Thursday, August 27, 2015

ಕುರ್‍ಆನ್, ಬೈಬಲ್, ಗೀತೆ, ಗಾಂಧಿ ಮತ್ತು ಮಾವೋವಾದಿ..

ಜೋಳಿ ಚಿರಯತ್
      “ನನ್ನ ಕಂಪ್ಯೂಟರನ್ನು ಅವರು ತೆರೆದರು. ನಾನು ನಿಂತೇ ಇದ್ದೆ. ತೆರೆದ ಕೂಡಲೇ ಕಂಪ್ಯೂಟರ್ ಡೆಸ್ಕ್ ಟಾಪ್(Desktop)ನಲ್ಲಿ
ನನ್ನ ಹೆಸರಿನಲ್ಲಿದ್ದ ಫೋಲ್ಡರ್ ಕಾಣಿಸಿತು. ಅವರ ಮುಖದಲ್ಲಿ ಒಂದು ಬಗೆಯ ಕುತೂಹಲ. ಕ್ಲಿಕ್ ಮಾಡಿದರು.Oppose the worship of the books (ಪುಸ್ತಕ ಪೂಜೆಗೆ ವಿರೋಧ) ಎಂಬ ಶೀರ್ಷಿಕೆಯಲ್ಲಿ ಮಾವೋ ಬರೆದಿರುವ ಲೇಖನ ಅವರ ಕಣ್ಣಿಗೆ ಬಿತ್ತು. ತೆರೆದರು. ನನ್ನತ್ತ ವ್ಯಂಗ್ಯಭರಿತವಾಗಿ ದೃಷ್ಟಿ ಹಾಯಿಸಿದರು. ಏನನ್ನೋ ಪತ್ತೆ ಹಚ್ಚಿದ ಉತ್ಸಾಹದೊಂದಿಗೆ ಅವರು ಪ್ರಶ್ನಿಸಿದರು -
   ‘ಮಾವೋವಾದಿಯಲ್ಲ ಎಂದಲ್ಲವೇ ನೀವು ಈ ವರೆಗೆ ನಮ್ಮೊಂದಿಗೆ ವಾದಿಸಿದ್ದು? ಹಾಗಾದರೆ ಇದೇನು?'
   ನಾನು ಮರು ಪ್ರಶ್ನಿಸಿದೆ, ‘ಏನು?' ಅವರೂ ಬಿಡಲಿಲ್ಲ - ‘ನೀವೇ ಹೇಳಿ?’ ನಾನು ಹೇಳಿದೆ, ‘ಒಂದು ಲೇಖನ’. ಅವರು ಮುಂದುವರಿಸಿದರು, ‘ನೀವಿದನ್ನು ಯಾಕೆ ಓದುತ್ತೀರಿ?’ ನಾನಂದೆ, ‘ಯಾಕೆ, ಓದಬಾರದೇ? ಮಾವೋನ ಕೃತಿಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಅಲ್ಲದೇ ಇಂಟರ್‍ನೆಟ್‍ನಲ್ಲಿ ಈ ಲೇಖನ ಎಲ್ಲರಿಗೂ ಲಭ್ಯವಿದೆ. ಇದು ಎಂದಲ್ಲ, ಮಾವೋನ ಧಾರಾಳ ಪುಸ್ತಕಗಳನ್ನು ಇಂಟರ್‍ನೆಟ್‍ನಲ್ಲಿ ಓದಬಹುದು. ಹೀಗಿರುವಾಗ..!’ ನನ್ನ ಈ ಪ್ರಶ್ನೆಗೆ ಅವರು ನೇರ ಉತ್ತರವನ್ನು ನೀಡಲಿಲ್ಲ. ಅದರ ಬದಲು, ‘ನೀವೇಕೆ ಇವೆಲ್ಲವನ್ನೂ ಓದುತ್ತೀರಿ? ಅಲ್ಲದೇ ನೀವು ದಲಿತರ ಸಮಸ್ಯೆಗಳು ಮತ್ತು ಆದಿವಾಸಿಗಳ ಹೋರಾಟಗಳನ್ನು ಬೆಂಬಲಿಸುತ್ತಿದ್ದೀರಿ. ಅವರಿಗೆ ಬೆಂಬಲವಾಗಿ ಚಳವಳಿಯಲ್ಲಿ ಭಾಗವಹಿಸುತ್ತೀರಿ. ಮಾತಾಡುತ್ತೀರಿ. ಇವೆಲ್ಲ ಏನು..’ ಎಂದು ಪ್ರಶ್ನಿಸಿದರು. ಅವರ ಈ ಪ್ರಶ್ನೆಯಲ್ಲಿಯೇ ದಲಿತರು, ಆದಿವಾಸಿಗಳ ಹಕ್ಕುಗಳಿಗಾಗಿ ದನಿಯೆತ್ತುವುದು ಮಾವೋ ವಾದ ಎಂಬ ಸೂಚನೆ ಇತ್ತು. ನನಗದು ಹಿಡಿಸಲಿಲ್ಲ. ಆದಿವಾಸಿಗಳು ದಲಿತರು ಅಥವಾ ಮರ್ದಿತ ಜನಸಮೂಹದ ಹಕ್ಕುಗಳಿಗಾಗಿ ಹೋರಾಡುವುದು ಯಾಕೆ ಮಾವೋವಾದ ಆಗಬೇಕು? ಮನುಷ್ಯರ ಸಂಕಟಗಳನ್ನೂ ನಾವೇಕೆ ಎಡ-ಬಲ, ಆ ವಾದ- ಈ ವಾದ ಎಂದು ವಿಭಜಿಸಬೇಕು? ಈ ವಾದಗಳ ಹೊರತಾಗಿ ಚಳವಳಿಗಳನ್ನು ಕಟ್ಟಲಾಗದೇ, ನೋಡಬಾರದೇ.. ಎಂದೆಲ್ಲಾ ತೋಚಿತು. ನಾನು ಪ್ರತಿಭಟನಾ ದನಿಯಲ್ಲಿ ಹೇಳಿದೆ,
    ಬೀದಿಗಿಳಿದು ಸದಾ ಹೋರಾಟ ನಿರತರಾಗಬೇಕೆಂದು ಮನುಷ್ಯರಾರೂ ಬಯಸುವುದಿಲ್ಲ. ಅದರಲ್ಲಿ ಒಂದು ಬಗೆಯ ರಿಸ್ಕ್ ಇದೆ. ಜೀವ ಭಯ, ಬಂಧನ ಭೀತಿಗಳಿರುತ್ತವೆ. ಆರಾಮ ಜೀವಿಯಾದ ಮನುಷ್ಯ ಇವೆಲ್ಲವನ್ನು ಬರಿದೇ ಬಯಸುತ್ತಾನೆಂದು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಮನುಷ್ಯ ಬೀದಿಗಿಳಿಯುತ್ತಾನೆಂದಾದರೆ ಅದೇಕೆಂದು ನೀವೇಕೆ ಆಲೋಚಿಸುತ್ತಿಲ್ಲ? ಹೋರಾಟಗಾರರಲ್ಲಿ ಪ್ರಶ್ನಿಸುವುದಕ್ಕಿಂತ ಹೋರಾಟಗಳೇಕೆ ರೂಪ ತಾಳುತ್ತವೆ ಎಂದೂ ಆಲೋಚಿಸಬಹುದಲ್ಲವೇ? ಸಮಯವನ್ನು ಕೊಲ್ಲುವುದಕ್ಕಾಗಿ ನಾನು ಹೋರಾಟ ನಿರತಳಾಗಿರುವೆನೆಂಬುದು ನಿಮ್ಮ ಅಭಿಪ್ರಾಯವೇ? ನಾನು ಹೋರಾಡುತ್ತಿರುವುದು ಜನರ ಹಕ್ಕುಗಳಿಗಾಗಿ. ಅದರಲ್ಲಿ ಮಾವೋವಾದವನ್ನೋ ಇನ್ನೇನನ್ನೋ ಹುಡುಕುವುದು ನಿಮ್ಮ ಸಮಸ್ಯೆ. ನಾನು ಅವರ ಹಕ್ಕುಗಳ ಪರ ಯಾವತ್ತೂ ನಿಲ್ಲುವೆ. ನೀವು ನನ್ನನ್ನು ಹೇಗೆ ನೋಡಿದರೂ ಸರಿ. ನೀವು ದಲಿತರು - ಆದಿವಾಸಿಗಳು ಎಂದು ಹೇಳದಿರಲ್ಲ, ಅವರು ಎಲ್ಲ ಕಾಲಗಳಲ್ಲೂ ಅದೇ ಸ್ಥಿತಿಯಲ್ಲಿ ಯಾಕಿದ್ದಾರೆ ಎಂದು ಆಲೋಚಿಸಿದ್ದೀರಾ? ಸ್ವಾತಂತ್ರ್ಯ ಸಿಕ್ಕಿ 68 ವರ್ಷಗಳಾದರೂ ಅವರ ಸ್ಥಿತಿಯಲ್ಲಿ ಸುಧಾರಣೆಯಾಗದೇ ಇರುವುದು ಯಾತಕ್ಕಾಗಿ? ಹೀಗಿರುವಾಗ ಸಮಾಜಕ್ಕೆ ಹೊಣೆಗಾರಿಕೆಗಳಿಲ್ಲವೇ? ಆ ಹೊಣೆಗಾರಿಕೆಯ ಪ್ರಜ್ಞೆಯಿಂದ ಮಾತಾಡುವುದು ಮಾವೋವಾದವೇ... ?’
     2015 ಜನವರಿ 29ರಂದು 6 ಮಂದಿ ಪೊಲೀಸರ ತಂಡ ತನ್ನ ಮನೆಯ ಮೇಲೆ ನಡೆಸಿದ ದಿಢೀರ್ ದಾಳಿ, ಪರಿಶೀಲನೆ, ಪ್ರಶ್ನಾವಳಿಗಳ ಅನುಭವಗಳನ್ನು ಮಾನವ ಹಕ್ಕು ಹೋರಾಟಗಾರ್ತಿ ಜೋಳಿ ಚಿರಯತ್ ಹೀಗೆ ಹೇಳುತ್ತಾ ಹೋಗುತ್ತಾರೆ..
    ಜನವರಿ 29ರಂದು ಸಂಜೆ ಹೊರಗೆ ಹೋಗಿದ್ದ ನಾನು ಮರಳಿ ಬರುವಾಗ ಮನೆಯ ಎದುರು ಪೊಲೀಸರಿದ್ದರು. ಅವರಲ್ಲಿ ಓರ್ವರು ಮಹಿಳಾ ಪೇದೆ. ‘ಮನೆ ಪರಿಶೀಲನೆ ನಡೆಸಬೇಕಿದೆ’ ಎಂದರು. ನಾನು ಒಮ್ಮೆ ಅವಾಕ್ಕಾದೆ. ಪರಿಶೀಲನೆ ನಡೆಸುವಂಥದ್ದು ಮನೆಯೊಳಗೆ ಏನಿದೆ ಅಂದುಕೊಂಡೆ. ಆದರೂ ‘ಸರ್ಚ್ ವಾರಂಟ್ ಇದೆಯಾ’ ಎಂದು ಪ್ರಶ್ನಿಸಿದೆ. ‘ಓಹ್, ಇದು ಮೇಲಿನವರ ನಿರ್ದೇಶನ’ ಎಂದು ಹೇಳುತ್ತಾ ನನ್ನ ಹಿಂದೆಯೇ ಅವರು ಮನೆಯೊಳಗೆ ಸೇರಿಕೊಂಡರು. ಮನೆಯಂತೂ ಅಸ್ತವ್ಯಸ್ತವಾಗಿತ್ತು. ಒಂದಷ್ಟು ಮುಜುಗರವೂ ಆಯಿತು. ಕುಳಿತುಕೊಳ್ಳಿ ಎಂದು ನಾನು ಹೇಳುತ್ತಿರುವಂತೆಯೇ, ‘ಮ್ಯಾಡಂ ನಿಮ್ಮ ಮೊಬೈಲ್ ಒಮ್ಮೆ ಕೊಡಿ’ ಎಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಪಡೆದುಕೊಂಡರು. ನನ್ನೊಳಗಿನ ಗೊಂದಲದಿಂದಾಗಿ ಪ್ರತಿಭಟಿಸುವ ಪ್ರಜ್ಞೆಯೂ ಕ್ಷಣ ಸ್ಥಗಿತಗೊಂಡಿತ್ತು. ನಿಜವಾಗಿ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ನೇರ ದಾಳಿ. ‘ಯಾಕೆ ಪೋನ್ ಪಡೆದುಕೊಂಡಿರಿ' ಎಂದು ಪ್ರಶ್ನಿಸಿದೆ. ‘ನೋಡಲು' ಎಂಬ ಸಾಮಾನ್ಯ ಉತ್ತರ. ‘ಅದು ನನ್ನ ವೈಯಕ್ತಿಕ ಪೋನ್. ನಿಮ್ಮ ಕ್ರಮ ಸಾಧುವೇ..’ ಎಂದು ಮರು ಪ್ರಶ್ನಿಸಿದೆ. ಉತ್ತರವಿಲ್ಲ. ಅದರ ಬದಲು ಮೊಬೈಲ್ ಪರಿಶೀಲನೆಯಲ್ಲಿ ಅವರು ಮಗ್ನರಾದರು. ಹೊರಹೋದ ಮತ್ತು ಒಳಬಂದ ಕರೆಗಳನ್ನು ಪರಿಶೀಲಿಸತೊಡಗಿದರು. ನನ್ನ ಕಾಂಟಾಕ್ಟ್ಸ್ ಗಳನ್ನು ತಪಾಸಿಸಿದರು. ಕೆಲವು ನಂಬರ್ ಮತ್ತು ಹೆಸರುಗಳನ್ನು ಬರೆದು ಕೊಂಡರು. ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಬಗ್ಗೆ ಇಂಟೆಲಿಜೆನ್ಸ್ ವಿಭಾಗವು ಏನೆಂದು ವರದಿ ಕೊಟ್ಟಿರಬಹುದು? ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದಿರಬಹುದೇ? ಮಾವೋವಾದಿ, ಉಗ್ರವಾದಿ.. ಏನಿರಬಹುದು? ಆ ವರದಿಯ ಆಧಾರದಲ್ಲೇ ಈ ಪರಿಶೀಲನೆ ನಡೆಯುತ್ತಿರಬಹುದಲ್ಲವೇ?
     ಓರ್ವ ನನ್ನನ್ನು ಎವೆಯಿಕ್ಕದೇ ನೋಡುತ್ತಿದ್ದ. ಬಹುಶಃ ಆ ತಂಡದ ಮನಃಶಾಸ್ತ್ರಜ್ಞನಿರಬೇಕು. ನನ್ನಲ್ಲಾಗುವ ಭಾವನೆಗಳ ಏರಿಳಿತಗಳನ್ನು ಓದುವ ಪ್ರಯತ್ನ ನಡೆಸುತ್ತಿರಬಹುದು. ನಾನೂ ಆತನನ್ನು ಅದೇ ರೀತಿಯಲ್ಲಿ ನೋಡಿದೆ. ಇದರ ಮಧ್ಯೆಯೇ ಅವರು, ‘ನಿಮಗೆ ಎಷ್ಟು ಮಾವೋವಾದಿಗಳ ಪರಿಚಯ ಇದೆ’ ಎಂದು ಪ್ರಶ್ನಿಸಿದರು. ನನಗೆ ನಗು ಬಂತು. ‘ಯಾರೂ ಕೂಡ ಈ ವರೆಗೆ ನಾನು ಮಾವೋವಾದಿ ಎಂದು ಹೇಳಿಕೊಂಡು ತಮ್ಮನ್ನು ಪರಿಚಯ ಮಾಡಿಕೊಂಡಿಲ್ಲ. ಹಾಗೆಯೇ, ಬಿಜೆಪಿಯೋ ಮಾವೋವಾದಿಯೋ ಕಾಂಗ್ರೆಸ್ಸೋ ಕಮ್ಯುನಿಸ್ಟೋ ಎಂದು ನೋಡಿ ಕೊಂಡು ನಾನು ಗೆಳೆತನವನ್ನೂ ಬೆಳೆಸಿಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕವರೆಲ್ಲ ಮನುಷ್ಯರು..’ ಎಂದೆ. ಮಾವೋವಾದಿಗಳನ್ನು ಸಂಪರ್ಕಿಸುವುದಕ್ಕಾಗಿಯೇ ವಿೂಸಲಾಗಿರುವ ಮೊಬೈಲ್ ಇದೆಯಾ ಎಂದು ತುಸು ಕುಚೋದ್ಯದಿಂದಲೇ ಪ್ರಶ್ನಿಸಿದರು. ನನ್ನಲ್ಲಿ ಇನ್ನೊಂದು ಮೊಬೈಲ್ ಇತ್ತು. ಅದನ್ನೂ ಕೊಟ್ಟೆ. ಅದರಿಂದಲೂ ಕೆಲವು ನಂಬರ್‍ಗಳನ್ನು ಬರೆದಿಟ್ಟುಕೊಂಡರು. ‘ನಿಮಗೇಕೆ ವೈಫೈ, ಕಂಪ್ಯೂ ಟರ್, ಪ್ರಿಂಟರ್’ ಎಂದೆಲ್ಲಾ ಪ್ರಶ್ನಿಸಿದರು. ಅಸಂಬದ್ಧ ಪ್ರಶ್ನೆ. ಒಂದು ನಗರವೇ ವೈಫೈ ಆಗಲು ತೀರ್ಮಾನಿಸಿರುವಾಗ ನಿಮಗೇಕೆ ವೈಫೈ ಎಂದು ಪ್ರಶ್ನಿಸುವುದಕ್ಕೆ ಏನರ್ಥವಿದೆ? ಪ್ರಿಂಟರ್‍ನ ಬಗ್ಗೆಯೂ ಅನುಮಾನ. ಈ ಮಧ್ಯೆ ನನ್ನ ಫೇಸ್‍ಬುಕ್ ತೆರೆಯುವಂತೆ ಕೇಳಿಕೊಂಡರು. ನನ್ನ ಜಿ ಮೇಲ್ ಅನ್ನು ತೆರೆದರು. ನನ್ನ ಮೊಬೈಲ್, ಕಂಪ್ಯೂಟರ್, ಜಿ ಮೇಲ್, ಫೇಸ್‍ಬುಕ್ ಸಹಿತ ಎಲ್ಲವೂ ಒಂದೊಂದಾಗಿ ಅವರ ಪಾಲಾಗತೊಡಗಿದುವು. ನಾನು ನಿಂತುಕೊಂಡೇ ಇದ್ದುದನ್ನು ನೋಡಿ ಅವರಲ್ಲೊಬ್ಬ ‘ಕುಳಿತುಕೊಳ್ಳಿ' ಎಂದು ಕುರ್ಚಿಯನ್ನು ತೋರಿಸಿದ. ನನ್ನ ಮನೆಯೊಳಗೇ ನಾನು ಅತಿಥಿ. ನನ್ನ ಮನೆ, ನನ್ನ ಈಮೇಲ್, ನನ್ನ ಮೊಬೈಲು, ನನ್ನ, ನನ್ನ.. ಎಲ್ಲವೂ ಅನ್ಯರ ಪಾಲಾದ ಅನುಭವ. ವೈಯಕ್ತಿಕ ಸ್ವಾತಂತ್ರ್ಯ ಅಂದರೇನು? ಖಾಕಿದಾರಿಗಳು ಪ್ರಶ್ನಿಸಿದರೆ ಮುಗಿಯುವ ಈ ಸ್ವಾತಂತ್ರ್ಯಕ್ಕಾಗಿ ಯಾಕೆ ಹೆಮ್ಮೆ ಪಡಬೇಕು? ಟ್ಯೂಶನ್‍ಗೆ ತೆರಳುವಾಗ, ‘ನಾನು ತುಸು ತಡವಾಗಿ ಬರುವೆ' ಎಂದು ಮಗ ಹೇಳಿದ್ದ. ಅವನಾದರೂ ಬಂದು ಕಾಲಿಂಗ್ ಬೆಲ್ ಒತ್ತಬಾರದೇ ಎಂದು ಆಸೆಪಟ್ಟೆ. ಮನೆಯೊಳಗಿನ ವಾತಾವರಣವು ನನ್ನನ್ನು ಕಟ್ಟಿ ಹಾಕಿದಂತಿತ್ತು. ಈ ಮಧ್ಯೆ ಪುಸ್ತಕಗಳಿರುವ ಕಪಾಟನ್ನು ಪರಿಶೀಲಿಸಲು ಓರ್ವರು ಪ್ರಾರಂಭಿಸಿದರು. ಅವರಿಗೆ ಬೇಕಾದ ಪುಸ್ತಕಗಳು ಸಿಕ್ಕದ್ದರಿಂದಲೋ ಏನೋ ಬೇರೆಲ್ಲಾದರೂ ಪುಸ್ತಕಗಳು ಇವೆಯಾ ಎಂದು ಪ್ರಶ್ನಿಸಿದರು. ನನ್ನ ಬೆಡ್‍ರೂಮ್‍ನಲ್ಲಿರುವ ಪುಟ್ಟ ಕಪಾಟನ್ನು ತೋರಿಸಿದೆ. ಬೆಡ್‍ರೂಮ್ ಎಷ್ಟು ಅಸ್ತವ್ಯಸ್ತವಾಗಿತ್ತು ಎಂದರೆ, ನನಗೇ ಅದರೊಳಗೆ ಹೋಗಲು ಮುಜುಗರವಾಯಿತು. ಇದರ ನಡುವೆಯೇ ನನ್ನ ಮೊಬೈಲ್ ವಿವರಗಳನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಎಂದೋ ಬಂದ ಸಂದೇಶವನ್ನು ಎತ್ತಿಕೊಂಡು ನನ್ನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ವಿೂಟಿಂಗ್ ನಡೆಯುವ ಬಗ್ಗೆ ಬಂದಿರುವ ಎಸ್.ಎಂ.ಎಸ್. ಅನ್ನು ತೋರಿಸಿ ಆ ಸಭೆಯ ಅಜೆಂಡ ಏನಾಗಿತ್ತು ಎಂದು ಪ್ರಶ್ನಿಸಿದರು. ನಿಜವಾಗಿ, ಆ ಸಭೆಗೆ ನಾನು ಹೋಗಿಯೇ ಇರಲಿಲ್ಲ. ಈ ಮಧ್ಯೆ ನನ್ನ ಬೆಡ್‍ರೂಮ್‍ನಿಂದ ನೋಟೀಸ್‍ಗಳು, ಕಾಗದಗಳು ಹೊರಗೆ ಬರುತ್ತಿದ್ದುವು. ಮಹಿಳಾ ಪೇದೆ ಅವನ್ನೆಲ್ಲಾ ತರುವುದು ಮತ್ತು ಅದನ್ನು ಪರಿಶೀಲಿಸಿ ವಿಭಜಿಸುವುದು ನಡೆಯುತ್ತಲೇ ಇತ್ತು. ನಿಜವಾಗಿ, ಆ ನೋಟೀಸುಗಳಲ್ಲಿ ಏನಿವೆ ಎಂಬುದು ನನಗೂ ಗೊತ್ತಿರಲಿಲ್ಲ. ನಾನು ಕಾರ್ಯಕ್ರಮಗಳಿಗೆ ಹೋದಾಗ ಸಿಕ್ಕ ನೋಟೀಸ್‍ಗಳು ಅವು. ಹೀಗಿರುವಾಗಲೇ ಮಾರ್ಕ್ಸಿಸ್ಟ್ ಸಿದ್ಧಾಂತದ ಪರಿಚಯ (Introduction of Marrkxist Philosophy) ಎಂಬ ಪುಸ್ತಕವನ್ನು ಕಪಾಟಿನಿಂದ ಹೊರತಂದು ನನ್ನ ಎದುರಿಗಿಟ್ಟರು. ‘ಹಾಗಾದರೆ ನೀವು ಇದನ್ನೆಲ್ಲ ಓದುತ್ತೀರಲ್ಲವೇ..' ಎಂದು ವ್ಯಂಗ್ಯಭರಿತವಾಗಿಯೇ ಕೇಳಿದರು. ನಾನು ನಕ್ಕೆ. ನನ್ನ ಕಪಾಟಿನಲ್ಲಿರುವ ಜಲಾಲುದ್ದೀನ್ ರೂಮಿಯವರ ಪುಸ್ತಕವನ್ನು ತೋರಿಸಿ, ‘ಸರ್, ನಾನು ಅದನ್ನೂ ಓದುವೆ' ಎಂದೆ.ಮಾರ್ಕ್ಸಿಸ್ಟ್ ಪುಸ್ತಕವನ್ನು ಕಾಲೇಜಿನಲ್ಲೂ ಓದಿಸಲಾಗುತ್ತದಲ್ಲವೇ? ಅದನ್ನು ನಿಷೇಧಿಸಿರುವಿರಾ ಎಂದು ಮತ್ತೂ ಕೇಳಿದೆ. ಅವರು ಉತ್ತರಿಸಲಿಲ್ಲ. ಅದರ ಬದಲು ಅವರು ಇನ್ನೊಂದು ಕಂಪ್ಯೂಟರ್‍ನತ್ತ ಗಮನ ಹರಿಸಿದರು. ಅದು ಮಗನದ್ದು. ಅದರ ಪಾಸ್‍ವರ್ಡ್ ಕೇಳಿದರು. ಗವರ್ನ್‍ಮೆಂಟ್ ಎಂಬ ಪಾಸ್‍ವರ್ಡ್ ಅನ್ನು ಕೇಳಿ ಅಚ್ಚರಿಪಟ್ಟರು. ‘ಮಗನೂ ಮಾವೋವಾದಿಯೇ’ ಎಂದು ಕೇಳಿದರು. ಜೊತೆಗೇ ಮನೆಯ ಬಾಗಿಲು, ಕಿಟಕಿ, ಅಡುಗೆ ಕೋಣೆ ಸಹಿತ ಎಲ್ಲದರ ಲೆಕ್ಕವನ್ನೂ ಬರೆದಿಟ್ಟುಕೊಂಡರು. ನಕ್ಷೆ ರಚಿಸಿದರು. ಕೊನೆಗೆ ಮನೆಯಿಂದ ಹೊರಡುವಾಗ ನನ್ನತ್ತ ತಿರುಗಿ, ‘ನೀವು ಮಾವೋವಾದಿ ಅಲ್ಲ ತಾನೇ..' ಎಂದು ಈ ಹಿಂದೆ ಕೇಳಿದ್ದನ್ನೇ ಮತ್ತೊಮ್ಮೆ ಕೇಳಿದರು. ನಾನು ನನ್ನ ಕಪಾಟಿನಲ್ಲಿರುವ ಪುಸ್ತಕಗಳ ಕಡೆಗೆ ತೋರಿಸಿ, ‘ಇದರಲ್ಲಿ ಕುರ್‍ಆನ್, ಬೈಬಲ್, ಗೀತೆ, ಗಾಂಧಿ, ಸೂಫಿಸಂ.. ಎಲ್ಲವೂ ಇದೆ. ಆದರೆ ಇದರಲ್ಲಿ ಏನಾದರೂ ಒಂದು ಆಗಿರುವೆಯಾ ಎಂದು ನೀವು ಪ್ರಶ್ನಿಸಿಲ್ಲವೇಕೆ? ಪ್ರಜಾತಂತ್ರದಲ್ಲಿ ಎಲ್ಲರಿಗೂ ಎಲ್ಲವನ್ನೂ ಓದುವ ಸ್ವಾತಂತ್ರ್ಯ ಇರಬೇಕಾಗಿದೆ. ಅದನ್ನೇಕೆ ನೀವು ಅಪರಾಧವಾಗಿ ಕಾಣುತ್ತೀರಿ..’ ಎಂದೆ. ನಕ್ಕರು. ಅವರನ್ನೇ ತುಸು ದೂರದ ವರೆಗೆ ಹಿಂಬಾಲಿಸಿದೆ. ‘ಇನ್ನೊಮ್ಮೆ ಬರುವಾಗ ಮೊದಲೇ ತಿಳಿಸಿ ಬನ್ನಿ’ ಅಂದೆ. ‘ಯಾಕೆ, ದಾಖಲೆ ಗಳನ್ನು ಬೇರೆಡೆಗೆ ಸಾಗಿಸಲಿಕ್ಕಾ’ ಎಂದು ಪ್ರಶ್ನಿಸಿದರು. ‘ಅಲ್ಲ, ಮನೆಯನ್ನು ಓರಣವಾಗಿಟ್ಟು ಸ್ವಾಗತಿಸುವುದಕ್ಕೆ..’ ಎಂದೆ..."
       ಭಾರತೀಯ ಚಲನಚಿತ್ರ ಮಂಡಳಿಯ (FTII) ಅಧ್ಯಕ್ಷರನ್ನಾಗಿ ಗಜೇಂದ್ರ ಚೌಹಾಣ್‍ರ ನೇಮಕವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಳೆದ ವಾರ  ಮಧ್ಯರಾತ್ರಿ ಬಂಧಿಸಿ ಕಠಿಣ ಕೇಸು ದಾಖಲಿಸಲಾದ ಘಟನೆಯನ್ನು ನೋಡುತ್ತಾ ಜೋಳಿ ಚಿರಯತ್ ಯಾಕೋ ನೆನಪಾದರು.

Wednesday, August 26, 2015

 ಅತ್ಯಾಚಾರಿಯ ಸುತ್ತ ಹೊಸ ಚರ್ಚೆಯನ್ನು ಹುಟ್ಟು ಹಾಕಿದ ಭ್ರೂಣ

     ಗುಜರಾತ್‍ನ ಸಬರಕಾಂತ್ ಜಿಲ್ಲೆಯ ಪ್ರೌಢಶಾಲೆಯ ಹುಡುಗಿಯೊಬ್ಬಳು ಅತ್ಯಾಚಾರದ ಇನ್ನೊಂದು ಮುಖವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಆ ಮುಖ ಅತ್ಯಂತ ಭಾವಾನಾತ್ಮಕವಾದುದು. `ಜೀವಿಸುವ ಹಕ್ಕು' ಎಂಬ ಸಹಜ ಮೌಲ್ಯದ ಅಸ್ತಿತ್ವವನ್ನೇ ಅಲುಗಾಡಿಸುವಂಥದ್ದು. ಇನ್ನಷ್ಟೇ ಕಣ್ಣು ಬಿಡಬೇಕಿರುವ ಮತ್ತು ಈ ಜಗತ್ತಿನಲ್ಲಿ ಬಾಳಿ-ಬದುಕುವುದಕ್ಕೆ ಸಕಲ ಹಕ್ಕುಗಳನ್ನೂ ಹೊಂದಿರುವ ಮಗುವನ್ನು (ಭ್ರೂಣ) ಉಳಿಸಿಕೊಳ್ಳಬೇಕೋ ಅಳಿಸಿಹಾಕಬೇಕೋ ಎಂಬುದಕ್ಕೆ ಸಂಬಂಧಿಸಿದ್ದು. ಸುಪ್ರೀಮ್ ಕೋರ್ಟ್ ಇತ್ತೀಚಿಗೆ  ಈ ಕುರಿತಂತೆ ತೀರ್ಪೊಂದನ್ನು ನೀಡಿದೆ. “ತಾಯಿಯ ಭಾವನೆಯನ್ನು ಗೌರವಿಸುವ ಮೂಲಕ ಮಗುವಿಗೆ (ಭ್ರೂಣ) ಜೀವಿಸುವ ಹಕ್ಕನ್ನು ಅದು ನಿರಾಕರಿಸಿದೆ.” ಕೋರ್ಟ್‍ನ ಈ ತೀರ್ಪನ್ನು ಗೌರವಿಸಲೇಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುತ್ತಲೇ, ಆ ಹುಡುಗಿಯ ಘಾಸಿಗೊಂಡ ಮನಸ್ಸಿನ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯನ್ನೂ ನಾವು ಪ್ರದರ್ಶಿಸಬೇಕಿದೆ.
  ಮಲಹೊರುವ ಕಾರ್ಮಿಕನ ಮಗಳಾದ ಈ ಹುಡುಗಿಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದಾನೆ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದಾನೆ. 14ರ ಹರೆಯದ ಈ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆಯೆಂಬ ಎರಡು ಅಲುಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗುತ್ತದೆ. ತನ್ನ ಮಗುವಿನ ಹೊಟ್ಟೆಯೊಳಗೆ ಭ್ರೂಣವೊಂದು ಬೆಳೆಯುತ್ತಿರುವುದು ಆ ಬಾಲೆಯ ಅಪ್ಪನ ಗಮನಕ್ಕೂ ಬಂದಿರುವುದಿಲ್ಲ. ಅದು ಗೊತ್ತಾಗುವಾಗ 24 ವಾರಗಳೇ (6 ತಿಂಗಳು) ಸಂದಿರುತ್ತವೆ. ಅಪ್ಪ ಗುಜರಾತ್ ಹೈಕೋರ್ಟ್‍ನ ಮೊರೆ ಹೋಗುತ್ತಾನೆ. ಭ್ರೂಣವನ್ನು ತೆಗೆಸುವುದಕ್ಕೆ (ಅಬಾರ್ಷನ್) ಅನುಮತಿ ನೀಡಬೇಕೆಂದು ವಿನಂತಿಸುತ್ತಾನೆ. ಆದರೆ ಕಳೆದ ಜುಲೈ 24ರಂದು ಗುಜರಾತ್ ಹೈಕೋರ್ಟ್ ಆತನ ಮನವಿಯನ್ನು ತಳ್ಳಿ ಹಾಕುತ್ತದೆ. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ, ಈ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಾಳೆ. ಭ್ರೂಣವೂ ಆರೋಗ್ಯದಿಂದಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಹುಡುಗಿಯ ಹೊಟ್ಟೆಯೊಳಗಿನ ಭ್ರೂಣಕ್ಕೆ ಆಕೆ ಹೊಣೆಯಲ್ಲ ಎಂಬುದು. ಅದನ್ನು ಆಕೆ ಇಚ್ಛೆಪಟ್ಟು ಪಡೆದದ್ದಲ್ಲ. ಅದು ಕ್ರೌರ್ಯವೊಂದು ಬಿಟ್ಟುಹೋದ ಕುರುಹು. ಆದರೆ ಪ್ರಶ್ನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಇದರಲ್ಲಿ ಭ್ರೂಣದ ತಪ್ಪು ಏನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಹೇಗೆ ಮುಗ್ಧೆಯೋ ಹಾಗೆಯೇ ಭ್ರೂಣವೂ ಮುಗ್ಧ. ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲವಲ್ಲ.. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಭ್ರೂಣವೇ ಗುಜರಾತ್ ಹೈಕೋರ್ಟ್‍ನಲ್ಲಿ ಮೇಲುಗೈ ಪಡೆಯಿತು. ನ್ಯಾಯಾಧೀಶರಾದ ಅಭಿಲಾಷಾ ಕುಮಾರಿಯವರು `ಭ್ರೂಣದ ಜೀವಿಸುವ ಹಕ್ಕನ್ನು ನಿರಾಕರಿಸಲಾರೆ...' ಎಂದರು. ಆದರೆ ಹೈಕೋರ್ಟ್‍ನ ಈ ತೀರ್ಪನ್ನು ಅನೂರ್ಜಿತಗೊಳಿಸಿದ ಸುಪ್ರೀಮ್‍ಕೋರ್ಟ್, ಆ ಹುಡುಗಿಯ ಮನವಿಯನ್ನು ಗೌರವಿಸಿತು.
  ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಕವರೇಜ್ ಸಿಗದ ಪ್ರಕರಣ ಇದು. ಪತ್ರಿಕೋದ್ಯಮದ ತುರ್ತಿನಲ್ಲಿ ಅನೇಕ ಬಾರಿ ಸುದ್ದಿಗಳ ಗಂಭೀರತೆಯೇ ಹೊರಟು ಹೋಗುವುದಿದೆ. ಆಳ ವಿಶ್ಲೇಷಣೆಗೆ ಒಳಗಾಗಬೇಕಾದ ಮತ್ತು ಮಹತ್ವಪೂರ್ಣವೆನ್ನಿಸಿಕೊಳ್ಳಬೇಕಾದ ಸುದ್ದಿಗಳು ತೀರಾ ಅಪ್ರಾಮುಖ್ಯತೆಯೊಂದಿಗೆ ಪ್ರಕಟವಾಗಿ ಕಳೆದುಹೋಗುವುದಿದೆ. 14ರ ಹರೆಯದ ಈ ಹುಡುಗಿಯ ಪ್ರಕರಣವೂ ತಲ್ಲಣ ಸೃಷ್ಟಿಸದೇ ಇರುವುದಕ್ಕೆ ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ಸಾಮಾನ್ಯವಾಗಿರುವುದು ಕಾರಣವಾಗಿರಲೂಬಹುದು. ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು. ಸುಪ್ರೀಮ್ ಕೋರ್ಟಿನ ತೀರ್ಪನ್ನು ನಮ್ಮ ಮಾಧ್ಯಮ ಜಗತ್ತು ಸ್ವೀಕರಿಸಿರುವ ರೀತಿಯೇ ಇದನ್ನು ಸಮರ್ಥಿಸುತ್ತದೆ.   
   ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಸುಪ್ರೀಮ್ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕುರಿತಂತೆ ಇನ್ನಷ್ಟು ಚರ್ಚೆಯಾಗಬೇಕಿದೆ. ಅತ್ಯಾಚಾರದ ಪರಿಣಾಮಗಳನ್ನು ಆಳ ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ.

Thursday, August 13, 2015

10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವವರ ಮಧ್ಯೆ..

ಅಲ್‍ಝೈನ್ ತಾರಿಕ್
ಟಾಮ್ ಡಾಲಿ
    ಕಳೆದ ಜುಲೈ 18ರಂದು ಬ್ರಿಟನ್ನಿನ ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್‍ನಲ್ಲಿ ಪ್ರಕಟವಾದ ಬರಹವೊಂದು ಓದುಗರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಮೂಡಿಬಂದುವು. ಆ ಬರಹಕ್ಕೆ ನೀಡಿದ ಶೀರ್ಷಿಕೆಯನ್ನು ಒಂದು ಗುಂಪು ಬೆಂಬಲಿಸಿದರೆ ಇನ್ನೊಂದು ಗುಂಪು ಅದನ್ನು ವಿರೋಧಿಸಿತು. ಶೀರ್ಷಿಕೆಯು ಓದುಗರನ್ನು ಕೇಂದ್ರೀಕರಿಸಿರಬೇಕೋ ಅಥವಾ ಬರಹವನ್ನು ಕೇಂದ್ರೀಕರಿಸಿರಬೇಕೋ ಎಂಬ ಪ್ರಶ್ನೆಗಳೆದ್ದುವು. ಅಷ್ಟಕ್ಕೂ, Tom Daley: I always knew I was attracted to guys (ನಾನು ಹುಡುಗರಿಗೆ ಆಕರ್ಷಣೀಯವಾಗಿರುವೆನೆಂದು ನನಗೆ ಮೊದಲೇ ಗೊತ್ತಿತ್ತು - ಟಾಮ್ ಡಾಲಿ) ಎಂಬ ಶೀರ್ಷಿಕೆಯಲ್ಲಿ ಬ್ರಿಟನ್ನಿನ ಜನಪ್ರಿಯ ಈಜುಪಟು ಟಾಮ್ ಡಾಲಿಯ ಕುರಿತಂತೆ ಪ್ರಕಟವಾದ ಬರಹವೇ ಈ ಚರ್ಚೆಯ ಕೇಂದ್ರ ಬಿಂದು. ಸುಮಾರು 4 ಸಾವಿರ ಪದಗಳಷ್ಟು ದೀರ್ಘವಾದ ಈ ಬರಹದಲ್ಲಿ ಟಾಮ್ ಡಾಲಿ ಮನಬಿಚ್ಚಿ ಮಾತಾಡಿದ್ದರು. ಗಾರ್ಡಿಯನ್ ಪತ್ರಿಕೆಯು ಅವೆಲ್ಲವನ್ನೂ ಓದುಗರ ಮುಂದೆ ಸೊಗಸಾಗಿ ಮಂಡಿಸಿತ್ತು. ಬೆನ್ ಕ್ವಿಂಟನ್‍ರು ಪೋಟೋಗಳನ್ನು ಕ್ಲಿಕ್ಕಿಸಿದ್ದರು. ಗಾರ್ಡಿಯನ್ ಪತ್ರಿಕೆಯ ಸೈಮನ್ ಹಟ್ಟೆನ್ ಸ್ಟೋನ್‍ರು ಟಾಮ್ ಡಾಲಿಯ ಜೊತೆಗೆ ನಡೆಸಿದ ಈ ಮಾತು ಕತೆಯು ಎಷ್ಟು ಸೊಗಸಾಗಿದೆಯೆಂದರೆ, ಅದು ಒಂದೇ ಬಾರಿಗೆ ಓದಿಸಿ ಬಿಡುತ್ತದೆ. ನಮಗೆ ಗೊತ್ತಿಲ್ಲದ ಅಥವಾ ಗೊತ್ತು ಮಾಡಿಕೊಳ್ಳಲು ಆಸಕ್ತಿ ತೋರದ ಜಗತ್ತೊಂದನ್ನು ಅದು ಪರಿಚಯಿಸುತ್ತದೆ. ಅಂದಹಾಗೆ,
      2013ರಲ್ಲಿ ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಟಾಮ್ ಡಾಲಿಯ ವೀಡಿಯೋವು ಅಂದು ಬ್ರಿಟನ್‍ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅದಕ್ಕೆ ಕಾರಣವೂ ಇದೆ.
      ಟಾಮ್ ಡಾಲಿ ಮೊಟ್ಟಮೊದಲು ಜಗತ್ತಿನ ಗಮನಸೆಳೆದದ್ದು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ. ಆಗ ಟಾಮ್ ಡಾಲಿ 14ರ ಹುಡುಗ. ಬೀಜಿಂಗ್‍ನ ಈಜುಕೊಳವು ಆತನಿಂದಾಗಿ ಅಂದು ಜನಪ್ರಿಯವಾಗಿತ್ತು. ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಈ ಮರಿ ವಿೂನನ್ನು ನೋಡುವುದಕ್ಕೆ ಕೊಳದ ಸುತ್ತ ಸೇರಿದ್ದರು. ಅದಕ್ಕೆ ತಕ್ಕಂತೆ ಆತ ಪ್ರದರ್ಶನವನ್ನೂ ನೀಡಿದ್ದ. ಡೈವಿಂಗ್ (ತಲೆ ಮೊದ ಲಾಗುವಂತೆ ಮೇಲಿನಿಂದ ಕೆಳಕ್ಕೆ ಧುಮುಕುವುದು) ವಿಭಾಗದಲ್ಲಿ ಆತನ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು. ಹಾಗೆ ಫೈನಲ್ ಪ್ರವೇಶಿಸಿದ ಬ್ರಿಟನ್ನಿನ ಅತ್ಯಂತ ಕಿರಿಯ ಸ್ಪರ್ಧಾಳು ಎಂಬ ಗೌರವಕ್ಕೆ ಆತ ಅಂದು ಪಾತ್ರನಾಗಿದ್ದ. ಫೈನಲ್‍ನಲ್ಲಿ ಈ ತಂಡ ಪದಕ ಪಡೆಯದಿದ್ದರೂ ಮತ್ತು ಪದಕ ಕೈ ತಪ್ಪುವುದಕ್ಕೆ ಟಾಮ್ ಡಾಲಿಯ ಕಳಪೆ ಪ್ರದರ್ಶನವೇ ಕಾರಣ ಎಂದು ಸಹ ಈಜುಗಾರ ಬ್ಲೇಕ್ ಆಲ್‍ಡ್ರಿಜ್ ಆರೋಪಿಸಿದರೂ ಜಗತ್ತು ಕಣ್ಣು ನೆಟ್ಟದ್ದು ಈ ಹುಡುಗನ ಮೇಲೆಯೇ. ಮಾಧ್ಯಮಗಳೂ ಈ ಎಳೆ ಹುಡುಗನ ಸುತ್ತ ನೆರೆದವು. ಆತನನ್ನು ಬ್ರಿಟನ್ನಿನ ಭವಿಷ್ಯದ ವಿೂನು ಎಂದು ಕರೆದುವು. ಹಾಗಂತ, 7 ವರ್ಷದ ಪೋರನಿರುವಾಗಲೇ ನೀರಿಗೆ ಡೈವ್ ಮಾಡುತ್ತಿದ್ದ ಮತ್ತು 8 ವರ್ಷ ಪ್ರಾಯದಲ್ಲೇ ಈಜು ಮತ್ತು ಡೈವಿಂಗ್ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದ್ದ ಟಾಮ್ ಡಾಲಿಯಲ್ಲಿ ಅಸಾಮಾನ್ಯ ಪ್ರತಿಭೆಯಿತ್ತು. 9 ವರ್ಷದವನಾಗಿದ್ದಾಗ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಯುರೋಪಿಯನ್ ಚಾಂಪಿಯನ್‍ಶಿಪ್ ಅನ್ನು ಗೆಲ್ಲುವಾಗ ಆತನಿಗೆ ಬರೇ 13 ವರ್ಷ. ಚಿನ್ನದ ಪದಕ ಪಡೆದ ಅತೀ ಕಿರಿಯ ಈಜುಪಟು ಎಂಬ ಗೌರವಕ್ಕೂ ಆತ ಪಾತ್ರನಾಗಿದ್ದ. 15ರ ಹರೆಯದಲ್ಲಿ ಆತ ಬ್ರಿಟನ್ನಿನ ಅತೀ ಕಿರಿಯ ವಿಶ್ವ ಚಾಂಪಿಯನ್ ಆಗಿ ಗುರುತಿಸಿಕೊಂಡ. ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆಯುವಾಗ ಆತನ ಪ್ರಾಯ ಬರೇ 16 ವರ್ಷ. BBCಯು ಪ್ರತಿ ವರ್ಷ ನೀಡುವ ‘ಯುವ ಕ್ರೀಡಾಳು' ಪ್ರಶಸ್ತಿಯನ್ನು 3 ಬಾರಿ ಪಡಕೊಂಡವನೂ ಈತನೇ. ಇದರ ಬಳಿಕ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಆತ ಕಂಚಿನ ಪದಕ ಪಡೆದ. ಆಗ ಆತನ ವಯಸ್ಸು 18. ಆದರೆ ಈ ಪದಕಗಳ ಹಾದಿ ಆತನ ಪಾಲಿಗೆ ತೀರಾ ಸಲೀಸಾಗಿರಲಿಲ್ಲ. ಎಲೆಕ್ಟ್ರಿಶಿಯನ್ ಆಗಿದ್ದ ಅಪ್ಪ ರಾಬ್‍ರು ಮಗನ ಪ್ರತಿಭೆಯನ್ನು ಕಂಡು ಕೆಲಸವನ್ನು ತ್ಯಜಿಸಿ ಮಗನಿಗೆ ಜೊತೆ ನೀಡಿದ್ದರು. ಆದರೆ ಬ್ರೈನ್ ಕ್ಯಾನ್ಸರ್‍ಗೆ ತುತ್ತಾಗಿ 2011ರಲ್ಲಿ ಅವರು ಸಾವಿಗೀಡಾದಾಗ ಟಾಮ್ ಡಾಲಿ 12ರ ಹುಡುಗ. ಒಂದು ಕಡೆ ಜೊತೆಗಿಲ್ಲದ ಅಪ್ಪ, ಇನ್ನೊಂದು ಕಡೆ ತರಬೇತಿ ಮತ್ತು ಪಂದ್ಯಾಟದ ಹೆಸರಲ್ಲಿ ತಿಂಗಳುಗಟ್ಟಲೆ ಮನೆಯಿಂದ ಹೊರಗಿರಬೇಕಾದ ಅನಿವಾರ್ಯತೆ- ಇವುಗಳಿಂದಾಗಿ ಹುಡುಗ ಟಾಮ್ ಡಾಲಿ ಕುಸಿದು ಹೋಗಿದ್ದ. ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತರಬೇತುದಾರ ಆ್ಯಂಡಿ ಬ್ಯಾಂಕ್ಸ್ ಗೆ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆಳೆದ ಟಾಮ್ ಡಾಲಿ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಬಳಿಕ ಈಜುಕೊಳದಿಂದ ನಾಪತ್ತೆಯಾದ. ಅಪ್ಪಟ ಪ್ರತಿಭೆಯೊಂದು ದಿಢೀರ್ ಜನಪ್ರಿಯತೆ ಮತ್ತು ಹರೆಯದ ಆಕರ್ಷಣೆಯಿಂದಾಗಿ ಕಳೆದು ಹೋಗುತ್ತಿರುವ ಬಗ್ಗೆ ಅಲ್ಲಲ್ಲಿ ವಿಷಾದ ವ್ಯಕ್ತವಾಗುತ್ತಿತ್ತು. ಈಜುಕೊಳಕ್ಕಿಂತ ಟಿ.ವಿ. ಸ್ಟುಡಿಯೋಗಳು ಮತ್ತು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದ ಹುಡುಗನ ಹುಡುಗಾಟಿಕೆಗೆ ವ್ಯಾಪಕ ಬೇಸರ ವ್ಯಕ್ತವಾಗಿತ್ತು. ಆ ಬಳಿಕ ಕೆಲವು ಸಮಯ ಮಾಧ್ಯಮ ಗಮನದಿಂದ ಹೊರಬಿದ್ದ ಆತ 2013ರಲ್ಲಿ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ. ತಾನು ಪ್ರೇಮಪಾಶದಲ್ಲಿ ಬಿದ್ದಿದ್ದು; ಥಾಯಿಲೆಂಡ್, ಜಪಾನ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಸ್ಪೈನ್, ಫ್ರಾನ್ಸ್, ಸ್ವಿಝರ್ಲ್ಯಾಂಡ್, ಮೊರಾಕ್ಕೊ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಹೈಟಿ, ಜಮೈಕಾ, ಫ್ಲೋರಿಡಾ, ಮೆಕ್ಸಿಕೋ.. ಸಹಿತ ವಿವಿಧ ರಾಷ್ಟ್ರಗಳಿಗೆ ವಿಶ್ವ ಪರ್ಯಟನೆ ಮಾಡಿದ್ದು.. ಎಲ್ಲವನ್ನೂ ಹೇಳಿಕೊಂಡ. ಮಾಧ್ಯಮಗಳು ಮತ್ತೆ ಆತನ ಬಗ್ಗೆ ಸುದ್ದಿ ಬರೆಯತೊಡಗಿದುವು.    ಇದೀಗ ಆತ ಮತ್ತೆ ಈಜು ಕೊಳದತ್ತ ಮರಳಿದ್ದಾನೆ. ತಾನು ಹಿಂದಿಗಿಂತ ಪ್ರೌಢನಾಗಿದ್ದೇನೆ ಅನ್ನುತ್ತಿದ್ದಾನೆ. 2016ರ ರಿಯೋ ಒಲಿಂಪಿಕ್ಸ್ ಒಂದೇ ನನ್ನ ಮುಂದಿರುವ ಏಕೈಕ ಗುರಿ ಎಂದೂ ಹೇಳುತ್ತಿದ್ದಾನೆ. ಹಾಗಂತ, ಈ ಗುರಿಯನ್ನು ತಲುಪುವುದಕ್ಕಾಗಿ ಆತ ಪಡುತ್ತಿರುವ ಪರಿಶ್ರಮ ಅಚ್ಚರಿಯನ್ನು ಮೂಡಿಸುತ್ತದೆ.
     ನಿಜವಾಗಿ, ನೀರಿಗೆ ಡೈವ್ ಮಾಡುವುದೆಂದರೆ ಅದೊಂದು ಅಪಾಯಕಾರಿ ಸಾಹಸ. ಗಂಟೆಗೆ ಸುಮಾರು 35 ಮೈಲು ವೇಗದಲ್ಲಿ ಆತ ಈ ಹಿಂದೆ ನೀರಿಗೆ ಧುಮುಕುತ್ತಿದ್ದ. ಪ್ರತಿ ಬಾರಿ ಹಾಗೆ ನೀರಿಗೆ ಧುಮುಕುವಾಗಲೂ ಕಾರು ಢಿಕ್ಕಿ ಹೊಡೆದಂಥ ಅನುಭವವಾಗುತ್ತಿತ್ತಂತೆ. ಡೈವ್ ನೂರು ಶೇಕಡಾ ಯಶಸ್ವಿ ಮತ್ತು ಪರಿಪೂರ್ಣವೇ ಆಗಿರುತ್ತಿದ್ದರೂ ಪ್ರತಿ ಬಾರಿಯೂ ನೋವಾಗುತ್ತಿತ್ತಂತೆ. ಅಭ್ಯಾಸದ ನಿಮಿತ್ತ ಪ್ರತಿ ಬಾರಿ ಡೈವ್ ಮಾಡುವ ಬೋರ್ಡ್‍ಗೆ ಹತ್ತುವಾಗಲೂ ಭಯವಾಗುತ್ತಿತ್ತಂತೆ. ತಾನು ಕೆಲ ಸಮಯ ಈಜು ಕೊಳದಿಂದ ದೂರವಾಗಲು ಈ ಭಯವೂ ಕಾರಣವಾಗಿರಬಹುದು ಎಂಬುದು ಆತನ ನಂಬಿಕೆ. ಇವತ್ತು ಆತ ಅತ್ಯಂತ ಪ್ರೌಢ. ಯಾವ ಭಯವೂ ಇಲ್ಲ. ಬಿಡುವು ರಹಿತ ತರಬೇತಿಯಲ್ಲಿ ಟಾಮ್ ಡಾಲಿ ಮಗ್ನನಾಗಿದ್ದಾನೆ. ಒಂದು ವಾರದಲ್ಲಿ 11 ಅವಧಿಯ (ಸೆಶನ್ಸ್) ಅಭ್ಯಾಸ ಕ್ರಮ. ಪ್ರತಿ ಅವಧಿಯೂ 3ರಿಂದ 4 ಗಂಟೆಯಷ್ಟು ದೀರ್ಘವಿರುತ್ತದೆ. ಮತ್ತೆ ಕಠಿಣವಾದ ಪಥ್ಯಾಹಾರ (Diet). ಮೊಟ್ಟೆಯ ಬಿಳಿ ಭಾಗ, ಪಾಲಕ್ ಸೊಪ್ಪು ಮತ್ತು ಪಾತ್ರೆ ತುಂಬ ಗಂಜಿ ನೀರು - ಇದು ಬೆಳಗ್ಗಿನ ಆಹಾರ. ಕೋಳಿ ಮತ್ತು ದ್ವಿದಳ ಧಾನ್ಯಗಳು ಮಧ್ಯಾಹ್ನದ ಊಟಕ್ಕೆ. ಸಲ್‍ಮೋನ್ ಎಂಬ ವಿೂನು ಅಥವಾ ಚಿಕನ್ ಮತ್ತು ತರಕಾರಿಗಳನ್ನು ರಾತ್ರಿಯ ಊಟವಾಗಿ ಬಡಿಸಲಾಗುತ್ತದೆ. ಪ್ರತಿದಿನವೂ ಇದರದ್ದೇ ಕಾರುಬಾರು. ಅದೇ ಆಹಾರ. ಅದೇ ರುಚಿ. ಅದೇ ಅಭ್ಯಾಸ, ಅದೇ 10 ಗಂಟೆಗಳ ನಿದ್ದೆ. ಇದರ ನಡುವೆ ಭಾರ ಹೆಚ್ಚಾಗದಂತೆ, ಬೊಜ್ಜು ಬಾರದಂತೆ ಜಾಗರೂಕತೆ ಪಾಲಿಸಬೇಕು. ಮದುವೆ, ಮುಂಜಿ, ಸ್ನೇಹ ಕೂಟ ಮುಂತಾದವುಗಳನ್ನೆಲ್ಲ ತ್ಯಾಗ ಮಾಡಿಕೊಂಡು ಬರೇ ಈಜು, ಈಜು, ಈಜು ಎಂದು ಈಜುಕೊಳದತ್ತಲೇ ಸುಳಿದಾಡುತ್ತಿರಬೇಕಾಗುತ್ತದೆ. ಒಂದು ಬಗೆಯ ಜೈಲಿನ ಅನುಭವದೊಂದಿಗೆ ಅಭ್ಯಾಸನಿರತವಾಗಬೇಕಾಗುತ್ತದೆ. ಹಾಗಂತ, ಡೈವಿಂಗ್ ಎಂಬುದು ತೀರಾ ಅಪಾಯರಹಿತವೇನಲ್ಲ. ಟಾಮ್ ಡಾಲಿಯ ತಲೆ ಮುಂಭಾಗದಲ್ಲಿ ಇರುವ ಗಾಯಗಳೇ ಅದು ಎಷ್ಟು ಅಪಾಯಕಾರಿ ಎಂಬುದನ್ನು ಹೇಳುತ್ತದೆ. ಅಷ್ಟಕ್ಕೂ, ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್‍ಗಳೇ ಹೆಚ್ಚಾಗಿ ಸದ್ದು ಮಾಡುವ ಇಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಮತ್ತು ಅದರ ಅಭ್ಯಾಸ ಕ್ರಮಗಳು ಚರ್ಚೆಗೊಳಗಾಗುವುದು ತೀರಾ ಕಡಿಮೆ. ಒಲಿಂಪಿಕ್ಸ್ ನಡೆಯುವುದೇ 4 ವರ್ಷಗಳಿಗೊಮ್ಮೆ. ಆಗ ಕ್ರೀಡಾಪಟುಗಳ ವಿವಿಧ ಕಸರತ್ತುಗಳನ್ನು ನೋಡಿ ನಾವು ಬೆರಗಾಗುತ್ತೇವೆಯೇ ಹೊರತು ಆ ಕಸರತ್ತುಗಳ ಹಿಂದಿರುವ ದೀರ್ಘ ಶ್ರಮವನ್ನು ಅವಲೋಕಿಸುವುದಕ್ಕೆ ಅವಕಾಶಗಳು ಸಿಗುವುದಿಲ್ಲ. ಟೆನ್ನಿಸೋ ಕ್ರಿಕೆಟ್ಟೋ ನಮ್ಮ ಮುಂದೆ ಸದಾ ಇರುತ್ತದೆ. ಟಿ.ವಿ. ಚಾನೆಲ್ ತಿರುಗಿಸಿದರೆ ಒಂದಲ್ಲ ಒಂದು ಚಾನೆಲ್‍ನಲ್ಲಿ ಅವು ಇದ್ದೇ ಇರುತ್ತದೆ. ಆದರೆ ಲಾಂಗ್ ಜಂಪ್, ಓಟ, ಈಜು, ಮ್ಯಾರಥಾನ್ ಸಹಿತ ಒಂದು ದೊಡ್ಡ ಕ್ರೀಡಾ ಜಗತ್ತು ಬಹುತೇಕ ನಮ್ಮಿಂದ ಸದಾ ಮರೆಯಾಗಿರುತ್ತದೆ. ಅವನ್ನು ಚಾನೆಲ್‍ಗಳು ತೋರಿಸಬೇಕಾದರೆ ಒಲಿಂಪಿಕ್ಸೋ, ಕಾಮನ್‍ವೆಲ್ತೋ ಯುರೋಪಿಯನ್ ಪಂದ್ಯಾವಳಿಗಳೋ ಜರಗಬೇಕು. ಅಲ್ಲದೇ ಆ ಪಂದ್ಯಾವಳಿ ಮುಗಿದ ತಕ್ಷಣ ಟಿ.ವಿ.ಗಳಿಂದ ಅವು ನಾಪತ್ತೆಯಾಗಿ ಮತ್ತೆ ಆ ಜಾಗದಲ್ಲಿ ಅದೇ ಕ್ರಿಕೆಟ್ಟು.. ತುಂಬಿಕೊಳ್ಳುತ್ತದೆ. ಅಂದಹಾಗೆ, ಕ್ರೀಡಾಕೂಟಗಳು ನಾಲ್ಕು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಜರುಗುವುದಾದರೂ ಸ್ಪರ್ಧಾಳುಗಳು ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವಲ್ಲ. ಅವರ ಅಭ್ಯಾಸ ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಬೆಳಿಗ್ಗೆ, ಸಂಜೆ.. ಎಂದು ಪ್ರತಿದಿನ ಬೆವರು ಹರಿಸುತ್ತಲೇ ಇರುತ್ತಾರೆ. ಅಂಥದ್ದೊಂದು ಕಠಿಣ ಅಭ್ಯಾಸದ ಬಳಿಕ ಒಲಿಂಪಿಕ್ಸ್ ನಲ್ಲಿ ಐದೋ ಹತ್ತೋ ನಿಮಿಷ ಈಜಿ ಬಳಿಕ ಮರೆಯಾಗುತ್ತಾರೆ. ಕೇವಲ 10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವ ಕ್ರೀಡಾಪಟುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಲ್ಲಿ ಇರಬೇಕಾದ ಮಾನಸಿಕ ದೃಢತೆ, ಸಹನೆ, ಉತ್ಸಾಹ ಯಾವ ರೀತಿಯದ್ದಾಗಿರಬಹುದು? ಪದಕ ಕೈತಪ್ಪುವ ಕ್ರೀಡಾಪಟುವಿನ ಪರಿಸ್ಥಿತಿ ಹೇಗಿರಬಹುದು? ಆತ ಹೇಗೆ ತನ್ನನ್ನು ನಿಯಂತ್ರಿಸಿಕೊಳ್ಳಬಹುದು? ಅಷ್ಟಕ್ಕೂ, ಈ ಬಗೆಯ ಚಿಂತನೆಗೆ ಹಚ್ಚಬಹುದಾದ ಬರಹವೊಂದಕ್ಕೆ Tom Daley: I always knew I was attracted to guys ಎಂಬ ಶೀರ್ಷಿಕೆಯನ್ನು ಕೊಟ್ಟರೆ ಓದುಗರು ಪ್ರಶ್ನಿಸದಿರುತ್ತಾರೆಯೇ? ಇಡೀ ಬರಹದ ಎಲ್ಲೋ ಮಧ್ಯದಲ್ಲಿ ಒಂದು ಕಡೆ, ಮೂರ್ನಾಲ್ಕು ವಾಕ್ಯಗಳಲ್ಲಿ ಬಂದು ಮುಗಿದು ಹೋಗುವ ಅವರ ವೈಯಕ್ತಿಕ ವಿಷಯವನ್ನೇ ಶೀರ್ಷಿಕೆಯಾಗಿ ತಂದರೆ ಓದುಗರು ಕೆರಳದಿರುತ್ತಾರೆಯೇ? ಬರಹವೊಂದಕ್ಕೆ ಕೊಡುವ ಶೀರ್ಷಿಕೆಗೆ ಏನನ್ನು ಮಾನದಂಡವಾಗಿಸುತ್ತೀರಿ ಎಂದು ಪ್ರಶ್ನಿಸದಿರುತ್ತಾರೆಯೇ?
      ರಷ್ಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್ ಶಿಪ್‍ನಲ್ಲಿ ಬಹರೈನ್‍ನ ಅಲ್‍ಝೈನ್ ತಾರಿಕ್ ಎಂಬ 10ರ ಬಾಲೆ ಈಜಿ ಜಾಗತಿಕ ಸುದ್ದಿಯಾಗಿರುವುದನ್ನು ಓದುತ್ತಿರುವಾಗ ಟಾಮ್ ಡಾಲಿ ಮತ್ತು ದಿ ಗಾರ್ಡಿಯನ್ ಪತ್ರಿಕೆಯ ಶೀರ್ಷಿಕೆ ನೆನಪಾದುವು.


Tuesday, July 28, 2015

ಮರಣದಂಡನೆ ಎತ್ತಿರುವ ಪ್ರಶ್ನೆಗಳು..

ಯಾಕೂಬ್ ಮೇಮನ್
ರಾಮ್ ಜೇಠ್ಮಲಾನಿ
ಕೆ.ಟಿ.ಎಸ್. ತುಳಸಿ
ಗೋಪಾಲ್ ಸುಬ್ರಹ್ಮಣ್ಯಂ
ಹರೀಶ್ ಸಾಳ್ವೆ
ಮುಕುಲ್ ರೋಹ್ಟಗಿ..
ಮುಂತಾದವರ ಜೊತೆ ಎಂ.ಎಲ್. ಶರ್ಮಾ ಮತ್ತು ಎ.ಪಿ. ಸಿಂಗ್ ಎಂಬಿಬ್ಬರು ನ್ಯಾಯವಾದಿಗಳನ್ನು ಇಟ್ಟು ನೋಡಿ. ದೆಹಲಿಯ ನಿರ್ಭಯ ಪ್ರಕರಣದ ಆರೋಪಿಗಳಾದ ಅಕ್ಷಯ್ ಥಾಕುರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್‍ನ ಪರ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿಗಳು ಇವರು. ಇವರಿಬ್ಬರ ಹೇಳಿಕೆಗಳು ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್' ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ. “ಬೀದಿಯಲ್ಲಿ ಸ್ವೀಟ್ ಇಟ್ಟರೆ ನಾಯಿಗಳು ಬಂದು ತಿನ್ನುತ್ತವೆ. ಅಪರಾತ್ರಿಯಲ್ಲಿ ಯಾರೋ ಒಬ್ಬನ ಜೊತೆ ತನ್ನ ಮಗಳನ್ನು ನಿರ್ಭಯಳ ಹೆತ್ತವರು ಕಳುಹಿಸಿಕೊಟ್ಟದ್ದು ಯಾಕೆ..” ಎಂದು ಶರ್ಮಾ ಪ್ರಶ್ನಿಸಿದರೆ, “ನನ್ನ ಮಗಳು ಅಥವಾ ಸಹೋದರಿ ವಿವಾಹಪೂರ್ವ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನೆಗೊಯ್ದು ಪೆಟ್ರೋಲ್ ಸುರಿದು ಕುಟುಂಬದೆದುರೇ ಬೆಂಕಿ ಹಚ್ಚುವೆ..” ಎಂದು ಸಿಂಗ್ ಹೇಳುತ್ತಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ಆರೋಪಿಗಳ ಪರ ಇಂತಹ ವಕೀಲರು ವಾದಿಸಿದರೆ ಅದರ ಫಲಿತಾಂಶ ಏನಿದ್ದೀತು? ನ್ಯಾಯಾಧೀಶರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನಲ್ಲದೇ ಇನ್ನೇನನ್ನು ನೀಡಿಯಾರು? ಅಷ್ಟಕ್ಕೂ, ತೀರಾ ಸಾಮಾನ್ಯರಂತೆ ಮತ್ತು ಮಹಿಳಾ ಹಕ್ಕುಗಳ ಕುರಿತು ಅರಿವೇ ಇಲ್ಲದವರಂತೆ ಮಾತಾಡುವ ಇವರನ್ನು ನಿರ್ಭಯ ಆರೋಪಿಗಳು ತಮ್ಮ ವಕೀಲರನ್ನಾಗಿ ಆಯ್ಕೆ ಮಾಡಿಕೊಂಡದ್ದೇಕೆ? ಜೇಠ್ಮಲಾನಿ, ತುಳಸಿ, ಅಶೋಕ್ ದೇಸಾಯಿ, ಪರಾಸರನ್, ಪಿ.ಪಿ. ರಾವ್‍ರಂತಹ ಪ್ರಸಿದ್ಧ ನ್ಯಾಯವಾದಿಗಳು ಇದ್ದಾಗ್ಯೂ ನಿರ್ಭಯ ಆರೋಪಿಗಳು ಈ ಅಪರಿಚಿತರನ್ನೇ ಯಾಕೆ ನೇಮಿಸಿಕೊಂಡರು? ಇದು ಅವರ ಬಯಕೆಯೋ ಅಥವಾ ಅನಿವಾರ್ಯತೆಯೋ? 2009 ಅಕ್ಟೋಬರ್ 31ರಂದು ‘ದ ಎಕನಾಮಿಕ್ಸ್ ಟೈಂಸ್' ಪತ್ರಿಕೆಯು, ‘5 ನಿಮಿಷದ ಕೆಲಸಕ್ಕೆ 5 ಲಕ್ಷ ಪಡೆಯುವ ಪ್ರಮುಖ ವಕೀಲರು' ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. 5 ನಿಮಿಷದ ಕೋರ್ಟ್ ಹಾಜರಿಗೆ 3ರಿಂದ 5 ಲಕ್ಷ ರೂಪಾಯಿ ಪಡೆಯುವ ವಕೀಲರನ್ನು ಅದರಲ್ಲಿ ಹೆಸರಿಸಲಾಗಿತ್ತು. ಹರೀಶ್ ಸಾಳ್ವೆ, ಮುಕುಲ್ ರೋಹ್ಟಗಿ, ಅಶೋಕ್ ದೇಸಾಯಿ, ಕೆ.ಕೆ. ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ.. ಮುಂತಾದವರ ಹೆಸರು ಆ ಪಟ್ಟಿಯಲ್ಲಿದ್ದುವು. ನಿಜವಾಗಿ, ಜೇಠ್ಮಲಾನಿಯವರು ಒಂದು ಪ್ರಕರಣಕ್ಕೆ 40 ಲಕ್ಷ ರೂಪಾಯಿಯನ್ನು ಪಡಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನ್ಯಾಯವಾದಿಗಳ ವೃಂದದಲ್ಲಿಯೇ ಅವರಿಗೆ ಅಪಾರ ಅನುಭವ ಇದೆ. 2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರದ ಪರ ವಾದಿಸಿದ್ದಾರೆ, ಇಂದಿರಾ ಮತ್ತು ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಆರೋಪಿಗಳ ಪರವೂ ವಾದಿಸಿದ್ದಾರೆ. ಅವರೊಂದು ಪ್ರಕರಣವನ್ನು ಎತ್ತಿಕೊಂಡರೆಂದರೆ, ಅದಕ್ಕೆ ಅಪಾರ ಮನ್ನಣೆ ಸಿಗುತ್ತದೆ. ಅವರ ವಾಕ್ಚಾತುರ್ಯ, ಅಧ್ಯಯನಶೀಲತೆ ಮತ್ತು ಅನುಭವಗಳು ಪ್ರಕರಣಕ್ಕೆ ವಿಶೇಷ ತಿರುವನ್ನು ಕೊಡುವಷ್ಟು ಆಳವಾಗಿದೆ. ಹರೀಶ್ ಸಾಳ್ವೆಯವರು ಇತ್ತೀಚೆಗಷ್ಟೇ ವೋಡಾಪೋನ್ ಪ್ರಕರಣದಲ್ಲಿ ಸರಕಾರದ ವಿರುದ್ಧ ತೀರ್ಪು ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೋಡಾಪೋನ್ 11 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕೆಂಬ ಸರಕಾರದ ಆದೇಶವನ್ನು ಕೋರ್ಟು ವಜಾ ಗೊಳಿಸಿದೆ. ಹಾಗಂತ, ಇವರಲ್ಲಿ ಯಾರಾದರೊಬ್ಬರು ನಿರ್ಭಯ ಪ್ರಕರಣದ ಆರೋಪಿಗಳ ಪರ ವಾದಿಸುವುದನ್ನೊಮ್ಮೆ ಊಹಿಸಿಕೊಳ್ಳಿ. ಇವರಿಗೆ ಫೀಸು ಕೊಟ್ಟು ತಮ್ಮ ವಕೀಲರನ್ನಾಗಿ ನೇಮಿಸಿಕೊಳ್ಳುವ ಸಾಮರ್ಥ್ಯ ಕೊಳಚೆಗೇರಿ ನಿವಾಸಿಗಳಾದ ಆ ಆರೋಪಿಗಳಿಗಿದೆಯೇ? ಅಂದಮೇಲೆ ಸಮಾನ ನ್ಯಾಯ ಎಂಬ ಪರಿಕಲ್ಪನೆಗೆ ಏನರ್ಥವಿದೆ? ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾನೂನು ಆಯೋಗದ ನೆರವಿನೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, ಮರಣ ದಂಡನೆಗೆ ಗುರಿಯಾದ ಶೇ. 75ರಷ್ಟು ಮಂದಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಹಾಗೂ ಆರ್ಥಿಕವಾಗಿ ತೀರಾ ದುರ್ಬಲರಾದವರು. “ನೂರರಲ್ಲಿ ಓರ್ವರಿಗಷ್ಟೇ ಸರಿಯಾದ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಇದೆ..” ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ. ಭಾರತದ ಕಾನೂನು ಆಯೋಗದ ಮುಖ್ಯಸ್ಥ ಮತ್ತು ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎ.ಪಿ. ಶಾರ ಪ್ರಕಾರ, “ಭಾರತದಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಗಲ್ಲಿಗೇರುತ್ತಿದ್ದಾರೆ..” ಇವೆಲ್ಲ ಏನು? ಒಂದು ಕಡೆ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ ಇನ್ನೊಂದು ಕಡೆ, ದುರ್ಬಲ ಆರೋಪಿಗಳ ಕೈ-ಕಾಲುಗಳನ್ನು ಕಟ್ಟಿ ಹಾಕುವ ರೀತಿಯ ನ್ಯಾಯ ಪ್ರಕ್ರಿಯೆ - ಇದನ್ನು ಹೇಗೆ ವಿಶ್ಲೇಷಿಸಬಹುದು?
    2012 ನವೆಂಬರ್ 21ರಂದು ಅಜ್ಮಲ್ ಕಸಬ್‍ನನ್ನು ಗಲ್ಲಿ ಗೇರಿಸುವಾಗ ಆತನ ಮುಂದೆ ವಿವಿಧ ನ್ಯಾಯಾಲಯಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದ ಸುಮಾರು 300ರಷ್ಟು ಮಂದಿ ಇದ್ದರು. ಅವರಲ್ಲಿ ಅಫ್ಝಲ್‍ಗುರು ಇದ್ದ. ಪಂಜಾಬ್ ಮುಖ್ಯಮಂತ್ರಿ ಬಿಯಂತ್ ಸಿಂಗ್‍ರನ್ನು ಹತ್ಯೆಗೈದ ಬಲ್ವಂತ್ ಸಿಂಗ್ ರಾಜೋನಾ, ಖಾಲಿಸ್ತಾನ್ ಲಿಬರೇಶನ್ ಫೋರ್ಸ್‍ನ ಭಯೋತ್ಪಾದಕ ದೇವಿಂದರ್ ಸಿಂಗ್ ಭುಲ್ಲರ್, ರಾಜೀವ್ ಗಾಂಧಿಯನ್ನು ಹತ್ಯೆಗೈದ ಮೂವರು ಆರೋಪಿಗಳು, ವೀರಪ್ಪನ್‍ನ 4 ಮಂದಿ ಸಹಚರರು.. ಎಲ್ಲರೂ ಆತನ ಮುಂದೆ ಇದ್ದರು. ಅನುಕ್ರಮವಾಗಿ ಗಲ್ಲಿಗೇರಿಸುವುದಾದರೆ ಕಸಬ್ ನ ಸರದಿ 25 ಮಂದಿಯ ಬಳಿಕ ಬರಬೇಕಿತ್ತು. ಆದರೆ ಆತನನ್ನು ಹಿಂದಿನಿಂದ ಎತ್ತಿ ಮುಂದಕ್ಕೆ ತಂದು ಗಲ್ಲಿಗೇರಿಸಲಾಯಿತು. ಇದಕ್ಕೆ ಕಾರಣ ಏನೆಂದರೆ, ಆತ ಪಾಕಿಸ್ತಾನಿ. ಆತನನ್ನು ಜೀವಂತ ಇರಿಸಿಕೊಳ್ಳಬೇಕಾದ ಯಾವ ರಾಜಕೀಯ ಒತ್ತಡವೂ ಇಲ್ಲಿಲ್ಲ. ಆದರೆ, ದೇವಿಂದರ್ ಸಿಂಗ್ ಭುಲ್ಲರ್‍ನ ಹಿಂದೆ ರಾಜಕೀಯ ಒತ್ತಡ ಇದೆ. ಆತನನ್ನು ಗಲ್ಲಿಗೇರಿಸುವುದರ ವಿರುದ್ಧ ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತಿದೆ. ನಿಜವಾಗಿ, ಯಾರನ್ನು ಗಲ್ಲಿಗೇರಿಸಬೇಕು, ಯಾರನ್ನು ಬಾರದು, ಯಾರ ಗಲ್ಲನ್ನು ಮುಂದೂಡಬೇಕು.. ಎಂಬುದೆಲ್ಲ ಇಲ್ಲಿ ಬರೇ ಕೋರ್ಟು, ಕಚೇರಿ, ರಾಷ್ಟ್ರಪತಿಗಳಿಂದ ಮಾತ್ರ ನಿರ್ಧರಿತವಾಗುವುದಲ್ಲ. ಅದನ್ನೂ ರಾಜಕೀಯವೇ ನಿರ್ಧರಿಸುತ್ತದೆ. ‘ಕಸಬ್‍ನನ್ನು ಬಿರಿಯಾನಿ ಕೊಟ್ಟು ಸಾಕಲಾಗುತ್ತಿದೆ..' ಎಂಬುದಾಗಿ ಬಿಜೆಪಿ ಈ ದೇಶದಲ್ಲಿ ಪ್ರಚಾರ ಮಾಡಿತ್ತು. ಮಾಧ್ಯಮದ ಒಂದು ವರ್ಗವೂ ಅದಕ್ಕೆ ಬೆಂಬಲ ನೀಡಿತ್ತು. ಅಷ್ಟಕ್ಕೂ, ಕಸಬ್‍ನಿಂದ ಕಾಂಗ್ರೆಸ್‍ಗಾಗಲೀ ಬಿಜೆಪಿಗಾಗಲೀ ಯಾವ ಲಾಭವೂ ಇಲ್ಲ. ಈ ದೇಶದವನೇ ಅಲ್ಲದ ಆತನನ್ನು ಗಲ್ಲಿಗೇರಿಸುವುದರಿಂದ ರಾಜಕೀಯವಾಗಿ ಕಳಕೊಳ್ಳುವುದಕ್ಕೇನೂ ಇಲ್ಲ. ಇದನ್ನರಿತೇ ತುರ್ತಾಗಿ ಆತನನ್ನು ಗಲ್ಲಿಗೆ ಕೊಡಲಾಯಿತು. ಆದರೆ ಇಂಥ ರಾಜಕೀಯ ಪ್ರೇರಿತ ಕ್ರಮಗಳು ಸಹಜವಾಗಿ ಕೆಲವಾರು ಆತಂಕಕಾರಿ ಅನುಮಾನಗಳನ್ನೂ ಮುಂದಿಡುತ್ತದೆ. ಮರಣ ದಂಡನೆಗೆ ಗುರಿಯಾಗುವ ದುರ್ಬಲ ವರ್ಗದವರಿಗೆ ರಾಜಕೀಯವಾಗಿ ಹೇಳಿಕೊಳ್ಳಬಹುದಾದ ಪ್ರಭಾವವಿರುವುದಿಲ್ಲವಲ್ಲ. ಅವರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವ ಪೊಲೀಸ್ ವ್ಯವಸ್ಥೆಯಾದರೋ ಪರಮ ಭ್ರಷ್ಟಾಚಾರಿ. ಈ ದುರ್ಬಲರಿಂದ ನಕಲಿ ತಪ್ಪೊಪ್ಪಿಗೆಯನ್ನು ಪಡಕೊಳ್ಳುವುದಕ್ಕೆ ಪೊಲೀಸರಿಗೆ ಕಷ್ಟವೂ ಇಲ್ಲ. ಹಾಗಂತ, ಇವೆಲ್ಲವನ್ನೂ ಸಮರ್ಪಕವಾಗಿ ನ್ಯಾಯಾಧೀಶರ ಮುಂದೆ ನಿವೇದಿಸುವುದಕ್ಕೆ ಜೇಠ್ಮಲಾನಿ, ಹರೀಶ್ ಸಾಳ್ವೆ, ತುಳಸಿ..ಗಳೂ ಅವರಿಗೆ ಸಿಗುತ್ತಿಲ್ಲ. ಶ್ರೀಮಂತ ಮತ್ತು ಬಡವ ಮಾಡಿದ ಅಪರಾಧ ಒಂದೇ ಆಗಿದ್ದರೂ ತೀರ್ಪುಗಳು ಭಿನ್ನವಾಗಿ ಬರುವುದಕ್ಕೆ ಈ ಅಸಮಾನತೆ ಖಂಡಿತ ಅವಕಾಶ ಮಾಡಿಕೊಡುತ್ತದೆ. ಇಂಥ ಸ್ಥಿತಿಯಲ್ಲಿ, ‘ಗಲ್ಲು' ಶಿಕ್ಷೆ ಬೇಕೋ ಬೇಡವೋ ಎಂಬುದು ಮುಖ್ಯವಾಗುತ್ತದೆ. ಅಷ್ಟಕ್ಕೂ, ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಿರುವ ಕುರಿತಂತೆ  2007ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಮಸೂದೆಗೆ ಭಾರತವು ವಿರೋಧ ವ್ಯಕ್ತಪಡಿಸಿರಬಹುದು. 2012 ನವೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಡಿಸಿದ ‘ಗಲ್ಲುಶಿಕ್ಷೆ ನಿಷೇಧ' ಮಸೂದೆಯನ್ನು ಭಾರತ ತಿರಸ್ಕರಿಸಿರಬಹುದು. ಅಲ್ಲದೇ, ‘ಅಪರೂಪದಲ್ಲಿ ಅಪರೂಪದ’ ಪ್ರಕರಣಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕೆಂಬ 1983ರ ಸುಪ್ರೀಮ್ ಕೋರ್ಟ್‍ನ ನಿಲುವು ಪ್ರಶಂಸಾರ್ಹವಾದುದು ಎಂದೂ ಹೇಳಬಹುದು. ಆದರೆ, ನ್ಯಾಯವು ದುಡ್ಡಿದ್ದವರ ಪರ ಎಂಬ ವಾತಾರವಣ ನಿರ್ಮಾಣವಾಗಿರುವ ಕಡೆ ನೇಣು ಯಾವ ಪರಿಣಾಮವನ್ನು ಬೀರಬಲ್ಲುದು? 2001ರಲ್ಲಿ 83 ಮಂದಿ, 2002ರಲ್ಲಿ 23 ಮಂದಿ, 2005ರಲ್ಲಿ 77 ಮಂದಿ, 2006ರಲ್ಲಿ 40 ಮಂದಿ ಮತ್ತು 2007ರಲ್ಲಿ 100 ಮಂದಿಗೆ ದೇಶದ ವಿವಿಧ ನ್ಯಾಯಾಲಯಗಳು ನೇಣು ಶಿಕ್ಷೆಯನ್ನು ವಿಧಿಸಿದೆ (ಜಾರಿಗೊಳಿಸಿಲ್ಲ) ಎಂದು ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ಅಂಕಿ-ಅಂಶಗಳು ಹೇಳುವಾಗ, ಅದರಲ್ಲಿ ಹರೀಶ್ ಸಾಳ್ವೆ ವಾದಿಸಿದ ಪ್ರಕರಣಗಳು ಇದ್ದೀತೇ? ಜೇಠ್ಮಲಾನಿ ಪ್ರತಿನಿಧಿಸಿದ ಪ್ರಕರಣ ಎಷ್ಟಿರಬಹುದು? ಬಹುಶಃ, ಇಂಥದ್ದೊಂದು ಆತಂಕವೇ ಮರಣ ದಂಡನೆಯ ಬಗ್ಗೆ ಮತ್ತೆ ಮತ್ತೆ ಚರ್ಚೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಸಮರ್ಥ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಬಡ ಆರೋಪಿಗಳಿರುವ ದೇಶವೊಂದರಲ್ಲಿ ಮರಣದಂಡನೆ ಎಷ್ಟು ಸಮಂಜಸವಾದೀತು? ಅಫ್ಝಲ್ ಗುರುವಿಗೆ ಮರಣದಂಡನೆಯನ್ನು ವಿಧಿಸುವಾಗ, ‘ಇದರಲ್ಲಿ ಸಮಾಜದ ಭಾವನೆಯನ್ನು ಪರಿಗಣಿಸಲಾಗಿದೆ...’ ಎಂದು ಸುಪ್ರೀಮ್ ಕೋರ್ಟ್ ಹೇಳಿತ್ತು. ಅರುಂಧತಿ ರಾಯ್ ಸಹಿತ ಅನೇಕರು ಕೋರ್ಟ್‍ನ ಈ ವ್ಯಾಖ್ಯಾನವನ್ನು ಪ್ರಶ್ನಿಸಿದ್ದರು. ತೀರ್ಪುಗಳು ಭಾವನೆಯಿಂದ ಮುಕ್ತವಾಗಿರಬೇಕೆಂಬ ಅಭಿಪ್ರಾಯ ಹಲವರದ್ದಾಗಿತ್ತು. ನಿರ್ಭಯ ಪ್ರಕರಣಕ್ಕಿಂತ ಮೊದಲು ಅತ್ಯಾಚಾರವು ಈ ದೇಶದಲ್ಲಿ ಇವತ್ತಿನಷ್ಟು ಭಾವಾನಾತ್ಮಕವಾಗಿರಲಿಲ್ಲ. ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿಯಾಗುವ ವರೆಗೆ ಬಾಂಬ್ ಭಯೋತ್ಪಾದನೆಯೂ ಇವತ್ತಿನ ರೀತಿಯಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿರಲಿಲ್ಲ. ಆದರೆ, ಇವತ್ತು ಅತ್ಯಾಚಾರ ಮತ್ತು ಭಯೋತ್ಪಾದನೆ ಈ ದೇಶದಲ್ಲಿ ಭಾವನಾತ್ಮಕ ವಾತಾವರಣವೊಂದನ್ನು ಹುಟ್ಟುಹಾಕಿದೆ. ಮಾಧ್ಯಮ ಕ್ರಾಂತಿಯಿಂದಾಗಿ ಸಾರ್ವಜನಿಕ ಅಭಿಪ್ರಾಯಗಳು ಕ್ಷಿಪ್ರವಾಗಿ ರೂಪುಗೊಳ್ಳುತ್ತಿವೆ. ಆದ್ದರಿಂದ ಇಂಥ ಪ್ರತಿ ಪ್ರಕರಣವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಿದೆ. ಹೀಗಿರುವಾಗ, ರಾಮ್ ಜೇಠ್ಮಲಾನಿ ಪ್ರತಿನಿಧಿಸುವ ಪ್ರಕರಣಕ್ಕೂ ಎಂ.ಎಲ್. ಶರ್ಮ ಪ್ರತಿನಿಧಿಸುವ ಪ್ರಕಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸಗಳುಂಟಾಗುವ ಸಾಧ್ಯತೆಯಿದೆ. ಅಲ್ಲದೇ, ಹಲವಾರು ವರ್ಷ ಜೈಲಿನಲ್ಲಿದ್ದು ಬಳಿಕ ನಿರಾಪರಾಧಿಯೆಂದು ಬಿಡುಗಡೆಗೊಂಡ ಪ್ರಕರಣಗಳು ಈ ದೇಶದಲ್ಲಿ ಧಾರಾಳ ನಡೆದಿವೆ. ನೇಣು ಕುಣಿಕೆಯವರೆಗೆ ಸಾಗಿ ಬಳಿಕ ಬಿಡುಗಡೆಗೊಂಡ ಉಪನ್ಯಾಸಕ ಎಸ್.ಎ.ಆರ್. ಗೀಲಾನಿಯೇ ಇದಕ್ಕೆ ಅತ್ಯುತ್ತಮ ಸಾಕ್ಷಿ. “ನನ್ನ ಜೈಲಿನ ಅನುಭವಗಳು” ಎಂಬ ಅವರ ಕೃತಿಯನ್ನು ಓದಿದ ಯಾರೇ ಆಗಲಿ ದಿಗ್ಭ್ರಮೆಗೊಂಡಾರು. ಸಾಕ್ಷ್ಯಗಳನ್ನು ಸೃಷ್ಟಿಸುವ ನಮ್ಮ ವ್ಯವಸ್ಥೆಯ ಸಾಮರ್ಥ್ಯಕ್ಕೆ ಬೆಚ್ಚಿ ಬಿದ್ದಾರು. ಇಂಥ ಸ್ಥಿತಿಯಲ್ಲಿ, ಮರಣದಂಡನೆಯನ್ನು ಸಾರಾಸಾಗಟ ಬೆಂಬಲಿಸುವುದು ಎಷ್ಟರ ಮಟ್ಟಿಗೆ ಸರಿ? ಅದು ಅಗತ್ಯವೇ? ಅದರ ಹೊರತಾದ ಶಿಕ್ಷೆ ಅಪರಿಪೂರ್ಣವೇ? ಬಹುಶಃ,
   “ಸುಪ್ರೀಮ್ ಕೋರ್ಟ್ ಹೇಳಿರುವ ಅಪರೂಪದಲ್ಲಿ ಅಪ ರೂಪದ ಪ್ರಕರಣ ಎಂಬ ವಿಭಾಗದಲ್ಲಿ ಯಾಕೂಬ್ ಮೇಮನ್ ಪ್ರಕರಣ ಒಳಪಡುತ್ತದೆಯೇ ಎಂಬುದು ಖಂಡಿತಕ್ಕೂ ಚರ್ಚಾರ್ಹ” (It is certainly debatable whether Yakub memon's case would fall in the category of the rarest of the rare..) ಎಂದು ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಇಲ್ಲಿನ ಪ್ರಶ್ನೆಗಳು ಇನ್ನಷ್ಟು ಅರ್ಥಪೂರ್ಣವೆನಿಸಬಹುದು. 

Thursday, July 23, 2015

ಮೌಲಾನಾ ಫಝ್ಲುರ್ರಹ್ಮಾನ್, ಮಾಧ್ಯಮ ಮತ್ತು ಖಬರಿಸ್ತಾನದ ವಿಡಂಬನೆ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿಷಾದ ಪ್ರಕಟಣೆ
    “ಭೂಕಂಪಕ್ಕೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಮೌಲಾನಾ ಫಝ್ಲುರ್ರಹ್ಮಾನ್..” (Women wearing jeans are reason behind earthquekes- Jui-F chief maulana fazlur rehman) ಎಂಬ ಶೀರ್ಷಿಕೆಯಲ್ಲಿ ಕಳೆದ ಮೇ 30ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತು. ಮರುದಿನ ಮೇ 31ರಂದು (ಆದಿತ್ಯವಾರ) ವಿಜಯ ಕರ್ನಾಟಕ ಪತ್ರಿಕೆಯು, “ಭೂಕಂಪಕ್ಕೆ ಹೆಣ್ಣು ಮಕ್ಕಳ ಜೀನ್ಸ್ ಕಾರಣ” ಎಂಬ ಶೀರ್ಷಿಕೆಯಲ್ಲಿ ಅದೇ ಸುದ್ದಿಯನ್ನು ಪ್ರಕಟಿಸಿತು. “ಬೆಲೆ ಏರಿಕೆ, ಭಯೋತ್ಪಾದನೆ ಮತ್ತು ಭೂಕಂಪಗಳಿಗೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಪಾಕಿಸ್ತಾನದ ಧರ್ಮ ಗುರು” (Pakistan Cleric says women who wears jeans are behind earthquekes, terrorism and rising inflation) ಎಂಬ ಮೈಲುದ್ದದ ಶೀರ್ಷಿಕೆಯೊಂದಿಗೆ ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯಲ್ಲಿ ಜೂನ್ 2ರಂದು ಅದೇ ಸುದ್ದಿ ಪ್ರಕಟವಾಯಿತು. ಟೈಮ್ಸ್ ಆಫ್ ಇಂಡಿಯಾ, ಡಿ.ಎನ್.ಎ., ಕನ್ನಡಪ್ರಭ ಸೇರಿದಂತೆ ಹೆಚ್ಚಿನೆಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಅತೀವ ಆಸಕ್ತಿಯಿಂದ ಪ್ರಕಟಿಸಿದವು. ಮೇ 30ರಿಂದ ಜೂನ್ 2ರ ನಡುವೆ ಪ್ರಕಟವಾದ ಈ ಸುದ್ದಿಗಳಿಗೆ ಓದುಗರ ಪ್ರತಿಕ್ರಿಯೆ ಎಷ್ಟು ಆವೇಶ ಭರಿತವಾಗಿತ್ತೆಂದರೆ ನಿಂದನೆ, ಭರ್ತ್ಸ್ಯನೆ, ವ್ಯಂಗ್ಯಗಳ ಮಹಾಪೂರವೇ ಹರಿಯಿತು. ಫಝ್ಲುರ್ರಹ್ಮಾನ್‍ರನ್ನು ಜೋಕರ್‍ನಂತೆ ಬಿಂಬಿಸಲಾಯಿತು. ‘ಕೂಪ ಮಂಡೂಕ ಮೌಲಾನಾ’ ಎಂದು ಕರೆಯಲಾಯಿತು. ಅಂದಹಾಗೆ, ಫಝ್ಲುರ್ರಹ್ಮಾನ್‍ರು ಪಾಕ್ ಪಾರ್ಲಿಮೆಂಟ್‍ನ ಸದಸ್ಯ. ಅವರ ಜವಿೂಯತೆ ಉಲೆಮಾ ಪಕ್ಷವು ಪ್ರಧಾನಿ ನವಾಝ್ ಶರೀಫ್‍ರ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಅಷ್ಟಕ್ಕೂ, ಫಝ್ಲುರ್ರಹ್ಮಾನ್‍ರು ನಿಜಕ್ಕೂ ಇಂಥದ್ದೊಂದು ಹೇಳಿಕೆಯನ್ನು ಕೊಟ್ಟಿರುತ್ತಿದ್ದರೆ ಟೀಕೆಗಳನ್ನು ಒಂದು ಹಂತದವರೆಗೆ ಸಮರ್ಥಿಸಿಕೊಳ್ಳಬಹುದಿತ್ತು. ಹಾಗಂತ, ಅವರು ಮಾದರಿ ಮೌಲಾನಾ ಎಂದು ಹೇಳುತ್ತಿಲ್ಲ. ಅವರು ಈ ಹಿಂದೆ ನೀಡಿರಬಹುದಾದ ವಿವಾದಾಸ್ಪದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಆದರೆ, ಸುದ್ದಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಅದರ ಮೂಲವನ್ನು ಮಾಧ್ಯಮಗಳು ಪರಿಶೀಲಿಸಬೇಡವೇ? ಅದು ಫಝ್ಲುರ್ರಹ್ಮಾನ್‍ರ ಹೇಳಿಕೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನೋ ಮಾಹಿತಿಯನ್ನೋ ಇಟ್ಟುಕೊಂಡಿರಬೇಡವೇ? ನಿಜವಾಗಿ, ಈ ಸುದ್ದಿ ಪಾಕಿಸ್ತಾನದ ಖಬರಿಸ್ತಾನ್ ಟೈಮ್ಸ್ ಡಾಟ್ ಕಾಮ್ ಎಂಬ ಇಂಟರ್‍ನೆಟ್ ಪತ್ರಿಕೆಯಲ್ಲಿ (Online) ಮೇ 22ರಂದು ಪ್ರಕಟವಾಗಿತ್ತು. ಅದೊಂದು ವಿಡಂಬನಾತ್ಮಕ (Satirical) ಪತ್ರಿಕೆ. ತಮಾಷೆ, ವ್ಯಂಗ್ಯ, ಪ್ರಹಸನಗಳೇ ಈ ಖಬರಿಸ್ತಾನದ ಬಂಡವಾಳ. ಅದು ಉತ್ಪ್ರೇಕ್ಷಿತ ಸುದ್ದಿಯನ್ನು ಕೊಡುತ್ತಿರುತ್ತದೆ. ನಿಜದಂತೆ ಕಾಣುವ ಆದರೆ ನಿಜವಲ್ಲದ ಅಪಹಾಸ್ಯದ ಸುದ್ದಿಗಳನ್ನು ಸೃಷ್ಟಿಸುತ್ತಿರುತ್ತದೆ. ಈ ಖಬರಿಸ್ತಾನ ಪ್ರಕಟಿಸಿದ ಇದೇ ಸುದ್ದಿಯು ಮೇ 26ರ ಬಳಿಕ ಇನ್ನಿತರ ಇಂಟರ್‍ನೆಟ್ ಪತ್ರಿಕೆಗಳಲ್ಲೂ ಕಾಣಿಸಿಕೊಂಡವು. ಕ್ಯಾಂಪಸ್ ಬಸ್ ಮ್ಯಾಗ್ ಎಂಬ ಇಂಟರ್‍ನೆಟ್ ಪತ್ರಿಕೆಯೂ ಇದರಲ್ಲೊಂದು. ಆದರೆ ಆ ಪತ್ರಿಕೆಗೆ ಅದು ವಿಡಂಬನಾತ್ಮಕ ಸುದ್ದಿಯೆಂದು ಗೊತ್ತಿತ್ತು. ಹಾಗೆಯೇ ಅದು ಬರೆದಿತ್ತು ಕೂಡ. ತಾನು ಈ ಸುದ್ದಿಯನ್ನು ಪಾಕಿಸ್ತಾನ್ ಟುಡೇಯಿಂದ ಆರಿಸಿಕೊಂಡಿರುವುದಾಗಿಯೂ ಅದು ಹೇಳಿಕೊಂಡಿತ್ತು. ವಿಶೇಷ ಏನೆಂದರೆ, ಪಾಕಿಸ್ತಾನ್ ಟುಡೆಯಲ್ಲಿ ಈ ಸುದ್ದಿ ಒಂದು ವರ್ಷದ ಹಿಂದೆ 2014, ಫೆಬ್ರವರಿ 1 ರಂದೇ ಪ್ರಕಟವಾಗಿತ್ತು. ಇದೂ ಅದರ ಸ್ವಂತ ಸುದ್ದಿಯಲ್ಲ. ಖಬರಿಸ್ತಾನದಿಂದಲೇ ಪಡಕೊಂಡ ಸುದ್ದಿಯಾಗಿತ್ತದು. ಹೀಗೆ ತನ್ನದೇ ಹಳೆ ಸುದ್ದಿಯನ್ನು ಖಬರಿಸ್ತಾನವು ಮೇ 22 ರಂದು ಮತ್ತೆ ಹೊಸ ಸುದ್ದಿಯಂತೆ ಮರು ಪ್ರಕಟಿಸಿತು. ಖಬರಿಸ್ತಾನದ ಪ್ರಕಾರ, ಶುಕ್ರವಾರದ ನಮಾಝ್‍ನ ಬಳಿಕ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಫಝ್ಲುರ್ರಹ್ಮಾನ್‍ರು ಈ ಹೇಳಿಕೆಯನ್ನು ಹೊರಡಿಸಿದ್ದಾರೆ. ಕ್ಯಾಂಪಸ್ ಬಸ್ ಮ್ಯಾಗ್‍ನ ಪ್ರಕಾರ, ಈ ಹೇಳಿಕೆ ಹೊರಡಿಸಿದ್ದು ಮಂಗಳವಾರ. ವಿಜಯ ಕರ್ನಾಟಕದ ಮಟ್ಟಿಗೆ ಈ ಪತ್ರಿಕಾಗೋಷ್ಠಿ ಏರ್ಪಟಾದದ್ದು ಶನಿವಾರ. ಒಂದು ಸುದ್ದಿಯನ್ನು ಸುಳ್ಳು ಎಂದು ತೀರ್ಮಾನಿಸುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆಗಳು ಇನ್ನೇನು ಬೇಕು? ನಿಜವಾಗಿ, ಸುದ್ದಿಯನ್ನು ಪರಿಶೀಲಿಸದೆಯೇ ಪ್ರಕಟಿಸುವುದರಿಂದ ಆಗುವ ಅನಾಹುತಗಳಿಗೆ ಉದಾಹರಣೆ ಇದು. ಇಲ್ಲಿ ಖಬರಿಸ್ತಾನವನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ, ವಿಡಂಬನಾತ್ಮಕ ಪತ್ರಿಕೆಯಾಗಿಯೇ ಅದು ಗುರುತಿಸಿಕೊಂಡಿದೆ. ಆದ್ದರಿಂದಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸುದ್ದಿ ಪ್ರಕಟಿಸಿದುದಕ್ಕಾಗಿ ಬಳಿಕ ವಿಷಾದ ಸೂಚಿಸಿತು. ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯು ತನ್ನ ಅನ್‍ಲೈನ್ ಆವೃತ್ತಿಯಿಂದ ಈ ಸುದ್ದಿಯನ್ನು ಕಿತ್ತಾಹಾಕಿತು. ಹಾಗಿದ್ದರೂ, ಕೆಲವು ಪ್ರಶ್ನೆಗಳಂತೂ ಕಾಡಿಯೇ ಕಾಡುತ್ತದೆ. ಮಾಧ್ಯಮದ ಜವಾಬ್ದಾರಿಗಳು ಏನೆಲ್ಲ? ಸುದ್ದಿಯನ್ನು ಪರಿಶೀಲನೆಗೆ ಒಳಪಡಿಸದೆಯೇ ಪ್ರಕಟಿಸುವುದು ಬರೇ ವಿಷಾದ ಸೂಚಿಸಿ ಮುಗಿಸುವಷ್ಟು ಸಣ್ಣ ವಿಚಾರವೇ? ವಿಷಾದ ಸೂಚಿಸುವುದಕ್ಕಿಂತ ಮೊದಲು ಆ ಸುದ್ದಿಯು ಲಕ್ಷಾಂತರ ಮಂದಿಯನ್ನು ತಲುಪಿರುತ್ತದೆ. ಓದುಗರು ಅದನ್ನು ಇತರರಲ್ಲಿ ಹಂಚಿಕೊಂಡಿರುತ್ತಾರೆ. ಅದನ್ನು ತಮ್ಮ ವಾದಕ್ಕೆ ಪುರಾವೆಯಾಗಿ ಮಂಡಿಸಿರುತ್ತಾರೆ. ಓರ್ವನನ್ನು ಭಯೋತ್ಪಾದಕನೆಂದೋ ದೇಶದ್ರೋಹಿಯೆಂದೋ ಸಾಬೀತುಪಡಿಸುವುದಕ್ಕೆ ಆ ಸುದ್ದಿಯು ಬಳಕೆಯಾಗಿರುತ್ತದೆ. ಇವೆಲ್ಲವೂ ಕಳೆದ ಮೇಲೆ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಅಥವಾ ಇಂಟರ್‍ನೆಟ್ ಆವೃತ್ತಿಯಲ್ಲಿ ವಿಷಾದ ಸೂಚಿಸುವುದರಿಂದ ಅದಾಗಲೇ ಆಗಿರುವ ಹಾನಿಯನ್ನು ತುಂಬಬಹುದೆ? ಅಷ್ಟಕ್ಕೂ, ಅವು ಪ್ರಕಟಿಸುವ ವಿಷಾದ ಎಷ್ಟು ಚಿಕ್ಕದಾಗಿರುತ್ತದೆಂದರೆ, ಹೆಚ್ಚಿನ ಬಾರಿ ವಿಷಾದಕ್ಕೆ ಕಾರಣಗಳೇನು ಎಂಬುದೇ ಓದುಗರಿಗೆ ಗೊತ್ತಾಗುವುದಿಲ್ಲ. ಮುಖಪುಟದಲ್ಲಿ ಪ್ರಕಟವಾದ ಒಂದು ತಪ್ಪು ಸುದ್ದಿಯ ಬಗ್ಗೆ ಸೂಚಿಸುವ ವಿಷಾದ ಹೇಳಿಕೆಯು ಒಳಪುಟದಲ್ಲಿ ಒಂದು ಗೆರೆಯಷ್ಟೂ ಇರುವುದಿಲ್ಲ.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ, “ಈ ಸುದ್ದಿಯು ತಪ್ಪಾಗಿದ್ದು’ ಅದನ್ನು ಪಾಕಿಸ್ತಾನದ ವಿಡಂಬನಾತ್ಮಕ ವೆಬ್‍ಸೈಟ್‍ನ ವರದಿಯ ಆಧಾರದಲ್ಲಿ ಹೆಣೆಯಲಾಗಿತ್ತು. ತಪ್ಪಿಗಾಗಿ ವಿಷಾದಿಸುತ್ತೇವೆ” (This story is erroneous. It was based on reports over a satirical peace appeared on a Pakistani website  we regret the mistake) ಎಂದು ಬರೆಯಿತೇ ಹೊರತು ಆ ಸುದ್ದಿಯ ಹಿನ್ನೆಲೆ, ಸುದ್ದಿ ಹುಟ್ಟಿಕೊಂಡ ಬಗೆ ಮತ್ತು ವಾಸ್ತವಗಳ ಕುರಿತಂತೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಒಂದು ತಪ್ಪಾದ ಸುದ್ದಿಯನ್ನು ಓದಿದ ಓದುಗನಿಗೆ ಅದರ ಸರಿಯಾದ ಭಾಗವನ್ನು ಓದುವ ಹಕ್ಕು ಇದೆಯಲ್ಲವೇ? ಅದನ್ನು ಒದಗಿಸಬೇಕಾದದ್ದು ಯಾರು? ತಪ್ಪು ಸುದ್ದಿಯನ್ನು ಕೊಟ್ಟ ಪತ್ರಿಕೆಗಳು ಅದರ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲವಾದರೆ ಅದನ್ನು ಏನೆಂದು ಪರಿಗಣಿಸಬೇಕು? ಬೇಜವಾಬ್ದಾರಿ, ನಿರ್ಲಕ್ಷ್ಯ, ನುಣುಚಿಕೊಳ್ಳುವಿಕೆ, ಪಲಾಯನ...
    ಇತ್ತೀಚೆಗೆ ಬಿ.ಬಿ.ಸಿ.ಯು ಒಂದು ಸುದ್ದಿಯನ್ನು ಸ್ಫೋಟಿಸಿತು. ನೈಜೀರಿಯಾದ ಅನಂಬ್ರದಲ್ಲಿರುವ ಒಂದು ಹೊಟೇಲ್‍ನಲ್ಲಿ ನರಮಾಂಸವನ್ನು ಬೇಯಿಸಿ ಗ್ರಾಹಕರಿಗೆ ನೀಡಲಾಗುತ್ತದೆ ಎಂಬುದೇ ಆ ಸುದ್ದಿ. ಈ ವಿಷಯ ಬಹಿರಂಗವಾದ ಬಳಿಕ ಆ ಹೊಟೇಲ್ ಅನ್ನು ಮುಚ್ಚಲಾಗಿದೆ ಎಂದೂ ಅದು ಪ್ರಕಟಿಸಿತು. ಈ ಸುದ್ದಿ ಪ್ರಕಟವಾದದ್ದು ಬಿಬಿಸಿಯ ಸ್ವಾಹಿಲಿ ಎಂಬ ಹೆಸರಿನ ಇಂಟರ್‍ನೆಟ್ ಪತ್ರಿಕೆಯಲ್ಲಿ. ಸ್ವಾಹಿಲಿ ಎಂಬುದು ಒಂದು ಭಾಷೆ. ತಾಂಝಾನಿಯಾ, ಬುರುಂಡಿ, ಕಾಂಗೋ, ನೈಜೀರಿಯಾ, ಅಮೇರಿಕ, ರುವಾಂಡ... ಮುಂತಾದ ರಾಷ್ಟ್ರಗಳಲ್ಲಿ ಈ ಭಾಷೆಯನ್ನಾಡುವ 5 ಮಿಲಿಯನ್ ಮಂದಿಯಿದ್ದಾರೆ ಎಂದು ಹೇಳಲಾಗುತ್ತದೆ. ಬಿ.ಬಿ.ಸಿ. ಪ್ರಕಟಿಸಿದ ಸುದ್ದಿ ಎಷ್ಟು ರೋಚಕವಾಗಿತ್ತೆಂದರೆ, ಅದರಲ್ಲಿ ಹಸಿಹಸಿ ವಿವರಣೆಗಳಿದ್ದುವು. “ಜನರು ಅನುಮಾನ ಬಂದು ಪೊಲೀಸರಿಗೆ ದೂರು ಕೊಟ್ಟರೆಂದೂ, ಪೊಲೀಸರು ಬಂದು ಪರಿಶೀಲಿಸಿದಾಗ ಆಗಷ್ಟೇ ಕೊಯ್ದ, ರಕ್ತ ತೊಟ್ಟಿಕ್ಕುತ್ತಿರುವ ಮಾನವ ತಲೆಗಳು ಕಂಡುಬಂದುವು ಎಂದೂ’ ಬರೆಯಲಾಗಿತ್ತು. ರಕ್ತವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಲಾಗುತ್ತಿತ್ತಂತೆ. ಪೊಲೀಸರು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಬಂದೂಕುಗಳು ಮತ್ತು ಗ್ರೆನೇಡ್‍ಗಳು ಸಿಕ್ಕವು..” ಎಂದೂ ಬಿ.ಬಿ.ಸಿ. ಬರೆಯಿತು. ಈ ಸುದ್ದಿಯನ್ನು ಲಂಡನ್ನಿನ ಪ್ರಸಿದ್ಧ ಪತ್ರಿಕೆಗಳಾದ ಡೈಲಿ ಮೇಲ್, ಟೆಲಿಗ್ರಾಫ್‍ಗಳೂ ಎತ್ತಿಕೊಂಡವು. ನೈಜೀರಿಯಾದ ಕೆಲವು ಪತ್ರಿಕೆಗಳೂ ಇದನ್ನು ಮುದ್ರಿಸಿದುವು. ಇದನ್ನು ಓದಿದ ಅನಂಬ್ರದ ಜನರು ಬೀದಿಗಿಳಿದರು. ಬಿ.ಬಿ.ಸಿ. ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ನೈಜೀರಿಯದ ಸಂಸ್ಕ್ರಿತಿ ಮತ್ತು ಪ್ರವಾಸೋದ್ಯಮ ಸಚಿವೆ ಮೇರಿ ಇಮೆಲ್ಡಾರು ಸುದ್ದಿಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು. ಇಷ್ಟೆಲ್ಲ ಅನಾಹುತಗಳು ಆದ ಬಳಿಕ ಮೇ 19ರಂದು ಬಿ.ಬಿ.ಸಿ.ಯು ವಿಷಾದ ವ್ಯಕ್ತಪಡಿಸಿ ಇಂಟರ್‍ನೆಟ್ ಆವೃತ್ತಿಯಿಂದ ಆ ಸುದ್ದಿಯನ್ನು ಹಿಂತೆಗೆದುಕೊಂಡಿತು. ‘ಸುದ್ದಿ ಮೂಲವನ್ನು ತನಿಖೆಗೊಳಪಡಿಸದೇ ಪ್ರಕಟಿಸಿದುದರಿಂದ ಆದ ಪ್ರಮಾದವಿದು..’ ಎಂಬ ಸ್ಪಷ್ಟೀಕರಣವನ್ನೂ ನೀಡಿತು. ನಿಜವಾಗಿ, `ಪ್ರಮಾದ' ಎಂಬ ಮೂರಕ್ಷರಕ್ಕೆ ಸೀಮಿತಗೊಳಿಸಿ ನೋಡಬಹುದಾದ ಪ್ರಕರಣ ಇದಲ್ಲ. ಯಾಕೆಂದರೆ, ಇಂಥ ಪ್ರಮಾದಗಳು ಏಶ್ಯನ್- ಆಫ್ರಿಕನ್ ರಾಷ್ಟ್ರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ಬಿ.ಬಿ.ಸಿ.ಯಿಂದ ಹಿಡಿದು `ದ ಲಾಸ್ಟ್ ಕಿಂಗ್ ಆಫ್ ಸ್ಕಾಟ್‍ಲ್ಯಾಂಡ್' ಎಂಬ ಸಿನಿಮಾದ ವರೆಗೆ ಎಲ್ಲವೂ ಆಫ್ರಿಕನ್ ನಾಗರಿಕರನ್ನು ಅನಾಗರಿಕರಂತೆ ಬಿಂಬಿಸುತ್ತಲೇ ಬಂದಿವೆ. ಉಗಾಂಡದ ಮಾಜಿ ಅಧ್ಯಕ್ಷ ಇದಿ ಅಮೀನ್‍ರನ್ನು ನರಮಾಂಸ ಭಕ್ಷಕ ಎಂದು ಅವು ಹೇಳಿದ್ದುವು. ಲಿಬಿಯದ ಗದ್ದಾಫಿ, ಇರಾಕ್‍ನ ಸದ್ದಾಮ್, ಇರಾನ್‍ನ ಖೊಮೇನಿ... ಸಹಿತ ಆಫ್ರಿಕನ್-ಅರಬ್ ರಾಷ್ಟ್ರಗಳ ನಾಯಕರ ದೊಡ್ಡದೊಂದು ಪಟ್ಟಿಯೇ ಇವರ ಪ್ರಮಾದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಮಾಧ್ಯಮ ಪ್ರಾಮಾಣಿಕತೆ ಮತ್ತೆ ಮತ್ತೆ ಸಂದೇಹಕ್ಕೆ ಒಳಗಾಗುತ್ತಿರುವುದು. ವಿಷಾದ ಎಂಬುದು ನಿರ್ಲಕ್ಷ್ಯವನ್ನೋ ದುರುದ್ದೇಶವನ್ನೋ ಮುಚ್ಚಿಡುವುದಕ್ಕಾಗಿ ಬಳಸಬೇಕಾದ ಪದವಲ್ಲವಲ್ಲ. ಆ ಪದಕ್ಕೆ ಗೌರವವಿದೆ.We regret the mistake
   .
ತಪ್ಪೊಪ್ಪಿಕೊಂಡ BBC
ಎಂದು ಒಪ್ಪುವಾಗ, ಮತ್ತೆಂದೂ ಇಂಥದ್ದೊಂದು ಪ್ರಮಾದಕ್ಕೆ ಅವಕಾಶ ನೀಡುವುದಿಲ್ಲ ಎಂಬೊಂದು ಬದ್ಧತೆಯನ್ನೂ ಮಾಧ್ಯಮ ರಂಗ ಪ್ರದರ್ಶಿಸಬೇಕಾಗುತ್ತದೆ. ಈ ಬದ್ಧತೆಯನ್ನು ಮಾಧ್ಯಮ ರಂಗವು ಇವತ್ತು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿದೆ? ಈ ರಂಗ ಇವತ್ತು ನಮಗೆ ಒದಗಿಸುತ್ತಿರುವುದು ಸಂಪೂರ್ಣ ಪರಿಶೀಲನೆಗೊಳಪಡಿಸಿದ ಸುದ್ದಿಯನ್ನೋ? ಅವು ಪಕ್ಷಪಾತರಹಿತವೇ? ಧರ್ಮ, ಜಾತಿ, ಜನಾಂಗ, ಭಾಷೆಯನ್ನು ಮೀರಿದ ಆದರ್ಶವೊಂದು ‘ಸುದ್ದಿ ಮನೆ’(ಪತ್ರಿಕಾ ಕಚೇರಿ)ಗಳಲ್ಲಿವೆಯೇ? ಇದೆಯೆಂದಾದರೆ ಅದು ನಿಜಕ್ಕೂ ಸಕ್ರಿಯವಾಗಿದೆಯೇ? ಅಷ್ಟಕ್ಕೂ,
      ಫಝ್ಲುರ್ರಹ್ಮಾನ್‍ರ ಬಗ್ಗೆ ರೋಚಕ ಸುದ್ದಿಯನ್ನು ಕಟ್ಟಿಕೊಟ್ಟ ಕನ್ನಡ ಸಹಿತ ಹೆಚ್ಚಿನೆಲ್ಲ ಪತ್ರಿಕೆಗಳು ಕನಿಷ್ಠ ಆ ಬಗ್ಗೆ ಸ್ಪಷ್ಟೀಕರಣವನ್ನೋ ವಿಷಾದವನ್ನೋ ಈ ವರೆಗೂ ಸೂಚಿಸಿಲ್ಲ ಎಂಬುದೇ ಮಾಧ್ಯಮರಂಗದ ಆದರ್ಶ ಬದ್ಧತೆಯ ಮಿತಿಯನ್ನು ಸ್ಪಷ್ಟಪಡಿಸುತ್ತದೆ.  

Wednesday, July 8, 2015

ಇವೆಲ್ಲ ಆಕಸ್ಮಿಕವೋ ಪೂರ್ವಯೋಜಿತವೋ?

ಚೇತನ್ ಭಗತ್
ಅಮರ್ತ್ಯ ಸೇನ್
ಸಲ್ಮಾನ್ ರುಶ್ದಿ
ತಸ್ಲೀಮಾ ನಸ್ರೀನ್
    ಮುಂತಾದವರಂತೆ, ಪರಾಂಜಯ್ ಗುಹಾ ತಾಕುರ್ತಾ, ಸುಬಿರ್ ಘೋಷ್, ಜ್ಯೋತಿರ್ಮಯಿ ಚೌಧರಿ, ಮ್ಯಾಟ್ ಕೆನ್ನಾರ್ಡ್, ಆ್ಯಂಡ್ರೆ ವಾಲ್ಚೆಕ್.. ಇವರೆಲ್ಲ ಸುದ್ದಿಗೀಡಾದವರಲ್ಲ. ಹಾಗಂತ, ಇವರೂ ಬರಹಗಾರರೇ. ಆದರೆ ಇವರು ಬರಹಕ್ಕಾಗಿ ಆಯ್ದುಕೊಳ್ಳುವ ವಿಷಯಗಳು ಇವರನ್ನು ಖ್ಯಾತನಾಮರಿಂದ ಹೊರಗಿರಿಸಿವೆ. ಇವರ ಕುತೂಹಲಗಳನ್ನು ಜಾಣತನದಿಂದ ನಿರ್ಲಕ್ಷಿಸಲಾಗಿದೆ. ಸುದ್ದಿಗೆ ಮತ್ತು ಚರ್ಚೆಗೆ ಒಳಗಾಗಲೇಬೇಕಿದ್ದ ಇವರ ಬರಹಗಳನ್ನು ಸುದ್ದಿಗೀಡಾಗದಂತೆ ನೋಡಿಕೊಳ್ಳ     ಲಾಗಿದೆ. ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. ಮಾನಸಿಕವಾಗಿ ಹಿಂಸಿಸಲಾಗಿದೆ, ಅಗೌರವಿಸಲಾಗಿದೆ. ಅಷ್ಟಕ್ಕೂ, ರುಶ್ದಿಯಂತೆಯೋ ತಸ್ಲೀಮಾರಂತೆಯೋ ಇವರು ಯಾರ ಧಾರ್ಮಿಕ ಭಾವನೆಯನ್ನೂ ಘಾಸಿಗೊಳಿಸಿಲ್ಲ. ಜನರ ಆಚಾರ-ವಿಚಾರಗಳನ್ನು ಪ್ರಶ್ನಿಸಿಲ್ಲ. ಅವರು, ‘ಜಗತ್ತಿನ ಹೆಚ್ಚಿನ ಸಂಪತ್ತು ಕೇವಲ 85 ಮಂದಿ ಶ್ರೀಮಂತರಲ್ಲೇ ಯಾಕೆ ಸುತ್ತುತ್ತಿವೆ’ ಎಂದು ಅನುಮಾನಿಸಿದರು. ಆ ಕುರಿತಂತೆ ಅಧ್ಯಯನ ನಡೆಸಿದರು. ‘ಜಗತ್ತಿನ ಹೆಚ್ಚಿನೆಲ್ಲ ಅತಿಕ್ರಮಣಗಳು ಮತ್ತು ದಾಳಿಗಳು ನಿರ್ದಿಷ್ಟ ಸಂದರ್ಭವೊಂದರಲ್ಲೇ ಯಾಕೆ ಘಟಿಸುತ್ತಿವೆ..’ ಎಂದು ಕುತೂಹಲಗೊಂಡು ಹುಡುಕಾಡಿದರು. ಈ ಹುಡುಕಾಟವೇ ಇವರನ್ನು ಕಪ್ಪು ಪಟ್ಟಿಯಲ್ಲಿರಿಸುವುದಕ್ಕೆ ಕಾರಣವಾದುವು.
    ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಫೈನಾನ್ಶಿಯಲ್ ಟೈಮ್ಸ್.. ಮುಂತಾದ ಪ್ರಸಿದ್ಧ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದ ಖ್ಯಾತ ಪತ್ರಕರ್ತ ಮ್ಯಾಟ್ ಕೆನ್ನಾರ್ಡ್‍ರು ಒಮ್ಮೆ ಫೈನಾನ್ಶಿಯಲ್ ಟೈಮ್ಸ್ ಗೆ ಈಜಿಪ್ಟ್ ನ ಸರ್ವಾಧಿಕಾರಿ ಮುಬಾರಕ್‍ರ ಬಗ್ಗೆ ಒಂದು ಲೇಖನ ಬರೆದರು. ಇಸ್ರೇಲ್‍ನ ನಂತರ ಅಮೇರಿಕದಿಂದ ಅತ್ಯಂತ ಹೆಚ್ಚು ನೆರವು ಪಡೆಯುತ್ತಿರುವ ರಾಷ್ಟ್ರ ಈಜಿಪ್ಟ್. ಈ ಹಿನ್ನೆಲೆಯಿಂದಲೇ ಅವರು ‘ಅಮೇರಿಕ ಬೆಂಬಲಿತ’ (US backed ) ಎಂಬ ಪದವನ್ನು ಲೇಖನದ ಮಧ್ಯೆ ಬಳಸಿದರು. ಆದರೆ ಸಂಪಾದಕರು ಆ ಪದವನ್ನು ಕಿತ್ತು ಹಾಕಿದರು. ಇನ್ನೊಮ್ಮೆ, ಲೆಬನಾನ್‍ನಲ್ಲಿ ಅಸ್ತಿತ್ವದಲ್ಲಿರುವ ಹಿಝ್ಬುಲ್ಲಾದ ಬಗ್ಗೆ ಅದೇ ಫೈನಾನ್ಶಿಯಲ್ ಟೈಮ್ಸ್ ಗೆ ಲೇಖನವೊಂದನ್ನು ಬರೆದುಕೊಟ್ಟರು. ‘ಹಿಝ್ಬುಲ್ಲಾಗೆ ಇರಾನ್ ನೆರವಾಗುತ್ತಿದೆ’ (Iranian backed ) ಎಂದೂ ಬರೆದರು. ಆದರೆ ಆ ಪದವನ್ನು ಸಂಪಾದಕರು ಹಾಗೆಯೇ ಉಳಿಸಿಕೊಂಡರು. ಮಾಧ್ಯಮಗಳು ಮತ್ತು ಅವುಗಳ ಭಾಷೆಯನ್ನು ಮೂರನೇ ಶಕ್ತಿಯೊಂದು ಸದಾ ನಿಯಂತ್ರಿಸುತ್ತಿರುತ್ತದೆ ಎಂಬ ತನ್ನ ಅಧ್ಯಯನಾತ್ಮಕ ಬರಹದಲ್ಲಿ ಒಂದು ಉದಾಹರಣೆಯಾಗಿ ಕೆನ್ನಾರ್ಡ್‍ರು ಈ ಘಟನೆಯನ್ನು ಉಲ್ಲೇಖಿಸಿದರು. ಜಗತ್ತಿನಲ್ಲಿ ದೊಡ್ಡದೊಂದು ಜನಸಂಖ್ಯೆ ಹಸಿವಿನಿಂದ ಸಾಯುತ್ತಿರುವಾಗ ಕೆಲವೇ ಕೆಲವು ಶ್ರೀಮಂತರ ಗುಂಪಿನಲ್ಲಿ ಜಗತ್ತಿನ ಸಂಪತ್ತೆಲ್ಲ  ಸೇರಿಕೊಂಡಿರುವುದು ಆಕಸ್ಮಿಕವಲ್ಲ ಎಂದೇ ಅವರು ತನ್ನ ಹೊಸ ಪುಸ್ತಕ ‘The rocket: A Rouge Reporters V/s The Masters of the
ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಕರ್ಕರೆ
 Universe’ದಲ್ಲಿ ವಾದಿಸಿದರು. ಮಾಧ್ಯಮಗಳು ಈ ಶ್ರೀಮಂತರ ದಂಧೆಯನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಕಳಕೊಂಡಿವೆ ಎಂದು ಹಲವಾರು ಉದಾಹರಣೆಗಳ ಮೂಲಕ ಸಾದರಪಡಿಸಿದರು. ಇದಕ್ಕಿಂತ ಮೊದಲು, 2014 ಎಪ್ರಿಲ್ 15ರಂದು ‘ಗ್ಯಾಸ್ ವಾರ್ಸ್: ಕ್ರೋನಿ ಕ್ಯಾಪಿಟಾಲಿಸಂ ಆ್ಯಂಡ್ ದಿ ಅಂಬಾನೀಸ್' ಎಂಬ ಕೃತಿಯೊಂದು ಬಿಡುಗಡೆಯಾಯಿತು. ಪರಾಂಜಯ್ ಗುಹಾ, ಸುಬಿರ್ ಮತ್ತು ಜ್ಯೋತಿರ್ಮಯಿ ಎಂಬ ಮೂವರು ಸಂಶೋಧನಾ ನಿರತ ಬರಹಗಾರರು ಒಟ್ಟು ಸೇರಿ ಈ ಕೃತಿಯನ್ನು ರಚಿಸಿದ್ದರು. ವಿಶೇಷ ಏನೆಂದರೆ, ಅವರು ಈ ಕೃತಿಯ ಪ್ರಕಟಣೆಗಾಗಿ ಎರಡ್ಮೂರು ಪ್ರಕಾಶನ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಅವು ಒಪ್ಪಿಕೊಳ್ಳದೇ ಹೋದಾಗ ಸ್ವಯಂ ಪ್ರಕಟಣೆಗೆ ಮುಂದಾದರು. ಬಿಡುಗಡೆಯಾದ ಎರಡೇ ದಿನಗಳೊಳಗೆ ಅಂಬಾನಿಗಳ ವಕೀಲರಿಂದ ನೋಟೀಸ್ ಬಂತು. ಎಪ್ರಿಲ್ 23ರಂದು ಮತ್ತೊಂದು ನೋಟೀಸು ಬಂತು. 100 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಸಲಾದ ನೋಟೀಸ್. ಕೇಂದ್ರ ಸರಕಾರದ ನೀತಿಗಳು ಹೇಗೆ ಅಂಬಾನಿ ಪರವಾಗಿವೆ ಎಂಬುದನ್ನು ‘ಗ್ಯಾಸ್ ವಾರ್..’ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಕೃಷ್ಣ ಮತ್ತು ಗೋದಾವರಿ ನದಿ ತಟದಲ್ಲಿ ತೈಲ ಎತ್ತುವಿಕೆಗೆ ಮತ್ತು ತೈಲ ಬೆಲೆಗೆ ಸಂಬಂಧಿಸಿ ಅನಿಲ್ ಮತ್ತು ಮುಖೇಶ್ ಅಂಬಾನಿ ನಡುವೆ ಇರುವ ತಗಾದೆಗಳು ಕೃತಿಯಲ್ಲಿ ಉಲ್ಲೇಖಿತವಾಗಿದ್ದುವು. ಸರಕಾರವು ರಿಲಯನ್ಸ್ ಪರ ಇರುವುದನ್ನು ಮತ್ತು ಆ ಕಾರಣದಿಂದಲೇ ಈ ಹಿಂದೆ ಪೆಟ್ರೋಲಿಯಂ ಸಚಿವರನ್ನು ಸರಕಾರ ಬದಲಿಸಿರುವುದನ್ನೂ ಕೃತಿಯಲ್ಲಿ ಪುರಾವೆಯಾಗಿ ಮಂಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ರಿಲಯನ್ಸ್ ದೇಣಿಗೆ ನೀಡುತ್ತಿದೆ ಮತ್ತು ಪ್ರತಿಯಾಗಿ ವಿವಿಧ ತೈಲ ಮತ್ತಿತರ ಗುತ್ತಿಗೆಗಳನ್ನು ಪಡಕೊಂಡು ಅದು ಶ್ರೀಮಂತವಾಗುತ್ತಾ ಹೋಗುತ್ತಿದೆ ಎಂದೂ ಹೇಳಲಾಗಿತ್ತು.
    ಅಷ್ಟಕ್ಕೂ, ಮ್ಯಾಗಿ ನೂಡಲ್ಸನ್ನು ಸರಕಾರಗಳು ನಿಷೇಧಿಸುವುದಕ್ಕಿಂತ ಮೊದಲು ದೇಶದಲ್ಲಿ ಅದರ ವ್ಯಾಪ್ತಿ, ಮಾರಾಟ, ಬಜೆಟ್ ಇವೆಲ್ಲ ಎಷ್ಟು ಮಂದಿಗೆ ಗೊತ್ತಿತ್ತು? ‘ಮ್ಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ, ನಾವು ತಿನ್ನುತ್ತೇವೆ..’ ಎಂಬುದಕ್ಕಿಂತ ಹೊರತಾಗಿ ಅದರ ತಯಾರಿಯ ಬಗ್ಗೆ ನಾವೆಷ್ಟು ತಲೆ ಕೆಡಿಸಿಕೊಂಡಿದ್ದೆವು? ಮ್ಯಾಗಿಯನ್ನು ನಮಗೆ ಇಷ್ಟದ ಆಹಾರವಾಗಿ ಪರಿಚಯಿಸಿದ್ದು ಜಾಹೀರಾತುಗಳೇ. ಕೇವಲ ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ ಮ್ಯಾಗಿಯ ಪ್ರಚಾರಕ್ಕಾಗಿ 445 ಕೋಟಿ ರೂಪಾಯಿಯನ್ನು ಬಳಸಲಾಗಿದೆ. ಹಾಗಂತ, ಇದರ ತಪಾಸಣೆಗೆ ಕಂಪೆನಿ ವ್ಯಯಿಸಿದ್ದು ಬರೇ 19 ಕೋಟಿ ರೂಪಾಯಿ. ಶ್ರೀಮಂತ ಕಂಪೆನಿಗಳು ಮತ್ತು ವ್ಯಕ್ತಿಗಳು ತಮ್ಮ ಖಜಾನೆಯನ್ನು ತುಂಬಿಸುವುದಕ್ಕಾಗಿ ಮರುಳು ಮಾಡುವ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ರಾಷ್ಟ್ರಗಳು ಕೂಡ ಇದರಿಂದ ಹೊರತಾಗಿಲ್ಲ. ಅವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ನಿರ್ದಿಷ್ಟ ಸಂದರ್ಭಗಳಿಗಾಗಿ ಕಾಯುತ್ತಿರುತ್ತವೆ. 1994ರ  ವಿಶ್ವಕಪ್ ಫುಟ್ಬಾಲ್ ಫೈನಲ್‍ನಲ್ಲಿ ಇಟಲಿ ಆಡುತ್ತಿರುವ ದಿನದಂದೇ ಇಟಲಿಯ ಅಧ್ಯಕ್ಷ ಸಿಲ್ವಿಯೋ ಬೆರ್ಲಸ್ಕೋನಿಯವರು ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದರು. ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುವುದನ್ನು ತಡೆಯುವ ಉದ್ದೇಶದ ಆದೇಶವಾಗಿತ್ತದು. 2008ರಲ್ಲಿ ರಷ್ಯಾವು ಜಾರ್ಜಿಯಾದ ಮೇಲೆ ಆಕ್ರಮಣ ನಡೆಸುವಾಗ ಬೀಜಿಂಗ್‍ನಲ್ಲಿ ಒಲಿಂಪಿಕ್ಸ್ ನಡೆಯುತ್ತಿತ್ತು. ನಿಜವಾಗಿ, ಮಾಧ್ಯಮಗಳ ಗಮನವಷ್ಟೇ ಅಲ್ಲ, ಜಗತ್ತಿನ ಗಮನವೂ ಇದ್ದದ್ದು ಬೀಜಿಂಗ್‍ನಲ್ಲೇ. ಅಷ್ಟಕ್ಕೂ, ಇಂಥ ಘಟನೆಗಳು ಆಕಸ್ಮಿಕ ಅಲ್ಲ ಎಂಬುದಕ್ಕೆ - Read ದಿ study: Attack when the World is not watching? International media and the Israel-Palestinian conflict' (ಜಗತ್ತು ಗಮನಿಸದಿರುವಾಗ ನಡೆಸುವ ಆಕ್ರಮಣ, ಇಸ್ರೇಲ್-ಫೆಲೆಸ್ತೀನ್ ವಿವಾದ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ) ಎಂಬ ರಾಬಿನ್ ಡ್ಯುರಾಂಟ್ ಮತ್ತು ಎಕತರಿನ್ ಝರಾವ್‍ಸ್ಕಾಯ ಎಂಬವರ ಸಂಶೋಧನಾತ್ಮಕ ಬರಹ ಧಾರಾಳ ಪುರಾವೆಗಳನ್ನು ಒದಗಿಸುತ್ತದೆ. ಪ್ಯಾರಿಸ್‍ನ ಪೊ ಯುನಿವರ್ಸಿಟಿ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಪ್ರೊಫೆಸರ್‍ಗಳಾಗಿರುವ ಇವರು, ‘ಮಾಧ್ಯಮಗಳು ಇತರ ಸುದ್ದಿಗಳಲ್ಲಿ ಬ್ಯುಸಿಯಾಗಿರುವ ಸಂದರ್ಭವನ್ನು ವಿವಿಧ ರಾಷ್ಟ್ರಗಳು ಹೇಗೆ ಆಕ್ರಮಣಕ್ಕೆ ಬಳಸಿಕೊಳ್ಳುತ್ತವೆ.. ’ ಎಂಬುದನ್ನು ವಿವರವಾಗಿ ಕೃತಿಯಲ್ಲಿ ತೆರೆದಿಟ್ಟರು. 2000ದಿಂದ 2011ರ ವರೆಗಿನ 11 ವರ್ಷಗಳ ಅವಧಿಯ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಈ ಲೇಖಕರು ತಮ್ಮ ಅಧ್ಯಯನಕ್ಕೆ ಒಳಪಡಿಸಿದರು. ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷ ಮತ್ತು ಆ ಸಂದರ್ಭದಲ್ಲಿ ಅಮೇರಿಕದ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳನ್ನು ಪರಸ್ಪರ ಹೋಲಿಸಿ ನೋಡಿಕೊಂಡರು. 2001 ಸೆ. 11ರಂದು ಜಗತ್ತಿನ ಗಮನವೆಲ್ಲ ಅಮೇರಿಕದತ್ತ ನೆಟ್ಟಿತ್ತು. ಎರಡು ನಾಗರಿಕ ವಿಮಾನಗಳು ಅಲ್ಲಿನ ಅವಳಿ ಗೋಪುರವನ್ನು ಹೊಡೆದುರುಳಿಸಿದ ಭಯಾನಕ ಘಟನೆಗೆ ಜಗತ್ತು ತಲ್ಲಣಗೊಂಡಿತ್ತು. ಮಾಧ್ಯಮಗಳು ಮಾತ್ರವಲ್ಲ, ಜಗತ್ತಿನ ಎಲ್ಲರೂ ಅಮೇರಿಕದತ್ತ ಗಮನ ಕೇಂದ್ರೀಕರಿಸಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡು ಇಸ್ರೇಲ್‍ನ ಪ್ರಧಾನಿ ಏರಿಯಲ್ ಶೆರೋನ್‍ರು ಫೆಲೆಸ್ತೀನ್‍ನ ಗಾಝಾದ ಮೇಲೆ ಹೆಲಿಕಾಪ್ಟರ್ ದಾಳಿ ನಡೆಸಿದರು. ಪಶ್ಚಿಮ ದಂಡೆಯ ಮೇಲೆ ಸೇನೆಯ ಮೂಲಕ ಆಕ್ರಮಣ ನಡೆಸಿದರು. ಇದೊಂದೇ ಅಲ್ಲ, Exposing the lies of the Empire (ಸಾಮ್ರಾಜ್ಯದ ಸುಳ್ಳುಗಳ ಅನಾವರಣ) ಎಂಬ ಆ್ಯಂಡ್ರೆ ವಾಲ್ಚೆಕ್‍ರ ಕೃತಿಯಲ್ಲೂ ಇಂಥ ಮೋಸಗಳ ವಿವರಗಳಿವೆ. ಇರಾಕ್‍ನ ಮೇಲೆ ಅಮೇರಿಕ ನಡೆಸಿದ ಆಕ್ರಮಣದ ಸುತ್ತ ಹೆಣೆಯಲಾದ ಈ ಕೃತಿಯಲ್ಲಿ ಅಮೇರಿಕನ್ ಸುಳ್ಳುಗಳ ದೊಡ್ಡದೊಂದು ಮೂಟೆಯನ್ನೇ ಬಿಚ್ಚಿಡಲಾಗಿದೆ. ಕಾದಂಬರಿಕಾರ, ಸಿನಿಮಾ ನಿರ್ದೇಶಕ ಮತ್ತು ಪತ್ರಕರ್ತರೂ ಆಗಿರುವ ಆ್ಯಂಡ್ರೆ ವಾಲ್ಚೆಕ್‍ರು ಇದೀಗ ಈ ಕೃತಿಯ ದ್ವಿತೀಯ ಭಾಗವನ್ನು ತರುವ ಉಮೇದಿನಲ್ಲಿದ್ದಾರೆ. ಅವರ ವಿಶೇಷತೆ ಏನೆಂದರೆ, ಅವರು ಸುದ್ದಿಗಳ ಮೂಲವನ್ನು ಹುಡುಕಿಕೊಂಡು ಹೋಗುತ್ತಾರೆ. ‘ಚೀನಾದಲ್ಲಿ ಸಮಾಜವಾದ ಸತ್ತಿದೆ..’ ಎಂಬ ಪಾಶ್ಚಾತ್ಯ ಮಾಧ್ಯಮಗಳ ಅಭಿಪ್ರಾಯವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಅವರು ಬೀಜಿಂಗ್‍ನಲ್ಲಿ ನೆಲೆಸಿದರು. ಜಿಂಬಾಬ್ವೆಯ ವಿರುದ್ಧ ಇಕನಾಮಿಕ್ಸ್ ಟೈಮ್ಸ್, ಬಿಬಿಸಿಯಂಥ ಮಾಧ್ಯಮಗಳು ಅಕ್ಷರ ದಾಳಿಯನ್ನು ಪ್ರಾರಂಭಿಸಿದಾಗ ಅವರು ಜಿಂಬಾಬ್ವೆಗೆ ತೆರಳಿದರು. ‘ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲ..’ ಎಂಬಲ್ಲಿವರೆಗೆ ಈ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಒಂದು ಕಾಲದಲ್ಲಿ ಬಿಳಿಯ ರಾಷ್ಟ್ರಗಳ ಅತಿಕ್ರಮಣಕ್ಕೀಡಾಗಿ ಬಸವಳಿದಿದ್ದ ಮತ್ತು ರಾಬರ್ಟ್ ಮುಗಾಬೆಯವರ ನೇತೃತ್ವದಲ್ಲಿ ಕರಿಯರು ಒಟ್ಟು ಸೇರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಜಿಂಬಾಬ್ವೆಗಿದೆ. ಬಿಬಿಸಿ ಮತ್ತು ಇಕನಾಮಿಕ್ಸ್ ಗಳು ಹೇಳಿದ್ದು ಪರಮ ಸುಳ್ಳು ಎಂಬುದನ್ನು ವಾಲ್ಚೆಕ್ ಸಾಬೀತುಪಡಿಸಿದರು. ನಿಜವಾಗಿ, ಇಂಥ ಬರಹಗಳಿಗೆ ಮಾಧ್ಯಮಗಳಲ್ಲಿ ಜಾಗ ಸಿಗುವುದು ಕಡಿಮೆ. ಜುಜುಬಿ 85 ಮಂದಿಯ ಕೈಯಲ್ಲಿ ಇಷ್ಟು ದೊಡ್ಡ ಜಗತ್ತಿನ ಹೆಚ್ಚಿನ ಸಂಪತ್ತುಗಳು ಯಾಕೆ ಕೇಂದ್ರೀಕೃತವಾಗಿವೆ ಎಂಬ ಪ್ರಶ್ನೆಯನ್ನು ಕೇಳುವ ಸಾಮರ್ಥ್ಯ ಮುಖ್ಯವಾಹಿನಿಯ ಮಾಧ್ಯಮಗಳಿರುವುದಿಲ್ಲ. ಯಾಕೆಂದರೆ, ಈ ಮಾಧ್ಯಮವನ್ನು ನಿಯಂತ್ರಿಸುತ್ತಿರುವುದೇ ಈ ಶ್ರೀಮಂತರು. ಭಾರತದ ಪ್ರಮುಖ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾರ ನಿಯಂತ್ರಣದಲ್ಲಿವೆ ಎಂಬ ಅಧ್ಯಯನಕ್ಕೆ ಇಳಿದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಸರಕಾರಗಳಿಗೂ ಅವರನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಬಹುತೇಕ ಇರುವುದಿಲ್ಲ. ಅವರಿಲ್ಲದಿದ್ದರೆ ಪಕ್ಷ ನಡೆಯದಂಥ ಸ್ಥಿತಿ ಇರುತ್ತದೆ. ಅವರಿಗಾಗಿ ನೀತಿ-ನಿಯಮಗಳನ್ನು ಒಂದೋ ಸಡಿಲಿಸಬೇಕಾಗುತ್ತದೆ ಅಥವಾ ಪಕ್ಷಪಾತ ತೋರಬೇಕಾಗುತ್ತದೆ. ಹೀಗೆ ಶ್ರೀಮಂತರೇ ಶ್ರೀಮಂತರಾಗುತ್ತಾರೆ. ಅಷ್ಟಕ್ಕೂ, 
   ರಕ್ಷಣಾ ಹಗರಣದಿಂದಾಗಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರವು ತೀವ್ರ ಮುಜುಗರ ಅನುಭವಿಸುತ್ತಿದ್ದ ಸಂದರ್ಭದಲ್ಲೇ ಪಾರ್ಲಿಮೆಂಟ್ ನ ಮೇಲೆ ದಾಳಿಯಾಗುವುದು ಮತ್ತು ಕರ್ಕರೆ, ಸಾಲಸ್ಕರ್‍ರಂಥ ಪ್ರಮುಖ ಮೂವರು ಪೊಲೀಸಧಿಕಾರಿಗಳು ಆಶ್ಚರ್ಯಕರ ರೀತಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಸಾವಿಗೀಡಾಗುವುದನ್ನು ಹೇಗೆ ಅನುಮಾನಿಸದಿರಲು ಸಾಧ್ಯ?




Thursday, July 2, 2015

ರೋಮ್ ಮಾರ್ಚ್, ರಥಯಾತ್ರೆ ಮತ್ತು ಮೋದಿ..

ಶಂಕರ್ ಗುಹಾ ನಿಯೋಗಿ
    ನರೇಂದ್ರ ಮೋದಿಯವರು ಪ್ರಧಾನಿಯಾದ ಕೆಲವೇ ವಾರಗಳಲ್ಲಿ, “ಭಾರತದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ವಿದೇಶಿ ದೇಣಿಗೆ ಪಡೆಯುವ ಎನ್‍ಜಿಓ(ಸರಕಾರೇತರ ಸಂಸ್ಥೆ)ಗಳ ಸಂಚು” (Concerted efforts by select foreign funded NGOs to take down Indian development projects) ಎಂಬ ಶೀರ್ಷಿಕೆಯಲ್ಲಿ ಭಾರತದ ಗುಪ್ತಚರ ಇಲಾಖೆಯು (IB) 21 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಸುಮನ್ ಸಹಾಯ್, ವಂದನಾ ಶಿವ, ಕವಿತಾ ಕುರುಗಂತಿ, ಉದಯ ಕುಮಾರ್, ಅರುಣಾ ರಾಡ್ರಿಗಸ್, ಸ್ವಾಮಿ ಅಗ್ನಿವೇಶ್.. ಮುಂತಾದ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ವರದಿ ಶಂಕೆ ವ್ಯಕ್ತ ಪಡಿಸಿತು. ಗ್ರೀನ್‍ಪೀಸ್, ಆ್ಯಕ್ಷನ್ ಏಡ್, ಆಶಾ.. ಮುಂತಾದ ಎನ್‍ಜಿಓಗಳೂ ಶಂಕೆಗೊಳಗಾದವು. ಅದರಲ್ಲೂ ಗ್ರೀನ್‍ಪೀಸ್‍ನ ಮೇಲೆ ಮೋದಿ ಸರಕಾರ ಎಷ್ಟರ ಮಟ್ಟಿಗೆ ದ್ವೇಷದಿಂದ ವರ್ತಿಸಿ ತೆಂದರೆ, ಅದರ ಪ್ರಮುಖ ಕಾರ್ಯಕರ್ತೆ ಪ್ರಿಯಾ ಪಿಳ್ಳೆಯನ್ನು ಲಂಡನ್‍ಗೆ ತೆರಳದಂತೆ ಭಾರತದ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಯಿತು. ಮಧ್ಯ ಪ್ರದೇಶದ ಮಹನ್ ಎಂಬಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ನಿರ್ಗತಿಕರಾಗುವ ಆದಿವಾಸಿಗಳ ಕುರಿತಂತೆ ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ವಿಷಯ ಮಂಡಿಸುವುದು ಪ್ರಿಯಾ ಪಿಳ್ಳೆಯ ಪ್ರಯಾಣದ ಉದ್ದೇಶವಾಗಿತ್ತು. 40 ರಾಷ್ಟ್ರಗಳಲ್ಲಿ ಚಟುವಟಿಕೆಯಲ್ಲಿರುವ ಗ್ರೀನ್‍ಪೀಸ್, ಜಗತ್ತಿನಲ್ಲಿಯೇ ಅತಿ ದೊಡ್ಡ ಸರಕಾರೇತರ ಸಂಸ್ಥೆ. ಕಲ್ಲಿದ್ದಲು ಮತ್ತು ಪರಮಾಣು ಆಧಾರಿತ ವಿದ್ಯುತ್ ಯೋಜನೆಗಳೇ ಅದರ ಮುಖ್ಯ ಗುರಿ. ಇಂಥ ಬೃಹತ್ ಯೋಜನೆಗಳಿಂದ ಆಗಬಹುದಾದ ಪರಿಸರ ನಾಶ, ನಿರ್ವಸಿತರು, ಕೃಷಿ ಭೂಮಿ.. ಸಹಿತ ಒಟ್ಟು ಹಾನಿಗಳ ಬಗ್ಗೆ ಅದು ಜನಜಾಗೃತಿ ಮೂಡಿಸುವುದನ್ನು ಈವರೆಗೂ ಮಾಡುತ್ತಾ ಬಂದಿದೆ. ನಿಜವಾಗಿ, ಮೋದಿಯವರ ಕಾಕದೃಷ್ಟಿ ಗ್ರೀನ್‍ಪೀಸ್‍ನ ಮೇಲೆ ಬೀಳುವುದಕ್ಕೆ ಇನ್ನೊಂದು ಕಾರಣವೂ ಇದೆ- ಅದುವೇ ಅದಾನಿ. ‘Research breaking: Adani's record of environmental destruction and non compliance with regulations’ (ಅದಾನಿ ಕಂಪೆನಿ ನಡೆಸಿರುವ ಪರಿಸರ ನಾಶ ಮತ್ತು ಕಾನೂನು ಉಲ್ಲಂಘನೆಯ ಅಧ್ಯಯನಾತ್ಮಕ ವರದಿ) ಎಂಬ ಹೆಸರಲ್ಲಿ 2014 ಮಾರ್ಚ್‍ನಲ್ಲಿ ಗ್ರೀನ್‍ಪೀಸ್ ಸಂಸ್ಥೆಯು ವಿಸ್ತೃತ ವರದಿಯನ್ನು ಬಿಡುಗಡೆಗೊಳಿಸಿತ್ತು. ಮೋದಿಯವರ ಪರಮಾಪ್ತರಾದ ಅದಾನಿಯವರ ‘ಕೋಲ್ ಇಂಡಿಯಾ ಕಂಪೆನಿ’ಗೆ ಪರಿಸರ ನಾಶದಲ್ಲಿ ದೀರ್ಘ ಇತಿಹಾಸವಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನಧಿಕೃತ ನಿರ್ಮಾಣ, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ್ದೂ ಸೇರಿದಂತೆ ಅದಾನಿ ಕಂಪೆನಿಯ ನಡೆಯನ್ನು ಅದರಲ್ಲಿ ಉಲ್ಲೇಖಿಸಿ ಪ್ರಶ್ನಿಸಲಾಗಿತ್ತು. ಅದಾನಿಯವರ ಕೋಲ್ ಇಂಡಿಯಾ ಕಂಪೆನಿಯು ಜಗತ್ತಿನಲ್ಲಿಯೇ ಪ್ರಮುಖ ಕಲ್ಲಿದ್ದಲು ಸಂಸ್ಥೆ. ಆಸ್ಟ್ರೇಲಿಯಾದಲ್ಲಿ ಅದು 16.5 ಬಿಲಿಯನ್ ಡಾಲರ್ ಮೊತ್ತದ ಕಲ್ಲಿದ್ದಲು ಗುತ್ತಿಗೆಯನ್ನು ಪಡಕೊಂಡದ್ದು ಮತ್ತು ಅಲ್ಲಿನ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಆ ಮೊದಲೇ ಪಾರ್ಟಿ ಫಂಡ್ ನೀಡಿದ್ದು ಈ ಹಿಂದೆ ಸುದ್ದಿಯಾಗಿತ್ತು. ನಿಜವಾಗಿ, ಗ್ರೀನ್‍ಪೀಸ್‍ನ ಮೇಲೆ ಕ್ರಮ ಕೈಗೊಂಡರೆ ಅದು ಜಾಗತಿಕವಾಗಿ ಸಂಚಲನ ಸೃಷ್ಟಿಸಲಾರದೆಂಬುದು ಮೋದಿಯವರಿಗೆ ಖಚಿತವಾಗಿ ಗೊತ್ತಿತ್ತು. ಯಾಕೆಂದರೆ, ಅದು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವಿಶ್ವದಾದ್ಯಂತ ಪ್ರಶ್ನಿಸುತ್ತಿದೆ. ಅಂಥವುಗಳನ್ನು ಖಂಡಿಸಿ ಪ್ರತಿಭಟಿಸುತ್ತಿದೆ. ಫೋಸ್ಕೋ, ವೇದಾಂತ, ಪರಮಾಣು ವಿದ್ಯುತ್ ಸ್ಥಾವರಗಳು, ನರ್ಮದಾ ಯೋಜನೆ.. ಸಹಿತ ಎಲ್ಲವೂ ಅದರ ವಿರೋಧಕ್ಕೆ ಗುರಿಯಾಗಿದೆ. ಇವುಗಳಿಂದಾಗಿ ನಿರ್ವಸಿತರಾಗುವ ಜನರಿಗೆ ಅದು ಧ್ವನಿಯನ್ನು ಕೊಡುತ್ತಿದೆ. ಈ ಹಿಂದೆ ಫ್ರಾನ್ಸ್ ಸರಕಾರವು ಮೊರುರಾದಲ್ಲಿ ಅಣು ಪರೀಕ್ಷೆ ನಡೆಸಿದ್ದನ್ನು ಗ್ರೀನ್‍ಪೀಸ್ ಪ್ರತಿಭಟಿಸಿದಾಗ ಫ್ರಾನ್ಸ್ ಅದರ ಕತ್ತು ಹಿಸುಕಿತ್ತು. ಹಾಗಂತ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ.    ಪುರುಷೋತ್ತಮ್ ದಾಸ್ ಕುದಾಲ್‍ರ ನೇತೃತ್ವದಲ್ಲಿ 1982ರಲ್ಲಿ ಇಂದಿರಾ ಗಾಂಧಿಯವರು ಎನ್‍ಜಿಓಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು. 1975ರಲ್ಲಿ ತುರ್ತು ಪರಿಸ್ಥತಿಯನ್ನು ಹೇರಿ ಆ ಬಳಿಕ ಜನತಾ ಸರಕಾರ ಅಧಿಕಾರಕ್ಕೆ ಬಂದು ಮುಂದಿನ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯವರೇ ಅಧಿಕಾರಕ್ಕೇರಿದ ಸಂದರ್ಭವಾಗಿತ್ತದು. ಜನತಾ ಸರಕಾರದ ಗೆಲುವಿನಲ್ಲಿ ಎನ್‍ಜಿಓಗಳ ಪಾತ್ರವಿದೆ ಎಂಬುದು ಅವರ ಅನುಮಾನವಾಗಿತ್ತು. 'ಎನ್‍ಜಿಓಗಳಿಗೆ ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ  ದೇಣಿಗೆ ನೀಡಿದೆ ಮತ್ತು ಇದರಲ್ಲಿ ಸಂಘಪರಿವಾರದ ನಾಯಕರೂ ಭಾಗಿಯಾಗಿದ್ದಾರೆ'...  ಎಂದೂ ವರದಿಯಲ್ಲಿ ಹೇಳಲಾಗಿತ್ತು.    ನಿಜವಾಗಿ, ಸರ್ವಾಧಿಕಾರಿ ಮನಸ್ಥಿತಿಯ ಮಂದಿಯೇ ಹೀಗೆ. ಅದು ಇಂದಿರಾ ಆಗಿರಬಹುದು ಅಥವಾ ಮೋದಿ ಆಗಿರಬಹುದು - ಅವರು ಸದಾ ಭೀತಿಯಲ್ಲೇ ಬದುಕುತ್ತಿರುತ್ತಾರೆ. ವಿರೋಧಿ ಧ್ವನಿಗಳನ್ನು ಮಟ್ಟ ಹಾಕುತ್ತಾರೆ. ತನಿಖೆಯ ಹೆಸರಲ್ಲಿ ಹಿಂಸೆ ಕೊಡುತ್ತಾರೆ. ಒಮ್ಮೆ ಅಧಿಕಾರಕ್ಕೇರಿದ ಬಳಿಕ ಮತ್ತೆಂದೂ ಅಧಿಕಾರ ಬಿಟ್ಟು ಕೊಡಲು ಒಪ್ಪದ ಅಸಮರ್ಪಕ ರಾಜಕೀಯ ಮನಸ್ಥಿತಿ ಭಾರತದ್ದು. ಪ್ರಿಯಾ ಪಿಳ್ಳೆಯನ್ನು ದೇಶವಿರೋಧಿಯಂತೆ ನಡೆಸಿಕೊಂಡ
 
ರೋಮ್ ಮಾರ್ಚ್
ಮೋದಿಯವರಂತೆಯೇ 1977ರಲ್ಲಿ ಅಂದಿನ ಜನತಾ ಸರಕಾರವು ಶಂಕರ್ ಗುಹಾ ನಿಯೋಗಿಯನ್ನೂ ನಡೆಸಿ ಕೊಂಡಿತ್ತು. ಛತ್ತೀಸ್‍ಗಢದ ರಾಜಹೋರಾ ಕಲ್ಲಿದ್ದಲು ಗಣಿಯಲ್ಲಿ ಗುಲಾಮರಂತೆ ಜೀವಿಸುತ್ತಿದ್ದ ಆದಿವಾಸಿಗಳ ಪರ ಪ್ರತಿಭಟನೆ ಹಮ್ಮಿಕೊಂಡದ್ದಕ್ಕಾಗಿ ಅಂದಿನ ಮಧ್ಯಪ್ರದೇಶ ಸರಕಾರ ಅವರನ್ನು 1977 ಜೂನ್ 2ರಂದು ಬಂಧಿಸಿತ್ತು. ‘ರಷ್ಯಾದ ಸಹಾಯದಿಂದ ನಡೆಸಲಾಗುವ ಈ ಗಣಿಗಾರಿಕೆಯ ವಿರುದ್ಧ ಅಮೇರಿಕದ ಸಿಐಎ ಯು ನಿಯೋಗಿಯ ಮೂಲಕ ಸಂಚು ನಡೆಸಿದೆ..’ ಎಂದು ಸರಕಾರ ವಾದಿಸಿತ್ತು. ಒಂದು ರೀತಿಯಲ್ಲಿ, 1975ರಲ್ಲಿ ಈ ದೇಶದ ಮೇಲೆ ಮೊದಲ ಬಾರಿಗೆ ತುರ್ತು ಸ್ಥಿತಿಯನ್ನು ಹೇರಲಾಯಿತಾದರೂ ಅದು ಎರಡು ವರ್ಷಗಳಲ್ಲೇ ಅಧಿಕೃತವಾಗಿ ಕೊನೆಗೊಂಡಿದೆ. ಆದರೆ 1991ರ ಬಳಿಕ ಈ ದೇಶದಲ್ಲಿ ಅನಧಿಕೃತ ಮತ್ತು ಅಘೋಷಿತ ತುರ್ತು ಸ್ಥಿತಿಯೊಂದು ಹೆಚ್ಚೂ-ಕಡಿಮೆ ಜಾರಿಯಲ್ಲಿದೆ. 1922 ಅಕ್ಟೋಬರ್ 22ರಿಂದ 29ರ ವರೆಗೆ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲೋನಿಯು ‘ರೋಮ್ ಮಾರ್ಚ್' ಎಂಬ ರಾಲಿಯನ್ನು ಹಮ್ಮಿಕೊಂಡಿದ್ದರು. ‘ನಮಗೆ ಅಧಿಕಾರ ಕೊಡಿ’ ಎಂಬ ಘೋಷಣೆಯೊಂದಿಗೆ ಸುಮಾರು 60 ಸಾವಿರ ಕಪ್ಪು ಶರ್ಟ್ ಧರಿಸಿದ ಅವರ ಬೆಂಬಲಿಗರು ಇಟಲಿಯಾದ್ಯಂತ ರಾಲಿಯಲ್ಲಿ ತೆರಳಿದ್ದರು. 90ರ ದಶಕದಲ್ಲಿ ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಥಯಾತ್ರೆ ಅದನ್ನೇ ಹೋಲುತ್ತದೆ. ಆ ಬಳಿಕ ಈ ದೇಶದಲ್ಲಿ ಭೀತಿಯ ರಾಜಕೀಯವೊಂದು ನಡೆಯುತ್ತಿದೆ. ರಥ ತೆರಳಿದಲ್ಲೆಲ್ಲಾ ಕೋಮು ವಿಭಜನೆ, ರಕ್ತಪಾತ ನಡೆಯಿತು. ಮಂಡಲ್ ವಿರೋಧಿ ಚಳವಳಿ, ರಾಜೀವ್ ಗಾಂಧಿ ಹತ್ಯೆ, ನವ ಉದಾರೀಕರಣದ ಪ್ರವೇಶ.. ಎಲ್ಲವೂ 90ರ ಬಳಿಕದ ಘಟನೆಗಳಾಗಿವೆ. ತುರ್ತು ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಭೀತಿಯು 90ರ ಬಳಿಕ ರಾಜಕಾರಣದಲ್ಲಿ ಧಾರಾಳವಾಗಿ ಕಾಣಸಿಗುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜಾತ್ಯತೀತತೆ, ಜಾತೀಯತೆ, ಕೋಮುವಾದ, ಬಾಯಿಮುಚ್ಚಿ, ಪಾಕ್‍ಗೆ ಹೋಗಿ, ಸಮುದ್ರಕ್ಕೆ ಹಾರಿ.. ಎಂಬಂತಹ ಭೀತಿಕಾರಕ ಹೇಳಿಕೆಗಳು ಮಾಮೂಲಾಗುತ್ತಿವೆ. ತುರ್ತುಸ್ಥಿತಿ ಎಂಬ ಪದವನ್ನು ಪ್ರಯೋಗಿಸದೆಯೇ ಅದನ್ನು ಅನಧಿಕೃತವಾಗಿ ಜಾರಿಯಲ್ಲಿಡುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. 1971ರಲ್ಲಿ ಕಾಂಗ್ರೆಸ್ ವಿಭಜನೆಗೊಂಡ ನಂತರ ಗರೀಬಿ ಹಠಾವೊ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂಥ ಇಶ್ಯೂಗಳನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿಯವರು ಚುನಾವಣೆಯನ್ನು ಎದುರಿಸಿದರು. ಮಾತ್ರವಲ್ಲ, 352 ಸ್ಥಾನಗಳನ್ನು ಗಳಿಸಿದರು. ಅದೇ ವರ್ಷದ ಕೊನೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಬಾಂಗ್ಲಾವನ್ನು ವಿಮೋಚನೆಗೊಳಿಸಿದರು. ಅದಕ್ಕಾಗಿ ವಾಜಪೇಯಿಯವರಿಂದ ‘ದುರ್ಗೆ' ಎಂಬ ಬಿರುದನ್ನೂ ಗಿಟ್ಟಿಸಿಕೊಂಡರು. ಆದರೆ, ಇದಾಗಿ ಕೇವಲ 3 ವರ್ಷಗಳೊಳಗೆ ಇಂದಿರಾ ಎಂತಹ ಪಾತಾಳಕ್ಕೆ ಕುಸಿದರೆಂದರೆ, ಅವರು ತುರ್ತುಸ್ಥಿತಿಯ ಮೊರೆ ಹೋದರು. 1973ರಲ್ಲಿ ನಡೆದ ಅರಬ್-ಇಸ್ರೇಲ್ ಯುದ್ಧವು ಭಾರತೀಯ ಅರ್ಥವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸಿತ್ತು. ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಗುಜರಾತ್‍ನ ಎಲ್.ಡಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಆಹಾರಕ್ಕೆ 20% ಬೆಲೆ ಏರಿಸಿದ್ದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಆ ಬಳಿಕ ಇತರ ರಾಜ್ಯಗಳಿಗೂ ಹಮ್ಮಿಕೊಂಡು ಚಳವಳಿಯ ರೂಪ ಪಡೆಯಿತು. 1974 ಜನವರಿಯಲ್ಲಿ ಗುಜರಾತ್‍ನಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ 100ರಷ್ಟು ಮಂದಿ ಸಾವಿಗೀಡಾದರು. ಸರಕಾರಿ ಉದ್ಯೋಗಿಗಳೂ, ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗವಹಿಸತೊಡಗಿದರು. ಇಂದಿರಾ ತುರ್ತು ಸ್ಥಿತಿಯನ್ನು ಹೇರಿದರು.    1984ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, “ಯಾವ ಕಾರಣಕ್ಕಾಗಿ ನೀವು ಕೆಲವರ ವಾಹನಗಳಲ್ಲಿ ಪ್ರಯಾಣಿಸುವಾಗ ಭಯ ಪಡುತ್ತೀರಿ..” ಎಂಬ ಜಾಹೀರಾತನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆ ಜಾಹೀರಾತಿನಲ್ಲಿ ‘ಸಿಕ್ಖ್ ಡ್ರೈವರ್’ನಂತೆ ಕಾಣುವ ವ್ಯಕ್ತಿಯ ರೇಖಾಚಿತ್ರವೂ ಇತ್ತು. ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನಡೆದ ಆ ಚುನಾವಣೆಯ ಈ ಜಾಹೀರಾತನ್ನು ಮುಖ್ಯವಾಹಿನಿಯ ಪತ್ರಿಕೆಗಳೆಲ್ಲವೂ ಮುದ್ರಿಸಿದ್ದುವು. ಬಹುಶಃ, ಇವತ್ತು ಈ ಜಾಹೀರಾತನ್ನು ನಗಣ್ಯವಾಗಿಸುವಂತೆ ಹೇಳಿಕೆಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಪಕ್ಷೀಯರು ಮತ್ತು ಬೆಂಬಲಿಗರೇ ಇಂಥ ಹೇಳಿಕೆಗಳನ್ನು ಹೊರಡಿಸುತ್ತಿದ್ದರೂ ಅವರು ಮಾತಾಡುತ್ತಿಲ್ಲ. ನಿಜವಾಗಿ, ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯನ್ನು ಹೇರಲು ಮುಂದಾದದ್ದೇ ಸವಾಲುಗಳು ಎದುರಾದಾಗ ಮತ್ತು ಅದನ್ನು ಸಹಜ ಪ್ರಜಾತಾಂತ್ರಿಕ ರೀತಿಯಲ್ಲಿ ಎದುರಿಸಲು ಅಶಕ್ತರಾದಾಗ. ನರೇಂದ್ರ ಮೋದಿಯವರು ತನ್ನ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗೆ NGO ಗಳು ತಡೆ ಎಂಬುದನ್ನು ಪರಿಗಣಿಸಿಯೇ ಅವುಗಳನ್ನು ಶಂಕಿತ ಪಟ್ಟಿಯಲ್ಲಿರಿಸಿದರು. ಚುನಾವಣೆಯ ಸಂದರ್ಭದಲ್ಲಿ ಅವರು ಹುಟ್ಟಿಸಿದ ಭರವಸೆಯು ಒಂದೊಂದಾಗಿ ಕಳಚಿಕೊಳ್ಳುತ್ತಾ ಬರುತ್ತಿರುವಂತೆಯೇ ಸ್ವಚ್ಛ ಭಾರತ್ ಮತ್ತು ಯೋಗ ದಿನವನ್ನು ಆಚರಿಸಿದರು. ಇದೀಗ ಅಧಿಕಾರದ ಒಂದು ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲೇ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ, ಅವರ ಆಡಳಿತಾತ್ಮಕ ರೀತಿಯೇ ಸರ್ವಾಧಿಕಾರಿ ಸ್ವರೂಪದ್ದು. ಸಚಿವ ಸಂಪುಟವನ್ನು ತೆರೆಮರೆಗೆ ಸರಿಸಿ ಎಲ್ಲದರಲ್ಲೂ ‘ತಾನೇ' ಕಾಣಿಸಿಕೊಳ್ಳುವ ತವಕ. ಪಾಕ್‍ನ ಮೇಲೆ ಇಂದಿರಾ ದಾಳಿ ಮಾಡಿದಂತೆಯೇ ಮ್ಯಾನ್ಮಾರ್‍ನ ಗಡಿಯೊಳಕ್ಕೆ ನುಗ್ಗಿರುವುದನ್ನು ಮಹಾನ್ ಸಾಧನೆಯಾಗಿ ಅವರ ಪಕ್ಷ ಬಿಂಬಿಸಿಕೊಳ್ಳುತ್ತಿದೆ. ಇಂದಿರಾರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ವ್ಯಕ್ತಿ ಕೇಂದ್ರಿತವಾಗಿತ್ತು. ಮೋದಿ ನಾಯಕತ್ವದಲ್ಲಿ ಬಿಜೆಪಿಯೂ ವ್ಯಕ್ತಿ ಕೇಂದ್ರಿತವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಬದಲಾವಣೆ ಯಾವತ್ತೂ ಅಪಾಯಕಾರಿಯೇ.
     ಹಾಗಂತ, ಸುಮಾರು 8,875ರಷ್ಟು NGO ಗಳ ಪರವಾನಿಗೆಯನ್ನು ರದ್ದುಗೊಳಿಸಿರುವ ನರೇಂದ್ರ ಮೋದಿಯವರನ್ನು ಅನುಮಾನಿಸುವುದಕ್ಕೆ ಕಾರಣಗಳು ಇನ್ನೂ ಇವೆ.