Tuesday, August 27, 2019

45 ಕೆಜಿ ತೂಗುವ ಫಕೀರನ ಹತ್ಯೆಗೆ ಏನು ಕಾರಣ ಕಾಂಗ್ರೆಸ್ಸಿಗರೇ?



1. 1938-1939
2. 1947 ಮೇ 31
ಈ ಎರಡೂ ಇಸವಿಗಳನ್ನು ಇಂದಿನ ಕಾಂಗ್ರೆಸ್ ಪಕ್ಷ ಮತ್ತೆ ನೆನಪಿಸಿಕೊಳ್ಳಬೇಕಾದುದು ಬಹಳ ಅಗತ್ಯ. 1938-39ರಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಸವಾಲನ್ನು ಎದುರಿಸಲು ಸಿದ್ಧವಾಯಿತು. ಪ್ರಜಾತಂತ್ರ ವ್ಯವಸ್ಥೆಯನ್ನು ಪ್ರತಿಪಾದಿಸುವುದು ಬೇರೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ತನ್ನನ್ನು ಅರ್ಪಿಸಿಕೊಳ್ಳುವುದು ಬೇರೆ. ಪ್ರತಿ ಪಾದಿಸುವಾಗ ಸವಾಲುಗಳು ಕಡಿಮೆ. ಚತುರ ಮಾತುಗಾರ ಪ್ರಜಾತಂತ್ರ ವ್ಯವಸ್ಥೆಯನ್ನು ಬಂಗಾರದ ಕಲಶದಲ್ಲಿ ಇಟ್ಟುಕೊಡಬಲ್ಲ. ಅದನ್ನು ಅವನು ಪರಿಹಾರವಾಗಿ ಮತ್ತು ಪರಮ ಪವಿತ್ರವಾಗಿ ವ್ಯಾಖ್ಯಾನಿಸಬಲ್ಲ. ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರಜಾತಂತ್ರ ರಹಿತ ವ್ಯವಸ್ಥೆಗಳೆರಡನ್ನೂ ಮುಖಾಮುಖಿಗೊಳಿಸಿ, ಬೀಜ ಸೀಳಿ, ಎರಡ ರಲ್ಲಿ ಒಂದನ್ನು ಬಿಳಿಯಾಗಿಯೂ ಇನ್ನೊಂದನ್ನು ಕಪ್ಪಾಗಿಯೂ ಪರಿವರ್ತಿಸಬಲ್ಲ. ಹೀಗೆ ಮಾಡುವುದಕ್ಕೆ ಆ ಕ್ಷಣದಲ್ಲಿ ಆತನಿಗೆ ಅಗತ್ಯವಿರುವುದು ಎರಡೇ ಎರಡು ವಸ್ತುಗಳು.
1. ಮೈಕ್.
2. ನಾಲಗೆ.
ಆದರೆ, ಪ್ರಜಾತಂತ್ರ ವ್ಯವಸ್ಥೆಗೆ ವ್ಯಕ್ತಿಯೋ ಸಂಘಟನೆಯೋ ಪಕ್ಷವೋ ತನ್ನನ್ನು ಅರ್ಪಿಸಿಕೊಳ್ಳುವಾಗ ಈ ಮಾತುಗಾರಿಕೆಯೇ ಸವಾಲಾಗಿ ಎದುರು ನಿಲ್ಲುತ್ತದೆ. ಮೈಕ್‍ನಲ್ಲಿ ಪ್ರತಿಪಾದಿಸಿದ ಎಲ್ಲವೂ ಪ್ರಾಯೋಗಿಕವಾಗಿಯೂ ಸಾಧ್ಯ ಎಂದು ತೋರಿಸಿಕೊಡ ಬೇಕಾದ ಸವಾಲು ಎದುರಾಗುತ್ತದೆ. ಸಾಮಾನ್ಯವಾಗಿ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಯಾವುದೇ ರಾಜಕೀಯ ಪಕ್ಷ ದಾರಿ ಬದಲಿಸಿಕೊಳ್ಳುವುದು ಇಲ್ಲೇ. 1938-39ರ ಇಸವಿ ಮುಖ್ಯ ವಾಗುವುದು ಈ ಕಾರಣಕ್ಕಾಗಿಯೇ. ಪ್ರಜಾತಂತ್ರ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿತು. ಪಕ್ಷದ ಅಧ್ಯಕ್ಷ ಹುದ್ದೆಯನ್ನು ಮತದಾನದ ಮೂಲಕ ತುಂಬಿಕೊಳ್ಳಲು ನಿರ್ಧರಿಸಿತು. ಪಕ್ಷದಲ್ಲಿರುವ ಪ್ರಭಾವಿ ನಾಯಕರ ಮಟ್ಟಿಗೆ ಹೇಳುವುದಾದರೆ, ಇಂಥದ್ದೊಂದು  ನಿರ್ಧಾರ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ. ಯಾಕೆಂದರೆ, ಮತದಾನವಾದರೆ ಯಾರು ಬೇಕಾದರೂ ಆಯ್ಕೆಯಾಗುವುದಕ್ಕೆ ಬಾಗಿಲು ತೆರೆದಂತಾಗುತ್ತದೆ. ಹೊಸಬರೂ ಆಯ್ಕೆಯಾಗಬಹುದು. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು ಪರಾಜಯ ಹೊಂದಬಹುದು. ಇಂಥ ಸಾಧ್ಯಾಸಾಧ್ಯತೆಯ ನಡುವೆಯೂ ಮಹಾತ್ಮ ಗಾಂಧಿಯವರು ಅಧ್ಯಕ್ಷ ಹುದ್ದೆಯನ್ನು ಮುಕ್ತವಾಗಿಟ್ಟರು. ಒಂದುಕಡೆ, ನೇತಾಜಿ ಸುಭಾಶ್ ಚಂದ್ರ ಬೋಸ್‍ರು ಸ್ಪರ್ಧೆಗೆ ಇಳಿದರೆ ಇನ್ನೊಂದು ಕಡೆ ಸ್ವತಃ ಗಾಂಧೀಜಿಯವರೇ ಪಟ್ಟಾಭಿ ಸೀತಾರಾಮಯ್ಯರನ್ನು ಕಣಕ್ಕಿಳಿಸಿದರು. ಗಾಂಧೀಜಿಯವರ ಪ್ರಭಾವ, ಅವರ ವ್ಯಕ್ತಿತ್ವಕ್ಕೆ ಇದ್ದ ಖದರು, ರಾಷ್ಟ್ರವ್ಯಾಪಿಯಾಗಿ ಅವರಿಗಿದ್ದ ಜನಮನ್ನಣೆಯನ್ನು ಪರಿಗಣಿಸಿದರೆ ಪಟ್ಟಾಭಿ ಸೀತಾರಾಮಯ್ಯರ ಗೆಲುವು ಶತಸಿದ್ಧವಾಗಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. ನೇತಾಜಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೊಂದು ಅಭೂತಪೂರ್ವ ಬೆಳವಣಿಗೆ. ಚುನಾವಣೆಯ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಗಾಂಧೀಜಿ ತೋರಿದ ಧೈರ್ಯ ಮತ್ತು ಗಾಂಧೀಜಿ ಸೂಚಿಸಿದ ಅಭ್ಯರ್ಥಿಯನ್ನು ತಿರಸ್ಕರಿಸಿ ಯುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ ಕಾಂಗ್ರೆಸಿಗರು- ಇವೆರಡೂ ಮಹತ್ವಪೂರ್ಣವಾದುದು. ಇನ್ನೊಂದು, ಚಕ್ರಯ್ಯ.
1947 ಮೇ 31ರಂದು ಮಹಾತ್ಮಾ ಗಾಂಧೀಜಿಯವರು ಚಕ್ರಯ್ಯನ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಚಕ್ರಯ್ಯ ಕಾಂಗ್ರೆಸ್‍ನ ಯುವ ಮುಂದಾಳು. ಆಂಧ್ರಪ್ರದೇಶದ ದಲಿತ ಸಮು ದಾಯದ ವ್ಯಕ್ತಿ. ಧೈರ್ಯ, ಹೊಸ ಚಿಂತನೆ, ಖಚಿತ ನಿಲುವು ಗಳುಳ್ಳ ವ್ಯಕ್ತಿಯೆಂಬ ನೆಲೆಯಲ್ಲಿ ಗಾಂಧೀಜಿ ಅವರನ್ನು ಗುರುತಿಸಿದ್ದರು. ಆದರೆ, ಅವರ ಆರೋಗ್ಯ ಹದಗೆಡುತ್ತಾ ಇತ್ತು. ಗಾಂಧೀಜಿಯವರಿಗೂ ಅವರ ಆರೋಗ್ಯದ ಬಗ್ಗೆ ಆತಂಕವಿತ್ತು. ಅವರು ಹೇಳಿದ್ದು ಹೀಗೆ,
“ಭಾರತವು ತನ್ನ ಪ್ರಥಮ ರಾಷ್ಟ್ರಾಧ್ಯP್ಷÀನನ್ನು ಚುನಾಯಿಸುವ ಸಂದರ್ಭ ಹತ್ತಿರ ಬರುತ್ತಿದೆ. ಒಂದುವೇಳೆ, ಆ ಸಂದರ್ಭದಲ್ಲಿ ಚಕ್ರಯ್ಯ ಜೀವಂತವಾಗಿದ್ದರೆ ರಾಷ್ಟ್ರಾಧ್ಯP್ಷÀ ಹುz್ದÉಗೆ ನಾನು ಚಕ್ರಯ್ಯನ ಹೆಸರನ್ನು ಸೂಚಿಸುವೆ.”
ಈಗಿನ ಕಾಂಗ್ರೆಸ್‍ನ ಮುಂದೆ ಈಗ ಎರಡು ಆಯ್ಕೆಗಳಿವೆ.
1. ಚಕ್ರಯ್ಯನಂಥ ವ್ಯಕ್ತಿಯನ್ನು ಗುರುತಿಸುವುದು ಮತ್ತು ಅಧ್ಯಕ್ಷ  ಹುದ್ದೆಯನ್ನು ವಹಿಸಿಕೊಡುವುದು.
2. 1938-39ರಲ್ಲಿ ಮಾಡಿದಂತೆ ಅಧ್ಯP್ಷÀ ಹುz್ದÉಯನ್ನು ಚುನಾವಣೆಯ ಮೂಲಕ ತುಂಬಿಕೊಳ್ಳುವುದು.
2019 ಜುಲೈ 4ರಂದು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ  ಹುದ್ದೆಗೆ ಅಧಿಕೃತವಾಗಿ ರಾಜೀನಾಮೆಯನ್ನು ನೀಡಿ ದರು. ಕಾಂಗ್ರೆಸ್ ಪಕ್ಷದ ಮಟ್ಟಿಗೆ ಇದೊಂದು ಐತಿಹಾಸಿಕ ದಿನಾಂಕ. ಕಾಂಗ್ರೆಸ್ ಪಕ್ಷದ ಮೇಲೆ ನೆಹರೂ-ಗಾಂಧಿಯನ್ ಕುಟುಂಬದ 4 ತಲೆಮಾರುಗಳ ಆಧಿಪತ್ಯ ಈ ಮೂಲಕ ತಾರ್ಕಿಕ ಅಂತ್ಯವನ್ನು ಕಂಡಂತಾಗಿದೆ. ನೆಹರೂ, ಇಂದಿರಾ, ರಾಜೀವ್ ಮತ್ತು ರಾಹುಲ್- ಈ ನಾಲ್ವರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ, ಚಿಂತಿಸಿದ್ದಾರೆ, ತಂತ್ರಗಾರಿಕೆ ಹೆಣೆದಿದ್ದಾರೆ, ಮುಂದೆ ನಿಂತು ಹೋರಾಡಿದ್ದಾರೆ, ನಿದ್ದೆ  ಕಳೆದಿದ್ದಾರೆ ಮತ್ತು ಜೀವವನ್ನೂ ಕೊಟ್ಟಿದ್ದಾರೆ. ಕುಟುಂಬ ರಾಜಕಾರಣ ಎಂಬ ವ್ಯಂಗ್ಯನುಡಿಯ ಆಚೆಗೆ ಕಾಂಗ್ರೆಸ್ ಪಕ್ಷವನ್ನು ಪ್ರಬಲ ರಾಜಕೀಯ ಪP್ಷÀವಾಗಿ ಕಟ್ಟುವಲ್ಲಿ ಮತ್ತು ಅನೇಕಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಅವರ ಪಾತ್ರ ಮತ್ತು ಶ್ರಮ ಬಹಳ ದೊಡ್ಡದು. ಬಹುಶಃ, ಪಕ್ಷದ ಅಧ್ಯಕ್ಷನಾಗಿದ್ದುಕೊಂಡು ಅತ್ಯಂತ ಹೆಚ್ಚು ಸವಾಲು ಗಳನ್ನು ಎದುರಿಸಿದ್ದು ರಾಹುಲ್ ಗಾಂಧಿ. ಇಂದಿರಾ ಗಾಂಧಿಯವರಿಗೆ ತಂದೆ ನೆಹರೂರವರ ನೆರಳಿನಾಶ್ರಯವಿತ್ತು. ಪ್ರಧಾನಿಯಾಗಿ ನೆಹರೂ ಗಳಿಸಿರುವ ಜನಮನ್ನಣೆ, ಅವರಿಗಿದ್ದ ಗೌರವ, ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಸಹಜವಾಗಿಯೇ ದಕ್ಕಿದ್ದ ಜನ ಪ್ರಿಯತೆಗಳು ಇಂದಿರಾರನ್ನೂ ಕಾಪಾಡಿದುವು. ನೆಹರೂರಿಂದ ಪಡೆದ ರಾಜಕೀಯ ಪಟ್ಟಗಳೂ ಅವರ ಪ್ರಯೋಜನಕ್ಕೆ ಬಂದಿದ್ದುವು. ಇಂದಿರಾರಿಗೆ ಹೋಲಿಸಿದರೆ ರಾಜೀವ್ ಅನನುಭವಿ. ಇಂದಿರೆಯ ಮಗ ಅನ್ನುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯ ನಾಯಕನಾಗಿ ಗುರುತಿಸಿಕೊಳ್ಳುವುದಕ್ಕೆ ವಿಶೇಷ ಅರ್ಹತೆಯೇನೂ ಅವರಿಗಿರಲಿಲ್ಲ. ಆದರೆ, ಇಂದಿರಾ ಗಾಂಧಿಯವರ ಹತ್ಯೆ ಮತ್ತು ಆ ಹತ್ಯೆಯು ಈ ದೇಶದಾದ್ಯಂತ ಸೃಷ್ಟಿಸಿದ ಅನು ಕಂಪದ ವಾತಾವರಣವು ರಾಜೀವ್‍ರನ್ನು ಸುಲಭದಲ್ಲಿ ನಾಯಕ ನನ್ನಾಗಿ ರೂಪಿಸಿತು. ದೇಶವು ಅವರನ್ನು ಪ್ರಧಾನಿಯನ್ನಾಗಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕನಾಗಿ ಒಪ್ಪಿಕೊಂಡಿತು. ಆದರೆ, ರಾಹುಲ್ ಗಾಂಧಿಯ ಮಟ್ಟಿಗೆ ಈ ಯಾವ ಅನುಕೂಲತೆಗಳೂ ಇಲ್ಲ. ನೆಹರೂ, ಇಂದಿರಾ, ರಾಜೀವ್‍ರ ಕಾಲದ ರಾಜಕೀಯ ಸ್ಥಿತಿ-ಗತಿಗೆ ಹೋಲಿಸಿದರೆ ರಾಹುಲ್ ಕಾಲದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳು ಅತ್ಯಂತ ಭಿನ್ನ. ಬಿಜೆಪಿ ಅತ್ಯಂತ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದು ನಿಂತ ಕಾಲ. ನರೇಂದ್ರ ಮೋದಿ ಯಂಥ ಮಾತಿನ ಮಲ್ಲ ಅವರ ಎದುರಿದ್ದರು. ಇನ್ನೊಂದು ಕಡೆ, ಸೈದ್ಧಾಂತಿಕವಾಗಿ ಗಟ್ಟಿತನವಿಲ್ಲದ ಮತ್ತು ವೈಚಾರಿಕವಾಗಿ ದಿವಾಳಿಯಾದ ಜನರ ಗುಂಪಾಗಿ ಕಾಂಗ್ರೆಸ್ ಪಕ್ಷ ಪರಿವರ್ತಿತವಾಗಿತ್ತು. ಆದ್ದರಿಂದ ನೆಹರೂ, ಇಂದಿರಾ, ರಾಜೀವ್‍ರ ಕಾಲದ ಕಾಂಗ್ರೆಸ್‍ಗೆ ರಾಹುಲ್ ಕಾಲದ ಕಾಂಗ್ರೆಸನ್ನು ಹೋಲಿಸುವುದು ಸೂಕ್ತವಾಗುವುದಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪP್ಷÀದ ಮುಂಚೂಣಿಗೆ ಬರುವಾಗ ಕಾಂಗ್ರೆಸ್ ಎಷ್ಟು ಸೈದ್ಧಾಂತಿಕ ಅಧಃ ಪತನಕ್ಕೆ ತಲುಪಿತ್ತೆಂದರೆ, ಅದರ ಹೆಸರನ್ನು ಬಿಜೆಪಿಯೆಂದು ಬದಲಿಸಿದರೆ ದೊಡ್ಡ ವ್ಯತ್ಯಾಸ ಆಗಲಾರದು ಎಂದು ಹೇಳುವಂತಾಗಿತ್ತು. ಈಗಂತೂ ಈ ‘ಸೈದ್ಧಾಂತಿಕ ಭ್ರಷ್ಟಾಚಾರ’ದ ಸ್ಥಿತಿ ತೀವ್ರವಾಗಿಯೇ ಇದೆ. ಕಾಂಗ್ರೆಸ್‍ಗೂ ಬಿಜೆಪಿಗೂ ನಡುವೆ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರ ಸುಲಭವಿತ್ತು. ಬಿಜೆಪಿ ನಾಯಕರ ಭಾಷೆ ಕಾಂಗ್ರೆಸ್ ನಾಯಕರದ್ದಾಗಿರಲಿಲ್ಲ. ದೇಶ, ಭಾಷೆ, ಧರ್ಮ, ಜಾತಿ, ದೇಶಪ್ರೇಮ, ಧರ್ಮಪ್ರೇಮ ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ಬಿಜೆಪಿಯ ನಿಲುವಿಗೂ ಕಾಂಗ್ರೆಸ್‍ನ ನಿಲುವಿಗೂ ತಕ್ಷಣಕ್ಕೆ ಗುರು ತಿಸಿ ಬಿಡುವಷ್ಟು ವ್ಯತ್ಯಾಸಗಳಿದ್ದುವು. ಕೋಮುವಾದಕ್ಕೆ ಬಿಜೆಪಿ ಕೊಡುವ ಅರ್ಥ ಬೇರೆ, ಕಾಂಗ್ರೆಸ್ ಕೊಡುವ ಅರ್ಥ ಬೇರೆ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಖ್ ಸಹಿತ ಎಲ್ಲ ಧರ್ಮೀಯರ ಭಾರತೀಯತೆಯ ಬಗ್ಗೆ ಮತ್ತು ಅವರ ಐಡೆಂಟಿಟಿಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಎರಡು ರೀತಿಯ ಅಭಿಪ್ರಾಯ ಗಳನ್ನು ಹೊಂದಿದ್ದವು. ಆದರೆ ರಾಹುಲ್ ಕೈಗೆ ಕಾಂಗ್ರೆಸ್ ಸಿಗುವಾಗ ಅಥವಾ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಪ್ರವೇಶವಾಗುವಾಗ ಬಹುತೇಕ ಕಾಂಗ್ರೆಸ್ ಈ ಅನನ್ಯತೆಯನ್ನು ಕಳೆದುಕೊಂಡಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಜನಪ್ರತಿನಿಧಿಯೊಬ್ಬ ಯಾವ ಅಂಜಿಕೆ ಮತ್ತು ಸೈದ್ಧಾಂತಿಕ ತಾಕಲಾಟವಿಲ್ಲದೇ ಬಿಜೆಪಿ ಸೇರ ಬಹುದಾದ ವಾತಾವರಣ ನಿರ್ಮಾಣವಾಗಿತ್ತು. ರಾಹುಲ್ ನಿರ್ಗ ಮನದ ಈ ವೇಳೆಯಲ್ಲಂತೂ ಇದು ಉಚ್ಛ್ರಾಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೆಸರಿನಲ್ಲಿ ಬೇರೆ ಬೇರೆಯಾಗಿರುವ ಮತ್ತು ವೈಚಾರಿಕವಾಗಿ ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುವ ದಾರುಣ ಸ್ಥಿತಿಗೆ ತಲುಪಿಬಿಟ್ಟಿರುವಂತೆ ಕಾಣುತ್ತಿದೆ.
ಯಾವುದೇ ಪಕ್ಷದ ಹುಟ್ಟಿಗೆ ಮೂಲ ಆಧಾರ- ಸಿದ್ಧಾಂತ. ಗಾಂಧಿಯನ್ ಥಾಟ್ಸ್, ಸಾವರ್ಕರ್ ಥಾಟ್ಸ್, ಕಾರ್ಲ್‍ಮಾರ್ಕ್ಸ್  ಥಾಟ್ಸ್- ಇತ್ಯಾದಿಗಳು ಸಮಾನ ಅಲ್ಲ, ಏಕವೂ ಅಲ್ಲ. ಗಾಂಧಿಯನ್ ಥಾಟ್ಸ್ ನೊಂದಿಗೆ ಸಾವರ್ಕರ್ ಥಾಟ್ಸ್ ಹೊಂದಿಕೊಳ್ಳುವುದಿಲ್ಲ. ಸಾವರ್ಕರ್ ಥಾಟ್ಸ್ ಅನ್ನು ಕಾರ್ಲ್‍ಮಾರ್ಕ್ಸ್  ಥಾಟ್ಸ್ ಒಪ್ಪುವುದಿಲ್ಲ. ಕಾಂಗ್ರೆಸ್‍ನ ಹುಟ್ಟಿಗೂ ಬಿಜೆಪಿಯ ಹುಟ್ಟಿಗೂ ಇರುವ ಕಾರಣಗಳು ಏನೆಂದರೆ, ಗಾಂಧಿ ಮತ್ತು ಸಾವರ್ಕರ್. ಇವರಿಬ್ಬರೂ ಎರಡು ಬಿಂದುಗಳು. ಕಾಂಗ್ರೆಸ್ ಈ ದೇಶದ ವೈವಿಧ್ಯ ಸಂಸ್ಕೃತಿಯನ್ನು ಮತ್ತು ಧಾರ್ಮಿಕ ಐಡೆಂಟಿಟಿಯನ್ನು ಗೌರವಿಸಿ ಕಾಪಾಡುವ ಗುಣದ ನಾಮಪದವಾದರೆ, ಬಿಜೆಪಿ ಬಹುತೇಕ ಈ ಗುಣದ ವಿರುದ್ಧ ಪದವಾಗಿ ಆರಂಭ ಕಾಲದಿಂದಲೂ ಗುರುತಿಸಿಕೊಳ್ಳುತ್ತಲೇ ಬಂದಿದೆ. ಗಾಂಧೀಜಿಗೆ ಗೋಡ್ಸೆ ಗುಂಡಿಕ್ಕುವುದಕ್ಕೆ ಅವರ ಬರಿಮೈ ಕಾರಣವಾಗಿರಲಿಲ್ಲ. ಸೈದ್ಧಾಂತಿಕ ವ್ಯತ್ಯಾಸದ ಹೊರತಾಗಿ 45 ಕೆಜಿ ತೂಗುವ ಆ ಫಕೀರನನ್ನು ಹತ್ಯೆಗೈಯುವುದಕ್ಕೆ ಗೋಡ್ಸೆಗೆ ಇನ್ನಾವ ಕಾರಣವೂ ಇರಲಿಲ್ಲ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತ ಮತ್ತು ಗೋಡ್ಸೆಯ ಸಿದ್ಧಾಂತದ ನಡುವೆ ಎಷ್ಟು ತೀವ್ರವಾದ ವ್ಯತ್ಯಾಸ ಇದೆ ಅನ್ನುವುದನ್ನು ಆ ಗುಂಡು ಸೂಚಿಸುತ್ತದೆ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತವು ಗುಂಡಿಕ್ಕಿ ಹತ್ಯೆಗೈಯ ಬೇಕಾದುದು ಎಂಬುದಾಗಿ ಗೋಡ್ಸೆ ಪ್ರತಿನಿಧಿಸುವ ಸಿದ್ಧಾಂತವು ಭಾವಿಸುತ್ತದೆ. ಹೀಗಿರುವಾಗ, ಗಾಂಧೀಜಿ ಪ್ರಣೀತ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾದವ ಆ ಬಳಿಕ ಯಾವ ಮುಜುಗರವೂ ಇಲ್ಲದೇ ಗೋಡ್ಸೆಯನ್ನು ಮೆಚ್ಚಿ ಕೊಳ್ಳುವ ಅಥವಾ ಸಮರ್ಥಿಸಿಕೊಳ್ಳುವ ಪಕ್ಷವನ್ನು ಸೇರಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಹಾಗೆ ಸೇರಿಕೊಂಡವರನ್ನು ಏನೆಂದು ಕರೆಯ ಬಹುದು? ಸಿದ್ಧಾಂತ ಬದ್ಧತೆಯೇ ಪಕ್ಷ ಸೇರ್ಪಡೆಗೆ ಮತ್ತು ಚುನಾವಣಾ ಅಭ್ಯರ್ಥಿತನಕ್ಕೆ ಅರ್ಹತೆಯಾಗಿ ಮಾರ್ಪಡುವುದು ಯಾವಾಗ? ಅಂದಹಾಗೆ,
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಚಕ್ರಯ್ಯನಂಥ ಸಿದ್ಧಾಂತಬದ್ಧ ವ್ಯಕ್ತಿಯನ್ನು ಗುರುತಿಸುವುದು ಮತ್ತು ಧೈರ್ಯದಿಂದ ಘೋಷಿಸುವುದಕ್ಕೆ ಗಾಂಧೀಜಿಯಂಥ ಪ್ರಭಾವಿ ವ್ಯಕ್ತಿ ಈಗ ಕಾಂಗ್ರೆಸ್‍ನಲ್ಲಿಲ್ಲ. ಆದ್ದರಿಂದ, ಸುಭಾಷ್ ಚಂದ್ರ ಬೋಸ್‍ರ ಅನಿರೀಕ್ಷಿತ ಗೆಲುವಿಗೆ ಸಾಕ್ಷಿಯಾದ ಮುಕ್ತ ಚುನಾವಣಾ ವಿಧಾನವನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಬೇಕು. ಸಿದ್ಧಾಂತಕ್ಕೆ ಬದ್ಧವಾದ ಮತ್ತು ಯಾವ ಸಂದರ್ಭದಲ್ಲೂ ಸಿದ್ಧಾಂತವನ್ನು ಎತ್ತಿ ಹಿಡಿಯುವ ವ್ಯಕ್ತಿ ಕಾಂಗ್ರೆಸ್‍ನ ಅಧ್ಯP್ಷÀರಾಗಲಿ. ಆ ಮೂಲಕ ಶತಮಾನ ಹಳೆಯದಾದ ಪಕ್ಷವನ್ನು ಸಾವಿನಿಂದ ರಕ್ಷಿಸಲಿ.