Thursday, June 27, 2019

ಕತ್ತಲ ಕೋಣೆಯಲ್ಲಿ ಕೂಡಿಟ್ಟು ಸಾಯಿಸಬೇಕಾದ ಯಾವ ಅಪರಾಧವನ್ನು ಅವರು ಮಾಡಿದ್ದರು?




ಏ.ಕೆ. ಕುಕ್ಕಿಲ

ಸೂಕ್ತ ಚಿಕಿತ್ಸೆಯನ್ನೂ ಕೊಡಿಸದೆಯೇ, ಕುಟುಂಬ ಸದಸ್ಯರ ಭೇಟಿಗೆ ಅವಕಾಶವನ್ನೂ ನೀಡದೆಯೇ ಮತ್ತು ಆರೋಪದ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಾಂವಿಧಾನಿಕ ಏರ್ಪಾಟು ಮಾಡದೆಯೇ, ಅತಿಕ್ರೂರ ಕ್ರಿಮಿನಲ್‍ಗಳನ್ನು ಕೂಡಿಡುವ ಏಕಾಂತ  ಕೋಣೆಯಲ್ಲಿ ಇರಿಸಿ, ಪ್ರತಿದಿನವೂ ಸಾಯುವಂತೆ ಮಾಡಬೇಕಾದ ಯಾವ ಅಪರಾಧವನ್ನು ಮುಹಮ್ಮದ್ ಮುರ್ಸಿ ಮಾಡಿದ್ದರು?
ಮುರ್ಸಿ ವಿರೋಧಿಗಳಲ್ಲೂ ಈ ಬಗೆಯ ಪ್ರಶ್ನೆಯಿದೆ. ಮುರ್ಸಿಯವರನ್ನು ಅಧ್ಯಕ್ಷೀಯ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು 2013 ಜುಲೈ 3 ರಂದು ಆಗಿನ ರಕ್ಷಣಾ ಸಚಿವ ಅಬ್ದುಲ್ ಫತ್ತಾಹ್ ಅಲ್ ಸೀಸಿ ಘೋಷಿಸಿದಾಗ ಅದನ್ನು  ಬೆಂಬಲಿಸಿದ್ದ ವಿಶ್ವ ವಿಖ್ಯಾತ ಅಲ್ ಅಝ್ಹರ್ ವಿಶ್ವವಿದ್ಯಾಲಯದ ಶೈಖುಲ್ ಅಝ್ಹರ್ ಅಹ್ಮದ್ ಅಲ್ ತಯ್ಯಬ್, ಕಾಪ್ಟಿಕ್ ಚರ್ಚ್‍ನ ಪೋಪ್ ಎರಡನೇ ತವಾಬ್ರೋಸ್ ಮತ್ತು ಮುಖ್ಯ ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಹಾಗೂ ಅಲ್ ನೂರ್  ಪಕ್ಷಗಳಲ್ಲೂ ಈ ಪ್ರಶ್ನೆಯಿರಬಹುದು. ಮುರ್ಸಿಯವರ ಆಡಳಿತವನ್ನು ವಿಫಲ ಎಂದು ಘೋಷಿಸುವುದು ಬೇರೆ, ಅವರನ್ನು ಅಪರಾಧಿ ಎಂದು ಘೋಷಿಸುವುದು ಬೇರೆ. ಈಜಿಪ್ಟ್ ನಲ್ಲಿ 2011ರಲ್ಲಿ ಕಾಣಿಸಿಕೊಂಡ ಕ್ರಾಂತಿಯ ಮೂಲ ಬೇಡಿಕೆಗಳಾದ  ಆಹಾರ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಮುರ್ಸಿ ವಿಫಲರಾದರು ಎಂದು ಈಜಿಪ್ಟಿಯನ್ನರಿಗೆ ಅನಿಸಿದ್ದರೆ ಅದನ್ನು ಅಪರಾಧ ಅನ್ನುವಂತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುರ್ಸಿ ಸಹಿತ ಪ್ರತಿಯೊಬ್ಬರೂ ಟೀಕೆಗೆ ಅರ್ಹರು.  ಮುರ್ಸಿ ಅಧಿಕಾರದಿಂದ ಕೆಳಗಿಳಿಯಬೇಕು ಮತ್ತು ಹೊಸ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ 22 ಮಿಲಿಯನ್ ಸಹಿ ಸಂಗ್ರಹದ ಗುರಿಯೊಂದಿಗೆ 2013 ಎಪ್ರಿಲ್‍ನಲ್ಲಿ ಈಜಿಪ್ಟ್ ನಲ್ಲಿ ತಮರೋದ್ (ಬಂಡಾಯ) ಎಂಬ ಹೆಸರಲ್ಲಿ ಪ್ರಾರಂಭವಾದ  ಚಳವಳಿಯೂ ಅಪರಾಧವಲ್ಲ. ಆದರೆ, ಈ ಚಳವಳಿಯ ಹಿಂದೆ ಸೇನೆ ಮತ್ತು ಹುಸ್ನಿ ಮುಬಾರಕ್‍ರ ಬೆಂಬಲಿಗರಿದ್ದರು ಎಂಬುದನ್ನು ಮಾತ್ರ ಇದೇ ಸ್ಫೂರ್ತಿಯಿಂದ ಸ್ವೀಕರಿಸಲು ಸಾಧ್ಯವಿಲ್ಲ. ಈ ಚಳವಳಿಯನ್ನು ಯಶಸ್ವಿಗೊಳಿಸುವುದಕ್ಕಾಗಿ ರಕ್ಷಣಾ  ಸಚಿವಾಲಯ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಯಿಂದ ಭಾರೀ ಪ್ರಮಾಣದಲ್ಲಿ ಹಣವನ್ನು ಡ್ರಾ ಮಾಡಲಾಗಿದೆ ಎಂಬ ಸುದ್ದಿಯನ್ನೂ ಸಹಜವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಸೋರಿಕೆಯಾದ ಮಿಲಿಟರಿ ಅಧಿಕಾರಿಗಳ ನಡುವಿನ ಮಾತುಕತೆಯೇ ಇದನ್ನು  ಸ್ಪಷ್ಟಪಡಿಸಿತ್ತು. 2012 ಜೂನ್ 30ರಂದು ಈಜಿಪ್ಟ್ ನ ಅಧ್ಯಕ್ಷರಾಗಿ ಆಯ್ಕೆಯಾಗಿ ಜುಲೈ 3, 2013ರಲ್ಲಿ ಪದಚ್ಯುತಗೊಳ್ಳುವ ಈ 366 ದಿನಗಳ ನಡುವೆ ಮುರ್ಸಿಯವರ ವಿರುದ್ಧ ಚಳವಳಿ, ಪ್ರತಿಭಟನೆ, ಹೋರಾಟಗಳೆಲ್ಲ ನಡೆದುದು ಮತ್ತು ಅವರನ್ನು  ಕತ್ತಲ ಕೋಣೆಗೆ ತಳ್ಳಿದುದೆಲ್ಲ ಸಹಜವೇ? 1952ರ ಜಮಾಲ್ ಅಬ್ದುಲ್ ನಾಸರ್ ರಿಂದ ತೊಡಗಿ ಹುಸ್ನಿ ಮುಬಾರಕ್‍ರ ವರೆಗೆ ಈ ದೀರ್ಘ 60 ವರ್ಷಗಳ ಸರ್ವಾಧಿಕಾರವನ್ನು ಸಹಿಸಿಕೊಂಡ ಜನರಿಗೆ ಮತ್ತು ಅವರಾರನ್ನೂ ಕತ್ತಲ ಕೋಣೆಗೆ  ತಳ್ಳದ  ವ್ಯವಸ್ಥೆಗೆ ಮುರ್ಸಿಯನ್ನು ಬರೇ 365 ದಿನಗಳಷ್ಟು ದಿನ ಒಪ್ಪಿಕೊಳ್ಳಲೂ ಸಾಧ್ಯವಾಗದೇ ಹೋದುದುಕ್ಕೆ ಅವರು ಕಾರಣರೋ ಅಥವಾ ಈ ಹಿಂದಿನ 60 ವರ್ಷಗಳ ವರೆಗೆ ಅಧಿಕಾರದ ರುಚಿಯನ್ನು ಅನುಭವಿಸಿದ ಅಧಿಕಾರಿಗಳು ಮತ್ತು ಸೇನೆಯ ಸಂಚು   ಕಾರಣವೋ?
ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದ ಇಸ್ರೇಲ್ ಮತ್ತು ಗಾಝಾದ ಹಮಾಸ್‍ನ ನಡುವೆ 2012 ನವೆಂಬರ್ 20ರಂದು ಶಾಂತಿ ಸಂಧಾನವನ್ನು ಏರ್ಪಡಿಸಿ ಘರ್ಷಣೆ ಕೊನೆಗೊಳಿಸಲು ಯಶಸ್ವಿಯಾದ ಮರುದಿನವೇ ಮುರ್ಸಿಯವರು ಅತ್ಯಂತ ಸವಾಲಿನ  ನಿರ್ಧಾರವನ್ನು ಕೈಗೊಂಡರು. ನಿಜವಾಗಿ, 2012 ಜೂನ್ 30ರಂದು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ- ಮುಬಾರಕ್ ಕಾಲದ  ಆಡಳಿತ ವ್ಯವಸ್ಥೆ, ಅವೇ ಅಧಿಕಾರಿಗಳು, ಅದೇ ನ್ಯಾಯಾಂಗ ವ್ಯವಸ್ಥೆ ಮತ್ತು ಅದೇ ಮಿಲಿಟರಿ ಮನೋಭಾವ. ಇನ್ನೊಂದು ಸಮಸ್ಯೆ ಏನೆಂದರೆ, ಸಂವಿಧಾನ. ಹಾಲಿ ಸಂವಿಧಾನವನ್ನು ಮಿಲಿಟರಿಯು 2011ರಲ್ಲೇ ಅನೂರ್ಜಿತಗೊಳಿಸಿತ್ತು. ಆದ್ದರಿಂದ  ಕ್ರಾಂತಿಯ ಬೇಡಿಕೆಯನ್ನು ಪೂರೈಸಬೇಕಾದರೆ ಮತ್ತು ತನ್ನ ಕನಸಿನ ಈಜಿಪ್ಟನ್ನು ಸಾಕಾರಗೊಳಿಸಬೇಕಾದರೆ ಒಂದೆರಡು ಧೈರ್ಯದ ನಿರ್ಧಾರವನ್ನು ಮುರ್ಸಿ ಕೈಗೊಳ್ಳಲೇ ಬೇಕಾಗಿತ್ತು. ಅಲ್ಲದೆ, 2012 ಜೂನ್‍ನಲ್ಲಿ ಹಳೆ ಪಾರ್ಲಿಮೆಂಟೂ ವಿಸರ್ಜ ನೆಗೊಂಡಿತ್ತು. ಹೊಸ ಪಾರ್ಲಿಮೆಂಟ್‍ಗೆ ಚುನಾವಣೆ ನಡೆಯಬೇಕಾದರೆ 1971ರಲ್ಲಿ ಅನ್ವರ್ ಸಾದಾತ್ ಪರಿಚಯಿಸಿದ್ದ ಮತ್ತು ಒಂದಷ್ಟು ತಿದ್ದುಪಡಿ ಗಳೊಂದಿಗೆ 2011ರ ವರೆಗೂ ಅಸ್ತಿತ್ವ ಉಳಿಸಿಕೊಂಡಿದ್ದ ಸಂವಿಧಾನಕ್ಕೆ ಸಮಗ್ರ ತಿದ್ದುಪಡಿಗಳನ್ನು  ಮಾಡಬೇಕಿತ್ತು. ಆದ್ದರಿಂದ, ಮುಬಾರಕ್ ಕಾಲದ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಅವರು ಅಧ್ಯಕ್ಷೀಯ ಶಾಸನವನ್ನು (ಸುಗ್ರೀವಾಜ್ಞೆ) ಘೋಷಿಸಿದರು. ಅದೇವೇಳೆ, ಸಂವಿಧಾನದ ತಿದ್ದುಪಡಿಗೆ ತಂಡವನ್ನೂ ರಚಿಸಿದ್ದರು. ಆದರೆ, ಅವರು ಹೊರಡಿಸಿದ  ಸುಗ್ರೀವಾಜ್ಞೆಯು ಮರುದಿನದಿಂದಲೇ ಚರ್ಚೆಗೆ ಒಳಗಾಯಿತು. ವಿವಾದಿತ ಅನಿಸಿಕೊಂಡಿತು. ನ್ಯಾಯಾಂಗ ಪ್ರಕ್ರಿಯೆ ಮತ್ತು ಇನ್ನಿತರ ಕಾನೂನುಗಳ ವ್ಯಾಪ್ತಿಯಿಂದ ಅಧ್ಯಕ್ಷರನ್ನು ಹೊರಗಿಡುವ ಮತ್ತು ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಈ  ಸುಗ್ರೀವಾಜ್ಞೆಯನ್ನು  ಸದ್ಯದ ಪರಿಸ್ಥಿತಿಯ ಅಗತ್ಯ ಎಂದು ಮುರ್ಸಿ ಸಮರ್ಥಿಸಿಕೊಂಡರಾದರೂ ವಿರೋಧಿಗಳು ಒಪ್ಪಿಕೊಳ್ಳಲಿಲ್ಲ. ಮುರ್ಸಿಯನ್ನು ‘ಆಧುನಿಕ ಫರೋವ’ ಎಂದು ನೋಬೆಲ್ ವಿಜೇತ ಅಲ್ ಬರಾದಿ ಟೀಕಿಸಿದರು. ಇದು ವಿರೋಧದ ಬೆಂಕಿಗೆ  ತುಪ್ಪ ಸುರಿದಂತಾಯಿತು. ಸಂದರ್ಭಕ್ಕಾಗಿ ಕಾದು ಕುಳಿತಿದ್ದ ಮಿಲಿಟರಿ ವ್ಯವಸ್ಥೆ ಚುರುಕಾಯಿತು. ಮುರ್ಸಿಯವರು ಅಧಿಕಾರ ವಹಿಸಿ ಕೊಂಡಾಗ ರಕ್ಷಣಾ ಸಚಿವರಾಗಿದ್ದುದು ಫೀಲ್ಡ್ ಮಾರ್ಶಲ್ ಮುರಾದ್ ಹಸನ್ ತಂತಾವಿ. ಈಜಿಪ್ಟ್ ನಲ್ಲಿ ಮಿಲಿಟರಿ  ಮುಖ್ಯಸ್ಥನೇ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಮುರ್ಸಿಯವರು ತಂತಾವಿಯ ಬದಲು ಅಬ್ದುಲ್ ಫತ್ತಾಹ್ ಅಲ್ ಸೀಸಿ ಅವರನ್ನು ಹೊಸ ರಕ್ಷಣಾ ಸಚಿವರಾಗಿ ನೇಮಿಸಿದರು. ಅಚ್ಚರಿ ಏನೆಂದರೆ, ಈ ಸುಗ್ರೀವಾಜ್ಞೆಯ ಬಳಿಕ  ಹುಟ್ಟಿಕೊಂಡ ತಮರೋದ್ ಚಳವಳಿ, ಮುರ್ಸಿಯನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ತಹ್ರೀರ್ ಚೌಕದಲ್ಲಿ ನಡೆಸಲಾದ ಬೃಹತ್ ಪ್ರತಿಭಟನೆ, ಅಧ್ಯಕ್ಷರ ಅರಮನೆಯ ಮುಂದೆ ನಡೆದ ಪ್ರತಿಭಟನೆ ಮತ್ತು ಮುಸ್ಲಿಮ್ ಬ್ರದರ್ ಹುಡ್‍ನ ಮುಖ್ಯ  ಕಚೇರಿಯ ಮೇಲೆ ನಡೆದ ದಾಳಿ ಮತ್ತು ಅಂತಿಮವಾಗಿ ಮುರ್ಸಿ ಪದಚ್ಯುತಿ.. ಈ ಎಲ್ಲದರ ಹಿಂದೆಯೂ ಕೆಲಸ ಮಾಡಿದ್ದು ಇದೇ ಅಬ್ದುಲ್ ಫತ್ತಾಹ್ ಅಲ್ ಸೀಸಿ.
2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುರ್ಸಿಯವರು ಜಯ  ಗಳಿಸಿದ್ದುದು ಸಣ್ಣ ಅಂತರದಿಂದಾಗಿತ್ತು. ಅವರ ವಿರುದ್ಧ ಸ್ಪರ್ಧಿಸಿದ್ದು- ಹುಸ್ನಿ ಮುಬಾರಕ್‍ರ ಆಪ್ತರೆಂದು ಗುರುತಿಸಿಕೊಂಡಿದ್ದ ಅಹ್ಮದ್ ಶಫೀಕ್. ಹುಸ್ನಿ ಮುಬಾರಕ್‍ರ ಸರ್ವಾಧಿಕಾರ ಕೊನೆಗೊಳ್ಳಬೇಕೆಂದು ತಹ್ರೀರ್ ಚೌಕದಲ್ಲಿ ಆಹೋರಾತ್ರಿ  ಪ್ರತಿಭಟಿಸಿದ್ದ ಅದೇ ಮಂದಿ ಅಹ್ಮದ್ ಶಫೀಕ್‍ರಿಗೆ 49.3% ಮತ ಚಲಾಯಿಸಿದ್ದರು. ಮುರ್ಸಿಗೆ 51.7%.. ಈ ಸಣ್ಣ ಅಂತರವೇ ಈಜಿಪ್ಟಿಯನ್ನರ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಮುರ್ಸಿಯವರ ವಿರುದ್ಧ 49.3% ಮಂದಿ ಮತ ಹಾಕಿರುವುದರಿಂದ  ಅಧ್ಯಕ್ಷೀಯ ಸುಗ್ರೀವಾಜ್ಞೆಯನ್ನು ಎತ್ತಿಕೊಂಡು ಮುರ್ಸಿ ವಿರೋಧಿ ಚಳವಳಿಯೊಂದನ್ನು ತೀವ್ರಗೊಳಿಸುವುದು ಮಿಲಿಟರಿ ವ್ಯವಸ್ಥೆಗೆ ಸವಾಲಿನದ್ದೇನೂ ಆಗಿರಲಿಲ್ಲ. 2013 ಜೂನ್ 30ರೊಳಗೆ ಮುರ್ಸಿ ವಿರುದ್ಧ 22 ಮಿಲಿಯನ್ ಸಹಿ ಸಂಗ್ರಹ ಮತ್ತು  ಜೂನ್ 30ರಂದು ಬೃಹತ್ ಪ್ರತಿಭಟನೆ ಹಮ್ಮಿ ಕೊಳ್ಳುವ ತಮರೋದ್ ಚಳವಳಿಯು ಇದೇ ಮಿಲಿಟರಿಯ ಕೂಸು. ಹಾಗಂತ, ಅಧ್ಯಕ್ಷರಿಗೆ ಪರಮಾಧಿಕಾರವನ್ನು ಒದಗಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಬದಲು ಒಂದಷ್ಟು ಕಾಯಬಹುದಾಗಿತ್ತು  ಎಂಬ ವಾದವಿದ್ದರೂ ಸುಗ್ರೀವಾಜ್ಞೆಯು ಅವರ ಅನಿ ವಾರ್ಯತೆಗಳಲ್ಲಿ ಒಂದಾಗಿತ್ತು ಎಂಬ ವಾದಕ್ಕೂ ಮಹತ್ವ ಇದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮುಬಾರಕ್ ಆಡಳಿತವು ನೇಮಕ ಗೊಳಿಸಿದ್ದ ಪ್ರಾಸಿಕ್ಯೂಟರನ್ನು ವಜಾಗೊಳಿಸಿ 2012, ನವೆಂಬರ್ ನಲ್ಲಿ  ತಲತ್ ಇಬ್ರಾಹೀಮ್ ಅಬ್ದುಲ್ಲರನ್ನು ಇದೇ ಸುಗ್ರೀವಾಜ್ಞೆಯನ್ನು ಬಳಸಿ ಮುರ್ಸಿ ನೇಮಕಗೊಳಿಸಿದರು. ಇದನ್ನು ನ್ಯಾಯಾಂಗ ಸ್ವಾತಂತ್ರ್ಯಕ್ಕಾದ ಧಕ್ಕೆ ಎಂದು ಕರೆಯಲಾಯಿತಲ್ಲದೆ ಇದರ ವಿರುದ್ಧ ಜನರನ್ನು ಪ್ರಚೋದಿಸಲಾಯಿತು. ಇತರ  ನ್ಯಾಯಾಲಯಗಳ ಪ್ರಾಸಿಕ್ಯೂಟರ್ ಗಳಿಂದಲೂ ವಿರೋಧ ವ್ಯಕ್ತವಾಯಿತು. ಮುಬಾರಕ್ ರನ್ನು ಬೆಂಬಲಿಸುವವರ ಹಿಡಿತ ವ್ಯವಸ್ಥೆಯ ಮೇಲೆ ಎಷ್ಟು ಬಲವಾಗಿತ್ತೆಂದರೆ, ತಲತ್ ಅಬ್ದುಲ್ಲ ಡಿಸೆಂಬರ್ ನಲ್ಲಿ ರಾಜೀನಾಮೆ ಕೊಟ್ಟರು. ಮುಬಾರಕ್ ವಿರುದ್ಧದ  ಪ್ರತಿಭಟನೆಯನ್ನು ಮಿಲಿಟರಿ ಬಲ ಪ್ರಯೋಗಿಸಿ ದಮನಿಸಿದ್ದನ್ನು, ಸುಮಾರು 800 ಮಂದಿಯ ಹತ್ಯೆ ನಡೆಸಿದ್ದನ್ನು, ಮುಬಾರಕ್‍ರ ಭ್ರಷ್ಟಾಚಾರ, ಅವರ ಅಧಿಕಾರಿಗಳ ಅವ್ಯವಹಾರ.. ಮುಂತಾದುವುಗಳನ್ನು ತನಿಖಿಸುವುದಕ್ಕಾಗಿಯೂ ಮುರ್ಸಿಗೆ ಈ  ಸುಗ್ರೀವಾಜ್ಞೆ ಅಗತ್ಯವಾಗಿತ್ತು. ಅವರು ತನಿಖೆಗೂ ಆದೇಶಿಸಿದರು. ಆದರೆ ವ್ಯವಸ್ಥೆಯ ಒಳಗೆ ಮತ್ತು ಹೊರಗಿನ ಒತ್ತಡವನ್ನು ತಾಳಲಾರದೆ ಅವರು ಎರಡೇ ತಿಂಗಳೊಳಗೆ ಈ ಸುಗ್ರೀವಾಜ್ಞೆಯನ್ನು ಹಿಂಪಡೆದರು. ಹಾಗಂತ, ಈ ಬೆಳವಣಿಗೆಯ ಬಳಿಕವೂ  ತಮರೋದ್ ಚಳವಳಿ ಮತ್ತು ಸಾರ್ವಜನಿಕ ಪ್ರತಿಭಟನೆ ನಿಲ್ಲಲಿಲ್ಲ. ಅಧ್ಯಕ್ಷ  ಹುದ್ದೆಗೆ ಮರು ಚುನಾವಣೆ ನಡೆಯಬೇಕೆಂಬ ಪ್ರಮುಖ ಬೇಡಿಕೆಗೆ ಇನ್ನಷ್ಟು ಬೇಡಿಕೆಗಳನ್ನು ಸೇರಿಸಿ ತಮರೋದ್ ಚಳವಳಿ ಮುಂದುವರಿಯಿತು.
ಅಮೇರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ 1982ರಲ್ಲಿ ಪಿಹೆಚ್‍ಡಿ ಪದವಿ ಪಡೆದ ಮತ್ತು ಅಮೇರಿಕದ ನಾರ್ಥರಿಡ್ಜ್ ನ ಕಾಲ್‍ಸ್ಟೇಟ್ ವಿವಿಯಲ್ಲಿ 3 ವರ್ಷಗಳ ವರೆಗೆ ಸಹಾಯಕ ಪ್ರೊಫೆಸರ್ ಆಗಿ ದುಡಿದ ಮುಹಮ್ಮದ್ ಮುರ್ಸಿ  ಯವರಲ್ಲಿ ರಾಜಕೀಯ ಅನುಭವ ಕಡಿಮೆಯಾಗಿದ್ದರೂ ಅವರಲ್ಲಿರುವ ಪ್ರಜಾಸತ್ತಾತ್ಮಕ ಗುಣವು ಈಜಿಪ್ಟ್ ನಲ್ಲಿ ಈ ಮೊದಲೇ ಪ್ರಶಂಸೆಗೆ ಒಳಗಾಗಿತ್ತು. ಉನ್ನತ ಶಿಕ್ಷಣ ಪಡೆದಿರುವ ಮತ್ತು ಅಮೇರಿಕದಂತಹ ರಾಷ್ಟ್ರವೊಂದರಲ್ಲಿ ಆರ್ಥಿಕ, ಸಾಮಾಜಿಕ,  ಶೈಕ್ಷಣಿಕ ವಾತಾವರಣವನ್ನು ಸ್ವತಃ ಕಂಡುಂಡ ವ್ಯಕ್ತಿ ಎಂಬ ನೆಲೆಯಲ್ಲಿ ಅವರಿಗೆ ವಿಶೇಷ ಗೌರವವೂ ಲಭ್ಯವಾಗಿತ್ತು. ಅವರೆಷ್ಟು ಪ್ರಾಮಾಣಿಕ ಮತ್ತು ಸರ್ವಾಧಿಕಾರ ವಿರೋಧಿ ಎಂಬುದಕ್ಕೆ ಅವರ ಅವಧಿಯಲ್ಲಿ ರಚಿಸಲಾದ ಸಂವಿಧಾನವೇ ಪರಮ  ಪುರಾವೆ. ಈಜಿಪ್ಟನ್ನು ಆಳಿದ ಅಬ್ದುನ್ನಾಸಿರ್, ಅನ್ವರ್ ಸಾದಾತ್ ಮತ್ತು ಹುಸ್ನಿ ಮುಬಾರಕ್‍ರ ಸರ್ವಾಧಿಕಾರದ ಕಾಲದಲ್ಲಿ ಅಧ್ಯಕ್ಷೀಯ ಹುದ್ದೆಯ ಅವಧಿ 6 ವರ್ಷಗಳಾಗಿತ್ತು. ಅಲ್ಲದೇ, ಓರ್ವ ಅಧ್ಯಕ್ಷ ಎಷ್ಟು ಬಾರಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ಅಲ್ಲದೇ, 2005ರ ವರೆಗೂ ಏಕವ್ಯಕ್ತಿ ಚುನಾವಣೆ ಎಂಬ ಪ್ರಹಸನ ಈಜಿಪ್ಟ್ ನಲ್ಲಿ ಜಾರಿಯಲ್ಲಿತ್ತು. ತನ್ನ 6 ವರ್ಷಗಳ ಅವಧಿ ಮುಗಿದ ಕೂಡಲೇ ಹುಸ್ನಿ ಮುಬಾರಕ್ ಪುನಃ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಅವರ ವಿರುದ್ಧ ಇನ್ನಾರೂ  ಸ್ಪರ್ಧಿಸುವಂತಿರಲಿಲ್ಲ. ಅಮೇರಿಕ ಸಹಿತ ಯುರೋಪಿಯನ್ ರಾಷ್ಟ್ರಗಳ ಒತ್ತಡದ ಮೇರೆಗೆ 2005ರಲ್ಲಿ ಬಹು ಅಭ್ಯರ್ಥಿಗಳ ಸ್ಪರ್ಧೆಗೆ ಮುಬಾರಕ್ ಒಪ್ಪಿಕೊಂಡರು. 2005ರಲ್ಲಿ ಮತದಾನವಾದದ್ದು ಬರೇ 23%. ಅದರಲ್ಲಿ ಮುಬಾರಕ್‍ ಗೆ ಲಭ್ಯವಾದದ್ದು  88.5%. ಆದರೆ ಮುಹಮ್ಮದ್ ಮುರ್ಸಿಯವರು ಈ ಸಂವಿಧಾನಕ್ಕೆ ಆಮೂಲಾಗ್ರ ಬದಲಾವಣೆಯನ್ನು ತಂದರು. ಅಧ್ಯಕ್ಷರ ಅಧಿಕಾರಾವಧಿಯನ್ನು 6 ವರ್ಷಗಳಿಂದ 4 ವರ್ಷಗಳಿಗೆ ಕಡಿತಗೊಳಿಸಿದರು. ಎರಡು ಅವಧಿಗೆ ಮಾತ್ರ ಓರ್ವರು ಅಧ್ಯಕ್ಷ ರಾಗಿ  ಅಧಿಕಾರ ಚಲಾಯಿಸಬಹುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ನಿಯಮವನ್ನು ಸೇರ್ಪಡೆಗೊಳಿಸಿದರು. ಮುರ್ಸಿಯವರಲ್ಲಿ ಸರ್ವಾಧಿಕಾರದ ಗುಣವಿರುತ್ತಿದ್ದರೆ ಈ ಬದಲಾವಣೆ ಸಾಧ್ಯವೇ ಇರಲಿಲ್ಲ. ಅಷ್ಟಕ್ಕೂ,
ಅಧಿಕಾರ ವಹಿಸಿಕೊಂಡ ಕೂಡಲೇ ಅಮೇರಿಕ ಅಥವಾ ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡುವ ಬದಲು ಅವರು ಅರಬ್ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಿದರು. ಸೌದಿ ಅರೇಬಿಯಾ, ಚೀನಾ, ಇರಾನ್‍ಗೆ ಭೇಟಿ  ನೀಡಿದರು. ಕತರ್ ನ ಅಮೀರ್ ಈಜಿಪ್ಟ್ ಗೆ ಭೇಟಿಕೊಟ್ಟರು. 1979ರ ಬಳಿಕ ಇರಾನ್‍ನೊಂದಿಗೆ ಕಡಿದುಕೊಂಡಿದ್ದ ರಾಜತಾಂತ್ರಿಕ ಸಂಬಂಧವನ್ನು ಮುರ್ಸಿ ಪುನರ್ ಸ್ಥಾಪಿಸಿದರು. ಇತಿಯೋಪಿಯಾದಲ್ಲಿ ನಡೆದ ಆಫ್ರಿಕನ್ ಯೂನಿಯನ್ ಸಭೆಯಲ್ಲಿ  ಭಾಗವಹಿಸಿದರು. 1995ರ ಬಳಿಕ ಆಫ್ರಿಕನ್ ಯೂನಿಯನ್ ಸಭೆಯಲ್ಲಿ ಈಜಿಪ್ಟ್ ನ ಅಧ್ಯಕ್ಷರು ಭಾಗವಹಿಸಿದ್ದು ಅದೇ ಮೊದಲು. ಅದೇವೇಳೆ, ಸಿರಿಯಾದಲ್ಲಿ ನಡೆಯುತ್ತಿದ್ದ ನರಹತ್ಯೆಗಾಗಿ ಬಶ್ಶಾರುಲ್ ಅಸದ್‍ರನ್ನು ಅವರು ಟೀಕಿಸಿದರು. 2013, ಜೂನ್‍ನಲ್ಲಿ  ಸಿರಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡರು. ವಿಚಿತ್ರ ಏನೆಂದರೆ, ಇಷ್ಟೆಲ್ಲ ನಡೆದೂ ಈಜಿಪ್ಟಿಯನ್ನರು ಮುರ್ಸಿ ವಿರುದ್ಧ ಚಳವಳಿ ನಡೆಸಿದ್ದು. ಈ ಚಳವಳಿಯಿಂದಾಗಿ ಕೈರೋ, ಪೋರ್ಟ್ ಝೈದ್, ಸುಯೇಝï ಮತ್ತು  ಇಸ್ಲಾಮಿಯಾದಲ್ಲಿ ಹಿಂಸೆ, ಸಾವು-ನೋವುಗಳಾದುವು. ಒಂದು ತಿಂಗಳು ರಾಷ್ಟ್ರೀಯ ತುರ್ತುಸ್ಥಿತಿಯನ್ನು ಘೋಷಿಸಬೇಕಾಯಿತು. ವಿರೋಧ ಪಕ್ಷವಾದ ನ್ಯಾಶನಲ್ ಸಾಲ್ವೇಶನ್ ಫ್ರಂಟ್, ಅಲ್ ನೂರ್ ಪಕ್ಷಗಳು ಪ್ರತಿಭಟನಾಕಾರರ ಧ್ವನಿಯಲ್ಲಿ  ಮಾತಾಡಿದುವು. ನಿಜವಾಗಿ, ಯಾವಾಗ ಮುರ್ಸಿಯವರು ಸುಗ್ರೀವಾಜ್ಞೆಯನ್ನು ಹೊರಡಿಸಿದರೋ ಆವಾಗಲೇ ಸೀಸಿ ನೇತೃತ್ವದ ಮಿಲಿಟರಿ ಪಡೆಗೆ ಸರಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಸಂದರ್ಭ ಸೃಷ್ಟಿಯಾಗತೊಡಗಿತು. ಅದು ಈಜಿಪ್ಟಿಯನ್ನರ ಹಿತಚಿಂತಕನ ವೇಷ ಹಾಕಿಕೊಂಡಿತು. ಕೊನೆಗೆ ಜುಲೈ 1ರಂದು ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 48 ಗಂಟೆಗಳ ಸಮಯವನ್ನು ಸೇನಾ ಕಮಾಂಡರ್ ಎಂಬ ನೆಲೆಯಲ್ಲಿ ಸೀಸಿ ನಿಗದಿಪಡಿಸಿದರು. ಜುಲೈ 3,  2013ರಂದು ಮುರ್ಸಿಯವರನ್ನು ಅವರು ಪದಚ್ಯುತಗೊಳಿಸಿದರು. ಆದರೆ, ಇದನ್ನು ಖಂಡಿಸಿ ಈಜಿಪ್ಟ್ ನಾದ್ಯಂತ ಮುಸ್ಲಿಮ್ ಬ್ರದರ್ ಹುಡ್‍ನ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಬಲಪ್ರಯೋಗದ ಮೂಲಕ ಇವೆಲ್ಲವನ್ನೂ ದಮನಿಸಿದ ಸೀಸಿ,  ಸಾವಿರಾರು ಮಂದಿಯ ಹತ್ಯೆ ನಡೆಸಿದರು. ಇದರಲ್ಲಿ ಒಂದೇ ಬಾರಿಗೆ ನಡೆಸಲಾದ 900ರಷ್ಟು ಮಂದಿಯ ಹತ್ಯೆಯೂ ಸೇರಿದೆ. ಆದ್ದರಿಂದಲೇ, ಮತ್ತೆ ಅದೇ ಪ್ರಶ್ನೆಯನ್ನು ಕೇಳಬೇಕಾಗಿದೆ,
ಕತ್ತಲ ಕೋಣೆಯಲ್ಲಿ ಕೂಡಿಟ್ಟು ಸಾಯಿಸಬೇಕಾದಂತಹ ಯಾವ ಅಪರಾಧವನ್ನು ಮುರ್ಸಿ ಎಸಗಿದ್ದರು?

ಆ ನ್ಯಾಯಾಧೀಶ ಸೇದುವ ಸಿಗರೇಟು ಅದು ಎಷ್ಟನೆಯದ್ದೋ?



Censorship through Noice
Censorship through Silence

    ಮಾಧ್ಯಮ ಜಗತ್ತನ್ನು ವ್ಯಾಖ್ಯಾನಿಸುವುದಕ್ಕೆ ಖ್ಯಾತ ತತ್ವಜ್ಞಾನಿ ಮತ್ತು ಕಾದಂಬರಿಕಾರ ಅಂಬಟೊಕ್ ಇಕೋ ಬಳಸಿದ ಎರಡು ಪದಪುಂಜಗಳು ಇವು. ಗದ್ದಲದ ಮೂಲಕ (Censorship through Noice) ಮತ್ತು ಮೌನದ ಮೂಲಕ  (Censorship through Silence) ಮಾಧ್ಯಮಗಳು ಹೇಗೆ ಸುದ್ದಿ ಸೆನ್ಸಾರ್ ನಡೆಸುತ್ತವೆ ಅನ್ನುವುದನ್ನು ದಶಕದ ಹಿಂದೆ ಅವರು ವಿವರಿಸಿದ್ದರು. ಇದನ್ನು ಎರಡು ಉದಾಹರಣೆಗಳ ಮೂಲಕ ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದು.
1. ಲಂಚ ಪ್ರಕರಣಕ್ಕೆ ಸಂಬಂಧಿಸಿ 2009ರಲ್ಲಿ ಇಟಲಿಯ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ವಿರುದ್ಧ ರೈಮಂಡೋ ಮೆಸಿಯಾನೋ ಅನ್ನುವ ನ್ಯಾಯಾಧೀಶ ತೀರ್ಪು ನೀಡುತ್ತಾರೆ. ಪ್ರಧಾನಿ ಬೆರ್ಲುಸ್ಕೋನಿಯವರು ಲಂಚ ಪ್ರಕರಣದಲ್ಲಿ ತಪ್ಪಿತಸ್ಥ  ಅನ್ನುವುದು ಸಣ್ಣ ಸುದ್ದಿಯಲ್ಲ. ಇಡೀ ಇಟಲಿಯನ್ನೇ ದಂಗು ಬಡಿಸಬಹುದಾದ ಮತ್ತು ಬೆರ್ಲುಸ್ಕೋನಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಕುತ್ತು ತರಬಹುದಾದ ಎಲ್ಲ ಸಾಮರ್ಥ್ಯವೂ ಆ ತೀರ್ಪಿಗಿತ್ತು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರ  ಧೈರ್ಯ, ಪ್ರಾಮಾಣಿಕತೆ ಮತ್ತು ನಿಷ್ಠುರ ಧೋರಣೆಗಳು ಸಾರ್ವಜನಿಕ ಚರ್ಚೆಗೊಳಗಾಗುವ ಎಲ್ಲ ಸಾಧ್ಯತೆಗಳೂ ಕಂಡು ಬಂದುವು. ಹೀಗಾಗುವುದೆಂದರೆ, ಪರೋಕ್ಷವಾಗಿ ಬೆರ್ಲುಸ್ಕೋನಿ ಬೆತ್ತಲಾಗುವುದು ಎಂದೇ ಅರ್ಥ. ಈ ತೀರ್ಪನ್ನು ಎತ್ತಿಕೊಂಡು  ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಬೆರ್ಲುಸ್ಕೋನಿಯನ್ನು ಹಣಿಯುವುದು ಶತಸಿದ್ಧವಾಗಿತ್ತು. ಇನ್ನೇನು ಬೆರ್ಲುಸ್ಕೋನಿ ಯುಗ ಮುಗಿಯಿತು ಅನ್ನುವಾಗ ಇಟಲಿಯ ಪ್ರಸಿದ್ಧ ‘Canale  5’ ಎಂಬ ಟಿ.ವಿ. ಚಾನೆಲ್‍ನಲ್ಲಿ ವೀಡಿಯೋವೊಂದು ಪ್ರಸಾರ  ವಾಯಿತು. ಇಟಲಿಯ ಮಟ್ಟಿಗೆ ಅತ್ಯಂತ ಹೆಚ್ಚು ವೀಕ್ಷಕರಿರುವ ಚಾನೆಲ್ ಇದು. ನ್ಯಾಯಾಧೀಶ ರೈಮಂಡೋ ಮೆಸಿಯಾನೋ ಅವರಿಗೆ ಸಂಬಂಧಿಸಿದ ವೀಡಿಯೋ. ಈ ನ್ಯಾಯಾಧೀಶರು ರಸ್ತೆಯಲ್ಲಿ ನಡೆಯುವುದು, ನಡೆಯುತ್ತಾ ಸಿಗರೇಟು  ಸೇದುವುದು, ಕ್ಷೌರದಂಗಡಿಗೆ ಹೋಗುವುದು ಮತ್ತು ಗಡ್ಡ ಬೋಳಿಸುವುದು ಇತ್ಯಾದಿ ಖಾಸಗಿ ವಿಷಯಗಳು ಆ ವೀಡಿಯೋದಲ್ಲಿದ್ದುವು. ಆ ವೀಡಿಯೋ ಪ್ರಸಾರದ ನಡುನಡುವೆ ಆ್ಯಂಕರ್ ಅದಕ್ಕೊಂದು ವ್ಯಾಖ್ಯಾನವನ್ನು ನೀಡುತ್ತಲೇ ಹೋದ:
‘ವೀಕ್ಷಕರೇ, ಈ ನ್ಯಾಯಾಧೀಶರಿಗೆ ಇನ್ನೊಂದು ಗುಪ್ತ ಮುಖವೂ ಇದೆ. ಇವರು ಸೇದುವ ಈ ಸಿಗರೇಟು ಎಷ್ಟನೆಯ ದಾಗಿರಬಹುದು? ಇವರು ಧರಿಸಿರುವ ಕಾಲು ಚೀಲವನ್ನೊಮ್ಮೆ ನೋಡಿ. ಎಂಥ ಸಾಕ್ಸು? ವಿಚಿತ್ರ ಅನಿಸಲ್ವೆ? ಇವರೊಬ್ಬ  ಶೋಕಿಮ್ಯಾನ್. ಇವರಿಗೆ ಶಾಂತಿ-ನೆಮ್ಮದಿ ಸಿಗುವುದು ಕ್ಷೌರದಂಗಡಿಯಲ್ಲಿ ಮಾತ್ರ...’ ಹೀಗೆ ಸಾಗಿತ್ತು ಆತನ ಒಕ್ಕಣೆ.
ಇಟಲಿಯ ನಾಗರಿಕರಲ್ಲಿ ಈ ವೀಡಿಯೋ ವಿಚಿತ್ರ ಕುತೂಹಲವನ್ನು ಹುಟ್ಟು ಹಾಕಿತು. ಅವರಿಗೆ ಆ ಬಗೆಯ ಸುದ್ದಿ ಹೊಸತು. ನ್ಯಾಯಾಧೀಶರ ಖಾಸಗಿ ವಿವರಣೆಗಳನ್ನು ಸೆರೆ ಹಿಡಿದು ಹಾಗೆ ರಸವತ್ತಾಗಿ ಪ್ರಸಾರ ಮಾಡಿದ ಮೊದಲ ಘಟನೆ ಎಂಬ  ನೆಲೆ ಯಲ್ಲಿ ಇಟಲಿಯನ್ನರನ್ನು ಅದು ಸೆಳೆಯಿತು. ಅವರ ಸಿಗರೇಟು ಚರ್ಚೆಗೊಳಗಾಯಿತು. ಸಾಕ್ಸು ಮಾತಿಗೆ ವಸ್ತುವಾಯಿತು. ಅವರ ಇನ್ನಿತರ ಖಾಸಗಿ ಪ್ರಸಂಗಗಳ ಬಗ್ಗೆ ಸಾಮಾನ್ಯ ಜನರಲ್ಲಿ ಕುತೂಹಲ ಹೆಚ್ಚಿತು. ಜನರು ನ್ಯಾಯಾಧೀಶರ ಬಗ್ಗೆ  ವಿಧವಿಧವಾಗಿ ಮಾತಾಡತೊಡಗಿದರು. ಎಲ್ಲಿಯವರೆಗೆಂದರೆ, ಪ್ರತಿಪಕ್ಷಗಳೇ ಅದರ ವಿರುದ್ಧ ಮಾತಾಡಬೇಕಾಯಿತು. ನ್ಯಾಯಾಧೀಶರು ಆ ವೀಡಿಯೋ ಪ್ರಸಾರವನ್ನು ಖಂಡಿಸಿದರು. ಪ್ರತಿಪಕ್ಷಗಳೂ ಖಂಡಿಸಿದುವು. ತಮಾಷೆ ಏನೆಂದರೆ, ಈ ಖಂಡನೆಯೇ  ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಯಿತು. ಗದ್ದಲದ ನಡುವೆ ಬೆರ್ಲುಸ್ಕೋನಿಯ ಲಂಚ ಪ್ರಕರಣ ಮರೆಗೆ ಸರಿಯಿತು.
2. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಯ ಭರ್ಜರಿ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನೆರೆಕರೆ ದೇಶದ ಮುಖಂಡರು ಅದರಲ್ಲಿ ಭಾಗವಹಿಸಿದರು.  ಈ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಗಮನ ಸೆಳೆದವರಲ್ಲಿ ಒಬ್ಬರು- ಒಡಿಸ್ಸಾದ 64 ವರ್ಷದ ಪ್ರತಾಪ್ ಚಂದ್ರ ಸಾರಂಗಿ. ಬಿಳಿ ಕುರ್ತಾ ಮತ್ತು ಬಾಚದ ಕೂದಲಿನೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅವರನ್ನು ಉಳಿದ ಸಂಸದರು ಮತ್ತು  ಅತಿಥಿಗಳು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಟೈಮ್ಸ್ ನೌ ಚಾನೆಲ್‍ನ ವೆಬ್‍ಸೈಟ್‍ನಲ್ಲಿ ಅವರ ಬಗ್ಗೆ ಬರಹ ಪ್ರಕಟವಾಗಿತ್ತು. ಅವರು ಸಂಚಾರಕ್ಕೆ ಸೈಕಲನ್ನು ಉಪಯೋಗಿಸುವುದು, ಸಂಸ್ಕೃತ  ಭಾಷೆಯಲ್ಲಿ ಸಂವಹನ ನಡೆಸುವುದು ಹಾಗೂ  ವೇಷ ಭೂಷಣ ಮತ್ತು ಸಂಪತ್ತಿನಲ್ಲೂ ಸರಳವಾಗಿರುವುದನ್ನು ಆ ಬರಹದಲ್ಲಿ ವಿಶೇಷ ಒತ್ತು ಕೊಟ್ಟು ಹೇಳಲಾಗಿತ್ತು. ಅವರಲ್ಲಿ ಬರೇ 13 ಲಕ್ಷ  ರೂಪಾಯಿಯಷ್ಟೇ ಇದೆ ಅನ್ನುವುದನ್ನು ಗಮನ ಸೆಳೆಯುವ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರು  ದೆಹಲಿಯಲ್ಲಿ ಸೈಕಲ್ ಮೂಲಕ ಸಂಚರಿಸುವುದನ್ನು ನೀವು ನೋಡಿದರೆ ಅಚ್ಚರಿಗೆ ಒಳಗಾಗುವಿರಿ ಎಂದೂ ಹೇಳಲಾಗಿತ್ತು.’
ಹಾಗಂತ, ಈ ವಿವರಣೆಗಳೆಲ್ಲ ಸುಳ್ಳು ಎಂದಲ್ಲ, ನಿಜವೇ. ಮಾತ್ರವಲ್ಲ, ಅವರ ಸರಳತನ, ಕನಿಷ್ಠ ಆದಾಯ, ಸೈಕಲ್ ಸವಾರಿ, ಬಿಳಿ ಕುರ್ತಾ-ಪೈಜಾಮ, ಸಂಸ್ಕೃತ ಭಾಷೆಯಲ್ಲಿ ಸಂವಹನ ಇತ್ಯಾದಿ ಇತ್ಯಾದಿಗಳ ಬಗ್ಗೆ ಸುದ್ದಿ ತಯಾರಿಸುವುದು ಅಪರಾಧವೂ ಅಲ್ಲ. ಆದರೆ, ಈ ಸುದ್ದಿ ತಯಾರಿಸುವ ಭರಾಟೆಯಲ್ಲಿ ಸುದ್ದಿಯಾಗಲೇಬೇಕಾದ ಪ್ರಮುಖ ವಿಷಯಗಳನ್ನು ಅಡಗಿಸಬಾರದಲ್ಲ. ಸಾರಂಗಿಯ ವಿಷಯದಲ್ಲಿ ಟೈಮ್ಸ್ ನೌ ಎಂದಲ್ಲ, ಹಲವು ರಾಷ್ಟ್ರಮಟ್ಟದ ಪತ್ರಿಕೆಗಳು ಮತ್ತು ಚಾನೆಲ್‍ಗಳು  ದಂಗುಬಡಿಸುವ ಸತ್ಯವನ್ನು ಮುಚ್ಚಿಟ್ಟವು ಅಥವಾ ಮರೆತಂತೆ ನಟಿಸಿದುವು. 1999ರಲ್ಲಿ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ಕೊಂದ ಪ್ರಕರಣ ಒಡಿಸ್ಸಾದಲ್ಲಿ ನಡೆದಿತ್ತು. ಜೀಪಿನಲ್ಲಿ ಮಲಗಿದ್ದ ಈ ಮೂವರನ್ನೂ ಬೆಂಕಿ  ಹಚ್ಚಿ ಸಾಯಿಸಲಾಗಿತ್ತು. ಈ ಕೃತ್ಯದ ಹೊಣೆಯನ್ನು ಬಜರಂಗ ದಳದ ಮೇಲೆ ಹೊರಿಸಲಾಗಿತ್ತು. ದಾರಾಸಿಂಗ್ ಅನ್ನುವ ವ್ಯಕ್ತಿಯನ್ನು ಕೃತ್ಯದ ರೂವಾರಿಯೆಂದು ನ್ಯಾಯಾಲಯ ಘೋಷಿಸಿದ್ದು ಮತ್ತು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದೂ ನಡೆಯಿತು.  ಈ ಕೃತ್ಯದ ಸಮಯದಲ್ಲಿ ಬಜರಂಗದಳದ ಸ್ಥಾನೀಯ ಸಂಚಾಲಕರಾಗಿದ್ದುದು ಇದೇ ಸಾರಂಗಿ. 2007ರಲ್ಲಿ ಒಡಿಸ್ಸಾ ವಿಧಾನಸಭೆಯ ಮೇಲೆ ದಾಳಿ ನಡೆಸಿದ ಗುಂಪಿಗೆ ನೇತೃತ್ವ ನೀಡಿದ ಆರೋಪವೂ ಸಾರಂಗಿಯ ಮೇಲಿದೆ. ಸದ್ಯ ಅವರ ಮೇಲೆ 7  ಕ್ರಿಮಿನಲ್ ಕೇಸುಗಳಿವೆ. ಧರ್ಮಗಳ ನಡುವೆ ದ್ವೇಷ ಹರಡಿದ್ದು, ಶಾಂತಿ ಸುವ್ಯವಸ್ಥೆಯನ್ನು ಕೆಡಿಸಿದ್ದು ಇತ್ಯಾದಿ ಆರೋಪಗಳೂ ಇದರಲ್ಲಿ ಸೇರಿವೆ. ಅಂದಹಾಗೆ, ಸಾರಂಗಿಯವರು ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ನಿಜ.  ಆದರೆ, ಅವರನ್ನು ಕೇಂದ್ರೀಕರಿಸಿ ಸುದ್ದಿ ತಯಾರಿಸುವಾಗ ಅವರ ಸುತ್ತ ಹರಡಿಕೊಂಡಿರುವ ಈ ಕತ್ತಲ ಸ್ಥಿತಿಯನ್ನೂ ಪರಿಗಣಿಸಬೇಕಲ್ಲ. ಸುದ್ದಿಯು ಸುದ್ದಿ ತಯಾರಕನ ಮನಸ್ಥಿತಿಯಂತೆ ಅಥವಾ ಸುದ್ದಿ  ಸಂಸ್ಥೆಯ ಬಯಕೆಯಂತೆ ರಚಿತವಾಗಬಾರದಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸದೇ ತಯಾರಿಸುವ ಸುದ್ದಿಯನ್ನು ರದ್ದಿ ಎಂದಲ್ಲದೇ ಇನ್ನೇನೆಂದೂ ಕರೆಯಬೇಕು? ಅಂದಹಾಗೆ,
ಗಂಭೀರ ವಿಷಯವೊಂದು ಚರ್ಚೆಗೆ ಒಳಗಾಗುತ್ತದೆ ಎಂಬ ಸನ್ನಿವೇಶ ನಿರ್ಮಾಣಗೊಂಡಾಗ ಅಗಂಭೀರ ವಿಷಯವನ್ನು ಮುನ್ನೆಲೆಗೆ ತಂದು, ಅದರ ಸುತ್ತ ಗದ್ದಲವನ್ನು ಎಬ್ಬಿಸಿ, ಗಂಭೀರ ವಿಷಯವನ್ನು ಮರೆಗೆ ಸರಿಸುವ ಮಾಧ್ಯಮ ನೀತಿಗೆ  (Censorship through Noice) ಇಟಲಿಯ ಬೆರ್ಲುಸ್ಕೋನಿ ಪ್ರಕರಣ ಒಂದು ಉದಾಹರಣೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮಲ್ಲೂ ಈ ಬಗೆಯ ಗದ್ದಲದ ಪತ್ರಿಕೋದ್ಯಮ ಹೆಜ್ಜೆ ಹೆಜ್ಜೆಗೂ ಕಾಣಸಿಕ್ಕಿತು. ಝೀ ನ್ಯೂಸ್,  ಟೈಮ್ಸ್ ನೌ, ಎ.ಬಿ.ಪಿ. ನ್ಯೂಸ್, ನ್ಯೂಸ್ ನೇಷನ್ ಇತ್ಯಾದಿ ಟಿ.ವಿ. ಚಾನೆಲ್‍ಗಳು ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ಪ್ರಸಾರ ಮಾಡಿದುವು. ವಿಶೇಷ ಏನೆಂದರೆ, ಈ ಸಂದರ್ಶನವು ಬಹುತೇಕ  ರಾಜಕೀಯ ರಹಿತ ವಿಷಯಗಳ ಮೇಲೆ ನಡೆದಿತ್ತು. ಪ್ರಧಾನಿಯವರ ಆಹಾರ ಕ್ರಮಗಳ ಕುರಿತು, ಅವರ ವಸ್ತ್ರ ವಿನ್ಯಾಸದ ಕುರಿತು, ಬಾಲ್ಯದ ಕುರಿತು, ಆ ಬಾಲ್ಯದಲ್ಲಿ ತಿಂದ ಹಣ್ಣುಗಳ ಕುರಿತು... ಹೀಗೆ ಸಾಗಿತ್ತು ಸಂದರ್ಶನ. ನಿಜವಾಗಿ, ಚುನಾವಣೆ  ನಡೆಯುವುದು ಮತ್ತು ನಡೆಯಬೇಕಾಗಿರುವುದು ಜನರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ. ಚುನಾವಣೆಯೆಂಬುದೇ ಪಕ್ಕಾ ರಾಜಕೀಯ. ರಾಜಕೀಯ ರಹಿತ ಚುನಾವಣೆ ಎಂಬುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಧ್ಯವೂ ಇಲ್ಲ. ಇಂಥ ಸ್ಥಿತಿಯಲ್ಲಿ  ಮುಖ್ಯ ವಾಹಿನಿಯ ಟಿ.ವಿ. ಚಾನೆಲ್‍ಗಳು ರಾಜಕೀಯ ರಹಿತ ಸಂದರ್ಶನ ನಡೆಸುವುದೆಂದರೆ, ಅದರಿಂದ ನಾಗರಿಕರಿಗಾಗುವ ಪ್ರಯೋಜನಗಳೇನು? ಪ್ರಧಾನಿಯವರ ಉಡುಪು ವಿನ್ಯಾಸ ಮತ್ತು ಆಹಾರ ಕ್ರಮಗಳನ್ನು ಅರಿತುಕೊಳ್ಳುವುದು ಚುನಾವಣೆಯ  ಸಮಯದಲ್ಲಿ ಯಾಕೆ ಮುಖ್ಯವಾಗಬೇಕು? ಅವರ ಬಾಲ್ಯ, ಯೌವನ, ಸಾಹಿತ್ಯಾಭಿರುಚಿ, ಹವ್ಯಾಸಗಳು ಮುಂತಾದ ಖಾಸಗಿ ವಿಚಾರಗಳು- ಯಾರಿಗೆ ಓಟು ಹಾಕಬೇಕು ಎಂದು ಮತದಾರ ತೀರ್ಮಾನಿಸುವುದಕ್ಕೆ ಮಾನದಂಡಗಳೇ? ಜನರ ಮತವನ್ನು  ಇಂಥವು ನಿರ್ಧರಿಸಬೇಕೇ? ರಫೇಲ್ ವ್ಯವಹಾರದಲ್ಲಾಗಿರಬಹುದಾದ ಭ್ರಷ್ಟಾಚಾರದ ಬಗ್ಗೆ ನಾಗರಿಕರಲ್ಲಿ ಕುತೂಹಲ ಸೃಷ್ಟಿಯಾಗುವ ಸಮಯದಲ್ಲೇ  ನಕ್ಸಲ್ ಬೆದರಿಕೆಯ ಕುರಿತೋ ಕ್ಯಾಂಪಸ್ ರಾಜಕೀಯದ ಕುರಿತೋ ಅಥವಾ ಕಾಶ್ಮೀರ ಮತ್ತು  ಪಾಕಿಸ್ತಾನದ ಕುರಿತೋ ಗದ್ದಲ ಎಬ್ಬಿಸುವುದು ಯಾವ ಬಗೆಯ ಮಾಧ್ಯಮ ನೀತಿ? ಬಹು ಮಹತ್ವಪೂರ್ಣವಾದ ವಿಷಯವೊಂದು ಗಂಭೀರ ಸಂವಾದವನ್ನು ಬಯಸುತ್ತಿರುವ ಸಮಯದಲ್ಲೇ  ಆ ಬಗ್ಗೆ ಮೌನ ವಹಿಸುವುದು ಮತ್ತು ಮಹತ್ವ  ಪೂರ್ಣವಲ್ಲದ ವಿಷಯವನ್ನು ಮುನ್ನೆಲೆಗೆ ತಂದು ಚರ್ಚೆ ಹುಟ್ಟು ಹಾಕುವುದು (Censorship through Silence) ಯಾಕಾಗಿ? ಕನ್ನಡದ ಪ್ರಮುಖ ಟಿ.ವಿ. ಚಾನೆಲ್‍ಗಳೂ ಈ ಆರೋಪದಿಂದ ಹೊರಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸಿದ್ದ ಇವು, ರಾಜ್ಯದ ಮೈತ್ರಿ ಸರಕಾರದ ಬಗ್ಗೆ ಉತ್ಪ್ರೇಕ್ಷಿತ ಮತ್ತು ಅತಿ ವೈಭವೀಕರಣದ ಸುದ್ದಿಗಳನ್ನು ಪ್ರಸಾರ ಮಾಡಿದುವು.  ಕಳೆದ ವಿಧಾನಸಭಾ ಚುನಾವಣೆಯಲ್ಲಂತೂ  ಸಿದ್ದರಾಮಯ್ಯನವರ ಊಟದ ಮೆನುವನ್ನೂ ಭೂಕಂಪದ ರೀತಿಯಲ್ಲಿ ಉತ್ಪ್ರೇಕ್ಷಿತ ವ್ಯಾಖ್ಯಾನಕ್ಕೆ ಒಳಪಡಿಸಿದ್ದುವು.
ಭಾರತದಲ್ಲಿ ಸದ್ಯ 1.2 ಲಕ್ಷ ಮುದ್ರಣ ಪ್ರಕಾಶನಾಲಯಗಳಿವೆ. 550 ಎಫ್.ಎಂ. ರೇಡಿಯೋ ಸ್ಟೇಷನ್‍ಗಳು ಮತ್ತು 880ರಷ್ಟು ಸೆಟ್‍ಲೈಟ್ ಟಿ.ವಿ. ಚಾನೆಲ್‍ಗಳಿವೆ. ಇವುಗಳಲ್ಲಿ ನ್ಯೂಸ್ ಚಾನೆಲ್ ಗಳ ಸಂಖ್ಯೆಯೇ 380. ವಿಷಾದ ಏನೆಂದರೆ, ಇಲ್ಲಿ  ತಯಾರಾಗುವ ಸುದ್ದಿಗಳೆಲ್ಲ ಬಹಳ ವಸ್ತುನಿಷ್ಠ, ಪ್ರಾಮಾಣಿಕ, ಬಹುತ್ವಪರ ಮತ್ತು ನ್ಯಾಯಪರ ಎಂದು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ದೆಹಲಿಯ  ಡಿಜಿಟಲ್ ಇಂಡಿಯಾ ಕಂಪೆನಿಯಾದ DataLEADS  ತನ್ನ ಸಮೀಕ್ಷೆ ಮತ್ತು ಸಂಶೋಧನೆಗಳ ಮೂಲಕ ಹೇಳುತ್ತಿದೆ. ರೇಡಿಯೋ ಸುದ್ದಿಗಳಲ್ಲಿ ಸರಕಾರದ ಪ್ರಭಾವ ದಟ್ಟವಾಗಿದ್ದರೆ, ಟಿ.ವಿ. ಚಾನೆಲ್‍ಗಳ ಮೇಲೆ ರಾಜಕೀಯ ಮಹತ್ವಾಕಾಂಕ್ಷೆ ಇರುವ  ವ್ಯಕ್ತಿಗಳ ಪ್ರಭಾವ ತೀವ್ರವಾಗಿಯೇ ಇದೆ. ಹೆಚ್ಚಿನ ಚಾನೆಲ್‍ಗಳು ಇಂಥ ವ್ಯಕ್ತಿಗಳ ನಿಯಂತ್ರಣದಲ್ಲಿವೆ ಅಥವಾ ಅವರೇ ಅದರ ಮಾಲಿಕರಾಗಿರುತ್ತಾರೆ. ಅನೇಕ ಬಾರಿ ಅವರ ಮೂಗಿನ ನೇರಕ್ಕೇ ಸುದ್ದಿ ತಯಾರಾಗಬೇಕಾಗುತ್ತದೆ. ಏಕ ವ್ಯಕ್ತಿ ಕೇಂದ್ರಿತ ಚಾ ನೆಲ್‍ಗಳೂ ಇವೆ. ಅವರ ಇಚ್ಛೆಯಂತೆ ಸುದ್ದಿ ತಯಾರಿ ನಡೆಯುತ್ತಿರುತ್ತದೆ. ಯಾವ ವಿಷಯದ ಬಗ್ಗೆ ಮೌನವಾಗಬೇಕು ಮತ್ತು ಯಾವ ವಿಷಯವನ್ನು ಚರ್ಚೆಗೆತ್ತಿಕೊಳ್ಳಬೇಕು ಎಂಬುದನ್ನೆಲ್ಲ ಅವರೇ ನಿರ್ಧರಿಸುತ್ತಾರೆ. ಅವರ ಹಿತಾಸಕ್ತಿಯೇನು ಅದುವೇ  ಆಯ್ಕೆಯ ಮಾನದಂಡ. ಲಂಚ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಘೋಷಿಸಲಾದ ಬೆರ್ಲುಸ್ಕೋನಿಯ ಬದಲು ಆ ತೀರ್ಪನ್ನು ಪ್ರಕಟಿಸಿದ ರೈಮಂಡೋ ಮೆಸಿಯಾನೋ ಬಗ್ಗೆ ಇಟಲಿಯ ‘Canale  5’ ಚಾನೆಲ್ ಸುದ್ದಿ ಪ್ರಸಾರ ಮಾಡಿರುವುದಕ್ಕೆ  ಮಾಧ್ಯಮ ಜಗತ್ತಿನಲ್ಲಿರುವ ಈ ಸ್ಥಿತಿಯೇ ಕಾರಣ. ‘Canale  5’ ಎಂಬ ಟಿ.ವಿ. ಚಾನೆಲ್‍ನ ಮಾಲಿಕ ಸ್ವತಃ ಬೆರ್ಲುಸ್ಕೋನಿ. ಬ್ರಿಟನ್ನಿನ ಮಾಧ್ಯಮ ಜಗತ್ತಿನಲ್ಲಿ ರೂಪಕ್ ಮರ್ಡೋಕ್ ಹೇಗೆಯೋ, ಜರ್ಮನಿಯಲ್ಲಿ ಬೆರ್ಟಲ್ಸ್ ಮನ್ ಮತ್ತು ಕಿರ್ಚ್  ಹೇಗೆಯೋ, ಫ್ರಾನ್ಸ್ ನಲ್ಲಿ ವಿವೆಂಡಿ ಹೇಗೆಯೋ ಹಾಗೆಯೇ ಇಟಲಿಯಲ್ಲಿ ಬೆರ್ಲುಸ್ಕೋನಿ. ‘Canale 5’ ಅಲ್ಲದೇ Italia 1 ಮತ್ತು Rate 4 ಎಂಬ ಇನ್ನೆರಡು ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳ ಮಾಲಿಕರೂ ಬೆರ್ಲುಸ್ಕೋನಿಯೆ. ಇಟಲಿಯ  ಅತಿದೊಡ್ಡ ಮೊಂಡಡೋರಿ ಎಂಬ ಪ್ರಕಾಶನಾಲಯದ ಮಾಲಿಕರೂ ಬೆರ್ಲುಸ್ಕೋನಿಯೇ. ಅಂದಹಾಗೆ,
ಬೆರ್ಲುಸ್ಕೋನಿಯಂಥ ಮಾಲಿಕರು ಮತ್ತು ‘Canale  5’ನಂಥ ಚಾನೆಲ್‍ಗಳು ನಮ್ಮಲ್ಲೂ ಧಾರಾಳ ಇವೆ. ಆದ್ದರಿಂದಲೇ ಆತಂಕ.

Thursday, June 20, 2019

ನರೇಂದ್ರ ಮೋದಿ ಗೆದ್ದರಲ್ಲ, ಹೇಗೆ?



ಏ.ಕೆ. ಕುಕ್ಕಿಲ

1. ನಿರುದ್ಯೋಗ
2. ಕೃಷಿ ಬಿಕ್ಕಟ್ಟು
3. ಬೆಲೆ ಹೆಚ್ಚಳ
ಈ ಮೂರನ್ನೂ ನಗಣ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಧ್ಯವಾದದ್ದು ಹೇಗೆ? ಕೃಷಿ ಬಿಕ್ಕಟ್ಟು, ಬೆಲೆ ಹೆಚ್ಚಳ ಮತ್ತು ನಿರುದ್ಯೋಗ ಇವು ಮೂರೂ ಮಧ್ಯಮ, ಮೇಲ್ಮಧ್ಯಮ ಮತ್ತು ತಳ ಸಮುದಾಯಕ್ಕೆ ಸಂಬಂಧಿಸಿದ ಸಂಕಟ ಗಳು.  ಈ ದೇಶದಲ್ಲಿ ಯಾರು ಪ್ರಧಾನಿಯಾಗಬೇಕು, ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ತೀರ್ಮಾನಿಸುವ ಸಾಮಥ್ರ್ಯ ಈ ಬೃಹತ್ ಸಮೂಹದ ಕೈಯಲ್ಲಿದೆ. ಹೀಗಿದ್ದೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋ ದಿಯವರ ಮೇಲೆ ಈ ಸಮೂಹ ವಿಶ್ವಾಸ ತಾಳಿದುದು ಯಾವ ಕಾರಣದಿಂದ? ತನ್ನ ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿಯವರು ಈ ಮೇಲಿನ ಮೂರೂ ವಿಷಯಗಳ ಮೇಲೆ ಮಾತಾಡಿದ್ದು ಬಹಳ ಬಹಳ ಕಡಿಮೆ. ತಮ್ಮ ಅಷ್ಟೂ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ನೋಟು ನಿಷೇಧ ಎಂಬ ಪದವನ್ನು ಉಲ್ಲೇಖಿಸಿದ್ದು ಬರೇ ಎರಡು ಬಾರಿ. ಹೀಗಿದ್ದೂ ಅವರು ಗೆದ್ದರಲ್ಲ, ಹೇಗೆ?
1. ನರೇಂದ್ರ ಮೋದಿಯವರಿಗೆ ಸರಿಸಮಾನವಾದ ನಾಯಕನನ್ನು ತೋರಿಸಲು ವಿರೋಧ ಪಕ್ಷಗಳು ವಿಫಲವಾದುದು ಇದಕ್ಕಿರುವ ಮೊದಲ ಕಾರಣ. ವಿರೋಧ ಪಕ್ಷಗಳು ಎಷ್ಟು ಚೆಲ್ಲಾಪಿಲ್ಲಿಯಾಗಿದ್ದುವು ಅಂದರೆ ಅಲ್ಲಿ ಪ್ರತಿಯೊಬ್ಬರೂ ಪ್ರಧಾನಿ  ಅಭ್ಯರ್ಥಿಯಾಗಿಯೇ ಬಿಂಬಿಸಿಕೊಂಡರು. ಡಿ.ಎಂ.ಕೆ. ಪಕ್ಷವನ್ನು ಬಿಟ್ಟರೆ ಉಳಿದಂತೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುವುದಕ್ಕೆ ಇತರ ಪಕ್ಷಗಳು ಹಿಂಜರಿದುವು. ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ, ಶರದ್  ಪವಾರ್ ಮುಂತಾದವರ ಹೆಸರುಗಳನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಧ್ಯಮಗಳು ತೇಲಿಸಿ ಬಿಟ್ಟವು. ಅಲ್ಲದೇ, ಈ ನಾಯಕರೂ ಅದನ್ನು ಒಳಗೊಳಗೇ ಆನಂದಿಸಿದರು. ಇದಕ್ಕೆ ವಿರುದ್ಧವಾಗಿ ನರೇಂದ್ರ ಮೋದಿಯವರು ತನ್ನನ್ನು ಬಲಿಷ್ಠ ನಾಯಕ  ಎಂದು ಘೋಷಿಸಿಕೊಂಡರು. ಇದಕ್ಕೆ ಪುರಾವೆಯಾಗಿ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‍ನ ಮೇಲೆ ನಡೆಸಲಾದ ವಾಯುದಾಳಿಯನ್ನು ಜನರ ಮುಂದಿಟ್ಟರು. ಇದರ ಜೊತೆಗೇ ಉರಿ ದಾಳಿಗೆ ಪ್ರತೀಕಾರವಾಗಿ 2016 ಸೆಪ್ಟೆಂಬರ್‍ನಲ್ಲಿ  ನಡೆಸಲಾದ ಸರ್ಜಿಕಲ್ ದಾಳಿಯನ್ನೂ ಜನರೊಂದಿಗೆ ಹಂಚಿಕೊಂಡರು. ‘ಘರ್‍ಮೆ ಗುಸ್‍ಕರ್ ಮಾರೂಂಗಾ’ ಮತ್ತು ‘ಗೋಲಿ ಕೆ ಜವಾಬ್ ಗೋಲಾ ಸೆ ದಿಯಾ ಜಾಯೆಗಾ’ ಎಂಬ ನುಡಿಗಟ್ಟುಗಳನ್ನು ಜನರ ಬಾಯಿಗಿಟ್ಟರು. ಅಗತ್ಯ ಬಿದ್ದರೆ  ಅಣುಬಾಂಬನ್ನೂ ಪ್ರಯೋಗಿಸುವೆ ಎಂಬ ಆವೇಶ ತೋರ್ಪಡಿಸಿದರು. ನಿಜವಾಗಿ, ಚರ್ಚೆಯಾಗಬೇಕಿ ದ್ದುದು ಪುಲ್ವಾಮ ದಾಳಿಯ ಬಗ್ಗೆ. ನರೇಂದ್ರ ಮೋದಿಯವರು ಬಲಿಷ್ಠ ನಾಯಕನೇ ಆಗಿದ್ದಿದ್ದರೆ ಪುಲ್ವಾಮದಲ್ಲಿ 40 ಯೋಧರ ಹತ್ಯೆ ಹೇಗಾಯಿತು  ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಕಾದುದು ಸಹಜ. ರಾಷ್ಟ್ರೀಯ ಭದ್ರತೆ ಮತ್ತು ಬಲಿಷ್ಠ ನಾಯಕತ್ವ ಎಂಬುದು ತೋಳ್ಬಲದ ಪ್ರದರ್ಶನವಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದಕ್ಕೆ ಪುಲ್ವಾಮ ಮುಖ್ಯವಾಗಿತ್ತು. ಆದರೆ, ಅಂಥ ಪ್ರಶ್ನೆ ಯನ್ನು  ಎತ್ತುವ ಸಂದರ್ಭವನ್ನೇ ಅವರು ವಿರೋಧ ಪಕ್ಷಗಳಿಗೆ ನೀಡಲಿಲ್ಲ. ಚೌಕಿದಾರ್‍ನಿಂದ ಅವರು ಬಾಲಾಕೋಟ್‍ಗೆ ನೆಗೆದರು. ರಫೇಲ್‍ನ ಬಗ್ಗೆ ಪ್ರಶ್ನಿಸುವಾಗ ರಾಜೀವ್ ಗಾಂಧಿಯನ್ನು ಮುನ್ನೆಲೆಗೆ ತಂದರು. ತನ್ನ ವಿರುದ್ಧ ವಿರೋಧ ಪಕ್ಷಗಳು ಮಾಡಿರುವ  ಟೀಕೆಯನ್ನೇ ಭಾಷಣವನ್ನಾಗಿ ಮಾಡಿದರು. ಇದನ್ನು ಹೆಕ್ಕಿಹೆಕ್ಕಿ ಉತ್ತರಿಸಬೇಕಾದರೆ ವಿರೋಧಿ ಕೂಟದಲ್ಲಿ ಬಲಿಷ್ಠ ಮತ್ತು ಸರ್ವಾಂಗೀಕೃತ ನಾಯಕರಿರಬೇಕು. ತಾನು ಎಲ್ಲರ ಒಪ್ಪಿಗೆಯ ನಾಯಕ ಹೌದೋ ಅಲ್ಲವೋ ಎಂಬ ಸಂದೇಹ ರಾಹುಲ್  ಗಾಂಧಿಗೆ ಆರಂಭದಿಂದಲೂ ಇತ್ತು. ಬಲಿಷ್ಠ ನಾಯಕತ್ವ ಎಂಬ ಮೋದಿಯವರ ಮಾತಿಗೆ ಪ್ರತಿಯಾಗಿ ಅವರು ಏನನ್ನೂ ಹೇಳದೆಯೇ ಇಶ್ಶೂ ಬದಲಿಸಲು ನೋಡಿದರು. ಮೋದಿಯವರಿಗೆ ಪ್ರತಿ ಏಟು ಕೊಡುವ ಬದಲು ರಕ್ಷಣಾತ್ಮಕವಾಗಿ  ಮಾತಾಡಿದರು. ಎಲ್ಲಿಯವರೆಗೆಂದರೆ ‘ಸರ್ಜಿಕಲ್ ಸ್ಟ್ರೈಕ್ ನಾವು ಮಾಡಿದ್ದೀವಿ’ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ಅವರ ಧ್ವನಿ ಕ್ಷೀಣವಾಯಿತು. ಒಂದುರೀತಿಯಲ್ಲಿ, ಪುಲ್ವಾಮದ ಬಳಿಕ ಬೆಳವಣಿಗೆಗಳನ್ನು ಬಳಸಿಕೊಂಡು ನರೇಂದ್ರ ಮೋ ದಿಯವರು ಈ ದೇಶಕ್ಕೆ ಬಲಿಷ್ಠ ನಾಯಕನ ಅಗತ್ಯವಿದೆ ಮತ್ತು ಆ ಬಲಿಷ್ಠ ನಾನೇ ಎಂದು ಮತದಾರರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿರುವಂತೆಯೇ ರಾಹುಲ್ ಮತ್ತು ವಿರೋಧ ಪಕ್ಷಗಳು ಅದಕ್ಕೆ ಎದುರೇಟು ನೀಡಲು ಮತ್ತು ಪ್ರತಿ ನಾಯಕ ನನ್ನು ಸೃಷ್ಟಿಸಲು ವಿಫಲವಾದುವು. ನಿಜವಾಗಿ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ. ಕಳೆದ 5-6 ವರ್ಷಗಳಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ಬೆಳವಣಿಗೆ ಇದು. ಅಮೇರಿಕ, ರಷ್ಯಾ, ಬ್ರೆಝಿಲ್, ಫಿಲಿಪ್ಪೀನ್ಸ್, ಹಂಗರಿ, ಪೋಲ್ಯಾಂಡ್ ಮುಂತಾದ  ರಾಷ್ಟ್ರಗಳಲ್ಲಿ ‘ಬಲಿಷ್ಠ ನಾಯಕ’ ಎಂಬುದು ಒಂದು ಮಂತ್ರವಾಗಿ ಬಿಟ್ಟಿದೆ. ಇವರ ಕಾರ್ಯಶೈಲಿ ಹೇಗಿದೆ ಎಂದರೆ, ನಿಯಮಬದ್ಧ ಸಂಸ್ಥೆಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ಧ ಮಾದರಿಯನ್ನು ವ್ಯಂಗ್ಯ ಮಾಡುತ್ತಾರೆ. ಇತರರ ಮೇಲೆ ಭ್ರಷ್ಟಾಚಾರದ ಆರೋಪ  ಹೊರಿಸುತ್ತಾರೆ. ಪ್ರಜಾತಂತ್ರ ಆಡಳಿತ ವಿಧಾನವನ್ನು ಅಸಹನೆಯಿಂದ ನೋಡುತ್ತಾರೆ. ಮೋದಿಯವರ ಈ ಪ್ರಚಾರ ಶೈಲಿ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬುದಕ್ಕೆ ‘ದಿ ಹಿಂದೂ-ಸಿಎಸ್‍ಡಿಎಸ್ ಲೋಕನೀತಿ’ ನಡೆಸಿರುವ ಸಮೀಕ್ಷೆಯೇ  ಸಾಕ್ಷಿ. ಮೋದಿಯವರಿಗೆ ಮತ ಹಾಕಿದ ಯುವ ಮತದಾರರ ಪೈಕಿ ಪ್ರತಿ ಮೂವರಲ್ಲಿ ಒಬ್ಬರು ಪ್ರಧಾನಿ ಅಭ್ಯರ್ಥಿಯೇ ಮುಖ್ಯ ವಿಷಯ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮೋದಿ ಪ್ರಧಾನಿ ಅಭ್ಯರ್ಥಿ ಅಲ್ಲದಿರುತ್ತಿದ್ದರೆ ನಾವು ಬೇರೆ ಪಕ್ಷಗಳಿಗೆ  ಮತ ಹಾಕುತ್ತಿದ್ದೆವು ಎಂದು ಯುವ ಮತದಾರ ರಲ್ಲಿ 33% ಮಂದಿ ಹೇಳಿಕೊಂಡರು. ಹರ್ಯಾಣ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದ ಯುವ ಸಮೂಹದಲ್ಲಿ ಮೋದಿಯವರ ಜನಪ್ರಿಯತೆಯು ರಾಷ್ಟ್ರೀಯ  ಸರಾಸರಿಗಿಂತ ಅಧಿಕವಿದೆ ಅನ್ನುವುದು ಇಲ್ಲಿ ಉಲ್ಲೇಖನೀಯ.
2. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪ್ರದರ್ಶಿಸಿದ ಒಗ್ಗಟ್ಟನ್ನು ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸಲೇ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇಜ್ರಿವಾಲ್,  ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ ಮುಂತಾದವರು ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದು ಆ ವೇದಿಕೆಗಷ್ಟೇ ಸೀಮಿತವಾಯಿತು. ಕಾಂಗ್ರೆಸನ್ನು ಕೈಬಿಟ್ಟು ಎಸ್‍ಪಿ-ಬಿಎಸ್‍ಪಿಗಳು  ಮೈತ್ರಿ ಮಾಡಿಕೊಂಡವು. ಅದೇವೇಳೆ, ಪಶ್ಚಿಮ ಬಂಗಾಲದಲ್ಲಿ ತೃಣಮೂಲ, ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್‍ಗಳು ಮುಖ ತಿರುಗಿಸಿ ಕೊಂಡು ನಿಂತವು. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಮೈತ್ರಿ ಮಾಡಿಕೊಳ್ಳಲಿಲ್ಲ.  ಕೇಜ್ರಿವಾಲ್‍ರ ಎಎಪಿಗೂ ಕಾಂಗ್ರೆಸ್‍ಗೂ ನಡುವೆ ಹೊಂದಾಣಿಕೆಯಾಗಲಿಲ್ಲ. ಕಾಂಗ್ರೆಸ್ ಮತ್ತು ಎನ್‍ಸಿಪಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಪಕ್ಷಗಳಾಗಿದ್ದರೂ ಗುಜರಾತ್‍ನಲ್ಲಿ ಪರಸ್ಪರ ವಿರುದ್ಧ ಸ್ಪರ್ಧಿಸಿದುವು. ವಿರೋಧ ಪಕ್ಷಗಳ ನಡುವಿನ ಈ ಅನೈಕ್ಯವನ್ನು ಮೋದಿಯವರು ಪರಿಣಾಮ ಕಾರಿಯಾಗಿ ವ್ಯಂಗ್ಯಕ್ಕೆ ಗುರಿಪಡಿಸಿದರು. ಮಹಾ ಕಲಬೆರಕೆ ಮೈತ್ರಿಕೂಟ ಎಂದು ಜರೆದರು.
3. ಬಿಜೆಪಿಯ- ಬಹುಸಂಖ್ಯಾತ ಧ್ರುವೀಕರಣ ರಾಜಕಾರಣಕ್ಕೆ ಪ್ರತಿಯಾಗಿ ರಾಷ್ಟ್ರೀಯ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸದೇ ಇದ್ದುದೂ ಮೋದಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು.  ರಾಹುಲ್ ಗಾಂಧಿಯವರು ಕೇರಳದ ವಯನಾಡ್‍ನಲ್ಲಿ ಸ್ಪರ್ಧಿಸುವು ದನ್ನು ನರೇಂದ್ರ ಮೋದಿಯವರು ಪ್ರಶ್ನಿಸಿದ ರೀತಿ ಧ್ರುವೀಕರಣ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆಯಾಗಿತ್ತು. ಬಹುಸಂಖ್ಯಾತರಿರುವ ಅಮೇಥಿಯಿಂದ ಅಲ್ಪಸಂಖ್ಯಾತರಿರುವ ವಯ ನಾಡ್‍ಗೆ ರಾಹುಲ್ ಗಾಂಧಿ ಪಲಾಯನ ಮಾಡಿದರು ಎಂದವರು ಕುಟುಕಿದರು. ಕುಂಭಮೇಳದ ಸಮಯದಲ್ಲಿ ಮೋದಿಯವರು ಸಂಗಮ ಸ್ಥಳವಾದ ಪ್ರಯಾಗ್‍ರಾಜ್‍ನಲ್ಲಿ ಮಿಂದರು. ವಾರಣಾಸಿಯ ಗಂಗಾನದಿಯಲ್ಲಿ ಮತ್ತೆಮತ್ತೆ ಆರತಿ ಎತ್ತಿದರು.  ನಾಮಪತ್ರ ಸಲ್ಲಿಸುವುದಕ್ಕಿಂತ ಹಿಂದಿನ ದಿನವೂ ಅವರು ಆರತಿ ಎತ್ತಿದರು. ಮೇ 18ರ ಕೊನೆ ಹಂತದ ಮತದಾನಕ್ಕಿಂತ ಒಂದುದಿನ ಮೊದಲು ಕೇದಾರನಾಥ ಗುಹೆಯಲ್ಲಿ ಕೇಸರಿ ಬಟ್ಟೆಯುಟ್ಟುಕೊಂಡು ಧ್ಯಾನ ನಿರತರಾದರು. ಅದನ್ನು ಈ ದೇಶದ  ಮುಖ್ಯ ವಾಹಿನಿಯ ಮಾಧ್ಯಮಗಳು ಲಕ್ಷಾಂತರ ಮನೆಗಳಿಗೆ ನೇರವಾಗಿ ದಾಟಿಸಿದುವು. ಬಿಜೆಪಿಯ ಯುವ ಮೋರ್ಚಾವು ‘ಮೋದಿ ಯುವ ಶಕ್ತಿ’ ಎಂಬ ಅಭಿಯಾನವನ್ನು ದೇಶದಾದ್ಯಂತ ನಡೆಸಿತು. ನಿಜವಾಗಿ, ಯುವ ಮತದಾರರ ಮೇಲೆ  ಬಿಜೆಪಿಯು 2017ರಲ್ಲೇ  ಒಂದು ಕಣ್ಣಿಟ್ಟಿತ್ತು. 2017 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮೋದಿಯವರು ಯುವ ಸಮೂಹದ ಭಾವನೆಗಳಿಗೆ ಲಗ್ಗೆ ಹಾಕಿದ್ದರು. ‘ಈ ಶತಮಾನದ ಆರಂಭದಲ್ಲಿ ಜನಿಸಿದ ಯುವ ಸಮೂಹವೇ, ನೀವು 18  ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಭಾರತದ ಭವಿಷ್ಯ ಬರೆಯುವ ನಿಮಗೆ ಸ್ವಾಗತ’ ಎಂದು ಅವರ ಮನ ಗೆಲ್ಲಲು ಯತ್ನಿಸಿದ್ದರು. ಅಂದಹಾಗೆ, ಬಹುಸಂಖ್ಯಾತರನ್ನು ಧ್ರುವೀಕರಿಸುವ ಬಿಜೆಪಿಯ  ತಂತ್ರ ಎಷ್ಟು ಯಶಸ್ವಿಯಾಗಿದೆ ಅನ್ನುವುದಕ್ಕೆ ಹಿಂದೂ ಬಾಹುಳ್ಯವಿರುವ ಜಮ್ಮು ಮತ್ತು ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರವೇ ಸಾಕ್ಷಿ. ಜಮ್ಮು, ಉದಮ್‍ಪುರ ಮತ್ತು ಲಡಾಕ್ ಈ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾದರೆ  ಶ್ರೀನಗರ, ಬಾರಮುಲ್ಲ ಮತ್ತು ಅನಂತನಾಗ್ ಕ್ಷೇತ್ರಗಳಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಜಯಗಳಿಸಿತು. ಬಿಜೆಪಿಯ ಈ ಧ್ರುವೀಕರಣ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅತ್ಯಂತ ಹತಾಶ ನಿಲುವನ್ನು ಪ್ರದರ್ಶಿಸಿತು. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯು  ಸೆಕ್ಯುಲರಿಸಂ ಅನ್ನು ಬದಿಗೆ ತಳ್ಳಿದ್ದರೂ ಕಾಂಗ್ರೆಸ್ ಆ ಬಗ್ಗೆ ಭಾರತೀಯರನ್ನು ಎಚ್ಚರಿಸುವ ಮತ್ತು ಸೆಕ್ಯುಲರ್ ರಾಷ್ಟ್ರೀಯತೆಯ ಅಗತ್ಯವನ್ನು ಎತ್ತಿಹಿಡಿಯುವ ಗಂಭೀರ ಪ್ರಯತ್ನ ನಡೆಸಲೇ ಇಲ್ಲ. ಸೆಕ್ಯುಲರಿಸಂ ನಿಂದ ಅಲ್ಪಸಂಖ್ಯಾತರವರೆಗೆ ಅದು ಒಂದು  ರೀತಿಯ ಮೌನವನ್ನು ಪಾಲಿಸುತ್ತಾ ಬಂತು. ಕಾಂಗ್ರೆಸ್‍ನ ಏಳಿಗೆಯ ದೃಷ್ಟಿಯಿಂದ ಈ ಎರಡೂ ವಿಷಯಗಳಲ್ಲಿ ಸ್ಪಷ್ಟ ಧೋರಣೆಯನ್ನು ತಳೆಯಬೇಕಾದುದು ಬಹುಮುಖ್ಯವಾಗಿತ್ತು. ರಾಹುಲ್ ಗಾಂಧಿಯವರು ಮಂದಿರಗಳಿಗೆ ಪದೇ ಪದೇ ಭೇಟಿ  ಕೊಟ್ಟರಾದರೂ ಹಿಂದುತ್ವ ಮತ್ತು ಹಿಂದೂಯಿಸಂನ ನಡುವಿನ ಅಂತರ ಮತ್ತು ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ವಿಫಲರಾದರು ಅಥವಾ ಅವರ ಪಕ್ಷ ಅವರ ನಡವಳಿಕೆಯನ್ನು ಮೌನದಿಂದ ವೀಕ್ಷಿಸುವುದರ ಹೊರತಾಗಿ ಏನನ್ನೂ  ಮಾಡಲಿಲ್ಲ. ಇದೂ ಜನರ ಮೇಲೆ ಪರಿಣಾಮ ಬೀರಿತು. ಬಿಜೆಪಿ ಪ್ರತಿಪಾದಿಸುವ ಹಿಂದುತ್ವವೇ ನಿಜವಾದ ಹಿಂದೂಯಿಸಂ ಎಂದು ಜನರು ನಂಬಿದರು ಮತ್ತು ಈ ವಿಷಯದಲ್ಲಿ ಹೆಚ್ಚು ಬದ್ಧತೆ ವ್ಯಕ್ತಪಡಿಸುತ್ತಿರುವ ಬಿಜೆಪಿಯ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದರು. ಅಲ್ಲದೇ, ಕಾಂಗ್ರೆಸ್ ತನ್ನ ಕಾರ್ಯಕರ್ತರ ಪಡೆಯನ್ನು ಕಟ್ಟುವಲ್ಲಿ ಮತ್ತು ಸಂಯೋಜಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. 2004ರಿಂದ 2014ರ ನಡುವೆ ಈ ವಿಷಯದಲ್ಲಿ ಗಾಢ ನಿರ್ಲಕ್ಷ್ಯ  ತೋರಲಾಯಿತು. ಇದಕ್ಕೆ ಹೋಲಿಸಿದರೆ,  ಬಿಜೆಪಿ ಬಹಳ ಮುಂದಿತ್ತು. ತನ್ನ ಪರಿವಾರ ಸಂಘಟನೆಗಳ ಮೂಲಕ ಹಳ್ಳಿ, ಗ್ರಾಮ ಮತ್ತು ಪಟ್ಟಣಗಳಲ್ಲಿ ಕಾರ್ಯಕರ್ತರ ಪಡೆಯನ್ನು ಯಶಸ್ವಿಯಾಗಿ ಅದು ಕಟ್ಟಿಕೊಂಡಿತು. ಧಾರ್ಮಿಕ ಕ್ಷೇತ್ರಗಳನ್ನು ಬಿಜೆಪಿಯು ಇದಕ್ಕಾಗಿ ಬಳಸಿಕೊಂಡಿತು. ಇದರ  ಜೊತೆಗೇ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಪ್ರಸ್ತುತಪಡಿಸಿದ NYAY (ನ್ಯಾಯ್) ಯೋಜನೆಯು ಜನರಿಗೆ ತಲುಪುವಲ್ಲಿ ವಿಫಲವಾಯಿತು. 20% ಬಡಕುಟುಂಬಗಳಿಗೆ ಪ್ರತಿ ತಿಂಗಳು 6000 ರೂಪಾಯಿಯಂತೆ ವರ್ಷಕ್ಕೆ 72 ಸಾವಿರ ರೂಪಾಯಿ ನೀಡುವ ಈ  ಯೋಜನೆಯು ವಿಶಿಷ್ಟವಾಗಿದ್ದರೂ ಅದನ್ನು ಚುನಾವಣೆಯ ಕೊನೆಕ್ಷಣದಲ್ಲಿ ಘೋಷಿಸಿದುದು ಕಾಂಗ್ರೆಸ್‍ಗೆ ಮುಳುವಾಯಿತು. ಪ್ರಿಯಾಂಕಾ ಗಾಂಧಿಯನ್ನು ಅಖಾಡಕ್ಕೆ ತಂದುದೂ ಕೊನೆಕ್ಷಣದಲ್ಲಿ.
4. ಬಿಜೆಪಿಗೂ ಮಹಿಳೆಯರಿಗೂ ಈವರೆಗೆ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಆದರೆ ಈ ಬಾರಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಅದರಲ್ಲೂ ಯುವತಿಯರು ಬಿಜೆಪಿಯನ್ನು ಬೆಂಬಲಿಸಿದರು. ಈ ಬಾರಿ 66.79% ಪುರುಷರು ಮತ ಚಲಾಯಿಸಿದ್ದರೆ  66.68% ಮಹಿಳೆಯರು ಮತ ಚಲಾಯಿಸಿದ್ದರು. ಪುರುಷರಿಗೆ ಸರಿಸಮಾನವಾಗಿ ಚಲಾಯಿಸಲಾದ ಈ ಮತವೂ ಫಲಿತಾಂಶದ ನಿರ್ಣಯದಲ್ಲಿ ಮುಖ್ಯ ಪಾತ್ರ ನಿರ್ವಹಿಸಿತು. ಉಜ್ವಲ್ ಯೋಜನೆಯ ಅಡಿಯಲ್ಲಿ ಮನೆಮನೆಗೆ ಉಚಿತ ಗ್ಯಾಸ್ ಸಿ ಲಿಂಡರ್ ಹಂಚಿದ್ದು ಮತ್ತು ಸ್ವಚ್ಛ ಭಾರತ್ ಮಿಶನ್ ಗ್ರಾಮೀಣ್ ಯೋಜನೆಯಡಿಯಲ್ಲಿ ಶೌಚಾಲಯ ಕಟ್ಟಿಸಿಕೊಟ್ಟದ್ದು ಬಿಜೆಪಿಯನ್ನು ಮಹಿಳೆಯರಿಗೆ ಹತ್ತಿರಗೊಳಿಸಿತು. ಜೊತೆಗೇ ಅಬ್ಬರದ ಪ್ರಚಾರ ಮತ್ತು ಪ್ರತಿ ಯೋಜನೆಗೂ ನೀಡಲಾದ ಜಾಣತನದ ಹೆಸರುಗಳೂ ಬಿಜೆಪಿ ಗೆಲುವಿನಲ್ಲಿ ತಮ್ಮದೇ ಪಾತ್ರವನ್ನು ವಹಿಸಿದವು. 2014ರ ಲೋಕಸಭಾ ಚುನಾವಣೆ ಯಲ್ಲಿ 5 ಸಾವಿರ ಕೋಟಿ ರೂಪಾಯಿಯನ್ನು ಜಾಹೀರಾತಿಗೆ ಖರ್ಚು ಮಾಡಿದ್ದ ಬಿಜೆಪಿಯು 2018ರಲ್ಲಿ 5 ರಾಜ್ಯಗಳ ಚುನಾವಣೆಗಾಗಿ  ಓeಣಜಿಟix, ಅoಟgಚಿಣe ಮತ್ತು ಡೆಟಾಲ್‍ಗಳು ಟಿ.ವಿ. ಜಾಹೀರಾತಿಗೆ ವ್ಯಯಿಸಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡಿತು. ಜೊತೆಗೇ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಯ ಐಟಿ ಸೆಲ್‍ನಂತೆ ಕಾರ್ಯನಿರ್ವಹಿಸಿದುವು. ಮೋದಿಯವರ  ಫೋಟೋ ಗಳು ಎಲ್ಲೆಡೆಯೂ ಕಾಣುವಂತೆ ನೇತು ಹಾಕುವ ತಂತ್ರವೂ ಯಶಸ್ವಿಯಾಯಿತು. ಕಚೇರಿಗಳಲ್ಲಿ, ಪೆಟ್ರೋಲ್ ಪಂಪ್, ಕ್ಯಾಲೆಂಡರ್, ವಿಮಾನ ನಿಲ್ದಾಣದ ಬಿಲ್ ಬೋರ್ಡ್‍ನಲ್ಲಿ, ರೈಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿ ಹೀಗೆ ಎಲ್ಲೆಲ್ಲೂ ಮೋದಿಯವರು ಕಾಣಿಸಿಕೊಂಡರು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನಾ, ಪ್ರಧಾನಮಂತ್ರಿ ಆವಾಸ್ ಯೋಜನಾ, ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ, ಪ್ರಧಾನಮಂತ್ರಿ ಜನಧನ್ ಯೋಜನಾ, ಪ್ರಧಾನಮಂತ್ರಿ ಉಜ್ವಲ್ ಯೋಜನಾ, ಪ್ರಧಾ ನಮಂತ್ರಿ ಗ್ರಾಮ ಸಡಕ್ ಯೋಜನಾ.. ಮುಂತಾಗಿ ಪ್ರತಿಯೊಂದರಲ್ಲೂ ಪ್ರಧಾನಿಯನ್ನು ಸ್ಮರಿಸುವ ತಂತ್ರ ಹೆಣೆಯಲಾಯಿತು. ಇದರ ಜೊತೆಗೇ ವಿರೋಧ ಪಕ್ಷಗಳ ನಕಾರಾತ್ಮಕ ಪ್ರಚಾರ ತಂತ್ರವೂ ಬಿಜೆಪಿಯ ಕೈ ಹಿಡಿಯಿತು. ಮೋದಿಯನ್ನೇ  ಹಣಿಯಲು ಕಾದು ಕುಳಿತಂತೆ ವರ್ತಿಸಿದ ಮತ್ತು ಸ್ಪಷ್ಟ ಎಜೆಂಡಾ ಇಲ್ಲದೇ ಅಖಾಡಕ್ಕಿಳಿದ ವಿರೋಧ ಪಕ್ಷಗಳನ್ನು ಮತದಾರರು ದ್ವೇಷಿಸತೊಡಗಿದರು. ಹಿಂದುಳಿದ ಜಾತಿ, ವರ್ಗಗಳು ಮತ್ತು ದಲಿತ ಸಮೂಹವೂ ಸೇರಿದಂತೆ ಎಲ್ಲವನ್ನೂ ಒಂದೇ  ಕೊಡೆಯೊಳಗೆ ಸೇರಿಸುವುದು ಬಿಜೆಪಿಯ ಗುರಿಯಾಗಿತ್ತು. ಅದು ಈ ಬಾರಿ ಬಹುತೇಕ ಈಡೇರಿದೆ. ಜಾತಿರಹಿತ ಸಮೂಹವನ್ನು ಕಟ್ಟಿಕೊಂಡು ಅಧಿಕಾರದಲ್ಲಿ ಉಳಿಯುವ ಶ್ರಮವಂತೂ ಈಗ ಯಶಸ್ವಿಯಾಗಿದೆ. 18ರಿಂದ 22 ವರ್ಷದೊಳಗಿನ  ಮತದಾರರ ಪೈಕಿ 41% ಮಂದಿ ಬಿಜೆಪಿಯನ್ನು ಈ ಬಾರಿ ಬೆಂಬಲಿಸಿದ್ದಾರೆ. ಇಲ್ಲಿ ಮುಖ್ಯವಾಗುವುದು ಈ ಮತದಾರರ ವಯಸ್ಸು. ಕಿರಿ ವಯಸ್ಸಿನ ಇವರನ್ನು ದೀರ್ಘ ಅವಧಿವರೆಗೆ ಬೆಂಬಲಿಗರಾಗಿ ಉಳಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಖಂಡಿತ  ಹೆಣೆಯಲಿದೆ. ಬಹುಸಂಖ್ಯಾತರನ್ನು ಧ್ರುವೀಕರಿಸಿ ಬಿಸಿರಕ್ತದ ಈ ಯುವಸಮೂಹವನ್ನು ತನ್ನ ಜೊತೆಯೇ ಇಟ್ಟುಕೊಳ್ಳುವ ಶ್ರಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ನಡೆಸಲಿದೆ.

ಆದ್ದರಿಂದ ಪಾಕಿಸ್ತಾನ ಮತ್ತು ಮುಸ್ಲಿಮರು ಮುಂದಿನ ದಿನಗಳಲ್ಲಿ ಸಾಕಷ್ಟು ಬೈಗುಳವನ್ನು ತಿನ್ನಬೇಕಾದೀತು.

Tuesday, June 4, 2019

ಪ್ರತ್ಯೇಕಿಸುವ ತಲಾಕ್‍ನ ಬಗ್ಗೆ ಗೊತ್ತಿರುವ ಎಷ್ಟು ಮಂದಿಗೆ ಜೋಡಿಸುವ ಝಕಾತ್‍ನ ಬಗ್ಗೆ ಗೊತ್ತಿದೆ?



     ಪವಿತ್ರ ಕುರ್‍ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್‍ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ  ಅಧ್ಯಾಯವಾದ ಅಲ್ ಮೂಮಿನೂನ್‍ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್‍ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್‍ನ 7ನೇ ಸೂಕ್ತಗಳೆಲ್ಲ ನಮಾಝï ಮತ್ತು ಝಕಾತನ್ನು ಜೊತೆಜೊತೆ ಯಾಗಿಯೇ ಉಲ್ಲೇಖಿಸಿವೆ. ‘ನಮಾಝನ್ನು  ಸಂಸ್ಥಾಪಿಸಿರಿ ಮತ್ತು ಝಕಾತ್ ಕೊಡಿರಿ’ ಎಂಬ ಆದೇಶವನ್ನು ಪವಿತ್ರ ಕುರ್‍ಆನಿನ 26 ಕಡೆಗಳಲ್ಲಿ ನೀಡಲಾಗಿದೆ. ಪವಿತ್ರ ಕುರ್‍ಆನಿನ 32 ಕಡೆಗಳಲ್ಲಿ ಕೇವಲ ಝಕಾತನ್ನು ಉಲ್ಲೇಖಿಸಲಾಗಿದೆ. ಇಷ್ಟಿದ್ದೂ, ಮುಸ್ಲಿಮ್ ಸಮುದಾಯಕ್ಕೆ ನಮಾಝïನ ಬಗ್ಗೆ  ಗೊತ್ತಿರುವಷ್ಟು ಝಕಾತ್‍ನ ಬಗ್ಗೆ ಗೊತ್ತಿಲ್ಲ. ಭಾರತೀಯ ಮುಸ್ಲಿಮೇತರ ಸಮುದಾಯಕ್ಕಂತೂ ಝಕಾತ್‍ನ ಬಗ್ಗೆ ಮಾಹಿತಿ ಇರುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ತಲಾಕ್ ಎಂದರೇನೆಂದು ಪ್ರಶ್ನಿಸಿದರೆ ಭಾರತೀಯ ಸಮಾಜ ಇವತ್ತು ಥಟ್ಟನೆ  ಉತ್ತರಿಸಬಹುದು. ಆದರೆ ಝಕಾತ್ ಹಾಗಲ್ಲ. ನಿಜವಾಗಿ, ತಲಾಕ್ ಮತ್ತು ಝಕಾತ್ ಎರಡೂ ಕೂಡ ಮನುಷ್ಯರಿಗೆ ಸಂಬಂಧಿಸಿದ್ದು. ತಲಾಕ್- ಪತಿ ಮತ್ತು ಪತ್ನಿಯ ನಡುವಿನ ವ್ಯವಹಾರವಾದರೆ ಝಕಾತ್- ಮನುಷ್ಯ ಮತ್ತು ಮನುಷ್ಯರ ನಡುವಿನ  ವ್ಯವಹಾರ. ತಲಾಕ್ ಎಂಬುದು ಬೇರ್ಪಡಿಸುವುದರ ಹೆಸರಾದರೆ, ಝಕಾತ್ ಎಂಬುದು ಜೋಡಿಸುವುದರ ಹೆಸರು. ವಿಷಾದ ಏನೆಂದರೆ, ಭಾರತೀಯ ಸಮಾಜಕ್ಕೆ ಈ ಜೋಡಿಸುವುದರ ಪರಿಚಯ ಬಹಳ ಕಡಿಮೆ ಇದೆ. ಆದರೆ ಈ ಬೇರ್ಪಡಿಸುವುದರ ಪರಿಚಯವಂತೂ ಬಹಳ ಚೆನ್ನಾಗಿಯೇ ಇದೆ. ಇದೊಂದು ಆಘಾತಕಾರಿ ಬೆಳವಣಿಗೆ. ನಿಜವಾಗಿ, ಮುಸ್ಲಿಮರೆಂದರೆ ನಮಾಝï. ಮುಸ್ಲಿಮರೆಂದರೆ ಝಕಾತ್. ಮುಸ್ಲಿಮರೆಂದರೆ ಹಜ್ಜ್. ಮುಸ್ಲಿಮರೆಂದರೆ ದೇವವಿಶ್ವಾಸ. ಆದರೆ,  ಸಾಮಾಜಿಕವಾಗಿ ಇವತ್ತು ಇವುಗಳ ಮೇಲೆ ಚರ್ಚೆಯೇ ಆಗುತ್ತಿಲ್ಲ. ಅದರ ಬದಲು ಬುರ್ಖಾ, ನಕಾಬ್, ಗಡ್ಡ, ಕುರ್ತಾ ಇತ್ಯಾದಿ ಇತ್ಯಾದಿ ಸಂಕೇತಗಳ ಮೇಲೆ ಟನ್ನುಗಟ್ಟಲೆ ದಾಖಲೆಗಳನ್ನು ಮಂಡಿಸಲಾಗುತ್ತಿದೆ. ಗಂಭೀರ ಚರ್ಚೆಗಳನ್ನು ಏರ್ಪಡಿಸಲಾಗುತ್ತಿದೆ. ಒಂದುವೇಳೆ, ಮಾಧ್ಯಮಗಳು ಝಕಾತ್‍ನ ಬಗ್ಗೆ ಅಧ್ಯಯನಾತ್ಮಕ ವರದಿಯನ್ನು ತಯಾರಿಸಿದರೆ ಮತ್ತು ಸಂವಾದವನ್ನು ಏರ್ಪಡಿಸಿದರೆ, ಭಾರತೀಯರು ಇಸ್ಲಾಮನ್ನು ಅಚ್ಚರಿಯಿಂದ ನೋಡಬಹುದು. ತಮ್ಮೆಲ್ಲ ಆರ್ಥಿಕ ಸಮಸ್ಯೆಗೆ  ಝಕಾತ್‍ನಲ್ಲಿ ಪರಿಹಾರವನ್ನು ಕಾಣಬಹುದು.
ಝಕಾತ್‍ಗೆ ಕನ್ನಡದಲ್ಲಿ ಕಡ್ಡಾಯ ದಾನ ಎಂದು ಅರ್ಥ ಕೊಡಬಹುದು. ಇಸ್ಲಾಮಿನಲ್ಲಿ ದಾನ ಮತ್ತು ಕಡ್ಡಾಯ ದಾನ ಎರಡೂ ಇದೆ. ದಾನವನ್ನು ಸರ್ವರೂ ನೀಡಬೇಕು. ಇದಕ್ಕೆ ಬಡವರು, ಶ್ರೀಮಂತರು ಎಂಬ ಭೇದವಿಲ್ಲ. ಆದರೆ ಕಡ್ಡಾಯ ದಾನದ  ಪಟ್ಟಿಯಲ್ಲಿ ಬಡವರು ಸೇರುವುದಿಲ್ಲ. ಶ್ರೀಮಂತರು ತಮ್ಮ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಬಡವರಿಗೆ ನೀಡುವುದರ ಹೆಸರೇ ಝಕಾತ್. ನಮಾಝï ಎಂಬುದು ದೇವ ಮತ್ತು ಮನುಷ್ಯನನ್ನು ಜೋಡಿಸುವುದರ ಹೆಸರಾದರೆ,  ಝಕಾತ್- ಮನುಷ್ಯ ಮತ್ತು ಮನುಷ್ಯರನ್ನು ಜೋಡಿಸುವುದರ ಹೆಸರು. ಆದ್ದರಿಂದಲೇ, ನಮಾಝï ಮಾಡಿರಿ ಎಂದು ಹೇಳುವುದರ ಜೊತೆಜೊತೆಗೇ ಝಕಾತ್ ನೀಡಿರಿ ಎಂದೂ ಪವಿತ್ರ ಕುರ್‍ಆನ್ ಹೇಳಿದೆ. ಇಲ್ಲಿಯ ಭಾಷೆ ಮತ್ತು ಧ್ವನಿಯಲ್ಲಿ  ಏಕರೂಪತೆಯಿದೆ. ಯಾರಾದರೊಬ್ಬರು ತಾನು ನಮಾಝï ಮಾಡುತ್ತೇನೆ, ಆದರೆ ನನ್ನ ಸಂಪತ್ತಿನಿಂದ ಕಡ್ಡಾಯವಾದ ದಾನ ಕೊಡಲಾರೆ ಎಂದು ಘೋಷಿಸಿದರೆ ಅವರು ಅಪರಾಧಿಯಾಗುತ್ತಾರೆ. ಅಂಥವರ ವಿರುದ್ಧ ಪ್ರಥಮ ಖಲೀಫ ಅಬೂಬಕರ್ (ರ)ರು ಯುದ್ಧ ಘೋಷಣೆಯ ಮಾತು ಆಡಿದ್ದರು. ಅದರರ್ಥ- ಸಂಕಟದಲ್ಲಿರುವವರ ನೋವುಗಳಿಗೆ ಸ್ಪಂದಿಸದ ಶ್ರೀಮಂತನ ನಮಾಝನ್ನು ದೇವನು ಬಯಸುವುದಿಲ್ಲ ಎಂದೇ.
ಝಕಾತ್ ಎಂಬುದು ಈ ಜಗತ್ತಿನ ಪಾಲಿಗೆ ಹೊಚ್ಚ ಹೊಸತಾದ  ಆರ್ಥಿಕ ಫಿಲಾಸಫಿ. ಜಗತ್ತಿನ ಯಾವ ತತ್ವ ಸಿದ್ಧಾಂತವೂ ಕೂಡ ಈ ಬಗೆಯ ಆರ್ಥಿಕ ಲೆಕ್ಕಾಚಾರವನ್ನು ಮಂಡಿಸಿಲ್ಲ. ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುವುದು ಮತ್ತು ಬಡವರು ಬಡವರಾಗಿಯೇ ಉಳಿಯುವುದಕ್ಕೆ ಪರಿಹಾರವನ್ನು  ಕಂಡುಕೊಳ್ಳಲಾಗಿಲ್ಲ. ಕಾರ್ಲ್‍ಮಾರ್ಕ್ಸ್  ಸಿದ್ಧಾಂತವನ್ನು ಜಗತ್ತು ಒಂದು ಹಂತದ ವರೆಗೆ ಪ್ರಯೋಗಿಸಿ ನೋಡಿತು. ಶ್ರೀಮಂತರ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವ ಮತ್ತು ಕಾರ್ಮಿಕರ ಬವಣೆಗಳಿಗೆ ಶ್ರೀಮಂತರನ್ನೇ ಹೊಣೆ ಮಾಡುವುದರ ಆಚೆಗೆ  ಶ್ರೀಮಂತ ಮತ್ತು ಬಡವ ಎಂಬ ಕಂದಕವನ್ನು ಮುಚ್ಚಿ ಸೇತುವೆಯೊಂದನ್ನು ನಿರ್ಮಿಸಬಹುದಾದ ಸಾಧ್ಯತೆಯನ್ನು ಕಂಡುಕೊಳ್ಳಲು ಅದಕ್ಕೂ ಸಾಧ್ಯವಾಗಲಿಲ್ಲ. ಆದರೂ ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಪ್ರೇರೇಪಿಸಲು ಈ  ಸಿದ್ಧಾಂತ ಯಶಸ್ವಿಯಾಗಿದೆ ಅನ್ನುವುದನ್ನು ಒಪ್ಪಿಕೊಳ್ಳಬೇಕು. ಆ ಬಳಿಕ ಉದಾರೀಕರಣ, ಜಾಗತೀಕರಣಗಳು ಜಗತ್ತಿನ ಮೇಲೆ ದಾಳಿ ಮಾಡಿದುವು. ಈ ದಾಳಿಗೂ ಅಪ್ಪಚ್ಚಿಯಾದುದು ಮತ್ತು ಆಗುತ್ತಿರುವುದು ಬಡವರು ಮತ್ತು ಕಾರ್ಮಿಕರೇ. ಈ  ಮೂರೂ ಆರ್ಥಿಕ ಸಿದ್ಧಾಂತಗಳ ಬಹುದೊಡ್ಡ ವೈಫಲ್ಯ ಏನೆಂದರೆ, ಬಡವರ ಮೇಲೆ ಶ್ರೀಮಂತರಿಗೆ ಯಾವ ಹೊಣೆಗಾರಿಕೆಯನ್ನೂ ಇವು ವಹಿಸುವುದಿಲ್ಲ. ಶ್ರೀಮಂತ ತನ್ನ ಸ್ವಸಾಮರ್ಥ್ಯದಿಂದ ಶ್ರೀಮಂತನಾಗಿದ್ದಾನೆ ಮತ್ತು ಬಡವ ತನ್ನ ಕೌಶಲ್ಯರಹಿತ  ಸ್ಥಿತಿಯಿಂದಾಗಿ ಬಡವನಾಜಿದ್ದಾನೆ ಅನ್ನುವ ಪರೋಕ್ಷ ಸಂದೇಶವನ್ನಷ್ಟೇ ಇವು ಕೊಡುತ್ತಿವೆ. ಝಕಾತ್ ಇದಕ್ಕೆ ತದ್ವಿರುದ್ಧ. ಶ್ರೀಮಂತನ ಶ್ರೀಮಂತಿಕೆಗೆ ಆತನ ಸ್ವಸಾಮರ್ಥ್ಯವೊಂದೇ ಕಾರಣ ಎಂಬುದನ್ನು ಅದು ಒಪ್ಪುವುದಿಲ್ಲ. ಬಡವನ ಬಡತನಕ್ಕೂ  ಆತನ ಕೌಶಲ್ಯರಹಿತ ಸ್ಥಿತಿಯೇ ಕಾರಣ ಎಂದೂ ಅದು ಷರಾ ಬರೆಯುವುದಿಲ್ಲ. ವ್ಯಕ್ತಿಯೋರ್ವನ ಶ್ರೀಮಂತಿಕೆಯ ಹಿಂದೆ ದೇವಾನುಗ್ರಹವಿದೆ ಎಂದು ಅದು ಹೇಳುತ್ತದೆ ಮತ್ತು ಈ ದೇವಾನುಗ್ರಹವನ್ನು ಬಡವರೊಂದಿಗೆ ಹಂಚಿಕೊಳ್ಳುವ ಮೂಲಕ  ತೀರಿಸಿಕೊಳ್ಳಬೇಕು ಎಂದು ಆದೇಶಿಸುತ್ತದೆ. ಹೀಗೆ ಹೇಳುವುದರಿಂದ ಎರಡು ಲಾಭ ಇದೆ.
1. ಬಡವನು ಶ್ರೀಮಂತನನ್ನು ವೈರಿಯಂತೆ ನೋಡುವುದಿಲ್ಲ.
2. ಬಡವ ಸದಾಕಾಲ ಬಡವನಾಗಿಯೇ ಉಳಿಯುವುದೂ ಇಲ್ಲ.
 ಶ್ರೀಮಂತನ ಶ್ರೀಮಂತಿಕೆಯಲ್ಲಿ  ಬಡವ ತನ್ನ ಏಳಿಗೆಯನ್ನು ಕಾಣುತ್ತಾನೆ. ಶ್ರೀಮಂತನ ಸಂಪತ್ತಿನಲ್ಲಿ ತನ್ನ ಪಾಲೂ ಇದೆ ಎಂಬ ಭಾವವು ಈರ್ಷ್ಯೆಯ ಬದಲು ಸಮಾಧಾನವನ್ನು ತರಿಸುತ್ತದೆ. ಬಡವನನ್ನು ಆ ಸ್ಥಿತಿಯಿಂದ ಮೇಲೆತ್ತುವ ಹೊಣೆಗಾರಿಕೆಯು ತನ್ನ ಮೇಲಿದೆ ಎಂಬ  ಪ್ರಜ್ಞೆಯು ಶ್ರೀಮಂತನಲ್ಲೂ ಜಾಗೃತವಾಗಿರುತ್ತದೆ. ತನ್ನ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಬಡವನಿಗೆ ಕೊಡುವ ಮೂಲಕ ಆತನನ್ನು ಆರ್ಥಿಕವಾಗಿ ಚೇತರಿಸುವಂತೆ ಮಾಡುವುದು ಮತ್ತು ಸಬಲರ ಸಾಲಲ್ಲಿ ಸೇರುವುದಕ್ಕೆ ನೆರವು ನೀಡುವುದೂ  ನಡೆಯುತ್ತದೆ. ಇದೊಂದು ರೀತಿಯಲ್ಲಿ ಸೇತುವೆಯ ಹಾಗೆ. ಈ ಸೇತುವೆಗೆ ಗೇಟುಗಳಿಲ್ಲ. ಬಡವನೂ ಶ್ರೀಮಂತನೂ ಸರಾಗವಾಗಿ ಅತ್ತಿತ್ತ ನಡೆಯಬಲ್ಲ ಸೌಹಾರ್ದದ ಸೇತುವೆ ಇದು. ಇಲ್ಲಿ ಕಾರ್ಮಿಕ ಶ್ರೀಮಂತನನ್ನು ಗೌರವಿಸುತ್ತಾನೆ. ಶ್ರೀಮಂತನು  ಕಾರ್ಮಿಕನನ್ನು ತನ್ನ ಸಂಪತ್ತಿನ ಪಾಲುದಾರನಾಗಿ ಪರಿಗಣಿಸುತ್ತಾನೆ. ಹಾಗಂತ,

 ಜಗತ್ತಿನ ಮುಸ್ಲಿಮರೆಲ್ಲ ನಮಾಝïನಷ್ಟೇ ಝಕಾತ್‍ಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ ಎಂದಲ್ಲ. ಒಂದುವೇಳೆ ಹಾಗೆ ಕೊಟ್ಟಿರುತ್ತಿದ್ದರೆ ಇವತ್ತು ಹಿಂದುಳಿದ ಮುಸ್ಲಿಮ್ ಗಲ್ಲಿಗಳು ಕಾಣಸಿಗಲು ಸಾಧ್ಯವೇ ಇರುತ್ತಿರಲಿಲ್ಲ. 2011ರ ಜನಗಣತಿಯಂತೆ ಪ್ರತಿ ನಾಲ್ಕರಲ್ಲಿ  ಓರ್ವ ಭಿಕ್ಷುಕ ಮುಸ್ಲಿಮ್. ಇದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ನ್ಯಾಷನಲ್ ಕೌನ್ಸಿಲ್ ಫಾರ್ ಅಪ್ಲೈಡ್ ಇಕನಾಮಿಕ್ಸ್ ರಿಸರ್ಚ್‍ನ ಪ್ರಕಾರ, ಭಾರತದ ಪಟ್ಟಣ ಪ್ರದೇಶಗಳಲ್ಲಿ ಬದುಕುತ್ತಿರುವ ಮುಸ್ಲಿಮರ ಪೈಕಿ ಪ್ರತಿ 10ರಲ್ಲಿ 3 ಮಂದಿ  ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾಚಾರ್ ಸಮಿತಿಯ ವರದಿಯ ಅಧ್ಯಾಯ 12, ಪುಟ 237ರಲ್ಲಿ ಉಲ್ಲೇಖಿಸಿರುವಂತೆ, ಭಾರತದ ಎಲ್ಲ ರಾಜ್ಯಗಳಲ್ಲೂ ಮುಸ್ಲಿಮರು ಹಿಂದುಳಿದವರಾಗಿದ್ದಾರೆ. ಇತ್ತೀಚೆಗೆ ಭಾರತದ ನೀತಿ ಆಯೋಗವು ಪ್ರಕಟಿಸಿದ  ವರದಿಯು ಈ ಎಲ್ಲ ಮಾಹಿತಿಗಳನ್ನೂ ಪುಷ್ಟೀಕರಿಸುವಂತೆ ಇದೆ. ದೇಶದಲ್ಲಿಯೇ ಅತ್ಯಂತ ಕಡಿಮೆ ಅಭಿವೃದ್ಧಿಗೊಂಡಿರುವ 101 ಜಿಲ್ಲೆಗಳ ಪೈಕಿ ದೆಹಲಿಗೆ ಹತ್ತಿರವಿರುವ ಮೇವಾತ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮುಸ್ಲಿಮರ ಸಂಖ್ಯೆ ಅತ್ಯಧಿಕವಿದೆ. ಇದರ  ಹತ್ತಿರವೇ ಇರುವ ಗುರುಗ್ರಾಮ್ ಜಿಲ್ಲೆಯಲ್ಲಿ ಮಲ್ಟಿನ್ಯಾಷನಲ್ ಕಂಪೆನಿಗಳು ಬಿಡಾರ ಹೂಡಿವೆ. ದೇಶದ ಅತ್ಯಂತ ಮುಂದುವರಿದ ಜಿಲ್ಲೆಗಳಲ್ಲಿ ಇದೂ ಒಂದು. ದೇಶದ ಅತ್ಯಂತ ಹೆಚ್ಚು ಹಿಂದುಳಿದಿರುವ 20 ಜಿಲ್ಲೆಗಳ ಪೈಕಿ 11 ಜಿಲ್ಲೆಗಳೂ ಮುಸ್ಲಿಮ್  ಬಾಹುಳ್ಯವಿರುವ ಜಿಲ್ಲೆಗಳಾಗಿವೆ. ಇಲ್ಲೂ ಎರಡು ವಿಷಯಗಳು ಸ್ಪಷ್ಟವಾಗಿ ಎದ್ದು ಕಾಣುತ್ತದೆ.
1. ಮುಸ್ಲಿಮರ ಬಗ್ಗೆ ವ್ಯವಸ್ಥೆಯ ನಿರ್ಲಕ್ಷ್ಯ.
2. ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಸ್ಲಿಮ್ ಸಮುದಾಯ ವಿಫಲವಾಗಿರುವುದು.
ಒಂದುವೇಳೆ, ವ್ಯವಸ್ಥೆ ಮುಸ್ಲಿಮರ ಮೇಲೆ ಕಾಕದೃಷ್ಟಿ ಬೀರಿದರೂ ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಸ್ಲಿಮರಿಗೆ ಸಾಧ್ಯವಾಗಿದ್ದರೆ, ಅಂಕಿ-ಅಂಶಗಳು ಇಷ್ಟು ನೀರಸವಾಗಿ ಇರುತ್ತಿರಲಿಲ್ಲ. ಒಂದುಕಡೆ, ಸರಕಾರದ ಅವಕೃಪೆ  ಮತ್ತು ಇನ್ನೊಂದು ಕಡೆ ಮುಸ್ಲಿಮ್ ಸಮುದಾಯದ ಶ್ರೀಮಂತರ ಹೊಣೆರಹಿತ ವರ್ತನೆ- ಇವೆರಡೂ ಜೊತೆಯಾದಾಗ ಏನಾಗಬಹುದೋ ಅದುವೇ ಆಗಿದೆ. ಅಷ್ಟಕ್ಕೂ,
ಇದು ಭಾರತೀಯ ಮುಸ್ಲಿಮ್ ಶ್ರೀಮಂತರ ಸಮಸ್ಯೆಯಷ್ಟೇ ಅಲ್ಲ, ಜಾಗತಿಕವಾಗಿ ಮುಸ್ಲಿಮ್ ರಾಷ್ಟ್ರಗಳಲ್ಲಿರುವ ಸಮಸ್ಯೆಯೂ ಇದುವೇ. ಮುಸ್ಲಿಮರು ಬಹುಸಂಖ್ಯಾತರಿರುವ ಸುಮಾರು 47 ರಾಷ್ಟ್ರಗಳಲ್ಲಿ ಝಕಾತ್ ಕಡ್ಡಾಯವಾಗಿ  ಸಂಗ್ರಹವಾಗುತ್ತಿರುವುದು- ಲಿಬಿಯ, ಮಲೇಶ್ಯಾ, ಪಾಕಿಸ್ತಾನ, ಸೌದಿ ಅರೇಬಿಯ, ಸುಡಾನ್ ಮತ್ತು ಯಮನ್‍ಗಳಲ್ಲಿ ಮಾತ್ರ. ಇಲ್ಲಿ ಸರಕಾರವೇ ಮುಂದೆ ನಿಂತು ಝಕಾತನ್ನು ಸಂಗ್ರಹಿಸುತ್ತದೆ. ಈಜಿಪ್ಟ್, ಜೋರ್ಡಾನ್, ಬಹರೈನ್, ಕುವೈತ್, ಲೆಬನಾನ್,  ಬಾಂಗ್ಲಾದೇಶ, ಇರಾನ್, ಜೋರ್ಡಾನ್, ಯುಎಇ, ಇಂಡೋನೇಶ್ಯಾ ಮುಂತಾದ ರಾಷ್ಟ್ರಗಳಲ್ಲಿ ಝಕಾತ್ ಸಂಗ್ರಹಕ್ಕೆ ಸರಕಾರದ ವತಿಯಿಂದ ವ್ಯವಸ್ಥೆ ಮಾಡಲಾಗಿದೆಯಾದರೂ ಝಕಾತನ್ನು ನೀಡುವ ಅಥವಾ ಬಿಡುವ ಅವಕಾಶವನ್ನು ಶ್ರೀಮಂತರಿಗೇ  ಬಿಟ್ಟುಕೊಡಲಾಗಿದೆ. ಉಳಿದಂತೆ ಟರ್ಕಿ, ಉಝ್ಬೆಕಿಸ್ತಾನ್, ಟುನೀಶ್ಯಾ, ತಜಕಿಸ್ತಾನ್, ಸೊಮಾಲಿಯ, ಸೆನೆಗಲ್, ಕತಾರ್, ಸಿರಿಯಾ, ಒಮಾನ್, ಕಝಕಿಸ್ತಾನ್, ಇರಾಕ್, ಅಲ್ಜೀರಿಯಾ, ಅಫಘಾನಿಸ್ತಾನ್ ಇತ್ಯಾದಿ ರಾಷ್ಟ್ರಗಳಲ್ಲೆಲ್ಲ ಝಕಾತ್ ಸಂಗ್ರಹಕ್ಕೆ  ಸರಕಾರಿ ವ್ಯವಸ್ಥೆಯೇ ಇಲ್ಲ. ಮುಸ್ಲಿಮ್ ರಾಷ್ಟ್ರಗಳೇ ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂದ ಮೇಲೆ ಮತ್ತು ಸಂಗ್ರಹಿಸಿದ ಮೊತ್ತವನ್ನೂ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆಯೆಂದ ಮೇಲೆ ಭಾರತೀಯ  ಮುಸ್ಲಿಮರ ವೈಫಲ್ಯವನ್ನು ನಾವು ವಿಶ್ವದ ಎಂಟನೇ ಅದ್ಭುತವಾಗಿ ನೋಡಬೇಕಿಲ್ಲ. ಆದರೂ ವೈಫಲ್ಯವನ್ನು ವೈಫಲ್ಯವೆಂದು ಒಪ್ಪಿಕೊಳ್ಳದೇ ಹೋದರೆ ತಿದ್ದಿಕೊಳ್ಳುವುದಕ್ಕೆ ಅವಕಾಶವೇ ಇರುವುದಿಲ್ಲವಲ್ಲ. ಆ ಕಾರಣಕ್ಕಾಗಿ ಯಾದರೂ ಭಾರತೀಯ  ಮುಸ್ಲಿಮರು ಹೊಸತೊಂದು ಸ್ಟ್ರಾಟಜಿಯನ್ನು ತಯಾರಿಸಬೇಕು. ಹಾಗಂತ, ಈ ಸ್ಟ್ರಾಟಜಿ ಮುಸ್ಲಿಮರಿಗೆ ಮಾತ್ರ ಸೀಮಿತವಾಗಬೇಕಿಲ್ಲ. ಮುಸ್ಲಿಮೇತರರನ್ನೂ ಆಕರ್ಷಿಸಬಲ್ಲಂಥ ಪ್ರಾಯೋಗಿಕ ಸ್ಟ್ರಾಟಜಿಯನ್ನು ರೂಪಿಸಬೇಕು. ಮುಖ್ಯವಾಗಿ,
ಪ್ರತಿ ಮಸೀದಿಗಳೂ ಝಕಾತ್ ಕಮಿಟಿಯನ್ನು ರಚಿಸಬೇಕು. ಈ ಕಮಿಟಿಯಲ್ಲಿ ಮಸೀದಿಯ ಅಧ್ಯಕ್ಷರು, ಧರ್ಮಗುರುಗಳು, ಶ್ರೀಮಂತರೂ ಇರುವಂತೆ ನೋಡಿಕೊಳ್ಳಬೇಕು. ಈ ದೇಶದ ಪ್ರತಿ ಮಸೀದಿಯಲ್ಲೂ ಆ ಮಸೀದಿಯ ವ್ಯಾಪ್ತಿಗೆ ಒಳಪಟ್ಟವರ  ಹೆಸರು ಮತ್ತು ವಿಳಾಸಗಳು ಇರುತ್ತವೆ ಮತ್ತು ಪ್ರತಿ ಮುಸ್ಲಿಮರೂ ಯಾವುದಾದರೊಂದು ಮಸೀದಿಗೆ ಒಳಪಟ್ಟಿರುತ್ತಾರೆ. ಈ ಝಕಾತ್ ಕಮಿಟಿ ಏನು ಮಾಡಬೇಕೆಂದರೆ, ಪ್ರತಿ ಮನೆಯ ವಿವರಗಳನ್ನೂ ಸಮಗ್ರವಾಗಿ ಸಂಗ್ರಹಿಸುವ ತಂಡಗಳನ್ನು  ರಚಿಸಬೇಕು. ಆ ವಿವರಗಳಲ್ಲಿ ಮನೆಯ ಸದಸ್ಯರ ಸಂಖ್ಯೆ, ಹೆಣ್ಣು-ಗಂಡು, ವಿದ್ಯಾರ್ಥಿಗಳು, ದುಡಿಯುವವರು, ರೋಗಿಗಳು, ವಿಧವೆಯರು, ಮದುವೆ ಪ್ರಾಯದ ಯುವತಿಯರು, ವೃದ್ಧರು, ಕುಟುಂಬದ ವರಮಾನ, ಬಿಪಿಎಲ್, ಎಪಿಎಲ್ ಸೌಲಭ್ಯವನ್ನು ಹೊಂದಿರುವವರು, ಮಾಸಾಶನವೂ ಸೇರಿದಂತೆ ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವವರು ಇತ್ಯಾದಿ ಇತ್ಯಾದಿ ಸಂಪೂರ್ಣ ವಿವರಗಳುಳ್ಳ ಡಾಟಾವನ್ನು ಮಸೀದಿಯ ಕಂಪ್ಯೂಟರ್‍ನಲ್ಲಿ ದಾಖಲಿಸಿ ಇಡಬೇಕು. ಇಷ್ಟು ವಿವರಗಳನ್ನು ಕಲೆ ಹಾಕಿದರೆ 90% ಕೆಲಸ  ಮುಗಿದಂತೆ. ಈ ವಿವರಗಳನ್ನು ನೋಡಿದ ಆ ಮಸೀದಿ ವ್ಯಾಪ್ತಿಯ ಯಾವುದೇ ಶ್ರೀಮಂತ ಝಕಾತನ್ನು ನೀಡದೇ ಇರಲಾರ. ದಾನಿಗಳೂ ಸಹಾಯ ಮಾಡಲು ಮುಂದೆ ಬಂದಾರು. ಪ್ರತಿ ಮಸೀದಿಯ ವ್ಯಾಪ್ತಿಯಲ್ಲಿರುವ ಬಡವರನ್ನು ಸಬಲರನ್ನಾಗಿ  ಮಾಡುವುದು ಝಕಾತ್ ಕಮಿಟಿಯ ಗುರಿಯಾಗಿರಬೇಕು. ಟೀ ಶಾಪ್, ರಿಕ್ಷಾ, ತಳ್ಳುಗಾಡಿ, ದಿನಸಿ ಅಂಗಡಿ, ಮೊಬೈಲ್ ರಿಪೇರಿ-ಟಿ.ವಿ. ರಿಪೇರಿ ಶಾಪ್, ಪೈಂಟಿಂಗ್, ಸಾರಣೆಗೆ ಬೇಕಾದ ಪರಿಕರಗಳು... ಹೀಗೆ ಜನರ ಕೌಶಲ್ಯವನ್ನು ಪರಿಗಣಿಸಿ  ಬೇಕಾದುದನ್ನು ಒದಗಿಸಬೇಕು. ಆ ಮೂಲಕ ಅವರು ಸ್ವಾವಲಂಬಿಗಳಾಗುವಂತೆ ಮಾಡಬೇಕು. ಮುಂದಿನ ವರ್ಷಗಳಲ್ಲಿ ಅವರೂ ಝಕಾತ್ ನೀಡುವಂತೆ ಮಾಡುವವರೆಗೆ ಝಕಾತ್ ಕಮಿಟಿ ಅವರ ಮೇಲೆ ಒಂದು ಕಣ್ಣಿಡಬೇಕು. ತನ್ನ ಆದಾಯದ  2.5% ಝಕಾತ್ ನೀಡುವಂತೆ ಆಯಾ ಮಸೀದಿ ವ್ಯಾಪ್ತಿಯ ಶ್ರೀಮಂತರಿಗೆ ಮನವರಿಕೆ ಮಾಡಿಸುವ ಹೊಣೆಗಾರಿಕೆಯನ್ನೂ ಝಕಾತ್ ಕಮಿಟಿ ಹೊತ್ತುಕೊಳ್ಳಬೇಕು. ಅಂದಹಾಗೆ, ಝಕಾತ್‍ನ ಶೇಕಡಾವಾರು ಮೊತ್ತ ಏಕರೂಪವಲ್ಲ. ನೀರಾವರಿ ಕೃಷಿಗೆ  5%, ಮಳೆನೀರು ಕೊಯ್ಲಿಗೆ 10%, ಬಂಗಾರ-ಬೆಳ್ಳಿ, ಹಣ, ವ್ಯಾಪಾರ, ವೇತನ ಇತ್ಯಾದಿಗಳಿಗೆ 2.5%, ಖನಿಜ ಮೂಲದಿಂದ ಪಡೆದ ಆದಾಯಕ್ಕೆ 20%... ಹೀಗೆ ಝಕಾತ್ ಕಮಿಟಿಯಲ್ಲಿ ಪಕ್ಕಾ ಲೆಕ್ಕಾಚಾರವಿರಬೇಕು. ಇದೇನೂ ಅಸಾಧ್ಯವಲ್ಲ. ಪ್ರತಿ  ಮಸೀದಿಗಳೂ ಮನಸ್ಸು ಮಾಡಿದರೆ ಮತ್ತು ಮಸೀದಿ ಧರ್ಮಗುರುಗಳು ಹಾಗೂ ಮಸೀದಿ ಕಮಿಟಿಗಳು ಮುತುವರ್ಜಿ ತೋರಿದರೆ ದೊಡ್ಡದೊಂದು ಬದಲಾವಣೆ ಸಾಧ್ಯವಾಗಬಹುದು. ಮಾತ್ರವಲ್ಲ, ಮುಸ್ಲಿಮೇತರ ಸಮುದಾಯಕ್ಕೂ ಇದು  ಮಾದರಿಯಾಗಬಹುದು. ಅಂದಹಾಗೆ,
ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಇನ್ಫೋಸಿಸ್ ಮತ್ತಿತರ ದಿಗ್ಗಜರು ತಮ್ಮ ಶ್ರೀಮಂತಿಕೆಯಲ್ಲಿ ಬಡವರದ್ದೂ ಪಾಲಿದೆ ಎಂದು ಅಂದುಕೊಳ್ಳುವುದನ್ನು ಮತ್ತು ಅದನ್ನು ತಮ್ಮ ಸಮುದಾಯದ ಬಡವರಿಗೆ ಪಾವತಿಸಲು ಮುಂದಾಗುವುದನ್ನೊಮ್ಮೆ  ಊಹಿಸಿ. ಅದು ಈ ದೇಶದಲ್ಲಿ ಮಾಡಬಹುದಾದ ಕ್ರಾಂತಿಯನ್ನೊಮ್ಮೆ ಲೆಕ್ಕ ಹಾಕಿ.