Saturday, October 28, 2023

ಆ ಮಯ್ಯತ್ ಸಂಸ್ಕಾರದಲ್ಲಿ 8 ಮಂದಿಯಷ್ಟೇ ಇದ್ದರು...





‘ಆ ಮಹಿಳೆಯ ಮೃತದೇಹವನ್ನು ಸಂಸ್ಕಾರಕ್ಕಾಗಿ ಮಸೀದಿಗೆ ಕೊಂಡೊಯ್ಯು ತ್ತಿದ್ರು. ಎಣಿಕೆಯ ಏಳು ಅಥವಾ ಎಂಟು ಮಂದಿಯಷ್ಟೇ  ಗುಂಪಿನಲ್ಲಿದ್ದರು. ಇವರಲ್ಲಿ ನಾಲ್ಕು ಮಂದಿ ಮೃತದೇಹವನ್ನಿರಿಸಲಾದ ಮಂಚಕ್ಕೆ ಹೆಗಲು ಕೊಟ್ಟಿದ್ದರು. ಉಳಿದ ಮೂರೋ-ನಾಲ್ಕೋ  ಮಂದಿ ಮಂಚದ ಹಿಂದೆ-ಮುಂದೆ  ಇದ್ದರು. ನಂಗೆ ಆ ಮೃತ ಮಹಿಳೆಯ ಪರಿಚಯವಿಲ್ಲ. ಆದರೆ ಮನಸ್ಸು ತಡೆಯಲಿಲ್ಲ. ಪುರುಷನ  ಮೃತದೇಹವಾಗಿರುತ್ತಿದ್ದರೆ ಹೀಗಿರುತ್ತಿತ್ತೇ... ಎಂದು ಆಲೋಚಿಸಿದೆ. ಈ ಮೃತ ಮಹಿಳೆಗೆ ಪತಿ-ಮಕ್ಕಳಿಲ್ಲವೇ, ಕುಟುಂಬ ಇಲ್ಲವೇ,  ಗೆಳೆಯರಿಲ್ಲವೇ... ಎಂದೆಲ್ಲಾ ಚಿಂತಿಸಿದೆ. ಬಳಿಕ ಆ ಗುಂಪಿನೊಂದಿಗೆ ಸೇರಿಕೊಂಡೆ. ಮಯ್ಯತ್ ಸಂಸ್ಕಾರದಲ್ಲಿ ಭಾಗಿಯಾದೆ. ಆ ಗುಂಪಿನಲ್ಲಿದ್ದ ಓರ್ವರು ನನಗೆ ಅಷ್ಟಿಷ್ಟು ಪರಿಚಿತರಿದ್ದರು. ತಳಮಳ ತಡೆಯಲಾಗದೇ ನನ್ನ ಅನುಮಾನವನ್ನು ಮುಂದಿಟ್ಟೆ. ನಿಜವಾಗಿ, ಆ ಮಹಿಳೆ  ಭಿಕ್ಷುಕಿಯೋ ಇನ್ನಾವುದೋ ಊರಿನಿಂದ ಬಂದು ಮೃತಪಟ್ಟ ಅಪರಿಚಿತೆಯೋ ಆಗಿರಲಿಲ್ಲ. ಪತಿ ಮೃತಪಟ್ಟಿದ್ದರು. ಮಕ್ಕಳಿರಲಿಲ್ಲ.  ಇವೆರಡರ ಹೊರತಾಗಿ ಅದೇ ಊರಿನಲ್ಲಿ ಬದುಕಿದ್ದ ಹಿರಿ ಜೀವಿಯಾಗಿದ್ದರು. ನೆರೆಕರೆಯವರು ಮನೆಗೆ ಭೇಟಿಕೊಟ್ಟು ಹೋಗಿದ್ದಾರೆ.  ತೀರಾ ಹತ್ತಿರದ ಕುಟುಂಬಿಕರು ಮೃತದೇಹವನ್ನು ನೋಡುವ ಸುನ್ನತನ್ನು ಪಾಲಿಸಿ ಮರಳಿದ್ದಾರೆ. ಹೀಗೆ ಮರಳದೇ ಉಳಿದ ತೀರಾ  ಹತ್ತಿರದ ಕುಟುಂಬಿಕರು ಮತ್ತು ಒಂದಿಬ್ಬರು ನೆರೆಕರೆಯವರಷ್ಟೇ ಮಯ್ಯತ್ ಸಂಸ್ಕಾರದವರೆಗೆ ಉಳಿದಿದ್ದಾರೆ...’

ಗೆಳೆಯರೊಬ್ಬರು ಮೊನ್ನೆ ತೀರಾ ನೋವಿನಿಂದ ಈ ವಿಷಯ ಹಂಚಿಕೊಂಡರು.

ಹಾಗಂತ, ಈ ಒಂಟಿ ಘಟನೆಯನ್ನು ಎತ್ತಿಕೊಂಡು, ಎಲ್ಲ ಮೃತ ಮಹಿಳೆಯ ಪರಿಸ್ಥಿತಿಯೂ ಹೀಗೆಯೇ ಎಂದು ಷರಾ ಬರೆದು  ಬಿಡುವಂತಿಲ್ಲ. ಬಿಡಿ ಘಟನೆಯನ್ನು ಬಿಡಿಯಾಗಿಯೇ ನೋಡಬೇಕು ಮತ್ತು ಸಾರ್ವತ್ರಿಕವಾಗಿ ಅನ್ವಯಿಸಬಾರದು ಎಂಬುದೂ ಸರಿ.  ಆದರೂ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ನಿಜಕ್ಕೂ ಈ ಮೇಲಿನ ಘಟನೆ ಒಂಟಿಯೆಂದು  ತಿರಸ್ಕರಿಸಿ ಬಿಡ  ಬಹುದಾದಷ್ಟು ಕ್ಷುಲ್ಲಕವೇ? ಮನಸಿಗೆ ಕಸಿವಿಸಿಯಾಗುವ ಇಂಥ ಸನ್ನಿವೇಶ ಬೇರೆ ಕಡೆ ನಡೆದಿಲ್ಲವೇ, ನಡೆಯುತ್ತಿಲ್ಲವೇ? ಅಥವಾ ಇದು  ಗಂಭೀರವಾಗಿ ಪರಿಗಣಿಸತಕ್ಕ ವಿಷಯವೇ ಅಲ್ಲವೇ? ಉಸಿರು ನಿಲ್ಲುವುದರೊಂದಿಗೆ ವ್ಯಕ್ತಿಗೂ ಈ ಜಗತ್ತಿನ ಜಂಜಾಟಕ್ಕೂ ಪರದೆ  ಬೀಳುತ್ತದೆ. ಆ ಬಳಿಕ ಯಾರು ಸೇರಿದರೂ, ಎಷ್ಟು ಮಂದಿ ಸೇರಿದರೂ ಅಥವಾ ಸೇರದೇ ಇದ್ದರೂ ಆ ಮೃತ ವ್ಯಕ್ತಿಗೂ ಅದಕ್ಕೂ  ಸಂಬಂಧವೇ ಇಲ್ಲ ಎಂಬ ನಿಲುವೇ?

ಗೊತ್ತಿಲ್ಲ.

ಆದರೆ,
ಹತ್ತಕ್ಕಿಂತಲೂ ಕಡಿಮೆ ಮಂದಿ ಸೇರಿಕೊಂಡು ಮೃತದೇಹವನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದು ಕ್ಷಣ ಕಸಿವಿಸಿಗೋ, ತಳಮಳಕ್ಕೋ  ಆಘಾತಕ್ಕೋ ಕಾರಣವಾಗುವುದರಲ್ಲಿ ಅಚ್ಚರಿ ಏನಿಲ್ಲ. ಇದು ಸಹಜ ಅಲ್ಲ. ಒಂದು ಕಡೆ ಮೃತದೇಹವನ್ನು ನೋಡುವುದಕ್ಕೆ ಸಾವಿರಾರು  ಮಂದಿ ಸೇರುವ ಸನ್ನಿವೇಶಗಳು ನಡೆಯುತ್ತವೆ. ಮೃತದೇಹವನ್ನು ಮಸೀದಿಗೆ ಕೊಂಡೊಯ್ಯುವ ವೇಳೆಯೂ ಈ ಜನಸಾಗರ ಹಿಂಬಾಲಿಸುತ್ತದೆ. ಎಲ್ಲೆಲ್ಲಿಂದಲೋ, ಯಾವ್ಯಾವ ಊರಿನಿಂದಲೋ ಜನರು ದಂಡು ದಂಡಾಗಿ ಆಗಮಿಸುತ್ತಾರೆ. ಮೃತ ವ್ಯಕ್ತಿಯನ್ನು ಕೊನೆಯ  ಬಾರಿ ಕಾಣ್ತುಂಬಿಕೊಳ್ಳುವುದಕ್ಕಾಗಿ ನೂಕು-ನುಗ್ಗಲು ನಡೆಯುತ್ತದೆ. ಆ ಬಳಿಕ ಸಂತಾಪ ಸಭೆಗಳೂ ನಡೆಯುತ್ತವೆ. ಹಾಗಂತ,

ಇವೆಲ್ಲ ನಡೆಯಬಾರದು ಎಂದಲ್ಲ. ಓರ್ವ ಅಸಾಮಾನ್ಯ ವ್ಯಕ್ತಿ ಮೃತಪಟ್ಟಾಗ ಇವೆಲ್ಲ ಸಹಜ. ಮತ್ತು ಇಲ್ಲೂ ಒಂದು ವಿಶೇಷತೆ ಇದೆ.  ಅದೇನೆಂದರೆ, ಹೀಗೆ ಮೃತಪಟ್ಟವರು ಪುರುಷರೇ ಆಗಿರುತ್ತಾರೆ. ಮಹಿಳೆಯರಿಗೆ ಸಂಬಂಧಿಸಿ ಇಂಥ ಸನ್ನಿವೇಶಗಳು ಶೂನ್ಯ ಅನ್ನುವಷ್ಟು  ಕಡಿಮೆ. ಅಸಾಮಾನ್ಯರು ಬಿಡಿ, ಸಾಮಾನ್ಯ ಪುರುಷ ಮತ್ತು ಮಹಿಳೆಯರು ಮೃತಪಟ್ಟಾಗಲೂ ಈ ವ್ಯತ್ಯಾಸ ಕಂಡೇ ಕಾಣುತ್ತದೆ. ಸಾಮಾನ್ಯ ಪುರುಷ  ವ್ಯಕ್ತಿ ಮೃತಪಟ್ಟ ಸುದ್ದಿಗೆ ಸ್ಪಂದಿಸುವಷ್ಟು ತೀವ್ರ ವಾಗಿ ಸಾಮಾನ್ಯ ಮಹಿಳೆ ಮೃತಪಟ್ಟ ಸುದ್ದಿಗೆ ಸಮಾಜ   ಅಥವಾ ಸಂಬಂಧಿಕರೇ ಸ್ಪಂದಿಸುವುದಿಲ್ಲ. ಯಾಕೆ ಹೀಗೆ? ಇದಕ್ಕೆ ಮಹಿಳೆ ಎಷ್ಟು ಹೊಣೆ? ಪುರುಷ ಎಷ್ಟು ಹೊಣೆ? ಸಮುದಾಯ ಎಷ್ಟು ಹೊಣೆ?

ಯಾವುದೇ ಓರ್ವ ಪುರುಷ ಅಸಾಮಾನ್ಯ ವ್ಯಕ್ತಿಯಾಗಿರುವುದರ ಹಿಂದೆ ಆತನ ತಾಯಿ ಮತ್ತು ಪತ್ನಿಯ ಪ್ರಮುಖ ಪಾತ್ರ ಇರುತ್ತದೆ.  ತಾಯಿ ಮತ್ತು ಪತ್ನಿಯ ಸೇವಾ ಮನೋಭಾವ ಮತ್ತು ನಿಸ್ವಾರ್ಥ ಶ್ರಮದ ಹೊರತು ಪುರುಷನೋರ್ವ ಅಪ್ರತಿಮ ಸಮಾಜ ಸೇವಕ,  ಕೊಡುಗೈ ದಾನಿ ಆಗುವ ಸಾಧ್ಯತೆ ಕಡಿಮೆ. ವ್ಯಕ್ತಿಯೋರ್ವ ಸಮಾಜ ಸೇವಕನೋ ಇನ್ನೇನೋ ಆಗಿ ಗುರುತಿಸಿ ಕೊಳ್ಳುವಾಗ ಮನೆಯನ್ನು  ತಾಯಿ ಮತ್ತು ಪತ್ನಿ ನಿಭಾಯಿಸುತ್ತಿರುತ್ತಾರೆ. ಯಾವುದೋ ಕರೆಗೆ ಸ್ಪಂದಿಸಿ ಪುರುಷ ಹೊತ್ತಲ್ಲದ ಹೊತ್ತಿನಲ್ಲೂ ಮನೆಯಿಂದ ಹೊರಟು  ಹೋಗುವಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಮನೆಯ ಮಹಿಳೆಯರ ಮೇಲೆ ಬೀಳುತ್ತದೆ. ಮಕ್ಕಳನ್ನು ಶಾಲೆಗೆ  ಸಿದ್ಧಗೊಳಿಸಬೇಕು, ಅದಕ್ಕಿಂತ ಮೊದಲು ಮಕ್ಕಳಿಗೆ ಆಹಾರ ತಯಾರಿಸಬೇಕು. ಬಟ್ಟೆ-ಬರೆಗಳನ್ನು ಒಪ್ಪ-ಓರಣಗೊಳಿಸಬೇಕು, ಹೋಮ್  ವರ್ಕ್ ನಿಂದ  ಹಿಡಿದು ಶಾಲೆಗೆ ತೆರಳಿ ಶಿಕ್ಷಕರನ್ನು ಭೇಟಿಯಾಗುವರೆಗೆ ಎಲ್ಲವನ್ನೂ ನಿಭಾಯಿಸಬೇಕು. ಶಾಲೆಗೆ ತೆರಳಿದ ಮಕ್ಕಳು ಸಂಜೆ  ಮನೆಗೆ ಬರುವ ವೇಳೆ ಅವರನ್ನು ಸ್ವಾಗತಿಸುವುದಕ್ಕೆ ಮತ್ತು ಅವರ ಹಸಿವನ್ನು ತಣಿಸುವುದಕ್ಕೆ ಮುಂದಾಗಬೇಕು. ಬೆಳೆದ ಮಕ್ಕಳಾದರೆ  ಮೊಬೈಲ್‌ನಲ್ಲಿ ಏನೇನು ವೀಕ್ಷಿಸುತ್ತಾರೆ ಅನ್ನುವ ಆತಂಕ, ಎರಡು ಕಣ್ಣುಗಳಲ್ಲಿ ಒಂದನ್ನು ಅತ್ತವೇ ಇಡಬೇಕಾದ ಒತ್ತಡ. ಹೊರಗೆ  ಹೋಗುವ ಗಂಡು ಮಕ್ಕಳು ಮನೆಗೆ ಮರಳಲು ತುಸು ತಡವಾದರೂ ಮನದಲ್ಲಿ ನೂರು ಭಾವ. ಮಕ್ಕಳನ್ನು ಯಾವ ಶಾಲೆಗೆ, ಯಾವ  ಕೋರ್ಸ್ ಗೆ  ಸೇರಿಸಬೇಕು ಎಂಬ ಬೇಗುದಿ... ಇತ್ಯಾದಿಗಳು ಬ್ಯುಝಿ ಪುರುಷನ ಮನೆಯಲ್ಲಿರುವ ಮಹಿಳೆಯರ ಮೇಲಿರುತ್ತದೆ. ಪುರುಷ  ಮನೆಯ ಹೊರಗಿನ ಕೆಲಸಗಳಲ್ಲಿ ನಿರತವಾಗಿರುವಾಗ ಮನೆಯ ಇಡೀ ಜವಾಬ್ದಾರಿಯನ್ನು ಮಹಿಳೆ ಹೊತ್ತುಕೊಳ್ಳುತ್ತಾಳೆ. ಇದು ಕೇವಲ  ಸಮಾಜ ಸೇವೆಯಲ್ಲಿ ತೊಡಗಿರುವ ಪುರುಷರಿಗೆ ಸಂಬಂಧಿಸಿ ಮಾತ್ರ ಹೇಳುವುದಲ್ಲ. ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವವರು,  ವೈದ್ಯರು, ನ್ಯಾಯವಾದಿಗಳು, ಶಿಕ್ಷಕರು, ಸಾಹಿತಿಗಳು, ಉದ್ಯಮಿಗಳು ಇತ್ಯಾದಿ ಎಲ್ಲರಿಗೆ ಸಂಬಂಧಿಸಿಯೂ ಬಹುತೇಕ ಈ ಮಾತುಗಳು  ಅನ್ವಯಿಸುತ್ತವೆ. ಒಂದುವೇಳೆ,

ಮನೆಯ ಮಹಿಳೆಯು ಸಹಕರಿಸದೇ ಇದ್ದರೆ ಯಾವ ಪುರುಷನೂ ಯಶಸ್ವಿ ಉದ್ಯಮಿ, ಸದಾ ಕೈಗೆ ಸಿಗುವ ಸಮಾಜ ಸೇವಕ, ಯಶಸ್ವಿ  ರಾಜಕಾರಣಿ, ವೈದ್ಯ, ಶಿಕ್ಷಕ ಆಗುವ ಸಾಧ್ಯತೆಗಳು ತೀರಾ ತೀರಾ ಕಡಿಮೆ. ಪುರುಷನೋರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಸಮಾಜದಲ್ಲಿ  ಗುರುತಿಸಿಕೊಳ್ಳುವುದರ ಹಿಂದೆ ಮನೆ ಮಹಿಳೆಯರ ಬೆವರಿರುತ್ತದೆ. ಆದರೆ ಸಮಾಜಕ್ಕೆ ಈ ಬೆವರು ಕಾಣಿಸುವುದಿಲ್ಲ. ಬದಲು ಅದರ ಫ ಲಿತಾಂಶವಾಗಿರುವ ಪುರುಷನಷ್ಟೇ ಕಾಣಿಸುತ್ತಾನೆ. ಅಷ್ಟಕ್ಕೂ,

ಯಾವುದೇ ಯಶಸ್ವಿ ಉದ್ಯಮಿಯ ಪತ್ನಿ ಉದ್ಯಮಿಯಾಗುವುದು ಕಡಿಮೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಪತ್ನಿ  ಅಷ್ಟೇ ತೀವ್ರವಾಗಿ ಸಮಾಜ ಸೇವೆಯಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡಿರುವುದು ಕಡಿಮೆ. ವೈದ್ಯನೋರ್ವ ವೈದ್ಯೆಯನ್ನೇ  ಮದುವೆಯಾದರೂ ತ್ಯಾಗದ ಸಂದರ್ಭ ಬಂದಾಗ ವೈದ್ಯೆ ಅದಕ್ಕೆ ಸಿದ್ಧವಾಗುತ್ತಾಳೆ. ಅನೇಕ ಬಾರಿ ಮನೆವಾರ್ತೆ ನೋಡಿಕೊಳ್ಳುವುದಕ್ಕಾಗಿ  ವೈದ್ಯಕೀಯ ಸೇವೆಯಿಂದಲೇ ದೂರ ನಿಲ್ಲುತ್ತಾರೆ. ಶಿಕ್ಷಕ ಮತ್ತು ಶಿಕ್ಷಕಿಗೆ ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಮಕ್ಕಳ  ಲಾಲನೆ-ಪಾಲನೆ, ಕುಟುಂಬ ನಿರ್ವಹಣೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟು ತನ್ನ ಶಿಕ್ಷಕ ವೃತ್ತಿಯನ್ನೋ ಲಾಯರ್ ವೃತ್ತಿಯನ್ನೋ  ಕೈಬಿಡುವ ಮಹಿಳೆಯರಿದ್ದಾರೆಯೇ ಹೊರತು ಪುರುಷರಿಲ್ಲ. ರಾಜಕಾರಣಿಯ ಪತ್ನಿ ರಾಜಕಾರಣಿಯಾಗುವುದು ತೀರಾ ತೀರಾ ಅಪರೂಪ.  ಹಾಗಂತ, ಈ ರಾಜಕಾರಣಿಗಳ ಪತ್ನಿಯರು ರಾಜಕೀಯ ಮಹತ್ವಾಕಾಂಕ್ಷೆ ಇಲ್ಲದವರೆಂದೋ ಅಸಮರ್ಥರೆಂದೋ ಇದರರ್ಥವಲ್ಲ.  ರಾಜಕಾರಣಿಯ ಪತ್ನಿಗೆ ಮನೆ ನಿರ್ವಹಣೆಯೇ ಬಹುದೊಡ್ಡ ಸವಾಲು. ರಾಜಕಾರಣಿ ಪತಿ ಮನೆಯಲ್ಲಿರುವುದು ಕಡಿಮೆ. ಇದ್ದರೂ  ಕುಟುಂಬಕ್ಕೆ ಸಮಯ ಮೀಸಲಿಡುವುದು ಇನ್ನೂ ಕಡಿಮೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಆಪ್ತರು.. ಎಂಬೆಲ್ಲಾ ದಂಡು ಅವರ  ಸುತ್ತ-ಮುತ್ತ ತಿರುಗಾಡುತ್ತಿರುತ್ತದೆ. ಇದರ ನಡುವೆಯೇ ಮಹಿಳೆಯರು ಮನೆ ನಿರ್ವಹಣೆ ಮಾಡಬೇಕು. ಮಕ್ಕಳನ್ನು ನೋಡಿಕೊಳ್ಳಬೇಕು.  ಅನೇಕ ವೇಳೆ, ರಾಜಕಾರಣಿ ಪತಿ ಮೃತಪಟ್ಟ ಬಳಿಕ ಪತ್ನಿ ರಾಜಕೀಯ ಪ್ರವೇಶಿಸುವುದೂ ಇದೆ. ಒಂದುರೀತಿಯಲ್ಲಿ,

ಪುರುಷ ಪ್ರಸಿದ್ಧನಾಗುವುದು ಅಥವಾ ತನ್ನ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಮಹಿಳೆಯಿಂದ. ಆಕೆಯ ತ್ಯಾಗ, ಪರಿಶ್ರಮ, ಬೆವರು ಮತ್ತು  ಪ್ರಾರ್ಥನೆಯು ಪುರುಷನ ಪಾಲಿಗೆ ಯಾವಾಗಲೂ ಆಮ್ಲಜನಕವಾಗಿ ಕೆಲಸ ಮಾಡುತ್ತದೆ. ಆದರೆ ಸಮಾಜ ಪುರುಷ ನನ್ನು  ಗುರುತಿಸುತ್ತದೆಯೇ ಹೊರತು ಅದರ ಹಿಂದಿರುವ ಶಕ್ತಿಯನ್ನು ಗಮನಿಸುವುದಿಲ್ಲ. ಈ ಯಶಸ್ವಿ ವ್ಯಕ್ತಿ ಮೃತಪಟ್ಟಾಗ ಸಾವಿರಾರು ಮಂದಿ  ಸೇರುತ್ತಾರೆ. ಗುಣಗಾನ ಮಾಡುತ್ತಾರೆ. ಆ ವ್ಯಕ್ತಿಯನ್ನು ಕೊನೆಯ ಬಾರಿ ನೋಡುವುದಕ್ಕೆ ತುದಿಗಾಲಲ್ಲಿ ನಿಲ್ಲುತ್ತಾರೆ. ಅವರ ಹೆಸರಲ್ಲಿ  ರಕ್ತದಾನ ಶಿಬಿರವನ್ನೋ ಸೇವಾ ಚಟುವಟಿಕೆ ಯನ್ನೋ ನಡೆಸುತ್ತಾರೆ. ಸಾಹಿತ್ಯ ಮತ್ತು ಭಾಷಣ ವೇದಿಕೆಗಳಿಗೆ ಅವರ ಹೆಸರನ್ನಿಡುತ್ತಾರೆ.  ಅವರ ಹೆಸರಲ್ಲಿ ಪ್ರಶಸ್ತಿ ಪುರಸ್ಕಾರವನ್ನು ನೀಡುವ ಪರಂಪರೆ ಪ್ರಾರಂಭಿಸುತ್ತಾರೆ. ಅವರ ಸಾಧನೆಯನ್ನು ಸ್ಮರಿಸುವ ಪುಸ್ತಕಗಳೂ ಬರುತ್ತವೆ.

ಆದರೆ,
ಅವರನ್ನು ಈ ಹಂತಕ್ಕೇರಿಸುವಲ್ಲಿ ಬಹುದೊಡ್ಡ ತ್ಯಾಗ ಮಾಡಿರುವ ಮತ್ತು ಬೆವರು ಹರಿಸಿರುವ ಆಕೆಯನ್ನು ಮಾತ್ರ ಸಮಾಜ ಬಹುತೇಕ  ಬಾರಿ ಮರೆತು ಬಿಡುತ್ತದೆ. ಆದ್ದರಿಂದಲೇ ಪತಿ ಮೃತಪಟ್ಟಾಗ ಸೇರಿದ ಸಾವಿರಾರು ಮಂದಿಯಲ್ಲಿ ನೂರು ಮಂದಿಯೂ ಅವರ ಪತ್ನಿ  ಮೃತಪಟ್ಟಾಗ ಸೇರುವುದಿಲ್ಲ. ಈ ನೂರು ಮಂದಿಯಲ್ಲಿ ಮೃತದೇಹದೊಂದಿಗೆ ಮಸೀದಿಗೆ ಹೋಗು ವವರು ಇನ್ನೂ ಕಡಿಮೆಯಿರುತ್ತಾರೆ.  ಇದು ಒಂದಿಷ್ಟು ಪ್ರತಿಷ್ಠಿತ ವ್ಯಕ್ತಿಗಳಿಗೆ ಸಂಬಂಧಿಸಿದ ಸಂಗತಿಯಾದರೆ, ಸಾಮಾನ್ಯ ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿ ಈ  ಪರಿಸ್ಥಿತಿ ಇನ್ನೂ ಆಘಾತಕಾರಿಯಾಗಿರುತ್ತದೆ. ಮೃತ ಪುರುಷನನ್ನು ನೋಡಲು ಬರುವವರು ಮತ್ತು ಮಯ್ಯತ್‌ನೊಂದಿಗೆ ಮಸೀದಿವರೆಗೆ  ಹೋಗುವವರ ಸಂಖ್ಯೆಯ ಅರ್ಧದಷ್ಟೂ ಜನ ಇವರ ಪತ್ನಿಗೆ ಸಂಬಂಧಿಸಿ ಸೇರುವುದಿಲ್ಲ. ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ಪರಿಸ್ಥಿತಿ ಇಷ್ಟು ಕೆಟ್ಟಿಲ್ಲವಾದರೂ ನಗರಗಳಲ್ಲಿ ಇದು ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದೆ. ಹಾಗಂತ,

ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಳ್ಳದ ಮತ್ತು ಮನೆವಾರ್ತೆ ನೋಡಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿದ ಕಾರಣ  ಮಹಿಳೆಯರಿಗೆ ಸಂಬಂಧಿಸಿ ಇಂಥವು ಘಟಿಸುತ್ತವೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಇದನ್ನು ಪೂರ್ಣವಾಗಿ ಒಪ್ಪುವ ಹಾಗಿಲ್ಲ.  ಒಂದುವೇಳೆ, ಅವರು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿದ್ದರೆ, ಒಂದೋ ಕುಟುಂಬ ನಿಭಾವಣೆಯಲ್ಲಿ ಸಮಸ್ಯೆಗಳುಂಟಾಗುತ್ತಿತ್ತು  ಅಥವಾ ಪುರುಷನ ಸಕ್ರಿಯತೆಯ ಮೇಲೆ ಅದು ತೀವ್ರ ಅಡ್ಡ ಪರಿಣಾಮ ಬೀರುತ್ತಿತ್ತು. ಅಷ್ಟಕ್ಕೂ,
ಇವೆರಡನ್ನೂ ನಿಭಾಯಿಸಿಕೊಂಡು ಪತಿ ಮತ್ತು ಪತ್ನಿ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಯಾಗಿರುವ ದೃಷ್ಟಾಂತಗಳು ಇಲ್ಲ ಎಂದಲ್ಲ. ಇದೆ.  ಆದರೆ ಎಣಿಕೆಗೆ ಸಿಗುವಷ್ಟೇ ಇದೆ. ಅದರಾಚೆಗೆ ಯಶಸ್ವಿ ಉದ್ಯಮಿ, ಯಶಸ್ವಿ ವೈದ್ಯ, ಸಮಾಜ ಸೇವಕ, ಶಿಕ್ಷಕ, ಪ್ರಮುಖ ಸಾಹಿತಿಯ ಬೆನ್ನ  ಹಿಂದೆ ಅವರ ತಾಯಿ, ಪತ್ನಿ ಇರುತ್ತಾರೆ. ಈ ವಾಸ್ತವಕ್ಕೆ ಮುಸ್ಲಿಮ್ ಸಮುದಾಯ ಮುಖಾಮುಖಿಯಾಗಬೇಕು. ಪುರುಷರನ್ನು  ಗುರುತಿಸುವ ಮತ್ತು ಗೌರವಿಸುವ ರೀತಿಯಲ್ಲೇ  ಅವರ ಮಹಿಳೆಯರನ್ನೂ ಗುರುತಿಸುವ ಮತ್ತು ಗೌರವಿಸುವ ಪ್ರಕ್ರಿಯೆಗಳಾಗಬೇಕು.  ಮುಖ್ಯವಾಗಿ, ಗೆಳೆಯ ಹೇಳಿದಂಥ ಸನ್ನಿವೇಶ ನಿರ್ಮಾಣವಾಗದಂತೆ ಸಮುದಾಯದೊಳಗೆ ಜಾಗೃತಿ ಮೂಡಬೇಕು.

ಹೆಣ್ಣಿನ ತ್ಯಾಗ, ಪರಿಶ್ರಮವೂ ಗುರುತಿಗೀಡಾಗಲಿ.

Thursday, October 5, 2023

ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?





1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ?

2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್‌ನಲ್ಲಿ ಅದಕ್ಕೆ ನಿಷೇಧ  ಇದೆಯೇ?

ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ  ಪರಮೇಶ್ವರಿಯ ವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ,  ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, ಅಕ್ಬರ್, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಇಂದಿರಾಗಾಂಧಿ,  ನರೇಂದ್ರ ಮೋದಿಯವರೆಗೆ.. ದೇವರುಗಳು, ಧರ್ಮ ಸುಧಾರಕರು, ರಾಜರು ಮತ್ತು ಪ್ರಧಾನ ಮಂತ್ರಿಗಳ ಚಿತ್ರಗಳು, ಪುತ್ಥಳಿಗಳು,  ಕಟೌಟ್‌ಗಳು ಮತ್ತು ವಿವಿಧ ಭಂಗಿಯ ದೃಶ್ಯ ರೂಪಗಳು ಯಥೇಚ್ಛ ಲಭ್ಯವಿರುವ ಕಾಲದಲ್ಲಿ 6ನೇ ಶತಮಾನದಲ್ಲಿ ಬಾಳಿ ಬದುಕಿದ  ಮುಹಮ್ಮದ್‌ರ(ಸ) ಬಗ್ಗೆ ಮತ್ತು ಅವರು ಪರಿಚಯಿಸಿದ ದೇವರ ಬಗ್ಗೆ ಇಂಥ ಯಾವ ರಚನೆಗಳೂ ಯಾಕೆ ಲಭ್ಯವಿಲ್ಲ ಎಂಬ  ಕುತೂಹಲ ಯಾರಲ್ಲಾದರೂ ಮೂಡಿದರೆ ಅಚ್ಚರಿ ಏನಿಲ್ಲ.

ಪ್ರವಾದಿ ಹುಟ್ಟಿ ಬೆಳೆದ 6ನೇ ಶತಮಾನದ ಬದುಕು-ಭಾವ ಮತ್ತು ಜೀವನ ಕ್ರಮಗಳನ್ನು ಅಧ್ಯಯನ ನಡೆಸಿದರೆ ಹಾಗೂ ಪ್ರವಾದಿ  ಬೋಧನೆಗಳ ಆಶಯಗಳನ್ನು ಅರಿತುಕೊಂಡರೆ, ಚಿತ್ರ-ಪುತ್ಥಳಿಗಳ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಅಬ್ದುಲ್ಲಾ ಮತ್ತು ಆಮಿನಾರ ಪುತ್ರರಾದ ಮುಹಮ್ಮದರು ಹುಟ್ಟುವಾಗ ಮಕ್ಕಾ ಏನೂ ಮುಸ್ಲಿಮರ ಆಡುಂಬೊಲ ಆಗಿರಲಿಲ್ಲ. ಅಲ್ಲಿ  ಕ್ರೈಸ್ತರು, ಯಹೂದಿಯರು ಮತ್ತು ವಿಗ್ರಹಾರಾಧಕರೇ ಇದ್ದರು. ಆದಿ ಮಾನವ ಮತ್ತು ಇಸ್ಲಾಮಿನ ಪ್ರಥಮ ಪ್ರವಾದಿ ಆದಮ್(ಅ)ರಿಂದ  ನಿರ್ಮಿತವಾಗಿ ಕಾಲಕ್ರಮೇಣ ಜೀರ್ಣಾವಸ್ಥೆಗೆ ತಲುಪಿ ಬಳಿಕ ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಈಲ್(ಅ)ರಿಂದ ಪುನರ್  ನಿರ್ಮಾಣಗೊಂಡ ಮಕ್ಕಾದ ಕಾಬಾದೊಳಗೆ ಆಗ 360ಕ್ಕಿಂತ ಅಧಿಕ ವಿಗ್ರಹಗಳಿದ್ದುವು. ವಿಪರ್ಯಾಸ ಏನೆಂದರೆ, ದೇವನೊಬ್ಬನೇ ಮತ್ತು  ಆತನನ್ನು ಮಾತ್ರ ಆರಾಧಿಸಬೇಕು ಎಂದು ಜನರಿಗೆ ಕರೆಕೊಟ್ಟಿದ್ದ ಪ್ರವಾದಿ ಇಬ್ರಾಹೀಮ್ ಮತ್ತು ಇಸ್ಮಾಈಲ್‌ರ ವಿಗ್ರಹವೂ ಕಾಬಾದ  ಒಳಗಿತ್ತು. ಅಷ್ಟೇ ಅಲ್ಲ, ಮಕ್ಕಾದಲ್ಲಿ ಈ ಹಿಂದೆ ಬದುಕಿ ಮರೆಯಾಗಿದ್ದ ಸಜ್ಜನರಾದ ಲಾತ್, ಉಝ್ಝ, ಮನಾತ ಮತ್ತಿತರ ಹಲವು  ವ್ಯಕ್ತಿಗಳೂ ಆ ಕಾಬಾದೊಳಗೆ ವಿಗ್ರಹಗಳಾಗಿ ಪೂಜಾರ್ಹಗೊಂಡಿದ್ದರು. ಬಾಲಕ ಮುಹಮ್ಮದ್ ಇವನ್ನೆಲ್ಲಾ ನೋಡಿ ಬೆಳೆದರು.  ಮಾತ್ರವಲ್ಲ, ಮನುಷ್ಯರು ಆರಾಧನೆಗೆ ಒಳಗಾಗುವುದನ್ನು ಅವರ ಅಂತರಾತ್ಮ ಒಪ್ಪುತ್ತಿರಲಿಲ್ಲ. ಆದ್ದರಿಂದಲೇ,

ಇಂಥ  ಪೂಜಾ ವಿಧಾನ ಮತ್ತು ಆರಾಧನಾ ಕ್ರಮಗಳಿಂದೆಲ್ಲ ಅವರು ಅಂತರ ಕಾಯ್ದುಕೊಂಡರು. 40ನೇ ಪ್ರಾಯದಲ್ಲಿ ಪ್ರವಾದಿಯಾಗಿ  ನಿಯುಕ್ತಗೊಳ್ಳುವುದಕ್ಕಿಂತ ಮೊದಲೇ ಅವರೊಳಗೆ ಮನುಷ್ಯ ಮತ್ತು ದೇವನ ನಡುವಿನ ವ್ಯತ್ಯಾಸಗಳ ಬಗ್ಗೆ ಆಗಿನ ಮಕ್ಕಾ ಜನತೆಯ  ನಿಲುವಿಗಿಂತ ಭಿನ್ನ ಆಲೋಚನೆಯಿತ್ತು. 40ನೇ ಪ್ರಾಯದಲ್ಲಿ ಅವರಿಗೆ ದೇವನಿಂದ ವಾಣಿಗಳು ಅವತೀರ್ಣ ವಾಗತೊಡಗಿತು.  ಒಂದುರೀತಿಯಲ್ಲಿ,

40 ವರ್ಷದ ವರೆಗಿನ ಮುಹಮ್ಮದ್ ಮತ್ತು 40 ವರ್ಷದ ಬಳಿಕದ ಮುಹಮ್ಮದ್- ಈ ಎರಡೂ ಒಂದೇ ಆಗಿರಲಿಲ್ಲ. 40 ವರ್ಷದ  ವರೆಗೆ ಅವರೋರ್ವ ವ್ಯಕ್ತಿ. ಮಕ್ಕಾದ ಅಷ್ಟೂ ಜನರ ನಡುವೆ ಓರ್ವ ಸಜ್ಜನ, ಸತ್ಯವಂತ ಮತ್ತು ಪ್ರಾಮಾಣಿಕ ಎಂದು ಗುರುತಿಸಿಕೊಂಡ  ವ್ಯಕ್ತಿ. ಜೊತೆಗೇ ಪ್ರಮುಖ ವ್ಯಾಪಾರಿ. ಆದರೆ, 40 ವರ್ಷದ ಬಳಿಕ ಅವರು ಈ ಐಡೆಂಟಿಟಿಯನ್ನು ಮೀರಿ ಪ್ರವಾದಿಯಾಗಿ  ಗುರುತಿಸಿಕೊಂಡರು. ಹಾಗೆಯೇ, ಆವರೆಗೆ ಮಕ್ಕಾ ಜನತೆಯಿಂದ ಎದುರಿಸದ ವಿರೋಧಗಳನ್ನು ಆ ಬಳಿಕ ಎದುರಿಸಿದರು. ಅವರು  ಪ್ರವಾದಿ ಹೌದೋ ಅಲ್ಲವೋ ಎಂಬುದಾಗಿ ಮಕ್ಕಾದ ಜನತೆ ಅವರನ್ನು ವಿಧವಿಧವಾಗಿ ಪರೀಕ್ಷಿಸಿದರು. ಆದರೆ ಪ್ರತಿ ಪರೀಕ್ಷೆಯಲ್ಲೂ  ಮುಹಮ್ಮದ್‌ರ ಪ್ರವಾದಿತ್ವ ಸಾಬೀತುಗೊಳ್ಳುತ್ತಲೇ ಹೋಯಿತು ಮತ್ತು ಅನುಯಾಯಿಗಳು ಮತ್ತು ಪರೋಕ್ಷ ಬೆಂಬಲಿಗರ ಸಂಖ್ಯೆಯಲ್ಲಿ  ವೃದ್ಧಿಯಾಗುತ್ತಾ ಬಂತು. ಅಷ್ಟಕ್ಕೂ, ತನಗಿರುವ ಜನಪ್ರಿಯತೆ ಮತ್ತು ದಿನೇದಿನೇ ಹೆಚ್ಚುತ್ತಿರುವ ಬೆಂಬ ಲಿಗರ ಸಂಖ್ಯೆಯನ್ನು ಪರಿಗಣಿಸಿ,  ಅವರಿಗೆ ತಾನು ಮನುಷ್ಯಾತೀತ ಎಂದು ಹೇಳಿಕೊಳ್ಳಬಹುದಿತ್ತು. ತನ್ನನ್ನು ಪವಾಡ ಪುರುಷನಾಗಿಯೋ ಪೂಜೆಗೆ ಅರ್ಹನಾದ  ವ್ಯಕ್ತಿಯಾಗಿಯೋ ದೇವನ ಅವತಾರವಾಗಿಯೋ ಬಿಂಬಿಸಿಕೊಳ್ಳಬಹುದಿತ್ತು. ಹೀಗೆ ಬಿಂಬಿಸಿಕೊಳ್ಳದ ಪ್ರವಾದಿ ಇಬ್ರಾಹೀಮ್ ಮತ್ತು  ಇಸ್ಮಾಈಲ್‌ರೇ ವಿಗ್ರಹವಾಗಿ ಕಾಬಾದೊಳಗೆ ಪೂಜೆಗೊಳ್ಳುತ್ತಿರುವಾಗ, ಒಂದುವೇಳೆ ಜೀವಂತವಿರುವಾಗಲೇ ಪ್ರವಾದಿ ಮುಹಮ್ಮದ್ ಹಾಗೆ  ಬಿಂಬಿಸಿಕೊಂಡಿರುತ್ತಿದ್ದರೆ ಅವರ ಜನಪ್ರಿಯತೆಗೇನೂ ಕುಂದುಂಟಾಗುತ್ತಿರಲಿಲ್ಲ ಮತ್ತು ಅವರನ್ನು ವಿರೋಧಿಸುತ್ತಿದ್ದವರೇ ಅವರ ಬೆಂಬಲಕ್ಕೆ  ನಿಲ್ಲುವ ಸಾಧ್ಯತೆ ಹೆಚ್ಚಿತ್ತು. ‘ನೀನು ಏಕದೇವ ಪ್ರತಿಪಾದನೆಯನ್ನು ಕೈಬಿಟ್ಟರೆ ನಿನಗೆ ಬೇಕಾದುದನ್ನು ನಾವು ಕೊಡುತ್ತೇವೆ...’ ಎಂದು ಮಕ್ಕಾದ  ವಿರೋಧಿಗಳು ಅವರಿಗೆ ಆಫರನ್ನೂ ನೀಡಿದ್ದರು. ಆದರೆ, ಪ್ರವಾದಿ ಮುಹಮ್ಮದ್ ಎಲ್ಲೂ ಮಾನವ ದೇವನಾಗುವ ಸಂದರ್ಭಕ್ಕೆ ಅವಕಾ ಶವನ್ನೇ ಕೊಡಲಿಲ್ಲ. ಮಾತ್ರವಲ್ಲ, ಜನರೊಂದಿಗೆ ಹೀಗೆ ಹೇಳುವಂತೆ ಅಲ್ಲಾಹನೇ ಪವಿತ್ರ ಕುರ್‌ಆನ್‌ನಲ್ಲಿಅವರಿಗೆ ಆಜ್ಞಾಪಿಸುತ್ತಾನೆ;

‘ಓ ಪೈಗಂಬರರೇ, ಇವರೊಡನೆ ಹೇಳಿರಿ, ನನ್ನಲ್ಲಿ ಅಲ್ಲಾಹನ ಖಜಾನೆಗಳಿವೆಯೆಂದು ನಾನು ನಿಮ್ಮೊಡನೆ ಹೇಳುವುದಿಲ್ಲ. ನಾನು ಪರೋಕ್ಷ  ಜ್ಞಾನಿಯೂ ಅಲ್ಲ. ನಾನು ದೇವಚರನೆಂದೂ ಹೇಳುವುದಿಲ್ಲ. ನಾನು ನನ್ನ ಮೇಲೆ ಅವತೀರ್ಣಗೊಳ್ಳುತ್ತಿರುವ ದಿವ್ಯ ವಾಣಿಯ ಅನುಸರಣೆಯನ್ನು ಮಾತ್ರ ಮಾಡುತ್ತಿದ್ದೇನೆ.’ (6:50)

ಇನ್ನೊಂದು ವಚನ ಹೀಗಿದೆ;
‘ಇವರೊಡನೆ ಹೇಳಿರಿ, ನಾನೋರ್ವ ಅಪೂರ್ವ ಸಂದೇಶವಾಹಕ ನಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ  ಎಂಬುದಾಗಲಿ ನನಗರಿಯದು. ನಾನಂತೂ ನನ್ನ ಬಳಿಗೆ ಕಳುಹಿಸಲಾಗುತ್ತಿರುವ ದಿವ್ಯವಾಣಿಯನ್ನು ಅನುಸರಿಸುತ್ತಿದ್ದೇನೆ. ನಾನೋರ್ವ  ಸುಸ್ಪಷ್ಟ ಎಚ್ಚರಿಕೆ ನೀಡುವವನೇ ಹೊರತು ಇನ್ನೇನಲ್ಲ.’ (46:9)

ಇದನ್ನೂ ಓದಿ;
‘ಓ ಪೈಗಂಬರರೇ ಹೇಳಿರಿ, ನಾನು ನಿಮ್ಮಂತೆಯೇ ಇರುವ ಓರ್ವ ಮನುಷ್ಯ. ನಿಮ್ಮ ದೇವನು ಏಕಮಾತ್ರ ದೇವನೆಂದು ನನ್ನ ಕಡೆಗೆ  ದಿವ್ಯವಾಣಿ ಮಾಡಲಾಗುತ್ತಿದೆ.’ (18:110)

ಇಷ್ಟೇ ಅಲ್ಲ,
‘ನನ್ನ ಸಮಾಧಿಯನ್ನು ಆರಾಧನೆಯ ವಿಗ್ರಹವಾಗಿ ಮಾಡ ಬೇಡ’ ಎಂದು ಅಲ್ಲಾಹನಲ್ಲೂ ಅವರು ಪ್ರಾರ್ಥಿಸಿದ್ದರು ಮತ್ತು ದೇವನು  ಅದನ್ನು ಸ್ವೀಕರಿಸಿದ್ದಾಗಿ ವರದಿಯಿದೆ. ಕ್ರೈಸ್ತರು ಈಸಾರನ್ನು ಅತಿರೇಕ ಮಟ್ಟಕ್ಕೆ ಕೊಂಡೊಯ್ದಂತೆ ನನ್ನನ್ನು ಕೊಂಡೊಯ್ಯಬೇಡಿ ಎಂದೂ  ತನ್ನ ಅನುಯಾಯಿಗಳಲ್ಲಿ ಪ್ರವಾದಿ(ಸ) ಹೇಳಿದ್ದರು. ಅಷ್ಟಕ್ಕೂ,

ಪವಿತ್ರ ಕುರ್‌ಆನ್‌ನಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಇಷ್ಟೆಲ್ಲಾ ಜಾಗರೂಕತೆಯ ವಾಣಿಗಳು ಅವತೀರ್ಣಗೊಳ್ಳುವುದಕ್ಕೆ ಕಾರಣಗಳೇನು? ತನ್ನನ್ನು ಆರಾಧ್ಯರ ಮಟ್ಟಕ್ಕೆ ಏರಿಸಬೇಡಿ, ಪ್ರವಾದಿ ಈಸಾರ ವಿಷಯದಲ್ಲಿ ಅವರ ಅನುಯಾಯಿಗಳು ಇಂಥ ತಪ್ಪು ಮಾಡಿದ್ದಾರೆ,  ತನ್ನ ಸಮಾಧಿ ವಿಗ್ರಹವಾಗದಿರಲಿ ಎಂದೆಲ್ಲಾ ಸ್ವತಃ ಪ್ರವಾದಿಯೇ(ಸ) ಹೇಳಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರವೇ ‘ಪ್ರವಾದಿಯವರ  ಚಿತ್ರವೇಕಿಲ್ಲ’ ಎಂಬ ಪ್ರಶ್ನೆಗೂ ಉತ್ತರ ಅನ್ನಿಸುತ್ತದೆ. ತನ್ನ ಹಿಂದಿನ ಕಾಲದ ಪ್ರವಾದಿಗಳು ಮತ್ತು ಸಜ್ಜನರು ವಿಗ್ರಹಗಳಾಗಿ ಮತ್ತು ಪವಾಡ  ಪುರುಷರಾಗಿ ಆರಾಧನೆಗೊಳಗಾಗುತ್ತಿರುವುದನ್ನು ಪ್ರವಾದಿ ಕಣ್ಣಾರೆ ಕಂಡಿದ್ದಾರೆ. ಒಂದುವೇಳೆ ತಾನು ಈ ವಿಷಯದಲ್ಲಿ ಎಚ್ಚರಿಕೆ ವಹಿಸದೇ  ಹೋದರೆ ತನ್ನ ಕಾಲಾನಂತರ ತಾನೂ ಹೀಗೆಯೇ ಆರಾಧನೆಗೆ ಒಳಗಾಗಬಹುದು ಎಂಬ ಭಾವ ಅವರಲ್ಲಿ ಉಂಟಾಗಿರಬಹುದು.  ಆದುದರಿಂದಲೇ, ತನ್ನ ಅನುಯಾಯಿಗಳಿಗೆ ತಾನೇನು ಮತ್ತು ಪೂಜೆಗೆ ಅರ್ಹನು ಯಾರು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದರು ಎಂದನ್ನಿಸುತ್ತದೆ. ಒಂದುವೇಳೆ, ತನ್ನ ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟರೆ ತಾನಿಲ್ಲದ ಕಾಲದಲ್ಲಿ ಅದು ಅಸಾಮಾನ್ಯ ಗೌರವಕ್ಕೆ ಪಾತ್ರವಾದೀತು ಎಂಬ ಭಯವೂ ಅವರಲ್ಲಿ ಇದ್ದಿರಬಹುದು. ಹಾಗಂತ, ಪವಿತ್ರ ಕುರ್‌ಆನ್‌ನಲ್ಲಿ ಚಿತ್ರ ಬಿಡಿಸಬಾರದು ಎಂಬ ನೇರ ವಾಕ್ಯ ಇಲ್ಲ.  ಇದೇವೇಳೆ, ಆರಾಧನೆಗಾಗಿ ಚಿತ್ರವನ್ನಾಗಲಿ ಸ್ಮಾರಕವನ್ನಾಗಲಿ ರಚಿಸಬಾರದು, ಆದರೆ ಕಲೆಯಾಗಿ ತಪ್ಪಿಲ್ಲ’ ಎಂಬ ಅಭಿಪ್ರಾಯವನ್ನು  ಆಧುನಿಕ ವಿದ್ವಾಂಸರು ವ್ಯಕ್ತಪಡಿಸಿರುವುದನ್ನು ನೋಡಿದರೆ ಚಿತ್ರ ರಚನೆಗೆ ಇಸ್ಲಾಮ್ ವಿರೋಧಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಇನ್ನೂ ಒಂದು ಸಂಗತಿಯಿದೆ-

ಒಂದು ಚಿತ್ರವಾಗಿ ತಾನಿರುವುದನ್ನು ಪ್ರವಾದಿ ಬಯಸಿರಲಿಲ್ಲವಾದರೂ ಮೌಖಿಕವಾಗಿ ಮತ್ತು ಬರಹದ ರೂಪದಲ್ಲಿ ಅವರಿರುವುದನ್ನು  ವಿರೋಧಿಸಿಲ್ಲ ಎಂಬುದೂ ಮುಖ್ಯವಾಗುತ್ತದೆ. ಪ್ರವಾದಿಯ ಶರೀರ ಹೇಗಿತ್ತು, ಅವರ ಬಣ್ಣ, ಅವರ ಕೂದಲು ಮತ್ತು ಗಡ್ಡದ ಉದ್ದಳತೆ,  ಅವರು ಕುಳಿತುಕೊಳ್ಳುವ ಭಂಗಿ, ನಮಾಝï‌ಗೆ ನಿಲ್ಲುವ ರೀತಿ, ತಿನ್ನುವ ವಿಧಾನ, ಮಾತಿನ ಶೈಲಿ, ನಗು, ನಡೆಯುವ ರೀತಿ, ಧರಿಸುವ ವಸ್ತ್ರ, ಪೇಟ, ಕಣ್ಣುಗಳು.. ಇತ್ಯಾದಿಗಳ ವಿವರ ಗ್ರಂಥಗಳಲ್ಲಿ ಸಿಗುತ್ತದೆ. ಹೀಗೆ ಬರೆದಿಡುವುದನ್ನು ಮತ್ತು ಮೌಖಿಕವಾಗಿ ಹೇಳುವುದನ್ನು  ಪ್ರವಾದಿ ವಿರೋಧಿಸಿಲ್ಲ ಎಂದೇ ಇದರರ್ಥ. ಅಂದರೆ, ಒಂದು ಚಿತ್ರವಾಗಿ ಉಳಿಯುವುದರ ಬಗ್ಗೆ ಪ್ರವಾದಿಯವರಿಗೆ ನಿರ್ದಿಷ್ಟ ನಿಲುವು  ಇತ್ತು. ಈ ಹಿಂದಿನ ಸಜ್ಜನರಂತೆ ತಾನೂ ಆರಾಧನೆಗೋ ಇನ್ನೇನಕ್ಕೋ ಒಳಗಾದೇನು ಎಂಬ ಸ್ಪಷ್ಟತೆ ಅದರಲ್ಲಿತ್ತು. ಸಾಮಾನ್ಯ ಜನರು  ತಕ್ಷಣ ಭಾವುಕರಾಗುತ್ತಾರೆ. ತಮ್ಮಲ್ಲಿಲ್ಲದ ವಿಶೇಷತೆ ಇನ್ನೊಬ್ಬರಲ್ಲಿ ಕಂಡಾಗ ಮೋಹಗೊಳ್ಳುತ್ತಾರೆ. ಕ್ರಮೇಣ ಈ ಮೋಹವು ಆರಾಧನಾ  ರೂಪವಾಗಿ ಬದಲಾಗಿ ಬಿಡುತ್ತದೆ. ಇವತ್ತಿನ ದಿನಗಳಲ್ಲಿ ಇಂಥವು ಮಾಮೂಲು. ದೇವಮಾನವರೇ ತುಂಬಿ ಹೋಗಿರುವ ಮತ್ತು ಮನುಷ್ಯರೇ ದೇವರಂತೆ ಪೂಜೆಗೊಳ್ಳುತ್ತಿರುವ ಸನ್ನಿವೇಶದಲ್ಲಿ ಪ್ರವಾದಿಯ ಚಿತ್ರ ಇಲ್ಲದೇ ಇರುವುದರ ಮಹತ್ವ ಸುಲಭದಲ್ಲೇ   ಅರ್ಥವಾಗಬಹುದು. ಹುಟ್ಟಿಯೇ ಇಲ್ಲದ ಉರಿಗೌಡ-ನಂಜೇಗೌಡರನ್ನು ಹುಟ್ಟಿಸಿ ಅವರದ್ದೊಂದು ಚೆಲುವಾದ ಆಕೃತಿಯನ್ನು ರಚಿಸಿ ಜನಸಾಮಾನ್ಯರನ್ನು ನಂಬಿಸಬಹುದಾದ ಈ ಕಾಲದಲ್ಲಿ ಪ್ರವಾದಿಯ(ಸ) ಚಿತ್ರ ಬಿಡಿಸುವುದಕ್ಕೆ ಅನುಮತಿ ಸಿಗುತ್ತಿದ್ದರೆ ಏನಾಗುತ್ತಿತ್ತು?  ಅಂದಹಾಗೆ,

ಪವಿತ್ರ ಕುರ್‌ಆನ್ ಪರಿಚಯಿಸುವ ಅಲ್ಲಾಹನನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ತರುವುದಕ್ಕೆ ಸಾಧ್ಯವೇ ಇಲ್ಲ. ‘ವಿಶ್ವದ ಯಾವ ವಸ್ತುವೂ  ಅಲ್ಲಾಹನನ್ನು ಹೋಲುವುದಿಲ್ಲ’ (42:11) ಎಂದು ಹೇಳುವ ಕುರ್‌ಆನ್, ಇನ್ನೊಂದೆಡೆ ‘ಅಲ್ಲಾಹನು ಭೂಮಿ-ಆಕಾಶಗಳ ಪ್ರಕಾಶವಾಗಿರುವನು’ (24:35) ಎಂದೂ ಹೇಳಿದೆ. ‘ಅಲ್ಲಾಹನಿಗೆ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ’ (112:3) ಎಂದೂ  ಹೇಳಿದೆ. ಅಲ್ಲಾಹನೆಂಬುದು ಆಕಾರಗಳಲ್ಲಿ ನಿರ್ದಿಷ್ಟವಾಗಿ ಕಟ್ಟಿಕೊಡಲಾಗದ ಒಂದು ಅಪರಿಮಿತ ಶಕ್ತಿ. ಅಲ್ಲಾಹನಿಗೆ ಸಂಬಂಧಿಸಿ  ನೋಡಿದರೆ ಪ್ರವಾದಿಯವರಿಗೆ ಖಚಿತ ಐಡೆಂಟಿಟಿಯಿದೆ. ಅವರು 63 ವರ್ಷಗಳ ಕಾಲ ಜನರ ನಡುವೆ ಬದುಕಿದ್ದಾರೆ. ಅವರ ದೇಹಾಕೃತಿ,  ಮಾತು-ಕೃತಿ, ಬದುಕು-ಭಾವಗಳನ್ನು ಜನರು ಕಂಡಿದ್ದಾರೆ. ಅವರು ಮದುವೆಯಾಗಿದ್ದರು, ಮಕ್ಕಳಿದ್ದರು, ಕಾಯಿಲೆ ಬಂದಿತ್ತು, ಹಸಿವು- ನೀರಡಿಕೆ, ದುಃಖ, ಸಂತೋಷ ಇತ್ಯಾದಿ ಮಾನವ ಸಹಜವಾದುದು ಅವರಲ್ಲೂ ಇತ್ತು. ಇವೆಲ್ಲವುಗಳ ಆಚೆಗೂ ಚಿತ್ರವಾಗಿ ಈ ಜಗತ್ತಿನಲ್ಲಿ  ಅವರಿಲ್ಲ ಎಂಬುದು ಕೌತುಕದಷ್ಟೇ ಅಧ್ಯಯನಕ್ಕೂ ಯೋಗ್ಯ. ಚಿತ್ರವಿಲ್ಲದ ಪ್ರವಾದಿಗೆ ಜಾಗತಿಕವಾಗಿ ಇಷ್ಟೊಂದು ಅನುಯಾಯಿಗಳು  ಯಾಕಿದ್ದಾರೆ ಮತ್ತು ಅವರು ಪರಿಚಯಿಸಿದ ಅಲ್ಲಾಹನನ್ನು ಅನುಸರಿಸುವವರು ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹೇಗೆ ನಿರ್ಮಾಣವಾದರು ಎಂಬುದೂ ವಿಶ್ಲೇಷಣೆಗೆ ಅರ್ಹ. ಅಷ್ಟಕ್ಕೂ,

ಕಲೆ ನಿಷಿದ್ಧವಲ್ಲದ ಧರ್ಮದಲ್ಲಿ ಅಲ್ಲಾಹನ ಮತ್ತು ಪ್ರವಾದಿ ಮುಹಮ್ಮದ್(ಸ)ರ ಚಿತ್ರ ಇಲ್ಲದೇ ಇರುವುದು ಹಾಗೂ ಇದರಿಂದಾಗಿ  ಇಸ್ಲಾಮ್ ಧರ್ಮಕ್ಕೆ ಆಗಿರುವ ಲಾಭ-ನಷ್ಟಗಳೇನು ಎಂಬುದು ಸಂಶೋಧನೆಗೆ ಒಳಗಾಗುವುದಾದರೆ ನಿಜಕ್ಕೂ ಸ್ವಾಗತಾರ್ಹ.