Tuesday, December 25, 2012

ಕಳಪೆ ವಸ್ತುಗಳ ಮಾರಾಟಗಾರ ಥಳಿತಕ್ಕೆ ಒಳಗಾಗಿದ್ದಾನೆಯೇ ಹೊರತು ಸನ್ಮಾನಕ್ಕಲ್ಲ..


“ನನ್ನ, ಗುಜರಾತ್ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದವರಿಗೆ, ನನ್ನನ್ನು ಮನಸ್ಸಿಗೆ ಬಂದಂತೆ ಬೈದವರಿಗೆ, ತಮ್ಮ ಮನಸ್ಸಿನ ವಿಕಾರವನ್ನು ಹೊರ ಹಾಕಿ ವಿಜೃಂಭಿಸಿದವರಿಗೆ, ಗುಜರಾತಿಗೆ ಹುಡುಗಿಯನ್ನು ಕರಕೊಂಡು ಹೋಗಿದ್ದೆಯಾ ಎಂದು ಪ್ರಶ್ನಿಸುವ ಮೊಲಕ ತಮ್ಮ ಮನಸ್ಸಿನ ಆಲೋಚನೆಯನ್ನು ಹೊರಹಾಕಿದ ಮಹಾತ್ಮರಿಗೆ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಮಾತು ನಮ್ಮ ಸಂಸ್ಕ್ರಿತಿಯನ್ನು ಹೊರ ಹಾಕುತ್ತದೆ ಎಂಬ ಮಾತಿಗೆ ನನಗೆ ಮತ್ತೊಮ್ಮೆ ಪುರಾವೆ ದೊರಕಿದೆ. ಹಾಗೆ ಮೋದಿಯವರ ಉಗ್ರ ಅಭಿಮಾನಿಗಳ ಮನಸ್ಸು ಹೇಗಿದೆ ಎಂಬುದು ನನಗೆ ಮತ್ತೊಮ್ಮೆ ಅರ್ಥವಾಗಿದೆ. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಗೆ ಹಾಕಿ ಬೆತ್ತಲೆಯಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು...”
  ಹಾಗಂತ ಕನ್ನಡದ ಖ್ಯಾತ ಪತ್ರಕರ್ತರೂ ಸಮಯ ಟಿ.ವಿ. ಚಾನೆಲ್‍ನಲ್ಲಿ ಈ ಹಿಂದೆ ಸಂಪಾದಕರೂ ಆಗಿದ್ದ ಶಶಿಧರ್ ಭಟ್ರು 2012, ಡಿ. 17ರಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದರು. ಅದಕ್ಕೆ ಕಾರಣವೂ ಇದೆ.
  ಅವರು ಇತ್ತೀಚೆಗೆ ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿದ್ದರು. ಆಗ ತಮ್ಮ ಅನುಭವಕ್ಕೆ ಬಂದದ್ದನ್ನು, ‘ಮೋದಿಯ ನಾಡಿನಲ್ಲಿ ಎರಡು ದಿನ ಕಂಡದ್ದು, ಕೇಳಿದ್ದು..’ ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಇವರ ಗಡ್ಡವನ್ನು ನೋಡಿ ಮುಸ್ಲಿಮ್ ಎಂದು ಭಾವಿಸಿದ ಅಹ್ಮದಾಬಾದ್‍ನ ಹೊಟೇಲ್‍ನ ಮಾಲಿಕ ರೂಮ್ ಕೊಡಲು ನಿರಾಕರಿಸಿದ್ದು, ಆತ ಮೋದಿಯ ಅಭಿವೃದ್ಧಿಯ ಬಗ್ಗೆ ಹೊಗಳಿದ್ದು, ಯಾವ ಅಭಿವೃದ್ಧಿ ಎಂದು ಇವರು ಪ್ರಶ್ನಿಸಿದಾಗ ಉತ್ತರಕ್ಕಾಗಿ ತಡಕಾಡಿದ್ದು... ಎಲ್ಲವನ್ನೂ ಭಟ್ರು ವಿಸ್ತ್ರತವಾಗಿ ಬರೆದಿದ್ದರು. ಮಾತ್ರವಲ್ಲ, ಇಂಥ ರಾಜ್ಯಕ್ಕೆ ಧಿಕ್ಕಾರವಿರಲಿ ಎಂದೂ ಸೇರಿಸಿದ್ದರು. ಡಿ. 15ರಂದು ಬರೆದ ಈ ಲೇಖನಕ್ಕೆ ಕೇವಲ ಎರಡೇ ದಿನಗಳಲ್ಲಿ ಓದುಗರಿಂದ 188 ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದುವು. ಹೆಚ್ಚಿನ ಪ್ರತಿಕ್ರಿಯೆಗಳೂ ಭಟ್ರನ್ನು ಹೀಯಾಳಿಸುವ ಮತ್ತು ಮೋದಿಯನ್ನು ಸಂತನಂತೆ ಹೊಗಳುವ ಧಾಟಿಯಲ್ಲಿತ್ತು. ನಿಜವಾಗಿ, ಇದು ಶಶಿಧರ ಭಟ್ ಎಂಬ ಓರ್ವ ಪತ್ರಕರ್ತರಿಗಾದ ಅನುಭವವಷ್ಟೇ ಅಲ್ಲ, ಮೋದಿಯನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಇವತ್ತು ಇಂಥ ಹೀಯಾಳಿಕೆಗಳು ಬೆನ್ನಟ್ಟುತ್ತಾ ಬರುತ್ತಿವೆ. ಮೋದಿಯ ಕುರಿತಂತೆ ಒಂದು ಬಗೆಯ ಭ್ರಮೆ ಮತ್ತು ಭ್ರಾಂತಿಯನ್ನು ತುಂಬಿಕೊಂಡ ಯುವ ಸಮೂಹ ವೊಂದು ಈ ದೇಶದಲ್ಲಿ ತಲೆ ಎತ್ತುತ್ತಾ ಇದೆ. ಮೋದಿಯನ್ನು ‘ಅಭಿವೃದ್ಧಿಯ ಹರಿಕಾರ’, ‘ಹಿಂದೂ ಹೃದಯ ಸಾಮ್ರಾಟ..’ ಎಂದೆಲ್ಲಾ ಈ ಗುಂಪು ಹಾಡಿ ಹೊಗಳುತ್ತಾ ಇದೆ. ‘ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಅತುಲ್ ಸೂದ್ ಸೇರಿದಂತೆ 10 ಮಂದಿ ಪ್ರಮುಖ ಸಂಶೋಧಕರು ಇತ್ತೀಚೆಗೆ ಗುಜರಾತ್‍ನಾದ್ಯಂತ ಸುತ್ತಾಡಿ ತಯಾರಿಸಿದ, ‘ಅಭಿವೃದ್ಧಿಯ ನಡುವೆ ಬಡತನ: ಗುಜರಾತ್‍ನ ಅಭಿವೃದ್ಧಿಯ ದುರಂತ’ (Poverty Amidst Prosperity: Essays on the Trujectory of Development in Gujrat) ಎಂಬ ಅಧ್ಯಯನಾತ್ಮಕ ಪ್ರಬಂಧದ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚಿಸಿದರೂ ಈ ಗುಂಪು, ಆ ಸಂಶೋಧಕರನ್ನೇ ಹಿಂದೂ ವಿರೋಧಿಗಳು ಅನ್ನುತ್ತವೆ. ಮೋದಿಯನ್ನು ಟೀಕಿಸುವುದು ಹಿಂದೂಗಳನ್ನು ಟೀಕಿಸಿದಂತೆ ಎಂಬೊಂದು ಸುಳ್ಳನ್ನು ಹರಡಲು ಈ ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. ಅಡ್ವಾಣಿಯನ್ನೊ ಸುಶ್ಮಾ, ಜೈಟ್ಲಿಯನ್ನೋ ಟೀಕಿಸಿದರೆ ಸುಮ್ಮನಿರುವ ಈ ಫ್ಯಾನ್ ಕ್ಲಬ್, ಮೋದಿಯನ್ನು ಟೀಕಿಸಿದ ಕೂಡಲೇ ಜಾಗೃತಗೊಳ್ಳುತ್ತದೆ. ಮೋದಿ ಟೀಕಾತೀತ, ಅವರು ದೇಶಕ್ಕೇ ರೋಲ್ ಮಾಡೆಲ್ ಎಂಬುದನ್ನು ಮಾಧ್ಯಮಗಳ ಮುಖಾಂತರ ನಿರಂತರವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಶ್ರಮದಲ್ಲಿ ಈ ಮಂದಿ ನಿರತರಾಗಿದ್ದಾರೆ. ಮಾಧ್ಯಮಗಳೂ ಇದರಲ್ಲಿ ಭಾಗಿಯಾಗಿವೆ. ಪುರಾವೆ ಬೇಕಾದರೆ, ಗುಜರಾತ್ ಚುನಾವಣೆಯ ಫಲಿತಾಂಶಕ್ಕೆ ಕನ್ನಡ ಪತ್ರಿಕೆಗಳು ಕೊಟ್ಟ ಶೀರ್ಷಿಕೆಗಳನ್ನೇ ಎತ್ತಿಕೊಳ್ಳಿ. ‘ಮೋದಿಗೆ ಹ್ಯಾಟ್ರಿಕ್ ಗೆಲುವು..’ (Hat - trick for Narendra Modi ..) ಎಂಬ ಸಹಜ ಮತ್ತು ಉತ್ಪ್ರೇಕ್ಷೆಯಿಲ್ಲದ ಶೈಲಿಯ ಶೀರ್ಷಿಕೆಯಲ್ಲಿ ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾದಂಥ ಆಂಗ್ಲ ಪತ್ರಿಕೆಗಳು ವರದಿ ಪ್ರಕಟಿಸಿದ್ದರೆ, ಕನ್ನಡಪ್ರಭ ಪತ್ರಿಕೆಯು-ನಮೋ ನಮಃ ‘ವೀರಭದ್ರ’ ಎಂದೂ, ಉದಯವಾಣಿ- ಮೋದಿ ಮೋಡಿ ಮುಮ್ಮಡಿ ಎಂದೂ ಹೊಸದಿಂಗತ- ನಮೋ ಗುಜರಾತ್ ಎಂದೂ ಶೀರ್ಷಿಕೆ ಕೊಟ್ಟಿದ್ದುವು. ಮೋದಿಯನ್ನು ದೈವತ್ವಕ್ಕೇರಿಸುವ ಶೈಲಿಯ ಇಂಥ ಶೀರ್ಷಿಕೆಗಳು ಕೊಡುವ ಸೂಚನೆಯಾದರೂ ಏನು? ಜನ ಸಾಮಾನ್ಯರ ಮೇಲೆ ಇಂಥ ಶೀರ್ಷಿಕೆಗಳು ಯಾವ ಬಗೆಯ ಪರಿಣಾಮವನ್ನು ಬೀರಿಯಾವು? ಅಂದಹಾಗೆ, ಸುದ್ದಿಯೊಂದರ ಶೀರ್ಷಿಕೆಗೂ ಲೇಖನವೊಂದರ ಶೀರ್ಷಿಕೆಗೂ ವ್ಯತ್ಯಾಸ ಇದೆಯಲ್ಲವೇ? ಮೋದಿಯನ್ನು ಆರಾಧಿಸುವ ಪತ್ರಕರ್ತರು ಮಾಧ್ಯಮಗಳಲ್ಲಿದ್ದರೆ ಸುದ್ದಿ ಹೇಗೆ ತಿರುಚಿಕೊಳ್ಳಬಹುದು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?
ಅಕ್ಟೋಬರ್ 9
  ‘..ಸಂಜೆ 7 ಗಂಟೆಗೆ ಅಹ್ಮದಾಬಾದ್‍ನಲ್ಲಿ ಮೋದಿಯ ಚುನಾವಣಾ ಭಾಷಣ ಏರ್ಪಾಡಾಗಿತ್ತು. ಆದರೆ ಮೋದಿ ಆಗಮಿಸಿದ್ದು 10 ಗಂಟೆಗೆ. 7 ಗಂಟೆಗೆ ಬಂದು ಮೋದಿಯನ್ನು ಕಾಯುತ್ತಿದ್ದ ಜನರಿಗೆ ಬಿಜೆಪಿ ನಾಯಕರು ಮೋದಿಯ ಮುಖವಾಡ, ಪೋಸ್ಟರ್ಸ್, ಮೋದಿಯ ಗ್ಲೌವ್ಸ್, ಮೋದಿ ಟೀಶರ್ಟ್, ಶಾಲು... ಎಲ್ಲವನ್ನೂ ಹಂಚತೊಡಗಿದರು. ಸಾಮಾನ್ಯ ವ್ಯಕ್ತಿಯೊಬ್ಬ ಸಭೆಯತ್ತ ನೋಡಿದರೆ ಕಾಣಿಸುವುದು ಎಲ್ಲೆಲ್ಲೂ ಮೋದಿಯೇ. ಆ ಬಳಿಕ ಮೋದಿ ಮತ್ತು ಗುಜರಾತನ್ನು ಹೊಗಳುವ ಹಾಡು, ನರ್ತನಗಳು ಆರಂಭವಾದುವು. ಮೋದಿಯನ್ನು ಶಿವಾಜಿ, ಪೃಥ್ವಿರಾಜ್ ಚೌಹಾಣ್ ಮತ್ತು ವಿವೇಕಾನಂದರಿಗೆ ಹೋಲಿಕೆ ಮಾಡಿ ಗಾಯಕನೋರ್ವ ಹಾಡತೊಡಗಿದ. ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಮೋದಿಯ ಸ್ತುತಿ ಮಾಡತೊಡಗಿದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆರಂಭಿಸಿದರು. ನೆರೆದ ಮಂದಿ, ಮೋದಿ ಇದಲ್ಲ, ಇದಲ್ಲ ಮೋದಿ.. ಎಂದು ಬೊಬ್ಬೆ ಹಾಕುತ್ತಿದ್ದರೆ, ಇಡೀ ಸಭೆಯಲ್ಲೇ ರೋಮಾಂಚನ, ಕುತೂಹಲ. ಕೊನೆಗೆ ಮೋದಿ ಬಂದರು..’ (ವಿದ್ಯಾ ಸುಬ್ರಹ್ಮಣ್ಯಂ, 2012 ಡಿ. 13. ದಿ ಹಿಂದೂ). ನಿಜವಾಗಿ ಮೋದಿಗೆ ಪ್ರಚಾರದ ಕಲೆ ಚೆನ್ನಾಗಿ ಗೊತ್ತು. ‘2012ರ ನವೆಂಬರ್ ನಲ್ಲಿ ಮೋದಿಯ 50 ಸಾವಿರ ಮುಖವಾಡಗಳನ್ನು ಖರೀದಿಸಲಾಗಿತ್ತು. ಆದರೆ ಆ ಮುಖವಾಡ ಸೂಕ್ತವಾಗಿಲ್ಲ, ಮುಖವಾಡದಲ್ಲಿ ಚರ್ಮ ಜೋತು ಬಿದ್ದಿದೆ, ವೃದ್ಧರಂತೆ ಕಾಣುತ್ತದೆಂದು ಹೇಳಿ ಅವನ್ನು ತಿರಸ್ಕರಿಸಲಾಯಿತಲ್ಲದೇ, 3 ಲಕ್ಷ ಹೊಸ ಮುಖವಾಡಕ್ಕೆ ಆದೇಶ ನೀಡಲಾಯಿತು.’ (ದಿ ಹಿಂದೂ, ಡಿ. 20, 2012) ಇದಲ್ಲದೇ ಮೋದಿಯ ಮುಗಿಲೆತ್ತರದ ಕಟೌಟುಗಳನ್ನು ಬ್ಯುಝಿ ಟ್ರಾಫಿಕ್‍ನ ಹತ್ತಿರ, ಮಾಲ್‍ಗಳ ಬಳಿ, ಸರ್ಕಲ್‍ಗಳಲ್ಲಿ ಧಾರಾಳ ತೂಗು ಹಾಕಲಾಗಿದೆ. ಉರಿಯುತ್ತಿದ್ದ ರೈಲಿನ ಪ್ರತಿಕೃತಿಯೊಂದಿಗೆ 2002ರಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದರೆ, 2007ರ ಚುನಾವಣೆಯಲ್ಲಿ ಮೋದಿ ರೈಲನ್ನು ಕೈಬಿಟ್ಟು 6 ಕೋಟಿ ಗುಜರಾತಿಯನ್ನರ ‘ಅಸ್ಮಿತೆ’ ಯನ್ನು (ಗೌರವ) ಎತ್ತಿಕೊಂಡರು. ಮೌತ್‍ಕಾ ಸೌಧಾಗರ್ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನೇ ಅಸ್ತ್ರವಾಗಿ ಬಳಸಿ ಕೊಂಡರು. ಆದರೆ ಈ 2012ರಲ್ಲಿ ಮೋದಿಗೆ ಆ ಕೋಮು ಅಜೆಂಡಾವೋ, ಅಸ್ಮಿತೆಯೋ ಅಗತ್ಯವಿರಲಿಲ್ಲ. ಅವರು ಅಭಿವೃದ್ಧಿಯ ಮಾತುಗಳನ್ನಾಡಿದರು. 3ಡಿ ತಂತ್ರಜ್ಞಾನದ ಮುಖಾಂತರ 5 ದಿನಗಳಲ್ಲಿ 106 ಕಡೆ ಚುನಾವಣಾ ಭಾಷಣಗಳನ್ನು ನೀಡಿದರು. ಮೋದಿಯ ಅಭಿವೃದ್ಧಿ ಮಂತ್ರ ಪೊಳ್ಳು ಎಂಬುದನ್ನು ಅಂಕಿ-ಸಂಖ್ಯೆಗಳ ಆಧಾರದಲ್ಲಿ ಸಮೀಕ್ಷರು ಎಷ್ಟೇ ಹೇಳಿದರೂ, 3ಡಿ ತಂತ್ರಜ್ಞಾನದಲ್ಲಿ ಕಾಣಿಸಿಕೊಳ್ಳುವ ಮೋದಿಯ ಬಗ್ಗೆ ಜನಸಾಮಾನ್ಯರು ಆಕರ್ಷಿತರಾಗಲಾರರೆಂದು ಹೇಗೆ ಹೇಳುವುದು? ಮೋದಿ ಗುಜರಾತ್‍ಗಾಗಿ ಏನೋ ಅದ್ಭುತವಾದುದನ್ನು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರು ಅಂದುಕೊಳ್ಳುವುದಕ್ಕೆ ಮುಖವಾಡ, ಕಟೌಟ್‍ಗಳು, 3ಡಿಗಳಂಥ ಗಿಮಿಕ್‍ಗಳು ಪ್ರೇರಕವಾಗಲಾರದೇ? ಗುಜರಾತ್‍ನ ಗಲ್ಲಿಗಳಲ್ಲಿ, ಬೀದಿ, ಸಭೆಗಳಲ್ಲಿ.. ಹೀಗೆ ಮೋದಿಯ ಮುಖವಾಡವನ್ನು ಧರಿಸಿದ ಮಂದಿ ಎಲ್ಲೆಲ್ಲೂ ಕಾಣಿಸಿಕೊಳ್ಳುವಾಗ ಒಂದು ಬಗೆಯ ಭ್ರಮೆಗೆ ಸಾರ್ವಜನಿಕರು ಒಳಗಾಗುವ ಸಾಧ್ಯತೆ ಖಂಡಿತ ಇದೆ. ಇಷ್ಟಕ್ಕೂ, 2009ರಲ್ಲೇ ಮೋದಿ ಬ್ಲಾಗು ಆರಂಭಿಸಿದ್ದಾರೆ. ಅವರು ಪ್ರತಿದಿನ ಟ್ವೀಟ್ ಮಾಡುತ್ತಾರೆ. ಫೇಸ್‍ಬುಕ್‍ನಲ್ಲಿದ್ದಾರೆ. ನಿಜವಾಗಿ ಇವತ್ತಿನ ದಿನಗಳಲ್ಲಿ ಯಾವೆಲ್ಲ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸಲು ಸಾಧ್ಯವಿದೆಯೋ ಅವೆಲ್ಲವನ್ನೂ ಮೋದಿ ಬಳಸುತ್ತಿದ್ದಾರೆ. 2007ರ ಚುನಾವಣೆಯ ಸಂದರ್ಭದಲ್ಲಿ ಮಿಯಾಂ ಮುಶರ್ರಫ್ ಎಂದು ಪಾಕಿಸ್ತಾನದ ಮುಶರ್ರಫ್‍ರನ್ನು ಛೇಡಿಸುತ್ತಾ, ಆ ಮುಖಾಂತರ ಪರೋಕ್ಷವಾಗಿ ಮುಸ್ಲಿಮರನ್ನು ವ್ಯಂಗ್ಯಕ್ಕೆ ಒಳಪಡಿಸಿದ್ದರೆ ಈ ಬಾರಿ ಸೋನಿಯಾರ ಆಪ್ತ ಕಾರ್ಯದರ್ಶಿ ಗುಜರಾತ್‍ನ ಅಹ್ಮದ್ ಪಟೇಲ್‍ರನ್ನು ಅಹ್ಮದ್ ಭಾಯಿ ಎಂದು ಸಂಬೋಧಿಸುತ್ತಾ, ಬಿಜೆಪಿ ಸೋತರೆ ಓರ್ವ ಮುಸ್ಲಿಮ್ ವ್ಯಕ್ತಿ  ಗುಜರಾತ್‍ನ ಮುಖ್ಯಮಂತ್ರಿ ಆಗುತ್ತಾರೆ ಎಂಬಂತೆ ಬಿಂಬಿಸುತ್ತಾರೆ. ಅಲ್ಲೂ ಪಟೇಲ್ ಎಂಬ ಪದವನ್ನು ಬೇಕೆಂದೇ ಅಡಗಿಸುತ್ತಾರೆ. ನಿಜವಾಗಿ ಗುಜರಾತ್‍ನ ಮುಖ್ಯಮಂತ್ರಿ. ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿಯೇ ಇರಲಿಲ್ಲ. ಮಾತ್ರವಲ್ಲ ಅಹ್ಮದ್ ಪಟೇಲ್‍ರು ಅಲ್ಲಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯೂ ಇರಲಿಲ್ಲ. ಆದರೆ, ಇಲ್ಲದ ಸಾಧ್ಯತೆಯನ್ನು ಇದ್ದಂತೆ ತೋರಿಸಿ ಜನರನ್ನು ದಿಕ್ಕು ತಪ್ಪಿಸುವ, ಮುಸ್ಲಿಮ್ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಅಪಾಯಕಾರಿ ಎಂಬ ಸೂಚನೆ ರವಾನಿಸುವ ತಂತ್ರವನ್ನು ಮೋದಿ ಹೆಣೆದರು. ಅಪ್ಪಟ ಸುಳ್ಳು, ಕೋಮುವಾದಿ ಭಾಷೆ ಮತ್ತು ಜನಾಂಗದ್ವೇಷಿ ವಿಚಾರಗಳನ್ನು ಹರಡುತ್ತಾ, ತನ್ನ ವಿರುದ್ಧ ಬರುವ ಆರೋಪಗಳನ್ನೆಲ್ಲಾ ‘ಹಿಂದೂ ವಿರೋಧಿ’ ಎಂಬಂತೆ ಚಿತ್ರಿಸಲು ಒಂದು ಹಂತದವರೆಗೆ ಮೋದಿ ಯಶಸ್ವಿಯಾಗಿದ್ದಾರೆ. ಅವರ ಫೇಸ್‍ಬುಕ್‍ನಲ್ಲಿ ಇರುವ ಪೋಸ್ಟ್ ಗಳಲ್ಲಿ ಹೆಚ್ಚಿನವು ಅವರು ವಿಶ್ವದ ನಾನಾ ಉದ್ಯಮಿಗಳು, ರಾಜತಾಂತ್ರಿಕರು, ಚಿಂತಕರ ಜೊತೆಗಿರುವಂಥವು. ‘ನಿರುದ್ಯೋಗ, ಅಸಮಾನತೆ, ಬಡತನ, ಅಪೌಷ್ಟಿಕತೆ, ಶಿಶು ಮರಣ, ಆರೋಗ್ಯ ಮತ್ತು ಶಿಕ್ಷಣಾ ಕ್ಷೇತ್ರಗಳಲ್ಲಿ ಗುಜರಾತ್‍ನ ಸದ್ಯದ ಸಾಧನೆ ತೀರಾ ಕಳಪೆಯಾಗಿದ್ದರೂ’ (ಅತುಲ್ ಸೂದ್, ದಿ ಹಿಂದೂ 2012, ನ. 30) ಅಹ್ಮದಾಬಾದ್‍ನ ಶಾಪಿಂಗ್ ಮಾಲ್‍ಗಳನ್ನೂ, ಶೋ ರೂಮ್‍ಗಳನ್ನೂ, ಸೂಪರ್ ಹೈವೇ, ಸುಂದರವಾಗಿರುವ ಸಬರಮತಿ ನದಿಯನ್ನೂ ತೋರಿಸಿ ಮೋದಿ ಅಭಿವೃದ್ಧಿ ಅನ್ನುತ್ತಿದ್ದಾರೆ. ಒಂದು ರೀತಿಯಲ್ಲಿ, ಗುಜರಾತ್‍ನಾದ್ಯಂತ ಒಂದು ಬಗೆಯ ಭ್ರಮೆಯಿದೆ. ಭ್ರಾಂತಿ ಮತ್ತು ಭೀತಿಯೂ ಇದೆ.  ಮೋದಿಯ ಸುಳ್ಳಿನ ಪ್ರಚಾರದ ಅಬ್ಬರವನ್ನು ನೋಡಿ, ಗುಜರಾತ್‍ನಲ್ಲಿ ಏನೋ ಆಗುತ್ತಿದೆ ಎಂದು ಜನಸಾಮಾನ್ಯರು ಅಂದುಕೊಳ್ಳುವಂಥ ವಾತಾವರಣ ಖಂಡಿತ ಇದೆ. ತಮ್ಮ ಕೇರಿಯಲ್ಲಿ ಅಲ್ಲದಿದ್ದರೂ ಇತರ ಕಡೆ ಭಾರೀ ಅಭಿವೃದ್ಧಿ ಆಗಿರಬೇಕು ಎಂದು ನಂಬುವಂಥ ಸ್ಥಿತಿಯನ್ನು ಮೋದಿ ಮತ್ತು ಅವರ ಬೆಂಬಲಿಗರು ನಿರ್ಮಿಸಿದ್ದಾರೆ.
ಜಮೀಅತೆ ಉಲಮಾಯೆ ಹಿಂದ್
ಆಲ್ ಇಂಡಿಯಾ ಮಜ್ಲಿಸೆ ಮುಶಾವರತ್
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್
ಮರ್ಕಝಿ ಜಮೀಅತೆ ಅಹ್ಲೆ ಹದೀಸ್
ಇಮಾರತೆ ಶರಿಯಾ..
ಮುಂತಾದ 10 ಸಂಘಟನೆಗಳು 2012 ನವೆಂಬರ್ 23ರಂದು ಸಭೆ ಸೇರಿ ಮುಸ್ಲಿಮ್ ಸಬಲೀಕರಣಕ್ಕಾಗಿರುವ ಜಂಟಿ ಸಮಿತಿ(JCMOE)ಯನ್ನು ರಚಿಸಿತಲ್ಲದೇ, 2002ರ ಗುಜರಾತ್ ಹತ್ಯಾಕಾಂಡಕ್ಕಾಗಿ ಮೋದಿ ಕ್ಷಮೆಯಾಚಿಸಿ ತನ್ನ ವರ್ತನೆಯಲ್ಲಿ ಬದಲಾವಣೆ ತೋರ್ಪಡಿಸಿದರೆ, ಗುಜರಾತ್‍ನ ಪುನರ್ ನಿರ್ಮಾಣದಲ್ಲಿ ಮುಸ್ಲಿಮರು ಸಹಕರಿಸುವುದಾಗಿ ಘೋಷಿಸಿತ್ತು. ಮುಸ್ಲಿಮರು ಹೆಚ್ಚಿರುವ ಚುನಾವಣಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಮೋದಿ ಮುಸ್ಲಿಮರಿಗೆ ನೀಡಬೇಕು ಎಂದೂ ಅದು ಆಗ್ರಹಿಸಿತ್ತು. ಆದರೆ ಗುಜರಾತ್‍ನ 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮರಿಗೆ ಮೋದಿ ಟಿಕೇಟು ನೀಡಲಿಲ್ಲ. ಸದ್ಬಾವನಾ ಯಾತ್ರೆಯಲ್ಲಿ ಮುಸ್ಲಿಮರ ಜೊತೆ ನಿಂತು ಪೋಸ್ ಕೊಟ್ಟರೂ ಒಂದು ಸೆಕೆಂಡು ತಲೆಯಲ್ಲಿಟ್ಟು ಕೆಳಗಿಡಬಹುದಾಗಿದ್ದ ಮುಸ್ಲಿಮ್ ಟೋಪಿಯನ್ನೂ ಅವರು ಸ್ವೀಕರಿಸಲಿಲ್ಲ. ನಿಜವಾಗಿ, ಮುಸ್ಲಿಮ್ ವಿರೋಧಿ ಎಂಬ ಇಮೇಜನ್ನು ಕಳಚಿಕೊಳ್ಳಲು ಮೋದಿಗೆ ಎಳ್ಳಷ್ಟೂ ಇಷ್ಟವಿಲ್ಲ. ಮೋದಿಯ ವೇದಿಕೆಗೆ ಮುಸ್ಲಿಮ್ ವಿದ್ವಾಂಸರೇ ಬರಲಿ, ಇರ್ಫಾನ್ ಪಠಾಣೇ ಬರಲಿ, ಎಲ್ಲವನ್ನೂ ಅವರು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ಪಾಠ ಕಲಿಸಿದ್ದೇನೆ ಎಂಬ ಹಮ್ಮು ಈಗಲೂ ಅವರಲ್ಲಿದೆ. ..‘ಈ ವರ್ಷ ಗುಜರಾತ್‍ನ ಸೌರಾಷ್ಟ್ರವು ಮಳೆ ಇಲ್ಲದೇ ಸಂಕಷ್ಟಕ್ಕೆ ಒಳಗಾದಾಗ, ಸೌರಾಷ್ಟ್ರವನ್ನು ಅವರು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಿಲ್ಲ. ಯಾಕೆಂದರೆ, ಹಾಗೆ ಘೋಷಿಸುವುದರಿಂದ ಗುಜರಾತ್‍ನ ಬಗ್ಗೆ ತಾನು ಕಟ್ಟಿ ಬೆಳೆಸಿದ ಸುಳ್ಳು ಇಮೇಜಿಗೆ ಎಲ್ಲಿ ಧಕ್ಕೆ ಬಂದೀತೋ ಎಂಬ ಭೀತಿ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಗುಜರಾತ್‍ನಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆಯಲ್ಲವೇ ಎಂದು ಈ ವರ್ಷದ ಆರಂಭದಲ್ಲಿ ಅಮೇರಿಕದ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪತ್ರಕರ್ತನೋರ್ವ ಮೋದಿಯನ್ನು ಪ್ರಶ್ನಿಸಿದ್ದ. ಹೆಣ್ಣು ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುವುದೇ (ಸ್ಲಿಮ್) ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು:’ (ದಿ ಹಿಂದೂ, ಸ್ಮಿತಾಗುಪ್ತಾ, ಡಿ. 20, 2012) ಹೀಗೆ ಮೋದಿ ಉದ್ದಕ್ಕೂ ಸತ್ಯವನ್ನು ಮುಚ್ಚಿಡುತ್ತಲೇ ಹೋಗುತ್ತಿದ್ದಾರೆ. ನುಣುಪಾದ ರಸ್ತೆ, ಶಾಪಿಂಗ್ ಮಾಲ್‍ಗಳನ್ನು ತೋರಿಸಿ, ವಿವಿಧ ಗಿಮಿಕ್‍ಗಳನ್ನು ಮಾಡಿ, ಗುಜರಾತಿಯನ್ನರನ್ನು ಒಂದು ಬಗೆಯ ಭ್ರಮೆಗೆ ಅವರು ಒಳಪಡಿಸಿದ್ದಾರೆ. ಒಂದು ರೀತಿಯಲ್ಲಿ, ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರು 2001ರಲ್ಲಿ ಮುಖ್ಯಮಂತ್ರಿ ಆಗುವಾಗ ಗುಜರಾತ್‍ನಲ್ಲಿ ಬಿಜೆಪಿಯ ಸ್ಥಿತಿ ದಯನೀಯವಾಗಿತ್ತು. ಆದ್ದರಿಂದ ಹಿಂದೂ ಕೋಮುವಾದವನ್ನು ಅವರು ಮಾರಾಟ ಮಾಡಲೇ ಬೇಕಾಗಿತ್ತು. ಹೀಗಾಗಿ 2002ರಲ್ಲಿ ಅವರು ಕೋಮುಗಲಭೆಯನ್ನು ಮಾರಾಟ ಮಾಡಿದರು. ಆದರೆ ಈಗ ಅದೇ ವಸ್ತುವನ್ನು ಅವರು ಮತ್ತೆ ಮಾರಾಟ ಮಾಡುತ್ತಿಲ್ಲ. ಯಾಕೆಂದರೆ, 2002ರಲ್ಲಿ ಅವರು ಮಾರಿದ್ದು ಕಳಪೆ ವಸ್ತು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಮತ್ತೊಮ್ಮೆ ಅದನ್ನು ಮಾರಾಟಕ್ಕಿಟ್ಟರೆ ಗಿರಾಕಿಗಳು ಸಿಗಲಿಕ್ಕಿಲ್ಲ ಅನ್ನುವುದೂ ಅವರಿಗೆ ಗೊತ್ತು. ಆದ್ದರಿಂದಲೇ, ಈ ಬಾರಿ ಅವರು ‘ಅಭಿವೃದ್ಧಿ’ಯನ್ನು ಮಾರಾಟಕ್ಕಿಟ್ಟಿದ್ದಾರೆ.
  ಅಂದಹಾಗೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಾ ಜೇಬು ತುಂಬಿಸುತ್ತಿರುವವರನ್ನು ಕೊನೆಗೊಂದು ದಿನ ಆ ಗಿರಾಕಿಗಳೇ ಹಿಡಿದು ಥಳಿಸಿ, ಮುಖವಾಡ ಬಯಲುಗೊಳಿಸಿದ ಧಾರಾಳ ಉದಾಹರಣೆಗಳು ಈ ದೇಶದಲ್ಲಿ ನಡೆದಿದೆಯಲ್ಲವೇ?


Tuesday, December 11, 2012

ಅಬ್ದುಲ್ ನಾರಾಯಣ್ ಡಿ' ಸೋಜ ಎಂಬ ಸೌಹಾರ್ದಪ್ರೇಮಿ?

ಸಂಪಾದಕರೇ,
  ನಾನು ಕೆಎಸ್‍ಆರ್‍ಟಿಸಿಯಲ್ಲಿ ನೌಕರ. ಕಳೆದ ದೀಪಾವಳಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ನನ್ನಲ್ಲಿ ಚಂದಾ ಕೇಳಿದರು. ನಾನು ನಯವಾಗಿ ನಿರಾಕರಿಸಿದೆ. ಇಸ್ಲಾಮಿನಲ್ಲಿ ವಿಗ್ರಹ ಪೂಜೆ ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ಕೊಡುವುದು ನಿಷಿದ್ಧ ಎಂದೆ. ಸಹೋದ್ಯೋಗಿಗಳಿಗೆ ಇಷ್ಟವಾದಂತೆ ಕಾಣಿಸಲಿಲ್ಲ. ಬಳಿಕ, ಬಸ್ಸಿಗೆ ಹೂಹಾರ ಹಾಕುವಂತೆ ಒತ್ತಾಯಿಸಿದರು. ಆಗಲೂ ನಾನು ನಿರಾಕರಿಸಿದೆ. ಇಸ್ಲಾಮಿನಲ್ಲಿ ಇಂಥ ಆಚರಣೆಗಳಿಗೆ ಅವಕಾಶ ಇಲ್ಲ. ಇದು ಹಿಂದೂ ಧರ್ಮದ ಆಚರಣೆ. ನೀವು ಆಚರಿಸಿ. ಆದರೆ ನನ್ನನ್ನು ಬಲವಂತಪಡಿಸಬೇಡಿ ಎಂದೆ. ಅವರು ಒಪ್ಪಿಕೊಳ್ಳಲಿಲ್ಲ. ನನ್ನನ್ನು ಕೋಮುವಾದಿಯಂತೆ, ಸೌಹಾರ್ದದ ವಿರೋಧಿಯಂತೆ ಬಿಂಬಿಸಿದರು. ಮೇಲಧಿಕಾರಿಗಳಿಗೆ ದೂರು ಕೊಟ್ಟರು. ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ ಕೆಲಸದಿಂದ ವಜಾ ಮಾಡುವುದಕ್ಕಾಗಿ ಪಿತೂರಿ ನಡೆಸಿದರು. ಹೀಗಾಗಿ ನಾನು ಸಾಕಷ್ಟು ನೊಂದಿದ್ದೇನೆ. ಇನ್ನೊಂದು ಧರ್ಮವನ್ನು ಗೌರವಿಸುತ್ತಾ, ನನ್ನ ಧರ್ಮಕ್ಕೆ ನಾನು ನಿಷ್ಠನಾಗುವುದು ಯಾಕೆ ಸೌಹಾರ್ದದ ವಿರೋಧಿ ಅನ್ನಿಸಿಕೊಳ್ಳುತ್ತದೆ ಅನ್ನುವುದು ಇನ್ನೂ ನನಗೆ ಅರ್ಥವಾಗಿಲ್ಲ. ನಾನು ತಪ್ಪು ಮಾಡಿದ್ದೇನೆಯೇ ತಿಳಿಸಿ..
  ಹಾಗಂತ ನನ್ನ ದೂರದ ಗೆಳೆಯನೊಬ್ಬ ದೂರವಾಣಿ ಕರೆ ಮಾಡಿ ಇತ್ತೀಚೆಗೆ ವಿನಂತಿಸಿದ್ದ..
ಇಷ್ಟಕ್ಕೂ, ಸೌಹಾರ್ದ ಅಂದರೇನು? ಯಾವುದನ್ನೆಲ್ಲಾ ನಾವು ಸೌಹಾರ್ದ ಅಂತ ಕರೆಯಬಹುದು? ಹಿಂದೂ ವಿಧಿಯಂತೆ ಮುಸ್ಲಿಮರು ವಿವಾಹವಾಗುವುದು ಅಥವಾ ಇಸ್ಲಾಮೀ  ವಿಧಿಯಂತೆ ಹಿಂದೂಗಳು ವಿವಾಹವಾಗುವುದು ಸೌಹಾರ್ದವಾಗಬಹುದೇ? ಹಿಂದೂಗಳದ್ದೋ ಕ್ರೈಸ್ತರದ್ದೋ ಕೆಲವು ಆಚರಣೆಗಳನ್ನು ಮುಸ್ಲಿಮರು ಮಾಡುವುದು ಮತ್ತು ಮುಸ್ಲಿಮರ ಕೆಲವು ಆಚರಣೆಗಳನ್ನು ಹಿಂದೂಗಳು ಮಾಡುವುದನ್ನೆಲ್ಲಾ ಸೌಹಾರ್ದವಾಗಿ ಪರಿಗಣಿಸಬಹುದಾ? ನಿಜವಾಗಿ, ಮಾಧ್ಯಮಗಳ ಹಿಡಿತ ಈ ಸಮಾಜದ ಮೇಲೆ ಬಲವಾಗಿರುವುದರಿಂದ ಅವು ಏನೆಲ್ಲ ಹೇಳುತ್ತವೋ ಅಥವಾ ಯಾವುದನ್ನು ಅನುಕರಣೀಯ ಅಂಥ ಬೋಧಿಸುತ್ತವೋ ಅವನ್ನೇ ಸರಿ ಎಂದು ಸಮಾಜ ತೀರ್ಮಾನಿಸಿಬಿಡುತ್ತದೆ. ಮುಸ್ಲಿಮನೋರ್ವ ಇರುಮುಡಿ ಕಟ್ಟಿ ಅಯ್ಯಪ್ಪ ವ್ರತಧಾರಿಯಾಗುವುದು ಇವತ್ತಿನ ಮಾಧ್ಯಮಗಳ ಮಟ್ಟಿಗೆ ಸೌಹಾರ್ದದ ಸಂಕೇತ. ದರ್ಗಾಕ್ಕೆ ಹಿಂದೂವೊಬ್ಬ ನಡೆದುಕೊಳ್ಳುವುದು ಕೂಡಾ ಮಾಧ್ಯಮಗಳ ಕಣ್ಣಿನಲ್ಲಿ ಸೌಹಾರ್ದವಾಗುತ್ತದೆ. ‘ಕಾರಣಿಕದ’ ಜಾಗಕ್ಕೆ ಮುಸ್ಲಿಮನೋರ್ವ ನಡೆದುಕೊಂಡರೆ, ಅಂತರ್ಜಾತಿ ವಿವಾಹವಾದರೆ ಅಥವಾ ಇನ್ನೇನೋ ಅಸಂಗತಗಳು ನಡೆದರೆ ಅವಕ್ಕೆಲ್ಲಾ ಸೌಹಾರ್ದದ ಬಿರುದು ಕೊಟ್ಟು ಸಾರ್ವಜನಿಕವಾಗಿ, ‘ಇಂಥದ್ದು ಮಾತ್ರ ಸೌಹಾರ್ದ’ ಎಂಬೊಂದು ತಿಳುವಳಿಕೆಯನ್ನು ಹುಟ್ಟಿಸುವಲ್ಲಿ ಮಾಧ್ಯಮಗಳು ಬಹುವಂಶ ಇವತ್ತು ಯಶಸ್ವಿಯಾಗಿವೆ. ಆದ್ದರಿಂದಲೇ, ಚಂದಾ ಕೊಡಲು ನಿರಾಕರಿಸಿದ ನನ್ನ ಗೆಳೆಯ ಕೋಮುವಾದಿಯಾಗಿ ಬಿಂಬಿತಗೊಂಡದ್ದು.
  ಅಂದ ಹಾಗೆ, ಇಸ್ಲಾಮ್‍ನಲ್ಲಿ ಮದುವೆಯಾಗುವುದಕ್ಕೆ ನಿಶ್ಚಿತವಾದ ವಿಧಾನವಿದೆ. ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವರ ಮತ್ತು ವಧುವಿನ ತಂದೆ ಇಲ್ಲವೇ ವಾರೀಸುದಾರರು ವಿಧಿಗಳನ್ನು ನೆರವೇರಿಸುತ್ತಾರೆ. ಅದೇ ವೇಳೆ ಹಿಂದೂಗಳ ಮದುವೆಯು ಅಗ್ನಿಸಾಕ್ಷಿಯಾಗಿ ನೆರವೇರುತ್ತದೆ. ಮಾತ್ರವಲ್ಲ, ಇಸ್ಲಾಮ್ ಪ್ರಬಲವಾಗಿ ನಿಷೇಧಿಸಿರುವ ಬಹುದೇವಾರಾಧನೆ, ವಿಗ್ರಹಾರಾಧನೆಯ ವಿಧಿ-ವಿಧಾನಗಳೂ ಬಳಕೆಯಲ್ಲಿವೆ. ಹೀಗಿರುವಾಗ, ಮುಸ್ಲಿಮನೊಬ್ಬ ಹಿಂದೂ ಧಾರ್ಮಿಕ ವಿಧಿಯಂತೆ ಮದುವೆಯಾಗುವುದಾದರೆ, ಅದು ಹಿಂದೂಗಳ ಮಟ್ಟಿಗೆ ಸೌಹಾರ್ದವಾಗಿ ಕಾಣಬಹುದು. ಆದರೆ ಮುಸ್ಲಿಮರು ಅದನ್ನು ಧರ್ಮದ್ರೋಹವೆಂದಲ್ಲದೆ ಸೌಹಾರ್ದವಾಗಿ ಪರಿಗಣಿಸಲು ಸಾಧ್ಯವೇ? ಒಂದು ಧರ್ಮಕ್ಕೆ ಅಪಚಾರವೆಸಗಿ ಮಾಡಲಾಗುವ ಯಾವುದೇ ಬಗೆಯ ಸೌಹಾರ್ದತೆಯು ಸಾಮಾಜಿಕವಾಗಿ ಒಗ್ಗಟ್ಟನ್ನು ತಂದೀತೇ? ಆದ್ದರಿಂದಲೇ ಪ್ರವಾದಿ ಮುಹಮ್ಮದರು(ಸ) ಇಂಥ ಆಲೋಚನೆಗಳನ್ನು ಬಲವಾಗಿ ತಿರಸ್ಕರಿಸಿದ್ದು. "ಒಂದು ವರ್ಷ ನೀವು ನಮ್ಮ ವಿಗ್ರಹಗಳನ್ನು ಪೂಜಿಸಿದರೆ ಇನ್ನೊಂದು ವರ್ಷ ನಿಮ್ಮ ಅಲ್ಲಾಹನನ್ನು ನಾವು ಪೂಜಿಸುತ್ತೇವೆ" ಎಂದು ಪ್ರವಾದಿಯವರಲ್ಲಿ ಮಕ್ಕಾದ ವಿರೋಧಿಗಳು ವಿನಂತಿಸಿದ್ದರು. ಒಂದು ವೇಳೆ ಪ್ರವಾದಿಯವರು  ಆ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದರೆ ಅವರ ಮತ್ತು ಅವರ ಅನುಯಾಯಿಗಳ ಮೇಲೆ ನಡೆಯುತ್ತಿದ್ದ ಹಿಂಸೆ, ದೌರ್ಜನ್ಯ, ಬಹಿಷ್ಕಾರಗಳಿಗೆಲ್ಲಾ ತೆರೆ ಬೀಳುತ್ತಿತ್ತು. ಇಷ್ಟಿದ್ದೂ ಪ್ರವಾದಿ(ಸ) ಹೇಳಿದ್ದು, ‘ನಿಮಗೆ ನಿಮ್ಮ ಧರ್ಮ ಮತ್ತು ನಮಗೆ ನಮ್ಮ ಧರ್ಮ.’ ‘ಧರ್ಮದ ವಿಷಯದಲ್ಲಿ ಬಲಾತ್ಕಾರ ಸರಿಯಲ್ಲ.’ (ಪವಿತ್ರ ಕುರ್‍ಆನ್: 2: 256) (109: 6)
  ನಿಜವಾಗಿ, ಇಂಥದ್ದೊಂದು ಕಲಬೆರಕೆಯ ಸೌಹಾರ್ದತೆಯು ಆಚರಣೆಯಲ್ಲಿರಬೇಕಾದುದು ಕೊಳ್ಳುಬಾಕ ಸಂಸ್ಕ್ರತಿಯ ಮಟ್ಟಿಗೆ ಬಹಳ ಅಗತ್ಯ. ಧರ್ಮವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸುತ್ತಾ ಬದುಕುವ ಸಮೂಹವೊಂದರ ಅಗತ್ಯ ಜಾಗತೀಕರಣಕ್ಕೆ ಮತ್ತು ಸಾಮ್ರಾಜ್ಯಶಾಹಿ ಆಲೋಚನೆಗಳಿಗೆ ತುರ್ತಾಗಿ ಬೇಕಾಗಿದೆ. ಒಂದು ಕಡೆ ಅಪ್ಪಟ ಭೌತಿಕ ವಾದಿಗಳನ್ನು ಅದು ತಯಾರಿಸುತ್ತಿರುವ ಹಾಗೆಯೇ ಇನ್ನೊಂದು ಕಡೆ, ಧರ್ಮನಿಷ್ಠರನ್ನು ಅಪಾಯಕಾರಿಗಳಂತೆ ಬಿಂಬಿಸುವುದಕ್ಕೆ ಅದು ತನ್ನ ಸರ್ವಸಾಧ್ಯ ಕಾಣಿಕೆಗಳನ್ನು ನೀಡುತ್ತಿದೆ. ಜಗತ್ತಿನ ಕೆಲವು ಕುಬೇರ ಕಂಪೆನಿಗಳು ಉತ್ಪನ್ನಗಳನ್ನು ತಯಾರಿಸಿ, ಅದಕ್ಕೆ ತಕ್ಕಂತೆ ಮಾಧ್ಯಮಗಳನ್ನು ಬಳಸಿ ಜನರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತಿವೆ. ಜನರು ಈ ಉತ್ಪನ್ನಗಳನ್ನು ಮನೆ ತುಂಬಿಸಿಕೊಳ್ಳುವುದೇ ನಿಜವಾದ ಪ್ರೆಸ್ಟೀಜು ಎಂದು ಭಾವಿಸುವ ಮೂಲಕ ಅದಕ್ಕಾಗಿ ಹಗಲಿರುಳು, ನ್ಯಾಯ-ಅನ್ಯಾಯವೆನ್ನದೆ ದುಡಿಯುತ್ತಾರೆ. ದೇಶದ ಒಟ್ಟು ವ್ಯವಸ್ಥೆ ಇವತ್ತು ಭ್ರಷ್ಟವಾಗಿದ್ದರೆ, ಜನರಲ್ಲಿ ತುಂಬಲಾದ ಈ ದುರಾಸೆಗೆ ಪ್ರಥಮ ಸ್ಥಾನವಿದೆ.
  ಇದರ ಇನ್ನೊಂದು ಮುಖ, ಈ ತೀವ್ರ ಭೌತಿಕವಾದವನ್ನು ಒಪ್ಪದವರನ್ನು ಅಪಾಯಕಾರಿಗಳಂತೆ ಬಿಂಬಿಸುವುದು. ಇವತ್ತು ಸಾಮ್ರಾಜ್ಯಶಾಹಿತ್ವದ ಪ್ರಥಮ ಶತ್ರು ಯಾವುದೇ ಒಂದು ರಾಷ್ಟ್ರವಲ್ಲ ಅಥವಾ ಸರ್ವಾಧಿಕಾರಿಯೋ ಯಾವುದಾದರೊಂದು ನಿರ್ದಿಷ್ಟ ಪಕ್ಷವೋ ಅಲ್ಲ. ಧರ್ಮವನ್ನು ಅದರ ನಿಜವಾದ ಅರ್ಥದಲ್ಲಿ ಯಾರೆಲ್ಲ ಪಾಲಿಸುತ್ತಾರೋ ಅವರ ಬಗ್ಗೆ ಸಾಮ್ರಾಜ್ಯಶಾಹಿತ್ವಕ್ಕೆ ತೀವ್ರ ಸಿಟ್ಟಿದೆ. ತಮ್ಮ ಭ್ರಮಾ ಜಗತ್ತಿನೊಳಗೆ ಅವರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವ ಅದು ಇವರು ತಮ್ಮ ವಿರುದ್ಧ ಧ್ವನಿಯೆತ್ತದಂತೆ ತಡೆಯುವುದಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಂತ್ರಗಳನ್ನು ಹೆಣೆದುಕೊಂಡಿದೆ. ಭಾರತದಂಥ ದೇಶಗಳಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗುವಂಥ ವಾತಾವರಣವನ್ನು ನಿರ್ಮಿಸಿದ್ದರೆ, ಇರಾಕ್ ಮತ್ತಿತರ ಕಡೆ ಸುನ್ನಿ-ಶಿಯಾ ಭಿನ್ನಾಭಿಪ್ರಾಯವನ್ನು, ಜನಾಂಗೀಯ ಮತ್ತು ಪ್ರಾದೇಶಿಕ ವಾದವನ್ನು ಸಂಘರ್ಷದ ವಿಷಯವಾಗಿ ತೂರಿಬಿಟ್ಟಿದೆ. ಸಾಮ್ರಾಜ್ಯಶಾಹಿತ್ವವನ್ನು ಮತ್ತು ಕಲಬೆರಕೆ ಧಾರ್ಮಿಕತೆ ಯನ್ನು ಬಲವಾಗಿ ವಿರೋಧಿಸುತ್ತಿದ್ದ ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಅನ್ನು ಹುಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿಯ ಮುಖಾಂತರ 40 ವರ್ಷಗಳವರೆಗೆ ದಮನಿಸಿದ್ದು ಇದೇ ಸಾಮ್ರಾಜ್ಯಶಾಹಿತ್ವ. ಇಲ್ಲದಿದ್ದರೆ ಫೆಲೆಸ್ತೀನ್, ಈಜಿಪ್ಟ್, ಸಿರಿಯ, ಜೋರ್ಡಾನ್, ಲೆಬನಾನ್.. ಮುಂತಾದ ರಾಷ್ಟ್ರಗಳ ಭೂಪ್ರದೇಶವನ್ನು ಆಕ್ರಮಿಸಿರುವ ಇಸ್ರೇಲ್‍ನ ವಿರುದ್ಧ ಒಂದಾಗುವುದರ ಬದಲು, ಲಿಬಿಯದ ಗದ್ದಾಫಿ, ಟ್ಯುನೀಶಿಯಾದ ಝೈನುಲ್ ಆಬಿದೀನ್, ಈಜಿಪ್ಟ್ ನ ಮುಬಾರಕ್, ಜೋರ್ಡಾನ್‍ನ ಸಾಲಿಹ್, ಸಿರಿಯದ ಅಸದ್..ರೆಲ್ಲ ತಮ್ಮದೇ ದೇಶದ ‘ಮುಸ್ಲಿಮ್ ಬ್ರದರ್‍ಹುಡ್’ಗಳ ವಿರುದ್ಧ ಒಂದಾಗುತ್ತಿದ್ದರೆ? ನಿಜವಾಗಿ, ಇಂಥ ಧರ್ಮದ ಇಂತಿಂಥ ಚಟುವಟಿಕೆಗಳು ಅಮಾನವೀಯವಾದದ್ದು, ಕ್ರೌರ್ಯದ್ದು ಎಂದು ಮಾಧ್ಯಮಗಳನ್ನು ಬಳಸಿ ಸಾಮ್ರಾಜ್ಯಶಾಹಿತ್ವವು ಗದ್ದಲವೆಬ್ಬಿಸುತ್ತದೆ. ಮಾತ್ರವಲ್ಲ, ಅದು ಹೇಗೆ ಇತರ ಧರ್ಮಗಳಿಗೆ ಅಪಾಯಕಾರಿ ಎಂಬುದನ್ನು ಸಿನಿಮಾ, ಕಾರ್ಟೂನ್ ಅಥವಾ ಇನ್ನಾವುದಾದರೂ ವಿಧಾನದ ಮೂಲಕ ಹೇಳುತ್ತಲೇ ಇರುತ್ತವೆ. ಹೀಗೆ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ತೆರೆಯ ಹಿಂದೆ ನಿಂತು ಅತ್ಯಂತ ಅಚ್ಚುಕಟ್ಟಾಗಿ ಅವು ಮಾಡುತ್ತಲೇ ಇರುತ್ತವೆ. ಆದ್ದರಿಂದಲೇ, ನನ್ನ ಮಿತ್ರನ ಧರ್ಮನಿಷ್ಠೆ ಆತನ ಸಹೋದ್ಯೋಗಿಗಳಿಗೆ ಕೋಮುವಾದದಂತೆ ಕಾಣಿಸಿದ್ದು. ಯಾಕೆಂದರೆ, ಕೋಮುವಾದ, ಸೌಹಾರ್ದತೆ.. ಎಂಬುದನ್ನೆಲ್ಲಾ ನಾವು ಇವತ್ತು ಕಲಿತದ್ದು ಧರ್ಮಗ್ರಂಥಗಳಿಂದಲ್ಲ, ಮಾಧ್ಯಮ ಜಾಹೀರಾತುಗಳಿಂದ. ನಿಜವಾಗಿ, ತನ್ನ ಧರ್ಮಕ್ಕೆ ನಿಷ್ಠವಾಗಿರುವುದು ಕೋಮುವಾದವಲ್ಲ. ತನ್ನ ಧರ್ಮದವನ ಅಪರಾಧವನ್ನು, ‘ತನ್ನ ಧರ್ಮದವ’ ಎಂಬ ಕಾರಣಕ್ಕಾಗಿ ಬೆಂಬಲಿಸುವುದೇ ಕೋಮುವಾದ. ಆದರೆ ಇವತ್ತಿನ ಸ್ಥಿತಿಯಾದರೂ ಹೇಗಿದೆ? ಸಮಾಜದಲ್ಲಿ ಕಳ್ಳಭಟ್ಟಿ ಇದೆ. ಮದ್ಯ ಇದೆ. ಲಾಟರಿ ಇದೆ. ಜೂಜು ಇದೆ.. ಹೀಗೆ ಧರ್ಮಗಳು ವಿರೋಧಿಸಿದ ಕೆಡುಕಿನ ಸಾವಿರ ಸಾವಿರ ಪ್ರಕಾರಗಳು ಇವೆ. ಆದರೆ, ಈ ಕುರಿತಂತೆ ಎಲ್ಲಾದರೂ ಗಲಭೆ ನಡೆಯುತ್ತದೆಯೇ? ಕಳ್ಳಭಟ್ಟಿ ತಯಾರಿಸುವವ ಇನ್ನೊಬ್ಬ ಕಳ್ಳಭಟ್ಟಿ ತಯಾರಕನ ಮೇಲೆ ಮುಗಿ ಬೀಳುತ್ತಾನಾ? ಒಂದು ಮದ್ಯದಂಗಡಿಯ ಮಾಲಿಕ ಇನ್ನೋರ್ವ ಮದ್ಯದಂಗಡಿ ಮಾಲಿಕನನ್ನು ಕೊಲ್ಲುತ್ತಾನಾ? ಸಿಕ್ಕಿಮ್ ಲಾಟರಿಯು ನಾಗಾಲ್ಯಾಂಡ್ ಲಾಟರಿಯನ್ನು ಮುಗಿಸಲು ನೋಡುವುದಿದೆಯೇ? ನಿಜವಾಗಿ ಎಲ್ಲ ಕೆಡುಕುಗಳ ಸ್ಥಿತಿಯೂ ಹೀಗೆಯೇ. ಒಂದು ರೀತಿಯಲ್ಲಿ, ಧರ್ಮಾನುಯಾಯಿಗಳು ಈ ಎಲ್ಲ ಕೆಡುಕುಗಳ ವಿರುದ್ಧ ಹೋರಾಡಬೇಕಿತ್ತು. ಆದರೆ ಇದು ಆಗುವ ಬದಲು; ಒಂದು ಪ್ರದೇಶಕ್ಕೆ ತೀರಾ ಕಂಟಕವಾಗಿರುವ ಹಿಂದೂ ಸಹೋದರನ ಮಾಲಿಕತ್ವದ ಮದ್ಯ ದಂಗಡಿಯ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದರೆ, ಆ ಮದ್ಯದಂಗಡಿ ಹಿಂದೂವಿಗೆ ಸೇರಿದ್ದು ಎಂಬ ಏಕೈಕ ಕಾರಣಕ್ಕಾಗಿ ಅದರ ಪರ ಹಿಂದೂಗಳು ಒಟ್ಟು ಸೇರುವಂಥ ಘೋರ ವಿಪರ್ಯಾಸಗಳು ನಡೆಯುತ್ತಿವೆ. ಅದೇ ರೀತಿ, ಅಕ್ರಮ ಕಸಾಯಿಖಾನೆ ಒಂದು ಕಡೆ ನಡೆಯುತ್ತಿದ್ದರೆ ಮತ್ತು ಅದರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದರೆ ಅದು ಮುಸ್ಲಿಮರಿಗೆ ಸೇರಿದ್ದೆಂಬ ಕಾರಣಕ್ಕಾಗಿ ಆ ಅಕ್ರಮ ಕಸಾಯಿಖಾನೆಯನ್ನು ಮುಸ್ಲಿಮರು ಬೆಂಬಲಿಸುವಂಥ ಧರ್ಮವಿರೋಧಿ ಕೃತ್ಯಗಳು ನಡೆಯುತ್ತಿವೆ. ನಿಜವಾಗಿ, ಕೋಮುವಾದ ಅಂದರೆ ಇದುವೇ. ಇದಕ್ಕೆ ಧರ್ಮಾನುಯಾಯಿಗಳ ಅಜ್ಞಾನ ಕಾರಣವೇ ಹೊರತು ಧರ್ಮ ಅಲ್ಲ. ಆದರೆ, ಇಂಥದ್ದೊಂದು ಅಜ್ಞಾನ ಸಮಾಜದಲ್ಲಿ ಗಟ್ಟಿಯಾಗಿ ಬೇರೂರುವುದನ್ನು ಸಾಮ್ರಾಜ್ಯಶಾಹಿ ಮತ್ತು ಮಾರುಕಟ್ಟೆ ದೊರೆಗಳು ಯಾವಾಗಲೂ ಬಯಸುತ್ತಲೇ ಇರುತ್ತಾರೆ. ಹೀಗಾದರೆ, ದೇಶದ ಬಹುದೊಡ್ಡ ಜನಸಂಖ್ಯೆಯನ್ನು ತಮ್ಮ ಉತ್ಪನ್ನಗಳ ಹಿಂದೆಯೇ ಬೀಳುವಂತೆ ಮಾಡುವುದಕ್ಕೆ ಈ ಮಾರುಕಟ್ಟೆ ದೊರೆಗಳಿಗೆ ಸುಲಭವಾಗುತ್ತದೆ. ನಿಜವಾಗಿ, ಇವತ್ತು ಯಾವುದೇ ಧರ್ಮಾನುಯಾಯಿ ಸಾಮ್ರಾಜ್ಯ ಶಾಹಿತ್ವದ ಬಗ್ಗೆ ಸರಿಯಾಗಿ ಅರಿತುಕೊಂಡರೆ ಆತ ಖಂಡಿತ ಇನ್ನೊಂದು ಧರ್ಮವನ್ನು ದ್ವೇಷಿಸುವ ಬದಲು ಸಾಮ್ರಾಜ್ಯಶಾಹಿತ್ವ ಹುಟ್ಟು ಹಾಕುತ್ತಿರುವ ಭ್ರಮೆಗಳ ಮತ್ತು ಅವುಗಳಿಂದಾಗಿ ಜನರು ಸ್ವೇಚ್ಛಾಚಾರಿಗಳಾಗುತ್ತಿರುವುದರ ವಿರುದ್ಧ ಹೋರಾಡುತ್ತಿದ್ದ.
  ಅಂದಹಾಗೆ, ಸೌಹಾರ್ದಕ್ಕೆ ವ್ಯಾಖ್ಯಾನವಾದರೂ ಏನು? ಇನ್ನೊಬ್ಬರಿಗೆ ಖುಷಿಯಾಗಲಿ ಎಂದು ತನ್ನ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೌಹಾರ್ದವಾಗುತ್ತದೆ? ತನ್ನ ಧರ್ಮ ವಿರೋಧಿಸಿದ್ದರೂ ತನ್ನ ಸಹೋದ್ಯೋಗಿಗಳಿಗೆ ನೋವಾಗದಿರಲಿ ಎಂಬುದಕ್ಕಾಗಿ ಓರ್ವ ಮದ್ಯ ಸೇವಿಸಬಹುದೇ? ಭ್ರಷ್ಟಾಚಾರದಲ್ಲಿ ಭಾಗಿಯಾಗಬಹುದೇ? ಕಳ್ಳತನಕ್ಕೆ ಸಹಕರಿಸಬಹುದೇ? ಏಕದೇವನದ್ದೋ ವಿಗ್ರಹದ್ದೋ ಪೂಜೆ ಮಾಡಬಹುದೇ.. ನಿಜವಾಗಿ, ಹೀಗೆಲ್ಲ ಮಾಡುವುದು ಸೌಹಾರ್ದವಾಗುತ್ತದೆಂದಾದರೆ ಸೌಹಾರ್ದದ ಅರ್ಥವೇ ‘ವಂಚನೆ’ ಎಂದಾಗಿ ಬಿಡುತ್ತದೆ. ಯಾಕೆಂದರೆ, ಆತ ಹೀಗೆಲ್ಲ ಮಾಡುವುದು ಆತನ ಇಷ್ಟದಂತೆ ಅಲ್ಲ, ಇನ್ನಾರದೋ ಖುಷಿಗಾಗಿ. ಇದು ಎಷ್ಟು ಅಪಾಯಕಾರಿ ಎಂದರೆ, ಓರ್ವ ಅಬ್ದುಲ್ ನಾರಾಯಣ್ ಡಿಸೋಜ ಎಂದು ತನ್ನನ್ನು ಕರೆದುಕೊಂಡಂತೆ. ಮುಸ್ಲಿಮರಲ್ಲಿ ಆತ ಅಬ್ದುಲ್ಲ ಎಂದು ಗುರುತಿಸಿಕೊಳ್ಳುತ್ತಾನೆ. ಹಿಂದೂಗಳು ಸಿಕ್ಕರೆ ನಾರಾಯಣ್ ಎಂದೂ ಕ್ರೈಸ್ತರನ್ನು ಕಂಡರೆ ಡಿಸೋಜ ಎಂದೂ ಪರಿಚಯಿಸಿ ಕೊಳ್ಳುತ್ತಾನೆ. ನಿಜವಾಗಿ, ಆತ ಮಾಡುತ್ತಿರುವುದು ವಂಚನೆ. ಪರಿಸ್ಥಿತಿಯ ಲಾಭ ಪಡಕೊಳ್ಳುವುದಕ್ಕಾಗಿ ಆತ ವಿವಿಧ ವೇಷ ತೊಡುತ್ತಿರುತ್ತಾನೆ. ಒಂದು ರೀತಿಯಲ್ಲಿ, ಈತನಷ್ಟು ಅಪಾಯಕಾರಿಗಳು ಇನ್ನಾರೂ ಇರುವುದಿಲ್ಲ. ಸಮಾಜದಲ್ಲಿ ಇವತ್ತು ಕೆಲವರು ಒತ್ತಾಯಪಡಿಸುತ್ತಿರುವುದು ಈ ಬಗೆಯ ಸೌಹಾರ್ದವನ್ನು. ಮುಸ್ಲಿಮನೊಬ್ಬ ಗಣಪತಿಗೆ ಪೂಜೆ ಮಾಡಿದರೆ, ಕೃಷ್ಣಾಷ್ಟಮಿಯಲ್ಲಿ ವೇಷ ಹಾಕಿದರೆ ಅಥವಾ ಹಿಂದೂವೊಬ್ಬ ದರ್ಗಾಕ್ಕೋ ಇನ್ನಾವುದಕ್ಕೋ ನಡಕೊಂಡರೆ.. ಅದು ಸೌಹಾರ್ದ ಖಂಡಿತ ಅಲ್ಲ. ಅದೊಂದು ಬಗೆಯ ನಕಲಿ ಧಾರ್ಮಿಕತೆ. ಸೌಹಾರ್ದ ಅಂದರೆ ತನ್ನ ಧರ್ಮ ವಿರೋಧಿಸಿದ ಕಾರ್ಯಗಳನ್ನು ಮಾಡುವುದಲ್ಲ, ಬದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೌರವಿಸುವುದು. ಆದ್ದರಿಂದಲೇ ಧರ್ಮನಿಷ್ಠ ವ್ಯಕ್ತಿ ಎಂದೂ ಕೋಮುವಾದಿಯಾಗುವುದಿಲ್ಲ. ಸೌಹಾರ್ದ ವಿರೋಧಿಯೂ ಆಗುವುದಿಲ್ಲ. ಆದರೆ ಇವತ್ತು ಕೋಮುವಾದ ಮತ್ತು ಸೌಹಾರ್ದದ ಅರ್ಥವನ್ನೇ ಕೆಲವರು ಕೆಡಿಸಿಬಿಟ್ಟಿರುವುದರಿಂದ ಧರ್ಮಿಷ್ಟರೇ ಇವತ್ತು ಕೋಮುವಾದಿಗಳು ಮತ್ತು ಸೌಹಾರ್ದ ವಿರೋಧಿಗಳಾಗಿ ಗುರುತಿಗೀಡಾಗುತ್ತಿದ್ದಾರೆ.
  ಮಿತ್ರನ ಸಂಕಟ ಕೂಡಾ ಇದುವೇ..

Monday, November 26, 2012

ಇರ್ಶಾದ್ ಅಲಿಯ ಪತ್ರವೂ ನಾಪತ್ತೆಯಾಗುವ ಮೌಲ್ವಿಯೋ

2008. ದೆಹಲಿಯ ಬಟ್ಲಾ ಹೌಸ್‍ನಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುತ್ತದೆ. ಇಬ್ಬರು ಶಂಕಿತ ಯುವಕರು ಮತ್ತು ಓರ್ವ ಪೊಲೀಸಧಿಕಾರಿ ಕಾರ್ಯಾಚರಣೆಯಲ್ಲಿ ಸಾವಿಗೀಡಾಗುತ್ತಾರೆ. ಸಾವಿಗೀಡಾದವರಲ್ಲಿ ದೆಹಲಿಯ ಜಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಇದ್ದ. ಆ ಕಾರ್ಯಾಚರಣೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ. ಅದೊಂದು ನಕಲಿ ಕಾರ್ಯಾಚರಣೆಯೆಂದು ದಿಗ್ವಿಜಯ್ ಸಿಂಗ್ ಆರೋಪಿಸುತ್ತಾರೆ. ಜಾಮಿಯಾ ವಿಶ್ವವಿದ್ಯಾಲಯದಲ್ಲೂ ಈ ಕುರಿತಂತೆ ಸಾಕಷ್ಟು ಚರ್ಚೆ, ಸಮಾಲೋಚನೆಗಳು ನಡೆಯುತ್ತವೆ. ಈ ಮಧ್ಯೆ ಪೊಲೀಸ್ ಮೂಲಗಳ ಹೆಸರನ್ನಿಟ್ಟುಕೊಂಡು ಮುಸ್ಲಿಮ್ ಉಗ್ರವಾದದ ಕತೆಗಳು ದಿನಂಪ್ರತಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ದೆಹಲಿಯ ಆಸುಪಾಸಿನಿಂದ ಮುಸ್ಲಿಮ್ ಯುವಕರನ್ನು ಬಂಧಿಸಿರುವ ಬಗ್ಗೆ, ಅವರಿಗೂ ಪಾಕ್ ಮೂಲದ ಹುಜಿಯೋ ಲಷ್ಕರೋ, ಜೈಶೋ ಅಥವಾ ಇನ್ನಾವುದಾದರೂ ಉಗ್ರವಾದಿ ಸಂಘಟನೆಗಳಿಗೂ ಇರುವ ಸಂಬಂಧದ ಬಗ್ಗೆ ವರದಿಗಳು ಬರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಉಪಾಧ್ಯಾಯರ ಏಕತಾ ಸಂಘ(Jamia Teachers Solidarity Association - JTSA)ವನ್ನು ಸ್ಥಾಪಿಸಲಾಗುತ್ತದಲ್ಲದೇ ಭಯೋತ್ಪಾದನೆಯ ಆರೋಪದಲ್ಲಿ ಬಂಧನಕ್ಕೀಡಾಗುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗುತ್ತದೆ.
  ಜಸ್ಟಿಸ್ ರಾಜಿಂದರ್ ಸಾಚಾರ್
  ಅರುಂಧತಿ ರಾಯ್
  ಜವಾಹರ್ ರೋಜಾ
  ಮನೀಶ್ ಸೇಥಿ..
ಮುಂತಾದ 8 ಮಂದಿ ಪ್ರಭಾವಿಗಳ ತಂಡ 4 ವರ್ಷಗಳ ಕಾಲ ಸಮೀಕ್ಷೆ ನಡೆಸಿ 2012 ಸೆ. 18ರಂದು ದೆಹಲಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸುತ್ತದೆ. 'Framed, Damned, Acquitted - 'Dossiers of a Very Special Cell ' ಎಂಬ 200 ಪುಟಗಳ ಈ ವರದಿಯನ್ನು ಬಿಡುಗಡೆಗೊಳಿಸುತ್ತಾ ಅರುಂಧತಿ ರಾಯ್ ಹೀಗೆ ಹೇಳುತ್ತಾರೆ:
  ಬಾಬರೀ ಮಸೀದಿಯ ಬೀಗವನ್ನು ತೆರೆದ ಈ ದೇಶದ ವ್ಯವಸ್ಥೆಯು ಆ ಬಳಿಕ ಭಾರತದ ಮಾರುಕಟ್ಟೆಯನ್ನು ವಿದೇಶಿ ಕಂಪೆನಿಗಳಿಗೆ ಮುಕ್ತವಾಗಿಸಿಬಿಟ್ಟಿತು. ಮಾತ್ರವಲ್ಲ, ಅಮೇರಿಕ ಮತ್ತು ಇಸ್ರೇಲ್‍ನ ಜೊತೆ ಆಪ್ತ ಸಂಬಂಧವನ್ನೂ ಬೆಳೆಸಿಕೊಂಡಿತು. ನಿಜವಾಗಿ ಈ ದೇಶವನ್ನು ಮಿಲಿಟರೀಕರಣಗೊಳಿಸುವುದಕ್ಕಾಗಿ ಇಲ್ಲಿನ ವ್ಯವಸ್ಥೆಯು ಇಸ್ಲಾಮಿಕ್ ಟೆರರಿಸಮ್ ಮತ್ತು ಮಾವೋಯಿಸ್ಟ್ ಟೆರರಿಸಮ್ ಎಂಬ ಗುಮ್ಮವನ್ನು ಸೃಷ್ಟಿಸಿದೆ..’
  ಹಾಗಂತ, ಅರುಂಧತಿ ರಾಯ್‍ರ ಆರೋಪವನ್ನು ಅಲ್ಲಗಳೆಯುವುದಾದರೂ ಹೇಗೆ?
ಉಪಾಧ್ಯಾಯರ ಸಂಘ (JTSA) ಬಿಡುಗಡೆಗೊಳಿಸಿದ 200 ಪುಟಗಳ ವರದಿಯಲ್ಲಿ, ಭಯೋತ್ಪಾದನೆಯ ಆರೋಪ ಹೊತ್ತು ಕೆಲವಾರು ವರ್ಷಗಳನ್ನು ಜೈಲಲ್ಲಿ ಕಳೆದು ನಿರಪರಾಧಿಯೆಂದು ಬಿಡುಗಡೆಗೊಂಡ 16 ಮುಸ್ಲಿಮ್ ಯುವಕರ ದಾರುಣ ವಿವರಗಳಿವೆ. 14 ವರ್ಷಗಳ ಕಾಲ ತಿಹಾರ್ ಜೈಲಲ್ಲಿದ್ದು, ಬಳಿಕ ಅಮಾಯಕನೆಂದು ಬಿಡುಗಡೆಗೊಂಡ ಅಮೀರ್ ಅಲಿ, 5 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಇರ್ಷಾದ್ ಅಲಿ.. ಸಹಿತ ಎಲ್ಲರದ್ದೂ ಒಂದೊಂದು ಕತೆ-ವ್ಯಥೆ. ಇರ್ಷಾದ್ ಅಲಿಯಂತೂ ದೆಹಲಿಯ ವಿಶೇಷ ಪೊಲೀಸ್ ದಳಕ್ಕೆ ಮಾಹಿತಿದಾರನಾಗಿದ್ದವ. ಆದರೆ ಪೊಲೀಸರು ವಹಿಸಿದ ಕೆಲಸವೊಂದನ್ನು ನಿರ್ವಹಿಸಲು ಒಪ್ಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ಆತನನ್ನು 2006ರಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು. ಆತ ಅಲ್ಲಿಂದಲೇ ಪ್ರಧಾನಿ ಮನ್ ಮೋಹನ್ ಸಿಂಗ್‍ರಿಗೆ ಪತ್ರ ಬರೆದಿದ್ದ. ಆ ಪತ್ರದ ವಿವರಣೆಯೂ JTSA  ವರದಿಯಲ್ಲಿದೆ.
‘..ಭಯೋತ್ಪಾದಕರ ಕುರಿತಂತೆ ದೆಹಲಿ ಪೆÇಲೀಸರು ಏನೇನು  ಹೇಳುತ್ತಿರುತ್ತಾರೋ ಅವೆಲ್ಲ ಸತ್ಯವಲ್ಲ. ನಿಜವಾಗಿ ಭಯೋತ್ಪಾದಕರನ್ನು ಸೃಷ್ಟಿಸುವುದು ಪೊಲೀಸರೇ. ಭಡ್ತಿಗೆ ಮತ್ತು ಪುರಸ್ಕಾರಕ್ಕಾಗಿ ಅವರೇ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ. ಇಸ್ಲಾಮಿನ ಬಗ್ಗೆ ಒಂದಷ್ಟು ತಿಳಿದುಕೊಂಡ ಯುವಕರನ್ನು ಪೊಲೀಸರು ತಮ್ಮ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಲ್ಲದೇ ಅವರಿಗೆ ಇಸ್ಲಾಮೀ  ಚಿಹ್ನೆಯಾದ ಗಡ್ಡ ಮತ್ತು ಡ್ರೆಸ್ ತೊಡುವಂತೆ ಆದೇಶಿಸುತ್ತಾರೆ. ಅದಕ್ಕಾಗಿ ದುಡ್ಡೂ ಕೊಡುತ್ತಾರೆ. ಮಾತ್ರವಲ್ಲ, ಮೌಲ್ವಿ ಎಂಬ ಗುರುತನ್ನು ಹಚ್ಚಿ ಬಾಡಿಗೆ ಮನೆಗಳಲ್ಲಿ ಇರಿಸುತ್ತಾರೆ. ಈ ನಕಲಿ ಮೌಲ್ವಿಗಳು ನಮಾಝ್‍ಗಾಗಿ ಮಸೀದಿಗೆ ಹೋಗುವುದು, ಭಾರೀ ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವುದೆಲ್ಲ ನಡೆಯುತ್ತಿರುತ್ತದೆ. ಕ್ರಮೇಣ ಸುತ್ತಮುತ್ತಲ ಜನರ ಸ್ನೇಹ ಬೆಳೆಸುತ್ತಾರೆ. ಇಸ್ಲಾಮಿಗೆ ತ್ಯಾಗ ಮನೋಭಾವದ ಯುವಕರ ಅಗತ್ಯ ಎಷ್ಟಿದೆ ಎಂಬುದನ್ನು ಮುಸ್ಲಿಮರ ಕರುಣಾಜನಕ ಕತೆಗಳನ್ನು ಹೇಳುತ್ತಾ ಮನವರಿಕೆ ಮಾಡಿಸುತ್ತಾರೆ. ಯುವಕರು ಆತನ ಮಾತಿಗೆ ಮರುಳಾಗಿರುವರೆಂದು ಖಚಿತವಾದ ಬಳಿಕ ಆತ ತಾನು ಲಷ್ಕರೋ, ಹುಜಿಯೋ ಅಥವಾ ಇನ್ನಾವುದೋ ಸಂಘಟನೆಯ ಕಮಾಂಡರ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಭಯೋ ತ್ಪಾದನೆಯ ಯೋಜನೆಗಳನ್ನು ಯುವಕರ ಜೊತೆ ಸೇರಿಕೊಂಡು ರೂಪಿಸುತ್ತಾನೆ. ಬಳಿಕ ಪೊಲೀಸರೇ ನೀಡುವ ಕೆಲವೊಂದು ಶಸ್ತ್ರಾಸ್ತ್ರಗಳನ್ನು ಗುಂಪಿಗೆ ವಿತರಿಸುತ್ತಾನೆ. ಸಣ್ಣ ಮಟ್ಟಿನ ತರಬೇತಿಯನ್ನೂ ನೀಡುತ್ತಾನೆ. ಆ ಬಳಿಕ ಆ ಯುವಕರ ಪ್ರತಿ ಚಲನ ವಲನಗಳನ್ನೂ ಪೊಲೀಸರಿಗೆ ಒಪ್ಪಿಸುತ್ತಿರುತ್ತಾನೆ. ಅಂತಿಮವಾಗಿ ಉಗ್ರ ಕೃತ್ಯಕ್ಕೆ ಅವರನ್ನು ಕಳುಹಿಸಿ, ಅದರ ಮಾಹಿತಿಯನ್ನು ಪೊಲೀಸರಿಗೆ ನೀಡಿ ಪೊಲೀಸರು ಬಂಧಿಸುವಂತೆ ನೋಡಿಕೊಳ್ಳುತ್ತಾನೆ. ಮಾತ್ರವಲ್ಲ, ಆತ ಅಲ್ಲಿಂದ ನಾಪತ್ತೆಯಾಗಿ ಇನ್ನೊಂದು ಪ್ರದೇಶಕ್ಕೆ ಹೋಗುತ್ತಾನಲ್ಲದೇ, ಪೊಲೀಸರ ನಿರ್ದೇಶನದಂತೆ ಬೇರೊಂದು ಕಾರ್ಯಾಚರಣೆಯಲ್ಲಿ ತೊಡಗುತ್ತಾನೆ..'
  ಇರ್ಷಾದ್ ಅಲಿ ಬರೆದಿರುವ ಈ ಪತ್ರ ಇನ್ನೂ ದೀರ್ಘವಿದೆ. ಭದ್ರತಾ ಸಂಸ್ಥೆಗಳು ದೇಶವನ್ನು ರಕ್ಷಿಸುತ್ತಿಲ್ಲ, ಬದಲು ಅಭದ್ರತೆಗೆ ತಳ್ಳುತ್ತಿವೆ, ಆದ್ದರಿಂದ ಈ ಕುರಿತಂತೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್‍ರಿಗೆ ಬರೆದ ಪತ್ರದಲ್ಲಿ ಆತ ಮನವಿ ಮಾಡಿಕೊಂಡಿದ್ದಾನೆ.
ಇರ್ಷಾದ್ ಅಲಿ
  ಅಂದಹಾಗೆ, ಭಯೋತ್ಪಾದನಾ ಯೋಜನೆಯನ್ನು ಬೇಧಿಸಿದ್ದಾಗಿ ಹೇಳಿಕೊಳ್ಳುವ ಪೊಲೀಸರು, 'ಪ್ರಮುಖ ರೂವಾರಿ ಮೌಲ್ವಿ ನಾಪತ್ತೆ' ಎಂದು ಘೋಷಿಸುವುದಿದೆ. 3 ವರ್ಷಗಳ ಹಿಂದೆ ದೆಹಲಿ ಪೊಲೀಸರು ಮಂಗಳೂರು ಸುತ್ತಮುತ್ತ ದಾಳಿ ನಡೆಸಿ ಮೊರ್ನಾಲ್ಕು ಮಂದಿಯನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದಾಗಲೂ, 'ಮೌಲ್ವಿ ನಾಪತ್ತೆಯಾಗಿರುವುದನ್ನು' ಮಾಧ್ಯಮಗಳಲ್ಲಿ ತೇಲಿಸಿ ಬಿಟ್ಟಿದ್ದರು. ಬಹುಶಃ ಇರ್ಷಾದ್ ಅಲಿಯ ಪತ್ರ ಒಂದಷ್ಟು ನಂಬಿಕೆಗೆ ಅರ್ಹ ಅನ್ನಿಸುವುದು ಈ ಕಾರಣದಿಂದಲೇ. ನಿಜವಾಗಿ, ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಬಂಧನಕ್ಕೀಡಾಗುವುದಕ್ಕೂ ಕಳ್ಳತನದ ಆರೋಪಕ್ಕೂ ತುಂಬಾ ವ್ಯತ್ಯಾಸ ಇದೆ. ಭಯೋತ್ಪಾದನೆಯ ಕುರಿತಂತೆ ಮಾಧ್ಯಮಗಳು ಈ ದೇಶದಲ್ಲಿ ಎಂಥ ಅಪಾಯಕಾರಿ ವಾತಾವರಣವನ್ನು ನಿರ್ಮಿಸಿ ಬಿಟ್ಟಿವೆಯೆಂದರೆ, ಆರೋಪಗಳ ಬಗ್ಗೆ ಅನುಮಾನಿಸುವುದಕ್ಕೂ ಭಯಪಡುವಷ್ಟು. ಬಂಧಿತ ಯುವಕರ ಅಮಾಯಕತೆಯ ಬಗ್ಗೆ ಯಾರಾದರೂ ಮಾತಾಡಿಬಿಟ್ಟರೆ ಭಯೋತ್ಪಾದಕರ ಬೆಂಬಲಿಗರು ಎಂಬ ಹಣೆಪಟ್ಟಿಯನ್ನು ಅವು ಹಚ್ಚಿ ಬಿಡುತ್ತವೆ. ಆದ್ದರಿಂದಲೇ, ಕಸಬ್‍ನನ್ನು ಗಲ್ಲಿಗೇರಿಸಿದ ಸುದ್ದಿಯ ಪಕ್ಕದಲ್ಲೇ, 'ಅಫ್ಝಲ್ ಗುರು ಯಾವಾಗ?' ಎಂಬ ಶೀರ್ಷಿಕೆಯಲ್ಲಿ ಕೆಲವು ಕನ್ನಡ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು. ಇವೆರಡೂ ಭಿನ್ನ ಪ್ರಕರಣಗಳು ಎಂಬುದು ಗೊತ್ತಿದ್ದೂ ಅವು ಸುದ್ದಿಯನ್ನು ಭಾವುಕಗೊಳಿಸಿದುವು. ಇರ್ಷಾದ್ ಅಲಿಯಂತೆ ಅಫ್ಝಲ್ ಗುರುವೂ ಪೊಲೀಸ್ ಮಾಹಿತಿದಾರನಾಗಿದ್ದ. ಪಾರ್ಲಿಮೆಂಟ್ ದಾಳಿಯಲ್ಲಿ ಆತನ ಪಾತ್ರದ ಬಗ್ಗೆ, ಅದರ ಹಿಂದಿರಬಹುದಾದ ರಾಜಕೀಯ ಕೈವಾಡದ ಬಗ್ಗೆ ಅರುಂಧತಿ ರಾಯ್ ಸಹಿತ ಕೆಲವಾರು ಮಂದಿ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಮ್ ಕೋರ್ಟು ಕೂಡಾ, 'ಈ ದೇಶದ ನಾಗರಿಕರ ಭಾವನೆಗಳನ್ನು ಪರಿಗಣಿಸಿ ಅಫ್ಝಲ್ ಗುರುವಿಗೆ ಗಲ್ಲು ವಿಧಿಸುತ್ತಿದ್ದೇವೆ' ಎಂದು ಹೇಳಿದೆಯೇ ಹೊರತು, ಪೂರ್ಣ ಸಾಕ್ಷ್ಯಗಳ ಆಧಾರದಲ್ಲಿ ಅಲ್ಲ. ಅಂದಹಾಗೆ, ಹೀಗೆಂದ ಮಾತ್ರಕ್ಕೇ, ಅಫ್ಝಲ್ ಗುರು ನಿರಪರಾಧಿಯೆಂದೋ ಆತನಿಗೆ ಗಲ್ಲು ವಿಧಿಸಬಾರದೆಂದೋ ಹೇಳುತ್ತಿಲ್ಲ. ಅದನ್ನು ಸುಪ್ರೀಮ್ ಕೋರ್ಟು ಈಗಾಗಲೇ ತೀರ್ಮಾನಿಸಿಬಿಟ್ಟಿದೆ. ಆದರೆ ಆತನನ್ನು ಮುಸ್ಲಿಮರ ಪ್ರತಿನಿಧಿಯೆಂಬಂತೆ ಬಿಂಬಿಸಿ ಮುಸ್ಲಿಮರನ್ನು ಪರೋಕ್ಷವಾಗಿ ಭಯೋತ್ಪಾದಕರೆಂದು ಛೇಡಿಸುವ ಯತ್ನವನ್ನು ಪತ್ರಿಕೆಗಳು ಮಾಡಿದ್ದಿಲ್ಲವೇ? ಕಸಬ್‍ನನ್ನು ಗಲ್ಲಿಗೇರಿಸಿದ ಲಾಭವನ್ನು ಕಾಂಗ್ರೆಸ್ ಪಕ್ಷ  ಪಡೆದುಕೊಳ್ಳದಿರಲಿ ಎಂಬ ಉದ್ದೇಶದಿಂದ ಕಸಬ್‍ನ ಜೊತೆಗೇ ಅಫ್ಝಲ್‍ನ ಗಲ್ಲು ಸುದ್ದಿಯನ್ನು ಅವು ತೇಲಿಸಿ ಬಿಟ್ಟಿವೆ ಎಂದು ಅನ್ನಿಸುವುದಿಲ್ಲವೇ? ಇಷ್ಟಕ್ಕೂ, ಕಸಬ್‍ನನ್ನು ಮುಂದಿಟ್ಟುಕೊಂಡು ಅಫ್ಝಲ್ ಯಾವಾಗ ಎಂದು ಕೇಳಿದ ಇವೇ ಪತ್ರಿಕೆಗಳು ಗುಜರಾತ್‍ನ ಮಾಯಾ ಕೊಡ್ನಾನಿಯನ್ನು ಎದುರಿಟ್ಟುಕೊಂಡು ಮೋದಿ ಯಾವಾಗ ಎಂದು ಕೇಳಿಲ್ಲವಲ್ಲ, ಯಾಕೆ? ಸಾಧ್ವಿ ಪ್ರಜ್ಞಾ ಸಿಂಗ್‍ಳನ್ನು ಮುಂದಿಟ್ಟು, ತೊಗಾಡಿಯಾ ಯಾವಾಗ ಎಂದು ಕೇಳಬಹುದಿತ್ತಲ್ಲವೇ? ನಾಗರಾಜ್ ಜಂಬಗಿಯ ಬಂಧನದ ಸುದ್ದಿಯೊಂದಿಗೆ ಮುತಾಲಿಕ್ ಯಾವಾಗ ಎಂದು ಪ್ರಶ್ನಿಸುವ ಅವಕಾಶವೂ ಇತ್ತಲ್ಲವೇ? ಮನುಷ್ಯರನ್ನು ಬಾಂಬಿಟ್ಟು ಕೊಲ್ಲುವುದು ಮಾತ್ರ ಭಯೋತ್ಪಾದನೆ, ಉಳಿದಂತೆ ಪೆಟ್ರೋಲ್ ಸುರಿದೋ ತಲವಾರಿನಿಂದ ಇರಿದೋ ಸಾಮೂಹಿಕವಾಗಿ ಕೊಲ್ಲುವುದೆಲ್ಲ ದೇಶಪ್ರೇಮಿ ಕೃತ್ಯಗಳು ಎಂದು ಇವು ಭಾವಿಸಿವೆಯೇ?
  ಬಹುಶಃ,
1. ಸುಪ್ರೀಮ್ ಕೋರ್ಟು ಯಾರನ್ನು ಅಮಾಯಕರೆಂದು ಹೇಳಿ ಬಿಡುಗಡೆಗೊಳಿಸಿದೆಯೋ ಅವರಿಗೆ ಸೂಕ್ತ ಪರಿಹಾರವನ್ನು ಕೊಡಬೇಕು.
2. ಸರಕಾರ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
3. ಅಮಾಯಕರ ವಿರುದ್ಧ ವಿವಿಧ ಕತೆಗಳನ್ನು ಹೆಣೆದು ಭಯೋತ್ಪಾದಕರಾಗಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಮತ್ತು ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು.
4. ಹೀಗೆ ತಪ್ಪಾಗಿ ಜೈಲಲ್ಲಿರುವವರನ್ನು ಪತ್ತೆ ಹಚ್ಚುವುದಕ್ಕಾಗಿ ರಾಷ್ಟ್ರೀಯ ತನಿಖಾ ಆಯೋಗದ ರಚನೆಯಾಗಬೇಕು..
  ಎಂದು ಮುಂತಾಗಿ 8 ಬೇಡಿಕೆಗಳನ್ನು ಮುಂದಿಟ್ಟ JTSA ಯ ಬೇಡಿಕೆಗಳಿಗೆ ಬಹುಶಃ ಈ ಮನಸ್ಥಿತಿಯಿಂದಾಗಿಯೇ ಪತ್ರಿಕೆಗಳಲ್ಲಿ ಪ್ರಚಾರ ಸಿಗದಿದ್ದುದು. ಇಲ್ಲದಿದ್ದರೆ, ಸಾಚಾರ್, ರಾಯ್, ರೋಜಾ ರಂಥ ಪ್ರಮುಖರಿದ್ದೂ,  'Framed, Damned, Acquitted - 'Dossiers of a Very Special Cell ' ಎಂಬ ಸಮೀಕ್ಷಾ ವರದಿಯು ಸುದ್ದಿಯಾಗಲಿಲ್ಲ ಅಂದರೆ ಏನರ್ಥ?
  1996ರಲ್ಲಿ ದೆಹಲಿಯ ಲಜ್‍ಪತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮುಹಮ್ಮದ್ ಅಲಿ ಭಟ್ ಮತ್ತು ಮಿರ್ಝಾ ನಿಸಾರ್ ಹುಸೈನ್‍ರಿಗೆ ಕೆಳಕೋರ್ಟು ನೀಡಿದ್ದ ಮರಣ ದಂಡನೆಯನ್ನು ರದ್ದುಪಡಿಸಿ ಅವರನ್ನು ಅಮಾಯಕರೆಂದು ದೆಹಲಿ ಹೈಕೋರ್ಟು  ಬಿಡುಗಡೆಗೊಳಿಸಿದ ಸುದ್ದಿಯನ್ನು (ದಿ ಹಿಂದೂ 2012, ನವೆಂಬರ್ 23) ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ ಈ ಪ್ರಕರಣವನ್ನು ನಿರ್ವಹಿಸಿದ್ದೂ ದೆಹಲಿ ಪೊಲೀಸರೇ.

Tuesday, November 20, 2012

ಚೆಗುವೆರಾರನ್ನು ಓದುತ್ತಾ ಮೌದೂದಿಯವರ ಬಗ್ಗೆ ಬರೆಯಬೇಕೆನಿಸಿತು..

ಸೈಯದ್ ಮೌದೂದಿ
1925. ಅವಿಭಜಿತ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆಗಳು ಸ್ಫೋಟಗೊಂಡಿದ್ದುವು. ‘ಭಾರತದಿಂದ ಮುಸ್ಲಿಮರನ್ನು ಓಡಿಸಬೇಕು, ಮಕ್ಕಾದ ಕಅಬಾಲಯದಲ್ಲಿ ಭಗವಾಧ್ವಜವನ್ನು ಹಾರಿಸಬೇಕೆಂಬ..’ ಘೋಷಣೆಯನ್ನು ಕೆಲವು ಹಿಂದೂ ಸಂಘಟನೆಗಳು ಕೂಗತೊಡಗಿದ್ದುವು. ಮುಸ್ಲಿಮರ ವಿರುದ್ಧ ಹೋರಾಡುವುದಕ್ಕಾಗಿ ಹಿಂದೂ ಮಹಿಳೆಯರೂ ಆಯುಧ ಎತ್ತಿ ಕೊಳ್ಳಬೇಕೆಂದು ಪಂಡಿತ್ ಮದನ್ ಮೋಹನ್ ಮಾಲವೀಯ, ಲಾಲಾ ಲಜಪತ್ ರಾಯ್, ಸ್ವಾಮಿ ಶ್ರದ್ಧಾನಂದ ಮೊದಲಾದವರು ಬಹಿರಂಗವಾಗಿಯೇ ಕರೆಕೊಟ್ಟರು. ಈ ಸಂದರ್ಭದಲ್ಲೇ ಪ್ರವಾದಿಯವರನ್ನು(ಸ) ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವ, ‘ರಂಗೀಲಾ ರಸೂಲ್’ ಎಂಬ ಕೃತಿಯೊಂದು ಹೊರಬಂತು. ರಾಜಗೋಪಾಲ್ ಎಂಬ ಪುಸ್ತಕ ವ್ಯಾಪಾರಿ ಪ್ರಕಟಿಸಿದ್ದ ಆ ಕೃತಿಯನ್ನು ಬರೆದಿರುವುದು, ಹಿಂದೂ ಮಹಾ ಸಭಾದ ನಾಯಕ ಮತ್ತು ಶುದ್ಧಿ ಚಳವಳಿಯ ರೂವಾರಿಯಾಗಿದ್ದ ಸ್ವಾಮಿ ಶ್ರದ್ಧಾನಂದರು ಎಂಬೊಂದು ಅನುಮಾನ ಎಲ್ಲೆಡೆ ಹರಡಿಕೊಂಡಿತು. ಮುಸ್ಲಿಮರು ಪ್ರತಿಭಟಿಸಿದರು. ಪ್ರಕಾಶಕರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದರು. ಆದರೆ ಕೆಳ ನ್ಯಾಯಾಲಯ ಪ್ರಕಾಶಕರನ್ನು ದೋಷಿ ಎಂದು ಕರೆದರೂ ಲಾಹೋರ್ ಹೈಕೋರ್ಟು ನಿರ್ದೋಷಿ ಎಂದಿತು. ಮತ್ತೆ ಪ್ರತಿಭಟನೆಗಳಾದುವು. ಇಂಥ ಹೊತ್ತಲ್ಲೇ ಅಬ್ದುರ್ರಶೀದ್ ಎಂಬೋರ್ವ ವ್ಯಕ್ತಿ ಸ್ವಾಮಿ ಶ್ರದ್ಧಾನಂದರನ್ನು 1926 ಫೆಬ್ರವರಿಯಲ್ಲಿ ಹತ್ಯೆ ಮಾಡಿದ. ಇದು, ಮುಸ್ಲಿಮರ ವಿರುದ್ಧ ದ್ವೇಷದ ಅಭಿಯಾನ ಕೈಗೊಂಡವರನ್ನು ಮಾತ್ರವಲ್ಲ, ತಟಸ್ಥ ನಿಲುವಿನವರನ್ನು ಕೂಡ ಒಂದು ಹಂತದವರೆಗೆ ಕೆರಳಿಸಿಬಿಟ್ಟಿತು. ಜಿಹಾದ್‍ನ ಔಚಿತ್ಯವನ್ನೇ ಅವರು ಪ್ರಶ್ನಿಸತೊಡಗಿದರು. ‘ಇಸ್ಲಾಮ್ ಖಡ್ಗದಿಂದ ಹರಡಿದೆ, ಅದರಲ್ಲಿ ಸಹನೆಗೆ ಜಾಗವಿಲ್ಲ, ಕಾಫಿರರನ್ನು ಕೊಂದವರೆಲ್ಲಾ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಕುರ್‍ಆನಿನಲ್ಲಿ ಇದೆ..’ ಎಂದೆಲ್ಲಾ ಹಿಂದೂ ಮಹಾ ಸಭಾದ ನಾಯಕರಷ್ಟೇ ಅಲ್ಲ, ಕೆಲವು ಕಾಂಗ್ರೆಸ್ ಮುಂದಾಳುಗಳೂ ಹೇಳತೊಡಗಿದರು. ವಿಷಾದ ಏನೆಂದರೆ, ಈ ಎಲ್ಲ ಆರೋಪಗಳಿಗೆ ಪವಿತ್ರ ಕುರ್‍ಆನಿನ ಆಧಾರದಲ್ಲಿ ಪರಿಣಾಮಕಾರಿಯಾಗಿ ಉತ್ತರಿಸುವ ಕೃತಿಯೊಂದು ಮುಸ್ಲಿಮರ ಬಳಿ ಇದ್ದಿರಲಿಲ್ಲ ಎಂಬುದು. ದೆಹಲಿಯ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝಿನ ಬಳಿಕ ಮೌಲಾನಾ ಮುಹಮ್ಮದಲಿ ಜೌಹರ್‍ರು ಈ ಕೊರತೆಯ ಬಗ್ಗೆ ಮಾತಾಡಿದರು. ಇಸ್ಲಾಮಿನ ಜಿಹಾದ್‍ನ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳನ್ನು ನೀಗಿಸಿ, ವಾಸ್ತವವನ್ನು ಹೇಳಬಲ್ಲ ಕೃತಿಯೊಂದನ್ನು ಯಾರಾದರೂ ರಚಿಸಬಲ್ಲಿರಾ ಎಂದವರು ಸೇರಿದವರೊಂದಿಗೆ ಭಾವುಕರಾಗಿ ಪ್ರಶ್ನಿಸಿದರು. ಆ ಸಭೆಯಲ್ಲಿದ್ದ ಯುವಕನೊಬ್ಬ ಅದನ್ನು ಅಂದೇ ಸವಾಲಾಗಿ ಸ್ವೀಕರಿಸಿದ. ಜಿಹಾದ್‍ಗೆ ಸಂಬಂಧಿಸಿ ಉರ್ದು, ಅರಬಿ, ಇಂಗ್ಲಿಷ್ ಭಾಷೆಯಲ್ಲಿರುವ ಸಾಕಷ್ಟು ಗ್ರಂಥಗಳ ಅಧ್ಯಯನ ನಡೆಸಿದ. ಕೊನೆಗೆ ‘ಇಸ್ಲಾಮಿನಲ್ಲಿ ಜಿಹಾದ್’ ಎಂಬ ಜಗದ್ವಿಖ್ಯಾತ ಗ್ರಂಥವನ್ನು ರಚಿಸಿದ. ಆಗ ಆ ಯುವಕನಿಗೆ ಕೇವಲ 24 ವರ್ಷ.
ಅವರೇ ಸೈಯದ್ ಅಬುಲ್ ಆಲಾ ಮೌದೂದಿ..
1. ಕುರ್‍ಆನ್ ವ್ಯಾಖ್ಯಾನ (ತಫ್ಹೀಮುಲ್ ಕುರ್‍ಆನ್)
2. ಇಸ್ಲಾಮ್ ಧರ್ಮ
3. ಇಸ್ಲಾಮೀ  ಜೀವನ ವ್ಯವಸ್ಥೆ
4. ಇಸ್ಲಾಮಿನ ರಾಜಕೀಯ ಸಿದ್ಧಾಂತ
5. ಇಸ್ಲಾಮೀ  ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು
6. ಇಸ್ಲಾಮ್ ಮತ್ತು ಆಧುನಿಕ ಆರ್ಥಿಕ ಸಿದ್ಧಾಂತಗಳು
7. ಬಡ್ಡಿ
8. ಇಸ್ಲಾಮ್ ಮತ್ತು ಸಾಮಾಜಿಕ ನ್ಯಾಯ
9. ಆಧುನಿಕ ಯುಗದ ಪಂಥಾಹ್ವಾನ ಮತ್ತು ಯುವಕರು
10. ಪರ್ದಾ..
..ಹೀಗೆ 200ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದಿರುವ ಮೌದೂದಿಯವರನ್ನು ಈ ಸಮಾಜ ಆರಂಭದಲ್ಲಿ ನೋಡಿದ್ದು ಅನುಮಾನಗಳಿಂದಲೇ. ಅದಕ್ಕೆ ಕಾರಣವೂ ಇದೆ..
     ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸಿದ ಯಾರನ್ನೇ ಆಗಲಿ, ಸಮಾಜ ಹೂ-ಹಾರ ಹಾಕಿ ಸ್ವಾಗತಿಸಿದ್ದು ಇತಿಹಾಸದಲ್ಲಿ  ಎಂದೂ ನಡೆದಿಲ್ಲ.  ಮುಸ್ಲಿಮ್ ಸಮುದಾಯದ ಗುಲಾಮ ಮನಸ್ಥಿತಿಯನ್ನು ಮೌದೂದಿಯವರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರು. ‘ಮುಸ್ಲಿಮ್’ ಆಗುವುದಕ್ಕೆ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿರುವುದು ಮಾನದಂಡ ಅಲ್ಲ ಎಂದು ಮೊತ್ತಮೊದಲು ಘೋಷಿಸಿದ್ದು ಮೌದೂದಿಯೇ. ಇಸ್ಲಾಮನ್ನು ಬರೇ ‘ಮಸೀದಿಯ’ ಧರ್ಮವಾಗಿ ಪರಿಗಣಿಸಿದ್ದ ಮತ್ತು ಬದುಕಿಗೂ ಇಸ್ಲಾಮ್‍ಗೂ ಯಾವ ಸಂಬಂಧವನ್ನೂ ಜೋಡಿಸಿಲ್ಲದ ಮುಸ್ಲಿಮ್ ಸಮುದಾಯದ ಮೇಲೆ ಅವರ ಈ ಮಾತು ತೀವ್ರ ಪರಿಣಾಮವನ್ನು ಬೀರಿತು. ಇಸ್ಲಾಮ್ ಅಂದರೆ, ಸಂಪ್ರದಾಯ ಅಲ್ಲ, ಸಮಗ್ರ ಜೀವನ ಪದ್ಧತಿ ಎಂದವರು ಸಾರಿದರು. ಬ್ರಿಟಿಷರ ಆಡಳಿತದಲ್ಲಿ ಆಂಗ್ಲ ಸಂಸ್ಕ್ರಿತಿಯಿಂದ ಪ್ರಭಾವಿತವಾಗಿದ್ದ ಮುಸ್ಲಿಮರ ಮಟ್ಟಿಗಂತೂ ಮೌದೂದಿಯವರ ಮಾತು ಇಸ್ಲಾಮ್ ವಿರೋಧಿಯಂತೆ ತೋರಿತು. ನಿಜವಾಗಿ, ಅಂದಿನ ಮುಸ್ಲಿಮ್ ಬುದ್ಧಿಜೀವಿಗಳು ಇಸ್ಲಾಮೀ  ಸಿದ್ಧಾಂತವನ್ನು ಕಾಲಬಾಹಿರ ಎಂದೇ ಪರಿಗಣಿಸಿದ್ದರು. ತಮ್ಮ ಸಂಸ್ಕ್ರಿತಿ, ಆಚಾರಗಳು, ವಿವಾಹ, ತಲಾಕ್, ಪರ್ದಾ ಮುಂತಾದುವುಗಳ ಕುರಿತಾಗಿ ಮಾತಾಡುವುದು ಗೌರವಕ್ಕೆ ಕುಂದು ಎಂದು ಅವರು ಭಾವಿಸಿದ್ದರು. ಆದ್ದರಿಂದಲೇ, ಇಂಗ್ಲಿಷ್ ಭಾಷೆ, ಆಂಗ್ಲರ ಉಡುಪು, ಸ್ತ್ರೀ-ಪುರುಷರ ಮುಕ್ತ ಮಿಲನ, ಮಿಶ್ರ ಸಂಸ್ಕ್ರಿತಿ, ಮದ್ಯಪಾನಗಳನ್ನೆಲ್ಲಾ ಸಾಮಾಜಿಕ ಅಗತ್ಯ ಎಂದವರು ಪ್ರತಿಪಾದಿಸತೊಡಗಿದ್ದರು. ಶಿರ್ಕ್ ಮತ್ತು ಬಿದ್‍ಅತ್‍ಗಳ ಕುರಿತಂತೆ ಸ್ಪಷ್ಟ ತಿಳುವಳಿಕೆಯೂ ಸಮಾಜದಲ್ಲಿರಲಿಲ್ಲ. ಅಷ್ಟಕ್ಕೂ, ಇವೆಲ್ಲ ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮುಸ್ಲಿಮರ ಬಳಿ ಇದ್ದದ್ದಾದರೂ ಏನು? ಇಸ್ಲಾಮ್‍ನ ಕುರಿತಂತೆ ವಿವಿಧ ರೂಪದಲ್ಲಿ ನಡೆಯುತ್ತಿದ್ದ ಅಪಪ್ರಚಾರಗಳಿಗೆ ಉತ್ತರ ಕೊಡಲು ಅವರ ಬಳಿ ಯಾವ ಕೃತಿಗಳಿತ್ತು? ಆಗಿನ ಪರಿಸ್ಥಿತಿಯನ್ನು ಎದುರಿಟ್ಟುಕೊಂಡು ಇಸ್ಲಾಮೀ  ಪಾರಿಭಾಷಿಕಗಳಿಗೆ ಹೊಸ ಅರ್ಥಗಳನ್ನು ಕೊಡುವ ಕೃತಿಗಳಾಗಲಿ, ಬರಹಗಾರರಾಗಲಿ ಇಲ್ಲದಿರುವಾಗ ಸಮುದಾಯ ಕೀಳರಿಮೆಯಿಂದಲ್ಲದೆ ಇನ್ನಾವ ರೀತಿಯಲ್ಲಿ ಬದುಕಬೇಕಿತ್ತು?
    ಆದ್ದರಿಂದಲೇ ಮೌದೂದಿ ಲೇಖನಿ ಎತ್ತಿದರು..
ಪರ್ದಾದ ಬಗ್ಗೆ ಅಪಹಾಸ್ಯದ ಮಾತುಗಳು ಚಾಲ್ತಿಯಲ್ಲಿದ್ದಾಗಲೇ ‘ಪರ್ದಾ’ ಎಂಬ ಕೃತಿ ರಚಿಸಿದರು. ಆಗ ಅವರಿಗೆ 34 ವರ್ಷ. `ಇಸ್ಲಾಮ್ ಧರ್ಮ' ಎಂಬ ಬಹು ಅಮೂಲ್ಯ ಕೃತಿ ರಚಿಸಿದರು. ಅವರ ಜೀವಿತ ಕಾಲದಲ್ಲಿಯೇ ಈ ಕೃತಿ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿತು. ‘ಪಾಶ್ಚಿಮಾತ್ಯ ಸಂಸ್ಕøತಿಯ ಕಲ್ಪನೆಗಳು ಮತ್ತು ಪ್ರಭಾವಗಳ ಕುರಿತಂತೆ ವಿಮರ್ಶಾತ್ಮಕ’ ಅಧ್ಯಯನ ನಡೆಸಿದರು. ‘ಇಸ್ಲಾಮ್ ಮತ್ತು ಅಜ್ಞಾನ’, ‘ಇಸ್ಲಾಮಿನ ನೈತಿಕ ದೃಷ್ಟಿಕೋನ.. ಎಂಬೆಲ್ಲಾ ಕೃತಿಗಳನ್ನು ರಚಿಸಿ ಸಮಾಜದ ಮುಂದಿಟ್ಟರು. ನಿಜವಾಗಿ, ತನ್ನ 11ರ ಹರೆಯದಲ್ಲೇ, ‘ಆಧುನಿಕ ಮಹಿಳೆ’ ಎಂಬ ಅರಬಿ ಕೃತಿಯನ್ನು ಅವರು ಉರ್ದು ಭಾಷೆಗೆ ಅನುವಾದಿಸಿದ್ದರು. 15ರ ಹರೆಯದಲ್ಲೇ ‘ಅಲ್ ಮದೀನ’ ಎಂಬ ಪತ್ರಿಕೆಯ ಉಪಸಂಪಾದಕರಾಗಿ ಆಯ್ಕೆಯಾಗಿದ್ದರು. 1903 ಸೆ. 25ರಂದು ಔರಂಗಾಬಾದ್‍ನಲ್ಲಿ ಹುಟ್ಟಿದ್ದ ಮೌದೂದಿಯವರು ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಬೆಳೆದರು. ಅವರ ತಂದೆ ಅಹ್ಮದ್ ಹಸನ್‍ರು ಅವರನ್ನು ಬೆಳೆಸಿದ್ದೂ ಹಾಗೆಯೇ. ಒಮ್ಮೆ ಸೇವಕನ ಮಗನಿಗೆ ಅವರು ಹೊಡೆದಾಗ, ಆ ಸೇವಕನ ಮಗನಲ್ಲಿ ಮಗನಿಗೆ ಹೊಡೆಯುವಂತೆ ಅವರ ಅಪ್ಪ ಆದೇಶಿಸಿದ್ದರು. ಈ ಮಟ್ಟದ ತರಬೇತಿಯೇ ಸಮಾಜದ ತಪ್ಪುಗಳನ್ನು ಪ್ರಶ್ನಿಸುವುದಕ್ಕೆ ಅವರನ್ನು ಪ್ರಚೋದಿಸಿರಬೇಕು. ಇಸ್ಲಾಮಿನ ಬಗ್ಗೆ ಆಳ ಅಧ್ಯಯನ ನಡೆಸಿದ್ದ ಅವರಿಗೆ ಪ್ರಸಕ್ತ ಸಮಸ್ಯೆಗಳ ಬಗ್ಗೆ ನಿಖರವಾಗಿ ಮಾತಾಡುವ ಸಾಮರ್ಥ್ಯವೂ  ಇತ್ತು. ಅವರು ಯುವಕರಾಗಿದ್ದ ಸಂದರ್ಭದಲ್ಲಿ ಲೌಡ್ ಸ್ಪೀಕರ್‍ನ ಬಗ್ಗೆ ಮುಸ್ಲಿಮ್ ಸಮಾಜದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಲೌಡ್ ಸ್ಪೀಕರ್ ಅಳವಡಿಸುವುದು ಇಸ್ಲಾಮಿನಲ್ಲಿ ನಿಷಿದ್ಧ ಎಂದು ವಿದ್ವಾಂಸರು ಫತ್ವ ಹೊರಡಿಸಿದ್ದರು. ಆದರೆ ಯುವಕ ಮೌದೂದಿ ಅದನ್ನು ಖಂಡಿಸಿದರು. ಅವರು ಹೀಗೆಂದರು,
    ‘ಎತ್ತಿನ ಬಂಡಿಯಲ್ಲಿ ಸಂಚರಿಸುವವನಿಗೆ ಮೋಟಾರು ವಾಹನದಲ್ಲಿ ಸಂಚರಿಸುವವನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ರೇಡಿಯೋದ ಬಲದಿಂದ ಒಂದು ಸೆಕೆಂಡಿನಲ್ಲಿ ಮಿಥ್ಯದ ಧ್ವನಿಯನ್ನು ಭೂಮಿಯ ಎಲ್ಲ ಮೂಲೆಗಳಿಗೂ ತಲುಪಿಸಿ ಕೋಟಿಗಟ್ಟಲೆ ಜನರ ಹೃದಯಗಳನ್ನು ಕೇವಲ ಮಾತಿನ ಮೋಡಿಯಿಂದ ಜಯಿಸುವವರ ವಿರುದ್ಧ, ಒಂದು ಸಭೆಯಲ್ಲಿ ಸೇರಿರುವ ಎಲ್ಲರಿಗೂ ಸತ್ಯದ ಧ್ವನಿಯನ್ನು ತಲುಪಿಸಲಿಕ್ಕೆ ಕೂಡ ಹಿಂಜರಿಯುವವರು ಹೇಗೆ ತಾನೆ ಜಯಗಳಿಸಿಯಾರು? ಇವತ್ತು ಇಸ್ಲಾಮಿನ ವಿರುದ್ಧದ ಪ್ರಚಾರವು ಎಲ್ಲ ಮಾಧ್ಯಮ ಬಲವನ್ನೂ ಉಪಯೋಗಿಸಿ ಮುಂದೆ ಸಾಗುತ್ತಿದೆ. ಹೀಗಿರುವಾಗ, ಅವನ್ನು ಉಪಯೋಗಿಸದೇ ಅವುಗಳ ವಿರುದ್ಧ ಹೋರಾಡಲು ಸಾಧ್ಯವೇ? ಒಂದು ವೇಳೆ ಪ್ರವಾದಿಯವರ(ಸ) ಕಾಲದಲ್ಲಿ ಈ ಉಪಕರಣ ಇರುತ್ತಿದ್ದರೆ ಅವರು(ಸ) ಕಂದಕ ತೋಡುವ ಇರಾನಿ ಕ್ರಮವನ್ನು ಸ್ವೀಕರಿಸಿದಂತೆ, ನಮಾಝ್, ಅದಾನ್ ಮತ್ತು ಖುತ್ಬಾಗಳಿಗೆ ಖಂಡಿತವಾಗಿಯೂ ಲೌಡ್ ಸ್ಪೀಕರನ್ನು ಬಳಸುತ್ತಿದ್ದರು..’ ಎಂದರು. ಮೌದೂದಿಯವರ ವಾದ ಎಷ್ಟು ಬಲವಾಗಿತ್ತೆಂದರೆ, ಬಳಿಕ ಆ ಫತ್ವಾವನ್ನೇ ವಿದ್ವಾಂಸರು ಹಿಂತೆಗೆದುಕೊಂಡರು.
     ಆದರೆ
ಚೆಗುವೆರಾ
 ಕೇವಲ ಕೃತಿಗಳನ್ನು ರಚಿಸುವುದರಿಂದಲೇ ಒಂದು ಸಮುದಾಯದ ಸುಧಾರಣೆ, ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದು ಮೌದೂದಿಯವರ ನಂಬಿಕೆಯಾಗಿತ್ತು. ಆದ್ದರಿಂದಲೇ, ‘ಒಂದು ಉತ್ತಮ ಸಂಘಟನೆಯ ಅಗತ್ಯ’ ಎಂಬ ಲೇಖನವನ್ನು 1941 ಎಪ್ರಿಲ್‍ನಲ್ಲಿ ತನ್ನ, ‘ತರ್ಜುಮಾನುಲ್ ಕುರ್‍ಆನ್’ ಎಂಬ ಪತ್ರಿಕೆಯಲ್ಲಿ ಬರೆದರು. 3500 ಪುಟಗಳ ಅರಬಿ ಗ್ರಂಥವೊಂದನ್ನು ಉರ್ದುವಿಗೆ ಅನುವಾದಿಸಿದ್ದಕ್ಕಾಗಿ ಸಿಕ್ಕ 5 ಸಾವಿರ ರೂಪಾಯಿಗಳಿಂದ ಅವರು ಈ ಪತ್ರಿಕೆಯನ್ನು ಆರಂಭಿಸಿದ್ದರು. ಮೌದೂದಿಯವರ ಆಲೋಚನೆಗಳು, ದೂರಗಾಮಿ ನಿಲುವುಗಳೆಲ್ಲ ಅಕ್ಷರ ರೂಪದಲ್ಲಿ ಪ್ರಕಟವಾಗುತ್ತಿದ್ದುದು ಈ ಪತ್ರಿಕೆಯಲ್ಲೇ. ಹಾಗೆ, 1941 ಅಗಸ್ಟ್ 26ರಂದು, ಜಮಾಅತೆ ಇಸ್ಲಾಮೀ  ಎಂಬ ಸಂಘಟನೆಯನ್ನು ಇತರ 75 ಮಂದಿಯ ಜೊತೆಗೂಡಿ ಅವರು ಸ್ಥಾಪಿಸಿದರು. ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಮಾನವನ ಆಮೂಲಾಗ್ರ ಸುಧಾರಣೆಯನ್ನು ಗುರಿಯಿರಿಸಿಕೊಂಡು ಹುಟ್ಟಿಕೊಂಡ ಈ ಸಂಘಟನೆ ಸಹಜವಾಗಿಯೇ ಸಮಾಜವನ್ನು ಆಕರ್ಷಿಸಿತು. ವಿರೋಧಿಗಳನ್ನೂ ಸೃಷ್ಟಿಸಿಕೊಂಡಿತು. ಈ ಮಧ್ಯೆ ದೇಶದ ವಿಭಜನೆಯಾದಾಗ, ಅವರು ವಾಸಿಸುತ್ತಿದ್ದ ಲಾಹೋರ್ ಪಾಕಿಸ್ತಾನದ ಭಾಗವಾಯಿತು. ಭಾರತದಲ್ಲೇ ಉಳಿದುಕೊಂಡ ಸಂಘಟನೆಯ ಕಾರ್ಯಕರ್ತರು. ಜಮಾಅತೆ ಇಸ್ಲಾಮೀ  ಹಿಂದ್ ಎಂಬ ಹೆಸರಲ್ಲಿ ಗುರುತಿಸಿಕೊಂಡರು. ಮೌದೂದಿಯವರ ಕ್ರಾಂತಿಕಾರಿ ಆಲೋಚನೆಗಳು ಪಾಕ್ ಪ್ರಭುತ್ವವನ್ನು ಯಾವ ಮಟ್ಟದಲ್ಲಿ ಕಾಡಿತ್ತೆಂದರೆ, ಅವರನ್ನು 3 ಬಾರಿ ಜೈಲಿಗಟ್ಟಲಾಯಿತು. ಒಂದು ಬಾರಿ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಆದರೆ ಜಾಗತಿಕ ಒತ್ತಡದ ಪರಿಣಾಮದಿಂದಾಗಿ ಶಿಕ್ಷೆ ಜಾರಿಗೊಳಿಸಲಾಗಲಿಲ್ಲ. ಒಂದು ರೀತಿಯಲ್ಲಿ ಮೌದೂದಿಯವರ ಆಲೋಚನೆಗಳು ಈ ಉಪ ಭೂಖಂಡವನ್ನು ದಾಟಿ ಜಾಗತಿಕವಾಗಿಯೇ ಜನಪ್ರಿಯವಾಗತೊಡಗಿತು. ಬಡ್ಡಿರಹಿತ ಆರ್ಥಿಕ ವ್ಯವಸ್ಥೆಯು ಇವತ್ತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದರೆ, ಅದರಲ್ಲಿ ಮೌದೂದಿಯವರ ವಿಚಾರಗಳಿಗೆ ದೊಡ್ಡ ಪಾತ್ರವಿದೆ. ಅರಬ್ ಕ್ರಾಂತಿಯ ಹಿಂದೆ ಮೌದೂದಿಯವರ ಆಲೋಚನೆಗಳಿಗೆ ಪ್ರಮುಖ ಸ್ಥಾನವಿದೆ. ಮೌಲ್ಯಾಧಾರಿತ ರಾಜಕೀಯ, ಕೆಡುಕು ರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂಬುದನ್ನು ಆಧುನಿಕ ಭಾಷೆಯಲ್ಲಿ ಹೇಳಿಕೊಟ್ಟದ್ದೇ ಮೌದೂದಿ. ನಿಜವಾಗಿ, ಇವತ್ತು ಈಜಿಪ್ಟನ್ನು ಆಳುತ್ತಿರುವ ಮುರ್ಸಿಯವರ ಮುಸ್ಲಿಮ್ ಬ್ರದರ್‍ಹುಡ್, ಟ್ಯುನೀಶಿಯಾದ ರಾಶಿದುಲ್ ಗನೂಶಿಯವರ ಅನ್ನಹ್ದ್‍ನಂಥ ಪಕ್ಷಗಳ ಜನಪ್ರಿಯತೆಯಲ್ಲಿ ಮೌದೂದಿಯವರಿಗೂ ಪಾಲಿದೆ. ಬಂಡವಾಳಶಾಹಿಗಳನ್ನು ಮತ್ತು ಸರ್ವಾಧಿಕಾರಿಗಳನ್ನು ಶಾಂತಿಯುತ ವಿಧಾನದ ಮೂಲಕ ಸೋಲಿಸುವುದಕ್ಕೆ ಅವರ ವಿಚಾರಗಳಿಗೆ ಇವತ್ತು ಸಾಧ್ಯವಾಗಿದೆ. ಜಾಗತಿಕವಾಗಿಯೇ ಕೌಟುಂಬಿಕ ವ್ಯವಸ್ಥೆ, ಆರ್ಥಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಹೊತ್ತಿನಲ್ಲಿಯೇ, ‘ಕುರ್‍ಆನ್’ ಮತ್ತು ಹದೀಸ್‍ನ ಆಧಾರದಲ್ಲಿ ಮೌದೂದಿಯವರು ಪರಿಚಯಪಡಿಸಿದ ಇಸ್ಲಾಮ್, ಇವತ್ತು ಪರ್ಯಾಯ ಆಯ್ಕೆಯಾಗಿ ಎದ್ದು ಕಾಣುತ್ತಿದೆ. ಈಗಾಗಲೇ ಸಾವಿಗೀಡಾಗಿರುವ ಸಮಾಜ ವಾದ ಮತ್ತು ಸಾವಿನ ಕದ ತಟ್ಟುತ್ತಿರುವ ಬಂಡವಾಳಶಾಹಿತ್ವದ ಮಧ್ಯೆ ಮುರ್ಸಿ, ಗನೂಶಿ, ತುರ್ಕಿಯ ಉರ್ದುಗಾನ್‍ರೆಲ್ಲ ಭರವಸೆ ಹುಟ್ಟಿಸುತ್ತಿದ್ದಾರೆ. ಆದ್ದರಿಂದಲೇ 1979 ಸೆ. 22ರಂದು ನಿಧನರಾದ ಮೌದೂದಿಯವರು ಮತ್ತೆ ಮತ್ತೆ ಪ್ರಸ್ತುತವಾಗುತ್ತಲೂ ಇದ್ದಾರೆ.
   ಇಷ್ಟಕ್ಕೂ, ಸಮಾಜವಾದದ ಜಾರಿಗಾಗಿ ಗೆರಿಲ್ಲಾ ಮಾದರಿಯಲ್ಲಿ ಹೋರಾಡುತ್ತಾ 1967 ಅಕ್ಟೋಬರ್ 9ರಂದು ಬೊಲಿವಿಯಾದಲ್ಲಿ ಹತ್ಯೆಗೀಡಾದ ಅರ್ನೆಸ್ಟೋ ಚೆಗುವೆರಾರ `ವಿಫಲ ಹೋರಾಟ’ದ ಬಗ್ಗೆ ಪತ್ರಿಕೆಗಳಲ್ಲಿ ವಾರಗಳ ಹಿಂದೆ ಲೇಖನಗಳನ್ನು ಓದುತ್ತಿದ್ದಾಗ, ‘ಸಫಲ ಹೋರಾಟ’ದ ಸೈಯದ್ ಮೌದೂದಿಯವರ ಬಗ್ಗೆ ಬರೆಯಬೇಕೆನಿಸಿತು.

Tuesday, November 13, 2012

ಅವರು ಪ್ರಾರ್ಥಿಸಬೇಕೆಂದು ಬಯಸುತ್ತೇವಲ್ಲ, ಅದಕ್ಕೆ ಅರ್ಹರಾಗಿದ್ದೇವಾ?

ಸಂಜೆಯಾದ ಕೂಡಲೇ ಆ ಬಾಲಕ ಬಾಗಿಲಿಗೆ ಬರುತ್ತಾನೆ. ಅಪ್ಪ ಬರುವ ಹೊತ್ತು. ಇವತ್ತು ಅಪ್ಪನೊಂದಿಗೆ ಚೆಂಡಾಟ ಆಡಬೇಕು. ಅಪ್ಪನ ಮಡಿಲಲ್ಲಿ ಕೂತು, ಜೇಬಿಗೆ ಕೈ ಹಾಕಿ, ಚಾಕಲೇಟು ಕೇಳಬೇಕು. ಎಷ್ಟು ದಿನ ಆಯ್ತು ಅಪ್ಪ ನಂಗೆ ಚಾಕಲೇಟು ಕೊಡಿಸದೇ? ಯಾವಾಗಲೂ ಅಮ್ಮನೇ ಕೊಡೋದು. ಇವತ್ತು ಅಪ್ಪನ ಕೈ ಹಿಡಿದು ನಡೆಯುತ್ತಾ ಅಂಗಡಿ ತನಕ ಹೋಗಿ ಚಾಕಲೇಟು ಖರೀದಿಸಿಯೇ ಬರಬೇಕು. ಬೇಡ, ಹೋಗುವಾಗ ಮಾತ್ರ ನಡೆಯುವುದು. ಬರುವಾಗ ಅಪ್ಪನೇ  ನನ್ನನ್ನು ಎತ್ತಿಕೊಳ್ಳಲಿ. ಎಷ್ಟು ದಿನದಿಂದ ನಾನು ಒಮ್ಮೆ ಅಪ್ಪ ಎತ್ತಿಕೊಳ್ಳಲಿ ಅಂತ ಕಾಯ್ತಾ ಇದ್ದೇನೆ? ಆದರೆ ಎತ್ತಿಕೊಳ್ಳುತ್ತಾರಾ? ನನ್ನ ಮಗೂ ಅಂತ ಮುತ್ತಿಕ್ಕುತ್ತಾರಾ? ಈ ಬಾರಿ ಚಾಕಲೇಟು ಬಾಯಲ್ಲಿಟ್ಟು ಅಪ್ಪನ ತೋಳಲ್ಲಿ ಖುಷಿ ಪಡುತ್ತಾ ಬರಬೇಕು. ನನ್ನ ಪಕ್ಕದ ಮನೆಯ ವಿಲ್ಫ್ರೆಡ್ ನನ್ನು  ಅವನ ಅಪ್ಪ ಎಷ್ಟೊಂದು ಮುದ್ದಿಸ್ತಾರೆ? ಎಲ್ಲಿಗೆ ಹೋಗುವಾಗಲೂ  ವಿಲ್ಫ್ರೆಡ್ ನನ್ನು ಕರಕೊಂಡೇ ಹೋಗುವುದು. ನಿನ್ನೆ ವಿಲ್ಫ್ರೆಡ್ ಮತ್ತು ಅವನ ಅಪ್ಪ ಜೊತೆಯಾಗಿ ಓಡುತ್ತಾ ಇದ್ರು. ಅವನ ಅಪ್ಪ ತುಂಬಾ ಒಳ್ಳೆಯವರು. ಅಪ್ಪ ಬರಲಿ, ಇವತ್ತು ಏನು ಹೇಳಿದ್ರೂ ನಾನು ಬಿಡುವುದೇ ಇಲ್ಲ. ಅವರು ನನ್ನೊಂದಿಗೆ ಆಡಲೇಬೇಕು. ಅಂಗಡಿಗೆ ಕರಕೊಂಡು ಹೋಗಲೇಬೇಕು..
     ಅಪ್ಪ ಬರುವುದು ಕಾಣಿಸುತ್ತದೆ..
ಬಾಲಕ ಓಡುತ್ತಾನೆ. ಅಪಾರ ಖುಷಿ. ಅಪ್ಪನ ಕೈ ಹಿಡಿಯುತ್ತಾನೆ. ಷರಟು ಹಿಡಿದು ಅಪ್ಪ, ಅಪ್ಪ ಅನ್ನುತ್ತಾನೆ. ಅಪ್ಪನಾದರೋ ವಿಪ ರೀತ ಬ್ಯುಝಿ. ಕೈ ಹಿಡಿದ ಮಗನನ್ನು ಎತ್ತಿ ಅಪ್ಪಿಕೊಳ್ಳುವುದಕ್ಕೆ, ಮುದ್ದಿಸುವುದಕ್ಕೆ, ನನ್ನ ಮುದ್ದೂ.. ಎಂದು ಲಲ್ಲೆಗರೆಯುವುದಕ್ಕೆ ಬಿಡುವೇ ಇಲ್ಲ. ತಲೆಯ ತುಂಬಾ ಕಚೇರಿಯನ್ನೇ ತುಂಬಿಕೊಂಡು ಬಂದಿರುವ ಆತ ಕೈ ಹಿಡಿದ ಮಗನನ್ನು ಎಳೆದುಕೊಂಡೇ ಸರ ಸರನೇ ಮನೆಗೆ ಬರುತ್ತಾನೆ. ಬ್ಯಾಗ್ ತೆಗೆದಿಡುವುದು, ಬಟ್ಟೆ ಕಳಚುವುದು, ಪತ್ನಿ ಕೊಟ್ಟ ನೀರು ಕುಡಿಯುವುದು.. ಇವೆಲ್ಲ ಯಾಂತ್ರಿಕವಾಗಿ ನಡೆಯುತ್ತದೆ. ಈ ಮಧ್ಯೆ ಮಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಆತ ಬಾಗಿಲಲ್ಲಿ ನಿಂತು ಏನೇನೆಲ್ಲಾ ಅಂದುಕೊಂಡಿದ್ದನೋ ಅವೆಲ್ಲವನ್ನೂ ಜಾರಿ ಮಾಡುವಂತೆ ಅಪ್ಪನನ್ನು ವಿನಂತಿಸುತ್ತಾನೆ. ಕೈ ಹಿಡಿದು ಜಗ್ಗುತ್ತಾನೆ. ಆದರೆ ಅಪ್ಪ ನಿರಾಕರಿಸುತ್ತಾನೆ. 'ನಾಳೆ ಆಡುವ ಮಗು' ಅನ್ನುತ್ತಾನೆ. ಹಾಗೆ ಸಾವಿರಾರು ನಾಳೆಗಳು ಕಳೆದು ಹೋಗುತ್ತವೆ. ಪ್ರತಿ ನಾಳೆಯೂ ಅಪ್ಪ ಬ್ಯುಝಿಯೇ. ಕೊನೆಗೆ ಮಗು ಅಪ್ಪನನ್ನು ಕಾಯುವುದನ್ನೇ ನಿಲ್ಲಿಸುತ್ತದೆ..
     ಈಗ ಅಪ್ಪನಿಗೆ ನಿವೃತ್ತಿಯಾಗಿದೆ. ಮಗ ದುಡಿಯುತ್ತಿದ್ದಾನೆ..
'ಒಮ್ಮೆ ಬಂದು ಹೋಗು ಮಗೂ' ಅಂತ ಆ ಅಪ್ಪ ವಿನಂತಿಸುವುದು ಅದು ಎಷ್ಟನೇ ಸಲವೋ, ಆದರೆ ಮಗ ಬರುವುದೇ ಇಲ್ಲ. ತುಂಬಾ ಬ್ಯುಝಿ ಇದ್ದೇನೆ ಅಪ್ಪ ಅನ್ನುತ್ತಾನೆ. ಪ್ರತಿದಿನ ಗೇಟಿನ ಸದ್ದು ಕೇಳುವಾಗಲೂ ಅಪ್ಪನಲ್ಲೊಂದು ಆಸೆ. ಮಗ ಬಂದಿರಬಹುದೇ ಅಂತ ಆಸೆಗಣ್ಣಿನಿಂದ ಬಾಗಿಲಿಗೆ ಬರುತ್ತಾರೆ. ನಡೆಯಲೂ ಆಗುತ್ತಿಲ್ಲ. ಕೋಲಿಗೆ ದೇಹದ ಭಾರವನ್ನು ಹಾಕಿ ತುಸು ಹೊತ್ತು ಗೇಟನ್ನೇ ವೀಕ್ಷಿಸುತ್ತಾರೆ. ಕಣ್ಣಲ್ಲಿ ಹನಿ ಕಣ್ಣೀರು. ಮಗನ ಬ್ಯುಝಿ ಒಮ್ಮೆ ಮುಗಿಯಲಿ ಅಂತ ಪ್ರಾರ್ಥಿಸುತ್ತಾರೆ. ಕಾದು ಕಾದು ದಣಿವಾದಾಗ ಒಳ ಹೋಗುತ್ತಾರೆ. ಮತ್ತೆ ಗೇಟು ಸದ್ದಾಗುತ್ತದೆ. ಮತ್ತದೇ ಆಸೆಗಣ್ಣು. ಕೋಲು ಹಿಡಿದ ಜೀವ ಮತ್ತೆ ಬಾಗಿಲಿಗೆ ಬರುತ್ತದೆ. ಮುಚ್ಚಿದ ಗೇಟನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ದೀರ್ಘ ನಿಟ್ಟುಸಿರು. ಜತೆಗೇ ತಾನು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಿಕೊಳ್ಳುತ್ತದೆ. ಬ್ಯುಝಿ ಲೈಫು, ಆಟ ಆಡುವಂತೆ ಮಗನ ದುಂಬಾಲು, ಪ್ರತಿದಿನವೂ ನಾಳೆ ಎಂದು ಮುಂದೂಡುತ್ತಿದ್ದುದು.. ಎಲ್ಲವೂ ಒಂದೊಂದಾಗಿ ಕಣ್ಣೆದುರಿಗೆ ಬರುತ್ತದೆ. ಕೊನೆಗೆ ಆ ಅಪ್ಪ ಹೇಳುತ್ತಾನೆ,
ನನ್ನ ಮಗ ನನ್ನಂತೆಯೇ ಆಗಿದ್ದಾನೆ..
      My boy was just like me
Cats in the cradele  ಎಂಬ ಕವನವೊಂದರ ಕಾಲ್ಪನಿಕ ವಿವರ ಇದು. ಖ್ಯಾತ ಗಾಯಕ ಹ್ಯಾರಿ ಚಾಪಿನ್ ರ , ವೆರೈಟೀಸ್ ಆಂಡ್ ಬಲ್ಡೆರ್ ಡಾಶ್  (Verities and balderdash) ಎಂಬ ಹಾಡಿನ ಆಲ್ಬಮ್ ಒಂದು 1974ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಕ್ಯಾಟ್ಸ್ ಇನ್ ದ ಕ್ರಾಡಲ್ ಕೂಡ ಒಂದು. ವಿಶೇಷ ಏನೆಂದರೆ, ಮೂಲ ಕವನವನ್ನು ರಚಿಸಿದ್ದೇ ಹ್ಯಾರಿಯ ಪತ್ನಿ ಸ್ಯಾಂಡಿ. ಆಕೆಯ ವಿಚ್ಛೇದಿತ ಪತಿ ಜೇಮ್ಸ್ ಕ್ಯಾಶ್ ಮೋರ್  ಮತ್ತು ನ್ಯೂಯಾರ್ಕ್ ಸಿಟಿಯ ಪ್ರತಿನಿಧಿ(ರಾಜಕಾರಣಿ)ಯಾಗಿದ್ದ ಆತನ ತಂದೆಯ ನಡುವೆ ಇದ್ದ ಸಂಬಂಧವೇ ಈ ಕವನಕ್ಕೆ ಪ್ರಚೋದನೆಯಾಗಿತ್ತು. ಇಷ್ಟಕ್ಕೂ ಕ್ಯಾಟ್ಸ್ ಇನ್ ದ ಕ್ರಾಡಲನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
    ಅಮೇರಿಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಸಂಭ್ರಮದಲ್ಲಿ ಕಳೆದ ವಾರ ಬರಾಕ್ ಒಬಾಮ ಉದ್ದದ ಭಾಷಣ ಮಾಡಿದ್ದರು. ಅಧ್ಯಕ್ಷ  ಆದಾಗಿನಿಂದ ಈ ವರೆಗೆ ಮಕ್ಕಳಾದ ಮಲಿಯಾ ಮತ್ತು ಸಸಾರ ಜೊತೆ ಪ್ರತಿ ಸಾರಿ ಶಿಕ್ಷಕರ ಸಭೆಗೆ ಹಾಜರಾದದ್ದು, ಮಗಳು ಮಲಿಯಾಳ ಜೊತೆ ಕೂತು ಹಾರಿ ಪಾಟರ್ ಸರಣಿಯ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದು.. ಎಲ್ಲವನ್ನೂ ಅವರು ಭಾಷಣದಲ್ಲಿ ನೆನಪಿಸಿಕೊಂಡಿದ್ದರು.
     ಅಂದಹಾಗೆ, ನಮ್ಮ ಪರಿಸ್ಥಿತಿಯಾದರೂ ಹೇಗಿದೆ? ಒಟ್ಟಿಗೆ ಓದುವುದು ಬಿಡಿ, ಪತ್ನಿ-ಮಕ್ಕಳ ಜೊತೆಗೆ ಕೂತು ಊಟ ಎಷ್ಟು ಸಮಯವಾಯಿತು? ಮಕ್ಕಳನ್ನು ಪ್ರೀತಿಯಿಂದ ಮಾತಾಡಿಸಲು, ಅವರೊಂದಿಗೆ ಅವರಂತಾಗಲು ನಮ್ಮಲ್ಲಿ ಎಷ್ಟು ಮಂದಿಗೆ ಪುರುಸೊತ್ತಿದೆ? ಬೆಳಗ್ಗೆದ್ದು ಬ್ರಶ್ ಮಾಡುವ ಅಪ್ಪ ಬಳಿಕ ಕಚೇರಿಗೆ ಹೋಗುವ ತಯಾರಿಯಲ್ಲಿ ತೊಡಗುತ್ತಾನೆ. ಕಾಲ್ ಮಾಡುವುದು ಅಥವಾ ಸ್ವೀಕರಿಸುವುದು, ಮೆಸೇಜ್ ಮಾಡುವುದು, ಟಿ.ವಿ. ವೀಕ್ಷಿಸುವುದು.. ಮುಂತಾದುವುಗಳಲ್ಲಿ ಬ್ಯುಝಿಯಾಗುತ್ತಾನೆ. ಬಟ್ಟೆಗೆ ಇಸ್ತ್ರಿ ಹಾಕಲಾಗಿದೆಯೋ ಎಂದು ಪರೀಕ್ಷಿಸಿ, ಇಲ್ಲದಿದ್ದರೆ ಪತ್ನಿಯ ಮೇಲೆ ಸಿಟ್ಟಾಗುತ್ತಾನೆ. ಹಾಗಂತ ಇಸ್ತ್ರಿ ಹಾಕುವಷ್ಟು ಆತನಲ್ಲಿ ಬಿಡುವು ಇಲ್ಲ ಎಂದಲ್ಲ. ಇಸ್ತ್ರಿ ಹಾಕುವ, ಅಡುಗೆ ಮಾಡುವ, ಮಕ್ಕಳನ್ನು ಶಾಲೆಗೆ ಸಿದ್ಧಪಡಿ ಸುವ, ಹೋಮ್ ವರ್ಕ್  ಮಾಡಿಸುವ, ಮಗುವಿನ  ‘ಒಂದೆರಡನ್ನು’ ತೆಗೆದು ಶುಚಿಗೊಳಿಸುವ, ಬಟ್ಟೆ ಒಗೆಯುವ, ನೆಲ ಗುಡಿ ಸುವ.. ಎಲ್ಲವನ್ನೂ ಪತ್ನಿಯ ‘ಕೆಲಸದ ಪಟ್ಟಿಗೆ’ ಸೇರಿಸಿದ ಎಷ್ಟು ಅಪ್ಪಂದಿರಿಲ್ಲ ನಮ್ಮಲ್ಲಿ? ಮಕ್ಕಳು ಯಾಕೆ ತಾಯಿಯನ್ನೇ ಹಚ್ಚಿಕೊಳ್ಳುತ್ತವೆ ಎಂದು ಅನೇಕರು ಪ್ರಶ್ನಿಸುವುದಿದೆ. ಯಾಕೆಂದರೆ, ಮಕ್ಕಳ ಪಾಲಿಗೆ ತಾಯಿ ಯಾವಾಗಲೂ ತಾಯಿಯೇ ಆಗಿರುತ್ತಾಳೆ. ಇಷ್ಟು ಕೆಲಸಗಳಲ್ಲಿ ಮಾತ್ರ ನಾನು ತಾಯಿ, ಉಳಿದಂತೆ ತಾಯಿಯ ಪಾತ್ರ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ತಾಯಿ ಹೇಳುವುದೇ ಇಲ್ಲ. ಆದರೆ ಅಪ್ಪ ಇಂಥ ಷರತ್ತುಗಳೊಂದಿಗೇ ಬದುಕುವುದು. ಆತ ಮಕ್ಕಳ ಪಾಲಿಗೆ ಯಾವಾಗಲೂ 'ಅಪ್ಪ' ಆಗಿರುವುದೇ ಇಲ್ಲ. ಕೆಲವೊಮ್ಮೆ ಯಜಮಾನ, ಕೆಲವೊಮ್ಮೆ ಅಂತರ ಕಾಯ್ದುಕೊಳ್ಳುವವ, ಕೆಲವೊಮ್ಮೆ ಜವಾಬ್ದಾರಿಯಿಂದ ನುಣುಚಿಕೊಳ್ಳುವವ.. ಹೀಗೆ ವಿವಿಧ ಪಾತ್ರಗಳೊಂದಿಗೆ ಅವನು ಬದುಕುತ್ತಿರುತ್ತಾನೆ. ಅಂದಹಾಗೆ, ಬೆಳಗ್ಗೆದ್ದು ಬ್ರಶ್ ಮಾಡುತ್ತಿರುವ ಅಪ್ಪ ಅಲ್ಲೇ ಇರುವ ಮಗನಿಗೋ ಮಗಳಿಗೋ ಬ್ರಶ್ ಮಾಡಿಸುವಂತೆ ಪತ್ನಿಗೆ ಆದೇಶಿಸುತ್ತಾನೆಯೇ ಹೊರತು ಸ್ವಯಂ ಮಾಡುವುದಿದೆಯೇ? ಮಗು ‘ಎರಡು’ ಮಾಡಿದರೆ ಬೇಗ ಶುಚಿಗೊಳಿಸುವಂತೆ ಪತ್ನಿಗೆ ಆದೇಶಿಸುವುದಲ್ಲದೆ ಸ್ವಯಂ ಶುಚಿಗೊಳಿಸುವ ಅಪ್ಪಂದಿರು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಪತ್ನಿ ಅಡುಗೆ ಮನೆಯಲ್ಲಿ ಬ್ಯುಝಿಯಾಗಿದ್ದರೂ ಮಕ್ಕಳನ್ನು ಸ್ನಾನ ಮಾಡಿಸುವುದಕ್ಕೆ ನಾವು ಮುಂದಾಗುತ್ತೇವಾ?
     ನಿಜವಾಗಿ, ಸ್ನಾನ ಮಾಡಿಸುವುದು, ಶುಚಿಗೊಳಿಸುವುದು, ಶಾಲೆಗೆ ಸಿದ್ಧಪಡಿಸುವುದೆಲ್ಲ ಬರೇ ಕೆಲಸಗಳಲ್ಲ. ಅವು ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸ, ಆತ್ಮೀಯತೆಗಳನ್ನು ಬೆಳೆಸುವ ಕೊಂಡಿಯೂ ಹೌದು. ಮಗುವಿಗೆ ಸ್ನಾನ ಮಾಡಿಸುವಾಗ ಅಲ್ಲಿ ಮಾತುಕತೆಗಳು ನಡೆಯುತ್ತವೆ. ಮಗು ತನ್ನ ಕಾಲಿಗೋ ಕೈಗೋ ಆದ ಗಾಯವನ್ನು ಅಪ್ಪನೊಂದಿಗೆ ಹೇಳಿಕೊಳ್ಳುತ್ತದೆ. ನಿನ್ನೆ ಯಾವ ಆಟ ಆಡಿದ್ದೆ, ಹೇಗೆ ಬಿದ್ದೆ, ಎಷ್ಟು ಕೂಗಿದೆ.. ಎಂದೆಲ್ಲಾ ಹೇಳುತ್ತಾ ಅದು ಅಪ್ಪನನ್ನು ಮಾತಾಡಿಸುತ್ತದೆ. ಆಗ ಅಪ್ಪ ಮಗುವಾಗುತ್ತಾನೆ. ಅಪ್ಪ ಕಣ್ಣಿಗೆ ಸೋಪು ಹಾಕಿದರೆಂದು ಮಗು ತಾಯಿಯಲ್ಲಿ ದೂರು ಹೇಳುತ್ತದೆ. ಅಪ್ಪ ಮತ್ತು ಮಗುವಿನ ಮಧ್ಯೆ ತಾಯಿ ರಾಜಿ ಮಾಡಿಸುತ್ತಾಳೆ. ಅಲ್ಲೊಂದು ಪ್ರೀತಿಯ, ತಮಾಷೆಯ ವಾತಾವರಣ ಸೃಷ್ಟಿಯಾಗುತ್ತದೆ. ಮಗನದ್ದೋ ಮಗಳದ್ದೋ ಸಮವಸ್ತ್ರಕ್ಕೆ ಇಸ್ತ್ರಿ ಹಾಕುವಾಗ, ಶೂಸ್ ಗೆ  ಪಾಲಿಶ್ ಹಾಕುವಾಗ, ಸಾಕ್ಸು ಧರಿಸುವಾಗಲೆಲ್ಲ ಮಗು ಮತ್ತು ಅಪ್ಪನ ಮಧ್ಯೆ ಸಂಭಾಷಣೆ ನಡೆದೇ ನಡೆಯುತ್ತದೆ. ಶಾಲಾ ವ್ಯಾನ್ ನಲ್ಲಿ  ತನ್ನ ಶೂಸ್ ಗೆ  ಸಹಪಾಠಿ ತುಳಿದದ್ದು, ಆಡುವಾಗ ಬಿದ್ದು ಸಮವಸ್ತ್ರದಲ್ಲಿ ಕೊಳೆಯಾದದ್ದು, ಟೀಚರು ಜೋರು ಮಾಡಿದ್ದು.. ಎಲ್ಲವನ್ನೂ  ಮಗು ಅಪ್ಪನೊಂದಿಗೆ ಹೇಳುತ್ತದೆ. ಆದರೆ ಸ್ನಾನ ಮಾಡಿಸುವುದು, ಶಾಲೆಗೆ ಸಿದ್ಧಪಡಿಸುವುದನ್ನು ಪತ್ನಿಯ ಕೆಲಸವಾಗಿ ಪರಿಗಣಿಸುವ ಪತಿಗೆ ಇವೆಲ್ಲದರ ಅನುಭವ ಆಗುವುದೇ ಇಲ್ಲ.
     ಇಷ್ಟಕ್ಕೂ, ಮಕ್ಕಳೊಂದಿಗೆ ಆಡುವುದಕ್ಕೆ, ಅವರೊಂದಿಗೆ ಚಿತ್ರ ಬಿಡಿಸುವುದಕ್ಕೆ, ಅವರು ಸೀರಿಯಸ್ ಆಗಿ ಹೇಳುವ 'ಸಿಲ್ಲಿ' ಮಾತುಗಳನ್ನು ಆಲಿಸುವುದಕ್ಕೆ ಆಸಕ್ತಿಯನ್ನೇ ತೋರಿಸದೆ, ಅವರು ಕೇಳಿದುದನ್ನೆಲ್ಲ ಖರೀದಿಸಿ ಕೊಟ್ಟು, ಅದನ್ನೇ ಪ್ರೀತಿ ಎಂದು ನಂಬಿರುವ ಅಪ್ಪಂದಿರು ನಮ್ಮ ನಡುವೆ ಎಷ್ಟಿಲ್ಲ ಹೇಳಿ? ಮಕ್ಕಳ ಮನಸ್ಸು ತೀರಾ ಸೂಕ್ಷ್ಮ ವಾದುದು. ದೊಡ್ಡವರು ಏನು ಮಾಡುತ್ತಾರೋ ಅವನ್ನೇ ಅವೂ ಮಾಡಲು ಪ್ರಯತ್ನಿಸುತ್ತವೆ. ಇಂಥ ಸಂದರ್ಭಗಳಲ್ಲೆಲ್ಲಾ ಅಪ್ಪನಿಗೆ ಸಿಟ್ಟು ಬರುವುದೇ ಹೆಚ್ಚು. ನಿಜವಾಗಿ, 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಅನ್ನುವ ಸಂದೇಶವೊಂದು ಯಾವಾಗಲೂ ಅಪ್ಪನಿಂದ ಮಕ್ಕಳಿಗೆ ರವಾನೆಯಾಗುತ್ತಿರಬೇಕು. ಹಾಗಂತ, ಮಗುವಿಗೆ ನಾಲ್ಕು ಬಾರಿಸಿ, 'ನಾನು ಪ್ರೀತಿಸುತ್ತೇನೆ ಮಗೂ' ಅನ್ನುವುದಲ್ಲವಲ್ಲ. ನಮ್ಮ ಭಾಷೆ, ಮಾತು, ವರ್ತನೆಗಳೇ ಮಗುವಿಗೆ ಅಂಥದ್ದೊಂದು ಸಂದೇಶವನ್ನು ಕೊಡುತ್ತಿರಬೇಕು. ಮಕ್ಕಳೊಂದಿಗೆ ಹಾಡುವುದು, ಅವರನ್ನು ಹೆಚ್ಚು ಆಲಿಸುವುದು, ಸುಮ್ಮನೆ ಸಿಟ್ಟು ಬರಿಸುವುದೆಲ್ಲ ಮಾಡುತ್ತಿರಬೇಕು. ಅಂದಹಾಗೆ, ಪ್ರವಾದಿ ಮುಹಮ್ಮದ್ ರು (ಸ) ತಮ್ಮ ಬ್ಯುಝಿ ಕಾರ್ಯಕ್ರಮ ಪಟ್ಟಿಯ ಮಧ್ಯೆಯೂ ಮಗಳು ಫಾತಿಮಾರನ್ನು ಎತ್ತಿಕೊಳ್ಳುತ್ತಿದ್ದರು, ಮುತ್ತಿಕ್ಕುತ್ತಿದ್ದರು, ಆಸನದಲ್ಲಿ ಕುಳ್ಳಿರಿಸುತ್ತಿದ್ದರು ಎಂದು ಮಾತ್ರವಲ್ಲ, ಮೊಮ್ಮಕ್ಕಳಾದ ಹಸನ್-ಹುಸೈನ್ ರನ್ನು ಬೆನ್ನಿನಲ್ಲಿ ಕೂರಿಸಿ ಆಟವಾಡಿಸಿದ್ದರೆಂಬುದೆಲ್ಲ ಬರೇ ಓದಿಗಷ್ಟೇ ಯಾಕೆ ಸೀಮಿತವಾಗಬೇಕು?
 ಕಚೇರಿ, ಪ್ರಾಜೆಕ್ಟು, ಅದು-ಇದು ಮುಂತಾದುವುಗಳೆಲ್ಲ ಇದ್ದದ್ದೇ. ಅದರ ಜೊತೆಗೇ ಮಕ್ಕಳ ಬಾಲ್ಯವನ್ನು ಅನುಭವಿಸಲು, ಮಕ್ಕಳೊಂದಿಗೆ ಮಕ್ಕಳಾಗಿ, ಅವರಿಗೆ ಸೂಕ್ತ ಸಂದೇಶಗಳನ್ನು ರವಾನಿಸುತ್ತಿರಲು ನಮಗೆ ಸಾಧ್ಯವೂ ಆಗಬೇಕು. ಯಾಕೆಂದರೆ, ಬಾಲ್ಯ ಕಾಲ ಮತ್ತೆ ಮತ್ತೆ ಬರುವುದಿಲ್ಲವಲ್ಲ. ಮಸೀದಿಗೆ ಹೋಗುವಾಗ ಮಕ್ಕಳನ್ನು ಕರಕೊಂಡು ಹೋಗುವುದರಿಂದ, ಅಂಗಡಿಗೆ ಹೋಗುವಾಗ ಜೊತೆಗೊಯ್ದು, ಅಲ್ಲಿಯ ವ್ಯವಹಾರಗಳನ್ನು ವೀಕ್ಷಿಸುವುದಕ್ಕೆ ಅವಕಾಶ ಒದಗಿಸುವುದರಿಂದ ಮಗು ಅನೇಕಾರು ಸಂಗತಿಗಳನ್ನು ಕಲಿಯುತ್ತದೆ. ನಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಇವೆಲ್ಲವನ್ನೂ ಮಾಡುವ ಅಂತ ತೀರ್ಮಾನಿಸುವುದಕ್ಕೆ ಬಾಲ್ಯವೇನು ನಿಂತಲ್ಲೇ ನಿಂತಿರುತ್ತದಾ? ಅಷ್ಟಕ್ಕೂ, 'ಬಾಲ್ಯದಲ್ಲಿ ನಮ್ಮ ಮೇಲೆ ಹೆತ್ತವರು  ಕರುಣೆ ತೋರಿದಂತೆ, ಈ ಮುಪ್ಪಿನಲ್ಲಿ ಅವರ ಮೇಲೆ ಕರುಣೆ ತೋರು' ಎಂದು ನಮ್ಮ ಮಕ್ಕಳು ನಮಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದು (ಪವಿತ್ರ ಕುರ್ಆನ್: 17: 24) ಬಯಸುವ ನಾವು, ಅದಕ್ಕೆ ಅರ್ಹರೂ ಆಗಿರಬೇಕಲ್ಲವೇ? ನಾವು ಬಾಲ್ಯದಲ್ಲಿ ಅವರನ್ನು ಪ್ರೀತಿಸದೇ, ಮುದ್ದಿಸದೇ, ಆಡಿಸದೇ ಇದ್ದರೆ ಅವರು ನಮ್ಮ ಪರವಾಗಿ ಹೀಗೆ ಪ್ರಾರ್ಥಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ?
      ಆಡಳಿತದ ಬ್ಯುಝಿಯ ಮಧ್ಯೆಯೂ ಶಿಕ್ಷಕರ ಸಭೆಗೆ ಹಾಜರಾಗುವ, ಮಕ್ಕಳ ಜೊತೆ ಪುಸ್ತಕ ಓದುವ ಒಬಾಮರನ್ನು ನೋಡುತ್ತಾ ಇವೆಲ್ಲ ನೆನಪಾಯಿತು.

Monday, November 5, 2012

ಸೌದಿ, ವೆನೆಜುವೇಲ, ಇರಾಕ್ ಗಳಿದ್ದರೂ ಅವರೆಲ್ಲಾ ಅಮೆರಿಕವನ್ನೇ ದ್ವೇಷಿಸುವುದೇಕೆ?



   ಒಂದು ಶೇಕಡಾ ಜನರಿಂದ
   ಒಂದು ಶೇಕಡಾ ಜನರಿಗೋಸ್ಕರ
   ಒಂದು ಶೇಕಡಾ ಜನರ ಸರಕಾರ..
       ಹಾಗಂತ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಖ್ಯಾತ ಆರ್ಥಿಕ ತಜ್ಞ ಜೋಸೆಫ್ ಸ್ಟಿಗ್ಲಿಜ್ ರು  ವಾರಗಳ ಹಿಂದೆ  ವಿಶ್ಲೇಷಿಸಿದ್ದರು. ಇದಕ್ಕೆ ಕಾರಣವೂ ಇದೆ..
       ಮಿಟ್ ರೋಮ್ನಿ ಮತ್ತು ಒಬಾಮರ ಮಧ್ಯೆ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ 2.5 ಬಿಲಿಯನ್ ಡಾಲರ್ ಖರ್ಚು ತಗಲಬಹುದೆಂಬುದು ಖಚಿತವಾಗಿದೆ. ಈ ಮೊತ್ತವನ್ನು ಒಬಾಮ ಮತ್ತು ರೋಮ್ನಿಯ ಮಧ್ಯೆ ಸಮಾನವಾಗಿ ವಿಂಗಡಿಸಿದರೆ 1.25 ಬಿಲಿಯನ್ ಡಾಲರ್ ಆಗುತ್ತದೆ. ಒಂದು ವೇಳೆ ಮುಂದಿನ 4 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮಿಟ್ ರೋಮ್ನಿ ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ. ಅವರು ಈ ಮೊತ್ತವನ್ನು ಮರಳಿ ಪಡಕೊಳ್ಳಬೇಕಾದರೆ ಪ್ರತಿದಿನ 8,50,000 ಡಾಲರ್ ಗಳಿಸಬೇಕಾಗುತ್ತದೆ ಅಥವಾ ತನಗೆ ದುಡ್ಡು ನೀಡಿದ ಕಂಪೆನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಅಗಾಗ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಮೆರಿಕದಲ್ಲಿ ಯುದ್ಧ ಟ್ಯಾಂಕ್ ಗಳನ್ನು ತಯಾರಿಸುವ ಜನರಲ್ ಡೈನಾಮಿಕ್ಸ್ ಎಂಬ ಬೃಹತ್ ಸಂಸ್ಥೆಯಿದೆ. ಅಮೆರಿಕದ ವಿವಿಧ ಪಾರ್ಲಿಮೆಂಟ್ ಸದಸ್ಯರು 2001ರಿಂದ 5.3 ಮಿಲಿಯನ್ ಡಾಲರ್ ಮೊತ್ತವನ್ನು ಈ ಸಂಸ್ಥೆಯಿಂದ ಪಡೆದಿದ್ದಾರೆ ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟೆಗ್ರಿಟಿ(CPI)ಯ ತನಿಖೆಯಿಂದ ಬಹಿರಂಗವಾಗಿತ್ತು. ಇಷ್ಟಕ್ಕೂ ಅಫಘಾನ್ ಮತ್ತು ಇರಾಕ್ ಮೇಲಿನ ಅಮೆರಿಕದ ದಾಳಿಗೆ ಈ ವರೆಗೆ 2.6ರಿಂದ 4 ಟ್ರಿಲಿಯನ್ ಡಾಲರ್ ಗಳಷ್ಟು ಖರ್ಚಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ, ಸದ್ಯ ಅಮೆರಿಕ 16 ಟ್ರಿಲಿಯನ್ ಡಾಲರ್ ಗಳಷ್ಟು ಸಾಲದಲ್ಲೂ ಇದೆ. ನೀವೇ ಹೇಳಿ, ಅಮೆರಿಕ ಇಂಥದ್ದೊಂದು ದಾಳಿಗೆ ಮುಂದಾಗಬೇಕಾದ ಅನಿವಾರ್ಯತೆ ಇತ್ತೆ? ಇರಾಕ್ ನ  ಮೇಲೆ ಅಮೆರಿಕ ದಾಳಿ ಮಾಡದೇ ಇರುತ್ತಿದ್ದರೆ, ಇರಾಕೇನೂ ಅಮೇರಿಕದ ಮೇಲೆ ದಾಳಿ ಮಾಡುತ್ತಿರಲಿಲ್ಲವಲ್ಲ. ಹೀಗಿರುವಾಗ, ತನ್ನ ದೇಶವನ್ನು ಸಾಲದಲ್ಲಿ ಮುಳುಗಿಸಬಹುದಾದ ದಾಳಿಯೊಂದಕ್ಕೆ ಅಮೆರಿಕ ಮುಂದಾದದ್ದೇಕೆ? ನಿಜವಾಗಿ, ಶಸ್ತ್ರಾಸ್ತ್ರ ಕಂಪೆನಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಅಮೆರಿಕದ ನೀತಿ-ನಿರೂಪಣೆಯ ಮೇಲೆ ಬಲವಾದ ಪ್ರಭಾವ ಬೀರುತ್ತಿವೆ ಎಂಬುದು ಸಾಬೀತಾಗುವುದೇ ಇಲ್ಲ್ಲಿ.
      ನೋಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲೆಡ್ಜ್ ರ , ‘ದಿ ಟ್ರಿಲಿಯನ್ ಡಾಲರ್ ವಾರ್’ ಎಂಬ ಕೃತಿಯನ್ನು ಓದಿದರೆ, ಯುದ್ಧವೆಂಬ ವ್ಯಾಪಾರದ ಧಾರಾಳ ವಿವರಗಳು ಸಿಗುತ್ತವೆ. 2008ರಲ್ಲಿ ಬಿಡುಗಡೆಯಾದ ಈ ಕೃತಿಯಲ್ಲಿ ಅಫಘಾನ್ ಮೇಲಿನ ದಾಳಿಯಲ್ಲಿ ಭಾಗಿಯಾದ ಅಮೆರಿಕನ್ ಸೈನಿಕರಿಗೆ ಅಪಾರ ಪ್ರಮಾಣದ ದುಡ್ಡು ನೀಡಲಾದ ಬಗ್ಗೆ ವಿವರಗಳಿವೆ. ಬದುಕಿನಾದ್ಯಂತ ಆರಾಮವಾಗಿ ಜೀವಿಸುವುದಕ್ಕೆ ಸಾಕಾಗುವಷ್ಟು ಮೊತ್ತವನ್ನು ಅವರೆಲ್ಲರಿಗೆ ನೀಡಲಾಗಿದೆ ಎನ್ನುತ್ತದೆ ಈ  ಕೃತಿ. ಇಷ್ಟೇ ಅಲ್ಲ,
    1. ಗೋಲ್ಡನ್ ಸ್ಯಾಚೆಸ್
    2. ಜೆ.ಪಿ. ಮಾರ್ಗನ್ ಚೇಸ್
    3. ಸಿಟಿ ಗ್ರೂಪ್
    4. ಯು.ಬಿ.ಎಸ್. ಬ್ಯಾಂಕ್
    5. ಮಾರ್ಗನ್ ಸ್ಟಾನ್ಲಿ
    6. ಜನರಲ್ ಎಲೆಕ್ಟ್ರಿಕ್..
2008ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮರಿಗಾಗಿ ಈ ಎಲ್ಲ ಹಣಕಾಸು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದುವು. ಈ ಹಿಂದೆ ನ್ಯೂಯಾರ್ಕ್ ಫೆಡರಲ್ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಟಿಮ್ ಗೈತನರ್  ರನ್ನು ತನ್ನ ಖಜಾನೆಯ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುವ ಮೂಲಕ ಹಣಕಾಸು ಸಂಸ್ಥೆಗಳ ಋಣವನ್ನು ಒಬಾಮ ಬಳಿಕ ತೀರಿಸಿದರು. ಇನ್ನೋರ್ವ ಬ್ಯಾಂಕ್ ಮುಖ್ಯಸ್ಥ ಲಾರೆನ್ಸ್ ಸಮ್ಮರ್ಸ್ ರನ್ನು ತನ್ನ ಪ್ರಮುಖ ಆರ್ಥಿಕ ಸಲಹೆಗಾರರನ್ನಾಗಿ ಅವರು ನೇಮಿಸಿಕೊಂಡರು. ಒಂದು ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂಬುದು ಅಲ್ಲಿನ ಬೃಹತ್ ಉದ್ಯಮಿಗಳ, ಹಣಕಾಸು ಸಂಸ್ಥೆಗಳ ಮತ್ತು ಶಸ್ತ್ರಾಸ್ತ್ರ ಕಂಪೆನಿಗಳ ಚುನಾವಣೆಯೂ ಆಗಿದೆ. ಅವು ತಮ್ಮ ಭವಿಷ್ಯದ ಬಜೆಟ್ಟನ್ನು ನಿರ್ಧರಿಸುವುದೇ ಈ ಚುನಾವಣೆಯಲ್ಲಿ. ನಾವು ಇಲ್ಲಿ ಭೂಮಿಗೆ, ಚಿನ್ನಕ್ಕೆ, ಶೇರ್ ಗೆ  ಬಂಡವಾಳ ಹೂಡುವಂತೆ ಇವು ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡುತ್ತವೆ. ಬಳಿಕ ಬಂಡವಾಳ ಹಿಂತಿರುಗಿಸುವಂತೆ ಅಭ್ಯರ್ಥಿಯ ಮೇಲೆ ವಿವಿಧ ಬಗೆಯ ಒತ್ತಡಗಳನ್ನು ಹೇರತೊಡಗುತ್ತವೆ. ಇಲ್ಲದಿದ್ದರೆ, ವಿದೇಶಿ ನೇರ ಹೂಡಿಕೆಗೆ ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಅಮೆರಿಕಕ್ಕೆ ಏನಿತ್ತು ದರ್ದು? ವಾಲ್ಮಾರ್ಟ್ ನಂಥ ಪ್ರಭಾವಿ ಕಂಪೆನಿಗಳನ್ನು ಭಾರತದ ಚಿಲ್ಲರೆ ಮಾರಾಟ ವಲಯದ ಮೇಲೆ ಹೇರಲು ಒಬಾಮರಿಗೆ ಅಂಥ ಆಸಕ್ತಿಯೇನು?
     ಅಫಘಾನ್ ಅತಿಕ್ರಮಣದ 11ನೇ ವರ್ಷಾಚಾರಣೆಯ ಪ್ರಯುಕ್ತ ನ್ಯೂಯಾರ್ಕಿನಲ್ಲಿ ತಿಂಗಳ ಹಿಂದೆ ಪ್ರತಿಭಟನೆಯೊಂದು ನಡೆದಿತ್ತು. ಕಳೆದ ವರ್ಷ ಅಮೆರಿಕದಾದ್ಯಂತ ಹಬ್ಬಿಕೊಂಡಿದ್ದ ಅಕ್ಯುಪೈ ವಾಲ್ ಸ್ಟ್ರೀಟ್  ಎಂಬ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆವಿನ್ ಝೀಸ್ ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ. ಇರಾಕ್, ಅಫಘಾನ್ ವಿಯೆಟ್ನಾಮ್.. ಮುಂತಾದೆಡೆ ಯುದ್ಧಗಳಲ್ಲಿ ಭಾಗವಹಿಸಿದ ಮಾಜಿ ಸೈನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯುದ್ಧ ಹೇಗೆ ಲಾಭಕರವಾಗಿದೆ ಎಂಬುದನ್ನು ಝೀಸ್ ಸಭೆಯಲ್ಲಿ ವಿವರಿಸಿದ. ಯೋಧರೇ ಅಚ್ಚರಿಗೆ ಒಳಗಾಗುವಷ್ಟು ಮಾಹಿತಿಗಳನ್ನು ಮುಂದಿಟ್ಟ. ನಿಜವಾಗಿ, ಅಮೆರಿಕದ ಅವಳಿ ಕಟ್ಟಡ ಉರುಳಿದಾಗ ಸಾವಿಗೀಡಾದದ್ದು 3 ಸಾವಿರ ಮಂದಿ. ಆದರೆ ಅದರ ಹೆಸರಲ್ಲಿ ಅಮೆರಿಕ ಕೈಗೊಂಡ ಕಾರ್ಯಾಚರಣೆಯಿಂದ 6 ಸಾವಿರ ಸೈನಿಕರು ಈಗಾಗಲೇ ಸಾವಿಗೀಡಾಗಿದ್ದಾರೆ. ಪ್ರತಿ 24 ಗಂಟೆಗಳಿಗೊಮ್ಮೆ ಓರ್ವ ಸೈನಿಕನಾದರೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ. 2003ರಿಂದ 2008ರ ವರೆಗೆ ಕೇವಲ ಇರಾಕ್ ಒಂದರಲ್ಲಿಯೇ 6,50,000 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. 1.8 ಮಿಲಿಯನ್ ಇರಾಕಿಗಳು ದೇಶ ಬಿಟ್ಟು ವಲಸೆ ಹೋಗಿದ್ದಾರೆ. ತಮ್ಮ ದೇಶದಲ್ಲಿಯೇ ಅತಂತ್ರರಾದವರ ಸಂಖ್ಯೆ 1.6 ಮಿಲಿಯನ್ (ದಿ ಹಿಂದು , ಅಕ್ಟೋಬರ್ 25, 2012). ಆದರೆ, ಇಷ್ಟೆಲ್ಲಾ ಮಾಹಿತಿಗಳು ಕಣ್ಣ ಮುಂದಿದ್ದರೂ ಒಬಾಮ ಮತ್ತು ರೋಮ್ನಿ ಮಧ್ಯೆ ನಡೆದ ಚರ್ಚೆಗಳಲ್ಲಿ ಇವುಗಳ ಪ್ರಸ್ತಾಪವೇ ಆಗಿಲ್ಲವೇಕೆ? ಒಬಾಮ ಮತ್ತು ರೋಮ್ನಿಯ ಮಧ್ಯೆ 3 ಸುತ್ತಿನ ಬಹಿರಂಗ ಚರ್ಚೆ ಈಗಾಗಲೇ ಮುಗಿದಿದೆ. ಅಂತಿಮವಾಗಿ ಈ ಚರ್ಚೆಯಲ್ಲಿ ಗೆದ್ದದ್ದು ಒಬಾಮ ಎಂಬ ತೀರ್ಮಾನಕ್ಕೂ ಬರಲಾಗಿದೆ. ಆದರೆ, ಈ ಚರ್ಚೆಯಲ್ಲಿ ಅಫಘಾನ್ ಮತ್ತು ಇರಾಕ್ ಮೇಲಿನ ದಾಳಿಗಾದ ಖರ್ಚಿನ ಕುರಿತು ಇಬ್ಬರೂ ಚಕಾರವೆತ್ತಲೇ ಇಲ್ಲ. ಸೇನೆಗೆ ಇನ್ನಷ್ಟು ಹಣ ಮೀಸಲಿಡುವ ಬಗ್ಗೆ ರೋಮ್ನಿ ಹೇಳಿಕೊಂಡರಲ್ಲದೇ, ಡ್ರೋನನ್ನೂ ಸಮರ್ಥಿಸಿಕೊಂಡರು. ಆದರೆ ಅತಿಕ್ರಮಣದಲ್ಲಿ ಸಾವಿಗೀಡಾದ ಇರಾಕ್, ಅಫಘಾನಿಯರ ಬಗ್ಗೆ ಅವರು ಅಪ್ಪಿತಪ್ಪಿಯೂ ಉಲ್ಲೇಖಿಸಲಿಲ್ಲ. ಅದು ಬಿಡಿ, ಅಣು ವಿದ್ಯುತ್ ನ  ಬಗ್ಗೆ ಒಬಾಮ ಒಂದೇ ಒಂದು ಬಾರಿಯಾದರೂ ಮಾತಾಡಲಿಲ್ಲ. ಅದು ಸುರಕ್ಷಿತ ವಿದ್ಯುತ್ ಎಂದೂ ಹೇಳಲಿಲ್ಲ. ಅವರು ವಾಯು, ಸೋಲಾರ್ ಮತ್ತು ಬಯೋ ವಿದ್ಯುತ್ ನ  ಬಗ್ಗೆಯಷ್ಟೇ ಚರ್ಚೆಯಲ್ಲಿ ಉಲ್ಲೇಖಿಸಿದ್ದರು. ಅಣು ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತದ ಮೇಲೆ ಒತ್ತಡ ಹೇರಿ ಯಶಸ್ವಿಯಾದ ಮತ್ತು ಜೈತಾಪುರ್ (ಫ್ರಾನ್ಸ್ ಪ್ರಾಯೋಜಕತ್ವ) ಸಹಿತ ದೇಶದ ವಿವಿಧ ಭಾಗಗಳಲ್ಲಿ ಅಣು ಸ್ಥಾವರಗಳನ್ನು ನಿರ್ಮಿಸಲು ಉತ್ತೇಜನ ಕೊಟ್ಟ ಇದೇ ಅಮೆರಿಕಕ್ಕೆ ಅಣು ವಿದ್ಯುತ್ ಅಪಥ್ಯವಾದುದೇಕೆ? ರೋಮ್ನಿ ಅಣು ವಿದ್ಯುತ್ ನ  ಬಗ್ಗೆ ಒಮ್ಮೆ ಉಲ್ಲೇಖಿಸಿದರೂ ಅದಕ್ಕೆ ಒತ್ತು ಕೊಡಲಿಲ್ಲ. ಇವೆಲ್ಲ ಏನು? ಒಳಗೊಂದು ಹೊರಗೊಂದು ನೀತಿಯೇ ಅಲ್ಲವೇ? ಮಲಾಲಳ ಪ್ರಕರಣದ ಕುರಿತಂತೆ ಇವತ್ತು ಪಾಕ್ ನಲ್ಲಿ ವ್ಯಕ್ತವಾಗುತ್ತಿರುವ ಸರಣಿ ಅನುಮಾನಗಳಿಗೆ ಅಮೆರಿಕನ್ ಮಾಧ್ಯಮಗಳು ಸಿಟ್ಟಾಗಿವೆ. ಪಾಕ್ ಮತ್ತು ಅಫಘಾನ್ ಗೆ  ಅಮೆರಿಕದ ವಿಶೇಷ ರಾಯಭಾರಿಯಾಗಿ ಈ ಹಿಂದೆ ನೇಮಕವಾಗಿದ್ದ ರಿಚರ್ಡ್ ಹಾಲ್ ಬ್ರೂಕ್ ರೊಂದಿಗೆ ಮಲಾಲ ಮತ್ತು ಆಕೆಯ ತಂದೆ ಝೈದುದ್ದೀನ್ ರು  ಇರುವ ಫೋಟೋ ಇಂಟರ್ನೆಟಲ್ಲಿ  ಇತ್ತೀಚೆಗೆ ಕಾಣಿಸಿಕೊಂಡಿತ್ತು. ಇದನ್ನು ಪೋಸ್ಟ್ ಮಾಡಿದ್ದು, ಪಾಕ್ ಜಮಾಅತೆ ಇಸ್ಲಾಮಿಯ ಮಾಜಿ ಅಧ್ಯಕ್ಷ ಖಾಝಿ ಹುಸೈನ್ ರ  ಮಗಳು ಸಮಿಯ. ಪ್ರಕರಣದ ಕುರಿತಂತೆ ಭಿನ್ನ ಚರ್ಚೆಗೆ ಈ ಫೋಟೋ ಪ್ರಚೋದನೆ ನೀಡುತ್ತದೆಂದು ಅಮೆರಿಕನ್ ಮಾಧ್ಯಮಗಳು ಸಿಟ್ಟು ವ್ಯಕ್ತಪಡಿಸಿದ್ದುವು. ‘ಮಲಾಲಳ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಿಂದ  ದಾಳಿ ಮಾಡಲಾಗಿದ್ದು, ಗುಂಡು ಮೆದುಳಿಗೆ ಹಾನಿ ಮಾಡದೇ ಕೇವಲ ತಲೆ ಮತ್ತು ಕತ್ತಿನ ಸುತ್ತ ಹರಿದಾಡುತ್ತಿದೆ, ಇಂಥ ಚಾಣಾಕ್ಷ ದಾಳಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಏಯಿಂದ ಮಾತ್ರ ಮಾಡಲು ಸಾಧ್ಯ, ತಾಲಿಬಾನ್ ಗೆ  ಇಂಥ ದಾಳಿ ಮಾಡುವ ಸಾಮರ್ಥ್ಯ  ಇಲ್ಲ...’ ಎಂಬೆಲ್ಲ ವ್ಯಾಖ್ಯಾನಗಳು ಪಾಕ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಅಮೆರಿಕನ್ ಅಧಿಕಾರಿಗಳಲ್ಲ್ಲಿ ಅಸಹನೆ ಉಂಟುಮಾಡಿದೆ. ಅಂದ ಹಾಗೆ, ಅಮೆರಿಕದ ಕುರಿತಂತೆ ಈ ಬಗೆಯ ಅನುಮಾನಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾದರೂ ಯಾರು? ಹಾಗಂತ ಅಮೆರಿಕವನ್ನು ದ್ವೇಷಿಸುತ್ತಿರುವುದು ಪಾಕ್ ಒಂದೇ ಅಲ್ಲ, ಪಾಕ್ ನಂಥ ಅನೇಕಾರು ರಾಷ್ಟ್ರಗಳ ಕೋಟ್ಯಂತರ ಮಂದಿ ಇವತ್ತು ಅಮೆರಿಕವನ್ನು ದ್ವೇಷಿಸುತ್ತಿದ್ದಾರಲ್ಲ, ಯಾಕಾಗಿ? ಅಮೆರಿಕ ಏನು ಮಾಡಿದರೂ, ಯಾವ ಹೇಳಿಕೆಯನ್ನು ಕೊಟ್ಟರೂ ಅನುಮಾನಿಸುವ ವಾತಾವರಣ ನಿರ್ಮಾಣವಾದ್ದೇಕೆ? ಹೇಗೆ? ಇಷ್ಟಕ್ಕೂ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರುವುದು ಅಮೆರಿಕ ಒಂದೇ ಅಲ್ಲವಲ್ಲ. ಆದರೆ ಅವಾವುದನ್ನೂ ದ್ವೇಷಿಸದೆ ಕೇವಲ ಅಮೆರಿಕವನ್ನಷ್ಟೇ ಜನರು ದ್ವೇಷಿಸುತ್ತಾರೆಂದರೆ ಆ ದ್ವೇಷಕ್ಕೆ ಅಮೆರಿಕದ ಶ್ರೀಮಂತಿಕೆ ಕಾರಣ ಅಲ್ಲ ಎಂಬುದೂ ಸ್ಪಷ್ಟವಲ್ಲವೇ? ಒಂದು ವೇಳೆ ಶ್ರೀಮಂತಿಕೆಯೇ ಕಾರಣವೆಂದಾಗಿದ್ದರೆ ಧಾರಾಳ ತೈಲ ಸಂಪತ್ತು ಇರುವ ಸೌದಿಯನ್ನೋ, ವೆನೆಝುವೇಲವನ್ನೋ, ಇರಾಕನ್ನೋ ಜನರು ದ್ವೇಷಿಸಬೇಕಿತ್ತಲ್ಲವೇ?
     ಆದರೂ, ಮುಂದಿನ ತಿಂಗಳು ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಒಬಾಮರೋ, ರೋಮ್ನಿಯೋರೋ ಹೀಗೆಲ್ಲಾ ಆತ್ಮಾವಲೋಕನ ನಡೆಸುತ್ತಾರೆಂಬ ನಿರೀಕ್ಷೆ ಯಾರಲ್ಲೂ ಇಲ್ಲ..


Tuesday, October 30, 2012

ಅವರ ಆ 8 ಗಂಟೆ ವಿಳಂಬದಲ್ಲಿ ಹತ್ತಾರು ಅರ್ಥಗಳಿದ್ದುವೇ?

ಇಮ್ರಾನ್ ಖಾನ್‍
      ಲಿವಿಂಗ್ ಅಂಡರ್ ಡ್ರೋನ್ಸ್ (ಡ್ರೋನ್‍ಗಳಡಿಯಲ್ಲಿ ಬದುಕು) ಎಂಬ ಡಾಕ್ಯುಮೆಂಟರಿಯನ್ನು ವೀಕ್ಷಿಸಿದರೆ ಅಥವಾ ಸ್ಟಾನ್‍ ಫೋರ್ಡ್  ಯುನಿವರ್ಸಿಟಿ ಮತ್ತು ನ್ಯೂಯಾರ್ಕ್ ಯುನಿವರ್ಸಿಟಿಗಳು ಜಂಟಿಯಾಗಿ ನಡೆಸಿದ ಅಧ್ಯಯನದ ವರದಿಯನ್ನು ಓದಿದರೆ  ಪಾಕಿಸ್ತಾನದ ಮಲಾಲ ಯೂಸುಫ್‍ಝಾಯಿ ಪ್ರಕರಣದ ಬಗ್ಗೆ ಖಂಡಿತ ಅನುಮಾನಗಳು ಮೂಡುತ್ತವೆ.
       ಲಿವಿಂಗ್ ಅಂಡರ್ ಡ್ರೋನ್ಸ್ ಎಂಬ ಹೆಸರಿನ ಡಾಕ್ಯುಮೆಂಟರಿ ಮತ್ತು 165 ಪುಟಗಳ ಅಧ್ಯಯನ ವರದಿಯು ಕಳೆದ 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದಲ್ಲಿ ಬಿಡುಗಡೆಯಾಗಿತ್ತು. ಮೇಲಿನೆರಡು ಯುನಿವರ್ಸಿಟಿಗಳ ವಿದ್ಯಾರ್ಥಿಗಳು ಒಂದು ವರ್ಷದ ಕಾಲ ಮಲಾಲಳ ಸ್ವಾತ್ ಕಣಿವೆ ಸಹಿತ ಪಾಕಿಸ್ತಾನದ ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನದ ವರದಿಯದು. ಅಮೇರಿಕದ ಡ್ರೋನ್ ದಾಳಿಯಿಂದ ಬದುಕುಳಿದ 130ಕ್ಕಿಂತಲೂ ಅಧಿಕ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ಆ ವರದಿಯಲ್ಲಿ ಹತ್ತಾರು ಕಣ್ಣೀರ ಕತೆಗಳಿವೆ. ಡ್ರೋನ್ ಕ್ಷಿಪಣಿಯ ಸದ್ದು ಕೇಳಿಸುತ್ತಲೇ ಜನರೆಲ್ಲ ಮನೆ, ಹಟ್ಟಿ, ಟಾಯ್ಲೆಟ್ಟು... ಹೀಗೆ ಸಿಕ್ಕ ಸಿಕ್ಕಲ್ಲಿ ನುಸುಳಿಕೊಳ್ಳುತ್ತಾರೆ. ಅಂತ್ಯಸಂಸ್ಕಾರ ನಡೆಸಲೂ ಭಯ. ಅದರಲ್ಲಿ ಭಾಗವಹಿಸಲೂ ಭೀತಿ. ಯಾಕೆಂದರೆ ಎಷ್ಟೋ ಬಾರಿ ಅಂತ್ಯ ಸಂಸ್ಕಾರಕ್ಕೆ ಸೇರಿದವರ ಮೇಲೆಯೇ ಡ್ರೋನ್(ಮಾನವ ರಹಿತ ಕ್ಷಿಪಣಿ)ಗಳು ಎರಗಿವೆ. ಮದುವೆ ನಡೆಸುವಂತಿಲ್ಲ. ಊರ ಪ್ರಮುಖರು ಸಭೆ ಸೇರುವಂತಿಲ್ಲ. ಯಾವ ಸಂದರ್ಭದಲ್ಲೂ ಡ್ರೋನ್ ಎರಗಬಹುದು. ಅಸಂಖ್ಯ ಮಂದಿ ನಿದ್ದೆ ಬಾರದ ಸಮಸ್ಯೆಯಿಂದ (insomnia) ಬಳಲುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಜಾರಿ
ಯಲ್ಲಿರುವ ಡ್ರೋನ್ ದಾಳಿಯಿಂದಾಗಿ ದೈಹಿಕ, ಮಾನಸಿಕ ಕಾಯಿಲೆಗಳಿಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ. ಅಂದ ಹಾಗೆ, ಯಾವುದಾದರೊಂದು ಸಭೆಗೋ ಅಂತ್ಯ ಸಂಸ್ಕಾರಕ್ಕೋ ಮದುವೆ ಕಾರ್ಯಕ್ರಮಕ್ಕೋ ಡ್ರೋನ್ ದಾಳಿಯಾದರೆ ಅರ್ಧ ತಾಸಿನ  ತನಕ ಯಾರೂ ಹತ್ತಿರ ಧಾವಿಸುವುದೇ ಇಲ್ಲ. ಯಾಕೆಂದರೆ ಮುಂದಿನ ಅರ್ಧ ತಾಸಿನೊಳಗೆ ಇನ್ನೊಂದು ದಾಳಿಯಾಗುವ ಸಾಧ್ಯತೆಯಿರುತ್ತದೆ. ಬುಶ್‍ರ ಆಡಳಿತಾವಧಿಯಲ್ಲಿ 43 ದಿನಗಳಿಗೊಮ್ಮೆ ಡ್ರೋನ್‍ನ ದಾಳಿಯಾಗುತ್ತಿದ್ದರೆ ಒಬಾಮರ ಆಡಳಿತದಲ್ಲಿ ದಿನಕ್ಕೊಂದು ಡ್ರೋನ್ ಸಿಡಿಯುತ್ತಲೇ ಇದೆ..’
       ಇಷ್ಟಕ್ಕೂ, ಪಾಕ್, ಬ್ರಿಟನ್ ಮತ್ತು ಅಮೇರಿಕಗಳಲ್ಲಿ ಇವತ್ತು ಡ್ರೋನ್ ಒಂದು ಚರ್ಚಾ ವಿಷಯವಾಗಿದ್ದರೆ ಅದಕ್ಕೆ ಮಲಾಲ ಖಂಡಿತ ಕಾರಣ ಅಲ್ಲ..
1 ನೂರ್ ಖಾನ್
ಮಲಾಲ
2 ಇಮ್ರಾನ್ ಖಾನ್
        ನೂರ್ ಖಾನ್ ಎಂಬ ಪಾಕ್‍ನ 27ರ ಯುವಕ ಕಳೆದವಾರ ಬ್ರಿಟನ್ನಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. 2011ರ  ಮಾರ್ಚ್ ನಲ್ಲಿ ಈತನ ತಂದೆ ಮಾಲಿಕ್ ದಾವೂದ್‍ರು ಪೂರ್ವ ವಜೇರಿಸ್ತಾನದಲ್ಲಿ ಬುಡಕಟ್ಟು ಪ್ರಮುಖರ ನಭೆ ನಡೆಸುತ್ತಿದ್ದರು. ಆಗ ಆ ಸಭೆಯ ಮೇಲೆ ಡ್ರೋನ್ ಎರಗುತ್ತದಲ್ಲದೇ ಮಾಲಿಕ್‍ರ ಸಹಿತ ಐವತ್ತು ಮಂದಿ ಬುಡಕಟ್ಟು ಪ್ರಮುಖರನ್ನು ಹತ್ಯೆ ಮಾಡುತ್ತದೆ. ತನ್ನ ತಂದೆ ಟೆರರಿಸ್ಟ್ ಆಗಿರಲಿಲ್ಲ, ತಾಲಿಬಾನೂ ಆಗಿರಲಿಲ್ಲ. ಆದರೆ ಈ ಸಭೆಯ ಬಗ್ಗೆ ಬ್ರಿಟನ್ನಿನ ಗುಪ್ತಚರ ಅಧಿಕಾರಿಗಳು  ಅಮೇರಿಕನ್ ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದ್ದರಿಂದಲೇ ಡ್ರೋನ್ ದಾಳಿಯಾಗಿದೆ. ಆದ್ದರಿಂದ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದಾತ ಆಗ್ರಹಿಸಿದ್ದಾನೆ. ಇದಕ್ಕಿಂತ ಒಂದು ವಾರದ ಮೊದಲು, 2012 ಅಕ್ಟೋಬರ್ 11ರಂದು ತಹ್ರೀಕೆ ಇನ್ಸಾಫ್ ಪಾರ್ಟಿಯ ನಾಯಕ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್‍ರು ಪಾಕ್‍ನಲ್ಲಿ ಬೃಹತ್ ಜಾಥಾ ಸಂಘಟಿಸಿದ್ದರು. ಇಸ್ಲಾಮಾಬಾದ್‍ನಿಂದ ಡ್ರೋನ್‍ಪೀಡಿತ ವಝೀರಿಸ್ತಾನದ ಕೊಟಕೈ  ಪ್ರದೇಶಕ್ಕೆ ಹಮ್ಮಿಕೊಂಡ ಈ ಮೂರು ದಿನಗಳ ಜಾಥಾದ ಉದ್ದೇಶ ಡ್ರೋನ್‍ನ ಬಗ್ಗೆ ಜಾಗತಿಕ ಗಮನ ಸೆಳೆಯುವುದಾಗಿತ್ತು. ಡ್ರೋನ್ ದಾಳಿಯನ್ನು ರದ್ದುಪಡಿಸಬೇಕೆಂದು ಕೋರಿ ಇಸ್ಲಾಮಾಬಾದ್‍ನಲ್ಲಿರುವ ಅಮೇರಿಕನ್ ರಾಯಭಾರಿ ರಿಚರ್ಡ್ ಹಾಗ್‍ಲ್ಯಾಂಡ್‍ಗೆ ಸಲ್ಲಿಸಲಾದ ಮನವಿಗೆ ಖ್ಯಾತ ಅಮೇರಿಕನ್ ಬರಹಗಾರ ಅಲಿಸ್ ಲೂಕರ್, ಸಿನಿಮಾ ನಿರ್ದೇಶಕರುಗಳಾದ ಒಲಿವರ್ ಸ್ಟೋನ್ ಮತ್ತು ಡ್ಯಾನಿ ಗ್ಲೋವರ್ ಸಹಿ ಹಾಕಿದ್ದರು.  ಅಮೇರಿಕದ ಮಾಜಿ ಸೇನಾ ಜನರಲ್ ಅನ್ನಿ  ರೈಟ್ ರು   ಇಮ್ರಾನ್‍ರ ಜಾಥಾಕ್ಕೆ ಬೆಂಬಲ ಸಾರಿದರು. ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಜಾಥಾದಲ್ಲಿ ಪಾಲ್ಗೊಳ್ಳುವುದನ್ನು ಕಂಡು ಪಾಕ್ ಆಡಳಿತ ತಬ್ಬಿಬ್ಬಾಯಿತು. ವಝೀರಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ಕೊಡಲಾರೆ ಅಂದಿತು. ಅದಕ್ಕೆ ಕಾರಣವೂ ಇದೆ. ಅಮೇರಿಕವು ಏಕಾಏಕಿ  ಪಾಕಿಸ್ತಾನಕ್ಕೆ ಪ್ರವೇಶಿಸಿ ಡ್ರೋನ್ ದಾಳಿ ಪ್ರಾರಂಭಿಸಿದ್ದಲ್ಲ. ಡ್ರೋನ್ ದಾಳಿ ನಡೆಸಲು ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟದ್ದೇ ಪಾಕಿಸ್ತಾನ. ಅಮೇರಿಕ ಕೊಡುವ ದೊಡ್ಡ ಪ್ರಮಾಣದ ಬಾಡಿಗೆ ಮೊತ್ತದ ಮೇಲಷ್ಟೇ ಕಣ್ಣಿಟ್ಟಿದ್ದ ಪಾಕಿಸ್ತಾನ, 2004ರಿಂದ 2011 ನವೆಂಬರ್ ವರೆಗೆ ಶಮ್ಸ್ ವಿಮಾನ ನಿಲ್ದಾಣದ ಬಗ್ಗೆ ಮಾತೇ ಆಡಿರಲಿಲ್ಲ. ಆದರೆ 2011 ನವೆಂಬರ್‍ನಲ್ಲಿ ಶಮ್ಸ್ ನಿಂದ ಅಮೇರಿಕ ಹಾರಿಸಿದ ಡ್ರೋನ್ ಕ್ಷಿಪಣಿಗೆ ಸಲಾಲ ಎಂಬ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದ ಪಾಕ್‍ನ 24 ಸೈನಿಕರು ಬಲಿಯಾದಾಗ ಎರಡು ತಿಂಗಳುಗಳ ಕಾಲ ಪಾಕ್ ಸರಕಾರ ಶಮ್ಸ್ ಅನ್ನು ಮುಚ್ಚಿಬಿಟ್ಟಿತು. ಇದಕ್ಕೆ ಅಮೇರಿಕದ ವಿರುದ್ಧ  ಪಾಕ್ ಜನತೆಯ ವ್ಯಾಪಕ ಆಕ್ರೋಶವೂ ಕಾರಣವಾಗಿತ್ತು. ಆದರೆ ಯಾವಾಗ ಜನರ ಆಕ್ರೋಶ ತಣ್ಣಗಾಯಿತೋ 2012 ಜನವರಿ 10ರಂದು ಪಾಕ್ ಮತ್ತೆ ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟಿತು. ಅಂದಹಾಗೆ, ಪಾಕ್ ಸೈನಿಕರನ್ನು ಗುರುತಿಸುವುದಕ್ಕೂ ಡ್ರೋನ್‍ಗೆ ಸಾಧ್ಯವಾಗುವುದಿಲ್ಲವೆಂದ ಮೇಲೆ ಉಗ್ರರನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ? ಸೈನಿಕರ ಮೇಲೆಯೇ ಎರಗುವ ಡ್ರೋನ್, ಇನ್ನು ನಾಗರಿಕರ ಮೇಲೆ ಎರಗದೆಂದು ಹೇಗೆ ಹೇಳುವುದು? ನಿಜವಾಗಿ ಡ್ರೋನ್ ದಾಳಿಯನ್ನು ಮಾನವ ವಿರೋಧಿ ಎಂದು ಬೊಟ್ಟು ಮಾಡುತ್ತಿರುವುದು ಪಾಕ್ ಜನತೆಯಷ್ಟೇ ಅಲ್ಲ, 2009 ಎಪ್ರಿಲ್ 9ರಂದು ಫಾದರ್ ಲೂವಿಸ್ ವಿಟಲ್, ಕಾತಿ ಕೆಲ್ಲಿ, ಸ್ಟೀಫನ್ ಕೆಲ್ಲಿ, ಈವ್ ಟೋಟ್ಸ್.. ಮುಂತಾದ ಪ್ರಭಾವಿಗಳು ಡ್ರೋನ್ ದಾಳಿಯನ್ನು ರದ್ದುಪಡಿಸ ಬೇಕೆಂದು ಒತ್ತಾಯಿಸಿ ಅಮೇರಿಕದ ಕ್ರೀಚ್ ವಿಮಾನ ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಬಂಧನಕ್ಕೂ ಒಳಗಾಗಿದ್ದರು. ಡ್ರೋನ್‍ನ ಮೂಲಕ ನಾಗರಿಕರ ಹತ್ಯೆಯಾಗುತ್ತಿರುವುದಕ್ಕೆ 2009 ಜೂನ್ 3ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು (UNHRC) ಅಮೇರಿಕವನ್ನು ಖಂಡಿಸಿತು. UNHRCಯ ತನಿಖಾ ತಂಡದ ಮುಖ್ಯಸ್ಥ ಫಿಲಿಪ್ ಆಲ್‍ಸ್ಟನ್‍ರು 2009 ಅಕ್ಟೋಬರ್ 27ರಂದು ಡ್ರೋನ್ ದಾಳಿಯನ್ನು ಮನುಷ್ಯ ವಿರೋಧಿ ಅಂದರು. ಒಂದು ರೀತಿಯಲ್ಲಿ ಡ್ರೋನ್‍ನ ವಿರುದ್ಧ ವ್ಯಾಪಕವಾಗುತ್ತಿರುವ ಪ್ರತಿಭಟನೆಯನ್ನು ಪರಿಗಣಿಸಿಯೇ 2009-10ರಲ್ಲಿ ಅಮೇರಿಕವು ಡ್ರೋನ್‍ನ ಉದ್ದವನ್ನು 21 ಇಂಚಿಗೆ ತಗ್ಗಿಸಿದ್ದು ಮತ್ತು ಭಾರವನ್ನು 16 ಕೆ.ಜಿ.ಗೆ ಇಳಿಸಿದ್ದು. ಅಂದಹಾಗೆ, ಭಾರ ಮತ್ತು ಉದ್ದವನ್ನು ತಗ್ಗಿಸಿದ ಕೂಡಲೇ ಡ್ರೋನ್‍ಗೆ ನಾಗರಿಕರು ಮತ್ತು 'ಉಗ್ರ'ವಾದಿಗಳ ಗುರುತು ಸಿಗುತ್ತದೆಂದೇನೂ ಅಲ್ಲವಲ್ಲ. ಮಲಾಲಳ ಪ್ರಕರಣಕ್ಕಿಂತ ಮೊದಲು ಮತ್ತು ಆ ಬಳಿಕವೂ  ವಾಯುವ್ಯ ಪಾಕ್‍ನ ಮೇಲೆ ಡ್ರೋನ್ ಎರಗಿವೆ. ಹಾಗಂತ, ಮಲಾಲಳಿಗೆ ಗುಂಡು ಹಾರಿಸಿದವರ ವಿರುದ್ಧ ಮಾತಾಡಿದಂತೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾದವರ ಪರ ಮಾಧ್ಯಮಗಳು ಮಾತಾಡಿವೆಯೇ? ಒಬಾಮ, ಹಿಲರಿ ಕ್ಲಿಂಟನ್, ಬ್ರಿಟನ್ನಿನ ಕ್ಯಾಮರೂನ್, ಮಡೋನ್ನಾ.. ಎಲ್ಲರಿಗೂ ಮಲಾಲ ಗೊತ್ತು. ಬ್ರಿಟನ್ನಿನ ರಾಣಿ ಎಲಿಜಬೆತ್‍ಗೂ ಗೊತ್ತು. ಆದರೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾಗುತ್ತಿರುವ ‘ಮಲಾಲಗಳು’ ಯಾರಿಗೆಲ್ಲ ಗೊತ್ತಿವೆ? ಅವರ ಪ್ರಾಯ, ಕಲಿಯುತ್ತಿರುವ ಶಾಲೆ, ಅವರಲ್ಲಿರುವ ಪ್ರತಿಭೆಗಳನ್ನು ಇವರಲ್ಲಿ ಒಬ್ಬರಾದರೂ ಉಲ್ಲೇಖಿಸಿಲ್ಲವಲ್ಲ, ಯಾಕೆ?
     ಒಟ್ಟು ಡ್ರೋನ್ ದಾಳಿ     -    349
     ಒಬಾಮರ ಅವಧಿಯಲ್ಲಿ ಆದ ದಾಳಿ     -    297
     ಬುಶ್‍ರ ಅವಧಿಯಲ್ಲಿ     -    52
     ಸಾವಿಗೀಡಾದ ನಾಗರಿಕರು  -    884
     ಮಕ್ಕಳು  -    176
     ಒಟ್ಟು ಗಾಯಗೊಂಡವರು     -    1389
         2004ರಿಂದ 2012 ಅಕ್ಟೋಬರ್ 10ರ ವರೆಗೆ ಪಾಕ್‍ನಲ್ಲಿ ನಡೆದ ಡ್ರೋನ್ ಕಾರ್ಯಾಚರಣೆಯ ವಿವರವಿದು. ನೀವೇ ಹೇಳಿ, ಸಾವಿಗೀಡಾದ 176 ಮಕ್ಕಳಲ್ಲಿ ಒಂದೇ ಒಂದು ಮಗು ಮಲಾಲಳಂತೆ ಸುದ್ದಿಗೀಡಾಗಿದೆಯೇ? ಎಷ್ಟು ಮಂದಿ ಬರಹಗಾರರು ಈ ಮಕ್ಕಳನ್ನು ಎದುರಿಟ್ಟುಕೊಂಡು ಲೇಖನ ಬರೆದಿದ್ದಾರೆ? ಮಲಾಲಳನ್ನು ಎತ್ತಿಕೊಂಡು ತಾಲಿಬಾನ್‍ಗಳನ್ನು ದೂಷಿಸಿದಂತೆ ಈ ಮಕ್ಕಳನ್ನು ಎತ್ತಿಕೊಂಡು ಅಮೇರಿಕವನ್ನು ಮತ್ತು ಅದರ ಯುದ್ಧ ನೀತಿಯನ್ನು ಎಷ್ಟು ಮಂದಿ ಪ್ರಶ್ನಿಸಿದ್ದಾರೆ? ಹತ್ಯೆ ನಡೆಸಿದ್ದು ತಾಲಿಬಾನ್ ಎಂದಾದರೆ ಅದು ಕ್ರೂರ ಅನ್ನಿಸುವುದು ಮತ್ತು ಅಮೇರಿಕ ಎಂದಾದರೆ ಅದು ಭಯೋತ್ಪಾದನಾ ವಿರೋಧಿ ಹೋರಾಟ ಅನ್ನಿಸುವುದೆಲ್ಲ ಯಾಕೆ? ನಿಜವಾಗಿ, ಮಲಾಲ ಪ್ರಕರಣದ ಬಗ್ಗೆ ಅನುಮಾನ ಮೂಡುವುದೇ ಇಲ್ಲಿ. ಆಕೆಯ ಮೇಲಾದ ದಾಳಿಯನ್ನು ಒಬಾಮರ ಮೇಲೋ ರಾಣಿ ಎಲಿಜಬೆತ್‍ರ ಮೇಲೋ ಆದ ದಾಳಿಯಂತೆ ಮಾಧ್ಯಮಗಳು ಬಿಂಬಿಸಿರುವುದರ ಹಿಂದೆ ಅಸಹಜ ಉದ್ದೇಶವೇನೂ ಇಲ್ಲ ಅನ್ನುತ್ತೀರಾ? ಅಮೇರಿಕದ ಯುದ್ಧ ನೀತಿಯನ್ನು ಬೆಂಬಲಿಸುವವರೆಲ್ಲ ಮಲಾಲಳಿಗಾಗಿ ಕಣ್ಣೀರಿಳಿಸಿದ್ದು, ತೀರಾ ಪ್ರಾದೇಶಿಕ ಟಿ.ವಿ. ಚಾನೆಲ್‍ಗಳೂ ಬ್ರೇಕಿಂಗ್ ನ್ಯೂಸ್ ಆಗಿಸುವಷ್ಟು, ಫಾಲೋ ಅಪ್ ನ್ಯೂಸ್ ಬಿತ್ತರಿಸುವಷ್ಟು ಮಲಾಲಳ ಪ್ರಕರಣಕ್ಕೆ ಮಹತ್ವ ದೊರಕಿದ್ದರಲ್ಲಿ ಬರೇ ಮಾಧ್ಯಮ ಧರ್ಮವಷ್ಟೇ  ಕಾಣಿಸುತ್ತದಾ? ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ತಾಲಿಬಾನ್ ನಿಲುವನ್ನು ಪ್ರಶ್ನಿಸುತ್ತಿರುವ ಹೆಣ್ಣು ಮಗಳ ಮೇಲೆ ದಾಳಿಯಾಗುವುದರಿಂದ ನಷ್ಟವಾಗುವುದು ತಾಲಿಬಾನ್‍ಗೇ ಹೊರತು ಅಮೇರಿಕಕ್ಕೆ ಖಂಡಿತ ಅಲ್ಲ. ಅಮೇರಿಕ ಈಗಾಗಲೇ ಅಫಘಾನ್ ಮತ್ತು ಪಾಕ್‍ಗಳಲ್ಲಿ ಸೈನಿಕ ಕಾರ್ಯಾಚರಣೆಯನ್ನು ಬಹುತೇಕ ನಿಲ್ಲಿಸಿ ಬಿಟ್ಟಿದೆ. ಅಫಘಾನ್ ಮತ್ತು ಇರಾಕ್‍ಗಳಲ್ಲಿ 6 ಸಾವಿರ ಸೈನಿಕರನ್ನು ಕಳಕೊಂಡಿರುವ ಅಮೇರಿಕಕ್ಕೆ (ದಿ ಹಿಂದೂ 2012 ಅಕ್ಟೋಬರ್ 25, ಪಿ. ಸಾಯಿನಾಥ್) ತಾಲಿಬಾನನ್ನು ಬಂದೂಕಿನಿಂದ ಎದುರಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಬಿಟ್ಟಿದೆ. ಅಲ್ಲದೇ, ಅಮೇರಿಕನ್ ಸೇನೆಯಲ್ಲಿ ಪ್ರತಿದಿನ ಒಬ್ಬ ಸೈನಿಕನಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ (ದಿ ಹಿಂದೂ 2012 ಅಕ್ಟೋಬರ್ 25). ಹೀಗಿರುವಾಗ ಕುಳಿತಲ್ಲಿಂದಲೇ ಹಾರಿಸಲಾಗುವ ಡ್ರೋನ್‍ನ ಹೊರತು ಅಮೇರಿಕದ ಬಳಿ ಬೇರೆ ಆಯ್ಕೆಗಳೇ ಇಲ್ಲ. ಆದರೆ ಡ್ರೋನ್‍ಗೆ ಜಾಗತಿಕವಾಗಿ ಬೆಂಬಲಿಗರ ಬದಲು ವಿರೋಧಿಗಳೇ ಹೆಚ್ಚುತ್ತಿದ್ದಾರೆ. 2010 ಜೂನ್ 2ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು ಬಿಡುಗಡೆಗೊಳಿಸಿದ (ಪಿಲಿಪ್ ಆಲ್‍ಸ್ಟನ್‍ರ ನೇತೃತ್ವದಲ್ಲಿ ತಯಾರಿಸಲಾದ) ವರದಿಯಲ್ಲಿ ಡ್ರೋನ್ ಕಾರ್ಯಾಚರಣೆಯ ಔಚಿತ್ಯವನ್ನೇ ಪ್ರಶ್ನಿಸಲಾಗಿತ್ತು. ಇದೇ ಆಯೋಗದ ಮುಖ್ಯಸ್ಥ ನವಿ ಪಿಲ್ಲೆ 2012 ಜೂನ್ 7ರಂದು ಪಾಕಿಸ್ತಾನಕ್ಕೆ 4 ದಿನಗಳ ಭೇಟಿ ನೀಡಿದರಲ್ಲದೇ ಡ್ರೋನ್ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದರು. ಇದಾಗಿ ನಾಲ್ಕು ತಿಂಗಳೊಳಗೆ, ಅಕ್ಟೋಬರ್ 11ರಂದು ಡ್ರೋನ್ ವಿರುದ್ಧ  ಇಮ್ರಾನ್ ಖಾನ್‍ರು ಬೃಹತ್ ರಾಲಿ ಸಂಘಟಿಸಿದರು. ಬ್ರಿಟನ್ ಮತ್ತು ಅಮೇರಿಕದ ಸಾಕಷ್ಟು ಬರಹಗಾರರು ಇಮ್ರಾನ್‍ರನ್ನು ಬೆಂಬಲಿಸಿದರು. ಪಾಕಿಸ್ತಾನದ ಜನತೆ ಡ್ರೋನ್‍ನ ವಿರುದ್ಧ ಒಂದಾಗುವ ಸೂಚನೆಗಳು ಕಾಣಿಸತೊಡಗಿದುವು.. ಅಮೇರಿಕದ ಡ್ರೋನ್‍ಗೆ ತನ್ನ ನೆಲವನ್ನು ಕೊಟ್ಟು ಜನರ ಮಧ್ಯೆ ಖಳನಾಗಿ ಗುರುತಿಸಿಕೊಂಡಿರುವ ಪಾಕ್ ಸರಕಾರಕ್ಕೆ ಇಮ್ರಾನ್ ಖಾನ್‍ರನ್ನು ತಡೆಯುವುದು ಅಗತ್ಯವಾಗಿತ್ತು. ಅಷ್ಟೇ ಅಲ್ಲ, ಡ್ರೋನ್‍ನ ಬಗ್ಗೆ ಮೃದು ನಿಲುವು ತಾಳುವಂಥ ಇಶ್ಶೂವೊಂದನ್ನು ಜನರಿಗೆ ಒದಗಿಸುವ ಅನಿವಾರ್ಯತೆಯೂ ಅದಕ್ಕಿತ್ತು. ಬಹುಶಃ ಮಲಾಲಳ ಪ್ರಕರಣವು ಪಾಕ್ ಆಡಳಿತದ ಎಲ್ಲ ಸಂಕಟವನ್ನೂ ಪರಿಹರಿಸಿಬಿಟ್ಟಿತು.
       ಮಲಾಲಳ ಮೇಲೆ ಅಕ್ಟೋಬರ್ 9ರಂದು ಆದ ದಾಳಿಗೆ 8 ಗಂಟೆಗಳಷ್ಟು ವಿಳಂಬವಾಗಿ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್‍ರನ್ನು ಮಾಧ್ಯಮಗಳು ತೀವ್ರವಾಗಿ ಟೀಕಿಸಿದ್ದುವು. ಆದರೆ ಆ ವಿಳಂಬಕ್ಕೆ ಅರ್ಥವಿದೆಯೆಂದು ಈಗ ಅನ್ನಿಸುತ್ತದಲ್ಲವೇ?