Saturday, January 25, 2020

ಪೌರತ್ವ ಕಾಯ್ದೆ ಮತ್ತು ವಲಸಿಗರ ಧರ್ಮ



1. ಎಸ್. ರಾಮದಾಸ್ ಅವರ ಪಟ್ಟಾಳಿ ಮಕ್ಕಳ ಕಾಚ್ಚಿ
2. ಅನುಪ್ರಿಯ ಪಟೇಲ್ ಅವರ ಅಪ್ನಾ ದಳ್
3. ರಾಮದಾಸ್ ಅಠವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದಲ್ಲಿರುವ 13 ಮಿತ್ರ ಪಕ್ಷಗಳ ಪೈಕಿ ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ಅನ್ನು ಬೆಂಬಲಿಸುತ್ತಿರುವ ಪಕ್ಷಗಳು ಈ ಮೇಲಿನ ಮೂರೇ ಮೂರು. ಉಳಿದ 10  ಪಕ್ಷಗಳೂ ಒಂದಲ್ಲ ಒಂದು ಕಾರಣವನ್ನು ಮುಂದೊಡ್ಡಿ ಪೌರತ್ವ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್)ಯನ್ನು  ವಿರೋಧಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಸುಮಾರು 2,021 ಕೋಟಿ ರೂಪಾಯಿಯನ್ನು ಖರ್ಚು ಮಾಡಿ 93 ರಷ್ಟು ವಿದೇಶ ಯಾತ್ರೆಯನ್ನು ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸದ್ಯ  ಒಂಟಿಯಾಗಿದ್ದಾರೆ. ಈ 2020ರಲ್ಲಿ ಈ ದೇಶಗಳು ಅವರ ಬೆಂಬಲಕ್ಕೆ ನಿಲ್ಲುವುದು ಬಿಡಿ, ಅವರ ಬಗ್ಗೆ ಒಂದೊಂದಾಗಿ ಅಸಮಾಧಾನವನ್ನು ಸೂಚಿಸ ತೊಡಗಿವೆ. 2019ರಲ್ಲಿ ಮೋದಿಯವರು ಮರಳಿ ಅಧಿಕಾರಕ್ಕೇರಿದ ಬಳಿಕ ಜಾರಿಗೆ ತಂದ ತ್ರಿವಳಿ ತಲಾಕ್ ಕಾನೂನು, ಕಾಶ್ಮೀರದ 370ನೇ ವಿಧಿ ರದ್ದು ಮತ್ತು ಸಿಎಎಗಳು ಈ ಮಿತ್ರರನ್ನೆಲ್ಲ ಮುನಿಸಿಕೊಳ್ಳುವಂತೆ ಮಾಡಿವೆ. 2014 ರಿಂದ 2019 ಎಪ್ರಿಲ್‍ನ  ವರೆಗೆ 93 ದೇಶ ಸುತ್ತಿ ಸಂಬಂಧ ಸುಧಾರಣೆಗೆ ಮಾಡಿದ ಪ್ರಯತ್ನಗಳನ್ನೆಲ್ಲಾ 2019 ಮೇ ಬಳಿಕದ ಮೋದಿಯವರ ನೀತಿಗಳು ಆಪೋಶನ ಪಡೆದುಕೊಂಡಿವೆ. ಮಲೇಶ್ಯಾ ತನ್ನ ಅಸಮಾಧಾನವನ್ನು  ಬಹಿರಂಗ ವಾಗಿಯೇ ಹೊರಹಾಕಿದೆ. ಪ್ರಧಾನಿ ಮೋದಿಯವರ ಜೊತೆ ನಡೆಸಬೇಕಿದ್ದ ಮಾತುಕತೆಯನ್ನು ಜಪಾನಿನ ಪ್ರಧಾನಿ ಮುಂದೂಡಿದ್ದಾರೆ. 

ಮೋದಿಯವರ ಮಟ್ಟಿಗೆ ಆಪ್ತರೆನಿಸಿದ್ದ ಬೇಗಂ ಹಸೀನಾ  ಅವರ ಬಾಂಗ್ಲಾದೇಶ ಈಗ ಮಾರು ದೂರ ನಿಂತಿದೆ. ಅಲ್ಲಿನ ವಿದೇಶಾಂಗ ಸಚಿವ ಮತ್ತು ಗೃಹಸಚಿವರ ಭಾರತ ಭೇಟಿ ರದ್ದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅನ್ನುವ ಭಾರತದ ಆರೋಪಕ್ಕೆ ಅದು ಅಸಮಾಧಾನ ಸೂಚಿಸಿದೆ. 1971ರ ಬಳಿಕ ವಿಶ್ವಸಂಸ್ಥೆಯಲ್ಲಿ ಬಹುತೇಕ ನಿರ್ಜೀವಾವಸ್ಥೆಯಲ್ಲಿದ್ದ ಕಾಶ್ಮೀರದ ವಿವಾದವು ಇದೀಗ ಮತ್ತೆ ಜೀವವನ್ನು ಪಡೆದುಕೊಂಡಿದೆ.  ಭದ್ರತಾ ಮಂಡಳಿಯಲ್ಲಿ ಚರ್ಚಿಸುವ ಹಂತಕ್ಕೆ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಲು ಪಾಕ್ ಯಶಸ್ವಿಯಾಗಿದೆ. 370ನೇ ವಿಧಿ ರದ್ಧತಿಯೇ ಇದಕ್ಕೆ ಕಾರಣ. ಅಮೇರಿಕ ಮತ್ತು ಬ್ರಿಟನ್‍ಗಳು ಈಗಾಗಲೇ ಭಾರತದ ಬೆಳವಣಿಗೆಗಳಿಗೆ ಕಳವಳವನ್ನು ಸೂಚಿಸಿವೆ. ಇನ್ನು, ನೆರೆಕರೆಯ ಪೈಕಿ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಇಟ್ಟುಕೊಂಡ ರಾಷ್ಟ್ರಗಳು ಒಂದೂ ಕಾಣಿಸುತ್ತಿಲ್ಲ.  ಶ್ರೀಲಂಕಾವಾಗಲಿ, ನೇಪಾಳ, ಭೂತಾನ್ ಅಥವಾ ಮ್ಯಾನ್ಮಾರ್ ಆಗಲಿ ಎಲ್ಲವೂ ಚೀನಾದ ಕಡೆಗೆ ಮುಖ ಮಾಡಿ ಮಲಗಿವೆ. ಈ ಎಲ್ಲ ರಾಷ್ಟ್ರಗಳಲ್ಲಿ ಚೀನಾದ ಹೂಡಿಕೆಯ ಗಾತ್ರವನ್ನು ಪರಿಗಣಿಸಿದರೆ ಭಾರತ  ಜುಜುಬಿ. ಇನ್ನೊಂದೆಡೆ 5 ಟ್ರಿಲಿಯನ್ ಡಾಲರ್ ಮೊತ್ತದ ಅರ್ಥವ್ಯವಸ್ಥೆಯಾಗಿ ಮಾರ್ಪಡಲು ಹೊರಟು ಅದರ ಅರ್ಧದಷ್ಟನ್ನೂ ತಲುಪಲಾಗದ ದೈನೇಸಿ ಸ್ಥಿತಿ ಯಲ್ಲಿದೆ ಭಾರತದೆ. ಕಳೆದ ನಾಲ್ಕು ದ ಶಕಗಳಲ್ಲೇ ನಿರುದ್ಯೋಗದ ಪ್ರಮಾಣ ಅತ್ಯಧಿಕವಾಗಿದೆ. ನೋಟು ನಿಷೇಧ ಮತ್ತು ಅತ್ಯಂತ ಅಸಮರ್ಪಕ ರೀತಿಯಲ್ಲಿ ಜಾರಿಗೊಳಿಸಲಾದ ಜಿಎಸ್‍ಟಿಯಿಂದಾಗಿ ಆಗಿರುವ ಅನಾಹುತಗಳ ಫಲಿತಾಂಶ  ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಏರ್ ಇಂಡಿಯಾವೂ ಮಾರಾಟವಾಗಿದೆ. ರೈಲ್ವೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಆಡಳಿತಾತ್ಮಕ  ಖರ್ಚು-ವೆಚ್ಚಗಳನ್ನು ನಿಭಾಯಿಸುವುದಕ್ಕೆ ಹಣದ ಕೊರತೆ ಎದುರಾಗಿ ಆರ್‍ಬಿಐನಿಂದ ಮೀಸಲು ನಿಧಿಯನ್ನು ಪಡೆದುಕೊಳ್ಳಲಾಗಿದೆ. ಭಾರತದ ಅರ್ಥವ್ಯವಸ್ಥೆಯ ಮಟ್ಟಿಗೆ ‘ಬಂಗಾರದ ಮೊಟ್ಟೆ’ ಎಂದು  ವಿಶೇಷಣವುಳ್ಳ ಭಾರತ್ ಪೆಟ್ರೋಲಿಯಮನ್ನೂ ಮಾರಾಟದ ಪಟ್ಟಿಯಲ್ಲಿಡಲಾಗಿದೆ. ನಷ್ಟದಲ್ಲಿರುವ ಸರಕಾರಿ ಸಂಸ್ಥೆಗಳಿಗೆ ಚೇತರಿಕೆಯ ದೃಷ್ಟಿಯಿಂದ ಸ್ವಲ್ಪ ಮೊತ್ತವನ್ನು ಕೊಟ್ಟು ಕೊನೆಗೆ ಅವನ್ನೆಲ್ಲಾ  ಖಾಸಗಿಗಳಿಗೆ ಮಾರಾಟ ಮಾಡುವ ತಂತ್ರ ನಡೆಯುತ್ತಿದೆ. ಈ ನಡುವೆ ಬ್ಯಾಂಕುಗಳ ವಿಲೀನವಾಗಿದೆ. 9% ಇದ್ದ ಜಿಡಿಪಿಯು ಕುಸಿಯುತ್ತಾ ಬಂದು ಈಗ 4% ರ ಆಸುಪಾಸಿನಲ್ಲಿದೆ. ನಿರ್ಮಾಣ  ಕಾಮಗಾರಿಗಳು ನಿಧಾನವಾಗಿವೆ. ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ವಿದೇಶಿ ಮತ್ತು ಸ್ವದೇಶಿ ಶ್ರೀಮಂತರು ದೇಶದಲ್ಲಿ ಹಣ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ದೇಶದೊಳಗಿನ ಅಭದ್ರತೆಯ  ವಾತಾವರಣವು ಹೂಡಿಕೆದಾರರನ್ನು ಅನಿಶ್ಚಿತತೆಗೆ ದೂಡಿದೆ. ಬೆಲೆ ಯಲ್ಲಿ ಏರಿಕೆ ಮತ್ತು ಪ್ರವಾಸೋದ್ಯಾಮದಲ್ಲಿ ಇಳಿಕೆಯಾಗುತ್ತಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಾಶ್ಮೀರವಂತೂ  ಬರಡಾಗಿ ಮಲಗಿದೆ. ಆದರೂ,
ಕೇಂದ್ರ ಸರಕಾರ ತನ್ನ ಕುದುರೆಗೆ ಮೂರೇ ಕಾಲು ಎಂದು ಸಮರ್ಥಿಸುತ್ತಿದೆ.

2015ರಲ್ಲಿ ಇದೇ ಮೋದಿ ನೇತೃತ್ವದ ಕೇಂದ್ರ ಸರಕಾರವು ದೀರ್ಘಾವಧಿಯ ವೀಸಾಕ್ಕಾಗಿ ವಲಸಿಗರಿಂದ ಅರ್ಜಿಯನ್ನು ಆಹ್ವಾನಿಸಿತ್ತು. ಆಗ ತಾವು ಧಾರ್ಮಿಕ ದಮನದ ಕಾರಣಕ್ಕಾಗಿ ಭಾರತಕ್ಕೆ ಬಂದಿದ್ದೇವೆಂದು ವಾದಿಸಿ ವೀಸಾಕ್ಕಾಗಿ ಅರ್ಜಿ ಹಾಕದವರ ಸಂಖ್ಯೆ ಬರೇ 31,313. ಹೀಗೆಂದು ಕೇಂದ್ರ ಸರಕಾರದ ಗುಪ್ತಚರ ವರದಿಗಳೇ ಹೇಳುತ್ತಿವೆ. ಇನ್ನೊಂದು ಅಂಕಿ ಅಂಶದ ಪ್ರಕಾರ, ವಿಭಜನೆಯ  ತರುವಾಯ 4 ವರ್ಷಗಳಲ್ಲಿ ಭಾರತದಿಂದ ಸುಮಾರು 80 ಲಕ್ಷದಷ್ಟು ಮಂದಿ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಸರಿಸುಮಾರು ಅಷ್ಟೇ ಸಂಖ್ಯೆಯ ಮಂದಿ ಭಾರತಕ್ಕೂ ಬಂದಿದ್ದಾರೆ ಎನ್ನಲಾಗುತ್ತಿದೆ.  ಉಳಿದಂತೆ ವಲಸಿಗರ ಬಗ್ಗೆ ಕೆಲವು ಭ್ರಮೆಗಳು ಮತ್ತು ವದಂತಿಗಳಷ್ಟೇ ಚಾಲ್ತಿಯಲ್ಲಿವೆ. ಈ ವದಂತಿಗಳನ್ನು ಹರಡುವಲ್ಲಿ ಬಿಜೆಪಿಯ ಪಾತ್ರ ಬಹಳ ದೊಡ್ಡದು. ಅಸ್ಸಾಮ್ ಒಂದರಲ್ಲೇ ಒಂದೂವರೆ ಕೋಟಿಯಷ್ಟು ಅಕ್ರಮ ವಲಸಿಗರಿದ್ದಾರೆಂದು ಬಿಜೆಪಿ  ಹೇಳಿಕೊಂಡಿತ್ತು. ಆದರೆ, 2019 ಆಗಸ್ಟ್ ನಲ್ಲಿ ಬಿಡುಗಡೆ ಗೊಳಿಸಲಾದ ಅಂತಿಮ ಎನ್‍ಆರ್ ಸಿ ಪಟ್ಟಿಯಲ್ಲಿ ಕೇವಲ 19 ಲಕ್ಷ ಮಂದಿಯಷ್ಟೇ ಅಕ್ರಮ ವಲಸಿಗರಾಗಿ ಗುರುತಿಗೀಡಾಗಿದ್ದಾರೆ. ಹಾಗಂತ,

ಪಾಕ್ ಮತ್ತು ಬಾಂಗ್ಲಾಗಳ ಗಡಿಗೆ ತಾಗಿಕೊಂಡಿರುವ ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ವಲಸಿಗರಿರುವುದು ಅಸಹಜವೇನಲ್ಲ. ಒಂದೇ ಭೂಮಿಯಾಗಿದ್ದ ಭಾರತವನ್ನು ಕತ್ತರಿಸಿ  ಎರಡು ತುಂಡನ್ನಾಗಿ ಮತ್ತು ಆ ತುಂಡಿನಿಂದ ಇನ್ನೊಂದು ಭಾಗವನ್ನು ಕತ್ತರಿಸಿ ದೂರ ಸರಿಸಿದಾಕ್ಷಣ ಮಾನವ ಸಂಬಂಧಗಳು ಕತ್ತರಿಸಿ ಹೋಗಬೇಕೆಂದೇನೂ ಇಲ್ಲವಲ್ಲ. ಭೂಮಿಯನ್ನು ಕತ್ತರಿಸುವುದು ದೇಶ ಎಂಬ ಪರಿಕಲ್ಪನೆಯ ಪೂರ್ಣತೆಗೆ ಅನಿವಾರ್ಯ ಇರಬಹುದು. ಆದರೆ, ಜನರ ಸಂಬಂಧ ಅದರಿಂದಾಗಿ ಕತ್ತರಿಸಿ ಹೋಗುವುದಿಲ್ಲ. ಜನರು ಆ ಬಳಿಕವೂ ಗಡಿಯ ಆಚೆಗೆ ಮತ್ತು ಈಚೆಗೆ  ಹೋಗುತ್ತಲೂ ಬರುತ್ತಲೂ ಇರುತ್ತಾರೆ. ಕೌಟುಂಬಿಕ ಸಂಬಂಧವನ್ನು ಬೆಳೆಸುತ್ತಿರುತ್ತಾರೆ. ಗಡಿಯ ಈ ಭಾಗದವರನು ಗಡಿಯ ಆ ಭಾಗದ ವಧುವನ್ನು ಮದುವೆಯಾಗುವುದು ಗಡಿಗಿಂತ ಸಾವಿರಾರು  ಕಿಲೋ ಮೀಟರ್ ದೂರ ಇರುವ ನಮಗೆ ಹೊಸತೇ ಹೊರತು ಗಡಿಭಾಗಕ್ಕಲ್ಲ. ಈ ಬಗೆಯ ಸಂಬಂಧಗಳ ಕಾರಣಕ್ಕಾಗಿಯೂ ಭಾರತದಲ್ಲಿ ಬಂದು ನೆಲೆಸಿದವರಿದ್ದಾರೆ. ಇವರಲ್ಲಿ ಹಿಂದೂಗಳೂ ಇದ್ದಾರೆ,  ಮುಸ್ಲಿಮರೂ ಇದ್ದಾರೆ. ವಲಸೆಗೆ ಇನ್ನೊಂದು ಬಹುಮುಖ್ಯ ಕಾರಣ- ಉದ್ಯೋಗ.
ಯಾವ ದೇಶದ ಆರ್ಥಿಕ ಸ್ಥಿತಿ ಪ್ರಬಲವಾಗಿರುತ್ತೋ ಅಲ್ಲಿಗೆ ನಿರುದ್ಯೋಗಿಗಳ ದಂಡು ಲಗ್ಗೆ ಇಡುವುದು ಸಾರ್ವಕಾಲಿಕ ಸತ್ಯ. ಮೆಕ್ಸಿಕೋದ ಗಡಿಯನ್ನು ಮುಚ್ಚುವಂತೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್  ಟ್ರಂಪ್ ಆದೇಶಿಸಿದ್ದು ಇದೇ ಕಾರಣದಿಂದ. ಸಂಪನ್ನ ದೇಶವಾದ ಅಮೇರಿಕಾಕ್ಕೆ ಪಕ್ಕದ ಮೆಕ್ಸಿಕೋದಿಂದ ಉದ್ಯೋಗವನ್ನರಸಿಕೊಂಡು ಜನರು ಬರುವುದು ಅಸಹಜವಲ್ಲ. ಇವನ್ನೆಲ್ಲ ನಿಭಾಯಿಸುವುದಕ್ಕೆ  ಆಯಾ ದೇಶಗಳಲ್ಲಿ ವಲಸೆ ವಿರೋಧಿ ಕಾನೂನುಗಳಿವೆ. ಆದರೆ,
ಕೇಂದ್ರ ಸರಕಾರ ಇಂಥ ವಲಸೆಯನ್ನೇ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟಿದೆ. ಈಶಾನ್ಯ ಭಾರತದ ವಲಸೆ ಸಮಸ್ಯೆಯನ್ನು ಇಡೀ ಭಾರತದ ಸಮಸ್ಯೆಯೆಂಬಂತೆ ಬಿಂಬಿಸಿರುವುದು ಬಿಜೆಪಿಯ  ಒಂದು ತಪ್ಪಾದರೆ, ಪೌರತ್ವ ಮತ್ತು ವಲಸೆಯನ್ನು ಏಕೀಕರಿಸಿ ಜನರನ್ನು ಗೊಂದಲಕ್ಕೆ ದೂಡಿರುವುದು ಇನ್ನೊಂದು ತಪ್ಪು. ಗಡಿಭಾಗದ ರಾಜ್ಯಗಳ ವಲಸೆ ಸಮಸ್ಯೆಗೆ ಇಡೀ ಭಾರತದ 130 ಕೋಟಿ ಮಂದಿಯನ್ನೂ ಶಂಕಿತ ನಾಗರಿಕರನ್ನಾಗಿಸುವುದು ಮತ್ತು ಅವರಿಂದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದು ಮೂರ್ಖತನದ ಪರಮಾವಧಿ. ಅಸ್ಸಾಮ್‍ನ 3 ಕೋಟಿಯಷ್ಟು ಜನಸಂಖ್ಯೆಯ ಪೈಕಿ ಅಕ್ರಮ  ವಲಸಿಗರೆಷ್ಟು ಎಂಬುದನ್ನು ಪತ್ತೆ ಹಚ್ಚುವ ಪ್ರಕ್ರಿಯೆ 2015ರಲ್ಲಿ ಪ್ರಾರಂಭವಾಗಿ 2019 ಆಗಸ್ಟ್ ನಲ್ಲಿ ಕೊನೆಗೊಂಡಾಗ ಆದ ಆವಾಂತರಗಳೇನು? ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ  ಖರ್ಚಿನಲ್ಲಿ 52 ಸಾವಿರ ಸರಕಾರಿ ಅಧಿಕಾರಿಗಳ ಮೂಲಕ 4 ವರ್ಷಗಳ ಕಾಲ ನಡೆದ ಆ ಎನ್‍ಆರ್ ಸಿಯು ಅಂತಿಮವಾಗಿ ಪತ್ತೆಹಚ್ಚಿದ್ದು ಬರೇ 19 ಲಕ್ಷ ಮಂದಿಯನ್ನು. ಅದರಲ್ಲಿ ಸುಮಾರು 15 ಲಕ್ಷ  ಮಂದಿಯೂ ಹಿಂದೂಗಳೇ. ಒಂದೂವರೆ ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಿದ ರಾಜ್ಯವೊಂದರ ಸ್ಥಿತಿ ಇದು. ಹಾಗಂತ, ಈ 15 ಲಕ್ಷ ಮಂದಿ ಹಿಂದೂಗಳಲ್ಲಿ ಎಲ್ಲರೂ  ಧಾರ್ಮಿಕ ದೌರ್ಜನ್ಯ ದಿಂದಾಗಿ ಭಾರತಕ್ಕೆ ಬಂದವರು ಎಂದಲ್ಲವಲ್ಲ. ಇವರಲ್ಲಿ ತೀರಾ ತೀರಾ ಸಣ್ಣ ಭಾಗವೊಂದು ಮಾತ್ರ ಧಾರ್ಮಿಕ ದೌರ್ಜನ್ಯದ ಲಾಭದಲ್ಲಿ ಪೌರತ್ವವನ್ನು ಗಿಟ್ಟಿಸಿಕೊಳ್ಳಬಹುದು. ಆದರೆ  ಉಳಿದ ಬೃಹತ್ ಪ್ರಮಾಣದ ಹಿಂದೂ ವಲಸಿಗರ ಪಾಡೇನು? ಮುಸ್ಲಿಮರ ಜೊತೆಗೆ ಅವರೂ ಬಂಧನ ಕೇಂದ್ರದಲ್ಲಿ ಬದುಕಬೇಕಲ್ಲವೇ? ಅಸ್ಸಾಮ್‍ನ ಬಂಧನ ಕೇಂದ್ರಗಳಲ್ಲಿ ಈಗಾಗಲೇ ಸಾವಿಗೀಡಾದ  29 ಮಂದಿಯಲ್ಲಿ ಹಿಂದೂಗಳೇ ಹೆಚ್ಚಿದ್ದಾರೆ. ಮೊನ್ನೆ ಮೊನ್ನೆಯಂತೆ ಸುರೇಶ್ ಕೊಂಚ್ ಎಂಬವ ಬಂಧನ ಕೇಂದ್ರದಲ್ಲಿ ಸಾವಿಗೀಡಾದ. ಹೀಗಿರುವಾಗ ಎನ್‍ಆರ್ ಸಿ ಯಾರ ಉಪಯೋಗಕ್ಕೆ?

ವಲಸಿಗರಿಗೆ ಪೌರತ್ವ ಕೊಡುವುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ವಲಸಿಗರನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸಿ, ಮುಸ್ಲಿಮರನ್ನು ಮಾತ್ರ ಪೌರತ್ವದಿಂದ ಹೊರಗಿಡುವುದಿದೆಯಲ್ಲ, ಅದಕ್ಕೆ  ಆಕ್ಷೇಪ. ವಲಸಿಗರಲ್ಲಿ ಮುಸ್ಲಿಮ್ ವಲಸಿಗರ ಸಂಖ್ಯೆ ಎಷ್ಟು ಸಣ್ಣದು ಎಂಬುದನ್ನು ಅಸ್ಸಾಮ್‍ನ ಎನ್‍ಆರ್ ಸಿಯೇ ಸ್ಪಷ್ಟ ಪಡಿಸುತ್ತದೆ. ಅಲ್ಲದೇ, ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದಿರುವ  ವಲಸಿಗರನ್ನು ಮೆಕ್ಸಿಕೋದಿಂದ ಅಮೇರಿಕಾಕ್ಕೆ ವಲಸೆ ಹೋದವರಿಗೆ ಹೋಲಿಸಲಾಗದು. ಭಾರತಕ್ಕೂ ಮತ್ತು ಪಾಕ್-ಬಾಂಗ್ಲಾಕ್ಕೂ ನಡುವೆ ಕರುಳಬಳ್ಳಿ ಸಂಬಂಧ ಇದೆ. ಈ ಸಂಬಂಧವೇ ಗಡಿ ಮೀರಿದ  ವಲಸೆಗೆ ಕಾರಣವಾಗಿದೆ. ಹೀಗಿರುವಾಗ, ವಲಸಿಗರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ ಮಾನವೀಯ ನೆಲೆಯಲ್ಲಿ ನೋಡುವುದು ಉತ್ತಮವಲ್ಲವೇ? ವಲಸೆಯನ್ನು ವಲಸೆಯೆಂದೇ  ಪರಿಗಣಿಸುವುದಕ್ಕೆ ಏನು ತೊಂದರೆಯಿದೆ? ಅವರ ನಡುವೆ ಹಿಂದೂ-ಮುಸ್ಲಿಮ್ ಎಂಬ ದುರ್ಬೀನನ್ನು ಏಕೆ ತಂದಿಡುತ್ತೀರಿ? ಬೃಹತ್ ಸಂಖ್ಯೆಯಲ್ಲಿರುವ ಮುಸ್ಲಿಮೇತರ ವಲಸಿಗರಿಗೆ ಪೌರತ್ವ  ಕೊಡುವಾಗ ಇಲ್ಲಿನ ಉದ್ಯೋಗ, ಸಂಸ್ಕøತಿ, ಭಾಷೆ, ಭೌಗೋಳಿ ಪರಂಪರೆಗೆ ತೊಂದರೆ ಎದುರಾಗುವುದಿಲ್ಲವೆಂದಾದರೆ ಇಲ್ಲಿನವರೇ ಆಗಿದ್ದ ತೀರಾ ಸಣ್ಣ ಪ್ರಮಾಣದಲ್ಲಿರುವ ಮುಸ್ಲಿಮರಿಗೆ ಪೌರತ್ವ  ಕೊಡುವಾಗ ಏನು ತೊಂದರೆ? ಯಾಕೆ ಹುಯಿಲು?

No comments:

Post a Comment