Wednesday, September 27, 2023

ಮಕ್ಕಳನ್ನು ಹೊರಗೆ ನಿಲ್ಲಿಸುವ ಮಸೀದಿ ಬೋರ್ಡುಗಳು





ಜನರೇಶನ್ ಗ್ಯಾಪ್

ಮೊನ್ನೆ ಸಂಜೆ ಕಚೇಯಿಂದ ಹೊರಡುವಾಗ ಆ ವಿದ್ಯಾರ್ಥಿ ಯುವಕ ಹತ್ತಿರ ಬಂದ. ಗೆಳೆಯನ ಮಗ. ಬೈಕ್‌ನಲ್ಲಿ ನಾನೂ  ಬರಬಹುದಾ ಎಂದು ವಿನಯದಿಂದ ಪ್ರಶ್ನಿಸಿದ. ಹತ್ತಿಸಿಕೊಂಡೆ. ಏನು ಸ್ಟಡೀ ಮಾಡ್ತಾ ಇರುವಿ ಎಂದು ಪ್ರಶ್ನಿಸಿದೆ. ಆರ್ಟಿಫಿಶಿಯಲ್  ಇಂಟೆಲಿಜೆನ್ಸ್ ಅಂದ. ನನ್ನಲ್ಲಿ ಕುತೂಹಲ. ಆತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಾಗಿ ಹಲವು ಸಂಗತಿಗಳನ್ನು ಹಂಚಿಕೊಂಡ.  ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಿರುವ ಅವಕಾಶ, ಭವಿಷ್ಯ ಮತ್ತು ಭಾರತಕ್ಕಿಂತ ವಿದೇಶದಲ್ಲಿ ಇದಕ್ಕಿರಬಹುದಾದ  ಅಪಾರ ಸಾಧ್ಯತೆಗಳ ಕುರಿತಾಗಿ ಅಭಿಪ್ರಾಯಗಳನ್ನು ಹಂಚುತ್ತಾ ಹೋದ. ಆತನ ಮಾತುಗಳನ್ನು ಆಲಿಸುತ್ತಾ ಹೋದಾಗಲೆಲ್ಲ ನಾನು ಈ  ವಿಷಯದಲ್ಲಿ ಒಂದನೇ ತರಗತಿ ಎಂಬುದೂ ಗೊತ್ತಾಯಿತು. ಈ ನಡುವೆ ಆತ ಹೇಳಿದ ಮಾತೊಂದು ನನ್ನನ್ನು ಬಹಳವೇ ಕಾಡಿತು-  ‘ತನಗೆ ಡಿಸೈನಿಂಗ್ ಫೀಲ್ಡ್ ಇಷ್ಟ ಮತ್ತು ಆ ಕಾರಣದಿಂದ ಇನ್‌ಸ್ಟಾಗ್ರಾಂನಲ್ಲಿ ಇಂಥವುಗಳನ್ನೇ ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳುವೆ,  ಸಮಯ ಸಿಕ್ಕಾಗ ಅವನ್ನು ವೀಕ್ಷಿಸುವೆ’ ಎಂದೂ ಹೇಳಿದ. ನಿಜವಾಗಿ,

ಇನ್‌ಸ್ಟಾಗ್ರಾಂ ವೀಕ್ಷಿಸುವುದೆಂದರೆ ಚಿತ್ರವಿಚಿತ್ರ ಹಾಡು, ಹಾವಭಾವ, ಡ್ಯಾನ್ಸ್ ಗಳನ್ನು ವೀಕ್ಷಿಸುವುದೆಂದೇ ಹೆಚ್ಚಿನ ಹೆತ್ತವರು ಭಾವಿಸಿದ್ದಾರೆ.  ಆದ್ದರಿಂದ ಇನ್‌ಸ್ಟಾಗ್ರಾಂ ವೀಕ್ಷಿಸದಂತೆ ಮಕ್ಕಳ ಮೇಲೆ ನಿಯಂತ್ರಣ ಹೇರುವುದೂ ಇದೆ. ಇದು ಸಂಪೂರ್ಣ ತಪ್ಪು ಎಂದಲ್ಲ. ಆದರೆ, ಇ ನ್‌ಸ್ಟಾಗ್ರಾಂ ಅನ್ನು ಒಂದು ಮಗು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬಹುದು ಮತ್ತು ಕಲಿಕೆ, ಪ್ರತಿಭಾ ಪೋಷಣೆಗೆ ಪೂರಕವಾದ  ಏನೆಲ್ಲಾ ಅದರಲ್ಲಿದೆ ಎಂಬ ಬಗ್ಗೆ ಹೆತ್ತವರಲ್ಲಿ ಮಾಹಿತಿಗಳ ಕೊರತೆ ಇರುತ್ತದೆ. ಇದಕ್ಕೆ ಕಾರಣ ಜನರೇಶನ್ ಗ್ಯಾಪ್. ಟೆಕ್ನಾಲಜಿಯ ಈ  ಕಾಲದಲ್ಲಿ ನಾಲ್ಕೈದು  ವರ್ಷ ಪ್ರಾಯ ಅಂತರವಿರುವವರಲ್ಲೇ  ತಾಂತ್ರಿಕವಾಗಿ ಅಗಾಧ ಅಂತರ ಎದ್ದು ಕಾಣುತ್ತದೆ. ಕ್ಷಣಕ್ಷಣಕ್ಕೂ ಹೊಸ  ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿರುವಾಗ ತಲೆಮಾರುಗಳ ನಡುವೆ ಬಹಳ ಬೇಗನೇ ಅಂತರ ಉಂಟಾಗುತ್ತಿರುತ್ತದೆ. ಆರ್ಟಿಫಿಶಿಯಲ್  ಇಂಟೆಲಿ ಜೆನ್ಸ್ ನ  ಬಗ್ಗೆ ಇವತ್ತು ಯುವಸಮೂಹಕ್ಕೆ ಗೊತ್ತಿರುವ ಒಂದು ಶೇಕಡಾ ಮಾಹಿತಿ ಕೂಡ ಅವರ ಹೆತ್ತವರಿಗಿರುವುದಿಲ್ಲ. ಇಂಥ  ಉದಾಹರಣೆಗಳು ಸಾಕಷ್ಟು ಇವೆ.
ಸಮಸ್ಯೆ ಏನೆಂದರೆ,

ತಮಗೆ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಂಡು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವುದು ಬೇರೆ, ತಮಗೆ ಗೊತ್ತಿಲ್ಲ ಅನ್ನುವುದನ್ನೇ  ಅವಮಾನ ಎಂದು ಭಾವಿಸಿ ಮಕ್ಕಳನ್ನೇ ಗದರಿಸುತ್ತಾ ಅವರ ಪ್ರತಿ ನಡೆಯನ್ನೂ ವಿರೋಧಿಸುತ್ತಾ ಅವರ ಮಾತನ್ನು ತುಂಡರಿಸುತ್ತಾ  ವರ್ತಿಸುವುದು ಬೇರೆ. ಅನೇಕ ಹೆತ್ತವರು ಮಕ್ಕಳ ಮೇಲೆ ಹೀಗೆ ನಿಷ್ಠುರವಾಗಿ ವರ್ತಿಸುವುದಿದೆ. ಹೆತ್ತವರಿಗೆ ಗೊತ್ತು ಮಾಡುವ ಮಕ್ಕಳ  ಪ್ರಯತ್ನವನ್ನು ಉದ್ಧಟತನವೆಂಬಂತೆ  ಕಂಡು ಬಾಯಿ ಮುಚ್ಚಿಸುವ ಹೆತ್ತವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ನಿಜವಾಗಿ,

ಜನರೇಶನ್ ಗ್ಯಾಪ್‌ನ ಪರಿಣಾಮವಿದು.

ಇದಕ್ಕೆ ಪರಿಹಾರ ಏನು? ಮಕ್ಕಳ ಜೊತೆ ಹೆಚ್ಚೆಚ್ಚು ಒಡನಾಡುವುದು ಮತ್ತು ಅವರೊಂದಿಗೆ ತಮಾಷೆ, ಖುಷಿಯ ಕ್ಷಣ ಗಳನ್ನು  ಹಂಚಿಕೊಂಡು  ಮಾಹಿತಿ ವಿನಿಮಯವಾಗುವಂತೆ ನೋಡಿಕೊಳ್ಳುವುದು ಇದಕ್ಕಿರುವ ಹಲವು ಪರಿಹಾರಗಳಲ್ಲಿ ಒಂದು. ಮಕ್ಕಳೊಂದಿಗೆ  ಅಂತರ ಹೆಚ್ಚಾದಂತೆಲ್ಲಾ ಮಾಹಿತಿಗಳ ವಿನಿಮಯವೂ ಕಡಿಮೆಯಾಗುತ್ತದೆ. ಜೊತೆಗೇ ಮಕ್ಕಳ ಮೇಲೆ ಅನಗತ್ಯ ಸಂದೇಹಗಳಿಗೂ ಆಸ್ಪದ  ಕೊಡುತ್ತದೆ. ಮಗನೋ ಮಗಳೋ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದರೆ ಹೆತ್ತವರಿಗೆ ಸಣ್ಣ ಸಂದೇಹ ಮತ್ತು ಕಳವಳ. ಅದರಲ್ಲಿ ಬರೇ ಬೇಡದ್ದೇ   ಇದೆ ಎಂಬ ಪೂರ್ವಾಗ್ರಹವೇ ಈ ಸಂದೇಹ ಮತ್ತು ಅಸಹನೆಗೆ ಕಾರಣ. ಒಂದುವೇಳೆ, ಆ ಬಗ್ಗೆ ಮಕ್ಕಳ ಜೊತೆಗೇ ಕುಳಿತು  ತಿಳಿದುಕೊಳ್ಳುವ ಪ್ರಯತ್ನ ಸಾಗಿದರೆ ಸಾಕಷ್ಟು ಸಂದೇಹಗಳು ನಿವಾರಣೆಯಾಗಬಹುದು. ಸದ್ಯದ ದಿನಗಳಲ್ಲಿ ಮಕ್ಕಳನ್ನು ಹೆಚ್ಚೆಚ್ಚು ಆಪ್ತವಾಗಿಸಿಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ. ಈ ವಿಷಯಗಳಲ್ಲಿ ಪ್ರವಾದಿ(ಸ) ಅತ್ಯಂತ ಪರಮೋಚ್ಛ ಮಾದರಿ. ಅವರು ಪುಟ್ಟ ಮಕ್ಕಳಿಂದ  ಹಿಡಿದು ಹದಿಹರೆಯದವರ ಜೊತೆಗೂ ಒಡನಾಡಿದ ಅನೇಕ ವರದಿಗಳು ಸಾಕಷ್ಟು ಹದೀಸ್ ಗ್ರಂಥಗಳಲ್ಲಿವೆ. ಹದಿಹರೆಯದವರನ್ನಾಗಲಿ  ಮಕ್ಕಳನ್ನಾಗಲಿ ಅವರು ಕರ್ಕಶವಾಗಿ ನಡೆಸಿಕೊಂಡದ್ದು ಇಲ್ಲವೇ ಇಲ್ಲ. ಎಲ್ಲಿಯವರೆಗೆಂದರೆ,

ಫಜ್ಲ್  ಬಿನ್ ಅಬ್ಬಾಸ್ ಎಂಬ ಹದಿಹರೆಯದ ಯುವಕ ಪ್ರವಾದಿಯವರ ಜೊತೆ ಪ್ರಯಾಣದಲ್ಲಿದ್ದರು. ಹೀಗೆ ಸಾಗುವಾಗ  ಯುವತಿಯೋರ್ವಳು ಎದುರಾದಳು. ಫಜ್ಲ್ ಗೆ    ದೃಷ್ಟಿ ಕಳಚಲಾಗಲಿಲ್ಲ. ಪ್ರವಾದಿ(ಸ) ಯುವಕ ಫಜ್ಲ್  ರ ಗಲ್ಲವನ್ನು ಹಿಡಿದು ಮುಖವನ್ನು ಇನ್ನೊಂದು ಕಡೆಗೆ ತಿರುಗಿಸಿದರು. ಆದರೆ, ಪ್ರವಾದಿ(ಸ) ಫಜ್ಲ್  ರನ್ನು ಹೀಯಾಳಿಸಿದ್ದಾಗಲಿ, ಬೈದದ್ದಾಗಲಿ, ಮನಸ್ಸಿಗೆ ನೋವಾಗುವಂಥ ಒಂದೇ ಒಂದು ಮಾತನ್ನು ಆಡಿದ್ದಾಗಲಿ ಇಲ್ಲವೇ ಇಲ್ಲ. ಯಾಕೆಂದರೆ, ಹದಿಹರೆಯದವರ ಭಾವನೆಗಳ ಬಗ್ಗೆ ಪ್ರವಾದಿಯವ ರಿಗೆ (ಸ) ಅರಿವಿತ್ತು. ಆ ಪ್ರಾಯದವರೊಂದಿಗೆ ಹೇಗೆ ನಡಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆಯಿತ್ತು. ಫಜ್ಲ್  ರ ಪ್ರಾಯದಲ್ಲಿ ನಿಂತು  ಯೋಚಿಸುವ ಸಾಮರ್ಥ್ಯ ಪ್ರವಾದಿಯವರಿಗೆ ಇದ್ದಿದ್ದರಿಂದಲೇ ಗಲ್ಲವನ್ನು ಹಿಡಿದು ಪ್ರೀತಿಯಿಂದ ಮುಖ ತಿರುಗಿಸುವ ಮೂಲಕ ತಿದ್ದಿದರು. ನಿಜವಾಗಿ,

ಮುಕ್ತ ಸ್ವಾತಂತ್ರ‍್ಯದ ಈ ಆಧುನಿಕ ಕಾಲದಲ್ಲಿ ಹದಿಹರೆಯದವರನ್ನು ತಿದ್ದಲು ಹೊರಡುವವರಲ್ಲಿ ಇರಬೇಕಾದ ಎಚ್ಚರಿಕೆಗಳಿವು. ಬೆರಳ  ತುದಿಯಲ್ಲಿ ಜಗತ್ತನ್ನೇ ನೋಡಲು ಸಾಧ್ಯವಿರುವ ಈ ಕಾಲದಲ್ಲಿ ಹೆತ್ತವರು ತಮ್ಮ ಹದಿಹರೆಯದ ಮಕ್ಕಳ ವಿಷಯದಲ್ಲೂ ಪ್ರವಾದಿಯ  ಪ್ರೀತಿ ಮತ್ತು ಜಾಣ್ಮೆಯನ್ನು ಪ್ರದರ್ಶಿಸಬೇಕಿದೆ. ಕಾಲದ ಬದಲಾವಣೆಯನ್ನು ಲೆಕ್ಕಿಸದೇ ಮಕ್ಕಳ ಜೊತೆ ವರ್ತಿಸುವುದರಿಂದ ಲಾಭಕ್ಕಿಂತ  ನಷ್ಟವೇ ಹೆಚ್ಚಾಗಬಹುದು.

ಇಮಾಮ್ ಬುಖಾರಿ ಉಲ್ಲೇಖಿಸಿರುವ ವಚನ ಹೀಗಿದೆ:

ಉಮರ್ ಬಿನ್ ಅಬೀಸಲಮ ಅವರು ಮಗುವಾಗಿದ್ದಾಗಿನ ಘಟನೆ. ಚಿಕ್ಕ ಪ್ರಾಯದ ಉಮರ್ ಪ್ರವಾದಿ(ಸ)ರ ಜೊತೆ ಊಟಕ್ಕೆ ಕುಳಿತ.  ಬಟ್ಟಲಿನ ಉದ್ದಕ್ಕೂ ಬೆರಳಾಡಿಸಿ ಮತ್ತು ಕೈ ತಾಗಿಸಿ ತಿನ್ನತೊಡಗಿದ. ಪ್ರವಾದಿ(ಸ) ಬಾಲಕ ಉಮರ್‌ನನ್ನು ತಿದ್ದಿದರು. ತಿನ್ನುವ ಮೊದಲು  ಬಿಸ್ಮಿ ಹೇಳಬೇಕು ಎಂದು ಹೇಳಿಕೊಟ್ಟರು. ಆ ಬಳಿಕ ಬಲಗೈಯಿಂದ ತಿನ್ನಬೇಕು ಎಂದು ಮೈದಡವಿ ಹೇಳಿ ದರು. ಮಾತ್ರವಲ್ಲ, ಬಟ್ಟಲಿನ  ಉದ್ದಕ್ಕೂ ಕೈಹಾಕಿ ತಿನ್ನಬಾರದು, ನಿನ್ನ ಹತ್ತಿರದಿಂದ ತಿನ್ನಬೇಕು ಎಂದೂ ಹೇಳಿಕೊಟ್ಟರು.
ಪ್ರವಾದಿ(ಸ) ಹೇಳಿದ ರೀತಿ ತನ್ನ ಮೇಲೆ ಎಂಥ ಪರಿಣಾಮ ಬೀರಿತೆಂದರೆ, ಆ ಬಳಿಕ ಜೀವಮಾನದಲ್ಲಿ ಒಮ್ಮೆಯೂ ಈ ಉಪ ದೇಶವನ್ನು ನಾನು ಉಲ್ಲಂಘಿಸಿಲ್ಲ ಎಂದು ಉಮರ್ ಬಿನ್ ಅಬೀ ಸಲಮ ಹೇಳಿರುವುದಾಗಿ ಬುಖಾರಿ ಗ್ರಂಥದಲ್ಲಿ ನಮೂದಿಸಲಾಗಿದೆ.

ಇದೊಂದೇ ಅಲ್ಲ,

ಪ್ರವಾದಿ(ಸ) ಮಕ್ಕಳನ್ನು ಅತಿಯಾಗಿ ಹಚ್ಚಿಕೊಳ್ಳುತ್ತಿದ್ದರು. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಮಾತ್ರವೇ ಅಲ್ಲ, ಎಲ್ಲ ಮಕ್ಕಳನ್ನೂ  ಪ್ರೀತಿಯಿಂದ ಮಾತನಾಡಿಸುವುದು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಅವರ ರೀತಿಯಾಗಿತ್ತು. ಒಂದು  ಬಾರಿ ಹೀಗಾಯಿತು,

ಅವರು ಸಾಮೂಹಿಕ ನಮಾಝï‌ನ ನೇತೃತ್ವ ವಹಿಸಿದ್ದರು. ಸುಜೂದ್ ತುಂಬಾ ದೀರ್ಘವಾಯಿತು. ಎಷ್ಟೆಂದರೆ, ನಮಾಜ್  ನಲ್ಲಿದ್ದ  ಎಲ್ಲರ ಅನುಭವಕ್ಕೂ ಬರುವಷ್ಟು. ಆದ್ದರಿಂದಲೇ ನಮಾಜ್  ಮುಗಿದ ಬಳಿಕ ಪ್ರವಾದಿಯವರನ್ನು ಆ ಬಗ್ಗೆ ಅವರೆಲ್ಲ ಪ್ರಶ್ನಿಸಿದರು. ಆಗ  ಪ್ರವಾದಿ(ಸ) ಹೇಳಿದರು,

‘ನಾನು ಸುಜೂದ್‌ನಲ್ಲಿದ್ದಾಗ ನನ್ನ ಬೆನ್ನ ಮೇಲೆ ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ ಹತ್ತಿದರು. ಆದ್ದರಿಂದ ಅವರು ಇಳಿಯು  ವವರೆಗೆ ನಾನು ಕಾದೆ. ಆದ್ದರಿಂದ ಸುಜೂದ್ ದೀರ್ಘವಾಯಿತು.’ ಇದೊಂದೇ ಅಲ್ಲ, ನಮಾಜ್ನ  ವೇಳೆ ಮತ್ತು ಮಿಂಬರ್‌ನಲ್ಲಿದ್ದ  ಸಮಯದಲ್ಲೂ ಪ್ರವಾದಿ ಮಕ್ಕಳನ್ನು ಪ್ರೀತಿಸಿದ್ದರು ಎಂಬುದಾಗಿ ಇಮಾಮ್ ಅಹ್ಮದ್ ಮತ್ತು ನಸಾಈ ಉಲ್ಲೇಖಿಸಿರುವ ಹದೀಸ್ ಗಳ ಲ್ಲಿದೆ. ಅಂದಹಾಗೆ,

ಪ್ರವಾದಿಯ ಈ ಉದಾಹರಣೆಯನ್ನು ಇಂದಿನ ಕಾಲದ ಮಸೀದಿಗಳಿಗೆ ಅನ್ವಯಿಸಿ ನೋಡಿ. 7 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮಸೀ ದಿಗೆ ಕರೆತರಬೇಡಿ ಎಂಬ ಬೋರ್ಡು ತೂಗು ಹಾಕಲಾದ ಮಸೀದಿಗಳು ಅಸಂಖ್ಯ ಇವೆ. ಹಾಗಂತ, ಇಂಥ ಬೋರ್ಡ್ ಗೆ  ಅದರದ್ದೇ   ಆದ ಕಾರಣಗಳು ಇರಬಹುದು. ಆದರೆ ಹೆತ್ತವರನ್ನು ಅನುಸರಿಸಿಕೊಂಡು ಬೆಳೆಯಬೇಕಾದ ಮತ್ತು ನಮಾಜ್ ನ   ಚೈತನ್ಯವನ್ನು ತನ್ನೊಳಗೆ ಇಳಿಸಿಕೊಳ್ಳಬೇಕಾದ ಮಕ್ಕಳನ್ನು ಹೀಗೆ ಮಸೀದಿಯಿಂದ ಹೊರಗಿರಿಸುವ ಬದಲು ಮಸೀದಿಗೆ ತಾಗಿಕೊಂಡೇ ಕಿಡ್ಸ್ ರೂಮನ್ನು  ನಿರ್ಮಿಸಿದರೆ ಎಷ್ಟು ಚೆನ್ನಾದೀತು? ಹಾಗೆ ಮಾಡಿದರೆ ಆಡುತ್ತಲೇ ನಮಾಝನ್ನು ಜೀರ್ಣಿಸಿಕೊಳ್ಳುವ ಅವಕಾಶವೊಂದು ಮಕ್ಕಳಿಗೆ  ಸಿಕ್ಕಂತಾಗದೇ? ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಮಸೀದಿಯಲ್ಲಿ ನಮಾಝಿಗರನ್ನು ನೋಡುತ್ತಾ ಬೆಳೆಯುವ ಮಗು ಮಸೀದಿಗೆ  ಹತ್ತಿರವಾಗುತ್ತದೆ. ಆರಂಭದಲ್ಲಿ ಸಣ್ಣ-ಪುಟ್ಟ ಕೀಟಲೆ, ಆಟ, ಶಬ್ದ ಇದ್ದದ್ದೇ . ನಿಧಾನಕ್ಕೆ ಅದು ಸರಿ ಹೋಗುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ನಮಾಝಿಗರು ಮಕ್ಕಳ ಈ ತುಂಟಾಟವನ್ನು ಮಹಾನ್ ಅಪರಾಧವೆಂಬಂತೆ  ಕಾಣುವುದಿದೆ. ನಮಾಜ್  ಮುಗಿದ ಕೂಡಲೇ ಆ  ಮಕ್ಕಳನ್ನು ನೂರು ಕಣ್ಣುಗಳು ಸುಡುವಂತೆ ತಿರುಗಿ ನೋಡುವುದಿದೆ. ಮಕ್ಕಳನ್ನು ಹತ್ತಿರ ಕರೆದು ಮೈದಡವಿ ಪ್ರೀತಿಯಿಂದ ಮತ್ತೆ ಮತ್ತೆ  ಹೇಳುವ ಸಹನೆ ಇವತ್ತಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ, ಹಿರಿಯರು ಮಕ್ಕಳ ಬಗ್ಗೆ ಮಗುವಾಗಿ ಆಲೋಚಿಸದೇ  ಇರುವುದು.

ಒಮ್ಮೆ ಪ್ರವಾದಿಯವರು(ಸ) ಹಸನ್ ಮತ್ತು ಹುಸೈನ್ ಜೊತೆ ಆಡುತ್ತಿದ್ದ ವೇಳೆ ಅಲ್ಲಿಗೆ ಮುಆವಿಯಾ ಬಂದರು. ಅವರು ಆಟವನ್ನು  ನೋಡತೊಡಗಿದರು. ಆಗ ಪ್ರವಾದಿ(ಸ) ಹೇಳಿದರು,

ಯಾರಿಗಾದರೂ ಮಕ್ಕಳಿದ್ದರೆ ಅವರು ಮಕ್ಕಳ ಜೊತೆ ಮಗುವಾಗಲಿ. ಇನ್ನೊಂದು ಘಟನೆ,

ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್‌ರನ್ನು ಬೆನ್ನ ಮೇಲೆ ಕೂರಿಸಿ ಪ್ರವಾದಿ(ಸ) ಆಟವಾಡುತ್ತಿದ್ದಾಗ ಉಮರ್ ಬಿನ್ ಖತ್ತಾಬ್(ರ)  ಅಲ್ಲಿಗೆ ಬಂದರು. ‘ಎಷ್ಟು ಒಳ್ಳೆಯ ಕುದುರೆ ನಿಮ್ದು’ ಎಂದು ಮಕ್ಕಳನ್ನು ನೋಡಿ ನಗುತ್ತಾ ಹೇಳಿದರು. ಆಗ ಪ್ರವಾದಿ(ಸ), ‘ಇವರಿಬ್ಬರೂ  ಒಳ್ಳೆಯ ಕುದುರೆ ಸವಾರರು’ ಎಂದರು ಎಂಬುದಾಗಿ ಇಬ್ನು ಕಸೀರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಗಳು ಫಾತಿಮಾ(ರ)ರನ್ನು ಪ್ರವಾದಿ ತನ್ನ ಕರುಳಿನ ತುಂಡು ಎಂದು ಹೇಳಿದ್ದರು. ಫಾತಿಮಾ ಹತ್ತಿರ ಬಂದಾಗ ಎದ್ದು ನಿಂತು ಅವರನ್ನು  ಆಲಿಂಗಿಸಿ ಚುಂಬಿಸಿ ತನ್ನ ಬಳಿ ಕುಳ್ಳಿರಿಸುತ್ತಿದ್ದರು. ಒಮ್ಮೆ ಫಾತಿಮಾ ಪುಟ್ಟ ದೂರಿನೊಂದಿಗೆ ಪ್ರವಾದಿ(ಸ)ರ ಬಳಿಗೆ ಬಂದರು. ಪತಿ ಅಲಿಯವರ(ರ) ಮನೆಯಲ್ಲಿ ಕೆಲಸದಾಳು ಇಲ್ಲದೇ ಇರುವುದರಿಂದ ತನಗಾಗುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡರು. ಪ್ರವಾದಿ(ಸ)  ಫಾತಿಮಾರನ್ನು ಹತ್ತಿರ ಕುಳ್ಳಿರಿಸಿದರು. ಸಹನೆಯ ಉಪದೇಶ ಮಾಡಿದರು. ಆಯಾಸದ ವೇಳೆ ಹೇಳುವುದಕ್ಕೆಂದು ಕೆಲವು ಸ್ವಸ್ತಿ ವಚ ನಗಳನ್ನು ಹೇಳಿಕೊಟ್ಟರು. ಅಂದಹಾಗೆ,

ಹದಿಹರೆಯದ ಮತ್ತು ಚಿಕ್ಕ ಪ್ರಾಯದ ಮಕ್ಕಳ ಮಾತುಗಳನ್ನು ಅವರ ಮಟ್ಟಕ್ಕೆ ಇಳಿದು ಕೇಳುವ ಮತ್ತು ಆಲೋಚಿಸುವ ಸಹನೆ  ಪ್ರದರ್ಶಿಸುವುದು ಇಂದಿನ ಹೆತ್ತವರ ಪಾಲಿಗೆ ಬಹಳ ಅಗತ್ಯ. ಮಕ್ಕಳು, ಹದಿಹರೆಯದವರು ಮತ್ತು ದೊಡ್ಡವರ ಜೊತೆ ಪ್ರವಾದಿ(ಸ)  ಏಕಪ್ರಕಾರವಾಗಿ ನಡಕೊಂಡದ್ದೇ  ಇಲ್ಲ. ಹದಿಹರೆಯದ ಸಹಜ ಆಕರ್ಷಣೆಗೆ ಅವರು ಪ್ರತಿಕ್ರಿಯಿಸಿದ ರೀತಿ ಮತ್ತು ಮಕ್ಕಳ ಜೊತೆ  ಮಗುವಾಗುತ್ತಿದ್ದ ರೀತಿಯೇ ಅವರು ಕಾಲ ಮತ್ತು ಪ್ರಾಯವನ್ನು ಹೇಗೆ ಓದುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜನರೇಶನ್ ಗ್ಯಾ ಪ್‌ಗೆ ಅವರಲ್ಲಿ ಅವಕಾಶವೇ ಇರಲಿಲ್ಲ. ಆ ಕಾಲದ ಜನರೇಶನ್‌ನ ಭಾವನೆಯನ್ನು ಅವರು ಓದಬಲ್ಲವರಾಗಿದ್ದರು. ಅಳಿಯನಾದ ಅಲಿಯವರನ್ನು(ರ) ತರಾಟೆಗೆತ್ತಿಕೊಳ್ಳುವ ಬದಲು ತಾನು ಅತಿಯಾಗಿ ಪ್ರೀತಿಸುವ ಮಗಳಿಗೆ ಅವರು ಉಪದೇಶ ನೀಡಿದ್ದೇ  ಸಂದರ್ಭ  ಮತ್ತು ಸನ್ನಿವೇಶವನ್ನು ಅವರು ಹೇಗೆ ತಿಳಿದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಈಗಿನ ಅಗತ್ಯ ಇದು. ಟೆಕ್ನಾಲಜಿಯ ಈ  ಕಾಲದಲ್ಲಿ ಜನರೇಶನ್ ಗ್ಯಾಪ್ ಆಗದಂತೆ ಹೆತ್ತವರು ಜಾಗರೂಕತೆಯನ್ನು ಪಾಲಿಸಬೇಕು.

Thursday, September 14, 2023

ಇಸ್ಲಾಮೋಫೋಬಿಯಾದ ಫಲಿತಾಂಶವೇ ಈ ಹೇಮಾ, ರೇವತಿ, ತ್ಯಾಗಿ?




ನಾಲ್ಕು ಘಟನೆಗಳು

1. ತಮಿಳುನಾಡಿನ ತಿರುವಣ್ಣಮಲೈ ನಗರದ ಸೋಮಸಿಪಾಡಿ ಗ್ರಾಮದ ಅಣ್ಣಾಮಲೈ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಹಿಂದಿ ಪರೀಕ್ಷೆ ನಡೆಯುತ್ತಿತ್ತು. 27 ವರ್ಷದ ಶಬಾನಾ ಪರೀಕ್ಷೆಗೆ ಹಾಜರಾದರು. ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ ಏರ್ಪಡಿಸಿದ್ದ  ಈ ಪರೀಕ್ಷೆಗೆ 540 ಮಂದಿ ಹಾಜರಾಗಿದ್ದರು. ಇವರಲ್ಲಿ ಶಬಾನಾ ಏಕೈಕ ಹಿಜಾಬ್‌ಧಾರಿ ಮಹಿಳೆ. ಇವರು ಕ್ವಾಲಿಫೈಡ್ ಅರೆಬಿಕ್ ಟೀಚರ್.  ಖಾಸಗಿ ಶಾಲೆಯೊಂದರಲ್ಲಿ ಈ ಶಬಾನಾ ಅರೆಬಿಕ್ ಟೀಚರ್ ಆಗಿಯೂ ಕೆಲಸ ಮಾಡುತ್ತಿದ್ದರು. ಪರೀಕ್ಷೆ ಬರೆಯುತ್ತಾ 15 ನಿಮಿಷಗಳು  ಕಳೆದಿರಬಹುದು. ಪರೀಕ್ಷಾ ಹಾಲ್‌ನ ಮೇಲ್ನೋಟ ವಹಿಸಿಕೊಂಡಿದ್ದ ರೇವತಿ ಟೀಚರ್ ಅವರ ಬಳಿಗೆ ಬಂದು ಹಿಜಾಬ್‌ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರಿ ಎಂದು ಆದೇಶಿಸಿದರು. ಶಬಾನಾ ಒಪ್ಪಲಿಲ್ಲ. ತಮಿಳುನಾಡಿನ ಯಾವುದೇ ಶಾಲೆಯಲ್ಲಾಗಲಿ  ಪರೀಕ್ಷಾ ಹಾಲ್‌ನಲ್ಲಾಗಲಿ ಹಿಜಾಬ್‌ಗೆ ನಿಷೇಧ ಇರಲಿಲ್ಲ. ಶಬಾನಾ ವಾದಿಸಿದರು. ಬಳಿಕ ಶಾಲಾ ಪ್ರಾಂಶುಪಾಲ ಸಂತೋಷ್ ಕುಮಾರ್  ಅವರ ಪ್ರವೇಶವಾಯಿತು. ಒಂದೋ ಹಿಜಾಬ್ ಇಲ್ಲವೇ ಪರೀಕ್ಷೆ ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಅವಕಾಶ ಇದೆ ಎಂದು  ಅವರು ಷರಾ ಬರೆದರು. ಶಬಾನಾ ಒಪ್ಪಲಿಲ್ಲ. ತಾನು ಅರೆಬಿಕ್ ಟೀಚರ್ ಆಗಿದ್ದು, ಹಿಜಾಬ್ ಕಳಚುವುದರಿಂದ ತನ್ನ ಮಕ್ಕಳಿಗೆ ಕೆಟ್ಟ  ಸಂದೇಶ ರವಾನೆಯಾಗುತ್ತದೆ ಎಂದರೂ ಅವರು ಕೇಳಲಿಲ್ಲ. ಶಾಲಾ ಕರೆಸ್ಟಾಂಡೆಂಟ್  ಆಗಮಿಸಿ ಆಕೆಯ ಪ್ಯಾಡ್ ಅನ್ನು ಕಿತ್ತುಕೊಂಡರು.  ಮಾತ್ರವಲ್ಲ, ಸ್ವಇಚ್ಛೆಯಿಂದ ಪರೀಕ್ಷಾ ಹಾಲ್‌ನಿಂದ ತೆರಳುತ್ತಿರುವುದಾಗಿ ಬರಹದ ಮೂಲಕ ಬರೆದುಕೊಡು ಎಂದೂ ಆಗ್ರಹಿಸಿದರು.  ಶಬಾನಾ ಈ ಎಲ್ಲ ಸಂಗತಿಯನ್ನು ಜಿಲ್ಲಾಧಿಕಾರಿ ಮುರುಗೇಶ್ ಅವರ ಗಮನಕ್ಕೆ ತಂದರು. ಶಿಕ್ಷಣ ಸಚಿವ ಅಸ್‌ಬಿಲ್ ಮಹೇಶ್  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಶಬಾನಾರಿಗೆ ಮರಳಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಯಿತು. ಆದರೆ, ಘಟ ನೆಯಿಂದ ತಾನು ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ ಎಂದ ಶಬಾನಾ ಆ ಹೊತ್ತಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ನೊಂದು  ನುಡಿದರು. ಇದು 2023, ಆಗಸ್ಟ್ 22ರಂದು ನಡೆದ ಘಟನೆ.

2. ದೆಹಲಿಯ ಕೈಲಾಶ್ ನಗರದ ಸರಕಾರಿ ಪ್ರೌಢಶಾಲೆಯ ಟೀಚರ್ ಹೇಮಾ ಗುಲಾಟಿ 9ನೇ ತರಗತಿಗೆ ಪಾಠ ಮಾಡುತ್ತಿದ್ದರು.  ಚಂದ್ರಯಾನವು ಚಂದ್ರನಿಗೆ ಮುತ್ತಿಕ್ಕುವುದಕ್ಕೆ ಗಂಟೆಗಳಷ್ಟೇ ಬಾಕಿಯಿತ್ತು. ದೆಹಲಿ ಸರಕಾರ ಹೊಸದಾಗಿ ಅಳವಡಿಸಿರುವ ದೇಶಭಕ್ತಿ ಪಾಠ ಪುಸ್ತಕವನ್ನು ಬೋಧಿಸುತ್ತಿರುವ ವೇಳೆ ಮುಸ್ಲಿಮರು ಮತ್ತು ಇಸ್ಲಾಮ್‌ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದರು. ‘ಮುಸ್ಲಿಮರು  ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಯಾವ ಪಾತ್ರವನ್ನೂ ನಿಭಾಯಿಸಿಲ್ಲ, ನೀವು ಪ್ರಾಣಿಗಳನ್ನು ಹತ್ಯೆ ಮಾಡು ತ್ತೀರಿ’ ಮತ್ತು ಅದರ  ಮಾಂಸವನ್ನು ತಿನ್ನುತ್ತೀರಿ. ನೀವು ಕರುಣೆ ಇಲ್ಲದವರು, ನೀವು ಪಾಕಿಸ್ತಾನಕ್ಕೆ ಹೋಗಿ... ಎಂದು 52 ವಿದ್ಯಾರ್ಥಿಗಳ ಮುಂದೆ ಆಕೆ  ಹೇಳಿದರು. ಹಾಗಂತ, ಆಕೆ ಹೀಗೆ ಮಾತನಾಡುತ್ತಿರುವುದು ಅದು ಮೊದಲ ಬಾರಿ ಆಗಿರಲಿಲ್ಲ. ತರಗತಿಯಲ್ಲಿರುವ 9 ಮುಸ್ಲಿಮ್  ವಿದ್ಯಾರ್ಥಿಗಳು ಈ ಬಾರಿ ಆಕ್ಷೇಪಿಸಿದರು. ಇದೇವೇಳೆ, ಕೆಲವು ವಿದ್ಯಾರ್ಥಿಗಳು ಆಕೆಯ ಮಾತಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.  ಇದಾದ ಬಳಿಕ ಮಕ್ಕಳ ಹೆತ್ತವರು ಈ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾದರು ಮತ್ತು ಹೇಮಾ ಗುಲಾಟಿ ತಪ್ಪೊಪ್ಪಿಕೊಂಡು ಕ್ಷಮೆ  ಯಾಚಿಸಿದರು. ಇದು ನಡೆದಿರುವುದು ಆಗಸ್ಟ್ 23ರಂದು.

3. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಖುಬ್ಬೂಪುರ್ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್ ಕೂಡ ಇಂಥದ್ದೇ  ಮುಸ್ಲಿಮ್ ದ್ವೇಷದ  ಕಾರಣಕ್ಕಾಗಿ ಸುದ್ದಿಗೀಡಾಯಿತು. ಒಂದರಿಂದ  5ನೇ ತರಗತಿಯವರೆಗೆ ಕಲಿಸಲಾಗುವ ಈ ಖಾಸಗಿ ಶಾಲೆಯಲ್ಲಿ ಒಟ್ಟು 52  ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಉಳಿದ ವಿದ್ಯಾರ್ಥಿಗಳಿಂದ ಟೀಚರ್ ತೃಪ್ತ ತ್ಯಾಗಿ  ಬಾರಿಸುತ್ತಾರೆ. ಮಾತ್ರವಲ್ಲ, ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಎರಡನೇ ತರಗತಿಯ ಆ ವಿದ್ಯಾರ್ಥಿ ಅಳುತ್ತಾ ಕರಿ  ಹಲಗೆಯ ಬಳಿ ನಿಂತಿರುವುದು ಮತ್ತು ಸಹಪಾಠಿಗಳು ಒಬ್ಬೊಬ್ಬರಾಗಿ ಬಂದು ಆತನ ಕೆನ್ನೆಗೆ ಬಾರಿಸುವುದು ವೀಡಿಯೋದಲ್ಲಿದೆ.  ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಗಿಸುವುದಕ್ಕೆ ಹೆತ್ತವರ ಮೇಲೆ ಒತ್ತಡಗಳೂ  ಬಂದಿವೆ. ಇದು ಆಗಸ್ಟ್ 22ರ ಘಟನೆ.

4. ಜನವರಿ 22, 2022ರಂದು ನಮ್ಮದೇ ರಾಜ್ಯದಲ್ಲಿ ಹಿಜಾಬ್ ವಿವಾದ ಶುರುವಾಯಿತು. ಎರಡ್ಮೂರು ತಿಂಗಳ ಕಾಲ ವಿದ್ಯಾರ್ಥಿ ನಿಯರನ್ನು ಇನ್ನಿಲ್ಲದಂತೆ ಕಾಡಿದ ಈ ವಿವಾದದಿಂದಾಗಿ 1010 ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ವಿಧಾನಸಭೆಗೆ ಸರಕಾರವೇ  ತಿಳಿಸಿರುವ ಮಾಹಿತಿ ಹೇಳುತ್ತದೆ.

ಹಾಗಂತ, ಇವೆಲ್ಲ ಒಂದು ಬೆಳಗಾತ ದಿಢೀರನೇ ಉಂಟಾದ ಬೆಳವಣಿಗೆ ಎಂದು ಅನಿಸುತ್ತಿಲ್ಲ.

ಜನರ ಮನಸ್ಸಿನಲ್ಲಿ ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್‌ನ ಬಗೆಗಿನ ಭೀತಿಯ ಭಾವವನ್ನು ಸೃಷ್ಟಿಸುವ ಪ್ರಯತ್ನ ಬಹಳ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಸಿನಿಮಾ, ನಾಟಕ, ಯಕ್ಷಗಾನ, ಕತೆ, ಕಾದಂಬರಿಗಳ ಮೂಲಕ ಈ ದ್ವೇಷದ ಇಂಜಕ್ಷನ್ ಅನ್ನು ಜನರಿಗೆ ಚುಚ್ಚುತ್ತಲೇ ಬರಲಾಗಿದೆ. ಇತ್ತೀಚಿನ ದಶಕದಲ್ಲಿ ಈ ದ್ವೇಷ ಪ್ರಚಾರದ ನೊಗವನ್ನು ಟಿ.ವಿ. ಚಾನೆಲ್‌ಗಳು ವಹಿಸಿ ಕೊಂಡ ಬಳಿಕ  ಹೆಚ್ಚು ತೀವ್ರ ರೂಪದ ಫಲಿತಾಂಶ ವ್ಯಕ್ತವಾಗುತ್ತಿದೆ.

ಮುಸ್ಲಿಮರನ್ನು ಲುಚ್ಚರಂತೆ, ಹೆಣ್ಣುಬಾಕರು, ಸರ್ವಾಧಿಕಾರಿಗಳು, ಮಹಿಳಾ ದೌರ್ಜನ್ಯಕೋರರು, ದರೋಡೆಕೋರರು, ಬಹುಪತ್ನಿ  ವಲ್ಲಭರು ಮತ್ತು ಇನ್ನಿತರ ಅತಿಕೆಟ್ಟ ವ್ಯಕ್ತಿತ್ವಗಳಂತೆ ಬಿಂಬಿಸಲು ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳ ನಡುವೆ ಈಗಲೂ ಪೈಪೋಟಿಯೇ  ಇದೆ. 2012ರಲ್ಲಿ ಡಿಕ್ಟೇಟರ್ ಎಂಬ ಹಾಲಿವುಡ್ ಸಿನಿಮಾ ಬಿಡುಗಡೆಯಾಯಿತು. ಸಹಜವಾಗಿ ಇದರಲ್ಲಿ ಡಿಕ್ಟೇಟರ್ (ಸರ್ವಾಧಿಕಾರಿ)  ಮುಸ್ಲಿಮ್. ಯಾವುದೇ ಕಾರಣಕ್ಕೂ ಪ್ರಜಾತಂತ್ರ ತಳವೂರದಂತೆ ಮಾಡುವುದೇ ಆತನ ಕೆಲಸ. ಅದಕ್ಕಾಗಿ ಅತಿ ಕ್ರೂರಿಯಾಗಿ ಆತ  ಬದಲಾಗುತ್ತಾನೆ. ಹಾಗಂತ, 2012ರಲ್ಲಿ ಸಿನಿಮಾ ತಯಾರು ಮಾಡುವಾಗ ಮತ್ತು ಅದಕ್ಕಿಂತ ಮೊದಲೂ ಈ ಜಗತ್ತಿನಲ್ಲಿ ಮುಸ್ಲಿಮರಲ್ಲದ  ಸರ್ವಾಧಿಕಾರಿಗಳು ಸಾಕಷ್ಟು ಇದ್ದರು. ಜನರೊಂದಿಗೆ ಅತ್ಯಂತ ನಿರ್ದಯಿಯಾಗಿ ನಡಕೊಂಡವರೂ ಇದ್ದರು. ಈಗಲೂ ಇದ್ದಾರೆ. 2022  ಆಗಸ್ಟ್ 5ರಂದು ಅನ್ನು ಕಪೂರ್ ನಾಯಕತ್ವದ ‘ಹಮ್ ದೋ ಹಮಾರೆ ಬಾರಾ’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು.  ಅದರಲ್ಲಿ ಅನ್ನು ಕಪೂರ್ ಮುಸ್ಲಿಮ್ ಕುಟುಂಬದ ಯಜಮಾನನ ಪಾತ್ರ ಧಾರಿಯಾಗಿ ಕಾಣಿಸಿದ್ದರೆ ಸುತ್ತ-ಮುತ್ತ 11 ಮಕ್ಕಳಿದ್ದರು. ಅಲ್ಲದೇ  12ನೇ ಪ್ರಸವಕ್ಕೆ ಸಿದ್ಧವಾದ ಪತ್ನಿಯೂ ಜೊತೆಗಿದ್ದರು. 2023ರಲ್ಲಿ ಈ ಸಿನಿಮಾ ಬಿಡುಗಡೆಯೂ ಆಯಿತು. ಅಂದಹಾಗೆ, 

ಈ ಸಿನಿಮಾ  ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತೋ ಸೋತಿತೋ ಎಂಬುದಕ್ಕಿಂತ  ಹೆಚ್ಚಾಗಿ ಈ ಸಿನಿಮಾ ವೀಕ್ಷಿಸಿದವರ ಮೇಲೆ ಈ ಚಿತ್ರಕತೆ ಎಂಥ ಪರಿಣಾಮ  ಬೀರಿರಬಹುದು ಎಂಬುದೇ ಮುಖ್ಯ. ಮುಸ್ಲಿಮ್ ಸಮುದಾಯ ಮಕ್ಕಳನ್ನು ತಯಾರಿಸುವ ಕಾರ್ಖಾನೆಗಳಿದ್ದಂತೆ ಎಂಬ ಸಂದೇಶವನ್ನು  ಈ ಸಿನಿಮಾ ಬಿತ್ತುವುದಂತೂ ಖಂಡಿತ. ಹಾಗಂತ, ಈ ದೇಶದ ಜನಗಣತಿ ವಿವರಗಳು ಈ ಸಂದೇಶವನ್ನು ಪುರಸ್ಕರಿಸುತ್ತದೆಯೇ? ಇಲ್ಲ.  ಸ್ವಾತಂತ್ರ‍್ಯಾ ನಂತರ ನಡೆದ ಮೊದಲ ಜನಗಣತಿಯ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತ  ಹೆಚ್ಚಿತ್ತು. ಆದರೆ  2011ರ ಜನಗಣತಿಯ ಪ್ರಕಾರ, ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತಲೂ ವೇಗವಾಗಿ ಕುಸಿಯುತ್ತಿದೆ. ಹಿಂದುಳಿದ  ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಮರ ಫಲವತ್ತತೆಯ ಪ್ರಮಾಣ ಸಮಾನವಾಗಿ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ಮುಸ್ಲಿಮರ ಫಲವತ್ತತೆಯ  ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಆದ್ದರಿಂದಲೇ, ಹಮ್ ದೋ ಹಮಾರೆ ಬಾರಾ ಸಿನಿಮಾ ಪೋಸ್ಟರ್‌ಗೆ ಪತ್ರಕರ್ತೆ ರಾಣಾ  ಅಯ್ಯೂಬ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಹಾಗೆ,

‘ಇಮ್ಯಾಜಿನಿಂಗ್  ಇಂಡಿಯನ್ ಮುಸ್ಲಿಮ್ಸ್: ಲುಕಿಂಗ್ ಥ್ರೂ ದಿ ಲೆನ್ಸ್ ಆಫ್ ಬಾಲಿವುಡ್’- ಎಂಬ ಸಂಶೋಧನಾ ಪ್ರಬಂಧದಲ್ಲಿ  ಮುಸ್ಲಿಮ್ ದ್ವೇಷಕ್ಕೆ ಬಾಲಿವುಡ್ ಸಿನಿಮಾಗಳ ಕೊಡುಗೆಯನ್ನು ಮೊಯಿದುಲ್ ಇಸ್ಲಾಮ್ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಹೆಚ್ಚಿನೆಲ್ಲ ಸಿನಿಮಾಗಳಲ್ಲಿ ಮುಸ್ಲಿಮರು ಒಂದೋ ಖಳರು ಅಥವಾ ಖೂಳರು ಅಥವಾ ಹೆಣ್ಣು ಬಾಕರು. ಮುಸ್ಲಿಮ್ ಪಾತ್ರವನ್ನು ನೆಗೆಟಿವ್ ಆಗಿ  ಬಿಂಬಿಸುವುದು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾ ನಿರ್ದೇಶಕರ ಮಾಮೂಲು ನೀತಿ. ಇನ್ನೊಂದು, ಐತಿಹಾಸಿಕ ಘಟನೆಗಳನ್ನು  ಹಿಂದೂ-ಮುಸ್ಲಿಮ್ ಆಗಿ ಚಿತ್ರೀಕರಿಸುವುದು. ಉದಾಹರಣೆಗೆ, ತಾನಾಜಿ ಸಿನಿಮಾ. 1670ರಲ್ಲಿ ಕೊಂಡಾಣದಲ್ಲಿ ಔರಂಗಝೇಬ್ ಮತ್ತು  ತಾನಾಜಿ ನಡುವೆ ನಡೆದ ಯುದ್ಧವನ್ನು ಯುದ್ಧವಾಗಿ ಬಿಂಬಿಸದೇ ಹಿಂದೂ-ಮುಸ್ಲಿಮ್ ನೆರಳಿನೊಂದಿಗೆ ಇದು ಕಟ್ಟಿಕೊಡುತ್ತದೆ.  ಅಲ್ಲಾವುದ್ದೀನ್ ಖಿಲ್ಜಿಯು ಚಿತ್ತೂರು ಮೇಲೆ ದಾಳಿ ಮಾಡಿ ಪದ್ಮಾವತಿಯ ಗಂಡ ರತನ್‌ಸಿಂಗ್‌ರನ್ನು ಕೊಂದ ಘಟನೆಯನ್ನು ನಿರ್ದೇಶಕ  ಸಂಜಯ್ ಲೀಲಾ ಬನ್ಸಾಲಿಯು
ಹಿಂದೂ-ಮುಸ್ಲಿಮ್ ರೀತಿಯಲ್ಲೇ  ಬಿಂಬಿಸಿದ್ದಾರೆ. ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ದ ನಾಲ್ಕು ಮಂದಿ ಮಹಿಳೆಯರಲ್ಲಿ ಇಬ್ಬರು  ಮುಸ್ಲಿಮ್ ಪಾತ್ರಧಾರಿಗಳು. ಸ್ವಾತಂತ್ರ‍್ಯ ಹುಡುಕಾಟದ ಈ ಪಾತ್ರಗಳು ಪರೋಕ್ಷವಾಗಿ ಮುಸ್ಲಿಮ್ ಮಹಿಳೆಯರಿಗೆ ಸೀಮಿತ ಸ್ವಾತಂತ್ರ‍್ಯದ  ಸಂದೇಶವನ್ನು ರವಾನಿಸುತ್ತದೆ. ಇದರಾಚೆಗೆ ಸಂಜಯ್ ಪೂರಣ್ ಸಿಂಗ್ ನಿರ್ದೇಶನದ ‘72 ಹೂರೈನ್’ ಎಂಬ ಸಿನಿಮಾ ಏನು ಹೇಳಲಿದೆ ಎಂಬುದಕ್ಕೆ ವಿಶೇಷ ಸಂಶೋಧನೆಯೇನೂ ಬೇಕಾಗಿಲ್ಲ. ಇದರ ಜೊತೆಗೆ, ‘ದಿ ಕಾಶ್ಮೀರಿ ಫೈಲ್ಸ್’ ಮಾಡಿರುವ ಅನಾಹುತವನ್ನೂ  ಪರಿಗಣಿಸಬೇಕು. ಸಿನಿಮಾ ವೀಕ್ಷಿಸಿ ಹೊರ ಬಂದವರು ಮುಸ್ಲಿಮ್ ದ್ವೇಷದ ಮಾತುಗಳನ್ನು ಮಾಧ್ಯಮಗಳ ಮುಂದೆ  ಬಹಿರಂಗವಾಗಿಯೇ ಆಡಿರುವುದನ್ನು ಈ ದೇಶ ಕಂಡಿದೆ. ಹಿಂದೂಗಳ ವಿರುದ್ಧ ಮುಸ್ಲಿಮರು ಕ್ರೌರ್ಯ ಎಸಗಿದ್ದಾರೆ ಅನ್ನುವ ಬಲವಾದ  ಸಂದೇಶವನ್ನು ಈ ಸಿನಿಮಾ ದೇಶದುದ್ದಕ್ಕೂ ರವಾನಿಸಿದೆ ಮತ್ತು ಕಾಶ್ಮೀರಿ ಮುಸ್ಲಿಮರು ಪಂಡಿತರಿಗೆ ಆಶ್ರಯ ಕೊಟ್ಟ ಮತ್ತು ಅವರನ್ನು  ರಕ್ಷಿಸಿದುದಕ್ಕಾಗಿ ತಮ್ಮ ಜೀವಕ್ಕೇ ಅಪಾಯ ತಂದು ಕೊಂಡ ಸತ್ಯಗಳನ್ನು ಈ ಸಿನಿಮಾದಲ್ಲಿ ಮರೆಮಾಚಲಾಗಿದೆ. ಅಲ್ಲದೇ,  ಹಿಂದೂಗಳಿಗಿಂತ  ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಮುಸ್ಲಿಮರು ಉಗ್ರವಾದಕ್ಕೆ ಬಲಿಯಾಗಿರುವುದನ್ನೂ  ಅಡಗಿಸಿಡಲಾಗಿದೆ. ಹಾಗೆಯೇ ಕೇರಳ ಸ್ಟೋರಿ ಸಿನಿಮಾ ಮಾಡಿರುವುದೂ ಇಂಥದ್ದೇ  ಅನಾಹುತವನ್ನು. ಒಂದುರೀತಿಯಲ್ಲಿ,

ಸಿನಿಮಾಗಳು ಒಂದುಕಡೆ ಇಸ್ಲಾಮೋಫೋಬಿಯಾವನ್ನು ಹರಡಲು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಾಗಲೇ, ಹಿಂದಿ ಮತ್ತು  ಇಂಗ್ಲಿಷ್ ಟಿ.ವಿ. ಚಾನೆಲ್‌ಗಳು ಇದಕ್ಕಿಂತ ನೇರವಾಗಿ ಮತ್ತು ಯಾವ ಮುಜುಗರವೂ ಇಲ್ಲದೇ ಇಸ್ಲಾಮೋಫೋಬಿಯಾವನ್ನು  ಹರಡತೊಡಗಿದುವು. ಒಂದು ಸಿನಿಮಾ ತಯಾರಾಗಿ ಬಿಡುಗಡೆಗೊಳ್ಳುವುದಕ್ಕೆ ವರ್ಷಗಳು ಬೇಕಾಗುತ್ತವೆ. ಆದರೆ, ಈ ಟಿ.ವಿ. ಚಾ ನೆಲ್‌ಗಳು ಪ್ರತಿದಿನವೂ ಏನಾದರೊಂದು ನೆಪದಲ್ಲಿ ಮುಸ್ಲಿಮರನ್ನು ಖಳರಂತೆ ಬಿಂಬಿಸಲು ಪ್ರಾರಂಭಿಸಿದುವು. ಪಾಕಿಸ್ತಾನದಲ್ಲಿ ನಡೆದ  ಯಕಶ್ಚಿತ್ ದರೋಡೆಯನ್ನೂ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿ, ಆ ಮುಖಾಂತರ ಭಾರತೀಯ ಮುಸ್ಲಿಮರನ್ನು ಕಟಕಟೆ ಯಲ್ಲಿ  ನಿಲ್ಲಿಸುವಷ್ಟರ ಮಟ್ಟಿಗೆ ಈ ಚಾನೆಲ್‌ಗಳು ಬುದ್ಧಿಭ್ರಮಣೆಗೆ ಒಳಗಾದುವು. ಇಂಥವು ನಿರಂತರ ನಡೆಯತೊಡಗಿದಾಗ ಅದರ ಫಲಿತಾಂಶ  ನಾಗರಿಕ ಸಮಾಜದಲ್ಲಿ ವ್ಯಕ್ತವಾಗಲೇಬೇಕು. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾ, ಟ್ವಿಟರ್‌ಗಳಲ್ಲಂತೂ ದ್ವೇಷಪ್ರಚಾರಕ್ಕೆ ನಿಯಂತ್ರಣವೇ  ಇಲ್ಲದಂತಾಗಿದೆ. ಹೀಗಿರುತ್ತಾ, ತೃಪ್ತ ತ್ಯಾಗಿ, ಹೇಮಾ ಗುಲಾಟಿ ಅಥವಾ ರೇವತಿ ಮೇಡಂ ಇವುಗಳಿಂದ ಪ್ರಭಾವಿತರಾಗಿರಲಾರರು ಎಂದು  ಹೇಳುವುದು ಹೇಗೆ? ಅಷ್ಟಕ್ಕೂ,

ತೃಪ್ತ ತ್ಯಾಗಿ, ಹೇಮಾ ಗುಲಾಟಿ ಮತ್ತು ರೇವತಿ- ಮೂವರೂ ಮಹಿಳೆಯರೇ. ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರವು ಮಹಿಳೆ ಯರ  ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಅನ್ನುವುದರ ಸೂಚನೆಯೇ ಇದು? ತಾಯಿ ಹೃದಯದಲ್ಲಿ ದ್ವೇಷ ತುಂಬಿಕೊಳ್ಳುವುದು ಆಘಾತಕಾರಿ.

Tuesday, September 5, 2023

ಸೌಮ್ಯ, ಗೌರಿ, ಸಲ್ಮಾ ಮತ್ತು ಲವ್





1. ಸೌಮ್ಯ ಭಟ್- ಮಿಲಿಟರಿ ಅಶ್ರಫ್
2. ಶ್ರದ್ಧಾ ವಾಲ್ಕರ್- ಅಫ್ತಾಬ್ ಪೂನಾವಾಲ
3. ಸಲ್ಮಾ ಸುಲ್ತಾನಾ- ಮಧು ಸಾಹು
4. ಗೌರಿ - ಪದ್ಮರಾಜ್

ಪ್ರೀತಿ-ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳ ಸುಳಿಗೆ ಸಿಲುಕಿ ಜೀವ ಕಳಕೊಳ್ಳುತ್ತಿರುವ ಭಾರತೀಯ ಹೆಣ್ಣು ಮಕ್ಕಳ ಪೈಕಿ ನಾಲ್ವರು ಇಲ್ಲಿದ್ದಾರೆ. ಇಲ್ಲಿರುವ ನಾಲ್ಕು ಮಂದಿ ಹೆಣ್ಣು ಮಕ್ಕಳಿ ಗಾಗಲಿ ಅಥವಾ ಇವರನ್ನು ಸಾಯಿಸಿದ ನಾಲ್ಕು ಮಂದಿ ಗಂಡು ಮಕ್ಕಳಿಗಾಗಲಿ  ಹೇಳಿಕೊಳ್ಳುವಂಥ ಕ್ರಿಮಿನಲ್ ಹಿನ್ನೆಲೆ ಇಲ್ಲ. ಕಾಲೇಜು ವಿದ್ಯಾರ್ಥಿನಿ ಸೌಮ್ಯಳನ್ನು 1997ರಲ್ಲಿ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಹತ್ಯೆ ಮಾಡಿದ  ಅಶ್ರಫ್ ಯೋಧನಾಗಿದ್ದ. ಆವರೆಗೂ ಆತನ ಮೇಲೆ ಯಾವೊಂದು ಪ್ರಕರಣವೂ ಪೊಲೀಸು ಠಾಣೆಯಲ್ಲಿ ದಾಖಲಾಗಿರಲಿಲ್ಲ. ಆದರೆ  ಏಕಾಏಕಿ ಒಂದು ಸಂಜೆ ಆತ ಹತ್ಯೆಕೋರನಾಗಿಬಿಟ್ಟ. ಕ್ರಿಮಿನಲ್ ವ್ಯಕ್ತಿಯಾಗಿ ಗುರುತಿಸಿಕೊಂಡ. ನ್ಯಾಯಾಲಯ ಈತನನ್ನು ಈ  ಹತ್ಯೆಯಿಂದ ಖುಲಾಸೆಗೊಳಿಸಿದ್ದರೂ ಸಾರ್ವಜನಿಕವಾಗಿ ಇವತ್ತೂ ಆತನೇ ಅಪರಾಧಿ. ದೆಹಲಿಯ ಅಫ್ತಾಬ್ ಪೂನಾವಾಲನಿಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2022ರಲ್ಲಿ ತನ್ನ ಗೆಳತಿ ಶ್ರದ್ಧಾಳನ್ನು ಹತ್ಯೆ ಮಾಡಿದ. ತುಂಡು ತುಂಡು ಮಾಡಿ ಎಸೆದ. ಚತ್ತೀಸ್‌ಗಢದ ಸಲ್ಮಾ  ಸುಲ್ತಾನ ಮತ್ತು ಮಧು ಸಾಹು ಪ್ರಕರಣ ಕೂಡ ಇದಕ್ಕಿಂತ ಭಿನ್ನ ಅಲ್ಲ. ಸಲ್ಮಾ ಟಿ.ವಿ. ಆ್ಯಂಕರ್. ಮಧು ಜಿಮ್ ಟ್ರೈನರ್. ಲಿವ್ ಇನ್  ಟುಗೆದರ್ ಸಂಬಂಧದಂತೆ  ಜೊತೆಯಾಗಿ ಬದುಕುತ್ತಿದ್ದ ಈಕೆಯನ್ನು 2018ರಲ್ಲಿ ಈತ ಹತ್ಯೆ ಮಾಡಿದ. ಮೊನ್ನೆ 2023ರಲ್ಲಿ ಪ್ರಕರಣ  ಬೆಳಕಿಗೆ ಬಂತು. ಹಾಗಂತ, ಈ ಮಧು ಸಾಹುಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಆದರೆ ಸಲ್ಮಾಳ ಬಗ್ಗೆ ಅನುಮಾನ ಇತ್ತು. ಎಲ್ಲಿ ಕೈತಪ್ಪಿ  ಹೋಗುತ್ತಾಳೋ ಅನ್ನುವ ಭಯ ಇತ್ತು. ಗೌರಿಯಂತೂ ಅದೇ ಸೌಮ್ಯಳ ಪುತ್ತೂರಿನಲ್ಲಿ ನಿನ್ನೆ ಮೊನ್ನೆಯಂತೆ ಹತ್ಯೆಯಾದವಳು. ಪ್ರೇಮ  ನಿರಾಕರಣೆಗೆ ಕುದ್ದು ಹೋದ ಜೆಸಿಬಿ ಚಾಲಕ ಪದ್ಮರಾಜ್ ಇರಿದು ಕೊಂದಿದ್ದಾನೆ. ಈತನಿಗೂ ಕ್ರಿಮಿನಲ್ ಹಿನ್ನೆಲೆ ಇರುವ ಯಾವ  ಮಾಹಿತಿಯೂ ಇಲ್ಲ.

ಮತ್ತೇಕೆ ಹೀಗೆ?

ಇವರನ್ನು ಹಠಾತ್ ಕ್ರಿಮಿನಲ್‌ಗಳಾಗಿಸಿದ್ದು ಯಾವುದು? ಪ್ರೇಮವೇ? ವೀಕ್ಷಿಸಿದ ಸಿನಿಮಾಗಳೇ? ಓದಿದ ಕಾದಂಬರಿಗಳೇ, ಕತೆಗಳೇ?  ನಾಟಕಗಳೇ? ಧರ್ಮಗ್ರಂಥಗಳೇ? ಅಪ್ರಬುದ್ಧತೆಯೇ? ಅಥವಾ ನಾಗರಿಕ ಜೀವನ ವಿಧಾನವೇ?

ಇಲ್ಲಿ ಹತ್ಯೆಕೋರರಾಗಿ ಗುರುತಿಸಿಕೊಂಡಿರುವ ನಾಲ್ವರು ಯುವಕರು ಮತ್ತು ಸಂತ್ರಸ್ತರಾಗಿರುವ ನಾಲ್ವರು ಯುವತಿಯರು 20ರಿಂದ 30  ವರ್ಷ ಪ್ರಾಯದ ಒಳಗಿನವರು. ಇವರಷ್ಟೇ ಅಲ್ಲ, ಇವತ್ತು ಪ್ರೀತಿ-ಪ್ರೇಮದ ಹೆಸರಲ್ಲಿ ಜೀವ ಕಳಕೊಳ್ಳುತ್ತಿರುವ ಮತ್ತು ಕ್ರಿಮಿ ನಲ್‌ಗಳಾಗುತ್ತಿರುವವರಲ್ಲಿ 99% ಮಂದಿ ಕೂಡಾ ಇದೇ ಪ್ರಾಯದವರು. ಪ್ರೇಮ ವೈಫಲ್ಯದ ಹೆಸರಲ್ಲಿ ಮತ್ತು ಮನೆಯವರ ವಿರೋಧದ  ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರೂ ಇದೇ ಪ್ರಾಯದವರೇ. ದುಡಿದು ಹೆತ್ತವರನ್ನು ಸಾಕಬೇಕಾದ ಪ್ರಾಯದ ಮಕ್ಕಳು ಕ್ರಿಮಿನಲ್‌ಗಳಾಗಿ ಜೈಲು ಪಾಲಾಗುವುದು ಮತ್ತು ಬೆಳೆದ ಹೆಣ್ಣು ಮಕ್ಕಳು ಹೆತ್ತವರ ಕಣ್ಣೆದುರೇ ಶವವಾಗಿ ಮಲಗುವುದು ಅತ್ಯಂತ ಆಘಾತಕಾರಿ  ಸನ್ನಿವೇಶ. ಸಾಮಾನ್ಯವಾಗಿ, ಇಂಥ ಘಟನೆ ನಡೆದ ಕೂಡಲೇ ನಾಗರಿಕ ಸಮಾಜ ಅದನ್ನು ಪ್ರೀತಿ-ಪ್ರೇಮ ಎಂದು ಕೇವಲವಾಗಿ  ನೋಡುವುದಿದೆ. ಹತ್ಯೆಕೋರರನ್ನು ಬೈದು, ಯುವತಿಯ ಬಗ್ಗೆ ಅನುಕಂಪದ ನಾಲ್ಕು ಮಾತು ಗಳನ್ನಾಡಿ ಸುಮ್ಮನಾಗುವುದೂ ಇದೆ.  ಲವ್ ಮಾಡುವ ಉಸಾ ಬರಿ ಆಕೆಗೇಕೆ ಬೇಕಿತ್ತು, ಲವ್ ಮಾಡದೇ ಇಷ್ಟು ಹೆಣ್ಣು ಮಕ್ಕಳು ಬದುಕುತ್ತಿಲ್ಲವಾ, ಯುವಕನನ್ನು ದೂರಿ  ಪ್ರಯೋಜನವಿಲ್ಲ ಎಂದು ಯುವತಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೈತೊಳೆದು ಕೊಳ್ಳುವುದೂ ಇದೆ. ನಿಜವಾಗಿ,

ಇದರಾಚೆಗೆ ನಾಗರಿಕ ಸಮಾಜ ಕೆಲವು ಪ್ರಶ್ನೆಗಳನ್ನು ಸ್ವಯಂ ಕೇಳಿಕೊಳ್ಳಬೇಕಿದೆ.

ಮಕ್ಕಳು ಎಂಥ ಸಮಾಜದಲ್ಲಿ ಬೆಳೆಯುತ್ತಿದ್ದಾರೆ? ಅವರು ವೀಕ್ಷಿಸುತ್ತಿರುವ ಸಿನಿಮಾಗಳು ಹೇಗಿವೆ? ಟಿ.ವಿ.ಯಲ್ಲಿ ವೀಕ್ಷಿಸುತ್ತಿರುವ  ಧಾರಾವಾಹಿಗಳೋ ಕಾರ್ಟೂನ್‌ಗಳೋ ಯಾವ ಸಂದೇಶವನ್ನು ಕೊಡುವಂತಿವೆ? ಅವರು ಮೊಬೈಲ್‌ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ?  ಕಂಪ್ಯೂಟರ್‌ನಲ್ಲಿ ಏನನ್ನು ಹುಡುಕುತ್ತಿದ್ದಾರೆ? ಪ್ರೀತಿ-ಪ್ರೇಮ ಆಧಾರಿತ ಸಿನಿಮಾಗಳು ಸಾರುವ ಸಂದೇಶವನ್ನು ವಿಶ್ಲೇಷಣೆ ಮಾಡಿ  ಸ್ವೀಕರಿಸುವಷ್ಟು ಅವರು ಪ್ರಬುದ್ಧರಾಗಿದ್ದಾರಾ ಅಥವಾ ಸಿನಿಮಾ ಸೃಷ್ಟಿಸುವ ಕಲ್ಪನಾಲೋಕವನ್ನೇ ನಂಬುವಂಥ  ಸ್ಥಿತಿಯಲ್ಲಿದ್ದಾರಾ?  ಮೂರು ಗಂಟೆಯೊಳಗೆ ಮುಗಿಯಬೇಕಾದ ಸಿನಿಮಾದ ಕತೆಯನ್ನು ಮತ್ತು ಅದರ ಪಾತ್ರವನ್ನು ಸಿನಿಮಾವಾಗಿ ಜೀರ್ಣಿಸಿಕೊಳ್ಳಲು ಹ ದಿಹರೆಯದ ಎಷ್ಟು ಮಂದಿಗೆ ಸಾಧ್ಯವಾಗುತ್ತಿದೆ? ಮೊಬೈಲ್ ವೀಕ್ಷಣೆಯಿಂದ ಅವರು ಏನನ್ನು ಪಡೆಯುತ್ತಿದ್ದಾರೆ? ಹೆಣ್ಣು ಗಂಡು  ನಡುವಿನ ಪ್ರಕೃತಿದತ್ತ ಆಕರ್ಷಣೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಬಗ್ಗೆ ಹದಿಹರೆಯದಲ್ಲಿ ಎಷ್ಟು ಮಕ್ಕಳಿಗೆ ಮನೆ  ಮತ್ತು ಶಾಲೆಯಲ್ಲಿ ತರಬೇತಿ ಸಿಕ್ಕಿರುತ್ತದೆ? ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರೀತಿ-ಪ್ರೇಮದ ಬಗ್ಗೆ ಮತ್ತು ಆಕರ್ಷಣೆಯ ಬಗ್ಗೆ  ತಿಳುವಳಿಕೆಯ ಪಾಠ ಮಾಡುತ್ತಾರಾ? ಮನೆಯಲ್ಲಿ ಹೆತ್ತವರು ಮಕ್ಕಳ ಜೊತೆ ಹೇಗೆ ನಡಕೊಳ್ಳುತ್ತಾರೆ? ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದು ಮಗನಲ್ಲೋ  ಮಗಳಲ್ಲೋ  ಹೆತ್ತವರು ಪ್ರಶ್ನಿಸುವುದಿದೆಯೇ? ಅಥವಾ ಪ್ರೀತಿ-ಪ್ರೇಮದ ಬಗ್ಗೆ ಮಾತಾಡುವುದೇ ಅಪರಾಧ ಎಂಬ ರೀತಿಯಲ್ಲಿ ಬದುಕುತ್ತಿದ್ದಾರೆಯೇ? ಮಕ್ಕಳ ಚಟುವಟಿಕೆಯ ಮೇಲೆ ನಿಗಾ ಇಟ್ಟು ಅವರ ವರ್ತನೆ ಯಲ್ಲಾಗುವ  ಬದಲಾವಣೆಯನ್ನು ಗ್ರಹಿಸಿಕೊಂಡು ಸಂದರ್ಭಾನುಸಾರ ಮಾರ್ಗದರ್ಶನ ಮಾಡುವ ಕ್ರಮ ಹೆತ್ತವರಲ್ಲಿದೆಯೇ?

ಅಂದಹಾಗೆ,

ಹೆಣ್ಣು ಮತ್ತು ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಪೂರಕವಾದ ವಾತಾವರಣವಿರುವ ದೇಶವೊಂದರಲ್ಲಿ ಅವರು ಪರಸ್ಪರ  ಮಾತಾಡಬಾರದು, ಆಕರ್ಷಣೆಗೆ ಒಳಗಾಗಬಾರದು ಎಂದೆಲ್ಲಾ ಬಯಸುವುದು ಶುದ್ಧ ಮುಗ್ಧತನ ಮತ್ತು ಅತಾರ್ಕಿಕ. ಎಲ್‌ಕೆಜಿಯಿಂದ  ಹಿಡಿದು ಡಿಗ್ರಿಯವರೆಗೆ, ಸರಕಾರಿ ಕಚೇರಿಯಿಂದ ಹಿಡಿದು ರೈಲು, ಬಸ್ಸು, ವಿಮಾನದ ವರೆಗೆ ಮತ್ತು ಸಂತೆಯಿಂದ  ಹಿಡಿದು ಹೊಟೇಲಿನ  ವರೆಗೆ ಎಲ್ಲೆಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಬದುಕುತ್ತಾರೆ, ಕಲಿಯುತ್ತಾರೆ, ಪ್ರಯಾಣಿಸುತ್ತಾರೆ ಮತ್ತು ಉದ್ಯೋಗ ಮಾಡುತ್ತಾರೆ.  ವೈದ್ಯ ಶಿಕ್ಷಣ, ಇಂಜಿನಿಯರಿಂಗ್  ಶಿಕ್ಷಣದಿಂದ ಹಿಡಿದು ಸೇನಾ ನೇಮಕಾತಿವರೆಗೆ ಹೆಣ್ಣು-ಗಂಡಿನ ನಡುವೆ ಎಲ್ಲೂ ಪರದೆಯಿಲ್ಲ.  ಆದ್ದರಿಂದ ಹರೆಯದ ಮಕ್ಕಳು ಪರಸ್ಪರ ಆಕರ್ಷಿತರಾಗುವುದನ್ನು ಮತ್ತು ಆ ಆಕರ್ಷಣೆ ಪ್ರೀತಿ-ಪ್ರೇಮದತ್ತ ತಿರುಗುವುದನ್ನು ಎಂಟನೇ  ಅದ್ಭುತವಾಗಿ ನೋಡಬೇಕಿಲ್ಲ. ಆದರೆ, ಇಂಥ ವಾತಾವರಣ ಇದ್ದೂ ಗೊತ್ತೇ ಇಲ್ಲದಂತೆ ಹೆತ್ತವರು ಮತ್ತು ಸಮಾಜ ವರ್ತಿಸುವುದು ಮಾತ್ರ  ನಿಜಕ್ಕೂ ಎಂಟನೇ ಅದ್ಭುತ. ಮೊದಲನೆಯದಾಗಿ,

ಹೆಣ್ಣು-ಗಂಡು ಬೆರೆಯುವುದಕ್ಕೆ ಪೂರಕವಾದ ವಾತಾವರಣ ತನ್ನ ಸುತ್ತ-ಮುತ್ತಲೂ ಇದೆ ಎಂಬುದನ್ನು ಪ್ರತಿ ಹೆತ್ತವರೂ ಒಪ್ಪಿಕೊಳ್ಳಬೇಕು.  ಎರಡನೆಯದಾಗಿ, ಜಗತ್ತಿನ ಇತರೆಲ್ಲ ಮಕ್ಕಳು ಪರಸ್ಪರ ಆಕರ್ಷಿತರಾದರೂ ತನ್ನ ಮನೆ ಮಕ್ಕಳು ಮಾತ್ರ ಅದರಿಂದ ಹೊರತಾಗಿರುತ್ತಾರೆ  ಎಂಬ ನಂಬಿಕೆಯಲ್ಲೂ ಇರಬಾರದು. ಯಾವುದು ಸಾಮಾಜಿಕವಾಗಿ ಸಹಜವೋ ಮತ್ತು ಪ್ರಾಕೃತಿಕವಾಗಿಯೂ ಸತ್ಯವೋ ಅದರಿಂದ  ಪೂರ್ಣ ವಿಮುಖಗೊಂಡು ಯಾರೂ ಬದುಕ ಲಾರರು. ಆದರೆ, ಇಂಥ ಸನ್ನಿವೇಶದಲ್ಲಿ ಸ್ವಯಂ ನಿಯಂತ್ರಣ ಹೇರಿಕೊಂಡು ಬದುಕುವ  ಕೋಟ್ಯಂತರ ಹದಿಹರೆಯದವರಿದ್ದಾರೆ. ಅವರಿಗೆ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಿರುತ್ತದೆ. ಆಕರ್ಷಣೆಯೂ ಇರುತ್ತದೆ. ಆದರೆ ಈ ಪ್ರೀತಿ- ಪ್ರೇಮ, ಆಕರ್ಷಣೆ ಇತ್ಯಾದಿಗಳ ಮಿತಿಯೂ ಗೊತ್ತಿರುತ್ತದೆ. ಹಾಗಂತ, ಇಂಥ ತಿಳುವಳಿಕೆ ಈ ಮಕ್ಕಳಲ್ಲಿ ಬೆಳೆದಿರುವುದಕ್ಕೆ ಅವರೊಬ್ಬರೇ  ಕಾರಣ ಆಗಿರುವುದಿಲ್ಲ. ಹೆತ್ತವರೂ ಕಾರಣ ಆಗಿರುತ್ತಾರೆ. ಕೆಲವೊಮ್ಮೆ ಶಿಕ್ಷಕರು, ಕೆಲವೊಮ್ಮೆ ಗೆಳೆಯರು, ಕೆಲವೊಮ್ಮೆ ಯಾವುದೋ ಪುಸ್ತಕ,  ಯಾರದೋ ಮಾತು ಕೂಡಾ ಕಾರಣ ಆಗಿರುತ್ತದೆ. ಯಾವ ಸಿನಿಮಾದ ಪ್ರೇರಣೆಯಿಂದ ಗೌರಿಯನ್ನು ಪದ್ಮರಾಜ್ ಕೊಂದಿರುತ್ತಾನೋ  ಅಥವಾ ಯಾವ ಘಟನೆ, ಯಾವ ರೀಲ್ಸ್ ಅಥವಾ ಯಾವ ಪುಸ್ತಕರಿಂದ ಪ್ರೇರಿತನಾಗಿ ಆತ ಈ ಹತ್ಯೆ ನಡೆಸಿರುತ್ತಾನೋ ಅದೇ ಸಿನಿಮಾ,  ಪುಸ್ತಕ, ರೀಲ್ಸ್ ಗಳನ್ನ  ಇವರೂ ನೋಡಿರುತ್ತಾರೆ. ಅವನಂಥದ್ದೇ ಪರಿಸ್ಥಿತಿಯನ್ನು ಇವರೂ ಎದುರಿಸಿರುತ್ತಾರೆ. ಆದರೆ, ಅವರು ಯಾಕೆ  ಪದ್ಮರಾಜ್ ಆಗುವುದಿಲ್ಲ ಎಂದರೆ, ಅದರಾಚೆಗೆ ಆಲೋಚಿಸಬಲ್ಲ ಮತ್ತು ತನ್ನನ್ನು ನಿಯಂತ್ರಿಸಿಕೊಳ್ಳಬಲ್ಲ ಮಾರ್ಗದರ್ಶನ ಅವರಿಗೆ  ಸಿಕ್ಕಿರುತ್ತದೆ. ಸದ್ಯದ ಅಗತ್ಯ ಇದು. ಅಷ್ಟಕ್ಕೂ,

15ರಿಂದ 25ರ ವರೆಗಿನ ಪ್ರಾಯ ಅತ್ಯಂತ ಅಪಾಯಕಾರಿಯೂ ಹೌದು, ಪ್ರಯೋಜನಕಾರಿಯೂ ಹೌದು. ಇದು ಹೆಣ್ಣು-ಗಂಡು  ನಡುವಿನ ಆಕರ್ಷಣೆಯ ಪ್ರಾಯ. ತನಗೆಲ್ಲ ಗೊತ್ತಿದೆ ಎಂಬ ಹುಂಬ ವರ್ತನೆಯ ಪ್ರಾಯ. ಹೆತ್ತವರಿಂದ ಒಂದೊಂದನ್ನೇ  ಮುಚ್ಚಿಕೊಳ್ಳಬಯಸುವ ಪ್ರಾಯ. ಈ ಪ್ರಾಯದ ತುಮುಲವನ್ನು ಹೆತ್ತವರು ಗಮನದಲ್ಲಿಟ್ಟುಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಯುವ ಹತ್ಯೆ ಮತ್ತು ಆತ್ಮಹತ್ಯೆ ಸುದ್ದಿಗಳನ್ನು ಈ ಪ್ರಾಯದ ಮಕ್ಕಳಿಂದ ಅಡಗಿಸಿಡಬೇಕಾದ  ಅಗತ್ಯ ಇಲ್ಲ. ಸಂದರ್ಭ ನೋಡಿಕೊಂಡು ಮಕ್ಕಳ ಮುಂದೆ ಇಂಥವುಗಳನ್ನು ಪ್ರಸ್ತಾಪ ಮಾಡುವ ಮತ್ತು ಸರಿಯಾದುದನ್ನು ಹೇಳುವ ಆಪ್ತ  ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಅನೇಕ ಬಾರಿ ಇಂಥ ಸುದ್ದಿಗಳು ಹೆತ್ತವರಿಗಿಂತ ಮೊದಲು ಮಕ್ಕಳಿಗೆ ಗೊತ್ತಿರುತ್ತದೆ. ಆದರೆ ಅವರು  ಪ್ರಸ್ತಾಪಿಸುವುದಿಲ್ಲ. ಹೆತ್ತವರು ಪ್ರಸ್ತಾಪಿಸಿದರೆ ಅವರೂ ಆಸಕ್ತಿಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಂಥ ಸಂದರ್ಭಗಳಲ್ಲಿ  ತನ್ನ ಮಕ್ಕಳ ಆಲೋಚನಾ ಕ್ರಮ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆತ್ತವರಿಗೆ ಅವಕಾಶ ಒದಗುತ್ತದೆ.

ಅಂದಹಾಗೆ,

ತಂತ್ರಜ್ಞಾನದ ಈ ಯುಗದಲ್ಲಿ ತಾಳ್ಮೆ ಎಂಬ ಪದ ಅರ್ಥವನ್ನೇ ಕಳಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದ ದೆಸೆಯಿಂದಾಗಿ  ಎರಡ್ಮೂರು ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಗಮನವಿಡಲು ಸಾಧ್ಯವಾಗದಂಥ ಸ್ಥಿತಿಯಿದೆ. ಸಿಟ್ಟು, ಆಕ್ರೋಶ, ಆವೇಶಗಳು ಕ್ಷಣ  ಮಾತ್ರದಲ್ಲಿ ಸ್ಫೋಟಿಸಿ ಏನೇನೋ ಅನಾಹುತಗಳಾಗುವ ಸನ್ನಿವೇಶ ಇವತ್ತಿನದು. ಆದ್ದರಿಂದ ಯುವ ಪ್ರಾಯದವರು ತೆಗೆದುಕೊಳ್ಳುವ  ಯಾವುದೇ ನಿರ್ಧಾರವೂ ಸಮತೂಕದ್ದೋ  ದೀರ್ಘ ಆಲೋಚನೆ ಯಿಂದ ಕೂಡಿದ್ದೋ  ಆಗಿರುವ ಸಾಧ್ಯತೆಗಳು ಕಡಿಮೆ ಇರುತ್ತದೆ.  ಪ್ರೀತಿ-ಪ್ರೇಮದ ವಿಷಯದಲ್ಲಂತೂ ಕ್ಷಣದ ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದೇ ಹೆಚ್ಚು. ಗೆಳೆಯರು, ಹಿತೈಷಿಗಳು ಅಥವಾ  ಹೆತ್ತವರಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿರುವುದೂ ಕಡಿಮೆ. ನಿಜಕ್ಕೂ, ಈ ಪ್ರೀತಿ-ಪ್ರೇಮ, ಹತ್ಯೆ, ಆತ್ಮಹತ್ಯೆಗಳೆಲ್ಲ ಸಾಮಾಜಿಕ  ಸವಾಲು. ಇದಕ್ಕೆ ಸಮಾಜ ಮುಖಾಮುಖಿಯಾಗದ ಹೊರತು ಪರಿಹಾರ ಸಾಧ್ಯವಿಲ್ಲ. ಪ್ರತಿ ಮನೆಯೂ ಈ ಬಗ್ಗೆ ಜಾಗೃತವಾಗಬೇಕು.  ತಮ್ಮ ಮಕ್ಕಳನ್ನು ಪ್ರಬುದ್ಧವಾಗಿ ಮತ್ತು ಪ್ರೀತಿ-ಪ್ರೇಮದ ಪ್ರಾಯ ಸಹಜ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪೂರಕವಾಗಿ ಬೆಳೆಸ ಬೇಕು.  ಮೊಬೈಲು ಜಗತ್ತು ಕಟ್ಟಿಕೊಡುವ ಭ್ರಮೆಗಳನ್ನು ಅರ್ಥ ಮಾಡುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಬೇಕು. ಇದಕ್ಕಾಗಿ ಮಕ್ಕಳೊಂದಿಗೆ  ಆಪ್ತ ಸಂಬಂಧವನ್ನು ಹೆತ್ತವರು ಬೆಳೆಸಿಕೊಳ್ಳುವುದು ಬಹಳ ಅಗತ್ಯ. ರಾತ್ರಿ ಊಟವನ್ನು ಹೆತ್ತವರು ಮಕ್ಕಳ ಜೊತೆ ಮಾಡುವುದು ಮತ್ತು  ಸಂದರ್ಭಾನುಸಾರ ವಿಷಯಗಳನ್ನು ಪ್ರಸ್ತಾಪಿಸಿ ಮಕ್ಕಳನ್ನು ಪ್ರಬುದ್ಧಗೊಳಿಸುವ ಸಂಸ್ಕೃತಿ ಬೆಳೆದು ಬರಬೇಕು. ತಮ್ಮ ಕುಟುಂಬದ ಯ ಶಸ್ವಿ ವ್ಯಕ್ತಿಗಳ ಹಿನ್ನೆಲೆಯನ್ನು ಮಾತಿನ ಭಾಗವಾಗಿಸಬೇಕು. ಅವರ ಕಲಿಕೆ, ಉದ್ಯೋಗ, ಮದುವೆ, ಸಮಾಜ ಸೇವೆ... ಇತ್ಯಾದಿಗಳನ್ನು  ವಿವರಿಸುತ್ತಾ ಮಕ್ಕಳಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ಉಂಟು ಮಾಡಬೇಕು. ಏನಿದ್ದರೂ,

ಯುವಕ ಮತ್ತು ಯುವತಿಯರು ಪ್ರೀತಿ-ಪ್ರೇಮದ ಹೆಸರಲ್ಲಿ ಒಂದೋ ಕ್ರಿಮಿನಲ್‌ಗಳಾಗುವುದು ಅಥವಾ ಪ್ರಾಣ ಕಳಕೊಳ್ಳುವುದು-  ಎರಡೂ ಆಘಾತಕಾರಿ. ಇದನ್ನು ತಪ್ಪಿಸಲೇಬೇಕಿದೆ. ಬೇರು ಮಟ್ಟದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

Friday, September 1, 2023

ಸೌಜನ್ಯ: ಸಿಬಿಐ ಉತ್ತರಿಸಬೇಕಾದ ಪ್ರಶ್ನೆಗಳು





11 ವರ್ಷಗಳ ಬಳಿಕವೂ ಸೌಜನ್ಯ ಪ್ರಕರಣ ಸಾರ್ವಜನಿಕ ಚಳವಳಿಯಾಗಿ ಮತ್ತು ಮನೆ ಮನೆ ಮಾತಾಗಿ ಉಳಿದುಕೊಂಡಿರುವುದೇಕೆ?  ಪ್ರತಿದಿನ ಅತ್ಯಾಚಾರ-ಹತ್ಯೆ ನಡೆಯುತ್ತಿರುವ ದೇಶದಲ್ಲಿ ಈ ಪ್ರಕರಣ 11 ವರ್ಷಗಳ ಬಳಿಕವೂ ಹೋರಾಟದ ಕಾವು  ಉಳಿಸಿಕೊಂಡಿರುವುದಕ್ಕೆ ಕಾರಣಗಳೇನು? ಸೌಜನ್ಯ ತಾಯಿ ಈ 11 ವರ್ಷಗಳಲ್ಲೂ ಹೋರಾಟ ಕಣದಲ್ಲಿ ಸಕ್ರಿಯರಾಗಿದ್ದಾರೆ. ನ್ಯಾಯ  ಕೊಡಿ ಎಂದು ಊರೂರು ಸುತ್ತುತ್ತಿದ್ದಾರೆ. ಅವರು ಸರಕಾರದಿಂದ ಪರಿಹಾರ ಕೇಳುತ್ತಿಲ್ಲ. ಮನೆ ಕಟ್ಟಿ ಕೊಡಿ ಅನ್ನುತ್ತಿಲ್ಲ ಅಥವಾ ಮಕ್ಕಳ  ವಿದ್ಯಾಭ್ಯಾಸಕ್ಕೆ ಮತ್ತು ಜೀವನ ನಿರ್ವಹಣೆಗೆ ಸಹಾಯ ಮಾಡಿ ಎಂದು ಸರಕಾರವನ್ನಾಗಲಿ ಸಾರ್ವಜನಿಕ ರನ್ನಾಗಲಿ ವಿನಂತಿಸುತ್ತಿಲ್ಲ.  ಅವರ ಆಗ್ರಹ- ಮಗಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಿ ಅನ್ನೋದು. ಇಲ್ಲೂ ಒಂದು ವಿಶೇಷತೆ ಇದೆ.  ಸಾಮಾನ್ಯವಾಗಿ,


ಯಾವುದೇ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿಗಳನ್ನೇ ಸಂತ್ರಸ್ತರು ಮತ್ತು ಸಾರ್ವ ಜನಿಕರು ಅಪರಾಧಿಗಳೆಂದು ಭಾವಿಸುತ್ತಾರೆ. ಅವರಿಗೆ ಶಿಕ್ಷೆಯಾದರೆ ಸಂತ್ರಸ್ತ ಕುಟುಂಬ ನ್ಯಾಯ ಸಿಕ್ಕಿತು ಎಂದು ಹೇಳಿಕೊಳ್ಳುತ್ತದೆ. ದೆಹಲಿಯ ನಿರ್ಭಯ  ಪ್ರಕರಣ ಇದಕ್ಕೊಂದು ಉದಾಹರಣೆ. ಒಂದುವೇಳೆ, ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಗೊಂಡರೆ ಸಂತ್ರಸ್ತ ಕುಟುಂಬ ನ್ಯಾಯ  ನಿರಾಕರಣೆಯ ವಿಷಾದಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಸೌಜನ್ಯ ಪ್ರಕರಣದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಪೊಲೀಸರು ಆರೋಪಿಯೆಂದು ಬಂಧಿಸಿರುವ ಸಂತೋಷ್ ರಾವ್‌ನನ್ನು ಈ ಕುಟುಂಬ ಅಪರಾಧಿ ಭಾವದಲ್ಲಿ ಕಂಡೇ ಇಲ್ಲ. ಬದಲು, ಆತನನ್ನೇ ಸಂತ್ರಸ್ತನಾಗಿ ಪರಿಗಣಿಸಿದೆ. ಆತನನ್ನು ಸಿಬಿಐ ನ್ಯಾಯಾಲಯ ನಿರ್ದೋಷಿಯೆಂದು ಹೇಳಿ ಬಿಡುಗಡೆಗೊಳಿಸಿರುವುದಕ್ಕೆ ಈ  ಕುಟುಂಬ ಎಂದೂ  ಅಸಮಾಧಾನ ವ್ಯಕ್ತಪಡಿಸಿಲ್ಲ. ತಮ್ಮ ಭಾವನೆಯನ್ನೇ ಸಿಬಿಐ ನ್ಯಾಯಾಲಯ ಪುರಸ್ಕರಿಸಿದೆ ಎಂಬ ಸಮಾಧಾನ ಬಿಟ್ಟರೆ  ಸಂತೋಷ್ ರಾವ್‌ನನ್ನು ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಆತನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುವ ಯಾವ ಆಗ್ರಹವನ್ನೂ ಸೌಜನ್ಯ  ಕುಟುಂಬ ಮಾಡಿಲ್ಲ. ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಓರ್ವ ತಾಯಿ ಇಷ್ಟು ನಿಷ್ಠುರವಾಗಿ ಮತ್ತು  ಹಠಮಾರಿಯಾಗಿ ನಡಕೊಳ್ಳಲು ಕಾರಣವೇನು? ಅಪರಾಧಿಗಳು ಇಂಥವರೇ ಅನ್ನುವ ಖಚಿತತೆ ಅವರಲ್ಲಿ ಇದೆಯೇ? ಅಂಥದ್ದೊಂದು   ಭಾವ ಅವರಲ್ಲಿ ಹುಟ್ಟಿಕೊಳ್ಳಲು ಮತ್ತು ಅದು ಖಚಿತತೆಯನ್ನು ಪಡೆಯಲು ಕಾರಣವೇನು? ಸೌಜನ್ಯಳಿಗಿಂತ ಮೊದಲು ಆ ಪರಿಸರದಲ್ಲಿ  ನಡೆದ ಹಲವು ಅನುಮಾನಾಸ್ಪದ ಸಾವುಗಳು ಇದಕ್ಕೆ ಕಾರಣವೇ? ಅಂದಹಾಗೆ,

ಕೆಲವು ಪ್ರಶ್ನೆಗಳಿವೆ


1. ಆರೋಪಿ ಸಂತೋಷ್ ರಾವ್‌ನನ್ನು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿಯಲ್ಲಿ ಹಿಡಿದು ಪೊಲೀಸರಿಗೆ  ಒಪ್ಪಿಸಿದವರಲ್ಲಿ ರವಿ ಪೂಜಾರಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇದನ್ನು ಹತ್ಯೆ ಎಂದು ಸ್ಥಳೀಯರು ಅನುಮಾನಿಸುತ್ತಾರೆ.  ಹಾಗೆಯೇ, ಇನ್ನೋರ್ವ ಗೋಪಾಲಕೃಷ್ಣ ಗೌಡ ಎಂಬವ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಆದರೆ, ಸಿಬಿಐ ಈ ಬಗ್ಗೆ ಯಾವ  ಅನುಮಾನವನ್ನಾಗಲಿ, ಗಮನವನ್ನಾಗಲಿ ನೀಡದಿರಲು ಕಾರಣವೇನು?


2. ಡಿಎನ್‌ಎ ತಜ್ಞ ವಿನೋದ್ ಕೆ. ಲಕ್ಕಪ್ಪ ಅವರು ನೀಡಿರುವ ಹೇಳಿಕೆಯ ಪ್ರಕಾರ, ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ  ವ್ಯಕ್ತಿಗಳಿಂದ ಅತ್ಯಾಚಾರ ನಡೆದಿರಬಹುದು ಎಂದಿದೆ. ಸೌಜನ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ  ತಾಲೂಕು ಜನರಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ   ಕೂಡಾ ಇದನ್ನು ಪುಷ್ಠೀಕರಿಸಿದ್ದಾರೆ. ಆದರೂ ಈ ವಿಷಯದಲ್ಲಿ ಸಿಬಿಐ ತನಿಖೆ  ನಡೆಸುವ ಉಮೇದು ತೋರಿಸದಿರುವುದಕ್ಕೆ ಕಾರಣವೇನು?


3. ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತದೇಹ ನೇತ್ರಾವತಿ ಸ್ನಾನಭಟ್ಟರ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ  ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕಾದರೆ ನೀರಿನ ತೊರೆಯನ್ನು ಹಾಯಬೇಕಿದೆ. ಒಬ್ಬನೇ ಆರೋಪಿ ಆಕೆಯನ್ನು  ಎತ್ತಿಕೊಂಡು ನೀರಿನ ತೊರೆಯನ್ನು ದಾಟುವುದು ಕಷ್ಟ ಸಾಧ್ಯ ಎಂದು ಸನ್ನಿವೇಶಗಳು ಹೇಳುತ್ತವೆ. ಸಂತೋಷ್ ರಾವ್‌ನನ್ನು ನಿರ್ದೋಷಿ  ಎಂದ ನ್ಯಾಯಾಧೀಶರೂ ಇದನ್ನು ಗಮನಿಸಿದ್ದಾರೆ. ಆದರೆ ಸಿಬಿಐ ಈ ಸಾಮಾನ್ಯ ಸಂಗತಿಯ ಬಗ್ಗೆ ತನಿಖೆಯ ವೇಳೆ ಗಮನ ಕೊಡದಿರುವುದಕ್ಕೆ ಕಾರಣವೇನು?


4. ಸೌಜನ್ಯ ಕಾಣೆಯಾದ ದಿನ ಆಸುಪಾಸಿನಲ್ಲಿ ತೀವ್ರ ಮಳೆ ಇತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿದೆ. ಆದರೆ, ಹತ್ಯೆಗೀಡಾದ ಸೌಜನ್ಯಳ  ಬಟ್ಟೆಯಾಗಲಿ ಕಾಲೇಜಿನ ಬ್ಯಾಗ್ ಆಗಲಿ ಒದ್ದೆಯಾಗಿಲ್ಲ. ಅಂದರೆ, ಮೃತದೇಹ ಎಲ್ಲಿ ಪತ್ತೆಯಾಗಿತ್ತೋ ಅಲ್ಲಿ ಅತ್ಯಾಚಾರ ಮತ್ತು  ಹತ್ಯೆಯಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತವೆ. ಆದರೆ, ಈ ಬಗ್ಗೆ ಸಿಬಿಐ ಕುತೂಹಲ ತೋರದಿರಲು ಕಾರಣವೇನು?


5. ಸೌಜನ್ಯಳ ಜೊತೆ ಕಾಲೇಜಿನಿಂದ ಬಸ್‌ನಲ್ಲಿ ಬಂದವರ ಹೇಳಿಕೆಗಳು ಸಿಬಿಐ ದಾಖಲೆಗಳಲ್ಲಿ ಸಿಗುವುದಿಲ್ಲ ಎಂದು ಹೇಳ ಲಾಗುತ್ತಿದೆ.  ಸೌಜನ್ಯ ಜೊತೆ ಕೊನೆವರೆಗೂ ಇದ್ದ ಗೆಳತಿಯರ ಮಾತುಗಳು ತನಿಖೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು. ಅಲ್ಲದೇ, ಬೆಳ್ತಂಗಡಿ  ಪೊಲೀಸರು ಮತ್ತು ಸಿಐಡಿ ದಾಖಲಿಸಿದ ಹೇಳಿಕೆಗಳನ್ನು ಸಿಬಿಐ ಮರುಪರಿಶೀಲನೆಗೆ ಒಳಪಡಿಸಿಲ್ಲ ಎಂದೂ
ಹೇಳಲಾಗುತ್ತಿದೆ. ಯಾಕೆ ಹೀಗಾಯಿತು?


6. ಸೌಜನ್ಯ ಮೃತದೇಹ ಸಿಕ್ಕ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳ ಟ್ರೇಸ್ ನಡೆದಿದೆಯೇ? ಇಲ್ಲ ಅನ್ನುತ್ತಿವೆ ಮಾಹಿತಿಗಳು.  ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಇದು ಸುಲಭ ವಿಧಾನ.


7. ಯೋನಿ ದ್ರವ ಅಥವಾ ವೆಜೈನಲ್ ಸ್ವಾಬ್ ಅನ್ನು ಅತ್ಯಾಚಾರದ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ವೈದ್ಯರು ಇದನ್ನು  ಶೇಖರಣೆ ಮಾಡಿ, ಒಣಗಿಸಿ ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಆದರೆ, ಇಲ್ಲಿ ಪರೀಕ್ಷೆಗೆ ಕಳುಹಿಸಲಾದ  ವೆಜೈನಲ್ ಸ್ವಾಬ್‌ನಲ್ಲಿ ಫಂಗಸ್ ಬಂದಿತ್ತು ಮತ್ತು ಆ ಕಾರಣದಿಂದ ಪರೀಕ್ಷೆಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ ಎಂದು ವರದಿ ಇದೆ.  ಪ್ರಮುಖ ಸಾಕ್ಷ್ಯವಾಗಿದ್ದ ವೆಜೈನಲ್ ಸ್ವಾಬ್‌ನ ಬಗ್ಗೆ ವೈದ್ಯಾಧಿಕಾರಿ ಇಲ್ಲಿ ನಿರ್ಲಕ್ಷ್ಯ  ವಹಿಸಿದ್ದು ಯಾಕೆ?

ಹಾಗಂತ,


ಸಿಬಿಐ ತನಿಖೆಯ ಬಗ್ಗೆ ಹೈಕೋರ್ಟು ಅಸಮಾಧಾನ ವ್ಯಕ್ತ ಪಡಿಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣ ಮರು ತನಿಖೆ  ನಡೆಸಬೇಕೆಂದು ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಮೂರ್ತಿ ಅರವಿಂದ್  ಕುಮಾರ್ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ  ಹರೀಶ್ ಮತ್ತು ಗೋಪಾಲ್ ಎಂಬವರು ಸಾಕ್ಷ್ಯ  ನುಡಿದಿದ್ದರು. ಆ ಬಳಿಕ ತನಿಖೆ ಕೈಗೆತ್ತಿಕೊಂಡ ಸಿಬಿಐಯು ಅಧೀನ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಹರೀಶ್ ಮತ್ತು ಗೋಪಾಲ್ ಹೇಳಿಕೆಗಳೂ ಸೇರಿದಂತೆ ಪ್ರಾಥಮಿಕ ಹಂತದಲ್ಲಿ ಪೊಲೀಸರು  ಸಂಗ್ರಹಿಸಿದ್ದ ಹಲವು ಅಂಶಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಚಂದಪ್ಪ ಗೌಡ ಕೋರಿದ್ದರು. ಇದನ್ನು ಆಲಿಸಿದ ಅರವಿಂದ್ ಕುಮಾರ್  ನೇತೃತ್ವದ ಏಕ ಸದಸ್ಯ ಪೀಠ, ಸಿಬಿಐ ತನಿಖಾ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ‘ಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ  ನಿಮ್ಮಿಂದ ಇಂಥ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ತನಿಖೆಯನ್ನು ಮೊದಲು ಸಿಐಡಿಗೆ ಮತ್ತು ನಂತರ ಸಿಬಿಐಗೆ ವಹಿಸಲಾಗಿದೆ. ಆದರೆ ಇದೀಗ ಸಿಬಿಐ ತನಿಖೆಯನ್ನೂ ಅನುಮಾನದಿಂದ  ನೋಡುವಂತಾಗಿದೆ. ನಿಮ್ಮಿಂದ ಸಮರ್ಪಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಲಿದೆ...’ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಷ್ಟಕ್ಕೂ,


ಸೌಜನ್ಯ ಪ್ರಕರಣ ಒಂದು ಚಳವಳಿಯಾಗಿ ಬೆಳೆದು ನಿಂತಿರುವುದಕ್ಕೆ ಆಕೆ ಬದುಕಿ ಬಾಳಿದ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅ ನುಮಾನಾಸ್ಪದ ಸಾವುಗಳೇ ಪ್ರೇರಣೆ ಎಂದು ಅನಿಸುತ್ತೆ. ಹಾಗಂತ, ಆ ಅನುಮಾನಾಸ್ಪದ ಸಾವುಗಳು ಸಹಜ ಸಾವುಗಳೇ ಆಗಿದ್ದಿರಬಹುದು  ಮತ್ತು ಅವು ಹತ್ಯೆ ಆಗಿಲ್ಲದೇ ಇರಬಹುದು. ಆದರೆ, ಇವುಗಳನ್ನು ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಅದರಲ್ಲಿ ಎಡವಿದಾಗ ಸಾರ್ವಜನಿಕ ಅನುಮಾನಗಳು ಬಲ ಪಡೆಯುತ್ತಾ ಹೋಗುತ್ತವೆ. ಪದೇ ಪದೇ ಇಂಥವು ನಡೆಯುವಾಗ ಮತ್ತು ಅದಕ್ಕೆ ಯಾವುದೇ ಸ್ಪಷ್ಟೀಕರಣ ಇಲ್ಲದೇ  ಹೋದಾಗ ಜನ ಆಡಿಕೊಳ್ಳತೊಡಗುತ್ತಾರೆ. ಬಳಿಕ ಅವು ಅಸಮಾಧಾನವಾಗಿ ಮಾರ್ಪಡುತ್ತದೆ. ನಂತರ ಅದು ಆಕ್ರೋಶವಾಗುತ್ತದೆ.  ಸೌಜನ್ಯ ಪ್ರಕರಣ 11 ವರ್ಷಗಳ ಬಳಿಕವೂ ಯಾಕೆ ಕಾವು ಉಳಿಸಿಕೊಂಡಿದೆ ಅನ್ನುವು ದಕ್ಕೆ ಇಲ್ಲೆಲ್ಲೋ  ಉತ್ತರ ಇದೆ. ಎಲ್ಲಿಯ  ವರೆಗೆಂದರೆ, ಈ ನ್ಯಾಯ ಬೇಡಿಕೆಯ ಚಳವಳಿಯಿಂದ ಎಡ, ಬಲ, ಮಧ್ಯಮ ಯಾವ ಪಂಥವೂ ಅಂತರ ಕಾಯ್ದುಕೊಳ್ಳದಂಥ ಪರಿಸ್ಥಿತಿ  ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯ ತೀರ್ಪಿನ ವಿರುದ್ಧ ಅಸಮಾಧಾನ ಸೂಚಿಸಿ ಬಿಜೆಪಿ ಶಾಸಕರೇ  ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸುತ್ತಾರೆಂದರೆ ಮತ್ತು ಪ್ರಕರಣದ ಮರು ತನಿಖೆ ಆಗ್ರಹಿಸುತ್ತಾರೆಂದರೆ, ಸೌಜನ್ಯ ಪರ  ಹೋರಾಟ ಸಾರ್ವಜನಿಕವಾಗಿ ಬೀರಿರುವ ಪ್ರಭಾವವನ್ನು ಊಹಿಸಬಹುದು.


ಸದ್ಯದ ಸಮಸ್ಯೆ ಏನೆಂದರೆ, ವಿಶ್ವಾಸಾರ್ಹತೆ ಎಂಬ ಬಹು ಅಮೂಲ್ಯ ಗುಣಕ್ಕೆ ತೀವ್ರ ಹಾನಿ ತಟ್ಟಿರುವುದು. ರಾಜಕಾರಣಿಯಾಗಲಿ,  ಸಾಮಾಜಿಕ ಮುಂದಾಳುವಾಗಲಿ, ಅರ್ಚಕನಾಗಲಿ, ಧರ್ಮ ಪಂಡಿತನಾಗಲಿ, ಮೌಲಾನಾ ಆಗಲಿ... ಯಾರೂ ಇವತ್ತು ಪೂರ್ಣ  ಪ್ರಮಾಣದಲ್ಲಿ ವಿಶ್ವಾಸಯೋಗ್ಯರಾಗಿ ಉಳಿದಿಲ್ಲ. ಜನರು ಒಂದು ಅನುಮಾನದ ಕಣ್ಣಿಟ್ಟುಕೊಂಡೇ ಎಲ್ಲರನ್ನೂ ತೂಗತೊಡಗಿದ್ದಾರೆ.  ವಿಶ್ವಾಸಾರ್ಹತೆ ಎಂಬ ಮೌಲ್ಯ ಕುಸಿದು ಹೋದಾಗ ಎದುರಾಗುವ ಹಲವು ಸವಾಲುಗಳಲ್ಲಿ ಇದೂ ಒಂದು. ಆದರೆ,


ಈ ಎಲ್ಲರ ನಡುವೆ ಸೌಜನ್ಯ ತಾಯಿ ನಕ್ಷತ್ರದಂತೆ ಮಿನುಗು ತ್ತಿದ್ದಾರೆ. ಅವರೆಡೆಗೆ ಕೈಯೆತ್ತಿ ತೋರಿಸಲು ಒಂದು ನರಪಿಳ್ಳೆಗೂ  ಸಾಧ್ಯವಾಗದಂಥ ಪ್ರಾಮಾಣಿಕತೆ ಮತ್ತು ಸಜ್ಜನಿಕೆಯನ್ನು ಪ್ರದರ್ಶಿಸಿದ್ದಾರೆ. ಈ 11 ವರ್ಷಗಳ ಉದ್ದಕ್ಕೂ ಆ ತಾಯಿ ನಡೆದುಕೊಂಡು  ಬಂದ ರೀತಿ, ತೋಡಿಕೊಂಡ ನೋವು ಮತ್ತು ಕಾಲಿಗೆ ಚಕ್ರ ಕಟ್ಟಿಕೊಂಡು ತನ್ನ ಮಗಳಿಗಾಗಿ ಓಡಾಡಿದ ರೀತಿ ಅನನ್ಯ ಮತ್ತು ಓರ್ವ  ತಾಯಿಯಿಂದ ಮಾತ್ರ ನಿರೀಕ್ಷಿಸಬಹುದಾದ ಕೆಚ್ಚೆದೆ ಅದು. ಈ ಹಿಂದೆ ದೆಹಲಿ ನಿರ್ಭಯ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು.  ನಿರ್ಭಯ ತಾಯಿ ಗುರಿ ಮುಟ್ಟುವವರೆಗೆ ಹೋರಾಡಿದ್ದರು. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ವಿರಮಿಸಲಾರೆ ಎಂಬಂತೆ   ಸಕ್ರಿಯರಾಗಿದ್ದರು. ಸೌಜನ್ಯ ತಾಯಿಯಲ್ಲೂ ಅದೇ ಖಚಿತತೆ ಮತ್ತು ಹಠ ಎದ್ದು ಕಾಣುತ್ತಿದೆ. ಓರ್ವ ಹೆಣ್ಣು ಪರಿಸ್ಥಿತಿಗೆ ಹೊಂದಿಕೊಂಡು   ಹೇಗೆ ಗೃಹಿಣಿಯೂ ಆಗಬಲ್ಲಳು ಮತ್ತು ಹೋರಾಟಗಾರ್ತಿಯೂ ಆಗಬಲ್ಲಳು ಎಂಬುದಕ್ಕೆ ಸೌಜನ್ಯ ತಾಯಿ ಅತ್ಯುತ್ತಮ ನಿದರ್ಶನ.


ಅತ್ಯಾಚಾರ ಎಂಬುದು ದರೋಡೆ, ಕಳ್ಳತನ, ವಂಚನೆ ಇತ್ಯಾದಿಗಳಂಥಲ್ಲ. ಹೆಚ್ಚಿನ ವೇಳೆ ಅತ್ಯಾಚಾರಿಗಳು ಹೆಣ್ಣನ್ನು ಸಾಯಿಸುತ್ತಾರೆ.  ಒಂದುವೇಳೆ, ಸಾಯಿಸದೇ ಬಿಟ್ಟರೂ ಅತ್ಯಾಚಾರವನ್ನು ಜೀವನಪೂರ್ತಿ ಹೊತ್ತುಕೊಂಡು ಓರ್ವ ಯುವತಿ ಬದುಕುವುದು ಸುಲಭ ಅಲ್ಲ.  ಅತ್ಯಾಚಾರದ ಬಗ್ಗೆ ದೂರು ಕೊಟ್ಟರೆ ಸಾರ್ವಜನಿಕರಿಗೆ ಅತ್ಯಾಚಾರದ ಬಗ್ಗೆ ಗೊತ್ತಾಗುತ್ತದೆ. ಅದರಿಂದಾಗಿ ನೆರೆಕರೆಯವರು ಮತ್ತು  ಕುಟುಂಬಸ್ಥರು ಅತ್ಯಾಚಾರ ಸಂತ್ರಸ್ತೆ ಎಂಬ ಹಣೆಪಟ್ಟಿಯೊಂದನ್ನು ಅಂಟಿಸಿ ಅನುಕಂಪವನ್ನೋ ಅನುಮಾನವನ್ನೋ ನಿತ್ಯ  ಸುರಿಸುತ್ತಿರುತ್ತಾರೆ. ವಿವಾಹದ ಸಂದರ್ಭದಲ್ಲಿ ಸವಾಲು ಎದುರಾಗುತ್ತದೆ. ಅಲ್ಲದೇ, ದೂರು ಕೊಟ್ಟ ಬಳಿಕ ಅಪರಾಧಿಗಳಿಂದ ಜೀವ  ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ. ಎಲ್ಲಿ, ಯಾವಾಗ, ಏನಾಗುತ್ತೋ ಎಂಬ ಭಯವೊಂದನ್ನು ಎದೆಯೊಳಗಿಟ್ಟುಕೊಂಡೇ  ನಡೆದಾಡಬೇಕಾಗುತ್ತದೆ. ಇಷ್ಟೆಲ್ಲಾ ಆಗಿಯೂ ಕೇಸು ಬಿದ್ದು ಹೋದರೆ ಸಂಕಟದ ಮೇಲೆ ಸಂಕಟ.


ಕಳೆದು ಹೋದ ಮಗಳಿಗಾಗಿ ದಣಿವರಿಯದೇ ಹೋರಾಡುತ್ತಿರುವ ಆ ತಾಯಿಗೆ ಯಶಸ್ಸು ಸಿಗಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ.

Friday, August 18, 2023

ಗ್ಯಾನ್‌ವಾಪಿ ಸರ್ವೇ ಯಾರ ಅಗತ್ಯ?



ಶಿವಮಂದಿರವನ್ನು ಒಡೆದು 1669ರಲ್ಲಿ ಔರಂಗಝೇಬ್ ಕಟ್ಟಿರುವನೆಂದು ಹೇಳಲಾಗುವ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ  ಸರ್ವೇ ನಡೆದಿದೆ. ಪೂರ್ವದಲ್ಲಿ ಅದು ಏನಾಗಿತ್ತು, ಮಂದಿರದ ಕುರುಹುಗಳು ಅಲ್ಲಿ ಇದೆಯೇ ಎಂಬುದು ಸರ್ವೇಯ ಪ್ರಧಾನ ಗುರಿ.  ನಿಜಕ್ಕೂ, ಇಂಥ ಹುಡುಕಾಟ ಯಾರ ಅಗತ್ಯ? ಈ ಸರ್ವೇಯ ಫಲಿತಾಂಶದಿಂದ  ಸಂತಸಪಡುವವರು ಯಾರು- ರಾಜಕಾರಣಿಗಳೋ  ನಾಗರಿಕರೋ?

1669ಕ್ಕಿಂತಲೂ ಪೂರ್ವದಲ್ಲಿ ಅದು ಶಿವ ಮಂದಿರವಾಗಿತ್ತೋ ಇಲ್ಲವೋ; ಆದರೆ, ಅದಕ್ಕೂ ಈಗ ಆ ಮಸೀದಿಯಲ್ಲಿ ನಮಾಝï  ಮಾಡುತ್ತಿರುವವರಿಗೂ ಯಾವ ಸಂಬಂಧವೂ ಇಲ್ಲ.

ಒಂದುವೇಳೆ, 1669ರಲ್ಲಿ ಮಂದಿರವನ್ನು ಒಡೆದೇ ಈ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಿದರೂ ಈಗ ಆ ಘಟನೆಗೆ 400  ವರ್ಷಗಳೇ ಕಳೆದಿವೆ. ರಾಜರುಗಳ ಕಾಲ ಕಳೆದು ಪ್ರಜೆಗಳ ಕಾಲ ಬಂದಿದೆ. ರಾಜರುಗಳ ಕಾಲದಲ್ಲಿ ಏನೇನು ಅನಾಹುತಗಳು ನಡೆದಿವೆ  ಎಂಬುದನ್ನು ಈ ಪ್ರಜೆಗಳ ಕಾಲದಲ್ಲಿ ಸಂಶೋಧನೆ ಮಾಡಿ ಸರಿಪಡಿಸುವುದು ಅಗತ್ಯವೇ? ಹಾಗೆ ಸರಿಪಡಿಸಲು ಹೊರಟರೆ ಈ ಮಣ್ಣಿನಲ್ಲಿ ಸರ್ವೇ ನಡೆಸಬೇಕಾದ ಪುರಾತನ ಕಟ್ಟಡಗಳು, ಮಂದಿರಗಳು, ಗುರುದ್ವಾರಗಳು ಎಷ್ಟಿದ್ದೀತು? ದೇಶ ವಿಭಜನೆಯ ವೇಳೆ ಪಂಜಾಬ್,  ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ 50 ಸಾವಿರ ಮಸೀದಿಗಳನ್ನು ಒಂದೋ ಧ್ವಂಸ ಮಾಡಲಾಗಿದೆ ಅಥವಾ ಮಂದಿರವೋ  ಅಥವಾ ಗುರುದ್ವಾರವೋ ಆಗಿ ಬದಲಾಯಿಸಲಾಗಿದೆ. ಇವುಗಳನ್ನು ಮತ್ತೆ ಮುಸ್ಲಿಮರಿಗೆ ಮರಳಿಸಬೇಕು ಎಂದು ಆಗ್ರಹಿಸಿದರೆ ಅದು  ಸಾರ್ವಜನಿಕವಾಗಿ ಬೀರುವ ಪರಿಣಾಮಗಳು ಏನೇನು?

ಒಂದುಕಾಲದಲ್ಲಿ ಇಂದಿನ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿಸ್ತಾರ ಭೂಭಾಗದಲ್ಲಿ ಜೈನ ಧರ್ಮವು ಸೊಂಪಾಗಿ ಬೆಳೆದಿತ್ತು. ಕ್ರಿಸ್ತ ಪೂರ್ವದಲ್ಲಿ ಹುಟ್ಟಿ ಈ ಮಣ್ಣಿನಲ್ಲಿ ಅಪಾರ ಜನಾಕರ್ಷಣೆಯನ್ನು ಪಡೆದು ಕ್ರಿಸ್ತಶಕ 13ನೇ ಶತಮಾನದವರೆಗೆ ದೊಡ್ಡಮಟ್ಟದ ಸಂಚಲನೆಯನ್ನು ಸೃಷ್ಟಿಸಿದ ಧರ್ಮ ಇದು. ತೆಲಂಗಾಣದ ಕಾಕತಿಯಾಗಳು ಮತ್ತು ಆಂಧ್ರದ ವೆಂಕಿ ಚಾಲುಕ್ಯರು ಜೈನ ಧರ್ಮದ ಅನುಯಾಯಿಗಳಾಗಿದ್ದರು. ಜೈನರ ಮೊದಲ ತೀರ್ಥಂಕರ ಮತ್ತು ಜೈನಧರ್ಮದ ಸ್ಥಾಪಕ ರಿಶಭನ ಮಗ ಬಾಹುಬಲಿಯ ರಾಜಧಾನಿ  ಪೊಡಾಣ್ ಆಗಿತ್ತು. ಇವತ್ತು ಅದು ನಿಝಾಮಾಬಾದ್‌ನ ಹತ್ತಿರದ ಪ್ರದೇಶವಾಗಿ ಗುರುತಿಸಿ ಕೊಂಡಿದೆ. ಆದರೆ ಕ್ರಿ.ಶ. 13ನೇ ಶತಮಾ ನದವರೆಗೆ ಈ ಭಾಗದಲ್ಲಿ ಅತ್ಯಂತ ಉಜ್ವಲವಾಗಿದ್ದ ಜೈನ ಧರ್ಮವು ಇವತ್ತು ಈ ಭಾಗದಲ್ಲಿ ಹುಡುಕಿದರೂ ಸಿಗದಷ್ಟು ಅಪರೂಪವಾಗಿದೆ.  ಈ ಎರಡೂ ರಾಜ್ಯಗಳಲ್ಲಿ ಇವತ್ತು ಕೇವಲ 42 ಜೈನ ಸ್ಮಾರಕಗಳಷ್ಟೇ ಉಳಿದುಕೊಂಡಿವೆ. ಪ್ರಸಿದ್ಧ ಹಿಂದೂ ಮಂದಿರಗಳಾದ  ವೇಮುಲವಾಡ, ಲಸರ್‌ನ ಪ್ರಸಿದ್ಧ ಸರಸ್ವತಿ ಮಂದಿರ ಮತ್ತು ಪದ್ಮಾಕ್ಷಿ ಮಂದಿರಗಳು ಒಂದು ಕಾಲದಲ್ಲಿ ಜೈನಬಸದಿಗಳಾಗಿದ್ದುವು ಎಂದು  ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ವೀರಶೈವ ಚಿಂತನೆಯು ಅತ್ಯಂತ ಆಕ್ರಮಣಕಾರಿಯಾಗಿ ಈ ಭಾಗದಲ್ಲಿ ಪ್ರಚಾರ  ಪಡೆಯುವುದರೊಂದಿಗೆ ಜೈನ ಧರ್ಮದ ಅವನತಿಯ ಆರಂಭವಾಯಿತು. ಅದರ ಜೊತೆಗೆ ಬಸದಿಗಳು, ಸ್ಮಾರಕಗಳು ಕೂಡ  ಬದಲಾದುವು. ಅಂದಹಾಗೆ,

ಒಂದು  ಕಾಲದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಈ ಮಣ್ಣಿನಲ್ಲಿ ಎಷ್ಟು ಸಮೃದ್ಧವಾಗಿ ಬೆಳೆದಿದ್ದುವು ಎಂದರೆ, ಅದು ರಾಜ ಧರ್ಮವೇ  ಆಗಿತ್ತು. ಈ ಎರಡು ಧರ್ಮಗಳಲ್ಲಿ ಹಲವು ರಾಜವಂಶಗಳೇ ಆಗಿಹೋಗಿವೆ. ಸಾಮ್ರಾಟ ಅಶೋಕ ಅವರಲ್ಲಿ ಒಬ್ಬ.  ಇಷ್ಟೊಂದು  ಭವ್ಯ ಇತಿಹಾಸವನ್ನು ಹೊಂದಿರುವ ಈ ಎರಡೂ ಧರ್ಮಗಳ ಕುರುಹುಗಳೂ ಅಷ್ಟೇ ಸಮೃದ್ಧವಾಗಿರ ಬೇಕಾದುದು ಅಗತ್ಯ. ಆದರೆ,  ಜೈನ ಬಸದಿ ಮತ್ತು ಬೌದ್ಧ ಸ್ತೂಪಗಳು ಬಹುತೇಕ ಈ ದೇಶದಿಂದ ಕಾಣೆಯಾಗಿವೆ. ಹಾಗಿದ್ದರೆ ಅವು ಎಲ್ಲಿವೆ? ಏನಾಗಿವೆ? ಅವು  ಸಹಜವಾಗಿ ಧ್ವಂಸಗೊಂಡಿವೆಯೋ ಅಥವಾ ಮಂದಿರವಾಗಿ ಪರಿವರ್ತನೆಯಾಗಿವೆಯೋ?
ಹಾಗಂತ, ಇಂಥದ್ದೊಂದು  ಪ್ರಶ್ನೆಯನ್ನು ಇಟ್ಟುಕೊಂಡು ಭೂಮಿಯನ್ನು ಅಗೆಯಲು ಹೊರಟರೆ ಅದರಿಂದ ಈ ಸಮಾಜಕ್ಕಾಗುವ  ಲಾಭವೇನು?

ಅಷ್ಟಕ್ಕೂ, ಇತಿಹಾಸ ಏಕಮುಖವಾಗಿಲ್ಲ.

ಇಲ್ಲಿ, ಮಂದಿರವನ್ನು ಒಡೆದ ಮುಸ್ಲಿಮ್ ರಾಜನಷ್ಟೇ ಇರುವುದಲ್ಲ, ಹಿಂದೂ ರಾಜನೂ ಇದ್ದಾನೆ. ಮಂದಿರಕ್ಕೆ ಭೂದಾನ ಮಾಡಿದ  ಮುಸ್ಲಿಮ್ ದೊರೆ ಇರುವಂತೆಯೇ ಮಂದಿರವನ್ನೇ ಒಡೆದು ವಿಗ್ರಹ ದೋಚಿದ ಹಿಂದೂ ರಾಜನೂ ಇದ್ದಾನೆ. ಮುಸ್ಲಿಮ್ ರಾಜನನ್ನು  ಸೋಲಿಸುವುದಕ್ಕಾಗಿ ಹಿಂದೂ ರಾಜನೊಂದಿಗೆ ಕೈಜೋಡಿಸಿದ ಮುಸ್ಲಿಮ್ ದೊರೆಗಳೂ ಇದ್ದಾರೆ. ಟಿಪ್ಪು ಸುಲ್ತಾನ್‌ನನ್ನು ಬ್ರಿಟಿಷರು  ಮಣಿಸಿದ್ದೇ  ನಿಜಾಮರ ಸಹಕಾರದಿಂದ. ಕ್ರೂರಿ, ವಿಗ್ರಹಭಂಜಕ, ಮತಾಂತರಿ ಎಂದೆಲ್ಲಾ ದೂಷಣೆಗೆ ಒಳಗಾಗಿರುವ ಔರಂಗಝೇಬನು  ಮಂದಿರಗಳಿಗೆ ಕಾವಲಾಗಿದ್ದ ಮತ್ತು ಹಿಂದೂ ಸಂತರನ್ನು ಗೌರವಿಸಿದ್ದ ಎಂಬ ದಾಖಲೆಯೂ ಇದೆ. 1669ರಲ್ಲಿ ಬನಾರಸ್‌ನ ಆತನ ಅ ಧಿಕಾರಿಗಳು ಹೊರಡಿಸಿದ ರಾಜಾದೇಶ ಹೀಗಿವೆ:

‘ಬನಾರಸ್‌ನ ಆಸುಪಾಸಿನಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯವಾಗಿದೆ, ಅದರಲ್ಲೂ ಮಂದಿರದಲ್ಲಿ ಪೂಜಾ ಕೈಂಕರ್ಯದಲ್ಲಿ
ತೊಡಗಿರುವ ಬ್ರಾಹ್ಮಣರ ಮೇಲೆ ಅನ್ಯಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಂದಿರ ಕಾಯುವ ಹೊಣೆಗಾರಿಕೆಯಿಂದ ಈ  ಬ್ರಾಹ್ಮಣರನ್ನು ಹೊರಹಾಕುವುದು ಈ ದೌರ್ಜನ್ಯಕೋರರ ಉದ್ದೇಶವಾಗಿದೆ. ಇದು ಅಸಾಧುವಾದುದು. ಆದ್ದರಿಂದ ಈ ಪತ್ರ ತಲುಪಿದ  ತಕ್ಷಣ ಯಾರೂ ನ್ಯಾಯಬಾಹಿರವಾಗಿ ನಡಕೊಳ್ಳದಂತೆ ಮತ್ತು ಬ್ರಾಹ್ಮಣ ಪೂಜಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು  ಮತ್ತು ಮಂದಿರದ ಪಾವಿತ್ರ‍್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು..’ ಅಂದಹಾಗೆ,

ಮಂದಿರಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಕಾಶ್ಮೀರದ ರಾಜ ಸುಲ್ತಾನ್ ಸಿಕಂದರ್ (1489-1517) ಕೈಗೊಂಡಾಗ ಅದನ್ನು  ಕಾಶ್ಮೀರದ ಮುಂಚೂಣಿ ಸೂಫಿಗಳಾದ ಹಝ್ರತ್ ನೂರುದ್ದೀನ್ ನೂರಾನಿಯವರು ತೀವ್ರವಾಗಿ ಪ್ರತಿಭಟಿಸಿದ್ದೂ ಇತಿಹಾಸದಲ್ಲಿದೆ.  ‘ಇಸ್ಲಾಮ್‌ನಲ್ಲಿ ಈ ದಾಳಿಗೆ ಅವಕಾಶ ಇಲ್ಲ’ ಎಂದು ಅವರು ಘಂಟಾಘೋಷವಾಗಿ ಹೇಳಿದ್ದನ್ನು ಇತರ ಉಲೆಮಾಗಳೂ ಬೆಂಬಲಿಸಿದರು.  ನಿಜವಾಗಿ, ಈ ಮಣ್ಣಿನ ಯಾವುದೇ ಮಂದಿರವನ್ನು ಮುಸ್ಲಿಮ್ ನಾಗರಿಕರು ಧ್ವಂಸಗೊಳಿಸಿದ ಇತಿಹಾಸ ಇಲ್ಲವೇ ಇಲ್ಲ. ಮಂದಿರವನ್ನೋ ಬಸದಿ,  ಸ್ತೂಪವನ್ನೋ ಧ್ವಂಸಗೊಳಿಸುವ ಕೃತ್ಯವು ರಾಜರುಗಳಿಂದ ರಾಜರುಗಳಿಗಾಗಿ ನಡೆಯುತ್ತಿತ್ತೇ ಹೊರತು ಅದಕ್ಕೂ ನಾಗರಿಕರಿಗೂ  ಸಂಬಂಧವೇ ಇರಲಿಲ್ಲ. ಆದ್ದರಿಂದಲೇ, ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಯಾಕೆ ಹೀಗೆ? ರಾಜರುಗಳು ಮಾತ್ರ ಧರ್ಮಶ್ರದ್ಧೆಯುಳ್ಳವರಾಗಿದ್ದರೆ ಅಥವಾ ಧರ್ಮಶ್ರದ್ಧೆಗೂ ಈ ಧ್ವಂಸ ಕೃತ್ಯಕ್ಕೂ ಸಂಬಂಧ  ಇರಲಿಲ್ಲವೇ? ಒಂದು ಮಂದಿರವನ್ನು ಧ್ವಂಸಗೊಳಿಸಿದ ಅದೇ ರಾಜ  ಇನ್ನೊಂದು ಕಡೆ ಮಂದಿರವನ್ನು ಕಟ್ಟಿಸಿದ ಮತ್ತು ಮಂದಿರಕ್ಕೆ ಭೂದಾನ ಮಾಡಿದ ದಾಖಲೆಗಳೂ ಇತಿಹಾಸದಲ್ಲಿ ವಿಫುಲವಾಗಿ ಇವೆ.  ಔರಂಗಝೇಬನೂ ಇವರಲ್ಲಿ ಒಬ್ಬ. ಟಿಪ್ಪು ಸುಲ್ತಾನನ ಮೇಲೆ ದೇಗುಲ ಭಂಜನೆಯ ಆರೋಪವಷ್ಟೇ ಇರುವುದಲ್ಲ, ದೇಗುಲಕ್ಕೆ  ಭೂಮಿಯನ್ನು ಉಂಬಳಿಯಾಗಿ ಕೊಟ್ಟ, ಮಂದಿರಕ್ಕೆ ಕಾವಲು ನಿಂತ ಮತ್ತು ಮಂದಿರ ನಿರ್ಮಿಸಿದ ಶ್ಲಾಘನೆಯೂ ಇದೆ. ಆದ್ದರಿಂದ,  ರಾಜರುಗಳ ಕ್ರಮವನ್ನು ಧರ್ಮದ ಕನ್ನಡಕದಿಂದ ನೋಡುವುದಕ್ಕಿಂತ ರಾಜಕೀಯ ಕನ್ನಡಕದಿಂದ ನೋಡುವುದೇ  ಹೆಚ್ಚು ಸೂಕ್ತ ಎಂದು  ಅನಿಸುತ್ತದೆ. ಧ್ವಂಸಗೊಂಡ  ಅಥವಾ ದರೋಡೆಗೊಂಡ ಹೆಚ್ಚಿನ ಮಂದಿರಗಳನ್ನು ಪರಿಶೀಲಿಸಿದರೆ, ಅಚ್ಚರಿಯ ಫಲಿತಾಂಶವೊಂದು   ಸಿಗುತ್ತದೆ. ಅರಮನೆಯ ಮಂದಿರವಾಗಿ ಗುರುತಿಸಿಕೊಂಡವುಗಳೇ ಇವುಗಳಲ್ಲಿ ಹೆಚ್ಚಿವೆ. ಇದಕ್ಕೆ ಈ ಮಂದಿರಗಳಲ್ಲಿ ಅಪಾರವಾದ  ವಜ್ರ-ವೈಢೂರ್ಯಗಳಿರುವುದು ಒಂದು ಕಾರಣವಾದರೆ, ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಅವು ಗುರುತಿಸಿಕೊಂಡಿರುವುದು  ಕೂಡ ಇನ್ನೊಂದು ಕಾರಣವಾಗಿದೆ. ಗೆದ್ದ ರಾಜ ಸೋತ ರಾಜನ ರಾಜಧಾನಿಯಲ್ಲಿರುವ ಧಾರ್ಮಿಕ ಕ್ಷೇತ್ರವನ್ನು ಲೂಟಿಗೈದು ತಮ್ಮ  ಪರಾಕ್ರಮದ ಸಂದೇಶವನ್ನು ಜನರಿಗೆ ತಲುಪಿಸುವ ಗುರಿಯೂ ಇದರ ಹಿಂದಿರುತ್ತದೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಎಂಬ ಭೇದ  ಇಲ್ಲದೇ ರಾಜರುಗಳು ಇಂಥ ಲೂಟಿಯಲ್ಲಿ ಭಾಗಿಯಾಗಿದ್ದಾರೆ.

ಕೆಲವು ಉದಾಹರಣೆಗಳು ಹೀಗಿವೆ;

1. 7ನೇ ಶತಮಾನದಲ್ಲಿ ಪಲ್ಲವ ರಾಜ ಒಂದನೇ ನರಸಿಂಹ ವರ್ಮನ್ ಎಂಬವ ಚಾಲುಕ್ಯರ ಮೇಲೆ ವಿಜಯ ಸಾಧಿಸಿದ ಬಳಿಕ  ರಾಜಧಾನಿ ವಾತಾಪಿಯ ಮಂದಿರದ ಮೇಲೆ ದಾಳಿ ಮಾಡಿದ. ಅಲ್ಲಿದ್ದ ಗಣೇಶ ವಿಗ್ರಹವನ್ನು ಎತ್ತಿಕೊಂಡು ಹೋದ.

2. ತನ್ನ ಶತ್ರು ರಾಜ ಕಾಶ್ಮೀರದ ಲಲಿತಾದಿತ್ಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಭಾಗವಾಗಿ ಬಂಗಾಳದ ಹಿಂದೂ ಸೇನೆಯು ವಿಷ್ಣುವಿನ  ವಿಗ್ರಹವನ್ನು ಧ್ವಂಸಗೊಳಿಸಿತು. ಇದು ನಡೆದುದು 8ನೇ ಶತಮಾನದಲ್ಲಿ.

3. 10ನೇ ಶತಮಾನದಲ್ಲಿ ಹಿಂದೂ ರಾಜ ಹರಂಬಪಾಲ ಮತ್ತು ಕೋಗ್ರಾದ ಹಿಂದೂ ರಾಜನ ನಡುವೆ ಯುದ್ಧ ನಡೆಯಿತು. ಇದರಲ್ಲಿ  ಕೋಗ್ರಾದ ರಾಜ ಸೋಲೊಪ್ಪಿಕೊಂಡ. ಆ ಬಳಿಕ ಅರಮನೆಯ ವಿಷ್ಣು ಮಂದಿರವನ್ನು ಲೂಟಿ ಮಾಡಲಾಯಿತು. ಬಂಗಾರದ  ವಿಗ್ರಹಗಳನ್ನು ದರೋಡೆ ಮಾಡಿ ಕೊಂಡೊಯ್ಯಲಾಯಿತು.

4. ತನ್ನ ಶತ್ರುಗಳಾದ ಚಾಲಕ್ಯ ಪಾಲ ಮತ್ತು ಕಳಿಂಗರ ವಿರುದ್ಧ ಚೋಳ ದೊರೆ ಒಂದನೇ ರಾಜೇಂದ್ರ ಯುದ್ಧ ಹೂಡಿದ. ಗೆದ್ದ. ಬಳಿಕ  ಶತ್ರು ರಾಜರ ಮಂದಿರಗಳಿಂದ  ತಂದ ವಿಗ್ರಹಗಳಿಗೆ ತನ್ನ ನಾಡಿನಲ್ಲಿ ಪ್ರತಿಷ್ಠಾಪನಾ ಕಾರ್ಯ ಮಾಡಿದ.

5. 16ನೇ ಶತಮಾನದಲ್ಲಿ ವಿಜಯನಗರದ ದೊರೆ ಕೃಷ್ಟದೇವರಾಯ ಉದಯಗಿರಿಯ ಮೇಲೆ ದಾಳಿ ಮಾಡಿ ಕೃಷ್ಣ ವಿಗ್ರಹವನ್ನು  ಎತ್ತಿಕೊಂಡು ಬಂದ. ಪಂದಾರ್‌ಪುರ್ ಮಂದಿರದಿಂದ  ವಿಠ್ಠಲ ವಿಗ್ರಹವನ್ನೂ ಲೂಟಿ ಮಾಡಿ ತಂದ.

6. 10ನೇ ಶತಮಾನದಲ್ಲಿ ರಾಷ್ಟ್ರ ಕೂಟರ ದೊರೆ ಮೂರನೇ ಇಂದ್ರನು ತನ್ನ ಶತ್ರುವಾದ ಹಿಂದೂ ರಾಜನನ್ನು ಮಣಿಸಿದ ಬಳಿಕ ಕಲ್ಪದಲ್ಲಿರುವ ಕಲಪ್ರಿಯ ಮಂದಿರವನ್ನು ಧ್ವಂಸ ಮಾಡಿದ. ತಮಿಳು ಭಾಗದಲ್ಲಿ ಅನೇಕ ಮಂದಿರಗಳನ್ನು ಒಡಿಸ್ಸಾ ಸೂರ್ಯವಂಶ  ಗಜಪತಿ ಸಾಮ್ರಾಜ್ಯದ ಸ್ಥಾಪಕ ಕಪಿಲೇಂದ್ರ ಧ್ವಂಸ ಮಾಡಿದ. ಹಾಗೆಯೇ  ಗೋಲ್ಕೊಂಡಾ ಸುಲ್ತಾನರ ಸೇನಾಧಿ ಪತಿಯಾಗಿದ್ದ ಮರಾಠಿ  ಬ್ರಾಹ್ಮಣ ಮುರಹರಿ ರಾವ್ ಎಂಬವ ಕೃಷ್ಣಾ ನದಿ ಪ್ರದೇಶವನ್ನು ಸುಲ್ತಾನರ ಅಧೀನಕ್ಕೆ ತಂದ ಬಳಿಕ ಅಹೋಬಿಮ್ ಮಂದಿರದ ಮೇಲೆ  ದಾಳಿ ಮಾಡಿ ಅಲ್ಲಿನ ವಿಗ್ರಹ ವನ್ನು ಸುಲ್ತಾನರಿಗೆ ಪಾರಿತೋಷಕವಾಗಿ ಸಮರ್ಪಿಸಿದ ಎಂಬ ಇತಿಹಾಸವೂ ಇದೆ. ಈ ಬಗ್ಗೆ,  sanctified vandalism as a political tool  ಎಂಬ ಶೀರ್ಷಿಕೆಯಲ್ಲಿ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ  ಬರಹದಲ್ಲಿ ಇನ್ನಷ್ಟು ವಿವರಗಳೂ ಇವೆ.

ನಿಜವಾಗಿ, ಯಾವುದೋ ಒಂದು ಕಾಲದಲ್ಲಿ ಮಂದಿರವೊಂದು  ಮಸೀದಿಯಾಗಿ ಮಾರ್ಪಟ್ಟಿದ್ದರೆ ಅಥವಾ ಬಸದಿಯೋ ಸ್ತೂಪವೋ  ಮಂದಿರವಾಗಿ ಬದಲಾಗಿದ್ದರೆ ಅದಕ್ಕೆ ಧಾರ್ಮಿಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶಗಳೇ ಮುಖ್ಯವಾಗಿದ್ದುವು. ರಾಜ ಧರ್ಮಭೀರುವಾಗಿರುವುದು ಕಡಿಮೆ. ಧರ್ಮಭೀರುವಾಗಿರುವ ರಾಜ ಇನ್ನೊಂದು ಧರ್ಮ ಸಂಕೇತಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ  ಕಡಿಮೆ. ಅದರಲ್ಲೂ ಮುಸ್ಲಿಮ್ ದೊರೆಗಳಂತೂ ಧರ್ಮದ ಕಾರಣಕ್ಕಾಗಿ ಮಂದಿರಗಳ ಮೇಲೆ ದಾಳಿ ಮಾಡುವುದು ಮತ್ತೂ ಕಡಿಮೆ.  ಯಾಕೆಂದರೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರದಲ್ಲಿರಬೇಕಾದುದು ತನ್ನ ಅಸ್ತಿತ್ವ ಉಳಿವಿನ  ದೃಷ್ಟಿಯಿಂದ ಅವರಿಗೆ ಬಹಳ ಮುಖ್ಯ. ಆದರೆ ಗೆದ್ದ ರಾಜ ಸೋತ ರಾಜನ ರಾಜಧಾನಿಯ ಮಂದಿರವನ್ನು ಲೂಟಿ ಮಾಡುವುದು ಆ  ಕಾಲದ ಸಂಪ್ರದಾಯವೇ ಆಗಿರಬೇಕು. ಸಂಪತ್ತನ್ನು ದೋಚುವುದೇ ಅದರ ಮುಖ್ಯ ಗುರಿಯಾಗಿರಬೇಕು. ಇದು ನಾಗರಿಕರಿಗೂ ಚೆನ್ನಾಗಿ  ಗೊತ್ತಿರಬೇಕು. ಆದ್ದರಿಂದಲೇ, ಯಾವುದೇ ರಾಜನ ಮಂದಿರ ದರೋಡೆಗೆ ನಾಗರಿಕರಿಂದ ಪ್ರತಿರೋಧ ವ್ಯಕ್ತವಾದ ಉದಾಹರಣೆ ಇಲ್ಲವೇ  ಇಲ್ಲ. ಆದರೆ, ಮಸೀದಿಗಳಲ್ಲಿ ಸಂಪತ್ತನ್ನು ಕಾಪಿಡುವ ಪದ್ಧತಿ ಇಲ್ಲದೇ ಇರುವುದರಿಂದ ಅವು ದಾಳಿಗಳಿಂದ ಸುರಕ್ಷಿತವಾಗಿರುವ  ಸಾಧ್ಯತೆಯೂ ಇದೆ. ಅಂದಹಾಗೆ,

ಗ್ಯಾನ್‌ವಾಪಿ ವಿವಾದದ ಹಿಂದಿರುವುದೂ ರಾಜಕೀಯ ಹಿತಾಸಕ್ತಿಯೇ ಹೊರತು ಇನ್ನೇನಲ್ಲ.

Thursday, August 10, 2023

ಮಣಿಪುರಿ ಮುಸ್ಲಿಮರು: ಇತಿಹಾಸ, ವರ್ತಮಾನ ಮತ್ತು ಪ್ರವಾದಿಯ(ಸ) ಆ ಸಂಗಾತಿ


ಏ.ಕೆ. ಕುಕ್ಕಿಲ

1. ಮಣಿಪುರದಲ್ಲಿ ಮುಸ್ಲಿಮರಿದ್ದಾರಾ?
2. ಅವರಿಗೂ ಮಣಿಪುರಿಗಳಿಗೂ ನಡುವೆ ಸಂಬಂಧ  ಹೇಗಿದೆ?

ಮಣಿಪುರ ಹಿಂಸಾಚಾರ ಚರ್ಚೆಯ ನಡುವೆ ಅತೀ ಹೆಚ್ಚು ಕೇಳಿ ಬಂದ ಪ್ರಶ್ನೆಗಳಲ್ಲಿ ಇವುಗಳೂ ಸೇರಿವೆ.

1993 ಮೇ 3. ಮಣಿಪುರದ ಮುಸ್ಲಿಮರ ಪಾಲಿಗೆ ಕರಾಳ ದಿನ. ಇವತ್ತಿಗೂ ಮಣಿಪುರದ ಮುಸ್ಲಿಮರು ಮೇ 3ನ್ನು ಕಪ್ಪು ದಿನವಾಗಿ  ಪರಿಗಣಿಸುತ್ತಾರೆ. ಪಂಗಾಲ್ ಹತ್ಯಾಕಾಂಡ ನಡೆದ ದಿನ ಇದು. ಪಂಗಾಲ್ ಎಂಬುದು ಮುಸ್ಲಿಮರನ್ನು ಮೇತಿ ಭಾಷೆಯಲ್ಲಿ ಸಂಬೋಧಿಸುವ ಹೆಸರು. ಮೇತಿ ಪಂಗಾಲ್ ಎಂದು ಇರುವಂತೆಯೇ ಮೇತಿ ಹಿಂದೂ, ಮೇತಿ ಕ್ರೈಸ್ತ ಎಂದೂ ಇದೆ. ಮೇತಿ ಹಿಂದೂ ಮತ್ತು  ಮೇತಿ ಪಂಗಾಲ್ ಅಥವಾ ಮುಸ್ಲಿಮರ ನಡುವಿನ ಈ ಘರ್ಷಣೆಯಲ್ಲಿ 100 ಮಂದಿಯ ಹತ್ಯೆಯಾಗಿದೆ ಎಂಬುದು ಸರಕಾರದ  ಲೆಕ್ಕಾಚಾರ. ಸರಕಾರೇತರ ಸಂಸ್ಥೆಗಳ ಪ್ರಕಾರ 140ರಷ್ಟು ಮಂದಿಯ ಹತ್ಯೆಯಾಗಿದೆ. ಮುಸ್ಲಿಮರೇ ಪ್ರಯಾಣಿಸುತ್ತಿದ್ದ ಬಸ್ಸಿಗೆ ಬೆಂಕಿ  ಕೊಡಲಾಗಿದೆ. ಭೂವಿವಾದ ಈ ಮುಸ್ಲಿಮ್ ಹತ್ಯಾಕಾಂಡಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ಇನ್ನೂ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದೆ. ಮುಖ್ಯವಾಗಿ, ಮೇತಿ ಹಿಂದೂ ಪ್ರತ್ಯೇಕತಾವಾದಿಗಳು ಮುಸ್ಲಿಮರಿಂದ ಬಲವಂತದಿಂದ ಹಣ ಸಂಗ್ರಹಕ್ಕೆ ಇಳಿದುದು  ಮತ್ತು ಅವರಲ್ಲಿ ಓರ್ವನನ್ನು ಮುಸ್ಲಿಮರು ಹತ್ಯೆಗೈದುದು ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಸಾಮಾನ್ಯವಾಗಿ, ಮಣಿಪುರದ ಮುಸ್ಲಿಮರ ಇತಿಹಾಸವನ್ನು 1604ರಿಂದ ಲೆಕ್ಕ ಹಾಕಲಾಗುತ್ತದೆ. ಮಣಿಪುರವನ್ನು ಆಳುತ್ತಿದ್ದ ಖಾಗೆಂಬ  ಎಂಬ ರಾಜನ ಜೊತೆ ಆತನ ಸಹೋದರ ಸೆನೆಂಗ್ ಬಾನಿಗೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಆದ್ದರಿಂದ ತನ್ನ ಸಹೋದರನನ್ನು  ಮಣಿಸುವುದಕ್ಕಾಗಿ ಸೈನಿಕ ನೆರವು ನೀಡುವಂತೆ ಕಚಾರಿ ರಾಜ ದಿಮ್‌ಶಾ ಪ್ರಸಾಪಿಲ್‌ಗೆ ಈ ಸೆನೆಂಗ್‌ಬಾ ಮನವಿ ಮಾಡುತ್ತಾನೆ. ಆದರೆ  ಖಾಗೆಂಬಾನ ಸಾಮರ್ಥ್ಯ ಗೊತ್ತಿದ್ದ ದಿಮ್‌ಶಾ, ತಾನೋರ್ವನೇ ದಂಡೆತ್ತಿ ಹೋದರೆ ಗೆಲುವು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ  ಮತ್ತು ತರಫ್ ಪ್ರದೇಶದ ರಾಜ ಮುಹಮ್ಮದ್ ನಝೀರ್‌ನನ್ನು ನೆರವಾಗುವಂತೆ ಕೋರುತ್ತಾನೆ. ಹೀಗೆ ನಝೀರ್ ತನ್ನ ಸಹೋದರ  ಮುಹಮ್ಮದ್ ಸಾನಿಯ ನೇತೃತ್ವದಲ್ಲಿ ಸೇನಾಪಡೆಯನ್ನು ಕಳುಹಿಸಿಕೊಡುತ್ತಾನೆ. ಆದರೆ,

ಈ ಸೇನೆಗೆ ರಾಜ ಖಾಗೆಂಬಾ ಪಡೆಯನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಹಮ್ಮದ್ ಸಾನಿ ಮತ್ತು 1000 ಸೈನಿಕರನ್ನು  ಬಂಧಿಸಲಾಗುತ್ತದೆ. ಬಳಿಕ ಮಣಿಪುರದಲ್ಲೇ  ಉಳಕೊಳ್ಳಲು ಈ ಸೈನಿಕರಿಗೆ ರಾಜ ಖಾಗೆಂಬಾ ಅನುಮತಿಯನ್ನು ನೀಡುತ್ತಾನೆ. ಈ ನಡುವೆ  ಬರ್ಮಾದ ರಾಜ ಮಣಿಪುರದ ಮೇಲೆ ದಾಳಿ ಮಾಡುತ್ತಾನೆ. ಆಗ ರಾಜ ಖಾಗೆಂಬಾ ಈ 1000 ಸೈನಿಕರಲ್ಲಿ ನೆರವಾಗುವಂತೆ  ವಿನಂತಿಸುತ್ತಾನೆ. ಹೀಗೆ ಮೇತಿ ಸೇನೆಯ ಜೊತೆ ಸೇರಿ ಬರ್ಮಾ ಸೇನೆಯ ವಿರುದ್ಧ ಈ 1000 ಸೈನಿಕರು ಹೋರಾಡಿ ಜಯ ತಂದು  ಕೊಡುತ್ತಾರೆ. ಈ ಗೆಲುವು ರಾಜನಲ್ಲಿ ಅಪಾರ ಸಂತಸವನ್ನು ತರುತ್ತದೆ ಮತ್ತು ಈ 1000 ಸೈನಿಕರನ್ನು ಪಂಗಾಲ್ ಎಂದು ಕರೆಯುತ್ತಾನೆ.  ಪಂಗಾಲ್ ಎಂದರೆ ಮೇತಿ ಭಾಷೆಯಲ್ಲಿ ಶಕ್ತಿ ಎಂದೂ ಅರ್ಥವಿದೆ. ಮಾತ್ರವಲ್ಲ, ಆವರೆಗೆ ಬರೇ ಉಳಕೊಳ್ಳುವುದಕ್ಕಷ್ಟೇ ಸ್ವಾತಂತ್ರ‍್ಯವನ್ನು  ಪಡೆದಿದ್ದ ಈ ಪಂಗಾಲ್‌ಗಳಿಗೆ ಮೇತಿ ಹಿಂದೂಗಳನ್ನು ಮದುವೆಯಾಗುವ ಮತ್ತು ಭೂಮಿ ಹೊಂದುವ ಸ್ವಾತಂತ್ರ‍್ಯವನ್ನೂ ನೀಡುತ್ತಾನೆ.  ಹೀಗೆ ಪಂಗಾಲ್‌ಗಳು ಅಥವಾ ಮುಸ್ಲಿಮರು ಮಣಿಪುರದ ಭಾಗವಾಗುತ್ತಾರೆ ಎಂಬ ವರದಿಯೂ ಇದೆ. ಹಾಗೆಯೇ,

ಮೊಘಲ್ ದೊರೆ ಔರಂಗಝೇಬ್‌ ನಿಂದ  ತಪ್ಪಿಸಿಕೊಂಡು ಬಂದಿದ್ದ ಶಾ ಶುಜಾ ಎಂಬವನು ಇದೇ ಮಣಿಪುರದಲ್ಲಿ ಆಶ್ರಯ ಪಡೆದಿದ್ದ  ಎಂಬ ವಿವರವೂ ಇದೆ. ಔರಂಗಝೇಬನ ಸಹೋದರ ಈ ಶಾ ಶುಜಾ. ಈತ ಮೊದಲು ಬರ್ಮಾದ ಅರ್ಕಾನ್‌ಗೆ ಬಂದ. ಆದರೆ  ಬರ್ಮಾದ ರಾಜ ಈತನಿಗೆ ಆಶ್ರಯ ಕೊಡಲು ವಿಫಲವಾದಾಗ ತ್ರಿಪುರ ಪ್ರವೇಶಿಸಿದ. ಆದರೆ ಆತನನ್ನು ಒಪ್ಪಿಸುವಂತೆ ತ್ರಿಪುರ ರಾಜನ  ಮೇಲೆ ಔರಂಗಝೇಬ್ ಒತ್ತಡ ಹಾಕಿದುದನ್ನು ಅರಿತುಕೊಂಡ ಶಾ ಶುಜ ಅಂತಿಮವಾಗಿ ಮಣಿಪುರದಲ್ಲಿ ಆಶ್ರಯ ಪಡೆದ ಎಂದೂ  ಹೇಳಲಾಗುತ್ತಿದೆ. ಹಾಗಂತ, ಶಾ ಶುಜಾ ಒಬ್ಬನೇ ಇಲ್ಲಿಗೆ ಬಂದಿರಲಿಲ್ಲ. ಆತನ ಜೊತೆ ಕುಟುಂಬ-ಪರಿವಾರವೂ ಇತ್ತು. ಇವರನ್ನೆಲ್ಲ  ಮಂಗಲ್ಸ್ ಅಥವಾ ಮಂಗ್‌ಕೋನ್ ಎಂದು ಕರೆಯಲಾಗುತ್ತಿತ್ತು ಮತ್ತು ಇವರ ಪೀಳಿಗೆ ಮಕಕ್ ಮಯೂಮ್ ವಂಶವಾಗಿ ಬೆಳೆಯಿತು.  ಮಣಿಪುರ ರಾಜನ ಆಸ್ಥಾನದಲ್ಲಿ ಇವರಿಗೆ ಮಂಗಲ್ ಸಂಗ್ಲೇನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಕಚೇರಿಯೂ ಇತ್ತು ಎಂದೂ  ಹೇಳಲಾಗುತ್ತಿದೆ.

ಆದರೆ,

2011 ಮೇ 17ರಂದು ಮಣಿಪುರ ರಾಜಧಾನಿ ಇಂಫಾಲ್‌ನ ಕ್ಲಾಸಿಕ್ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಯಾದ ‘ಮಣಿಪುರಿ  ಮುಸ್ಲಿಮ್ಸ್: ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ಸ್ 615-2000’ ಎಂಬ ಕೃತಿಯು ಈ ಮೇಲಿನ ವಿವರಗಳಿಗಿಂತ ಪೂರ್ವದಲ್ಲಿ ನಡೆದ  ಬೆಳವಣಿಗೆಯನ್ನು ಅತ್ಯಂತ ಅಧಿಕಾರಯುತವಾಗಿ ಮತ್ತು ದಾಖಲೆಗಳ ಸಹಿತ ವಿವರಿಸುತ್ತದೆ.

ನಿಜವಾಗಿ, ಇಸ್ಲಾಮ್ ಮಣಿಪುರಕ್ಕೆ ಬಂದಿರುವುದು 1600ರಲ್ಲಲ್ಲ. ಅದಕ್ಕಿಂತ ಸಾವಿರ ವರ್ಷಗಳ ಹಿಂದೆ 615ರಲ್ಲಿ ಎಂಬುದನ್ನು ಈ ಕೃತಿ  ವಿವರವಾಗಿ ಮುಂದಿಡುತ್ತದೆ. ಮಣಿಪುರದಲ್ಲಿ ಅರಿಬಮ್ ಎಂಬ ಮುಸ್ಲಿಮ್ ಮನೆತನ ಇದೆ. ಇದನ್ನು ಸೆಗಾಯ್  ಎಂದೂ ಕರೆಯುತ್ತಾರೆ. ಈ  ಮನೆತನದ ಜೈವಿಕ ವಂಶಾವಳಿಯು ಪ್ರವಾದಿ(ಸ) ಚಿಕ್ಕಪ್ಪ ಹಂಝ(ರ) ಮತ್ತು ಸಅದ್ ಬಿನ್ ಅಬೀ ವಕ್ಕಾಸ್‌ರಲ್ಲಿಗೆ (ರ) ಹೋಗಿ ತಲುಪುತ್ತದೆ.  ಅರಿಬಮ್ ಎಂಬುದು ಅರಿಬಾಅï ಎಂಬ ಮೂಲ ಅರೇಬಿಕ್ ಪದದ ಅಪಭ್ರಂಶ ಪದ. ಶುದ್ಧ ಅರಬಿಗಳು ಎಂದು ಇದರರ್ಥ ಎಂದು  ಈ ಕೃತಿಯಲ್ಲಿ ಫಾರೂಖ್ ಅಹ್ಮದ್ ವಿವರಿಸುತ್ತಾರೆ.

ಪ್ರವಾದಿ ಚಿಕ್ಕಪ್ಪ ಹಂಝ ಅವರು ಇಸವಿ 610ರಲ್ಲಿ ಮಣಿಪುರ ಪ್ರವೇಶಿಸುತ್ತಾರೆ. ಆದರೆ ಸಅದ್ ಬಿನ್ ಅಬೀ ವಕ್ಕಾಸ್‌ರು ಹಂಝರ  ಜೊತೆ ಬಂದಿರುವುದಿಲ್ಲ. ಇಸವಿ 615ರಲ್ಲಿ ಮೂವರು ಸಂಗಾತಿಗಳೊಂದಿಗೆ ಸಅದ್ ಬಿನ್ ಅಬೀ ವಕ್ಕಾಸ್‌ರು ಚೀನಾದತ್ತ ಮುಖ ಮಾಡಿ  ಅಬಿಸೀನಿಯಾದಿಂದ ಹೊರಡುತ್ತಾರೆ ಮತ್ತು ಈಗಿನ ಬಾಂಗ್ಲಾದ ಚಿತ್ತಗಾಂಗ್ ಮೂಲಕ ಮಣಿಪುರ ಪ್ರವೇಶಿಸುತ್ತಾರೆ. ಹಾಗೆಯೇ ಇನ್ನೊಂದು ಭೇಟಿಯೂ  ಮಣಿಪುರಕ್ಕೆ ನಡೆಯುತ್ತದೆ. ಅದು ಇಸ್ಲಾಮಿನ ನಾಲ್ಕನೇ ಖಲೀಫಾ ಅಲಿಯವರ ಎರಡನೇ ಪತ್ನಿ ಕೌಲ ಬಿಂತಿ  ಜಾಫರ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವರಾದ ಮುಹಮ್ಮದ್ ಹನೀಫಾ ಅವರ ಭೇಟಿ. ಇಸವಿ 680ರಲ್ಲಿ ಇವರು ಮಣಿಪುರಕ್ಕೆ  ಬರುತ್ತಾರೆ. ಖಿಲಾಫತ್‌ನ ವಿಷಯದಲ್ಲಿ ನಡೆದ ವಿವಾದದ ಬಳಿಕ ಅವರು ಒಂದು ಗುಂಪಿನೊಂದಿಗೆ ಮ್ಯಾನ್ಮಾರ್‌ನ ರಾಕೈನ್ ಬಂದು  ನೆಲೆಸುತ್ತಾರೆ ಮತ್ತು ಆ ಬಳಿಕ ಮಣಿಪುರಕ್ಕೆ ಭೇಟಿ ಕೊಡುತ್ತಾರೆ ಎಂದೂ ಹೇಳಲಾಗುತ್ತಿದೆ.

ಅದೇವೇಳೆ,

7ನೇ ಶತಮಾನದಲ್ಲಿ ಮಣಿಪುರವನ್ನು ಆಳುತ್ತಿದ್ದ ಸಫಾಂಗ್ಬಾ ರಾಜನ ಕಾಲದಲ್ಲಿ ಮುಸ್ಲಿಮ್ ಸಂತನೋರ್ವ ಭಾಷಣ ಮಾಡಿರು ವುದಾಗಿ  ಸ್ಥಳೀಯ ಭಾಷೆಯಲ್ಲಿ ಬರೆಯಲ್ಪಟ್ಟಿರುವ ದಾಖಲೆಯೂ ಇದೆ. ಈ ರಾಜ ಇಸವಿ 624ರ ವರೆಗೆ ರಾಜ್ಯಭಾರ ಮಾಡಿರು ವುದರಿಂದ ಆ  ಸಂತ ಒಂದೋ ಹಂಝ(ರ) ಅಥವಾ ಸಅದ್ ಬಿನ್ ಅಬೀ ವಕ್ಕಾಸ್ ಎಂಬ ಅಭಿಪ್ರಾಯವೂ ಇದೆ. ಆದರೆ ಹಂಝ ಅವರು ಮಣಿ ಪುರದಲ್ಲೇ  ನೆಲೆಸುವುದಿಲ್ಲ. ಅವರು ಮರಳಿ ಮದೀನಾಕ್ಕೆ ಹೋಗುತ್ತಾರಲ್ಲದೇ, ಇಸವಿ 625ರಲ್ಲಿ ಉಹುದ್ ಕಾಳಗದಲ್ಲಿ  ಹುತಾತ್ಮರಾಗುತ್ತಾರೆ. ಒಂದುವೇಳೆ,

ಆ ಭಾಷಣ ಮಾಡಿದ ಸಂತ ಹಂಝ ಅಲ್ಲದೇ ಇದ್ದರೆ ಸಅದ್ ಬಿನ್ ಅಬೀ ವಕ್ಕಾಸ್ ಆಗಿರುವ ಸಾಧ್ಯತೆಯೂ ಇದೆ. ಯಾಕೆಂದರೆ,  ಸಅದ್ ಬಿನ್ ಅಬೀ ವಕ್ಕಾಸ್‌ರು ಬೇ ಆಫ್ ಬೆಂಗಾಲ್ ಅಥವಾ ಸಮುದ್ರ ಮಾರ್ಗ ಮೂಲಕ ಇಸವಿ 615ರಲ್ಲಿ ಮಣಿಪುರಕ್ಕೆ ಬಂದಿದ್ದಾರೆ.  ಹೀಗೆ ಬಂದ ಅವರು ಕೂಡಾ ಅಲ್ಲೇ  ನೆಲೆ ನಿಲ್ಲಲಿಲ್ಲ. ಮರಳಿ ಅರಬ್ ದೇಶಕ್ಕೆ ಹೊರಟು ಹೋದವರು ಬರೋಬ್ಬರಿ 27 ವರ್ಷಗಳ  ಬಳಿಕ ಮತ್ತೆ ಚೀನಾ ಕರಾವಳಿ ಪ್ರದೇಶಕ್ಕೆ ಮರಳಿ ಬರುತ್ತಾರೆ ಮತ್ತು ಹೀಗೆ ಬರುವಾಗ ಅವರು ಕುರ್‌ಆನ್ ಪ್ರತಿಯನ್ನೂ ತರುತ್ತಾರೆ.  ಚೀನಿ ಮುಸ್ಲಿಮರು ಅಥವಾ ಹುಯಿ ಮುಸ್ಲಿಮರ ಪ್ರಕಾರ ಸಅದ್ ಬಿನ್ ಅಬೀ ವಕ್ಕಾಸ್ ಅಲ್ಲೇ  ನಿಧನರಾಗಿದ್ದು ಅವರ ಸಮಾಧಿಯೂ  ಅಲ್ಲೇ  ಇದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ ಎಂದೂ ಹೇಳಲಾಗುತ್ತದೆ. ಅದು ಸಅದ್ ಬಿನ್ ಅಬೀ ವಕ್ಕಾಸ್ ಅವರ ಪುತ್ರನ ಸಮಾಧಿಯಾಗಿದ್ದು, ಅವರು ಅಲ್ಲೇ  ಮದುವೆಯಾಗಿ ಅಲ್ಲೇ  ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನೂ ಪುಸ್ತಕ ನೀಡುತ್ತದೆ. ಈ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಮಣಿಪುರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹಲೀಮ್ ಚೌಧರಿ ಮುಖ್ಯ ಅತಿಥಿಯಾಗಿದ್ದರು ಮತ್ತು ಮಿಲ್ಲಿ  ಗಝೆಟ್‌ನ ಸಂಪಾದಕ ಡಾ| ಝಫರುಲ್ ಇಸ್ಲಾಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅಂದಹಾಗೆ,

2011ರ ಜನಗಣತಿ ಪ್ರಕಾರ, ಮಣಿಪುರದಲ್ಲಿ 2,39,886 ಮುಸ್ಲಿಮರಿದ್ದಾರೆ. 2011ರ ಬಳಿಕ ಜನಗಣತಿ ನಡೆಯದೇ ಇರುವು ದರಿಂದ,  ಪ್ರಸಕ್ತ ವಿವರಗಳು ಲಭ್ಯವಿಲ್ಲ. ಇದು ಮಣಿಪುರದ ಒಟ್ಟು ಜನಸಂಖ್ಯೆಯ ಕೇವಲ 8.4% ಮಾತ್ರ. ಹೆಚ್ಚಿನ ಮುಸ್ಲಿಮರು ಇಂಫಾಲ್ ಮತ್ತು  ತೌಬಾಲ್‌ನಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ಮಣಿಪುರಿ ಮುಸ್ಲಿಮರು ಅಸ್ಸಾಮ್‌ನ ಕಚಾರ್ ಮತ್ತು ಹೊಬಾಯ್, ತ್ರಿಪುರಾದ ಕೊಮಾಲ್ ಪುರ್‌ನಲ್ಲೂ ವಾಸವಿದ್ದಾರೆ. 1815ರಲ್ಲಿ ಬರ್ಮಾದ ರಾಜನು ಮಣಿಪುರದ ಮೇಲೆ ದಾಳಿ ಮಾಡಿದ್ದು, ಆಗ ತಪ್ಪಿಸಿಕೊಂಡು ಹೋದ  ಮುಸ್ಲಿಮರು ಈ ಎರಡು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ ಎಂಬ ಮಾಹಿತಿಗಳೂ ಸಿಗುತ್ತವೆ.

ಮಣಿಪುರಿ ಮುಸ್ಲಿಮ್ ಪುರುಷರು ಸಾಂಪ್ರದಾಯಿಕವಾಗಿ ಲುಂಗಿ ಮತ್ತು ಪೈಜಾಮ ಧರಿಸುತ್ತಾರೆ. ಮಹಿಳೆಯರು ಸಲ್ವಾರ್ ಕಮೀಝï  ಮತ್ತು ಫಾನೆಕ್ ಧರಿಸುತ್ತಾರೆ. ಹಾಗಂತ, ಮೇತಿ ಪಂಗಲ್ ಎಂಬ ಹೆಸರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿ  ಗುರುತಿಸಿಕೊಳ್ಳುತ್ತಿದ್ದರೂ ಇವರೆಲ್ಲ ಆಂತರಿಕವಾಗಿ ಬೇರೆ ಬೇರೆ ಮನೆತನದೊಂದಿಗೆ ಜೋಡಿಕೊಂಡಿದ್ದಾರೆ. ಆದರೆ,
ದೇಶದ ಸದ್ಯದ ದ್ವೇಷ ರಾಜಕಾರಣದ ಪ್ರಭಾವದಿಂದ ಮಣಿಪುರ ಮುಸ್ಲಿಮರೂ ಹೊರತಾಗಿಲ್ಲ. ಇಸ್ಲಾಮೋಫೋಬಿಯಾದ ಪ್ರಭಾವ  ಇಲ್ಲೂ ಇದೆ. ಮುಸ್ಲಿಮರನ್ನು ಕಳ್ಳರು, ಮಾದಕ ವಸ್ತು ಸಾಗಾಟಗಾರರು, ಸಮಾಜ ವಿರೋಧಿಗಳು ಎಂದು ಮುಂತಾಗಿ ಬಿಂಬಿಸುವ  ಶ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮುಹಮ್ಮದ್ ಫಾರೂಕ್ ಖಾನ್ ಎಂಬ ವ್ಯಕ್ತಿಯನ್ನು  ಸಾರ್ವಜನಿಕವಾಗಿ ಥಳಿಸಿರುವ ವೀಡಿಯೋ 2018ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ಸ್ಕೂಟರ್ ಕದ್ದಿದ್ದಾನೆ  ಎಂಬ ಆರೋಪದಲ್ಲಿ ಈ ಕೃತ್ಯ ಎಸಗಲಾಗಿತ್ತು. ಆದರೆ, ಬಳಿಕ ಆತ ಕಳ್ಳನಲ್ಲ, ತಪ್ಪಾಗಿ ಆತನನ್ನು ಲಿಂಚಿಂಗ್  ಮಾಡಲಾಗಿದೆ ಎಂಬುದು  ಬಹಿರಂಗವಾಯಿತು. 2017ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ  ಮತ್ತು ವ್ಯವಸ್ಥಿತವಾಗಿ ಅಂಚಿಗೆ ತಳ್ಳುವ ಪ್ರಯತ್ನಗಳು ನಡೆಯುತ್ತಲೇ ಇದ್ದುವು. ಸರಕಾರಿ ಸಂಸ್ಥೆಗಳಲ್ಲಿ ಮತ್ತು ಶಾಸನ ಸಭೆಗಳಲ್ಲಿ  ಮುಸ್ಲಿಮರಿಗೆ ಅತ್ಯಂತ ಕಡಿಮೆ ಪ್ರಾತಿ ನಿಧ್ಯವಷ್ಟೇ ಇದೆ. ಸರ್ವ ಶಿಕ್ಷಣ್ ಅಭಿಯಾನ್ ಯೋಜನೆಯಡಿ ಕಸ್ತೂರ್ಬಾ ಗಾಂಧಿ ಬಾಲಿಕಾ  ವಿದ್ಯಾಲಯಗಳಲ್ಲಿ ಹೆಚ್ಚಿನವುಗಳನ್ನು ಮೇತಿ ಹಿಂದೂ ಸಮುದಾಯಗಳು ಇರುವ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವೂ  ಇದೆ. 2018ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತೂ ಮುಸ್ಲಿಮ್ ವಿರೋಧಿ ಪ್ರಚಾರಗಳ ಸಂಖ್ಯೆಯಲ್ಲಿ ಭಾರೀ  ಹೆಚ್ಚಳವಾಗುತ್ತಿದೆ. 2018ರಲ್ಲಿ ರಚಿಸಲಾದ ‘ಪ್ರೊಟೆಕ್ಷನ್ ಆಫ್ ಮಣಿಪುರ್ ಪೀಪಲ್’ ಮಸೂದೆಯ ಕರಡು ರಚನಾ ಸಮಿತಿಯಲ್ಲಿ  ಮುಸ್ಲಿಮರಿಗೆ ಪ್ರಾತಿನಿಧ್ಯವನ್ನೇ ನಿರಾಕರಿಸಲಾಗಿತ್ತು. ಮೇತಿ ಮುಸ್ಲಿಮರು ರೋಹಿಂಗ್ಯನ್ನರಿಗೆ ಆಶ್ರಯ ಕೊಡುತ್ತಿದ್ದಾರೆ ಎಂಬ ಸುಳ್ಳು ಸು ದ್ದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಅಷ್ಟಕ್ಕೂ,

‘ಮಣಿಪುರ ಹಿಂಸೆಯ ಗುರಿ ಕ್ರೈರಾಗಿರಲಿಲ್ಲ, ಮುಸ್ಲಿಮರಾಗಿದ್ದರು. ಆದರೆ, ಕೊನೆಹಂತದಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು  ತರಲಾಯಿತು ಮತ್ತು ಕ್ರೈಸ್ತರನ್ನು ಗುರಿ ಮಾಡಲಾಯಿತು. ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇ ಈ ಹಿಂಸಾಚಾರದ ಹಿಂದಿತ್ತು.  ಮಣಿಪುರ ಇತಿಹಾಸದಲ್ಲಿ ಎಂದೂ ಮೇತಿ ಹಿಂದೂಗಳು ಮತ್ತು ಕುಕಿಗಳ ನಡುವೆ ಘರ್ಷಣೆ ನಡೆದೇ ಇಲ್ಲ..’ ಎಂದು ಕಳೆದವಾರ  ಮಣಿಪುರಕ್ಕೆ ಭೇಟಿ ನೀಡಿ ಮರಳಿದ ಫಾದರ್ ಜಾನ್ಸನ್ ಹೇಳಿರುವುದೇ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅಚ್ಚರಿ ಏನೆಂದರೆ,


1993 ಮೇ 3ರಂದು ಪಂಗಾಲ್ ಹತ್ಯಾಕಾಂಡ ನಡೆದಿತ್ತು. ಇದೀಗ 2023 ಮೇ 3ರಂದು ಮಣಿಪುರ ಮತ್ತೆ ಉರಿದಿದೆ. ಇದು  ಕಾಕತಾಳೀಯವೋ ಅಥವಾ ಯೋಜನಾಬದ್ಧವೋ?

Wednesday, August 2, 2023

ಹಿಂಸಾಚಾರದಲ್ಲಿ ಹೆಣ್ಣೇಕೆ ಬೆತ್ತಲಾಗಬೇಕು?





‘My children would ask me, why go to court - Recalls Muzaffar Nagar Riots Gang Rape victim of her decade long ordeal- ನೀನೇಕೆ ಕೋರ್ಟಿಗೆ ಹೋಗುತ್ತಿ ಅಮ್ಮ ಎಂದು ನ ನ್ನ ಮಕ್ಕಳು ಕೇಳುತ್ತಾರೆ...:  ಹತ್ತು ವರ್ಷಗಳ ದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡ ಮುಝಫ್ಫರ್ ನಗರ್ ಗ್ಯಾಂಗ್ ರೇಪ್‌ನ ಸಂತ್ರಸ್ತೆ...  ಎಂಬ ತಲೆಬರಹದೊಂದಿಗೆ 2023 ಮೇ 18ರ ಔಟ್‌ಲುಕ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು.

ಅದಕ್ಕೆ ಕಾರಣವೂ ಇತ್ತು


ಹಿಂದೂ ಮತ್ತು ಮುಸ್ಲಿಮ್ ಯುವಕರಿಬ್ಬರ ನಡುವೆ ನಡೆದ ಬೈಕ್ ಅಪಘಾತವೊಂದು 42 ಮುಸ್ಲಿಮ್ ಮತ್ತು 20 ಹಿಂದೂಗಳ ಹತ್ಯೆಗೆ,  93 ಮಂದಿಯ ಗಾಯಕ್ಕೆ ಮತ್ತು 50 ಸಾವಿರಕ್ಕಿಂತಲೂ ಅಧಿಕ ಮಂದಿ ಊರು ತೊರೆದು ಪಲಾಯನ (ಬಹುತೇಕ ಎಲ್ಲರೂ  ಮುಸ್ಲಿಮರೇ) ಮಾಡುವುದಕ್ಕೆ ಕಾರಣವಾದ ಬೃಹತ್ ಹಿಂಸಾಚಾರಕ್ಕೆ ಕಾರಣವಾಯಿತು. 2013 ಆಗಸ್ಟ್ ಕೊನೆಯಲ್ಲಿ ಆರಂಭವಾದ  ಹಿಂಸಾಚಾರವು ಸೆಪ್ಟೆಂಬರ್ ನಲ್ಲಿ ಕೊನೆಗೊಂಡಿತು. ಹಸ್ತಲಾಘವ ಮಾಡಿ ನಕ್ಕು ಮುಗಿಸಿ ಬಿಡಬಹುದಾಗಿದ್ದ ಅಪಘಾತ ಪ್ರಕರಣವು  ಪ್ರತಿಷ್ಠೆಯಾಗಿ ಮಾರ್ಪಟ್ಟು, ಯುವತಿಗೆ ಕಿರುಕುಳ ಎಂಬ ವದಂತಿಯೊಂದಿಗೆ ಊರೆಲ್ಲಾ ಸುತ್ತಾಡಿತು. ಆ ಬಳಿಕ ಅಪಘಾತದಲ್ಲಿ  ಭಾಗಿಯಾದ ಮುಸ್ಲಿಂ ಯುವಕ ಮತ್ತು ಕಿರುಕುಳವನ್ನು ಪ್ರಶ್ನಿಸಲು ಹೋದವರೆಂದು ಹೇಳಲಾದ ಹಿಂದೂ  ಯುವಕರ ಹತ್ಯೆಯೂ ನಡೆಯಿತು. ಆದರೆ ಈ  ಹತ್ಯೆಗೆ ಸಂಬಂಧಿಸಿದಂತೆ  ದಾಖಲಾದ ಎಫ್‌ಐಆರ್‌ನಲ್ಲಿ ಕಿರುಕುಳದ ಉಲ್ಲೇಖವೇ ಇಲ್ಲ ಎಂದೂ ವರದಿಯಿದೆ. ಅಂತೂ ಪುಟ್ಟ ಜಗಳ  ಮತ್ತು ವದಂತಿಯೊಂದರ ಮೇಲೆ ಹುಟ್ಟಿಕೊಂಡ ಕೋಮು ಬೆಂಕಿ ಉತ್ತರ ಪ್ರದೇಶದ ಮುಝಫ್ಫರ್ ನಗರ್ ಉದ್ದಕ್ಕೂ ಕಾಡ್ಗಿಚ್ಚಿನಂತೆ  ಹರಡಿತು. ಈ ಬೆಂಕಿಯಲ್ಲಿ ನೊಂದು ಬೆಂದ ಓರ್ವ ಮುಸ್ಲಿಮ್ ಮಹಿಳೆಯ ಒಡಲ ಧ್ವನಿಯೇ ಈ ಮೇಲಿನ ಔಟ್ ಲುಕ್ ಪತ್ರಿಕೆಯ  ಶೀರ್ಷಿಕೆ. 


‘ಹಿಂದೂ ಯುವಕರ ಹತ್ಯೆ ನಡೆಸಿದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಿ’..  ಎಂದು ಲೌಡ್ ಸ್ಪೀಕರ್‌ನಲ್ಲಿ ಕರೆ ಕೇಳಿಸಿತು. 2013 ಸೆ ಪ್ಟೆಂಬರ್ 7ರ ಘಟನೆ ಇದು. ನನ್ನ ಪತಿ ಟೈಲರ್. ನಮಗೆ ಆಗ 5 ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಮರುದಿನ  ಸೆಪ್ಟೆಂಬರ್ 8ರಂದು ನನ್ನ ದೊಡ್ಡ ಮಗನಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಮಗನನ್ನು ಪತಿ ವೈದ್ಯರಲ್ಲಿಗೆ ಕೊಂಡು ಹೋದರು. ಇದಾಗಿ  ಒಂದು ಗಂಟೆಯೊಳಗೆ ಎಲ್ಲೆಲ್ಲೂ ಭಯವೇ ತುಂಬಿಕೊಳ್ಳತೊಡಗಿತು. ಹತ್ತಿರದ ಮಸೀದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾಗಿದೆ ಎಂಬ  ಸುದ್ದಿ ಕೇಳಿ ಬಂತು. ಹಿಂಸೆ ಭುಗಿಲೆದ್ದಿರುವುದರಿಂದ ಶಮ್ಲಿ ಗ್ರಾಮಕ್ಕೆ ಪಲಾಯನ ಮಾಡು ವಂತೆ ಅಕ್ಕಪಕ್ಕದವರು ಸಲಹೆ ನೀಡಿದರು.  ಅವರ ಜೊತೆ ನಾನೂ ಹೊರಟೆ. ಶಮ್ಲಿಯಲ್ಲಿ ನನ್ನ ಸಂಬಂಧಿಕರೂ ಇದ್ದರು. ಕಬ್ಬಿನ ತೋಟದ ನಡುವೆ ನಾವೆಲ್ಲ ಭಯದಿಂದ  ಹೊರಟೆವು. ನನ್ನ ಜೊತೆ ಮಗನಿದ್ದ. ಕಬ್ಬಿನ ಗಿಡದ ಕತ್ತಿಯಲಗಿನಂಥ ಎಲೆಗಳು ಮಗನ ಮೈಗೆ ತಾಕುತ್ತಿದ್ದುದರಿಂದ ಆತ ಕಿರುಚುತ್ತಿದ್ದ.  ನನಗೆ ಆ ದಾರಿ ಹೊಸತು. ಆ ಕಬ್ಬಿನ ತೋಟದಲ್ಲಿ ನಾನೆಂದೂ ಈ ಮೊದಲು ನಡೆದಿರಲಿಲ್ಲ. ನಾನು ಗುಂಪಿನಿಂದ  ಹಿಂದೆ ಬಿದ್ದೆ. ಹೀಗೆ  2 ಕಿ.ಮೀಟರ್ ನಡೆದು ಮುಖ್ಯ ರಸ್ತೆಗೆ ಬಂದೆ. ಶಮ್ಲಿಗೆ ಹೋಗಲು ವಾಹನ ಸಿಗುತ್ತದೋ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ,

  ನನ್ನನ್ನು ಮಹೇಶ್ ವೀರ್, ಸಿಕಂದರ್ ಮತ್ತು ಕುಲ್ದೀಪ್ ಎಂಬ ಪರಿಚಿತರೇ ಆದ ಯುವಕರು ಹಿಡಿದರು. ಇವರೆಷ್ಟು ಪರಿ ಚಿತರೆಂದರೆ, ನನ್ನ ಗಂಡನ ಟೈಲರ್ ಶಾಪ್‌ಗೆ ಹೋಗುತ್ತಿದ್ದವರು  ಇವರು. ನನ್ನ ಮನೆಗೆ ಅನುಮತಿಯನ್ನೇ ಕೇಳದೇ ಪ್ರವೇಶಿಸುವಷ್ಟು ಸಲುಗೆಯಿಂದ ಇದ್ದವರು. ಅವರ ಕೈಯಲ್ಲಿ ಆಯುಧವಿತ್ತು. ಪಕ್ಕದ  ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋದ ಅವರು ನನ್ನ ಮಗುವಿನ ಕತ್ತಿಗೆ ತಲವಾರು ಇಟ್ಟು ಬೆದರಿಸಿದರು. ನನ್ನ ಮೇಲೆ ಅತ್ಯಾಚಾರ  ನಡೆಸಿದರು. ಇವೆಲ್ಲ ಫಗುನಾ ಎಂಬ ಪ್ರದೇಶದಲ್ಲಿ ನಡೆದಿತ್ತು..’

2023 ಮೇಯಲ್ಲಿ ಮುಝಫ್ಫರ್ ನಗರ್ ಜಿಲ್ಲಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ವೀರ್ ಮತ್ತು ಸಿಕಂದರ್  ಎಂಬಿಬ್ಬರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಈ ಮಹಿಳೆಯನ್ನು ಭೇಟಿಯಾಗಿ ಔಟ್‌ಲುಕ್, ದಿ ಕ್ವಿಂಟ್ ಸಹಿತ ವಿವಿಧ ಪತ್ರಿಕೆಗಳು  ಮಾಡಿದ ವರದಿಯ ಸಂಕ್ಷಿಪ್ತ ರೂಪ ಈ ಮೇಲಿನ ಹೇಳಿಕೆ. ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣಾ ಹಂತದಲ್ಲೇ  ಮೃತಪಟ್ಟಿದ್ದ. ಔಟ್‌ಲುಕ್ ಈಕೆಗೆ  ಶಮಾ ಎಂದು ಹೆಸರಿಟ್ಟಿದೆ. ಆದರೆ, ಇದು ನಿಜನಾಮವಲ್ಲ. ಹಾಗಂತ, ಈ ನ್ಯಾಯ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಖ್ಯಾತ ನ್ಯಾಯವಾದಿ ವೃಂದಾ ಗ್ರೋವರ್ ಅವರ ಬಲ ಇಲ್ಲದೇ ಇರುತ್ತಿದ್ದರೆ ಅಪರಾಧಿಗಳಿಗೆ  ಈ ಶಿಕ್ಷೆ ಸಿಗುತ್ತಿತ್ತೋ, ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ತಣ್ಣಗೆ ಮಲಗಿದ್ದ ಈ ಪ್ರಕರಣಕ್ಕೆ ಜೀವ ತುಂಬಿದ್ದು ವೃಂದಾ ಗ್ರೋವರ್. ಅವರು  ಸುಪ್ರೀಮ್ ಕೋರ್ಟಿಗೆ ಹೋಗಿ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟಕ್ಕೂ,

ಮುಝಫ್ಫರ್ ನಗರ್ ಹಿಂಸಾಚಾರದಲ್ಲಿ ನಡೆದ ಏಕೈಕ ಅತ್ಯಾಚಾರ ಪ್ರಕರಣವೇನೂ ಇದಾಗಿರಲಿಲ್ಲ. ಈ ಶಮಾಳೂ ಸೇರಿ ಒಟ್ಟು 7  ಮಂದಿಯ ಮೇಲಿನ ಅತ್ಯಾಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ 6 ಮಂದಿ ಪೊಲೀಸರಿಗೆ ದೂರು ನೀಡಿದರು. ಓರ್ವಳಂತೂ ದೂರು  ನೀಡುವುದಕ್ಕೂ ಹೋಗಿರಲಿಲ್ಲ. ಬೆದರಿಕೆ ಮತ್ತು ಹಣದ ಆಮಿಷದೊಂದಿಗೆ ಆಕೆಯನ್ನು ತಡೆಯಲಾಯಿತು ಎಂಬ ಆರೋಪವೂ ಇದೆ.  ಈ 6 ಮಂದಿಯ ದೂರಿನ ಮೇಲೆ ಎಫ್‌ಐಆರ್ ದಾಖಲಾಯಿತಾದರೂ ಕೋರ್ಟು ವಿಚಾರಣೆಯ ವೇಳೆ ಇವರಲ್ಲಿ ಶಮಾಳನ್ನು ಬಿಟ್ಟು  ಉಳಿದ 5 ಮಂದಿ ಸಂತ್ರಸ್ತರೂ ಹೇಳಿಕೆ ಬದಲಿಸಿದರು. ‘ನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ’ ಎಂದು ನ್ಯಾಯಾಧೀಶರ ಮುಂದೆ  ಹೇಳಿಕೊಂಡರು. ಇದರಿಂದಾಗಿ 22 ಮಂದಿ ಅತ್ಯಾಚಾರಿ ಆರೋಪಿಗಳು ಬಚಾವಾದರು. ಅಂದಹಾಗೆ,


ಹೇಳಿಕೆ ಬದಲಿಸಿದ ಆ ಸಂತ್ರಸ್ತ ಮಹಿಳೆಯರ ಮೇಲೆ ತಕ್ಷಣಕ್ಕೆ ನಮ್ಮಲ್ಲಿ ಅಸಮಾಧಾನ ಮೂಡಬಹುದು. ತಮ್ಮ ಮೇಲೆ ಕ್ರೌರ್ಯವೆಸಗಿದ  ಅಪರಾಧಿಗಳನ್ನು ದಂಡಿಸುವ ಅವಕಾಶವನ್ನು ಅವರೇಕೆ ಕಳೆದುಕೊಂಡರು ಎಂಬ ಪ್ರಶ್ನೆಯೂ ಇರಬಹುದು. ಆದರೆ ಕೋಮು  ಹಿಂಸಾಚಾರದಲ್ಲಿ ನಡೆಯುವ ಅತ್ಯಾಚಾರಕ್ಕೂ ಸಹಜ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸ ಇರುತ್ತದೆ.  ಹಿಂಸಾಚಾರದ ಅತ್ಯಾಚಾರ ಅತ್ಯಂತ ಸುರಕ್ಷಿತ. ಹಿಂಸಾಚಾರದಲ್ಲಿ ತೊಡಗಿದ ಸಮಾಜವೇ ಇಂಥ ಅತ್ಯಾಚಾರಿಗಳ ಪರ ನಿಲ್ಲುತ್ತದೆ. ಅವರ  ರಕ್ಷಣೆಗಾಗಿ ವಿವಿಧ ರೀತಿಯ ತಂತ್ರಗಳನ್ನು ಹೆಣೆಯುತ್ತದೆ. ಅದರಲ್ಲಿ ಜೀವ ಬೆದರಿಕೆ, ಬಹಿಷ್ಕಾರದ ಕರೆ, ಹಣದ ಆಮಿಷ ಇತ್ಯಾದಿಗಳೂ  ಸೇರಿರುತ್ತವೆ. ಪಲಾಯನ ಮಾಡಿರುವ ಸಂತ್ರಸ್ತೆ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಊರಿಗೆ ಮರಳಬೇಕಾದರೆ ‘ಕೇಸು’  ಹಿಂತೆಗೆದುಕೊಳ್ಳಬೇಕು ಎಂಬ ಷರತ್ತನ್ನು ಸಮಾಜ ವಿಧಿಸುತ್ತದೆ. ಈ ಐವರು ಮಹಿಳೆಯರ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿದೆ.


ಹಿಂಸಾಚಾರದ ವೇಳೆ ಫಗುನಾ ಗ್ರಾಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಐವರು ಮಹಿಳೆಯರು 22 ಮಂದಿಯ  ವಿರುದ್ಧ ದೂರು ಕೊಟ್ಟಿದ್ದರು. ಎಫ್‌ಐಆರ್ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ನಡುವೆ, 2014 ಜೂನ್‌ನಲ್ಲಿ ಧೋಲೆರಾ  ಎಂಬ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪ್ರಕರಣ ದಾಖಲಾಯಿತು. 10 ಮಂದಿ ಮುಸ್ಲಿಮರನ್ನು  ಆರೋಪಿಗಳೆಂದು ಹೆಸರಿಸಲಾಯಿತು. ಈ ಫಗುನಾ ಮತ್ತು ಧೋಲೆರಾ ಗ್ರಾಮಗಳು 20 ಕಿ.ಮೀಟರ್ ಅಂತರದಲ್ಲಿವೆ. ಈ ಘಟನೆ  ನಡೆದದ್ದೇ ತಡ, ಅತ್ಯಾಚಾರ ಪ್ರಕರಣಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಪ್ರಕರಣಗಳನ್ನು ಹಿಂಪಡೆದು ರಾಜಿಯಲ್ಲಿ ಮುಗಿಸುವ  ಪ್ರಸ್ತಾಪಗಳಾದುವು. ಸಂತ್ರಸ್ತರಿಗೆ ಹಣವನ್ನು ನೀಡಲಾಗಿದೆ ಎಂಬ ವರದಿಯೂ ಇದೆ. ಈ ರಾಜಿ ಪಂಚಾತಿಕೆಯ ಹಿನ್ನೆಲೆಯಲ್ಲಿ ಹಿಂದೂ  ಮಹಿಳೆ ಮತ್ತು ಈ 5 ಮಂದಿ ಮುಸ್ಲಿಮ್ ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದರು. ಆ ಮೂಲಕ ಒಟ್ಟು  32 ಮಂದಿ ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡರು. ಆದರೆ ಶಮಾ ಮಾತ್ರ ಯಾವ ಆಮಿಷಕ್ಕೂ, ರಾಜಿಗೂ  ತಯಾರಾಗಲಿಲ್ಲ. ಈ ಎಲ್ಲ ವಿವರವನ್ನು ‘Muzaffar Nagar riots: The deal that saved 32 alleged rapists’- ಮುಝಫ್ಫರ್ ನಗರ್ ಹಿಂಸಾಚಾರ: 32 ಮಂದಿ ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಿದ ಒಪ್ಪಂದ- ಎಂಬ  ಶೀರ್ಷಿಕೆಯಲ್ಲಿ ಐಶ್ವರ್ಯ ಅಯ್ಯರ್ ಎಂಬ ಪತ್ರಕರ್ತೆ 2019 ಆಗಸ್ಟ್ 27ರಂದು ದಿ ಕ್ವಿಂಟ್ ವೆಬ್ ಪತ್ರಿಕೆಯಲ್ಲಿ ಬರೆದ ವರದಿಯಲ್ಲಿ  ನೀಡಲಾಗಿದೆ.

ಆದರೆ, ಶಮಾಳ ಪರಿಸ್ಥಿತಿ ಇಷ್ಟು ಸಹಜವಲ್ಲ.


ರಾಜಿಗೆ ಒಪ್ಪಿಕೊಳ್ಳದ ಆಕೆ ನಿರಂತರ ಬೆದರಿಕೆಯನ್ನೂ ಎದುರಿಸಿದಳು. ಊರನ್ನೂ ತೊರೆದಳು. ಇನ್ನೊಂದು ಕಡೆ, ಶಮ್ಲಿ ಗ್ರಾಮದಲ್ಲಿ  NGO  ಕಟ್ಟಿಕೊಟ್ಟ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸವಿರುವ ಆಕೆಯನ್ನು ಅಕ್ಕಪಕ್ಕದವರೇ ಅಸ್ಪೃಶ್ಯಳಂತೆ ನೋಡತೊಡಗಿದರು.  ಆಕೆಯಿಂದ ಅಂತರ ಕಾಯ್ದುಕೊಂಡರು. ತಮ್ಮ ಮನೆಯ ಮಕ್ಕಳು ಆಕೆಯ ಮನೆಗೆ ಹೋಗದಂತೆ ತಡೆದರು. ತಾನು ಅತ್ಯಾಚಾರ ಸಂತ್ರಸ್ತೆ  ಎಂದು ಗೊತ್ತಾದ ಬಳಿಕ ಆದ ಬದಲಾವಣೆ ಇದು ಎಂದಾಕೆ ಹೇಳಿರುವುದನ್ನು ಔಟ್‌ಲುಕ್ ಪತ್ರಿಕೆಯ ವರದಿಯಲ್ಲಿ ಕಾಣಬಹುದು. ಆಕೆ  ಹೇಳಿರುವ ಇದಕ್ಕಿಂತಲೂ ದಾರುಣ ಸಂಗತಿಯೆಂದರೆ, ಆಕೆಯ ಮಕ್ಕಳ ಪ್ರಶ್ನೆ. ಪದೇ ಪದೇ ಯಾಕಮ್ಮ ಕೋರ್ಟಿಗೆ ಹೋಗುತ್ತಿ ಎಂದು  ಮಕ್ಕಳು ಪ್ರಶ್ನಿಸುತ್ತಾರೆ. ‘ಹಿಂಸಾಚಾರ ನಡೆದಿತ್ತಲ್ಲ, ಆಗ ನಮ್ಮ ಮನೆಗೆ ಬೆಂಕಿ ಕೊಡಲಾಗಿತ್ತು, ದರೋಡೆ ಮಾಡಲಾಗಿತ್ತು. ಆದ್ದರಿಂದ ನಮ್ಮ  ಭೂಮಿ ಇತರರ ಪಾಲಾಗಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಕೋರ್ಟಿಗೆ ಹೋಗುತ್ತಿದ್ದೇನೆ..’ ಎಂದು ಹೇಳುತ್ತಿದ್ದುದಾಗಿ ಶಮಾ  ಹೇಳಿರುವುದೂ ವರದಿಯಲ್ಲಿದೆ. ನಿಜವಾಗಿ,


ಅತ್ಯಾಚಾರ ಎಂಬುದು ಹೆಣ್ಣಿನ ಪಾಲಿಗೆ ಎರಡು ಅಲುಗಿನ ಕತ್ತಿ. ಒಂದು- ಅತ್ಯಾಚಾರವೆಂಬ ಇರಿತವಾದರೆ, ಇನ್ನೊಂದು-  ಅತ್ಯಾಚಾರಕ್ಕೀಡಾದವಳು ಎಂಬ ವಕ್ರ ದೃಷ್ಟಿಯ ಇರಿತ. ಇವೆರಡನ್ನೂ ಓರ್ವ ಸಂತ್ರಸ್ತ ಮಹಿಳೆ ಜೀವನದುದ್ದಕ್ಕೂ ಹೊತ್ತುಕೊಂಡೇ  ಬದುಕಬೇಕು. ಹಿಂಸಾಚಾರಕ್ಕೆ ಕಾರಣಗಳೇನೇ ಇರಲಿ, ಅಂತಿಮವಾಗಿ ಅದರ ನೋವುಣ್ಣುವುದು ಹೆಣ್ಣೇ. ಬೈಕ್ ಅಪಘಾತದಿಂದ ಹುಟ್ಟಿಕೊಂಡ ಮುಝಫ್ಫರ್ ನಗರ್ ಹಿಂಸೆ, ಮೀಸಲಾತಿ ನೆಪದಲ್ಲಿ ಸ್ಫೋಟಗೊಂಡ ಮಣಿಪುರ ಹಿಂಸೆ ಅಥವಾ ರೈಲಿಗೆ ಬೆಂಕಿ ಕೊಟ್ಟ ನೆಪದಲ್ಲಿ  ಭುಗಿಲೆದ್ದ ಗುಜರಾತ್ ಹಿಂಸಾಚಾರ- ಈ ಮೂರಕ್ಕೂ ಕಾರಣಕರ್ತರು ಪುರುಷರೇ. ಆದರೆ, ಅತ್ಯಂತ ಹೀನಾಯ ಕ್ರೌರ್ಯಕ್ಕೆ ತುತ್ತಾದದ್ದು  ಮಾತ್ರ ಮಹಿಳೆಯರು. 2016ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ವರದಿಗಳನ್ನು ಅಧ್ಯಯನ ನಡೆಸಿದರೂ ಲಭ್ಯವಾಗುವುದು  ಇದೇ ಫಲಿತಾಂಶ. ಈ ಕುರಿತಂತೆ ಆಸ್ಟ್ರೆಲಿಯಾ, ಕೆನಡ, ನಾರ್ವೆ, ಫಿಲಿಪ್ಪೀನ್ಸ್, ಬಾಂಗ್ಲಾದೇಶವನ್ನೊಳಗೊAಡ ತಜ್ಞರು ಮತ್ತು ಸಂಶೋಧಕರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ‘Forced migration of Rohingya: The untold experiencde’- ಎಂಬ ಹೆಸರಲ್ಲಿ 2018 ಆಗಸ್ಟ್ ನಲ್ಲಿ  ಈ ಸಮಿತಿ ವರದಿಯನ್ನೂ ನೀಡಿತ್ತು. ಆ ವರದಿ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಯಾವುದೇ ಮಹಿಳೆ ತಾನೇಕೆ ಮಹಿಳೆಯಾಗಿ ಹುಟ್ಟಿದೆ ಎಂದು ಪ್ರಶ್ನಿಸುವಷ್ಟು ಭೀಕರವಾಗಿತ್ತು. 18 ಸಾವಿರ  ರೋಹಿಂಗ್ಯ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ನಡೆದಿದೆ ಎಂಬುದಾಗಿ ಆ ವರದಿಯಲ್ಲಿ  ಹೇಳಲಾಗಿತ್ತು. ಇದಲ್ಲದೇ, ದಿ ಇಂಡಿಪೆಂಡೆಂಟ್  ಪತ್ರಿಕೆಯು, 'Burmese military guilty of widespread rape of Rohingyan Muslims’- ಎಂಬ ಶೀರ್ಷಿಕೆಯಲ್ಲಿ 2017 ನವೆಂಬರ್ 16ರಂದು ಹೃದಯ ಕಲಕುವ ವರದಿಯನ್ನೂ ಪ್ರಕಟಿಸಿತ್ತು.  15 ವರ್ಷದ ಬಾಲಕಿಯನ್ನು 10 ಮಂದಿ ಮ್ಯಾನ್ಮಾರ್ ಸೈನಿಕರು ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಕ್ರೌರ್ಯ.

ಬಹುಶಃ

ಹೆಣ್ಣಿನ ದೇಹವನ್ನು ಬಲವಂತದಿಂದ  ಅನುಭವಿಸಬಯಸುವ ಪುರುಷರೇ ಈ ‘ಹಿಂಸಾಚಾರ’ ಎಂಬ ಕಾನ್ಸೆಪ್ಟನ್ನು ಸೃಷ್ಟಿ ಮಾಡಿರಬೇಕು.  ಸಹಜ ಸಂದರ್ಭದಲ್ಲಿ ಅತ್ಯಾಚಾರ ಮಾಡಲು ಹಿಂಜರಿಯುವ ಪುರುಷ ಹಿಂಸಾಚಾರದ ವೇಳೆ ಅತ್ಯಾಚಾರವನ್ನು ಸಹಜಗೊಳಿಸುತ್ತಾನೆ.  ಹೆಣ್ಣನ್ನು ಹುಡುಕಿ ಹುಡುಕಿ ಕ್ರೌರ್ಯವೆಸಗುತ್ತಾನೆ. ಆಕೆಯ ದೇಹವನ್ನು ಬೆತ್ತಲೆಗೊಳಿಸುತ್ತಾನೆ. ಇಂಚಿಂಚೂ  ಇರಿಯುತ್ತಾನೆ. ಸಾಯಿಸುತ್ತಾನೆ  ಮತ್ತು ಯಾವ ಪಾಪಭಾರವೂ ಇಲ್ಲದೇ ಸಮಾಜದ ಭಾಗವಾಗಿ ಬದುಕುತ್ತಾನೆ. ಅಷ್ಟಕ್ಕೂ,

ಕೋಮು ಹಿಂಸಾಚಾರವೆಂಬುದು ಎರಡೂ ಧರ್ಮಾನುಯಾಯಿಗಳ ನಡುವಿನ ದ್ವೇಷ ಸಾಧನೆಯೇ ಆಗಿರುತ್ತಿದ್ದರೆ, ಹೆಣ್ಣೇಕೆ  ಅತ್ಯಾಚಾರಕ್ಕೆ ಒಳಗಾಗಬೇಕು? ಘರ್ಷಣೆಯ ಭಾಗವಾಗದೇ ತಮ್ಮ ಪಾಡಿಗಿರುವ ಹೆಣ್ಣೇಕೆ ಬೆತ್ತಲೆಯಾಗಬೇಕು? ಅವಳು ಮಾಡಿರುವ  ಅಪರಾಧವೇನು?

Thursday, July 27, 2023

ಮುಸ್ಲಿಮ್ ದ್ವೇಷವನ್ನೇ ಹೊದ್ದು ತಿರುಗುತ್ತಿರುವ ಸುಳ್ಳು ಸುದ್ದಿಗಳು



1. ಕರ್ನಾಟಕದಲ್ಲಿ ನಡೆಯಬೇಕಿದ್ದ ಭಾರೀ ರೈಲು ಅವಘಡ ವೊಂದು ಸ್ವಲ್ಪದರಲ್ಲೇ  ತಪ್ಪಿದೆ. ರೈಲು ಸಂಚರಿಸುವಾಗ ಮುಸ್ಲಿಮನೊಬ್ಬ  ಹಳಿಯ ಮೇಲೆ ಎಲ್‌ಪಿಜಿ ಸಿಲಿಂಡರ್ ಎಸೆದಿದ್ದಾನೆ. ಅದೃಷ್ಟವಶಾತ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಒಂದುವೇಳೆ, ಸ್ಫೋಟಗೊಳ್ಳುತ್ತಿದ್ದರೆ ಸಾವಿರಾರು ಮಂದಿ ಹೆಣವಾಗುತ್ತಿದ್ದರು. ಅಂತಹ ದೊಡ್ಡ ಅನಾಹುತವನ್ನು ಜನರು ಮತ್ತು ರೈಲ್ವೆ ಸಿಬ್ಬಂದಿ ತಡೆದಿದ್ದಾರೆ. ಪ್ರಧಾನಿ  ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಲೆಂದೇ ಹೀಗೆ ಮಾಡುತ್ತಿದ್ದಾರೆ.. ಎಂಬ ಒಕ್ಕಣೆಯುಳ್ಳ ಚಿತ್ರಸಹಿತ ಬರಹವನ್ನು ಅಥವಾ  ವೀಡಿಯೋವನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಈ ವೀಡಿಯೋ ಮತ್ತು ಚಿತ್ರಬರಹವು ಸೋಶಿಯಲ್  ಮೀಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಮುಂದೆಯೂ ಇದು ಹಂಚಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಂತ, ಈ ಸುದ್ದಿ  ನಿಜವೇ?

ಸುಳ್ಳು

ನಿಜವಾಗಿ ಕರ್ನಾಟಕಕ್ಕೂ ಈ ಸುದ್ದಿಗೂ ಸಂಬಂಧವೇ ಇಲ್ಲ. ಇದು ಉತ್ತರ ಪ್ರದೇಶದ ಗುರುಗ್ರಾಮ ಜಿಲ್ಲೆಯ ಕಥಾಗೋದಾಮ್ ರೈಲು  ನಿಲ್ದಾಣಕ್ಕೆ ಸಂಬಂಧಿಸಿದ ವೀಡಿಯೋ. 2022 ಜುಲೈ 5ರಂದು ಈ ಘಟನೆ ನಡೆದಿತ್ತು. ಗಂಗಾರಾಮ್ ಎಂಬ ವ್ಯಕ್ತಿ ಖಾಲಿ ಸಿಲಿಂಡರ್  ಹೊತ್ತು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಬಂದಿತ್ತು. ಆತ ಜೀವಭಯದಿಂದ ಸಿಲಿಂಡರ್ ಅಲ್ಲೇ  ಎಸೆದು ಓಡಿ ಹೋಗಿದ್ದ. ಇದನ್ನು  ಗಮನಿಸಿದ ರೈಲ್ವೆ ಪೊಲೀಸರು ರೈಲನ್ನು ತಡೆದು ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಿಲಿಂಡರ್ ರೈಲು ಚಕ್ರಕ್ಕೆ ಸಿಲುಕಿ  ಚೂರುಚೂರಾಗಿತ್ತು. ನಂತರ ಗಂಗಾರಾಮ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರೇ ಮಾಹಿತಿಯನ್ನು  ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

2. ಪಶ್ಚಿಮ ಬಂಗಾಳದ ಹಿಂದೂಗಳ ದುರಂತಮಯ ಪರಿಸ್ಥಿತಿಯನ್ನು ನೋಡಿ. ಹಿಂದೂಗಳಾದ ನಾವು ಒಗ್ಗಟ್ಟಾಗಿ ಹಿಂದೂಗಳನ್ನು  ಬೆಂಬಲಿಸುವ ಪಕ್ಷಕ್ಕೆ ಮತ ಹಾಕದೇ ಇದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಇದೇ ಆಗಲಿದೆ. ಎಚ್ಚರ ಇರಲಿ. ಇದು  ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರದ ಮುಸ್ಲಿಮ್ ಓಲೈಕೆಯ ದೃಶ್ಯ. ನಮ್ಮ ಹಿಂದೂಗಳ ಪರಿಸ್ಥಿತಿಯನ್ನೊಮ್ಮೆ  ನೋಡಿಕೊಳ್ಳಿ.. ಎಂಬ ಬರಹವುಳ್ಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ವ್ಯಾ ಪಕವಾಗಿ ಹರಿದಾಡಿದ ವೀಡಿಯೋ ಇದು. ಇಬ್ಬರು ಯುವಕರಿಗೆ ಹಲವು ಮಂದಿ ಸೇರಿ ಥಳಿಸುವ ದೃಶ್ಯ ಈ ವೀಡಿಯೋದಲ್ಲಿದೆ.  ಹಾಗಂತ, ಇದು ನಿಜವೇ?

ಸುಳ್ಳು

ನಿಜವಾಗಿ, ಈ ವೀಡಿಯೋ ಭಾರತದ್ದೇ  ಅಲ್ಲ. ಬಾಂಗ್ಲಾದೇಶದ ನ್ಯೂಸ್ ಮೀಡಿಯಾ ಬಾಂಗ್ಲಾ ಎಂಬ ಹೆಸರಿನ ವೆಬ್ ಪತ್ರಿಕೆಯು ಈ  ವೀಡಿಯೋವನ್ನು 2019 ಮಾರ್ಚ್ 24ರಂದು ತನ್ನ ವೆಬ್ ಪುಟದಲ್ಲಿ ಹಂಚಿಕೊಂಡಿತ್ತು. ಬಾಂಗ್ಲಾದೇಶದ ಇನ್ನಿತರ ಹಲವು ವೆಬ್  ಪತ್ರಿಕೆಗಳೂ ಈ ವೀಡಿಯೋವನ್ನು ಹಂಚಿಕೊಂಡಿವೆ. ‘ತುಂಬಾ ಕಷ್ಟಪಟ್ಟು ಈ ಆಟೋರಿಕ್ಷಾವನ್ನು ಖರೀದಿಸಿದ್ದೆ..’ ಎಂದು ಈ ಗುಂಪಿನ ಲ್ಲಿರುವ ವ್ಯಕ್ತಿಯೋರ್ವರು ಹೇಳುವುದು ಕೂಡಾ ವೀಡಿಯೋದಲ್ಲಿ ಕೇಳಿಸುತ್ತದೆ. ವಾಸ್ತವ ಏನೆಂದರೆ, ಆಟೋ ರಿಕ್ಷಾ ಕದ್ದು ಸಿಕ್ಕಿ ಬಿದ್ದ  ಇಬ್ಬರು ಯುವಕರನ್ನು ಥಳಿಸುವ ವೀಡಿಯೋ ಇದು. ಆದರೆ, ದುಷ್ಟ ಮನಸ್ಸುಗಳು ಈ ವೀಡಿಯೋಕ್ಕೆ ಸಂಬಂಧಿಸಿದ ಮಾಹಿತಿಗಳನ್ನು  ತಿರುಚಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಥಳಿಸುತ್ತಿರುವ ಮುಸ್ಲಿಮರು ಎಂದು ಬಿಂಬಿಸಿವೆ. ಈ ಪ್ರಶಂಸಾರ್ಹ ಸತ್ಯ ಶೋಧನಾ  ಕೆಲಸವನ್ನು ದಿ ಕ್ವಿಂಟ್ ಪತ್ರಿಕೆ ನಡೆಸಿ ಪ್ರಕಟಿಸಿದೆ.

3. ದೇಶ ಬದಲಾಗುತ್ತಿದೆ. ಮುಸ್ಲಿಮ್ ಯುವಕನೊಬ್ಬ ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯನ್ನು ಪ್ರೀತಿಸಿ ಅವಳನ್ನು ಅ ಪಹರಣ ಮಾಡುವ ಯತ್ನ ನಡೆಸಿದ್ದಾನೆ. ಆದರೆ, ಈ ಪ್ರಯತ್ನದಲ್ಲಿ ವಿಫಲಗೊಂಡು ಹಿಂದೂ ಸಮಾಜದ ಮಹಿಳೆಯರಿಗೆ ಸಿಕ್ಕಿ ಬಿ ದ್ದಿದ್ದಾನೆ. ಈಗ ಅವನಿಗಾದ ಪರಿಸ್ಥಿತಿಯನ್ನು ನೋಡಿ. ಹಿಂದೂ ಸಮಾಜ ಜಾಗೃತವಾಗುತ್ತಿದೆ.. ಎಂಬ ಅಡಿ ಬರಹವಿರುವ ವೀಡಿಯೋ  ನಿಮಗೂ ತಲುಪಿರ ಬಹುದು. ಬಹುತೇಕ ಉತ್ತರ ಭಾರತದಲ್ಲಿ ಸಾಕಷ್ಟು ಹಂಚಿಕೆಯಾಗಿ ರುವ ವೀಡಿಯೋ ಇದು. ಹಾಗಂತ, ಇದು  ನಿಜವೇ?

ಸುಳ್ಳು

ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 2020 ಜನವರಿ 20ರಂದು ವರದಿಯನ್ನು ಪ್ರಕಟಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಈತ  ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಕುಪಿತಗೊಂಡು ಮಹಿಳೆಯರು ಆತನನ್ನು ನಗ್ನವಾಗಿಸಿ ಥಳಿಸಿದ್ದಾರೆ. ಇದು ನಡೆ ದಿರುವುದು ಹರ್ಯಾಣದ ಅಂಬಾಲದಲ್ಲಿ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ. ಪವನ್ ಎಂಬುದು ಈತನ ಹೆಸರಾಗಿದ್ದು, ಶಾಲಾ  ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಆ ಮಕ್ಕಳ ಹೆತ್ತವರೂ ಈತನಿಗೆ ಥಳಿಸಿದವರಲ್ಲಿ ಸೇರಿದ್ದಾರೆ ಎಂದೂ ವರದಿಯಲ್ಲಿ  ಹೇಳಲಾಗಿದೆ. ಅಲ್ಲದೇ ಈತನ ವಿರುದ್ಧ ಇಂಡಿಯನ್ ಪೀನಲ್ ಕೋಡ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ,  ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುನೀತಾ ಎಂಬವರು ಮಾಹಿತಿ ನೀಡಿರುವ ವೀಡಿಯೋ ಕೂಡ  ಲಭ್ಯವಿದೆ. ಆದರೆ ಈ ಎಲ್ಲ ಮಾಹಿತಿಯನ್ನು ತಿರುಚಿ ಹಿಂದೂ ಯುವತಿಯನ್ನು ಪ್ರೀತಿಸಿ ಅಪಹರಣ ಮಾಡಲು ಯತ್ನಿಸಿದ ಮುಸ್ಲಿಮ್  ಯುವಕ ಎಂದು ಸುಳ್ಳು ಬರೆಯಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

4. ಗುಂಪೊಂದು  ಮಹಿಳೆಯನ್ನು ಹಿಂಸಿಸಿ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡುವ ವೀಡಿಯೋವನ್ನು ನೀವು ವೀಕ್ಷಿಸಿರುವಿರೋ ಗೊತ್ತಿಲ್ಲ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿರುವ ವೀಡಿಯೋ ಇದು. ಕರ್ನಾಟಕವೂ ಸೇರಿದಂತೆ ಉತ್ತರ ಭಾರತದ  ದೊಡ್ಡದೊಂಡು ಸಮೂಹಕ್ಕೆ ಈ ವೀಡಿಯೋ ತಲುಪಿದೆ. ಇದು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಯಾನಕ ದೃಶ್ಯ  ಎಂಬ ವಿವರವನ್ನು ಈ ವೀಡಿಯೋದ ಜೊತೆ ಹಂಚಿಕೊಳ್ಳಲಾಗಿದೆ. ಈ ಹೆಣ್ಮಗಳು ಮಣಿಪುರದ ಹಿಂದೂ ಮೈತಿ ಸಮುದಾಯಕ್ಕೆ  ಸೇರಿದವಳಾಗಿದ್ದಾಳೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಇದೇ ಪರಿಸ್ಥಿತಿ ಎದುರಾಗಲಿದೆ. ಕರ್ನಾಟಕದಲ್ಲೂ ಮತಾಂತರ ನಿಷೇಧ  ಕಾಯ್ದೆಯನ್ನು ಹಿಂಪಡೆಯಲಾಗುತ್ತಿದೆ. ಕರ್ನಾಟಕದಲ್ಲೂ ಹಿಂದೂಗಳಿಗೆ ಇದೇ ಪರಿಸ್ಥಿತಿ ಬಂದೊದಗಲಿದೆ.. ಎಂಬ ವಿವರವನ್ನು ಈ  ವೀಡಿಯೋದ ಜೊತೆ ನೀಡಲಾಗಿದೆ.
ಹಾಗಂತ, ಈ ವಿವರ ನಿಜವೇ?

ಸುಳ್ಳು

ಈ ಘಟನೆ ನಡೆದಿರುವುದು ನಿಜ. 2022 ಡಿಸೆಂಬರ್ 8ರಂದು ಮ್ಯಾನ್ಮಾರ್‌ನಲ್ಲಿ ನಡೆದಿದೆ. ಈ ಕುರಿತಂತೆ ಮ್ಯಾನ್ಮಾರ್‌ನ ಮಿಜ್ಜಿಮಾ ಎಂಬ  ಸುದ್ದಿ ಸಂಸ್ಥೆ ವರದಿಯನ್ನೂ ಮಾಡಿದೆ. ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಮತ್ತು ವಿರೋಧಿ ಪಿಡಿಎಫ್  ಪಕ್ಷಗಳ ನಡುವಿನ ಘರ್ಷ ಣೆಯ ಫಲಿತಾಂಶ ಈ ಹತ್ಯೆ. ಈಕೆ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷಕ್ಕೆ ತಮ್ಮ ಕುರಿತು  ಮಾಹಿತಿಯನ್ನು ನೀಡಿದ್ದಾಳೆ ಎಂದು ಕುದಿಗೊಂಡು ಪಿಡಿಎಫ್ ಪಕ್ಷದವರು ಈ ಹತ್ಯೆ ನಡೆಸಿದ್ದಾರೆ ಎಂದು ಮಿಜ್ಜಿಮಾ ಸುದ್ದಿ ಸಂಸ್ಥೆಯ  ವರದಿ ಯಲ್ಲಿ ಹೇಳಲಾಗಿದೆ. ಭಾರತದ ಮಣಿಪುರಕ್ಕೂ ಈ ವೀಡಿಯೋಕ್ಕೂ ಸಂಬಂಧ ಇಲ್ಲ ಎಂದು ಆಲ್ಟ್ ನ್ಯೂಸ್ ಸಂಸ್ಥೆಯ ಫ್ಯಾಕ್ಟ್  ಚೆಕ್ ವರದಿಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಸುಳ್ಳು ಸುದ್ದಿಗಳ ಭರಾಟೆ ಮತ್ತು ಹಂಚಿಕೆಯಾಗುತ್ತಿರುವ ವೇಗವನ್ನು ನೋಡಿದರೆ, ಸತ್ಯವನ್ನು ತಿಳಿಸುವ ಫ್ಯಾಕ್ಟ್ ಚೆಕ್ ವರದಿಗಳು ಕಡಿಮೆ  ಪ್ರಮಾಣದಲ್ಲಿವೆ ಮತ್ತು ಹಂಚಿಕೆಯೂ ನಿಧಾನಗತಿಯಲ್ಲಿವೆ. ಸುಳ್ಳನ್ನು ಸೃಷ್ಟಿಸುವುದು ಸುಲಭ. ಹಂಚಿಕೆ ಅದಕ್ಕಿಂತಲೂ ಸುಲಭ. ಆದರೆ  ಫ್ಯಾಕ್ಟ್ ಚೆಕ್ ಹಾಗಲ್ಲ. ಸುಳ್ಳು ಸುದ್ದಿಯ ಮೂಲವನ್ನು ಹುಡುಕುವುದಕ್ಕೆ ತಾಳ್ಮೆ, ಶ್ರಮ ಮತ್ತು
ಬದ್ಧತೆಯ ಅಗತ್ಯವಿರುತ್ತದೆ. ಎಂದೋ ಯಾವಾಗಲೋ ಪ್ರಕಟವಾದ ಒಂದು ಚಿತ್ರ ಅಥವಾ ಹಂಚಿಕೆಯಾದ ಒಂದು ವೀಡಿಯೋವನ್ನು  ತನಗೆ ಬೇಕಾದಂತೆ ತಿರುಚಿ ಸುಳ್ಳುಗಾರ ಹಂಚಿಕೊಂಡಿರುತ್ತಾನೆ. ಆದರೆ ಸತ್ಯದ ಹುಡುಕಾಟದಲ್ಲಿರುವವ ಅದನ್ನು ಹುಡುಕುತ್ತಾ ಹುಡುಕುತ್ತಾ  ಗಂಟೆ, ದಿನಗಳು, ತಿಂಗಳುಗಳನ್ನು ಕಳೆಯಬೇಕಾಗುತ್ತದೆ. ಅಷ್ಟರಲ್ಲಿ ಆ ಸುಳ್ಳು ಸುದ್ದಿ ತಲುಪಬೇಕಾದಲ್ಲಿಗೆಲ್ಲ ತಲುಪಿ ಮಾಡ ಬೇಕಾದ ಅ ನಾಹುತಗಳನ್ನೆಲ್ಲ ಮಾಡಿಯಾಗಿರುತ್ತದೆ. ಆ ಬಳಿಕ ಬರುವ ಫ್ಯಾಕ್ಟ್ ಚೆಕ್‌ನಲ್ಲಿ ಅಷ್ಟು ವೇಗ ಇರುವುದಿಲ್ಲ. ಸುಳ್ಳು ಸುದ್ದಿಗಳ ಶಕ್ತಿಯೇ ಇದು.  ನಿಜವಾಗಿ,

ಸುಳ್ಳು ಸುದ್ದಿ ಎಂಬ ಪದವು 1890ರಲ್ಲಿ ಮೊದಲ ಬಾರಿ ಬಳಕೆಯಾಗಿದೆ ಎಂದು The long and brutal  of fake news
ತಲೆಬರಹದಲ್ಲಿ ಜಾಕೊಬ್ ಸಾಲ್ ಎಂಬವರು 2016ರಲ್ಲಿ ಬರೆದ ಲೇಖನದಲ್ಲಿ ಆಧಾರ ಸಹಿತ ವಿವರಿಸಿದ್ದಾರೆ. ಹಾಗಂತ, ಪದ 1890ರಲ್ಲಿ ಹುಟ್ಟಿಕೊಂಡಿದ್ದರೂ ಸುಳ್ಳು ಸುದ್ದಿಗಳ ಪ್ರಚಾರ 1475ರಲ್ಲೇ  ನಡೆದಿತ್ತು ಎಂಬುದನ್ನು ಇತಿಹಾಸ  ಹೇಳುತ್ತದೆ. ಇಟಲಿಯ ಸಿಮೋನಿಯೋ ಎಂಬ ಎರಡೂವರೆ ವರ್ಷದ ಬಾಲಕ 1475ರ ಈಸ್ಟರ್ ಹಬ್ಬದ ದಿನದಂದು ಕಾಣೆಯಾಗುತ್ತಾನೆ. ಅದು ಯಹೂದಿಯರ ಬಗ್ಗೆ ಕ್ರೈಸ್ತರಲ್ಲಿ ಅಸಹನೆಯಿದ್ದ ಕಾಲ. ಈ ಬಾಲಕನನ್ನು ಯಹೂದಿಯರು ಅಪಹರಣ ಮಾಡಿ  ಹತ್ಯೆ ಮಾಡಿದ್ದು, ಆತನ ರಕ್ತವನ್ನು ಕುಡಿದು ಹಬ್ಬ ಆಚರಿಸಿದ್ದಾರೆ ಎಂದು ಕ್ರೈಸ್ತ ಪಾದ್ರಿ ಬರ್ನಾಡಿನೋ ಡಫೆಲ್ಟೊ ಎಂಬವ ಸರಣಿ ಉಪ ನ್ಯಾಸ ನೀಡತೊಡಗುತ್ತಾನೆ. ಸುದ್ದಿ ಬಾಯಿಂದ ಬಾಯಿಗೆ ರವಾನೆಯಾಗಿ ಆಕ್ರೋಶ ಮಡುಗಟ್ಟುತ್ತದೆ. ಘಟನೆ ನಡೆದಿರುವ ಟ್ರೆಂಟ್ ನಗರದ  ಮುಖ್ಯ ಬಿಷಪ್ ಜೊಹಾನ್ಸನ್ ಹಿಂಡರ್‌ಬ್ಯಾಚ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ನಗರದ ಎಲ್ಲಾ  ಯಹೂದಿಯನ್ನು ಬಂಧಿಸಿ ದೌರ್ಜನ್ಯ  ನಡೆಸಲು ಆದೇಶಿಸುತ್ತಾರೆ. ಇವರಲ್ಲಿ 15 ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಂತ ಸುಟ್ಟು ಹಾಕಲಾಗುತ್ತದೆ. ಅಲ್ಲದೇ, ಈ  ಸುದ್ದಿಯಿಂದಾಗಿ ಟ್ರೆಂಟ್‌ನ ಅಕ್ಕ ಪಕ್ಕದ ಊರುಗಳಲ್ಲಿದ್ದ ಯಹೂದಿಗಳನ್ನೆಲ್ಲ ತೀವ್ರವಾಗಿ ಹಿಂಸಿಸಿ ದೌರ್ಜನ್ಯ ಎಸಗಲಾಗುತ್ತದೆ. ಅಷ್ಟಕ್ಕೂ,  ಸಿಮೋನಿಯೋ ಎಂಬ ಬಾಲಕ ಸಾವಿಗೀಡಾಗಿದ್ದುದು ನಿಜ. ಆದರೆ, ಆತನಿಗೆ ಸಂಬAಧಿ ಸಿದ ಉಳಿದೆಲ್ಲ ಸುದ್ದಿಗಳು ಸುಳ್ಳಾಗಿತ್ತು.

ಇನ್ನೊಂದು ಘಟನೆ ಹೀಗಿದೆ,

1761ರಲ್ಲಿ ಮಾರ್ಕ್ ಅಂಟಾನಿಯೋ ಕಲಾಸ್ ಎಂಬ 22 ವರ್ಷದ ಯುವಕ ಫ್ರಾನ್ಸ್ನ ಟೇಲೋಸ್ ಎಂಬಲ್ಲಿ ಆತ್ಮಹತ್ಯೆ  ಮಾಡಿಕೊಳ್ಳುತ್ತಾನೆ. ಈತ ಪ್ರೊಟೆಸ್ಟೆಂಟ್ ಜೀನ್ ಕಲಾಸ್ ಪ್ರಸಿದ್ಧ ವ್ಯಾಪಾರಿಯ ಮಗ. ಆದರೆ, ಈ ಆತ್ಮಹತ್ಯೆಗೆ ಕ್ಯಾಥೋಲಿಕ್  ಪಂಥದವರು ‘ಹತ್ಯೆ’ ಎಂಬ ತಿರುವನ್ನು ಕೊಟ್ಟು ಪ್ರಚಾರ ಮಾಡಿ ದರು. ಮಗ ಕ್ಯಾಥೋಲಿಕ್ ಪಂಥಕ್ಕೆ ಪರಿವರ್ತನೆ ಆಗುವವನಿದ್ದ.  ಇದನ್ನು ಸಹಿಸದೇ ಅಪ್ಪನೇ ಹತ್ಯೆ ನಡೆಸಿದ್ದಾನೆ ಎಂದು ವದಂತಿ ಹಬ್ಬಿಸಿದರು. ಈ ವದಂತಿ ಎಷ್ಟು ಪ್ರಬಲವಾಗಿತ್ತೆಂದರೆ, ಈ ಅಪ್ಪನನ್ನು  ಹಿಂಸಿಸಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಸುಳ್ಳಿನ ಶಕ್ತಿ ಅಗಾಧವಾದುದು.