Friday, July 26, 2024

ಮುಸ್ಲಿಮ್ ದ್ವೇಷಿ ರಾಜಕೀಯಕ್ಕೆ ಟಾಟಾ ಹೇಳುತ್ತಿದ್ದಾರೆಯೇ ಮತದಾರರು?






1. ಕರ್ನಾಟಕ
2. ಉತ್ತರ ಪ್ರದೇಶ
3. ಪಶ್ಚಿಮ ಬಂಗಾಳ
4. ಮಹಾರಾಷ್ಟ್ರ 
5. ಹರ್ಯಾಣ

ತೀವ್ರ ಮುಸ್ಲಿಮ್ ದ್ವೇಷವು ಎಲ್ಲಿಯ ವರೆಗೆ ಕೈ ಹಿಡಿಯುತ್ತೆ ಎಂಬ ಪ್ರಶ್ನೆಯನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಸ್ವಯಂ ಕೇಳಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಥದ್ದೊಂದು  ಪ್ರಶ್ನೆಯನ್ನು  ಕೇಳಿಕೊಳ್ಳಬೇಕಾದ ಮತ್ತು ಆತ್ಮಾವಲೋಕನಕ್ಕೆ ಸಿದ್ಧವಾಗಲೇಬೇಕಾದ ಜರೂರತ್ತು ಬಿಜೆಪಿಗೆ ಎದುರಾಗಿದೆ ಎಂಬುದಂತೂ   ಸ್ಪಷ್ಟ. 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿತ್ತು.  ಕಾಂಗ್ರೆಸ್‌ಗೆ ದಕ್ಕಿದ್ದು ಬರೇ ಒಂದು ಸೀಟು. ಮಾತ್ರವಲ್ಲ, ಆ ಬಳಿಕ 2023ರ ವರೆಗೆ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ  ಬಿಜೆಪಿಯೇ ಆಳ್ವಿಕೆಯನ್ನೂ ನಡೆಸಿತು. ಆರಂಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಬಳಿಕ ಬೊಮ್ಮಾಯಿ  ಮುಖ್ಯಮಂತ್ರಿಯಾದರು. ಮುಖ್ಯವಾಗಿ,

ಬೊಮ್ಮಾಯಿ ಆಡಳಿತದ ಸಮಯದಲ್ಲಿ ಮುಸ್ಲಿಮ್ ದ್ವೇಷ ಪ್ರಕರಣಗಳು ತೀವ್ರಗೊಂಡವು. ಸ್ವತಃ ಮುಖ್ಯಮಂತ್ರಿಯವರೇ  ಅದರ ನೇತೃತ್ವ ವಹಿಸಿಕೊಂಡಂತೆ  ಆಡತೊಡಗಿದರು. ಅನೈತಿಕ ಪೊಲೀಸ್‌ಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಹೆಸರಲ್ಲಿ  ಸಮರ್ಥಿಸಿಕೊಂಡರು. ಕರಾವಳಿಯಲ್ಲಿ ಒಂದೇ ತಿಂಗಳೊಳಗೆ ನಡೆದ ಮೂವರು ಯುವಕರ ಹತ್ಯೆಯಲ್ಲಿ ಅತ್ಯಂತ  ಏಕಮುಖವಾಗಿ ನಡಕೊಂಡರು. ಇಬ್ಬರು ಮುಸ್ಲಿಮ್ ಯುವಕರ ಕುಟುಂಬಗಳಿಗೆ ನಯಾಪೈಸೆ ಪರಿಹಾರವನ್ನೂ ನೀಡಲಿಲ್ಲ.  ಆದರೆ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದಲ್ಲದೇ, 25 ಲಕ್ಷ ಪರಿಹಾರವನ್ನೂ ನೆಟ್ಟಾರು ಪತ್ನಿಗೆ ಉದ್ಯೋಗವನ್ನೂ  ದೊರಕಿಸಿಕೊಟ್ಟರು. ಆದರೆ ಅಲ್ಲೇ  ಪಕ್ಕದಲ್ಲಿದ್ದ ಮಸೂದ್ ಎಂಬ ಯುವಕನ ಸಂತ್ರಸ್ತ ತಾಯಿಯನ್ನು ಭೇಟಿ ಮಾಡಿ  ಸಾಂತ್ವನಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರಲಿಲ್ಲ. ಅಧಿಕಾರದ ಕೊನೆಯ ದಿನಗಳಲ್ಲಿ ಮುಸ್ಲಿಮ್ ಮೀಸಲಾತಿಯನ್ನು  ಏಕಾಏಕಿ ಕಿತ್ತುಹಾಕಿದರು. ಸ್ಥಳೀಯ ವಾಗಿ ಪರಿಹರಿಸಬಹುದಾಗಿದ್ದ ಹಿಜಾಬ್ ವಿಷಯವನ್ನು ಮತ ಧ್ರುವೀಕರಣಕ್ಕಾಗಿ  ಬಳಸಿಕೊಂಡರು. ಮುಸ್ಲಿಮರ  ಬಗ್ಗೆ ಅತ್ಯಂತ ನಕಾರಾತ್ಮಕವಾಗಿ ಮತ್ತು ತೀರಾ ದ್ವೇಷಮಯವಾಗಿ ನಡಕೊಂಡರು. ಇದರ  ನಡುವೆಯೇ ಹಲಾಲ್ ಕಟ್, ಜಟ್ಕಾ ಕಟ್, ಮುಸ್ಲಿಮ್ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿಷೇಧ ಇತ್ಯಾದಿಗಳ ಮೂಲಕ  ಮುಸ್ಲಿಮ್ ದ್ವೇಷವನ್ನು ಜೀವಂತ ಉಳಿಸಿಕೊಳ್ಳಲಾಯಿತು. ಗೋಸಾಗಾಟದ ಹೆಸರಲ್ಲಿ ಹಲವು ಕಡೆ ಮುಸ್ಲಿಮರನ್ನು ಗುರಿ  ಮಾಡಿ ಥಳಿಸಲಾಯಿತು. ಒಂದುರೀತಿಯಲ್ಲಿ,

ಮುಸ್ಲಿಮರನ್ನೇ ಗುರಿಮಾಡಿದ ಆಡಳಿತ ನೀತಿಯನ್ನು ಬೊಮ್ಮಾಯಿ ಸರಕಾರ ಉದ್ದಕ್ಕೂ ನಿರ್ವಹಿಸುತ್ತಾ ಬಂತು. ಮುಸ್ಲಿಮ್  ವಿರೋಧಿ ಭಾಷಣಗಳು ಸಾಮಾನ್ಯ ಎನ್ನುವಂತಾಯಿತು. ಸರಕಾರದ ಧೋರಣೆಯನ್ನೇ ಕನ್ನಡದ ಮುಂಚೂಣಿ ಟಿ.ವಿ. ಚಾ ನೆಲ್‌ಗಳೂ ತಳೆದುವು. 24 ಗಂಟೆ ಮುಸ್ಲಿಮ್ ದ್ವೇಷವನ್ನು ಉಗುಳುವ ಮತ್ತು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ  ವಿಚಾರಣೆ ನಡೆಸುವ ರೀತಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾದುವು. ಮುಸ್ಲಿಮರನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ  ವಿರೋಧಿಸಿದರೆ ಮತ್ತು ದ್ವೇಷಭಾವವನ್ನು ಪ್ರಚೋದಿಸಿದರೆ ಮರಳಿ ಗೆಲ್ಲಬಹುದು ಎಂಬ ನಂಬಿಕೆ ಬೊಮ್ಮಾಯಿ ಸಹಿತ  ಕೇಂದ್ರ ಹೈಕಮಾಂಡ್‌ನಲ್ಲೂ ಇದ್ದಂತಿತ್ತು. ಆದರೆ, ಲೋಕಸಭಾ ಚುನಾವಣೆಗಿಂತ ಮೊದಲು ನಡೆದ ವಿಧಾನಸಭಾ ಚು ನಾವಣೆಯಲ್ಲಿ ರಾಜ್ಯದ ಮತದಾರರು ಬೊಮ್ಮಾಯಿ ಸರಕಾರವನ್ನು ತಿರಸ್ಕರಿಸಿದರು. ಮುಸ್ಲಿಮರನ್ನು ದ್ವೇಷಿಸುವುದರಿಂದ  ಹಿಂದೂ ಮತದಾರರನ್ನು ಧ್ರುವೀಕರಿಸಬಹುದು ಎಂಬ ನಂಬಿಕೆಗೆ ಬಿದ್ದ ಪ್ರಬಲ ಏಟು ಇದಾಗಿತ್ತು. ಇದಾಗಿ ಒಂದು  ವರ್ಷದ ಬಳಿಕ ಮೊನ್ನೆ ಲೋಕಸಭಾ ಚುನಾವಣೆ ನಡೆಯಿತು. ದುರಂತ ಏನೆಂದರೆ,

ರಾಜ್ಯದಲ್ಲಿ ಈಗಾಗಲೇ ಪ್ರಯೋಗಿಸಿ ವಿಫಲಗೊಂಡಿದ್ದ ಅದೇ ಸೂತ್ರವನ್ನು ಕೇಂದ್ರ ನಾಯಕರು ಮತ್ತೆ ರಾಜ್ಯದಲ್ಲೂ ಮತ್ತು  ದೇಶದುದ್ದಗಲಕ್ಕೂ ಪ್ರಯೋಗಿಸಿದರು. ಮುಸ್ಲಿಮ್ ಮೀಸಲಾತಿ ಕಿತ್ತು ಹಾಕಿರುವುದನ್ನು ಬೆಂಬಲಿಸಿದರು. ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿ ಎಂದು ಖುದ್ದು ಪ್ರಧಾನಿಯೇ ಕರೆಕೊಟ್ಟರು. ಹುಬ್ಬಳ್ಳಿಯ ನೇಹಾ ಹತ್ಯೆಯನ್ನು ಮುಸ್ಲಿಮ್ ವಿರೋಧಿ  ಭಾವನೆ ಕೆರಳಿಸಲು ಬಳಸಿಕೊಂಡರು. ಅದೇ ಸಂದರ್ಭದಲ್ಲಿ ಅದೇ ಹುಬ್ಬಳ್ಳಿ ಮತ್ತು ಕೊಡಗಿನ ಸೋಮವಾರಪೇಟೆಯಲ್ಲಿ  ನಡೆದ ಅಂಥದ್ದೇ  ಹತ್ಯೆಗಳ ಬಗ್ಗೆ ಮೌನವಹಿಸಿದರು. ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಹೇಗೆ ತೀವ್ರ ಮುಸ್ಲಿಮ್  ದ್ವೇಷವನ್ನು ನೀತಿಯಾಗಿ ಪಾಲಿಸಲಾಯಿತೋ ಅದೇ ಬಗೆಯ ನೀತಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ  ಪಾಲಿಸಿದರು. ಸಮಾಜವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದರಿಂದ ತನ್ನ ಮತದಾರರು ಕೈತಪ್ಪಲಾರರು  ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆ ಕಾರಣಕ್ಕಾಗಿಯೇ ಅದು ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೂ ಟಿಕೆಟ್ ನೀಡಲಿಲ್ಲ. ಆದರೆ ಜನರು ತೀವ್ರ ಮುಸ್ಲಿಮ್ ದ್ವೇಷಿ ನೀತಿಯನ್ನು ಪುನಃ ತಿರಸ್ಕರಿಸಿದರು. 2019ರಲ್ಲಿ 25 ಲೋಕಸಭಾ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 17 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. 2019ರಲ್ಲಿ ಏಕೈಕ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆದ್ದುಕೊಂಡಿತು. ಹಾಗಂತ,

ಈ ಬದಲಾವಣೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿಯ ಕೈ ಹಿಡಿದಿತ್ತು. 80 ಲೋಕಸಭಾ ಸ್ಥಾನಗಳ ಪೈಕಿ 64  ಸ್ಥಾನಗಳಲ್ಲಿ ಮತದಾರರು ಬಿಜೆಪಿಯನ್ನೇ ಗೆಲ್ಲಿಸಿದರು. ಕೇಂದ್ರದಲ್ಲಿ ಯಾವ ಸರಕಾರ ಇರಬೇಕು ಎಂಬುದನ್ನು  ನಿರ್ಧರಿಸುವುದಕ್ಕೆ ಉತ್ತರ ಪ್ರದೇಶದ ಫಲಿತಾಂಶ ನಿರ್ಣಾಯಕ. ಆದ್ದರಿಂದಲೇ, ಬಿಜೆಪಿಯ ರಾಷ್ಟ್ರೀಯ ನಾಯಕರು ಉತ್ತರ  ಪ್ರದೇಶಕ್ಕೆ ಅತೀ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಧಾನಿ ಮೋದಿಯವರು ತಮ್ಮ ತವರು ರಾಜ್ಯವಾದ ಗುಜರಾತನ್ನು ಬಿಟ್ಟು  ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಪರ್ಧಿಸುವುದಕ್ಕೆ ಕಾರಣವೂ ಇದುವೇ. ತನ್ನ ಸ್ಪರ್ಧೆಯು ಉತ್ತರ ಪ್ರದೇಶದ ಉಳಿದ 79  ಕ್ಷೇತ್ರಗಳ ಮೇಲೆ ಪರಿಣಾಮ ಬೀರಬೇಕು ಎಂಬ ತಂತ್ರವೂ ಇದರ ಹಿಂದಿದೆ. ಈ ಬಾರಿಯ ಲೋಕಸಭಾ ಚುನಾವಣೆಯ  ಮೊದಲು ತರಾತುರಿಯಿಂದ ರಾಮಮಂದಿರವನ್ನು ಉದ್ಘಾಟಿಸಲಾಯಿತು. ಮಾತ್ರವಲ್ಲ, ಆ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮ್  ವಿರೋಧಿ ಭಾವವನ್ನು ಬಡಿದೆಬ್ಬಿಸಲಾಯಿತು. ಮುಸ್ಲಿಮರನ್ನು ಸತಾಯಿಸುವ ಶೈಲಿಯನ್ನು ರಾಜನೀತಿಯಾಗಿ  ಬಿಂಬಿಸಲಾಯಿತು. ‘ಉತ್ತರ ಪ್ರದೇಶದ ರಸ್ತೆಯಲ್ಲಿ ಈಗ ನಮಾಝï ನಡೆಯುತ್ತಿಲ್ಲ, ಮೈಕ್‌ಗಳಲ್ಲಿ ಬಾಂಗ್ ಕೇಳಿಸುತ್ತಿಲ್ಲ..’  ಎಂದು ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಮ್ಮೆಯಿಂದ  ಹೇಳಿಕೊಂಡರು. ಪ್ರಧಾನಿ ಮೋದಿಯಂತೂ ಹಿಂದಿ ರಾಜ್ಯಗಳಲ್ಲಿ ಮಾಡಿದ ಭಾಷಣ ಗಳಲ್ಲಿ ಮುಸ್ಲಿಮರೇ ಕೇಂದ್ರೀಯ  ಸ್ಥಾನದಲ್ಲಿದ್ದರು. ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು, ದೇಶದ ಸಂಪತ್ತಿನ ಮೊದಲ ಹಕ್ಕುದಾರರು,  ಮಾಂಗಲ್ಯ ಕಸಿಯುವವರು.. ಎಂಬೆಲ್ಲಾ ರೀತಿಯಲ್ಲಿ ಹೀನೈಸಿ ಮಾತಾಡಿದರು. ಹಿಂದಿ ರಾಜ್ಯದ ಮತದಾರರು ಮುಸ್ಲಿಮ್  ದ್ವೇಷವನ್ನು ಇಷ್ಟಪಡುತ್ತಾರೆ ಮತ್ತು ಮುಸ್ಲಿಮರನ್ನು ದ್ವೇಷಿಸಿದಷ್ಟೂ ತಮ್ಮ ಓಟ್ ಬ್ಯಾಂಕ್ ವೃದ್ಧಿಸುತ್ತದೆ ಎಂಬ ಭಾವದಲ್ಲಿ  ಪ್ರಧಾನಿಯಿಂದ ಹಿಡಿದು ಉಳಿದ ನಾಯಕರ ವರೆಗೆ ಎಲ್ಲರೂ ವಿವಿಧ ಪ್ರಚಾರ ಸಭೆಗಳಲ್ಲಿ ನಡಕೊಂಡರು. ಆದರೆ,
ಉತ್ತರ ಪ್ರದೇಶದ ಮತದಾರರು ಈ ದ್ವೇಷಕ್ಕೆ ಮರುಳಾಗಲಿಲ್ಲ. ಬರೇ 33 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, 37 ಕ್ಷೇತ್ರಗಳಲ್ಲಿ  ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದರು. ಅಸ್ತಿತ್ವವೇ ಕಳೆದುಹೋಗಿದ್ದ ಕಾಂಗ್ರೆಸನ್ನು 6 ಕ್ಷೇತ್ರಗಳಲ್ಲಿ  ಗೆಲ್ಲಿಸಿದರು.

ಹಾಗೆಯೇ,

ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 2019ರಲ್ಲಿ ಕೇವಲ ಬಿಜೆಪಿಯೊಂದೇ 23 ಸ್ಥಾನಗಳನ್ನು ಗೆದ್ದುಕೊಂಡಿತ್ತು.  ಎನ್‌ಡಿಎಗೆ ಒಟ್ಟು 41 ಸ್ಥಾನಗಳು ದಕ್ಕಿತ್ತು. ಆದರೆ ಈ ಬಾರಿ ಜನರು ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ತಿರಸ್ಕರಿಸಿದರು.  ಬಿಜೆಪಿಗೆ ಕೇವಲ 9 ಸ್ಥಾನಗಳನ್ನು ನೀಡಿದ ಮಹಾರಾಷ್ಟ್ರದ ಮತದಾರರು ಶಿಂಧೆ ಬಣಕ್ಕೆ 7 ಮತ್ತು ಅಜಿತ್ ಪವಾರ್ ಬಣಕ್ಕೆ  ಕೇವಲ ಒಂದು ಸ್ಥಾನವನ್ನು ಕೊಟ್ಟು ದ್ವೇಷ ರಾಜಕೀಯಕ್ಕೆ ನಾವಿಲ್ಲ ಎಂಬುದನ್ನು ತಿಳಿ ಹೇಳಿದರು. ಈ ಬಾರಿ ಎನ್‌ಡಿಎಗೆ  17 ಸ್ಥಾನಗಳಷ್ಟೇ ಸಿಕ್ಕರೆ ಇಂಡಿಯಾ ಕೂಟಕ್ಕೆ 31 ಸ್ಥಾನಗಳು ಸಿಕ್ಕವು. ನಾಮಾವಶೇಷವಾಗಿದ್ದ ಕಾಂಗ್ರೆಸ್‌ನ ಕೈ ಹಿಡಿದ  ಮತದಾರರು 13 ಕ್ಷೇತ್ರಗಳಲ್ಲಿ ಗೆಲ್ಲಿಸಿದರು. ಠಾಕ್ರೆ ಮತ್ತು ಶರದ್ ಪವಾರ್ ಪಕ್ಷಕ್ಕೆ ತಲಾ 8 ಮಂದಿಯ ಬಲ ನೀಡಿದರು.  ಅಂದಹಾಗೆ,
ಉಳಿದ ರಾಜ್ಯಗಳೆಂದರೆ, ಹರ್ಯಾಣ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ. 2019ರಲ್ಲಿ ಹರ್ಯಾಣದಲ್ಲಿ ಬಿಜೆಪಿ ಎಲ್ಲಾ 10  ಸ್ಥಾನಗಳನ್ನೂ ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿಗೆ 5 ಸ್ಥಾನಗಳನ್ನಷ್ಟೇ ಕೊಟ್ಟ ಮತದಾರರು ಉಳಿದ 5ರಲ್ಲಿ ಕಾಂಗ್ರೆಸನ್ನು  ಗೆಲ್ಲಿಸಿದರು. 2019ರಲ್ಲಿ ರಾಜಸ್ಥಾನದ ಎಲ್ಲಾ 25 ಸ್ಥಾನಗಳೂ ಬಿಜೆಪಿಯ ಪಾಲಾಗಿತ್ತು. ಆದರೆ ಈ ಬಾರಿ ಅಲ್ಲೂ ಜನ  ಬಿಜೆಪಿಯ ಮುಸ್ಲಿಮ್ ದ್ವೇಷ ರಾಜಕೀಯವನ್ನು ತಿರಸ್ಕರಿಸಿದರು. ಬಿಜೆಪಿಗೆ 14 ಸ್ಥಾನಗಳನ್ನು ಕೊಟ್ಟ ರಾಜಸ್ಥಾನಿಯರು 8  ಸ್ಥಾನಗಳಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದರು. ಪಶ್ಚಿಮ ಬಂಗಾಳವಂತೂ  ಬಿಜೆಪಿಗೆ ಇನ್ನಿಲ್ಲದ ನಿರಾಸೆಯನ್ನು ತಂದಿಕ್ಕಿತ್ತು. 2019ರಲ್ಲಿ  18 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 12 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ  ಸುಮಾರು 28 ಸ್ಥಾನಗಳ ನಿರೀಕ್ಷೆಯಲ್ಲಿತ್ತು. ಅದಕ್ಕಾಗಿ ತೀವ್ರ ಮುಸ್ಲಿಮ್ ದ್ವೇಷಿ ಭಾಷಣಗಳನ್ನೂ ಮಾಡಿತ್ತು. ವರ್ತನೆಯೂ  ಏಕಮುಖವಾಗಿತ್ತು. ಪಶ್ಚಿಮ ಬಂಗಾಳವನ್ನು ಮುಸ್ಲಿಮ್ ರಾಜ್ಯವನ್ನಾಗಿ ಮಾಡಲು ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ  ಎಂಬಲ್ಲಿಂದ ಹಿಡಿದು ಎನ್‌ಆರ್‌ಸಿ ಜಾರಿಗೆ ತಂದು ಮುಸ್ಲಿಮ್ ನುಸುಳುಕೋರರನ್ನು ಹೊರಗಟ್ಟುತ್ತೇವೆ ಎಂಬಲ್ಲಿ ವರೆಗೆ  ವಿವಿಧ ರೀತಿಯಲ್ಲಿ ಮುಸ್ಲಿಮ್ ಕೇಂದ್ರಿತ ದ್ವೇಷದ ಮಾತುಗಳನ್ನು ವಿವಿಧ ನಾಯಕರು ಆಡಿದರು. ಆದರೆ, ಮತದಾರರು  ಈ ದ್ವೇಷ ಭಾಷೆಯನ್ನು ತಿರಸ್ಕರಿಸಿದರು. ಒಂದುರೀತಿಯಲ್ಲಿ,

ಈ ಬಾರಿಯ ಲೋಕಸಭಾ ಚುನಾವಣೆಯು ಮುಸ್ಲಿಮ್ ದ್ವೇಷಿ ರಾಜನೀತಿ ಮತ್ತು ಅಭಿವೃದ್ಧಿ ರಾಜನೀತಿಯ ನಡುವಿನ  ಹಣಾಹಣಿಯಂತಿತ್ತು. ಮಧ್ಯಪ್ರದೇಶ, ಗುಜರಾತ್, ಅಸ್ಸಾಮ್‌ನಲ್ಲಿ ದ್ವೇಷ ರಾಜನೀತಿಗೆ ಬೆಂಬಲ ಸಿಕ್ಕಿವೆಯಾದರೂ ದೇಶದ  ಉಳಿದ ಭಾಗಗಳಲ್ಲಿ ಇದಕ್ಕೆ ಪ್ರಬಲ ಪ್ರತಿರೋಧ ಎದುರಾಗಿದೆ. ಜನರು ಮುಸ್ಲಿಮ್ ದ್ವೇಷಿ ರಾಜಕೀಯದಿಂದ ರೋಸಿ  ಹೋಗತೊಡಗಿದ್ದಾರೆ. ಕಳೆದ 10 ವರ್ಷಗಳಲ್ಲಿ ವರ್ಕ್ಔಟ್ ಆಗಿದ್ದ ಪ್ರಚಾರ ತಂತ್ರವು ನಿಧಾನಕ್ಕೆ ಕೈಕೊಡತೊಡಗಿದೆ.  ಪದೇಪದೇ ಮುಸ್ಲಿಮರನ್ನು ಸತಾಯಿಸುವುದು, ಅವರ ಮಸೀದಿ, ಗಡ್ಡ, ನಮಾಝï, ಅಝಾನ್, ಆಹಾರ, ಮದುವೆ,  ವಿಚ್ಛೇದನ, ವ್ಯಾಪಾರ-ವಹಿವಾಟುಗಳನ್ನೇ ಗುರಿಮಾಡಿಕೊಂಡು ಮಾತಾಡುವುದು ಜನರಿಗೂ ಈಗ ಬೇಸರ ತರಿಸಿದೆ.  ಮುಸ್ಲಿಮರನ್ನೇ ಕೇಂದ್ರೀಕರಿಸಿ 24 ಗಂಟೆ ರಾಜಕೀಯ ಮಾಡುವುದಕ್ಕೆ ಅವರೂ ಮುಖ ತಿರುಗಿಸತೊಡಗಿದ್ದಾರೆ. ಆದರೆ,  ಬಿಜೆಪಿಗೆ ಮುಸ್ಲಿಮ್ ಕೇಂದ್ರಿತ ರಾಜಕೀಯದ ಹೊರತಾಗಿ ಬೇರೆ ವಿಧಾನದಲ್ಲಿ ಹಿಡಿತ ಇಲ್ಲ. ಅಭಿವೃದ್ಧಿ ರಾಜಕಾರಣದ ಬಗ್ಗೆ  ಮಾತಾಡುವಂಥ ಏನನ್ನೂ ಅದು ಮಾಡಿಯೂ ಇಲ್ಲ. ನಿರುದ್ಯೋಗ ಮತ್ತು ಬೆಲೆಯೇರಿಕೆಗಳು ಬಿಜೆಪಿಯನ್ನು ಹೋದಲ್ಲಿ  ಬಂದಲ್ಲಿ ಮುಜುಗರಕ್ಕೆ ಒಳಪಡಿಸುತ್ತಲೂ ಇದೆ. ಆದ್ದರಿಂದ, ಮುಸ್ಲಿಮ್ ದ್ವೇಷವನ್ನು ನೆಚ್ಚಿಕೊಳ್ಳದ ಹೊರತು ಅನ್ಯದಾರಿಯಿಲ್ಲ  ಎಂಬ ಸ್ಥಿತಿಗೆ ಅದು ಬಂದು ತಲುಪಿದೆ. ಆದರೆ, ಜನರು ಈ ದ್ವೇಷ ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದಂತೆ  ಕಾಣುತ್ತಿದೆ. ಆದರೆ,

ವಿದಾಯ ಹೇಳಲಾಗದ ಸ್ಥಿತಿಯಲ್ಲಿ ಬಿಜೆಪಿಯಿದೆ.

ಆ ಇಬ್ಬರಲ್ಲಿ ಅಲ್ಲಾಹನು ಇಷ್ಟಪಡುವುದು ಯಾರನ್ನು?





ಪವಿತ್ರ ಕುರ್‌ಆನಿನ ಈ ವಚನಗಳನ್ನೊಮ್ಮೆ ಪರಿಶೀಲಿಸಿ-

1. ಓ ಆದಮರ ಸಂತತಿಯವರೇ, ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿ ಮೀರುವವರನ್ನು ಮೆಚ್ಚುವುದಿಲ್ಲ. (7:31)
2. ನಿಮಗೆ ಇವು ನಿಷಿದ್ಧಗೊಳಿಸಲ್ಪಟ್ಟಿವೆ- ಶವ, ರಕ್ತ, ಹಂದಿಮಾಂಸ, ಅಲ್ಲಾಹನ ಹೊರತು ಇತರರ ಹೆಸರಲ್ಲಿ ದಿಬ್ಹ್ ಮಾಡಲ್ಪಟ್ಟ ಪ್ರಾಣಿ.  ಉಸಿರುಗಟ್ಟಿ ಅಥವಾ ಪೆಟ್ಟು ತಾಗಿ ಅಥವಾ ಎತ್ತರದಿಂದ ಬಿದ್ದು ಅಥವಾ ಘರ್ಷಿಸಲ್ಪಟ್ಟು ಅಥವಾ ಕ್ರೂರಮೃಗದಿಂದ ಹರಿದು ಹಾಕಲ್ಪಟ್ಟು ಸತ್ತ  ಪ್ರಾಣಿ. ಆದರೆ ನೀವು ಜೀವಂತ ಪಡೆದು ದಿಬ್ಹ್ ಮಾಡಿದ ಪ್ರಾಣಿಯು ಇದಕ್ಕೆ ಹೊರತಾಗಿದೆ. (5:3)
3. ನಿಮಗೆ ಎಲ್ಲ ಶುದ್ಧ ವಸ್ತುಗಳೂ ಧರ್ಮಸಮ್ಮತಗೊಳಿಸಲ್ಪಟ್ಟಿವೆ. (5:4)
4. ಇಂದು ನಿಮಗೆ ಸಕಲ ಶುದ್ಧ ವಸ್ತುಗಳೂ ಧರ್ಮಸಮ್ಮತ ಮಾಡಲ್ಪಟ್ಟಿವೆ. (5:5)
5. ಅಲ್ಲಾಹನ ಕಡೆಯಿಂದ ನಿಮ್ಮ ಮೇಲೆ ನಿಷೇಧವೇನಾದರೂ ಇದ್ದರೆ ಅದಿಷ್ಟೇ- ಶವವನ್ನು ತಿನ್ನಬೇಡಿರಿ. ನೆತ್ತರು ಮತ್ತು ಹಂದಿಯ ಮಾಂಸವ ನ್ನು ವರ್ಜಿಸಿರಿ. ಮತ್ತು ಅಲ್ಲಾಹನ ಹೊರತು ಇತರರ ಹೆಸರು ಉಚ್ಛರಿಸಲಾದ ವಸ್ತುಗಳನ್ನು ತಿನ್ನಬೇಡಿರಿ. ಆದರೆ ವಿವಶಾವಸ್ಥೆಯಲ್ಲಿದ್ದು,  ನಿಯಮೋಲ್ಲಂಘನೆಯ ಉದ್ದೇಶ ವಿಲ್ಲದೆಯೂ ಮಿತಿ ಮೀರದೆಯೂ ಅವುಗಳಿಂದೇನಾದರೂ ತಿಂದುಬಿಟ್ಟರೆ ದೋಷವಿಲ್ಲ. (2: 173)
6. ನಾವು ನೀಡಿರುವ ಶುದ್ಧ ಆಹಾರವನ್ನೇ ಉಣ್ಣಿರಿ. ಮತ್ತು ಅದನ್ನುಂಡು ವಿದ್ರೋಹ ಮಾಡದಿರಿ. (25:8)
7. ನಿಮ್ಮನ್ನು ನೀವೇ ವಿನಾಶಕ್ಕೆ ಒಳಪಡಿಸಿಕೊಳ್ಳಬೇಡಿರಿ. (2:195)
8. ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ. (20:81)
9. ಓ ಸತ್ಯವಿಶ್ವಾಸಿಗಳೇ, ಮದ್ಯವನ್ನು ವರ್ಜಿಸಿರಿ. (5:90)
10. ಹೇ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ವಸ್ತುಗಳನ್ನು ನೀವು ಉಣ್ಣಿರಿ. (2:168)

1. ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ ಹೀಗೆ ವಿವರಿಸುತ್ತಾರೆ-

ಪ್ರವಾದಿ(ಸ) ಹೇಳಿದರು, ಓ ಅಬ್ದುಲ್ಲಾ, ದಿನವಿಡೀ ಉಪವಾಸವಿದ್ದು, ರಾತ್ರಿಯಿಡೀ ನಮಾಝï‌ನಲ್ಲಿ ಕಳೆಯಬೇಡಿ. ಕೆಲವೊಮ್ಮೆ ಉಪವಾಸ  ಆಚರಿಸಿ ಮತ್ತು ಕೆಲವೊಮ್ಮೆ ಬಿಟ್ಟುಬಿಡಿ. ರಾತ್ರಿಯಲ್ಲಿ ನಮಾಝನ್ನೂ ಮಾಡಿ ಮತ್ತು ನಿದ್ದೆಯನ್ನೂ ಮಾಡಿ. ನಿಮ್ಮ ಮೇಲೆ ನಿಮ್ಮ ದೇಹಕ್ಕೆ ಹಕ್ಕಿದೆ.  ಕಣ್ಣುಗಳಿಗೆ ಹಕ್ಕಿದೆ ಮತ್ತು ಪತ್ನಿಗೆ ಹಕ್ಕಿದೆ.

2. ಉಸಾಮಾ ಬಿನ್ ಶರೀಕ್ ಹೇಳುತ್ತಾರೆ-
ಪ್ರವಾದಿಯವರ(ಸ) ಬಳಿ ನಾನಿದ್ದೆ. ಆಗ ಅರಬರಾದ ಕೆಲವರು ಬಂದು ಹೀಗೆ ಪ್ರಶ್ನಿಸಿದರು, ಓ ಪ್ರವಾದಿಯವರೇ, ಯಾವುದೇ ಕಾಯಿಲೆಗೆ  ನಾವು ಚಿಕಿತ್ಸೆ ಮಾಡಬೇಕೇ?
ಪ್ರವಾದಿ(ಸ) ಹೇಳಿದರು, ಹೌದು, ಔಷಧವನ್ನು ತೆಗೆದುಕೊಳ್ಳ ಬೇಕು. ಅಲ್ಲಾಹನು ಎಲ್ಲಕ್ಕೂ ಔಷಧಿಯನ್ನು ಸೃಷ್ಟಿಸಿದ್ದಾನೆ. ಆದರೆ ಒಂದರ  ಹೊರತು. ಆಗ ಆ ಅರಬರು ಪ್ರಶ್ನಿಸಿದರು, ಏನದು? ಪ್ರವಾದಿ(ಸ) ಹೇಳಿದರು, ‘ವೃದ್ಧಾಪ್ಯ’.

3. ಪ್ರವಾದಿ(ಸ) ಹೇಳಿದರು, ಹೆಚ್ಚಿನ ಜನರು ಪ್ರಶಂಸಿಸದ ಎರಡು ಅನುಗ್ರಹಗಳಿವೆ. 1. ಆರೋಗ್ಯ 2. ಸಮಯ.

4. ಪ್ರವಾದಿ(ಸ) ಹೇಳಿದರು,
ಹೊಟ್ಟೆಯ ಮೂರರಲ್ಲೊಂದು  ಭಾಗವನ್ನು ಆಹಾರಕ್ಕಾಗಿ ಮೀಸಲಿಡಿ. ಮೂರರಲ್ಲೊಂದು  ಭಾಗವನ್ನು ನೀರಿಗೆ ಮತ್ತು ಮೂರರಲ್ಲೊಂದು  ಭಾಗವನ್ನು ಸುಗಮ ಉಸಿರಾಟಕ್ಕಾಗಿ ಮೀಸಲಿಡಿ.

5. ಪ್ರವಾದಿ(ಸ) ಹೇಳಿದರು,
ಒಂದು ಪ್ರದೇಶದಲ್ಲಿ ಪ್ಲೇಗ್ ಅಥವಾ ಸಾಂಕ್ರಾಮಿಕ ಕಾಯಿಲೆ ಇದೆ ಎಂದು ಗೊತ್ತಾದರೆ ಆ ಪ್ರದೇಶಕ್ಕೆ ನೀವು ಹೋಗಬಾರದು.
6. ಪ್ರವಾದಿ(ಸ) ಹೇಳಿದರು, ಓರ್ವ ಸಾಂಕ್ರಾಮಿಕ ರೋಗಿ ಆರೋಗ್ಯವಂತರ ಹತ್ತಿರದಿಂದ ಹೋಗಬಾರದು.
7. ಪ್ರವಾದಿ(ಸ) ಹೇಳಿದರು, ಸ್ವಚ್ಛತೆ ವಿಶ್ವಾಸದ ಅರ್ಧಭಾಗವಾಗಿದೆ.

ಅಂದಹಾಗೆ,
ಇಲ್ಲಿನ ಕುರ್‌ಆನ್ ಮತ್ತು ಪ್ರವಾದಿ(ಸ) ವಚನಗಳನ್ನು ಎದುರು ಹರಡಿಕೊಂಡು ಒಂದಷ್ಟು ಹೊತ್ತು ಆಲೋಚಿಸಿ. ಮನುಷ್ಯನ ಆರೋಗ್ಯಕ್ಕೆ  ಇಸ್ಲಾಮ್ ಇಷ್ಟೊಂದು ಮಹತ್ವ ಕೊಡಲು ಕಾರಣವೇನು? ಇಲ್ಲಿ ಉಲ್ಲೇಖಕ್ಕೆ ಒಳಗಾಗಿರುವ ಮತ್ತು ಒಳಗಾಗದೇ ಇರುವ ಕುರ್‌ಆನ್ ಮತ್ತು  ಹದೀಸ್‌ಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಹತ್ತು ಹಲವು ಮಾರ್ಗದರ್ಶನಗಳಿವೆ. ಹಾಗಂತ, ಆರೋಗ್ಯಕ್ಕೂ ಧರ್ಮಕ್ಕೂ ಏನು ಸಂಬಂಧ? ಯಾಕೆ  ಸಂಬಂಧ? ‘ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಮಿತಿ ಮೀರಬೇಡಿ..’ ಎಂದು ಕುರ್‌ಆನ್ ಬೋಧಿಸಿರುವುದು ಕೇವಲ ಮುಸ್ಲಿಮರಿಗಷ್ಟೇ  ಅಲ್ಲ. ‘ಓ ಆದಮರ ಸಂತತಿಯೇ’ ಎಂಬ ಪದಪ್ರಯೋಗದ ಮೂಲಕವೇ ಈ ಉಪದೇಶವನ್ನು ಮಾಡಿದೆ. ಅಂದರೆ, ಎಲ್ಲ ಮನುಷ್ಯರ  ಆರೋಗ್ಯದ ಕಾಳಜಿಯೂ ಈ ವಚನದಲ್ಲಿದೆ. ‘ಸತ್ಯ ವಿಶ್ವಾಸಿಗಳೇ, ಮದ್ಯವನ್ನು ವರ್ಜಿಸಿರಿ’ ಎಂದು ಹೇಳಿದ ಅದೇ ಕುರ್‌ಆನ್, ‘ಹೇ ಜನರೇ,  ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನೇ ಸೇವಿಸಿರಿ..’ ಎಂದು ಸಾರ್ವತ್ರಿಕ ಕರೆಯನ್ನೂ ಕೊಟ್ಟಿದೆ. ಮುಸ್ಲಿಮರಿಗಂತೂ, ಯಾವ ವಸ್ತು ಶುದ್ಧ,  ಯಾವುದು ಅಶುದ್ಧ, ಯಾವುದನ್ನು ತಿನ್ನಬಹುದು ಮತ್ತು ತಿನ್ನಬಾರದು.. ಇತ್ಯಾದಿಗಳನ್ನು ಪಟ್ಟಿ ಮಾಡಿ ಹೇಳಿದೆ. ಪ್ರವಾದಿ(ಸ) ಹೇಳಿದರು,

ಆಹಾರ ಸೇವಿಸಿದ ಬಳಿಕ ಕೈ-ಬಾಯಿ ತೊಳೆಯದ ಕಾರಣ ಯಾರಿಗಾದರೂ ಕಾಯಿಲೆ ಬಂದರೆ ಅದಕ್ಕಾಗಿ ಅವರನ್ನಲ್ಲದೇ ಇನ್ನಾರನ್ನೂ  ದೂರಬೇಡಿ. (ಅಹ್ಮದ್)

ದ್ವಿತೀಯ ಖಲೀಫ ಉಮರ್ ಹೇಳಿದರು,
ಜನರೇ, ನಿಮ್ಮ ಮಕ್ಕಳಿಗೆ ಬಿಲ್ವಿದ್ಯೆಯನ್ನು ಕಲಿಸಿ. ಹಾಗೆಯೇ, ಈಜಲು ಮತ್ತು ಕುದುರೆ ಸವಾರಿ ಮಾಡಲೂ ಕಲಿಸಿರಿ.

ನಿಜವಾಗಿ, ಆರೋಗ್ಯಕ್ಕೂ ಧರ್ಮಕ್ಕೂ ಅತೀ ನಿಕಟ ಸಂಬಂಧವಿದೆ ಅಥವಾ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಸೀನುವಾಗ ಕೈ ಅಥವಾ ಬಟ್ಟೆಯ ನ್ನು ಬಾಯಿಗಡ್ಡ ಇಡಿ ಮತ್ತು ದೊಡ್ಡ ಸದ್ದು ಬರದಂತೆ ನೋಡಿಕೊಳ್ಳಿ ಎಂದು ಪ್ರವಾದಿ(ಸ) ಹೇಳಿದ್ದಾರೆ. ಸೀನುವ ಸಂದರ್ಭದಲ್ಲಿ  ಹೊರಬಹುದಾದ ಜೊಲ್ಲು ಹನಿ ವಾತಾವರಣವನ್ನು ಸೇರಿಕೊಳ್ಳುವುದಕ್ಕೆ ಅವಕಾಶ ಇದೆ. ಒಂದುವೇಳೆ, ಸೀನಿದ ವ್ಯಕ್ತಿಯಲ್ಲಿ ಹರಡುವ ಕಾಯಿಲೆ ಇದ್ದರೆ  ಮತ್ತು ಹನಿ ವಾತಾವರಣದಲ್ಲಿ ಸೇರಿಕೊಂಡರೆ ಅದರಿಂದ ಆರೋಗ್ಯವಂತರೂ ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ. ಇದರ ಗಂಭೀರತೆ  ನಮಗೆ ಚೆನ್ನಾಗಿ ಮನದಟ್ಟಾದುದು ಕೊರೋನಾ ಅವಧಿಯಲ್ಲಿ. ಆವರೆಗೆ ಈ ಪ್ರವಾದಿ(ಸ)ರ ಸೂಚನೆಯನ್ನು ಗಂಭೀರಿರವಾಗಿ ಪಾಲಿಸದವರೂ  ಕೊರೋನಾ ಅವಧಿಯಲ್ಲಿ ಅತ್ಯಂತ ನಿಷ್ಠೆಯಿಂದ ಈ ಕ್ರಮವನ್ನು ಅನುಸರಿಸಿದರು. ಮಾಸ್ಕ್ ಬದುಕಿನ ಭಾಗವೇ ಆಗಿಹೋಯಿತು. ಕ್ವಾರಂಟೈನ್,  ಕಂಟೋನ್ಮೆಂಟ್  ಮುಂತಾದ ಹೊಸ ಹೊಸ ಪದಗಳ ಮೂಲಕ ಜಾರಿಗೊಂಡ ಕ್ರಮಗಳೆಲ್ಲ ಪ್ರವಾದಿ(ಸ) ಸೂಚಿಸಿದ ಮಾರ್ಗದರ್ಶಿ ಸೂತ್ರಗಳೇ  ಆಗಿದ್ದುವು. ‘ಸಾಂಕ್ರಾಮಿಕ ರೋಗಿಗಳು ಇರುವಲ್ಲೇ  ಇರಬೇಕು ಮತ್ತು ಅದಿಲ್ಲದ ಪ್ರದೇಶದ ಮಂದಿ ಸಾಂಕ್ರಾಮಿಕ ಕಾಯಿಲೆ ಇರುವ ಪ್ರದೇಶಕ್ಕೆ  ಹೋಗಬಾರದು..’ ಎಂಬುದನ್ನೇ ಕೊರೋನಾ ಕಾಲದ ಸರ್ಕಾರಿ ನಿರ್ದೇಶನಗಳು ಪಾಲಿಸಿದುವು. ಜನರನ್ನು ತಂತಮ್ಮ ಮನೆಗಳಿಗೇ  ಸೀಮಿತಗೊಳಿಸಿತು. ರಸ್ತೆಗಳು ಖಾಲಿಯಾದುವು. ಕೊರೋನಾ ಪೀಡಿತರನ್ನು ಆರೋಗ್ಯವಂತರಿಂದ  ಬೇರ್ಪಡಿಸಲಾಯಿತು. ಹಾಗಂತ,

ಇದೊಂದು  ಉದಾಹರಣೆ ಅಷ್ಟೇ. ಸಾಮಾನ್ಯವಾಗಿ, ಆರೋಗ್ಯದ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಳ್ಳುವುದು ಅನಾರೋಗ್ಯ ಬಾಧಿಸಿದಾಗ.  ಅದಕ್ಕಿಂತ ಮೊದಲು ಮಿತಾಹಾರ, ಶುದ್ಧ ಆಹಾರ, ಸರಿಯಾದ ನಿದ್ದೆ, ವ್ಯಾಯಾಮ, ರಾತ್ರಿ ಮಲಗುವಾಗ ಹಲ್ಲುಜ್ಜುವುದು, ತಿನ್ನುವುದಕ್ಕಿಂತ  ಮೊದಲು ಕೈ ತೊಳೆಯುವುದು, ಉಪವಾಸ ಆಚರಿಸುವುದು ಇತ್ಯಾದಿಗಳನ್ನು ಗಂಭೀರವಾಗಿ ಪರಿಗಣಿಸುವವರು ಕಡಿಮೆ. ಹೊಟ್ಟೆ ತುಂಬಾ ತಿನ್ನುವುದು, ತಡರಾತ್ರಿವರೆಗೆ ಎಚ್ಚರದಿಂದಿರುವುದು ಮತ್ತು ಬೆಳಿಗ್ಗೆ ವ್ಯಾಯಾಮ ಮಾಡದಿರುವುದು ಇತ್ಯಾದಿ ತಪ್ಪು ಕ್ರಮಗಳು ಕುರ್‌ಆನ್ ಮತ್ತು  ಹದೀಸ್‌ನ ಅನು ಯಾಯಿಗಳಲ್ಲೇ  ಧಾರಾಳ ಇದೆ. ‘ಸತ್ಯವಿಶ್ವಾಸಿಗಳ ಪೈಕಿ ಆರೋಗ್ಯದಲ್ಲಿ ದುರ್ಬಲ ವ್ಯಕ್ತಿಗಿಂತ ಸಬಲ ವ್ಯಕ್ತಿ ಅಲ್ಲಾಹನಿಗೆ ಹೆಚ್ಚು ಇಷ್ಟ..’ ಎಂದು  ಪ್ರವಾದಿ(ಸ) ಹೇಳಿದ್ದಾರೆ. ಯಾಕೆ ಹೀಗೆ? ಅಲ್ಲಾಹನ ಇಷ್ಟಕ್ಕೆ ವ್ಯಕ್ತಿಯ ದೈಹಿಕ ಸಾಮರ್ಥ್ಯ ಏಕೆ ಮಾನದಂಡವಾಗುತ್ತದೆ? ದೈಹಿಕವಾಗಿ  ಅಸಮರ್ಥ ವ್ಯಕ್ತಿಗಿಂತ ದೈಹಿಕವಾಗಿ ಪ್ರಬಲ ವ್ಯಕ್ತಿಯನ್ನು ಹೀಗೆ ಎತ್ತಿ ಹೇಳಲು ಕಾರಣವೇನು? ಈ ಕುರಿತಂತೆ ನಮ್ಮನ್ನು ನಾವು ಜಿಜ್ಞಾಸೆಗೆ ಒಳ ಪಡಿಸಿದರೆ ಇದರ ಹಿಂದಿರುವ ಹಕೀಕತ್ತು ಮನವರಿಕೆ ಯಾಗುತ್ತದೆ. ಬಾಹ್ಯನೋಟಕ್ಕೆ ಸತ್ಯವಿಶ್ವಾಸಿಗಳನ್ನು ಅವರ ದೈಹಿಕ ಸಾಮರ್ಥ್ಯದ  ಆಧಾರದಲ್ಲಿ ಅಳೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಬಹುದು. ಅಲ್ಲಾಹನು ಇಬ್ಬರು ವ್ಯಕ್ತಿಗಳನ್ನು ಹೀಗೆ ವಿಭಜಿಸಿ ನೋಡುವನೇ  ಎಂದೂ ಅನಿಸಬಹುದು. ನಿಜವಾಗಿ,

ಈ ಇಬ್ಬರೂ ಸಮಪ್ರಾಯದವರಾಗಿರಬಹುದೇ ಹೊರತು ಒಬ್ಬರು ವೃದ್ಧರು ಮತ್ತು ಇನ್ನೊಬ್ಬರು ಯುವಕರು ಆಗಿರಲು ಸಾಧ್ಯವೇ ಇಲ್ಲ. ಒಂದೇ  ಪ್ರಾಯದ ಇಬ್ಬರಲ್ಲಿ ಒಬ್ಬರು ಆರೋಗ್ಯ ಸೂಕ್ಷ್ಮಗಳನ್ನು ಪಾಲಿಸುತ್ತಾ, ಶುದ್ಧ ಆಹಾರವನ್ನೇ ಸೇವಿಸುತ್ತಾ, ವ್ಯಾಯಾಮ ಇತ್ಯಾದಿ ದೇಹ ದಂಡನೆ  ಕ್ರಮಗಳನ್ನು ಅನುಸರಿಸುತ್ತಾ ದೈಹಿಕವಾಗಿ ಫಿಟ್ ಆಗಿರುವ ವ್ಯಕ್ತಿಯಾಗಿದ್ದಿರಬಹುದಾದರೆ ಇನ್ನೊಬ್ಬರು ಈ ಎಲ್ಲವನ್ನೂ ನಿರ್ಲಕ್ಷಿಸಿದ ವ್ಯಕ್ತಿ.  ಇವರಿಬ್ಬರ ಪ್ರಾಯ ಒಂದೇ ಆಗಿದ್ದರೂ ಕ್ಷಮತೆ ಒಂದೇ ಆಗಿರುವ ಸಾಧ್ಯತೆ ಇಲ್ಲ. ದೈಹಿಕವಾಗಿ ಫಿಟ್ ಆಗಿರುವ ವ್ಯಕ್ತಿ 10 ನಿಮಿಷದಲ್ಲಿ ಕ್ರಮಿಸುವ  ದಾರಿಯನ್ನು ಇನ್ನೋರ್ವ ಅಷ್ಟೇ ಸಮಯದಲ್ಲಿ ಕ್ರಮಿಸಲು ಸಾಧ್ಯವಿಲ್ಲ. ಪ್ರವಾಹ, ಭೂಕಂಪದಂಥ  ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ  ದುರಂತಗಳ ಸಂದರ್ಭದಲ್ಲಿ ಈ ಇಬ್ಬರ ಕ್ಷಮತೆಯೂ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ದೈಹಿಕವಾಗಿ ಫಿಟ್ ಇರುವ ವ್ಯಕ್ತಿ ಇಂಥ  ಸಂದರ್ಭಗಳಲ್ಲಿ ಸ್ಪಂದಿಸುವ ರೀತಿಗೂ ಇನ್ನೊಬ್ಬರು ಸ್ಪಂದಿಸುವ ರೀತಿಗೂ ದಾರಾಳ ವ್ಯತ್ಯಾಸಗಳಿರುತ್ತವೆ. ಈ ಎಲ್ಲವನ್ನೂ ಸೂಚ್ಯವಾಗಿ ಈ  ಮೇಲಿನ ಪ್ರವಾದಿ(ಸ) ವಚನ ಸೂಚಿಸುತ್ತದೆ ಎಂದೇ ಹೇಳಬಹುದು. ಅಂದಹಾಗೆ,

ಆಧುನಿಕ ಆಹಾರ ಕ್ರಮಗಳ ಅಡ್ಡಪರಿಣಾಮಗಳು ಒಂದು ಕಡೆಯಾದರೆ, ಹಗಲು ಮತ್ತು ರಾತ್ರಿಯಲ್ಲಿ ದುಡಿಯಲೇಬೇಕಾದ ಆಧುನಿಕ ಉದ್ಯೋಗ  ನೀತಿಗಳು ಇನ್ನೊಂದು ಕಡೆ. ಡೇ ಶಿಫ್ಟ್, ನೈಟ್ ಶಿಫ್ಟ್ ಎಂಬ ಪದಗಳು ಇವತ್ತು ಮಾಮೂಲಾಗಿವೆ. ಜಂಕ್‌ಫುಡ್‌ಗಳು ಬದುಕಿನ  ಭಾಗವಾಗತೊಡಗಿವೆ. ಇದರಿಂದಾಗಿ ಬದುಕಿನ ತಾಳವೂ ತಪ್ಪತೊಡಗಿದೆ. ಅಸಮರ್ಪಕ ನಿದ್ದೆ, ಅಸಮರ್ಪಕ ಆಹಾರ ಮತ್ತು ಅಸಮರ್ಪಕ  ಜೀವನ ರೀತಿಯು ದೇಹದ ಮೇಲೆ ಪರಿಣಾಮವನ್ನು ಬೀರುತ್ತಿವೆ. ಅಲ್ಲದೆ, ಹಗಲು ಕೆಲಸ ಮಾಡುವವರಲ್ಲೂ ವ್ಯಾಯಾಮದ ಬಗ್ಗೆ ಇನ್ನಿಲ್ಲದ  ಅಸಡ್ಡೆಯಿದೆ. ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತ ಕ್ಕೊಳಪಟ್ಟು ಮೃತಪಟ್ಟವರ ಪಟ್ಟಿಯನ್ನು ಕೊಡುವವರೂ ಇದ್ದಾರೆ. ಗುಟ್ಕಾ,  ಸಿಗರೇಟು ಸೇದುವವರಲ್ಲೂ ಇಂಥದ್ದೇ  ಪಟ್ಟಿಯಿರುತ್ತದೆ. ಯಾವ ಚಟವೂ ಇಲ್ಲದ ವ್ಯಕ್ತಿಗೆ ಗಂಭೀರ ಕಾಯಿಲೆ ಬಂದಿರುವುದನ್ನು ತೋರಿಸಿ  ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಜವಾಗಿ,

ವ್ಯಾಯಾಮಕ್ಕೂ ಕಾಯಿಲೆ ಬರುವುದಕ್ಕೂ ದೊಡ್ಡ ಸಂಬಂಧ  ಇಲ್ಲ. ಆಯುಷ್ಯ ಇರುವವರೆಗೆ ಆರೋಗ್ಯಪೂರ್ಣವಾಗಿ ಬದುಕು ವುದೇ  ಮುಖ್ಯವಾಗಬೇಕು. ವಿವಿಧ ಸತ್ಕರ್ಮಗಳಲ್ಲಿ ಭಾಗಿಯಾಗುವುದಕ್ಕೆ ಆರೋಗ್ಯಪೂರ್ಣ ದೇಹ ಅಗತ್ಯ. ಸರಿಯಾದ ಸಮಯದಲ್ಲಿ ಊಟ, ನಿದ್ದೆ  ಮತ್ತು ವ್ಯಾಯಾಮಗಳನ್ನು ಮಾಡುತ್ತಾ ಚಟುವಟಿಕೆಯಲ್ಲಿರುವ ವ್ಯಕ್ತಿಯ ಮನಸ್ಸೂ ಆರೋಗ್ಯ ಪೂರ್ಣವಾಗಿರುತ್ತದೆ. ಇದು ಮನೆಯ  ವಾತಾವರಣವನ್ನು ಆರೋಗ್ಯಪೂರ್ಣವಾಗಿ ಇಡುತ್ತದೆ. ಅಷ್ಟಕ್ಕೂ,

ಹಿತ-ಮಿತ ಆಹಾರ, ವ್ಯಾಯಾಮ, ನಿದ್ದೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ತೀವ್ರ ನಿಷ್ಕಾಳಜಿ ಇದೆ ಎಂಬ  ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯ ಇದ್ದೇ  ಇದೆ.

Thursday, June 27, 2024

ಜನರನ್ನು ನರಕಕ್ಕೆಸೆಯಲು ಕಾದು ಕುಳಿತ ಕಠಿಣ ಹೃದಯಿಯೇ ಅಲ್ಲಾಹ್?



ಪವಿತ್ರ ಕುರ್‌ಆನಿನ ಅಲ್ ಬಕರ ಅಧ್ಯಾಯದ 260ನೇ ವಚನವನ್ನು ನೀವು ಈಗಾಗಲೇ ಓದಿರಬಹುದು. ಆದರೆ ಇನ್ನೊಮ್ಮೆ ಗಮನವಿಟ್ಟು ಓದಿ.  ಪ್ರವಾದಿ ಇಬ್ರಾಹೀಮ್(ಅ) ಮತ್ತು ಅಲ್ಲಾಹನ ನಡುವಿನ ಆ ಸಂಭಾಷಣೆ ಬರೇ ಸಂಭಾಷಣೆ ಅಲ್ಲ. ಅದರಲ್ಲಿ ಅಪಾರ ಪ್ರೀತಿ ಮತ್ತು ಒಲುಮೆ  ಇದೆ. ದಾಸ ಮತ್ತು ಒಡೆಯ ಎಂಬ ಭಾವವನ್ನು ಮೀರಿದ ಆಪ್ತತೆಯಿದೆ. ಪ್ರವಾದಿ ಇಬ್ರಾಹೀಮ್(ಅ) ಅಲ್ಲಾಹನಲ್ಲಿ ಹೀಗೆ ಪ್ರಶ್ನಿಸುತ್ತಾರೆ,

‘ದೇವಾ, ಸತ್ತವರನ್ನು ನೀನು ಹೇಗೆ ಜೀವಂತಗೊಳಿಸುತ್ತೀ?’

ಈ ಪ್ರಶ್ನೆಗೆ ಅಲ್ಲಾಹನು ನೇರವಾಗಿ ಉತ್ತರಿಸುವುದಿಲ್ಲ. ಆತ ಪ್ರಶ್ನೆಯೊಂದರ ಮೂಲಕ ಇಬ್ರಾಹೀಮರನ್ನು ಕೆಣಕುತ್ತಾನೆ,

‘ಅಲ್ಲ, ನಿಮಗೆ ಇನ್ನೂ ನಂಬಿಕೆ ಬಂದಿಲ್ಲವೇ?’

ಅದಕ್ಕೆ ಇಬ್ರಾಹೀಮ್(ಅ) ಹೀಗೆ ಉತ್ತರಿಸುತ್ತಾರೆ,

‘ನಂಬಿಕೆ ಇದೆ ದೇವಾ, ಆದರೆ ಮನಸ್ಸಿನ ತೃಪ್ತಿಗಾಗಿ ಕೇಳುತ್ತಿದ್ದೇನೆ..’

ಈ ಸಂಭಾಷಣೆಯ ಶೈಲಿಯನ್ನೊಮ್ಮೆ ಗಮನಿಸಿ. ಅಲ್ಲಾಹನು ಮಾತಾಡಿರುವುದು ಸಾಮಾನ್ಯ ವ್ಯಕ್ತಿಯ ಜೊತೆ ಅಲ್ಲ. ಪ್ರವಾದಿಯ ಜೊತೆ. ಅಲ್ಲಾಹ್  ಅಂದರೆ ಏನು, ಆತನ ಸಾಮರ್ಥ್ಯ ಏನು. ಆತ ಏನನ್ನು ಬಯಸುತ್ತಾನೆ, ಸೃಷ್ಟಿಗಳು ಮತ್ತು ಸೃಷ್ಟಿಕರ್ತನ ನಡುವಿನ ಸಂಬಂಧ ಹೇಗಿರಬೇಕು,  ಒಡೆಯನ ಜೊತೆ ದಾಸನ ಮಾತುಕತೆ ಏನಾಗಿರಬೇಕು... ಇತ್ಯಾದಿಗಳೆಲ್ಲ ಗೊತ್ತಿಲ್ಲದ ವ್ಯಕ್ತಿ ಅಲ್ಲಾಹನಲ್ಲಿ, ‘ನೀನು ಹೇಗೆ ಸತ್ತವರನ್ನು  ಜೀವಂತಗೊಳಿಸುತ್ತೀ...’ ಎಂದು ಪ್ರಶ್ನಿಸುವುದು ಬೇರೆ, ಪ್ರವಾದಿ ಇಬ್ರಾಹೀಮ್(ಅ) ಪ್ರಶ್ನಿಸುವುದು ಬೇರೆ. ಈ ಸಂಭಾಷಣೆ ನಡೆಸುವಾಗ  ಇಬ್ರಾಹೀಮ್(ಅ) ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅವರನ್ನು ಅಲ್ಲಾಹನು ಪ್ರವಾದಿಯಾಗಿ ಆಯ್ಕೆ ಮಾಡಿದ್ದನು. ಅಲ್ಲಾಹನೇ ಆಯ್ಕೆ ಮಾಡಿದ  ವ್ಯಕ್ತಿಗೆ ಅಲ್ಲಾಹನ ಜೊತೆಗಿನ ಮಾತುಕತೆ ಹೇಗಿರಬೇಕು ಎಂಬುದು ಗೊತ್ತಿರಲೇಬೇಕು. ಅಲ್ಲಾಹನ ಸಾಮರ್ಥ್ಯ ಏನು ಅನ್ನುವುದೂ  ಗೊತ್ತಿರಲೇಬೇಕು. ಹೀಗಿದ್ದ ಮೇಲೂ, ‘ನೀನು ಸತ್ತವರನ್ನು ಹೇಗೆ ಜೀವಂತಗೊಳಿಸುತ್ತೀ’ ಎಂದು ಇಬ್ರಾಹೀಮ್(ಅ) ಕೇಳಿದ್ದು ಏಕೆ? ಆ  ಧೈರ್ಯ ಅವರಲ್ಲಿ ಬಂದದ್ದು ಹೇಗೆ? ತಾನು ಹೀಗೆ ಪ್ರಶ್ನಿಸುವುದು ಅಧಿಕ ಪ್ರಸಂಗ ವಾದೀತು ಎಂಬ ಭಯ ಅವರಲ್ಲಿ ಮೂಡದಿರಲು  ಕಾರಣವೇನು?

ನಿಜವಾಗಿ,

ಲ್ಲಾಹನನ್ನು ಇವತ್ತು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೋ ಅದಕ್ಕಿಂತ ಭಿನ್ನವಾಗಿ ಇಬ್ರಾಹೀಮ್(ಅ)ರು ಅಲ್ಲಾಹನನ್ನು ಪರಿ ಭಾವಿಸಿದ್ದರು  ಎಂದೇ ಈ ಸಂಭಾಷಣೆ ಸ್ಪಷ್ಟಪಡಿಸುತ್ತದೆ. ಈ ಸಂಭಾಷಣೆಯಲ್ಲಿ ಗೆಳೆಯರಂಥ ಭಾವವಿದೆ. ತನಗೆ ಏನನಿಸುತ್ತದೋ ಅವೆಲ್ಲವನ್ನೂ ಕೇಳಿ  ತಿಳಿದುಕೊಳ್ಳುವ ಹಂಬಲವಿದೆ. ಅಲ್ಲಾಹನನ್ನು ಗೆಳೆಯನಾಗಿ ಮತ್ತು ಆಪ್ತನಾಗಿ ಮಾಡಿಕೊಂಡಾಗ ಮಾತ್ರ ಈ ಬಗೆಯ ಸಂಭಾಷಣೆ ಸಾಧ್ಯ. ನಾವು  ಗೆಳೆಯರನ್ನೋ ಆಪ್ತರನ್ನೋ ಭೇಟಿಯಾಗುವ ಸಂದರ್ಭಕ್ಕಾಗಿ ಕಾಯುತ್ತಿರುತ್ತೇವೆ. ಅವರು ಸಿಕ್ಕಿ ದರೆ ಅಪಾರ ಖುಷಿ ಪಡುತ್ತೇವೆ. ಅವರ ಜೊತೆ  ಗೊತ್ತಿರುವುದನ್ನು ಮತ್ತು ಗೊತ್ತಿಲ್ಲದಿರುವುದನ್ನೂ ಪ್ರಶ್ನಿಸಿ ತಿಳಿದುಕೊಳ್ಳುತ್ತೇವೆ. ಮಾರು ತ್ತರ ನೀಡುತ್ತೇವೆ. ಇಲ್ಲಿ ಪರದೆ ಎಂಬುದು ಇರುವುದೇ  ಇಲ್ಲ. ಅಲ್ಲಾಹನನ್ನು ಹೀಗೆ ಗೆಳೆಯನಂತೆ ಪರಿಭಾವಿಸಿಕೊಂಡು ನಮಗೆ ಮಾತಾಡಲು ಸಾಧ್ಯವೇ? ಅಲ್ಲಾಹ್ ಒಡೆಯ ನಿಜ. ಆದರೆ ಒಡೆಯ  ನಾಚೆಗೆ ಗೆಳೆಯನೂ ಆಗಬಲ್ಲನೇ? ಹಾಗೆ ಆಗುವಾಗ ಉಂಟಾಗುವ ರೋಮಾಂಚನ ಯಾವ ರೀತಿಯದ್ದಿರಬಹುದು? ಹಾಗಂತ,

ಇವತ್ತು ನಾವು ಅಲ್ಲಾಹನನ್ನು ಪರಿಭಾವಿಸಿಕೊಂಡಿರುವುದು ಹೇಗೆ? ಜನರನ್ನು ನರಕಕ್ಕೆ ಹಾಕಲು ಹೊಂಚು ಹಾಕಿ ಕುಳಿತಿರುವ ನಿರ್ದಯಿಯಂತೆ  ಆತನನ್ನು ಪ್ರಸ್ತುತಪಡಿಸುತ್ತಿದ್ದೇವೆಯೇ? ಅಲ್ಲಾಹ ನನ್ನು ಭೀತಿಯ ಅನ್ವರ್ಥ ರೂಪವಾಗಿ ಕಟ್ಟಿ ಕೊಡುತ್ತಿದ್ದೇವೆಯೇ? ಒಂದುವೇಳೆ, ಪ್ರವಾದಿ  ಇಬ್ರಾಹೀಮರಂತೆ ನಮ್ಮಲ್ಲಾರಾದರೂ ಅಲ್ಲಾಹನ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಪ್ರಶ್ನಿಸಿದರೆ ನಾವು ಇವತ್ತು ಹೇಗೆ ಉತ್ತರ ಕೊಡಬಲ್ಲೆವು?  ಉತ್ತರದಲ್ಲಿ ಎಷ್ಟು ಕಠಿಣ ಪದಗಳಿದ್ದೀತು? ಧ್ವನಿಯಲ್ಲಿ ಬೆದರಿಕೆಯ ಭಾವ ಇದ್ದೀತೇ? ಪ್ರಶ್ನಿಸಿದವನ ವಿಶ್ವಾಸವನ್ನೇ ಅನುಮಾನಕ್ಕೀಡು ಮಾಡುವ  ರೀತಿಯಲ್ಲಿ ಇದ್ದೀತೇ? ಆತನಿಗೆ ಧರ್ಮ ವಿರೋಧಿ ಎಂಬ ಪಟ್ಟ ಕಟ್ಟುವ ರೀತಿಯಲ್ಲಿ ಇದ್ದೀತೇ?

ಇನ್ನೊಂದು ಸಂಭಾಷಣೆ ನೋಡಿ.

‘ನಾನು ನಿನ್ನ ಪ್ರಭುವಾಗಿದ್ದೇನೆ ಮೂಸಾ. ನೀನು ಪಾದರಕ್ಷೆಯನ್ನು ಕಳಚಿ ಇಡು. ನೀನೀಗ ಪವಿತ್ರ ತುವಾ ಪರ್ವತದಲ್ಲಿದ್ದೀ.’
‘ಓ ಮೂಸಾ, ನಿನ್ನ ಬಲಗೈಯಲ್ಲಿ ಇರುವುದು ಏನು?’
‘ಇದು ನನ್ನ ಲಾಠಿ ಪ್ರಭು. ನಾನಿದನ್ನು ಊರಿಕೊಂಡು ನಡೆಯುತ್ತೇನೆ. ಇದರಿಂದ ಆಡುಗಳಿಗೆ ಎಲೆಗಳನ್ನು ಬೀಳಿಸುತ್ತೇನೆ. ಇದರಿಂದ ಇನ್ನೂ  ಅನೇಕ ಪ್ರಯೋಜನಗಳನ್ನು ಪಡೆಯುತ್ತೇನೆ.’
‘ಓ ಮೂಸಾ, ಆ ಬೆತ್ತವನ್ನೊಮ್ಮೆ ಎಸೆದು ಬಿಡು.’
ಮೂಸಾ ಹಾಗೆ ಮಾಡಿದ ಕೂಡಲೇ ಆ ಬೆತ್ತ ಹಾವಾಗಿ ಮಾರ್ಪಾಡಾಗುತ್ತದೆ. ಮೂಸಾ(ಅ) ಭಯಪಡುತ್ತಾರೆ. ಆಗ ಅಲ್ಲಾಹನು ಸಾಂತ್ವನ ಪಡಿಸುವುದು ಹೀಗೆ:
‘ಅದನ್ನು ಹಿಡ್ಕೊಳ್ಳಿ. ಹೆದರಬೇಡಿ. ಅದನ್ನು ನಾನು ಪೂರ್ವ ಸ್ಥಿತಿಗೆ ತರುತ್ತೇನೆ.’

ಪವಿತ್ರ ಕುರ್‌ಆನಿನ 20ನೇ ಅಧ್ಯಾಯವಾದ ತ್ವಾಹಾದಲ್ಲಿ ದಾಖಲಾಗಿರುವ ಈ ಇಡೀ ಸಂಭಾಷಣೆಯನ್ನೊಮ್ಮೆ ಗಮನಿಸಿ ನೋಡಿ. ಮೂಸಾರ  ಕೈಯಲ್ಲಿ ಇರುವುದು ಏನು ಅನ್ನುವುದು ಅಲ್ಲಾಹನಿಗೆ ಗೊತ್ತಿಲ್ಲ ಎಂದಲ್ಲ ಮತ್ತು ಅದನ್ನು ಅವರು ಯಾವು ದಕ್ಕೆಲ್ಲಾ ಉಪಯೋಗಿಸುತ್ತಾರೆ  ಎಂಬುದು ತಿಳಿದಿಲ್ಲ ಎಂದೂ ಅಲ್ಲ. ಬೆತ್ತ ಹಾವಾಗುತ್ತದೆ ಎಂದು ಅದನ್ನು ಎಸೆಯುವ ಮೊದಲೇ ಮೂಸಾರಿಗೆ ಅಲ್ಲಾಹನು ತಿಳಿಸಿ ಧೈರ್ಯ  ತುಂಬಬಹುದಿತ್ತು. ಒಡೆಯನ ವರ್ತನೆ ಸಾಮಾನ್ಯವಾಗಿ ಹಾಗೆಯೇ ಇರುತ್ತದೆ. ತನ ಗೆಲ್ಲವೂ ಗೊತ್ತು ಎಂಬ ಭಾವವನ್ನು ದಾಸನ ಮೇಲೆ  ಪ್ರಯೋಗಿಸುವ ಶೈಲಿ ಒಡೆಯನದು. ಆದರೆ ಅಲ್ಲಾಹನು ಇಲ್ಲಿ ಹಾಗೆ ಮಾಡಿಯೇ ಇಲ್ಲ. ಬೆತ್ತವನ್ನು ಎಸೆಯಲು ಹೇಳುತ್ತಾನೆ. ಅದಕ್ಕಿಂತ  ಮೊದಲು, ನಿನ್ನ ಕೈಯಲ್ಲಿರುವುದು ಏನು ಮತ್ತು ಅದು ಯಾಕೆ ಎಂದು ಗೆಳೆಯನಂತೆ ಪ್ರಶ್ನಿಸುತ್ತಾನೆ. ಮೂಸಾ(ಅ) ಕೂಡಾ ಹಾಗೆಯೇ  ಸಹಜವಾಗಿ ಉತ್ತರಿಸುತ್ತಾ ಹೋಗುತ್ತಾರೆ. ಅದುಬಿಟ್ಟು, ನೀನೇಕೆ ಪ್ರಶ್ನಿಸುತ್ತೀ, ನಿನಗೆ ಗೊತ್ತಲ್ಲವೇ ದೇವಾ.. ಎಂದು ಮರು ಪ್ರಶ್ನಿಸುವುದೇ ಇಲ್ಲ.  ಇಲ್ಲಿ ದಾಸ ಮತ್ತು ಒಡೆಯ ಎಂಬ ಭಾವದ ಆಚೆಗೆ ಇಬ್ಬರು ಗೆಳೆಯರು ಸರಾಗವಾಗಿ ಮಾತುಕತೆ ನಡೆಸಿದಂತೆ ತೋರುತ್ತದೆ. ಆದರೆ ಅಲ್ಲಾಹ್  ಗೆಳೆಯನಿಗಿಂತಲೂ ಮಿಗಿಲಾಗಿ ಒಡೆಯನೂ ಆಗಿದ್ದಾನೆ ಎಂಬುದನ್ನು ಬೆತ್ತ ಹಾವಾಗುವ ಮೂಲಕ ಸಾಬೀತುಪಡಿಸಲಾಗುತ್ತದೆ. ಆದರೆ ಅಲ್ಲೂ  ಅಲ್ಲಾಹನು ತನ್ನ ಮಹಿಮೆಯನ್ನು ಹೇಳುವ ಬದಲು, ‘ಅದನ್ನು ಹಿಡ್ಕೊಳ್ಳಿ, ಭಯ ಬೀಳಬೇಡಿ’ ಎಂದು ಸಾಂತ್ವನಿಸುವ ಮೂಲಕ ಗೆಳೆಯನಂಥ  ಭಾವವನ್ನೇ ಮುಂದುವರಿಸುತ್ತಾನೆ. ಇದೇವೇಳೆ,

‘ನೀನು ಮತ್ತು ನಿನ್ನ ಸಹೋದರ ಫಿರ್‌ಔನನ ಬಳಿಗೆ ಹೋಗಬೇಕು’ ಎಂದು ಅಲ್ಲಾಹನು ಮೂಸಾ(ಅ)ರ ಜೊತೆ ಹೇಳುತ್ತಾನೆ. ಆದರೆ,  ಅಲ್ಲಾಹನ ಆದೇಶವನ್ನು ಮರು ಮಾತಿಲ್ಲದೇ ಒಪ್ಪಿಕೊಂಡು ಹೊರಡಬೇಕಾಗಿದ್ದ ಮೂಸಾ(ಅ) ಹಾಗೆ ಮಾಡುವುದಿಲ್ಲ. ಅದರ ಬದಲು,

‘ಫಿರ್‌ಔನ್ ನಮ್ಮ ಮೇಲೆ ಅತಿರೇಕವೆಸಗಬಹುದು ಮತ್ತು ಮುಗಿ ಬೀಳಬಹುದು ಎಂಬ ಆತಂಕ ನಮಗಿದೆ’ ಎಂದು ಅಲ್ಲಾಹನಲ್ಲಿ ಹೇಳುತ್ತಾರೆ.  ಇದಕ್ಕೆ ಪ್ರತಿಯಾಗಿ, ಅಲ್ಲಾಹನು ಮೂಸಾರನ್ನು ಗದರಿಸಬಹುದಿತ್ತು. ‘ಫಿರ್‌ಔನ್ ಏನು ಮಾಡಬಲ್ಲ ಎಂಬುದು ನಿನಗಿಂತ ನನಗೆ ಗೊತ್ತು, ನೀನು  ಆತಂಕ ಪಡಬೇಕಾಗಿಲ್ಲ, ಹೇಳಿದ್ದನ್ನು ಮಾಡು..’ ಎಂದು ಆದೇಶದ ಧ್ವನಿಯಲ್ಲಿ ಹೇಳಬಹುದಿತ್ತು. ಆದರೆ ಅಲ್ಲಾಹನು, ‘ಹೆದರಬೇಡಿ, ನಾನು  ನಿಮ್ಮ ಜೊತೆ ಇದ್ದೇನೆ, ಎಲ್ಲವನ್ನೂ ಆಲಿಸುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ’ ಎಂದು ಆಪ್ತಭಾವದಲ್ಲಿ ಸಾಂತ್ವನಿಸುತ್ತಾನೆ. ಈ ಸಂಭಾಷಣೆಯಲ್ಲಿ  ಒಡೆಯ ಮತ್ತು ದಾಸ ಎಂಬುದಕ್ಕಿಂತ  ಮಿಗಿಲಾದ ಗೆಳೆತನದ ಭಾವ ಎದ್ದು ಕಾಣುತ್ತದೆ. ಅಲ್ಲದೇ, ‘ನನ್ನ ನಾಲಗೆಯಲ್ಲಿ ತೊಡಕಿದೆ ಪ್ರಭೂ,  ಅದನ್ನು ನೀಗಿಸು’ ಎಂದು ಮೂಸಾ(ಅ) ಅಲ್ಲಾಹ ನಲ್ಲಿ ಕೇಳಿಕೊಳ್ಳುತ್ತಾರೆ. ‘ಫಿರ್‌ಔನನೊಡನೆ ನಯವಾಗಿ ಮಾತಾಡಬೇಕು..’ ಎಂದು ಅಲ್ಲಾಹ ನು ಮೂಸಾರಿಗೆ ಹೇಳಿಕೊಡುತ್ತಾನೆ.

ಒಂದುರೀತಿಯಲ್ಲಿ, ಇದೊಂದು ಹೃದ್ಯ ಸಂಭಾಷಣೆ. ನೀನು ಹೀಗೀಗೆ ಮಾಡು ಎಂದು ಅಲ್ಲಾಹನು ಹೇಳುವಾಗ, ‘ನೀನು ಹೀಗೀಗೆ ನನಗೆ ಅನುಕೂಲತೆಗಳನ್ನು ಮಾಡಿಕೊಡು’ ಎಂದು ಮೂಸಾ(ಅ) ಹೇಳುತ್ತಾರೆ. ಅಂದಹಾಗೆ, ಮೂಸಾ(ಅ)ರ ಮನಸ್ಸಲ್ಲೇನಿದೆ ಎಂದು ಅಲ್ಲಾಹನಿಗೆ  ಮೊದಲೇ ಗೊತ್ತು ಮತ್ತು ಅಲ್ಲಾಹನಿಗೆ ಮೊದಲೇ ಗೊತ್ತು ಎಂಬುದಾಗಿ ಮೂಸಾರಿಗೂ(ಅ) ಗೊತ್ತು. ತಾಹಾ ಅಧ್ಯಾಯದ ಈ  ಸಂಭಾಷಣೆಯನ್ನು ಓದುವಾಗ, ನಾವು ಅಲ್ಲಾಹನನ್ನು ಹೇಗೆ ಪರಿಭಾವಿಸಿಕೊಳ್ಳಬೇಕು ಅನ್ನುವ ಸ್ಪಷ್ಟತೆಯೊಂದು ಸಿಗುತ್ತದೆ. ಅಲ್ಲಾಹ್ ಬೆತ್ತ ಹಿಡಿದು  ನಿಂತಿರುವ ಪೊಲೀಸ್ ಅಲ್ಲ. ಆತ ನಮ್ಮ ಗೆಳೆಯನೂ ಹೌದು, ಆಪ್ತನೂ ಹೌದು. ಗೆಳೆಯನಂಥ ಭಾವದಲ್ಲಿ ಆತನೊಂದಿಗೆ ಸಂಭಾಷಣೆ ನಡೆಸುವ  ಸಲುಗೆಯನ್ನು ನಾವು ಬೆಳೆಸಿಕೊಳ್ಳಬೇಕು. ಸಹಜವಾಗಿ ಮಾತಾಡಬೇಕು. ಪರದೆ ಇಲ್ಲದೇ ಆತನ ಜೊತೆ ಮಾತಾಡುತ್ತಿದ್ದೇನೆ ಅನ್ನುವ ಫೀಲಿಂಗ್  ಅನ್ನು ಬೆಳೆಸಿಕೊಳ್ಳಬೇಕು. ಸೌರ್ ಗುಹೆಯಲ್ಲಿ ತನ್ನ ಜೊತೆ ಇದ್ದ ಅಬೂಬಕರ್(ರ)ರನ್ನು ಅಲ್ಲಾಹನ ಪ್ರವಾದಿ(ಸ) ಸಾಂತ್ವನಿಸಿದ ರೀತಿಯನ್ನು  ಅತ್ತೌಬ ಅಧ್ಯಾಯದ 40ನೇ ವಚನದಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

‘ಖೇದಿಸಬೇಡಿ, ಅಲ್ಲಾಹ್ ನಮ್ಮ ಜೊತೆ ಇದ್ದಾನೆ.’

ಬನೀ ಇಸ್ರಾಈಲ್ ಸಮುದಾಯವನ್ನು ಕರಕೊಂಡು ಹೊರಟ ಮೂಸಾರನ್ನು(ಅ) ಫಿರ್‌ಔನ್ ಮತ್ತು ಸೇನೆ ಬೆನ್ನಟ್ಟಿ ಬರುತ್ತದೆ ಮತ್ತು ಸಮುದ್ರದ  ಎದುರು ಎರಡೂ ತಂಡಗಳು ಮುಖಾಮುಖಿ ಯಾಗುವ ಸನ್ನಿವೇಶ ಸೃಷ್ಟಿಯಾದಾಗ ಮೂಸಾ(ಅ) ಸಂಗಡಿಗ ರೊಂದಿಗೆ ಹೀಗೆ  ಹೇಳಿರುವುದಾಗಿ ಅಶ್ಶುಅರಾ ಅಧ್ಯಾಯದ 62ನೇ ವಚನದಲ್ಲಿ ಇದೆ,

‘ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ಖಂಡಿತ ವಾಗಿಯೂ ನನಗೆ ದಾರಿ ತೋರುವನು.’

ಲ್ಲಾಹನ ಮೇಲೆ ಎಂಥ ಅಚಂಚಲ ವಿಶ್ವಾಸವನ್ನು ತಾಳಬೇಕು ಎಂಬುದಕ್ಕೆ ಈ ಎರಡೂ ಘಟನೆಗಳು ಅತ್ಯುತ್ತಮ ಉದಾಹರಣೆ. ಪ್ರವಾದಿ  ಮುಹಮ್ಮದ್(ಸ) ಮತ್ತು ಪ್ರವಾದಿ ಮೂಸಾ(ಅ) ಅಲ್ಲಾಹನ ಮೇಲೆ ಎಂಥ ವಿಶ್ವಾಸವನ್ನು ಹೊಂದಿದ್ದರು ಅನ್ನುವುದನ್ನು ಇವೆರಡೂ  ಸೂಚಿಸುತ್ತದೆ. ಇದೇ ಮೂಸಾ(ಅ)ರು ತುವಾ ಪರ್ವತದಲ್ಲಿ ಅಲ್ಲಾಹನೊಂದಿಗೆ ನಡೆಸಿದ ಸಂಭಾಷಣೆಯ ವಿವರವನ್ನು ಅಲ್ ಅಅï‌ರಾಫ್  ಅಧ್ಯಾಯದಲ್ಲಿ ನೀಡಲಾಗಿದೆ. ‘ನನಗೆ ನಿನ್ನನ್ನು ಒಮ್ಮೆ ನೋಡಬೇಕು..’ ಎಂದು ಮೂಸಾ(ಅ) ಅಲ್ಲಾಹನಲ್ಲಿ ಹೇಳುತ್ತಾರೆ. ಹಾಗಂತ, ತಾನು ಹೀಗೆ  ಅರಿಕೆ ಮಾಡುವುದು ಸರಿಯೋ, ಇದು ಕೆಟ್ಟ ಆಸೆ ಆಗಲಾರದೇ, ಅಲ್ಲಾಹನಿಗೆ ಅವಿಧೇಯತೆ ತೋರಿದಂತೆ ಆಗಬಹುದೇ.. ಎಂದೆಲ್ಲಾ ಮೂಸಾ (ಅ) ಆಲೋಚಿಸುವುದಿಲ್ಲ ಮತ್ತು ಅಲ್ಲಾಹನು ಗದರಿಸುವುದೂ ಇಲ್ಲ. ‘ನೀನು ನನ್ನನ್ನು ನೋಡಲಾರೆ ಮೂಸಾ..’ ಎಂದು ಅಲ್ಲಾಹನು  ಹೇಳುತ್ತಾನೆ. ಬಳಿಕ ಅವರು ಮೂರ್ಛೆ ತಪ್ಪಿ ಬೀಳುತ್ತಾರೆ ಮತ್ತು ಎಚ್ಚರವಾದ ಕೂಡಲೇ, ಪಶ್ಚಾತ್ತಾಪ ಪಡುತ್ತಾರೆ, ನೀನು ಮಹಾ ಪರಿಶುದ್ಧನು  ಅನ್ನುತ್ತಾರೆ. ನಿಜವಾಗಿ,

ಲ್ಲಾಹನು ನಾವು ಕರೆದಾಗ ಉತ್ತರಿಸುವ ಕರುಣಾಮಯಿ ಶಕ್ತಿ. ನೀವು ನನ್ನನ್ನು ಸ್ಮರಿಸಿದರೆ ನಾನು ನಿಮ್ಮನ್ನು ಸ್ಮರಿಸುವೆನು ಎಂದು (2:152)  ಅಲ್ಲಾಹನು ಹೇಳಿದ್ದಾನೆ. ‘ನೀವು ಎಲ್ಲಿದ್ದರೂ ನಾನು ನಿಮ್ಮ ಜೊತೆ ಇದ್ದೇನೆ’ (57:4) ಎಂದೂ ಹೇಳಿದ್ದಾನೆ. ಇಷ್ಟು ಹತ್ತಿರ ವಾಗಿರುವ ಮತ್ತು  ಆಪ್ತವಾಗಿರುವ ಅಲ್ಲಾಹನನ್ನು ಹೃದಯದ ಹತ್ತಿರ ತಂದು ಮಾತಾಡಿಸುವ ಸಲುಗೆಯನ್ನು ನಾವು ಬೆಳೆಸಿಕೊಳ್ಳಬೇಕು. ಆತನೊಂದಿಗೆ ಗೆಳೆತನವನ್ನು  ಬೆಳೆಸಿಕೊಂಡಾಗ ಸಂಭಾಷಣೆಗೆ ಮಿತಿಯೂ ಇರುವುದಿಲ್ಲ. ಪರದೆಯೂ ಇರುವುದಿಲ್ಲ. ಅಂದುಕೊಂಡದ್ದನ್ನೆಲ್ಲ ಆತನೊಂದಿಗೆ ಹೇಳಿ  ಹಗುರವಾಗಬಹುದು. ತನಗೆ ಬೇಕಾದುದನ್ನೆಲ್ಲ ಕೇಳಿ ಸಮಾಧಾನಪಟ್ಟುಕೊಳ್ಳಬಹುದು. ಮಾತ್ರವಲ್ಲ, ನೀವು ಕೇಳಿದರೆ ನಾನು ಉತ್ತರಿಸುತ್ತೇನೆ  ಎಂದು ಆತನೇ ಹೇಳಿರುವುದರಿಂದ ಆ ಬಗ್ಗೆ ದೃಢವಿಶ್ವಾಸವನ್ನೂ ತಾಳಬೇಕು. ಶತ್ರುಗಳು ಸುತ್ತುವರಿದಿದ್ದಾಗಲೂ ಸೌರ್ ಗುಹೆಯೊಳಗಿದ್ದ  ಪ್ರವಾದಿಯವರು ತಾಳಿದ್ದ ಅದೇ ದೃಢವಿಶ್ವಾಸ. ಮುಂದೆ ಸಮುದ್ರ ಮತ್ತು ಬೆನ್ನ ಹಿಂದೆ ಫಿರ್‌ಔನ್ ಎಂಬ ಸ್ಥಿತಿ ಇದ್ದಾಗಲೂ ಪ್ರವಾದಿ ಮೂಸಾ (ಅ)ರಲ್ಲಿದ್ದ ಅದೇ ಅಚಂಚಲ ವಿಶ್ವಾಸ. ಅಲ್ಲಾಹ್ ನನ್ನ ಜೊತೆ ಇದ್ದಾನೆ ಎಂಬ ಭಾವದೊಂದಿಗೆ ಅಲ್ಲಾಹನೊಂದಿಗೆ ನಡೆಸುವ ಸಂಭಾಷಣೆಯಲ್ಲಿ  ನಿರಾಶೆಗೆ ಜಾಗವೇ ಇರುವುದಿಲ್ಲ, ಇರಬಾರದು ಕೂಡಾ.

Tuesday, May 21, 2024

ಗೆಲ್ಲಿಸಿದ ಸೋಶಿಯಲ್ ಮೀಡಿಯಾವೇ ಸೋಲಿಸಲಿದೆಯೇ?




1. ಟೈಮ್ಸ್ ನೌ
2. ಝೀ ನ್ಯೂಸ್
3. ರಿಪಬ್ಲಿಕ್ ಭಾರತ್
4. ಸಿಎನ್-ನ್ಯೂಸ್ 18
5. ಇಂಡಿಯಾ ಟಿವಿ
6. ಟಿವಿ ಟುಡೇ ನೆಟ್‌ವರ್ಕ್
7. ಇಂಡಿಯಾ ಟುಡೇ
8. ಆಜ್‌ತಕ್

ಒಂದುವೇಳೆ, ಇವು ಮತ್ತು ಇಂಥ ಇನ್ನಿತರ ಟಿವಿ ಚಾನೆಲ್‌ಗಳು ‘ಮೋದಿ ಕಾವಲು’ಗಾರರಾಗಿ ಬದಲಾಗದೇ ಇರುತ್ತಿದ್ದರೆ ನಮಗೋರ್ವ ಧ್ರುವ್ ರಾಠಿ ಸಿಗ್ತಾ ಇದ್ದರೇ? ರವೀಶ್ ಕುಮಾರ್ ಈ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದರೇ? ಓರ್ವ ಆಕಾಶ್ ಬ್ಯಾನರ್ಜಿ, ಮುಹಮ್ಮದ್ ಝುಬೇರ್, ಕುನಾಲ್ ಕಾಮ್ರಾ, ಕುಮಾರ್ ಶ್ಯಾಮ್‌ಗಳು ಜನರ ನಾಲಿಗೆಯ ತುದಿಯಲ್ಲಿ ಇರುತ್ತಿದ್ದರೇ?

ಇವು ಬರೇ ಪ್ರಶ್ನೆಗಳಲ್ಲ

ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನಲ್ಲಿ  ತಜ್ಞರಾಗಿರುವ ಯಾಮಿನಿ ಅಯ್ಯರ್ ಮತ್ತು ನೀಲಾಂಜನ್ ಸಿರ್ಕಾರ್ ಎಂಬಿಬ್ಬರು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸುತ್ತಾಡಿದಾಗ ಸಿಕ್ಕ ಅನುಭವವನ್ನು ದಿ ಹಿಂದೂ ಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮೋಹನ್‌ಲಾಲ್ ಗಂಜ್ ಕ್ಷೇತ್ರದ ರಾವತ್ ಸಮುದಾಯದ ಯುವಕ ಧ್ರುವ್ ರಾಠಿಯ ದೊಡ್ಡ ಫ್ಯಾನ್. ನಿರಂತರವಾಗಿ ಧ್ರುವ್ ರಾಠಿಯ ವೀಡಿಯೋ ವೀಕ್ಷಿಸುತ್ತಿರುವುದಾಗಿ ಆತ ಇವರೊಂದಿಗೆ ಹೇಳಿಕೊಂಡ. ಹಾಗಂತ, ಈತ ಬಿಜೆಪಿ ಬೆಂಬಲಿಗ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವ ಶಾಲಿಯಾಗಿರುವ ಮೋಹನ್‌ಲಾಲ್ ಗಂಜ್ ಕ್ಷೇತ್ರದ ಯುವಕನ ಬಗ್ಗೆಯೂ ಈ ಇಬ್ಬರು ಬರೆದಿದ್ದಾರೆ. ಈತ ಜಾಟ್ ಸಮು ದಾಯದವ. ಬಹಿರಂಗವಾಗಿ ಆತ ರಾಜಕೀಯೇತರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಆದರೆ, ಬಿಜೆಪಿಯ ಬಗ್ಗೆ ತೀವ್ರ ಅಸಮಾ ಧಾನವಿದೆ. ಆದರೆ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರೆ ತೊಂದರೆ ಎದುರಾಗಬಹುದು ಎಂಬುದು ಆತನ ಅಭಿಪ್ರಾಯ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕುರ್ಮಿ ಸಮುದಾಯ ಬಹಳ ಪ್ರಭಾವಿಯಾಗಿದೆ. ಮುಖ್ಯವಾಗಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಇದೇ ಸಮುದಾಯದ ಬಾಹುಳ್ಯವಿದೆ. ಇಲ್ಲಿನ ಯುವ ತಲೆಮಾರಿನಲ್ಲಿ ಬಿಜೆಪಿಯ ಬಗ್ಗೆ ಮತ್ತು ಮುಖ್ಯ ವಾಹಿನಿ ಟಿವಿ ಚಾನೆಲ್‌ಗಳ ಸುದ್ದಿಗಳ ಬಗ್ಗೆ ತೀವ್ರ ಆಕ್ಷೇಪವಿದೆ. 2019ರಲ್ಲಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ 2022ರ ವಿಧಾನಸಭಾ ಚುನಾವಣೆಯಲ್ಲಿ 5ರಲ್ಲಿ 3 ಸ್ಥಾನಗಳನ್ನೂ ಬಿಜೆಪಿ ಕಳಕೊಂಡಿತ್ತು. ಇದೇ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಜಾಟ್ ಸಮುದಾಯದ ಯುವಕರ ಗುಂಪು ತಾವು ನಿರಂತರವಾಗಿ ರವೀಶ್ ಕುಮಾರ್ ವೀಡಿಯೋ ವೀಕ್ಷಿಸುತ್ತಿರುವುದಾಗಿ ಹೇಳಿರುವುದನ್ನು ಈ ಇಬ್ಬರು ತಜ್ಞರು ಬರ ಕೊಂಡಿದ್ದಾರೆ. ಹಾಗೆಯೇ, ಒಂದುವೇಳೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾರಣ ಧ್ರುವ್ ರಾಠಿ ಎಂದು ಓರ್ವ ಮುಸ್ಲಿಮ್ ಯುವಕ ಹೇಳಿರುವುದನ್ನೂ ಇವರು ಉಲ್ಲೇಖಿಸಿದ್ದಾರೆ.

ನಿಜವಾಗಿ,

ಈ ಬಾರಿಯ ಚುನಾವಣೆ ಬಿಜೆಪಿಯ ಟಿವಿ ಚಾನೆಲ್‌ಗಳು ಮತ್ತು ವಿರೋಧ ಪಕ್ಷಗಳ ಸೋಶಿಯಲ್ ಮೀಡಿಯಾಗಳ ನಡುವೆ ನಡೆಯುತ್ತಿದೆ ಎನ್ನುವುದೇ ಹೆಚ್ಚು ಸರಿ. ಅದರಲ್ಲೂ ಯೂಟ್ಯೂಬ್ ಚಾನೆಲ್‌ಗಳ ಪಾತ್ರ ಬಹಳ ಹಿರಿದು. 2019ರಲ್ಲೂ ಬಹುತೇಕ ಇಂಥದ್ದೇ  ವಾತಾವರಣ ಇತ್ತು. ಈಗಿನಷ್ಟಲ್ಲದಿದ್ದರೂ ಸೋಶಿಯಲ್ ಮೀಡಿಯಾ ಜನಪ್ರಿಯವಾಗಿಯೇ ಇತ್ತು. ಪ್ರಧಾನಿ ಮೋದಿಯನ್ನು ಕಾವಲು ಕಾಯುವ ಟಿವಿ ಚಾನೆಲ್‌ಗಳು, ಪತ್ರಿಕೆಗಳು ಮತ್ತು ಬಿಜೆಪಿ ಪ್ರಣೀತ ಸೋಶಿಯಲ್ ಮೀಡಿಯಾ ಒಂದುಕಡೆಯಾದರೆ ಇನ್ನೊಂದು ಕಡೆ ಅವುಗಳ ಪ್ರೊಪಗಾಂಡಾ ವನ್ನು ಪ್ರಶ್ನಿಸುವ ಸೋಶಿಯಲ್ ಮೀಡಿಯಾಗಳಿದ್ದುವು. ಒಂದು ವೇಳೆ, ಪುಲ್ವಾಮ ಮತ್ತು ರಾಮಮಂದಿರ ಇಶ್ಯೂಗಳೆರಡು ಅಲ್ಲದೇ ಇರುತ್ತಿದ್ದರೆ ಬಿಜೆಪಿ 313 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕಡಿಮೆ ಇತ್ತು. ಆದರೆ,

ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 2014 ಮತ್ತು 2019ರ ಚುನಾವಣಾ ಗೆಲುವಿಗೆ ಬಿಜೆಪಿ ಯಾವ ಮಾಧ್ಯಮವನ್ನು ಬಳಸಿಕೊಂಡಿತ್ತೋ ಅದೇ ಸೋಶಿಯಲ್ ಮೀಡಿಯಾವೇ ಇವತ್ತು ಬಿಜೆಪಿಗೆ ಸವಾಲಾಗಿ ನಿಂತಿದೆ. ಮುಖ್ಯವಾಗಿ 2019ರಿಂದ ಈ 2024ರ ನಡುವೆ 5 ವರ್ಷಗಳು ಕಳೆದಿವೆ. ಇದು ಸೋಶಿಯಲ್ ಮೀಡಿಯಾಕ್ಕೆ ಸಂಬಂಧಿಸಿ ಮಹತ್ವಪೂರ್ಣ ಅವಧಿ. ಈ ಅವಧಿ ಯಲ್ಲಿ ಕೋಟ್ಯಂತರ ಯುವಕರು ಪದವೀಧರರಾಗಿ ಶಿಕ್ಷಣ ಸಂಸ್ಥೆಗಳಿಂದ  ಹೊರಬಂದಿದ್ದಾರೆ. ಶಾಲೆಗಳಲ್ಲಿ ಕಲಿಯುತ್ತಿದ್ದವರು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಕಾಲೇಜು ಮೆಟ್ಟಿಲು ಹತ್ತಿದವರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೋನಾ ನಂತರ ಹರೆಯದವರ ಕೈಗೂ ಮೊಬೈಲ್ ಬಂದಿದೆ. ಇದು ಒಂದು ಭಾಗವಾದರೆ, ಇನ್ನೊಂದು ಭಾಗ ಸಾಮಾನ್ಯ ನಾಗರಿಕರದ್ದು. ಕಳೆದೈದು ವರ್ಷಗಳಲ್ಲಿ ಮೊಬೈಲ್ ವೀಕ್ಷಣೆ ಮತ್ತು ವಿಷಯಗಳ ಆದ್ಯತೆಯಲ್ಲಿ ಇವರು ಹೆಚ್ಚು ಪ್ರಬುದ್ಧರಾಗಿದ್ದಾರೆ. ಕಂಟೆಂಟ್  ಆಧಾರಿತ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಾರಂಭಿಸಿದ್ದಾರೆ. 2010ರಿಂದ 2019ರ ನಡುವೆ ಜನರು ಸಾಮಾನ್ಯವಾಗಿ ಟಿವಿ ಚಾನೆಲ್‌ಗಳ ನರೇಟಿವ್‌ಗಳ ಮೇಲೆಯೇ ಹೆಚ್ಚು ನಂಬಿಕೆ ಇಡುತ್ತಿದ್ದರು. ಕಂಟೆAಟ್‌ಗಳಿಗಿಂತ  ಟಿವಿ ಚಾನೆಲ್‌ಗಳ ಮೇಲಿನ ನಂಬಿಕೆಯೇ ಅವರನ್ನು ನಿಯಂತ್ರಿಸುತ್ತಿತ್ತು. ವಿವಿಧ ಹೆಸರುಗಳಲ್ಲಿ ಮೋದಿ ಪರ ನೀಡುತ್ತಿದ್ದ ವಿವಿಧ ಕಾರ್ಯಕ್ರಮಗಳ ಮೇಲೆ ವಿಶ್ವಾಸವನ್ನೂ ತಾಳುತ್ತಿದ್ದರು. ಆದರೆ,

2019ರ ಬಳಿಕ ಆಗಿರುವ ಬಹಳ ದೊಡ್ಡ ಬದಲಾವಣೆ ಏನೆಂದರೆ, ಗೋಧಿ ಮೀಡಿಯಾಗಳಿಂದ ರೋಸಿ ಹೋದ ಪತ್ರಕರ್ತರು ಪರ್ಯಾಯ ಮಾಧ್ಯಮಗಳನ್ನು ಪ್ರಬಲವಾಗಿ ಬಳಸಿಕೊಂಡದ್ದು. ಮುಖ್ಯವಾಗಿ, ಯೂಟ್ಯೂಬ್‌ನಲ್ಲಿ ಇವರೆಲ್ಲ ನೆಲೆ ಕಂಡುಕೊಂಡರು. ಟಿವಿ ಚಾನೆಲ್‌ಗಳ ಏಕಮುಖ ಧೋರಣೆಯನ್ನು ಖಂಡಿಸಿ ಅಲ್ಲಿಂದ ಹೊರಬಂದವರು ಮತ್ತು ಇನ್ನಿತರ ಜರ್ನ ಲಿಸ್ಟ್ ಗಳಿಗೆ  ಯೂಟ್ಯೂಬ್ ಅತ್ಯಂತ ಯೋಗ್ಯ ತಾಣವಾಯಿತು. ವರಮಾನಕ್ಕೆ ದಾರಿಯೂ ಆಯಿತು. ಇನ್ನೊಂದು ಕಡೆ ಟಿವಿ ಚಾನೆಲ್‌ಗಳ ಕಾರ್ಯಕ್ರಮಗಳನ್ನು ಪೇಲವಗೊಳಿಸುವಷ್ಟು ಗಟ್ಟಿ ಕಂಟೆAಟ್‌ಗಳನ್ನು ಇವರು ನೀಡತೊಡಗಿದರು. ನಿಖರ ಮಾಹಿತಿ, ಅಂಕಿ-ಅಂಶ, ಸಾಕ್ಷ್ಯ ಆಧಾರಿತ ವಾದಗಳ ಮೂಲಕ ಟಿವಿ ಚಾನೆಲ್‌ಗಳಿಗೆ ಸವಾಲು ಹಾಕತೊಡಗಿದರು. ಇವತ್ತು ದೇಶದಾದ್ಯಂತ 1 ಲಕ್ಷವನ್ನೂ ದಾಟಿ ಸಬ್‌ಸ್ಕ್ರೈಬರ್‌ಗಳುಳ್ಳ 40 ಸಾವಿರಕ್ಕಿಂತಲೂ ಅಧಿಕ ಯೂಟ್ಯೂಬ್ ಚಾನೆಲ್‌ಗಳಿವೆ. ಇವುಗಳಲ್ಲಿ ರಾಜಕೀಯ ಮತ್ತು ರಾಜಕೀಯೇತರ ವಿಷಯಗಳಿಗೆ ಸೀಮಿತವಾದ ಯೂಟ್ಯೂಬ್ ಗಳಿವೆಯಾದರೂ ರಾಜಕೀಯ ಯೂಟ್ಯೂಬ್‌ಗಳೇ ಅಧಿಕ ಎಂಬುದೂ ಗಮನಾರ್ಹ. ಅಂದಹಾಗೆ,

ಒಂದು  ಲಕ್ಷ ಸಬ್‌ಸ್ಕ್ರೈ ಬರ್ ಹೊಂದುವುದು ಸುಲಭ ಅಲ್ಲ. ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೂ ಒಂದು ಯೂಟ್ಯೂಬ್ ಚಾನೆಲ್ ಲಕ್ಷ ಸಬ್‌ಸ್ಕೆöçÊಬರ್ ಗಡಿ ದಾಟುವುದಕ್ಕೆ ಬಹುತೇಕ ಬಾರಿ ಯಶಸ್ವಿಯಾಗುವುದಿಲ್ಲ. ಜನರು ಕಾರ್ಯಕ್ರಮ ವೀಕ್ಷಿಸಿದರೂ ಸಬ್‌ಸ್ಕ್ರೈಬ್  ಆಗುವುದಿಲ್ಲ. ಈ ಚಾನೆಲನ್ನು ಬೆಂಬಲಿಸಬೇಕು ಎಂಬ ಭಾವ ವೀಕ್ಷಕರಲ್ಲಿ ಮೂಡುವವರೆಗೆ ಚಾನೆಲ್  ಹೆಚ್ಚಾಗುವುದಿಲ್ಲ. ಇವತ್ತು ಧ್ರುವ್ ರಾಠಿ ಮತ್ತು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಸಬ್‌ಸ್ಕ್ರೈಬನ್ನೂ ದಾಟಿದೆ. ಇವರಿಬ್ಬರೂ ಮೋದಿ ಸರಕಾರದ ಪ್ರಬಲ ಟೀಕಾಕಾರರೂ ಆಗಿದ್ದಾರೆ. ಮಾತ್ರವಲ್ಲ, ತಮ್ಮ ವಿರೋಧವನ್ನು ಬರಿದೇ ವ್ಯಕ್ತಪಡಿಸದೇ ಅತ್ಯಂತ ಪ್ರಬಲ ಸಾಕ್ಷ್ಯಾಧಾರಗಳನ್ನೂ ಅದಕ್ಕೆ ಒದಗಿಸುತ್ತಿದ್ದಾರೆ. ಮೋದಿ ಪರ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಲು ಸಾಧ್ಯವೇ ಇಲ್ಲದ ಅತ್ಯಂತ ಶಕ್ತಿಶಾಲಿ ಕಾರ್ಯಕ್ರಮಗಳನ್ನು ಇವರು ನೀಡುತ್ತಾ ಬಂದಿದ್ದಾರೆ. 2014ರಿಂದ ಒಂದು ಬಗೆಯ ಸುದ್ದಿಯನ್ನು ಆಲಿಸುತ್ತಾ ಬಂದಿ ರುವ ಜನರಿಗೆ ಇದೀಗ ಅದನ್ನು ಪ್ರಶ್ನಿಸುವ ರೀತಿಯ ಕಾರ್ಯ ಕ್ರಮಗಳು ಆಕರ್ಷಕ ಅನ್ನಿಸತೊಡಗಿವೆ. ಟಿವಿ ಚಾನೆಲ್‌ಗಳಿಗಿಂತ ಯೂಟ್ಯೂಬ್ ಚಾನೆಲ್‌ಗಳ ಜರ್ನಲಿಸ್ಟ್ ಗಳು  ಕೊಡುವ ಸಾಕ್ಷ್ಯ  ಆಧಾರಿತ ಮತ್ತು ವಿಷಯ ಆಧಾರಿತ ಕಾರ್ಯಕ್ರಮಗಳು ಪ್ರಭಾವ ಬೀಳತೊಡಗಿವೆ. 2014ರ ಯುವ ಸಮೂಹವು ಈ 2024ರ ವೇಳೆಗೆ ಹೆಚ್ಚು ಮಾಗಿದೆ ಮತ್ತು ಅನುಭವಿಯಾಗಿದೆ. ಭ್ರಮೆ ಮತ್ತು ಭಾವನೆಯಿಂದ ಹೊರಬಂದು ವಾಸ್ತವದ ಆಧಾರದಲ್ಲಿ ಅಭಿಪ್ರಾಯಗಳನ್ನು ಕಟ್ಟುವ ತಿಳುವಳಿಕೆ ಬಂದಿದೆ. ಅಂದಹಾಗೆ,

ಇಂಥ  ಬದಲಾವಣೆಗಳು ಅದ್ಭುತ ಏನಲ್ಲ. ಎಲ್ಲ ಕಾಲಗಳಲ್ಲೂ ಈ ಬಗೆಯ ಪರಿವರ್ತನೆ ಆಗುತ್ತಲೇ ಇರುತ್ತದೆ. 2004ರಿಂದ 2014ರ ವರೆಗಿನ ಕಾಂಗ್ರೆಸ್ ಅಧಿಕಾರಾವಧಿಯಲ್ಲೂ ಈ ವಿಚಾರ ಬದಲಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನ ಮತ್ತು ನಿರ್ಭಯ ಪ್ರಕರಣಗಳು ಸಮಾಜದ ವಿಚಾರಧಾರೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದುವು. ಈ ಹಿಂದೆ ಕಾಂಗ್ರೆಸ್‌ಗೆ ಮತ ಚಲಾಯಿಸಿದವರೇ ಬಿಜೆಪಿಗೆ ಮತ ಚಲಾಯಿಸಿದರು. ಆದರೆ, 2014ರ ಬಳಿಕ ಆದ ಮಹತ್ತರ ಬದಲಾವಣೆ ಏನೆಂದರೆ, ಬಿಜೆಪಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಗಳನ್ನು ಮುಖ್ಯವಾಹಿನಿಯ ಟಿವಿ ಚಾನೆಲ್ ಗಳು ವಹಿಸಿಕೊಂಡು ಮಾತಾಡಲು ಪ್ರಾರಂಭಿಸಿದ್ದು. ಮುಸ್ಲಿಮರನ್ನು ಹೊರೆಯಂತೆ, ದೇಶದ್ರೋಹಿಗಳಂತೆ, ಹಿಂದೂ ವಿರೋಧಿ ಗಳಂತೆ ಮತ್ತು ಪಾಕ್, ಸೌದಿ ನಿಷ್ಠರಂತೆ ಬಿಂಬಿಸುತ್ತಿದ್ದ ಬಲಪಂಥೀಯ ಸೋಶಿಯಲ್ ಮೀಡಿಯಾಗಳ ವಿವರಣೆಗಳನ್ನೇ ಇವು ಅನಾಮತ್ತಾಗಿ ಎತ್ತಿಕೊಂಡು ಅದೇ ಭಾಷೆಯಲ್ಲಿ ಮಾತಾಡತೊಡಗಿದುವು. ಈ 2024ರಲ್ಲಿ ಗೋಧಿ ಮೀಡಿಯಾಗಳ ಆ್ಯಂಕರ್‌ಗಳು ಮತ್ತು ಅವರ ಭಾಷೆಯನ್ನು 2010ಕ್ಕೆ ಹೋಲಿಸಿ ನೋಡಿದಾಗ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ.

2010ರ ಆಸುಪಾಸಿನಲ್ಲಿ ಮುಸ್ಲಿಮ್ ದ್ವೇಷ ಎಂಬುದು ಚಾನೆಲ್‌ಗಳ ಅಧಿಕೃತ ಭಾಷೆ ಆಗಿರಲಿಲ್ಲ. ಹಿಂದೂ-ಮುಸ್ಲಿಮ್ ಇಶ್ಯೂವನ್ನು ನಿರಂತರ ಎತ್ತುತ್ತಾ ಮತ್ತು ಅದರ ಮೇಲೆ ಏಕಮುಖ ಕಂಟೆಂಟ್  ತಯಾರಿಸುತ್ತಾ ಏಕಮುಖವಾಗಿ ನಡ ಕೊಳ್ಳುತ್ತಿರಲಿಲ್ಲ. ಬಿಜೆಪಿ ತುಂಬಿದ್ದೇ  ಈ ನಿರ್ವಾತವನ್ನು. ಅದು ಹಿಂದೂ-ಮುಸ್ಲಿಮ್ ಇಶ್ಯೂವನ್ನು ಸೋಶಿಯಲ್ ಮೀಡಿಯದಲ್ಲಿ ಮುನ್ನೆಲೆಗೆ ತಂದಿತು. ಮುಖ್ಯವಾಗಿ ಮುಸ್ಲಿಮ್ ದ್ವೇಷ ಭಾವ ಸಾರ್ವಜನಿಕರಲ್ಲಿ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಪ್ರತಿ ವೈಯಕ್ತಿಕ ಪ್ರಕರಣಕ್ಕೂ ಧರ್ಮದ ಬಣ್ಣ ಬಳಿದು ವ್ಯಾಖ್ಯಾನಿಸತೊಡಗಿತು. ಮುಸ್ಲಿಮರ ಜನಸಂಖ್ಯೆ, ಲವ್ ಜಿಹಾದ್, ಅಸುರಕ್ಷಿತ ಹಿಂದೂ ಹೆಣ್ಮಕ್ಕಳು, ಮುಸ್ಲಿಮರ ಪಾಲಾಗುತ್ತಿರುವ ಭೂಮಿ, ಭಯೋತ್ಪಾದನೆ, ಕಾಶ್ಮೀರದ ಪಂಡಿತರ ಮೇಲಿನ ಅನ್ಯಾಯ, ಪಾಕಿಸ್ತಾನದ ಮಸಲತ್ತು, ಬಾಂಗ್ಲಾದಿಂದ  ಮುಸ್ಲಿಮರ ನುಸುಳುವಿಕೆ, ಇಂಡಿಯನ್ ಮುಜಾಹಿದೀನ್, ಅಲ್ ಖೈದಾ, ಹರ್ಕತುಲ್ ಅನ್ಸಾರ್, ಐಸಿಸ್.. ಇತ್ಯಾದಿ ಇತ್ಯಾದಿ ಮುಸ್ಲಿಮ್ ಕೇಂದ್ರಿತ ವಿಷಯಗಳನ್ನು ಕ್ರೋಢೀಕರಿಸಿ ನಿರಂತರ ಸೋಶಿಯಲ್ ಮೀಡಿಯದಲ್ಲಿ ನರೇಟಿವ್‌ಗಳನ್ನು ಸೃಷ್ಟಿಸಿತು. ಟಿವಿ ಚಾನೆಲ್‌ಗಳಲ್ಲಿ ಸಂದರ್ಭಾನುಸಾರ ಮಾತ್ರ ಚರ್ಚೆಗೊಳಗಾಗುತ್ತಿದ್ದ ಇಂಥ ವಿಷಯಗಳನ್ನು ಬಿಜೆಪಿ ಐಟಿ ಸೆಲ್ ದಿನದ 24 ಗಂಟೆಯೂ ಚರ್ಚಿಸಲು ಮತ್ತು ವಾಟ್ಸಪ್‌ನಲ್ಲಿ ಹರಿಬಿಡಲು ಪ್ರಾರಂಭಿಸಿದAತೆಯೇ ಜನರು ಆಕರ್ಷಿತರಾದರು. ಅವರಿಗೂ ಹೌದು ಅನ್ನಿಸತೊಡಗಿತು. ಅವರೂ ಮಾತಾಡತೊಡಗಿದರು. ಬಳಿಕ ಇದು ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳ ಪಡಸಾಲೆಗೂ ಪ್ರವೇಶಿಸಿತು. ಹೀಗೆ ಬಿಜೆಪಿ ಐಟಿ ಸೆಲ್ ಸೃಷ್ಟಿಸಿದ ಪ್ರೊಪಗಾಂಡವು ಟಿವಿ ಮತ್ತು ಪತ್ರಿಕೆಗಳ ಅಧಿಕೃತ ಭಾಷೆಯಾಗಿ ಮತ್ತು ನಿರಂತರ ಕಾರ್ಯಕ್ರಮಗಳ ವಸ್ತುವಾಗಿ ಮಾರ್ಪಟ್ಟಿತು. ಆದರೆ, ಇದೀಗ ಅದೇ ಸೋಶಿಯಲ್ ಮೀಡಿಯಾ ದಿಂದ ಬಿಜೆಪಿ ತೀವ್ರ ಪ್ರತಿರೋಧವನ್ನು ಎದು ರಿಸುತ್ತಿದೆ. ಯಾವ ಮಾಧ್ಯಮವನ್ನು ಬಳಸಿ ಅದು ಅಧಿಕಾರಕ್ಕೆ ಬಂತೋ ಅದೇ ಮೀಡಿಯಾ ಮೂಲಕವೇ ಧ್ರುವ್ ರಾಠಿ, ರವೀಶ್ ಕುಮಾರ್ ಮತ್ತು ಅಸಂಖ್ಯ ಯೂಟ್ಯೂಬರ್‌ಗಳು ಸಡ್ಡು ಹೊಡೆಯುತ್ತಿದ್ದಾರೆ. ಇವರ ಜೊತೆಗೇ ಅಸಂಖ್ಯ ಯೂಟ್ಯೂಬ್ ಚಾನೆಲ್‌ಗಳೂ ಬಿಜೆಪಿ ಸುಳ್ಳುಗಳಿಗೆ ಕನ್ನಡಿ ಹಿಡಿಯುತ್ತಿವೆ. ಅಧಿಕಾರಕ್ಕೇರಲು ಬಿಜೆಪಿ ಬಳಸಿದ ಮೆಟ್ಟಿಲನ್ನೇ ಇದೀಗ ವಿರೋಧ ಪಕ್ಷಗಳೂ ಬಳಸುತ್ತಿವೆ. ಇದರಿಂದ ನಿಜಕ್ಕೂ ಅನಾಥವಾಗಿರುವುದು ಟಿವಿ ಚಾನೆಲ್‌ಗಳು. ಬಿಜೆಪಿಯನ್ನು ನಂಬಿ ಅದರ ಕಾಲಬುಡಕ್ಕೆ ತನ್ನನ್ನು ಒಡ್ಡಿಕೊಂಡ ಇವುಗಳೆಲ್ಲ ಇದೀಗ ಜನರಿಂದಲೂ ಮತ್ತು ವಿರೋಧ ಪಕ್ಷಗಳಿಂದಲೂ ತಿರಸ್ಕೃತಗೊಂಡ ಸ್ಥಿತಿಯಲ್ಲಿದೆ. ಅವುಗಳಲ್ಲಿ ಗಟ್ಟಿಯಾದ ಕಂಟೆಂಟ್ ಗಳಿಲ್ಲ. ಕಣ್ಣು ಮುಚ್ಚಿ ಮೋದಿಯನ್ನು ಬೆಂಬಲಿಸುತ್ತಾ ಬಂದಿರುವ ಅವುಗಳಿಗೆ ದಿಢೀರನೇ ಪಥ ಬದಲಿಸುವುದಕ್ಕೂ ಆಗುವುದಿಲ್ಲ. ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಅವುಗಳು ಇದೀಗ ಮೋದಿ ವಿರೋಧಿ ನೀತಿ ಅಳವಡಿಸಿಕೊಂಡರೆ ಮತ್ತಷ್ಟು ನಗೆಪಾಟಲಿಗೀಡಾಗುವ ಅವಕಾಶವೂ ಇದೆ. ಒಂದAತೂ ಸ್ಪಷ್ಟ,

ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ ಯಾರೂ ಹೆಚ್ಚು ಸಮಯ ಬಾಳುವುದಿಲ್ಲ. ಯಾವ ಸುಳ್ಳಿಗೂ ದೀರ್ಘ  ಆಯುಷ್ಯವಿಲ್ಲ.


Saturday, May 18, 2024

ನೀವು ನಿಮ್ಮ ಮನೆ ಪ್ರವೇಶಿಸುವಾಗ ಸಲಾಂ ಹೇಳುತ್ತೀರಾ?




1. ಸಲಾಮುನ್ ಕೌಲಂಮ್ಮಿನ್ ರಬ್ಬಿರ‍್ರಹೀಮ್- ಸ್ವರ್ಗವಾಸಿಗಳೇ, ಸಲಾಮ್ ಎಂದು ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ಹೇಳಲಾಗಿದೆ.  (36:58)
2. ವ ಕಾಲ ಲಹುಮ್ ಖಝನತುಹಾ ಸಲಾಮುನ್ ಅಲೈಕುಂ- ಸ್ವರ್ಗ ಪ್ರವೇಶಿಸುವವರೊಡನೆ ನಿಮಗೆ ಸಲಾಂ ಎನ್ನಲಾಗುತ್ತದೆ. (39:73)
3. ಇಲ್ಲಾ ಖೀಲನ್ ಸಲಾಮನ್ ಸಲಾಮ- ಸ್ವರ್ಗದಲ್ಲಿ ಪ್ರತಿಯೊಂದು ಮಾತೂ ಸರಿಯಾದ ಮಾತೇ ಆಗಿರುವುದು. (36:26)

ಅಂದಹಾಗೆ,

ಪವಿತ್ರ ಕುರ್‌ಆನಿನ ಈ ವಚನಗಳಷ್ಟೇ ಅಲ್ಲ, ಸಲಾಮ್‌ನ ಮಹತ್ವದ ಕುರಿತಂತೆ ವಿವರಿಸುವ ಹತ್ತು-ಹಲವು ಪ್ರವಾದಿ ವಚನಗಳು ನಮ್ಮ  ನಡುವೆಯಿವೆ. ಆರಾಧನೆಗಳಲ್ಲೇ  ಅತೀ ಶ್ರೇಷ್ಠವೆಂದು ಹೇಳಲಾದ ನಮಾಝನ್ನು ಕೊನೆಗೊಳಿಸುವುದು ಬಲ ಮತ್ತು ಎಡ ಭಾಗಕ್ಕೆ ತಿರುಗಿ  ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹ್ ಎಂದು ಹೇಳುವ ಮೂಲಕವೇ. ಆ ಮೂಲಕ ಸರ್ವರಲ್ಲೂ ಒಳಿತನ್ನು ಹಾಗೂ ದೇವನ ಅನುಗ್ರಹವನ್ನು  ಬಯಸುವ ಕ್ರಿಯೆಯೊಂದು ನಡೆಯುತ್ತದೆ. ಅಷ್ಟಕ್ಕೂ, ನಮಾಝï ಮಾಡುವುದು ಅಲ್ಲಾಹನಿಗಾಗಿರುವಾಗ, ಅದರ ಕೊನೆಯಲ್ಲಿ ಅಲ್ಲಾಹನ ಸ್ತುತಿ  ಸ್ತೋತ್ರಗಳ ಬದಲಾಗಿ ಜನರಿಗೆ ಒಳಿತನ್ನು ಬಯಸುವ ಈ ಪ್ರಾರ್ಥನೆಯನ್ನು ಅಲ್ಲಾಹನು ಕಲಿಸಲು ಕಾರಣವೇನು? ಅಲ್ಲಾಹುಮ್ಮ ಅಂತಸ್ಸಲಾಮ್  ವಮಿಂಕಸ್ಸಲಾಮ್ ತಬಾರಕ್ತ ಯಾದಲ್ ಜಲಾಲಿ ವಲ್ ಇಕ್ರಾಮ್.. ಎಂದು ಪ್ರವಾದಿ ನಮಾಝï ಬಳಿಕ ಪ್ರಾರ್ಥಿಸುತ್ತಿದ್ದರೆಂದೂ ವರದಿಗಳಿವೆ.  ಅಂದರೆ, ‘ಅಲ್ಲಾಹನೇ ನೀನು ಶಾಂತಿಯ ಸಂಕೇತ ಮತ್ತು ಶಾಂತಿಯನ್ನು ದಯಪಾಲಿಸುವವ. ಆದ್ದರಿಂದ ನನಗೆ ಶಾಂತಿಯುತ ಬದುಕನ್ನು  ದಯಪಾಲಿಸು’. ಅಂದಹಾಗೆ,

ಸರ್ವರಿಗೂ ಶಾಂತಿಯನ್ನು ಬಯಸುವ ಮೂಲಕ ನಮಾಝನ್ನು ಕೊನೆಗೊಳಿಸಲಾಗುತ್ತದೆ ಮತ್ತು ಆ ಬಳಿಕದ ಪ್ರಾರ್ಥನೆಯೂ ಶಾಂತಿಯನ್ನೇ  ಕೇಂದ್ರೀಕರಿಸಿರುತ್ತದೆ. ನನಗೆ ಶಾಂತಿಯುತ ಬದುಕನ್ನು ನೀಡು ಎಂದು ಪ್ರವಾದಿ(ಸ)ಯವರು ಬಯಸುವುದರ ಉದ್ದೇಶ, ಸರ್ವ ಮುಸ್ಲಿಮರೂ  ಶಾಂತಿಯುತ ಬದುಕನ್ನು ಬಯಸಬೇಕು ಎಂದೇ ಆಗಿದೆ. ನಿಜವಾಗಿ, ಇದು ಮುಸ್ಲಿಮರ ಐಡೆಂಟಿಟಿ. ಯಾರು ಶಾಂತಿಯುತ ಬದುಕನ್ನು  ಬಯಸುತ್ತಾರೋ ಅವರು ಅಶಾಂತಿಯುತ ಸಾಮಾಜಿಕ ವ್ಯವಸ್ಥೆಯನ್ನು ಬಯಸುವುದಾಗಲಿ, ಅದಕ್ಕಾಗಿ ಪ್ರಯತ್ನಿಸುವುದಾಗಲಿ ಮಾಡಲು  ಸಾಧ್ಯವೇ ಇಲ್ಲ. ಪ್ರವಾದಿಯವರು(ಸ) ಅನಸ್(ರ)ರೊಂದಿಗೆ ಹೀಗೆ ಹೇಳಿದ್ದಾರೆ,

‘ಮಗನೇ, ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’ ‘ನನ್ನ ಮನೆಯಲ್ಲಿ ದಟ್ಟ ಬಡತನವಿದೆ’ ಎಂದು ಓರ್ವ ವ್ಯಕ್ತಿ ಬಂದು ಹೇಳಿದಾಗಲೂ ಪ್ರವಾದಿ(ಸ) ಹೇಳಿದ್ದು ಮೇಲಿನ ಮಾತುಗಳನ್ನೇ-  ‘ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’  ಇದೇವೇಳೆ, ಪ್ರವಾದಿ(ಸ) ಹೇಳಿರುವುದಾಗಿ ಪ್ರಮುಖ ಸಂಗಾತಿ ಅಬೂದರ್ದಾ(ರ) ಹೇಳಿರುವ ಈ ಕೆಳಗಿನ ವಚನವೂ ಬಹಳ ಮಹತ್ವದ್ದಾಗಿದೆ-

‘ನೀವು ಸಲಾಮನ್ನು ಪ್ರಚಾರ ಮಾಡಿ. ಹಾಗಾದರೆ ನೀವು ಉನ್ನತಿಗೆ ಏರುವಿರಿ.’

ಇಲ್ಲಿ ಒಂದು ಗಮನಾರ್ಹ ಅಂಶವಿದೆ. ಸಲಾಮನ್ನು ಹೇಳಿರಿ ಅನುವುದಕ್ಕಿಂತ ಸಲಾಮನ್ನು ಪ್ರಚಾರ ಮಾಡಿರಿ ಎಂದು ಒತ್ತು ಕೊಟ್ಟು  ಹೇಳಲಾಗಿದೆ. ಅದೇವೇಳೆ, ನಿಮ್ಮ ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಿರಿ, ಅದರಿಂದ ಸಮೃದ್ಧಿ ಉಂಟಾಗುತ್ತದೆ ಎಂದೂ ಹೇಳಲಾಗಿದೆ. ಇನ್ನೊಂದು ಕಡೆ, ನಮಾಝï‌ನಿಂದ ವಿರಮಿಸುವುದಕ್ಕೆ ಸಲಾಮನ್ನು ಸಾಕ್ಷ್ಯವಾಗಿ ಆಯ್ಕೆ ಮಾಡಲಾಗಿದೆ. ಇವೆಲ್ಲ ಹೇಳುವುದೇನು? ಓರ್ವರನ್ನು  ಎದುರುಗೊಂಡಾಗ ಅಸ್ಸಲಾಮು ಅಲೈಕುಂ ಎಂದು ಹೇಳುವುದಕ್ಕೆ ಬಾಯುಪಚಾರಕ್ಕಿಂತ ಹೊರತಾದ ಘನವಾದ ಉದ್ದೇಶವಿದೆ ಎಂಬುದನ್ನೇ  ಅಲ್ಲವೇ? ನಾವು ಸಲಾಮ್‌ನ ನಿಜವಾದ ಉದ್ದೇಶ ಮತ್ತು ಅರ್ಥವನ್ನು ಅರಿತು ಎಷ್ಟು ಬಾರಿ ಸಲಾಮ್ ಹೇಳಿದ್ದೇವೆ? ‘ಸಲಾಮ್  ಹೇಳುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ, ದಾರಿದ್ರ‍್ಯ ತೊಲಗುತ್ತದೆ, ಅದು ಅಲ್ಲಾಹನ ಗುಣನಾಮಗಳಲ್ಲಿ ಒಂದು, ಅದನ್ನು ಪ್ರಚಾರ  ಮಾಡಬೇಕು, ಆ ಮೂಲಕ ಸರ್ವರಲ್ಲೂ ಶಾಂತಿ ಮತ್ತು ಒಳಿತನ್ನು ಪಸರಿಸಬೇಕು..’ ಎಂದು ಮನಸಾರೆ ಅಂದುಕೊಂಡು  ನಾವು ಸಲಾಂ  ಹೇಳಿದ್ದು ಯಾವಾಗ? ಸಲಾಂ ಹೇಳುವಾಗ ಒಂದು ಬಾರಿಯಾದರೂ ನಮ್ಮೊಳಗೆ ಇಂಥ ಭಾವ ಉಂಟಾಗಿದೆಯೇ? ಗೆಳೆಯನೊಬ್ಬ ಎದುರು  ಸಿಕ್ಕಾಗ, ಅಲ್ಲಾಹನು ನಿಮಗೆ ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಮನಸ್ಸಿನಿಂದ ಬಯಸಿ ಸಲಾಂ ಹೇಳಿದ್ದೀರಾ ಅಥವಾ ಅದೊಂದು  ಸಹಜ ನಡವಳಿಕೆಯಾಗಿ ಮಾರ್ಪಟ್ಟಿದೆಯೇ? ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಬೇಕು ಎಂದು ಹೇಳಿದ ಪ್ರವಾದಿ, ಅದರಿಂದ ಮನೆಯ  ದಾರಿದ್ರ‍್ಯ ದೂರವಾಗುತ್ತದೆ ಎಂದೂ ಹೇಳಿದ್ದಾರೆ.

ಬಡತನ, ದಾರಿದ್ರ‍್ಯ ಇತ್ಯಾದಿಗಳೆಲ್ಲ ಶಾಶ್ವತವಲ್ಲ. ಅವು ಒಂದು ತಾತ್ಕಾಲಿಕ ಸ್ಥಿತಿಯೇ ಹೊರತು ದಾರಿದ್ರ‍್ಯದಲ್ಲಿರುವವರೆಲ್ಲ ಸದಾಕಾಲ ದಾರಿದ್ರ‍್ಯದಲ್ಲೇ   ಇರಬೇಕೆಂದು ಇಸ್ಲಾಮ್ ಬಯಸುವುದಿಲ್ಲ, ಸರಕಾರಗಳೂ ಬಯಸುವುದಿಲ್ಲ. ಆದರೆ, ಬಡತನವು ಅನೇಕ ಬಾರಿ ಅತೀ ಅನಿವಾರ್ಯತೆಯನ್ನು  ತ್ಯಾಗ ಮಾಡಬೇಕಾದ ಪರಿಸ್ಥಿತಿಗೆ ದೂಡುತ್ತದೆ. ಶ್ರೀಮಂತರು ತಮಗೆ ಬೇಡವಾದುದನ್ನೂ ಖರೀದಿಸುವ ಸಾಮರ್ಥ್ಯ ಪಡಕೊಂಡಿರುವಾಗ  ಬಡವರು ಅತೀ ಅಗತ್ಯವಾದುದನ್ನೂ ಖರೀದಿಸಲು ಸಾಧ್ಯವಾಗದೇ ಸಂಕಟಕ್ಕೆ ಒಳಗಾಗುತ್ತಾರೆ. ಇದು ಧರ್ಮಾತೀತ ಸ್ಥಿತಿ. ಆದರೆ, ಈ  ಸ್ಥಿತಿಯನ್ನು ಮೀರಬಲ್ಲ ಉಪಕರಣವಾಗಿ ಪ್ರವಾದಿ(ಸ) ಸಲಾಮನ್ನು ಪರಿಚಯಿಸಿದ್ದಾರೆ. ಅದರರ್ಥ ಮನೆಗೆ ಪ್ರವೇಶಿಸುವಾಗ, ಸಲಾಮ್ ಹೇಳಿದ  ತಕ್ಷಣ ಬಡತನ ನಿವಾರಣೆಯಾಗುತ್ತದೆ ಎಂದಲ್ಲ. ಆದರೆ, ಅದರ ಅರ್ಥ ಅರಿತು ಅದನ್ನು ಮನಸ್ಸಿಗೆ ತಂದುಕೊಂಡು  ಹೇಳುವ ಸಲಾಮ್‌ನಲ್ಲಿ  ಬಾಯುಪಚಾರಕ್ಕಿಂತ ಮಿಗಿಲಾದ ಆಧ್ಯಾತ್ಮ ಭಾವ ಒಳಗೊಂಡಿರುತ್ತದೆ. ಅಲ್ಲಾಹನೇ, ನಮಗೆ ಶಾಂತಿ ಮತ್ತು ಸಮೃದ್ಧಿಯನ್ನು ಕೊಡು ಎಂದು  ಪ್ರತಿಬಾರಿ ಮನೆಗೆ ಪ್ರವೇಶಿಸುವಾಗಲೂ ಮನೆಯಿಂದ ಹೊರಹೋಗುವಾಗಲೂ ಪ್ರಾರ್ಥಿಸುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಒಂದು ಮನೆಯಲ್ಲಿ  6 ಮಂದಿ ಇದ್ದಾರೆಂದಿಟ್ಟುಕೊಳ್ಳಿ. ಈ 6 ಮಂದಿಯಲ್ಲಿ ಮನೆಯಿಂದ ಒಂಟಿ ಒಂಟಿಯಾಗಿಯೋ ಸಾಮೂಹಿಕ ವಾಗಿಯೋ ಹೊರಹೋಗುವಾಗ  ಸಲಾಂ ಹೇಳುವುದು ಮತ್ತು ಮನೆಗೆ ಒಂಟಿ ಒಂಟಿಯಾಗಿ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಒಮ್ಮೆ ಸ್ಮರಿಸಿಕೊಳ್ಳಿ. ಅದು ನಮ್ಮೊಳಗೆ  ಅಂತಃಶಕ್ತಿಯನ್ನು ತುಂಬುತ್ತದೆ. ಆಧ್ಯಾತ್ಮಿಕ ಚೈತನ್ಯ ಮತ್ತು ಸಕಾರಾತ್ಮಕ ಭಾವವನ್ನು ನೆಲೆಗೊಳಿಸುತ್ತದೆ. ದುರಂತ ಏನೆಂದರೆ,

ಯಾರಾದರೂ ಮುಖಾಮುಖಿಯಾದಾಗ ಸಲಾಂ ಹೇಳುವ ಎಷ್ಟೋ ಮಂದಿ ಮನೆ ಪ್ರವೇಶಿಸುವಾಗ ಸಲಾಂ ಹೇಳುವುದು ಕಡಿಮೆ. ಮಗ  ತಂದೆಗೋ ತಾಯಿಗೋ ತಂಗಿಗೋ ಅಕ್ಕನಿಗೋ ಸಲಾಂ ಹೇಳುವುದೂ ಕಡಿಮೆ. ಹಾಗಂತ, ಹೀಗೆ ಸಲಾಂ ಹೇಳುವುದಕ್ಕೆ ಅವರ  ವಿರೋಧವಿದೆ ಎಂದಲ್ಲ. ಅದು ರೂಢಿಯಲ್ಲಿ ಬಂದಿಲ್ಲ. ಹೊರಗೆ ಗೆಳೆಯನನ್ನೋ ಗೆಳತಿಯನ್ನೋ ಪರಿಚಿತರು ಮತ್ತು ಇಷ್ಟದವರನ್ನೋ ಆಲಿಂಗಿಸುವ ಮತ್ತು ಶುಭಾಶಯ ಕೋರುವ ಮಗನೋ ಮಗಳೋ ಮನೆಯಲ್ಲಿ ಹೆತ್ತವರನ್ನು ಆಲಿಂಗಿಸುವುದು ಕಡಿಮೆ. ಹೆತ್ತವರಲ್ಲೂ ಈ  ಮುಲಾಜುತನ ಇರುತ್ತದೆ. ಪತಿ ಮತ್ತು ಪತ್ನಿ ಪರಸ್ಪರ ಆಲಿಂಗಿಸಿಕೊಳ್ಳುವುದು, ಪರಸ್ಪರ ಸಲಾಂ ಹೇಳಿ ಹೊರಡುವುದೆಲ್ಲ ನಾಚಿಕೆಯ ವಿಷಯ  ಎಂಬಂತೆ  ಆಗುವುದಿದೆ. ನಿಜವಾಗಿ, ಆಲಿಂಗನವು ಪರಸ್ಪರ ಆಪ್ತ ಭಾವವನ್ನು ಹಂಚುವುದಕ್ಕೆ ಸಹಕಾರಿಯಾದರೆ ಸಲಾಂ ಶಾಂತಿ ಮತ್ತು ಸಮೃ ದ್ಧಿಯನ್ನು ಉಂಟು ಮಾಡುವುದಕ್ಕೆ ನೆರವಾಗುತ್ತದೆ. ಇದು ಬರೇ ಭಾವ ಅಲ್ಲ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಸಕಲರಿಗೂ ಒಳಿತು  ಬಯಸುವ ಧಾರ್ಮಿಕ ಕರ್ತವ್ಯ. ಆದ್ದರಿಂದಲೇ, ಪ್ರವಾದಿ(ಸ) ಸಲಾಮನ್ನು ಪ್ರಚಾರ ಮಾಡಿ ಎಂದೇ ಹೇಳಿದ್ದಾರೆ. ಅದು ಸಾರ್ವಜನಿಕ  ಭಾವವಾಗಿ ವ್ಯಕ್ತವಾಗಬೇಕು. ಸರ್ವರಿಗೂ ಒಳಿತು, ಶಾಂತಿ, ಸಮೃದ್ಧಿಯನ್ನು ಬಯಸುವ ಪ್ರಾರ್ಥನೆಯೊಂದು ಸರ್ವ ದಿಕ್ಕುಗಳಿಂದಲೂ ಕೇಳಿಸುವಂತಿದ್ದರೆ ಅದರಲ್ಲಿ ತೊಂದರೆ ಏನಿದೆ? ನಿಜವಾಗಿ,

ಈ ಜಗತ್ತಿನ ಅಭಿವಂದನೆಯ ಪ್ರಕಾರಗಳಲ್ಲೇ  ಅಸ್ಸಲಾಮು ಅಲೈಕುಂ ಎಂಬುದು ಅತೀ ವಿಶಿಷ್ಟ ಮತ್ತು ಅತೀ ಆಕರ್ಷಕ ಎಂದೇ ಹೇಳಬಹುದು.  ಯಾವುದೇ ಬಗೆಯ ಮಾತನ್ನು ಆರಂಭಿಸುವುದಕ್ಕಿಂತ  ಮೊದಲು, ‘ನಿನಗೆ ಒಳಿತಾಗಲಿ, ನಿನಗೆ ಶಾಂತಿಪೂರ್ಣ ಬದುಕು ಲಭಿಸಲಿ..’ ಎಂದು  ಪ್ರಾರ್ಥಿಸುವುದು ಮಹತ್ತರ ವಿಧಾನ. ಸಾಮಾನ್ಯವಾಗಿ ಇವತ್ತು ಹೆಚ್ಚಿನ ಮಾತುಕತೆಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಮೊಬೈಲ್  ಮೂಲಕ ನಿಮ್ಮನ್ನು ಸಂಪರ್ಕಿಸುವ ವ್ಯಕ್ತಿಯ ಆ ಕ್ಷಣದ ಪರಿಸ್ಥಿತಿ, ಭಾವ, ಉದ್ದೇಶ ನಮಗೆ ಗೊತ್ತಿರುವುದಿಲ್ಲ. ವ್ಯಕ್ತಿಯ ಹೆಸರು ಮೊಬೈಲ್  ಸ್ಕ್ರೀನ್‌ನಲ್ಲಿ ಕಾಣಿಸಿದಾಗ ವ್ಯಕ್ತಿಯ ಮುಖಭಾವವನ್ನು ನೀವು ಕಲ್ಪಿಸಿಕೊಳ್ಳುತ್ತೀರಿ. ಆದರೆ, ಆ ಮುಖಭಾವದಲ್ಲಿ ಅಡಗಿರಬಹುದಾದ ಸಾವಿರ  ಸಂಗತಿಗಳು ನಿಮ್ಮಿಂದ ಅಡಗಿರುತ್ತದೆ. ಆತ/ಕೆ ವಿಪರೀತ ದುಃಸ್ಥಿತಿಯಲ್ಲಿರಬಹುದು, ಹಣಕಾಸಿನ ಮುಗ್ಗಟ್ಟಿನಲ್ಲಿರಬಹುದು, ಅತೀವ ಸಂತಸದಲ್ಲೂ  ಇರಬಹುದು. ತನ್ನವರನ್ನು ಕಳಕೊಂಡ ದುಃಖದಲ್ಲಿರಬಹುದು, ಅತೀವ ಆಕ್ರೋಶದಲ್ಲೂ ಇರಬಹುದು. ಈ ಬದುಕಿನಲ್ಲಿ ಸುಖವಿಲ್ಲ ಎಂಬ  ನಿರಾಶಾಭಾವದಲ್ಲೂ ಇರಬಹುದು... ಆದರೆ, ಈ ಕರೆ ಸ್ವೀಕರಿಸುವ ವ್ಯಕ್ತಿಗೆ ಇವೆಲ್ಲ ಗೊತ್ತಿರಬೇಕೆಂದಿಲ್ಲ. ಇಂಥ ಸಂದರ್ಭದಲ್ಲಿ ನಿನ್ನಲ್ಲಿ ಶಾಂತಿ  ಸಮಾಧಾನ ಉಂಟಾಗಲಿ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಮಾತುಕತೆ ಆರಂಭಿಸುವುದು ಎಂಥ ಸುಖಾನುಭವವನ್ನು  ಕೊಡಬಲ್ಲುದು? ಆ ಕಡೆಯ ವ್ಯಕ್ತಿ ನಿಜಕ್ಕೂ ಅಸ್ಸಲಾಮು ಅಲೈಕುಂ ಎಂಬ ಪದದ ನಿಜವಾದ ಅರ್ಥವನ್ನು ಅರಿತುಕೊಂಡಿದ್ದರೆ ಮತ್ತು ಅದರ  ಸಾಮರ್ಥ್ಯವನ್ನು ತಿಳಿದುಕೊಂಡಿದ್ದರೆ ಆ ಕ್ಷಣದಲ್ಲಿ ಅವರಲ್ಲಿ ಮೂಡಬಹುದಾದ ಭಾವಗಳೇನು?

ಮಾನವ ಸಂಘಜೀವಿ ಮತ್ತು ಸಮಾಜ ಜೀವಿ. ಒಂಟಿಯಾಗಿ ಬದುಕುವುದು ಆತನ ಪ್ರಕೃತಿಗೆ ಸೂಕ್ತವಲ್ಲ. ಇಂಥ ಮನುಷ್ಯ ಇತರರಿಗೆ ಒಳಿತನ್ನು  ಬಯಸಬೇಕು ಎಂಬುದು ಇಸ್ಲಾಮ್‌ನ ಮರ್ಮ. ‘ಓರ್ವರು ಸೃಷ್ಟಿಯ ಬಗ್ಗೆ ಒಳಿತನ್ನು ಬಯಸಿದರೆ, ಅಲ್ಲಾಹನು ಅವರ ಮೇಲೆ ಕರುಣೆ  ತೋರುತ್ತಾನೆ’ ಎಂದು ಪ್ರವಾದಿ(ಸ) ಹೇಳಿದ್ದಾರೆ. ಧರ್ಮದ ಒಳಾರ್ಥವೇ ಗುಣಾಕಾಂಕ್ಷೆ ಎಂದೇ ಹೇಳಲಾಗಿದೆ. ಇತರರಿಗೆ ಕೇಡನ್ನು ಬಯಸದೇ  ಇರುವುದು ಮತ್ತು ಅಶಾಂತಿಯನ್ನು ಹರಡಲು ಸಹಕರಿಸದೇ ಇರುವುದೇ ಮುಸ್ಲಿಮನ ಐಡೆಂಟಿಟಿ. ಆದ್ದರಿಂದಲೇ, ನೀವು ಯಾವ ಸನ್ನಿವೇ ಶದಲ್ಲಿದ್ದರೂ ಸಲಾಮ್ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂಬ ತರಬೇತಿಯನ್ನು ನೀಡಲಾಗಿದೆ. ಕಿರಿಯರು ಹಿರಿಯರಿಗೆ ಮೊದಲು  ಸಲಾಮ್ ಹೇಳಬೇಕು. ನಡೆಯುವವರು ಕುಳಿತವರಿಗೂ ಒಂಟಿ ವ್ಯಕ್ತಿ ಗುಂಪಿಗೂ ಮೊದಲು ಸಲಾಂ ಹೇಳಬೇಕು. ಒಂದು ಗುಂಪಿನಲ್ಲಿರುವವರಲ್ಲಿ ಒಬ್ಬರು ಸಲಾಂಗೆ ಉತ್ತರಿಸಿದರೆ ಅಥವಾ ಸಲಾಂ ಹೇಳಿದರೆ ಆ ಗುಂಪಿನ ಎಲ್ಲರೂ ಸಲಾಂ ಹೇಳಿದಂತೆ ಅಥವಾ ಉತ್ತರಿಸಿದಂತೆ  ಎಂದು ಪರಿ ಗಣಿಸಲಾಗುತ್ತದೆ. ಅಷ್ಟಕ್ಕೂ,

ನಾವು ಪ್ರತಿನಿತ್ಯ ಹೇಳುವ ಸಲಾಂ ಎಷ್ಟು ಚೈತನ್ಯಭರಿತವಾಗಿದೆ ಎಂಬ ಬಗ್ಗೆ ಅವಲೋಕನವೊಂದನ್ನು ನಡೆಸಬೇಕು. ನಮ್ಮ ಸಲಾಂನಲ್ಲಿ ಎಷ್ಟು  ಆಧ್ಯಾತ್ಮಿಕ ಸ್ಫೂರ್ತಿಯಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮನೆಗೆ ಪ್ರವೇಶಿಸುವಾಗ, ಮನೆಯಿಂದ ಹೊರಹೋಗುವಾಗ ತಾನು ಸಲಾಂ  ಹೇಳುತ್ತೇನೆಯೇ ಎಂಬುದನ್ನು ಪ್ರತಿ ಹೆಣ್ಣು ಮತ್ತು ಗಂಡು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಸಲಾಂ ಹೇಳುವ ಗುಣವನ್ನು ಮತ್ತು  ಅದರ ಅರ್ಥವನ್ನು ಪರಿಣಾಮಕಾರಿಯಾಗಿ ವಿವರಿಸಿ ಹೇಳಬೇಕು. ಅದು ಬರೇ ಅಭಿವಂದನೆಯಷ್ಟೇ ಅಲ್ಲ, ಮನೆಯಲ್ಲಿ ಶಾಂತಿ, ಸಮಾಧಾನವನ್ನು ಉಂಟು ಮಾಡುವ ಹಾಗೂ ಸಮೃದ್ಧಿಯನ್ನು ನೆಲೆಗೊಳಿಸುವ ಚೈತನ್ಯವೂ ಹೌದು ಎಂಬುದನ್ನು ತಿಳಿದುಕೊಳ್ಳುತ್ತಾ ಮಕ್ಕಳು ಬೆಳೆಯಬೇಕು  ಮತ್ತು ಆ ಕಾರಣಕ್ಕಾಗಿಯೇ ಮಕ್ಕಳು ಸಲಾಂ
ರೂಢಿಸಿಕೊಳ್ಳಬೇಕು. ಇದೇನೂ ಭಾರೀ ಶ್ರಮದ ಕೆಲಸವಲ್ಲ. ಯಾವ ಮನೆಯಲ್ಲಿ ಸಲಾಂ  ಹೇಳುವ ರೂಢಿ ಇಲ್ಲವೋ ಆ ಮನೆಯ ಹೆತ್ತವರು ಮನೆ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಪ್ರಾರಂಭಿಸಿದರೆ ಧಾರಾಳ ಸಾಕು. ಮುಂದೆ  ಮಕ್ಕಳೂ ಅದನ್ನು ಅನುಸರಿಸುತ್ತಾರೆ ಮತ್ತು ಮನೆಯಲ್ಲಿ ‘ಸಲಾಂ’ ನೆಲೆಸಿರುತ್ತದೆ.



ಭಾರತೀಯ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಹಸಿರು ಧ್ವಜ

 



ಏ.ಕೆ. ಕುಕ್ಕಿಲ

ಕೆಲವು ಪ್ರಶ್ನೆಗಳಿವೆ.

1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ.
2. ಮುಸ್ಲಿಮರು ಸಮಾಜದಲ್ಲಿ ಪ್ರತ್ಯೇಕವಾಗಿ ಬದುಕುವುದಕ್ಕೆ ಒತ್ತು ಕೊಡುತ್ತಿದ್ದಾರೆ.
3. ಮುಸ್ಲಿಮರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ... 

 ಹಿಂದೂಗಳ ಜೊತೆಗಿನ ಯಾವುದೇ ಸಂವಾದ  ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಅತಿಥಿ ಎದುರಿಸುವ ಪ್ರಶ್ನೆಗಳಲ್ಲಿ ಇವು ಇದ್ದೇ  ಇರುತ್ತವೆ. ಅಷ್ಟಕ್ಕೂ, ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳೇನು? ದುರುದ್ದೇಶಪೂರಿತ ಎಂದು ಏಕಾಏಕಿ ಇವನ್ನು ತಳ್ಳಿ ಹಾಕಬಹುದೇ? ರಾಜಕೀಯ ಪ್ರಣೀತ ಪ್ರಶ್ನೆಗಳು ಎಂದು ಷರಾ ಬರೆದು ಬಿಡಬಹುದೇ? ಮುಸ್ಲಿಮರ ಜೀವನ ಕ್ರಮವೇ ಇವುಗಳಿಗೆ ಕಾರಣ ಎಂದು  ಸಮರ್ಥಿಸಿಕೊಳ್ಳಬಹುದೇ? ಅಂದಹಾಗೆ, ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ ಎಂಬ ಆರೋಪಕ್ಕೆ ಕೊಡುವ ಆಧಾರಗಳು ಹೀಗಿವೆ;

1. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝï ಮಾಡುತ್ತಾರೆ.
2. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ.
3. ಅವರು ಅರೇಬಿಕ್ ಭಾಷೆಯಲ್ಲಿರುವ ಕುರ್‌ಆನನ್ನು ಪಠಿಸುತ್ತಾರೆ.
4. ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಾರೆ.

ಇದರಲ್ಲಿ ಧ್ವಜಕ್ಕೆ ಸಂಬಂಧಿಸಿ ಪುಟ್ಟದೊಂದು ಗೊಂದಲಕ್ಕೆ ಅವಕಾಶ ಇದೆ. ಜಾಗತಿಕ ಮುಸ್ಲಿಮ್ ಸಮುದಾಯವು ಹಸಿರನ್ನು ತಮ್ಮ ಧಾರ್ಮಿಕ  ಬಣ್ಣವಾಗಿ ಆಯ್ದುಕೊಂಡಿದೆ. ಮುಸ್ಲಿಮ್ ವ್ಯಕ್ತಿಯ ಮೃತದೇಹವನ್ನು ಕೊಂಡೊಯ್ಯುವಾಗ ಹಸಿರು ಬಟ್ಟೆಯನ್ನು ಹೊದಿಸುವುದಿದೆ. ಮಸೀದಿ- ಮದ್ರಸಾಗಳಿಗೆ ಹಸಿರು ಬಣ್ಣ ಬಳಿಯು ವುದಿದೆ. ದರ್ಗಾಗಳನ್ನು ಹಸಿರು ಹೊದಿಕೆಯಿಂದ ಮುಚ್ಚುವುದಿದೆ. ಯಾವುದಾದರೂ ಧಾರ್ಮಿಕ  ಕಾರ್ಯಕ್ರಮ ನಡೆಸುವ ವೇಳೆ ರಸ್ತೆಬದಿಯಲ್ಲಿ ಹಸಿರು ಮಿನಿಚರ್ ಮತ್ತು ಹಸಿರು ಬಣ್ಣದ ಬ್ಯಾನರ್‌ಗಳನ್ನು ತೂಗು ಹಾಕುವುದಿದೆ. ಹಾಗಂತ,  ಈ ಬಣ್ಣಕ್ಕೂ ಇಸ್ಲಾಮ್‌ಗೂ ಆಳವಾದ ಸಂಬAಧ ಇದೆ ಎಂದು ಹೇಳಲಾಗದು. ಕುರ್‌ಆನ್‌ನಲ್ಲಾಗಲಿ  ಪ್ರವಚನಗಳಲ್ಲಾಗಲಿ  ಹಸಿರು ಬಣ್ಣವನ್ನು  ಇಸ್ಲಾಮ್‌ನ ಬಣ್ಣ ಎಂದು ಹೇಳಿಯೂ ಇಲ್ಲ. ಪ್ರವಾದಿಯವರು ಬಿಳಿ ಬಣ್ಣವನ್ನು ಅತ್ಯಂತ ಇಷ್ಟಪಡುತ್ತಿದ್ದರು ಮತ್ತು ಬಿಳಿ ಬಟ್ಟೆಯನ್ನೇ  ಧರಿಸುತ್ತಿದ್ದರು ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಆದರೂ ಹಸಿರು ಬಣ್ಣ ಮುಸ್ಲಿಮರ ಧಾರ್ಮಿಕ ಬಣ್ಣವೆಂಬ ಭಾವ ಅನಧಿಕೃತವಾಗಿ  ಚಲಾವಣೆಯಲ್ಲಿದೆ. ಆದ್ದರಿಂದಲೇ,

ಪಾಕಿಸ್ತಾನದ ರಾಷ್ಟ್ರೀಯ ಧ್ವಜದ ಬಣ್ಣ ಹಸಿರು. ಭಾರತೀಯ ಮುಸ್ಲಿಮರು ಸಾಮಾನ್ಯವಾಗಿ ಎತ್ತಿ ಹಿಡಿಯುವ ಧ್ವಜದ ಬಣ್ಣವೂ ಹಸಿರೇ.  ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಎಂಬ ರಾಜಕೀಯ ಪಕ್ಷದ ಧ್ವಜದ ಬಣ್ಣವೂ ಹಸಿರೇ. ಆದರೆ ಪಾಕ್ ಧ್ವಜದ ಮಧ್ಯದಲ್ಲಿ ಅರ್ಧ  ಚಂದ್ರಾಕೃತಿ ಮತ್ತು ನಕ್ಷತ್ರದ ಚಿತ್ರ ಇದೆ ಹಾಗೂ ಇವೆರಡೂ ಬಿಳಿ ಬಣ್ಣದಲ್ಲಿದೆ. ಅಲ್ಲದೇ, ಧ್ವಜ ಸಂಪೂರ್ಣವಾಗಿ ಹಸಿರು ಬಣ್ಣವನ್ನು ಮಾತ್ರವೇ  ಹೊಂದಿಲ್ಲ. ಹಸಿರು ಬಣ್ಣ ಮುಕ್ಕಾಲು ಭಾಗ ಇದ್ದರೆ ಉಳಿದ ಕಾಲು ಭಾಗ ಬಿಳಿ ಬಣ್ಣ. ಧ್ವಜದ ಹಿಡಿಕೆಯಲ್ಲಿ ಅಥವಾ ಎಡಭಾಗದಲ್ಲಿ ಬಿಳಿ  ಬಣ್ಣವಿದ್ದರೆ ಉಳಿದಂತೆ ಹಸಿರು ಬಣ್ಣವಿದೆ. ಮಧ್ಯದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇದೆ. ಆದರೆ ಇಂಡಿಯನ್ ಯೂನಿ ಯನ್ ಮುಸ್ಲಿಮ್  ಲೀಗ್ ಪಕ್ಷದ ಧ್ವಜವು ಸಂಪೂರ್ಣವಾಗಿ ಹಸಿರು ಬಣ್ಣವನ್ನಷ್ಟೇ ಹೊಂದಿದೆ. ಮಾತ್ರವಲ್ಲ, ಧ್ವಜದ ಎಡ ಮೂಲೆಯಲ್ಲಿ ಅರ್ಧ ಚಂದ್ರಾಕೃತಿ ಮತ್ತು  ನಕ್ಷತ್ರವನ್ನು ಬಿಳಿ ಬಣ್ಣದಲ್ಲಿ ಹೊಂದಿದೆ. ಹಾಗೆಯೇ, ಮುಸ್ಲಿಮ್ ಲೀಗ್ ಅನ್ನು ಹೊರತುಪಡಿಸಿ ಇತರ ಭಾರತೀಯ ಮುಸ್ಲಿಮರು ಹಾರಿಸುವ  ಯಾವ ಧ್ವಜದಲ್ಲೂ ಹಸಿರು ಬಣ್ಣದ ಹೊರತಾಗಿ ಬಿಳಿ ಬಣ್ಣ ಕಾಣಿಸುವುದಿಲ್ಲ. ಧ್ವಜಗಳಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇ ದ್ದಿರಬಹುದಾದರೂ ಪಾಕ್ ಧ್ವಜದಲ್ಲಿರುವ ಬಿಳಿ ಬಣ್ಣವು ಭಾರತೀಯ ಮುಸ್ಲಿಮರು ಹಾರಿಸುವ ಧ್ವಜದಲ್ಲಿ ಯಾವಾಗಲೂ ಇರುವುದಿಲ್ಲ. ಆದರೆ,

ಭಾರತೀಯ ಮಾಧ್ಯಮಗಳು ಈ ಸೂಕ್ಷ್ಮ  ವ್ಯತ್ಯಾಸವನ್ನು ಬಹುತೇಕ ಬಾರಿ ಅವಗಣಿಸಿದ್ದೇ  ಹೆಚ್ಚು. ಭಾರತ ಮತ್ತು ಪಾಕ್ ಗಳ ನಡುವೆ ಸಂಬಂಧ   ಜಟಿಲವಾಗಿರುವ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗಿರುವ ಮಾಧ್ಯಮಗಳು ಅಸೂಕ್ಷ್ಮತೆಯನ್ನೇ ನೀತಿಯಾಗಿಸಿಕೊಂಡಂತೆ   ವರ್ತಿಸಿದುದರ ಅಡ್ಡಪರಿಣಾಮವನ್ನು ಭಾರತೀಯ ಮುಸ್ಲಿಮರು ಅನುಭವಿಸುವಂತಾಗಿದೆ. ಹಾಗಂತ, ಪಾಕಿಸ್ತಾನದ ರಾಷ್ಟ್ರಧ್ವಜವೇನೂ  ರಹಸ್ಯವಾಗಿಲ್ಲ. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಧ್ವಜವೂ ಅಥವಾ ಭಾರತೀಯ ಮುಸ್ಲಿಮರು ಹಾರಿಸುತ್ತಿರುವ ಧ್ವಜವೂ  ರಹಸ್ಯವಾಗಿಲ್ಲ. ಗೂಗಲ್ ಮಾಡಿ ನೋಡಿದರೆ ಇವು ಚಿತ್ರವಾಗಿಯೂ ಬರಹದಲ್ಲೂ ಲಭ್ಯವಿದೆ. ಆದರೆ, ಹೆಚ್ಚಿನ ಮಾಧ್ಯಮಗಳು ಇಷ್ಟನ್ನು  ಮಾಡಲೂ ತಯಾರಿಲ್ಲ. ಒಂದು ಸಮುದಾಯದ ರಾಷ್ಟ್ರನಿಷ್ಠೆಯನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಸೂಕ್ಷ್ಮ ಸಂದರ್ಭವೆಂದು  ಇವುಗಳನ್ನು  ಪರಿಗಣಿಸಿ ನಿಕಷಕ್ಕೆ ಒಡ್ಡುವ ಬದಲು ಅತ್ಯಂತ ಬೇಜವಾಬ್ದಾರಿಯಿಂದ ಅವು ವರ್ತಿಸಿದ್ದೇ  ಹೆಚ್ಚು. ಅಲ್ಲದೇ, ಮುಖ್ಯವಾಹಿನಿಯ ಮುದ್ರಣ ಮತ್ತು  ದೃಶ್ಯ ಮಾಧ್ಯಮಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ ಇರುವುದೂ ಇಂಥ ಗೊಂದಲಗಳ ಸೃಷ್ಟಿಗೆ ಕಾರಣವೆಂದೂ  ಹೇಳಬಹುದು. ಅದರ ಜೊತೆಗೇ, ಭಾರತೀಯ ಮುಸ್ಲಿಮ್ ಸಮುದಾಯಕ್ಕೆ ಪಾಕ್ ರಾಷ್ಟ್ರಧ್ವಜ ಮತ್ತು ತಾವು ಹಾರಿಸುವ ಧ್ವಜದ ನಡುವೆ ಏನೇ ನು ವ್ಯತ್ಯಾಸಗಳಿವೆ ಅಥವಾ ಇರಬೇಕು ಎಂಬುದರ ಬಗ್ಗೆ ಎಷ್ಟು ತಿಳುವಳಿಕೆ ಇದೆ ಅನ್ನು ವುದೂ ಮುಖ್ಯ. ಅಷ್ಟಕ್ಕೂ,

ಭಾರತೀಯ ಮುಸ್ಲಿಮರು ಹಾರಿಸುವ ಧ್ವಜವು ಭಾರತದ ರಾಷ್ಟ್ರಧ್ವಜದಂತೆ ಸದಾ ಕಾಪಿಟ್ಟುಕೊಳ್ಳುವ ಧ್ವಜವಲ್ಲ. ಈದ್‌ನ ದಿನದಂದೋ ಪ್ರವಾದಿ  ದಿನಾಚರಣೆಯ ದಿನದಂದೋ ಅಥವಾ ಕೆಲವು ಧಾರ್ಮಿಕ ಪ್ರವಚನಗಳ ಸಮಯದಲ್ಲೋ  ಈ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ಅವುಗಳನ್ನು  ಆ ಬಳಿಕ ಅಷ್ಟೇ ಗಂಭೀರವಾಗಿ ಕಾಪಿಡಲಾಗುವ ವ್ಯವಸ್ಥೆಯೂ ಇದ್ದಂತಿಲ್ಲ. ಮುಂದಿನ ವರ್ಷ ಹೊಸತಾಗಿ ಧ್ವಜ ತಯಾರಿ ನಡೆಯುವುದೇ  ಹೆಚ್ಚು. ಹಾಗೆ ಧ್ವಜ ತಯಾರಿಸುವಾಗ ಹಿಂದಿನ ವರ್ಷದ ನೀತಿ-ನಿಯಮಗಳನ್ನು ಅಷ್ಟೇ ಮುತುವರ್ಜಿಯಿಂದ ಪಾಲಿಸಲಾಗಿದೆ ಎಂದು ನೂರು  ಶೇಕಡಾ ಖಚಿತವಾಗಿ ಹೇಳುವಂತೆಯೂ ಇಲ್ಲ. ಆದ್ದರಿಂದ, ಆಕಾರದಲ್ಲಿ ಮತ್ತು ಚಂದ್ರ ಹಾಗೂ ನಕ್ಷತ್ರವನ್ನು ಛಾಪಿಸುವ ಜಾಗ ಮತ್ತು ಕ್ರಮದಲ್ಲಿ  ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ. ಆದರೂ, ಪಾಕ್ ಧ್ವಜದಂತೆ ಹಸಿರಿನೊಂದಿಗೆ ಬಿಳಿ ಬಣ್ಣವಿರುವ ಮತ್ತು ಮಧ್ಯದಲ್ಲಿ ಅರ್ಧ ಚಂದ್ರಾಕೃತಿ  ಮತ್ತು ನಕ್ಷತ್ರ ಇರುವ ಧ್ವಜವನ್ನು ಭಾರತೀಯ ಮುಸ್ಲಿಮರು ಎತ್ತಿ ಹಿಡಿದಿರುವುದು ಇಲ್ಲವೇ ಇಲ್ಲ. ಆದರೆ ಭಾರತೀಯ ಮುಖ್ಯವಾಹಿನಿಯ  ಮಾಧ್ಯಮಗಳೂ ಸಹಿತ ಪ್ರಾದೇಶಿಕ ಮಾಧ್ಯಮಗಳು ಕೂಡಾ ಈ ಸೂಕ್ಷ್ಮತೆಯನ್ನು ಮರೆತಂತೆ ಅನೇಕ ಬಾರಿ ವರ್ತಿಸಿವೆ. ಮಾತ್ರ ವಲ್ಲ, ಪದೇ  ಪದೇ ಇಂಥ ತಪ್ಪುಗಳು ಪುನರಾವರ್ತನೆಯಾಗುತ್ತಿರುವುದನ್ನು ನೋಡಿದರೆ ಅವು ಮರೆತಂತೆ ನಟಿಸುತ್ತಿದೆಯೇನೋ ಎಂದು ಅನಿಸುತ್ತದೆ.  ಹಾಗಂತ,

ಹಸಿರು ಬಣ್ಣದ ಧ್ವಜವನ್ನು ತೋರಿಸಿ ಭಾರತೀಯ ಮುಸ್ಲಿಮರನ್ನು ಪಾಕ್ ನಿಷ್ಠರೆಂದು ಹೇಳುವವರು ಮತ್ತು ಹಾಗೆ ಬಿಂಬಿಸುವ  ಮಾಧ್ಯಮಗಳು ಧ್ವಜಕ್ಕೆ ಸಂಬಂಧಿಸಿ ಒಂದಿಷ್ಟು ಸಂಶೋಧನೆ ನಡೆಸಿರುತ್ತಿದ್ದರೂ ಈ ಹಸಿರು ಧ್ವಜ ಪಾಕಿಸ್ತಾನಕ್ಕೆ ಮಾತ್ರ ಸೀಮಿತ ವಾಗಿಲ್ಲ  ಎಂಬುದನ್ನು ಕಂಡುಕೊಳ್ಳುತ್ತಿದ್ದುವು. ಅಲ್ಜೀರಿಯಾ, ಅಝರ್‌ಬೈಜಾನ್, ಕ್ಯಾಮರೂನ್, ಇರಾನ್, ಮಾರಿಟೇನಿಯಾ, ಬಾಂಗ್ಲಾದೇಶ, ಸೌದಿ  ಅರೇಬಿಯಾ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳೂ ಹಸಿರು ಬಣ್ಣವನ್ನೇ ರಾಷ್ಟ್ರಧ್ವಜದ ಬಣ್ಣವಾಗಿ ಆಯ್ಕೆ ಮಾಡಿಕೊಂಡಿವೆ. ಹಸಿರು ಧ್ವಜದ  ಮಧ್ಯಭಾಗದಲ್ಲಿ ಪೂರ್ಣ ಚಂದ್ರಾಕೃತಿಯ ಕಡುಕೆಂಪು ಬಣ್ಣವು ಬಾಂಗ್ಲಾದೇಶದ ರಾಷ್ಟ್ರಧ್ವಜ ವಾಗಿದ್ದರೆ, ಲಾ ಇಲಾಹ ಇಲ್ಲಲ್ಲಾಹ್  ಮುಹಮ್ಮದರ‍್ರಸೂಲುಲ್ಲಾಹ್ ಎಂದು ಅರಬಿ ಭಾಷೆಯಲ್ಲಿ ಬಿಳಿ ಬಣ್ಣದಲ್ಲಿ ಬರೆದಿರುವ ಹಸಿರು ಬಣ್ಣದ ಧ್ವಜವು ಸೌದಿ ಅರೇಬಿಯಾದ  ರಾಷ್ಟ್ರಧ್ವಜವಾಗಿದೆ. ಅಲ್ಜೀರಿಯಾದ ಧ್ವಜವು ಅರ್ಧಭಾಗ ಹಸಿರು ಮತ್ತು ಅರ್ಧ ಭಾಗ ಬಿಳಿ ಬಣ್ಣವನ್ನು ಹೊಂದಿದ್ದು, ಮಧ್ಯದಲ್ಲಿ ಕೆಂಪು ಬಣ್ಣದಲ್ಲಿ  ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರವನ್ನು ಹೊಂದಿದೆ. ಕ್ಯಾಮರೂನ್ ದೇಶದ ರಾಷ್ಟ್ರೀಯ ಧ್ವಜದ ಮಧ್ಯ ಭಾಗವು ಹಸಿರು ಬಣ್ಣವನ್ನು ಹೊಂದಿದ್ದು  ಅದರಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಾಲ್ಕು ನಕ್ಷತ್ರಗಳಿವೆ. ಹಾಗೆಯೇ, ಉಳಿದ ಭಾಗದಲ್ಲಿ ಹಳದಿ, ಬಿಳಿ, ಕೆಂಪು ಮತ್ತು ಕಡು ನೀಲಿ ಬಣ್ಣವಿದೆ.  ಮಾರಿಟಾನಿಯಾ ಮತ್ತು ಇರಾನ್ ಗಳ ಧ್ವಜದಲ್ಲೂ ಹಸಿರಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ಮಾರಿಟಾನಿಯಾ ಧ್ವಜದ ಮೇಲ್ಭಾಗ ಮತ್ತು  ಕೆಳಭಾಗದಲ್ಲಿ ಸಣ್ಣ ಗೆರೆಯಾಕಾರದಲ್ಲಿ ಕೆಂಪು ಬಣ್ಣವಿದ್ದರೆ ಉಳಿದ ಭಾಗವನ್ನು ಹಸಿರು ಆವರಿಸಿಕೊಂಡಿದೆ ಮತ್ತು ಅರ್ಧ ಚಂದ್ರಾಕೃತಿ ಮತ್ತು  ನಕ್ಷತ್ರವನ್ನು ಮಧ್ಯದಲ್ಲಿ ಇರಿಸಿಕೊಂಡಿದೆ. ಉಳಿದಂತೆ,
ಜೋರ್ಡಾನ್, ಕುವೈಟ್, ಇರಾಕ್, ಅಲ್ಬೇನಿಯಾ, ಅಂಗೋಲಾ, ಆಂಟಿಗುವಾ, ಬರ್ಬುಡಾ, ಅರ್ಮೇನಿಯ, ಬಹರೈನ್, ಬೊಲಿವಿಯಾ, ಬೋಟ್ಸು  ವಾನಾ, ಬ್ರೂನೈ, ಕಾಂಬೋಡಿಯಾ, ಚಾಡ್, ಕ್ರೋವೇಶಿಯಾ, ಈಜಿಪ್ಟ್, ಈಸ್ಪೋನಿಯಾ, ಇಥಿಯೋಪಿಯಾ, ಗಬೋನ್, ಕತಾರ್, ಸರ್ಬಿಯಾ,  ಸೋಮಾಲಿಯಾ, ಸಿರಿಯಾ, ಟ್ಯುನೀಶಿಯಾ, ತುರ್ಕಿ, ಯಮನ್, ಝಾಂಬಿಯಾ, ಉಗಾಂಡ, ಸಿಂಗಾಪುರ, ರೊಮಾನಿಯಾ, ಫೆಲೆಸ್ತೀನ್,  ಒಮಾನ್, ನೈಜೀ ರಿಯಾ, ನೈಜರ್, ನಮೀಬಿಯಾ, ಮೊರಾಕ್ಕೋ, ಮೊಂಟನಿಗ್ರೋ, ಮಾರಿಷಸ್, ಮಾಲ್ಟಾ, ಲಿಥುವೇನಿಯಾ, ಲಾತ್ವಿಯ,  ಲೈಬೀರಿಯಾ, ಕೊಸೋವೊ, ಕಿನ್ಯಾ, ಇಂಡೋನೇಶಿಯಾ, ಲೆಬನಾನ್, ಸುಡಾನ್, ಸಿರಿಯಾ, ಯುಎಇ, ತುರ್ಕೆಮೆನಿಸ್ತಾನ್, ಉಝ್ಬೆಕಿಸ್ತಾನ್, ಗಿನಿಯಾ, ಮಾಲಿ, ಸೆನೆಗಲ್ ದೇಶಗಳ ಧ್ವಜದಲ್ಲೂ ಹಸಿರು ಬಣ್ಣವಿದೆ. ಅಂದಹಾಗೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ರಾಷ್ಟ್ರಗಳು  ಹಸಿರು ಬಣ್ಣವನ್ನು ತಮ್ಮ ರಾಷ್ಟ್ರಧ್ವಜದಲ್ಲಿ ಬಳಸಿಕೊಳ್ಳುವುದಕ್ಕೆ ಪವಿತ್ರ ಕುರ್‌ಆನಿನ ಈ ಎರಡು ವಚನಗಳು ಮುಖ್ಯ ಕಾರಣ ಎಂದು  ಹೇಳಲಾಗುತ್ತದೆ-

1. ಆ ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳ ಹಾಗೂ ನುಣುಪಾದ ಅಮೂಲ್ಯ ಹಾಸುಗಳ ಮೇಲೆ ದಿಂಬಿಗೊರಗಿ  ಕುಳಿತಿರುವರು.  (ಅಧ್ಯಾಯ 55, ವಚನ 76)
2. ಸ್ವರ್ಗವಾಸಿಗಳ ಮೈಮೇಲೆ ತೆಳ್ಳಗಿನ ರೇಶ್ಮೆಯ ಹಸಿರು ಉಡುಪು ಮತ್ತು ಜರತಾರಿ ಬಟ್ಟೆಗಳಿರುವುವು. (ಅಧ್ಯಾಯ 76, ವಚನ 21)  ನಿಜವಾಗಿ,

ಹಸಿರು ಧ್ವಜದ ಹೆಸರಲ್ಲಿ ಭಾರತೀಯ ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಿಸುವುದರ ಹಿಂದೆ ರಾಜಕೀಯ ದುರುದ್ದೇಶ ಕೆಲಸ ಮಾಡುತ್ತಿದೆ  ಎಂಬುದು ಅತ್ಯಂತ ವಾಸ್ತವ. ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕ್ ನಿಷ್ಠರು ಎಂದೆಲ್ಲಾ ಬಿಂಬಿಸುವುದರಿಂದ  ರಾಜಕೀಯವಾಗಿ  ಲಾಭವಿದೆ ಎಂಬುದನ್ನು ತಿಳಿದುಕೊಂಡ ಪಕ್ಷವು ಸುಳ್ಳನ್ನು ಮತ್ತೆ ಮತ್ತೆ ತೇಲಿಬಿಡುವ ಹಾಗೂ ಗೊಂದಲಕಾರಿ ಸುದ್ದಿಯನ್ನು ಉತ್ಪಾದನೆ ಮಾಡುವ  ಅಪಾಯಕಾರಿ ಕೆಲಸ ಮಾಡುತ್ತಿದೆ ಅನ್ನುವುದೂ ಸ್ಪಷ್ಟ. ರಾಜಕೀಯ ಪಕ್ಷಗಳ ಈ ದುರುದ್ದೇಶಕ್ಕೆ ಕೆಲವು ಪ್ರಮುಖ ಮಾಧ್ಯಮಗಳೇ ಬೆಂಬಲ  ನೀಡುತ್ತಿರುವುದೇ ಮುಸ್ಲಿಮರು ಇವತ್ತು ಕಟಕಟೆಯಲ್ಲಿ ನಿಂತಿರುವುದಕ್ಕೆ ಮುಖ್ಯ ಕಾರಣ. ಮೊದಲು, ‘ಮುಸ್ಲಿಮರಿಂದ ಪಾಕ್ ಧ್ವಜ ಹಾರಾಟ’  ಎಂಬ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಬಳಿಕ ಪೊಲೀಸರು ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡಕೊಂಡು ಪರಿಶೀಲಿಸಿದ  ಬಳಿಕ ಅದು ಪಾಕ್ ಧ್ವಜವಲ್ಲ, ಹಸಿರು ಧ್ವಜ ಎಂದು ಗೊತ್ತಾಗಿ ಪ್ರಕರಣ ಮುಕ್ತಾಯವನ್ನು ಕಾಣುತ್ತದೆ. ಆದರೆ, ಈ ಸತ್ಯ ಸುದ್ದಿ ಬಹಿರಂಗಕ್ಕೆ  ಬರುವ ಮೊದಲೇ ಸುಳ್ಳು ಸುದ್ದಿ ದೇಶದಾದ್ಯಂತ ಕಾಡ್ಗಿಚ್ಚಿನಂತೆ ಎಲ್ಲರಿಗೂ ತಲುಪಿರುತ್ತದೆ. ಈ ಸುಳ್ಳು ಸುದ್ದಿಯನ್ನು ತೇಲಿಸಿದವರ ಉದ್ದೇಶವೂ  ಇದುವೇ ಆಗಿರುತ್ತದೆ. ಅಲ್ಲದೇ, ನಿಜ ಸುದ್ದಿಗೆ ಸುಳ್ಳು ಸುದ್ದಿಯಷ್ಟು ಆಕರ್ಷಣೆ ಇಲ್ಲದೇ ಇರುವುದರಿಂದ ಅದು ಮಾಧ್ಯಮಗಳಲ್ಲಿ ಜಾಗ  ಪಡಕೊಳ್ಳುವುದೂ ಕಡಿಮೆ. ನಿಜವಾಗಿ,

ಕಟಕಟೆಯಲ್ಲಿರಬೇಕಾದುದು ಮುಸ್ಲಿಮರ ದೇಶನಿಷ್ಠೆಯಲ್ಲ, ಕೆಲವು ಮಾಧ್ಯಮಗಳು ಮತ್ತು ನಿರ್ದಿಷ್ಟ ರಾಜಕೀಯ ಪಕ್ಷಗಳ ಸತ್ಯನಿಷ್ಠೆ, ಪ್ರಾಮಾಣಿಕತೆ  ಮತ್ತು ದೇಶಪ್ರೇಮ. ಅಷ್ಟೇ.

Friday, May 17, 2024

ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

 



ಏ.ಕೆ. ಕುಕ್ಕಿಲ

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು  ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿ ಗಳು ಏನನ್ನುತ್ತವೆ?
ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್  ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ  ಬರೆಯಲಾದ ಆ ಬರಹದ ಶೀರ್ಷಿಕೆ:

Rate of Muslim population rise fell more than Hindus in 20 years
(ಕಳೆದ 20 ವರ್ಷಗಳಲ್ಲಿ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರ ಹಿಂದೂಗಳಿಗಿAತಲೂ ಕಡಿಮೆ.)

ಗೂಗಲ್ ಮಾಡಿದರೆ ಈ ಬರಹ ಈಗಲೂ ಓದುವಿಕೆಗೆ ಲಭ್ಯ ಇದೆ. ಈ ಬರಹದ ಆರಂಭ ಹೀಗಾಗುತ್ತದೆ-
While India's Muslim population grew faster than Hindu population between 1991 and 2001 and then
between 2001 and 2011, the pace of growth declined more dramatically for muslims than hindus over these
two decades, census data shows-
- ಅಂದರೆ,

‘ಜನಗಣತಿ ಅಂಕಿ-ಅಂಶಗಳ ಪ್ರಕಾರ, 1991-2001ರ ನಡುವೆ ಈ ದೇಶದ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು ಹಿಂದೂ ಜನಸಂಖ್ಯಾ  ಬೆಳವಣಿಗೆ ದರಕ್ಕಿಂತ ವೇಗವಾಗಿತ್ತಾದರೂ 2001-2011ರ ನಡುವೆ ಮುಸ್ಲಿಮರ ಈ ಬೆಳವಣಿಗೆ ದರವು ಹಿಂದೂಗಳಿಗಿಂತಲೂ ವೇಗವಾಗಿ  ಕುಸಿಯಿತು.’

1991ರಿಂದ 2011- ಈ ಎರಡು ದಶಕಗಳಲ್ಲಿ ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರವು 19.9%ದಿಂದ 16.8%ಕ್ಕೆ ಕುಸಿಯಿತು.  ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ 20 ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರ 3.1%ಕ್ಕೆ ಕುಸಿಯಿತು. ಇದೇ ಅವಧಿಯಲ್ಲಿ  ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು 29.5%ದಿಂದ 24.6%ಕ್ಕೆ ಕುಸಿಯಿತು. ಅಂದರೆ, ಈ ಎರಡು ದಶಕಗಳ ನಡುವೆ 4.7%ಕ್ಕೆ ಕುಸಿಯಿತು.  ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ ಕುಸಿತಕ್ಕೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಕುಸಿತದ  ಪ್ರಮಾಣ ಹೆಚ್ಚು. 1991-2011- ಈ 20 ವರ್ಷಗಳ ನಡುವೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರವು 3.1% ಕುಸಿದಿದ್ದರೆ ಮುಸ್ಲಿಮರ  ಕುಸಿತದ ಪ್ರಮಾಣವು 4.7% ಆಗಿತ್ತು. ಇದೇವೇಳೆ, ಇದೇ ಅವಧಿಯಲ್ಲಿ ಬೌದ್ಧ, ಜೈನ, ಕ್ರೈಸ್ತ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ  ಇಳಿಕೆಯು ಇದಕ್ಕಿಂತಲೂ ಹೆಚ್ಚಾಗಿದೆ. ಅಂದಹಾಗೆ,

1991ರಿಂದ  2011ರ ನಡುವೆ ಭಾರತದ ವಿವಿಧ ಧರ್ಮಗಳ ಲೆಕ್ಕಾಚಾರ ಮಾಡುವುದಾದರೆ, ಅತೀ ನಿಧಾನವಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ  ಇಳಿಕೆ ಕಂಡಿರುವುದು ಹಿಂದೂ ಸಮುದಾಯದಲ್ಲಿ. ಅತೀ ವೇಗವಾಗಿ ಜನಸಂಖ್ಯಾ ದರ ಇಳಿದಿರುವುದು ಜೈನ ಮತ್ತು ಬೌದ್ಧ ಸಮುದಾಯದಲ್ಲಿ. ಭಾರತ ಸರ್ಕಾರ ನಡೆಸಿರುವ ಜನಗಣತಿ ವಿವರಗಳೇ ಇವೆಲ್ಲವನ್ನೂ ಸ್ಪಷ್ಟಪಡಿಸಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಇನ್ನೂ ನಡೆಯದಿರುವುದರಿಂದ 2011ರ ಜನಗಣತಿಯನ್ನೇ ಜನಸಂಖ್ಯಾ ಲೆಕ್ಕಾಚಾರಕ್ಕೆ ಆಧಾರವಾಗಿ ಪರಿಗಣಿಸಲಾಗುತ್ತದೆ.

ಇನ್ನೂ ಒಂದಿಷ್ಟು ಅಂಕಿ-ಅಂಶಗಳು

1992ರಲ್ಲಿ ಓರ್ವ ಮುಸ್ಲಿಮ್ ಮಹಿಳೆಗೆ ಸರಾಸರಿ 4.4 ಮಕ್ಕಳು ಇದ್ದರೆ, 2015ಕ್ಕೆ ತಲುಪುವಾಗ ಇದು 2.6ಕ್ಕೆ ಕುಸಿಯಿತು. ಇದೇವೇಳೆ,  1992ರಲ್ಲಿ ಓರ್ವ ಹಿಂದೂ ಮಹಿಳೆಗೆ ಸರಾಸರಿ 3.3 ಮಕ್ಕಳು ಇದ್ದರೆ, 2015ಕ್ಕಾಗುವಾಗ ಇದು 1.2ಕ್ಕೆ ಕುಸಿಯಿತು. 2021ರ Pew Research Centreನ  ವರದಿಯ ಪ್ರಕಾರ,

1992ರಿಂದ 2015ರ ನಡುವೆ ಮುಸ್ಲಿಮ್ ಮಹಿಳೆಯರ ಫಲ ವತ್ತತೆಯ ಪ್ರಮಾಣವು 4.4ರಿಂದ 2.6ಕ್ಕೆ ಕುಸಿದಿದೆ. ಇದೇವೇಳೆ, ಹಿಂದೂ  ಮಹಿಳೆಯರಲ್ಲಿ ಇದು 3.3ರಿಂದ 2.1ಕ್ಕೆ ಕುಸಿದಿದೆ. The National Family health survey (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) 2019-21ರ ವರದಿ ಪ್ರಕಾರ,

ಹಿಂದೂ ಮತ್ತು ಮುಸ್ಲಿಮ್ ಮಹಿಳೆಯರ ನಡುವಿನ ಫಲವತ್ತತೆಯ ಅಂತರವು 0.42ರ ಪ್ರಮಾಣದಲ್ಲಿದೆ. ಅಂದರೆ, ಓರ್ವ ಹಿಂದೂ ಮಹಿಳೆ  ಸರಾಸರಿ 1.94 ಮಗುವನ್ನು ಹೊಂದುವಾಗ, ಮುಸ್ಲಿಮ್ ಮಹಿಳೆ ಸರಾಸರಿ 2.36 ಮಗುವನ್ನು ಹೊಂದುತ್ತಾಳೆ. 1992ರಲ್ಲಿ ಓರ್ವ ಮುಸ್ಲಿಮ್  ಮಹಿಳೆ ಹಿಂದೂ ಮಹಿಳೆಗಿಂತ ಸರಾಸರಿ 1.1 ಮಗುವನ್ನು ಹೆಚ್ಚು ಹೊಂದುತ್ತಿದ್ದಳು. ಆದರೆ, 3 ದಶಕಗಳಲ್ಲಿ ಈ ಅಂತರದಲ್ಲಿ ಭಾರೀ  ಇಳಿಕೆಯಾಗಿದೆ. ಹಾಗೆಯೇ,

1991-2011ರ ನಡುವೆ ಲೆಕ್ಕ ಹಾಕಿದರೆ, ಮುಸ್ಲಿಮ್ ಫಲವತ್ತತೆಯ ಪ್ರಮಾಣವು 35% ಕುಸಿದಿರುವಾಗ ಹಿಂದೂ ಫಲವತ್ತತೆಯ ಪ್ರಮಾಣವು  30% ಕುಸಿದಿದೆ. ಅಂದರೆ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರ ಫಲವತ್ತತೆಯ ಪ್ರಮಾಣವು ಹಿಂದೂಗಳಿಗಿಂತ  5% ಹೆಚ್ಚು ಕುಸಿದಿದೆ. ಇದು  ಹೀಗೆಯೇ ಮುಂದುವರಿದರೆ 2030ಕ್ಕಾಗುವಾಗ ಹಿಂದೂ-ಮುಸ್ಲಿಮ್ ಫಲವತ್ತತೆಯ ಪ್ರಮಾಣವು ಸಮಾನ ಮಟ್ಟಕ್ಕೆ ಬರಲಿದೆ ಎಂದು  ಅಂದಾಜಿಸಬಹುದು. ಅಂದಹಾಗೆ,

2021ರಲ್ಲಿ ಬಿಡುಗಡೆಯಾದ ಬಹುಚರ್ಚಿತ The Population Myth: Islam, Family Plannings and Politics inIndia ಎಂಬ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರ ಪುಸ್ತಕದಲ್ಲಿ ಈ ಕುರಿತಂತೆ ಸಾಕಷ್ಟು ವಿವರಗಳಿವೆ.  ಅವರು ಈ ಪುಸ್ತಕದಲ್ಲಿ ದೆಹಲಿ ವಿವಿಯ ಮಾಜಿ ವೈಸ್ ಚಾನ್ಸ್ಲರ್ ದಿನೇಶ್ ಸಿಂಗ್ ಮತ್ತು ಪ್ರೊ. ಅಜಯ್ ಕುಮಾರ್ ಅವರ ಲೆಕ್ಕಾಚಾರವನ್ನು  ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಅದರ ಪ್ರಕಾರ, 1951ರ ಜನಗಣತಿ ಪ್ರಕಾರ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 9.8% ಇತ್ತು. 2011ರ ಜ ನಗಣತಿಯಂತೆ ಇದು 14.2%ವಾಗಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ 84.1%ದಿಂದ 79.8%ಕ್ಕೆ ಇಳಿಕೆಯಾಗಿದೆ.  ಅಂದರೆ ಕಳೆದ 60 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಕೇವಲ 4.4% ಮಾತ್ರವೇ ಏರಿಕೆಯಾಗಿದೆ. ಹೀಗಾದರೆ, ಮುಂದಿನ ಸಾವಿರ  ವರ್ಷಗಳಲ್ಲೂ ಮುಸ್ಲಿಮರ ಜನಸಂಖ್ಯೆ ಹಿಂದೂಗಳನ್ನು ಮೀರಿಸಲಾರದು ಎಂದವರು ಜನಗಣತಿ ಅಂಕಿ-ಸಂಖ್ಯೆಗಳ ಆಧಾರದಲ್ಲೇ  ಬರೆ ದಿದ್ದಾರೆ. ಅದರಲ್ಲೂ ಹಿಂದೂಗಳು ಇನ್ನು ಮುಂದೆ ಒಂದೇ ಒಂದು ಮಗುವನ್ನು ಹೆರದಿದ್ದರೂ 2070ರ ವರೆಗೆ ಮುಸ್ಲಿಮರು ಈ ದೇಶದಲ್ಲಿ  ಬಹುಸಂಖ್ಯಾತರಾಗಲಾರರು ಎಂದೂ ಖುರೇಶಿ ಬರೆದಿದ್ದಾರೆ. ನಿಜವಾಗಿ,

ಜನಸಂಖ್ಯಾ ಹೆಚ್ಚಳಕ್ಕೂ ಬಡತನ, ಅನಕ್ಷರತೆ ಮತ್ತು ಅಜ್ಞಾನಕ್ಕೂ  ನಡುವೆ ಗಾಢ ಸಂಬಂಧವಿದೆ. ಈ ಸಂಬಂಧಕ್ಕೆ ಹೋಲಿಸಿದರೆ, ಜನಸಂಖ್ಯಾ  ಹೆಚ್ಚಳಕ್ಕೂ ಧರ್ಮಕ್ಕೂ ನಡುವಿನ ಸಂಬಂಧ ತೀರಾ ತೆಳುವಾದುದು. ಕೇರಳ ಸಹಿತ ದಕ್ಷಿಣ ಭಾರತದ ಹಿಂದೂ ಮಹಿಳೆಯರ ಫಲವತ್ತತೆಯ  ಪ್ರಮಾಣವು ಉತ್ತರ ಭಾರತದ ರಾಜ್ಯಗಳ ಹಿಂದೂ ಮಹಿಳೆಯರಿಗೆ ಹೋಲಿಸಿದರೆ ತೀರಾ ಕಡಿಮೆ. ಬಿಹಾರದಲ್ಲಿ ಫಲವತ್ತತೆಯ ಪ್ರಮಾಣ  (TFR) 2.9, ರಾಜಸ್ತಾನ 2.8, ಉತ್ತರ ಪ್ರದೇಶ 2.6 ಇದೆ. ಓರ್ವ ತಾಯಿ ಮಗುವನ್ನು ಹೊಂದುವುದಕ್ಕೂ ಧರ್ಮಕ್ಕೂ ಸಂಬಂಧ  ಇರುತ್ತಿದ್ದರೆ ದಕ್ಷಿಣ ಭಾರತದ ಹಿಂದೂ ಮಹಿಳೆಯರಿಗೂ ಉತ್ತರ ಭಾರತದ ಹಿಂದೂ ಮಹಿಳೆಯರಿಗೂ ಮಕ್ಕಳನ್ನು ಹೊಂದುವ ವಿಷಯದಲ್ಲಿ  ಸಮಾನ ಹೋಲಿಕೆ ಇರಬೇಕಾಗಿತ್ತು. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿ ಸರಾಸರಿ ಮಕ್ಕಳ ಸಂಖ್ಯೆ ಹೆಚ್ಚು.  ಯಾಕೆ ಹೀಗೆ ಎಂದರೆ,

ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಬಿಹಾರ, ಒಡಿಸ್ಸಾ, ಉತ್ತರ ಪ್ರದೇಶ, ರಾಜಸ್ಥಾನ  ಇತ್ಯಾದಿ ರಾಜ್ಯಗಳಲ್ಲಿ ಪ್ರತಿ ಕುಟುಂಬದ ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯು ದಕ್ಷಿಣ ಭಾರತದ ಕುಟುಂಬಗಳಿಂದ  ತುಂಬಾ ಕೆಳಗಿದೆ. ಎಲ್ಲಿ ಆರ್ಥಿಕ  ಮತ್ತು ಶೈಕ್ಷಣಿಕ ಸ್ಥಿತಿ ತಳಮಟ್ಟದಲ್ಲಿದೆಯೋ ಆ ಪ್ರದೇಶಗಳಲ್ಲಿ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಬೇಧ  ಇಲ್ಲ. ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಓರ್ವ ತಾಯಿ ಹೊಂದಿರುವ ಮಕ್ಕಳ ಸರಾಸರಿ ಪ್ರಮಾಣವು ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ  ಹೋಲಿಸಿದರೆ ತೀರಾ ಕಡಿಮೆ. ಇದು ಹಿಂದೂ ಮತ್ತು ಮುಸ್ಲಿಮರಲ್ಲೂ ಬಹುತೇಕ ಸಮಾನವಾಗಿದೆ. ಅಷ್ಟಕ್ಕೂ,

ಜನಸಂಖ್ಯೆಯನ್ನು ಹೊರೆಯಾಗಿ ನೋಡುವ ಸಿದ್ಧಾಂತವನ್ನು ಮೊದಲು ಪರಿಚಯಿಸಿದ್ದು ಥಾಮಸ್ ರಾಬರ್ಟ್ ಮಲ್ತಸ್ ಎಂಬ ಅರ್ಥತಜ್ಞ.  ಇಂಗ್ಲೆಂಡಿನವರಾದ ಮತ್ತು ಮೂರು ಮಕ್ಕಳ ತಂದೆಯಾದ ಇವರು 1798ರಲ್ಲಿ Principle of population-- ಎಂಬ ಪ್ರಬಂಧವನ್ನು ಮಂಡಿಸಿದರು. 1803ರಲ್ಲಿ ಅದರ ಪರಿ ಷ್ಕೃತ ರೂಪವನ್ನು ಪ್ರಕಟಿಸಿದರು. ಅದರಲ್ಲಿ ಅವರು ಜನಸಂಖ್ಯೆಯನ್ನು ಹೊರೆಯಾಗಿ ವ್ಯಾಖ್ಯಾನಿಸಿದ್ದರು. ಜನಸಂಖ್ಯಾ ಹೆಚ್ಚಳವು ಬಡತನ, ನಿರಕ್ಷರತೆ, ಅನಾರೋಗ್ಯ ಇತ್ಯಾದಿಗಳಿಗೆ ಕಾರಣವಾಗುತ್ತದೆ ಎಂಬ ಥಿಯರಿಯನ್ನು ಮಂಡಿಸಿದರು.  ಈ ಥಿಯರಿಯ ಆಧಾರದಲ್ಲಿಯೇ 1973ರಲ್ಲಿ ವಿಶ್ವಸಂಸ್ಥೆಯು ಜನಸಂಖ್ಯಾ ನಿಯಂತ್ರಣವನ್ನು ಘೋಷಿಸಿತು. 1980ರಲ್ಲಿ ಚೀನಾವು  ಕುಟುಂಬಕ್ಕೊಂದೇ  ಮಗು ನೀತಿ ಯನ್ನು ಕಡ್ಡಾಯವಾಗಿ ಜಾರಿಗೊಳಿಸಿತು. ಇದಾಗಿ 36 ವರ್ಷಗಳ ಬಳಿಕ 2016ರಲ್ಲಿ ಇದೇ ಚೀನಾ ತನ್ನ ಈ  ನೀತಿಯನ್ನು ಪೂರ್ಣವಾಗಿ ರದ್ದುಗೊಳಿಸಿತು. ಕುಟುಂಬವೊಂದು  ಮೂರು ಮಗುವನ್ನು ಹೊಂದುವಂತೆ  ವಿನಂತಿ ಮಾಡಲಾಯಿತು. ಅದಕ್ಕಾಗಿ  ವಿವಿಧ ಪ್ರೋತ್ಸಾಹದ ವಿಧಾನಗಳನ್ನೂ ಅನುಸರಿಸಿತು. ಇದು ಏಕೆಂದರೆ,

ಒಂದೇ  ಮಗು ನೀತಿಯಿಂದಾಗಿ ಹಿರಿಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತಲ್ಲದೇ, ದುಡಿಯುವ ಪ್ರಾಯದ ಯುವ ಸಮೂಹದ ಸಂಖ್ಯೆ  ತೀವ್ರ ಪ್ರಮಾಣದಲ್ಲಿ ಕುಸಿಯತೊಡಗಿತು. 2022ರ ವೇಳೆಗೆ ಚೀನಾದಲ್ಲಿ ವೃದ್ಧರ ಸಂಖ್ಯೆ 20%ವನ್ನೂ ಮೀರಿ ಬೆಳೆ ಯಿತು. ಅಲ್ಲದೇ, ಒಂದೇ  ಮಗು ನೀತಿಗೆ ಚೀನಾ ನಾಗರಿಕರು ಎಷ್ಟು ಒಗ್ಗಿ ಹೋಗಿದ್ದಾರೆಂದರೆ, ಸರ್ಕಾರ ಇನಾಮು ಘೋಷಿಸಿ ದರೂ ಒಂದಕ್ಕಿಂತ  ಹೆಚ್ಚು ಮಗುವನ್ನು  ಹೊಂದಲು ಮುಂದೆ ಬರುತ್ತಿಲ್ಲ. ಶಿಕ್ಷಣ ವೆಚ್ಚ, ಪ್ರಸವ ವೆಚ್ಚ, ಜೀವನ ವೆಚ್ಚವನ್ನು ಪರಿಗಣಿಸಿಕೊಂಡು ಚೀನೀಯರು ಒಂದೇ ಮಗುವಿಗೆ ಆದ್ಯತೆ  ನೀಡುತ್ತಿರುವುದು ಸರ್ಕಾರದ ಕೈ ಕಟ್ಟಿದಂತಾಗಿದೆ. ಅಂದಹಾಗೆ,
ಜನಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆ ಎಂದಾದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನನ ಪ್ರಮಾಣದಲ್ಲಿ ವ್ಯತ್ಯಾಸ  ಇರಬಾರದಾಗಿತ್ತು. ಅದರಲ್ಲೂ ಜನಸಂಖ್ಯಾ ಹೆಚ್ಚಳಕ್ಕೆ ಇಸ್ಲಾಮ್ ಪ್ರಚೋದಿಸುತ್ತಿದೆ ಎಂದಾದರೆ, ಅರಬ್ ರಾಷ್ಟ್ರಗಳಲ್ಲಿ ಜನರು ತುಂಬಿ  ತುಳುಕಿರಬೇಕಿತ್ತು. ಕುರ್‌ಆನನ್ನೇ ಸಂವಿಧಾನವೆಂದು ಒಪ್ಪಿಕೊಂಡಿರುವ ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್, ಕುವೈಟ್, ಬಹರೈನ್ನ್   ಇತ್ಯಾದಿ ರಾಷ್ಟ್ರಗಳಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದಷ್ಟು ಜನರು ತುಂಬಿರಬೇಕಿತ್ತು. ಆದರೆ, ಆ ರಾಷ್ಟ್ರಗಳಲ್ಲಿ ಸ್ಥಳೀಯರ ಸಂಖ್ಯೆ ಎಷ್ಟು ಕಡಿಮೆ  ಇದೆ ಎಂದರೆ, ಭಾರತ ಸಹಿತ ಉದ್ಯೋಗಕ್ಕಾಗಿ ಅಲ್ಲಿಗೆ ಆಗಮಿಸಿರುವ ವಿದೇಶಿಯರ ಸಂಖ್ಯೆಯೇ ಹೆಚ್ಚಿದೆ. ಈ ಅರಬ್ ರಾಷ್ಟ್ರಗಳು  ಆರ್ಥಿಕವಾಗಿ ಸುಸ್ಥಿತಿಯಲ್ಲಿರುವುದು ಮತ್ತು ಪ್ರತಿ ಅರಬ್ ಕುಟುಂಬವೂ ಸುಶಿಕ್ಷಿತವಾಗಿರುವುದೇ ಇದಕ್ಕೆ ಕಾರಣ. ಹಾಗೆಯೇ, ಜನಸಂಖ್ಯೆಗೆ  ಸಂಬಂಧಿಸಿ ಜಗತ್ತಿನಲ್ಲಿಯೇ ನಂಬರ್ ವನ್ ಸ್ಥಾನದಲ್ಲಿರುವ ಚೀನಾ ಮುಸ್ಲಿಮ್ ರಾಷ್ಟ್ರವೇನೂ ಅಲ್ಲವಲ್ಲ.ಇಸ್ಲಾಮ್ ಎಂದೂ ಜನಸಂಖ್ಯೆಯನ್ನು ಏರಿಸಿ ರಾಷ್ಟ್ರವನ್ನು ತನ್ನ ವಶಪಡಿಸಿಕೊಳ್ಳುವ ಥಿಯರಿಯನ್ನು ಮಂಡಿಸಿಯೇ ಇಲ್ಲ. ಹಾಗೆಯೇ ಜ ನಸಂಖ್ಯೆಯನ್ನು ಹೊರೆ ಎಂದೂ ಹೇಳಿಯೂ ಇಲ್ಲ.ಕುರ್‌ಆನಿನ ಪ್ರಕಾರ, 

ಓರ್ವ ತಾಯಿ ಒಂದು ಮಗುವನ್ನು ಹೆತ್ತು ಕನಿಷ್ಠ ಮೂರು ವರ್ಷಗಳಾದ ಬಳಿಕ ಇನ್ನೊಂದು ಮಗುವನ್ನು ಹೆರಬೇಕು.  (ಅಧ್ಯಾಯ: 31, ವಚನ: 14) ಇದರ ಪ್ರಕಾರ ಇಬ್ಬರು ಮಕ್ಕಳನ್ನು ಓರ್ವ ತಾಯಿ ಹೊಂದುವಾಗ ಕನಿಷ್ಠ ಆರೇಳು ವರ್ಷಗಳಾದರೂ ಆಗುತ್ತದೆ.  ಹೆಣ್ಣನ್ನು ಮಗು ಹೆರುವ ಯಂತ್ರವೆಂದು ಇಸ್ಲಾಮ್ ಪರಿಗಣಿಸಿದ್ದಿದ್ದರೆ ಈ ಅಂತರವನ್ನು ಹೇರುವ ಅಗತ್ಯ ಇದ್ದಿರಲೇ ಇಲ್ಲ. ತಾಯಿಯ  ಆರೋಗ್ಯಕ್ಕೆ ಗರಿಷ್ಠ ಮಹತ್ವ ಕೊಡುವ ಇಸ್ಲಾಮ್, ಹೆಣ್ಣನ್ನು ಹೆರುವ ಯಂತ್ರವಾಗಿ ಕಾಣುವುದಕ್ಕೆ ಸಾಧ್ಯವೂ ಇಲ್ಲ.

ಇದೊಂದು ಮಿತ್.

ಲವ್ ಜಿಹಾದ್‌ನಂತೆ ಜನಸಂಖ್ಯಾ ಹೆಚ್ಚಳವೂ ಒಂದು ಪ್ರೊಪಗಂಡಾ. ಜನ ಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ, ಮುಸ್ಲಿಮರ  ಬಗ್ಗೆ ಹಿಂದೂಗಳಲ್ಲಿ ಭಯ ಹುಟ್ಟಿಸುವುದೇ ಇದರ ಹಿಂದಿರುವ ಉದ್ದೇಶ. ಈ ದೇಶ ಭವಿಷ್ಯದಲ್ಲಿ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುತ್ತದೆ  ಎಂಬುದು ಬಹುದೊಡ್ಡ ಸುಳ್ಳು. ಈ ದೇಶ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುವುದಕ್ಕೆ ಸಾಧ್ಯವೇ ಇಲ್ಲ. 2030ರ ವೇಳೆಗೆ ಹಿಂದೂ- ಮುಸ್ಲಿಮ್ ಮಹಿಳೆಯರ ಫಲವತ್ತತೆಯ ಪ್ರಮಾಣ ಏಕಪ್ರಕಾರ ವಾಗಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, 1951ರಿಂದ 1991ರ  ವರೆಗೆ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರವು ಹಿಂದೂಗಳಿಗೆ ಹೋಲಿಸಿದರೆ ಹೆಚ್ಚಿತ್ತು ಎಂಬುದು ನಿಜ. ಆದರೆ ಮುಂದಿನ ಎರಡು ದಶಕಗಳಲ್ಲಿ ಈ ಏರಿಕೆ ಪ್ರಮಾಣವು ದಿಢೀರ್ ಕುಸಿದಿರುವುದೂ ನಿಜ. ಈ ಕುಸಿತವೇ ಈ ಏರಿಕೆ-ಇಳಿಕೆಗೆ ಧರ್ಮ ಕಾರಣವಲ್ಲ ಎಂಬುದನ್ನು  ಸೂಚಿಸುತ್ತದೆ. ಬಡತನ-ನಿರಕ್ಷರತೆ, ಅಜ್ಞಾನ ಯಾವ ಪ್ರದೇಶಗಳಲ್ಲಿ ಹೆಚ್ಚಿದೆಯೋ ಅಲ್ಲಿನ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ  ಹೆಚ್ಚಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಗೊಂಡಿರುವ ಪ್ರದೇಶಗಳ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಜನಸಂಖ್ಯೆ ಕಡಿಮೆ ಇದೆ.  ಒಂದುವೇಳೆ, ಮಕ್ಕಳ ಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆಯೆಂದಾದರೆ, ಈ ಸಹಜತೆ ಸಾಧ್ಯವೇ ಇರಲಿಲ್ಲ. ಅಂದಹಾಗೆ,

ಇಲ್ಲಿ ನೀಡಲಾದ ಎಲ್ಲ ಅಂಕಿ-ಅಂಶಗಳೂ ಜನಗಣತಿಯನ್ನು ಆಧರಿಸಿದ್ದಾಗಿದ್ದು, ಯಾರು ಬೇಕಾದರೂ ಗೂಗಲ್ ಮಾಡಿ ಪರಿಶೀ ಲಿಸಿಕೊಳ್ಳಬಹುದು.