Tuesday, December 9, 2014

ಅಂಥ ಮಗಳು ಹೇಳದೆ ಕೇಳದೆ ಹೊರಟು ಹೋಗುವುದೆಂದರೆ..

    ಹುಡುಗಿ ತನ್ನ ಕೋಣೆಯಲ್ಲಿ ಅತ್ತಿತ್ತ ನಡೆಯುತ್ತಿರುತ್ತಾಳೆ. ಮುಖದಲ್ಲಿ ಆತಂಕ, ಗಲಿಬಿಲಿ. ಮನೆಯಲ್ಲಿ ಮದುವೆಯ ತಯಾರಿ ನಡೆಯುತ್ತಿರುತ್ತದೆ. ಈ ಮಧ್ಯೆ ಮೊಬೈಲ್ ರಿಂಗುಣಿಸುತ್ತದೆ. “ಹಲೋ ರವಿ, ನಂಗೆ ಭಯವಾಗ್ತಿದೆ..” ಅನ್ನುತ್ತಾಳೆ. ಆತ ಧೈರ್ಯ ತುಂಬುತ್ತಾನೆ. “ನೀನು ಹೊರಟು ಬಾ. ಹಗಲು ತಾನೆ, ಯಾರೂ ಅನುಮಾನ ಪಡಲ್ಲ. ರೈಲ್ವೆ ಸ್ಟೇಷನ್‍ನಲ್ಲಿ ನಾನು ಕಾಯ್ತಾ ಇದ್ದೇನೆ. 3 ಗಂಟೆಗೆ ತಲುಪಬೇಕು. ಡ್ರೆಸ್ಸು, ಬ್ಯಾಗು ಎಂದೆಲ್ಲಾ ಆತಂಕ ಪಡಬೇಡ. ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ. ಬರಿಗೈಲಿ ಬಂದರೆ ಸಾಕು..' ಅನ್ನುತ್ತಾನೆ. ಹುಡುಗಿ ಒಪ್ಪಿಕೊಳ್ಳುತ್ತಾಳೆ. ಡ್ರೆಸ್ ಖರೀದಿಸುವ ನೆಪದಲ್ಲಿ ಮನೆಯಿಂದ ಹೊರಟು ರಿಕ್ಷಾದಲ್ಲಿ ಕೂರುತ್ತಾಳೆ. ಒಳ ದಾರಿಯಾಗಿ ರೈಲ್ವೆ ಸ್ಟೇಷನ್‍ಗೆ ಹೋಗುವಂತೆ ವಿನಂತಿಸುತ್ತಾಳೆ. ಮಾಮೂಲಿ ದಾರಿಯಾಗಿ ಹೋದರೆ ಪರಿಚಿತರು ಗುರುತು ಹಚ್ಚಿಯಾರೆಂಬ ಭಯ. ಒಳ ರಸ್ತೆಯು ಇಕ್ಕಟ್ಟಾಗಿದ್ದು ಹೋಗಲು ಯೋಗ್ಯವಾಗಿಲ್ಲವೆಂದು ರಿಕ್ಷಾ ಚಾಲಕ ಆರಂಭದಲ್ಲಿ ತಕರಾರು ತೆಗೆದರೂ ಹೆಚ್ಚುವರಿಯಾಗಿ ಹಣ ಪಾವತಿಸಬೇಕೆಂಬ ಒಪ್ಪಂದದೊಂದಿಗೆ ರಿಕ್ಷಾ ಚಲಿಸುತ್ತದೆ. ಆದರೆ ತುಸು ದೂರ ಸಾಗುತ್ತಲೇ ರಿಕ್ಷಾ ಕೈ ಕೊಡುತ್ತದೆ. ಎಷ್ಟು ಪ್ರಯತ್ನಿಸಿದರೂ ರಿಕ್ಷಾ ಚಲಿಸುವುದಿಲ್ಲ. ಇಕ್ಕಟ್ಟಾದ ರಸ್ತೆ, ವಾಹನಗಳ ಓಡಾಟವೂ ಕಡಿಮೆ.. ಇಂಥ ಸ್ಥಿತಿಯಲ್ಲಿ ಏನು ಮಾಡುವುದೆಂದು ಆಲೋಚಿಸುತ್ತಿದ್ದಾಗ ಒಂದು ಕಾರು ಆ ದಾರಿಯಾಗಿ ಬರುತ್ತದೆ. ಹುಡುಗಿಯನ್ನು ರೈಲ್ವೇ ಸ್ಟೇಷನ್‍ಗೆ ತಲುಪಿಸುವಂತೆ ರಿಕ್ಷಾ ಚಾಲಕ ಕಾರು ಚಾಲಕನಲ್ಲಿ ವಿನಂತಿಸುತ್ತಾನೆ. ಆತ ಒಪ್ಪಿಕೊಳ್ಳುತ್ತಾನೆ. ಹೀಗೆ ಹೋಗುತ್ತಾ ಕಾರು ಚಾಲಕ ಹುಡುಗಿಯನ್ನು ಮಾತಿಗೆಳೆಯುತ್ತಾನೆ. ಎಲ್ಲಿಗೆ ಎಂದು ಪ್ರಶ್ನಿಸುತ್ತಾನೆ. ಆಕೆ ರೈಲ್ವೇ ಸ್ಟೇಷನ್‍ಗೆ ಅನ್ನುತ್ತಾಳೆ. ಅದು ಗೊತ್ತಿದೆ, ಅಲ್ಲಿಂದ ಎಲ್ಲಿಗೆ ಎಂದು ಮರು ಪ್ರಶ್ನಿಸುತ್ತಾನೆ. ಹುಡುಗಿ ಪ್ರತಿಕ್ರಿಯಿಸದೇ ಕಾರಿನಿಂದ ಹೊರಗೆ ದಿಟ್ಟಿಸುತ್ತಾಳೆ. ‘ಏನೋ ಟೆನ್ಶನ್‍ನಲ್ಲಿ ಇರುವ ಹಾಗಿದೆ..' ಎಂದು ಮತ್ತೆ ಮಾತಿಗೆ ಎಳೆಯುತ್ತಾನೆ. ‘ಏಯ್ ಅಂಥದ್ದೇನಿಲ್ಲ..' ಎಂದು ಆಕೆ ಸಹಜತೆಯನ್ನು ತೋರ್ಪಡಿಸಲು ಯತ್ನಿಸುತ್ತಾಳೆ. ಅದೇ ವೇಳೆ ರವಿಯ ಕಾಲ್ ಬರುತ್ತದೆ. ‘ಹಲೋ ರವಿ, ಹಲೋ ರವಿ’ ಎಂದು ಹೇಳುತ್ತಾಳೆ. ಮತ್ತೆ ಮತ್ತೆ ಪುನರಾವರ್ತಿಸುತ್ತಾಳೆ. ಒಳರಸ್ತೆಯಾದುದರಿಂದ ಸಂಪರ್ಕದಲ್ಲಿ ತೊಂದರೆ ಕಾಣಿಸಿಕೊಂಡು ಕರೆ ಸ್ಥಗಿತಗೊಳ್ಳುತ್ತದೆ. ಈ ಮಧ್ಯೆ ಆ ಹುಡುಗಿಯ ಮನಸ್ಥಿತಿಯ ಕುರಿತು ಕಾರು ಚಾಲಕ ಆಲೋಚಿಸುತ್ತಿರುತ್ತಾನೆ. ಮನೆಯಿಂದ ತಪ್ಪಿಸಿಕೊಂಡು ಬಂದಿರಬೇಕು ಎಂದು ಅನುಮಾನಿಸುತ್ತಾನೆ. ಆದರೂ ಹುಡುಗಿಯಲ್ಲಿ ಬ್ಯಾಗು ಇಲ್ಲದೇ ಇರುವುದು ಮತ್ತು ಸೀದಾ-ಸಾದಾ ಪೇಟೆಗೆ ಹೋಗುವವರಂತೆ ಕಾಣಿಸುತ್ತಿರುವುದು ಆತನಲ್ಲೂ ಗೊಂದಲ ಮೂಡಿಸುತ್ತದೆ. ಆದರೂ ಆತ ಪ್ರಶ್ನೆಯೊಂದನ್ನು ಎಸೆದು ಬಿಡುತ್ತಾನೆ.
   "ಸಾಮಾನ್ಯವಾಗಿ ಮನೆಯಿಂದ ಓಡಿ ಹೋಗುವವರಲ್ಲಿ ಬ್ಯಾಗು ಇರುತ್ತದಲ್ಲ. ನಿನ್ನಲ್ಲಿ ಅದು ಕಾಣಿಸುತ್ತಿಲ್ಲ. ಏನಾಯ್ತು?"
   ಆಕೆ: ನಾನು ಓಡಿ ಹೋಗುತ್ತಿರುವುದಾಗಿ ನಿಂಗೆ ಯಾರು ಹೇಳಿದ್ದು?
   ಆತ: ನೀನೇ
   ಆಕೆ: ನಾನಾ..
   ಆತ: ಹಾಂ, ನಿನ್ನ ಮುಖವೇ ಅದನ್ನು ಹೇಳುತ್ತದೆ.
ಹೀಗೆ ಮಾತುಕತೆಗಳು ಸಾಗುತ್ತವೆ. ಹೇಳಲೋ ಬೇಡವೋ ಎಂಬ ಗೊಂದಲ ಹುಡುಗಿಯಲ್ಲಿ. ಆತ ಒತ್ತಾಯಪಡಿಸುತ್ತಾನೆ. ಇಲ್ಲಿ ನಾವಿಬ್ಬರೂ ಅಪರಿಚಿತರು ಅನ್ನುತ್ತಾನೆ. ನೀನು ಈ ಕಾರಿನಿಂದ ಇಳಿದು ಹೋದ ಬಳಿಕ ನೀನಾರೋ ನಾನಾರೋ? ನನ್ನಲ್ಲಿ ನೀನು ವಿಷಯ ಹೇಳುವುದರಿಂದ ನಮಗಲ್ಲದೇ ಇನ್ನಾರಿಗೂ ಗೊತ್ತಾಗಲ್ಲ.. ಎಂದೆಲ್ಲಾ ನಂಬಿಸುತ್ತಾನೆ. ಅರ್ಧದಲ್ಲೇ ಕಾರು ನಿಲ್ಲಿಸುತ್ತಾ, ‘ಇಷ್ಟವಿಲ್ಲದಿದ್ದರೆ ಇಳಿದು ಹೋಗಬಹುದು' ಎಂದೂ ಹೇಳುತ್ತಾನೆ. ಕಾರು ಚಲಿಸುತ್ತದೆ. ಹುಡುಗಿ ವೃತ್ತಾಂತ ಹೇಳತೊಡಗುತ್ತಾಳೆ. ನೀವು ಅನುಮಾನಿಸಿದ್ದೇ ನಿಜ ಅನ್ನುತ್ತಾಳೆ. ಕಾಲೇಜು ಸಹಪಾಠಿಯಾದ ರವಿಯನ್ನು ತಾನು ಪ್ರೀತಿಸುತ್ತಿದ್ದು, ಮನೆಯವರು ಈ ಪ್ರೀತಿಗೆ ಒಪ್ಪಿಗೆ ಸೂಚಿಸಲಿಲ್ಲ, ಬೇರೆಯೇ ಮದುವೆ ನಿಶ್ಚಯಿಸಿದ್ರು. ಆದ್ದರಿಂದ ಹೊರಟು ಬಂದೆ ಅನ್ನುತ್ತಾಳೆ. ಆತ ಆಕೆಯ ನಿರ್ಧಾರವನ್ನು ಒಂದು ಹಂತದಲ್ಲಿ ಸಮರ್ಥಿಸುತ್ತಾನೆ. ಮದುವೆ ನಿಶ್ಚಯವಾದ ಕೂಡಲೇ ಹೊರಟು ಬಂದದ್ದು ಒಳ್ಳೆಯದಾಯಿತು. ಈಗಿನ ಕೆಲವು ಪ್ರಕರಣಗಳಂತೂ ದಿಗಿಲು ಬಡಿಸುವಂತಿರುತ್ತದೆ ಅನ್ನುತ್ತಾನೆ. ಮದುವೆ ಮುನ್ನಾದಿನ ಅಥವಾ ರಾತ್ರಿ ಅಥವಾ ಮದುವೆ ಮಂಟಪದಿಂದಲೇ ಹುಡುಗಿಯರು ಓಡಿ ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥ ಸ್ಥಿತಿಯಲ್ಲಿ ನಿಶ್ಚಯದ ಸಂದರ್ಭದಲ್ಲೇ ಹೊರಟು ಬಂದದ್ದು ಅದಕ್ಕಿಂತ ಉತ್ತಮ ಅನ್ನುತ್ತಾನೆ. ಹುಡುಗಿ ಗಲಿಬಿಲಿಯಿಂದ ನೋಡುತ್ತಾಳೆ. ತಗ್ಗಿದ ದನಿಯಲ್ಲಿ, “ನನಗೆ ನಾಳೇನೇ ಮದುವೆ“ ಅನ್ನುತ್ತಾಳೆ. ತುಸು ಹೊತ್ತು ಮೌನ. ಬಳಿಕ ಆತನೇ ಮಾತು ಪ್ರಾರಂಭಿಸುತ್ತಾನೆ.
   "ಇಲ್ಲಿಂದ ಹೋದ ಬಳಿಕ ಏನು ಮಾಡುತ್ತೀ?"
   ಆಕೆ: ರವಿಗೆ ಪಾಲಕ್ಕಾಡಿನಲ್ಲಿ ಓರ್ವ ಗೆಳೆಯನಿದ್ದಾನೆ. ಮದುವೆ ರಿಜಿಸ್ಟರ್‍ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಆತ ಮಾಡಿಟ್ಟಿದ್ದಾನೆ. ರವಿಗೆ ಒಂದು ಉದ್ಯೋಗ ಸಿಗುವವರೆಗೆ ಆತನ ಮನೆಯಲ್ಲೇ ತಂಗುವ ಯೋಜನೆ ಹಾಕಿ ಕೊಂಡಿದ್ದೇವೆ.
   ಆತ: ನಿನಗೆ ನಿನ್ನ ಪ್ರಿಯಕರನ ಉದ್ಯೋಗದ ಬಗ್ಗೆ, ನಿನ್ನ ನಾಳೆಯ ಬಗ್ಗೆ ಕಾಳಜಿ ಇದೆ. ಭವಿಷ್ಯದ ಕುರಿತಂತೆ ಯೋಜನೆಯೂ ಇದೆ. ಆದರೆ ನಾಳೆಯ ದಿನ ನಿನ್ನ ಮನೆಯವರು ಎದುರಿಸುವ ಸಮಸ್ಯೆಗಳ ಕುರಿತಂತೆ ನೀನು ಯೋಚಿಸಿರುವೆಯಾ? ನಿನ್ನ ಹೆತ್ತವರ ಮುಂದೆ ನಿನ್ನ ಕುಟುಂಬದವರು ಎಸೆಯುವ ಪ್ರಶ್ನೆಗಳು, ಭತ್ರ್ಸನೆಗಳು ಏನಾಗಿರಬಹುದು ಎಂಬ ಬಗ್ಗೆ ಆಲೋಚಿಸಿರುವಿಯಾ?
   ಹುಡುಗಿ ಮೌನ ವಹಿಸುತ್ತಾಳೆ.
   ಆತ: ಮನೆಯಲ್ಲಿ ಯಾರೆಲ್ಲ ಇದ್ದಾರೆ?
   ಆಕೆ: ತಂದೆ-ತಾಯಿ, ತಂಗಿ, ತಮ್ಮ..
   ಆತ: ಇವತ್ತು ಸಂಜೆಯ ವರೆಗೆ ನಿನ್ನ ಮನೆಯವರು ನಿನ್ನನ್ನು ಹುಡುಕದೆ ಇರಬಹುದು. ಆದರೆ ಇದು ಹೆಚ್ಚು ಹೊತ್ತು ನಡೆಯಲ್ಲ. ಆ ಬಳಿಕ ನಿನ್ನ ಹುಡುಕಾಟ ನಡೆದೇ ನಡೆಯುತ್ತದೆ. ನೀನು ಓಡಿ ಹೋಗಿರುವಿ ಎಂಬ ಸುದ್ದಿ ನೆರೆಕರೆಗೆ, ಊರಿನವರಿಗೆ ನಿಧಾನವಾಗಿ ಗೊತ್ತಾಗುತ್ತದೆ. ಬಳಿಕ ನಾವು ಸಿನಿಮಾಗಳಲ್ಲಿ, ಪತ್ರಿಕೆಗಳಲ್ಲಿ ಓದಿರುತ್ತೇವಲ್ಲ - ಮದುವೆ ಮಂಟಪದಿಂದ ವಧು ಓಡಿ ಹೋದಳು, ಅವಮಾನ ಸಹಿಸಲಾರದೇ ತಂದೆ ಹೃದಯಾಘಾತದಿಂದ ನಿಧನರಾದರು, ತಾಯಿ ಆತ್ಮಹತ್ಯೆ ಮಾಡಿಕೊಂಡಳು ಎಂದೆಲ್ಲ.. ಅವೆಲ್ಲ ನಡೆಯಬಹುದು. ಬೇಡ ಬಿಡು- ನಿನ್ನ ಹೆತ್ತವರು, ಸಂಬಂಧಿಕರು ಅತ್ತ ಇರಲಿ, ತನ್ನ ಪತ್ನಿಯಾಗುವವಳ ಬಗ್ಗೆ ದೊಡ್ಡದೊಂದು ಕನಸು ಕಟ್ಟಿಕೊಂಡು ಅದಕ್ಕಾಗಿ ತಯಾರಿ ನಡೆಸುತ್ತಿರುವ ಮದುಮಗ ಇದ್ದಾನಲ್ಲ. ಆತನ ಬಗ್ಗೆ ಆಲೋಚಿಸಿದ್ದೀಯಾ? ಆತನ ಮುಂದೆಯಾದರೂ ಸತ್ಯ ಹೇಳಬಹುದಿತ್ತಲ್ಲವೇ? ಒಂದು ವೇಳೆ ನೀನು ಹೇಳಿರುತ್ತಿದ್ದರೆ ಈ ಪರಿಸ್ಥಿತಿ ಬರದಿರುವ ಸಾಧ್ಯತೆಯೂ ಇತ್ತಲ್ಲವೇ?
   ಹುಡುಗಿ ಪಿಳಿಪಿಳಿ ಅನ್ನುತ್ತಾಳೆ. ತಾನು ಹೀಗೆಲ್ಲ ಆಲೋಚಿಸಲಿಲ್ಲ, ಮದುವೆ ನಿಶ್ಚಯಗೊಂಡ ಕೂಡಲೇ ಗಲಿಬಿಲಿಗೊಂಡೆ ಅನ್ನುತ್ತಾಳೆ. ತನಗೆ ಗೊತ್ತುಪಡಿಸಿದ ವರ ದುಬೈಯಲ್ಲಿ ಉದ್ಯೋಗದಲ್ಲಿದ್ದು ನಾವಿಬ್ಬರೂ ಮಾತಾಡಿಲ್ಲ. ನನ್ನ ಪೋಟೋ ನೋಡಿ ಆತ ಒಪ್ಪಿಕೊಂಡ. ಆತನ ಹೆತ್ತವರು ಮದುವೆ ನಿಶ್ಚಯಿಸಿದ್ರು.. ಎಂದೆಲ್ಲಾ ಹೇಳಿಬಿಡುತ್ತಾಳೆ. ಹುಡುಗಿಯ ಈ ಗಲಿಬಿಲಿಯನ್ನು ಸದುಪಯೋಗಿಸಿಕೊಂಡು ಹುಡುಗ ತನ್ನ ಬದುಕಿನಲ್ಲಾದ ಘಟನೆಯನ್ನು ಆಕೆಯ ಮುಂದೆ ತೆರೆದಿಡುತ್ತಾನೆ. ತನಗೋರ್ವ ಮುದ್ದು ತಂಗಿಯಿದ್ದದ್ದು, ತಾನು ಮತ್ತು ತಂದೆ-ತಾಯಿ ಅತ್ಯಂತ ಅಕ್ಕರೆಯಿಂದ ಆಕೆಯನ್ನು ನೋಡಿಕೊಂಡಿದ್ದು ಮತ್ತು ಆಕೆಯ ಒಪ್ಪಿಗೆ ಪಡೆದೇ ಮದುವೆ ನಿಶ್ಚಯಿಸಿದ್ದು.. ಎಲ್ಲವನ್ನೂ ಹೇಳುತ್ತಾನೆ. ಆದರೆ ಆಕೆಗೊಂದು ಅಫೇರ್ ಇದೆ ಎಂಬುದು ಆಕೆ ಹೇಳಿಯೂ ಇರಲಿಲ್ಲ. ಮನೆಯವರಿಗೆ ಗೊತ್ತೂ ಇರಲಿಲ್ಲ. ಹೀಗಿರುತ್ತಾ ಮದುವೆಯ ದಿನ ಆಕೆ ಓಡಿ ಹೋಗುತ್ತಾಳೆ. ಇದನ್ನು ಅರಗಿಸಿಕೊಳ್ಳಲಾಗದ ತಂದೆ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ತಾಯಿ ಕುಗ್ಗಿ ಹೋಗುತ್ತಾರೆ. ಊರವರು ಮನೆಗೆ ಬಂದು ಮಗಳನ್ನು ದೂಷಿಸುವುದನ್ನು ಆಲಿಸಲು ತಾಯಿ ಸಿದ್ಧಳಿರಲಿಲ್ಲ. ಆಕೆ ಆಗಲೂ ಮಗಳನ್ನು ಪ್ರೀತಿಸುತ್ತಿದ್ದಳು. ಆ ವರೆಗೆ ಪ್ರೀತಿಯಿಂದ ಬೆಳೆಸಿದ ತಂಗಿಯನ್ನು ದ್ವೇಷಿಸಲು ನಮ್ಮಿಂದ ಸಾಧ್ಯವೇ ಆಗಲಿಲ್ಲ.. ಅನ್ನುತ್ತಾನೆ. ಕಣ್ಣಲ್ಲಿ ಹನಿ ಕಣ್ಣೀರು. ನನ್ನ ತಂದೆಗಾದ ಸ್ಥಿತಿ ನಿನ್ನ ತಂದೆಗೆ ಆಗದಿರಲಿ ಎಂದೂ ಹೇಳುತ್ತಾನೆ. ಹುಡುಗಿಯ ಕಣ್ಣು ಹನಿಗೂಡುತ್ತದೆ. ತನ್ನ ಮನೆಯಲ್ಲಿ ಹೆತ್ತವರು, ಸಂಬಂಧಿಕರು ಆಡುತ್ತಿದ್ದ ಮಾತುಗಳು ನೆನಪಿಗೆ ಬರುತ್ತವೆ. ಕಾರನ್ನು ಮನೆಯತ್ತ ತಿರುಗಿಸುವಂತೆ ಹೇಳುತ್ತಾಳೆ. ಆಕೆಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಆಕೆಯ ಹೆಸರು ಕೇಳುತ್ತಾನೆ. ಸೀತ ಅನ್ನುತ್ತಾಳೆ. ಹ್ಯಾಪಿ ಮ್ಯಾರೇಜ್ ಲೈಫ್ ಎಂದು ಶುಭ ಕೋರುತ್ತಾನೆ. ಮನೆಗೆ ಹೋದ ಬಳಿಕ ತಾನು ಆತನನ್ನು ಮದುವೆಗೆ ಆಹ್ವಾನಿಸಿಲ್ಲ ಎನ್ನುವುದು ಆಕೆಗೆ ಜ್ಞಾಪಕಕ್ಕೆ ಬರುತ್ತದೆ. ಕರೆ ಮಾಡುತ್ತಾಳೆ. ಆದರೆ ತನಗೂ ಇಂತಿಂಥವರ ಮಗಳು ಸೀತಳಿಗೂ ನಾಳೆ ಮದುವೆ ಇದೆ ಎಂದು ಆತ ಹೇಳುತ್ತಾನೆ. ಹುಡುಗಿಗೆ ಗಾಬರಿಯಾಗುತ್ತದೆ. ತನಗೆ ಮದುವೆ ನಿಶ್ಚಯಗೊಂಡ ಹುಡುಗನ ಪೋಟೋ ಹುಡುಕುತ್ತಾಳೆ. ಅವನೇ ಇವನು. ಆಘಾತದಿಂದ ಇನ್ನೂ ಹೊರಬರದ ಆಕೆಯೊಂದಿಗೆ ಆತ ಹೇಳುತ್ತಾನೆ:
   ನಾನು ನನ್ನ ಬದುಕಿನಲ್ಲಾದ ಘಟನೆಯನ್ನಷ್ಟೇ ನಿನ್ನಲ್ಲಿ ಹೇಳಿದೆ. ನಿನ್ನನ್ನು ನಾನು ನಿನ್ನ ಮನೆಗೆ ಮರಳಿಸಿಲ್ಲ. ಆದರೆ ನನ್ನ ಮಾತನ್ನು ಆಲಿಸಲು ಮತ್ತು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸಾಯಿತಲ್ಲ, ಆ ಮನಸ್ಸನ್ನು ನಾನು ಇಷ್ಟಪಡುತ್ತೇನೆ. ನಡೆದ ಘಟನೆ ನಮ್ಮಿಬ್ಬರ ನಡುವೆಯೇ ಇರಲಿ. ನಾಳೆ ಮದುವೆ ಮಂಪಟದಲ್ಲಿ ಭೇಟಿಯಾಗೋಣ..”
   ವಿಶಾಲ್ ಶಿವ್ ಪ್ರಭು ನಿರ್ದೇಶಿಸಿರುವ ‘ಶರಿಗಳ್ ಮಾತ್ರಂ' (sharikal  matram) ಎಂಬ 17 ನಿಮಿಷಗಳ ಮಲಯಾಳಂ ಕಿರುಚಿತ್ರದ ದೃಶ್ಯಗಳಿವು. ಗೆಳೆಯ ಇರ್ಶಾದ್ ಬೈರಿಕಟ್ಟೆ ಕಳುಹಿಸಿಕೊಟ್ಟ ಈ ಕಿರುಚಿತ್ರವು ತನ್ನ ಭಾವುಕತೆಯಿಂದಾಗಿ ಮತ್ತೆ ಮತ್ತೆ ಕಾಡುತ್ತದೆ. ನಿಜವಾಗಿ, ಪ್ರೀತಿ-ಪ್ರೇಮ, ಓಡಿ ಹೋಗುವುದು.. ಇವೆಲ್ಲ ಇವತ್ತಿನ ದಿನಗಳಲ್ಲಿ ಹೊಸ ವಿಷಯವಲ್ಲ. ಅದನ್ನು ನಾವು - ಅವರು ಎಂದು ವಿಂಗಡಿಸಬೇಕಾದ ಅಗತ್ಯವೂ ಇಲ್ಲ. ಹೆಣ್ಣು-ಗಂಡು ನಡುವಿನ ಆಕರ್ಷಣೆಗೆ ಧರ್ಮಾತೀತವಾದ ಪ್ರಕೃತಿ ಸಹಜ ಕಾರಣಗಳಿವೆ. ಆದರೆ ಈ ವಾಸ್ತವವನ್ನು ನಿರ್ಲಕ್ಷಿಸುವ ಮಂದಿ ಇಂಥ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುತ್ತಾರೆ. ಯಾವ ಧರ್ಮಕ್ಕೆ ಎಷ್ಟು ಲಾಭ-ನಷ್ಟ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಜೋಡಿಗಳನ್ನು ಹುಡುಕುವುದಕ್ಕಾಗಿ ತಂಡಗಳ ರಚನೆಯಾಗುತ್ತದೆ. ಒಂದು ರೀತಿಯ ಗದ್ದಲ, ಹೇಳಿಕೆ- ಪ್ರತಿ ಹೇಳಿಕೆಗಳ ನಡುವೆ ಪ್ರಕರಣ ಮಾಧ್ಯಮಗಳಲ್ಲೂ ಜೀವಂತ ಇರುತ್ತದೆ. ಆದರೆ ಇಂಥ ಪ್ರಕರಣಗಳಿಗೆ ಇನ್ನೊಂದು ಮುಖವಿರುತ್ತದೆ. ಅದುವೇ ಜೋಡಿಗಳ ಹೆತ್ತವರದ್ದು. ಮುಖ್ಯವಾಗಿ ಹೆಣ್ಣಿನ ಮನೆಯವರು ಇಂಥ ಸಂದರ್ಭಗಳಲ್ಲಿ ತೀವ್ರವಾಗಿ ಕುಗ್ಗಿ ಹೋಗಿರುತ್ತಾರೆ. ಹೆತ್ತು ಹೊತ್ತು ಬೆಳೆಸಿದ, ಮುದ್ದಾಡಿದ ಮಗುವೊಂದು ಕೈಯಿಂದ ಜಾರಿಹೋದ ಅನುಭವ. ಬಂಧುಗಳು ದೂಷಿಸುತ್ತಾರೆ. ನೆರೆಕರೆಯವರು ತಲೆಗೊಂದು ಮಾತಾಡುತ್ತಾರೆ. ಕಚೇರಿ, ಮಾರುಕಟ್ಟೆ, ಅಲ್ಲಿ-ಇಲ್ಲಿ.. ಎಲ್ಲೆಡೆಯೂ ಅವಮಾನಿಸಿದಂಥ ಅನುಭವವಾಗುತ್ತದೆ. ಎಲ್ಲಕ್ಕಿಂತ, ತಾನು ಈ ವರೆಗೆ ಇಷ್ಟು ಪ್ರೀತಿಯಿಂದ ಬೆಳೆಸಿದ ಮಗು ಹೀಗೆ ಮಾಡಿತಲ್ಲ ಎಂಬ ನೋವು ಮತ್ತೆ ಮತ್ತೆ ಹೆತ್ತವರನ್ನು ಚುಚ್ಚುತ್ತಿರುತ್ತದೆ. ನಿಜವಾಗಿ, ಭಾವುಕತೆ ಕೊಡುವ ನೋವು ಇತರೆಲ್ಲ ನೋವುಗಳಿಗಿಂತ ಹೆಚ್ಚು ತೀವ್ರವಾದುದು. ಹಾಗಂತ, ಮಕ್ಕಳೇ ತಪ್ಪು, ಹೆತ್ತವರೇ ಸರಿ ಎಂದಲ್ಲ. ತಮ್ಮ ಪ್ರೇಮ ಪ್ರಕರಣವನ್ನು ಹೆತ್ತವರ ಮುಂದೆ ಹೇಳುವ ಹೊಣೆಗಾರಿಕೆ ಮಕ್ಕಳ ಮೇಲೆ ಇರುವಂತೆಯೇ ಅವರನ್ನು ತಾಳ್ಮೆಯಿಂದ ಆಲಿಸುವ ಹೊಣೆಗಾರಿಕೆ ಹೆತ್ತವರ ಮೇಲೂ ಇದೆ. ತನ್ನ ಮಕ್ಕಳು ತಾನು ಹೇಳಿದಂತೆ ಕೇಳಬೇಕು ಎಂಬ ಅಧಿಕಾರ ಪ್ರಜ್ಞೆಯಿಂದಾಗಿ ಅನೇಕ ಬಾರಿ ಹೆತ್ತವರು ಅನಾಹುತಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅದೇ ವೇಳೆ, ಇತರೆಲ್ಲ ವಿಷಯಗಳನ್ನು ಹೆತ್ತವರ ಮುಂದಿಡುವ ಮಕ್ಕಳು ಪ್ರೇಮ ಪ್ರಕರಣವನ್ನು ಮುಚ್ಚಿಡುವುದೇ ಹೆಚ್ಚು.
   ಜಗತ್ತು ಆಧುನಿಕವಾಗಿದೆ ಎಂದು ನಾವೆಷ್ಟೇ ಹೇಳಿಕೊಂಡರೂ ಓರ್ವ ತಂದೆಗೆ ತನ್ನ ಮಗಳು ಯಾವಾಗಲೂ ಪುಟ್ಟ ಮಗುವೇ. ಆ ಮಗು ತನ್ನ ಭಾವನೆಯಂತೆ ಬದುಕಬೇಕು, ಸುಖವಾಗಿರಬೇಕು, ನಗುನಗುತ್ತಿರಬೇಕು, ಅಪ್ಪನನ್ನು ಕಾಡಿಸುತ್ತಿರಬೇಕು.. ಎಂದೆಲ್ಲಾ ಆತ ಆಸೆ ಪಡುತ್ತಿರುತ್ತಾನೆ. ಕೂಲಿ ಕೆಲಸ ಮಾಡಿಯೋ ರಿಕ್ಷಾ ಚಲಾಯಿಸಿಯೋ, ಕಚೇರಿಯಿಂದಲೋ ಸಂಜೆ ಮನೆಗೆ ಹೋದಾಗ ಅಪ್ಪನನ್ನು ಸ್ವಾಗತಿಸುವುದು ಮಗಳೇ. ನೀರು ಕೊಡುವುದು ಮಗಳೇ. ದಣಿವಾರಿಸಿಕೊಳ್ಳುವಂತೆ, ಸ್ನಾನ ಮಾಡುವಂತೆ, ಚಾ ಕುಡಿಯುವಂತೆ.. ಒತ್ತಾಯಿಸುವುದೆಲ್ಲ ಮಗಳೇ. ಮಗಳೆಂದರೆ ಮನೆಯ ದೀಪ. ಆ ದೀಪದ ಬೆಳಕಿನಲ್ಲಿ ಮನೆ ಖುಷಿ ಖುಷಿಯಾಗಿರುತ್ತದೆ. ಬಹುಶಃ ಇಂಥ ಮಗು ಮನೆಯಲ್ಲಿ ಹೇಳದೇ ಕೇಳದೇ ಹೊರಟು ಹೋಗುವುದನ್ನು ಯಾವ ಹೆತ್ತವರೂ ಜೀರ್ಣಿಸುವುದಕ್ಕೆ ಸಾಧ್ಯವಿಲ್ಲ. ತಮ್ಮ ಅಮೂಲ್ಯವಾದುದನ್ನು ಯಾರೋ ಕಿತ್ತುಕೊಂಡು ಹೋದರು ಎಂಬ ಭಾವದಲ್ಲಿ ಅಥವಾ ತನ್ನ ಮಗು ತನಗೆ ಮೋಸ ಮಾಡಿತು ಎಂಬ ನೋವಿನಲ್ಲಿ ಮನೆ ಮೌನವಾಗಿ ಬಿಡುತ್ತದೆ. ಅಂದಹಾಗೆ, ಮಕ್ಕಳ ಮೇಲೆ ಹೆತ್ತವರು ತಮ್ಮ ಇಚ್ಛೆಯನ್ನು ಹೇರುವುದು ತಪ್ಪೇ ಆಗಿರಬಹುದು. ತಮ್ಮ ಮೂಗಿನ ನೇರಕ್ಕೆ ಅವರು ಬದುಕಬೇಕು ಎಂದು ಬಯಸುವುದನ್ನು ಪ್ರಕೃತಿ ವಿರೋಧಿ ಎಂದೂ ಹೇಳಬಹುದು. ಆದರೆ ಈ ತಪ್ಪು-ಒಪ್ಪುಗಳ ಆಚೆಗೆ ಭಾವನಾತ್ಮಕ ಸಂಬಂಧವೊಂದು ಹೆತ್ತವರು ಮತ್ತು ಮಕ್ಕಳ ನಡುವೆ ಇದೆ. ಆ ಸಂಬಂಧ ಎಷ್ಟು ಗಾಢವಾದುದೆಂದರೆ ಈ ಸ್ವಾತಂತ್ರ್ಯ, ಅಧಿಕಾರ, ಒಪ್ಪು-ತಪ್ಪು ಎಂಬೆಲ್ಲ ವಿಧಿ ನಿಯಮಗಳನ್ನೇ ಸಡಿಲಗೊಳಿಸುವಷ್ಟು. ತಂದೆಯ ಮಡಿಲಲ್ಲಿ ತಲೆಯಿಟ್ಟು ಮಗಳು ತನ್ನ ಇಚ್ಛೆಯನ್ನು ಹೇಳಿಕೊಂಡರೆ ಯಾವ ಅಪ್ಪನೂ ಕರಗದಿರಲಾರ ಅಥವಾ ಮಗಳನ್ನು ಆಲಂಗಿಸಿ ತನ್ನ ಎದೆ ಮಿಡಿತವನ್ನು ಅಪ್ಪ ಹೇಳಿಕೊಂಡರೆ ಯಾವ ಮಗಳೂ ಕರಗದಿರಲಾರಳು. ‘ಶರಿಗಳ್ ಮಾತ್ರಂ’ ಚಿತ್ರದಲ್ಲಿ ಕಾರು ಚಾಲಕ ಹೇಳುವ ಒಂದು ಡಯಲಾಗ್ ಇದೆ -
    “ತಾನು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಒಂದಂತೂ ಗೊತ್ತಿದೆ, ಹೆತ್ತವರನ್ನು ದುಃಖಕ್ಕೀಡು ಮಾಡುವ ಯಾವ ಸರಿಗಳೂ ನನಗೆ ತಪ್ಪುಗಳಾಗಿವೆ. ಅವರನ್ನು ಸಂತಸಪಡಿಸುವ ಯಾವ ತಪ್ಪುಗಳೂ ನನಗೆ ಸರಿಗಳಾಗಿವೆ. ಸರಿಗಳು ಮಾತ್ರ..”
    ಇದು ನನ್ನನ್ನು ಮತ್ತೆ ಮತ್ತೆ ಕಾಡಿತು. ಭಾವುಕಗೊಳಿಸಿತು. ತಾರ್ಕಿಕ ಪ್ರಶ್ನೆಗಳೇನೇ ಇದ್ದರೂ..

Monday, November 17, 2014

ಹೊಟ್ಟೆ ತುಂಬಿಸುವ ಬದಲು ಹೊಟ್ಟೆ ಸೀಳುವುದನ್ನೇ ಪರಿಹಾರ ಅನ್ನುತ್ತೇವಲ್ಲ..

   ಸಂತಾನಹರಣ ಚಿಕಿತ್ಸೆಯಲ್ಲಿ ವ್ಯಾಸೆಕ್ಟಮಿ ಮತ್ತು ಟ್ಯುಬೆಕ್ಟಮಿ ಎಂಬ ಎರಡು ವಿಧಾನಗಳಿವೆ. ವ್ಯಾಸೆಕ್ಟಮಿ ಪುರುಷರಿಗೆ ಸಂಬಂಧಿಸಿದ್ದಾದರೆ ಟ್ಯುಬೆಕ್ಟಮಿ ಮಹಿಳೆಯರಿಗೆ ಸಂಬಂಧಿಸಿದ್ದು. ಇದರಲ್ಲಿ ಪುರುಷರ ಸಂತಾನಹರಣ ಚಿಕಿತ್ಸೆಯು ತೀರಾ ಸರಳ, ಸುಲಭ ಮತ್ತು ಕಡಿಮೆ ಅವಧಿಯದ್ದು. ಇದಕ್ಕೆ 5 ನಿಮಿಷಗಳಷ್ಟೇ ಸಾಕಾಗುತ್ತದೆ. ಮಾತ್ರವಲ್ಲ, ಎರಡು ಗಂಟೆಗಳ ವಿರಾಮದಲ್ಲಿ ಎಲ್ಲವೂ ಕೊನೆಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಟ್ಯುಬೆಕ್ಟಮಿ ಸರಳವಲ್ಲ. ಕೆಲವೊಮ್ಮೆ ಮಹಿಳೆಯರು 8 ದಿನಗಳ ವರೆಗೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತುಸು ದೀರ್ಘ ಅವಧಿಯ ವಿರಾಮ ಬೇಕಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯೂ ಇರುತ್ತದೆ. ಇಷ್ಟಿದ್ದೂ, ಸಂತಾನಹರಣ ಚಿಕಿತ್ಸೆಗೆ ಮಹಿಳೆಯರೇ ಯಾಕೆ ಒಳಗಾಗುತ್ತಿದ್ದಾರೆ? 2012ರಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾದವರ ಸಂಖ್ಯೆ 46 ಲಕ್ಷ. ಆದರೆ ಇದರಲ್ಲಿ ಪುರುಷರ ಅನುಪಾತ ಒಂದು ಶೇಕಡಾಕ್ಕಿಂತಲೂ ಕಡಿಮೆ. 2012-13ರಲ್ಲಿ 0.85% ಪುರುಷರು ಮಾತ್ರ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದಾರೆ. 2013-14ರಲ್ಲಂತೂ ಈ ಅನುಪಾತ 0.44%ಕ್ಕೆ ಕುಸಿದಿದೆ (ದಿ ಹಿಂದೂ 2014 ನವಂಬರ್ 13 ). ಅಂದರೆ ಸಂತಾನಹರಣ ಚಿಕಿತ್ಸೆಗೆ ಒಳಗಾಗುವವರಲ್ಲಿ ಶೇ. 99ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ. ಯಾಕೆ ಹೀಗೆ? ಒಂದು ಕಡೆ ಹೆಣ್ಣು ಗರ್ಭಧರಿಸಬೇಕು, 9 ತಿಂಗಳ ವರೆಗೆ ದೈಹಿಕವಾಗಿ ವಿವಿಧ ಏರಿಳಿತಗಳನ್ನು ಅನುಭವಿಸಬೇಕು, ಕೊನೆಗೆ ಸಂತಾನ ಹರಣ ಚಿಕಿತ್ಸೆಗೂ ಆಕೆಯದೇ ದೇಹ ಬೇಕು. ಅದೇ ವೇಳೆ ಪುರುಷ ಗರ್ಭಧರಿಸುವುದಿಲ್ಲ ಎಂದು ಮಾತ್ರವಲ್ಲ, ತನ್ನ ದೇಹವನ್ನು ವ್ಯಾಸೆಕ್ಟಮಿಗೆ ಒಡ್ಡುವುದೂ ಇಲ್ಲ. ಇಲ್ಲೂ ಒಂದು ಕುತೂಹಲದ ಸಂಗತಿಯಿದೆ. ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಬಡತನ ರೇಖೆಗಿಂತ ಕೆಳಗಿನ (BPL) ಮಹಿಳೆಯರಿಗೆ ಸರಕಾರವು 600 ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಬಡತನ ರೇಖೆಗಿಂತ ಮೇಲಿನ (APL) ಮಹಿಳೆಯರಿಗೆ 250 ರೂಪಾಯಿಯನ್ನು ನೀಡುತ್ತದೆ. ಅದೇ ವೇಳೆ ಇಂಥ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ BPL, APL ಎಂದು ನೋಡದೆಯೇ ಸರಕಾರ 1,100 ರೂಪಾಯಿಯನ್ನು ನೀಡುತ್ತದೆ (ದಿ ಹಿಂದೂ 2014 ನವಂಬರ್ 13 ). ಯಾಕೆ ಈ ಅಸಮಾನತೆ, ಲಿಂಗ ತಾರತಮ್ಯ? ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆಗಳ ಬಗ್ಗೆ ಧಾರಾಳ ಮಾತುಗಳು ಕೇಳಿ ಬರುತ್ತಿರುವ ಈ ದಿನಗಳಲ್ಲೂ ಪುರುಷರಿಗೆ 1,100 ರೂಪಾಯಿ ಮತ್ತು ಮಹಿಳೆಯರಿಗೆ 600 ರೂಪಾಯಿ ಎಂದು ನಿಗದಿಪಡಿಸಿರುವ ಔಚಿತ್ಯವೇಕೆ ಪ್ರಶ್ನೆಗೀಡಾಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆಯಲ್ಲಿ ಲಿಂಗ ಸಮಾನತೆಗಾಗಿ ಎಲ್ಲೂ ಒತ್ತಾಯಗಳು ಕೇಳಿ ಬರುತ್ತಿಲ್ಲವೇಕೆ? ‘ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಗಾಗುವುದೇ ಬೇಡ, ಗರ್ಭಧರಿಸುವುದರಿಂದ ವಿನಾಯಿತಿ ಪಡೆದಿರುವ ಪುರುಷರೇ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲಿ’ ಎಂಬ ಕೂಗೇಕೆ ಮೊಳಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವವರು ಗ್ರಾವಿೂಣ ಪ್ರದೇಶದ ಇಂಗ್ಲಿಷು, ಆಧುನಿಕತೆ, ಥಳಕು-ಬಳಕು ಗೊತ್ತಿಲ್ಲದ ಬಡ ಮಹಿಳೆಯರು ಎಂಬುದೇ ಈ ಮೌನಕ್ಕೆ ಕಾರಣವೇ ಅಥವಾ ಇದರ ಹಿಂದೆ ಇನ್ನೇನಾದರೂ ಉದ್ದೇಶಗಳಿವೆಯೇ? ಒಂದೋ ಸಂತಾನಹರಣ ಚಿಕಿತ್ಸೆಯೇ ರದ್ದುಗೊಳ್ಳಬೇಕು ಅಥವಾ ಇದರಲ್ಲಿ ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಒತ್ತಾಯಗಳು ಛತ್ತೀಸ್‍ಗಢದ ಸಾಮೂಹಿಕ ಹತ್ಯೆಯ ಬಳಿಕವೂ ಈವರೆಗೂ ಕೇಳಿ ಬಂದಿಲ್ಲವಲ್ಲ, ಯಾಕಾಗಿ? ಲಿಂಗ ಸಮಾನತೆಯ ಕೂಗುಗಳೂ ಸೆಲೆಕ್ಟಿವ್ ಆಗುತ್ತಿವೆಯೇ? ಹೆಣ್ಣು-ಗಂಡಿನ ನಡುವೆ ಶಿಕ್ಷಣ, ಉದ್ಯೋಗ, ಆಡಳಿತ ಸಹಿತ ಯಾವುದರಲ್ಲೂ ಲಿಂಗ ತಾರತಮ್ಯ ಸಲ್ಲದು ಎಂಬ ವಾದಗಳೆಲ್ಲವೂ ದಶಕಗಳಿಂದ ಜೀವಂತವಿರುವ ಈ ತಾರತಮ್ಯವನ್ನು ನಿರ್ಲಕ್ಷಿಸಿರುವುದೇಕೆ? ಅಲ್ಲದೇ, 2003ರಿಂದ 12ರ ನಡುವೆ ಸಂತಾನಹರಣ ಚಿಕಿತ್ಸೆಗೊಳಗಾದವರಲ್ಲಿ 1,434 ಮಂದಿ ಸಾವಿಗೀಡಾಗಿದ್ದಾರೆ. ಆದ್ದರಿಂದಲೇ ಸಂತಾನಹರಣ ಚಿಕಿತ್ಸೆ ಎಷ್ಟು ಸುರಕ್ಷಿತ ಎಂಬುದು ಚರ್ಚಾರ್ಹವೆನಿಸುವುದು. ಆದರೆ ಈ ಬಗ್ಗೆ ಎಲ್ಲೂ ಚರ್ಚೆಗಳೇ ಆಗುತ್ತಿಲ್ಲ. ವರ್ಷಂಪ್ರತಿ ಲಕ್ಷಾಂತರ ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಮತ್ತು ಇವರಲ್ಲಿ ದೊಡ್ಡದೊಂದು ಸಂಖ್ಯೆಯನ್ನು ಬಲವಂತ, ಆಮಿಷಗಳಿಂದ ಚಿಕಿತ್ಸಾ ಕೊಠಡಿಗೆ ಕರೆ ತರಲಾಗುತ್ತದೆ ಎಂಬುದು ಗೊತ್ತಿದ್ದೂ ಅದು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣವಾಗಿ ಈಗಲೂ ಗುರುತಿಸಿಕೊಳ್ಳುತ್ತಿಲ್ಲ. ಬಿಹಾರದ ಅರಾರಿಯ ಜಿಲ್ಲೆಯ ಶಾಲಾ ಕಟ್ಟಡದಲ್ಲಿ ಎರಡು ಗಂಟೆಯೊಳಗೆ 53 ಮಂದಿಯ ಸಂತಾನ ಹರಣ ಚಿಕಿತ್ಸೆ ನಡೆಸಿದ ಬಗ್ಗೆ ಮತ್ತು ಅವರನ್ನು ನೆಲದಲ್ಲಿ ಮಲಗಿಸಿದುದರ ಬಗ್ಗೆ 2012 ಎಪ್ರಿಲ್‍ನಲ್ಲಿ ಸುಪ್ರೀಮ್ ಕೋರ್ಟಿಗೆ ದೂರನ್ನು ಸಲ್ಲಿಸಲಾಗಿತ್ತು. ಆ ಚಿಕಿತ್ಸೆಯ ಕುರಿತಂತೆ ವೀಡಿಯೋಗಳೂ ಬಿಡುಗಡೆಯಾಗಿದ್ದುವು. ಆ 53 ಮಂದಿ ಮಹಿಳೆಯರನ್ನು ಬೆದರಿಕೆ ಹಾಕಿ ಬಲವಂತದಿಂದ ಶಾಲಾ ಕಟ್ಟಡದೊಳಕ್ಕೆ ಕರೆ ತರಲಾಗಿತ್ತು ಮತ್ತು ಟಾರ್ಚ್‍ಲೈಟ್ ಮೂಲಕ ಚಿಕಿತ್ಸೆ ನಡೆಸಲಾಗಿತ್ತು ಎಂದು ದೇವಿಕಾ ಬಿಸ್ವಾಸ್ ಎಂಬವರು ಕೋರ್ಟಿನಲ್ಲಿ ಹೇಳಿಕೆಯಿತ್ತಿದ್ದರು. ಈ ಬಗ್ಗೆ ಎರಡು ತಿಂಗಳ ಒಳಗೆ ಉತ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಮ್ ಕೋರ್ಟ್ ಆದೇಶವನ್ನೂ ನೀಡಿತ್ತು. ಸಂತಾನಹರಣ ಚಿಕಿತ್ಸೆಗೆ ಒಳಗಾಗದಿದ್ದರೆ ರೇಶನ್ ಕಾರ್ಡ್ ಸಹಿತ ಸರಕಾರಿ ಸೌಲಭ್ಯಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರ ಭಾರತದಲ್ಲಿ ಮುಖ್ಯವಾಗಿ ಆದಿವಾಸಿ, ಬುಡಕಟ್ಟು ಜನಾಂಗಗಳ ಮಹಿಳೆಯರನ್ನು ಬೆದರಿಸಲಾಗುತ್ತದೆ ಎಂಬ ವರದಿಗಳೂ ಈ ಹಿಂದೆ ಬಂದಿದ್ದುವು. ಕಾರ್, ಫ್ರೀಜರ್‍ಗಳ ಆಮಿಷ ಒಡ್ಡಿದ ಪ್ರಕರಣಗಳೂ ಧಾರಾಳ ಇವೆ. ಮಾತ್ರವಲ್ಲ, ಒಂದು ವರ್ಷದಲ್ಲಿ ಇಷ್ಟು ಸಂಖ್ಯೆಯ ಸಂತಾನ ಹರಣ ಚಿಕಿತ್ಸೆ ನಡೆಸಬೇಕು ಎಂಬ ಗುರಿಯನ್ನು ಆರೋಗ್ಯ ಅಧಿಕಾರಿಗಳಿಗೆ ನಿಗದಿಪಡಿಸಲಾಗುತ್ತದೆ ಮತ್ತು ಗುರಿ ಮುಟ್ಟದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆಯನ್ನೂ ಹಾಕಲಾಗುತ್ತದೆ ಎಂದು 2013 ಜೂನ್ 20ರಂದು ಆ್ಯಂಡ್ರ್ಯೂ ಮೆಕ್‍ಸ್ಕಿಲ್ ಎಂಬವರು, ‘ಇನ್‍ಸೈಡ್ ಇಂಡಿಯಾಸ್ ಸ್ಟಿರಿಲೈಸೇಶನ್ ಕ್ಯಾಂಪ್’ ಎಂಬ ಲೇಖನದಲ್ಲಿ ಗುಜರಾತನ್ನು ಉಲ್ಲೇಖಿಸಿ ಬರೆದಿದ್ದರು. ಆದರೆ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಗಂಭೀರ ಚರ್ಚೆ, ಅಧ್ಯಯನಕ್ಕೆ ಒಳಪಟ್ಟೇ ಇಲ್ಲ. ಕಾರಣವೇನು? ಈ ಚಿಕಿತ್ಸೆಗೆ ಒಳಗಾಗುವವರಲ್ಲಿ ಬಡವರೇ ಹೆಚ್ಚಿರುವುದರಿಂದ ಈ ಎಲ್ಲ ವಿಷಯಗಳು ಚರ್ಚೆಗೆ ಬಂದಿಲ್ಲವೋ ಅಥವಾ ಆ ಬಗ್ಗೆ ಚರ್ಚಿಸದಂತೆ ತಡೆಯುವ ವ್ಯವಸ್ಥಿತ ಹುನ್ನಾರ ಇದೆಯೋ? ಬಡವರ ಮಕ್ಕಳನ್ನು ಆಮಿಷವೊಡ್ಡಿ ಬಾವಿಗೆ ದೂಡುವ ವ್ಯವಸ್ಥಿತ ವಿಧಾನವಾಗಿರ ಬಹುದೇ ಈ ಸಂತಾನಹರಣ ಚಿಕಿತ್ಸೆ?
   ಜನಸಂಖ್ಯಾ ಸ್ಫೋಟ ಎಂಬ ಭೀತಿಕಾರಕ ಪದ ಸೃಷ್ಟಿಯಾದದ್ದು ಬಹುತೇಕ 19ನೇ ಶತಮಾನದಲ್ಲಿ. ಜನಸಂಖ್ಯೆಯ ಹೆಚ್ಚಳದಿಂದಾಗುವ ತೊಂದರೆಗಳ ಬಗ್ಗೆ ಬರಹ, ಡಾಕ್ಯುಮೆಂಟರಿಗಳು 1960ರಲ್ಲಿ ಬರತೊಡಗಿದುವು. ಮುಖ್ಯವಾಗಿ ಆಹಾರದ ಕೊರತೆಯು ಈ ಜಗತ್ತನ್ನು ತೀವ್ರವಾಗಿ ಕಾಡಲಿದೆ ಎಂಬ ಪ್ರಚಾರವನ್ನು ನಡೆಸಲಾಯಿತು. ಈ ವಾದಕ್ಕೆ ರೆವರೆಂಡ್ ಥಾಮಸ್ ಮುಲ್ತಸ್ ಎಂಬವರ ಚಿಂತನೆಗಳನ್ನೇ ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಾಗಿತ್ತು. ಜನಸಂಖ್ಯೆಯನ್ನು ಅಪಾಯವಾಗಿ ಚಿತ್ರಿಸುವ ಚಿಂತನೆಗಳಿಗೆ ಇವತ್ತಿಗೂ ಆಧಾರ ಥಾಮಸ್‍ರ ಅಭಿಪ್ರಾಯಗಳೇ. ‘ಜನನ ಪ್ರಮಾಣವು ಆಹಾರ ಉತ್ಪಾದನಾ ಪ್ರಮಾಣಕ್ಕಿಂತ ಅಧಿಕವಾಗಿದೆ’ ಎಂದು ಥಾಮಸ್ ಹೇಳಿದ್ದ. ಆದರೆ ಹಸಿರು ಕ್ರಾಂತಿಯು ಥಾಮಸ್‍ರ ಅಭಿಪ್ರಾಯವನ್ನು ಸುಳ್ಳಾಗಿಸಿದಾಗ (ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾದಾಗ) ಪಾಶ್ಚಾತ್ಯ ಜಗತ್ತು ಹೊಸ ಭೀತಿಯನ್ನು ಅದಕ್ಕೆ ಸೇರಿಸಿದುವು. ಅಧಿಕ ಜನಸಂಖ್ಯೆಯು ಪರಿಸರ ಅಸಮತೋಲನೆ, ಅಭಿವೃದ್ಧಿ ಕುಸಿತ ಮತ್ತು ರಾಜಕೀಯ ಅನಿಶ್ಚಿತತೆಗೆ ಕಾರಣವಾಗಬಲ್ಲುದು ಎಂದು ಅವು ಅಭಿಪ್ರಾಯಪಟ್ಟವು. ಇದಕ್ಕೆ ಪೂರಕವಾಗಿ ಅಮೇರಿಕ, ಬ್ರಿಟನ್, ಜಪಾನ್, ಸ್ವೀಡನ್‍ಗಳು ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳಿಗೆ ನೆರವನ್ನು ನೀಡತೊಡಗಿದುವು. ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಅಮೇರಿಕದ ಫೋರ್ಡ್, ರಾಕ್‍ಫೆಲ್ಲರ್ ಫೌಂಡೇಶನ್‍ಗಳು ಸಂತಾನ ನಿಯಂತ್ರಣದ ಅಗತ್ಯ, ಅನಿವಾರ್ಯತೆಗಳ ಬಗ್ಗೆ ಭಾಷಣ ಬಿಗಿಯತೊಡಗಿದುವು. ಅಮೇರಿಕದ ಜೀವಶಾಸ್ತ್ರಜ್ಞ ಪೌಲ್ ಎಹ್‍ರಿಚ್‍ರು ‘ಪಾಪ್ಯುಲೇಶನ್ ಬಾಂಬ್' ಎಂಬ ಬಹು ಪ್ರಸಿದ್ಧ ಕೃತಿಯನ್ನು 1968ರಲ್ಲಿ ಬರೆದರು.ಜನಸಂಖ್ಯೆಯ ಹೆಚ್ಚಳವು ಸಂಪತ್ತಿನ ಸವೆತಕ್ಕೆ ಮತ್ತು ಕ್ಯಾಪಿಟಾಲಿಸಮ್ ನ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂಬುದು ಪಾಶ್ಚಾತ್ಯರ ಭಯವಾಗಿತ್ತು. ಹೀಗೆ ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳ ಮೇಲೆ ಪಾಶ್ಚಾತ್ಯ ಜಗತ್ತಿನ ಒತ್ತಡಗಳು ಹೆಚ್ಚುತ್ತಾ ಇದ್ದ ಸಂದರ್ಭದಲ್ಲೇ ಭಾರತದಲ್ಲಿ ತುರ್ತು ಸ್ಥಿತಿ ಘೋಷಣೆಯಾದದ್ದು. ಬಹುಶಃ ಈ ತುರ್ತುಸ್ಥಿತಿಗೂ ಪಾಶ್ಚಾತ್ಯ ಜಗತ್ತಿನ ಒತ್ತಡಗಳಿಗೂ ಪರಸ್ಪರ ಸಂಬಂಧ ಇರಬಹುದೇ ಎಂಬ ಅನುಮಾನ ಈಗಲೂ ಇದೆ. 1975-77ರ ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ಮತ್ತು ಮಗ ಸಂಜಯ್ ಗಾಂಧಿಯವರು ಅತ್ಯಂತ ಮುತುವರ್ಜಿಯಿಂದ ಜಾರಿಗೆ ತಂದದ್ದು ಸಂತಾನ ನಿಯಂತ್ರಣ ಕಾನೂನನ್ನು. ಮುಖ್ಯವಾಗಿ ಪುರುಷರನ್ನು ಬೀದಿಯಿಂದ ಬಲವಂತದಿಂದ ಎತ್ತಿಕೊಂಡು ಹೋಗಿ ವ್ಯಾಸೆಕ್ಟಮಿಗೆ ಗುರಿಪಡಿಸಲಾಯಿತು. ತುರ್ತು ಸ್ಥಿತಿಯ ಎರಡು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಮಂದಿಯ ಮೇಲೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ಈ ದಿಟ್ಟ ಕ್ರಮಕ್ಕಾಗಿ ವಿಶ್ವಬ್ಯಾಂಕ್‍ನ ಅಧ್ಯಕ್ಷ ರಾಬರ್ಟ್ ಮೆಕ್‍ನಾಮರ್ ಅವರು ಇಂದಿರಾ ಗಾಂಧಿಯವರನ್ನು ಅಭಿನಂದಿಸಿದ್ದರು.
   "ತುರ್ತುಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಲಾದ ಅತಿ ಅಪಾಯಕಾರಿ ಪ್ರಯೋಗಗಳಲ್ಲಿ ಬಲವಂತದ ಸಂತಾನ ಹರಣ ಚಿಕಿತ್ಸೆಯೂ ಒಂದು. ಜನಸಂಖ್ಯೆಯು ನಿಯಂತ್ರಣ ವಿೂರಿ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಇಂಟರ್‍ನ್ಯಾಶನಲ್ ಮಾನಿಟರಿ ಫಂಡ್ (IMF) ಹಾಗೂ ವಿಶ್ವಬ್ಯಾಂಕ್‍ಗಳು ಭಾರತವನ್ನು ಆಗಾಗ ಎಚ್ಚರಿಸುತ್ತಲೇ ಇತ್ತು. ಆದರೆ ಭಾರತದ ರಾಜಕೀಯ ವಾತಾ ವರಣದಲ್ಲಿ ಜನನ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವುದು ಸುಲಭದ್ದಾಗಿರಲಿಲ್ಲ. ಹಾಗೊಂದು ವೇಳೆ ಜಾರಿಗೊಳಿಸಲು ಪ್ರಯತ್ನಿಸಿರುತ್ತಿದ್ದರೆ ಅಧಿಕಾರಕ್ಕೆ ಕುತ್ತು ಬರುವ ಸಾಧ್ಯತೆಯೂ ಇತ್ತು. ಹೀಗಿರುತ್ತಾ ತುರ್ತುಸ್ಥಿತಿ ಘೋಷಣೆಯಾದಾಗ IMF ಮತ್ತು ವಿಶ್ವಬ್ಯಾಂಕ್‍ಗಳು ಚುರುಕಾದುವು. ತನ್ನ ಬೇಡಿಕೆಯನ್ನು ಜಾರಿಗೊಳಿಸುವಂತೆ ಅವು ಇಂದಿರಾರ ಮೇಲೆ ಒತ್ತಡ ಹೇರಿದುವು. ಪಶ್ಚಿಮದ ಧನಿಕರನ್ನು ತೃಪ್ತಿಪಡಿಸುವುದಕ್ಕಾಗಿ ಇಂದಿರಾ ಮತ್ತು ಸಂಜಯ್ ಗಾಂಧಿಯವರು ಆ ಸಂದರ್ಭವನ್ನು ಬಳಸಿಕೊಂಡರು" ಎಂದು ‘ದಿ ಸಂಜಯ್ ಸ್ಟೋರಿ’ ಎಂಬ ವಿನೋದ್ ಮೆಹ್ತಾರ ಕೃತಿಯನ್ನು ವಿಮರ್ಶಿಸುತ್ತಾ ಡೇವಿಡ್ ಫ್ರಮ್ ಬರೆದಿದ್ದಾರೆ.
   ನಿಜವಾಗಿ, ಜನಸಂಖ್ಯೆಗೂ ಜನರ ಸಾಕ್ಷರತೆ, ಆರ್ಥಿಕ ಸ್ಥಿತಿಗೂ ಹತ್ತಿರದ ನಂಟಿದೆ. ಅತ್ಯಂತ ಹೆಚ್ಚು ಸಾಕ್ಷರರಿರುವ ಕೇರಳದಲ್ಲಿ ಅತಿ ಕಡಿಮೆ ಜನನ ಅನುಪಾತವಿದೆ. ಒಂದು ವೇಳೆ ಈ ಸತ್ಯವನ್ನು ನಮ್ಮನ್ನಾಳುವವರು ಒಪ್ಪಿಕೊಂಡರೆ ಸಂತಾನ ನಿಯಂತ್ರಣ ಚಿಕಿತ್ಸೆಗೆ ಬದಲಿ ದಾರಿಯೊಂದು ಅವರೆದುರು ತೆರೆದುಕೊಳ್ಳುತ್ತದೆ. ಜನರಿಗೆ ಶಿಕ್ಷಣವನ್ನು ಮತ್ತು ಆರ್ಥಿಕವಾಗಿ ಚೇತರಿಕೆಯನ್ನು ಕೊಡಲು ಆಡಳಿತಗಾರರು ಶಕ್ತವಾದರೆ ಆ ಬಳಿಕ ಅಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ದುರಂತ ಏನೆಂದರೆ, ನಮ್ಮ ಸರಕಾರಗಳು ಬಡವರಿಗೆ ಹೊಟ್ಟೆ ತುಂಬುವಷ್ಟು ಊಟ ಕೊಡುವುದಿಲ್ಲ. ಅಕ್ಷರ ಕಲಿಕೆಗೆ ಏರ್ಪಾಡು ಮಾಡುವುದಿಲ್ಲ. ಅದರ ಬದಲು ಬಡವರ ಹೊಟ್ಟೆಯಲ್ಲಿರುವ ಮಕ್ಕಳನ್ನು ಬಲವಂತದಿಂದ ಕಸಿಯಲು ಪ್ರಯತ್ನಿಸುತ್ತದೆ. ನಿಜವಾಗಿ ಇದು ಜನರಿಗೆ ವ್ಯವಸ್ಥೆ ಮಾಡುವ ಕಡು ದ್ರೋಹ. ಯಾಕೆಂದರೆ, ಮೂಲಭೂತ ಅಗತ್ಯಗಳಾದ ಅಕ್ಷರ, ಆಹಾರ, ಆರೋಗ್ಯವನ್ನು ನೀಡುವ ಹೊಣೆಗಾರಿಕೆ ಸರಕಾರದ್ದು. ಆ ಹೊಣೆಗಾರಿಕೆಯಲ್ಲಿ ಸರಕಾರ ವೈಫಲ್ಯ ಕಂಡಾಗ ಅದರ ಅಡ್ಡ ಪರಿಣಾಮಗಳು ಸಮಾಜದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಆ ಅಡ್ಡ ಪರಿಣಾಮಗಳಿಗೆ ಹೊಟ್ಟೆ ಸೀಳುವುದು ಪರಿಹಾರ ಅಲ್ಲ. ಅದು ಕ್ರೌರ್ಯ. ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಅಸಮರ್ಥವಾದ ಸರಕಾರವೊಂದರಿಂದ ಮಾತ್ರ ಇಂಥ ಕ್ರೌರ್ಯಗಳನ್ನು ಪರಿಹಾರವಾಗಿ ಸೂಚಿಸಲು ಸಾಧ್ಯ. ಸಂತಾನ ನಿಯಂತ್ರಣ ಚಿಕಿತ್ಸೆ ಎಂಬುದು ವ್ಯವಸ್ಥೆಯ ಅಸಮರ್ಥತೆಗೆ ಹುಟ್ಟಿಕೊಂಡ ಕೂಸೇ ಹೊರತು ಅದು ಪರಿಹಾರ ಅಲ್ಲ. ಇದನ್ನು ಪರಿಹಾರವಾಗಿ ಪರಿಗಣಿಸಿದ್ದಕ್ಕಾಗಿ ಚೀನಾ ಇವತ್ತು ಪಶ್ಚಾತ್ತಾಪ ಪಡುತ್ತಿದೆ. ಜನರ ಜೀವನ ಮಟ್ಟವನ್ನು ಸುಧಾರಿಸುವ ಬದಲು ಜನರ ಹೊಟ್ಟೆ ಸೀಳುವುದನ್ನೇ ಪರಿಹಾರವೆಂದು ಹೇಳಿಕೊಟ್ಟ ಪಾಶ್ಚಾತ್ಯ ಚಿಂತನೆಗಳನ್ನು ಒಪ್ಪಿಕೊಂಡದ್ದಕ್ಕಾಗಿ ಅದು ಇವತ್ತು ಭಾರೀ ಬೆಲೆ ತೆರುತ್ತಿದೆ. ಆದರೂ ಭಾರತದಲ್ಲಿ ಈ ಕುರಿತಂತೆ ಬಲವಾದ ಜಾಗೃತಿ ಕಾರ್ಯಕ್ರಮಗಳೇನೂ ನಡೆಯುತ್ತಿಲ್ಲ. ಸಂತಾನವನ್ನೇ ಅಪಾಯಕಾರಿಯೆಂದು ಬಿಂಬಿಸುವ ಪ್ರಯತ್ನದಲ್ಲಿ ಇವತ್ತೂ ವ್ಯವಸ್ಥೆ ತಲ್ಲೀನವಾಗಿದೆ. ಇದನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಬೇಕಾದ ಮಾಧ್ಯಮಗಳು ಅನುಮಾನ ಮೂಡಿಸುವ ರೀತಿಯಲ್ಲಿ ಮೌನವಾಗಿವೆ. ಜಾಗತಿಕವಾಗಿ ನಡೆಯುವ ಒಟ್ಟು ಸಂತಾನ ನಿಯಂತ್ರಣ ಚಿಕಿತ್ಸೆಯಲ್ಲಿ ಶೇ. 37ರಷ್ಟು ಚಿಕಿತ್ಸೆಗಳು ಭಾರತದಲ್ಲೇ ನಡೆಯುತ್ತಿದ್ದರೂ ಮತ್ತು ಈ ಚಿಕಿತ್ಸೆಗೆ ಒಳಗಾಗುವವರಲ್ಲಿ 99%ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ ಆಗಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಲಿಂಗ ತಾರತಮ್ಯದ ಮಾತಾಡುತ್ತಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಹೆಸರಲ್ಲಿ ಪ್ರತಿಭಟನೆಗಳೂ ಕಾಣಿಸಿಕೊಳ್ಳುತ್ತಿಲ್ಲ.
  ಯಾಕೆ ಹೀಗೆ?

Monday, November 10, 2014

ನಂದಿತಾ ಸಾವಿನಲ್ಲಿ ‘ಅತ್ಯಾಚಾರ’ಕ್ಕೊಳಗಾದ ಮಾಧ್ಯಮ ಧರ್ಮ


    ಒಂದು ಘಟನೆಯ ಸುತ್ತ ಸುದ್ದಿ ತಯಾರಿಸುವಾಗ ಓರ್ವ ಪತ್ರಕರ್ತನ/ಳಲ್ಲಿ ಇರಲೇಬೇಕಾದ ಎಚ್ಚರಿಕೆಗಳು ಏನೆಲ್ಲ? ಪ್ರತಿ ಘಟನೆಗೂ ಒಂದಕ್ಕಿಂತ ಹೆಚ್ಚು ಆಯಾಮಗಳಿರುತ್ತವೆ. ಹತ್ತಾರು ತಿರುವುಗಳಿರುತ್ತವೆ. ಈ ಆಯಾಮ ಮತ್ತು ತಿರುವುಗಳನ್ನು ಗಮನದಲ್ಲಿಟ್ಟುಕೊಂಡೇ ಪತ್ರಕರ್ತ ಘಟನಾ ಸ್ಥಳಕ್ಕೆ ತಲುಪಬೇಕು. ಹಾಗಂತ, ಘಟನಾ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಒಂದೇ ಬಗೆಯ ವಾತಾವರಣ ಇರಬೇಕೆಂದೇನೂ ಇಲ್ಲ. ಸ್ಥಳೀಯರ ಅಭಿಪ್ರಾಯದಲ್ಲಿ ವ್ಯತ್ಯಾಸ ಇರಬಹುದು. ಹೇಳುವ ಶೈಲಿ, ಮಂಡಿಸುವ ವಾದ, ಹಾವಭಾವಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಇರಬಹುದು. ಇವರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು, ಸಂತ್ರಸ್ತರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದವರು, ಮನಸ್ತಾಪ ಇರುವವರು, ನಿಷ್ಪಕ್ಷ  ನಿಲುವಿನವರು, ಸ್ವಾರ್ಥಿಗಳು.. ಎಲ್ಲರೂ ಇರಬಹುದು. ಅವರೆಲ್ಲರ ಅಭಿಪ್ರಾಯಗಳನ್ನು ಸುದ್ದಿಯ ರೂಪಕ್ಕೆ ಇಳಿಸುವ ಮೊದಲು ಈ ಅರಿವು ಸದಾ ಜೊತೆಗಿರಬೇಕು. ಅಲ್ಲದೇ, ಘಟನಾ ಸ್ಥಳದಲ್ಲೂ ಸೂಕ್ಷ್ಮ ಕುರುಹುಗಳಿರುತ್ತವೆ. ಈ ಕುರುಹುಗಳಿಗೂ ತಾನು ದಾಖಲಿಸಿಕೊಂಡ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡುವ ಮತ್ತು ಅದರ ಆಧಾರದಲ್ಲಿ ಘಟನೆಯನ್ನು ವಿಶ್ಲೇಷಿಸುವ ತಾಳ್ಮೆಯೂ ಇರಬೇಕು. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೀಗೆಲ್ಲ ನಡೆಯುವುದೇ ಇಲ್ಲ. ಘಟನಾ ಸ್ಥಳವನ್ನು ಪರಿಶೀಲಿಸದೆಯೇ ಮತ್ತು ಘಟನೆಯ ಒಳ-ಹೊರಗನ್ನು ಅಭ್ಯಸಿಸದೆಯೇ ನಿರ್ದಿಷ್ಟ ಮೂಲವೊಂದರ ಮಾಹಿತಿಯನ್ನಷ್ಟೇ ಆಧರಿಸಿಕೊಂಡು ಸುದ್ದಿಯನ್ನು ಕೆಲವೊಮ್ಮೆ ಹೆಣೆಯಲಾಗುತ್ತದೆ. ಕನಿಷ್ಠ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ತರಿಸಿ ಸುದ್ದಿಗೆ ನಿಖರತೆಯನ್ನು ಕೊಡುವ ಪ್ರಯತ್ನಗಳೂ ನಡೆಯುವುದಿಲ್ಲ. ಭಯೋತ್ಪಾದನಾ ಪ್ರಕರಣಗಳ ಕುರಿತಾದ ವರದಿಗಳಲ್ಲಿ ಇಂಥ ಏಕಮುಖ ನಿಲುವುಗಳು ಪತ್ರಿಕೆಗಳಲ್ಲಿ ಹಲವು ಬಾರಿ ವ್ಯಕ್ತವಾಗಿವೆ. ಮದ್ರಸಗಳೂ ಇಂಥ ವರದಿ ಗಾರಿಕೆಯಿಂದ ಸಂತ್ರಸ್ತಗೊಂಡಿವೆ. ಇದೀಗ ನಂದಿತಾ ಪ್ರಕರಣ. ಅಕ್ಟೋಬರ್ 30ರಂದು ಮೃತಪಟ್ಟ ಬಾಲಕಿ ನಂದಿತಾಳ ಕುರಿತಂತೆ ನವೆಂಬರ್ 2ರಿಂದ ಕನ್ನಡ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗತೊಡ ಗಿವೆ. ಈ ಸುದ್ದಿ ಮತ್ತು ಅದಕ್ಕೆ ಕೊಡುತ್ತಿರುವ ಶೀರ್ಷಿಕೆಗಳನ್ನು ಓದುವಾಗ ಕೆಲವೊಮ್ಮೆ ದಿಗಿಲಾಗುತ್ತದೆ. ಕೆಲವೊಮ್ಮೆ ಆತಂಕ, ವಿಷಾದವೂ ಉಂಟಾಗುತ್ತದೆ. ನಂದಿತಾಳ ಹೆತ್ತವರ ಕಣ್ಣೀರು, ಆಕ್ರೋಶ ಸಹಜವಾದುದು. ಆದರೆ ಪತ್ರಿಕೆಯೊಂದಕ್ಕೆ ಅದರಾಚೆಗೂ ಕೆಲವು ಜವಾಬ್ದಾರಿಗಳಿವೆ. ಇನ್ನೂ ಖಚಿತವಾಗದ ಘಟನೆಯೊಂದರ ಮೇಲೆ ಶೀರ್ಷಿಕೆ ಕಟ್ಟುವಾಗ ಮತ್ತು ಸುದ್ದಿ ಹೆಣೆಯುವಾಗ ಅನುಮಾನಿತ ಪ್ರಜ್ಞೆಯೊಂದು ಇರಲೇಬೇಕಾಗುತ್ತದೆ. ಈ ಮಾಹಿತಿಯೇ ಅಂತಿಮ ಅಲ್ಲ ಅನ್ನುವ ಸೂಚನೆಯೊಂದು ಸುದ್ದಿಯಲ್ಲಿ ಅಲ್ಲಲ್ಲಿ ಇಣುಕಬೇಕಾಗುತ್ತದೆ. ಯಾಕೆಂದರೆ, ಪತ್ರಿಕೆಯೆಂಬುದು ಕಾಗದಗಳ ರಾಶಿಯಲ್ಲ. ಅದು ಸಮಾಜದಲ್ಲಿ ಅಭಿಪ್ರಾಯವನ್ನು ರೂಪಿಸುತ್ತದೆ. ಸಮಾಜದ ಶಾಂತಿ-ಅಶಾಂತಿಯಲ್ಲಿ ಅದಕ್ಕೂ ಒಂದು ಪಾತ್ರವಿರುತ್ತದೆ. ಈ ಕಾರಣದಿಂದಲೇ ನ. 2ರಂದು ಪ್ರಕಟವಾದ ಪತ್ರಿಕಾ ವರದಿಗಳನ್ನು ಪರಿಶೀಲಿಸಬೇಕಾಗುತ್ತದೆ.
   1. ವಿಜಯವಾಣಿ
ಮುಖಪುಟ ಸುದ್ದಿ - ಶೀರ್ಷಿಕೆ: ವಿಷ ಕುಡಿಸಿ ಬಾಲಕಿ ಹತ್ಯೆ
“...ಪುಂಡರ ಗುಂಪೊಂದು ವಿಷ ಕುಡಿಸಿದ ಪರಿಣಾಮ ಶಾಲಾ ಬಾಲಕಿ ಮೃತಪಟ್ಟಿದ್ದು ತೀರ್ಥಹಳ್ಳಿ ಉದ್ವಿಗ್ನಗೊಂಡಿದೆ.. ಅಕ್ಟೋಬರ್ 29 ಬೆಳಿಗ್ಗೆ ಶಾಲೆಗೆ ತೆರಳಲೆಂದು ನಂದಿತಾ ಬಸ್ ನಿಲ್ದಾಣದಲ್ಲಿದ್ದಾಗ ಪರಿಚಿತನೊಬ್ಬ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ತೀರ್ಥಹಳ್ಳಿಯಲ್ಲಿ ಅದೇ ಕಾರಿಗೆ ಮತ್ತಿಬ್ಬರು ವ್ಯಕ್ತಿಗಳು ಹತ್ತಿದ್ದಾರೆ. ಬಳಿಕ ಆಕೆಯನ್ನು ಪಟ್ಟಣದ ಹೊರವಲಯದ ಆನಂದಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋದ ಯುವಕರು ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಬಾಯಿಗೆ ಬಟ್ಟೆ ತುರುಕಿ ಕಾಲ್ಕಿತ್ತಿದ್ದಾರೆ. ಸೊಪ್ಪು ತರಲೆಂದು ಬೆಟ್ಟಕ್ಕೆ ಹೋದ ಮಹಿಳೆಯರು ನಂದಿತಾಳನ್ನು ರಕ್ಷಿಸಿ ಪಾಲಕರಿಗೆ ಮಾಹಿತಿ ನೀಡಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
   2. ವಿಜಯ ಕರ್ನಾಟಕ
ಮುಖಪುಟ ಸುದ್ದಿ-ಶೀರ್ಷಿಕೆ: ಅಪಹರಣ, ಅತ್ಯಾಚಾರ - ಶಾಲಾ ಬಾಲಕಿ ಸಾವು
ತೀರ್ಥಹಳ್ಳಿ: ...ಇಲ್ಲಿನ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಳೇಬೈಲು ಗ್ರಾಮದ ಬಾಲಕಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿ ಬಲವಂತವಾಗಿ ಪ್ರಜ್ಞೆ ತಪ್ಪುವ ಔಷಧಿ ಕುಡಿಸಿದ್ದಾರೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅ. 29ರಂದು ಬೆಳಿಗ್ಗೆ 9:30ರ ಸುಮಾರಿಗೆ ಶಾಲೆಯ ಬಳಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಮೂವರು ಯುವಕರ ಗುಂಪು, ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಿತ್ತು.
   3. ಉದಯವಾಣಿ
ಒಳಪುಟ ಸುದ್ದಿ - ಶೀರ್ಷಿಕೆ: ಬಾಲಕಿ ಸಾವಿಗೆ ಭುಗಿಲೆದ್ದ ಆಕ್ರೋಶ: ತೀರ್ಥಹಳ್ಳಿ ಉದ್ವಿಗ್ನ
..ತೀರ್ಥಹಳ್ಳಿ ಸವಿೂಪದ ಬಾಳೇ ಬೈಲು ನಿವಾಸಿಯೋರ್ವರ ಪುತ್ರಿ ಅಕ್ಟೋಬರ್ 29ರಂದು ಬೆಳಿಗ್ಗೆ ಬಸ್‍ಗಾಗಿ ನಿಲ್ದಾಣದಲ್ಲಿ ಕಾಯುತ್ತಿ ದ್ದಳು. ಸುಮಾರು 9;30ರ ವೇಳೆಗೆ ಕಾರೊಂದರಲ್ಲಿ ಬಂದ ನಾಲ್ವರು ಯುವಕರು ಆಕೆಯನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡರು. ಬಳಿಕ ಆಕೆಗೆ ಸಾಫ್ಟ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
   4. ಹೊಸದಿಗಂತ
ಮುಖಪುಟ ಸುದ್ದಿ - ಶೀರ್ಷಿಕೆ: ತೀರ್ಥಹಳ್ಳಿಯಲ್ಲಿ ಪೈಶಾಚಿಕ ಕೃತ್ಯ ಬೆಳಕಿಗೆ, ಅತ್ಯಾಚಾರಕ್ಕೆ ಯತ್ನ: ಬಾಲಕಿ ದುರ್ಮರಣ
   ..ದಿನಸಿ ವ್ಯಾಪಾರಿ ಬಾಳೇಬೈಲಿನ ಕೃಷ್ಣಪ್ಪ ಎಂಬವರ ಪುತ್ರಿ ಯಾಗಿದ್ದ ನಂದಿತಾ, ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅ. 29ರಂದು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆಕೆಗೆ ಪರಿಚಯವಿದ್ದ ಒಂದು ಕೋಮಿಗೆ ಸೇರಿದ ನಾಲ್ವರು ಯುವಕರು ಆಕೆಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ನಂತರ ಆನಂದಗಿರಿ ನೆಡುತೋಪಿನಲ್ಲಿ ಮತ್ತು ಬರುವ ಮಾದಕ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರಬಹುದೆಂದು ಶಂಕಿಸಲಾಗಿದೆ.. ಆನಂದಗಿರಿ ಗುಡ್ಡದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಲು ಹೋಗಿದ್ದ ಮಹಿಳೆಯರು ಈಕೆ ನೆಡುತೋಪಿನಲ್ಲಿ ಅನಾಥವಾಗಿ ಮೂರ್ಛೆ ತಪ್ಪಿ ಬಿದ್ದಿರುವುದನ್ನು ನೋಡಿ ನಂದಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
   5. ವಾರ್ತಾಭಾರತಿ
ಒಳಪುಟ ಸುದ್ದಿ - ಶೀರ್ಷಿಕೆ: ವಿದ್ಯಾರ್ಥಿನಿ ನಿಗೂಢ ಸಾವು
   ನಂದಿತಾ ಅಕ್ಟೋಬರ್ 29ರಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುವ ಸಮಯದಲ್ಲಿ ಬೇರೆ ಕೋಮಿನ ಯುವಕನ ಜೊತೆಗೆ ಮಾತನಾಡಿದ್ದು, ಇದನ್ನು ಸ್ಥಳೀಯರು ನೋಡಿ ಆಕೆಯ ಮನೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಮನೆಯವರ ಬೈಗುಳಕ್ಕೆ ಅಂಜಿ ಬಾಲಕಿ ಇಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಒಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಆಕೆಯನ್ನು ಅ. 29ರಂದು ನಾಲ್ವರು ಯುವಕರು ಅಪಹರಿಸಿದ್ದು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸ್ಥಳೀಯರು ಆಗಮಿಸಿದಾಗ ಓಡಿ ಹೋಗಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದ್ದಾರೆ. ನ. 1ರಂದು ಆಕೆ ಮೃತಪಟ್ಟಿದ್ದಾಳೆ ಎಂದು ಸಂಘಪರಿವಾರದ ಸಂಘಟನೆಗಳು ಆರೋಪಿಸುತ್ತಿವೆ. ಕಳೆದೆರಡು ದಿನಗಳಿಂದ ಮೌನವಾಗಿದ್ದ ಆಕೆಯ ಪೋಷಕರು ನಾಲ್ವರು ಯುವಕರ ವಿರುದ್ಧ ಅತ್ಯಾಚಾರ ಯತ್ನ ಮತ್ತು ಕೊಲೆಯತ್ನ ದೂರು ದಾಖಲಿಸಿದ್ದಾರೆ. ಒಂದು ಮೂಲದ ಪ್ರಕಾರ, ನಾಲ್ವರು ಯುವಕರು ಬಾಲಕಿಯನ್ನು ಪುಸಲಾಯಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದರೆನ್ನಲಾಗಿದ್ದು ಬಾಲಕಿಯ ಕಿರುಚಾಟದಿಂದ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾದರೆಂದು ಹೇಳಲಾಗಿದೆ. ಆದರೆ ಸತ್ಯವೇನು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
   6. ಪ್ರಜಾವಾಣಿ
ಮುಖಪುಟ ಸುದ್ದಿ: ಶೀರ್ಷಿಕೆ - ವಿದ್ಯಾರ್ಥಿನಿ ಸಾವು: ತೀರ್ಥಹಳ್ಳಿಯಲ್ಲಿ ಗಲಾಟೆ
  ..ಅ. 29ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಂದಿತಾಳನ್ನು 4 ಮಂದಿ ಯುವಕರ ಗುಂಪು ಕಾರಿನಲ್ಲಿ ಅಪಹರಿಸಿತ್ತು. ತದ ನಂತರ ಪಟ್ಟಣದ ತುಂಗಾ ಬೆಟ್ಟದಲ್ಲಿ ವಿದ್ಯಾರ್ಥಿನಿಯನ್ನು ಬಿಟ್ಟು ಹೋಗಿತ್ತು. ಹೊಟ್ಟೆ ಮತ್ತು ತಲೆನೋವು ತಾಳಲಾರದೆ ಬಳಲಿದ್ದ ಬಾಲಕಿಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಳು.
  7. ಕನ್ನಡ ಪ್ರಭ
ಒಳಪುಟ ಸುದ್ದಿ - ಶೀರ್ಷಿಕೆ: ಅತ್ಯಾಚಾರಕ್ಕೊಳಗಾದ ತೀರ್ಥಹಳ್ಳಿ ಬಾಲಕಿ ಸಾವು
   ..ಬಾಲಕಿಯ ತಂದೆ ಕೃಷ್ಣಪ್ಪ ಹೇಳುವಂತೆ, ಗುರುವಾರ ಶಾಲೆಯಿಂದ ಮರಳುತ್ತಿದ್ದ 8ನೇ ತರಗತಿಯ ಈ ಮುಗ್ಧ ಬಾಲಕಿಯನ್ನು ಪರಿಚಯದ ಹುಡುಗನೊಬ್ಬ ಓಮ್ನಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರಿನಲ್ಲಿದ್ದ ಇತರ ಇಬ್ಬರು ಆಕೆಯ ನೀರಿನ ಬಾಟಲಿಗೆ ಯಾವುದೋ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಿದ್ದಾರೆ. ಪ್ರಜ್ಞೆ ತಪ್ಪಿದ ಆಕೆಯ ಜೊತೆಗೆ ಈ ಮೂರು ಮಂದಿ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸುಮಾರು ಒಂದು ಗಂಟೆಯ ನಂತರ ಓಮ್ನಿಯಿಂದ ಬಾಲಕಿಯನ್ನು ರಸ್ತೆ ಪಕ್ಕಕ್ಕೆ ದೂಡಿ ಹೋಗಿದ್ದಾರೆ. ಆಕೆಯನ್ನು ನೋಡಿದ ಯಾರೋ ಆಕೆಯ ಗುರುತಿನ ಚೀಟಿಯಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ ತಿಳಿಸಿದ್ದಾರೆ. ಆಕೆಯನ್ನು ಮನೆಗೆ ಕೊಂಡುಹೋದ ಮೇಲೆ ಆಕೆಗೆ ಪ್ರಜ್ಞೆ ಬಂದಿದ್ದು ವಿಪರೀತ ವಾಂತಿ ಮಾಡಿದ್ದಾಳೆ..”
    ಒಂದೇ ಘಟನೆ, ಒಂದೇ ದಿನ ಬೇರೆ ಬೇರೆ ಪತ್ರಿಕೆಗಳನ್ನು ಚಿತ್ರಿತವಾದ ರೀತಿ ಇದು. ಯಾಕೆ ಹೀಗೆ? ಸುದ್ದಿಗಳಲ್ಲಿ ಈ ಮಟ್ಟದ ವೈರುಧ್ಯಗಳೇಕಿವೆ? ನಿಜವಾಗಿ, ಇಂಥ ಘಟನೆಗಳಿಗೆ ಯಾವಾಗಲೂ ಒಂದಕ್ಕಿಂತ ಹೆಚ್ಚು ಮುಖಗಳಿರುತ್ತವೆ. ವಾರ್ತಾಭಾರತಿಯನ್ನು ಬಿಟ್ಟು ಉಳಿದ ಯಾವ ಪತ್ರಿಕೆಗಳೂ ಆ ಕುರಿತಂತೆ ಆಸಕ್ತಿಯನ್ನೇ ತೋರಿಲ್ಲ. ಕನಿಷ್ಠ ಪ್ರಜಾವಾಣಿ ತೋರಿದ ಸಂಯಮವನ್ನೂ ಅವು ಪ್ರದರ್ಶಿಸಿಲ್ಲ. ಅದರ ಬದಲು ಅವೆಲ್ಲ ಅತ್ಯಾಚಾರವನ್ನು ಸಾಬೀತುಪಡಿಸಲು ಜಿದ್ದಿಗೆ ಬಿದ್ದಂತೆ ವರ್ತಿಸಿದುವು. ಮಾನ, ಘನತೆ, ಗೌರವಗಳೆಲ್ಲ ಮೃತದೇಹಕ್ಕೂ ಇರುತ್ತದೆ ಮತ್ತು ಅದನ್ನು ಗೌರವಿಸ ಬೇಕಾಗಿದೆ ಎಂಬುದನ್ನು ಮರೆತಂತೆ ಬರೆದುವು. ಅಂದಹಾಗೆ,  ಬಾಲಕಿ ನಂದಿತಾ ಪ್ರಕರಣಕ್ಕೆ ಎರಡು ವಾರಗಳು ಸಂದ ಈ ಸಂದರ್ಭದಲ್ಲಿ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಏನನಿಸುತ್ತದೆ? ಮಗಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ವತಃ ತಂದೆ ಕೃಷ್ಣಪ್ಪರೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಮಾತು - ವರ್ತನೆಗಳಲ್ಲಿ ಅಸಹಜತೆ ವ್ಯಕ್ತವಾಗುತ್ತಿದೆ. ಘಟನೆಗೆ ಬೇರೆಯದೇ ಆದ ಆಯಾಮಗಳಿರಬಹುದು ಎಂದು ಶಂಕಿಸುವುದಕ್ಕೆ ಪೂರಕವಾದ ಅಂಶಗಳು ಗೋಚರಿಸುತ್ತಿವೆ. ಆದರೆ ನವಂಬರ್ 2ರಿಂದ ಬಹುತೇಕ ಒಂದು ವಾರಗಳ ಕಾಲ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಇಂಥದ್ದೊಂದು ಸುಳಿವನ್ನೇ ಕೊಡದಷ್ಟು ಏಕಮುಖವಾಗಿದ್ದುವು. ಘಟನೆಗೆ ಇನ್ನೊಂದು ಮುಖವಿರಬಹುದೇ ಎಂಬ ಶಂಕೆಗೆ ಆಸ್ಪದವೇ ಇಲ್ಲದಂತೆ ವರ್ತಿಸಿದುವು. ಈ ಬೇಜವಾಬ್ದಾರಿ ವರ್ತನೆಯೇ ತೀರ್ಥಹಳ್ಳಿಯನ್ನು ಉರಿಸಿದ್ದು ಅಥವಾ ಉರಿಸಲು ಬಯಸಿದವರಿಗೆ ನೆರವಾದದ್ದು. ಅಷ್ಟಕ್ಕೂ,
   ರೋಚಕತೆ, ಸುದ್ದಿವೈಭವ, ಊಹೆ, ಅತಿರೇಕಗಳ ಹಂಗಿಲ್ಲದೇ ಒಂದು ಸುದ್ದಿಯನ್ನು ಕೇವಲ ಸುದ್ದಿಯಾಗಿಯಷ್ಟೇ ಓದುಗನಿಗೆ ಕಟ್ಟಿಕೊಡಬೇಕಾದುದು ಪತ್ರಿಕಾ ಧರ್ಮ ಎಂದಾದರೆ ಆ ಧರ್ಮ ಇವತ್ತು ಎಲ್ಲಿದೆ, ಎಷ್ಟರ ಮಟ್ಟಿಗೆ ಜೀವಂತವಾಗಿದೆ ಮತ್ತು ಯಾರೆಲ್ಲ ಅದನ್ನು ಅನುಸರಿಸುತ್ತಿದ್ದಾರೆ?

Tuesday, November 4, 2014

 ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿ

     ಮಹಾತ್ಮಾ ಗಾಂಧಿ
  ಸರ್ದಾರ್ ಪಟೇಲ್
  ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ಹೆಸರುಗಳನ್ನು ಬಾರಿಬಾರಿಗೂ ಸ್ಮರಿಸುತ್ತಿದ್ದಾರೆ. ಓರ್ವರನ್ನು ರನ್ ಫಾರ್ ಯುನಿಟಿಗೂ (ಏಕತೆಗಾಗಿ ಓಟ) ಇನ್ನೋರ್ವರನ್ನು ಸ್ವಚ್ಛ ಭಾರತಕ್ಕೂ ಬಳಸಿಕೊಂಡಿದ್ದಾರೆ. ‘ಸರ್ದಾರ್ ಇಲ್ಲದ ಗಾಂಧಿ ಅಪೂರ್ಣ’ ಎಂಬೊಂದು ಆಕರ್ಷಕ ನುಡಿಗಟ್ಟನ್ನೂ ಉದುರಿಸಿದ್ದಾರೆ. ಹೀಗೆ ‘ಗಾಂಧಿಯನ್ನು ಪೂರ್ಣಗೊಳಿಸುವ ಪಟೇಲರಿಗಾಗಿ’ ನರ್ಮದಾ ನದಿ ಕಣಿವೆಯಲ್ಲಿ 600 ವಿೂಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಸಿಟಿಝನ್ ಫಾರ್ ಅಕೌಂಟೇಬಲ್ ಗವರ್ನ್‍ಮೆಂಟ್ ಎಂಬ ಸರಕಾರೇತರ ಸಂಸ್ಥೆಯೊಂದು ಈ ಪ್ರತಿಮೆಗಾಗಿ ಅಭಿಯಾನ ನಡೆಸುತ್ತಿದೆ. ಮನೆ ಮನೆಗೆ ಭೇಟಿ ಕೊಡುತ್ತಿದೆ. ರಾಮಮಂದಿರಕ್ಕೆ ಇಟ್ಟಿಗೆಯನ್ನು ಸಂಗ್ರಹಿಸಿದಂತೆ ಪಟೇಲ್ ಪ್ರತಿಮೆಗೆ ಪ್ರತಿಯೋರ್ವರಿಂದಲೂ ದುಡ್ಡು, ಉಕ್ಕಿನ ಸಂಗ್ರಹವಾಗುತ್ತಿದೆ. ಅದಕ್ಕೆಂದೇ www.statueofunity ಎಂಬ ವೆಬ್‍ಸೈಟ್ ಪ್ರಾರಂಭಿಸಲಾಗಿದ್ದು, 2500 ಕೋಟಿ ರೂಪಾಯಿಯ ಆ ಯೋಜನೆಯ ಬಗ್ಗೆ ಅದರಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಇದಾಗಲಿದ್ದು, ನ್ಯೂಯಾರ್ಕ್‍ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಮತ್ತು ಬ್ರೆಜಿಲ್‍ನ ರಿಯೋ ಡಿ ಜನಿರೋದಲ್ಲಿರುವ ಕ್ರಿಸ್ಟ್ ದಿ ರಿಡೀಮರ್‍ಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟನ್ನೂ ಇದಕ್ಕಾಗಿ ರಚಿಸಲಾಗಿದೆ. ಸಂದರ್ಶಕರ ಕೊಠಡಿ, ಅಮ್ಯೂಸ್‍ಮೆಂಟ್ ಪಾರ್ಕ್, ವಿಶಾಲ ಸಭಾಂಗಣ, ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿರುವ ಪಟೇಲ್‍ರ ಈ ಪ್ರತಿಮೆ ಯೋಜನೆಯನ್ನು ಸ್ವಚ್ಛ ಭಾರತದ ಗಾಂಧೀಜಿಗೆ ಒಮ್ಮೆ ಹೋಲಿಸಿ ನೋಡಿ. ಯಾರು ಪೂರ್ಣವಾಗುತ್ತಿದ್ದಾರೆ? ಗಾಂಧಿಯೋ ಪಟೇಲರೋ? ಸ್ವಚ್ಛ ಭಾರತ್ ಅಭಿಯಾನವನ್ನು ಘೋಷಿಸುವ ಸಂದರ್ಭದಲ್ಲೂ ತೀವ್ರ ಬಲಪಂಥೀಯ ವ್ಯಕ್ತಿತ್ವಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ್ ಮತ್ತು ಮದನ್ ಮೋಹನ್ ಮಾಳವಿಯರನ್ನು ಮೋದಿಯವರು ಸ್ಮರಿಸಿ ಕೊಂಡಿದ್ದರು. ಗಾಂಧಿ ಎಂಬುದು ಮೋದಿ ಮತ್ತು ಅವರ ಪರಿವಾರಕ್ಕೆ ಎಂದೂ ಜೀರ್ಣಿಸಲಾಗದ ವ್ಯಕ್ತಿತ್ವ. ಗಾಂಧಿಯವರ ಅಭಿವೃದ್ಧಿ ಚಿಂತನೆಗೂ ಮೋದಿಯವರ ಅಭಿವೃದ್ಧಿ ಚಿಂತನೆಗೂ ತದ್ವಿರುದ್ಧ ಎನ್ನಬಹುದಾದಷ್ಟು ವ್ಯತ್ಯಾಸಗಳಿವೆ. ದೇಶಪ್ರೇಮ, ರಾಷ್ಟ್ರೀಯ ಭದ್ರತೆ, ಕೈಗಾರಿಕಾ ನೀತಿ, ಅರ್ಥವ್ಯವಸ್ಥೆ ಮತ್ತು ಜಾತ್ಯತೀತತೆ.. ಎಲ್ಲದರ ವಿಷಯದಲ್ಲೂ ಗಾಂಧಿ ಮತ್ತು ಮೋದಿಯವರು ಉತ್ತರ-ದಕ್ಷಿಣ. ಆದ್ದರಿಂದಲೇ, ಪ್ರಧಾನಿಯಾಗುವವರೆಗೆ ಗಾಂಧಿಯನ್ನು ಹೊರಗಿಟ್ಟೇ ಮೋದಿ ಮಾತಾಡುತ್ತಿದ್ದರು. ಗಾಂಧಿ ಎಂಬೊಂದು ವ್ಯಕ್ತಿತ್ವವು ಈ ದೇಶವನ್ನು ಮತ್ತು ಇಲ್ಲಿಯ ನಾಗರಿಕರನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ ಎಂಬ ಸತ್ಯವನ್ನು ಅಲ್ಲಗಳೆಯುವ ರೀತಿಯಲ್ಲಿ ಅವರು ವರ್ತಿಸಿದ್ದರು. ಪಟೇಲ್‍ರು ಗುಜರಾತ್‍ನವರಾದಂತೆಯೇ ಗಾಂಧಿ ಕೂಡ ಗುಜರಾತ್‍ನವರೇ. ಪಟೇಲ್‍ರಿಗೆ ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಅವರನ್ನು ಗೌರವಾರ್ಹ ವ್ಯಕ್ತಿತ್ವವಾಗಿ ಗುರುತಿಸಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟು, ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸರ್ದಾರ್ ಪಟೇಲ್ ಯುನಿವರ್ಸಿಟಿ ಮುಂತಾದ ರೂಪದಲ್ಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿತ್ತು. ಆದ್ದರಿಂದ, “ಕಾಂಗ್ರೆಸ್ ಸರಕಾರ ಪಟೇಲ್‍ರನ್ನು ನಿರ್ಲಕ್ಷಿಸಿದುದರಿಂದ ಪ್ರತಿಮೆ ನಿರ್ಮಿಸಬೇಕಾಯಿತು” ಎಂಬ ಮೋದಿವಾದ ಸುಳ್ಳು ಮತ್ತು ಅತಾರ್ಕಿಕವಾದುದು. ಒಂದು ರೀತಿಯಲ್ಲಿ, ಗುಜರಾತ್‍ನವರಾಗಿಯೂ ಗುಜರಾತ್‍ನಲ್ಲಿ ಕಳೆದು ಹೋಗಿರುವುದು ಗಾಂಧಿಯೇ. ಅವರನ್ನು ಸಬರಮತಿಯ ಆಶ್ರಮಕ್ಕೆ ಸೀಮಿತಗೊಳಿಸಿ ಬಿಡಲಾಗಿದೆ. ಧರಣಿ, ಸತ್ಯಾಗ್ರಹ, ಹಿಂದೂ-ಮುಸ್ಲಿಮ್ ಏಕತೆ ಮುಂತಾದುವುಗಳೆಲ್ಲ ನೆಲೆ ಕಳೆದುಕೊಂಡಿರುವುದೂ ಗುಜರಾತ್‍ನಲ್ಲಿಯೇ. ನಿಜವಾಗಿ, ಗುಜರಾತ್‍ನಲ್ಲಿ ಪ್ರತಿಮೆ ನಿರ್ಮಾಣ ವಾಗಲೇಬೇಕಿದ್ದರೆ (ಪ್ರತಿಮೆ ನಿರ್ಮಾಣವೇ ತಪ್ಪು) ಅದು ಗಾಂಧಿಯದ್ದಾಗಿರಬೇಕಿತ್ತು. ಆದರೆ ಗಾಂಧಿಯನ್ನು ಕಸ ಗುಡಿಸುವುದಕ್ಕೆ, ಡ್ರೈನೇಜ್ ಸ್ವಚ್ಛಗೊಳಿಸುವುದಕ್ಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳ ಮಟ್ಟಕ್ಕೆ ಇಳಿಸಿಬಿಟ್ಟು ಪಟೇಲ್‍ರನ್ನು  ಪ್ರತಿಮೆಯಲ್ಲಿ ಮೋದಿ ಎತ್ತಿ ನಿಲ್ಲಿಸಿದ್ದಾರೆ. ಈ ಮೂಲಕ ಗಾಂಧಿಯನ್ನು ರಾಜಕೀಯ ರಹಿತ ವ್ಯಕ್ತಿತ್ವವಾಗಿ ಕಟ್ಟಿಕೊಡುವ ಸಂಚು ಎದ್ದು ಕಾಣುತ್ತಿದೆ. ರಾಜಕೀಯವಾಗಿ ಗಾಂಧಿ ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತಾರೋ ಅಲ್ಲಿಯ ವರೆಗೆ ಮೋದಿ ಮತ್ತು ಅವರ ಪರಿವಾರದ ಚಿಂತನೆಗಳಿಗೆ ಸವಾಲು ಎದುರಾಗುತ್ತಲೇ ಇರುತ್ತದೆ. 1948ರಲ್ಲಿ ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇವತ್ತು ಕೂಡಾ ಬಹು ಚರ್ಚಿತ ವ್ಯಕ್ತಿಯಾಗಿ ಜೀವಂತ ಇದ್ದಾನೆ. ಗಾಂಧಿ ಈ ದೇಶದಲ್ಲಿ ಚರ್ಚೆಗೆ ಒಳಗಾಗುವುದು ಇತರ ನಾಯಕರಂತೆ ಪುಣ್ಯ ತಿಥಿಯಂದೋ ಹುಟ್ಟು ಹಬ್ಬದಂದೋ ಅಥವಾ ಕೆಲವು ನಿರ್ದಿಷ್ಟ ದಿನಗಳಂದೋ ಅಲ್ಲ. ಈ ದೇಶದ ಆಡಳಿತವು ತೆಗೆದುಕೊಳ್ಳುವ ಬಹುತೇಕ ಪ್ರತಿ ನಿರ್ಧಾರದ ಸಂದರ್ಭದಲ್ಲೂ ಅವರು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಗೊಳ್ಳುತ್ತಾರೆ. ಅವರ ಆಲೋಚನೆಗಳನ್ನು ಮತ್ತು ಪ್ರಸ್ತುತ ಆಡಳಿತದ  ಆಲೋಚನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. ಒಂದು ವೇಳೆ, ಗಾಂಧಿಯವರದು ಸ್ವಚ್ಛತೆ, ಸಮಾಜಸೇವಾ ಕಾರ್ಯಗಳು ಅಥವಾ ಸರಳ ಜೀವನ ಮುಂತಾದ ತೀರಾ ರಾಜಕೀಯ ರಹಿತ ವ್ಯಕ್ತಿತ್ವವಾಗಿರುತ್ತಿದ್ದರೆ ಈ 6 ದಶಕಗಳ ಬಳಿಕವೂ ಗೋಡ್ಸೆಯ ಗುಂಡು ಚರ್ಚಾರ್ಹ ಎನಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಗಾಂಧಿ ಯಾವಾಗಲೋ ಓರ್ವ ಸಮಾಜ ಸೇವಕರಾಗಿ ಕಾಣೆಯಾಗುತ್ತಿದ್ದರು. ಬಹುಶಃ ಗಾಂಧಿಗಿರುವ ಈ ವಿಶೇಷತೆಯೇ ಅವರನ್ನು ಅತ್ತ ಒಪ್ಪಿಕೊಳ್ಳಲೂ ಆಗದ ಇತ್ತ ತಿರಸ್ಕರಿಸಲೂ ಆಗದ ಸಂದಿಗ್ಧತೆಗೆ ಮೋದಿ ಮತ್ತು ಪರಿವಾರವನ್ನು ನೂಕಿಬಿಟ್ಟಿದೆ. ಈ ಹಿನ್ನೆಲೆಯಿಂದಾಗಿಯೇ ಮೋದಿಯವರು ಗಾಂಧಿಯನ್ನು ಸ್ವಚ್ಛ ಭಾರತಕ್ಕೆ ಜೋಡಿಸಿರಬೇಕು. ಓರ್ವ ಸೋಶಿಯಲ್ ವರ್ಕರ್ ಎಂಬಂತೆ ಗಾಂಧಿಯನ್ನು ಬೀದಿಬದಿಯಲ್ಲಿ ಕಸಗುಡಿಸಲು ನಿಲ್ಲಿಸುತ್ತಲೇ ಪಟೇಲ್‍ರನ್ನು ಪ್ರತಿಮೆಯ ಮೂಲಕ ರಾಜಕೀಯ ವ್ಯಕ್ತಿತ್ವವಾಗಿ ಕಟ್ಟಿಕೊಡುವುದು ಮೋದಿಯವರ ಇಂಗಿತವಾದಂತಿದೆ. ಸ್ವಚ್ಛ ಭಾರತದ ಗಾಂಧಿಯ ಎದುರು ಪ್ರತಿಮೆಯ ಪಟೇಲರನ್ನು ನಿಲ್ಲಿಸುವಾಗ ಗೆಲ್ಲುವುದು ಪಟೇಲರೇ. ಪ್ರತಿಮೆ ಸ್ಥಾಯಿಯಾದುದು. ಅದು ಅನಂತ ಕಾಲದ ವರೆಗೆ ಇರಬಲ್ಲುದು. ಆದರೆ ಸ್ವಚ್ಛ ಭಾರತಕ್ಕೆ ಸೀಮಿತತೆ ಮತ್ತು ಕಾಲಮಿತಿ ಎರಡೂ ಇದೆ. ಅದೊಂದು ಯೋಜನೆ. ಆ ಯೋಜನೆಯ ಮೂಲಕ ಗಾಂಧಿ ಚರ್ಚೆಗೀಡಾಗುವುದು ನೈರ್ಮಲ್ಯದ ಸುತ್ತ ಮಾತ್ರ. ಆ ಚರ್ಚೆ ಎಂದೂ ಗಾಂಧಿಯವರ ರಾಜಕೀಯ ಆಲೋಚನೆಗಳ ಕಡೆಗೆ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಮೆಗಾದರೋ ಉಕ್ಕಿನ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವು ಬಲಾಢ್ಯತೆ, ಶ್ರೇಷ್ಠತೆ ಮುಂತಾದ ಗುಣಗಳನ್ನೇ ಧ್ವನಿಸುತ್ತದೆ. ಬಹುಶಃ ಸ್ವಚ್ಛ ಭಾರತ ಮತ್ತು ಪ್ರತಿಮೆ ನಿರ್ಮಾಣದ ಮೂಲಕ ಗಾಂಧಿಯನ್ನು ರಾಜಕೀಯ ರಹಿತಗೊಳಿಸಿ ಪಟೇಲರನ್ನು ಮೋದಿ ಬ್ರಾಂಡಿನ ಹೊಸ ರಾಜಕೀಯ ಪ್ರತಿರೂಪವಾಗಿ ಕಟ್ಟಿಕೊಡುವ ಪ್ರಯತ್ನ ಸಾಗುತ್ತಿರುವಂತೆ ಕಾಣುತ್ತಿದೆ.
 ನಿಜವಾಗಿ, ಗಾಂಧಿ ಮತ್ತು ಪಟೇಲ್ ಇಬ್ಬರೂ ಕಾಂಗ್ರೆಸಿಗರೇ.  ಅವರಿಬ್ಬರ ಐಡಿಯಾಲಜಿಯೂ ಕಾಂಗ್ರೆಸನ್ನು ಬೆಳೆಸಿದೆ ಮತ್ತು ಬಲಿಷ್ಠಗೊಳಿಸಿದೆ. ತನ್ನ ಬದುಕಿನುದ್ದಕ್ಕೂ ಕಾಂಗ್ರೆಸಿನವರಾಗಿದ್ದುಕೊಂಡೇ ಬದುಕಿದ್ದು ಮತ್ತು ಕಾಂಗ್ರೆಸ್ ಅನ್ನು  ಸಮರ್ಥಿಸಿಕೊಂಡವರಾಗಿದ್ದರು ಪಟೇಲರು. ಆದರೆ ಮೋದಿ ಮತ್ತು ಅವರ ಬೆಂಬಲಿಗರು ಈ ಸತ್ಯವನ್ನು ಎಲ್ಲೂ ಹೇಳದೆಯೇ ಅವರನ್ನು ತಮ್ಮವರೆಂದೂ ಅವರ ಐಡಿಯಾಲಜಿಯು ತಮ್ಮದೆಂದೂ ಬಿಂಬಿಸುವ ಯತ್ನದಲ್ಲಿದ್ದಾರೆ. ಪಟೇಲರ ಐಡಿಯಾಲಜಿ ಕಾಂಗ್ರೆಸ್‍ನ ಐಡಿಯಾಲಜಿಯಾಗಿತ್ತು. ಗಾಂಧಿ, ನೆಹರೂರಂತೆಯೇ ದ್ವೇಷ ರಾಜಕೀಯವನ್ನು ಇಷ್ಟಪಡದವರು ಪಟೇಲರು. ಆದ್ದರಿಂದಲೇ, 1949ರಲ್ಲಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಲಾದ ಮತ್ತು ಅಲ್ಲಿದ್ದ ಮೌಲ್ವಿಯನ್ನು ಓಡಿಸಿ ಅದರೊಳಗೆ ರಾಮ ವಿಗ್ರಹ ಪ್ರತಿಷ್ಠಾಪಿಸಲಾದ ಘಟನೆಯ ವಿರುದ್ಧ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. “ವಿವಾದವನ್ನು ಬಲವಂತದಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ, ನೀವಿದಕ್ಕೆ ಆಸ್ಪದ ಕೊಡಬೇಡಿ” ಎಂದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಿ.ಬಿ. ಪಂತ್‍ರಿಗೆ ಅವರು ಖಾರ ಪತ್ರವನ್ನು ಬರೆದಿದ್ದರು. ಗಾಂಧಿ ಹತ್ಯೆಯ ತರುವಾಯ ಆರೆಸ್ಸೆಸ್‍ಗೆ ನಿಷೇಧ ವಿಧಿಸಿದ್ದೂ ಪಟೇಲರೇ. ನಿಷೇಧವನ್ನು ಹಿಂತೆಗೆದುಕೊಳ್ಳುವುದಕ್ಕೆ, “ಸಾಮಾಜಿಕ ಸಂಘಟನೆಯಾಗಿ ಚಟುವಟಿಕೆಯಲ್ಲಿರುತ್ತೇವೆ, ರಾಜಕೀಯ ಪ್ರವೇಶಿಸುವುದಿಲ್ಲ” ಎಂಬ ಮುಚ್ಚಳಿಕೆಯನ್ನು ಷರತ್ತು ಆಗಿ ಮುಂದಿಟ್ಟವರೂ ಪಟೇಲರೇ. ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಖಾರ ಪತ್ರವನ್ನು ಬರೆದವರೂ ಅವರೇ. ‘ಇಂಡಿಯಾ ವಿನ್ಸ್ ಫ್ರೀಡಮ್' ಎಂಬ ಕೃತಿಯಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್‍ರು ಭಾರತ ವಿಭಜನೆಗೊಂಡ ಬಗ್ಗೆ ಮತ್ತು ಆ ಸಮಯದಲ್ಲಿ ಪಟೇಲರ ದೃಷ್ಟಿಕೋನದ ಬಗ್ಗೆ ಬರೆದಿದ್ದಾರೆ. ನೆಹರೂ ಅವರಿಗಿಂತ 6 ತಿಂಗಳು ಮೊದಲೇ ವಿಭಜನೆಯನ್ನು ಅನಿವಾರ್ಯ ಎಂದು ಒಪ್ಪಿಕೊಂಡವರು ಪಟೇಲರಾಗಿದ್ದರು. ಅವರು 1946 ಡಿಸೆಂಬರ್‍ನಲ್ಲಿಯೇ ವಿಭಜನೆಯ ಪರ ನಿಲುವನ್ನು ಹೊಂದಿದ್ದರು. ಕೊನೆ ಕ್ಷಣದ ವರೆಗೆ ದೇಶ ವಿಭಜನೆಗೆ ವಿರುದ್ಧವಾಗಿದ್ದ ಆಝಾದ್‍ರಿಗೆ ಅತ್ಯಂತ ಆಘಾತ ಮತ್ತು ಅಚ್ಚರಿಯಾದದ್ದು ಪಟೇಲರ ಈ ನಿಲುವೇ ಆಗಿತ್ತು. ಅವರು ಪಟೇಲರ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನಾವು ಇಷ್ಟಪಡುತ್ತೇವೋ ಇಲ್ಲವೋ ಆದರೆ ಭಾರತದಲ್ಲಿ ಎರಡು ದೇಶಗಳಿವೆ” ಎಂಬ ಪಟೇಲರ ಪತ್ರವನ್ನು ಓದಿ ನಾನು ದುಃಖಿತನಾದೆ ಎಂದು ಆಝಾದ್‍ರು ಇಂಡಿಯಾ ವಿನ್ಸ್ ಫ್ರೀಡಮ್‍ನಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಥ ಪಟೇಲರನ್ನು ಮೋದಿಯವರು ಇವತ್ತು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟೇಲರು ಕಾಂಗ್ರೆಸ್‍ನೊಳಗಿದ್ದೂ ಕಾಂಗ್ರೆಸ್ ಅಲ್ಲದ ವ್ಯಕ್ತಿಯಾಗಿದ್ದರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನವೊಂದು ರನ್ ಫಾರ್ ಯುನಿಟಿ ಮತ್ತು ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರ ಮಾತು-ಕೃತಿಯಲ್ಲಿದೆ. ನಿಜವಾಗಿ, ಪಟೇಲ್ ಇಲ್ಲದ ಕಾಂಗ್ರೆಸ್ ಹೇಗೆ ಅಪೂರ್ಣವೋ ಗಾಂಧಿ ಇಲ್ಲದ ಭಾರತೀಯ ರಾಜಕೀಯವೂ ಅಷ್ಟೇ ಅಪೂರ್ಣ. ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ನೆಹರೂ, ಆಝಾದ್, ಪಟೇಲ್, ಗಾಂಧಿ ಮುಂತಾದವರ ಕಾಲದ ಕಾಂಗ್ರೆಸ್ ಎಂದೂ ಒಂದು ಪಕ್ಷವಾಗಿರಲಿಲ್ಲ. ಅದೊಂದು
ತತ್ವ-ಸಿದ್ಧಾಂತಗಳುಳ್ಳ ಮನೆಯಾಗಿತ್ತು. ಅಲ್ಲಿ ಪಟೇಲರಿಗೂ, ನೆಹರೂರಿಗೂ ಆಝಾದ್‍ರಿಗೂ ಗಾಂಧೀಜಿಗೂ ಭಿನ್ನ ಭಿನ್ನ ಅಭಿಪ್ರಾಯಗಳಿದ್ದುವು. ಸರಿ ತಪ್ಪುಗಳ ಬಗ್ಗೆ ತಕರಾರುಗಳಿದ್ದುವು. ಆದರೆ ಅವರೆಂದೂ ಜನಾಂಗ ದ್ವೇಷಿಗಳೋ ಧಾರ್ಮಿಕ ಅಸಹಿಷ್ಣುಗಳೋ ಆಗಿರಲಿಲ್ಲ. ಭಾರತ ವಿಭಜನೆಯಾಗುವುದನ್ನು ಒಪ್ಪುವವರು ಮತ್ತು ಒಪ್ಪದವರು, ಪಾಕಿಸ್ತಾನಕ್ಕೆ ಪರಿಹಾರವಾಗಿ 50 ಕೋಟಿ ರೂಪಾಯಿ ಕೊಡಬೇಕೆನ್ನುವ ಗಾಂಧಿ ಅಭಿಪ್ರಾಯವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಅವರಲ್ಲಿ ಇದ್ದರೂ ಅದನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿಯೇ ಅವರು ಪರಿಗಣಿಸಿದ್ದರು. ಆದರೆ ಇವತ್ತು ಮೋದಿ ಮತ್ತು ಅವರ ಪರಿವಾರವು ಕಾಂಗ್ರೆಸ್ ಮನೆಯಿಂದ ಪಟೇಲ್‍ರನ್ನು ಅಪಹರಿಸಿ ತಂದು ಅವರಿಗೆ ತನ್ನ ಬಣ್ಣ ವನ್ನು ಬಳಿಯುವ ಪ್ರಯತ್ನ ಮಾಡುತ್ತಿದೆ. ‘ಉಕ್ಕಿನ ಮನುಷ್ಯ’, ‘ದೇಶ ವಿಭಜನೆಯ ವಿರೋಧಿ’, ‘ದೇಶವನ್ನು ಒಗ್ಗೂಡಿಸಿದ ವ್ಯಕ್ತಿ’.. ಎಂಬೆಲ್ಲ ಬಿರುದುಗಳನ್ನು ನೀಡಿ ಮೆರವಣಿಗೆ ಮಾಡುತ್ತಿದೆ. ಅವರ ಪ್ರತಿಮೆಯನ್ನು ಕೆತ್ತುವ ಉತ್ಸಾಹದಲ್ಲಿದೆ. ಇದು ಹೇಗಿದೆಯೆಂದರೆ, ವಾಜಪೇಯಿಯವರನ್ನು ತಮ್ಮವರೆಂದು ಕರೆದು ಕಾಂಗ್ರೆಸಿಗರು ಪ್ರತಿಮೆ ನಿರ್ಮಿಸಿದಂತೆ. ಅವರ ಐಡಿಯಾಲಜಿಯನ್ನು ತಮ್ಮ ಐಡಿಯಾಲಜಿ ಎಂದು ಹೇಳಿಕೊಂಡಂತೆ. ನಿಜ ಏನೆಂದರೆ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರೆಂದು ಹೇಳಿಕೊಳ್ಳಬಹುದಾದ ಯಾರೊಬ್ಬರೂ ಮೋದಿ ಮತ್ತು ಅವರ ಪರಿವಾರಕ್ಕಿಲ್ಲ. ಇರುವವರೆಲ್ಲ ಕಾಂಗ್ರೆಸಿಗರೇ. ಈ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವರು ಪಟೇಲರನ್ನು ಹೆಕ್ಕಿಕೊಂಡಿದ್ದಾರೆ. ಮಾತ್ರವಲ್ಲ, ಅವರಿಗೆ ಬಂಡಾಯ ಕಾಂಗ್ರೆಸಿಗನ ವೇಷ ತೊಡಿಸಿ ‘ಅವರ ಆಲೋಚನೆಗಳೇ ನಮ್ಮವು' ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ಇದೀಗ ಅವರಿಗೆ ಗಾಂಧಿ ಇಲ್ಲದ ಪಟೇಲ್ ಪರಿಣಾಮಕಾರಿಯಲ್ಲ ಎಂಬುದು ಮನವರಿಕೆಯಾಗಿರಬೇಕು. ಈ ಕಾರಣದಿಂದಲೇ ರಾಜಕೀಯ ರಹಿತ ಸಾಧು ಗಾಂಧಿಯನ್ನು ಅವರು ಸ್ವಚ್ಛ ಭಾರತದ ನೆಪದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಾಂಧಿ ಮತ್ತು ಪಟೇಲರನ್ನು ಒಟ್ಟಿಗೇ ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ಪ್ರಬಲ ವ್ಯಕ್ತಿತ್ವವಾಗಿ ಪಟೇಲ್‍ರು ಮತ್ತು ಇನ್ನೊಂದು ಕಡೆ ಸಾಧು ವ್ಯಕ್ತಿತ್ವವಾಗಿ ಗಾಂಧಿ - ಹೀಗೆ ಇವರಿಬ್ಬರನ್ನು ಬಳಸಿಕೊಂಡು ಮೋದಿಯವರು ತಮ್ಮ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರು ಇಂದಿನ ಮಾತು ಮುಂದಿನ ದಿನಗಳಲ್ಲಿ, ‘ಗಾಂಧಿ ಇಲ್ಲದ ಪಟೇಲ್ ಅಪೂರ್ಣ’ ಎಂದಾಗಿ ಕೊನೆಗೆ, ಗಾಂಧಿ ಅಪೂರ್ಣವಾಗಿಯೂ ಪಟೇಲ್ ಪೂರ್ಣವಾಗಿಯೂ ವ್ಯಾಖ್ಯಾನಕ್ಕೀಡಾಗಬಹುದು. ಅಂತಿಮವಾಗಿ ಗೋಡ್ಸೆಯೇ ವಿಜೃಂಭಿಸಲೂ ಬಹುದು.

Monday, October 27, 2014

ನುಡಿಸಿರಿಯನ್ನು ಒಪ್ಪಿಕೊಳ್ಳುವ ಸಿದ್ದಲಿಂಗಯ್ಯ ಮತ್ತು ನೋಬೆಲ್ ಅನ್ನು ತಿರಸ್ಕರಿಸುವ ಸರ್ತೆ

      “ಅಲ್ಜೀರಿಯಾದ ವಿರುದ್ಧ ಫ್ರಾನ್ಸ್ ನಡೆಸುತ್ತಿದ್ದ ಯುದ್ಧದ ಸಂದರ್ಭದಲ್ಲಿ ನಾವು 121 ಹೇಳಿಕೆಗೆ (Declaration of the121) ಸಹಿ ಹಾಕಿದೆವಲ್ಲ, ಆಗ ಈ ನೋಬೆಲ್ ಪಾರಿತೋಷಕವನ್ನು  ನನಗೆ ನೀಡಿರುತ್ತಿದ್ದರೆ ನಾನು ಸ್ವೀಕರಿಸಬಹುದಿತ್ತು. ಯಾಕೆಂದರೆ ಅದು ನನ್ನ ಪಾಲಿಗೆ ಮಾತ್ರವಲ್ಲ, ನಾವು ಯಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರೆಲ್ಲರ ಪಾಲಿಗೆ ಸಲ್ಲುವ ಗವ್ ರವ ವಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸದೆ ಯುದ್ಧ ಮುಗಿದ ಬಳಿಕ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಲ್ಲದೆ, ಪ್ರಶಸ್ತಿಯು ಪಶ್ಚಿಮದ ಸಾಹಿತಿಗಳಿಗೆ ಇಲ್ಲವೇ ಪೂರ್ವದ ಬಂಡಾಯಗಾರರಿಗೆ ಎಂಬ ರೀತಿಯಲ್ಲಿ ಯಾಕೆ ವಿತರಣೆಯಾಗುತ್ತಿದೆ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ನಾನು ಈ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ..”
   ‘ದಿ ವಾಲ್', ‘ದಿ ಫೈಲ್ಸ್', ‘ನೋ ಎಕ್ಸಿಸ್ಟ್', ‘ದಿ ವಿಕ್ಟರ್ಸ್', ‘ಡರ್ಟಿ ಹ್ಯಾಂಡ್ಸ್', ‘ಟ್ರಬಲ್ಡ್ ಸ್ಲೀಪ್', ‘ದಿ ಡೆವಿಲ್ ಆ್ಯಂಡ್ ಗುಡ್ ಲಾರ್ಡ್', ‘ದಿ ಟ್ರೋಜನ್ ವುಮೆನ್', ‘ದಿ ಕಂಡೆಮ್‍ನ್ಡ್ ಆಫ್ ಅಲ್ ಟೋನಾ..' ಮುಂತಾದ ಮೇರು ಕೃತಿಗಳನ್ನು ಬರೆದ ಫ್ರಾನ್ಸ್ ನ ಖ್ಯಾತ ಸಾಹಿತಿ ಜೀನ್ ಪಾಲ್ ಸರ್ತೆ 1964ರಲ್ಲಿ ತನಗೆ ಸಿಕ್ಕ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸುತ್ತಾ ಹೇಳಿದ ಮಾತುಗಳಿವು. ದಸರಾವನ್ನು ಉದ್ಘಾಟಿಸಿದ ಗಿರೀಶ್ ಕಾರ್ನಾಡ್‍ರ ಕುರಿತಂತೆ ಅಥವಾ ವಿಹಿಂಪ ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಮೋಹನ್ ಆಳ್ವರ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ಕವಿ ಸಿದ್ಧಲಿಂಗಯ್ಯನವರ ಕುರಿತಂತೆ ಉಂಟಾದ ಪರ-ವಿರುದ್ಧ ಅಭಿಪ್ರಾಯಗಳಂತೆ ಸರ್ತೆಯವರ ನಿರ್ಧಾರವೂ ಅಂದು ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.  ತನ್ನ ಯುದ್ಧ ವಿರೋಧಿ ನಿಲುವನ್ನು ಪ್ರಶಸ್ತಿಯ ಆಯ್ಕೆಗೆ ಮಾನದಂಡವಾಗಿ ಬಳಸಿಕೊಳ್ಳಬೇಕಿತ್ತೆಂದು ಸರ್ತೆ ಒತ್ತಡ ಹಾಕುವುದು ಎಷ್ಟು ಸರಿ ಎಂಬ ವಾದವನ್ನು ಅಂದು ಹಲವರು ಮುಂದಿಟ್ಟಿದ್ದರು. ಪ್ರಶಸ್ತಿಯನ್ನು ಯಾವಾಗ, ಯಾವ ಸಂದರ್ಭದಲ್ಲಿ ನೀಡಬೇಕೆಂದು ಸ್ವತಃ ಸಾಹಿತಿಯೇ ತೀರ್ಮಾನಿಸುವುದು ಅಸಂಬದ್ಧ ಎಂದೂ ಹೇಳಿದವರಿದ್ದರು. ಅದೇ ವೇಳೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಫ್ರಾನ್ಸಿನ ಅತಿಕ್ರಮಣ ನೀತಿಯನ್ನು ಖಂಡಿಸುವುದಕ್ಕಿಂತ ಪ್ರಶಸ್ತಿಯನ್ನು ತಿರಸ್ಕರಿಸಿ ಪ್ರತಿಭಟಿಸುವುದೇ ಹೆಚ್ಚು ಪ್ರಭಾವಶಾಲಿ ಎಂದು ಸಮರ್ಥಿಸಿದವರೂ ಇದ್ದರು. ಕಳೆದ ವಾರ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು, ‘ಜೀನ್ ಪಾಲ್ ಸರ್ತೆ: ಹಿಂದೆಂಗಿಂತಲೂ ಈಗ ಹೆಚ್ಚು ಪ್ರಸ್ತುತ' (Jean Paul Sartre: More relevent now than ever) ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿದಾಗಲೂ ಓದುಗ ವಲಯದಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದುವು. ಪ್ರಶಸ್ತಿಯನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸಿ ಪ್ರಶಸ್ತಿ ಮೊತ್ತವಾದ 21 ಸಾವಿರ ಪೌಂಡ್ ಅನ್ನು ಲಂಡನ್ನಿನ ವರ್ಣಭೇದ ಸಮಿತಿಗೆ ನೀಡಿರುತ್ತಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದೂ ಹೇಳಿದವರಿದ್ದಾರೆ. ಅದೇ ವೇಳೆ, ಸರ್ತೆಯವರ ನಿಲುವನ್ನು ಸೈದ್ಧಾಂತಿಕ ಬದ್ಧತೆ ಎಂದು ಕರೆದು ಬೆಂಬಲಿಸಿದವರಿದ್ದಾರೆ. ನೋಬೆಲ್ ಪ್ರಶಸ್ತಿಯನ್ನು ಯುದ್ಧ, ಅತಿಕ್ರಮಣ ಮುಂತಾದುವುಗಳೊಂದಿಗೆ ಜೋಡಿಸಿ ಸಂವೇದನಾಶೀಲ ಗೊಳಿಸಿದುದಕ್ಕಾಗಿ ಅವರನ್ನು ಮೆಚ್ಚಿಕೊಂಡವರಿದ್ದಾರೆ. ನಿಜವಾಗಿ, ಸರ್ತೆಯವರ ನಿರ್ಧಾರಕ್ಕೆ ಬಲವಾದ ಕಾರಣಗಳಿದ್ದುವು.
   1830ರಲ್ಲಿ ಅಲ್ಜೀರಿಯವನ್ನು ಅತಿಕ್ರಮಿಸಿ ವಶಪಡಿಸಿಕೊಂಡ ಫ್ರಾನ್ಸ್, ತನ್ನ ಸೇನಾ ಬಲದ ಮೂಲಕ ಸ್ಥಳೀಯತೆಯ ಮೇಲೆ ದಾಳಿ ನಡೆಸುತ್ತಲೇ ಬಂದಿತು. ಮಾರ್ಶಲ್ ಬುಗೀಡ್‍ರ ನೇತೃತ್ವದಲ್ಲಿ ಹತ್ಯಾಕಾಂಡ, ಅತ್ಯಾಚಾರಗಳೂ ನಡೆದುವು. 1834ರಲ್ಲಿ ಅಲ್ಜೀರಿಯಾವನ್ನು ಫ್ರಾನ್ಸ್ ನ ಮಿಲಿಟರಿ ಕಾಲನಿಯಾಗಿ ಘೋಷಿಸಲಾಯಿತು. 1840ರಲ್ಲಿ ಅಲೆಜೈರ್, ಓರನ್ ಮತ್ತು ಕಾನ್‍ಸ್ಟಾಂಟಿಕ್ ಎಂಬ ಹೆಸರಲ್ಲಿ ಅಲ್ಜೀರಿಯಾವನ್ನು 3 ಭಾಗಗಳಾಗಿ ವಿಭಜಿಸಲಾಯಿತು. ಹಾಗೆಯೇ ಕಾಲನಿಯಾಗಿದ್ದ ಅಲ್ಜೀರಿಯಾವನ್ನು ಫ್ರಾನ್ಸ್ ನ ಭಾಗವೆಂದೂ ಸಾರಲಾಯಿತು. ಹೀಗೆ ಫ್ರಾನ್ಸ್ ನ ಭಾಗವಾದ ಅಲ್ಜೀರಿಯಾದಲ್ಲಿ ಸ್ಪೈನ್, ಇಟಾಲಿಯನ್ ಮುಂತಾದ ಯುರೋಪಿಯನ್ ರಾಷ್ಟ್ರಗಳ ಮಂದಿ ಬಂದು ನೆಲೆಸಿದರು. ಧಾರಾಳ ಸಂಖ್ಯೆಯಲ್ಲಿ ಫ್ರೆಂಚರೂ ಈ ಹೊಸ ನಾಡಲ್ಲಿ ಬೀಡು ಕಟ್ಟತೊಡಗಿದರು. ಹೀಗಿದ್ದೂ ಪ್ರಥಮ ಜಾಗತಿಕ ಯುದ್ಧದ ವೇಳೆ ಅಲ್ಜೀರಿಯನ್ನರು ಫ್ರಾನ್ಸ್ ನ ಜೊತೆಗೂಡಿ ಹೋರಾಡಿದರು. ಒಂದು ರೀತಿಯಲ್ಲಿ, ಅಲ್ಜೀರಿಯಾದ ಮೇಲೆ ತನ್ನ ದೇಶ ನಡೆಸುತ್ತಿರುವ ದಾಳಿ ಮತ್ತು ಆ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತಾ ಬೆಳೆದವರೇ ಸರ್ತೆ. 1940ರಲ್ಲಿ ಜರ್ಮನಿಯ ಹಿಟ್ಲರ್‍ನ ಸೇನೆಯು ಫ್ರಾನ್ಸ್ ನ ಮೇಲೆ ದಾಳಿ ಮಾಡಿದಾಗ ಅವರಿಗೆ ಅತಿಕ್ರಮಣದ ನೇರ ಪರಿಚಯವಾಗಿತ್ತು. ಅವರನ್ನು ಜರ್ಮನ್ ಸೇನೆ ಬಂಧಿಸಿತು. 9 ತಿಂಗಳ ಕಾಲ ಜೈಲಲ್ಲಿದ್ದ ಅವರು 1941ರಲ್ಲಿ ಬಿಡುಗಡೆಗೊಳ್ಳುವಾಗ ಅವರೊಳಗೆ ಸಾಕಷ್ಟು ಬದಲಾವಣೆಗಳಾಗಿದ್ದುವು. ಆ ಬಳಿಕ ಅವರು ಓರ್ವ ಫ್ರಾನ್ಸಿನ ಪ್ರಜೆಯಾಗಿಯಷ್ಟೇ ಆಲೋಚಿಸಲಿಲ್ಲ. ಅಲ್ಜೀರಿಯನ್ನರೂ ಅವರದಾದರು. ಜಗತ್ತಿನ ಸಕಲ ಅತಿಕ್ರಮಣವನ್ನೂ ಅವರು ದ್ವೇಷಿಸಿದರು. ಆದ್ದರಿಂದಲೇ, 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ 11 ಮಂದಿ ಇಸ್ರೇಲಿ ಅಥ್ಲೀಟ್‍ಗಳನ್ನು ಫೆಲೆಸ್ತೀನಿನ ಮಂದಿ ಕೊಂದು ಹಾಕಿದುದನ್ನು ಅವರು ಬೆಂಬಲಿಸಿದ್ದು. ಜಾಗತಿಕವಾಗಿಯೇ ಆ ಘಟನೆಯ ವಿರುದ್ಧ ಖಂಡನೆಗಳು ವ್ಯಕ್ತವಾಗುತ್ತಿದ್ದಾಗ ಅವರು ಆ ಹತ್ಯೆಯ ಪರ ನಿಂತದ್ದು. ಅತಿಕ್ರಮಣ ಮತ್ತು ದೌರ್ಜನ್ಯಕ್ಕೀಡಾದ ಒಂದು ಸಂತ್ರಸ್ತ ಸಮೂಹಕ್ಕೆ ಪ್ರತಿರೋಧದ ಹಕ್ಕಿದೆ ಎಂದವರು ಆ ಸಂದರ್ಭದಲ್ಲಿ ವಾದಿಸಿದರು.
   “ಭಯೋತ್ಪಾದನೆಯು ಭಯಾನಕವೇ ಆಗಿರಬಹುದು. ಆದರೆ ಫೆಲೆಸ್ತೀನಿಯರಿಗೆ ಬೇರೆ ದಾರಿಯಿರಲಿಲ್ಲ. ಆಯುಧ ಮತ್ತು ಬೆಂಬಲದ ಕೊರತೆಯನ್ನು ಎದುರಿಸುತ್ತಿರುವ ಅವರು ತಮ್ಮ ಅತಿಕ್ರಮಣ ವಿರೋಧಿ ನಿಲುವನ್ನು ನಾವೆಣಿಸಿದ ರೀತಿಯಲ್ಲೇ ತೋರಬೇಕೆಂದು ಬಯಸುವುದೇ ತಪ್ಪು. ಅಲ್ಲದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಇಸ್ರೇಲಿನ ಆ ಅಥ್ಲೀಟ್‍ಗಳು ಸೈನಿಕರಾಗಿದ್ದರೆಂಬುದನ್ನೂ ನಾವು ಪರಿಗಣಿಸಬೇಕು..” ಎಂದು ಸಮರ್ಥಿಸಿಕೊಂಡರು. ಅಂದಿನ ಸಾಹಿತಿಗಳಾದ ಆ್ಯಂಡರ್ಸನ್ ಮತ್ತು ವಾಲ್‍ಝೇರ್‍ರು ಇದನ್ನು ಹಿಪಾಕ್ರಸಿ ಎಂದು ಖಂಡಿಸಿದ್ದರು. ಫ್ರಾನ್ಸಿನಲ್ಲಿ ಅವರ ನಿಲುವಿನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದರೂ ಅವರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಅವರಿಗೆ ಕಮ್ಯುನಿಸಂನ ಮೇಲೆ ಪ್ರೀತಿ ಇತ್ತಾದರೂ ಫ್ರಾನ್ಸಿನಲ್ಲಿರುವ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿಕೊಳ್ಳಲಿಲ್ಲ. ಹಾಗೆಯೇ ಸೋವಿಯತ್ ಯೂನಿಯನ್‍ನಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ತೀವ್ರವಾಗಿ ವಿಮರ್ಶೆಗೊಡ್ಡಿದರು. ಅದು ಹಂಗೇರಿಯ ಮೇಲೆ ನಡೆಸಿದ ದಾಳಿಯನ್ನು ಓರ್ವ ಕಮ್ಯುನಿಸ್ಟ್ ಪ್ರೇಮಿಯಾಗಿದ್ದುಕೊಂಡೇ ಖಂಡಿಸಿದರು. ಅಮೇರಿಕವು ವಿಯೆಟ್ನಾಂನ ಮೇಲೆ ದಾಳಿ ಮಾಡಿದುದನ್ನು ಖಂಡಿಸುತ್ತಲೇ ರಶ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದರು. ನಿಜವಾಗಿ, ಅವರು ಈ ಜಗತ್ತಿನ ಸಕಲ ಕ್ರೌರ್ಯಗಳಿಗೂ ವಿರೋಧ ಪಕ್ಷ ವಾಗಿದ್ದರು. ಸಂತ್ರಸ್ತರ ಕುರಿತಂತೆ ಅವರಲ್ಲಿ ಅಪಾರ ಕಕ್ಕುಲಾತಿಯಿತ್ತು. ಇಲ್ಲದಿದ್ದರೆ, ಅಲ್ಜೀರಿಯಾದ ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ದಾಳಿ ನಡೆಸುತ್ತಿದ್ದ ನ್ಯಾಶನಲ್ ಲಿಬರೇಶನ್ ಫ್ರಂಟ್ (FLN) ಅನ್ನು ಅವರು ಬೆಂಬಲಿಸುತ್ತಿರಲಿಲ್ಲ.
   1954ರಲ್ಲಿ ಅಲ್ಜೀರಿಯಾದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಅದಕ್ಕಾಗಿಯೇ FLN ಸಂಘಟನೆಯನ್ನು ಹುಟ್ಟು ಹಾಕಲಾಯಿತು. 1956ರಲ್ಲಿ 4 ಲಕ್ಷ  ಫ್ರೆಂಚ್ ಯೋಧರು ಅಲ್ಜೀರಿಯಾದಲ್ಲಿದ್ದರು. FLNನ್ನು ನಿರ್ಮೂಲನಗೊಳಿಸುವುದಕ್ಕಾಗಿ ಫ್ರೆಂಚ್ ಸರಕಾರವು ಭೂಸೇನೆ ಮತ್ತು ವಾಯುಸೇನೆಯನ್ನು ಬಳಸಿತು. ಮಾರಕ ನೆಪಾಮ್ ಎಂಬ ರಾಸಾಯನಿಕವನ್ನು ಪ್ರಯೋಗಿಸಿತು. ಆದರೆ ಗೆರಿಲ್ಲಾ ಹೋರಾಟವನ್ನು ಸದೆಬಡಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಹೀಗೆ 1961ರಲ್ಲಿ ಅಧ್ಯಕ್ಷ  ಚಾರ್ಲ್ಸ್  ಡಿ ಗಲ್ಲೆಯವರು ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ನೀಡಲು ತೀರ್ಮಾನಿಸಿದರು. ಆದರೆ ಇದಕ್ಕೆ ಸೇನೆಯಿಂದ ತೀವ್ರ ಪ್ರತಿರೋಧ ಎದುರಾಯಿತು. ಅಧ್ಯಕ್ಷ  ಡಿ ಗಲ್ಲೆಯವರನ್ನು ಹತ್ಯೆ ಮಾಡುವ ಯತ್ನವೂ ನಡೆಯಿತು. ಅಲ್ಜೀರಿಯನ್ ಸ್ವಾತಂತ್ರ್ಯವನ್ನು ವಿರೋಧಿಸುವ ಯೋಧರು ಒಟ್ಟು ಸೇರಿ OAS  ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಅಲ್ಜೀರಿಯಾದಲ್ಲಿ ಬಾಂಬು, ಹತ್ಯೆಗಳಲ್ಲಿ ತೊಡಗಿಸಿಕೊಂಡಿತು. ಅಲ್ಜೀರಿಯಾದ ಪರ ಇರುವ  ಫ್ರೆಂಚ್ ಪ್ರಜೆಗಳನ್ನೂ ದಾಳಿಗೆ ಗುರಿಪಡಿಸಲಾಯಿತು. ಸರ್ತೆಯವರು ಎರಡು ಬಾರಿ ಹತ್ಯಾ ಯತ್ನಗಳಿಂದ ಪಾರಾದರು. ಕೊನೆಗೆ 1962ರಲ್ಲಿ ಅಲ್ಜೀರಿಯಾವು ಸ್ವತಂತ್ರಗೊಂಡಿತು. ಆ ಸಂದರ್ಭವನ್ನು ಅತ್ಯಂತ ಖುಷಿಯಿಂದ ಕಣ್ತುಂಬಿಕೊಂಡವರಲ್ಲಿ ಸರ್ತೆ ಕೂಡ ಒಬ್ಬರು. ಅಷ್ಟಕ್ಕೂ,
   ಸ್ವೀಡನ್ನಿನ ಪ್ರಮುಖ 15 ಮಂದಿ ಸಾಹಿತಿಗಳು ಒಟ್ಟು ಸೇರಿ ಆಯ್ಕೆ ಮಾಡುವ ನೋಬೆಲ್ ಪ್ರಶಸ್ತಿಯ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಒಂದು ಸಾಹಿತ್ಯವನ್ನು ಆಯ್ಕೆ ಮಾಡುವುದಕ್ಕೆ ಇರುವ ಮಾನದಂಡಗಳು, ಅಲ್ಲಿ ನಡೆಯುವ ಚರ್ಚೆಗಳ ಸ್ವರೂಪ, ಕೊಡುವ ಆದ್ಯತೆ.. ಯಾವುದನ್ನೂ ಸ್ವೀಡನ್ ಹೊರ ಜಗತ್ತಿಗೆ ಯಾವತ್ತೂ ಬಿಟ್ಟು ಕೊಡುವುದಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಒತ್ತಡಗಳಿರುತ್ತವೆಯೇ ಎಂಬುದರಿಂದ ಹಿಡಿದು ಜಗತ್ತಿನ ಎಲ್ಲ ಭಾಷೆಗಳ ಎಲ್ಲ ಕೃತಿಗಳಿಗೂ ಸಮಾನ ಪ್ರಾಶಸ್ತ್ಯ ಲಭ್ಯವಾಗುತ್ತಿವೆಯೇ ಎಂಬಲ್ಲಿವರೆಗೆ ಎಲ್ಲವೂ ರಹಸ್ಯವಾಗಿಯೇ ಇರುತ್ತವೆ. ಈವರೆಗೆ ಒಟ್ಟು 111 ನೋಬೆಲ್ ಪ್ರಶಸ್ತಿ ಗಳನ್ನು ವಿತರಿಸಲಾಗಿದೆ. ಅದರಲ್ಲಿ ಅನೇಕ ಪ್ರಶಸ್ತಿಗಳು ಈಗಲೂ ವಿವಾದಾಸ್ಪದವಾಗಿಯೇ ಉಳಿದಿವೆ. 2004ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ವಿಲ್ಫ್ರೆಡ್ ಎಲಿನೋಕ್, 1997ರಲ್ಲಿ ಗೆದ್ದ ಇಟಲಿಯ ಕವಿ ದಾರಿಯ ಫೋ, 1989ರಲ್ಲಿ ಪ್ರಶಸ್ತಿ ಗೆದ್ದ ಸ್ಪಾನಿಶ್ ಸಾಹಿತಿ ಕ್ಯಾಮಿನೊ ಜೋಸ್ ಸೆಲ್ಲಾ.. ಇವರೆಲ್ಲರ ಹಿಂದೆ ಈಗಲೂ ಅಚ್ಚರಿ ಇದೆ. 6 ವರ್ಷಗಳ ಹಿಂದೆ ಜೀನ್ ಮಾರಿಯಾ ಗುಸ್ತಾವೊ ಲಿ ಕ್ಲೇಸಿಯೋ ಎಂಬ ಅಷ್ಟೇನೂ ಪರಿಚಿತವಲ್ಲದ ಫ್ರಾನ್ಸಿನ ಸಾಹಿತಿಗೆ ಈ ಪ್ರಶಸ್ತಿ ಸಿಕ್ಕಾಗ ಹಲವರು ತಗಾದೆ ಎತ್ತಿ ದ್ದರು. ನಿಜವಾಗಿ, ‘ಗೀತಾಂಜಲಿ'ಯು ಇಂಗ್ಲಿಷ್‍ಗೆ ಅನುವಾದಗೊಳ್ಳದೇ ಇರುತ್ತಿದ್ದರೆ ಮತ್ತು ವಿಶ್ವಕವಿ ಡಬ್ಲ್ಯು.ಬಿ. ಯೇಟ್ಸ್ ರು ಮಧ್ಯಪ್ರವೇಶಿಸದೇ ಇರುತ್ತಿದ್ದರೆ ನಮ್ಮ ರವೀಂದ್ರನಾಥ ಠಾಗೋರರಿಗೆ ನೋಬೆಲ್ ಸಿಗುವುದೇ ಅನುಮಾನವಾಗಿತ್ತು. ಅಂದಹಾಗೆ, ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್, ರಶ್ಯನ್ ಭಾಷೆಗಳ ಸಾಹಿತ್ಯಗಳಿಗೆ ಸಿಗುವ ಆದ್ಯತೆಯು ಏಶ್ಯನ್ ಮತ್ತು ಆಫ್ರಿಕನ್ ಸಾಹಿತ್ಯಗಳಿಗೆ ಇವತ್ತು ಖಂಡಿತ ಸಿಗುತ್ತಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಸಾಹಿತ್ಯಗಳು ಮಾತ್ರವಲ್ಲ, ಸಾಹಿತಿಯ ದೇಶ, ಭಾಷೆ, ಸಾಹಿತ್ಯದ ವಸ್ತು, ರಾಜಕೀಯ ಮುಂತಾದುವುಗಳೆಲ್ಲ ಪ್ರಭಾವ ಬೀರುತ್ತಿರುವುದಕ್ಕೆ ಅವಕಾಶವಿದ್ದೇ ಇದೆ. ಒಬಾಮರಿಗೆ ಸಿಕ್ಕ ನೋಬೆಲ್ ಶಾಂತಿ ಪ್ರಶಸ್ತಿಯು ಈ ಅನುಮಾನವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಒಂದು ವೇಳೆ 1954-62ರ ಮಧ್ಯೆ ಸರ್ತೆಗೆ ನೋಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಫ್ರಾನ್ಸ್-ಅಲ್ಜೀರಿಯಾದಲ್ಲಿ ಮತ್ತು ಜಾಗತಿಕವಾಗಿ ಅದು ಮಾಡಬಹುದಾಗಿದ್ದ ಸದ್ದು ಯಾವ ಬಗೆಯದ್ದಾಗಿರುತ್ತಿತ್ತು? ಸರ್ತೆ ಅವರು ಅತಿಕ್ರಮಣ ವಿರೋಧಿ ಐಕಾನ್ ಆಗಿ ಬಿಂಬಿತಗೊಳ್ಳುತ್ತಿರಲಿಲ್ಲವೇ? ಪ್ರಶಸ್ತಿಯು ಅವರ ಯುದ್ಧ ವಿರೋಧಿ ನಿಲುವಿಗೆ ಸಿಕ್ಕ ಪುರಸ್ಕಾರ’ ಎಂಬ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಯುತ್ತಿತ್ತಲ್ಲವೇ? ಹಾಗಾಗಿರುತ್ತಿದ್ದರೆ ಇತರ ಅತಿಕ್ರಮಣಕೋರ ರಾಷ್ಟ್ರಗಳ ಮೇಲೂ ಅದು ಪರಿಣಾಮ ಬೀರುತ್ತಿತ್ತೇನೋ. ಮಾತ್ರವಲ್ಲ, ಅಲ್ಜೀರಿಯಾ

ಸ್ವತಂತ್ರಗೊಳ್ಳುವುದಕ್ಕೆ 1962ರ ವರೆಗೆ ಕಾಯಬೇಕಾಗಿಯೂ ಇರುತ್ತಿರಲಿಲ್ಲವೇನೋ. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ ಮಹತ್ವ ಬರುವುದು ಈ ಎಲ್ಲ ಕಾರಣಗಳಿಂದಲೇ. ಮಾತ್ರವಲ್ಲ, ಗಿರೀಶ್ ಕಾರ್ನಾಡ್, ಸಿದ್ಧಲಿಂಗಯ್ಯ ಅವರ ಸುತ್ತ ನಡೆದ ಮತ್ತು ಸದ್ಯ ನಡೆಯುತ್ತಿರುವ ಚರ್ಚೆಗಳ ಇತಿ ಮತ್ತು ಮಿತಿಗಳೂ ಇವೇ. ಇವತ್ತು ಕೂಡ ಸರ್ತೆ ಅವರ ನಿಲುವನ್ನು ಪ್ರಶ್ನಿಸುವವರೂ ಮತ್ತು ಬೆಂಬಲಿಸುವವರೂ ಇಬ್ಬರೂ ಇದ್ದಾರೆ. ಅವರು ತಮ್ಮ ನಿಲುವನ್ನು ಪ್ರತಿಪಾದಿಸುವುದಕ್ಕೆ ನೋಬೆಲ್ ಸಾಹಿತ್ಯ ಪ್ರಶಸ್ತಿಯ ವೇದಿಕೆಯನ್ನು ಬಳಸಿಕೊಳ್ಳಬೇಕಿತ್ತು ಎಂದು ವಾದಿಸುವವರು ಇರುವಂತೆಯೇ ಅವರು ಆ ವೇದಿಕೆಯನ್ನು ತಿರಸ್ಕರಿಸುವ ಮೂಲಕ ಅದನ್ನು ಪ್ರತಿಪಾದಿಸಲು ಯಶಸ್ವಿಯಾಗಿದ್ದಾರೆ ಎಂದು ವಾದಿಸುವವರೂ ಇದ್ದಾರೆ. ಹೀಗಿರುವಾಗ, ಇದರಲ್ಲಿ ಒಂದು ಮಾತ್ರ ಸರಿ ಎಂದು ಪಟ್ಟು ಹಿಡಿದು ವಾದಿಸಬೇಕಿಲ್ಲ. ಎರಡರಲ್ಲೂ ಸರಿ ಇರಬಹುದು ಮತ್ತು ಯಾವುದು ಹೆಚ್ಚು ಸರಿ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಬಹುದು. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ 50 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಎರಡರಲ್ಲೂ ಸರಿಯನ್ನೇ ಹುಡುಕುತ್ತಾ ಸಂವಾದದ ವೇದಿಕೆಯನ್ನು ನಿರ್ಮಲವಾಗಿಡುವುದೇ ಉತ್ತಮವೆನಿಸುತ್ತದೆ.




Tuesday, October 21, 2014

ಗಾಳಿಯಾಡದ ಪಂಜರದೊಳಗೆ ಧರ್ಮಗಳನ್ನು ಬಚ್ಚಿಟ್ಟಿರುವುದೇಕೆ?

ಮೀರತ್ ಪ್ರೇಮ ಪ್ರಕರಣದ ಯುವತಿ
   “ಲವ್ ಜಿಹಾದ್ ಎಂಬುದು ಮುಸ್ಲಿಮ್ ಕಾನ್ಸ್ ಪರಸಿಯ (ಸಂಚು) ಉತ್ಪನ್ನ ಎಂದು ದೂಷಿಸಲಾಗುತ್ತದೆ. ಇದು ನಿಜವೇ? ಮುಸ್ಲಿಮ್ ಸಮಾಜದಲ್ಲಿ ಅಂಥದ್ದೊಂದು ವಾತಾವರಣ ಇದೆಯೇ? ಯಾವ ಹೆತ್ತವರೂ ತಮ್ಮ ಧರ್ಮ ಅಥವಾ ಜಾತಿಗಿಂತ ಹೊರಗಿನ ಕುಟುಂಬಗಳೊಂದಿಗೆ ಮದುವೆ ಸಂಬಂಧವನ್ನು ಕುದುರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮದುವೆ ಮತ್ತಿತರ ವಿಷಯಗಳಲ್ಲಿ ಈ ದೇಶದ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಅಪ್ಪಟ ಸಂಪ್ರದಾಯವಾದಿಗಳಾಗುತ್ತಾರೆ. ಹುಡುಗಿಗಾಗಲಿ, ಹುಡುಗನಿಗಾಗಲಿ ತಮ್ಮದೇ ಜಾತಿ, ಭಾಷೆಯ ಸಂಬಂಧಕ್ಕಾಗಿ ಎಷ್ಟು ಸಮಯ ಬೇಕಾದರೂ ಕಾಯುವ ಸ್ಥಿತಿಯೊಂದು ಈ ದೇಶದಲ್ಲಿ ಇವತ್ತೂ ಇದೆ. ಹೀಗಿರುವಾಗ ‘ಸಂಚು’ ಎಂಬ ಪದ ಬಳಕೆ ಎಷ್ಟು ಸರಿ? ತಮ್ಮ ಧರ್ಮವನ್ನು ಬಿಟ್ಟು ಹೊರಗಿನವರನ್ನು ಮದುವೆಯಾದ ಗಂಡು-ಹೆಣ್ಣನ್ನು ಬಹಿಷ್ಕರಿಸುವ ರೂಢಿ ಈ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದವೂ ಇಲ್ಲ. ಆದ್ದರಿಂದಲೇ ಇಂಥ ಪ್ರೇಮಿಗಳು ಇವತ್ತು ನ್ಯಾಯಾಲಯದ್ದೋ ಪೊಲೀಸರದ್ದೋ ನೆರವು ಪಡೆದು ಮದುವೆಯಾಗುತ್ತಿದ್ದಾರೆ. ಒಂದು ವೇಳೆ, ಇದು ಮುಸ್ಲಿಮರ ಸಂಚೇ ಆಗಿರುತ್ತಿದ್ದರೆ ಇಂಥ ಮದುವೆಗಳಲ್ಲಿ ಮುಸ್ಲಿಮರ ಪಾಲುಗೊಳ್ಳುವಿಕೆ ಹೇಗಿರಬೇಕಿತ್ತು? ಮುಸ್ಲಿಮ್ ಸಮುದಾಯವೇ ಇಂಥ ಮದುವೆಗಳಲ್ಲಿ ಭಾಗವಹಿಸಿ ಬೆಂಬಲಿಸ ಬೇಕಿತ್ತಲ್ಲವೇ? ನಿಜ ಏನೆಂದರೆ, ಧರ್ಮವನ್ನೂ ಕುಟುಂಬವನ್ನೂ ಮತ್ತು ಅದರ ತಲ್ಲಣಗಳನ್ನೂ ಲೆಕ್ಕಿಸದ ಓರ್ವ ಯುವಕ ಮತ್ತು ಯುವತಿಯ ಲವ್ ಸ್ಟೋರಿ ಇದು. ಅವರು ನೆರವಿಗಾಗಿ ಕೋರ್ಟು ಮೆಟ್ಟಲೇರುತ್ತಿರುವುದರ ಹಿನ್ನೆಲೆಯೂ ಇದುವೇ. ತನಿಖೆಗಳು ಮತ್ತೆ ಮತ್ತೆ ಇದನ್ನೇ ಸಮರ್ಥಿಸುತ್ತಲೂ ಇವೆ. ಹಾಗಂತ, ತನಿಖೆ ನಡೆಸುವ ಪೊಲೀಸರೆಲ್ಲ ಮುಸ್ಲಿಮರೇನೂ ಅಲ್ಲವಲ್ಲ. ಧರ್ಮದ ವಿಷಯದಲ್ಲಿ ಪೊಲೀಸರ ಸಹಿತ ಎಲ್ಲರೂ ಕಟು ಸಂಪ್ರದಾಯವಾದಿಗಳಾಗುವ ಈ ದೇಶದಲ್ಲಿ ‘ಲವ್ ಜಿಹಾದ್'ನ ವಿಷಯದಲ್ಲಿ ಅವರೆಲ್ಲ ಸುಳ್ಳು ಹೇಳಲು ಸಾಧ್ಯವೇ..?" ಎಂದು ಓರ್ವ ಓದುಗ ಪ್ರತಿಕ್ರಿಯಿಸುವಾಗ,
   "ಹಿಂದೂಗಳು ಅಂತರ್ ಧರ್ಮೀಯ ವಿವಾಹದ ವಿರೋಧಿಗಳಲ್ಲ. ಬೌದ್ಧ, ಕ್ರೈಸ್ತ, ಯಹೂದಿ ಯುವಕರನ್ನು ಹಿಂದೂ ಯುವತಿಯರು ವಿವಾಹವಾಗುವುದನ್ನು ಅವರು ವಿರೋಧಿಸುತ್ತಲೂ ಇಲ್ಲ. ಆದರೆ ಮುಸ್ಲಿಮ್ ಯುವಕರನ್ನು ವಿವಾಹವಾಗುವುದನ್ನು ಅವರು ವಿರೋಧಿಸುತ್ತಾರೆ. ಯಾಕೆಂದರೆ, ಹಿಂದೂಗಳು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾರೆ. ಬೌದ್ಧ, ಕ್ರೈಸ್ತ, ಯಹೂದಿ ಧರ್ಮಗಳು ಮಹಿಳೆಯರನ್ನು ಗೌರವಿಸುವಾಗ ಇಸ್ಲಾಮ್ ಅವರನ್ನು ತಲಾಕ್, ತಲಾಕ್, ತಲಾಕ್ ಎಂದು ಅಟ್ಟುತ್ತದೆ. ಅದರ ವಿರುದ್ಧ ಮಹಿಳೆಯರು ಏನು ಮಾಡುವಂತೆಯೂ ಇಲ್ಲ. ಮುಸ್ಲಿಮರು ಮತಾಂತರ ಮಾಡುತ್ತಾರೆ. ಕುರ್‍ಆನಿನ ದೃಷ್ಟಿಯಲ್ಲಿ ಮುಸ್ಲಿಮ್ ಮಹಿಳೆ ಸೆಕ್ಸ್ ಸ್ಲೇವ್ (ಲೈಂಗಿಕ ಗುಲಾಮಳು) ಆಗಿದ್ದಾಳೆ. ಮಾತ್ರವಲ್ಲ, ಇನ್ನೊಂದು ಧರ್ಮದಿಂದ ಮತಾಂತರ ಆದವಳ ಸ್ಥಿತಿಯಂತೂ ಇದಕ್ಕಿಂತಲೂ ಹೀನಾಯವಾದುದಾಗಿದೆ.." ಎಂದು ಇನ್ನೋರ್ವ ಉತ್ತರಿಸುತ್ತಾನೆ. ಅಕ್ಟೋಬರ್ 15ರಂದು ಇಂಡಿಯಾ ಟುಡೆ ಪತ್ರಿಕೆಯ ಆನ್‍ಲೈನ್ ವಿಭಾಗದಲ್ಲಿ ಪ್ರಕಟವಾದ, 'ಲವ್ ಜಿಹಾದ್‍ನ ನೆಪ: ಮಧ್ಯಪ್ರದೇಶದಲ್ಲಿ ಹಿಂದೂ-ಮುಸ್ಲಿಮ್ ಮದುವೆಯನ್ನು ತಡೆದ ಬಲಪಂಥೀಯ ಗುಂಪು' (Citing Love Jihad, right -wing group stops Hindu -Muslim court marriage in MP) ಎಂಬ ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿ ವ್ಯಕ್ತವಾದ ಅಭಿಪ್ರಾಯಗಳಲ್ಲಿ ಮೇಲಿನಂಥ ತುತು ಮೆಮೆ ಅನ್ನುವ ಧಾಟಿಯವು ಧಾರಾಳ ಇವೆ. ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ, ತಲಾಕ್‍ನ ನಿಜವಾದ ರೂಪ, ಮದುವೆ ಮತ್ತು ಮತಾಂತರದ ವಿಧಿ-ವಿಧಾನಗಳನ್ನು ಕರ್ಮಟವಾಗಿ ಚರ್ಚಿಸಿದ ಬರಹಗಳು ಇರುವಂತೆಯೇ ಸತಿ ಹೋಗುವುದು, ಶ್ರೇಣೀಕೃತ ಜಾತಿಪದ್ಧತಿ, ವಿಧವೆಯರನ್ನು ಅಮಂಗಲೆಯರೆಂದು ದೂರ ಇಡುವುದು.. ಸೇರಿದಂತೆ ಹಿಂದೂ ಧರ್ಮದ ವಿವಿಧ ಆಚರಣೆಗಳ ವಿಮರ್ಶೆಗಳೂ ನಡೆದಿವೆ. ಲವ್ ಜಿಹಾದನ್ನು ಓರ್ವ ಅಲ್ಲಗಳೆಯುವಾಗ ಇನ್ನೋರ್ವ ಅದನ್ನು ಭಯೋತ್ಪಾದನೆಯ ಭಾಗವಾಗಿ ಕಾಣುತ್ತಾನೆ. ಅಷ್ಟಕ್ಕೂ,
   ಲವ್‍ಜಿಹಾದ್ (ಈ ಪದ ಪ್ರಯೋಗವೇ ತಪ್ಪು) ಎಂದು ರಾಡಿಯೆಬ್ಬಿಸಲಾದ ಯಾವ ಪ್ರಕರಣವೂ ಅನಕ್ಷರಸ್ಥರಿಗೆ ಸಂಬಂಧಿಸಿದ್ದಲ್ಲ. ಓದು-ಬರಹ ಬಾರದ, ಮುಸ್ಲಿಮ್ ಯುವಕರ 'ಸಂಚು’ಗಳನ್ನು ತಿಳಿಯದ ಮುಗ್ಧ ಹೆಣ್ಣು ಮಕ್ಕಳ ಹೆಸರೇನೂ ಲವ್ ಜಿಹಾದ್‍ನಲ್ಲಿ ಒಳಗೊಂಡವರ ಪಟ್ಟಿಯಲ್ಲಿಲ್ಲ. ಹೆಚ್ಚಿನೆಲ್ಲ ಹೆಣ್ಣು ಮಕ್ಕಳೂ ಓದಿದವರೇ. ತಮ್ಮ ಸುತ್ತಮುತ್ತ ಮತ್ತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಸಾಮರ್ಥ್ಯ  ಇದ್ದವರೇ. ಇಷ್ಟಿದ್ದೂ, ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯರ ಮಧ್ಯೆ ಪ್ರೇಮಾಂಕುರವಾಗುತ್ತದೆಂದರೆ ಮತ್ತು ಅವರು ಪರಸ್ಪರ ಮದುವೆಯಾಗಲು ತೀರ್ಮಾನಿಸುತ್ತಾರೆಂದರೆ, ಅದೇಕೆ ಅಪಾಯಕಾರಿಯಾಗಿ ಗುರುತಿಸಿಕೊಳ್ಳಬೇಕು? ಲವ್ ಜಿಹಾದ್‍ಗೆ ಬಲಿ ಅನ್ನುವ ಪದಪ್ರಯೋಗಗಳಿಗೇಕೆ ಅದು ಗುರಿಯಾಗಬೇಕು? ಓರ್ವ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವ ಮೊದಲು ತಂತಮ್ಮ ಧರ್ಮದ ಪರವಾನಿಗೆ ಪಡೆದುಕೊಂಡು ಮುಂದುವರಿದ ಉದಾಹರಣೆ ಎಲ್ಲೂ ಇಲ್ಲ. ಪ್ರಾಯ ಸಹಜ ಆಕರ್ಷಣೆಯು ಹೆಣ್ಣು-ಗಂಡನ್ನು ಹತ್ತಿರ ತರುತ್ತದೆ. ಅವರು ಪರಸ್ಪರ ಮಾತಾಡುತ್ತಾರೆ. ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಳ್ಳುವಾಗ ತಾನು ಹಿಂದೂ ಎಂದೋ ಮುಸ್ಲಿಮ್ ಎಂದೋ ಇಬ್ಬರಿಗೂ ಗೊತ್ತಾಗುತ್ತದೆ. ಹೆಸರನ್ನು ಅಥವಾ ಧರ್ಮವನ್ನು ಮರೆಮಾಚಿ ಪ್ರೀತಿಸಲು ಸಾಧ್ಯವಿಲ್ಲ. ಯಾಕೆಂದರೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ದಿನ ಬೆಳಗಾಗುವುದರೊಳಗಾಗಿ ನಡೆಯುವ ಸಂಗತಿಗಳಲ್ಲ. ಅದೊಂದು ದೀರ್ಘ ಪ್ರಕ್ರಿಯೆ. ಓರ್ವ ವಿದ್ಯಾವಂತ ಹೆಣ್ಣು ಮಗಳು ತನ್ನ ಪ್ರಿಯಕರನ ಧರ್ಮವನ್ನು ಮತ್ತು ವಿಚಾರಗಳನ್ನು ತಿಳಿದುಕೊಳ್ಳಲಾರದಷ್ಟು ದುರ್ಬಲಳು ಎಂದು ಹೇಳುವುದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗುತ್ತದೆ. ಹಾಗಂತ, ಇವೆಲ್ಲ ಲವ್ ಜಿಹಾದ್ ಎಂದು ಕೂಗೆಬ್ಬಿಸುವವರಿಗೆ ಗೊತ್ತಿಲ್ಲ ಎಂದಲ್ಲ. 2009 ಅಕ್ಟೋಬರ್‍ನಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಲವ್ ಜಿಹಾದ್‍ನ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿತ್ತು. ಲವ್ ಜಿಹಾದ್ ಸಂಘಟಿತವಾಗಿ ನಡೆಯುತ್ತಿದೆಯೇ ಎಂಬ ಅಂಶವನ್ನೂ ತನಿಖೆಯ ವೇಳೆ ಪರಿಗಣಿಸುವಂತೆ ನಿರ್ದೇಶಿಸಿತ್ತು. 2009ರ ಕೊನೆಯಲ್ಲಿ ಸಿಐಡಿ ನಿರ್ದೇಶಕ ಜಾಕೊಬ್ ಪೊನ್ನೂಸೆ ಅವರು ಲವ್ ಜಿಹಾದ್ ಕಲ್ಪನೆಯನ್ನೇ ತಿರಸ್ಕರಿಸಿ ವರದಿ ನೀಡಿದರು. ಅದಕ್ಕೆ ಯಾವ ಪುರಾವೆಯೂ ಇಲ್ಲ ಎಂದೂ ಹೇಳಿದರು. 2012 ಜನವರಿಯಲ್ಲಿ ಕೇರಳದ ಪೊಲೀಸರೂ ಲವ್ ಜಿಹಾದ್‍ನ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಲವ್ ಜಿಹಾದ್ ಎಂಬುದು ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದೂ ಹೇಳಿದರು. ಮಾತ್ರವಲ್ಲ, ಲವ್ ಜಿಹಾದ್‍ನ ಹೆಸರಲ್ಲಿ ಅಪಪ್ರಚಾರದಲ್ಲಿ ತೊಡಗಿರುವ ಹಿಂದೂ ಜಾಗೃತಿ ಡಾಟ್ ಆರ್ಗ್ ಮೇಲೆ ಕೇಸು ಹಾಕುವುದಾಗಿಯೂ ಘೋಷಿಸಿದರು. ಅಲ್ಲದೇ 2014 ಸೆಪ್ಟೆಂಬರ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಎ.ಎಲ್. ಬ್ಯಾನರ್ಜಿಯವರೂ ಲವ್ ಜಿಹಾದ್ ಅನ್ನು ತಿರಸ್ಕರಿಸಿದರು. ಹೆಚ್ಚಿನೆಲ್ಲ ಪ್ರೇಮ ವಿವಾಹಗಳೂ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಡೆದಿರುವುದಾಗಿ (ರಾಯಿಟರ್ಸ್ ವರದಿ) ಅವರು ಅಭಿಪ್ರಾಯಪಟ್ಟರು. ಇಷ್ಟಿದ್ದೂ, ಮತ್ತೆ ಮತ್ತೆ ಸುಳ್ಳುಗಳನ್ನೇಕೆ ಹಬ್ಬಿಸಲಾಗುತ್ತದೆ? ‘ಮುಸ್ಲಿಮೇತರ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಮುಸ್ಲಿಮ್ ಯುವಕರು ಪ್ರೇಮದ ಬಲೆಗೆ ಬೀಳಿಸುತ್ತಾರೆ, ಆಕೆಯ ಕುಟುಂಬವನ್ನು ಒಪ್ಪಿಸಿಯೋ ಪ್ರೇಮದ ಅಮಲಿನಲ್ಲೋ ಮದುವೆಯಾಗುತ್ತಾರೆ, ಮದುವೆಗಿಂತ ಮೊದಲೇ ಅಥವಾ ನಂತರ ಮತಾಂತರ ಮಾಡುತ್ತಾರೆ, 5-6 ಮಕ್ಕಳನ್ನು ಹುಟ್ಟಿಸಿದ ಬಳಿಕ ತಲಾಕ್ ಹೇಳುತ್ತಾರೆ, ಬಳಿಕ ಅಸಹಾಯಕ ಸ್ಥಿತಿಯಲ್ಲಿ ಭಯೋತ್ಪಾದಕರಿಗೆ ಸಹಾಯಕಿಯಾಗಿ ಅವರು ಬದುಕುತ್ತಾರೆ..' ಎಂಬಂಥ ಅಪ್ಪಟ ಸುಳ್ಳುಗಳನ್ನು ವಿೂರತ್ ಘಟನೆಯ ಬಳಿಕ ಧರ್ಮ ಜಾಗರಣ್ ಮಂಚ್ ತನ್ನ ಮುದ್ರಿತ ನೋಟೀಸುಗಳಲ್ಲಿ ಹೇಳಿರುವುದೇಕೆ? ಯಾವ ತನಿಖೆಯಲ್ಲೂ ಸಾಬೀತಾಗದ ಸಂಗತಿಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದರ ಕಾನೂನು ವಿಧಿ ಏನು? ಅಲ್ಲದೇ,
   ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಜಹಾನಾ ಬಾದ್‍ನ ಗೈನೇರಿದಾನ್ ಗ್ರಾಮದ ಜಾಟ್ ಯುವಕನ ಮನೆಗೆ 2014 ಮೇ 20ರಂದು ನುಗ್ಗಿದ ಯುವತಿಯ ಹೆತ್ತವರು, ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಸ್ಥಳೀಯ ಬಿಜೆಪಿ ನಾಯಕರು ಹಿಂದೂ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮತ್ತು ಹುಡುಗಿಯನ್ನು ಮರಳಿ ಹಿಂದೂ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ನೆಲೆಸುತ್ತದೆ. ಆದರೆ ಅದೇ ಬಿಜೆಪಿಯ ಮುಖಂಡರು ಮೇ 30ರಂದು ವಿೂರತ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಯುವತಿಯನ್ನು ರಕ್ಷಿಸುವಂತೆ ಮತ್ತು ಮುಸ್ಲಿಮ್ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಯುವಕನನ್ನು ಬಂಧಿಸದಿದ್ದರೆ ಮಹಾ ಪಂಚಾಯತ್ ಕರೆಯುವುದಾಗಿ ಬೆದರಿಸುತ್ತಾರೆ (ಇಂಡಿಯನ್ ಎಕ್ಸ್ ಪ್ರೆಸ್). ‘ಹಿಂದೂ ಬಹು-ಬೇಟಿ ಬಚಾವೋ ಸಂಘರ್ಷ್ ಸಮಿತಿ’ಯನ್ನು ರಚಿಸಲಾಗುತ್ತದೆ. ಏನಿವೆಲ್ಲ? ಜಹನಾಬಾದ್‍ನ ಮುಸ್ಲಿಮ್ ಯುವತಿಯನ್ನು ಹಿಂದೂ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸುವ ಇದೇ ರಾಜಕೀಯ ಪಕ್ಷ, ವಿೂರತ್‍ನ ಹಿಂದೂ ಯುವತಿಯನ್ನು ಮುಸ್ಲಿಮ್ ಕುಟುಂಬಕ್ಕೆ ಒಪ್ಪಿಸಿ ಎಂದು ಆಗ್ರಹಿಸದೇ ಇರುವುದನ್ನು ಏನೆಂದು ಕರೆಯಬೇಕು? ದ್ವಂದ್ವ, ಹಿಪಾಕ್ರಸಿ, ಜನಾಂಗಬೇಧ, ಮನುಷ್ಯ ವಿರೋಧಿ.. ಮುಂತಾದ ಪದಗಳಿಂದ ಆ ನಕಲಿತನವನ್ನು ಖಂಡಿಸಿದರೆ ಸಾಕೇ? ನಿಜವಾಗಿ,
   ತನ್ನ ಮಾತಿನಿಂದಲೋ ವಿಚಾರಗಳಿಂದಲೋ ಇನ್ನೋರ್ವರನ್ನು ಪ್ರಭಾವಿತಗೊಳಿಸುವ ಪ್ರಯತ್ನಗಳು ಹೊಸದೇನೂ ಅಲ್ಲ. ಕಂಪೆನಿಯೊಂದು ಹೆಚ್ಚಿನ ಸಂಬಳ, ಭತ್ಯೆಯ ಭರವಸೆಯನ್ನು ನೀಡಿ ಇನ್ನೊಂದು ಕಂಪೆನಿಯ ಉದ್ಯೋಗಿಗಳನ್ನು ಆಕರ್ಷಿಸುವುದಿದೆ. ಫೆಮಿನಿಸಂನ ಪ್ರತಿಪಾದಕರು ತಮ್ಮ ವಾದಗಳ ಮೂಲಕ ಇತರರನ್ನು ಪ್ರಭಾವಿತಗೊಳಿಸುವುದಕ್ಕೆ ಪ್ರಯತ್ನಿಸುವುದಿದೆ. ಪ್ರಗತಿಪರರು ಮತ್ತು ಸಂಪ್ರದಾಯವಾದಿಗಳ ಮಧ್ಯೆ ವೈಚಾರಿಕ ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಮಾವೋವಾದ, ಮಾರ್ಕ್ಸಿಸಮ್ ನ ವಕ್ತಾರರು ಅದನ್ನು ಇತರರಿಗೂ ಹಂಚುತ್ತಿರುತ್ತಾರೆ. ಇತರೆಲ್ಲ ಆರ್ಥಿಕ ಚಿಂತನೆಗಳಿಗಿಂತ ಬಂಡವಾಳಶಾಹಿತ್ವವು ಹೇಗೆ ಉತ್ತಮ ಎಂಬುದನ್ನು ಹೇಳುವುದಕ್ಕಾಗಿ ಪ್ರತಿದಿನ ಜಾಗತಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳು ನಡೆಯುತ್ತಲೇ ಇವೆ. ರಾಜಕಾರಣಿಗಳಂತೂ ಭರವಸೆಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಒಂದು ರೀತಿಯಲ್ಲಿ, ಇಲ್ಲೆಲ್ಲಾ ನಡೆಯುತ್ತಿರುವುದು ಮನಪರಿವರ್ತನೆಯ ಪ್ರಯತ್ನಗಳೇ. ಫೆಮಿನಿಸ್ಟ್, ಮಾರ್ಕ್ಸಿಸ್ಟ್, ಸೋಶಿಯಲಿಸ್ಟ್, ಇಂಡಸ್ಟ್ರಿಯಲಿಸ್ಟ್, ಪೊಲಿಟಿಶಿಯನ್.. ಎಲ್ಲರೂ ತಂತಮ್ಮ ವಾದಗಳಿಗೆ ಜನರನ್ನು ಸೇರಿಸುವ ಪ್ರಯತ್ನದಲ್ಲಿ ಪ್ರತಿದಿನ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ, ಸಮಾಜವೂ ಇದನ್ನು ಅತ್ಯಂತ ಸ್ಫೂರ್ತಿಯಿಂದಲೇ ಸ್ವೀಕರಿಸಿದೆ. ಹೀಗಿರುವಾಗ ಧರ್ಮಗಳಿಗೇಕೆ ನಾವು ಇಂಥದ್ದೊಂದು ಸ್ಪೇಸ್ ಅನ್ನು ಒದಗಿಸಿಕೊಡುತ್ತಿಲ್ಲ? ಸೋಶಿಯಲಿಸಂ ಅನ್ನು ಚರ್ಚಿಸುವಷ್ಟೇ ಸ್ಫೂರ್ತಿ ಮತ್ತು ಉತ್ಸಾಹದಿಂದ ಧರ್ಮಗಳ ಬಗ್ಗೆಯೂ ಚರ್ಚಿಸುವುದಕ್ಕೇಕೆ ವಾತಾವರಣವನ್ನು ಸಜ್ಜುಗೊಳಿಸುತ್ತಿಲ್ಲ? ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದ ವ್ಯಕ್ತಿ ಮನಪರಿವರ್ತನೆಗೊಂಡು ಬಂಡವಾಳಶಾಹಿತ್ವ ವನ್ನು ಅಪ್ಪಿಕೊಳ್ಳುವುದು ಎಷ್ಟು ಸಲಿಸಾಗಿ ನಡೆಯಬಲ್ಲುದೋ ಅಷ್ಟೇ ಸಲೀಸಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಮುಸ್ಲಿಮ್ ಆಗುವುದೂ ಅಥವಾ ಇದಕ್ಕೆ ವಿರುದ್ಧ ಆಗುವುದು ಯಾಕೆ ಸಾಧ್ಯವಾಗುತ್ತಿಲ್ಲ? ಫೆಮಿನಿಸಂ, ಸೋಶಿಯಲಿಸಂಗೆಲ್ಲ ಇರುವ ಅಪಾರ ಸ್ವಾತಂತ್ರ್ಯವು ಹಿಂದೂಯಿಸಂ, ಇಸ್ಲಾಮಿಸಂಗೆಲ್ಲ ನಾವು ನೀಡದಿರುವುದು ಯಾಕಾಗಿ? ಸಮಾಜವಾದ ಮತ್ತು ಬಂಡವಾಳವಾದಗಳ ನಡುವೆ ವೈಚಾರಿಕ ಸಂವಾದ ನಡೆಯುವಂತೆಯೇ ಮತ್ತು ಇಷ್ಟವಿದ್ದವರು ಇಷ್ಟ ಬಂದ ವಾದವನ್ನು ಸ್ವೀಕರಿಸಲು ಸ್ವಾತಂತ್ರ್ಯ ಇರುವಂತೆಯೇ ಇಸ್ಲಾಮ್, ಕ್ರೈಸ್ತ-ಹಿಂದೂ ಧರ್ಮಗಳ ನಡುವೆಯೂ ಸಂವಾದ ನಡೆಯುವಂತಹ ಮತ್ತು ಇಷ್ಟ ಬಂದವರು ಇಷ್ಟ ಬಂದ ಧರ್ಮವನ್ನು ಸ್ವೀಕರಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಇರುವಂತಹ ವಾತಾವರಣಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟರೇನು? ಅಷ್ಟಕ್ಕೂ, ಒಂದು ಕಂಪೆನಿಯ ಭರವಸೆಯು ಸುಳ್ಳು ಎಂದು ಗೊತ್ತಾದರೆ ಅದರಿಂದ ಹಿಂದೆ ಬರುವುದಕ್ಕೆ ಉದ್ಯೋಗಿಗೆ ಸಕಲ ಸ್ವಾತಂತ್ರ್ಯವೂ ಇರುತ್ತದೆ. ಫೆಮಿನಿಸಂ, ಸೋಶಿಯಲಿಸಂ.. ಎಲ್ಲವೂ ಹಾಗೆಯೇ. ಮಾತು, ವಿಚಾರಗಳಿಂದ ಪ್ರಭಾವಿತಗೊಂಡು ಓರ್ವ ವ್ಯಕ್ತಿ ಒಂದು ಇಸಂ ಅನ್ನು ಒಪ್ಪಿಕೊಂಡಾಕ್ಷಣ ಎಲ್ಲವೂ ಮುಗಿದು ಹೋಗುವುದಿಲ್ಲ. ಅದು ಸುಳ್ಳು ಮತ್ತು ಮಾತಿನ ಕಸರತ್ತು ಎಂದು ಗೊತ್ತಾದ ತಕ್ಷಣ ಆತನಿಗೆ/ಳಿಗೆ ತನ್ನ ಹಿಂದಿನ ವಾದಕ್ಕೆ ಮರಳಿ ಬರುವುದಕ್ಕೂ ಅವಕಾಶ ಇರುತ್ತದೆ. ಅಂಥ ಪ್ರಕರಣಗಳು ಇವತ್ತು ಧಾರಾಳ ನಡೆಯುತ್ತಲೂ ಇವೆ. ಈ ಸ್ವಾತಂತ್ರ್ಯ ಧಾರ್ಮಿಕವಾಗಿಯೂ ಇರಬೇಕಾದದ್ದೇ. ಇಸ್ಲಾವಿೂ ವಿಚಾರಗಳಿಂದ ಪ್ರಭಾವಿತನಾದವನಿಗೆ ಅದರ ಒಳಹೊಕ್ಕ ಬಳಿಕ ಅದು ಭ್ರಮೆ ಎಂದು ಅನಿಸಿದರೆ ಮರಳಿ ಹೋಗುವುದಕ್ಕೆ ಯಾವ ನಿರ್ಬಂಧಗಳೂ ಇರಬೇಕಿಲ್ಲ, ಇರಬಾರದು ಕೂಡ. ಈ ನಿಯಮ ಇತರ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೂ ಈ ಕ್ಷೇತ್ರ ಇನ್ನೂ ಇಂಥ ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳದೇ ಇರುವುದು ಯಾವ ಕಾರಣದಿಂದ? 
   ಅಂದಹಾಗೆ, ಲವ್ ಜಿಹಾದ್ ಆಗಿ ಬಿಂಬಿತಗೊಂಡಿದ್ದ ವಿೂರತ್‍ನ ಜಾಟ್ ಯುವತಿ ಮತ್ತು ಮುಸ್ಲಿಮ್ ಯುವಕನ ಪ್ರೇಮ ಪ್ರಕರಣವು ಇದೀಗ ಪಡೆದುಕೊಂಡ ತಿರುವನ್ನೇ ಎತ್ತಿಕೊಳ್ಳಿ. ಇದರಿಂದ ಸಿಗುವ ಪಾಠಗಳೇನು? ಧರ್ಮವನ್ನು ಉಸಿರಾಡುವುದಕ್ಕೂ ಸ್ವಾತಂತ್ರ್ಯವಿಲ್ಲದ ಗಾಜಿನ ಪಂಜರವಾಗಿ ಮಾರ್ಪಡಿಸಿದ್ದು ಯಾರು? ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಬೆಳೆಯಬೇಕಾದ ಧರ್ಮಕ್ಕೆ ಲಂಚ, ಆಮಿಷಗಳ ಬೇಲಿಗಳೇಕೆ? ಒತ್ತಡ, ಬಲವಂತದ ತಿವಿತಗಳೇಕೆ? ಇಷ್ಟವಿದ್ದವರು ಒಪ್ಪಿಕೊಳ್ಳುವ ಮತ್ತು ಇಷ್ಟವಿಲ್ಲದವರು ಒಪ್ಪಿಕೊಳ್ಳದೇ ಇರುವ ಸಹಜ ಸ್ವಾತಂತ್ರ್ಯವನ್ನು ಧರ್ಮಗಳಿಂದ ಕಿತ್ತುಕೊಂಡವರು ಯಾರು? ಅವರ ಉದ್ದೇಶವೇನು?

Wednesday, October 8, 2014

ಜ್ಞಾನಸರ ಮತ್ತು ವಿರತ್ತುರ ಪ್ರತಿಜ್ಞೆ ಧರ್ಮ ರಕ್ಷಣೆಗೋ ಜನಾಂಗ ನಿರ್ಮೂಲನಕ್ಕೋ?


    ಶ್ರೀಲಂಕಾದ ಬೋದು ಬಾಲ ಸೇನಾ (ಬೌದ್ಧ ಸೇನೆ)ದ ನಾಯಕ ಗಲಗೊಡ ಜ್ಞಾನಸರ ಮತ್ತು ಮ್ಯಾನ್ಮಾರ್‍ನ ‘969 ಚಳವಳಿ’ಯ ನಾಯಕ ಆಶಿನ್ ವಿರತ್ತು ಕಳೆದ ವಾರ ಲಂಕಾದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ ಮತ್ತು ಬೌದ್ಧ ಧರ್ಮದ ರಕ್ಷಣೆಗೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು ಪ್ರಕಟಿಸಿದ್ದುವು. ಇದಕ್ಕೆ ಕಾರಣವೂ ಇದೆ.  
   2014 ಜೂನ್ 15ರಂದು ಲಂಕಾದ ಕಲುತರ ಜಿಲ್ಲೆಯ ಅಲುತಗಮ, ಬೆರುವಲ ಮತ್ತು ದರ್ಗಾಟೌನ್ ಪ್ರದೇಶಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ನಡೆಯಿತು. 4 ಮಂದಿ ಸಾವಿಗೀಡಾದರು. ಸಾವಿರಾರು ಮುಸ್ಲಿಮರು ನಿರ್ವಸಿತರಾದರು. 17 ಮಸೀದಿಗಳು ನೆಲಸಮಗೊಂಡವು. ಬೌದ್ಧ ಸನ್ಯಾಸಿ ಅಯಗಮ ಸಮಿತ್‍ರ ಮೇಲೆ ಹಲ್ಲೆ ನಡೆಸಲಾದ ನೆಪದಲ್ಲಿ ಬೌದ್ಧ ಸೇನೆ ಈ ಹಿಂಸಾಚಾರವನ್ನು ಆರಂಭಿಸಿತ್ತು. ಮೂರು ದಿನಗಳ ವರೆಗೆ ನಡೆದ ಈ ಹಿಂಸಾಚಾರದ ಸುದ್ದಿಯು ಹೊರ ಜಗತ್ತಿಗೆ ಅಷ್ಟೇ ತೀವ್ರತೆಯಿಂದ ವರದಿಯಾಗದಿರಲೆಂದು ಸರಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್ ವಿಧಿಸಿತು. ಟಿ.ವಿ.ಗಳು ಸುಮ್ಮ ನಾದುವು. ಆದರೆ ಮಾಧ್ಯಮಗಳು ತೋರಿಸದಿದ್ದುದನ್ನು ಫೇಸ್‍ಬುಕ್, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣಗಳು ಜಗತ್ತಿಗೆ ತೋರಿಸಿದುವು. ಬೌದ್ಧಸೇನೆಯ ಪ್ರಮುಖ ಟೀಕಾಕಾರರಾಗಿರುವ ಬೌದ್ಧ ಸನ್ಯಾಸಿ ವಾಟರೇಕ ವಿಜಿತರಿಗೆ ಜೂನ್ 19ರಂದು ಈ ಮಂದಿ ಬಲವಂತದಿಂದ ಸುನ್ನತಿ (ಮುಂಜಿ) ಮಾಡಿಸಿದರು. ಸಂಡೇ ಟೈಮ್ಸ್ ನ ಪತ್ರಕರ್ತ ಶರತ್ ಸಿರಿವರ್ಧನೆಯ ಮೇಲೆ ದಾಳಿ ನಡೆಯಿತು. ಅಲ್ ಜಝೀರಾ ಪತ್ರಿಕಾ ತಂಡ ಮತ್ತು ಪತ್ರಕರ್ತ ಬಿನಯ್ ಸೂರ್ಯರಚಿಯ ಮೇಲೂ ಹಲ್ಲೆ ನಡೆಯಿತು. ಮುಸ್ಲಿಮರ ಆಸ್ತಿ-ಪಾಸ್ತಿಗಳ ಮೇಲೆ ವ್ಯವಸ್ಥಿತ ದಾಳಿ ನಡೆಯಿತು. ಬೊಲಿವಿಯಾದಲ್ಲಿದ್ದ ಅಧ್ಯಕ್ಷ  ರಾಜಪಕ್ಸೆ ಹಿಂತಿರುಗಿ ಬರುವವರೆಗೆ ಸರಕಾರ ಯಾವ ಹೇಳಿಕೆಯನ್ನೂ ಹೊರಡಿಸಲಿಲ್ಲ. ಈ ಮುಸ್ಲಿಮ್ ವಿರೋಧಿ ದಂಗೆಗೆ ರಕ್ಷಣಾ ಮಂತ್ರಿಯ ಸಲಹೆಗಾರ ಕಪಿಲ್ ಹೆಂದವಿತರಣ, ಕರ್ನಲ್ ಸುರೇಶ್ ಸಲ್ಲೆ ಮತ್ತು ಗುಪ್ತಚರ ಇಲಾಖೆಯ ಉಪಮುಖ್ಯಸ್ಥ ಚಂದ್ರ ವಾಕಿಷ್ಟರೇ ಕಾರಣ ಎಂದು ಮುಖ್ಯ ವಿರೋಧ ಪಕ್ಷವಾದ ಯುನೈಟೆಡ್ ನ್ಯಾಶನಲ್ ಪಾರ್ಟಿಯ ನಾಯಕ ಮಂಗಳ ಸಮರವೀರ ಆರೋಪಿಸಿದರು. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್‍ಕಿ ಮೂನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ನವಿಪಿಳ್ಳೆ, ಕೊಲಂಬೋದಲ್ಲಿರುವ ಅಮೇರಿಕ ಮತ್ತು ಕೆನಡಾದ ರಾಯಭಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ನಾರ್ವೆ, ಸ್ವೀಡನ್, ತುರ್ಕಿ ಸಹಿತ ಯುರೋಪಿಯನ್ ಯೂನಿಯನ್‍ಗಳ ನಿಯೋಗವೊಂದು ಕೊಲಂಬೋಕ್ಕೆ ಭೇಟಿ ನೀಡಿತು. ಲಂಕಾದ ತಮಿಳರ ಜಾಗದಲ್ಲಿ ಇದೀಗ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಎತ್ತಿದರು. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಬೌದ್ಧ ಸೇನೆಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ರಾಜಪಕ್ಸೆ ಭಾಗಿಯಾಗುತ್ತಿರುವುದನ್ನು ಅನೇಕರು ಪ್ರಶ್ನಿಸಿದರು.
   ಅಂದಹಾಗೆ, ಗಲಭೆ ನಡೆದ ಜೂನ್ ತಿಂಗಳಿನಲ್ಲಿಯೇ ಲಂಕಾದ ಪಾರ್ಲಿಮೆಂಟ್‍ನ 6 ಮಂದಿ ಸದಸ್ಯರ ಸತ್ಯಶೋಧನಾ ಸಮಿತಿಯೊಂದು ದೇಹಿವಾಲಾ ಮೃಗಾಲಯಕ್ಕೆ ಭೇಟಿ ನೀಡಿತು. ಗಲಭೆಯಿಂದ ತತ್ತರಿಸಿದ ಜನರನ್ನು ಭೇಟಿಯಾಗುವುದಕ್ಕೆ ಸಮಿತಿ ರಚಿಸುವ ಬದಲು ಮೃಗಾಲಯದಲ್ಲಿ ನೀರ್ಗುದುರೆ ಮತ್ತು ಸಿಂಹವು ಸಾವಿಗೀಡಾದುದನ್ನು ಪರಿಶೀಲಿಸಲು ಸಮಿತಿ ರಚಿಸಿದುದಕ್ಕೆ ತೀವ್ರ ಟೀಕೆಗಳು ಎದುರಾದುವು. ಗಲಭೆಗ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ ರಾಜಪಕ್ಸೆಯವರು, ಬೌದ್ಧ ಧರ್ಮದ ರಕ್ಷಣೆಯ ಅಗತ್ಯವಿದೆ ಎಂದಿದ್ದೂ ಚರ್ಚೆಗೀಡಾಯಿತು. ಅಷ್ಟಕ್ಕೂ, ಜನಾಂಗ ತಾರತಮ್ಯ ಎಂಬುದು ಲಂಕಾಕ್ಕೆ ಹೊಸತಲ್ಲ.
    1948ರಲ್ಲಿ ಲಂಕಾವು ಬ್ರಿಟಿಷ್ ಪ್ರಭುತ್ವದಿಂದ ಸ್ವತಂತ್ರಗೊಂಡ ಕೂಡಲೇ ಸಿಲೋನ್ ಸಿಟಿಝನ್‍ಶಿಪ್ ಆ್ಯಕ್ಟನ್ನು ಪಾರ್ಲಿಮೆಂಟ್ ಜಾರಿಗೆ ತಂದಿತ್ತು. ಈ ಕಾಯ್ದೆಯು ಭಾರತ ಮೂಲದ ತಮಿಳರಿಗೆ ಪೌರತ್ವವನ್ನೇ ನಿಷೇಧಿಸಿತು. ಆಗ 7 ಲಕ್ಷದಷ್ಟು ತಮಿಳು ನಾಗರಿಕರು ಅತಂತ್ರರಾದರು. ಇವರಲ್ಲಿ 3 ಲಕ್ಷ  ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. 1956ರಲ್ಲಿ ಪ್ರಧಾನಿ ಭಂಡಾರ ನಾಯಿಕೆಯವರು ಸಿಂಹಳ ಓನ್ಲಿ ಆ್ಯಕ್ಟ್ ಅನ್ನು ಜಾರಿಗೆ ತಂದರು. ಈ ಮೂಲಕ ಲಂಕಾದ ಅಧಿಕೃತ ಭಾಷೆಯಾಗಿ ಇಂಗ್ಲಿಷ್‍ನ ಬದಲು ಸಿಂಹಳವು ಆಯ್ಕೆಯಾಯಿತು. ಮಾತ್ರವಲ್ಲ, ಈ ಕಾಯ್ದೆಯನ್ನು ಬಳಸಿಕೊಂಡು ತಮಿಳರನ್ನು ವ್ಯವಸ್ಥಿತವಾಗಿ ಬಗ್ಗುಬಡಿಯಲಾಯಿತು. ಸರಕಾರಿ ಹುದ್ದೆಗಳಲ್ಲಿ ಭಾಷೆಯ ನೆಪವೊಡ್ಡಿ ತಮಿಳರನ್ನು ಹೊರಗಿಡಲಾಯಿತು. ಸಿಂಹಳ ಭಾಷೆಯಲ್ಲಿ ಪರಿಣತರಾಗಿಲ್ಲ ಎಂಬ ಕಾರಣವೊಡ್ಡಿ ತಮಿಳು ಅಧಿಕಾರಿಗಳನ್ನು ಹುದ್ಧೆಯಿಂದ ಕಿತ್ತುಹಾಕಲಾಯಿತು. ನಿಜವಾಗಿ, 1960ರಲ್ಲಿ ಪ್ರತ್ಯೇಕ ತಮಿಳುರಾಷ್ಟ್ರದ ಬೇಡಿಕೆಯನ್ನು ಮುಂದಿಡುವ ಕರಪತ್ರಗಳು ಪ್ರಕಟವಾಗಲು ಪ್ರಾರಂಭವಾದುದಕ್ಕೆ ಕಾರಣ ಇದುವೇ. ಕೊಲಂಬೋದ ಬ್ರಿಟಿಷ್ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆ್ಯಂಟನಿ ಬಾಲಸಿಂಘಂ ಅವರು ಪ್ರತ್ಯೇಕತಾವಾದಿಗಳ ಸಭೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಬಳಿಕ ಅವರು ಇಂಗ್ಲೆಂಡ್‍ಗೆ ತೆರಳಿದರಲ್ಲದೇ ಎಲ್‍ಟಿಟಿಇಯ ಪ್ರಮುಖ ಚಿಂತಕರಲ್ಲಿ ಒಬ್ಬರಾದರು. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಲಂಕಾ ಸರಕಾರವು ತಾರತಮ್ಯ ನೀತಿಯನ್ನು ಸಡಿಲಗೊಳಿಸಲಿಲ್ಲ. 1970ರಲ್ಲಿ ಪಾಲಿಸಿ ಆಫ್ ಸ್ಟಾಂಡರ್‍ಡೈಸೇಶನ್ ಎಂಬ ಕಾಯ್ದೆಯನ್ನು ಜಾರಿಗೊಳಿಸಿತು. ವಿಶ್ವವಿದ್ಯಾಲಯಗಳ ಆಡಳಿತವನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡರೂ ನಿಜ ಅದಾಗಿರಲಿಲ್ಲ. ಈ ಕಾಯ್ದೆಯನ್ನು ಬಳಸಿಕೊಂಡು ಸಿಂಹಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಲಾಯಿತು. ಈ ಕಾಯ್ದೆಯಂತೆ ವೈದ್ಯಕೀಯ ಸೀಟು ಸಿಗಬೇಕೆಂದರೆ ಸಿಂಹಳೀಯ ವಿದ್ಯಾರ್ಥಿ ಒಟ್ಟು 400 ಅಂಕದಲ್ಲಿ 229 ಅಂಕ ಪಡೆದರೆ ಸಾಕಾಗುತ್ತದೆ. ಆದರೆ ತಮಿಳು ವಿದ್ಯಾರ್ಥಿ 250 ಅಂಕ ಪಡೆಯಬೇಕು. 1978ರಲ್ಲಿ ತಮಿಳು ಮ್ಯಾಗಸಿನ್‍ಗಳ ಆಮದಿಗೆ ನಿಷೇಧ ವಿಧಿಸಲಾಯಿತು. ಹೀಗೆ ಲಂಕಾದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಸಿಂಹಳೀಯರನ್ನು ಬಿಟ್ಟರೆ ಉಳಿದಂತೆ ಎರಡನೇ ಅತಿದೊಡ್ಡ ಸಮುದಾಯವಾಗಿದ್ದ ತಮಿಳರನ್ನು ವ್ಯವಸ್ಥಿತವಾಗಿ ತುಳಿದುದರ ಫಲಿತಾಂಶವೇ ಎಲ್‍ಟಿಟಿಇಯ ಉಗಮವಾಗಿತ್ತು. 2009 ಮೇ 17ರಂದು ಎಲ್‍ಟಿಟಿಇಯು ಅಂತಿಮವಾಗಿ ಸೋಲೊಪ್ಪಿಕೊಂಡರೂ ಅದು ಹುಟ್ಟುಹಾಕಿದ ಕಾವು ಮತ್ತು ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಇಂಥ ಹೊತ್ತಿನಲ್ಲಿಯೇ ಲಂಕಾವು ಮತ್ತೊಮ್ಮೆ ಜನಾಂಗೀಯ ನಿರ್ಮೂಲನಾ ಆರೋಪಕ್ಕೆ ಗುರಿಯಾಗಿದೆ.
   ಲಂಕಾಕ್ಕೂ ಮುಸ್ಲಿಮರಿಗೂ ಪ್ರವಾದಿ ಮುಹಮ್ಮದ್ ರ ಕಾಲದಿಂದಲೇ ಸಂಬಂಧ ಇದೆ. 7ನೇ ಶತಮಾನದಲ್ಲೇ ಅರಬ್ ವ್ಯಾಪಾರಿಗಳು ಈ ದ್ವೀಪರಾಷ್ಟ್ರಕ್ಕೆ ಕಾಲಿಟ್ಟರಲ್ಲದೇ ಕೃಷಿ ಮತ್ತು ಜಾನುವಾರು ಸಾಕಣೆ ಮಾಡುತ್ತಿದ್ದ ಸಿಂಹಳೀಯ ನಾಡಿಗೆ ವ್ಯಾಪಾರದ ರುಚಿಯನ್ನು ಹತ್ತಿಸಿದರು. ಆದ್ದರಿಂದಲೇ ಬಹುತೇಕ ಜನರಿಗೆ ಮತ್ತು ಆಡಳಿತಕ್ಕೆ ಹತ್ತಿರವಾದರು. ಅವರು ಬಹುಬೇಗ ತಮಿಳು ಕಲಿತರು. ಸ್ಥಳೀಯರೊಂದಿಗೆ ಬೆರೆತು ಅಲ್ಲೇ ನೆಲೆಸಿದರು. ಮುಸ್ಲಿಮ್ ದೊರೆಗಳು ಲಂಕಾವನ್ನು ಆಳಿದ ಇತಿಹಾಸವೂ ಇದೆ. 1344ರಲ್ಲಿ ಲಂಕಾಕ್ಕೆ ಭೇಟಿ ನೀಡಿದ ಖ್ಯಾತ ಇತಿಹಾಸಕಾರ ಇಬ್ನು ಬತೂತ ಈ ಬಗ್ಗೆ ತನ್ನ ಅನುಭವವನ್ನೂ ಹಂಚಿಕೊಂಡಿದ್ದಾರೆ. ಕ್ರಿಸ್ತಪೂರ್ವ 307-267ರ ಸಮಯದಲ್ಲಿ ರಾಜ ಅಶೋಕ್‍ರಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರವಾದ ಸಿಂಹಳೀಯರು ಲಂಕಾದಲ್ಲಿ ಇವತ್ತೂ ಬಹುಸಂಖ್ಯಾತರೇ. ಮುಸ್ಲಿಮರು ಬರೇ 10%. ಮುಸ್ಲಿಮರನ್ನು ಸಾಮಾನ್ಯವಾಗಿ ಮಾರ್ಸ್ ಮುಸ್ಲಿಮ್ಸ್ ಮತ್ತು ಮಲಯಾ ಮುಸ್ಲಿಮ್ಸ್ ಎಂದು ವಿಭಜಿಸಲಾಗುತ್ತದೆ. ಸಿಂಹಳೀಯರದ್ದು ಪಾಲಿ ಭಾಷೆಗೆ ಹತ್ತಿರದ ನಂಟಿರುವ ಆರ್ಯನ್ ಭಾಷೆಯಾದರೆ ಮುಸ್ಲಿಮರು ಅರಬಿ ಮತ್ತು ತಮಿಳು ಮಿಶ್ರಿತ ಭಾಷೆ ಮಾತಾಡುತ್ತಾರೆ. ಅವರ ಭಾಷೆಯಲ್ಲಿ ಅತ್ಯಧಿಕ ಅರಬಿ ಪದಗಳು ಒಳಗೊಂಡಿವೆ. ಅಲ್ಲಿನ 99% ಮುಸ್ಲಿಮರು ಕೂಡ ಅಕ್ಷರಸ್ಥರೇ. ಸುಮಾರು 800ರಷ್ಟು ಶಾಲೆಗಳನ್ನು ಅವರು ನಡೆಸುತ್ತಿದ್ದಾರೆ. ಮುಸ್ಲಿಮ್ ಯುನಿವರ್ಸಿಟಿಯೂ ಇದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮುಸ್ಲಿಮರು, ಎಲ್‍ಟಿಟಿಇ ಮತ್ತು ಸರಕಾರದ ನಡುವಿನ ಹೋರಾಟದ ಸಂದರ್ಭದಲ್ಲಿ ಸರಕಾರವನ್ನೇ ಬೆಂಬಲಿಸಿದ್ದರು. ಇದು ಎಲ್‍ಟಿಟಿಇಯ ಮುಖಂಡ ಪ್ರಭಾಕರನ್ ಅವರನ್ನು ತೀವ್ರವಾಗಿ ಸಿಟ್ಟಿಗೆಬ್ಬಿಸಿತ್ತು. 1990ರ ಅವಧಿಯಲ್ಲಿ ಉತ್ತರ ಲಂಕಾದಿಂದ 95 ಸಾವಿರ ಮುಸ್ಲಿಮರನ್ನು ಅವರು ಹೊರಹಾಕಿದ್ದರು. ಮಾತ್ರವಲ್ಲ, ನೂರಾರು ಮಂದಿ ಈ ಸಂದರ್ಭದಲ್ಲಿ ಪ್ರಾಣ ಕಳಕೊಂಡರು. ಈ ಕೃತ್ಯಕ್ಕಾಗಿ 2002ರಲ್ಲಿ ಸ್ವತಃ ಪ್ರಭಾಕರ್ ಅವರೇ ಮುಸ್ಲಿಮರ ಕ್ಷಮೆ ಯಾಚಿಸಿದ್ದರು. ಒಂದು ರೀತಿಯಲ್ಲಿ ತಮಿಳರೊಂದಿಗೆ ಜನಾಂಗೀಯವಾಗಿ ಯಾವ ಸಂಬಂಧ ಇಲ್ಲದಿದ್ದರೂ ಇವತ್ತೂ ತಮಿಳು ಮಾತಾಡುವ ಮುಸ್ಲಿಮರು ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಆರಂಭದಲ್ಲಿ ತಮಿಳರ ವಿರುದ್ಧ ನಿಂತ ಅಲ್ಲಿನ ಸರಕಾರ ಮತ್ತು ಬಲಪಂಥೀಯ ಬೌದ್ಧರು ಇವತ್ತು ಮುಸ್ಲಿಮರ ಜನಾಂಗ ನಿರ್ಮೂಲನಕ್ಕಾಗಿ ವಿವಿಧ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. 2013 ಫೆಬ್ರವರಿಯಲ್ಲಿ ಹಲಾಲ್ ಲೋಗೋದ ನೆಪದಲ್ಲಿ ಬೌದ್ಧ ಸೇನೆಯು ಸರಣಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿತ್ತು. ಆಲ್ ಸಿಲೋನ್ ಜವಿೂಯತುಲ್ ಉಲೆಮಾ ಎಂಬ ಸಂಘಟನೆಯು ನೀಡುವ ಹಲಾಲ್ (ಧರ್ಮಸಮ್ಮತ) ಸರ್ಟಿಫಿಕೇಟನ್ನು ಅಲ್ಲಿನ ಸಾಕಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳುತ್ತಿವೆ. ಆದರೆ ಇಸ್ಲಾವಿೂ ಕಾನೂನಿನಂತೆ ತಯಾರಾಗುವ ಉತ್ಪನ್ನಗಳು ಲಂಕಾದಲ್ಲಿ ಮಾರಾಟವಾಗುವುದು ಮತ್ತು ಅದು ಬೌದ್ಧರ ಆಹಾರವಾಗಿ ಬಳಕೆಗೀಡಾಗುವುದು ತಪ್ಪು ಎಂದು ಬೌದ್ಧ ಸೇನೆ ವಾದಿಸಿತು. ಬಳಿಕ ಅಂಥ ಸರ್ಟಿಫಿಕೇಟ್ ಕೊಡುವುದನ್ನು ಉಲೇಮಾ ಸಂಘಟನೆಯು ರದ್ದುಪಡಿಸಿತು. ನಿಜವಾಗಿ ಬೌದ್ಧ ಸೇನೆಯ ಸಿಟ್ಟು ಹಲಾಲ್ ಉತ್ಪನ್ನದ  ಮೇಲಾಗಿರಲಿಲ್ಲ. ಹಲಾಲ್ ಉತ್ಪನ್ನದ ಕಂಪೆನಿಗಳು ಲಂಕಾದಲ್ಲಿ ಜನಪ್ರಿಯವಾಗಿದ್ದುವು. 10% ಮುಸ್ಲಿಮರಿದ್ದರೂ ಹಲಾಲ್ ಉತ್ಪನ್ನಗಳು ಮಾರುಕಟ್ಟೆಯ 20%ವನ್ನು ಆಕ್ರಮಿಸಿಕೊಂಡಿದ್ದುವು. ಇದುವೇ ಬೌದ್ಧ ಸೇನೆಯನ್ನು ಕುಪಿತಗೊಳಿಸಿತ್ತು. 2014 ಆಗಸ್ಟ್ ನಲ್ಲಿ ಮಸೀದಿಯ ನಿರ್ಮಾಣದ ವಿರುದ್ಧ ಬೌದ್ಧ ಸೇನೆ ಪ್ರತಿಭಟನೆ ಹಮ್ಮಿಕೊಂಡಿತು. ಬಳಿಕ ಅದು ದೊಡ್ಡ ವಿವಾದಕ್ಕೂ ಕಾರಣವಾಯಿತು.
   ಅಂದಹಾಗೆ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ‘969 ಚಳವಳಿ' ಹಾಗೂ ಬೋದೋ ಬಾಲ ಸೇನಾಗಳು ಜೊತೆಯಾಗಿರುವುದಕ್ಕೂ ಭಾರತ ಉಪಖಂಡದಲ್ಲಾದ ಬೆಳವಣಿಗೆಗಳಿಗೂ ಸಂಬಂಧ ಇರಬಹುದೇ? ಭಾರತದಲ್ಲಿ ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಬಲ ಬಂದಿರುವುದು ಮತ್ತು ಬಲಪಂಥೀಯ ಚಟುವಟಿಕೆಗಳು ಹೆಚ್ಚು ವೇಗ ಪಡೆದಿರುವುದನ್ನು ಮ್ಯಾನ್ಮಾರ್ ಮತ್ತು ಲಂಕಾದ ಬೆಳವಣಿಗೆಗಳಿಗೆ ಹೋಲಿಸಿ ನೋಡಿದರೆ ಏನನಿಸುತ್ತದೆ? ವಿರತ್ತು ಮತ್ತು ಜ್ಞಾನಸರರ ಭೇಟಿಯು ರವಾನಿಸುವ ಸೂಚನೆಗಳೇನು? ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯ ಸಂಘಟನೆಗಳು ಯಾವ ಆರೋಪವನ್ನು ಹೊರಿಸುತ್ತಿವೆಯೋ ಅವೇ ಆರೋಪವನ್ನು ಲಂಕಾದಲ್ಲಿ ಬೌದ್ಧ ಸೇನೆ ಮುಸ್ಲಿಮರ ವಿರುದ್ಧ ಹೊರಿಸುತ್ತಿರುವುದರ ಹಿನ್ನೆಲೆ ಏನು? ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ, ಸಿಂಹಳೀಯ ಮಹಿಳೆಯರನ್ನು ವಿವಾಹವಾಗಿ ಜನಸಂಖ್ಯೆ ಹೆಚ್ಚಿಸುತ್ತಾರೆ, ವ್ಯಾಪಾರದ ಮೂಲಕ ಪ್ರಾಬಲ್ಯ ಪಡೆದು ಆಡಳಿತವನ್ನು ಕೈವಶ ಪಡಿಸಬಯಸುತ್ತಾರೆ ಮತ್ತು ಸಿಂಹಳೀಯ ಅಸ್ಮಿತೆಗೆ ಬೆದರಿಕೆ ಯಾಗಿದ್ದಾರೆ..’ ಮುಂತಾದ ಆರೋಪಗಳೊಂದಿಗೆ ಬೌದ್ಧ ಸೇನೆ ಕಾರ್ಯಪ್ರವೃತ್ತವಾಗಿರುವುದನ್ನು ಏನೆಂದು ವ್ಯಾಖ್ಯಾನಿಸಬಹುದು? ಅದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶವೇನು?
   ಆಶಿನ್ ವಿರತ್ತು ಮತ್ತು ಜ್ಞಾನಸರರ ನಡುವಿನ ಭೇಟಿ ಮತ್ತು ಅವರ ಧರ್ಮರಕ್ಷಣೆಯ ಪ್ರತಿಜ್ಞೆಯು ಸಹಜವಾಗಿಯೇ ಅನುಮಾನ ಗಳನ್ನು ಹುಟ್ಟುಹಾಕುತ್ತದೆ.



Tuesday, September 16, 2014

ಹೆಣ್ಣನ್ನು ವೇಶ್ಯೆಗೊಳಿಸುವ ಪುರುಷನೇಕೆ ಮಹಿಳಾ ವಿರೋಧಿ ಎನಿಸಿಕೊಳ್ಳುತ್ತಿಲ್ಲ?

   ಹೆಣ್ಣು ಸ್ವಯಂ ವೇಶ್ಯೆ ಅಲ್ಲ. ಗಂಡು ಆಕೆಯನ್ನು ವೇಶ್ಯೆಗೊಳಿಸುತ್ತಾನೆ. ಆತನ ಸಂಪರ್ಕದಿಂದಾಗಿ ಆಕೆ ವೇಶ್ಯೆಯಾಗುತ್ತಾಳೆ. ಆದರೂ ಮಾಂಸದಂಧೆ, ವೇಶ್ಯಾವಾಟಿಕೆ, ಮೈ ಮಾರುವಿಕೆ.. ಮುಂತಾದ ಪದಗಳೆಲ್ಲ ಹೆಣ್ಣಿನ ಸುತ್ತವೇ ಗಿರಕಿ ಹೊಡೆಯುತ್ತಿರುವುದೇಕೆ? ಇವು ಮತ್ತು ಇಂಥ ಅನೇಕ ಪದಗಳಲ್ಲಿ ಒಂದು ಪದವನ್ನಾದರೂ ಆಕೆಯನ್ನು ವೇಶ್ಯೆಗೊಳಿಸಿದ ಪುರುಷನಿಗೆ ಈ ಸಮಾಜ ಇನ್ನೂ ಕೊಡದಿರುವುದು ಯಾವ ಕಾರಣದಿಂದ? ಹೆಣ್ಣು ವೇಶ್ಯೆಯಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರ ನಿಂತೋ ಘನತೆರಹಿತವಾಗಿಯೋ ಬದುಕುತ್ತಿರುವಾಗ ಅದಕ್ಕೆ ಕಾರಣನಾದವ ಸಕಲ ಮರ್ಯಾದೆ ಮತ್ತು ಪೂರ್ಣ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾನಲ್ಲ, ಯಾಕೆ ಇದು ಚರ್ಚಾರ್ಹಗೊಳ್ಳುತ್ತಿಲ್ಲ? ಹಾಗಂತ, ಹೆಣ್ಣನ್ನು ಹೀಗೆ ವೇಶ್ಯೆಗೊಳಿಸಿದವ ರಾಜಕಾರಣಿ ಆಗಿರಬಹುದು, ಧಾರ್ಮಿಕ ಮುಖಂಡ, ಹೋರಾಟಗಾರ, ಸಮಾಜಸೇವಕ, ಬುದ್ಧಿಜೀವಿ, ಸಾಹಿತಿ, ಪತ್ರಕರ್ತ, ವೈದ್ಯ, ಇಂಜಿನಿಯರ್, ನ್ಯಾಯವಾದಿ, ಸಾಮಾನ್ಯ.. ಯಾರೂ ಆಗಿರಬಹುದು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದೋ ನಿಷೇಧ ವಿಧಿಸಿ ಎಂದೋ ಆತ ಆಗ್ರಹಿಸಿರಬಹುದು. ಆ ಕುರಿತಾದ ಪ್ರತಿಭಟನೆಗಳಲ್ಲಿ ಮುಂದಾಳುತ್ವ ವಹಿಸಿರಬಹುದು. ಹೆಣ್ಣಿನ ಹಕ್ಕು-ಸಮಾನತೆಯ ಕುರಿತಂತೆ ಚರ್ಚಿಸಿರಬಹುದು.. ಇವೆಲ್ಲ ಏನು? ಪುರುಷ ಯಜಮಾನಿಕೆ ಅಲ್ಲವೇ? ಪುರುಷನಿಗೆ ಸಮಾಜದಲ್ಲಿ ಸಿಗುವಷ್ಟೇ ಗೌರವ ಆತನಿಂದ ‘ವೇಶ್ಯೆ' ಆದವಳಿಗೂ ಸಿಗಬೇಕೆಂದು ಒತ್ತಾಯಿಸಿ ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ? ಆಕೆಯನ್ನು ‘ವೇಶ್ಯೆ' ಮಾಡಿದವರ ಭಾವಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತಿಲ್ಲ? ಹೆಣ್ಣಿನಿಂದ ಸುಖವನ್ನು ಪಡೆದ ಪುರುಷ ಆಕೆಗೆ ವೇಶ್ಯೆ ಎಂಬ ಬಿರುದನ್ನು ದಯಪಾಲಿಸಿ ಹಿಂತಿರುಗುತ್ತಾನೆ. ಆದರೆ ಆಕೆಯಿಂದ ಆತ ಯಾವ ಬಿರುದನ್ನೂ ಪಡಕೊಳ್ಳುವುದಿಲ್ಲ. ಈ ತಾರತಮ್ಯದ ಬಗ್ಗೆ ಸಮಾಜದ ನಿಲುವು ಏನು? ಅಷ್ಟಕ್ಕೂ, ಆತ ಸುಖಕ್ಕೆ ಬದಲಾಗಿ ದುಡ್ಡು ಪಾವತಿಸುತ್ತಾನೆ ಎಂದು ವಾದಿಸಬಹುದು. ಓರ್ವ ಹೆಣ್ಣಿಗೆ ತನ್ನ ಮಾನ, ಮರ್ಯಾದೆ, ಗೌರವ ಮುಂತಾದುವುಗಳನ್ನೆಲ್ಲ ವಿೂರಿ ಬದುಕಬೇಕಾದಂಥ ಬಡತನದ ಪರಿಸ್ಥಿತಿ ಎದುರಾಗಿದೆಯೆಂದರೆ ಅದಕ್ಕೆ ಈ ಪುರುಷ ಸಮಾಜದ ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ಲೈಂಗಿಕವಾಗಿ ಬಳಸಿಕೊಳ್ಳುವುದೇ? ಓರ್ವರ ಅಸಹಾಯಕತೆಗೆ ಪ್ರತಿಕ್ರಿಯಿಸುವ ಮಾನವೀಯ ವಿಧಾನವೇ ಇದು? ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಹೆಚ್ಚಿನೆಲ್ಲ ವೇಶ್ಯೆಯರ ಹಿಂದೆ ಬಡತನದ ಕತೆಯಿದೆ. ಮಾನವ ಕಳ್ಳ ಸಾಗಾಣಿಕೆಯಿಂದಲೋ ಮೋಸಕ್ಕೊಳಗಾಗಿಯೋ ವೇಶ್ಯೆಯರಾಗುವವರ ಸಂಖ್ಯೆ ತೀರಾ ಕಡಿಮೆ. ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುವವರ ಹಿನ್ನೆಲೆಯೂ ಬಡತನದ್ದೇ. ಒಂದು ಕಡೆ ಅಸಹಾಯಕತೆ. ಇನ್ನೊಂದು ಕಡೆ ಆ ಅಸಹಾಯಕತೆಗೆ ನೆರವಾಗುವ ನೆಪದಲ್ಲಿ ಆಕೆಯ ದೇಹದ ದುರ್ಬಳಕೆ. ಯಾಕೆ ಇದು ಮಹಿಳಾ ದೌರ್ಜನ್ಯ ಅನ್ನಿಸಿಕೊಳ್ಳುತ್ತಿಲ್ಲ?
ಪುರಾತನ ಮೆಸಪಟೋಮಿಯ ಅಥವಾ ಹಮ್ಮುರಾಬಿ ನಾಗರಿಕತೆಯಲ್ಲಿ ವೇಶ್ಯಾವಾಟಿಕೆ ಇತ್ತು ಎಂದೋ ಅಥವಾ ಗ್ರೀಕ್‍ನ ಪೋರ್ನೊ ಎಂಬ ಪದದಿಂದ ಪೋರ್ನೋಗ್ರಫಿ ಎಂಬ ಪದ ಹುಟ್ಟಿಕೊಂಡಿದೆಯೆಂದೋ ವಾದಿಸುವುದು ಸುಲಭ. ಪುರಾತನ ಗ್ರೀಕ್‍ನ ಇತಿಹಾಸದಲ್ಲಿ ಲೈಸ್ ಎಂಬ ಮಹಿಳೆಯ ಚೆಲುವು ಮತ್ತು ಮಾದಕತೆಯ ಕತೆಯಿದೆ. ಆಕೆ ವೇಶ್ಯೆ ಆಗಿದ್ದಳೆಂದೂ ಆಕೆಯ ಚೆಲುವಿಗಾಗಿ ಹೆಚ್ಚಿನ ಮೊತ್ತ ಪಾವತಿಸಲಾಗುತ್ತಿತ್ತೆಂದೂ ಹೇಳಲಾಗುತ್ತದೆ. ಅಂದಹಾಗೆ, ಪುರಾತನ ಕಾಲದ ದೊಡ್ಡದೊಂದು ಇತಿಹಾಸವು ಅಮಾನವೀಯವಾಗಿತ್ತು. ದುರ್ಬಲರಾದ ಮಹಿಳೆ ಮತ್ತು ಪುರುಷರ ರಕ್ತದ ಕಲೆಗಳಿಂದ ಅವು ಬರೆಯಲ್ಪಟ್ಟಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಮಿಲಿಟರಿ ವೇಶ್ಯಾಗೃಹದಲ್ಲಿ ಚೀನಾ, ಕೊರಿಯ ಮತ್ತಿತರೆಡೆಯ 2 ಲಕ್ಷದಷ್ಟು ಮಹಿಳೆಯರು ಲೈಂಗಿಕ ತೃಷೆಗೆ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಗುಲಾಮರು ಮತ್ತು ದೇವದಾಸಿಯರಾಗಿ ಪುರುಷ-ಮಹಿಳೆಯರಿಬ್ಬರೂ ಈ ಜಗತ್ತಿನಾದ್ಯಂತ ಸರಣಿ ಅತ್ಯಾಚಾರಗಳನ್ನು ಅನುಭವಿಸಿದರು. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಗುಲಾಮತನ, ವೇಶ್ಯಾವಾಟಿಕೆಯನ್ನು ಕಾನೂನುಬಾಹಿರವೆಂದು ಸಾರಿದರು. ಕಮ್ಯುನಿಸ್ಟ್ ಚಿಂತಕರೂ ವೇಶ್ಯಾವಾಟಿಕೆಗೆ ವಿರುದ್ಧ ವಾಗಿದ್ದರು. 'Only a specific expression of the general prostitution of the laborer' ಎಂದು ಹೇಳಿದ್ದ ಕಾರ್ಲ್ ಮಾರ್ಕ್ಸ್, ‘ಕ್ಯಾಪಿಟಾಲಿಸಂನಿಂದ ಹೊರಬರುವುದಕ್ಕಾಗಿ ವೇಶ್ಯಾವಾಟಿಕೆಯನ್ನು ನಿಷೇಧಿಸಬೇಕಾಗಿದೆ’ ಎಂದು ವಾದಿಸಿದ್ದರು. ಫ್ರೆಡ್ರಿಕ್ ಏಂಗಲ್ಸ್ ರು, ಮದುವೆಯನ್ನೇ ‘ವೇಶ್ಯಾವಾಟಿಕೆಯ ವಿಧಾನ’ ಎಂದಿದ್ದರು. ವ್ಲಾದಿವಿೂರ್ ಲೆನಿನ್‍ರ ಪ್ರಕಾರ, ‘ವೇಶ್ಯಾವಾಟಿಕೆಯು ಅಸಹ್ಯ ಕೃತ್ಯ'. ಜಗತ್ತು ಕಮ್ಯುನಿಸಂನಿಂದ ಬಂಡವಾಳಶಾಹಿತ್ವಕ್ಕೆ ಹೊರಳಿದ ಬಳಿಕ ವೇಶ್ಯಾವಾಟಿಕೆಯ ಕುರಿತಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ವ್ಯಕ್ತವಾದುವು. ಆದರೆ ಇವತ್ತೂ 109 ರಾಷ್ಟ್ರಗಳು ವೇಶ್ಯಾವಾಟಿಕೆಯನ್ನು ಕಾನೂನುಬಾಹಿರ ಎಂದೇ ಪರಿಗಣಿಸಿವೆ. ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ಇರಾನ್‍ಗಳಲ್ಲಿ ವೇಶ್ಯಾವಾಟಿಕೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ನಿಜವಾಗಿ, ಗ್ರೀಕ್, ರೋಮನ್, ಮೆಸಪೊಟೇಮಿಯ ನಾಗರಿಕತೆಗಳಲ್ಲಿ ಮತ್ತು ಬಳಿಕದ ಶತಮಾನಗಳಲ್ಲಿ ದುರ್ಬಲರಾದ ಹೆಣ್ಣು ಮತ್ತು ಗಂಡಿನ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದುವು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಾಗ ಗಂಡು ಇತರ ಕಠಿಣ ದುಡಿಮೆಗಳಿಗೆ ಬಲಿಯಾಗುತ್ತಿದ್ದ. ಆದರೆ ಈ ಆಧುನಿಕ ಜಗತ್ತು ದುರ್ಬಲ ಪುರುಷರನ್ನು ಬಹುತೇಕ ಆ ದೌರ್ಜನ್ಯಗಳಿಂದ ಹೊರತಂದು ರಕ್ಷಿಸಿದೆ. ಗಣಿಗಳಲ್ಲಿ, ತೋಟ, ಕಾರ್ಖಾನೆಗಳಲ್ಲಿ ಜೀತಕ್ಕೆ ಒಳಗಾದವರಿಗೆ ಮುಕ್ತಿ ನೀಡುತ್ತಿದೆ. ಆದರೆ ದುರ್ಬಲ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಜಗತ್ತು ಅದೇ ಮಾನದಂಡದಲ್ಲಿ ವ್ಯಾಖ್ಯಾನಿಸುತ್ತಿಲ್ಲ. ಅದಕ್ಕೆ ವೇಶ್ಯಾವಾಟಿಕೆ ಎಂಬ ಬಿರುದನ್ನು ಕೊಟ್ಟು ಆ ದೌರ್ಜನ್ಯವನ್ನು ನ್ಯಾಯಬದ್ಧಗೊಳಿಸುವ ಜಾಣತನ ತೋರುತ್ತಿದೆ. ಆಕೆಯ ದೇಹವನ್ನು ಕಮರ್ಷಿಯಲ್ ಎಂದು ವ್ಯಾಖ್ಯಾನಿಸಿ ದುಡ್ಡು ಕೊಟ್ಟು ಆ ದೇಹವನ್ನು ಯಾರಿಗೆ ಬೇಕಾದರೂ ಪಡೆಯುವ ಅರ್ಹತೆಯಿದೆ ಎಂದು ಹೇಳುತ್ತಿದೆ.
   ನಿಜವಾಗಿ, ಇಲ್ಲಿ ಚರ್ಚೆಗೊಳಗಾಗಬೇಕಾದದ್ದು ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂದಲ್ಲ, ವೇಶ್ಯೆಯರ ಅಗತ್ಯ ಯಾರಿಗಿದೆ ಮತ್ತು ಯಾಕಿದೆ ಎಂದು. ಯಾಕೆ ಪುರುಷರು ಇಂಥದ್ದೊಂದು ವ್ಯವಸ್ಥೆಯನ್ನು ಬಯಸುತ್ತಾರೆ? ವೇಶ್ಯೆಯ ಬಳಿಗೆ ಹೋಗುವ ಪುರುಷ ಯಾರದೋ ಮಗ, ಪತಿ, ಸಹೋದರ, ತಂದೆ.. ಆಗಿರುತ್ತಾರೆ. ಅವರಿಗೆ ತನ್ನ ಮನೆಯಲ್ಲಿ ಪತಿಯಾಗಿ, ತಂದೆಯಾಗಿ, ಮಗನಾಗಿ ಮತ್ತು ಇನ್ನಿತರ ಪಾತ್ರವಾಗಿ ಜವಾಬ್ದಾರಿಗಳಿವೆ. ಸಾಮಾಜಿಕವಾಗಿ ಐಡೆಂಟಿಟಿ ಇದೆ. ಈ ಪಾತ್ರಗಳಿಗೆಲ್ಲ ಅವರ ವೇಶ್ಯಾಸಂಗ ನ್ಯಾಯವನ್ನೂ ಗೌರವವನ್ನೂ ಒದಗಿಸಿಕೊಡಬಲ್ಲುದೇ? ಪತಿಯಾಗಿ ಓರ್ವ ವ್ಯಕ್ತಿ ತನ್ನ ವೇಶ್ಯಾಸಂಗವನ್ನು ಹೇಗೆ ಸಮರ್ಥಿಸಬಲ್ಲ? ಪತ್ನಿಯೊಂದಿಗೆ ಆತ ಈ ಸಂಗತಿಯನ್ನು ಹೇಳಬಲ್ಲನೇ? ಹಾಗೆ ಹೇಳಿದರೆ ಆಕೆಯ ಪ್ರತಿಕ್ರಿಯೆ ಏನಿದ್ದೀತು? ಆಕೆಯೂ ಅಂಥದ್ದೇ ಸ್ವಾತಂತ್ರ್ಯವನ್ನು ಬಯಸಿದರೆ ಆತನ ಪ್ರತಿಕ್ರಿಯೆ ಏನಿದ್ದೀತು? ಅವರ ಸಂಬಂಧ ಎಲ್ಲಿಯವರೆಗೆ ಮುಂದುವರಿದೀತು? ಓರ್ವ ತಂದೆ ತನ್ನ ವೇಶ್ಯಾಸಂಗವನ್ನು ತನ್ನ ಮಕ್ಕಳ ಜೊತೆ ಹಂಚಿಕೊಳ್ಳಬಲ್ಲರೇ? ಮಗ ತನ್ನ ತಾಯಿಯೊಂದಿಗೋ ತಂದೆಯೊಂದಿಗೋ ‘ತಾನು ಹೀಗೆ’ ಎಂದು ಹೇಳಿ ಕೊಳ್ಳಬಲ್ಲನೇ? ವೇಶ್ಯೆಯನ್ನು ಅನುಭವಿಸುವ ಓರ್ವ ಶಿಕ್ಷಕನನ್ನು ಸಮಾಜ ಹೇಗೆ ಸ್ವೀಕರಿಸಬಹುದು? ಅಂದ ಹಾಗೆ, ವೇಶ್ಯಾವಾಟಿಕೆಯ ಸುತ್ತ ಚರ್ಚಿಸುವಾಗ ನಾವೆಲ್ಲ ಯಾಕೆ ಈ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುವುದೇ ನಂಬಿಕೆಗಳ ಮೇಲೆ. ಪತ್ನಿಗೆ ಪತಿಯ ಮೇಲೆ, ಮಗಳಿಗೆ ತಂದೆಯ ಮೇಲೆ, ಹೆತ್ತವರಿಗೆ ಮಕ್ಕಳ ಮೇಲೆ, ಮಕ್ಕಳಿಗೆ ಶಿಕ್ಷಕರ ಮೇಲೆ.. ಇಂಥ ನಂಬಿಕೆಗಳ ಮೇಲೆ ವೇಶ್ಯಾಸಂಗ ಬೀರುವ ಪರಿಣಾಮಗಳು ಯಾವ ಬಗೆಯವು? ಹೀಗಿರುತ್ತಾ, ಮಹಿಳಾ ಹಕ್ಕು, ಸಮಾನತೆಯ ಬಗ್ಗೆ ಮಾತಾಡುವ ಜಗತ್ತಿಗೆ ಯಾಕೆ ವೇಶ್ಯಾವಾಟಿಕೆಯು ಪುರುಷ ಜಗತ್ತಿನ ಸೃಷ್ಟಿ ಎಂದು ಅನಿಸುತ್ತಿಲ್ಲ? ಪುರುಷನ ಬಯಕೆಯನ್ನು ತೀರಿಸುವುದಕ್ಕೆ ಮದುವೆಯ ಹೊರತಾದ ವ್ಯವಸ್ಥೆಯೊಂದು ಇರಬೇಕು ಎಂದಾದರೆ ಮಹಿಳೆಯ ಬಯಕೆಯನ್ನು ತೀರಿಸುವುದಕ್ಕೂ ಒಂದು ವ್ಯವಸ್ಥೆ ಇರಬೇಕೆಂದು ಮಹಿಳಾ ಜಗತ್ತು ವಾದಿಸುತ್ತಿಲ್ಲವೇಕೆ? ಆ ವ್ಯವಸ್ಥೆ ಯಾಕೆ ಈ ವರೆಗೆ ಅಸ್ತಿತ್ವಕ್ಕೆ ಬಂದಿಲ್ಲ? ಅಷ್ಟಕ್ಕೂ, ಪುರುಷನಿಗೇಕೆ ಅಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ? ಆತನೇನು ಮಹಿಳೆಗಿಂತ ಮಿಗಿಲೇ? ಮಹಿಳೆಗಿಲ್ಲದ ಕೆಲವು ವಿಶೇಷ ರಿಯಾಯಿತಿ, ಸೌಲಭ್ಯಗಳು ಪುರುಷನಿಗೆ ಅಗತ್ಯವಿದೆ ಮತ್ತು ಅದರಲ್ಲಿ ಮಹಿಳೆಯ ದೇಹವೂ ಒಂದು ಎಂದು ಕಲಿಸಿದವರು ಯಾರು? ಈ ಅಸಮಾನತೆಯ ಪಾಠವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಬದಲು ಅದನ್ನೇ ಕಾನೂನುಬದ್ಧಗೊಳಿಸಿ ಎಂದು ಒತ್ತಾಯಿಸುವುದು ಯಾವ ಬಗೆಯ ಸಮಾನತೆ?
   ಅತ್ಯಾಚಾರಕ್ಕೂ ವೇಶ್ಯಾವಾಟಿಕೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕಡೆ ಪುರುಷ ಹೆಣ್ಣಿನ ಅನುಮತಿಯನ್ನು ಪಡೆಯದೇ ದೈಹಿಕ ಸುಖವನ್ನು ಪಡೆಯುವಾಗ ಇನ್ನೊಂದು ಕಡೆ ಅವಳ ಅಸಹಾಯಕೆಯನ್ನೇ ಅನುಮತಿಯನ್ನಾಗಿ ಪರಿವರ್ತಿಸಿಕೊಂಡು ಸುಖ ಪಡೆಯುತ್ತಾನೆ. ಎರಡರಲ್ಲೂ ಗಂಡಿನ ದಬ್ಬಾಳಿಕೆ ಮತ್ತು ಹೆಣ್ಣಿನ ಅಸಹಾಯಕತೆಗಳಿವೆ. ಆದರೆ, ಒಂದು ದಬ್ಬಾಳಿಕೆಯಾಗಿಯೂ ಇನ್ನೊಂದು ಪುರುಷ ಸಮಾಜದ ಸಹಜ ಬೇಡಿಕೆಯಾಗಿಯೂ ಗುರುತಿಗೀಡಾಗಿದೆ. ಮುಸ್ಲಿಮ್ ಮಹಿಳೆಯರು ತೊಡುವ ಬುರ್ಖಾವನ್ನು ಪುರುಷ ಯಜಮಾನಿಕೆಯಾಗಿ ಮತ್ತು ಅಸಮಾನತೆಯ ಸಂಕೇತವಾಗಿ ವ್ಯಾಖ್ಯಾನಿಸುವವರೇ ವೇಶ್ಯಾವಾಟಿಕೆಯು ಕಾನೂನು ಬದ್ಧಗೊಳ್ಳಬೇಕೆಂದು ವಾದಿಸುತ್ತಾರೆ. ಅದಕ್ಕಿರುವ ಪುರಾತನ ಹಿನ್ನೆಲೆಯನ್ನು ಮುಂದಿಡುತ್ತಾರೆ. ಆದರೆ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬಾಳಿ ಬದುಕಬೇಕಾದ ಓರ್ವ ಹೆಣ್ಣನ್ನು ವೇಶ್ಯೆ ಮಾಡುವುದು ಪುರುಷ ದಬ್ಬಾಳಿಕೆ, ಯಜಮಾನಿಕೆಯಾಗಿ ಗುರುತಿಸಿಕೊಳ್ಳದೇ ಆಯ್ಕೆ ಸ್ವಾತಂತ್ರ್ಯವಾಗಿ ವ್ಯಾಖ್ಯಾನಗೊಳ್ಳುತ್ತದೆ. ಅಂದ ಹಾಗೆ, ವೇಶ್ಯವಾಟಿಕೆಯು ಓರ್ವ ಹೆಣ್ಣು ಮಗಳ ಪಾಲಿಗೆ ಆಯ್ಕೆಯೋ ಅನಿವಾರ್ಯವೋ ಆಗಬಹುದಾದ ಸಂದರ್ಭ ಯಾವುದು? ಯಾವ ಹೆಣ್ಣೂ ತನ್ನ ಬದುಕಿನ ಪ್ರಥಮ ಆಯ್ಕೆಯಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲಳೇ? ಹಾಗೆ ವಾದಿಸುವುದು ಎತ್ತು-ಕುರಿಗಳು ಸ್ವಯಂ ಕಸಾಯಿಖಾನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ವಾದಿಸಿದಂತಾಗದೆ? ಹೆಣ್ಣಿನ ಪಾಲಿಗೆ ವೇಶ್ಯಾವಾಟಿಕೆ ಕಟ್ಟಕಡೆಯ ಆಯ್ಕೆ. ತನ್ನ ಅನಿವಾರ್ಯತೆಯನ್ನು ಪೂರೈಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಇರುವಾಗ ತನ್ನ ಸಹಜ ಲಜ್ಜೆಯನ್ನು ಬಲವಂತದಿಂದ ಬದಿಗಿರಿಸಿ ಆಕೆ ದೇಹವನ್ನು ಪಣಕ್ಕಿಡಬಯಸುತ್ತಾಳೆ. ಅದವಳ ಆಯ್ಕೆಯಲ್ಲ, ಅನಿವಾರ್ಯತೆ. ನಿಜವಾಗಿ, ಅಂಥ ಅನಿವಾರ್ಯತೆಗಳು ಪುರುಷನಿಗೂ ಎದುರಾಗುತ್ತವೆ. ಆದರೆ ಆತ ಅದನ್ನು ಎದುರಿಸುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಅಂಥ ಅನಿವಾರ್ಯತೆ ಎದುರಾದಾಗ ಪುರುಷ ಆಕೆಯ ದೇಹವನ್ನು ಬಯಸುತ್ತಾನೆ. ಹೆಣ್ಣಿನ ಅನಿವಾರ್ಯತೆಗೆ ದೇಹವನ್ನು ಬಳಸದೆಯೇ ನೆರವಾಗುವ ಅವಕಾಶ ಇದ್ದರೂ, ಆಕೆಯನ್ನು ಆತ ವೇಶ್ಯಗೊಳಿಸುತ್ತಾನೆ. ಮಾತ್ರವಲ್ಲ, ತನ್ನ ವೇಶ್ಯಾಸಂಗವನ್ನು ಮರೆಮಾಚಿ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಇದು ಪುರುಷ ಯಜಮಾನಿಕೆ ಮತ್ತು ಮಹಿಳಾ ದೌರ್ಜನ್ಯ ಅಲ್ಲ ಎಂದಾದರೆ ಜುಜುಬಿ ಬುರ್ಖಾ ಯಾವ ಲೆಕ್ಕ? ಅದರ ವಿರುದ್ಧವೇಕೆ ಈ ಪರಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ?

Wednesday, September 10, 2014

ಬಶೀರ್ ಎತ್ತಿಕೊಳ್ಳಬೇಕಾದ ಪಂಜು ಮತ್ತು ಸಾರಾ ಅಬೂಬಕರ್‍ರ ಪಂಜು

ಸಾರಾ ಅಬೂಬಕರ್ 
    ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರ ‘ಬಾಡೂಟದ ಜೊತೆ ಗಾಂಧಿ ಜಯಂತಿ’ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಸರ್ ಅವರು ಮಾಡಿದ ಭಾಷಣ ಮತ್ತು ಅದನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ (ಶೇರ್) ಪತ್ರಕರ್ತ ನವೀನ್ ಸೂರಿಂಜೆಯವರ ಬಗ್ಗೆ ವ್ಯಕ್ತವಾದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದಿ ತೀವ್ರ ನೋವು ಮತ್ತು ವಿಷಾದ ಉಂಟಾಯಿತು. ಒಂದೊಳ್ಳೆಯ ಚರ್ಚೆ ನಡೆಸಬಹುದಾಗಿದ್ದ ಮತ್ತು ನಡೆಸಬೇಕಾಗಿದ್ದ ಅಭಿಪ್ರಾಯವನ್ನೇ ಅನಾಗರಿಕಗೊಳಿಸಿ, ಬಳಿಕ ನಿಂದನೀಯ ಮಟ್ಟಕ್ಕೆ ಕೊಂಡೊಯ್ದು ಕೊನೆಗೆ ಧರ್ಮವಿರೋಧಿ ಎಂಬ ಷರಾದೊಂದಿಗೆ ಮುಕ್ತಾಯಗೊಳಿಸುವ ಅವಿವೇಕವು ಹಲವಾರು ಪ್ರತಿಕ್ರಿಯೆಗಳಲ್ಲಿ ಕಂಡುಬಂತು. ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದಕ್ಕಿಂತ ಮೊದಲು ಭಾಷೆ ಮತ್ತು ಭಾವನೆಗಳ ಮೇಲೆ ಹಿಡಿತ ಅತ್ಯಗತ್ಯ. ಕಂಪ್ಯೂಟರ್‍ನ ಕೀ ಬೋರ್ಡ್‍ಗೆ ಸ್ವಂತ ಬುದ್ಧಿಯಿಲ್ಲ. ಸರಿ-ತಪ್ಪುಗಳ ಪ್ರಜ್ಞೆಯಿಲ್ಲ. ಇವುಗಳನ್ನು ಕೀ ಬೋರ್ಡ್‍ನಲ್ಲಿ ತುಂಬಬೇಕಾದವನು ಅದರ ಬಳಕೆದಾರ. ಈ ಎಚ್ಚರಿಕೆ ಬಳಕೆದಾರನಲ್ಲಿ ಸದಾ ಇರಬೇಕು. ಪತ್ರಿಕೆಗಳಿಗೆ ಸಂಪಾದಕ ಇರುವಂತೆ ಫೇಸ್‍ಬುಕ್‍ಗೆ ಇಲ್ಲ ಮತ್ತು ಆ ಕಾರಣದಿಂದಾಗಿ ಎಡಿಟಿಂಗ್‍ನ ಭೀತಿ ಇಲ್ಲ ಎಂಬ ಭರವಸೆಯಲ್ಲಿ ಯದ್ವಾತದ್ವಾ ಬರೆಯುವುದರಿಂದ ಬರೆದವರ ಮೇಲಷ್ಟೇ ಅಲ್ಲ, ಅವರು ಪ್ರತಿನಿಧಿಸುವ ಸಮುದಾಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ತಪ್ಪು ತಿಳುವಳಿಕೆಗಳಿಗೆ ಅದು ಅವಕಾಶ ಮಾಡಿಕೊಡಬಹುದು ಎಂಬ ಎಚ್ಚರಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕು.
 ದಿನೇಶ್ ಅವಿೂನ್ ಮಟ್ಟು ಅಥವಾ ನವೀನ್ ಸೂರಿಂಜೆಯವರ ಅಭಿಪ್ರಾಯಗಳನ್ನು ಪ್ರಭಾಕರ ಭಟ್ಟರದ್ದೋ ತೊಗಾಡಿಯಾ, ಯೋಗಿ ಆದಿತ್ಯನಾಥರದ್ದೋ ಅಭಿಪ್ರಾಯಗಳಂತೆ ಕಾಣುವುದು ಆಕ್ಷೇಪಾರ್ಹ, ಹಾಸ್ಯಾಸ್ಪದ ಮತ್ತು ಖಂಡನೀಯವಾದದ್ದು. ಅವಿೂನ್ ಮಟ್ಟು ಅವರು ನಮ್ಮ ನಡುವಿನ ಅತ್ಯಂತ ಸಂವೇದನಾಶೀಲ ಚಿಂತಕ, ಬರಹಗಾರ. ಅವರು ಈ ನಾಡಿನ ಜಾತ್ಯತೀತ ಮತ್ತು ಕೋಮುವಾದಿ ವಿರೋಧಿ ನಿರ್ಭೀತ ವ್ಯಕ್ತಿತ್ವವೂ ಹೌದು. ನವೀನ್ ಸೂರಿಂಜೆ ಯುವ ಪತ್ರಕರ್ತ. ಅವರಲ್ಲಿ ಅಪಾರ ಉತ್ಸಾಹ ಇದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ. ಕೋಮುವಾದವನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ರಿಸ್ಕ್ ತೆಗೆದುಕೊಂಡು ಖಂಡಿಸುವ ಛಾತಿ ತೋರಿಸುತ್ತಾರೆ. ಇವರನ್ನು ವಿಮರ್ಶಿಸುವ ಮೊದಲು ಈ ಅರಿವು ಇರಬೇಕು. ಹಾಗಂತ, ಇವರ ಅಭಿಪ್ರಾಯಗಳನ್ನು ಸಾರಾಸಗಟು ಒಪ್ಪಿಕೊಳ್ಳಬೇಕು ಎಂದಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮಟ್ಟು ಮತ್ತು ಸೂರಿಂಜೆಗೆ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಆ ಅಭಿಪ್ರಾಯಗಳನ್ನು ವಿಮರ್ಶಿಸುವುದಕ್ಕೂ ಇದೆ. ಆದರೆ, ಆ ವಿಮರ್ಶೆಯು ಸೌಜನ್ಯದ ಗೆರೆಯನ್ನು ದಾಟಬಾರದು. ಇವರನ್ನು ಸಂಘಪರಿವಾರದ ವ್ಯಕ್ತಿಗಳೆಂದು ನಿಂದಿಸುವುದು ಖಂಡನೀಯವಷ್ಟೇ ಅಲ್ಲ, ಅದರಲ್ಲಿ ಅಜ್ಞಾನ ಇದೆ. ಅವರ ವ್ಯಕ್ತಿತ್ವ, ನಿಲುವು, ಹೋರಾಟಗಳ ಬಗ್ಗೆ ಅಪರಿಚಿತತೆಯಿದೆ ಮತ್ತು ಧರ್ಮವಿರೋಧಿ ಅಸಹಿಷ್ಣುತೆಯಿದೆ. ಇಂಥ ಏಕಮುಖ ನಿಲುವುಗಳು ಅಂತಿಮವಾಗಿ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಸಹಿಸದ ಮತ್ತು ಅಂಥವರ ಮೇಲೆ ದಾಳಿ ಮಾಡಬಹುದಾದ ಮಟ್ಟಕ್ಕೆ ಕೊಂಡೊಯ್ಯಬಹುದು. ಇದು ಅಪಾಯಕಾರಿ.
 ದಿನೇಶ್ ಅವಿೂನ್ ಮಟ್ಟು ಅವರು ಬುರ್ಖಾದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಈವರೆಗೆ ಈ ಸಮಾಜ ಆಲಿಸದ ಅಭಿಪ್ರಾಯಗಳೇನೂ ಅಲ್ಲ. ಅವರ ಅಭಿಪ್ರಾಯದಲ್ಲಿ ಒಂದಷ್ಟು ಅರಿವಿನ ಕೊರತೆ, ಯಾವುದೋ ಒತ್ತಡ, ಮುಸ್ಲಿಮ್ ಸಮುದಾಯದೊಳಗಿನ ಇತ್ತೀಚಿನ ಸಂವೇದನಾಶೀಲ ಬೆಳವಣಿಗೆಗಳ ಕುರಿತಂತೆ ಅಧ್ಯಯನ ನಡೆಸದೇ ಇರುವುದು.. ಮುಂತಾದುವುಗಳು ಗೋಚರಿಸುತ್ತವೆ. ಮಟ್ಟು ಸರ್ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ. ನಿಜವಾಗಿ, ಬುರ್ಖಾವನ್ನು ಕಳಚಲೇಬೇಕು ಅನ್ನುವುದು ಬುರ್ಖಾ ಧರಿಸಲೇಬೇಕು ಅನ್ನುವಷ್ಟೇ ಅಪಾಯಕಾರಿ ಮತ್ತು ಸ್ವಾತಂತ್ರ್ಯ ವಿರೋಧಿಯಾದುದು. ಬುರ್ಖಾವನ್ನು ಕಿತ್ತು ಹಾಕಬೇಕೆಂಬ ದನಿ ಜೋರಾದಂತೆಲ್ಲ ಅದನ್ನು ಧರಿಸಲೇಬೇಕು ಎಂದು ವಾದಿಸುವವರ ಚಟುವಟಿಕೆಗಳೂ ಜೋರಾಗುತ್ತವೆ. ಇದಕ್ಕೆ ಕಾರಣ, ಬುರ್ಖಾವು ಧರ್ಮದ ಮೂಲಭೂತ ಹಕ್ಕು ಎಂದೋ ಅದಿಲ್ಲದೇ ಧರ್ಮ ಸಂಪೂರ್ಣವಾಗದು ಎಂದೋ ಅಲ್ಲ. ಅದೊಂದು ಬಗೆಯ ಭೀತಿ. ಮುಸ್ಲಿಮರ ಕುರಿತಂತೆ ಈ ದೇಶದಲ್ಲಿ ಇವತ್ತು ಸಾಕಷ್ಟು ಪ್ರಮಾಣದಲ್ಲಿ ಅಪಪ್ರಚಾರಗಳು ಮತ್ತು ಆಕ್ರಮಣಗಳು ನಡೆಯುತ್ತಿವೆ. ಅವರ ಅಸ್ತಿತ್ವ, ಐಡೆಂಟಿಟಿಯನ್ನೇ ಪ್ರಶ್ನಾರ್ಹಗೊಳಿಸುವ ಚಟುವಟಿಕೆಗಳು ನಡೆಯುತ್ತಿವೆ. ಬುರ್ಖಾ, ಸ್ಕಾರ್ಫ್‍ನ ನೆಪದಲ್ಲಿ ಶಾಲಾ
ಪ್ರವೇಶಾತಿಯನ್ನೇ ನಿರಾಕರಿಸುವ ಘಟನೆಗಳೂ ನಡೆಯುತ್ತಿವೆ. ಇಂಥ ನಕಾರಾತ್ಮಕ ಬೆಳವಣಿಗೆಗಳು ಅಂತಿಮವಾಗಿ ಧರ್ಮದ ಮೂಲಭೂತ ಬೇಡಿಕೆಗಳಲ್ಲದವುಗಳನ್ನು ಕೂಡ ಧರ್ಮದ ಬೇಡಿಕೆಯಾಗಿ ಮತ್ತು ಅದನ್ನು ಪ್ರಶ್ನಿಸುವವರನ್ನು ಸಂಚುಕೋರರನ್ನಾಗಿ ಪರಿಗಣಿಸುವಂತೆ ಮಾಡುವುದಕ್ಕೆ ಅವಕಾಶ ಇದೆ. ತಮ್ಮ ಧರ್ಮದ ಒಂದೊಂದು ಕುರುಗಳನ್ನು ಅಳಿಸುವ ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಭಾವಿಸುವುದಕ್ಕೂ ಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ತಾವು ‘ಕುರುಹು’ ಎಂದು ಭಾವಿಸುವ ವಿಷಯಗಳು ನಿಜವಾದ ಧಾರ್ಮಿಕ ಕುರುಹುಗಳೋ ಎಂದು ಆಲೋಚಿಸುವಷ್ಟೂ ಅವರಲ್ಲಿ ಸಹನೆ ಇರುವುದಿಲ್ಲ. ಮಟ್ಟು ಮತ್ತು ಸೂರಿಂಜೆಯವರನ್ನು ನಿಂದಿಸಿದವರಲ್ಲಿ ಈ ಅವಿವೇಕ ಗೋಚರಿಸುತ್ತದೆ. ಅವರ ಪ್ರತಿಕ್ರಿಯೆಗಳಲ್ಲಿ, ಬುರ್ಖಾ ಧರಿಸಲೇಬೇಕು ಎಂಬ ಆಗ್ರಹಕ್ಕಿಂತ ತಮ್ಮ ಧರ್ಮದ ವಿರುದ್ಧ ಸಂಚು ನಡೆದಿದೆ ಎಂಬ ಭೀತಿಯೇ ಎದ್ದು ಕಾಣುತ್ತದೆ.
ಬಿ. ಎಂ. ಬಶೀರ್
ಅಮೀನ್ ಮಟ್ಟು
    ಕುಕ್ಕಿಲದಲ್ಲಿರುವ ನನ್ನ ತಾಯಿ ಆಸ್ಯಮ್ಮರು ಈಗಲೂ ಪ್ರತಿದಿನ ಬೆಳಿಗ್ಗೆ ಅರ್ಧ ಕಿಲೋ ವಿೂಟರ್‍ನಷ್ಟು ದೂರ ಇರುವ ಚಂದ್ರ ಭಟ್ಟ ಮತ್ತು ವಿನಯ ಭಟ್ಟರ ಮನೆಗೆ ಹಾಲು ತರಲು ಹೋಗುತ್ತಾರೆ. ಅಷ್ಟೇ ದೂರ ಇರುವ ಮಗನ (ನನ್ನ ಅಣ್ಣ) ಬೀಡಿ ಬ್ರಾಂಚ್‍ಗೂ ಹೋಗುತ್ತಾರೆ. ಪರಿಸರದಲ್ಲಿರುವ ಹಿಂದೂ-ಮುಸ್ಲಿಮ್-ಕ್ರೈಸ್ತರ ಮನೆಗಳಿಗೂ ಭೇಟಿ ಕೊಡುತ್ತಿರುತ್ತಾರೆ. ಆದರೆ, ಈ ಯಾವ ಸಂದರ್ಭಗಳಲ್ಲೂ ಅವರು ಬುರ್ಖಾ ಧರಿಸುವುದೇ ಇಲ್ಲ. ಸೀರೆ, ಕುಪ್ಪಸ ಮತ್ತು ತಲೆಗೊಂದು ಲೇಸ್ (ಶಿರವಸ್ತ್ರ).. ಇದುವೇ ನನ್ನಮ್ಮನ ಬುರ್ಖಾ. ಹಾಗಂತ, ಅವರು ಬುರ್ಖಾ ಧರಿಸದೇ ಇರುವುದಕ್ಕೆ ಸಾರಾ ಅಬೂಬಕರ್ ಅವರ ಕೃತಿಗಳು ಮತ್ತು ಚಿಂತನೆಗಳು ಕಾರಣ ಅಲ್ಲ. ಅಕ್ಷರ ಜ್ಞಾನವೇ ಇಲ್ಲದ ಅವರು ಸಾರಾ ಅಬೂಬಕರ್‍ರನ್ನು ನೋಡಿಯೂ ಇಲ್ಲ. ಅದವರ ಬದುಕು. ಅದರಂತೆ ಅವರು ಬದುಕುತ್ತಿದ್ದಾರೆ. ‘ಹೀಗೆ ಬದುಕುವುದು ಧರ್ಮ ವಿರೋಧಿ' ಎಂದು ಯಾವ ‘ಮೂಲಭೂತ’ವಾದಿಯೂ ಅವರೊಂದಿಗೆ ಹೇಳಿಲ್ಲ. ಯಾಕೆಂದರೆ, ಬುರ್ಖಾ ಇಸ್ಲಾಮಿನ ಮೂಲಭೂತ ಬೇಡಿಕೆಯಲ್ಲ. ಎರಡ್ಮೂರು ದಶಕಗಳ ಹಿಂದೆ ವಿದೇಶಗಳಿಂದ ಕಡ ತಂದ ವಸ್ತು ಇದು. ಈ ‘ವಸ್ತು'ವನ್ನು ಮುಸ್ಲಿಮ್ ಸಮುದಾಯ ತನ್ನದಾಗಿಸಿಕೊಂಡುದುದಕ್ಕೆ ಒಂದು ಪ್ರಮುಖ ಕಾರಣ ಇದೆ. ಅದುವೇ ಬಡತನ. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಪೆರ್ನಾಲ್‍ನಂದು (ಹಬ್ಬ) ಕಷ್ಟದಲ್ಲಿ ಹೊಸ ಬಟ್ಟೆ ಹೊಲಿಸುವ ಸಮುದಾಯಕ್ಕೆ ಬುರ್ಖಾದ ಅಗತ್ಯ ಬಹಳವೇ ಇತ್ತು. ಅದು ಒಳಗಿರುವ ಬಟ್ಟೆಯನ್ನು ಮರೆಸುತ್ತದೆ. ತಾನು ಧರಿಸಿದ ಚೂಡಿದಾರ, ಸೀರೆ ಅಥವಾ ಲಂಗದಾವಣಿಯ ವಯಸ್ಸನ್ನು ಮರೆಮಾಚುತ್ತದೆ. ಅವುಗಳ ಬಣ್ಣ ಮಾಸಿರುವುದನ್ನು ಅದು ನೋಡುಗರಿಂದ ಅಡಗಿಸುತ್ತದೆ. ಸೀರೆಗೆ ಅಥವಾ ಕುಪ್ಪಸಕ್ಕೆ ಹಾಕಿರುವ ತೇಪೆಯನ್ನು ಅದು ಮುಚ್ಚಿ ಬಿಡುತ್ತದೆ. ಇವತ್ತು, ಶಾಲಾ-ಕಾಲೇಜಿಗೆ ಹೋಗುವ ಎಷ್ಟೋ ಹೆಣ್ಣು ಮಕ್ಕಳು ಬುರ್ಖಾವನ್ನು ಇಷ್ಟಪಟ್ಟು ಧರಿಸುತ್ತಾರೆ. ಅದವರ ಬಡತನವನ್ನು ಮರೆಮಾಚುತ್ತದೆ. ಬಸ್ಸಿನಲ್ಲೋ ರಸ್ತೆಯಲ್ಲೋ ಅಥವಾ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲೋ ಅವರನ್ನು ಇನ್ಫೀರಿಯಾರಿಟಿ ಕಾಂಪ್ಲೆಕ್ಸ್‍ನಿಂದ ರಕ್ಷಿಸುತ್ತದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗಿರುವಾಗ ಒಂದು ವೇಳೆ, ಯಾರಾದರೂ ಬುರ್ಖಾವನ್ನು ಅವರಿಂದ ಕಿತ್ತು ಹಾಕಲು ಮುಂದಾಗುತ್ತಾರೆಂದರೆ ಅದವರ ಗೌರವವನ್ನೇ ಕಿತ್ತುಹಾಕಲು ಮುಂದಾದಂತೆ ಮತ್ತು ಅವರ ಬಡತನವನ್ನು ಸಮಾಜದ ಮುಂದೆ ಬಿಚ್ಚಿಟ್ಟಂತೆ ಆಗಬಹುದು. ಇಂಥ ಪ್ರಯತ್ನವನ್ನು ಕೆಲವರು ಪ್ರಗತಿಪರ ದೃಷ್ಟಿಕೋನ ಎಂದು ವಾದಿಸಿದರೂ ಅದನ್ನು ಅನಿವಾರ್ಯವಾಗಿ ಧರಿಸಿದವರ ಮಟ್ಟಿಗೆ (ಹೆಚ್ಚಿನವರು ಹಾಗೆಯೇ) ಅವಮಾನ. ಮಾತ್ರವಲ್ಲ, ಅವರ ವಿರುದ್ಧದ ಸಂಚು. ಅಷ್ಟಕ್ಕೂ, ನನ್ನ ಈ ವಾದವನ್ನು ಸಮರ್ಥಿಸುವುದಕ್ಕೆ ಮುಸ್ಲಿಮ್ ಸಮುದಾಯದ ಮನೆಗಳಲ್ಲಿರುವ ಬುರ್ಖಾಗಳ ಸಂಖ್ಯೆಗಳೇ ಧಾರಾಳ ಸಾಕು. ಸಾಮಾನ್ಯವಾಗಿ, ಓರ್ವರಿಗೆ ಒಂದಕ್ಕಿಂತ ಹೆಚ್ಚು ಉಡುಪುಗಳಿರುವಂತೆ ಬುರ್ಖಾಗಳಿಲ್ಲ. ಒಂದು ಮನೆಯಲ್ಲಿ ಐದು ಮಂದಿ ಮಹಿಳೆಯರಿದ್ದರೆ, ಎರಡೋ ಮೂರೋ ಬುರ್ಖಾಗಳಿರುವುದೇ ಹೆಚ್ಚು. (ಇದಕ್ಕೆ ಅಪವಾದಗಳೂ ಇವೆ.) ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಪ್ರತಿದಿನ ಸಂಜೆ ಬುರ್ಖಾವನ್ನು ಒಗೆದು ಬೆಳಿಗ್ಗೆ ಧರಿಸಿಕೊಂಡು ಹೋಗುವವರೇ ಅಧಿಕವಿದ್ದಾರೆ. ಆದ್ದರಿಂದ, ಬುರ್ಖಾದಿಂದ ಮುಸ್ಲಿಮ್ ಮಹಿಳೆಯರನ್ನು ಹೊರತರಬೇಕು ಎಂದು ಕರೆಕೊಡುವಾಗ ಅಥವಾ ‘ಅದು ಮೂಲಭೂತವಾದದ ಸಂಕೇತ' ಎಂದು ವಾದಿಸುವಾಗ ಈ ವಸ್ತುಸ್ಥಿತಿಯನ್ನು ಅರಿತುಕೊಳ್ಳುವುದೂ ಅಗತ್ಯವೆನಿಸುತ್ತದೆ. ಅದು ಯಾರದೋ ಹೇರಿಕೆಯೋ ಅಥವಾ ಅನಿವಾರ್ಯತೆಯೋ ಎಂಬ ಚರ್ಚೆಗೆ ತೊಡಗುವ ಸಂದರ್ಭದಲ್ಲಿ ಈ ವಸ್ತುಸ್ಥಿತಿಯನ್ನೂ ಎದುರಿಟ್ಟುಕೊಳ್ಳಬೇಕಿದೆ. ಮುಸ್ಲಿಮ್ ಸಮುದಾಯದ ಒಳಗಿನ ತಲ್ಲಣಗಳನ್ನು ಅಧ್ಯಯನ ನಡೆಸದೇ ಬರಿದೇ ಆಗ್ರಹಗಳನ್ನು ವ್ಯಕ್ತಪಡಿಸಿದರೆ ಅದು ಅಂತಿಮವಾಗಿ ‘ಬಂಡಾಯ’ ಎಂಬ ಹಣೆಪಟ್ಟಿಯೊಂದಿಗೆ ನಿರ್ಲಕ್ಷ್ಯಕ್ಕೆ ಒಳಗಾಗಬಹುದೇ ಹೊರತು ರಚನಾತ್ಮಕ ಬದಲಾವಣೆಗಲ್ಲ.
 ಬುರ್ಖಾವು ಮುಸ್ಲಿಮ್ ಸಮುದಾಯದಲ್ಲಿ ಎಷ್ಟು ಬೇಗ ಜನಪ್ರಿಯಗೊಂಡಿತೋ ಅಷ್ಟೇ ವೇಗವಾಗಿ ಇವತ್ತು  ಅದರ ‘ಧಾರ್ಮಿಕ ಅನ್ಯತ್ವ'ದ ಕುರಿತೂ ಚರ್ಚೆಗಳಾಗುತ್ತಿವೆ. ಬುರ್ಖಾ ಅಂದರೆ ಕುರ್‍ಆನ್ ಹೇಳಿರುವ ಪರ್ದಾ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡತೊಡಗಿದೆ. ಈ ಅರಿವನ್ನು ಮೂಡಿಸುತ್ತಿರುವುದು ಮೂಲಭೂತವಾದಿಗಳೆಂದು ಪ್ರಗತಿಪರರು ದೂಷಿಸುವ ಧಾರ್ಮಿಕ ಸಂಘಟನೆಗಳೇ ಎಂಬುದು ಗಮನಾರ್ಹ. ಆದರೂ, ನಿಂತ ಸ್ಥಿತಿಯಲ್ಲಿಯೇ ಬುರ್ಖಾವನ್ನು ಕಳಚಿ ಹಾಕುವಂತಹ ವೈರಾಗ್ಯವಾಗಲಿ, ಅನಿವಾರ್ಯತೆಯಾಗಲಿ ಅಥವಾ ಆರ್ಥಿಕ ಸಬಲೀಕರಣವಾಗಲಿ ಮುಸ್ಲಿಮ್ ಸಮುದಾಯದಲ್ಲಿ ಇವತ್ತಿಲ್ಲ. ಇವತ್ತಿನ ತಲೆಮಾರು ಇದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಎಂದರೆ, ಅದಿಲ್ಲದೆ ಕಂಫರ್ಟಬಲ್ ಆಗುತ್ತಿಲ್ಲ ಎಂದು ಹೇಳುವಷ್ಟು. ಮಾತ್ರವಲ್ಲ, ‘ಬುರ್ಖಾ ಕಡ್ಡಾಯ' ಎಂದು ಮನೆಯ ಪುರುಷರು ಭಾವಿಸುವಷ್ಟು. ಇವತ್ತು ಅಸಂಖ್ಯ ಯುವತಿಯರು ಯಾರ ಒತ್ತಡವೂ ಇಲ್ಲದೇ ಇಷ್ಟಪಟ್ಟು ಬುರ್ಖಾ ಧರಿಸುತ್ತಿದ್ದಾರೆ. ಅದು ಕಡ್ಡಾಯವಲ್ಲ ಎಂದು ಹೇಳಿದರೂ ಕಂಫರ್ಟಬಲ್‍ನ ಕಾರಣ ಮುಂದಿಡುತ್ತಾರೆ. ಅವಿೂನ್ ಮಟ್ಟು ಅವರು ಹೇಳಿದಂತೆ, ಒಂದು ವೇಳೆ ಮುಸ್ಲಿಮ್ ಮಹಿಳೆಯರ ಮಧ್ಯೆ ಬುರ್ಖಾ ಬೇಕೇ ಬೇಡವೇ ಎಂಬ ವಿಷಯದಲ್ಲಿ ಇವತ್ತು ಗುಪ್ತ ಮತದಾನ ನಡೆಸಿದರೆ ಬುರ್ಖಾವೇ ಜಯಶಾಲಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅದರ ಹಿಂದೆ ಇರುವುದು ಮೂಲಭೂತವಾದವಲ್ಲ; ಮರ್ಯಾದೆ ವಾದ, ಬಡತನ ವಾದ ಮತ್ತು ಕೆಲವೊಮ್ಮೆ ಮೈಮುಚ್ಚುವ ವಾದ.
 ಹಾಗಂತ, ಮುಸ್ಲಿಮ್ ಸಮಾಜದಲ್ಲಿ ಅಪದ್ಧಗಳು ಇಲ್ಲ ಎಂದಲ್ಲ. ಬುರ್ಖಾ ಕಡ್ಡಾಯವಲ್ಲ ಎಂದು ವಾದಿಸುವ ಮಂದಿಯೇ ತಂತಮ್ಮ ಮನೆಗಳಲ್ಲಿ ಕಡ್ಡಾಯದಂತೆ ಅದನ್ನು ಹೇರುವುದಿದೆ. ಬುರ್ಖಾ ಧರಿಸದೆ ಇರುವ ಸಹಜ ಸ್ವಾತಂತ್ರ್ಯವನ್ನು ಮಹಿಳೆಯರಿಂದ ಕಿತ್ತುಕೊಳ್ಳುವುದಿದೆ. ಬುರ್ಖಾ ಧರಿಸದೇ ಇರುವುದು ಧರ್ಮವಿರೋಧಿ ಕ್ರಮದಂತೆ ವಾದಿಸುವುದೂ ಇದೆ. ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರದ್ದೋ ಪುರುಷ ಸಮಾಜದ್ದೋ ಒತ್ತಡಕ್ಕೆ ಮಣಿದು ಬುರ್ಖಾ ಧರಿಸುತ್ತಿರುವರೆಂಬ ವಾದವನ್ನು ನಾನು ಸಾರಾಸಗಟು ತಿರಸ್ಕರಿಸುತ್ತಲೂ ಇಲ್ಲ. ಆದರೆ, ಇವಕ್ಕೆಲ್ಲ ಬುರ್ಖಾ ವಿರೋಧಿ ಅಭಿಯಾನ ನಡೆಸುವುದೋ ನಿಂತ ಸ್ಥಿತಿಯಲ್ಲೇ ಅದನ್ನು ಕಳಚಿ ಹಾಕಬೇಕೆಂದು ಆಗ್ರಹಿಸುವುದೋ ಪರಿಹಾರ ಅಲ್ಲ. ಸಾರಾ ಅಬೂಬಕರ್ ಮಾಡಿದ್ದೂ ಇದೇ ತಪ್ಪನ್ನು. ಅವರು ಮುಸ್ಲಿಮ್ ಸಮಾಜದಲ್ಲಿದ್ದ ಅಜ್ಞಾನಜನ್ಯ ಮತ್ತು ಧರ್ಮ ವಿರೋಧಿ ಆಚರಣೆಗಳನ್ನು ಕಟುವಾಗಿ ಖಂಡಿಸಿದರು. ಅದಕ್ಕೆ ಧರ್ಮವೇ ಕಾರಣ ಎಂಬ ಅತಿರೇಕದ ವ್ಯಾಖ್ಯಾನವನ್ನು ಕೊಟ್ಟರು. ಪದಗಳಿಂದ ಚುಚ್ಚಿದರು. ಅವಮಾನಿಸಿದರು. ಸಾರಾರ ಈ ವಾದದಲ್ಲಿ ಸಮಾಜವನ್ನು ಚಿಂತನೆಗೆ ಹಚ್ಚುವುದಕ್ಕಿಂತ ಆಕ್ರೋಶಕ್ಕೆ ದೂಡುವ ಅಂಶಗಳೇ ಹೆಚ್ಚಿದ್ದುವು. ಮೂರು ದಶಕಗಳ ಹಿಂದಿನ ಸಮಾಜವು ಅವರ ನಕಾರಾತ್ಮಕ ಧೋರಣೆಯನ್ನು ನಕಾರಾತ್ಮಕವಾಗಿಯೇ ಸ್ವೀಕರಿಸಿತು. ಅದು ಸರಿ ಎಂದಲ್ಲ. ಆದರೆ, ಸಾರಾರನ್ನು ನಕಾರಾತ್ಮಕವಾಗಿ ಸ್ವೀಕರಿಸಿದ ಅದೇ ಸಮಾಜ,  ‘ಮೂಲಭೂತವಾದಿ'ಗಳ ಸುಧಾರಣಾವಾದಿ ಸಭ್ಯ ವಾದವನ್ನು ಅಷ್ಟೇ ಸಕಾರಾತ್ಮಕವಾಗಿ ಆಲಿಸಿತು. ತನ್ನನ್ನು ತಿದ್ದಿಕೊಳ್ಳಲು ಮುಂದಾಯಿತು. ತಲಾಕ್, ಬಹುಪತ್ನಿತ್ವ, ಬುರ್ಖಾ, ಹೆಣ್ಣು ಮಕ್ಕಳ ಶಿಕ್ಷಣ.. ಮುಂತಾದುವುಗಳ ಕುರಿತಂತೆ ಸಮಾಜದಲ್ಲಿದ್ದ ದೊಡ್ಡದೊಂದು ಅಜ್ಞಾನದ ಪರದೆಯನ್ನು ಕಿತ್ತುಹಾಕುವಲ್ಲಿ ಅದು ಬಹುದೊಡ್ಡ ಯಶಸ್ಸು ಪಡೆಯಿತು. ಇವತ್ತು ಮುಸ್ಲಿಮ್ ಸಮಾಜದಲ್ಲಿ ‘ತಲಾಕ್, ತಲಾಕ್, ತಲಾಕ್’ ನಗಣ್ಯವಾಗುತ್ತಾ ಬಂದಿದೆ. ‘ಬಹುಪತ್ನಿತ್ವ'ದ ಇತಿ-ಮಿತಿಗಳು ಅರ್ಥವಾಗಿವೆ ಮತ್ತು ಹೆಣ್ಣು ಮಕ್ಕಳು ಧಾರಾಳ ಸಂಖ್ಯೆಯಲ್ಲಿ ಶಿಕ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಸ್ಲಿಮ್ ಸಮುದಾಯದೊಳಗೆ ಸದ್ದು-ಗದ್ದಲವಿಲ್ಲದೇ ನಡೆದಿರುವ ಈ ಕ್ರಾಂತಿಯನ್ನು ಪರಿಗಣಿಸುವಾಗ ಸಾರಾ-ಬೊಳುವಾರು ಅವರ ಪರಂಪರೆಯ ಪಂಜನ್ನು (ರಿಲೇ ಬ್ಯಾಟನ್) ಬಿ.ಎಂ. ಬಶೀರ್ ಅಷ್ಟೇ ಆಸಕ್ತಿಯಿಂದ ಯಾಕೆ ಮುಂದುವರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾರಾರ ಸಮಾಜವಲ್ಲ ಇವತ್ತಿನದು. ಬೊಳುವಾರು ಎದುರಿಸಿದ ಸಮಸ್ಯೆಗಳಲ್ಲ ಇವತ್ತಿನ ಮುಸ್ಲಿಮ್ ಸಮಾಜದ್ದು. ಬಲಪಂಥೀಯ ಕೋಮುವಾದಿ ವಿಚಾರಧಾರೆಯ ಭೀತಿಯೇ ಇವತ್ತಿನ ಮುಸ್ಲಿಮ್ ಸಮುದಾಯದ ಒಳಗಿನ ಮತ್ತು ಹೊರಗಿನ ತಲ್ಲಣಗಳಾಗಿವೆ. ಭಾರತೀಕರಣದ ನೆಪದಲ್ಲಿ ಬುರ್ಖಾವನ್ನು ಅವು ಇಶ್ಯೂ ಮಾಡುತ್ತಿವೆ. ತಲಾಕ್, ಬಹುಪತ್ನಿತ್ವ, ಜಿಹಾದ್.. ಎಂಬೆಲ್ಲಾ ಪದಗಳನ್ನು ಅವು ವಿರೂಪಗೊಳಿಸಿ ಮಾರುತ್ತಿವೆ. ಹೆಣ್ಣು-ಗಂಡಿನ ಪ್ರೀತಿಯನ್ನು ಲವ್ ಜಿಹಾದ್ ಅನ್ನುತ್ತಿವೆ. ಪ್ರತಿ ಸ್ಥಳೀಯ ಘಟನೆಯನ್ನೂ ರಾಷ್ಟ್ರಮಟ್ಟದ ಇಶ್ಯೂ ಆಗಿಸುವ ಮತ್ತು ಕೋಮುಗಲಭೆಗೆ ಪ್ರಚೋದನೆ ಕೊಡುವ ಜಾಣತನವನ್ನು ಅವು ಪ್ರದರ್ಶಿಸುತ್ತಿವೆ. ಇಂಥ ಹೊತ್ತಲ್ಲಿ ಬಿ.ಎಂ. ಬಶೀರ್‍ರಂಥವರು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಇವತ್ತು ಮುಸ್ಲಿಮ್ ಸಮಾಜದೊಳಗಿನ ಸುಧಾರಣಾ ಪ್ರಕ್ರಿಯೆಗೆ ಅಡ್ಡವಾಗಿ ನಿಂತಿರುವುದು (ಮಟ್ಟು ಸರ್ ಪ್ರಕಾರ) ‘ಮೂಲಭೂತವಾದಿ' ಸಂಘಟನೆಗಳಲ್ಲ. ನಿಜವಾಗಿ ಅವೇ ಸುಧಾರಣಾ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿವೆ ಮತ್ತು ಆ ದಾರಿಯಲ್ಲಿ ಶ್ರಮಿಸುತ್ತಿವೆ. ಈ ಸುಧಾರಣಾ ಪ್ರಕ್ರಿಯೆಗಳು ನಿಧಾನಗೊಳ್ಳುವಂತೆ ಮತ್ತು ಸಮಾಜವು ಕೋಮುವಾದೀಕರಣಗೊಳ್ಳುವಂತೆ ಪ್ರಚೋದನೆ ಸಿಗುತ್ತಿರುವುದು ಬಲಪಂಥೀಯ ಕೋಮುವಾದದಿಂದ. ಆದ್ದರಿಂದ ಸಾರಾರ ಪಂಜನ್ನು ಪಕ್ಕಕ್ಕಿಟ್ಟ ಬಶೀರ್‍ರ ನಡೆಯನ್ನು ಸೂಕ್ತ ಮತ್ತು ಸಮಂಜಸ ಎಂದೇ ವ್ಯಾಖ್ಯಾನಿಸಬೇಕಾಗಿದೆ. ಇವತ್ತಿನ ದಿನಗಳಲ್ಲಿ ಮುಸ್ಲಿಮ್ ಸಮಾಜಕ್ಕೆ ಸಾರಾರ (ಬಂಡಾಯ) ಅಗತ್ಯವಿಲ್ಲ. ಬಶೀರ್‍ರಂಥವರ ಅಗತ್ಯವಿದೆ. ಮುಸ್ಲಿಮ್ ಸಮಾಜದ ಒಳಗೆ ಗುರುತಿಸಿಕೊಂಡು ಅಲ್ಲಿನ ಧ್ವನಿಯಾಗುತ್ತಲೇ ಮತ್ತು ಸಂದರ್ಭೋಚಿತವಾಗಿ ಸುಧಾರಣಾ ಪರ ನಿಲುವು ವ್ಯಕ್ತಪಡಿಸುತ್ತಲೇ ಬಲಪಂಥೀಯ ಕೋಮುವಾದದ ವಿರುದ್ಧ ಅವರು ಪ್ರಬಲ ಪಂಜನ್ನು ಉರಿಸಬೇಕಾಗಿದೆ. ಈ ಪಂಜು ಎಲ್ಲ ರೀತಿಯ ಕೋಮುವಾದವನ್ನು ದಹಿಸುವ ಮತ್ತು ಅಜ್ಞಾನದ ಕತ್ತಲೆಗೆ ಬೆಳಕು ನೀಡುವ ಕೆಲಸವನ್ನು ಮಾಡಬೇಕಾಗಿದೆ.

Tuesday, September 9, 2014

‘ಮೌಲಾನಾ’ ಪ್ರತಿಪಾದಿಸಿದ ಭಾವೈಕ್ಯತೆಯ ಸುತ್ತ..

ಅಕ್ಬರ್
ದಾರಾಶುಕೊ
ರಾಜಾರಾಂ ಮೋಹನ್ ರಾಯ್
ರಾಮಕೃಷ್ಣ ಪರಮಹಂಸ
    ಸಹಿತ ಅನೇಕಾರು ಮಂದಿ ಈ ದೇಶದಲ್ಲಿ ‘ಸರ್ವಧರ್ಮ ಸಮಭಾವ' ಅಥವಾ ಧಾರ್ಮಿಕ ಸೌಹಾರ್ದತೆಯ ಕುರಿತಂತೆ ತಮ್ಮದೇ ಆದ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವುಗಳ ಪರ ಮತ್ತು ವಿರುದ್ಧ ಧಾರಾಳ ಚರ್ಚೆಗಳೂ ಆಗಿವೆ. ವಿಭಿನ್ನ ಧರ್ಮ, ಜಾತಿ, ಜನಾಂಗಗಳಿರುವ ದೇಶವೊಂದರಲ್ಲಿ ಧಾರ್ಮಿಕ ಆಚರಣೆಗಳು ಹೇಗಿರಬೇಕು? ಅವುಗಳ ನಡುವೆ ಸೌಹಾರ್ದತೆ ಸಾಧ್ಯವೇ? ಹೇಗೆಲ್ಲ ಸಾಧ್ಯ? ಯಾವುದು ಸೌಹಾರ್ದ ಮತ್ತು ಯಾವುದಲ್ಲ? ಗಾಡ್, ಖುದಾ, ಭಗವಾನ್, ಅಲ್ಲಾಹ್.. ಮುಂತಾದುವುಗಳೆಲ್ಲ ಓರ್ವ ದೇವನ ಹಲವು ನಾಮಗಳಾಗಬಹುದಾದರೆ, ಇಸ್ಲಾಮ್, ಕ್ರೈಸ್ತ, ಹಿಂದೂ, ಬೌದ್ಧ, ಜೈನ.. ಮುಂತಾದುವುಗಳೆಲ್ಲ ಆ ಓರ್ವ ದೇವನ ಹಲವು ಹೆಸರುಗಳಲ್ಲಿರುವ ಒಂದೇ ಧರ್ಮವಾಗಬಾರದೇಕೆ? ‘ಸರ್ವೆ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ - ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖ ಬಾರದಿರಲಿ’ - ಎಂಬ ಶ್ಲೋಕಕ್ಕಿಂತ ‘ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸರ್ವ ಸಮಾನರು' ಎಂಬ ಕುರ್‍ಆನಿನ (49:13) ವಚನದಲ್ಲಿ ಏನು ಭಿನ್ನತೆಯಿದೆ? ಧರ್ಮಗಳೆಲ್ಲ ಪರಸ್ಪರ ಪ್ರತ್ಯೇಕವಾಗಿ ಮತ್ತು ಆಚರಣೆಗಳಲ್ಲೋ ಆರಾಧನೆಗಳಲ್ಲೋ ಒಂದಕ್ಕೊಂದು ಸಂಧಿಸದಷ್ಟು ಅನ್ಯವಾಗಿ ಗುರುತಿಸಿಕೊಳ್ಳುತ್ತಿರುವುದರಿಂದಲೇ ಅಲ್ಲವೇ ವಿಚಾರವಾದ, ನಾಸ್ತಿಕವಾದ, ಮೂಲಭೂತವಾದಗಳು ಬೆಳೆದಿರುವುದು? ಟಿ.ಎನ್. ಸೀತಾರಾಮ್‍ರ ಧಾರಾವಾಹಿಯೊಂದರಲ್ಲಿ ಮಗುವೊಂದು ಬೆತ್ತಲೆಯಾಗಿ ಮನೆಯಿಂದ ಹೊರಗೆ ಹೋಗುವ ದೃಶ್ಯವಿದೆ. ಧರ್ಮದ ಬೇಲಿಯೊಳಗೆ ಬೆಳೆಸದೆ ಸ್ವತಂತ್ರವಾಗಿ ಮನುಷ್ಯರನ್ನು ಬೆಳೆಸಬೇಕೆಂಬ ಆಗ್ರಹ ಆ ದೃಶ್ಯದಲ್ಲಿದೆ. ಇಂಥ ಆಲೋಚನೆ, ವಿಚಾರಗಳಿಗೆ ಮೂಲ ಕಾರಣ ಯಾರು? ಧರ್ಮಗಳೋ ಅಥವಾ ಅದನ್ನು ಪ್ರತ್ಯೇಕತೆಯೊಳಗೆ ತೂರಿಸಿದ ಧರ್ಮಭಕ್ತರೋ?
   ಬಹುಶಃ ಪ್ರಶ್ನೆಗಳು ಧಾರಾಳ ಇವೆ. ಮಾತ್ರವಲ್ಲ, ಇಂಥ ಪ್ರಶ್ನೆಗಳು ಎಷ್ಟು ಪ್ರಭಾವಶಾಲಿ ಆಗಿರುತ್ತವೆ ಎಂದರೆ, ದಾರಾಶುಕೊರಂಥ ಅನೇಕಾರು ಮಂದಿಯನ್ನೂ ಅವು ಸೃಷ್ಟಿಸುತ್ತವೆ. ನಿಜವಾಗಿ, ‘ಕಾರ್ಮಿಕ ವರ್ಗದ ಹೊಟ್ಟೆಯನ್ನು ಧಾರ್ಮಿಕ ಚಿಂತನೆಗಳು ತಣಿಸುವುದಿಲ್ಲ' ಎಂಬ ಅಸಹನೆಯಿಂದಲೇ ಕಾರ್ಲ್ ಮಾರ್ಕ್ಸ್ ರ ಕಮ್ಯುನಿಸ್ಟ್ ಮೆನಿಫೆಸ್ಟೋ ಹುಟ್ಟಿಕೊಂಡದ್ದು. ಹಾಗಂತ, ಆ ಮೆನಿಫೆಸ್ಟೋ ಕಾರ್ಮಿಕರ ಹೊಟ್ಟೆಯನ್ನು ತಣಿಸಿತೋ ಎಂದು ಪ್ರಶ್ನಿಸಿದರೆ, ವಿಷಾದವೇ ಉತ್ತರವಾಗುತ್ತದೆ. ಜಗತ್ತಿನ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಅವರು ಕಾರ್ಮಿಕ ವರ್ಗದ ಕ್ರಾಂತಿಯನ್ನು ಬಯಸಿದರು. ಕಮ್ಯುನಿಸಂ ಎಂಬ ‘ಕಾರ್ಮಿಕ ಕ್ರಾಂತಿ'ಯು ಯುರೋಪನ್ನು ಸಂಪೂರ್ಣವಾಗಿ ಆವರಿಸದಿದ್ದರೂ ಅಲ್ಲೆಲ್ಲಾ ಶ್ರೀಮಂತ ವರ್ಗವನ್ನು ಅದು ಅಪ್ರತ್ಯಕ್ಷಗೊಳಿಸಲಿದೆ ಎಂದು ಅವರು ಭಾವಿಸಿದ್ದರು. ಅಷ್ಟಕ್ಕೂ, ಅದು ಅವರೊಬ್ಬರ ನಿರೀಕ್ಷೆಯಷ್ಟೇ ಆಗಿರಲಿಲ್ಲ. ಏಂಗಲ್ಸ್ ರಿಗೂ ಮತ್ತು ಅವರಂಥ ಅನೇಕ ಚಿಂತಕರಿಗೂ ಅದರಲ್ಲಿ ಪಾತ್ರವಿದೆ. ಜಗತ್ತಿನಲ್ಲಿರುವ ಧರ್ಮಗಳಿಗೆಲ್ಲ ಪರ್ಯಾಯ ಧರ್ಮವಾಗಿ ‘ಕಾರ್ಮಿಕ ಧರ್ಮ' ಉದಯವಾಯಿತೆಂಬ ಮತ್ತು ಅದುವೇ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೆಂಬ ಪ್ರಚಾರವೂ ನಡೆಯಿತು. ಆದರೆ ಆ ಭರವಸೆ ತೀರಾ ಸಣ್ಣ ಅವಧಿಯಲ್ಲೇ ಧರಾಶಾಹಿಯಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋವನ್ನು ರಷ್ಯಾದಲ್ಲಿ ಜಾರಿಗೆ ತಂದ ಸ್ಟಾಲಿನ್‍ರೇ ಆ ಮೆನಿಫೆಸ್ಟೋದ ಅಪ್ರಸ್ತುತತೆಯನ್ನು ಸಾರಿಬಿಟ್ಟರು. ಅವರಿಗೆ ಒಂದಕ್ಕಿಂತ ಹೆಚ್ಚು ಅದ್ದೂರಿ ಬಂಗಲೆಗಳಿದ್ದುದು, ಅತ್ಯಾಧುನಿಕ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಮತ್ತು ಸ್ವದೇಶಿತನವನ್ನು ಪ್ರಚುರಪಡಿಸುತ್ತಾ ವಿದೇಶಿ ಮದ್ಯವಾದ ಸ್ಕೋಡಾವನ್ನು ಸೇವಿಸುತ್ತಿದ್ದುದೆಲ್ಲಾ ಕ್ರಮೇಣ ಬಹಿರಂಗವಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋ ಮಾತಾಡಿದ್ದು ಕಾರ್ಮಿಕರ ಪರ. ಆದರೆ ಸ್ಟಾಲಿನ್ ಬದುಕಿದ್ದು ಅಪ್ಪಟ ಶ್ರೀಮಂತರಂತೆ. ಅವರ ದಾಂಪತ್ಯ ಬದುಕಂತೂ ಅತ್ಯಂತ ಮಾದರಿರಹಿತವಾಗಿತ್ತು ಎಂದು ಎರಡು ವರ್ಷಗಳ ಹಿಂದೆ ಮೃತಪಟ್ಟ ಅವರ ಮಗಳು ಸ್ವೆಟ್ಲಾನಾ ಸ್ಟಾಲಿನಾ ತಮ್ಮ ‘ಟ್ವೆಂಟಿ ಲೆಟರ್ಸ್ ಟು ಏ  ಫ್ರೆಂಡ್  ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಅವರು ನನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂದವರು ಹೇಳಿದ್ದಾರೆ. ಧರ್ಮದ ವೈಫಲ್ಯವನ್ನು ಎತ್ತಿಕೊಂಡು ಕಾರ್ಮಿಕವಾದವನ್ನು ನೆಚ್ಚಿಕೊಂಡ ವ್ಯಕ್ತಿಯೋರ್ವರ ವಿಫಲ ಬದುಕಿನ ಚಿತ್ರಣವನ್ನು ಸ್ವೆಟ್ಲಾನಾರ ಆತ್ಮಕತೆ ವಿವರಿಸುತ್ತದೆ. ಧಾರಾಶುಕೊ ಅಂತೂ ಧರ್ಮಗಳ ನಡುವೆ ಪಾರಿಭಾಷಿಕಗಳ ಹೊರತು ಇನ್ನೇನೂ ವ್ಯತ್ಯಾಸ ಇಲ್ಲವೆಂದು ಹೇಳಿದ್ದ. ಧಾರ್ಮಿಕ ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ‘ದೀನೇ ಇಲಾಹಿ'ಯನ್ನು ಅಕ್ಬರ್ ಸ್ಥಾಪಿಸಿದಂತೆಯೇ ಅದರ ಮುಂದುವರಿದ ಭಾಗವನ್ನು ದಾರಾಶುಕೊ ಕೈಗೆತ್ತಿಕೊಂಡಿದ್ದ. ಆತ ಉಪನಿಷತ್ತು, ಭಗವದ್ಗೀತೆ, ಚಂದ್ರವಧೆ, ಯೋಗವಿಶಿಷ್ಟ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ತುಲನಾತ್ಮಕ ಅಧ್ಯಯನವುಳ್ಳ ‘ಮಜ್‍ಮಉಲ್ ಬಹ್ರೈನ್' ಎಂಬ ಫಾರ್ಸಿ ಗ್ರಂಥವನ್ನು ಬರೆದದ್ದಲ್ಲದೇ ‘ಸಮುದ್ರ ಸಂಗಮ’ ಎಂಬ ಹೆಸರಲ್ಲಿ ಅದನ್ನು ಸಂಸ್ಕøತಕ್ಕೂ ಅನುವಾದಿಸಿದ್ದ. 1866ರಲ್ಲಿ ಸ್ಥಾಪಿತವಾದ ‘ಭಾರತೀಯ ಬ್ರಹ್ಮ ಸಮಾಜವು' ಹಿಂದೂ, ಬೌದ್ಧ ಮತ್ತು ಇಸ್ಲಾಮ್‍ನಿಂದ ಪಡೆಯಲಾದ ಉದ್ಧರಣೆಗಳಿಂದ ಕೂಡಿದ ಚಿಂತನೆಗಳಾಗಿವೆ ಎಂದು ಹೇಳಲಾಗುತ್ತದೆ. ಸರ್ವಧರ್ಮ ಸಮಭಾವ ಎಂಬ ಕಲ್ಪನೆಯಲ್ಲಿ ರಾಮಕೃಷ್ಣ ಪರಮ ಹಂಸರಿಗೂ ವಿರೋಧ ಇರಲಿಲ್ಲ. ಹೀಗೆ ಒಂದು ಬಗೆಯ ಧಾರ್ಮಿಕ ಸೌಹಾರ್ದತೆ, ಸಮಭಾವದ ಕಲ್ಪನೆಗಳು ಈ ದೇಶದಲ್ಲಿ ಆಗಾಗ ಮೂಡಿ ಬರುತ್ತಲೇ ಇದ್ದುವು. ವಿವಿಧ ನದಿಗಳು ಸಾಗರಕ್ಕೆ ಸೇರುವಂತೆ ವಿವಿಧ ಧರ್ಮಗಳೆಲ್ಲ ಒಂದೇ ದೇವನಲ್ಲಿಗೆ ಸೇರುತ್ತವೆ ಎಂಬ ಮಾತುಗಳೂ ಹುಟ್ಟಿಕೊಂಡವು. ಅಷ್ಟಕ್ಕೂ,
   ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮ ಮತ್ತು ಏಕದೇವಾರಾಧನೆಯನ್ನು ಮಾತ್ರ ಪ್ರತಿಪಾದಿಸುವ ಹಾಗೂ ಮೂರ್ತಿ ಪೂಜೆ ಮತ್ತು ಬಹುದೇವಾರಾಧನೆಯನ್ನು ಪ್ರಬಲವಾಗಿ ನಿರಾಕರಿಸುವ ಇಸ್ಲಾಮ್ ಧರ್ಮದ ನಡುವೆ ಭಾವೈಕ್ಯತೆ ಹೇಗೆಲ್ಲ ಸಾಧ್ಯ? ಯಾವೆಲ್ಲ ವಿಷಯಗಳಲ್ಲಿ ಸಾಧ್ಯ? 33ರಿಂದ 33 ಕೋಟಿಯ ವರೆಗೆ ದೇವತೆಗಳಲ್ಲಿ ನಂಬಿಕೆಯಿಡುವ ಹಿಂದೂ ಧರ್ಮಕ್ಕೂ ಪ್ರವಾದಿ ಮುಹಮ್ಮದ್‍ರನ್ನು(ಸ) ಅಂತಿಮ ಪ್ರವಾದಿ ಮತ್ತು ಪವಿತ್ರ ಕುರ್‍ಆನನ್ನು ಅಂತಿಮ ದೇವಗ್ರಂಥ ಎನ್ನುವ ಇಸ್ಲಾಮ್‍ಗೂ ನಡುವೆ ಖಂಡಿತ ಅನೇಕಾರು ವಿಷಯಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಹೀಗಿರುವಾಗ, ಮೂರ್ತಿ ಪೂಜೆಯನ್ನು ಪ್ರಬಲವಾಗಿ ನಿರಾಕರಿಸುವ ಧರ್ಮದ ವ್ಯಕ್ತಿಯೊಬ್ಬ ಗಣಪತಿಯನ್ನು ಪೂಜಿಸುವುದು ಮತ್ತು ಅದನ್ನು ಭಾವೈಕ್ಯತೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸುವುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಧರ್ಮದ ಮೂಲಭೂತ ವಿಶ್ವಾಸಕ್ಕೇ ವಿರುದ್ಧವಾದ ಕೃತ್ಯವೊಂದು ಭಾವೈಕ್ಯತೆಯ ಹೆಸರಲ್ಲಿ ಶ್ಲಾಘನೆಗೆ ಒಳಗಾಗುವುದು ಎಷ್ಟು ಸರಿ? ಇಸ್ಲಾಮ್‍ನಲ್ಲಿ ಮದ್ಯಪಾನವನ್ನು ಬಲವಾಗಿ ನಿಷೇಧಿಸಲಾಗಿದೆ. ಸಾಷ್ಟಾಂಗವು ನಿರಾಕಾರನಾದ ದೇವನಿಗೆ ಹೊರತು ಇನ್ನಾವ ಮನುಷ್ಯರಿಗೋ ವಿಗ್ರಹಗಳಿಗೋ ಆಗಬಾರದೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಅಸಂಖ್ಯ ದೇವ-ದೇವತೆಗಳ ಜೊತೆಗೇ ಜಡ ಮತ್ತು ಚೇತನ ವಸ್ತುಗಳೂ ಶ್ರದ್ಧಾಕೇಂದ್ರಗಳಾಗಿವೆ. ಸೂರ್ಯ, ಚಂದ್ರ, ನಕ್ಷತ್ರ, ಸಮುದ್ರ, ನದಿ, ಪರ್ವತ, ಮರ, ಗೋವು ಎಲ್ಲವೂ ಪೂಜನೀಯ. ಹಾಗಂತ, ಇವುಗಳನ್ನು ಪೂಜಿಸುವವರನ್ನು ನಿರಾಕಾರ ದೇವನನ್ನು (ಅಲ್ಲಾಹ್) ಪೂಜಿಸುವಂತೆ ಇಸ್ಲಾಮ್ ಬಲವಂತ ಪಡಿಸುವುದಿಲ್ಲ (ಪವಿತ್ರ ಕುರ್‍ಆನ್: 2: 256). ಅಲ್ಲದೇ, ಅದು ವಿಗ್ರಹಗಳ ನಿಂದನೆಯನ್ನು ಧರ್ಮನಿಷಿದ್ಧ ಎನ್ನುತ್ತದೆ (ಪವಿತ್ರ ಕುರ್‍ಆನ್: 6: 108). ಹಾಗೆಯೇ, ಶವವನ್ನು ದಫನ ಮಾಡಬೇಕೆಂದೇ ಇಸ್ಲಾಮ್ ಆದೇಶಿಸುತ್ತದೆ. ಹಿಂದೂಗಳಲ್ಲಿರುವ ಸಪ್ತಪದಿಗಿಂತ ಭಿನ್ನವಾಗಿ ಇಸ್ಲಾಮ್‍ನಲ್ಲಿ ನಿಕಾಹ್ ಕ್ರಮ ಇದೆ. ಜೈನರ ದಿಗಂಬರ ಪದ್ಧತಿ ಇಸ್ಲಾಮ್‍ನಲ್ಲಿಲ್ಲ. ಸನ್ಯಾಸತ್ವವೂ ಇಲ್ಲ. ಹಾಗಂತ, ಭಾವೈಕ್ಯತೆಗಾಗಿ ಓರ್ವ ಮುಸ್ಲಿಮ್ ಈ ನಿಯಮಗಳನ್ನೆಲ್ಲಾ ಮುರಿಯಬಹುದೇ? ಹಾಗೆ ಮುರಿಯುವುದು ಭಾವೈಕ್ಯತೆಯೆಂದಾದರೆ, ಭಾವೈಕ್ಯತೆಯ ಅರ್ಥವೇನು, ಧರ್ಮಗಳ ಮೂಲಭೂತ ಬೇಡಿಕೆಗಳನ್ನು ಮುರಿಯುವುದೇ? ಹೀಗೆ ಮುರಿಯುವುದರಿಂದ ಒಂದು ಧರ್ಮದ ಅನುಯಾಯಿಗಳಿಗೆ ಆಗಬಹುದಾದ ನೋವುಗಳು ಎಷ್ಟರ ಮಟ್ಟಿಗೆ ಪರಿಗಣನೆಗೆ ಒಳಗಾಗಿವೆ? ಭಾವೈಕ್ಯತೆ ಎಂಬುದು ವಿವಿಧ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮದ ಮೂಲಭೂತ ವಿಶ್ವಾಸ ಮತ್ತು ಬೇಡಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರ ಹೆಸರೇ ಆಗಿದ್ದರೆ ಮತ್ತು ಅದು ಶ್ಲಾಘನಾರ್ಹ ಕ್ರಮ ಎಂದಾದರೆ ಫಲಿತಾಂಶ ಏನಾದೀತು? ಸಾಮಾಜಿಕವಾಗಿ ಇಂಥ ಭಾವೈಕ್ಯತೆಗಳು ಭಾರೀ ಪ್ರಮಾಣದಲ್ಲಿ ನಡೆದರೆ ಮಸೀದಿ, ಮಂದಿರ, ಚರ್ಚ್, ಬಸದಿ, ಗುರುದ್ವಾರಗಳು ಹೇಗೆ ಕಾಣಿಸಿಕೊಂಡಾವು? ಅವು ಸೃಷ್ಟಿಸಬಹುದಾದ ಸಮಸ್ಯೆಗಳು ಮತ್ತು ಪರಿಣಾಮಗಳೇನು? ಧರ್ಮದ ನಿಯಮಗಳನ್ನು ಮುರಿಯುವುದೇ ಭಾವೈಕ್ಯತೆ ಎಂಬುದು ಕೊನೆಗೆ ಏನನ್ನು ಮತ್ತು ಯಾವುದನ್ನೆಲ್ಲಾ ಮುರಿಯುವುದಕ್ಕೆ ಪ್ರೇರೇಪಿಸಬಹುದು?
 
     ನಿಜವಾಗಿ, ಭಾವೈಕ್ಯತೆಯು ಒಂದು ಧರ್ಮದ ನಿಯಮಗಳನ್ನು ಮುರಿದುಕೊಂಡು ನಡೆಸುವ ಆಚರಣೆಯ ಹೆಸರಲ್ಲ. ಅದು ಧರ್ಮಗಳನ್ನು ಮತ್ತು ಅದರ ಅನುಯಾಯಿಗಳನ್ನು ಪರಸ್ಪರ ಜೋಡಿಸುವುದರ ಹೆಸರು. ಆದ್ದರಿಂದ, ಒಂದು ಧರ್ಮದ ಆಚರಣೆಗಳನ್ನು ಗೌರವಿಸುವುದಕ್ಕೆ ಇನ್ನೊಂದು ಧರ್ಮದ ನಿಯಮಗಳನ್ನು ಮುರಿಯಬೇಕೆಂದಿಲ್ಲ. ಗಣೇಶ ಚತುರ್ಥಿಯ ದಿನದಂದು ಹಿಂದೂ ಬಾಂಧವರಿಗೆ ಶುಭಾಶಯ ಕೋರುವುದು, ಅವರ ಆಹ್ವಾನವನ್ನು ಸ್ವೀಕರಿಸಿ ಮನೆಗೆ ಭೇಟಿ ಕೊಡುವುದು, ಅವರ ಧಾರ್ಮಿಕ ಮೆರವಣಿಗೆ ಮತ್ತಿತರ ಸಂದರ್ಭಗಳು ಸುಗಮವಾಗಿ ನಡೆಯುವಂಥ ವಾತಾವರಣ ನಿರ್ಮಿಸುವುದು, ಅವರಿಗೆ ನೆರವಾಗುವುದು.. ಇತ್ಯಾದಿಗಳು ನಿಜ ಭಾವೈಕ್ಯತೆಯ ರೂಪಗಳಾಗಿವೆ. ವಿವಿಧ ಧರ್ಮದವರು ತಂತಮ್ಮ ಹಬ್ಬಗಳ ಸಂದರ್ಭದಲ್ಲಿ ಪರಸ್ಪರರ ಮನೆಗಳಿಗೆ ಭೇಟಿ ಕೊಡುವುದು ಮತ್ತು ಸಿಹಿ ತಿಂಡಿ, ಹಬ್ಬದೂಟಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಬದಲಾವಣೆಗೆ ಕಾರಣವಾಗಬಹುದು. ಇವು ಮನಸ್ಸುಗಳನ್ನು ಪರಸ್ಪರ ಹತ್ತಿರಗೊಳಿಸುತ್ತದೆ. ಅಲ್ಲಿ ಭಾವನಾತ್ಮಕ ಭದ್ರತೆಯೊಂದು ಏರ್ಪಡುತ್ತದೆ. ಮುರಿಯುವಿಕೆಯಲ್ಲಿ ಇಲ್ಲದ ತೃಪ್ತ ಮತ್ತು ನಿರಾಳ ಭಾವವೊಂದು ನಿರ್ಮಾಣವಾಗುತ್ತದೆ. ಅಂದಹಾಗೆ, ಗಣೇಶ ಚತುರ್ಥಿ ಎಂದಲ್ಲ, ವಿವಿಧ ಧರ್ಮಗಳಿರುವ ಈ ದೇಶದಲ್ಲಿ ಹಬ್ಬಗಳು ಮತ್ತು ವಿಶೇಷ ದಿನಗಳು ವಾರಕ್ಕೊಂದರಂತೆ ಬರುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಆಯಾ ಧರ್ಮೀಯರು ತಮ್ಮೊಳಗೇ ಖುಷಿಯನ್ನು ಹಂಚಿಕೊಳ್ಳುವುದಕ್ಕಿಂತ ಎಲ್ಲ ಧರ್ಮೀಯರೂ ತಂತಮ್ಮ ಮಿತಿಯೊಳಗೆ ಒಟ್ಟಾಗಿ ಖುಷಿಯನ್ನು ಹಂಚಿಕೊಂಡು ಅನುಭವಿಸುವುದರಿಂದ ಸಹಜ ಭಾವೈಕ್ಯತೆ ನಿರ್ಮಾಣವಾಗಬಹುದು. ಹಾಗಾದಾಗ, ಮೂರ್ತಿಯನ್ನು ಆರಾಧಿಸುವವ ಮತ್ತು ಆರಾಧಿಸದವ, ಯೇಸುವನ್ನು ದೇವಪುತ್ರ ಅನ್ನುವವಳು ಮತ್ತು ಪ್ರವಾದಿ ಅನ್ನುವವಳ ನಡುವೆ ಸಂಬಂಧ ಬೆಳೆಯುತ್ತದೆ. ಅಂಥ ಸಂಬಂಧಗಳು ಉಂಟು ಮಾಡುವ ಭಾವೈಕ್ಯತೆಯು ಧಾರ್ಮಿಕ ನಿಯಮಗಳನ್ನು ಮುರಿದು ಮಾಡುವ ಭಾವ ಐಕ್ಯತೆಗಳಂಥಲ್ಲ. ಮುರಿಯುವುದು ಮತ್ತು ಜೋಡಿಸುವುದು ಒಂದೇ ಅಲ್ಲ. ಆದರೂ, ಮುರಿಯುವುದೇ ಭಾವೈಕ್ಯತೆ ಮತ್ತು ಜೋಡಿಸುವುದೇ ‘ಮತಾಂತರ' ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವುದಕ್ಕೆ ಏನೆನ್ನಬೇಕು? ತಂತಮ್ಮ ಧರ್ಮದಲ್ಲಿದ್ದುಕೊಂಡೇ ಇನ್ನೊಂದು ಧರ್ಮವನ್ನು ಗೌರವಿಸುವ ಮತ್ತು ಅದರ ಆಚರಣೆಗಳಿಗೆ ಸಹಕರಿಸುವ ಕ್ರಮಗಳು ಯಾಕೆ ಸಾಮಾಜಿಕ ಅಗತ್ಯಗಳಾಗಿ ಪ್ರಚಾರಗೊಳ್ಳುತ್ತಿಲ್ಲ? ಭಾವೈಕ್ಯತೆಯ ನಿಜವಾದ ರೂಪಕ್ಕಿಂತ ಕುರೂಪವೇ ಯಾಕೆ ಮಾದರಿ ಅನ್ನಿಸಿಕೊಳ್ಳುತ್ತಿವೆ? ಈ ಮಾದರಿ ಎಷ್ಟು ಸ್ವಾಗತಾರ್ಹ? ಎಷ್ಟು ಸಮಾಜಮುಖಿ?  
   ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕರುಂದವಾಡದ ಐದು ಮಸೀದಿಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಮತ್ತು ಮಂಗಳೂರಿನ ಕೈಕಂಬದಲ್ಲಿ ಮೌಲಾನ ಎಂಬ ಬಿ.ಕಾಂ. ವಿದ್ಯಾರ್ಥಿ ಗಣೇಶ ವಿಗ್ರಹವನ್ನು ರಚಿಸಿ ಪೂಜಿಸಿದ ಚಿತ್ರಸಹಿತ ಸುದ್ದಿಗಳನ್ನು ‘ಭಾವೈಕ್ಯತೆ' ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಮಾಧ್ಯಮಗಳು ಪ್ರಕಟಿಸಿದುದನ್ನು ಓದುತ್ತಾ ಹೀಗೆಲ್ಲಾ ಆಲೋಚಿಸಬೇಕಾಯಿತು.

Monday, September 1, 2014

ವೃದ್ಧಾಶ್ರಮದಿಂದ ಗ್ರೇಸಿ ಮಾರ್ಟಿಸ್ ಬರೆದ ಪತ್ರ






 
   Every morning
   He helps her get up
   Get ready for a day
   That she may not remember tomorrow
   ........ 
ಗ್ರೇಸಿ ಮಾರ್ಟಿಸ್ ಬರೆದ ಪತ್ರದ ಒಂದು ಭಾಗ
   ಹೀಗೆ ಆರಂಭವಾಗಿ ನಾಲ್ಕೈದು ಚರಣಗಳಲ್ಲಿ ಕೊನೆಗೊಳ್ಳುವ ಕವನವು 2006 ಫೆಬ್ರವರಿಯಲ್ಲಿ ಪ್ರಕಟವಾದಾಗ ಕೇಟ್ ಕಾರ್ಟ್ ರೈಟ್‍ರನ್ನು ಸಾಕಷ್ಟು ಮಂದಿ ಅಭಿನಂದಿಸಿದ್ದರು. ನೆನಪು ಶಕ್ತಿಯನ್ನು ಕಳಕೊಂಡ ತಾಯಿಯನ್ನು ಎದುರಿಟ್ಟುಕೊಂಡು ಕೇಟ್ ಕಾರ್ಟ್‍ರೈಟ್‍ರು ರಚಿಸಿದ್ದ ಈ ಕವನಕ್ಕೆ ಧಾರಾಳ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದುವು. "ಪ್ರತಿ ಬೆಳಗುಗಳಲಿ| ಅವ ಮಾಡುವವನು ಸಹಾಯ ಅವಳಿಗೆ| ಎದ್ದೇಳಲು| ದಿನದಾರಂಭಕ್ಕೆ ಸಿದ್ಧಗೊಳ್ಳಲು| ಆದರವಳು ಅದನ್ನು ನಾಳೆ ನೆನಪಿಸಲಾರಳು| ಅದುವೇ ಅವನ ಅಳಲು.." ಎಂಬ ಸಾಲುಗಳಲ್ಲಿರುವ ಭಾವುಕತೆಯನ್ನು ಕೊಂಡಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಈ ಹಾಡನ್ನು ಹಂಚಿಕೊಂಡರು. ಅದು ಒಳಗೊಂಡಿರುವ ಭಾವುಕತೆಗಾಗಿ ಇಷ್ಟಪಟ್ಟರು. ತಮ್ಮ ಮನೆ ಮತ್ತು ಪರಿಸರಗಳಲ್ಲಿ ಹಿರಿಯರ ಸ್ಥಿತಿ-ಗತಿಗಳ ಕುರಿತಂತೆ ಈ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದುವು. ಹಿರಿಯರನ್ನು ವೃದ್ಧಾ ಶ್ರಮಗಳಿಗೆ ಅಟ್ಟುವ ಬಗ್ಗೆ, ಅದರ ಅಗತ್ಯ-ಅನಗತ್ಯಗಳ ಕುರಿತಂತೆ ವಾಗ್ವಾದಗಳೂ ನಡೆದುವು. ಆಧುನಿಕ ಜೀವನ ಕ್ರಮಗಳ ಪ್ರಭಾವವನ್ನು ಕೆಲವರು ಅದಕ್ಕೆ ಕಾರಣವಾಗಿ ಮುಂದಿಟ್ಟರು. ಕೆಲವರು ತಿರಸ್ಕರಿಸಿದರು. ಧರ್ಮವನ್ನು ಪರಿಹಾರವಾಗಿ ಮುಂದಿಟ್ಟವರು ಕೆಲವರಾದರೆ, ವೃದ್ಧಾಶ್ರಮಗಳನ್ನೇ ಅನಿವಾರ್ಯವಾಗಿ ಕಂಡವರು ಕೆಲವರು. ಹೀಗೆ ಕೇಟ್‍ರ ಕೆಲವು ಸಾಲುಗಳು ಒಂದು ಗಂಭೀರ ಚರ್ಚೆಯನ್ನೇ ಹುಟ್ಟು ಹಾಕುವಲ್ಲಿ ಸಫಲವಾಗಿದ್ದುವು.
   ವಯಸ್ಸಾಗುವುದು ಪ್ರಕೃತಿ ಸಹಜ ಬೆಳವಣಿಗೆ. ಹುಟ್ಟುವ ಮಗುವಿನಿಂದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದು ಅರಿವಿಗೆ ಬರುವುದು ವಯಸ್ಸಾದಾಗಲೇ. ಹೆಚ್ಚಿನ ವೇಳೆ ಹಿರಿಯರು ಹಿರಿತನಕ್ಕೆ ಸಜ್ಜುಗೊಂಡಿರುವುದೇ ಇಲ್ಲ. ಮುಪ್ಪನ್ನು ಎದುರಿಸುವ ಕುರಿತು, ಆ ಸಂದರ್ಭದಲ್ಲಿ ತನ್ನ ವರ್ತನೆ, ನಿರೀಕ್ಷೆ, ಸಹನೆ.. ಮುಂತಾದುವುಗಳ ಕುರಿತು ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ತನ್ನ ಬಿಸಿನೆಸ್‍ನಲ್ಲಿ ವೈಫಲ್ಯ ಉಂಟಾದರೆ ಏನು ಮಾಡಬೇಕು ಎಂದು ಆಲೋಚಿಸುವ ಮತ್ತು ವ್ಯಾಪಾರದ ಹಿತ ಕಾಪಾಡುವಲ್ಲಿ ವಿವಿಧ ತಂತ್ರಗಳನ್ನು ಹೆಣೆಯುವ ಮಂದಿ ಧಾರಾಳ ಇದ್ದಾರೆ. ಕಚೇರಿಗೆ ಎರಡು ದಿನ ರಜೆ ಹಾಕಬೇಕೆಂದು ಬಯಸುವ ನೌಕರ, ಅದಕ್ಕಾಗಿ ತಯಾರಿ ನಡೆಸುತ್ತಾನೆ. ಹಾಗಂತ ಇಂಥ ಮುನ್ನೆಚ್ಚರಿಕೆಗಳು ಕೇವಲ ಬ್ಯುಸಿನೆಸ್‍ಗೋ ಕಚೇರಿ ನೌಕರಿಗೋ ಸೀಮಿತವೂ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇಂಥದ್ದೊಂದು ತಯಾರಿಯನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಂತ,  ವೃದ್ಧಾಪ್ಯವು ಇವುಗಳಂತೆ ಅಲ್ಲ ಎಂದು ವಾದಿಸಬಹುದಾದರೂ ಅದೂ ಒಂದು ತಯಾರಿಗರ್ಹವಾದ ಸ್ಥಿತಿಯೇ. ವೃದ್ಧಾಪ್ಯವನ್ನು ನಿರ್ಲಕ್ಷಿಸಿ ಬದುಕುವುದರಿಂದ ಅದೇನೂ ನಮ್ಮಿಂದ ದೂರ ಹೋಗುವುದಿಲ್ಲ. ನಿಜವಾಗಿ, ನಮ್ಮ ದೈಹಿಕ-ಮಾನಸಿಕ ಆರೋಗ್ಯವು ನಾವು ವೃದ್ಧಾಪ್ಯವನ್ನು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ಆಧರಿಸಿಕೊಂಡಿರುತ್ತದೆ. ಅನಾರೋಗ್ಯಕ್ಕೂ ನಮ್ಮ ಮನಸ್ಥಿತಿಗೂ ಹತ್ತಿರದ ನಂಟಿದೆ. ವೃದ್ಧಾಪ್ಯದ ಕುರುಹುಗಳಿಗೂ ನಮ್ಮ ಆಲೋಚನೆಗಳಿಗೂ ನಿಕಟ ಸಂಬಂಧವಿದೆ. ಅನೇಕರನ್ನು ವೃದ್ಧಾಪ್ಯ ಕಾಡುವುದು  ವಯಸ್ಸಿನಿಂದಲ್ಲ, ಮನಸ್ಥಿತಿಯಿಂದ.
   ಯುರೋಪಿಯನ್ ರಾಷ್ಟ್ರಗಳಲ್ಲಿ ವೃದ್ಧಾಪ್ಯದ ಸುತ್ತ ಹತ್ತು-ಹಲವು ಪ್ರಬಂಧಗಳು, ಸರ್ವೇಗಳು ನಡೆದಿವೆ. ವೃದ್ಧಾಪ್ಯವನ್ನೇ ಮುಂದೂಡಬಹುದಾದ ಸಂಶೋಧನೆಗಳಲ್ಲಿ ವಿಜ್ಞಾನಿಗಳು ತೊಡಗಿಸಿಕೊಂಡಿರುವ ಸುದ್ದಿಗಳೂ ಬರುತ್ತಿವೆ. ಯುರೋಪ್‍ನಲ್ಲಿರುವ ವೃದ್ಧಾಶ್ರಮಗಳಿಗೆ ಹೋಲಿಸಿದರೆ, ಭಾರತದಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ ಏನೇನೂ ಅಲ್ಲ. ಆದರೂ ವೃದ್ಧಾಶ್ರಮಗಳ ಕುರಿತಂತೆ ಗಂಭೀರ ಚರ್ಚೆ ನಡೆಯಲೇಬೇಕಾಗಿದೆ. ‘ಏಜಿಂಗ್, ಇಂಟರ್ ಜನರೇಶನಲ್ ರಿಲೇಶನ್ಸ್, ಕೇರ್ ಸಿಸ್ಟಮ್ಸ್ ಆ್ಯಂಡ್ ಕ್ವಾಲಿಟಿ ಆಫ್ ಲೈಫ್' ಎಂಬ ಹೆಸರಲ್ಲಿ 2003ರಲ್ಲಿ ನಾರ್ವೆಯಲ್ಲಿ ಪ್ರಬಂಧವೊಂದು ಮಂಡನೆಯಾಗಿತ್ತು. ಜರ್ಮನಿ, ಇಸ್ರೇಲ್, ಸ್ಪೈನ್, ನಾರ್ವೆ ಮತ್ತು ಬ್ರಿಟನ್‍ಗಳು ಧನಸಹಾಯ ನೀಡಿ ರಚಿಸಲಾದ ಸರ್ವೇ ಆಧಾರಿತ ಈ ಪ್ರಬಂಧವು ವೃದ್ಧರ ಹತ್ತು-ಹಲವು ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿತು. ಮುಖ್ಯವಾಗಿ ಯುರೋಪಿನಲ್ಲಿ ವೃದ್ಧರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಆಳ ಅಧ್ಯಯನ ನಡೆಸಿದ ಪ್ರಬಂಧವಾಗಿತ್ತದು. ಅದೇ ರೀತಿಯಲ್ಲಿ, ಜಾಸ್ಮೀನ್ ರಾಕ್‍ವೆಲ್ ಎಂಬವರು ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿಗಾಗಿ, "ರಿಲೇಶನ್‍ಶಿಪ್ ಆ್ಯಸ್ ರೆಮೆಡಿ: ವಿೂಟಿಂಗ್ ದಿ ಸೋಶಿಯಲ್ ಆ್ಯಂಡ್ ಇಮೋಶನಲ್ ನೀಡ್ಸ್ ಆಫ್ ಎಲ್ಡರ್ಸ್ ಲಿವಿಂಗ್ ಇನ್ ರೆಸಿಡೆನ್ಸಿಯಲ್ ಕೇರ್" ಎಂಬ ಅಧ್ಯಯನಾತ್ಮಕ ಪ್ರಬಂಧವನ್ನು ರಚಿಸಿದ್ದರು. ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ‘ವೃದ್ಧಾಪ್ಯ' ಹಲವು ರೀತಿಯಲ್ಲಿ ಸದಾ ಚರ್ಚೆಯಲ್ಲಿರುವ ಸಂಗತಿ. ಹಾಂಕಾಂಗ್, ಚೀನಾ ಅಥವಾ ದಕ್ಷಿಣೇಶ್ಯದ ರಾಷ್ಟ್ರಗಳಲ್ಲಿ ವೃದ್ಧರ ಸ್ಥಿತಿ-ಗತಿಯನ್ನು ಯುರೋಪಿಯನ್ ರಾಷ್ಟ್ರಗಳ ವೃದ್ಧರ ಸ್ಥಿತಿ-ಗತಿಗಳೊಂದಿಗೆ ಹೋಲಿಸಿಕೊಂಡು ನಡೆಸಲಾದ ಸರ್ವೇಗಳೂ ಧಾರಾಳ ಇವೆ. ಏಶ್ಯನ್ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಹಿರಿಯರಿಂದ ಭಾವನಾತ್ಮಕವಾಗಿ ದೂರ ಸರಿಯುತ್ತಿರುವ ಬಗ್ಗೆ ಮತ್ತು ಆರ್ಥಿಕ ನೆರವು ಮಾತ್ರವೇ ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತಿರುವ ಬಗ್ಗೆ ಸಾಕಷ್ಟು ವಿವರಗಳೂ ವ್ಯಕ್ತಗೊಂಡಿವೆ. ಅಷ್ಟಕ್ಕೂ, ಇಂಥದ್ದೊಂದು ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಮತ್ತು ಅದರ ವ್ಯಾಪ್ತಿ ದಿನೇ ದಿನೇ ವಿಸ್ತಾರಗೊಳ್ಳುತ್ತಿರುವುದಕ್ಕೆ ಕಾರಣಗಳೇನು? ಆಧುನಿಕ ಜೀವನ ಕ್ರಮಗಳೇ? ಶೈಕ್ಷಣಿಕ ಬೆಳವಣಿಗೆಯೇ? ಜೀವನಾನುಕೂಲತೆಗಳೇ? ತಥಾಕಥಿತ ಅಭಿವೃದ್ಧಿಗಳೇ? ಟಿ.ವಿ., ಕಂಪ್ಯೂಟರ್, ಮೊಬೈಲ್‍ಗಳೇ? ಇಂದಿನ ತಲೆಮಾರು ಪ್ರತಿದಿನವೂ ಹೊಸ ಹೊಸ ತಂತ್ರಜ್ಞಾನಗಳನ್ನುಪರಿಚಯಿಸಿಕೊಳ್ಳುತ್ತಿವೆ. ಅತ್ಯಂತ ವೇಗವಾಗಿ Update  ಆಗುತ್ತಿವೆ. ಹಾಗೆಯೇ ಅವು ಮನೆಯ ಹಿರಿಯರು Updateಗೊಂಡಿರಬೇಕೆಂದೂ ಬಯಸುತ್ತಿವೆ. ಮೊಬೈಲನ್ನು ಕೇವಲ ಕರೆ ಮಾಡುವುದಕ್ಕಷ್ಟೇ ಬಳಸುವ ಹಿರಿಯರಿಗೂ ವಿವಿಧ ಆ್ಯಪ್‍ಗಳಿಗಾಗಿ ಬಳಸುವ ಹೊಸ ತಲೆಮಾರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ತಮ್ಮ ಭಾಷೆ, ಹವ್ಯಾಸ, ವೇಗಗಳಿಗೆ ಹಿರಿಯರು ಹೊಂದಿಕೊಳ್ಳಲಾರರು ಎಂಬುದು ಗೊತ್ತಾಗುತ್ತಲೇ ಮಕ್ಕಳು ಹಿರಿಯರಿಂದ ದೂರ ಸರಿದು ಉಪಕರಣಗಳಿಗೆ ಹತ್ತಿರ ವಾಗುತ್ತಿರಬಹುದೇ? ಟಿ.ವಿ. ಕಾರ್ಟೂನ್‍ಗಳಲ್ಲಿ ಅಥವಾ ವಿವಿಧ ಕಾರ್ಯಕ್ರಮಗಳಲ್ಲಿ ಸಿಗುವ ಆನಂದವನ್ನೇ ಹಿರಿಯರ ಒಡನಾಟದಲ್ಲೂ ಯುವ ತಲೆಮಾರು ನಿರೀಕ್ಷಿಸುತ್ತಿರಬಹುದೇ? ನಿಜವಾಗಿ, ಹಿರಿಯರೆಂಬುದು ಒಂದು ಅದ್ಭುತ ಮಾಹಿತಿಕೋಶ. ಅವರಲ್ಲಿ ಕತೆ, ಕವನ, ಹಾಸ್ಯ, ತಮಾಷೆ, ಒಗಟು.. ಎಲ್ಲವೂ ಇರುತ್ತವೆ. ಆದರೆ ಇವನ್ನು ಆಸ್ವಾದಿಸುವುದಕ್ಕೂ ಬರಬೇಕಲ್ಲವೇ? ಟಿ.ವಿ., ಮೊಬೈಲ್‍ಗಳಲ್ಲಿ ಅಥವಾ ಗೆಳೆಯರ ಜೊತೆಗಿನ ಒಡನಾಟದಲ್ಲಿ ಸಿಗುವ ಖುಷಿಯನ್ನು ಹಿರಿಯರಲ್ಲಿ ಹುಡುಕುತ್ತಾ ಅದು ಸಿಗದಾಗ ದೂರ ಸರಿಯುವ ಆಧುನಿಕ ಪೀಳಿಗೆಯಿಂದಾಗಿ ಹಿರಿಯರು ಒಂಟಿತನ ಅನುಭವಿಸುತ್ತಾರೆ. ಅಷ್ಟಕ್ಕೂ, ಹಿರಿಯರೊಂದಿಗೆ ಬೆರೆಯುವ ಕಲೆಯನ್ನು ಮಕ್ಕಳಿಗೆ ನಾವೆಷ್ಟು ಹೇಳಿಕೊಡುತ್ತಿದ್ದೇವೆ? ಅದರ ಸುಖವನ್ನು ಎಷ್ಟು ಮನವರಿಕೆ ಮಾಡಿಕೊಡುತ್ತಿದ್ದೇವೆ? ಮಗನೂ ಸೊಸೆಯೂ ನೌಕರಿ ಮಾಡುತ್ತಿರುವ ಮನೆಯಲ್ಲಿ ಹಿರಿಯರು ಹೆಚ್ಚು ಆಶ್ರಯಿಸುವುದು ಮೊಮ್ಮಕ್ಕಳನ್ನು. ಮೊಮ್ಮಕ್ಕಳೂ ತುಟ್ಟಿಯಾದರೆ ಆ ಬಳಿಕ ಹಿರಿಯರು ಹತಾಶರಾಗುತ್ತಾರೆ. ಆರೋಗ್ಯ ಹದಗೆಡತೊಡಗುತ್ತದೆ. ಅತ್ತ ನೌಕರಿಯನ್ನೂ ಬಿಡಲಾಗದ ಇತ್ತ ಹೆತ್ತವರನ್ನೂ ಸರಿಯಾಗಿ ನೋಡಲಾಗದ ಅನೇಕ ಮಕ್ಕಳು ಅಂತಿಮವಾಗಿ ವೃದ್ಧಾಶ್ರಮಗಳನ್ನು ಸಂಪರ್ಕಿಸುತ್ತಾರೆ. ಹೀಗೆ  ಬದುಕಿನ ವಾಸ್ತವಗಳಿಗೆ ಬೆನ್ನು ಹಾಕಿ ಬದುಕತೊಡಗುತ್ತಾರೆ. ನಿಜವಾಗಿ, ಹಿರಿಯರಿಗೆ ಭಾವನಾತ್ಮಕ ಆರೈಕೆಯ ಅಗತ್ಯವಿರುತ್ತದೆ. ಅದನ್ನು ವೃದ್ಧಾಶ್ರಮಗಳು ಕೊಡಲಾರವು. ವೃದ್ಧಾಶ್ರಮಗಳಲ್ಲಿರುವವರೆಲ್ಲ ವೃದ್ಧರೇ. ಅದರಲ್ಲೂ ವಿವಿಧ ಕಾಯಿಲೆಗಳನ್ನು ಅಂಟಿಸಿಕೊಂಡು ಸಂಕಟಪಡುವವರೇ ಹೆಚ್ಚು. ಆದ್ದರಿಂದಲೇ, ಅಲ್ಲಿ ನಡೆಯಬಹುದಾದ ಮಾತುಕತೆಗಳು ಕೂಡ ಬಹುತೇಕ ಕಣ್ಣೀರಿನದ್ದೇ ಆಗಿರುತ್ತವೆ. ಮಗ, ಮಗಳು, ಸೊಸೆ, ಕುಟುಂಬಿಕರು ನಡೆಸಿದ ದೌರ್ಜನ್ಯಗಳು ಮತ್ತೆ ಮತ್ತೆ ಅವರ ಮಾತುಕತೆಗಳಲ್ಲಿ ಪ್ರಸ್ತಾಪಗೊಳ್ಳುತ್ತಿರುವುದಕ್ಕೆ ಅವಕಾಶವಿದೆ. ಅಂತಿಮವಾಗಿ ಹೃದಯ ಭಾರಗೊಳ್ಳುವುದಕ್ಕೂ ಕಣ್ಣೀರಿಗೂ ಅದು ಕಾರಣವಾಗಬಹುದು. ಆದರೆ ಮನೆಯ ವಾತಾವರಣ ಹಾಗಲ್ಲ. ಅಲ್ಲಿ ಹಿರಿಯರ ಮುಂದೆ ಮಗ, ಸೊಸೆ, ಮೊಮ್ಮಕ್ಕಳು, ಮಗಳ ಮಕ್ಕಳು, ಕುಟುಂಬಿಕರಿರುತ್ತಾರೆ. ಅಲ್ಲೊಂದು ಜೀವಕಳೆಯಿರುತ್ತದೆ. ಅಲ್ಲಿ ನಡೆಯಬಹುದಾದ ಮಾತು ಕತೆಗಳು ವೃದ್ಧರ ನಡುವೆ ನಡೆಯುವ ಮಾತುಕತೆಗಳಂತಿರುವುದಿಲ್ಲ. ಮೊಮ್ಮಕ್ಕಳ ನಗು ವೃದ್ಧರ ಮನಸ್ಸನ್ನು ಅರಳಿಸುತ್ತದೆ. ತನ್ನ ಮಗನೋ ಮಗಳೋ ಬಾಲ್ಯದಲ್ಲಿ ನಡೆಸುತ್ತಿದ್ದ ತುಂಟಾಟಗಳು ಮೊಮ್ಮಕ್ಕಳ ಮೂಲಕ ಅವರ ನೆನಪಿಗೆ ಬರುತ್ತವೆ. ತನ್ನ ಊರುಗೋಲನ್ನು ಮೊಮ್ಮಗು ಊರಿಕೊಂಡು ತಮಾಷೆ ಮಾಡುವಾಗ ಹಿರಿಯರೂ ಆನಂದಪಡುತ್ತಾರೆ. ವೃದ್ಧಾಶ್ರಮಗಳಲ್ಲಿ ಇಂಥದ್ದೊಂದು ವಾತಾವರಣಕ್ಕೆ ಅವಕಾಶವೇ ಇಲ್ಲ.
   ಅಂದಹಾಗೆ, ಶೈಕ್ಷಣಿಕ ಪ್ರಗತಿಯು ಕೌಟುಂಬಿಕ ನೆಮ್ಮದಿಗೆ ಕನ್ನ ಕೊರೆಯುತ್ತಿದೆಯೇ ಎಂಬುದರ ಸುತ್ತ ಗಂಭೀರ ಅವಲೋಕನವೊಂದು ನಡೆಯಬೇಕಾಗಿದೆ. ಇಂದಿನ ಜೀವನ ಕ್ರಮಗಳು ದಶಕಗಳ ಹಿಂದಿನಂತಿಲ್ಲ. ಮನೆಯ ಪ್ರತಿ ಸದಸ್ಯರಲ್ಲೂ ಅವರದೇ ಆದ ಉದ್ದೇಶಗಳಿವೆ. ಕಲಿಕೆ ಮತ್ತು ಉದ್ಯೋಗ ಪಡೆಯುವಲ್ಲಿ ಹೆಣ್ಣು-ಗಂಡು ಇಬ್ಬರಲ್ಲೂ ಪೈಪೋಟಿಯಿದೆ. ಇವತ್ತು ಗಂಡಿನಂತೆ ಹೆಣ್ಣೂ ಉದ್ಯೋಗಸ್ಥೆಯೇ.  ಬಹುಶಃ ಇಂಥ  ವಾತಾವರಣವು ಅಂತಿಮವಾಗಿ ಹಿರಿಯರನ್ನು ಒಂಟಿಯಾಗಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಂದು ಕಡೆ, ‘ಬಳಸಿ ಬಿಸಾಕು' ಎಂಬ ಸಂಸ್ಕøತಿ ಮನೆಯ ಜಗಲಿಗಷ್ಟೇ ಅಲ್ಲ, ಅಡುಗೆ ಕೋಣೆಯನ್ನೂ ಆವರಿಸಿಬಿಟ್ಟಿದೆ. ಬಂಡವಾಳಶಾಹಿತ್ವವು ಸ್ವಕೇಂದ್ರಿತ ಜೀವನ ಮೌಲ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಪ್ರತಿ ಮನೆ-ಮನಗಳಲ್ಲೂ ಬಿತ್ತುತ್ತಿದೆ. ಇವತ್ತಿನ ಜಗತ್ತಿನಲ್ಲಿ ‘ಹಳತಿಗೆ' ಭಾರೀ ಬೆಲೆಯೇನೂ ಇಲ್ಲ. ಮೊಬೈಲ್, ಶೂಸ್, ವಾಹನ, ಟಿ.ವಿ., ಆಭರಣಗಳು.. ಎಲ್ಲವೂ ವರ್ಷ ಕಳೆಯುವ ಮೊದಲೇ ಹಳತಾಗುತ್ತವೆ. ಹಳತಾದುದನ್ನು ತ್ಯಜಿಸಿ ಹೊಸದನ್ನು ಖರೀದಿಸುವಂತೆ ಮಾರುಕಟ್ಟೆಗಳು ಮತ್ತು ಅಲ್ಲಿನ ಉತ್ಪನ್ನಗಳು ಪ್ರಚೋದಿಸುತ್ತವೆ. ಹೀಗೆ ವರ್ಷವಾಗುತ್ತಲೇ ಹೊಸ ಮೊಬೈಲು, ವಾಹನ, ಆಭರಣಗಳು ಯುವ ತಲೆಮಾರಿನ ಕೈಯಲ್ಲಿ ಪ್ರತ್ಯಕ್ಷಗೊಳ್ಳುತ್ತಲೇ ಇರುತ್ತವೆ. ಆ ಪಟ್ಟಿಗೆ ಇವತ್ತು ಹಿರಿಯರೂ ಸೇರಿಕೊಳ್ಳುತ್ತಿದ್ದಾರೆಯೇ? ಹಳತಾದವರನ್ನು ಆಶ್ರಮಕ್ಕೆ ಅಟ್ಟಿ ಹೊಸತಿನೊಂದಿಗೆ ಬದುಕುವುದು ಸಹಜ ಅನ್ನಿಸಿಕೊಳ್ಳುತ್ತಿದೆಯೇ? ಹಳತು ಮತ್ತು ಹೊಸತು ಎಂಬ ಎರಡು ಧ್ರುವಗಳಿಗೆ ಹಿರಿಯರು ಮತ್ತು ಕಿರಿಯರನ್ನು ಸೇರಿಸಿಬಿಟ್ಟಿರುವುದು ಯಾವುದು? ನಮ್ಮ ಶೈಕ್ಷಣಿಕ ಪ್ರಗತಿಯೇ? ಜೀವನ ವಿಧಾನಗಳೇ? ಮೌಲ್ಯಗಳ ನಿರ್ಲಕ್ಷ್ಯವೇ? ಬಂಡವಾಳಶಾಹಿತ್ವವೇ?
   ಉಡುಪಿ ಜಿಲ್ಲೆಯ ವೃದ್ಧಾಶ್ರಮದಲ್ಲಿರುವ ಗ್ರೇಸಿ ಮಾರ್ಟಿಸ್ ಅನ್ನುವ ತಾಯಿ ಕಳೆದವಾರ ನನಗೆ  ಬರೆದ ಪತ್ರವನ್ನು ಓದುತ್ತಾ ಇವೆಲ್ಲ ನೆನಪಾದುವು.