Monday, November 17, 2014

ಹೊಟ್ಟೆ ತುಂಬಿಸುವ ಬದಲು ಹೊಟ್ಟೆ ಸೀಳುವುದನ್ನೇ ಪರಿಹಾರ ಅನ್ನುತ್ತೇವಲ್ಲ..

   ಸಂತಾನಹರಣ ಚಿಕಿತ್ಸೆಯಲ್ಲಿ ವ್ಯಾಸೆಕ್ಟಮಿ ಮತ್ತು ಟ್ಯುಬೆಕ್ಟಮಿ ಎಂಬ ಎರಡು ವಿಧಾನಗಳಿವೆ. ವ್ಯಾಸೆಕ್ಟಮಿ ಪುರುಷರಿಗೆ ಸಂಬಂಧಿಸಿದ್ದಾದರೆ ಟ್ಯುಬೆಕ್ಟಮಿ ಮಹಿಳೆಯರಿಗೆ ಸಂಬಂಧಿಸಿದ್ದು. ಇದರಲ್ಲಿ ಪುರುಷರ ಸಂತಾನಹರಣ ಚಿಕಿತ್ಸೆಯು ತೀರಾ ಸರಳ, ಸುಲಭ ಮತ್ತು ಕಡಿಮೆ ಅವಧಿಯದ್ದು. ಇದಕ್ಕೆ 5 ನಿಮಿಷಗಳಷ್ಟೇ ಸಾಕಾಗುತ್ತದೆ. ಮಾತ್ರವಲ್ಲ, ಎರಡು ಗಂಟೆಗಳ ವಿರಾಮದಲ್ಲಿ ಎಲ್ಲವೂ ಕೊನೆಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಟ್ಯುಬೆಕ್ಟಮಿ ಸರಳವಲ್ಲ. ಕೆಲವೊಮ್ಮೆ ಮಹಿಳೆಯರು 8 ದಿನಗಳ ವರೆಗೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತುಸು ದೀರ್ಘ ಅವಧಿಯ ವಿರಾಮ ಬೇಕಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯೂ ಇರುತ್ತದೆ. ಇಷ್ಟಿದ್ದೂ, ಸಂತಾನಹರಣ ಚಿಕಿತ್ಸೆಗೆ ಮಹಿಳೆಯರೇ ಯಾಕೆ ಒಳಗಾಗುತ್ತಿದ್ದಾರೆ? 2012ರಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾದವರ ಸಂಖ್ಯೆ 46 ಲಕ್ಷ. ಆದರೆ ಇದರಲ್ಲಿ ಪುರುಷರ ಅನುಪಾತ ಒಂದು ಶೇಕಡಾಕ್ಕಿಂತಲೂ ಕಡಿಮೆ. 2012-13ರಲ್ಲಿ 0.85% ಪುರುಷರು ಮಾತ್ರ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದಾರೆ. 2013-14ರಲ್ಲಂತೂ ಈ ಅನುಪಾತ 0.44%ಕ್ಕೆ ಕುಸಿದಿದೆ (ದಿ ಹಿಂದೂ 2014 ನವಂಬರ್ 13 ). ಅಂದರೆ ಸಂತಾನಹರಣ ಚಿಕಿತ್ಸೆಗೆ ಒಳಗಾಗುವವರಲ್ಲಿ ಶೇ. 99ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ. ಯಾಕೆ ಹೀಗೆ? ಒಂದು ಕಡೆ ಹೆಣ್ಣು ಗರ್ಭಧರಿಸಬೇಕು, 9 ತಿಂಗಳ ವರೆಗೆ ದೈಹಿಕವಾಗಿ ವಿವಿಧ ಏರಿಳಿತಗಳನ್ನು ಅನುಭವಿಸಬೇಕು, ಕೊನೆಗೆ ಸಂತಾನ ಹರಣ ಚಿಕಿತ್ಸೆಗೂ ಆಕೆಯದೇ ದೇಹ ಬೇಕು. ಅದೇ ವೇಳೆ ಪುರುಷ ಗರ್ಭಧರಿಸುವುದಿಲ್ಲ ಎಂದು ಮಾತ್ರವಲ್ಲ, ತನ್ನ ದೇಹವನ್ನು ವ್ಯಾಸೆಕ್ಟಮಿಗೆ ಒಡ್ಡುವುದೂ ಇಲ್ಲ. ಇಲ್ಲೂ ಒಂದು ಕುತೂಹಲದ ಸಂಗತಿಯಿದೆ. ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಬಡತನ ರೇಖೆಗಿಂತ ಕೆಳಗಿನ (BPL) ಮಹಿಳೆಯರಿಗೆ ಸರಕಾರವು 600 ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಬಡತನ ರೇಖೆಗಿಂತ ಮೇಲಿನ (APL) ಮಹಿಳೆಯರಿಗೆ 250 ರೂಪಾಯಿಯನ್ನು ನೀಡುತ್ತದೆ. ಅದೇ ವೇಳೆ ಇಂಥ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ BPL, APL ಎಂದು ನೋಡದೆಯೇ ಸರಕಾರ 1,100 ರೂಪಾಯಿಯನ್ನು ನೀಡುತ್ತದೆ (ದಿ ಹಿಂದೂ 2014 ನವಂಬರ್ 13 ). ಯಾಕೆ ಈ ಅಸಮಾನತೆ, ಲಿಂಗ ತಾರತಮ್ಯ? ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆಗಳ ಬಗ್ಗೆ ಧಾರಾಳ ಮಾತುಗಳು ಕೇಳಿ ಬರುತ್ತಿರುವ ಈ ದಿನಗಳಲ್ಲೂ ಪುರುಷರಿಗೆ 1,100 ರೂಪಾಯಿ ಮತ್ತು ಮಹಿಳೆಯರಿಗೆ 600 ರೂಪಾಯಿ ಎಂದು ನಿಗದಿಪಡಿಸಿರುವ ಔಚಿತ್ಯವೇಕೆ ಪ್ರಶ್ನೆಗೀಡಾಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆಯಲ್ಲಿ ಲಿಂಗ ಸಮಾನತೆಗಾಗಿ ಎಲ್ಲೂ ಒತ್ತಾಯಗಳು ಕೇಳಿ ಬರುತ್ತಿಲ್ಲವೇಕೆ? ‘ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಗಾಗುವುದೇ ಬೇಡ, ಗರ್ಭಧರಿಸುವುದರಿಂದ ವಿನಾಯಿತಿ ಪಡೆದಿರುವ ಪುರುಷರೇ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲಿ’ ಎಂಬ ಕೂಗೇಕೆ ಮೊಳಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವವರು ಗ್ರಾವಿೂಣ ಪ್ರದೇಶದ ಇಂಗ್ಲಿಷು, ಆಧುನಿಕತೆ, ಥಳಕು-ಬಳಕು ಗೊತ್ತಿಲ್ಲದ ಬಡ ಮಹಿಳೆಯರು ಎಂಬುದೇ ಈ ಮೌನಕ್ಕೆ ಕಾರಣವೇ ಅಥವಾ ಇದರ ಹಿಂದೆ ಇನ್ನೇನಾದರೂ ಉದ್ದೇಶಗಳಿವೆಯೇ? ಒಂದೋ ಸಂತಾನಹರಣ ಚಿಕಿತ್ಸೆಯೇ ರದ್ದುಗೊಳ್ಳಬೇಕು ಅಥವಾ ಇದರಲ್ಲಿ ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಒತ್ತಾಯಗಳು ಛತ್ತೀಸ್‍ಗಢದ ಸಾಮೂಹಿಕ ಹತ್ಯೆಯ ಬಳಿಕವೂ ಈವರೆಗೂ ಕೇಳಿ ಬಂದಿಲ್ಲವಲ್ಲ, ಯಾಕಾಗಿ? ಲಿಂಗ ಸಮಾನತೆಯ ಕೂಗುಗಳೂ ಸೆಲೆಕ್ಟಿವ್ ಆಗುತ್ತಿವೆಯೇ? ಹೆಣ್ಣು-ಗಂಡಿನ ನಡುವೆ ಶಿಕ್ಷಣ, ಉದ್ಯೋಗ, ಆಡಳಿತ ಸಹಿತ ಯಾವುದರಲ್ಲೂ ಲಿಂಗ ತಾರತಮ್ಯ ಸಲ್ಲದು ಎಂಬ ವಾದಗಳೆಲ್ಲವೂ ದಶಕಗಳಿಂದ ಜೀವಂತವಿರುವ ಈ ತಾರತಮ್ಯವನ್ನು ನಿರ್ಲಕ್ಷಿಸಿರುವುದೇಕೆ? ಅಲ್ಲದೇ, 2003ರಿಂದ 12ರ ನಡುವೆ ಸಂತಾನಹರಣ ಚಿಕಿತ್ಸೆಗೊಳಗಾದವರಲ್ಲಿ 1,434 ಮಂದಿ ಸಾವಿಗೀಡಾಗಿದ್ದಾರೆ. ಆದ್ದರಿಂದಲೇ ಸಂತಾನಹರಣ ಚಿಕಿತ್ಸೆ ಎಷ್ಟು ಸುರಕ್ಷಿತ ಎಂಬುದು ಚರ್ಚಾರ್ಹವೆನಿಸುವುದು. ಆದರೆ ಈ ಬಗ್ಗೆ ಎಲ್ಲೂ ಚರ್ಚೆಗಳೇ ಆಗುತ್ತಿಲ್ಲ. ವರ್ಷಂಪ್ರತಿ ಲಕ್ಷಾಂತರ ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಮತ್ತು ಇವರಲ್ಲಿ ದೊಡ್ಡದೊಂದು ಸಂಖ್ಯೆಯನ್ನು ಬಲವಂತ, ಆಮಿಷಗಳಿಂದ ಚಿಕಿತ್ಸಾ ಕೊಠಡಿಗೆ ಕರೆ ತರಲಾಗುತ್ತದೆ ಎಂಬುದು ಗೊತ್ತಿದ್ದೂ ಅದು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣವಾಗಿ ಈಗಲೂ ಗುರುತಿಸಿಕೊಳ್ಳುತ್ತಿಲ್ಲ. ಬಿಹಾರದ ಅರಾರಿಯ ಜಿಲ್ಲೆಯ ಶಾಲಾ ಕಟ್ಟಡದಲ್ಲಿ ಎರಡು ಗಂಟೆಯೊಳಗೆ 53 ಮಂದಿಯ ಸಂತಾನ ಹರಣ ಚಿಕಿತ್ಸೆ ನಡೆಸಿದ ಬಗ್ಗೆ ಮತ್ತು ಅವರನ್ನು ನೆಲದಲ್ಲಿ ಮಲಗಿಸಿದುದರ ಬಗ್ಗೆ 2012 ಎಪ್ರಿಲ್‍ನಲ್ಲಿ ಸುಪ್ರೀಮ್ ಕೋರ್ಟಿಗೆ ದೂರನ್ನು ಸಲ್ಲಿಸಲಾಗಿತ್ತು. ಆ ಚಿಕಿತ್ಸೆಯ ಕುರಿತಂತೆ ವೀಡಿಯೋಗಳೂ ಬಿಡುಗಡೆಯಾಗಿದ್ದುವು. ಆ 53 ಮಂದಿ ಮಹಿಳೆಯರನ್ನು ಬೆದರಿಕೆ ಹಾಕಿ ಬಲವಂತದಿಂದ ಶಾಲಾ ಕಟ್ಟಡದೊಳಕ್ಕೆ ಕರೆ ತರಲಾಗಿತ್ತು ಮತ್ತು ಟಾರ್ಚ್‍ಲೈಟ್ ಮೂಲಕ ಚಿಕಿತ್ಸೆ ನಡೆಸಲಾಗಿತ್ತು ಎಂದು ದೇವಿಕಾ ಬಿಸ್ವಾಸ್ ಎಂಬವರು ಕೋರ್ಟಿನಲ್ಲಿ ಹೇಳಿಕೆಯಿತ್ತಿದ್ದರು. ಈ ಬಗ್ಗೆ ಎರಡು ತಿಂಗಳ ಒಳಗೆ ಉತ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಮ್ ಕೋರ್ಟ್ ಆದೇಶವನ್ನೂ ನೀಡಿತ್ತು. ಸಂತಾನಹರಣ ಚಿಕಿತ್ಸೆಗೆ ಒಳಗಾಗದಿದ್ದರೆ ರೇಶನ್ ಕಾರ್ಡ್ ಸಹಿತ ಸರಕಾರಿ ಸೌಲಭ್ಯಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರ ಭಾರತದಲ್ಲಿ ಮುಖ್ಯವಾಗಿ ಆದಿವಾಸಿ, ಬುಡಕಟ್ಟು ಜನಾಂಗಗಳ ಮಹಿಳೆಯರನ್ನು ಬೆದರಿಸಲಾಗುತ್ತದೆ ಎಂಬ ವರದಿಗಳೂ ಈ ಹಿಂದೆ ಬಂದಿದ್ದುವು. ಕಾರ್, ಫ್ರೀಜರ್‍ಗಳ ಆಮಿಷ ಒಡ್ಡಿದ ಪ್ರಕರಣಗಳೂ ಧಾರಾಳ ಇವೆ. ಮಾತ್ರವಲ್ಲ, ಒಂದು ವರ್ಷದಲ್ಲಿ ಇಷ್ಟು ಸಂಖ್ಯೆಯ ಸಂತಾನ ಹರಣ ಚಿಕಿತ್ಸೆ ನಡೆಸಬೇಕು ಎಂಬ ಗುರಿಯನ್ನು ಆರೋಗ್ಯ ಅಧಿಕಾರಿಗಳಿಗೆ ನಿಗದಿಪಡಿಸಲಾಗುತ್ತದೆ ಮತ್ತು ಗುರಿ ಮುಟ್ಟದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆಯನ್ನೂ ಹಾಕಲಾಗುತ್ತದೆ ಎಂದು 2013 ಜೂನ್ 20ರಂದು ಆ್ಯಂಡ್ರ್ಯೂ ಮೆಕ್‍ಸ್ಕಿಲ್ ಎಂಬವರು, ‘ಇನ್‍ಸೈಡ್ ಇಂಡಿಯಾಸ್ ಸ್ಟಿರಿಲೈಸೇಶನ್ ಕ್ಯಾಂಪ್’ ಎಂಬ ಲೇಖನದಲ್ಲಿ ಗುಜರಾತನ್ನು ಉಲ್ಲೇಖಿಸಿ ಬರೆದಿದ್ದರು. ಆದರೆ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಗಂಭೀರ ಚರ್ಚೆ, ಅಧ್ಯಯನಕ್ಕೆ ಒಳಪಟ್ಟೇ ಇಲ್ಲ. ಕಾರಣವೇನು? ಈ ಚಿಕಿತ್ಸೆಗೆ ಒಳಗಾಗುವವರಲ್ಲಿ ಬಡವರೇ ಹೆಚ್ಚಿರುವುದರಿಂದ ಈ ಎಲ್ಲ ವಿಷಯಗಳು ಚರ್ಚೆಗೆ ಬಂದಿಲ್ಲವೋ ಅಥವಾ ಆ ಬಗ್ಗೆ ಚರ್ಚಿಸದಂತೆ ತಡೆಯುವ ವ್ಯವಸ್ಥಿತ ಹುನ್ನಾರ ಇದೆಯೋ? ಬಡವರ ಮಕ್ಕಳನ್ನು ಆಮಿಷವೊಡ್ಡಿ ಬಾವಿಗೆ ದೂಡುವ ವ್ಯವಸ್ಥಿತ ವಿಧಾನವಾಗಿರ ಬಹುದೇ ಈ ಸಂತಾನಹರಣ ಚಿಕಿತ್ಸೆ?
   ಜನಸಂಖ್ಯಾ ಸ್ಫೋಟ ಎಂಬ ಭೀತಿಕಾರಕ ಪದ ಸೃಷ್ಟಿಯಾದದ್ದು ಬಹುತೇಕ 19ನೇ ಶತಮಾನದಲ್ಲಿ. ಜನಸಂಖ್ಯೆಯ ಹೆಚ್ಚಳದಿಂದಾಗುವ ತೊಂದರೆಗಳ ಬಗ್ಗೆ ಬರಹ, ಡಾಕ್ಯುಮೆಂಟರಿಗಳು 1960ರಲ್ಲಿ ಬರತೊಡಗಿದುವು. ಮುಖ್ಯವಾಗಿ ಆಹಾರದ ಕೊರತೆಯು ಈ ಜಗತ್ತನ್ನು ತೀವ್ರವಾಗಿ ಕಾಡಲಿದೆ ಎಂಬ ಪ್ರಚಾರವನ್ನು ನಡೆಸಲಾಯಿತು. ಈ ವಾದಕ್ಕೆ ರೆವರೆಂಡ್ ಥಾಮಸ್ ಮುಲ್ತಸ್ ಎಂಬವರ ಚಿಂತನೆಗಳನ್ನೇ ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಾಗಿತ್ತು. ಜನಸಂಖ್ಯೆಯನ್ನು ಅಪಾಯವಾಗಿ ಚಿತ್ರಿಸುವ ಚಿಂತನೆಗಳಿಗೆ ಇವತ್ತಿಗೂ ಆಧಾರ ಥಾಮಸ್‍ರ ಅಭಿಪ್ರಾಯಗಳೇ. ‘ಜನನ ಪ್ರಮಾಣವು ಆಹಾರ ಉತ್ಪಾದನಾ ಪ್ರಮಾಣಕ್ಕಿಂತ ಅಧಿಕವಾಗಿದೆ’ ಎಂದು ಥಾಮಸ್ ಹೇಳಿದ್ದ. ಆದರೆ ಹಸಿರು ಕ್ರಾಂತಿಯು ಥಾಮಸ್‍ರ ಅಭಿಪ್ರಾಯವನ್ನು ಸುಳ್ಳಾಗಿಸಿದಾಗ (ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾದಾಗ) ಪಾಶ್ಚಾತ್ಯ ಜಗತ್ತು ಹೊಸ ಭೀತಿಯನ್ನು ಅದಕ್ಕೆ ಸೇರಿಸಿದುವು. ಅಧಿಕ ಜನಸಂಖ್ಯೆಯು ಪರಿಸರ ಅಸಮತೋಲನೆ, ಅಭಿವೃದ್ಧಿ ಕುಸಿತ ಮತ್ತು ರಾಜಕೀಯ ಅನಿಶ್ಚಿತತೆಗೆ ಕಾರಣವಾಗಬಲ್ಲುದು ಎಂದು ಅವು ಅಭಿಪ್ರಾಯಪಟ್ಟವು. ಇದಕ್ಕೆ ಪೂರಕವಾಗಿ ಅಮೇರಿಕ, ಬ್ರಿಟನ್, ಜಪಾನ್, ಸ್ವೀಡನ್‍ಗಳು ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳಿಗೆ ನೆರವನ್ನು ನೀಡತೊಡಗಿದುವು. ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಅಮೇರಿಕದ ಫೋರ್ಡ್, ರಾಕ್‍ಫೆಲ್ಲರ್ ಫೌಂಡೇಶನ್‍ಗಳು ಸಂತಾನ ನಿಯಂತ್ರಣದ ಅಗತ್ಯ, ಅನಿವಾರ್ಯತೆಗಳ ಬಗ್ಗೆ ಭಾಷಣ ಬಿಗಿಯತೊಡಗಿದುವು. ಅಮೇರಿಕದ ಜೀವಶಾಸ್ತ್ರಜ್ಞ ಪೌಲ್ ಎಹ್‍ರಿಚ್‍ರು ‘ಪಾಪ್ಯುಲೇಶನ್ ಬಾಂಬ್' ಎಂಬ ಬಹು ಪ್ರಸಿದ್ಧ ಕೃತಿಯನ್ನು 1968ರಲ್ಲಿ ಬರೆದರು.ಜನಸಂಖ್ಯೆಯ ಹೆಚ್ಚಳವು ಸಂಪತ್ತಿನ ಸವೆತಕ್ಕೆ ಮತ್ತು ಕ್ಯಾಪಿಟಾಲಿಸಮ್ ನ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂಬುದು ಪಾಶ್ಚಾತ್ಯರ ಭಯವಾಗಿತ್ತು. ಹೀಗೆ ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳ ಮೇಲೆ ಪಾಶ್ಚಾತ್ಯ ಜಗತ್ತಿನ ಒತ್ತಡಗಳು ಹೆಚ್ಚುತ್ತಾ ಇದ್ದ ಸಂದರ್ಭದಲ್ಲೇ ಭಾರತದಲ್ಲಿ ತುರ್ತು ಸ್ಥಿತಿ ಘೋಷಣೆಯಾದದ್ದು. ಬಹುಶಃ ಈ ತುರ್ತುಸ್ಥಿತಿಗೂ ಪಾಶ್ಚಾತ್ಯ ಜಗತ್ತಿನ ಒತ್ತಡಗಳಿಗೂ ಪರಸ್ಪರ ಸಂಬಂಧ ಇರಬಹುದೇ ಎಂಬ ಅನುಮಾನ ಈಗಲೂ ಇದೆ. 1975-77ರ ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ಮತ್ತು ಮಗ ಸಂಜಯ್ ಗಾಂಧಿಯವರು ಅತ್ಯಂತ ಮುತುವರ್ಜಿಯಿಂದ ಜಾರಿಗೆ ತಂದದ್ದು ಸಂತಾನ ನಿಯಂತ್ರಣ ಕಾನೂನನ್ನು. ಮುಖ್ಯವಾಗಿ ಪುರುಷರನ್ನು ಬೀದಿಯಿಂದ ಬಲವಂತದಿಂದ ಎತ್ತಿಕೊಂಡು ಹೋಗಿ ವ್ಯಾಸೆಕ್ಟಮಿಗೆ ಗುರಿಪಡಿಸಲಾಯಿತು. ತುರ್ತು ಸ್ಥಿತಿಯ ಎರಡು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಮಂದಿಯ ಮೇಲೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ಈ ದಿಟ್ಟ ಕ್ರಮಕ್ಕಾಗಿ ವಿಶ್ವಬ್ಯಾಂಕ್‍ನ ಅಧ್ಯಕ್ಷ ರಾಬರ್ಟ್ ಮೆಕ್‍ನಾಮರ್ ಅವರು ಇಂದಿರಾ ಗಾಂಧಿಯವರನ್ನು ಅಭಿನಂದಿಸಿದ್ದರು.
   "ತುರ್ತುಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಲಾದ ಅತಿ ಅಪಾಯಕಾರಿ ಪ್ರಯೋಗಗಳಲ್ಲಿ ಬಲವಂತದ ಸಂತಾನ ಹರಣ ಚಿಕಿತ್ಸೆಯೂ ಒಂದು. ಜನಸಂಖ್ಯೆಯು ನಿಯಂತ್ರಣ ವಿೂರಿ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಇಂಟರ್‍ನ್ಯಾಶನಲ್ ಮಾನಿಟರಿ ಫಂಡ್ (IMF) ಹಾಗೂ ವಿಶ್ವಬ್ಯಾಂಕ್‍ಗಳು ಭಾರತವನ್ನು ಆಗಾಗ ಎಚ್ಚರಿಸುತ್ತಲೇ ಇತ್ತು. ಆದರೆ ಭಾರತದ ರಾಜಕೀಯ ವಾತಾ ವರಣದಲ್ಲಿ ಜನನ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವುದು ಸುಲಭದ್ದಾಗಿರಲಿಲ್ಲ. ಹಾಗೊಂದು ವೇಳೆ ಜಾರಿಗೊಳಿಸಲು ಪ್ರಯತ್ನಿಸಿರುತ್ತಿದ್ದರೆ ಅಧಿಕಾರಕ್ಕೆ ಕುತ್ತು ಬರುವ ಸಾಧ್ಯತೆಯೂ ಇತ್ತು. ಹೀಗಿರುತ್ತಾ ತುರ್ತುಸ್ಥಿತಿ ಘೋಷಣೆಯಾದಾಗ IMF ಮತ್ತು ವಿಶ್ವಬ್ಯಾಂಕ್‍ಗಳು ಚುರುಕಾದುವು. ತನ್ನ ಬೇಡಿಕೆಯನ್ನು ಜಾರಿಗೊಳಿಸುವಂತೆ ಅವು ಇಂದಿರಾರ ಮೇಲೆ ಒತ್ತಡ ಹೇರಿದುವು. ಪಶ್ಚಿಮದ ಧನಿಕರನ್ನು ತೃಪ್ತಿಪಡಿಸುವುದಕ್ಕಾಗಿ ಇಂದಿರಾ ಮತ್ತು ಸಂಜಯ್ ಗಾಂಧಿಯವರು ಆ ಸಂದರ್ಭವನ್ನು ಬಳಸಿಕೊಂಡರು" ಎಂದು ‘ದಿ ಸಂಜಯ್ ಸ್ಟೋರಿ’ ಎಂಬ ವಿನೋದ್ ಮೆಹ್ತಾರ ಕೃತಿಯನ್ನು ವಿಮರ್ಶಿಸುತ್ತಾ ಡೇವಿಡ್ ಫ್ರಮ್ ಬರೆದಿದ್ದಾರೆ.
   ನಿಜವಾಗಿ, ಜನಸಂಖ್ಯೆಗೂ ಜನರ ಸಾಕ್ಷರತೆ, ಆರ್ಥಿಕ ಸ್ಥಿತಿಗೂ ಹತ್ತಿರದ ನಂಟಿದೆ. ಅತ್ಯಂತ ಹೆಚ್ಚು ಸಾಕ್ಷರರಿರುವ ಕೇರಳದಲ್ಲಿ ಅತಿ ಕಡಿಮೆ ಜನನ ಅನುಪಾತವಿದೆ. ಒಂದು ವೇಳೆ ಈ ಸತ್ಯವನ್ನು ನಮ್ಮನ್ನಾಳುವವರು ಒಪ್ಪಿಕೊಂಡರೆ ಸಂತಾನ ನಿಯಂತ್ರಣ ಚಿಕಿತ್ಸೆಗೆ ಬದಲಿ ದಾರಿಯೊಂದು ಅವರೆದುರು ತೆರೆದುಕೊಳ್ಳುತ್ತದೆ. ಜನರಿಗೆ ಶಿಕ್ಷಣವನ್ನು ಮತ್ತು ಆರ್ಥಿಕವಾಗಿ ಚೇತರಿಕೆಯನ್ನು ಕೊಡಲು ಆಡಳಿತಗಾರರು ಶಕ್ತವಾದರೆ ಆ ಬಳಿಕ ಅಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ದುರಂತ ಏನೆಂದರೆ, ನಮ್ಮ ಸರಕಾರಗಳು ಬಡವರಿಗೆ ಹೊಟ್ಟೆ ತುಂಬುವಷ್ಟು ಊಟ ಕೊಡುವುದಿಲ್ಲ. ಅಕ್ಷರ ಕಲಿಕೆಗೆ ಏರ್ಪಾಡು ಮಾಡುವುದಿಲ್ಲ. ಅದರ ಬದಲು ಬಡವರ ಹೊಟ್ಟೆಯಲ್ಲಿರುವ ಮಕ್ಕಳನ್ನು ಬಲವಂತದಿಂದ ಕಸಿಯಲು ಪ್ರಯತ್ನಿಸುತ್ತದೆ. ನಿಜವಾಗಿ ಇದು ಜನರಿಗೆ ವ್ಯವಸ್ಥೆ ಮಾಡುವ ಕಡು ದ್ರೋಹ. ಯಾಕೆಂದರೆ, ಮೂಲಭೂತ ಅಗತ್ಯಗಳಾದ ಅಕ್ಷರ, ಆಹಾರ, ಆರೋಗ್ಯವನ್ನು ನೀಡುವ ಹೊಣೆಗಾರಿಕೆ ಸರಕಾರದ್ದು. ಆ ಹೊಣೆಗಾರಿಕೆಯಲ್ಲಿ ಸರಕಾರ ವೈಫಲ್ಯ ಕಂಡಾಗ ಅದರ ಅಡ್ಡ ಪರಿಣಾಮಗಳು ಸಮಾಜದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಆ ಅಡ್ಡ ಪರಿಣಾಮಗಳಿಗೆ ಹೊಟ್ಟೆ ಸೀಳುವುದು ಪರಿಹಾರ ಅಲ್ಲ. ಅದು ಕ್ರೌರ್ಯ. ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಅಸಮರ್ಥವಾದ ಸರಕಾರವೊಂದರಿಂದ ಮಾತ್ರ ಇಂಥ ಕ್ರೌರ್ಯಗಳನ್ನು ಪರಿಹಾರವಾಗಿ ಸೂಚಿಸಲು ಸಾಧ್ಯ. ಸಂತಾನ ನಿಯಂತ್ರಣ ಚಿಕಿತ್ಸೆ ಎಂಬುದು ವ್ಯವಸ್ಥೆಯ ಅಸಮರ್ಥತೆಗೆ ಹುಟ್ಟಿಕೊಂಡ ಕೂಸೇ ಹೊರತು ಅದು ಪರಿಹಾರ ಅಲ್ಲ. ಇದನ್ನು ಪರಿಹಾರವಾಗಿ ಪರಿಗಣಿಸಿದ್ದಕ್ಕಾಗಿ ಚೀನಾ ಇವತ್ತು ಪಶ್ಚಾತ್ತಾಪ ಪಡುತ್ತಿದೆ. ಜನರ ಜೀವನ ಮಟ್ಟವನ್ನು ಸುಧಾರಿಸುವ ಬದಲು ಜನರ ಹೊಟ್ಟೆ ಸೀಳುವುದನ್ನೇ ಪರಿಹಾರವೆಂದು ಹೇಳಿಕೊಟ್ಟ ಪಾಶ್ಚಾತ್ಯ ಚಿಂತನೆಗಳನ್ನು ಒಪ್ಪಿಕೊಂಡದ್ದಕ್ಕಾಗಿ ಅದು ಇವತ್ತು ಭಾರೀ ಬೆಲೆ ತೆರುತ್ತಿದೆ. ಆದರೂ ಭಾರತದಲ್ಲಿ ಈ ಕುರಿತಂತೆ ಬಲವಾದ ಜಾಗೃತಿ ಕಾರ್ಯಕ್ರಮಗಳೇನೂ ನಡೆಯುತ್ತಿಲ್ಲ. ಸಂತಾನವನ್ನೇ ಅಪಾಯಕಾರಿಯೆಂದು ಬಿಂಬಿಸುವ ಪ್ರಯತ್ನದಲ್ಲಿ ಇವತ್ತೂ ವ್ಯವಸ್ಥೆ ತಲ್ಲೀನವಾಗಿದೆ. ಇದನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಬೇಕಾದ ಮಾಧ್ಯಮಗಳು ಅನುಮಾನ ಮೂಡಿಸುವ ರೀತಿಯಲ್ಲಿ ಮೌನವಾಗಿವೆ. ಜಾಗತಿಕವಾಗಿ ನಡೆಯುವ ಒಟ್ಟು ಸಂತಾನ ನಿಯಂತ್ರಣ ಚಿಕಿತ್ಸೆಯಲ್ಲಿ ಶೇ. 37ರಷ್ಟು ಚಿಕಿತ್ಸೆಗಳು ಭಾರತದಲ್ಲೇ ನಡೆಯುತ್ತಿದ್ದರೂ ಮತ್ತು ಈ ಚಿಕಿತ್ಸೆಗೆ ಒಳಗಾಗುವವರಲ್ಲಿ 99%ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ ಆಗಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಲಿಂಗ ತಾರತಮ್ಯದ ಮಾತಾಡುತ್ತಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಹೆಸರಲ್ಲಿ ಪ್ರತಿಭಟನೆಗಳೂ ಕಾಣಿಸಿಕೊಳ್ಳುತ್ತಿಲ್ಲ.
  ಯಾಕೆ ಹೀಗೆ?

No comments:

Post a Comment