Friday, December 29, 2023

ಗೆಲ್ಲಲು ಕಾಂಗ್ರೆಸ್ ಏನೇನು ಮಾಡಬಹುದು?





1. ಮೃದು ಹಿಂದುತ್ವ
2. ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ
3. ಮೈತ್ರಿ ಪಕ್ಷಗಳ ಕಡೆಗಣನೆ
4. ಆಕ್ರಮಣಕಾರಿ ಮನೋಭಾವದ ಕೊರತೆ
5. ಸೇವಾದಳದ ನಿರ್ಲಕ್ಷ್ಯ 

ಮಧ್ಯಪ್ರದೇಶ, ರಾಜಸ್ತಾನ ಚತ್ತೀಸ್‌ಗಢಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವೇನು ಅನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.  ತೆಲಂಗಾಣವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಒಟ್ಟಾರೆ 4 ಕೋಟಿ 81 ಲಕ್ಷ   ಮತಗಳನ್ನು ಪಡೆದರೆ ಕಾಂಗ್ರೆಸ್ 4 ಕೋಟಿ 90  ಲಕ್ಷ  ಮತಗಳನ್ನು ಪಡೆದಿದೆ. ಒಂದುರೀತಿ ಯಲ್ಲಿ, 9 ಲಕ್ಷದಷ್ಟು ಹೆಚ್ಚುವರಿ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಮಾಧಾನ ಪಡಲಾಗುತ್ತಿದೆ. ಆದರೆ ಈ ಸಮಾಧಾನ ಪೂರ್ಣ ಪ್ರಾಮಾಣಿಕವಲ್ಲ. ಯಾಕೆಂದರೆ,  ತೆಲಂಗಾಣದಲ್ಲಿ ಸ್ಪರ್ಧೆಯಿದ್ದುದೇ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ  ಸಮಿತಿ (ಬಿಆರ್‌ಎಸ್) ನಡುವೆ. ಆದ್ದರಿಂದ, ಅಲ್ಲಿ ಬಿಜೆಪಿ ಮತ್ತು  ಕಾಂಗ್ರೆಸ್ ನಡುವೆ ಚಲಾವಣೆಯಾದ ಮತಗಳನ್ನು ಉಳಿದ ಮೂರು ರಾಜ್ಯಗಳ ಜೊತೆಗೆ ಸೇರಿಸಿಕೊಂಡು ಲೆಕ್ಕ ಹಾಕುವುದು ತಪ್ಪಾಗುತ್ತದೆ.  ಆದರೂ ತೆಲಂಗಾಣದಲ್ಲಿ ಬಿಜೆಪಿ ಮಹತ್ವದ ಮುನ್ನಡೆಯನ್ನು ಪಡೆದಿದೆ. ಈ ಹಿಂದೆ ಏಕೈಕ ಶಾಸಕರನ್ನು ಹೊಂದಿದ್ದ ಬಿಜೆಪಿಯು ಈ  ಬಾರಿ 8 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಒಟ್ಟಾರೆ 14 ಲಕ್ಷ  ಮತಗಳನ್ನು  ಪಡೆದಿತ್ತು. ಈ ಬಾರಿ 32 ಲಕ್ಷ  ಮತಗಳನ್ನು ಪಡೆದಿದೆ. ಮಾತ್ರವಲ್ಲ, ಸುಮಾರು 15ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ  ಪಡೆದುಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯನ್ನು ಮಧ್ಯಪ್ರದೇಶ, ರಾಜಸ್ತಾನ ಮತ್ತು  ಛತ್ತೀಸ್‌ಗಢಗಳಿಗೆ ಸೀಮಿತಗೊಳಿಸಿ ನೋಡುವುದೇ ಸರಿಯಾದ ವಿಧಾನ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದರೆ, 

ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 98  ಲಕ್ಷ ಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. ಬಿಜೆಪಿ ಪಡೆದಿರುವ ಮತಗಳು 4 ಕೋಟಿ 48 ಲಕ್ಷಕ್ಕಿಂತಲೂ ಅಧಿಕ. ಅಂದರೆ,  ಕಾಂಗ್ರೆಸ್‌ಗಿAತ ಬಿಜೆಪಿ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಈ ಮೂರೂ  ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 57 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿತ್ತು ಮತ್ತು ಬಿಜೆಪಿ 3 ಕೋಟಿ 41 ಲಕ್ಷಕ್ಕಿಂತಲೂ ಅಧಿಕ  ಮತಗಳನ್ನು ಪಡೆದಿತ್ತು. ಅಂದರೆ ಬಿಜೆಪಿಗಿಂತ ಕಾಂಗ್ರೆಸ್ 16 ಲಕ್ಷಕ್ಕಿಂತಲೂ ಅಧಿಕ ಹೆಚ್ಚು ಮತಗಳನ್ನು ಪಡೆದಿತ್ತು.

ಇನ್ನೂ ಒಂದು ಲೆಕ್ಕಾಚಾರ ಇದೆ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ತಾನಗಳಲ್ಲಿ ಅಧಿಕಾರ ಕಳ ಕೊಂಡಿತ್ತು.  ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ ಮಧ್ಯ ಪ್ರದೇಶದಲ್ಲಿ ಆಪರೇಶನ್ ಕಮಲ ನಡೆದು, ಕಮಲನಾಥ್ ನೇತೃತ್ವದ ಕಾಂಗ್ರೆಸ್  ಸರಕಾರ ಕುಸಿದು ಬಿದ್ದುದು ಬೇರೆ ವಿಷಯ. ಆದರೆ, 2019ರ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ಚಿತ್ರಣವೇ  ಬದಲಾಯಿತು. ಮಧ್ಯಪ್ರದೇಶದ 28 ಲೋಕಸಭಾ ಸ್ಥಾನಗಳ ಪೈಕಿ 27 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತು. ರಾಜಸ್ತಾನದ 25 ಸ್ಥಾನಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತು. ಛತ್ತೀಸ್‌ಗಢದ ಪರಿಸ್ಥಿತಿಯೂ ಭಿನ್ನವಲ್ಲ. ಒಟ್ಟು 11 ಸ್ಥಾನಗಳ ಪೈಕಿ ಬಿಜೆಪಿ 9ನ್ನೂ  ಗೆದ್ದುಕೊಂಡಿತು.

ಇನ್ನೂ ಒಂದು ಅಂಕಿ ಅಂಶವನ್ನು ಇಲ್ಲಿ ಪರಿಗಣಿಸಬಹುದು.

2013ರಲ್ಲಿ ಈ ಮೂರೂ ರಾಜ್ಯಗಳಲ್ಲಿ ನಡೆದ ಚುನಾವಣೆಯನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಮಾತ್ರವಲ್ಲ, 2014ರ ಲೋಕಸಭಾ ಚು ನಾವಣೆಯಲ್ಲೂ ಬಿಜೆಪಿಗೆ ಗೆಲುವಾಯಿತು. ಹಾಗೆಯೇ 2003ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೇ ಅಭೂತಪೂರ್ವ ಗೆಲುವು  ಲಭ್ಯವಾಗಿತ್ತು. ಇದೇ ಉತ್ಸಾಹದಲ್ಲಿ ಆಗಿನ ಪ್ರಧಾನಿ ವಾಜಪೇಯಿಯವರು ಇಂಡಿಯಾ ಶೈನಿಂಗ್ ಎಂಬ ಘೋಷಣೆ ಯನ್ನು  ಹೊರಡಿಸಿದ್ದರು. ಅದರ ಮೇಲೆಯೇ 2004ರಲ್ಲಿ ಲೋಕಸಭಾ ಚುನಾವಣೆಯನ್ನೂ ಎದುರಿಸಿದರು ಮತ್ತು ಆಘಾತಕಾರಿ ಸೋಲನ್ನೂ  ಅನುಭವಿಸಿದರು.

ನಿಜವಾಗಿ, ಬಿಜೆಪಿಯ ಮತ ಗಳಿಕೆಯ ಹೆಚ್ಚಳದಲ್ಲಿ ಇತರ ಸಣ್ಣ-ಪುಟ್ಟ ಪಕ್ಷಗಳ ಪಾಲು ಅಧಿಕವಿದೆ ಎಂದು ಹೇಳಲಾಗುತ್ತಿದೆ.  ಮಾಯಾವತಿಯ ಬಿಎಸ್‌ಪಿಯು ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ 1.6% ಮತಗಳನ್ನು ಕಳಕೊಂಡಿದೆ. ಹಾಗೆಯೇ  ರಾಜಸ್ತಾನದಲ್ಲಿ 2.3%, ಛತ್ತೀಸ್‌ಗಢದಲ್ಲಿ 1.8% ಮತ್ತು ತೆಲಂಗಾಣದಲ್ಲಿ 0.7% ಮತಗಳನ್ನು ಕಳಕೊಂಡಿದೆ. ಹಾಗೆಯೇ, 2018ರಲ್ಲಿ ಜನತಾ  ಕಾಂಗ್ರೆಸ್ ಛತ್ತೀಸ್‌ಗಢ ಎಂಬ ಪಕ್ಷವು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು 7.6% ಮತ ಪ್ರಮಾಣದೊಂದಿಗೆ 5 ಸ್ಥಾನಗಳನ್ನು  ಪಡೆದುಕೊಂಡಿತ್ತು. ಆದರೆ ಈ ಬಾರಿ ಸೊನ್ನೆ ಸುತ್ತಿದೆ. ಇದೇ ರೀತಿ, ಈ ನಾಲ್ಕು ರಾಜ್ಯಗಳಲ್ಲಿ ಸ್ಪರ್ಧಿಸಿರುವ ಇತರ ಪಕ್ಷಗಳು ಮತ್ತು  ಪಕ್ಷೇತರರ ಶೇಕಡಾವಾರು ಮತಗಳೂ ಕುಸಿದಿದ್ದು, ಇವೆಲ್ಲ ವನ್ನೂ ಬಿಜೆಪಿ ಸೆಳೆದುಕೊಂಡಿದೆ ಎಂದು ಲೆಕ್ಕಾಚಾರ ಹೇಳುತ್ತಿದೆ.

ಅಷ್ಟಕ್ಕೂ,

ಕಾಂಗ್ರೆಸ್‌ನ ಈ ವೈಫಲ್ಯಕ್ಕೆ ಕಾರಣವೇನು? ಮೃದು ಹಿಂದುತ್ವವೇ? ಈ ಮೃದು ಹಿಂದುತ್ವ ಅಂದರೇನು? ರಾಹುಲ್ ಗಾಂಧಿ, ಪ್ರಿಯಾಂಕಾ  ಗಾಂಧಿ ದೇವಸ್ಥಾನಕ್ಕೆ ಹೋಗುವುದು ಅಥವಾ ದೇವಸ್ಥಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುವುದು ಮೃದು ಹಿಂದುತ್ವವೇ?  ಹಣೆಗೆ ನಾಮ ಹಾಕಿಕೊಳ್ಳುವುದು ಅಥವಾ ತಾನು ಶಿವನ ಆರಾಧಕ ಎಂದು ಹೇಳುವುದು ಮೃದು ಹಿಂದುತ್ವವೇ? ಸನಾತನ ಧರ್ಮವನ್ನು  ಟೀಕಿಸಿದ ಡಿಎಂಕೆ ಜೊತೆ ಅಸಹಮತವನ್ನು ತೋರುವುದು ಮೃದು ಹಿಂದುತ್ವವೇ? ಛತ್ತೀಸ್ ಗಢದ ಚಂಪಾರಣ್‌ನಲ್ಲಿ ಕಾಂಗ್ರೆಸ್  ಮುಖ್ಯಮಂತ್ರಿ ಬಘೇಲ್ ಅವರು ರಾಮನ ಬೃಹತ್ ಪ್ರತಿಮೆಯನ್ನು ಚುನಾವಣೆಗಿಂತ ಮೊದಲು ಅನಾವರಣಗೊಳಿಸಿದರು. ರಾಮ ವ ನವಾಸಕ್ಕೆಂದು ನಡೆದು ಹೋದ ಮಾರ್ಗವನ್ನು ‘ರಾಮ ವನ ಗಮನ ಪಥ’ ಎಂಬ ಹೆಸರಿನ ಯೋಜನೆಯೊಂದಿಗೆ ಜಾರಿಗೆ ತಂದರು.  ಇದನ್ನು ಮೃದು ಹಿಂದುತ್ವವೆಂದು  ಟೀಕಿಸಲಾಗುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳುವುದನ್ನು, ಕೇಸರಿ  ರುಮಾಲು ಹಾಕುವುದನ್ನು ಮೃದು ಹಿಂದುತ್ವ ಎಂದು ಕರೆಯ ಲಾಗುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುತ್ತಿದೆ  ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಿಜಕ್ಕೂ ಇದು ಎಷ್ಟು ತರ್ಕಬದ್ಧ? ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳು ವುದರಿಂದ  ವಿಚಲಿತರಾಗಿ ಬಿಜೆಪಿಗೆ ಮತ ಹಾಕುತ್ತಿರುವ ಕಾಂಗ್ರೆಸ್ ಮತದಾರರು ಯಾರು? ಅವರು ಈ ವರೆಗೆ ಬಿಜೆಪಿಗೆ ಮತ ಹಾಕದೇ  ಇರುವುದಕ್ಕೆ ಈ ಒಂದು ವ್ಯತ್ಯಾಸ ಮಾತ್ರ ಕಾರಣವೇ? ಹಿಂದೂ ಧರ್ಮವನ್ನು ಬಿಜೆಪಿ ಪ್ರತಿಪಾದಿಸುತ್ತಿರುವ ರೀತಿ ಮತ್ತು ಕಾಂಗ್ರೆಸ್ ಪ್ರತಿ ಪಾದಿಸುತ್ತಿರುವ ರೀತಿ ಹೇಗಿದೆ? ಸಮಾನವೇ? ಹಿಂದೂಯೇತರರನ್ನು ಮುಖ್ಯವಾಗಿ ಮುಸ್ಲಿಮರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ  ಹೇಗಿದೆ? ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತಿದೆ? ಚುನಾವಣಾ ಗೆಲುವಿಗಾಗಿ ಧಾರ್ಮಿಕ ಧ್ರುವೀಕರಣ ಮಾಡುವ ಬಿಜೆಪಿಗೂ ಧರ್ಮವನ್ನು  ಆಧ್ಯಾತ್ಮಿಕ ಸುಖದ ಭಾಗವಾಗಿ ನೋಡುವ ಕಾಂಗ್ರೆಸ್‌ಗೂ ವ್ಯತ್ಯಾಸ ಇಲ್ಲವೇ? ಈ ವರೆಗೆ ಕಾಂಗ್ರೆಸ್‌ಗೆ ಓಟು ಹಾಕುತ್ತಿದ್ದವರು ಈಗ  ಬಿಜೆಪಿಗೆ ಓಟು ಹಾಕುವುದಾದರೆ ಅದು ಕಾಂಗ್ರೆಸ್‌ನ ಮೃದು ಹಿಂದುತ್ವದಿಂದ ಬೇಸತ್ತೇ? ಕಾಂಗ್ರೆಸ್ ಅಲ್ಲದಿದ್ದರೆ ಇವರಿಗೆಲ್ಲ ಬಿಜೆಪಿ  ಪರ್ಯಾಯವಾದುದು ಹೇಗೆ? ಒಂದುರೀತಿಯಲ್ಲಿ,

ಮೃದು ಹಿಂದುತ್ವದಿಂದಾಗಿ ಕಾಂಗ್ರೆಸ್‌ಗೆ ಸೋಲಾಗುತ್ತಿದೆ ಎಂಬುದು ಒಂದು ಊಹೆಯೇ ಹೊರತು ಇದು ಬಹುತೇಕ ನಿಜವಲ್ಲ.  ಧರ್ಮವನ್ನು ಸಂಪೂರ್ಣ ನಿರಾಕರಿಸುವ ಧಾಟಿಯಲ್ಲಿ ಮಾತನಾಡಿದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಅಸ್ತಿತ್ವಕ್ಕಾಗಿ ಹೋರಾ ಡುತ್ತಿವೆ.  ಒಂದು ಕಾಲದಲ್ಲಿ ಪಶ್ಚಿಮ ಬಂಗಾಲದಂಥ  ದೊಡ್ಡ ರಾಜ್ಯವೂ ಸೇರಿ ತ್ರಿಪುರಾದಲ್ಲೂ ದೀರ್ಘಕಾಲ ಆಡಳಿತ ನಡೆಸಿದ್ದ ಮತ್ತು  ಲೋಕಸಭೆಯಲ್ಲಿ 50ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಕೇರಳಕ್ಕೆ ಸೀಮಿತಗೊಳ್ಳಲು ಕಾರಣವೇನು?  ಧರ್ಮದಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದೇ ಅದರ ಯಶಸ್ಸಿಗೆ ಕಾರಣವಾಗಿದ್ದರೆ, ಮತ್ತೇಕೆ ಇವತ್ತು ಅದು ಈ ಮಟ್ಟದಲ್ಲಿ  ಪತನಮುಖಿಯಾಗಿದೆ? ನಿಜವಾಗಿ,

ಕಾಂಗ್ರೆಸ್‌ನ ವೈಫಲ್ಯಕ್ಕೆ ಅದು ಧಾರ್ಮಿಕವಾಗಿ ಗುರುತಿಸಿಕೊಂಡಿರುವುದು ಕಾರಣ ಅಲ್ಲ. ಅದರಿಂದಾಗಿ ಕಾಂಗ್ರೆಸ್ ಮತದಾರರು ದೂರ  ಸರಿದುದೂ ಅಲ್ಲ. ಬಿಜೆಪಿಯ ಯಶಸ್ಸಿನಲ್ಲಿ ಅದರ ಪ್ರಚಾರ ತಂತ್ರಕ್ಕೆ ಬಹಳ ದೊಡ್ಡ ಪಾತ್ರ ಇದೆ. ದ್ವೇಷ ರಾಜಕೀಯವನ್ನು ಅದು  ತಳಮಟ್ಟದಲ್ಲಿ ಯಶಸ್ವಿಯಾಗಿ ಬಿತ್ತಿದೆ. ಈ ದ್ವೇಷವು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಅದರ ನಾಯಕರಿಂದ  ಬಿತ್ತರವಾಗುತ್ತಿರುತ್ತದೆ. ಇದನ್ನು ಕಾಂಗ್ರೆಸ್ ಎದುರಿಸಬೇಕಾದರೆ ಬೇರುಮಟ್ಟದಲ್ಲಿ ಜನರನ್ನು ತಲುಪುವ ಪ್ರಬಲ ಸಂಘಟನಾ ಬಲ  ಇರಬೇಕು. ‘ಸೇವಾದಳ’ವನ್ನು ಕಾಂಗ್ರೆಸ್ ಸ್ಥಾಪಿಸಿರುವುದು ಇದೇ ಕಾರಣಕ್ಕೆ. ಇದು ಬಲಿಷ್ಠವಾಗಿರುವ ಕಾಲದ ವರೆಗೆ ಕಾಂಗ್ರೆಸ್ಸೂ ಬಲಿಷ್ಠವಾಗಿತ್ತು. ಸೇವಾದಳದ ನಾಯಕರು ವೇದಿಕೆಯಲ್ಲಿರುವಾಗ ಕಾಂಗ್ರೆಸ್ ಜನಪ್ರತಿನಿಧಿಗಳು ಸಭಿಕರಾಗಿ ಎದುರಲ್ಲಿ ಕುಳಿತುಕೊಳ್ಳಬೇಕಿತ್ತು.  ಸೇವಾದಳದ ನಿರ್ದೇಶಗಳನ್ನು ಜನಪ್ರತಿನಿಧಿಗಳು ಅನುಸರಿಸಬೇಕಿತ್ತು. ಸೇವಾದಳವು ಬೇರುಮಟ್ಟದಲ್ಲಿ ಜನರನ್ನು ಸಂಪರ್ಕಿಸಿ ಮತವನ್ನು  ಒಗ್ಗೂಡಿಸುತ್ತಿತ್ತು. ಈ ಸೇವಾದಳದಿಂದಲೇ ಕಾಂಗ್ರೆಸ್ ನಾಯಕರೂ ಬೆಳೆಯುತ್ತಿದ್ದರು. ಕಾರ್ಯಕರ್ತರು ತಯಾರಾಗುತ್ತಿದ್ದುದೇ ಈ  ಸೇವಾದಳದಿಂದ. ಆದರೆ ಇವತ್ತು ಸೇವಾದಳ ಪರಿಣಾಮಶೂನ್ಯ ಸ್ಥಿತಿಯಲ್ಲಿದೆ. ಸೇವಾದಳದ ಸಭೆಯಲ್ಲಿ ಸಭಿಕರಾಗಿ ಕಾಣಿಸಿಕೊಳ್ಳಬೇಕಿದ್ದ  ಜನ ಪ್ರತಿನಿಧಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ/ಳೆ. ಆತನ ಅಣತಿ ಯಂತೆ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸಂಘಟ ನೆಯನ್ನು ಹೀಗೆ ಜನಪ್ರತಿನಿಧಿಗಳು ಹೈಜಾಕ್ ಮಾಡಿರುವ ಕಾರಣದಿಂದಾಗಿ ಸಂಘಟನೆಯ ಮಹತ್ವವೇ ಕಳೆದುಹೋಗಿದೆ. ಅದೇರೀತಿ,

ಗ್ಯಾರಂಟಿಗಳ ಮೇಲೆಯೇ ಅತಿಯಾದ ಭಾರ ಹಾಕಬಾರದು. ದಕ್ಷಿಣ ಭಾರತದಲ್ಲಿ ಒಂದೊಮ್ಮೆ ಈ ತತ್ವ ಫಲಿಸಬಹುದಾದರೂ ಹಿಂದಿ  ನಾಡಿನಲ್ಲಿ ದ್ವೇಷ ರಾಜಕೀಯದ ಪ್ರಭಾವವೇ ಮುಂಚೂಣಿಯಲ್ಲಿದೆ. ಯಾವುದೇ ಗ್ಯಾರಂಟಿಯನ್ನು ಕಾಲ ಕಸವಾಗಿಸುವಷ್ಟು ದ್ವೇಷವನ್ನು  ಪ್ರತಿದಿನವೆಂಬಂತೆ  ತುಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಜೊತೆಗೇ ಈಗಾಗಲೇ ಇಂಡಿಯಾ ಕೂಟದಿಂದ ಹೊರಗಿರುವ  ಪಕ್ಷಗಳನ್ನು ಕೂಟದೊಳಗೆ ಸೇರಿಸುವ ಮತ್ತು ಈಗಿಂದೀಗಲೇ ಲೋಕಸಭಾ ಸೀಟು ಹಂಚಿಕೆಯ ಸ್ಪಷ್ಟ ನಿರ್ಧಾರ ವನ್ನು ಕೈಗೊಳ್ಳಬೇಕು.  ಬಿಎಸ್‌ಪಿಯಂಥ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಕಡಿಮೆಯಿದ್ದರೂ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯ ಹಿಂದಿ ನಾಡಿನಲ್ಲಿ ಸಾಕಷ್ಟಿದೆ  ಎಂಬುದು ಇಂಡಿಯಾ ಒಕ್ಕೂಟಕ್ಕೆ ಗೊತ್ತಿರಬೇಕು. ಈಗಿಂದೀಗಲೇ ಇಂಡಿಯಾ ಒಕ್ಕೂಟ ಸೀಟು ಹಂಚಿಕೆಯನ್ನು ಗಂಭೀರವಾಗಿ  ಪರಿಗಣಿಸಿ ಒಮ್ಮತಕ್ಕೆ ಬರದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಅಸಾಧ್ಯ. ಜೊತೆಗೇ, ಇಂಡಿಯಾ ಒಕ್ಕೂಟವು ಸಾಮಾನ್ಯ ಕನಿಷ್ಠ  ಕಾರ್ಯಕ್ರಮಕ್ಕೆ ತಕ್ಷಣ ರೂಪು ನೀಡಬೇಕು. ಹಾಗಂತ,

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕಾನೂನಿನ ಕಠಿಣ ಭಾಷೆಯಲ್ಲೇ  ಉತ್ತರವನ್ನು ನೀಡಬೇಕು. ಇಂಥ ಸಂದರ್ಭಗಳಲ್ಲಿ  ಆಕ್ರಮಣಕಾರಿಯಾಗಿ ವರ್ತಿಸುವುದೇ ಸರಿಯಾದ ವಿಧಾನ. ನ್ಯಾಯ ಮತ್ತು ಸಂವಿಧಾನಕ್ಕೆ ಬದ್ಧವಾಗುವ ವಿಷಯದಲ್ಲಿ  ಆಕ್ರಮಣಕಾರಿಯಾಗುವುದು ಈಗಿನ ಅನಿವಾರ್ಯತೆ. ಬರೇ ಅಭಿವೃದ್ಧಿಯೊಂದೇ ಬಿಜೆಪಿಗಾಗಲಿ ಕಾಂಗ್ರೆಸ್‌ಗಾಗಿ ಓಟು ತರಲಾರದು.  ಆದ್ದರಿಂದಲೇ, ಬಿಜೆಪಿ ಅಭಿವೃದ್ಧಿಗಿಂತ ಹೆಚ್ಚು ಗಮನವನ್ನು ಅಭಿವೃದ್ಧಿ ಹೊರತಾದ ಧರ್ಮ ಧ್ರುವೀಕರಣಕ್ಕೆ ನೀಡುತ್ತಿದೆ. ಅದರ ಜೊತೆಗೇ  ಗ್ಯಾರಂಟಿಗಳ ಮೊರೆಯೂ ಹೋಗಿದೆ. ಬರೇ ಧರ್ಮ ಧ್ರುವೀಕರಣವೊಂದೇ ಓಟು ತಂದು ಕೊಡಲಾರದು ಎಂಬ ಭಯ ಬಿಜೆಪಿಗಿದೆ  ಎಂಬುದನ್ನೇ ಇದು ಸೂಚಿಸುತ್ತದೆ. ಇದು ನಿಜಕ್ಕೂ ಕಾಂಗ್ರೆಸ್‌ನ ಪಾಲಿಗೆ ಬಹುದೊಡ್ಡ ಆಶಾವಾದ. ಧರ್ಮ ಧ್ರುವೀಕರಣದ ಮೇಲೆ ಸ್ವತಃ  ಬಿಜೆಪಿಗೇ ಸಂಪೂರ್ಣ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜನರು ಸದಾಕಾಲ ದ್ವೇಷ ರಾಜಕಾರಣವನ್ನು ಬೆಂಬಲಿಸಲ್ಲ.  ಇಂಥ ರಾಜಕಾರಣದ ವ್ಯಾಲಿಡಿಟಿ ಹೃಸ್ವವಾದುದು. ಅಂತಿಮ ಗೆಲುವು ಸರ್ವರನ್ನೂ ಒಳಗೊಳ್ಳುವ ಸರ್ವಹಿತ ಸಿದ್ಧಾಂತದ್ದೇ. ಒಕ್ಕೂಟ  ಪಕ್ಷಗಳನ್ನು ವಿಶ್ವಾಸಕ್ಕೆ ಪಡಕೊಂಡು ಕಾಂಗ್ರೆಸ್ ಈಗಿಂದೀಗಲೇ ಸ್ಪಷ್ಟ ಗುರಿಯೊಂದಿಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದರೆ  ಗೆಲುವು ಅಸಾಧ್ಯವಲ್ಲ.

Thursday, December 14, 2023

ಅಲ್ಲಾಹನ ಹೆಸರಲ್ಲಿ ಇ ಮೇಲ್ ಮತ್ತು ಕಟಕಟೆಯಲ್ಲಿ ಮುಸ್ಲಿಮರು




1. ಹಿಂದೂವಿನಿಂದ  ಹಿಂದೂವಿನ ಮೇಲೆ ಹಲ್ಲೆ
2. ಮೇಲ್ಜಾತಿ ವ್ಯಕ್ತಿಯಿಂದ ದಲಿತನ ಮೇಲೆ ಹಲ್ಲೆ
3. ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ
4. ಹಿಂದೂವಿನ ಮೇಲೆ ಮುಸ್ಲಿಮನಿಂದ ಹಲ್ಲೆ
5. ಹಿಂದೂವಿನಿAದ ಮುಸ್ಲಿಮನ ಮೇಲೆ ಹಲ್ಲೆ
6. ಮನುಷ್ಯನಿಂದ ಮನುಷ್ಯನ ಮೇಲೆ ಹಲ್ಲೆ 


ಈ 6 ಸುದ್ದಿಗಳ ಪೈಕಿ ಜನರ ಗಮನವನ್ನೇ ಸೆಳೆಯದ, ಇತರರೊಂದಿಗೆ ಹಂಚಿಕೊಳ್ಳದ ಮತ್ತು ನಿರ್ಲಕ್ಷಿಸಿ ಮುಂದೆ ಹೋಗಬಹುದಾದ  ಸುದ್ದಿ ಯಾವುದಾಗಿರಬಹುದು? ಉತ್ತರ ಕಷ್ಟವೇನೂ ಅಲ್ಲ- 1 ಮತ್ತು 6. ಇನ್ನು, ಅತ್ಯಂತ ಹೆಚ್ಚು ಗಮನ ಸೆಳೆಯುವ, ಟಿ.ವಿ.  ಸಂವಾದಗಳಿಗೆ ಕಾರಣವಾಗುವ, ಸಾರ್ವಜನಿಕ ಪ್ರತಿಭಟನೆ, ರ‍್ಯಾಲಿ, ಲಾಠಿ ಚಾರ್ಜು-ಕರ್ಫ್ಯೂ, ಹಿಂಸೆಗಳಿಗೂ ಕಾರಣವಾಗಬಹುದಾದ  ಸುದ್ದಿ ಯಾವುದು? ಉತ್ತರ ಸುಲಭ- 4. ಇನ್ನು, ಇದಕ್ಕಿಂತ ತುಸು ಕಡಿಮೆ ಗಮನ ಸೆಳೆಯಬಹುದಾದ ಆದರೆ ಸಾರ್ವಜನಿಕ ಚರ್ಚೆ  ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ-ಟಿಪ್ಪಣಿಗಳಿಗೆ ಒಳಗಾಗಬಹುದಾದ ಸುದ್ದಿ ಯಾವುದೆಂದರೆ ಸಂಖ್ಯೆ 5ರದ್ದು. ಉಳಿದಂತೆ  ಕೆಲವೊಮ್ಮೆ ಪ್ರತಿಭಟನೆಗೂ ಚುನಾವಣೆಯ ಸಂದರ್ಭದಲ್ಲಾದರೆ ರಾಜಕಾರಣಿಗಳ ಕ್ಷಮಾಯಾಚನೆಗೂ ಕಠಿಣ ಕ್ರಮದ ಭರವಸೆಗೂ  ಕಾರಣವಾಗುವ ಸುದ್ದಿಯು ಕ್ರಮ ಸಂಖ್ಯೆ 2ರದ್ದು. ಆದರೆ, ‘ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ ’ ಎಂಬ ಕ್ರಮ ಸಂಖ್ಯೆ  3ರ ಸುದ್ದಿಯು ದೇಶದಲ್ಲಿ ಬಹುತೇಕ ಅಸಂಭವ ಅಥವಾ ಅಪರೂಪದಲ್ಲಿ ಅಪರೂಪದ್ದಾಗಿರುವುದರಿಂದ ಆ ಬಗ್ಗೆ ವಿಶ್ಲೇಷಣೆ  ಅಗತ್ಯವಿಲ್ಲ.
 

ಇನ್ನೊಂದು ಉದಾಹರಣೆ
1. ಪ್ರೀತಿಸಿದ ಯುವಕ-ಯುವತಿಯರಿಬ್ಬರೂ ಪರಾರಿ
2. ಹಿಂದೂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ
3. ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಪರಾರಿ
4. ಹಿಂದೂ ಯುವಕನೊಂದಿಗೆ ಮುಸ್ಲಿಮ್ ಯುವತಿ ಪರಾರಿ
5. ಮೇಲ್ಜಾತಿ ಯುವಕನೊಂದಿಗೆ ದಲಿತ ಯುವತಿ ಪರಾರಿ
6. ದಲಿತ ಯುವಕನೊಂದಿಗೆ ಮೇಲ್ಜಾತಿ ಯುವತಿ ಪರಾರಿ
ಇವುಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆಯುವ, ಚರ್ಚೆಗೆ ಗ್ರಾಸವಾಗುವ, ಹಿಂಸಾಚಾರ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ಗೆ  ಕಾರಣವಾಗುವ ಹಾಗೂ ಧರ್ಮ ಅಪಾಯದಲ್ಲಿದೆ ಎಂಬ ಕೂಗು ಕೇಳಿ ಬರುವ ಸುದ್ದಿ ಯಾವುದೆಂಬುದನ್ನು ಪತ್ತೆ ಹಚ್ಚುವುದಕ್ಕೆ  ಕಷ್ಟವೇನೂ ಇಲ್ಲ- ಅದು ಸುದ್ದಿ ಸಂಖ್ಯೆ 3. ಇನ್ನು, ಇಷ್ಟು ತೀವ್ರವಾಗಿ ಅಲ್ಲದಿದ್ದರೂ ಚರ್ಚೆ, ಆತಂಕ ಮತ್ತು ಸೋಶಿಯಲ್ ಮೀಡಿಯಾ  ಚರ್ಚೆಗಳಿಗೆ ಕಾರಣವಾಗುವ ಸುದ್ದಿಯೆಂದರೆ ಕ್ರಮ ಸಂಖ್ಯೆ 4ರದ್ದು. ಈ ಸುದ್ದಿiಗಳ ಪೈಕಿ ಅತ್ಯಂತ ಕಡಿಮೆ ಗಮನ ಸೆಳೆಯಬಹುದಾದ  ಮತ್ತು ನಕ್ಕು ಮುಂದೆ ಸಾಗಬಹುದಾದ ಅನಾಕರ್ಷಣೀಯ ಸುದ್ದಿ ಕ್ರಮ ಸಂಖ್ಯೆ 1ರದ್ದು. ಹಾಗೆಯೇ  ಕೆಲವೊಮ್ಮೆ ಅತ್ಯಂತ ಅಪಾಯಕಾರಿ  ತಿರುವನ್ನು ಪಡಕೊಳ್ಳಬಹುದಾದ ಮತ್ತು ಮರ್ಯಾದಾ ಹತ್ಯೆಯಂಥ ಕ್ರೌರ್ಯಕ್ಕೂ ಕಾರಣವಾಗಬಹುದಾದ ಸುದ್ದಿ ಕ್ರಮಸಂಖ್ಯೆ 6ರದ್ದು.  ಸುದ್ದಿ ಸಂಖ್ಯೆ 5 ಸಾಮಾನ್ಯ ಸಂದರ್ಭಗಳಲ್ಲಿ ಅಸಂಭವ ಆಗಿರುವುದರಿಂದ ಅದಕ್ಕಿರುವ ಪ್ರತಿಕ್ರಿಯೆಯ ಬಗ್ಗೆ ಕುತೂಹಲವನ್ನಷ್ಟೇ  ಇಟ್ಟುಕೊಳ್ಳಬಹುದು.


ಇನ್ನೂ ಒಂದು ಉದಾಹರಣೆ ಕೊಡುತ್ತೇನೆ
1. ಅಪರಿಚಿತರಿಂದ ವಿಮಾನ ನಿಲ್ದಾಣಕ್ಕೆ ಬಾಂಬು ಬೆದರಿಕೆ
2. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಅಲ್ಲಾಹನ ಹೆಸರಲ್ಲಿ ಈ-ಮೇಲ್ ರವಾನೆ
3. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಆದಿತ್ಯರಾವ್ ಎಂಬಾತನ ಬಂಧನ
4. ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಜೀವಂತ ಬಾಂಬ್: ತಜ್ಞರಿಂದ ಬಾಂಬ್ ನಿಷ್ಕ್ರಿಯ


ನಿಜವಾಗಿ ಇಲ್ಲಿರುವ ನಾಲ್ಕು ಸುದ್ದಿಗಳ ಪೈಕಿ ಅತ್ಯಂತ ಆಘಾತಕಾರಿ ಮತ್ತು ಬೆಚ್ಚಿ ಬೀಳಬೇಕಾದ ಸುದ್ದಿ ಕ್ರಮಸಂಖ್ಯೆ 4ರದ್ದು. ಯಾಕೆಂದರೆ,  ಯಾವ ಗೌಜು-ಗದ್ದಲ, ಬೆದರಿಕೆ, ಈ-ಮೇಲ್‌ಗಳ ರಂಪಾಟವೂ ಇಲ್ಲದೇ ಯಾರೋ ಒಬ್ಬ ಜೀವಂತ ಬಾಂಬ್ ಇಟ್ಟು ಹೋಗಿದ್ದಾನೆ,  ಅದು ಸಕಾಲದಲ್ಲಿ ಪತ್ತೆಯಾಗದೇ ಹೋಗಿರುತ್ತಿದ್ದರೆ ಅನೇಕ ಜೀವಗಳು ಪ್ರಾಣ ಕಳಕೊಳ್ಳುತ್ತಿದ್ದುವು. ವಿಮಾನ ನಿಲ್ದಾಣವೇ  ಸ್ಫೋಟಗೊಳ್ಳುತ್ತಿತ್ತು. ಒಂದೊಮ್ಮೆ ನಿಲ್ದಾಣದಲ್ಲಿ ವಿಮಾನ ಇರುತ್ತಿದ್ದರೆ, ಭಾರಿ ಸಾವು-ನೋವುಗಳಾಗುವ ಸಾಧ್ಯತೆಯೂ ಇತ್ತು. ಅಪಾರ  ನಾಶ-ನಷ್ಟ ಮತ್ತು ಭಾರತದ ವರ್ಚಸ್ಸಿಗೆ ಹಾನಿ ತಟ್ಟಬಹುದಾದ ಕೃತ್ಯ ಇದು. ಆದರೆ, ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು, ಸೋಶಿಯಲ್  ಮೀಡಿಯಾದ ಚರ್ಚೆಯಿಂದ ಹಿಡಿದು ಸಾರ್ವಜನಿಕ ಚರ್ಚೆ, ಸಭೆ, ಪ್ರತಿಭಟನೆ, ಆವೇಶದ ಭಾಷಣಗಳ ವರೆಗೆ- ಈ ಎಲ್ಲಕ್ಕೂ  ಕಾರಣವಾಗಬಹುದಾದ ಬಿಗ್ ಬ್ರೇಕಿಂಗ್ ಸುದ್ದಿ ಇದಾಗುವುದಿಲ್ಲ, ಬದಲು ಕ್ರಮ ಸಂಖ್ಯೆ 2ರ ಸುದ್ದಿ ಈ ಎಲ್ಲವನ್ನೂ ಸಾಧ್ಯವಾಗಿಸುತ್ತದೆ.  ಅಷ್ಟಕ್ಕೂ,


ಕ್ರಮ ಸಂಖ್ಯೆ 2ರ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಾಂಬನ್ನೇ ಹಾಕುವುದಿಲ್ಲ. ಅಲ್ಲಾಹನ ಹೆಸರಲ್ಲಿ ರವಾನಿಸಲಾದ ಈ-ಮೇಲ್‌ನ ಹೊರತಾಗಿ  ಆತ ಯಾರೆಂದೇ ಗೊತ್ತಿರುವುದಿಲ್ಲ. ಆತ ಈ-ಮೇಲ್‌ನಲ್ಲಿ ಬಳಸಿರುವ ಅಲ್ಲಾಹ್, ಬಿಸ್ಮಿಲ್ಲಾಹ್, ಇನ್‌ಶಾ ಅಲ್ಲಾಹ್, ಜಿಹಾದ್, ಕಾಫಿರ್  ಇತ್ಯಾದಿಗಳೇ ಆತನ ಗುರುತು. ಹಾಗಂತ, ಈ ಈ-ಮೇಲನ್ನು ಮುಸ್ಲಿಮ್ ವ್ಯಕ್ತಿಯೇ ರವಾನಿಸಬೇಕಿಲ್ಲ, ಇಂಥ ಪದಗಳನ್ನು ಬಲ್ಲ  ಯಾರೂ ಇಂಥ ಈ-ಮೇಲನ್ನು ರವಾನಿಸಬಹುದು. ಆದರೆ, ಅರೇಬಿಕ್ ಪದಗಳನ್ನು ಮುಸ್ಲಿಮರಿಗೆ ಸಂಬAಧಿಸಿದವು ಮತ್ತು ಮುಸ್ಲಿಮರು  ಮಾತ್ರ ಅಂಥ ಪದಗಳನ್ನು ಬಳಸಬಲ್ಲರು ಎಂದು ತಕ್ಷಣ ತೀರ್ಮಾನಕ್ಕೆ ಬರಲಾಗುತ್ತದಲ್ಲದೇ, ಟಿ.ವಿ. ಆ್ಯಂಕರ್‌ಗಳು ಕೋಟು- ಬೂಟುಗಳನ್ನು ಹಾಕಿಕೊಂಡು ಡಿಬೇಟ್‌ಗೆ ಸಿದ್ಧವಾಗುತ್ತಾರೆ. ಡಿಬೇಟ್ ಆರಂಭವಾಗುವುದಕ್ಕಿಂತ ಮೊದಲೇ ಗುಂಡಿನ ಧ್ವನಿಯೊಂದಿಗೆ  ಮುಖಕ್ಕೆ ಬಟ್ಟೆ ಕಟ್ಟಿದ ಮತ್ತು ಕೈಯಲ್ಲಿ ಬಂದೂಕು ಹಿಡಿದ ಚಿತ್ರಗಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರೆಲ್ಲ ಮುಸ್ಲಿಮರು ಎಂಬುದ ನ್ನು ಸಾರಿ ಹೇಳುವುದಕ್ಕಾಗಿ ಕೆಲವೊಮ್ಮೆ ಹಿನ್ನೆಲೆಯಲ್ಲಿ ಅದಾನ್ ಕೂಡಾ ಕೇಳಿಸುವುದಿದೆ ಅಥವಾ ಮಸೀದಿಯ ಚಿತ್ರ ಹಾದು  ಹೋಗುವುದಿದೆ. ಆ ಬಳಿಕ ಡಿಬೇಟ್‌ನ ಹೆಸರಲ್ಲಿ ಏಕಮುಖ ವಾದಗಳು ಪ್ರಾರಂಭವಾಗುತ್ತವೆ. ಈ ಹಿಂದೆ ಬಂದಿರುವ ಇಂಥದ್ದೇ  ಶೈಲಿಯ ಈ-ಮೇಲ್‌ಗಳು, ಅದರಲ್ಲಿ ಇದ್ದ ಅರೇಬಿಕ್ ಪದಗಳು ಮತ್ತು ಅದರ ಹಿಂದಿರುವ ಮನಸ್ಥಿತಿ, ಜಗತ್ತನ್ನೇ ಇಸ್ಲಾಮ್ ಮಾಡುವ  ಸಂಚು, ಹಿಂಸಾಪ್ರಿಯತೆ, ಹಿಂದೂಗಳಿಗಿರುವ ಅಪಾಯ.. ಇತ್ಯಾದಿಗಳನ್ನೆಲ್ಲ ಹರಡಿಟ್ಟು ಚರ್ಚಿಸಲಾಗುತ್ತದೆ. ಹಾಗಂತ,


ಟಿ.ವಿ.ಗಳಿಂದ ಹೊರಬಂದು ಪತ್ರಿಕೆಗಳನ್ನು ನೋಡಿದರೂ ಸುಖವೇನೂ ಇರುವುದಿಲ್ಲ. ಟಿ.ವಿ.ಯಷ್ಟು ಬೇಜವಾಬ್ದಾರಿತನದಿಂದ ಅಲ್ಲ ದಿದ್ದರೂ, ಶಂಕಿತರು ಮುಸ್ಲಿಮರೇ ಎಂದು ಪರೋಕ್ಷವಾಗಿಯಾದರೂ ಬಿಂಬಿಸುವ ರೀತಿಯಲ್ಲೇ  ಸುದ್ದಿ ಹೆಣೆಯಲ್ಪಟ್ಟಿರುತ್ತದೆ. ಅದಕ್ಕೆ  ಕಾರಣ, ಅಲ್ಲಾಹ್, ಬಿಸ್ಮಿಲ್ಲಾಹ್, ಜಿಹಾದ್, ಕಾಫಿರ್.. ಇತ್ಯಾದಿ ಪದಗಳು. ಇದರ ಆಚೆಗೆ, ರಾಜಕಾರಣಿಗಳು, ಸಂಘಟನೆಗಳ ನಾಯಕರು  ಅದಾಗಲೇ ಅಪರಾಧಿಯನ್ನು ಪತ್ತೆ ಮಾಡಿದವರಂತೆ ಹೇಳಿಕೆ ನೀಡತೊಡಗುತ್ತಾರೆ. ಇಸ್ಲಾಮ್‌ನಿಂದ ಈ ದೇಶಕ್ಕೆ ಇರುವ ಅಪಾಯ,  ಮುಸ್ಲಿಮರನ್ನು ದೂರ ಇಡಬೇಕಾದ ಅಗತ್ಯ ಮತ್ತು ಹಿಂದೂಗಳು ಸಂಘಟಿತರಾಗಬೇಕಾದ ಅನಿವಾರ್ಯತೆಗಳ ಕುರಿತು ಭಾಷಣಗಳನ್ನು  ಮಾಡಲಾಗುತ್ತದೆ. ಮುಸ್ಲಿಮ್ ಧರ್ಮಗುರುಗಳೇಕೆ ಫತ್ವಾ ಹೊರಡಿಸುವುದಿಲ್ಲ, ಈ ಬೆದರಿಕೆಯನ್ನು ಖಂಡಿಸಿ ಮುಸ್ಲಿಮರೇಕೆ ಪ್ರತಿಭಟನೆ  ನಡೆಸುವುದಿಲ್ಲ ಎಂದು ಪ್ರಶ್ನಿಸಲಾಗುತ್ತದೆ. ಅಂದಹಾಗೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಾಹನ ಹೆಸರಲ್ಲಿ ಈ-ಮೇಲ್ ಕಳಿಸಿದವನ ಬಂಧನವೂ ಆಗಿರುವುದಿಲ್ಲ ಮತ್ತು ಆತನ ಧರ್ಮ ಯಾವುದು ಎಂದೂ ಪತ್ತೆಯಾಗಿರುವುದಿಲ್ಲ. ಆ ಈ-ಮೇಲ್‌ನಲ್ಲಿ ಬಳಸಲಾಗಿರುವ ಪದಗಳೇ  ಒಂದಿಡೀ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಇದೇವೇಳೆ,


ಕ್ರಮಸಂಖ್ಯೆ 3ರ ಸುದ್ದಿಯ ಆರೋಪಿಯನ್ನು ಬಂಧಿಸಲಾಗಿದ್ದರೂ ಅದಕ್ಕೆ ಈ ಮಟ್ಟದ ಕವರೇಜ್ ಸಿಗುವುದಿಲ್ಲ. ಆ ವ್ಯಕ್ತಿಯನ್ನು ಆತನ  ಧರ್ಮದ ಆಧಾರದಲ್ಲಿ ಟಿ.ವಿ.ಗಳು ವಿಚಾರಣೆ ನಡೆಸುವುದಿಲ್ಲ.  ಆತ ಓದಿದ ಗ್ರಂಥ  ಯಾವುದು, ಅದರಲ್ಲಿ ಆತನಿಗೆ ಇಷ್ಟವಾದ ಅಧ್ಯಾಯ ಯಾವುದು, ಆತ ವೀಕ್ಷಿಸುತ್ತಿದ್ದ ವೀಡಿಯೋ ಎಂಥದ್ದು, ಆತ ಎಲ್ಲೆಲ್ಲಿಗೆಲ್ಲಾ  ತೀರ್ಥಯಾತ್ರೆ ಹೋಗಿದ್ದಾನೆ, ಆತ ಕರ್ಮಠನಾಗಿದ್ದನೆ, ಆತ ಮದುವೆಯಾಗಿದ್ದಾನಾ, ಮಕ್ಕಳಿದ್ದಾರಾ, ಎಷ್ಟನೇ ತರಗತಿಯಲ್ಲಿ ಶಾಲೆ ಖೈದು  ಮಾಡಿದ್ದಾನೆ, ಈ ಮೊದಲು ಇಂಥ ಬೆದರಿಕೆ ಹಾಕಿದ್ದನಾ, ಪಾಸ್‌ಪೋರ್ಟ್ ಇದೆಯಾ, ವಿದೇಶಕ್ಕೆ ಪ್ರಯಾಣಿಸಿದ್ದಾನಾ... ಇತ್ಯಾದಿ ಇತ್ಯಾದಿ  ಮೀಡಿಯಾ ಟ್ರಯಲ್‌ಗಳು ನಡೆಯುವುದಿಲ್ಲ. ಪತ್ರಿಕೆಗಳು ಕೂಡಾ ವಿಷಯದ ಆಳಕ್ಕೆ ಇಳಿಯದೇ ಆತನಿಗೆ ಮಾನಸಿಕ ಸಮಸ್ಯೆ ಇತ್ತಾ,  ಖಿನ್ನತೆಗೆ ಔಷಧಿ ಪಡೆಯುತ್ತಿದ್ದನಾ ಎಂಬಿತ್ಯಾದಿ ಪತ್ತೆ ಕಾರ್ಯಕ್ಕೆ ತೊಡಗುತ್ತವೆ. ರಾಜಕಾರಣಿ ಗಳೂ ಮೌನವಾಗುತ್ತಾರೆ. ಸಂಘಟನೆಗಳಿಗೂ ಇದರಲ್ಲಿ ಆಸಕ್ತಿ ಇರುವುದಿಲ್ಲ. ಆವೇಶದ ಭಾಷಣಗಳೋ ಘೋಷಣೆಗಳೋ ಕೇಳಿ ಬರುವುದೂ ಇಲ್ಲ. ಏನೂ ನಡೆದೇ  ಇಲ್ಲವೋ ಎಂದು ಅನುಮಾನಿ ಸುವಂತೆ ಬಂದಷ್ಟೇ ವೇಗದಲ್ಲಿ ಈ ಸುದ್ದಿ ಸತ್ತೂ ಹೋಗುತ್ತದೆ.


ಅಂದಹಾಗೆ, ಈ ಎಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ.


ಬೆಂಗಳೂರಿನ 15  ಶಾಲೆಗಳಿಗೆ ಡಿಸೆಂಬರ್ 1ರಂದು ಈ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾದ ಸುದ್ದಿಯನ್ನು ಗೆಳೆಯರೊಬ್ಬರು  ನನಗೆ ವಾಟ್ಸಾಪ್ ಮಾಡಿದ್ದರು. ಅದರೊಂದಿಗೆ ಮುಸ್ಲಿಮರ ಬಗ್ಗೆ ಅತ್ಯಂತ ನಿರಾಶೆಯ ಭಾವನೆಗಳನ್ನೂ ಹಂಚಿ ಕೊಂಡಿದ್ದರು. ಇವರು  ದೇಶಸೇವೆಗೈದು ನಿವೃತ್ತರಾದ ಯೋಧರು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲೆ. ‘ಇಸ್ಲಾಮ್‌ಗೆ ಮತಾಂತರವಾಗಿ ಇಲ್ಲವೇ  ಸಾಯಲು ಸಿದ್ಧರಾಗಿ ಎಂದು ಬೆದರಿಸುವುದು, ವಿಗ್ರಹಾರಾಧಕರ ತಲೆ ಕಡಿಯುತ್ತೇವೆ ಅನ್ನುವುದು, 15 ಶಾಲೆಗಳಲ್ಲಿರುವ ಮಕ್ಕಳನ್ನು  ಬಾಂಬ್ ಸ್ಫೋಟಿಸಿ ಹತ್ಯೆ ನಡೆಸುತ್ತೇವೆ..’ ಅನ್ನುವುದೆಲ್ಲ ರಾಕ್ಷಸೀಯ ಮಾತುಗಳು. ಯಾರಲ್ಲೆ  ಆಗಲಿ ಆ ಮಾತುಗಳು ಆಘಾತ ಮತ್ತು  ಆಕ್ರೋಶವನ್ನು ಉಂಟು ಮಾಡಬಲ್ಲುದು. ಈ ಮಾತುಗಳ ನಡುನಡುವೆ ಬಿಸ್ಮಿಲ್ಲಾಹ್ ಮತ್ತು ಅಲ್ಲಾಹು ಅಕ್ಬರ್ ಎಂಬ ಪದಗಳೂ ಇವೆ.  ಈ ಈ-ಮೇಲ್‌ಗೆ ದಿಗಿಲುಗೊಂಡು ಶಾಲೆಗೆ ಧಾವಿಸಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡೂ ಹೋಗಿದ್ದಾರೆ. ಇವೆಲ್ಲ  ಅಸಹಜವೂ ಅಲ್ಲ. ವಿಷಾದ ಏನೆಂದರೆ,

ಒಂದು  ಈ-ಮೇಲ್‌ನಲ್ಲಿರುವ ಪದಗಳನ್ನು ಓದಿಕೊಂಡು ಅದಕ್ಕೆ ಧರ್ಮವನ್ನು ಅಂಟಿಸುತ್ತೇವಲ್ಲ, ಇದು ಎಷ್ಟು ಸರಿ? ಒಂದುವೇಳೆ, ಈ  ಈ-ಮೇಲ್‌ನ ಹಿಂದೆ ಇರುವ ವ್ಯಕ್ತಿ ಮುಸ್ಲಿಮ್ ಎಂದೇ ಇಟ್ಟುಕೊಂಡರೂ ಅದು ಇಸ್ಲಾಮ್‌ನಿಂದ ಪ್ರೇರಿತ ಎಂದು ಅಂದುಕೊಳ್ಳುವುದು  ಏಕೆ? 20 ಕೋಟಿ ಮುಸ್ಲಿಮರು ಈ ದೇಶದಲ್ಲಿ ಹಿಂದೂಗಳೊಂದಿಗೆ ಬೆರೆತು ಬದುಕುತ್ತಿದ್ದರೂ ಅವರ ಮೇಲೆ ವಿಶ್ವಾಸವಿಡುವುದಕ್ಕಿಂತ  ಹೆಚ್ಚು ಓರ್ವ ಭಯೋತ್ಪಾದಕನ ಈ-ಮೇಲ್‌ನ ಮೇಲೆ ನಂಬಿಕೆ ಇಡುವುದೇಕೆ? ಇಂಥದ್ದೊಂದು  ಸಮೂಹಸನ್ನಿ ಭೀತಿಯನ್ನು ಹುಟ್ಟು  ಹಾಕಿದವರು ಯಾರು? ಆ ಈ-ಮೇಲ್‌ನಲ್ಲಿ ಏನೆಲ್ಲಾ ಹೇಳಿವೆಯೋ ಅದುವೇ ಇಸ್ಲಾಮ್ ಮತ್ತು ಅದುವೇ ಮುಸ್ಲಿಮರು ಎಂದು  ನಂಬುವುದಕ್ಕೆ ಈ ದೇಶದಲ್ಲಿ ಏನು ಆಧಾರಗಳಿವೆ? ಮುಸ್ಲಿಮನ ಬುಟ್ಟಿಯಿಂದ ಮೀನು ಖರೀದಿಸುವ ಹಿಂದೂಗಳು, ಹಿಂದೂಗಳ  ಅಂಗಡಿಯಿಂದ  ಹೂವು ಖರೀದಿಸುವ ಮುಸ್ಲಿಮರು ಮತ್ತು ಧರ್ಮ ನೋಡದೇ ಅಕ್ಕಿ-ಸಕ್ಕರೆ, ಬೆಲ್ಲ, ಚಪ್ಪಲಿ, ಮೊಬೈಲು, ಟಿ.ವಿ., ಫ್ರಿಜ್ಜು,  ಕೋಳಿ, ಮಾಂಸ, ತರಕಾರಿ, ಕಾರು, ಬೈಕು, ಹಣ್ಣು-ಹಂಪಲುಗಳನ್ನು ಖರೀದಿಸುವ ಹಿಂದೂ ಮತ್ತು ಮುಸ್ಲಿಮರು ಹಾಗೂ ರಕ್ತದಾನ  ಮಾಡುವ ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವ ಈ ಎರಡೂ ಧರ್ಮೀಯರು ಒಂದು ಈ-ಮೇಲ್, ಒಂದು ಹತ್ಯೆ, ಒಂದು ಪ್ರೇಮ  ಪ್ರಕರಣಕ್ಕೆ ತಲ್ಲಣಿಸಿ ಹೋಗುವುದೇಕೆ? ನಿಜಕ್ಕೂ ಈ ಭಯ ಸಜಹವೇ ಅಥವಾ ರಾಜಕೀಯ ಸೃಷ್ಟಿಯೇ? ಅಷ್ಟಕ್ಕೂ,


ಕೊಲ್ಲುವ ಉದ್ದೇಶ ಹೊಂದಿರುವ ವ್ಯಕ್ತಿ ಈ-ಮೇಲ್ ಮಾಡುವುದಿಲ್ಲ. ಈ-ಮೇಲ್ ಮಾಡುವವ ಕೊಲ್ಲುವ ಉದ್ದೇಶವನ್ನು ಹೊಂದಿರುವುದೂ ಇಲ್ಲ. ಈತ ಬರೇ ಭಯೋತ್ಪಾದಕನಷ್ಟೇ ಅಲ್ಲ, ಧರ್ಮದ್ರೋಹಿ, ಮನುಷ್ಯ ದ್ರೋಹಿ ಮತ್ತು ಸೌಹಾರ್ದ ದ್ರೋಹಿ.

Wednesday, December 6, 2023

ತಲೆಬಾಗಿದ ಇಸ್ರೇಲ್, ಜಗತ್ತನ್ನು ಚಕಿತಗೊಳಿಸಿದ ಹಮಾಸ್




1. ಹಮಾಸ್ ಜೊತೆ ಮಾತುಕತೆ ನಡೆಸುವುದೆಂದರೆ ಐಸಿಸ್ ಜೊತೆ ಮಾತುಕತೆ ನಡೆಸಿದಂತೆ. ಇದು ಎಂದೂ ಸಾಧ್ಯವೇ ಇಲ್ಲ.

2. ಹಮಾಸನ್ನು ಸಂಪೂರ್ಣವಾಗಿ ನಾಶಪಡಿಸದೇ ಈ ಯುದ್ಧದಿಂದ ವಿರಮಿಸಲಾರೆ.

3. ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಸೈನಿಕ ಕಾರ್ಯಾಚರಣೆಯ ಮೂಲಕವೇ ಬಿಡುಗಡೆಗೊಳಿಸುತ್ತೇವೆ.

4. ಗಾಝಾವನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸುತ್ತೇವೆ, ಹಮಾಸ್‌ನಿಂದ ಮುಕ್ತಗೊಳಿಸುತ್ತೇವೆ ಮತ್ತು ಗಾಝಾದ ಸುರಕ್ಷಿತತೆಯನ್ನು  ನಮ್ಮ ಸೈನಿಕರೇ ನೋಡಿಕೊಳ್ಳುತ್ತಾರೆ.

5. ಎಷ್ಟೇ ಒತ್ತಡ ಎದುರಾದರೂ ಕದನ ವಿರಾಮ ಸಾಧ್ಯವೇ ಇಲ್ಲ.

6. ಕದನ ವಿರಾಮ ಎಂದರೆ ಪರಾಜಯ ಎಂದು ಅರ್ಥ.

ಇವೆಲ್ಲವನ್ನೂ ಹೇಳಿದ್ದು ಒಬ್ಬನೇ ವ್ಯಕ್ತಿ- ಬೆಂಜಮಿನ್ ನೆತನ್ಯಾಹು. ಆದರೆ ಇದೇ ಬೆಂಜಮಿನ್ ನೆತನ್ಯಾಹು ಈ ಎಲ್ಲ ಘೋಷಣೆಗಳಿಗೂ  ತದ್ವಿರುದ್ಧವಾಗಿ ನಡಕೊಂಡಿದ್ದಾರೆ. ಇದೇ ನೆತನ್ಯಾಹು ಸರ್ಕಾರ ಹಮಾಸ್‌ನ ಜೊತೆ ಮಾತುಕತೆ ನಡೆಸಿದೆ. ಮಾತ್ರವಲ್ಲ, ಇಸ್ರೇಲ್‌ಗೆ ಅನನುಕೂಲವಾಗುವ ರೀತಿಯ ಕದನ ವಿರಾಮಕ್ಕೂ ಒಪ್ಪಿಕೊಂಡಿದೆ. ಈ ಕದನ ವಿರಾಮದ ಷರತ್ತನ್ನು ಪರಿಶೀಲಿಸಿದರೆ ಇಸ್ರೇಲ್ ವಿರುದ್ಧದ  ಹೋರಾಟದಲ್ಲಿ ಹಮಾಸ್ ಮೇಲುಗೈ ಪಡೆದಿದೆ ಎಂದೇ ಅನಿಸುತ್ತದೆ. 4 ದಿನಗಳ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ 50  ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ 150 ಮಂದಿ ಫೆಲೆಸ್ತೀನಿ ಕೈದಿಗಳನ್ನು  ಬಿಡುಗಡೆಗೊಳಿಸಬೇಕು.

ಅಂದಹಾಗೆ, 

ಹಮಾಸ್‌ನ 50 ಮಂದಿಗೆ ಇಸ್ರೇಲ್ 150 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲು ಯಾಕೆ ಒಪ್ಪಿಕೊಂಡಿತು ಎಂಬುದು  ಮೊದಲ ಪ್ರಶ್ನೆ. ಹಮಾಸ್‌ನ ಹಿಡಿತದಲ್ಲಿ 240ಕ್ಕಿಂತಲೂ ಅಧಿಕ ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಈ ಹಿಂದೆ ಘೋಷಿಸಿತ್ತು.  ಒಂದುವೇಳೆ, ಈ ಘರ್ಷಣೆಯಲ್ಲಿ ಇಸ್ರೇಲ್ ಮೇಲುಗೈ ಪಡೆದಿದ್ದೇ  ಆಗಿದ್ದರೆ ಮತ್ತು ಹಮಾಸ್‌ನ ಜಂಘಾಬಲವನ್ನೇ ಅದು ಉಡುಗಿಸಿದ್ದರೆ  ಕದನ ವಿರಾಮ ಇಲ್ಲದೆಯೇ ಅದು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಬೇಕಿತ್ತು. ಅಥವಾ ಹಮಾಸ್‌ನ 50 ಮಂದಿಯ ಬದಲಿಗೆ ತನ್ನ ವಶದಲ್ಲಿರುವ 50 ಮಂದಿಯನ್ನು ಮಾತ್ರ ಬಿಡುಗಡೆಗೊಳಿಸಬೇಕಿತ್ತು. ಆದರೆ ಇವಾವುವೂ ಆಗಿಲ್ಲ. ಬದಲಾಗಿ ಹಮಾಸ್ ಬಿಡುಗಡೆಗೊಳಿಸುವ  ಸಂಖ್ಯೆಯ ಮೂರು ಪಟ್ಟು ಕೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಳ್ಳುವ ಮೂಲಕ ತಾನು ಅಸಹಾಯಕ ಎಂದು ನೆತನ್ಯಾಹು  ಘೋಷಿಸಿದ್ದಾರೆ. ಕತರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದದಲ್ಲಿ ಇನ್ನೂ ಒಂದು ಜಾಣ್ಮೆಯನ್ನು ಹಮಾಸ್ ಪ್ರದರ್ಶಿಸಿದೆ. ಇಸ್ರೇಲ್  ಬಿಡುಗಡೆಗೊಳಿಸಬೇಕಾದ 150 ಕೈದಿಗಳ ಪಟ್ಟಿಯನ್ನು ಅದು ಬಹಳ ಬುದ್ಧಿವಂತಿಕೆಯಿಂದ ತಯಾರಿಸಿದೆ. ಇಸ್ರೇಲ್ ಜೈಲಿನಲ್ಲಿ 19  ವರ್ಷಕ್ಕಿಂತ ಕೆಳಗಿನ ಎಷ್ಟು ಮಂದಿ ಫೆಲೆಸ್ತೀನಿ ಬಾಲಕರಿದ್ದಾರೆ ಎಂಬುದನ್ನು ಜಗತ್ತಿಗೆ ಗೊತ್ತು ಮಾಡುವ ಸಂದರ್ಭವಾಗಿ ಈ ಅವಕಾಶವನ್ನು ಅದು ಬಳಸಿಕೊಂಡಿದೆ. ಈ 150 ಮಂದಿ ಕೈದಿಗಳಲ್ಲಿ ಹೆಚ್ಚಿನವರು ತಾಯಿ ಮತ್ತು ಅವರ ಹದಿಹರೆಯದ ಮಕ್ಕಳೇ ಇದ್ದಾರೆ.  ಫೆಲೆಸ್ತೀನ್‌ನಿಂದ ತಾಯಂದಿರು ಮತ್ತು ಅವರ ಹದಿಹರೆಯದ ಮಕ್ಕಳನ್ನು ಇಸ್ರೇಲ್ ಕೊಂಡೊಯ್ದು ಜೈಲಲ್ಲಿಡುತ್ತಿದೆ ಎಂಬುದನ್ನು ಜಗತ್ತಿಗೆ  ಸಾರಲು ಈ ಸಂದರ್ಭವನ್ನು ಹಮಾಸ್ ಬಳಸಿಕೊಳ್ಳಲು ಯಶಸ್ವಿಯಾಗಿದೆ. ಒಂದುಕಡೆ,

ಅಕ್ಟೋಬರ್ 7ರ ಬಳಿಕ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ 6 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿ ಮಕ್ಕಳು ಹತ್ಯೆಗೀಡಾಗಿದ್ದಾರೆ. ಇ ನ್ನೊಂದು ಕಡೆ, ಬಾಲಕರನ್ನು ಮತ್ತು ಅವರ ತಾಯಂದಿರನ್ನು ಇದೇ ಇಸ್ರೇಲ್ ಬಂಧಿಸಿ ಜೈಲಲ್ಲಿಡುತ್ತಿದೆ.. ಎಂಬ ಸಂದೇಶವನ್ನು ಜಗತ್ತಿಗೆ  ಹಮಾಸ್ ಅತ್ಯಂತ ಜಾಣ್ಮೆಯಿಂದ ರವಾನಿಸುವ ಪ್ರಯತ್ನ ನಡೆಸಿದೆ. ಅಂದಹಾಗೆ,
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ ಬಳಿಕ ನಡೆದ ಚರ್ಚೆಗಳಲ್ಲಿ ಎರಡು ಬಹುಮುಖ್ಯ ಅಂಶಗಳಿದ್ದುವು- 

 1. ಪ್ರಬಲ ಆರ್ಥಿಕ ಬಲ, ಸೇನಾ ಬಲ ಮತ್ತು ಗುಪ್ತಚರ ಬಲವನ್ನು ಹೊಂದಿರುವ ಇಸ್ರೇಲ್‌ನ ಮುಂದೆ ಹಮಾಸ್ ನುಚ್ಚುನೂರಾಗಲಿದೆ. 

 2. ಭಯೋತ್ಪಾದಕ ಗುಂಪು ಎಂಬ ಹಣೆ ಪಟ್ಟಿ ಹಚ್ಚಿ ಹಮಾಸನ್ನು ಜಗತ್ತು ಮೂಲೆಗೊತ್ತಲಿದೆ ಮತ್ತು ಇಸ್ರೇಲ್‌ಗೆ ಜಾಗತಿಕ ರಾಷ್ಟ್ರಗಳ  ಮಾನ್ಯತೆ ಇನ್ನೂ ಹೆಚ್ಚಾಗಲಿದೆ.

ಆದರೆ,

46 ದಿನಗಳ ಘರ್ಷಣೆಗಳ ಬಳಿಕದ ಪರಿಸ್ಥಿತಿ ಹೇಗಿದೆಯೆಂದರೆ, ಈ ಎರಡೂ ಲೆಕ್ಕಾಚಾರಗಳೂ ತಲೆಕೆಳಗಾಗಿವೆ ಮತ್ತು ಇಸ್ರೇಲ್  ಅಕ್ಟೋಬರ್ 7ಕ್ಕಿಂತ ಮೊದಲಿನ ಸ್ಥಿತಿಯಿಂದಲೂ ಕೆಳಜಾರಿ ಪ್ರಪಾತಕ್ಕೆ ಬಿದ್ದಿದೆ. ಫೆಲೆಸ್ತೀನ್‌ನ ಮೇಲೆ ಬಾಂಬ್ ಸುರಿದು 14 ಸಾವಿರ  ಮಂದಿಯನ್ನು ಹತ್ಯೆಗೈಯಲು ಇಸ್ರೇಲ್ ಯಶಸ್ವಿಯಾಗಿದ್ದರೂ ಹಮಾಸ್‌ಗೆ ಆಘಾತ ನೀಡಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬರೇ 20  ನಿಮಿಷಗಳಲ್ಲಿ 5 ಸಾವಿರ ರಾಕೆಟ್‌ಗಳನ್ನು ಇಸ್ರೇಲ್ ನೊಳಗೆ ಹಾರಿಸಿದ ಹಮಾಸ್‌ನ ಆ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಬೇಧಿಸಲು  ಅದು ಎಳ್ಳಷ್ಟೂ ಶಕ್ತವಾಗಿಲ್ಲ. ಹಮಾಸ್‌ನ ಜಾಲ ಹೇಗಿದೆ, ಎಲ್ಲೆಲ್ಲಿದೆ ಮತ್ತು ಅದರ ಕಾರ್ಯಾಚರಣೆಯ ಸ್ವರೂಪ ಏನು ಎಂಬುದನ್ನೆಲ್ಲ  ಪತ್ತೆ ಹಚ್ಚುವಲ್ಲಿ ಇಸ್ರೇಲ್ ಘೋರ ವೈಫಲ್ಯವನ್ನು ಕಂಡಿದೆ. ಮೊಬೈಲ್‌ನೊಳಗೆ ನುಸುಳಿ ಮಾಹಿತಿಯನ್ನು ಕದಿಯಬಲ್ಲ ಅತ್ಯಾಧುನಿಕ  ಸ್ಪೈವೇರ್ ತಂತ್ರಜ್ಞಾನದ ಹೊರತಾಗಿಯೂ ಹಮಾಸ್‌ನ ಸೈನಿಕ ತಂತ್ರಜ್ಞಾನ, ಕಾರ್ಯಾಚರಣೆಯ ವಿಧಾನ ಮತ್ತು ರಾಕೆಟ್ ಲಾಂಚರ್‌ಗಳ  ಕಾರ್ಯವಿಧಾನವನ್ನು ಅರಿತುಕೊಳ್ಳು ವಲ್ಲಿ ಇಸ್ರೇಲ್ ವಿಫಲವಾಗಿರುವುದು ಅದರ ಸಾಮರ್ಥ್ಯದ ಮಿತಿಯನ್ನು ಹೇಳುತ್ತದೆ. ಒಂದೋ,

ಹೊರಗೆ ಬಿಂಬಿಸಿಕೊಂಡಷ್ಟು ಇಸ್ರೇಲ್ ಬಲಿಷ್ಠವಾಗಿಲ್ಲ ಅಥವಾ ಬುದ್ಧಿವಂತಿಕೆಯಲ್ಲಿ ಇಸ್ರೇಲನ್ನು ಮೀರಿಸುವ ಸಮರ್ಥರು ಹಮಾಸ್‌ನಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹಮಾಸ್ ಗುಂಪು ತನ್ನನ್ನು ಸುರಂಗದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ ಎಂದೇ ಈವರೆಗೆ ಇಸ್ರೇಲ್  ಹೇಳಿಕೊಳ್ಳುತ್ತಾ ಬಂದಿತ್ತು. ಜಗತ್ತು ಕೂಡ ಅದನ್ನೇ ನಂಬಿತ್ತು. ಇದು ಭಾಗಶಃ ಸತ್ಯ ಕೂಡ. ಆದರೆ, ಹಮಾಸ್‌ನ ಬಲ ಸುರಂಗವನ್ನೇ  ಅವಲಂಬಿಸಿಕೊಂಡಿಲ್ಲ ಎಂಬುದನ್ನು ಈ ಘರ್ಷಣೆ ಜಗಜ್ಜಾಹೀರುಗೊಳಿಸಿದೆ. 46 ದಿನಗಳ ಬಳಿಕವೂ ಅದು ಹಮಾಸ್‌ಗೆ ಸೇರಿದ  ಪ್ರಮುಖವಾದ ಏನನ್ನೂ ವಶಪಡಿಸಿಕೊಂಡಿಲ್ಲ. ನೆಲ, ಜಲ ಮತ್ತು ಆಕಾಶ ಮಾರ್ಗಗಳಿಂದ ಏಕಕಾಲದಲ್ಲಿ ಆಕ್ರಮಣ ಮಾಡಬಲ್ಲ  ಸಾಮರ್ಥ್ಯ ಇದ್ದೂ ಮತ್ತು ಇವಾವುವೂ ಇಲ್ಲದ ಹಮಾಸ್‌ನ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಶರಣಾಗತ ಸ್ಥಿತಿಗೆ ತಲುಪಿದ್ದು ಏಕೆ?  ಮೊಸಾದ್ ಎಂಬ ಪ್ರಬಲ ಗುಪ್ತಚರ ವ್ಯವಸ್ಥೆ ಇದ್ದೂ ಹಮಾಸ್ ಚಟುವಟಿಕೆಯ ಮೇಲೆ ಕಣ್ಣಿಡಲು ಅದು ವಿಫಲವಾದದ್ದು ಏಕೆ? ‘ಯುದ್ಧ  ಆರಂಭಿಸಿದ್ದು ನೀವು, ಕೊನೆಗೊಳಿಸುವುದು ನಾವು...’ ಎಂದು ಅಕ್ಟೋಬರ್ 7ರಂದು ಘೋಷಿಸಿದ್ದ ನೆತನ್ಯಾಹು ನವೆಂಬರ್ 25ಕ್ಕೆ ತಲುಪುವಾಗ ಶರಣಾಗತ ಭಾವದಲ್ಲಿ ಕಾಣಿಸಿಕೊಂಡದ್ದು ಯಾಕೆ? ಬಲಿಷ್ಠ ಎಂದು ಗುರುತಿಸಿಕೊಂಡಿರುವ ರಾಷ್ಟ್ರವೊಂದರ ಪ್ರಧಾನಿಯು  ಗಾಝಾ ಎಂಬ ರಾಷ್ಟ್ರವೇ ಅಲ್ಲದ ಮತ್ತು ಹಮಾಸ್ ಎಂಬ ಏನೂ ಅಲ್ಲದ ಗುಂಪಿನ ಪ್ರತಿನಿಧಿ ಇಸ್ಮಾಈಲ್ ಹನಿಯ್ಯ ಎಂಬವರ  ಮುಂದೆ ತಲೆ ತಗ್ಗಿಸಿದ್ದು ಏಕೆ? ನೆತನ್ಯಾಹು ಸರಕಾರದ ಪಾಲುದಾರ ಪಕ್ಷವಾಗಿರುವ  ಝಿಯೋನಿಸ್ಟ್ ಪಾರ್ಟಿ ಎಂಬ ತೀವ್ರ ಬಲಪಂಥೀಯ ಪಕ್ಷದ ವಿರೋಧದ ನಡುವೆಯೂ ಅವರು ಕದನ ವಿರಾಮಕ್ಕೆ ಒಪ್ಪಿಕೊಂಡದ್ದು ಏಕೆ? ಅವರಿಗೆ ಅಂಥದ್ದೊಂದು ಅನಿವಾರ್ಯತೆ ಏನಿತ್ತು? ನಿಜವಾಗಿ,

ಅಕ್ಟೋಬರ್ 7ರ ದಾಳಿಯ ಬಳಿಕ ಹಮಾಸ್ ಕಟಕಟೆಯಲ್ಲಿ ನಿಂತದ್ದು ನಿಜ. ಜಾಗತಿಕವಾಗಿ ಹಮಾಸ್ ಮೇಲಿದ್ದ ಸಹಾನುಭೂತಿಗೆ ಈ  ದಾಳಿ ಪೆಟ್ಟು ನೀಡಿದ್ದೂ ನಿಜ. ಈ ಉದ್ವೇಗದ ಸಂದರ್ಭವನ್ನೇ ನೆತನ್ಯಾಹು ಬಳಸಿಕೊಂಡರು. ಹಮಾಸನ್ನು ಟೆರರಿಸ್ಟ್ ಎಂದರು.  ಟೆರರಿಸ್ಟ್ ಗಳ  ಜೊತೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಅಬ್ಬರಿಸಿದರು. ಅಮೇರಿಕ, ಬ್ರಿಟನ್, ಜರ್ಮನಿ, ಕೆನಡ, ಭಾರತ ಇತ್ಯಾದಿ  ರಾಷ್ಟçಗಳ ಬೆಂಬಲದಿಂದ ಅವರು ಪುಳಕಿತರಾದರು. ಆದರೆ ‘ಇಂಥ ಸನ್ನಿವೇಶದಲ್ಲೂ ಹಮಾಸನ್ನು ಟೆರರಿಸ್ಟ್ ಎನ್ನಲಾರೆ’ ಎಂದು  ಘೋಷಿಸಿದ್ದು ಬಿಬಿಸಿ ಮಾಧ್ಯಮ. ಬ್ರಿಟನ್ನಿನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲಾವೆಲ್ಲಿ ಮತ್ತು  ಸಂಸ್ಕೃತಿ ಕಾರ್ಯದರ್ಶಿ ಲೇಸಿ ಫ್ರೇಝರ್ ಅವರು ಬಿಬಿಸಿಯ ನಿಲುವನ್ನು ತೀವ್ರವಾಗಿ ಖಂಡಿಸಿದ ಹೊರತಾಗಿಯೂ ಮತ್ತು ಬಿಬಿಸಿ ಈ  ಬಗ್ಗೆ ನಿಲುವು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದ ಬಳಿಕವೂ ಬಿಬಿಸಿ ತನ್ನ ನಿಲುವಿಗೇ ಅಂಟಿಕೊಂಡಿತು. ಕದನ ವಿರಾಮದ ಈ  ಹಂತದಲ್ಲಿ ನಿಂತು ಪರಿಶೀಲಿಸಿದರೆ,

ಈ ಇಡೀ ಘರ್ಷಣೆಯಿಂದ ಇಸ್ರೇಲ್ ಕಳಕೊಂಡದ್ದೇ  ಹೆಚ್ಚು ಎಂದೇ ಅನಿಸುತ್ತದೆ. ಹಮಾಸ್‌ನ ಜೊತೆ ಮಾತುಕತೆಗೆ ಮುಂದಾಗುವ  ಮೂಲಕ ಅದು ಟೆರರಿಸ್ಟ್ ಗುಂಪು ಅಲ್ಲ ಮತ್ತು ಅದು ಗಾಝಾದ ಸಂಘಟನೆ ಎಂಬುದನ್ನು ಬಹಿರಂಗವಾಗಿ ಅದು ಒಪ್ಪಿಕೊಂಡಿದೆ. ಇನ್ನೊಂದು  ಮಹತ್ವಪೂರ್ಣ ಬೆಳವಣಿಗೆ ಏನೆಂದರೆ, ದ್ವಿರಾಷ್ಟ್ರ  ಸಿದ್ಧಾಂತವೇ ಪರಿಹಾರ ಎಂಬ ಕೂಗು ಜಾಗತಿಕವಾಗಿಯೇ ಕೇಳಿ ಬಂದಿದೆ.  ಅಕ್ಟೋಬರ್ 7 ಮೊದಲು ಯಾವ ಕೂಗು ಅತೀ ಸಣ್ಣ ಪ್ರಮಾಣದಲ್ಲೂ ಕೇಳುತ್ತಿರಲಿಲ್ಲವೋ ಅದೇ ಕೂಗು ಇವತ್ತು ಅತೀ ತಾರಕ ಧ್ವನಿಯಲ್ಲಿ ಕೇಳಿಸಲಾರಂಭಿಸಿದೆ. ಚೀನಾದಿಂದ ಹಿಡಿದು ಭಾರತ, ಆಸ್ಟ್ರೆಲಿಯಾ, ದಕ್ಷಿಣ ಆಫ್ರಿಕಾ, ಅಮೇರಿಕಾ, ಸ್ವೀಡನ್, ಸಿಂಗಾಪುರ  ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ ಬಲವಾಗಿ ಧ್ವನಿಯೆತ್ತಿವೆ. ಭಾರತ, ಚೀನಾ, ರ ಶ್ಯಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಅರ್ಜಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನೊಳಗೊಂಡ  ಬಿಕ್ಸ್ ಒಕ್ಕೂಟ ರಾಷ್ಟ್ರಗಳ ಸಭೆಯು ದ್ವಿರಾಷ್ಟ್ರ ಪರಿಹಾರವನ್ನು ಬಲವಾಗಿಯೇ ಮಂಡಿಸಿವೆ. ಬ್ರಿಕ್ಸ್ ನ  ಈಗಿನ ಅಧ್ಯಕ್ಷ ದಕ್ಷಿಣ ಆಫ್ರಿಕಾದ  ಸಿರಿಲ್ ರಾಂಪೋಸ್ ಅವರಂತೂ ಇಸ್ರೇಲ್ ಬಾಂಬ್ ಹಾಕುವುದನ್ನು ನಿಲ್ಲಿಸುವವರೆಗೆ ತನ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯನ್ನೇ  ಮುಚ್ಚಿಸಿದರು ಮತ್ತು ರಾಜತಾಂತ್ರಿಕ ಸಂಬಂಧವನ್ನೇ ಸ್ಥಗಿತಗೊಳಿಸಿದರು. ಅಕ್ಟೋಬರ್ 7ರ ಮೊದಲು ಇಸ್ರೇಲ್‌ನ ಮೇಲೆ ಈ ಬಗೆಯ  ಒತ್ತಡ ಇದ್ದಿರಲಿಲ್ಲ. ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದಿರುವ ಮತ್ತು ಈ ಕುರಿತಂತೆ ಯಾವುದೇ ರಾಷ್ಟ್ರ  ನಾಯಕರು ಹೇಳಿಕೆ ನೀಡದಂತೆ ಮತ್ತು ಮಾಧ್ಯಮಗಳಲ್ಲಿ ಚರ್ಚೆ ನಡೆಯದಂತೆ ನೋಡಿಕೊಳ್ಳುತ್ತಾ ಬಂದಿದ್ದ ಇಸ್ರೇಲ್, ಇತ್ತೀಚಿನ ದ ಶಕಗಳಲ್ಲಿ ಇದೇ ಮೊದಲು ಬಾರಿ ಕಟಕಟೆಯಲ್ಲಿ ನಿಂತಿತು. ಅಕ್ಟೋಬರ್ 7ರಂದು ಫೆಲೆಸ್ತೀನ್‌ನ ಮೇಲೆ ವೈಮಾನಿಕ ದಾಳಿ ನಡೆಸಲು  ಮುಂದಾಗುವಾಗ ನೆತನ್ಯಾಹು ಇಂಥದ್ದೊಂದು  ಬೆಳವಣಿಗೆಯನ್ನು ಊಹಿಸಿರುವ ಸಾಧ್ಯತೆಯೇ ಇಲ್ಲ.
 
ಒಂದುರೀತಿಯಲ್ಲಿ,

ಈ ಘರ್ಷಣೆಯು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಎಂಬ ಫೆಲೆಸ್ತೀನಿಯರ ಬಹುಕಾಲದ ಕನಸು ನನಸಾಗುವ ದಿಶೆಯಲ್ಲಿ ಮಹತ್ವದ  ಮೈಲುಗಲ್ಲಾಗುವ ಸಾಧ್ಯತೆ ಕಾಣಿಸುತ್ತದೆ. ಬಹುಶಃ ಈಗಿನ ಅಲ್ಪಕಾಲೀನ ಕದನ ವಿರಾಮವೇ ಶಾಶ್ವತ ಕದನ ವಿರಾಮವಾಗಿ ಮಾರ್ಪಡಲೂ  ಬಹುದು ಅಥವಾ ಮತ್ತೆ ಘರ್ಷಣೆ ಮುಂದುವರಿಯಲೂ ಬಹುದು. ಆದರೆ, ಈಗಾಗಲೇ ಈ ಘರ್ಷಣೆಯಿಂದ ಇಸ್ರೇಲ್ ಸಾಕಷ್ಟು  ಕಳಕೊಂಡಿದೆ. ಒಂದುವೇಳೆ, ಘರ್ಷಣೆ ಇನ್ನಷ್ಟು ಮುಂದುವರಿದರೆ ಇದರಿಂದ ಇಸ್ರೇಲ್ ಮತ್ತಷ್ಟು ತೊಂದರೆಗೆ ಸಿಲುಕಲಿದೆ. ಅರಬ್  ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಗ್ಗಟ್ಟು ಪ್ರದ ರ್ಶಿಸಬೇಕಾದ ಮತ್ತು ಕಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ  ಸಿಲುಕಲಿದೆ. ಇದನ್ನು ಅಮೇರಿಕ ಬಯಸಲಾರದು. ಇಸ್ರೇಲ್‌ಗೂ ಇದು ಬೇಕಾಗಿಲ್ಲ. ಇದರಾಚೆಗೆ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ  ಜಾಗತಿಕ ರಾಷ್ಟ್ರಗಳ ಒಲವು ಮತ್ತು ಒತ್ತಡ ಹೆಚ್ಚಾಗಬಹುದು. ಇದಕ್ಕೆ ಅಮೇರಿಕ ಪದೇ ಪದೇ ತಡೆ ಒಡ್ಡುತ್ತಿರುವುದರಿಂದ ಚೀನಾ  ನೇತೃತ್ವದಲ್ಲಿ ಅರಬ್ ರಾಷ್ಟ್ರಗಳು ಅಮೇರಿಕಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದು ನಿಲ್ಲಬಹುದು. ಹೀಗಾದರೆ, ಒಂದೋ ಅಮೇರಿಕ ಮತ್ತು  ಅದರ ಬೆಂಬಲಿಗರು ಮೆತ್ತಗಾಗಬೇಕಾಗುತ್ತದೆ ಅಥವಾ ಇನ್ನೊಂದು ಮಹಾ ಘರ್ಷಣೆಗೆ ವೇದಿಕೆ ಸಿದ್ಧವಾಗ ಬೇಕಾಗುತ್ತದೆ. ಇವು ಏನೇ  ಇದ್ದರೂ,

ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯನ್ನು ಪರಿಶೀಲಿಸಿದರೆ, ಹಮಾಸ್ ಮೇಲುಗೈ ಪಡೆದಂತೆ ಮತ್ತು ಇಸ್ರೇಲ್ ಮಂಡಿಯೂರಿದಂತೆ  ಕಾಣಿಸುತ್ತದೆ. ಇದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಇರುವೆಯೊಂದು ಆನೆಯನ್ನು ಮಣಿಸುತ್ತದಲ್ಲ , ಅಂಥ  ಕತೆ. 

Monday, November 27, 2023

ಉಡುಪಿಯಲ್ಲಿ ಹತ್ಯೆ: ನಿಜಕ್ಕೂ ಚರ್ಚೆಗೊಳ ಗಾಗಬೇಕಾದುದು ಯಾವುದು?





1. ಅಯ್ನಾಝ

2. ಗೌರಿ

3. ಶ್ರದ್ಧಾ ವಾಲ್ಕರ್

ಹತ್ಯೆಗೀಡಾಗಿರುವ ಈ ಮೂವರಲ್ಲೂ ಒಂದು ಸಮಾನಾಂಶವಿದೆ. ಅದೇನೆಂದರೆ, ಈ ಮೂವರೂ ಮಹಿಳೆಯರು. ಅಸಮಾನ ಅಂಶವೂ  ಇದೆ, ಅದು ಒಂದಲ್ಲ ಹಲವು. ಇಲ್ಲಿ ಬಹುಮುಖ್ಯ ಪ್ರಶ್ನೆಯೊಂದಿದೆ-

ಗಂಡು  ಇಷ್ಟು ವ್ಯಗ್ರಗೊಳ್ಳುವುದು ಏಕೆ? ಹತ್ಯೆಯನ್ನು ಪರಿಹಾರವಾಗಿ ಬಗೆಯುವುದು ಏಕೆ?

2023 ನವೆಂಬರ್ 12ರಂದು ಉಡುಪಿ ನೇಜಾರಿನ ಗಗನ ಸಖಿ ಅಯ್ನಾಝ ಮತ್ತು ಆಕೆಯ ತಾಯಿ, ಸಹೋದರಿ ಮತ್ತು ಪುಟ್ಟ  ತಮ್ಮನನ್ನು ಹತ್ಯೆ ಮಾಡಲಾಯಿತು. ಆರೋಪಿಯ ಹೆಸರು- ಪ್ರವೀಣ್ ಅರುಣ್ ಚೌಗಲೆ. 2022  ಮೇ 18ರಂದು ದೆಹಲಿಯ ನೌರೋಲಿಯಲ್ಲಿ ಶ್ರದ್ಧಾ ವಾಲ್ಕರ್ ಎಂಬವರ ಹತ್ಯೆ ನಡೆಯಿತು. ಆರೋಪಿಯ ಹೆಸರು- ಅಫ್ತಾಬ್ ಅಮೀನ್ ಪೂನಾವಾಲ. ಈ ಎರಡೂ  ಹತ್ಯೆಗಳು ಅತ್ಯಂತ ಬರ್ಬರವಾಗಿತ್ತು. ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ತುಂಡರಿಸಿ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಬಳಿಕ ದೇಹದ  ತುಂಡುಗಳನ್ನು ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ  ನಾಶಕ್ಕಾಗಿ ಪೂನಾವಾಲ ಪ್ರಯತ್ನಿಸಿದ್ದ. ಮನೆಯೊಳಗೆ ಹರಿದಿದ್ದ  ರಕ್ತವನ್ನು ನೀರಿನಿಂದ ಸ್ವಚ್ಛಗೊಳಿಸಿದ್ದ. ಆಕೆ ಜೀವಂತ ವಿದ್ದಾಳೆ ಎಂದು ಗೆಳತಿಯರು ಮತ್ತು ಮನೆಯವರು ಭಾವಿಸುವಂತೆ  ಮಾಡುವುದಕ್ಕಾಗಿ ಬೇರೆ ಬೇರೆ ತಂತ್ರಗಳನ್ನೂ ಹೆಣೆದಿದ್ದ. ಅಂದಹಾಗೆ,

ಈ ಪೂನಾವಾಲಾಗೆ ಹೋಲಿಸಿದರೆ ಈ ಪ್ರವೀಣ್ ಚೌಗಲೆ ಇನ್ನಷ್ಟು ಭೀಕರವಾಗಿ ಕಾಣಿಸುತ್ತಾನೆ. ಅಫ್ತಾಬ್ ಪೂನಾವಾಲ ಸಾಮಾನ್ಯ ಫುಡ್  ಬ್ಲಾಗರ್. ಆತ ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಯಾವುದೇ ಶಿಸ್ತುಬದ್ಧ ವ್ಯವಸ್ಥೆಯಿಂದಾಗಲಿ ತರಬೇತಿ ಪಡೆದವನಲ್ಲ. ಆಹಾರ  ತಯಾರಿಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಈತ ಫುಡ್ ಫೋಟೋಗ್ರಾಫರ್ ಆಗಿಯೂ ಗುರುತಿಸಿಕೊಂಡಿದ್ದ. ತನ್ನ ಇನ್‌ಸ್ಟಾಗ್ರಾಮ್  ಅಕೌಂಟನ್ನು ‘ಹಂಗ್ರಿ ಚೋಕೋ’ ಎಂದು ಹೆಸರಿಸಿ ತನ್ನ ಆಹಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದ. ಆತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 28  ಸಾವಿರಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿದ್ದರು. ಪದವೀಧರನಾಗಿದ್ದ 28 ವರ್ಷದ ಪೂನಾವಾಲ ಬಾಡಿ ಬಿಲ್ಡರ್ ಕೂಡಾ ಆಗಿದ್ದ.  ಆದರೆ,

ಪ್ರವೀಣ್ ಚೌಗಲೆಯ ಹಿನ್ನೆಲೆ ಹೀಗಲ್ಲ. ನಾಗರಿಕ ಸಮಾಜ ಗೌರವಿಸುವ ಮತ್ತು ಆದರ ಭಾವದಿಂದ ನೋಡುವ ಹಿನ್ನೆಲೆ ಈತನ ಬೆ ನ್ನಿಗಿದೆ. ಈತ ಪೊಲೀಸ್ ಇಲಾಖೆಯಲ್ಲಿದ್ದ. ಆ ಬಳಿಕ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಕ್ಯಾಬಿನ್ ಕ್ರೂ ಉದ್ಯೋಗದಲ್ಲಿದ್ದ. ಇವು  ಎರಡೂ ಶಿಸ್ತಿನ ಕಾರಣಕ್ಕಾಗಿ ಗುರುತಿಸಿಕೊಂಡಿವೆ. ಪೊಲೀಸ್ ಹುದ್ದೆಗೆ ಆಯ್ಕೆಯಾದ ಕೂಡಲೇ ಖಾಕಿ ಡ್ರೆಸ್ಸು, ಲಾಠಿ, ಹ್ಯಾಟು-ಬೂಟು  ಕೊಡುವುದಿಲ್ಲ. ಅಲ್ಲಿ ಶಿಸ್ತಿನ ಪಾಠವನ್ನು ಹೇಳಿ ಕೊಡಲಾಗುತ್ತದೆ. ಜನರೊಂದಿಗೆ ಹೇಗೆ ವರ್ತಿಸಬೇಕು, ಅತ್ಯಂತ ಕಠಿಣ ಸನ್ನಿವೇಶದಲ್ಲೂ  ಹೇಗೆ ಸಂಯಮದಿಂದಿರಬೇಕು ಎಂದು ಕಲಿಸಲಾಗುತ್ತದೆ. ವಿಮಾನ ಸಂಸ್ಥೆಯಲ್ಲೂ ಅಷ್ಟೇ. ಶಿಸ್ತಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.  ಪ್ರಯಾಣಿಕರೊಂದಿಗೆ ಸಂಯಮ ಮತ್ತು ಆದರ ಭಾವದೊಂದಿಗೆ ವರ್ತಿಸಲು ಹೇಳಿ ಕೊಡಲಾಗುತ್ತದೆ. ಅದಕ್ಕಾಗಿ ತರಬೇತಿಯನ್ನೂ  ನೀಡಲಾಗುತ್ತದೆ. ಇಷ್ಟಿದ್ದೂ,
ಅಫ್ತಾಬ್ ಪೂನಾವಾಲನೂ ನಾಚುವಷ್ಟು ಭೀಕರವಾಗಿ ಪ್ರವೀಣ್ ಚೌಗಲೆ ಹತ್ಯೆ ಮಾಡಿದ್ದಾನೆ. 12 ವರ್ಷದ ಬಾಲಕನನ್ನೂ ಕತ್ತರಿಸಿ  ಹಾಕಿದ್ದಾನೆ. ಆದರೆ, ಈ ಎರಡನ್ನೂ ಮೀಡಿಯಾ ನೋಡಿದ್ದು ಹೇಗೆ? ಫೇಸ್‌ಬುಕ್, ಟ್ವೀಟರ್ (ಈಗಿನ ಎಕ್ಸ್) ಬಳಕೆದಾರರು  ಪ್ರತಿಕ್ರಿಯಿಸಿದ್ದು ಹೇಗೆ?

ಶ್ರದ್ಧಾ ವಾಲ್ಕರ್‌ಳನ್ನು ಕೊಂದವ ಅಫ್ತಾಬ್ ಪೂನಾವಾಲಾ ಎಂದು ಗೊತ್ತಾದ ಕೂಡಲೇ ಮೀಡಿಯಾಗಳು ಆತನ ಟ್ರಯಲ್‌ಗೆ ಇಳಿದಿದ್ದುವು.  ಆತ ಎಲ್ಲಿಯವ, ಆತನ ತಂದೆ-ತಾಯಿ ಯಾರು? ಅವರ ಹಿನ್ನೆಲೆ ಏನು, ಯಾವ ವೃತ್ತಿಯಲ್ಲಿದ್ದಾರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರಾ,  ದೇಶವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದಾರಾ, ವಿದೇಶಕ್ಕೆ ಪ್ರಯಾಣಿಸಿದ್ದಾರಾ, ಅವರಿಗೆಷ್ಟು ಮಕ್ಕಳು, ಅವರು ಏನೇನು ಆಗಿದ್ದಾರೆ,  ಅಫ್ತಾಬ್ ಅವರಲ್ಲಿ ಎಷ್ಟನೆಯವ, ಈತ ಎಲ್ಲೆಲ್ಲಿ ಕಲಿತಿದ್ದಾನೆ, ಕಲಿಕೆಯ ವೇಳೆ ಈತನ ಸ್ವಭಾವ ಏನಿತ್ತು, ಶ್ರದ್ಧಾಳ ಮೊದಲು ಮತ್ತು ಬಳಿಕ  ಯಾರೊಂದಿಗೆಲ್ಲ ರಿಲೇಷನ್‌ಶಿಪ್ ಇತ್ತು, ಈ ಹಿಂದೆಯೂ ಹತ್ಯೆ ಮಾಡಿದ್ದಾನಾ, ಈತನ ಕೆಲಸ ಏನು, ಈ ಹಿಂದೆ ಯಾವ ಕೆಲಸ  ಮಾಡುತ್ತಿದ್ದ, ಇದು ಲವ್ ಜಿಹಾದಾ, ಆನ್‌ಲೈನ್‌ನಲ್ಲಿ ಏನೇನೆಲ್ಲಾ ಹುಡುಕಿದ್ದಾನೆ, ಯಾರೊಂದಿಗೆಲ್ಲ ಸಂಪರ್ಕ ಇಟ್ಟುಕೊಂಡಿದ್ದಾನೆ..  ಇತ್ಯಾದಿ ಇತ್ಯಾದಿ ಹತ್ತು ಹಲವು ಪ್ರಶ್ನೆಗಳೊಂದಿಗೆ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ತನಿಖೆಗಿಳಿದಿದ್ದುವು. ರಾಷ್ಟ್ರೀಯ ಟಿ.ವಿ. ಚಾ ನೆಲ್‌ಗಳಲ್ಲಂತೂ ದಿನಕ್ಕೆರಡು ಎಪಿಸೋಡ್‌ಗಳನ್ನು ಪ್ರಸಾರ ಮಾಡಿದವು. ಈ ನಡುವೆ ಸೋಶಿಯಲ್ ಮೀಡಿಯಾವಂತೂ ಇವರಿಬ್ಬರ  ಸಂಬಂಧವನ್ನು ಲವ್ ಜಿಹಾದ್ ಎಂದಿತು. ‘ಮುಸ್ಲಿಮರೊಂದಿಗೆ ಸಂಬಂಧ ಬೆಳೆಸಿದರೆ ಫ್ರಿಡ್ಜ್ ಸೇರುತ್ತೀರಿ’ ಎಂದು ಉಪದೇಶ ಮಾಡಿತು.  ‘ನನ್ನ ಅಬ್ದುಲ್ಲ ಅಂಥವನಲ್ಲ..’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್  ಆಯಿತು. ಶ್ರದ್ಧಾಳನ್ನು ಹಿಂದೂ ಎಂದೂ ಅಫ್ತಾಬ್‌ನನ್ನು ಮುಸ್ಲಿಮ್  ಎಂದೂ ವರ್ಗೀಕರಿಸಿ ಆ ಹತ್ಯೆಯನ್ನು ಹಿಂದೂ-ಮುಸ್ಲಿಮ್ ಪ್ರಕರಣವಾಗಿ ಬಿಂಬಿಸಲಾಯಿತು. ಆದರೆ,

ಆರೋಪಿ ಪ್ರವೀಣ್ ಚೌಗಲೆಗೆ ಸಂಬಂಧಿಸಿ ಮೀಡಿಯಾಗಳು ಈ ಬಗೆಯ ತನಿಖೆಯನ್ನೇ ನಡೆಸಿಲ್ಲ. ಆತನ ಹಿನ್ನೆಲೆ, ಆತ ದ್ವೇಷ ಭಾಷಣ  ಪ್ರೇಮಿಯಾಗಿದ್ದನೇ, ಆತನ ಮೊಬೈಲ್‌ನಲ್ಲಿ ಯಾರೆಲ್ಲರ ಭಾಷಣಗಳ ತುಣುಕಿತ್ತು, ಎಷ್ಟು ಭಾಷಣ ಸಭೆಗಳಿಗೆ ಹೋಗಿದ್ದಾನೆ, ಮುಸ್ಲಿಮ್  ವಿರೋಧಿ ಎಷ್ಟು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾನೆ, ಆತನ ಸೋಶಿಯಲ್ ಮೀಡಿಯಾ ಅಕೌಂಟ್ ಹೇಗಿದೆ, ಅದರಲ್ಲಿ ಮುಸ್ಲಿಮ್  ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾನಾ, ಆತನ ಕೌಟುಂಬಿಕ ಬದುಕು ಹೇಗಿದೆ, ಎಷ್ಟು ಮದುವೆಯಾಗಿದ್ದಾನೆ, ಅಪರಾಧ ಹಿನ್ನೆಲೆ  ಇದೆಯಾ, ಆತ ಕಲಿತ ಶಾಲೆ ಯಾವುದು, ಅಲ್ಲಿನ ನಡವಳಿಕೆ ಹೇಗಿತ್ತು, ಮುಸ್ಲಿಮರನ್ನು ಚಿಕ್ಕಂದಿನಿಂದಲೇ ದ್ವೇಷಿಸುತ್ತಿದ್ದನಾ, ಮುಸ್ಲಿಮ್  ದ್ವೇಷಿ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದನಾ, ಆತ ಪೊಲೀಸ್ ಇಲಾಖೆಯಲ್ಲಿದ್ದಾಗ ಮುಸ್ಲಿಮ್ ಕೈದಿಗಳ  ಜೊತೆ ಹೇಗೆ ನಡಕೊಂಡಿದ್ದ, ಕಸ್ಟಡಿ ಥಳಿತದ ಆರೋಪ ಇದೆಯೇ, ಮುಸ್ಲಿಮ್ ವಿಮಾನ ಪ್ರಯಾಣಿಕರೊಂದಿಗೆ ಹೇಗೆ ನಡಕೊಳ್ಳುತ್ತಿದ್ದ,  ಪ್ರಯಾ ಣಿಕರಿಂದ ಆರೋಪ ಇತ್ತಾ, ಆತನ ಅಪ್ಪ-ಅಮ್ಮ ಯಾರು, ಅವರ ಹಿನ್ನೆಲೆ ಏನು, ಅವರು ಯಾರೊಂದಿಗೆಲ್ಲ ಸಂಪರ್ಕ ಇಟ್ಟು  ಕೊಂಡಿದ್ದಾರೆ.. ಎಂದು ಮುಂತಾಗಿ ತನಿಖೆಗಿಳಿಯಬೇಕಾದ ಮೀಡಿಯಾಗಳು ಅದರ ಬದಲು ಹತ್ಯೆಗೆ ಅನೈತಿಕ ಸಂಬಂಧ ಕಾರಣ  ಎಂಬೊಂದು ದಾಳವನ್ನು ಆರಂಭದಲ್ಲೇ  ಉರುಳಿಸಿ ಕೈ ತೊಳೆದುಕೊಂಡವು. ಹಾಗಿದ್ದರೆ,

ಅಫ್ತಾಬ್ ಪೂನಾವಾಲನ ಮೇಲೆ ಅಷ್ಟೊಂದು ಅನುಮಾನ ಮತ್ತು ಕುತೂಹಲವನ್ನು ಇವೇ ಮೀಡಿಯಾಗಳು ವ್ಯಕ್ತಪಡಿಸಿದ್ದೇಕೆ? ಅದನ್ನೂ  ಇಬ್ಬರು ಸಂಗಾತಿಗಳ ನಡುವಿನ ಮನಸ್ತಾಪ ಎಂದು ಷರಾ ಬರೆದು ಬಿಡಬಹುದಿತ್ತಲ್ಲವೇ? ಯಾಕೆ ಹಾಗಾಗಲಿಲ್ಲ? ಶ್ರದ್ಧಾಳ ಹತ್ಯೆಯಲ್ಲಿ  ಅಫ್ತಾಬ್‌ನ ಧರ್ಮ ಮುಖ್ಯವಾಗುವುದಾದರೆ, ಅಯ್ನಾಝï‌ಳ ಹತ್ಯೆಯಲ್ಲಿ ಯಾಕೆ ಪ್ರವೀಣನ ಧರ್ಮ ಮುಖ್ಯ ವಾಗುವುದಿಲ್ಲ? ಒಂದನ್ನು  ಲವ್ ಜಿಹಾದ್‌ನ ಹಿನ್ನೆಲೆಯಲ್ಲೂ ಇನ್ನೊಂದನ್ನು ನೈತಿಕತೆಯ ಹಿನ್ನೆಲೆಯಲ್ಲೂ ನೋಡುವುದರ ಮರ್ಮವೇನು? ನಿಜವಾಗಿ,

ಇದೊಂದು ಮನಸ್ಥಿತಿ. ಈ ಅಪಾಯಕಾರಿ ಮನಸ್ಥಿತಿಯು ಕೆಲವೊಮ್ಮೆ ದ್ವೇಷಭಾಷಣಕಾರರಿಗಿಂತಲೂ ಅತಿಯಾಗಿ ಮಾಧ್ಯಮ ಮಿತ್ರರಲ್ಲಿ  ಕಾಣಿಸಿಕೊಳ್ಳುತ್ತದೆ. ಆರೋಪಿ ಮುಸ್ಲಿಮ್ ಅಂದ ತಕ್ಷಣ ಅವರೊಳಗಿನ ‘ಧರ್ಮಪ್ರಜ್ಞೆ’ ಎಚ್ಚರಗೊಳ್ಳುತ್ತದೆ. ಆರೋಪಿ ಮುಸ್ಲಿಮ್ ಹೆಸರಿನವ ಎಂದಾದರೆ ಆ ಕೃತ್ಯಕ್ಕೆ ಬಾಹ್ಯ ಕಾರಣ ಕ್ಕಿಂತ ಹೊರತಾದ ಧರ್ಮ ಕಾರಣ ಇದ್ದೇ  ಇರುತ್ತದೆ ಎಂದವರು ತೀರ್ಮಾನಿಸಿ ಬಿಡುತ್ತಾರೆ.  ಅವರ ತನಿಖಾ ರೀತಿ, ನಾಗರಿಕರಲ್ಲಿ ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಕೇಳುವ ಪ್ರಶ್ನೆ ಎಲ್ಲವೂ ತಮ್ಮ ಈ ಪೂರ್ವಾಗ್ರಹವನ್ನು  ಪುಷ್ಠೀಕರಿಸುವ ರೀತಿಯಲ್ಲೇ  ಇರುತ್ತದೆ. ವರದಿಗಳನ್ನೂ ಈ ಅನುಮಾನದ ಸುಳಿಯೊಳಗೇ ತಯಾರಿಸಲಾಗುತ್ತದೆ. ಅಂದಹಾಗೆ, ಅ ಫ್ತಾಬ್‌ಗಿಂತಲೂ ಬರ್ಬರವಾಗಿ ನಡಕೊಂಡ ಪ್ರವೀಣನ ಬಗ್ಗೆ ಮಾಧ್ಯಮಗಳು ತೋರಿದ ನಯ-ವಿನಯ, ನಾಜೂಕುತನವು ಖಂಡಿತ  ಪಿಎಚ್‌ಡಿ ಸಂಶೋಧನೆಗೆ ಅರ್ಹವಾಗಿದೆ.
ನಿಜವಾಗಿ,

ಚರ್ಚೆಗೊಳಗಾಗಬೇಕಾದದ್ದು- ಪುರುಷ ಯಾಕೆ ಚೂರಿಯಲ್ಲಿ ಪರಿಹಾರವನ್ನು ಕಾಣುತ್ತಾನೆ ಎಂಬುದು. 2023 ಆಗಸ್ಟ್ ನಲ್ಲಿ  ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನಲ್ಲಿ 18 ವರ್ಷದ ಗೌರಿ ಎಂಬ ಯುವತಿಯನ್ನು ಪದ್ಮರಾಜ ಎಂಬವ ಹತ್ಯೆ ಮಾಡಿದ. ಇಂಥವು ಆಗಾಗ ಸುದ್ದಿಗೆ  ಒಳಗಾಗುತ್ತಲೇ ಇರುತ್ತದೆ. ಪುರುಷ ಹೆಣ್ಣಿನ ಜೊತೆ ಇಷ್ಟು ನಿಷ್ಠುರವಾಗಿ ನಡಕೊಳ್ಳುವುದಕ್ಕೆ ಏನು ಕಾರಣ? ಅಹಂಮೇ? ತಾನು  ಹೇಳಿದ್ದನ್ನು ಹೆಣ್ಣು ಕೇಳಲೇಬೇಕು ಎಂಬ ಪುರುಷ ಪ್ರಧಾನ ಮನಸ್ಥಿತಿಯೇ? ತಾನು ಏನು ಮಾಡಿಯೂ ದಕ್ಕಿಸಿಕೊಳ್ಳುವೆ ಎಂಬ ಹುಂಬ  ಧೈರ್ಯವೇ? ಅಥವಾ ಇದರಾಚೆ ಗಿನ ಬೇರಾವುದಾದರೂ ಕಾರಣಗಳು ಇವೆಯೇ? ಹತ್ಯೆಯನ್ನು ಧರ್ಮದ ಆಧಾರದಲ್ಲಿ  ವಿಭಜಿಸುವುದಕ್ಕಿಂತ ಇಂಥ ಅನುಮಾನಗಳ ನ್ನಿಟ್ಟುಕೊಂಡು ಹುಡುಕ ಹೊರಟರೆ ಅದರಿಂದ ನಾಗರಿಕ ಸಮಾಜವನ್ನು ಎಚ್ಚರಿಸುವುದಕ್ಕೆ  ಪೂರಕ ಮಾಹಿತಿಗಳು ಲಭ್ಯವಾದೀತು. ಮುಖ್ಯವಾಗಿ, ನಾವೆಷ್ಟೇ ಆಧುನಿಕಗೊಂಡಿದ್ದೇವೆ ಎಂದು ಹೇಳಿದರೂ ಮತ್ತು ಚಂದ್ರನಲ್ಲಿಗೆ ನಮ್ಮ  ನೌಕೆ ತಲುಪಿದ್ದನ್ನು ಸಂಭ್ರಮಿಸಿದರೂ ಆಳದಲ್ಲಿ ಪುರುಷ ಅಹಂನ ಮನಸ್ಥಿತಿಯೊಂದು ಸಮಾಜದಲ್ಲಿ ಸುಪ್ತವಾಗಿ ಹರಿಯುತ್ತಿದೆ. ಹೆಚ್ಚಿನ  ಮನೆಗಳೂ ಇಂಥ ಮನಸ್ಥಿತಿ ಯಿಂದಲೇ ತುಂಬಿಕೊಂಡಂತಿದೆ. ಹೆಣ್ಣೆಂದರೆ ಗಂಡಿಗೆ ತಗ್ಗಿ-ಬಗ್ಗಿ ಶರಣು ಭಾವದಲ್ಲಿ ಬದುಕಬೇಕಾದವಳು,  ಎದುರು ಮಾತಾಡುವಂತಿಲ್ಲ, ತರ್ಕ-ವಾದಗಳ ಮೂಲಕ ಗಂಡಿಗೆ ಇರಿಸು-ಮುರಿಸು ತರುವಂತಿಲ್ಲ, ಗಂಡಿಗಿಂತ  ಉತ್ತಮ ಐಡಿಯಾ  ಅವಳಲ್ಲಿದ್ದರೂ ಅದನ್ನು ಸ್ವೀಕರಿಸುವುದು ಗಂಡಿನ ಸ್ವಾಭಿಮಾನಕ್ಕೆ ಕುತ್ತು, ಗಂಡಿಗಿಂತ ಉನ್ನತ ಹುದ್ದೆಯಲ್ಲಿರುವವಳು ಪತ್ನಿಯಾಗುವುದು  ಆತನ ಇಮೇಜಿಗೆ ಕುಂದು.. ಇತ್ಯಾದಿ ಇತ್ಯಾದಿ ಹಲವು ಅಲಿಖಿತ ಕಟ್ಟು ಪಾಡುಗಳನ್ನು ಹೆಚ್ಚಿನ ಪುರುಷರು ಎದೆಯೊಳಗಿಟ್ಟು  ಬದುಕುತ್ತಿರುತ್ತಾರೆ. ಕೆಲವೊಮ್ಮೆ ಅದನ್ನು ವ್ಯಕ್ತಪಡಿಸುತ್ತಲೂ ಇರುತ್ತಾರೆ. ಇಂಥ ಮನಸ್ಥಿತಿಯು ಹೆಣ್ಣಿನ ಸಣ್ಣ ಎದುರುತ್ತರವನ್ನೂ ತನಗಾದ  ಅವಮಾನವೆಂದೇ ಬಗೆಯುವ ಸಾಧ್ಯತೆ ಇದೆ. ತನಗಿಲ್ಲದ ಪ್ರತಿಭೆ, ಮಾತುಗಾರಿಕೆ, ಚುರುಕುತನಗಳು ಆಕೆಯಲ್ಲಿರುವುದನ್ನು ಪುರುಷ  ನೋರ್ವ ತನ್ನ ಪಾಲಿನ ಹಿನ್ನಡೆಯಾಗಿ ಪರಿಗಣಿಸುವುದಕ್ಕೂ ಅವಕಾಶ ಇದೆ. ಇಂಥ ಭಾವನೆ ಪದೇ ಪದೇ ಎದೆಯನ್ನು  ಚುಚ್ಚತೊಡಗಿದಾಗ ಕ್ಷುಲ್ಲಕವೆಂದು ತೋರುವ ಕಾರಣಕ್ಕೂ ಚೂರಿ ಎತ್ತಿಕೊಳ್ಳುವುದನ್ನೂ ನಿರಾಕರಿಸಲಾಗದು. ಸದ್ಯದ ಅಗತ್ಯ ಏನೆಂದರೆ,

ಇಂಥ ಕ್ರೌರ್ಯಗಳಲ್ಲಿ ಆರೋಪಿಯ ಧರ್ಮವನ್ನು ಹುಡುಕದೇ ಆತ ಬೆಳೆದ ಮನೆ, ಅಲ್ಲಿನ ರೀತಿ-ರಿವಾಜು, ಕಟ್ಟುಪಾಡುಗಳು, ಆತನ  ಪರಿಸರ ಇತ್ಯಾದಿಗಳ ಮೇಲೆ ಗಮನ ಹರಿಸಿ ಕಾರಣಗಳನ್ನು ಪತ್ತೆ ಹಚ್ಚಬೇಕು. ಇದು ನಿರಂತರವಾಗಿ ನಡೆಯಬೇಕು. ಹೆಣ್ಣಿನ ಮೇಲೆ  ಚೂರಿ ಅಥವಾ ಶಸ್ತ್ರ  ಪ್ರಯೋಗ ಮಾಡುವ ಗಂಡುಗಳ ನಡುವೆ ಸಾಮ್ಯತೆ ಇದೆಯೇ ಎಂಬ ಅಧ್ಯಯನ ನಡೆಸಬೇಕು. ಈ ಕುರಿತಂತೆ  ಮನಃಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಪಡೆದು ಪ್ರಕಟಿಸಬೇಕು. ಇಂಥ ಪ್ರಯತ್ನಗಳು ಒಂದು ಅಭಿಯಾನದಂತೆ ನಡೆದರೆ ಕ್ರಮೇಣ ಅದು  ಮನೆ ಮನೆಯಲ್ಲೂ ಚರ್ಚೆಗೆ ಒಳಗಾದೀತು. ಹೆಣ್ಣನ್ನು ದ್ವಿತೀಯ ದರ್ಜೆಯಂತೆ ಕಾಣುವ ಮನೆ-ಮನಗಳ ಪರಿವರ್ತನೆಗೂ ಇಂಥವು  ಕಾರಣವಾದೀತು. ಸದ್ಯದ ಅಗತ್ಯ ಇದು. ಅದರಾಚೆಗೆ ಅಫ್ತಾಬ್, ಪ್ರವೀಣ್ ಅಥವಾ ಪದ್ಮರಾಜ್‌ರನ್ನು ಹಿಂದೂ-ಮುಸ್ಲಿಮ್ ಆಗಿ  ನೋಡುವುದು ನಿಜಕ್ಕೂ ಅಧರ್ಮ.

Saturday, November 25, 2023

‘40 ಶಿಶುಗಳ ಶಿರಚ್ಛೇದ’ ಸುದ್ದಿಯನ್ನು ಉತ್ಪಾದಿಸಿದವರು ಯಾರು?




1. ಇಸ್ರೇಲ್ ಮೊದಲ ಗುರಿ ಮಾತ್ರ: ಜಗತ್ತಿಗೆ ಹಮಾಸ್ ಕಮಾಂಡರ್ ಎಚ್ಚರಿಕೆ

ಜೆರುಸಲೇಂ: ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಹಮಾಸ್ ಕಮಾಂಡರ್ ಮಹಮೂದ್ ಅಲ್  ಜಹರ್ ಅವರು ಜಗತ್ತಿಗೆ ದೊಡ್ಡ ಎಚ್ಚರಿಕೆಯನ್ನು ನೀಡಿದ್ದು, ಜಾಗತಿಕ ನಿಯಂತ್ರಣಕ್ಕಾಗಿ ಫೆಲೆಸ್ತೀನ್ ಭಯೋತ್ಪಾದಕ ಗುಂಪಿನ  ಮಹತ್ವಾಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇಸ್ರೇಲ್ ಮೊದಲ ಗುರಿ ಮಾತ್ರ.  ಇಡೀ ಗ್ರಹ ನಮ್ಮ ಆಳ್ವಿಕೆಗೆ ಒಳಪಡುತ್ತದೆ ಎಂದು ಜಹರ್ ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
(ಉದಯವಾಣಿ, ಅಕ್ಟೋಬರ್ 12, 2023)

2. ಇಸ್ರೇಲ್ ಮೊದಲ ಗುರಿ, ಮುಂದೆ ಸಂಪೂರ್ಣ ಭೂಮಿಯಲ್ಲೇ  ನಮ್ಮ ಕಾನೂನು ಇರುತ್ತೆ: ಹಮಾಸ್ ಕಮಾಂಡರ್ ಎಚ್ಚರಿಕೆ
(ಏಶಿಯಾ ನೆಟ್ ಸುವರ್ಣ ನ್ಯೂಸ್: ಅಕ್ಟೋಬರ್ 12, 2023)

3. ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ: ಎಚ್ಚರಿಕೆ ನೀಡಿದ ಹಮಾಸ್ ಕಮಾಂಡರ್ ಅಲ್ ಜಹರ್
(ಟಿ.ವಿ. 9, ಅಕ್ಟೋಬರ್ 12, 2023)

4. ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ- ಹಮಾಸ್ ಉದ್ಧಟತನ
(ಪಬ್ಲಿಕ್ ಟಿ.ವಿ., ಅಕ್ಟೋಬರ್ 12, 2023)

ಈ ಮೇಲಿನ ಮಾಧ್ಯಮ ಸಂಸ್ಥೆಗಳಲ್ಲದೇ, ಎನ್‌ಡಿಟಿವಿ, ಹಿಂದೂಸ್ತಾನ್ ಟೈಮ್ಸ್ ನಂಥ  ಪತ್ರಿಕೆಗಳು ಕೂಡಾ ಇದೇ ರೀತಿಯ ಸುದ್ದಿಯನ್ನು  ಅಕ್ಟೋಬರ್ 12ರಂದು ಪ್ರಕಟಿಸಿವೆ. ಮಾತ್ರವಲ್ಲ, ಎಲ್ಲ ಮಾಧ್ಯಮ ಸಂಸ್ಥೆಗಳೂ ತಮ್ಮ ವೆಬ್ ಪೋರ್ಟಲ್‌ಗಳಲ್ಲಿ ಈ ಸುದ್ದಿಯ ಜೊತೆಗೇ  ಮುಹಮ್ಮದ್ ಅಲ್ ಜಹರ್ ಅವರ ವೀಡಿಯೋವನ್ನೂ ಹಂಚಿಕೊಂಡಿವೆ. ಅಲ್ ಮೇಕ್ ಎಂಬ ಪತ್ರಕರ್ತೆ ತನ್ನ ಟ್ವಿಟರ್(ಎಕ್ಸ್)ನಲ್ಲಿ  ಹಂಚಿಕೊಂಡಿರುವ MEMRI ಟಿ.ವಿ.ಯ ತುಣುಕನ್ನೇ ಬಹುತೇಕ ಎಲ್ಲವೂ ಹಂಚಿಕೊಂಡಿವೆ. ಇದೇ ಸುದ್ದಿಯನ್ನು ಇಸ್ರೇಲ್‌ನ ‘ದ  ಜೆರುಸಲೇಂ ಪೋಸ್ಟ್’ ಪತ್ರಿಕೆಯು Israel is only the first target: Warns Hamas commander ಎಂಬ ಶೀರ್ಷಿಕೆಯಲ್ಲಿ ಅಕ್ಟೋಬರ್ 9ರಂದು ಪ್ರಕಟಿಸಿದೆ. ಇದೇವೇಳೆ, ಇದೇ ಸುದ್ದಿಯ ಸುತ್ತ ಇಂಗ್ಲೆಂಡಿನ ಡೈಲಿ ಮೇಲ್ ಪತ್ರಿಕೆಯು  ಅಕ್ಟೋಬರ್ 10ರಂದು ವರದಿ ಪ್ರಕಟಿಸಿದ್ದು, ಹಮಾಸ್ ನಾಯಕ ಮುಹಮ್ಮದ್ ಅಲ್ ಜಹರ್ 2021 ಡಿಸೆಂಬರ್‌ನಲ್ಲಿ  ಬಿಡುಗಡೆಗೊಳಿಸಿದ್ದ ವೀಡಿಯೋದಲ್ಲಿ ಈ ಮಾತುಗಳನ್ನು ಆಡಿರುವುದಾಗಿ ವಿವರಿಸಿದೆ. (Israel is only the first target: Warns Hamas commander is newly resurfaced video). ಅಂದಹಾಗೆ, ಅರಬಿ ಭಾಷೆಯಲ್ಲಿರುವ ಆ ವೀಡಿಯೋದಲ್ಲಿರುವುದು ಇಷ್ಟು-

510 ದಶಲಕ್ಷ  ಚದರ ಕಿ.ಮೀ. ವಿಸ್ತಾರವುಳ್ಳ ಭೂಮಿಯಲ್ಲಿ ಅನ್ಯಾಯ, ದಬ್ಬಾಳಿಕೆ, ನರಮೇಧ ಸಹಿತ ಯಾವ ಅನ್ಯಾಯಗಳೂ ಇಲ್ಲದ  ಒಂದು ದೇಶ ನಿರ್ಮಾಣವಾಗಲಿದೆ. ಫೆಲೆಸ್ತೀನ್, ಲೆಬನಾನ್, ಸಿರಿಯಾ, ಇರಾಕ್ ಮುಂತಾದ ರಾಷ್ಟ್ರಗಳ ವಿರುದ್ಧ ಈಗ ನಡೆಯುತ್ತಿರುವ  ಅಕ್ರಮಗಳು ಕೊನೆಗೊಳ್ಳಲಿವೆ...

ಅಲ್ಲದೇ,

ಈ ವೀಡಿಯೋವನ್ನು ಮೆಮರಿ ಟಿ.ವಿ. ಪ್ರಸಾರ ಮಾಡಿದ ಕೆಲವೇ ಗಂಟೆಗಳೊಳಗೆ ಇಸ್ರೇಲ್ ಪ್ರಧಾನಿ ಪ್ರತಿಕ್ರಿಯೆ ನೀಡುತ್ತಾರೆ. ಅದು  ಹೀಗಿದೆ-

‘ಹಮಾಸ್ ಅಂದರೆ ಐಸಿಸ್ (ದಾಯಿಶ್) ಆಗಿದೆ ಮತ್ತು ಪ್ರಪಂಚವು ಐಸಿಸ್ ಅನ್ನು ನಾಶ ಮಾಡಿದಂತೆ ನಾವೂ ಅವರನ್ನು ನಾಶ  ಮಾಡುತ್ತೇವೆ.’

ಅಷ್ಟಕ್ಕೂ,

ಈ ಮುಹಮ್ಮದ್ ಅಲ್ ಜಹರ್ ಹಮಾಸ್‌ನ ಕಮಾಂಡರ್ ಅಲ್ಲ. ಹಮಾಸ್‌ನ ರಾಜಕೀಯ ವ್ಯವಹಾರ ಸಮಿತಿ ಸದಸ್ಯ. ಅಲ್ಲದೇ,  ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿ ಮತ್ತು ಆ ಬಳಿಕ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ  ಮಾಡಲಾದ ವೀಡಿಯೋ ಇದಲ್ಲ. ಲಂಡನ್ನಿನ ಡೈಲಿ ಮೇಲ್ ವಿವರಿಸಿದಂತೆ, ಒಂದು ವರ್ಷದ ಹಿಂದಿನ ವೀಡಿಯೋ. ಆದರೆ ಈ ಸು ದ್ದಿಯನ್ನು ಬಿತ್ತರಿಸಿದ ಭಾರತದ ಯಾವ ಮಾಧ್ಯಮಗಳು ಕೂಡಾ ಈ ಸತ್ಯವನ್ನು ಹೇಳಿಯೇ ಇಲ್ಲ. ಮತ್ತು ಜೆರುಸಲೇಂ ಪೋಸ್ಟ್ ಸಹಿತ  ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳೂ ಈ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಟ್ಟಿವೆ ಮತ್ತು ಅಕ್ಟೋಬರ್ 7ರ ನಂತರದ ವೀಡಿಯೋ  ಎಂಬಂತೆಯೇ ಬಿಂಬಿಸಿವೆ. ಈ ವೀಡಿಯೋ ಪ್ರಸಾರವಾದ ಮರುಕ್ಷಣವೇ ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ  ನೋಡಿ. ಹಮಾಸನ್ನು ಅವರು ಐಸಿಸ್‌ಗೆ ಹೋಲಿಸುತ್ತಾರೆ. ಅದರಂತೆ ಭಯೋತ್ಪಾದನೆ ನಡೆಸುವ ಮತ್ತು ಜಗತ್ತನ್ನು  ಇಸ್ಲಾಮಯಗೊಳಿಸುವ ಉದ್ದೇಶವನ್ನು ಈ ಹಮಾಸ್ ಹೊಂದಿದೆ ಎಂಬಂತೆ ಹೇಳಿಕೆ ಕೊಡುತ್ತಾರೆ. ಹಾಗಂತ,

ಈ ವೀಡಿಯೋದ ಹಿನ್ನೆಲೆ, ಅದರಲ್ಲಿರುವ ವ್ಯಕ್ತಿಯ ಸ್ಥಾನಮಾನ ಇತ್ಯಾದಿಗಳನ್ನು ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಹೇಳದೇ  ಇರುವುದಕ್ಕೆ ಅವುಗಳನ್ನು ಸಂಪೂರ್ಣ ಕಟಕಟೆಯಲ್ಲಿ ನಿಲ್ಲಿಸುವಂತೆಯೂ ಇಲ್ಲ. ಇಂಥ ಸುದ್ದಿಗಳನ್ನು ಉತ್ಪಾದನೆ ಮಾಡಿ ಹಂಚುವುದರಲ್ಲಿ  MEMRI ಅಥವಾ ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಶನ್ ಕುಖ್ಯಾತಿ ಯನ್ನು ಪಡೆದಿದೆ. 1997 ಡಿಸೆಂಬರ್ 1ರಂದು  ಅಮೇರಿಕದ ವಾಷಿಂಗ್ಟನ್‌ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಇಗಲ್  ಕಾರ್ಮೆನ್ (Yigal Carmen) ಮತ್ತು ಇಸ್ರೇಲ್-ಅಮೇರಿಕನ್ ಚಿಂತಕ ಮೆರಾವ್ ವರ್ಮ್ಸೆರ್ ((Meyrav Wurmser)..  ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಸುದ್ದಿಯನ್ನು ಒದಗಿಸುವ ಹೊಣೆಯನ್ನು ಇದು ವಹಿಸಿಕೊಂಡಿದೆ. ಮುಖ್ಯವಾಗಿ, ಅರಬ್ ರಾಷ್ಟ್ರಗಳ  ಸುದ್ದಿಗಳನ್ನು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿ ಹಂಚುವುದು ಇದರ ಗುರಿ. ಆದರೆ ಇಸ್ರೇಲ್‌ನ ಪಕ್ಷಪಾತಿ ನೀತಿಗಾಗಿ ಇದು  ಸಾಕಷ್ಟು ಟೀಕೆಗೂ ಗುರಿಯಾಗಿದೆ. ಇಸ್ರೇಲ್‌ನ ಹಿತವನ್ನು ಕಾಪಾಡುವ ರೀತಿಯಲ್ಲಿ ಸುದ್ದಿಯನ್ನು ಹೆಣೆಯುವುದು ಇದರ ಗುರಿ ಎಂದು  ಹೇಳಲಾಗುತ್ತಿದೆ. ಅಲ್ ಜಹರ್ ಅವರ ವರ್ಷದ ಹಿಂದಿನ ವೀಡಿಯೋವನ್ನು ಇಸ್ರೇಲ್-ಫೆಲೆಸ್ತೀನ್ ಘರ್ಷಣೆಯ ಬೆನ್ನಿಗೆ ಜಾಗತಿಕ  ಮಾಧ್ಯಮಗಳಿಗೆ ದೊರಕುವಂತೆ ಪ್ರಸಾರ ಮಾಡಿರುವುದರಲ್ಲೂ ಮತ್ತು ಆ ವೀಡಿಯೋದ ಹಿನ್ನೆಲೆಯನ್ನು ಮುಚ್ಚಿಡುವುದರಲ್ಲೂ ಇದೇ  ಜಾಣತನವಿದೆ. ಕನ್ನಡ ಸಹಿತ ಭಾರತೀಯ ಮಾಧ್ಯಮಗಳು ಈ ಸುದ್ದಿಯನ್ನು ಸ್ವಯಂ ಉತ್ಪಾದಿಸಿದ್ದಲ್ಲ. ಅಲ್ಲಿಂದ ಕಡ ತಂದು ಪ್ರಕಟಿಸಿವೆ.  ಆದರೆ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೆ ವಿಫಲವಾಗಿವೆ. ಮುಖ್ಯವಾಗಿ, ಘರ್ಷಣೆಯಂಥ ಸನ್ನಿವೇಶದಲ್ಲಿ  ಸುಳ್ಳು ಸುದ್ದಿಗಳನ್ನು ಉತ್ಪಾದಿಸಿ ಹಂಚುವುದೂ ಒಂದು ಯುದ್ಧತಂತ್ರ. ಆದ್ದರಿಂದ, ಘರ್ಷಣೆ ನಿರತ ರಾಷ್ಟ್ರಗಳ ಸುತ್ತ ವರದಿಯಾಗುವ  ಸುದ್ದಿಗಳನ್ನು ಪ್ರಕಟಿಸುವ ಮೊದಲು ಎಲ್ಲ ಮಾಧ್ಯಮ ಸಂಸ್ಥೆಗಳೂ ಮೈಯೆಲ್ಲಾ ಕಣ್ಣಾಗಿರಬೇಕು. ಶಶಸ್ತ್ರಾಸ್ತ್ರದಿಂದ  ಮಾಡಬಹುದಾದ ಹಾನಿಗಿಂತ ಹೆಚ್ಚಿನದ್ದನ್ನು ಕೆಲವೊಮ್ಮೆ ಒಂದು ಸುಳ್ಳು ಸುದ್ದಿ ಮಾಡಲು ಸಾಧ್ಯವಿದೆ. ಅಷ್ಟಕ್ಕೂ,

ಅಲ್ ಜಹರ್ ವೀಡಿಯೋದಲ್ಲಿ ಆಘಾತಕಾರಿಯಾದದ್ದೇನೂ ಇಲ್ಲ. ಅಖಂಡ ಭಾರತ್ ಎಂಬ ಪರಿಕಲ್ಪನೆಯನ್ನು ಹೇಗೆ ಈ ದೇಶದಲ್ಲಿ  ಹೇಳಲಾಗುತ್ತೋ ಅದೇ ರೀತಿಯ ಹೇಳಿಕೆ ಅದು. ಅಲ್ ಜಹರ್ ಉಲ್ಲೇಖಿಸಿದ ಲೆಬನಾನ್, ಸಿರಿಯ, ಇರಾಕ್, ಫೆಲೆಸ್ತೀನ್‌ಗಳೆಲ್ಲ  ಒಂದಲ್ಲ ಒಂದು ರೀತಿಯಲ್ಲಿ ಸಂಘರ್ಷ ಪೀಡಿತವಾಗಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಈ ರಾಷ್ಟ್ರಗಳ ಸಾರ್ವ ಭೌಮತೆಯ ಮೇಲೆ ಹಿಡಿತ  ಸಾಧಿಸಿವೆ. ಅವುಗಳಿಂದ ಈ ದೇಶಗಳನ್ನು ವಿಮೋಚನೆಗೊಳಿಸುವುದು ಅವರ ಇಂಗಿತವಾಗಿದೆ. ಇದು ಭಯೋತ್ಪಾದನೆ ಹೇಗಾಗುತ್ತದೆ?  ಅರಬ್ ರಾಷ್ಟçಗಳನ್ನು ಅನ್ಯಾಯ ದಬ್ಬಾಳಿಕೆಯಿಂದ ವಿಮೋಚನೆಗೊಳಿಸುತ್ತೇವೆ ಅನ್ನುವುದು ಹೇಗೆ ಐಸಿಸ್ ಆಗುತ್ತದೆ? ಅಖಂಡ ಭಾರತ  ಎಂಬ ಪರಿಕಲ್ಪನೆಯಲ್ಲಿ ಕಾಣದ ಭಯೋತ್ಪಾದನೆಯು ಫೆಲೆಸ್ತೀನ್, ಲೆಬನಾನ್, ಸಿರಿಯಾವನ್ನು ಅನ್ಯರ ಹಿಡಿತದಿಂದ ಮುಕ್ತಗೊಳಿಸುವುದರಲ್ಲಿ ಹೇಗೆ ಕಾಣಲು ಸಾಧ್ಯ?

ಇನ್ನೂ ಒಂದು ಸುದ್ದಿಯಿದೆ,

1. ಹಸುಳೆಗಳನ್ನೂ ಬಿಡದ ಹೇಡಿಗಳು, ಮಕ್ಕಳ ಮಾರಣಹೋಮ: ರಾಕ್ಷಸ ಹಮಾಸ್
(ಹೊಸದಿಗಂತ ಅಕ್ಟೋಬರ್ 2023)

2. ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ 40 ಶಿಶುಗಳ ಹತ್ಯೆ
(ಕನ್ನಡ ಪ್ರಭ, ಅಕ್ಟೋಬರ್ 10, 2023)

3. 40 ಪುಟ್ಟ ಮಕ್ಕಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು: ಶವ ಕಂಡು ಕಣ್ಣೀರಿಟ್ಟ ಇಸ್ರೇಲ್ ಯೋಧರು
(ಏಶಿಯಾ ನೆಟ್ ಸುವರ್ಣ ನ್ಯೂಸ್ ಅಕ್ಟೋಬರ್ 11, 2023)

4. Israel releases photos of babies murdered, burned by Hamas Monsters
(ಇಂಡಿಯಾ ಟುಡೇ, ಅಕ್ಟೋಬರ್ 12, 2023)

5. Hamas militants killed, beheaded 40 babies and children at Israeli kibbutz
(ಟೈಮ್ಸ್ ಆಫ್ ಇಂಡಿಯಾ, ಅಕ್ಟೋಬರ್ 11, 2023)

ಇವಲ್ಲದೇ, ಲಾಸ್ ಏಂಜಲೀಸ್ ಟೈಮ್ಸ್, ಲಂಡನ್ ಟೈಮ್ಸ್, ಡೈಲಿ ಮೇಲ್ ಮುಂತಾದ ಪ್ರಮುಖ ಪತ್ರಿಕೆಗಳು ಕೂಡಾ ಈ ಸುದ್ದಿಯನ್ನು  ಒತ್ತು ಕೊಟ್ಟು ಪ್ರಕಟಿಸಿದುವು. ವಿಶೇಷ ಏನೆಂದರೆ, ಎಲ್ಲಾ ಸುದ್ದಿಗಳಲ್ಲೂ ಶಿರಚ್ಛೇದ ಎಂಬ ಪದ ಸಾಮಾನ್ಯವಾಗಿತ್ತು. ಅಷ್ಟಕ್ಕೂ, ಶಿಶುಗಳನ್ನು ತಲೆ ಕೊಯ್ದು ಕೊಲ್ಲುವುದು ಎಂಬುದು ಭಯಾನಕ, ಭೀಭತ್ಸ. ಐಸಿಸ್‌ನ ಮೇಲೆ ಮತ್ತು ಅಲ್ ಕಾಯ್ದಾದ ಮೇಲೆ ಇಂಥದ್ದೇ   ಆರೋಪವನ್ನು ಹೊರಿಸಲಾಗುತ್ತದೆ. ಮಕ್ಕಳು ಈ ಜಗತ್ತಿನಲ್ಲಿ ಕರುಣೆಯ ಪ್ರತೀಕ. ಅದರಲ್ಲೂ ಶಿಶುಗಳಂತೂ ಅಸಹಾಯಕರು. ಅವು  ಸ್ವಯಂ ರಕ್ಷಿಸಿಕೊಳ್ಳಲೂ ಅಶಕ್ತ ಮತ್ತು ಪ್ರತೀಕಾರ ತೀರಿಸಲೂ ಅಸಮರ್ಥ. ಇಂಥ ಶಿಶುಗಳ ಶಿರಚ್ಛೇದ ಮಾಡುವುದೆಂದರೆ, ಅದು  ರಾಕ್ಷಸೀಯ ವರ್ತನೆ. ನಮ್ಮ ದೇಶದಲ್ಲೇ  ಮಕ್ಕಳ ಅಪಹರಣಕಾರರು ಎಂಬ ಆರೋಪದಲ್ಲಿ ಹಲವು ಲಿಂಚಿಂಗ್  ಪ್ರಕರಣಗಳು ನಡೆದಿವೆ.  ಹತ್ಯೆಯೂ ನಡೆದಿದೆ. ಅಂದರೆ, ಮಕ್ಕಳ ಬಗ್ಗೆ ಜಗತ್ತಿನಲ್ಲಿ ಅತೀವ ಕಾಳಜಿಯಿದೆ. ಆದ್ದರಿಂದ ಈ ಶಿರಚ್ಛೇದ ಸುದ್ದಿ ಹಮಾಸ್‌ನ ವಿರುದ್ಧ  ಜಗತ್ತನ್ನೇ ಒಂದಾಗಿಸಿತು. ಅಕ್ಟೋಬರ್ 8ರಂದು ಸಿಎನ್‌ಎನ್ ಚಾನೆಲ್ ಈ ಸುದ್ದಿಯನ್ನು ಸ್ಫೋಟಿಸಿತು. ಆ ಬಳಿಕ ಬೆಚ್ಚಿಬಿದ್ದ ಜಾಗತಿಕ  ಮಾಧ್ಯಮಗಳು ಅದನ್ನು ಮುಖ್ಯ ಸುದ್ದಿಯಾಗಿ ಪ್ರಕಟಿಸಿದುವು. ಇದೇ ಸುದ್ದಿಯನ್ನು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಕೂಡಾ ಪುನರಾವರ್ತಿಸಿದರು. ಈ ಸುದ್ದಿ ಜಗತ್ತಿನಲ್ಲಿಡೀ ಸುತ್ತಿದ ನಾಲ್ಕು ದಿನಗಳ ಬಳಿಕ ಅಕ್ಟೋಬರ್ 12ರಂದು ಸಿಎನ್‌ಎನ್ ಪತ್ರಕರ್ತೆ ಸಾರಾ  ಸಿಡ್ನರ್ ಕ್ಷಮೆ ಯಾಚಿಸಿದರು. ಇಸ್ರೇಲ್ ಒದಗಿಸಿದ ಸುದ್ದಿಯನ್ನು ಪರಿಶೀಲಿಸದೇ ಹಂಚಿಕೊAಡಿದ್ದೆ, ಆದರೆ ಆ ಸುದ್ದಿಯನ್ನು ದೃಢ ಪಡಿಸಲು ಇಸ್ರೇಲ್ ವಿಫಲವಾಗಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ... ಎಂದಾಕೆ ಟ್ವೀಟ್ ಮಾಡಿದರು.
ಹಾಗಿದ್ದರೆ,

ಈ ಸುದ್ದಿಯನ್ನು ಉತ್ಪಾದಿಸಿದ್ದು ಯಾರು? ಯಾಕೆ? ಶಿಶುಗಳ ಶಿರಚ್ಛೇದ ಎಂಬ ಸುದ್ದಿಯನ್ನೇ ಯಾಕೆ ಅವರು ಉತ್ಪಾದಿಸಿದರು? ಇದ ನ್ನು ಮರುಪರಿಶೀಲಿಸದೆಯೇ ಎಲ್ಲೆಡೆ ಹಂಚಿಕೊಳ್ಳುವAಥ ವಾತಾವರಣ ಸೃಷ್ಟಿ ಮಾಡಿದವರು ಯಾರು? ಸುಳ್ಳು ಸುದ್ದಿ ತಲುಪಿದ ಎಷ್ಟು  ಮಂದಿಗೆ ಆ ಬಳಿಕದ ಸತ್ಯಸುದ್ದಿ ತಲುಪಿರಬಹುದು? ಹಮಾಸ್ ಅಂದರೆ ಶಿಶುಗಳನ್ನು ಬಿಡದೆ ಶಿರಚ್ಛೇದನ ಮಾಡುವ ಪಾಪಿಗಳು  ಎಂದು ಈಗಲೂ ನಂಬಿರುವವರ ಸಂಖ್ಯೆ ಎಷ್ಟಿರಬಹುದು? ಹೀಗೆ ಆಗಬೇಕೆಂದೇ ಈ ಸುದ್ದಿಯನ್ನು ಸೃಷ್ಟಿಸಲಾಗಿತ್ತೇ? ಅಂದಹಾಗೆ,

ರಣಾಂಗಣದಲ್ಲಿ ನಡೆಯುವ ಯುದ್ಧಕ್ಕಿಂತ ಭೀಕರ ಯುದ್ಧವನ್ನು ಇವತ್ತು ಸುದ್ದಿ ಮನೆಗಳಲ್ಲಿ ಉತ್ಪಾದಿಸಲಾಗುತ್ತದೆ. ಆದ್ದರಿಂದ ಓದುಗರು  ಸದಾ ಜಾಗೃತರಾಗಿರಬೇಕು.

Saturday, November 18, 2023

ಆ ಹಿರಿಯರು ಎತ್ತಿ ಹಿಡಿದಿರುವ ಭಿತ್ತಿಪತ್ರವೇ ಎಲ್ಲವನ್ನೂ ಹೇಳುತ್ತಿದೆ...






You take my water
Burn my olive trees
Destroy my house
Take my job
Steal my land
Imprison my Father
Kill my Mother
Bomb my country
Starve us all
Humiliate us all
But... I am to blame
I shot a rocket back

‘ಆಪರೇಶನ್ ಪಿಲ್ಲರ್ ಆಫ್ ಡಿಫೆನ್ಸ್’ ಎಂಬ ಹೆಸರಲ್ಲಿ 2012ರಲ್ಲಿ ಗಾಝಾದ ಮೇಲೆ ಇಸ್ರೇಲ್ ವಾಯುದಾಳಿ ಆರಂಭಿಸಿದಾಗ ಮತ್ತು  ನೂರಾರು ಮಂದಿಯನ್ನು ಸಾಯಿಸಿದಾಗ ಗಾಝಾದ ಓರ್ವ ಹಿರಿಯ ವ್ಯಕ್ತಿ ಇಂಥದ್ದೊಂದು  ಭಿತ್ತಿಪತ್ರವನ್ನು ಎತ್ತಿ ಹಿಡಿದು  ಪ್ರತಿಭಟಿಸಿದ್ದರು. ಕೆಲವೊಂದಿಷ್ಟು ಪತ್ರಿಕೆಗಳು ಈ ಭಿತ್ತಿಪತ್ರಕ್ಕೆ ಮಹತ್ವ ಕೊಟ್ಟು ಪ್ರಕಟಿಸಿದ್ದುವು. ಅದರಲ್ಲಿ, ಭಾರತದ ಫ್ರಂಟ್‌ಲೈನ್ ಪತ್ರಿಕೆ  ಕೂಡಾ ಒಂದು. ಈ ಭಿತ್ತಿಪತ್ರವನ್ನು ಸಂಕ್ಷಿಪ್ತವಾಗಿ ಹೀಗೆ ಅನುವಾದಿಸಬಹುದು:

‘ನೀವು ನನ್ನ ನೀರನ್ನು ಕಸಿದಿರಿ, ನನ್ನ ಆಲಿವ್ ಮರಗಳನ್ನು ಸುಟ್ಟಿರಿ, ನನ್ನ ಮನೆಯನ್ನು ಧ್ವಂಸ ಮಾಡಿದಿರಿ, ನನ್ನ ಕೆಲಸವನ್ನು  ಕಿತ್ತುಕೊಂಡಿರಿ. ನನ್ನ ಭೂಮಿಯನ್ನು ಲಪಟಾಯಿಸಿದಿರಿ, ನನ್ನ ತಂದೆಯನ್ನು ಜೈಲಲ್ಲಿಟ್ಟಿರಿ, ನನ್ನ ತಾಯಿಯನ್ನು ಕೊಂದಿರಿ, ನನ್ನ ದೇಶಕ್ಕೆ  ಬಾಂಬ್ ಹಾಕಿದಿರಿ, ನಮ್ಮನ್ನೆಲ್ಲ ಹಸಿವಿಗೆ ದೂಡಿದಿರಿ, ನಮ್ಮನ್ನು ಅವಮಾನಿಸಿದಿರಿ... ಹೀಗಿದ್ದೂ ಈಗ ನಾನೇ ಅಪರಾಧಿ. ಏಕೆಂದರೆ,  ನಿಮ್ಮೆಡೆಗೆ ನಾನೊಂದು ರಾಕೆಟ್ ಹಾರಿಸಿದೆ..’

ಬಹುಶಃ, 1948 ಮೇ 15ರಿಂದ 2023ರ ಈ ನವೆಂಬರ್ ವರೆಗೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಏನೆಲ್ಲ ಘಟಿಸಿವೆಯೋ  ಅವೆಲ್ಲವನ್ನೂ ಈ ಒಂದು ಭಿತ್ತಿಪತ್ರಕ್ಕಿಂತ ಸಮರ್ಥವಾಗಿ ಇನ್ನಾವುದೂ ಕಟ್ಟಿಕೊಡಲಾರದು ಅನ್ನಿಸುತ್ತದೆ. ಅಮೇರಿಕದ ಬೆಂಬಲ ಮತ್ತು  ವಿಶ್ವಸಂಸ್ಥೆಯ ಒತ್ತಾಸೆಯೊಂದಿಗೆ 1948 ಮೇ 15ರಂದು ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾದಾಗ ಅಲ್ಲಿ ಕೇವಲ 8  ಲಕ್ಷದ 6 ಸಾವಿರ ಮಂದಿ ಯಹೂದಿಯರಷ್ಟೇ ಇದ್ದರು. ಫೆಲೆಸ್ತೀನ್ ಮಣ್ಣಿನ 55% ಭೂಭಾಗವಷ್ಟೇ ಇಸ್ರೇಲ್‌ನದ್ದಾಗಿತ್ತು. ಇವತ್ತು  ಇಸ್ರೇಲ್‌ನಲ್ಲಿ ಸುಮಾರು 90 ಲಕ್ಷ ಮಂದಿ ಯಹೂದಿಯರಿದ್ದಾರೆ ಮತ್ತು ಫೆಲೆಸ್ತೀನ್‌ನ 95% ಭೂಮಿ ಕೂಡಾ ಇಸ್ರೇಲ್‌ನ ವಶದಲ್ಲಿದೆ.  ಇವತ್ತು, ಜಾಗತಿಕವಾಗಿ ಚದುರಿ ಹೋಗಿರುವ ಯಹೂದಿಯರನ್ನು ಇಸ್ರೇಲ್ ಮುಕ್ತವಾಗಿ ತನ್ನಲ್ಲಿಗೆ ಸ್ವಾಗತಿಸುತ್ತಿದೆಯಲ್ಲದೇ, ಅವರ ವಸತಿಗಾಗಿ  ಫೆಲೆಸ್ತೀನಿ ಭೂಮಿಯನ್ನು ಇಂಚಿಂಚೇ  ಕಸಿದುಕೊಳ್ಳುತ್ತಿದೆ ಮತ್ತು ಅಲ್ಲಿರುವ ಫೆಲೆಸ್ತೀನಿಯರನ್ನು ಬಲವಂತದಿಂದ  ಒಕ್ಕಲೆಬ್ಬಿಸುತ್ತಿದೆ.  ಹಾಗಂತ,

ಇವೇನೂ ರಹಸ್ಯವಾಗಿ ನಡೆಯುತ್ತಿಲ್ಲ. ಇಂಥ ಅಕ್ರಮ ವಸತಿ ನಿರ್ಮಾಣದ ವಿರುದ್ಧ ವಿಶ್ವಸಂಸ್ಥೆಯದ್ದೇ  ಒಂದಕ್ಕಿಂತ  ಹೆಚ್ಚು ನಿರ್ಣಯಗಳು  ಅಂಗೀಕಾರಗೊಂಡಿವೆ. ಅದರಲ್ಲಿ ಗೋಡೆ ನಿರ್ಮಾಣವನ್ನು ಖಂಡಿಸಿ ಕೈಗೊಳ್ಳಲಾದ ನಿರ್ಣಯವೂ ಒಂದು. ಫೆಲೆಸ್ತೀನಿಯರನ್ನು ಫೆಲೆಸ್ತೀನಿಯರಿಂದಲೇ ವಿಭಜಿಸುವ ಬೃಹತ್ ಗೋಡೆ ನಿರ್ಮಾಣಕ್ಕೆ ಇಸ್ರೇಲ್ 2002ರಲ್ಲಿ ಕೈಹಾಕಿತು. 704 ಕಿ. ಮೀಟರ್ ಉದ್ದದ ಈ  ಗೋಡೆಯು 2006ರಲ್ಲಿ ಪೂರ್ಣಗೊಂಡಾಗ ಪಶ್ಚಿಮ ದಂಡೆಯ 25 ಸಾವಿರ ಫೆಲೆಸ್ತೀನಿಯರು ಉಳಿದ ಭಾಗದ ಫೆಲೆಸ್ತೀನಿಯರ ಸಂಪರ್ಕವನ್ನು ಕಳೆದುಕೊಂಡರು. ಈ ಗೋಡೆಯ 15% ಭಾಗ ಇಸ್ರೇಲ್‌ನಲ್ಲಿದ್ದರೆ ಉಳಿದ 85% ಭಾಗವೂ ಫೆಲೆಸ್ತೀನ್‌ನ ಪಶ್ಚಿಮ ದಂಡೆಯನ್ನು ಹಾದು ಹೋಗಿದೆ. ಇಷ್ಟಿದ್ದೂ, ಈ ಗೋಡೆಯನ್ನು ಅಲುಗಾಡಿಸುವುದಕ್ಕೆ ವಿಶ್ವಸಂಸ್ಥೆಯ ಯಾವ ನಿರ್ಣಯಕ್ಕೂ ಸಾಧ್ಯವಾಗಿಲ್ಲ.  ಇದು ವರ್ಣಭೇದದ ಗೋಡೆ ಎಂಬ ವಿಶ್ವಸಂಸ್ಥೆಯ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತೂ ದಕ್ಕಿಲ್ಲ. ನಿಜವಾಗಿ,

1948 ಮೇ 15ರಂದು ಇಸ್ರೇಲ್ ರಾಷ್ಟ್ರ  ಅಧಿಕೃತವಾಗಿ ಘೋಷಣೆಯಾದದ್ದೇ  ರಕ್ತದೋಕುಳಿಯ ಮೇಲೆ. ಈ ಘೋಷಣೆಯ ಮೂರು  ವಾರಗಳ ಮೊದಲು, 1948 ಎಪ್ರಿಲ್ 9ರಂದು ಇರ್ಗುನ್ ಮತ್ತು ಸ್ಟೆರ್ನ್ ಎಂಬ ಝಿಯೋನಿಸ್ಟ್ ಬಂದೂಕುಧಾರಿ ಗುಂಪು ಪಶ್ಚಿಮ  ಜೆರುಸಲೇಮ್‌ನಲ್ಲಿರುವ ಡೆರ್ ಯಾಸೀನ್‌ಗೆ ನುಗ್ಗುತ್ತದೆ. ಇಲ್ಲಿ ವಾಸಿಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಗುಂಡು ಹಾರಿಸಿ ನರಮೇಧ  ನಡೆಸುತ್ತದೆ. ಕಲ್ಲು ಕ್ವಾರೆಯಲ್ಲಿ ದುಡಿಯುತ್ತಿದ್ದ ಮತ್ತು ಕಲ್ಲು ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದ ಬಡಪಾಯಿ ಫೆಲೆಸ್ತೀನಿಯರು  ಇಂಥದ್ದೊಂದು  ದಾಳಿಯನ್ನು ನಿರೀಕ್ಷಿಸಿಯೇ ಇರಲಿಲ್ಲ. ಈ ದಾಳಿಯಲ್ಲಿ 20ಕ್ಕಿಂತ ಅಧಿಕ ಫೆಲೆಸ್ತೀನಿಯರು ಹತ್ಯೆಗೀಡಾಗುತ್ತಾರೆ ಮತ್ತು  ಸಾವಿರಾರು ಮಂದಿ ಪಲಾಯನ ಮಾಡುತ್ತಾರೆ-(The Deir Yassin massacare: Why still matters 75 years later: 9, April 2023). ಫೆಲೆಸ್ತೀನಿಯರನ್ನು ಬಲವಂತದಿಂದ  ಒಕ್ಕಲೆಬ್ಬಿಸಿ ಆ ಭೂಮಿಯನ್ನು ಇಸ್ರೇಲ್ ಭೂಪಟಕ್ಕೆ  ಸೇರಿಸುವುದೇ ಈ ದಾಳಿಯ ಉದ್ದೇಶವಾಗಿತ್ತು. ಈ ನರಮೇಧಕ್ಕೆ ನೇತೃತ್ವ ನೀಡಿದವರೇ ಮೆನಾಚಿನ್ ಬೆಗಿನ್. ಇವರು ಆ ಬಳಿಕ ಇಸ್ರೇಲಿನ ಪ್ರಧಾನಿಯಾಗುತ್ತಾರೆ. ಮಾತ್ರವಲ್ಲ, ಶಾಂತಿ ಒಪ್ಪಂದದ ಹೆಸರಲ್ಲಿ ಈಜಿಪ್ಟ್ ಅಧ್ಯಕ್ಷ ಸಾದಾತ್‌ರ ಜೊತೆ ನೋಬೆಲ್ ಪ್ರಶಸ್ತಿ  ಹಂಚಿಕೊಳ್ಳುತ್ತಾರೆ. ಆ ಬಳಿಕ,

1982ರಲ್ಲಿ ಇತಿಹಾಸ ಕಂಡ ಅತಿದೊಡ್ಡ ನರಮೇಧಕ್ಕೆ ಜಗತ್ತು ಸಾಕ್ಷಿಯಾಗುತ್ತದೆ. ಲೆಬನಾನ್‌ನ ಶಬ್ರ ಮತ್ತು ಶತೀಲದ ನಿರಾಶ್ರಿತ ಕೇಂದ್ರಗಳ  ಮೇಲೆ ಇಸ್ರೇಲ್ ಸೇನೆ ಬೆಂಬಲಿತ ಶಸ್ತ್ರ ಸಜ್ಜಿತ ಗುಂಪು ಗಳು ಭೀಕರ ದಾಳಿ ಮಾಡುತ್ತವೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ  ಮೂರು ಯುದ್ಧಗಳಿಂದಾಗಿ ಮತ್ತು ಇಸ್ರೇಲ್ ಭೂ ಒತ್ತುವರಿಯಿಂದಾಗಿ ನಿರಾಶ್ರಿತರಾದ ಫೆಲೆಸ್ತೀನಿಯರು ಲೆಬನಾನ್‌ನ ಈ ನಿರಾಶ್ರಿತ  ಕೇಂದ್ರಗಳಲ್ಲಿದ್ದರು. ಇಸ್ರೇಲ್ ಅಧ್ಯಕ್ಷ  ಇಝಾಕ್ ರಬಿನ್‌ರ ಹತ್ಯೆಯ ನೆಪದಲ್ಲಿ ನಡೆದ ಈ ಕ್ರೌರ್ಯಕ್ಕೆ 3,500 ಮಂದಿ ನಿರಾಶ್ರಿತರು  ಹತ್ಯೆಗೀಡಾದರು. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆಯೇ ಅಧಿಕ. ಆ ಬಳಿಕದಿಂದ ಈ 2023ರ ನವೆಂಬರ್ ವರೆಗೆ  ಫೆಲೆಸ್ತೀನಿನ ಮೇಲೆ ಇಸ್ರೇಲ್ ಹತ್ತು-ಹಲವು ಬಾರಿ ವೈಮಾನಿಕ ಮತ್ತು ಭೂದಾಳಿಯನ್ನು ನಡೆಸಿದೆ. ಸಾವಿರಕ್ಕೂ ಮಿಕ್ಕಿ ಫೆಲೆಸ್ತೀನಿಯರು  ಈ ದಾಳಿಗೆ ಬಲಿಯಾಗಿದ್ದಾರೆ. ಅಸಂಖ್ಯ ಮಂದಿ ಗಾಯಗೊಂಡಿದ್ದಾರೆ. ಅಂದಹಾಗೆ,

ಫೆಲೆಸ್ತೀನ್‌ನಿಂದ  ಹಾರಿ ಬರುವ ರಾಕೆಟ್‌ಗಳನ್ನೇ ಈ ಎಲ್ಲ ಸಂದರ್ಭಗಳಲ್ಲೂ ತನ್ನ ದಾಳಿಗೆ ಇಸ್ರೇಲ್ ನೆಪವಾಗಿ ಬಳಸಿ ಕೊಳ್ಳುತ್ತಿದೆ.  ಆದರೆ, ಅಕ್ರಮವಾಗಿ ರಾಷ್ಟ್ರ  ಸ್ಥಾಪನೆ ಮಾಡಿದ್ದಲ್ಲದೇ ತನ್ನ ಸುತ್ತಲಿನ ಜನತೆಯನ್ನು ಕುಡಿಯುವ ನೀರಿಗೂ ಅಂಗಲಾಚುವಂತೆ  ಮಾಡಿ,  ತುತ್ತು ಅನ್ನಕ್ಕೂ ಕೈಯೊಡ್ಡುವಂತೆ ನಿರ್ಬಂಧಿಸಿ, ಅವರಿಂದ ಸರ್ವ ಸ್ವಾತಂತ್ರ‍್ಯವನ್ನೂ ಕಸಿದುಕೊಂಡು ಮತ್ತು ಅವರ ಭೂಮಿಯನ್ನು ನಿತ್ಯ  ಕಸಿದುಕೊಳ್ಳುತ್ತಾ ಹಿಂಸೆಗೆ ಪ್ರಚೋದಿಸುವ ಮತ್ತು ಪ್ರತೀಕಾರ ತೀರಿಸುವಂತೆ ರೊಚ್ಚಿಗೆಬ್ಬಿಸುವ ಇಸ್ರೇಲ್‌ನ ನೀತಿ ಎಲ್ಲೂ ಚರ್ಚೆಗೆ  ಒಳಗಾಗುತ್ತಿಲ್ಲ. ಅವರ ಬದಲು ದುರ್ಬಲ ರಾಕೆಟ್ಟೇ ಸಮೂಹ ನಾಶಕವೆಂಬಂತೆ  ಬಿಂಬಿತವಾಗುತ್ತಿದೆ. ಇದೇವೇಳೆ,

ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಕಗ್ಗೊಲೆಯ ವಿರುದ್ಧ ಪ್ರಮುಖ ಮಾಧ್ಯಮಗಳು ಮತ್ತು ಜಾಗತಿಕ ನಾಯಕರು  ವ್ಯಕ್ತಪಡಿಸಿದ ಆಕ್ರೋಶ, ಆಘಾತ ಮತ್ತು ಪ್ರತೀಕಾರ ಭಾವದ ಸಣ್ಣದೊಂದು ಅಂಶವನ್ನಾದರೂ ಇಸ್ರೇಲ್ ಈ 75 ವರ್ಷಗಳಲ್ಲಿ ಎಸಗಿರುವ  ಕಗ್ಗೊಲೆ ಮತ್ತು ಕ್ರೌರ್ಯಗಳ ವಿರುದ್ಧ ಯಾಕೆ ವ್ಯಕ್ತಪಡಿಸುತ್ತಿಲ್ಲ ಎಂಬ ಪ್ರಶ್ನೆಗೂ ಮಹತ್ವವಿದೆ. ಅಥವಾ ಇಸ್ರೇಲ್ ಕಡೆಯಿಂದ ಯಾವ  ಅನ್ಯಾಯವೂ ನಡೆಯುತ್ತಿಲ್ಲವೇ, ಫೆಲೆಸ್ತೀನಿ ಹೋರಾಟಗಾರರು ಸುಳ್ಳು ಸುಳ್ಳೇ ಇಸ್ರೇಲನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆಯೇ ಎಂಬ  ಅನುಮಾನಕ್ಕೂ ಅವಕಾಶ ಇದೆ. ನಿಜವಾಗಿ, ಇಸ್ರೇಲ್ ಸಂತ್ರಸ್ತ ರಾಷ್ಟ್ರವಾಗಿಯೂ ಫೆಲೆಸ್ತೀನಿಯರು ಭಯೋತ್ಪಾದಕರಾಗಿಯೂ  ಬಿಂಬಿತವಾಗಿರುವುದರ ಹಿಂದೆ ಬಲವಾದ ಒಂದು ಕಾರಣ ಇದೆ. ಅದುವೇ,

MEMRI

2001 ಸೆಪ್ಟೆಂಬರ್ 11ರಂದು (9/11) ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದ ಬೆನ್ನಿಗೇ ವೀಡಿಯೋ ಒಂದು ವೈರಲ್  ಆಗಿತ್ತು. ಅಮೇರಿಕ, ಬ್ರಿಟನ್, ಫ್ರಾನ್ಸ್ ಸಹಿತ ಯುರೋಪಿಯನ್ ರಾಷ್ಟ್ರಗಳು ಮತ್ತು ಅರಬ್ ರಾಷ್ಟ್ರಗಳ ಟಿ.ವಿ. ಚಾನೆಲ್ ಗಳು ಕೂಡಾ  ಆ ವೀಡಿಯೋವನ್ನು ಪ್ರಸಾರ ಮಾಡಿದ್ದುವು. ಭಾರತೀಯ ಮಾಧ್ಯಮಗಳಲ್ಲೂ ಆ ವೀಡಿಯೋ ಸುದ್ದಿಯಾಗಿತ್ತು. ‘ಅವಳಿ ಕಟ್ಟಡದ ಮೇಲಿನ ದಾಳಿಯನ್ನು ಸಂಭ್ರಮಿಸುತ್ತಿರುವ ಫೆಲೆಸ್ತೀನಿಯರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ವೀಡಿಯೋದಿಂದ ಕೋಟ್ಯಂತರ  ವಿರೋಧಿಗಳನ್ನು ಫೆಲೆಸ್ತೀನಿಯರು ಗಿಟ್ಟಿಸಿಕೊಂಡರು. ಅರಬ್ ರಾಷ್ಟ್ರಗಳ ವಿರೋಧಕ್ಕೂ ಫೆಲೆಸ್ತೀನಿಯರು ತುತ್ತಾದರು. ಈಗಿನಂತೆ  ಸೋಶಿಯಲ್ ಮೀಡಿಯಾ ಬಲಶಾಲಿಯಾಗಿ ಲ್ಲದ ಆ ಕಾಲದಲ್ಲಿ ಸತ್ಯಸುದ್ದಿ ಬಹಿರಂಗವಾದಾಗ ಬಹುತೇಕರೂ ಆ ವೀಡಿಯೋವನ್ನೇ  ಮರೆತಿದ್ದರು. ನಿಜವಾಗಿ, 1990ರ ಗಲ್ಫ್ ಯುದ್ಧದ ವೇಳೆ ಸದ್ದಾಮ್ ಹುಸೇನ್‌ರನ್ನು ಬೆಂಬಲಿಸಿ ಫೆಲೆಸ್ತೀನಿಯರು ನಡೆಸಿದ ಸಂಭ್ರಮದ  ವೀಡಿಯೋ ಅದಾಗಿತ್ತು. ಅಷ್ಟಕ್ಕೂ,

ಅವಳಿ ಗೋಪುರ ಧ್ವಂಸಕ್ಕೆ ಸಂಬಂಧವೇ ಇಲ್ಲದ ಈ ವೀಡಿಯೋವನ್ನು ಮಾಧ್ಯಮಗಳಿಗೆ ಹಂಚಿದ್ದು ಯಾರು, ಜಗತ್ತಿನ ಪ್ರಮುಖ  ಮಾಧ್ಯಮಗಳು ಆ ವೀಡಿಯೋವನ್ನು ಪರಾಂಬರಿಸದೇ ಪ್ರಸಾರ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.  ಬಹುಶಃ ಅದರ ಹಿಂದಿರುವುದೇ ಈ,

ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್‌ಸ್ಟಿಟ್ಯೂಶನ್ ಅಥವಾ MEMRI ಎಂಬ ಮಾಧ್ಯಮ ಸಂಸ್ಥೆ.

1997 ಡಿಸೆಂಬರ್ 1ರಂದು ಅಮೇರಿಕದ ವಾಷಿಂಗ್ಟನ್‌ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ  ಸಂಸ್ಥೆಯ ಮಾಜಿ ಅಧಿಕಾರಿ ಇಗಲ್ ಕಾರ್ಮೋನ್ (Yigal Carmen) ಮತ್ತು ಇಸ್ರೇಲಿ-ಅಮೇರಿಕನ್ ಚಿಂತಕ ಮೆರಾವ್  ವರ್ಮ್ಸೆರ್ (Meyrav Wurmser). ತುರ್ಕಿ, ಯಮನ್, ಲೆಬನಾನ್, ಸಿರಿಯಾ ಸಹಿತ ಅರಬ್ ರಾಷ್ಟ್ರಗಳ ಸುದ್ದಿಗಳನ್ನು ಇಂಗ್ಲಿಷ್  ಮತ್ತಿತರ ಭಾಷೆಗಳಿಗೆ ಭಾಷಾಂತರಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ  MEMRIಯು, ಮುಂಚೂಣಿ ಮಾಧ್ಯಮಗಳ ಮೇಲೆ  ಗಾಢ ಪ್ರಭಾವವನ್ನು ಹೊಂದಿದೆ. ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಯಾವುದೇ ಹಣವನ್ನು ಪಡೆಯದೇ ಸುದ್ದಿಯನ್ನು ಒದಗಿಸುವ ಈ  ಸಂಸ್ಥೆಯು ಅರಬ್ ಮತ್ತು ಇಸ್ರೇಲ್ ವಿರೋಧಿ ಸುದ್ದಿಗಳನ್ನು ಉತ್ಪಾದಿಸುತ್ತಿದೆ ಎಂಬ ಆರೋಪ ಪ್ರಬಲವಾಗಿಯೇ ಇದೆ. ಇಸ್ರೇಲ್‌ನ  ಹಿನ್ನೆಲೆ, ಭೂ ವಿಸ್ತರಣೆ, ಕ್ರೌರ್ಯಗಳು ಸಹಿತ ಯಾವುದೂ ಚರ್ಚೆಯಾಗದಂತೆ ನೋಡಿಕೊಳ್ಳುವುದು ಮತ್ತು ಫೆಲೆಸ್ತೀನಿಯರ ವಿಮೋಚ ನಾ ಹೋರಾಟವನ್ನು ಭಯೋತ್ಪಾದನೆಯಂತೆ ಬಿಂಬಿಸುವಲ್ಲಿ ಇದರ ಪಾತ್ರ ಮಹತ್ವದ್ದು ಎಂದು ಹೇಳಲಾಗುತ್ತಿದೆ. ಹಮಾಸ್  ಹೋರಾಟಗಾರರು 40 ಇಸ್ರೇಲಿ ಮಕ್ಕಳ ಶಿರಚ್ಛೇದನ ನಡೆಸಿದ್ದಾರೆ ಎಂಬ ಸುದ್ದಿ ಮೊದಲು ಉತ್ಪಾದನೆಯಾದದ್ದು ಎಲ್ಲಿ ಎಂಬ ಪತ್ತೆ  ಕಾರ್ಯಕ್ಕೆ ಯಾರಾದರೂ ಇಳಿದರೆ, ಅವರು ಈ  MEMRI ಕಚೇರಿಗೆ ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಮೊದಲು ಈ ಸುದ್ದಿಯನ್ನು  ಹಂಚಿಕೊಂಡದ್ದು ಇಸ್ರೇಲ್. ಅದೇ ಸುದ್ದಿಯನ್ನು ಆ ಬಳಿಕ ಸಿಎನ್‌ಎನ್ ನ್ಯೂಸ್ ಚಾನೆಲ್ ಪ್ರಸಾರ ಮಾಡಿತು. ಆ ಬಳಿಕ ಅಮೇರಿಕದ  ಅಧ್ಯಕ್ಷ ಜೊ ಬೈಡೆನ್ ಆ ಸುದ್ದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಇದಾಗಿ ಐದು ದಿನಗಳ ಬಳಿಕ ಈ ಸುದ್ದಿ ಸುಳ್ಳು  ಎಂದು ಸಿಎನ್‌ಎನ್ ಪತ್ರಕರ್ತೆ ಒಪ್ಪಿಕೊಂಡರಲ್ಲದೇ, ಕ್ಷಮೆ ಯಾಚಿಸಿದರು.

ಅಂದಹಾಗೆ,

ಇಸ್ರೇಲ್ ರಾಷ್ಟ್ರ ಪರಿಕಲ್ಪನೆಗೂ 1893ರಲ್ಲಿ ಫ್ರಾನ್ಸ್ ನಲ್ಲಿ  ನಡೆದ ಘಟನೆಗೂ ಸಂಬಂಧ  ಇದೆ.

ಆಲ್ಫ್ರೆಡ್ ಡ್ರೆಫಸ್ (Alfred Dreyfus) ಎಂಬ ಸೇನಾಧಿಕಾರಿಯನ್ನು 1893ರಲ್ಲಿ ಫ್ರಾನ್ಸ್ ವಿಚಾರಣೆಗೆ ಒಳಪಡಿಸಿತು. ಫ್ರಾನ್ಸ್ ನ   ರಹಸ್ಯ ಮಾಹಿತಿಯನ್ನು ಫ್ರಾನ್ಸ್ನಲ್ಲಿರುವ ಜರ್ಮನಿ ರಾಯಭಾರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಈ 35 ವರ್ಷದ ಯಹೂದಿ  ಸೇನಾಧಿಕಾರಿಯ ಮೇಲಿತ್ತು. 1894ರಲ್ಲಿ ಫ್ರೆಂಚ್ ಅಕಾಡೆಮಿಯ ಹತ್ತಿರ ಇವರನ್ನು ಕೋರ್ಟ್ ಮಾರ್ಶಲ್‌ಗೆ ಒಳಪಡಿಸಲಾಯಿತಲ್ಲದೇ,  ಯೋಧರ ಜೊತೆಗೇ ಸಾವಿರಾರು ಜನರನ್ನೂ ಸೇರಿಸಿ ಅತ್ಯಂತ ನಾಟಕೀಯವಾಗಿ ಶಿಕ್ಷಿಸಲಾಯಿತು. ಅವರ ಯೂನಿಫಾರ್ಮ್ ಹರಿದೆಸೆದು  ಪದಕಗಳನ್ನು ಕಿತ್ತೆಸೆದು ಕೂದಲು ಕತ್ತರಿಸಿ ಚಾಟಿಯಿಂದ ಥಳಿಸಲಾಯಿತು. ಈ ಎಲ್ಲ ಕ್ರೌರ್ಯಗಳ ನಡುವೆ ಫ್ರಾನ್ಸ್ ಗೆ  ಜಯವಾಗಲಿ ಎಂಬ  ಘೋಷಣೆಯನ್ನೂ ಕೂಗಲಾಯಿತು. ಅಲ್ಪ ಸಂಖ್ಯಾತ ಯಹೂದಿಯರು ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬ ಪ್ರಚಾರದೊಂದಿಗೆ ಈ ಎಲ್ಲವೂ  ನಡೆಯಿತು. ಆ ಬಳಿಕ 5 ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಲಾಯಿತು. ನಿಜವಾಗಿ,

ಈ ಆಲ್ಫ್ರೆಡ್ ಅಪರಾಧಿಯೇ ಆಗಿರಲಿಲ್ಲ. ಸೇನೆಯ ಹೊಸ ಕಮಾಂಡರ್ ಜಾರ್ಜ್ ಪಿಕಾರ್ಟ್ ಎಂಬವರು ಈ ಬಗ್ಗೆ ತನಿಖೆ  ನಡೆಸಿದರಲ್ಲದೇ, ಆಲ್ಫ್ರೆಡ್‌ರನ್ನು ಅನ್ಯಾಯವಾಗಿ ದಂಡಿಸಲಾಗಿದೆ ಎಂದು ಹೇಳಿದರು ಮತ್ತು ಮೇಜರ್ ಜನರಲ್ ಫರ್ಡಿನೆಂಡ್ ವಾಲ್‌ಸಿ ನ್ ನಿಜವಾದ ಅಪರಾಧಿ ಎಂದು 1896ರಲ್ಲಿ ವರದಿ ನೀಡಿದರು. ಆದರೆ ಫ್ರಾನ್ಸ್ ಈ ವರದಿಯನ್ನು ಒಪ್ಪಲು ತಯಾರಿರಲಿಲ್ಲ. ಈ ಇಡೀ  ವಿಚಾರಣಾ ಪ್ರಕ್ರಿಯೆಯನ್ನು ವರದಿ ಮಾಡಲು ಆಸ್ಟ್ರೀಯಾದಿಂದ ಆಗಮಿಸಿದ್ದ ಪತ್ರಕರ್ತ ಥಿಯೋಡರ್ ಹೆಲ್‌ಸಲ್ ಎಂಬವರು ಯಹೂದಿಯರಿಗೆ ಪ್ರತ್ಯೇಕ ರಾಷ್ಟ್ರದ ಆಶಯ ಮೊತ್ತಮೊದಲ ಬಾರಿ ಮುಂದಿಟ್ಟರು. ಯುರೋಪ್‌ನಲ್ಲಿ ಯಹೂದಿಯ ಮೇಲೆ ನಡೆಯುತ್ತಿರುವ  ಹಿಂಸೆ, ಅನ್ಯಾಯ, ಕ್ರೌರ್ಯಗಳಿಗೆ ಪ್ರತ್ಯೇಕ ರಾಷ್ಟ್ರವೇ ಪರಿಹಾರ ಎಂಬ ವಾದವನ್ನು ಮುಂದಿಟ್ಟು 1896ರಲ್ಲಿ ‘ಯಹೂದಿ ರಾಷ್ಟ್ರ ’ ಎಂಬ  ಪುಸ್ತಕವನ್ನೇ ಬರೆದರು. ಈ ಹಿನ್ನೆಲೆಯಲ್ಲಿ 1897ರಲ್ಲಿ ಸ್ವಿಟ್ಝರ್ಲ್ಯಾಂಡಿನ ಬಾಸೆಲ್‌ನಲ್ಲಿ ಜಾಗತಿಕ ಝಿಯೋನಿಸ್ಟ್ ಕಾನ್ಫರೆನ್ಸ್ ನಡೆಯಿತು  ಮತ್ತು ಯಹೂದಿಯರಿಗೆ ಸ್ವತಂತ್ರ ರಾಷ್ಟ್ರ  ಎಂಬ ಆಶಯವನ್ನು ಮುಂದಿಟ್ಟಿತು. ಈ ಸ್ವತಂತ್ರ ಯಹೂದಿ ರಾಷ್ಟ್ರ ವನ್ನು ಉಗಾಂಡದಲ್ಲಿ  ಸ್ಥಾಪಿಸಿ ಎಂದು 1907ರಲ್ಲಿ ಬ್ರಿಟನ್ ಯಹೂದಿಯರಿಗೆ ಹೇಳಿತು. ಹಾಗಂತ, ಉಂಗಾಡವೇನೂ ಖಾಲಿ ಬಿದ್ದಿರಲಿಲ್ಲ. ಆದರೆ ಯಹೂದಿಯರು ಈ ಆಫರನ್ನು ತಿರಸ್ಕರಿಸಿದರು. ಬಳಿಕ ಯಹೂದಿಯರು 1917ರ ಬಾಲ್ಫರ್ ಘೋಷಣೆಯೊಂದಿಗೆ ಫೆಲೆಸ್ತೀನ್‌ನಲ್ಲಿ ಯಹೂದಿ  ರಾಷ್ಟ್ರ  ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಯಿತು. ಫೆಲೆಸ್ತೀನನ್ನು ಎರಡಾಗಿ ವಿಭಜಿಸಿ ಒಂದು ಭಾಗದಲ್ಲಿ ಇಸ್ರೇಲನ್ನು ಸ್ಥಾಪಿಸುವ ಯೋಜನೆಯನ್ನು 1947 ನವೆಂಬರ್‌ನಲ್ಲಿ ವಿಶ್ವಸಂಸ್ಥೆ ಪ್ರಸ್ತಾಪಿಸಿತು. ಹಾಗಂತ, ಆಗ ಫೆಲೆಸ್ತೀನ್‌ನಲ್ಲಿ ಜನವಾಸವಿಲ್ಲದ ಖಾಲಿ ಪ್ರದೇಶವೇನೂ ಇರಲಿಲ್ಲ. ಅಂದರೆ ಫೆಲೆಸ್ತೀನಿಯರನ್ನು ಹೊರಹಾಕಿ ಯಹೂದಿಯರನ್ನು ಕೂರಿಸುವುದು ಎಂಬುದು ಅದರ ಇಂಗಿತವಾಗಿತ್ತು. 1948 ಮೇ  15ರಂದು ಫೆಲೆಸ್ತೀನ್‌ನಲ್ಲಿ ಸ್ವತಂತ್ರ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಯಿತು. ಇದು ಇತಿಹಾಸ. ಅಷ್ಟಕ್ಕೂ,

ಫೆಲೆಸ್ತೀನ್‌ನಿಂದ ಹಾರುವ ಜುಜುಬಿ ರಾಕೆಟನ್ನು ತೋರಿಸಿ ಫೆಲೆಸ್ತೀನಿಯರನ್ನು ಭಯೋತ್ಪಾದಕರಂತೆ ಮತ್ತು ಇಸ್ರೇಲನ್ನು ಸಂತ್ರಸ್ತ  ರಾಷ್ಟ್ರ ದಂತೆ ಚಿತ್ರಿಸುವವರು ಗಾಝಾದ ಆ ಹಿರಿಯ ವ್ಯಕ್ತಿಯ ಭಿತ್ತಿಪತ್ರವನ್ನು ಒಮ್ಮೆ ಹೃದಯಕ್ಕೆ ಒತ್ತಿ ಹಿಡಿದು ಅವಲೋಕಿಸುವುದು  ಒಳ್ಳೆಯದು.

Tuesday, November 14, 2023

15ರ ಬಾಲೆ ನೀಡಿದ ಸುಳ್ಳು ಸಾಕ್ಷ್ಯ ಇರಾಕ್ ಯುದ್ಧಕ್ಕೆ ಕಾರಣವಾಗಿತ್ತು...




ನಾಯಿರಾ
ಕಾಲಿನ್ ಪವೆಲ್

ಯಾವುದೇ ಯುದ್ಧದ ಸಂದರ್ಭದಲ್ಲಿ ನೆನಪಿಗೆ ಬರುವ ಮತ್ತು ಸದಾಕಾಲ ನೆನಪಿಗೆ ಬರಬೇಕಾದ ಹೆಸರುಗಳಿವು.

“ಮಿಸ್ಟರ್ ಚೆಯರ್‌ಮ್ಯಾನ್ ಮತ್ತು ಕಮಿಟಿ ಸದಸ್ಯರೇ, ನಾನು ನಾಯಿರಾ. ನಾನು ಈಗಷ್ಟೇ ಕುವೈಟ್‌ನಿಂದ ಬಂದಿರುವೆ. ಆಗಸ್ಟ್ 2ರಂದು  ನಾನು ಮತ್ತು ನನ್ನ ತಾಯಿ ಕುವೈಟ್‌ನಲ್ಲಿದ್ದೆವು. ನನ್ನ ದೊಡ್ಡಕ್ಕ ಜುಲೈ 29ರಂದು ಮಗುವಿಗೆ ಜನ್ಮ ನೀಡಿದಳು. ಆದ್ದರಿಂದ ಆಕೆಯ ಜೊತೆ  ಸಮಯ ಕಳೆಯುವುದಕ್ಕಾಗಿ ನಾವು ಅಲ್ಲಿದ್ದೆವು. ಆಗಸ್ಟ್ 2ರಂದು ನಮ್ಮ ದೇಶದ ಮೇಲೆ ಇರಾಕ್ ಆಕ್ರಮಣ ನಡೆಸಿತು. ನನ್ನ ಅಕ್ಕ ತನ್ನ  ಮಗುವನ್ನು ಉಳಿಸುವುದಕ್ಕಾಗಿ ಮರಳುಗಾಡಿನಲ್ಲಿ ಸಂಚರಿಸಿ ಹಾಲು-ನೀರು ಇಲ್ಲದೇ ಸಂಕಟ ಪಟ್ಟು ಹೇಗೋ ಸೌದಿ ಅರೇಬಿಯ  ಸೇರಿಕೊಂಡಳು. ನಾನು ನನ್ನ ದೇಶಕ್ಕಾಗಿ ಏನಾದರೂ ಮಾಡಲೇಬೇಕೆಂದು ಬಯಸಿ ಅಲ್ಲೇ  ಉಳಿದೆ. ಇರಾಕ್ ಆಕ್ರಮಣದ ಎರಡನೇ  ವಾರ ನಾನು ಕುವೈಟ್‌ನ ಅಲ್‌ದಾರ್ ಆಸ್ಪತ್ರೆಯಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಜೊತೆ ಇತರ 12 ಮಹಿಳೆಯರೂ  ಇದ್ದರು. ಇವರಲ್ಲಿ ಅತೀ ಕಿರಿಯವಳೆಂದರೆ ನಾನೇ. ನನ್ನ ಕಣ್ಣ ಮುಂದೆಯೇ ಇರಾಕಿ ಯೋಧರು ಬಂದೂಕಿನೊಂದಿಗೆ ಆಸ್ಪತ್ರೆಗೆ  ಬಂದರು. ಶಿಶುಗಳನ್ನು ಇನ್‌ಕ್ಯುಬೇಟರ್ (ಉಷ್ಣಪೋಷಕ ಯಂತ್ರ ಅಥವಾ ಜನಿಸಿದ ಮಕ್ಕಳಿಗೆ ಕಾವು ಕೊಡುವ ಯಂತ್ರ)ನಿಂದ  ಎತ್ತಿ  ನೆಲದಲ್ಲಿಟ್ಟು ಸಾಯಲು ಬಿಟ್ಟರು ಮತ್ತು ಇನ್‌ಕ್ಯುಬೇಟರ್‌ಗಳನ್ನು ಹೊತ್ತೊಯ್ದರು. ಇದು ಭಯಾನಕ ಅನುಭವ. ನಾನು ಆಸ್ಪತ್ರೆಯಿಂದ  ಹೊರಬಂದೆ. ನನ್ನ ಗೆಳೆಯನನ್ನು ಭೇಟಿಯಾದೆ. 22 ವರ್ಷದ ಆತನನ್ನು ಇರಾಕಿ ಯೋಧರು ಚಿತ್ರಹಿಂಸೆ ಕೊಟ್ಟು  ಬಿಡುಗಡೆಗೊಳಿಸಿದ್ದರು. ಯೋಧರು ಆತನ ತಲೆಯನ್ನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿಸಿದ್ದರು. ಸಾಯುವ ಹಂತದಲ್ಲಿ ಮೇಲೆತ್ತಿದ್ದರು.  ಆತನ ಬೆರಳುಗಳಿಂದ ಉಗುರುಗಳನ್ನು ಕಿತ್ತೆಸೆದಿದ್ದರೆ ಮತ್ತು ಆತನ ಖಾಸಗಿ ಭಾಗಗಳಿಗೆ ವಿದ್ಯುತ್ ಶಾಕ್ ಕೊಟ್ಟಿದ್ದರು. 15  ವರ್ಷದವಳಾದ ನನಗೆ ಸದ್ದಾಮ್ ಹುಸೇನ್ ಆಕ್ರಮಣದ ಮುಂಚಿನ ಕುವೈಟನ್ನು ಮತ್ತು ಆಕ್ರಮಣ ನಂತರದ ಕುವೈಟನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಈ ವಯಸ್ಸು ಧಾರಾಳ ಸಾಕು, ಥ್ಯಾಂಕ್ಯು...”

1990 ಅಕ್ಟೋಬರ್ 10ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ ಕುವೈಟ್‌ನ ನಾಯಿರಾ ಎಂಬ 15ರ ಹರೆಯದ  ಯುವತಿ ನೀಡಿದ ಈ ಸಾಕ್ಷ್ಯವನ್ನು Hill and Knowlton   ಎಂಬ ಸಂಸ್ಥೆ ಪೂರ್ಣವಾಗಿ ಚಿತ್ರೀಕರಿಸಿಕೊಂಡಿತು. ಒಟ್ಟು 4  ನಿಮಿಷಗಳಷ್ಟು ಅವಧಿಯ ಸಾಕ್ಷ್ಯನುಡಿ. ಅಮೇರಿಕದಲ್ಲಿ ಕುವೈಟ್ ಪರವಾಗಿ ಜನಾಭಿಪ್ರಾಯ ರೂಪಿಸುವುದಕ್ಕಾಗಿ ಕುವೈಟ್ ಸರಕಾರವೇ ಈ  Hill and Knowlton  ಸಂಸ್ಥೆಯನ್ನು ಸ್ಥಾಪಿಸಿತ್ತು ಮತ್ತು Citizen for a Free Kuwait Public Relations ಎಂಬ ಅಭಿಯಾನವನ್ನೂ ಇದು ಅಮೇರಿಕಾದಲ್ಲಿ ನಡೆಸುತ್ತಿತ್ತು. ನಾಯಿರಾ ನೀಡಿದ ಈ ಭಾವನಾತ್ಮಕ ಮತ್ತು  ದಂಗುಬಡಿಸುವ ಸಾಕ್ಷ್ಯ  ನುಡಿಯನ್ನು ಈ Hill and Knowlton  ಸಂಸ್ಥೆಯು ಅಮೇರಿಕದ ವಿವಿಧ ಚಾನೆಲ್‌ಗಳಿಗೆ ನೀಡಿತು.  ಅಮೇರಿಕದ ಒಟ್ಟು 700 ಚಾನೆಲ್‌ಗಳಲ್ಲಿ ಈ ವೀಡಿಯೋ ಪ್ರಸಾರವಾಯಿತು. ಮುಖ್ಯವಾಗಿ,

ABC Nightline ಮತ್ತು NBC Nightly News  ಎಂಬೆರಡು ಪ್ರಮುಖ ಚಾನೆಲ್‌ಗಳ ಮೂಲಕ ಆ ಕಾಲದಲ್ಲೇ  30ರಿಂದ 53  ಮಿಲಿಯನ್ ಜನರಿಗೆ ಈ ವೀಡಿಯೋ ತಲುಪಿತು. ಅಮೇರಿಕ ದಾದ್ಯಂತ ಈ 15ರ ಹರೆಯದ ನಾಯಿರಾ ಸುದ್ದಿಯಾದಳು. ಆಕೆಯ  ಭಾವುಕ ಮಾತುಗಳು ಅನೇಕರ ಕಣ್ಣನ್ನು ತೋಯಿಸಿದುವು. 1990 ಆಗಸ್ಟ್ 2ರಂದು ಕುವೈಟ್‌ನ ಮೇಲೆ ಆಕ್ರಮಣ ಮಾಡಿದ ಇರಾಕ್‌ನ  ಸದ್ದಾಮ್ ಹುಸೈನ್ ಮತ್ತು ಅವರ ಸೇನಾಪಡೆ ಎಂಥ ಕ್ರೂರಿಗಳು ಎಂದು ಜನರಾಡಿಕೊಳ್ಳತೊಡಗಿದರು. ಅಮೇರಿಕದ ಆಗಿನ ಅಧ್ಯಕ್ಷ   ಜಾರ್ಜ್ ಡಬ್ಲ್ಯು ಬುಶ್ ಅವರು ಕನಿಷ್ಠ 10 ಬಾರಿಯಾದರೂ ಈ ನಾಯಿರಾ ಸಾಕ್ಷ್ಯ ನುಡಿಯನ್ನು ಪುನರಾ ವರ್ತಿಸಿದರು. ಅಮೇರಿಕದ 7  ಮಂದಿ ಸೆನೆಟರ್‌ಗಳು ನಾಯಿರಾ ಸ್ಟೋರಿಯನ್ನು ಪುನರುಚ್ಛರಿಸಿದರು. ಬ್ರಿಟನ್ ಮೂಲದ ಸರಕಾರೇತರ (NGO) ದೈತ್ಯ  ಸಂಸ್ಥೆಯಾಗಿರುವ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಈ ಸುದ್ದಿಗೆ ಭಾರೀ ಪ್ರಚಾರವನ್ನು ನೀಡಿತು. ಈ ಸುದ್ದಿ ಜಾಗತಿಕವಾಗಿ  ಪ್ರಸಾರವಾಗುವಂತೆಯೂ ಶಕ್ತಿಮೀರಿ ಯತ್ನಿಸಿತು. ಇದಕ್ಕೆ ಪೂರಕವಾಗಿ ವಿವಿಧ ರಾಷ್ಟ್ರಗಳ ಪತ್ರಿಕೆಗಳು ಮತ್ತು ಟಿ.ವಿ.ಗಳು ತಮ್ಮದೇ  ಮಸಾಲೆಯನ್ನು ಬೆರೆಸಿ ಸುದ್ದಿ ಪ್ರಸಾರ ಮಾಡಿದುವು. ಸದ್ದಾಮ್ ಹುಸೈನ್‌ರನ್ನು ಅತ್ಯಂತ ಕ್ರೂರಿ ಮತ್ತು ಮನುಷ್ಯ ದ್ರೋಹಿಯಾಗಿ  ಬಿಂಬಿಸುವುದಕ್ಕೆ ಮತ್ತು ಕುವೈಟ್ ಮೇಲಿನ ಅವರ ಆಕ್ರಮಣಕ್ಕೆ ಪ್ರತಿಯಾಗಿ ಇರಾಕ್ ಮೇಲೆ ದಾಳಿ ನಡೆಸುವುದಕ್ಕೆ ಅಮೇರಿಕ ಸಹಿತ  ಜಾಗತಿಕ ರಾಷ್ಟ್ರಗಳಿಗೆ ಈ ಸಾಕ್ಷ್ಯ ನುಡಿ ತೀವ್ರ ಪ್ರಚೋದನೆಯನ್ನೂ ನೀಡಿತು. ಅಮೇರಿಕದ ನಾಗರಿಕರ ಮೇಲಂತೂ ಈ ನಾಯಿರಾಳ  ಮಾಹಿತಿಗಳು ತೀವ್ರ ಪ್ರಭಾವವನ್ನು ಬೀರಿದುವು. ಇರಾಕ್ ವಿರುದ್ಧ ದಾಳಿ ಮಾಡುವಂತೆ ಅಧ್ಯಕ್ಷ ಬುಶ್‌ರ ಮೇಲೆ ಅವರು ಒತ್ತಡವನ್ನೂ  ಹೇರಿದರು. ಹೀಗೆ,

1991 ಜನವರಿ 17ರಂದು ಅಮೇರಿಕ ನೇತೃತ್ವದ ಮಿತ್ರಪಡೆಗಳು ಇರಾಕ್ ಮೇಲೆ ದಾಳಿ ಮಾಡಿತು. ಸೈನಿಕರು ಮತ್ತು ನಾಗರಿಕರೂ  ಸೇರಿದಂತೆ ಸುಮಾರು 30ರಿಂದ 40 ಸಾವಿರದಷ್ಟು ಇರಾಕಿಯನ್ನರು ಈ ದಾಳಿಗೆ ಬಲಿಯಾದರು. ಈ ಯುದ್ಧದಲ್ಲಿ ಇರಾಕ್ ದಯ ನೀಯವಾಗಿ ಸೋತಿತು ಮತ್ತು ಕುವೈಟ್‌ನಿಂದ ಹಿಂಜರಿಯಿತು.

ಆದರೆ,

ಯುದ್ಧ ಮುಗಿದು ನಾಶ-ನಷ್ಟಗಳು ಸಂಭವಿಸಿದ ಒಂದು ವರ್ಷದ ಬಳಿಕ, 1992ರಲ್ಲಿ ಒಂದೊAದೇ ಸತ್ಯ ಬಹಿರಂಗವಾಗ ತೊಡಗಿತು.  ಈ ನಾಯಿರಾ ಎಂಬ 15 ವರ್ಷದ ಬಾಲಕಿ ಬೇರಾರೂ ಅಲ್ಲ, ಅಮೇರಿಕದಲ್ಲಿರುವ ಕುವೈಟ್ ರಾಯಭಾರಿ ಸೌದ್ ಅಲ್ ಸಬಾರ ಪುತ್ರಿ.  ಈಕೆಯ ಪೂರ್ತಿ ಹೆಸರು ನಾಯಿರಾ ಅಲ್ ಸಬಾ. ಆದರೆ ಸಾಕ್ಷ್ಯನುಡಿಯ ಸಂದರ್ಭದಲ್ಲಾಗಲಿ ಮುಂದಿನ ಒಂದು ವರ್ಷದವರೆಗಾಗಲಿ  ಆಕೆಯ ಪೂರ್ಣ ಹೆಸರನ್ನು ಬಹಿರಂಗಪಡಿಸಿಯೇ ಇರಲಿಲ್ಲ. ಅಲ್ಲದೇ, ಈ ಇಡೀ ಸಾಕ್ಷ್ಯನುಡಿಯು ಪೂರ್ವ ನಿರ್ಧರಿತ ಚಿತ್ರಕತೆಯಾಗಿತ್ತು.  ಈ ಚಿತ್ರಕತೆ ರಚಿಸಿದ್ದು ಆರಂಭದಲ್ಲಿ ಹೇಳಲಾದ Hill and Knowlton. ಕುವೈಟ್‌ನ ಪರವಾಗಿ ಅಮೇರಿಕದಲ್ಲಿ ಅಭಿಯಾನ  ನಡೆಸುತ್ತಿದ್ದ ಈ ಸಂಸ್ಥೆಯು ಉದ್ದೇಶಪೂರ್ವಕವಾಗಿ ಹೆಣೆದ ತಂತ್ರದ ಭಾಗವಾಗಿಯೇ ಈ ನಾಯಿರಾ ಅಲ್ ಸಬಾ ವಿಶ್ವಸಂಸ್ಥೆಯ ಮಾ ನವ ಹಕ್ಕುಗಳ ಸಭೆಯಲ್ಲಿ ಸಾಕ್ಷ್ಯ ನುಡಿದಿದ್ದಳು. (Legislator ಟು  probe allegations of Iraqi atrocities: Accused identified as daughter of Kuwait Ambassador to US -The Washington Post - January 7, 1992)

ಈ ವಿವರ ಬಹಿರಂಗಕ್ಕೆ ಬಂದ ಬಳಿಕ ಇನ್ನಷ್ಟು ಸತ್ಯಗಳೂ ಹೊರಬಿದ್ದುವು. ಈ ಸಾಕ್ಷ್ಯನುಡಿಗೆ ವ್ಯಾಪಕ ಪ್ರಚಾರ ಸಿಗುವಲ್ಲಿ ಶ್ರಮಿಸಿದ್ದ  ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸ್ವತಃ ಮುಜುಗರಕ್ಕೆ ಒಳಗಾಯಿತು. ಸುಳ್ಳು ಹೇಳಿ ದಾರಿ ತಪ್ಪಿಸಿದುದಕ್ಕಾಗಿ ಆಮ್ನೆಸ್ಟಿ ಇಂಟರ್ ನ್ಯಾಶನಲ್‌ನ  ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಜಾನ್ ಹೀಲಿಯವರು ಬುಶ್ ಆಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. (Amnesty responds Healey John-  February ೨೮, 1991)

ಈ ನಡುವೆ ಮಧ್ಯೇಶ್ಯಾ ಕೇಂದ್ರೀಕರಿಸಿ ಕೆಲಸ ಮಾಡುತ್ತಿರುವ ಮಾನವ ಹಕ್ಕು ಆಯೋಗವು ತನಿಖೆಗಿಳಿಯಿತು. ಕುವೈಟ್ ಆಕ್ರಮಣದ  ವೇಳೆ ಇರಾಕ್ ಸೇನೆ ನಡೆಸಿರಬಹುದಾದ ಮಾನವ ಹಕ್ಕು ಉಲ್ಲಂಘನೆಯ ಕುರಿತು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸ ತೊಡಗಿತು.  ಮಾತ್ರವಲ್ಲ, ನಾಯಿರಾಳ ಸಾಕ್ಷ್ಯನುಡಿಯಲ್ಲಿ ಹೇಳಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಹೇಳಿತು. ಆಯೋಗದ ನಿರ್ದೇಶಕ  ಆ್ಯಂಡ್ರೂ ವೆಟ್ಲಿ ಈ ಕುರಿತಂತೆ ವಿಸ್ತೃತ  ವರದಿಯನ್ನೇ ಬಿಡುಗಡೆಗೊಳಿಸಿದರು. ನಾಯಿರಾ ಹೇಳಿರುವ ಕತೆಯು ಕುವೈಟ್ ನಿಂದ  ಹೊರಗಿರುವ ಮತ್ತು ಕುವೈಟನ್ನು ಚೆನ್ನಾಗಿ ಬಲ್ಲವರು ಕೃತ್ರಿಮವಾಗಿ ತಯಾರಿಸಿದ್ದಾಗಿದೆ ಎಂದು ಮುಲಾಜಿಲ್ಲದೇ ಹೇಳಿದರು. ಅಲ್ಲದೇ,  ನಾಯಿರಾ ಉಲ್ಲೇಖಿಸಿರುವ ಅಲ್ದಾರ್ ಆಸ್ಪತ್ರೆಯ ವೈದ್ಯ ರಾದ ಅಝೀಝï ಅಬು ಹಮದ್‌ರನ್ನು The Independent  ಪತ್ರಿಕೆ  ಭೇಟಿಯಾಗಿ ಮಾತುಕತೆ ನಡೆಸಿತು. ಅವರು ನಾಯಿರಾ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು. ಅಲ್ದಾರ್ ಆಸ್ಪತ್ರೆಗೆ ಇರಾಕಿ  ಯೋಧರು ಬಂದಿರುವುದು ನಿಜ. ಆಗ ಈ ಆಸ್ಪತ್ರೆಯ ಮೆಟರ್ನಿಟಿ ವಿಭಾಗದಲ್ಲಿ 25ರಿಂದ 30ರಷ್ಟು ಶಿಶುಗಳು ಇದ್ದುವು. ಇರಾಕಿ  ಯೋಧರು ಇಲ್ಲಿನ ಇನ್‌ಕ್ಯುಬೇಟರ್ ಕೊಂಡೂ ಹೋಗಿಲ್ಲ, ಶಿಶುಗಳನ್ನು ಸಾಯಲೂ ಬಿಟ್ಟಿಲ್ಲ ಎಂದವರು ಹೇಳಿದರು. (Iraqi Baby Atrocity is  revealed as myth- January 1992).
ಆದರೆ ಸತ್ಯಗಳು ಹೀಗೆ ಬಿಡಿಬಿಡಿಯಾಗಿ ಬಹಿರಂಗವಾಗುವ ಮೊದಲೇ ನಾಯಿರಾಳ ಮೂಲಕ ಹರಡಲಾದ ಸುಳ್ಳು ಯಾವ  ಪರಿಣಾಮವನ್ನು ಬೀರಬೇಕಿತ್ತೋ ಅವೆಲ್ಲವನ್ನೂ ಬೀರಿಯಾಗಿತ್ತು.

2. ಕಾಲಿನ್ ಪವೆಲ್

2002ರಿಂದ 2005ರ ವರೆಗೆ ಅಮೇರಿಕದ ರಾಜ್ಯ ಕಾರ್ಯದರ್ಶಿ ಯಾಗಿದ್ದ ಕಾಲಿನ್ ಪವೆಲ್ ಅವರು 2003 ಫೆಬ್ರವರಿ 5ರಂದು  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾಡಿದ ಭಾಷಣವು ಜಗತ್ತಿನ ಕುಖ್ಯಾತ ಭಾಷಣಗಳಲ್ಲಿ ಒಂದು. ಆ ಭಾಷಣದ ಆರಂಭದಿAದ  ಕೊನೆಯವರೆಗೆ ಅವರು ಕೈಯಲ್ಲಿ ಶೀಶೆಯೊಂದನ್ನು ಹಿಡಿದುಕೊಂಡಿದ್ದರು. ಈ ಶೀಶೆಯಲ್ಲಿರುವುದು ಭಯಾನಕ ಅಂತ್ರಾಕ್ಸ್ ರಾಸಾಯನಿಕ  ಎಂದೂ ಹೇಳಿದ್ದರು. ಭದ್ರತಾ ಮಂಡಳಿಯ ಅಷ್ಟೂ ರಾಷ್ಟ್ರಗಳ ಸದಸ್ಯರ ಮುಂದೆ ಅವರು ಆವೇಶಪೂರ್ಣ ಭಾಷಣ ಮಾಡಿದ್ದರು.  ಇರಾಕ್‌ನ ಅಧ್ಯಕ್ಷ  ಸದ್ದಾಮ್ ಹುಸೇನ್ ಜಗತ್ತಿಗೆ ಬೆದರಿಕೆಯಾಗಿದ್ದಾರೆ, ಸಮೂಹ ನಾಶಕ ಅಸ್ತ್ರಗಳನ್ನು ಅವರು ಅಭಿವೃದ್ಧಿಪಡಿಸುತ್ತಿದ್ದಾರೆ,  ಮಾನವ ರಹಿತ ವಾಹನ ಮತ್ತು ಆಕಾಶ ಮಾರ್ಗದ ಮೂಲಕ ಅವರು ಈ ಅಸ್ತ್ರವನ್ನು ಅಮೇರಿಕ ಸಹಿತ ನೆರೆಕರೆಯ ರಾಷ್ಟ್ರಗಳ ವಿರುದ್ಧ  ಬಳಸಲಿದ್ದಾರೆ... ಎಂದೆಲ್ಲಾ  ಆ ಭಾಷಣದಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಸದ್ದಾಮ್‌ರನ್ನು ತಡೆಯದಿದ್ದರೆ ಜಗತ್ತಿನ ವಿನಾಶ ಖಂಡಿತ...  ಎಂಬ ರೀತಿಯಲ್ಲಿ ಅವರು ಬೆದರಿಸಿದ್ದರು. ಮಾತ್ರವಲ್ಲ,

ಈ ಸಮೂಹ ನಾಶಕ ಅಸ್ತ್ರಗಳು ಅಲ್ ಕೈದಾಕ್ಕೆ ರವಾನೆ ಯಾಗುವ ಭೀತಿಯಿದ್ದು, ಸದ್ದಾಮ್ ಮತ್ತು ಅಲ್ ಕೈದಾ ನಡುವೆ ಆಪ್ತ  ಸಂಬಂಧ ಇದೆ ಎಂದೂ ಸಭೆಗೆ ವಿವರಿಸಿದ್ದರು. ಕೈಯಲ್ಲಿ ಶೀಶೆ ಹಿಡಿದು ಪವೆಲ್ ಮಾಡಿದ ಭಾಷಣ ಆ ಕಾಲದಲ್ಲಿ ಭಾರೀ ವೈರಲ್  ಆಗಿತ್ತು. ಅಮೇರಿಕದ ನಾಗರಿಕರಷ್ಟೇ ಅಲ್ಲ, ಇರಾಕ್ ಅಕ್ಕ-ಪಕ್ಕದ ರಾಷ್ಟ್ರಗಳೂ ಭಯಭೀತವಾದುವು. ಯುರೋಪಿಯನ್ ರಾಷ್ಟ್ರಗಳೂ  ಪವೆಲ್ ಮಾತುಗಳಿಂದ ತೀವ್ರ ಪ್ರಭಾವಿತವಾದುವು. ಅಮೇರಿಕದ ಗುಪ್ತಚರ ಸಂಸ್ಥೆ CIA ನೀಡಿದ ವರದಿ ಎಂಬ ನೆಲೆಯಲ್ಲಿ ಅದು  ವ್ಯಾಪಕ ಚರ್ಚೆಗೆ ಮತ್ತು ವಿಶ್ವಾಸಕ್ಕೂ ಒಳಗಾಯಿತು. ಈ ಭಾಷಣದ ಬಳಿಕ ಜಾಗತಿಕವಾಗಿ ಉಂಟಾದ ಇರಾಕ್ ವಿರೋಧಿ ಅಲೆಯನ್ನೇ  ಬಳಸಿಕೊಂಡು ಮಾರ್ಚ್ 19, 2003ರಂದು ಇರಾಕ್ ಮೇಲೆ ಅಮೇರಿಕ ಆಕ್ರಮಣ ನಡೆಸಿತು. ವಿಶೇಷ ಏನೆಂದರೆ, ಈ ಆಕ್ರಮಣಕ್ಕಿಂತ  ಮೊದಲೇ ವಿಶ್ವಸಂಸ್ಥೆಯ 70ರಷ್ಟು ಸೈಟ್ ಇನ್ಸ್ಪೆಕ್ಟರ್‌ಗಳು ಇರಾಕ್‌ಗೆ ತೆರಳಿ ಸಮೂಹ ನಾಶಕ ಅಸ್ತ್ರಕ್ಕಾಗಿ ಹುಡುಕಾಡಿದ್ದರು. ಆದರೆ  ಅದು ಪತ್ತೆಯಾಗಿರಲಿಲ್ಲ. ಆದರೂ ಪವೆಲ್ ಅವರ ಭಾಷಣ  ಮತ್ತು ಕೈಯಲ್ಲಿದ್ದ ಶೀಶೆಯು ವಿಶ್ವಸಂಸ್ಥೆಯ 70ರಷ್ಟು ತಪಾಸಕರನ್ನೇ  ನಾಲಾಯಕ್‌ಗೊಳಿಸಲಾಯಿತು. ವಿಶ್ವಸಂಸ್ಥೆಗಿಂತ  ಅಮೇರಿಕದ ಹೇಳಿಕೆಯಲ್ಲೇ  ಜಗತ್ತು ನಂಬಿಕೆಯನ್ನಿಟ್ಟಿತು. ಈ ನಡುವೆ,
ಅಮೇರಿಕದ ಉಪಾಧ್ಯಕ್ಷರಾಗಿದ್ದ ಡಿಕ್ ಚೆನಿಯ ಕಾರ್ಯದರ್ಶಿ ಲಿಬ್ಬಿ ಮತ್ತು ರಕ್ಷಣಾ ಸಚಿವರಾಗಿದ್ದ ಡೊನಾಲ್ಡ್ ರಮ್ಸ್ಫೆಲ್ಡ್ ಅವರ  ಕಾರ್ಯದರ್ಶಿ ಡಗ್ಲಾಸ್ ವೈಟ್ ಅವರು ಸರಣಿ ಸುಳ್ಳುಗಳನ್ನು ಹಂಚತೊಡಗಿದರು. ಅಣ್ವಸ್ತ್ರ ತಯಾರಿಸಲು ಬೇಕಾದ ಯುರೇನಿಯಂ ಅನ್ನು ನೈಜರ್ ದೇಶದಿಂದ ಸದ್ದಾಮ್ ಹುಸೇನ್ ಪಡೆದಿದ್ದಾರೆ ಎಂಬುದೂ ಈ ಸುಳ್ಳುಗಳಲ್ಲಿ ಒಂದು. ನಿಜವಾಗಿ, ನೈಜರ್‌ನಲ್ಲಿದ್ದ  ಅಮೇರಿಕದ ರಾಯಭಾರಿ ವಿಲ್ಸನ್ ಅವರಲ್ಲಿ ಈ ಬಗ್ಗೆ ಪತ್ತೆಕಾರ್ಯ ನಡೆಸುವಂತೆ ಅಮೇರಿಕದ ಗುಪ್ತಚರ ಸಂಸ್ಥೆ (CIA)  ಕೇಳಿಕೊಂಡಿತ್ತು. ಆ ಬಗ್ಗೆ ಅವರು ಗುಪ್ತವಾಗಿ ಶೋಧನೆಯನ್ನೂ ನಡೆಸಿದ್ದರು ಮತ್ತು ಅಂಥ ಯಾವುದೂ ನಡೆದಿಲ್ಲ ಎಂದು  2002ರಲ್ಲೇ  ಅವರು ವರದಿಯನ್ನೂ ಕೊಟ್ಟಿದ್ದರು. (Former Cheney  aid to and guilty - 7 March,  2007) ಆದರೆ ಈ ಸತ್ಯವನ್ನೇ ಮುಚ್ಚಿಟ್ಟು ಈ ಇಬ್ಬರು ಕಾರ್ಯದರ್ಶಿಗಳು ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹರಡತೊಡಗಿದರು.
ಆದರೆ,

ಇರಾಕ್ ನಾಶವಾದರೂ ಸಮೂಹ ವಿನಾಶಕ ಅಸ್ತ್ರ ಅಮೇರಿಕನ್ ಸೇನೆಗಾಗಲಿ, ಮಿತ್ರ ಪಡೆಗಾಗಲಿ ಸಿಗಲೇ ಇಲ್ಲ. ಈ ಬಗ್ಗೆ ಕಾಲಿನ್  ಪವೆಲ್ ಅವರನ್ನು ಅಮೇರಿಕನ್ ಪಾರ್ಲಿಮೆಂಟ್‌ನಲ್ಲಿ ಡೆಮಾಕ್ರಾಟಿಕ್ ಪಕ್ಷದ ಗ್ಯಾರಿ ಅಕರ್‌ಮ್ಯಾನ್ ತರಾಟೆಗೆ ತೆಗೆದುಕೊಂಡಿದ್ದರು. ನೀವು  ಸುಳ್ಳು ಹೇಳಿದ್ದೀರಿ ಎಂದೂ ಛೇಡಿಸಿದ್ದರು. ಆಗಲೂ ಪವೆಲ್ ಅದನ್ನು ಒಪ್ಪಿರಲಿಲ್ಲ. (Iraq Truth : Powell defends Bush- February 11, 2004) ಆದರೆ 2011ರಲ್ಲಿ ಅಲ್ ಜಝೀರಾ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಪ್ಪನ್ನು ಒಪ್ಪಿಕೊಂಡಿದ್ದರು. CIA  ನೀಡಿದ ಮಾಹಿತಿಗಳು ತಪ್ಪಾಗಿದ್ದುವು ಎಂದಿದ್ದರು. (Colin Powell regrets Iraqi war intelligence: 11 Sep. 2011) ಮಾತ್ರವಲ್ಲ, ತಪ್ಪು ಮಾಹಿತಿ ನೀಡಿದ್ದಕ್ಕಾಗಿ 2017ರಲ್ಲಿ ಬ್ಲೂಂಬರ್ಗ್ ಗೆ  ನೀಡಿದ ಸಂದರ್ಶ ನದಲ್ಲಿ CIA ಯನ್ನು ಕಟುವಾಗಿ ಟೀಕಿಸಿದ್ದರು. ಅವರು 2021 ಅಕ್ಟೋಬರ್ 18ರಂದು ಕೊರೋನಾ ದಿಂದಾಗಿ ತಮ್ಮ 84ನೇ  ಪ್ರಾಯದಲ್ಲಿ ನಿಧನರಾದರು.

ಅಂದಹಾಗೆ,

ಹಮಾಸ್‌ನಿಂದ  40 ಇಸ್ರೇಲಿ ಮಕ್ಕಳ ಶಿರಚ್ಛೇದ, ಡಜನ್ನುಗಟ್ಟಲೆ ಇಸ್ರೇಲಿ ಬಾಲಕಿಯನ್ನು ಲೈಂಗಿಕ ಕಾರ್ಯಕರ್ತೆಯರಾಗಿ ಇಟ್ಟು ಕೊಂಡಿರುವ ಹಮಾಸ್, ಪುಟ್ಟ ಮಗುವನ್ನು ಅಪಹರಿಸಿದ ಹಮಾಸ್, ಗಾಝಾದ ಆಸ್ಪತ್ರೆಗೆ ರಾಕೆಟ್ ಹಾರಿಸಿ ತನ್ನದೇ 500ಕ್ಕಿಂತಲೂ ಅ ಧಿಕ ಮಂದಿಯನ್ನು ಕೊಂದ ಹಮಾಸ್, ಅಲ್‌ಕೈದಾ ಧ್ವಜವನ್ನು ಎತ್ತಿ ಹಿಡಿದ ಹಮಾಸ್ ಕಾರ್ಯಕರ್ತರು... ಇತ್ಯಾದಿ ಇತ್ಯಾದಿ ಸುದ್ದಿಗಳನ್ನು ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ, ಸೋಷಿಯಲ್ ಮೀಡಿಯಾದ ಈ ಕಾಲದಲ್ಲಿ ಸುಳ್ಳು ಗಳಿಗೆ ಹೆಚ್ಚು ಸಮಯ ಬಾಳಿಕೆಯಿಲ್ಲ  ಮತ್ತು ಹಮಾಸ್‌ಗೆ ಸಂಬಂಧಿಸಿದ ಈ ಎಲ್ಲ ಸುದ್ದಿಗಳೂ ಸುಳ್ಳು ಎಂಬುದು ಪುರಾವೆ ಸಮೇತ ಸಾಬೀತಾಗಿವೆ ಎಂಬುದೇ ಸಮಾಧಾನಕರ.