Thursday, January 23, 2020

ನಿಮಗೇಕೆ ಆತಂಕ ಎಂದು ಪ್ರಶ್ನಿಸುತ್ತೀರಲ್ಲ, ಕೇಳಿ



 ‘ವಂಶ ಮತ್ತು ಧರ್ಮ ಸಂಬಂಧಿ ಸರ್ವ ತಾರತಮ್ಯವನ್ನೂ ವಿರೋಧಿಸುವ 1969ರ ಅಂತಾರಾಷ್ಟ್ರೀಯ ಒಡಂಬಡಿಕೆ’  (International
convention on the elimination of all forms of Racial discrimination) ಮತ್ತು ‘ದೇಶದ ನಾಗರಿಕರ ಹಕ್ಕುಗಳನ್ನು ದೃಢಪಡಿಸುವ ಅಂತಾರಾಷ್ಟ್ರೀಯ ಒಡಂಬಡಿಕೆ’  (International Covenant on civil and political rights)-- ಈ ಎರಡಕ್ಕೂ ಭಾರತ ಸಹಿ ಹಾಕಿದೆ. ವಂಶ ಮತ್ತು ಧರ್ಮದ ಹೆಸರಲ್ಲಿ ನಾಗರಿಕರ ನಡುವೆ ಬೇಧ- ಭಾವ ತೋರಲಾರೆ ಮತ್ತು ನಾಗರಿಕರ ಹಕ್ಕುಗಳನ್ನು ದಮನಿಸಲಾರೆ ಎಂಬುದನ್ನು ವಿಶ್ವಸಂಸ್ಥೆಯಲ್ಲಿ ಒಪ್ಪಿಕೊಂಡಿರುವ ದೇಶ ಭಾರತ. ವರ್ಷದ ಹಿಂದೆ ಹಂಗೇರಿಗೂ ಯುರೋಪಿಯನ್ ಯೂನಿಯನ್  ಒಕ್ಕೂಟ ರಾಷ್ಟ್ರಗಳಿಗೂ ನಡುವೆ ತಕರಾರು ಉಂಟಾಯಿತು. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಹಂಗೇರಿಯು ತನ್ನ ದೇಶದ ಚಿಂತಕರು, ನ್ಯಾಯಾಧೀಶರು, ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕು ಗುಂಪುಗಳ ಮೇಲೆ ನಿರ್ಬಂಧವನ್ನು ಹೇರಿದೆ ಮತ್ತು ಅವುಗಳ ಸ್ವಾತಂತ್ರ್ಯಕ್ಕೆ ತಡೆ ಒಡ್ಡಿದೆ ಎಂದು ದೂರಲಾಯಿತು. 1992ರಲ್ಲಿ ಅಸ್ತಿತ್ವಕ್ಕೆ ಬಂದ ಯುರೋಪಿಯನ್ ಯೂನಿಯನ್  ಒಡಂಬಡಿಕೆಯ ಭಾಗ-2ರಲ್ಲಿ ಮಾನವನ ಅಂತಸ್ತು, ಸಮಾನತೆ, ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಅಲ್ಪಸಂಖ್ಯಾತರ ಸಹಿತ ಎಲ್ಲ ವಿಭಾಗಗಳ ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಲಾಗಿದೆ.  ಈ ನಿಯಮಗಳನ್ನು ಉಲ್ಲಂಘಿಸುವ ಸದಸ್ಯ ರಾಷ್ಟ್ರಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒಡಂಬಡಿಕೆಯ ಭಾಗ-7ರಲ್ಲಿ ಹೇಳಲಾಗಿದೆ. ಆದ್ದರಿಂದ ಹಂಗೇರಿ ಪ್ರಕರಣವು ಯುರೋಪಿಯನ್  ಯೂನಿಯನ್ ಸಂಸತ್ತಿನಲ್ಲಿ ಚರ್ಚೆಗೆ ಒಳಗಾಯಿತು. ತನ್ನ ದೇಶದ ಅಲ್ಪಸಂಖ್ಯಾತರು ಮತ್ತು ಹೋರಾಟ ಗಾರರನ್ನು ಹಂಗೇರಿಯು ತಾರತಮ್ಯದಿಂದ ನೋಡುತ್ತಿದೆ ಎಂಬುದು ಗಂಭೀರ ಚರ್ಚೆಗೆ ಕಾರಣವಾಯಿತಲ್ಲದೇ, ಪ್ರಕರಣವನ್ನು ಮತಕ್ಕೂ ಹಾಕಲಾಯಿತು. ಆಗ ಹಂಗೇರಿಯ ವಿರುದ್ಧ 448 ಮತಗಳು ಮತ್ತು ಪರ 197 ಮತಗಳೂ ಬಿದ್ದುವು. ಧರ್ಮ ಮತ್ತು ವಂಶದ ಹೆಸರಲ್ಲಿ ನಾಗರಿಕರನ್ನು  ಬೇಧ-ಭಾವದಿಂದ ನೋಡುವುದನ್ನು ವಿಶ್ವಸಂಸ್ಥೆಯಾಗಲಿ ಯುರೋಪಿಯನ್ ಒಕ್ಕೂಟವಾಗಲಿ ಮಾನ್ಯ ಮಾಡುವುದಿಲ್ಲ ಅನ್ನುವುದಕ್ಕೆ ಉದಾಹರಣೆ ಇದು. ಹಾಗಂತ, ನಾಗರಿಕರ ಜೊತೆ ಬೇಧ-ಭಾವ  ತೋರುವ ಪ್ರಕರಣಗಳು ನಡೆದಿಲ್ಲ ಮತ್ತು ನಡೆಯುತ್ತಿಲ್ಲ ಎಂದಲ್ಲ,
1982ರಲ್ಲಿ ಮ್ಯಾನ್ಮಾರ್ ನ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮ್ಯಾನ್ಮಾರ್ ನ ನಾಗರಿಕರನ್ನು ಮೂರು ರೀತಿಯಲ್ಲಿ ವಿಭಜಿಸಿತು.
1. ನಿಜವಾದ ನಾಗರಿಕರು
2. ಸಹ ನಾಗರಿಕರು
3. ಪೌರತ್ವ ನೀಡಲಾಗಿರುವ ವಿದೇಶಿ ನಾಗರಿಕರು.
ಮ್ಯಾನ್ಮಾರ್ ನ ನಿಜವಾದ ಪೌರರನ್ನು ಗುರುತಿಸುವ ಅಂತಿಮ ವರ್ಷವಾಗಿ (cut off year) 1824ನ್ನು ಈ ಪೌರತ್ವ ಕಾಯ್ದೆಯು ನಿಗದಿಪಡಿಸಿತು. ಅಸ್ಸಾಮಿಗರಿಗೆ 1971 ಮಾರ್ಚ್ 24 ಹೇಗೋ ಹಾಗೆಯೇ ಇದು. 1825ರಲ್ಲಿ ಹಳೆಯ ಬರ್ಮಾದ (ಈಗಿನ ಮ್ಯಾನ್ಮಾರ್) ಮೇಲೆ ದಾಳಿ ಮಾಡಿದ ಬ್ರಿಟಿಷರು ಅದನ್ನು ವಶಪಡಿಸಿಕೊಂಡಿದ್ದರು. ಈ ದಾಳಿಗಿಂತ ಮೊದಲು ಬರ್ಮಾದಲ್ಲಿ ವಾಸವಿದ್ದವರಿಗೆ  ಮತ್ತು ಅವರ ನಂತರದ ಪೀಳಿಗೆಗೆ ಮಾತ್ರ ಪೂರ್ಣ ಪೌರತ್ವವನ್ನು ನೀಡಲಾಗುವುದು ಎಂದು ಕಾಯ್ದೆ ಹೇಳುತ್ತದೆ. ಒಂದು ರೀತಿಯಲ್ಲಿ, ಭಾರತದ ಎನ್‍ಆರ್ ಸಿ ಹೇಗೆಯೋ ಅದೇ ರೀತಿಯ ಕಾಯ್ದೆ- ಕಲಮುಗಳನ್ನು ಮ್ಯಾನ್ಮಾರ್ ನ ಪೌರತ್ವ ಕಾಯ್ದೆಯೂ ಒಳಗೊಂಡಿತ್ತು. ಎಲ್ಲ ನಾಗರಿಕರಿಗೂ ಪೌರತ್ವದ ಗುರುತಿನ ಚೀಟಿಯನ್ನು ಮ್ಯಾನ್ಮಾರ್ ಕಡ್ಡಾಯಗೊಳಿಸಿತು. ಈ ಪ್ರಕ್ರಿಯೆಯನ್ನು ಎಷ್ಟು  ನಿಷ್ಕರುಣೆಯಿಂದ ಮಾಡಲಾಯಿತೆಂದರೆ, ಮ್ಯಾನ್ಮಾರ್ ನಲ್ಲಿ ಬಹು ಹಿಂದಿನಿಂದಲೂ ಬದುಕುತ್ತಾ ಬಂದವರ ಮೇಲೂ ಸೇನಾಡಳಿತ ದಯೆ ತೋರಲಿಲ್ಲ. ಪೌರತ್ವ ಕಾಯ್ದೆಯು ಪಟ್ಟಿಮಾಡಿರುವ ಎಲ್ಲ  ದಾಖಲೆಗಳನ್ನು ಸಮರ್ಪಿಸದವರಿಗೆ ಒಂದೋ ವಿದೇಶಿ ನೋಂದಣಿ ಕಾರ್ಡ್(FRC)ಗಳನ್ನು ನೀಡಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಅಥವಾ ದೇಶದಿಂದ ಹೊರಹಾಕುವುದು- ಈ  ಎರಡನ್ನು ನಿಯಮವಾಗಿ ಪೌರತ್ವ ಕಾಯ್ದೆಯಲ್ಲಿ ಹೇಳಲಾಗಿದೆ. ದುರಂತ ಏನೆಂದರೆ, 
ಈ ಕಾಯ್ದೆಯ ನೇರ ಪರಿಣಾಮವನ್ನು ಅರಕ್ಕಾನ್ (ರಾಖೈನ್) ರಾಜ್ಯದ ರೋಹಿಂಗ್ಯನ್ನರು ಎದುರಿಸಬೇಕಾಯಿತು.  ರೋಹಿಂಗ್ಯನ್ ವಂಶಜರಿಗೆ ಬರ್ಮಾದಲ್ಲಿ ಒಂದು ದೀರ್ಘ ಇತಿಹಾಸವಿದೆ. 15ನೇ ಶತಮಾನದಿಂದಲೂ ಅರಕ್ಕಾನ್ ಎಂಬ ಪ್ರದೇಶದಲ್ಲಿ ಇವರು ವಾಸಿಸುತ್ತಾ ಬಂದಿದ್ದಾರೆ ಎಂಬುದಾಗಿ ಇತಿಹಾಸ  ಹೇಳುತ್ತದೆ. ಅಂದು ಅರಕ್ಕಾನ್ ಪ್ರದೇಶವು ಬಂಗಾಳಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅರಕ್ಕಾನ್ ಆ ಬಳಿಕ ಸ್ವತಂತ್ರ ರಾಷ್ಟ್ರವಾಯಿತು. ಆ ಸ್ವತಂತ್ರ ಅರಕ್ಕಾನ್ ರಾಷ್ಟ್ರದ ದೊರೆಯು ಸುಲ್ತಾನ್ ಎಂಬ  ಹೆಸರಿನಿಂದ ಗುರುತಿಸಿಕೊಂಡಿದ್ದ. ಆಡಳಿತ ಮತ್ತು ಸೇನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದುದು ಇದೇ ರೋಹಿಂಗ್ಯನ್ ವಂಶಜರು. 1785ರಲ್ಲಿ ಅರಕ್ಕಾನ್ ರಾಷ್ಟ್ರವು ಬರ್ಮಾದ ಭಾಗವಾಯಿತು. ಆಗಲೂ  ಆಡಳಿತ ಮತ್ತು ಸೇನೆಯಲ್ಲಿ ರೋಹಿಂಗ್ಯನ್ನರಿಗೆ ಮುಖ್ಯ ಪಾತ್ರವೇ ಇತ್ತು. 1825ರಲ್ಲಿ ಬ್ರಿಟಿಷರು ಮತ್ತು ಬರ್ಮಾದ ನಡುವೆ ಮೊದಲ ಯುದ್ಧ ನಡೆಯಿತು. ಇದರಲ್ಲಿ ಬರ್ಮಾ ಪರಾಜಯ ಹೊಂದಿತಲ್ಲದೇ,  ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಬರ್ಮಾವೂ ಸೇರ್ಪಡೆಗೊಂಡಿತು. ಈ ನಡುವೆ ಅರಕ್ಕಾನ್ ಪ್ರದೇಶದ ರೋಹಿಂಗ್ಯನ್ ವಂಶಜರ ಜನಸಂಖ್ಯೆಯಲ್ಲಿ ಆಗುತ್ತಿರುವ ವೃದ್ಧಿ ಮತ್ತು ಆಡಳಿತ ಮತ್ತು  ಸಾಮಾಜಿಕ ವಿಷಯಗಳಲ್ಲಿ ಅವರು ಹೊಂದುತ್ತಿರುವ ಪ್ರಾಬಲ್ಯವು ಬೌದ್ಧ ಧರ್ಮೀಯರಲ್ಲಿ ಆತಂಕವನ್ನು ಹುಟ್ಟು ಹಾಕತೊಡಗಿತು. ಇದು ಸಂಘರ್ಷಕ್ಕೂ ಕಾರಣವಾಯಿತು. ಎಲ್ಲಿಯ ವರೆಗೆಂದರೆ, ಈ  ವಿಷಯವನ್ನು ಪರಿಶೀಲಿಸುವುದಕ್ಕಾಗಿ ಬ್ರಿಟಿಷರು ತನಿಖಾ ತಂಡವನ್ನೂ ರಚಿಸಿದ್ದರು. ಅಂತಿಮವಾಗಿ 1937ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯಿಂದ ಬರ್ಮಾವನ್ನು ಪ್ರತ್ಯೇಕಗೊಳಿಸಿದರು. 1948ರಲ್ಲಿ ಬರ್ಮಾದ ಗಡಿ ಗುರುತೂ ನಡೆಯಿತು. ಈ ನಡುವೆ ಬೌದ್ಧ ರಾಷ್ಟ್ರವಾದ ಜಪಾನ್ ಸೇನೆಯು ಬರ್ಮಾದ ಮೇಲೆ ದಾಳಿ ಮಾಡಿತು. ಆಗ ಅರಕ್ಕಾನ್‍ನಲ್ಲಿ ಎರಡು ಗುಂಪುಗಳಾದುವು. ಬೌದ್ಧರು ಜಪಾನ್ ಸೇನೆಯ ಪರ ನಿಂತರು. ಆದರೆ ರೋಹಿಂಗ್ಯನ್ನರನ್ನು ಬ್ರಿಟಿಷರು ತಮ್ಮ ಜೊತೆ ಸೇರಿಕೊಳ್ಳುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದು ಎರಡೂ ಸಮುದಾಯದ ನಡುವಿನ ಜಗಳಕ್ಕೆ ಇನ್ನಷ್ಟು ಉರಿಯನ್ನು ಹಚ್ಚಿಬಿಟ್ಟಿತು. 1962ರಲ್ಲಿ ಅಧಿಕಾರಕ್ಕೆ ಬಂದ ಜನರಲ್ ನೇ ವಿನ್ ಅವರು ರೋಹಿಂಗ್ಯನ್ನರ ದಮನಕ್ಕೆ ನೀಲನಕ್ಷೆಯನ್ನು ರೂಪಿಸಿದರು. ರಾಖೈನ್ ರಾಜ್ಯವು 288 ಗ್ರಾಮಗಳನ್ನು ಹೊಂದಿರುವ ವಿಶಾಲ ಪ್ರದೇಶ. ಆಡಳಿತಾತ್ಮಕವಾಗಿ ಮತ್ತು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸಕ್ರಿಯರಾಗಿದ್ದ ಇವರನ್ನು ದಮನಗೊಳಿಸುವುದಕ್ಕಾಗಿಯೇ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ  ತಂದಿತು. ಅರಕ್ಕಾನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 12 ಲಕ್ಷ ಮುಸ್ಲಿಮರನ್ನು ರೋಹಿಂಗ್ಯನ್ ಎಂದು ಉಲ್ಲೇಖಿಸಲೂ ಮ್ಯಾನ್ಮಾರ್ ಆಡಳಿತ ಒಪ್ಪಿಕೊಳ್ಳಲಿಲ್ಲ. ಅವರನ್ನು ಬಂಗಾಳಿಗಳು ಎಂದು  ಕರೆಯಿತು. ಮಾತ್ರವಲ್ಲ, ಪೌರತ್ವ ಕಾಯ್ದೆಯನ್ನು ಅವರ ಮೇಲೆ ನಿರ್ದಯವಾಗಿ ಜಾರಿಗೊಳಿಸಿತು. ಅದರ ಪ್ರಕಾರ ರೋಹಿಂಗ್ಯನ್ನರು ಪೌರತ್ವ ನಿರಾಕರಣೆಗೆ ಒಳಗಾದರು. ಅವರಿಂದ ಸರಕಾರಿ ಉದ್ಯೋಗ,  ಮತದಾನದ ಹಕ್ಕನ್ನು ಕಸಿಯಲಾಯಿತಲ್ಲದೇ ಸಂಚಾರಕ್ಕೂ, ಶೈಕ್ಷಣಿಕ ಸೌಲಭ್ಯಕ್ಕೂ ನಿರ್ಬಂಧ ಹೇರಲಾಯಿತು. 2017ರಲ್ಲಿ ಸೇನೆ ಕೈಗೊಂಡ ವಂಶನಾಶ ಕ್ರೌರ್ಯದಲ್ಲಿ (ಕ್ಲಿಯರೆನ್ಸ್ ಆಪರೇಶನ್) 730  ಮಕ್ಕಳೂ ಸೇರಿದಂತೆ 6,700 ಮಂದಿಯ ಹತ್ಯೆಯಾಗಿದೆ ಎಂದು ಹೇಳಲಾಗುತ್ತದೆ. ರಾಖೈನ್ ರಾಜ್ಯದ 288 ಗ್ರಾಮಗಳಿಗೆ ಪೂರ್ಣವಾಗಿ ಅಥವಾ ಭಾಗಶಃ ಬೆಂಕಿ ಹಚ್ಚಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳ ವರದಿಗಳು ಹೇಳುತ್ತಿವೆ. ಸುಮಾರು 9 ಲಕ್ಷ ರೋಹಿಂಗ್ಯನ್ನರು ಬಾಂಗ್ಲಾದೇಶದಲ್ಲಿ ಇವತ್ತು ನಿರಾಶ್ರಿತ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ, 
2018 ಜುಲೈ 19ರಂದು ಇಸ್ರೇಲ್‍ನ ಪಾರ್ಲಿಮೆಂಟು (ನೆಸೆಟ್) ಒಂದು ಮಸೂದೆಯನ್ನು ಅಂಗೀಕರಿಸಿತು. ಇಸ್ರೇಲನ್ನು ಸಂಪೂರ್ಣ ಯಹೂದಿ ರಾಷ್ಟ್ರವಾಗಿ ಘೋಷಿಸುವ ಈ ಮಸೂದೆಯ ಪರ 62  ಮತಗಳು ಬಿದ್ದರೆ ವಿರೋಧವಾಗಿ 55 ಮತಗಳು ಬಿದ್ದುವು. ಆ ಬಳಿಕ ಸುಪ್ರೀಮ್ ಕೋರ್ಟಿನಿಂದಲೂ ಇದಕ್ಕೆ ಅಂಗೀಕಾರ ದೊರೆಯಿತು. ‘ಇಸ್ರೇಲ್ ಐತಿಹಾಸಿಕವಾಗಿಯೇ ಯಹೂದಿಯರ ಜನ್ಮಭೂಮಿಯಾಗಿದ್ದು, ಸ್ವನಿರ್ಣಯ ಅಧಿಕಾರವು ಯಹೂದಿಯರಿಗೆ ಮಾತ್ರ ಸೀಮಿತ’ವೆಂದು ಈ ಮಸೂದೆಯು ಹೇಳುತ್ತದೆ. ಅಧಿಕೃತ ಭಾಷೆಯಾಗಿ ಗುರುತಿಸಿಕೊಂಡಿದ್ದ ಅರಬಿಯನ್ನು ಕೈಬಿಟ್ಟು ಹಿಬ್ರೂವನ್ನು ಮಾತ್ರ ಅಧಿಕೃತ ಪಟ್ಟಿಯಲ್ಲಿ ಸೇರಿಸಲಾಯಿತು. ಆದರೆ, ಈ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಅರಬಿ ಭಾಷೆಗೆ ವಿಶೇಷ ಗೌರವವನ್ನು ನೀಡಲಾಯಿತು. ಯಹೂದಿ ಧರ್ಮಕ್ಕೆ ಸಂಬಂಧಿಸಿದ ಕುರುಹುಗಳನ್ನು ಇಸ್ರೇಲ್‍ನ ಸಂಕೇತಗಳಾಗಿ ಮಾರ್ಪಡಿಸಲಾಯಿತು. ನಿಜವಾಗಿ, ಇಸ್ರೇಲ್‍ನ ಒಟ್ಟು 80 ಲಕ್ಷ ಜನಸಂಖ್ಯೆಯಲ್ಲಿ 18 ಲಕ್ಷ  ಮಂದಿ (20%) ಅರಬಿಗಳಿದ್ದಾರೆ. ಅವರು ಪರಂಪರಾಗತವಾಗಿ ಅಲ್ಲಿಯದೇ ನಿವಾಸಿಗಳು. ಈ ನಿವಾಸಿಗಳು ಮತ್ತು ಅತಿಕ್ರಮಣದ ಮೂಲಕ ಇಸ್ರೇಲ್ ವಶಪಡಿಸಿಕೊಂಡ ಫೆಲೆಸ್ತೀನಿಗಳ ನಡುವೆ ಬೇಧ-ಭಾವ ತೋರುವ 65 ನಿಯಮಗಳನ್ನು ಕಳೆದ 7  ವರ್ಷಗಳಲ್ಲಿ ಇಸ್ರೇಲ್ ರೂಪಿಸಿದೆ ಮತ್ತು ತನ್ನ ಭೂಮಿ ಯಿಂದ ಹೊರದಬ್ಬಿದ ಮುಸ್ಲಿಮರಿಗೆ ಮರಳಿ ಬರುವ ಅವಕಾಶವನ್ನೂ ಇಸ್ರೇಲ್ ನಿರಾಕರಿಸಿದೆ.
ಇದರ ಜೊತೆಗೇ 1935 ಅಕ್ಟೋಬರ್ ನಲ್ಲಿ ಹಿಟ್ಲರ್ ಜಾರಿಗೆ ತಂದ ಪೌರತ್ವ ಕಾಯ್ದೆಯನ್ನೂ ನಾವು ಇಟ್ಟು ನೋಡಬೇಕು. ಅಂದಹಾಗೆ,
ಎನ್‍ಆರ್ ಸಿ ಮತ್ತು ಸಿಎಎಗಳು ಆಳದಲ್ಲಿ ಯಾವ ಹುನ್ನಾರವನ್ನು ಹೊಂದಿರಬಹುದು ಮತ್ತು ಅಂತಿಮವಾಗಿ ಅದು ಯಾವ ಅಪಾಯವನ್ನು ತಂದೊಡ್ಡಬಹುದು ಅನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಮ್ಯಾನ್ಮಾರ್, ಇಸ್ರೇಲ್ ಮತ್ತು ಜರ್ಮನಿಯ ಈ ಉದಾಹರಣೆಗಳು ನಮಗೆ ಧಾರಾಳ ಸಾಕು. ಆಘಾತಕಾರಿ ಸಂಗತಿ ಏನೆಂದರೆ, ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರವು ದಿನಕ್ಕೊಂದರಂತೆ ಮಾತಾಡುತ್ತಿದೆ ಅನ್ನುವುದು. ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ‘ಧಾರ್ಮಿಕ ದೌರ್ಜನ್ಯ’ಕ್ಕೆ ಒಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಕೊಡುವ ಕಾಯ್ದೆಯೇ ಸಿಎಎ  ಎಂದು ಕೇಂದ್ರ ಸರಕಾರ ಪಾರ್ಲಿಮೆಂಟ್ ನಲ್ಲಿ ಹೇಳಿಕೊಂಡಿತ್ತು. ಈಗಲೂ ಹೇಳುತ್ತಿದೆ. ಆದರೆ, ಸಿಎಎ ಕಾಯ್ದೆಯಲ್ಲಿ ‘ಧಾರ್ಮಿಕ ದೌರ್ಜನ್ಯ’ ಎಂಬ ಪದವನ್ನೇ ಬಳಸಲಾಗಿಲ್ಲ ಎಂದು ಪ್ರಜಾವಾಣಿ ಪತ್ರಿಕೆ  (2020 ಜನವರಿ 2, ಪುಟ 6) ಮತ್ತು 2019 ಡಿಸೆಂಬರ್ 23ರ ಇಂಡಿಯಾ ಟುಡೆಯಲ್ಲಿ ಕೌಶಿಕ್ ದೇರಾ ಬರೆದ Everything you wanted to know about the CAA and NRC ಎಂಬ ಶೀರ್ಷಿಕೆಯ ಲೇಖನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವುದಾಗಿ ಕಾಯ್ದೆಯಲ್ಲಿ  ಹೇಳಲಾಗಿದೆ. ಆದರೆ, ಮುಸ್ಲಿಮ್ ವಲಸಿಗರನ್ನು ಮಾತ್ರ ಹೊರಗಿಡಲಾಗಿದೆ. ನಿಜವಾಗಿ, ಸರಕಾರದ ಈ ಇಬ್ಬಂದಿತನವೇ ಸಿಎಎ ಮತ್ತು ಎನ್‍ಆರ್ ಸಿಯ ಅಪಾಯವನ್ನು ಸ್ಪಷ್ಟಪಡಿಸುತ್ತದೆ. ಹೊರನೋಟಕ್ಕೆ  ಹೇಳುವಷ್ಟು ಸರಳ ಮತ್ತು ಸಾಮಾನ್ಯವಲ್ಲ ಈ ಪ್ರಕ್ರಿಯೆ. ಇದರ ಹಿಂದೆ ಇನ್ನೇನೋ ಉದ್ದೇಶವಿರುವಂತಿದೆ. ಅಷ್ಟಕ್ಕೂ, 
2010ರಿಂದ 17ರ ನಡುವೆ ಅಮೇರಿಕದಲ್ಲಿ 35 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2019 ಡಿಸೆಂಬರ್ 1ರಂದು ಪ್ರಕಟಿಸಿದ The overlooked undocumented immigrants: From India, China, Brazil ಎಂಬ ಶೀರ್ಷಿಕೆಯ ಲೇಖನದಲ್ಲಿ ವಿವರಿಸಿತ್ತು. ಇವರಲ್ಲಿ ಹೆಚ್ಚಿನವರು ಭಾರತೀಯರು  ಎಂದು ಲೇಖನ ಬರೆದಿರುವ ಮರಿಯಮ್ ಜೋರ್ಡಾನ್ ಅವರು ಹೇಳಿದ್ದರು. ಆದರೆ ಈ ಅಕ್ರಮ ವಲಸಿಗರನ್ನು ಹೊರಗಟ್ಟುವುದಕ್ಕೆ ಅಮೇರಿಕ ಸಿಎಎಯನ್ನೋ ಎನ್‍ಆರ್ ಸಿಯನ್ನೋ ಜಾರಿಗೆ ತರಲಿಲ್ಲ.  ಯಾಕೆಂದರೆ, ಇದು ಅನಗತ್ಯ. ಸಾಮಾನ್ಯ ಕಾಯ್ದೆಯೇ ಇದನ್ನು ನಿಭಾಯಿಸುವುದಕ್ಕೆ ಧಾರಾಳ ಸಾಕಾಗುತ್ತದೆ. ಹಾಗೆಯೇ, ಅಮೇರಿಕವು 150 ಮಂದಿ ಭಾರತೀಯರನ್ನು ಗಡೀಪಾರುಗೊಳಿಸಿರುವ ಸು ದ್ದಿಯನ್ನು 2019 ನವೆಂಬರ್ 20ರಂದು ಪ್ರಕಟವಾದ ದ ಎಕನಾಮಿಕ್ ಟೈಮ್ಸ್ ಪತ್ರಿಕೆಯು ವರದಿ ಮಾಡಿತ್ತು (150 Indians deported
from America). ಇದು ಸಹಜ ಕ್ರಿಯೆ.  ಭಾರತಕ್ಕೂ ಇದು ಸಾಧ್ಯವಿದೆ. ಇದಕ್ಕಾಗಿ ಎನ್‍ಆರ್ ಸಿ ಮತ್ತು ಸಿಎಎಯ ಅಗತ್ಯವೇ ಇಲ್ಲ. ೧೩೦ ಕೋಟಿ ಭಾರತೀಯರನ್ನು ಕಚೇರಿಗಳ ಎದುರು ಸರತಿ ನಿಲ್ಲಿಸಬೇಕಾದ ಯಾವ ಅಗತ್ಯವೂ ಇಲ್ಲ. ಆದ್ದರಿಂದಲೇ,
ಎನ್‍ಪಿಆರ್, ಎನ್‍ಆರ್ ಸಿ ಮತ್ತು ಸಿಎಎಯ ಬಗ್ಗೆ ಆತಂಕ. ಆಳುವವರು ಏನೇ ಹೇಳಲಿ.

No comments:

Post a Comment