Tuesday, April 23, 2024

ಹುಬ್ಬಳ್ಳಿ: ದ್ವೇಷದ ಬಾಯಿಗೆ ಸಕ್ಕರೆ ಹಾಕಿದ ಅಂಜುಮನೆ ಇಸ್ಲಾಮ್



ಏ ಕೆ ಕುಕ್ಕಿಲ 

1. ಮುಸ್ಲಿಮರು ಕೆಟ್ಟವರು
2. ಮುಸ್ಲಿಮರು ಹಂತಕರು

ಇAಥದ್ದೊಂದು  ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದೆಯೆಂದಾದರೆ, 140 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಅವಕಾಶಗಳು ಬೇಕಾದಷ್ಟಿವೆ. ತನ್ನ ಸಂಗಾತಿ ಶ್ರದ್ಧಾಳನ್ನು ತುಂಡು ತುಂಡು ಮಾಡಿ ಫ್ರೀಜರ್‌ನಲ್ಲಿಟ್ಟ ದೆಹಲಿಯ ಅಫ್ತಾಬ್ ಅಮೀನ್ ಪೂನಾವಾಲನಿಂದ ಹಿಡಿದು ನೇಹಾ ಹಿರೇಮಠ್‌ಳನ್ನು ಇರಿದು ಹತ್ಯೆ ಮಾಡಿದ ಹುಬ್ಬಳ್ಳಿಯ ಫಯಾಜ್ ನವರೆಗೆ. ಹಾಗಂತ,

1. ಹಿಂದೂಗಳು ಕೆಟ್ಟವರು
2. ಹಿಂದೂಗಳು ಹಂತಕರು

ಎಂಬೊಂದು  ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದ್ದರೂ ಅವಕ್ಕೂ ಸರಕುಗಳು ಬೇಕಾದಷ್ಟಿವೆ. ಉಡುಪಿಯ ನೇಜಾರಿನ ತಾಯಿ-ಮಗಳನ್ನು ಹತ್ಯೆ ಮಾಡಿದ ಪ್ರವೀಣ್ ಚೌಗಲೆಯಿಂದ ಹಿಡಿದು ಬೆಂಗಳೂರಿನ ಪ್ರದೀಪ್ ವರೆಗೆ. ತಾನು ಪ್ರೀತಿಸುತ್ತಿದ್ದ ರುಕ್ಸಾನ ಎಂಬ ಹೆಣ್ಮಗಳನ್ನೇ ಈತ 2024 ಮಾರ್ಚ್ 31ರಂದು ಕೊಂದು ಸುಟ್ಟು ಹಾಕಿದ್ದ. ಅಂದಹಾಗೆ,

ಮುಸ್ಲಿಮ್ ವ್ಯಕ್ತಿಯ ಅಪರಾಧವನ್ನು ಎತ್ತಿಕೊಂಡು ಇಸ್ಲಾಮನ್ನು ಹಂತಕ ಧರ್ಮ ಎಂದು ಬಿಂಬಿಸುವಾಗ, ಹಿಂದೂ ವ್ಯಕ್ತಿಯ ಅಪರಾಧವನ್ನು ಉಲ್ಲೇಖಿಸಿ ಹಿಂದೂ ಧರ್ಮವನ್ನು ಹಂತಕ ಧರ್ಮ ಎಂದು ಬಿಂಬಿಸುವುದು ಸಹಜ. ಆದರೆ, ಹೀಗೆ ಬಿಂಬಿಸುವ ಎರಡೂ ಗುಂಪಿಗೂ ವಾಸ್ತವ ಏನು ಅನ್ನುವುದು ಗೊತ್ತಿರುತ್ತದೆ. ವ್ಯಕ್ತಿಯ ತಪ್ಪಿಗೆ ಆ ವ್ಯಕ್ತಿಯ ಧರ್ಮವೋ ಸಮುದಾಯವೋ ಹೊಣೆಯಲ್ಲ ಎಂಬುದಕ್ಕೆ ವಿಶೇಷ ಸಂಶೋಧನೆಯ ಅಗತ್ಯವೇನೂ ಇಲ್ಲ. ಪ್ರಜಾತಂತ್ರ ಭಾರತದಲ್ಲಿ ಎಲ್ಲ ಧರ್ಮಗಳ ಅನುಯಾಯಿಗಳೂ ಸಂವಿಧಾನಕ್ಕೆ ಬದ್ಧವಾಗಿ ಬದುಕಬೇಕಾಗುತ್ತದೆ. ಅಲ್ಲದೇ, ಯಾವುದೇ ವ್ಯಕ್ತಿಗೆ ಶಿಕ್ಷೆ ನೀಡುವ ಸ್ವಾತಂತ್ರ‍್ಯವನ್ನು ಸಂವಿಧಾನ ಯಾವುದೇ ಸಮುದಾಯಕ್ಕೂ ಕೊಟ್ಟಿಲ್ಲ. ಯಾವುದೇ ಧರ್ಮಗುರುವಿಗೂ ಕೊಟ್ಟಿಲ್ಲ. ಆದ್ದರಿಂದ ನೇಹಾಳನ್ನು ಹತ್ಯೆಗೈದ ಆರೋಪಿ ಫಯಾಜ್  ನ ಹತ್ಯೆಗೆ ಯಾವುದಾದರೂ ಧರ್ಮಗುರು ಫತ್ವಾ ಹೊರಡಿಸಿದರೆ ಅವರು ಇಲ್ಲಿನ ಕಾನೂನಿನ ಪ್ರಕಾರ ಅಪರಾಧಿಯಾಗುತ್ತಾರೆ. ಧರ್ಮಗುರು ಬಿಡಿ, ಸ್ವತಃ ಫಯಾಜ್ ನ   ತಂದೆಯೇ ಮಗನಿಗೆ ಶಿಕ್ಷೆ ಕೊಡಲು ಹೊರಟರೆ ಅವರೂ ತಪ್ಪಿತಸ್ಥರಾಗುತ್ತಾರೆ. ಇದು ಫಯಾಜ್ ನ ಅಪರಾಧವನ್ನು ಇಸ್ಲಾಮ್‌ನ ಮೇಲೋ ಮುಸ್ಲಿಮರ ಮೇಲೋ ಹೊರಿಸುತ್ತಿರುವ ಗುಂಪಿಗೂ ಗೊತ್ತಿಲ್ಲದ್ದಲ್ಲ. ಮತ್ತೇಕೆ ಈ ಗುಂಪು ಹೀಗೆ ವರ್ತಿಸುತ್ತದೆಂದರೆ, ಅದರ ಹಿಂದೆ ರಾಜಕೀಯ ಕಾರಣಗಳಿವೆ. ಅಂದಹಾಗೆ,

ಒಂದು  ಗುಂಪಿನ ಆರೋಪಕ್ಕೆ ಇನ್ನೊಂದು ಗುಂಪು ಪ್ರತಿ ಆರೋಪವನ್ನು ಮಾಡುವುದು ಆರೋಪದ ತೀವ್ರತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಬಹುದೇ ಹೊರತು ಅಪರಾಧ ಕೃತ್ಯವನ್ನಲ್ಲ. ಅಪರಾಧ ಕೃತ್ಯಗಳನ್ನು ಧರ್ಮಾಧಾರಿತವಾಗಿ ವಿಭಜಿಸಿ ವಿಶ್ಲೇಷಿಸುವುದರಿಂದ ಲಾಭವಾಗುವುದಿದ್ದರೆ ಅದು ಅಪರಾಧಿಗಳಿಗೆ ಮಾತ್ರ. ಒಂದು ಉದಾಹರಣೆ,

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಆಸಿಫಾ ಎಂಬ 8 ವರ್ಷದ ಬಾಲೆಯ ಶವ 2018, ಜನವರಿ 17ರಂದು ಪತ್ತೆಯಾಯಿತು. ಬುಡಕಟ್ಟು ಸಮುದಾಯದ ಈ ಬಾಲೆ 7 ದಿನಗಳ ವರೆಗೆ ಕಾಣೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರಂಭದಲ್ಲಿ ಅಪ್ರಾಪ್ತ ಯುವಕನನ್ನು ಬಂಧಿಸಿದರು. ಆತ ಹೇಳಿದ ಸತ್ಯ ಮಾತ್ರ ಆಘಾತಕಾರಿಯಾಗಿತ್ತು. ಪೊಲೀಸರು ಆತನ ಹೇಳಿಕೆಯ ಜಾಡು ಹಿಡಿದು ತನಿಖಿಸಿದಾಗ ಪೊಲೀಸರು ಆಘಾತದ ಮೇಲೆ ಆಘಾತವನ್ನು ಅನುಭವಿಸಿದರು. ಈ ಕ್ರೌರ್ಯದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಅವರ ಪಾತ್ರ ಇತ್ತು. ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳಾದ ತಿಲಕ್ ರಾಜ್ ಮತ್ತು ಅರವಿಂದ್ ದತ್ತಾ ಶ್ರಮಿಸಿದ್ದರು. ಮಾತ್ರವಲ್ಲ, ಸಾಕ್ಷ್ಯ  ನಾಶಕ್ಕಾಗಿ ನೆರವಾಗಿದ್ದರು. ಈ ಕೃತ್ಯದ ಪ್ರಮುಖ ಆರೋಪಿ ಸಂಜಿರಾಮ್ ಮಂದಿರವೊಂದರ ಅರ್ಚಕನಾಗಿದ್ದ. ಈತನ ಮಗ ವಿಶಾಲ್ ಕೂಡಾ ಈ ಕ್ರೌರ್ಯದಲ್ಲಿ ಭಾಗಿಯಾಗಿದ್ದ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ಕಥುವಾದ ಕೆಳಕೋರ್ಟಿನಲ್ಲಿ ನಡೆಯಿತಾದರೂ ಆ ಬಳಿಕ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಪ್ರಕರಣವನ್ನು ಚಂಡೀಗಢಕ್ಕೆ ವರ್ಗಾಯಿಸಿತು. ತ್ವರಿತಗತಿ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಸುಪ್ರೀಮ್ ಕೋರ್ಟು ಆದೇಶಿಸಿತು. ಅಲ್ಲದೇ, ವಿಚಾರಣಾ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕೆಂದು ಕೂಡಾ ಕೋರ್ಟು ಆದೇಶಿಸಿತು. ಈ ನಡುವೆ,

ತಮ್ಮ ಪರವಾಗಿ ವಾದಿಸುತ್ತಿರುವ ದೀಪಿಕಾ ರಾಜವತ್‌ರನ್ನು ತಾವು ಕೈಬಿಟ್ಟಿರುವುದಾಗಿಯೂ ಮತ್ತು ಅವರು ಇನ್ನು ಮುಂದೆ ಆಸಿಫಾ ಪ್ರಕರಣದಲ್ಲಿ ತಮ್ಮನ್ನು ಪ್ರತಿನಿಧಿಸುತ್ತಿಲ್ಲವೆಂದೂ..’ ಆಸಿಫಾಳ ತಂದೆ ಚಂಢೀಗಢ ನ್ಯಾಯಾಲಯಕ್ಕೆ ತಿಳಿಸಿದರು. ‘ಈವರೆಗೆ ನಡೆದ 100ರಷ್ಟು ವಿಚಾರಣಾ ಪ್ರಕ್ರಿಯೆಯಲ್ಲಿ ಇವರು ಕೇವಲ 2 ಬಾರಿ ಮಾತ್ರ ಹಾಜರಾಗಿದ್ದಾರೆ..’ ಎಂದು ಆ ತಂದೆ ಕಾರಣವನ್ನೂ ನೀಡಿದರು. ಕೊನೆಗೆ, 2019 ಜೂನ್ 10ರಂದು ಪ್ರಕರಣದ 7 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿತು. ಮಂದಿರದ ಅರ್ಚಕ ಸಂಜಿರಾಮ್ ಮತ್ತು ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯ ಮತ್ತು ಪರ್ವೇಶ್ ಕುಮಾರ್‌ರಿಗೆ 25 ವರ್ಷಗಳ ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿತು. ಹಾಗೆಯೇ, ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ ಅಪರಾಧಕ್ಕಾಗಿ ತಿಲಕ್ ರಾಜ್, ಆನಂದ್ ದತ್ತ ಮತ್ತು ಸುರೇಂದ್ ವರ್ಮಾರಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತು. ಇದೇವೇಳೆ, ಸಂಜಿರಾಮ್‌ನ ಮಗ ವಿಶಾಲ್‌ನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನ್ಯಾಯಾಲಯ ದೋಷಮುಕ್ತಗೊಳಿಸಿತು. ಸಂಜಿರಾಮ್‌ನ ಸಂಬಂಧಿಕರಾದ ಅಪ್ರಾಪ್ತ ಯುವಕನನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆಗೆ ಒಪ್ಪಿಸಲಾಯಿತು. ನಿಜವಾಗಿ,

ಇಲ್ಲಿನ ಉದ್ದೇಶ, ಈ ಪ್ರಕರಣವನ್ನು ವಿವರಿಸುವುದಲ್ಲ. ಈ ಅತ್ಯಾಚಾರ ಮತ್ತು ಹತ್ಯೆ ಬಹಿರಂಗವಾಗಿ, ಇಬ್ಬರು ಪೊಲೀಸ್ ಅಧಿಕಾರಿಗಳಾದ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಹಾಗೂ ಸಂಜಿರಾಮ್ ಮತ್ತು ಆತನ ಮಗ ಮತ್ತು ಮೊಮ್ಮಗನನ್ನು ಪೊಲೀಸರು ಬಂಧಿಸಿದ ದಿನಗಳೊಳಗೆ ಜಮ್ಮುವಿನಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಿತು ಎಂಬುದನ್ನು ವಿವರಿಸುವುದೇ ಇದರ ಉದ್ದೇಶ. ಈ ಬಂಧನಗಳು ನಡೆದ ಬೆನ್ನಿಗೇ ಹಿಂದೂ ಏಕ್ತಾ ಮಂಚ್ ಎಂಬ ಸಂಘಟನೆಯನ್ನು ರಚಿಸಲಾಯಿತಲ್ಲದೇ, ಬಂಧಿತರ ಪರ ಬೃಹತ್ ರ‍್ಯಾಲಿ ನಡೆಸಲಾಯಿತು. ಈ ರ‍್ಯಾಲಿಯಲ್ಲಿ ಆಗಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರದ ಅರಣ್ಯ ಸಚಿವರಾಗಿದ್ದ ಚೌದರಿ ಲಾಲ್ ಸಿಂಗ್ ಮತ್ತು ಕೈಗಾರಿಕಾ ಸಚಿವ ಚಂದರ್ ಪ್ರಕಾಶ್ ಗಂಗಾ ಭಾಗವಹಿಸಿದರು ಮತ್ತು ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಪೊಲೀಸರನ್ನು ಮತ್ತು ಅಪ್ರಾಪ್ತನನ್ನು ಬಂಧಿಸಿರುವುದಕ್ಕೆ ಕಿಡಿ ಕಾರಿದರು. ಈ ಮೂಲಕ ಆರೋಪಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಭಂಡ ಧೈರ್ಯ, ಹುಚ್ಚು ಆವೇಶವನ್ನು ಮೂಡಿಸಿದರು. ಅಂದಹಾಗೆ,

ಯಾವುದೇ ಕ್ರಿಮಿನಲ್ ಪ್ರಕರಣ ನಡೆದಾಗ ನಾಗರಿಕ ಸಮಾಜ ಮಾಡಬೇಕಾದುದೇನೆಂದರೆ ಕ್ರಿಮಿನಲ್‌ಗಳನ್ನು ಒಂಟಿಯಾಗಿಸುವುದು. ನಿಮಗೆ ನಮ್ಮ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವುದು. ಹುಬ್ಬಳ್ಳಿ ಪ್ರಕರಣ ಇದಕ್ಕೊಂದು ಉದಾಹರಣೆ.

ನೇಹಾ ಹಿರೇಮಠಳನ್ನು ಹತ್ಯೆಗೈದುದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಭಾಗಿಯಾದರು. ಶುಕ್ರವಾರದ ಜುಮಾ ನಮಾಝï‌ನ ಬಳಿಕ ಅಂಜುಮನ್ ಎ ಇಸ್ಲಾಮೀ ಸಂಘಟನೆಯ ಕುಂದಗೋಲ, ಕಲಗಟಗಿ, ಹುಬ್ಬಳ್ಳಿ, ಅಲ್‌ನವಾರ ಮತ್ತು ಧಾರವಾಡ ಘಟಕದ ಅಧ್ಯಕ್ಷರುಗಳು ಹುಬ್ಬಳ್ಳಿ ಪೊಲೀಸ್ ಕಮೀಷನರ್‌ರನ್ನು ಭೇಟಿಯಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಹಾಗೆಯೇ ಮುಸ್ಲಿಮ್ ಸಮುದಾಯದ ಪರವಾಗಿ ಸಂಘಟನೆಯ ನಾಯಕರು ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಇದರ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮತ್ತು ಪಕ್ಷಪಾತ ರಹಿತ ತನಿಖೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಘಟನೆಯ ನಾಯಕರು ಪತ್ರ ಬರೆದು ಒತ್ತಾಯಿಸಿದರು. ಇದರಾಚೆಗೆ ಇಡೀ ಕರ್ನಾಟಕಕ್ಕೆ ಸಂಬಂಧಿಸಿ ನೋಡುವುದಾದರೂ ಎಲ್ಲೂ ಮುಸ್ಲಿಮ್ ಸಮುದಾಯದ ಯಾರೂ ಈ ಕ್ರೌರ್ಯದ ಪರ ವಹಿಸಿ ಮಾತನಾಡಲೇ ಇಲ್ಲ. ಕಥುವಾದ ಹಿಂದೂ ಏಕ್ತಾ ಮಂಚ್ ರಚಿಸಿದಂತೆ ಮುಸ್ಲಿಮ್ ಸಮುದಾಯ ಮುಸ್ಲಿಮ್ ಏಕ್ತಾ ಮಂಚ್ ರಚಿಸಲಿಲ್ಲ. ಫಯಾಜ್  ನ ಪರ ರ‍್ಯಾಲಿ ನಡೆಸಲಿಲ್ಲ. ಎಲ್ಲಿಯ ವರೆಗೆಂದರೆ, ಆತನ ತಂದೆಯೇ ಆತನ ಪರ ನಿಲ್ಲಲಿಲ್ಲ. ಅಂದಹಾಗೆ,

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಪರಾಧಗಳನ್ನು ಶೂನ್ಯ ಸಂಖ್ಯೆಗೆ ಇಳಿಸಲು ಸಾಧ್ಯವೇ ಇಲ್ಲ. ಆದರೆ ಅಪರಾಧಿಗಳ ಪರ ವಹಿಸದೇ ಇರುವುದು, ತ್ವರಿತಗತಿಯಲ್ಲಿ ವಿಚಾರಣೆ ನಡೆಸುವುದು ಮತ್ತು ಹಿಂದೂ-ಮುಸ್ಲಿಮ್-ಸಿಕ್ಖ್ ಎಂಬ ಭೇದ ಇಲ್ಲದೇ ಪ್ರತಿ ಮನೆಗಳಲ್ಲೂ ಮಕ್ಕಳಿಗೆ ನೈತಿಕ ಹಾಗೂ ಜೀವನ ಪಾಠಗಳನ್ನು ಹೇಳಿಕೊಡುವುದಕ್ಕೆ ಸಾಧ್ಯವಿದೆ. ಇವು ಅಪರಾಧ ಪ್ರಕರಣಗಳನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಬಹುದು. ಅಷ್ಟಕ್ಕೂ 

ನರ್ಸರಿಯಿಂದ ಡಿಗ್ರಿಯವರೆಗೆ ಮತ್ತು ಬಸ್ಸು, ರೈಲು, ವಿಮಾನ, ಸರಕಾರಿ ಕಚೇರಿಗಳಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್  ಕಾಲೇಜು ಮತ್ತು ಕೀಡಾ ಕ್ಷೇತ್ರದ ವರೆಗೆ ಎಲ್ಲೆಲ್ಲೂ ಹೆಣ್ಣು ಮತ್ತು ಗಂಡು ಜೊತೆಯಾಗಿಯೇ ಇರುವ ಸಾಮಾಜಿಕ ವಾತಾವರಣದಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನಿಂದ ಅಥವಾ ಮುಸ್ಲಿಮ್ ಯುವತಿ ಹಿಂದೂ ಯುವಕನಿಂದ ಆಕರ್ಷಿತವಾಗುವುದರಲ್ಲಿ ಅಚ್ಚರಿಯೂ ಇಲ್ಲ, ಅದು ಎಂಟನೇ ಅದ್ಭುತವೂ ಅಲ್ಲ. ಹರೆಯದಲ್ಲಿ ಆಕರ್ಷಣೆ ಸಹಜ. ಹೆಣ್ಣು ಮತ್ತು ಗಂಡು ಜೊತೆಯಾಗಿ ಕಲಿಯುವಾಗ, ಅವರು ಉದ್ಯೋಗ ಮಾಡುವಾಗ ಆಕರ್ಷಣೆ ಸಹಜ ಮತ್ತು ಕೆಲವೊಮ್ಮೆ ಪ್ರೇಮಾಂಕರವಾಗುವುದೂ ಸಹಜ. ಹರೆಯದಲ್ಲಾಗುವ ಈ ಬೆಳವಣಿಗೆಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ರಂಪಾಟ ಮಾಡುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಇನ್ನೇನೂ ಆಗದು. ಅಂದಹಾಗೆ,

ಹಿಂದೂ  ಮತ್ತು ಮುಸ್ಲಿಮರು ಈ ದೇಶದಲ್ಲಿ ವೈರಿಗಳಂತೆ ಬದುಕುವುದರಿಂದ ಈ ದೇಶದ ಅಭಿವೃದ್ಧಿಗೂ ತೊಡಕು ಮತ್ತು ಈ ಎರಡೂ ಸಮುದಾಯಗಳ ಆರೋಗ್ಯಕ್ಕೂ ಕೇಡು. ಸದ್ಯ ಆಗಬೇಕಿರುವುದು ಏನೆಂದರೆ, ಕ್ರಿಮಿನಲ್ ಕೃತ್ಯಗಳು ಎರಡೂ ಸಮುದಾಯಗಳ ಸಂಬಂಧವನ್ನು ನಿರ್ಧರಿಸುವ ಮಾನದಂಡ ಆಗದಂತೆ ನೋಡಿಕೊಳ್ಳುವುದು ಮತ್ತು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗುವವರನ್ನು ಧರ್ಮ ನೋಡದೇ ಖಂಡಿಸಿ ಅವರಿಂದ ಅಂತರವನ್ನು ಕಾಪಾಡಿಕೊಳ್ಳುವುದು. ಹಾಗೆಯೇ ಪ್ರತಿ ಮನೆಗಳಲ್ಲೂ ಮಕ್ಕಳನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಬೆಳೆಸುವುದು.

ಪ್ರೀತಿ-ಪ್ರೇಮದ ವಿಷಯದಲ್ಲಿ ಹೆಣ್ಣಿನಷ್ಟು ಸಹನೆ ಗಂಡಿನಲ್ಲಿರುವುದಿಲ್ಲ. ಹೆಣ್ಣು ಹೆಚ್ಚು ಪ್ರಬುದ್ಧತೆಯಿಂದ ನಡಕೊಂಡರೆ ಗಂಡು ಭಾವುಕತೆಗೆ ಹೆಚ್ಚು ಒತ್ತು ನೀಡುತ್ತಾನೆ. ಹೆಣ್ಣಿನಲ್ಲಿ ಪ್ರಾಕ್ಟಿಕಲ್ ಪ್ರಜ್ಞೆ ಹೆಚ್ಚು. ಗಂಡಿನಲ್ಲಿ ಹುಚ್ಚು ಆವೇಶ ಮತ್ತು ಕ್ಷಣದ ಭಾವುಕತೆಗೇ ಹೆಚ್ಚು ಮಾರ್ಕು. ಈ ಎರಡೂ ಭಿನ್ನ ಗುಣಗಳ ಜೀವಗಳು ಪರಸ್ಪರ ಆಕರ್ಷಣೆಗೆ ಒಳಗಾಗುವಾಗ ವ್ಯತಿರಿಕ್ತ ನಡವಳಿಕೆಗಳು ವ್ಯಕ್ತವಾಗುವುದು ಅಸಹಜ ಅಲ್ಲ. ಇಂಥ ಸಂದರ್ಭಗಳಲ್ಲಿ ಯುವಕ-ಯುವತಿಯರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯ ಇರುತ್ತದೆ. ಭಾವನಾತ್ಮಕ ಸನ್ನಿವೇಶಗಳನ್ನು ನಿಭಾಯಿಸುವ ಕಲೆಯನ್ನು ಹರೆಯದ ಮಕ್ಕಳಿಗೆ ಪ್ರತಿ ಮನೆಯಲ್ಲೂ ತಿಳಿಸಿಕೊಡುವ ವ್ಯವಸ್ಥೆ ಆಗಬೇಕಿದೆ. ತನ್ನ ಮಗ ಅಥವಾ ಮಗಳು ಅಂಥವಳಲ್ಲ ಎಂಬ ಭಾವವನ್ನು ಬಿಟ್ಟು, ಪ್ರತಿ ಮಕ್ಕಳಲ್ಲೂ ಹೆಣ್ಣು-ಗಂಡಿನ ನಡುವಿನ ಆಕರ್ಷಣೆ ಮತ್ತು ಅದರಿಂದ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಪೋಷಕರು ವಿವರಿಸಿಕೊಡುವ ಅಗತ್ಯವಿದೆ. ಸಾಮಾನ್ಯವಾಗಿ ಇತರೆಲ್ಲ ವಿಷಯಗಳನ್ನು ಹಂಚಿಕೊಳ್ಳುವ ಮಕ್ಕಳು ಪ್ರೇಮವನ್ನು ಹೆತ್ತವರೊಂದಿಗೆ ಹಂಚಿಕೊಳ್ಳುವುದು ಕಡಿಮೆ. ಆಕರ್ಷಣೆಯು ಪ್ರೇಮವಾಗಿ ಬಲಿತು ಬಲಿಷ್ಠವಾದ ಬಳಿಕ ಬಹುತೇಕ ಪ್ರೇಮ ಪ್ರಕರಣಗಳು ಹೆತ್ತವರ ಗಮನಕ್ಕೆ ಬರುವುದಿದೆ. ಇದು ಆ ಬಳಿಕದ ಹಲವಾರು ಸವಾಲುಗಳಿಗೂ ಕಾರಣವಾಗುತ್ತದೆ. ಆದ್ದರಿಂದ,

ಮಕ್ಕಳೊಂದಿಗೆ ಹೆತ್ತವರು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ಪ್ರೇಮವೂ ಸೇರಿದಂತೆ ಪ್ರತಿಯೊಂದನ್ನೂ ಹೆತ್ತವರೊಂದಿಗೆ ಹಂಚಿಕೊಳ್ಳುವುದಕ್ಕೆ ಮಕ್ಕಳು ಮನಸ್ಸು ಮಾಡುವಂಥ ಗೆಳೆತನದ ಸಂಬಂಧವನ್ನು ಬೆಳೆಸಬೇಕು. ಅಗಾಗ್ಗೆ ಮಕ್ಕಳಿಗೆ ಇಂಥ ವಿಷಯಗಳಲ್ಲಿ ಮಾರ್ಗದರ್ಶನ ಮಾಡುತ್ತಿರಬೇಕು. ಎಲ್ಲಾದರೂ ನಡೆದ ಪ್ರಕರಣವನ್ನು ನೆಪ ಮಾಡಿಕೊಂಡು ಮಕ್ಕಳನ್ನು ಹತ್ತಿರ ಕೂರಿಸಿ ತಿಳುವಳಿಕೆ ನೀಡುತ್ತಿರಬೇಕು. ಈ ತರಬೇತಿಯು ಭವಿಷ್ಯದಲ್ಲಿ ಮಕ್ಕಳಿಗೆ ನೆರವಾಗಬಹುದು. ಸಿಟ್ಟಿನ ಭರದಲ್ಲೋ  ಅಥವಾ ನಿರಾಶೆಯ ಸನ್ನಿವೇಶದಲ್ಲೋ  ಹುಚ್ಚು ನಿರ್ಧಾರ ತಾಳದಂತೆ ಅವರನ್ನು ತಡೆಯುವುದಕ್ಕೆ ಹೆತ್ತವರು ಎಂದೋ ನೀಡಿದ ಮಾರ್ಗದರ್ಶನ ಪ್ರಯೋಜನಕ್ಕೆ ಬರಬಹುದು. ಅಂದಹಾಗೆ,

ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಮ್ ಸಮುದಾಯ ನಡಕೊಂಡ ರೀತಿ ಅತ್ಯಂತ ಪ್ರಬುದ್ಧವಾದುದು. ‘ನ್ಯಾಯ ನಿನ್ನ ಹೆತ್ತವರ ವಿರುದ್ಧ ಇದ್ದರೆ ನೀನು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ..’ ಎಂಬ ಪವಿತ್ರ ಕುರ್‌ಆನಿನ ಧ್ಯೇಯಕ್ಕೆ ಅನ್ವರ್ಥವಾದುದು. ಇದಕ್ಕಾಗಿ ಹುಬ್ಬಳ್ಳಿಯ ಅಂಜುಮನ್-ಎ-ಇಸ್ಲಾಮ್  ಸಂಘಟನೆಯನ್ನು ಅಭಿನಂದಿಸುವೆ.

ಸನ್ಮಾರ್ಗ 

Saturday, April 20, 2024

ಕುರ್ ಆನ್ ನಲ್ಲಿ ಉಪವಾಸದ ವಚನಗಳ ನಡುವೆ ಪ್ರಾರ್ಥನೆಯ ವಚನ ಏಕಿದೆ?






ಪವಿತ್ರ ಕುರ್‌ಆನಿನ 185 ವಚನದಲ್ಲಿ ರಮಝಾನ್ ಮತ್ತು ಉಪವಾಸದ ಬಗ್ಗೆ ಹೇಳಿರುವ ಅಲ್ಲಾಹನು 186ನೇ ವಚನದಲ್ಲಿ ಪ್ರಾರ್ಥನೆಯ ಬಗ್ಗೆ  ಹೇಳಿದ್ದಾನೆ. ಈ ಎರಡೂ ವಚನಗಳು ಹೀಗಿವೆ:

1. ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯ ಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳ ನ್ನೊಳಗೊಂಡಿರುವ `ಕುರ್‌ಆನ್' ಅವತೀರ್ಣಗೊಂಡ ತಿಂಗಳು `ರಮಝಾನ್' ಆಗಿರುತ್ತದೆ. ಆದುದ ರಿಂದ ಯಾವನಾದರೂ ಈ ತಿಂಗಳನ್ನು  ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು  ಮಾಡಲು ಇಚ್ಛಿಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗದರ್ಶನದ ಮೂಲಕ  ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ  ಕೊಡಲಾಗಿದೆ. (ಅಲ್‌ಬಕರ: 185)

2. ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು  ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ  ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. (ಇದನ್ನು ಅವರಿಗೆ ತಿಳಿಸಿಬಿಡಿರಿ) ಅವರು ಸನ್ಮಾರ್ಗ ಪಡೆಯಲೂಬಹುದು. (ಅಲ್‌ಬಕರ:  186)

ಇದರ ನಂತರದ 187ನೇ ವಚನದಲ್ಲಿ ಅಲ್ಲಾಹನು ಪುನಃ ಉಪವಾಸದಲ್ಲಿ ಏನು ಮಾಡಬಹುದು ಮತ್ತು ಮಾಡಬಾರದು ಎಂಬುದನ್ನು  ಹೇಳಿದ್ದಾನೆ. ಅಂದರೆ ಉಪವಾಸದ ಬಗ್ಗೆ ವಿವರಿಸುತ್ತಾ ಮಧ್ಯದಲ್ಲಿ ತುಂಡರಿಸಿ ಪ್ರಾರ್ಥನೆಯ ಬಗ್ಗೆ ಹೇಳಿ ಪುನಃ ಉಪವಾಸದ ಕುರಿತಾದ  ಮಾರ್ಗದರ್ಶನವನ್ನು ಅಲ್ಲಾಹನು ನೀಡಿದ್ದಾನೆ. ಅಲ್ಲಾಹನು ಹೀಗೇಕೆ ಮಾಡಿದ? 186ನೇ ವಚನದಲ್ಲಿ ಉಪವಾಸ ಅನ್ನುವ ಪದವೇ ಇಲ್ಲ.  ಅದರ ಹಿಂದೆ ಮತ್ತು ಮುಂದಿನ ವಚನಗಳೆರಡೂ ಉಪವಾಸವನ್ನೇ ಕೇಂದ್ರೀಕರಿಸಿವೆ. ಹಾಗಿದ್ದರೆ ಮಧ್ಯದ ವಚನದಲ್ಲಿ ಉಪವಾಸಕ್ಕೆ ಸಂಬಂಧವೇ  ಇಲ್ಲದಂತೆ ಕಾಣುವ ವಚನವೊಂದನ್ನು ಅಲ್ಲಾಹನು ಹೇಳಲು ಕಾರಣವೇನು? ಬಹುಶಃ,

ಪ್ರಾರ್ಥನೆಗೆ ಇಲ್ಲಿರುವ ಮಹತ್ವವನ್ನು ಸಾರುವುದಕ್ಕಾಗಿಯೇ ಉಪವಾಸದ ವಚನಗಳನ್ನು ತುಂಡರಿಸಿಕೊಂಡು ಈ ವಚನ ನಡುವೆ ಬಂದಿರಬೇಕು  ಎಂದೇ ಅನಿಸುತ್ತದೆ. ಈ 186ನೇ ವಚನ ವನ್ನು ನೀವು ಮತ್ತೊಮ್ಮೆ ಗಮನವಿಟ್ಟು ತಾಳ್ಮೆಯಿಂದ ಓದಿ. ‘ನನ್ನ ದಾಸರು’ ಎಂಬ ಪದದಿಂದ ಈ  ವಚನವನ್ನು ಅಲ್ಲಾಹನು ಆರಂಭಿಸಿದ್ದಾನೆ. ನನ್ನ ದಾಸನು ನನ್ನಲ್ಲಿ ಪ್ರಾರ್ಥಿಸಿದರೆ ನಾನು ಉತ್ತರಿಸುತ್ತೇನೆ ಮತ್ತು ಅವರಿಗೆ ತೀರಾ ನಿಕಟನಾಗಿರುತ್ತೇನೆ ಎಂದು ಅಲ್ಲಾಹನು ಹೇಳುತ್ತಾನೆ. ನಿಜವಾಗಿ,

ಪ್ರಾರ್ಥನೆ ಎಂಬುದು ಈ ಜಗತ್ತಿನ ಅತಿದೊಡ್ಡ ಅಯುಧ. ಮನುಷ್ಯ ಸಂತೋಷದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಸಮ ಪ್ರಮಾಣದಲ್ಲಿ  ಬಳಸಬಹುದಾದ ಪ್ರಬಲ ಆಯುಧವೊಂದಿದ್ದರೆ ಅದು ಪ್ರಾರ್ಥನೆ ಮಾತ್ರ. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಒಂದೈದು ನಿಮಿಷ ಧ್ಯಾನಸ್ಥವಾಗಿ  ಪ್ರಾರ್ಥಿಸಿದ ವ್ಯಕ್ತಿ ಆ ಬಳಿಕ ಆ ಸ್ಥಿತಿಯಿಂದ ಹೊರಬಂದಾಗ ಮೊದಲಿನಂತಿರವುದಿಲ್ಲ. ಯಾವುದೋ ಒಂದು ಅವ್ಯಕ್ತ ಶಕ್ತಿ ಅವರೊಳಗೆ  ಸಂಚಯಿಸಿಕೊಂಡಿರುತ್ತದೆ. ಯಾವುದೋ ಬಗೆಯ ಆಶಾವಾದವೊಂದು ಗರಿಗೇರಿರುತ್ತದೆ. ತನ್ನ ಪ್ರಾರ್ಥನೆಯನ್ನು ಆಲಿಸಲು ಒಬ್ಬನಿದ್ದಾನೆ ಮತ್ತು  ಆತ ಪ್ರಾರ್ಥನೆಯ ಬೇಡಿಕೆಯನ್ನು ನೇರವೇರಿಸಲು ಶಕ್ತನಿದ್ದಾನೆ ಎಂದು ಭರವಸೆ ಅತ್ಯಂತ ನಿರಾಶಾದಾಯಕ ಸನ್ನಿವೇಶದಲ್ಲೂ ಶಕ್ತಿಯನ್ನು  ತುಂಬುತ್ತದೆ. ಆದರೆ ಈ ಪ್ರಾರ್ಥನೆಯ ವೇಳೆ ವ್ಯಕ್ತಿ ದಾಸನಾಗಿರಬೇಕು. ಅರ್ಥಾತ್ ದೇವನು ಒಡೆಯ ಎಂಬ ಭಾವ ವ್ಯಕ್ತಿಯೊಳಗೆ  ಶಕ್ತಿಯುತವಾಗಿ ನೆಲೆಸಿರಬೇಕು. ಪ್ರಾರ್ಥನೆಗೆ ಇರುವ ಮೊಟ್ಟಮೊದಲ ಅರ್ಹತೆ ಇದು. ಎರಡನೆಯದ್ದು, ಅಲ್ಲಾಹನು ತನಗೆ ಅತ್ಯಂತ ನಿಕಟ ನಾಗಿದ್ದಾನೆ ಎಂಬ ಬಲವಾದ ನಂಬಿಕೆ. ಪ್ರಾರ್ಥಿಸುವವರಲ್ಲಿ ಈ ಎರಡೂ ಭಾವನೆಗಳು ಜೊತೆಯಾದಾಗ ಆ ಪ್ರಾರ್ಥನೆಗೆ ಉತ್ತರಿಸುವುದಾಗಿ  ಅಲ್ಲಾಹನು ಹೇಳುತ್ತಾನೆ. ಇಲ್ಲಿರುವ ಪ್ರಶ್ನೆಯೇನೆಂದರೆ,

ಪ್ರಾರ್ಥಿಸುವಾಗ ನಾವು ಈ ಎರಡೂ ಭಾವಗಳೊಂದಿಗೆ ಸಜ್ಜಾಗುತ್ತೇವೆಯೋ ಎಂಬುದು. ಕಡ್ಡಾಯ ನಮಾಝï ಮುಗಿದ ಬಳಿಕ ನಾವು  ಮಾಡುವ ಪ್ರಾರ್ಥನೆಗಳ ಸ್ವರೂಪ ಹೇಗಿದೆ? ಅದೊಂದು ಸಾಂಪ್ರದಾಯಿಕ ಕ್ರಿಯೆ ಎಂಬುದರ ಆಚೆಗೆ ದಾಸ ಮತ್ತು ಒಡೆಯನ ನಡುವಿನ  ಸಂಭಾಷಣೆಯಂತೆ  ಪರಿಭಾವಿಸಿಕೊಂಡು ಪ್ರಾರ್ಥಿಸುವವರು ಎಷ್ಟು ಮಂದಿ ಇದ್ದಾರೆ? ಅಲ್ಲಾಹನು ತನ್ನ ನಿಕಟ ಇದ್ದಾನೆ ಎಂದು ಭಾವಿಸಿಕೊಂಡು  ಮಾಡುವ ಪ್ರಾರ್ಥನೆಯ ಸ್ವರೂಪ ಹೇಗಿರಬಹುದು? ಅಂಥ ಭಾವ ನಮ್ಮೊಳಗಿದ್ದರೆ ನಮ್ಮ ದೇಹಭಾಷೆ ಹೇಗಿರಬಹುದು? ಏಕಾಗ್ರತೆ  ಹೇಗಿರಬಹುದು? ಎಷ್ಟು ಹೊತ್ತು ಪ್ರಾರ್ಥಿಸಬಹುದು? ಸುಮ್ಮನೆ ನಾವಿವತ್ತು ಮಾಡುವ ಪ್ರಾರ್ಥನೆಯ ಬಗ್ಗೆ ಆಲೋಚಿಸೋಣ. ನಾವೆಷ್ಟು  ಏಕಾಗ್ರತೆಯಿಂದ ಪ್ರಾರ್ಥಿಸುತ್ತೇವೆ? ದೀನವಾಗಿ ಮತ್ತು ಅಲ್ಲಾಹನು ನಿಕಟವೇ ಇದ್ದಾನೆ ಎಂಬ ಭಾವದಿಂದ ದಿನದಲ್ಲಿ ಬಿಡಿ ವಾರದಲ್ಲಿ ಒಮ್ಮೆಯಾದರೂ ಪ್ರಾರ್ಥಿಸಲು ಸಾಧ್ಯವಾಗುತ್ತಾ? ಹಾಗಂತ, ಪ್ರತಿದಿನ ಪ್ರಾರ್ಥಿಸುವುದಿಲ್ಲ ಎಂದಲ್ಲ. ಪ್ರತಿ ನಮಾಝï‌ನಲ್ಲೂ ನಾವು ಪ್ರಾರ್ಥಿಸುತ್ತೇವೆ.  ಆದರೆ, ಹೀಗೆ ಪ್ರಾರ್ಥಿಸುವಾಗ ನಮ್ಮ ಮನಸ್ಸು ಎಲ್ಲಿರುತ್ತದೆ? ನಮ್ಮ ಕಣ್ಣು, ಕೈ-ಕಾಲುಗಳ ಭಾವನೆಗಳು ಏನಿರುತ್ತವೆ? ನಾಲಗೆಗೂ  ಹೃದಯಕ್ಕೂ ಯಾವ ಸಂಬಂಧ ಇರುತ್ತದೆ? ನಾವು ಎಷ್ಟು ಬಾರಿ ದಾಸರಾಗಿ ಪ್ರಾರ್ಥಿಸಿದ್ದೇವೆ? ಒಡೆಯ ತನ್ನ ಪಕ್ಕವೇ ಇದ್ದಾನೆ ಎಂದು ಭಾವಿಸಿ  ಪ್ರಾರ್ಥಿಸಿದ ಪ್ರಾರ್ಥನೆಗಳು ಎಷ್ಟಿವೆ? ಪ್ರಾರ್ಥನೆಯ ಸಂದರ್ಭದಲ್ಲಿ ನಾವೆಷ್ಟು ಬಾರಿ ಒಡೆಯರಾಗಿಲ್ಲ? ಅಲ್ಲಾಹನು ದಾಸನೇನೋ ಎಂದು  ಭಾವಿಸುವಂತೆ ನಡಕೊಂಡಿಲ್ಲ? ನಿಜವಾಗಿ,

ಉಪವಾಸದ ದಿನಗಳಲ್ಲಿ ಮನುಷ್ಯ ದಾಸನಾಗುವಷ್ಟು ಮತ್ತು ಅಲ್ಲಾಹ್ ಒಡೆಯನಾಗುವಷ್ಟು ಇನ್ನಾವ ತಿಂಗಳಲ್ಲೂ ಆಗಲ್ಲ ಅನಿಸುತ್ತದೆ.  ರಮಝಾನ್‌ನಲ್ಲಿ ಮಾಡುವಷ್ಟು ಪ್ರಾರ್ಥನೆ ಇನ್ನಾವ ತಿಂಗಳಲ್ಲೂ ಮಾಡುವ ಸಾಧ್ಯತೆ ಇಲ್ಲ. ಉಪವಾಸ ಸ್ಥಿತಿಯು ವ್ಯಕ್ತಿಯನ್ನು ಪ್ರಾರ್ಥನೆಗೆ  ಸಜ್ಜುಗೊಳಿಸುವಷ್ಟು ಇನ್ನಾವ ಸ್ಥಿತಿಯೂ ಸಜ್ಜುಗೊಳಿಸುವುದು ಸುಲಭ ಅಲ್ಲ. ಆದ್ದರಿಂದಲೇ, ಅಲ್ಲಾಹನು ಉಪವಾಸದ ವಚನಗಳ ನಡುವೆ  ಪ್ರಾರ್ಥನೆಯ ವಚನವನ್ನೂ ಇಟ್ಟಿರಬೇಕು. ಆದರೆ, ತಂತ್ರಜ್ಞಾನದ ಈ ಉತ್ತುಂಗ ಕಾಲದಲ್ಲಿ ಉಪವಾಸಕ್ಕೂ ಸವಾಲುಗಳು ಎದುರಾಗಿವೆ. ನಾಲ್ಕೈದು  ದಶಕಗಳ ಹಿಂದೆ ಆಗಿದ್ದರೆ ನೋಡಬಾರದ್ದನ್ನು ನೋಡುವುದಕ್ಕೂ ಮತ್ತು ಆಲಿಸಬಾರದ್ದನ್ನು ಆಲಿಸುವುದಕ್ಕೂ ಮಿತಿಗಳಿದ್ದುವು. ಸಿನಿಮಾ  ನೋಡಬೇಕೆಂದರೆ ನಗರದಲ್ಲಿರುವ ಥಿಯೇಟರ್‌ಗೇ ಹೋಗಬೇಕಿತ್ತು. ಆಡಬಾರದ್ದನ್ನು ಆಡಬೇಕೆಂದರೆ ವ್ಯಕ್ತಿಯನ್ನು ಭೇಟಿಯಾಗಬೇಕಿತ್ತು.  ಕೆಡುಕುಗಳೆಂದು ನಾವು ಯಾವುದನ್ನೆಲ್ಲ ಪಟ್ಟಿ ಮಾಡುತ್ತೇವೋ ಅವೆಲ್ಲವೂ ತೀರಾ ಸುಲಭವಾಗಿ ಲಭ್ಯವಾಗದಷ್ಟು ತುಟ್ಟಿಯಾಗಿದ್ದುವು. ಉಪವಾಸದ  ಸಮಯದಲ್ಲಿ ಏನನ್ನಾದರೂ ತಿನ್ನಬೇಕೆಂದರೆ ಹೊಟೇಲಿಗೆ ಹೋಗಿಯೇ ತಿನ್ನಬೇಕಿತ್ತು. ಆದರೆ ಇವತ್ತು ಅಂಥ ಬೇಲಿಗಳೇ ಇಲ್ಲ. ಒಂದು  ಬೆಳಗಾತ ಮೊಬೈಲ್ ಹಿಡಿದು ಕುಳಿತರೆ ಇಫ್ತಾರ್ ವರೆಗೂ ನೋಡುವಷ್ಟು ಮತ್ತು ಆಲಿಸುವಷ್ಟು ವಿಷಯಗಳು ಅದರಲ್ಲಿರುತ್ತವೆ. ನಮ್ಮ ಇಡೀ ದಿನದ ಸಮಯವನ್ನು ಒಂದು ಮೊಬೈಲ್‌ಗೆ ಕಸಿದುಕೊಳ್ಳುವ ಸಾಮರ್ಥ್ಯವಿದೆ. ನಮಾಝï ನಲ್ಲೂ ನಮ್ಮ ಏಕತಾನತೆಯನ್ನು ಮೊಬೈಲ್  ಕಸಿಯುತ್ತದೆ. ಪ್ರಾರ್ಥನೆಯಲ್ಲೂ ಅದು ನಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಡ್ರೈವಿಂಗ್‌ನಲ್ಲೂ ನಮ್ಮನ್ನು ಅದು ವಿಚಲಿತಗೊಳಿಸುತ್ತದೆ. ಗಂಭೀರ  ಸಭೆ ನಡೆಯುವಾಗಲೂ ನಮ್ಮನ್ನು ಅದು ಕೆಣಕುತ್ತದೆ. ಎಂಥ ಸಂದರ್ಭಗಳಲ್ಲೂ ಅಚಾನಕ್ಕಾಗಿ ನಮ್ಮ ಕೈ ಮೊಬೈಲ್‌ನತ್ತ ಹೋಗುವಷ್ಟು ಅದು  ಪರಮಾತ್ಮವಾಗಿ ಬಿಟ್ಟಿದೆ. ದಾಸ ಮತ್ತು ಒಡೆಯನ ನಡುವಿನ ಅತ್ಯಂತ ಖಾಸಗಿ ಸಂಭಾಷಣೆಗೂ ಕತ್ತರಿ ಹಾಕುವಷ್ಟು ಬೃಹತ್ತಾಗಿ ಬೆಳೆದಿರುವ ಈ  ಮೊಬೈಲ್ ಹಾವಳಿಯಿಂದ ಮನಸ್ಸನ್ನು ತಡೆದಿಟ್ಟುಕೊಳ್ಳುವುದು ಹೇಗೆ? ನಿಜಕ್ಕೂ,

ಇವತ್ತು ನಾವು ಯಾವುದನ್ನೆಲ್ಲಾ ಅಮಲು ಪದಾರ್ಥಗಳು ಎಂದು ಪಟ್ಟಿ ಮಾಡುತ್ತೇವೆಯೋ ಅವುಗಳಲ್ಲಿ ಮೊದಲ ಸ್ಥಾನ ದಲ್ಲಿಡಬೇಕಾದ ಎಲ್ಲ  ಅರ್ಹತೆ ಮೊಬೈಲ್‌ಗಿದೆ. ಯುವ ಸಮೂಹ ವನ್ನಂತೂ ಅದು ಆವರಿಸಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಉಪವಾಸಿಗರು ಏಕಾಗ್ರಚಿತ್ತರಾಗುವುದು  ಹಾಗೂ ಒಡೆಯ ಮತ್ತು ದಾಸ ಎಂಬ ಭಾವದೊಂದಿಗೆ ಧ್ಯಾನಸ್ಥ ಸ್ಥಿತಿಗೆ ತಲುಪಿ ಪ್ರಾರ್ಥಿಸುವುದು ಬಹುದೊಡ್ಡ ಸವಾಲು. ಒಂದು ಕ್ಲಿಕ್  ಮಾಡಿದರೆ ನೀವಿರುವಲ್ಲಿಗೇ ನಿಮ್ಮಿಷ್ಟದ ಸ್ವಾದಿಷ್ಟ ಆಹಾರ ತಲುಪಿಸುವ ವ್ಯವಸ್ಥೆ ಇವತ್ತಿನದು. ಹಿಂದಿನಂತೆ  ಹೊಟೇಲಿಗೇ ಹೋಗಿ ತಿನ್ನಬೇಕಾದ  ಮುಜುಗರದ ಸ್ಥಿತಿ ಉಪವಾಸಿಗನಿಗೆ ಇವತ್ತಿಲ್ಲ. ನಿಜವಾಗಿ, ಇದನ್ನು ಸೌಲಭ್ಯ ವಾಗಿಯೂ ನೋಡಬಹುದು ಅಥವಾ ಸವಾಲಾಗಿಯೂ ನೋಡಬಹುದು. ಉಪವಾಸವನ್ನು ಭಂಗಗೊಳಿಸುವ ಎಲ್ಲವೂ ತನ್ನೆದುರು ಸುಲಭವಾಗಿ ಲಭ್ಯವಿದ್ದೂ ತಾನು ಅವುಗಳಿಂದೆಲ್ಲ ದೂರ ನಿಲ್ಲುವು ದಕ್ಕೆ  ಆಂತರಿಕ ಶಕ್ತಿ ಬೇಕು. ಒಂದುರೀತಿಯಲ್ಲಿ ಈ ದಿನಗಳ ಉಪವಾಸ ಈ ಹಿಂದಿನ ತಲೆಮಾರಿನ ಉಪವಾಸಕ್ಕೆ ಹೋಲಿಸಿದರೆ ಹೆಚ್ಚು ಸವಾಲಿನದ್ದು.  ಈ ಹಿಂದಿನ ತಲೆಮಾರಿಗೆ ಲಭ್ಯವಿಲ್ಲದ ಮತ್ತು ಉಪವಾಸ ಭಂಗಗೊಳ್ಳುವ ಅಥವಾ ಅದರ ನಿಜ ಉದ್ದೇಶವನ್ನು ತೆಳ್ಳಗಾಗಿಸುವ ಅನೇಕಾರು  ಸೌಲಭ್ಯಗಳು ಇವತ್ತಿನ ತಲೆಮಾರಿಗೆ ಲಭ್ಯವಾಗಿದೆ. ಈ ಸೌಲಭ್ಯಗಳ ಹೊರತಾಗಿಯೂ ಓರ್ವರು ವಿಚಲಿತರಾಗದೇ ಮತ್ತು ಏಕಾಗ್ರತೆಯನ್ನು  ಕಳಕೊಳ್ಳದೇ ಉಪವಾಸ ವ್ರತ ಆಚರಿಸಲು ಯಶಸ್ವಿಯಾಗುತ್ತಾರೆಂದರೆ ಅದೊಂದು ಸಾಧನೆಯೇ ಸರಿ. ಹಸಿವು ಮತ್ತು ಬಾಯಾರಿಕೆ ಎಂಬ  ಸಾಮಾನ್ಯ ಪರಿಕಲ್ಪನೆಯ ಆಚೆಗೆ ಉಪವಾಸ ಇವತ್ತು ವಿಸ್ತರಿಸಿಕೊಂಡಿದೆ. ಹಸಿವನ್ನಾದರೂ ತಡಕೊಳ್ಳಬಹುದು, ಬಾಯಾರಿಕೆಯನ್ನಾದರೂ  ಸಹಿಸಿಕೊಳ್ಳಬಹುದು, ಆದರೆ, ಈ ಮೊಬೈಲ್‌ನಿಂದ ತಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೊಂದು ಇವತ್ತು ಮುನ್ನೆಲೆಗೆ ಬಂದಿದೆ. ಅದು  ಯುವಸಮೂಹವೂ ಸೇರಿ ಒಂದಿಡೀ ಸಮೂಹದ ಏಕಾಗ್ರತೆಯನ್ನು ಚೆಲ್ಲಾಪಿಲ್ಲಿಗೊಳಿಸಿದೆ. ವ್ಯಸನದ ಹೊಸ ಮಾದರಿಯನ್ನು ಪರಿಚಯಿಸಿದೆ.  ಇಂಥ ಸಂದರ್ಭದಲ್ಲಿ ಉಪವಾಸದ ಉದ್ದೇಶದೆಡೆಗೆ ನ್ಯಾಯಯುತವಾಗಿ ತಲುಪುವುದು ತೀರಾ ಸುಲಭ ಅಲ್ಲ. ನಿಜವಾಗಿ,

ಉಪವಾಸ ಪ್ರತಿವರ್ಷ ಯಾಕೆ ಅಗತ್ಯ ಎಂಬ ಪ್ರಶ್ನೆಗೆ ಪ್ರತಿವರ್ಷ ಆವಿಷ್ಕಾರಗೊಳ್ಳುವ ಈಗಿನ ಹೊಸ ಹೊಸ ತಂತ್ರಜ್ಞಾನಗಳು ಉತ್ತರವನ್ನು  ಹೇಳುತ್ತವೆ. ಈ ತಂತ್ರಜ್ಞಾನಗಳು ಮನುಷ್ಯರನ್ನು ದಾಸರನ್ನಾಗಿ ಮಾಡುತ್ತಲೂ ಇವೆ. ಅದರ ಆಕರ್ಷಣೆಯಿಂದ ಮನುಷ್ಯ ತಪ್ಪಿಸಿಕೊಳ್ಳಲಾಗದೇ  ಒದ್ದಾಡುತ್ತಿರುತ್ತಾನೆ/ಳೆ. ಇಂಥ ಸಂದರ್ಭದಲ್ಲಿ ಉಪವಾಸ ಮತ್ತೆ ದಾಸ ಮತ್ತು ಒಡೆಯನ ಸಂಬಂಧಗಳನ್ನು ನೆನಪಿಸುತ್ತದೆ. ತಂತ್ರಜ್ಞಾನದ  ದಾಸ್ಯತನದಿಂದ ಅಲ್ಲಾಹನ ದಾಸ್ಯತನದೆಡೆಗೆ ಮರಳಲು ಸಾಧ್ಯವಾ ಎಂದು ಪ್ರಶ್ನಿಸುತ್ತದೆ. ಅವುಗಳ ಗೀಳಿನಿಂದ ಹೊರಬಂದು ಒಡೆಯನಿಗಾಗಿ  ಏಕಾಗ್ರ ಚಿತ್ತನಾಗು ಎಂದು ಕರೆ ಕೊಡುತ್ತದೆ. ಇದೊಂದು ಸವಾಲು. ಯಾಕೆಂದರೆ, ಅಲ್ಲಾಹನು ಭೌತಿಕವಾಗಿ ಉಪವಾಸಿಗನ ಎದುರಿಲ್ಲ. ಆದರೆ  ಆಧುನಿಕ ತಂತ್ರಜ್ಞಾನಗಳು ಮತ್ತು ಅವು ಕೊಡುವ ಅಪರಿಮಿತ ಮನರಂಜನೆಗಳು ಭೌತಿಕವಾಗಿಯೇ ಜೊತೆಗಿವೆ. ಆದ್ದರಿಂದ ಅವುಗಳ ದಾಸ್ಯ ದಿಂದ ಹೊರಬಂದು ನೈಜ ಒಡೆಯನ ದಾಸನಾಗುವುದಕ್ಕೆ ವರ್ಷವರ್ಷವೂ ತರಬೇತಿಯ ಅಗತ್ಯ ಇದೆ. ಹಾಗೆಯೇ, ದಾಸ ಮತ್ತು ಒಡೆಯನ  ನಡುವೆ ನಿಕಟ ಸಂಪರ್ಕವೂ ಬೆಳೆಯಬೇಕಾಗಿದೆ. ಒಡೆಯನನ್ನು ಮರೆತ ದಾಸ ದಾರ ಕಡಿದು ಹೋದ ಗಾಳಿಪಟದಂತೆ. ಬಹುಶಃ,

ಉಪವಾಸದ ವಿವರಣೆಯುಳ್ಳ ವಚನಗಳ ನಡುವೆ ಪ್ರಾರ್ಥನೆಯ ವಚನವನ್ನು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಇದುವೇ ಕಾರಣ  ಇರಬೇಕು.


Saturday, February 10, 2024

ತೀರ್ಪು ನೀಡಿ ನಿವೃತ್ತರಾಗುವುದೋ ಅಲ್ಲ, ನಿವೃತ್ತರಾಗುವವರನ್ನೇ ಆಯ್ಕೆ ಮಾಡುವುದೋ?





The 1991 Act spoke “to our history and to the future of nation.. In preserving the character of places of public worship, the parliament has mandated in no uncertain terms that history and its wrongs shall not be used an instruments to oppress the present and the future...”

ಅಥವಾ

‘ಇತಿಹಾಸ ಮತ್ತು ಅದರ ತಪ್ಪುಗಳು ವರ್ತಮಾನ ಮತ್ತು ಭವಿಷ್ಯವನ್ನು ದಮನಿಸುವ ಸಾಧನಗಳನ್ನಾಗಿ ಬಳಸಬಾರದು. ಆರಾಧನಾ  ಸ್ಥಳಗಳ ಸ್ವರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾರ್ಲಿಮೆಂಟ್ ಸ್ಪಷ್ಟ ಪದಗಳಲ್ಲಿ ಇದನ್ನು ನಿರ್ದೇಶಿಸಿದೆ..’

ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ 2019 ನವೆಂಬರ್ 9ರಂದು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ  ರಂಜನ್ ಗೊಗೋಯ್, ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಐದು ಮಂದಿಯ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಈ ಉಲ್ಲೇಖವೂ ಇದೆ. ಇಲ್ಲಿ ಈ ಐವರು ನ್ಯಾಯಾಧೀಶರು  ಬೊಟ್ಟು ಮಾಡಿರುವುದು 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ 1991  ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. 

ಅದಕ್ಕೆ ಕಾರಣವೂ ಇತ್ತು. 

ಅದು ಬಾಬರಿ ಮಸೀದಿ ವಿವಾದವನ್ನು  ಕೈಗೊತ್ತಿಕೊಂಡ ಬಿಜೆಪಿ, ದೇಶದಾದ್ಯಂತ ಧರ್ಮ ಧ್ರುವೀಕರಣದಲ್ಲಿ ತೊಡಗಿದ್ದ ಕಾಲ. ಅಡ್ವಾಣಿ, ಜೋಶಿ, ವಾಜಪೇಯಿ ಸಹಿತ ಎಲ್ಲರೂ  ರಥಯಾತ್ರೆ, ಮಂದಿರ ನಿರ್ಮಾಣದ ವಿಷಯದಲ್ಲಿ ಸಕ್ರಿಯರಾಗಿದ್ದ ಸಂದರ್ಭ. ಇದೇವೇಳೆ, ವಿಶ್ವ ಹಿಂದೂ ಪರಿಷತ್ ಮತ್ತು ಇತರ  ಸಂಘಟನೆಗಳು ವಾರಣಾಸಿಯ ಜ್ಞಾನವಾಪಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ ಮೇಲೂ ಹಕ್ಕು ಮಂಡಿಸಿದುವು. ಈ  ಎರಡೂ ಮಸೀದಿಗಳನ್ನು ಹಿಂದೂಗಳಿಗೆ ಒಪ್ಪಿಸುವಂತೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ  ಘೋಷಿಸಿದುವು. ಅಲ್ಲದೇ, ದೇಶದಾದ್ಯಂತ ಇಂಥ 3000 ಮಸೀದಿಗಳಿದ್ದು, ಅವುಗಳನ್ನೂ ನಮ್ಮ ವಶಕ್ಕೆ ಒಪ್ಪಿಸಬೇಕೆಂಬ ವಾದವನ್ನು  ಮುಂದಿಟ್ಟವು. ಒಂದುಕಡೆ,
ಅಯೋಧ್ಯೆಗೆ ಸಂಬಂಧಿಸಿ ರಥಯಾತ್ರೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮತ್ತು ಶಾಹಿ ಈದ್ಗಾದ ಜೊತೆಗೆ 3000 ಮಸೀದಿಗಳ  ಮೇಲೆ ಹಕ್ಕು ಸ್ಥಾಪನೆಯ ಮಾತುಗಳು ಕೇಳಿ ಬರತೊಡಗಿದಂತೆಯೇ ನರಸಿಂಹರಾವ್ ಸರಕಾರ ಎಚ್ಚೆತ್ತುಕೊಂಡಿತು. ತುರ್ತಾಗಿ ಕಾನೂನೊಂದನ್ನು ರೂಪಿಸಿತು. 1947 ಆಗಸ್ಟ್ 15ರಂದು ಈ ದೇಶದ ಆರಾಧನಾ ಸ್ಥಳಗಳು ಹೇಗಿತ್ತೋ ಅದೇ ಯಥಾಸ್ಥಿತಿಯನ್ನು  ಕಾಯ್ದುಕೊಳ್ಳುವ, ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ನ್ನು ಪಾರ್ಲಿಮೆಂಟಲ್ಲಿ ಮಂಡಿಸಿತು. ಆದರೆ, ಈ ಕಾಯ್ದೆ ವ್ಯಾಪ್ತಿಯಿಂದ  ಬಾಬರಿ ಮಸೀದಿಯನ್ನು ಹೊರಗಿಟ್ಟಿತು. ಅದಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ರುವುದರಿಂದ ಈ  ವಿನಾಯಿತಿಯನ್ನು ನೀಡಲಾಗಿದೆ ಎಂದು ಮಸೂದೆ ಮಂಡಿಸುತ್ತಾ ಅಂದಿನ ಗೃಹಸಚಿವ ಎಸ್.ಬಿ. ಚವ್ಹಾಣ್ ಪಾರ್ಲಿಮೆಂಟ್‌ಗೆ ತಿಳಿಸಿದರು.  ಹಾಗೆಯೇ ಜಮ್ಮು-ಕಾಶ್ಮೀರವನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹಾಗಂತ,
ಪಾರ್ಲಿಮೆಂಟ್  ಏನೂ ತಕ್ಷಣ ಇದಕ್ಕೆ ಅಂಗೀಕಾರ ನೀಡಿರಲಿಲ್ಲ.


8 ಗಂಟೆಗಿಂತಲೂ ಅಧಿಕ ಕಾಲ ಪಾರ್ಲಿಮೆಂಟ್‌ನಲ್ಲಿ ಬಿರುಸಿನ ಚರ್ಚೆ ನಡೆಯಿತು. ನಿರೀಕ್ಷೆಯಂತೆಯೇ ಬಿಜೆಪಿ ಈ ಮಸೂದೆಯನ್ನು  ವಿರೋಧಿಸಿತು. ಬಿಜೆಪಿಯ ಜಸ್ವಂತ್ ಸಿಂಗ್, ರಾಮ್ನಾಯ್ಕ್ , ಉಮಾ ಭಾರತಿ ಮುಂತಾದವರು ಈ ಕಾಯ್ದೆ ಯನ್ನು ಪ್ರಶ್ನಿಸಿದರು.  ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರ ಸರಕಾರ ಸವಾರಿ ಮಾಡುತ್ತಿದೆ ಎಂದು ಜಸ್ವಂತ್ ಸಿಂಗ್ ಆಕ್ಷೇಪಿಸಿದರು.  ಇದೇವೇಳೆ, ಲಕ್ಷದ್ವೀಪದ ಕಾಂಗ್ರೆಸ್ ಸಂಸದ ಪಿ.ಎಂ. ಸಈದ್ ಅವರು ಈ ಕಾಯ್ದೆ ವ್ಯಾಪ್ತಿಯೊಳಗೆ ಬಾಬರಿ ಮಸೀದಿಯನ್ನೂ  ತರಬೇಕೆಂದು ಆಗ್ರಹಿಸಿದರು. ಸಿಪಿಐಎಂನ ಸೋಮನಾಥ ಚಟರ್ಜಿಯವರೂ ಇದೇ ಪ್ರಶ್ನೆಯನ್ನು ಮುಂದಿಟ್ಟರು. ಈಗಿನ ಸಂಸದ  ಅಸದುದ್ದೀನ್ ಒವೈಸಿಯ ತಂದೆ ಸುಲ್ತಾನ್ ಸಲಾಹುದ್ದೀನ್ ಒವೈಸಿ ಮತ್ತು ಮುಸ್ಲಿಮ್ ಲೀಗ್‌ನ ಸುಲೈಮಾನ್ ಸೇಠ್ ಅವರು  ಮಸೂದೆಯನ್ನು ಬೆಂಬಲಿಸಿದರಾದರೂ ಜಮ್ಮು-ಕಾಶ್ಮೀರವನ್ನು ವ್ಯಾಪ್ತಿಯಿಂದ ಹೊರಗಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಡ್ವಾಣಿ  ಪಾರ್ಲಿಮೆಂಟ್‌ನಿಂದ  ಹೊರನಡೆದರು. ಹೀಗೆ ಸಾಕಷ್ಟು ಚರ್ಚೆ ನಡೆದ ಬಳಿಕ ಈ ಮಸೂದೆಯನ್ನು ಅಂಗೀಕರಿಸಿ ಕಾನೂನಾಗಿ ಜಾರಿ  ಮಾಡಲಾಯಿತು. ಆದರೆ,

ಇದೀಗ ಅದೇ ಕಾಯ್ದೆ ಕಟಕಟೆಯಲ್ಲಿ ನಿಂತಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನೀಡಿರುವ  ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗೆ ತೀರ್ಪು ನೀಡಿದ ದಿನದಂದೇ ಅವರು ನ್ಯಾಯಾಧೀಶ ಹೊಣೆಗಾರಿಕೆಯಿಂದ  ನಿವೃತ್ತಿಯೂ ಆಗಿದ್ದಾರೆ. ಅಚ್ಚರಿ ಏನೆಂದರೆ, ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟು ತೀರ್ಪಿನಲ್ಲೂ ಇಂಥದ್ದೇ   ಘಟನೆ ನಡೆದಿತ್ತು. ಬಾಬರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರಕ್ಕಾಗಿ ಬಿಟ್ಟು ಕೊಡಬೇಕೆಂದು 2019 ನವೆಂಬರ್ 9ರಂದು ತೀರ್ಪು  ನೀಡಿದ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ನವೆಂಬರ್ 17ರಂದು ನಿವೃತ್ತರಾಗಿದ್ದರು.  ಇದು ಕಾಕತಾಳೀಯವೋ ಅಥವಾ ವೃತ್ತಿಯ ಕೊನೆಯಲ್ಲಿ ಉಂಟಾಗಬಹುದಾದ ಭಾವುಕತೆ ಮತ್ತು ಧಾರ್ಮಿಕತೆಯ ಒಲವನ್ನು  ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಭಾಗವಾಗಿ ಅಂಥವರನ್ನೇ ತೀರ್ಪಿಗಾಗಿ ಉಪಾಯದಿಂದ ಬಳಸಿಕೊಳ್ಳಲಾಗುತ್ತಿದೆಯೋ ಎಂಬ ಅ ನುಮಾನವೂ ವ್ಯಕ್ತವಾಗುತ್ತಿದೆ. ಬಾಬರಿ ಮಸೀದಿ ಒಡೆದ ಪ್ರಕರಣದಿಂದ ಅಡ್ವಾಣಿಯವರನ್ನು ೨೦೨೦ರಲ್ಲಿ ದೋಷಮುಕ್ತಿಗೊಳಿಸಿದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರೂ ಅದೇ ದಿನ ನಿವೃತ್ತರಾಗಿದ್ದರು.  ಒಂದುಕಡೆ, 1947 ಆಗಸ್ಟ್ 15ರಂದು ದೇಶದ ಆರಾಧನಾ ಸ್ಥಳಗಳು ಹೇಗಿದ್ದುವೋ ಅವೆಲ್ಲವನ್ನೂ  ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಆದೇಶಿಸುವ 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮಸೀದಿಯ ಉತ್ಖನನಕ್ಕೆ ನ್ಯಾಯಾಲಯವೇ ಆದೇಶ ನೀಡುವುದು ಇವೆರಡೂ ಜೊತೆಜೊತೆಯಾಗಿ ಹೇಗೆ ನಡೆಯಲು ಸಾಧ್ಯ  ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಮಾತ್ರವಲ್ಲ, ನ್ಯಾಯಾಲಯದ ಮೇಲಿನ ಜನರ ಅಪನಂಬಿಕೆಯನ್ನು ವೃದ್ಧಿಸುತ್ತಲೂ ಇದೆ.  ಹೀಗಾದರೆ, ಈ ದೇಶವನ್ನು ಧರ್ಮಗಳ ಆಧಾರದಲ್ಲಿ ಒಡೆಯುತ್ತಾ ಹೋಗಬಯಸುವವರು ವಿವಿಧ ಮಸೀದಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತಲೇ ಹೋಗಬಹುದು. ಅಂಥ ಸನ್ನಿವೇಶ ಸೃಷ್ಟಿಯಾದರೆ ಈ ದೇಶದ ಭವಿಷ್ಯ ಏನು? 1991ರ ಕಾಯ್ದೆ ಯಾಕೆ  ಮುಖ್ಯ ಅನ್ನುವುದು ಜ್ಞಾನವಾಪಿ ವಿವಾದದಿಂದ ಸ್ಪಷ್ಟವಾಗುತ್ತದೆ. 

ನಿಜವಾಗಿ,


1991ರ ಈ ಕಾಯ್ದೆಯಿಂದ ತಮಗೆ ಅನಾನುಕೂಲವಾಗಬಹುದು ಎಂಬುದನ್ನು ಬಿಜೆಪಿ ಚೆನ್ನಾಗಿಯೇ ಗ್ರಹಿಸಿದೆ. ಆದ್ದರಿಂದ ಆ ಪಕ್ಷದ  ಜೊತೆ ಗುರುತಿಸಿಕೊಂಡಿರುವ ಅಶ್ವಿನಿ ಉಪಾಧ್ಯಾಯ್ ಅವರು ಈ ಕಾಯ್ದೆಯ ಕಟ್ ಆಫ್ ಡೇಟ್ ಅಥವಾ 1947 ಆಗಸ್ಟ್ 15 ಎಂಬ  ದಿನಾಂಕವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ನ ಮೆಟ್ಟಲೇರಿದ್ದಾರೆ. ಈ ಕಟ್ ಆಫ್ ಡೇಟ್ ಅಪ್ರಸ್ತುತ ಮತ್ತು ಭಾರತದ ಮೇಲೆ  ಮೂಲಭೂತವಾದಿಗಳ ಬರ್ಬರ ದಾಳಿ ಆರಂಭವಾದ 1192ನ್ನೇ ಕಟ್ ಆಫ್ ಡೇಟ್ ಆಗಿ ಪರಿಗಣಿಸ ಬೇಕೆಂದು ಆಗ್ರಹಿಸಿದ್ದಾರೆ. ಈ  ಅರ್ಜಿ ಪರಿಗಣನೆಗೂ ಒಳಗಾಗಿದೆ. ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು ಈ ಅರ್ಜಿಗೆ ಸಂಬಂಧಿಸಿ ಕೇಂದ್ರಕ್ಕೆ  ನೋಟೀಸು ಜಾರಿಗೊಳಿಸಿದ್ದಾರೆ. ಈ ಅರ್ಜಿಗೆ ಉತ್ತರಿಸುವಂತೆ 2023 ಜುಲೈಯಲ್ಲಿ ಕೇಂದ್ರಕ್ಕೆ ನೋಟೀಸು ಜಾರಿಗೊಳಿಸಿದಾಗ  ಅಕ್ಟೋಬರ್ 31ರ ವರೆಗೆ ಸಮಯ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿನಂತಿಸಿದ್ದರು. ಉತ್ತರಕ್ಕಾಗಿ ಕೇಂದ್ರ  ಸರಕಾರ ಸಮಯ ಮುಂದೂಡುತ್ತಿರುವುದು ಇದು ಎರಡನೇ ಬಾರಿ ಎಂದು ಸುಬ್ರಹ್ಮಣ್ಯ ಸ್ವಾಮಿ ಆಕ್ಷೇಪಿಸಿದ್ದರು. ಅಲ್ಲದೇ, ಕಪಿಲ್  ಸಿಬಲ್ ಅವರು ಈ ಇಡೀ ಪ್ರಕ್ರಿಯೆಯನ್ನೇ ಆಕ್ಷೇಪಿಸಿದ್ದರು. ಅಯೋಧ್ಯೆ ತೀರ್ಪಿನಲ್ಲಿ ಈ 1991ರ ಈ ಕಾಯ್ದೆಯನ್ನು ಸಮರ್ಥಿಸಿರುವಾಗ  ಈ ಅರ್ಜಿಯ ಪ್ರಸ್ತುತತೆ ಏನು ಎಂದು ಪ್ರಶ್ನಿಸಿದ್ದರು. ಅಂದಹಾಗೆ,


ಬಾಬರಿ ಮಸೀದಿಗೆ ಸಂಬಂಧಿಸಿ ಐವರು ನ್ಯಾಯಾಧೀಶರು ನೀಡಿರುವ ತೀರ್ಪು ಅತೀವ ಟೀಕೆ, ಪ್ರಶ್ನೆ, ವಿಮರ್ಶೆಗೆ ಒಳಗಾಗಿರುವ  ಹಂತದಲ್ಲೇ ಜ್ಞಾನವಾಪಿ ಮಸೀದಿಯ ಕುರಿತಾದ ತೀರ್ಪು ಹೊರಬಿದ್ದಿದೆ. ಸ್ಥಳೀಯ ನ್ಯಾಯಾಲಯದ ತೀರ್ಪು ಎಂಬ ನೆಲೆಯಲ್ಲಿ ಇದಕ್ಕೆ  ಅತೀವ ಮಹತ್ವ ನೀಡಬಾರದು ಎಂಬುದು ಸರಿಯೇ ಆದರೂ 1991ರ ಆರಾಧನಾ ಸ್ಥಳ ಸಂರಕ್ಷಣಾ ಕಾಯ್ದೆಯ ಹೊರತಾಗಿಯೂ  ನ್ಯಾಯಾಲಯ ಉತ್ಖನನಕ್ಕೆ ಆದೇಶ ನೀಡುವುದು ಮತ್ತು ಪೂಜೆಗೆ ಅವಕಾಶ ನೀಡುವುದೆಲ್ಲ ನ್ಯಾಯಾಲಯಗಳ ಮೇಲಿನ ಅನುಮಾನಗಳನ್ನು ಗಟ್ಟಿಗೊಳಿಸುವ ರೀತಿಯಲ್ಲಿದೆ. ಪುರಾವೆಗಳ ಮೇಲೆ ತೀರ್ಪು ನೀಡುವುದಕ್ಕಿಂತ ಭಾವನೆಗಳು ಮತ್ತು ಧಾರ್ಮಿಕ ಬದ್ಧತೆಯ  ಆಧಾರದಲ್ಲಿ ನ್ಯಾಯಾಧೀಶರುಗಳು ತೀರ್ಪು ನೀಡುತ್ತಿದ್ದಾರೋ ಎಂಬ ಪ್ರಶ್ನೆಗಳೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಬಾಬರಿ ತೀರ್ಪು  ನೀಡಿದ ವಾರದ ಬಳಿಕ ಗೊಗೋಯ್ ನಿವೃತ್ತರಾದರು. ಜ್ಞಾನವಾಪಿ ಮಸೀದಿಯ ತಳ ಅಂತಸ್ತಿನಲ್ಲಿ ಪೂಜೆಗೆ ಅನುಮತಿ ಕೊಟ್ಟು ಅದೇ  ದಿನ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನಿವೃತ್ತರಾಗಿದ್ದಾರೆ. ಇದನ್ನು ಕಾಕತಾಳೀಯ ಎಂದು ಸಮರ್ಥಿಸಿಕೊಳ್ಳಬಹುದಾದರೂ  ತೀರ್ಪಿನ ಸ್ವರೂಪವು ಈ ಸಮರ್ಥನೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಕ್ಕೆ ಬಿಡುತ್ತಿಲ್ಲ. ಇದಕ್ಕೆ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಧೀಶ ಜೋಸೆಫ್ ನೀಡಿದ ಅಭಿಪ್ರಾಯವೂ  ಆಧಾರವನ್ನು ನೀಡುತ್ತದೆ. ಅವರು ಮತ್ತು ಬಿ.ವಿ. ನಾಗರತ್ನ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಜೋಸೆಫ್ ಅವರು ಜೂನ್  16ರಂದು ನಿವೃತ್ತರಾಗಲಿದ್ದರು. ಇವರು ವಿಚಾರಣೆ ನಡೆಸುವುದು ಕೇಂದ್ರ ಸರಕಾರಕ್ಕೆ ಬೇಕಿರಲಿಲ್ಲ. ಅದನ್ನು ಅವರು ಬಹಿರಂಗವಾಗಿಯೇ  ಹೇಳಿದರು. ಈ ಪ್ರಕರಣ ಮಾರ್ಚ್ ನಲ್ಲಿ  ತಮ್ಮ ಬಳಿಗೆ ಬಂದ ತಕ್ಷಣವೇ ನಾವು ಅಪರಾಧಿಗಳಿಗೆ ನೋಟೀಸು ಜಾರಿಗೊಳಿಸಲು  ಆದೇಶಿಸಿದ್ದೇವೆ, ಆದರೆ ಅದು ತಲುಪಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳುತ್ತಿದ್ದಾರೆ. I think it should be more than clear to you what's happening. The problem for me is that I am retiring on June 16. It is obvious that they dont want me to wear the matter... That's more than obvious...ಎಂದವರು ಹೇಳಿದ್ದರು. ವಿಚಾರಣೆಯನ್ನು ಮುಂದೂಡುವಂತೆ  ಮಾಡುವುದಕ್ಕಾಗಿ ನೋಟೀಸು ತಲುಪಿಲ್ಲ ಎಂಬ ನೆಪವನ್ನು ಹೂಡಲಾಗುತ್ತಿದೆ ಎಂಬುದು ಅವರ ವಾದವಾಗಿತ್ತು. ಸುಪ್ರೀಮ್ ಕೋರ್ಟ್  ನ್ಯಾಯಾಧೀಶರೇ ಇಂಥದ್ದೊಂದು  ಮಾತನ್ನು ಹೇಳುತ್ತಾರೆಂದರೆ, ನ್ಯಾಯಾಲಯಗಳ ಕಾರ್ಯವೈಖರಿಯ ಬಗ್ಗೆ ಅನುಮಾನಿಸುವುದು  ಹೇಗೆ ಅಪರಾಧವಾಗುತ್ತದೆ? ಜೋಸೆಫ್‌ರು ನಿವೃತ್ತರಾಗಿ ಅವರ ಸ್ಥಾನಕ್ಕೆ ತಮಗನುಕೂಲವಾದ ನ್ಯಾಯಾಧೀಶರು ಬರಬೇಕೆಂದು  ಕಾಯಲು ನ್ಯಾಯಿಕ ಪ್ರಕ್ರಿಯೆಯಲ್ಲಿ ಅವಕಾಶ ಇದೆಯೆಂದಾದರೆ, ನಿವೃತ್ತರಾಗುವ ನ್ಯಾಯಾಧೀಶರನ್ನೇ ತೀರ್ಪಿಗಾಗಿ ಆಯ್ಕೆ  ಮಾಡಿಕೊಳ್ಳುವ ತಂತ್ರವೂ ನಡೆಯಲಾರದೆಂದು ಹೇಗೆ ಹೇಳುವುದು? ಅಥವಾ ತಮಗೆ ಅನುಕೂಲಕರವಾದ ನ್ಯಾಯಾಧೀಶರು  ಸಿಗುವವರೆಗೆ ವಿಚಾರಣಾ ಪ್ರಕ್ರಿಯೆಯನ್ನು ಮುಂದೂಡುತ್ತಾ ಸಾಗುವುದು ಮತ್ತು ಸಂದರ್ಭ, ಸನ್ನಿವೇಶ ನೋಡಿಕೊಂಡು ಪ್ರಕರಣ  ವಿಚಾರಣೆಗೆ ಒಳಗಾಗುವಂತೆ ನೋಡಿಕೊಳ್ಳುವುದೆಲ್ಲ ನಡೆಯಲಾರದೆಂದು ಹೇಗೆ ನಂಬುವುದು? ನ್ಯಾಯಾಧೀಶರಾದ ಜೋಸೆಫ್ ಅವರ  ಅಭಿಪ್ರಾಯ ಇಂಥ ಅನುಮಾನಗಳಿಗೆ ಪುಷ್ಠಿ ನೀಡುತ್ತದೆ. 

ಅಂದಹಾಗೆ,

ಸರಕಾರಗಳು ಬದಲಾದಂತೆ ನ್ಯಾಯಾಲಯಗಳ ತೀರ್ಪುಗಳೂ ಸರಕಾರಕ್ಕೆ ಪೂರಕವಾಗುವಂತೆ ಬರುತ್ತಿರುವುದೇಕೆ ಎಂಬ ಪ್ರಶ್ನೆ ಸದ್ಯದ  ದಿನಗಳಲ್ಲಿ ನಿರ್ಲಕ್ಷಿಸದಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಜಾತಂತ್ರ ಭಾರತದಲ್ಲಿ ನ್ಯಾಯಾಲಯಗಳೇ ಭರವಸೆಯ ಅಂತಿಮ  ತಾಣ. ಅದೂ ವಿಶ್ವಾಸ ಕಳಕೊಂಡರೆ ಪ್ರಜಾತಂತ್ರ ಸತ್ತಂತೆ. ಜ್ಞಾನವಾಪಿ ಮಸೀದಿ ತೀರ್ಪು ಮತ್ತು ಅದಕ್ಕಿಂತ ಮೊದಲು ಬಾಬರಿಗೆ  ಸಂಬಂಧಿಸಿ ಸುಪ್ರೀಮ್ ಕೋರ್ಟ್ ತೀರ್ಪು ನ್ಯಾಯಾಲಯಗಳ ಮೇಲಿನ ವಿಶ್ವಾಸವನ್ನು ಕುಂದಿಸುವಂತೆ ಮಾಡಿರುವುದು ನಿಜ.  ನ್ಯಾಯ ಯಾವತ್ತೂ ಜನಸಂಖ್ಯೆ, ಧರ್ಮ, ವ್ಯಕ್ತಿ, ಶಕ್ತಿಗಳ ಆಧಾರದಲ್ಲಿ ನೀಡುವಂತಿರಬಾರದು. ಅದು ಪೂರ್ಣವಾಗಿ ನ್ಯಾಯಕ್ಕೆ ಮಾತ್ರ  ನಿಷ್ಠವಾಗಿರಬೇಕು. ಬಾಬರಿಯಾಗಲಿ, ಜ್ಞಾನವಾಪಿಯಾಗಲಿ ಶಾಹಿ ಈದ್ಗಾ ಆಗಲಿ ಅಥವಾ ಇನ್ನಾವುದೇ ಪ್ರಕರಣವಾಗಲಿ, ಸತ್ಯವೊಂದೇ  ನ್ಯಾಯದಾನಕ್ಕೆ ಆಧಾರವಾಗಿರಬೇಕು, ಅಷ್ಟೇ.

ನಿತಿನ್, ಶಹ್ನಾ ಹುಟ್ಟು ಹಾಕಿರುವ ಪ್ರಶ್ನೆಗಳು




1. ತನ್ನ ಸಹೋದರಿ ಮತ್ತು ತಾಯಿಯನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿದ ಮಗ ನಿತಿನ್
2. ಮಗನನ್ನೇ ಗುಂಡಿಟ್ಟು ಕೊಂದ ತಂದೆ
3. ಪತಿ-ಪತ್ನಿ ಜಗಳಕ್ಕೆ 3 ವರ್ಷದ ಮಗು ಮೃತ್ಯು

ಕಳೆದವಾರ ನಡೆದ ಈ ಮೂರು ಘಟನೆಗಳಿಗಿಂತ ಭೀಭತ್ಸಕರವಾದ ಮತ್ತು ಹೃದಯ ಹಿಂಡುವ ಹತ್ತು ಹಲವು ಘಟನೆಗಳು ಈ  ಮೊದಲೂ ನಡೆದಿರ ಬಹುದು. ಮುಂದೆ ನಡೆಯಲಾರದು ಎನ್ನುವ ಖಚಿತತೆಯೂ ಇಲ್ಲ. ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯ ಸಿಇಒ  ಸುಚನಾ ಸೇತ್ ಎಂಬವರು ತನ್ನ ಪುಟ್ಟ ಮಗನನ್ನು ಹತ್ಯೆ ಮಾಡಿದ ಘಟನೆ ಜನವರಿ ಆರಂಭದಲ್ಲಿ ನಡೆದಿತ್ತು. ಗಂಡ ವೆಂಕಟ್ ರಾಮನ್‌ನಿಂದ ವಿವಾಹ ವಿಚ್ಛೇದನ ಪಡಕೊಂಡಿದ್ದ ಸುಚನಾಗೆ ತನ್ನ ಮಗುವನ್ನು ಅವರೊಂದಿಗೆ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ,  ವಾರಕ್ಕೊಂದು ಸಾರಿ ಮಗುವಿನ ಭೇಟಿಗೆ ವೆಂಕಟ್ ರಾಮನ್‌ಗೆ ಅವಕಾಶ ಕೊಡಬೇಕು ಎಂದು ಕೌಟುಂಬಿಕ ನ್ಯಾಯಾಲಯ  ಆದೇಶಿಸಿತ್ತು. ಈ ಆದೇಶವನ್ನು ಜೀರ್ಣಿಸಿಕೊಳ್ಳಲಾಗದ ಸುಚನಾ ಗೋವಾದ ಲಾಡ್ಜೊಂದರಲ್ಲಿ ತನ್ನ ಮಗುವನ್ನೇ ಹತ್ಯೆ ಮಾಡಿದ್ದಳು.  ಉನ್ನತ ಶಿಕ್ಷಣ ಪಡೆದ ಮತ್ತು ಕಂಪೆನಿಯೊಂದನ್ನು ಆರಂಭಿಸಿ ಸಿಇಒ ಆಗುವಷ್ಟು ಧೈರ್ಯ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದಿರುವ ಸುಚನಾ ಹೀಗೇಕೆ ಮಾಡಿದಳು ಎಂಬ ಪ್ರಶ್ನೆ ಅಸಂಖ್ಯ ಮಂದಿಯನ್ನು ಕಾಡಿತು.

2023ರ ಡಿಸೆಂಬರ್‌ನಲ್ಲಿ ಕೇರಳದಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆಯಿತು. ಶಹ್ನಾ ಎಂಬ 28ರ ಹರೆಯದ ವೈದ್ಯೆ ಆತ್ಮಹತ್ಯೆ  ಮಾಡಿಕೊಂಡರು. ತಿರುವನಂತಪುರದ  ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಈಕೆಗೆ ರುವೈಸ್ ಎಂಬ ವೈದ್ಯನ ಜೊತೆ ಮದುವೆ ನಿಶ್ಚಿತವಾಗಿತ್ತು. ಈತ ಮೆಡಿಕಲ್ ಪಿಜಿ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ. ಆದರೆ ಮದುವೆ ಹತ್ತಿರ  ಬರುತ್ತಿದ್ದಂತೆಯೇ ಈತ ನಖರಾ ಪ್ರಾರಂಭಿಸಿದ. 150 ಪವನ್ ಚಿನ್ನ, 15 ಎಕ್ರೆ ಭೂಮಿ ಮತ್ತು BMW ಕಾರು ಬೇಕೆಂದು ಬೇಡಿಕೆಯಿಟ್ಟ.  ಅಷ್ಟೊಂದು ಭಾರೀ ಮೊತ್ತವನ್ನು ಕೊಡಲು ತಾನು ಅಶಕ್ತೆ ಎಂದು ಆತ್ಮಹತ್ಯೆಗಿಂತ ಮೊದಲು ಆಕೆ ಡಾ| ರುವೈಸ್‌ಗೆ ವಾಟ್ಸಪ್ ಸಂದೇಶ  ಕಳಿಸಿದ್ದೂ ನಡೆದಿತ್ತು. ಅಂದಹಾಗೆ,

ಮಸೀದಿ-ಮಂದಿರ, ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಇತ್ಯಾದಿ ನಿತ್ಯ ಸುದ್ದಿಗಳ ನಡುವೆ ಇಂಥ ಘಟನೆಗಳು ಸದ್ದಿಲ್ಲದೇ ಮತ್ತು  ಚರ್ಚೆಗಳಿಗೊಳಗಾಗದೇ ಮರೆಯಾಗುತ್ತಿವೆ. ನಾಲ್ಕು ಮಂದಿ ಸೇರಿದ ಕಡೆಯಾಗಲಿ, ವಾಟ್ಸಪ್, ಫೇಸ್‌ಬುಕ್, ಟ್ವಿಟರ್ ಗಳಲ್ಲಾಗಲಿ ಇಂಥ  ಘಟನೆಗಳು ಗಂಭೀರ ಚರ್ಚೆಗೆ ತೆರೆದುಕೊಳ್ಳುವುದು ಕಡಿಮೆ. ಮಂದಿರ-ಮಸೀದಿ ಚರ್ಚೆಯಲ್ಲಿ ತಿಂಗಳುಗಟ್ಟಲೆ ಚರ್ಚಿಸಲು ಆಸಕ್ತಿ  ತೋರುವವರಲ್ಲಿ ಒಂದು ಶೇಕಡಾ ಆಸಕ್ತಿಯೂ ಇಂಥ ಘಟನೆಗಳ ಮೇಲೆ ಇರುವುದಿಲ್ಲ. ದೇಶದಲ್ಲಿ ಮಂದಿರ-ಮಸೀದಿಗಳಿಗೆ  ಕೊರತೆಯಿಲ್ಲ. ಆದರೆ, ಮನುಷ್ಯ ಜೀವಕ್ಕೆ ಬೆಲೆಯನ್ನೇ ಕೊಡದ ಘಟನೆಗಳು ಸಾಮಾಜಿಕ ಸಂಚಲನೆಯನ್ನೇ ಸೃಷ್ಟಿಸುವುದಿಲ್ಲ ಎಂದಾದರೆ  ಅದು ಕೊಡುವ ಸಂದೇಶವೇನು?

ಮೈಸೂರಿನ ಹುಣಸೂರು ತಾಲೂಕಿನ ಮರೂರಿನ ಘಟನೆಯನ್ನೇ ಎತ್ತಿಕೊಳ್ಳಿ. ನಿತಿನ್‌ನ ಸಹೋದರಿ 19 ವರ್ಷದ ಧನುಶ್ರೀ ಮುಸ್ಲಿಮ್  ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಇದು ನಿತಿನ್‌ಗೆ ಇಷ್ಟವಿರಲಿಲ್ಲ. ಆದರೆ ಧನುಶ್ರೀಗೆ ತನ್ನ ಪ್ರೀತಿಯ ವಿಷಯದಲ್ಲಿ ತನ್ನದೇ  ಆದ ಅಭಿಪ್ರಾಯಗಳಿದ್ದುವು. ಸಹೋದರಿಯ ಅಭಿಪ್ರಾಯ ವನ್ನು ಗೌರವಿಸುವ ಬದಲು ಆತ ಒಳಗೊಳಗೆ ದ್ವೇಷ ಬೆಳೆಸಿಕೊಂಡ.  ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆಂದು ತಾಯಿ ಮತ್ತು ತಂಗಿಯನ್ನು ಬೈಕ್‌ನಲ್ಲಿ ಕೂರಿಸಿ ಹೊರಟ ಆತ ಮಾರೂರು ಕೆರೆ ಬಳಿ  ಬೈಕ್ ನಿಲ್ಲಿಸಿ ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಕೆರೆಗೆ ತಳ್ಳಿದ್ದಾನೆ.

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಕರೇಕಲ್‌ನಲ್ಲಿ ನಡೆದ ಇನ್ನೊಂದು ಘಟನೆಯೂ ಸರಿಸುಮಾರು ಇದನ್ನೇ ಹೋಲುತ್ತದೆ. ಇಲ್ಲಿ  ತಂದೆಯೇ ಸ್ವಂತ ಮಗನನ್ನು ಹತ್ಯೆ ಮಾಡಿದ್ದಾನೆ.  ಮದ್ಯಪಾನದ ಗೀಳಿಗೆ ಬಿದ್ದಿದ್ದ ಸುರೇಶ್ ಎಂಬ ತಂದೆ 32 ವರ್ಷದ ಮಗ  ನರ್ತನ್ ಬೋಪಣ್ಣನಲ್ಲಿ ಮದ್ಯಪಾನಕ್ಕೆ ಹಣ ಕೇಳಿದ್ದಾನೆ. ಈ ನರ್ತನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ತಾಯಿ  ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಕುಡಿತಕ್ಕೆ ಹಣ ಕೇಳಿದ ತಂದೆಯೊಂದಿಗೆ ಮಗ ಮಾತಿಗೆ ಮಾತು ಬೆಳೆಸಿದ್ದಾನೆ. ಕೊನೆಗೆ  ತಂದೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ ತಮ್ಮ ಬಳಿ ಇದ್ದ ಸಿಂಗಲ್ ಬ್ಯಾರೆಲ್ ಗನ್‌ನಿಂದ  ಬಾಗಿಲಿನತ್ತ ಗುಂಡು ಹಾರಿಸಿದ್ದು, ಅದು ಬಾಗಿಲನ್ನು ಸೀಳಿ ನರ್ತನ್‌ನ ತೊಡೆಯನ್ನು ಪ್ರವೇಶಿಸಿ ಗಂಭೀರವಾಗಿ ಗಾಯಗೊಳಿಸಿ  ಪ್ರಾಣವನ್ನೇ ಕಸಿದಿದೆ. 

ಮೂರನೇ ಪ್ರಕರಣವು ಬೆಂಗಳೂರಿನ ಸುಚನಾ ಘಟನೆಯನ್ನೇ ಹೋಲುತ್ತದೆ. ಬೆಂಗಳೂರಿನ ಹಾರೋಹಳ್ಳಿಯ  ಗೇರೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ದಂಪತಿಗಳ ನಡುವೆ ಜಗಳವಾಗಿದೆ. ಮೂರು ವರ್ಷಗಳ ಹಿಂದಷ್ಟೇ  ಮದುವೆಯಾಗಿದ್ದ ಈ ಜೋಡಿಯ ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಪೂರ್ಣಿಮಾ ತಾನೂ ವಿಷ ಕುಡಿದು ಮೂರು ವರ್ಷದ  ಮಗು ದೀಕ್ಷಿತ್ ಗೌಡನಿಗೂ ವಿಷ ಕುಡಿಸಿದ್ದಾಳೆ. ಮಗು ಮೃತಪಟ್ಟಿದ್ದು ತಾಯಿ ಬದುಕುಳಿದಿದ್ದಾರೆ. ಅಷ್ಟಕ್ಕೂ,

ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ತನ್ನ ತಂಗಿಯನ್ನೇ ಮತ್ತು ಅಡ್ಡ ಬಂದ ತಾಯಿಯನ್ನೇ ಹತ್ಯೆ ಮಾಡುವಷ್ಟು ಭೀಕರ ಅಪರಾಧವೇ? ಇಲ್ಲಿ ಪ್ರೀತಿಯ ಮೇಲಿನ ಅಸಮಾಧಾನಕ್ಕಿಂತ ಪ್ರೀತಿಸಿದ ಯುವಕನ ಧರ್ಮವೇ ಖಳನಾಯಕ ಪಟ್ಟವನ್ನು ಪಡೆ ದಿದೆ. ಇಂಥ  ದ್ವೇಷ ನಿತಿನ್ ಒಬ್ಬನ ಸಮಸ್ಯೆಯಲ್ಲ. ಈ ದೇಶದಲ್ಲಿ ಇಂಥ ಅಸಂಖ್ಯ ಯುವಕರು ಇಂಥ ದ್ವೇಷವನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ.  ಹಾಗಂತ, ಪ್ರತ್ಯಕ್ಷವಾಗಿ ಅವರಿಗೆ ಮುಸ್ಲಿಮರಿಂದ ಯಾವ ತೊಂದರೆಯೂ ಆಗಿರುವುದಿಲ್ಲ. ಮಾತ್ರವಲ್ಲ, ಇಂಥ ಮಂದಿಗೆ ಮುಸ್ಲಿಮ್  ಗೆಳೆಯರೂ ಇರುತ್ತಾರೆ. ಅವರ ಜೊತೆ ಕೊಡು-ಕೊಳ್ಳುವಿಕೆಯ ಸಂಬಂಧವೂ ಇರುತ್ತದೆ. ಹಾಗಿದ್ದೂ, ಮುಸ್ಲಿಮರೆಂದರೆ ಕೆಟ್ಟವರು ಮತ್ತು  ಅವರಿಗೆ ಅನ್ಯಾಯ ಮಾಡುವುದು ಧಾರ್ಮಿಕವಾಗಿ ಸರಿ ಎಂಬಂಥ  ಭಾವದೊಂದಿಗೆ ಬದುಕುತ್ತಿರುತ್ತಾರೆ. ಅಂದಹಾಗೆ, ಇಂಥ ಭಾವ  ಯಾಕಿದೆ ಎಂಬ ಪ್ರಶ್ನೆ ಶ್ರೀಮಂತರಿಗೆ ಅಗತ್ಯ ಬೀಳುವುದಿಲ್ಲ. ಯಾಕೆಂದರೆ, ಅವರ ಮಕ್ಕಳು ಬೀದಿಯಲ್ಲಿಲ್ಲ. ಪ್ರೀತಿ-ಪ್ರೇಮಗಳ ಹೆಸರಲ್ಲಿ  ನಡೆಯುವ ಹಲ್ಲೆ, ದೌರ್ಜನ್ಯ, ಕೇಸು, ಜೈಲು ಇತ್ಯಾದಿಗಳಲ್ಲಿ ಅವರ ಮಕ್ಕಳು ಇರುವುದಿಲ್ಲ. ನಗರದ ಉನ್ನತ ಶಿಕ್ಷಣ  ಸಂಸ್ಥೆಗಳಲ್ಲಿ ಕ ಲಿಯುತ್ತಿರುವ ಅವರ ಮಕ್ಕಳನ್ನು ಅತ್ತ ಸುಳಿಯಲು ಅವರು ಬಿಡುವುದೂ ಇಲ್ಲ. ಆದರೆ, ಹೀಗೆ ಬೀದಿಯಲ್ಲಿ ಧರ್ಮರಕ್ಷಣೆ ಮಾಡುವ  ಗುಂಪು ಚಂದಾ ಸಂಗ್ರಹಕ್ಕೆಂದು  ಅವರ ಬಳಿಗೆ ಬಂದರೆ ಹಣ ಕೊಟ್ಟು ಆರಾಮವಾಗಿರುತ್ತಾರೆ. ಅದರಾಚೆಗೆ ಅವರಿಗೂ ಈ  ಧರ್ಮರಕ್ಷಣೆಗೂ ಯಾವ ಸಂಬAಧವೂ ಇರುವುದಿಲ್ಲ. ಇನ್ನು,

ಇಂಥ ಯುವಕರನ್ನು ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗೆ ಅಟ್ಟುವ ರಾಜಕೀಯ ಪಕ್ಷಗಳ ನಾಯಕರಿಗೂ ಇಂಥವರೊಂದಿಗೆ ಭಾವನಾತ್ಮಕ  ನಂಟಿರುವುದಿಲ್ಲ. ಅವರೂ ತಮ್ಮ ಮಕ್ಕಳನ್ನು ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ವಿದೇಶದಲ್ಲಿ ಓದಿಸುತ್ತಿರುತ್ತಾರೆ. ತಮ್ಮ  ಮಕ್ಕಳನ್ನು ಈ ನಾಯಕರು ಎಂದೂ ಧರ್ಮರಕ್ಷಣೆಯ ಬೀದಿ ಹೋರಾಟಕ್ಕೆ ಕಳುಹಿಸುವುದೇ ಇಲ್ಲ. ಈ ಮಕ್ಕಳ ಪ್ರೀತಿ-ಪ್ರೇಮಗಳು  ಬಹಿರಂಗಕ್ಕೆ ಬರುವುದೂ ಇಲ್ಲ. ಬಂದರೂ ಅದಕ್ಕೆ ಅತ್ಯಂತ ರಸವತ್ತಾದ ಕಾರಣಗಳೊಂದಿಗೆ ಸಮ ರ್ಥಿಸಲಾಗುತ್ತದೆ. ಕೊನೆಗೆ ಈ  ಮಕ್ಕಳೇ ನೇರವಾಗಿ ರಾಜಕೀಯದ ಉನ್ನತ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ. ಮಾತ್ರವಲ್ಲ, ಇದೇ ಬೀದಿ ಹೋರಾಟದ ಯುವಕರನ್ನು ತಮ್ಮ  ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಾರೆ. ಧರ್ಮರಕ್ಷಣೆಯ ಬಹುತೇಕ ಎಲ್ಲ ಹೋರಾಟಗಳ ಪರಿಸ್ಥಿತಿ ಇದುವೇ. ಬೀದಿಯಲ್ಲಿ  ಹೋರಾಡುವ ಯುವಕರು ಬಹುತೇಕ ಬೀದಿಗೇ ಸೀಮಿತವಾಗಿ ಒಂದಷ್ಟು ಕೇಸುಗಳನ್ನು ಜಡಿಸಿಕೊಂಡು ಅತ್ತ ಕುಟುಂಬವನ್ನೂ  ಸಾಕಲಾಗದೇ ಮತ್ತು ಪ್ರಕರಣಗಳಿಂದಲೂ ಮುಕ್ತರಾಗದೇ ಸಂಕಟ ಪಡುತ್ತಿರುತ್ತಾರೆ. ಅವರ ಮಕ್ಕಳೂ ಕ್ರಮೇಣ ಇದೇ ಹಾದಿಯನ್ನು  ಹಿಡಿಯುತ್ತಾರೆ. ಅವರ ಬದುಕೂ ಕ್ರಮೇಣ ಇದೇ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ. ಹೀಗೆ ರಾಜಕಾರಣಿಯ ಮಗ ರಾಜಕಾರಣಿಯಾಗಿ  ಅಥವಾ ಉದ್ಯಮಿಯೋ ಮಲ್ಟಿ ನ್ಯಾಶನಲ್ ಕಂಪೆನಿಯ ಉದ್ಯೋಗಿಯೋ ಅಥವಾ ವಿದೇಶದಲ್ಲಿ ಕೈತುಂಬಾ ಪಗಾರ ಪಡೆಯುವ  ವ್ಯಕ್ತಿಯೋ ಆಗುವಾಗ ಬೀದಿ ಹೋರಾಟದವರ ಮಕ್ಕಳು ಅದೇ ಬೀದಿ ಹೋರಾಟಕ್ಕೆ ಸೀಮಿತವಾಗುತ್ತಾರೆ. ದ್ವೇಷ ಅಂತಿಮವಾಗಿ  ಕೊಡುವ ಫಲಿತಾಂಶ ಇದುವೇ. ಅಂದಹಾಗೆ,

ಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿದೆ. ಇನ್ನೊಬ್ಬರ ಮಾತನ್ನು ಆಲಿಸಿಕೊಳ್ಳುವ ಮತ್ತು ತಾಳ್ಮೆಯಿಂದ ಪರಾಮರ್ಶಿಸುವ ಗುಣವೇ  ಮರೆಯಾಗತೊಡಗಿದೆ. ತಕ್ಷಣವೇ ಆಕ್ರೋಶಗೊಳ್ಳುವುದು ಮತ್ತು ಸಿಟ್ಟಿನ ಕೈಯಲ್ಲಿ ತೀರ್ಮಾನ ಕೈಗೊಳ್ಳುವ ಪ್ರಕರಣಗಳು ಅಧಿಕವಾಗುತ್ತಿವೆ. ಮಗನೊಂದಿಗೆ ಜಗಳವಾಡಿ ಗುಂಡು ಹಾರಿಸಿ ಕೊಂದ ತಂದೆ ಇದಕ್ಕೆ ಒಂದು ಉದಾಹರಣೆಯಾದರೆ, ಸುಚನಾ,  ಪೂರ್ಣಿಮಾ, ಶಹ್ನಾ ಇದಕ್ಕೆ ಇನ್ನಷ್ಟು ಉದಾಹರಣೆಗಳು. ವೈದ್ಯೆಯಾಗಿರುವ ಶಹ್ನಾಗೆ ಡಾ| ರುವೈಸ್‌ನನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ  ಬೇಕಾದಷ್ಟು ತಿಳುವಳಿಕೆ ಮತ್ತು ಶಿಕ್ಷಣ ಇತ್ತು. ವರದಕ್ಷಿಣೆ ಧರ್ಮವಿರೋಧಿ ಮತ್ತು ಕಾನೂನು ವಿರೋಧಿ ಎಂಬ ಪ್ರಜ್ಞೆ ಆಕೆಯಲ್ಲಿ ಇನ್ನಾರೋ ಮೂಡಿಸಬೇಕಾಗಿರಲಿಲ್ಲ. ಸ್ವತಃ ತಿಳಿದುಕೊಳ್ಳುವಷ್ಟು ಆಕೆ ಶಿಕ್ಷಿತಳಾಗಿದ್ದಳು. ವೈದ್ಯೆಯನ್ನು ಪತ್ನಿಯಾಗಿ ಪಡೆಯುವುದರ ಆಚೆಗೆ  ಹಣವೂ ಭೂಮಿಯೂ ಬೇಕು ಎಂದು ಹೇಳುವ ಗಂಡನ್ನು ‘ತೊಲಗು’ ಎಂದು ಹೇಳಿ ಕಾನೂನಿನ ಕೈಗೊಪ್ಪಿಸಬೇಕಿತ್ತು. ಆದರೆ, ಆಕೆ ಈ  ಕೆಚ್ಚನ್ನು ತೋರ್ಪಡಿಸುವ ಬದಲು ಬದುಕನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಳೇಕೆ? ಹಾಗಂತ, ಸುಚನಾಳನ್ನೂ ಇದೇ ಪಟ್ಟಿಯ  ಲ್ಲಿಟ್ಟು ವಿಶ್ಲೇಷಿಸಬಹುದು. ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಂಥವರ ಬದುಕಿನಲ್ಲಿ ವಿಚ್ಛೇದನ ಹೊಸತಲ್ಲ. ಸಾಮಾನ್ಯವಾಗಿ  ಇಂಥವರು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ತರ್ಕಿಸುವುದೂ ಇಲ್ಲ. ಪರಸ್ಪರ ಮಾತಾಡಿಕೊಂಡೇ ಬೇರೆ ಬೇರೆಯಾಗುವುದು  ಮಾಮೂಲು. ಹೀಗಿರುತ್ತಾ, ಸುಚನಾ ಮಗುವನ್ನೇ ಹತ್ಯೆ ಮಾಡುವಷ್ಟು ಆಘಾತಕಾರಿ ನಿರ್ಧಾರಕ್ಕೆ ಬಂದರೇಕೆ? ಗಂಡಿಗೆ ಹೋಲಿಸಿದರೆ  ಹೆಣ್ಣು ಅಪರಾಧ ಕೃತ್ಯಗಳಲ್ಲಿ ಪಾಲುಗೊಳ್ಳುವುದು ಕಡಿಮೆ. ಹಾಗಿದ್ದೂ, ಇಂಥ ಹತ್ಯೆಯೊಂದು ಅತ್ಯಂತ ಉನ್ನತ ಸ್ಥಾನದಲ್ಲಿರುವ ಮಹಿಳೆಯಿಂದ ಘಟಿಸಿದುದು ಏಕೆ? ಬಹುಶಃ,

ತಾಳ್ಮೆಯ ಕೊರತೆಯೇ ಈ ಎಲ್ಲಕ್ಕೂ ಕಾರಣ ಅನಿಸುತ್ತದೆ. ಇತ್ತಿತ್ತಲಾಗಿ ಆತ್ಮಹತ್ಯೆಯಂಥ ಅಪರಾಧ ಕೃತ್ಯಗಳಲ್ಲಿ ಏರಿಕೆಯಾಗುತ್ತಿರುವುದರ  ಹಿಂದೆ ತಾಳ್ಮೆಯಿಂದ ಅವಲೋಕನ ನಡೆಸುವ ಶಕ್ತಿ ಕಡಿಮೆಯಾಗುವುದನ್ನೇ ಸೂಚಿಸುತ್ತದೆ. ಯಾರಲ್ಲೂ ತಾಳ್ಮೆಯಿಲ್ಲ. ಮರು  ಅವಲೋಕಿಸುವ ವ್ಯವಧಾನವಿಲ್ಲ. ಇನ್ನೊಬ್ಬರಲ್ಲಿ ವಿಚಾರಿಸಿ ನಿರ್ಧಾರ ಕೈಗೊಳ್ಳುವ ಸಹನೆ ಇಲ್ಲ. ಕ್ರಿಯೆಗೆ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತ ಪಡಿಸುವುದನ್ನೇ ಪರಿಹಾರವಾಗಿ ಆಧುನಿಕ ಸಮಾಜ ಕಾಣುತ್ತಿದೆ. ಇಂಥ ಪ್ರವೃತ್ತಿಯು ಮಗನನ್ನೇ ತಂದೆ ಹತ್ಯೆ ಮಾಡುವ ಅಥವಾ ತಾಯಿ,  ತಂಗಿಯನ್ನೇ ಮಗ ಹತ್ಯೆ ಮಾಡುವ ಆಘಾತಕಾರಿ ಬೆಳವಣಿಗೆಗೂ ಕಾರಣವಾಗುತ್ತಿದೆ.

Wednesday, January 17, 2024

2023: ಒಂದು ತುದಿಯಲ್ಲಿ ಬಿದೂರಿ, ಇನ್ನೊಂದು ತುದಿಯಲ್ಲಿ ಗೌತಮ್ ಗಂಭೀರ್






1. ರಮೇಶ್ ಬಿದೂರಿ
2. ಗೌತಮ್ ಗಂಭೀರ್ 

2023ರಲ್ಲಿ ನಡೆದ ಮುಸ್ಲಿಮ್ ದ್ವೇಷದ ಘಟನಾವಳಿಗಳನ್ನು ಅವಲೋಕಿಸುವಾಗ ಥಟ್ಟನೆ ಎದುರು ಬಂದ ಎರಡು ಹೆಸರುಗಳಿವು.

ಸೆಪ್ಟೆಂಬರ್‌ನಲ್ಲಿ ನಡೆದ ಪಾರ್ಲಿಮೆಂಟ್ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿದೂರಿ ಅತ್ಯಂತ ಅನಾಗರಿಕವಾಗಿ ವರ್ತಿಸಿದರು.  ಬಿ.ಎಸ್.ಪಿ. ಸಂಸದ ದಾನಿಶ್ ಅಲಿಯನ್ನು ಮುಲ್ಲಾ ಆತಂಕ್‌ವಾದಿ, ಉಗ್ರವಾದಿ, ಮುಂಜಿ ಮಾಡಿಕೊಂಡವ, ವೇಶ್ಯಾವಾಟಿಕೆ ನಡೆಸುವವ  ಎಂದೆಲ್ಲಾ ಅಷ್ಟೂ ಸದಸ್ಯರ ಮುಂದೆ ದೂಷಿಸಿದರು. ದಾನಿಶ್ ಅಲಿ ದಿಗ್ಭ್ರಾಂತರಾದರು. ಪಾರ್ಲಿಮೆಂಟ್ ಎತಿಕ್ಸ್ ಸಮಿತಿಯ  ಸದಸ್ಯರಾಗಿರುವ ತನ್ನನ್ನೇ ಆತಂಕ್‌ವಾದಿ, ಕಟುವಾ ಎಂದು ಪಾರ್ಲಿಮೆಂಟ್ ಒಳಗೆಯೇ ಸದಸ್ಯನೋರ್ವ ದೂಷಿಸುವುದಾದರೆ, ಪಾರ್ಲಿಮೆಂಟ್ ಹೊರಗಿನ ವಿಶಾಲ ಭಾರತದಲ್ಲಿ ಸಾಮಾನ್ಯ ಮುಸ್ಲಿಮರು ಎಂತೆಂಥ  ದೂಷಣೆಗಳನ್ನು ಎದುರಿಸುತ್ತಿರಬಹುದು ಎಂದು  ಆತಂಕಪಟ್ಟರು. ಎಲ್ಲೆಡೆ ವಿರೋಧ ವ್ಯಕ್ತವಾದಾಗ ಬಿಜೆಪಿ ಎಂದಿನ ತಂತ್ರವನ್ನು ಹೆಣೆಯಿತು. ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ  ನಡೆಸುವವರು ಹೇಗೆ ತಮ್ಮ ಮೇಲೆಯೂ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿ ಪ್ರಕರಣ ಇತ್ಯರ್ಥಪಡಿಸುವ ತಂತ್ರ  ಹೆಣೆಯುತ್ತಾರೋ ಅದೇ ವಿಧಾನವನ್ನು ಇಲ್ಲೂ ಬಳಸ
ಲಾಯಿತು. ‘ದಾನಿಶ್ ಅಲಿಯ ಪ್ರಚೋದನಕಾರಿ ಮಾತುಗಳಿಗೆ ಪ್ರತಿಯಾಗಿ ಬಿದೂರಿ ಈ ಪ್ರತಿಕ್ರಿಯೆ ನೀಡಿದ್ದು, ಅದೂ ವಿಚಾರಣೆಗೆ  ಒಳಗಾಗಬೇಕು’ ಎಂದು ಸ್ಪೀಕರ್ ಓಂ ಬಿರ್ಲಾರಿಗೆ ದೂರು ನೀಡಿತು. ಅಂದರೆ, ಯಾರಾದರೂ ಪ್ರಚೋದಿಸಿದರೆ, ಧರ್ಮದ್ವೇಷಿ ಪದಗಳ  ಮೂಲಕ ಪಾರ್ಲಿಮೆಂಟ್ ಒಳಗೆ ನಿಂದಿಸಬಹುದು ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಸಮರ್ಥಿಸಿತು. ಹಾಗಂತ,

ಬಿದೂರಿಯ ಧರ್ಮದ್ವೇಷಿ ಬೈಗುಳವನ್ನು ಸೆರೆಹಿಡಿದ ಪಾರ್ಲಿಮೆಂಟ್ ಕ್ಯಾಮರಾವು ದಾನಿಶ್ ಅಲಿಯ ಪ್ರಚೋದನೆಯನ್ನು ಯಾಕೆ ಸೆರೆ  ಹಿಡಿದಿಲ್ಲ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಇದು ಪ್ರಕರಣದ ಗಂಭೀರತೆಯನ್ನು ತಣಿಸುವ ಮತ್ತು ಗಮನ ಬೇರೆಡೆಗೆ  ಸೆಳೆಯುವ ಬಿಜೆಪಿ ತಂತ್ರದ ಭಾಗವೇ ಹೊರತು ಇನ್ನೇನಲ್ಲ. ಈಗ ಈ ಪ್ರಕರಣ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಇದೇವೇಳೆ,  ಇದೇ ಬಿದೂರಿಗೆ ರಾಜಸ್ತಾನದ ಅಸೆಂಬ್ಲಿ ಚುನಾವಣೆಯ ವೇಳೆ ಟೋಂಕ್ ಜಿಲ್ಲೆಯ ಪ್ರಚಾರ ಉಸ್ತುವಾರಿಯನ್ನು ಬಿಜೆಪಿ ವಹಿಸಿಕೊಟ್ಟಿತು.  ಇದು ಮುಸ್ಲಿಮರು ಹೆಚ್ಚಿರುವ ಜಿಲ್ಲೆ. ಮುಸ್ಲಿಮ್ ದ್ವೇಷದ ಮಾತುಗಳನ್ನು ಉದುರಿಸಿ ಧ್ರುವೀಕರಣ ನಡೆಸುವುದರ ಹೊರತಾಗಿ ಇದಕ್ಕೆ  ಬೇರೆ ಯಾವ ಉದ್ದೇಶ ಇರಬಹುದು? ಹಾಗಂತ,

ಮಾಜಿ ಕ್ರಿಕೆಟಿಗ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ರದ್ದು ಇನ್ನೊಂದು ಬಗೆ. ಪಾಕ್ ಜೊತೆ ಕ್ರಿಕೆಟ್ ಸಂಬಂಧವನ್ನು  ಸಂಪೂರ್ಣ ರದ್ದುಗೊಳಿಸಬೇಕು ಎಂದು ಬಲವಾಗಿ ವಾದಿಸಿದ ವ್ಯಕ್ತಿ ಈ ಗಂಭೀರ್. ತನ್ನ ಈ ನಿಲುವನ್ನು ಅವರು ಅನೇಕ ಬಾರಿ  ಬಹಿರಂಗವಾಗಿ ಸಾರಿದ್ದಾರೆ. ಆದರೆ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಇದೇ ಗಂಭೀರ್ ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಪಕ್ಕ  ಕೂತು ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಒಂದುಕಡೆ ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎನ್ನುತ್ತಾ ಇ ನ್ನೊಂದು ಕಡೆ ವೀಕ್ಷಕ ವಿವರಣೆ ನೀಡುವುದು ಇಬ್ಬಂದಿತನವಲ್ಲವೇ ಎಂಬ ಸೋಶಿಯಲ್ ಮೀಡಿಯಾ ಪ್ರಶ್ನೆಗೆ ಸಿಟ್ಟಾದರು. ಹಣದ  ಮುಂದೆ ಯಾವ ಸಿದ್ಧಾಂತವೂ ನಿಲ್ಲುವುದಿಲ್ಲ ಅನ್ನುವುದನ್ನು ಅವರು ಈ ಮೂಲಕ ತನ್ನ ಬೆಂಬಲಿಗರಿಗೆ ಸ್ಪಷ್ಟಪಡಿಸಿದರು.

2023 ಜನವರಿಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ  ಜಾಹೀರಾತೊಂದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ ಎರಡು ಚಿತ್ರಗಳಿದ್ದುವು. 2017ಕ್ಕಿಂತ ಮೊದಲು ಮತ್ತು  2017ರ ನಂತರ ಎಂದು ಈ ಎರಡೂ ಚಿತ್ರಗಳಿಗೆ ಒಕ್ಕಣೆ ನೀಡಲಾಗಿತ್ತು. ಕುತ್ತಿಗೆಗೆ ಶಾಲು ಹಾಕಿಕೊಂಡ ಯುವಕ ಕೈಯಲ್ಲಿರುವ  ಪೆಟ್ರೋಲ್ ಬಾಂಬ್ ಎಸೆಯುವ ಚಿತ್ರ 2017ಕ್ಕಿಂತ ಮೊದಲಿನದ್ದಾದರೆ ಅದೇ ಯುವಕ ಕೈ ಮುಗಿದು ಕ್ಷಮೆ ಯಾಚಿಸುವ ಚಿತ್ರ 2017ರ  ನಂತರದ್ದು. ಉತ್ತರ ಪ್ರದೇಶದ ಮುಸ್ಲಿಮರು ಸಾಮಾನ್ಯವಾಗಿ ಕುತ್ತಿಗೆಗೆ ಶಾಲು ಸುತ್ತುವುದು ರೂಢಿ. ಅದನ್ನೇ ಅನ್ವರ್ಥವಾಗಿ ಈ ಚಿತ್ರದಲ್ಲಿ  ಬಳಸಲಾಗಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ದಮನಿಸಿದ್ದಾರೆ ಎಂದು ಪರೋಕ್ಷ  ಸಂದೇಶ ಸಾರುವ ಈ ಜಾಹೀರಾತನ್ನು ಬಿಜೆಪಿ ಸಮರ್ಥಿಸಿಕೊಂಡಿತು. ಅದರಲ್ಲಿ ಮುಸ್ಲಿಮ್ ಅಂತ ಎಲ್ಲಿದೆ ಎಂಬುದು ಬಿಜೆಪಿಯ ಪ್ರ ಶ್ನೆಯಾಗಿತ್ತು. ಆದರೆ ಈ ಜಾಹೀರಾತಿನ ಒಳಾರ್ಥ ಏನು ಮತ್ತು ಜಾಹೀರಾತು ಯಾರ ಕುರಿತಾಗಿದೆ ಎಂಬುದು ಜನಸಾಮಾನ್ಯರಿಗೂ  ಅರ್ಥವಾಗುವಂತಿತ್ತು. ‘ಕ್ರಿಮಿನಲ್‌ಗಳನ್ನು ಅವರು ಧರಿಸಿರುವ ಬಟ್ಟೆಯಿಂದ ಗುರುತಿಸಬಹುದು’ ಎಂದು ಪ್ರಧಾನಿ ಮೋದಿಯವರು ಈ  ಹಿಂದೆ ಎನ್.ಆರ್.ಸಿ. ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದ್ದರು. ಹಾಗಂತ, ಕ್ರಿಮಿನಲ್‌ಗಳಿಗೆ ಯಾವ ಧರ್ಮವನ್ನೂ ಜೋಡಿಸಿಲ್ಲವಾದರೂ ಪ್ರಧಾನಿಯ ಗುರಿ ಯಾರು ಅನ್ನುವುದಕ್ಕೆ ವಿಶೇಷ ವಿವರಣೆಯ ಅಗತ್ಯವಿರಲಿಲ್ಲ. ಮುಸ್ಲಿಮರು ಎಂದು ಹೇಳದೇ ಮುಸ್ಲಿಮರ ನ್ನು ಅಪರಾಧಿಗಳಂತೆ ನಡೆಸಿಕೊಳ್ಳುವ ವಿಧಾನ ಇದು. ಮುಸ್ಲಿಮರು ಕ್ರಿಮಿನಲ್, ದಂಗೆಕೋರರು ಎಂಬೆಲ್ಲಾ ಸಂದೇಶವನ್ನು  ಪರೋಕ್ಷವಾಗಿ ಸಾರುತ್ತಾ ಮುಸ್ಲಿಮ್ ದ್ವೇಷವನ್ನು ಸಾರ್ವತ್ರಿಕವಾಗಿ ಬಿತ್ತುವ ಅಪಾಯಕಾರಿ ತಂತ್ರ ಇದು.

2023 ಜೂನ್‌ನಲ್ಲಿ ಒಡಿಸ್ಸಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತು. ತಕ್ಷಣ ಈ ರೈಲು ಅಪಘಾತಕ್ಕೆ ಮುಸ್ಲಿಮ್  ವ್ಯಕ್ತಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸೃಷ್ಟಿಸಿ ಹಂಚಲಾಯಿತು. ಅಪಘಾತ ನಡೆದ ಸ್ಥಳದ ರೈಲ್ವೇ ಸ್ಟೇಷನ್ ಅಧಿಕಾರಿ ಮುಸ್ಲಿಮ್ ಎಂದು ಈ ಸುದ್ದಿಯಲ್ಲಿ ಹೇಳಲಾಯಿತು. ಭಾರೀ ಸಂಖ್ಯೆಯಲ್ಲಿ ಈ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಯಿತಲ್ಲದೇ, ಕರ್ನಾಟಕದ ಹಳ್ಳಿ ಮೂಲೆಯ ವಾಟ್ಸಾಪ್‌ನಲ್ಲೂ ಪ್ರತ್ಯಕ್ಷವಾಯಿತು. ಆ ಬಳಿಕ ಇನ್ನೊಂದು ಸುಳ್ಳು ಸುದ್ದಿಯನ್ನು  ತೇಲಿಬಿಡಲಾಯಿತು. ಅಪಘಾತ ನಡೆದ ಸ್ಥಳದಲ್ಲಿರುವ ಬಿಳಿ ಕಟ್ಟಡವೊಂದನ್ನು ತೋರಿಸಿ ಇದು ಮಸೀದಿಯಾಗಿದ್ದು, ಇಲ್ಲಿ ನಡೆಸಲಾದ  ಸಂಚಿನಿಂದಲೇ   ಈ ಅಪಘಾತ ನಡೆದಿದೆ ಎಂದು ಹೇಳಲಾಯಿತು. ಮಾತ್ರವಲ್ಲ, ಶುಕ್ರವಾರ ಅಪಘಾತ ನಡೆದಿರುವುದನ್ನೂ ವಿಶೇಷವಾಗಿ  ಉಲ್ಲೇಖಿಸಲಾಯಿತು. ಮಸೀದಿಯಲ್ಲಿ ಶುಕ್ರವಾರ ಸೇರಿದ ಮುಸ್ಲಿಮರು ಈ ರೈಲು ಅಪಘಾತವಾಗುವಂತೆ ಕುತಂತ್ರ ಹೆಣೆದರು ಎಂದು  ಸೂಚಿಸುವುದಕ್ಕಾಗಿಯೇ ಶುಕ್ರವಾರವನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ಕೂಡಾ ಭಾರೀ ಪ್ರಮಾಣದಲ್ಲಿ ಸೋಶಿಯಲ್  ಮೀಡಿಯಾದಲ್ಲಿ
ಹಂಚಿಕೆಯಾಯಿತು. ಆ ಬಳಿಕ, ಈ ಬಿಳಿ ಕಟ್ಟಡವು ಹರೇಕಷ್ಣ ಪಂಥದ ಮಂದಿರ ಎಂದು ಬಹಿರಂಗವಾಯಿತು. ಮುಸ್ಲಿಮ್ ದ್ವೇಷ ಈ  ಮಣ್ಣಿನಲ್ಲಿ ಹೇಗೆ ಬೆಳೆಯುತ್ತಿದೆ ಮತ್ತು ಮುಸ್ಲಿಮ್ ಭೀತಿಯನ್ನು ಹೇಗೆಲ್ಲ ಹರಡಲಾಗುತ್ತಿದೆ ಅನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಝೀ ನ್ಯೂಸ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಡೆಸಿಕೊಡುವ ಬ್ಲ್ಯಾಕ್ ಆಂಡ್ ವೈಟ್ ಪ್ರೈಮ್ ಟೈಮ್ ಶೋನಲ್ಲಿ ಮುಸ್ಲಿಮ್  ತುಷ್ಠೀಕರಣದ ವಿಷಯವನ್ನು ಎತ್ತಿಕೊಂಡರು. ‘ಮುಸ್ಲಿಮರು ವಾಹನ ಖರೀದಿಸಲು ಕರ್ನಾಟಕ ಸರಕಾರವು 50% ಧನಸಹಾಯ ಮತ್ತು  3 ಲಕ್ಷ ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ’ ಎಂದು ಹೇಳಿದ ಚೌಧರಿ, ಹಿಂದೂಗಳಿಗೆ ಏನೇನೂ ಇಲ್ಲ ಎಂದರು. ಹೇಗೆ ಸಿದ್ದರಾಮಯ್ಯ ಸರಕಾರವು ಮುಸ್ಲಿಮ್ ಓಲೈಕೆಯಲ್ಲಿ ತೊಡಗಿದೆ ಮತ್ತು ಹಿಂದೂ ವಿರೋಧಿಯಾಗಿ ನಡಕೊಳ್ಳುತ್ತಿದೆ ಎಂದು  ಭಾಷಣವನ್ನು ಬಿಗಿದರು. ನಿಜವಾಗಿ, ಇದು ತಿರುಚಿದ ಸತ್ಯವಾಗಿತ್ತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆ.ಎಂ.ಡಿ.ಸಿ.)ವು  ಮುಸ್ಲಿಮರೂ ಸೇರಿದಂತೆ ಕ್ರೈಸ್ತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಸೌಲಭ್ಯವನ್ನು ಘೋಷಿಸಿದ್ದು ನಿಜ. ಆದರೆ ಈ  ಸೌಲಭ್ಯ ಅಲ್ಪಸಂಖ್ಯಾತರಿಗೆ ಮಾತ್ರ ಇರುವುದಲ್ಲ. ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ  ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಹಿಂದೂಗಳಿಗೂ ನೀಡಲಾಗುತ್ತಿದೆ.  ಆದರೆ, ಸುಧೀರ್ ಚೌಧರಿ ಈ ಸತ್ಯ ಅಡಗಿಸಿಟ್ಟು ಮುಸ್ಲಿಮ್ ದ್ವೇಷವನ್ನು ಬಿತ್ತುವುದಕ್ಕೆ ಪ್ರಯತ್ನಿಸಿದರು. ಇವರ ವಿರುದ್ಧ ಇಲಾಖೆಯ ಶಿವ  ಕುಮಾರ್ ಅವರು ದೂರು ದಾಖಲಿಸಿದರು.

ಜಾಗತಿಕ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ ಆದ ಬಳಿಕ  ಮಾಧ್ಯಮದವರು ಅವರ ತಾಯಿಯನ್ನು ಸಂದರ್ಶಿಸಿದ ಘಟನೆ ನಡೆಯಿತು. ನೀರಜ್ ಅವರ ಆತ್ಮೀಯ ಗೆಳೆಯ ಪಾಕಿಸ್ತಾನದ ಅರ್ಶದ್  ನದೀಮ್ ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ‘ನಿಮ್ಮ ಮಗ ಪಾಕಿಸ್ತಾನಿಯನ್ನು ಸೋಲಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು’  ಎಂದು ಪತ್ರಕರ್ತನೋರ್ವ ಆ ತಾಯಿಯಲ್ಲಿ ಪ್ರಶ್ನಿಸಿದರು. ನಿಜವಾಗಿ ಈ ಪ್ರಶ್ನೆಯು ಕುಚೋದ್ಯವಾಗಿತ್ತು. ಪಾಕಿಸ್ತಾನವನ್ನು ದೂಷಿಸುವ  ಮೂಲಕ ಭಾರತೀಯ ಮುಸ್ಲಿಮರನ್ನು ಪರೋಕ್ಷವಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಇಲ್ಲಿನ ಮಾಧ್ಯಮ ನೀತಿ. ಬಿಜೆಪಿಯೂ ಇದನ್ನೇ  ಮಾಡುತ್ತಿದೆ. ಪಾಕಿಸ್ತಾನವನ್ನು ದೂಷಿಸುವ ಉತ್ತರವೊಂದನ್ನು ನಿರೀಕ್ಷಿಸಿಯೇ ಈ ಪತ್ರಕರ್ತ ಈ ಪ್ರಶ್ನೆ ಕೇಳಿರಬೇಕು ಎಂದೇ ಅನಿಸುತ್ತದೆ.  ಆದರೆ ಆ ತಾಯಿ ಕೊಟ್ಟ ಉತ್ತರವಂತೂ ಜೀವನದಲ್ಲಿ ಇನ್ನೆಂದೂ ಇಂಥ ಪ್ರಶ್ನೆಯನ್ನು ಆ ಪತ್ರಕರ್ತ ಕೇಳಬಾರದೆಂಬಷ್ಟು  ಮಾರ್ಮಿಕವಾಗಿತ್ತು. ಆ ತಾಯಿ ಹೇಳಿದ್ದು ಹೀಗೆ;
“ಆಟಗಾರ ಕೇವಲ ಆಟಗಾರ ಮಾತ್ರ, ಆತ ಯಾವ ದೇಶದವ ಎಂಬುದು ಮುಖ್ಯ ಆಗುವುದಿಲ್ಲ. ಒಂದುವೇಳೆ, ಅರ್ಶದ್ ನದೀಮ್ ಈ  ಚಾಂಪಿಯನ್‌ಶಿಪನ್ನು ಜಯಿಸುತ್ತಿದ್ದರೂ ನಾನು ಸಂತೋಷಪಡುತ್ತಿದ್ದೆ.”

ಇವಲ್ಲದೇ ಇನ್ನೂ ಕೆಲವು ಮುಸ್ಲಿಮ್ ದ್ವೇಷಿ ಘಟನೆಗಳೂ 2023ರಲ್ಲಿ ನಡೆದಿವೆ. ಭಾರತ ಮತ್ತು ಪಾಕ್‌ಗಳ ನಡುವೆ ಕ್ರಿಕೆಟ್ ಪಂದ್ಯಾಟ  ನಡೆಯುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನಿಯರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಬಾರದು ಎಂದು ಪೊಲೀಸ್‌ನೋರ್ವ  ತಡೆದದ್ದು ಇದರಲ್ಲಿ ಒಂದು. ಚೇತನ್ ಸಿಂಗ್ ಎಂಬ ರೈಲ್ವೇ ಕಾನ್‌ಸ್ಟೇಬಲ್ ಮೂವರು ಮುಸ್ಲಿಮರನ್ನು ಹುಡುಕಿ ಕೊಂದದ್ದು ಮತ್ತು  ಬಳಿಕ ಜೈ ಮೋದಿ, ಜೈ ಯೋಗಿ ಎಂದು ಘೋಷಿಸಿದ್ದೂ ಇದರಲ್ಲಿ ಒಂದು. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನಲ್ಲಿ ತೃಪ್ತ ತ್ಯಾಗಿ  ಎಂಬ ಟೀಚರ್ 7 ವರ್ಷದ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಹಿಂದೂ ವಿದ್ಯಾರ್ಥಿಗಳಿಂದ ಬಾರಿಸಿದ್ದೂ ಇದರಲ್ಲಿ ಒಂದು. ಭಾರತೀಯ  ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯಿತ್ ಅಂತೂ ತೃಪ್ತ ತ್ಯಾಗಿ ವಿರುದ್ಧದ ಕೇಸ್ ಹಿಂಪಡೆದುಕೊಳ್ಳುವಂತೆ  ಮುಸ್ಲಿಮ್  ವಿದ್ಯಾರ್ಥಿಯ ಹೆತ್ತವರ ಮೇಲೆ ಒತ್ತಡವನ್ನೂ ತಂದರು. ಗುಜರಾತ್‌ನ ಮೆಹ್ಸಾನಾದಲ್ಲಿ ಇನ್ನೂ ಒಂದು ಆಘಾತಕಾರಿ ಘಟನೆ ನಡೆಯಿತು.  10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಸಾನ್ ಬಾನುಳನ್ನು ಸನ್ಮಾನಿಸದೇ ದ್ವಿತೀಯ ಸ್ಥಾನಿಯಾದ ಹಿಂದೂ ವಿದ್ಯಾರ್ಥಿ ನಿಯನ್ನು ಕರೆದು ಸನ್ಮಾನಿಸಿತು. ಚಂದ್ರಯಾನ ಯಶಸ್ವಿಯಾದ ಬೆನ್ನಿಗೇ ದೆಹಲಿಯ ಕೈಲಾಶ್ ನಗರದ ಹೇಮಾ ಗುಲಾಠಿ ಎಂಬ ಟೀಚರ್  ವಿವಾದಕ್ಕೆ ಗುರಿಯಾದರು. ‘ದೇಶಭಕ್ತಿ ಪಠ್ಯ’ವನ್ನು ಬೋಧಿಸುತ್ತಿದ್ದ ವೇಳೆ ಮುಸ್ಲಿಮ್ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವು ದೇಶದ ಸ್ವಾತಂತ್ರ‍್ಯ  ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ, ನಿಮಗೆ ಭಾರತದಲ್ಲಿರಲು ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಹೋಗಿ, ಪ್ರಾಣಿ ಕೊಯ್ದು ತಿನ್ನುವವರು ನೀವು.. ಎಂದೆಲ್ಲಾ ನಿಂದಿಸಿದ್ದು ನಡೆಯಿತು. ಆ ಬಳಿಕ ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು.

ಇವು 2023ರಲ್ಲಿ ಈ ದೇಶದಲ್ಲಿ ನಡೆದ ಮುಸ್ಲಿಮ್ ದ್ವೇಷದ ಕೆಲವು ಸ್ಯಾಂಪಲ್‌ಗಳಿವು. ಈ ದೇಶದಲ್ಲಿ ಅಧಿಕಾರದಲ್ಲಿರುವವರು ಮತ್ತು  ಮಾಧ್ಯಮಗಳು ಮುಸ್ಲಿಮ್ ದ್ವೇಷವನ್ನು ಉತ್ಪಾದಿಸಿ ಹಂಚುತ್ತಿದೆ ಮತ್ತು ಇದಕ್ಕೆ ವ್ಯಾಪಕ ಮಾರುಕಟ್ಟೆ ಒದಗುವಂತೆಯೂ  ನೋಡಿಕೊಳ್ಳುತ್ತಿದೆ. ನಿಜಕ್ಕೂ ಇದು ವಿಷಾದಕರ.

ಮುಸ್ಲಿಮ್ ಲೀಗ್, SDPI ಗೆ ಓಟು ಹಾಕದ ಮುಸ್ಲಿಮರು ಇಸ್ಲಾಮ್ ವಿರೋಧಿಗಳೇ?




1. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML)
2. ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ (AIMIM)
3. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)
4. ನ್ಯಾಶನಲ್ ಕಾನ್ಫರೆನ್ಸ್ (NC)
5. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PDP)
6. ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
7. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI)

ಮುಸ್ಲಿಮ್ ನಾಯಕತ್ವದ ಮತ್ತು ಮುಸ್ಲಿಮ್ ವ್ಯಕ್ತಿಗಳೇ ಸ್ಥಾಪಿಸಿರುವ ಈ ಯಾವ ರಾಜಕೀಯ ಪಕ್ಷಗಳಿಗೂ ಮುಸ್ಲಿಮರು ಇಸ್ಲಾಮನ್ನು  ಒತ್ತೆ ಇಟ್ಟಿಲ್ಲ. ಇವು ಎಂದಲ್ಲ, ಇವುಗಳ ಹೊರತಾಗಿ ಸಣ್ಣ-ಪುಟ್ಟ ಮುಸ್ಲಿಮ್ ನೇತೃತ್ವದ ಅನೇಕ ರಾಜಕೀಯ ಪಕ್ಷಗಳು ಈ ದೇಶದಲ್ಲಿವೆ.  ಈ ರಾಜಕೀಯ ಪಕ್ಷಗಳನ್ನು ಅಥವಾ ಇವುಗಳಲ್ಲಿ ಯಾವುದಾದರೂ ಒಂದನ್ನು ಇಸ್ಲಾಮಿನ ನಿಜವಾದ ರಕ್ಷಕ ಎಂದು ಷರಾ ಬರೆದು  ಮುಸ್ಲಿಮರು ಸಾಮೂಹಿಕವಾಗಿ ಅದನ್ನು ಬೆಂಬಲಿಸಿಲ್ಲ. ಮುಸ್ಲಿಮರು ಈ ಎಲ್ಲ ಪಕ್ಷಗಳನ್ನೂ ಬರೇ ರಾಜಕೀಯ ಪಕ್ಷಗಳಾಗಿಯಷ್ಟೇ  ನೋಡಿದ್ದಾರೆಯೇ ಹೊರತು ಇಸ್ಲಾಮಿನ ಅಭ್ಯುದಯಕ್ಕಾಗಿ ಸ್ಥಾಪಿಸಲ್ಪಟ್ಟ ಪಕ್ಷ ಎಂದು ಘೋಷಿಸಿದ್ದೋ  ಕರೆ ಕೊಟ್ಟದ್ದೋ  ಇಲ್ಲವೇ ಇಲ್ಲ.  ಈ ಎಲ್ಲ ರಾಜಕೀಯ ಪಕ್ಷಗಳಿದ್ದೂ ಮುಸ್ಲಿಮರು ಇವುಗಳಿಗೆ ಹೊರತಾದ ಮತ್ತು ಹಿಂದೂಗಳೇ ಸ್ಥಾಪಿಸಿರುವ ಹಾಗೂ ಹಿಂದೂಗಳ  ನಾಯಕತ್ವದಲ್ಲೇ  ಇರುವ ರಾಜಕೀಯ ಪಕ್ಷಗಳಿಗೆ ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳಾಗಿಯೇ  ನೋಡುವ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕೆ ಖಾಝಿಗಳನ್ನು (ನಿರ್ದಿಷ್ಟ ಧರ್ಮಗುರುಗಳು) ಅವಲಂಬಿಸುವ ವಿವೇಕವನ್ನು  ಮುಸ್ಲಿಮರು ಈವರೆಗೂ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ,

ಈ ಮಣ್ಣಿನಲ್ಲಿ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಿಗೆ ಭವ್ಯ ಇತಿಹಾಸವಿದೆ. ಭಾರತ ವಿಭಜನೆಯಾದ ಬಳಿಕ ಮುಹಮ್ಮದ್  ಇಸ್ಮಾಈಲ್ ಎಂಬವರ ನೇತೃತ್ವದಲ್ಲಿ 1948 ಮಾರ್ಚ್ 10ರಂದು ಆಲ್ ಇಂಡಿಯಾ ಮುಸ್ಲಿಮ್ ಲೀಗ್‌ನ ಮೊದಲ ಸಭೆ ಮದ್ರಾಸ್‌ನಲ್ಲಿ  ನಡೆಯಿತು. 1951 ಸೆ. 1ರಂದು ಇದರ ಹೆಸರನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML) ಎಂದು ಮರು ನಾಮಕರಣ ಮಾಡಲಾಯಿತು. 2004ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಮ್ ಲೀಗ್ ಸ್ಥಾನವನ್ನೂ ಪಡೆಯಿತು. ಈಗ ಮುಹಮ್ಮದ್  ಬಶೀರ್, ಅಬ್ದುಸ್ಸಮದ್ ಸಮದಾನಿ ಮತ್ತು ನವಾಜ್  ಎಂಬವರು ಲೋಕಸಭಾ ಸದಸ್ಯರಾಗಿ ಈ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ  ರಾಜ್ಯಸಭೆಯನ್ನು ಅಬ್ದುಲ್ ವಾಹಿದ್ ಪ್ರತಿ ನಿಧಿಸುತ್ತಿದ್ದಾರೆ. ಅಲ್ಲದೇ,
ಮುಹಮ್ಮದ್ ಇಸ್ಮಾಈಲ್ ಸಾಹಿಬ್ ಮತ್ತು ಮುಹಮ್ಮದ್ ಅಲಿ ಶಿಬಾಹ್ ತಂಙಳ್ ಅವರ ಹೆಸರಲ್ಲಿ ಅಂಚೆ ಚೀಟಿಯೂ  ಬಿಡುಗಡೆಯಾಗಿದೆ. ಪ್ರವಾದಿ ಕುಟುಂಬ ಪರಂಪರೆಯ ಸೈಯದ್ ಬಾಫಾಖಿ ತಂಙಳ್, ಸಾದಿಕ್ ಅಲಿ ಶಿಹಾಬ್ ತಂಙಳ್, ಹೈದರಲಿ  ಶಿಹಾಬ್ ತಂಙಳ್ ಸಹಿತ ಪಾಣಕ್ಕಾಡ್ ಕುಟುಂಬವೇ ಈ ಪಕ್ಷದ ಜೊತೆ ಇದ್ದರೂ ಮುಸ್ಲಿಮರು ಈ ಪಕ್ಷವನ್ನು ಇಸ್ಲಾಮ್‌ನ ರಕ್ಷಕನಂತೆ  ಅಥವಾ ಇಸ್ಲಾಮಿನ ಪ್ರತಿನಿಧಿಯಂತೆ ಕಂಡಿಲ್ಲ. ಕೇರಳದಲ್ಲಿ ಮುಸ್ಲಿಮರು ಈ ಪಕ್ಷಕ್ಕೆ ಮತ ಚಲಾಯಿಸಿದ್ದಕ್ಕಿಂತ ಹೆಚ್ಚು ಮತಗಳನ್ನು  ಹಿಂದೂ ನೇತೃತ್ವದ ಪಕ್ಷಗಳಿಗೆ ನೀಡಿದ್ದೂ ಇದೆ. ಇಸ್ಲಾಮಿನ ಹೆಸರಲ್ಲಿ ಈ ಪಕ್ಷ ಮತವನ್ನು ಕೇಳಿದ್ದೂ ಇಲ್ಲ. ಒಂದು ಕಡೆ ಪ್ರವಾದಿ  ಕುಟುಂಬ ಪರಂಪರೆಯವರ ಬೆಂಬಲ ಮತ್ತು ಇನ್ನೊಂದು ಕಡೆ ಮುಸ್ಲಿಮ್ ಲೀಗ್ ಎಂಬ ಹೆಸರಿನ ಹೊರತಾಗಿಯೂ ಮುಸ್ಲಿಮರು ಈ  ಪಕ್ಷವನ್ನು ಧರ್ಮದ ನೊಗ ಹೊತ್ತುಕೊಂಡ ಪಕ್ಷವಾಗಿ ಪರಿಗಣಿಸಿಲ್ಲ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಖಾಝಿಗಳ  ಹೊರತಾಗಿ ಇತರರನ್ನು ಅವಲಂಬಿಸುತ್ತಲೂ ಇಲ್ಲ. ಆದ್ದರಿಂದಲೇ, ಮುಸ್ಲಿಮ್ ನೇತೃತ್ವದ ಯಾವುದೇ ಪಕ್ಷಕ್ಕೆ ಧಾರ್ಮಿಕ ಭಾವನೆಗಳನ್ನು  ಕೆದಕಿ ಮತ ಪಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ.

ನವಾಬ್ ಮುಹಮ್ಮದ್ ನವಾಜ್  ಖಾನ್ ಖಿಲೇದಾರ್ ಎಂಬವರು 1927ರಲ್ಲಿ ಹೈದರಾಬಾದ್‌ನಲ್ಲಿ ಸ್ಥಾಪಿಸಿದ ಆಲ್ ಇಂಡಿಯಾ  ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಎಂಬ ರಾಜಕೀಯ ಪಕ್ಷಕ್ಕೂ ಈ ಮಣ್ಣಿನಲ್ಲಿ ದೊಡ್ಡ ಹೆಸರಿದೆ. 1958ರಲ್ಲಿ ಅಬ್ದುಲ್  ವಾಹಿದ್ ಓವೈಸಿ ಅಧ್ಯಕ್ಷರಾಗುವ ಮೂಲಕ ಓವೈಸಿ ಕುಟುಂಬದ ಪಾರಮ್ಯಕ್ಕೆ ಒಳಗಾದ ಈ ಪಕ್ಷವು ಇಂದಿನ ತೆಲಂಗಾಣದ ಹೊರತಾಗಿ  ಮಹಾರಾಷ್ಟ್ರ  ಮತ್ತು ಬಿಹಾರ ಅಸೆಂಬ್ಲಿಯಲ್ಲೂ ಜನಪ್ರತಿನಿಧಿಯನ್ನು ಹೊಂದಿದೆ. ಅಸದುದ್ದೀನ್ ಓವೈಸಿ ಸತತ ನಾಲ್ಕನೇ ಬಾರಿ  ಲೋಕಸಭಾ ಸದಸ್ಯರಾಗಿ ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈಗಿನ ತೆಲಂಗಾಣ ವಿಧಾನಸಭೆಯಲ್ಲಿ ಈ ಪಕ್ಷದ 7 ಮಂದಿ ಸದಸ್ಯರಿದ್ದಾರೆ. ಅಷ್ಟಕ್ಕೂ,  ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಎಂದರೆ ‘ಮುಸ್ಲಿಮರ ಐಕ್ಯತೆಗಾಗಿರುವ ಅಖಿಲ ಭಾರತ ಕೌನ್ಸಿಲ್’ ಎಂದು  ಅರ್ಥ. ಹೀಗೆ ಮುಸ್ಲಿಮರ ಐಕ್ಯತೆಯನ್ನು ಬಯಸುವ ಪಕ್ಷ ಎಂಬ ಹಣೆಪಟ್ಟಿ ಈ ಪಕ್ಷಕ್ಕಿದ್ದರೂ ಮುಸ್ಲಿಮರು ಈ ಪಕ್ಷಕ್ಕೆ ‘ಧರ್ಮರಕ್ಷಕ’  ಎಂಬ ಬಿರುದನ್ನು ಕೊಟ್ಟಿಲ್ಲ. ಅದನ್ನೊಂದು ರಾಜಕೀಯ ಪಕ್ಷವಾಗಿ ಪರಿಗಣಿಸಿದ್ದಾರೆಯೇ ಹೊರತು ಓವೈಸಿ ಪಕ್ಷಕ್ಕೆ ಮತ ಚಲಾಯಿಸದವರು ಇಸ್ಲಾಮ್ ವಿರೋಧಿಗಳು ಎಂದು ಎಲ್ಲೂ ಹೇಳಿಲ್ಲ. ಓವೈಸಿ ಪಕ್ಷದ ಮುಸ್ಲಿಮ್ ಅಭ್ಯರ್ಥಿಯ ಬದಲು ಹಿಂದೂ ನೇತೃತ್ವ ಪಕ್ಷದ  ಹಿಂದೂ ಅಭ್ಯರ್ಥಿಗೆ ಮುಸ್ಲಿಮರು ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಧರ್ಮವನ್ನು ದುರುಪಯೋಗಿಸುವುದಕ್ಕೆ  ಯಾವ ರಾಜಕೀಯ ಪಕ್ಷಕ್ಕೂ ಮುಸ್ಲಿಮರು ಅನುಮತಿಯನ್ನು ನೀಡುತ್ತಿಲ್ಲ.

ಅಸ್ಸಾಮ್ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು 2005ರಲ್ಲಿ ಸ್ಥಾಪಿಸಿದ ಉದ್ಯಮಿ ಮತ್ತು ಇಸ್ಲಾಮೀ ವಿದ್ವಾಂಸ ಬದ್ರುದ್ದೀನ್  ಅಜ್ಮಲ್‌ರು 2013ರಲ್ಲಿ ಇದಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF) ಎಂದು ಮರುನಾಮಕರಣ  ಮಾಡಿದರು. ಇವರು ಜಮೀಯತೆ ಉಲೆಮಾಯೆ ಹಿಂದ್ ಎಂಬ ಧಾರ್ಮಿಕ ಸಂಘಟನೆಯ ಅಸ್ಸಾಮ್ ಘಟಕದ ಅಧ್ಯಕ್ಷರೂ ಆಗಿದ್ದಾರೆ.  2005ರಲ್ಲಿ ಅಸ್ಸಾಮ್ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಇವರ ಪಕ್ಷ 10 ಸ್ಥಾನಗಳನ್ನು ಗೆದ್ದಿತ್ತು. 2011ರ ಅಸೆಂಬ್ಲಿ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿಯೂ ಗುರುತಿಸಿಕೊಂಡಿತ್ತು. 2014ರ ಲೋಕಸಭಾ  ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದು ಕೊಂಡ AIUDF, 2016ರ ಅಸ್ಸಾಮ್ ಅಸೆಂಬ್ಲಿ ಚುನಾವಣೆಯಲ್ಲಿ 13 ಸ್ಥಾನಕ್ಕೆ ಕುಸಿಯಿತು.  ಮಾತ್ರವಲ್ಲ, ಮತದಾರರು ಬದ್ರುದ್ದೀನ್ ಅಜ್ಮಲ್‌ರನ್ನೇ ಸೋಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಅವರೊಬ್ಬರೇ  ಆರಿಸಿ ಬಂದಿದ್ದಾರೆ. ಅಂದಹಾಗೆ,

25 ಶಿಕ್ಷಣ ಸಂಸ್ಥೆ ಮತ್ತು ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳನ್ನು ನಡೆಸುತ್ತಿರುವ ಇವರಿಗೆ ಧಾರ್ಮಿಕ ವಿದ್ವಾಂಸ ಎಂಬ ಹಣೆಪಟ್ಟಿ ಇದ್ದರೂ  ಇವರ ಪಕ್ಷಕ್ಕೆ ಮತ ಚಲಾಯಿಸದವರನ್ನು ‘ಇಸ್ಲಾಮ್ ವಿರೋಧಿ’ಗಳು ಎಂದು ಎಲ್ಲೂ ಯಾರೂ ಘೋಷಿಸಿಯೇ ಇಲ್ಲ. ಸ್ವತಃ ಅಜ್ಮಲ್  ಅವರನ್ನೇ ಸಲ್ಮಾರ ಕ್ಷೇತ್ರದ ಮತದಾರರು 2016 ರಲ್ಲಿ ಸೋಲಿಸಿದ್ದಾರೆ. ಒಂದುವೇಳೆ, ಅಜ್ಮಲ್ ಪಕ್ಷಕ್ಕೆ ಓಟು ಹಾಕುವುದೆಂದರೆ ಇಸ್ಲಾಮಿನ  ರಕ್ಷಣೆಗೆ ಓಟು ಹಾಕಿದಂತೆ ಎಂಬ ಭಾವ ಮುಸ್ಲಿಮರಲ್ಲಿ ಇದ್ದಿದ್ದೇ  ಆಗಿದ್ದರೆ 2014ರಲ್ಲಿ ಗೆದ್ದಿದ್ದ ಮೂರು ಲೋಕಸಭಾ ಸೀಟುಗಳು  2019ಕ್ಕಾಗುವಾಗ ಒಂದು ಸೀಟಾಗಿ ಕುಸಿಯುತ್ತಿರಲಿಲ್ಲ ಅಥವಾ 2011ರಲ್ಲಿ 18 ಅಸೆಂಬ್ಲಿ ಸೀಟುಗಳನ್ನು ಗೆದ್ದವರು 2016ರಲ್ಲಿ 13  ಸೀಟುಗಳಿಗೆ ತೃಪ್ತಿ ಪಡಬೇಕಾಗಿರಲಿಲ್ಲ. ಇದೇವೇಳೆ,

ಇ ಅಬೂಬಕರ್ ನೇತೃತ್ವದಲ್ಲಿ 2009 ಜೂನ್ 21ರಂದು ಸ್ಥಾಪನೆಯಾದ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)  ಮತ್ತು 2011 ಎಪ್ರಿಲ್ 18ರಂದು ಮುಜ್ತಬಾ  ಫಾರೂಖಿ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ಪಕ್ಷಗಳು ಈವರೆಗೆ ಲೋಕಸಭೆ ಅಥವಾ ವಿಧಾನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು  ಕಳುಹಿಸುವುದಕ್ಕೇ ಶಕ್ತವಾಗಿಲ್ಲ. ಈ ಎರಡೂ ಪಕ್ಷಗಳ ಕೇಂದ್ರ ನವದೆಹಲಿಯಲ್ಲಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆ  SDPI 29 ಕಡೆ ಸ್ಪರ್ಧಿಸಿತ್ತು. 2019ರಲ್ಲಿ 15 ಕಡೆ ಸ್ಪರ್ಧಿಸಿತ್ತು. 2013ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ 24 ಕಡೆ ಸ್ಪರ್ಧಿಸಿದ್ದರೆ, 2016ರ ತಮಿಳುನಾಡು ಅಸೆಂಬ್ಲಿ ಚುನಾವಣೆಯ ವೇಳೆ 30 ಕಡೆ ಸ್ಪರ್ಧಿಸಿತ್ತು. ಇದೇ ಅವಧಿಯಲ್ಲಿ ನಡೆದ ಕೇರಳ ಅಸೆಂಬ್ಲಿ  ಚುನಾವಣೆಯಲ್ಲಿ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೆಯೇ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.  ಇದೇವೇಳೆ, WPI ಪಕ್ಷವು ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಈ ಎರಡೂ  ಪಕ್ಷಗಳ ಬದಲು ಹಿಂದೂ ನೇತೃತ್ವ ಪಕ್ಷದ ಹಿಂದೂ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮಾತ್ರ ವಲ್ಲ, ಹೀಗೆ ಮತ ಚಲಾಯಿಸಿದ  ಮುಸ್ಲಿಮರನ್ನು ‘ಇಸ್ಲಾಮ್ ವಿರೋಧಿಗಳು’ ಎಂದು ಸ್ವತಃ ಈ ಪಕ್ಷಗಳಾಗಲಿ ಅಥವಾ ಅದರ ಬೆಂಬಲಿಗರಾಗಲಿ ಎಲ್ಲೂ ಹೇಳಲೇ ಇಲ್ಲ.  ಇದರ ಹೊರತಾಗಿ,

ಮಾಜಿ ಗೃಹಸಚಿವ ಮುಫ್ತಿ ಮುಹಮ್ಮದ್ ಸಈದ್ 1999ರಲ್ಲಿ ಸ್ಥಾಪಿಸಿದ PDP ಮತ್ತು 1932ರಲ್ಲಿ ಶೈಕ್ ಅಬ್ದುಲ್ಲಾರಿಂದ ಸ್ಥಾಪಿತವಾದ  NC ಪಕ್ಷಗಳನ್ನು ಜಮ್ಮು-ಕಾಶ್ಮೀರದ ಮಂದಿ ಗೆಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷವನ್ನೂ ಗೆಲ್ಲಿಸಿದ್ದಾರೆ. ಮುಸ್ಲಿಮರೇ ಹೆಚ್ಚಿರುವ  ಕಾಶ್ಮೀರದಲ್ಲಿ ಈ ಮೂರು ಪಕ್ಷಗಳ ಹೊರತಾಗಿ ಬೇರೆ ಪಕ್ಷಗಳಲ್ಲಿ ಅಷ್ಟು ಬಲ ಇದ್ದಿಲ್ಲವಾದ್ದರಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ  ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಅಲ್ಲಿನ ಮುಸ್ಲಿಮರಿಗಿದೆ. ಈ ಆಯ್ಕೆಯೂ ಧರ್ಮಾಧಾರಿತವಾಗಿಲ್ಲ ಅನ್ನುವುದೂ ಸ್ಪಷ್ಟ.  ಫಾರೂಖ್ ಅಬ್ದುಲ್ಲಾರನ್ನು ಮುಖ್ಯಮಂತ್ರಿಯಾಗಿಸಿದ ಅದೇ ಜನತೆ ಮುಫ್ತಿ ಮುಹಮ್ಮದ್ ರನ್ನೂ  ಮುಖ್ಯಮಂತ್ರಿಯಾಗಿಸಿದೆ  ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೆಹಬೂಬಾ ಮುಫ್ತಿ ಕೂಡಾ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾಗಿ,

ಇಸ್ಲಾಮಿನ ನೊಗ ಖಾಝಿಗಳ ಕೈಯಲ್ಲಿದೆಯೇ ಹೊರತು ಯಾವುದೇ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಲ್ಲಿಲ್ಲ. ರಾಜಕೀಯ  ಪಕ್ಷದ ನಾಯಕ ಎಷ್ಟೇ ಧರ್ಮಿಷ್ಠನಾಗಿರಲಿ ಮುಸ್ಲಿಮರು ತಮ್ಮ ಧರ್ಮದ ವ್ಯಾಖ್ಯಾನಕ್ಕಾಗಿ ಮತ್ತು ಸಾಂದರ್ಭಿಕ ಅಭಿಪ್ರಾಯಗಳಿಗಾಗಿ  ಖಾಝಿಗಳನ್ನೇ ಸಂಪರ್ಕಿಸುತ್ತಾರೆ. ಖಾಝಿಗಳಿಗೆ ಮುಸ್ಲಿಮರಲ್ಲಿ ವಿಶೇಷ ಸ್ಥಾನಮಾನವಿದೆ. ಅವರು ಸಾಮಾನ್ಯ ಮಸೀದಿಯ  ಧರ್ಮಗುರುಗಳಂಥಲ್ಲ. ಅವರು ಪಕ್ಷ-ಸಂಘಟನೆಯ ಮುಲಾಜಿಗೆ ಬೀಳದೇ ಧರ್ಮ ತತ್ವವನ್ನು ಹೇಳಬಲ್ಲವರು. ನಿಜವಾಗಿ, ಇಸ್ಲಾಮಿನ  ವರ್ಚಸ್ಸು ಉಳಿದಿರುವುದೇ ಮುಸ್ಲಿಮರೊಳಗಿನ ಈ ಬಗೆಯ ವ್ಯವಸ್ಥೆಯಿಂದ. ರಾಜಕೀಯ ಪಕ್ಷಗಳನ್ನು ಬರೇ ಪಕ್ಷಗಳಾಗಿ ಮತ್ತು  ಅವುಗಳ ಚಟುವಟಿಕೆಗಳನ್ನು ರಾಜಕೀಯಕ್ಕೆ ಸೀಮಿತವಾಗಿ ನೋಡುವುದಕ್ಕೆ ಮುಸ್ಲಿಮರಿಗೆ ಸಾಧ್ಯವಾಗಿರುವುದು ಖಾಝಿ ಸಿಸ್ಟಮ್‌ನಿಂದ.  ಮುಸ್ಲಿಮರಿಗೆ ಮಾರ್ಗದರ್ಶನ ಮಾಡುವ ಮತ್ತು ಯಾವುದು ಇಸ್ಲಾಮ್ ಮತ್ತು ಯಾವುದಲ್ಲ ಎಂದು ಹೇಳುವ ಹೊಣೆಗಾರಿಕೆ ಬಹುತೇಕ  ಇವರ ಹೆಗಲ ಮೇಲಿದೆ. ಮುಸ್ಲಿಮರಲ್ಲಿರುವ ವಿವಿಧ ಸಂಘಟನೆಗಳೂ ಖಾಝಿಗಳ ಮಾತುಗಳಿಗೆ ಕಿವಿಯಾಗುತ್ತವೆ. ಸಂಘಟನಾ ರಹಿತ  ಮತ್ತು ಪಕ್ಷರಹಿತವಾಗಿ ವರ್ತಿಸುವ ಜವಾಬ್ದಾರಿಯೂ ಖಾಝಿಗಳ ಮೇಲಿರುತ್ತದೆ. ಒಂದುವೇಳೆ, ಈ ಖಾಝಿ ಸಿಸ್ಟಮ್ ಇಲ್ಲದೇ  ಇರುತ್ತಿದ್ದರೆ ರಾಜಕೀಯ ಪಕ್ಷಗಳು ಆ ಶೂನ್ಯವನ್ನು ದುರುಪ ಯೋಗಿಸುತ್ತಿದ್ದುವೋ ಏನೋ? ಅಂದಹಾಗೆ,

ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು ಹಿಂದೂ ಧರ್ಮ ರಕ್ಷಕನಂತೆ ಮತ್ತು ಅದಕ್ಕೆ ಮತ ಚಲಾಯಿಸದವರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸಲಾಗುತ್ತಿರುವುದನ್ನು ಕಂಡು ಇವೆಲ್ಲ ನೆನಪಾಯಿತು. ಹಾಗಂತ, ಧರ್ಮವನ್ನು ರಾಜಕೀಯ ಪಕ್ಷದ ವಶಕ್ಕೆ ಒಪ್ಪಿಸುವುದು  ಅತ್ಯಂತ ಅಪಾಯಕಾರಿ.

Tuesday, January 16, 2024

ಹಿಜಾಬ್‌ಗೆ ಕೇಸರಿ ಶಾಲು ಉತ್ತರವೇ?




1. ಹಿಜಾಬ್
2. ಕೇಸರಿ ಶಾಲು
3. ಧರ್ಮ

ನಿಜಕ್ಕೂ ಹಿಜಾಬ್‌ಗೆ ಕೇಸರಿ ಶಾಲು ಪರ್ಯಾಯವೇ, ಸಮಾನವೇ ಅಥವಾ ಉತ್ತರವೇ? 2022 ಫೆಬ್ರವರಿ 5ರಂದು ಮುಖ್ಯಮಂತ್ರಿ  ಬೊಮ್ಮಾಯಿ ಘೋಷಿಸಿದ್ದ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಡಿಸೆಂಬರ್ 22, 2023ರಂದು ಘೋಷಿಸಿದ ಬಳಿಕ ಹಿಜಾಬ್ ಮತ್ತು ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಅನೇಕರು  ಚರ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬಹುದೆಂದಾದರೆ, ಕೇಸರಿ ಶಾಲು ಧರಿಸಿಯೂ ಕಾಲೇಜಿಗೆ ಹೋಗಬಹುದು  ಎಂಬುದು ಈ ವಾದದ ಮುಖ್ಯ ಅಂಶ. ಅಷ್ಟಕ್ಕೂ,

ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿ ಮಾಡಿ ಚರ್ಚಿಸುವುದು ಸೂಕ್ತವೇ? ಇಸ್ಲಾಮ್‌ನಲ್ಲಿ ಹಿಜಾಬ್‌ಗಿರುವ ಧಾರ್ಮಿಕ ಮಹತ್ವವು  ಹಿಂದೂಗಳಲ್ಲಿ ಕೇಸರಿ ಶಾಲ್‌ಗೂ ಇದೆಯೆಂದಾದರೆ, ಮತ್ತೇಕೆ ಹಿಜಾಬ್‌ನಂತೆ ಸಾರ್ವಜನಿಕವಾಗಿ ಹಿಂದೂಗಳು ಕೇಸರಿ ಶಾಲನ್ನು ಸದಾ  ಧರಿಸುತ್ತಿಲ್ಲ? ಕಾಲೇಜು ಉಪನ್ಯಾಸಕರಿಂದ ಹಿಡಿದು ಐಟಿಬಿಟಿ ಉದ್ಯೋಗಿಗಳ ವರೆಗೆ, ಶಾಸಕರಿಂದ ಹಿಡಿದು ಸಂಸದರ ವರೆಗೆ, ರಾಜ್ಯಪಾಲರಿಂದ ಹಿಡಿದು ರಾಷ್ಟ್ರಪತಿವರೆಗೆ, ಮುಖ್ಯಮಂತ್ರಿಗಳಿಂದ  ಹಿಡಿದು ಪ್ರಧಾನ ಮಂತ್ರಿಯವರೆಗೆ, ವಕೀಲರಿಂದ ಹಿಡಿದು ಮುಖ್ಯ  ನ್ಯಾಯಾಧೀಶರವರೆಗೆ... ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಪುರುಷರು ಮತ್ತು ಮಹಿಳೆಯರೇ ತುಂಬಿರಬೇಕಿತ್ತಲ್ಲ? ರಿಕ್ಷಾ ಡ್ರೈವರ್,  ಕಾರು, ಬಸ್ಸು ಚಾಲಕರು, ಪೈಲಟ್‌ಗಳು, ವೈದ್ಯರು, ದಾದಿಯರು, ಕೂಲಿ ಕಾರ್ಮಿಕರು, ಉದ್ಯಮಿಗಳು, ಅದಾನಿ-ಅಂಬಾನಿಗಳು.. ಎಲ್ಲರೂ  ಕೇಸರಿ ಶಾಲನ್ನು ಧರಿಸಿಯೇ ಇರಬೇಕಿತ್ತಲ್ಲ? ಯಾಕಿಲ್ಲ? ಈ ದೇಶದ 99.99% ಹಿಂದೂಗಳು ಕೂಡಾ ಸಾರ್ವಜನಿಕ ಜೀವನದಲ್ಲಿ ಕೇಸರಿ  ಶಾಲನ್ನು ಒಂದು ಅಭ್ಯಾಸವಾಗಿ ಧರಿಸುತ್ತಲೇ ಇಲ್ಲ. ಖಾಸಗಿ ಬದುಕಿನಲ್ಲೂ ಕೇಸರಿ ಶಾಲು ಅವಿಭಾಜ್ಯ ಅಂಗವಾಗಿಲ್ಲ. ನಿರ್ದಿಷ್ಟ  ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಲ್ಪಸ್ವಲ್ಪ ಕೇಸರಿ ಶಾಲು ಧರಿಸಿದವರನ್ನು  ಕಾಣಬಹುದೇ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಕೇಸರಿ ಶಾಲು ರೂಢಿಯಾಗಿ ಬಳಕೆಯಾಗುತ್ತಿಲ್ಲ. ಆದರೆ,

ಹಿಜಾಬ್ ಅಥವಾ ಶಿರವಸ್ತ್ರ ಹಾಗಲ್ಲ. ಮುಸ್ಲಿಮ್ ಮಹಿಳೆಯರು ಮನೆಯಲ್ಲೂ ಶಿರವಸ್ತ್ರ ಧರಿಸುತ್ತಾರೆ. ಬಸ್, ರೈಲು, ವಿಮಾನ  ಪ್ರಯಾಣದಲ್ಲೂ ಶಿರವಸ್ತ್ರ ಧರಿಸುತ್ತಾರೆ. ಸರಕಾರಿ ಕಚೇರಿಯಲ್ಲೂ, ಶಿಕ್ಷಣ ಸಂಸ್ಥೆಯಲ್ಲೂ, ಖಾಸಗಿ ಉದ್ಯೋಗ ಸ್ಥಳದಲ್ಲೂ, ಶಾಸನ  ಸಭೆಯಲ್ಲೂ, ನ್ಯಾಯಾಧೀಶರಾಗಿರುವಾಗಲೂ, ವೈದ್ಯರು, ದಾದಿಯಾಗಿರುವಾಗಲೂ, ಮಾರುಕಟ್ಟೆಯಲ್ಲೂ.. ಹೀಗೆ ಎಲ್ಲೆಡೆಯೂ ಹಿಜಾಬ್  ಧರಿಸಿಯೇ ಕಾಣಸಿಗುತ್ತಾರೆ. ಅಂದ ಹಾಗೆ, ಬುರ್ಖಾ ಧರಿಸದ ಮುಸ್ಲಿಮ್ ಮಹಿಳೆಯರು ಧಾರಾಳ ಇದ್ದಾರೆ. ಆದರೆ ಹಿಜಾಬ್ ಧರಿಸದ  ಮುಸ್ಲಿಮ್ ಮಹಿಳೆಯರು ಕಾಣಸಿಗುವುದು ಅಪರೂಪ. ಒಂದುವೇಳೆ, ಹಿಜಾಬ್‌ನಷ್ಟು ಕೇಸರಿ ಶಾಲ್‌ಗೂ ಹಿಂದೂ ಧರ್ಮದಲ್ಲಿ  ಮಹತ್ವ ಇರುತ್ತಿದ್ದರೆ, ಸಾರ್ವಜನಿಕ ಬದುಕಿನಲ್ಲಿ ಅದು ಇಷ್ಟು ಅಪರೂಪ ಆಗಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ಹಿಂದೂಗಳಲ್ಲಿ  ರೂಢಿಯಾಗಿ ಬಳಕೆಯಲ್ಲಿರುತ್ತಿತ್ತು. ಹೇಗೆ ಬಿಂದಿ, ನಾಮ, ಕಾಲುಂಗುರ, ಕರಿಮಣಿ... ಇತ್ಯಾದಿಗಳು ಸಹಜವಾಗಿ ಬಳಕೆಯಲ್ಲಿವೆಯೋ  ಹಾಗೆ. ಇವುಗಳಿಗೆ ಧಾರ್ಮಿಕ ಹಿನ್ನೆಲೆ ಇರುವುದರಿಂದ ಇವು ಮನೆಯಿಂದ ಹಿಡಿದು ಶಾಸನ ಸಭೆಯವರೆಗೆ ಮತ್ತು ಶಾಲಾ- ಕಾಲೇಜುಗಳಿಂದ ಹಿಡಿದು ಸರಕಾರಿ ಕಚೇರಿಗಳ ವರೆಗೆ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧಿಸಿ  2022 ಫೆಬ್ರವರಿ 5ರಂದು ಬೊಮ್ಮಾಯಿ ಸರಕಾರ ಆದೇಶ ಹೊರಡಿಸುವಾಗಲೂ ಹಿಂದೂ ವಿದ್ಯಾರ್ಥಿಗಳು ಬಿಂದಿ, ನಾಮ, ಕೆಂಪು  ದಾರವನ್ನು ಕಟ್ಟಿಕೊಂಡು ಕಾಲೇಜಿಗೆ ಬರುತ್ತಿದ್ದರು. ಯಾಕೆಂದರೆ, ಅದು ಅವರ ಬದುಕಿನ ಭಾಗ. ಧಾರ್ಮಿಕವಾಗಿ ಅವುಗಳಿಗಿರುವ  ಮಹತ್ವವೇ ಅದನ್ನು ನಿತ್ಯ ರೂಢಿಯಾಗಿಸಿದೆ. ನಿಜವಾಗಿ,

ಹಿಜಾಬ್‌ಗೆ ಮುಖಾಮುಖಿಯಾಗಿಸಬೇಕಾದದ್ದು ಇವುಗಳನ್ನು. ಬಿಂದಿ, ಕಾಲುಂಗುರ, ನಾಮ, ಕರಿಮಣಿ... ಮುಂತಾದವುಗಳು ಸಂಪೂರ್ಣವಲ್ಲದಿದ್ದರೂ ಒಂದು ಹಂತದ ವರೆಗೆ ಹಿಜಾಬ್‌ಗೆ ತದ್ರೂಪವಾಗಿ ತೋರಿಸಬಹುದು. ಆದರೆ ಹಿಜಾಬ್ ವಿವಾದ ಆರಂಭವಾದ  2022 ಜನವರಿಯಿಂದ ಇವತ್ತಿನವರೆಗೆ ಅತಿ ಬುದ್ಧಿವಂತರು ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಚರ್ಚಿಸುತ್ತಿದ್ದಾರೆ.  ಅಲ್ಲದೇ, ಸಿಕ್ಖ್ ವಿದ್ಯಾರ್ಥಿಗಳು ಧರಿಸುವ ಪೇಟವನ್ನು ಎಲ್ಲೂ ಚರ್ಚೆಯ ವ್ಯಾಪ್ತಿಗೆ ತರುತ್ತಲೂ ಇಲ್ಲ. ಅಂದರೆ, ಇಲ್ಲಿರುವುದು  ಮುಸ್ಲಿಮ್ ದ್ವೇಷವೇ ಹೊರತು ಇನ್ನೇನೂ ಅಲ್ಲ. 2022 ಜನವರಿಯಲ್ಲಿ ಹಿಜಾಬನ್ನು ಉಡುಪಿಯ ಸರಕಾರಿ ಹೆಣ್ಣು ಮಕ್ಕಳ ಕಾಲೇಜು  ವಿವಾದವಾಗಿ ಮಾರ್ಪಡಿಸಿದ ಬಳಿಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಕುಂದಾಪುರದ ಭಂಡಾರ್‌ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್  ಕಾಲೇಜು ಪ್ರವೇಶ ನಿರಾಕರಿಸಿತು. ಆದರೆ, ಹಿಜಾಬ್‌ಗೆ ಅವಕಾಶ ಇದೆ ಎಂದು ಕಾಲೇಜು ರೂಲ್ ಬುಕ್‌ನಲ್ಲಿ ಇರುವುದನ್ನು ಈ  ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಕೂಡಾ ಫೆ.  5ರ ಸರಕಾರಿ ಆದೇಶದ ಬಳಿಕ ಹಿಜಾಬ್‌ಗೆ ನಿಷೇಧ ಹೇರಿತು. ಆದರೆ, ಈ ಮೊದಲು ಈ ಕಾಲೇಜಿನಲ್ಲಿ ಹಿಜಾಬ್‌ಗೆ ಯಾವ ನಿಷೇಧವೂ  ಇರಲಿಲ್ಲ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಕುಂದುಪಾರ ಕಾಲೇಜು ಕೂಡಾ ಹಿಜಾಬ್‌ಧಾರಿ  ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಿತು. ಪ್ರಶ್ನೆ ಇರುವುದೂ ಇಲ್ಲೇ. ಒಂದುವೇಳೆ, ಹಿಜಾಬ್ ನಷ್ಟು ಮಹತ್ವ ಕೇಸರಿ ಶಾಲ್‌ಗೂ  ಇದೆಯೆಂದಾದರೆ, 2022ರ ಫೆಬ್ರವರಿಗಿಂತ ಮೊದಲೇ ಹಿಜಾಬ್‌ನಂತೆಯೇ ಕೇಸರಿ ಶಾಲ್ ಧರಿಸಲು ತಮಗೂ ಅನುಮತಿ ಕೊಡಿ  ಎಂದು ಯಾವ ವಿದ್ಯಾರ್ಥಿಗಳೂ ಯಾಕೆ ಶಾಲಾಡಳಿತವನ್ನು ಕೋರಿಕೊಂಡಿಲ್ಲ ಅಥವಾ ಹಿಜಾಬ್ ಧರಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು  ಬರುವಂತೆಯೇ ಸಹಜವಾಗಿ ಕೇಸರಿ ಶಾಲು ಧರಿಸಿಕೊಂಡು ಯಾಕೆ ಬರಲಿಲ್ಲ? ಉಡುಪಿಯ ವಿದ್ಯಾರ್ಥಿನಿಯರಿಗೆ ಹಿಜಾಬನ್ನು ನಿರಾಕರಿಸಲಾದ  ಬಳಿಕವೇ ಏಕೆ ಕೇಸರಿ ಶಾಲು ಮುನ್ನೆಲೆಗೆ ಬಂತು? ಹಿಜಾಬ್‌ನಂತೆ ಇದು ಜೀವನರೂಢಿ ಆಗಿಲ್ಲ ಎಂಬುದನ್ನೇ ಇದು  ಸೂಚಿಸುತ್ತದಲ್ಲವೇ? ನಿಜವಾಗಿ,

ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ್ತ್ರದ್ದೇ ಭಾಗವಾದ ಶಾಲನ್ನು ತಲೆಗೆ ಹಾಕಿಕೊಳ್ಳಲು ಬಯಸಿದ್ದರೇ ಹೊರತು ಸಾರ್ವಜನಿಕವಾಗಿ  ರೂಢಿಯಲ್ಲಿರುವ ಶಿರವಸ್ತ್ರದ ಮಾದರಿಯನ್ನಲ್ಲ. ಬಟ್ಟೆಯಿಂದ ಸದಾ ತಲೆ ಮುಚ್ಚಿರಬೇಕು ಅನ್ನುವುದು ಮುಸ್ಲಿಮರ ಧಾರ್ಮಿಕ ನಂಬಿಕೆ.  ಸಮವಸ್ತ್ರವು ಯಾವ ಶಾಲನ್ನು ಕುತ್ತಿಗೆಗೆ ಹಾಕಿಕೊಳ್ಳಲು ಅನುಮತಿಸುತ್ತದೋ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುತ್ತೇವೆ  ಎಂದಷ್ಟೇ ವಿದ್ಯಾರ್ಥಿನಿಯರು ಕೋರಿಕೊಂಡಿದ್ದರು. ಇದು ಸಂಪೂರ್ಣವಾಗಿ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯ. ಸಮವಸ್ತ್ರದ  ಜೊತೆ ಶಾಲು ಅನುಮತಿಸಿರುವುದು ವಿದ್ಯಾರ್ಥಿನಿಯರಿಗೆ ಮಾತ್ರ. ವಿದ್ಯಾರ್ಥಿ ಗಳ ಸಮವಸ್ತ್ರದಲ್ಲಿ ಶಾಲ್‌ಗೆ ಅವಕಾಶವಿಲ್ಲ. ಆದರೆ,  ಹಿಜಾಬನ್ನು ನೆಪ ಮಾಡಿಕೊಂಡು ಗಂಡು ಮಕ್ಕಳು ಕೇಸರಿ ಶಾಲನ್ನು ಶಾಲೆಯೊಳಗೆ ತಂದರು. ಇದು ಪೂರ್ಣವಾಗಿ ದ್ವೇಷ ರಾಜಕೀಯ  ಪಿತೂರಿಯಿಂದಾಗಿತ್ತೇ ಹೊರತು ಧರ್ಮ ಪ್ರೇಮದಿಂದ ಅಲ್ಲವೇ ಅಲ್ಲ. ಅಷ್ಟಕ್ಕೂ,

ಕಾಲೇಜು ಕುಸ್ತಿ ಅಖಾಡವೂ ಅಲ್ಲ, ಹಿಜಾಬ್ ಮತ್ತು ಕೇಸರಿ ಶಾಲು ಜಟ್ಟಿಗಳೂ ಅಲ್ಲ. ವಿದ್ಯಾರ್ಥಿಗಳನ್ನು ಹಿಂದೂ-ಮುಸ್ಲಿಮ್ ಆಗಿ  ವಿಭಜಿಸುವ ಷಡ್ಯಂತ್ರವೊಂದರ ಭಾಗವಾಗಿಯೇ ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಹಿಜಾಬ್ ಎಂಬುದು  ಕೇಸರಿ ವಿರೋಧಿ ಅಲ್ಲ. ಹಿಜಾಬ್‌ಗೆ ನಿರ್ದಿಷ್ಟ ಬಣ್ಣವೂ ಇಲ್ಲ. ಒಂದುವೇಳೆ ಯಾವುದೇ ಕಾಲೇಜು ಕೇಸರಿ ಬಣ್ಣವನ್ನು ಸಮವಸ್ತ್ರದ  ಬಣ್ಣವಾಗಿ ಆಯ್ಕೆ ಮಾಡಿಕೊಂಡರೆ ಮತ್ತು ಕೇಸರಿ ಬಣ್ಣದ ಶಾಲನ್ನೇ ಧರಿಸಬೇಕೆಂದು ಹೇಳಿದರೆ ಮುಸ್ಲಿಮ್ ಹೆಣ್ಣು ಮಕ್ಕಳೂ ಅದೇ  ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುವ ಅವಕಾಶವನ್ನಷ್ಟೇ ಕೋರುತ್ತಾರೆಯೇ ಹೊರತು ಬೇರೆಯೇ ಬಣ್ಣದ ಹಿಜಾಬ್ ಧರಿಸುತ್ತೇವೆ  ಎಂದು ಖಂಡಿತ ಹೇಳುವುದಿಲ್ಲ. ಯಾಕೆಂದರೆ, ಹಿಜಾಬ್ ಫ್ಯಾಶನ್ ಅಲ್ಲ, ಅದು ಬದುಕಿನ ಭಾಗ. ಅದಕ್ಕೆ ಬಣ್ಣ ಮುಖ್ಯ ಅಲ್ಲ, ತಲೆ  ಮುಚ್ಚುವುದೇ ಅದರ ಗುರಿ. ಆದರೆ,

ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಇನ್ನಿಲ್ಲದ ಕಾಟವನ್ನು ಕೊಡಲಾಯಿತು. ಹಿಜಾಬ್  ಧರಿಸಿ  ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಲಾಯಿತು. ಹಿಜಾಬ್ ಧರಿಸುವುದನ್ನು ಮೂಲಭೂತ ವಾದವೆಂಬಂತೆ  ಬಿಂಬಿಸಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರು ಅತ್ಯಂತ ಏಕಮುಖವಾಗಿ ನಡಕೊಂಡರು. ಯೂನಿ ಫಾರ್ಮ್ ನ  ಭಾಗವಾಗಿ  ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂದ ವಿದ್ಯಾರ್ಥಿನಿಯರ ಬೇಡಿಕೆಯನ್ನು ತಿರಸ್ಕರಿಸಿದರು. ಅವರದೇ ಪಕ್ಷದ  ಶಾಸಕರು ಮತ್ತು ನಾಯಕರು ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲನ್ನು ಪ್ರಚೋದಿಸಿದರು. ಉಡುಪಿ ಜಿಲ್ಲೆಯಲ್ಲಿ ಉಚಿತವಾಗಿ ಕೇಸರಿ  ಶಾಲನ್ನು ವಿತರಿಸಲಾದ ಘಟನೆಯೂ ನಡೆಯಿತು. ಈ ಸನ್ನಿವೇಶದಲ್ಲಿ ಸರಕಾರವೂ ಸೇರಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು  ಹಿಂದೂ-ಮುಸ್ಲಿಮ್ ಆದರೇ ಹೊರತು ಜವಾಬ್ದಾರಿಯುತವಾಗಿ ವರ್ತಿಸಲೇ ಇಲ್ಲ. ಸರಕಾರ ತಾನು 6 ಕೋಟಿ ಕನ್ನಡಿಗರಿಗೆ  ಉತ್ತರದಾಯಿ ಎಂಬುದನ್ನೇ ಮರೆತು ಒಂದು ಗುಂಪಿನ ಪರ ಬಲವಾಗಿಯೇ ನಿಂತಿತು. ಒಂದು ಪುಟ್ಟ ಸುತ್ತೋಲೆಯಿಂದ  ನಿಭಾಯಿಸಬಹುದಾಗಿದ್ದ ಪ್ರಕರಣವನ್ನು ಮೂರು ದಿನಗಳ ಕಾಲ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಸಾರುವಂಥ ಗಂಭೀರ  ಸ್ಥಿತಿಗೆ ತಳ್ಳಿತು. ಹೈಕೋರ್ಟ್ನಲ್ಲೂ ಹಿಜಾಬ್‌ನ ವಿರುದ್ಧ ವಾದಿಸಿತು. ಮಾತ್ರವಲ್ಲ, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ತಿ,  ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಝೈಬುನ್ನಿಸಾ ಎಂ. ಕಾಝಿ ಅವರಿದ್ದ ಪೀಠವು ಬೊಮ್ಮಾಯಿ ಸರಕಾರದ ಆದೇಶವನ್ನೇ  ಎತ್ತಿ ಹಿಡಿಯಿತು. ಪ್ರಕರಣ ಈಗ ಸುಪ್ರೀಮ್ ಕೋರ್ಟ್ನಲ್ಲಿದೆ. ಈ ನಡುವೆಯೇ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ,

ಸುಪ್ರೀಮ್ ಕೋರ್ಟ್ನಲ್ಲಿರುವ ಪ್ರಕರಣವೊಂದನ್ನು ಹಿಂಪಡೆಯಲು ಸಾಧ್ಯವೇ, ಅದಕ್ಕಿರುವ ದಾರಿಗಳೇನು, ಕಾನೂನು ಇತಿಮಿತಿಗಳು  ಏನೆಲ್ಲ ಎಂಬ ಪ್ರಶ್ನೆಗಳಾಚೆಗೆ ಸಿದ್ದರಾಮಯ್ಯ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಲೋಕಸಭಾ ಚುನಾ ವಣೆ ಹತ್ತಿರವಿರುವಂತೆಯೇ  ಇಂಥ ಹೇಳಿಕೆ ಕೊಡುವುದು ಸುಲಭ ಅಲ್ಲ. ಬಿಜೆಪಿ ಇದನ್ನು ಮುಸ್ಲಿಮ್ ಓಲೈಕೆ ಎಂದು ಹೇಳಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ  ಇದ್ದೂ ಸಿದ್ದರಾಮಯ್ಯ ಇಂಥ ನಿಲುವು ಪ್ರದರ್ಶಿಸುತ್ತಾರೆಂದರೆ ಅದರ ಹಿಂದೆ ಅವರ ದಮನಿತ ಪರ ಕಾಳಜಿ ಸ್ಪಷ್ಟವಾಗುತ್ತದೆ. ಚುನಾವಣೆಯ ಲಾಭ-ನಷ್ಟಕ್ಕಿಂತ ನ್ಯಾಯದಾನವೇ ಮುಖ್ಯ ಎಂದು ಅವರು ಸಾರಿದ ಸಂದೇಶಕ್ಕೆ ಧನ್ಯವಾದ ಹೇಳಬೇಕಾಗುತ್ತದೆ.