Thursday, August 31, 2017

ಉಸ್ತಾದ್, ಪ್ರಿನ್ಸ್, ಜೈ, ಬಿಟ್ಟು ಮತ್ತು ...

       ಹುಲಿಗಳಲ್ಲಿ ಸೆಲೆಬ್ರಿಟಿ ಹುಲಿಗಳು ಯಾಕಿವೆ? ಯಾವ ಕಾರಣಕ್ಕಾಗಿ ಒಂದು ಹುಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುತ್ತದೆ? ಅದಕ್ಕೆ ಮಾನದಂಡಗಳಿವೆಯೇ? ಅದು ಪ್ರತಿಭೆ ಆಧಾರಿತವೇ, ಆಕಾರ ಆಧಾರಿತವೇ ಅಥವಾ ಇನ್ನಾವುದಾದರೂ ವಿಶೇಷತೆ ಒಂದು ಹುಲಿಯನ್ನು ಸೆಲೆಬ್ರಿಟಿಗೊಳಿಸುವುದರಲ್ಲಿದೆಯೇ? ರಾಜಸ್ಥಾನದ ರಾಂತಂಬೋರೆ ರಾಷ್ಟ್ರೀಯ ರಕ್ಷಿತಾರಣ್ಯದ ಉಸ್ತಾದ್ ಅಥವಾ ಮಚಲಿ ಎಂಬ ಹುಲಿ, ಕರ್ನಾಟಕದ ಬಂಡೀಪುರ ರಾಷ್ಟ್ರೀಯ ರಕ್ಷಿತಾರಣ್ಯದ ಪ್ರಿನ್ಸ್ ಎಂಬ ಹುಲಿ, ಮಹಾರಾಷ್ಟ್ರದ ಚಂದ್ರಾಪುರದ ರಕ್ಷಿತಾರಣ್ಯದ ಜೈ ಮತ್ತು ಬಿಟ್ಟು ಎಂಬ ಹುಲಿಗಳು ಇಂಥ ಪ್ರಶ್ನೆಗಳನ್ನು ಆಗಾಗ ಹುಟ್ಟು ಹಾಕುತ್ತಲೇ ಇರುತ್ತವೆ. ಈ ಹಿಂದೆ ಒಮ್ಮೆ ಉಸ್ತಾದ್ ಹುಲಿಯು ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿತ್ತು. ಚಂದ್ರಾಪುರ್ ಅರಣ್ಯದಿಂದ ಜೈ ಹುಲಿಯು ಕಾಣೆಯಾಗಿದೆ ಎಂಬ ಸುದ್ದಿಯೂ ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯುವಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಈ ದೇಶದ ರಕ್ಷಿತಾರಣ್ಯಗಳಲ್ಲಿ ನೂರಾರು ಹುಲಿಗಳಿವೆ. ಈ ಹುಲಿಗಳ ನಡುವೆ ಪ್ರಣಯ, ಜಗಳ, ಸಾವು, ಅನಾರೋಗ್ಯ.. ಎಲ್ಲವೂ ನಡೆಯುತ್ತಲೂ ಇರುತ್ತವೆ. ಆದರೆ ಇವುಗಳಲ್ಲಿ ನಾಲ್ಕೈದು ಹುಲಿಗಳನ್ನು ಆಯ್ದು, ಅವುಗಳಿಗೆ ಪ್ರತ್ಯೇಕ ಹೆಸರು ಕೊಟ್ಟು, ಅವುಗಳ ಬಗ್ಗೆ ವಿಶೇಷ ಗಮನ ಹರಿಯುವಂತೆ ಮಾಡುವುದು ಯಾತಕ್ಕಾಗಿ? ಅದರ ಉz್ದÉೀಶವೇನು? ಬಹುಶಃ, ಜನರನ್ನು ಈ ರಕ್ಷಿತಾರಣ್ಯಗಳ ಕಡೆಗೆ ಆಕರ್ಷಿಸಲು ಮತ್ತು ಅವರಲ್ಲಿ ಈ ಹುಲಿಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವುದರ ಹೊರತಾಗಿ ಇದಕ್ಕೆ ಬೇರೆ ಕಾರಣಗಳಿರುವ ಸಾಧ್ಯತೆಯಿಲ್ಲ. ಬಹುಶಃ, ಉಸ್ತಾದ್ ನಂಥ ಹುಲಿಗಳು ನಮ್ಮ ದೇಶದ ರಕ್ಷಿತಾರಣ್ಯಗಳಲ್ಲಿ ಅನೇಕ ಇರಬಹುದು ಮತ್ತು ಅವುಗಳಲ್ಲಿ ಉಸ್ತಾದ್‍ಗಿಂತಲೂ ಗಟ್ಟಿಮುಟ್ಟಾದ ಹಾಗೂ ಚೆಲುವಾದ ಹುಲಿಗಳೂ ಇರಬಹುದು. ಮುಂದೊಂದು ದಿನ ಇವುಗಳಲ್ಲಿ ಒಂದು ಹುಲಿಗೆ ಕುತೂಹಲಕಾರಿ ಕತೆಯೊಂದಿಗೆ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಭಾಗ್ಯವೂ ಸಿಗಬಹುದು. ಆದಾಯ ಹೆಚ್ಚಿಸಿಕೊಳ್ಳುವ ತಂತ್ರ ಇದು. ಜನರನ್ನು ಸೆಳೆಯುವ ಬುದ್ಧಿವಂತಿಕೆಯೂ ಇದರ ಹಿಂದಿದೆ. ಹಾಗಂತ, ಒಂದು ಸರಕಾರವೇ ಇಂಥ ತಂತ್ರವನ್ನು ತನ್ನ ಕಾರ್ಯನೀತಿಯಾಗಿ ಅಳ ವಡಿಸಿಕೊಂಡರೆ ಹೇಗಾಗಬಹುದು? ಕಳೆದ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಡವಳಿಕೆಗಳು, ವಿದೇಶಾಂಗ ನೀತಿಗಳು, ಉಡುಗೊರೆಗಳು ಮತ್ತು ಕಾರ್ಯಕ್ರಮ ಆಯೋಜನೆಗಳು ಹುಲಿಗಳ ಸೆಲೆಬ್ರಿಟಿ ತಂತ್ರವನ್ನು ನೆನಪಿಸುವಂತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳಕ್ಕೆ ಭೇಟಿ ಕೊಟ್ಟರು. ಪ್ರಸಿದ್ಧ ಪಶುಪತಿನಾಥ ದೇವಾಲಯವನ್ನು ಸಂದರ್ಶಿಸಿದರು. ಈ ಸಂದರ್ಶನದ ವೇಳೆ ನರೇಂದ್ರ ಮೋದಿಯವರು ಕೇಸರಿ ಶಾಲು, ರುದ್ರಾಕ್ಷಿ ಮಾಲೆ ಮತ್ತು ಹಣೆಗೆ ಗಂಧವನ್ನು ಹಚ್ಚಿಕೊಂಡಿದ್ದರು. ಇದರಲ್ಲಿ ತಪ್ಪು ಖಂಡಿತ ಇಲ್ಲ. ಇದು ಅವರವರ ಸ್ವಾತಂತ್ರ್ಯ. ಇದೇ ವೇಳೆ, ಸೆಕ್ಯುಲರ್ ಭಾರತದ ಪ್ರಧಾನಿಯೋರ್ವರು ಭಾರತದ ಕೆಲವು ನಿರ್ದಿಷ್ಟ ಸಂಘಟನೆಗಳಲ್ಲಿ ಮಾತ್ರ ಕಡ್ಡಾಯದಂತೆ ಪಾಲಿಸಲಾಗುತ್ತಿರುವ ‘ಕೇಸರಿ ಶಾಲು, ಗಂಧ ಮತ್ತು ರುದ್ರಾಕ್ಷಿ ಮಾಲೆ’ ಧಾರಣೆಯಲ್ಲಿ ಕಾಣಿಸಿಕೊಳ್ಳುವುದನ್ನು ತೀರಾ ಸಹಜವಾಗಿ ಕಾಣಬಹುದೇ? ಅದರ ಹಿಂದೆ ಅಸಹಜವಾದುದು ಇರಲಾರದೇ? ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿರುವ ಅದೇ ಧರ್ಮವನ್ನು ಅನುಸರಿಸುವವರು ಕಾಂಗ್ರೆಸ್, ಕಮ್ಯುನಿಸ್ಟ್, ಆಪ್, ತೃಣಮೂಲ, ಜನತಾದಳಗಳು, ತೆಲುಗುದೇಶಂ, ಟಿ.ಆರ್.ಎಸ್., ಸಮಾಜವಾದಿ.. ಸಹಿತ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲ ದೇವಾಲಯ ಪ್ರವೇಶದ ವೇಳೆ ಇದೇ ಉಡುಪು ನೀತಿಯನ್ನು ಅನುಸರಿಸುವುದು ಕಡಿಮೆ. ಮೋದಿಯವರ ಉಡುಗೆ ಪ್ರಾಮುಖ್ಯತೆ ಪಡೆಯುವುದೇ ಇಲ್ಲಿ. ಅವರು ಸೆಕ್ಯುಲರ್ ಭಾರತದಲ್ಲಿರುವ ನಿರ್ದಿಷ್ಟ ಧಾರ್ಮಿಕ ಸಂಘ ಟನೆಗಳನ್ನು ತನ್ನ ಉಡುಗೆಯಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ ಆ ಸಂಘಟನೆಗಳನ್ನು ಮತ್ತು ಅವು ಪ್ರತಿಪಾದಿಸುವ ವಿಚಾರ ಧಾರೆಗಳನ್ನು ನೇಪಾಳಿಗರಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಇದೆ. ನಿರ್ದಿಷ್ಟ ವಿಚಾರಧಾರೆಗೆ ಓರ್ವ ಪ್ರಧಾನಿ ರಾಯಭಾರಿ ಯಾಗುವ ತಂತ್ರ ಇದು. ಸೆಕ್ಯುಲರ್ ಸಂವಿಧಾನವನ್ನು ತನ್ನ ನಡೆ-ನುಡಿಯಲ್ಲಿ ಪ್ರತಿನಿಧಿಸಬೇಕಾದ ಪ್ರಧಾನಿಯೋರ್ವರು ಆ ಸಂವಿಧಾನಕ್ಕೆ ತೀರಾ ವಿರುದ್ಧವಾದ ವಿಚಾರಧಾರೆಯನ್ನು ಹೇಗೆ ನಾಜೂಕಾಗಿ ಪ್ರಚಾರ ಮಾಡಿದರು ಅನ್ನುವುದಕ್ಕೆ ಸಾಕ್ಷಿ ಇದು. ಇದಕ್ಕೆ ಇನ್ನೊಂದು ಉದಾಹರಣೆ ಅಬುಧಾಬಿ ಭೇಟಿ. 2015ರಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಯುಎಇ ಸರಕಾರವು ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. ಅಬುಧಾಬಿಯಲ್ಲಿ ದೇವಾಲಯ ವೊಂದನ್ನು ನಿರ್ಮಿಸುವುದಕ್ಕೆ ಜಾಗ  ಮಂಜೂರು ಮಾಡಲಾಗಿರುವ ಘೋಷಣೆ ಅದು. ಈ ಘೋಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ:
“ಭಾರತೀಯ ಸಮುದಾಯದ ದೀರ್ಘಕಾಲದ ಕಾಯುವಿಕೆ ಕೊನೆಗೊಂಡಿದೆ. ಪ್ರಧಾನಿ ಮೋದಿಯವರ ಯುಎಇ ಭೇಟಿಯ ವೇಳೆ ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಲು ಯುಎಇ ಸರಕಾರ ನಿರ್ಧರಿಸಿದೆ.”
ಪ್ರಧಾನಿ ನರೇಂದ್ರ ಮೋದಿಯವರು ಹೀಗೆ ಟ್ವೀಟ್ ಮಾಡಿದರು:
“ಅಬುಧಾಬಿಯಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿದ ಯುಎಇ ಆಡಳಿತಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ಮಹತ್ದದ  ಹೆಜ್ಜೆ.”
      ನಿಜಕ್ಕೂ ಇದು ಮಹತ್ವದ ಹೆಜ್ಜೆಯೇ? ದೇವಾಲಯವನ್ನೋ ಮಸೀದಿಯನ್ನೋ ಅಥವಾ ಚರ್ಚನ್ನೋ ನಿರ್ಮಿಸಿ ಕೊಡುವುದು ಓರ್ವ ಪ್ರಧಾನಿಯ ವಿದೇಶ ಭೇಟಿಯ ಪ್ರಮುಖ ಗುರಿಯೇ? ಅಥವಾ ಒಂದು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸಿದ ವರ್ಚಸ್ಸನ್ನು ಪಡಕೊಳ್ಳುವ ತಂತ್ರದ ಭಾಗವೇ ಈ ಟ್ವೀಟ್? ನಿಜವಾಗಿ ಯಾವುದೇ ದೇಶದ ಆಡಳಿತ ಪ್ರಮುಖರೊಬ್ಬರು ಇನ್ನೊಂದು ದೇಶಕ್ಕೆ ಭೇಟಿ ಕೊಟ್ಟು ಅಲ್ಲಿ ಚರ್ಚನ್ನೋ ಮಸೀದಿ ಯನ್ನೋ ನಿರ್ಮಿಸುವುದಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳು ವುದು ಭೇಟಿಯ ಪ್ರಮುಖ ಗುರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಯುಎಇಯಲ್ಲಿ ಭಾರತೀಯ ವಲಸಿಗ ಕುಟುಂಬಗಳು ಧಾರಾಳ ಇವೆ. ಅವರಿಗೆ ಅವರದ್ದೇ  ಆದ ಸಾಕಷ್ಟು ಸಮಸ್ಯೆಗಳೂ ಇವೆ. ಉದ್ಯೋಗ ಭದ್ರತೆ ಮತ್ತು ಸುರಕ್ಷಿತತೆ ಇವುಗಳಲ್ಲಿ ಪ್ರಮುಖವಾದುದು. ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಮೂಲವಾಗಿರುವ ಇವರ ಬಗ್ಗೆ ಯಾವ ಮಹತ್ವಪೂರ್ಣ ಒಪ್ಪಂದವನ್ನೂ ಘೋಷಿಸದೆಯೇ ಮಂದಿರವನ್ನು ಸಾಧನೆಯಾಗಿ ಬಿಂಬಿಸಿಕೊಳ್ಳುವುದೆಂದರೇನು? ಒಂದು ವೇಳೆ ಮೋದಿಯವರ ಸ್ಥಾನದಲ್ಲಿ ಓರ್ವ ಮುಸ್ಲಿಮ್ ಇರುತ್ತಿದ್ದರೆ ಮತ್ತು ಅವರು ಜಪಾನಿಗೋ ನಾರ್ವೆಗೋ ಭೇಟಿ ನೀಡಿ ‘ಮಸೀದಿ ನಿರ್ಮಾಣ’ವನ್ನು ಭೇಟಿಯ ಪ್ರಮುಖ ಸಾಧನೆಯಾಗಿ ಟ್ವೀಟ್ ಮಾಡಿರುತ್ತಿದ್ದರೆ ಅದಕ್ಕೆ ಲಭ್ಯವಾಗುವ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು? ಬಹುಶಃ, ಈ ದೇಶದಲ್ಲಿ ಮಂದಿರ ನಿರ್ಮಾಣದ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದರ ಪ್ರತಿನಿಧಿಯಾದ ಮೋದಿಯವರು ಮುಸ್ಲಿಮ್ ರಾಷ್ಟ್ರದಲ್ಲೂ ಮಂದಿರ ನಿರ್ಮಿಸುವಷ್ಟು ಕಾಳಜಿ ಉಳ್ಳವರು ಎಂದು ಸಾರುವುದೇ ಈ ಟ್ವೀಟ್‍ನ ಉದ್ದೇಶ. ಆ ಮೂಲಕ ಬೆಂಬಲಿಗರಲ್ಲಿ ತನ್ನ ಇಮೇಜನ್ನು ಹೆಚ್ಚಿಸಿಕೊಳ್ಳುವ ಶ್ರಮವೂ ಇದರ ಹಿಂದಿದೆ.
ಯಾವುದೇ ರಾಷ್ಟ್ರದ ಆಡಳಿತ ಪ್ರಮುಖರ ವಿದೇಶ ಭೇಟಿ ಮಹತ್ವಪೂರ್ಣವಾಗಬೇಕಾದುದು ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಹೇಳಿಕೆಗಳಿಗಾಗಿ ಮಾತ್ರ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಸೌದಿ ಭೇಟಿ ಇದಕ್ಕೊಂದು ಉದಾಹರಣೆ. ಅವರ ಭೇಟಿಯ ಬಳಿಕ ನಾಲ್ಕು ಗಲ್ಫ್ ರಾಷ್ಟ್ರಗಳು ತಮ್ಮ ಬಹುಕಾಲದ ಮಿತ್ರ ಮತ್ತು ತಮ್ಮ ಗಡಿಯನ್ನೇ ಹಂಚಿಕೊಳ್ಳುವ ಕತರ್ ಮೇಲೆ ದಿಗ್ಬಂಧನ ಹೇರಿದುವು. ಆ ದಿಗ್ಬಂಧನದ ಸರಿ-ತಪ್ಪುಗಳೇನೇ ಇರಲಿ, ಒಂದು ಭೇಟಿಯ ಸ್ಪಷ್ಟ ಫಲಿತಾಂಶವಾಗಿ ಆ ಬೆಳವಣಿಗೆಯನ್ನು ಎತ್ತಿಕೊಳ್ಳಬಹುದಾಗಿದೆ. ವಿಶೇಷ ಏನೆಂದರೆ, ಇವತ್ತು ಮೋದಿಯವರ ವಿದೇಶ ಭೇಟಿಯು ಫಲಿತಾಂಶದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುವುದರ ಬದಲು ಅವರು ಧರಿಸಿದ ಉಡುಪು, ಆಲಿಂಗನ, ಉಡುಗೊರೆಗಳ ಕಾರಣಕ್ಕಾಗಿಯೇ ಚರ್ಚಿತವಾಗುತ್ತಿವೆ. ಅವರ ಜಪಾನ್ ಭೇಟಿಯ ವೇಳೆ ರಾಜ ಅಕಿಹಿಟೋ ಅವರಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದುದನ್ನು ಭಾರತೀಯ ಮಾಧ್ಯಮಗಳು ವಿಶೇಷ ಕಾಳಜಿ ವಹಿಸಿ ಚರ್ಚಿಸಿದುವು. ಅಲ್ಲದೇ ಜಪಾನ್ ಪ್ರಧಾನಿ ಶಿನೊಝೊ ಅಬೆಯವರಿಗೂ ಭಗವದ್ಗೀತೆ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದುದೂ ಚರ್ಚೆಗೊಳಗಾಯಿತು. ‘ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸಬೇಕು’ ಎಂದು 2014ರಲ್ಲಿ ಸುಶ್ಮಾ ಸ್ವರಾಜ್ ಆಗ್ರಹಿಸಿದುದೂ ಈ ಸಂದರ್ಭದಲ್ಲಿ ಪ್ರಚಾರ ಪಡೆಯಿತು. ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‍ಗೂ ಪ್ರಧಾನಿ ಮೋದಿಯವರು ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ನಿಜವಾಗಿ, ಭಗವದ್ಗೀತೆ ಭಾರತದ ಸಂವಿಧಾನ ಅಲ್ಲ. ಹೀಗಿದ್ದೂ ಭಾರತದ ಪ್ರಧಾನಿಯೋರ್ವರು ಉಡುಗೊರೆಯಾಗಿ ಸಂವಿಧಾನವನ್ನೋ ಅಥವಾ ತಾಜ್‍ಮಹಲ್ ಮತ್ತಿತರ
ವಾಸ್ತುಶಿಲ್ಪಗಳ ಪ್ರತಿಕೃತಿಗಳನ್ನೋ ನೀಡುವುದರ ಬದಲು ಭಗವದ್ಗೀತೆಯನ್ನೇ ಉಡುಗೊರೆಯಾಗಿ ಆಯ್ದುಕೊಂಡದ್ದೇಕೆ? ಬಹುಶಃ, ಇದೊಂದು ಅಳೆದೂ ತೂಗಿ ಮಾಡಲಾದ ಆಯ್ಕೆ. ಸೆಕ್ಯುಲರ್ ಭಾರತದ ಪ್ರಧಾನಿಯಾಗಿದ್ದೂ ಮೋದಿಯವರು ಹೇಗೆ ಭಗವದ್ಗೀತೆಯನ್ನು ಪ್ರಚಾರಪಡಿಸುತ್ತಿದ್ದಾರೆ ಎಂಬುದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಸಾರುವ ತಂತ್ರ ಇದು. ಮೋದಿಯವರ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಇದು ತೀರಾ ಅಗತ್ಯ. 2016ರಲ್ಲಿ ನರೇಂದ್ರ ಮೋದಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲೂ ಇದನ್ನು ಗುರುತಿಸಬಹುದು. ಅಫಘಾನ್, ಪಾಕ್ ಮತ್ತು ಬಾಂಗ್ಲಾ ದೇಶದಿಂದ ಭಾರತಕ್ಕೆ ವಲಸೆ ಬರುವ ಹಿಂದೂ, ಕ್ರೈಸ್ತ, ಸಿಕ್ಖ್, ಫಾರ್ಸಿಗಳನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ ಈ ಪಟ್ಟಿಯಲ್ಲಿ ಮುಸ್ಲಿಮರ ಪ್ರಸ್ತಾಪವೇ ಇಲ್ಲ. ಅಂದರೆ, ಈ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಮುಸ್ಲಿಮ್ ವಲಸಿಗರನ್ನು ಕಾನೂನುಬಾಹಿರವಾಗಿಯೇ ಪರಿಗಣಿಸಲಾಗುತ್ತದೆ ಎಂದರ್ಥ. ನಿಜವಾಗಿ, ಭಾರತದ ಗಡಿಯಲ್ಲಿ ಅತ್ಯಂತ ಹೆಚ್ಚು ನಿರಾಶ್ರಿತರಾಗಿರುವವರೆಂದರೆ ಹಿಂದೂಗಳು ಮತ್ತು ಮುಸ್ಲಿಮರು. ಇಲ್ಲೂ ಮೋದಿಯವರ ಬೆಂಬಲಿಗ ವರ್ಗದ ‘ಮುಸ್ಲಿಮ್ ವಿರೋಧಿ’ ಭಾವನೆಯನ್ನು ತಣಿಸುವ ಶ್ರಮ ನಡೆದಿರುವುದು ಅತ್ಯಂತ ಸ್ಪಷ್ಟ. ತನ್ನ ಬೆಂಬಲಿಗರ ಬೆಂಬಲವನ್ನು ತಾಜಾ ಆಗಿ ಇಟ್ಟುಕೊಳ್ಳುವುದಕ್ಕೆ ಮಂದಿರ, ಭಗವದ್ಗೀತೆ, ದೇವಾಲಯ ಭೇಟಿ, ಮುಸ್ಲಿಮ್ ವಿರೋಧಿ ನೀತಿಗಳಿಂದ ಸಾಧ್ಯವಿದೆ ಎಂದು ಮೋದಿ ಮತ್ತು ಅವರ ಚಿಂತಕ ಛಾವಡಿ ತಿಳಿದುಕೊಂಡಿದೆ. ಒಂದು ರೀತಿಯಲ್ಲಿ, ಇಂಥ ನಿಲುವುಗಳೇ ಈ ಸರಕಾರದ ವರ್ಚಸ್ಸಿನ ಉಳಿವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ. ಉಸ್ತಾದ್, ಪ್ರಿನ್ಸ್, ಜೈ ಮತ್ತು ಬಿಟ್ಟು ಹುಲಿಗಳಂತೆ ಈ ಸರಕಾರದ ಪಾಲಿಗೆ ಈ ವಿಷಯಗಳೇ ಸೆಲೆಬ್ರಿಟಿಗಳು. ಇವನ್ನು ಆಗಾಗ ಚರ್ಚೆಗೊಳಗಾಗುವಂತೆ ನೋಡಿಕೊಂಡು ಸರಕಾರದ ವರ್ಚಸ್ಸನ್ನು ತಾಜಾ ಆಗಿ ಉಳಿಸಿಕೊಳ್ಳುವ ಶ್ರಮ ನಡೆಯುತ್ತಿದೆ.

Saturday, August 5, 2017

ಪಾತ್ರಕ್ಕೆ ತಕ್ಕ ಉಡುಪು ಯಾಕೆ ಹೆಣ್ಣಿಗೆ ಮಾತ್ರ?

      ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಪ್ರತಿಭೆ.. ಮುಂತಾದು ವುಗಳನ್ನು ಅತ್ಯಂತ ಹೆಚ್ಚು ಚರ್ಚೆಗೆ ಎತ್ತಿಕೊಳ್ಳುವುದು ಸಿನಿಮಾ ಕ್ಷೇತ್ರ. ಅಲ್ಲಿಂದ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಪುರುಷರನ್ನು ಸದೆಬಡಿಯುವ ಪಾತ್ರದಲ್ಲಿ ಮಹಿಳೆ ಮಿಂಚುತ್ತಾಳೆ. ಪುರುಷ ನಿಗಿಂತಲೂ ಹೆಚ್ಚು ಐಕ್ಯೂ ಇರುವವಳಾಗಿ ಗುರುತಿಸಿಕೊಳ್ಳುತ್ತಾಳೆ. ಅದ್ಭುತ ತಾಯಿಯಾಗಿ, ಪ್ರೇಮಿಯಾಗಿ, ಸಹನಾಮಯಿಯಾಗಿ, ಬುದ್ಧಿವಂತಳಾಗಿ, ಪ್ರತಿಭಟನಾ ಗುಣವುಳ್ಳವಳಾಗಿ, ಸಮಾನತೆಯ ಪ್ರತಿಪಾದಕಳಾಗಿ.. ಹೀಗೆ ಎಲ್ಲ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾಳೆ. ಇದೊಂದು ಮುಖ. ಈ ಸುಂದರ ಮುಖದಿಂದ ಆಕರ್ಷಿತರಾಗಿ ಧಾರಾಳ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮನ್ನು ಪರೀಕ್ಷೆಗೊಡ್ಡಲು ಸಿದ್ಧರಾಗುತ್ತಿದ್ದಾರೆ. ಅಲ್ಲಿ ಸಮಾನತೆಯಿದೆ, ಲಿಂಗ ಬೇಧ ಇಲ್ಲ, ಸುರಕ್ಷಿತತೆಯಿದೆ.. ಇತ್ಯಾದಿ ಇತ್ಯಾದಿ ನಂಬಿಕೆಗಳೂ ಅವರಲ್ಲಿವೆ. ಅದೇ ವೇಳೆ, ಇದಕ್ಕೆ ಇನ್ನೊಂದು ಮುಖವೂ ಇದೆ. ಕೇರಳದ ನಟಿಯರು ಕಳೆದವಾರ ಈ ಕರಾಳ ಮುಖವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟರು. Womens collective in Cinema ಎಂಬ ಹೆಸರಲ್ಲಿ ಒಂದು ನಿಯೋಗವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಗೆ ಒಯ್ದರು. ಮಂಜು ವಾರಿಯರ್, ಬೀನಾ ಮೋಳ್, ರೀಮಾ ಕಲ್ಲಿಂಗಲ್, ಪಾರ್ವತಿ, ಅಂಜಲಿ ಮೆನನ್ ಮುಂತಾದ ಪ್ರಮುಖ ನಟಿಯರು ಆ ನಿಯೋಗದಲ್ಲಿದ್ದರು. ಅವರ ಬೇಡಿಕೆ ಏನೆಂದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ತಮಗೆ ಸುರಕ್ಷಿತತೆಯನ್ನು ಒದಗಿಸ ಬೇಕು ಎಂಬುದು. ಎಲ್ಲಿ ಮಹಿಳಾ ಸುರಕ್ಷಿತತೆಯ ಬಗ್ಗೆ ಸಾಲು ಸಾಲು ಸಿನಿಮಾಗಳು, ಡಯಲಾಗ್‍ಗಳು ಸೃಷ್ಟಿಯಾಗುತ್ತೋ ಅಲ್ಲೇ  ಮಹಿಳೆ ಅಸುರಕ್ಷಿತಳಾಗಿದ್ದಾಳೆ ಎಂಬುದು. ಅಷ್ಟಕ್ಕೂ, ಈ ಅಸುರಕ್ಷಿತತೆಯ ಭಯ ಇವರನ್ನು ಕಾಡುತ್ತಿರುವುದು ಪ್ರಾಣಿಗಳಿಂದಲ್ಲ, ಪುರುಷರಿಂದ. ಹೆಣ್ಣನ್ನು ಅತ್ಯಾಚಾರಿಗಳಿಂದ, ದರೋಡೆಕೋರರಿಂದ, ಚುಡಾವಣೆದಾರರಿಂದ, ಮಾನವ ಕಳ್ಳ ಸಾಗಾಟಗಾರರಿಂದ.. ಅಮೋಘವಾಗಿ ರಕ್ಷಿಸುವ ಪಾತ್ರದಲ್ಲಿ ಮಿಂಚುತ್ತಿರುವ ಹೀರೋ ಗಳಿಂದ. ಅಂಥ ಚಿತ್ರಕತೆಯನ್ನು ರಚಿಸಿದ ಪುರುಷನಿಂದ. ನಿರ್ದೇಶಕನಿಂದ. ಸಹನಟರಿಂದ. ತಂತ್ರಜ್ಞರಿಂದ. ಈ ಬೆಳವಣಿಗೆ ಗಿಂತ ಕೆಲವು ಸಮಯ ಮೊದಲು ತಮಿಳುನಾಡಿನ ಪ್ರಮುಖ ನಟ ಶರತ್ ಕುಮಾರ್‍ರ ಮಗಳು ವರಲಕ್ಷ್ಮಿ ಒಂದು ಟ್ವೀಟ್ ಮಾಡಿದರು. ಆಕೆಯೂ ಓರ್ವ ಪ್ರಮುಖ ನಟಿ. ಕೇರಳದ  ಪ್ರಸಿದ್ಧ ನಟಿಯನ್ನು ಚಲಿಸುತ್ತಿರುವ ಆಡಿ ಕಾರಿನಲ್ಲಿ ಗಂಟೆಗಳ ವರೆಗೆ ಲೈಂಗಿಕವಾಗಿ ಹಿಂಸಿಸಿದ ಪ್ರಕರಣದ ಬಳಿಕ ಮಾಡಿದ ಟ್ವೀಟ್ ಇದು.
‘ತಮಿಳು ಟಿ.ವಿ. ಚಾನೆಲ್‍ನ ಮುಖ್ಯಸ್ಥನ ಜೊತೆ ಸೀರಿಯಲ್‍ಗೆ ಸಂಬಂಧಿಸಿ ಸಭೆ ನಡೆಸಿದೆ. ಬಳಿಕ ಆತ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ..’ ಈ ಟ್ವೀಟ್‍ಗೆ ಅನೇಕ ಮಂದಿ ಆಘಾತ ವ್ಯಕ್ತಪಡಿಸಿದರು.
      2015ರಲ್ಲಿ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು ಒಂದು ಸಮೀಕ್ಷೆ ಆಧಾರಿತ ಅಭಿಪ್ರಾಯವನ್ನು ಮಂಡಿಸಿತ್ತು. ಸಿನಿಮಾ ಮತ್ತು ಟಿ.ವಿ. ಇಂಡಸ್ಟ್ರಿಯಲ್‍ನ ಶೇ. 99 ಮಂದಿ ಮಹಿಳೆಯರಿಗೂ ಸೆಕ್ಸಿಸಂನ ಅನುಭವ ಆಗಿದೆ ಎಂದು ಅದರಲ್ಲಿ ಹೇಳಲಾಗಿತ್ತು. ಮಹಿಳೆಯನ್ನು ವಸ್ತುವಾಗಿ ನೋಡಬಾರದೆಂದು ಹೇಳಿಕೊಡುವ ಕ್ಷೇತ್ರದಲ್ಲೇ  ಯಾಕೆ ಹೆಣ್ಣು ಮತ್ತೆ ಮತ್ತೆ ವಸ್ತುವಾಗುತ್ತಿದ್ದಾಳೆ? ಈ ದೇಶದ ಯಾವನಾದರೂ ಓರ್ವ ಪ್ರಸಿದ್ಧ ನಟ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ಶೋಷಣೆಗೆ ಒಳಗಾದದ್ದು ನಡೆದಿದೆಯೇ? ಲೈಂಗಿಕ ಶೋಷಣೆ ಬಿಡಿ, ಕನಿಷ್ಠ ಆತನ ಎದುರು ದನಿಯೇರಿಸಿ ಮಾತನಾಡಿದ ಪ್ರಕರಣಗಳಿವೆಯೇ? ಪಕ್ಕಾ ದರೋಡೆಕೋರರೂ ಆತನನ್ನು ಮುಟ್ಟುವ ಧೈರ್ಯ ಮಾಡಿದ್ದಿದೆಯೇ? ಮತ್ತೇಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಏನೇನೂ ಅಲ್ಲದ ವ್ಯಕ್ತಿಗಳು ಓರ್ವ ಪ್ರಸಿದ್ಧ ನಟಿಯ ಮೇಲೆ ಲೈಂಗಿಕ ಶೋಷಣೆ ನಡೆಸುವ ಪ್ರಕರಣ ನಡೆಯುತ್ತದೆ? ಅದೂ ಚಲಿಸುವ ಕಾರಿನಲ್ಲಿ. ಈ ದೇಶದ ಎಲ್ಲೋ ಮೂಲೆಯಲ್ಲಿ ಯಾವುದೋ ಅಪರಿಚಿತ ಹೆಣ್ಣು ಮಗಳ ಮೇಲೆ ನಡೆಯಬಹುದಾದಂಥ ರೀತಿಯ ಹಿಂಸೆಗೆ ಓರ್ವ ನಟಿ ಒಳ ಗಾಗುತ್ತಾಳೆ ಮತ್ತು ಆ ಹಿಂಸೆಯಲ್ಲಿ ಆಕೆಯ ಸಿನಿಮಾ ಇಂಡಸ್ಟ್ರಿಯ ಒಳಗಿನ ವ್ಯಕ್ತಿಗಳೇ ಪಾಲುಗೊಳ್ಳುತ್ತಾರೆ ಅನ್ನುವುದು ಏನನ್ನು ಸೂಚಿಸುತ್ತದೆ? ಸಿನಿಮಾ ಇಂಡಸ್ಟ್ರಿಯೂ ಹೆಣ್ಣನ್ನು ವಸ್ತುವಾಗಿ ಮತ್ತು ಅಗ್ಗವಾಗಿ ನೋಡುತ್ತಿದೆ ಎಂದಲ್ಲವೇ? ಅಷ್ಟಕ್ಕೂ, ಕೇರಳದ ನಟಿಯನ್ನು ಲೈಂಗಿಕವಾಗಿಯೇ ಯಾಕೆ ಶೋಷಿಸಬೇಕಿತ್ತು? ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇರೆ ದಾರಿಗಳೂ ಇತ್ತಲ್ಲವೇ? ಈ ಇಂಡಸ್ಟ್ರಿಯಲ್ಲಿ ನಟರ ಜೊತೆಯಲ್ಲೂ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲವೇ? ಆಗೆಲ್ಲ ಅವರನ್ನು ಹೀಗೆ ಲೈಂಗಿಕವಾಗಿ ಶೋಷಣೆಗೆ ಒಳಪಡಿಸಲಾಗುತ್ತಿದೆಯೇ?
    ಲೈಂಗಿಕ ಶೋಷಣೆ ಎಂಬುದು ಹೆಣ್ಣನ್ನು ಶರಣುಗೊಳಿಸುವುದಕ್ಕೆ ಪುರುಷ ಸಮಾಜ ಸಾಮಾನ್ಯವಾಗಿ ಬಳಸುತ್ತಿರುವ ಅಸ್ತ್ರ. ಭಾರತದ ಉದ್ದಗಲಕ್ಕೂ ಇದರ ಪ್ರಯೋಗ ನಡೆಯುತ್ತಲೇ ಇದೆ. ತನ್ನನ್ನು ಪ್ರೀತಿಸದ ಹೆಣ್ಣನ್ನು ಪುರುಷ ಲೈಂಗಿಕ ದೌರ್ಜನ್ಯದ ಮೂಲಕ ಪ್ರತೀಕಾರ ತೀರಿಸುವುದಿದೆ. ತನಗೆ ಎದುರಾಡಿದ ಉದ್ಯೋಗಸ್ಥೆಯ ಮೇಲೆ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ಎಸಗುವುದಿದೆ. ಪುರುಷರ ವಿರುದ್ಧ ದನಿಯೆತ್ತಿದವಳನ್ನು ಇದೇ ವಿಧಾನ ಬಳಸಿ ಪಳಗಿಸುವುದಿದೆ. ಈ ದೇಶದ ಸಾಮಾನ್ಯ ಹೆಣ್ಣು ಮತ್ತು ಗಂಡಿನ ನಡುವಿನ ಜಗಳ-ಭಿನ್ನಾಭಿಪ್ರಾಯಗಳು ಬಹುತೇಕ ಬಾರಿ ಅಂತ್ಯ ಕಾಣುವುದೇ ಲೈಂಗಿಕ ಶೋಷಣೆಯ ಮೂಲಕ. ಹೆಣ್ಣನ್ನು ಅವಮಾನಿಸುವುದಕ್ಕೆ ಪುರುಷ ಸಮಾಜ ಲೈಂಗಿಕ ಹಿಂಸೆಯನ್ನು ಒಂದು ಆಯುಧವಾಗಿ ಬಳಸಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುತ್ತಾ ಮತ್ತು ಹೆಣ್ಣನ್ನು ಲೈಂಗಿಕ ವಸ್ತುವಾಗಿ ನೋಡಬಾರದೆನ್ನುತ್ತಾ ಸಾಗುತ್ತಿರುವ ಕ್ಷೇತ್ರವೇ ಸಿನಿಮಾ ರಂಗ. ಆದರೆ ಆ ಕ್ಷೇತ್ರದ ಪ್ರತಿಪಾದನೆಗೂ ಅದು ಹೆಣ್ಣನ್ನು ನೋಡುವ ವಿಧಾನಕ್ಕೂ ತಾಳಮೇಳವಿಲ್ಲವೆಂದರೆ ಹೇಗೆ? ಆ ಕ್ಷೇತ್ರವೂ ಹೆಣ್ಣನ್ನು ಪಳಗಿಸುವುದಕ್ಕೆ ಲೈಂಗಿಕ ಶೋಷಣೆಯನ್ನೇ ಪರಿಣಾಮಕಾರಿ ಅಸ್ತ್ರವಾಗಿ ಪರಿಗಣಿಸಿದರೆ ಹೇಗೆ? ಹಾಗಂತ, ಅಲ್ಲಿಯ ವೇತನಾ ಕ್ರಮಗಳು ಹೇಗಿವೆ? ಸ್ತ್ರೀ-ಪುರುಷ ಸಮಾ ನತೆಯನ್ನು ಇಲ್ಲಿ ಪಾಲಿಸಲಾಗುತ್ತಿದೆಯೇ? ಹೀರೋಗೆ ಕೊಡುವಷ್ಟೇ ವೇತನವನ್ನು ಹೀರೋಯಿನ್‍ಗೂ ಕೊಡಲಾಗುತ್ತಿದೆಯೇ? ಸಿನಿಮಾ ಅಂದರೆ ಹೀರೋ ಮತ್ತು ಹೀರೋಯಿನ್ ಮಾತ್ರ ಅಲ್ಲ. ನೂರಾರು ಕಾರ್ಮಿಕರನ್ನೊಳಗೊಂಡ ವಿಶಾಲ ಕ್ಷೇತ್ರ ಅದು. ಅಲ್ಲಿ ಕಾರ್ಮಿಕರಾಗಿರುವ ಹೆಣ್ಣು ಮತ್ತು ಗಂಡಿನ ಸ್ಥಿತಿ-ಗತಿಗಳು ಹೇಗಿವೆ? ಕಾರ್ಮಿಕ ಕಾನೂನುಗಳು ಈ ಕ್ಷೇತ್ರಕ್ಕೆ ಅನ್ವಯ ವಾಗುತ್ತಿವೆಯೇ? ವಾರಗಳ ಹಿಂದೆ ಸಂಜನಾ ಎಂಬ ಕನ್ನಡ ನಟಿಯ ಬಗ್ಗೆ ಟಿ.ವಿ. ಮಾಧ್ಯಮಗಳು ಸಾಕಷ್ಟು ಹೊತ್ತು ಚರ್ಚಿಸಿದುವು. ಆಕೆಯ ನಗ್ನ ದೃಶ್ಯದ ವೀಡಿಯೋ ಸೋರಿಕೆ ಯಾಗಿರುವುದನ್ನೂ ಸೋರಿಕೆಗಿರಬಹುದಾದ ಕಾರಣಗಳ ಸಾಧ್ಯಾ ಸಾಧ್ಯತೆಗಳನ್ನೂ ಚರ್ಚಿಸಿದುವು. ದುರಂತ ಏನೆಂದರೆ, ಯಾರೂ ಕೂಡ ನಟಿಯದ್ದೇ  ನಗ್ನ ವೀಡಿಯೋ ಯಾಕೆ ಸೋರಿಕೆಯಾಗಬೇಕು ಎಂದು ಪ್ರಶ್ನಿಸಲಿಲ್ಲ. ನಗ್ನತೆ ಎಂಬುದು ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ವಿಶೇಷತೆ ಏನಲ್ಲ. ಪುರುಷನೂ ನಗ್ನನಾಗಬಲ್ಲ. ಆದರೆ ವಿವಾದಾತ್ಮಕ ಸೋರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಸುತ್ತಿ ಕೊಂಡಿರುತ್ತವೆ? ಚಿತ್ರ ಬಿಡುಗಡೆಯ ಮೊದಲು ಹೆಣ್ಣಿನ ದೇಹ ವನ್ನು ಕೇಂದ್ರೀಕರಿಸಿ ವೀಡಿಯೋವನ್ನೋ ಚಿತ್ರವನ್ನೋ ಯಾಕೆ ಸೋರಿಕೆಯೋ ಬಿಡುಗಡೆಯೋ ಮಾಡಲಾಗುತ್ತದೆ? ಒಂದು ಕಡೆ ಹೆಣ್ಣು ಬರೇ ದೇಹವಲ್ಲ ಎಂದು ಹೇಳುತ್ತಲೇ ಇನ್ನೊಂದು ಕಡೆ ಬರೇ ದೇಹವನ್ನೇ ಮುಖ್ಯವಾಗಿಸಿಕೊಂಡು ಸಿನಿಮಾ ತಯಾರಾಗುವುದು ಮತ್ತು ಅದೇ ದೇಹದ ಮೂಲಕ ಸಮಾನತೆ, ಹಕ್ಕು, ಸ್ವಾತಂತ್ರ್ಯಗಳ ಡಯಲಾಗ್‍ಗಳನ್ನು ಹೇಳಿಸುವುದರ ಅರ್ಥ ಏನು? ಇದರ ಹಿಂದೆ ಯಾರಿದ್ದಾರೆ? ಪುರುಷರೇ? ಇಂಥವು ಗಳನ್ನು ಮಹಿಳಾ ವಿರೋಧಿ ಎಂದು ಬಹಿರಂಗವಾಗಿ ಹೇಳುವ ನಟಿಯರು ಯಾಕೆ ಕಾಣಿಸುತ್ತಿಲ್ಲ? ಸಿನಿಮಾ ರಂಗದಲ್ಲೂ ಶೋಷಣೆ ಇದೆಯೇ? ಪುರುಷನ ಅಣತಿಯಂತೆ ಹೆಣ್ಣು ಕೆಲಸ ಮಾಡಬೇಕಿದೆಯೇ? ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಡಯಲಾಗ್‍ಗಳನ್ನು ಹೇಳುತ್ತಾ ಆ ಡಯಲಾಗ್‍ಗಳಿಗೆ ವಿರುದ್ಧವಾಗಿ ಬದುಕಬೇಕಾದ ಕ್ಷೇತ್ರವಾಗಿದೆಯೇ ಸಿನಿಮಾ ಕ್ಷೇತ್ರ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬಹುದು. ಈ ಕ್ಷೇತ್ರಕ್ಕೆ ಹೊಸದಾಗಿ ಬರುವ ನಟಿಯರು ಮತ್ತು ಈಗಾಗಲೇ ತಳವೂರಿರುವ ನಟಿಯರು ಕೂಡ ಆಗಾಗ ಮಾಧ್ಯಮಗಳ ಮುಂದೆ ‘ಪಾತ್ರದ ಬೇಡಿಕೆಯನ್ನು ಅನುಸರಿಸಿ ಉಡುಪು ತೊಡಲು ಸಿದ್ಧ’ ಎಂದು ಹೇಳಿಕೊಳ್ಳುವುದಿದೆ. ಹಾಗಂದರೇನು? ಇದು ಇವರ ಮಾತೋ ಅಥವಾ ಈ ಇಂಡಸ್ಟ್ರೀ ಹೇಳಿಸುವ ಮಾತೋ? ಅಭಿನಯಕ್ಕಿಂತ ತೊಡುವ ಉಡುಪೇ ಯಾಕೆ ಮುಖ್ಯವಾಗಬೇಕು? ಯಾಕೆ ಯಾವ ನಟರೂ ಇಂಥ ಹೇಳಿಕೆಗಳನ್ನು ಕೊಡುವುದಿಲ್ಲ? ‘ಪಾತ್ರಕ್ಕೆ ತಕ್ಕಂತೆ ಉಡುಪು’ ಎಂಬುದು ಬರೇ ಹೆಣ್ಣಿಗೆ ಸಂಬಂಧಿಸಿ ಮಾತ್ರ ಇರುವ ನಿಯಮ ಅಲ್ಲವಲ್ಲ. ಪುರುಷನೂ ಪಾತ್ರಕ್ಕೆ ತಕ್ಕಂತೆ ಉಡುಪು ತೊಡಬೇಕಲ್ಲವೇ? ಮತ್ತೇಕೆ ನಟಿಯರೇ ಪಾತ್ರಕ್ಕೆ ತಕ್ಕಂತೆ ಉಡುಪು ಎಂಬ ಡಯಲಾಗ್‍ಗಳನ್ನು ಉದುರಿಸುತ್ತಾರೆ? ಈ ಕ್ಷೇತ್ರದಲ್ಲಿ ಪಾತ್ರಕ್ಕೆ ತಕ್ಕುದಲ್ಲದ ಉಡುಪನ್ನು ನಟಿಯರ ಮೇಲೆ ಹೇರುತ್ತಾರಾ? ಯಾರು ಅವರು? ಪುರುಷರೇ? ಮಹಿಳೆಯರೇ? ಈ ಕ್ಷೇತ್ರದಲ್ಲಿ ನಟರಿಗಿರುವ ಸ್ವಾತಂತ್ರ್ಯ ನಟಿಯರಿಗಿಲ್ಲವೇ? ನಟರ ಆಯ್ಕೆಗೆ ಪ್ರತಿಭೆ ಆಧಾರವಾಗುವಾಗ ನಟಿಯರ ಆಯ್ಕೆಗೆ ಪ್ರತಿಭೆಯ ಜೊತೆಗೇ ಇತರವುಗಳೂ ಆಧಾರವಾಗುತ್ತದೆಯೇ? ಇದು ಈ ಕ್ಷೇತ್ರ ಪ್ರತಿಪಾದಿಸುವ ಸ್ತ್ರೀ-ಪುರುಷ ಸಮಾನತೆಯ ಚೌಕಟ್ಟಿನೊಳಗಡೆ ಬರುತ್ತದೆಯೇ? ಸಿನಿಮಾ ಜಗತ್ತಿನ ಹೊರಗಡೆ ಸಂಭವಿಸುವ ಮಹಿಳಾ ಶೋಷಣೆಯ ಕುರಿತು ಆಗಾಗ ದಿಗ್ಭ್ರಮೆ ವ್ಯಕ್ತಪಡಿಸುವ ಸಿನಿಮಾ ಕ್ಷೇತ್ರದ ದಿಗ್ಗಜರು ಯಾಕೆ ಒಳಗಿನ ಈ ತೂತುಗಳ ಬಗ್ಗೆ ಯಾವ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುವುದಿಲ್ಲ?
      ಮಹಿಳಾ ಸಮಾನತೆ, ಸಮಾನ ಪ್ರಾತಿನಿಧ್ಯ, ಸಮಾನ ಸ್ವಾತಂತ್ರ್ಯ.. ಇತ್ಯಾದಿಗಳೆಲ್ಲ ಪುರುಷ ತನ್ನ ಅನುಕೂಲಕ್ಕಾಗಿ ಹುಟ್ಟು ಹಾಕಿರುವ ಪದಪುಂಜಗಳೇನೋ ಅನ್ನುವ ಅನುಮಾನಕ್ಕೆ ಇವು ಮತ್ತು ಇಂಥ ಇನ್ನಿತರ ಸಂಗತಿಗಳು ಪುಷ್ಠಿಯನ್ನು ನೀಡುತ್ತಲೇ ಇವೆ. ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಇಂದಿಗೆ 21 ವರ್ಷಗಳೇ ಸಂದಿವೆ. 1996 ಸೆ. 12ರಂದು ಮಹಿಳೆಯರಿಗೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ 33% ಮೀಸಲಾತಿ ನೀಡುವ ಮಸೂದೆಯನ್ನು ಮೊದಲ ಬಾರಿ ಮಂಡಿಸಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲೇ ಸೇರಿಸಿಕೊಂಡ ವಿಷಯ ಇದು. ಆದರೆ ರಾತೋರಾತ್ರಿ ನೋಟು ಅಮಾನ್ಯಗೊಳಿಸಿದ ಬಿಜೆಪಿಗೆ, ಪಾರ್ಲಿಮೆಂಟನ್ನು ವಿಶ್ವಾಸಕ್ಕೆ ಪಡೆದುಕೊಂಡು ಜಿಎಸ್‍ಟಿಯನ್ನು ಜಾರಿಗೊಳಿಸಿದ ಬಿಜೆಪಿಗೆ, ‘ಜಾನುವಾರು ಮಾರಾಟ ಕಾಯ್ದೆ’ಯನ್ನು ತರಾತುರಿಯಿಂದ ಜಾರಿಗೊಳಿಸುವ ಉಮೇದು ವ್ಯಕ್ತಪಡಿಸಿದ ಬಿಜೆಪಿಗೆ ಸ್ವತಃ ಪ್ರಣಾಳಿಕೆಯಲ್ಲೇ  ಭರವಸೆ ನೀಡಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವುದಕ್ಕೆ ಈ ವರೆಗೂ ಸಾಧ್ಯವಾಗಿಲ್ಲ. ಪ್ರಣಾಳಿಕೆಯಲ್ಲೇ ಇಲ್ಲದ ನೋಟು ಅಮಾನ್ಯ ಎಂಬ ಅತಿ ಧೈರ್ಯದ ನಿರ್ಧಾರ ತಳೆದ ಬಿಜೆಪಿಯು ಯಾಕೆ 2 ದಶಕಗಳಿಂದ ಕಾಯುತ್ತಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಕಾನೂನಾಗಿಸುವ ಧೈರ್ಯ ತೋರಿಸುತ್ತಿಲ್ಲ? ಇಲ್ಲಿನ ಪ್ರಶ್ನೆ ಧೈರ್ಯದ್ದೋ ಅಥವಾ ಪುರುಷಾಧಿಪತ್ಯಕ್ಕೆ ಹೊಡೆತ ಬೀಳುತ್ತದೆ ಎಂಬ ಭಯದ್ದೋ? ಇಲ್ಲೂ ಮತ್ತದೇ ಶೋಷಣಾತ್ಮಕ ಮನಸ್ಥಿತಿಯೇ ಎದ್ದು ಕಾಣುತ್ತದೆ. ಭಾರತೀಯ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಬಹುತೇಕ ಪುರುಷರಷ್ಟೇ ಇದೆ. ಇದರ ಆಧಾರದಲ್ಲಿ ಹೇಳುವುದಾದರೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಅರ್ಧಕ್ಕರ್ಧ ಮಂದಿ ಮಹಿಳೆಯರಿರಬೇಕಿತ್ತು. ಆದರೆ, ಸದ್ಯ ಭಾರತದ ಪಾರ್ಲಿಮೆಂಟ್‍ನಲ್ಲಿ ಮಹಿಳೆಯರ ಸಂಖ್ಯೆ 12%. ಒಂದು ವೇಳೆ 33% ಮೀಸಲಾತಿಯು ಜಾರಿಯಾದರೆ ಕರ್ನಾಟಕದ ವಿಧಾನ ಸಭೆಯಲ್ಲಿ 84 ಶಾಸಕಿಯರಿರಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ನಿಜವಾಗಿ, ಮಹಿಳಾ ಜನಸಂಖ್ಯೆಗೆ ಸಂಬಂಧಿಸಿ ಹೇಳುವುದಾದರೆ ಈ ಸಂಖ್ಯೆಯೂ ಕನಿಷ್ಠವೇ. ಗಂಡಿಗೆ ಹೆಣ್ಣು ಸಮಾನ ಎಂದು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆ ಸಮಾನತೆಯ ಸಣ್ಣ ಮಾದರಿಯನ್ನೂ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುವುದು ಅಸಾಧ್ಯವಾಗುತ್ತಿರುವುದೇಕೆ? ಅದೇ ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯ, ಹಕ್ಕು ಗಳನ್ನು ಅತ್ಯಂತ ಪ್ರಬಲವಾಗಿ ಮಂಡಿಸುವ ಸಿನಿಮಾ ಕ್ಷೇತ್ರದಲ್ಲಿ ಹೆಣ್ಣು ದನಿ ರಹಿತಳಾಗಿ ಮತ್ತು ದೇಹ ಕೇಂದ್ರಿತ ವಸ್ತುವಾಗಿ ಪರಿಗಣನೆಗೆ ಒಳಗಾಗುತ್ತಿರುವುದೇಕೆ? ಇದರ ಅರ್ಥವೇನು? ಸದ್ಯ ಪ್ರತಿಪಾದಿಸಲಾಗು ತ್ತಿರುವ ರೀತಿಯ ಮಹಿಳಾ ಸಮಾನತೆಯು ಪ್ರಾಯೋಗಿಕವಾಗಿ ಅಸಾಧ್ಯವೇ? ಇದು ಸಿನಿಮಾಗಳಿಗೆ, ಭಾಷಣಗಳಿಗೆ ಮತ್ತು ಬರಹಗಳಿಗೆ ಮಾತ್ರ ಒಗ್ಗುವ ಮತ್ತು ಬದುಕಿ ತೋರಿಸಲು ಅಸಾಧ್ಯವಾದ ಚಿಂತನೆಯೇ?