Wednesday, September 27, 2023

ಮಕ್ಕಳನ್ನು ಹೊರಗೆ ನಿಲ್ಲಿಸುವ ಮಸೀದಿ ಬೋರ್ಡುಗಳು





ಜನರೇಶನ್ ಗ್ಯಾಪ್

ಮೊನ್ನೆ ಸಂಜೆ ಕಚೇಯಿಂದ ಹೊರಡುವಾಗ ಆ ವಿದ್ಯಾರ್ಥಿ ಯುವಕ ಹತ್ತಿರ ಬಂದ. ಗೆಳೆಯನ ಮಗ. ಬೈಕ್‌ನಲ್ಲಿ ನಾನೂ  ಬರಬಹುದಾ ಎಂದು ವಿನಯದಿಂದ ಪ್ರಶ್ನಿಸಿದ. ಹತ್ತಿಸಿಕೊಂಡೆ. ಏನು ಸ್ಟಡೀ ಮಾಡ್ತಾ ಇರುವಿ ಎಂದು ಪ್ರಶ್ನಿಸಿದೆ. ಆರ್ಟಿಫಿಶಿಯಲ್  ಇಂಟೆಲಿಜೆನ್ಸ್ ಅಂದ. ನನ್ನಲ್ಲಿ ಕುತೂಹಲ. ಆತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಾಗಿ ಹಲವು ಸಂಗತಿಗಳನ್ನು ಹಂಚಿಕೊಂಡ.  ಮುಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಿರುವ ಅವಕಾಶ, ಭವಿಷ್ಯ ಮತ್ತು ಭಾರತಕ್ಕಿಂತ ವಿದೇಶದಲ್ಲಿ ಇದಕ್ಕಿರಬಹುದಾದ  ಅಪಾರ ಸಾಧ್ಯತೆಗಳ ಕುರಿತಾಗಿ ಅಭಿಪ್ರಾಯಗಳನ್ನು ಹಂಚುತ್ತಾ ಹೋದ. ಆತನ ಮಾತುಗಳನ್ನು ಆಲಿಸುತ್ತಾ ಹೋದಾಗಲೆಲ್ಲ ನಾನು ಈ  ವಿಷಯದಲ್ಲಿ ಒಂದನೇ ತರಗತಿ ಎಂಬುದೂ ಗೊತ್ತಾಯಿತು. ಈ ನಡುವೆ ಆತ ಹೇಳಿದ ಮಾತೊಂದು ನನ್ನನ್ನು ಬಹಳವೇ ಕಾಡಿತು-  ‘ತನಗೆ ಡಿಸೈನಿಂಗ್ ಫೀಲ್ಡ್ ಇಷ್ಟ ಮತ್ತು ಆ ಕಾರಣದಿಂದ ಇನ್‌ಸ್ಟಾಗ್ರಾಂನಲ್ಲಿ ಇಂಥವುಗಳನ್ನೇ ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳುವೆ,  ಸಮಯ ಸಿಕ್ಕಾಗ ಅವನ್ನು ವೀಕ್ಷಿಸುವೆ’ ಎಂದೂ ಹೇಳಿದ. ನಿಜವಾಗಿ,

ಇನ್‌ಸ್ಟಾಗ್ರಾಂ ವೀಕ್ಷಿಸುವುದೆಂದರೆ ಚಿತ್ರವಿಚಿತ್ರ ಹಾಡು, ಹಾವಭಾವ, ಡ್ಯಾನ್ಸ್ ಗಳನ್ನು ವೀಕ್ಷಿಸುವುದೆಂದೇ ಹೆಚ್ಚಿನ ಹೆತ್ತವರು ಭಾವಿಸಿದ್ದಾರೆ.  ಆದ್ದರಿಂದ ಇನ್‌ಸ್ಟಾಗ್ರಾಂ ವೀಕ್ಷಿಸದಂತೆ ಮಕ್ಕಳ ಮೇಲೆ ನಿಯಂತ್ರಣ ಹೇರುವುದೂ ಇದೆ. ಇದು ಸಂಪೂರ್ಣ ತಪ್ಪು ಎಂದಲ್ಲ. ಆದರೆ, ಇ ನ್‌ಸ್ಟಾಗ್ರಾಂ ಅನ್ನು ಒಂದು ಮಗು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬಹುದು ಮತ್ತು ಕಲಿಕೆ, ಪ್ರತಿಭಾ ಪೋಷಣೆಗೆ ಪೂರಕವಾದ  ಏನೆಲ್ಲಾ ಅದರಲ್ಲಿದೆ ಎಂಬ ಬಗ್ಗೆ ಹೆತ್ತವರಲ್ಲಿ ಮಾಹಿತಿಗಳ ಕೊರತೆ ಇರುತ್ತದೆ. ಇದಕ್ಕೆ ಕಾರಣ ಜನರೇಶನ್ ಗ್ಯಾಪ್. ಟೆಕ್ನಾಲಜಿಯ ಈ  ಕಾಲದಲ್ಲಿ ನಾಲ್ಕೈದು  ವರ್ಷ ಪ್ರಾಯ ಅಂತರವಿರುವವರಲ್ಲೇ  ತಾಂತ್ರಿಕವಾಗಿ ಅಗಾಧ ಅಂತರ ಎದ್ದು ಕಾಣುತ್ತದೆ. ಕ್ಷಣಕ್ಷಣಕ್ಕೂ ಹೊಸ  ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿರುವಾಗ ತಲೆಮಾರುಗಳ ನಡುವೆ ಬಹಳ ಬೇಗನೇ ಅಂತರ ಉಂಟಾಗುತ್ತಿರುತ್ತದೆ. ಆರ್ಟಿಫಿಶಿಯಲ್  ಇಂಟೆಲಿ ಜೆನ್ಸ್ ನ  ಬಗ್ಗೆ ಇವತ್ತು ಯುವಸಮೂಹಕ್ಕೆ ಗೊತ್ತಿರುವ ಒಂದು ಶೇಕಡಾ ಮಾಹಿತಿ ಕೂಡ ಅವರ ಹೆತ್ತವರಿಗಿರುವುದಿಲ್ಲ. ಇಂಥ  ಉದಾಹರಣೆಗಳು ಸಾಕಷ್ಟು ಇವೆ.
ಸಮಸ್ಯೆ ಏನೆಂದರೆ,

ತಮಗೆ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಂಡು ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸುವುದು ಬೇರೆ, ತಮಗೆ ಗೊತ್ತಿಲ್ಲ ಅನ್ನುವುದನ್ನೇ  ಅವಮಾನ ಎಂದು ಭಾವಿಸಿ ಮಕ್ಕಳನ್ನೇ ಗದರಿಸುತ್ತಾ ಅವರ ಪ್ರತಿ ನಡೆಯನ್ನೂ ವಿರೋಧಿಸುತ್ತಾ ಅವರ ಮಾತನ್ನು ತುಂಡರಿಸುತ್ತಾ  ವರ್ತಿಸುವುದು ಬೇರೆ. ಅನೇಕ ಹೆತ್ತವರು ಮಕ್ಕಳ ಮೇಲೆ ಹೀಗೆ ನಿಷ್ಠುರವಾಗಿ ವರ್ತಿಸುವುದಿದೆ. ಹೆತ್ತವರಿಗೆ ಗೊತ್ತು ಮಾಡುವ ಮಕ್ಕಳ  ಪ್ರಯತ್ನವನ್ನು ಉದ್ಧಟತನವೆಂಬಂತೆ  ಕಂಡು ಬಾಯಿ ಮುಚ್ಚಿಸುವ ಹೆತ್ತವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ನಿಜವಾಗಿ,

ಜನರೇಶನ್ ಗ್ಯಾಪ್‌ನ ಪರಿಣಾಮವಿದು.

ಇದಕ್ಕೆ ಪರಿಹಾರ ಏನು? ಮಕ್ಕಳ ಜೊತೆ ಹೆಚ್ಚೆಚ್ಚು ಒಡನಾಡುವುದು ಮತ್ತು ಅವರೊಂದಿಗೆ ತಮಾಷೆ, ಖುಷಿಯ ಕ್ಷಣ ಗಳನ್ನು  ಹಂಚಿಕೊಂಡು  ಮಾಹಿತಿ ವಿನಿಮಯವಾಗುವಂತೆ ನೋಡಿಕೊಳ್ಳುವುದು ಇದಕ್ಕಿರುವ ಹಲವು ಪರಿಹಾರಗಳಲ್ಲಿ ಒಂದು. ಮಕ್ಕಳೊಂದಿಗೆ  ಅಂತರ ಹೆಚ್ಚಾದಂತೆಲ್ಲಾ ಮಾಹಿತಿಗಳ ವಿನಿಮಯವೂ ಕಡಿಮೆಯಾಗುತ್ತದೆ. ಜೊತೆಗೇ ಮಕ್ಕಳ ಮೇಲೆ ಅನಗತ್ಯ ಸಂದೇಹಗಳಿಗೂ ಆಸ್ಪದ  ಕೊಡುತ್ತದೆ. ಮಗನೋ ಮಗಳೋ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದರೆ ಹೆತ್ತವರಿಗೆ ಸಣ್ಣ ಸಂದೇಹ ಮತ್ತು ಕಳವಳ. ಅದರಲ್ಲಿ ಬರೇ ಬೇಡದ್ದೇ   ಇದೆ ಎಂಬ ಪೂರ್ವಾಗ್ರಹವೇ ಈ ಸಂದೇಹ ಮತ್ತು ಅಸಹನೆಗೆ ಕಾರಣ. ಒಂದುವೇಳೆ, ಆ ಬಗ್ಗೆ ಮಕ್ಕಳ ಜೊತೆಗೇ ಕುಳಿತು  ತಿಳಿದುಕೊಳ್ಳುವ ಪ್ರಯತ್ನ ಸಾಗಿದರೆ ಸಾಕಷ್ಟು ಸಂದೇಹಗಳು ನಿವಾರಣೆಯಾಗಬಹುದು. ಸದ್ಯದ ದಿನಗಳಲ್ಲಿ ಮಕ್ಕಳನ್ನು ಹೆಚ್ಚೆಚ್ಚು ಆಪ್ತವಾಗಿಸಿಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ. ಈ ವಿಷಯಗಳಲ್ಲಿ ಪ್ರವಾದಿ(ಸ) ಅತ್ಯಂತ ಪರಮೋಚ್ಛ ಮಾದರಿ. ಅವರು ಪುಟ್ಟ ಮಕ್ಕಳಿಂದ  ಹಿಡಿದು ಹದಿಹರೆಯದವರ ಜೊತೆಗೂ ಒಡನಾಡಿದ ಅನೇಕ ವರದಿಗಳು ಸಾಕಷ್ಟು ಹದೀಸ್ ಗ್ರಂಥಗಳಲ್ಲಿವೆ. ಹದಿಹರೆಯದವರನ್ನಾಗಲಿ  ಮಕ್ಕಳನ್ನಾಗಲಿ ಅವರು ಕರ್ಕಶವಾಗಿ ನಡೆಸಿಕೊಂಡದ್ದು ಇಲ್ಲವೇ ಇಲ್ಲ. ಎಲ್ಲಿಯವರೆಗೆಂದರೆ,

ಫಜ್ಲ್  ಬಿನ್ ಅಬ್ಬಾಸ್ ಎಂಬ ಹದಿಹರೆಯದ ಯುವಕ ಪ್ರವಾದಿಯವರ ಜೊತೆ ಪ್ರಯಾಣದಲ್ಲಿದ್ದರು. ಹೀಗೆ ಸಾಗುವಾಗ  ಯುವತಿಯೋರ್ವಳು ಎದುರಾದಳು. ಫಜ್ಲ್ ಗೆ    ದೃಷ್ಟಿ ಕಳಚಲಾಗಲಿಲ್ಲ. ಪ್ರವಾದಿ(ಸ) ಯುವಕ ಫಜ್ಲ್  ರ ಗಲ್ಲವನ್ನು ಹಿಡಿದು ಮುಖವನ್ನು ಇನ್ನೊಂದು ಕಡೆಗೆ ತಿರುಗಿಸಿದರು. ಆದರೆ, ಪ್ರವಾದಿ(ಸ) ಫಜ್ಲ್  ರನ್ನು ಹೀಯಾಳಿಸಿದ್ದಾಗಲಿ, ಬೈದದ್ದಾಗಲಿ, ಮನಸ್ಸಿಗೆ ನೋವಾಗುವಂಥ ಒಂದೇ ಒಂದು ಮಾತನ್ನು ಆಡಿದ್ದಾಗಲಿ ಇಲ್ಲವೇ ಇಲ್ಲ. ಯಾಕೆಂದರೆ, ಹದಿಹರೆಯದವರ ಭಾವನೆಗಳ ಬಗ್ಗೆ ಪ್ರವಾದಿಯವ ರಿಗೆ (ಸ) ಅರಿವಿತ್ತು. ಆ ಪ್ರಾಯದವರೊಂದಿಗೆ ಹೇಗೆ ನಡಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆಯಿತ್ತು. ಫಜ್ಲ್  ರ ಪ್ರಾಯದಲ್ಲಿ ನಿಂತು  ಯೋಚಿಸುವ ಸಾಮರ್ಥ್ಯ ಪ್ರವಾದಿಯವರಿಗೆ ಇದ್ದಿದ್ದರಿಂದಲೇ ಗಲ್ಲವನ್ನು ಹಿಡಿದು ಪ್ರೀತಿಯಿಂದ ಮುಖ ತಿರುಗಿಸುವ ಮೂಲಕ ತಿದ್ದಿದರು. ನಿಜವಾಗಿ,

ಮುಕ್ತ ಸ್ವಾತಂತ್ರ‍್ಯದ ಈ ಆಧುನಿಕ ಕಾಲದಲ್ಲಿ ಹದಿಹರೆಯದವರನ್ನು ತಿದ್ದಲು ಹೊರಡುವವರಲ್ಲಿ ಇರಬೇಕಾದ ಎಚ್ಚರಿಕೆಗಳಿವು. ಬೆರಳ  ತುದಿಯಲ್ಲಿ ಜಗತ್ತನ್ನೇ ನೋಡಲು ಸಾಧ್ಯವಿರುವ ಈ ಕಾಲದಲ್ಲಿ ಹೆತ್ತವರು ತಮ್ಮ ಹದಿಹರೆಯದ ಮಕ್ಕಳ ವಿಷಯದಲ್ಲೂ ಪ್ರವಾದಿಯ  ಪ್ರೀತಿ ಮತ್ತು ಜಾಣ್ಮೆಯನ್ನು ಪ್ರದರ್ಶಿಸಬೇಕಿದೆ. ಕಾಲದ ಬದಲಾವಣೆಯನ್ನು ಲೆಕ್ಕಿಸದೇ ಮಕ್ಕಳ ಜೊತೆ ವರ್ತಿಸುವುದರಿಂದ ಲಾಭಕ್ಕಿಂತ  ನಷ್ಟವೇ ಹೆಚ್ಚಾಗಬಹುದು.

ಇಮಾಮ್ ಬುಖಾರಿ ಉಲ್ಲೇಖಿಸಿರುವ ವಚನ ಹೀಗಿದೆ:

ಉಮರ್ ಬಿನ್ ಅಬೀಸಲಮ ಅವರು ಮಗುವಾಗಿದ್ದಾಗಿನ ಘಟನೆ. ಚಿಕ್ಕ ಪ್ರಾಯದ ಉಮರ್ ಪ್ರವಾದಿ(ಸ)ರ ಜೊತೆ ಊಟಕ್ಕೆ ಕುಳಿತ.  ಬಟ್ಟಲಿನ ಉದ್ದಕ್ಕೂ ಬೆರಳಾಡಿಸಿ ಮತ್ತು ಕೈ ತಾಗಿಸಿ ತಿನ್ನತೊಡಗಿದ. ಪ್ರವಾದಿ(ಸ) ಬಾಲಕ ಉಮರ್‌ನನ್ನು ತಿದ್ದಿದರು. ತಿನ್ನುವ ಮೊದಲು  ಬಿಸ್ಮಿ ಹೇಳಬೇಕು ಎಂದು ಹೇಳಿಕೊಟ್ಟರು. ಆ ಬಳಿಕ ಬಲಗೈಯಿಂದ ತಿನ್ನಬೇಕು ಎಂದು ಮೈದಡವಿ ಹೇಳಿ ದರು. ಮಾತ್ರವಲ್ಲ, ಬಟ್ಟಲಿನ  ಉದ್ದಕ್ಕೂ ಕೈಹಾಕಿ ತಿನ್ನಬಾರದು, ನಿನ್ನ ಹತ್ತಿರದಿಂದ ತಿನ್ನಬೇಕು ಎಂದೂ ಹೇಳಿಕೊಟ್ಟರು.
ಪ್ರವಾದಿ(ಸ) ಹೇಳಿದ ರೀತಿ ತನ್ನ ಮೇಲೆ ಎಂಥ ಪರಿಣಾಮ ಬೀರಿತೆಂದರೆ, ಆ ಬಳಿಕ ಜೀವಮಾನದಲ್ಲಿ ಒಮ್ಮೆಯೂ ಈ ಉಪ ದೇಶವನ್ನು ನಾನು ಉಲ್ಲಂಘಿಸಿಲ್ಲ ಎಂದು ಉಮರ್ ಬಿನ್ ಅಬೀ ಸಲಮ ಹೇಳಿರುವುದಾಗಿ ಬುಖಾರಿ ಗ್ರಂಥದಲ್ಲಿ ನಮೂದಿಸಲಾಗಿದೆ.

ಇದೊಂದೇ ಅಲ್ಲ,

ಪ್ರವಾದಿ(ಸ) ಮಕ್ಕಳನ್ನು ಅತಿಯಾಗಿ ಹಚ್ಚಿಕೊಳ್ಳುತ್ತಿದ್ದರು. ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಮಾತ್ರವೇ ಅಲ್ಲ, ಎಲ್ಲ ಮಕ್ಕಳನ್ನೂ  ಪ್ರೀತಿಯಿಂದ ಮಾತನಾಡಿಸುವುದು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡುವುದು ಅವರ ರೀತಿಯಾಗಿತ್ತು. ಒಂದು  ಬಾರಿ ಹೀಗಾಯಿತು,

ಅವರು ಸಾಮೂಹಿಕ ನಮಾಝï‌ನ ನೇತೃತ್ವ ವಹಿಸಿದ್ದರು. ಸುಜೂದ್ ತುಂಬಾ ದೀರ್ಘವಾಯಿತು. ಎಷ್ಟೆಂದರೆ, ನಮಾಜ್  ನಲ್ಲಿದ್ದ  ಎಲ್ಲರ ಅನುಭವಕ್ಕೂ ಬರುವಷ್ಟು. ಆದ್ದರಿಂದಲೇ ನಮಾಜ್  ಮುಗಿದ ಬಳಿಕ ಪ್ರವಾದಿಯವರನ್ನು ಆ ಬಗ್ಗೆ ಅವರೆಲ್ಲ ಪ್ರಶ್ನಿಸಿದರು. ಆಗ  ಪ್ರವಾದಿ(ಸ) ಹೇಳಿದರು,

‘ನಾನು ಸುಜೂದ್‌ನಲ್ಲಿದ್ದಾಗ ನನ್ನ ಬೆನ್ನ ಮೇಲೆ ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ ಹತ್ತಿದರು. ಆದ್ದರಿಂದ ಅವರು ಇಳಿಯು  ವವರೆಗೆ ನಾನು ಕಾದೆ. ಆದ್ದರಿಂದ ಸುಜೂದ್ ದೀರ್ಘವಾಯಿತು.’ ಇದೊಂದೇ ಅಲ್ಲ, ನಮಾಜ್ನ  ವೇಳೆ ಮತ್ತು ಮಿಂಬರ್‌ನಲ್ಲಿದ್ದ  ಸಮಯದಲ್ಲೂ ಪ್ರವಾದಿ ಮಕ್ಕಳನ್ನು ಪ್ರೀತಿಸಿದ್ದರು ಎಂಬುದಾಗಿ ಇಮಾಮ್ ಅಹ್ಮದ್ ಮತ್ತು ನಸಾಈ ಉಲ್ಲೇಖಿಸಿರುವ ಹದೀಸ್ ಗಳ ಲ್ಲಿದೆ. ಅಂದಹಾಗೆ,

ಪ್ರವಾದಿಯ ಈ ಉದಾಹರಣೆಯನ್ನು ಇಂದಿನ ಕಾಲದ ಮಸೀದಿಗಳಿಗೆ ಅನ್ವಯಿಸಿ ನೋಡಿ. 7 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಮಸೀ ದಿಗೆ ಕರೆತರಬೇಡಿ ಎಂಬ ಬೋರ್ಡು ತೂಗು ಹಾಕಲಾದ ಮಸೀದಿಗಳು ಅಸಂಖ್ಯ ಇವೆ. ಹಾಗಂತ, ಇಂಥ ಬೋರ್ಡ್ ಗೆ  ಅದರದ್ದೇ   ಆದ ಕಾರಣಗಳು ಇರಬಹುದು. ಆದರೆ ಹೆತ್ತವರನ್ನು ಅನುಸರಿಸಿಕೊಂಡು ಬೆಳೆಯಬೇಕಾದ ಮತ್ತು ನಮಾಜ್ ನ   ಚೈತನ್ಯವನ್ನು ತನ್ನೊಳಗೆ ಇಳಿಸಿಕೊಳ್ಳಬೇಕಾದ ಮಕ್ಕಳನ್ನು ಹೀಗೆ ಮಸೀದಿಯಿಂದ ಹೊರಗಿರಿಸುವ ಬದಲು ಮಸೀದಿಗೆ ತಾಗಿಕೊಂಡೇ ಕಿಡ್ಸ್ ರೂಮನ್ನು  ನಿರ್ಮಿಸಿದರೆ ಎಷ್ಟು ಚೆನ್ನಾದೀತು? ಹಾಗೆ ಮಾಡಿದರೆ ಆಡುತ್ತಲೇ ನಮಾಝನ್ನು ಜೀರ್ಣಿಸಿಕೊಳ್ಳುವ ಅವಕಾಶವೊಂದು ಮಕ್ಕಳಿಗೆ  ಸಿಕ್ಕಂತಾಗದೇ? ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಮಸೀದಿಯಲ್ಲಿ ನಮಾಝಿಗರನ್ನು ನೋಡುತ್ತಾ ಬೆಳೆಯುವ ಮಗು ಮಸೀದಿಗೆ  ಹತ್ತಿರವಾಗುತ್ತದೆ. ಆರಂಭದಲ್ಲಿ ಸಣ್ಣ-ಪುಟ್ಟ ಕೀಟಲೆ, ಆಟ, ಶಬ್ದ ಇದ್ದದ್ದೇ . ನಿಧಾನಕ್ಕೆ ಅದು ಸರಿ ಹೋಗುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ನಮಾಝಿಗರು ಮಕ್ಕಳ ಈ ತುಂಟಾಟವನ್ನು ಮಹಾನ್ ಅಪರಾಧವೆಂಬಂತೆ  ಕಾಣುವುದಿದೆ. ನಮಾಜ್  ಮುಗಿದ ಕೂಡಲೇ ಆ  ಮಕ್ಕಳನ್ನು ನೂರು ಕಣ್ಣುಗಳು ಸುಡುವಂತೆ ತಿರುಗಿ ನೋಡುವುದಿದೆ. ಮಕ್ಕಳನ್ನು ಹತ್ತಿರ ಕರೆದು ಮೈದಡವಿ ಪ್ರೀತಿಯಿಂದ ಮತ್ತೆ ಮತ್ತೆ  ಹೇಳುವ ಸಹನೆ ಇವತ್ತಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ, ಹಿರಿಯರು ಮಕ್ಕಳ ಬಗ್ಗೆ ಮಗುವಾಗಿ ಆಲೋಚಿಸದೇ  ಇರುವುದು.

ಒಮ್ಮೆ ಪ್ರವಾದಿಯವರು(ಸ) ಹಸನ್ ಮತ್ತು ಹುಸೈನ್ ಜೊತೆ ಆಡುತ್ತಿದ್ದ ವೇಳೆ ಅಲ್ಲಿಗೆ ಮುಆವಿಯಾ ಬಂದರು. ಅವರು ಆಟವನ್ನು  ನೋಡತೊಡಗಿದರು. ಆಗ ಪ್ರವಾದಿ(ಸ) ಹೇಳಿದರು,

ಯಾರಿಗಾದರೂ ಮಕ್ಕಳಿದ್ದರೆ ಅವರು ಮಕ್ಕಳ ಜೊತೆ ಮಗುವಾಗಲಿ. ಇನ್ನೊಂದು ಘಟನೆ,

ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್‌ರನ್ನು ಬೆನ್ನ ಮೇಲೆ ಕೂರಿಸಿ ಪ್ರವಾದಿ(ಸ) ಆಟವಾಡುತ್ತಿದ್ದಾಗ ಉಮರ್ ಬಿನ್ ಖತ್ತಾಬ್(ರ)  ಅಲ್ಲಿಗೆ ಬಂದರು. ‘ಎಷ್ಟು ಒಳ್ಳೆಯ ಕುದುರೆ ನಿಮ್ದು’ ಎಂದು ಮಕ್ಕಳನ್ನು ನೋಡಿ ನಗುತ್ತಾ ಹೇಳಿದರು. ಆಗ ಪ್ರವಾದಿ(ಸ), ‘ಇವರಿಬ್ಬರೂ  ಒಳ್ಳೆಯ ಕುದುರೆ ಸವಾರರು’ ಎಂದರು ಎಂಬುದಾಗಿ ಇಬ್ನು ಕಸೀರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಗಳು ಫಾತಿಮಾ(ರ)ರನ್ನು ಪ್ರವಾದಿ ತನ್ನ ಕರುಳಿನ ತುಂಡು ಎಂದು ಹೇಳಿದ್ದರು. ಫಾತಿಮಾ ಹತ್ತಿರ ಬಂದಾಗ ಎದ್ದು ನಿಂತು ಅವರನ್ನು  ಆಲಿಂಗಿಸಿ ಚುಂಬಿಸಿ ತನ್ನ ಬಳಿ ಕುಳ್ಳಿರಿಸುತ್ತಿದ್ದರು. ಒಮ್ಮೆ ಫಾತಿಮಾ ಪುಟ್ಟ ದೂರಿನೊಂದಿಗೆ ಪ್ರವಾದಿ(ಸ)ರ ಬಳಿಗೆ ಬಂದರು. ಪತಿ ಅಲಿಯವರ(ರ) ಮನೆಯಲ್ಲಿ ಕೆಲಸದಾಳು ಇಲ್ಲದೇ ಇರುವುದರಿಂದ ತನಗಾಗುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡರು. ಪ್ರವಾದಿ(ಸ)  ಫಾತಿಮಾರನ್ನು ಹತ್ತಿರ ಕುಳ್ಳಿರಿಸಿದರು. ಸಹನೆಯ ಉಪದೇಶ ಮಾಡಿದರು. ಆಯಾಸದ ವೇಳೆ ಹೇಳುವುದಕ್ಕೆಂದು ಕೆಲವು ಸ್ವಸ್ತಿ ವಚ ನಗಳನ್ನು ಹೇಳಿಕೊಟ್ಟರು. ಅಂದಹಾಗೆ,

ಹದಿಹರೆಯದ ಮತ್ತು ಚಿಕ್ಕ ಪ್ರಾಯದ ಮಕ್ಕಳ ಮಾತುಗಳನ್ನು ಅವರ ಮಟ್ಟಕ್ಕೆ ಇಳಿದು ಕೇಳುವ ಮತ್ತು ಆಲೋಚಿಸುವ ಸಹನೆ  ಪ್ರದರ್ಶಿಸುವುದು ಇಂದಿನ ಹೆತ್ತವರ ಪಾಲಿಗೆ ಬಹಳ ಅಗತ್ಯ. ಮಕ್ಕಳು, ಹದಿಹರೆಯದವರು ಮತ್ತು ದೊಡ್ಡವರ ಜೊತೆ ಪ್ರವಾದಿ(ಸ)  ಏಕಪ್ರಕಾರವಾಗಿ ನಡಕೊಂಡದ್ದೇ  ಇಲ್ಲ. ಹದಿಹರೆಯದ ಸಹಜ ಆಕರ್ಷಣೆಗೆ ಅವರು ಪ್ರತಿಕ್ರಿಯಿಸಿದ ರೀತಿ ಮತ್ತು ಮಕ್ಕಳ ಜೊತೆ  ಮಗುವಾಗುತ್ತಿದ್ದ ರೀತಿಯೇ ಅವರು ಕಾಲ ಮತ್ತು ಪ್ರಾಯವನ್ನು ಹೇಗೆ ಓದುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಜನರೇಶನ್ ಗ್ಯಾ ಪ್‌ಗೆ ಅವರಲ್ಲಿ ಅವಕಾಶವೇ ಇರಲಿಲ್ಲ. ಆ ಕಾಲದ ಜನರೇಶನ್‌ನ ಭಾವನೆಯನ್ನು ಅವರು ಓದಬಲ್ಲವರಾಗಿದ್ದರು. ಅಳಿಯನಾದ ಅಲಿಯವರನ್ನು(ರ) ತರಾಟೆಗೆತ್ತಿಕೊಳ್ಳುವ ಬದಲು ತಾನು ಅತಿಯಾಗಿ ಪ್ರೀತಿಸುವ ಮಗಳಿಗೆ ಅವರು ಉಪದೇಶ ನೀಡಿದ್ದೇ  ಸಂದರ್ಭ  ಮತ್ತು ಸನ್ನಿವೇಶವನ್ನು ಅವರು ಹೇಗೆ ತಿಳಿದುಕೊಳ್ಳುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಈಗಿನ ಅಗತ್ಯ ಇದು. ಟೆಕ್ನಾಲಜಿಯ ಈ  ಕಾಲದಲ್ಲಿ ಜನರೇಶನ್ ಗ್ಯಾಪ್ ಆಗದಂತೆ ಹೆತ್ತವರು ಜಾಗರೂಕತೆಯನ್ನು ಪಾಲಿಸಬೇಕು.

Thursday, September 14, 2023

ಇಸ್ಲಾಮೋಫೋಬಿಯಾದ ಫಲಿತಾಂಶವೇ ಈ ಹೇಮಾ, ರೇವತಿ, ತ್ಯಾಗಿ?




ನಾಲ್ಕು ಘಟನೆಗಳು

1. ತಮಿಳುನಾಡಿನ ತಿರುವಣ್ಣಮಲೈ ನಗರದ ಸೋಮಸಿಪಾಡಿ ಗ್ರಾಮದ ಅಣ್ಣಾಮಲೈ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಹಿಂದಿ ಪರೀಕ್ಷೆ ನಡೆಯುತ್ತಿತ್ತು. 27 ವರ್ಷದ ಶಬಾನಾ ಪರೀಕ್ಷೆಗೆ ಹಾಜರಾದರು. ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ ಏರ್ಪಡಿಸಿದ್ದ  ಈ ಪರೀಕ್ಷೆಗೆ 540 ಮಂದಿ ಹಾಜರಾಗಿದ್ದರು. ಇವರಲ್ಲಿ ಶಬಾನಾ ಏಕೈಕ ಹಿಜಾಬ್‌ಧಾರಿ ಮಹಿಳೆ. ಇವರು ಕ್ವಾಲಿಫೈಡ್ ಅರೆಬಿಕ್ ಟೀಚರ್.  ಖಾಸಗಿ ಶಾಲೆಯೊಂದರಲ್ಲಿ ಈ ಶಬಾನಾ ಅರೆಬಿಕ್ ಟೀಚರ್ ಆಗಿಯೂ ಕೆಲಸ ಮಾಡುತ್ತಿದ್ದರು. ಪರೀಕ್ಷೆ ಬರೆಯುತ್ತಾ 15 ನಿಮಿಷಗಳು  ಕಳೆದಿರಬಹುದು. ಪರೀಕ್ಷಾ ಹಾಲ್‌ನ ಮೇಲ್ನೋಟ ವಹಿಸಿಕೊಂಡಿದ್ದ ರೇವತಿ ಟೀಚರ್ ಅವರ ಬಳಿಗೆ ಬಂದು ಹಿಜಾಬ್‌ಗೆ ಆಕ್ಷೇಪ ವ್ಯಕ್ತ ಪಡಿಸಿದರು. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರಿ ಎಂದು ಆದೇಶಿಸಿದರು. ಶಬಾನಾ ಒಪ್ಪಲಿಲ್ಲ. ತಮಿಳುನಾಡಿನ ಯಾವುದೇ ಶಾಲೆಯಲ್ಲಾಗಲಿ  ಪರೀಕ್ಷಾ ಹಾಲ್‌ನಲ್ಲಾಗಲಿ ಹಿಜಾಬ್‌ಗೆ ನಿಷೇಧ ಇರಲಿಲ್ಲ. ಶಬಾನಾ ವಾದಿಸಿದರು. ಬಳಿಕ ಶಾಲಾ ಪ್ರಾಂಶುಪಾಲ ಸಂತೋಷ್ ಕುಮಾರ್  ಅವರ ಪ್ರವೇಶವಾಯಿತು. ಒಂದೋ ಹಿಜಾಬ್ ಇಲ್ಲವೇ ಪರೀಕ್ಷೆ ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವ ಅವಕಾಶ ಇದೆ ಎಂದು  ಅವರು ಷರಾ ಬರೆದರು. ಶಬಾನಾ ಒಪ್ಪಲಿಲ್ಲ. ತಾನು ಅರೆಬಿಕ್ ಟೀಚರ್ ಆಗಿದ್ದು, ಹಿಜಾಬ್ ಕಳಚುವುದರಿಂದ ತನ್ನ ಮಕ್ಕಳಿಗೆ ಕೆಟ್ಟ  ಸಂದೇಶ ರವಾನೆಯಾಗುತ್ತದೆ ಎಂದರೂ ಅವರು ಕೇಳಲಿಲ್ಲ. ಶಾಲಾ ಕರೆಸ್ಟಾಂಡೆಂಟ್  ಆಗಮಿಸಿ ಆಕೆಯ ಪ್ಯಾಡ್ ಅನ್ನು ಕಿತ್ತುಕೊಂಡರು.  ಮಾತ್ರವಲ್ಲ, ಸ್ವಇಚ್ಛೆಯಿಂದ ಪರೀಕ್ಷಾ ಹಾಲ್‌ನಿಂದ ತೆರಳುತ್ತಿರುವುದಾಗಿ ಬರಹದ ಮೂಲಕ ಬರೆದುಕೊಡು ಎಂದೂ ಆಗ್ರಹಿಸಿದರು.  ಶಬಾನಾ ಈ ಎಲ್ಲ ಸಂಗತಿಯನ್ನು ಜಿಲ್ಲಾಧಿಕಾರಿ ಮುರುಗೇಶ್ ಅವರ ಗಮನಕ್ಕೆ ತಂದರು. ಶಿಕ್ಷಣ ಸಚಿವ ಅಸ್‌ಬಿಲ್ ಮಹೇಶ್  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಶಬಾನಾರಿಗೆ ಮರಳಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಯಿತು. ಆದರೆ, ಘಟ ನೆಯಿಂದ ತಾನು ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ ಎಂದ ಶಬಾನಾ ಆ ಹೊತ್ತಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ನೊಂದು  ನುಡಿದರು. ಇದು 2023, ಆಗಸ್ಟ್ 22ರಂದು ನಡೆದ ಘಟನೆ.

2. ದೆಹಲಿಯ ಕೈಲಾಶ್ ನಗರದ ಸರಕಾರಿ ಪ್ರೌಢಶಾಲೆಯ ಟೀಚರ್ ಹೇಮಾ ಗುಲಾಟಿ 9ನೇ ತರಗತಿಗೆ ಪಾಠ ಮಾಡುತ್ತಿದ್ದರು.  ಚಂದ್ರಯಾನವು ಚಂದ್ರನಿಗೆ ಮುತ್ತಿಕ್ಕುವುದಕ್ಕೆ ಗಂಟೆಗಳಷ್ಟೇ ಬಾಕಿಯಿತ್ತು. ದೆಹಲಿ ಸರಕಾರ ಹೊಸದಾಗಿ ಅಳವಡಿಸಿರುವ ದೇಶಭಕ್ತಿ ಪಾಠ ಪುಸ್ತಕವನ್ನು ಬೋಧಿಸುತ್ತಿರುವ ವೇಳೆ ಮುಸ್ಲಿಮರು ಮತ್ತು ಇಸ್ಲಾಮ್‌ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದರು. ‘ಮುಸ್ಲಿಮರು  ಭಾರತೀಯ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಯಾವ ಪಾತ್ರವನ್ನೂ ನಿಭಾಯಿಸಿಲ್ಲ, ನೀವು ಪ್ರಾಣಿಗಳನ್ನು ಹತ್ಯೆ ಮಾಡು ತ್ತೀರಿ’ ಮತ್ತು ಅದರ  ಮಾಂಸವನ್ನು ತಿನ್ನುತ್ತೀರಿ. ನೀವು ಕರುಣೆ ಇಲ್ಲದವರು, ನೀವು ಪಾಕಿಸ್ತಾನಕ್ಕೆ ಹೋಗಿ... ಎಂದು 52 ವಿದ್ಯಾರ್ಥಿಗಳ ಮುಂದೆ ಆಕೆ  ಹೇಳಿದರು. ಹಾಗಂತ, ಆಕೆ ಹೀಗೆ ಮಾತನಾಡುತ್ತಿರುವುದು ಅದು ಮೊದಲ ಬಾರಿ ಆಗಿರಲಿಲ್ಲ. ತರಗತಿಯಲ್ಲಿರುವ 9 ಮುಸ್ಲಿಮ್  ವಿದ್ಯಾರ್ಥಿಗಳು ಈ ಬಾರಿ ಆಕ್ಷೇಪಿಸಿದರು. ಇದೇವೇಳೆ, ಕೆಲವು ವಿದ್ಯಾರ್ಥಿಗಳು ಆಕೆಯ ಮಾತಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.  ಇದಾದ ಬಳಿಕ ಮಕ್ಕಳ ಹೆತ್ತವರು ಈ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾದರು ಮತ್ತು ಹೇಮಾ ಗುಲಾಟಿ ತಪ್ಪೊಪ್ಪಿಕೊಂಡು ಕ್ಷಮೆ  ಯಾಚಿಸಿದರು. ಇದು ನಡೆದಿರುವುದು ಆಗಸ್ಟ್ 23ರಂದು.

3. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಖುಬ್ಬೂಪುರ್ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್ ಕೂಡ ಇಂಥದ್ದೇ  ಮುಸ್ಲಿಮ್ ದ್ವೇಷದ  ಕಾರಣಕ್ಕಾಗಿ ಸುದ್ದಿಗೀಡಾಯಿತು. ಒಂದರಿಂದ  5ನೇ ತರಗತಿಯವರೆಗೆ ಕಲಿಸಲಾಗುವ ಈ ಖಾಸಗಿ ಶಾಲೆಯಲ್ಲಿ ಒಟ್ಟು 52  ವಿದ್ಯಾರ್ಥಿಗಳಿದ್ದಾರೆ. ಎರಡನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಉಳಿದ ವಿದ್ಯಾರ್ಥಿಗಳಿಂದ ಟೀಚರ್ ತೃಪ್ತ ತ್ಯಾಗಿ  ಬಾರಿಸುತ್ತಾರೆ. ಮಾತ್ರವಲ್ಲ, ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಎರಡನೇ ತರಗತಿಯ ಆ ವಿದ್ಯಾರ್ಥಿ ಅಳುತ್ತಾ ಕರಿ  ಹಲಗೆಯ ಬಳಿ ನಿಂತಿರುವುದು ಮತ್ತು ಸಹಪಾಠಿಗಳು ಒಬ್ಬೊಬ್ಬರಾಗಿ ಬಂದು ಆತನ ಕೆನ್ನೆಗೆ ಬಾರಿಸುವುದು ವೀಡಿಯೋದಲ್ಲಿದೆ.  ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಗಿಸುವುದಕ್ಕೆ ಹೆತ್ತವರ ಮೇಲೆ ಒತ್ತಡಗಳೂ  ಬಂದಿವೆ. ಇದು ಆಗಸ್ಟ್ 22ರ ಘಟನೆ.

4. ಜನವರಿ 22, 2022ರಂದು ನಮ್ಮದೇ ರಾಜ್ಯದಲ್ಲಿ ಹಿಜಾಬ್ ವಿವಾದ ಶುರುವಾಯಿತು. ಎರಡ್ಮೂರು ತಿಂಗಳ ಕಾಲ ವಿದ್ಯಾರ್ಥಿ ನಿಯರನ್ನು ಇನ್ನಿಲ್ಲದಂತೆ ಕಾಡಿದ ಈ ವಿವಾದದಿಂದಾಗಿ 1010 ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ವಿಧಾನಸಭೆಗೆ ಸರಕಾರವೇ  ತಿಳಿಸಿರುವ ಮಾಹಿತಿ ಹೇಳುತ್ತದೆ.

ಹಾಗಂತ, ಇವೆಲ್ಲ ಒಂದು ಬೆಳಗಾತ ದಿಢೀರನೇ ಉಂಟಾದ ಬೆಳವಣಿಗೆ ಎಂದು ಅನಿಸುತ್ತಿಲ್ಲ.

ಜನರ ಮನಸ್ಸಿನಲ್ಲಿ ಇಸ್ಲಾಮೋಫೋಬಿಕ್ ಅಥವಾ ಇಸ್ಲಾಮ್‌ನ ಬಗೆಗಿನ ಭೀತಿಯ ಭಾವವನ್ನು ಸೃಷ್ಟಿಸುವ ಪ್ರಯತ್ನ ಬಹಳ ಹಿಂದಿನಿಂದಲೇ ನಡೆಯುತ್ತಾ ಬಂದಿದೆ. ಸಿನಿಮಾ, ನಾಟಕ, ಯಕ್ಷಗಾನ, ಕತೆ, ಕಾದಂಬರಿಗಳ ಮೂಲಕ ಈ ದ್ವೇಷದ ಇಂಜಕ್ಷನ್ ಅನ್ನು ಜನರಿಗೆ ಚುಚ್ಚುತ್ತಲೇ ಬರಲಾಗಿದೆ. ಇತ್ತೀಚಿನ ದಶಕದಲ್ಲಿ ಈ ದ್ವೇಷ ಪ್ರಚಾರದ ನೊಗವನ್ನು ಟಿ.ವಿ. ಚಾನೆಲ್‌ಗಳು ವಹಿಸಿ ಕೊಂಡ ಬಳಿಕ  ಹೆಚ್ಚು ತೀವ್ರ ರೂಪದ ಫಲಿತಾಂಶ ವ್ಯಕ್ತವಾಗುತ್ತಿದೆ.

ಮುಸ್ಲಿಮರನ್ನು ಲುಚ್ಚರಂತೆ, ಹೆಣ್ಣುಬಾಕರು, ಸರ್ವಾಧಿಕಾರಿಗಳು, ಮಹಿಳಾ ದೌರ್ಜನ್ಯಕೋರರು, ದರೋಡೆಕೋರರು, ಬಹುಪತ್ನಿ  ವಲ್ಲಭರು ಮತ್ತು ಇನ್ನಿತರ ಅತಿಕೆಟ್ಟ ವ್ಯಕ್ತಿತ್ವಗಳಂತೆ ಬಿಂಬಿಸಲು ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳ ನಡುವೆ ಈಗಲೂ ಪೈಪೋಟಿಯೇ  ಇದೆ. 2012ರಲ್ಲಿ ಡಿಕ್ಟೇಟರ್ ಎಂಬ ಹಾಲಿವುಡ್ ಸಿನಿಮಾ ಬಿಡುಗಡೆಯಾಯಿತು. ಸಹಜವಾಗಿ ಇದರಲ್ಲಿ ಡಿಕ್ಟೇಟರ್ (ಸರ್ವಾಧಿಕಾರಿ)  ಮುಸ್ಲಿಮ್. ಯಾವುದೇ ಕಾರಣಕ್ಕೂ ಪ್ರಜಾತಂತ್ರ ತಳವೂರದಂತೆ ಮಾಡುವುದೇ ಆತನ ಕೆಲಸ. ಅದಕ್ಕಾಗಿ ಅತಿ ಕ್ರೂರಿಯಾಗಿ ಆತ  ಬದಲಾಗುತ್ತಾನೆ. ಹಾಗಂತ, 2012ರಲ್ಲಿ ಸಿನಿಮಾ ತಯಾರು ಮಾಡುವಾಗ ಮತ್ತು ಅದಕ್ಕಿಂತ ಮೊದಲೂ ಈ ಜಗತ್ತಿನಲ್ಲಿ ಮುಸ್ಲಿಮರಲ್ಲದ  ಸರ್ವಾಧಿಕಾರಿಗಳು ಸಾಕಷ್ಟು ಇದ್ದರು. ಜನರೊಂದಿಗೆ ಅತ್ಯಂತ ನಿರ್ದಯಿಯಾಗಿ ನಡಕೊಂಡವರೂ ಇದ್ದರು. ಈಗಲೂ ಇದ್ದಾರೆ. 2022  ಆಗಸ್ಟ್ 5ರಂದು ಅನ್ನು ಕಪೂರ್ ನಾಯಕತ್ವದ ‘ಹಮ್ ದೋ ಹಮಾರೆ ಬಾರಾ’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು.  ಅದರಲ್ಲಿ ಅನ್ನು ಕಪೂರ್ ಮುಸ್ಲಿಮ್ ಕುಟುಂಬದ ಯಜಮಾನನ ಪಾತ್ರ ಧಾರಿಯಾಗಿ ಕಾಣಿಸಿದ್ದರೆ ಸುತ್ತ-ಮುತ್ತ 11 ಮಕ್ಕಳಿದ್ದರು. ಅಲ್ಲದೇ  12ನೇ ಪ್ರಸವಕ್ಕೆ ಸಿದ್ಧವಾದ ಪತ್ನಿಯೂ ಜೊತೆಗಿದ್ದರು. 2023ರಲ್ಲಿ ಈ ಸಿನಿಮಾ ಬಿಡುಗಡೆಯೂ ಆಯಿತು. ಅಂದಹಾಗೆ, 

ಈ ಸಿನಿಮಾ  ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತೋ ಸೋತಿತೋ ಎಂಬುದಕ್ಕಿಂತ  ಹೆಚ್ಚಾಗಿ ಈ ಸಿನಿಮಾ ವೀಕ್ಷಿಸಿದವರ ಮೇಲೆ ಈ ಚಿತ್ರಕತೆ ಎಂಥ ಪರಿಣಾಮ  ಬೀರಿರಬಹುದು ಎಂಬುದೇ ಮುಖ್ಯ. ಮುಸ್ಲಿಮ್ ಸಮುದಾಯ ಮಕ್ಕಳನ್ನು ತಯಾರಿಸುವ ಕಾರ್ಖಾನೆಗಳಿದ್ದಂತೆ ಎಂಬ ಸಂದೇಶವನ್ನು  ಈ ಸಿನಿಮಾ ಬಿತ್ತುವುದಂತೂ ಖಂಡಿತ. ಹಾಗಂತ, ಈ ದೇಶದ ಜನಗಣತಿ ವಿವರಗಳು ಈ ಸಂದೇಶವನ್ನು ಪುರಸ್ಕರಿಸುತ್ತದೆಯೇ? ಇಲ್ಲ.  ಸ್ವಾತಂತ್ರ‍್ಯಾ ನಂತರ ನಡೆದ ಮೊದಲ ಜನಗಣತಿಯ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತ  ಹೆಚ್ಚಿತ್ತು. ಆದರೆ  2011ರ ಜನಗಣತಿಯ ಪ್ರಕಾರ, ಮುಸ್ಲಿಮರ ಫಲವತ್ತತೆಯ ಪ್ರಮಾಣ ಹಿಂದೂಗಳಿಗಿಂತಲೂ ವೇಗವಾಗಿ ಕುಸಿಯುತ್ತಿದೆ. ಹಿಂದುಳಿದ  ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಮರ ಫಲವತ್ತತೆಯ ಪ್ರಮಾಣ ಸಮಾನವಾಗಿ ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ಮುಸ್ಲಿಮರ ಫಲವತ್ತತೆಯ  ಪ್ರಮಾಣ ವೇಗವಾಗಿ ಕುಸಿಯುತ್ತಿದೆ. ಆದ್ದರಿಂದಲೇ, ಹಮ್ ದೋ ಹಮಾರೆ ಬಾರಾ ಸಿನಿಮಾ ಪೋಸ್ಟರ್‌ಗೆ ಪತ್ರಕರ್ತೆ ರಾಣಾ  ಅಯ್ಯೂಬ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಹಾಗೆ,

‘ಇಮ್ಯಾಜಿನಿಂಗ್  ಇಂಡಿಯನ್ ಮುಸ್ಲಿಮ್ಸ್: ಲುಕಿಂಗ್ ಥ್ರೂ ದಿ ಲೆನ್ಸ್ ಆಫ್ ಬಾಲಿವುಡ್’- ಎಂಬ ಸಂಶೋಧನಾ ಪ್ರಬಂಧದಲ್ಲಿ  ಮುಸ್ಲಿಮ್ ದ್ವೇಷಕ್ಕೆ ಬಾಲಿವುಡ್ ಸಿನಿಮಾಗಳ ಕೊಡುಗೆಯನ್ನು ಮೊಯಿದುಲ್ ಇಸ್ಲಾಮ್ ಬಿಡಿಬಿಡಿಯಾಗಿ ವಿವರಿಸಿದ್ದಾರೆ. ಹೆಚ್ಚಿನೆಲ್ಲ ಸಿನಿಮಾಗಳಲ್ಲಿ ಮುಸ್ಲಿಮರು ಒಂದೋ ಖಳರು ಅಥವಾ ಖೂಳರು ಅಥವಾ ಹೆಣ್ಣು ಬಾಕರು. ಮುಸ್ಲಿಮ್ ಪಾತ್ರವನ್ನು ನೆಗೆಟಿವ್ ಆಗಿ  ಬಿಂಬಿಸುವುದು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾ ನಿರ್ದೇಶಕರ ಮಾಮೂಲು ನೀತಿ. ಇನ್ನೊಂದು, ಐತಿಹಾಸಿಕ ಘಟನೆಗಳನ್ನು  ಹಿಂದೂ-ಮುಸ್ಲಿಮ್ ಆಗಿ ಚಿತ್ರೀಕರಿಸುವುದು. ಉದಾಹರಣೆಗೆ, ತಾನಾಜಿ ಸಿನಿಮಾ. 1670ರಲ್ಲಿ ಕೊಂಡಾಣದಲ್ಲಿ ಔರಂಗಝೇಬ್ ಮತ್ತು  ತಾನಾಜಿ ನಡುವೆ ನಡೆದ ಯುದ್ಧವನ್ನು ಯುದ್ಧವಾಗಿ ಬಿಂಬಿಸದೇ ಹಿಂದೂ-ಮುಸ್ಲಿಮ್ ನೆರಳಿನೊಂದಿಗೆ ಇದು ಕಟ್ಟಿಕೊಡುತ್ತದೆ.  ಅಲ್ಲಾವುದ್ದೀನ್ ಖಿಲ್ಜಿಯು ಚಿತ್ತೂರು ಮೇಲೆ ದಾಳಿ ಮಾಡಿ ಪದ್ಮಾವತಿಯ ಗಂಡ ರತನ್‌ಸಿಂಗ್‌ರನ್ನು ಕೊಂದ ಘಟನೆಯನ್ನು ನಿರ್ದೇಶಕ  ಸಂಜಯ್ ಲೀಲಾ ಬನ್ಸಾಲಿಯು
ಹಿಂದೂ-ಮುಸ್ಲಿಮ್ ರೀತಿಯಲ್ಲೇ  ಬಿಂಬಿಸಿದ್ದಾರೆ. ‘ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ’ದ ನಾಲ್ಕು ಮಂದಿ ಮಹಿಳೆಯರಲ್ಲಿ ಇಬ್ಬರು  ಮುಸ್ಲಿಮ್ ಪಾತ್ರಧಾರಿಗಳು. ಸ್ವಾತಂತ್ರ‍್ಯ ಹುಡುಕಾಟದ ಈ ಪಾತ್ರಗಳು ಪರೋಕ್ಷವಾಗಿ ಮುಸ್ಲಿಮ್ ಮಹಿಳೆಯರಿಗೆ ಸೀಮಿತ ಸ್ವಾತಂತ್ರ‍್ಯದ  ಸಂದೇಶವನ್ನು ರವಾನಿಸುತ್ತದೆ. ಇದರಾಚೆಗೆ ಸಂಜಯ್ ಪೂರಣ್ ಸಿಂಗ್ ನಿರ್ದೇಶನದ ‘72 ಹೂರೈನ್’ ಎಂಬ ಸಿನಿಮಾ ಏನು ಹೇಳಲಿದೆ ಎಂಬುದಕ್ಕೆ ವಿಶೇಷ ಸಂಶೋಧನೆಯೇನೂ ಬೇಕಾಗಿಲ್ಲ. ಇದರ ಜೊತೆಗೆ, ‘ದಿ ಕಾಶ್ಮೀರಿ ಫೈಲ್ಸ್’ ಮಾಡಿರುವ ಅನಾಹುತವನ್ನೂ  ಪರಿಗಣಿಸಬೇಕು. ಸಿನಿಮಾ ವೀಕ್ಷಿಸಿ ಹೊರ ಬಂದವರು ಮುಸ್ಲಿಮ್ ದ್ವೇಷದ ಮಾತುಗಳನ್ನು ಮಾಧ್ಯಮಗಳ ಮುಂದೆ  ಬಹಿರಂಗವಾಗಿಯೇ ಆಡಿರುವುದನ್ನು ಈ ದೇಶ ಕಂಡಿದೆ. ಹಿಂದೂಗಳ ವಿರುದ್ಧ ಮುಸ್ಲಿಮರು ಕ್ರೌರ್ಯ ಎಸಗಿದ್ದಾರೆ ಅನ್ನುವ ಬಲವಾದ  ಸಂದೇಶವನ್ನು ಈ ಸಿನಿಮಾ ದೇಶದುದ್ದಕ್ಕೂ ರವಾನಿಸಿದೆ ಮತ್ತು ಕಾಶ್ಮೀರಿ ಮುಸ್ಲಿಮರು ಪಂಡಿತರಿಗೆ ಆಶ್ರಯ ಕೊಟ್ಟ ಮತ್ತು ಅವರನ್ನು  ರಕ್ಷಿಸಿದುದಕ್ಕಾಗಿ ತಮ್ಮ ಜೀವಕ್ಕೇ ಅಪಾಯ ತಂದು ಕೊಂಡ ಸತ್ಯಗಳನ್ನು ಈ ಸಿನಿಮಾದಲ್ಲಿ ಮರೆಮಾಚಲಾಗಿದೆ. ಅಲ್ಲದೇ,  ಹಿಂದೂಗಳಿಗಿಂತ  ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಕಾಶ್ಮೀರದಲ್ಲಿ ಮುಸ್ಲಿಮರು ಉಗ್ರವಾದಕ್ಕೆ ಬಲಿಯಾಗಿರುವುದನ್ನೂ  ಅಡಗಿಸಿಡಲಾಗಿದೆ. ಹಾಗೆಯೇ ಕೇರಳ ಸ್ಟೋರಿ ಸಿನಿಮಾ ಮಾಡಿರುವುದೂ ಇಂಥದ್ದೇ  ಅನಾಹುತವನ್ನು. ಒಂದುರೀತಿಯಲ್ಲಿ,

ಸಿನಿಮಾಗಳು ಒಂದುಕಡೆ ಇಸ್ಲಾಮೋಫೋಬಿಯಾವನ್ನು ಹರಡಲು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವಾಗಲೇ, ಹಿಂದಿ ಮತ್ತು  ಇಂಗ್ಲಿಷ್ ಟಿ.ವಿ. ಚಾನೆಲ್‌ಗಳು ಇದಕ್ಕಿಂತ ನೇರವಾಗಿ ಮತ್ತು ಯಾವ ಮುಜುಗರವೂ ಇಲ್ಲದೇ ಇಸ್ಲಾಮೋಫೋಬಿಯಾವನ್ನು  ಹರಡತೊಡಗಿದುವು. ಒಂದು ಸಿನಿಮಾ ತಯಾರಾಗಿ ಬಿಡುಗಡೆಗೊಳ್ಳುವುದಕ್ಕೆ ವರ್ಷಗಳು ಬೇಕಾಗುತ್ತವೆ. ಆದರೆ, ಈ ಟಿ.ವಿ. ಚಾ ನೆಲ್‌ಗಳು ಪ್ರತಿದಿನವೂ ಏನಾದರೊಂದು ನೆಪದಲ್ಲಿ ಮುಸ್ಲಿಮರನ್ನು ಖಳರಂತೆ ಬಿಂಬಿಸಲು ಪ್ರಾರಂಭಿಸಿದುವು. ಪಾಕಿಸ್ತಾನದಲ್ಲಿ ನಡೆದ  ಯಕಶ್ಚಿತ್ ದರೋಡೆಯನ್ನೂ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿ, ಆ ಮುಖಾಂತರ ಭಾರತೀಯ ಮುಸ್ಲಿಮರನ್ನು ಕಟಕಟೆ ಯಲ್ಲಿ  ನಿಲ್ಲಿಸುವಷ್ಟರ ಮಟ್ಟಿಗೆ ಈ ಚಾನೆಲ್‌ಗಳು ಬುದ್ಧಿಭ್ರಮಣೆಗೆ ಒಳಗಾದುವು. ಇಂಥವು ನಿರಂತರ ನಡೆಯತೊಡಗಿದಾಗ ಅದರ ಫಲಿತಾಂಶ  ನಾಗರಿಕ ಸಮಾಜದಲ್ಲಿ ವ್ಯಕ್ತವಾಗಲೇಬೇಕು. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾ, ಟ್ವಿಟರ್‌ಗಳಲ್ಲಂತೂ ದ್ವೇಷಪ್ರಚಾರಕ್ಕೆ ನಿಯಂತ್ರಣವೇ  ಇಲ್ಲದಂತಾಗಿದೆ. ಹೀಗಿರುತ್ತಾ, ತೃಪ್ತ ತ್ಯಾಗಿ, ಹೇಮಾ ಗುಲಾಟಿ ಅಥವಾ ರೇವತಿ ಮೇಡಂ ಇವುಗಳಿಂದ ಪ್ರಭಾವಿತರಾಗಿರಲಾರರು ಎಂದು  ಹೇಳುವುದು ಹೇಗೆ? ಅಷ್ಟಕ್ಕೂ,

ತೃಪ್ತ ತ್ಯಾಗಿ, ಹೇಮಾ ಗುಲಾಟಿ ಮತ್ತು ರೇವತಿ- ಮೂವರೂ ಮಹಿಳೆಯರೇ. ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರವು ಮಹಿಳೆ ಯರ  ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಅನ್ನುವುದರ ಸೂಚನೆಯೇ ಇದು? ತಾಯಿ ಹೃದಯದಲ್ಲಿ ದ್ವೇಷ ತುಂಬಿಕೊಳ್ಳುವುದು ಆಘಾತಕಾರಿ.

Tuesday, September 5, 2023

ಸೌಮ್ಯ, ಗೌರಿ, ಸಲ್ಮಾ ಮತ್ತು ಲವ್





1. ಸೌಮ್ಯ ಭಟ್- ಮಿಲಿಟರಿ ಅಶ್ರಫ್
2. ಶ್ರದ್ಧಾ ವಾಲ್ಕರ್- ಅಫ್ತಾಬ್ ಪೂನಾವಾಲ
3. ಸಲ್ಮಾ ಸುಲ್ತಾನಾ- ಮಧು ಸಾಹು
4. ಗೌರಿ - ಪದ್ಮರಾಜ್

ಪ್ರೀತಿ-ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳ ಸುಳಿಗೆ ಸಿಲುಕಿ ಜೀವ ಕಳಕೊಳ್ಳುತ್ತಿರುವ ಭಾರತೀಯ ಹೆಣ್ಣು ಮಕ್ಕಳ ಪೈಕಿ ನಾಲ್ವರು ಇಲ್ಲಿದ್ದಾರೆ. ಇಲ್ಲಿರುವ ನಾಲ್ಕು ಮಂದಿ ಹೆಣ್ಣು ಮಕ್ಕಳಿ ಗಾಗಲಿ ಅಥವಾ ಇವರನ್ನು ಸಾಯಿಸಿದ ನಾಲ್ಕು ಮಂದಿ ಗಂಡು ಮಕ್ಕಳಿಗಾಗಲಿ  ಹೇಳಿಕೊಳ್ಳುವಂಥ ಕ್ರಿಮಿನಲ್ ಹಿನ್ನೆಲೆ ಇಲ್ಲ. ಕಾಲೇಜು ವಿದ್ಯಾರ್ಥಿನಿ ಸೌಮ್ಯಳನ್ನು 1997ರಲ್ಲಿ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಹತ್ಯೆ ಮಾಡಿದ  ಅಶ್ರಫ್ ಯೋಧನಾಗಿದ್ದ. ಆವರೆಗೂ ಆತನ ಮೇಲೆ ಯಾವೊಂದು ಪ್ರಕರಣವೂ ಪೊಲೀಸು ಠಾಣೆಯಲ್ಲಿ ದಾಖಲಾಗಿರಲಿಲ್ಲ. ಆದರೆ  ಏಕಾಏಕಿ ಒಂದು ಸಂಜೆ ಆತ ಹತ್ಯೆಕೋರನಾಗಿಬಿಟ್ಟ. ಕ್ರಿಮಿನಲ್ ವ್ಯಕ್ತಿಯಾಗಿ ಗುರುತಿಸಿಕೊಂಡ. ನ್ಯಾಯಾಲಯ ಈತನನ್ನು ಈ  ಹತ್ಯೆಯಿಂದ ಖುಲಾಸೆಗೊಳಿಸಿದ್ದರೂ ಸಾರ್ವಜನಿಕವಾಗಿ ಇವತ್ತೂ ಆತನೇ ಅಪರಾಧಿ. ದೆಹಲಿಯ ಅಫ್ತಾಬ್ ಪೂನಾವಾಲನಿಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. 2022ರಲ್ಲಿ ತನ್ನ ಗೆಳತಿ ಶ್ರದ್ಧಾಳನ್ನು ಹತ್ಯೆ ಮಾಡಿದ. ತುಂಡು ತುಂಡು ಮಾಡಿ ಎಸೆದ. ಚತ್ತೀಸ್‌ಗಢದ ಸಲ್ಮಾ  ಸುಲ್ತಾನ ಮತ್ತು ಮಧು ಸಾಹು ಪ್ರಕರಣ ಕೂಡ ಇದಕ್ಕಿಂತ ಭಿನ್ನ ಅಲ್ಲ. ಸಲ್ಮಾ ಟಿ.ವಿ. ಆ್ಯಂಕರ್. ಮಧು ಜಿಮ್ ಟ್ರೈನರ್. ಲಿವ್ ಇನ್  ಟುಗೆದರ್ ಸಂಬಂಧದಂತೆ  ಜೊತೆಯಾಗಿ ಬದುಕುತ್ತಿದ್ದ ಈಕೆಯನ್ನು 2018ರಲ್ಲಿ ಈತ ಹತ್ಯೆ ಮಾಡಿದ. ಮೊನ್ನೆ 2023ರಲ್ಲಿ ಪ್ರಕರಣ  ಬೆಳಕಿಗೆ ಬಂತು. ಹಾಗಂತ, ಈ ಮಧು ಸಾಹುಗೂ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಆದರೆ ಸಲ್ಮಾಳ ಬಗ್ಗೆ ಅನುಮಾನ ಇತ್ತು. ಎಲ್ಲಿ ಕೈತಪ್ಪಿ  ಹೋಗುತ್ತಾಳೋ ಅನ್ನುವ ಭಯ ಇತ್ತು. ಗೌರಿಯಂತೂ ಅದೇ ಸೌಮ್ಯಳ ಪುತ್ತೂರಿನಲ್ಲಿ ನಿನ್ನೆ ಮೊನ್ನೆಯಂತೆ ಹತ್ಯೆಯಾದವಳು. ಪ್ರೇಮ  ನಿರಾಕರಣೆಗೆ ಕುದ್ದು ಹೋದ ಜೆಸಿಬಿ ಚಾಲಕ ಪದ್ಮರಾಜ್ ಇರಿದು ಕೊಂದಿದ್ದಾನೆ. ಈತನಿಗೂ ಕ್ರಿಮಿನಲ್ ಹಿನ್ನೆಲೆ ಇರುವ ಯಾವ  ಮಾಹಿತಿಯೂ ಇಲ್ಲ.

ಮತ್ತೇಕೆ ಹೀಗೆ?

ಇವರನ್ನು ಹಠಾತ್ ಕ್ರಿಮಿನಲ್‌ಗಳಾಗಿಸಿದ್ದು ಯಾವುದು? ಪ್ರೇಮವೇ? ವೀಕ್ಷಿಸಿದ ಸಿನಿಮಾಗಳೇ? ಓದಿದ ಕಾದಂಬರಿಗಳೇ, ಕತೆಗಳೇ?  ನಾಟಕಗಳೇ? ಧರ್ಮಗ್ರಂಥಗಳೇ? ಅಪ್ರಬುದ್ಧತೆಯೇ? ಅಥವಾ ನಾಗರಿಕ ಜೀವನ ವಿಧಾನವೇ?

ಇಲ್ಲಿ ಹತ್ಯೆಕೋರರಾಗಿ ಗುರುತಿಸಿಕೊಂಡಿರುವ ನಾಲ್ವರು ಯುವಕರು ಮತ್ತು ಸಂತ್ರಸ್ತರಾಗಿರುವ ನಾಲ್ವರು ಯುವತಿಯರು 20ರಿಂದ 30  ವರ್ಷ ಪ್ರಾಯದ ಒಳಗಿನವರು. ಇವರಷ್ಟೇ ಅಲ್ಲ, ಇವತ್ತು ಪ್ರೀತಿ-ಪ್ರೇಮದ ಹೆಸರಲ್ಲಿ ಜೀವ ಕಳಕೊಳ್ಳುತ್ತಿರುವ ಮತ್ತು ಕ್ರಿಮಿ ನಲ್‌ಗಳಾಗುತ್ತಿರುವವರಲ್ಲಿ 99% ಮಂದಿ ಕೂಡಾ ಇದೇ ಪ್ರಾಯದವರು. ಪ್ರೇಮ ವೈಫಲ್ಯದ ಹೆಸರಲ್ಲಿ ಮತ್ತು ಮನೆಯವರ ವಿರೋಧದ  ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರೂ ಇದೇ ಪ್ರಾಯದವರೇ. ದುಡಿದು ಹೆತ್ತವರನ್ನು ಸಾಕಬೇಕಾದ ಪ್ರಾಯದ ಮಕ್ಕಳು ಕ್ರಿಮಿನಲ್‌ಗಳಾಗಿ ಜೈಲು ಪಾಲಾಗುವುದು ಮತ್ತು ಬೆಳೆದ ಹೆಣ್ಣು ಮಕ್ಕಳು ಹೆತ್ತವರ ಕಣ್ಣೆದುರೇ ಶವವಾಗಿ ಮಲಗುವುದು ಅತ್ಯಂತ ಆಘಾತಕಾರಿ  ಸನ್ನಿವೇಶ. ಸಾಮಾನ್ಯವಾಗಿ, ಇಂಥ ಘಟನೆ ನಡೆದ ಕೂಡಲೇ ನಾಗರಿಕ ಸಮಾಜ ಅದನ್ನು ಪ್ರೀತಿ-ಪ್ರೇಮ ಎಂದು ಕೇವಲವಾಗಿ  ನೋಡುವುದಿದೆ. ಹತ್ಯೆಕೋರರನ್ನು ಬೈದು, ಯುವತಿಯ ಬಗ್ಗೆ ಅನುಕಂಪದ ನಾಲ್ಕು ಮಾತು ಗಳನ್ನಾಡಿ ಸುಮ್ಮನಾಗುವುದೂ ಇದೆ.  ಲವ್ ಮಾಡುವ ಉಸಾ ಬರಿ ಆಕೆಗೇಕೆ ಬೇಕಿತ್ತು, ಲವ್ ಮಾಡದೇ ಇಷ್ಟು ಹೆಣ್ಣು ಮಕ್ಕಳು ಬದುಕುತ್ತಿಲ್ಲವಾ, ಯುವಕನನ್ನು ದೂರಿ  ಪ್ರಯೋಜನವಿಲ್ಲ ಎಂದು ಯುವತಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೈತೊಳೆದು ಕೊಳ್ಳುವುದೂ ಇದೆ. ನಿಜವಾಗಿ,

ಇದರಾಚೆಗೆ ನಾಗರಿಕ ಸಮಾಜ ಕೆಲವು ಪ್ರಶ್ನೆಗಳನ್ನು ಸ್ವಯಂ ಕೇಳಿಕೊಳ್ಳಬೇಕಿದೆ.

ಮಕ್ಕಳು ಎಂಥ ಸಮಾಜದಲ್ಲಿ ಬೆಳೆಯುತ್ತಿದ್ದಾರೆ? ಅವರು ವೀಕ್ಷಿಸುತ್ತಿರುವ ಸಿನಿಮಾಗಳು ಹೇಗಿವೆ? ಟಿ.ವಿ.ಯಲ್ಲಿ ವೀಕ್ಷಿಸುತ್ತಿರುವ  ಧಾರಾವಾಹಿಗಳೋ ಕಾರ್ಟೂನ್‌ಗಳೋ ಯಾವ ಸಂದೇಶವನ್ನು ಕೊಡುವಂತಿವೆ? ಅವರು ಮೊಬೈಲ್‌ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ?  ಕಂಪ್ಯೂಟರ್‌ನಲ್ಲಿ ಏನನ್ನು ಹುಡುಕುತ್ತಿದ್ದಾರೆ? ಪ್ರೀತಿ-ಪ್ರೇಮ ಆಧಾರಿತ ಸಿನಿಮಾಗಳು ಸಾರುವ ಸಂದೇಶವನ್ನು ವಿಶ್ಲೇಷಣೆ ಮಾಡಿ  ಸ್ವೀಕರಿಸುವಷ್ಟು ಅವರು ಪ್ರಬುದ್ಧರಾಗಿದ್ದಾರಾ ಅಥವಾ ಸಿನಿಮಾ ಸೃಷ್ಟಿಸುವ ಕಲ್ಪನಾಲೋಕವನ್ನೇ ನಂಬುವಂಥ  ಸ್ಥಿತಿಯಲ್ಲಿದ್ದಾರಾ?  ಮೂರು ಗಂಟೆಯೊಳಗೆ ಮುಗಿಯಬೇಕಾದ ಸಿನಿಮಾದ ಕತೆಯನ್ನು ಮತ್ತು ಅದರ ಪಾತ್ರವನ್ನು ಸಿನಿಮಾವಾಗಿ ಜೀರ್ಣಿಸಿಕೊಳ್ಳಲು ಹ ದಿಹರೆಯದ ಎಷ್ಟು ಮಂದಿಗೆ ಸಾಧ್ಯವಾಗುತ್ತಿದೆ? ಮೊಬೈಲ್ ವೀಕ್ಷಣೆಯಿಂದ ಅವರು ಏನನ್ನು ಪಡೆಯುತ್ತಿದ್ದಾರೆ? ಹೆಣ್ಣು ಗಂಡು  ನಡುವಿನ ಪ್ರಕೃತಿದತ್ತ ಆಕರ್ಷಣೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನಿಭಾಯಿಸುವ ಬಗ್ಗೆ ಹದಿಹರೆಯದಲ್ಲಿ ಎಷ್ಟು ಮಕ್ಕಳಿಗೆ ಮನೆ  ಮತ್ತು ಶಾಲೆಯಲ್ಲಿ ತರಬೇತಿ ಸಿಕ್ಕಿರುತ್ತದೆ? ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರೀತಿ-ಪ್ರೇಮದ ಬಗ್ಗೆ ಮತ್ತು ಆಕರ್ಷಣೆಯ ಬಗ್ಗೆ  ತಿಳುವಳಿಕೆಯ ಪಾಠ ಮಾಡುತ್ತಾರಾ? ಮನೆಯಲ್ಲಿ ಹೆತ್ತವರು ಮಕ್ಕಳ ಜೊತೆ ಹೇಗೆ ನಡಕೊಳ್ಳುತ್ತಾರೆ? ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದು ಮಗನಲ್ಲೋ  ಮಗಳಲ್ಲೋ  ಹೆತ್ತವರು ಪ್ರಶ್ನಿಸುವುದಿದೆಯೇ? ಅಥವಾ ಪ್ರೀತಿ-ಪ್ರೇಮದ ಬಗ್ಗೆ ಮಾತಾಡುವುದೇ ಅಪರಾಧ ಎಂಬ ರೀತಿಯಲ್ಲಿ ಬದುಕುತ್ತಿದ್ದಾರೆಯೇ? ಮಕ್ಕಳ ಚಟುವಟಿಕೆಯ ಮೇಲೆ ನಿಗಾ ಇಟ್ಟು ಅವರ ವರ್ತನೆ ಯಲ್ಲಾಗುವ  ಬದಲಾವಣೆಯನ್ನು ಗ್ರಹಿಸಿಕೊಂಡು ಸಂದರ್ಭಾನುಸಾರ ಮಾರ್ಗದರ್ಶನ ಮಾಡುವ ಕ್ರಮ ಹೆತ್ತವರಲ್ಲಿದೆಯೇ?

ಅಂದಹಾಗೆ,

ಹೆಣ್ಣು ಮತ್ತು ಗಂಡು ಮುಕ್ತವಾಗಿ ಬೆರೆಯುವುದಕ್ಕೆ ಪೂರಕವಾದ ವಾತಾವರಣವಿರುವ ದೇಶವೊಂದರಲ್ಲಿ ಅವರು ಪರಸ್ಪರ  ಮಾತಾಡಬಾರದು, ಆಕರ್ಷಣೆಗೆ ಒಳಗಾಗಬಾರದು ಎಂದೆಲ್ಲಾ ಬಯಸುವುದು ಶುದ್ಧ ಮುಗ್ಧತನ ಮತ್ತು ಅತಾರ್ಕಿಕ. ಎಲ್‌ಕೆಜಿಯಿಂದ  ಹಿಡಿದು ಡಿಗ್ರಿಯವರೆಗೆ, ಸರಕಾರಿ ಕಚೇರಿಯಿಂದ ಹಿಡಿದು ರೈಲು, ಬಸ್ಸು, ವಿಮಾನದ ವರೆಗೆ ಮತ್ತು ಸಂತೆಯಿಂದ  ಹಿಡಿದು ಹೊಟೇಲಿನ  ವರೆಗೆ ಎಲ್ಲೆಲ್ಲೂ ಹೆಣ್ಣು-ಗಂಡು ಜೊತೆಯಾಗಿಯೇ ಬದುಕುತ್ತಾರೆ, ಕಲಿಯುತ್ತಾರೆ, ಪ್ರಯಾಣಿಸುತ್ತಾರೆ ಮತ್ತು ಉದ್ಯೋಗ ಮಾಡುತ್ತಾರೆ.  ವೈದ್ಯ ಶಿಕ್ಷಣ, ಇಂಜಿನಿಯರಿಂಗ್  ಶಿಕ್ಷಣದಿಂದ ಹಿಡಿದು ಸೇನಾ ನೇಮಕಾತಿವರೆಗೆ ಹೆಣ್ಣು-ಗಂಡಿನ ನಡುವೆ ಎಲ್ಲೂ ಪರದೆಯಿಲ್ಲ.  ಆದ್ದರಿಂದ ಹರೆಯದ ಮಕ್ಕಳು ಪರಸ್ಪರ ಆಕರ್ಷಿತರಾಗುವುದನ್ನು ಮತ್ತು ಆ ಆಕರ್ಷಣೆ ಪ್ರೀತಿ-ಪ್ರೇಮದತ್ತ ತಿರುಗುವುದನ್ನು ಎಂಟನೇ  ಅದ್ಭುತವಾಗಿ ನೋಡಬೇಕಿಲ್ಲ. ಆದರೆ, ಇಂಥ ವಾತಾವರಣ ಇದ್ದೂ ಗೊತ್ತೇ ಇಲ್ಲದಂತೆ ಹೆತ್ತವರು ಮತ್ತು ಸಮಾಜ ವರ್ತಿಸುವುದು ಮಾತ್ರ  ನಿಜಕ್ಕೂ ಎಂಟನೇ ಅದ್ಭುತ. ಮೊದಲನೆಯದಾಗಿ,

ಹೆಣ್ಣು-ಗಂಡು ಬೆರೆಯುವುದಕ್ಕೆ ಪೂರಕವಾದ ವಾತಾವರಣ ತನ್ನ ಸುತ್ತ-ಮುತ್ತಲೂ ಇದೆ ಎಂಬುದನ್ನು ಪ್ರತಿ ಹೆತ್ತವರೂ ಒಪ್ಪಿಕೊಳ್ಳಬೇಕು.  ಎರಡನೆಯದಾಗಿ, ಜಗತ್ತಿನ ಇತರೆಲ್ಲ ಮಕ್ಕಳು ಪರಸ್ಪರ ಆಕರ್ಷಿತರಾದರೂ ತನ್ನ ಮನೆ ಮಕ್ಕಳು ಮಾತ್ರ ಅದರಿಂದ ಹೊರತಾಗಿರುತ್ತಾರೆ  ಎಂಬ ನಂಬಿಕೆಯಲ್ಲೂ ಇರಬಾರದು. ಯಾವುದು ಸಾಮಾಜಿಕವಾಗಿ ಸಹಜವೋ ಮತ್ತು ಪ್ರಾಕೃತಿಕವಾಗಿಯೂ ಸತ್ಯವೋ ಅದರಿಂದ  ಪೂರ್ಣ ವಿಮುಖಗೊಂಡು ಯಾರೂ ಬದುಕ ಲಾರರು. ಆದರೆ, ಇಂಥ ಸನ್ನಿವೇಶದಲ್ಲಿ ಸ್ವಯಂ ನಿಯಂತ್ರಣ ಹೇರಿಕೊಂಡು ಬದುಕುವ  ಕೋಟ್ಯಂತರ ಹದಿಹರೆಯದವರಿದ್ದಾರೆ. ಅವರಿಗೆ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಿರುತ್ತದೆ. ಆಕರ್ಷಣೆಯೂ ಇರುತ್ತದೆ. ಆದರೆ ಈ ಪ್ರೀತಿ- ಪ್ರೇಮ, ಆಕರ್ಷಣೆ ಇತ್ಯಾದಿಗಳ ಮಿತಿಯೂ ಗೊತ್ತಿರುತ್ತದೆ. ಹಾಗಂತ, ಇಂಥ ತಿಳುವಳಿಕೆ ಈ ಮಕ್ಕಳಲ್ಲಿ ಬೆಳೆದಿರುವುದಕ್ಕೆ ಅವರೊಬ್ಬರೇ  ಕಾರಣ ಆಗಿರುವುದಿಲ್ಲ. ಹೆತ್ತವರೂ ಕಾರಣ ಆಗಿರುತ್ತಾರೆ. ಕೆಲವೊಮ್ಮೆ ಶಿಕ್ಷಕರು, ಕೆಲವೊಮ್ಮೆ ಗೆಳೆಯರು, ಕೆಲವೊಮ್ಮೆ ಯಾವುದೋ ಪುಸ್ತಕ,  ಯಾರದೋ ಮಾತು ಕೂಡಾ ಕಾರಣ ಆಗಿರುತ್ತದೆ. ಯಾವ ಸಿನಿಮಾದ ಪ್ರೇರಣೆಯಿಂದ ಗೌರಿಯನ್ನು ಪದ್ಮರಾಜ್ ಕೊಂದಿರುತ್ತಾನೋ  ಅಥವಾ ಯಾವ ಘಟನೆ, ಯಾವ ರೀಲ್ಸ್ ಅಥವಾ ಯಾವ ಪುಸ್ತಕರಿಂದ ಪ್ರೇರಿತನಾಗಿ ಆತ ಈ ಹತ್ಯೆ ನಡೆಸಿರುತ್ತಾನೋ ಅದೇ ಸಿನಿಮಾ,  ಪುಸ್ತಕ, ರೀಲ್ಸ್ ಗಳನ್ನ  ಇವರೂ ನೋಡಿರುತ್ತಾರೆ. ಅವನಂಥದ್ದೇ ಪರಿಸ್ಥಿತಿಯನ್ನು ಇವರೂ ಎದುರಿಸಿರುತ್ತಾರೆ. ಆದರೆ, ಅವರು ಯಾಕೆ  ಪದ್ಮರಾಜ್ ಆಗುವುದಿಲ್ಲ ಎಂದರೆ, ಅದರಾಚೆಗೆ ಆಲೋಚಿಸಬಲ್ಲ ಮತ್ತು ತನ್ನನ್ನು ನಿಯಂತ್ರಿಸಿಕೊಳ್ಳಬಲ್ಲ ಮಾರ್ಗದರ್ಶನ ಅವರಿಗೆ  ಸಿಕ್ಕಿರುತ್ತದೆ. ಸದ್ಯದ ಅಗತ್ಯ ಇದು. ಅಷ್ಟಕ್ಕೂ,

15ರಿಂದ 25ರ ವರೆಗಿನ ಪ್ರಾಯ ಅತ್ಯಂತ ಅಪಾಯಕಾರಿಯೂ ಹೌದು, ಪ್ರಯೋಜನಕಾರಿಯೂ ಹೌದು. ಇದು ಹೆಣ್ಣು-ಗಂಡು  ನಡುವಿನ ಆಕರ್ಷಣೆಯ ಪ್ರಾಯ. ತನಗೆಲ್ಲ ಗೊತ್ತಿದೆ ಎಂಬ ಹುಂಬ ವರ್ತನೆಯ ಪ್ರಾಯ. ಹೆತ್ತವರಿಂದ ಒಂದೊಂದನ್ನೇ  ಮುಚ್ಚಿಕೊಳ್ಳಬಯಸುವ ಪ್ರಾಯ. ಈ ಪ್ರಾಯದ ತುಮುಲವನ್ನು ಹೆತ್ತವರು ಗಮನದಲ್ಲಿಟ್ಟುಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು. ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಯುವ ಹತ್ಯೆ ಮತ್ತು ಆತ್ಮಹತ್ಯೆ ಸುದ್ದಿಗಳನ್ನು ಈ ಪ್ರಾಯದ ಮಕ್ಕಳಿಂದ ಅಡಗಿಸಿಡಬೇಕಾದ  ಅಗತ್ಯ ಇಲ್ಲ. ಸಂದರ್ಭ ನೋಡಿಕೊಂಡು ಮಕ್ಕಳ ಮುಂದೆ ಇಂಥವುಗಳನ್ನು ಪ್ರಸ್ತಾಪ ಮಾಡುವ ಮತ್ತು ಸರಿಯಾದುದನ್ನು ಹೇಳುವ ಆಪ್ತ  ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಅನೇಕ ಬಾರಿ ಇಂಥ ಸುದ್ದಿಗಳು ಹೆತ್ತವರಿಗಿಂತ ಮೊದಲು ಮಕ್ಕಳಿಗೆ ಗೊತ್ತಿರುತ್ತದೆ. ಆದರೆ ಅವರು  ಪ್ರಸ್ತಾಪಿಸುವುದಿಲ್ಲ. ಹೆತ್ತವರು ಪ್ರಸ್ತಾಪಿಸಿದರೆ ಅವರೂ ಆಸಕ್ತಿಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಅಂಥ ಸಂದರ್ಭಗಳಲ್ಲಿ  ತನ್ನ ಮಕ್ಕಳ ಆಲೋಚನಾ ಕ್ರಮ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹೆತ್ತವರಿಗೆ ಅವಕಾಶ ಒದಗುತ್ತದೆ.

ಅಂದಹಾಗೆ,

ತಂತ್ರಜ್ಞಾನದ ಈ ಯುಗದಲ್ಲಿ ತಾಳ್ಮೆ ಎಂಬ ಪದ ಅರ್ಥವನ್ನೇ ಕಳಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದ ದೆಸೆಯಿಂದಾಗಿ  ಎರಡ್ಮೂರು ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಗಮನವಿಡಲು ಸಾಧ್ಯವಾಗದಂಥ ಸ್ಥಿತಿಯಿದೆ. ಸಿಟ್ಟು, ಆಕ್ರೋಶ, ಆವೇಶಗಳು ಕ್ಷಣ  ಮಾತ್ರದಲ್ಲಿ ಸ್ಫೋಟಿಸಿ ಏನೇನೋ ಅನಾಹುತಗಳಾಗುವ ಸನ್ನಿವೇಶ ಇವತ್ತಿನದು. ಆದ್ದರಿಂದ ಯುವ ಪ್ರಾಯದವರು ತೆಗೆದುಕೊಳ್ಳುವ  ಯಾವುದೇ ನಿರ್ಧಾರವೂ ಸಮತೂಕದ್ದೋ  ದೀರ್ಘ ಆಲೋಚನೆ ಯಿಂದ ಕೂಡಿದ್ದೋ  ಆಗಿರುವ ಸಾಧ್ಯತೆಗಳು ಕಡಿಮೆ ಇರುತ್ತದೆ.  ಪ್ರೀತಿ-ಪ್ರೇಮದ ವಿಷಯದಲ್ಲಂತೂ ಕ್ಷಣದ ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದೇ ಹೆಚ್ಚು. ಗೆಳೆಯರು, ಹಿತೈಷಿಗಳು ಅಥವಾ  ಹೆತ್ತವರಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿರುವುದೂ ಕಡಿಮೆ. ನಿಜಕ್ಕೂ, ಈ ಪ್ರೀತಿ-ಪ್ರೇಮ, ಹತ್ಯೆ, ಆತ್ಮಹತ್ಯೆಗಳೆಲ್ಲ ಸಾಮಾಜಿಕ  ಸವಾಲು. ಇದಕ್ಕೆ ಸಮಾಜ ಮುಖಾಮುಖಿಯಾಗದ ಹೊರತು ಪರಿಹಾರ ಸಾಧ್ಯವಿಲ್ಲ. ಪ್ರತಿ ಮನೆಯೂ ಈ ಬಗ್ಗೆ ಜಾಗೃತವಾಗಬೇಕು.  ತಮ್ಮ ಮಕ್ಕಳನ್ನು ಪ್ರಬುದ್ಧವಾಗಿ ಮತ್ತು ಪ್ರೀತಿ-ಪ್ರೇಮದ ಪ್ರಾಯ ಸಹಜ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪೂರಕವಾಗಿ ಬೆಳೆಸ ಬೇಕು.  ಮೊಬೈಲು ಜಗತ್ತು ಕಟ್ಟಿಕೊಡುವ ಭ್ರಮೆಗಳನ್ನು ಅರ್ಥ ಮಾಡುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಬೇಕು. ಇದಕ್ಕಾಗಿ ಮಕ್ಕಳೊಂದಿಗೆ  ಆಪ್ತ ಸಂಬಂಧವನ್ನು ಹೆತ್ತವರು ಬೆಳೆಸಿಕೊಳ್ಳುವುದು ಬಹಳ ಅಗತ್ಯ. ರಾತ್ರಿ ಊಟವನ್ನು ಹೆತ್ತವರು ಮಕ್ಕಳ ಜೊತೆ ಮಾಡುವುದು ಮತ್ತು  ಸಂದರ್ಭಾನುಸಾರ ವಿಷಯಗಳನ್ನು ಪ್ರಸ್ತಾಪಿಸಿ ಮಕ್ಕಳನ್ನು ಪ್ರಬುದ್ಧಗೊಳಿಸುವ ಸಂಸ್ಕೃತಿ ಬೆಳೆದು ಬರಬೇಕು. ತಮ್ಮ ಕುಟುಂಬದ ಯ ಶಸ್ವಿ ವ್ಯಕ್ತಿಗಳ ಹಿನ್ನೆಲೆಯನ್ನು ಮಾತಿನ ಭಾಗವಾಗಿಸಬೇಕು. ಅವರ ಕಲಿಕೆ, ಉದ್ಯೋಗ, ಮದುವೆ, ಸಮಾಜ ಸೇವೆ... ಇತ್ಯಾದಿಗಳನ್ನು  ವಿವರಿಸುತ್ತಾ ಮಕ್ಕಳಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ಉಂಟು ಮಾಡಬೇಕು. ಏನಿದ್ದರೂ,

ಯುವಕ ಮತ್ತು ಯುವತಿಯರು ಪ್ರೀತಿ-ಪ್ರೇಮದ ಹೆಸರಲ್ಲಿ ಒಂದೋ ಕ್ರಿಮಿನಲ್‌ಗಳಾಗುವುದು ಅಥವಾ ಪ್ರಾಣ ಕಳಕೊಳ್ಳುವುದು-  ಎರಡೂ ಆಘಾತಕಾರಿ. ಇದನ್ನು ತಪ್ಪಿಸಲೇಬೇಕಿದೆ. ಬೇರು ಮಟ್ಟದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

Friday, September 1, 2023

ಸೌಜನ್ಯ: ಸಿಬಿಐ ಉತ್ತರಿಸಬೇಕಾದ ಪ್ರಶ್ನೆಗಳು





11 ವರ್ಷಗಳ ಬಳಿಕವೂ ಸೌಜನ್ಯ ಪ್ರಕರಣ ಸಾರ್ವಜನಿಕ ಚಳವಳಿಯಾಗಿ ಮತ್ತು ಮನೆ ಮನೆ ಮಾತಾಗಿ ಉಳಿದುಕೊಂಡಿರುವುದೇಕೆ?  ಪ್ರತಿದಿನ ಅತ್ಯಾಚಾರ-ಹತ್ಯೆ ನಡೆಯುತ್ತಿರುವ ದೇಶದಲ್ಲಿ ಈ ಪ್ರಕರಣ 11 ವರ್ಷಗಳ ಬಳಿಕವೂ ಹೋರಾಟದ ಕಾವು  ಉಳಿಸಿಕೊಂಡಿರುವುದಕ್ಕೆ ಕಾರಣಗಳೇನು? ಸೌಜನ್ಯ ತಾಯಿ ಈ 11 ವರ್ಷಗಳಲ್ಲೂ ಹೋರಾಟ ಕಣದಲ್ಲಿ ಸಕ್ರಿಯರಾಗಿದ್ದಾರೆ. ನ್ಯಾಯ  ಕೊಡಿ ಎಂದು ಊರೂರು ಸುತ್ತುತ್ತಿದ್ದಾರೆ. ಅವರು ಸರಕಾರದಿಂದ ಪರಿಹಾರ ಕೇಳುತ್ತಿಲ್ಲ. ಮನೆ ಕಟ್ಟಿ ಕೊಡಿ ಅನ್ನುತ್ತಿಲ್ಲ ಅಥವಾ ಮಕ್ಕಳ  ವಿದ್ಯಾಭ್ಯಾಸಕ್ಕೆ ಮತ್ತು ಜೀವನ ನಿರ್ವಹಣೆಗೆ ಸಹಾಯ ಮಾಡಿ ಎಂದು ಸರಕಾರವನ್ನಾಗಲಿ ಸಾರ್ವಜನಿಕ ರನ್ನಾಗಲಿ ವಿನಂತಿಸುತ್ತಿಲ್ಲ.  ಅವರ ಆಗ್ರಹ- ಮಗಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಿ ಅನ್ನೋದು. ಇಲ್ಲೂ ಒಂದು ವಿಶೇಷತೆ ಇದೆ.  ಸಾಮಾನ್ಯವಾಗಿ,


ಯಾವುದೇ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಆರೋಪಿಗಳನ್ನೇ ಸಂತ್ರಸ್ತರು ಮತ್ತು ಸಾರ್ವ ಜನಿಕರು ಅಪರಾಧಿಗಳೆಂದು ಭಾವಿಸುತ್ತಾರೆ. ಅವರಿಗೆ ಶಿಕ್ಷೆಯಾದರೆ ಸಂತ್ರಸ್ತ ಕುಟುಂಬ ನ್ಯಾಯ ಸಿಕ್ಕಿತು ಎಂದು ಹೇಳಿಕೊಳ್ಳುತ್ತದೆ. ದೆಹಲಿಯ ನಿರ್ಭಯ  ಪ್ರಕರಣ ಇದಕ್ಕೊಂದು ಉದಾಹರಣೆ. ಒಂದುವೇಳೆ, ಆರೋಪಿಗಳು ನಿರ್ದೋಷಿಗಳಾಗಿ ಬಿಡುಗಡೆಗೊಂಡರೆ ಸಂತ್ರಸ್ತ ಕುಟುಂಬ ನ್ಯಾಯ  ನಿರಾಕರಣೆಯ ವಿಷಾದಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಸೌಜನ್ಯ ಪ್ರಕರಣದಲ್ಲಿ ಇದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಪೊಲೀಸರು ಆರೋಪಿಯೆಂದು ಬಂಧಿಸಿರುವ ಸಂತೋಷ್ ರಾವ್‌ನನ್ನು ಈ ಕುಟುಂಬ ಅಪರಾಧಿ ಭಾವದಲ್ಲಿ ಕಂಡೇ ಇಲ್ಲ. ಬದಲು, ಆತನನ್ನೇ ಸಂತ್ರಸ್ತನಾಗಿ ಪರಿಗಣಿಸಿದೆ. ಆತನನ್ನು ಸಿಬಿಐ ನ್ಯಾಯಾಲಯ ನಿರ್ದೋಷಿಯೆಂದು ಹೇಳಿ ಬಿಡುಗಡೆಗೊಳಿಸಿರುವುದಕ್ಕೆ ಈ  ಕುಟುಂಬ ಎಂದೂ  ಅಸಮಾಧಾನ ವ್ಯಕ್ತಪಡಿಸಿಲ್ಲ. ತಮ್ಮ ಭಾವನೆಯನ್ನೇ ಸಿಬಿಐ ನ್ಯಾಯಾಲಯ ಪುರಸ್ಕರಿಸಿದೆ ಎಂಬ ಸಮಾಧಾನ ಬಿಟ್ಟರೆ  ಸಂತೋಷ್ ರಾವ್‌ನನ್ನು ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಆತನಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುವ ಯಾವ ಆಗ್ರಹವನ್ನೂ ಸೌಜನ್ಯ  ಕುಟುಂಬ ಮಾಡಿಲ್ಲ. ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಓರ್ವ ತಾಯಿ ಇಷ್ಟು ನಿಷ್ಠುರವಾಗಿ ಮತ್ತು  ಹಠಮಾರಿಯಾಗಿ ನಡಕೊಳ್ಳಲು ಕಾರಣವೇನು? ಅಪರಾಧಿಗಳು ಇಂಥವರೇ ಅನ್ನುವ ಖಚಿತತೆ ಅವರಲ್ಲಿ ಇದೆಯೇ? ಅಂಥದ್ದೊಂದು   ಭಾವ ಅವರಲ್ಲಿ ಹುಟ್ಟಿಕೊಳ್ಳಲು ಮತ್ತು ಅದು ಖಚಿತತೆಯನ್ನು ಪಡೆಯಲು ಕಾರಣವೇನು? ಸೌಜನ್ಯಳಿಗಿಂತ ಮೊದಲು ಆ ಪರಿಸರದಲ್ಲಿ  ನಡೆದ ಹಲವು ಅನುಮಾನಾಸ್ಪದ ಸಾವುಗಳು ಇದಕ್ಕೆ ಕಾರಣವೇ? ಅಂದಹಾಗೆ,

ಕೆಲವು ಪ್ರಶ್ನೆಗಳಿವೆ


1. ಆರೋಪಿ ಸಂತೋಷ್ ರಾವ್‌ನನ್ನು ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಬೆಟ್ಟದ ಬಳಿಯಲ್ಲಿ ಹಿಡಿದು ಪೊಲೀಸರಿಗೆ  ಒಪ್ಪಿಸಿದವರಲ್ಲಿ ರವಿ ಪೂಜಾರಿ ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇದನ್ನು ಹತ್ಯೆ ಎಂದು ಸ್ಥಳೀಯರು ಅನುಮಾನಿಸುತ್ತಾರೆ.  ಹಾಗೆಯೇ, ಇನ್ನೋರ್ವ ಗೋಪಾಲಕೃಷ್ಣ ಗೌಡ ಎಂಬವ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಆದರೆ, ಸಿಬಿಐ ಈ ಬಗ್ಗೆ ಯಾವ  ಅನುಮಾನವನ್ನಾಗಲಿ, ಗಮನವನ್ನಾಗಲಿ ನೀಡದಿರಲು ಕಾರಣವೇನು?


2. ಡಿಎನ್‌ಎ ತಜ್ಞ ವಿನೋದ್ ಕೆ. ಲಕ್ಕಪ್ಪ ಅವರು ನೀಡಿರುವ ಹೇಳಿಕೆಯ ಪ್ರಕಾರ, ಸೌಜನ್ಯ ಮೇಲೆ ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯ  ವ್ಯಕ್ತಿಗಳಿಂದ ಅತ್ಯಾಚಾರ ನಡೆದಿರಬಹುದು ಎಂದಿದೆ. ಸೌಜನ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬೆಳ್ತಂಗಡಿಯ  ತಾಲೂಕು ಜನರಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ   ಕೂಡಾ ಇದನ್ನು ಪುಷ್ಠೀಕರಿಸಿದ್ದಾರೆ. ಆದರೂ ಈ ವಿಷಯದಲ್ಲಿ ಸಿಬಿಐ ತನಿಖೆ  ನಡೆಸುವ ಉಮೇದು ತೋರಿಸದಿರುವುದಕ್ಕೆ ಕಾರಣವೇನು?


3. ಅಕ್ಟೋಬರ್ 10, 2012ರಂದು ಸೌಜನ್ಯಳ ಮೃತದೇಹ ನೇತ್ರಾವತಿ ಸ್ನಾನಭಟ್ಟರ ಪಕ್ಕದ ಮಣ್ಣಸಂಕ ಎಂಬಲ್ಲಿ ಮರದ  ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಇಲ್ಲಿಗೆ ಹೋಗಬೇಕಾದರೆ ನೀರಿನ ತೊರೆಯನ್ನು ಹಾಯಬೇಕಿದೆ. ಒಬ್ಬನೇ ಆರೋಪಿ ಆಕೆಯನ್ನು  ಎತ್ತಿಕೊಂಡು ನೀರಿನ ತೊರೆಯನ್ನು ದಾಟುವುದು ಕಷ್ಟ ಸಾಧ್ಯ ಎಂದು ಸನ್ನಿವೇಶಗಳು ಹೇಳುತ್ತವೆ. ಸಂತೋಷ್ ರಾವ್‌ನನ್ನು ನಿರ್ದೋಷಿ  ಎಂದ ನ್ಯಾಯಾಧೀಶರೂ ಇದನ್ನು ಗಮನಿಸಿದ್ದಾರೆ. ಆದರೆ ಸಿಬಿಐ ಈ ಸಾಮಾನ್ಯ ಸಂಗತಿಯ ಬಗ್ಗೆ ತನಿಖೆಯ ವೇಳೆ ಗಮನ ಕೊಡದಿರುವುದಕ್ಕೆ ಕಾರಣವೇನು?


4. ಸೌಜನ್ಯ ಕಾಣೆಯಾದ ದಿನ ಆಸುಪಾಸಿನಲ್ಲಿ ತೀವ್ರ ಮಳೆ ಇತ್ತು ಎಂದು ಸಾಕ್ಷಿಗಳ ಹೇಳಿಕೆಯಲ್ಲಿದೆ. ಆದರೆ, ಹತ್ಯೆಗೀಡಾದ ಸೌಜನ್ಯಳ  ಬಟ್ಟೆಯಾಗಲಿ ಕಾಲೇಜಿನ ಬ್ಯಾಗ್ ಆಗಲಿ ಒದ್ದೆಯಾಗಿಲ್ಲ. ಅಂದರೆ, ಮೃತದೇಹ ಎಲ್ಲಿ ಪತ್ತೆಯಾಗಿತ್ತೋ ಅಲ್ಲಿ ಅತ್ಯಾಚಾರ ಮತ್ತು  ಹತ್ಯೆಯಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತವೆ. ಆದರೆ, ಈ ಬಗ್ಗೆ ಸಿಬಿಐ ಕುತೂಹಲ ತೋರದಿರಲು ಕಾರಣವೇನು?


5. ಸೌಜನ್ಯಳ ಜೊತೆ ಕಾಲೇಜಿನಿಂದ ಬಸ್‌ನಲ್ಲಿ ಬಂದವರ ಹೇಳಿಕೆಗಳು ಸಿಬಿಐ ದಾಖಲೆಗಳಲ್ಲಿ ಸಿಗುವುದಿಲ್ಲ ಎಂದು ಹೇಳ ಲಾಗುತ್ತಿದೆ.  ಸೌಜನ್ಯ ಜೊತೆ ಕೊನೆವರೆಗೂ ಇದ್ದ ಗೆಳತಿಯರ ಮಾತುಗಳು ತನಿಖೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು. ಅಲ್ಲದೇ, ಬೆಳ್ತಂಗಡಿ  ಪೊಲೀಸರು ಮತ್ತು ಸಿಐಡಿ ದಾಖಲಿಸಿದ ಹೇಳಿಕೆಗಳನ್ನು ಸಿಬಿಐ ಮರುಪರಿಶೀಲನೆಗೆ ಒಳಪಡಿಸಿಲ್ಲ ಎಂದೂ
ಹೇಳಲಾಗುತ್ತಿದೆ. ಯಾಕೆ ಹೀಗಾಯಿತು?


6. ಸೌಜನ್ಯ ಮೃತದೇಹ ಸಿಕ್ಕ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳ ಟ್ರೇಸ್ ನಡೆದಿದೆಯೇ? ಇಲ್ಲ ಅನ್ನುತ್ತಿವೆ ಮಾಹಿತಿಗಳು.  ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಇದು ಸುಲಭ ವಿಧಾನ.


7. ಯೋನಿ ದ್ರವ ಅಥವಾ ವೆಜೈನಲ್ ಸ್ವಾಬ್ ಅನ್ನು ಅತ್ಯಾಚಾರದ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ವೈದ್ಯರು ಇದನ್ನು  ಶೇಖರಣೆ ಮಾಡಿ, ಒಣಗಿಸಿ ಪ್ಯಾಕ್ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಆದರೆ, ಇಲ್ಲಿ ಪರೀಕ್ಷೆಗೆ ಕಳುಹಿಸಲಾದ  ವೆಜೈನಲ್ ಸ್ವಾಬ್‌ನಲ್ಲಿ ಫಂಗಸ್ ಬಂದಿತ್ತು ಮತ್ತು ಆ ಕಾರಣದಿಂದ ಪರೀಕ್ಷೆಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ ಎಂದು ವರದಿ ಇದೆ.  ಪ್ರಮುಖ ಸಾಕ್ಷ್ಯವಾಗಿದ್ದ ವೆಜೈನಲ್ ಸ್ವಾಬ್‌ನ ಬಗ್ಗೆ ವೈದ್ಯಾಧಿಕಾರಿ ಇಲ್ಲಿ ನಿರ್ಲಕ್ಷ್ಯ  ವಹಿಸಿದ್ದು ಯಾಕೆ?

ಹಾಗಂತ,


ಸಿಬಿಐ ತನಿಖೆಯ ಬಗ್ಗೆ ಹೈಕೋರ್ಟು ಅಸಮಾಧಾನ ವ್ಯಕ್ತ ಪಡಿಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣ ಮರು ತನಿಖೆ  ನಡೆಸಬೇಕೆಂದು ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಮೂರ್ತಿ ಅರವಿಂದ್  ಕುಮಾರ್ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರ ಮುಂದೆ  ಹರೀಶ್ ಮತ್ತು ಗೋಪಾಲ್ ಎಂಬವರು ಸಾಕ್ಷ್ಯ  ನುಡಿದಿದ್ದರು. ಆ ಬಳಿಕ ತನಿಖೆ ಕೈಗೆತ್ತಿಕೊಂಡ ಸಿಬಿಐಯು ಅಧೀನ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಹರೀಶ್ ಮತ್ತು ಗೋಪಾಲ್ ಹೇಳಿಕೆಗಳೂ ಸೇರಿದಂತೆ ಪ್ರಾಥಮಿಕ ಹಂತದಲ್ಲಿ ಪೊಲೀಸರು  ಸಂಗ್ರಹಿಸಿದ್ದ ಹಲವು ಅಂಶಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಚಂದಪ್ಪ ಗೌಡ ಕೋರಿದ್ದರು. ಇದನ್ನು ಆಲಿಸಿದ ಅರವಿಂದ್ ಕುಮಾರ್  ನೇತೃತ್ವದ ಏಕ ಸದಸ್ಯ ಪೀಠ, ಸಿಬಿಐ ತನಿಖಾ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ‘ಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ  ನಿಮ್ಮಿಂದ ಇಂಥ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಈ ತನಿಖೆಯನ್ನು ಮೊದಲು ಸಿಐಡಿಗೆ ಮತ್ತು ನಂತರ ಸಿಬಿಐಗೆ ವಹಿಸಲಾಗಿದೆ. ಆದರೆ ಇದೀಗ ಸಿಬಿಐ ತನಿಖೆಯನ್ನೂ ಅನುಮಾನದಿಂದ  ನೋಡುವಂತಾಗಿದೆ. ನಿಮ್ಮಿಂದ ಸಮರ್ಪಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಾದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಲಿದೆ...’ ಎಂದು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಷ್ಟಕ್ಕೂ,


ಸೌಜನ್ಯ ಪ್ರಕರಣ ಒಂದು ಚಳವಳಿಯಾಗಿ ಬೆಳೆದು ನಿಂತಿರುವುದಕ್ಕೆ ಆಕೆ ಬದುಕಿ ಬಾಳಿದ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅ ನುಮಾನಾಸ್ಪದ ಸಾವುಗಳೇ ಪ್ರೇರಣೆ ಎಂದು ಅನಿಸುತ್ತೆ. ಹಾಗಂತ, ಆ ಅನುಮಾನಾಸ್ಪದ ಸಾವುಗಳು ಸಹಜ ಸಾವುಗಳೇ ಆಗಿದ್ದಿರಬಹುದು  ಮತ್ತು ಅವು ಹತ್ಯೆ ಆಗಿಲ್ಲದೇ ಇರಬಹುದು. ಆದರೆ, ಇವುಗಳನ್ನು ಸ್ಪಷ್ಟಪಡಿಸಬೇಕಾದ ವ್ಯವಸ್ಥೆ ಅದರಲ್ಲಿ ಎಡವಿದಾಗ ಸಾರ್ವಜನಿಕ ಅನುಮಾನಗಳು ಬಲ ಪಡೆಯುತ್ತಾ ಹೋಗುತ್ತವೆ. ಪದೇ ಪದೇ ಇಂಥವು ನಡೆಯುವಾಗ ಮತ್ತು ಅದಕ್ಕೆ ಯಾವುದೇ ಸ್ಪಷ್ಟೀಕರಣ ಇಲ್ಲದೇ  ಹೋದಾಗ ಜನ ಆಡಿಕೊಳ್ಳತೊಡಗುತ್ತಾರೆ. ಬಳಿಕ ಅವು ಅಸಮಾಧಾನವಾಗಿ ಮಾರ್ಪಡುತ್ತದೆ. ನಂತರ ಅದು ಆಕ್ರೋಶವಾಗುತ್ತದೆ.  ಸೌಜನ್ಯ ಪ್ರಕರಣ 11 ವರ್ಷಗಳ ಬಳಿಕವೂ ಯಾಕೆ ಕಾವು ಉಳಿಸಿಕೊಂಡಿದೆ ಅನ್ನುವು ದಕ್ಕೆ ಇಲ್ಲೆಲ್ಲೋ  ಉತ್ತರ ಇದೆ. ಎಲ್ಲಿಯ  ವರೆಗೆಂದರೆ, ಈ ನ್ಯಾಯ ಬೇಡಿಕೆಯ ಚಳವಳಿಯಿಂದ ಎಡ, ಬಲ, ಮಧ್ಯಮ ಯಾವ ಪಂಥವೂ ಅಂತರ ಕಾಯ್ದುಕೊಳ್ಳದಂಥ ಪರಿಸ್ಥಿತಿ  ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯ ತೀರ್ಪಿನ ವಿರುದ್ಧ ಅಸಮಾಧಾನ ಸೂಚಿಸಿ ಬಿಜೆಪಿ ಶಾಸಕರೇ  ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸುತ್ತಾರೆಂದರೆ ಮತ್ತು ಪ್ರಕರಣದ ಮರು ತನಿಖೆ ಆಗ್ರಹಿಸುತ್ತಾರೆಂದರೆ, ಸೌಜನ್ಯ ಪರ  ಹೋರಾಟ ಸಾರ್ವಜನಿಕವಾಗಿ ಬೀರಿರುವ ಪ್ರಭಾವವನ್ನು ಊಹಿಸಬಹುದು.


ಸದ್ಯದ ಸಮಸ್ಯೆ ಏನೆಂದರೆ, ವಿಶ್ವಾಸಾರ್ಹತೆ ಎಂಬ ಬಹು ಅಮೂಲ್ಯ ಗುಣಕ್ಕೆ ತೀವ್ರ ಹಾನಿ ತಟ್ಟಿರುವುದು. ರಾಜಕಾರಣಿಯಾಗಲಿ,  ಸಾಮಾಜಿಕ ಮುಂದಾಳುವಾಗಲಿ, ಅರ್ಚಕನಾಗಲಿ, ಧರ್ಮ ಪಂಡಿತನಾಗಲಿ, ಮೌಲಾನಾ ಆಗಲಿ... ಯಾರೂ ಇವತ್ತು ಪೂರ್ಣ  ಪ್ರಮಾಣದಲ್ಲಿ ವಿಶ್ವಾಸಯೋಗ್ಯರಾಗಿ ಉಳಿದಿಲ್ಲ. ಜನರು ಒಂದು ಅನುಮಾನದ ಕಣ್ಣಿಟ್ಟುಕೊಂಡೇ ಎಲ್ಲರನ್ನೂ ತೂಗತೊಡಗಿದ್ದಾರೆ.  ವಿಶ್ವಾಸಾರ್ಹತೆ ಎಂಬ ಮೌಲ್ಯ ಕುಸಿದು ಹೋದಾಗ ಎದುರಾಗುವ ಹಲವು ಸವಾಲುಗಳಲ್ಲಿ ಇದೂ ಒಂದು. ಆದರೆ,


ಈ ಎಲ್ಲರ ನಡುವೆ ಸೌಜನ್ಯ ತಾಯಿ ನಕ್ಷತ್ರದಂತೆ ಮಿನುಗು ತ್ತಿದ್ದಾರೆ. ಅವರೆಡೆಗೆ ಕೈಯೆತ್ತಿ ತೋರಿಸಲು ಒಂದು ನರಪಿಳ್ಳೆಗೂ  ಸಾಧ್ಯವಾಗದಂಥ ಪ್ರಾಮಾಣಿಕತೆ ಮತ್ತು ಸಜ್ಜನಿಕೆಯನ್ನು ಪ್ರದರ್ಶಿಸಿದ್ದಾರೆ. ಈ 11 ವರ್ಷಗಳ ಉದ್ದಕ್ಕೂ ಆ ತಾಯಿ ನಡೆದುಕೊಂಡು  ಬಂದ ರೀತಿ, ತೋಡಿಕೊಂಡ ನೋವು ಮತ್ತು ಕಾಲಿಗೆ ಚಕ್ರ ಕಟ್ಟಿಕೊಂಡು ತನ್ನ ಮಗಳಿಗಾಗಿ ಓಡಾಡಿದ ರೀತಿ ಅನನ್ಯ ಮತ್ತು ಓರ್ವ  ತಾಯಿಯಿಂದ ಮಾತ್ರ ನಿರೀಕ್ಷಿಸಬಹುದಾದ ಕೆಚ್ಚೆದೆ ಅದು. ಈ ಹಿಂದೆ ದೆಹಲಿ ನಿರ್ಭಯ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು.  ನಿರ್ಭಯ ತಾಯಿ ಗುರಿ ಮುಟ್ಟುವವರೆಗೆ ಹೋರಾಡಿದ್ದರು. ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ವಿರಮಿಸಲಾರೆ ಎಂಬಂತೆ   ಸಕ್ರಿಯರಾಗಿದ್ದರು. ಸೌಜನ್ಯ ತಾಯಿಯಲ್ಲೂ ಅದೇ ಖಚಿತತೆ ಮತ್ತು ಹಠ ಎದ್ದು ಕಾಣುತ್ತಿದೆ. ಓರ್ವ ಹೆಣ್ಣು ಪರಿಸ್ಥಿತಿಗೆ ಹೊಂದಿಕೊಂಡು   ಹೇಗೆ ಗೃಹಿಣಿಯೂ ಆಗಬಲ್ಲಳು ಮತ್ತು ಹೋರಾಟಗಾರ್ತಿಯೂ ಆಗಬಲ್ಲಳು ಎಂಬುದಕ್ಕೆ ಸೌಜನ್ಯ ತಾಯಿ ಅತ್ಯುತ್ತಮ ನಿದರ್ಶನ.


ಅತ್ಯಾಚಾರ ಎಂಬುದು ದರೋಡೆ, ಕಳ್ಳತನ, ವಂಚನೆ ಇತ್ಯಾದಿಗಳಂಥಲ್ಲ. ಹೆಚ್ಚಿನ ವೇಳೆ ಅತ್ಯಾಚಾರಿಗಳು ಹೆಣ್ಣನ್ನು ಸಾಯಿಸುತ್ತಾರೆ.  ಒಂದುವೇಳೆ, ಸಾಯಿಸದೇ ಬಿಟ್ಟರೂ ಅತ್ಯಾಚಾರವನ್ನು ಜೀವನಪೂರ್ತಿ ಹೊತ್ತುಕೊಂಡು ಓರ್ವ ಯುವತಿ ಬದುಕುವುದು ಸುಲಭ ಅಲ್ಲ.  ಅತ್ಯಾಚಾರದ ಬಗ್ಗೆ ದೂರು ಕೊಟ್ಟರೆ ಸಾರ್ವಜನಿಕರಿಗೆ ಅತ್ಯಾಚಾರದ ಬಗ್ಗೆ ಗೊತ್ತಾಗುತ್ತದೆ. ಅದರಿಂದಾಗಿ ನೆರೆಕರೆಯವರು ಮತ್ತು  ಕುಟುಂಬಸ್ಥರು ಅತ್ಯಾಚಾರ ಸಂತ್ರಸ್ತೆ ಎಂಬ ಹಣೆಪಟ್ಟಿಯೊಂದನ್ನು ಅಂಟಿಸಿ ಅನುಕಂಪವನ್ನೋ ಅನುಮಾನವನ್ನೋ ನಿತ್ಯ  ಸುರಿಸುತ್ತಿರುತ್ತಾರೆ. ವಿವಾಹದ ಸಂದರ್ಭದಲ್ಲಿ ಸವಾಲು ಎದುರಾಗುತ್ತದೆ. ಅಲ್ಲದೇ, ದೂರು ಕೊಟ್ಟ ಬಳಿಕ ಅಪರಾಧಿಗಳಿಂದ ಜೀವ  ಬೆದರಿಕೆಯನ್ನೂ ಎದುರಿಸಬೇಕಾಗುತ್ತದೆ. ಎಲ್ಲಿ, ಯಾವಾಗ, ಏನಾಗುತ್ತೋ ಎಂಬ ಭಯವೊಂದನ್ನು ಎದೆಯೊಳಗಿಟ್ಟುಕೊಂಡೇ  ನಡೆದಾಡಬೇಕಾಗುತ್ತದೆ. ಇಷ್ಟೆಲ್ಲಾ ಆಗಿಯೂ ಕೇಸು ಬಿದ್ದು ಹೋದರೆ ಸಂಕಟದ ಮೇಲೆ ಸಂಕಟ.


ಕಳೆದು ಹೋದ ಮಗಳಿಗಾಗಿ ದಣಿವರಿಯದೇ ಹೋರಾಡುತ್ತಿರುವ ಆ ತಾಯಿಗೆ ಯಶಸ್ಸು ಸಿಗಲಿ. ಅಪರಾಧಿಗಳಿಗೆ ಶಿಕ್ಷೆಯಾಗಲಿ.