Wednesday, January 22, 2014

ಕಾರ್ಮಿಕರ ಪ್ರತಿಭಟನೆಗಿಂತ ಶ್ರೀಶಾಂತ್ ರ ಮದುವೆಯೇ ಮುಖ್ಯವಾಗುತ್ತದಲ್ಲ, ಏಕೆ ಹೇಳಿ?

1. ವಾರ್ ಈಸ್ ಎ ಲೈ
2. ವೆನ್ ದಿ ವರ್ಲ್ಡ್  ಔಟ್‍ಲಾವ್‍ಡ್  ವಾರ್
3. ವಾರ್ ನೋ ಮೋರ್: ದಿ ಕೇಸ್ ಫಾರ್ ಅಬೋಲಿಶನ್
ಮುಂತಾದ ಬಹುಚರ್ಚಿತ ಕೃತಿಗಳನ್ನು ರಚಿಸಿರುವ ಮತ್ತು ಈಗ ‘ವಾರ್ ಈಸ್ ಎ ಕ್ರೈಮ್.ಆರ್ಗ್' ಎಂಬ ವೆಬ್‍ಸೈಟ್ ಸ್ಥಾಪಿಸಿ ಸಕ್ರಿಯರಾಗಿರುವ ಅಮೇರಿಕದ ಪ್ರಮುಖ ಬ್ಲಾಗರ್, ಅಂಕಣಗಾರ ಡೇವಿಡ್ ಸ್ವಾನ್‍ಸನ್‍ರು ಪ್ರಚಲಿತ ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಅನೇಕ ಬಾರಿ ಚರ್ಚೆಗೆ ಒಳಗಾಗಿದ್ದಾರೆ. ಯುದ್ಧದ ಬಗ್ಗೆ, ಅದು ಉಂಟು ಮಾಡುವ ನಾಶ-ನಷ್ಟದ ಬಗ್ಗೆ ಮತ್ತು ಅದು ಸುತ್ತುವರಿದಿರುವ ಸುಳ್ಳುಗಳ ಬಗ್ಗೆ ಕಣ್ತೆರೆಸುವ ಹಲವು ಪ್ರಭಾವಿ ಬರಹಗಳನ್ನು ಬರೆದಿದ್ದಾರೆ.
   2003ರಲ್ಲಿ ಅಮೇರಿಕವು ಇರಾಕ್‍ನ ಮೇಲೆ ಅತಿಕ್ರಮಣ ನಡೆಸಿತು. ಬಾಂಬುಗಳು, ಬಂದೂಕುಗಳೂ ಸಿಡಿದುವು. ಸದ್ದಾಮ್‍ರನ್ನು ಅಧಿಕಾರದಿಂದ ಕಿತ್ತು ಹಾಕಲಾಯಿತು. ಈ ಮಧ್ಯೆ ಅಮೇರಿಕದಲ್ಲಿ ಕೆಲವಾರು ಸಮೀಕ್ಷೆಗಳೂ ನಡೆದುವು. 2010ರಲ್ಲಿ ನಡೆದ ಸಮೀಕ್ಷೆಯ ಕೇಂದ್ರ ವಿಷಯ ಹೀಗಿತ್ತು:
   ಇರಾಕ್‍ನ ಮೇಲೆ ಅಮೇರಿಕ ನಡೆಸಿದ ದಾಳಿಯಿಂದ ಇರಾಕಿಗಳಿಗೆ ಲಾಭವಾಗಿದೆಯೋ ನಷ್ಟವಾಗಿದೆಯೋ?
ಸಮೀಕ್ಷೆಗೆ ಒಳಪಟ್ಟ ಅಮೇರಿಕನ್ನರಲ್ಲಿ ಹೆಚ್ಚಿನ ಮಂದಿಯೂ ಇರಾಕಿಗಳಿಗೆ ಲಾಭವಾಗಿದೆ ಎಂದೇ ಉತ್ತರಿಸಿದ್ದರು. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇರಾಕ್‍ನಲ್ಲಿಯೂ ಸರ್ವೇ ನಡೆಸಲಾಯಿತು. ಆದರೆ ಬಹುತೇಕ ಎಲ್ಲ ಇರಾಕಿಗಳೂ ತಮಗೆ ಸದ್ದಾಮ್ ಆಡಳಿತ ಕಾಲವೇ ಉತ್ತಮವಾಗಿತ್ತೆಂದು ಅಭಿಪ್ರಾಯಪಟ್ಟರು. ಒಂದೇ ವಿಷಯ, ಆದರೆ ಎರಡು ಅಭಿಪ್ರಾಯ! ಹೀಗಾಗಲು ಕಾರಣ ಏನೆಂದರೆ, ಮಾಧ್ಯಮಗಳೇ. ಇರಾಕಿಗಳು ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೋ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. ಅದು ಅವರ ಕಣ್ಣೆದುರಿನ ವಾಸ್ತವ. ಆದರೆ ಅಮೇರಿಕನ್ನರ ಅಭಿಪ್ರಾಯವು ಸಂಪೂರ್ಣವಾಗಿ ಮಾಧ್ಯಮ ವರದಿಯನ್ನೇ ಅವಲಂಬಿಸಿಕೊಂಡಿತ್ತು. ಮಾಧ್ಯಮಗಳು ಏನನ್ನು ಉಣಬಡಿಸಿದ್ದುವೋ ಅದರ ಸಂಗ್ರಹ ರೂಪವನ್ನೇ ಅಮೇರಿಕನ್ನರು ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದರು.
   ಡೇವಿಡ್ ಸ್ವಾನ್‍ಸನ್‍ರ ಈ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣ ಇದೆ..
ಈ ವರ್ಷದ ಆರಂಭದಲ್ಲಿ ತಮಿಳ್ನಾಡಿನ ಕೆಲವು ಓದುಗರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ  ಮಾರ್ಕಾಂಡೇಯ ಕಾಟ್ಜು ಅವರಿಗೆ ಪತ್ರವೊಂದನ್ನು ಬರೆದರು. ಸಾಮಾನ್ಯವಾಗಿ ಪತ್ರಿಕಾ ಮಂಡಳಿಗೆ ದೂರುಗಳು ರವಾನೆಯಾಗುತ್ತಲೇ ಇರುತ್ತವೆ. ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಓದುಗರ ಆಗಾಗ ಸಿಟ್ಟು ತೋಡಿಕೊಳ್ಳುವುದಿದೆ. ಇಂತಿಂಥ ಪತ್ರಿಕೆ, ಚಾನೆಲ್‍ಗಳಲ್ಲಿ ಗಲಭೆಗೆ ಪ್ರಚೋದನೆ ನೀಡಲಾಗಿದೆ, ವಾರ್ತೆಯನ್ನು ತಿರುಚಲಾಗಿದೆ, ಒಂದು ಸಮುದಾಯವನ್ನು ಅವಮಾನಿಸಲಾಗಿದೆ.. ಎಂಬೆಲ್ಲ ದೂರುಗಳನ್ನು ಹೊತ್ತ ಪತ್ರಗಳು ಕಾಟ್ಜುರನ್ನು ತಲುಪುತ್ತಲೇ ಇರುತ್ತವೆ. ಆದರೆ ತಮಿಳ್ನಾಡಿನ ಪತ್ರ ಇದಕ್ಕಿಂತ ಭಿನ್ನ ಆಗಿತ್ತು.
   ಪ್ರಮುಖ 11 ಕಾರ್ಮಿಕ ಸಂಘಟನೆಗಳಿಗೆ ಸೇರಿದ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಕಾರ್ಮಿಕರು ಕಳೆದ ಡಿ. 12ರಂದು ದೆಹಲಿಯಲ್ಲಿ ಪಾರ್ಲಿಮೆಂಟೋ ಚಲೋ ರಾಲಿಯನ್ನು ಏರ್ಪಡಿಸಿದ್ದರು. ನಿಜವಾಗಿ ಶ್ರಮಿಕ ವರ್ಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಟ್ಟು ಸೇರುವುದು, ಪ್ರತಿಭಟಿಸುವುದೆಲ್ಲ ತೀರಾ ಅಪರೂಪ. ಶ್ರಮಿಕ ವರ್ಗಕ್ಕೆ ಅದರದ್ದೇ ಆದ ಮಿತಿಗಳಿವೆ. ಐಟಿ-ಬಿಟಿಯಲ್ಲಿ ದುಡಿಯುವವರಿಗೆ, ಸರಕಾರಿ ಉದ್ಯೋಗಿಗಳಾಗಿರುವ ಮಂದಿಗೆ ಇರುವಂಥ ವರ್ಚಸ್ಸು ಇಂಥವರಿಗಿರುವುದು ಕಡಿಮೆ. ಶ್ರಮಿಕ ವರ್ಗ ಸಾಮಾನ್ಯವಾಗಿ ತಳಮಟ್ಟದ ಜನಸಮುದಾಯವನ್ನು ಪ್ರತಿನಿಧಿಸುತ್ತದೆ. ಅಂಥವರು ಡಿ. 12ರಂದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಟ್ಟು ಸೇರಿ ಪ್ರತಿಭಟನೆ ಹಮ್ಮಿಕೊಂಡರೂ ಡಿ. 13ರ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಕ್ರಾನಿಕಲ್.. ಮುಂತಾದ ಪ್ರಮುಖ ಆಂಗ್ಲ ಪತ್ರಿಕೆಗಳಾಗಲಿ, ತಮಿಳು ಪತ್ರಿಕೆಗಳಾಗಲಿ ಆ ಸುದ್ದಿಯನ್ನು ಪ್ರಕಟಿಸಿಯೇ ಇರಲಿಲ್ಲ. ಮೋದಿಯದ್ದೋ ರಾಹುಲ್‍ರದ್ದೋ ಸಣ್ಣ ಸಭೆಗೂ ಭಾರೀ ಕವರೇಜ್ ಕೊಡುವ ಮಾಧ್ಯಮಗಳು, ಕಾರ್ಮಿಕ ಪ್ರತಿಭಟನೆಯನ್ನು ಕಡೆಗಣಿಸಿದ್ದು ಸರಿಯೇ? ಡಿ. 13ರ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲಿ ಭುವನೇಶ್ವರಿಯನ್ನು ಕ್ರಿಕೆಟಿಗ ಶ್ರೀಶಾಂತ್ ವಿವಾಹವಾದ ಬಗ್ಗೆ ಚಿತ್ರ ಸಮೇತ ವರದಿಗಳಿದ್ದುವು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಗೆ ಜಾಗ ಕೊಡದ ಪತ್ರಿಕೆಗಳು, ಸಾಮಾನ್ಯ ಮದುವೆ ಸಮಾರಂಭಕ್ಕೆ ಮಹತ್ವ ಕೊಟ್ಟದ್ದರ ಬಗ್ಗೆ ಮಂಡಳಿಯ ನಿಲುವು ಏನು? ಹಾಗಂತ, ಮಂಡಳಿಗೆ ದೂರು ಕೊಡುವುದಕ್ಕಿಂತ ಮೊದಲು ಸಂಬಂಧಿತ ಸಂಪಾದಕರಿಗೆ ವಿಷಯ ತಿಳಿಸಬೇಕೆಂಬ ನಿಯಮ ಇರುವುದು ನಮಗೆ ಗೊತ್ತು. ನಾವು ಅದನ್ನು ಪಾಲಿಸಿಲ್ಲ ಅನ್ನುವುದೂ ನಿಜ. ಯಾಕೆಂದರೆ, ಒಂದೋ ಎರಡೋ ಪತ್ರಿಕೆಯಿಂದ ಇಂಥ ಎಡವಟ್ಟು ಆಗಿದ್ದಿದ್ದರೆ ಸಂಪಾದಕರನ್ನು ಭೇಟಿಯಾಗಬಹುದಿತ್ತು. ಆದರೆ ಹಲವು ಪತ್ರಿಕೆಗಳು ಒಂದೇ ಬಗೆಯ ತಪ್ಪನ್ನು ಮಾಡಿರುವಾಗ ಎಲ್ಲ ಸಂಪಾದಕರನ್ನೂ ಭೇಟಿ ಮಾಡುವುದು ಹೇಗೆ? ಅದು ಎಷ್ಟು ಪ್ರಾಯೋಗಿಕ? ಆದ್ದರಿಂದ ನಿಮ್ಮಲ್ಲಿ ಭರವಸೆ ಇಟ್ಟು ಈ ಪತ್ರ ರವಾನಿಸಿದ್ದೇವೆ..’ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು.
   ಅಷ್ಟಕ್ಕೂ, ಭಾರತವು ಪತ್ರಿಕೆಗಳ ಪಾಲಿಗೆ ಅತಿದೊಡ್ಡ ಮಾರುಕಟ್ಟೆ. ವಿವಿಧ ಬಗೆಯ ಸುಮಾರು 70 ಸಾವಿರದಷ್ಟು ಪತ್ರಿಕೆಗಳು ಈ ದೇಶದಲ್ಲಿ ಚಲಾವಣೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಪ್ರತಿದಿನ 100 ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ. 500ರಷ್ಟು ಟಿ.ವಿ. ಚಾನೆಲ್‍ಗಳೇ ಇವೆ. ಇವುಗಳಲ್ಲಿ ನ್ಯೂಸ್ ಚಾನೆಲ್‍ಗಳ ಪಾಲು 80. ಮಾಧ್ಯಮ ಕ್ಷೇತ್ರದಲ್ಲಿ ಒಂದು ಬಗೆಯ ಸ್ಪರ್ಧೆ ಇವತ್ತು ಸೃಷ್ಟಿಯಾಗಿ ಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೇ ಹೋದರೆ ಪತ್ರಿಕೆಯೊಂದು ಬದುಕಿ ಉಳಿಯಬಲ್ಲುದೇ? ಮಸಾಲೆಗಳೇ ತುಂಬಿರುವ ವರದಿಗಳ ಮಧ್ಯೆ ಅವೇನೂ ಇಲ್ಲದ, ನಿಖರ ಮತ್ತು ನಿಷ್ಠುರ ಸತ್ಯವುಳ್ಳ ವರದಿಗಳನ್ನಷ್ಟೇ ಪ್ರಕಟಿಸುವ ಧೈರ್ಯ ತೋರಿದರೆ ಆ ಪತ್ರಿಕೆಗೆ ಎಷ್ಟು ಮಂದಿ ಓದುಗರು ಸಿಕ್ಕಾರು?
    ‘2006ರ ಜನವರಿಯಿಂದ ಎಪ್ರಿಲ್ 2ರ ವರೆಗೆ ಮಹಾರಾಷ್ಟ್ರದ ವಿದರ್ಭದಲ್ಲಿ 400ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರು. ಎಪ್ರಿಲ್ 2ರ ಅದೇ ದಿನ ಸೆನ್ಸೆಕ್ಸ್ ಹನ್ನೊಂದು ಸಾವಿರವನ್ನು ದಾಟಿತು. ಮಾತ್ರವಲ್ಲ, ಪತ್ರಕರ್ತರಿಗೆ ‘ಲಕ್ಮೆ ಫ್ಯಾಶನ್ ವೀಕ್' 500 ಪಾಸುಗಳನ್ನು ಬಿಡುಗಡೆ ಮಾಡಿತು. ಒಂದೇ ವಾರದಲ್ಲಿ ನಡೆದ ಈ ಮೂರು ಬೆಳವಣಿಗೆಗಳಲ್ಲಿ ವಿದರ್ಭದ ರೈತರ ಸಾವು ಹೆಚ್ಚಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಉಲ್ಲೇಖಕ್ಕೇ ಒಳಗಾಗಲಿಲ್ಲ. ಆದರೆ ಈ ದೇಶದ 2% ಮಂದಿ ಮಾತ್ರ ಆಸಕ್ತವಾಗಿರುವ ಷೇರು ಮಾರುಕಟ್ಟೆಯ ಬಗ್ಗೆ, ಸೆನ್ಸೆಕ್ಸ್ ನ ಏರಿಳಿತದ ಬಗ್ಗೆ ಮಾಧ್ಯಮಗಳು ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟಿಸುತ್ತವೆ. 500 ಮಂದಿ ಪತ್ರಕರ್ತರು ಫ್ಯಾಶನ್ ಶೋವನ್ನು ವರದಿ ಮಾಡಲು ಹೋಗುವಾಗ ವಿದರ್ಭದ ರೈತರ ಸಮಸ್ಯೆಯನ್ನು ಅಧ್ಯಯನ ನಡೆಸಲು ತೆರಳುವ ಪತ್ರಕರ್ತರು ಬೆರಳೆಣಿಕೆಯಷ್ಟು. ನಿಜವಾಗಿ, ಫ್ಯಾಶನ್ ಶೋವನ್ನು ವರದಿ ಮಾಡಲು ತೆರಳುವ ಪತ್ರಕರ್ತರು ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಭರ್ಜರಿ ಪಾರ್ಟಿಗಳು, ಕಿವಿ ತಣಿಸುವ ಸಂಗೀತ, ಆಡಂಬರ.. ಎಲ್ಲವೂ ಇರುತ್ತದೆ. ಆದರೆ ರೈತರನ್ನು ಹುಡುಕಿಕೊಂಡು ಹೋದರೆ, ಪ್ಯಾಂಟು ಸೂಟುಗಳಲ್ಲಿ ಕೆಸರು ಮೆತ್ತಿಕೊಳ್ಳುತ್ತದೆ. ವಾಹನಗಳು ಸಾಗದ ದಾರಿ, ಭರ್ಜರಿ ಔತಣ ಸಿಗದ ಮನೆಗಳು ಮತ್ತು ಕಣ್ಣೀರನ್ನೇ ಉಣಬಡಿಸುವ ಮನುಷ್ಯರು ಪತ್ರಕರ್ತರಿಗೆ ಎಷ್ಟು ಇಷ್ಟವಾಗಬಲ್ಲರು? ಅಂದಹಾಗೆ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯು ಫ್ಯಾಶನ್ ಶೋಗಿಂತ ಅಥವಾ ಶ್ರೀಶಾಂತ್‍ರ ಮದುವೆಗಿಂತ ಮಹತ್ವಪೂರ್ಣ ಎಂದು ಓರ್ವ ಸಂಪಾದಕ ತೀರ್ಮಾನಿಸಬೇಕಾದರೆ ಕನಿಷ್ಠ ಆತನಿಗೆ ಶ್ರಮಿಕ ವರ್ಗದ ಬಗ್ಗೆ ಆಳವಾದ ಅರಿವು ಇರಬೇಕು. ರೈತನ ಬೆವರಿಗೂ ಫ್ಯಾಶನ್ ಶೋದ ಬೆಡಗಿಯ ಬೆವರಿಗೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸ ಗೊತ್ತಿರಬೇಕು. ಸದ್ಯದ ದಿನಗಳು ಹೇಗಿವೆ ಎಂದರೆ, ಮಾಧ್ಯಮದ ಆಯಕಟ್ಟಿನ ಜಾಗಗಳು ಮಾತ್ರವಲ್ಲ, ಅದರ ನಂತರದ ಸ್ಥಾನಗಳು ಕೂಡ ಫ್ಯಾಶನ್ ಶೋದಂತಹ ಥಳಕು-ಬಳುಕನ್ನು ಇಷ್ಟಪಡುವವರ ಪಾಲಾಗಿ ಬಿಟ್ಟಿವೆ. ರೈತನ ಮಗ, ಮಲ ಹೊರುವವನ ಮಗಳು, ಹೊಲೆಯ, ಮಾದಿಗರ ಮಕ್ಕಳು.. ಮಾಧ್ಯಮ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನಕ್ಕೆ ಏರುವಲ್ಲಿ ವಿಫಲವಾಗುತ್ತಲೇ ಇದ್ದಾರೆ. ದೆಹಲಿ ಮೂಲದ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯು 37 ಹಿಂದಿ, ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳನ್ನು ಕೇಂದ್ರೀಕರಿಸಿ 2006ರಲ್ಲಿ ಸರ್ವೇ ನಡೆಸಿತ್ತು. ಇದರಲ್ಲಿ ಬಹಿರಂಗವಾದ ಸತ್ಯ ಏನೆಂದರೆ, ಪತ್ರಿಕೆಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳ ಪೈಕಿ ಶೇ. 90 ಸ್ಥಾನಗಳಲ್ಲಿ ಮೇಲ್ವರ್ಗದವರೇ ಇದ್ದರು. ಮಾತ್ರವಲ್ಲ, ದಲಿತರ ಪೈಕಿ ಒಬ್ಬನೇ ಒಬ್ಬ ಪ್ರತಿನಿಧಿ ಈ ಸ್ಥಾನದಲ್ಲಿ ಇರಲಿಲ್ಲ. ಇವೆಲ್ಲ ಸೂಚಿಸುವುದು ಏನನ್ನು? ತುಳಿತಕ್ಕೊಳಗಾಗಿರುವವರ ಪ್ರಾತಿನಿಧ್ಯವೇ ಶೂನ್ಯವಾಗಿರುವ ಕ್ಷೇತ್ರವೊಂದು ಅವರ ಬಗ್ಗೆ ಕಾಳಜಿಯುಳ್ಳ ಸುದ್ದಿ-ಲೇಖನಗಳನ್ನು ಭಾರೀ ಉತ್ಸಾಹದಿಂದ ಪ್ರಕಟಿಸುತ್ತದೆಂದು ಹೇಗೆ ನಿರೀಕ್ಷಿಸುವುದು? ಅಂದಹಾಗೆ, ಪಡಿತರ ಸಮಸ್ಯೆ, ನೀರು, ನಿರುದ್ಯೋಗ, ಗ್ಯಾಸ್, ಬೆಲೆ ಏರಿಕೆ.. ಮುಂತಾದ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗುವ ಪ್ರತಿಭಟನೆಗಳಿಗೆ ಇವತ್ತಿನ ಮುಖ್ಯ ವಾಹಿನಿಯ ಪತ್ರಿಕೆಗಳು ಕೊಡುವ ಮಹತ್ವ ಮತ್ತು ಪ್ರಚೋದನಕಾರಿ ಭಾಷಣವೊಂದಕ್ಕೆ ಕೊಡುವ ಮಹತ್ವ; ಇವೆರಡನ್ನೂ ತುಲನೆ ಮಾಡಿ ನೋಡಿ, ಏನನಿಸುತ್ತದೆ? ಜನಸಾಮಾನ್ಯರ ನೋವುಗಳನ್ನು ಓರ್ವ ಪತ್ರಕರ್ತ ಅಥವಾ ಸಂಪಾದಕ ಸ್ವಯಂ ಅನುಭವಿಸುವುದಕ್ಕೂ ಇನ್ನಾರೋ ಹೇಳಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಹಸಿರು ಕಾರ್ಡು ಮತ್ತು ಕೆಂಪು ಕಾರ್ಡನ್ನು ವಿತರಿಸುವಲ್ಲಿ ಒಂದು ಕುಟುಂಬಕ್ಕಾದ ಅನ್ಯಾಯವು ಓರ್ವ ಪತ್ರಕರ್ತನಿಗೆ ಮಹತ್ವದ ಸುದ್ದಿಯಂತೆ ಕಾಣಿಸಬೇಕಾದರೆ, ಹಸಿವಿನ ಪರಿಚಯ ಇರಬೇಕು. ಆದರೆ ಮಾಧ್ಯಮ ಕ್ಷೇತ್ರದಲ್ಲಿರುವವರ ಜೀವನ ಕ್ರಮಕ್ಕೂ ಜನಸಾಮಾನ್ಯರ ಜೀವನ ಕ್ರಮಕ್ಕೂ ನಡುವೆ ಇರುವ ಅಗಾಧ ಪ್ರಮಾಣದ ಅಂತರವೇ ಕಾರ್ಮಿಕ ಪ್ರತಿಭಟನೆಗಳಂಥ ಜನಪರ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಗಮನ ಸೆಳೆಯಲು ವಿಫಲವಾಗುತ್ತಿದೆಯೇನೋ ಅನ್ನಿಸುತ್ತಿದೆ. ಪ್ರಚೋದನಕಾರಿ ಭಾಷಣವು ಗ್ಯಾಸ್ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಗಿಂತ ಮಹತ್ವದ ಸುದ್ದಿಯಾಗಿ ಪ್ರಕಟವಾಗುವುದಕ್ಕೂ ಇದನ್ನೇ ಕಾರಣವಾಗಿ ಪರಿಗಣಿಸಬೇಕಾಗುತ್ತದೆ.
   ಮೀಡಿಯಾ ಮೋರ್ ಕೀನ್ ಆನ್ ಫ್ಯಾಶನ್ ಶೋಸ್ ದಾನ್ ಫಾರ್ಮರ್ಸ್ ಸೂಸೈಡ್ಸ್ (ರೈತರ ಆತ್ಮಹತ್ಯೆಗಿಂತ ಫ್ಯಾಶನ್ ಶೋಗಳ ಮೇಲೆಯೇ ಮಾಧ್ಯಮಗಳಿಗೆ ಹೆಚ್ಚು ಆಸಕ್ತಿ) ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ಲೇಖನ ಬರೆದು ಮಾಧ್ಯಮ ಜಗತ್ತಿನ ತಪ್ಪುಗಳನ್ನು ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕ ಮತ್ತು ಪ್ರಮುಖ ಪತ್ರಕರ್ತ ಪಿ. ಸಾಯಿನಾಥ್ ಅನಾವರಣಗೊಳಿಸಿದ್ದರು. ಇದೀಗ ತಮಿಳುನಾಡಿನ ರೈತರು ಪತ್ರ ಬರೆದಿದ್ದಾರೆ. ವಿಷಾದ ಏನೆಂದರೆ, ಮಾಧ್ಯಮ ರಂಗವು ಈ ಪತ್ರವನ್ನು ಎದುರಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತದೆಂದು ನಿರೀಕ್ಷಿಸುವುದಕ್ಕೆ ಯಾವ ಆಧಾರಗಳೂ ಕಾಣಿಸುತ್ತಿಲ್ಲ.

1 comment:

  1. ಕಾರ್ಪೊರೇಟ್ ಮಾಧ್ಯಮಗಳ ವರ್ಗಗುಣ ಪದೇ ಪದೇ ಸಾಬೀತಾಗುತ್ತಿದೆ. ಇವರಿಗೆ ಬಹುಜನರ ಹಿತಕ್ಕಿಂತ ಉಳ್ಳವರ ಹಿತ ಮುಖ್ಯವಾಗಿದೆ. ಜನರ ಸಮಸ್ಯೆಗಿಂತ ಬ್ರೇಕಿಂಗ್, ಕ್ರೈಮ್, ಸೆಕ್ಸ್ ಈ ವಿಚಾರಗಳಿಗೆ ಒತ್ತು ಹೆಚ್ಚಾಗಿದೆ. ಇದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ದೊಡ್ಡ ಅಡ್ಡಿ. ದುಡಿಯುವ ಜನರ ಪರವಾಗಿ ಮಾಧ್ಯಮಗಳ ಮಾತನಾಡುವ ಅನಿವಾರ್ಯತೆಯನ್ನು ಸೃಷ್ಟಿಸುವ ಒಂದು ಸಾಂಸ್ಕೃತಿಕ ಕ್ರಾಂತಿಯಾಗುವ ಅಗತ್ಯವಿದೆ.

    ReplyDelete