Tuesday, September 4, 2018

ಒಂದು ಅಸಾಧು ನಡೆ

ಬಿಜೆಪಿ - 104
ಕಾಂಗ್ರೆಸ್ - 78
ಜೆಡಿಎಸ್ - 38
ಪಕ್ಷೇತರರು - 2
ಇದು ಜನಮತ. ಇದನ್ನು ತಿದ್ದುವ ಅಧಿಕಾರ ಯಾವ ರಾಜಕೀಯ ಪಕ್ಷಕ್ಕೂ  ಇಲ್ಲ. 104 ಸ್ಥಾನವನ್ನು ಗಳಿಸಿರುವ ಬಿಜೆಪಿಯು ಇನ್ನೊಂದಿಷ್ಟು ಸ್ಥಾನವನ್ನು ಸ್ವಯಂ ಚುನಾಯಿಸಿಕೊಂಡು ಬಹುಮತ ಪಡೆದುಕೊಳ್ಳುವುದಕ್ಕೆ ಭಾರತೀಯ ಪ್ರಜಾತಂತ್ರದಲ್ಲಿ ಅವಕಾಶ ಇಲ್ಲ. ಈ ನಿಯಮ ಕಾಂಗ್ರೆಸ್‍ಗೂ ಜೆಡಿಎಸ್‍ಗೂ ಮತ್ತು ಈ ದೇಶದಲ್ಲಿರುವ ಸರ್ವ ರಾಜಕೀಯ ಪಕ್ಪಗಳಿಗೂ ಸಮಾನವಾಗಿ ಅನ್ವಯ. ಆದ್ದರಿಂದ, ಸರಕಾರ ರಚಿಸುವುದಕ್ಕೆ ಸಿದ್ಧವಾಗುವ ಯಾವುದೇ ಪಕ್ಪವು ವಿಧಾನಸಭೆಯ ಒಟ್ಟು ಸ್ಥಾನ ಗಳಿಗಿಂತ ಕನಿಷ್ಠ ಒಂದು ಸ್ಥಾನವನ್ನಾದರೂ ಅಧಿಕ ಪಡೆದಿರಲೇಬೇಕು. ಅದೂ ಜನಮತದ ಮೂಲಕವೇ. ಇದು ನಿಯಮ. ಕರ್ನಾಟಕದ ವಿಧಾನಸಭೆಗೆ ಸಂಬಂಧಿಸಿ ಹೇಳುವುದಾದರೆ, ಮೇಲಿನ ಮೂರು ಪಕ್ಪಗಳು ಸ್ಪಷ್ಟ ಜನಾದೇಶವನ್ನು ಪಡೆದುಕೊಳ್ಳಲು ವಿಫಲವಾಗಿವೆ. ಈ ಸ್ಥಿತಿಯಲ್ಲಿ, ಈ ಮೂರೂ ಪಕ್ಪಗಳ ಮುಂದೆ ಎರಡು ಆಯ್ಕೆಗಳಷ್ಟೇ ಇದ್ದುವು.
1. ಬಹುಮತ ಇಲ್ಲದೇ ಇರುವುದನ್ನು ಪರಿಗಣಿಸಿ ತಟಸ್ಥವಾಗಿ ಉಳಿಯುವುದು.
2. ಪರಸ್ಪರ ಮೈತ್ರಿ ಮಾಡಿಕೊಳ್ಳುವ ಮೂಲಕ ಬಹುಮತ ಲಭ್ಯವಾಗುವಂತೆ ನೋಡಿಕೊಳ್ಳುವುದು.
    ಈ ಅವಕಾಶ ಮೇಲಿನ ಮೂರು ಪಕ್ಪಗಳಿಗೂ ಇದ್ದುವು. ಆದರೆ ಬಿಜೆಪಿ ಮೈತ್ರಿ ಕುದುರಿಸಿಕೊಳ್ಳುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಮೈತ್ರಿ ಮಾಡಿಕೊಂಡವು. ಅಚ್ಚರಿಯ ಸಂಗತಿ ಏನೆಂದರೆ, ಗೋವಾ, ಮಣಿಪುರ, ಮೇಘಾಲಯ, ಜಮ್ಮು-ಕಾಶ್ಮೀರ ಇತ್ಯಾದಿ ರಾಜ್ಯಗಳಲ್ಲಿ ಇತರ ಪಕ್ಪಗಳ ಜೊತೆ ಸೇರಿ ಸರಕಾರ ರಚಿಸಲು ಯಶಸ್ವಿಯಾಗಿದ್ದ ಬಿಜೆಪಿ ಕರ್ನಾಟಕದಲ್ಲಿ ಯಾಕೆ ವಿಫಲವಾಯಿತು ಅನ್ನುವುದು. ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಪವಾಗಿದ್ದೂ ಸರಕಾರ ರಚಿಸಲು ವಿಫಲವಾದುದಕ್ಕೆ ಬಹುಮುಖ್ಯ ಕಾರಣ ಬಿಜೆಪಿಯ ಬುದ್ಧಿವಂತಿಕೆ, ಚಾಣಾಕ್ಪತೆ ಮತ್ತು ಅಧಿಕಾರ ಬಲ. ಆದರೆ ಕರ್ನಾಟಕದಲ್ಲಿ ಯಾಕೆ ಇವು ಯಾವುವೂ ಬಿಜೆಪಿಯ ಪಾಲಿಗೆ ಪ್ರಯೋಜನಕ್ಕೆ ಬರಲಿಲ್ಲ ಅಥವಾ ಅಲ್ಲಿ ತೋರಿಸಿದ ಇಚ್ಛಾಶಕ್ತಿಯನ್ನು ಬಿಜೆಪಿ ಇಲ್ಲೇಕೆ ತೋರ್ಪಡಿಸಲಿಲ್ಲ? ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಲು ಹೊರಟಿರುವ ಬಿಜೆಪಿಯು ಕರ್ನಾಟಕದಲ್ಲಿ ಆ ಬಗ್ಗೆ ಗಂಭೀರ ಪ್ರಯತ್ನ ನಡೆಸದೇ ಇದ್ದುದು ಏಕೆ? ಕಾಂಗ್ರೆಸ್ ಮುಕ್ತ ಭಾರತವೇ ಬಿಜೆಪಿಯ ಬಹುಮುಖ್ಯ ಗುರಿ ಎಂದಾದರೆ, ಮುಖ್ಯ ಮಂತ್ರಿ ಯಾರಾಗಬೇಕು ಎಂಬುದು ಗೌಣವಾಗುತ್ತದೆ. ಸರಕಾರ ಕಾಂಗ್ರೆಸ್‍ನದ್ದಾಗಿರಬಾರದು ಅನ್ನುವುದೇ ಮುಖ್ಯವಾಗುತ್ತದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿ ಹಾಗಾಗಿಲ್ಲ. ಯಾಕೆ ಇದು? ಇತರ ರಾಜ್ಯಗಳಲ್ಲಿ ಫಲಿತಾಂಶಕ್ಕಿಂತ ಮೊದಲೇ ಕಾಂಗ್ರೆಸ್ಸೇತರ ಪಕ್ಪಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಗಂಭೀರ ಸಿದ್ಧತೆ ನಡೆಸಿದ್ದ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಆ ಚುರುಕುತನವನ್ನು ತೋರ್ಪಡಿಸದಿದ್ದುದು ಯಾಕಾಗಿ? ಅಂದಹಾಗೆ, ರಾಜ್ಯದ ಚುನಾವಣಾ ಫಲಿತಾಂಶ ಏನಾಗಬಹುದು ಎಂಬುದನ್ನು ಫಲಿತಾಂಶ ಪ್ರಕಟಣೆಗಿಂತ ಮೂರು ದಿನಗಳ ಮೊದಲೇ -ಮೇ 12ರಂದೇ- ವಿವಿಧ ಸಮೀಕ್ಷೆಗಳು ಸ್ಪಷ್ಟಪಡಿಸಿದ್ದುವು. ಸಮೀಕ್ಷೆಗಳ ಒಟ್ಟು ಸಾರಾಂಶ ಅತಂತ್ರದತ್ತ ಬೊಟ್ಟು ಮಾಡುತ್ತಿದ್ದುವೇ ಹೊರತು ಯಾವುದೇ ಪಕ್ಪವನ್ನು ಆರಾಮ ಸ್ಥಿತಿಗೆ ತಳ್ಳಿರಲಿಲ್ಲ. ಕಾಂಗ್ರೆಸ್ ಮೇ 12ರಂದೇ ಮೈತ್ರಿಯ ಬಗ್ಗೆ ಚಿಂತನ-ಮಂಥನ ನಡೆಸಿದೆ ಅನ್ನುವುದು ಈಗಾಗಲೇ ಬಹಿರಂಗವಾಗಿದೆ. ಆದರೆ ಬಿಜೆಪಿ ಪಾಳಯದಲ್ಲಿ ಈ ಚುರುಕುತನ ಕಾಣಿಸಿಕೊಳ್ಳದೇ ಇದ್ದುದಕ್ಕೆ ಕಾರಣ ಏನು? ಬಿಜೆಪಿ ತನ್ನ ಆಂತರಿಕ ಸಮೀಕ್ಷೆಯ ಮೇಲೆಯೇ ಬಲವಾದ ನಂಬಿಕೆ ಇಟ್ಟಿತೇ? ಆ ಸಮೀಕ್ಷೆಯು ಬಿಜೆಪಿಗೆ ಬಹುಮತವನ್ನು ಖಚಿತಪಡಿಸಿತ್ತೇ ಅಥವಾ ಯಡಿಯೂರಪ್ಪರನ್ನು ರಾಜಕೀಯವಾಗಿ ನಿವೃತ್ತಿಯಾಗುವಂತೆ ನೋಡಿಕೊಳ್ಳುವ ಒತ್ತಡ ಸ್ಥಿತಿಯೊಂದನ್ನು ನಿರ್ಮಿಸುವುದು ಅದರ ಉದ್ದೇಶವಾಗಿತ್ತೇ?
    ನಿಜವಾಗಿ, ಯಾವುದೇ ಒಂದು ರಾಜಕೀಯ ಪಕ್ಪದ ಉದ್ದೇಶವು ಇನ್ನೊಂದು ಪಕ್ಪದ ನಿರ್ನಾಮ ಆಗಿರಬಾರದು. ಹಾಗಂತ, ಇದು ಬಿಜೆಪಿಗೆ ಮಾತ್ರ ಅನ್ವಯವಾಗುವ ಮಾತಲ್ಲ. ತೃಣಮೂಲ ಮತ್ತು ಎಡಪಕ್ಷಗಳಿಗೂ ಇದು ಅನ್ವಯ. ಒಂದು ಪಕ್ಪದ ನಿರ್ನಾಮವೇ ಇನ್ನೊಂದು ಪಕ್ಪದ ಮುಖ್ಯ ಗುರಿಯಾಗುವಾಗ ಅಸಾಧು ಮಾರ್ಗಗಳೆಲ್ಲ ಸಾಧುವಾಗಿ ಬಿಡುತ್ತದೆ. ತಪ್ಪುಗಳೆಲ್ಲ ಸರಿಯಾಗಿ ಬಿಡುತ್ತದೆ. 55 ಗಂಟೆಗಳ ಕಾಲ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಈ ಬಹುಮತ ರಹಿತ ಸರಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಿಜೆಪಿ ನಾಯಕರು ಕಂಡುಕೊಂಡ ದಾರಿ, ಬಳಸಿದ ಭಾಷೆ ಮತ್ತು ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ನೀಡಿದ ಹೇಳಿಕೆಗಳೆಲ್ಲ ಈ ಅಸಾಧುತನವನ್ನು ಸ್ಪಷ್ಟಪಡಿಸುತ್ತದೆ. ಒಂದು ರೀತಿಯಲ್ಲಿ ಚುನಾವಣೋತ್ತರ ಮೈತ್ರಿ ಅನ್ನುವುದೇ ಅನೈತಿಕ. ಅವಕಾಶವಾದ. ಮೈತ್ರಿ ಮಾಡಿಕೊಳ್ಳುವುದಿದ್ದರೆ ಚುನಾವಣಾ ಪೂರ್ವದಲ್ಲಿ ಮಾಡಿಕೊಳ್ಳಬೇಕೇ ಹೊರತು ಬಹುಮತ ಲಭ್ಯವಾಗದೇ ಹೋದಾಗ ಮೈತ್ರಿ ಮಾಡಿಕೊಳ್ಳುವುದಲ್ಲ. ರಾಜ್ಯದ ಚುನಾವಣೆಯಲ್ಲಿ ಜನರು ಯಾವುದೇ ಮೈತ್ರಿಕೂಟಕ್ಕೆ ಮತ ಚಲಾಯಿಸಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರ ಪಕ್ಪಗಳನ್ನು ಮತದಾರರು ಬಿಡಿ ಬಿಡಿ ಪಕ್ಪಗಳಾಗಿಯೇ ಪರಿಗಣಿಸಿದ್ದರು ಮತ್ತು ಚುನಾವಣಾ ಪ್ರಚಾರದ ವೇಳೆ ಯಾವ ಪಕ್ಪಗಳೂ ಮೈತ್ರಿ ಸರಕಾರದ ಆಶ್ವಾಸನೆ ನೀಡಿರಲಿಲ್ಲ. ಒಂದು ವೇಳೆ, ಇಂಥದ್ದೊಂದು ಆಶ್ವಾಸನೆಯ ಮೂಲಕ ಈ ಮೂರು ಪಕ್ಪಗಳು ಮತದಾರರನ್ನು ಸಮೀಪಿಸಿರುತ್ತಿದ್ದರೆ ಈಗಿನ ಫಲಿತಾಂಶ ಬರುವುದಕ್ಕೆ ಸಾಧ್ಯವಿತ್ತೇ ಅನ್ನುವುದು ಖಂಡಿತ ಚರ್ಚಾರ್ಹ. ಚುನಾವಣಾ ಪೂರ್ವದಲ್ಲಿ ಪರಸ್ಪರ ಸಹಕಾರ ಮನೋಭಾವ ಇಲ್ಲದ ಮತ್ತು ಪರಸ್ಪರ ಎದುರಾಳಿಗಳಂತೆ ಗುರುತಿಸಿಕೊಂಡ ಪಕ್ಪಗಳು ಚುನಾವಣೆಯ ಬಳಿಕ ಪರಸ್ಪರ ಮಿತ್ರರಾಗುವುದು ಮತ್ತು ಅಧಿಕಾರದಲ್ಲಿ ಪಾಲು ದಾರರಾಗುವುದನ್ನು ನೈತಿಕವಾಗಿ ಸಮರ್ಥಿಸಲು ಸಾಧ್ಯವಿಲ್ಲ. ಪ್ರಜಾತಂತ್ರದಲ್ಲಿ ಈ ಬಗೆಯ ಮೈತ್ರಿಗೆ ಅವಕಾಶ ಇದೆ ಅನ್ನುವ ಕಾರಣಕ್ಕಾಗಿ ಮಾತ್ರ ಇದನ್ನು ಒಪ್ಪಿಕೊಳ್ಳಬಹುದು. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸ್ಥಾನ-ಮಾನ ಇದು. ಹಾಗಂತ, ಈ ವಾದ ಕೇವಲ ಕುಮಾರಸ್ವಾಮಿಗೆ ಸಂಬಂಧಿಸಿ ಮಾತ್ರ ಪ್ರಸ್ತುತವಾಗುವುದಲ್ಲ. ಬಿಜೆಪಿಗೂ ಅಷ್ಟೇ ಪ್ರಸ್ತುತ. ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾದರಿಯನ್ನೇ ಅನುಸರಿಸಿ ಸರಕಾರ ರಚಿಸಿದೆ. ಆದ್ದರಿಂದ ರಾಜಕೀಯ ಅವಕಾಶವಾದಿತನ ಎಂಬುದು ಯಾವುದಾದರೊಂದು ರಾಜಕೀಯ ಪಕ್ಪಕ್ಕೆ ಸೀಮಿತಗೊಳಿಸಿ ಹೇಳಬಹುದಾದ ಪದವಲ್ಲ. 1952ರಲ್ಲಿ ಈ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾ ವಣೆಯಿಂದ ಹಿಡಿದು 1970ರ ವರೆಗೆ ಏಕಪಕ್ಪವೇ ಆಡಳಿತವನ್ನು ನಡೆಸಿತ್ತು. ಕಾಂಗ್ರೆಸ್‍ಗೆ ಸವಾಲು ಒಡ್ಡಬಲ್ಲ ಪರ್ಯಾಯ ಪಕ್ಪವೊಂದು ಇಲ್ಲದ ಶೂನ್ಯ ಕಾಲ ಅದು. ಒಂದು ರೀತಿಯಲ್ಲಿ, ವಿರೋಧ ಪಕ್ಪ ಮುಕ್ತ ಭಾರತದ ವಾತಾವರಣವನ್ನು ಕಾಂಗ್ರೆಸ್ ಆ ಸಮಯದಲ್ಲಿ ನಿರ್ಮಿಸಿತ್ತು. ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಇವತ್ತು ಬಿಜೆಪಿ ಘೋಷಿಸಿರುವಂತೆಯೇ ಆವತ್ತು ‘ವಿರೋಧ ಪಕ್ಪ ಮುಕ್ತ ಭಾರತ’ ಎಂದು ಕಾಂಗ್ರೆಸ್ ಘೋಷಿಸಿರದಿದ್ದರೂ ಪರಿಸ್ಥಿತಿ ಹಾಗೆಯೇ ಇತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಪ ಎಂಬ ಬಹುಮಾನ್ಯತೆ ಗಿಟ್ಟಿಸಿಕೊಂಡಿದ್ದ ಪಕ್ಪದ ಪ್ರಾಬಲ್ಯವೂ ಹೆಚ್ಚು ಸಮಯ ಉಳಿಯಲಿಲ್ಲ. 70ರ ಬಳಿಕದ ರಾಜಕೀಯವು ಬಹು ಆಯಾಮವನ್ನು ಪಡೆದುಕೊಂಡಿತು. ಎರಡು ದಶಕಗಳ ಕಾಲ ಅಧಿಕಾರದ ರುಚಿ ಅನುಭವಿಸಿದ ಕಾಂಗ್ರೆಸ್‍ಗೆ ಪರ್ಯಾಯ ಪP್ಷÀಗಳು ಸವಾಲೊಡ್ಡುವಷ್ಟು ಬಲಿಷ್ಠ ವಾದುವು. ಆದರೆ ಈ ಸವಾಲನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿರಲಿಲ್ಲ. ಆದ್ದರಿಂದಲೇ ತುರ್ತುಸ್ಥಿತಿಯ ಘೋಷಣೆಯೂ ಆಯಿತು. ಕಾಂಗ್ರೆಸನ್ನೇ ಜನರು ತಿರಸ್ಕರಿಸಿದರು. ಪರ್ಯಾಯ ಪಕ್ಪಗಳಿಗೆ ಬೆಂಬಲವನ್ನು ಸಾರಿದರು. ತನಗೆ ಸರಿಸಮಾನವಾಗಿ ಯಾರೂ ಬೆಳೆಯಬಾರದೆಂಬ ಮಾನಸಿಕತೆಗೆ ಜನರು ನೀಡಿದ ಉತ್ತರ ಇದು. ಇದೀಗ ಬಿಜೆಪಿಯು ಅದೇ ಪುರಾತನ ಮಾನಸಿ ಕತೆಯ ಮುಂದುವರಿದ ಭಾಗವನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಅಂದರೆ, ರಾಷ್ಟ್ರೀಯವಾಗಿ ತನಗೆ ಸವಾಲೊಡ್ಡಬಲ್ಲ ಏಕೈಕ ದೊಡ್ಡ ಪಕ್ಪದ ಅಂತ್ಯ ಎಂದು ಅರ್ಥ. ಈ ಬಗೆಯ ಅಂತ್ಯ ಯಾಕಾಗಿ? ಯಾವ ಉದ್ದೇಶಕ್ಕಾಗಿ? ಭಾರತೀಯ ಪ್ರಜಾ ತಂತ್ರದ ಬಯಕೆಯೇ ಇದು? ಅಂದಹಾಗೆ, ಒಂದು ರಾಜಕೀಯ ಪಕ್ಪದ ಅಂತ್ಯಕ್ಕೂ ಒಂದು ವಿಚಾರಧಾರೆಯ ಅಂತ್ಯಕ್ಕೂ ವ್ಯತ್ಯಾಸ ಇದೆ. ಭಾರತೀಯ ಪ್ರಜಾತಂತ್ರಕ್ಕೆ ಯೋಗ್ಯವಲ್ಲದ ಮತ್ತು ಮನುಷ್ಯರ ಪಾಲಿಗೆ ಅಪಾಯಕಾರಿಯಾಗಿರುವ ವಿಚಾರಧಾರೆಯನ್ನು ಸಂವಿಧಾನಬದ್ಧ ಮಾರ್ಗಗಳ ಮೂಲಕ ಇಲ್ಲವಾಗಿಸುವುದು ತಪ್ಪಲ್ಲ. ಆದರೆ ಕಾಂಗ್ರೆಸ್‍ನ ಮೇಲೆ ಈ ದೇಶದ ಯಾವ ಸಾಂವಿಧಾನಿಕ ಸಂಸ್ಥೆಗಳೂ ಇಂಥದ್ದೊಂದು ಆರೋಪವನ್ನು ಹೊರಿಸಿಲ್ಲ. ಇನ್ನು, ಆ ಪಕ್ಪದ ಮೇಲೆ ಏನೆಲ್ಲ ಆರೋಪಗಳಿವೆಯೋ ಅವೆಲ್ಲವೂ ಬಿಜೆಪಿಯ ಮೇಲೂ ಇವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಕ್ರಿಮಿನಲ್ ಕೇಸುಗಳು, ಅಧಿಕಾರ ದುರುಪಯೋಗ, ನಾಗರಿಕ ಹತ್ಯೆ.. ಇತ್ಯಾದಿ ಇತ್ಯಾದಿ ಎಲ್ಲದರಲ್ಲೂ ಎರಡೂ ಪಕ್ಪಗಳೂ ಹೆಸರು ಕೆಡಿಸಿಕೊಂಡಿವೆ. ಹೀಗಿರುವಾಗ, ರಾಜಕೀಯವಾಗಿ ಸ್ವಚ್ಛವಲ್ಲದ ಪಕ್ಪವೊಂದು ಇನ್ನೊಂದು ಅಸ್ವಚ್ಛ ಪಕ್ಪವನ್ನು ನಿರ್ನಾಮಗೊಳಿಸುವ ಮಾತಾಡುವುದು ಅತ್ಯಂತ ಅಪ್ರಬುದ್ಧವಾದ ನಡೆ. ಇನ್ನು, ಒಂದು ವೇಳೆ, ಬಿಜೆಪಿ ಬಯಸಿದಂತೆಯೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಯಿತು ಎಂದೇ ಇಟ್ಟು ಕೊಳ್ಳೋಣ. ಆಗ ಉಂಟಾಗಬಹುದಾದ ರಾಜಕೀಯ ನಿರ್ವಾತ ಸ್ಥಿತಿಯು ಹೇಗಿರಬಹುದು? ಕಾಂಗ್ರೆಸ್ ನಿರ್ನಾಮವಾದರೆ, ಆ ಬಳಿಕ ಉಳಿದುಕೊಳ್ಳುವುದು ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಪಗಳು ಮಾತ್ರ. ಅವುಗಳನ್ನು ಬಿಜೆಪಿ ಹೇಗೆ ನಡೆಸಿಕೊಳ್ಳಬಹುದು? ಏಕಪಕ್ಪದ ಆಡಳಿತಕ್ಕೆ ಈ ದೇಶ ಶರಣಾಗಬಹುದೇ? ಪ್ರಾದೇಶಿಕ ಪಕ್ಪಗಳನ್ನು ಒಂದೊಂದಾಗಿ ಆಪೋಶನ ಪಡಕೊಳ್ಳುತ್ತಾ ಅಂತಿಮವಾಗಿ ಏಕಪಕ್ಪ, ಏಕಭಾರತವೆಂಬ ಘೋಷಣೆ ಈ ದೇಶದ್ದಾಗಬಹುದೇ?
    ಭಾರತೀಯ ಪ್ರಜಾಸತ್ತೆಗೂ ಅಮೇರಿಕ, ಬ್ರಿಟನ್, ಜರ್ಮನಿ ಸಹಿತ ಯುರೋಪಿಯನ್ ರಾಷ್ಟ್ರಗಳ ಪ್ರಜಾಸತ್ತೆಗೂ ನಡುವೆ ಸಾಕಷ್ಟು ಅಂತರಗಳಿವೆ. ಅಮೇರಿಕದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಎಂಬ ಎರಡೇ ಪಕ್ಪಗಳಿವೆ. ಡೆಮಾಕ್ರಾಟ್ ಪಕ್ಪ ಇಷ್ಟವಾಗದಿದ್ದರೆ ಜನರು ರಿಪಬ್ಲಿಕನ್ ಪಕ್ಪದಲ್ಲಿ ತಮ್ಮಿಷ್ಟವನ್ನು ಕಾಣಬೇಕು. ಇದರ ಹೊರತಾಗಿ ಮೂರನೆಯದರಲ್ಲಿ ಸುಖ ಕಾಣುವ ಅವಕಾಶ ಅವರಿಗಿಲ್ಲ. ಬ್ರಿಟನ್‍ನಲ್ಲಿ ಕನ್ಸರ್ವೇಟಿವ್ ಪಾರ್ಟಿ ಮತ್ತು ಲೇಬರ್ ಪಾರ್ಟಿಗಳಿವೆ. ಜರ್ಮನಿಯಲ್ಲಿ ಕ್ರಿಶ್ಚಿಯನ್ ಡೆಮಾಕ್ರಾಟ್ ಮತ್ತು ಸೋಶಿಯಲ್ ಡೆಮಾಕ್ರಾಟ್. ಎಡ-ಬಲ-ಮಧ್ಯಮ ಸಹಿತ ಎಲ್ಲ ವಿಚಾರಧಾರೆಯನ್ನೂ ಜನರು ಈ ಎರಡು ಪಕ್ಪಗಳಲ್ಲೇ  ಕಂಡುಕೊಳ್ಳಬೇಕು. ಆದರೆ ಭಾರತೀಯ ಪ್ರಜಾತಂತ್ರ ಹಾಗಲ್ಲ. ಇಲ್ಲಿಯ ವ್ಯವಸ್ಥೆ 120 ಕೋಟಿ ಪಕ್ಪಗಳನ್ನೂ ತಾಳಿಕೊಳ್ಳುವಷ್ಟು ಉದಾರಿ. ಅಮೇರಿಕ, ಬ್ರಿಟನ್, ಜರ್ಮನಿ ಮತ್ತಿತರ ರಾಷ್ಟ್ರಗಳಲ್ಲಿ ಕರ್ನಾಟಕದಂಥ ರಾಜಕೀಯ ಅಸ್ಥಿರತೆ ಉಂಟಾಗದೇ ಇರುವುದಕ್ಕೂ ಭಾರತದಲ್ಲಿ ಪದೇ ಪದೇ ಅದು ನಿರ್ಮಾಣವಾಗುವುದಕ್ಕೂ ಈ ದ್ವಿಪಕ್ಪ ಮತ್ತು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯೇ ಮುಖ್ಯ ಕಾರಣ. ಆದರೆ ಯುರೋಪಿಗೆ ನಮ್ಮನ್ನು ಹೋಲಿಸುವಂತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಚಾಚಿರುವ ಭಾರತವೇ ಒಂದು ಸೋಜಿಗ. ವೈವಿಧ್ಯಮಯ ಅಸಂಖ್ಯ ಮಾದರಿಗಳು ಹೆಜ್ಜೆಹೆಜ್ಜೆಗೂ ಇಲ್ಲಿ ಸಿಗುತ್ತಲೇ ಇರುತ್ತವೆ. ಭಾರತದಲ್ಲಿರುವಷ್ಟು ಧರ್ಮ, ಭಾಷೆ, ಜಾತಿ, ಪಂಗಡಗಳು ದ್ವಿಪಕ್ಪ ಪ್ರಜಾಸತ್ತೆ ಯನ್ನು ಒಪ್ಪಿಕೊಂಡಿರುವ ರಾಷ್ಟ್ರಗಳಲ್ಲಿ ಇಲ್ಲವೇ ಇಲ್ಲ. ಆದ್ದರಿಂದ ಆ ಮಾದರಿ ಭಾರತೀಯ ವಾತಾವರಣಕ್ಕೆ ಒಗ್ಗಿಕೊಳ್ಳುವುದೇ ಅನ್ನುವ ಪ್ರಶ್ನೆಗೇ ಉತ್ತರ ಸರಳವೂ ಅಲ್ಲ. ಇವತ್ತು ಬಿಜೆಪಿ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದರೆ ಅದಕ್ಕೆ ಭಾರತದ ಬಹುಪಕ್ಷೀಯ ವ್ಯವಸ್ಥೆಯೇ ಬಹುಮುಖ್ಯ ಕಾರಣ. 1952 ರಿಂದ 1970ರ ವರೆಗೆ ಪ್ರಾಬಲ್ಯ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಪವು ಉಳಿದ ಪಕ್ಪಗಳ ನಿರ್ನಾಮಕ್ಕೆ ಪಣ ಅಂದು ತೊಟ್ಟಿದ್ದರೆ ಇವತ್ತು ಭಾರತೀಯ ಪ್ರಜಾತಂತ್ರದ ಸ್ಥಿತಿ ಹೇಗಿರುತ್ತಿತ್ತು? ಬಿಜೆಪಿ ಎಲ್ಲಿರುತ್ತಿತ್ತು? ಒಂದು ಪಕ್ಪ ಪ್ರಬಲವಾಗುವುದು ಮತ್ತು ಇನ್ನೊಂದು ಪಕ್ಪ ದುರ್ಬಲವಾಗುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಹಜ. ಆದರೆ ಪ್ರಬಲ ಪಕ್ಪವು ದುರ್ಬಲ ಪಕ್ಪದ ನಿರ್ನಾಮ ವನ್ನು ಬಯಸುವುದು ಅಸಹಜ ಮಾತ್ರವಲ್ಲ, ಅಸಾಂವಿಧಾನಿಕ.
     ಬಹುಮತ ಇಲ್ಲದೆಯೂ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿಸಿ ಕರ್ನಾಟಕವನ್ನು ‘ಕಾಂಗ್ರೆಸ್ ಮುಕ್ತವಾಗಿಸಲು’ ಬಿಜೆಪಿ ತೋರಿದ ಅವಸರದಲ್ಲಿ ವ್ಯಕ್ತವಾಗುವುದು ಈ ಅಸಾಧುತನವೇ.






No comments:

Post a Comment