Saturday, January 25, 2020

ಪೌರತ್ವ ಕಾಯ್ದೆ ಮತ್ತು ವಲಸಿಗರ ಧರ್ಮ



1. ಎಸ್. ರಾಮದಾಸ್ ಅವರ ಪಟ್ಟಾಳಿ ಮಕ್ಕಳ ಕಾಚ್ಚಿ
2. ಅನುಪ್ರಿಯ ಪಟೇಲ್ ಅವರ ಅಪ್ನಾ ದಳ್
3. ರಾಮದಾಸ್ ಅಠವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದಲ್ಲಿರುವ 13 ಮಿತ್ರ ಪಕ್ಷಗಳ ಪೈಕಿ ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ಅನ್ನು ಬೆಂಬಲಿಸುತ್ತಿರುವ ಪಕ್ಷಗಳು ಈ ಮೇಲಿನ ಮೂರೇ ಮೂರು. ಉಳಿದ 10  ಪಕ್ಷಗಳೂ ಒಂದಲ್ಲ ಒಂದು ಕಾರಣವನ್ನು ಮುಂದೊಡ್ಡಿ ಪೌರತ್ವ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್)ಯನ್ನು  ವಿರೋಧಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಸುಮಾರು 2,021 ಕೋಟಿ ರೂಪಾಯಿಯನ್ನು ಖರ್ಚು ಮಾಡಿ 93 ರಷ್ಟು ವಿದೇಶ ಯಾತ್ರೆಯನ್ನು ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸದ್ಯ  ಒಂಟಿಯಾಗಿದ್ದಾರೆ. ಈ 2020ರಲ್ಲಿ ಈ ದೇಶಗಳು ಅವರ ಬೆಂಬಲಕ್ಕೆ ನಿಲ್ಲುವುದು ಬಿಡಿ, ಅವರ ಬಗ್ಗೆ ಒಂದೊಂದಾಗಿ ಅಸಮಾಧಾನವನ್ನು ಸೂಚಿಸ ತೊಡಗಿವೆ. 2019ರಲ್ಲಿ ಮೋದಿಯವರು ಮರಳಿ ಅಧಿಕಾರಕ್ಕೇರಿದ ಬಳಿಕ ಜಾರಿಗೆ ತಂದ ತ್ರಿವಳಿ ತಲಾಕ್ ಕಾನೂನು, ಕಾಶ್ಮೀರದ 370ನೇ ವಿಧಿ ರದ್ದು ಮತ್ತು ಸಿಎಎಗಳು ಈ ಮಿತ್ರರನ್ನೆಲ್ಲ ಮುನಿಸಿಕೊಳ್ಳುವಂತೆ ಮಾಡಿವೆ. 2014 ರಿಂದ 2019 ಎಪ್ರಿಲ್‍ನ  ವರೆಗೆ 93 ದೇಶ ಸುತ್ತಿ ಸಂಬಂಧ ಸುಧಾರಣೆಗೆ ಮಾಡಿದ ಪ್ರಯತ್ನಗಳನ್ನೆಲ್ಲಾ 2019 ಮೇ ಬಳಿಕದ ಮೋದಿಯವರ ನೀತಿಗಳು ಆಪೋಶನ ಪಡೆದುಕೊಂಡಿವೆ. ಮಲೇಶ್ಯಾ ತನ್ನ ಅಸಮಾಧಾನವನ್ನು  ಬಹಿರಂಗ ವಾಗಿಯೇ ಹೊರಹಾಕಿದೆ. ಪ್ರಧಾನಿ ಮೋದಿಯವರ ಜೊತೆ ನಡೆಸಬೇಕಿದ್ದ ಮಾತುಕತೆಯನ್ನು ಜಪಾನಿನ ಪ್ರಧಾನಿ ಮುಂದೂಡಿದ್ದಾರೆ. 

ಮೋದಿಯವರ ಮಟ್ಟಿಗೆ ಆಪ್ತರೆನಿಸಿದ್ದ ಬೇಗಂ ಹಸೀನಾ  ಅವರ ಬಾಂಗ್ಲಾದೇಶ ಈಗ ಮಾರು ದೂರ ನಿಂತಿದೆ. ಅಲ್ಲಿನ ವಿದೇಶಾಂಗ ಸಚಿವ ಮತ್ತು ಗೃಹಸಚಿವರ ಭಾರತ ಭೇಟಿ ರದ್ದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅನ್ನುವ ಭಾರತದ ಆರೋಪಕ್ಕೆ ಅದು ಅಸಮಾಧಾನ ಸೂಚಿಸಿದೆ. 1971ರ ಬಳಿಕ ವಿಶ್ವಸಂಸ್ಥೆಯಲ್ಲಿ ಬಹುತೇಕ ನಿರ್ಜೀವಾವಸ್ಥೆಯಲ್ಲಿದ್ದ ಕಾಶ್ಮೀರದ ವಿವಾದವು ಇದೀಗ ಮತ್ತೆ ಜೀವವನ್ನು ಪಡೆದುಕೊಂಡಿದೆ.  ಭದ್ರತಾ ಮಂಡಳಿಯಲ್ಲಿ ಚರ್ಚಿಸುವ ಹಂತಕ್ಕೆ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಲು ಪಾಕ್ ಯಶಸ್ವಿಯಾಗಿದೆ. 370ನೇ ವಿಧಿ ರದ್ಧತಿಯೇ ಇದಕ್ಕೆ ಕಾರಣ. ಅಮೇರಿಕ ಮತ್ತು ಬ್ರಿಟನ್‍ಗಳು ಈಗಾಗಲೇ ಭಾರತದ ಬೆಳವಣಿಗೆಗಳಿಗೆ ಕಳವಳವನ್ನು ಸೂಚಿಸಿವೆ. ಇನ್ನು, ನೆರೆಕರೆಯ ಪೈಕಿ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಇಟ್ಟುಕೊಂಡ ರಾಷ್ಟ್ರಗಳು ಒಂದೂ ಕಾಣಿಸುತ್ತಿಲ್ಲ.  ಶ್ರೀಲಂಕಾವಾಗಲಿ, ನೇಪಾಳ, ಭೂತಾನ್ ಅಥವಾ ಮ್ಯಾನ್ಮಾರ್ ಆಗಲಿ ಎಲ್ಲವೂ ಚೀನಾದ ಕಡೆಗೆ ಮುಖ ಮಾಡಿ ಮಲಗಿವೆ. ಈ ಎಲ್ಲ ರಾಷ್ಟ್ರಗಳಲ್ಲಿ ಚೀನಾದ ಹೂಡಿಕೆಯ ಗಾತ್ರವನ್ನು ಪರಿಗಣಿಸಿದರೆ ಭಾರತ  ಜುಜುಬಿ. ಇನ್ನೊಂದೆಡೆ 5 ಟ್ರಿಲಿಯನ್ ಡಾಲರ್ ಮೊತ್ತದ ಅರ್ಥವ್ಯವಸ್ಥೆಯಾಗಿ ಮಾರ್ಪಡಲು ಹೊರಟು ಅದರ ಅರ್ಧದಷ್ಟನ್ನೂ ತಲುಪಲಾಗದ ದೈನೇಸಿ ಸ್ಥಿತಿ ಯಲ್ಲಿದೆ ಭಾರತದೆ. ಕಳೆದ ನಾಲ್ಕು ದ ಶಕಗಳಲ್ಲೇ ನಿರುದ್ಯೋಗದ ಪ್ರಮಾಣ ಅತ್ಯಧಿಕವಾಗಿದೆ. ನೋಟು ನಿಷೇಧ ಮತ್ತು ಅತ್ಯಂತ ಅಸಮರ್ಪಕ ರೀತಿಯಲ್ಲಿ ಜಾರಿಗೊಳಿಸಲಾದ ಜಿಎಸ್‍ಟಿಯಿಂದಾಗಿ ಆಗಿರುವ ಅನಾಹುತಗಳ ಫಲಿತಾಂಶ  ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಏರ್ ಇಂಡಿಯಾವೂ ಮಾರಾಟವಾಗಿದೆ. ರೈಲ್ವೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಆಡಳಿತಾತ್ಮಕ  ಖರ್ಚು-ವೆಚ್ಚಗಳನ್ನು ನಿಭಾಯಿಸುವುದಕ್ಕೆ ಹಣದ ಕೊರತೆ ಎದುರಾಗಿ ಆರ್‍ಬಿಐನಿಂದ ಮೀಸಲು ನಿಧಿಯನ್ನು ಪಡೆದುಕೊಳ್ಳಲಾಗಿದೆ. ಭಾರತದ ಅರ್ಥವ್ಯವಸ್ಥೆಯ ಮಟ್ಟಿಗೆ ‘ಬಂಗಾರದ ಮೊಟ್ಟೆ’ ಎಂದು  ವಿಶೇಷಣವುಳ್ಳ ಭಾರತ್ ಪೆಟ್ರೋಲಿಯಮನ್ನೂ ಮಾರಾಟದ ಪಟ್ಟಿಯಲ್ಲಿಡಲಾಗಿದೆ. ನಷ್ಟದಲ್ಲಿರುವ ಸರಕಾರಿ ಸಂಸ್ಥೆಗಳಿಗೆ ಚೇತರಿಕೆಯ ದೃಷ್ಟಿಯಿಂದ ಸ್ವಲ್ಪ ಮೊತ್ತವನ್ನು ಕೊಟ್ಟು ಕೊನೆಗೆ ಅವನ್ನೆಲ್ಲಾ  ಖಾಸಗಿಗಳಿಗೆ ಮಾರಾಟ ಮಾಡುವ ತಂತ್ರ ನಡೆಯುತ್ತಿದೆ. ಈ ನಡುವೆ ಬ್ಯಾಂಕುಗಳ ವಿಲೀನವಾಗಿದೆ. 9% ಇದ್ದ ಜಿಡಿಪಿಯು ಕುಸಿಯುತ್ತಾ ಬಂದು ಈಗ 4% ರ ಆಸುಪಾಸಿನಲ್ಲಿದೆ. ನಿರ್ಮಾಣ  ಕಾಮಗಾರಿಗಳು ನಿಧಾನವಾಗಿವೆ. ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ವಿದೇಶಿ ಮತ್ತು ಸ್ವದೇಶಿ ಶ್ರೀಮಂತರು ದೇಶದಲ್ಲಿ ಹಣ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ದೇಶದೊಳಗಿನ ಅಭದ್ರತೆಯ  ವಾತಾವರಣವು ಹೂಡಿಕೆದಾರರನ್ನು ಅನಿಶ್ಚಿತತೆಗೆ ದೂಡಿದೆ. ಬೆಲೆ ಯಲ್ಲಿ ಏರಿಕೆ ಮತ್ತು ಪ್ರವಾಸೋದ್ಯಾಮದಲ್ಲಿ ಇಳಿಕೆಯಾಗುತ್ತಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಾಶ್ಮೀರವಂತೂ  ಬರಡಾಗಿ ಮಲಗಿದೆ. ಆದರೂ,
ಕೇಂದ್ರ ಸರಕಾರ ತನ್ನ ಕುದುರೆಗೆ ಮೂರೇ ಕಾಲು ಎಂದು ಸಮರ್ಥಿಸುತ್ತಿದೆ.

2015ರಲ್ಲಿ ಇದೇ ಮೋದಿ ನೇತೃತ್ವದ ಕೇಂದ್ರ ಸರಕಾರವು ದೀರ್ಘಾವಧಿಯ ವೀಸಾಕ್ಕಾಗಿ ವಲಸಿಗರಿಂದ ಅರ್ಜಿಯನ್ನು ಆಹ್ವಾನಿಸಿತ್ತು. ಆಗ ತಾವು ಧಾರ್ಮಿಕ ದಮನದ ಕಾರಣಕ್ಕಾಗಿ ಭಾರತಕ್ಕೆ ಬಂದಿದ್ದೇವೆಂದು ವಾದಿಸಿ ವೀಸಾಕ್ಕಾಗಿ ಅರ್ಜಿ ಹಾಕದವರ ಸಂಖ್ಯೆ ಬರೇ 31,313. ಹೀಗೆಂದು ಕೇಂದ್ರ ಸರಕಾರದ ಗುಪ್ತಚರ ವರದಿಗಳೇ ಹೇಳುತ್ತಿವೆ. ಇನ್ನೊಂದು ಅಂಕಿ ಅಂಶದ ಪ್ರಕಾರ, ವಿಭಜನೆಯ  ತರುವಾಯ 4 ವರ್ಷಗಳಲ್ಲಿ ಭಾರತದಿಂದ ಸುಮಾರು 80 ಲಕ್ಷದಷ್ಟು ಮಂದಿ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಸರಿಸುಮಾರು ಅಷ್ಟೇ ಸಂಖ್ಯೆಯ ಮಂದಿ ಭಾರತಕ್ಕೂ ಬಂದಿದ್ದಾರೆ ಎನ್ನಲಾಗುತ್ತಿದೆ.  ಉಳಿದಂತೆ ವಲಸಿಗರ ಬಗ್ಗೆ ಕೆಲವು ಭ್ರಮೆಗಳು ಮತ್ತು ವದಂತಿಗಳಷ್ಟೇ ಚಾಲ್ತಿಯಲ್ಲಿವೆ. ಈ ವದಂತಿಗಳನ್ನು ಹರಡುವಲ್ಲಿ ಬಿಜೆಪಿಯ ಪಾತ್ರ ಬಹಳ ದೊಡ್ಡದು. ಅಸ್ಸಾಮ್ ಒಂದರಲ್ಲೇ ಒಂದೂವರೆ ಕೋಟಿಯಷ್ಟು ಅಕ್ರಮ ವಲಸಿಗರಿದ್ದಾರೆಂದು ಬಿಜೆಪಿ  ಹೇಳಿಕೊಂಡಿತ್ತು. ಆದರೆ, 2019 ಆಗಸ್ಟ್ ನಲ್ಲಿ ಬಿಡುಗಡೆ ಗೊಳಿಸಲಾದ ಅಂತಿಮ ಎನ್‍ಆರ್ ಸಿ ಪಟ್ಟಿಯಲ್ಲಿ ಕೇವಲ 19 ಲಕ್ಷ ಮಂದಿಯಷ್ಟೇ ಅಕ್ರಮ ವಲಸಿಗರಾಗಿ ಗುರುತಿಗೀಡಾಗಿದ್ದಾರೆ. ಹಾಗಂತ,

ಪಾಕ್ ಮತ್ತು ಬಾಂಗ್ಲಾಗಳ ಗಡಿಗೆ ತಾಗಿಕೊಂಡಿರುವ ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ವಲಸಿಗರಿರುವುದು ಅಸಹಜವೇನಲ್ಲ. ಒಂದೇ ಭೂಮಿಯಾಗಿದ್ದ ಭಾರತವನ್ನು ಕತ್ತರಿಸಿ  ಎರಡು ತುಂಡನ್ನಾಗಿ ಮತ್ತು ಆ ತುಂಡಿನಿಂದ ಇನ್ನೊಂದು ಭಾಗವನ್ನು ಕತ್ತರಿಸಿ ದೂರ ಸರಿಸಿದಾಕ್ಷಣ ಮಾನವ ಸಂಬಂಧಗಳು ಕತ್ತರಿಸಿ ಹೋಗಬೇಕೆಂದೇನೂ ಇಲ್ಲವಲ್ಲ. ಭೂಮಿಯನ್ನು ಕತ್ತರಿಸುವುದು ದೇಶ ಎಂಬ ಪರಿಕಲ್ಪನೆಯ ಪೂರ್ಣತೆಗೆ ಅನಿವಾರ್ಯ ಇರಬಹುದು. ಆದರೆ, ಜನರ ಸಂಬಂಧ ಅದರಿಂದಾಗಿ ಕತ್ತರಿಸಿ ಹೋಗುವುದಿಲ್ಲ. ಜನರು ಆ ಬಳಿಕವೂ ಗಡಿಯ ಆಚೆಗೆ ಮತ್ತು ಈಚೆಗೆ  ಹೋಗುತ್ತಲೂ ಬರುತ್ತಲೂ ಇರುತ್ತಾರೆ. ಕೌಟುಂಬಿಕ ಸಂಬಂಧವನ್ನು ಬೆಳೆಸುತ್ತಿರುತ್ತಾರೆ. ಗಡಿಯ ಈ ಭಾಗದವರನು ಗಡಿಯ ಆ ಭಾಗದ ವಧುವನ್ನು ಮದುವೆಯಾಗುವುದು ಗಡಿಗಿಂತ ಸಾವಿರಾರು  ಕಿಲೋ ಮೀಟರ್ ದೂರ ಇರುವ ನಮಗೆ ಹೊಸತೇ ಹೊರತು ಗಡಿಭಾಗಕ್ಕಲ್ಲ. ಈ ಬಗೆಯ ಸಂಬಂಧಗಳ ಕಾರಣಕ್ಕಾಗಿಯೂ ಭಾರತದಲ್ಲಿ ಬಂದು ನೆಲೆಸಿದವರಿದ್ದಾರೆ. ಇವರಲ್ಲಿ ಹಿಂದೂಗಳೂ ಇದ್ದಾರೆ,  ಮುಸ್ಲಿಮರೂ ಇದ್ದಾರೆ. ವಲಸೆಗೆ ಇನ್ನೊಂದು ಬಹುಮುಖ್ಯ ಕಾರಣ- ಉದ್ಯೋಗ.
ಯಾವ ದೇಶದ ಆರ್ಥಿಕ ಸ್ಥಿತಿ ಪ್ರಬಲವಾಗಿರುತ್ತೋ ಅಲ್ಲಿಗೆ ನಿರುದ್ಯೋಗಿಗಳ ದಂಡು ಲಗ್ಗೆ ಇಡುವುದು ಸಾರ್ವಕಾಲಿಕ ಸತ್ಯ. ಮೆಕ್ಸಿಕೋದ ಗಡಿಯನ್ನು ಮುಚ್ಚುವಂತೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್  ಟ್ರಂಪ್ ಆದೇಶಿಸಿದ್ದು ಇದೇ ಕಾರಣದಿಂದ. ಸಂಪನ್ನ ದೇಶವಾದ ಅಮೇರಿಕಾಕ್ಕೆ ಪಕ್ಕದ ಮೆಕ್ಸಿಕೋದಿಂದ ಉದ್ಯೋಗವನ್ನರಸಿಕೊಂಡು ಜನರು ಬರುವುದು ಅಸಹಜವಲ್ಲ. ಇವನ್ನೆಲ್ಲ ನಿಭಾಯಿಸುವುದಕ್ಕೆ  ಆಯಾ ದೇಶಗಳಲ್ಲಿ ವಲಸೆ ವಿರೋಧಿ ಕಾನೂನುಗಳಿವೆ. ಆದರೆ,
ಕೇಂದ್ರ ಸರಕಾರ ಇಂಥ ವಲಸೆಯನ್ನೇ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟಿದೆ. ಈಶಾನ್ಯ ಭಾರತದ ವಲಸೆ ಸಮಸ್ಯೆಯನ್ನು ಇಡೀ ಭಾರತದ ಸಮಸ್ಯೆಯೆಂಬಂತೆ ಬಿಂಬಿಸಿರುವುದು ಬಿಜೆಪಿಯ  ಒಂದು ತಪ್ಪಾದರೆ, ಪೌರತ್ವ ಮತ್ತು ವಲಸೆಯನ್ನು ಏಕೀಕರಿಸಿ ಜನರನ್ನು ಗೊಂದಲಕ್ಕೆ ದೂಡಿರುವುದು ಇನ್ನೊಂದು ತಪ್ಪು. ಗಡಿಭಾಗದ ರಾಜ್ಯಗಳ ವಲಸೆ ಸಮಸ್ಯೆಗೆ ಇಡೀ ಭಾರತದ 130 ಕೋಟಿ ಮಂದಿಯನ್ನೂ ಶಂಕಿತ ನಾಗರಿಕರನ್ನಾಗಿಸುವುದು ಮತ್ತು ಅವರಿಂದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದು ಮೂರ್ಖತನದ ಪರಮಾವಧಿ. ಅಸ್ಸಾಮ್‍ನ 3 ಕೋಟಿಯಷ್ಟು ಜನಸಂಖ್ಯೆಯ ಪೈಕಿ ಅಕ್ರಮ  ವಲಸಿಗರೆಷ್ಟು ಎಂಬುದನ್ನು ಪತ್ತೆ ಹಚ್ಚುವ ಪ್ರಕ್ರಿಯೆ 2015ರಲ್ಲಿ ಪ್ರಾರಂಭವಾಗಿ 2019 ಆಗಸ್ಟ್ ನಲ್ಲಿ ಕೊನೆಗೊಂಡಾಗ ಆದ ಆವಾಂತರಗಳೇನು? ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ  ಖರ್ಚಿನಲ್ಲಿ 52 ಸಾವಿರ ಸರಕಾರಿ ಅಧಿಕಾರಿಗಳ ಮೂಲಕ 4 ವರ್ಷಗಳ ಕಾಲ ನಡೆದ ಆ ಎನ್‍ಆರ್ ಸಿಯು ಅಂತಿಮವಾಗಿ ಪತ್ತೆಹಚ್ಚಿದ್ದು ಬರೇ 19 ಲಕ್ಷ ಮಂದಿಯನ್ನು. ಅದರಲ್ಲಿ ಸುಮಾರು 15 ಲಕ್ಷ  ಮಂದಿಯೂ ಹಿಂದೂಗಳೇ. ಒಂದೂವರೆ ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಿದ ರಾಜ್ಯವೊಂದರ ಸ್ಥಿತಿ ಇದು. ಹಾಗಂತ, ಈ 15 ಲಕ್ಷ ಮಂದಿ ಹಿಂದೂಗಳಲ್ಲಿ ಎಲ್ಲರೂ  ಧಾರ್ಮಿಕ ದೌರ್ಜನ್ಯ ದಿಂದಾಗಿ ಭಾರತಕ್ಕೆ ಬಂದವರು ಎಂದಲ್ಲವಲ್ಲ. ಇವರಲ್ಲಿ ತೀರಾ ತೀರಾ ಸಣ್ಣ ಭಾಗವೊಂದು ಮಾತ್ರ ಧಾರ್ಮಿಕ ದೌರ್ಜನ್ಯದ ಲಾಭದಲ್ಲಿ ಪೌರತ್ವವನ್ನು ಗಿಟ್ಟಿಸಿಕೊಳ್ಳಬಹುದು. ಆದರೆ  ಉಳಿದ ಬೃಹತ್ ಪ್ರಮಾಣದ ಹಿಂದೂ ವಲಸಿಗರ ಪಾಡೇನು? ಮುಸ್ಲಿಮರ ಜೊತೆಗೆ ಅವರೂ ಬಂಧನ ಕೇಂದ್ರದಲ್ಲಿ ಬದುಕಬೇಕಲ್ಲವೇ? ಅಸ್ಸಾಮ್‍ನ ಬಂಧನ ಕೇಂದ್ರಗಳಲ್ಲಿ ಈಗಾಗಲೇ ಸಾವಿಗೀಡಾದ  29 ಮಂದಿಯಲ್ಲಿ ಹಿಂದೂಗಳೇ ಹೆಚ್ಚಿದ್ದಾರೆ. ಮೊನ್ನೆ ಮೊನ್ನೆಯಂತೆ ಸುರೇಶ್ ಕೊಂಚ್ ಎಂಬವ ಬಂಧನ ಕೇಂದ್ರದಲ್ಲಿ ಸಾವಿಗೀಡಾದ. ಹೀಗಿರುವಾಗ ಎನ್‍ಆರ್ ಸಿ ಯಾರ ಉಪಯೋಗಕ್ಕೆ?

ವಲಸಿಗರಿಗೆ ಪೌರತ್ವ ಕೊಡುವುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ವಲಸಿಗರನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸಿ, ಮುಸ್ಲಿಮರನ್ನು ಮಾತ್ರ ಪೌರತ್ವದಿಂದ ಹೊರಗಿಡುವುದಿದೆಯಲ್ಲ, ಅದಕ್ಕೆ  ಆಕ್ಷೇಪ. ವಲಸಿಗರಲ್ಲಿ ಮುಸ್ಲಿಮ್ ವಲಸಿಗರ ಸಂಖ್ಯೆ ಎಷ್ಟು ಸಣ್ಣದು ಎಂಬುದನ್ನು ಅಸ್ಸಾಮ್‍ನ ಎನ್‍ಆರ್ ಸಿಯೇ ಸ್ಪಷ್ಟ ಪಡಿಸುತ್ತದೆ. ಅಲ್ಲದೇ, ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದಿರುವ  ವಲಸಿಗರನ್ನು ಮೆಕ್ಸಿಕೋದಿಂದ ಅಮೇರಿಕಾಕ್ಕೆ ವಲಸೆ ಹೋದವರಿಗೆ ಹೋಲಿಸಲಾಗದು. ಭಾರತಕ್ಕೂ ಮತ್ತು ಪಾಕ್-ಬಾಂಗ್ಲಾಕ್ಕೂ ನಡುವೆ ಕರುಳಬಳ್ಳಿ ಸಂಬಂಧ ಇದೆ. ಈ ಸಂಬಂಧವೇ ಗಡಿ ಮೀರಿದ  ವಲಸೆಗೆ ಕಾರಣವಾಗಿದೆ. ಹೀಗಿರುವಾಗ, ವಲಸಿಗರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ ಮಾನವೀಯ ನೆಲೆಯಲ್ಲಿ ನೋಡುವುದು ಉತ್ತಮವಲ್ಲವೇ? ವಲಸೆಯನ್ನು ವಲಸೆಯೆಂದೇ  ಪರಿಗಣಿಸುವುದಕ್ಕೆ ಏನು ತೊಂದರೆಯಿದೆ? ಅವರ ನಡುವೆ ಹಿಂದೂ-ಮುಸ್ಲಿಮ್ ಎಂಬ ದುರ್ಬೀನನ್ನು ಏಕೆ ತಂದಿಡುತ್ತೀರಿ? ಬೃಹತ್ ಸಂಖ್ಯೆಯಲ್ಲಿರುವ ಮುಸ್ಲಿಮೇತರ ವಲಸಿಗರಿಗೆ ಪೌರತ್ವ  ಕೊಡುವಾಗ ಇಲ್ಲಿನ ಉದ್ಯೋಗ, ಸಂಸ್ಕøತಿ, ಭಾಷೆ, ಭೌಗೋಳಿ ಪರಂಪರೆಗೆ ತೊಂದರೆ ಎದುರಾಗುವುದಿಲ್ಲವೆಂದಾದರೆ ಇಲ್ಲಿನವರೇ ಆಗಿದ್ದ ತೀರಾ ಸಣ್ಣ ಪ್ರಮಾಣದಲ್ಲಿರುವ ಮುಸ್ಲಿಮರಿಗೆ ಪೌರತ್ವ  ಕೊಡುವಾಗ ಏನು ತೊಂದರೆ? ಯಾಕೆ ಹುಯಿಲು?

Thursday, January 23, 2020

ನಿಮಗೇಕೆ ಆತಂಕ ಎಂದು ಪ್ರಶ್ನಿಸುತ್ತೀರಲ್ಲ, ಕೇಳಿ



 ‘ವಂಶ ಮತ್ತು ಧರ್ಮ ಸಂಬಂಧಿ ಸರ್ವ ತಾರತಮ್ಯವನ್ನೂ ವಿರೋಧಿಸುವ 1969ರ ಅಂತಾರಾಷ್ಟ್ರೀಯ ಒಡಂಬಡಿಕೆ’  (International
convention on the elimination of all forms of Racial discrimination) ಮತ್ತು ‘ದೇಶದ ನಾಗರಿಕರ ಹಕ್ಕುಗಳನ್ನು ದೃಢಪಡಿಸುವ ಅಂತಾರಾಷ್ಟ್ರೀಯ ಒಡಂಬಡಿಕೆ’  (International Covenant on civil and political rights)-- ಈ ಎರಡಕ್ಕೂ ಭಾರತ ಸಹಿ ಹಾಕಿದೆ. ವಂಶ ಮತ್ತು ಧರ್ಮದ ಹೆಸರಲ್ಲಿ ನಾಗರಿಕರ ನಡುವೆ ಬೇಧ- ಭಾವ ತೋರಲಾರೆ ಮತ್ತು ನಾಗರಿಕರ ಹಕ್ಕುಗಳನ್ನು ದಮನಿಸಲಾರೆ ಎಂಬುದನ್ನು ವಿಶ್ವಸಂಸ್ಥೆಯಲ್ಲಿ ಒಪ್ಪಿಕೊಂಡಿರುವ ದೇಶ ಭಾರತ. ವರ್ಷದ ಹಿಂದೆ ಹಂಗೇರಿಗೂ ಯುರೋಪಿಯನ್ ಯೂನಿಯನ್  ಒಕ್ಕೂಟ ರಾಷ್ಟ್ರಗಳಿಗೂ ನಡುವೆ ತಕರಾರು ಉಂಟಾಯಿತು. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಹಂಗೇರಿಯು ತನ್ನ ದೇಶದ ಚಿಂತಕರು, ನ್ಯಾಯಾಧೀಶರು, ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕು ಗುಂಪುಗಳ ಮೇಲೆ ನಿರ್ಬಂಧವನ್ನು ಹೇರಿದೆ ಮತ್ತು ಅವುಗಳ ಸ್ವಾತಂತ್ರ್ಯಕ್ಕೆ ತಡೆ ಒಡ್ಡಿದೆ ಎಂದು ದೂರಲಾಯಿತು. 1992ರಲ್ಲಿ ಅಸ್ತಿತ್ವಕ್ಕೆ ಬಂದ ಯುರೋಪಿಯನ್ ಯೂನಿಯನ್  ಒಡಂಬಡಿಕೆಯ ಭಾಗ-2ರಲ್ಲಿ ಮಾನವನ ಅಂತಸ್ತು, ಸಮಾನತೆ, ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಅಲ್ಪಸಂಖ್ಯಾತರ ಸಹಿತ ಎಲ್ಲ ವಿಭಾಗಗಳ ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಲಾಗಿದೆ.  ಈ ನಿಯಮಗಳನ್ನು ಉಲ್ಲಂಘಿಸುವ ಸದಸ್ಯ ರಾಷ್ಟ್ರಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒಡಂಬಡಿಕೆಯ ಭಾಗ-7ರಲ್ಲಿ ಹೇಳಲಾಗಿದೆ. ಆದ್ದರಿಂದ ಹಂಗೇರಿ ಪ್ರಕರಣವು ಯುರೋಪಿಯನ್  ಯೂನಿಯನ್ ಸಂಸತ್ತಿನಲ್ಲಿ ಚರ್ಚೆಗೆ ಒಳಗಾಯಿತು. ತನ್ನ ದೇಶದ ಅಲ್ಪಸಂಖ್ಯಾತರು ಮತ್ತು ಹೋರಾಟ ಗಾರರನ್ನು ಹಂಗೇರಿಯು ತಾರತಮ್ಯದಿಂದ ನೋಡುತ್ತಿದೆ ಎಂಬುದು ಗಂಭೀರ ಚರ್ಚೆಗೆ ಕಾರಣವಾಯಿತಲ್ಲದೇ, ಪ್ರಕರಣವನ್ನು ಮತಕ್ಕೂ ಹಾಕಲಾಯಿತು. ಆಗ ಹಂಗೇರಿಯ ವಿರುದ್ಧ 448 ಮತಗಳು ಮತ್ತು ಪರ 197 ಮತಗಳೂ ಬಿದ್ದುವು. ಧರ್ಮ ಮತ್ತು ವಂಶದ ಹೆಸರಲ್ಲಿ ನಾಗರಿಕರನ್ನು  ಬೇಧ-ಭಾವದಿಂದ ನೋಡುವುದನ್ನು ವಿಶ್ವಸಂಸ್ಥೆಯಾಗಲಿ ಯುರೋಪಿಯನ್ ಒಕ್ಕೂಟವಾಗಲಿ ಮಾನ್ಯ ಮಾಡುವುದಿಲ್ಲ ಅನ್ನುವುದಕ್ಕೆ ಉದಾಹರಣೆ ಇದು. ಹಾಗಂತ, ನಾಗರಿಕರ ಜೊತೆ ಬೇಧ-ಭಾವ  ತೋರುವ ಪ್ರಕರಣಗಳು ನಡೆದಿಲ್ಲ ಮತ್ತು ನಡೆಯುತ್ತಿಲ್ಲ ಎಂದಲ್ಲ,
1982ರಲ್ಲಿ ಮ್ಯಾನ್ಮಾರ್ ನ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮ್ಯಾನ್ಮಾರ್ ನ ನಾಗರಿಕರನ್ನು ಮೂರು ರೀತಿಯಲ್ಲಿ ವಿಭಜಿಸಿತು.
1. ನಿಜವಾದ ನಾಗರಿಕರು
2. ಸಹ ನಾಗರಿಕರು
3. ಪೌರತ್ವ ನೀಡಲಾಗಿರುವ ವಿದೇಶಿ ನಾಗರಿಕರು.
ಮ್ಯಾನ್ಮಾರ್ ನ ನಿಜವಾದ ಪೌರರನ್ನು ಗುರುತಿಸುವ ಅಂತಿಮ ವರ್ಷವಾಗಿ (cut off year) 1824ನ್ನು ಈ ಪೌರತ್ವ ಕಾಯ್ದೆಯು ನಿಗದಿಪಡಿಸಿತು. ಅಸ್ಸಾಮಿಗರಿಗೆ 1971 ಮಾರ್ಚ್ 24 ಹೇಗೋ ಹಾಗೆಯೇ ಇದು. 1825ರಲ್ಲಿ ಹಳೆಯ ಬರ್ಮಾದ (ಈಗಿನ ಮ್ಯಾನ್ಮಾರ್) ಮೇಲೆ ದಾಳಿ ಮಾಡಿದ ಬ್ರಿಟಿಷರು ಅದನ್ನು ವಶಪಡಿಸಿಕೊಂಡಿದ್ದರು. ಈ ದಾಳಿಗಿಂತ ಮೊದಲು ಬರ್ಮಾದಲ್ಲಿ ವಾಸವಿದ್ದವರಿಗೆ  ಮತ್ತು ಅವರ ನಂತರದ ಪೀಳಿಗೆಗೆ ಮಾತ್ರ ಪೂರ್ಣ ಪೌರತ್ವವನ್ನು ನೀಡಲಾಗುವುದು ಎಂದು ಕಾಯ್ದೆ ಹೇಳುತ್ತದೆ. ಒಂದು ರೀತಿಯಲ್ಲಿ, ಭಾರತದ ಎನ್‍ಆರ್ ಸಿ ಹೇಗೆಯೋ ಅದೇ ರೀತಿಯ ಕಾಯ್ದೆ- ಕಲಮುಗಳನ್ನು ಮ್ಯಾನ್ಮಾರ್ ನ ಪೌರತ್ವ ಕಾಯ್ದೆಯೂ ಒಳಗೊಂಡಿತ್ತು. ಎಲ್ಲ ನಾಗರಿಕರಿಗೂ ಪೌರತ್ವದ ಗುರುತಿನ ಚೀಟಿಯನ್ನು ಮ್ಯಾನ್ಮಾರ್ ಕಡ್ಡಾಯಗೊಳಿಸಿತು. ಈ ಪ್ರಕ್ರಿಯೆಯನ್ನು ಎಷ್ಟು  ನಿಷ್ಕರುಣೆಯಿಂದ ಮಾಡಲಾಯಿತೆಂದರೆ, ಮ್ಯಾನ್ಮಾರ್ ನಲ್ಲಿ ಬಹು ಹಿಂದಿನಿಂದಲೂ ಬದುಕುತ್ತಾ ಬಂದವರ ಮೇಲೂ ಸೇನಾಡಳಿತ ದಯೆ ತೋರಲಿಲ್ಲ. ಪೌರತ್ವ ಕಾಯ್ದೆಯು ಪಟ್ಟಿಮಾಡಿರುವ ಎಲ್ಲ  ದಾಖಲೆಗಳನ್ನು ಸಮರ್ಪಿಸದವರಿಗೆ ಒಂದೋ ವಿದೇಶಿ ನೋಂದಣಿ ಕಾರ್ಡ್(FRC)ಗಳನ್ನು ನೀಡಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಅಥವಾ ದೇಶದಿಂದ ಹೊರಹಾಕುವುದು- ಈ  ಎರಡನ್ನು ನಿಯಮವಾಗಿ ಪೌರತ್ವ ಕಾಯ್ದೆಯಲ್ಲಿ ಹೇಳಲಾಗಿದೆ. ದುರಂತ ಏನೆಂದರೆ, 
ಈ ಕಾಯ್ದೆಯ ನೇರ ಪರಿಣಾಮವನ್ನು ಅರಕ್ಕಾನ್ (ರಾಖೈನ್) ರಾಜ್ಯದ ರೋಹಿಂಗ್ಯನ್ನರು ಎದುರಿಸಬೇಕಾಯಿತು.  ರೋಹಿಂಗ್ಯನ್ ವಂಶಜರಿಗೆ ಬರ್ಮಾದಲ್ಲಿ ಒಂದು ದೀರ್ಘ ಇತಿಹಾಸವಿದೆ. 15ನೇ ಶತಮಾನದಿಂದಲೂ ಅರಕ್ಕಾನ್ ಎಂಬ ಪ್ರದೇಶದಲ್ಲಿ ಇವರು ವಾಸಿಸುತ್ತಾ ಬಂದಿದ್ದಾರೆ ಎಂಬುದಾಗಿ ಇತಿಹಾಸ  ಹೇಳುತ್ತದೆ. ಅಂದು ಅರಕ್ಕಾನ್ ಪ್ರದೇಶವು ಬಂಗಾಳಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅರಕ್ಕಾನ್ ಆ ಬಳಿಕ ಸ್ವತಂತ್ರ ರಾಷ್ಟ್ರವಾಯಿತು. ಆ ಸ್ವತಂತ್ರ ಅರಕ್ಕಾನ್ ರಾಷ್ಟ್ರದ ದೊರೆಯು ಸುಲ್ತಾನ್ ಎಂಬ  ಹೆಸರಿನಿಂದ ಗುರುತಿಸಿಕೊಂಡಿದ್ದ. ಆಡಳಿತ ಮತ್ತು ಸೇನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದುದು ಇದೇ ರೋಹಿಂಗ್ಯನ್ ವಂಶಜರು. 1785ರಲ್ಲಿ ಅರಕ್ಕಾನ್ ರಾಷ್ಟ್ರವು ಬರ್ಮಾದ ಭಾಗವಾಯಿತು. ಆಗಲೂ  ಆಡಳಿತ ಮತ್ತು ಸೇನೆಯಲ್ಲಿ ರೋಹಿಂಗ್ಯನ್ನರಿಗೆ ಮುಖ್ಯ ಪಾತ್ರವೇ ಇತ್ತು. 1825ರಲ್ಲಿ ಬ್ರಿಟಿಷರು ಮತ್ತು ಬರ್ಮಾದ ನಡುವೆ ಮೊದಲ ಯುದ್ಧ ನಡೆಯಿತು. ಇದರಲ್ಲಿ ಬರ್ಮಾ ಪರಾಜಯ ಹೊಂದಿತಲ್ಲದೇ,  ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಬರ್ಮಾವೂ ಸೇರ್ಪಡೆಗೊಂಡಿತು. ಈ ನಡುವೆ ಅರಕ್ಕಾನ್ ಪ್ರದೇಶದ ರೋಹಿಂಗ್ಯನ್ ವಂಶಜರ ಜನಸಂಖ್ಯೆಯಲ್ಲಿ ಆಗುತ್ತಿರುವ ವೃದ್ಧಿ ಮತ್ತು ಆಡಳಿತ ಮತ್ತು  ಸಾಮಾಜಿಕ ವಿಷಯಗಳಲ್ಲಿ ಅವರು ಹೊಂದುತ್ತಿರುವ ಪ್ರಾಬಲ್ಯವು ಬೌದ್ಧ ಧರ್ಮೀಯರಲ್ಲಿ ಆತಂಕವನ್ನು ಹುಟ್ಟು ಹಾಕತೊಡಗಿತು. ಇದು ಸಂಘರ್ಷಕ್ಕೂ ಕಾರಣವಾಯಿತು. ಎಲ್ಲಿಯ ವರೆಗೆಂದರೆ, ಈ  ವಿಷಯವನ್ನು ಪರಿಶೀಲಿಸುವುದಕ್ಕಾಗಿ ಬ್ರಿಟಿಷರು ತನಿಖಾ ತಂಡವನ್ನೂ ರಚಿಸಿದ್ದರು. ಅಂತಿಮವಾಗಿ 1937ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯಿಂದ ಬರ್ಮಾವನ್ನು ಪ್ರತ್ಯೇಕಗೊಳಿಸಿದರು. 1948ರಲ್ಲಿ ಬರ್ಮಾದ ಗಡಿ ಗುರುತೂ ನಡೆಯಿತು. ಈ ನಡುವೆ ಬೌದ್ಧ ರಾಷ್ಟ್ರವಾದ ಜಪಾನ್ ಸೇನೆಯು ಬರ್ಮಾದ ಮೇಲೆ ದಾಳಿ ಮಾಡಿತು. ಆಗ ಅರಕ್ಕಾನ್‍ನಲ್ಲಿ ಎರಡು ಗುಂಪುಗಳಾದುವು. ಬೌದ್ಧರು ಜಪಾನ್ ಸೇನೆಯ ಪರ ನಿಂತರು. ಆದರೆ ರೋಹಿಂಗ್ಯನ್ನರನ್ನು ಬ್ರಿಟಿಷರು ತಮ್ಮ ಜೊತೆ ಸೇರಿಕೊಳ್ಳುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದು ಎರಡೂ ಸಮುದಾಯದ ನಡುವಿನ ಜಗಳಕ್ಕೆ ಇನ್ನಷ್ಟು ಉರಿಯನ್ನು ಹಚ್ಚಿಬಿಟ್ಟಿತು. 1962ರಲ್ಲಿ ಅಧಿಕಾರಕ್ಕೆ ಬಂದ ಜನರಲ್ ನೇ ವಿನ್ ಅವರು ರೋಹಿಂಗ್ಯನ್ನರ ದಮನಕ್ಕೆ ನೀಲನಕ್ಷೆಯನ್ನು ರೂಪಿಸಿದರು. ರಾಖೈನ್ ರಾಜ್ಯವು 288 ಗ್ರಾಮಗಳನ್ನು ಹೊಂದಿರುವ ವಿಶಾಲ ಪ್ರದೇಶ. ಆಡಳಿತಾತ್ಮಕವಾಗಿ ಮತ್ತು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸಕ್ರಿಯರಾಗಿದ್ದ ಇವರನ್ನು ದಮನಗೊಳಿಸುವುದಕ್ಕಾಗಿಯೇ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ  ತಂದಿತು. ಅರಕ್ಕಾನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 12 ಲಕ್ಷ ಮುಸ್ಲಿಮರನ್ನು ರೋಹಿಂಗ್ಯನ್ ಎಂದು ಉಲ್ಲೇಖಿಸಲೂ ಮ್ಯಾನ್ಮಾರ್ ಆಡಳಿತ ಒಪ್ಪಿಕೊಳ್ಳಲಿಲ್ಲ. ಅವರನ್ನು ಬಂಗಾಳಿಗಳು ಎಂದು  ಕರೆಯಿತು. ಮಾತ್ರವಲ್ಲ, ಪೌರತ್ವ ಕಾಯ್ದೆಯನ್ನು ಅವರ ಮೇಲೆ ನಿರ್ದಯವಾಗಿ ಜಾರಿಗೊಳಿಸಿತು. ಅದರ ಪ್ರಕಾರ ರೋಹಿಂಗ್ಯನ್ನರು ಪೌರತ್ವ ನಿರಾಕರಣೆಗೆ ಒಳಗಾದರು. ಅವರಿಂದ ಸರಕಾರಿ ಉದ್ಯೋಗ,  ಮತದಾನದ ಹಕ್ಕನ್ನು ಕಸಿಯಲಾಯಿತಲ್ಲದೇ ಸಂಚಾರಕ್ಕೂ, ಶೈಕ್ಷಣಿಕ ಸೌಲಭ್ಯಕ್ಕೂ ನಿರ್ಬಂಧ ಹೇರಲಾಯಿತು. 2017ರಲ್ಲಿ ಸೇನೆ ಕೈಗೊಂಡ ವಂಶನಾಶ ಕ್ರೌರ್ಯದಲ್ಲಿ (ಕ್ಲಿಯರೆನ್ಸ್ ಆಪರೇಶನ್) 730  ಮಕ್ಕಳೂ ಸೇರಿದಂತೆ 6,700 ಮಂದಿಯ ಹತ್ಯೆಯಾಗಿದೆ ಎಂದು ಹೇಳಲಾಗುತ್ತದೆ. ರಾಖೈನ್ ರಾಜ್ಯದ 288 ಗ್ರಾಮಗಳಿಗೆ ಪೂರ್ಣವಾಗಿ ಅಥವಾ ಭಾಗಶಃ ಬೆಂಕಿ ಹಚ್ಚಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳ ವರದಿಗಳು ಹೇಳುತ್ತಿವೆ. ಸುಮಾರು 9 ಲಕ್ಷ ರೋಹಿಂಗ್ಯನ್ನರು ಬಾಂಗ್ಲಾದೇಶದಲ್ಲಿ ಇವತ್ತು ನಿರಾಶ್ರಿತ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ, 
2018 ಜುಲೈ 19ರಂದು ಇಸ್ರೇಲ್‍ನ ಪಾರ್ಲಿಮೆಂಟು (ನೆಸೆಟ್) ಒಂದು ಮಸೂದೆಯನ್ನು ಅಂಗೀಕರಿಸಿತು. ಇಸ್ರೇಲನ್ನು ಸಂಪೂರ್ಣ ಯಹೂದಿ ರಾಷ್ಟ್ರವಾಗಿ ಘೋಷಿಸುವ ಈ ಮಸೂದೆಯ ಪರ 62  ಮತಗಳು ಬಿದ್ದರೆ ವಿರೋಧವಾಗಿ 55 ಮತಗಳು ಬಿದ್ದುವು. ಆ ಬಳಿಕ ಸುಪ್ರೀಮ್ ಕೋರ್ಟಿನಿಂದಲೂ ಇದಕ್ಕೆ ಅಂಗೀಕಾರ ದೊರೆಯಿತು. ‘ಇಸ್ರೇಲ್ ಐತಿಹಾಸಿಕವಾಗಿಯೇ ಯಹೂದಿಯರ ಜನ್ಮಭೂಮಿಯಾಗಿದ್ದು, ಸ್ವನಿರ್ಣಯ ಅಧಿಕಾರವು ಯಹೂದಿಯರಿಗೆ ಮಾತ್ರ ಸೀಮಿತ’ವೆಂದು ಈ ಮಸೂದೆಯು ಹೇಳುತ್ತದೆ. ಅಧಿಕೃತ ಭಾಷೆಯಾಗಿ ಗುರುತಿಸಿಕೊಂಡಿದ್ದ ಅರಬಿಯನ್ನು ಕೈಬಿಟ್ಟು ಹಿಬ್ರೂವನ್ನು ಮಾತ್ರ ಅಧಿಕೃತ ಪಟ್ಟಿಯಲ್ಲಿ ಸೇರಿಸಲಾಯಿತು. ಆದರೆ, ಈ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಅರಬಿ ಭಾಷೆಗೆ ವಿಶೇಷ ಗೌರವವನ್ನು ನೀಡಲಾಯಿತು. ಯಹೂದಿ ಧರ್ಮಕ್ಕೆ ಸಂಬಂಧಿಸಿದ ಕುರುಹುಗಳನ್ನು ಇಸ್ರೇಲ್‍ನ ಸಂಕೇತಗಳಾಗಿ ಮಾರ್ಪಡಿಸಲಾಯಿತು. ನಿಜವಾಗಿ, ಇಸ್ರೇಲ್‍ನ ಒಟ್ಟು 80 ಲಕ್ಷ ಜನಸಂಖ್ಯೆಯಲ್ಲಿ 18 ಲಕ್ಷ  ಮಂದಿ (20%) ಅರಬಿಗಳಿದ್ದಾರೆ. ಅವರು ಪರಂಪರಾಗತವಾಗಿ ಅಲ್ಲಿಯದೇ ನಿವಾಸಿಗಳು. ಈ ನಿವಾಸಿಗಳು ಮತ್ತು ಅತಿಕ್ರಮಣದ ಮೂಲಕ ಇಸ್ರೇಲ್ ವಶಪಡಿಸಿಕೊಂಡ ಫೆಲೆಸ್ತೀನಿಗಳ ನಡುವೆ ಬೇಧ-ಭಾವ ತೋರುವ 65 ನಿಯಮಗಳನ್ನು ಕಳೆದ 7  ವರ್ಷಗಳಲ್ಲಿ ಇಸ್ರೇಲ್ ರೂಪಿಸಿದೆ ಮತ್ತು ತನ್ನ ಭೂಮಿ ಯಿಂದ ಹೊರದಬ್ಬಿದ ಮುಸ್ಲಿಮರಿಗೆ ಮರಳಿ ಬರುವ ಅವಕಾಶವನ್ನೂ ಇಸ್ರೇಲ್ ನಿರಾಕರಿಸಿದೆ.
ಇದರ ಜೊತೆಗೇ 1935 ಅಕ್ಟೋಬರ್ ನಲ್ಲಿ ಹಿಟ್ಲರ್ ಜಾರಿಗೆ ತಂದ ಪೌರತ್ವ ಕಾಯ್ದೆಯನ್ನೂ ನಾವು ಇಟ್ಟು ನೋಡಬೇಕು. ಅಂದಹಾಗೆ,
ಎನ್‍ಆರ್ ಸಿ ಮತ್ತು ಸಿಎಎಗಳು ಆಳದಲ್ಲಿ ಯಾವ ಹುನ್ನಾರವನ್ನು ಹೊಂದಿರಬಹುದು ಮತ್ತು ಅಂತಿಮವಾಗಿ ಅದು ಯಾವ ಅಪಾಯವನ್ನು ತಂದೊಡ್ಡಬಹುದು ಅನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಮ್ಯಾನ್ಮಾರ್, ಇಸ್ರೇಲ್ ಮತ್ತು ಜರ್ಮನಿಯ ಈ ಉದಾಹರಣೆಗಳು ನಮಗೆ ಧಾರಾಳ ಸಾಕು. ಆಘಾತಕಾರಿ ಸಂಗತಿ ಏನೆಂದರೆ, ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರವು ದಿನಕ್ಕೊಂದರಂತೆ ಮಾತಾಡುತ್ತಿದೆ ಅನ್ನುವುದು. ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ‘ಧಾರ್ಮಿಕ ದೌರ್ಜನ್ಯ’ಕ್ಕೆ ಒಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಕೊಡುವ ಕಾಯ್ದೆಯೇ ಸಿಎಎ  ಎಂದು ಕೇಂದ್ರ ಸರಕಾರ ಪಾರ್ಲಿಮೆಂಟ್ ನಲ್ಲಿ ಹೇಳಿಕೊಂಡಿತ್ತು. ಈಗಲೂ ಹೇಳುತ್ತಿದೆ. ಆದರೆ, ಸಿಎಎ ಕಾಯ್ದೆಯಲ್ಲಿ ‘ಧಾರ್ಮಿಕ ದೌರ್ಜನ್ಯ’ ಎಂಬ ಪದವನ್ನೇ ಬಳಸಲಾಗಿಲ್ಲ ಎಂದು ಪ್ರಜಾವಾಣಿ ಪತ್ರಿಕೆ  (2020 ಜನವರಿ 2, ಪುಟ 6) ಮತ್ತು 2019 ಡಿಸೆಂಬರ್ 23ರ ಇಂಡಿಯಾ ಟುಡೆಯಲ್ಲಿ ಕೌಶಿಕ್ ದೇರಾ ಬರೆದ Everything you wanted to know about the CAA and NRC ಎಂಬ ಶೀರ್ಷಿಕೆಯ ಲೇಖನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವುದಾಗಿ ಕಾಯ್ದೆಯಲ್ಲಿ  ಹೇಳಲಾಗಿದೆ. ಆದರೆ, ಮುಸ್ಲಿಮ್ ವಲಸಿಗರನ್ನು ಮಾತ್ರ ಹೊರಗಿಡಲಾಗಿದೆ. ನಿಜವಾಗಿ, ಸರಕಾರದ ಈ ಇಬ್ಬಂದಿತನವೇ ಸಿಎಎ ಮತ್ತು ಎನ್‍ಆರ್ ಸಿಯ ಅಪಾಯವನ್ನು ಸ್ಪಷ್ಟಪಡಿಸುತ್ತದೆ. ಹೊರನೋಟಕ್ಕೆ  ಹೇಳುವಷ್ಟು ಸರಳ ಮತ್ತು ಸಾಮಾನ್ಯವಲ್ಲ ಈ ಪ್ರಕ್ರಿಯೆ. ಇದರ ಹಿಂದೆ ಇನ್ನೇನೋ ಉದ್ದೇಶವಿರುವಂತಿದೆ. ಅಷ್ಟಕ್ಕೂ, 
2010ರಿಂದ 17ರ ನಡುವೆ ಅಮೇರಿಕದಲ್ಲಿ 35 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2019 ಡಿಸೆಂಬರ್ 1ರಂದು ಪ್ರಕಟಿಸಿದ The overlooked undocumented immigrants: From India, China, Brazil ಎಂಬ ಶೀರ್ಷಿಕೆಯ ಲೇಖನದಲ್ಲಿ ವಿವರಿಸಿತ್ತು. ಇವರಲ್ಲಿ ಹೆಚ್ಚಿನವರು ಭಾರತೀಯರು  ಎಂದು ಲೇಖನ ಬರೆದಿರುವ ಮರಿಯಮ್ ಜೋರ್ಡಾನ್ ಅವರು ಹೇಳಿದ್ದರು. ಆದರೆ ಈ ಅಕ್ರಮ ವಲಸಿಗರನ್ನು ಹೊರಗಟ್ಟುವುದಕ್ಕೆ ಅಮೇರಿಕ ಸಿಎಎಯನ್ನೋ ಎನ್‍ಆರ್ ಸಿಯನ್ನೋ ಜಾರಿಗೆ ತರಲಿಲ್ಲ.  ಯಾಕೆಂದರೆ, ಇದು ಅನಗತ್ಯ. ಸಾಮಾನ್ಯ ಕಾಯ್ದೆಯೇ ಇದನ್ನು ನಿಭಾಯಿಸುವುದಕ್ಕೆ ಧಾರಾಳ ಸಾಕಾಗುತ್ತದೆ. ಹಾಗೆಯೇ, ಅಮೇರಿಕವು 150 ಮಂದಿ ಭಾರತೀಯರನ್ನು ಗಡೀಪಾರುಗೊಳಿಸಿರುವ ಸು ದ್ದಿಯನ್ನು 2019 ನವೆಂಬರ್ 20ರಂದು ಪ್ರಕಟವಾದ ದ ಎಕನಾಮಿಕ್ ಟೈಮ್ಸ್ ಪತ್ರಿಕೆಯು ವರದಿ ಮಾಡಿತ್ತು (150 Indians deported
from America). ಇದು ಸಹಜ ಕ್ರಿಯೆ.  ಭಾರತಕ್ಕೂ ಇದು ಸಾಧ್ಯವಿದೆ. ಇದಕ್ಕಾಗಿ ಎನ್‍ಆರ್ ಸಿ ಮತ್ತು ಸಿಎಎಯ ಅಗತ್ಯವೇ ಇಲ್ಲ. ೧೩೦ ಕೋಟಿ ಭಾರತೀಯರನ್ನು ಕಚೇರಿಗಳ ಎದುರು ಸರತಿ ನಿಲ್ಲಿಸಬೇಕಾದ ಯಾವ ಅಗತ್ಯವೂ ಇಲ್ಲ. ಆದ್ದರಿಂದಲೇ,
ಎನ್‍ಪಿಆರ್, ಎನ್‍ಆರ್ ಸಿ ಮತ್ತು ಸಿಎಎಯ ಬಗ್ಗೆ ಆತಂಕ. ಆಳುವವರು ಏನೇ ಹೇಳಲಿ.

Monday, January 6, 2020

ಅವರಲ್ಲಿ ವಲಸಿಗರು ಯಾರು, ನುಸುಳುಕೋರರು ಯಾರು?



While exercising its Right of reply at the 38th session of the UN Human Rights Council, in 2018, the Indian representative said of the Pakistan’s stand: “In its obsession with puritanism, it has unleashed systematic persecution against its own muslim minorities including Shias, Ahmadiyas, Ismilia and Hazaras, who have been reduced to second class citizens.

“ಪಾಕಿಸ್ತಾನವು ತನ್ನದೇ ಬಹುಸಂಖ್ಯಾತ ಸಮುದಾಯದ ಅಲ್ಪಸಂಖ್ಯಾತ ಪಂಗಡಗಳಾದ ಶಿಯಾ, ಅಹ್ಮದಿಯಾ, ಇಸ್ಮಾಯಿಲಿಯಾ ಮತ್ತು ಹಝಾರಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಮತ್ತು ಅವರನ್ನು  ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಿ ಕೊಳ್ಳುತ್ತಿದೆ...” ಎಂದು 2018ರಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ 38ನೇ ಸಭೆಯಲ್ಲಿ ಮೋದಿ ಸರಕಾರ ವಾದಿಸಿತ್ತು ಎಂಬುದಾಗಿ 2019  ಡಿಸೆಂಬರ್ 26ರ ದಿ ಹಿಂದೂ ಪತ್ರಿಕೆ ಬಹಿರಂಗಪಡಿಸಿದೆ. ನಿಜವಾಗಿ,
ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರದ ಈ ವರೆಗಿನ ವಾದಗಳನ್ನೆಲ್ಲ ಪುಡಿಗಟ್ಟುವ ದಾಖಲೆ ಇದು. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಹಿಂದೂಗಳ ಮೇಲೆ ಧಾರ್ಮಿಕ  ದಮನ ನಡೆಯುತ್ತಿದೆ ಮತ್ತು ಆ ಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುತ್ತಿದ್ದೇವೆ ಎಂಬುದು ಕೇಂದ್ರದ ವಾದ. ಧಾರ್ಮಿಕ ದೌರ್ಜನ್ಯದಿಂದ ಪಾರಾಗಿ ಭಾರತಕ್ಕೆ ಬಂದಿರುವ  ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಕೊಡುವುದು ಸಿಎಎಯ ಉದ್ದೇಶ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಮೇಲಿನ ಮೂರೂ ರಾಷ್ಟ್ರಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತವಾಗಿರುವುದರಿಂದ  ಮುಸ್ಲಿಮರ ಮೇಲೆ ಧಾರ್ಮಿಕ ದೌರ್ಜನ್ಯ ಅಸಾಧ್ಯ ಮತ್ತು ಆ ಕಾರಣಕ್ಕಾಗಿ ನಾವು ಪೌರತ್ವ ಕಾನೂನಿನಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದೇವೆ ಎಂದೂ ಕೇಂದ್ರ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆ. ಇದೇವೇಳೆ,  ಪಾಕಿಸ್ತಾನದಲ್ಲಿ ಇಸ್ಮಾಯಿಲಿಯ, ಅಹ್ಮದಿಯಾ, ಹಝಾರ ಮತ್ತು ಶಿಯಾ ಪಂಗಡಗಳ ಮೇಲೆ ಧಾರ್ಮಿಕ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಇದೇ ಸರಕಾರದ ಪ್ರತಿನಿಧಿಗಳು ವಾದಿಸುತ್ತಾರೆ. ಈ ಇಬ್ಬಂದಿತನಕ್ಕೆ ಏನೆಂದು ಹೇಳಬೇಕು? ಹಾಗಿದ್ದರೆ ಧಾರ್ಮಿಕ ದೌರ್ಜನ್ಯದಿಂದಾಗಿ ಪಾಕ್‍ನಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿರುವಂತೆಯೇ ಶಿಯಾ, ಅಹ್ಮದಿಯಾ, ಹಝಾರ, ಇಸ್ಮಾ ಯಿಲಿಯ್ಯ  ಪಂಗಡದ ಮುಸ್ಲಿಮರೂ ಬಂದಿರಬಾರದೇಕೆ? ಅವರಿಗೆ ಪೌರತ್ವ ಕೊಡಬಾರದೇಕೆ? ಅಷ್ಟಕ್ಕೂ,
ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರ ಪೈಕಿ ಎಷ್ಟು ಮಂದಿ ಧಾರ್ಮಿಕ ದೌರ್ಜನ್ಯವನ್ನು ಎದುರಿಸುದ್ದಾರೆ ಮತ್ತು ಎಷ್ಟು ಮಂದಿ ಉದ್ಯೋಗ ಮತ್ತಿತರ ಅವಕಾಶಗಳನ್ನು  ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ನಮ್ಮಲ್ಲಿ ಯಾವ ಪ್ಯಾರಾಮೀಟರ್ ಇದೆ? ಪಾಕ್, ಅಫಘಾನ್ ಮತ್ತು ಬಾಂಗ್ಲಾದಿಂದ ಭಾರತ ಪ್ರವೇಶಿಸಿರುವ ಎಲ್ಲ ಮುಸ್ಲಿಮೇತರರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬುದು ನಿಜವೇ? ಅವರೆಲ್ಲ ಧಾರ್ಮಿಕ ದೌರ್ಜನ್ಯದಿಂದಾಗಿ ಮಾತ್ರ ಭಾರತ ಪ್ರವೇಶಿಸಿದ ವಲಸಿಗರೇ? ಮುಸ್ಲಿಮರು ಮಾತ್ರ ಈ ಯಾವುದನ್ನೂ ಎದುರಿಸದೇ  ಭಾರತ ಪ್ರವೇಶಿಸಿದ ನುಸುಳುಕೋರರೇ? ಮುಸ್ಲಿಮೇತರರನ್ನು ವಲಸಿಗರು ಮತ್ತು ಮುಸ್ಲಿಮರನ್ನು ನುಸುಳುಕೋರರು ಎಂಬುದಾಗಿ ವಿಭಜಿಸುವುದಕ್ಕೆ ಏನು ಆಧಾರವಿದೆ? ಉದ್ಯೋಗ ಮತ್ತಿತರ ಅವಕಾಶಗಳನ್ನು ಹುಡುಕಿಕೊಂಡು ಮುಸ್ಲಿಮೇತರರೂ ಯಾಕೆ ಭಾರತಕ್ಕೆ ನುಸುಳಿರ ಬಾರದು? ಮುಸ್ಲಿಮರು ಮಾತ್ರ ಯಾಕೆ ನುಸುಳುಕೋರರಾಗುತ್ತಾರೆ, ಅವರೇಕೆ ವಲಸಿಗರಾಗುವುದಿಲ್ಲ? ಧಾರ್ಮಿಕ ದೌರ್ಜನ್ಯ ಮತ್ತು ಉದ್ಯೋಗ ಹುಡುಕಾಟ ಎಂಬೆರಡು ಸಮಾನ ಕಾರಣಗಳಿಗಾಗಿ ಮುಸ್ಲಿಮರು ಮತ್ತು ಮುಸ್ಲಿಮೇತರರೂ ಭಾರತ ಪ್ರವೇಶಿಸಿರುವ ಸಾಧ್ಯತೆಯೇ ಅಧಿಕವಿದ್ದರೂ ಯಾಕೆ ಮುಸ್ಲಿಮರನ್ನು ನುಸುಳುಕೋರರು ಮತ್ತು ಮುಸ್ಲಿಮೇತರರನ್ನು ವಲಸಿಗರು ಎಂದು ಕರೆಯಲಾಗುತ್ತದೆ? ನುಸುಳುಕೋರರು ಎಂಬ ಪದದಲ್ಲಿಯೇ ಕಾನೂನು ಬಾಹಿರವಾಗಿ ಪ್ರವೇಶಿಸಿದವರು ಎಂಬ ಧ್ವನಿಯಿದೆ. ಆದರೆ ವಲಸಿಗರು ಅನ್ನುವ ಪದದಲ್ಲಿ ಈ ಅಪರಾಧಿ ಭಾವವಿಲ್ಲ. ಅಂದಹಾಗೆ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ಭಾರತ ಪ್ರವೇಶಿಸಿದ ಮುಸ್ಲಿಮೇತರರೆಲ್ಲರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಹಾಗಂತ, ಪಾಕ್, ಅಫಘಾನ್  ಮತ್ತು ಬಾಂಗ್ಲಾದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯ ನಡೆದಿದೆ ಅನ್ನುವುದು ಸುಳ್ಳಲ್ಲ. ಕ್ರಿಕೆಟಿಗ ಶುಐಬ್ ಅಖ್ತರ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟಿಗ ದಾನಿಶ್ ಕನೇರಿಯಾ ಅವರ ಮೇಲೆ ಧಾರ್ಮಿಕ ತಾರ ತಮ್ಯ ನಡೆದಿತ್ತು ಎಂದವರು ಹೇಳಿರುವುದೂ ಮತ್ತು ಕನೇರಿಯಾ ಅದನ್ನು ಒಪ್ಪಿಕೊಂಡಿರುವುದೂ ನಡೆದಿದೆ. ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ  ಎರಡನೇ ಹಿಂದೂ ಕ್ರಿಕೆಟಿಗ ಕನೇರಿಯಾ. ಅಷ್ಟೊಂದು ಉನ್ನತ ಮಟ್ಟದಲ್ಲೂ ಧಾರ್ಮಿಕ ತಾರತಮ್ಯ ನಡೆದಿದೆ ಎಂಬುದು ಆಘಾತಕಾರಿ ಮತ್ತು ಖಂಡನಾರ್ಹ. ಆದರೂ ಪಾಕ್‍ನಲ್ಲಿ ನಡೆಯುತ್ತಿರುವ  ಧಾರ್ಮಿಕ ತಾರತಮ್ಯದ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಗೃಹಸಚಿವ ಅಮಿತ್ ಶಾ ಅವರು ನೀಡಿರುವ ಲೆಕ್ಕಾಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ಪ್ರಕಾರ, 1951ರಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರ  ಸಮುದಾಯದ ಜನಸಂಖ್ಯೆ 23% ಇತ್ತು. ಈಗ ಅದು 3.7ಕ್ಕೆ ಕುಸಿದಿದೆ. ಅಂದ ಹಾಗೆ, ಇದು ನಿಜವಲ್ಲ. 1951ರಲ್ಲಿ ಬಾಂಗ್ಲಾದೇಶದ ಉದಯವಾಗಿರಲಿಲ್ಲ. ಈಗಿನ ಬಾಂಗ್ಲಾದೇಶವು ಆಗಿನ ಪೂರ್ವ  ಪಾಕಿಸ್ತಾನದ ಭಾಗವಾಗಿತ್ತು. ಆ ಪೂರ್ವ ಭಾಗದಲ್ಲಿ ಮುಸ್ಲಿಮರ ಸಂಖ್ಯೆ 23% ಇತ್ತೇ ಹೊರತು ಇಡೀ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮೇತರರ ಜನಸಂಖ್ಯೆ 23% ಇರಲಿಲ್ಲ. ಆಗ ಇದ್ದುದು ಬರೇ 3.5%. ಒಂದುವೇಳೆ, ಕಾಶ್ಮೀರದಲ್ಲಿರುವ ಮುಸ್ಲಿಮರ ಜನಸಂಖ್ಯೆಯ ಶೇಕಡಾವಾರು ಲೆಕ್ಕವನ್ನು ಎತ್ತಿಕೊಂಡು ಇಡೀ ಭಾರತಕ್ಕೆ ಅದನ್ನು ಅನ್ವಯಿಸಿ ಹೇಳಿದರೆ ಹೇಗಿದ್ದೀತು? ಭಾರತದಲ್ಲಿ  60% ಮುಸ್ಲಿಮರಿದ್ದಾರೆ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಪಾಕಿಸ್ತಾನದಲ್ಲಿ 1951ರ ಜನಗಣತಿ ಪ್ರಕಾರ 23% ಮುಸ್ಲಿಮೇತರರಿದ್ದರು ಎಂದು ಹೇಳುವುದೂ ಅಷ್ಟೇ ತಪ್ಪು. ಪಾಕ್‍ನಲ್ಲಿ  ವರ್ಷಂಪ್ರತಿ ಮುಸ್ಲಿಮೇತರರ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಒಪ್ಪಿಕೊಂಡರೂ 23% ದಿಂದ 3.7%ಕ್ಕೆ ಇಳಿಯಿತು ಎಂಬ ಉತ್ಪ್ರೇಕ್ಷಿತ ಸುಳ್ಳನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಅದೇವೇಳೆ, 1951ರ  ಜನಗಣತಿಯಂತೆ ಬಾಂಗ್ಲಾದಲ್ಲಿ ಮುಸ್ಲಿಮೇತರರ ಜನಸಂಖ್ಯೆ 23.20%ದಷ್ಟಿತ್ತು ಮತ್ತು 2011ರ ಜನಗಣತಿ ಪ್ರಕಾರ ಈ ಅನುಪಾತ 9.40%ಕ್ಕೆ ಕುಸಿದಿದೆ. ನಿಜವಾಗಿ,
ವಿಭಜನೆಯು ಭಾರತ ಮತ್ತು ಪಾಕ್‍ಗಳ ನಡುವೆ ಅತಿದೊಡ್ಡ ವಲಸೆಗೆ ಕಾರಣವಾಯಿತು. ಒಂದು ಅಂದಾಜಿನ ಪ್ರಕಾರ, 72.3 ಲಕ್ಷ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಮತ್ತು 72.49 ಲಕ್ಷ  ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಅಷ್ಟಕ್ಕೂ, ಭೂಪಟದ ಮಧ್ಯೆ ಗೆರೆಯೊಂದನ್ನು ಎಳೆದ ತಕ್ಷಣ ಭೂಪಟದಲ್ಲಿ ವಿಭಜನೆ ಉಂಟಾದೀತೇ ಹೊರತು ಜೊತೆಯಾಗಿದ್ದ ಜನರ ನಡುವಿನ  ಸಂಬಂಧದಲ್ಲಿ ಬಿರುಕು ಉಂಟಾಗಲು ಸಾಧ್ಯವಿಲ್ಲವಲ್ಲ. ಎರಡೂ ರಾಷ್ಟ್ರಗಳ ವಿಭಜನೆಯಿಂದಾಗಿ ಅಣ್ಣ ಪಾಕ್‍ನಲ್ಲಿ ಮತ್ತು ತಮ್ಮ ಭಾರತದಲ್ಲಿ ಎಂಬಂತಹ ಸ್ಥಿತಿ ತಲೆದೋರಿತು. ಗಡಿ ಗುರುತು ಏನೇ  ಇದ್ದರೂ ಈ ಸಂಬಂಧಗಳು ಪರಸ್ಪರ ನಾಡುಗಳಿಗೆ ವಲಸೆ ಹೋಗುವುದಕ್ಕೂ ಕಾರಣವಾಯಿತು. ಭಾರತದ ಗಡಿ ಪ್ರದೇಶಗಳಲ್ಲಿ ತಮ್ಮ ಸಂಬಂಧಿಕರಿದ್ದಾರೆ ಮತ್ತು ಉದ್ಯೋಗ ಹುಡುಕಲು ಅವರು  ನೆರವಾಗುತ್ತಾರೆ ಎಂಬ ಧೈರ್ಯದಿಂದ ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದವರ ಸಂಖ್ಯೆ ದೊಡ್ಡದಿರಬಹುದು. ಹಾಗೆಯೇ ಧಾರ್ಮಿಕ ದೌರ್ಜನ್ಯವೂ ಹೀಗೆ ವಲಸೆ ಬರುವುದಕ್ಕೆ ಕಾರಣ  ಇರ ಬಹುದು. ಅಸ್ಸಾಮ್‍ನ ಮೇಲೆ ಈ ವಲಸೆ ದೊಡ್ಡಮಟ್ಟದ ಪರಿಣಾಮವನ್ನು ಬೀರಿತು. ಅಸ್ಸಾಮ್‍ಗೆ ಹೀಗೆ ವಲಸೆ ಬಂದವರಲ್ಲಿ ಮುಸ್ಲಿಮರೂ ಮತ್ತು ಮುಸ್ಲಿಮೇತರರೂ ಇದ್ದರು. ಈ ವಲಸೆ  ಅಸ್ಸಾಮ್‍ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ವಲಸೆಯ ವಿರುದ್ಧ ಜನಾಂದೋಲನಗಳೇ ನಡೆದುವು. ಸುಮಾರು 2000ಕ್ಕಿಂತಲೂ ಅಧಿಕ ಮಂದಿಯ ಸಾವಿಗೆ ಕಾರಣವಾದ ನೆಲ್ಲಿ ಹತ್ಯಾಕಾಂಡಕ್ಕೆ ಈ  ವಲಸೆ ವಿರೋಧಿ ಚಳವಳಿಯೇ ಕಾರಣ. ಆದ್ದರಿಂದಲೇ, ಅಸ್ಸಾಮ್‍ನ ಎನ್‍ಆರ್ ಸಿಗೆ ವಿಶೇಷ ಮಹತ್ವವಿದೆ. 1971 ಮಾರ್ಚ್ 24ರ ಬಳಿಕ ವಲಸೆ ಬಂದ ಎಲ್ಲರನ್ನೂ ಅಸ್ಸಾಮ್‍ನಿಂದ  ಹೊರಹಾಕಬೇಕೆಂಬುದು ಅಸ್ಸಾಮ್ ಎನ್‍ಆರ್ ಸಿಯ ಮುಖ್ಯ ಉದ್ದೇಶ. 1971 ಮಾರ್ಚ್ 24ಕ್ಕಿಂತ ಮೊದಲಿನ ಜನನ ದಾಖಲೆ, ಮತದಾರರ ಪಟ್ಟಿಯಲ್ಲಿ ಹೆಸರು, ಎಲ್‍ಐಸಿ ಪ್ರಮಾಣ ಪತ್ರ, ಪಾಸ್ ಪೋರ್ಟ್, ಬ್ಯಾಂಕ್ ಖಾತೆ ಇತ್ಯಾದಿ 14 ದಾಖಲೆಗಳನ್ನು ಅಸ್ಸಾಮಿಗರು ತಮ್ಮ ನಾಗರಿಕತ್ವದ ಪುರಾವೆಯಾಗಿ ಮಂಡಿಸಬೇಕಿದೆ. ಇದಿಲ್ಲದವರು ತಮ್ಮ ಹೆತ್ತವರ ಪೌರತ್ವ ದಾಖಲೆಗಳೂ ಸೇರಿದಂತೆ 8  ದಾಖಲೆಗಳನ್ನಾದರೂ ತೋರಿಸಲೇಬೇಕು. ಇದೂ ಸಾಧ್ಯವಾಗದವರು ವಿದೇಶಿ ಟ್ರಿಬ್ಯೂನಲ್‍ನ ಬಾಗಿಲು ತಟ್ಟಬೇಕು. ಆದರೆ, ಭಾರತದ ಒಟ್ಟು ಜನಸಂಖ್ಯೆಯ ಪೈಕಿ ಕೇವಲ 58% ಜನರಲ್ಲಿ ಮಾತ್ರ ಜನನ ನೋಂದಣಿ ದಾಖಲೆ ಇದೆ ಎಂದು ಯುನಿಸೆಫ್ ಹೇಳುತ್ತದೆ. ಆದ್ದರಿಂದಲೇ,
 ಅಸ್ಸಾಮ್‍ನ ಜನರು ತಮ್ಮ ದಾಖಲೆಗಳನ್ನು ಪಡಕೊಳ್ಳುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರು. ಅವರು ಹಣ  ಹೊಂದಿಸುವುದಕ್ಕಾಗಿ ತಮ್ಮ ಭೂಮಿ ಮಾರಿದರು. ಉದ್ಯೋಗಕ್ಕೆ ರಜೆ ಹಾಕಿದರು. ಉಳುಮೆ ಕೈ ಬಿಟ್ಟರು. ಕೇವಲ ಅಸ್ಸಾಮ್ ಸರಕಾರವೊಂದೇ ಇಡೀ ಎನ್‍ಆರ್ ಸಿ ಪ್ರಕ್ರಿಯೆಗಾಗಿ 11 ಕೋಟಿ 82 ಲಕ್ಷ  ರೂಪಾಯಿಯನ್ನು ಖರ್ಚು ಮಾಡಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಅಂದರೆ, ಒಬ್ಬೊಬ್ಬ ವ್ಯಕ್ತಿಗೂ 19,064 ರೂಪಾಯಿ ಖರ್ಚು ಮಾಡಿದಂತಾಗಿದೆ. 2017ರಲ್ಲಿ ಅಸ್ಸಾಮ್‍ನ ಒಟ್ಟು ಜನಸಂಖ್ಯೆಯಲ್ಲಿ 1.2 ಕೋಟಿ ಮಂದಿ ವಿದೇಶಿಗರು ಎಂದು ಘೋಷಿಸಲಾಯಿತು. 2018 ಜುಲೈನಲ್ಲಿ ಈ ವಿದೇಶಿಯರ ಸಂಖ್ಯೆ 44 ಲಕ್ಷಕ್ಕೆ ಕುಸಿಯಿತು. 2019ರಲ್ಲಿ ಈ ಸಂಖ್ಯೆ ಮತ್ತೂ ಕುಸಿದು 19 ಲಕ್ಷಕ್ಕೆ  ಬಂದು ನಿಂತಿತು. ತಮಾಷೆ ಏನೆಂದರೆ, ಈ ಖರ್ಚು, ಅಲೆದಾಟ, ಸಂಕಟಗಳೆಲ್ಲ ಭಾರತೀಯನೊಬ್ಬ ಭಾರತೀಯ ಎಂದು ಸಾಬೀತುಪಡಿಸುವುದಕ್ಕಾಗಿ ಮಾಡಲಾಗಿದೆ ಎಂಬುದು. ಅಂದಹಾಗೆ,
ಎನ್‍ಆರ್ ಸಿ ಪ್ರಕಾರ, ಈ ದೇಶದ ಮುಸ್ಲಿಮರು ಮತ್ತು ಮುಸ್ಲಿಮೇತರರೆಲ್ಲರೂ ತಮ್ಮ ಪೌರತ್ವ ಸಾಬೀತುಪಡಿಸುವುದಕ್ಕಾಗಿ ದಾಖಲೆ ಸಲ್ಲಿಸಬೇಕಾಗುತ್ತದೆ. ಹೀಗೆ ದಾಖಲೆಗಳನ್ನು ಸಲ್ಲಿಸ ಬೇಕೆಂದರೆ,  ಮೊದಲಾಗಿ ಅವುಗಳನ್ನು ಸಂಗ್ರಹಿಸಬೇಕು. ಅದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕು. ಭಾರತೀಯ ನಾಗರಿಕರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸುವುದಕ್ಕಾಗಿ ಪಡುವ ಸಂಕಟ ಇದು. ಅಸ್ಸಾಮ್‍ನ ಮಂದಿ ಈ ಎಲ್ಲ ಸಂಕಟಗಳಿಗೆ ತುತ್ತಾಗಿ ಬಸವಳಿದಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಅಸ್ಸಾಮ್‍ನಲ್ಲಿ ಸಿಕ್ಕಿದ್ದು ಬರೇ 19 ಲಕ್ಷ ಮಂದಿ. ಇದೂ ಅಂತಿಮ ಅಲ್ಲ. ಈ 19 ಲಕ್ಷ ಮಂದಿಗೂ ವಿದೇಶಿ  ಟ್ರಿಬ್ಯೂನಲ್‍ಗೆ ಹೋಗಿ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಅವಕಾಶ ಇದೆ. ಅಲ್ಲೂ ನ್ಯಾಯ ಸಿಗದಿದ್ದರೆ ಮತ್ತೆ ನ್ಯಾಯಾಲಯವನ್ನು ಸಮೀಪಿಸಬಹುದು. ಸದ್ಯ,
ದೇಶದಾದ್ಯಂತ ನಡೆಸಲಾಗುವುದೆಂದು ಹೇಳಲಾಗುತ್ತಿರುವ ಎನ್‍ಆರ್ ಸಿ ಮತ್ತು ಸಿಎಎಗೆ ಅಗತ್ಯವಿರುವ ದಾಖಲೆಗಳು ಏನೇನು ಎಂಬುದನ್ನು ಕೇಂದ್ರ ಸರಕಾರ ಈವರೆಗೂ ಹೇಳಿಯೇ ಇಲ್ಲ. ಆದ್ದರಿಂದ,  ಅಸ್ಸಾಮ್‍ನ ಮಾದರಿಯಲ್ಲೇ ದೇಶದಾದ್ಯಂತ ಎನ್‍ಆರ್ ಸಿ ನಡೆಸಲಾಗುತ್ತದೆ ಎಂದು ಅಂದುಕೊಳ್ಳಬೇಕಾಗುತ್ತದೆ. ಹೀಗಾದರೆ 130 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಯುದ್ಧಸ್ಥಿತಿ ನಿರ್ಮಾಣವಾದೀತು. ಸರಕಾರಿ ಕಚೇರಿಗಳಲ್ಲಿ ಜನದಟ್ಟಣೆಯಿಂದಾಗಿ ಗೋಲಿಬಾರ್, ಲಾಠಿ ಚಾರ್ಜ್‍ಗಳು ನಿತ್ಯದ ಸುದ್ದಿಯಾದೀತು.