Thursday, January 2, 2025

ರಮಝಾನ್ ನಲ್ಲಿ ಹಾಫಿಝ್ ಗಳನ್ನು ಹುಡುಕುವ ಮಸೀದಿಗಳು ಮತ್ತು ಹಾಫಿಝ್ ಗಳು




ಏ.ಕೆ. ಕುಕ್ಕಿಲ

ಮದ್ರಸದಲ್ಲಿ ಕಲಿತಿರುವ ಮತ್ತು ಕುರ್‌ಆನ್ ಕಂಠಪಾಠ ಮಾಡಿರುವ (ಹಾಫಿಝï) ಬಿಹಾರದ ಹರೆಯದ ಯುವಕನೊಬ್ಬ  ಹೊಟೇಲ್ ಒಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿರುವುದನ್ನು ಇತ್ತೀಚೆಗೆ ಒಬ್ಬರು ಬರೆದುಕೊಂಡಿದ್ದರು. ಹಾಗಂತ, ಕ್ಲೀನಿಂಗ್  ಕೆಲಸ ಮಾಡಬಾರದು, ಅದೇನು ನಿಕೃಷ್ಟವಾ ಎಂಬ ಪ್ರಶ್ನೆ ಇರಬಹುದು. ನಿಕೃಷ್ಟವೂ ಅಲ್ಲ, ಮಾಡಬಾರದು ಎಂದೂ ಅಲ್ಲ.  ಆದರೆ, ಕುರ್‌ಆನ್ ಕಂಠ ಪಾಠ ಮಾಡಿರುವ ಮತ್ತು ಆಲಿಮ್ ಎಂದು ಗುರುತಿಸಿಕೊಳ್ಳಬಹುದಾದಷ್ಟು ಕಲಿತಿರುವ ಓರ್ವ  ವ್ಯಕ್ತಿ ಕ್ಲೀನಿಂಗ್ ಕೆಲಸಕ್ಕೆ ಸೇರಬೇಕಾ ಎಂಬುದು ಇಲ್ಲಿನ ತಕರಾರು.

 ಒಂದು ಮಗು ಮದ್ರಸಾ ವಿದ್ಯಾಭ್ಯಾಸವನ್ನು ಪಡೆದು  ಕುರ್‌ಆನ್ ಕಂಠಪಾಠವನ್ನೂ ಮಾಡುವುದೆಂದರೆ ಅಲ್ಲಿ ಆ ಮಗುವಿನ ಶ್ರಮವಷ್ಟೇ ಇರುವುದಲ್ಲ, ಸಮುದಾಯದ ಬೆವರೂ  ಅದರಲ್ಲಿರುತ್ತದೆ. ಆ ಮಗುವಿಗಾಗಿ ಸಮುದಾಯ ಹಣ ಹೂಡುತ್ತದೆ. ರಮಝಾನ್ ತಿಂಗಳು ಬಂತೆಂದರೆ, ಇಂಥ  ಮದ್ರಸಾಗಳು ಚಂದಾ ಸಂಗ್ರಹಕ್ಕೆಂದು  ಪ್ರತಿನಿಧಿಗಳಿಗೆ ಬರುತ್ತಾರೆ. ವಿಶೇಷವಾಗಿ ಉತ್ತರ ಭಾರತದಿಂದಲೂ ಪ್ರತಿನಿಧಿಗಳು  ಬರುತ್ತಾರೆ. ನಾವು ನಮ್ಮಿಂದಾದಷ್ಟು ಸಹಾಯ ಮಾಡುತ್ತೇವೆ. ಆದರೆ, ಈ ಸಹಾಯದ ಆಚೆಗೆ ಈ ಮದ್ರಸಾಗಳು ಎಂಥ  ವಿದ್ಯಾರ್ಥಿಗಳನ್ನು ತಯಾರಿಸುತ್ತವೆ? ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಅಲ್ಲಿ ಎಷ್ಟು ಮಹತ್ವವನ್ನು ನೀಡಲಾಗುತ್ತದೆ? ಅಲ್ಲಿಯ  ಕಲಿಕಾ ಸ್ವರೂಪವೇನು? ಸಂಶೋಧನೆಗೆ ಅಲ್ಲಿ ಒತ್ತು ನೀಡಲಾಗುತ್ತಿದೆಯೇ ಅಥವಾ ಹಿಂದಿನ ವಿದ್ವಾಂಸರ ಸಂಶೋಧನೆಯ  ಕಲಿಕೆಗಷ್ಟೇ ಓದನ್ನು ಸೀಮಿತಗೊಳಿಸಲಾಗುತ್ತಿದೆಯೇ? ಮುಸ್ಲಿಮ್ ಮತ್ತು ಇಸ್ಲಾಮ್ ಕೇಂದ್ರಿತವಾಗಿ ವರ್ತಮಾನದ  ರಾಜಕೀಯವು ಎತ್ತುವ ಹತ್ತು-ಹಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲ ಮತ್ತು ಇಂಥ ಸವಾಲುಗಳ ಒಳಹೂರಣವನ್ನು ಅರ್ಥೈಸಿ,  ಅದಕ್ಕೆ ತಕ್ಕುದಾಗಿ ವೈಚಾರಿಕ ಪ್ರಜ್ಞೆಯಿಂದ ಉತ್ತರಿಸಬಲ್ಲ ಬುದ್ಧಿವಂತರನ್ನು ಇಲ್ಲಿ ತಯಾರಿಸಲಾಗುತ್ತಿದೆಯೇ ಎಂದು  ಪ್ರಶ್ನಿಸಿಕೊಂಡಿದ್ದೇವೆಯೇ? ಯಾಕೆಂದರೆ,

ಈ ದೇಶದಲ್ಲಿ ಪ್ರತಿವರ್ಷ ಮದ್ರಸಾಗಳಿಂದ 5 ಸಾವಿರ ಮಂದಿ ಬಿರುದಿನೊಂದಿಗೆ ಹೊರಬರುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಲ್ಲಿ ಮದ್ರಸಾ  ಎಂದು ಹೇಳಿರುವುದು ಬೆಳಿಗ್ಗೆ ಶಾಲೆ ಪ್ರಾರಂಭವಾಗುವುದಕ್ಕಿಂತ  ಮೊದಲು ಮತ್ತು ಸಂಜೆ ಶಾಲೆ ಮುಗಿದ ಬಳಿಕ ಹೋಗಿ  ಮಕ್ಕಳು ಒಂದೆರಡು ಗಂಟೆಯ ಧಾರ್ಮಿಕ ಶಿಕ್ಷಣ ಪಡೆಯುತ್ತಾರಲ್ಲ, ಅದನ್ನಲ್ಲ. ಬರೇ ಮದ್ರಸಾಗಳಲ್ಲೇ  ಕಲಿಯುತ್ತಿರುವ  ಮತ್ತು ಬಹುತೇಕ ಹಾಸ್ಟೆಲ್‌ಗಳಲ್ಲಿ ತಂಗಿ ಕಲಿಯುತ್ತಿರುವ ವಿದ್ಯಾಭ್ಯಾಸ ಕ್ರಮ ವನ್ನು. ಹೀಗೆ ಕಲಿತ ಮಕ್ಕಳು ಬಿರುದಿನೊಂದಿಗೆ ಈ ಶಾಲೆಯಿಂದ ಹೊರಬೀಳುತ್ತಾರೆ. ಅನೇಕ ಬಾರಿ ರಮಝಾನ್‌ನಲ್ಲಿ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗಾಗಿ  ಆಯ್ಕೆಯಾಗುವುದೂ ಇವರೇ. ರಮಝಾನ್ ಬರುವುದಕ್ಕಿಂತ ತಿಂಗಳ ಮೊದಲು ಹೆಚ್ಚಿನ ಮಸೀದಿಗಳು ಇಂಥ  ಹಾಫಿಝï‌ಗಳ ತಲಾಶೆಯಲ್ಲಿ ತೊಡಗುತ್ತವೆ. ಸ್ಥಳೀಯವಾಗಿ ಇಂಥ ಹಾಫಿಝï‌ಗಳು ಅಲಭ್ಯವಾಗಿರುವುದೇ ಇದಕ್ಕೆ ಕಾರಣ.  ಅದೇವೇಳೆ, ಬಿಹಾರ, ಜಾರ್ಖಂಡ್, ಉತ್ತರಾ ಖಂಡ್, ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಗಳು ಇಂಥ  ಹಾಫಿಝï‌ಗಳನ್ನು ಧಾರಾಳವಾಗಿ ತಯಾರಿಸುತ್ತವೆ. ಆದ್ದರಿಂದಲೇ ರಮಝಾನ್‌ನಲ್ಲಿ ಹೆಚ್ಚಿನ ಮಸೀದಿಗಳಲ್ಲಿ ಉತ್ತರ ಭಾರತ  ಮತ್ತು ಕೆಲವೆಡೆ ಉತ್ತರ ಕರ್ನಾಟಕದ ಹಾಫಿಝï‌ಗಳೇ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗೆ ನೇತೃತ್ವ ನೀಡುವುದನ್ನು  ಕಾಣಬಹುದು. ಇದು ತಪ್ಪು ಎಂದಲ್ಲ. ಆದರೆ,

ಆಧುನಿಕ ಶಿಕ್ಷಣಕ್ಕೆ ಮಹತ್ವ ಕೊಡದೇ ಬರೇ ಮದ್ರಸಾ ಶಿಕ್ಷಣವನ್ನೇ ಗುರಿಯಾಗಿಸಿಕೊಂಡು ಕಲಿಯುವುದು ಮತ್ತು ಬಿರುದಿನೊಂದಿಗೆ ಹೊರಬರುವ ಇವೇ ಮಂದಿ ಆ ಬಳಿಕ ಮಸೀದಿ ಇಮಾಮರಾಗಿ ಸಮುದಾಯಕ್ಕೆ ನೇತೃತ್ವ ಮತ್ತು ಮಾರ್ಗದರ್ಶನ ನೀಡುವ ಅತೀ ಮಹತ್ವಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದು ನಡೆಯುತ್ತದೆ. ಇವರೇ ಮುಖ್ಯ ವಿಷಯಗಳಲ್ಲಿ  ಧಾರ್ಮಿಕ ಅಭಿಪ್ರಾಯ ವ್ಯಕ್ತಪಡಿಸುವ ಆಲಿಮ್‌ಗಳಾಗುತ್ತಾರೆ. ಅನೇಕ ಬಾರಿ ಇವರು ರಾಜಕೀಯ ಕುತಂತ್ರದ ಪ್ರಶ್ನೆಗಳ  ಒಳಮರ್ಮವನ್ನು ತಿಳಿಯದೇ ಅಭಿಪ್ರಾಯ ಹಂಚಿಕೊಂಡು  ಸಮುದಾಯವನ್ನು ಮುಜುಗರಕ್ಕೆ ಸಿಲುಕಿಸುವುದೂ ಇದೆ.  ಉತ್ತರ ಭಾರತದಿಂದ ಇಂಥ ವಿದ್ವಾಂಸರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗೆ ಒಳಗಾಗುವುದೂ ಇದೆ. ಅವರ ವಿಡಿಯೋ ವೈರಲ್ ಆಗುವುದೂ ಇದೆ.  ಇದು  ಅವರ ಸಮಸ್ಯೆ ಮಾತ್ರ ಅಲ್ಲ. ಸಮುದಾಯದ ದೂರದೃಷ್ಟಿಯ ಕೊರತೆಯೂ ಇದರ ಹಿಂದಿದೆ. ಯಾವುದೇ ಮದ್ರಸದ  ಚಂದಾಕ್ಕೆ ಬರುವವರಲ್ಲಿ ನಾವು ಒಂದಷ್ಟು ಮಾತುಕತೆ ನಡೆಸಬೇಕು. ಆ ಮದ್ರಸಾದ ಕಲಿಕಾ ಸ್ವರೂಪದಿಂದ ಹಿಡಿದು ಭೌತಿಕ  ಶಿಕ್ಷಣ ಕೊಡುವುದಕ್ಕೆ ಅವರಲ್ಲಿರುವ ಅಡಚಣೆಗಳೇನು ಅಥವಾ ಅದಕ್ಕೆ ತಯಾರಿ ನಡೆಸದೇ ಇರುವುದಕ್ಕೆ ಕಾರಣಗಳೇನು  ಇತ್ಯಾದಿಯಾಗಿ ಕನಿಷ್ಠ ಮಾಹಿತಿ ಪಡಕೊಳ್ಳುವ ಪ್ರಯತ್ನ ನಡೆಸಬೇಕು. ಯಾಕೆಂದರೆ,

ಮದ್ರಸಾ ಶಿಕ್ಷಣಕ್ಕಾಗಿ ಚಂದಾ ನೀಡುವುದೆಂದರೆ ಮದುವೆಗೋ ಔಷಧಿಗೋ ಚಂದಾ ನೀಡಿದಂತಲ್ಲ. ಈ ಮದ್ರಸಾಗಳು  ಸಮುದಾಯಕ್ಕೆ ಮಾರ್ಗದರ್ಶನ ನೀಡಬಲ್ಲವರನ್ನು ತಯಾರಿಸುತ್ತವೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಕೌಟುಂಬಿಕ  ವಿಷಯಗಳಲ್ಲಿ ಅವರಿಂದ ಸಮಾಜ ಅಭಿಪ್ರಾಯವನ್ನು ನಿರೀಕ್ಷಿಸುತ್ತದೆ. ಇಂಥ ಸ್ಥಾನಕ್ಕೆ ಏರುವವರನ್ನು ತಯಾರಿಸುವ  ಮದ್ರಸಾಗಳು ಬರೇ ಕುರ್‌ಆನ್ ಕಂಠಪಾಠ ಮಾಡುವುದು, ಧಾರ್ಮಿಕ ಸಂಗತಿಗಳನ್ನು ತಿಳಿಸುವುದರಿಂದ ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ. ವರ್ತಮಾನದ  ಸವಾಲುಗಳನ್ನು ಎದುರಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ಸಮರ್ಥರನ್ನು ಇವು  ತಯಾರಿಸಬೇಕು. ಒಂದುವೇಳೆ, ಇಂಥ ಮದ್ರಸಾಗಳ ಪ್ರತಿನಿಧಿಗಳನ್ನು ಕೂರಿಸಿ ಅವರ ಜೊತೆ ಧಾರ್ಮಿಕ ಮತ್ತು ಭೌತಿಕ  ಶಿಕ್ಷಣಗಳ ಅಗತ್ಯ ಮತ್ತು ಮಹತ್ವಗಳ ಬಗ್ಗೆ ಅರಿವು ಮೂಡಿಸಿದರೆ, ಅವರು ಮರಳಿದ ಬಳಿಕ ಕನಿಷ್ಠ ತಮ್ಮೂರ ಆಡಳಿತ  ಸಮಿತಿಯಲ್ಲಿ ಈ ಬಗ್ಗೆ ವಿಚಾರವನ್ನು ಹಂಚಿಕೊಳ್ಳಬಹುದು. ಮುಂದಿನ ಬಾರಿ ಚಂದಾ ಸಂಗ್ರಹಕ್ಕೆ ಬರುವಾಗ ಮದ್ರಸಾದ  ಆಧುನೀಕರಣ ಮತ್ತು ಭೌತಿಕ ಶಿಕ್ಷಣ ಕೊಡುವ ಬಗ್ಗೆ ನಡೆದಿರುವ ಚರ್ಚೆ ಮತ್ತು ಅಂದಾಜು ವೆಚ್ಚದ ಪಟ್ಟಿಯನ್ನಾದರೂ  ತರಬಹುದು. ಚಂದಾ ನೀಡುವ ಮೊದಲು ಶಿಕ್ಷಣದ ಸ್ವರೂಪ ಮತ್ತು ಪ್ರಗತಿಯ ಬಗ್ಗೆ ಜನರು ಪ್ರಶ್ನಿಸುತ್ತಾರೆ ಎಂಬ ಭಾವ  ಮದ್ರಸಾ ಆಡಳಿತ ಸಮಿತಿಗಳಲ್ಲಿ ಮೂಡತೊಡಗಿದರೆ ಸಹಜವಾಗಿಯೇ ಪರಿವರ್ತನೆಗೆ ಬಾಗಿಲು ತೆರೆದುಕೊಳ್ಳುತ್ತದೆ.  ಮುಖ್ಯವಾಗಿ, 

ಇವತ್ತು ವ್ಯಕ್ತಿತ್ವ ವಿಕಸನ ಎಂಬುದು ವಿದ್ಯಾರ್ಥಿಗಳಿಗೆ ಒಂದು ಪಠ್ಯವೇ ಆಗುವಷ್ಟು ಮಹತ್ವವನ್ನು  ಪಡೆದುಕೊಂಡಿದೆ. ಇಸ್ಲಾಮ್ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಆತ್ಮಸಂಸ್ಕರಣೆಗೆ ಬಹಳಷ್ಟು ಮಹತ್ವವನ್ನೂ ನೀಡುತ್ತದೆ. ಇಸ್ಲಾಮಿನಲ್ಲಿ  ಶಿಕ್ಷಣದ ಬಹಳ ಮುಖ್ಯ ಗುರಿಗಳಲ್ಲಿ ವ್ಯಕ್ತಿತ್ವ ವಿಕಸನವೂ ಒಂದು. ಪ್ರವಾದಿ(ಸ)ಯವರನ್ನು ಕಳುಹಿಸಿರುವುದರ ಉದ್ದೇಶಗಳಲ್ಲಿ ಇದೂ ಒಂದು ಎಂದು ಹೇಳಿರುವ ಪವಿತ್ರ ಕುರ್‌ಆನ್, ಅದನ್ನು ವ್ಯಕ್ತಪಡಿಸಿರುವುದು ಹೀಗೆ:
“ಅವರಿಗೆ ಅಲ್ಲಾಹನ ಸೂಕ್ತಗಳನ್ನು ಓದಿ ಹೇಳುವ, ಅವರ ಜೀವನವನ್ನು ಸಂಸ್ಕರಿಸುವ ಸಂದೇಶವಾಹಕರನ್ನು  ನಿಯೋಜಿಸಿದ್ದೇವೆ.” (3:164). 

ಮದ್ರಸಾದಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆ ಅಲ್ಲ. ಭೌತಿಕ ಶಿಕ್ಷಣ ಪಡೆದ  ವಿದ್ಯಾರ್ಥಿಗಳಿಗಿಂತ ಭಿನ್ನ ವ್ಯಕ್ತಿತ್ವವೊಂದನ್ನು ಅವರು ರೂಢಿಸಿಕೊಂಡಿರಬೇಕಾಗುತ್ತದೆ. ಅವರಿಂದ ಸಮಾಜ ಸಾಕಷ್ಟನ್ನು  ನಿರೀಕ್ಷಿಸಿರುತ್ತದೆ. ಬರೇ ಭೌತಿಕ ಶಿಕ್ಷಣ ಪಡೆದ ವ್ಯಕ್ತಿಯೋರ್ವ ಅಪರಾಧ ಕೃತ್ಯಗಳಲ್ಲಿ ಭಾಗಿಯಾದಾಗ ಸಮಾಜ ವ್ಯಕ್ತಪಡಿಸುವ  ಪ್ರತಿಕ್ರಿಯೆಗೂ ಮದ್ರಸಾ ಬಿರುದಾಂಕಿತ ವ್ಯಕ್ತಿ ಅದೇ ಅಪರಾಧದಲ್ಲಿ ಭಾಗಿಯಾದಾಗ ವ್ಯಕ್ತಪಡಿಸುವ ಪ್ರತಿಕ್ರಿಯೆಗೂ ದೊಡ್ಡ  ವ್ಯತ್ಯಾಸವಿರುತ್ತದೆ. ಆ ಕಾರಣದಿಂದಲೇ ಮದ್ರಸಾದಿಂದ ಹೊರಬೀಳುವ ವಿದ್ಯಾರ್ಥಿಗಳು ವಿಶೇಷ ಎಚ್ಚರಿಕೆಯನ್ನು  ವಹಿಸಬೇಕಾಗುತ್ತದೆ. ಅವರು ಸಮಾಜದ ಗೌರವಕ್ಕೆ ಪಾತ್ರವಾಗಬೇಕಾದರೆ, ಅವರಲ್ಲಿ ಅಂಥ ಆಕರ್ಷಣೀಯ ಗುಣಗಳಿರಬೇಕಾಗುತ್ತದೆ. ವರ್ತನೆಯಲ್ಲೂ ಆ ಗುಣಗಳು ಪ್ರತಿಫಲಿಸ ಬೇಕಾಗುತ್ತದೆ. ಸಮುದಾಯವು ಅವರ ಮಾತುಗಳನ್ನು ಆಲಿಸುವಂತೆ ಮಾಡುವ ಮತ್ತು ಅವರಲ್ಲಿ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳುವ ಹಂತಕ್ಕೆ ಅವರು ತಮ್ಮನ್ನು ಅಭಿವೃದ್ಧಿ ಪಡಿಸಿ ಕೊಳ್ಳಬೇಕಾಗಿದೆ. ಹಾಗಂತ,

ಹೀಗೆ ಹೇಳುವುದು ಸುಲಭ. ಆದರೆ, ಪ್ರಾಯೋಗಿಕವಾಗಿ ಅಷ್ಟು ಸುಲಭ ಅಲ್ಲ. ಅದಕ್ಕೆ ತರಬೇತಿಯ ಅಗತ್ಯ ಇದೆ. ವ್ಯಕ್ತಿತ್ವ  ವಿಕಸನಕ್ಕೆ ಸಂಬಂಧಿಸಿ ಮದ್ರಸಾಗಳಲ್ಲಿ ವಿಶೇಷ  ತರಗತಿಗಳನ್ನು ನಡೆಸಬೇಕಾಗಿದೆ. ಆತ್ಮಸಂಸ್ಕರಣೆಗೆ ಅತಿಯಾದ  ಮಹತ್ವವನ್ನು ನೀಡಬೇಕಾಗಿದೆ. ಮುಖ್ಯವಾಗಿ, ಹೀಗೆ ಮದ್ರಸಾಗಳಿಂದ ಸಮಾಜಕ್ಕೆ ಹರಿದು ಬರುವವರು ಯಾವುದಾದರೂ  ಮಸೀದಿಯ ಇಮಾಮರಾಗಿ ಮತ್ತು ಮದ್ರಸಾ ಶಿಕ್ಷಕರಾಗಿ ಸೇರಿಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಪದ್ಧತಿ.  ಆದರೆ, ಇಂಥ ಶಿಕ್ಷಕರಿಗೆ ನಿಯಮಿತವಾಗಿ ತರಬೇತಿ ನೀಡುವ ಕಾರ್ಯಾಗಾರಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯಿದೆ.

ಶಿಕ್ಷಕ ಓರ್ವ ಉತ್ತಮ ಮತ್ತು ಪರಿಣಾಮಕಾರಿ ಶಿಕ್ಷಕನಾಗುವುದು ಒಂದು ಕಲೆ. ಇವತ್ತು ತರಬೇತಿ ಕಾರ್ಯಾಗಾರ ಎಂಬುದು  ಎಲ್ಲ ಕ್ಷೇತ್ರಗಳಲ್ಲೂ ಕಡ್ಡಾಯವೆಂಬಂತೆ  ನಡೆಯುತ್ತಾ ಬರುತ್ತಿದೆ. ಶಿಕ್ಷಕರು, ಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಿಗಳು,  ಜನ ಪ್ರತಿನಿಧಿಗಳೂ ಸೇರಿದಂತೆ ಎಲ್ಲರೂ ವರ್ಷಕ್ಕೊಮ್ಮೆಯಾದರೂ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ.  ಅಲ್ಲಿ ಅವರಿರುವ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಹೊಸ ಸಂಶೋಧನೆಗಳ ಬಗ್ಗೆ ಚರ್ಚೆಯಾಗುತ್ತದೆ. ಶಿಕ್ಷಕರಾದರೆ ಬೋಧನೆಯ ಹೊಸ ಮಾದರಿಗಳು, ಹೊಸ ಹೊಸ ಕಾನೂನುಗಳು, ತಂತ್ರಜ್ಞಾನದಲ್ಲಾಗಿರುವ ಪ್ರಗತಿ ಮತ್ತು ಅವು ಮಕ್ಕಳ  ತಿಳುವಳಿಕೆಯಲ್ಲಿ ಮಾಡಿರುವ ಬದಲಾವಣೆ.. ಇತ್ಯಾದಿಗಳ ಮೇಲೆ ಅಭಿಪ್ರಾಯಗಳು ಹಂಚಿಕೆಯಾಗುತ್ತವೆ. ಹೊಸತನ್ನು ಕಲಿಸುವ, ಕಲಿಯುವ ಮತ್ತು ಹೊಸ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಂಡು ಆತ್ಮವಿಶ್ವಾಸದೊಂದಿಗೆ ಶಿಕ್ಷಕ ವೃತ್ತಿಗೆ ಮರಳಲು  ಇಂಥ ಕಾರ್ಯಾಗಾರ ಬಹುಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ. ಆದರೆ,

ಮದ್ರಸಾ ಶಿಕ್ಷಕರಿಗಾಗಿ ಬಹುತೇಕ ಇಂಥ ಕಾರ್ಯಾಗಾರಗಳು ನಡೆಯುತ್ತಲೇ ಇಲ್ಲ ಎಂಬುದೇ ವಿಷಾದದ ಸಂಗತಿ. ಅಲ್ಲಿ  ವಿಕಸನಕ್ಕೆ ಆದ್ಯತೆ ಕಡಿಮೆಯಾಗಿದೆ. ಅದರ ಜೊತೆಗೇ ಮದ್ರಸಾ ಕಲಿಕೆಯ ಸಂದರ್ಭದಲ್ಲಿ ಸಂಶೋಧನೆಗೆ ಸಿಗಬೇಕಾದಷ್ಟು  ಒತ್ತು ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಗತ ವಿದ್ವಾಂಸರು ಏನೇ ನೆಲ್ಲ ಸಂಶೋಧನೆ ಕೈಗೊಂಡಿದ್ದಾರೋ ಮತ್ತು  ಕುರ್‌ಆನ್ ಹಾಗೂ ಹದೀಸ್‌ಗಳ ಮೇಲೆ ಏನೆಲ್ಲಾ ಅಧ್ಯಯನಗಳನ್ನು ಮಾಡಿದ್ದಾರೋ ಅವುಗಳನ್ನು ಕಲಿಯುವುದಕ್ಕಷ್ಟೇ  ತಮ್ಮನ್ನು ಸೀಮಿತಗೊಳಿಸುವ ರೀತಿಯಲ್ಲಿ ಮದ್ರಸ ಕಲಿಕೆಯನ್ನು ಅದುಮಿಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.  ನಿಜವಾಗಿ,

ಮದ್ರಸಾ ಕಲಿಕೆಯ ಪ್ರತಿ ಮಗುವೂ ವಿಭಿನ್ನವಾಗಿರುತ್ತದೆ. ಹೊಸತಿಗೆ ತೆರೆದುಕೊಳ್ಳುವುದೇ ಪ್ರತಿ ಮಗುವಿನ ಪ್ರಕೃತಿ. ಇಂಥ  ಮಕ್ಕಳನ್ನು ಗತಕಾಲದ ಚಿಂತನೆಗಳನ್ನು ಓದಿ ಅಭ್ಯಸಿಸಿ ಬಿರುದು ಪಡಕೊಳ್ಳುವುದಕ್ಕಷ್ಟೇ ಮಿತಿಗೊಳಿಸದೇ ಕುರ್‌ಆನ್ ಮತ್ತು  ಹದೀಸ್ ಗಳ ಮೇಲೆ ಸಂಶೋಧನೆಗೆ ಹಚ್ಚಬೇಕು. ಅದಕ್ಕೆ ಪೂರಕವಾಗಿ ಕಲಿಕಾ ರೀತಿಯಲ್ಲಿ ಬದಲಾವಣೆಯನ್ನು ತರಬೇಕು.  ಪವಿತ್ರ ಕುರ್‌ಆನ್ ಸಾರ್ವಕಾಲಿಕ ಗ್ರಂಥ ಎಂಬುದರ ಅರ್ಥ, ಅದು ಸರ್ವ ಕಾಲಗಳ ಸವಾಲುಗಳಿಗೂ ತನ್ನೊಳಗೆ  ಪರಿಹಾರವನ್ನು ಅಡಗಿಸಿಕೊಂಡಿದೆ ಎಂದೇ ಆಗಿದೆ. ಆದರೆ ಆ ಪರಿಹಾರವನ್ನು ಹುಡುಕಿ ತೆಗೆಯಬೇಕಾದ ಸವಾಲು ಎಲ್ಲರ  ಮೇಲಿದೆ. ಮದ್ರಸಾ ಶಿಕ್ಷಣವಂತೂ ಕುರ್‌ಆನಿನ ಪ್ರತಿ ವಾಕ್ಯಗಳಲ್ಲಿ ಅಡಗಿರುವ ವಿಭಿನ್ನ ಸಾಧ್ಯತೆಗಳನ್ನು ಸಂಶೋಧಿಸುವ  ಕ್ಲಾಸ್ ರೂಮ್‌ಗಳಾಗಬೇಕು. ಓರ್ವ ವಿದ್ಯಾರ್ಥಿಯೊಳಗೆ ಸಂಶೋಧನೆಯ ಆಸಕ್ತಿಯನ್ನು ಹುಟ್ಟಿಸಿದರೆ ಆ ಬಳಿಕ ಆ  ವಿದ್ಯಾರ್ಥಿ ಸಮಾಜಕ್ಕೂ ಸಮು ದಾಯಕ್ಕೂ ಅಪೂರ್ವ ಶಕ್ತಿಯಾಗಬಲ್ಲರು. ಸಮುದಾಯಕ್ಕೆ ನೇತೃತ್ವ ಸಿಗಬೇಕಾದದ್ದು ಇಂಥ  ವ್ಯಕ್ತಿಗಳಿಂದ. ಅಂಥವರು ವರ್ತಮಾನದ ಸವಾಲುಗಳನ್ನು ಅರ್ಥೈಸಬಲ್ಲರು ಮತ್ತು ಧಾರ್ಮಿಕ ಆಧಾರದಲ್ಲಿ ಸರ್ವರೂ  ಅಂಗೀಕರಿಸಬಲ್ಲ ಉತ್ತರವನ್ನು ನೀಡಬಲ್ಲರು. ಅಷ್ಟಕ್ಕೂ,

ಮದ್ರಸಾಗಳ ಅಸ್ತಿತ್ವವನ್ನೇ ಇಲ್ಲವಾಗಿಸಲು ಪ್ರಭುತ್ವ ತಂತ್ರ ಹೆಣೆಯುತ್ತಿರುವ ಈ ದಿನಗಳಲ್ಲಿ ಮದ್ರಸಾಗಳನ್ನು ಫಲಪ್ರದಗೊಳಿಸಲು ಮತ್ತು ಸಮಾಜದಲ್ಲಿ ನಿರ್ಮಾಣಾತ್ಮಕ ಪಾತ್ರ ವಹಿಸುವುದಕ್ಕೆ ಅವುಗಳನ್ನು ಸಿದ್ಧಪಡಿಸಲು ಮುಂದಾಗದಿದ್ದರೆ  ಸಮುದಾಯ ಮುಂದಕ್ಕೆ ಬೆರಳು ಕಚ್ಚಿಕೊಳ್ಳಬೇಕಾದೀತು.

Saturday, December 14, 2024

ಲಕ್ಕಿ ಭಾಸ್ಕರ್, ಸೀತಾರಾಮ ಮತ್ತು ವರ್ತಮಾನ ಭಾರತ







ಕಳೆದವಾರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಬರಹಗಳ ಪೈಕಿ ಎರಡು ನನ್ನ ಗಮನ ಸೆಳೆದವು. ಅದರಲ್ಲಿ ಒಂದು ಗೆಳೆಯ ಶಶಿಧರ್ ಹೆಮ್ಮಾಡಿಯವರದ್ದು-

1. ಸೀತಾರಾಮ ಎಂಬ ಧಾರಾವಾಹಿ ಒಂದಿದೆ. ಅದರಲ್ಲೊಂದು  ಪುಟ್ಟ ಮಗು ಇದೆ. ಆ ಕಾರಣಕ್ಕೆ ನನ್ನ ಮಕ್ಕಳು ಅದನ್ನು ನೋಡಲು ಶುರು ಮಾಡಿದರು. ನಮ್ಮ ಮನೆಯಲ್ಲಿ ನೋಡುವ ಏಕೈಕ ಸೀರಿಯಲ್ ಇದು ಮಾತ್ರ. ಈ ಸೀರಿಯಲ್‌ನಲ್ಲಿ ಸಿಹಿ ಎಂಬ ಮಗುವನ್ನು ಮೂರು ಬಾರಿ ಈಗಾಗಲೇ ಕಿಡ್ನ್ಯಾಪ್ ಮಾಡಲಾಗಿತ್ತು. ಈಗ ಆ ಮಗುವನ್ನು ಸಾಯಿಸಲಾಗಿದೆ. ಹೀಗೆ ಆ ಮಗುವನ್ನು ಸಾಯಿಸುವ ಷಡ್ಯಂತ್ರ ಮಾಡಿರುವುದು ಮಗುವಿನ ದೊಡ್ಡಮ್ಮ. ಈಕೆ ಈಗಾಗಲೇ ತನ್ನ ಗಂಡನ ಅಣ್ಣ ಮತ್ತು ಅತ್ತಿಗೆಯನ್ನು ಮರ್ಡರ್ ಮಾಡಿಸಿದವಳು. ಅದೇ ಅಣ್ಣ-ಅತ್ತಿಗೆಯ ಮಗು ವನ್ನು ಆಕ್ಸಿಡೆಂಟ್ ಮಾಡಿಸಿ ಕೊಲೆ ಮಾಡಲಿಕ್ಕೆ ಪ್ರಯತ್ನ ಪಟ್ಟಳು. ಈಗ ತನ್ನ ಕುಟುಂಬದಲ್ಲೇ  ಆಸ್ತಿ ಇತ್ಯಾದಿಗಾಗಿ ಈಕೆ ಈ ಮುದ್ದು ಮಗುವನ್ನು ರೌಡಿಗಳಿಂದ ಕೊಲೆ ಮಾಡಿಸಿದ್ದಾಳೆ. ನಾನು ಕೇಳುವುದು, ಇಂತಹ ಸೀರಿಯಲ್‌ಗಳ ಮೂಲಕ ನಾವು ನಮ್ಮ ಕನ್ನಡ ಜನತೆಗೆ ಏನು ಸಂದೇಶ ಕೊಡುತ್ತಿದ್ದೇವೆ? ಕೊಲೆ ಅಷ್ಟು ಸುಲಭವೇ? ನಮ್ಮ ಸುತ್ತ-ಮುತ್ತಲಿರುವ ಸ್ತ್ರೀಯರು 99% ಯಾರೂ ಹೀಗೆ ಇಲ್ಲ. ಹಾಗಿದ್ರೆ, ಸೀರಿಯಲ್ ಸ್ತ್ರೀ  ಪಾತ್ರಗಳು ಮಾತ್ರ ಹೀಗೇಕೆ? ಓರ್ವ ಪುಟ್ಟ ಬಾಲಕಿಯನ್ನು ಅದೇ ಮನೆಯ ಹೆಂಗಸು ಕೊಲೆ ಮಾಡಿಸುತ್ತಾಳೆಯೇ? ಈ ದರಿದ್ರ ಪಾತ್ರ ನಿರ್ವಹಿಸುತ್ತಿರುವುದು ಕನ್ನಡದ ಮಹಾನ್ ನಟ ಲೋಕೇಶ್‌ರ ಮಗಳು. ಎಂತಹ ದುರಂತ?
ನಿನ್ನೆ ನನ್ನ ಹೆಂಡತಿ ಇದನ್ನೇ ಕೇಳುತ್ತಿದ್ದಳು, ನಮ್ಮ ಸೀರಿಯಲ್‌ಗಳು ಯಾಕೆ ಹೀಗೆ? ಹೆಣ್ಣಿನ ಶೋಷಣೆ, ಸಮಸ್ಯೆ, ಕೌಟುಂಬಿಕ ಬದುಕು, ಅವಳ ಜಂಜಾಟ, ಸಹನೆ ಇವೆಲ್ಲದರ ಬಗ್ಗೆ ಏನನ್ನೂ ತೋರಿಸದೇ ಯಾಕೆ ಹೆಣ್ಣು ಇಷ್ಟು ಕ್ರೂರಿ ಎಂಬಂತೆ  ಬಿಂಬಿಸಲಾಗುತ್ತಿದೆ?

ಇನ್ನೊಂದು, ಉಪನ್ಯಾಸಕಿ ದೀಪಾ ಹಿರೇಗುತ್ತಿ ಅವರದು. ವಾರದ ಹಿಂದೆ ಬಿಡುಗಡೆಯಾದ ಲಕ್ಕಿ ಭಾಸ್ಕರ್ ಎಂಬ ಸಿನಿಮಾವನ್ನು ವಿಮರ್ಶಿಸುತ್ತಾ ಸಿನಿಮಾಗಳು ಕೊಡಬೇಕಾದ ಸಂದೇಶ ಮತ್ತು ಕೊಡುತ್ತಿರುವ ಸಂದೇಶಗಳ ಬಗ್ಗೆ ಬರೆದಿದ್ದಾರೆ. ಅದನ್ನು ಸಂಕ್ಷಿಪ್ತವಾಗಿ ಹೀಗೆ ಓದಬಹುದು-
‘ಲಕ್ಕಿ ಭಾಸ್ಕರ್ ಸಿನಿಮಾ ನೋಡಿದೆ. ತೊಂಬತ್ತರ ದಶಕದ ಸಾಧಾರಣ ಬ್ಯಾಂಕ್ ಉದ್ಯೋಗಿಯೊಬ್ಬ ಬ್ಯಾಂಕ್‌ನ ಹಣವನ್ನು ವ್ಯವಹಾರಕ್ಕೆ ಬಳಸಿಕೊಂಡು ಶ್ರೀಮಂತನಾಗುವ ಕತೆ. ಚಿತ್ರ ಎಲ್ಲೂ ಬೋರ್ ಆಗಲ್ಲ. ಆದರೆ, ಈ ಸಿನಿಮಾ ನೋಡುವಾಗ ಒಳಗೊಳಗೇ ಕಿರಿಕಿರಿಯಾಗುತ್ತಿತ್ತು. ಇದು ಸೂಕ್ಷ್ಮವಾಗಿ ಹಲವಾರು ನೆಗೆಟಿವ್ ಸಂಗತಿಗಳನ್ನು ಹೇಳುತ್ತೆ. ಒಂದೇ ಒಂದು ಉದಾ ಹರಣೆ ಏನೆಂದರೆ, ಭಾಸ್ಕರ್‌ನ ಮಗ ಶಾಲೆಯಲ್ಲಿ ಚಾಕಲೇಟ್ ಕದ್ದ ಹುಡುಗನ ಪರವಾಗಿ ಸಾಕ್ಷಿ ಹೇಳಿ ಅದನ್ನು ಮನೆಗೆ ಬಂದು ಸಮರ್ಥಿಸಿಕೊಂಡದ್ದು. ಅದರಿಂದ ಅಪ್ಪ ಸ್ಫೂರ್ತಿ ಪಡೆದದ್ದು. ಆಗಲೇ ಹಿಂಸೆಯಾಗಿಬಿಟ್ಟಿತು. ಅಷ್ಟೇ ಅಲ್ಲ, ಕೊನೇಲಿ ಹೇಳೋ ಹಾಗೆ, “ಎಷ್ಟು ಚೆನ್ನಾಗಿ ಆಡಿದೆ ಅನ್ನೋದು ಮುಖ್ಯ ಅಲ್ಲ, ಯಾವಾಗ ನಿಲ್ಲಿಸಿದೆ ಅನ್ನೋದು ಮುಖ್ಯ.” ಇದನ್ನು ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿ  ಕೊಂಡು ಬಿಟ್ಟರೆ... ಹಾ.
ಈ ಸಿನಿಮಾದಿಂದ ಹುಡುಗು ಬುದ್ಧಿಯವರು ಯಾರೂ ಸ್ಫೂರ್ತಿ ಪಡೆಯಬೇಡಿ. ಇಷ್ಟು ಸುಲಭವಾ ದುಡ್ಡು ಮಾಡೋದು, ಅದೂ ಕೋಟಿ ಕೋಟಿ ಅಂತ ಯಾಮಾರಬೇಡಿ...’ ಅಂದಹಾಗೆ,

ಈ ಎರಡೂ ಬರಹಗಳು ಒಂದು ಸತ್ಯವನ್ನು ಹೇಳುತ್ತದೆ. ಮೌಲ್ಯಗಳನ್ನು ಕಾಲ ಕಸದಂತೆ ಕಾಣುವುದು ಮತ್ತು ಭ್ರಮೆಯನ್ನೇ ಸತ್ಯವೆಂದು ಬಿಂಬಿಸುವುದು ಫ್ಯಾಶನ್ ಆಗುತ್ತಿದೆ. ಸೀತಾರಾಮ ಧಾರಾವಾಹಿಯ ಕತೆಯನ್ನು ಎತ್ತಿಕೊಂಡು ಶಶಿಧರ್ ಕೆಲವು ಪ್ರಶ್ನೆ ಗಳನ್ನು ಎತ್ತಿದ್ದಾರೆ. ಸಿಹಿ ಅನ್ನುವ ಮೂರು ವರ್ಷದ ಮಗುವನ್ನು ಹತ್ಯೆಗೈಯುವ ದೊಡ್ಡಮ್ಮನಂಥ ಸ್ತ್ರೀಯರು ನಮ್ಮ ಸುತ್ತ-ಮುತ್ತಲೆಲ್ಲ ಇಲ್ಲವಲ್ಲ, ಮತ್ತೇಕೆ ಇಂಥ ಹಿಂಸಕ ಧಾರಾವಾಹಿಗಳನ್ನು ತಯಾರಿಸಲಾಗುತ್ತಿದೆ, 99% ಮಹಿಳೆಯರೂ ಹಾಗಿಲ್ಲವೆಂದ ಮೇಲೆ ಪದೇ ಪದೇ ಮಹಿಳೆಯರನ್ನು ಕ್ರೂರಿಗಳಂತೆ, ಹಿಂಸಕರಂತೆ  ಬಿಂಬಿಸುವ ಧಾರಾವಾಹಿಗಳೇ ಯಾಕೆ ಪ್ರಸಾರವಾಗುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ. ನಿಜವಾಗಿ,

ಈ ಪ್ರಶ್ನೆ ಕೇವಲ ಈ ಧಾರಾವಾಹಿಗೆ ಸಂಬಂಧಿಸಿ ಮಾತ್ರ ಪ್ರಸ್ತುತವಾಗುವುದಲ್ಲ. ಈ ದೇಶದ ಸದ್ಯದ ಪರಿಸ್ಥಿತಿಯನ್ನೇ ನೋಡಿ. ಮುಸ್ಲಿಮ್ ದ್ವೇಷ ಉಚ್ಛ್ರಾಯ ಸ್ಥಿತಿಯಲ್ಲಿದೆ. ‘ಮುಸ್ಲಿಮರೆಂದರೆ ಹಾಗೆ, ಮುಸ್ಲಿಮರೆಂದರೆ ಹೀಗೆ, ಅವರಿಗೆ ನಾಲ್ಕು ನಾಲ್ಕು ಪತ್ನಿಯರಿದ್ದಾರೆ, ಹತ್ತು-ಹದಿನೈದು ಮಕ್ಕಳಿದ್ದಾರೆ, ತಲಾಕ್ ತಲಾಕ್ ತಲಾಕ್ ನಿರಂತರವಾಗಿ ನಡೆಯುತ್ತಿದ್ದು, ಮಹಿಳೆಯರು ಅತಂತ್ರರಾಗಿದ್ದಾರೆ, ಮುಸಲ್ಮಾನರು ಲವ್ ಜಿಹಾದ್ ನಡೆಸುತ್ತಾರೆ, ಲ್ಯಾಂಡ್ ಜಿಹಾದ್ ಎಂಬುದೂ ಇದೆ, ಅವರು ಮತಾಂತರ ಮಾಡುತ್ತಾರೆ, ನಮ್ಮ ನಿಮ್ಮ ಎಲ್ಲ ಜಾಗಗಳನ್ನೂ ವಕ್ಫ್ನ ಹೆಸರಲ್ಲಿ ಕಬಳಿಸುತ್ತಾರೆ, ಅವರ ಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಉಳಿ ಗಾಲವಿಲ್ಲ, ಅವರಿಗೆ ಮನೆ ಕೊಡಬಾರದು, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು, ಅವರನ್ನು ಮನೆಗೆ ಕರೆಸಿಕೊಳ್ಳಬಾರದು... ಹೀಗೆ ದಿನನಿತ್ಯ ಭಾಷಣಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಮಾತುಗಳು-ಅಭಿಪ್ರಾಯಗಳು ಹರಿದು ಬರುತ್ತಲೇ ಇವೆ. ಹಾಗಂತ,

ಇಂಥ  ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವವರಲ್ಲಿ ಮತ್ತು ಭಾಷಣ ಮಾಡುವವರಲ್ಲಿ- ಅಲ್ಲ, ನಾಲ್ವರು ಬಿಡಿ, ಇಬ್ಬರು ಪತ್ನಿಯರನ್ನು ಹೊಂದಿದ ಓರ್ವ ಮುಸ್ಲಿಮ್ ವ್ಯಕ್ತಿ ನಿಮ್ಮ ಅಕ್ಕ ಪಕ್ಕದಲ್ಲಿ ಅಥವಾ ನಿಮ್ಮ ಪರಿಸರದಲ್ಲಿ ಇದ್ದಾರಾ ಎಂದು ಪ್ರಶ್ನಿಸಿ ನೋಡಿ. ಅವರಿಗೆ ಗೊತ್ತೇ ಇರುವುದಿಲ್ಲ. ಅವರು ದೂರದ ಇನ್ನೆಲ್ಲಿಗೋ ಬೆರಳು ತೋರಿಸುತ್ತಾರೆ. ತಮಗೆ ಗೊತ್ತೇ ಇಲ್ಲದ ಮತ್ತು ಕಂಡೇ ಇಲ್ಲದ ಊರುಗಳಲ್ಲಿ ಹಾಗೆ ಇದೆ ಎಂಬಂತೆ  ಆಡಿಕೊಳ್ಳುತ್ತಾರೆ.  ಇನ್ನು, ಅವರು ತೋರಿಸಿದ ಆ ಪ್ರದೇಶದಲ್ಲಿ ಹೀಗೆ ಕೇಳಿದರೆ ಸಿಗುವ ಉತ್ತರವೂ ಭಿನ್ನ ಅಲ್ಲ. ಅವರೂ ಅಂಥ ದ್ವಿಪತ್ನಿ ವಲ್ಲಭರನ್ನು ನೋಡಿರುವುದಿಲ್ಲ. ನಮ್ಮಲ್ಲಿ ಇಲ್ಲದಿದ್ದರೇನಂತೆ, ಬೇರೆಲ್ಲೋ  ಇದೆ, ಮುಸ್ಲಿಮರೆಂದರೆ ಹಾಗೆಯೇ  ಎಂಬಂತೆ ತಪ್ಪಿಸಿಕೊಳ್ಳುತ್ತಾರೆ.

ಇದು ಕೇವಲ ಮದುವೆಗೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆ ಅಲ್ಲ. ಹತ್ತು-ಹತ್ತು ಮಕ್ಕಳಿರುವ ಮುಸ್ಲಿಮ್ ಕುಟುಂಬಗಳು ನಿಮ್ಮ ಪರಿಸರದಲ್ಲಿ ಇದ್ದಾವಾ ಎಂದು ಕೇಳಿದರೆ, ಇಲ್ಲ ಅನ್ನುವುದೇ ಅವರ ಉತ್ತರವಾಗಿರುತ್ತದೆ. ಮತ್ತೆ ಯಾಕೆ ಇಂಥ ಸುಳ್ಳುಗಳನ್ನು ಹಂಚಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ಬೇರೆ ಕಡೆ ಇದೆ ಎಂಬಂತೆ ಸಮರ್ಥಿಸಿಕೊಳ್ಳುತ್ತಾರೆ. ನಿಜವಾಗಿ,

ಸಮಾಜದಲ್ಲಿ ಯಾವುದು ಇಲ್ಲವೋ ಅದನ್ನೇ ಇದೆ ಎಂದು ಪದೇ ಪದೇ ಬಿಂಬಿಸುವುದು ಮತ್ತು ಜನರು ನಂಬುವಂಥ  ವಾತಾವರಣವನ್ನು ಉಂಟು ಮಾಡುವುದು ಇವತ್ತಿನ ಅಪಾಯಕಾರಿ ವಿದ್ಯಮಾನವಾಗಿದೆ. ಇಂಥ ಭ್ರಮೆಗಳನ್ನು ಜನರ ಬಳಿಗೆ ತಲುಪಿಸುವುದಕ್ಕೆ ವಾಟ್ಸಪ್-ಫೇಸ್‌ಬುಕ್‌ಗಳು ದೊಡ್ಡ ಪಾತ್ರವನ್ನು ನಿಭಾಯಿಸುತ್ತಲೂ ಇವೆ. ಎಲ್ಲೋ  ಒಂದು ಕಡೆ ನಡೆದ ಒಂಟಿ ಘಟನೆಯನ್ನು ಶರವೇಗದಲ್ಲಿ ಇನ್ನೊಂದು ಮನೆಗೆ ತಲುಪಿಸುವ ಸಾಮರ್ಥ್ಯ ಈಗಿನ ತಂತ್ರಜ್ಞಾನಕ್ಕಿದೆ. ಜಾರ್ಖಂಡ್‌ನ ಯಾವುದೋ ಮೂಲೆಯಲ್ಲಿನ ಹಿಂದೂ ಹೆಣ್ಣು ಮಗಳನ್ನು ಮುಸ್ಲಿಮ್ ಯುವಕ ನೋರ್ವ ಪ್ರೀತಿಸಿ ಮದುವೆಯಾಗುವುದು ಇವತ್ತಿನ ದಿನಗಳಲ್ಲಿ ಆ ಊರಿನ ವಿಷಯವಷ್ಟೇ ಆಗುತ್ತಿಲ್ಲ ಮತ್ತು ಮದುವೆ ಎಂಬ ಮೂರಕ್ಷರಗಳಿಗೆ ಸೀಮಿತವಾಗುವ ಪ್ರಸಂಗವಾಗಿಯೂ ಅದು ಗುರುತಿಸಿಕೊಳ್ಳುತ್ತಿಲ್ಲ. ಜಾರ್ಖಂಡ್‌ನಿಂದ  ಕರ್ನಾಟಕದ ಹಳ್ಳಿಯೊಂದಕ್ಕೆ ಆ ‘ಮದುವೆ’ ಸುದ್ದಿ ತಲುಪುವಾಗ ನೂರಾರು ರೆಕ್ಕೆ-ಪುಕ್ಕಗಳನ್ನು ಸೇರಿಸಿಕೊಂಡಿರುತ್ತದೆ. ಸಿನಿಮಾ ಕತೆಗಳಿಗಿಂತಲೂ ಭೀಕರವಾಗಿ ಮತ್ತು ರಮ್ಯವಾಗಿ ಆ ಮದುವೆಯ ಸುತ್ತ ಕತೆಯನ್ನು ಕಟ್ಟಿ ಹಂಚಲಾಗುತ್ತದೆ. ಆ ಮದುವೆ ಪ್ರಕರಣವನ್ನು ಇಟ್ಟುಕೊಂಡು ದೇಶದಾದ್ಯಂತ ಅಸಂಖ್ಯ ಕಡೆಗಳಲ್ಲಿ ‘ಲವ್ ಜಿಹಾದ್’ ಭಾಷಣ ಮಾಡಲಾಗುತ್ತದೆ. ದೇಶದ ವಿವಿಧ ಭಾಷೆಗಳಲ್ಲಿ ಅಸಂಖ್ಯ ಬರಹಗಳು ಪ್ರಕಟವಾಗುತ್ತವೆ. ಪತ್ರಿಕೆಗಳಲ್ಲಿ ಒಂದು ರೀತಿಯಲ್ಲಿ ಅದು ವಿಶ್ಲೇಷಣೆಗೆ ಒಳಪಟ್ಟರೆ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ  ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಆ ಬಳಿಕ ಡಿಜಿಟಲ್ ಮೀಡಿಯಾಗಳ ಸರದಿ. ಟಿವಿ ಚಾನೆಲ್‌ಗಳಿಗೂ ಬ್ರೇಕಿಂಗ್ ನ್ಯೂಸ್. ಕೆಲವೊಮ್ಮೆ ಪ್ರೈಮ್  ಟೈಮ್ ಸಂವಾದಕ್ಕೂ ಅದು ವಸ್ತುವಾಗುತ್ತದೆ. ರಾಜಕಾರಣಿಯೂ ತನ್ನ ಭಾಷಣದ ವಸ್ತುವಾಗಿ ಅದನ್ನು ಉಲ್ಲೇಖಿಸುತ್ತಾರೆ. ಹೀಗೆ,

ದೇಶದ ಯಾವುದೋ ಒಂದು ಮೂಲೆಯಲ್ಲಿ ನಡೆದ ಒಂಟಿ ಮದುವೆಯೊಂದು 80 ಕೋಟಿ ಹಿಂದೂಗಳ ಅಸ್ಮಿತೆಯ ಪ್ರಶ್ನೆಯಾಗಿ, ಅವರ ಅಸ್ತಿತ್ವಕ್ಕೆ ಅಪಾಯ ಎದುರಾದ ಘಟನೆಯಾಗಿ ಮತ್ತು 20 ಕೋಟಿ ಮುಸ್ಲಿಮರ ಸಂಚಿನ ಪ್ರಕರಣವಾಗಿ ಅದು ದೇಶದಾದ್ಯಂತ ಹಂಚಿಕೆಯಾಗುತ್ತದೆ. ಆ ಒಂದೇ ಒಂದು ಮದುವೆ ಪ್ರಕರಣವು ಮುಸ್ಲಿಮ್ ಸಮುದಾಯವನ್ನು ಹಿಂದೂ ವಿರೋಧಿಯಾಗಿ ಮತ್ತು ಸಂಚು ನಡೆಸುವ ಸಮುದಾಯವಾಗಿ ಮಾರ್ಪಡಿಸಿಬಿಡುತ್ತದೆ. ಹಾಗಂತ,
ಇಂಥ  ಮದುವೆ ಮುಸ್ಲಿಮರಲ್ಲಿ ಮಾತ್ರವೇ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಅಲ್ಲ ಅನ್ನುವುದೇ ಉತ್ತರ. ಮುಸ್ಲಿಮ್ ಯುವತಿಯನ್ನು ಹಿಂದೂ ಯುವಕ ವರಿಸುವ ಪ್ರಕರಣಗಳೂ ಆಗಾಗ ನಡೆಯುತ್ತಿರುತ್ತವೆ. ಆದರೆ, ಅಂಥವುಗಳನ್ನು ಸಹಜ ಎಂಬಂತೆ ಸ್ವೀಕರಿಸುವ ಅದೇ ಮಂದಿ ತದ್ವಿರುದ್ಧ ಬೆಳವಣಿಗೆಯನ್ನು ಮಾತ್ರ ಅಪಾಯಕಾರಿಯೆಂಬಂತೆ  ನೋಡುತ್ತಾರೆ. ಇದಕ್ಕೆ ಕಾರಣ, ‘ಮುಸ್ಲಿಮ್ ಮದುವೆ’ಯ ಸುತ್ತ ಕಟ್ಟಲಾಗುತ್ತಿರುವ ಭಯಾನಕ ಕತೆಗಳು. ಇಂಥ ಭ್ರಮಾತ್ಮಕ ಕತೆಗಳನ್ನು ಕಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವುದಕ್ಕೆ ಬಹುಶಃ ತಜ್ಞ ತಂಡಗಳೇ ಇರುವಂತಿದೆ. ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ಪ್ರಕರಣಕ್ಕೂ ಧಾರ್ಮಿಕ ತಿರುವು ಕೊಟ್ಟು ಮುಸ್ಲಿಮರನ್ನು ದೇಶದ್ರೋಹಿಗಳಂತೆ, ಹಿಂದೂ ವಿರೋಧಿಗಳಂತೆ ಮತ್ತು ಹಿಂಸಕರಂತೆ  ಬಿಂಬಿಸುವುದೇ ಇವರ ಪೂರ್ಣಕಾಲಿಕ ಉದ್ಯೋಗ ಆಗಿರುವಂತಿದೆ. ಇದರ ಜೊತೆಗೇ,

ಲಕ್ಕಿ ಭಾಸ್ಕರ್ ಸಿನಿಮಾ ಕತೆಯನ್ನೂ ಇಟ್ಟು ನೋಡಬಹುದು. ಕಳ್ಳತನವನ್ನೇ ಮೌಲ್ಯ ಎಂದು ಬಿಂಬಿಸುವ ಈ ಸಿನಿಮಾ ಸಾರುವ ಸಂದೇಶ ಅತ್ಯಂತ ನಕಾರಾತ್ಮಕವಾದುದು. ಮೋಸ ಮಾಡಿ ಶ್ರೀಮಂತನಾಗುವುದನ್ನೇ ಯಶಸ್ಸು ಎಂದು ಬಿಂಬಿಸಿ ಈ ಸಿನಿಮಾ ಕೊನೆಗೊಳ್ಳುತ್ತದೆ ಎಂಬುದೇ ಈ ಸಿನಿಮಾದ ದೌರ್ಬಲ್ಯ ಎಂದು ದೀಪಾ ಹಿರೇಗುತ್ತಿ ಬರೆದಿದ್ದಾರೆ. ಆದರೆ, ಈ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರಂತೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಸಿನಿಮಾ ಆಗಿ ಇದು ಗುರುತಿಸಿಕೊಂಡಿದೆಯಂತೆ. ನಕಾರಾತ್ಮಕ ಸಂದೇಶವನ್ನು ಸಾರುವ ಮತ್ತು ಯುವ ತಲೆಮಾರಿನಲ್ಲಿ   ಮೋಸವನ್ನೇ ಯಶಸ್ಸಿನ ದಾರಿಯಾಗಿ ಬಿಂಬಿಸುವ ಸಿನಿಮಾವೊಂದು ಜನಪ್ರಿಯ ಅನ್ನಿಸಿಕೊಂಡದ್ದು ಏಕೆ? ಯುವತಲೆಮಾರಿಗೆ ಈ ಸಿನಿಮಾದಿಂದ ಸಿಗುವ ಪಾಠವೇನು? ಮೈಮುರಿದು ದುಡಿಯುವುದಕ್ಕಿಂತ ಮೋಸದ ದಾರಿಯಲ್ಲಿ ಹಣ ಮಾಡುವುದೇ ಲೇಸು ಎಂಬ ಸಂದೇಶ ಸಾರುವುದು ಯಾಕೆ ಜನಪ್ರಿಯ ಆಗಬೇಕು? ನಿಜವಾಗಿ,

ಸೀತಾರಾಮ ಎಂಬ ಧಾರಾವಾಹಿ ಮತ್ತು ಲಕ್ಕಿ ಭಾಸ್ಕರ್ ಎಂಬ ಸಿನಿಮಾಗಳೆರಡೂ ಸದ್ಯದ ಭಾರತದ ಸ್ಥಿತಿಯನ್ನು ಹೇಳುತ್ತದೆ. ಸುಳ್ಳುಗಳು ಹೇಗೆ ಜನರ ಭಾವ ಪ್ರಪಂಚಕ್ಕೆ ನುಗ್ಗಿ, ಅವರನ್ನು ಭ್ರಮೆಯಲ್ಲಿ ತೇಲುವಂತೆ ಮಾಡಿ, ಸುಳ್ಳುಗಳನ್ನೇ ಸತ್ಯವೆಂದು ಅವರು ಪಟ್ಟು ಹಿಡಿದು ವಾದಿಸುವಂತೆ ಮಾಡಬಹುದು ಎಂಬುದನ್ನೂ ಹೇಳುತ್ತದೆ. ಅಂದಹಾಗೆ, ಮುಸ್ಲಿಮ್ ದ್ವೇಷಕ್ಕೆ ಕಾರಣವಾಗಿರುವುದೂ ಇಂಥದ್ದೇ  ಭ್ರಮಾತ್ಮಕ ಕತೆಗಳೇ.

Monday, November 25, 2024

ಹೈದರಾಬಾದ್: ಸಮಾವೇಶದ ಯಶಸ್ಸಿಗೆ ಕಾರಣವಾದ 7 ಅಂಶಗಳು






1. ನೀರು
2. ಶೌಚಾಲಯ
3. ಮೊಬೈಲ್ ಚಾರ್ಜಿಂಗ್
4. ಆಹಾರ ವೈವಿಧ್ಯತೆ
5. ಸಭಾಂಗಣ
6. ಆರೋಗ್ಯ ವ್ಯವಸ್ಥೆ
7. ನಿರ್ವಹಣಾ ತಂಡ
ಸಾವಿರಾರು ಮಂದಿಯನ್ನು ಸೇರಿಸಿ ಮೂರ‍್ನಾಲ್ಕು ದಿನಗಳ ಕಾಲ ನಡೆಸುವ ಯಾವುದೇ ಸಮಾವೇಶದ ಯಶಸ್ಸು ಈ ಮೇಲಿನ 7 ವಿಷಯಗಳನ್ನು ಅವಲಂಬಿ ಸಿರುತ್ತದೆ. ಹತ್ತಿಪ್ಪತ್ತು ಮಂದಿ ಒಂದು ಕಡೆ ಸೇರಿ ಮೂರ‍್ನಾಲ್ಕು ದಿನಗಳ ಕಾಲ ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ 20ರಿಂದ 25 ಸಾವಿರ ಮಂದಿ ಒಂದು ಕಡೆ ಸೇರಿ ಇಂಥದ್ದೇ  ಸಭೆ  ನಡೆಸುವಾಗ ಎದುರಾಗುವ ಸವಾಲುಗಳಿಗೂ ಭೂಮಿ-ಆಕಾಶದಷ್ಟು ಅಂತರವಿರುತ್ತದೆ. ಈ ದೇಶದಲ್ಲಿ 28 ರಾಜ್ಯಗಳು ಮತ್ತು  8 ಕೇಂದ್ರಾಡಳಿತ ಪ್ರದೇಶಗಳಿವೆ. ಭಾಷೆಗಳಾದರೋ ನೂರಾರು. ಕರ್ನಾಟಕದ ಕರಾವಳಿ ಭಾಗದ ಜನರು ಆಡುವ ಮನೆಭಾಷೆ ಬೆಂಗಳೂರಿಗರಿಗೆ ಅರ್ಥವೇ ಆಗುವುದಿಲ್ಲ. ಇದು ಒಂದು ರಾಜ್ಯದ ಒಳಗಿನ ಸ್ಥಿತಿ. ಹೀಗಿರುವಾಗ, 28 ರಾಜ್ಯಗಳಲ್ಲಿ  ಅಸ್ತಿತ್ವದಲ್ಲಿರಬಹುದಾದ ಭಾಷಾ ವೈವಿಧ್ಯತೆ ಹೇಗಿರಬಹುದು? ನಾಗಾಲ್ಯಾಂಡ್, ಒಡಿಸ್ಸಾ, ಜಾರ್ಖಂಡ್, ತ್ರಿಪುರ, ಮಣಿಪುರದಂಥ ರಾಜ್ಯಗಳಿಂದ ಬಂದವರು ಮತ್ತು ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಗಳಿಂದ ಬಂದವರು ಪರಸ್ಪರ  ಒಂದೇ ಚಪ್ಪರದಡಿಯಲ್ಲಿ ಎದುರು-ಬದುರಾದಾಗ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು? ನಿಜವಾಗಿ,

ಈ ಡಿಜಿಟಲ್ ಯುಗದಲ್ಲಿ ಸಾವಿರಾರು ಮಂದಿಯನ್ನು ಒಂದೇ ಕಡೆ ಸೇರಿಸಿ ಮರ‍್ನಾಲ್ಕು ದಿನಗಳ ಕಾಲ ಸಭೆ ನಡೆಸುವ  ಅಗತ್ಯ ಏನಿದೆ ಎಂಬ ಪ್ರಶ್ನೆಯನ್ನು ಕೆಲವರು ಎಸೆದು ಬಿಡುವುದಿದೆ. ತಂತ್ರಜ್ಞಾನದ ಈ ಯುಗದಲ್ಲಿ ಓಬಿರಾಯನ ಕಾಲದ  ಸಂಪ್ರದಾಯಕ್ಕೆ ಇನ್ನೂ ಜೋತು ಬೀಳುವುದೇಕೆ ಎಂದೂ ಪ್ರಶ್ನಿಸುವವರಿದ್ದಾರೆ. ಹೀಗೆ ಸಭೆ ಸೇರುವುದರಿಂದ ಸಮಯ  ಹಾಳಾಗುತ್ತದೆ, ದುಬಾರಿ ಖರ್ಚಾಗುತ್ತದೆ, ನೀರು ಪೋಲಾಗುತ್ತದೆ ಎಂದು ಹೇಳುವವರಿದ್ದಾರೆ ಮತ್ತು ಆನ್‌ಲೈನ್ ಮೂಲಕ  ಇಂಥ ಸಭೆಗಳನ್ನು ನಡೆಸುವುದೇ ಬುದ್ಧಿವಂತಿಕೆ ಎಂಬ ಉಪದೇಶ ನೀಡುವವರೂ ಇದ್ದಾರೆ. ಆದರೆ,

ಇದೊಂದು ರಮ್ಯ ವಾದವೇ ಹೊರತು ಆಫ್‌ಲೈನ್ ಸಭೆಗೂ ಆನ್‌ಲೈನ್ ಸಭೆಗೂ ನಡುವೆ ಹತ್ತಾರು ವ್ಯತ್ಯಾಸಗಳಿವೆ.  ಸಾವಿರಾರು ಮಂದಿ ಒಂದು ಕಡೆ ಸೇರುವುದೆಂದರೆ ಅದು ಬರೇ ಭೌತಿಕ ಸಮಾಗಮವಷ್ಟೇ ಆಗಿರುವುದಿಲ್ಲ. ಅಲ್ಲೊಂದು   ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಒಡಿಸ್ಸಾದ ಓರ್ವ ವ್ಯಕ್ತಿ ದಕ್ಷಿಣ ಭಾರತದ ಇನ್ನೊಂದು ಮೂಲೆಯ ವ್ಯಕ್ತಿಯೊಂದಿಗೆ  ಸಂಭಾಷಣೆ ನಡೆಸುತ್ತಾರೆ. ಭಾಷಾ ವೈವಿಧ್ಯತೆಗಳು ಅವರ ನಡುವೆ ಹಂಚಿಕೆಯಾಗುತ್ತದೆ. ಬದುಕು, ಭಾವ, ಕೌಟುಂಬಿಕ  ಸಂಗತಿಗಳು, ಉದ್ಯೋಗ, ಆರೋಗ್ಯ ಇತ್ಯಾದಿಗಳು ಪ್ರಸ್ತಾಪಕ್ಕೆ ಬರುತ್ತವೆ. ಆ ಇಬ್ಬರಲ್ಲಿ ಒಬ್ಬರು ಒಳ್ಳೆಯ ವ್ಯಾ ಪಾರಿಯಾಗಿರಬಹುದು, ಶಿಕ್ಷಕ/ಕಿಯಾಗಿರಬಹುದು, ಕಂಪೆನಿಯ ಒಡೆಯರಾಗಿರಬಹುದು, ವೈದ್ಯರೋ ಇಂಜಿನಿಯರೋ  ದಾದಿಯೋ ರಿಕ್ಷಾ ಚಾಲಕರೋ ಇನ್ನೇನೋ ಆಗಿರಬಹುದು. ಅದೇವೇಳೆ, ಇನ್ನೊಬ್ಬರು ಧಾರ್ಮಿಕ ವಿದ್ವಾಂಸರೋ ವಿದೇಶಿ  ಉದ್ಯೋಗಿಯೋ ಸಂಶೋಧನಾ ವಿದ್ಯಾರ್ಥಿಯೋ ಹೋರಾಟಗಾರರೋ ರಾಜಕಾರಣಿಯೋ ಕೂಲಿ ಕಾರ್ಮಿಕರೋ  ಅಥವಾ ರೈತರೋ ಇನ್ನೇನೋ ಆಗಿರಬಹುದು. ಇಂಥ ಭಿನ್ನ ಭಿನ್ನ ಅಭಿರುಚಿಯುಳ್ಳವರು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ  ದುಡಿಯುತ್ತಿರುವವರು ಪರಸ್ಪರ ಒಂದೇ ಕಡೆ ಸೇರಿ ಅಭಿಪ್ರಾಯ ವಿನಿಮಯ ಮಾಡುವುದೆಂದರೆ ಅದು ಹತ್ತು ಹಲವು  ಸಾಧ್ಯತೆಗಳನ್ನು ತೆರೆದಿಡುತ್ತದೆ. ರೈತರಿಗೆ ಆ ಭೇಟಿಯಿಂದ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಐಡಿಯಾ  ಸಿಗಬಹುದು. ರಿಕ್ಷಾ ಚಾಲಕ ತನ್ನ ಮಗನಿಗೆ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವಂತೆ ಮಾಡುವುದಕ್ಕೆ ಸೂಕ್ತ  ಮಾರ್ಗದರ್ಶನ ಸಿಗಬಹುದು. ವಿದ್ವಾಂಸರ ಬೋಧನೆಯಿಂದ ವ್ಯಾಪಾರಿಗೆ ತನ್ನ ವ್ಯಾಪಾರದಲ್ಲಿ ಇನ್ನಷ್ಟು ಸೂಕ್ಷ್ಮತೆಯನ್ನು  ಪಾಲಿಸಲು ನೆರವಾಗಬಹುದು. ಅಂದರೆ,

ಜನರು ಭೌತಿಕವಾಗಿ ಒಂದು ಕಡೆ ಸೇರುವುದೆಂದರೆ, ಅಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಷ್ಟೇ ಆಗಿರುವು  ದಿಲ್ಲ. ಅಲ್ಲೊಂದು  ಸಂವಹನ ಏರ್ಪಡುತ್ತದೆ, ಸಂಬಂಧ ಸೃಷ್ಟಿಯಾಗುತ್ತದೆ. ಸಭೆ ಮುಗಿದು ಊರಿಗೆ ಹಿಂತಿರುಗಿದ ಬಳಿಕವೂ  ಸಂಪರ್ಕದಲ್ಲಿರುವುದಕ್ಕೆ ಬೇಕಾದ ಸನ್ನಿವೇಶ ನಿರ್ಮಾಣ ವಾಗುತ್ತದೆ. ಆದರೆ, ಇಂಥ ಯಾವ ಸಾಧ್ಯತೆಗಳೂ ಆನ್‌ಲೈನ್  ಸಭೆಯಿಂದ ಸಾಧ್ಯವಿಲ್ಲ. ಅಂದಹಾಗೆ,

ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ನೀರು, ಆಹಾರ ಮತ್ತು ಶೌಚಾಲಯ ಮುಖ್ಯವಾಗುತ್ತದೆ. ಸಾವಿರಾರು ಮಂದಿ ಸೇರಿ  ಮೂರ‍್ನಾಲ್ಕು ದಿನಗಳ ಕಾಲ ತಂಗುವ ಸಮಾವೇಶಗಳಲ್ಲಂತೂ ಇವು ಸಮಾವೇಶದ ಯಶಸ್ಸನ್ನು ನಿರ್ಧರಿಸುವಷ್ಟು  ಆದ್ಯತೆಯನ್ನು ಪಡೆಯುತ್ತದೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಆಹಾರ ಕ್ರಮಗಳಿವೆ. ಕರಾವಳಿಯ ಇಡ್ಲಿ-ಸಾಂಬಾರ್,  ಕುಚಲಕ್ಕಿ ಊಟ, ನೀರ್‌ದೋಸೆಗಳು ಮಧ್ಯಪ್ರದೇಶ, ಹರ್ಯಾಣ, ಪಂಜಾಬಿ ನಾಗರಿಕರ ಆಹಾರ ಕ್ರಮಗಳಲ್ಲ. ಅಲ್ಲಿನವರ  ಆಹಾರ ವಿಧಾನವು ಕೇರಳ, ತಮಿಳುನಾಡಿನವರ ಆಹಾರ ಕ್ರಮದಂತೆಯೂ ಅಲ್ಲ. ಒಂದೊಂದು ರಾಜ್ಯದ ಒಂದೊಂದು  ಜಿಲ್ಲೆಯಲ್ಲೇ  ಒಂದೊಂದು ರೀತಿಯ ಖಾದ್ಯಗಳಿವೆ, ಉಪಾಹಾರಗಳಿವೆ. ಆದ್ದರಿಂದ ಈ ಎಲ್ಲ ರಾಜ್ಯಗಳ ಮಂದಿ ಒಂದೇ  ಕಡೆ ಸಾವಿರಾರು ಸಂಖ್ಯೆಯಲ್ಲಿ ಸೇರುವಾಗ ಅವರೆಲ್ಲರ ಆಹಾರ ವೈವಿಧ್ಯತೆಯನ್ನು ನಿರಾಕರಿಸಿ ಒಂದೇ ಆಹಾರವನ್ನು  ಬಡಿಸುವುದು ಆರೋಗ್ಯ ಸಮಸ್ಯೆಗೂ ಕಾರಣವಾಗ ಬಹುದು. ಹಾಗೇನಾದರೂ ಆದರೆ, ಕಾರ್ಯಕ್ರಮದ ಮೇಲೆ ಗಮನ  ಕೊಡುವುದಕ್ಕಿಂತ ಆರೋಗ್ಯದ ಬಗ್ಗೆಯೇ ತಲೆ ಕೆಡಿಸಿಕೊಳ್ಳಬೇಕಾದ ಜರೂರತ್ತು ಸೇರಿದವರಿಗೆ ಎದುರಾಗಬಹುದು. ಇದು  ಅಲ್ಲಿ ಸೇರುವಿಕೆಯ ಉದ್ದೇಶವನ್ನೇ ಹಾಳು ಮಾಡಬಹುದು. ಹಾಗಂತ,

ಇಂಥ ಬೃಹತ್ ಜನಸಂಖ್ಯೆಯ ಆಹಾರ ವೈವಿಧ್ಯತೆಯನ್ನು ಗಮನಿಸಿ ಪ್ರತಿಯೊಬ್ಬರಿಗೂ ಪ್ರತ್ಯಪ್ರತ್ಯೇಕ ಆಹಾರ  ತಯಾರಿಕೆಯೂ ಪ್ರಾಯೋಗಿಕವಲ್ಲ. ಇಂಥ ಸಂದರ್ಭಗಳಲ್ಲಿ ಆಹಾರ ಕ್ರಮಗಳಲ್ಲಿ ಬಹುತೇಕ ಸಾಮ್ಯತೆಯಿರುವ ರಾಜ್ಯಗಳ  ಪಟ್ಟಿ ಮಾಡಿ, ಅಂಥ ರಾಜ್ಯಗಳಿಂದ ಬಂದವರಿಗೆ ಒಂದೇ ಕಡೆ ಊಟ ತಯಾರಿಸಿ ಬಡಿಸುವಂಥ ಪ್ರಯೋಗಕ್ಕೆ  ಕೈಹಾಕಬೇಕಾಗುತ್ತದೆ. ಇದಕ್ಕಾಗಿ ಹತ್ತಾರು ಕಿಚನ್‌ಗಳನ್ನು ಪ್ರತ್ಯಪ್ರತ್ಯೇಕ ನಿರ್ಮಿಸಬೇಕಾಗುತ್ತದೆ. ಹೀಗೆ ಗುಂಪುಗಳಾಗಿ  ವಿಭಜಿಸಲ್ಪಟ್ಟ ರಾಜ್ಯಗಳ ಜನರನ್ನು ಒಂದೇ ಕಡೆ ಸೇರುವಂಥ ಟೆಂಟ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಬಾಹ್ಯ ನೋಟಕ್ಕೆ  ಇವೆಲ್ಲವನ್ನೂ ಹೇಳುವುದು ಸುಲಭವಾದರೂ ಪ್ರಾಯೋಗಿಕವಾಗಿ ಇದು ಸವಾಲಿನ ಕೆಲಸ. ಆದರೆ, ಈ ಸವಾಲನ್ನು  ಎದುರಿಸುವಲ್ಲಿ ಯಶಸ್ವಿಯಾದರೆ ಅದು ಇಡೀ ಸಮಾವೇಶವನ್ನೇ ಯಶಸ್ವಿಗೊಳಿಸಿದಂತೆ. ಯಾಕೆಂದರೆ, ಇಷ್ಟದ ಆಹಾರವೇ  ಹೊಟ್ಟೆ ಸೇರುವುದರಿಂದ ಮಾನಸಿಕವಾಗಿ ವ್ಯಕ್ತಿ ನಿರಾಳವಾಗುತ್ತಾರೆ. ಆಹಾರದ ಬಗ್ಗೆ ಆಲೋಚಿಸದೇ ಕಾರ್ಯಕ್ರಮದ  ಕಡೆಗೆ ಗಮನ ಹರಿಸುತ್ತಾರೆ.

ಯಾವಾಗ ದೇಹಕ್ಕೆ ಒಗ್ಗುವ ಆಹಾರ ಲಭಿಸುತ್ತದೋ ಅದು ಇನ್ನೆರಡು ಬೇಡಿಕೆಗಳನ್ನೂ ಮುಂದಿಡುತ್ತದೆ. ಅದುವೇ ನೀರು  ಮತ್ತು ಶೌಚಾಲಯ. ಇಂಥ ಸಮಾ ವೇಶಗಳಲ್ಲಿ ನೀರಿನ ಕೊರತೆ ಎದುರಾದರೆ ಮತ್ತು ಶೌಚಾಲಯ ಅಸಮರ್ಪಕವಾಗಿದ್ದರೆ  ಅದು ಸೇರಿದವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥ ರನ್ನಾಗಿಸುತ್ತದೆ. ಕಾರ್ಯಕ್ರಮದ ಮೇಲೆ ಇರಬೇಕಾದ  ಗಮನವು ಅಸಮರ್ಪಕ ಶೌಚ ವ್ಯವಸ್ಥೆಯಿಂದಾಗಿ ವಿಚಲಿತಗೊಳ್ಳುತ್ತದೆ. ಇದರ ಜೊತೆಗೇ,
ಸಮಾವೇಶದ ಯಶಸ್ಸಿನಲ್ಲಿ ಪಾಲುದಾರವಾಗಿರುವ ಇನ್ನೆರಡು ಅಂಶಗಳೆಂದರೆ, ಆರೋಗ್ಯ ವ್ಯವಸ್ಥೆ ಮತ್ತು ನಿರ್ವಹಣಾ  ತಂಡ. 

ಸಾವಿರಾರು ಮಂದಿ ಒಂದುಕಡೆ ಸೇರುವುದೆಂದರೆ, ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿ, ಭಾಷೆ, ದೃಷ್ಟಿಕೋನ,  ಸಂಪ್ರದಾಯಗಳು ಒಂದೇ ಕಡೆ ಸಮಾಗಮವಾಗುವುದು ಎಂದೇ ಅರ್ಥ. ಕೇರಳದವರು ಯಾವುದನ್ನು ಶಿಸ್ತು ಎಂದು  ಅಂದುಕೊಳ್ಳುತ್ತಾರೋ ಅದನ್ನೇ ಬಿಹಾರದವರು ನಗಣ್ಯ ಸಂಗತಿಯಾಗಿ ಪರಿಗಣಿಸಬಹುದು. ಪಶ್ಚಿಮ ಬಂಗಾಳದವರು  ಯಾವುದಕ್ಕೆ ಮಹತ್ವ ನೀಡುತ್ತಾರೋ ಪುದುಚೇರಿಯವರು ಅದಕ್ಕೆ ಮಹತ್ವವನ್ನೇ ಕಲ್ಪಿಸದಿರಬಹುದು. ಇಂಥ ಸಮಾವೇಶದಲ್ಲಿ  ಸೇರುವವರಲ್ಲಿ ಒರಟರು, ಅಪಾರ ಸಂಯಮಿಗಳು, ತಿಂಡಿಪೋಕರು, ನಿಧಾನಿಗಳು, ತಕ್ಷಣ ಸಿಟ್ಟು ಬರುವವರು, ಸದಾ  ನೆಗೆಟಿವ್‌ಗಳನ್ನೇ ಉಣ್ಣುವವರು... ಮುಂತಾಗಿ ಅನೇಕ ರೀತಿಯ ಜನರಿರಬಹುದು. ವೈಚಾರಿಕವಾಗಿ ಇವರಲ್ಲಿ ಎಷ್ಟೇ ಏಕತೆ  ಇದ್ದರೂ ಸಂಸ್ಕೃತಿ, ಆಚಾರ, ವರ್ತನೆಗಳಲ್ಲಿ ವ್ಯತ್ಯಾಸಗಳು ಇದ್ದೇ  ಇರುತ್ತವೆ. ಇಂಥವರನ್ನೆಲ್ಲಾ ಒಂದೇ ನಿಯಮದಡಿಗೆ  ತರುವುದು ಸುಲಭವಲ್ಲ. ಇದಕ್ಕೆ ಬಲಿಷ್ಠ ಸ್ವಯಂಸೇವಕರ ಅಗತ್ಯವಿರುತ್ತದೆ. ಎಲ್ಲರನ್ನೂ ಒಂದೇ ನಿಯಮದಡಿಗೆ ತಂದು,  ಇಡೀ ಸಮಾವೇಶವನ್ನು ಶಿಸ್ತು ಬದ್ಧವಾಗಿ ಕೊಂಡೊಯ್ಯಬೇಕಾದ ಇವರು ತಮ್ಮ ಹೊಣೆಗಾರಿಕೆಯಲ್ಲಿ ಅಲ್ಪವೇ  ವಿಫಲವಾದರೂ ಒಟ್ಟು ಸಮಾವೇಶವನ್ನೇ ಅದು ಹಾಳು ಮಾಡಿಬಿಡುತ್ತದೆ. ಇದರ ಜೊತೆಜೊತೆಗೇ ಓದಿಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ, ಆರೋಗ್ಯ ವ್ಯವಸ್ಥೆ.

ಇಂಥ ಸಮಾವೇಶಗಳಲ್ಲಿ ಭಾಗಿಯಾಗುವವರಲ್ಲಿ ಹಲವು ರೀತಿಯ ಜನರಿರುತ್ತಾರೆ. ಪೂರ್ಣ ಪ್ರಮಾಣದ ಆರೋಗ್ಯ ಹೊಂದಿದವರು ಒಂದು ವಿಭಾಗವಾದರೆ, ಸಮಾವೇಶದ ಮೇಲಿನ ಆಕರ್ಷಣೆಯಿಂದ ತಮ್ಮ ಅನಾರೋಗ್ಯವನ್ನೂ ಕಡೆಗಣಿಸಿ ಸೇರುವಂಥವರು ಇನ್ನೊಂದು ವಿಭಾಗವಾಗಿರುತ್ತಾರೆ. ಇಂಥವರ ಆರೋಗ್ಯವು ಸಮಾವೇಶದಲ್ಲಿ ಕೈ ಕೊಡುವ ಸಾಧ್ಯತೆ ಇರುತ್ತದೆ.  ತೀವ್ರವಾಗಿ ಅಸ್ವಸ್ಥರಾಗುವವರು ಮತ್ತು ಭಾಗಶಃ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಈಡಾಗುವವರೂ ಇರಬಹುದು.  ಇಂಥ ಸನ್ನಿವೇಶವನ್ನು ಮುಂಚಿತವಾಗಿ ಅರಿತುಕೊಂಡು ಅದಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳದಿದ್ದರೆ ಅಂಥವರ ಅನಾ  ರೋಗ್ಯವೇ ಒಟ್ಟು ಸಮಾವೇಶದ ವೈಫಲ್ಯಕ್ಕೆ ಕಾರಣವಾಗಬಲ್ಲುದು. ಹಾಗಂತ,

ಇಲ್ಲಿ ಪ್ರಸ್ತಾಪಿಸಲೇಬೇಕಾದ ಇನ್ನೆರಡು ಸಂಗತಿಗಳೆಂದರೆ, ಸಮಾವೇಶದ ಉದ್ದೇಶ, ಗುರಿ, ಮಹತ್ವವನ್ನು ಸ್ಪಷ್ಟಪಡಿಸಬೇಕಾದ  ವೇದಿಕೆಯನ್ನು ಹೇಗೆ ರೂಪಿಸಲಾಗಿದೆ ಮತ್ತು ಸಭಾಂಗಣವನ್ನು ಹೇಗೆ ರಚಿಸಲಾಗಿದೆ ಎಂಬುದು. ಯಾವುದೇ ಸಮಾವೇಶದ ಯಶಸ್ಸು ಜನರ ಸಂಖ್ಯೆಯನ್ನು ಹೊಂದಿಕೊಂಡಿರುವುದಿಲ್ಲ. ಬದಲು ಸಭಿಕ ಸ್ನೇಹಿ ಸಭಾಂಗಣ, ವೇದಿಕೆ ಮತ್ತು ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳನ್ನು ಹೊಂದಿಕೊಂಡಿರುತ್ತದೆ. ವೇದಿಕೆ ಮತ್ತು ಸಭಾಂಗಣ ಎಷ್ಟೇ ಅದ್ಭುತವಾಗಿರಲಿ,  ವೇದಿಕೆಯಲ್ಲಿ ಮಂಡಿಸಲಾಗುವ ವಿಚಾರಗಳು ಕಾಲ, ದೇಶ ಮತ್ತು ಪರಿಸ್ಥಿತಿಗೆ ಮುಖಾಮುಖಿಯಾಗುವಂತಿಲ್ಲದಿದ್ದರೆ ಮತ್ತು  ಕಾಲಬಾಹಿರ ಸರಕುಗಳೇ ವಿಚಾರಗಳಾದರೆ, ಅದರಿಂದ ಪ್ರಯೋಜನವೇನೂ ಆಗದು. ಹಾಗೆಯೇ, ವೇದಿಕೆಯಲ್ಲಿ  ಮಂಡಿಸಲಾಗುವ ವಿಚಾರಗಳು ಎಷ್ಟೇ ಪರಿಣಾಮಕಾರಿಯಾಗಿರಲಿ ಸಭಿಕಸ್ನೇಹಿ ವಾತಾವರಣದ ಸಭಾಂಗಣ  ನಿರ್ಮಾಣವಾಗಿಲ್ಲದಿದ್ದರೆ ಅದೂ ಫಲಿತಾಂಶದ ದೃಷ್ಟಿಯಿಂದ ಶೂನ್ಯ ಎನ್ನಬಹುದು. ಇದರ ಜೊತೆಗೇ,

ಎಲ್ಲರ ಬದುಕಿನ ಅನಿವಾರ್ಯ ಸಂಗಾತಿಯಾಗಿರುವ ಮೊಬೈಲ್ ಬಗ್ಗೆಯೂ ಆಧುನಿಕ ಸಮಾವೇಶಗಳಲ್ಲಿ ಗಮನ  ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ, ಬೃಹತ್ ಸಮಾವೇಶಗಳಲ್ಲಿ ಮೊಬೈಲ್ ಚಾರ್ಜಿಂಗ್‌ಗೆ ಬೇಕಾದ ವ್ಯವಸ್ಥೆ ಮಾಡುವುದು  ಕಡಿಮೆ. ಒಂದುವೇಳೆ ಮಾಡಿದರೂ ಸರ್ವರಿಗೂ ತೃಪ್ತಿಕರವಾದ ಮತ್ತು ಎಟಕುವ ರೀತಿಯಲ್ಲಿ ಚಾರ್ಜಿಂಗ್ ಸೌಲಭ್ಯ  ಒದಗಿಸುವುದು ಬಹುತೇಕ ಶೂನ್ಯ. ಇವತ್ತಿನ ದಿನಗಳಲ್ಲಿ ಊಟ, ಶೌಚದಷ್ಟೇ ಮೊಬೈಲ್ ಬಳಕೆಯೂ ಬದುಕಿನ  ಭಾಗವಾಗಿದೆ. ಮೂರ‍್ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶಗಳಲ್ಲಂತೂ ಮೊಬೈಲ್ ಬಳಕೆ ಧಾರಾಳ ನಡೆಯುತ್ತದೆ.  ಕುಟುಂಬದವರನ್ನು ಸಂಪರ್ಕಿಸುವುದರಿಂದ  ಹಿಡಿದು ಮಾಹಿತಿ-ಸುದ್ದಿ-ವಿಶ್ಲೇಷಣೆಗಳ ವರೆಗೆ ಎಲ್ಲದಕ್ಕೂ ಮೊಬೈಲ್  ಅವಲಂಬನೆ ಅನಿವಾರ್ಯವೂ ಆಗಿದೆ. ಇಂಥ ಸಂದರ್ಭಗಳಲ್ಲಿ ಚಾರ್ಜಿಂಗ್‌ಗೆ ಸಮರ್ಪಕ ಸೌಲಭ್ಯ ಇಲ್ಲದೇ ಹೋದರೆ  ಅದು ಸೇರಿದವರ ಆಸಕ್ತಿಯ ಮೇಲೆ ಅಡ್ಡಪರಿಣಾಮ ಬೀರಬಲ್ಲುದು. ಅಂದಹಾಗೆ,

ಹೈದರಾಬಾದ್‌ನಲ್ಲಿ ಮೂರು ದಿನಗಳ ಕಾಲ ನಡೆದ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರ ಅಖಿಲ ಭಾರತ ಸಮಾವೇಶವು  ಅಭೂತಪೂರ್ವ ಯಶಸ್ಸು ಕಂಡಿದ್ದರೆ ಅದಕ್ಕೆ ಈ ಮೇಲಿನ 7 ವಿಷಯಗಳಿಗೆ ಕಾರ್ಯಕ್ರಮ ಆಯೋಜಕರು ನೀಡಿದ  ಮಹತ್ವವೇ ಕಾರಣ ಎಂದೇ ಅನಿಸುತ್ತದೆ.

Monday, November 4, 2024

ವಕ್ಫ್: ಕಳೆದುಕೊಂಡ ಭೂಮಿಯನ್ನು ಮರಳಿ ಪಡೆಯುವುದೇ ಪರಿಹಾರವೇ?





1. ವಕ್ಫ್ ಕಾಯ್ದೆ
2. ಭೂ ಸುಧಾರಣಾ ಕಾಯ್ದೆ
3. ಭೂ ಒತ್ತುವರಿ ಕಾಯ್ದೆ
4. ಇನಾಮ್ ರದ್ದಿಯಾತಿ ಕಾಯ್ದೆ
ಸದ್ಯ ರಾಜ್ಯದಲ್ಲಿ ವಕ್ಫ್ ಸುದ್ದಿಯಲ್ಲಿದೆ. ತಿಂಗಳುಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಗಿ ನಿಧಾನಕ್ಕೆ ತಣ್ಣಗಾಗಿದ್ದ ಈ  ಸಂಗತಿಯು ಮತ್ತೆ ರಾಜ್ಯದಲ್ಲಿ ಹೊತ್ತಿಕೊಳ್ಳುವುದಕ್ಕೆ, ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸಲು ವಕ್ಫ್ ಸಚಿವಾಲಯ ನಿರ್ಧರಿಸಿರುವುದು ಒಂದು ಕಾರಣವಾದರೆ, ಈ ಇಡೀ ಪ್ರಕ್ರಿಯೆಯನ್ನೇ ತಿರುಚಿ ರಾಜಕೀಯ ಲಾಭ ಪಡಕೊಳ್ಳಲು ಬಿಜೆಪಿ  ಪ್ರಯತ್ನಿಸಿರುವುದು ಇದಕ್ಕೆ ಇನ್ನೊಂದು ಕಾರಣ.

‘ರಾಜ್ಯದಲ್ಲಿ 2 ಲಕ್ಷ  ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯಿದೆ’ ಎಂದು ಬಿಜೆಪಿ ಮುಖಂಡರಾಗಿದ್ದ ಅನ್ವರ್ ಮಾಣಿಪ್ಪಾಡಿ ಈ  ಹಿಂದೆ ಹೇಳಿದ್ದರು. ಈ ಕುರಿತಂತೆ ಅಧ್ಯಯನ ನಡೆಸಿ ಯಡಿಯೂರಪ್ಪ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು. ಈ ವರ ದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಸರಕಾರ ಹಿಂದೇಟು ಹಾಕಿದಾಗ ಪ್ರಕರಣವನ್ನು ಸುಪ್ರೀಮ್ ಕೋರ್ಟ್ ವರೆಗೂ  ಕೊಂಡೊಯ್ಯಲಾಗಿತ್ತು. ಮಾತ್ರವಲ್ಲ, ವರದಿಯನ್ನು ಸದನದಲ್ಲಿ ಮಂಡಿಸುವಂತೆ  ಸುಪ್ರೀಮ್ ಕೋರ್ಟೇ ಸರಕಾರಕ್ಕೆ ನಿರ್ದೇ ಶನ ನೀಡಿತ್ತು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಯಡಿಯೂರಪ್ಪ ಸರಕಾರವು ಸದನದಲ್ಲಿ ಮಂಡಿಸಿದಂತೆ  ನಟಿಸಿ ಕೋರ್ಟ್  ನಿಂದೆ ಕ್ರಮದಿಂದ ತಪ್ಪಿಸಿಕೊಂಡಿತ್ತು.

ಅನ್ವರ್ ಮಾಣಿಪ್ಪಾಡಿ ವರದಿಯ ಮುಖ್ಯ ಭಾಗ ಏನೆಂದರೆ, ಈ ಎರಡು ಲಕ್ಷ ಎಕ್ರೆ ಭೂಮಿಯಲ್ಲಿ ಬಹುಪಾಲನ್ನು  ರಾಜಕಾರಣಿಗಳು ಮತ್ತು ಇನ್ನಿತರರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನುವುದು. ಆ ಮೂಲಕ ಮುಸ್ಲಿಮ್ ಸಮುದಾಯದ  ಅಭಿವೃದ್ಧಿಗೆ ಬಳಕೆಯಾಗಬೇಕಾಗಿದ್ದ ಕೋಟ್ಯಂತರ ರೂಪಾಯಿ ಆದಾಯವು ನಷ್ಟವಾಗಿದೆ ಅನ್ನುವುದು. ಸದ್ಯ,

ರಾಜ್ಯ ವಕ್ಫ್ ಇಲಾಖೆಯ ಅಧೀನದಲ್ಲಿರುವುದು ಕೇವಲ 23 ಸಾವಿರ ಎಕ್ರೆ ಭೂಮಿ ಮಾತ್ರ. ಅಂದರೆ, ಅನ್ವರ್ ಮಾಣಿಪ್ಪಾಡಿ  ವರದಿಯ ಆಧಾರದಲ್ಲಿ ಹೇಳುವುದಾದರೆ, 10ರಲ್ಲಿ ಒಂದು ಭಾಗ ಮಾತ್ರ ವಕ್ಫ್ ಇಲಾಖೆಯ ಅಧೀನದಲ್ಲಿದೆ. ಹಾಗಿದ್ದರೆ,  ಉಳಿದ ಈ 9 ಭಾಗವನ್ನು ವಕ್ಫ್ ಇಲಾಖೆಯ ಅಧೀನಕ್ಕೆ ಒಳಪಡಿಸುವುದು ಹೇಗೆ ಎಂಬ ಪ್ರಶ್ನೆಯ ಜೊತೆಗೇ ಈಗ ವಕ್ಫ್ ನದ್ದೆಂದು  ಹೇಳಲಾಗುವ ಭೂಮಿಯ ದಾಖಲಾತಿ ಹೇಗಿದೆ, ಇದರ ಕಡತವೂ ಸರಿಯಾಗಿದೆಯೇ, ಅವುಗಳಲ್ಲೂ  ಒತ್ತುವಾರಿಯಾಗಿವೆಯೇ, ಬೇರೆಯವರು ಅದನ್ನು ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದರ  ಜೊತೆಗೇ,

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಕ್ಕೂ ಹೊರಟಿದೆ. ಅದು ಒಂದುವೇಳೆ ಪ್ರಸ್ತಾವಿತ ರೂ ಪದಲ್ಲಿ ಜಾರಿಗೊಂಡರೆ, ದಾಖಲೆ ಇಲ್ಲದ ವಕ್ಫ್ ಆಸ್ತಿಗಳು ಕೈಬಿಟ್ಟು ಹೋಗಲಿವೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಎಲ್ಲ  ವಕ್ಫ್ ಆಸ್ತಿಗಳಿಗೆ ದಾಖಲೆ ಪತ್ರ ಮಾಡಿಟ್ಟುಕೊಳ್ಳಬೇಕು ಎಂದು ವಕ್ಫ್ ಸಚಿವಾಲಯ ನಿರ್ಧರಿಸಿದೆ. ವಕ್ಫ್ ದಾಖಲೆಗಳನ್ನು  ಸರಿಮಾಡಿಸಿಟ್ಟುಕೊಳ್ಳಿ ಎಂದು ಸರಕಾರವೇ ಸೂಚಿಸಿರಲೂಬಹುದು. ಈ ಕಾರಣಗಳಿಂದ ವಕ್ಫ್ ಸಚಿವಾಲಯ  ಚುರುಕಾಯಿತು. ವಕ್ಫ್ ಆಸ್ತಿಗಳು ಒತ್ತುವರಿಯಾಗಿರುವುದಾಗಿ ಎಲ್ಲೆಲ್ಲಾ  ದೂರುಗಳು ಕೇಳಿ ಬಂದಿವೆಯೋ ಅಲ್ಲೆಲ್ಲಾ  ವಕ್ಫ್  ಅದಾಲತ್ ನಡೆಸಲು ವಕ್ಫ್ ಇಲಾಖೆ ಮುಂದಾಯಿತು. ಇದರ ಭಾಗವಾಗಿ ಬಿಜಾಪುರದಲ್ಲಿ ವಕ್ಫ್ ಅದಾಲತ್ ನಡೆಯಿತು.  1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಬಿಜಾಪುರದಲ್ಲಿ 14,201 ಎಕ್ರೆ, 32 ಗುಂಟೆ ವಕ್ಫ್ ಭೂಮಿಯಿದೆ. ಆದರೆ, ಈಗ  ಬಿಜಾಪುರಕ್ಕೆ ಸಂಬAಧಿಸಿ ವಕ್ಫ್ ಅಧೀನದಲ್ಲಿರುವುದು ಬರೇ 773 ಎಕ್ರೆ ಭೂಮಿ ಮಾತ್ರ. ಹಾಗಿದ್ದರೆ, ಉಳಿದ ಭೂಮಿ ಏ ನಾಯಿತು ಎಂಬ ಪ್ರಶ್ನೆ ಸಹಜ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಚುರುಕಾಗಿದೆ. ಪಹಣಿ ಪತ್ರದಲ್ಲಿರುವ ಸಂಖ್ಯೆ 9  ಮತ್ತು 11ನ್ನು ತಪಾಸಣೆಗೆ ಒಳಪಡಿಸಿದೆ. ಪಹಣಿ ಸಂಖ್ಯೆ 9ರಲ್ಲಿ ಮಾಲಿಕನ ಹೆಸರಿದ್ದು 11ರಲ್ಲಿ ವಕ್ಫ್ ಎಂದು ನಮೂ ದಿಸಲಾಗಿರುವ ಆಸ್ತಿಗಳ ಮಾಲಿಕರಿಗೆ ನೋಟೀಸು ಜಾರಿಗೊಳಿಸಿದೆ. ನಿಮ್ಮ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂ ದಿಸಲಾಗಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಆಸ್ತಿ ನಿಮ್ಮದೆಂದು ದೃಢೀಕರಿಸಿಕೊಳ್ಳಿ ಎಂಬುದು ಈ ನೋಟೀಸಿನ ಅರ್ಥ.  ಹಾಗಂತ, ಇಂಥ ನೋಟೀಸನ್ನು ಎಲ್ಲರಿಗೂ ಕಳುಹಿಸಲಾಗಿಲ್ಲ. ಯಾರ ಪಹಣಿ ಪತ್ರದಲ್ಲಿ ವಕ್ಫ್ ಎಂದು  ನಮೂದಾಗಿದೆಯೋ ಅವರಿಗೆ ಮಾತ್ರ ಕಳುಹಿಸಲಾಗಿದೆ.

ಇದರ ಹಿಂದೆ ಒಂದು ಕತೆಯಿದೆ.

ಭಾರತದಲ್ಲಿ ವಕ್ಫ್ ಕಾಯ್ದೆ ಸ್ವಾತಂತ್ರ‍್ಯ ಪೂರ್ವದಲ್ಲೇ  ಅಸ್ತಿತ್ವದಲ್ಲಿತ್ತು. 1923ರಲ್ಲಿ ಬ್ರಿಟಿಷರು ಅದನ್ನು ಮಾನ್ಯ ಮಾಡಿದ್ದರು.  ಸರಳವಾಗಿ ಹೇಳುವುದಾದರೆ, ವಕ್ಫ್ನ ಅರ್ಥ ದೇವನಿಗೆ ಅರ್ಪಿಸುವುದು ಎಂದಾಗಿದೆ. ಇದು ಮುಸ್ಲಿಮ್ ಸಮುದಾಯದಲ್ಲಿ  ಅನೂಚಾನೂಚವಾಗಿ ನಡೆದುಕೊಂಡು ಬಂದ ಒಂದು ಧಾರ್ಮಿಕ ಪ್ರಕ್ರಿಯೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೇ   ಭೂಮಿಯನ್ನು ವಕ್ಫ್ ಮಾಡುವ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಮುಸ್ಲಿಮ್ ಸಮುದಾಯದ ಶ್ರೀಮಂತರು ಮಾತ್ರವಲ್ಲ,  ಸಾಮಾನ್ಯ ಜನರೂ ತಮ್ಮಲ್ಲಿನ ಸ್ಥಿರ ಮತ್ತು ಚರ ಆಸ್ತಿಯನ್ನು ವಕ್ಫ್ ಮಾಡುತ್ತಲೇ ಬಂದಿದ್ದಾರೆ. ಹೀಗೆ ವಕ್ಫ್ ಮಾಡಿದ  ಭೂಮಿಯಲ್ಲಿ ಮಸೀದಿ ನಿರ್ಮಾಣ, ಮದ್ರಸ ನಿರ್ಮಾಣ, ಅನಾಥಾಲಯ ನಿರ್ಮಾಣಗಳನ್ನು ಮಾಡಲಾಗುತ್ತದೆ. ಕಬರಸ್ತಾ ನಕ್ಕೆ ಬಳಕೆ ಮಾಡಲಾಗುತ್ತದೆ. ಮಸೀದಿ, ಮದ್ರಸಗಳಿಗೆ ಆದಾಯ ಮೂಲವಾಗಿ ವಾಣಿಜ್ಯ ಕಟ್ಟಡಗಳನ್ನು ಕಟ್ಟುವುದಕ್ಕೆ, ಕೃಷಿ  ಕಾರ್ಯಗಳಿಗೆ ಬಳಸುವುದಕ್ಕೂ ಉಪಯೋಗಿಸಲಾಗುತ್ತದೆ. ಅಂದಹಾಗೆ,
ಮಸೀದಿ ಮತ್ತು ಮದ್ರಸಾಗಳಲ್ಲಿ ಮೌಲ್ವಿಗಳಿರುತ್ತಾರೆ, ಸಹಾಯಕರಿರುತ್ತಾರೆ, ಶಿಕ್ಷಕರಿರುತ್ತಾರೆ, ಸಿಬಂದಿಗಳಿರುತ್ತಾರೆ. ಅವರಿಗೆ  ವೇತನ ನೀಡಬೇಕಾಗುತ್ತದೆ. ಹಾಗೆಯೇ, ಮಸೀದಿಗೆ ಬೇಕಾದ ಉಪಕರಣಗಳು, ವಿದ್ಯುತ್ ಬಿಲ್‌ಗಳು ಸಹಿತ ಇನ್ನಿತರ ಅ ನೇಕ ಖರ್ಚು ವೆಚ್ಚಗಳಿರುತ್ತವೆ. ಅವುಗಳಿಗೂ ಹಣ ಬೇಕಾಗುತ್ತದೆ. ಈ ಎಲ್ಲಕ್ಕೂ ಆದಾಯವಾಗಿ ವಕ್ಫ್ ಭೂಮಿಯನ್ನು  ಬಳಸುವ ಕ್ರಮ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಹೀಗೆ ತಮ್ಮಲ್ಲಿರುವ ಭೂಮಿಯನ್ನು ವಕ್ಫ್ ಮಾಡುವುದು ಬಹಳ  ಪುಣ್ಯದಾಯಕ ಎಂದು ಇಸ್ಲಾಮ್ ಕಲಿಸುತ್ತದೆ. ಹೀಗೆ ವಕ್ಫ್ ಮಾಡುವ ವ್ಯಕ್ತಿಗೆ ಜೀವಂತ ಇರುವಾಗಲೂ ಮತ್ತು ಮೃತಪಟ್ಟ  ಬಳಿಕವೂ ಪುಣ್ಯಗಳು ಸದಾ ಲಭಿಸುತ್ತಿರುತ್ತವೆ ಎಂದೂ ಇಸ್ಲಾಮ್ ಹೇಳುತ್ತದೆ. ಮುಸ್ಲಿಮರು ಮರಣಾನಂತರದ ಜೀವನಕ್ಕೆ  ಅಪಾರ ಪ್ರಾಶಸ್ತ್ಯ ನೀಡುತ್ತಾರಾದ್ದರಿಂದ ಸ್ಥಿತಿವಂತರಲ್ಲದವರೂ ವಕ್ಫ್ ಮಾಡುವ ವಿಷಯದಲ್ಲಿ ಸಾಕಷ್ಟು  ಉದಾರಿಗಳಾಗಿರುತ್ತಾರೆ. ತಮ್ಮಲ್ಲಿನ ಸಣ್ಣದೊಂದು ಅಂಶವನ್ನಾದರೂ ವಕ್ಫ್ ಮಾಡುವುದನ್ನು ಬಹಳವೇ ಇಷ್ಟಪಡುತ್ತಾರೆ. ಈ  ಕಾರಣದಿಂದಲೇ,

ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಪಾರ ಪ್ರಮಾಣದ ವಕ್ಫ್ ಭೂಮಿ ಇದೆ. ಈ ವಕ್ಫ್ ಭೂಮಿಯಲ್ಲಿ ಸರಕಾರದ್ದು ಒಂದಿಂಚು ಭೂಮಿಯೂ ಇಲ್ಲ. ಸರಕಾರ ಕಬರಸ್ತಾನಗಳಿಗೆ ಭೂಮಿ ನೀಡಿದ್ದಿದೆ. ಅದು ಮುಸ್ಲಿಮರಿಗೆ ಮಾತ್ರ ಅಲ್ಲ,  ಹಿಂದೂಗಳಿಗೂ ಕ್ರೈಸ್ತರಿಗೂ ನೀಡಿದೆ. ಸಮಸ್ಯೆ ಏನೆಂದರೆ,
ಮುಸ್ಲಿಮ್ ಸಮುದಾಯದ ವ್ಯಕ್ತಿಗಳು ತಮ್ಮಲ್ಲಿನ ಭೂಮಿಯನ್ನು ಹೀಗೆ ವಕ್ಫ್ ಮಾಡುತ್ತಾ ಹೋದರಾದರೂ ಅದರ  ನೋಂದಣಿ ವಿಷಯದಲ್ಲಿ ಗಾಢ ನಿರ್ಲಕ್ಷ್ಯ  ತೋರಿದರು. ಇನ್ನು, ನೋಂದಣಿಯಾಗಿ ಪಹಣಿ ಪತ್ರವಾದ ಭೂಮಿಯನ್ನು  ಸುರಕ್ಷಿತವಾಗಿರಿಸಿಕೊಳ್ಳುವಲ್ಲೂ ವಕ್ಫ್ ಇಲಾಖೆ ವಿಫಲವಾಯಿತು. ಒಂದುಕಡೆ, ತನ್ನ ಭೂಮಿಯನ್ನು ದೇವನಿಗೆ ಅರ್ಪಿಸಿದ್ದೇನೆ  ಎಂದು ಘೋಷಿಸುವಲ್ಲಿಗೆ ತನ್ನ ಜವಾಬ್ದಾರಿ ಮುಗಿಯಿತೆಂದು ವ್ಯಕ್ತಿ ಅಂದುಕೊಳ್ಳುವುದು ನಡೆದರೆ, ಇಂಥ ಭೂಮಿಯನ್ನು  ರಕ್ಷಿಸಿ ಸಮುದಾಯಕ್ಕೆ ನೆರವಾಗಬೇಕಾಗಿದ್ದ ವಕ್ಫ್ ಇಲಾಖೆಯ ವ್ಯಕ್ತಿಗಳೇ ಅವುಗಳನ್ನು ಮಾರಾಟ ಮಾಡುವುದೂ  ನಡೆಯಿತು. ವಕ್ಫ್ ಕಾಯ್ದೆಯನ್ವಯ ನೋಂದಾಯಿತವಾಗದ ಭೂಮಿ ಬಿಡಿ, ನೋಂದಾಯಿತವಾಗಿರುವ ಸಾವಿರಾರು ಎಕ್ರೆ  ಭೂಮಿಯೂ ಹೀಗೆ ಯಾರ‍್ಯಾರದ್ದೋ  ಪಾಲಾಯಿತು. ಇದು ಸಮಸ್ಯೆ ಒಂದು ಮುಖವಾದರೆ ಇನ್ನೊಂದು, ಸಂದರ್ಭಾ ನುಸಾರ ಸರಕಾರವೇ ತಂದಿರುವ ಕಾನೂನುಗಳು. ಅದರಲ್ಲಿ ಭೂಸುಧಾರಣಾ ಕಾಯ್ದೆಯೂ ಒಂದು.

1961ರಲ್ಲಿ ಈ ಭೂಸುಧಾರಣಾ ಕಾಯ್ದೆಯನ್ನು ರೂಪಿಸಲಾಯಿತಲ್ಲದೇ, 1965ರಲ್ಲಿ ಜಾರಿಗೊಳಿಸಲಾಯಿತು. 1974 ಮತ್ತು  2020ರಲ್ಲಿ ಈ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಯಿತು. 1964ರಲ್ಲಿ ಭೂ ಒತ್ತುವರಿ ಕಾಯ್ದೆಯನ್ನು ಜಾರಿಗೆ ತರಲಾಯಿತು  ಮತ್ತು 1991ರಲ್ಲಿ ಇದಕ್ಕೆ ತಿದ್ದುಪಡಿಗಳನ್ನು ತಂದು ಮರುಜಾರಿಗೊಳಿಸಲಾಯಿತು. ಇನ್ನೊಂದು, ಇನಾಮ್ ರದ್ದಿಯಾತಿ  ಕಾಯ್ದೆ. 1954ರಲ್ಲಿ ಜಾರಿಗೊಂಡ ಈ ಕಾಯ್ದೆಗೆ 2021ರಲ್ಲಿ ತಿದ್ದುಪಡಿಯನ್ನು ಮಾಡಲಾಯಿತು. ಭೂಸುಧಾರಣಾ  ಕಾಯ್ದೆಯ ಮುಖ್ಯ ಉದ್ದೇಶ ಏನಾಗಿತ್ತೆಂದರೆ,

ಕೃಷಿ ಜಮೀನಿನಲ್ಲಿ ಉಳುಮೆ ಮಾಡಿದ ರೈತನಿಗೆ ಅದರ ಮಾಲಕತ್ವವನ್ನು ನೀಡುವುದು. ಭೂ ಒತ್ತುವರಿ ಕಾಯ್ದೆಯ ಉದ್ದೇಶವೂ ಇದಕ್ಕಿಂತ ಭಿನ್ನವಲ್ಲ. ಭೂಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಾ ಬಂದಿರುವ ರೈತರಿಗೆ ಆ ಒತ್ತುವರಿಯನ್ನು  ಸಕ್ರಮಗೊಳಿಸಿ ಅದರ ಒಡೆತನವನ್ನು ಅವರಿಗೆ ಒಪ್ಪಿಸುವುದು. ಇನಾಮ್ ರದ್ದಿಯಾತಿ ಕಾಯ್ದೆಯೂ ಹೆಚ್ಚು ಕಮ್ಮಿ ಇವೇ  ಉದ್ದೇಶವನ್ನೇ ಹೊಂದಿದೆ. ಇನಾಮ್ ಅಥವಾ ಉಡುಗೊರೆಯಾಗಿ ಸಿಕ್ಕ ಭೂಮಿಗಿದ್ದ ರಕ್ಷಣೆಯನ್ನು ರದ್ದು ಮಾಡುವುದು  ಇದರ ಉದ್ದೇಶ. ಹೀಗೆ ಈ ಕಾಯ್ದೆಗಳಿಂದಾಗಿ ಸಾವಿರಾರು ಎಕ್ರೆ ಭೂಮಿ ವಕ್ಫ್ ಇಲಾಖೆಯ ಕೈತಪ್ಪಿ ಹೋಗಿದೆ. ಕೇವಲ  ಭೂಸುಧಾರಣಾ ಕಾಯ್ದೆಯ ಅನ್ವಯ ರಾಜ್ಯ ಸರಕಾರ 1183 ಎಕ್ರೆ ವಕ್ಫ್ ಭೂಮಿಯನ್ನು ಇತರರಿಗೆ ನೀಡಿರುವುದು ಅ ಧಿಕೃತವಾಗಿ ದಾಖಲಾಗಿದೆ. ಹೀಗೆ ಭೂಮಿ ಪಡಕೊಂಡವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇದ್ದಾರೆ. ಇನಾಮ್  ರದ್ದಿಯಾತಿ ಕಾಯ್ದೆಯ ಮೂಲಕ 1459 ಎಕ್ರೆಗಿಂತಲೂ ಅಧಿಕ ವಕ್ಫ್ ಭೂಮಿಯನ್ನು ಸರಕಾರ ಇತರರಿಗೆ ಹಂಚಿಕೆ  ಮಾಡಿದೆ. ಭೂಒತ್ತುವರಿ ಕಾಯ್ದೆಯನ್ನು ತಂದು 133 ಎಕ್ರೆ ವಕ್ಫ್ ಭೂಮಿಯನ್ನು ಸರಕಾರ ಹಂಚಿಕೆ ಮಾಡಿದೆ. ಇದು  ಕೇವಲ ನಮ್ಮ ರಾಜ್ಯದ ಲೆಕ್ಕಾಚಾರ ಮಾತ್ರ. ಆದರೆ, ಇಂಥ ಕಾಯ್ದೆಗಳು ದೇಶದಾದ್ಯಂತ ಜಾರಿಯಾಗಿವೆ. ಹಾಗಿದ್ದರೆ ಎಷ್ಟು  ದೊಡ್ಡಮಟ್ಟದಲ್ಲಿ ವಕ್ಫ್ ಆಸ್ತಿ ಪರರ ಪಾಲಾಗಿರಬಹುದು ಎಂಬುದನ್ನೊಮ್ಮೆ ಊಹಿಸಿ. ಆದರೆ,

ಇಲ್ಲಿಗೇ ಎಲ್ಲವೂ ಮುಗಿಯಲಿಲ್ಲ.

ವಕ್ಫ್ ಆಸ್ತಿಗೆ ಸಂಬಂಧಿಸಿ 1998ರಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶ ವಿ.ಎನ್. ಖರೆ ಅವರು ಐತಿಹಾಸಿಕ ತೀರ್ಪು  ನೀಡಿದರು. ಒಮ್ಮೆ ವಕ್ಫ್ ಎಂದು ನೋಂದಾಯಿತಗೊಂಡ  ಆಸ್ತಿ ಎಂದೆಂದೂ  ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂದು ಆ  ತೀರ್ಪಿನಲ್ಲಿ ಹೇಳಲಾಗಿದೆ. Once a Waqf is always a  Waqf  ಎಂಬ ಖರೆ ಅವರ ತೀರ್ಪಿನ ವಾಕ್ಯವು ಆ  ಬಳಿಕ ಜನಜನಿತವಾಗುವಷ್ಟು ಪ್ರಸಿದ್ಧವೂ ಆಯಿತು. ಆಂಧ್ರಪ್ರದೇಶದ ವಕ್ಫ್ ಬೋರ್ಡ್ ಮತ್ತು ಸೈಯದ್ ಅಲಿ ಮತ್ತಿತರರ  ಪ್ರಕರಣದ ವಿಚಾರಣೆಯ ಬಳಿಕ ಸುಪ್ರೀಮ್ ಕೋರ್ಟು ಈ ತೀರ್ಪು ನೀಡಿತ್ತು. ಇನಾಮ್ ರದ್ದಿಯಾತಿ ಕಾಯ್ದೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಈ ತೀರ್ಪಿಗೆ ಬಹಳ ಮಹತ್ವವಿದೆ. ವಕ್ಫ್ ಭೂಮಿಯಲ್ಲಿ  ಯಾವುದೇ ಕಾಯ್ದೆಯ ಮೂಲಕ ಪರಭಾರೆ ಮಾಡುವುದಕ್ಕೆ ಯಾವುದೇ ಸರಕಾರಕ್ಕೂ ಅಧಿಕಾರ ಇಲ್ಲ ಎಂದು ಈ ತೀರ್ಪು  ಹೇಳುತ್ತದೆ. ವಕ್ಫ್ ನ  ಆಸ್ತಿಯು ಸದಾ ವಕ್ಫ್ ಆಸ್ತಿಯಾಗಿಯೇ ಇರುತ್ತದೆ ಎಂಬುದು ಭೂಸುಧಾರಣೆ ಕಾಯ್ದೆ, ಇನಾಮ್ ರದ್ದಿಯಾತಿ ಕಾಯ್ದೆ, ಭೂ ಒತ್ತುವರಿ ಕಾಯ್ದೆಗಳ ಮೂಲಕ ಸರಕಾರ ನೀಡಿರುವ ವಕ್ಫ್ನ ಎಲ್ಲ ಆಸ್ತಿಗಳೂ ವಕ್ಫ್ ನದ್ದೇ  ಆಗಿ  ಉಳಿಯಲಿದೆ ಎಂಬುದನ್ನೇ ಹೇಳುತ್ತದೆ. ಆ ಕಾರಣದಿಂದಲೂ ಪಹಣಿ ಪತ್ರ ಸಂಖ್ಯೆ 11ರಲ್ಲಿ ವಕ್ಫ್ ಆಸ್ತಿ ಎಂದು  ಉಳಿದುಕೊಂಡಿರುವುದಕ್ಕೆ ಅವಕಾಶ ಇದೆ. ಈಗಿನ ಪ್ರಶ್ನೆ ಏನೆಂದರೆ,

ಹಲವು ದಶಕಗಳಿಂದ ಇಂಥ ಭೂಮಿಯಲ್ಲಿ ಅಸಂಖ್ಯ ಮಂದಿ ವಾಸಿಸುತ್ತಿದ್ದಾರೆ. ಅದರಲ್ಲಿ ಅವರು ಮನೆ  ಕಟ್ಟಿಕೊಂಡಿರಬಹುದು, ಕೃಷಿ ಕಾರ್ಯ ಮಾಡುತ್ತಿರಬಹುದು, ಉದ್ಯಮಗಳನ್ನು ಸ್ಥಾಪಿಸಿರಬಹುದು, ಮಂದಿರವನ್ನೇ  ಕಟ್ಟಿಕೊಂಡಿರಲೂ ಬಹುದು. Once a Waqf is  always a Waqf  ಎಂಬ ಸುಪ್ರೀಮ್ ಕೋರ್ಟಿನ ತೀರ್ಪನ್ನು  ತೋರಿಸಿ ಇವರೆಲ್ಲರನ್ನೂ ಈಗ ಒಕ್ಕಲೆಬ್ಬಿಸಬೇಕಾ? ಅವರಿಂದ ಭೂಮಿಯನ್ನು ವಕ್ಫ್ ಇಲಾಖೆ ವಶಪಡಿಸಿಕೊಳ್ಳಬೇಕಾ?  ಇವರಿಗೆ ಅಥವಾ ಇವರ ಹಿರಿಯರಿಗೆ ಒಂದೋ ಈ ಭೂಮಿಯನ್ನು ಸರಕಾರ ಕೊಟ್ಟಿರಬಹುದು ಅಥವಾ ವಕ್ಫ್  ಇಲಾಖೆಯನ್ನು ದುರುಪಯೋಗಪಡಿಸಿ ಅಲ್ಲಿನ ಅಧಿಕಾರಿಗಳೇ ಮಾರಿರಬಹುದು. ಇವು ಏನಿದ್ದರೂ ಇವು ಇವರಿಗೆ  ಸಂಬಂಧಿಸಿದ್ದಲ್ಲ. ಸರಕಾರ ಮತ್ತು ಮುಸ್ಲಿಮ್ ವ್ಯಕ್ತಿಗಳು ಮಾಡಿರುವ ತಪ್ಪಿಗೆ ಇವರನ್ನು ಹೊಣೆ ಮಾಡುವುದೇ ಸರಿಯೇ?  ಒಂದುವೇಳೆ, ಹೀಗೆ ವಕ್ಫ್ ಭೂಮಿಯ ಮರುವಶ ಅಭಿಯಾನ ನಡೆಸುವುದಾದರೆ ಅದು ಒಟ್ಟು ಸಮಾಜದ ಮೇಲೆ ಬೀರುವ  ಪರಿಣಾಮ ಏನು? ಹೀಗೆ ಮಾಡುವುದು ಪ್ರಾಯೋಗಿಕವೇ? ಆಂತರಿಕ ಸಂಘರ್ಷವೊAದಕ್ಕೆ ಮತ್ತು ಈಗಾಗಲೇ ಇರುವ  ಮುಸ್ಲಿಮ್ ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಇದು ಕೋಮುವಾದಿಗಳಿಗೆ ಸುಲಭ ಅವಕಾಶ ಆಗಲಾರದೇ?  ಇದರ ಬದಲು ಈಗ ಇರುವ ವಕ್ಫ್ ಆಸ್ತಿಯನ್ನಾದರೂ ಸುರಕ್ಷಿತವಾಗಿ ಉಳಿಸಿಕೊಳ್ಳುವುದಕ್ಕೆ ಮತ್ತು ಸಮುದಾಯಕ್ಕೆ  ಪ್ರಯೋಜನವಾಗುವ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಕಾರ್ಯಯೋಜನೆ ರೂಪಿಸುವುದು ಉತ್ತಮವೇ?

ವಕ್ಫ್ ಇಲಾಖೆಯ ಮುಖ್ಯಸ್ಥರು, ಸಮುದಾಯದ ನಾಯಕರು, ಉಲೆಮಾಗಳು, ಸಂಘಟನೆಗಳು ಜೊತೆ ಸೇರಿ ಈ ಬಗ್ಗೆ  ನಿರ್ಧಾರ ಕೈಗೊಳ್ಳಬೇಕಿದೆ.

Thursday, October 17, 2024

ಗೆಳೆಯನ ನೆಮ್ಮದಿಯನ್ನೇ ಕೆಡಿಸಿಬಿಟ್ಟ ಒಂದು ವಾಟ್ಸಾಪ್ ವೀಡಿಯೋ ಕಾಲ್





ಏ.ಕೆ. ಕುಕ್ಕಿಲ
ಹತ್ತಿರದ ಗೆಳೆಯರೊಬ್ಬರು ಹಂಚಿಕೊಂಡ  ಘಟನೆ ಇದು

ರಾತ್ರಿ ಸುಮಾರು 10 ಗಂಟೆ. ಮೊಬೈಲ್ ರಿಂಗಾಗುತ್ತದೆ. ಅವರಿನ್ನೂ ಮನೆಗೆ ತಲುಪಿರಲಿಲ್ಲ. ವೃತ್ತಿಯಲ್ಲಿ ಫೋಟೋಗ್ರಾಫರ್.  ಕಂಪ್ಯೂಟರ್ ತಂತ್ರಜ್ಞಾನದಲ್ಲೂ ಪರಿಣತರು. ಬೈಕ್ ನಿಲ್ಲಿಸಿ ಜೇಬಿನಿಂದ ಮೊಬೈಲ್ ಎತ್ತುತ್ತಾರೆ. ಅದು ವಾಟ್ಸಾಪ್  ವೀಡಿಯೋ ಕಾಲ್. ಕರೆ ಸ್ವೀಕರಿಸಬೇಕೋ ಬೇಡವೋ ಎಂಬ ಅನುಮಾನ ಅವರನ್ನು ಕಾಡುತ್ತದೆ. ಯಾಕೆಂದರೆ, ಅಪರಿಚಿತ  ವ್ಯಕ್ತಿಯ ಕರೆ. ಅವರು ಕರೆಯನ್ನು ನಿರ್ಲಕ್ಷಿಸುವ ನಿರ್ಧಾರ ಮಾಡುತ್ತಾರೆ ಮತ್ತು ಕರೆಯನ್ನು ತುಂಡರಿಸುತ್ತಾರೆ. ಆದರೆ,  ಮರಳಿ ಅದೇ ಸಂಖ್ಯೆಯಿಂದ  ವೀಡಿಯೋ ಕಾಲ್ ಬರುತ್ತದೆ. ಅವರು ತುಸು ಗೊಂದಲಕ್ಕೆ ಒಳಗಾಗುತ್ತಾರೆ. ಅಪರಿಚಿತ  ಅಂದ ಮಾತ್ರಕ್ಕೇ ಕರೆಯನ್ನು ತಿರಸ್ಕರಿಸುವುದು ಸರಿಯೇ ಎಂಬ ಪ್ರಶ್ನೆಯೊಂದು ಅವರೊಳಗೆ ಮೂಡುತ್ತದೆ. ಈ  ಹಿಂದೆಯೂ ಅಪರಿಚಿತ ಕರೆಯನ್ನು ಸ್ವೀಕರಿಸಿದ್ದಿದೆ. ವೃತ್ತಿಗೆ ಸಂಬಂಧಿಸಿ ಅಪರಿಚಿತ ಕರೆ ಸಹಜವೂ ಹೌದು. ಮದುವೆ,  ಸಾರ್ವಜನಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ವೃತ್ತಿ ತನ್ನದಾಗಿರುವುದರಿಂದ ಕರೆ  ಮಾಡಿದವರು ತನ್ನ ಗ್ರಾಹಕರೂ ಆಗಿರಬಹುದು ಎಂದು ಆಲೋಚಿಸುತ್ತಾರೆ. ಫೋಟೋಗ್ರಾಫ್‌ಗಾಗಿ ಆಹ್ವಾನಿಸಲು ಕರೆ  ಮಾಡಿರಬಾರದೇಕೆ ಎಂದೂ ಅಂದುಕೊಳ್ಳುತ್ತಾರೆ. ಅಲ್ಲದೇ, 

ತಾನು ಫೇಸ್‌ಬುಕ್‌ನಲ್ಲೂ ಇರುವುದರಿಂದ ಮತ್ತು ಅಲ್ಲಿ ತನ್ನ  ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿರುವುದರಿಂದ ಈ ಕರೆಯನ್ನು ಅನುಮಾನಿಸಬೇಕಿಲ್ಲ ಎಂಬ ನಿರ್ಧಾರಕ್ಕೂ  ಬರುತ್ತಾರೆ ಮತ್ತು ಕರೆ ಸ್ವೀಕರಿಸುತ್ತಾರೆ. ಹಲೋ ಹಲೋ ಅನ್ನುತ್ತಾರೆ. ಆ ಕಡೆಯಿಂದಲೂ ಹಲೋ ಹಲೋ ಅನ್ನುವ  ಪ್ರತಿಕ್ರಿಯೆಯೇ ಬರುತ್ತದೆ. ಮೊಬೈಲ್ ಸ್ಕ್ರೀನ್‌ನಲ್ಲಿ ಆ ಅಪರಿಚಿತ ವ್ಯಕ್ತಿಯ ಮುಖ ಕಾಣುತ್ತದೋ ಎಂದು ನೋಡುತ್ತಾರೆ.  ಇಲ್ಲ. ವಂಚಕರು ಇರಬಹುದೋ ಎಂದು ಶಂಕಿಸುತ್ತಾರೆ ಮತ್ತು ಕರೆಯನ್ನು ತುಂಡರಿಸುತ್ತಾರೆ. ಇನ್ನೇನು ಮೊಬೈಲನ್ನು  ಜೇಬಿಗೆ ಹಾಕಿ ಘಟನೆಯನ್ನು ಮರೆಯಬೇಕು ಅಂದುಕೊಳ್ಳುವಷ್ಟರಲ್ಲೇ  ಮತ್ತೆ ರಿಂಗುಣಿಸುತ್ತದೆ. ಮತ್ತೆ ಮೊಬೈಲ್  ಎತ್ತಿಕೊಳ್ಳುತ್ತಾರೆ. ನೋಡಿದರೆ,

ವಾಟ್ಸಾಪ್ ಕಾಲ್. ವೀಡಿಯೋ ಕಾಲ್ ಅಲ್ಲ. ಅವರು ಕರೆ ಸ್ವೀಕರಿಸುತ್ತಾರೆ. ಹಲೋ ಅನ್ನುತ್ತಾರೆ. ಅತ್ತ ಕಡೆಯಿಂದ ಗಂಡಸಿನ  ಧ್ವನಿ-

‘ನಿನ್ನ ವಾಟ್ಸಾಪ್‌ಗೆ ವೀಡಿಯೋ ಕಳಿಸಿದ್ದೇನೆ, ನೋಡು..’ ಎಂದು ಹೇಳಿ ಆ ವ್ಯಕ್ತಿ ಕರೆ ಸ್ಥಗಿತಗೊಳಿಸುತ್ತಾನೆ. ಆ ಧ್ವನಿಯಲ್ಲಿ  ನಾಜೂಕುತನ ಇಲ್ಲದಿರುವುದನ್ನು ಮತ್ತು ಆಜ್ಞೆ ರೂಪದ ಗಡಸುತನ ಇರುವುದನ್ನು ಗೆಳೆಯ ಗುರುತಿಸುತ್ತಾರೆ. ಏನೋ  ಹೇಗೆಯೋ ಎಂಬ ಕುತೂಹಲ ಮಿಶ್ರಿತ ಭಯ ಅವರನ್ನು ಆವರಿಸುತ್ತದೆ. ವಾಟ್ಸಾಪ್ ತೆರೆಯಬೇಕೋ ಬೇಡವೋ ಎಂಬ  ದಿಗಿಲೂ ಉಂಟಾಗುತ್ತದೆ. ಧೈರ್ಯ ಮಾಡಿ ವಾಟ್ಸಾಪ್ ತೆರೆಯುತ್ತಾರೆ ಮತ್ತು ಆ ವೀಡಿಯೋ ನೋಡುತ್ತಾರೆ. ಅಷ್ಟೇ.  ಅವರ ಕೈ ಅದುರತೊಡಗುತ್ತದೆ. ಎದೆ ಢವಢವ ಹೊಡೆದುಕೊಳ್ಳತೊಡಗುತ್ತದೆ. ನಿಂತ ನೆಲವೇ ಕುಸಿದ ಅನುಭವ. ತಾನೆ ಲ್ಲಿದ್ದೇನೆ ಎಂಬುದೇ ಮರೆತು ಹೋಗುತ್ತದೆ. ಅವರು ಅಕ್ಕ-ಪಕ್ಕ ನೋಡುತ್ತಾರೆ. ವಿರಳ ಜನಸಂದಣಿ. ಅವರು ಮತ್ತೊಮ್ಮೆ ಆ  ವೀಡಿಯೋ ನೋಡುತ್ತಾರೆ. ಮೈಯಿಡೀ ಕಂಪಿಸುತ್ತದೆ. ಹೌದು,
‘ಆ ವೀಡಿಯೋದಲ್ಲಿರುವ ವ್ಯಕ್ತಿ ನಾನೇ. ನನ್ನದೇ ಮುಖ. ನಗ್ನ ಹೆಣ್ಣಿನ ಜೊತೆ ತಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ವೀಡಿಯೋ.’ ಎಡಿಟಿಂಗ್ ಎಷ್ಟು ಚೆನ್ನಾಗಿ ಮಾಡಿದ್ದಾ ರೆಂದರೆ, ತಕ್ಷಣಕ್ಕೆ ಯಾರೂ ಅದನ್ನು ನಕಲಿ ಎಂದೇ  ಒಪ್ಪ ಲಾರರು. ತನ್ನದೇ ಮುಖ. ದೇಹವೂ ತನ್ನಂತೆಯೇ ಇದೆ. ಬಹುಶಃ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ತನ್ನ  ಫೋಟೋವನ್ನೋ ವೀಡಿಯೋವನ್ನೋ ಅವರು ದುರ್ಬಳಕೆ ಮಾಡಿಕೊಂಡಿರ ಬಹುದು ಎಂದು ಅವರಿಗೆ ಅನಿಸಿತು. ಏನು ಮಾಡೋದು? ತನಗೆ ಈ ವೀಡಿಯೋವನ್ನು ಕಳಿಸಿದವರ ಉದ್ದೇಶವೇನು? ಹಣಕ್ಕಾಗಿ ಒತ್ತಾಯಿಸುತ್ತಾರಾ? ಕೊಡದಿದ್ದರೆ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳಬಹುದಾ? ಹಾಗೇನೂ ಆದರೆ ತಾನು ಈವರೆಗೂ ಕಾಪಾಡಿಕೊಂಡು  ಬಂದ ಘನತೆ, ಗೌರವದ ಸ್ಥಿತಿ ಏನಾದೀತು.. ಎಂದೆಲ್ಲಾ ಆಲೋಚಿಸುತ್ತಿರುವಾಗಲೇ ಮತ್ತೆ ಮೊಬೈಲ್ ರಿಂಗುಣಿಸುತ್ತದೆ. ಈಗ  ಅವರ ಕೈ ಅಕ್ಷರಶಃ ನಡುಗುತ್ತಿತ್ತು. ಕರೆ ಸ್ವೀಕರಿಸಿದ ಕೂಡಲೇ ಅತ್ತ ಕಡೆಯಿಂದ ಅದೇ ಗಡಸು ಧ್ವನಿ. ಇವರಿಗೆ ಧ್ವನಿಯೇ  ಬರುವುದಿಲ್ಲ.

‘ವೀಡಿಯೋ ನೋಡಿದಿರಾ? ನಿಮ್ಮ ಗೆಳೆಯರಿಗೆ ಈ ವೀಡಿಯೋವನ್ನು ಕಳುಹಿಸಿಕೊಡಬಾರದು ಎಂದಾದರೆ ತಕ್ಷಣಕ್ಕೆ 25  ಸಾವಿರ ರೂಪಾಯಿಯನ್ನು ನೀಡಬೇಕು. ಅಕೌಂಟ್ ನಂಬರ್ ನಿನ್ನ ವಾಟ್ಸಾಪ್‌ಗೆ ಕಳುಹಿಸಿಕೊಟ್ಟಿದ್ದೇನೆ. ನಿನ್ನ ಹತ್ತಿರದ  ಗೆಳೆಯರ ಪಟ್ಟಿಯನ್ನು ನಾನು ಫೇಸ್‌ಬುಕ್‌ನಿಂದ ಸಂಗ್ರಹಿಸಿದ್ದೇನೆ. ಕ್ಲೋಸ್ ಫ್ರೆಂಡ್ಸ್ ಎಂದು ನೀವು ಮಾಡಿರುವ ಗ್ರೂಪ್ ನಿಂದ ನಿನ್ನ ಗೆಳೆಯರು ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದೇನೆ. ತಕ್ಷಣಕ್ಕೆ ನಾನು ಹೇಳಿದಷ್ಟು ಹಣ ಹಾಕು.  ನಿರಾಕರಿಸಿದರೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತೇನೆ. ನಿನ್ನ ಮನೆ ನರಕವಾಗಬಾರದೆಂದಾದರೆ ನಾನು  ಹೇಳಿದಂತೆ ಮಾಡು..’ ಎಂದು ಆದೇಶದ ಧ್ವನಿಯಲ್ಲಿ ಆ ವ್ಯಕ್ತಿ ಹೇಳುತ್ತಾನೆ.

ಗೆಳೆಯರಿಗೆ ಮಾತೇ ಹೊರಡುವುದಿಲ್ಲ. ಹಣ ಕಳುಹಿಸುತ್ತೇನೆ ಅಥವಾ ಕಳುಹಿಸುವುದಿಲ್ಲ ಎಂದೂ ಹೇಳಲಾಗದಷ್ಟು  ಆಘಾತಕ್ಕೆ ಒಳಗಾಗುತ್ತಾರೆ. ಅಷ್ಟು ಹಣವನ್ನು ಸಂಗ್ರಹಿಸುವುದು ಹೇಗೆ ಎಂಬುದು ಒಂದು ಪ್ರಶ್ನೆಯಾದರೆ ಅವರು  ಹೇಳಿದಷ್ಟು ಹಣ ಕೊಟ್ಟರೂ ಪುನಃ ಕೇಳಲಾರನೆಂದು ನಂಬುವುದು ಹೇಗೆ ಎಂಬುದು ಇನ್ನೊಂದು ಪ್ರಶ್ನೆ. ತನ್ನ ಪತ್ನಿ ಮತ್ತು  ಮಕ್ಕಳಿಗೆ ಈ ವೀಡಿಯೋ ಸಿಕ್ಕರೆ ಏನಾಗಬಹುದು? ಹೆತ್ತವರು ತನ್ನನ್ನು ಏನಂದುಕೊಂಡಾರು? ಗೆಳೆಯರು ಮತ್ತು  ಕುಟುಂಬ ತನ್ನನ್ನು ಹೇಗೆ ನಡೆಸಿಕೊಂಡೀತು? ತನ್ನ ವತ್ತಿಯ ಮೇಲೆ ಈ ವೀಡಿಯೋ ಹೇಗೆ ಪರಿಣಾಮ ಬೀರಬಹುದು?  ಆ ವೀಡಿಯೋದಲ್ಲಿರುವ ವ್ಯಕ್ತಿ ತಾನಲ್ಲ ಎಂದು ಹೇಳಿದರೆ ಮನೆಯವರು ನಂಬಿಯಾರೇ? ಗೆಳೆಯರು ನನ್ನ ಮೇಲೆ ವಿಶ್ವಾಸ  ತಾಳಿಯಾರೇ? ತನ್ನ ಸುತ್ತಮುತ್ತಲಿನವರೇ ತನ್ನ ಪ್ರಾಮಾಣಿಕತೆಯನ್ನು ಶಂಕಿಸಿಯಾರೇ?... ಎಂದೆಲ್ಲಾ ಅಂದುಕೊಂಡು   ಅವರು ನುಚ್ಚುನೂರಾಗುತ್ತಾರೆ. ಹೀಗಿರುತ್ತಾ ಪುನಃ ವಾಟ್ಸಾಪ್ ಕರೆ ಬರುತ್ತದೆ. ‘ಹಣ ಕಳುಹಿಸುತ್ತೀಯೋ ಇಲ್ಲ ನಿನ್ನ  ಗೆಳೆಯರೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲೋ..’ ಎಂದು ನೇರವಾಗಿಯೇ ಆ ವ್ಯಕ್ತಿ ಪ್ರಶ್ನಿಸುತ್ತಾನೆ. ಬೆದರಿಕೆಯ ಧ್ವನಿ.  ಗೆಳೆಯ ತುಸು ಧೈರ್ಯ ತಂದುಕೊಳ್ಳುತ್ತಾರೆ,

‘ನೀವು ಹೇಳಿದಷ್ಟು ಹಣ ತಕ್ಷಣಕ್ಕೆ ಹೊಂದಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಗೆಳೆಯರಿಂದ ಸಾಲ ಪಡೆದು  ಕೊಡಬೇಕಾದರೂ ತುಸು ಸಮಯ ಬೇಕು..’ ಎಂದು ಅವರು ಉತ್ತರಿಸುತ್ತಾರೆ. ಮಾತ್ರವಲ್ಲ, ತನ್ನ ಉತ್ತರದ ಬಗ್ಗೆ ಅವರಿಗೇ  ಅಚ್ಚರಿಯಾಗುತ್ತದೆ. ‘ತಾನು ಇಂಥ ಉತ್ತರ ಹೇಗೆ ಕೊಟ್ಟೆ’ ಎಂದೂ ಗಾಬರಿಯಾಗುತ್ತಾರೆ. ಆತ ಅರ್ಧಗಂಟೆಯ ಸಮಯ  ಕೊಡುತ್ತಾನೆ. ಇನ್ನರ್ಧ ಗಂಟೆಯೊಳಗೆ ಹಣ ಕಳುಹಿಸದಿದ್ದರೆ ನಿನ್ನ ಮಾನ ತೆಗೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.  ಮಾತಿಗೆ ತಪ್ಪಬೇಡ ಎಂದು ಮತ್ತೆ ಮತ್ತೆ ಎಚ್ಚರಿಸಿ ಕರೆ ಸ್ಥಗಿತಗೊಳಿಸುತ್ತಾನೆ.

ಗೆಳೆಯ ಚುರುಕಾಗುತ್ತಾರೆ. ತನ್ನ ಪರಿಚಿತ ಪೊಲೀಸರನ್ನು ಸಂಪರ್ಕಿಸುತ್ತಾರೆ. ಈಗಾಗಲೇ ರಾತ್ರಿ 10 ಗಂಟೆ ಕಳೆದಿದೆ. ಈಗ  ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸುವ ಅಗತ್ಯ ಇಲ್ಲ. ನೀವು ಬೇರೆ ಬೇರೆ ಕಾರಣ ಕೊಟ್ಟು ಬೆಳಗಿನ ತನಕ ಆ  ವ್ಯಕ್ತಿ ಕಾಯುವಂತೆ ಮಾಡಿ. ಬೆಳಿಗ್ಗೆ ಹಣ ಕೊಡುತ್ತೇನೆ ಎಂದು ಹೇಳಿ ನಂಬಿಸಿ. ಏನಿದ್ದರೂ ನಾಳೆ ವಿಚಾರಿಸುವಾ ಎಂದು  ಅವರು ಧೈರ್ಯ ತುಂಬುತ್ತಾರೆ. ಗೆಳೆಯನಲ್ಲಿದ್ದ ಭಯ ನಿಧಾನಕ್ಕೆ ತಂತ್ರವಾಗಿ ಮಾರ್ಪಾಟುಗೊಳ್ಳುತ್ತದೆ. ಬೆಳಿಗ್ಗಿನ ವರೆಗೆ  ಆತನನ್ನು ಕಾಯುವಂತೆ ಮಾಡುವುದು ಹೇಗೆ, ಆತ ಒಪ್ಪದಿದ್ದರೆ ಒಪ್ಪುವಂತೆ ನಂಬಿಸುವುದು ಹೇಗೆ, ಬೇರೇನಾದರೂ ಷರತ್ತು  ಒಡ್ಡಿದರೆ ಹೇಗೆ ಪ್ರತಿಕ್ರಿಯಿಸಬೇಕು.. ಎಂಬಿತ್ಯಾದಿಯಾಗಿ ಆಲೋಚಿಸುತ್ತಾ ಆತನ ಕರೆಗೆ ಕಾಯುತ್ತಾರೆ. ನಿರೀಕ್ಷೆಯಂತೆಯೇ  ಮತ್ತೆ ಆತ ಕರೆ ಮಾಡುತ್ತಾನೆ. ಬೆದರಿಸುತ್ತಾನೆ. ಆದರೆ ಗೆಳೆಯ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಾರೆ. ಆತನ  ವೀಡಿಯೋಕ್ಕೆ ಭಯಗೊಂಡವರಂತೆ ನಟಿಸುತ್ತಾರೆ ಮತ್ತು ಬೆಳಿಗ್ಗೆ ಹಣ ಖಂಡಿತ ಜಮೆ ಮಾಡುವುದಾಗಿ ನಂಬಿಸುತ್ತಾರೆ. ಆತ  ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ. ಗೆಳೆಯ ಒಂದಷ್ಟು ನಿರಾಳವಾಗುತ್ತಾರೆ. ನಡೆದ ಘಟನೆಯನ್ನು ಪತ್ನಿಯಲ್ಲಿ  ಹಂಚಿಕೊಳ್ಳುತ್ತಾರೆ. ವೀಡಿಯೋ ತೋರಿಸುತ್ತಾರೆ. ಪತ್ನಿ ಹೇಗೆ ಪ್ರತಿಕ್ರಿಯಿಸಬಹುದು ಎಂದೂ ಭಯಪಡುತ್ತಾರೆ. ಆದರೆ,  ಪತ್ನಿಯ ಪ್ರತಿಕ್ರಿಯೆ ಅವರಲ್ಲಿ ನೂರು ಆನೆಯ ಬಲವನ್ನು ತುಂಬುತ್ತದೆ,

‘ನೀವೇನೂ ಭಯಪಡಬೇಡಿ, ನಿಮ್ಮ ಮೇಲೆ ನನಗೆ ವಿಶ್ವಾಸವಿದೆ, ಆತನ ವಿರುದ್ಧ ಕೇಸು ದಾಖಲಿಸಿ, ನಿಮ್ಮ ಜೊತೆ ನಾನಿದ್ದೇನೆ..’ ಎಂದು ಪತ್ನಿ ಬೆನ್ನು ತಟ್ಟುತ್ತಾರೆ.

ಅವರಲ್ಲಿ ಅದ್ಭುತ ಶಕ್ತಿ ಸಂಚಯವಾಗುತ್ತದೆ. ಭಯ ಹೊರಟು ಹೋಗುತ್ತದೆ. ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು  ದಾಖಲಿಸುತ್ತಾರೆ. ಇಂಥದ್ದೇ  ವೀಡಿಯೋ ತೋರಿಸಿ ವಾರದ ಹಿಂದೆ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ವಸೂಲು  ಮಾಡಿರುವ ಪ್ರಕರಣವನ್ನು ಪೊಲೀಸರು ಇವರೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ವಾಟ್ಸಾಪ್ ಅನ್ನು ಡಿಲೀಟ್ ಮಾಡಿ,  ಫೇಸ್‌ಬುಕ್‌ಗೆ ಲಾಕ್ ಹಾಕು ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ. ಯಾವುದೇ ಅಪರಿಚಿತ ಕರೆಯನ್ನು ಎರಡು ದಿನಗಳ  ಕಾಲ ಸ್ವೀಕರಿಸಬೇಡಿ ಎಂದೂ ಹೇಳುತ್ತಾರೆ. ಈ ವೀಡಿಯೋ ಮಾಡಿದಾತ ಮಧ್ಯ ಪ್ರದೇಶದಲ್ಲಿದ್ದಾನೆ ಮತ್ತು ನಿಮ್ಮಲ್ಲಿ  ವೈಯಕ್ತಿಕ ದ್ವೇಷ ಇಲ್ಲದೇ ಇರುವುದರಿಂದ ನಿಮ್ಮ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾರ  ಎಂದು ಧೈರ್ಯ ತುಂಬುತ್ತಾರೆ. ನೀವಿಲ್ಲದಿದ್ದರೆ ಇನ್ನೊಬ್ಬರು ಎಂದು ಆತ ಮುಂದೆ ಹೋಗುವ ಸಾಧ್ಯತೆಯೇ ಹೆಚ್ಚು  ಎಂದೂ ವಿವರಿಸುತ್ತಾರೆ. ಗೆಳೆಯ ಹಾಗೆಯೇ ಮಾಡುತ್ತಾರೆ. ಅಲ್ಲಿಗೆ ಆ ಪ್ರಕರಣ ಕೊನೆಗೊಳ್ಳುತ್ತದೆ. ವಾರಗಳ ಬಳಿಕ  ಗೆಳೆಯ ವಾಟ್ಸಪ್ ಡೌನ್‌ಲೌಡ್ ಮಾಡಿ ಎಂದಿನಂತೆ ಚಟುವಟಿಕೆಯಲ್ಲಿ ತೊಡಗುತ್ತಾರೆ. ಹಾಗಂತ,

ಇದು ನನ್ನ ಗೆಳೆಯರೋರ್ವರ ವೈಯಕ್ತಿಕ ಅನುಭವವಷ್ಟೇ ಆಗಬೇಕಿಲ್ಲ. ಇಂಥವು ನಿತ್ಯ ನಡೆಯುತ್ತಿರುತ್ತವೆ. ಹೆಚ್ಚಿನವರು  ಮರ್ಯಾದೆಗೆ ಅಂಜಿ ವಂಚಕರ ಸಂಚಿಗೆ ಬಲಿಯಾಗುತ್ತಾರೆ. ಹಣ ಕೊಟ್ಟೂ ಕೊಟ್ಟೂ ಖಿನ್ನತೆಗೆ ಜಾರುತ್ತಾರೆ. ಕೆಲವೊಮ್ಮೆ  ಬದುಕು ಕೊನೆಗೊಳಿಸಿಕೊಳ್ಳುವುದೂ ಇದೆ. ಇಂಥ ಸಂದರ್ಭಗಳಲ್ಲಿ ಮನೆಯವರ ಪಾತ್ರ ಬಹಳ ಮುಖ್ಯ. ಹಾಗೆಯೇ,  ವಂಚನೆಗೆ ಸಿಲುಕಿಕೊಂಡ ವ್ಯಕ್ತಿ ತಾಳುವ ನಿರ್ಧಾರವೂ ಅಷ್ಟೇ ಮುಖ್ಯ. ಸಂಗತಿಯನ್ನು ಅಡಗಿಸಿಡದೇ ಮನೆಯವರಲ್ಲಿ ಮನಸು ಬಿಚ್ಚಿ ಹೇಳುವ ಧೈರ್ಯವನ್ನು ವ್ಯಕ್ತಿ ಮೊದಲಾಗಿ ಪ್ರದರ್ಶಿಸಬೇಕು. ನಡೆದಿರುವುದೇನು ಎಂದು ಪತ್ನಿ-ಮಕ್ಕಳು ಅಥವಾ  ತಂದೆ-ತಾಯಿ, ಸಹೋದರರಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು. ಮನೆಯವರೂ ಅಷ್ಟೇ, ಆ ಕ್ಷಣದಲ್ಲಿ ಪೂರ್ಣ ಬೆಂಬಲ  ನೀಡಬೇಕು. ಧೈರ್ಯ ತುಂಬಬೇಕು. ಆ ಸಿಕ್ಕಿನಿಂದ ಬಿಡುಗಡೆಗೊಳ್ಳುವುದಕ್ಕೆ ಬೇಕಾದ ತಂತ್ರಗಳನ್ನು ಜೊತೆಯಾಗಿ  ಹೆಣೆಯಬೇಕು. ತನ್ನ ಜೊತೆ ತನ್ನ ಮನೆ ಮತ್ತು ಕುಟುಂಬ ಇದೆ ಎಂಬ ವಿಶ್ವಾಸ ವ್ಯಕ್ತಿಯಲ್ಲಿ ಯಾವಾಗ ಮೂಡುತ್ತೋ  ಅದು ಆತನಲ್ಲಿ ಬೆಟ್ಟದಷ್ಟು ಆತ್ಮವಿಶ್ವಾಸವನ್ನು ತುಂಬುತ್ತದೆ. ಪ್ರಕರಣವನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು  ಹುಟ್ಟು ಹಾಕುತ್ತದೆ. ಅಂದಹಾಗೆ,

ಸೋಶಿಯಲ್ ಮೀಡಿಯಾ ಎಂಬುದು ಎರಡು ಅಲಗಿನ ಕತ್ತಿಯಂತಿದೆ. ಅದು ಏಕಕಾಲದಲ್ಲಿ ವರವೂ ಶಾಪವೂ  ಆಗಬಲ್ಲುದು. ಅತ್ಯಂತ ಪ್ರಾಮಾಣಿಕ ಮತ್ತು ಸಜ್ಜನರನ್ನೂ ಅಪರಾಧಿಗಳಂತೆ ಮತ್ತು ತಲೆತಗ್ಗಿಸುವ ಕೃತ್ಯ ಮಾಡಿದವರಂತೆ  ಬಿಂಬಿಸುವ ಸಾಮರ್ಥ್ಯ ಸೋಶಿಯಲ್ ಮೀಡಿಯಾಕ್ಕಿದೆ. ತುಸು ಯಾಮಾರಿದರೂ ಅದು ನಿಮ್ಮನ್ನು ಹಿಂಡಿ  ಹಿಪ್ಪೆಗೊಳಿಸಬಲ್ಲುದು. ಅಳ್ಳೆದೆಯವರ ಬದುಕನ್ನೇ ಕಸಿದುಕೊಳ್ಳಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ.


Thursday, September 5, 2024

ನೈತಿಕ, ಅನೈತಿಕ ಮತ್ತು ವರ್ತಮಾನದ ತಲ್ಲಣಗಳು


ನೈತಿಕ
ಅನೈತಿಕ

ವರ್ತಮಾನ ಕಾಲದ ಅತ್ಯಂತ ವಿವಾದಾಸ್ಪದ ಪದಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಈ ಎರಡೂ ಪದಗಳ ವ್ಯಾಖ್ಯಾನಗಳು  ಇವತ್ತು ಬದಲಾಗುತ್ತಿವೆ. ಮದ್ಯಪಾನವನ್ನು ನೈತಿಕ ಪಟ್ಟಿಯಲ್ಲಿಟ್ಟು ಸಮರ್ಥಿಸುವವರು ಇರುವಂತೆಯೇ ಅನೈತಿಕವೆಂದು ಸಾರಿ  ವಿರೋಧಿಸುವವರೂ ಇದ್ದಾರೆ. ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆಯೂ ಇಂಥದ್ದೇ  ಭಿನ್ನ ನಿಲುವುಗಳಿವೆ. ಅತ್ಯಾಚಾರಕ್ಕೆ  ತುಂಡುಡುಗೆಯದ್ದೂ ಕೊಡುಗೆ ಇದೆ ಎಂದು ವಾದಿಸುವವರು ಇರುವಂತೆಯೇ ಎರಡು ವರ್ಷದ ಮಗುವಿನ ಮೇಲೂ  ಆಗುತ್ತಿರುವ ಅತ್ಯಾಚಾರಕ್ಕೆ ಯಾವ ಉಡುಗೆ ಕಾರಣ ಎಂದು ಮರು ಪ್ರಶ್ನಿಸುವವರೂ ಇದ್ದಾರೆ. ಸಿನಿಮಾಗಳು ಅ ನೈತಿಕತೆಯನ್ನು ಪೋಷಿಸುತ್ತಿವೆ ಎಂಬ ವಾದ ಒಂದೆಡೆಯಾದರೆ, ನೈತಿಕ-ಅನೈತಿಕವು ನೋಡುವ ಕಣ್ಣಿನಲ್ಲಿದೆ ಎಂಬ ವಾದ  ಇನ್ನೊಂದೆಡೆ. ಡಿಕ್ಷನರಿಯ ಪ್ರಕಾರ ನೈತಿಕ ಅಂದರೆ ಸದಾಚಾರ, ಸುನೀತಿ ಎಂದು ಅರ್ಥ. ಅನೈತಿಕ ಅಂದರೆ ದುರಾಚಾರ,  ದುರ್ನೀತಿ ಎಂದು ಅರ್ಥ. ಅಂದರೆ,
ಈ ಎರಡೂ ಪದಗಳು ಅತ್ಯಂತ ವಿಶಾಲಾರ್ಥವನ್ನು ಹೊಂದಿವೆ. ಸದಾಚಾರ ಎಂಬುದಕ್ಕೆ ನಿರ್ದಿಷ್ಟ ಪರಿಧಿ ಯೇನೂ ಇಲ್ಲ.  ಉತ್ತಮವಾದ ಎಲ್ಲ ಆಚಾರಗಳೂ ಸದಾಚಾರಗಳೇ. ಕೆಟ್ಟದಾದ ಎಲ್ಲ ಆಚಾರಗಳೂ ದುರಾಚಾರಗಳೇ. ಮಾವಿನ ಮರದಿಂದ  ಬಿದ್ದ ಹಣ್ಣನ್ನು ಮಾಲಿಕರ ಅನುಮತಿ ಇಲ್ಲದೇ ಹೆಕ್ಕಿ ತಿನ್ನುವುದು ದುರಾಚಾರವೇ. ಹಾಗೆಯೇ, ರಸ್ತೆಯಲ್ಲಿ ಬಿದ್ದಿರುವ ಮುಳ್ಳನ್ನೋ ಕಲ್ಲನ್ನೋ ಎತ್ತಿ ಬಿಸಾಕುವುದು ಸದಾಚಾರವೇ. ಆದರೆ, ಅನೈತಿಕತೆ ಎಂಬ ಪದ ಕೇಳಿದ ತಕ್ಷಣ ನಮ್ಮಲ್ಲಿ ಈ  ವಿಶಾಲಾರ್ಥದ ಭಾವ ಮೂಡುತ್ತದೆಯೇ ಅಥವಾ ನಿರ್ದಿಷ್ಟ ವಿಷಯದ ಸುತ್ತ ನಿಮ್ಮ ಭಾವ ಗಿರಕಿ ಹೊಡೆಯುತ್ತದೆಯೇ?  ಭ್ರಷ್ಟಾಚಾರವೂ ಅನೈತಿಕವೇ. ಸುಳ್ಳು ಹೇಳುವುದೂ ಅನೈತಿಕವೇ. ಮೋಸ ಮಾಡುವುದು, ಪರೀಕ್ಷೆಯಲ್ಲಿ ನಕಲು  ಹೊಡೆಯುವುದು, ನಿಂದಿಸುವುದು.. ಎಲ್ಲವೂ ಅನೈತಿಕವೇ. ಆದರೆ, ಸಾಮಾನ್ಯವಾಗಿ ಅನೈತಿಕತೆ ಎಂಬ ಪದವನ್ನು ನಾವು  ಇವುಗಳಿಗೆ ಉಪಯೋಗಿಸುವುದೇ ಇಲ್ಲ ಅಥವಾ ಅನೈತಿಕತೆ ಎಂದು ಕೇಳಿದಾಗ ಇವಾವುವೂ ನೆನಪಾಗುವುದೇ ಇಲ್ಲ. ಈ  ವರ್ತಮಾನ ಕಾಲದಲ್ಲಿ ಅನೈತಿಕತೆ ಅಂದರೆ, ಹೆಣ್ಣು ಮತ್ತು ಗಂಡು ನೈತಿಕವಲ್ಲದ ರೀತಿಯಲ್ಲಿ ಸೇರಿಕೊಳ್ಳುವುದು. ನೈತಿಕ  ಪೊಲೀಸ್‌ಗಿರಿ ಎಂಬ ಪದವನ್ನೇ ಈ ಸಮಾಜ ಆವಿಷ್ಕರಿಸಿ ಬೇಕಾದಾಗಲೆಲ್ಲ ಬಳಸುತ್ತಲೂ ಇವೆ. ಅಷ್ಟಕ್ಕೂ, ಈ ನೈತಿಕ  ಪೊಲೀಸ್‌ಗಿರಿ ಎಂಬುದು ಭ್ರಷ್ಟಾಚಾರಕ್ಕೋ ಸುಳ್ಳು ಹೇಳುವುದಕ್ಕೋ ವಂಚನೆ ಮಾಡುವುದಕ್ಕೋ ಬಳಕೆ ಆಗುತ್ತಿಲ್ಲ. ಹೆಣ್ಣು  ಮತ್ತು ಗಂಡು ನಡುವಿನ ಸಂಬಂಧವನ್ನು ವಿರೋಧಿಸುವ ನಿರ್ದಿಷ್ಟ ಗುಂಪಿಗೆ ಈ ಪದ ಪ್ರಯೋಗವಾಗುತ್ತಿದೆ. ಅಂದಹಾಗೆ,

ಯಾಕೆ ಹೀಗೆ ಎಂಬ ಪ್ರಶ್ನೆ ಉದ್ಭವಿಸಬಹುದು.

ಇದಕ್ಕೆ ಕಾರಣ, ಪ್ರಚಲಿತ ಸಾಮಾಜಿಕ ಪರಿಸ್ಥಿತಿ. ಈ ದೇಶದಲ್ಲಿ ಪ್ರತಿದಿನ 86ರಷ್ಟು ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ  ಅನ್ನುವುದು ಕೇಂದ್ರ ಸರಕಾರವೇ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿ. ಇದು ಪೊಲೀಸ್ ಠಾಣೆಗಳಲ್ಲಿ ದಾಖಲಾದ  ಪ್ರಕರಣಗಳು ಮಾತ್ರ. ಆದರೆ ಪೊಲೀಸ್ ಠಾಣೆಯ ವರೆಗೂ ಹೋಗದೇ ರಾಜಿಯಲ್ಲೇ  ಮುಗಿಯುವ ಅಥವಾ ಯಾರಿಗೂ  ಹೇಳದೇ ಮುಚ್ಚಿಡಲಾಗುವ ಅತ್ಯಾಚಾರ ಪ್ರಕರಣಗಳು ಈ 86ಕ್ಕಿಂತ ಎಷ್ಟೋ ಪಟ್ಟು ಅಧಿಕ ಇರಬಹುದು ಎಂಬುದಾಗಿ  ತಜ್ಞರೇ ಹೇಳುತ್ತಿದ್ದಾರೆ. ಇಂಥ ಅತ್ಯಾಚಾರ ಪ್ರಕರಣಗಳಲ್ಲಿ ಅಲ್ಲೊಂದು -ಇಲ್ಲೊಂದು  ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗುತ್ತವೆ.  ಅತ್ಯಾಚಾರ ಎಂಬುದು ಪ್ರತಿದಿನದ ಸಂಕಟವಾಗಿರುವುದರಿಂದ  ಅದಕ್ಕೆ ಕಾರಣವಾಗುವ ಅಂಶಗಳೂ ಸಹಜವಾಗಿಯೇ   ಚರ್ಚೆಗೂ ಒಳಗಾಗುತ್ತವೆ. ಈ ಅತ್ಯಾಚಾರದ ಹೊರತಾಗಿ ಲೈಂಗಿಕ ಕಿರುಕುಳ ಎಂಬ ಒಂದು ಕ್ಷೇತ್ರ ಬೇರೆಯೇ ಇದೆ.  ಇವುಗಳಲ್ಲಿ ಹೆಚ್ಚಿನವು ಸುದ್ದಿಯೇ ಆಗುವುದಿಲ್ಲ. ಹೀಗೆ ಪ್ರತಿದಿನ ಇವುಗಳನ್ನು ಕೇಳಿ ಕೇಳಿ ಅಭ್ಯಾಸವಾಗಿರುವ ಜನರು ನಿಧಾನಕ್ಕೆ ಈ ಅನೈತಿಕತೆ ಅನ್ನುವ ಪದವನ್ನು ಸ್ತ್ರೀ  ಮತ್ತು ಪುರುಷರ ನೈತಿಕವಲ್ಲದ ಸೇರುವಿಕೆಗೆ ಮಾತ್ರ ಸೀಮಿತಗೊಳಿಸಿದಂತಿದೆ.  ‘ಅನೈತಿಕ ಚಟುವಟಿಕೆ: ನಾಲ್ವರ ಬಂಧನ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗುವ ಸುದ್ದಿಯನ್ನು ಸುದ್ದಿ ಓದದೆಯೇ ಇವತ್ತಿನ  ಸಮಾಜ ಅರ್ಥ ಮಾಡಿಕೊಳ್ಳುವಷ್ಟು ಈ ಪದದ ಅರ್ಥ ಸೀಮಿತವಾಗಿ ಬಿಟ್ಟಿದೆ. ಈ ಕಾರಣದಿಂದಲೇ,

ನೈತಿಕವಲ್ಲದ ಇತರ ಚಟುವಟಿಕೆಗಳತ್ತ ಸಾರ್ವಜನಿಕ ಗಮನವೂ ಕಡಿಮೆಯಾಗಿದೆ. ಭ್ರಷ್ಟಾಚಾರದಂಥ ಹತ್ತು-ಹಲವು  ಚಟುವಟಿಕೆಗಳು ಗಂಭೀರ ಚರ್ಚಾ ಪರಿಧಿಯಿಂದ ಹೊರಬಿದ್ದು, ಅನಾಹುತಕಾರಿಯಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರ  ಅಂದಾಕ್ಷಣ, ರಾಜಕಾರಣಿಗಳ ಕಡೆಗೆ ನೋಡಬೇಕಾಗಿಲ್ಲ. ತೀರಾ ತೀರಾ ತಳ ಮಟ್ಟದಲ್ಲೇ  ಇದಕ್ಕೆ ಅಸ್ತಿತ್ವ ಇದೆ. ಇದನ್ನು ಅ ನೈತಿಕ ವ್ಯವಹಾರವಾಗಿ ಕಾಣದಷ್ಟು ಸಮಾಜ ಸಹಜವಾಗಿ ಸ್ವೀಕರಿಸುತ್ತಲೂ ಇದೆ. ಸುಳ್ಳು ಎಂಬುದಕ್ಕೆ ನೈತಿಕ ಮಾನ್ಯತೆಯೇ  ದಕ್ಕಿಬಿಟ್ಟಿದೆ. ಸುಳ್ಳು ಹೇಳುವುದನ್ನು ಅಪರಾಧವಾಗಿ ಕಾಣುವ ಮನೋಭಾವವೇ ಹೊರಟು ಹೋಗುತ್ತಿದೆ. ಅಪಪ್ರಚಾರ, ಅ ನ್ಯಾಯ, ಅಕ್ರಮ, ಅವಹೇಳನ... ಮುಂತಾದ ಎಲ್ಲ ಬಗೆಯ ಅನೈತಿಕ ನಡವಳಿಕೆಗಳೂ ನೈತಿಕ ಮಾನ್ಯತೆಯನ್ನು  ಪಡಕೊಳ್ಳುತ್ತಾ ಬದುಕಿನ ಭಾಗವಾಗುತ್ತಲೂ ಇದೆ. ಆದರೂ,
ಅತ್ಯಾಚಾರ, ಲೈಂಗಿಕ ಕಿರುಕುಳಗಳ ಭರಾಟೆಯಲ್ಲಿ ಇವಾವುವೂ ಚರ್ಚೆಗೇ ಒಳಗಾಗುತ್ತಿಲ್ಲ ಅಥವಾ ಅವುಗಳ ಮುಂದೆ ಇವುಗಳನ್ನು ಚರ್ಚಿಸುವುದು ಸಪ್ಪೆ ಎಂಬ ಭಾವ ಇದಕ್ಕೆ ಕಾರಣವೋ ಗೊತ್ತಿಲ್ಲ. ನಿಜವಾಗಿ, ಒಂದು ಸಮಾಜ ಆರೋಗ್ಯ ಪೂರ್ಣವಾಗಿ ಗುರುತಿಸಿಕೊಳ್ಳುವುದು ಆ ಸಮಾಜದಲ್ಲಿ ನೈತಿಕ ಮೌಲ್ಯಗಳು ಎಷ್ಟು ಪ್ರಮಾಣದಲ್ಲಿ ಅಸ್ತಿತ್ವದಲ್ಲಿವೆ ಎಂಬುದರ  ಆಧಾರದಲ್ಲಿ. ಮಹಿಳಾ ಸುರಕ್ಷಿತತೆ ಅದರ ಒಂದು ಭಾಗವೇ ಹೊರತು ಅದುವೇ ಎಲ್ಲವೂ ಅಲ್ಲ.
ಪವಿತ್ರ ಕುರ್‌ಆನ್ ಈ ಕುರಿತಂತೆ ವಿಸ್ತ್ರತವಾಗಿ ಮತ್ತು ವಿಶಾಲಾರ್ಥದಲ್ಲಿ ಚರ್ಚಿಸಿದೆ. ಆರೋಗ್ಯಪೂರ್ಣ ಸಮಾಜವೊಂದಕ್ಕೆ  ಏನೆಲ್ಲ ಅಗತ್ಯ ಎಂಬುದನ್ನು ಅದು ಸ್ಪಷ್ಟವಾಗಿ ಹೇಳಿದೆ;

1. ಉದ್ಧಟತನದಿಂದ ಮಾತಾಡಬೇಡಿ. (3: 159),
2. ಕೋಪವನ್ನು ನಿಯಂತ್ರಿಸಿಕೊಳ್ಳಿ (3: 134),
3. ಇತರರೊಂದಿಗೆ ಉತ್ತಮ ರೀತಿಯಿಂದ ನಡಕೊಳ್ಳಿ (4: 36),
 4. ದುರಹಂಕಾರ ಮತ್ತು ಆತ್ಮಸ್ತುತಿ ಮಾಡಿಕೊಳ್ಳಬೇಡಿ  (4: 36), 
5. ಜಿಪುಣತೆ ಸಲ್ಲದು (4: 37), 
6. ಸೊಕ್ಕಿನ ನಡವಳಿಕೆ ಸಲ್ಲದು (7: 13),
 7. ಇತರರ ತಪ್ಪುಗಳನ್ನು ಕ್ಷಮಿಸಿ  (7: 199), 
8. ಜನರೊಂದಿಗೆ ನಯವಾಗಿ ಮಾತನಾಡಿ (20:44), 
9. ನಿಮ್ಮ ದನಿಯನ್ನು ತಗ್ಗಿಸಿ ಮಾತನಾಡಿ (31:19),  
10. ಇತರರನ್ನು ಅಪಹಾಸ್ಯ ಮಾಡಬೇಡಿ (49:11),
11. ಹೆತ್ತವರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸೇವೆ ಮಾಡಿ (17:23), 
12. ಹೆತ್ತವರ ಬಗ್ಗೆ ‘ಛೆ’ ಎಂಬ ಉದ್ಘಾರವ ನ್ನೂ ಹೊರಡಿಸದಿರಿ (17:23), 
13. ಸಾಲದ ವ್ಯವಹಾರ ನಡೆಸುವಾಗ ಬರೆದಿಟ್ಟುಕೊಳ್ಳಿ (2:282),
14. ಯಾರನ್ನೂ ಅಂಧವಾಗಿ ಅನುಸರಿಸಬೇಡಿ (2:170), 
15. ಬಡ್ಡಿ ತಿನ್ನಬೇಡಿ (2:275),
 16. ಭ್ರಷ್ಟಾಚಾರದಲ್ಲಿ  ಭಾಗಿಯಾಗಬೇಡಿ (2:188), 
17. ವಾಗ್ದಾನವನ್ನು ಉಲ್ಲಂಘಿಸಬೇಡಿ (2:177), 
18. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಿ  (2:283), 
19. ಸತ್ಯವನ್ನು ಸುಳ್ಳಿನೊಂದಿಗೆ ಬೆರೆಸಬೇಡಿ (2:242),
20. ಅರ್ಹತೆಯ ಮೇಲೆ ನೇಮಕ ಮಾಡಿ, ನ್ಯಾಯದಂತೆಯೇ ತೀರ್ಪು ನೀಡಿ (4:58), 
21. ನ್ಯಾಯದ ಪರ ದೃಢವಾಗಿ  ನಿಲ್ಲಿರಿ (4:135), 
22. ಮೃತ ವ್ಯಕ್ತಿಯ ಸಂಪತ್ತು ಆತನ ಕುಟುಂಬದಲ್ಲಿ ವಿತರಿಸಬೇಕು (4:7),
 23. ಅನಾಥರ ಸೊತ್ತನ್ನು  ಕಬಳಿಸಬೇಡಿ (4:10),
 25. ಒಬ್ಬರ ಸಂಪತ್ತನ್ನು ಇನ್ನೊಬ್ಬರು ಅನುಚಿತ ರೀತಿ ಯಿಂದ ಕಬಳಿಸಬಾರದು (4:29), 
26.  ಅನಾಥರನ್ನು ರಕ್ಷಿಸಿ (2:220), 
27. ಜನರ ನಡುವಿನ ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸಿ (4:9), 
28.  ಸಂದೇಹಗಳಿಂದ  ದೂರ ನಿಲ್ಲಿ (49:12), 
29. ಇತರರ ಬಗ್ಗೆ ದೂಷಣೆ ಮಾಡಬೇಡಿ (49:12), 
30. ಸಂಪತ್ತನ್ನು  ಸೇವೆಗಾಗಿ ಖರ್ಚು ಮಾಡಿ (57:7), 
31. ಬಡವರಿಗೆ ಉಣಿಸುವುದನ್ನು ಪ್ರೋತ್ಸಾಹಿಸಿ (107:3),
 32. ಹಣವನ್ನು  ಲೆಕ್ಕಾಚಾರವಿಲ್ಲದೆ ಖರ್ಚು ಮಾಡಬೇಡಿ (17:29),
 33. ಅತಿಥಿಯನ್ನು ಗೌರವಿಸಿ (51:27), 
 34ನೀವು ಏನನ್ನು ಜ ನರೊಂದಿಗೆ ಹೇಳುತ್ತೀರೋ ಮೊದಲು ನೀವು ಅದನ್ನು ಪಾಲಿಸಿ (2:44), 
35. ಯಾರು ನಿಮ್ಮೊಂದಿಗೆ  ಹೋರಾಡುತ್ತಾರೋ ಅವರೊಂದಿಗೆ ಮಾತ್ರ ಹೋರಾಡಿ (2:190), 
36. ಎರಡು ವರ್ಷಗಳ ವರೆಗೆ ನಿಮ್ಮ ಮಗುವಿಗೆ  ಎದೆಹಾಲು ಉಣಿಸಿ (2:223), 
37. ವ್ಯಭಿಚಾರದ ಹತ್ತಿರವೂ ಸುಳಿಯಬೇಡಿ (17:32), 38. ಪುರುಷ ಮತ್ತು ಸ್ತ್ರೀಯ  ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ (3:195), 
39. ಪರಸ್ಪರ ಹತ್ಯೆ ನಡೆಸದಿರಿ (4:92),
 40. ಅಪ್ರಾಮಾಣಿಕರ  ಪರವಾಗಿ ವಾದಿಸಬೇಡಿ (4:105),
41. ಒಳಿತಿನ ವಿಷಯದಲ್ಲಿ ಎಲ್ಲರೊಂದಿಗೆ ಸಹಕರಿಸಿ, ಕೆಡುಕಿನ ವಿಷಯದಲ್ಲಿ ಯಾರೊಂದಿಗೂ ಸಹಕರಿಸಬೇಡಿ (5:2), 
 42. ರಕ್ತಸಂಬಂಧಿಗಳ ಜೊತೆ ವಿವಾಹ ಮಾಡಿಕೊಳ್ಳಬೇಡಿ (4:23), 
43. ಬಹುಮತವು ಸತ್ಯವನ್ನು ನಿರ್ಣಯಿಸುವುದಕ್ಕೆ  ಮಾನದಂಡವಲ್ಲ (6:116),
 44. ಪಾಪ ಮತ್ತು ಕಾನೂನುಬಾಹಿರ ಕೃತ್ಯಗಳ ವಿರುದ್ಧ ಹೋರಾಡಿ (5:63), 
45. ಅನುಮತಿ  ಇಲ್ಲದೆ ಹೆತ್ತವರ ಕೋಣೆ ಪ್ರವೇಶಿಸಬೇಡಿ (24:58),
 46. ಮದ್ಯಪಾನ ಮಾಡಬೇಡಿ, ಜೂಜಾಡಬೇಡಿ (5:90), 
47.  ಇತರರ ಆರಾಧ್ಯರನ್ನು ನಿಂದಿಸಬೇಡಿ (6:108),
 48. ಅಳತೆ-ತೂಕದಲ್ಲಿ ವಂಚಿಸಬೇಡಿ (6:152),
 49. ಉಣ್ಣಿರಿ, ಕುಡಿಯಿರಿ,  ಆದರೆ ಮಿತಿಮೀರಬೇಡಿ (7:31), 
50. ರಕ್ಷಣೆ ಕೋರಿ ಬರುವವರಿಗೆ ರಕ್ಷಣೆ ಒದಗಿಸಿ (9:6), 
51. ನಿಮ್ಮ ಪಾಪಕ್ಕೆ ನೀವೇ  ಜವಾಬ್ದಾರರು (17:13), 
52. ಹಸಿವಿನ ಭೀತಿಯಿಂದ ಮಕ್ಕಳ ಹತ್ಯೆ ಮಾಡಬೇಡಿ (17:31),
 53. ಅನಗತ್ಯ ಕೆಲಸಗಳಿಂದ  ದೂರ ನಿಲ್ಲಿ (23:3),
 54. ಒಳಿತನ್ನು ಆದೇಶಿಸಿ, ಕೆಡುಕಿನಿಂದ ದೂರ ನಿಲ್ಲಿ (31:17),
55. ಮಹಿಳೆಯರು ಸೌಂದರ್ಯ ಪ್ರದರ್ಶನ ಮಾಡದಿರಲಿ. 
56. ಕೆಡುಕನ್ನು ಒಳಿತಿನಿಂದ ಎದುರಿಸಿ (41:34),
 57.  ಯಾರಲ್ಲಿ ಹೆಚ್ಚು ಒಳಿತು ಇದೆಯೋ ಅವರೇ ಅತ್ಯುತ್ತಮರು (49:13), 
58. ಇತರ ಧರ್ಮೀಯರೊಂದಿಗೆ ಸೌಜನ್ಯದಿಂದ  ನಡಕೊಳ್ಳಿ (60:8). ನಿಜವಾಗಿ,

ವರ್ತಮಾನ ಕಾಲದ ದೊಡ್ಡ ದುರಂತ ಏನೆಂದರೆ, ಮನುಷ್ಯನ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಇಂಥ  ಮೌಲ್ಯಗಳೇ ಕಾಣೆಯಾಗಿವೆ. ಸತ್ಯ, ನ್ಯಾಯ, ಪ್ರಾಮಾಣಿಕತೆ, ಸಭ್ಯತೆ, ಸಜ್ಜನಿಕೆಗಳನ್ನೆಲ್ಲ ಕೆಲಸಕ್ಕೆ ಬಾರದ ವಿಷಯಗಳಾಗಿ  ಆಧುನಿಕ ಮಾನವ ಪರಿಗಣಿಸುತ್ತಿದ್ದಾನೆ. ಹಣ ಮಾಡಬೇಕು ಮತ್ತು ಬಯಸಿದ್ದನ್ನು ಅನುಭವಿಸುತ್ತಾ ಸುಖವಾಗಿರಬೇಕು  ಎಂಬುದೇ ಮೌಲ್ಯವಾಗಿ ಬಿಟ್ಟಿದೆ. ಧರ್ಮಾತೀತವಾಗಿ ಜನರು ಈ ಹೊಸ ‘ಧರ್ಮ’ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.  ಹೊಣೆಗಾರಿಕೆಗಳೇ ಇಲ್ಲದ ಮತ್ತು ತೋಚಿದಂತೆ ಬದುಕಬಹುದಾದ ಈ ‘ಧರ್ಮ’ ಜನಪ್ರಿಯವೂ ಆಗುತ್ತಿದೆ. ಈ ಬಗ್ಗೆ  ಗಂಭೀರ ಅವಲೋಕನವೊಂದು ಪ್ರತಿ ಮನೆಮನೆಯಲ್ಲೂ ನಡೆಯಲೇ ಬೇಕು. ಈ ಸಮಾಜದಲ್ಲಿ ಹೆಣ್ಣು ಮಾತ್ರ  ಅಸುರಕ್ಷಿತವಾಗಿರುವುದಲ್ಲ. ಎಲ್ಲ ಬಗೆಯ ಮೌಲ್ಯಗಳೂ ಅಸುರಕ್ಷಿತವಾಗಿವೆ. ಇಂಥ ಸಮಾಜದಲ್ಲಿ ಹೆಣ್ಣನ್ನು  ಸುರಕ್ಷಿತಗೊಳಿಸುವುದರಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಲು ಸಾಧ್ಯವಿಲ್ಲ. ಹೆಣ್ಣಿಗೆ ಈ ಸಮಾಜವನ್ನು  ಸುರಕ್ಷಿತ ಗೊಳಿಸುವುದಕ್ಕೆ ಪೂರಕ ಪ್ರಯತ್ನಗಳನ್ನು ನಡೆಸುವುದರ ಜೊತೆಗೇ ಒಟ್ಟು ಸಮಾಜದಲ್ಲಿ ನೈತಿಕ ಮೌಲ್ಯಗಳು  ಪಾಲನೆಯಾಗುವಂತೆ ಮಾಡುವುದಕ್ಕಾಗಿ ಎಳವೆಯಿಂದಲೇ ಮಕ್ಕಳಿಗೆ ತರಬೇತಿ ನೀಡ ತೊಡಗಬೇಕು. ಯಾವ ಕಾರಣಕ್ಕೂ  ಭ್ರಷ್ಟಾಚಾರಿ ಆಗಬಾರದು, ಸುಳ್ಳು ಹೇಳಬಾರದು, ವಂಚನೆ ಮಾಡಬಾರದು, ಇತರ ಧರ್ಮಗಳನ್ನು ನಿಂದಿಸ ಬಾರದು,  ಹೆಣ್ಣನ್ನು ಕೀಳಾಗಿ ಕಾಣಬಾರದು, ಮದ್ಯಪಾನ ಮಾಡಬಾರದು, ಸುಳ್ಳಿಗೆ ಸಾಕ್ಷ್ಯ  ನಿಲ್ಲಬಾರದು, ಅನೈತಿಕವಾದ ಯಾವುದೇ  ಕೃತ್ಯದಲ್ಲೂ ಭಾಗಿಯಾಗಬಾರದು... ಎಂದು ಮುಂತಾಗಿ ಮಕ್ಕಳಲ್ಲಿ ಮೌಲ್ಯ ಪ್ರಜ್ಞೆಯನ್ನು ಪ್ರತಿ ಹೆತ್ತವರೂ ಮೂಡಿಸಬೇಕು.  ಅಂದಹಾಗೆ,

ನೈತಿಕತೆ ಮತ್ತು ಅನೈತಿಕತೆಯ ವ್ಯಾಖ್ಯಾನವೇ ಬದಲಾಗಿರುವ ಮತ್ತು ತಡೆರಹಿತ ವ್ಯಕ್ತಿ ಸ್ವಾತಂತ್ರ‍್ಯ ಲಭ್ಯವಾಗಿರುವ ಈ ದಿ ನಗಳಲ್ಲಿ ಮೌಲ್ಯಪ್ರಜ್ಞೆಯೇ ಚಿಂದಿಯಾಗಬಹುದಾದ ಅಪಾಯವೂ ಇದೆ. ಆದ್ದರಿಂದ ಹೆಣ್ಣೂ ಸಹಿತ ಒಟ್ಟು ಮೌಲ್ಯಗಳನ್ನೇ  ಸುರಕ್ಷಿತಗೊಳಿಸುವತ್ತ ಗಮನ ಹರಿಸಬೇಕಿದೆ.

Thursday, August 29, 2024

ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದ ಆಕೆ ವಿಚ್ಛೇದನ ಪಡಕೊಂಡಳು





ತಾನೇಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದೆ ಎಂಬುದನ್ನು ಇತ್ತೀಚೆಗೆ ಓರ್ವ ಮಹಿಳೆ ಹೀಗೆ ಹಂಚಿಕೊಂಡಿದ್ದರು,

‘ನಮ್ಮದು ಅವಿಭಕ್ತ ಕುಟುಂಬ. ನಾನು ಉದ್ಯೋಗಸ್ಥೆ ಮಹಿಳೆ. ಪ್ರತಿದಿನ ನಾನು 7 ಗಂಟೆ ಕೆಲಸ ಮಾಡುತ್ತೇನೆ ಮತ್ತು  ಪ್ರಯಾಣಕ್ಕಾಗಿ 4 ಗಂಟೆ ಉಪಯೋಗಿಸುತ್ತೇನೆ. ಅಂದರೆ, ಪ್ರತಿದಿನ 11 ಗಂಟೆಗಳು ಉದ್ಯೋಗ ನಿಮಿತ್ತ ಖರ್ಚಾಗುತ್ತವೆ.  ನನ್ನ ಗಂಡನಿಗೆ ರಾತ್ರಿ ಪಾಳಿಯ ಕೆಲಸ. ನಾನು ಕೆಲಸ ಮುಗಿಸಿ ಮನೆಗೆ ತಲುಪಿದ ಅರ್ಧಗಂಟೆಯೊಳಗೆ ನನ್ನ ಗಂಡ ಮನೆಯಿಂದ ಕೆಲಸಕ್ಕೆ ಹೊರಡುತ್ತಾರೆ. ನಾನು ಆದಷ್ಟು ಬೇಗ ಮನೆಗೆ ಬಂದು ಅಡುಗೆ ಮಾಡಿ ಬಳಸಿ, ಟಿಫಿನ್‌ಗೆ ಹಾಕಿ  ಕೊಡಬೇಕೆಂದು ನನ್ನ ಗಂಡ ಬಯಸುತ್ತಾನೆ. ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ಬ್ರೇಕ್ ಫಾಸ್ಟ್ ಮತ್ತು ಲಂಚ್ ರೆಡಿ ಮಾಡಿ  ಗಂಡನಿಗೂ ಆತನ ಹೆತ್ತವರಿಗೂ ಮತ್ತು ಅಜ್ಜ-ಅಜ್ಜಿಗೂ ನೀಡುತ್ತೇನೆ. ಇದನ್ನು ನಾನು ಪ್ರತಿದಿನವೂ ಮಾಡುತ್ತೇನೆ ಮತ್ತು ಈ  ಬಗ್ಗೆ ನನ್ನಲ್ಲಿ ಆಕ್ಷೇಪಗಳೂ ಇಲ್ಲ. ಸಮಸ್ಯೆ ಇರೋದು ಸಮಯದಲ್ಲಿ ಮತ್ತು ನನಗಾಗುವ ಆಯಾಸ ದಲ್ಲಿ. ಅಂದಹಾಗೆ,

ರಜಾದಿನದಂದೂ  ನನಗೆ ಬಿಡುವಿಲ್ಲ. ಈ ದಿನಗಳಂದು ನನ್ನ ಅತ್ತೆ ಹಾಸಿಗೆಯಿಂದ ಏಳುವುದೇ ಇಲ್ಲ. ಕೇಳಿದರೆ, ಆರೋಗ್ಯ  ಸರಿ ಇಲ್ಲ ಅನ್ನುತ್ತಾರೆ. ಆದ್ದರಿಂದ ಅವರಿರುವಲ್ಲಿಗೆ ನಾನು ಎಲ್ಲವನ್ನೂ ತಲುಪಿಸಬೇಕು. ಆದರೆ, ಅದೇ ಬೆಡ್‌ನಲ್ಲಿ ಕುಳಿತು  ಅತ್ತೆ ನನ್ನದುರೇ ಗಂಟೆಗಟ್ಟಲೆ ತನ್ನವರೊಂದಿಗೆ ಫೋನ್‌ನಲ್ಲಿ ಮಾತಾಡುತ್ತಾರೆ. ನನ್ನ ಗಂಡನಾದರೋ ಪರಮ ಉದಾಸೀನ  ವ್ಯಕ್ತಿ. ರಜಾ ದಿನದಂದು ಅಂಗಡಿಗೆ ತೆರಳಿ ದಿನಸಿ ವಸ್ತುಗಳನ್ನು ತರುವುದಿಲ್ಲ. ಅದನ್ನೂ ನಾನೇ ತರುತ್ತೇನೆ. ಜೊತೆಗೆ ಸ್ವಚ್ಛತಾ  ಕೆಲಸವನ್ನೂ ನಾನೇ ಮಾಡಬೇಕು. ನಾನೇನೂ ಮೆಶಿನ್ ಅಲ್ಲವಲ್ಲ. ಆದರೆ ಮನೆಯವರಿಗೆ ಇದು ಅರ್ಥವೇ ಆಗುತ್ತಿಲ್ಲ.  ಅವರು ಮನೆ ಕ್ಲೀನ್ ಇಲ್ಲ ಎಂದು ನನ್ನನ್ನೇ ದೂರುತ್ತಾರೆ. ಕೆಲಸಕ್ಕೆ ಹೋಗುವ ಮೊದಲು ಗುಡಿಸಿ, ಒರೆಸಿ ಹೋಗಲಿಕ್ಕೇನು  ಧಾಡಿ ಎಂದು ಮೈಮೇಲೆ ಬೀಳುತ್ತಾರೆ.

ಒಂದು ದಿನ ಅತ್ತೆ-ಮಾವಂದಿರ ಎದುರೇ ನನ್ನ ಗಂಡ ನನ್ನನ್ನು ಥಳಿಸಿದರು. ನನ್ನ ಮೈಮೇಲೆ ಗಾಯಗಳಾದುವು. ಗಂಡ  ನನ್ನನ್ನು ಥಳಿಸುತ್ತಿದ್ದರೂ ಮನೆಯವರಾರೂ ಅದನ್ನು ತಡೆಯಲಿಲ್ಲ ಅಥವಾ ಥಳಿಸದಂತೆ ಮಗನನ್ನು ಆಕ್ಷೇಪಿಸಲೂ ಇಲ್ಲ.  ನೀನು ಕೆಲಸಕ್ಕೆ ರಾಜೀನಾಮೆ ಕೊಡು ಎಂಬುದು ಗಂಡನ ಆಗ್ರಹವಾಗಿತ್ತು. ಮರುದಿನ ನಾನು ನನ್ನ ಕಚೇರಿ ಮುಖ್ಯಸ್ಥರಿಗೆ  ಕೆಲಸ ಬಿಡುವುದಾಗಿ ಹೇಳಿದೆ. ಆದರೆ ಅವರು ತಕ್ಷಣ ಕೆಲಸದಿಂದ ಬಿಡುಗಡೆಗೊಳಿಸಲು ಒಪ್ಪಿಕೊಳ್ಳಲಿಲ್ಲ. ಕನಿಷ್ಠ ಎರಡು  ತಿಂಗಳಾದರೂ ಕೆಲಸ ಮಾಡಬೇಕು ಎಂಬ ಷರತ್ತು ವಿಧಿಸಿದರು. ನನಗೆ ಭತ್ಯೆ, ಪಿಂಚಣಿ ಸಿಗಬೇಕಾದರೆ ಈ ಷರತ್ತಿಗೆ ನಾನು  ತಲೆಬಾಗಲೇಬೇಕಿತ್ತು. ನಾನು ಈ ವಿಷಯವನ್ನು ಗಂಡನಲ್ಲಿ ಹೇಳಿದೆ. ಆತ ರೌದ್ರಾವತಾರ ತಾಳಿದ. ಬೆಲ್ಟ್ನಿಂದ ಹೊಡೆದ.  ನಿಜವಾಗಿ, ಆತನಿಗೆ ನಾನು ಕೆಲಸ ಬಿಡುವುದು ಬೇಕಿರಲಿಲ್ಲ. ಯಾಕೆಂದರೆ, ಆತ ನಗರದ ಅನೇಕ ಜನರಿಂದ ಸಾಲ  ಪಡಕೊಂಡಿದ್ದ. ಫೈನಾನ್ಸ್ ಗಳಿಂದಲೂ ಸಾಲ ಪಡಕೊಂಡಿದ್ದ. ಇದು ನನಗೆ ಗೊತ್ತಿರಲಿಲ್ಲ. ನನ್ನ ಸಂಬಳವನ್ನು  ತೆಗೆದುಕೊಳ್ಳುತ್ತಿದ್ದ ಆತ, ಅದನ್ನು ಯಾವುದಕ್ಕೆ ಖರ್ಚು ಮಾಡುತ್ತಿದ್ದೇನೆ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲ. ನಿಜ ಏ ನೆಂದರೆ,

ದುಡಿಯುವ ಮಹಿಳೆಯಾಗಿಯೂ ನನಗೆ ಬೇಕಾದಷ್ಟು ಬಟೆ ಖರೀದಿಸುವುದಕ್ಕೂ ಸ್ವಾತಂತ್ರ್ಯ  ಇರಲಿಲ್ಲ. ನನ್ನ ಸೀರೆ ಹರಿದಿರುವುದು ಗೊತ್ತಾಗದಿರಲೆಂದು ಕನಿಷ್ಠ 3 ಪಿನ್‌ಗಳನ್ನಾದರೂ ಚುಚ್ಚುತ್ತಿದ್ದೆ. ಆದರೂ ನನ್ನ ಬಗ್ಗೆ ಗಂಡ ಮತ್ತು ಮ ನೆಯವರು ಯಾವ ಕಾಳಜಿಯನ್ನೂ ತೋರುತ್ತಿರಲಿಲ್ಲ. ಅಲ್ಲದೇ, ನನ್ನ ಹೆತ್ತವರ ಜೊತೆ ಮಾತಾಡಲೂ ಗಂಡ ಬಿಡುತ್ತಿರಲಿಲ್ಲ.  ಆ ಕಾರಣದಿಂದಾಗಿ ನಾನು ಕಚೇರಿ ತಲುಪಿದ ಬಳಿಕ ಕರೆ ಮಾಡುತ್ತಿದ್ದೆ. ಮನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯ  ತಲೆದೋರಿದರೆ ಅಥವಾ ನ್ಯಾಯದ ಬಗ್ಗೆ ನಾನು ಮಾತನಾಡಿದರೆ, ತಕ್ಷಣ ನನ್ನ ಗಂಡ ಮತ್ತು ಅತ್ತೆ ನನ್ನ ಹೆತ್ತವರಿಗೆ ಕರೆ  ಮಾಡಿ ಬೆದರಿಸುತ್ತಿದ್ದರು. ನನ್ನ ಹೆತ್ತವರನ್ನು ಅತೀ ಕನಿಷ್ಠ ಪದಗಳಿಂದ ಗಂಡ ಬೈಯುತ್ತಿದ್ದ..’

ಅಂದಹಾಗೆ,

ಇದು ಒಂದು ಮುಖ ಮಾತ್ರ. ಒಂದುವೇಳೆ ಈಕೆಯ ಗಂಡನನ್ನು ಪ್ರಶ್ನಿಸಿದರೆ ಆತನಲ್ಲಿ ಸಮರ್ಥನೆಯ ನೂರು  ವಾದಗಳಿರಬಹುದು. ಅಂತೂ ದೇಶದಲ್ಲಿ ವಿಚ್ಚೇದನ ಅಥವಾ ತಲಾಕ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುತ್ತಿವೆ  ಎಂಬುದಂತೂ  ನಿಜ. ಹಾಗಂತ, ಇದು ಕೇವಲ ಭಾರತಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಅಲ್ಲ. ಜಾಗತಿಕವಾಗಿಯೇ  ಇಂಥದ್ದೊಂದು  ಸ್ಥಿತಿಯಿದೆ. ಜಗತ್ತಿನಲ್ಲಿಯೇ ಅತ್ಯಧಿಕ ವಿಚ್ಛೇದನ ಗಳು ನಡೆಯುತ್ತಿರುವುದು ಮಾಲ್ದೀವ್ಸ್ ನಲ್ಲಿ. ಪ್ರತಿ ಸಾವಿರ  ಮದುವೆಯಲ್ಲಿ 5ರಿಂದ 6 ಮದುವೆಗಳು ಅಲ್ಲಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಕಝಕಿಸ್ತಾನದಲ್ಲಿ ನಡೆಯುವ ಸಾವಿರ  ಮದುವೆ ಗಳಲ್ಲಿ 4ರಿಂದ 5ರಷ್ಟು ಮದುವೆಗಳು ವಿಚ್ಛೇದನಕ್ಕೆ ಒಳಗಾಗುತ್ತಿವೆ. ರಶ್ಯಾದಲ್ಲಿ 3ರಿಂದ 4 ಮದುವೆಗಳು ಹೀಗೆ  ಕೊನೆಗೊಳ್ಳುತ್ತಿದ್ದರೆ, ಅಮೇರಿಕದಲ್ಲಿ ಪ್ರತಿ ಸಾವಿರದಲ್ಲಿ 5ರಷ್ಟು ಮದುವೆಗಳು ತಲಾಕ್‌ಗೆ ಒಳಗಾಗುತ್ತಿವೆ. ಅಮೇರಿಕದ ಅರ್ಕಿ ನ್ಸಾಸ್ ರಾಜ್ಯವಂತೂ ವಿಶ್ವದಲ್ಲಿಯೇ ಅತ್ಯಧಿಕ ತಲಾಕ್‌ಗಳಾಗುವ ರಾಜ್ಯವಾಗಿ ಗುರುತಿಸಿ ಕೊಂಡಿದೆ. ಇಲ್ಲಿ ನಡೆಯುವ ಪ್ರತಿ  1000 ಮದುವೆಗಳಲ್ಲಿ 24ರಷ್ಟು ಮದುವೆಗಳು ದೀರ್ಘ ಬಾಳಿಕೆ ಬರುವುದೇ ಇಲ್ಲ. ಈ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ  ಭಾರತ ಉತ್ತಮ ಸ್ಥಿತಿಯಲ್ಲಿದೆ. ನಮ್ಮಲ್ಲಿ ನಡೆಯುವ ಪ್ರತಿ ಸಾವಿರ ಮದುವೆಗಳ ಪೈಕಿ ವಿಚ್ಛೇದನದಲ್ಲಿ ಕೊನೆಗೊಳ್ಳುವುದು  ಒಂದರಿಂದ  ಎರಡರಷ್ಟು ವಿವಾಹಗಳು ಮಾತ್ರ. ಆದರೆ, ನಮಗಿಂತಲೂ ಕಡಿಮೆ ಪ್ರಮಾಣದಲ್ಲಿ ವಿಚ್ಛೇದನಗಳಾಗುತ್ತಿರುವುದು  ಶ್ರೀಲಂಕಾದಲ್ಲಿ. ಜಗತ್ತಿನಲ್ಲಿಯೇ ವಿಚ್ಛೇದನ ಪ್ರಕರಣಗಳು ಶ್ರೀಲಂಕಾದಲ್ಲಿ ಅತೀ ಕಡಿಮೆ ಎಂದು ಲೆಕ್ಕ ಹಾಕಲಾಗಿದೆ. ಇಲ್ಲಿ  ನಡೆಯುವ ಪ್ರತಿ 10 ಸಾವಿರ ಮದುವೆಗಳ ಪೈಕಿ ಒಂದು ಮದುವೆಯಷ್ಟೇ ತಲಾಕ್‌ನಲ್ಲಿ ಕೊನೆ ಗೊಳ್ಳುತ್ತವೆ. ಆ ಬಳಿಕದ  ಸ್ಥಾನ ವಿಯೆಟ್ನಾಂ ಮತ್ತು ಗ್ವಾಟೆ ಮಾಲಾಗಳ ಪಾಲಾಗಿದೆ. ವಿಶೇಷ ಏನೆಂದರೆ, ಫಿಲಿಪ್ಪೀನ್‌ನಲ್ಲಿ ಈ ವರ್ಷದ ಆರಂಭದ  ವರೆಗೆ ವಿಚ್ಚೇದನವೇ ಕಾನೂನುಬಾಹಿರವಾಗಿತ್ತು. ಪರಸ್ಪರ ತಿಳುವಳಿಕೆಯಿಂದ ವಿಚ್ಚೇದನಗಳು ನಡೆಯುತ್ತಿದ್ದುವಾದರೂ ಅವು ಕಾನೂನುಬದ್ಧ  ಆಗಿರಲೂ ಇಲ್ಲ. ಆದರೆ, 2024 ಮೇಯಲ್ಲಿ ವಿಚ್ಛೇದನವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಅಲ್ಲಿನ ಪಾರ್ಲಿಮಂಟ್‌ನಲ್ಲಿ ಮಂಡಿಸಲಾಗಿದೆ. ಅಷ್ಟಕ್ಕೂ,

ಇತ್ತೀಚಿನ ಒಂದೆರಡು ದಶಕಗಳಲ್ಲಿ ವಿಚ್ಛೇದನ ಪ್ರಕರಣ ವೇಗವನ್ನು ಪಡೆಯಲು ಕಾರಣವೇನು ಎಂಬ ಪ್ರಶ್ನೆ ಸಹಜ. ಈ  ಕುರಿತಂತೆ ಹಲವು ಬಗೆಯ ಸರ್ವೇಗಳು ನಡೆದಿವೆ ಮತ್ತು ಸಮಸ್ಯೆಯ ಆಳವನ್ನು ಸ್ಪರ್ಶಿಸಲು ಅನೇಕ ತಜ್ಞರು  ಪ್ರಯತ್ನಿಸಿದ್ದಾರೆ. ಕಳೆದೊಂದು ದಶಕದಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಆಗಿರುವ ಭಾರೀ ಪ್ರಮಾಣದ ಏರಿಕೆಯನ್ನು  ನೋಡಿದರೆ, ಸಮಾಜ ಗಂಭೀರವಾಗಿ ಆಲೋಚಿಸಬೇಕಾದ ಕ್ಷೇತ್ರ ಇದು ಎಂದೇ ಅನಿಸುತ್ತದೆ. ಸಾಮಾನ್ಯವಾಗಿ, ಹತ್ಯೆ,  ಹಲ್ಲೆ, ಅತ್ಯಾಚಾರ, ದ್ವೇಷಭಾಷಣ ಇತ್ಯಾದಿಗಳು ಸುದ್ದಿಯಾಗುವಂತೆ ವಿಚ್ಛೇದನ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗುವುದಿಲ್ಲ. ಹಲವು ಪ್ರಕರಣಗಳು ಮಾತುಕತೆಯಲ್ಲಿ, ಇನ್ನು ಹಲವು ಕೌಟುಂಬಿಕ ನ್ಯಾಯಾಲಯಗಳಲ್ಲಿ ಮತ್ತೂ  ಹಲವು ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ. ಇಂಥ ಅಸಂಖ್ಯ ಪ್ರಕರಣಗಳ  ಪೈಕಿ ಅಲ್ಲೊಂದು  ಇಲ್ಲೊಂದು  ಮಾಧ್ಯಮಗಳಲ್ಲಿ ವರದಿಯಾಗುವುದನ್ನು ಬಿಟ್ಟರೆ ಉಳಿದಂತೆ ಈ ಕ್ಷೇತ್ರವು ಗಾಢ ಮೌನವನ್ನೇ  ಹೊದ್ದುಕೊಂಡಿವೆ. ಈ ಮೌನವೇ ಈ ಕ್ಷೇತ್ರದಲ್ಲಾಗುವ ತಲ್ಲಣಗಳು ಹೊರಜಗತ್ತಿನಲ್ಲಿ ಚರ್ಚೆಯಾಗದಂತೆಯೂ  ನೋಡಿಕೊಳ್ಳುತ್ತವೆ. ನಿಜವಾಗಿ, ವಿಚ್ಛೇದನ ಪ್ರಕರಣದ ಏರುಗತಿಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಆಗಿರುವ  ಬದಲಾವಣೆಗೂ ನೇರ ಸಂಬಂಧ  ಇದೆ. ಮುಖ್ಯವಾಗಿ, ವಿಚ್ಛೇದನಕ್ಕೆ ಕೆಲವು ಮುಖ್ಯ ಕಾರಣಗಳನ್ನು ಹೀಗೆ ಪಟ್ಟಿ  ಮಾಡಬಹುದು.

1. ಮಹಿಳಾ ಸಬಲೀಕರಣ: ಮಹಿಳೆಯರು ಹೆಚ್ಚೆಚ್ಚು ಶಿಕ್ಷಿತರಾಗುತ್ತಿದ್ದಾರೆ ಮತ್ತು ಉದ್ಯೋಗಕ್ಕೂ ಸೇರುತ್ತಿದ್ದಾರೆ. ಸ್ವಾವಲಂಬಿ  ಬದುಕು ಸಹಜವಾಗಿಯೇ ಅವರೊಳಗೆ ಧೈರ್ಯ, ಸ್ವಾಭಿಮಾನ ಮತ್ತು ಭರವಸೆಯನ್ನು ತುಂಬಿದೆ. ಪತಿಯದ್ದೋ  ಅಥವಾ  ಪತಿ ಮನೆಯವರದ್ದೋ  ಹೀನೈಕೆ, ಅವಮಾನ, ದೌರ್ಜನ್ಯ, ಹಿಂಸೆಯನ್ನು ಪ್ರತಿಭಟಿಸಲು ಮತ್ತು ಸಂಬಂಧವನ್ನೇ ಮುರಿದು  ಹೊರಬರಲು ಶಿಕ್ಷಣ ಅವರಲ್ಲಿ ಛಲವನ್ನು ಒದಗಿಸಿದೆ.

2. ನಗರ ಜೀವನ: ಗ್ರಾಮ ಭಾರತ ಬದಲಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿದ್ದಾರೆ. ನಗರದ ಜೀವನ  ವಾದರೋ ಇನ್ನೂ ವಿಚಿತ್ರ. ಇಲ್ಲಿ ಕೆಲಸದ ಅವಧಿ ಹೆಚ್ಚಿರುತ್ತದಷ್ಟೇ ಅಲ್ಲ, ನೈಟ್ ಶಿಫ್ಟ್, ಡೇ ಶಿಫ್ಟ್ ಕೂಡಾ ಇರುತ್ತದೆ.  ಇದರಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೂ ಅಧಿಕವಿರುತ್ತದೆ. ಅಲ್ಲದೇ,  ಕುಟುಂಬದಲ್ಲಿ ಬಿರುಕು ಮೂಡುವುದಕ್ಕೆ ಪೂರಕ ಸುದ್ದಿಗಳನ್ನು ಓದುವುದಕ್ಕೆ ಅವಕಾಶಗಳಿರುವುದೂ ಕೌಟುಂಬಿಕ ಸಂಬಂಧದ  ಭದ್ರತೆಯನ್ನು ತೆಳುವಾಗಿಸುತ್ತದೆ.

3. ಅತಿಯಾದ ನಿರೀಕ್ಷೆ: ದಂಪತಿಗಳು ಅತಿಯಾದ ನಿರೀಕ್ಷೆಯನ್ನು ಹೊಂದುವುದು ಮತ್ತು ಅದು ಕೈಗೂಡುವ ಲಕ್ಷಣ  ಕಾಣಿಸದೇ ಹೋದಾಗ ಮನಸ್ತಾಪ ಉಂಟಾಗುವುದೂ ನಡೆಯುತ್ತಿದೆ. ದಂಪತಿಗಳು ಸ್ವಸಂತೋಷಕ್ಕೆ, ಸ್ವಗುರಿ ಮತ್ತು ಸ್ವಂತ  ಐಡೆಂಟಿಟಿಗಾಗಿ ಸೆಣಸುವುದು ಕೂಡಾ ಕೌಟುಂಬಿಕ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿವೆ.

4. ಕಾನೂನು ತಿಳುವಳಿಕೆ: ಶೈಕ್ಷಣಿಕವಾಗಿ ಹೇಗೆ ಹೆಣ್ಣು ಮಕ್ಕಳು ಮುಂದೆ ಬಂದರೋ ಅವರಿಗೆ ಮದುವೆ ಮತ್ತು ವಿಚ್ಛೇದನಗಳ ಕುರಿತಾದ ಕಾನೂನಿನ ತಿಳುವಳಿಕೆಯೂ ಹೆಚ್ಚಾಯಿತು. ವಿಚ್ಛೇದನ ಪಡಕೊಳ್ಳುವುದಕ್ಕೆ ಏನೇನು ಮಾಡಬೇಕು, ಎಷ್ಟು  ಸಮಯದಲ್ಲಿ ವಿಚ್ಛೇದನ ಸಿಗಬಹುದು, ಅದಕ್ಕಿರುವ ಪ್ರಕ್ರಿಯೆ ಗಳು ಏನೇನು ಎಂಬುದನ್ನೆಲ್ಲ ತಿಳಿದುಕೊಂಡಿರುವ ಪತಿ  ಮತ್ತು ಪತ್ನಿ ವಿಚ್ಛೇದನಕ್ಕೆ ಹೆದರಬೇಕಾಗಿಲ್ಲ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ.
5. ಅಣು ಕುಟುಂಬಗಳ ಹೆಚ್ಚಳ: ಅವಿಭಕ್ತ ಕುಟುಂಬಗಳಲ್ಲಿ ಸಿಗುವ ಕೌಟುಂಬಿಕ ಬೆಂಬಲವು ಅಣು ಕುಟುಂಬಗಳಲ್ಲಿ  ಸಿಗುವುದಿಲ್ಲ. ಪತಿ-ಪತ್ನಿ ನಡುವೆ ಉಂಟಾಗುವ ಮನಸ್ತಾಪವನ್ನು ಹೆತ್ತವರು ಮಧ್ಯಪ್ರವೇಶಿಸಿ ಬಗೆಹರಿಸುವುದು ಅವಿಭಕ್ತ  ಕುಟುಂಬಗಳಲ್ಲಿ ಸಾಧ್ಯ. ನಾಲ್ಕು ಬುದ್ಧಿ ಮಾತು ಹೇಳಿ ಅವರು ಮನಸ್ತಾಪಕ್ಕೆ ಮುಲಾಮು ಹಚ್ಚುತ್ತಾರೆ. ಆದರೆ, ಪತಿ-ಪತ್ನಿ  ಮಾತ್ರ ಇರುವಲ್ಲಿ ಭಿನ್ನಾಭಿಪ್ರಾಯ ದಿನೇ ದಿನೇ ಬೆಳೆಯುತ್ತ ಬೆಟ್ಟವಾಗುತ್ತಾ ಹೋಗುವುದಕ್ಕೆ ಅವಕಾಶ ಹೆಚ್ಚಿದೆ ಮತ್ತು  ಇಬ್ಬರನ್ನೂ ಅಹಂ ನಿಯಂತ್ರಿಸುವುದಕ್ಕೆ ಸಾಧ್ಯವೂ ಇದೆ. ಹಾಗಂತ,

ಈ ಪರಿಸ್ಥಿತಿಯಿಂದ ಹೊರಬರುವುದಕ್ಕೆ ಸಾಧ್ಯವೇ ಇಲ್ಲ ಎಂದಲ್ಲ. ಪತಿ ಮತ್ತು ಪತ್ನಿ ಮನಸ್ಸು ಮಾಡಿದರೆ ಮತ್ತು ಅಹಂ  ಅನ್ನು ತೊರೆದು ಪರಸ್ಪರರನ್ನು ಗೌರವಿಸುವ ಬುದ್ಧಿವಂತಿಕೆಯನ್ನು ತೋರಿದರೆ, ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು  ಉಂಟಾಗ ಬಹುದು. ಮದುವೆಗೆ ಮುಂಚೆ ವಧೂ-ವರರನ್ನು ಕೌನ್ಸಿಲಿಂಗ್‌ಗೆ ಒಳಪಡಿಸುವುದು ಇದರಲ್ಲಿ ಬಹಳ ಮುಖ್ಯ.  ಅವರಿಬ್ಬರೂ ಪರಸ್ಪರ ಬಯಕೆ, ನಿರೀಕ್ಷೆ, ಆರ್ಥಿಕ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದರಿಂದ ಮದುವೆ ಬಳಿಕದ ಬದುಕ ನ್ನು ಹೆಚ್ಚು ನಿಖರವಾಗಿ ನಡೆಸಲು ಅನುಕೂಲವಾಗಬಹುದು. ಪರಸ್ಪರ ಮಾತುಕತೆ ನಡೆಸುವುದು, ತಪ್ಪುಗಳನ್ನು ತಿದ್ದಿಕೊಳ್ಳುವುದು, ಕ್ಷಮೆ ಕೇಳಿಕೊಳ್ಳುವುದು, ವಾರದ ರಜೆಯಲ್ಲೋ  ಅಥವಾ ರಜೆ ಪಡೆದುಕೊಂಡೋ ದೂರ ಪ್ರಯಾಣ  ಬೆಳೆಸುವುದು, ಕೆಲವೊಮ್ಮೆ ರಾತ್ರಿಯ ಊಟವನ್ನು ಮನೆಯ ಹೊರಗೆ ಮಾಡುವುದು, ಸಂಬಂಧಿಕರ ಮನೆಗೆ ಜೊತೆಯಾಗಿ  ಹೋಗುವುದು ಇತ್ಯಾದಿಗಳನ್ನು ಮಾಡುವುದೂ ಉತ್ತಮ. ಭಿನ್ನಾಭಿಪ್ರಾಯವನ್ನು ಬೆಟ್ಟವಾಗಿಸದೇ ಕ್ಷಮಿಸುವ ಮತ್ತು  ಮರೆಯುವ ಕೌಶಲ್ಯವನ್ನು ಇಬ್ಬರೂ ಬೆಳೆಸಿಕೊಳ್ಳಬೇಕು. ಪರಸ್ಪರರ ಪ್ರತಿಭೆಗಳನ್ನು ಒಪ್ಪಿಕೊಳ್ಳುವ, ಗೌರವಿಸುವ ಮತ್ತು  ಮೆಚ್ಚಿಕೊಳ್ಳುವ ಗುಣವನ್ನೂ ಅಳವಡಿಸಿಕೊಳ್ಳಬೇಕು. ಪತಿ ಮತ್ತು ಪತ್ನಿ ಎಂಥದ್ದೇ  ಉದ್ಯೋಗದಲ್ಲಿದ್ದರೂ ಪರಸ್ಪರರಿಗೆ  ಸಮಯ ಕೊಡುವಷ್ಟು ಬಿಡುವು ಮಾಡಿಕೊಳ್ಳಲೇಬೇಕು. ಮನೆಯೊಳಗಿನ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳಬೇಕು.  ಹಾಗಂತ,

ಇವಿಷ್ಟನ್ನು ಮಾಡಿದರೆ ಮುಂದೆ ವಿಚ್ಛೇದನಗಳೇ ನಡೆಯಲ್ಲ ಎಂದು ಹೇಳುತ್ತಿಲ್ಲ. ಇವೆಲ್ಲ ಟಿಪ್ಸ್ ಗಳಷ್ಟೇ. ವಿಚ್ಚೇದನ  ಪ್ರಮಾಣವನ್ನು ಕಡಿಮೆ ಗೊಳಿಸುವುದಕ್ಕಷ್ಟೇ ಈ ಟಿಪ್ಸ್ ಗಳಿಗೆ ಸಾಧ್ಯವಾಗಬಹುದು. ಅದರಾಚೆಗೆ, ಮದುವೆ ಎಲ್ಲಿಯವರೆಗೆ  ಭೂಮಿಯಲ್ಲಿ ಅಸ್ತಿತ್ವದಲ್ಲಿರುತ್ತದೋ ಅಲ್ಲಿಯವರೆಗೆ ವಿಚ್ಛೇ ದನವೂ ಇದ್ದೇ  ಇರುತ್ತದೆ.