ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ಪತ್ನಿ ಯೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ಕೆಲವೊಮ್ಮೆ ಸಮಾಲೋಚನೆ ನಡೆಸ ಬೇಕು ಎಂದು ಅನಿಸುತ್ತದೆ. ಆದರೆ ಪತ್ನಿಯೊಂದಿಗೆ ಎಂಥಾ ಸಮಾಲೋಚನೆ ಎಂದು ಒಳಮನಸ್ಸು ಹೇಳುತ್ತದೆ. ಅದು ನನ್ನ ಅಹಂಕಾರವೋ, ಸ್ವಾಭಿಮಾನವೋ ಕೀಳರಿಮೆಯೋ ಗೊತ್ತಿಲ್ಲ. ಆದರೆ ನನ್ನ ಗೆಳೆಯರಲ್ಲಿ ನಾನು ಸಮಾಲೋಚನೆ ನಡೆಸುತ್ತೇನೆ. ಕೆಲವೊಮ್ಮೆ ಅವರ ಅಭಿಪ್ರಾಯವನ್ನು ಮನ್ನಿಸಿ ನನ್ನ ಅಭಿಪ್ರಾಯವನ್ನು ತ್ಯಾಗ ಮಾಡುವುದೂ ಇದೆ. ಹಾಗೆಯೇ, ನನ್ನ ಪತ್ನಿಗೆ ನನ್ನ ಈ ವರ್ತನೆಯ ವಿಷಯದಲ್ಲಿ ತೀವ್ರ ಆಕ್ಷೇಪವೂ ಇದೆ. ಕೆಲವೊಮ್ಮೆ ಆಕೆ ಎಷ್ಟು ಪ್ರಬುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾಳೆಂದರೆ, ನನ್ನ ಮತ್ತು ಗೆಳೆಯರ ಅಭಿಪ್ರಾಯಕ್ಕಿಂತಲೂ ಆಕೆಯ ಸಲಹೆ ಉತ್ತಮವಾಗಿರುತ್ತದೆ. ನನ್ನ ಒಳಮನಸ್ಸು ಆಕೆಯ ತಿಳುವಳಿಕೆ, ಪ್ರಬುದ್ಧತೆಯ ಕುರಿತು ಸದಭಿಪ್ರಾಯವನ್ನೇ ಹೊಂದಿದೆ. ಆದರೆ, ಯಾಕೋ ಆಕೆಯೊಂದಿಗೆ ಸಮಾಲೋಚನೆ ಮಾಡಲು ಮನಸ್ಸು ಕೇಳುತ್ತಿಲ್ಲ. ಇದರಿಂದಾಗಿ ಹಲವು ಬಾರಿ ನಮ್ಮ ನಡುವೆ ವಾಗ್ವಾದವೂ ನಡೆದಿದೆ. ಯಾಕೆ ಹೀಗೆ ಎಂದು ಗೊತ್ತಾಗುತ್ತಿಲ್ಲ...’
ನಿಜವಾಗಿ ಇದು ಒಬ್ಬರ ಸಮಸ್ಯೆಯಲ್ಲ. ಪತ್ನಿಯ ಹೊರತಾಗಿ ಇತರೆಲ್ಲರನ್ನೂ ಬುದ್ಧಿವಂತರೆಂದು ನಂಬುವ ಮತ್ತು ಅವರಲ್ಲಿ ಚರ್ಚೆ, ಸಮಾಲೋಚನೆ ನಡೆಸಿ ಸಲಹೆಗಳು ಕೇಳುವ ಮಂದಿ ನಮ್ಮ ನಡುವೆ ಧಾರಾಳ ಇದ್ದಾರೆ. ಮಗಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬಲ್ಲಿಂದ ತೊಡಗಿ ಮನೆಗೆ ಯಾವೆಲ್ಲ ದಿನಸಿ ಸಾಮಾನುಗಳನ್ನು ತರಬೇಕು ಎಂಬಲ್ಲಿವರೆಗೆ ಪ್ರತಿಯೊಂದನ್ನೂ ಪತಿಯೇ ನಿರ್ಧರಿಸುವ ಅಸಂಖ್ಯ ಮನೆಗಳು ನಮ್ಮ ನಡುವೆ ಇವೆ. ಪತ್ನಿ ಏನಾದರೂ ಸಲಹೆ ಹೇಳಿದರೆ ಅದು ಉತ್ತಮವಾಗಿದ್ದರೂ ತಿರಸ್ಕರಿಸುವ ಪತಿಯಂದಿರೂ ಧಾರಾಳ ಇದ್ದಾರೆ. ‘ನಿನಗೇನು ಗೊತ್ತು’ ಎಂದು ಅವಮಾ ನಿಸುವವರೂ ಇದ್ದಾರೆ. ಈಗಿನ ಆಧುನಿಕ ಕಾಲದಲ್ಲಂತೂ ಇಂಥ ವಿಷಯಗಳೇ ವಾಗ್ವಾದಕ್ಕೆ ಕಾರಣವಾಗಿ ವಿಚ್ಛೇದನದ ಹಂತಕ್ಕೂ ಹೋಗುವುದಿದೆ. ಯಾಕೆ ಹೀಗೆ? ಗೆಳೆಯರೊಂದಿಗೆ ಸಮಾಲೋಚನೆ ನಡೆಸುವ ವ್ಯಕ್ತಿ ಯಾಕೆ ಪತ್ನಿಯೊಂದಿಗೆ ಸಮಾಲೋಚನೆ ನಡೆಸಬಾರದು. ಆತನನ್ನು ಇದರಿಂದ ತಡೆಯುತ್ತಿರುವವರು ಯಾರು? ಪತ್ನಿಯೊಂದಿಗೆ ಸಮಾಲೋಚನೆ ನಡೆಸಬಾರದು ಎಂದು ಪತಿಯನ್ನು ಒಪ್ಪಿಸಿರುವುದು ಯಾವುದು? ಧರ್ಮವೇ? ಬೆಳೆದು ಬಂದ ವಾತಾವರಣವೇ, ಮೇಲರಿಮೆಯೇ? ಅಹಂಕಾರವೇ?
ಪ್ರವಾದಿ ಮುಹಮ್ಮದರು(ಸ) ಉಮ್ರಾ ಮಾಡುವ ಉದ್ದೇಶವನ್ನಿಟ್ಟುಕೊಂಡು ಮದೀನಾದಿಂದ ಮಕ್ಕಾಕ್ಕೆ ಹೊರಡುತ್ತಾರೆ. ಅವರ ಜೊತೆ ಅವರ ಪತ್ನಿಯರೂ ಮತ್ತು ಸಾವಿರಕ್ಕಿಂತಲೂ ಅಧಿಕ ಅನುಯಾಯಿಗಳೂ ಇದ್ದರು. ಮಕ್ಕಾದಲ್ಲಿದ್ದ ಅವರ ವಿರೋಧಿಗಳಿಗೆ ಪ್ರವಾದಿಯವರ(ಸ) ಈ ಪ್ರಯಾಣದ ಸುದ್ದಿ ಸಿಕ್ಕಿತು. ತಾವೇ ಕಿರುಕುಳ ಕೊಟ್ಟು ವಲಸೆ ಹೋಗುವಂತೆ ಮಾಡಿದ ವ್ಯಕ್ತಿ ಮರಳಿ ಮಕ್ಕಾಕ್ಕೆ ಬರುವುದನ್ನು ಅವರು ಇಷ್ಟಪಡಲಿಲ್ಲ. ಹಾಗಂತ, ಪ್ರವಾದಿಯವರು(ಸ) ಮಕ್ಕಾದ ಮೇಲೆ ದಂಡೆತ್ತಿ ಬರುತ್ತಿಲ್ಲ ಎಂಬುದು ಇವರಿಗೆ ಖಚಿತವಾಗಿ ಗೊತ್ತಾದ ಬಳಿಕವೂ ಪ್ರವಾದಿ ಯನ್ನು ಮಕ್ಕಾದೊಳಗೆ ಬಿಟ್ಟುಕೊಡಲು ಅವರು ಸಿದ್ಧರಿರಲಿಲ್ಲ. ಆದ್ದರಿಂದ ಪ್ರವಾದಿ(ಸ) ಜೊತೆ ಸಮಾಲೋಚನೆಗಾಗಿ ಓರ್ವ ದೂತನನ್ನು ಅವರು ಕಳುಹಿಸಿಕೊಟ್ಟರು. ಅವರ ಹೆಸರು ಸುಹೈಲ್ ಬಿನ್ ಅಮ್ರ್. ಅವರು ಹುದೈಬಿಯಾ ಎಂಬಲ್ಲಿ ಪ್ರವಾದಿಯವರನ್ನು ಭೇಟಿಯಾದರು. ಅಲ್ಲಿ ಮಾತುಕತೆಗಳೂ ನಡೆದುವು. ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ಆ ಒಪ್ಪಂದದ ಪ್ರಕಾರ ಪ್ರವಾದಿ ಮತ್ತು ಅವರ ಅನುಯಾಯಿಗಳು ಮಕ್ಕಾ ಪ್ರವೇಶಿಸದೇ ಮರಳಿ ಮದೀನಾಕ್ಕೆ ಹೋಗಬೇಕಿತ್ತು. ಅಲ್ಲದೇ, ಮಕ್ಕಾದಿಂದ ಯಾರಾದರೂ ಆಶ್ರಯ ಬಯಸಿ ಮದೀನಾಕ್ಕೆ ಆಗಮಿಸಿದರೆ ಅವರನ್ನು ಪುನಃ ಪ್ರವಾದಿಯವರು ಮಕ್ಕಾದವರ ವಶಕ್ಕೆ ಒಪ್ಪಿಸಬೇಕಿತ್ತು. ಆದರೆ ಮದೀನಾದಿಂದ ಯಾರಾದರೂ ಆಶ್ರಯ ಕೋರಿ ಮಕ್ಕಾಕ್ಕೆ ಬಂದರೆ ಅವರನ್ನು ಮರಳಿ ಮದೀನಾಕ್ಕೆ ಒಪ್ಪಿಸಬೇಕಿರಲಿಲ್ಲ...’ ಒಪ್ಪಂದದ ಈ ಶರತ್ತುಗಳು ಪ್ರವಾದಿಯ ಅನುಯಾಯಿಗಳನ್ನು ತೀವ್ರವಾಗಿ ಘಾಸಿಗೊಳಿಸಿತು. ನಾವು ಇಷ್ಟೂ ದುರ್ಬಲರಾ ಎಂಬ ನೋವು ಮತ್ತು ಆಕ್ರೋಶ ಅವರೊಳಗೆ ಸ್ಫೋಟಿಸಿತು. ಮದೀನಾ ದಿಂದ ಹೊರಡುವಾಗ ಪ್ರವಾದಿ ಮತ್ತು ಅನುಯಾಯಿಗಳು ಬಲಿಪ್ರಾಣಿಯನ್ನೂ ಜೊತೆ ಕರೆತಂದಿದ್ದರು. ಅವುಗಳು ನಿಂತಲ್ಲೇ ಇದ್ದುವು. ಅ ನುಯಾಯಿಗಳೂ ಕುಳಿತಲ್ಲೇ ಇದ್ದರು. ಮಕ್ಕಾಕ್ಕೆ ಹೋಗಲು ಸಾಧ್ಯವಾಗದಿರುವ ಈ ಹೊತ್ತಿನಲ್ಲಿ ಉಮ್ರಾ ನಿರ್ವ ಹಣೆಯ ಸಂಕೇತವಾಗಿ ಇಲ್ಲೇ ತಲೆಗೂದಲನ್ನು ಬೋಳಿಸಿ ಪ್ರಾಣಿಬಲಿಯನ್ನು ಅರ್ಪಿಸಿ ಮರಳಿ ಮದೀನಾಕ್ಕೆ ಹೋಗೋಣ ಎಂದು ಪ್ರವಾದಿ ತನ್ನ ಸಾವಿರವನ್ನೂ ಮಿಕ್ಕಿದ ಅನುಯಾಯಿಗಳಿಗೆ ಹೇಳಿದರು. ಆದರೆ, ಅವರಾರೂ ಮಾತನ್ನು ಪಾಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವರೆಲ್ಲ ಅಲುಗಾಡದೇ ಸುಮ್ಮನಿದ್ದರು. ಇದು ಪ್ರವಾದಿಯನ್ನು ಕಸಿವಿಸಿಗೊಳಿಸಿತು. ಏನು ಮಾಡಬೇಕೆಂದು ತೋಚದೇ ಪತ್ನಿ ಉಮ್ಮು ಸಲಮಾರಲ್ಲಿ ಸಮಾಲೋಚನೆ ನಡೆಸಿದರು. ಅವರು ನೀಡಿದ ಸಲಹೆಯಂತೆ ಅವರೇ ಮೊದಲಾಗಿ ತಲೆ ಬೋಳಿಸಿಕೊಂಡು ಪ್ರಾಣಿ ಬಲಿ ನೀಡಿದರು. ಇದರ ಬೆನ್ನಿಗೇ ಎಲ್ಲ ಅನುಯಾಯಿಗಳೂ ಅದನ್ನೇ ಅನುಸರಿಸಿದರು.
ಪವಿತ್ರ ಕುರ್ಆನ್ನಲ್ಲಿ ಹೀಗೊಂದು ವಚನವಿದೆ,
ಈ ಎರಡೂ ಸೂಕ್ತಗಳು ಸಮಾಲೋಚನೆಯನ್ನೇ ಕೇಂದ್ರೀಕರಿಸಿವೆ. ನಿಜವಾಗಿ, ಮಗುವಿನ ಎದೆಹಾಲು ಬಿಡಿಸುವುದಕ್ಕೂ ಸಮಾಲೋಚನೆಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾದುದು. ಪತಿ-ಪತ್ನಿ ಇಬ್ಬರೂ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕಾದಂಥ ಗಂಭೀರ ಸಂಗತಿ ಅದರಲ್ಲೇನಿದೆ ಎಂಬ ಪ್ರಶ್ನೆಯೂ ಇರಬಹುದು. ಮಗುವಿಗೆ ಎದೆಹಾಲು ಬಿಡಿಸುವ ಕಲೆ ತಾಯಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕೆ ಪತಿಯ ಸಹಕಾರದ ಅಗತ್ಯವೂ ಬೀಳುವುದಿಲ್ಲ. ಊರವರಿಗೆ ಹೇಳಿ ಬಿಡಿಸುವ ವಿಷಯವೂ ಅದಲ್ಲ. ಆದರೂ ಅಲ್ಲಾಹನು ಇಲ್ಲೂ ಸಮಾಲೋಚನೆಗೆ ಮಹತ್ವ ಕೊಟ್ಟಿದ್ದಾನೆಂದರೆ, ಇನ್ನು ಬದುಕಿನ ಉಳಿದ ವಿಷಯಗಳ ಸಮಾಲೋಚನೆಗೆ ನಾವೆಷ್ಟು ಮಹತ್ವವನ್ನು ಕೊಡಬೇಡ? ಓರ್ವ ಪತಿ ಅತ್ಯಂತ ಹೆಚ್ಚು ಸಮಯವನ್ನು ಕಳೆಯುವುದು ಪತ್ನಿಯೊಂದಿಗೆ. ಉದ್ಯೋಗ ವೇಳೆಯ ಎಂಟೋ ಒಂಭತ್ತೋ ಗಂಟೆಗಳನ್ನು ಹೊರತುಪಡಿಸಿದರೆ ಉಳಿದ ದೀರ್ಘ ಸಮಯವನ್ನು ಪತ್ನಿಯೊಂದಿಗೆ ಪತಿ ಕಳೆಯ ಬೇಕಾಗುತ್ತದೆ. ಪವಿತ್ರ ಕುರ್ಆನ್ ಪತಿ ಮತ್ತು ಪತ್ನಿಯನ್ನು ಜೋಡಿ ಎಂದು ಸಂಬೋಧಿಸಿದೆ. ಜೋಡಿ ಎಂಬ ಪದಕ್ಕೆ ಒಬ್ಬರು ಹೆಚ್ಚು ಇನ್ನೊಬ್ಬರು ಕಡಿಮೆ ಎಂಬ ಅರ್ಥ ಇಲ್ಲ. ಒಂದುವೇಳೆ ಪತಿ ಮತ್ತು ಪತ್ನಿಯ ನಡುವೆ ಸ್ಥಾನಮಾನಗಳಲ್ಲಿ ವ್ಯತ್ಯಾಸ ಇರುತ್ತಿದ್ದರೆ ಜೋಡಿ ಎಂಬ ಪದ ಬಳಕೆಯನ್ನೇ ಅಲ್ಲಾಹನು ಮಾಡುತ್ತಿರಲಿಲ್ಲ.
ಜೋಡಿಗಳು ಹೇಗಿರಬೇಕೆಂದರೆ ಪತಿ ತನಗೇನನ್ನು ಬಯಸುತ್ತಾನೋ ಅದನ್ನೇ ಪತ್ನಿಗೂ ಬಯಸಬೇಕು. ಪತ್ನಿಯೂ ಅಷ್ಟೇ, ತನಗೇನನ್ನು ಆಕೆ ಬಯಸುತ್ತಾಳೋ ಅದನ್ನು ಪತಿಗೂ ಬಯಸ ಬೇಕು. ಹೀಗೆ ಬಯಸಬೇಕೆಂದರೆ ಪರಸ್ಪರ ಸಮಾಲೋಚನೆ ನಡೆಯಬೇಕು. ಮಗುವನ್ನು ಶಾಲೆಗೆ ಸೇರಿಸುವ ವಿಷಯವೇ ಇರಲಿ, ಅಥವಾ ವಾಹನವೊಂದನ್ನು ಖರೀ ದಿಸುವ ಸಂಗತಿಯೇ ಇರಲಿ ಇಬ್ಬರಲ್ಲೂ ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆ ಎರಡೂ ಅಭಿಪ್ರಾಯಗಳನ್ನು ಹಂಚಿಕೊಂಡಾಗ ಉತ್ತಮವಾದ ಮೂರನೆಯದೊಂದು ಅಭಿಪ್ರಾಯ ವ್ಯಕ್ತವಾಗಬಹುದು. ಒಂದು ಮೊಬೈಲ್ ಖರೀದಿಸಬೇಕು ಅಂತಿಟ್ಟುಕೊಳ್ಳಿ. ಈ ವಿಷಯದಲ್ಲಿ ಪತಿಗಿಂತ ಪತ್ನಿಯಲ್ಲೇ ಹೆಚ್ಚು ತಿಳುವಳಿಕೆ ಇರಬಹುದು. ಯಾವ ಕಂಪೆನಿಯ, ಯಾವ ಮಾಡೆಲ್ನ ಮೊಬೈಲ್ನಲ್ಲಿ ಹೆಚ್ಚು ಜಿಬಿ ಇರುತ್ತದೆ, ಕ್ಯಾಮರಾ ಉತ್ತಮವಿರುತ್ತದೆ ಮತ್ತು ಗ್ರಾಹಕಸ್ನೇಹಿಯಾಗಿರುತ್ತದೆ ಎಂಬುದನ್ನು ಪತಿಗಿಂತ ಚೆನ್ನಾಗಿ ಪತ್ನಿ ತಿಳಿದಿರುವ ಸಾಧ್ಯತೆ ಇದೆ ಅಥವಾ ಪತಿಗೇ ಹೆಚ್ಚು ಗೊತ್ತಿರುವುದಕ್ಕೂ ಅವಕಾಶ ಇದೆ. ಒಂದುವೇಳೆ ಇಬ್ಬರೂ ಈ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬಂದರೆ ಅದರಿಂದ ಲಾಭವೂ ಇದೆ. ಏನೆಂದರೆ, ಖರೀದಿಸಿದ ಆ ಮೊಬೈಲ್ ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯಕ್ಷಮತೆಯನ್ನು ಹೊಂದಿಲ್ಲದೇ ಹೋದರೂ ಇಬ್ಬರಲ್ಲಿ ಯಾರಾದರೂ ಒಬ್ಬರು ಕಟಕಟೆಯಲ್ಲಿ ನಿಲ್ಲಬೇಕಾಗಿ ಬರುವುದಿಲ್ಲ. ಸಮಾಲೋಚಿಸಿ ನಿರ್ಧಾರ ಕೈಗೊಂಡಿರುವುದರಿAದ ಇಬ್ಬರೂ ಅದಕ್ಕೆ ಸಮಾನ ಹೊಣೆಗಾರರಾಗಿರುತ್ತಾರೆ.
ಪತ್ನಿಯೊಂದಿಗೆ ಸಮಾಲೋಚನೆ ನಡೆಸದೇ ಇರುವುದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಗಂಡಿನ ಅಹಮ್ಮೇ ಮುಖ್ಯ ಕಾರಣವಾಗಿರುತ್ತದೆ. ತಾನು ಆಕೆಗಿಂತ ಮೇಲು ಎಂಬ ಕಾರಣದಿಂದಲೋ ಆಕೆಗೇನು ಗೊತ್ತು ಎಂಬ ನಿರ್ಲಕ್ಷ್ಯ ಭಾವದಿಂದಲೋ ಗಂಡು ಹೀಗೆ ನಡಕೊಳ್ಳುವುದೇ ಹೆಚ್ಚು. ಇದರಲ್ಲಿ ಗಂಡು ಬೆಳೆದು ಬಂದ ಮನೆಯ ವಾತಾವರಣದ ಪಾಲೂ ಇದೆ. ಸಾಮಾನ್ಯವಾಗಿ ಹೆತ್ತವರನ್ನು ನೋಡಿಯೇ ಮಕ್ಕಳು ಬೆಳೆಯುತ್ತಾರೆ. ಅಮ್ಮನೊಂದಿಗೆ ಅಪ್ಪ ಹೇಗೆ ವರ್ತಿಸುತ್ತಾರೆ ಎಂಬುದನ್ನು ಮಕ್ಕಳು ನೋಡುತ್ತಿರುತ್ತಾರೆ ಮತ್ತು ಆ ವರ್ತನೆಯು ಅವರ ಬದುಕಿನ ಮೇಲೂ ಪ್ರಭಾವ ಬೀರುತ್ತಿರುತ್ತದೆ. ಹೆಣ್ಣು ಮಗಳಿಗಿಂತ ಗಂಡು ಮಕ್ಕಳಿಗೆ ಮನೆಯಲ್ಲಿ ಹೆತ್ತವರು ಹೆಚ್ಚುವರಿ ಪ್ರಾಶಸ್ತ್ಯ ನೀಡುವುದು, ಗಂಡು ಹೇಳಿದಂತೆ ಕೇಳಬೇಕು ಎಂಬ ಒತ್ತಡವನ್ನು ನೇರವಾಗಿಯೋ ಪರೋಕ್ಷವಾಗಿಯೋ ಹೆಣ್ಣಿನ ಮೇಲೆ ಹೇರುವುದು ಇತ್ಯಾದಿಗಳೆಲ್ಲ ಗಂಡು ಮಕ್ಕಳನ್ನು ಹೆಣ್ಣಿನ ವಿಷಯದಲ್ಲಿ ಒರಟರನ್ನಾಗಿ ಮಾರ್ಪಡಿಸುತ್ತಲೂ ಇರುತ್ತವೆ. ಪ್ರವಾದಿ(ಸ) ಹೇಳಿದರು,
‘ಓರ್ವರಲ್ಲಿ ಅಣುವಿನಷ್ಟಾದರೂ ಅಹಂಕಾರ ಇದ್ದರೆ ಅವರು ಸ್ವರ್ಗ ಪ್ರವೇಶಿಸುವುದಿಲ್ಲ.’
ಸಾಮಾನ್ಯವಾಗಿ ಈ ವಚನವನ್ನು ಮೊಣಕಾಲಿಗಿಂತ ಕೆಳಗೆ ಉಡುಪು ಧರಿಸುವುದಕ್ಕೆ, ಎದೆ ಬಿಗಿದುಕೊಂಡು ನಡೆಯುವುದಕ್ಕೆ, ಇತರರನ್ನು ಅವಗಣಿಸುವಂತೆ ವರ್ತಿಸುವುದಕ್ಕೆ, ಜಂಭದಿಂದ ಮಾತಾಡುವುದಕ್ಕೆ... ಇತ್ಯಾದಿಗಳಿಗೆ ಅನ್ವಯಿಸಿ ನೋಡುತ್ತೇವೆಯೇ ಹೊರತು ಪತಿ ಮತ್ತು ಪತ್ನಿ ನಡುವಿನ ಸಂಬಂಧದಲ್ಲಿ ಇರುವ ಅಹಂಕಾರದ ವರ್ತನೆಗೆ ಅನ್ವಯಿಸಿ ವ್ಯಾಖ್ಯಾನಿಸುವುದು ಬಹಳ ಕಡಿಮೆ. ನಿಜವಾಗಿ, ಈ ವಚನವನ್ನು ಮೊದಲಾಗಿ ಅನ್ವಯಿಸಬೇಕಾದದ್ದು ಪತ್ನಿಯ ಜೊತೆ ಪತಿಯ ಠೇಂಕಾರದ ವರ್ತನೆಗೆ. ಪತ್ನಿಗೇನು ಗೊತ್ತು ಎಂಬ ಭಾವದೊಂದಿಗೆ ಯಾರು ಬದುಕುತ್ತಿದ್ದಾರೋ ಅವರಿಗೆ ಮೊದಲಾಗಿ ಈ ವಚನವನ್ನು ಅನ್ವಯಿಸಿ ವ್ಯಾಖ್ಯಾನಿಸುವ ಪ್ರಯತ್ನ ನಡೆಯಬೇಕಾಗಿದೆ. ಪತ್ನಿಯೊಂದಿಗೆ ಸಮಾಲೋಚನೆ ನಡೆಸುವುದಿಲ್ಲ ಎಂಬುದು ತೀರಾ ಸಣ್ಣ ಸಂಗತಿಯಲ್ಲ. ಅದರ ಹಿಂದೆ ಅಹಂಕಾರವಿದೆ. ಅದಕ್ಕೆ ಆತ ಬೆಳೆದು ಬಂದ ವಾತಾವರಣ ಕಾರಣವಾಗಿರಬಹುದಾದರೂ ಅದರಿಂದ ಕಳಚಿಕೊಂಡು ಬದುಕುವ ಎಲ್ಲ ಅವಕಾಶಗಳೂ ವ್ಯಕ್ತಿಗೆ ಇದ್ದೇ ಇದೆ. ಆದರೂ ಆತ ಅದೇ ಸ್ವಭಾವವನ್ನು ಮುಂದುವರಿಸುವುದಾದರೆ, ಅದು ನರಕಕ್ಕೆ ಕೊಂಡೊಯ್ಯುತ್ತದೆ ಎಂಬ ಎಚ್ಚರಿಕೆಯನ್ನು ಎಲ್ಲ ಗಂಡುಗಳಿಗೂ ನೀಡಬೇಕಾಗಿದೆ. ಪತ್ನಿಯೆಂದರೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಬಟ್ಟೆ ತೊಳೆದು ಮಕ್ಕಳನ್ನು ಸಂಭಾಳಿಸಿ ಸೇವೆ ಮಾಡುತ್ತಾ ಬದುಕಬೇಕಾದವಳು ಎಂಬ ಅಜ್ಞಾನ ಕಾಲದ ನಿಲುವನ್ನು ಈ ಕಾಲದಲ್ಲೂ ಮುಂದುವರಿಸುವವರು ಕುರ್ಆನ್ ಮತ್ತು ಪ್ರವಾದಿ(ಸ) ವಚನಕ್ಕೆ ಅಗೌರವ ತೋರಿಸುತ್ತಿದ್ದಾರೆ ಎಂದೇ ಹೇಳಬೇಕಾಗಿದೆ.