Tuesday, January 28, 2014

ವಿಳಾಸವೇ ಇಲ್ಲದ ಅವರನ್ನು ಸೃಷ್ಟಿಸಿದ್ದು ತಕ್ಷಣದ ಪ್ರತಿಕ್ರಿಯೆಗಳೇ?

 1. ಜುನಾಗಢ್
 2. ನವ್‍ಸಾರಿ
 3. ನರ್ಮದಾ
 4. ಡಾಂಗ್ಸ್
  2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ನಾಲ್ಕು ಕ್ಷೇತ್ರಗಳಲ್ಲಿ ಹಿಂಸಾಚಾರ ಕಾಣಿಸಿಕೊಳ್ಳದೇ ಇದ್ದುದಕ್ಕೆ ಏನು ಕಾರಣ? ಹಿಂಸಾಚಾರ ಅತ್ಯಂತ ತೀವ್ರವಾಗಿದ್ದ ಆನಂದ್ ಮತ್ತು ಖೇಡಾ ಕ್ಷೇತ್ರಗಳ ಆಸು-ಪಾಸಿನಲ್ಲೇ ಈ ಕ್ಷೇತ್ರಗಳು ಇದ್ದೂ ಇಂಥದ್ದೊಂದು ಬೆಳವಣಿಗೆ ಯಾಕಾಯಿತು? ಈ ಹತ್ಯಾಕಾಂಡವು ಕ್ರಿಯೆಗೆ ಪ್ರತಿಕ್ರಿಯೆ ಎಂದಾದರೆ ಈ ಪ್ರತಿಕ್ರಿಯೆ ಕೆಲವು ನಿರ್ದಿಷ್ಟ ಕ್ಷೇತ್ರ ಮತ್ತು ಪ್ರದೇಶಗಳಲ್ಲಿ ಮಾತ್ರ ಯಾಕೆ ಕಾಣಿಸಿಕೊಂಡಿತು? ಕೆಲವು ಆಯ್ದ ಪ್ರದೇಶಗಳ ಮಂದಿ ಮಾತ್ರ ಯಾಕೆ ತಕ್ಷಣ ಪ್ರಚೋದನೆಗೊಂಡರು? ಹೀಗಿರುವಾಗ, ಕ್ರಿಯೆಗೆ ಪ್ರತಿಕ್ರಿಯೆ, ತಕ್ಷಣದ ಪ್ರಚೋದನೆ.. ಎಂಬೆಲ್ಲ ವ್ಯಾಖ್ಯಾನಗಳನ್ನು ಕೊಟ್ಟು ಈ  ಹತ್ಯಾಕಾಂಡವನ್ನು ಸರಳೀಕೃತಗೊಳಿಸುತ್ತಿರುವವರ ವಾದವನ್ನು ಒಪ್ಪಬಹುದೇ? ಅಷ್ಟಕ್ಕೂ, ಮೋದಿ ಸರಕಾರವು ಕರಸೇವಕರ ಮೃತ ದೇಹಗಳನ್ನು ಮೆರವಣಿಗೆಯಲ್ಲಿ ಅಹ್ಮದಾಬಾದ್‍ಗೆ ಕರೆತಂದಿತ್ತು. ಗುಜರಾತ್‍ಗಿಂತ ತೀರಾ ದೂರ ಇರುವ ಕರ್ನಾಟಕದ ಮಾಧ್ಯಮಗಳಲ್ಲೂ ಕಸೇವಕರ ಸಾವು ಪ್ರಮುಖ ಸುದ್ದಿಯಾಗಿ ಬಿತ್ತರವಾಗಿತ್ತು. ಅಂದರೆ, ಗೋಧ್ರಾ
ಪ್ರಕರಣವು ಬರೇ ಗುಜರಾತ್‍ನ ದುರಂತವಾಗಿಯಷ್ಟೇ ಗುರುತಿಸಿಕೊಂಡದ್ದಲ್ಲ, ಇಡೀ ದೇಶಕ್ಕೇ ಆಘಾತದ ಸುದ್ದಿಯಾಗಿತ್ತು. ಹೀಗಿರುವಾಗ, ಕನಿಷ್ಠ ಇಡೀ ಗುಜರಾತ್‍ನಲ್ಲಾದರೂ ಹಿಂಸಾತ್ಮಕ ಪ್ರತಿಕ್ರಿಯೆ ಕಾಣಿಸಿಕೊಳ್ಳಬೇಕಿತ್ತಲ್ಲವೇ?
 ಇಂಥದ್ದೊಂದು ಅನುಮಾನವನ್ನು ಆಕ್ಸ್ ಫರ್ಡ್‍ ನ  ಸಮಾಜಶಾಸ್ತ್ರಜ್ಞ ಮೈಕೆಲ್ ಬಿಗ್ಸ್ ಮತ್ತು ಭಾರತದ ಸಂಶೋಧಕ ರಾಹಿಲ್ ದತ್ತಿವಾಲರು ದಿ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ವ್ಯಕ್ತಪಡಿಸಿದ್ದರು.
 ನಿಜವಾಗಿ, ಯಾವುದೇ ಹತ್ಯಾಕಾಂಡವೂ ‘ಸಹಜ' ಆಗಿರುವುದಿಲ್ಲ. ಹತ್ಯಾಕಾಂಡಗಳಿಗೆ ಅವುಗಳದ್ದೇ ಆದ ಹಿನ್ನೆಲೆ, ಯೋಜನೆ, ಗುರಿಗಳಿರುತ್ತವೆ. ಗುಜರಾತ್ ಹತ್ಯಾಕಾಂಡದ ವೇಳೆ ಜುನಾಗಢ್ ಮತ್ತು ನವ್‍ಸಾರಿ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದವರು ಬಿಜೆಪಿ ಶಾಸಕರು. ಹಾಗೆಯೇ ನರ್ಮದಾ ಮತ್ತು ಡಾಂಗ್ಸ್ ಕ್ಷೇತ್ರಗಳಲ್ಲಿ ಬಿಜೆಪಿ ತೀರಾ ದುರ್ಬಲ ಆಗಿತ್ತು. ಒಂದು ವೇಳೆ ಹತ್ಯಾಕಾಂಡವು ಗೋಧ್ರಾ ಘಟನೆಗೆ ಸಹಜ ಪ್ರತಿಕ್ರಿಯೆಯೇ ಆಗಿರುತ್ತಿದ್ದರೆ, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಹಿಲ್ ದತ್ತಿವಾಲರು ಹೊಸ ಬಗೆಯ ಸರ್ವೇಗೆ ಮುಂದಾದರು. 1998ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳು ಮತ್ತು ಆ ಬಳಿಕದಿಂದ ಈ ವರೆಗಿನ ಅದರ ಸ್ಥಾನಗಳನ್ನು ಅವರು ವಿಶ್ಲೇಷಣೆಗೆ ಒಳಪಡಿಸಿದರು. ಹಿಂಸಾಪೀಡಿತ ಮತ್ತು ಹಿಂಸಾರಹಿತ ಕ್ಷೇತ್ರಗಳನ್ನು ತುಲನೆ ಮಾಡಿ ನೋಡಿದರು. ಈ ಹಿಂದೆ ಇದೇ ಬಗೆಯ ಮಾನದಂಡವನ್ನು ಅಳವಡಿಸಿಕೊಂಡು ಖ್ಯಾತ ಸಮಾಜ ಶಾಸ್ತ್ರಜ್ಞ ಪೌಲ್ ಬ್ರಾಸ್ ಎಂಬವರು ಅಧ್ಯಯನ ನಡೆಸಿದ್ದರು. ಭಾರತದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿ, 1. ದಿ ಪ್ರೊಡಕ್ಷನ್ ಆಫ್ ಹಿಂದೂ-ಮುಸ್ಲಿಮ್ ವಯಲೆನ್ಸ್ ಇನ್ ಕಾಂಟೆಂಪರರಿ ಇಂಡಿಯಾ 2. ಫಾರ್ಮ್ ಆಫ್ ಕಲೆಕ್ಟಿವ್ ವಯಲೆನ್ಸ್ ರಯೆಟ್ಸ್, ಪೊಗ್ರಾಮ್ಸ್ ಆಂಡ್ ಜೆನೋಸೈಡ್ ಇನ್ ಮಾಡರ್ನ್ ಇಂಡಿಯಾ, 3. ಎತ್‍ನಿಕ್ ಗ್ರೂಪ್ಸ್ ಆಂಡ್ ಸ್ಟೇಟ್.. ಮುಂತಾದ ಬಹುಪ್ರಭಾವಿ ಕೃತಿಗಳನ್ನು ಬರೆದಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಈ ಪ್ರೊಫೆಸರ್‍ರ ಸರ್ವೇ ವಿಧಾನವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿವೆ. ದತ್ತಿವಾಲ ಈ ವಿಧಾನವನ್ನೇ ಅನುಸರಿಸಿ ಗುಜರಾತ್ ಹತ್ಯಾಕಾಂಡದ ಸತ್ಯಗಳನ್ನು ಹುಡುಕುವ ಪ್ರಯತ್ನ ಮಾಡಿದರು. ದಂಗುಬಡಿಸುವ ಸಂಗತಿ ಏನೆಂದರೆ, ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಮುಸ್ಲಿಮರ ಪಾತ್ರ ಎಲ್ಲಿ ನಿರ್ಣಾಯಕವಾಗಿತ್ತೋ ಅಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಬಿಜೆಪಿ ಪ್ರಬಲ ವಾಗಿರುವ ಕ್ಷೇತ್ರಗಳು ಹಿಂಸಾರಹಿತವಾಗಿರುವಂತೆಯೇ ಬಿಜೆಪಿ ಅಭ್ಯರ್ಥಿಗಳಿಗೆ 20ರಿಂದ 30% ಮತದಾನವಾದ ಕ್ಷೇತ್ರಗಳೂ ಹಿಂಸೆಯಿಂದ ದೂರವಿದ್ದುವು. ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಎದುರಿಸಿದ ಮತ್ತು 30-40% ಓಟು ಪಡೆದ ಕ್ಷೇತ್ರಗಳೇ ಹಿಂಸೆಯ ಕೇಂದ್ರಗಳಾಗಿದ್ದುವು. ಮಾತ್ರವಲ್ಲ, ಎಲ್ಲೆಲ್ಲಾ ಹಿಂಸಾಚಾರ ನಡೆದಿತ್ತೋ ಅಲ್ಲೆಲ್ಲಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆಯಲ್ಲಿ ತೀವ್ರ ಮಟ್ಟದ ಏರಿಕೆ ಕಾಣಸಿಕೊಂಡಿತ್ತು.
 ಅಷ್ಟಕ್ಕೂ, ಇಂಥದ್ದು ಕೇವಲ ಭಾರತದಲ್ಲಿ ಮಾತ್ರ ನಡೆಯುವುದಲ್ಲ.
 2007ರಲ್ಲಿ ಕೀನ್ಯಾದಲ್ಲಿ ಭೀಕರ ಹಿಂಸಾಚಾರ ನಡೆಯಿತು. ಅಧ್ಯಕ್ಷ  ಕಿಬಕಿಯವರು ಹಿಂಸಾಚಾರಕ್ಕೆ ರಾಜಕಾರಣಿ ಭಾಷೆಯಲ್ಲಿ ವ್ಯಾಖ್ಯಾನಗಳನ್ನು ಕೊಟ್ಟರು. ಪಾರ್ಟಿ ಆಫ್ ನ್ಯಾಶನಲ್ ಯೂನಿಟಿ ಮತ್ತು ಓರೇಂಜ್ ಡೆಮಾಕ್ರಟಿಕ್ ಮೂವ್‍ಮೆಂಟ್ ಪಕ್ಷಗಳ ಅಧಿಕಾರ ದಾಹದಿಂದ ಹುಟ್ಟಿಕೊಂಡ ಹಿಂಸಾಚಾರಕ್ಕೆ 1,133 ಮಂದಿ ಬಲಿಯಾದರು. ಮೂರೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ನಿರಾಶ್ರಿತರಾದರು. Spoutaneous or pre-meditated post-election violence in Kenya -  ಎಂಬ ಅಧ್ಯಯನಾಧಾರಿತ ಬರಹದಲ್ಲಿ ಆ ಹಿಂಸಾಚಾರದ ರಾಜಕೀಯ ಪ್ರಭಾವವನ್ನು ಬಿಚ್ಚಿಡಲಾಗಿದೆ. ಅಂದಹಾಗೆ, ನಿತ್ಯ ಮಾತಾಡಿ ಕುಶಲೋಪರಿ ಹಂಚಿಕೊಳ್ಳುವ ಅಕ್ಕ-ಪಕ್ಕದ ಮಂದಿ ಎಲ್ಲೋ ನಡೆದ ಒಂದು ದಿಢೀರ್ ಪ್ರಕರಣವನ್ನು ಎತ್ತಿಕೊಂಡು ಸಂಬಂಧವೇ ಇಲ್ಲದವರಂತೆ ವರ್ತಿಸುವುದನ್ನು ಹೇಗೆ ಸಹಜ ಎಂದು ಒಪ್ಪಿಕೊಳ್ಳುವುದು? ಗೋಧ್ರಾ ಪ್ರಕರಣ ಅಥವಾ ಮುಝಫರ್ ನಗರದ ಘಟನೆ ತೀರಾ ಅನಿರೀಕ್ಷಿತವಾದದ್ದು. ಅದಕ್ಕೂ ತನ್ನ ನೆರೆಮನೆಯ ಮುಸ್ಲಿಮರಿಗೂ ಸಂಬಂಧ ಇದೆ ಎಂದು ಮುಝಫರ್ ನಗರದಲ್ಲಿ ಅಥವಾ ಪಂಚಮಹಲ್, ಗುಲ್ಬರ್ಗ್ ಸೊಸೈಟಿಯ ಹತ್ಯಾಕಾಂಡದಲ್ಲಿ ಭಾಗಿಯಾದವರು ತೀರ್ಮಾನಿಸುವುದಕ್ಕೆ ಸಾಧ್ಯವೇ ಇಲ್ಲ. ಒಂದು ಬೆಳಗಾತ ನಡೆದ ಗೋಧ್ರಾ ಘಟನೆಯನ್ನು ಮುಂದಿಟ್ಟುಕೊಂಡು ತನ್ನ ನೆರೆಮನೆಯ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರಕ್ಕೆ ಗುರಿಪಡಿಸಲು ಸಾಧ್ಯವೇ? ಎಲ್ಲೋ ನಡೆದ ಕ್ರಿಯೆಗೆ ಇನ್ನೆಲ್ಲೋ ಇರುವ ಮತ್ತು ತನಗೆ ತೀರಾ ಪರಿಚಿತ ಇರುವ ವ್ಯಕ್ತಿಯ ಮೇಲೆ ಹಿಂಸಾತ್ಮಕ ಪ್ರತಿಕ್ರಿಯೆ ತೋರುವುದನ್ನು ಸಹಜ ಅನ್ನಲಾದೀತೇ?  ಒಂದು ವೇಳೆ, ಇಂಥ ಪ್ರತಿಕ್ರಿಯೆಗಳು ಸಹಜ ಎಂದಾದರೆ ಭೂಮಿಯಲ್ಲಿ ಹಿಂಸೆಯ ಹೊರತು ಬೇರೆ ಯಾವ ವಾತಾವರಣವಿದ್ದೀತು? ಅಷ್ಟಕ್ಕೂ, ರಾಜಕೀಯ ಬೆರೆತುಕೊಂಡ ಅಥವಾ ನಿರ್ದಿಷ್ಟ ಪಕ್ಷವೊಂದಕ್ಕೆ ಲಾಭ ತರಬಲ್ಲಂಥ ಘಟನೆಗಳಿಗೆ ಮಾತ್ರ ಯಾಕೆ ಹಿಂಸಾತ್ಮಕ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ? ಘಟನೆಯೊಂದರ ಭೀಭತ್ಸತೆಯನ್ನು ನೋಡಿಕೊಂಡು ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತ ವಾಗುತ್ತದೆಂದಾದರೆ, ಅತ್ಯಾಚಾರಕ್ಕೀಡಾಗಿ ಸಾವಿಗೀಡಾದ ನಿರ್ಭಯಳ ಪ್ರಕರಣದಲ್ಲೂ ಅದು ಕಾಣಿಸಿಕೊಳ್ಳಬೇಕಿತ್ತಲ್ಲವೇ? ಆ ಭೀಕರ ಕ್ರಿಯೆಗೆ ಪ್ರತಿಭಟನೆಯಂಥ ತೀರಾ ಅಹಿಂಸಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಲು ಕಾರಣವೇನು? ಅದರ ಬಳಿಕವೇ ಮುಝಫರ್ ನಗರದಲ್ಲಿ ಚುಡಾವಣೆ ಪ್ರಕರಣ ನಡೆದಿದೆ. ನಿರ್ಭಯ ಪ್ರಕರಣಕ್ಕೆ ಹೋಲಿಸಿದರೆ ಏನೇನೂ ಅಲ್ಲದ ಘಟನೆಯೊಂದು 62 ಮಂದಿಯ ಸಾವಿಗೆ ಮತ್ತು 50 ಸಾವಿರದಷ್ಟು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾಗುವಷ್ಟು ಭೀಕರ ಅನ್ನಿಸಿಕೊಂಡಿತೇಕೆ? ಪ್ರತಿಕ್ರಿಯೆಯೊಂದು ಹಿಂಸಾತ್ಮಕ ಅಥವಾ ಶಾಂತವಾಗುವುದಕ್ಕೆ ಕ್ರಿಯೆ ನಡೆಸಿದವರ ಧರ್ಮ ಮತ್ತು ಹೆಸರುಗಳು ಮುಖ್ಯವಾಗುತ್ತದೆ ಎಂದಲ್ಲವೇ ಇದರರ್ಥ. ಹಾಗಾದರೆ, ಅಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಬೆಳೆಸಿದವರು ಯಾರು? ನಮ್ಮ ಶಿಕ್ಷಣ ಕ್ರಮದ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ಮಟ್ಟದ ಹಿಂಸಾಚಾರಕ್ಕೆ ಅದುವೇ ಮೂಲ ಕಾರಣ ಎಂದು ಯಾರೂ ಹೇಳುತ್ತಿಲ್ಲ. ಒಂದು ಧರ್ಮದವರನ್ನು ಹತ್ಯಾಕಾಂಡಕ್ಕೆ ಒಳಪಡಿಸುವಂತೆ ಪ್ರಚೋದಿಸುವ ಅಂಶಗಳು ನಮ್ಮ ಶೈಕ್ಷಕ ಪಠ್ಯಕ್ರಮಗಳಲ್ಲಿ ಈ ವರೆಗೆ ಅಳವಡಿಕೆಯಾಗಿಲ್ಲ. ಹಾಗಂತ, ಪಠ್ಯಕ್ರಮಗಳೇ ಇದಕ್ಕೆ ಮುಖ್ಯ ಕಾರಣ ಎಂದಾದರೆ, ಈ ಹಿಂಸಾಚಾರಗಳಲ್ಲಿ ವೈದ್ಯರು, ಇಂಜಿನಿಯರ್‍ಗಳು, ವಿಜ್ಞಾನಿಗಳು, ಉನ್ನತ ಅಧಿಕಾರಿಗಳು ಮುಂತಾದ ಶಿಕ್ಷಿತರು ನೇರವಾಗಿ ಪಾಲುಗೊಳ್ಳಬೇಕಿತ್ತು. ಆದರೆ ಯಾವ ಪ್ರಕರಣಗಳಲ್ಲೂ ಇಂಥವರ ನೇರ ಪಾಲುದಾರಿಕೆ ಕಾಣಿಸುತ್ತಿಲ್ಲ. ಗುಜರಾತ್ ಹತ್ಯಾಕಾಂಡ ಅಥವಾ ಇನ್ನಿತರ ಯಾವುದೇ ಹತ್ಯಾಕಾಂಡಗಳಲ್ಲೂ ಆದಿವಾಸಿಗಳು, ಹಿಂದುಳಿದ ವರ್ಗಗಳ ಸಾಮಾನ್ಯ ಮಂದಿಯೇ ಪಾಲುಗೊಂಡಿದ್ದಾರೆ. ಇವೆಲ್ಲ ಸೂಚಿಸುವುದು ಏನನ್ನು? ತಮ್ಮ ನೆರೆಯ, ಪರಿಚಿತ ಮಂದಿಯನ್ನೇ ಹತ್ಯೆ ಮಾಡುವಷ್ಟು, ಅತ್ಯಾಚಾರ ಮಾಡಿ ಹೆಮ್ಮೆ ಪಡುವಷ್ಟು ಹೀನ ಮಟ್ಟಕ್ಕೆ ಇವರನ್ನು ತಲುಪಿಸಿದ್ದು ಯಾರು? ಅವರ ಉದ್ದೇಶವೇನು?
 ಯಾವುದೇ ಹತ್ಯಾಕಾಂಡ ಬರೇ ಸಾವು-ನೋವುಗಳನ್ನಷ್ಟೇ ಸೃಷ್ಟಿಸುವುದಲ್ಲ. ಒಂದು ದೊಡ್ಡ ಜನಸಮೂಹದ ಐಡೆಂಟಿಟಿಯನ್ನೇ ಅದು ಕಿತ್ತುಕೊಂಡು ಬಿಡುತ್ತದೆ. ಹಿಂಸಾಚಾರ ಸ್ಫೋಟಿಸಿದ ಬೆನ್ನಿಗೇ ಜನರ ವಲಸೆ ಪ್ರಾರಂಭವಾಗುತ್ತದೆ. ಹಾಗೆ ವಲಸೆ ಹೋಗುವವರಿಗೆ ಮನೆ, ಬಟ್ಟೆ, ಸಂಪತ್ತು ಸಹಿತ ಏನನ್ನೂ ಒಯ್ಯಲಾಗುವುದಿಲ್ಲ. ಹಾಗೆ ಹೋಗುವವರಲ್ಲಿ ಗರ್ಭಿಣಿಯರು, ಬಾಣಂತಿಯರು, ರೋಗಿಗಳು, ವೃದ್ಧರು, ಮಕ್ಕಳು.. ಎಲ್ಲರೂ ಇರುತ್ತಾರೆ. ವಲಸೆ ಹೋಗುವಾಗ ನಿರ್ದಿಷ್ಟ ಗುರಿಯೂ ಇರುವುದಿಲ್ಲ. ಅಂತೂ ಬದುಕಿ ಉಳಿಯುವುದಕ್ಕಾಗಿ ಎಲ್ಲೋ ಟೆಂಟು ಹಾಕುತ್ತಾರೆ. ಅಲ್ಲಿ ಶುದ್ಧ ನೀರು, ಆಹಾರ, ಶೌಚಾಲಯ, ಔಷಧ.. ಯಾವುದರ ವ್ಯವಸ್ಥೆಯೂ ಇರುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ.. ಎಲ್ಲವನ್ನೂ ಕಳಕೊಂಡ ಸಾವಿರಾರು ಮಂದಿಯ ಗುಂಪಿಗೆ ಸರಕಾರ ಎಷ್ಟೇ ನೆರವಿನ ವಾಗ್ದಾನ ಮಾಡಿದರೂ ಒಂದು ಹಂತದ ಬಳಿಕ ವಲಸಿಗರು ಒಂಟಿಯಾಗುತ್ತಾ ಹೋಗುತ್ತಾರೆ. ಅವರು ನಿರಾಶ್ರಿತ ಶಿಬಿರಗಳಲ್ಲಿ ಹೆಚ್ಚು ಸಮಯ ಠಿಕಾಣಿ ಹೂಡುವುದನ್ನು ಸರಕಾರವೂ ಇಚ್ಛಿಸುವುದಿಲ್ಲ. ಯಾಕೆಂದರೆ, ತನ್ನದೇ ಪ್ರಜೆಗಳು ನಿರಾಶ್ರಿತ ಶಿಬಿರಗಳಲ್ಲಿ ಬದುಕುವುದೆಂದರೆ ಯಾವ ಸರಕಾರಕ್ಕೇ ಆಗಲಿ ಅದು ಕಪ್ಪು ಚುಕ್ಕೆ. ಅವರನ್ನು ಎತ್ತಿಕೊಂಡು ವಿರೋಧ ಪಕ್ಷಗಳು ರಾಜಕೀಯ ಮಾಡಬಹುದು. ಮಾಧ್ಯಮಗಳು ಸರಕಾರದ ವೈಫಲ್ಯಕ್ಕೆ ಪುರಾವೆಯಾಗಿ ಆ ಶಿಬಿರಗಳನ್ನು ತೋರಿಸಬಹುದು. ಆದ್ದರಿಂದ ಒಂದಷ್ಟು ಪರಿಹಾರವನ್ನು ಘೋಷಿಸಿ ಅವರನ್ನು ಶಿಬಿರದಿಂದ ಎತ್ತಿ ಹೊರಹಾಕಲಾಗುತ್ತದೆ. ಹೀಗೆ ಮೊದಲು ತನ್ನ ಊರಿನಿಂದ ಬಳಿಕ ನಿರಾಶ್ರಿತ ಶಿಬಿರಗಳಿಂದ ಹೊರಬೀಳುವ ಮಂದಿ ಅಂತಿಮವಾಗಿ ಎಲ್ಲೆಲ್ಲೋ ಟೆಂಟು ಹಾಕಿ ಬದುಕತೊಡಗುತ್ತಾರೆ. ಅವರಿಗೆ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ಸರಿಯಾದ ಐಡೆಂಟಿಟಿಯೇ ಇರುವುದಿಲ್ಲ. ರೇಶನ್ ಕಾರ್ಡ್, ಗುರುತಿನ ಚೀಟಿ, ವಿಳಾಸ.. ಯಾವುದೂ ಇರುವುದಿಲ್ಲ. ಮಕ್ಕಳಿಗೆ ಶಿಕ್ಷಣವೂ ಇರುವುದಿಲ್ಲ. ಒಂದಷ್ಟು ಸಮಯ ಒಂದು ಕಡೆಯಾದರೆ ಇನ್ನೊಂದಷ್ಟು ಸಮಯ ಇನ್ನೊಂದು ಕಡೆ. ಒಂದು ವೇಳೆ ಈ ದೇಶದ ಸ್ಲಂಗಳ ಮೂಲವನ್ನು ಹುಡುಕ ಹೊರಟರೆ ಇಂಥ ನೂರಾರು ಕತೆಗಳು ಸಿಗಬಲ್ಲುದು.
 ಮುಝಫರ್ ನಗರದ ನಿರಾಶ್ರಿತ ಶಿಬಿರಗಳನ್ನು ಉತ್ತರ ಪ್ರದೇಶ ಸರಕಾರವು ಇತ್ತೀಚೆಗೆ ಬುಲ್ಡೋಜರ್‍ನಿಂದ ಕೆಡವಿದ ಬಳಿಕ ದಿಕ್ಕಾಪಾಲಾದ ಸಂತ್ರಸ್ತರು ರಸ್ತೆಯ ಬದಿ, ರೈಲ್ವೆ ನಿಲ್ದಾಣದ ಸಮೀಪ ಅಲ್ಲಲ್ಲಿ ಶಿಬಿರಗಳನ್ನು ಹಾಕಿಕೊಂಡಿದ್ದಾರೆ ಎಂಬ ವರದಿಗಳೇ ಇವಕ್ಕೆ ಪುರಾವೆಯಾಗಿವೆ.

Wednesday, January 22, 2014

ಕಾರ್ಮಿಕರ ಪ್ರತಿಭಟನೆಗಿಂತ ಶ್ರೀಶಾಂತ್ ರ ಮದುವೆಯೇ ಮುಖ್ಯವಾಗುತ್ತದಲ್ಲ, ಏಕೆ ಹೇಳಿ?

1. ವಾರ್ ಈಸ್ ಎ ಲೈ
2. ವೆನ್ ದಿ ವರ್ಲ್ಡ್  ಔಟ್‍ಲಾವ್‍ಡ್  ವಾರ್
3. ವಾರ್ ನೋ ಮೋರ್: ದಿ ಕೇಸ್ ಫಾರ್ ಅಬೋಲಿಶನ್
ಮುಂತಾದ ಬಹುಚರ್ಚಿತ ಕೃತಿಗಳನ್ನು ರಚಿಸಿರುವ ಮತ್ತು ಈಗ ‘ವಾರ್ ಈಸ್ ಎ ಕ್ರೈಮ್.ಆರ್ಗ್' ಎಂಬ ವೆಬ್‍ಸೈಟ್ ಸ್ಥಾಪಿಸಿ ಸಕ್ರಿಯರಾಗಿರುವ ಅಮೇರಿಕದ ಪ್ರಮುಖ ಬ್ಲಾಗರ್, ಅಂಕಣಗಾರ ಡೇವಿಡ್ ಸ್ವಾನ್‍ಸನ್‍ರು ಪ್ರಚಲಿತ ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಅನೇಕ ಬಾರಿ ಚರ್ಚೆಗೆ ಒಳಗಾಗಿದ್ದಾರೆ. ಯುದ್ಧದ ಬಗ್ಗೆ, ಅದು ಉಂಟು ಮಾಡುವ ನಾಶ-ನಷ್ಟದ ಬಗ್ಗೆ ಮತ್ತು ಅದು ಸುತ್ತುವರಿದಿರುವ ಸುಳ್ಳುಗಳ ಬಗ್ಗೆ ಕಣ್ತೆರೆಸುವ ಹಲವು ಪ್ರಭಾವಿ ಬರಹಗಳನ್ನು ಬರೆದಿದ್ದಾರೆ.
   2003ರಲ್ಲಿ ಅಮೇರಿಕವು ಇರಾಕ್‍ನ ಮೇಲೆ ಅತಿಕ್ರಮಣ ನಡೆಸಿತು. ಬಾಂಬುಗಳು, ಬಂದೂಕುಗಳೂ ಸಿಡಿದುವು. ಸದ್ದಾಮ್‍ರನ್ನು ಅಧಿಕಾರದಿಂದ ಕಿತ್ತು ಹಾಕಲಾಯಿತು. ಈ ಮಧ್ಯೆ ಅಮೇರಿಕದಲ್ಲಿ ಕೆಲವಾರು ಸಮೀಕ್ಷೆಗಳೂ ನಡೆದುವು. 2010ರಲ್ಲಿ ನಡೆದ ಸಮೀಕ್ಷೆಯ ಕೇಂದ್ರ ವಿಷಯ ಹೀಗಿತ್ತು:
   ಇರಾಕ್‍ನ ಮೇಲೆ ಅಮೇರಿಕ ನಡೆಸಿದ ದಾಳಿಯಿಂದ ಇರಾಕಿಗಳಿಗೆ ಲಾಭವಾಗಿದೆಯೋ ನಷ್ಟವಾಗಿದೆಯೋ?
ಸಮೀಕ್ಷೆಗೆ ಒಳಪಟ್ಟ ಅಮೇರಿಕನ್ನರಲ್ಲಿ ಹೆಚ್ಚಿನ ಮಂದಿಯೂ ಇರಾಕಿಗಳಿಗೆ ಲಾಭವಾಗಿದೆ ಎಂದೇ ಉತ್ತರಿಸಿದ್ದರು. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇರಾಕ್‍ನಲ್ಲಿಯೂ ಸರ್ವೇ ನಡೆಸಲಾಯಿತು. ಆದರೆ ಬಹುತೇಕ ಎಲ್ಲ ಇರಾಕಿಗಳೂ ತಮಗೆ ಸದ್ದಾಮ್ ಆಡಳಿತ ಕಾಲವೇ ಉತ್ತಮವಾಗಿತ್ತೆಂದು ಅಭಿಪ್ರಾಯಪಟ್ಟರು. ಒಂದೇ ವಿಷಯ, ಆದರೆ ಎರಡು ಅಭಿಪ್ರಾಯ! ಹೀಗಾಗಲು ಕಾರಣ ಏನೆಂದರೆ, ಮಾಧ್ಯಮಗಳೇ. ಇರಾಕಿಗಳು ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೋ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. ಅದು ಅವರ ಕಣ್ಣೆದುರಿನ ವಾಸ್ತವ. ಆದರೆ ಅಮೇರಿಕನ್ನರ ಅಭಿಪ್ರಾಯವು ಸಂಪೂರ್ಣವಾಗಿ ಮಾಧ್ಯಮ ವರದಿಯನ್ನೇ ಅವಲಂಬಿಸಿಕೊಂಡಿತ್ತು. ಮಾಧ್ಯಮಗಳು ಏನನ್ನು ಉಣಬಡಿಸಿದ್ದುವೋ ಅದರ ಸಂಗ್ರಹ ರೂಪವನ್ನೇ ಅಮೇರಿಕನ್ನರು ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದರು.
   ಡೇವಿಡ್ ಸ್ವಾನ್‍ಸನ್‍ರ ಈ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣ ಇದೆ..
ಈ ವರ್ಷದ ಆರಂಭದಲ್ಲಿ ತಮಿಳ್ನಾಡಿನ ಕೆಲವು ಓದುಗರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ  ಮಾರ್ಕಾಂಡೇಯ ಕಾಟ್ಜು ಅವರಿಗೆ ಪತ್ರವೊಂದನ್ನು ಬರೆದರು. ಸಾಮಾನ್ಯವಾಗಿ ಪತ್ರಿಕಾ ಮಂಡಳಿಗೆ ದೂರುಗಳು ರವಾನೆಯಾಗುತ್ತಲೇ ಇರುತ್ತವೆ. ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಓದುಗರ ಆಗಾಗ ಸಿಟ್ಟು ತೋಡಿಕೊಳ್ಳುವುದಿದೆ. ಇಂತಿಂಥ ಪತ್ರಿಕೆ, ಚಾನೆಲ್‍ಗಳಲ್ಲಿ ಗಲಭೆಗೆ ಪ್ರಚೋದನೆ ನೀಡಲಾಗಿದೆ, ವಾರ್ತೆಯನ್ನು ತಿರುಚಲಾಗಿದೆ, ಒಂದು ಸಮುದಾಯವನ್ನು ಅವಮಾನಿಸಲಾಗಿದೆ.. ಎಂಬೆಲ್ಲ ದೂರುಗಳನ್ನು ಹೊತ್ತ ಪತ್ರಗಳು ಕಾಟ್ಜುರನ್ನು ತಲುಪುತ್ತಲೇ ಇರುತ್ತವೆ. ಆದರೆ ತಮಿಳ್ನಾಡಿನ ಪತ್ರ ಇದಕ್ಕಿಂತ ಭಿನ್ನ ಆಗಿತ್ತು.
   ಪ್ರಮುಖ 11 ಕಾರ್ಮಿಕ ಸಂಘಟನೆಗಳಿಗೆ ಸೇರಿದ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಕಾರ್ಮಿಕರು ಕಳೆದ ಡಿ. 12ರಂದು ದೆಹಲಿಯಲ್ಲಿ ಪಾರ್ಲಿಮೆಂಟೋ ಚಲೋ ರಾಲಿಯನ್ನು ಏರ್ಪಡಿಸಿದ್ದರು. ನಿಜವಾಗಿ ಶ್ರಮಿಕ ವರ್ಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಟ್ಟು ಸೇರುವುದು, ಪ್ರತಿಭಟಿಸುವುದೆಲ್ಲ ತೀರಾ ಅಪರೂಪ. ಶ್ರಮಿಕ ವರ್ಗಕ್ಕೆ ಅದರದ್ದೇ ಆದ ಮಿತಿಗಳಿವೆ. ಐಟಿ-ಬಿಟಿಯಲ್ಲಿ ದುಡಿಯುವವರಿಗೆ, ಸರಕಾರಿ ಉದ್ಯೋಗಿಗಳಾಗಿರುವ ಮಂದಿಗೆ ಇರುವಂಥ ವರ್ಚಸ್ಸು ಇಂಥವರಿಗಿರುವುದು ಕಡಿಮೆ. ಶ್ರಮಿಕ ವರ್ಗ ಸಾಮಾನ್ಯವಾಗಿ ತಳಮಟ್ಟದ ಜನಸಮುದಾಯವನ್ನು ಪ್ರತಿನಿಧಿಸುತ್ತದೆ. ಅಂಥವರು ಡಿ. 12ರಂದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಟ್ಟು ಸೇರಿ ಪ್ರತಿಭಟನೆ ಹಮ್ಮಿಕೊಂಡರೂ ಡಿ. 13ರ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಕ್ರಾನಿಕಲ್.. ಮುಂತಾದ ಪ್ರಮುಖ ಆಂಗ್ಲ ಪತ್ರಿಕೆಗಳಾಗಲಿ, ತಮಿಳು ಪತ್ರಿಕೆಗಳಾಗಲಿ ಆ ಸುದ್ದಿಯನ್ನು ಪ್ರಕಟಿಸಿಯೇ ಇರಲಿಲ್ಲ. ಮೋದಿಯದ್ದೋ ರಾಹುಲ್‍ರದ್ದೋ ಸಣ್ಣ ಸಭೆಗೂ ಭಾರೀ ಕವರೇಜ್ ಕೊಡುವ ಮಾಧ್ಯಮಗಳು, ಕಾರ್ಮಿಕ ಪ್ರತಿಭಟನೆಯನ್ನು ಕಡೆಗಣಿಸಿದ್ದು ಸರಿಯೇ? ಡಿ. 13ರ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲಿ ಭುವನೇಶ್ವರಿಯನ್ನು ಕ್ರಿಕೆಟಿಗ ಶ್ರೀಶಾಂತ್ ವಿವಾಹವಾದ ಬಗ್ಗೆ ಚಿತ್ರ ಸಮೇತ ವರದಿಗಳಿದ್ದುವು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಗೆ ಜಾಗ ಕೊಡದ ಪತ್ರಿಕೆಗಳು, ಸಾಮಾನ್ಯ ಮದುವೆ ಸಮಾರಂಭಕ್ಕೆ ಮಹತ್ವ ಕೊಟ್ಟದ್ದರ ಬಗ್ಗೆ ಮಂಡಳಿಯ ನಿಲುವು ಏನು? ಹಾಗಂತ, ಮಂಡಳಿಗೆ ದೂರು ಕೊಡುವುದಕ್ಕಿಂತ ಮೊದಲು ಸಂಬಂಧಿತ ಸಂಪಾದಕರಿಗೆ ವಿಷಯ ತಿಳಿಸಬೇಕೆಂಬ ನಿಯಮ ಇರುವುದು ನಮಗೆ ಗೊತ್ತು. ನಾವು ಅದನ್ನು ಪಾಲಿಸಿಲ್ಲ ಅನ್ನುವುದೂ ನಿಜ. ಯಾಕೆಂದರೆ, ಒಂದೋ ಎರಡೋ ಪತ್ರಿಕೆಯಿಂದ ಇಂಥ ಎಡವಟ್ಟು ಆಗಿದ್ದಿದ್ದರೆ ಸಂಪಾದಕರನ್ನು ಭೇಟಿಯಾಗಬಹುದಿತ್ತು. ಆದರೆ ಹಲವು ಪತ್ರಿಕೆಗಳು ಒಂದೇ ಬಗೆಯ ತಪ್ಪನ್ನು ಮಾಡಿರುವಾಗ ಎಲ್ಲ ಸಂಪಾದಕರನ್ನೂ ಭೇಟಿ ಮಾಡುವುದು ಹೇಗೆ? ಅದು ಎಷ್ಟು ಪ್ರಾಯೋಗಿಕ? ಆದ್ದರಿಂದ ನಿಮ್ಮಲ್ಲಿ ಭರವಸೆ ಇಟ್ಟು ಈ ಪತ್ರ ರವಾನಿಸಿದ್ದೇವೆ..’ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು.
   ಅಷ್ಟಕ್ಕೂ, ಭಾರತವು ಪತ್ರಿಕೆಗಳ ಪಾಲಿಗೆ ಅತಿದೊಡ್ಡ ಮಾರುಕಟ್ಟೆ. ವಿವಿಧ ಬಗೆಯ ಸುಮಾರು 70 ಸಾವಿರದಷ್ಟು ಪತ್ರಿಕೆಗಳು ಈ ದೇಶದಲ್ಲಿ ಚಲಾವಣೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಪ್ರತಿದಿನ 100 ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ. 500ರಷ್ಟು ಟಿ.ವಿ. ಚಾನೆಲ್‍ಗಳೇ ಇವೆ. ಇವುಗಳಲ್ಲಿ ನ್ಯೂಸ್ ಚಾನೆಲ್‍ಗಳ ಪಾಲು 80. ಮಾಧ್ಯಮ ಕ್ಷೇತ್ರದಲ್ಲಿ ಒಂದು ಬಗೆಯ ಸ್ಪರ್ಧೆ ಇವತ್ತು ಸೃಷ್ಟಿಯಾಗಿ ಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೇ ಹೋದರೆ ಪತ್ರಿಕೆಯೊಂದು ಬದುಕಿ ಉಳಿಯಬಲ್ಲುದೇ? ಮಸಾಲೆಗಳೇ ತುಂಬಿರುವ ವರದಿಗಳ ಮಧ್ಯೆ ಅವೇನೂ ಇಲ್ಲದ, ನಿಖರ ಮತ್ತು ನಿಷ್ಠುರ ಸತ್ಯವುಳ್ಳ ವರದಿಗಳನ್ನಷ್ಟೇ ಪ್ರಕಟಿಸುವ ಧೈರ್ಯ ತೋರಿದರೆ ಆ ಪತ್ರಿಕೆಗೆ ಎಷ್ಟು ಮಂದಿ ಓದುಗರು ಸಿಕ್ಕಾರು?
    ‘2006ರ ಜನವರಿಯಿಂದ ಎಪ್ರಿಲ್ 2ರ ವರೆಗೆ ಮಹಾರಾಷ್ಟ್ರದ ವಿದರ್ಭದಲ್ಲಿ 400ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರು. ಎಪ್ರಿಲ್ 2ರ ಅದೇ ದಿನ ಸೆನ್ಸೆಕ್ಸ್ ಹನ್ನೊಂದು ಸಾವಿರವನ್ನು ದಾಟಿತು. ಮಾತ್ರವಲ್ಲ, ಪತ್ರಕರ್ತರಿಗೆ ‘ಲಕ್ಮೆ ಫ್ಯಾಶನ್ ವೀಕ್' 500 ಪಾಸುಗಳನ್ನು ಬಿಡುಗಡೆ ಮಾಡಿತು. ಒಂದೇ ವಾರದಲ್ಲಿ ನಡೆದ ಈ ಮೂರು ಬೆಳವಣಿಗೆಗಳಲ್ಲಿ ವಿದರ್ಭದ ರೈತರ ಸಾವು ಹೆಚ್ಚಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಉಲ್ಲೇಖಕ್ಕೇ ಒಳಗಾಗಲಿಲ್ಲ. ಆದರೆ ಈ ದೇಶದ 2% ಮಂದಿ ಮಾತ್ರ ಆಸಕ್ತವಾಗಿರುವ ಷೇರು ಮಾರುಕಟ್ಟೆಯ ಬಗ್ಗೆ, ಸೆನ್ಸೆಕ್ಸ್ ನ ಏರಿಳಿತದ ಬಗ್ಗೆ ಮಾಧ್ಯಮಗಳು ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟಿಸುತ್ತವೆ. 500 ಮಂದಿ ಪತ್ರಕರ್ತರು ಫ್ಯಾಶನ್ ಶೋವನ್ನು ವರದಿ ಮಾಡಲು ಹೋಗುವಾಗ ವಿದರ್ಭದ ರೈತರ ಸಮಸ್ಯೆಯನ್ನು ಅಧ್ಯಯನ ನಡೆಸಲು ತೆರಳುವ ಪತ್ರಕರ್ತರು ಬೆರಳೆಣಿಕೆಯಷ್ಟು. ನಿಜವಾಗಿ, ಫ್ಯಾಶನ್ ಶೋವನ್ನು ವರದಿ ಮಾಡಲು ತೆರಳುವ ಪತ್ರಕರ್ತರು ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಭರ್ಜರಿ ಪಾರ್ಟಿಗಳು, ಕಿವಿ ತಣಿಸುವ ಸಂಗೀತ, ಆಡಂಬರ.. ಎಲ್ಲವೂ ಇರುತ್ತದೆ. ಆದರೆ ರೈತರನ್ನು ಹುಡುಕಿಕೊಂಡು ಹೋದರೆ, ಪ್ಯಾಂಟು ಸೂಟುಗಳಲ್ಲಿ ಕೆಸರು ಮೆತ್ತಿಕೊಳ್ಳುತ್ತದೆ. ವಾಹನಗಳು ಸಾಗದ ದಾರಿ, ಭರ್ಜರಿ ಔತಣ ಸಿಗದ ಮನೆಗಳು ಮತ್ತು ಕಣ್ಣೀರನ್ನೇ ಉಣಬಡಿಸುವ ಮನುಷ್ಯರು ಪತ್ರಕರ್ತರಿಗೆ ಎಷ್ಟು ಇಷ್ಟವಾಗಬಲ್ಲರು? ಅಂದಹಾಗೆ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯು ಫ್ಯಾಶನ್ ಶೋಗಿಂತ ಅಥವಾ ಶ್ರೀಶಾಂತ್‍ರ ಮದುವೆಗಿಂತ ಮಹತ್ವಪೂರ್ಣ ಎಂದು ಓರ್ವ ಸಂಪಾದಕ ತೀರ್ಮಾನಿಸಬೇಕಾದರೆ ಕನಿಷ್ಠ ಆತನಿಗೆ ಶ್ರಮಿಕ ವರ್ಗದ ಬಗ್ಗೆ ಆಳವಾದ ಅರಿವು ಇರಬೇಕು. ರೈತನ ಬೆವರಿಗೂ ಫ್ಯಾಶನ್ ಶೋದ ಬೆಡಗಿಯ ಬೆವರಿಗೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸ ಗೊತ್ತಿರಬೇಕು. ಸದ್ಯದ ದಿನಗಳು ಹೇಗಿವೆ ಎಂದರೆ, ಮಾಧ್ಯಮದ ಆಯಕಟ್ಟಿನ ಜಾಗಗಳು ಮಾತ್ರವಲ್ಲ, ಅದರ ನಂತರದ ಸ್ಥಾನಗಳು ಕೂಡ ಫ್ಯಾಶನ್ ಶೋದಂತಹ ಥಳಕು-ಬಳುಕನ್ನು ಇಷ್ಟಪಡುವವರ ಪಾಲಾಗಿ ಬಿಟ್ಟಿವೆ. ರೈತನ ಮಗ, ಮಲ ಹೊರುವವನ ಮಗಳು, ಹೊಲೆಯ, ಮಾದಿಗರ ಮಕ್ಕಳು.. ಮಾಧ್ಯಮ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನಕ್ಕೆ ಏರುವಲ್ಲಿ ವಿಫಲವಾಗುತ್ತಲೇ ಇದ್ದಾರೆ. ದೆಹಲಿ ಮೂಲದ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯು 37 ಹಿಂದಿ, ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳನ್ನು ಕೇಂದ್ರೀಕರಿಸಿ 2006ರಲ್ಲಿ ಸರ್ವೇ ನಡೆಸಿತ್ತು. ಇದರಲ್ಲಿ ಬಹಿರಂಗವಾದ ಸತ್ಯ ಏನೆಂದರೆ, ಪತ್ರಿಕೆಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳ ಪೈಕಿ ಶೇ. 90 ಸ್ಥಾನಗಳಲ್ಲಿ ಮೇಲ್ವರ್ಗದವರೇ ಇದ್ದರು. ಮಾತ್ರವಲ್ಲ, ದಲಿತರ ಪೈಕಿ ಒಬ್ಬನೇ ಒಬ್ಬ ಪ್ರತಿನಿಧಿ ಈ ಸ್ಥಾನದಲ್ಲಿ ಇರಲಿಲ್ಲ. ಇವೆಲ್ಲ ಸೂಚಿಸುವುದು ಏನನ್ನು? ತುಳಿತಕ್ಕೊಳಗಾಗಿರುವವರ ಪ್ರಾತಿನಿಧ್ಯವೇ ಶೂನ್ಯವಾಗಿರುವ ಕ್ಷೇತ್ರವೊಂದು ಅವರ ಬಗ್ಗೆ ಕಾಳಜಿಯುಳ್ಳ ಸುದ್ದಿ-ಲೇಖನಗಳನ್ನು ಭಾರೀ ಉತ್ಸಾಹದಿಂದ ಪ್ರಕಟಿಸುತ್ತದೆಂದು ಹೇಗೆ ನಿರೀಕ್ಷಿಸುವುದು? ಅಂದಹಾಗೆ, ಪಡಿತರ ಸಮಸ್ಯೆ, ನೀರು, ನಿರುದ್ಯೋಗ, ಗ್ಯಾಸ್, ಬೆಲೆ ಏರಿಕೆ.. ಮುಂತಾದ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗುವ ಪ್ರತಿಭಟನೆಗಳಿಗೆ ಇವತ್ತಿನ ಮುಖ್ಯ ವಾಹಿನಿಯ ಪತ್ರಿಕೆಗಳು ಕೊಡುವ ಮಹತ್ವ ಮತ್ತು ಪ್ರಚೋದನಕಾರಿ ಭಾಷಣವೊಂದಕ್ಕೆ ಕೊಡುವ ಮಹತ್ವ; ಇವೆರಡನ್ನೂ ತುಲನೆ ಮಾಡಿ ನೋಡಿ, ಏನನಿಸುತ್ತದೆ? ಜನಸಾಮಾನ್ಯರ ನೋವುಗಳನ್ನು ಓರ್ವ ಪತ್ರಕರ್ತ ಅಥವಾ ಸಂಪಾದಕ ಸ್ವಯಂ ಅನುಭವಿಸುವುದಕ್ಕೂ ಇನ್ನಾರೋ ಹೇಳಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಹಸಿರು ಕಾರ್ಡು ಮತ್ತು ಕೆಂಪು ಕಾರ್ಡನ್ನು ವಿತರಿಸುವಲ್ಲಿ ಒಂದು ಕುಟುಂಬಕ್ಕಾದ ಅನ್ಯಾಯವು ಓರ್ವ ಪತ್ರಕರ್ತನಿಗೆ ಮಹತ್ವದ ಸುದ್ದಿಯಂತೆ ಕಾಣಿಸಬೇಕಾದರೆ, ಹಸಿವಿನ ಪರಿಚಯ ಇರಬೇಕು. ಆದರೆ ಮಾಧ್ಯಮ ಕ್ಷೇತ್ರದಲ್ಲಿರುವವರ ಜೀವನ ಕ್ರಮಕ್ಕೂ ಜನಸಾಮಾನ್ಯರ ಜೀವನ ಕ್ರಮಕ್ಕೂ ನಡುವೆ ಇರುವ ಅಗಾಧ ಪ್ರಮಾಣದ ಅಂತರವೇ ಕಾರ್ಮಿಕ ಪ್ರತಿಭಟನೆಗಳಂಥ ಜನಪರ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಗಮನ ಸೆಳೆಯಲು ವಿಫಲವಾಗುತ್ತಿದೆಯೇನೋ ಅನ್ನಿಸುತ್ತಿದೆ. ಪ್ರಚೋದನಕಾರಿ ಭಾಷಣವು ಗ್ಯಾಸ್ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಗಿಂತ ಮಹತ್ವದ ಸುದ್ದಿಯಾಗಿ ಪ್ರಕಟವಾಗುವುದಕ್ಕೂ ಇದನ್ನೇ ಕಾರಣವಾಗಿ ಪರಿಗಣಿಸಬೇಕಾಗುತ್ತದೆ.
   ಮೀಡಿಯಾ ಮೋರ್ ಕೀನ್ ಆನ್ ಫ್ಯಾಶನ್ ಶೋಸ್ ದಾನ್ ಫಾರ್ಮರ್ಸ್ ಸೂಸೈಡ್ಸ್ (ರೈತರ ಆತ್ಮಹತ್ಯೆಗಿಂತ ಫ್ಯಾಶನ್ ಶೋಗಳ ಮೇಲೆಯೇ ಮಾಧ್ಯಮಗಳಿಗೆ ಹೆಚ್ಚು ಆಸಕ್ತಿ) ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ಲೇಖನ ಬರೆದು ಮಾಧ್ಯಮ ಜಗತ್ತಿನ ತಪ್ಪುಗಳನ್ನು ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕ ಮತ್ತು ಪ್ರಮುಖ ಪತ್ರಕರ್ತ ಪಿ. ಸಾಯಿನಾಥ್ ಅನಾವರಣಗೊಳಿಸಿದ್ದರು. ಇದೀಗ ತಮಿಳುನಾಡಿನ ರೈತರು ಪತ್ರ ಬರೆದಿದ್ದಾರೆ. ವಿಷಾದ ಏನೆಂದರೆ, ಮಾಧ್ಯಮ ರಂಗವು ಈ ಪತ್ರವನ್ನು ಎದುರಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತದೆಂದು ನಿರೀಕ್ಷಿಸುವುದಕ್ಕೆ ಯಾವ ಆಧಾರಗಳೂ ಕಾಣಿಸುತ್ತಿಲ್ಲ.

Wednesday, January 8, 2014

ಅಪರಾಧಿಗಳು, ಧರ್ಮ ನಿಂದಕರೆಲ್ಲ ಹೀರೋಗಳಾಗದಿರಲಿ..


    ಪ್ರಕರಣವೊಂದು ಧರ್ಮವಿರೋಧಿ, ಸಮಾಜ ವಿರೋಧಿಯಾಗಿ ಗುರುತಿಸಿಕೊಳ್ಳುವುದಕ್ಕೆ ಯಾವುದು ಮಾನದಂಡವಾಗಬೇಕು? ಪ್ರಕರಣದಲ್ಲಿ ಭಾಗಿಯಾದವರ ಧರ್ಮವೇ, ಜಾತಿಯೇ, ವೇಷ ಭೂಷಣಗಳೇ? ಒಂದು ಪ್ರಕರಣವು ಅಭಿನಂದನಾರ್ಹ ಎನಿಸಿಕೊಳ್ಳುವುದು ಅಥವಾ ಖಂಡನೆಗೆ ಒಳಪಡಬೇಕಾದದ್ದೆಲ್ಲ ಯಾವುದರ ಆಧಾರದಲ್ಲಿ? ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ ಇಟ್ಟುಕೊಳ್ಳುವುದನ್ನು ತಪ್ಪೆನ್ನುವವರು ಮತ್ತು ಅದನ್ನು ಬಲವಂತದಿಂದ, ಹಲ್ಲೆ ನಡೆಸಿಯಾದರೂ ತಡೆಯಬೇಕಾದದ್ದು ತಮ್ಮ ಧಾರ್ಮಿಕ ಕರ್ತವ್ಯ ಎಂದು ವಾದಿಸುವವರು; ಹಿಂದೂ ಯುವಕ ಮುಸ್ಲಿಮ್ ಯುವತಿಯೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನೂ ತಪ್ಪೆನ್ನಬೇಕಲ್ಲವೇ? ಅಂಥ ಸಂಬಂಧವನ್ನು ಬಲವಂತದಿಂದ, ಹಲ್ಲೆ ನಡೆಸಿಯಾದರೂ ತಡೆಯುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ವಾದಿಸಬೇಕಲ್ಲವೇ? ನ್ಯಾಯ ಅಂದರೆ ಇದುವೇ ಅಲ್ಲವೇ? ಹಾಗೆಯೇ, ಮುಸ್ಲಿಮ್ ಯುವತಿ ಹಿಂದೂ ಯುವಕನೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನು ಬಲವಂತದಿಂದ ತಡೆಯಬೇಕೆಂದು ವಾದಿಸುವವರಿಗೂ ಇದೇ ಪ್ರಶ್ನೆ ಅನ್ವಯವಾಗುತ್ತದೆ. ಆದರೆ, ಈ ಎಲ್ಲ ಸಂದರ್ಭಗಳಲ್ಲಿ ಇವರ ನಿಲುವಿನಲ್ಲಿ ದ್ವಂದ್ವಗಳೇಕೆ ಕಾಣಿಸುತ್ತವೆ? ಹಿಂದೂ ಹುಡುಗ ಮುಸ್ಲಿಮ್ ಹುಡುಗಿಯೊಂದಿಗೆ ಗೆಳೆತನ ಬೆಳೆಸಿದರೆ ಅಭಿನಂದನೆ ಸಲ್ಲಿಸುತ್ತಲೇ ಹಿಂದೂ ಯುವತಿ ಮುಸ್ಲಿಮ್ ಹುಡುಗನೊಂದಿಗೆ ಗೆಳೆತನ ಬೆಳೆಸಿದಾಗ ದಾಳಿ ನಡೆಸುವುದೇಕೆ? ಪ್ರತಿಭಟನೆ ಹಮ್ಮಿಕೊಳ್ಳುವುದೇಕೆ?
   ದೇರಳಕಟ್ಟೆಯಲ್ಲಿ ನಡೆದ ಪ್ರಕರಣವು ಜಿಲ್ಲೆಯಲ್ಲಿ ನೈತಿಕತೆ, ಅನೈತಿಕತೆ, ನ್ಯಾಯ, ಧರ್ಮ, ಕೋಮು ರಾಜಕೀಯ.. ಮುಂತಾದುವುಗಳ ಸುತ್ತ ಮತ್ತೊಮ್ಮೆ ಚರ್ಚೆಗೆ ವೇದಿಕೆ ಒದಗಿಸಿದೆ. ದೇರಳಕಟ್ಟೆಯಲ್ಲಿ ಏನು ನಡೆದಿದೆಯೋ ಅದು ತೀವ್ರವಾದ ಖಂಡನೆಗೆ ಅರ್ಹವಾದದ್ದು. ಅದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕಾದದ್ದು ಅತ್ಯಂತ ಅಗತ್ಯ. ಅದರಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳಬಾರದು. ಅದೇವೇಳೆ, ಅದರಲ್ಲಿ ಭಾಗಿಯಾದ ಆರೋಪಿಗಳ ಹೆಸರನ್ನು ನೋಡಿಕೊಂಡು ಆ ಇಡೀ ಪ್ರಕರಣವನ್ನು ಒಂದು ಧರ್ಮಕ್ಕೆ  ಜೋಡಿಸುವುದನ್ನೂ ಅಷ್ಟೇ ಪ್ರಬಲವಾಗಿ ಖಂಡಿಸಬೇಕಾಗುತ್ತದೆ. ಯಾಕೆಂದರೆ, ಹಾಗೆ ಮಾಡುವುದು ಸೈನೈಡ್ ಕಿಲ್ಲರ್ ಮೋಹನ್ ಕುಮಾರನಿಗೆ ಧರ್ಮವನ್ನು ಜೋಡಿಸಿದಂತೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಕೊಲ್ಲುವುದಕ್ಕಿಂತ ಮೊದಲು ಮೋಹನನು ಅತ್ಯಾಚಾರವಷ್ಟೇ ಮಾಡುತ್ತಿದ್ದುದಲ್ಲ, ಮನೆಯಲ್ಲಿರುವ ಹಣ, ಬಂಗಾರವನ್ನೆಲ್ಲಾ ತಮ್ಮೊಂದಿಗೆ ತರುವಂತೆ ಆ ಹೆಣ್ಣು ಮಕ್ಕಳಲ್ಲಿ ಹೇಳುತ್ತಿದ್ದ. ಮದುವೆಯ ಕನಸು ಕಟ್ಟಿಕೊಂಡು ಬರುವ ಆ ಮುಗ್ಧ ಹೆಣ್ಣು ಮಕ್ಕಳಿಗೆ ಬಳಿಕ ಸಯನೈಡ್ ನೀಡಿ ಕೊಲ್ಲುತ್ತಿದ್ದ. ಮಾಡಿದ ಅತ್ಯಾಚಾರವನ್ನು ಚಿತ್ರೀಕರಿಸುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ, ಆತ ಎಸಗಿದ ಕೃತ್ಯಗಳಂತೂ ದೇರಳಕಟ್ಟೆ ಪ್ರಕರಣಕ್ಕಿಂತಲೂ ಘೋರವಾದದ್ದು. ಯಾಕೆಂದರೆ, ಮದುವೆ ಎಂಬುದು ಪ್ರತಿ ಹೆಣ್ಣು ಮಕ್ಕಳ ದೊಡ್ಡದೊಂದು ಕನಸು. ಆ ಕನಸನ್ನು ದುರುಪಯೋಗಿಸಿಕೊಂಡು ಅತ್ಯಾಚಾರಕ್ಕೆ ಒಳಪಡಿಸಿ ಕೊಲ್ಲುವುದಿದೆಯಲ್ಲ, ಅದಕ್ಕೆ ಯಾವ ಬ್ಲಾಕ್‍ಮೇಲೂ ಸಮಾನವಲ್ಲ. ಅಂದಹಾಗೆ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದವರೆಲ್ಲ ಕ್ರಿಮಿನಲ್ ಹಿನ್ನೆಲೆಯುಳ್ಳವರು. ರೌಡಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಂಡವರು.  ಆದ್ದರಿಂದ, ಸಮಾಜದಲ್ಲಿ ಅವರಿಗೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಬೆಂಬಲಿಗರೂ ಇರುವುದಿಲ್ಲ. ಆದರೆ, ಮೋಹನ್ ಕುಮಾರ್ ಹಾಗಲ್ಲ. ಆತ ಸಮಾಜದಲ್ಲಿ ಕ್ರಿಮಿನಲ್ ಆಗಿ ಗುರುತಿಸಿರಲಿಲ್ಲ. ಬ್ಲಾಕ್‍ಮೇಲ್ ಮಾಡುವ ತಂಡದ ಸದಸ್ಯನೆಂಬ ಹಣೆಪಟ್ಟಿಯೂ ಇರಲಿಲ್ಲ. ಶಿಕ್ಷಕನ ಗುರುತಿನೊಂದಿಗೆ ಬದುಕುತ್ತಿದ್ದ ಆತನಿಗೂ ಪಕ್ಕಾ ಕ್ರಿಮಿನಲ್‍ಗಳಾಗಿ ಗುರುತಿಸಿಕೊಂಡಿದ್ದ ದೇರಳಕಟ್ಟೆ ಆರೋಪಿಗಳಿಗೂ ಹೋಲಿಸಿ ನೋಡಿದರೆ ಮೋಹನ್ ಕುಮಾರನ ಅಪರಾಧವೇ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತದೆ. ಆದರೂ, ಈಗ ಪ್ರತಿಭಟನೆಯಲ್ಲಿ ತೊಡಗಿರುವ ಎಷ್ಟು ಮಂದಿ ಆತನ ವಿರುದ್ಧ ಪ್ರತಿಭಟಿಸಿದ್ದಾರೆ? ಆತನ ಕ್ರೌರ್ಯವನ್ನು ಆತ ಪ್ರತಿನಿಧಿಸುವ ಧರ್ಮಕ್ಕೆ ಜೋಡಿಸಿದ್ದಾರೆ? ಆತನ ಮೇಲೆ ಇಂತಿಂಥ ಕಾಯ್ದೆಗಳನ್ನು ಹಾಕಿ ಎಂದು ಆಗ್ರಹಿಸಿದ್ದಾರೆ? ಹೀಗಿರುವಾಗ, ಇಲ್ಲೆಲ್ಲಾ ಕೇಳದ ಘೋಷಣೆ, ಮಾಡದ ಪ್ರತಿಭಟನೆಗಳು ದೇರಳಕಟ್ಟೆ ಪ್ರಕರಣದಲ್ಲಿ ಮಾತ್ರ ಕಾಣಿಸಿಕೊಂಡಿರುವುದಕ್ಕೆ ಏನು ಕಾರಣ? ಒಂದು ವೇಳೆ ದೇರಳಕಟ್ಟೆ ಆರೋಪಿಗಳ ಹೆಸರು ಸಫ್ವಾನ್, ಸಂಶುದ್ದೀನ್, ಸವಿೂರ್, ನಿಸಾರ್... ಎಂದಾಗಿರದೇ, ವಿನಯ, ರಮೇಶ್, ಉದಯ, ಚಂದ್ರ.. ಎಂದಾಗಿರುತ್ತಿದ್ದರೆ ಈ ಇಡೀ ಪ್ರಕರಣ ಯಾವ ತಿರುವನ್ನು ಪಡಕೊಳ್ಳುತ್ತಿತ್ತು? ಅದು ನೈತಿಕ ಪೊಲೀಸ್‍ಗಿರಿಯಾಗಿ ಸಮರ್ಥನೆಗೆ ಒಳಗಾಗುತ್ತಿರಲಿಲ್ಲವೇ? ಅಷ್ಟಕ್ಕೂ, ಹೋಮ್ ಸ್ಟೇ ದಾಳಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳೇನೂ ಸುರಕ್ಷಿತ ಆಗಿರಲಿಲ್ಲವಲ್ಲ. ಸುಮಾರು 50 ರಷ್ಟಿದ್ದ ಯುವಕರ ಮಧ್ಯೆ ಆ ಹೆಣ್ಣು ಮಕ್ಕಳು ಅನುಭವಿಸಿದ ಹಿಂಸೆಯ ಬಗ್ಗೆ ಹೈಕೋರ್ಟೇ ದಿಗ್ಭ್ರಮೆ ವ್ಯಕ್ತಪಡಿಸಿತ್ತು. ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಆದರೂ, ಇವತ್ತು ಪ್ರತಿಭಟನೆಯಲ್ಲಿ ತೊಡಗಿರುವರು ಅಂದು ಆ ಪ್ರಕರಣವನ್ನು ಯಾವೆಲ್ಲ ರೀತಿಯಲ್ಲಿ ಸಮರ್ಥಿಸಿಲ್ಲ? ಆರೋಪಿಗಳ ಬಿಡುಗಡೆಗಾಗಿ ಒತ್ತಾಯಿಸಿದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲವೇ? ಹೆಣ್ಣಿನ ಮಾನ, ಘನತೆ, ಗೌರವವನ್ನು ಕಾಪಾಡುವುದು ಪ್ರತಿಭಟನಾಕಾರರ ಉದ್ದೇಶ ಎಂದಾಗಿದ್ದರೆ, ಅದು ದೇರಳಕಟ್ಟೆಯಾದರೇನು, ಹೋಮ್ ಸ್ಟೇ ಆದರೇನು ಅಥವಾ ಸೌಜನ್ಯ ಆದರೇನು.. ಎಲ್ಲವೂ ಒಂದೇ ಅಲ್ಲವೇ? ಹೋಮ್ ಸ್ಟೇಯ ಹೆಣ್ಣು ಮಕ್ಕಳ ಮಾನವನ್ನು ಹರಾಜುಗೊಳಿಸಿ ದೇರಳಕಟ್ಟೆ ಪ್ರಕರಣಕ್ಕಾಗಿ ಖಂಡನೆ ವ್ಯಕ್ತಪಡಿಸುವುದಕ್ಕೆ ಏನು ಅರ್ಥವಿದೆ? ಅಲ್ಲದೇ, ಈಗ ಪ್ರತಿಭಟಿಸುವವರಲ್ಲಿ ಎಷ್ಟು ಮಂದಿ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಿದ್ದಾರೆ? ನ್ಯಾಯಯುತ ತನಿಖೆಗೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ? ಭಾಷಣ ಮಾಡಿದ್ದಾರೆ?   ದೇರಳಕಟ್ಟೆಯ ವಿದ್ಯಾರ್ಥಿನಿಯಂತೆ ಸೌಜನ್ಯಳ ಮಾನ, ಪ್ರಾಣವೂ ಗೌರವಾರ್ಹವೇ ಅಲ್ಲವೇ?
 ನಿಜವಾಗಿ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಿಡುಗಡೆಗೊಳಿಸುವುದಕ್ಕೋ, ಪ್ರಕರಣವನ್ನು ದುರ್ಬಲಗೊಳಿಸುವುದಕ್ಕೋ ಮುಸ್ಲಿಮ್ ಸಮುದಾಯ ಎಂದೂ ಪ್ರಯತ್ನಿಸಿಲ್ಲ. ಅವರನ್ನು ಬಿಡುಗಡೆಗೊಳಿಸಿ ಎಂದು ಹೇಳಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲ. ಆರೋಪಿಗಳ ಕೃತ್ಯವನ್ನು ಧಾರ್ಮಿಕವಾಗಿಯೋ, ವೈಯಕ್ತಿಕವಾಗಿಯೋ ಯಾವ ವಿದ್ವಾಂಸರೂ, ನಾಯಕರೂ ಸಮರ್ಥಿಸಿಕೊಂಡಿಲ್ಲ. ಹೀಗೆಲ್ಲ ಇದ್ದೂ ಆ ಇಡೀ ಪ್ರಕರಣವನ್ನು ಮುಸ್ಲಿಮರ ಅಪರಾಧವಾಗಿ ಬಿಂಬಿಸುತ್ತಿರುವುದಕ್ಕೆ ಏನೆನ್ನಬೇಕು? ಮುಸ್ಲಿಮರ ಧಾರ್ಮಿಕ ವಿಧಿಯನ್ನು ಅವಹೇಳನಗೊಳಿಸುತ್ತಾ, ಅವರ ಆಚಾರ-ಆರಾಧನಾ ಕ್ರಮವನ್ನು ತೆಗಳುತ್ತಾ ನಡೆಯುವವರನ್ನು ಏನೆಂದು ಕರೆಯಬೇಕು? ನಿಜವಾಗಿ, ಒಂದು ಧರ್ಮವನ್ನು ಇತರರು ಪ್ರೀತಿಸುವುದು, ಗೌರವಿಸುವುದು ಆ ಧರ್ಮದ ನಾಯಕರ ವರ್ತನೆಯನ್ನು ನೋಡಿಕೊಂಡು. ದೇರಳಕಟ್ಟೆ ಪ್ರಕರಣದ ಬಳಿಕ ಏರ್ಪಡಿಸಲಾದ ಪ್ರತಿಭಟನೆಗಳು ಮತ್ತು ಕೇಳಿಬಂದ ಭಾಷಣಗಳನ್ನು ಆಲಿಸುವಾಗ ಆಘಾತವಾಗುತ್ತದೆ. ಪ್ರತಿಭಟನಾಕಾರರು ಮತ್ತು ಭಾಷಣಗಾರರ ಧಾರ್ಮಿಕ ನಿಷ್ಠೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಇನ್ನೊಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಸಾರಾಸಗಟು ಅವಮಾನಿಸುವವರು ಹೇಗೆ ಧಾರ್ಮಿಕ ನಾಯಕರಾಗಬಲ್ಲರು? ಅಂಥ ನಾಯಕರಿಂದ ಎಂಥ ಧರ್ಮ ಜಾಗೃತಿ ಉಂಟಾದೀತು? ಅವರು ಕಟ್ಟುವ ಸಮಾಜದ ಸ್ವರೂಪವಾದರೂ ಹೇಗಿದ್ದೀತು?
   ಅಂದಹಾಗೆ, ಅಪರಾಧ ಕೃತ್ಯಕ್ಕೂ ಧರ್ಮಕ್ಕೂ ಯಾವ ಸಂಬಂಧವೂ ಇರುವುದಿಲ್ಲ, ಇರಬಾರದು. ಅಪರಾಧಿಗಳು ಕೇವಲ ಅಪರಾಧಿಗಳೇ ಹೊರತು ಅಪರಾಧಿಗಳನ್ನು ಮುಸ್ಲಿಮ್ ಅಪರಾಧಿ ಅಥವಾ ಹಿಂದೂ ಅಪರಾಧಿ ಎಂದು ವಿಭಜಿಸುವುದು ಅತ್ಯಂತ ಅಮಾನವೀಯವಾದದ್ದು. ಮುಂದಿನ ಎರಡ್ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇಶ್ಯೂ ಬೇಕೆಂದಾದರೆ ಈ ಜಿಲ್ಲೆಯಲ್ಲಿ ಧಾರಾಳ ಇವೆ. ಅದಕ್ಕಾಗಿ ದೇರಳಕಟ್ಟೆ ಪ್ರಕರಣವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಯಾರೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಯೂ ಆಧಾರದಲ್ಲಿ ನಡೆಯಬೇಕೆ ಹೊರತು ಭಾವನೆಗಳ ಆಧಾರದಲ್ಲಿ ಅಲ್ಲ. ಹೋಮ್ ಸ್ಟೇ, ದೇರಳಕಟ್ಟೆ, ಪಬ್‍ದಾಳಿ, ಮೋಹನ್ ಕುಮಾರ್.. ಇವೆಲ್ಲ ಪಕ್ಕಾ ಕಾನೂನು ಬಾಹಿರ ಕೃತ್ಯಗಳು. ಅವನ್ನು ಕಾನೂನು ನೋಡಿಕೊಳ್ಳಲಿ. ಅದರ ನೆಪದಲ್ಲಿ ಧರ್ಮವನ್ನೋ ಅದರ ಆಚಾರಗಳನ್ನೋ ನಿಂದಿಸುವುದೆಂದರೆ, ಅದುಅವರ ಯೋಗ್ಯತೆಯನ್ನಷ್ಟೇ ಬಿಂಬಿಸುತ್ತದೆ. ಯಾವ ಆರೋಪಿಗಳೂ ಮೌಲವಿಗಳಲ್ಲೋ, ಪುರೋಹಿತರಲ್ಲೋ ಕೇಳಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ಮೌಲವಿ, ಪುರೋಹಿತರು ಅಪರಾಧ ಕೃತ್ಯಕ್ಕೆ ಪ್ರಚೋದಿಸಿದರೂ ಅದಕ್ಕೆ ಧರ್ಮ ಹೊಣೆಯಾಗುವುದೂ ಇಲ್ಲ. ಅದು ಅವರ ಕಸುಬು. ಆದ್ದರಿಂದ, ಆರೋಪಿಗಳನ್ನು ಆರೋಪಿಗಳಾಗಿಯೇ ನೋಡೋಣ. ಅವರೆಂದೂ ಸಮಾಜದ ಹೀರೋಗಳು ಆಗದಿರಲಿ. ಅವರನ್ನು ಹೀರೋಗಳಾಗಿಸುವವರಿಗೆ ನಮ್ಮ ಬೆಂಬಲವೂ ಸಿಗದಿರಲಿ.


Tuesday, December 24, 2013

ಕಣ್ಣೀರಾಗುವ ತಾಯಿಯ ಎದುರು ಯಾವ ಮಕ್ಕಳು ತಾನೇ ಕರಗುವುದಿಲ್ಲ?

   ಮೊನ್ನೆ ಆತ್ಮೀಯ ಗೆಳೆಯ ಎದುರು ಬಂದು ಕೂತಿದ್ದ..
ಹಾಗಂತ ಆತ ಹಾಗೆ ಬಂದು ಕೂರುವುದು ಅದು ಮೊದಲ ಸಲವೇನೂ ಅಲ್ಲ. ಪ್ರತಿದಿನವೂ ನಾವಿಬ್ಬರೂ ಹಾಗೆ ಎದುರು ಬದುರು ಕೂರುತ್ತೇವೆ. ಚರ್ಚಿಸುತ್ತೇವೆ. ಪತ್ರಿಕೆಯ ಬಗ್ಗೆ, ಅದರಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ, ಪುಟ ವಿನ್ಯಾಸ, ಪ್ರಸಾರದ ಬಗ್ಗೆ, ಲೇಖನಗಳ ವೈವಿಧ್ಯತೆಯ ಬಗ್ಗೆ... ಹೀಗೆ ಪ್ರತಿ ದಿನದ ಚರ್ಚೆಗೂ ಧಾರಾಳ ವಿಷಯಗಳಿರುತ್ತವೆ. ಪತ್ರಿಕೆಯನ್ನು ಹೇಗೆ ಭಿನ್ನವಾಗಿ ಕಟ್ಟಿಕೊಡಬಹುದು ಎಂಬ ಬಗ್ಗೆ ಚರ್ಚೆಗಳು ಸಾಗುತ್ತಿರುತ್ತದೆ. ಅಷ್ಟಕ್ಕೂ, ಪತ್ರಿಕೆಯ 16 ಪುಟಗಳನ್ನು ವಾರವೊಂದರಲ್ಲಿ ಹೇಗಾದರೂ ಮಾಡಿ ತುಂಬಿಸಿ ಬಿಡಬೇಕೆಂಬ ಗುರಿಯಷ್ಟೇ ಇರುವುದಾದರೆ, ಸಂಪಾದಕರಿಗೂ ಸಂಪಾದಕೀಯ ಬಳಗಕ್ಕೂ ಅಂಥ ಕಷ್ಟವೇನಿಲ್ಲ. ಆದರೆ ಪ್ರತಿ ಪುಟದಲ್ಲೂ ಪ್ರಬುದ್ಧ ಮತ್ತು ವಿಚಾರ ಪ್ರಚೋದಕ ಬರಹಗಳಿರಬೇಕು ಎಂಬ ಗುರಿ ಇದ್ದರೆ ಖಂಡಿತ ಇದು ಕಷ್ಟದ್ದು ಮತ್ತು ಸವಾಲಿನದ್ದೇ. ಆಗ ಪತ್ರಿಕೆಯ ಪ್ರತಿಯೊಂದು ಪುಟವೂ ಸಂಪಾದಕೀಯ ಬಳಗದ ಪಾಲಿಗೆ ಅಸಾಮಾನ್ಯದ್ದಾಗಿ ಬಿಡುತ್ತದೆ. ಒಂದು ವಾರದವರೆಗೆ ಓದುಗರನ್ನು ಹಿಡಿದಿಡಬಹುದಾದಷ್ಟು ತೂಕದ ಬರಹಗಳಿಗಾಗಿ ಪ್ರಯತ್ನ ನಡೆಯುತ್ತದೆ. ನಿಜವಾಗಿ, ವಾರಪತ್ರಿಕೆಯೆಂಬುದು ದೈನಿಕದಂತೆ ಅಲ್ಲ. ದೈನಿಕದ ಬಹುತೇಕ ಸುದ್ದಿಗಳು ಸಂಜೆಯಾಗುವಾಗ ಸತ್ತು ಹೋಗಿರುತ್ತದೆ. ಮರುದಿನ ಹೊಸ ಸುದ್ದಿ, ಹೊಸ ಸಾವು. ಮೊದಲ ದಿನದ ಸುದ್ದಿಗೆ ತದ್ವಿರುದ್ಧವಾದ ಸುದ್ದಿಗಳು ಮರುದಿನ ಪ್ರಕಟವಾಗಲೂಬಹುದು. ರಾಜಕಾರಣಿಗಳು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಆತ್ಮಹತ್ಯೆ, ಹಲ್ಲೆ, ವಂಚನೆ, ಅತ್ಯಾಚಾರ... ಇತ್ಯಾದಿ ಸುದ್ದಿಗಳ ಜೊತೆ ನಿತ್ಯ ಪ್ರಕಟವಾಗುವ ದೈನಿಕಗಳಿಗಿಂತ ಭಿನ್ನ ಸುದ್ದಿ-ವಿಶ್ಲೇಷಣೆಗಳಿಗಾಗಿ ಓದುಗರು ವಾರಪತ್ರಿಕೆಯನ್ನು ಕಾಯುತ್ತಾರೆ. ಆದ್ದರಿಂದ, ಸಂಜೆಯಾಗುವಾಗ ಸಾಯುವ ದೈನಿಕಗಳ ಸುದ್ದಿಗಳಿಗೆ ವಿಶ್ಲೇಷಣೆಯ ಮೂಲಕ ಜೀವ ಕೊಡುವುದು, ಅದರ ವಿವಿಧ ಮಗ್ಗುಲುಗಳನ್ನು ಚರ್ಚೆಗೆತ್ತಿಕೊಂಡು ಓದುಗರ ಮನ ತಟ್ಟುವುದನ್ನು ವಾರಪತ್ರಿಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ವಾರಪತ್ರಿಕೆಯ ಸಂಪಾದಕೀಯ ಬಳಗವು ದೈನಿಕದ ಸಂಪಾದಕೀಯ ಬಳಗಕ್ಕಿಂತ ಭಿನ್ನವಾಗಿ ಚಟುವಟಿಕೆಯಲ್ಲಿ ತೊಡಗಬೇಕಾಗುತ್ತದೆ. ಯಾವುದೇ ಒಂದು ಸುದ್ದಿಯನ್ನು ವಿಶ್ಲೇಷಿಸುವುದಕ್ಕೂ ಬರೇ ಆ ಸುದ್ದಿಯನ್ನು ಯಥಾ ಪ್ರಕಾರ ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸುದ್ದಿಯಲ್ಲಿ ಬರಹಗಾರನ ಅಭಿಪ್ರಾಯ ಇರುವುದಿಲ್ಲ. ಅದು ಬರೇ ಸುದ್ದಿ. ಒಂದೋ ಆ ಸುದ್ದಿ ಆ ದಿನ ಹೊತ್ತೇರುವಾಗಲೇ ಸಾಯ     ಬಹುದು ಅಥವಾ ಸಂಜೆಯವರೆಗೆ ಓದುಗರ ನಡುವೆ ಚರ್ಚೆಯಲ್ಲಿರಬಹುದು. ಕೆಲವೊಮ್ಮೆ ಈ ಚರ್ಚೆ ದಿನಗಳವರೆಗೂ ಮುಂದುವರಿಯಬಹುದು. ಆದರೆ ಸುದ್ದಿ ವಿಶ್ಲೇಷಣೆ ಮಾಡುವ ವಾರಪತ್ರಿಕೆಯೊಂದು ಅಂಥ ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಲು ಎತ್ತಿಕೊಳ್ಳುವಾಗ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುದ್ದಿಯನ್ನು ಜನ ಈಗಾಗಲೇ ಓದಿರುವುದರಿಂದ ಅದೇ ಸುದ್ದಿಯನ್ನು ಮತ್ತೆ ಕೊಡುವಂತಿಲ್ಲ. ಅದರ ಇನ್ನಿತರ ಮಗ್ಗುಲುಗಳನ್ನು ವಿಶ್ಲೇಷಿಸಬೇಕೆಂದರೆ ಮಾಹಿತಿಯ ಅಗತ್ಯ ಇರುತ್ತದೆ. ವಿಶ್ಲೇಷಣೆಯ ಹೆಚ್ಚು ತರ್ಕಬದ್ಧ ಮತ್ತು ತೂಕಬದ್ಧವಾಗ ಬೇಕಾದರೆ ಬೇರೆ ಸಾಹಿತ್ಯ ಕೃತಿಗಳ ಅಧ್ಯಯನ ನಡೆಸಿರಬೇಕಾಗುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಓದುಗರನ್ನು ಗಮನದಲ್ಲಿಟ್ಟುಕೊಳ್ಳಬೇಕು. ತನ್ನ ಬರಹ ಯಾವ ಬಗೆಯ, ಎಂಥ ವೈಚಾರಿಕ ಮಟ್ಟವನ್ನು ಬೆಳೆಸಿಕೊಂಡ ಓದುಗರನ್ನು ತಲುಪುತ್ತಿದೆ ಎಂಬ ಅರಿವು ಬರಹಗಾರನಲ್ಲಿ ಇರಬೇಕು. ಓದುಗರ ಭಾವನೆಗಳನ್ನು ಪರಿಗಣಿಸದೇ ಬರೆಯ ತೊಡಗಿದರೆ, ಬರಹ ಹೇಗೆಯೇ ಇದ್ದರೂ ಅದು ನಿರೀಕ್ಷಿತ ಪರಿಣಾಮ ಬೀರುವ ಸಾಧ್ಯತೆಗಳು ತೀರಾ ಕಡಿಮೆ...
ಸಾಮಾನ್ಯವಾಗಿ ಗೆಳೆಯ ಇಂಥ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ. ಆದರೆ ಇವತ್ತು ಆ ಬಗ್ಗೆ ಮಾತಾಡಲೇ ಇಲ್ಲ..
ಕಣ್ಣು ತುಂಬಿಕೊಂಡಿತ್ತು. ಗೆಳೆಯನ ತುಂಬಿದ ಕಣ್ಣನ್ನು ನಾನು ನೋಡಿದ್ದು ಇದೇ ಮೊದಲು. ನಾಲ್ಕು ಮಾತುಗಳನ್ನು ಆಡುತ್ತಿದ್ದಂತೆಯೇ ಕಣ್ಣೀರು ದರದರನೆ ಹರಿಯ ತೊಡಗಿತು. ಸಾಮಾನ್ಯವಾಗಿ ಪುರುಷರು ಇತರರೆದುರು ಕಣ್ಣೀರು ಹಾಕುವುದು ಕಡಿಮೆ. ಅಷ್ಟೊಂದು ಆಘಾತಕಾರಿ ಸಂಗತಿಗಳು ಎದುರಾದರೆ ಯಾರೂ ಕಾಣದ ಸ್ಥಳದಲ್ಲಿ ಪುರುಷರು ಕಣ್ಣೀರು ಹರಿಸಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಒಂದು ವೇಳೆ, ಪ್ರತಿ ಮನೆಯ ಸ್ನಾನಗೃಹದ ಗೋಡೆಗಳಿಗೆ ಬಾಯಿ ಬರುತ್ತಿದ್ದರೆ, ಅಸಂಖ್ಯಾತ ಪುರುಷರ ಕಣ್ಣೀರ ಕತೆಗಳನ್ನು ಅವು ಹೇಳುತ್ತಿದ್ದುವು. ಯಾಕೆಂದರೆ, ಪುರುಷರು ಸ್ನಾನ ಗೃಹದಲ್ಲಿ ಕಣ್ಣೀರು ಹರಿಸಿ, ಮುಖ ತೊಳೆದುಕೊಂಡು ತಮ್ಮ ಕಣ್ಣೀರನ್ನು ಅಡಗಿಸುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಎಲ್ಲರೆದುರೇ ಕಣ್ಣೀರು ಹರಿಸಿದರೆ ಎಲ್ಲಿ ಹೆಂಗರುಳಿನವನು ಎಂಬ ಅಡ್ಡ ಹೆಸರು ಬರುತ್ತೋ ಅನ್ನುವ ಅನುಮಾನ, ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ..
ಪತ್ನಿ, ಇಬ್ಬರು ಮಕ್ಕಳೊಂದಿಗೆ ಪರಂಪರೆಯ ಮನೆಯಲ್ಲಿ ವಾಸವಿರುವ ನನ್ನ ಗೆಳೆಯನಿಗೆ ಬೇರೊಂದು ಮನೆ ಮಾಡಿಕೊಳ್ಳ ಬೇಕೆಂಬ ಇರಾದೆ ವರ್ಷಗಳ ಮೊದಲೇ ಇತ್ತು. ಅದನ್ನು ಆತ ಆಗೊಮ್ಮೆ-ಈಗೊಮ್ಮೆ ಹೇಳಿಕೊಂಡದ್ದೂ ಇದೆ. ಮೂರ್ನಾಲ್ಕು ಮಂದಿ ತಮ್ಮಂದಿರಿರುವ ಒಂದು ದೊಡ್ಡ ಕುಟುಂಬದ ಮನೆಯಿಂದ ತಾನೊಬ್ಬ ಹೊರ ಹೋದರೆ ಅಂಥ ಸಮಸ್ಯೆ ಏನೂ ಉಂಟಾಗದು ಎಂಬ ದೃಢ ನಿಲುವು ಗೆಳೆಯನದ್ದಾಗಿತ್ತು. ವಿಧವೆ ತಾಯಿಯೊಂದಿಗೆ ಆಗಾಗ ತನ್ನ ಇರಾದೆಯನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಲೂ ಇದ್ದ. ತಮ್ಮಂದಿರಿಗೆ ಈಗಾಗಲೇ ವಿವಾಹವಾಗಿರುವುದರಿಂದ ತಾಯಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಏನೂ ವ್ಯತ್ಯಾಸ ಆಗದು ಎಂದೂ ನಂಬಿದ್ದ. ನಿಜವಾಗಿ, ಮನೆಯ ಹಿರಿಯ ಸದಸ್ಯನಾಗಿ ಮನೆ ಬಿಡುವುದೆಂದರೆ ಅದೊಂದು ದೊಡ್ಡ ಸವಾಲು. ಮನೆಯವರೆಲ್ಲರೂ ಹಿರಿಯವನನ್ನೇ ಅವಲಂಬಿಸಿರುತ್ತಾರೆ. ಅಣ್ಣ ಜವಾಬ್ದಾರಿ ನೋಡಿಕೊಳ್ಳುತ್ತಾನೆ ಎಂಬ ಧೈರ್ಯದಿಂದ ತಮ್ಮಂದಿರು ಬದುಕುತ್ತಿರುತ್ತಾರೆ. ತಾಯಿಯೂ ಹಿರಿಯ ಮಗನ ಮೇಲೆ ಇಟ್ಟಷ್ಟು ಭರವಸೆ ಇನ್ನಾರ ಮೇಲೂ ಇಟ್ಟಿರುವುದಿಲ್ಲ. ಮಾತ್ರವಲ್ಲ, ಕೆಲವೊಮ್ಮೆ ಮಗನಿಗಿಂತಲೂ ಮಗನ ಮಕ್ಕಳ ಜೊತೆಯೇ ತಾಯಿಯ ಸಂಬಂಧ ಹೆಚ್ಚಿರುವುದೂ ಇದೆ. ಯಾಕೆಂದರೆ, ಮಗ ಉದ್ಯೋಗ ನಿಮಿತ್ತ ಕಚೇರಿಗೆ ಹೋದರೆ ಬರುವಾಗ ಸಂಜೆಯಾಗಿರುತ್ತದೆ. ಬಳಿಕ ಸ್ನಾನ, ಅದೂ-ಇದೂ ಎಂದು ಸಮಯ ಬೇಗ ಬೇಗನೆ ಕಳೆದು ಹೋಗುತ್ತದೆ. ಈ ಮಧ್ಯೆ ತಾಯಿಯೊಂದಿಗೆ ಬೆರೆಯುವುದಕ್ಕೆಂದು ಎಷ್ಟೇ ಪ್ರಯತ್ನಿಸಿದರೂ ಅದಕ್ಕೊಂದು ಮಿತಿ ಇದೆ. ಆದರೆ ಮಗನ ಸಣ್ಣ ಮಕ್ಕಳು ಬೆಳಗಿನಿಂದ ಸಂಜೆಯವರೆಗೆ ಅಜ್ಜಿಯ ಜೊತೆಗಿರುತ್ತದೆ. ತಮ್ಮ ಮುದ್ದು ಮುದ್ದು ಮಾತುಗಳ ಮೂಲಕ ಅಪ್ಪ ಬಿಟ್ಟು ಹೋದ ಜಾಗವನ್ನು ಅವು ತುಂಬಿ ಬಿಡುತ್ತವೆ. ಆದ್ದರಿಂದಲೇ, ವಯಸ್ಸಾದ ತಾಯಿ ತನ್ನ ಸಂತಸವನ್ನು ಈ ಮಕ್ಕಳೊಂದಿಗೆ ಕಂಡುಕೊಳ್ಳುತ್ತಾಳೆ. ಆ ಮಕ್ಕಳ (ಮೊಮ್ಮಕ್ಕಳ) ಆಟದಲ್ಲಿ, ಖುಷಿಯಲ್ಲಿ, ತಂಟೆಯಲ್ಲಿ.. ತನ್ನ ಮಗನನ್ನು ಅನುಭವಿಸುತ್ತಾಳೆ. ಹೀಗಿರುವಾಗ ಮಗ ಬೇರೆ ಮನೆ ಮಾಡುವುದೆಂದರೆ, ಮಗನ ಜೊತೆ ಮೊಮ್ಮಕ್ಕಳನ್ನೂ ಕಳಕೊಂಡಂತೆ. ಬಹುಶಃ, ಕಚೇರಿಯಲ್ಲಿ ಬಿಝಿಯಾಗಿರುವ ಗಮನಕ್ಕೆ ಇವು ಬರಬೇಕೆಂದೇನೂ ಇಲ್ಲ. ಆದ್ದರಿಂದಲೇ, ಗೆಳೆಯ ಬೇರೊಂದು ಮನೆ ಮಾಡಿ ತಾಯಿಯನ್ನು ಹೊಸ ಮನೆಗೆ ಕರೆದಾಗ ಅವರು ಕಣ್ಣೀರಾದರು. ಹೊಸ ಮನೆಗೆ ಬಂದರೂ ನಿಲ್ಲಲೊಪ್ಪಲಿಲ್ಲ. ತಿರುಗಿ ಬಂದು ಮಗನನ್ನು ಮತ್ತು ಮೊಮ್ಮಗುವನ್ನು ಸ್ಮರಿಸಿ ಕಣ್ಣೀರು ಹರಿಸತೊಡಗಿದರು. ತಾನು ಬೇರೆ ಮನೆ ಮಾಡಿದ್ದು ತಾಯಿಗೆ ಇಷ್ಟವಿಲ್ಲ ಎಂದರಿತ ಗೆಳೆಯನಿಗೆ ಏನು ಮಾಡಬೇಕೆಂಬ ಗೊಂದಲ. ಅತ್ತ ತಾಯಿಯನ್ನು ಬಿಡುವಂತಿಲ್ಲ, ಇತ್ತ ಬಾಡಿಗೆ ಮನೆ ಮತ್ತು ಅದಕ್ಕಾಗಿ ಖರೀದಿಸಲಾದ ಹೊಸ ಹೊಸ ಗೃಹಪಯೋಗಿ ವಸ್ತುಗಳು ತಾಯಿಯ ಕಣ್ಣೀರಿಗೆ ಕಾರಣ ವಾದ, ಅಭಿಶಪ್ತ ಮಗ ನಾನಾಗಿ ಬಿಡುವೆನೋ ಎಂಬ ಭಯ. ತಾಯಿಗೆ ತಾನು ಅರ್ಥವಾಗಿಲ್ಲವೋ ಅಥವಾ ಅರ್ಥ ಮಾಡಿಸುವಲ್ಲಿ ತಾನು ವಿಫಲನಾಗಿರುವೆನೋ ಎಂಬ ಅನುಮಾನ. ಇನ್ನೊಂದು ಕಡೆ, ಪತ್ನಿಯಲ್ಲಿ ಸಹಜವಾಗಿರುವ ಹೊಸ ಮನೆಯ ಆಸೆ. ಒಂದು ಬಗೆಯ ಗೊಂದಲದೊಂದಿಗೆ ಗೆಳೆಯ ನನ್ನ ಮುಂದಿದ್ದ. ಹೊಸ ಮನೆ ಮತ್ತು ತಾಯಿ ಎಂಬ ಈ ಎರಡು ಆಯ್ಕೆಯ ನಡುವೆ ಆತ ಸಂಕಟಪಡುತ್ತಿದ್ದ..
   ‘If u can Survive, you must remember that I love you very much- ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು..’
   ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಸಂದೇಶ ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಅಸಂಖ್ಯ ಮಂದಿ ಈ ಸಂದೇಶವನ್ನು ಶೇರ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ.
ವರ್ಷಗಳ ಹಿಂದೆ ಜಪಾನಿನಲ್ಲಿ ನಡೆದ ಭೂಕಂಪವು ದೊಡ್ಡದೊಂದು ಅವಶೇಷಗಳ ರಾಶಿಯನ್ನೇ ಸೃಷ್ಟಿಸಿತ್ತು. ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು ಮನೆಯೊಂದರ ಅವಶೇಷ ಗಳಡಿಯಲ್ಲಿ ಕವುಚಿ ಮಲಗಿರುವ ಓರ್ವ ಯುವತಿಯನ್ನು ಕಂಡರು. ಮುಂದಕ್ಕೆ ಬಾಗಿ, ಹಣೆಯನ್ನು ನೆಲಕ್ಕೆ ಒತ್ತಿ, ಎರಡೂ ಕೈಗಳನ್ನು ನೆಲಕ್ಕೆ ಹರಡಿ ಏನನ್ನೋ ಅಡಗಿಸಿಟ್ಟ ರೀತಿಯಲ್ಲಿ ಆ ಯುವತಿ ಬಿದ್ದಿದ್ದಳು. ಓರ್ವ ಸೈನಿಕ ಆಕೆಯನ್ನು ಮುಟ್ಟಿ ನೋಡಿದ. ದೇಹ ತಣ್ಣಗಾಗಿತ್ತು. ಆಕೆಯ ತಲೆ ಮತ್ತು ಬೆನ್ನಿನ ಮೇಲೆ ಮನೆಯ ಅವಶೇಷ ಬಿದ್ದಿದ್ದುವು. ಸೈನಿಕ ಅಲ್ಲಿಂದ ತುಸು ಮುಂದಕ್ಕೆ ಹೋದನಾದರೂ ಯುವತಿ ಏನನ್ನೋ ಅಪ್ಪಿ ಹಿಡಿದಿದ್ದಾಳೆ ಎಂದು ಅನುಮಾನವಾಗಿ ಮರಳಿ ಬಂದು ಯುವತಿಯನ್ನು ಪರೀಕ್ಷಿಸಿದ. ಬಳಿಕ ಜೋರಾಗಿ ಕೂಗಿ ಹೇಳಿದ,
   ‘ಗೆಳೆಯರೇ, ಇಲ್ಲಿ ಬನ್ನಿ, ಇಲ್ಲೊಂದು ಮಗುವಿದೆ. ಪವಾಡ, ಪವಾಡ..’
ಅವಶೇಷಗಳನ್ನು ಸರಿಸಿ ಯುವತಿಯನ್ನು ಮೇಲೆತ್ತಿದಾಗ, ಕಂಬಳಿಯಲ್ಲಿ ಸುತ್ತಿ ಮಲಗಿಸಿದ್ದ 3 ತಿಂಗಳ ಶಿಶು ಬೆಚ್ಚಗೆ ನಿದ್ರಿಸುತ್ತಿತ್ತು. ಆ ಯುವತಿ ತನ್ನ ಜೀವವನ್ನು ಬಲಿ ನೀಡಿ ಆ ಮಗುವನ್ನು ರಕ್ಷಿಸಿದ್ದಳು. ಬೀಳುತ್ತಿದ್ದ ಮನೆಯ ಅವಶೇಷಗಳಿಗೆ ತನ್ನ ದೇಹವನ್ನು ಒಡ್ಡಿ, ಮಗುವನ್ನು ರಕ್ಷಿಸಿರುವುದು ಸೈನಿಕರನ್ನು ದಂಗು ಬಡಿಸಿತ್ತು. ಮಗುವನ್ನುಸುತ್ತಿದ್ದ ಕಂಬಳಿಯನ್ನು ವೈದ್ಯರು ಕಿತ್ತಾಗ ಅದರೊಳಗೆ ಮೊಬೈಲ್ ಪೋನ್ ಒಂದು ಪತ್ತೆಯಾಗಿತ್ತು. ಮಾತ್ರವಲ್ಲ, ಆ ಪೋನ್‍ನ ಸ್ಕ್ರೀನ್‍ನಲ್ಲಿ ಒಂದು ಸಂದೇಶವೂ ಇತ್ತು. ಬಹುಶಃ, ಮರಣಕ್ಕೆ ಮುಖಾಮುಖಿಯಾದಾಗ, ಒಂದು ವೇಳೆ ತನ್ನ ಮಗು ಬದುಕಿ ಉಳಿದರೆ.. ಎಂಬ ನಿರೀಕ್ಷೆಯೊಂದಿಗೆ ತನ್ನ ಮುದ್ದು ಕಂದನಿಗೆ ತಾಯಿ ಕೊನೆಯದಾಗಿ ನೀಡಿದ ಸಂದೇಶವಾಗಿತ್ತದು- ‘ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ತುಂಬ ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು.’ ಅಂದಹಾಗೆ, ತಾಯಿ ಪ್ರೀತಿಯನ್ನು ಅರಿತುಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಂದೇಶ ಇನ್ನಾವುದಿದೆ ಹೇಳಿ?
   ಮೊನ್ನೆ ಕಣ್ತುಂಬಿಕೊಂಡು ಎದುರು ಕೂತ ಗೆಳೆಯನನ್ನು ನೋಡುವಾಗ ಜಪಾನಿನ ಆ ತಾಯಿಯ ನೆನಪಾಯಿತು.

Monday, December 16, 2013

ಹತ್ಯಾಕಾಂಡದ ಭಾಷೆಗೆ ಏಟು ಕೊಟ್ಟವರನ್ನು 'ಉಚಿತಕ್ಕೆ' ಸೀಮಿತಗೊಳಿಸುವುದೇಕೆ?

ಪಾಟ್ನ ಸ್ಪೋಟ ಸಂತ್ರಸ್ತರೊಂದಿಗೆ ಮೋದಿ 
   No, never.We don't need to get into the system to fight. We want to pressure the government and assert our rights as citizens. Everyone who has a dream need not get into politics - ಇಲ್ಲ, ಎಂದಿಗೂ ಇಲ್ಲ. ವ್ಯವಸ್ಥೆಯನ್ನು ಬದಲಿಸುವ ಧ್ಯೇಯದೊಂದಿಗೆ ನಾವು ನಡೆಸುತ್ತಿರುವ ಹೋರಾಟಕ್ಕೆ ಅದರ ಅಗತ್ಯ ಇಲ್ಲ. ನಾವು ಸರಕಾರದ ಮೇಲೆ ಒತ್ತಡ ಹಾಕಲು ಬಯಸುತ್ತೇವೆ ಮತ್ತು ಪ್ರಜೆಗಳೆಂಬ ನೆಲೆಯಲ್ಲಿ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಬಯಸುತ್ತೇವೆ. ವ್ಯವಸ್ಥೆಯನ್ನು ಬದಲಿಸಬೇಕೆಂಬ ಕನಸು ಹೊತ್ತ ಪ್ರತಿಯೋರ್ವರೂ ರಾಜಕೀಯ ಸೇರಬೇಕಾದ ಅಗತ್ಯ ಇಲ್ಲ..’
   ‘ರಾಜಕೀಯ ಸೇರುತ್ತೀರಾ..’ ಎಂಬ ದಿ ಹಿಂದೂ ಪತ್ರಿಕೆಯ ಪ್ರಶ್ನೆಗೆ 2011 ಆಗಸ್ಟ್ 31ರಂದು ಅರವಿಂದ್ ಕೇಜ್ರಿವಾಲ್ (ಇಟ್ ಈಸ್ ಎ ಲಾಂಗ್ ಜರ್ನಿ ಅಹೆಡ್) ಮೇಲಿನಂತೆ ಉತ್ತರಿಸಿದ್ದರು. ಆದರೆ 2012 ನವೆಂಬರ್ 26ರಂದು ಅವರು ಆಮ್ ಆದ್ಮಿಯನ್ನು ಹುಟ್ಟು ಹಾಕಿದರು. ಡಿಸೆಂಬರ್ 16ರಂದು ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯಿತು. ಹೊಸ ಕನಸು, ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಜನಸಾಮಾನ್ಯರಿಗೆ ತಟ್ಟುವ ಶೈಲಿಯಲ್ಲಿ ಮಂಡಿಸುತ್ತಿದ್ದ ಪಕ್ಷವೊಂದಕ್ಕೆ ಜನರನ್ನು ತಲುಪಲು ಇದಕ್ಕಿಂತ ಉತ್ತಮವಾದ ಇಶ್ಯೂ ಬೇರೊಂದಿರಲಿಲ್ಲ. ಹೀಗಿದ್ದೂ..
1. ಪ್ರತಿ ಕುಟುಂಬಕ್ಕೆ ಪ್ರತಿ ದಿನ 700 ಲೀಟರ್ ಉಚಿತ ನೀರು.
2. ಅಕ್ರಮ ಗುಡಿಸಲುಗಳ ಸಕ್ರಮ
3. ವಿದ್ಯುತ್ ದರದಲ್ಲಿ 50% ಕಡಿತ
4. ಅಗ್ಗದ ಜೆನೆರಿಕ್ ಔಷಧಗಳನ್ನು ಪ್ರತಿ ನಾಗರಿಕರಿಗೂ ಲಭ್ಯಗೊಳಿಸುವುದು.
5. ಶಾಲಾ-ಕಾಲೇಜುಗಳ ಶುಲ್ಕದಲ್ಲಿ ಇಳಿಕೆ
6. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ..
ಮುಂತಾದ ಅಗ್ಗದ ಘೋಷಣೆಗಳಿಂದಾಗಿಯೇ ಆಮ್ ಆದ್ಮಿ ದೆಹಲಿ ಚುನಾವಣೆಯಲ್ಲಿ 28 ಸ್ಥಾನ ಗಳಿಸಿದೆಯೆಂದು ವಾದಿಸುತ್ತಿರುವ ಬಿಜೆಪಿ ಬೆಂಬಲಿಗರ ವಿಶ್ಲೇಷಣೆ ಎಷ್ಟು ನಿಜ? ಅಗ್ಗದ ಘೋಷಣೆ ಗಳೇನು ಈ ದೇಶದ ನಾಗರಿಕರಿಗೆ ಹೊಸದೇ? ಕಾಂಗ್ರೆಸ್ ಮತ್ತು ಬಿಜೆಪಿ ಇಂಥ ಘೋಷಣೆಗಳನ್ನು ಎಷ್ಟು ಬಾರಿ ಬಳಸಿಲ್ಲ? ಅಲ್ಲದೇ ಇಂಥ ಘೋಷಣೆಗಳನ್ನು ಜನ ಇಷ್ಟ ಪಡುತ್ತಾರೆ ಎಂಬ ಬಗ್ಗೆ ಈ ಪಕ್ಷಗಳಿಗೆ ಭರವಸೆ ಇರುತ್ತಿದ್ದರೆ, ಅವೇನು ಬಿಡುತ್ತಿದ್ದುವೇ? 70 ಅಂಶಗಳನ್ನೊಳಗೊಂಡ ಕೇಜ್ರಿವಾಲರ ಚುನಾವಣಾ ಪ್ರಣಾಳಿಕೆಗೆ (ಮೆನಿಫೆಸ್ಟೋ) ವಿರುದ್ಧವಾಗಿ ಅವು 140 ಅಂಶಗಳ ಪ್ರಣಾಳಿಕೆಯನ್ನು ಹೊರ ತರುತ್ತಿರಲಿಲ್ಲವೇ? ದೇಶದ ರಾಜಕೀಯದಲ್ಲಿ ಅಗಾಧ ಅನುಭವವುಳ್ಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಉಚಿತ ವಿದ್ಯುತ್, ಉಚಿತ ಅಕ್ಕಿ, ನೀರು.. ಮುಂತಾದುವುಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ತಯಾರು ಗೊಳಿಸುವುದೇನು ಕಷ್ಟದ್ದಲ್ಲವಲ್ಲ? ಅಷ್ಟಕ್ಕೂ, ಆಮ್ ಆದ್ಮಿ ಎಂಬುದು ಆಗಷ್ಟೇ ಹುಟ್ಟಿದ ಕೂಸು. ಅದರ ಆಲೋಚನೆ, ಪ್ರಣಾಳಿಕೆಯೂ ಹೊಸದು. ಆದ್ದರಿಂದ, ಆ ಪಕ್ಷವನ್ನು ಒಪ್ಪಿ ಕೊಳ್ಳುವುದಕ್ಕಿಂತ ತಿರಸ್ಕರಿಸುವುದಕ್ಕೇ ಜನರಿಗೆ ಹೆಚ್ಚು ಕಾರಣಗಳಿದ್ದುವು. ಯಾಕೆಂದರೆ, ಯಾವುದೇ ಹೊಸ ಪಕ್ಷವು ಇತರ ಪ್ರಬಲ ಪಕ್ಷಗಳಿಗಿಂತ ಭಿನ್ನ ಮತ್ತು ಉಚಿತ ಅಂಶಗಳುಳ್ಳ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು ಈ ದೇಶದಲ್ಲಿ ಹೊಸತೇನೂ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಇಲ್ಲದ ಕೆಲವು ಅನುಕೂಲತೆಗಳು ಪ್ರಾದೇಶಿಕ ಪಕ್ಷಗಳಿಗೆ ಇರುತ್ತವೆ. ಅದರ ವ್ಯಾಪ್ತಿ ಸೀಮಿತವಾದದ್ದು. ಗುರಿಯೂ ಸೀಮಿತವೇ. ರಾಜಕೀಯವಾಗಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಅವು ಜನಪ್ರಿಯ ಘೋಷಣೆಗಳ ಮೊರೆ ಹೋಗಬೇಕಾಗುತ್ತದೆ ಎಂಬ ಅರಿವು ಜನರಲ್ಲೂ ಇರುತ್ತದೆ. ಆದ್ದರಿಂದಲೇ, ಜನರು ಅಂಥ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಲ್ಲದೇ, ಅಂಥ ಪಕ್ಷಗಳಿಗೆ ಓಟು ಹಾಕುವುದರಿಂದ ಮತ ಹಂಚಿ ಹೋಗಿ ಅಯೋಗ್ಯರು ಆರಿಸಿ ಬರುತ್ತಾರೆ ಎಂಬ ಭೀತಿ ಮತದಾರರಲ್ಲಿ ಯಾವಾಗಲೂ ಇರುತ್ತದೆ. ಹೀಗಿರುವಾಗ, ಆಮ್ ಆದ್ಮಿಯ ಗೆಲುವನ್ನು ಕೇವಲ ಜನಪ್ರಿಯ ಘೋಷಣೆಗಳ ಗೂಟಕ್ಕೆ ಕಟ್ಟಿ ಹಾಕಿ ವಿಶ್ಲೇಷಣೆ ನಡೆಸುವುದು ಆತ್ಮವಂಚನೆ ಆಗಲಾರದೇ? ದೆಹಲಿಯಂಥ ಶಿಕ್ಷಿತ, ವಿದ್ಯಾವಂತ ಮತ್ತು ‘ಉಚಿತ' ಕೊಡುಗೆಗಳನ್ನು ಸದಾ ದ್ವೇಷಿಸುವ ಕಾರ್ಪೋ ರೇಟ್ ವಲಯದ ಮಾಧ್ಯಮಗಳು ಗಿಜಿಗುಡುತ್ತಿರುವ ರಾಜ್ಯವೊಂದರ ಮಂದಿ ಉಚಿತವನ್ನೇ ಬಯಸುವಷ್ಟು ಸಿನಿಕರೇ, ಅಂಥ ಭರವಸೆಗಳನ್ನು ನಂಬುವಷ್ಟು ದಡ್ಡರೇ..
ಇಂಡಿಯನ್ ಮುಜಾಹಿದೀನ್
ಪಾಕಿಸ್ತಾನ
ಭ್ರಷ್ಟಾಚಾರ
ಹತ್ಯಾಕಾಂಡ
ಕೋಮುವಾದ
   ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವುದು ಬಹುತೇಕ ಇಂಥ ವಿಷಯಗಳಿಂದಲೇ. ಬಿಜೆಪಿಯ ಚುನಾವಣಾ ಭಾಷಣಗಳಲ್ಲಿ ಯಾವಾಗಲೂ ಪಾಕಿಸ್ತಾನದ ಪ್ರಸ್ತಾಪವಾಗುತ್ತದೆ. ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದೀನ್‍ಗಳ ಜಪ ನಡೆಯುತ್ತದೆ. ಹಾಗಂತ, ಕಳೆದ 60 ವರ್ಷಗಳಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಬಾಂಬು ಸ್ಫೋಟಗಳಿಂದ ಸಾವಿಗೀಡಾಗಿದ್ದಾರೆ ಮತ್ತು ಕೋಮು ಗಲಭೆಗಳಿಂದಾಗಿ ಸಾವಿಗೀಡಾದವರ ಸಂಖ್ಯೆಯ ಮುಂದೆ ಇವರು ಎಷ್ಟು ಶೇಕಡಾ ಎಂದು ಅದು ಹೇಳುವುದೇ ಇಲ್ಲ. ಬಾಂಬು ಸ್ಫೋಟಗಳಿಗೆ ಬಲಿಯಾದ ಕುಟುಂಬಗಳ ಕಣ್ಣೀರ ಕತೆಯನ್ನು ಬಿಜೆಪಿ ಅಸಂಖ್ಯ ವೇದಿಕೆಗಳಲ್ಲಿ ಹೇಳಿದೆ. ಅಂಥ ಕುಟುಂಬಗಳ ಮನೆಗೆ ತೆರಳಿ ಅದರ ನಾಯಕರು ಸಹಾಯ ಧನ ವಿತರಿಸಿದ್ದಾರೆ. ಇತ್ತೀಚೆಗೆ ನಡೆದ ಪಾಟ್ನಾ ಸ್ಫೋಟದಲ್ಲಿ ಸಂತ್ರಸ್ತರಾದ ಮಹಿಳೆಯೊಂದಿಗೆ ನರೇಂದ್ರ ಮೋದಿ ಮೊಬೈಲ್‍ನಲ್ಲಿ ಸಂಪರ್ಕಿಸಿ ಸಾಂತ್ವನ ಹೇಳಿದ್ದನ್ನು ಟಿ.ವಿ. ಚಾನೆಲ್‍ಗಳು ನೇರ ಪ್ರಸಾರ ಮಾಡಿದ್ದುವು. ಆದರೆ, ಕೋಮುಗಲಭೆಗಳ ಸಂತ್ರಸ್ತರ ಬಗ್ಗೆ ಬಿಜೆಪಿ ಮಾತಾಡುವುದೇ ಇಲ್ಲ. ಅವರ ಕಣ್ಣೀರ ಕತೆಗಳನ್ನು ಅದು ವೇದಿಕೆಗಳಲ್ಲಿ ಹಂಚಿಕೊಳ್ಳುವುದೂ ಇಲ್ಲ. ಪಾಟ್ನಾ ಸ್ಫೋಟದ ಬೆನ್ನಿಗೇ ಮುಝಫರ್ ನಗರದಲ್ಲಿ ಕೋಮು ಹತ್ಯಾಕಾಂಡ ನಡೆಯಿತು. ಮುಸ್ಲಿಮರನ್ನೇ ಗುರಿಯಾಗಿಸಿ ನಡೆದ ಈ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸಂತ್ರಸ್ತರಾದರು. ಪಾಟ್ನಾ ಪ್ರಕರಣದಂತೆ ಮೋದಿಯಾಗಲಿ, ಅವರ ಆಪ್ತ ಅಮಿತ್ ಷಾ ಆಗಲಿ ಈ ಸಂತ್ರಸ್ತರನ್ನು ಭೇಟಿಯಾದದ್ದಾಗಲಿ, ಮೊಬೈಲ್‍ನಲ್ಲಿ ಸಂಪರ್ಕಿಸಿದ್ದಾಗಲಿ ಯಾವುದೂ ನಡೆಯಲಿಲ್ಲ. ಕೋಮು ಗಲಭೆಯಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ, ಅವರಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎಂಬ ಮಾಹಿತಿಯನ್ನು ಅದು ಈ ವರೆಗೂ ಈ ದೇಶದ ನಾಗರಿಕರೊಂದಿಗೆ ಹಂಚಿಕೊಂಡಿಲ್ಲ. ಆದರೆ ಭಯೋತ್ಪಾದನಾ ಪ್ರಕರಣಗಳ ಬಗ್ಗೆ, ಅದು ನಡೆದ ದಿನಾಂಕ, ಪ್ರದೇಶ, ಸ್ಫೋಟಗಳಿಗೆ ಬಳಸಲಾದ ಉಪಕರಣಗಳು, ಆರೋಪಿಗಳ ಹೆಸರುಗಳನ್ನು ಅಸಂಖ್ಯ ಬಾರಿ ವಿವಿಧ ವೇದಿಕೆ, ಪತ್ರಿಕೆಗಳ ಮೂಲಕ ಅದು ಹೇಳುತ್ತಲೇ ಬಂದಿದೆ. ಬಾಬರಿ ಮಸೀದಿಯನ್ನು ಅದು ಚುನಾವಣೆಗಾಗಿ ಬಳಸಿಕೊಂಡಿತು. ಗುಜರಾತನ್ನು ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿತು. ಅದರ ಪ್ರಧಾನಿ ಅಭ್ಯರ್ಥಿ ಅಥವಾ ಪಕ್ಷದ ನೇತೃತ್ವ ಸ್ಥಾನದಲ್ಲಿ ಗುರುತಿಸುವವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹತ್ಯಾಕಾಂಡದ ಆರೋಪಿಗಳೇ. ಚುನಾವಣೆ ಹತ್ತಿರ ಬರುವಾಗಲೆಲ್ಲ ಅದರ ಪೋಷಕ ಸಂಘಟನೆಗಳು ರಾಮನಿಗೆ ಸಂಬಂಧಿಸಿ ಅಥವಾ ಹಿಂದೂ ಧರ್ಮಕ್ಕೆ ಸಂಬಂಧಿಸಿ ರಾಲಿಗಳನ್ನು ಹಮ್ಮಿಕೊಳ್ಳುತ್ತವೆ. ಸಭೆಗಳನ್ನು ಏರ್ಪಡಿಸುತ್ತವೆ. ಒಂದು ರೀತಿಯಲ್ಲಿ ಬಿಜೆಪಿ ಈ ದೇಶದಲ್ಲಿ ಉದ್ದಕ್ಕೂ ಚುನಾವಣೆಯನ್ನು ಎದುರಿಸಿದ್ದು, ಎದುರಿಸುತ್ತಿರುವುದು ಧರ್ಮ ಮತ್ತು ಕೋಮುವಾದದ ಆಧಾರದಲ್ಲೇ. ಹತ್ಯಾಕಾಂಡಗಳು ಮತ್ತು ಬಾಂಬ್ ಸ್ಫೋಟಗಳ ನೆರವನ್ನು ಪಡೆದುಕೊಂಡೇ ಅದು ಚುನಾವಣೆಯಲ್ಲಿ ಸೆಣಸಿದೆ, ಸೆಣಸುತ್ತಿದೆ. ಇನ್ನೊಂದು ಕಡೆ, ಕಾಂಗ್ರೆಸ್‍ನ ಚರಿತ್ರೆಯೂ ಭಿನ್ನವಾಗಿಲ್ಲ. ಭ್ರಷ್ಟಾಚಾರದ ಆರೋಪ ಪಟ್ಟಿಯನ್ನು ಕುತ್ತಿಗೆಗೆ ಕಟ್ಟಿಕೊಂಡೇ ಅದರ ಅಭ್ಯರ್ಥಿಗಳು ಚುನಾವಣೆಗಿಳಿಯುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಮಾತಾಡುತ್ತಾ ರಾಜ ದರ್ಬಾರು ನಡೆಸುತ್ತಾರೆ. ಹತ್ಯಾಕಾಂಡಗಳ ಕಳಂಕವೂ ಅದರ ಬೆನ್ನಿಗಿದೆ. ಕಲ್ಯಾಣ ರಾಷ್ಟ್ರದ ಬಗ್ಗೆ ಅದು ಪ್ರತಿ ಚುನಾವಣೆಯಲ್ಲೂ ಮಾತಾಡುತ್ತದೆ. ಜನಸಾಮಾನ್ಯರ ಸಂಕಟಗಳನ್ನೊಳಗೊಂಡ ಪ್ರಣಾಳಿಕೆಯನ್ನೂ ಬಿಡುಗಡೆಗೊಳಿಸುತ್ತದೆ. ಜೊತೆಗೇ ನ್ಯಾಯ ವಿತರಣೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶವನ್ನೀಯುವ ಕಾನೂನನ್ನೂ ರಚಿಸುತ್ತದೆ. ಇಂಥ ಸ್ಥಿತಿಯಲ್ಲಿ, ಇವ್ಯಾವುವೂ ಗೋಚರಿಸದ ಮತ್ತು ಅಚ್ಚ ಮನುಷ್ಯರ ಭಾಷೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಮಾತಾಡಿದ ಆಮ್ ಆದ್ಮಿಯನ್ನು ಜನರು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡರು ಎಂದು ನಾವೇಕೆ ಪರಿಗಣಿಸಬಾರದು? ಆಮ್ ಆದ್ಮಿಯ ಆಲೋಚನೆಗಳು ಹೊಸತು. ಸಾಮಾನ್ಯವಾಗಿ ವೇದಿಕೆಗಳಲ್ಲಿ ಮಂಡಿಸುವ, ಪತ್ರಿಕೆಗಳ ಕಾಲಂಗಳಲ್ಲಿ ಪ್ರತಿಪಾದಿಸುವ ಚಿಂತನೆಗಳನ್ನು ಕೇಜ್ರಿವಾಲ್ ಪ್ರಾಯೋಗಿಕಗೊಳಿಸುವ ಬಗ್ಗೆ ಮಾತಾಡಿದ್ದರು. ಅಂಥ ಚಿಂತನೆಗಳನ್ನು ಬುದ್ಧಿಜೀವಿಗಳ ಬಡಬಡಿಕೆ ಎಂದೇ ರಾಜಕೀಯ ಪಕ್ಷಗಳು ತಿರಸ್ಕರಿಸಿದ್ದುವು. ವೈದ್ಯರು, ಕವಿಗಳು, ಪತ್ರಕರ್ತರು, ವಕೀಲರು, ವಿದ್ಯಾರ್ಥಿಗಳು, ನೌಕರರು.. ಹೀಗೆ ಒಂದು ಹೊಸ ಬಗೆಯ ತಂಡವನ್ನು ಕೇಜ್ರಿವಾಲ್ ಕಟ್ಟಿದರು. ಬಾಂಬ್ ಸ್ಫೋಟದ, ಹತ್ಯಾಕಾಂಡದ ಭಾಷೆಯಲ್ಲಿ ಅವರು ಮಾತಾಡಲಿಲ್ಲ. ಧರ್ಮವನ್ನು ದುರುಪಯೋಗಿಸದೆಯೇ ಚುನಾವಣೆಯಲ್ಲಿ ಸೆಣಸಬಹುದು ಎಂಬ ವಾತಾವರಣವನ್ನು ಅವರು ಹುಟ್ಟು ಹಾಕಿದರು. ಬಹುಶಃ, ರಾಷ್ಟ್ರಮಟ್ಟದ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳ ಕೇಂದ್ರ ಕಚೇರಿಗಳಿರುವ ದೆಹಲಿಯಲ್ಲಿ ರಾಜಕಾರಣಿಯೇ ಅಲ್ಲದ ಓರ್ವ ವ್ಯಕ್ತಿ ಮತ್ತು ಆತನ ತಂಡವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವುದು ಸುಲಭದ ಮಾತಲ್ಲ. ಮಾಧ್ಯಮಗಳನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇರುವಂತೆಯೇ ಪ್ರಬಲ ರಾಜಕಾರಣಿಗಳನ್ನು ಎದುರಿಸುವುದಕ್ಕೆ ಬುದ್ಧಿವಂತಿಕೆಯ ಕಾರ್ಯತಂತ್ರ ರೂಪಿಸುವ ಅಗತ್ಯವೂ ಇರುತ್ತದೆ. ಆಮ್ ಆದ್ಮಿ ಇದನ್ನು ಮೆಟ್ಟಿ ನಿಂತಿದೆಯೆಂದರೆ ಇದು ಯಾವುದರ ಸೂಚನೆ?
   ನಿಜವಾಗಿ, ಧರ್ಮವನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ದುರುಪಯೋಗಪಡಿಸದೆಯೇ ಚುನಾವಣೆಯನ್ನು ಗೆಲ್ಲಬಹುದು ಎಂಬ ಒಳ್ಳೆಯ ಸಂದೇಶವನ್ನು ಆಮ್ ಆದ್ಮಿ ರವಾನಿಸಿದೆ. ಭವಿಷ್ಯದ ದೃಷ್ಟಿಯಿಂದ ಇದು ಶುಭ ಸೂಚನೆ. ಬಿಜೆಪಿಯ ಪ್ರಬಲ ಕೋಮುವಾದ ಮತ್ತು ಕಾಂಗ್ರೆಸ್‍ನ ಮೃದು ಕೋಮುವಾದದ ನಡುವೆ ಇವತ್ತು ನಡೆಯುತ್ತಿರುವ ಚುನಾವಣಾ ಹೋರಾಟವನ್ನು ಕೇಜ್ರಿವಾಲ್ ಆಮ್ ಆದ್ಮೀಕರಣಗೊಳಿಸಿದ್ದಾರೆ. ಅವರಿಗೆ ಎಷ್ಟು ಸ್ಥಾನ ಸಿಕ್ಕಿತು ಎಂಬುದು ಮುಖ್ಯ ಅಲ್ಲ. ವಿದ್ಯಾವಂತರು, ಶಿಕ್ಷಿತರಿರುವ ರಾಜ್ಯವೊಂದರಲ್ಲಿ ಕೇವಲ ಜನಪರ ವಿಷಯಗಳನ್ನೆತ್ತಿಕೊಂಡು ಚುನಾವಣೆಗಿಳಿದ ಆಮ್ ಆದ್ಮಿಯ ಯಶಸ್ಸನ್ನು ಕೋಮುವಾದಿ ರಾಜಕಾರಣದ ವಿರುದ್ಧದ ಯಶಸ್ಸೆಂದೇ ಪರಿಗಣಿಸಬೇಕು. ಭವಿಷ್ಯದಲ್ಲಿ, ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಭಾಷಣಗಳು ಕೋಮುವಾದಿ ರಹಿತವಾಗುವುದಕ್ಕೆ ಈ ಯಶಸ್ಸು ಪ್ರಚೋದಕವಾಗುವುದಕ್ಕೆ ಅವಕಾಶ ಇದೆ. ಮುಖ್ಯವಾಗಿ ಜನಪರ ಅಜೆಂಡಾದೊಂದಿಗೆ ತಳಮಟ್ಟದ ಜನರನ್ನು ತಲುಪಲು ಪ್ರಯತ್ನಿಸಿದರೆ ಅಂಥ ಪಕ್ಷ
ಗಳನ್ನು ಜನರು ಗೆಲ್ಲಿಸುತ್ತಾರೆ ಎಂಬುದಕ್ಕೆ ಆದ್ಮಿ ಒಂದು ಒಳ್ಳೆಯ ಉದಾಹರಣೆ.

Tuesday, December 10, 2013

ಲಜ್ಜೆಯನ್ನು ಕಸಿದುಕೊಂಡವರೇ, ಈ ದೌರ್ಜನ್ಯದ ಪಾಪವನ್ನೇಕೆ ಹೊತ್ತುಕೊಳ್ಳುತ್ತಿಲ್ಲ?

ರಾಧಿಕಾ ಆಪ್ಟೆ, ಅರಣ್ಯ ಕೌರ್, ಗೀತಾಂಜಲಿ ಥಾಪಾ ಮತ್ತು ಸಂಧ್ಯಾ ಮೃದುಲ್ ಅಭಿನಯಿಸಿರುವ 22 ನಿಮಿಷಗಳ ಕಿರು ಚಿತ್ರವೊಂದು ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಅಸಂಖ್ಯ ಮಂದಿ ಈಗಾಗಲೇ ಇದನ್ನು ವೀಕ್ಷಿಸಿದ್ದಾರೆ. ಲೈಂಗಿಕ ದೌರ್ಜನ್ಯವು ಎಗ್ಗಿಲ್ಲದೇ ನಡೆಯುತ್ತಿರುವ ದೇಶವೊಂದರಲ್ಲಿ ಹೆಣ್ಣು ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಯಾವೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕು.. ಎಂಬುದರ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ಸಾಕಷ್ಟು ಮಂದಿ ಈ ಚಿತ್ರದ ಸರಿ-ತಪ್ಪುಗಳ ಬಗ್ಗೆ ಚರ್ಚಿಸಿದ್ದಾರೆ. ವೀಕ್ಷಕರ ಪ್ರತಿಕ್ರಿಯೆಗಳು ಎಷ್ಟು ಜೋರಾಗಿತ್ತೆಂದರೆ, ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್‍ರೇ ಸ್ವತಃ ಸ್ಪಷ್ಟನೆ ಕೊಡುವಷ್ಟು. ಈ ದೇಶ ಸದ್ಯ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೊಂದಕ್ಕೆ 22 ನಿಮಿಷಗಳಲ್ಲಿ ಪರಿಹಾರವೊಂದನ್ನು ಕಟ್ಟಿ ಕೊಟ್ಟ ಅನುರಾಗ್ ಕಶ್ಯಪ್‍ರನ್ನು ಮೃದುವಾಗಿ ಚುಚ್ಚಿದ, ತರಾಟೆಗೆತ್ತಿಕೊಂಡವರು ಒಂದು ಕಡೆಯಾದರೆ, ಅವರನ್ನು ಬೆಂಬಲಿಸಿ, ಆ ಪರಿಹಾರವನ್ನು ಮೆಚ್ಚಿ ಕೊಂಡವರು ಇನ್ನೊಂದು ಕಡೆ. ಈ ಪರಿಹಾರದಂತೆ ನಮ್ಮನ್ನು ನಾವು ತಯಾರುಗೊಳಿಸುತ್ತೇವೆ ಅಂತ ಹೇಳಿಕೊಂಡ ಯುವತಿಯರು ಅನೇಕ. ಹಾಗಂತ,
   ‘ದಾಟ್  ಡೇ ಆಫ್ಟರ್ ಎವರಿ ಡೇ..' ಎಂಬ ಈ ಕಿರುಚಿತ್ರದಲ್ಲಿ ಸೂಚಿಸಲಾಗಿರುವ ಪರಿಹಾರವನ್ನು ಒಂದೊಮ್ಮೆ ನೀವೂ ಆಲೋಚಿಸಿರಬಹುದು.
ಮೂವರು ಮಹಿಳಾ ಉದ್ಯೋಗಿಗಳು. ಮನೆಯ ಒಳಗಿನ ಅಡುಗೆ ಮತ್ತಿತರ ಕೆಲಸಗಳನ್ನು ಮಾಡುತ್ತಲೇ ಮನೆಯ ಹೊರಗೂ ದುಡಿಯಬೇಕಾದ ಒತ್ತಡದಲ್ಲಿ ಇವರ ಬದುಕು ಸಾಗುತ್ತಿರುತ್ತದೆ. ಓರ್ವಳು ಅಡುಗೆ ಮನೆಯಲ್ಲಿ ಚಹಾ ತಯಾರಿಸುತ್ತಿರುತ್ತಾಳೆ. ಹೊರಗೆ ಮನೆಯ ಯಜಮಾನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೈಂಗಿಕ ದೌರ್ಜನ್ಯಗಳ ಸಾಲು ಸಾಲು ಸುದ್ದಿಗಳನ್ನು ಇವಳಿಗೆ ಕೇಳಿಸುವಂತೆ ಓದುತ್ತಿರುತ್ತಾನೆ. ಮನೆಯ ಹೊರಗಿನ ವಾತಾವರಣ ಹೆಣ್ಣಿಗೆ ಎಷ್ಟು ಅಪಾಯಕಾರಿಯಾಗಿದೆ ಎಂಬ ಸೂಚನೆಯನ್ನು ಆಕೆಗೆ ರವಾನಿಸುವ ವಿಧಾನ ಇದು. ಇನ್ನೊಂದು ಮನೆಯಲ್ಲೂ ಇದೇ ಪರಿಸ್ಥಿತಿ. ಆ ಮನೆಯ ಮಹಿಳೆ ಕೆಲಸಕ್ಕೆ ಹೊರಡುವಾಗ 5 ವರ್ಷದ ಬಾಲೆಯ ಮೇಲೆ ಅತ್ಯಾಚಾರವಾದ ಸುದ್ದಿ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುತ್ತದೆ. ವೀಕ್ಷಿಸುತ್ತಿರುವ ಅತ್ತೆಗೆ ಸೊಸೆಯ ಸುರಕ್ಷಿತತೆಯ ಬಗ್ಗೆ ದಿಗಿಲಾಗುತ್ತದೆ. ಹೀಗೆ ಬೇರೆ ಬೇರೆ ಮನೆಗಳಲ್ಲಿ ವಾಸಿಸುವ ಮೂವರು ಮಹಿಳೆಯರೂ ನಿಗದಿತ ಸಮಯದಲ್ಲಿ ಒಂದೇ ಕಡೆ ಸೇರಿ ಒಟ್ಟಾಗಿ ಕೆಲಸಕ್ಕೆ ಹೋಗುತ್ತಾರೆ. ಕಟ್ಟಡದ ಮೇಲಿನಿಂದ ಪೋಲಿಗಳು ಅವರ ವೀಡಿಯೋ ತೆಗೆಯುತ್ತಾರೆ. ತುಸು ದೂರ ಹೋದಾಗ ಕಟ್ಟುಮಸ್ತಾದ ಯುವಕರು ಚುಡಾವಣೆಗಿಳಿಯುತ್ತಾರೆ. ಕೊನೆಗೆ ಓರ್ವಳನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ಒಂದು ಕಡೆ ಅಸಹಾಯಕತೆ, ಇನ್ನೊಂದು ಕಡೆ ಕೆಲಸದ ಅನಿವಾರ್ಯತೆ.. ಓರ್ವಳಲ್ಲಿ ಕಣ್ಣೀರು ಹರಿಯುತ್ತದೆ. ಹೀಗಿರುವಾಗ, ಈ ದೌರ್ಜನ್ಯವನ್ನು ಎದುರಿಸುವ ಬಗ್ಗೆ ಉಳಿದಿಬ್ಬರು ಆಕೆಯಲ್ಲಿ ಧೈರ್ಯ ತುಂಬುತ್ತಾರೆ. ಸ್ವರಕ್ಷಣೆಯ ಪಾಠ ಹೇಳಿಕೊಡುತ್ತಾರೆ. ಅದರಂತೆ ಈಕೆ ಅವರ ಜೊತೆ ಸ್ವರಕ್ಷಣೆಯ ಕಲೆಗಳನ್ನು ಕರಗತ ಮಾಡಿಕೊಳ್ಳುತ್ತಾಳೆ. ವ್ಯಾಯಾಮ, ತರಬೇತಿಗಳು ನಡೆಯುತ್ತವೆ. ಅಂತಿಮವಾಗಿ, ಒಂದು ದಿನ ಯುವಕರು ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ, ಮೂವರೂ ತಮ್ಮ ಮುಷ್ಠಿ ಹೊಡೆತಗಳ ಮೂಲಕ ಎದುರಿಸುತ್ತಾರೆ. ಹೆಣ್ಣನ್ನು ಅಬಲೆ ಅಂದುಕೊಂಡಿದ್ದ ಪುಂಡರು ಈ ಮಹಿಳೆಯರ ಪ್ರತಿರೋಧವನ್ನು ಎದುರಿಸಲಾಗದೇ ನೆಲಕ್ಕುರುಳುತ್ತಾರೆ..’
   ಮಹಿಳಾ ಬ್ಯಾಂಕು
   ಮಹಿಳಾ ಟ್ಯಾಕ್ಸಿಗಳು
ಮಹಿಳೆಯರನ್ನು ಸುರಕ್ಷಿತಗೊಳಿಸುವುದಕ್ಕಾಗಿ ಜಾರಿಗೊಳ್ಳುತ್ತಿರುವ ಹಲವು ಯೋಜನೆಗಳಲ್ಲಿ ಇವು ಕೇವಲ ಎರಡು ಮಾತ್ರ. ದೆಹಲಿಯಲ್ಲಿ ಈಗಾಗಲೇ ಮಹಿಳಾ ಬ್ಯಾಂಕು ಆರಂಭಗೊಂಡಿದೆ. ಮಹಿಳೆಯರೇ ಚಲಾಯಿಸುವ ಟ್ಯಾಕ್ಸಿಗಳು ಕೇರಳದಲ್ಲಿ ರಸ್ತೆಗಿಳಿದಿವೆ. ಇದರ ಜೊತೆಗೇ, ಹೆಣ್ಣನ್ನು ಪುರುಷರಿಂದ ಪ್ರತ್ಯೇಕಗೊಳಿಸುವ ವಿಧಾನವನ್ನು ಅನಾಗರಿಕವೆಂದು ಖಂಡಿಸಲಾಗುತ್ತಿದೆ! ಹೆಣ್ಣಿನ ಉಡುಪು, ಸ್ವಚ್ಛಂದ ಸಂಸ್ಕøತಿ, ಮದ್ಯ.. ಮುಂತಾದುವುಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದು ಹೇಳುವವರು ಮತ್ತು ಅದನ್ನು ಅಲ್ಲಗಳೆಯುವವರು ಸಮಾಜದಲ್ಲಿ ಧಾರಾಳ ಇದ್ದಾರೆ. ನಿಜವಾಗಿ, ಹೆಣ್ಣು ಈ 21ನೇ ಶತಮಾನದ ಅಂತ್ಯದಲ್ಲಿ ಭೂಮಿಗೆ ದಿಢೀರ್ ಆಗಿ ಇಳಿದು ಬಂದ ಹೊಸ ಜೀವಿಯೇನೂ ಅಲ್ಲ. ಗಂಡಿನ ಜೊತೆಜೊತೆಗೇ ಹೆಣ್ಣೂ ಇದ್ದಾಳೆ.  ಆದರೂ ಈ ಹಿಂದೆಂದೂ ಆಗದಷ್ಟು ಅಥವಾ ಸುದ್ದಿಗೆ ಬರದಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಇವತ್ತು ಕೇಳಿ ಬರುತ್ತಿರುವುದೇಕೆ? ಇಂಗ್ಲೆಂಡಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ವರದಿಯನ್ನು ಸಲ್ಲಿಸಲಾಯಿತು. ಮಾತ್ರವಲ್ಲ, ಆ ವರದಿಯನ್ನು ಓದಿ ಆ ದೇಶ ತೀವ್ರ ಆಘಾತವನ್ನು ವ್ಯಕ್ತಪಡಿಸಿತು. (ದಿ ಹಿಂದೂ ನ. 28, 2013) ಫ್ರಾನ್ಸ್ ನಲ್ಲೂ ಇದೇ ಸ್ಥಿತಿಯಿದೆ. ಈ ನೆಲ ಹೆಣ್ಣಿಗೆ ಸುರಕ್ಷಿತವಾಗಿಲ್ಲ ಎಂದು ಘೋಷಿಸಿ ಬಿಡುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಏನು ಕಾರಣ, ಯಾರು ಕಾರಣ? ಕರಾಟೆಯ ಪಟ್ಟುಗಳನ್ನು ಕಲಿತುಕೊಳ್ಳುವುದರಿಂದ ಹೆಣ್ಣು ಸುರಕ್ಷಿತಳಾಗಬಲ್ಲಳೇ? ಅವಳಿಂದ ಪೆಟ್ಟು ತಿಂದ ದೌರ್ಜನ್ಯಕೋರರು ಹಗೆ ತೀರಿಸುವುದಕ್ಕೆ ಮುಂದಾಗಲಾರರೆಂದು ಹೇಗೆ ಹೇಳುವುದು? ಸ್ವರಕ್ಷಣೆಯ ಪಟ್ಟುಗಳನ್ನು ಕಲಿತುಕೊಂಡ ಒಂಟಿ ಹೆಣ್ಣಿಗೆ ಪುಂಡರ ಗುಂಪು ಎದುರಾದರೆ ಏನಾಗಬಹುದು? ಏಟಿಗೆ-ಪ್ರತಿಯೇಟು ಎಂಬುದು ಎಷ್ಟರ ಮಟ್ಟಿಗೆ ಪ್ರಾಯೋಗಿಕ ಅನ್ನಿಸಬಹುದು? ‘ನಿನ್ನನ್ನು ನೀನೇ ರಕ್ಷಿಸಿಕೊ, ನೀನೇ ಸಜ್ಜುಗೊಳ್ಳು, ತೋಳು ಗಟ್ಟಿಗೊಳಿಸು.. ಎಂದೆಲ್ಲ ಹೆಣ್ಣಿಗೆ ಬೋಧಿಸುವುದು ಎಷ್ಟು ಸರಿ? ಆಕೆಯಲ್ಲಿ ಸುರಕ್ಷಿತತೆಯನ್ನು ಖಾತರಿಗೊಳಿಸುವ ಹೊಣೆಯಾರದು.. ಇಂಥ ಹತ್ತಾರು ಪ್ರಶ್ನೆಗಳನ್ನು That  Day After Every Day  ಕಿರುಚಿತ್ರ ಹುಟ್ಟು ಹಾಕುತ್ತದಾದರೂ ತೀರಾ ಅಸಹಾಯಕ ಸ್ಥಿತಿಯಲ್ಲಿ ಕರಾಟೆಯ ಪಟ್ಟುಗಳು ಹೆಣ್ಣಿಗೆ ಮಾನಸಿಕ ಬಲವನ್ನು ತಂದುಕೊಡಬಲ್ಲುದು ಅನ್ನುವುದನ್ನೂ ಒಪ್ಪಬೇಕಾಗುತ್ತದೆ. ಇದೇ ವೇಳೆ, ಪ್ರತಿ ಮೂವರಲ್ಲಿ ಇಬ್ಬರು ಪತ್ರಕರ್ತೆಯರು ಲೈಂಗಿಕ ದೌರ್ಜನ್ಯದ ಅನುಭವ ಪಡೆದಿರುತ್ತಾರೆ ಎಂದು ಕಳೆದವಾರ ಪ್ರಕಟವಾದ ಸಮೀಕ್ಷೆಯೊಂದು (ದಿ ಹಿಂದೂ ಡಿ. 4, 2013) ಬಹಿರಂಗಪಡಿಸಿದೆ. ಸಮೀಕ್ಷೆಗೆ ಒಳಪಡಿಸಿದ 822 ಪತ್ರಕರ್ತೆಯರಲ್ಲಿ 530 ಪತ್ರಕರ್ತೆಯರು ಸಂದರ್ಶಕರಿಂದ, ಬಾಸ್‍ನಿಂದ ಮತ್ತು ಕೆಲಸದ ಸಮಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ತಿಳುವಳಿಕೆಯಿರುವ, ಹೆಣ್ಣನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರಿರುವ ಕ್ಷೇತ್ರದಲ್ಲೇ ಇಷ್ಟು ವ್ಯಾಪಕ ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆಯೆಂದಾದರೆ, ಅದಕ್ಕೆ ಕರಾಟೆ ಕಲಿಕೆಯು ಪರಿಹಾರವಾಗುವುದಕ್ಕೆ ಸಾಧ್ಯವೇ?
   ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ 50 ವರ್ಷಗಳ ಹಿಂದೆ ಯಾವ ಬಗೆಯ ಸಂಬಂಧ, ಸಲುಗೆ ಇತ್ತೋ ಇವತ್ತು ಹಾಗಿಲ್ಲ. ಇಂದಿನ ಮತ್ತು ಹಿಂದಿನ ಸಿನಿಮಾಗಳೇ ಇದಕ್ಕೆ ಅತ್ಯುತ್ತಮ ಪುರಾವೆ. ಆದರೆ ಬರಬರುತ್ತಾ ಅಂತರ ಕಡಿಮೆಯಾಯಿತು. ಹೆಣ್ಣನ್ನು ವ್ಯಾಖ್ಯಾನಿಸುವ ರೀತಿಗಳು ಬದಲಾದುವು. ಈ ಹಿಂದೆ ಹೆಣ್ಣಿನ ಪಾತ್ರವನ್ನು ಪುರುಷನೇ ಮಾಡುತ್ತಿದ್ದ. ಶಾಲಾ ದಿನಗಳಲ್ಲಿ ಆಕಸ್ಮಿಕವಾಗಿ ಹೆಣ್ಣಿನ ಸ್ಪರ್ಶವಾದರೂ ಅದು ಆ ದಿನದ ಬ್ರೇಕಿಂಗ್ ನ್ಯೂಸ್. ಬಳಿಕ ಹೆಣ್ಣಿನ ಪಾತ್ರವನ್ನು ಹೆಣ್ಣೇ ಮಾಡತೊಡಗಿದಳು. ಹೆಣ್ಣಿನ ಕುರಿತಂತೆ ಹೊಸ ಹೊಸ ಪರಿಕಲ್ಪನೆಗಳು, ವ್ಯಾಖ್ಯಾನಗಳು ಬರತೊಡಗಿದುವು. ಮಾರುಕಟ್ಟೆ ಆಧಾರಿತ ಜೀವನ ಶೈಲಿ ಜನಪ್ರಿಯವಾಗತೊಡಗಿದಂತೆಯೇ ಹೆಣ್ಣು ಆಕರ್ಷಕ ಜೀವಿಯಾಗತೊಡಗಿದಳು. ಮಹಿಳಾ ಸ್ವಾತಂತ್ರ್ಯದ  ಹೆಸರಲ್ಲಿ ಹೆಣ್ಣಿನ ಪ್ರಾಕೃತಿಕ ಮಿತಿಗಳನ್ನು ಮೀರುವ ಪ್ರಯತ್ನಗಳು ನಡೆದುವು. ಪುರುಷರ ಜೊತೆಗೆ ಮುಕ್ತವಾಗಿ ಬೆರೆಯುವ ವಾತಾವರಣವನ್ನು ಸಮಾನತೆ, ಸ್ವಾತಂತ್ರ್ಯ ಎಂದೆಲ್ಲಾ ಹೇಳಲಾಯಿತು. ನಿಜವಾಗಿ, ಹೆಣ್ಣು ಅನಾದಿಕಾಲದ ನಾಲ್ಕು ಗೋಡೆಗಳೊಳಗಿನ ಜೀವಿಯಾಗಿಯೇ ಈ 21ನೇ ಶತಮಾನದಲ್ಲೂ ಇರಬೇಕು ಎಂಬುದು ಖಂಡಿತ ಇಲ್ಲಿನ ಉದ್ದೇಶವಲ್ಲ. ಹೆಣ್ಣಿನ ಪಾತ್ರವನ್ನು ಪುರುಷ ಮಾಡುತ್ತಿದ್ದ ಕಾಲವೇ ಹೆಣ್ಣಿಗೆ ಉತ್ತಮ ಎಂದೂ ಹೇಳುತ್ತಿಲ್ಲ. ಆದರೆ, ಹೆಣ್ಣನ್ನು ಈ ಪುರುಷ ಜಗತ್ತಿನಲ್ಲಿ ಮುಕ್ತವಾಗಿ ಬೆರೆಯಲು ಬಿಡುವಾಗ ಅವರನ್ನು ಅಷ್ಟೇ ಗೌರವಯುತವಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಪುರುಷರನ್ನೂ ತರಬೇತುಗೊಳಿಸಬೇಕಿತ್ತಲ್ಲವೇ? ಸಂಪೂರ್ಣ ಉಡುಪು ಧರಿಸಿದ ಮತ್ತು ಧರಿಸದ, ಫ್ಯಾಷನೇಬಲ್ ಆಗಿರುವ ಮತ್ತು ಆಗಿರದ, ಸ್ಪರ್ಶಿಸುವ ಮತ್ತು ಸ್ಪರ್ಶಿಸದ.. ಹೀಗೆ ಜಗತ್ತಿನಲ್ಲಿ ಭಿನ್ನ ರೀತಿಯಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ಪುರುಷರೆಲ್ಲ ಒಂದೇ ರೀತಿಯ ಭಾವನೆ ಇಟ್ಟುಕೊಂಡಿರುತ್ತಾರೆಂದು  ಹೇಳುವಂತಿಲ್ಲ. ಅವರ ನಗು, ಮಾತು, ಆಂಗಿಕ ಹಾವಭಾವ, ನೋಟ.. ಎಲ್ಲದರ ಬಗ್ಗೆಯೂ ಎಲ್ಲ ಪುರುಷರೂ ಒಂದೇ ಅರ್ಥವನ್ನು ಕಂಡುಕೊಳ್ಳಬೇಕಿಲ್ಲ. ಒಬ್ಬಳ ನಗು ಓರ್ವ ಪುರುಷನಿಗೆ ಸಾಮಾನ್ಯವಾಗಿ ಕಂಡರೆ ಅದೇ ನಗು ಇನ್ನೊಬ್ಬನಿಗೆ ಇನ್ನೇನೋ ಆಗಿ ಕಾಣಿಸಬಹುದು. ಅದು ವ್ಯಕ್ತಿಯ ಮನಸ್ಥಿತಿ, ಅರ್ಥೈಸುವಿಕೆಯನ್ನು ಹೊಂದಿಕೊಂಡಿರುತ್ತದೆ. ಬಹುಶಃ; ಹೆಣ್ಣನ್ನು ಆಧುನಿಕಗೊಳಿಸುವ ಧಾವಂತದಲ್ಲಿ ಎಲ್ಲರೂ ಈ ಮೂಲಪಾಠಗಳನ್ನು ಮರೆತರೆಂದೇ ಹೇಳಬೇಕು. ಹೆಣ್ಣು ಮತ್ತು ಗಂಡು ಭಾವನಾತ್ಮಕವಾಗಿ ಬೇರೆ ಬೇರೆ. ಹೆಣ್ಣಿನಲ್ಲಿ ಕಣ್ಣೀರು ತರಿಸುವ ಸಂಗತಿಗಳು ಗಂಡಿನಲ್ಲಿ ಕಣ್ಣೀರು ತರಿಸಬೇಕೆಂದಿಲ್ಲ. ಗಂಡು ಕೋಪದಿಂದ ಸಿಡಿಮಿಡಿಗೊಳ್ಳುವಾಗ ಹೆಣ್ಣು ಕೂಲಾಗಿ ಇರಬಲ್ಲಳು. ಒಂದು ವಿಷಯದ ಕುರಿತಂತೆ ಗಂಡು ಮತ್ತು ಹೆಣ್ಣಿನ ತೀರ್ಮಾನಗಳು ಬೇರೆ ಬೇರೆಯಾಗಿರುತ್ತದೆ. ಆ ವಿಷಯವನ್ನು ವಿವರಿಸುವಾಗ ಅವರಿಬ್ಬರು ವ್ಯಕ್ತಪಡಿಸುವ ಹಾವ-ಭಾವಗಳೂ ಬೇರೆ ಬೇರೆಯಾಗಿರುತ್ತದೆ. ಹೀಗಿರುವಾಗ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಏಕಮುಖವಾಗಿ ವ್ಯಾಖ್ಯಾನಿಸುವುದೇಕೆ? ಆಕೆಯ ಹಾವ-ಭಾವಗಳನ್ನು ತಪ್ಪಾಗಿ ಅರ್ಥೈಸದಂಥ ವಾತಾವರಣವನ್ನೂ ನಿರ್ಮಿಸಬೇಕಾದ ಅಗತ್ಯದ ಬಗ್ಗೆಯೇಕೆ ಯಾರೂ ಮಾತಾಡುತ್ತಿಲ್ಲ? ಕುಡಿತದ ಅಮಲಿನಲ್ಲಿರುವ ಸಮಾಜವು ಈ ಹೆಣ್ಣನ್ನು ಸಕಲ ಗೌರವಾದರಗಳಿಂದ ಸ್ವೀಕರಿಸುತ್ತದೆಂಬ ಭ್ರಮೆಯಲ್ಲಿ ನಾವು ಇನ್ನೂ ನಂಬಿಕೆ ಇಟ್ಟಿರುವುದೇಕೆ? ಹೆಣ್ಣನ್ನು ‘ಲಜ್ಜೆ'ಯ ಪ್ರತೀಕವಾಗಿ ಕಂಡುಕೊಂಡಿದ್ದ ಪುರುಷ ಜಗತ್ತಿಗೆ ‘ಲಜ್ಜೆ' ರಹಿತ ಹೆಣ್ಣಿನ ಪರಿಕಲ್ಪನೆಯನ್ನು ಪರಿಚಯಗೊಳಿಸಿದ್ದೇ ಆಧುನಿಕ ಮಾರುಕಟ್ಟೆ ದೊರೆಗಳು. ಅದಕ್ಕೆ ಸಮಾನತೆ, ಸ್ವಾತಂತ್ರ್ಯ, ಸಬಲೀಕರಣ.. ಎಂಬೆಲ್ಲ ಹೆಸರನ್ನು ಕೊಟ್ಟದ್ದೂ ಅವರೇ. ಸಿನಿಮಾಗಳ ಮೂಲಕ ಇದನ್ನು ಪ್ರಚಾರಗೊಳಿಸಿದರು. ಹೆಣ್ಣನ್ನು ಆಕರ್ಷಣೆಯ ಪರ್ಯಾಯ ಪದವಾಗಿ ಬಳಸತೊಡಗಿದರು. ಆಕೆಯ ನಗು, ಕಣ್ಣು, ಮೂಗು, ದೇಹ ರಚನೆ, ಸೌಂದರ್ಯ, ತೂಕ.. ಎಲ್ಲವನ್ನೂ ಪುರುಷರ ಆರಾಧ್ಯ ಭಾಗವಾಗಿ ಪರಿಚಯಿಸಿದರು. ಅವುಗಳಿಗಾಗಿ ಪುರುಷರು ಆಸೆ ಪಡುವಂತಹ ವಾತಾವರಣವನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ತಂದರು. ಒಂದು ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯದ ವ್ಯಾಖ್ಯಾನsವನ್ನು ‘ಲಜ್ಜೆ' ಸಹಿತವಾಗಿ ಮಾಡಿರುತ್ತಿದ್ದರೆ ಮತ್ತು ಆ ‘ಲಜ್ಜೆ'ಯ ವ್ಯಾಪ್ತಿಯಲ್ಲಿ ಇದ್ದುಕೊಂಡೇ ಪುರುಷನಿಗೆ ಸಮಾನವಾಗಿ ಎಲ್ಲ ಕ್ಷೇತ್ರ ಗಳಲ್ಲೂ ಆಕೆ ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಬೆಳೆಸಿರುತ್ತಿದ್ದರೆ ಇವತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಖಂಡಿತ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿರಲಿಲ್ಲ. ಆದ್ದರಿಂದಲೇ,
   ‘ನಿನ್ನನ್ನು ನೀನೇ ರಕ್ಷಿಸಿಕೋ..' ಎಂದು ಸಾರುವ ದಾಟ್  ಡೇ ಆಫ್ಟರ್ ಎವರಿ ಡೇ ಕಿರುಚಿತ್ರದ ಸಂದೇಶವು ಸಮಾಜವನ್ನು ವ್ಯಂಗ್ಯವಾಗಿ ಇರಿಯುವಂತೆ ಕಾಣುತ್ತದೆ. ಹೆಣ್ಣನ್ನು ಲಜ್ಜೆರಹಿತಳನ್ನಾಗಿ ಮಾಡಿ ಆಕೆಯನ್ನು ಸರ್ವ ಆಕ್ರಮಣಕ್ಕೂ ತೆರೆದಿಟ್ಟವರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವಂತೆ ತೋರುತ್ತದೆ.

Monday, December 2, 2013

ಕಳೆದು ಹೋದ ನೆಮ್ಮದಿಯನ್ನು ಮರಳಿಸಿ ಅಂದರೆ ಏನು ಮಾಡಬಲ್ಲೆವು?

   “..ಆರುಷಿ ತಲ್ವಾರ್ ಮತ್ತು ಶಂಕರರಾಮನ್ ಹತ್ಯಾ ಪ್ರಕರಣಗಳ ಕುರಿತಂತೆ ಈ ವಾರ ಎರಡು ತೀರ್ಪುಗಳು ಹೊರಬಿದ್ದುವು. ಆರುಷಿ ತಲ್ವಾರ್ ಪ್ರಕರಣದಲ್ಲಿ, ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಗಳನ್ನು ಪರಿಗಣಿಸಿ ಆರುಷಿಯ ಹೆತ್ತವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು. ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ  ನೀಡಿದುದರಿಂದ ಆರೋಪಿ ಗಳನ್ನು ಖುಲಾಸೆಗೊಳಿಸಲಾಯಿತು. ಆರುಷಿಯ ಕೊಲೆಯು ಮನೆಯೊಳಗೆ ನಡೆದಿದ್ದರೆ ಶಂಕರರಾಮನ್‍ರ ಹತ್ಯೆಯು ಪ್ರಸಿದ್ಧ ಕಾಂಚಿ ಪುರಮ್ ದೇವಾಲಯದ ಆವರಣದಲ್ಲಿ ನಡೆದಿತ್ತು. ಬಹುಶಃ, ಕೋರ್ಟು ಕಲಾಪದಲ್ಲಿ ಹಣ ಬಲ ಮತ್ತು ವ್ಯಕ್ತಿ ಪ್ರಭಾವವು ಪರಿಣಾಮ ಬೀರಬಲ್ಲುದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ..”
   ಚೆನ್ನೈನ ಪಾರ್ಥಸಾರಥಿ ಎಂಬವರು ದಿ ಹಿಂದೂ ಪತ್ರಿಕೆಯಲ್ಲಿ ನ. 30ರಂದು ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದಿರುವವರು ಖಂಡಿತ ಇದ್ದಾರೆ. ‘ಸತ್ಯ ಗೆದ್ದಿದೆ, ಧರ್ಮ ಜಯಶಾಲಿಯಾಗಿದೆ..' ಎಂದು ನ. 28ರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಪುಟದ ಜಾಹೀರಾತಿನಲ್ಲಿ ಜಯೇಂದ್ರ ಸರಸ್ವತಿಯವರು ಹೇಳಿಕೊಂಡಾಗ, ‘ಸತ್ಯಕ್ಕೆ ಸೋಲಾಗಿದೆ' ಎಂದು ತಲ್ವಾರ್ ದಂಪತಿಗಳು ಘೋಷಿಸಿದರು. ಒಂದು ಕಡೆ ಸಿಹಿ ಹಂಚಿಕೆ ನಡೆಯಿತು. ಇನ್ನೊಂದು ಕಡೆ ಕಣ್ಣೀರು ಹರಿಯಿತು. ‘ಮಧ್ಯ ವಯಸ್ಸನ್ನು ದಾಟಿದ ಮತ್ತು ಬಿಳಿಗಡ್ಡದ ರಾಜೇಶ್ ತಲ್ವಾರ್‍ರಲ್ಲಿ ಇಬ್ಬರನ್ನು ಒಂದೇ ಏಟಿಗೆ ಕೊಲ್ಲುವ ಸಾಮಥ್ರ್ಯ ಇದೆಯೇ? ಹೇಮರಾಜ್‍ನನ್ನು ಕೊಲ್ಲುವಾಗ ಅಥವಾ ಆರುಷಿಯನ್ನು ಕೊಲ್ಲುವಾಗ ಅವರಿಬ್ಬರಿಂದ ಯಾವ ಪ್ರತಿರೋಧಗಳೂ ಎದುರಾಗಿಲ್ಲವೇ? ಒಬ್ಬರನ್ನು ಕೊಲ್ಲುವಾಗ ಇನ್ನೊಬ್ಬರು ತಮ್ಮ ಸರದಿಗಾಗಿ ಕಾಯುತ್ತಾ ನಿಂತರೇ..’ ಎಂಬ ಪ್ರಶ್ನೆಗಳಿಂದ ಹಿಡಿದು ಹತ್ತು-ಹಲವು ಬಗೆಯ ಅನುಮಾನಗಳು ಮಾಧ್ಯಮಗಳಲ್ಲೂ ಸಾರ್ವಜನಿಕರಲ್ಲೂ ಕಾಣಿಸಿಕೊಂಡವು. ಕೇವಲ ಊಹೆಗಳ ಆಧಾರದಲ್ಲಿ ಅಥವಾ ಸಾಂದರ್ಭಿಕ ಪುರಾವೆಗಳನ್ನು ಮುಂದಿಟ್ಟುಕೊಂಡು ಶಿಕ್ಷೆ ಕೊಡುವ ಕ್ರಮ ತಪ್ಪು ಅನ್ನಲಾಯಿತು. ಅದೇ ವೇಳೆ, ‘ಜಯೇಂದ್ರ ಸರಸ್ವತಿ ಸಹಿತ ಎಲ್ಲ 23 ಆರೋಪಿಗಳೂ ನಿರಪರಾಧಿಗಳು ಎಂದಾದರೆ, ಶಂಕರರಾಮನ್‍ರನ್ನು ಕೊಂದವರು ಯಾರು..’ ಎಂಬ ಪ್ರಶ್ನೆಯನ್ನು ಮಾಧ್ಯಮಗಳಲ್ಲಿ ಅನೇಕರು ಎತ್ತಿದರು. ದೃಕ್‍ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ತಪ್ಪು-ಒಪ್ಪುಗಳು ಚರ್ಚೆಗೀಡಾದುವು. ಪ್ರಕರಣವೊಂದನ್ನು ಬೇರೆ ಬೇರೆ ನ್ಯಾಯಾಧೀಶರುಗಳು ನೋಡುವ ವಿಧಾನ, ದೃಕ್‍ಸಾಕ್ಷ್ಯಗಳನ್ನು ಬಲವಾಗಿ ನೆಚ್ಚಿಕೊಳ್ಳುವವರು ಮತ್ತು ಸನ್ನಿವೇಶವನ್ನು ನೋಡಿಕೊಂಡು ತೀರ್ಮಾನಿಸುವವರು, ಅದರ ಸಾಧಕ-ಬಾಧಕಗಳು.. ಎಲ್ಲವೂ ಚರ್ಚೆಗೆ ಬಂದುವು.
ಶಂಕರರಾಮನ್
ಆರುಷಿ
   ಈ ಎರಡೂ ಹೆಸರುಗಳು ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೆ ಒಳಗಾಗಿದೆ. ತಮಿಳುನಾಡಿನ ಕಾಂಚಿಪುರದ ಶ್ರೀ ವರದ ರಾಜ ದೇವಸ್ಥಾನದ ವ್ಯವಸ್ಥಾಪಕ ಶಂಕರರಾಮನ್‍ರು 2004 ಸೆ. 3ರಂದು ದೇವಾಲಯದ ಆವರಣದಲ್ಲಿ ಕೊಲೆಯಾಗಿ ಪತ್ತೆಯಾಗುವುದಕ್ಕಿಂತ ಮೊದಲೇ ಅವರು ಕಾಂಚಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರದ ಆರೋಪ ಹೊರಿಸಿದ್ದರು. ರಾಮನ್‍ರ ಪತ್ನಿ ಪದ್ಮ ಮತ್ತು ಮಗ ಆನಂದ ಶರ್ಮಾ ಸೇರಿದಂತೆ ಕುಟುಂಬ ಸದಸ್ಯರು ಕೊಲೆ ಆರೋಪವನ್ನು  ಕಂಚಿಶ್ರೀಗಳ ಮೇಲೆ  ಹೊರಿಸಿದರು. 2004 ನ. 11ರಂದು ಹಿರಿಯ ಶ್ರೀಗಳಾದ ಜಯೇಂದ್ರ ಸರಸ್ವತಿ ಮತ್ತು 2005 ಜನವರಿ 10ರಂದು ಕಿರಿಯ ಶ್ರೀಗಳನ್ನು ಬಂಧಿಸಲಾಯಿತು. ಜಯಲಲಿತಾರ ಅಧಿಕಾರಾವಧಿಯಲ್ಲಿ ನಡೆದ ಈ ಬಂಧನ ಕ್ರಮವು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. 8 ವರ್ಷಗಳಲ್ಲಿ ಮೂವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದರು. ಶಂಕರರಾಮನ್‍ರ ಪತ್ನಿ, ಮಗ ಸಹಿತ 189 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಆದರೆ ವಿಚಾರಣೆಯ ವೇಳೆ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದರು. ಈ ಮೊದಲು ಪೆರೇಡ್‍ನಲ್ಲಿ ಆರೋಪಿಗಳನ್ನು ಗುರುತಿಸಿದ್ದ ಸಾಕ್ಷಿಗಳೇ ಕೋರ್ಟ್‍ನಲ್ಲಿ ನ್ಯಾಯಾಧೀಶರ ಎದುರು ಅವರನ್ನು ಗುರುತಿಸಲು ವಿಫಲರಾದರು. ಇದನ್ನೇ ನೆಪವಾಗಿಸಿ ಕೋರ್ಟು ಎಲ್ಲ ಆರೋಪಿಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಆರುಷಿ ಪ್ರಕರಣ ಹಾಗಲ್ಲ. 2008 ಮೇ 16ರಂದು ಹತ್ಯೆಗೀಡಾದ ದಿನದಿಂದಲೂ ಈ ಹುಡುಗಿ ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೊಳಗಾಗಿದ್ದಾಳೆ. ಮಾಧ್ಯಮಗಳು ಹತ್ತು-ಹಲವು ಕತೆಗಳನ್ನು ಈ ಹುಡುಗಿಯ ಸುತ್ತ ಹೆಣೆದಿವೆ. ನ್ಯಾಯ ಮೂರ್ತಿ ಅಲ್ತಮಶ್ ಕಬೀರ್ ಮತ್ತು ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ನ್ಯಾಯಾಂಗ ಪೀಠವು 2008 ಜುಲೈ 22ರಂದು ಈ ಬಗ್ಗೆ ಮಾಧ್ಯಮಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ತಲ್ವಾರ್ ಕುಟುಂಬದ ವಿರುದ್ಧ ನಿರಾಧಾರ ಕತೆಗಳನ್ನು ಹೆಣೆಯಬೇಡಿ ಎಂದಿದ್ದರು. ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯು 2008ರಲ್ಲಿ ಆರುಷಿಯ ಸುತ್ತ ಚಿತ್ರ ನಿರ್ಮಾಣ ಮಾಡಲು ಮುಂದಾದಾಗ, ಮಕ್ಕಳ ರಕ್ಷಣೆಗಿರುವ ರಾಷ್ಟ್ರೀಯ ಆಯೋಗಕ್ಕೆ  ನೂಪುರ್ ತಲ್ವಾರ್ ದೂರು ಕೊಟ್ಟಿದ್ದರು. ಟೆಲಿಫಿಲ್ಮ್ ಮಾಡದಂತೆ ತಡೆಯಬೇಕೆಂದು ಕೋರಿದ್ದರು. 2012ರಲ್ಲಿ ಜೈಲಿ ನಲ್ಲಿದ್ದಾಗ, ‘ಅರುಷಿ ಹತ್ಯೆಯ ಹಿಂದಿನ ರಹಸ್ಯ: ದುರದೃಷ್ಟವಂತ ತಾಯಿಯೋರ್ವಳ ಕತೆ..' ಎಂಬ ಹೆಸರಲ್ಲಿ ನೂಪುರ್ ತಲ್ವಾರ್ ಪುಸ್ತಕ ಬರೆಯಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದರು. ಅವರ ಜೈಲು ಕೊಠಡಿಯಿಂದ 17 ಪುಟಗಳ ಬರಹವನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ಬರೆಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂಬುದು ಪೊಲೀಸರ ವಾದವಾಗಿತ್ತು. ಇದಲ್ಲದೇ, ರಾಜೇಶ್ ತಲ್ವಾರ್‍ರ ಸಹೋದರಿ ವಂದನಾ ತಲ್ವಾರ್ ಮತ್ತು ಗೆಳೆಯರು, ತಲ್ವಾರ್ ದಂಪತಿಗಳ ಪರ ಆನ್‍ಲೈನ್ ಅಭಿಯಾನವನ್ನೇ ಆರಂಭಿಸಿದ್ದರು. ವೆಬ್‍ಸೈಟ್, ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ಗಳನ್ನು ಆರಂಭಿಸಿ, ತಲ್ವಾರ್ ದಂಪತಿಗಳ ಮುಗ್ಧತನವನ್ನು ಪ್ರಚಾರ ಮಾಡುತ್ತಿದ್ದರು.
   ಆದ್ದರಿಂದಲೇ, ಒಂದು ಪ್ರಕರಣದ ಬಗ್ಗೆ ತೀರ್ಪು ಕೊಡುವುದ ಕ್ಕಿಂತ ಮೊದಲು ನ್ಯಾಯಾಧೀಶರು ಯಾವೆಲ್ಲ ಎಚ್ಚರಿಕೆಗಳನ್ನು ಕೈಗೊಳ್ಳಬೇಕು, ಸಾಂದರ್ಭಿಕ ಸಾಕ್ಷ್ಯ ಮತ್ತು ದೃಕ್‍ಸಾಕ್ಷ್ಯಗಳಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು, ಒಂದು ವೇಳೆ ದೃಕ್‍ಸಾಕ್ಷ್ಯಗಳಗಳ ಅನುಪಸ್ಥಿತಿಯಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಬಹುದು.. ಎಂಬೆಲ್ಲ ಚರ್ಚೆಗಳಿಗೆ ಶಂಕರರಾಮನ್ ಮತ್ತು ಆರುಷಿ ಪ್ರಕರಣಗಳು ಇವತ್ತು ಕಾರಣವಾಗಿವೆ.
   ಅಂದಹಾಗೆ, ಬಲವಾದ ಪುರಾವೆಗಳಿಲ್ಲದೇ ತಲ್ವಾರ್ ದಂಪತಿ ಗಳನ್ನು ಶಿಕ್ಷಿಸಲು ಸಾಧ್ಯವೆಂದಾದರೆ, ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದದ್ದನ್ನೂ ಗಂಭೀರವಾಗಿ ಪರಿಗಣಿಸಬಹುದಲ್ಲವೇ? ಪ್ರಕರಣದ ಆರಂಭದಲ್ಲಿ ಈ ಎಲ್ಲ ಸಾಕ್ಷಿಗಳು ಶ್ರೀಗಳ ವಿರುದ್ಧ ಸಾಕ್ಷಿ ನುಡಿದಿದ್ದರು. ಪೊಲೀಸರ ಸಮ್ಮುಖದಲ್ಲಿ ಆರೋಪಿಗಳ ಗುರುತು ಹಿಡಿದಿದ್ದರು. ಆ ಬಳಿಕ 8 ವರ್ಷಗಳ ದೀರ್ಘ ಅವಧಿ ವರೆಗೆ ವಿಚಾರಣೆ ಮುಂದುವರಿಯಿತು. ಬಳಿಕ ಸಾಕ್ಷಿಗಳು ತಮ್ಮ ಈ ಹಿಂದಿನ ಸಾಕ್ಷ್ಯವನ್ನೇ ಅಲ್ಲಗಳೆದರು. ಆರೋಪಿಗಳ ಪರಿಚಯವಿಲ್ಲ ಅಂದರು. ನಿಜವಾಗಿ, ಈ ಸಾಕ್ಷಿಗಳು ಈ ಮೊದಲು ಏನು ಹೇಳಿದ್ದರು ಎಂಬುದು ನ್ಯಾಯಾಧೀಶರಿಗೆ ಗೊತ್ತಿಲ್ಲ ಎಂದಲ್ಲ. ಆದರೂ ಅವರು ಈ ನಿಲುವನ್ನು ಪುರಾವೆಯಾಗಿ ಪರಿಗಣಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದರು. ಆದರೆ, ಇದೇ ಉದಾರ ನಿಲುವು ಅರುಷಿ ಪ್ರಕರಣದಲ್ಲಿ ಕಾಣಿಸಿಯೇ ಇಲ್ಲ. ಅಲ್ಲಿನ ತೀರ್ಪಿಗೆ ಆಧಾರವಾಗಿರುವುದು ಸಾಂದರ್ಭಿಕ ಸಾಕ್ಷ್ಯಗಳು. ‘ಈ ದಂಪತಿಗಳಲ್ಲದೇ ಇನ್ನಾರೂ ಕೊಲೆ ಮಾಡಲು ಸಾಧ್ಯವಿಲ್ಲ..' ಎಂಬ ಊಹೆ ಆಧಾರಿತ ನಿಲುವುಗಳು. ತಿರುಗಿಬಿದ್ದ ಸಾಕ್ಷ್ಯಗಳನ್ನು ಪುರಸ್ಕರಿಸುವ ನ್ಯಾಯಾಲಯ ಒಂದು ಕಡೆಯಾದರೆ, ಸಾಂದರ್ಭಿಕ ಸಾಕ್ಷ್ಯವನ್ನೇ ನೆಚ್ಚಿಕೊಂಡು ಜೀವಾವಧಿ ಶಿಕ್ಷೆ ವಿಧಿಸುವ ನ್ಯಾಯಾಲಯ ಇನ್ನೊಂದು ಕಡೆ. ವಿಕಿಪೀಡಿಯಾದಲ್ಲಿ ಆರುಷಿ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಮನೆಯ ನಕ್ಷೆಯನ್ನು ತೋರಿಸಿ ಒಟ್ಟು ಪ್ರಕರಣ ಹೇಗೆ ನಡೆದಿರಬಹುದು ಎಂದೆಲ್ಲಾ ವಿವರಿಸುವ ಪ್ರಯತ್ನಗಳು ಅಲ್ಲಿ ನಡೆದಿವೆ. ರಾಜೇಶ್ ತಲ್ವಾರ್‍ರು ಗಾಲ್ಫ್ ಸ್ಟಿಕ್‍ನಿಂದ ಹೇಮರಾಜ್‍ಗೆ ಮೊದಲು ಏಟು ಕೊಟ್ಟು ಎರಡನೇ ಬಾರಿಯ ಏಟನ್ನು ಆತ ತಪ್ಪಿಸುವಾಗ ಆ ಏಟು ಆರುಷಿಗೆ ಬಿದ್ದಿರಬಹುದು ಎಂದೆಲ್ಲಾ ಊಹಿಸಲಾಗಿದೆ. ಹೇಮ್‍ರಾಜ್‍ರ ಮೊಬೈಲ್ ಫೋನ್ ಈ ವರೆಗೂ ಪತ್ತೆಯಾಗಿಲ್ಲ. ಆರುಷಿಯ ಮೊಬೈಲ್ ಪತ್ತೆಯಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಅಷ್ಟಕ್ಕೂ, ಅತ್ಯಂತ ಬುದ್ಧಿವಂತಿಕೆಯಿಂದ ಈ ಕೊಲೆಯನ್ನು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಆ ಕೊಲೆಯ ಹೊಣೆಯನ್ನು ಹೆತ್ತವರ ಮೇಲೆಯೇ ಹೊರಿಸಬೇಕೆಂದಿಲ್ಲವಲ್ಲ. ಅಪರಾಧವು ಸಂಶಯಾತೀತವಾಗಿ ಸಾಬೀತಾಗದೇ ಶಿಕ್ಷಿಸುವ ಕ್ರಮ ರೂಢಿಗೆ ಬಂದರೆ ಏನಾದೀತು? ನಿರಪರಾಧಿಗಳು ಶಿಕ್ಷೆಗೆ ಒಳಗಾಗದಂತೆ ಗರಿಷ್ಠ ಪ್ರಯತ್ನಿಸಬೇಕಾದುದು ನ್ಯಾಯಾಲಯಗಳ ಹೊಣೆಗಾರಿಕೆಯಲ್ಲವೇ? ಕಂಚಿಶ್ರೀಗಳ ಪ್ರಕರಣದಲ್ಲಿ ನ್ಯಾಯಾಲಯ ತೋರಿದ ವಿಶಾಲತೆಯನ್ನು ಆರುಷಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೋರದಿರುವುದನ್ನು ಹೇಗೆ ವಿಶ್ಲೇಷಿಸಬಹುದು?
   ಕೊಲೆ ಆರೋಪವನ್ನು ಹೊತ್ತು ಕೊಳ್ಳುವುದು ಸಣ್ಣ ಸಂಗತಿಯಲ್ಲ. ಅದರಲ್ಲೂ ತನ್ನ ಮಗಳನ್ನೇ ಕೊಂದ ಆರೋಪವನ್ನು ಹೊತ್ತು ಕೊಂಡು ಜೈಲು ಸೇರುವ ಸಂದರ್ಭ ಅತ್ಯಂತ ದಯನೀಯವಾದದ್ದು. ಒಂದು ಕಡೆ, ತಲ್ವಾರ್ ದಂಪತಿಗಳಿಗೆ ಇರುವ ಏಕೈಕ ಮಗಳೇ ಕಳೆದು ಹೋಗಿದ್ದಾಳೆ. ಇನ್ನೊಂದು ಕಡೆ, ಕೊಲೆಗಾರರು ಎಂಬ ಹಣೆಪಟ್ಟಿ ಸಿಕ್ಕಿದೆ. ಆ ಮೂಲಕ ಇರುವ ಘನತೆ, ಗೌರವಗಳೂ ಮಣ್ಣು ಪಾಲಾಗಿವೆ. ಇದು ಕೇವಲ ತಲ್ವಾರ್ ದಂಪತಿಯೋರ್ವರ ಸಮಸ್ಯೆಯಲ್ಲ. ಆರೇಳು ತಿಂಗಳುಗಳ ವರೆಗೆ ಜೈಲಲ್ಲಿ ಕಳೆದ ಕಂಚಿಶ್ರೀಗಳಿಗೂ ಇದು ಅನ್ವಯವಾಗುತ್ತದೆ. ಅವರು ತಪ್ಪೇ ಮಾಡಿಲ್ಲವೆಂದ ಮೇಲೆ ಅವರು ಬಂಧನದ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ನೋವು, ಅವಮಾನಗಳಿಗೆ ಯಾರು ಹೊಣೆ? ಈಗಿನ ತೀರ್ಪಿನಿಂದ ಅದನ್ನು ಅವರಿಗೆ ಮರಳಿಸಲು ಸಾಧ್ಯವೇ?
   ‘ಸತ್ಯಕ್ಕೆ ಸೋಲಾಗಿದೆ..’ ಎನ್ನುತ್ತಾ ಜೈಲಿನೊಳಗೆ ಹೋದ ತಲ್ವಾರ್ ದಂಪತಿಗಳು ಮತ್ತು ‘ಸತ್ಯ ಗೆದ್ದಿದೆ’ ಅನ್ನುವ ಜಾಹೀ ರಾತು ಕೊಟ್ಟ ಕಂಚಿಶ್ರೀಗಳನ್ನು ನೋಡುವಾಗ ಮನಸು ಗೊಂದಲಕ್ಕೆ ಒಳಗಾಗುತ್ತದೆ. ಸತ್ಯಕ್ಕೆ ಸೋಲಾಗದಿರಲಿ ಅನ್ನಿಸುತ್ತದೆ.