Tuesday, May 21, 2019

ಕ್ಲಾಸ್ ರಿಲೋಷಿಯಸ್‍ನಿಂದ ನಾವು ಕಲಿಯಬಹುದಾದದ್ದು ಏನು?



ಏಳೆಂಟು ವರ್ಷಗಳೊಳಗೆ ಪ್ರಸಿದ್ಧಿ ಮತ್ತು ಕುಪ್ರಸಿದ್ಧಿ ಎರಡನ್ನೂ ತನ್ನದಾಗಿಸಿಕೊಂಡ ಪತ್ರಕರ್ತನೆಂದರೆ, ಜರ್ಮನಿಯ ಕ್ಲಾಸ್ ರಿಲೋಷಿಯಸ್.
ಸ್ವಿಝರ್ಲಾ೦ಡಿನ ನ ರಿಪೋರ್ಟೆಗೆನ್ ಮ್ಯಾಗಸಿನ್‍ಗೆ ಬರೆದ ವಿಶಿಷ್ಟ ಲೇಖನಕ್ಕಾಗಿ 2014ರಲ್ಲಿ ಈತ ಜರ್ಮನ್ ಭಾಷೆಯ ‘ವರ್ಷದ CNN ಪತ್ರಕರ್ತ’ ಎಂಬ ಪ್ರಶಸ್ತಿಗೆ ಭಾಜನನಾದ. 2017ರಲ್ಲಿ ಯುರೋಪಿಯನ್ ಪ್ರೆಸ್ ಪ್ರೈಝನ್ನು ಗಿಟ್ಟಿಸಿಕೊಂಡ. ಐಸಿಸ್  ಭಯೋತ್ಪಾದಕ ಪಡೆಯು ಇರಾಕಿ ಮಗುವನ್ನು ಅಪಹರಿಸಿ ಕೊಂಡೊಯ್ದ ಘಟನೆಯ ಮೇಲೆ ಬರೆದ ಲೇಖನ; ಕ್ಯೂಬಾದ ಗ್ವಾಂಟನಾಮೊ ಬೇ ಜೈಲಿನಲ್ಲಿರುವ ಯಮನ್‍ನ ಕೈದಿಯ ಮೇಲೆ ಬರೆದ ಲೇಖನ, ಟರ್ಕಿಯಲ್ಲಿ ಗುಲಾಮರಾಗಿ ಜೀವನ  ನಡೆಸುತ್ತಿರುವ ಸಿರಿಯದ ಅಲೆಪ್ಪೊ ನಗರದ ಅನಾಥರ ಕುರಿತಾದ ಬರಹ, NFL ಫುಟ್ಬಾಲ್ ಸ್ಟಾರ್ ಕಾಲಿನ್ ಕೆಪೇಮಿಕ್‍ರ ಹೆತ್ತವರೊಂದಿಗೆ ನಡೆಸಲಾದ ಸಂದರ್ಶನ ಮತ್ತು ಅಮೇರಿಕದ ಚುನಾವಣೆಯ ಸಮಯದಲ್ಲಿ ಮಿನ್ನೆಸೋಟದ ಫರ್ಗುಸ್  ಫಾಲ್ಸ್ ನಲ್ಲಿ ಡೊನಾಲ್ಡ್ ಟ್ರಂಪ್‍ಗಿರುವ ಭಾರೀ ಜನಬೆಂಬಲದ ಹಿನ್ನೆಲೆಯನ್ನು ಕೆದಕಿ ಬರೆದ ಲೇಖನ ಇತ್ಯಾದಿಗಳು ಕ್ಲಾಸ್ ರಿಲೋಷಿಯಸ್‍ಗೆ ಭಾರೀ ಜನಪ್ರೀತಿಯನ್ನು ಗಳಿಸಿಕೊಟ್ಟವು. ಜರ್ಮನಿಯ ಪ್ರತಿಷ್ಠಿತ Dextscher Reporterpreis ಬಹುಮಾನವು ನಾಲ್ಕು ಬಾರಿ ಈತನನ್ನು ಹುಡುಕಿಕೊಂಡು ಬಂದವು. ಇವರ ಲೇಖನದಲ್ಲಿರುವ ಕಾವ್ಯಾತ್ಮಕ ಗುಣ, ಪ್ರಸ್ತುತತೆ ಮತ್ತು ಒಳನೋಟವು ಅದ್ಭುತ ವಾದುದೆಂದು ಪ್ರತಿ ಪ್ರಶಸ್ತಿಗಳೂ ಭುಜ ತಟ್ಟಿದುವು. ಆದರೆ,
2018ರ ಕೊನೆಯಲ್ಲಿ ಜರ್ಮನಿಯ ಪ್ರಸಿದ್ಧ ಮ್ಯಾಗಸಿನ್ ಡೇರ್ ಸ್ಪಿಂಜಲ್ ಆತನನ್ನು ಕೆಲಸದಿಂದ ಕಿತ್ತು ಹಾಕಿತು. ಮಾತ್ರ ವಲ್ಲ, ಪ್ರತಿವಾರ 7,25,600 ಕ್ಕಿಂತ ಅಧಿಕ ಪ್ರತಿಗಳು ಮಾರಾಟ ವಾಗುವ ಮತ್ತು 6.5 ಮಿಲಿಯನ್ ಆನ್‍ಲೈನ್ ಓದುಗರಿರುವ ಈ  ಪತ್ರಿಕೆಯು ಈತನ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಿತು.
ವಿಷಯ ಇಷ್ಟೇ.
ಆತ ತನ್ನ ಲೇಖನದ ನಡುನಡುವೆ ಕಲ್ಪಿತ ಕಥೆಗಳನ್ನು ಪೋಣಿಸಿದ್ದ. ಇಲ್ಲದ್ದನ್ನು ಸೇರಿಸಿದ್ದ. 2018 ಡಿಸೆಂಬರ್ 9ರಂದು ಡೇರ್ ಸ್ಪಿಂಜಲ್ ಅತೀವ ಅವಮಾನದೊಂದಿಗೆ ತನ್ನ ವರದಿಗಾರನ ತಪ್ಪನ್ನು ಒಪ್ಪಿಕೊಂಡಿತು. ಆದರೆ ಡೇರ್ ಸ್ಪಿಂಜಲ್‍ಗೆ ಹಾಗೆ ತ ಪ್ಪೊಪ್ಪಿಕೊಳ್ಳುವುದು ಮತ್ತು ತನ್ನ ಪತ್ರಿಕೆಯಲ್ಲಿ ಸತ್ಯದ ಮುಖ ವಾಡದಲ್ಲಿ ಸುಳ್ಳು ಕತೆಗಳು ಪ್ರಕಟವಾಗಿದ್ದುವು ಎಂದು ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ. ಅದಾಗಲೇ ಕ್ಲಾಸ್ ರಿಲೋಷಿಯಸ್ ಡೇರ್ ಸ್ಪಿಂಜಲ್ ಅನ್ನೂ ಮೀರಿ ಬೆಳೆದಿದ್ದ. ತನಿಖಾ  ಬರಹ ಮತ್ತು ಕುತೂಹಲಕಾರಿ ವರದಿಗಾರಿಕೆಗಾಗಿ ಜರ್ಮನಿಯಾದ್ಯಂತ ಪ್ರಸಿದ್ಧನಾಗಿದ್ದ. 1985ರಲ್ಲಿ ಹುಟ್ಟಿ 2011ರಲ್ಲಿ ಫ್ರಿಲ್ಯಾನ್ಸ್ ಪತ್ರಕರ್ತನಾಗಿ ಪರಿವರ್ತಿತನಾದ ಆತನ ಬರಹವನ್ನು ಜರ್ಮನಿಯಲ್ಲಿ ಪ್ರಕಟಿಸದ ಪತ್ರಿಕೆಗಳೇ ಇಲ್ಲ. 2017ರಲ್ಲಿ ಡೇರ್  ಸ್ಪಿಂಜಲ್ ಪತ್ರಿಕೆಯಲ್ಲಿ ಖಾಯಂ ಕೆಲಸ ಗಿಟ್ಟಿಸಿಕೊಳ್ಳುವ ಮೊದಲು ಫ್ರಾಂಕ್ ಫಾರ್ಟವರ್, ಫಿನಾನ್ಶಿಯಲ್ ಟೈಮ್ಸ್, ಡೈ ವೆಲ್ಟ್, ಝೈಲ್ ಆನ್‍ಲೈನ್, ಡೇರ್ ಸ್ಪಿಂಜಲ್, ರಿಪೋರ್ಟೆಗೆನ್ ಸಹಿತ ಅನೇಕಾರು ಪತ್ರಿಕೆಗಳಿಗೆ ಫ್ರಿಲ್ಯಾನ್ಸ್ ಆಗಿ ಬರೆಯುತ್ತಿದ್ದ.  2011ರಿಂದ 2018ರ ನಡುವೆ ಕೇವಲ ಡೇರ್ ಸ್ಪಿಂಜಲ್ ಪತ್ರಿಕೆಯೊಂದಕ್ಕೆ 60ರಷ್ಟು ಅಪರೂಪದ ವರದಿಗಳನ್ನು ಮಾಡಿದ್ದ. ಅತ್ಯಂತ ಸಂಕೀರ್ಣವಾದ ಮತ್ತು ಸಾರ್ವಜನಿಕ ಗಮನ ಸೆಳೆಯಬಲ್ಲ ಸುದ್ದಿಗಳ ಹಿಂದೆ ಹುಡುಕಾಡಲು ಡೇರ್ ಸ್ಪಿಂಜಲ್ ಸಹಿತ  ವಿವಿಧ ಪತ್ರಿಕೆಗಳಿಗೆ ನೆನಪಿಗೆ ಬರುತ್ತಿ ದ್ದುದೇ ಕ್ಲಾಸ್ ರಿಲೋಷಿಯಸ್. ಆತ ಆ ಕೆಲಸವನ್ನು ಒಪ್ಪಿಕೊಂಡನೆಂದರೆ, ಅದೊಂದು ಭಾರೀ ಗಮನ ಸೆಳೆಯಬಲ್ಲ ಬರಹವಾಗುತ್ತದೆಂಬ ನಂಬಿಕೆ ಜರ್ಮನಿಯ ಪತ್ರಿಕಾ ಜಗತ್ತಿನಲ್ಲಿತ್ತು. ಅಂಥದ್ದೊಂದು ಬರಹ  ಕಲೆ ಮತ್ತು ವರದಿಗಾರಿಕೆಯ ಕೌಶಲ್ಯ ಆತನಲ್ಲಿದೆಯೆಂದು ಪತ್ರಿಕೆಗಳು ನಂಬಿದ್ದುವು. ಬಹುಶಃ ಈ ನಂಬಿಕೆಯ ಭಾರವು ಆತನೊಳಗೆ ಒತ್ತಡವೊಂದನ್ನು ಹುಟ್ಟುಹಾಕಿತ್ತೋ ಏನೋ? ಅಸಾಮಾನ್ಯವಾದ ಏನಾದರೊಂದನ್ನು ತನ್ನ ಬರಹದಲ್ಲಿ ಉಲ್ಲೇಖಿಸದೇ  ಹೋದರೆ ತನಗಿರುವ ಮಾರ್ಕೆಟ್ ಬಿದ್ದು ಹೋಗಬಹುದು ಎಂದು ಆತ ಭಾವಿಸಿದ್ದನೋ ಏನೋ? ಅಂತೂ ಆತ ತನ್ನ ವರದಿಯಲ್ಲಿ ಕಲ್ಪಿತ ಕತೆಗಳನ್ನು ಸೃಷ್ಟಿಸತೊಡಗಿದ. ಇದು ಬಹಿರಂಗವಾದದ್ದು ಟ್ರಂಪ್ ಕುರಿತಾದ 2017ರ ವರದಿಯ ಬಳಿಕ.  ಅರಿಝೋನಾದ ಅಮೇರಿಕ-ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ಬೆಂಬಲಿಗ ಗುಂಪು ಕಾವಲು ಕಾಯುತ್ತಿದೆ ಎಂದು ಆತ ವರದಿಯಲ್ಲಿ ಬರೆದನಲ್ಲದೇ Keep Mexico Out ಎಂಬ ಪ್ಲಕಾರ್ಡನ್ನು ಅದಕ್ಕೆ ಪುರಾವೆಯಾಗಿ ಮಂಡಿಸಿದ್ದ. ವಿಶೇಷ ಏನೆಂದರೆ, ಈ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಅಮೇರಿಕದಲ್ಲಿ ಆತನಿಗೆ ವರದಿಗಾರಿಕೆಗೆ ನೆರವಾದ ಜುವಾನ್ ಮೊರೆನೊ ಎಂಬವ. ರಿಲೋಷಿಯಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಇಬ್ಬರು ವ್ಯಕ್ತಿಗಳನ್ನು ಜುವಾನ್ ಮೊರೆನೊ ಸಂಪರ್ಕಿಸಿದ.  ಆದರೆ ಅವರು ತಮ್ಮನ್ನು ರಿಲೋಷಿಯಸ್ ಸಂಪರ್ಕಿಸಿಯೇ ಇಲ್ಲ ಎಂದು ಹೇಳಿದರು. ರಿಲೋಷಿಯಸ್‍ನ ವರದಿಗಾರಿಕೆಯ ವಿಶ್ವಾಸಾರ್ಹತೆಗೆ ಬಿದ್ದ ಮೊದಲ ಹೊಡೆತ ಇದು. ಅಷ್ಟಕ್ಕೇ ಡೇರ್ ಸ್ಪಿಂಜಲ್ ಪತ್ರಿಕೆ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅದು ತನಿಖೆಗೆ ಸಮಿತಿಯನ್ನು ರಚಿಸಿತು. ಆಗ ಒಂದೊಂದೇ ಸುಳ್ಳುಗಳು ಹೊರಬಿದ್ದುವು. ಆತನಿಗೆ ಪ್ರಶಸ್ತಿಯನ್ನು ತಂದುಕೊಟ್ಟ ವರದಿಗಳು ಸಂಪೂರ್ಣ ಸತ್ಯವಲ್ಲ ಎಂಬುದು ಪತ್ತೆಯಾಯಿತು. ಅಮೇರಿಕದ ಫುಟ್ಬಾಲ್ ಸ್ಟಾರ್ ಆಟಗಾರ ಕಾಲಿನ್‍ರ ಹೆತ್ತವರನ್ನು  ಈತ ಸಂದರ್ಶಿಸಿಯೇ ಇರಲಿಲ್ಲ. ಬರೇ ಕಲ್ಪಿಸಿಕೊಂಡು ಬರೆದಿದ್ದ. ಒಟ್ಟು 60 ವರದಿ ಗಳಲ್ಲಿ 14 ವರದಿಗಳು ಅಸತ್ಯದಿಂದ ಕೂಡಿವೆ ಎಂದು ತನಿಖಾ ಸಮಿತಿಯು ಹೇಳಿಕೊಂಡಿತು. ಅದರಲ್ಲಿ ಗ್ವಾಂಟನಾಮೋ ಬೇಯಲ್ಲಿದ್ದ ಯಮನ್ ವ್ಯಕ್ತಿಯ ಬಗೆಗಿನ  ವರದಿ, ಇರಾಕಿನ ಮಗುವನ್ನು ಐಸಿಸ್‍ನ ಗುಂಪು ಅಪಹರಿಸಿದ ವರದಿ, ಸಿರಿಯಾದ ಅಲೆಪ್ಪೊದ ಅನಾಥ ಮಕ್ಕಳು ಟರ್ಕಿಯಲ್ಲಿ ಗುಲಾಮರಾಗಿ ಬದುಕುತ್ತಿರುವ ವರದಿ ಇತ್ಯಾದಿ ಬಹುಮಾನ ವಿಜೇತ ಬರಹಗಳೂ ಸೇರಿದ್ದುವು. ವರದಿಯ ನಡುನಡುವೆ  ತನ್ನದೇ ಕಲ್ಪಿತ ಕತೆಗಳನ್ನು ಸೇರಿಸುವ ಮೂಲಕ ರಿಲೋಷಿಯಸ್ ಪತ್ರಿಕೋದ್ಯಮಕ್ಕೆ ಕಳಂಕ ತಂದಿದ್ದಾನೆ ಎಂದು ಡೇರ್ ಸ್ಪಿಂಜಲ್ ದೂಷಿಸಿತು.
ಇವೆಲ್ಲವನ್ನೂ ಇಲ್ಲಿ ಸ್ಮರಿಸಿಕೊಳ್ಳುವುದಕ್ಕೆ ಕಾರಣ ಇದೆ.
ಕಳೆದ ಎರಡು ತಿಂಗಳುಗಳಲ್ಲಿ ರಾಜ್ಯವು ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಅತ್ಯಂತ ಕೆಟ್ಟದಾಗಿ ಗುರುತಿಸಿಕೊಂಡಿತು. ಇತ್ತೀಚಿನ ಘಟನೆ ಏನೆಂದರೆ, ನಟಿ ರಮ್ಯಾರ ಕುರಿತು ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡದ್ದಕ್ಕಾಗಿ ವಿಶ್ವವಾಣಿಯ  ಮಾಜಿ ಪತ್ರಕರ್ತನೋರ್ವನ ಮೇಲೆ ಎಫ್‍ಐಆರ್ ದಾಖಲಾಯಿತು. ಇದರ ಜೊತೆಜೊತೆಗೇ, ಕಾಶ್ಮೀರದ ಲೇಹ್‍ನ ಪತ್ರಕರ್ತರು ಬಿಜೆಪಿಯಿಂದ ಹಣ ಸ್ವೀಕರಿಸಿದ್ದಾರೆ ಅನ್ನುವ ಆರೋಪಕ್ಕೆ ತುತ್ತಾದರು. ಪತ್ರಕರ್ತರ ಕೈಗೆ ಬಿಜೆಪಿ ನಾಯಕರು ಕವರ್  ನೀಡುತ್ತಿರುವ ವೀಡಿಯೋ ಬಿಡುಗಡೆಗೊಂಡಿತು. ಈ ಬಗ್ಗೆ ಓರ್ವ ಪತ್ರಕರ್ತೆ ಸಾಕ್ಷ್ಯವನ್ನೂ ನುಡಿದರು. ಇದಕ್ಕಿಂತ ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ಹಲವು ಪತ್ರಕರ್ತರು ಪತ್ರಿಕಾ ವೃತ್ತಿಗೆ ದ್ರೋಹ ಬಗೆದುದಕ್ಕಾಗಿ ಸುದ್ದಿಗೀಡಾದರು. ಇದರಲ್ಲಿ ಫೋಕಸ್  ಟಿ.ವಿ.ಗಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೂ ಒಬ್ಬರು. ಅವರು ತಿರುಚಿದ ವೀಡಿಯೋ ದೃಶ್ಯಾವಳಿಯನ್ನು ಇಟ್ಟುಕೊಂಡು ಬಿಜೆಪಿ ಶಾಸಕರನ್ನು ಬ್ಲ್ಯಾಕ್‍ಮೇಲ್ ಮಾಡಿದರು ಎಂಬ ಆರೋಪವನ್ನು ಹೊತ್ತುಕೊಂಡು ಬಂಧನಕ್ಕೆ ಒಳಗಾಗಿದ್ದಾರೆ. ಸಚಿವ  ಎಂ.ಬಿ. ಪಾಟೀಲರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವರೆಂದು ಹೇಳಲಾದ ಪತ್ರವೊಂದನ್ನು ಲೋಕಸಭಾ ಚುನಾವಣೆಯ ಆರಂಭ ಹಂತದಲ್ಲಿ ವಿಜಯವಾಣಿ ಪತ್ರಿಕೆಯು ಪ್ರಕಟಿಸಿತ್ತು. ಅದು ನಕಲಿಯೆಂದು ಪತ್ತೆಯಾದ ಬಳಿಕ  ಅದರ ಆರೋಪದಲ್ಲಿ ಉದಯ್ ಇಂಡಿಯಾದ ವಿಶೇಷ ವರದಿಗಾರರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಂಧಿಸಲಾಯಿತು. ಈ ವ್ಯಕ್ತಿಯ ಜೊತೆಗೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಕಾರ್ಡ್ ಎಂಬ ವೆಬ್‍ಸೈಟ್‍ನ ಸಂಪಾದಕ ವಿಕ್ರಂ  ಹೆಗ್ಡೆಯನ್ನು ಬಂಧಿಸಲಾಯಿತು. ಪಬ್ಲಿಕ್ ಟಿ.ವಿ.ಯ ವರದಿಗಾರನೋರ್ವ ಸಮಯ ನ್ಯೂಸ್ ವರದಿಗಾರನ ಜೊತೆ ಸೇರಿಕೊಂಡು ವೈದ್ಯರೊಬ್ಬರನ್ನು ಬ್ಲ್ಯಾಕ್‍ಮೇಲ್ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಘಟನೆ ನಡೆಯಿತು. ಆತನ ಬಂಧನವೂ  ಆಯಿತು. ವಿಜಯಪುರದಲ್ಲೂ ಇಂಥದ್ದೇ  ಘಟನೆಯೊಂದು ನಡೆಯಿತು. ಇಲ್ಲೂ ಬ್ಲ್ಯಾಕ್‍ಮೇಲ್‍ಗೆ ಒಳಗಾದದ್ದು ಓರ್ವ ವೈದ್ಯ. ಬೆದರಿಸಿದ್ದು ಟಿ.ವಿ. ಚಾನೆಲ್‍ನ ಕ್ಯಾಮರಾಮೆನ್. ಆತನನ್ನೂ ಬಂಧಿಸಲಾಯಿತು. ಇವು ಬೆಳಕಿಗೆ ಬಂದ ಇತ್ತೀಚಿನ ಘಟನೆಗಳು. ಹಾಗಂತ, ಬೆಳಕಿಗೆ ಬಾರದವುಗಳು ಇನ್ನೂ ಇರಬಹುದು. ಪ್ರಶ್ನೆಯಿರುವುದು ಎಷ್ಟು ಪ್ರಕರಣಗಳು ದಾಖಲಾದುವು ಎಂದಲ್ಲ. ಯಾಕೆ ಹೀಗಾಗುತ್ತಿದೆ ಮತ್ತು ಇದರಿಂದ ಮಾಧ್ಯಮ ವಿಶ್ವಾಸಾರ್ಹತೆಯ ಮೇಲೆ ಆಗುವ ಪರಿಣಾಮಗಳು ಏನೇನು  ಎಂಬುದರಲ್ಲಿ. ಸಾಮಾಜಿಕ ಜಾಲತಾಣಗಳು ಇವತ್ತು ಪರ್ಯಾಯ ಮಾಧ್ಯಮವಾಗಿ ಗಟ್ಟಿಯಾಗಿ ತಳವೂರುತ್ತಿವೆ. ಇವುಗಳ ಅನುಪಸ್ಥಿತಿಯ ಕಾಲದಲ್ಲಿ ಮಾಧ್ಯಮಗಳು ನಡೆದದ್ದೇ  ದಾರಿ, ಆಡಿದ್ದೇ  ಮಾತು ಎಂಬ ವಾತಾವರಣ ಇತ್ತು. ಇವತ್ತು ಹಾಗಿಲ್ಲ.  ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪ್ರತಿ ಸಣ್ಣ ತಪ್ಪನ್ನೂ ದುರ್ಬೀನು ಹಿಡಿದು ನೋಡುವ ಮತ್ತು ಧೈರ್ಯದಿಂದ ಹೇಳುವ ಸನ್ನಿವೇಶ ನಿರ್ಮಾಣ ವಾಗಿದೆ. ನಿಜವಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಸವಾಲು ಎದುರಾದದ್ದೇ  ಸಾಮಾಜಿಕ  ಜಾಲತಾಣದಿಂದ. ಜನರು ಸುದ್ದಿಗಳಿಗಾಗಿ ನಿರ್ದಿಷ್ಟ ಪತ್ರಿಕೆ ಮತ್ತು ನಿರ್ದಿಷ್ಟ ಟಿ.ವಿ. ಚಾನೆಲ್ ಗಳನ್ನು ಅವಲಂಬಿಸಬೇಕಾದ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳು ಬದಲಿಸಿದವು. ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ಹತ್ತಾರು ಸುದ್ದಿಗಳನ್ನು ಓದುವ  ಮತ್ತು ಹಂಚಿಕೊಳ್ಳುವ ಸುಲಭ ಅವಕಾಶವನ್ನು ಇಂಟರ್‍ನೆಟ್ ಮಾಧ್ಯಮ ಸೃಷ್ಟಿ ಮಾಡಿತು. ಬಹುಶಃ, ಆವರೆಗೆ ಸುದ್ದಿಗಳಿಗಾಗಿ ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನೇ ಅವ ಲಂಬಿಸಿಕೊಂಡಿದ್ದ ಜನರು ಹೀಗೆ ಇನ್ನಿತರ ಮೂಲಗಳ ಮೂಲಕ ಅವನ್ನು  ಪಡೆಯಲು ಪ್ರಾರಂಭಿಸಿದಾಗ ಈ ಮಾಧ್ಯಮಗಳಿಗೆ ಅಸ್ತಿತ್ವದ ಪ್ರಶ್ನೆ ಉದ್ಭವವಾಗುವುದು ಸಹಜ. ಸದ್ಯ ಅಂಥದ್ದೊಂದು  ಬಿಕ್ಕಟ್ಟು ಸೃಷ್ಟಿಯಾದಂತಿದೆ. ಪತ್ರಕರ್ತರು ಯಾವಾಗ ಬೇಕಾದರೂ ಕೆಲಸ ಕಳೆದುಕೊಳ್ಳಬಹುದಾದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ವೇತನವೂ ಈ ಹಿಂದಿನಂತೆ ನಿರೀಕ್ಷಿಸಿದಷ್ಟು ಲಭ್ಯವಾಗುತ್ತಿಲ್ಲ. ಒಂದು ಪ್ರದೇಶದ ವರದಿಗಾಗಿ ಇವತ್ತು ಆ ಪ್ರದೇಶದ ವರದಿಗಾರನನ್ನೇ ಕಾಯುತ್ತಾ ಕೂರುವ ಸಂದರ್ಭ ಕಡಿಮೆಯಾಗಿದೆ. ವಾಟ್ಯಾಪ್‍ಗಳು ಕ್ಷಣಮಾತ್ರದಲ್ಲಿ ಸುದ್ದಿಗಳನ್ನು ರವಾನಿಸುತ್ತಿವೆ.  ಪತ್ರಕರ್ತನೋರ್ವನ ಕೆಲಸವನ್ನು ಇನ್ನಾವುದೋ ವ್ಯಕ್ತಿ ತನ್ನ ಮೊಬೈಲ್‍ನ ಮೂಲಕ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಟರ್‍ನೆಟ್ ಮಾಧ್ಯಮವು ಸುದ್ದಿ ತಯಾರಿ ಕ್ಷೇತ್ರದಲ್ಲಿ ತೆರೆದಿರುವ ವಿಫುಲ ಅವಕಾಶಗಳು ಪತ್ರಕರ್ತರ ಅವಕಾಶವನ್ನು  ಕಬಳಿಸಿ ಬಿಟ್ಟಿದೆ. ಬಹುಶಃ, ಇಂಥ ವಾತಾವರಣವು ಪತ್ರಕರ್ತರನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಸಾಧ್ಯವೂ ಇದೆ.
ಅಂತೂ, ಕಳೆದ ಒಂದೂವರೆ-ಎರಡು ತಿಂಗಳು ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅತ್ಯಂತ ಸವಾಲಿನ ತಿಂಗಳುಗಳು. ಪತ್ರಿಕೋದ್ಯಮ ನಿಂತಿರುವುದು ವಿಶ್ವಾಸಾರ್ಹತೆಯ ಮೇಲೆ. ಆ ವಿಶ್ವಾಸಾರ್ಹತೆಗೆ ಭಂಗ ಬರುವುದೆಂದರೆ, ಈ ಕ್ಷೇತ್ರದ ಅವಸಾನಕ್ಕೆ  ಮೊಳೆ ಹೊಡೆದಂತೆ. ಪತ್ರಿಕೋದ್ಯಮದ ಮೇಲೆ ಜನರು ವಿಶ್ವಾಸ ಕಳಕೊಂಡ ದಿನ ಆ ಕ್ಷೇತ್ರ ಖಂಡಿತ ಸಾವಿನಂಚಿಗೆ ತಲುಪುತ್ತದೆ. ಪರ್ಯಾಯ ಮಾಧ್ಯಮವಾಗಿ ಇಂಟರ್‍ನೆಟ್ ಮಾಧ್ಯಮವು ಜನಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಂತೂ ದೃಶ್ಯ  ಮತ್ತು ಮುದ್ರಣ ಮಾಧ್ಯಮವು ಒಂದು ಗೇಣು ಹೆಚ್ಚೇ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಓದುಗ ಮತ್ತು ವೀಕ್ಷಕ ವೃಂದವನ್ನು ಕ್ಲಾಸ್ ರಿಲೋಷಿಯಸ್‍ನಂತೆ ಕಡೆಗಣಿಸಿದರೆ ಅಂತಿಮವಾಗಿ ಇಡೀ ಪತ್ರಿಕೋದ್ಯಮವೇ ಅದಕ್ಕೆ ಬೆಲೆ ತೆರಬೇಕಾದೀತು.

ಗರೀಬಿ ಹಠಾವೋ, ಅಚ್ಛೇ ದಿನ್ ಮತ್ತು ಖಾಲಿತನ



1971
1977
1989
2014
ಭಾರತೀಯ ಪ್ರಜಾತಂತ್ರ ಈವರೆಗೆ ಸಾಗಿ ಬಂದ ಹಾದಿಯನ್ನು ಹೀಗೆ ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು. 1970ರ ವರೆಗೆ ‘ಜನಪ್ರಿಯ ರಾಜಕಾರಣ’ ಎಂಬುದು ಇರಲಿಲ್ಲ. ಜನಪ್ರಿಯ ರಾಜ ಕಾರಣವೆಂದರೆ- ಒಂದೇ ವಿಷಯದ ಮೇಲೆ ಜನರ  ಗಮನವನ್ನು ಸೆಳೆಯುವುದು, ಆ ವಿಷಯವನ್ನು ಚರ್ಚೆಯಲ್ಲಿಡುವುದು ಮತ್ತು ಅದನ್ನು ಜನರ ಧ್ವನಿಯಾಗಿ ಪರಿವರ್ತಿಸುವುದು. ಉದಾಹರಣೆಗೆ, 2014ರ ಅಚ್ಛೇ ದಿನ್ ಘೋಷವಾಕ್ಯ.
ಗಾಂಧೀಜಿ ಮತ್ತು ನೆಹರೂ ಇಬ್ಬರೂ ಅತ್ಯಂತ ವರ್ಚಸ್ವೀ ವ್ಯಕ್ತಿಗಳಾಗಿದ್ದರೂ ‘ಜನಪ್ರಿಯ ಚಳವಳಿ’ ಮತ್ತು ‘ಜನಪ್ರಿಯ ರಾಜಕಾರಣ’ವನ್ನು ಆಶ್ರಯಿಸಿ ಬದುಕಲಿಲ್ಲ. ಅಸಹಕಾರ ಚಳವಳಿಯ ಭಾಗವಾಗಿ ಚೌರಿಚೌರಾದಲ್ಲಿ ಜನರು ಪೊಲೀಸ್ ಠಾಣೆಗೆ ಬೆಂಕಿ  ಕೊಟ್ಟು 22 ಪೊಲೀಸರನ್ನು ಸಾಯಿಸಿದಾಗ ಗಾಂಧೀಜಿ ಎಷ್ಟು ವ್ಯಗ್ರಗೊಂಡರೆಂದರೆ ತಾನೇ ಕರೆಕೊಟ್ಟ ಅಸಹಕಾರ ಚಳವಳಿಯನ್ನೇ ರದ್ದುಗೊಳಿಸಿದರು. ಈ ನಿರ್ಧಾರವು ನೆಹರೂ ಮತ್ತು ಭಗತ್ ಸಿಂಗ್‍ರಂಥ ಅಂದಿನ ಪ್ರಮುಖ ನಾಯಕರಲ್ಲೇ  ಅಸಮಾಧಾನವನ್ನು ತರಿಸಿತ್ತು. ನೆಹರೂ ಅಂತೂ ಈ ನಿರ್ಧಾರವನ್ನು ಹಿನ್ನಡೆ ಎಂದು ಕರೆದರು. ನಿಜವಾಗಿ, ಆ ಬೆಂಕಿ ಕೊಟ್ಟ ಘಟನೆ ಯನ್ನೇ ವೈಭವೀಕರಿಸಿ ಮತ್ತು ಆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ಮೂವರು  ಚಳವಳಿಗಾರರನ್ನು ಹುತಾತ್ಮರೆಂದು ಬಣ್ಣಿಸಿ ಗಾಂಧೀಜಿಯವರಿಗೆ ದೇಶದಾದ್ಯಂತ ಪ್ರತಿ ಚಳವಳಿಯನ್ನು ಹುಟ್ಟು ಹಾಕಬಹುದಿತ್ತು. ತನ್ನ ಅಸಹಕಾರ ಚಳವಳಿಯನ್ನು ಇನ್ನಷ್ಟು ತೀಕ್ಷ್ಣ  ಮತ್ತು ಕ್ರಿಯಾಶೀಲಗೊಳಿಸುವುದಕ್ಕೆ ಚೌರಿಚೌರಾ ಘಟನೆಯನ್ನು  ಬಳಸಿಕೊಳ್ಳಬಹುದಿತ್ತು. 2014ರಲ್ಲಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಅನ್ನುವ ಘೋಷವಾಕ್ಯವನ್ನು ಹೇಗೆ ಜನರ ಘೋಷವಾಕ್ಯವಾಗಿಸಿದರೋ ಹಾಗೆಯೇ ಚೌರಿಚೌರಾವನ್ನು ಜನರ ಆಡು ಮಾತಾಗಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ  ರೂಪವನ್ನು ಕೊಡಬಹುದಿತ್ತು. ಆದರೆ ಗಾಂಧೀಜಿ ಈ ಜನಪ್ರಿಯ ನೀತಿಯನ್ನು ಕೈಬಿಟ್ಟು ತಾನು ನಂಬಿರುವ ಅಹಿಂಸಾ ಸಿದ್ಧಾಂತಕ್ಕೆ ಮಹತ್ವ ನೀಡಿದರು. ನೆಹರೂ ಕೂಡ ಇದೇ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರು ಜನಪ್ರಿಯ  ರಾಜಕಾರಣವೆಂಬ ಥಿಯರಿಯನ್ನು ನೆಚ್ಚಿಕೊಳ್ಳಲಿಲ್ಲ. ‘ಮುಸ್ಲಿಮ್ ಪಾಕಿಸ್ತಾನ’ದಂತೆ ‘ಹಿಂದೂ ಭಾರತ’ದ ಬೇಡಿಕೆಯು ಆ ಕಾಲದಲ್ಲಿ ಬಲವಾಗಿ ಕೇಳಿ ಬಂದಾಗಲೂ ಅವರು ಸೆಕ್ಯುಲರ್ ಭಾರತಕ್ಕೆ ಒತ್ತು ಕೊಟ್ಟರು. ಒಂದುವೇಳೆ, ಭಾರತವನ್ನು ಹಿಂದೂ  ಭಾರತವನ್ನಾಗಿಸುವುದರ ಪರ ಅವರು ನಿಲ್ಲುತ್ತಿದ್ದರೆ ಅದು ಅವರಿಗೆ ಈ ಸೆಕ್ಯುಲರ್‍ಗಿಂತ ಹೆಚ್ಚಿನ ಜನಪ್ರಿಯತೆ ಒದಗಿಸಿಕೊಡುವ ಎಲ್ಲ ಸಾಧ್ಯತೆಗಳೂ ಇದ್ದುವು. ಅಲ್ಲದೇ ಮುಸ್ಲಿಮ್ ಪಾಕಿಸ್ತಾನಕ್ಕೆ ಹಿಂದೂ ಭಾರತ ಎಂಬ ನುಡಿಗಟ್ಟನ್ನು ರಚಿಸಿ ದೇಶದಾದ್ಯಂತ ಮಾರುವುದಕ್ಕೆ ಮತ್ತು ತನ್ನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವು ದಕ್ಕೆ ಅದು ದಾರಿ ತೆರೆದು ಕೊಡಬಹುದಿತ್ತು. ಮಾತ್ರವಲ್ಲ, ಇಂಥದ್ದೊಂದು  ತೀರ್ಮಾನಕ್ಕೆ ಎದುರಾಗಬಹುದಾದ ವಿರೋಧವನ್ನು ಮುಸ್ಲಿಮ್ ಪಾಕಿಸ್ತಾನವನ್ನು ತೋರಿಸಿ  ತಿರಸ್ಕರಿಸುವುದೂ ಅವರಿಗೆ ಕಷ್ಟವಾಗುತ್ತಿರಲಿಲ್ಲ. ಆದರೆ ನೆಹರೂ ಸೆಕ್ಯುಲರ್ ಭಾರತ ಮತ್ತು ವಿಜ್ಞಾನ ಭಾರತವನ್ನು ಆಯ್ದುಕೊಂಡರು. ಅಂಧಶ್ರದ್ಧೆ, ಮೂಢ ನಂಬಿಕೆ, ಕಟ್ಟುಕತೆಗಳೇ ಪ್ರಾಬಲ್ಯ ಸ್ಥಾಪಿಸಿದ್ದ ಕಾಲದಲ್ಲಿ ಮತ್ತು ಅವಕ್ಕೆಲ್ಲ ಧರ್ಮದ ಕವಚವನ್ನು  ತೊಡಿಸಿ ಜನರನ್ನು ಶೋಷಿಸುತ್ತಿದ್ದ ದಿನಗಳಲ್ಲಿ ನೆಹರೂ ಅವರು ವೈಜ್ಞಾನಿಕ ಲಾಭಗಳನ್ನು ಜನರಿಗೆ ತಲುಪಿಸಬಯಸಿದರು. ಅಂಧಶ್ರದ್ಧೆಗೆ ಎದುರಾಗಿ ಆರೋಗ್ಯ ಕೇಂದ್ರಗಳನ್ನು ತೆರೆದರು. ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಮುನ್ನುಡಿ  ಇಟ್ಟರು. ಜನರನ್ನು ಆಲೋಚನೆಗೆ ಹಚ್ಚುವುದು ಮತ್ತು ಅದರ ಆಧಾರದಲ್ಲಿ ಮೌಢ್ಯಗಳಿಂದ ಹೊರತರುವುದು ಅವರ ಉದ್ದೇಶವಾಗಿತ್ತು. ಒಂದು ರೀತಿಯಲ್ಲಿ ಇದು ಕಠಿಣ ಕೆಲಸ. ಜನರ ಭಾವನೆಗೆ ವಿರುದ್ಧವಾಗಿ ನಿಲ್ಲುವ ಭಂಡ ಧೈರ್ಯ. ಆದರೆ ಇವರ  ಮಗಳು ಇಂದಿರಾ ಗಾಂಧಿ ಭಿನ್ನ ಹಾದಿಯನ್ನು ತುಳಿದರು.
1971ರಲ್ಲಿ ಗರೀಬಿ ಹಠಾವೋ ಅನ್ನುವ ಘೋಷವಾಕ್ಯವನ್ನು ಉರುಳಿಸಿ ಅದನ್ನು ಅವರು ಜನರ ಧ್ವನಿಯಾಗಿಸಿದರು. ತನ್ನ ವಿರೋಧಿಗಳನ್ನು ಕೇವಲ ಈ ಒಂದೇ ಘೋಷವಾಕ್ಯದಿಂದ ಮೆಟ್ಟಿನಿಂತರು. ಭಾರತದಲ್ಲಿ ಜನಪ್ರಿಯ ರಾಜಕಾರಣವು ಇಲ್ಲಿಂದ  ಪ್ರಾರಂಭವಾಯಿತು ಎಂದು ಹೇಳಬಹುದು. ಜನರು ಆವರೆಗೆ ಗ್ರಹಿಸದೇ ಇದ್ದ ಘೋಷವಾಕ್ಯವೊಂದನ್ನು ಸೃಷ್ಟಿಸುವಲ್ಲಿ ಮತ್ತು ಬಹುಸಂಖ್ಯಾತ ಜನರ ಧ್ವನಿಯಾಗಿ ಅದನ್ನು ಮಾರ್ಪಡಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದರ ಜೊತೆಗೇ ಇಂದಿರಾ  ಎಂದರೆ ಇಂಡಿಯಾ ಅನ್ನುವ ಘೋಷವಾಕ್ಯವೂ ಜನಪ್ರಿಯ ವಾಯಿತು. ಇದಾದ ಬಳಿಕ ಜಯಪ್ರಕಾಶ್ ನಾರಾಯಣ್ ಅವರು 1977ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಐಕಾನ್ ಆಗಿ ಮೂಡಿಬಂದರು. ಗರೀಬಿ ಹಠಾವೋ ಎಂಬ ಘೋಷವಾಕ್ಯವನ್ನು  ಉರುಳಿಸಿದ ಇಂದಿರಾ ಗಾಂಧಿಗೆ ಕೇವಲ 6 ವರ್ಷಗಳಲ್ಲಿ ಎದುರಾದ ಪ್ರಬಲ ಪ್ರತಿರೋಧ ಅಂದರೆ, ಜಯಪ್ರಕಾಶ್ ನಾರಾಯಣ್. ಅವರು ಪ್ರಜಾತಂತ್ರ ಮತ್ತು ಸಂವಿಧಾನದ ನಿಜ ರಕ್ಷಕನಂತೆ ಗೋಚರಿಸಿದರು. ಇಂದಿರಾ ಇವೆರಡರ ವಿರೋಧಿಯಾಗಿ  ಬಿಂಬಿತವಾದರು. ಜಯಪ್ರಕಾಶ್‍ರ ಮೇಲೆ ಈ ದೇಶ ಭಾರೀ ಭರವಸೆಯನ್ನು ವ್ಯಕ್ತಪಡಿಸಿತು. ಅಂದಿನ ಬಹುಸಂಖ್ಯಾತ ಭಾರತೀಯರ ಧ್ವನಿಗೆ ಜಯಪ್ರಕಾಶ್ ವೇದಿಕೆಯಾದರು. ಅವರು ತಮ್ಮ ಧ್ವನಿಯನ್ನು ಜನರ ಧ್ವನಿಯಾಗಿ ಪರಿವರ್ತಿಸಿದರು.
1989ರಲ್ಲಿ ವಿ.ಪಿ. ಸಿಂಗ್ ಮೂಲಕ ಮೂರನೇ ಘಟ್ಟದ ‘ಜನಪ್ರಿಯ ರಾಜಕಾರಣ’ ಯಶಸ್ಸು ಪಡೆಯಿತು. ಅವರಂತೂ ಭ್ರಷ್ಟಾಚಾರ ವಿರೋಧಿ ಮಸೀಹನಂತೆ ಕಂಡುಬಂದರು. ಅಂದು ಅವರು ಭ್ರಷ್ಟಾಚಾರವನ್ನು ಜನರಿಗೆ ಅರ್ಥ ಮಾಡಿಸುವುದಕ್ಕಾಗಿ  ಬೆಂಕಿ ಪೆಟ್ಟಿಗೆ, ಬ್ಲೇಡು ಸಹಿತ ಜನರ ದಿನನಿತ್ಯದ ಬಳಕೆಯ ವಸ್ತುಗಳನ್ನು ರೂಪಕವಾಗಿ ಎತ್ತಿಕೊಂಡರು. ಬೆಂಕಿಪೆಟ್ಟಿಗೆಗೆ ವ್ಯಯಿಸುವ ಹಣದ ಒಂದು ಪಾಲನ್ನು ರಾಜೀವ್ ಗಾಂಧಿ ಕಬಳಿಸಿದ್ದಾರೆ ಎಂಬರ್ಥದಲ್ಲಿ ಮಾತಾಡಿದರು. ‘ಗಲೀ ಗಲೀ ಮೆ ಶೋರ್  ಹೈ, ರಾಜೀವ್ ಗಾಂಧಿ ಚೋರ್ ಹೈ’ ಎಂಬ ನುಡಿಗಟ್ಟನ್ನು ರಚಿಸಿಕೊಂಡು ಬೋಫೋರ್ಸ್ ಹಗರಣವನ್ನು ಜನರಿಗೆ ಪರಿಚಯಿಸಿದರು. ಜನರಿಗೆ ಆ ನುಡಿಗಟ್ಟು ಇಷ್ಟ ವಾಯಿತು. ಬರಬರುತ್ತಾ ಅದು ಬಹುಜನರ ಆಡುಮಾತಾಗಿ ಪರಿವರ್ತಿತವಾಯಿತು.  ಇದರ ಬಳಿಕ ಜನಪ್ರಿಯ ರಾಜಕಾರಣದಲ್ಲಿ ಬೆಳಗಿದವರು ನರೇಂದ್ರ ಮೋದಿ. 2014ರಲ್ಲಿ ಅವರ ಭಾಷಣ, ಆಂಗಿಕ ಅಭಿನಯಗಳು ಭಾರತೀಯರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದುವು. ಅಚ್ಛೇದಿನ್ ಆಯೇಗಾ ಎಂಬ ಮಾತನ್ನು ಅವರು  ಉದುರಿಸಿದರು. ಹಿಂದೂ ಹೃದಯ ಸಾಮ್ರಾಟ್ ಎಂಬುದಾಗಿ ಅವರನ್ನು ಬಿಂಬಿಸಲಾಯಿತು. ಗುಜರಾತ್ ಮಾದರಿಯನ್ನು ಅವರ ಬೆನ್ನಿಗೆ ಅಂಟಿಸಲಾಯಿತು. ಅಭಿವೃದ್ಧಿಯ ಹರಿಕಾರನಾಗಿ, ಬಡವರಿಗೆ ಚಾಯ್‍ವಾಲಾ ಆಗಿ, ನಗರ ಮತ್ತು ಗ್ರಾಮೀಣ  ಪ್ರದೇಶದ ಜನರ ಭರವಸೆಯಾಗಿ ಅವರು ಮೂಡಿಬಂದರು. ಹಾಗಂತ, ಈ ಅಲೆಗೆ ಪ್ರತಿಯಾಗಿ ವಿರೋಧ ಪP್ಷÀವಾದ ಕಾಂಗ್ರೆಸ್‍ನಲ್ಲಿ ಯಾವ ಅಸ್ತ್ರವೂ ಇರಲಿಲ್ಲ. ಅಚ್ಛೇ ದಿನ್‍ಗೆ ಪರ್ಯಾಯವಾಗಿ ಒಂದು ಘೋಷವಾಕ್ಯವನ್ನು ರಚಿಸುವ ಉಮೇದೂ  ಕಾಂಗ್ರೆಸ್‍ನಲ್ಲಿ ಕಾಣಿಸಲಿಲ್ಲ. ನರೇಂದ್ರ ಮೋದಿಯವರ ಭಾಷಣ ಚಾತುರ್ಯಕ್ಕೆ ಎದುರಾಗಿ ಕಾಂಗ್ರೆಸ್ ಓರ್ವ ಭಾಷಣ ಚತುರನನ್ನೂ ಪರಿಚಯಿಸಲಿಲ್ಲ. ಇಂತಹ ಸ್ಥಿತಿಯಲ್ಲಿ ಸಹಜವಾದುದೇ ಘಟಿಸಿತು. ನರೇಂದ್ರ ಮೋದಿಯವರ ಅಚ್ಛೇದಿನ್ ಆಯೇಗಾ  ಘೋಷವಾಕ್ಯ ಜನರ ಘೋಷವಾಕ್ಯವಾಗಿ ಬದಲಾಯಿತು.
ಸದ್ಯದ ಸ್ಥಿತಿ ಏನೆಂದರೆ, ಬಿಜೆಪಿಯ ಬತ್ತಳಿಕೆಯಲ್ಲಿರುವ ಘೋಷವಾಕ್ಯಗಳೆಲ್ಲವೂ ಖಾಲಿಯಾಗಿವೆ. ಈ ಬಾರಿ ಎಲ್ಲೂ ಅಚ್ಛೇದಿನ್‍ನ ಪ್ರಸ್ತಾಪವಿಲ್ಲ. ಗುಜರಾತ್ ಮಾದರಿಯ ಉಲ್ಲೇಖ ಇಲ್ಲ. ಕಪ್ಪು ಹಣ ಸದ್ದು ಮಾಡುತ್ತಿಲ್ಲ. ರಾಮಮಂದಿರ ಇಲ್ಲ.  ಅಂದಹಾಗೆ, 2014ರಲ್ಲಿದ್ದ ಮತ್ತು 2019ರಲ್ಲೂ ಚಾಲ್ತಿಯಲ್ಲಿ  ರುವ ಏಕೈಕ ವಿಷಯವೆಂದರೆ, ಪಾಕಿಸ್ತಾನ ಮಾತ್ರ. ನಿಜವಾಗಿ, 2014ರಲ್ಲಿ ನರೇಂದ್ರ ಮೋದಿಯವರು ಒಂದು ಕನಸಷ್ಟೇ ಆಗಿದ್ದರು. ಅವರನ್ನು ಗುಜರಾತ್ ಬಿಟ್ಟರೆ ಉಳಿದಂತೆ ಭಾರತವು  ಆಡಳಿತಗಾರನಾಗಿ ನೋಡಿರಲಿಲ್ಲ. ಮಾತ್ರವಲ್ಲ, ಅವರಾಡುವ ಮಾತುಗಳು, ಬಳಸುವ ಉಪಮೆಗಳು, ಪಟ್ಟುಗಳು ಇತ್ಯಾದಿ ಎಲ್ಲವೂ ಮನ್‍ಮೋಹನ್ ಸಿಂಗ್‍ಗೆ ಹೋಲಿಸಿದರೆ ಆಕರ್ಷಕ ವಾಗಿದ್ದುವು. ಜೊತೆಗೇ ಗುಜರಾತ್ ಮಾದರಿಯ ಬಗ್ಗೆ ಚಿತ್ರ-ವಿಚಿತ್ರ  ವಾದಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುವು. ಜನರು ಮೋದಿಯವರಲ್ಲಿ ವಿಶ್ವಾಸವನ್ನು ಹೊಂದುವುದಕ್ಕೆ ಅವು ಧಾರಾಳ ಸಾಕಾಗಿತ್ತು. ಆದರೆ, 2019 ಹಾಗಿಲ್ಲ. ಇವತ್ತು ನರೇಂದ್ರ ಮೋದಿ ಪರಿಚಿತ ವ್ಯಕ್ತಿ. ಅವರ ಮಾತನ್ನು ಮಾತ್ರವಲ್ಲ, 5 ವರ್ಷಗಳ  ಆಡಳಿತವನ್ನೂ ಜನರು ಅನುಭವಿಸಿದ್ದಾರೆ. ಅವರ ಮಾತಿಗೂ ಆಡಳಿತಕ್ಕೂ ನಡುವೆ ಇರುವ ಸರಿ-ತಪ್ಪುಗಳನ್ನು ಜನರು ಇವತ್ತು ಲೆಕ್ಕ ಹಾಕಬಲ್ಲರು. ನಿರುದ್ಯೋಗ ಸಮಸ್ಯೆಯು ಕಳೆದ 40 ವರ್ಷಗಳಲ್ಲೇ  ಅತ್ಯಧಿಕ ಮಟ್ಟದಲ್ಲಿದೆ ಎಂಬುದು ಬರೇ ಮಾಧ್ಯಮ  ವರದಿಯಷ್ಟೇ ಅಲ್ಲ, ಪ್ರತಿ ಮನೆಗಳ ವಾಸ್ತವವೂ ಹೌದು. ಬೆಲೆ ಏರಿಕೆಯಲ್ಲಿ ಇಳಿತವಾಗಿಲ್ಲ. ಆಧಾರ್ ವ್ಯವಸ್ಥೆಯನ್ನು ಸರಳೀಕರಿಸಲಾಗಿಲ್ಲ. ಗ್ಯಾಸ್ ಸಬ್ಸಿಡಿಗಾಗಿ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಜೋಡಿಸುವ ನಿಯಮವನ್ನು ರದ್ದುಪಡಿಸಲಾಗಿಲ್ಲ.  ತೈಲ ಬೆಲೆಯು 2014ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ರೈತ ಆತ್ಮಹತ್ಯೆ, ಹಿಂಸಾಚಾರ, ಭಯೋತ್ಪಾದನೆ, ಭ್ರಷ್ಟಾಚಾರ ಇತ್ಯಾದಿ ವಿಷಯ ಗಳಲ್ಲಿ 2014ಕ್ಕೂ 2019ಕ್ಕೂ ಭಾರೀ ಅನ್ನಬಹುದಾದ ವ್ಯತ್ಯಾಸಗಳಿಲ್ಲ. ಒಂದುಕಡೆ ರಫೇಲ್ ಸದ್ದು ಮಾಡಿದರೆ, ಇ ನ್ನೊಂದು ಕಡೆ ಭಯೋತ್ಪಾದಕರು ಉರಿ, ಪಠಾಣ್‍ಕೋಟ್ ಮತ್ತು ಪುಲ್ವಾಮದಲ್ಲಿ ದಾಳಿ ನಡೆಸಿದರು. ಭಾರೀ ಭದ್ರತಾ ತಪಾಸಣೆಯಿರುವ ಪುಲ್ವಾಮ ಒಂದರಲ್ಲೇ  ಭಯೋತ್ಪಾದಕರು 40ರಷ್ಟು ಯೋಧರನ್ನು ಸಾಯಿಸಿದರು. ನಕ್ಸಲ್ ಹಿಂಸಾಚಾರವಂತೂ  ನೋಟ್‍ಬ್ಯಾನ್‍ನ ಬಳಿಕವೂ ಮುಂದುವರಿಯಿತು. ಕಾಶ್ಮೀರವು 1990ರ ಬಳಿಕ ಇದೇ ಮೊದಲ ಬಾರಿ ಹಿಂಸಾಚಾರದ ಚರಮ ಸೀಮಿಗೆ ತಲುಪಿತು. ತಿಂಗಳುಗಳ ಕಾಲ ಕಾಶ್ಮೀರಿ ನಾಗರಿಕರು ‘ಕಲ್ಲೆಸೆತ ಪ್ರತಿಭಟನೆ’ ನಡೆಸಿದರು. ಯೋಜನಾ ಆಯೋಗವ ನ್ನು ರದ್ದುಗೊಳಿಸಿ ಅದರ ಸ್ಥಾನದಲ್ಲಿ ಆಸ್ಥಾನ ವಿದೂಷಕನಂತಿರುವ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಜಿಎಸ್‍ಟಿ ಮತ್ತು ನೋಟ್‍ಬ್ಯಾನ್‍ಗಳು ಸಣ್ಣ ಮತ್ತು ಮಧ್ಯಮ ಉದ್ಯಮವನ್ನೇ ನಾಶ ಮಾಡಿದುವು. ಆಡಳಿತ ವಿಭಾಗದಲ್ಲಿ ಒಂದೇ  ವಿಚಾರಧಾರೆಯ ವ್ಯಕ್ತಿಗಳನ್ನು ಕೂರಿಸುವ ಮತ್ತು ಆರಿಸುವ ಶ್ರಮಗಳು ನಡೆದುವು. ಆಡಳಿತ ವಿರೋಧಿ ಧ್ವನಿಗಳನ್ನು ದೇಶವಿರೋಧಿ ಧ್ವನಿಗಳೆಂದು ಬಿಂಬಿಸಲಾಯಿತು. ಧಾರ್ಮಿಕ ಅಸಹಿಷ್ಣುತೆ ತೀವ್ರವಾಯಿತು. ಗೋವಿನ ಹೆಸರಲ್ಲಿ ಒಂದು ನಿರ್ದಿಷ್ಟ  ಧರ್ಮದವರನ್ನು ಗುರಿಯಾಗಿಸಿ ಥಳಿತ ಮತ್ತು ಹತ್ಯೆಗಳು ನಡೆದುವು. ಹಿಂದಿ ಮತ್ತು ಸಂಸ್ಕøತವನ್ನು ಬಲವಂತದಿಂದ ಹೇರುವುದಕ್ಕೆ ಪ್ರಯತ್ನಿಸಲಾಯಿತು. ಮೋದಿ ಸಂಪುಟದ ಹಲವು ಸಚಿವರು ಅತ್ಯಂತ ಅಗೌರವಾರ್ಹ ಮಾತುಗಳಿಗಾಗಿ ಗುರುತಿಸಿ  ಕೊಂಡರು. ಸಂವಿಧಾನವನ್ನೇ ಬದಲಾಯಿಸುವೆವು ಅನ್ನುವ ಮಟ್ಟಕ್ಕೆ ಅವರ ಮಾತುಗಳು ಹಳಿತಪ್ಪಿ ಹೋದುವು.
ಒಂದುರೀತಿಯಲ್ಲಿ, 2014ರ ಬಿಜೆಪಿ ಕಳೆದುಹೋಗಿದೆ. ಈಗಿರುವುದು ವಚನಭ್ರಷ್ಟ ಬಿಜೆಪಿ. ಈ ಬಿಜೆಪಿಗೆ 2014ರ ತನ್ನದೇ ಆಶ್ವಾಸನೆಗಳಲ್ಲಿ ಒಂದೂ ನೆನಪಿಲ್ಲ. ಒಂದುವೇಳೆ, ಮತದಾರರಿಗೂ ಇದೇ ರೀತಿಯ ಮರೆವು ಬಾಧಿಸಿದರೆ ಮಾತ್ರ ಈ ಬಾರಿ  ಬಿಜೆಪಿ ಮರಳಿ ಗೆಲ್ಲಬಹುದು. ಈ ವಾರದ ಸನ್ಮಾರ್ಗದಲ್ಲಿ