Monday, November 26, 2012

ಇರ್ಶಾದ್ ಅಲಿಯ ಪತ್ರವೂ ನಾಪತ್ತೆಯಾಗುವ ಮೌಲ್ವಿಯೋ

2008. ದೆಹಲಿಯ ಬಟ್ಲಾ ಹೌಸ್‍ನಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುತ್ತದೆ. ಇಬ್ಬರು ಶಂಕಿತ ಯುವಕರು ಮತ್ತು ಓರ್ವ ಪೊಲೀಸಧಿಕಾರಿ ಕಾರ್ಯಾಚರಣೆಯಲ್ಲಿ ಸಾವಿಗೀಡಾಗುತ್ತಾರೆ. ಸಾವಿಗೀಡಾದವರಲ್ಲಿ ದೆಹಲಿಯ ಜಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಇದ್ದ. ಆ ಕಾರ್ಯಾಚರಣೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ. ಅದೊಂದು ನಕಲಿ ಕಾರ್ಯಾಚರಣೆಯೆಂದು ದಿಗ್ವಿಜಯ್ ಸಿಂಗ್ ಆರೋಪಿಸುತ್ತಾರೆ. ಜಾಮಿಯಾ ವಿಶ್ವವಿದ್ಯಾಲಯದಲ್ಲೂ ಈ ಕುರಿತಂತೆ ಸಾಕಷ್ಟು ಚರ್ಚೆ, ಸಮಾಲೋಚನೆಗಳು ನಡೆಯುತ್ತವೆ. ಈ ಮಧ್ಯೆ ಪೊಲೀಸ್ ಮೂಲಗಳ ಹೆಸರನ್ನಿಟ್ಟುಕೊಂಡು ಮುಸ್ಲಿಮ್ ಉಗ್ರವಾದದ ಕತೆಗಳು ದಿನಂಪ್ರತಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ದೆಹಲಿಯ ಆಸುಪಾಸಿನಿಂದ ಮುಸ್ಲಿಮ್ ಯುವಕರನ್ನು ಬಂಧಿಸಿರುವ ಬಗ್ಗೆ, ಅವರಿಗೂ ಪಾಕ್ ಮೂಲದ ಹುಜಿಯೋ ಲಷ್ಕರೋ, ಜೈಶೋ ಅಥವಾ ಇನ್ನಾವುದಾದರೂ ಉಗ್ರವಾದಿ ಸಂಘಟನೆಗಳಿಗೂ ಇರುವ ಸಂಬಂಧದ ಬಗ್ಗೆ ವರದಿಗಳು ಬರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಉಪಾಧ್ಯಾಯರ ಏಕತಾ ಸಂಘ(Jamia Teachers Solidarity Association - JTSA)ವನ್ನು ಸ್ಥಾಪಿಸಲಾಗುತ್ತದಲ್ಲದೇ ಭಯೋತ್ಪಾದನೆಯ ಆರೋಪದಲ್ಲಿ ಬಂಧನಕ್ಕೀಡಾಗುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗುತ್ತದೆ.
  ಜಸ್ಟಿಸ್ ರಾಜಿಂದರ್ ಸಾಚಾರ್
  ಅರುಂಧತಿ ರಾಯ್
  ಜವಾಹರ್ ರೋಜಾ
  ಮನೀಶ್ ಸೇಥಿ..
ಮುಂತಾದ 8 ಮಂದಿ ಪ್ರಭಾವಿಗಳ ತಂಡ 4 ವರ್ಷಗಳ ಕಾಲ ಸಮೀಕ್ಷೆ ನಡೆಸಿ 2012 ಸೆ. 18ರಂದು ದೆಹಲಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸುತ್ತದೆ. 'Framed, Damned, Acquitted - 'Dossiers of a Very Special Cell ' ಎಂಬ 200 ಪುಟಗಳ ಈ ವರದಿಯನ್ನು ಬಿಡುಗಡೆಗೊಳಿಸುತ್ತಾ ಅರುಂಧತಿ ರಾಯ್ ಹೀಗೆ ಹೇಳುತ್ತಾರೆ:
  ಬಾಬರೀ ಮಸೀದಿಯ ಬೀಗವನ್ನು ತೆರೆದ ಈ ದೇಶದ ವ್ಯವಸ್ಥೆಯು ಆ ಬಳಿಕ ಭಾರತದ ಮಾರುಕಟ್ಟೆಯನ್ನು ವಿದೇಶಿ ಕಂಪೆನಿಗಳಿಗೆ ಮುಕ್ತವಾಗಿಸಿಬಿಟ್ಟಿತು. ಮಾತ್ರವಲ್ಲ, ಅಮೇರಿಕ ಮತ್ತು ಇಸ್ರೇಲ್‍ನ ಜೊತೆ ಆಪ್ತ ಸಂಬಂಧವನ್ನೂ ಬೆಳೆಸಿಕೊಂಡಿತು. ನಿಜವಾಗಿ ಈ ದೇಶವನ್ನು ಮಿಲಿಟರೀಕರಣಗೊಳಿಸುವುದಕ್ಕಾಗಿ ಇಲ್ಲಿನ ವ್ಯವಸ್ಥೆಯು ಇಸ್ಲಾಮಿಕ್ ಟೆರರಿಸಮ್ ಮತ್ತು ಮಾವೋಯಿಸ್ಟ್ ಟೆರರಿಸಮ್ ಎಂಬ ಗುಮ್ಮವನ್ನು ಸೃಷ್ಟಿಸಿದೆ..’
  ಹಾಗಂತ, ಅರುಂಧತಿ ರಾಯ್‍ರ ಆರೋಪವನ್ನು ಅಲ್ಲಗಳೆಯುವುದಾದರೂ ಹೇಗೆ?
ಉಪಾಧ್ಯಾಯರ ಸಂಘ (JTSA) ಬಿಡುಗಡೆಗೊಳಿಸಿದ 200 ಪುಟಗಳ ವರದಿಯಲ್ಲಿ, ಭಯೋತ್ಪಾದನೆಯ ಆರೋಪ ಹೊತ್ತು ಕೆಲವಾರು ವರ್ಷಗಳನ್ನು ಜೈಲಲ್ಲಿ ಕಳೆದು ನಿರಪರಾಧಿಯೆಂದು ಬಿಡುಗಡೆಗೊಂಡ 16 ಮುಸ್ಲಿಮ್ ಯುವಕರ ದಾರುಣ ವಿವರಗಳಿವೆ. 14 ವರ್ಷಗಳ ಕಾಲ ತಿಹಾರ್ ಜೈಲಲ್ಲಿದ್ದು, ಬಳಿಕ ಅಮಾಯಕನೆಂದು ಬಿಡುಗಡೆಗೊಂಡ ಅಮೀರ್ ಅಲಿ, 5 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಇರ್ಷಾದ್ ಅಲಿ.. ಸಹಿತ ಎಲ್ಲರದ್ದೂ ಒಂದೊಂದು ಕತೆ-ವ್ಯಥೆ. ಇರ್ಷಾದ್ ಅಲಿಯಂತೂ ದೆಹಲಿಯ ವಿಶೇಷ ಪೊಲೀಸ್ ದಳಕ್ಕೆ ಮಾಹಿತಿದಾರನಾಗಿದ್ದವ. ಆದರೆ ಪೊಲೀಸರು ವಹಿಸಿದ ಕೆಲಸವೊಂದನ್ನು ನಿರ್ವಹಿಸಲು ಒಪ್ಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ಆತನನ್ನು 2006ರಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು. ಆತ ಅಲ್ಲಿಂದಲೇ ಪ್ರಧಾನಿ ಮನ್ ಮೋಹನ್ ಸಿಂಗ್‍ರಿಗೆ ಪತ್ರ ಬರೆದಿದ್ದ. ಆ ಪತ್ರದ ವಿವರಣೆಯೂ JTSA  ವರದಿಯಲ್ಲಿದೆ.
‘..ಭಯೋತ್ಪಾದಕರ ಕುರಿತಂತೆ ದೆಹಲಿ ಪೆÇಲೀಸರು ಏನೇನು  ಹೇಳುತ್ತಿರುತ್ತಾರೋ ಅವೆಲ್ಲ ಸತ್ಯವಲ್ಲ. ನಿಜವಾಗಿ ಭಯೋತ್ಪಾದಕರನ್ನು ಸೃಷ್ಟಿಸುವುದು ಪೊಲೀಸರೇ. ಭಡ್ತಿಗೆ ಮತ್ತು ಪುರಸ್ಕಾರಕ್ಕಾಗಿ ಅವರೇ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ. ಇಸ್ಲಾಮಿನ ಬಗ್ಗೆ ಒಂದಷ್ಟು ತಿಳಿದುಕೊಂಡ ಯುವಕರನ್ನು ಪೊಲೀಸರು ತಮ್ಮ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಲ್ಲದೇ ಅವರಿಗೆ ಇಸ್ಲಾಮೀ  ಚಿಹ್ನೆಯಾದ ಗಡ್ಡ ಮತ್ತು ಡ್ರೆಸ್ ತೊಡುವಂತೆ ಆದೇಶಿಸುತ್ತಾರೆ. ಅದಕ್ಕಾಗಿ ದುಡ್ಡೂ ಕೊಡುತ್ತಾರೆ. ಮಾತ್ರವಲ್ಲ, ಮೌಲ್ವಿ ಎಂಬ ಗುರುತನ್ನು ಹಚ್ಚಿ ಬಾಡಿಗೆ ಮನೆಗಳಲ್ಲಿ ಇರಿಸುತ್ತಾರೆ. ಈ ನಕಲಿ ಮೌಲ್ವಿಗಳು ನಮಾಝ್‍ಗಾಗಿ ಮಸೀದಿಗೆ ಹೋಗುವುದು, ಭಾರೀ ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವುದೆಲ್ಲ ನಡೆಯುತ್ತಿರುತ್ತದೆ. ಕ್ರಮೇಣ ಸುತ್ತಮುತ್ತಲ ಜನರ ಸ್ನೇಹ ಬೆಳೆಸುತ್ತಾರೆ. ಇಸ್ಲಾಮಿಗೆ ತ್ಯಾಗ ಮನೋಭಾವದ ಯುವಕರ ಅಗತ್ಯ ಎಷ್ಟಿದೆ ಎಂಬುದನ್ನು ಮುಸ್ಲಿಮರ ಕರುಣಾಜನಕ ಕತೆಗಳನ್ನು ಹೇಳುತ್ತಾ ಮನವರಿಕೆ ಮಾಡಿಸುತ್ತಾರೆ. ಯುವಕರು ಆತನ ಮಾತಿಗೆ ಮರುಳಾಗಿರುವರೆಂದು ಖಚಿತವಾದ ಬಳಿಕ ಆತ ತಾನು ಲಷ್ಕರೋ, ಹುಜಿಯೋ ಅಥವಾ ಇನ್ನಾವುದೋ ಸಂಘಟನೆಯ ಕಮಾಂಡರ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಭಯೋ ತ್ಪಾದನೆಯ ಯೋಜನೆಗಳನ್ನು ಯುವಕರ ಜೊತೆ ಸೇರಿಕೊಂಡು ರೂಪಿಸುತ್ತಾನೆ. ಬಳಿಕ ಪೊಲೀಸರೇ ನೀಡುವ ಕೆಲವೊಂದು ಶಸ್ತ್ರಾಸ್ತ್ರಗಳನ್ನು ಗುಂಪಿಗೆ ವಿತರಿಸುತ್ತಾನೆ. ಸಣ್ಣ ಮಟ್ಟಿನ ತರಬೇತಿಯನ್ನೂ ನೀಡುತ್ತಾನೆ. ಆ ಬಳಿಕ ಆ ಯುವಕರ ಪ್ರತಿ ಚಲನ ವಲನಗಳನ್ನೂ ಪೊಲೀಸರಿಗೆ ಒಪ್ಪಿಸುತ್ತಿರುತ್ತಾನೆ. ಅಂತಿಮವಾಗಿ ಉಗ್ರ ಕೃತ್ಯಕ್ಕೆ ಅವರನ್ನು ಕಳುಹಿಸಿ, ಅದರ ಮಾಹಿತಿಯನ್ನು ಪೊಲೀಸರಿಗೆ ನೀಡಿ ಪೊಲೀಸರು ಬಂಧಿಸುವಂತೆ ನೋಡಿಕೊಳ್ಳುತ್ತಾನೆ. ಮಾತ್ರವಲ್ಲ, ಆತ ಅಲ್ಲಿಂದ ನಾಪತ್ತೆಯಾಗಿ ಇನ್ನೊಂದು ಪ್ರದೇಶಕ್ಕೆ ಹೋಗುತ್ತಾನಲ್ಲದೇ, ಪೊಲೀಸರ ನಿರ್ದೇಶನದಂತೆ ಬೇರೊಂದು ಕಾರ್ಯಾಚರಣೆಯಲ್ಲಿ ತೊಡಗುತ್ತಾನೆ..'
  ಇರ್ಷಾದ್ ಅಲಿ ಬರೆದಿರುವ ಈ ಪತ್ರ ಇನ್ನೂ ದೀರ್ಘವಿದೆ. ಭದ್ರತಾ ಸಂಸ್ಥೆಗಳು ದೇಶವನ್ನು ರಕ್ಷಿಸುತ್ತಿಲ್ಲ, ಬದಲು ಅಭದ್ರತೆಗೆ ತಳ್ಳುತ್ತಿವೆ, ಆದ್ದರಿಂದ ಈ ಕುರಿತಂತೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್‍ರಿಗೆ ಬರೆದ ಪತ್ರದಲ್ಲಿ ಆತ ಮನವಿ ಮಾಡಿಕೊಂಡಿದ್ದಾನೆ.
ಇರ್ಷಾದ್ ಅಲಿ
  ಅಂದಹಾಗೆ, ಭಯೋತ್ಪಾದನಾ ಯೋಜನೆಯನ್ನು ಬೇಧಿಸಿದ್ದಾಗಿ ಹೇಳಿಕೊಳ್ಳುವ ಪೊಲೀಸರು, 'ಪ್ರಮುಖ ರೂವಾರಿ ಮೌಲ್ವಿ ನಾಪತ್ತೆ' ಎಂದು ಘೋಷಿಸುವುದಿದೆ. 3 ವರ್ಷಗಳ ಹಿಂದೆ ದೆಹಲಿ ಪೊಲೀಸರು ಮಂಗಳೂರು ಸುತ್ತಮುತ್ತ ದಾಳಿ ನಡೆಸಿ ಮೊರ್ನಾಲ್ಕು ಮಂದಿಯನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದಾಗಲೂ, 'ಮೌಲ್ವಿ ನಾಪತ್ತೆಯಾಗಿರುವುದನ್ನು' ಮಾಧ್ಯಮಗಳಲ್ಲಿ ತೇಲಿಸಿ ಬಿಟ್ಟಿದ್ದರು. ಬಹುಶಃ ಇರ್ಷಾದ್ ಅಲಿಯ ಪತ್ರ ಒಂದಷ್ಟು ನಂಬಿಕೆಗೆ ಅರ್ಹ ಅನ್ನಿಸುವುದು ಈ ಕಾರಣದಿಂದಲೇ. ನಿಜವಾಗಿ, ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಬಂಧನಕ್ಕೀಡಾಗುವುದಕ್ಕೂ ಕಳ್ಳತನದ ಆರೋಪಕ್ಕೂ ತುಂಬಾ ವ್ಯತ್ಯಾಸ ಇದೆ. ಭಯೋತ್ಪಾದನೆಯ ಕುರಿತಂತೆ ಮಾಧ್ಯಮಗಳು ಈ ದೇಶದಲ್ಲಿ ಎಂಥ ಅಪಾಯಕಾರಿ ವಾತಾವರಣವನ್ನು ನಿರ್ಮಿಸಿ ಬಿಟ್ಟಿವೆಯೆಂದರೆ, ಆರೋಪಗಳ ಬಗ್ಗೆ ಅನುಮಾನಿಸುವುದಕ್ಕೂ ಭಯಪಡುವಷ್ಟು. ಬಂಧಿತ ಯುವಕರ ಅಮಾಯಕತೆಯ ಬಗ್ಗೆ ಯಾರಾದರೂ ಮಾತಾಡಿಬಿಟ್ಟರೆ ಭಯೋತ್ಪಾದಕರ ಬೆಂಬಲಿಗರು ಎಂಬ ಹಣೆಪಟ್ಟಿಯನ್ನು ಅವು ಹಚ್ಚಿ ಬಿಡುತ್ತವೆ. ಆದ್ದರಿಂದಲೇ, ಕಸಬ್‍ನನ್ನು ಗಲ್ಲಿಗೇರಿಸಿದ ಸುದ್ದಿಯ ಪಕ್ಕದಲ್ಲೇ, 'ಅಫ್ಝಲ್ ಗುರು ಯಾವಾಗ?' ಎಂಬ ಶೀರ್ಷಿಕೆಯಲ್ಲಿ ಕೆಲವು ಕನ್ನಡ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು. ಇವೆರಡೂ ಭಿನ್ನ ಪ್ರಕರಣಗಳು ಎಂಬುದು ಗೊತ್ತಿದ್ದೂ ಅವು ಸುದ್ದಿಯನ್ನು ಭಾವುಕಗೊಳಿಸಿದುವು. ಇರ್ಷಾದ್ ಅಲಿಯಂತೆ ಅಫ್ಝಲ್ ಗುರುವೂ ಪೊಲೀಸ್ ಮಾಹಿತಿದಾರನಾಗಿದ್ದ. ಪಾರ್ಲಿಮೆಂಟ್ ದಾಳಿಯಲ್ಲಿ ಆತನ ಪಾತ್ರದ ಬಗ್ಗೆ, ಅದರ ಹಿಂದಿರಬಹುದಾದ ರಾಜಕೀಯ ಕೈವಾಡದ ಬಗ್ಗೆ ಅರುಂಧತಿ ರಾಯ್ ಸಹಿತ ಕೆಲವಾರು ಮಂದಿ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಮ್ ಕೋರ್ಟು ಕೂಡಾ, 'ಈ ದೇಶದ ನಾಗರಿಕರ ಭಾವನೆಗಳನ್ನು ಪರಿಗಣಿಸಿ ಅಫ್ಝಲ್ ಗುರುವಿಗೆ ಗಲ್ಲು ವಿಧಿಸುತ್ತಿದ್ದೇವೆ' ಎಂದು ಹೇಳಿದೆಯೇ ಹೊರತು, ಪೂರ್ಣ ಸಾಕ್ಷ್ಯಗಳ ಆಧಾರದಲ್ಲಿ ಅಲ್ಲ. ಅಂದಹಾಗೆ, ಹೀಗೆಂದ ಮಾತ್ರಕ್ಕೇ, ಅಫ್ಝಲ್ ಗುರು ನಿರಪರಾಧಿಯೆಂದೋ ಆತನಿಗೆ ಗಲ್ಲು ವಿಧಿಸಬಾರದೆಂದೋ ಹೇಳುತ್ತಿಲ್ಲ. ಅದನ್ನು ಸುಪ್ರೀಮ್ ಕೋರ್ಟು ಈಗಾಗಲೇ ತೀರ್ಮಾನಿಸಿಬಿಟ್ಟಿದೆ. ಆದರೆ ಆತನನ್ನು ಮುಸ್ಲಿಮರ ಪ್ರತಿನಿಧಿಯೆಂಬಂತೆ ಬಿಂಬಿಸಿ ಮುಸ್ಲಿಮರನ್ನು ಪರೋಕ್ಷವಾಗಿ ಭಯೋತ್ಪಾದಕರೆಂದು ಛೇಡಿಸುವ ಯತ್ನವನ್ನು ಪತ್ರಿಕೆಗಳು ಮಾಡಿದ್ದಿಲ್ಲವೇ? ಕಸಬ್‍ನನ್ನು ಗಲ್ಲಿಗೇರಿಸಿದ ಲಾಭವನ್ನು ಕಾಂಗ್ರೆಸ್ ಪಕ್ಷ  ಪಡೆದುಕೊಳ್ಳದಿರಲಿ ಎಂಬ ಉದ್ದೇಶದಿಂದ ಕಸಬ್‍ನ ಜೊತೆಗೇ ಅಫ್ಝಲ್‍ನ ಗಲ್ಲು ಸುದ್ದಿಯನ್ನು ಅವು ತೇಲಿಸಿ ಬಿಟ್ಟಿವೆ ಎಂದು ಅನ್ನಿಸುವುದಿಲ್ಲವೇ? ಇಷ್ಟಕ್ಕೂ, ಕಸಬ್‍ನನ್ನು ಮುಂದಿಟ್ಟುಕೊಂಡು ಅಫ್ಝಲ್ ಯಾವಾಗ ಎಂದು ಕೇಳಿದ ಇವೇ ಪತ್ರಿಕೆಗಳು ಗುಜರಾತ್‍ನ ಮಾಯಾ ಕೊಡ್ನಾನಿಯನ್ನು ಎದುರಿಟ್ಟುಕೊಂಡು ಮೋದಿ ಯಾವಾಗ ಎಂದು ಕೇಳಿಲ್ಲವಲ್ಲ, ಯಾಕೆ? ಸಾಧ್ವಿ ಪ್ರಜ್ಞಾ ಸಿಂಗ್‍ಳನ್ನು ಮುಂದಿಟ್ಟು, ತೊಗಾಡಿಯಾ ಯಾವಾಗ ಎಂದು ಕೇಳಬಹುದಿತ್ತಲ್ಲವೇ? ನಾಗರಾಜ್ ಜಂಬಗಿಯ ಬಂಧನದ ಸುದ್ದಿಯೊಂದಿಗೆ ಮುತಾಲಿಕ್ ಯಾವಾಗ ಎಂದು ಪ್ರಶ್ನಿಸುವ ಅವಕಾಶವೂ ಇತ್ತಲ್ಲವೇ? ಮನುಷ್ಯರನ್ನು ಬಾಂಬಿಟ್ಟು ಕೊಲ್ಲುವುದು ಮಾತ್ರ ಭಯೋತ್ಪಾದನೆ, ಉಳಿದಂತೆ ಪೆಟ್ರೋಲ್ ಸುರಿದೋ ತಲವಾರಿನಿಂದ ಇರಿದೋ ಸಾಮೂಹಿಕವಾಗಿ ಕೊಲ್ಲುವುದೆಲ್ಲ ದೇಶಪ್ರೇಮಿ ಕೃತ್ಯಗಳು ಎಂದು ಇವು ಭಾವಿಸಿವೆಯೇ?
  ಬಹುಶಃ,
1. ಸುಪ್ರೀಮ್ ಕೋರ್ಟು ಯಾರನ್ನು ಅಮಾಯಕರೆಂದು ಹೇಳಿ ಬಿಡುಗಡೆಗೊಳಿಸಿದೆಯೋ ಅವರಿಗೆ ಸೂಕ್ತ ಪರಿಹಾರವನ್ನು ಕೊಡಬೇಕು.
2. ಸರಕಾರ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
3. ಅಮಾಯಕರ ವಿರುದ್ಧ ವಿವಿಧ ಕತೆಗಳನ್ನು ಹೆಣೆದು ಭಯೋತ್ಪಾದಕರಾಗಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಮತ್ತು ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು.
4. ಹೀಗೆ ತಪ್ಪಾಗಿ ಜೈಲಲ್ಲಿರುವವರನ್ನು ಪತ್ತೆ ಹಚ್ಚುವುದಕ್ಕಾಗಿ ರಾಷ್ಟ್ರೀಯ ತನಿಖಾ ಆಯೋಗದ ರಚನೆಯಾಗಬೇಕು..
  ಎಂದು ಮುಂತಾಗಿ 8 ಬೇಡಿಕೆಗಳನ್ನು ಮುಂದಿಟ್ಟ JTSA ಯ ಬೇಡಿಕೆಗಳಿಗೆ ಬಹುಶಃ ಈ ಮನಸ್ಥಿತಿಯಿಂದಾಗಿಯೇ ಪತ್ರಿಕೆಗಳಲ್ಲಿ ಪ್ರಚಾರ ಸಿಗದಿದ್ದುದು. ಇಲ್ಲದಿದ್ದರೆ, ಸಾಚಾರ್, ರಾಯ್, ರೋಜಾ ರಂಥ ಪ್ರಮುಖರಿದ್ದೂ,  'Framed, Damned, Acquitted - 'Dossiers of a Very Special Cell ' ಎಂಬ ಸಮೀಕ್ಷಾ ವರದಿಯು ಸುದ್ದಿಯಾಗಲಿಲ್ಲ ಅಂದರೆ ಏನರ್ಥ?
  1996ರಲ್ಲಿ ದೆಹಲಿಯ ಲಜ್‍ಪತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮುಹಮ್ಮದ್ ಅಲಿ ಭಟ್ ಮತ್ತು ಮಿರ್ಝಾ ನಿಸಾರ್ ಹುಸೈನ್‍ರಿಗೆ ಕೆಳಕೋರ್ಟು ನೀಡಿದ್ದ ಮರಣ ದಂಡನೆಯನ್ನು ರದ್ದುಪಡಿಸಿ ಅವರನ್ನು ಅಮಾಯಕರೆಂದು ದೆಹಲಿ ಹೈಕೋರ್ಟು  ಬಿಡುಗಡೆಗೊಳಿಸಿದ ಸುದ್ದಿಯನ್ನು (ದಿ ಹಿಂದೂ 2012, ನವೆಂಬರ್ 23) ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ ಈ ಪ್ರಕರಣವನ್ನು ನಿರ್ವಹಿಸಿದ್ದೂ ದೆಹಲಿ ಪೊಲೀಸರೇ.

No comments:

Post a Comment