Friday, July 26, 2024

ಆ ಇಬ್ಬರಲ್ಲಿ ಅಲ್ಲಾಹನು ಇಷ್ಟಪಡುವುದು ಯಾರನ್ನು?





ಪವಿತ್ರ ಕುರ್‌ಆನಿನ ಈ ವಚನಗಳನ್ನೊಮ್ಮೆ ಪರಿಶೀಲಿಸಿ-

1. ಓ ಆದಮರ ಸಂತತಿಯವರೇ, ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿ ಮೀರುವವರನ್ನು ಮೆಚ್ಚುವುದಿಲ್ಲ. (7:31)
2. ನಿಮಗೆ ಇವು ನಿಷಿದ್ಧಗೊಳಿಸಲ್ಪಟ್ಟಿವೆ- ಶವ, ರಕ್ತ, ಹಂದಿಮಾಂಸ, ಅಲ್ಲಾಹನ ಹೊರತು ಇತರರ ಹೆಸರಲ್ಲಿ ದಿಬ್ಹ್ ಮಾಡಲ್ಪಟ್ಟ ಪ್ರಾಣಿ.  ಉಸಿರುಗಟ್ಟಿ ಅಥವಾ ಪೆಟ್ಟು ತಾಗಿ ಅಥವಾ ಎತ್ತರದಿಂದ ಬಿದ್ದು ಅಥವಾ ಘರ್ಷಿಸಲ್ಪಟ್ಟು ಅಥವಾ ಕ್ರೂರಮೃಗದಿಂದ ಹರಿದು ಹಾಕಲ್ಪಟ್ಟು ಸತ್ತ  ಪ್ರಾಣಿ. ಆದರೆ ನೀವು ಜೀವಂತ ಪಡೆದು ದಿಬ್ಹ್ ಮಾಡಿದ ಪ್ರಾಣಿಯು ಇದಕ್ಕೆ ಹೊರತಾಗಿದೆ. (5:3)
3. ನಿಮಗೆ ಎಲ್ಲ ಶುದ್ಧ ವಸ್ತುಗಳೂ ಧರ್ಮಸಮ್ಮತಗೊಳಿಸಲ್ಪಟ್ಟಿವೆ. (5:4)
4. ಇಂದು ನಿಮಗೆ ಸಕಲ ಶುದ್ಧ ವಸ್ತುಗಳೂ ಧರ್ಮಸಮ್ಮತ ಮಾಡಲ್ಪಟ್ಟಿವೆ. (5:5)
5. ಅಲ್ಲಾಹನ ಕಡೆಯಿಂದ ನಿಮ್ಮ ಮೇಲೆ ನಿಷೇಧವೇನಾದರೂ ಇದ್ದರೆ ಅದಿಷ್ಟೇ- ಶವವನ್ನು ತಿನ್ನಬೇಡಿರಿ. ನೆತ್ತರು ಮತ್ತು ಹಂದಿಯ ಮಾಂಸವ ನ್ನು ವರ್ಜಿಸಿರಿ. ಮತ್ತು ಅಲ್ಲಾಹನ ಹೊರತು ಇತರರ ಹೆಸರು ಉಚ್ಛರಿಸಲಾದ ವಸ್ತುಗಳನ್ನು ತಿನ್ನಬೇಡಿರಿ. ಆದರೆ ವಿವಶಾವಸ್ಥೆಯಲ್ಲಿದ್ದು,  ನಿಯಮೋಲ್ಲಂಘನೆಯ ಉದ್ದೇಶ ವಿಲ್ಲದೆಯೂ ಮಿತಿ ಮೀರದೆಯೂ ಅವುಗಳಿಂದೇನಾದರೂ ತಿಂದುಬಿಟ್ಟರೆ ದೋಷವಿಲ್ಲ. (2: 173)
6. ನಾವು ನೀಡಿರುವ ಶುದ್ಧ ಆಹಾರವನ್ನೇ ಉಣ್ಣಿರಿ. ಮತ್ತು ಅದನ್ನುಂಡು ವಿದ್ರೋಹ ಮಾಡದಿರಿ. (25:8)
7. ನಿಮ್ಮನ್ನು ನೀವೇ ವಿನಾಶಕ್ಕೆ ಒಳಪಡಿಸಿಕೊಳ್ಳಬೇಡಿರಿ. (2:195)
8. ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ. (20:81)
9. ಓ ಸತ್ಯವಿಶ್ವಾಸಿಗಳೇ, ಮದ್ಯವನ್ನು ವರ್ಜಿಸಿರಿ. (5:90)
10. ಹೇ ಜನರೇ, ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧ ವಸ್ತುಗಳನ್ನು ನೀವು ಉಣ್ಣಿರಿ. (2:168)

1. ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ ಹೀಗೆ ವಿವರಿಸುತ್ತಾರೆ-

ಪ್ರವಾದಿ(ಸ) ಹೇಳಿದರು, ಓ ಅಬ್ದುಲ್ಲಾ, ದಿನವಿಡೀ ಉಪವಾಸವಿದ್ದು, ರಾತ್ರಿಯಿಡೀ ನಮಾಝï‌ನಲ್ಲಿ ಕಳೆಯಬೇಡಿ. ಕೆಲವೊಮ್ಮೆ ಉಪವಾಸ  ಆಚರಿಸಿ ಮತ್ತು ಕೆಲವೊಮ್ಮೆ ಬಿಟ್ಟುಬಿಡಿ. ರಾತ್ರಿಯಲ್ಲಿ ನಮಾಝನ್ನೂ ಮಾಡಿ ಮತ್ತು ನಿದ್ದೆಯನ್ನೂ ಮಾಡಿ. ನಿಮ್ಮ ಮೇಲೆ ನಿಮ್ಮ ದೇಹಕ್ಕೆ ಹಕ್ಕಿದೆ.  ಕಣ್ಣುಗಳಿಗೆ ಹಕ್ಕಿದೆ ಮತ್ತು ಪತ್ನಿಗೆ ಹಕ್ಕಿದೆ.

2. ಉಸಾಮಾ ಬಿನ್ ಶರೀಕ್ ಹೇಳುತ್ತಾರೆ-
ಪ್ರವಾದಿಯವರ(ಸ) ಬಳಿ ನಾನಿದ್ದೆ. ಆಗ ಅರಬರಾದ ಕೆಲವರು ಬಂದು ಹೀಗೆ ಪ್ರಶ್ನಿಸಿದರು, ಓ ಪ್ರವಾದಿಯವರೇ, ಯಾವುದೇ ಕಾಯಿಲೆಗೆ  ನಾವು ಚಿಕಿತ್ಸೆ ಮಾಡಬೇಕೇ?
ಪ್ರವಾದಿ(ಸ) ಹೇಳಿದರು, ಹೌದು, ಔಷಧವನ್ನು ತೆಗೆದುಕೊಳ್ಳ ಬೇಕು. ಅಲ್ಲಾಹನು ಎಲ್ಲಕ್ಕೂ ಔಷಧಿಯನ್ನು ಸೃಷ್ಟಿಸಿದ್ದಾನೆ. ಆದರೆ ಒಂದರ  ಹೊರತು. ಆಗ ಆ ಅರಬರು ಪ್ರಶ್ನಿಸಿದರು, ಏನದು? ಪ್ರವಾದಿ(ಸ) ಹೇಳಿದರು, ‘ವೃದ್ಧಾಪ್ಯ’.

3. ಪ್ರವಾದಿ(ಸ) ಹೇಳಿದರು, ಹೆಚ್ಚಿನ ಜನರು ಪ್ರಶಂಸಿಸದ ಎರಡು ಅನುಗ್ರಹಗಳಿವೆ. 1. ಆರೋಗ್ಯ 2. ಸಮಯ.

4. ಪ್ರವಾದಿ(ಸ) ಹೇಳಿದರು,
ಹೊಟ್ಟೆಯ ಮೂರರಲ್ಲೊಂದು  ಭಾಗವನ್ನು ಆಹಾರಕ್ಕಾಗಿ ಮೀಸಲಿಡಿ. ಮೂರರಲ್ಲೊಂದು  ಭಾಗವನ್ನು ನೀರಿಗೆ ಮತ್ತು ಮೂರರಲ್ಲೊಂದು  ಭಾಗವನ್ನು ಸುಗಮ ಉಸಿರಾಟಕ್ಕಾಗಿ ಮೀಸಲಿಡಿ.

5. ಪ್ರವಾದಿ(ಸ) ಹೇಳಿದರು,
ಒಂದು ಪ್ರದೇಶದಲ್ಲಿ ಪ್ಲೇಗ್ ಅಥವಾ ಸಾಂಕ್ರಾಮಿಕ ಕಾಯಿಲೆ ಇದೆ ಎಂದು ಗೊತ್ತಾದರೆ ಆ ಪ್ರದೇಶಕ್ಕೆ ನೀವು ಹೋಗಬಾರದು.
6. ಪ್ರವಾದಿ(ಸ) ಹೇಳಿದರು, ಓರ್ವ ಸಾಂಕ್ರಾಮಿಕ ರೋಗಿ ಆರೋಗ್ಯವಂತರ ಹತ್ತಿರದಿಂದ ಹೋಗಬಾರದು.
7. ಪ್ರವಾದಿ(ಸ) ಹೇಳಿದರು, ಸ್ವಚ್ಛತೆ ವಿಶ್ವಾಸದ ಅರ್ಧಭಾಗವಾಗಿದೆ.

ಅಂದಹಾಗೆ,
ಇಲ್ಲಿನ ಕುರ್‌ಆನ್ ಮತ್ತು ಪ್ರವಾದಿ(ಸ) ವಚನಗಳನ್ನು ಎದುರು ಹರಡಿಕೊಂಡು ಒಂದಷ್ಟು ಹೊತ್ತು ಆಲೋಚಿಸಿ. ಮನುಷ್ಯನ ಆರೋಗ್ಯಕ್ಕೆ  ಇಸ್ಲಾಮ್ ಇಷ್ಟೊಂದು ಮಹತ್ವ ಕೊಡಲು ಕಾರಣವೇನು? ಇಲ್ಲಿ ಉಲ್ಲೇಖಕ್ಕೆ ಒಳಗಾಗಿರುವ ಮತ್ತು ಒಳಗಾಗದೇ ಇರುವ ಕುರ್‌ಆನ್ ಮತ್ತು  ಹದೀಸ್‌ಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಹತ್ತು ಹಲವು ಮಾರ್ಗದರ್ಶನಗಳಿವೆ. ಹಾಗಂತ, ಆರೋಗ್ಯಕ್ಕೂ ಧರ್ಮಕ್ಕೂ ಏನು ಸಂಬಂಧ? ಯಾಕೆ  ಸಂಬಂಧ? ‘ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಮಿತಿ ಮೀರಬೇಡಿ..’ ಎಂದು ಕುರ್‌ಆನ್ ಬೋಧಿಸಿರುವುದು ಕೇವಲ ಮುಸ್ಲಿಮರಿಗಷ್ಟೇ  ಅಲ್ಲ. ‘ಓ ಆದಮರ ಸಂತತಿಯೇ’ ಎಂಬ ಪದಪ್ರಯೋಗದ ಮೂಲಕವೇ ಈ ಉಪದೇಶವನ್ನು ಮಾಡಿದೆ. ಅಂದರೆ, ಎಲ್ಲ ಮನುಷ್ಯರ  ಆರೋಗ್ಯದ ಕಾಳಜಿಯೂ ಈ ವಚನದಲ್ಲಿದೆ. ‘ಸತ್ಯ ವಿಶ್ವಾಸಿಗಳೇ, ಮದ್ಯವನ್ನು ವರ್ಜಿಸಿರಿ’ ಎಂದು ಹೇಳಿದ ಅದೇ ಕುರ್‌ಆನ್, ‘ಹೇ ಜನರೇ,  ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನೇ ಸೇವಿಸಿರಿ..’ ಎಂದು ಸಾರ್ವತ್ರಿಕ ಕರೆಯನ್ನೂ ಕೊಟ್ಟಿದೆ. ಮುಸ್ಲಿಮರಿಗಂತೂ, ಯಾವ ವಸ್ತು ಶುದ್ಧ,  ಯಾವುದು ಅಶುದ್ಧ, ಯಾವುದನ್ನು ತಿನ್ನಬಹುದು ಮತ್ತು ತಿನ್ನಬಾರದು.. ಇತ್ಯಾದಿಗಳನ್ನು ಪಟ್ಟಿ ಮಾಡಿ ಹೇಳಿದೆ. ಪ್ರವಾದಿ(ಸ) ಹೇಳಿದರು,

ಆಹಾರ ಸೇವಿಸಿದ ಬಳಿಕ ಕೈ-ಬಾಯಿ ತೊಳೆಯದ ಕಾರಣ ಯಾರಿಗಾದರೂ ಕಾಯಿಲೆ ಬಂದರೆ ಅದಕ್ಕಾಗಿ ಅವರನ್ನಲ್ಲದೇ ಇನ್ನಾರನ್ನೂ  ದೂರಬೇಡಿ. (ಅಹ್ಮದ್)

ದ್ವಿತೀಯ ಖಲೀಫ ಉಮರ್ ಹೇಳಿದರು,
ಜನರೇ, ನಿಮ್ಮ ಮಕ್ಕಳಿಗೆ ಬಿಲ್ವಿದ್ಯೆಯನ್ನು ಕಲಿಸಿ. ಹಾಗೆಯೇ, ಈಜಲು ಮತ್ತು ಕುದುರೆ ಸವಾರಿ ಮಾಡಲೂ ಕಲಿಸಿರಿ.

ನಿಜವಾಗಿ, ಆರೋಗ್ಯಕ್ಕೂ ಧರ್ಮಕ್ಕೂ ಅತೀ ನಿಕಟ ಸಂಬಂಧವಿದೆ ಅಥವಾ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಸೀನುವಾಗ ಕೈ ಅಥವಾ ಬಟ್ಟೆಯ ನ್ನು ಬಾಯಿಗಡ್ಡ ಇಡಿ ಮತ್ತು ದೊಡ್ಡ ಸದ್ದು ಬರದಂತೆ ನೋಡಿಕೊಳ್ಳಿ ಎಂದು ಪ್ರವಾದಿ(ಸ) ಹೇಳಿದ್ದಾರೆ. ಸೀನುವ ಸಂದರ್ಭದಲ್ಲಿ  ಹೊರಬಹುದಾದ ಜೊಲ್ಲು ಹನಿ ವಾತಾವರಣವನ್ನು ಸೇರಿಕೊಳ್ಳುವುದಕ್ಕೆ ಅವಕಾಶ ಇದೆ. ಒಂದುವೇಳೆ, ಸೀನಿದ ವ್ಯಕ್ತಿಯಲ್ಲಿ ಹರಡುವ ಕಾಯಿಲೆ ಇದ್ದರೆ  ಮತ್ತು ಹನಿ ವಾತಾವರಣದಲ್ಲಿ ಸೇರಿಕೊಂಡರೆ ಅದರಿಂದ ಆರೋಗ್ಯವಂತರೂ ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ. ಇದರ ಗಂಭೀರತೆ  ನಮಗೆ ಚೆನ್ನಾಗಿ ಮನದಟ್ಟಾದುದು ಕೊರೋನಾ ಅವಧಿಯಲ್ಲಿ. ಆವರೆಗೆ ಈ ಪ್ರವಾದಿ(ಸ)ರ ಸೂಚನೆಯನ್ನು ಗಂಭೀರಿರವಾಗಿ ಪಾಲಿಸದವರೂ  ಕೊರೋನಾ ಅವಧಿಯಲ್ಲಿ ಅತ್ಯಂತ ನಿಷ್ಠೆಯಿಂದ ಈ ಕ್ರಮವನ್ನು ಅನುಸರಿಸಿದರು. ಮಾಸ್ಕ್ ಬದುಕಿನ ಭಾಗವೇ ಆಗಿಹೋಯಿತು. ಕ್ವಾರಂಟೈನ್,  ಕಂಟೋನ್ಮೆಂಟ್  ಮುಂತಾದ ಹೊಸ ಹೊಸ ಪದಗಳ ಮೂಲಕ ಜಾರಿಗೊಂಡ ಕ್ರಮಗಳೆಲ್ಲ ಪ್ರವಾದಿ(ಸ) ಸೂಚಿಸಿದ ಮಾರ್ಗದರ್ಶಿ ಸೂತ್ರಗಳೇ  ಆಗಿದ್ದುವು. ‘ಸಾಂಕ್ರಾಮಿಕ ರೋಗಿಗಳು ಇರುವಲ್ಲೇ  ಇರಬೇಕು ಮತ್ತು ಅದಿಲ್ಲದ ಪ್ರದೇಶದ ಮಂದಿ ಸಾಂಕ್ರಾಮಿಕ ಕಾಯಿಲೆ ಇರುವ ಪ್ರದೇಶಕ್ಕೆ  ಹೋಗಬಾರದು..’ ಎಂಬುದನ್ನೇ ಕೊರೋನಾ ಕಾಲದ ಸರ್ಕಾರಿ ನಿರ್ದೇಶನಗಳು ಪಾಲಿಸಿದುವು. ಜನರನ್ನು ತಂತಮ್ಮ ಮನೆಗಳಿಗೇ  ಸೀಮಿತಗೊಳಿಸಿತು. ರಸ್ತೆಗಳು ಖಾಲಿಯಾದುವು. ಕೊರೋನಾ ಪೀಡಿತರನ್ನು ಆರೋಗ್ಯವಂತರಿಂದ  ಬೇರ್ಪಡಿಸಲಾಯಿತು. ಹಾಗಂತ,

ಇದೊಂದು  ಉದಾಹರಣೆ ಅಷ್ಟೇ. ಸಾಮಾನ್ಯವಾಗಿ, ಆರೋಗ್ಯದ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಳ್ಳುವುದು ಅನಾರೋಗ್ಯ ಬಾಧಿಸಿದಾಗ.  ಅದಕ್ಕಿಂತ ಮೊದಲು ಮಿತಾಹಾರ, ಶುದ್ಧ ಆಹಾರ, ಸರಿಯಾದ ನಿದ್ದೆ, ವ್ಯಾಯಾಮ, ರಾತ್ರಿ ಮಲಗುವಾಗ ಹಲ್ಲುಜ್ಜುವುದು, ತಿನ್ನುವುದಕ್ಕಿಂತ  ಮೊದಲು ಕೈ ತೊಳೆಯುವುದು, ಉಪವಾಸ ಆಚರಿಸುವುದು ಇತ್ಯಾದಿಗಳನ್ನು ಗಂಭೀರವಾಗಿ ಪರಿಗಣಿಸುವವರು ಕಡಿಮೆ. ಹೊಟ್ಟೆ ತುಂಬಾ ತಿನ್ನುವುದು, ತಡರಾತ್ರಿವರೆಗೆ ಎಚ್ಚರದಿಂದಿರುವುದು ಮತ್ತು ಬೆಳಿಗ್ಗೆ ವ್ಯಾಯಾಮ ಮಾಡದಿರುವುದು ಇತ್ಯಾದಿ ತಪ್ಪು ಕ್ರಮಗಳು ಕುರ್‌ಆನ್ ಮತ್ತು  ಹದೀಸ್‌ನ ಅನು ಯಾಯಿಗಳಲ್ಲೇ  ಧಾರಾಳ ಇದೆ. ‘ಸತ್ಯವಿಶ್ವಾಸಿಗಳ ಪೈಕಿ ಆರೋಗ್ಯದಲ್ಲಿ ದುರ್ಬಲ ವ್ಯಕ್ತಿಗಿಂತ ಸಬಲ ವ್ಯಕ್ತಿ ಅಲ್ಲಾಹನಿಗೆ ಹೆಚ್ಚು ಇಷ್ಟ..’ ಎಂದು  ಪ್ರವಾದಿ(ಸ) ಹೇಳಿದ್ದಾರೆ. ಯಾಕೆ ಹೀಗೆ? ಅಲ್ಲಾಹನ ಇಷ್ಟಕ್ಕೆ ವ್ಯಕ್ತಿಯ ದೈಹಿಕ ಸಾಮರ್ಥ್ಯ ಏಕೆ ಮಾನದಂಡವಾಗುತ್ತದೆ? ದೈಹಿಕವಾಗಿ  ಅಸಮರ್ಥ ವ್ಯಕ್ತಿಗಿಂತ ದೈಹಿಕವಾಗಿ ಪ್ರಬಲ ವ್ಯಕ್ತಿಯನ್ನು ಹೀಗೆ ಎತ್ತಿ ಹೇಳಲು ಕಾರಣವೇನು? ಈ ಕುರಿತಂತೆ ನಮ್ಮನ್ನು ನಾವು ಜಿಜ್ಞಾಸೆಗೆ ಒಳ ಪಡಿಸಿದರೆ ಇದರ ಹಿಂದಿರುವ ಹಕೀಕತ್ತು ಮನವರಿಕೆ ಯಾಗುತ್ತದೆ. ಬಾಹ್ಯನೋಟಕ್ಕೆ ಸತ್ಯವಿಶ್ವಾಸಿಗಳನ್ನು ಅವರ ದೈಹಿಕ ಸಾಮರ್ಥ್ಯದ  ಆಧಾರದಲ್ಲಿ ಅಳೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಬಹುದು. ಅಲ್ಲಾಹನು ಇಬ್ಬರು ವ್ಯಕ್ತಿಗಳನ್ನು ಹೀಗೆ ವಿಭಜಿಸಿ ನೋಡುವನೇ  ಎಂದೂ ಅನಿಸಬಹುದು. ನಿಜವಾಗಿ,

ಈ ಇಬ್ಬರೂ ಸಮಪ್ರಾಯದವರಾಗಿರಬಹುದೇ ಹೊರತು ಒಬ್ಬರು ವೃದ್ಧರು ಮತ್ತು ಇನ್ನೊಬ್ಬರು ಯುವಕರು ಆಗಿರಲು ಸಾಧ್ಯವೇ ಇಲ್ಲ. ಒಂದೇ  ಪ್ರಾಯದ ಇಬ್ಬರಲ್ಲಿ ಒಬ್ಬರು ಆರೋಗ್ಯ ಸೂಕ್ಷ್ಮಗಳನ್ನು ಪಾಲಿಸುತ್ತಾ, ಶುದ್ಧ ಆಹಾರವನ್ನೇ ಸೇವಿಸುತ್ತಾ, ವ್ಯಾಯಾಮ ಇತ್ಯಾದಿ ದೇಹ ದಂಡನೆ  ಕ್ರಮಗಳನ್ನು ಅನುಸರಿಸುತ್ತಾ ದೈಹಿಕವಾಗಿ ಫಿಟ್ ಆಗಿರುವ ವ್ಯಕ್ತಿಯಾಗಿದ್ದಿರಬಹುದಾದರೆ ಇನ್ನೊಬ್ಬರು ಈ ಎಲ್ಲವನ್ನೂ ನಿರ್ಲಕ್ಷಿಸಿದ ವ್ಯಕ್ತಿ.  ಇವರಿಬ್ಬರ ಪ್ರಾಯ ಒಂದೇ ಆಗಿದ್ದರೂ ಕ್ಷಮತೆ ಒಂದೇ ಆಗಿರುವ ಸಾಧ್ಯತೆ ಇಲ್ಲ. ದೈಹಿಕವಾಗಿ ಫಿಟ್ ಆಗಿರುವ ವ್ಯಕ್ತಿ 10 ನಿಮಿಷದಲ್ಲಿ ಕ್ರಮಿಸುವ  ದಾರಿಯನ್ನು ಇನ್ನೋರ್ವ ಅಷ್ಟೇ ಸಮಯದಲ್ಲಿ ಕ್ರಮಿಸಲು ಸಾಧ್ಯವಿಲ್ಲ. ಪ್ರವಾಹ, ಭೂಕಂಪದಂಥ  ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ  ದುರಂತಗಳ ಸಂದರ್ಭದಲ್ಲಿ ಈ ಇಬ್ಬರ ಕ್ಷಮತೆಯೂ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ದೈಹಿಕವಾಗಿ ಫಿಟ್ ಇರುವ ವ್ಯಕ್ತಿ ಇಂಥ  ಸಂದರ್ಭಗಳಲ್ಲಿ ಸ್ಪಂದಿಸುವ ರೀತಿಗೂ ಇನ್ನೊಬ್ಬರು ಸ್ಪಂದಿಸುವ ರೀತಿಗೂ ದಾರಾಳ ವ್ಯತ್ಯಾಸಗಳಿರುತ್ತವೆ. ಈ ಎಲ್ಲವನ್ನೂ ಸೂಚ್ಯವಾಗಿ ಈ  ಮೇಲಿನ ಪ್ರವಾದಿ(ಸ) ವಚನ ಸೂಚಿಸುತ್ತದೆ ಎಂದೇ ಹೇಳಬಹುದು. ಅಂದಹಾಗೆ,

ಆಧುನಿಕ ಆಹಾರ ಕ್ರಮಗಳ ಅಡ್ಡಪರಿಣಾಮಗಳು ಒಂದು ಕಡೆಯಾದರೆ, ಹಗಲು ಮತ್ತು ರಾತ್ರಿಯಲ್ಲಿ ದುಡಿಯಲೇಬೇಕಾದ ಆಧುನಿಕ ಉದ್ಯೋಗ  ನೀತಿಗಳು ಇನ್ನೊಂದು ಕಡೆ. ಡೇ ಶಿಫ್ಟ್, ನೈಟ್ ಶಿಫ್ಟ್ ಎಂಬ ಪದಗಳು ಇವತ್ತು ಮಾಮೂಲಾಗಿವೆ. ಜಂಕ್‌ಫುಡ್‌ಗಳು ಬದುಕಿನ  ಭಾಗವಾಗತೊಡಗಿವೆ. ಇದರಿಂದಾಗಿ ಬದುಕಿನ ತಾಳವೂ ತಪ್ಪತೊಡಗಿದೆ. ಅಸಮರ್ಪಕ ನಿದ್ದೆ, ಅಸಮರ್ಪಕ ಆಹಾರ ಮತ್ತು ಅಸಮರ್ಪಕ  ಜೀವನ ರೀತಿಯು ದೇಹದ ಮೇಲೆ ಪರಿಣಾಮವನ್ನು ಬೀರುತ್ತಿವೆ. ಅಲ್ಲದೆ, ಹಗಲು ಕೆಲಸ ಮಾಡುವವರಲ್ಲೂ ವ್ಯಾಯಾಮದ ಬಗ್ಗೆ ಇನ್ನಿಲ್ಲದ  ಅಸಡ್ಡೆಯಿದೆ. ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತ ಕ್ಕೊಳಪಟ್ಟು ಮೃತಪಟ್ಟವರ ಪಟ್ಟಿಯನ್ನು ಕೊಡುವವರೂ ಇದ್ದಾರೆ. ಗುಟ್ಕಾ,  ಸಿಗರೇಟು ಸೇದುವವರಲ್ಲೂ ಇಂಥದ್ದೇ  ಪಟ್ಟಿಯಿರುತ್ತದೆ. ಯಾವ ಚಟವೂ ಇಲ್ಲದ ವ್ಯಕ್ತಿಗೆ ಗಂಭೀರ ಕಾಯಿಲೆ ಬಂದಿರುವುದನ್ನು ತೋರಿಸಿ  ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಜವಾಗಿ,

ವ್ಯಾಯಾಮಕ್ಕೂ ಕಾಯಿಲೆ ಬರುವುದಕ್ಕೂ ದೊಡ್ಡ ಸಂಬಂಧ  ಇಲ್ಲ. ಆಯುಷ್ಯ ಇರುವವರೆಗೆ ಆರೋಗ್ಯಪೂರ್ಣವಾಗಿ ಬದುಕು ವುದೇ  ಮುಖ್ಯವಾಗಬೇಕು. ವಿವಿಧ ಸತ್ಕರ್ಮಗಳಲ್ಲಿ ಭಾಗಿಯಾಗುವುದಕ್ಕೆ ಆರೋಗ್ಯಪೂರ್ಣ ದೇಹ ಅಗತ್ಯ. ಸರಿಯಾದ ಸಮಯದಲ್ಲಿ ಊಟ, ನಿದ್ದೆ  ಮತ್ತು ವ್ಯಾಯಾಮಗಳನ್ನು ಮಾಡುತ್ತಾ ಚಟುವಟಿಕೆಯಲ್ಲಿರುವ ವ್ಯಕ್ತಿಯ ಮನಸ್ಸೂ ಆರೋಗ್ಯ ಪೂರ್ಣವಾಗಿರುತ್ತದೆ. ಇದು ಮನೆಯ  ವಾತಾವರಣವನ್ನು ಆರೋಗ್ಯಪೂರ್ಣವಾಗಿ ಇಡುತ್ತದೆ. ಅಷ್ಟಕ್ಕೂ,

ಹಿತ-ಮಿತ ಆಹಾರ, ವ್ಯಾಯಾಮ, ನಿದ್ದೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ತೀವ್ರ ನಿಷ್ಕಾಳಜಿ ಇದೆ ಎಂಬ  ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯ ಇದ್ದೇ  ಇದೆ.

No comments:

Post a Comment