Monday, September 30, 2013

ನೈನಾರನ್ನು ಸದಾ ಅಸ್ಪ್ರಶ್ಯಗೊಳಿಸುವ ಈ ಮಾದರಿಯೇಕೆ ಇಷ್ಟವಾಗಬೇಕು?


ಮಿಸ್ ಮುಸ್ಲಿಮಾ
ಮಿಸ್ ಅಮೇರಿಕ
   ಕಳೆದ ವಾರ ಎರಡು ಸೌಂದರ್ಯ ಸ್ಪರ್ಧೆಗಳು ನಡೆದುವು. ಇಂಡೋನೇಶ್ಯಾದ ಜಕಾರ್ತದಲ್ಲಿ ನಡೆದ ಮಿಸ್ ಮುಸ್ಲಿಮಾ ಸ್ಪರ್ಧೆಯಲ್ಲಿ ನೈಜೀರಿಯದ ಕಪ್ಪು ಸುಂದರಿ ಆಯಿಷಾ ವಿಜಯಿಯಾದರೆ ಭಾರತ ಮೂಲದ ತಿಳಿಗಪ್ಪು ಸುಂದರಿ ನೈನಾ  ದಲೂರಿ ಮಿಸ್ ಅಮೇರಿಕನ್ ಆಗಿ ಆಯ್ಕೆಯಾದಳು. ಇದರ ಬೆನ್ನಿಗೇ ಅಸಂಖ್ಯೆ ಪ್ರತಿಕ್ರಿಯೆಗಳು ನೈನಾಳನ್ನು ಹುಡುಕಿಕೊಂಡು ಬಂದುವು. ಅಮೇರಿಕದ 49 ರಾಜ್ಯಗಳ ಸ್ಪರ್ಧಿಗಳನ್ನು ಸೋಲಿಸಿ ವಿಜಯಿಯಾದ ಆಕೆಯನ್ನು ಅನೇಕರು ಟೆರರಿಸ್ಟ್ ಎಂದರು. ಕಪ್ಪು ಮೈ ಬಣ್ಣಕ್ಕಾಗಿ ಟೀಕಿಸಿದರು. ಇಂಟರ್‍ನೆಟ್ ತುಂಬ ಆಕೆಯನ್ನು ನಿಂದಿಸುವ, ಮೈ ಬಣ್ಣವನ್ನು ಅಪಹಾಸ್ಯಗೊಳಿಸುವ, ಬಿಳಿ ಯೇತರಳಾದ ಆಕೆಯ ಯೋಗ್ಯತೆಯನ್ನು ಪ್ರಶ್ನಿಸುವ ಟ್ವೀಟ್‍ಗಳು ಧಾರಾಳ ಕಾಣಿಸಿಕೊಂಡವು. ಒಂದು ಹಂತದಲ್ಲಿ ನೈನಾ ವಿಚಲಿತಳಾದಳು. ಟಿ.ವಿ. ಸಂದರ್ಶನದಲ್ಲಿ ತನ್ನ ನೋವನ್ನೂ ಪ್ರಕಟಿಸಿದಳು. ಆದರೂ, 'ಸಾವಿರಾರು ಹೊಗಳಿಕೆಯ ಮಾತುಗಳ ಮಧ್ಯೆ ನೂರಾರು ನಿಂದನೆಗಳು ದೊಡ್ಡದಲ್ಲ' ಅಂದಳು. ಮಾಧ್ಯಮಗಳೂ ನೈನಾಳ ಬಗ್ಗೆ ಬರೆದುವು.
   ‘ಅಮೇರಿಕವನ್ನು ನಾವೆಲ್ಲ ಅಭಿವೃದ್ಧಿ ಹೊಂದಿದ ಮತ್ತು ಆಧುನಿಕ ರಾಷ್ಟ್ರವಾಗಿ ನೋಡುತ್ತಿದ್ದೇವೆ. ಅಲ್ಲಿನದು ಪ್ರಗತಿಪರ ಚಿಂತನೆ, ತೆರೆದ ಮನಸ್ಸು ಎಂದೆಲ್ಲಾ ಹೇಳುತ್ತಿರುತ್ತೇವೆ. ಆದರೆ ಇದೇ ಅಮೇರಿಕವು, ನಾವು ಅಂದುಕೊಂಡಷ್ಟು ಮಾದರಿ ಅಲ್ಲ ಎಂಬುದು ಗೊತ್ತಾಗಿ ಅಚ್ಚರಿ ಮತ್ತು ಆಘಾತವಾಯಿತು. ಅಮೇರಿಕದಿಂದ ಜನಾಂಗೀಯವಾದ ಇನ್ನೂ ತೊಲಗಿಲ್ಲದಿರುವುದಕ್ಕೆ ವಿಷಾದವಿದೆ’.. ಎಂದು ದಿ ಹಿಂದೂ ಪತ್ರಿಕೆಯಲ್ಲಿ ಗುರ್ಗಾಂವ್‍ನ ರೇನು ದಿಲ್ಲಾನ್ ಬರೆದರೆ, ಬೆಂಗಳೂರಿನ ಗೋಪಾಲ್ ಸುತಾರ್ ಎಂಬವರು,
   ‘ನೈನಾಳನ್ನು ಅರಬ್ ಮೂಲದವಳು ಎಂದು ತಪ್ಪಾಗಿ ಭಾವಿಸಿ ಟೆರರಿಸ್ಟ್ ಎಂದು ಟೀಕಿಸಿದ್ದಾಗಿರಬಹುದು ಎಂದು ಈಗ ಹೇಳಲಾಗುತ್ತಿದೆ. ನಾನು ಸೌದಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದೇನೆ. ಅಲ್ಲಿನ ಅರಬರೂ ನನಗೆ ಗೊತ್ತು. ಅವರೇನೂ  ಟೆರರಿಸ್ಟ್ ಗಳಲ್ಲ. ನಿಜವಾಗಿ, ಅಮೇರಿಕನ್ನರ ಬಿಳಿ ಹೆಮ್ಮೆಗೆ ನೈನಾ ಬಾಂಬ್ ಹಾಕಿದ್ದಾಳೆ..’ ಎಂದು ಬರೆದರು. ಅಲ್ಲದೇ,
   ಇಂಥದ್ದೊಂದು 'ಜನಾಂಗೀಯವಾದಿ' ಕೂಗು ಎಬ್ಬಿಸಿದ್ದೇ ಟಿ.ವಿ. ಮಾಧ್ಯಮಗಳು. ಅವು ನೈನಾಳನ್ನು ಎತ್ತಿಕೊಂಡು ಸರಿ-ತಪ್ಪುಗಳನ್ನು ಚರ್ಚಿಸಿವೆ. ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟ್ ಜನಾಂಗೀಯ ವಾದವಿದೆ, ಕರಿಯರ ವಿರುದ್ಧ ಯಾವೆಲ್ಲ ಬಗೆಯ ತಾರತಮ್ಯ ನಡೆಯುತ್ತಿದೆ, ಇದರ ವಿರುದ್ಧ ಯಾವ ಬಗೆಯ ಹೋರಾಟ ನಡೆಯಬೇಕು.. ಎಂದೆಲ್ಲಾ ವಾದಿಸುತ್ತಾ ಪುಕ್ಕಟೆ ಸಲಹೆಗಳನ್ನೂ ಕೊಡುತ್ತಿವೆ. ಆದರೆ, ಹೀಗೆ ಅಬ್ಬರಿಸುವ ಟಿ.ವಿ. ಚಾನೆಲ್‍ಗಳ ಆ್ಯಂಕರ್‍ಗಳಲ್ಲಿ ಎಷ್ಟು ಮಂದಿ ಹೆಣ್ಣು ಮಕ್ಕಳು ಕಪ್ಪು ಚರ್ಮದವರಿದ್ದಾರೆ? ಯಾಕೆ ಅವು ತಮ್ಮ ‘ಮನೆಯಿಂದಲೇ’ ಜನಾಂಗೀಯ ವಿರೋಧಿ ಹೋರಾಟವನ್ನು ಪ್ರಾರಂಭಿಸುತ್ತಿಲ್ಲ? ತ್ವಚೆಯನ್ನು ಆಕರ್ಷಕಗೊಳಿಸುವ (ಬಿಳಿ) ಜಾಹೀರಾತು ಅತ್ಯಂತ ಹೆಚ್ಚು ಪ್ರಸಾರವಾಗುವುದೇ ಟಿ.ವಿ. ಚಾನೆಲ್‍ಗಳಲ್ಲಿ. ಈ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವುದೂ ಪ್ರಸಾದನ ಸಾಮಗ್ರಿಗಳೇ. ಬಿಳಿ ಚರ್ಮವನ್ನು ಆಕರ್ಷಕ ಮತ್ತು ಗೌರವಾರ್ಹ ಎಂದು ಬಿಂಬಿಸುವ ವರ್ತನೆಗಳು, ಜಾಹೀರಾತುಗಳು ಟಿ.ವಿ.ಗಳಲ್ಲಿ ಧಾರಾಳ ಪ್ರಸಾರವಾಗುತ್ತಿವೆ. ಇವನ್ನೆಲ್ಲ ಹಾಗೆಯೇ ಇರಗೊಟ್ಟು, ಅಮೇರಿಕನ್ ಜನಾಂಗೀಯತೆಯ ಬಗ್ಗೆ ಮಾತಾಡುತ್ತವಲ್ಲ, ಏನೆನ್ನಬೇಕು? ಹಿಪಾಕ್ರಸಿ, ದ್ವಂದ್ವ, ಆತ್ಮವಂಚನೆ.. ಎಂಬೆಲ್ಲ ಪದಗಳ ಬಳಕೆಗೆ ಇವು ಯೋಗ್ಯವಲ್ಲವೇ..' ಎಂದೆಲ್ಲಾ ಓದುಗರು ಸಿಟ್ಟು ತೋಡಿಕೊಂಡರು.
   ನಿಜವಾಗಿ ಅಭಿವೃದ್ಧಿ ಮತ್ತು ಸಮಾನತೆ ಒಂದೇ ಅಲ್ಲ. ಅಭಿವೃದ್ಧಿ ಬೇರೆ, ಸಮಾನತೆಯ ಪ್ರಜ್ಞೆ ಬೇರೆ. ಅಮೇರಿಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರಬಹುದು. ಆದರೆ ಆ ಅಭಿವೃದ್ಧಿಯು ಅವರನ್ನು ಜನಾಂಗೀಯ ಪ್ರಜ್ಞೆಯಿಂದ ಸಂಪೂರ್ಣ ಮುಕ್ತಗೊಳಿಸುತ್ತದೆ ಎಂದು ಭಾವಿಸುವುದು ಸರಿಯಲ್ಲ. ಯಾಕೆಂದರೆ, ಜನಾಂಗೀಯತೆ ಎಂಬುದು ಮಾನಸಿಕವಾದದ್ದು. ಆರ್ಥಿಕ ಅಭಿ ವೃದ್ಧಿಯಾದರೋ ಬಾಹ್ಯವಾದದ್ದು. ಬಾಹ್ಯ ಆಡಂಬರಗಳು ಮಾನಸಿಕ ಕೊಳೆಯನ್ನು ತೊಳೆದು ಬಿಡಬಲ್ಲುದು ಎಂಬುದಕ್ಕೆ ಐತಿಹಾಸಿಕವಾಗಿ ಯಾವ ಉದಾಹರಣೆಗಳೂ ಇಲ್ಲ. ಒಂದು ವೇಳೆ, ಅಂಥದ್ದೊಂದು ಪವಾಡ ಸಾಧ್ಯವಾಗುತ್ತಿದ್ದರೆ, ಅಮೇರಿಕದಲ್ಲಿ ಎಂದಲ್ಲ, ಈ ದೇಶದಲ್ಲೂ ಅದು ಕೊನೆಗೊಂಡಿರಬೇಕಿತ್ತಲ್ಲವೇ? ಇವತ್ತೂ ಈ ದೇಶದಲ್ಲಿ ಶ್ರೇಷ್ಠ-ಕನಿಷ್ಠ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರೇನು ಬಡವರಲ್ಲವಲ್ಲ? ಶ್ರೇಣೀಕೃತ ಪುರಾತನ ಭಾರತದಲ್ಲೂ ಮತ್ತು ಆಧುನಿಕ ಭಾರತದಲ್ಲೂ ಅದು ಚಾಲ್ತಿಯಲ್ಲಿರುವುದು ದುಡ್ಡಿದ್ದವರಿಂದಲೇ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ? ಈ ಹಿಂದೆ ಜವಿೂನು, ದುಡ್ಡು, ವಿದ್ಯಾಭ್ಯಾಸ ಇದ್ದ ಮಂದಿಯೇ 'ಅಸ್ಪೃಶ್ಯತೆ'ಯನ್ನು ಪಾಲಿಸಿಕೊಂಡು ಬಂದಿದ್ದರು. ಇವತ್ತೂ ಅವರೇ ಇದನ್ನು ಮುಂದುವರಿಸಿ ಕೊಂಡು ಬರುತ್ತಿದ್ದಾರೆ. ಹೀಗಿರುವಾಗ, ಆರ್ಥಿಕ ಅಭಿವೃದ್ಧಿಯು ಅಸ್ಪೃಶ್ಯತೆ ಅಥವಾ ಜನಾಂಗೀಯತೆಯನ್ನು ನಿರ್ಮೂಲನಗೊಳಿಸಿಬಿಡಬಲ್ಲುದು ಎಂದು ನಂಬುವುದಕ್ಕೆ ಏನು ಆಧಾರವಿದೆ? ಬಹುಶಃ, ಈ ಹಿಂದಿನಂತೆ ಇವತ್ತು ಗೆರಟೆಯಲ್ಲಿ ನೀರು ಕೊಡದೇ ಇರಬಹುದು. ಸ್ಪೃಶ್ಯ ಸಾಗುವ ಹಾದಿಯಲ್ಲಿ 'ಅಸ್ಪೃಶ್ಯ' ಮಾರು ದೂರ ಹೋಗಿ ನಿಲ್ಲದೇ ಇರಬಹುದು. ಇಂಥ ಸೂಕ್ಷ್ಮ  ಬದಲಾವಣೆಗಳು ಸಮಾಜದಲ್ಲಿ ಖಂಡಿತ ಆಗಿವೆ. ಆದರೆ, 'ಅಸ್ಪೃಶ್ಯತೆ ಕೊನೆಗೊಳ್ಳುತ್ತಿದೆ' ಎಂಬುದಕ್ಕೆ ಇಂಥ ಸೂಕ್ಷ್ಮ  ಬದಲಾವಣೆ ಗಳನ್ನು ಪುರಾವೆಯಾಗಿ ಎತ್ತಿಕೊಳ್ಳುವುದು ದೊಡ್ಡ ಪ್ರಮಾದವಾಗಬಹುದು. ಯಾಕೆಂದರೆ, ನೂರೋ ಇನ್ನೂರೋ ವರ್ಷಗಳ ಹಿಂದೆ ಅಸ್ಪೃಶ್ಯತೆಯ ಆಚರಣೆಯು ಯಾವ ರೂಪದಲ್ಲಿತ್ತೋ ಅದೇ ರೀತಿಯಲ್ಲಿ ಈ ಆಧುನಿಕ ಕಾಲದಲ್ಲೂ ಆಚರಣೆಯಲ್ಲಿರುತ್ತದೆ ಎಂದು ಭಾವಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಇವತ್ತು ಕಾನೂನು ಬದಲಾಗಿದೆ. ಪ್ರಜಾತಂತ್ರ ಬಂದಿದೆ. ಹಳ್ಳಿ ಮೂಲೆಯೊಂದರ ಸಣ್ಣ ಪ್ರಕರಣವೂ ಜಾಗತಿಕ ಇಶ್ಯೂವಾಗುವಂತಹ ತಂತ್ರ ಜ್ಞಾನಗಳು ಆವಿಷ್ಕಾರಗೊಂಡಿವೆ. ಹೀಗಿರುವಾಗ, ಅಸ್ಪೃಶ್ಯತೆಯಲ್ಲಿ ಬಲವಾಗಿ ನಂಬಿಕೆ ಇಟ್ಟಿರುವ ವ್ಯಕ್ತಿ ಕೂಡ ಹಿಂದಿನ ಕಾಲದ ಒರಟುತನವನ್ನು ಮುಂದುವರಿಸಲಾರ. ಜಗತ್ತು ಆಧುನಿಕಗೊಂಡಿರುವಾಗ ಆಚರಣೆಯಲ್ಲೂ ಆಧುನಿಕತೆಯನ್ನು ತರುವುದಕ್ಕೆ ಆತ ಖಂಡಿತ ಕಲಿತಿರುತ್ತಾನೆ. ನಿಜವಾಗಿ, ಬದಲಾವಣೆಯೆಂಬುದು ಆಂತರಿಕವಾಗಿ ಆಗಬೇಕಾದದ್ದು. ಓರ್ವನು,  ಅಸ್ಪೃಶ್ಯತೆಯನ್ನು ಆಚರಿಸುವುದಕ್ಕೆ ಧಾರ್ಮಿಕ ಬೋಧನೆಗಳು ಅಥವಾ ಪರಂಪರಾಗತ ನಂಬಿಕೆಗಳೇ ಕಾರಣ ಎಂದಾದರೆ ಆತನನ್ನು ತಿದ್ದುವುದಕ್ಕೆ ಬಾಹ್ಯ ಕಾನೂನುಗಳು ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ. ಕಾನೂನಿಗೆ ಹೆದರಿ ಬಾಹ್ಯವಾಗಿ ಆತ ಸಮಾನತೆಯನ್ನು ಪ್ರತಿಪಾದಿಸಿದರೂ ಆಂತರಿಕವಾಗಿ ಆತ ಸ್ಪೃಶ್ಯನೇ ಆಗಿರುತ್ತಾನೆ. ಸಮಯ, ಸಂದರ್ಭ ನೋಡಿ ಅದನ್ನು ಪ್ರತಿಪಾದಿಸುತ್ತಲೂ, ಆಚರಿಸುತ್ತಲೂ ಇರುತ್ತಾನೆ. ನೈನಾ ದಲೂರಿ ಪ್ರಕರಣ ಹೇಳುತ್ತಿರುವುದೇ ಇದನ್ನು.
   2011ರಲ್ಲಿ ಅಮೇರಿಕದಲ್ಲಿ ಬಿಡುಗಡೆಯಾದ ಡಾರ್ಕ್ ಗರ್ಲ್ ಎಂಬ ಡಾಕ್ಯುಮೆಂಟರಿಯಲ್ಲಿ ಒಂದು ದೃಶ್ಯವಿದೆ.
5 ವರ್ಷದ ಕಪ್ಪು ಮಗು. ಅದರ ಎದುರು ಕಪ್ಪು ಮತ್ತು ಬಿಳಿ ಬಣ್ಣದ ಕೆಲವಾರು ಗೊಂಬೆಗಳನ್ನು ಇಡಲಾಗಿದೆ. ಈ ಗೊಂಬೆಗಳಲ್ಲಿ ಅತ್ಯಂತ ಬುದ್ಧಿವಂತ ಗೊಂಬೆಯೊಂದನ್ನು ಆಯ್ದುಕೋ ಎಂದು ಮಗುವಿಗೆ ಹೇಳಲಾಗುತ್ತದೆ. ಮಗು ಬಿಳಿ ಗೊಂಬೆಯನ್ನು ಆಯ್ದುಕೊಳ್ಳುತ್ತದೆ. ಇನ್ನು, 'ಕೆಟ್ಟ ಮತ್ತು ಜಗಳಗಂಟಿ ಗೊಂಬೆಯನ್ನು ಆಯ್ದುಕೋ' ಎಂದು ಹೇಳಿದಾಗ, ಅದು ಕಪ್ಪು ಗೊಂಬೆಯನ್ನು ಆಯ್ಕೆ ಮಾಡುತ್ತದೆ.
   ಒಂದು ರೀತಿಯಲ್ಲಿ ತುಳಿತಕ್ಕೊಳಗಾದವರ ಮನಸ್ಥಿತಿ ಇದು. ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಸಿಕೊಳ್ಳುತ್ತಾ, ತುಳಿಯುವವರನ್ನೇ ಶ್ರೇಷ್ಠರೆಂದು ಭಾವಿಸುತ್ತಾ ಬದುಕುವುದನ್ನು ಅವರು ರೂಢಿಸಿಕೊಳ್ಳು ತ್ತಾರೆ. ಖ್ಯಾತ ಗಾಯಕ ಬಿಯಾನ್ಸ್, ಮೈಕಲ್ ಜಾಕ್ಸನ್, ನಟ ಗೆಬೊರಿ ಸಿಡಿಬಿ, ಕೆರಿಬಿಯನ್ ದ್ವೀಪದ ಡ್ಯಾನ್ಸರ್ ವೇಬ್ಸ್ ಕಾರ್ಟೆಲ್, ನಟಿ ಮಾರಿಯಾ ಕ್ಯಾರಿ.. ಮುಂತಾದ ಸೆಲೆಬ್ರಿಟಿಗಳೆಲ್ಲ ತಮ್ಮ ಚರ್ಮವನ್ನು ದ್ವೇಷಿಸಿದ್ದು, ಬಿಳಿಯಾಗಿಸಿದ್ದೆಲ್ಲ ಇದೇ ಕೀಳರಿಮೆಯಿಂದ. ‘ ಸ್ನಾನದ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕು, ನನಗೆ ಬಿಳಿಯಾಗಬೇಕು ಅಮ್ಮ,..’ ಎಂದು ಡಾರ್ಕ್ ಗರ್ಲ್‍ನಲ್ಲಿ ಓರ್ವ ಯುವತಿ ಅಂಗಲಾಚುವ ದೃಶ್ಯವಿದೆ. ಜನಾಂಗೀಯ ಬರ್ಬರತೆಗೆ ಹಿಡಿದ ಕನ್ನಡಿ ಇದು. ‘ಕರಿಯ ವ್ಯಕ್ತಿಯಾಗಿ ತಾನು ಮತ್ತು ತಂಗಿ ಅಮೇರಿಕದಲ್ಲಿ ಅನುಭವಿಸಿದ ಸತ್ಯಗಳೇ ಈ ಡಾಕ್ಯುಮೆಂಟರಿ..’ ಎಂದು ಖ್ಯಾತ ನಟ ಮತ್ತು ಡಾಕ್ಯುಮೆಂಟರಿ ನಿರ್ದೇಶಕ ಬಿಲ್ ಡ್ಯುಕ್ ಹೇಳಿರುವುದು ಆಧುನಿಕ ಅಮೇರಿಕದ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತದೆ.
   ಬ್ಲ್ಯಾಕ್ ಲೈಕ್ ಮಿ
ಜಾನ್ ಹಾವರ್ಡ್ ಗ್ರಿಫಿನ್ ಎಂಬ ಅಮೇರಿಕದ ಮಾಜಿ ಯೋಧರೋರ್ವರು 1959ರಲ್ಲಿ ವಿಶಿಷ್ಟ ಪ್ರಯೋಗವೊಂದಕ್ಕೆ ಮುಂದಾಗುತ್ತಾರೆ. ಆ ಕಾಲದಲ್ಲಿ ಅಮೇರಿಕದ ಲೂಸಿಯಾನ, ಮಿಸಿಸಿಪ್ಪಿ, ಅಲಬಾಮಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ವರ್ಣಬೇಧ ನೀತಿಯನ್ನು ಶಿಸ್ತಿನಿಂದ ಆಚರಿಸಲಾಗುತ್ತಿತ್ತು. ಬಿಳಿಯರಾದ ಗ್ರಿಫಿನ್ ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಆದ್ದರಿಂದ ಅವರು ತಮ್ಮ ಬಿಳಿ ಚರ್ಮವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿ ಕಪ್ಪು ವರ್ಣೀಯರ ಅನುಭವಗಳನ್ನು ಸ್ವಯಂ ಪಡಕೊಳ್ಳಬೇಕೆಂದು ತೀರ್ಮಾನಿಸಿದರು. ಅದರಂತೆ ಲೂಸಿಯಾನದ ತನ್ನ ಗೆಳೆಯನ ಮನೆಯಲ್ಲಿ ಉಳಿದುಕೊಂಡು, ಚರ್ಮವನ್ನು ಕಪ್ಪುಗೊಳಿಸುವ methoxsalen ಔಷಧವನ್ನು ತೆಗೆದುಕೊಳ್ಳತೊಡಗಿದರು. ದಿನದಲ್ಲಿ 15 ಗಂಟೆಗಳ ಕಾಲ ಬಿಸಿಲಿಗೆ ಒಡ್ಡಿ ಮೈ ಬಣ್ಣದ ಬದಲಾವಣೆಗೆ ಶ್ರಮಿಸಿದರು. ಕೊನೆಗೆ ಈ ಔಷಧ ಮತ್ತು ದೇಹವಿಡೀ ಬಳಿದುಕೊಂಡ ಕಪ್ಪು ಬಣ್ಣದಿಂದಾಗಿ (ಡೈ) ಗ್ರಿಫಿನ್ ಒಂದು ಹಂತದ ವರೆಗೆ ತೆಳು ಕಪ್ಪು ವ್ಯಕ್ತಿಯಾಗಿ ಕಾಣಿಸತೊಡಗಿದರು. ಅದೇ ವೇಷದಲ್ಲಿ ಅವರು ಬಸ್ಸಿನ ಮೂಲಕ ಲೂಸಿಯಾನ ಸಹಿತ ನಾಲ್ಕು ರಾಜ್ಯಗಳಲ್ಲಿ ಉದ್ದಕ್ಕೂ ಸಂಚರಿಸಿದರು. ಅವರು ಈ ಹಿಂದೆ ಊಟ ಮಾಡುತ್ತಿದ್ದ ಹೊಟೇಲೇ ಅವರನ್ನು ಹೊರದಬ್ಬಿತು. ಬಸ್ಸಿನಲ್ಲಿ ಅವಮಾನಿಸಲಾಯಿತು. ಕ್ಷಣಕ್ಷಣಕ್ಕೂ ನಿಂದನೆ, ಒದೆತ, ಅವಮಾನಗಳು ಎದುರಾದವು. ಹೀಗೆ 6 ವಾರಗಳ ವರೆಗೆ ಅವರು ಕರಿಯನಾಗಿ ನಾನಾ ಅನುಭವವನ್ನು ಪಡೆದುಕೊಂಡರು. ಬರೆದಿಟ್ಟರು. 1961ರಲ್ಲಿ 'ಬ್ಲ್ಯಾಕ್ ಲೈಕ್ ಮಿ' ಎಂಬ ಕೃತಿ ಹೊರಬಂದಾಗ ಅಮೇರಿಕ ಮಾತ್ರವಲ್ಲ, ಆಸುಪಾಸಿನಲ್ಲೂ ಅದು ಸಾಕಷ್ಟು ಸುದ್ದಿ ಮಾಡಿತು. ಕೃತಿಯನ್ನು ಹಿಂತೆಗೆದುಕೊಳ್ಳಿ ಎಂಬ ಬೆದರಿಕೆಗಳು ಬಂದುವು. 1964ರಲ್ಲಿ ಅವರ ಮೇಲೆ ಆದ ಮಾರಣಾಂತಿಕ ಹಲ್ಲೆಯಿಂದ ಚೇತರಿಸಿಕೊಳ್ಳಲು 5 ತಿಂಗಳುಗಳೇ ಬೇಕಾದುವು..
   ನಿಜವಾಗಿ, ಅಮೇರಿಕದ ಬಾಹ್ಯ ಅಭಿವೃದ್ಧಿಯನ್ನು ಮತ್ತು ಆಂತರಿಕ ಬಡತನವನ್ನು ನೈನಾ ದಲೂರಿ ಚೆನ್ನಾಗಿ ತೆರೆದಿಟ್ಟಿದ್ದಾಳೆ. ಜಗತ್ತಿನ ವಿವಿಧ ದೇಶ ಮತ್ತು ಜನಾಂಗಗಳ ಮೇಲೆ ಅಮೇರಿಕ ತೋರುತ್ತಿರುವ ಪಕ್ಷಪಾತ, ಕ್ರೌರ್ಯಗಳಿಗೆ ಬಹುಶಃ ಈ ಆಂತರಿಕ ಬಡತನವೇ ಕಾರಣವಿರಬೇಕು. ಅಷ್ಟಕ್ಕೂ, ಒಂದು ಕಡೆ ಆಧುನಿಕ ಅಮೇರಿಕದ ಪ್ರತಿನಿಧಿಯಾದ ನೈನಾ ದಲೂರಿ, ಇನ್ನೊಂದು ಕಡೆ ಬಡ ನೈಜೀರಿಯಾದ ಆಯಿಷಾ, ಇವರಿಬ್ಬರಲ್ಲಿ ನೀಗ್ರೋ ಆಯಿಷಾ ಸರ್ವ ಗೌರವಕ್ಕೂ ಪಾತ್ರವಾಗುವುದು ಮತ್ತು ನೈನಾ ನಿಂದನೆಗೆ ಒಳಗಾಗುವುದೆಲ್ಲ ಏನನ್ನು ಸೂಚಿಸುತ್ತದೆ? ಅಮೇರಿಕ ಎಡವಿರುವುದು ಎಲ್ಲಿ? ಅದರ ಅಭಿವೃದ್ಧಿ ಮಾದರಿಯಲ್ಲಿ ಎಲ್ಲೆಲ್ಲಿ ತೂತುಗಳಿವೆ? ಯಾಕೆ ‘ನೈನಾ ದಲೂರಿಗಳು’ ಈ ‘ಅಭಿವೃದ್ಧಿ’ಯಲ್ಲಿ ಸದಾ ಅಸ್ಪೃಶ್ಯ ರಾಗುತ್ತಾರೆ? ಆದ್ದರಿಂದಲೇ,   
ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸಹೋದರರು (ಪವಿತ್ರ ಕುರ್‍ಆನ್: 49: 13) ಎಂದು ಸಾರಿದ, ಅರಬರಿಗೂ ಅರಬೇತರರಿಗೂ ಚಾರಿತ್ರ್ಯದ ಹೊರತು ಯಾವ ವ್ಯತ್ಯಾಸವೂ ಇಲ್ಲ ಎಂದ, ತನ್ನ ಕಾಲದ ಎಲ್ಲ ಜಾತಿಗಳೊಂದಿಗೂ ವೈವಾಹಿಕ ಸಂಬಂಧವನ್ನು ಬೆಳೆಸಿ ಜಾತಿರಹಿತ ಸಮಾಜವನ್ನು ಕಟ್ಟಿದ, ಬಿಲಾಲ್ ಎಂಬ ನೀಗ್ರೋ ವ್ಯಕ್ತಿಯಲ್ಲಿ ಮೊಟ್ಟಮೊದಲ ಅದಾನ್ (ಬಾಂಗ್) ಕೊಡಿಸಿದ ಮತ್ತು ನಮಾಝ್‍ನ ಮೂಲಕ ಅತಿ ಶ್ರೀಮಂತರನ್ನೂ ಕಡು ಬಡವರನ್ನೂ ಒಂದೇ ಸಾಲಿನಲ್ಲಿ ಭುಜಕ್ಕೆ ಭುಜ ತಾಗಿಸಿ ನಿಲ್ಲಿಸಿದ.. ಪ್ರವಾದಿ ಮುಹಮ್ಮದ್(ಸ) ಇಷ್ಟ ಆಗುವುದು.

Monday, September 23, 2013

ಅಂಥ ವಿಚಾರಧಾರೆ ಹಿಟ್ಲರ್ ನ ಜರ್ಮನಿಯನ್ನಲ್ಲದೆ ಗಾಂಧೀಜಿಯ ಭಾರತವನ್ನು ನಿರ್ಮಿಸಬಲ್ಲುದೆ?

ಜರ್ಮನಿ
ಇಟಲಿ
   ಫ್ಯಾಸಿಝಮ್‍ನ ವಿಶ್ಲೇಷಣೆಗೆ ಜಗತ್ತು ಯಾವಾಗಲೂ ಉದಾಹರಣೆಯಾಗಿ ಎತ್ತಿಕೊಳ್ಳುವುದು ಈ ಎರಡು ದೇಶಗಳನ್ನು. ಹಿಟ್ಲರ್ ಜರ್ಮನಿಯಲ್ಲಿದ್ದ. ಮುಸೊಲಿನಿ ಇಟಲಿಯನ್ನು ಆಳಿದ. ಇವರಿಬ್ಬರ ಮನಸ್ಥಿತಿ, ವಿಚಾರಧಾರೆ ಎಷ್ಟು ಅಪಾಯಕಾರಿಯಾಗಿ ತ್ತೆಂದರೆ, ಎರಡನೇ ವಿಶ್ವಯುದ್ಧದ ಕೇಂದ್ರ ಬಿಂದು ಇವರೇ. ಹಿಟ್ಲರ್ ಜರ್ಮನಿಯಲ್ಲಿ ಆರ್ಯನ್ ಜನಾಂಗವಾದವನ್ನು ಪ್ರತಿಪಾದಿಸಿದ. ತಾನು ಸಸ್ಯಾಹಾರಿಯಾಗಿರುವುದನ್ನು ಎಲ್ಲರಿಗೂ ಗೊತ್ತುಪಡಿಸಿದ. ತನ್ನ ಜನಾಂಗಕ್ಕಾಗಿ ಹೆಮ್ಮೆಪಟ್ಟ. ಜರ್ಮನಿಯ ಮಂದಿ ನಿಧಾನವಾಗಿ ಹಿಟ್ಲರ್‍ನನ್ನು ತಮ್ಮ ಜನಾಂಗದ ವ್ಯಕ್ತಿಯಾಗಿ ಮತ್ತು ಆ ಕಾರಣದಿಂದಲೇ ತಾವು ಸುರಕ್ಷಿತರು ಎಂದು ಅಂದುಕೊಳ್ಳುವುದಕ್ಕೆ ತೊಡಗಿದರು. ಅವರು ಸಹಜವಾಗಿ ಆರ್ಯನ್ ಜನಾಂಗವಾದದಲ್ಲಿ ಧ್ರುವೀಕರಣಗೊಂಡರು. ಜೊತೆಜೊತೆಗೇ ಅನಾರ್ಯರ ಬಗ್ಗೆ ಒಂದು ರೀತಿಯ ದ್ವೇಷವೂ ಇಂಜೆಕ್ಟ್ ಆಗತೊಡಗಿತು. ಅದು ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸಿತು. ಈ ದೇಶದ ಪ್ರತಿ ಸಮಸ್ಯೆಗೂ ಅನಾರ್ಯರು ಕಾರಣ ಎಂಬ ಬೀಜ ಮೊಳಕೆಯೊಡೆದು ಮರವಾಗಿ ಹೂ ಬಿಡಲು ಪ್ರಾರಂಭಿಸಿದ ಬಳಿಕ ಜರ್ಮನಿ ಪೂರ್ಣ ಪ್ರಮಾಣದಲ್ಲಿ ಹಿಟ್ಲರ್‍ನದ್ದಾಯಿತು. ಆ ಬಳಿಕ ಹಿಟ್ಲರ್ ತನ್ನನ್ನು ವಿರೋಧಿಸಿದ ಆರ್ಯನ್ ಕಮ್ಯುನಿಸ್ಟರನ್ನು ಹಿಂಸಿಸಿದಾಗಲೂ ಜನರು ಮಾತಾಡಲಿಲ್ಲ. ಎಲ್ಲಿಯವರೆಗೆಂದರೆ, ಹಿಟ್ಲರ್‍ನಿಂದ ಸಾಮೂಹಿಕ ಹತ್ಯಾಕಾಂಡ ನಡೆಯುತ್ತಿದ್ದರೂ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ನಿಜವಾಗಿ, ಫ್ಯಾಸಿಝಮ್‍ನ ಕಾರ್ಯ ಚಟುವಟಿಕೆಯೇ ಹೀಗೆ. ಅದು, ‘ಹತ್ಯಾಕಾಂಡಗಳಲ್ಲಿ ಪಾಲುಗೊಳ್ಳಿ’ ಎಂದು ಜನರಿಗೆ ನೇರವಾಗಿ ಕರೆ ಕೊಡುವುದಿಲ್ಲ. ಆದರೆ ಸಮಾಜವನ್ನು ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸಿ, ಜನರು ಹತ್ಯಾಕಾಂಡದಲ್ಲಿ ಭಾಗವಹಿಸುವುದಕ್ಕೆ ಪ್ರೇರಕವಾಗುವ ಯೋಗ್ಯ ವಾತಾವರಣವನ್ನು ನಿರ್ಮಿಸುತ್ತದೆ. ಮೋದಿ ಮತ್ತು ಬಳಗವು ಈ ದೇಶದಲ್ಲಿ ಸದ್ಯ ನಿರ್ವಹಿಸುತ್ತಿರುವ ಪಾತ್ರ ಇದುವೇ. 20%ಕ್ಕಿಂತ ಕಡಿಮೆ ಇರುವ ಮುಸ್ಲಿಮರ ವಿರುದ್ಧ 80%ದಷ್ಟಿರುವ ಬೃಹತ್ ವರ್ಗವನ್ನು ಧ್ರುವೀಕರಣಗೊಳಿಸುವ ಕನಸಿನೊಂದಿಗೆ ಈ ಬಳಗವು ಅಖಾಡಕ್ಕೆ ಇಳಿದಿದೆ. ಗುಜರಾತ್‍ನಲ್ಲಿ ಯಶಸ್ವಿಯಾಗಿರುವ ಈ ತಂತ್ರವನ್ನು ಅಲ್ಲಿಂದ ಹೊರಗೂ ಪ್ರಯೋಗಿಸಿ ನೋಡುವ ಪ್ರಯತ್ನಗಳು ಈಗಾಗಲೇ ನಡೆದಿವೆ. ‘2002 ಫೆ. 27ರಂದು ಗೋಧ್ರಾದಲ್ಲಿ ಸಬರ್ಮತಿ ರೈಲಿಗೆ ಬೆಂಕಿ ಹತ್ತಿಕೊಳ್ಳುವ 5 ದಿನಗಳ ಮೊದಲೇ ಗೋಧ್ರಾ ರೈಲು ನಿಲ್ದಾಣದಲ್ಲಿ ಮುಸ್ಲಿಮರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಬೆಳಗ್ಗೆ 3ರ ಬಳಿಕ ಗಡ್ಡದಾರಿ ಮುಸ್ಲಿಮರು ಕಾಣಿಸಿ ಕೊಳ್ಳದಂತೆ ವ್ಯವಸ್ಥೆ ಮಾಡಲಾಗಿತ್ತು.’ ಯಾಕೆಂದರೆ ಅಯೋಧ್ಯೆಯಿಂದ ಹಿಂತಿರುಗುವ ಕರಸೇವಕರು ಗಡ್ಡವನ್ನು ಕಂಡು ಉರಿದು ಬಿಟ್ಟಾರೆಂಬ ಅಂಜಿಕೆ. ‘ಆದ್ದರಿಂದಲೇ ಕರಸೇವಕರು ಇದ್ದ ಸಬರ್ಮತಿ ರೈಲಿಗೆ ಫೈಜಾಬಾದ್‍ನಲ್ಲಿ ಬುರ್ಖಾಧಾರಿ ಮಹಿಳೆಯೋರ್ವರು ಹತ್ತಿದಾಗ ಬುರ್ಖಾ ಕಳಚುವಂತೆ ಒತ್ತಡ ಹೇರಲಾಗಿತ್ತು’ (ದಿ ಹಿಂದೂ 2013 ಸೆ. 19). ಅಷ್ಟಕ್ಕೂ,
   ದಾಡಿಯನ್ನು ಕಂಡರೆ ಕರಸೇವಕರಿಗೆ ಸಿಟ್ಟಾದರೂ ಯಾಕೆ ಬರುತ್ತದೆ? ಅಯೋಧ್ಯೆಯಲ್ಲಿ ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಹಿಂತಿರುಗುವ ಕರಸೇವಕರಲ್ಲಿ ಮುಸ್ಲಿಮರನ್ನು ದ್ವೇಷಿಸುವಷ್ಟು ಅಸಹನೆಯಿರುತ್ತದೆ ಎಂದು ಒಂದು ವ್ಯವಸ್ಥೆ ನಂಬಬೇಕಾದರೆ, ಅದಕ್ಕೆ ಕಾರಣಗಳು ಏನು? ಯಾವ ಆಧಾರದಲ್ಲಿ? ‘ಎಲ್ಲ ಸಮಸ್ಯೆಗಳ ಮೂಲ ಮುಸ್ಲಿಮರೇ’ ಎಂಬ ಫ್ಯಾಸಿಸ್ಟ್ ವಿಚಾರಧಾರೆಯನ್ನು ಕರಸೇವಕರ ಸಹಿತ ಗುಜರಾತ್‍ನಾದ್ಯಂತ ಯಶಸ್ವಿಯಾಗಿ ಬಿತ್ತಲಾಗಿದೆ ಎಂಬುದರ ಸೂಚನೆಯಲ್ಲವೇ ಇದು? ಗಡ್ಡ, ಟೋಪಿ, ಬುರ್ಖಾಗಳೆಲ್ಲ ಒಂದು ಸಮುದಾಯದ ಐಡೆಂಟಿಟಿ. ಅದನ್ನು ಸಹಿಸಿಕೊಳ್ಳುವ ವಾತಾವರಣ ಒಂದು ರಾಜ್ಯದಲ್ಲಿ ಇಲ್ಲ ಎಂದರೆ ಆ ರಾಜ್ಯದಲ್ಲಿರುವ ವಿಚಾರಧಾರೆಯಾದರೂ ಯಾವುದು? ಹಾಗಂತ ಕರಸೇವಕರೇನೂ ಜರ್ಮನಿ, ಇಟಲಿಯಿಂದ ಬರುವುದಲ್ಲವಲ್ಲ. ಒಂದೇ ರಾಜ್ಯದ ಜನರ ಮಧ್ಯೆ ಈ ಮಟ್ಟದ ವಿಭಜನೆಯನ್ನು ಮಾಡಿಟ್ಟದ್ದು ಯಾವ ವಿಚಾರಧಾರೆ? ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಸಂಘ ಪರಿವಾರದ ಪ್ರಯತ್ನವನ್ನು 1990ರಲ್ಲಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‍ರು ವಿಫಲಗೊಳಿಸಿದಾಗ, ಮುಲಾಯಂರನ್ನು ಇದೇ ಬಿಜೆಪಿ, ‘ಮೌಲಾನಾ ಸಿಂಗ್’ ಎಂದು ಹಂಗಿಸಿತ್ತು. ಗುಜರಾತ್‍ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಸದ್ಭಾವನಾ ಯಾತ್ರೆಯಲ್ಲಿ ಮೌಲಾನರು ಕೊಟ್ಟ ಟೋಪಿ ಧರಿಸಲು ಮೋದಿ ನಿರಾಕರಿಸಿದ್ದರು. ಗಡ್ಡ, ಟೋಪಿ, ಮೌಲಾನರನ್ನೆಲ್ಲ ಮೋದಿ ಮತ್ತು ಬಳಗ ಧಾರಾಳ ಕುಚೇಷ್ಟೆಗೆ ಬಳಸಿಕೊಂಡಿದೆ. ವ್ಯಂಗ್ಯವಾಗಿ ಇರಿದಿದೆ. ಭಯೋತ್ಪಾದನೆಯ ಸಂಕೇತವಾಗಿ ಪ್ರತಿಬಿಂಬಿಸಿದೆ. ಭಾರತೀಯ ಮುಸ್ಲಿಮರು ಇಲ್ಲಿನ ಸಂಸ್ಕøತಿ, ಹೆಸರು, ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಭಾರತೀಯತೆ ಮೆರೆಯಬೇಕೆಂದು ಸಂಘಪರಿವಾರ ಆಗಾಗ ಆಗ್ರಹಿಸುತ್ತಲೇ ಬಂದಿದೆ. ನಿಮ್ಮ ಪೂರ್ವಜರು ಹಿಂದೂಗಳು ಎಂದೂ ಅದು ನೆನಪಿಸುತ್ತಿದೆ. ಆದರೆ ಇದೇ ಪರಿವಾರದ ಕಣ್ಮಣಿ ಮೋದಿಯು, ತನ್ನ ರಾಲಿಗಳಲ್ಲಿ ಟೋಪಿ, ಗಡ್ಡ, ಬುರ್ಖಾ ಧರಿಸಿದ ಮುಸ್ಲಿಮ್ ಸ್ತ್ರೀ-ಪುರುಷರನ್ನು ಕರೆತಂದು ಸಭೆಯ ಮುಂಭಾಗದಲ್ಲಿ ಕೂರಿಸುತ್ತಿದ್ದಾರೆ. ಇಷ್ಟಿದ್ದೂ, ಸಂಸ್ಕøತಿಯ ಬಗ್ಗೆ ಮಾತಾಡುವ ಸಂಘಪರಿವಾರ ಮೌನವಾಗಿದೆಯಲ್ಲ, ಯಾಕೆ? ‘ಬುರ್ಖಾ ಸೆಕ್ಯುಲರಿಸಮ್’ ಎಂದು ವ್ಯಂಗ್ಯವಾಡಿದ್ದ ಮೋದಿ ಇದೀಗ ಅದೇ ಬುರ್ಖಾವನ್ನು ನೆಚ್ಚಿಕೊಂಡಿರುವುದನ್ನು ಯಾಕೆ ಮೋದಿ ಬೆಂಬಲಿಗರು ಪ್ರಶ್ನಿಸುತ್ತಿಲ್ಲ? ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸುವ ಮುಲಾಯಂರನ್ನು, ಟೋಪಿ ಹಾಕಿಕೊಳ್ಳುವ ನಿತೀಶ್‍ರನ್ನು ‘ಸೋಗಲಾಡಿ ಸೆಕ್ಯುಲರಿಸ್ಟ್ ಗಳು’ ಎಂದೆಲ್ಲಾ ಮೂದಲಿಸುವ ಮೋದಿ ಬ್ರಿಗೇಡ್‍ಗಳು ಸುಮ್ಮನಿರುವುದೇಕೆ? ಒಂದು ವೇಳೆ, ‘ಬುರ್ಖಾ, ಗಡ್ಡ, ಟೋಪಿಯೊಂದಿಗೆ ರಾಲಿಗೆ ಬನ್ನಿ..’ ಎಂಬ ಕರೆಯನ್ನು ಮೋದಿಯ ಬದಲು ರಾಹುಲ್ ಗಾಂಧಿಯೋ ಸೋನಿಯಾರೋ ನೀಡುತ್ತಿದ್ದರೆ ಮೋದಿ ಅದನ್ನು ಹೇಗೆ ವ್ಯಾಖ್ಯಾ ನಿಸುತ್ತಿದ್ದರು? ಅವರ ಅಭಿಮಾನಿಗಳು ಫೇಸ್‍ಬುಕ್, ಟ್ವೀಟರ್‍ಗಳಲ್ಲಿ ಅಬ್ಬರಿಸುವ ರೀತಿ ಹೇಗಿರುತ್ತಿತ್ತು? ಮೋದಿ ಹೇಳಿದರೆ ಸಹ್ಯ ಅನ್ನಿಸುವುದೂ ಅದನ್ನೇ ರಾಹುಲ್ ಹೇಳಿದರೆ ಅಸಹ್ಯ ಅನ್ನಿಸುವುದೆಲ್ಲ ಯಾವ ಮನಸ್ಥಿತಿಯ ಪ್ರತಿಬಿಂಬ? ನಿಜವಾಗಿ, ಮೋದಿಗೆ ಬಹು ಸಂಖ್ಯಾತರನ್ನು ಬಿಟ್ಟು ಉಳಿದವರೊಂದಿಗೆ ಹೇಗೆ ಬೆರೆಯಬೇಕು ಎಂಬ ಬಗ್ಗೆಯೇ ಗೊಂದಲವಿದೆ. ಗಡ್ಡ, ಟೋಪಿ, ಪೈಜಾಮದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಎದುರಾದರೆ ಹೇಗೆ ವಂದಿಸಬೇಕು, ಎಷ್ಟು ಅಂತರ ಕಾಯ್ದುಕೊಳ್ಳಬೇಕು, ಯಾವ ಭಾಷೆಯಲ್ಲಿ ಮಾತಾಡಬೇಕು, ಎಷ್ಟು ಪರ್ಸೆಂಟ್ ನಗಬೇಕು, ಯಾವ ಭಂಗಿಯಲ್ಲಿ ಕ್ಯಾಮರಾಕ್ಕೆ ಫೋಸು ಕೊಡಬೇಕು.. ಎಂಬಿತ್ಯಾದಿಗಳು ಅವರನ್ನು ತೀವ್ರವಾಗಿ ಕಾಡುತ್ತಿರುವಂತೆ ಕಾಣುತ್ತಿದೆ. ಯಾಕೆಂದರೆ ಅವರ ವರ್ಚಸ್ಸು ಅಡಗಿರುವುದೇ ಮುಸ್ಲಿಮರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಆಧಾರದಲ್ಲಿ. ‘ಬುರ್ಖಾ ಸೆಕ್ಯುಲರಿಸಮ್’, ‘ನಾಯಿಕುನ್ನಿ’, ‘ಕ್ರಿಯೆ-ಪ್ರತಿಕ್ರಿಯೆ’..ಗಳೇ ನಿಜವಾದ ಮೋದಿ. ಅದರ ಹೊರತಾದ ಮೋದಿಯನ್ನು ಅವರ ಅಭಿಮಾನಿಗಳು ಇಷ್ಟಪಡುವ ಸಾಧ್ಯತೆ ಇಲ್ಲ. ಇದು ಮೋದಿಗೂ ಗೊತ್ತು. ಆದ್ದರಿಂದ, ಮುಖ್ಯ ಮಂತ್ರಿ ಮೋದಿಯು ಪ್ರಧಾನಮಂತ್ರಿ ಮೋದಿಯಾಗಿ ಬದಲಾದರೂ ಅವರ ಮನಃಸ್ಥಿತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಅಗತ್ಯ ಕಂಡು ಬಂದಾಗ ಕಾರಿನಡಿಗೆ 'ನಾಯಿಕುನ್ನಿ'ಯನ್ನು ಬೀಳಿಸಿ ಸಾಯಿಸಲು ಅವರು ಶ್ರಮಿಸಿಯಾರೇ ಹೊರತು ರಕ್ಷಿಸಲಲ್ಲ. ಅವರಲ್ಲಿ ತನ್ನದೇ ರಾಷ್ಟ್ರದ ಮನುಷ್ಯರ ಬಗ್ಗೆಯೇ ಗೊಂದಲಪೂರಿತ ನಿಲುವು ಇದೆ. ಅಲ್ಲದೇ ಇವರ ಅಭಿಮಾನಿಗಳೆನಿಸಿಕೊಂಡವರ ಭಾಷೆ, ಬರಹ, ಆವೇಶವನ್ನು ನೋಡಿದರಂತೂ ದಿಗಿಲಾಗುತ್ತದೆ. ಇವರನ್ನು ಮುಂದಿಟ್ಟುಕೊಂಡು ಮೋದಿಯನ್ನು ತೂಗಿದರಂತೂ, ಮೋದಿಯ ಕೈಯಲ್ಲಿ ಭಾರತವು ಹಿಟ್ಲರ್‍ನ ಜರ್ಮನಿಯಲ್ಲದೇ ಗಾಂಧೀಜಿಯ ಭಾರತವಂತೂ ಆಗಲಾರದು ಅನ್ನಿಸುತ್ತದೆ.
   ಇತ್ತೀಚೆಗೆ ಫೇಸ್‍ಬುಕ್ ಗೆಳೆಯರೊಬ್ಬರು ಒಂದು ಘಟನೆಯನ್ನು ಹೀಗೆ ಹಂಚಿಕೊಂಡಿದ್ದರು:
ನಾನು ನನ್ನ ನವಿಲು ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಫ್ಲೆಕ್ಸ್  ಪ್ರಿಂಟ್ ಹಾಕಿಸುತ್ತಿದ್ದೆ. ಒಂದಿಬ್ಬರು ಕಾಲೇಜು ಹುಡುಗರು ಮೋದಿಯ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್  ಮಾಡಿಸುತ್ತಿದ್ದರು. ಮೋದಿಯ ಜೊತೆಗೆ ಗಾಂಧೀಜಿಯ ಫೋಟೋವನ್ನೂ ಹಾಕಿಸುತ್ತಿದ್ದರು. ನಾನು ಕೇಳಿದೆ, ‘ಗಾಂಧಿ ಯಾರು ಗೊತ್ತಾ?’ ‘ಓಹ್ ಸಾರ್, ನಮ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟೋರು’ ಎಂದು ಖುಷಿಯಾಗಿ ಹೇಳಿದ ಒಬ್ಬ. ‘ಸರಿ, ಮೋದಿ ಯಾರು ಗೊತ್ತಾ’ ಅಂದೆ. ‘ಆ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂತಲೇ ಹುಟ್ಟಿರೋ ಮಹಾನ್ ವ್ಯಕ್ತಿ’ ಎಂದ. ದಂಗಾದ ನಾನು, 'ಅದು ಹೇಗೆ ಬುದ್ಧಿ ಕಲಿಸ್ತಾರಪ್ಪ ನಿಮ್ಮ ಮೋದಿ' ಅಂದರೆ, 'ನೋಡಿ ಸರ್, ಗೆದ್ದ ತಕ್ಷಣ ಯುದ್ಧ ಮಾಡೇ ಮಾಡ್ತಾರೆ..' ಅಂದ.
   ಮೋದಿಯ ಬಗ್ಗೆ ಜನರಲ್ಲಿ ಒಂದು ಬಗೆಯ ಭ್ರಮೆ, ಕುತೂಹಲ ಇದೆ. ಅವರು ಪಾಲ್ಗೊಳ್ಳುವ ಸಣ್ಣ ಸಭೆಯನ್ನೂ ಲೈವ್ ಆಗಿ ತೋರಿಸುವ ಮಾಧ್ಯಮಗಳೇ ಈ ಭ್ರಮೆ ಹರಡುವಲ್ಲಿ ಪ್ರಮುಖ ಪಾತ್ರಧಾರಿಗಳು. ಅವರನ್ನು ರಾಂಬೋ ಆಗಿ ಹೊತ್ತುಕೊಂಡು ತಿರುಗಾಡುವ ಅಭಿಮಾನಿಗಳಿಗೆ ಅವರ ಬಾಂಬೂ ಕ್ರೇಜೇ. ಹತ್ಯಾಕಾಂಡವೂ ಕ್ರೇಜೇ. ಅಷ್ಟಕ್ಕೂ, ಈ ದೇಶದಲ್ಲಿರುವುದು ಅಮೇರಿಕನ್ ಮಾದರಿಯ ಅಧ್ಯಕ್ಷೀಯ ಪದ್ಧತಿಯಲ್ಲವಲ್ಲ. ಮೋದಿ v/s ರಾಹುಲ್ ಗಾಂಧಿ ಎಂಬ ಮಾಧ್ಯಮ ಹುಟ್ಟು ಹಾಕಿರುವ ಚರ್ಚೆಯು ಅಮೇರಿಕಕ್ಕೆ ಸೂಕ್ತವೇ ಹೊರತು ಭಾರತಕ್ಕಲ್ಲ. ಆದರೆ ಮೋದಿಯನ್ನು ಪ್ರಧಾನಿ ಮಾಡಿಯೇ ಸಿದ್ಧ ಎಂದು ಹಠ ತೊಟ್ಟಿರುವ ಕಾರ್ಪೊರೇಟ್ ವಲಯವು ಪ ಕ್ಷ  ಆಧಾರಿತವಾಗಿ ಆಗಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಆಧಾರಿತವಾಗಿ ಮಾರ್ಪಡಿಸಿಬಿಟ್ಟಿವೆ. ಹಾಗಂತ, ಓರ್ವ ಪ್ರಧಾನಿಗೆ ಇರಬೇಕಾದ ಅರ್ಹತೆಗಳೇನು ಎಂದು ಚರ್ಚಿಸುವುದು ತಪ್ಪು ಎಂದಲ್ಲ. ಹಾಗೇನಾದರೂ ಗಂಭೀರ ಚರ್ಚೆಯೊಂದು ನಡೆದರೆ ಅಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಸೂಕ್ತ ಎಂದು ವ್ಯಕ್ತವಾಗಬಹುದು. ಯಾಕೆಂದರೆ, ಪ್ರಧಾನಿಗಿರುವ ಅರ್ಹತೆ ಬಾಂಬ್ ಹಾಕುವುದು, ಹತ್ಯಾಕಾಂಡ ನಡೆಸುವುದು, ಟಾಟಾ-ಅದಾನಿಗಳಿಗೆ ಭೂಮಿ ಬಿಟ್ಟು ಕೊಡುವುದೇ ಅಲ್ಲವಲ್ಲ. ರಾಜ್ಯಗಳ ಸಮಗ್ರ ಅಭಿವೃದ್ಧಿಯ ಪಟ್ಟಿಯಲ್ಲಿ ಗುಜರಾತ್‍ಗೆ 5ಕ್ಕಿಂತ ಕೆಳಗಿನ ಸ್ಥಾನವಿದೆಯೆಂಬುದು ಈಗ ಎಲ್ಲರಿಗೂ ಗೊತ್ತು. ಆದರೆ ಮೊದಲ 5 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇಲ್ಲದ ಜನಪ್ರಿಯತೆಯನ್ನು ಮೋದಿ ಮಾಧ್ಯಮಗಳ ಮುಖಾಂತರ ಪಡಕೊಂಡಿದ್ದಾರೆ. ಈ ಮಾಧ್ಯಮ ತಂತ್ರವನ್ನು ಮೋದಿ ಬಳಸಿಕೊಳ್ಳದೇ ಇರುತ್ತಿದ್ದರೆ ಇವತ್ತು ನಿತೀಶ್, ಚೌಹಾನ್, ಮಾಣಿಕ್ ಸರ್ಕಾರ್‍ಗಳೆಲ್ಲ ಮುಂಚೂಣಿ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದರು. ಅಂದಹಾಗೆ, ಕೇವಲ ಜನಪ್ರಿಯತೆಯೊಂದೇ ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಅರ್ಹತೆ ಎಂದಾದರೆ ಅಮಿತಾಬ್ ಬಚ್ಚನ್, ತೆಂಡುಲ್ಕರ್‍ಗಳೆಲ್ಲ ಅಭ್ಯರ್ಥಿಗಳಾಗುತ್ತಿದ್ದರಲ್ಲವೇ? ಜನಪ್ರಿಯತೆಗಿಂತ ಆಚೆ ಕೆಲವು ಮಾನವೀಯ ಗುಣಗಳು ಓರ್ವ ಅಭ್ಯರ್ಥಿಯಲ್ಲಿರ
ಹಿಟ್ಲರ್
ಬೇಕಾದುದು ಅತೀ ಅಗತ್ಯ. ಮೋದಿ ಈ ನಿಟ್ಟಿನಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ದಾರೆ. ಗುಜರಾತ್‍ನ ರಸ್ತೆ, ವಿದ್ಯುತ್ ಅಥವಾ ಅವರ ಮಾತುಗಾರಿಕೆಯನ್ನು ತೋರಿಸಿ ಮೋದಿಯನ್ನು ‘ಪರಿಹಾರ’ ಎಂದು ಬಿಂಬಿಸುವವರಿಗೆ ನಾವು ಗೋಧ್ರಾವನ್ನು ತೋರಿಸಬೇಕಾಗಿದೆ. ಪಶ್ಚಾತ್ತಾಪ ಪಡದ ಅವರ ಮನಸ್ಥಿತಿಯನ್ನು ಬಿಂಬಿಸಬೇಕಾಗಿದೆ. ಮುಸ್ಲಿಮರ ಕುರಿತಂತೆ ಅವರು ವ್ಯಕ್ತಪಡಿಸಿರುವ ಅಸಹ್ಯ ಪದ ಪ್ರಯೋಗಗಳತ್ತ ಗಮನ ಹರಿಸಬೇಕಾಗಿದೆ. ಯಾಕೆಂದರೆ, ಓರ್ವ ವ್ಯಕ್ತಿ 'ಪರಿಹಾರ' ಆಗುವುದು ಮತ್ತು ಆಗಬೇಕಾದದ್ದು ಆತನ ಮನುಷ್ಯ ಪರ ನಿಲುವಿಗಾಗಿ. ಮನುಷ್ಯರನ್ನು ಧರ್ಮದ ಆಧಾರದಲ್ಲಿ ಒಡೆಯುವ ಮತ್ತು ಒಂದು ವರ್ಗವನ್ನು ಮಾತ್ರ ಗೌರವಿಸುವ ವ್ಯಕ್ತಿ ಎಷ್ಟೇ ಜನಪ್ರಿಯರಾಗಿದ್ದರೂ ಆತ ‘ಪರಿಹಾರ’ ಆಗಲಾರ, ಆಗಬಾರದು.

Monday, September 16, 2013

ಇನ್ನಷ್ಟು ಠಾಕೂರ್ ಗಳ ಸೃಷ್ಟಿಗೆ ಚಿತ್ರಕತೆ ರಚಿಸುತ್ತಿದ್ದಾರಲ್ಲ, ಅವರನ್ನೇಕೆ ನಾವು ಪ್ರಶ್ನಿಸುತ್ತಿಲ್ಲ?

 ಜೇಮ್ಸ್ ಡೋಹರ್ಟಿ
ಜಾಯ್ ಡಿಮ್ಯಾಗಿಯೋ
ಅರ್ಥರ್ ಮಿಲ್ಲರ್
   ಈ ಮೂವರನ್ನು ನಟಿ ಮರ್ಲಿನ್ ಮೆನ್ರೋ ಮದುವೆಯಾದರು. ಎಲ್ಲರಿಂದಲೂ ವಿಚ್ಛೇದನ ಪಡಕೊಂಡರು. ರಾತ್ರಿ ಮಲಗುವಾಗ ಹೊಟ್ಟೆಯನ್ನು ಸವರುತ್ತಾ ಗರ್ಭದ ಕೃತಕ ಸುಖ ಅನುಭವಿಸುವಷ್ಟು ಮಗುವಿಗಾಗಿ ಹಂಬಲಿಸಿದರು. ತನ್ನನ್ನು ಅರ್ಥ ಮಾಡುವ ಪುರುಷನಿಗಾಗಿ ಆಕೆ ಹುಡುಕಾಡುವಾಗ, ಆಕೆಯ ಸೌಂದರ್ಯವನ್ನು ಆಸ್ವಾದಿಸುವುದಕ್ಕಾಗಿ ಜಗತ್ತು ಸಾಲುಗಟ್ಟಿತು. ಮೆನ್ರೋ ಒಂದು ಹಂತದ ವರೆಗೆ ಇವನ್ನೆಲ್ಲಾ ಅಸಹ್ಯಪಟ್ಟಳು. ತನ್ನ ಹಿಂದೆ ಬರುವ ಈ ಜಗತ್ತಿನ ಉದ್ದೇಶ, ಬಾಯಾರಿಕೆ ಏನೆಂಬುದು ಆಕೆಗೆ ಚೆನ್ನಾಗಿ ಅರ್ಥವಾಗತೊಡಗಿತ್ತು. ನಯಾಗರ, ಜೆಂಟಲ್‍ಮ್ಯಾನ್, ರಿವರ್ ಆಫ್ ನೋ ರಿಟರ್ನ್, ಸಮ್ ಲೈಕ್ ಇಟ್ ಹಾಟ್.. ಮುಂತಾದ ಸಿನಿಮಾಗಳಲ್ಲಿ ಆಕೆಯ ಅಭಿನಯವನ್ನು ಕಂಡು ಅಮೇರಿಕ ಅಭಿಮಾನ ಪಡುವಾಗ ಆಕೆ ಒಳಗೊಳಗೇ ಕರುಬುತ್ತಿದ್ದಳು. ವಿಶ್ವಾಸಾರ್ಹ ಸಂಗಾತಿ, ಪುಟ್ಟದೊಂದು ಮಗು, ನೆಮ್ಮದಿಯ ಬದುಕಿಗಾಗಿ ಆಕೆ ತವಕಪಡುತ್ತಿದ್ದಳು. ಒಂದು ಕಡೆ ಪ್ರಸಿದ್ಧಿಯಿದ್ದರೆ ಇನ್ನೊಂದು ಕಡೆ ಕತ್ತಲೆಯಿತ್ತು. ಅಮೇರಿಕ ಅಧ್ಯಕ್ಷ  ಕೆನಡಿಯನ್ನು ಪ್ರೀತಿಸಿದಳು. ಮದುವೆಯಾಗುವಂತೆ ಒತ್ತಾಯಿಸಿದಳು. ಅದೂ ಕೈಗೂಡದಾಗ, ಜಗತ್ತಿನ ಮನಸ್ಥಿತಿಯ ಬಗ್ಗೆಯೇ ಜಿಗುಪ್ಸೆಗೊಂಡಳು. ಈ ಜಗತ್ತು ಪ್ರೀತಿಸುವುದು ತನ್ನನ್ನಲ್ಲ, ತನ್ನ ಸೌಂದರ್ಯವನ್ನು ಎಂದು ಖಚಿತಪಡಿಸಿಕೊಂಡಳು. ಕಣ್ಣೀರಿಟ್ಟಳು.
   “..ದಯವಿಟ್ಟು ನನ್ನನ್ನು ತಮಾಷೆಯ ವಸ್ತುವಾಗಿ ನೋಡಬೇಡಿ. ನಾನು ಈ ಜಗತ್ತನ್ನು ಮತ್ತು ಬದುಕನ್ನು ಅಪಾರವಾಗಿ ಪ್ರೀತಿಸುತ್ತೇನೆ. ಆದರೆ ನನ್ನ ಬದಲು ನನ್ನ ಸೌಂದರ್ಯವನ್ನು ಮಾತ್ರ ಈ ಜಗತ್ತು ಪ್ರೀತಿಸುವುದನ್ನು ನೋಡುವಾಗ ಅಸಹ್ಯವಾಗುತ್ತದೆ. ಜನರು ನನ್ನನ್ನು ನೋಡುತ್ತಿಲ್ಲ. ನನ್ನ ದೇಹವನ್ನಷ್ಟೇ ನೋಡುತ್ತಿದ್ದಾರೆ..” ಎಂದೆಲ್ಲಾ ಹೇಳಿಕೊಂಡಳು. ಕೇವಲ ಸೆಕ್ಸ್ ಸಿಂಬಲ್ ಆಗಿ ಮಾತ್ರವೇ ಗುರುತಿಗೀಡಾಗುವುದನ್ನು ವಿರೋಧಿಸುತ್ತಲೇ ತನ್ನ 36ನೇ ವರ್ಷದಲ್ಲೇ ಆತ್ಮಹತ್ಯೆ ಮಾಡಿ ಕೊಂಡಳು. ವಿಪರ್ಯಾಸ ಏನೆಂದರೆ,
Merlyn Menro was an actress, model and ಸಿಂಗರ್, who became ಅ major sex symbol - ‘ಪ್ರಮುಖ ಸೆಕ್ಸ್ ಸಿಂಬಲ್ ಆಗಿರುವ ಮರ್ಲಿನ್ ಮೆನ್ರೋರು ಓರ್ವ ನಟಿ, ಮಾಡೆಲ್ ಮತ್ತು ಗಾಯಕಿ ಕೂಡ ಆಗಿದ್ದರು’ ಎಂದೇ ಜಗತ್ತು ಇವತ್ತು ಆಕೆಯನ್ನು ಗುರುತಿಸುತ್ತದೆ. (ವಿಕಿಪೀಡಿಯಾ).
   ಮಹಿಳೆ ಇವತ್ತು  ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಭಾಗವಾಗಿದ್ದಾಳೆ. ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟು ನೀಡಿದ ತೀರ್ಪು- ಹೆಣ್ಣು ಮತ್ತು ಗಂಡಿನ ಮನಸ್ಥಿತಿಯ ಸುತ್ತ ಮತ್ತೊಂದು ಸುತ್ತಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ‘ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧವಾಗಿ ಪರಿಗಣಿಸಬೇಕಿಲ್ಲ..’ ಎಂದು ಸುಪ್ರೀಮ್ ಕೋರ್ಟು ಇದೇ ಸಂದರ್ಭದಲ್ಲಿ ಹೇಳಿರುವುದನ್ನು ಇದರ ಜೊತೆಗಿಟ್ಟು ನೋಡಿದರೆ ಚರ್ಚೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರ ಮತ್ತು ಗಟ್ಟಿಗೊಳ್ಳುತ್ತದೆ. ಅತ್ಯಾಚಾರಕ್ಕೆ ಕೇವಲ ಅತ್ಯಾಚಾರಿಯಷ್ಟೇ ಕಾರಣವೇ? ಕಾಲಕಾಲಕ್ಕೆ ಬದಲಾಗುತ್ತಿರುವ ಕಾನೂನುಗಳು, ಜೀವನ ಕ್ರಮದ ವ್ಯಾಖ್ಯಾನಗಳಿಗೆ ಇದರಲ್ಲಿ ಯಾವ ಪಾತ್ರವೂ ಇಲ್ಲವೇ? ಹೆಣ್ಣನ್ನು ನಾವು ಇವತ್ತು ಬಿಂಬಿಸುತ್ತಿರುವ ರೀತಿ ಹೇಗಿದೆ? ಸಿನಿಮಾ ಸಹಿತ ಮಾಧ್ಯಮ ಕ್ಷೇತ್ರವು ಯಾಕಾಗಿ ಹೆಣ್ಣನ್ನು ಇಷ್ಟಪಡುತ್ತವೆ? ಇವೆಲ್ಲ ಹೆಣ್ಣನ್ನು ಮೆಚ್ಚಿಕೊಳ್ಳುವುದು ಬರೇ ಪ್ರತಿಭೆಗಾಗಿಯೋ ಅಥವಾ ಸೌಂದರ್ಯಕ್ಕಾಗಿಯೋ? ಅಪಾರ ಪ್ರತಿಭೆಯಿದ್ದೂ ಮರ್ಲಿನ್ ಮೆನ್ರೋ ಗುರುತಿಗೀಡಾದದ್ದು ಸೌಂದರ್ಯಕ್ಕಾಗಿ. ಹಾಗಂತ ಪ್ರತಿಭೆ ಚರ್ಚೆಗೆ ಒಳಗಾಗಿಲ್ಲ ಎಂದಲ್ಲ. ಆಗಿದೆ. ಆದರೆ ಮರ್ಲಿನ್ ಮೆನ್ರೊ ಅಂದರೆ ಮೊದಲು ನೆನಪಿಗೆ ಬರುವುದು ಸೌಂದರ್ಯವೇ. ಬಳಿಕ ಅಭಿನಯ. ನಟಿಯರಿಗೆ ಸಂಬಂಧಿಸಿ ಜಗತ್ತಿನ ನಿಲುವು ಬಹುತೇಕ ಇದುವೇ. ಡ್ಯಾನ್ಸು, ಡ್ರೆಸ್ಸು, ಸೌಂದರ್ಯದ ಕಾರಣಕ್ಕಾಗಿಯೇ ಓರ್ವ ನಟಿ ಚಿತ್ರದುದ್ದಕ್ಕೂ ವೀಕ್ಷಕರನ್ನು ಸೆಳೆಯುತ್ತಿರುತ್ತಾಳೆ. ಸೌಂದರ್ಯ ಪ್ರದರ್ಶನ ಮತ್ತು ಸೆಕ್ಸ್ ಅಪೀಲ್ ಇಲ್ಲದ ಪಾತ್ರಗಳು ಇರುವುದು ತೀರಾ ಕಡಿಮೆ. ಇವರಿಗೆ ಹೋಲಿಸಿದರೆ, ನಟರು ತೀರಾ ಭಿನ್ನ. ಡಯಲಾಗು, ಸಾಹಸ, ಮ್ಯಾನರಿಸಂನ ಕಾರಣಕ್ಕಾಗಿಯೇ ಪ್ರಥಮತಃ ಅವರು ನೆನಪಿಗೆ ಬರುತ್ತಾರೆ. ಹಾಗಂತ, ಹೆಣ್ಣು ಸೌಂದರ್ಯದ ವಸ್ತುವಾಗಿ ಗುರುತಿಗೀಡಾಗಿರುವುದಕ್ಕೆ ಆಕೆಯೊಬ್ಬಳೇ ಕಾರಣ ಎಂದು ಹೇಳುತ್ತಿಲ್ಲ. ಸಿನಿಮಾ ರಂಗ, ಮಾಡಲಿಂಗ್ ಅಥವಾ ಮಾಧ್ಯಮ.. ಯಾವುದೇ ಕ್ಷೇತ್ರವಿರಲಿ, ಅಲ್ಲೆಲ್ಲಾ ನಿರ್ದೇಶಕ, ನಿರ್ಮಾಪಕರು, ಬಹುತೇಕ ಪುರುಷರೇ. ಹೆಣ್ಣಿನ ಮತ್ತು ಗಂಡಿನ ಪಾತ್ರವನ್ನು ರಚಿಸುವುದೂ ಅವರೇ. ಹೆಣ್ಣು ಹೇಗಿದ್ದರೆ, ಹೇಗೆ ಅಭಿನಯಿಸಿದರೆ, ಎಷ್ಟು ಪ್ರಮಾಣದಲ್ಲಿ ಬಟ್ಟೆ ತೊಟ್ಟರೆ, ಯಾವ ಹಾಡಿಗೆ ಹೇಗೆ ಕುಣಿದರೆ ಚೆನ್ನ.. ಎಂದೆಲ್ಲಾ ತೀರ್ಮಾನಿಸುವುದೂ ಬಹುತೇಕ ಪುರುಷರೇ. ಒಂದು ರೀತಿಯಲ್ಲಿ, ಹೆಣ್ಣು ಇವತ್ತು ತನ್ನತನಕ್ಕಿಂತ ತನ್ನ ಸೌಂದರ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದ್ದರೆ, ಅದು ಸಂಪೂರ್ಣ ಆಕೆಯ ಬಯಕೆಯೆಂದು ಹೇಳುವಂತಿಲ್ಲ. ಮರ್ಲಿನ್ ಮೆನ್ರೊ ಹೇಗೆ ತನ್ನ ದೇಹ ಪ್ರದರ್ಶನವನ್ನು ಅಸಹ್ಯ ಪಟ್ಟುಕೊಂಡೂ ಆ ಕ್ಷೇತ್ರದಲ್ಲಿ ಮುಂದುವರಿದಳೋ ಅದೇ ರೀತಿಯಲ್ಲಿ ಗೊಂದಲದಲ್ಲಿರುವ ಹೆಣ್ಣು ಮಕ್ಕಳು ಖಂಡಿತ ಇವತ್ತೂ ಇರಬಹುದು. ಆದರೆ, ಅವರ ನಿಯಂತ್ರಣ ಅವರ ಕೈಯಲ್ಲಿಲ್ಲ. ಅವರು ಯಾವ ಕ್ಷೇತ್ರವನ್ನು ತನ್ನ ಪ್ರತಿಭೆ, ಕೆರಿಯರ್‍ನ ಬೆಳವಣಿಗೆಗೆ ಉತ್ತಮ ಎಂದು ಭಾವಿಸಿರುವರೋ ಆ ಕ್ಷೇತ್ರದ ತುಂಬಾ ವ್ಯಾಪಾರಿಗಳೇ ತುಂಬಿದ್ದಾರೆ. ಸೌಂದರ್ಯ ಪ್ರದರ್ಶನದ ಹೊರತು ಹೆಣ್ಣಿಗೆ ವ್ಯಕ್ತಿತ್ವವಿಲ್ಲ ಎಂದವರು ಸಾರುತ್ತಿ ದ್ದಾರೆ. ನಿಜವಾಗಿ, ಹೆಣ್ಣನ್ನು ಶೋಷಿಸುತ್ತಿರುವ ಸಿನಿಮಾ ಸಹಿತ ಎಲ್ಲ ರಂಗಗಳ ವಿರುದ್ಧವೂ ನಮ್ಮ ಮಧ್ಯೆ ಪ್ರತಿಭಟನೆಗಳು ಕಾಣಿಸಿಕೊಳ್ಳಬೇಕಿತ್ತು. ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದೆಲ್ಲಾ ಹೋರಾಟಕ್ಕಿಳಿಯುವವರು ಪುರುಷ ಶೋಷಣೆಯ ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಪುರುಷ ಸಾಮ್ರಾಜ್ಯದ ಈ ಶೋಷಣೆಗೆ ಪರ್ಯಾಯವಾಗಿ ಇನ್ನೊಂದು ರಂಗವೊಂದನ್ನು ತಯಾರಿಸಬೇಕಿತ್ತು. ಆದರೆ ಕಲೆ, ಸಂಸ್ಕøತಿ, ಮನರಂಜನೆಯನ್ನು ಪುರುಷ ಏನೆಂದು ವ್ಯಾಖ್ಯಾನಿಸುತ್ತಾನೋ ಅದನ್ನೇ ಮಹಿಳಾ ಜಗತ್ತೂ ಇವತ್ತು ಒಪ್ಪಿಕೊಳ್ಳುತ್ತಿದೆ. ಸೌಂದರ್ಯ ಪ್ರದರ್ಶನಕ್ಕೆ ಹೊರತಾದ ವ್ಯಕ್ತಿತ್ವವೊಂದು ಹೆಣ್ಣಿಗಿದೆ ಎಂಬುದನ್ನು ಸಾಬೀತುಪಡಿಸುವ ಸವಾಲನ್ನು ಸ್ವೀಕರಿಸುವುದಕ್ಕೆ ಅದು ಮುಂದಾಗುತ್ತಲೂ ಇಲ್ಲ. ಅಂದಹಾಗೆ,
   ಫೆಲಿಸಿಟೆ ಎದುರಿಸಿದ್ದೂ ಇದೇ ಸವಾಲನ್ನು.
ಫೆಲಿಸಿಟೆ ಓರ್ವ ಸಾಮಾನ್ಯ ಹೆಣ್ಣು ಮಗಳು. ಬದುಕನ್ನು ಅಪಾರವಾಗಿ ಪ್ರೀತಿಸುವ ಅವಳಿಗೆ ಸುಂದರ ಜಗತ್ತಿನ ಕನಸಿತ್ತು. ತಾನು, ತನ್ನ ಮಗು, ಪತಿ, ಮನೆ.. ಮುಂತಾದ ಚಿಕ್ಕದೊಂದು ಕನಸು ಕಟ್ಟಿಕೊಂಡು ಬದುಕಲು ಹೊರಟ  ಫೆಲಿಸಿಟೆಳ ಬದುಕಿನಲ್ಲಿ ಒಬ್ಬರ ನಂತರ ಒಬ್ಬರಂತೆ ಮೂವರು ಬಂದು ಹೋದರು. ಆದರೆ ಯಾರೂ ಆಕೆಗೆ ಕನಸಿನ ಬದುಕನ್ನು ಒದಗಿಸಲೇ ಇಲ್ಲ. ಕೊನೆಗೆ ಆಕೆ ಓರ್ವ ವಿಧವೆಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು, ಹೂದೋಟಕ್ಕೆ ನೀರುಣಿಸುವುದು.. ಹೀಗೆ ಬದುಕನ್ನು ಆನಂದಿಸಲು ಆರಂಭಿಸಿದಳು. ಸಂಬಳವನ್ನು ಆಕೆ ಎಣಿಸಿಯೇ ಇರಲಿಲ್ಲ. ಹೀಗಿರುತ್ತಾ, ಆ ವಿಧವೆಗೆ ಒಂದು ಪಕ್ಷಿ ಸಿಗುತ್ತದೆ. ಹೆಸರು ಲುಲು. ಆಕೆ ಅದನ್ನು  ಫೆಲಿಸಿಟೆಗೆ ಕೊಡುತ್ತಾಳೆ. ಲುಲು ಅಂದರೆ ಪ್ರೀತಿ, ತನ್ನತನ ಎಂದರ್ಥ. ಲುಲುವಿನಲ್ಲಿ  ಫೆಲಿಸಿಟೆ ತನ್ನತನವನ್ನು ಕಾಣತೊಡಗುತ್ತಾಳೆ. ಅದರೊಂದಿಗೆ ತನ್ನ ವ್ಯಕ್ತಿತ್ವ, ಹೆಣ್ಣಿನ ಭಾವನೆ, ಲಜ್ಜೆ, ಆಸೆ.. ಎಲ್ಲವನ್ನೂ ಹೇಳಿಕೊಳ್ಳುತ್ತಾ ಬದುಕತೊಡಗುತ್ತಾಳೆ. ಪತಿಯಂದಿರು ಕೊಡದ ಬದುಕನ್ನು ಲುಲುವಿನಲ್ಲಿ ಆಕೆ ಪಡೆಯತೊಡಗುತ್ತಾಳೆ..’
   ‘ಸಿಂಪಲ್ ಹಾರ್ಟ್’ ಎಂಬ ತಮ್ಮ ಕತೆಯೊಂದರಲ್ಲಿ ಫ್ರಾನ್ಸಿನ ಖ್ಯಾತ ಬರಹಗಾರ ಫ್ಲೋಬರ್ಟ್‍ರು ಹೆಣ್ಣನ್ನು ಹೀಗೆ
ಚಿತ್ರಿಸಿದ್ದಾರೆ. ನಿಜವಾಗಿ, ಫ್ಲೋಬರ್ಟ್ ಹೇಳಿದರೂ ಹೇಳದಿದ್ದರೂ ಹೆಣ್ಣು ಯಾವಾಗಲೂ ಭಾವುಕ ಜೀವಿ. ಲಜ್ಜೆ ಆಕೆಯ ಸೌಂದರ್ಯ. ಪುರುಷ ಜಗತ್ತಿನಿಂದ ಆಕೆ ಬಯಸುವುದು ತನ್ನ ಸೌಂದರ್ಯದ ದುರ್ಬಳಕೆಯನ್ನಲ್ಲ, ಸಂರಕ್ಷಣೆಯನ್ನು. ಆದರೆ, ಅತ್ಯಾಚಾರದ ಸುತ್ತ ಇವತ್ತು ಆಗುತ್ತಿರುವ ಚರ್ಚೆಗಳಲ್ಲಿ, ಆಧುನಿಕತೆಯ ಹೆಸರಲ್ಲಿ ಹೆಣ್ಣನ್ನು ದುರುಪಯೋಗಿಸುತ್ತಿರುವ ಪುರುಷ ಜಗತ್ತಿನ ಬಗ್ಗೆ ಯಾರೂ ಮಾತಾಡುವುದಿಲ್ಲ. ಅತ್ಯಾಚಾರವೆಂಬುದು ಕ್ರೂರ, ಅಮಾನವೀಯ, ಗಲ್ಲು ಶಿಕ್ಷೆಗೆ ಅರ್ಹ.. ಎಲ್ಲವೂ ಹೌದು. ಆದರೆ ಹೆಣ್ಣಿನ ಬಗ್ಗೆ ನಮ್ಮ ದೃಷ್ಟಿಕೋನವಾದರೂ ಹೇಗಿದೆ? ಸಿನಿಮಾ, ಮಾಡೆಲಿಂಗ್‍ನ ಹೆಸರಲ್ಲಿ ಹೆಣ್ಣು ಬೆತ್ತಲೆಗೊಳ್ಳುತ್ತಾಳಲ್ಲ, ಯಾರಿಂದ? ಹೆಣ್ಣು ಇವತ್ತು ಪ್ರವೇಶಿಸದ ಕ್ಷೇತ್ರವೇ ಇಲ್ಲ ಎಂದು ಅಭಿಮಾನ ಪಡುವಾಗಲೆಲ್ಲ, ಅವಳನ್ನು ಈ ಕ್ಷೇತ್ರಗಳು ಸುಖವಾಗಿಟ್ಟಿವೆ ಎಂದು ಎಷ್ಟರ ಮಟ್ಟಿಗೆ ಹೇಳಬಹುದು? ಆಕೆಗೆ ಪ್ರವೇಶ ಕೊಟ್ಟವರು ಅವರಿಂದ ಏನನ್ನೆಲ್ಲಾ ಕಸಿದುಕೊಂಡಿದ್ದಾರೆ? ಅವಳ ವ್ಯಕ್ತಿತ್ವವನ್ನು ಪ್ರದರ್ಶಿಸುವುದಕ್ಕೆ ಎಷ್ಟಂಶ ಅವಕಾಶ ಮಾಡಿಕೊಟ್ಟಿದ್ದಾರೆ?
   ‘ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ’ ಎಂದು ಒತ್ತಾಯಿಸುವವರಲ್ಲಿ ಅತ್ಯಾಚಾರಕ್ಕೆ ಪ್ರಚೋದನೆ ಕೊಡುವವರೂ ಇದ್ದಾರೆ ಅನ್ನುವುದೇ ಅತಿದೊಡ್ಡ ವ್ಯಂಗ್ಯ. ತಮ್ಮ ವ್ಯಾಪಾರವನ್ನು, ಬ್ಯಾಂಕ್ ಬ್ಯಾಲೆನ್ಸನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಅವರೆಲ್ಲ ಅತ್ಯಾಚಾರದಲ್ಲಿ ಪಾಲ್ಗೊಂಡೇ ಇರುತ್ತಾರೆ. ಆದರೆ ಅದಕ್ಕೆ ಅತ್ಯಾಚಾರ ಎಂಬ ಪದ ಬಳಕೆ ಆಗುತ್ತಿಲ್ಲ ಎಂಬುದಷ್ಟೇ ವ್ಯತ್ಯಾಸ. ಹೆಣ್ಣಿಗೆ ತನ್ನ ಸೌಂದರ್ಯವನ್ನೇ ವ್ಯಕ್ತಿತ್ವ ಎಂದು ಹೇಳಿಕೊಟ್ಟು, ಅದರ ಪ್ರದರ್ಶನವೇ ವ್ಯಕ್ತಿತ್ವ ಪ್ರದರ್ಶನ ಎಂದು ನಂಬಿಸಿದ್ದು ಗಲ್ಲು ಶಿಕ್ಷೆಗೊಳಗಾಗಿರುವ ಅಕ್ಷಯ್ ಠಾಕೂರ್, ವಿನಯ್, ಮುಖೇಶ್, ಪವನ್ ಖಂಡಿತ ಅಲ್ಲ. ಯುವತಿಯ ಮೇಲೆ ಕ್ರೂರವಾಗಿ ಎರಗಲು ಧೈರ್ಯ ಕೊಟ್ಟ ಮದ್ಯದ ತಯಾರಕರು ಅಥವಾ ವಿತರಕರೂ ಇವರಲ್ಲ. ಹೆಣ್ಣನ್ನು ಭೋಗದ ವಸ್ತುವಾಗಿ ಪ್ರಚಾರ ಮಾಡುತ್ತಿರುವ ಯಾವ ಮಾಧ್ಯಮದ ನಿರ್ದೇಶಕರೂ ಇವರಲ್ಲ. ಶ್ರೀಮಂತರಿಗೆ ಹೆಣ್ಣು, ಮದ್ಯ, ಲವರ್ಸ್.. ಎಂದು ಬೇಕಾದ್ದೆಲ್ಲವೂ ಸಿಗುವಂತಹ ಈ ವ್ಯವಸ್ಥೆಯ ನಿರ್ಮಾತೃಗಳೂ ಇವರಲ್ಲ. ಹಾಗಂತ ಇದರರ್ಥ ಇವರಿಗೆಲ್ಲ ಮರಣ ದಂಡನೆಯಾಗಬಾರದು ಎಂದಲ್ಲ. ಅವರೆಸಗಿದ ಕ್ರೌರ್ಯಕ್ಕೆ ಇದೂ ಕಡಿಮೆಯೇ. ಆದರೆ ಅವರನ್ನು ಖಂಡಿಸುವಾಗಲೆಲ್ಲ, ಆ ಕ್ರೌರ್ಯದಲ್ಲಿ ಅವರು ಮಾತ್ರ ಪಾಲುದಾರರಲ್ಲ ಎಂಬ ಅರಿವು ನಮ್ಮಲ್ಲಿರಬೇಕು. ಅವರನ್ನು ಆ ಅಪರಾಧಕ್ಕೆ ದೂಡಿದವರು ಆರಾಮವಾಗಿದ್ದಾರೆ. ಇನ್ನಷ್ಟು ಮುಖೇಶ್, ಪವನ್, ವಿನಯ್, ಠಾಕೂರ್‍ಗಳನ್ನು ಸೃಷ್ಟಿಸುವುದಕ್ಕೆ ಚಿತ್ರಕತೆ ರಚಿಸುತ್ತಿದ್ದಾರೆ. ಆದ್ದರಿಂದ ನಮ್ಮ ಅತ್ಯಾಚಾರದ ಚರ್ಚೆಯಲ್ಲಿ 'ಅವರ ಪಾತ್ರ' ಪ್ರಸ್ತಾಪವಾಗದ ಹೊರತು ಚರ್ಚೆ ಖಂಡಿತ ಪೂರ್ಣವಾಗಲಾರದು. ಒಪ್ಪಿ, ಬಿಡಿ.



Friday, September 13, 2013

ಹಾಲೋಕಾಸ್ಟ್ ಗೆ ಕಣ್ಣೀರಿಳಿಸುವವರೇ, ಈ ಹತ್ಯಾಕಾಂಡದ ಕುರಿತೇಕೆ ಮಾತಾಡುತ್ತಿಲ್ಲ?

ಮುಗೇನಿ
2003 ಡಿಸೆಂಬರ್ 16ರಂದು ಉಗಾಂಡದ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಡಾ| ಪೀಟರ್ ಮುಗೇನಿಯವರನ್ನು ಪೊಲೀಸರು ಬಂಧಿಸಿದರು. ಹಾಗಂತ, ಅವರೇನೂ ಕ್ರಿಮಿನಲ್ಲೋ ಮಾದಕ ವಸ್ತುಗಳ ಕಳ್ಳಸಾಗಾಟಗಾರರೋ ಆಗಿರಲಿಲ್ಲ. ಉಗಾಂಡದ ಪ್ರತಿ ಮನೆಗೂ ಮುಗೇನಿ ಎಂದರೆ ಯಾರೆಂದು ಗೊತ್ತಿತ್ತು. ಅಧ್ಯಕ್ಷ  ಯೋವರಿ ಮುಸೆವೆನಿ ಜೊತೆ ಸೇರಿ ಏಡ್ಸ್ ನ ಬಗ್ಗೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿರುವುದು, ಉಗಾಂಡದಿಂದ ಏಡ್ಸನ್ನು ನಿರ್ಮೂಲನಗೊಳಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಬಡರಾಷ್ಟ್ರಗಳ ವಿರುದ್ಧ ಪಾಶ್ಚಾತ್ಯ ಔಷಧ ಕಂಪೆನಿಗಳು ಮಾಡುತ್ತಿರುವ ಸವಾರಿಯನ್ನು ಪ್ರಶ್ನಿಸುತ್ತಿರುವುದು.. ಎಲ್ಲವೂ ಮುಗೇನಿಯವರನ್ನು ಉಗಾಂಡದ ಹೀರೋವನ್ನಾಗಿ ಮಾರ್ಪಡಿಸಿದ್ದುವು. ಉಗಾಂಡದ ಅಧ್ಯಕ್ಷ  ಮುಸೆವೆನಿಯ ಮಾತಿಗಿಂತಲೂ ಹೆಚ್ಚು ಗೌರವ ಮತ್ತು ಬೆಲೆ ಸಿಗುತ್ತಿದ್ದುದು ಮುಗೇನಿಯ ಅಭಿಪ್ರಾಯಗಳಿಗೆ. ಜಾಗತಿಕವಾಗಿಯೂ ಅವರು ಏಡ್ಸ್ ತಜ್ಞರಾಗಿ ಗುರುತಿಸಿಕೊಂಡಿದ್ದರು. ಆದ್ದರಿಂದಲೇ, ಅವರ ಬಂಧನವು ಉಗಾಂಡದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿಯೇ ಚರ್ಚೆಗೊಳಪಟ್ಟಿತು. ಉಗಾಂಡ ಸರಕಾರವು ತುರ್ತು ಸಂಪುಟ ಸಭೆಯನ್ನು ಕರೆಯಿತಲ್ಲದೇ ಮುಗೇನಿಯವರಲ್ಲಿ ವಿವರಣೆಯನ್ನು ಕೋರಿತು. ಅವರು ಹೇಳಿದರು,
   'ನಾನು ಕಾನೂನು ಉಲ್ಲಂಘಿಸಿದ್ದೇನೆಂದು ನೀವು ವಾದಿಸುವುದಾದರೆ ಹಾಗೆ ವಾದಿಸಿಕೊಳ್ಳಿ. ಆದರೆ, ಈ ಉಲ್ಲಂಘನೆಯು ನನಗಾಗಿ ಅಲ್ಲ ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತು. ನನ್ನ ಜನರು ದುಬಾರಿ ಔಷಧವನ್ನು ಖರೀದಿಸಲಾಗದೇ ಪ್ರತಿ ದಿನ ಸಾಯುತ್ತಿದ್ದಾರೆ. ಅವರಲ್ಲಿ ನಿಮ್ಮ ಗೆಳೆಯರಿರಬಹುದು, ಸಂಬಂಧಿಕರು, ಇತರರಿರಬಹುದು. ಅವರನ್ನು ರಕ್ಷಿಸುವ ಪ್ರಯತ್ನವನ್ನಷ್ಟೇ ನಾನು ಮಾಡಿದ್ದೇನೆ. ನಾನು ಭಾರತ ದಿಂದ ತಂದ ಜೆನೆರಿಕ್ ಔಷಧಗಳು ವಿಮಾನ ನಿಲ್ದಾಣದಲ್ಲಿವೆ. ಇನ್ನು ನೀವು ಏನನ್ನು ಮಾಡುತ್ತೀರೋ ಹಾಗೆ ಮಾಡಿಕೊಳ್ಳಿ. ನನ್ನ ಜನರ ಜೀವವನ್ನು ಉಳಿಸುವುದಕ್ಕೆ ಅವನ್ನು ಬಳಸುತ್ತೀರೋ ಅಥವಾ ಔಷಧ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಅವನ್ನು ನಾಶಪಡಿಸ್ತೀರೋ... ನಿಮಗೇ ಬಿಟ್ಟದ್ದು. ನಾನು ಮಾತ್ರ ಆ ಔಷಧವನ್ನು ಕಳಕೊಳ್ಳುವುದಕ್ಕಿಂತ ಬಂಧನವನ್ನು ಇಷ್ಟಪಡುತ್ತೇನೆ.'
   ನಿಜವಾಗಿ, ಆಫ್ರಿಕಾ ಖಂಡವನ್ನು ಕಾಡುತ್ತಿರುವ ಏಡ್ಸ್ ನ ಬಗ್ಗೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಹಿಪಾಕ್ರಸಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಗೊಂಡದ್ದೇ ಆಗ.
ಗ್ಲಾಕ್ಸೋಸ್ಮಿತ್ ಕ್ಲೈನ್
ರೋಚೆ
ನೊವರ್ಟೀಸ್
ಎಲಿ ಲಿಲ್ಲಿ
ಅಬ್ಬೋಟ್
   ಮುಂತಾದ ಬೃಹತ್ ಕಂಪೆನಿಗಳೇ ಇವತ್ತು ಔಷಧಗಳನ್ನು ತಯಾರಿಸುತ್ತಿರುವುದು. ಅಮೇರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಕೆಲವೇ ಕೆಲವು ರಾಷ್ಟ್ರಗಳಿಗೆ ಸೇರಿದ ಈ ಕಂಪೆನಿಗಳು ತಮ್ಮ ಔಷಧಗಳಿಗೆ ಯಾವ ಬೆಲೆಯನ್ನು ನಿಗದಿಪಡಿಸುತ್ತದೋ ಅದನ್ನು ಪ್ರಶ್ನಿಸದೇ ತೆರಬೇಕಾದ ಅನಿವಾರ್ಯತೆ ಇವತ್ತು ಎಲ್ಲರ ಮುಂದೆಯೂ ಇದೆ. ಒಂದು ಔಷಧವನ್ನು ತಯಾರಿಸುವುದಕ್ಕೆ ತಗಲುವ ಖರ್ಚೆಷ್ಟು, ಯಾವ ಮಾನದಂಡದಲ್ಲಿ ಬೆಲೆ ನಿಗದಿ ಪಡಿಸುತ್ತೀರಿ ಎಂಬೆಲ್ಲ ಪ್ರಶ್ನೆಗಳನ್ನು ನಾವು ಎತ್ತುವಂತಿಲ್ಲ. ಎತ್ತಿದರೂ ಪೇಟೆಂಟ್ ಕಾನೂನನ್ನು ಮುಂದು ಮಾಡಿ ಈ ಕಂಪೆನಿಗಳು ಜಾರಿಕೊಳ್ಳುತ್ತವೆ. ಒಂದು ವಸ್ತುವಿನ ಪೇಟೆಂಟನ್ನು ಒಂದು ಔಷಧ ಕಂಪೆನಿಯು ಪಡೆದುಕೊಂಡರೆ, ಆ ಬಳಿಕ ಆ ವಸ್ತುವಿನ ಬೆಲೆಯನ್ನು ನಿಗದಿಪಡಿಸುವ ಸಂಪೂರ್ಣ ಸ್ವಾತಂತ್ರ್ಯ ಆ ಕಂಪೆನಿಗಿದೆ. ಅಲ್ಲದೇ, ಆ ವಸ್ತುವನ್ನು ಇನ್ನಾವುದೇ ಕಂಪೆನಿ ತಯಾರಿಸುವುದಕ್ಕೂ ಸಾಧ್ಯವಿಲ್ಲ. ಇಷ್ಟಕ್ಕೂ, ಔಷಧವೆಂಬುದು ಗ್ರೈಂಡರ್, ಫ್ರಿಡ್ಜು, ಟಿ.ವಿ., ಕಂಪ್ಯೂಟರ್‍ಗಳಂತೆ ಅಲ್ಲವಲ್ಲ. ಒಂದು ಕಂಪೆನಿಯ ಟಿ.ವಿ. ಇಷ್ಟವಿಲ್ಲದಿದ್ದರೆ ಇನ್ನೊಂದು ಕಂಪೆನಿಯ ಟಿ.ವಿ.ಯನ್ನು ಖರೀದಿಸಬಹುದು ಅಥವಾ ಖರೀದಿಸದೆಯೂ ಇರಬಹುದು. ಹಾಗಂತ ಔಷಧ ಖರೀದಿಸದೇ ಇರಲು ಸಾಧ್ಯವಿಲ್ಲವಲ್ಲ. ಮುಗೇನಿ ಪ್ರಶ್ನಿಸಿದ್ದೇ ಈ ಅನ್ಯಾಯವನ್ನು.
   1980ರಲ್ಲಿ ಏಡ್ಸನ್ನು ಮೊತ್ತಮೊದಲ ಬಾರಿ ಗುರುತಿಸಿದಾಗ, ಆಫ್ರಿಕಾ ಖಂಡ ಬೆಚ್ಚಿಬಿದ್ದಿತ್ತು. ಯಾಕೆಂದರೆ, ಅವರ ಪಾಲಿಗೆ ಏಡ್ಸ್ ಎಂಬುದು ಮರಣ ದಂಡನೆಯಾಗಿತ್ತು. ಮದ್ದಿಲ್ಲ. ಏಡ್ಸನ್ನು ಗುಣಪಡಿಸುವ ಅಥವಾ ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಔಷಧವು 1996ರಲ್ಲಿ ತಯಾರಾಗುವುದರ ಮಧ್ಯೆ ಸಾವಿರಾರು ಮಂದಿ ಏಡ್ಸ್ ಗೆ ಬಲಿಯಾದರು. ಆದರೆ ಆ ಬಳಿಕವೂ ಏಡ್ಸ್ ನಿವಾರಕ ಔಷಧಗಳು ಆಫ್ರಿಕದ ಬಡರೋಗಿಗಳಿಗೆ ತಲುಪಲೇ ಇಲ್ಲ. ಯಾಕೆಂದರೆ, ಒಂದು ವರ್ಷದ ಚಿಕಿತ್ಸೆಗೆ 5 ಲಕ್ಷದಷ್ಟು ಮೊತ್ತವನ್ನು ಭರಿಸುವ ಸಾಮರ್ಥ್ಯ ವಾದರೂ ಅವರಲ್ಲಿ ಎಲ್ಲಿರುತ್ತದೆ? ಪ್ರತಿದಿನ ಆಫ್ರಿಕನ್ ಖಂಡದಲ್ಲಿ 60ರಷ್ಟು ಮಂದಿ ಸಾವಿಗೀಡಾಗುತ್ತಿದ್ದರೂ ಅಮೇರಿಕದ ಫಿಝರ್ ಕಂಪೆನಿ ಔಷಧದ ಬೆಲೆಯನ್ನು ಕಡಿಮೆಗೊಳಿಸಲು ಒಪ್ಪಲಿಲ್ಲ. ಮಾತ್ರವಲ್ಲ, ವಿಶ್ವ ವ್ಯಾಪಾರ ಸಂಸ್ಥೆಯ TIPS ಒಪ್ಪಂದವನ್ನು ಮುಂದಿಟ್ಟುಕೊಂಡು ಅಗ್ಗದ ಜೆನೆರಿಕ್ ಔಷಧಗಳನ್ನು ಆಮದು ಮಾಡಿ ಕೊಳ್ಳದಂತೆಯೂ ಅವು ತಡೆದುವು. 1999ರಲ್ಲಿ ದ. ಆಫ್ರಿಕಾದ ಸರಕಾರವು ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಆಮದು ಮಾಡಿಕೊಳ್ಳಲು ಮುಂದಾದಾಗ ಔಷಧ ಕಂಪೆನಿಗಳು ಮೊಕದ್ದಮೆ ಹೂಡಿದುವು. ಅಮೇರಿಕದ ಉಪಾಧ್ಯಕ್ಷ  ಅಲ್ ಗೋರೆಯವರು ಆರ್ಥಿಕ ನಿಷೇಧ ವಿಧಿಸುವ ಬೆದರಿಕೆ ಹಾಕಿದರು. ನಿಜವಾಗಿ ಈ ಸಂದರ್ಭದಲ್ಲಿ ಭಾರತದ ಡಾ| ಯೂಸುಫ್ ಹವಿೂದ್ ಅವರ ಸಿಪ್ಲಾ ಎಂಬ ಔಷಧ ಕಂಪೆನಿಯು ಏಡ್ಸ್ ನಿವಾರಕ ಜೆನೆರಿಕ್ ಔಷಧವನ್ನು ತಯಾರಿಸಿತ್ತು. ಬೃಹತ್ ಕಂಪೆನಿಗಳು ಸಿಪ್ಲಾದ ವಿರುದ್ಧ ಒತ್ತಡ ಹಾಕಿದುವು. ಆದರೆ ಭಾರತದಲ್ಲಿ ಜೆನೆರಿಕ್ ಔಷಧಗಳ ತಯಾರಿ ಮತ್ತು ಮಾರಾಟಕ್ಕೆ ಅವಕಾಶ ಇರುವುದರಿಂದ ಅವುಗಳ ಪ್ರಯತ್ನ ಫಲ ನೀಡಲಿಲ್ಲ. ಆದರೆ, ಭಾರತದಿಂದ ಈ ಜೆನೆರಿಕ್ ಔಷಧಗಳನ್ನು ಖರೀದಿಸದಂತೆ ಆಫ್ರಿಕಾವನ್ನು ಅವು ನಿರ್ಬಂಧಿಸಿದುವು. ಅಮೇರಿಕದ ಬೆದರಿಕೆ ಮತ್ತು ಕಂಪೆನಿಗಳ ಒತ್ತಡದಿಂದ ಬೆದರಿದ ಆಫ್ರಿಕಾದ ತಾಬೊ ಎಂಬೆಕಿ ಸರಕಾರವು, ಏಡ್ಸ್ ನಿವಾರಕ ಔಷಧವು ನಿರುಪಯುಕ್ತವಾಗಿದ್ದು ಅದರ ಸೇವನೆಯೇ ಅಪಾಯಕಾರಿ ಎಂದು ಘೋಷಿಸಿದರು. ಇದು ಆಫ್ರಿಕಾದಲ್ಲಿ ತೀವ್ರ ಚರ್ಚೆಗೆ, ಪ್ರತಿಭಟನೆಗೆ ಕಾರಣವಾಯಿತು. ಏಡ್ಸ್ ರೋಗಿಗಳ ಪರವಾಗಿ ರಚನೆಯಾಗಿದ್ದ ಟ್ರೀಟ್‍ಮೆಂಟ್ ಆ್ಯಕ್ಷನ್ ಕ್ಯಾಂಪೇನ್ ಎಂಬ ಸಂಘಟನೆಯು ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತು. HIV  ಪೀಡಿತರಾಗಿದ್ದ ಅದರ ನಾಯಕ ಝಾಕಿ ಅಚ್‍ಮಾಟ್‍ರು, ಎಲ್ಲರಿಗೂ ಅಗ್ಗದ ದರದಲ್ಲಿ ಔಷಧ ಸಿಗುವವರೆಗೆ ತಾನು ಚಿಕಿತ್ಸೆಯನ್ನೇ ಪಡಕೊಳ್ಳುವುದಿಲ್ಲ ಎಂದು ಘೋಷಿಸಿದರು. ಬ್ರೆಝಿಲ್ ಮತ್ತು ಥಾೈಲೆಂಡ್‍ಗಳಲ್ಲಿ ಸರಕಾರವೇ ಅಗ್ಗದ ಜೆನೆರಿಕ್ ಔಷಧಗಳನ್ನು ತಯಾರಿಸುತ್ತಿವೆ. ಪಾಶ್ಚಾತ್ಯ ಔಷಧ ಕಂಪೆನಿಗಳು 5 ಲಕ್ಷಕ್ಕೆ ವಿತರಿಸುವ ಅದೇ ಏಡ್ಸ್ ಔಷಧವನ್ನು ಸಿಪ್ಲಾವು 20 ಸಾವಿರ ರೂಪಾಯಿಯಲ್ಲಿ ನೀಡುತ್ತಿದೆ. ಒಂದು ವೇಳೆ ಆಫ್ರಿಕಾ ಖಂಡದಲ್ಲಿರುವವರು ಬಿಳಿಯರಾಗಿರುತ್ತಿದ್ದರೆ ಪಾಶ್ಚಾತ್ಯ ರಾಷ್ಟ್ರಗಳ ಧೋರಣೆ ಹೀಗಿರುತ್ತಿತ್ತೇ.. ಎಂದವರು ಪ್ರಶ್ನಿಸಿದರು.
   ಬಹುಶಃ ಔಷಧ ಕಂಪೆನಿಗಳ ಹಣದಾಹದ ಬಗ್ಗೆ ಚರ್ಚೆಯೊಂದು ನಡೆದದ್ದೇ ಝಾಕಿಯವರ ಈ ನಿಲುವಿನಿಂದಾಗಿ.
   ಹಾಗಂತ, ಔಷಧ ಕಂಪೆನಿಗಳು ಇವತ್ತು ಜಗತ್ತಿನ ಮುಂದೆ ಏನನ್ನು ಹೇಳುತ್ತಿವೆಯೋ ಅವೆಲ್ಲ ನಿಜವಲ್ಲ. ಔಷಧದ ಸಂಶೋಧನೆ ಮತ್ತು ಅಭಿವೃದ್ಧಿಗೆ ತಗಲುವ ಖರ್ಚಿನಿಂದಾಗಿ ಬೆಲೆಗಳು ದುಬಾರಿಯಾಗುತ್ತಿವೆ ಎಂದು ಅವು ನಂಬಿಸಲು ಯತ್ನಿಸುತ್ತಿವೆ. ನಿಜ ಏನೆಂದರೆ, ಔಷಧ ಕ್ಷೇತ್ರದಲ್ಲಿ ಇವತ್ತು ಆಗುತ್ತಿರುವ 90% ಸಂಶೋಧನೆಗಳೂ ಹಳೆಯ ಸಂಶೋಧನೆಗಳ ಆಧಾರದಲ್ಲೇ ನಡೆಯುವಂಥವು. ಅವೇನೂ ಸಂಪೂರ್ಣ ಹೊಸತಲ್ಲ. ಆದರೆ ಕಂಪೆನಿಗಳು ಇವನ್ನು ಬಚ್ಚಿಟ್ಟು ಸಂಶೋಧನೆಯ ಖರ್ಚನ್ನು ಮುಂದು ಮಾಡಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ, ಸಂಶೋಧನೆಗೆ ಕಂಪೆನಿಗಳು ಖರ್ಚು ಮಾಡುವ ಮೊತ್ತ ಬರೇ 12%. ಉಳಿದ 88% ಮೊತ್ತವನ್ನು ಸಾರ್ವಜನಿಕ ವಲಯದಿಂದ ಬಳಸಿಕೊಳ್ಳಲಾಗುತ್ತದೆ. ಈ ಕಾರಣದಿಂದಲೇ, ‘ಏಡ್ಸ್ ನಿವಾರಣೆಗೆ ಬಳಸುವ ಪ್ಲುಕೋನಝೋಲ್ ಎಂಬ ಔಷಧಿಯ ಬೆಲೆಯನ್ನು 50% ಇಳಿಸಿ ಅಥವಾ ಜೆನೆರಿಕ್ ಔಷಧದ ಆಮದಿಗೆ ಒಪ್ಪಿಕೊಳ್ಳಿ..’ ಎಂದು ಝಾಕಿ ಅಚ್‍ಮ್ಯಾಟ್‍ರು ಫಿಝರ್ ಕಂಪೆನಿಯನ್ನು ಆಗ್ರಹಿ ಸಿದ್ದು. ಅಂದಹಾಗೆ, ಜನರ ಖರೀದಿ ಸಾಮಥ್ರ್ಯಕ್ಕೆ ಪೂರಕವಾಗಿ ಔಷಧಗಳ ಬೆಲೆಗಳಿರಬೇಕು ಎಂದು ಆಗ್ರಹಿಸುವುದು ಯಾಕೆ ತಪ್ಪು ಅನ್ನಿಸಿಕೊಳ್ಳಬೇಕು? ಔಷಧವೊಂದರ ಸಂಶೋಧನೆಗೆ ಸಾಕಷ್ಟು ಶ್ರಮ, ದುಡ್ಡಿನ ಅಗತ್ಯವಿದೆಯೆಂಬುದು ನಿಜ. ಹಾಗಂತ, ಆ ಔಷಧವನ್ನು ಖರೀದಿಸುವುದಕ್ಕೆ ರೋಗಿಗಳಿಗೆ ಸಾಧ್ಯವಾಗುವುದಿಲ್ಲವೆಂದಾದರೆ ಅವು ಇದ್ದೂ ಏನು ಪ್ರಯೋಜನ? ಪೇಟೆಂಟ್ ಕಾಯ್ದೆಯನ್ನು ಬಳಸಿಕೊಂಡು ಔಷಧ ಕಂಪೆನಿಗಳು ಕುಬೇರವಾಗುವಂತೆ ನೋಡಿಕೊಳ್ಳುವ WTO, ಯಾರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ? ಜನರ ದುಡ್ಡಿನಿಂದ ಕೈಗೊಳ್ಳುವ ಸಂಶೋಧನೆಗಳು ಜನರ ಬದಲು ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆಂದರೆ ಏನೆನ್ನಬೇಕು? 2004ರಲ್ಲಿ ಪ್ರಕಟಗೊಂಡ, ದಿ ಇಕನಾಮಿಸ್ಟ್ ಪತ್ರಿಕೆಯಲ್ಲಿ, ಪಾಶ್ಚಾತ್ಯ ಔಷಧ ಕಂಪೆನಿಗಳ ಕ್ರೂರ ಮುಖವನ್ನು ಬಯಲಿಗೆಳೆಯಲಾಗಿತ್ತು. ಆಫ್ರಿಕಾ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಏಡ್ಸ್ ಔಷಧಿಯನ್ನು ಅವು ಹೇಗೆ ನಿರ್ಬಂಧಿಸಿವೆ ಎಂಬ ಬಗ್ಗೆ ಅದರಲ್ಲಿ ಬೆಳಕು ಚೆಲ್ಲಲಾಗಿತ್ತು. ಬಹುಶಃ, ಅಚ್‍ಮ್ಯಾಟ್ ಮತ್ತು ಮುಗೇನಿಯವರ ಛಲ ಬಿಡದ ಹೋರಾಟದಿಂದಾಗಿ ಯೂಸುಫ್ ಹವಿೂದ್‍ರ ಸಿಪ್ಲಾ ಕಂಪೆನಿಯು ಜಾಗತಿಕವಾಗಿಯೇ ಚರ್ಚೆಗೊಳಗಾಯಿತು. ಅತ್ಯಂತ ಅಗ್ಗದ ದರದಲ್ಲಿ ಏಡ್ಸ್ ಔಷಧವನ್ನು ತಯಾರಿಸಲು ಸಾಧ್ಯ ಎಂದವರು ಪ್ರಾಯೋ ಗಿಕವಾಗಿಯೇ ತೋರಿಸಿಕೊಟ್ಟರು. ಭಾರತ ಸರಕಾರವು 2005ರಲ್ಲಿ ಅವರಿಗೆ ಪದ್ಮಭೂಷಣವನ್ನು ಕೊಟ್ಟು ಗೌರವಿಸಿದಾಗ ಅತ್ತ ನೆಲ್ಸನ್ ಮಂಡೇಲಾ ಸಹಿತ ಹಲವಾರು ನಾಯಕರು ಅಚ್‍ಮ್ಯಾಟ್‍ರನ್ನು ಭೇಟಿಯಾದರು. ಅಚ್‍ಮ್ಯಾಟ್ ಆಫ್ರಿಕಾದ ಹೀರೋ ಅಂದರು ಮಂಡೇಲಾ. ಬಿಲ್‍ಕ್ಲಿಂಟನ್, ಫಿಝರ್ ಕಂಪೆನಿಯ ಮಾಜಿ ಉಪಾಧ್ಯಕ್ಷ  ಡಾ| ಪೀಟರ್ ಫ್ರೋಸ್ಟ್, ಡೆಸ್ಮಂಡ್ ಟುಟು ಮುಂತಾದವರೆಲ್ಲ ಔಷಧ ಕಂಪೆನಿಗಳ ಸ್ವಹಿತಾಸಕ್ತಿಯನ್ನು ಮತ್ತು ಅವು ಕರಿಯರ ಮೇಲೆ ತೋರುತ್ತಿರುವ ಅನಾದರವನ್ನು ಪ್ರಶ್ನಿಸಿದರು. ಆದರೂ,
   ಈ ಜಗತ್ತಿನಲ್ಲಿ ಹಿಟ್ಲರನ ಹಾಲೋಕಾಸ್ಟನ್ನು ವಿವರಿಸುವ ಡಾಕ್ಯುಮೆಂಟರಿ, ಸಿನಿಮಾಗಳು, ಪುಸ್ತಕಗಳು.. ಧಾರಾಳ ಇವೆ. ಅಸಂಖ್ಯ ವೇದಿಕೆಗಳಲ್ಲಿ ಆ ಬಗ್ಗೆ ಚರ್ಚಿಸಲಾಗಿದೆ. ಹಾಲೋಕಾಸ್ಟನ್ನು ನಿರಾಕರಿಸಿ ಮಾತಾಡುವುದು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ನಿಜವಾಗಿ, ಪಾಶ್ಚಾತ್ಯ ಔಷಧ ಕಂಪೆನಿಗಳು ಆಫ್ರಿಕಾದಲ್ಲಿ ನಡೆಸಿರುವ ಈ ಹತ್ಯಾಕಾಂಡಕ್ಕೆ ಹೋಲಿಸಿದರೆ ಹಾಲೋಕಾಸ್ಟ್ ಏನೇನೂ ಅಲ್ಲ. ಔಷಧ ನೀಡದೆ ಲಕ್ಷಾಂತರ ಮಂದಿಯನ್ನು ಅವು ಕೊಂದರೂ ಆ ಬಗ್ಗೆ ಯಾರೂ ಮಾತಾಡುತ್ತಿಲ್ಲ. ‘ಜೆನೋಸೈಡ್ ಬೈ ಡಿನೈಯಲ್: ಹೌ ಪ್ರೊಫಿಟೀರಿಂಗ್ ಫ್ರಮ್ HIV/ HIDS ಕಿಲ್ಲ್ಡ್ಡ್ ಮಿಲಿಯನ್ಸ್..’ ಎಂಬ ಮುಗೇನಿಯವರ ಪುಸ್ತಕವನ್ನು ಬಿಟ್ಟರೆ ಅದರ ಬಗ್ಗೆ ಬಹುತೇಕ ಯಾರೂ ಬರೆದಿಲ್ಲ. ಸಿನಿಮಾ ತಯಾರಾಗಿಲ್ಲ. ಒಂದು ವೇಳೆ ಇವೆಲ್ಲ ಬಿಳಿಯರ ನಾಡಲ್ಲಿ ನಡೆಯುತ್ತಿದ್ದರೆ..
  

ಭಾರತದ ಮೂಲದ ಮೋಹನ್ ಗ್ರೇ ಅವರ, ‘ಫೈರ್ ಇನ್ ದ ಬ್ಲಡ್’ (ರಕ್ತದಲ್ಲಿ ಬೆಂಕಿ) ಎಂಬ 84 ನಿಮಿಷಗಳ ಡಾಕ್ಯು ಮೆಂಟರಿಯನ್ನು ವೀಕ್ಷಿಸುತ್ತಾ ಇವೆಲ್ಲವನ್ನೂ ಹಂಚಿಕೊಳ್ಳ ಬೇಕೆನಿಸಿತು.