Monday, December 2, 2013

ಕಳೆದು ಹೋದ ನೆಮ್ಮದಿಯನ್ನು ಮರಳಿಸಿ ಅಂದರೆ ಏನು ಮಾಡಬಲ್ಲೆವು?

   “..ಆರುಷಿ ತಲ್ವಾರ್ ಮತ್ತು ಶಂಕರರಾಮನ್ ಹತ್ಯಾ ಪ್ರಕರಣಗಳ ಕುರಿತಂತೆ ಈ ವಾರ ಎರಡು ತೀರ್ಪುಗಳು ಹೊರಬಿದ್ದುವು. ಆರುಷಿ ತಲ್ವಾರ್ ಪ್ರಕರಣದಲ್ಲಿ, ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಗಳನ್ನು ಪರಿಗಣಿಸಿ ಆರುಷಿಯ ಹೆತ್ತವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು. ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ  ನೀಡಿದುದರಿಂದ ಆರೋಪಿ ಗಳನ್ನು ಖುಲಾಸೆಗೊಳಿಸಲಾಯಿತು. ಆರುಷಿಯ ಕೊಲೆಯು ಮನೆಯೊಳಗೆ ನಡೆದಿದ್ದರೆ ಶಂಕರರಾಮನ್‍ರ ಹತ್ಯೆಯು ಪ್ರಸಿದ್ಧ ಕಾಂಚಿ ಪುರಮ್ ದೇವಾಲಯದ ಆವರಣದಲ್ಲಿ ನಡೆದಿತ್ತು. ಬಹುಶಃ, ಕೋರ್ಟು ಕಲಾಪದಲ್ಲಿ ಹಣ ಬಲ ಮತ್ತು ವ್ಯಕ್ತಿ ಪ್ರಭಾವವು ಪರಿಣಾಮ ಬೀರಬಲ್ಲುದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ..”
   ಚೆನ್ನೈನ ಪಾರ್ಥಸಾರಥಿ ಎಂಬವರು ದಿ ಹಿಂದೂ ಪತ್ರಿಕೆಯಲ್ಲಿ ನ. 30ರಂದು ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದಿರುವವರು ಖಂಡಿತ ಇದ್ದಾರೆ. ‘ಸತ್ಯ ಗೆದ್ದಿದೆ, ಧರ್ಮ ಜಯಶಾಲಿಯಾಗಿದೆ..' ಎಂದು ನ. 28ರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಪುಟದ ಜಾಹೀರಾತಿನಲ್ಲಿ ಜಯೇಂದ್ರ ಸರಸ್ವತಿಯವರು ಹೇಳಿಕೊಂಡಾಗ, ‘ಸತ್ಯಕ್ಕೆ ಸೋಲಾಗಿದೆ' ಎಂದು ತಲ್ವಾರ್ ದಂಪತಿಗಳು ಘೋಷಿಸಿದರು. ಒಂದು ಕಡೆ ಸಿಹಿ ಹಂಚಿಕೆ ನಡೆಯಿತು. ಇನ್ನೊಂದು ಕಡೆ ಕಣ್ಣೀರು ಹರಿಯಿತು. ‘ಮಧ್ಯ ವಯಸ್ಸನ್ನು ದಾಟಿದ ಮತ್ತು ಬಿಳಿಗಡ್ಡದ ರಾಜೇಶ್ ತಲ್ವಾರ್‍ರಲ್ಲಿ ಇಬ್ಬರನ್ನು ಒಂದೇ ಏಟಿಗೆ ಕೊಲ್ಲುವ ಸಾಮಥ್ರ್ಯ ಇದೆಯೇ? ಹೇಮರಾಜ್‍ನನ್ನು ಕೊಲ್ಲುವಾಗ ಅಥವಾ ಆರುಷಿಯನ್ನು ಕೊಲ್ಲುವಾಗ ಅವರಿಬ್ಬರಿಂದ ಯಾವ ಪ್ರತಿರೋಧಗಳೂ ಎದುರಾಗಿಲ್ಲವೇ? ಒಬ್ಬರನ್ನು ಕೊಲ್ಲುವಾಗ ಇನ್ನೊಬ್ಬರು ತಮ್ಮ ಸರದಿಗಾಗಿ ಕಾಯುತ್ತಾ ನಿಂತರೇ..’ ಎಂಬ ಪ್ರಶ್ನೆಗಳಿಂದ ಹಿಡಿದು ಹತ್ತು-ಹಲವು ಬಗೆಯ ಅನುಮಾನಗಳು ಮಾಧ್ಯಮಗಳಲ್ಲೂ ಸಾರ್ವಜನಿಕರಲ್ಲೂ ಕಾಣಿಸಿಕೊಂಡವು. ಕೇವಲ ಊಹೆಗಳ ಆಧಾರದಲ್ಲಿ ಅಥವಾ ಸಾಂದರ್ಭಿಕ ಪುರಾವೆಗಳನ್ನು ಮುಂದಿಟ್ಟುಕೊಂಡು ಶಿಕ್ಷೆ ಕೊಡುವ ಕ್ರಮ ತಪ್ಪು ಅನ್ನಲಾಯಿತು. ಅದೇ ವೇಳೆ, ‘ಜಯೇಂದ್ರ ಸರಸ್ವತಿ ಸಹಿತ ಎಲ್ಲ 23 ಆರೋಪಿಗಳೂ ನಿರಪರಾಧಿಗಳು ಎಂದಾದರೆ, ಶಂಕರರಾಮನ್‍ರನ್ನು ಕೊಂದವರು ಯಾರು..’ ಎಂಬ ಪ್ರಶ್ನೆಯನ್ನು ಮಾಧ್ಯಮಗಳಲ್ಲಿ ಅನೇಕರು ಎತ್ತಿದರು. ದೃಕ್‍ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ತಪ್ಪು-ಒಪ್ಪುಗಳು ಚರ್ಚೆಗೀಡಾದುವು. ಪ್ರಕರಣವೊಂದನ್ನು ಬೇರೆ ಬೇರೆ ನ್ಯಾಯಾಧೀಶರುಗಳು ನೋಡುವ ವಿಧಾನ, ದೃಕ್‍ಸಾಕ್ಷ್ಯಗಳನ್ನು ಬಲವಾಗಿ ನೆಚ್ಚಿಕೊಳ್ಳುವವರು ಮತ್ತು ಸನ್ನಿವೇಶವನ್ನು ನೋಡಿಕೊಂಡು ತೀರ್ಮಾನಿಸುವವರು, ಅದರ ಸಾಧಕ-ಬಾಧಕಗಳು.. ಎಲ್ಲವೂ ಚರ್ಚೆಗೆ ಬಂದುವು.
ಶಂಕರರಾಮನ್
ಆರುಷಿ
   ಈ ಎರಡೂ ಹೆಸರುಗಳು ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೆ ಒಳಗಾಗಿದೆ. ತಮಿಳುನಾಡಿನ ಕಾಂಚಿಪುರದ ಶ್ರೀ ವರದ ರಾಜ ದೇವಸ್ಥಾನದ ವ್ಯವಸ್ಥಾಪಕ ಶಂಕರರಾಮನ್‍ರು 2004 ಸೆ. 3ರಂದು ದೇವಾಲಯದ ಆವರಣದಲ್ಲಿ ಕೊಲೆಯಾಗಿ ಪತ್ತೆಯಾಗುವುದಕ್ಕಿಂತ ಮೊದಲೇ ಅವರು ಕಾಂಚಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರದ ಆರೋಪ ಹೊರಿಸಿದ್ದರು. ರಾಮನ್‍ರ ಪತ್ನಿ ಪದ್ಮ ಮತ್ತು ಮಗ ಆನಂದ ಶರ್ಮಾ ಸೇರಿದಂತೆ ಕುಟುಂಬ ಸದಸ್ಯರು ಕೊಲೆ ಆರೋಪವನ್ನು  ಕಂಚಿಶ್ರೀಗಳ ಮೇಲೆ  ಹೊರಿಸಿದರು. 2004 ನ. 11ರಂದು ಹಿರಿಯ ಶ್ರೀಗಳಾದ ಜಯೇಂದ್ರ ಸರಸ್ವತಿ ಮತ್ತು 2005 ಜನವರಿ 10ರಂದು ಕಿರಿಯ ಶ್ರೀಗಳನ್ನು ಬಂಧಿಸಲಾಯಿತು. ಜಯಲಲಿತಾರ ಅಧಿಕಾರಾವಧಿಯಲ್ಲಿ ನಡೆದ ಈ ಬಂಧನ ಕ್ರಮವು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. 8 ವರ್ಷಗಳಲ್ಲಿ ಮೂವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದರು. ಶಂಕರರಾಮನ್‍ರ ಪತ್ನಿ, ಮಗ ಸಹಿತ 189 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಆದರೆ ವಿಚಾರಣೆಯ ವೇಳೆ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದರು. ಈ ಮೊದಲು ಪೆರೇಡ್‍ನಲ್ಲಿ ಆರೋಪಿಗಳನ್ನು ಗುರುತಿಸಿದ್ದ ಸಾಕ್ಷಿಗಳೇ ಕೋರ್ಟ್‍ನಲ್ಲಿ ನ್ಯಾಯಾಧೀಶರ ಎದುರು ಅವರನ್ನು ಗುರುತಿಸಲು ವಿಫಲರಾದರು. ಇದನ್ನೇ ನೆಪವಾಗಿಸಿ ಕೋರ್ಟು ಎಲ್ಲ ಆರೋಪಿಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಆರುಷಿ ಪ್ರಕರಣ ಹಾಗಲ್ಲ. 2008 ಮೇ 16ರಂದು ಹತ್ಯೆಗೀಡಾದ ದಿನದಿಂದಲೂ ಈ ಹುಡುಗಿ ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೊಳಗಾಗಿದ್ದಾಳೆ. ಮಾಧ್ಯಮಗಳು ಹತ್ತು-ಹಲವು ಕತೆಗಳನ್ನು ಈ ಹುಡುಗಿಯ ಸುತ್ತ ಹೆಣೆದಿವೆ. ನ್ಯಾಯ ಮೂರ್ತಿ ಅಲ್ತಮಶ್ ಕಬೀರ್ ಮತ್ತು ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ನ್ಯಾಯಾಂಗ ಪೀಠವು 2008 ಜುಲೈ 22ರಂದು ಈ ಬಗ್ಗೆ ಮಾಧ್ಯಮಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ತಲ್ವಾರ್ ಕುಟುಂಬದ ವಿರುದ್ಧ ನಿರಾಧಾರ ಕತೆಗಳನ್ನು ಹೆಣೆಯಬೇಡಿ ಎಂದಿದ್ದರು. ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯು 2008ರಲ್ಲಿ ಆರುಷಿಯ ಸುತ್ತ ಚಿತ್ರ ನಿರ್ಮಾಣ ಮಾಡಲು ಮುಂದಾದಾಗ, ಮಕ್ಕಳ ರಕ್ಷಣೆಗಿರುವ ರಾಷ್ಟ್ರೀಯ ಆಯೋಗಕ್ಕೆ  ನೂಪುರ್ ತಲ್ವಾರ್ ದೂರು ಕೊಟ್ಟಿದ್ದರು. ಟೆಲಿಫಿಲ್ಮ್ ಮಾಡದಂತೆ ತಡೆಯಬೇಕೆಂದು ಕೋರಿದ್ದರು. 2012ರಲ್ಲಿ ಜೈಲಿ ನಲ್ಲಿದ್ದಾಗ, ‘ಅರುಷಿ ಹತ್ಯೆಯ ಹಿಂದಿನ ರಹಸ್ಯ: ದುರದೃಷ್ಟವಂತ ತಾಯಿಯೋರ್ವಳ ಕತೆ..' ಎಂಬ ಹೆಸರಲ್ಲಿ ನೂಪುರ್ ತಲ್ವಾರ್ ಪುಸ್ತಕ ಬರೆಯಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದರು. ಅವರ ಜೈಲು ಕೊಠಡಿಯಿಂದ 17 ಪುಟಗಳ ಬರಹವನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ಬರೆಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂಬುದು ಪೊಲೀಸರ ವಾದವಾಗಿತ್ತು. ಇದಲ್ಲದೇ, ರಾಜೇಶ್ ತಲ್ವಾರ್‍ರ ಸಹೋದರಿ ವಂದನಾ ತಲ್ವಾರ್ ಮತ್ತು ಗೆಳೆಯರು, ತಲ್ವಾರ್ ದಂಪತಿಗಳ ಪರ ಆನ್‍ಲೈನ್ ಅಭಿಯಾನವನ್ನೇ ಆರಂಭಿಸಿದ್ದರು. ವೆಬ್‍ಸೈಟ್, ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ಗಳನ್ನು ಆರಂಭಿಸಿ, ತಲ್ವಾರ್ ದಂಪತಿಗಳ ಮುಗ್ಧತನವನ್ನು ಪ್ರಚಾರ ಮಾಡುತ್ತಿದ್ದರು.
   ಆದ್ದರಿಂದಲೇ, ಒಂದು ಪ್ರಕರಣದ ಬಗ್ಗೆ ತೀರ್ಪು ಕೊಡುವುದ ಕ್ಕಿಂತ ಮೊದಲು ನ್ಯಾಯಾಧೀಶರು ಯಾವೆಲ್ಲ ಎಚ್ಚರಿಕೆಗಳನ್ನು ಕೈಗೊಳ್ಳಬೇಕು, ಸಾಂದರ್ಭಿಕ ಸಾಕ್ಷ್ಯ ಮತ್ತು ದೃಕ್‍ಸಾಕ್ಷ್ಯಗಳಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು, ಒಂದು ವೇಳೆ ದೃಕ್‍ಸಾಕ್ಷ್ಯಗಳಗಳ ಅನುಪಸ್ಥಿತಿಯಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಬಹುದು.. ಎಂಬೆಲ್ಲ ಚರ್ಚೆಗಳಿಗೆ ಶಂಕರರಾಮನ್ ಮತ್ತು ಆರುಷಿ ಪ್ರಕರಣಗಳು ಇವತ್ತು ಕಾರಣವಾಗಿವೆ.
   ಅಂದಹಾಗೆ, ಬಲವಾದ ಪುರಾವೆಗಳಿಲ್ಲದೇ ತಲ್ವಾರ್ ದಂಪತಿ ಗಳನ್ನು ಶಿಕ್ಷಿಸಲು ಸಾಧ್ಯವೆಂದಾದರೆ, ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದದ್ದನ್ನೂ ಗಂಭೀರವಾಗಿ ಪರಿಗಣಿಸಬಹುದಲ್ಲವೇ? ಪ್ರಕರಣದ ಆರಂಭದಲ್ಲಿ ಈ ಎಲ್ಲ ಸಾಕ್ಷಿಗಳು ಶ್ರೀಗಳ ವಿರುದ್ಧ ಸಾಕ್ಷಿ ನುಡಿದಿದ್ದರು. ಪೊಲೀಸರ ಸಮ್ಮುಖದಲ್ಲಿ ಆರೋಪಿಗಳ ಗುರುತು ಹಿಡಿದಿದ್ದರು. ಆ ಬಳಿಕ 8 ವರ್ಷಗಳ ದೀರ್ಘ ಅವಧಿ ವರೆಗೆ ವಿಚಾರಣೆ ಮುಂದುವರಿಯಿತು. ಬಳಿಕ ಸಾಕ್ಷಿಗಳು ತಮ್ಮ ಈ ಹಿಂದಿನ ಸಾಕ್ಷ್ಯವನ್ನೇ ಅಲ್ಲಗಳೆದರು. ಆರೋಪಿಗಳ ಪರಿಚಯವಿಲ್ಲ ಅಂದರು. ನಿಜವಾಗಿ, ಈ ಸಾಕ್ಷಿಗಳು ಈ ಮೊದಲು ಏನು ಹೇಳಿದ್ದರು ಎಂಬುದು ನ್ಯಾಯಾಧೀಶರಿಗೆ ಗೊತ್ತಿಲ್ಲ ಎಂದಲ್ಲ. ಆದರೂ ಅವರು ಈ ನಿಲುವನ್ನು ಪುರಾವೆಯಾಗಿ ಪರಿಗಣಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದರು. ಆದರೆ, ಇದೇ ಉದಾರ ನಿಲುವು ಅರುಷಿ ಪ್ರಕರಣದಲ್ಲಿ ಕಾಣಿಸಿಯೇ ಇಲ್ಲ. ಅಲ್ಲಿನ ತೀರ್ಪಿಗೆ ಆಧಾರವಾಗಿರುವುದು ಸಾಂದರ್ಭಿಕ ಸಾಕ್ಷ್ಯಗಳು. ‘ಈ ದಂಪತಿಗಳಲ್ಲದೇ ಇನ್ನಾರೂ ಕೊಲೆ ಮಾಡಲು ಸಾಧ್ಯವಿಲ್ಲ..' ಎಂಬ ಊಹೆ ಆಧಾರಿತ ನಿಲುವುಗಳು. ತಿರುಗಿಬಿದ್ದ ಸಾಕ್ಷ್ಯಗಳನ್ನು ಪುರಸ್ಕರಿಸುವ ನ್ಯಾಯಾಲಯ ಒಂದು ಕಡೆಯಾದರೆ, ಸಾಂದರ್ಭಿಕ ಸಾಕ್ಷ್ಯವನ್ನೇ ನೆಚ್ಚಿಕೊಂಡು ಜೀವಾವಧಿ ಶಿಕ್ಷೆ ವಿಧಿಸುವ ನ್ಯಾಯಾಲಯ ಇನ್ನೊಂದು ಕಡೆ. ವಿಕಿಪೀಡಿಯಾದಲ್ಲಿ ಆರುಷಿ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಮನೆಯ ನಕ್ಷೆಯನ್ನು ತೋರಿಸಿ ಒಟ್ಟು ಪ್ರಕರಣ ಹೇಗೆ ನಡೆದಿರಬಹುದು ಎಂದೆಲ್ಲಾ ವಿವರಿಸುವ ಪ್ರಯತ್ನಗಳು ಅಲ್ಲಿ ನಡೆದಿವೆ. ರಾಜೇಶ್ ತಲ್ವಾರ್‍ರು ಗಾಲ್ಫ್ ಸ್ಟಿಕ್‍ನಿಂದ ಹೇಮರಾಜ್‍ಗೆ ಮೊದಲು ಏಟು ಕೊಟ್ಟು ಎರಡನೇ ಬಾರಿಯ ಏಟನ್ನು ಆತ ತಪ್ಪಿಸುವಾಗ ಆ ಏಟು ಆರುಷಿಗೆ ಬಿದ್ದಿರಬಹುದು ಎಂದೆಲ್ಲಾ ಊಹಿಸಲಾಗಿದೆ. ಹೇಮ್‍ರಾಜ್‍ರ ಮೊಬೈಲ್ ಫೋನ್ ಈ ವರೆಗೂ ಪತ್ತೆಯಾಗಿಲ್ಲ. ಆರುಷಿಯ ಮೊಬೈಲ್ ಪತ್ತೆಯಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಅಷ್ಟಕ್ಕೂ, ಅತ್ಯಂತ ಬುದ್ಧಿವಂತಿಕೆಯಿಂದ ಈ ಕೊಲೆಯನ್ನು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಆ ಕೊಲೆಯ ಹೊಣೆಯನ್ನು ಹೆತ್ತವರ ಮೇಲೆಯೇ ಹೊರಿಸಬೇಕೆಂದಿಲ್ಲವಲ್ಲ. ಅಪರಾಧವು ಸಂಶಯಾತೀತವಾಗಿ ಸಾಬೀತಾಗದೇ ಶಿಕ್ಷಿಸುವ ಕ್ರಮ ರೂಢಿಗೆ ಬಂದರೆ ಏನಾದೀತು? ನಿರಪರಾಧಿಗಳು ಶಿಕ್ಷೆಗೆ ಒಳಗಾಗದಂತೆ ಗರಿಷ್ಠ ಪ್ರಯತ್ನಿಸಬೇಕಾದುದು ನ್ಯಾಯಾಲಯಗಳ ಹೊಣೆಗಾರಿಕೆಯಲ್ಲವೇ? ಕಂಚಿಶ್ರೀಗಳ ಪ್ರಕರಣದಲ್ಲಿ ನ್ಯಾಯಾಲಯ ತೋರಿದ ವಿಶಾಲತೆಯನ್ನು ಆರುಷಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೋರದಿರುವುದನ್ನು ಹೇಗೆ ವಿಶ್ಲೇಷಿಸಬಹುದು?
   ಕೊಲೆ ಆರೋಪವನ್ನು ಹೊತ್ತು ಕೊಳ್ಳುವುದು ಸಣ್ಣ ಸಂಗತಿಯಲ್ಲ. ಅದರಲ್ಲೂ ತನ್ನ ಮಗಳನ್ನೇ ಕೊಂದ ಆರೋಪವನ್ನು ಹೊತ್ತು ಕೊಂಡು ಜೈಲು ಸೇರುವ ಸಂದರ್ಭ ಅತ್ಯಂತ ದಯನೀಯವಾದದ್ದು. ಒಂದು ಕಡೆ, ತಲ್ವಾರ್ ದಂಪತಿಗಳಿಗೆ ಇರುವ ಏಕೈಕ ಮಗಳೇ ಕಳೆದು ಹೋಗಿದ್ದಾಳೆ. ಇನ್ನೊಂದು ಕಡೆ, ಕೊಲೆಗಾರರು ಎಂಬ ಹಣೆಪಟ್ಟಿ ಸಿಕ್ಕಿದೆ. ಆ ಮೂಲಕ ಇರುವ ಘನತೆ, ಗೌರವಗಳೂ ಮಣ್ಣು ಪಾಲಾಗಿವೆ. ಇದು ಕೇವಲ ತಲ್ವಾರ್ ದಂಪತಿಯೋರ್ವರ ಸಮಸ್ಯೆಯಲ್ಲ. ಆರೇಳು ತಿಂಗಳುಗಳ ವರೆಗೆ ಜೈಲಲ್ಲಿ ಕಳೆದ ಕಂಚಿಶ್ರೀಗಳಿಗೂ ಇದು ಅನ್ವಯವಾಗುತ್ತದೆ. ಅವರು ತಪ್ಪೇ ಮಾಡಿಲ್ಲವೆಂದ ಮೇಲೆ ಅವರು ಬಂಧನದ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ನೋವು, ಅವಮಾನಗಳಿಗೆ ಯಾರು ಹೊಣೆ? ಈಗಿನ ತೀರ್ಪಿನಿಂದ ಅದನ್ನು ಅವರಿಗೆ ಮರಳಿಸಲು ಸಾಧ್ಯವೇ?
   ‘ಸತ್ಯಕ್ಕೆ ಸೋಲಾಗಿದೆ..’ ಎನ್ನುತ್ತಾ ಜೈಲಿನೊಳಗೆ ಹೋದ ತಲ್ವಾರ್ ದಂಪತಿಗಳು ಮತ್ತು ‘ಸತ್ಯ ಗೆದ್ದಿದೆ’ ಅನ್ನುವ ಜಾಹೀ ರಾತು ಕೊಟ್ಟ ಕಂಚಿಶ್ರೀಗಳನ್ನು ನೋಡುವಾಗ ಮನಸು ಗೊಂದಲಕ್ಕೆ ಒಳಗಾಗುತ್ತದೆ. ಸತ್ಯಕ್ಕೆ ಸೋಲಾಗದಿರಲಿ ಅನ್ನಿಸುತ್ತದೆ.

No comments:

Post a Comment