Tuesday, February 3, 2015

‘ಸೆಕ್ಯುಲರ್’ ಕಾಣೆಯಾದದ್ದು ಆಕಸ್ಮಿಕವೋ ಉದ್ದೇಶಪೂರ್ವಕವೋ?

   ಜನವರಿ 26ರಂದು ವಿವಿಧ ಪತ್ರಿಕೆಗಳಿಗೆ ಪ್ರಧಾನಿ ಮೋದಿ ಸರಕಾರವು ಬಿಡುಗಡೆಗೊಳಿಸಿದ ಜಾಹೀರಾತಿನಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಾಣೆಯಾದದ್ದು ಹಾಗೂ ಭಾರತದ ಧಾರ್ಮಿಕ ಬಹುತ್ವವನ್ನು ಬಿಂಬಿಸುವ ಜಾಹೀರಾತಿನ ಚಿತ್ರದಲ್ಲಿ ಪೇಟ ಧರಿಸಿದ ಸಿಖ್ ಮತ್ತು ಟೋಪಿ ಧರಿಸಿದ ಮುಸ್ಲಿಮ್ ನಾಪತ್ತೆಯಾದುದನ್ನು ಕೇವಲ ಆಕಸ್ಮಿಕ ಎಂದು ತಳ್ಳಿ ಹಾಕುವಂತಿಲ್ಲ.
    ಪಹ್ಲಜ್ ನಿಹಲಾನಿ, ಜಾರ್ಜ್ ಬೇಕರ್, ವಾಣಿ ತ್ರಿಪಾಠಿ, ಜೀವಿತಾ ರಾಜಶೇಖರ್, ಎಸ್.ವಿ. ಶೇಖರ್, ರಮೇಶ್ ಪತಂಗೆ.. ಸೇರಿದಂತೆ 9 ಮಂದಿಯನ್ನು ಕೇಂದ್ರ ಸರಕಾರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸೆನ್ಸಾರ್ ಮಂಡಳಿ)ಗೆ ಕಳೆದವಾರ ಆಯ್ಕೆ ಮಾಡಿತು. ಕಳೆದ ಲೋಕಸಭಾ ಚುನಾವಣೆಗಿಂತ ತುಸು ಮೊದಲು 2013 ಮೇಯಲ್ಲಿ ‘ಹರ್ ಘರ್ ಮೋದಿ’ ಎಂಬ ವೀಡಿಯೋವೊಂದು ಆನ್‍ಲೈನ್‍ನಲ್ಲಿ ಪ್ರಸಾರವಾಗಿತ್ತು. ಅದನ್ನು ತಯಾರಿಸಿ ಅಪ್‍ಲೋಡ್ ಮಾಡಿದವರೇ ಪಹ್ಲಾಜ್ ನಿಹಲಾನಿ. ಬಿಜೆಪಿಯ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್ ಸಿನ್ಹಾರ ಹತ್ತಿರದ ಸಂಬಂಧಿಯಾಗಿರುವ ನಿಹಲಾನಿಯವರು ಸಂಘಪರಿವಾರದ ಹಿನ್ನೆಲೆಯವರು. ಮೋದಿಯನ್ನು ಆ್ಯಕ್ಷನ್ ಹೀರೋ ಎಂದು ಕೊಂಡಾಡಿದ್ದೂ ಅವರೇ. ಜಾರ್ಜ್ ಬೇಕರ್ ಅವರು ಬಿಜೆಪಿ ಟಿಕೆಟ್‍ನಲ್ಲಿ ಪಶ್ಚಿಮ ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಿದವರಾಗಿದ್ದಾರೆ. ವಾಣಿ ತ್ರಿಪಾಠಿಯಂತೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಜೀವಿತಾ ಶೇಖರ್‍ರು ತೆಲಂಗಾಣ ಬಿಜೆಪಿಯ ವಕ್ತಾರೆಯಾಗಿ ಕೆಲಸ ಮಾಡಿರುವರಲ್ಲದೇ ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ತಮಿಳು ನಟರಾದ ಎಸ್.ವಿ. ಶೇಖರ್ ಅವರು 2013ರಲ್ಲಿ ಬಿಜೆಪಿಯನ್ನು ಸೇರಿದ್ದರು. ಮರಾಠಿ ವಾರಪತ್ರಿಕೆಯ ಸಂಪಾದಕರಾಗಿರುವ ರಮೇಶ್ ಪತಂಗೆ ಸಂಘಪರಿವಾರದ ಬೌದ್ಧಿಕ್ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ಅಂಗಸಂಸ್ಥೆಯಾದ ಸಾಮಾಜಿಕ್ ಸಮರಸತಾ ಮಂಚ್‍ನ ಸ್ಥಾಪಕ ಸದಸ್ಯರೂ ಆಗಿದ್ದಾರೆ.. ಏನಿವೆಲ್ಲ? ಸೆನ್ಸಾರ್ ಮಂಡಳಿಗೆ ಅದರದ್ದೇ ಆದ ಘನತೆ, ಗೌರವವಿದೆ. ಅದು ಬಿಜೆಪಿಯದ್ದೋ ಕಾಂಗ್ರೆಸ್ಸಿನದ್ದೋ ಅಂಗಸಂಸ್ಥೆಯಲ್ಲ. ಈ ದೇಶದಲ್ಲಿ ಯಾವುದೇ ಸಿನಿಮಾ, ಟಿ.ವಿ. ಜಾಹೀರಾತು, ಟಿ.ವಿ. ಕಾರ್ಯಕ್ರಮಗಳು ಪ್ರಸಾರವಾಗಬೇಕಾದರೆ ಅದಕ್ಕೆ ಸೆನ್ಸಾರ್ ಮಂಡಳಿಯ ಒಪ್ಪಿಗೆ ಬೇಕು. ಅಷ್ಟರ ಮಟ್ಟಿಗೆ ಅದು ಈ ದೇಶದ ಸಾಂಸ್ಕøತಿಕ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಇಂಥದ್ದೊಂದು ಸ್ವತಂತ್ರ ಸಂಸ್ಥೆಯನ್ನು ಬಿಜೆಪಿಯು ತನ್ನ ಅಂಗಸಂಸ್ಥೆಯಂತೆ ನಡೆಸಿಕೊಳ್ಳುವುದೆಂದರೇನು? ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್‍ಗಾಗಿ ವಿವಿಧ ವಿಚಾರಗಳನ್ನು ಪ್ರತಿನಿಧಿಸುವ ಸಿನಿಮಾಗಳು, ಕಿರುಚಿತ್ರಗಳು, ಟಿ.ವಿ. ಕಾರ್ಯಕ್ರಮಗಳು ಬರಬಹುದು. ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡವರ ಚಿತ್ರಗಳೂ ಅದರಲ್ಲಿರಬಹುದು. ಸಂಘಪರಿವಾರದ ಸಾಂಸ್ಕøತಿಕ ನಿಲುವುಗಳನ್ನು ಪ್ರಶ್ನಿಸುವಂತಹ ಪ್ರಖರ ವೈಚಾರಿಕತೆಯುಳ್ಳವೂ ಅವುಗಳಲ್ಲಿರಬಹುದು. ಇಂಥ ಸಂದರ್ಭಗಳಲ್ಲೆಲ್ಲಾ ಪಹ್ಲಾಜ್ ನಿಹಲಾನಿ ಮತ್ತು ಸಂಗಡಿಗರಿಗೆ ಹಿತಾಸಕ್ತಿಯ ಸಂಘರ್ಷ ಎದುರಾಗಲಾರದೇ? ಮೋದಿಯನ್ನು ಆ್ಯಕ್ಷನ್ ಹೀರೋ ಅನ್ನುವವ, ಮೋದಿಗಾಗಿ ಹಾಡನ್ನು ಅರ್ಪಿಸುವವ, ವೀಡಿಯೋ ತಯಾರಿಸುವವ, ಪಕ್ಷಕ್ಕಾಗಿ ದುಡಿಯುವವ ಒಂದೇ ಸಂಸ್ಥೆಯಲ್ಲಿದ್ದರೆ, ಆ ಸಂಸ್ಥೆಯೊಳಗಿನ ವಾತಾವರಣ ಹೇಗಿರಬಹುದು? ಜಾತ್ಯತೀತ ಮತ್ತು ಸಮಾಜವಾದಿ ಎಂಬ ಸಂವಿಧಾನದ ಆಶಯವನ್ನು ಕಡೆಗಣಿಸುವ ಮೋದಿ ಸರಕಾರ ಹಾಗೂ ಸೆನ್ಸಾರ್ ಮಂಡಳಿಯನ್ನು ‘ಜಾತ್ಯತೀತ’ ಆಶಯದಿಂದ ಮುಕ್ತಗೊಳಿಸಿರುವುದು ಏನನ್ನು ಸೂಚಿಸುತ್ತದೆ? ಇದು ಆಕಸ್ಮಿಕವೇ? ಕಾಕತಾಳೀಯವೇ? ಉದ್ದೇಶಪೂರ್ವಕವೇ?
   Socialist  ಮತ್ತು Secular ಎಂಬುದು ಬರೇ ಎರಡು ಪದಗಳಲ್ಲ. 1977 ಜನವರಿಯಲ್ಲಿ ಈ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದರಿಂದ ಅವೆರಡರ ಘನತೆ ತಗ್ಗುವುದೂ ಇಲ್ಲ. “We the People of India - ಭಾರತ ವಾಸಿಗಳಾದ ನಾವು, ಈ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಾಂತ್ರಿಕ ಗಣರಾಜ್ಯವನ್ನಾಗಿ ಸ್ಥಾಪಿಸಿ ಸಂವಿಧಾನವನ್ನು ಸ್ವೀಕರಿಸುತ್ತೇವೆ..' ಎಂಬ ಸಂವಿಧಾನದ ವಾಕ್ಯದಲ್ಲಿ ವಿಶಾಲಾರ್ಥವಿದೆ. ಒಂದು ವೇಳೆ ಈ ವಾಕ್ಯದಿಂದ  Socialist  ಮತ್ತು Secular ಎಂಬೆರಡು ಪದಗಳನ್ನು ಕಳಚಿ ಬಿಟ್ಟರೆ ಸಂವಿದಾನದಲ್ಲಿ ಉಳಿಯುವ ಸಾರ್ವಭೌಮ ಮತ್ತು ಲೋಕತಾಂತ್ರಿಕ ಪದಗಳು ತೀರಾ ಬಲಹೀನವಾಗಿ ಬಿಡಬಲ್ಲುದು. “ಭಾರತ ನಿವಾಸಿಗಳಾದ ನಾವು ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರವನ್ನು ಕಟ್ಟುತ್ತೇವೆ..” ಎಂದು ಘೋಷಿಸುವಾಗ ಅದು ಅನೇಕಾರು ಪೂರ್ವಾಗ್ರಹಗಳನ್ನು ತೊಡೆದು ಹಾಕುತ್ತದೆ. ಹೀಗೆ ಘೋಷಿಸಿದ ಬಳಿಕ ಈ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಮುಸ್ಲಿಮ್, ಕ್ರೈಸ್ತ, ಸಿಕ್ಖ್ ರಾಷ್ಟ್ರವಾಗಿ ಗುರುತಿಸಿಕೊಳ್ಳುವುದಕ್ಕೂ ಅವಕಾಶವಿಲ್ಲ. ಮೇಲ್ವರ್ಗದ್ದೋ ಆರ್ಯನ್ನರದ್ದೋ ದ್ರಾವಿಡರದ್ದೋ ರಾಷ್ಟ್ರವಾಗಲೂ ಸಾಧ್ಯವಿಲ್ಲ. ಈ ದೇಶ ಎಲ್ಲರದ್ದು. ಶ್ರೀಮಂತ ಮತ್ತು ಬಡವನದ್ದು. ಗುಡಿಸಲ ವಾಸಿ ಮತ್ತು ಬಂಗಲೆ ವಾಸಿಯದ್ದು. ಹಿಂದೂ ಮತ್ತು ಮುಸ್ಲಿಮನದ್ದು. ಯಾರ ನಂಬಿಕೆಗಳೂ ಮೇಲಲ್ಲ, ಕೀಳಲ್ಲ. ಆದರೆ ಈ ಸಮಾನತೆ ಮತ್ತು ಜಾತ್ಯತೀತ ಮೌಲ್ಯವನ್ನು ಸಾರುವ ಸಂವಿಧಾನದ ತಿದ್ದುಪಡಿಯನ್ನು ಅಷ್ಟೇ ಸ್ಫೂರ್ತಿಯಿಂದ ಒಪ್ಪಿಕೊಳ್ಳುವುದಕ್ಕೆ ಮೋದಿ ಮತ್ತು ಅವರ ಬೆಂಬಲಿಗರಿಗೆ ಈ ಹಿಂದಿನಿಂದಲೂ ಸಾಧ್ಯವಾಗಿಲ್ಲ. ಈ ದೇಶ ಹಿಂದೂ ರಾಷ್ಟ್ರವಾಗಿ ಘೋಷಿಸಬೇಕಾದರೆ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಹೊರ ಬೀಳಬೇಕಾಗುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯರಾಗಬೇಕಾಗುತ್ತದೆ. ಆರ್ಯನ್ನರು ಮತ್ತು ದ್ರಾವಿಡರು ಎಂಬ ವಿಂಗಡನೆಯನ್ನು ಅಳಿಸಬೇಕಾಗುತ್ತದೆ. ಇದೀಗ ಈ ಸಿದ್ಧಾಂತದ ಜಾರಿಯ ಸೂಚನೆಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಗುಜರಾತ್‍ನ ಶಾಲೆಗಳಲ್ಲಿ ಹೆಚ್ಚುವರಿ ಓದಿಗಾಗಿ ಆಯ್ಕೆ ಮಾಡಲಾಗಿರುವ 9 ಪುಸ್ತಕಗಳ ಪೈಕಿ 8 ಪುಸ್ತಕಗಳೂ ಶಿಕ್ಷಾ ಬಚಾವೋ ಆಂದೋಲನ್ ಸಮಿತಿಯ ಮುಖ್ಯಸ್ಥ ದೀನನಾಥ್ ಬಾತ್ರ ಬರೆದಿರುವಂಥದ್ದು. ವೆಂಡಿ ಡೊನಿಗರ್ ಬರೆದಿರುವ ‘ದಿ ಹಿಂದೂಸ್: ಆ್ಯನ್ ಆಲ್ಟರ್ ನೇಟಿವ್ ಹಿಸ್ಟರಿ' ಎಂಬ ಕೃತಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಮಾಡುವ ವರೆಗೆ ಇವರು ಯಾರೆಂಬುದು ಈ ದೇಶದ ಹೆಚ್ಚಿನ ಮಂದಿಗೆ ಗೊತ್ತೇ ಇರಲಿಲ್ಲ. ನಿವೃತ್ತ ಪ್ರಾಧ್ಯಾಪಕರಾಗಿರುವ ಇವರು ಸಂಘಪರಿವಾರದ ಆಲೋಚನೆಗಳಿಗೆ ತಕ್ಕಂತೆ ಇತಿಹಾಸವನ್ನು ಪುನರ್ರಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಗುಜರಾತ್‍ನ ವಿದ್ಯಾರ್ಥಿಗಳ ನಡುವೆ ‘ಬಾಲ ನರೇಂದ್ರ’ ಎಂಬ ಪುಸ್ತಕ ಹೆಚ್ಚು ಜನಪ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯಕಾಲದ ಸಂಗತಿಗಳನ್ನು ಈ ಕೃತಿಯಲ್ಲಿ ರೋಚಕವಾಗಿ ವರ್ಣಿಸಲಾಗಿದೆ. ಅವರ ಎಲ್ಲ ಸಾಧನೆಗಳಿಗೂ ಭಾರತೀಯ ಹಿಂದೂ ಸಂಸ್ಕøತಿಯೇ ಕಾರಣವೆಂದು ಅದರಲ್ಲಿ ಹೇಳಲಾಗಿದೆ. ಅಲ್ಲದೇ ವಾರಗಳ ಹಿಂದೆ ಅಹ್ಮದಾಬಾದ್‍ನ ಮುನ್ಸಿಪಲ್ ಕಾರ್ಪೋರೇಶನ್ ಹೊರಡಿಸಿದ ಸುತ್ತೋಲೆಯಂತೂ ಸಂವಿಧಾನದ ಜಾತ್ಯತೀತ ಆಶಯವನ್ನೇ ಪ್ರಶ್ನಿಸುವಂತಿದೆ. ಈ ಕಾರ್ಪೋರೇಶನ್ನಿನ ವ್ಯಾಪ್ತಿಯಲ್ಲಿ 450 ಪ್ರಾಥಮಿಕ ಶಾಲೆಗಳು ಬರುತ್ತವೆ. ಇದರಲ್ಲಿ 64 ಉರ್ದು ಶಾಲೆಗಳಿವೆ. ಸುಮಾರು 16 ಸಾವಿರ ಮುಸ್ಲಿಮ್ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ವಸಂತ ಪಂಚಮಿಯಂದು ಕಡ್ಡಾಯವಾಗಿ ಸರಸ್ವತಿ ಪೂಜೆಯನ್ನು ನೆರವೇರಿಸಬೇಕೆಂದು ಕಾರ್ಪೋರೇಶನ್ನಿನ ಸುತ್ತೋಲೆಯಲ್ಲಿ ಆದೇಶಿಸಲಾಗಿತ್ತು. ವಿಗ್ರಹ ಪೂಜೆಯನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡುವ ಈ ಸುತ್ತೋಲೆಯು ಸಂವಿಧಾನದ ಜಾತ್ಯತೀತ ಆಶಯಕ್ಕೆ ನೇರ ವಿರುದ್ಧವಾದುದು. ಆದರೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಪದ ಇರುವವರೆಗೆ ಇಂಥ ಸುತ್ತೋಲೆಗಳು ಮತ್ತೆ ಮತ್ತೆ ಪ್ರಶ್ನೆಗೀಡಾಗುತ್ತಲೇ ಇರುತ್ತವೆ ಎಂಬುದು ಈ ಸುತ್ತೋಲೆಯನ್ನು ಹೊರಡಿಸಿದವರಿಗೂ ಅದನ್ನು ಬೆಂಬಲಿಸಿದವರಿಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ, ಸಂವಿಧಾನದಿಂದಲೇ ಈ ಪದವನ್ನು ಕಿತ್ತು ಹಾಕಬೇಕೆಂದು ಅವರು ಬಯಸಿರಬೇಕು. ಅದರ ಭಾಗವಾಗಿಯೇ ಗಣರಾಜ್ಯೋತ್ಸವದ ಜಾಹೀರಾತಿನಲ್ಲಿ ಸೆಕ್ಯುಲರ್ ಮತ್ತು ಸಮಾಜವಾದಿ ಪದಗಳು ನಾಪತ್ತೆಯಾಗಿರಬೇಕು.
    ನಿಜವಾಗಿ, ಈ ದೇಶಕ್ಕೊಂದು ಇತಿಹಾಸವಿದೆ. ಅದು ಆರ್ಯನ್ನರು ಮತ್ತು ದ್ರಾವಿಡರ ಇತಿಹಾಸ. ಪುರಾತತ್ವ ಇಲಾಖೆಯ ಪ್ರಕಾರ, ಸಿಂಧೂ ನಾಗರಿಕತೆ ಅಥವಾ ದ್ರಾವಿಡ ನಾಗರಿಕತೆಯೇ ಭಾರತೀಯ ನಾಗರಿಕತೆಯ ಆರಂಭವಾಗಿದೆ. ಇದು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ಮುಂದುವರಿದಿದ್ದ ನಾಗರಿಕತೆಯಾಗಿತ್ತು. ಈ ನೆಲದ ಮೂಲ ನಿವಾಸಿಗಳು ದ್ರಾವಿಡರಾಗಿದ್ದರೇ ಹೊರತು ಉತ್ತರದಿಂದ ಬಂದ ಆರ್ಯನ್ನರಾಗಿರಲಿಲ್ಲ. ಆರ್ಯನ್ನರು 1500 ವರ್ಷಗಳ ಹಿಂದೆ ಈ ನೆಲಕ್ಕೆ ಕಾಲಿರಿಸಿದಾಗ ಇಲ್ಲಿ ದ್ರಾವಿಡ ನಾಗರಿಕತೆ ಸಂಪೂರ್ಣವಾಗಿ ಸ್ಥಾಪಿತಗೊಂಡಿತ್ತು. ಆರ್ಯನ್ನರು ಸ್ವಭಾವದಲ್ಲಿ ದ್ರಾವಿಡರಿಗೆ ತೀರಾ ವಿರುದ್ಧವಾಗಿದ್ದರು. ಅವರು ತಿರುಗಾಟದ ಸ್ವಭಾವವುಳ್ಳ ಕ್ರೂರಿಗಳಾಗಿದ್ದರು. ವ್ಯಾಪಾರ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ದ್ರಾವಿಡರ ಮೇಲೆ ಅವರು ದಾಳಿ ಮಾಡಿದರು. ಸಿಂಧೂ ನದಿಯ ದಡದಲ್ಲಿ, ಹರಪ್ಪ-ಮೊಹೆಂಜೊ ದಾರೋಗಳಲ್ಲಿ ವಾಸಿಸುತ್ತಿದ್ದ ಈ ದ್ರಾವಿಡರ ಮೇಲೆ ಆರ್ಯನ್ನರು ಪದೇ ಪದೇ ಮಾಡಿದ ದಾಳಿಯಿಂದಾಗಿ ಅವರು ದಕ್ಷಿಣಕ್ಕೆ ಪರಾರಿಯಾಗಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ವ್ಯವಸ್ಥಿತ ಸೇನಾ ಪದ್ಧತಿಯನ್ನೇ ಹೊಂದಿಲ್ಲದ ದ್ರಾವಿಡರನ್ನು ಮೂಲ ನೆಲೆಯಿಂದ ಅಟ್ಟಿ ಬಿಡುವುದಕ್ಕೆ ಆರ್ಯನ್ನರಿಗೆ ಕಷ್ಟವೂ ಆಗಲಿಲ್ಲ ಎಂದು ನವಂಬರ್ 2002ರ ಔಟ್‍ಲುಕ್ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಪರಿಗಣಿಸಿದರೆ ಜಾತ್ಯತೀತ ಮತ್ತು ಸಮಾಜವಾದಿ ಪದಗಳ ಮೇಲಿನ ಮೋದಿ ಪರಿವಾರದ ಸಿಟ್ಟು ಹೆಚ್ಚು ಸ್ಪಷ್ಟವಾಗುತ್ತದೆ. ಈ ದೇಶದ ಮೂಲ ನಿವಾಸಿಗಳು ಯಾರು ಮತ್ತು ಅನ್ಯರು ಯಾರು ಎಂಬುದಕ್ಕೆ ತರ್ಕಬದ್ಧ ಉತ್ತರವೂ ಸಿಗುತ್ತದೆ. ಮೂಲ ನಿವಾಸಿಗಳಾದ ದ್ರಾವಿಡರನ್ನು ಶ್ರೇಣೀಕೃತ ಸಮಾಜವಾಗಿ ವಿಭಜಿಸಿದ್ದು ಈ ಮಣ್ಣಿಗೆ ಅನ್ಯರಾಗಿರುವ ಆರ್ಯನ್ನರೇ. ಈ ವಿಭಜನೆಯಿಂದ ನೊಂದವರು ಬಳಿಕ ಇಸ್ಲಾಮ್, ಕ್ರೈಸ್ತ ಮುಂತಾದ ಧರ್ಮಗಳನ್ನು ಅಪ್ಪಿಕೊಂಡರು. ಆರ್ಯನ್ನರಿಂದಾಗಿ ಹುಟ್ಟಿಕೊಂಡ ಅಸ್ಪೃಶ್ಯತೆಯನ್ನು ಖಂಡಿಸಿಯೇ ಜೈನ, ಬೌದ್ಧ, ಸಿಖ್, ಬಸವ ಧರ್ಮಗಳು ಇಲ್ಲಿ ಸ್ಥಾಪಿತಗೊಂಡವು. ನಿಜವಾಗಿ, ಮುಸ್ಲಿಮರು, ಕ್ರೈಸ್ತರು ಪರಕೀಯರಲ್ಲ. ಅವರು ಇದೇ ಮಣ್ಣಿನ ಮೂಲ ನಿವಾಸಿಗಳು. ಇವರನ್ನು ಯಾರು ಇವತ್ತು ಅನ್ಯರೆಂದು ಹೇಳುತ್ತಾರೋ ಅವರೇ ನಿಜವಾದ ಪರಕೀಯರು. ಆದರೆ ಗೋಡ್ಸೆಯನ್ನು ವಿಜೃಂಭಿಸಲು ಹೊರಟವರಿಗೆ ಈ ಸತ್ಯವನ್ನು ಅರಗಿಸಲಾಗುತ್ತಿಲ್ಲ. ಅವರಿಗೆ ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯವಾಗಬೇಕು. ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಿತ್ತು ಹೋಗಬೇಕು. ಹಾಗಾದರೆ ಮಾತ್ರ ಅವರ ಕಲ್ಪನೆಯ ರಾಷ್ಟ್ರ ಸ್ಥಾಪಿತಗೊಳ್ಳುವುದಕ್ಕೆ ಸಾಧ್ಯ.
    ಸೆನ್ಸಾರ್ ಮಂಡಳಿಯು ಬಿಜೆಪಿಯ ಅಂಗಸಂಸ್ಥೆಯಂತಾದುದು ಮತ್ತು ಸೆಕ್ಯುಲರ್ ಹಾಗೂ ಸೋಶಿಯಲಿಷ್ಟ್ ಪದಗಳು ಗಣ ರಾಜ್ಯೋತ್ಸವದ ಜಾಹೀರಾತಿನಿಂದ ಕಾಣೆಯಾದುದೆಲ್ಲ ಈ ಕಲ್ಪನೆಯ ರಾಷ್ಟ್ರಕ್ಕೆ ಮಾಡಲಾಗುತ್ತಿರುವ ಸಿದ್ಧತೆಯಷ್ಟೇ.

Tuesday, January 13, 2015

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರ್ಲಿ ಹೆಬ್ಡೊ

   ಫ್ರಾನ್ಸಿನ ಚಾರ್ಲಿ ಹೆಬ್ಡೋ ಪತ್ರಿಕೆಯ ಉದ್ದೇಶ ಶುದ್ಧಿಯನ್ನು 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮರ ವಕ್ತಾರರು ಪ್ರಶ್ನಿಸಿದ್ದರು. ಪತ್ರಿಕೆಯ ನಿಲುವು ಪ್ರಚೋದನಕಾರಿಯಾಗಿದೆ ಎಂದಿದ್ದರು. ಫ್ರಾನ್ಸಿನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಸ್‍ರು ಪತ್ರಿಕೆಯ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿದ್ದರು. 'ಫ್ರಾನ್ಸಿನಲ್ಲಿ Freedom of expression (ಅಭಿವ್ಯಕ್ತಿ ಸ್ವಾತಂತ್ರ್ಯ)ಗೆ ನಿಯಮಗಳಿವೆ, ಅದನ್ನು ಕಡೆಗಣಿಸಬಾರದು' ಎಂದು ಎಚ್ಚರಿಸಿದ್ದರು. ಫ್ರಾನ್ಸ್ ನ ಯಹೂದಿ ಕೌನ್ಸಿಲ್‍ನ ಮುಖ್ಯಸ್ಥ ರಿಚರ್ಡ್ ಪ್ರೆಸ್‍ಕೈಮರ್ ಕೂಡ ಪತ್ರಿಕೆಯ ನಿಲುವನ್ನು ಖಂಡಿಸಿದ್ದರು. 2013 ಜನವರಿಯಲ್ಲಿ ಈ ಪತ್ರಿಕೆಯು ಪ್ರವಾದಿ ಮುಹಮ್ಮದ್ (ಸ)ರ  ಜೀವನವನ್ನು ಬಿಂಬಿಸುವ 65 ಪುಟಗಳ ವಿಡಂಬನೆಯ ಸಂಚಿಕೆಯನ್ನು ಪ್ರಕಟಿಸಿತ್ತು. ಪ್ರವಾದಿಯವರನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಧಾಟಿಯಲ್ಲಿದ್ದ ಆ ಸಂಚಿಕೆಯ ವಿರುದ್ಧ ಫ್ರಾನ್ಸಿನ ಮುಸ್ಲಿಮರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಆ ಸಂಚಿಕೆಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ‘ಸಿರಿಯನ್ ಅಸೋಸಿಯೇಶನ್ ಫಾರ್ ಲಿಬರ್ಟಿ’ ಎಂಬ ಸಂಘಟನೆಯು, 'ಚಾರ್ಲಿ ಹೆಬ್ಡೋವು ಜನಾಂಗವಾದ ಮತ್ತು ಧಾರ್ಮಿಕ ದ್ವೇಷ ವನ್ನು ಪ್ರಚೋದಿಸುತ್ತದೆ' ಎಂದು ಆರೋಪಿಸಿ ಕೋರ್ಟಿನಲ್ಲಿ ದಾವೆ ಹೂಡಿತ್ತು. ಆದರೆ ಪತ್ರಿಕೆಯ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್‍ನಿಂದ ಹಿಡಿದು ಕಾರ್ಟೂನಿಸ್ಟ್ ಗಳಾದ ಜಾರ್ಜ್ ವೊಲಿಂಸ್ಕಿ, ಜೀನ್ ಕ್ಯಾಬಟ್, ಅಕಾಕಬು, ಬೆರ್ಬಾರ್ ವೆರ್ಲಕ್‍ರವರೆಗೆ ಎಲ್ಲರೂ ಪತ್ರಿಕೆಯ ಧೋರಣೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥಿಸಿಕೊಂಡರು. ಪ್ರವಾದಿಯವರನ್ನು ಅವಮಾನಿಸುವ ಕಾರ್ಟೂನ್‍ಗಳನ್ನು ಮತ್ತೆ ಮತ್ತೆ ಅವರು ಪ್ರಕಟಿಸಿದರು. 2006ರಲ್ಲಿ ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್ ಪತ್ರಿಕೆಯು ಪ್ರವಾದಿಯವರನ್ನು ಅಣಕಿಸುವ ಮತ್ತು ನಿಂದಿಸುವ ರೀತಿಯಲ್ಲಿ ಪ್ರಕಟಿಸಿದ್ದ ಕಾರ್ಟೂನನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿತಲ್ಲದೇ 2011 ನವೆಂಬರ್ 3ರಂದು ಅದನ್ನು ಮರು ಮುದ್ರಿಸಿತು. ಮಾತ್ರವಲ್ಲ, ಚಾರ್ಲಿ ಹೆಬ್ಡೋ ಎಂಬ ಹೆಸರನ್ನು ಚರಿಯಾ ಹೆಬ್ಡೋ (ಶರಿಯಾವನ್ನು ಅಣಕಿಸುತ್ತಾ) ಎಂದು ಬರೆಯಿತು. ಗಡ್ಡ ಧರಿಸಿದ ಮತ್ತು ಪೇಟದಲ್ಲಿ ಬಾಂಬ್ ಇಟ್ಟುಕೊಂಡ ವ್ಯಕ್ತಿಯಾಗಿ ಪ್ರವಾದಿಯವರನ್ನು ಬಿಡಿಸಿದ ಆ ಕಾರ್ಟೂನಿನ ಕೆಳಗೆ, “ನಗುತ್ತಾ ಸಾಯು, ಇಲ್ಲದಿದ್ದರೆ 100 ಏಟುಗಳನ್ನು ತಿನ್ನು” (100 lashes if you're not dying of laughter ) ಎಂಬ ಒಕ್ಕಣೆಯನ್ನೂ ಸೇರಿಸಿತ್ತು. ನಿಜವಾಗಿ, ಚಾರ್ಲಿ ಹೆಬ್ಡೋ ಪತ್ರಿಕೆಯು ಎಷ್ಟು ಉಡಾಫೆಯ ಕಾರ್ಟೂನ್‍ಗಳನ್ನು ಪ್ರಕಟಿಸುತ್ತಿತ್ತೋ ಅದಕ್ಕಿಂತಲೂ ಉಡಾಫೆಯಾಗಿ ಅದರ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್ ವರ್ತಿಸುತ್ತಿದ್ದರು. “ಮುಹಮ್ಮದ್ ನನಗೆ ಪರಿಶುದ್ಧ ವ್ಯಕ್ತಿ ಅಲ್ಲ” ಎಂದು ಅವರು 2012ರಲ್ಲಿ ಅಸೋಸಿಯೇಟೆಡ್ ಪ್ರೆಸ್‍ಗೆ(AP) ಹೇಳಿಕೆ ಕೊಟ್ಟಿದ್ದರು. “ನಮ್ಮ ಕಾರ್ಟೂನ್‍ಗಳನ್ನು ನೋಡಿ ಮುಸ್ಲಿಮರು ನಗುತ್ತಿಲ್ಲ ಎಂಬುದು ಗೊತ್ತು. ಆದರೆ ಅದಕ್ಕಾಗಿ ನಾನವರನ್ನು ದೂಷಿಸುವುದಿಲ್ಲ. ನಾನು ಫ್ರೆಂಚ್ ಕಾನೂನಿನಂತೆ ಬದುಕುತ್ತಿರುವೆ. ಕುರ್‍ಆನಿನ ಕಾನೂನಿನಂತೆ ಅಲ್ಲ..” ಎಂದೂ ಹೇಳಿದ್ದರು. ಬಹುಶಃ ‘ಚಾರ್ಲಿ ಹೆಬ್ಡೋ: ಡೋಂಟ್ ಬ್ಲೇಮ್ ದಿಸ್ ಬ್ಲಡ್‍ಶೆಡ್ ಆನ್ ಫ್ರಾನ್ಸಸ್ ಮುಸ್ಲಿಮ್ಸ್’(ಚಾರ್ಲಿ ಹೆಬ್ದೋ: ಈ ರಕ್ತದೋಕುಳಿಗೆ ಫ್ರಾನ್ಸ್ ನ ಮುಸ್ಲಿಮರನ್ನು ದೂರಬೇಡಿ) ಎಂದು ಲಂಡನ್ನಿನ ಗಾರ್ಡಿಯನ್ ಪತ್ರಿಕೆಯಲ್ಲಿ ನಬಿಲಾ ರಮ್ದಾನಿ ಬರೆದಿರುವುದಕ್ಕೆ ಅಥವಾ ‘ವೈ ಐ ಆಮ್ ನಾಟ್ ಚಾರ್ಲಿ'( ನಾನೇಕೆ ಚಾರ್ಲಿಯಲ್ಲ) ಎಂದು ಗಯತಿ ಸಿಂಗ್ ಬರೆದಿರುವುದಕ್ಕೆ ಮತ್ತು, 'ಇನ್ ಇಸ್ರೇಲ್ , ಚಾರ್ಲಿ ಹೆಬ್ದೋ ವುಡ್ ನಾಟ್ ಹಾವ್ ಇವನ್ ಹಾಡ್ ದ ರೈಟ್ ಟು ಎಕ್ಸಿಸ್ಟ್'  (ಇಸ್ರೇನಲ್ಲಾಗಿರುತ್ತಿದ್ದರೆ ಚಾರ್ಲಿ ಹೆಬ್ದೋಗೆ  ಅಸ್ತಿತ್ವವೇ  ಇರುತ್ತಿರಲಿಲ್ಲ )  ...  ಎಂದು ಇಸ್ರೇಲ್ ನ ಪ್ರಮುಖ ಪತ್ರಿಕೆ ಹಾರೆಟ್ಜ್ ನಲ್ಲಿ ಇಡೋ ಅಮಿನ್ ಬರೆದಿರುವುದಕ್ಕೆಲ್ಲ ಚಾರ್ಲಿ ಹೆಬ್ಡೋ ಪತ್ರಿಕೆಯ ಈ ಎಲ್ಲ ಅಸಂಬದ್ಧತೆಗಳೇ  ಕಾರಣ ಎನ್ನಬಹುದು.
   ಚಾರ್ಲಿ ಹೆಬ್ಡೋದ ಮೇಲಿನ ದಾಳಿಯಲ್ಲಿ ಅಹ್ಮದ್ ಮೆರಾಬೆಟ್ ಮತ್ತು ಮುಸ್ತಫಾ ಔರಾದ್ ಎಂಬಿಬ್ಬರು ಮುಸ್ಲಿಮರೂ ಸಾವಿಗೀಡಾಗಿದ್ದಾರೆ. ಮೆರಾಬೆಟ್ ಪೊಲೀಸಧಿಕಾರಿಯಾಗಿದ್ದರೆ, ಮುಸ್ತಫಾ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ  ಉದ್ಯೋಗಿಯಾಗಿದ್ದ. ಆದರೆ 12 ಮಂದಿಯನ್ನು ಕೊಂದ ಉಗ್ರರನ್ನು ಮುಂದಿಟ್ಟು ಕೊಂಡು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವವರು ಮುಸ್ತಫಾನನ್ನು ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ. ಪತ್ರಿಕೆಯೊಂದು ಸತತವಾಗಿ ಪ್ರವಾದಿ ನಿಂದನೆಯನ್ನು ಮತ್ತು ಜನಾಂಗೀಯ ದ್ವೇಷವನ್ನು ಕಾರುತ್ತಿದ್ದರೂ ಮುಸ್ಲಿಮನೊಬ್ಬ ಅದರಲ್ಲಿ ಉದ್ಯೋಗಿಯಾಗಿ ಇರಬಲ್ಲ ಎಂಬುದು ಯಾವುದರ ಸೂಚನೆ, ಅಸಹಿಷ್ಣುತೆಯದ್ದೋ ಉದಾರತೆಯದ್ದೋ? ತೀವ್ರವಾದಿಗಳು ಮತ್ತು ಉದಾರವಾದಿಗಳು ಮುಸ್ಲಿಮರಲ್ಲಿ ಮಾತ್ರ ಇರುವುದಲ್ಲ. ತಮ್ಮ ನಿಲುವಿಗೆ ಸರಿ ಹೊಂದದ ವ್ಯಕ್ತಿಗಳನ್ನು ಕೊಲೆಗೈಯುವುದು ಇದು ಮೊದಲ ಸಲವೂ ಅಲ್ಲ. ಎಲಿಯಟ್ ರಾಡ್ಜರ್, ಆ್ಯಂಡರ್ಸ್ ಬ್ರೇವಿಕ್, ಜೇಮ್ಸ್ ಹಾಲ್‍ಮೆಸ್, ವಾಡೆ ಮೈಕೆಲ್ ಪೇಜ್, ಡ್ಯಾರೆನ್ ವಿಲ್ಸನ್, ತಿಮೋತಿ ಮೆಕ್‍ವಿಗ್.. ಇವರೆಲ್ಲ ಯಾರು? ಮುಸ್ಲಿಮರ ಬಗ್ಗೆ ಮೃದು ನಿಲುವನ್ನು ತಳೆದಿರುವರೆಂದು ಆರೋಪಿಸಿ ನಾರ್ವೆಯಲ್ಲಿ ಸುಮಾರು 80 ಮಂದಿ ಎಡಪಂಥೀಯರನ್ನು ಆ್ಯಂಡರ್ಸ್ ಬ್ರೇವಿಕ್ ಕೊಂದನಲ್ಲ, ಅವನನ್ನು ಯಾವ ಧರ್ಮಕ್ಕೆ ಸೇರಿಸೋಣ? ಅವನ ತೀವ್ರವಾದಿ ನಿಲುವಿಗೆ ಯಾವ ಧರ್ಮದ, ಯಾವ ಚಿಂತನೆಗಳು ಕಾರಣ ಎಂದು ಪಟ್ಟಿ ಮಾಡೋಣ? ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ’ ಎಂಬ ಸಂಘಟನೆಯನ್ನು 1989ರಲ್ಲಿ ಸ್ಥಾಪಿಸಿ ಧಾರ್ಮಿಕ ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‍ರನ್ನು 2013 ಆಗಸ್ಟ್ 20ರಂದು ಹತ್ಯೆ ಮಾಡಲಾಯಿತಲ್ಲ, ಅದು ಯಾವ ಧರ್ಮದ ತೀವ್ರವಾದ? ಔಟ್‍ಲುಕ್ ವಾರಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದ ಇರ್ಫಾನ್ ಹುಸೈನ್‍ರನ್ನು 1999 ಮಾರ್ಚ್ 8ರಂದು ಹತ್ಯೆ ನಡೆಸಿದ್ದಕ್ಕೆ ಯಾವ ತೀವ್ರವಾದಿ ವಿಚಾರಧಾರೆಗಳು ಕಾರಣ? ಉದಾರವಾದ ಮತ್ತು ತೀವ್ರವಾದವನ್ನು ಅಳೆಯುವುದಕ್ಕೆ ಪಾಶ್ಚಾತ್ಯ ಜಗತ್ತು ಒಂದು ತಕ್ಕಡಿಯನ್ನು ತಯಾರಿಸಿಟ್ಟುಕೊಂಡಿದೆ. ಆ ತಕ್ಕಡಿಯಲ್ಲಿ ಬಿಳಿಯರು ಮತ್ತು ಬಿಳಿಯೇತರರು ಒಂದೇ ರೀತಿಯಲ್ಲಿ ತೂಗುವುದಿಲ್ಲ. ನಾರ್ವೆಯ ಬಿಳಿ ಚರ್ಮದ ಆ್ಯಂಡರ್ಸ್ ಬ್ರೇವಿಕ್ ಓರ್ವ ಸಾಮಾನ್ಯ ಕ್ರಿಮಿನಲ್ ಆರೋಪಿಯಾಗಿ ವಿಚಾರಣೆಯನ್ನು ಎದುರಿಸಿದ. ಅಮೇರಿಕದಲ್ಲಿ ಬಿಳಿಯ ಪೊಲೀಸರು ಮತ್ತು ನ್ಯಾಯಾಲಯವು ಕರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರತಿಭಟಿಸಿ ಬೀದಿಗಿಳಿದ ಜನರ ಆಕ್ರೋಶ ಇನ್ನೂ ತಣಿದಿಲ್ಲ. ಎಬೋಲಾದ ಬಗ್ಗೆ ಬಿಳಿ ಜಗತ್ತು ಗಂಭೀರ ಭಾಷೆಯಲ್ಲಿ ಮಾತಾಡತೊಡಗಿದ್ದೇ ಬಿಳಿ ಮನುಷ್ಯ ಅದಕ್ಕೆ ಬಲಿಯಾದ ಬಳಿಕ. ಆದರೆ ಈ ಸಾವಿಗಿಂತ ಮೊದಲು ಆಫ್ರಿಕಾ ಖಂಡದ ಸಾವಿರಾರು ಕಪ್ಪು ಮನುಷ್ಯರು ಯಾರ ಕರುಣೆಗೂ ಪಾತ್ರರಾಗದೇ ಸಾವಿಗೀಡಾಗಿದ್ದರು. ಇರಾಕ್, ಪಾಕ್, ಸಿರಿಯಾ, ಫೆಲೆಸ್ತೀನ್‍ಗಳಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆಯಂತೆ ಯಾರನ್ನೂ ನಿಂದಿಸದ, ವಿಡಂಬನಾತ್ಮಕ ಕಾರ್ಟೂನ್ ರಚಿಸದ, ಪ್ರವಾದಿಗೆ 100 ಏಟುಗಳನ್ನು ಕೊಡುವೆ ಎಂದು ಹೇಳದ ಸಾಮಾನ್ಯ ಮಂದಿ ನಿತ್ಯ ಸಾಯುತ್ತಿದ್ದಾರೆ. ಅವರನ್ನು ಸಾಯಿಸುವ ತೀವ್ರವಾದಿಗಳಿಗೆ ಆಯುಧಗಳನ್ನು ಇವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ರಾಷ್ಟ್ರಗಳು ಒದಗಿಸುತ್ತಿವೆ. ಬಿಳಿಯ ಜಗತ್ತಿನ ಹೊರಗೆ ನಡೆಯುವ ಹತ್ಯೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ತೀವ್ರವಾದವನ್ನು ಪೋಷಿಸುತ್ತಲೇ 'ಮುಸ್ಲಿಮರಿಗೆ ನಗಲು ಬರುವುದಿಲ್ಲ, ಅವರಲ್ಲಿ ಉದಾರತನ ಇಲ್ಲ' ಎಂದು ಅವೇ ಮಂದಿ ಆರೋಪಿಸುವುದನ್ನು ಏನೆಂದು ಕರೆಯಬೇಕು?
   ಫ್ರಾನ್ಸ್ ಗೆ ವಸಾಹತುಶಾಹಿತ್ವದ ದೊಡ್ಡ ಇತಿಹಾಸವೇ ಇದೆ. ಅಲ್ಜೀರಿಯಾ, ಲಿಬಿಯಾ ಮುಂತಾದ ಮುಸ್ಲಿಮ್ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡು ಆಳಿದ ಅನುಭವ ಅದಕ್ಕಿದೆ. ಫ್ರಾನ್ಸ್ ನ 66 ಮಿಲಿಯನ್ ಜನಸಂಖ್ಯೆಯಲ್ಲಿ ಇವತ್ತು ಸುಮಾರು 6 ಮಿಲಿಯನ್ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ಆಫ್ರಿಕಾ ಸಹಿತ ತನ್ನ ಮಾಜಿ ವಸಾಹತುಗಳಿಂದ ವಲಸೆ ಬಂದವರು. ಇವರನ್ನು ಇವತ್ತು ಫ್ರಾನ್ಸ್ ನಲ್ಲಿ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ. ಜನಾಂಗೀಯ ನಿಂದನೆಗೆ ಗುರಿಪಡಿಸಲಾಗುತ್ತಿದೆ. ತಮ್ಮ ಜನಾಂಗವಾದಿ ನಿಲುವಿಗಾಗಿ ಶಿಕ್ಷೆಗೀಡಾಗಿರುವ ನ್ಯಾಶನಲ್ ಫ್ರಂಟ್ ಪಕ್ಷದ ಸ್ಥಾಪಕ ಜೀನ್ ಮೇರಿ ಲಿಪೆನ್ ಎಂಬವರು ಈ ಪ್ರಚಾರಾಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಮಗಳಾದ ಪಕ್ಷದ ಈಗಿನ ಅಧ್ಯಕ್ಷೆ ಮರೀನೆ ಲಿಪೆನ್‍ರು ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳನ್ನು ಅವಮಾನಿಸುವ ಮಾತುಗಳನ್ನು ನಿರಂತರ ಆಡುತ್ತಿದ್ದಾರೆ. ಫ್ರಾನ್ಸ್ ನ ವಲಸೆ ನಿಯಮವನ್ನು ವಿರೋಧಿಸುತ್ತಾ, ಜನರನ್ನು ಜನಾಂಗೀಯವಾಗಿ ಧ್ರುವೀಕರಿಸುತ್ತಿದ್ದಾರೆ. ಈ ದ್ವೇಷಪೂರಿತ ರಾಜಕಾರಣ ಎಷ್ಟು ಬಲ ಪಡೆದಿದೆಯೆಂದರೆ, ‘ರೋಮಾ ಜಿಪ್ಸಿಗಳು ಫ್ರಾನ್ಸಿನೊಂದಿಗೆ ಬೆರೆಯಲಾಗದ ಜನರಾಗಿದ್ದು, ಅವರನ್ನು ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ ಗಡೀಪಾರು ಮಾಡಬೇಕೆಂದು’ ಇತ್ತೀಚೆಗೆ ಫ್ರಾನ್ಸ್ ನ ಪ್ರಧಾನಿ ಮ್ಯಾನುವೆಲ್ ವಲ್ಲಾಸ್ ಅಭಿಪ್ರಾಯ ಪಟ್ಟಿದ್ದರು. ಈ ಹೇಳಿಕೆಯ ಬಳಿಕ ರೊಮೇನಿಯನ್ನರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿದ್ದುವು. ಅದರ ಬೆನ್ನಿಗೇ ಬಲಪಂಥೀಯ ಮೇಯರ್ ಓರ್ವರು ತಮ್ಮ ಮುನ್ಸಿಪಲ್ ವ್ಯಾಪ್ತಿಯ ರುದ್ರಭೂಮಿಯಲ್ಲಿ ರೊಮೇನಿಯದ ಮಗುವಿನ ಅಂತ್ಯಸಂಸ್ಕಾರ ನಡೆಸುವುದರಿಂದ ತಡೆದಿದ್ದರು. ಒಂದು ರೀತಿಯಲ್ಲಿ, ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಾಗೂ ಜನಾಂಗೀಯವಾದಿ ಪೂರ್ವಗ್ರಹಗಳನ್ನು ಹರಡುವ ಪ್ರಯತ್ನಗಳು ಫ್ರಾನ್ಸ್ ನಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಚಾರ್ಲಿ ಹೆಬ್ಡೋದ ಮೇಲೆ ದಾಳಿ ನಡೆದಿದೆ. ಇದನ್ನು ಉದಾರವಾದ ಮತ್ತು ತೀವ್ರವಾದ ಎಂದು ವಿಭಜಿಸಿ ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ವ್ಯಾಖ್ಯಾನಿಸುವುದು ಸುಲಭ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಪುಂಜವನ್ನು ಬಳಸಿಕೊಂಡು ಚಾರ್ಲಿ ಹೆಬ್ಡೋದ ಪರ ನಿಲ್ಲುವುದು ಕಷ್ಟವೂ ಅಲ್ಲ. ಆದರೆ, ಹೀಗೆ ವಾದಿಸುವವರಲ್ಲೂ ಕೆಲವೊಂದು ಅನುಮಾನಗಳು ಖಂಡಿತ ಇರಬಹುದು. ಚಾರ್ಲಿ ಹೆಬ್ಡೋದ ಕಾರ್ಟೂನ್‍ಗಳು ಬರೇ ಸೃಜನಶೀಲತೆಯ ಉದ್ದೇಶದಿಂದಷ್ಟೇ ಸೃಷ್ಟಿಯಾಗಿವೆಯೇ? ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್‍ನಲ್ಲಿ ಪ್ರಕಟವಾದ ಪ್ರವಾದಿ ನಿಂದನೆಯ ಕಾರ್ಟೂನನ್ನು 2006ರಲ್ಲಿ ಪ್ರಕಟಿಸಿ ಮತ್ತೆ ಪುನಃ 2011ರಲ್ಲಿ ಪ್ರಕಟಿಸಿದ್ದೇ ಅಲ್ಲದೇ 2012ರಲ್ಲಿ 65 ಪುಟಗಳ ಪ್ರವಾದಿ ಕಾರ್ಟೂನ್‍ಗಳನ್ನು ಪ್ರಕಟಿಸಿರುವುದರಲ್ಲೂ ಬರೇ ಸೃಜನಶೀಲತೆಯ ಉದ್ದೇಶವಷ್ಟೇ ಕಾಣುತ್ತಿದೆಯೇ? ಅದೇಕೆ ಪ್ರವಾದಿಯವರು ಮತ್ತು ಮುಸ್ಲಿಮರೇ ಈ ಪತ್ರಿಕೆಯ ಸೃಜನಶೀಲತೆಗೆ ವಸ್ತುವಾಗಿದ್ದಾರೆ? ಹಾಲೋಕಾಸ್ಟನ್ನು (ಹಿಟ್ಲರ್ ನಡೆಸಿದ ಯಹೂದಿ ಹತ್ಯಾಕಾಂಡ)  ತನ್ನ ಸೃಜನಶೀಲತೆಗೆ ಚಾರ್ಲಿ ಹೆಬ್ಡೋ ಬಳಸಿಕೊಂಡಿತ್ತೇ? ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರವಾದಿ ಮತ್ತು ಮುಸ್ಲಿಮರ ವಿಷಯದಲ್ಲಿ ಮಾತ್ರ ಘರ್ಜಿಸುವ ಮತ್ತು ಹಾಲೋಕಾಸ್ಟ್ ಹಾಗೂ ಬಿಳಿ ಜಗತ್ತಿನ ವಿಷಯದಲ್ಲಿ ಕುಂಯ್‍ಗುಡುವಂಥ ವಸ್ತುವೇ? ವಿಡಂಬನೆ, ನಿಂದನೆ, ಅಪಹಾಸ್ಯ, ವ್ಯಂಗ್ಯ ಮುಂತಾದ ಪದಗಳಿಗೆಲ್ಲ ವಿಭಿನ್ನ ಅರ್ಥಗಳಿವೆ ಎಂದಾದರೆ ಮತ್ತೇಕೆ ಚಾರ್ಲಿ ಹೆಬ್ಡೋದ ಅಗ್ಗದ ಪತ್ರಿಕೋದ್ಯಮವು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥನೆ ಗೀಡಾಗುವುದು? ವಿಡಂಬನೆ ಮತ್ತು ನಿಂದನೆಯ ನಡುವೆ ಸ್ಪಷ್ಟ ನೈತಿಕ ಗೆರೆಯನ್ನು ಎಳೆಯಲು ನಾವೆಲ್ಲ ಹಿಂದೇಟು ಹಾಕುತ್ತಿರುವುದು ಯಾರ ಮತ್ತು ಯಾವುದರ ಭಯದಿಂದ! ಅವೆರಡರ ನಡುವೆ ವ್ಯತ್ಯಾಸ ಇವೆಯೇ? ಇದ್ದರೆ ಅವು ಯಾವುವು? ಅಷ್ಟಕ್ಕೂ, ಚಾರ್ಲಿ ಹೆಬ್ಡೋದ ಕಾರ್ಟೂನುಗಳಲ್ಲಿ ಎಷ್ಟು ಕಾರ್ಟೂನ್‍ಗಳು ಕೇವಲ ವಿಡಂಬನೆ ಎಂಬ ವೃತ್ತದೊಳಗೆ ನಿಲ್ಲಬಲ್ಲವು? ವೃತ್ತದಿಂದ ಹೊರಗೆ ಜಿಗಿಯುವ ಮತ್ತು ವೃತ್ತದೊಳಗೇ ಬಾರದವುಗಳಿಗೆ ನಾವು ಏನೆಂದು ಹೆಸರು ಕೊಡಬಲ್ಲೆವು? ನಿಂದನೆ, ವ್ಯಂಗ್ಯ, ಅಪಹಾಸ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು, ಮತ್ತು..
    ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾ ಕಾಂಡವನ್ನು ಕನ್ನಡ ಅಕ್ಷರ ಮಾಲೆಯಲ್ಲಿ ಬರುವ ಸಕಲ ಕಟು ಪದಗಳನ್ನು ಬಳಸಿ ಖಂಡಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲೇಬೇಕಾಗಿದೆ.

Monday, January 5, 2015

ಒಂದು ವೇಳೆ ಗೋಡ್ಸೆಯ ಸ್ಥಾನದಲ್ಲಿ ಅಫ್ಝಲ್‍ಗುರು ಇರುತ್ತಿದ್ದರೆ..

   1. ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ
   2. ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ
   3. ಮೆ ಇಟ್ ಪ್ಲೀಸ್ ಯುವರ್ ಆನರ್: ದಿ ಅಸಾಸಿನ್ಸ್ ಸ್ಟೇಟ್‍ಮೆಂಟ್ ಇನ್ ಕೋರ್ಟ್
   4. 1986 ಫೆ. 1ರಂದು ಬಾಬರಿ ಮಸೀದಿಯ ಗೇಟಿನ ಬೀಗ ತೆರೆಯಲು ಆದೇಶಿಸಿದ ನ್ಯಾಯಾಧೀಶರ ಕೃತಿ
‘ನೀವು ಓದಲೇಬೇಕಾದ 6 ಹೊಸ ಪುಸ್ತಕಗಳು' ಎಂಬ ಹೆಸರಿನಲ್ಲಿ ಆರೆಸ್ಸೆಸ್‍ನ ಮುಖವಾಣಿ ಆರ್ಗನೈಝರ್ ಪತ್ರಿಕೆಯು 1997 ಅಕ್ಟೋಬರ್ 5ರ ಸಂಚಿಕೆಯಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿದ್ದ ಪುಸ್ತಕಗಳಿವು. ಇವುಗಳಲ್ಲಿ, ‘ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ’ ಮತ್ತು 'ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ' ಎಂಬೆರಡು ಕೃತಿಗಳನ್ನು ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಬರೆದಿದ್ದರು. 1948 ಜನವರಿ 30ರಂದು ತನ್ನ ಪಾಯಿಂಟ್ ಬ್ಲಾಂಕ್ ರೇಂಜ್ ಬಂದೂಕಿನಿಂದ ಗಾಂಧೀಜಿಯವರ ಎದೆಗೆ ಮೂರು ಸುತ್ತು ಗುಂಡುಹಾರಿಸಿದ ನಾಥೂರಾಮ್ ಗೋಡ್ಸೆಯ ಆ ಕೃತ್ಯಕ್ಕೆ ಈ 2015ಕ್ಕೆ ಸುಮಾರು 67 ವರ್ಷಗಳು ತಗುಲುತ್ತವೆ. ಕೃತ್ಯ ನಡೆದಾಗ ಈ ದೇಶ ಎಷ್ಟು ಆಕ್ರೋಶಗೊಂಡಿತ್ತೆಂದರೆ, ಆರೆಸ್ಸೆಸ್‍ಗೆ ನಿಷೇಧ ಹೇರಲಾಯಿತು. ಆರೆಸ್ಸೆಸ್‍ನ ಬಗ್ಗೆ ಒಲವು ಹೊಂದಿದ್ದರೆಂದು ಹೇಳಲಾಗುತ್ತಿದ್ದ ಸರ್ದಾರ್ ಪಟೇಲರೇ ಈ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದರು. ಮಾತ್ರವಲ್ಲ, ಆ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ‘ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು' ಎಂಬ ಷರತ್ತನ್ನು ಒಡ್ಡಿದ್ದರು. ಆರೆಸ್ಸೆಸ್‍ಗೂ ನಾಥೂರಾಮ್ ಗೋಡ್ಸೆಗೂ ನಡುವೆ ಯಾವ ಬಗೆಯ ಸಂಬಂಧ ಇತ್ತು ಎಂಬುದನ್ನು ಸಹೋದರ ಗೋಪಾಲ ಗೋಡ್ಸೆ ಹಲವು ಬಾರಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಗೋಡ್ಸೆಯನ್ನು 1949 ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು. ಆ ಕಾಲದಲ್ಲಿ ಗೋಡ್ಸೆಯನ್ನು ಹೊಗಳುವುದು ಬಿಡಿ ಆತನ ಹೆಸರೆತ್ತುವುದೇ ದೇಶದ್ರೋಹವೆಂಬಂತಹ ವಾತಾವರಣ ದೇಶದೆಲ್ಲೆಡೆ ಇತ್ತು. ಬ್ರಾಹ್ಮಣನಾಗಿದ್ದ ಆತನನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಟ್ಟುಕೊಳ್ಳುವವರೇ ಇರಲಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ್ದ ಆತನ ನೆನಪಲ್ಲಿ ಜಯಂತಿ ಆಚರಿಸಿದ್ದೋ ಪ್ರತಿಮೆ ನಿರ್ಮಾಣ ಮಾಡಿದ್ದೋ ನಡೆಯಲಿಲ್ಲ. ಹೀಗೆ ರಾಷ್ಟ್ರಪಿತ ಗಾಂಧೀಜಿಯನ್ನು ಹತ್ಯೆಗೈದ ದೇಶದ್ರೋಹಿ ಎಂಬ ಐಡೆಂಟಿಟಿಯೊಂದಿಗೆ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಇದೀಗ ಗುಣಗಾನಕ್ಕೆ ಒಳಗಾಗುತ್ತಿದ್ದಾನೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಉತ್ತರ ಪ್ರದೇಶದ ವಿೂರತ್‍ನಲ್ಲಿ ಗೋಡ್ಸೆ ದೇವಾಲಯಕ್ಕೆ ಭೂಮಿ ಪೂಜೆ ನಡೆದಿದೆ. ಹಿಂದೂ ಮಹಾಸಭಾ ತಯಾರಿಸಿರುವ ‘ದೇಶಭಕ್ತ ನಾಥೂರಾಮ್ ಗೋಡ್ಸೆ’ ಎಂಬ ಡಾಕ್ಯುಮೆಂಟರಿಯು ಇದೇ ಜನವರಿಯ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಗಾಂಧಿ ಹತ್ಯೆಯಾದ ಜನವರಿ 30ನ್ನು ಶೌರ್ಯ ದಿನವನ್ನಾಗಿ ಆಚರಿಸುವುದಾಗಿ ಮಹಾಸಭಾ ಘೋಷಿಸಿದೆ. ದೇಶದಾದ್ಯಂತ ಆತನ ಪ್ರತಿಮೆ ನಿಲ್ಲಿಸುವ ಬಗ್ಗೆ ಅದು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದೆ. ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‍ರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. 'ಗೋಡ್ಸೆಯು ಗಾಂಧಿಯನ್ನಲ್ಲ ನೆಹರೂರನ್ನು ಹತ್ಯೆ ಮಾಡಬೇಕಿತ್ತು' ಎಂದು ಕೇರಳದ ಸಂಘಪರಿವಾರದ ಮುಖವಾಣಿ ಕೇಸರಿ ಪತ್ರಿಕೆಯಲ್ಲಿ ಬಿಜೆಪಿ ಮುಖಂಡ ಗೋಪಾಲಕೃಷ್ಣನ್ ಈ ಹಿಂದೆ ಆಸೆ ತೋಡಿಕೊಂಡಿದ್ದರು. ಮೊನ್ನೆ ಮೊನ್ನೆ ಟಿ.ವಿ. ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಚಾರ್ಯ ಮದನ್ ಅವರು ಗಾಂಧಿ ಹತ್ಯೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಉದ್ದೇಶಕ್ಕಾಗಿ ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂದರು. ದೇಶ ವಿಭಜನೆಯ ಸಂದರ್ಭದಲ್ಲಾದ ಎಲ್ಲ ಹತ್ಯೆಯ ಹೊಣೆಯನ್ನೂ ಗಾಂಧಿಯ ಮೇಲೆ ಹೊರಿಸಿದ ಆತ, ಗಾಂಧಿ 10 ಲಕ್ಷ ಮಂದಿಯ ಕೊಲೆಗಾರ ಎಂದರು. ಗಾಂಧಿಯನ್ನು ವಿಚಾರಣೆಗೆ ಒಳಪಡಿಸುವ ಯಾವುದೇ ಕಾನೂನು ಈ ದೇಶದಲ್ಲಿ ರಚನೆಯಾಗದೇ ಇರುವುದು ದುರದೃಷ್ಟಕರ ಎಂದೂ ಆತ ಹೇಳಿದ. ಅಷ್ಟಕ್ಕೂ, 1948ರಲ್ಲಿ ಅಪ್ಪಟ ದೇಶದ್ರೋಹಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈ 2015ರಲ್ಲಿ ದೇಶಭಕ್ತನಾಗಿ ಪರಿವರ್ತನೆಗೊಂಡದ್ದು ಹೇಗೆ ಮತ್ತು ಯಾಕೆ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ರಾಷ್ಟ್ರಪಿತನನ್ನು ಕೊಲೆಗೈದ ಅಪರಾಧಿಯೊಬ್ಬನ ಮೇಲೆ ಸಂಘಪರಿವಾರಕ್ಕೆ ಈ ಮಟ್ಟದ ಮಮಕಾರ ಯಾಕಾಗಿ? ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವು ದೆಂದರೆ ಜೇನುಗೂಡಿಗೆ ಕೈ ಹಾಕಿದಂತೆ. ನಾಲ್ಕು ದಿಕ್ಕಿನಿಂದಲೂ ಆ ಸಮರ್ಥನೆ ಪ್ರಶ್ನೆಗೀಡಾಗುತ್ತದೆ. ಕೊಲೆಪಾತಕನನ್ನು ವೈಭವೀಕರಣಗೊಳಿಸುವವರು ಟೀಕೆಗೆ ಖಂಡಿತ ಗುರಿಯಾಗುತ್ತಾರೆ. ಇದು ಸಂಘಪರಿವಾರಕ್ಕೆ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೂ ಅಂಥದ್ದೊಂದು ಧೈರ್ಯ ಪ್ರದರ್ಶಿಸುವುದಕ್ಕೆ ಗೋಡ್ಸೆಯಲ್ಲಿ ಏನಿದೆ?
   ನಿಜವಾಗಿ, ಸಂಘಪರಿವಾರಕ್ಕೆ ಮುಸ್ಲಿಮ್ ವಿರೋಧಿ ವ್ಯಕ್ತಿತ್ವ ವೊಂದರ ಅಗತ್ಯವಿದೆ. ಗಾಂಧೀಜಿಯನ್ನು ಕೊಂದವ ಎಂಬೊಂದು ಪರಿಚಿತ ಮುಖ ಗೋಡ್ಸೆಗೆ ಈಗಾಗಲೇ ಇದೆ. ಈ ಮುಖಕ್ಕೆ ಇನ್ನೊಂದು ಭಾವುಕ ವ್ಯಾಖ್ಯಾನವನ್ನು ಕೊಟ್ಟು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಉದುರಿಸುವ ಆಲೋಚನೆ ಸಂಘಪರಿವಾರದ್ದು. ಸಾವರ್ಕರ್, ಹೆಡ್ಗೆವಾರ್, ಗೋಲ್ವಲ್ಕರ್‍ಗಳನ್ನು ಈ ಸಮಾಜ ಈ ವರೆಗೂ ತನ್ನೊಳಗೆ ಜೀರ್ಣಿಸಿಕೊಂಡಿಲ್ಲ. ಬಹುಸಂಖ್ಯಾತ ಸಮಾಜ ಅವರನ್ನು ಜಗಲಿಯ ಒಳಗೆ ಬಿಟ್ಟುಕೊಳ್ಳುತ್ತಲೂ ಇಲ್ಲ. ಅವರನ್ನು ಒಂದು ಸಂಘಟನೆಗೆ ಮತ್ತು ನಿರ್ದಿಷ್ಟ ಆಲೋಚನೆಗೆ ಸೀಮಿತಗೊಳಿಸಿ ಅನುಮಾನದಿಂದ ನೋಡುತ್ತಲೂ ಇದೆ. ಇವರಿಗೆ ಹೋಲಿಸಿದರೆ ಗೋಡ್ಸೆ ತುಸು ಭಿನ್ನ. ಆತ ಈ ಎಲ್ಲ ಚೌಕಟ್ಟನ್ನೂ ವಿೂರಿ ಒಂದು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದವ. ಗೋಲ್ವಾಲ್ಕರ್‍ರ ಹೆಸರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸುವುದಕ್ಕಿಂತ ಗೋಡ್ಸೆಯ ಹೆಸರಿನಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹೆಚ್ಚು ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ಪೂರಕವಾಗಿ ಭಾವುಕ ಕತೆಯೊಂದನ್ನು ಆತನ ಸುತ್ತ ಕಟ್ಟುವುದಕ್ಕೂ ಅವಕಾಶ ಇರುತ್ತದೆ. ಗೋಡ್ಸೆಯನ್ನು ವೈಭವೀಕರಿಸುತ್ತಿರುವ ವರ್ಗ ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಗೌರವಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅದೇ ಉಸಿರಲ್ಲಿ ಅವರೋರ್ವ ಮುಸ್ಲಿಮ್ ಪರ ಮತ್ತು ಪಾಕಿಸ್ತಾನದ ರಚನೆಗೆ ಸಮ್ಮತಿಸಿದ ವ್ಯಕ್ತಿ ಎಂದೂ ಹೇಳುತ್ತದೆ. ಟರ್ಕಿಯಲ್ಲಿ ಖಲೀಫಾ ಆಡಳಿತ ಉರುಳಿದಾಗ ಇಲ್ಲಿ ಖಿಲಾಫತ್ ಚಳವಳಿಯನ್ನು ಹುಟ್ಟು ಹಾಕಿ ಮುಸ್ಲಿಮರನ್ನು ಬೆಂಬಲಿಸಿದ ವ್ಯಕ್ತಿ ಗಾಂಧೀಜಿ ಅನ್ನುತ್ತದೆ. ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಗಾಂಧೀಜಿ ಕಾರಣ ಎಂಬ ಆರೋಪವನ್ನೂ ಹೊರಿಸುತ್ತದೆ. ಹೀಗೆ ಗಾಂಧೀಜಿಯನ್ನು ಮುಸ್ಲಿಮ್ ಪರವೆಂದೂ ಮತ್ತು ಮುಸ್ಲಿಮರನ್ನು ಹಿಂದೂಗಳ ಕೊಲೆಗಾರರೆಂದೂ ಬಿಂಬಿಸುವ ಎರಡು ಉದ್ದೇಶವನ್ನು ಗೋಡ್ಸೆಯ ವೈಭವೀಕರಣವು ಪೂರ್ತಿಗೊಳಿಸುತ್ತದೆ. ಅಂದಹಾಗೆ, ಮುಸ್ಲಿಮ್ ಪರ ಇರುವವರನ್ನು ಹತ್ಯೆ ನಡೆಸುವುದು ದೇಶದ್ರೋಹವೋ ಅಪರಾಧವೋ ಆಗುವುದಿಲ್ಲ ಎಂಬ ಸಂದೇಶವೊಂದನ್ನು ರವಾನಿಸಲು ಗೋಡ್ಸೆಯಷ್ಟು ಉತ್ತಮ ವ್ಯಕ್ತಿ ಸಂಘಪರಿವಾರಕ್ಕೆ ಬೇರೊಬ್ಬರಿಲ್ಲ. ಗೋಡ್ಸೆ ಸಮರ್ಥನೆಗೀಡಾದಷ್ಟೂ ಗಾಂಧೀಜಿ ಹೆಚ್ಚೆಚ್ಚು ಮುಸ್ಲಿಮ್ ಪ್ರೇಮಿಯಾಗುತ್ತಲೇ ಹೋಗುತ್ತಾರೆ. ಅಲ್ಲದೇ, ಗೋಡ್ಸೆಯ ಪರ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಮತ್ತು ಮುಸ್ಲಿಮರು ಚರ್ಚೆಗೀಡಾಗಲೇ ಬೇಕಾಗುತ್ತದೆ.

ಯಾಕೆಂದರೆ, ಗಾಂಧೀಜಿ ಇಲ್ಲದಿದ್ದರೆ ಗೋಡ್ಸೆಗೆ ವ್ಯಕ್ತಿತ್ವವೇ ಇಲ್ಲ. ಗಾಂಧೀಜಿಯಿಂದಾಗಿಯೇ ಗೋಡ್ಸೆ ಇವತ್ತು ಇತಿಹಾಸದ ಪುಟದಲ್ಲಿದ್ದಾನೆ. ಗಾಂಧೀಜಿಗೆ ಆತ ಗುಂಡಿಕ್ಕದೇ ಇರುತ್ತಿದ್ದರೆ ಮಹಾರಾಷ್ಟ್ರದ ಪುಣೆಯಲ್ಲಿ ‘ಅಗ್ರಣಿ' ಎಂಬ ಪತ್ರಿಕೆಯನ್ನು ನಡೆಸುತ್ತಾ ಆತ ಪರಿವಾರದ ಪ್ರಚಾರಕನಾಗಿ ಎಲ್ಲೋ ಕಳೆದು ಹೋಗುತ್ತಿದ್ದ. ಆದ್ದರಿಂದ, ಗೋಡ್ಸೆಯನ್ನು ವಿವರಿಸಲು ತೊಡಗಿದಂತೆಲ್ಲಾ ಗೋಡ್ಸೆಗಿಂತ ಹೆಚ್ಚು ಗಾಂಧೀಜಿ ಮತ್ತು ಮುಸ್ಲಿಮರು ಪ್ರಸ್ತಾಪವಾಗುತ್ತಲೇ ಇರಬೇಕಾಗುತ್ತದೆ. ಒಂದು ರೀತಿಯಲ್ಲಿ, ಇದು ಸಂಘಪರಿವಾರದ ಬಯಕೆಯೂ ಹೌದು. ಗಾಂಧೀಜಿಯನ್ನು ಈ ದೇಶದ ಗೌರವಾನ್ವಿತರ ಪಟ್ಟಿಯಿಂದ ಕಳಚಬೇಕೆಂಬುದು ಸಂಘದ ಬಹುಕಾಲದ ಕನಸು. ಬಹುಸಂಖ್ಯಾತರು ಅನುಭವಿಸುವ ಸ್ವಾತಂತ್ರ್ಯವನ್ನು ಅಷ್ಟೇ ಸಮಾನವಾಗಿ ಮುಸ್ಲಿಮ್ ಅಲ್ಪಸಂಖ್ಯಾತರು ಅನುಭವಿಸಬಾರದೆಂಬ ಅಜೆಂಡಾವನ್ನೂ ಅದು ಹೊಂದಿದೆ. ಈ ಗುರಿಯನ್ನು ತಲುಪುವುದಕ್ಕೆ ಗೋಡ್ಸೆ ಯಷ್ಟು ಸೂಕ್ತ ವ್ಯಕ್ತಿತ್ವ ಬೇರೆ ಸಿಗಲಾರದು. ಗೋಡ್ಸೆಯ ಬಗ್ಗೆ ಮಾತುಗಳನ್ನು ಆರಂಭಿಸಿ ಗಾಂಧೀಜಿ, ಮುಸ್ಲಿಮರು ಮತ್ತು ದೇಶಭಕ್ತಿಯಲ್ಲಿ ಕೊನೆಗೊಳಿಸುವುದು ಸುಲಭ ಮತ್ತು ಹೆಚ್ಚು ಪ್ರಾಯೋಗಿಕ. ಗೋಡ್ಸೆ ಗುಂಡಿಕ್ಕಿದುದು ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಗಲ್ಲ, ದೇಶ ವಿಭಜಿಸಿದವರನ್ನು ಬೆಂಬಲಿಸಿದ ಗಾಂಧಿಗೆ ಎಂದು ಪರಿವಾರ ಇವತ್ತು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಈ ವಾದಕ್ಕೆ ಹೆಚ್ಚು ಬಲ ಬರುತ್ತದೆ. ಮುಸ್ಲಿಮರ ಪರ ನಿಲ್ಲುವವರನ್ನು ಅಥವಾ ಮುಸ್ಲಿಮರನ್ನು ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂಬ ಸಂದೇಶವನ್ನು ಗೋಡ್ಸೆಯ ಮೂಲಕ ರವಾನಿಸಲು ಸಂಘಪರಿವಾರ ತೀರ್ಮಾನಿಸಿದಂತಿದೆ. ಬಹುಶಃ, ಗೋಡ್ಸೆಯ ಪ್ರತಿಮೆಯನ್ನು ದೇಶದಾದ್ಯಂತ ನಿರ್ಮಿಸಲು ಹೊರಟಿರುವ ಹಿಂದೂ ಮಹಾಸಭಾವನ್ನು ತಡೆಯಬೇಕೆಂದು ಕೋರಿ ಕಾನೂನು ತಜ್ಞ ಮತ್ತು ಮಾನವ ಹಕ್ಕು ಕಾರ್ಯಕರ್ತರಾಗಿರುವ ಶಹ್‍ಝಾದ್‍ರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರಕ್ಕೆ ತೂಕ ಬರುವುದೂ ಈ ಕಾರಣದಿಂದಲೇ. ಅದು ಬರೇ ಪ್ರತಿಮೆಯಲ್ಲ. ಆ ಪ್ರತಿಮೆಗೆ ಮುಸ್ಲಿಮ್ ವಿರೋಧಿಯಾದ ಇಮೇಜು ಇದೆ. ಗೋಡ್ಸೆಯ ಪ್ರತಿಮೆ ಹೆಚ್ಚಾದಷ್ಟೂ ಅಥವಾ ಆತನ ವೈಭವೀಕರಣ ವಿಸ್ತರಿಸಿದಷ್ಟೂ ಮುಸ್ಲಿಮ್ ವಿರೋಧಿ ಭಾವನೆಗಳು ಈ ದೇಶದಲ್ಲಿ ಖಂಡಿತ ಹೆಚ್ಚಾಗುತ್ತದೆ. ಒಂದು ಕಡೆ ಪಾರ್ಲಿಮೆಂಟಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ. ಹಾಗಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್ ಸಂಸತ್ ಸದಸ್ಯನನ್ನು ಅದು ಹೊಂದಿಲ್ಲ. ದೇಶಾದ್ಯಂತವಿರುವ ಅದರ 1058ರಷ್ಟು ಅಸೆಂಬ್ಲಿ ಸದಸ್ಯರಲ್ಲಿ ಬರೇ 4 ಮಂದಿಯಷ್ಟೇ ಮುಸ್ಲಿಮರಿದ್ದಾರೆ. ದೇಶವನ್ನಾಳುವ ಪ್ರಮುಖ ಪಕ್ಷವೊಂದರಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಇಷ್ಟು ದಯನೀಯ ಸ್ಥಿತಿಯಲ್ಲಿರುವಾಗಲೇ ಗೋಡ್ಸೆ ಮುನ್ನೆಲೆಗೆ ಬಂದಿದ್ದಾನೆ. ಮಾತ್ರವಲ್ಲ, ಮಾತನಾಡಲೇಬೇಕಿದ್ದ ಪ್ರಧಾನಿಯವರು ಮೌನವಾಗಿದ್ದಾರೆ. ಒಂದು ವೇಳೆ, ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಗೋಡ್ಸೆಯ ಮಾದರಿಯಲ್ಲಿ ವೈಭವೀಕರಿಸಲು ಯಾವುದಾದರೊಂದು ಸಂಘಟನೆ ಮುಂದಾಗಿರುತ್ತಿದ್ದರೆ ಕೇಂದ್ರ ಸರಕಾರದ ನಿಲುವು ಏನಾಗಿರುತ್ತಿತ್ತು? 1500 ವರ್ಷಗಳ ಇಸ್ಲಾವಿೂ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮುಸ್ಲಿಮ್ ಬಾಹುಳ್ಯದ ಕಾಶ್ಮೀರವು ಸೆಕ್ಯುಲರ್ ರಾಷ್ಟ್ರವಾದ ಭಾರದೊಂದಿಗೆ 1947ರಲ್ಲಿ ಸೇರಿಕೊಂಡರೂ ಭಾರತವು ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದಿರುವುದಕ್ಕೆ; ಪಕ್ಷ
 ಪಾತ, ದೌರ್ಜನ್ಯ ನಡೆಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಫ್ಝಲ್ ಗುರು ಪಾರ್ಲಿಮೆಂಟ್‍ಗೆ ದಾಳಿ ನಡೆಸಿದ್ದಾನೆ ಎಂದು ವಾದಿಸಬಹುದಾದ ಸಂದರ್ಭವನ್ನೊಮ್ಮೆ ಊಹಿಸಿ. ಆತ ದಾಳಿ ಮಾಡಿದ್ದು ಪಾರ್ಲಿಮೆಂಟಿನ ಮೇಲಲ್ಲ, ಅದರೊಳಗೆ ಕುಳಿತಿರುವ ಕಾಶ್ಮೀರಿ ವಿರೋಧಿಗಳನ್ನು ಎಂಬ ಸಮರ್ಥನೆಯನ್ನು ಅವಲೋಕಿಸಿ ನೋಡಿ. ಕೇಂದ್ರ ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಗೋಡ್ಸೆಯನ್ನು ವೈಭವೀಕರಿಸುತ್ತಿರುವವರು ಏನೆನ್ನಬಹುದು?

Tuesday, December 9, 2014

ಅಂಥ ಮಗಳು ಹೇಳದೆ ಕೇಳದೆ ಹೊರಟು ಹೋಗುವುದೆಂದರೆ..

    ಹುಡುಗಿ ತನ್ನ ಕೋಣೆಯಲ್ಲಿ ಅತ್ತಿತ್ತ ನಡೆಯುತ್ತಿರುತ್ತಾಳೆ. ಮುಖದಲ್ಲಿ ಆತಂಕ, ಗಲಿಬಿಲಿ. ಮನೆಯಲ್ಲಿ ಮದುವೆಯ ತಯಾರಿ ನಡೆಯುತ್ತಿರುತ್ತದೆ. ಈ ಮಧ್ಯೆ ಮೊಬೈಲ್ ರಿಂಗುಣಿಸುತ್ತದೆ. “ಹಲೋ ರವಿ, ನಂಗೆ ಭಯವಾಗ್ತಿದೆ..” ಅನ್ನುತ್ತಾಳೆ. ಆತ ಧೈರ್ಯ ತುಂಬುತ್ತಾನೆ. “ನೀನು ಹೊರಟು ಬಾ. ಹಗಲು ತಾನೆ, ಯಾರೂ ಅನುಮಾನ ಪಡಲ್ಲ. ರೈಲ್ವೆ ಸ್ಟೇಷನ್‍ನಲ್ಲಿ ನಾನು ಕಾಯ್ತಾ ಇದ್ದೇನೆ. 3 ಗಂಟೆಗೆ ತಲುಪಬೇಕು. ಡ್ರೆಸ್ಸು, ಬ್ಯಾಗು ಎಂದೆಲ್ಲಾ ಆತಂಕ ಪಡಬೇಡ. ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ. ಬರಿಗೈಲಿ ಬಂದರೆ ಸಾಕು..' ಅನ್ನುತ್ತಾನೆ. ಹುಡುಗಿ ಒಪ್ಪಿಕೊಳ್ಳುತ್ತಾಳೆ. ಡ್ರೆಸ್ ಖರೀದಿಸುವ ನೆಪದಲ್ಲಿ ಮನೆಯಿಂದ ಹೊರಟು ರಿಕ್ಷಾದಲ್ಲಿ ಕೂರುತ್ತಾಳೆ. ಒಳ ದಾರಿಯಾಗಿ ರೈಲ್ವೆ ಸ್ಟೇಷನ್‍ಗೆ ಹೋಗುವಂತೆ ವಿನಂತಿಸುತ್ತಾಳೆ. ಮಾಮೂಲಿ ದಾರಿಯಾಗಿ ಹೋದರೆ ಪರಿಚಿತರು ಗುರುತು ಹಚ್ಚಿಯಾರೆಂಬ ಭಯ. ಒಳ ರಸ್ತೆಯು ಇಕ್ಕಟ್ಟಾಗಿದ್ದು ಹೋಗಲು ಯೋಗ್ಯವಾಗಿಲ್ಲವೆಂದು ರಿಕ್ಷಾ ಚಾಲಕ ಆರಂಭದಲ್ಲಿ ತಕರಾರು ತೆಗೆದರೂ ಹೆಚ್ಚುವರಿಯಾಗಿ ಹಣ ಪಾವತಿಸಬೇಕೆಂಬ ಒಪ್ಪಂದದೊಂದಿಗೆ ರಿಕ್ಷಾ ಚಲಿಸುತ್ತದೆ. ಆದರೆ ತುಸು ದೂರ ಸಾಗುತ್ತಲೇ ರಿಕ್ಷಾ ಕೈ ಕೊಡುತ್ತದೆ. ಎಷ್ಟು ಪ್ರಯತ್ನಿಸಿದರೂ ರಿಕ್ಷಾ ಚಲಿಸುವುದಿಲ್ಲ. ಇಕ್ಕಟ್ಟಾದ ರಸ್ತೆ, ವಾಹನಗಳ ಓಡಾಟವೂ ಕಡಿಮೆ.. ಇಂಥ ಸ್ಥಿತಿಯಲ್ಲಿ ಏನು ಮಾಡುವುದೆಂದು ಆಲೋಚಿಸುತ್ತಿದ್ದಾಗ ಒಂದು ಕಾರು ಆ ದಾರಿಯಾಗಿ ಬರುತ್ತದೆ. ಹುಡುಗಿಯನ್ನು ರೈಲ್ವೇ ಸ್ಟೇಷನ್‍ಗೆ ತಲುಪಿಸುವಂತೆ ರಿಕ್ಷಾ ಚಾಲಕ ಕಾರು ಚಾಲಕನಲ್ಲಿ ವಿನಂತಿಸುತ್ತಾನೆ. ಆತ ಒಪ್ಪಿಕೊಳ್ಳುತ್ತಾನೆ. ಹೀಗೆ ಹೋಗುತ್ತಾ ಕಾರು ಚಾಲಕ ಹುಡುಗಿಯನ್ನು ಮಾತಿಗೆಳೆಯುತ್ತಾನೆ. ಎಲ್ಲಿಗೆ ಎಂದು ಪ್ರಶ್ನಿಸುತ್ತಾನೆ. ಆಕೆ ರೈಲ್ವೇ ಸ್ಟೇಷನ್‍ಗೆ ಅನ್ನುತ್ತಾಳೆ. ಅದು ಗೊತ್ತಿದೆ, ಅಲ್ಲಿಂದ ಎಲ್ಲಿಗೆ ಎಂದು ಮರು ಪ್ರಶ್ನಿಸುತ್ತಾನೆ. ಹುಡುಗಿ ಪ್ರತಿಕ್ರಿಯಿಸದೇ ಕಾರಿನಿಂದ ಹೊರಗೆ ದಿಟ್ಟಿಸುತ್ತಾಳೆ. ‘ಏನೋ ಟೆನ್ಶನ್‍ನಲ್ಲಿ ಇರುವ ಹಾಗಿದೆ..' ಎಂದು ಮತ್ತೆ ಮಾತಿಗೆ ಎಳೆಯುತ್ತಾನೆ. ‘ಏಯ್ ಅಂಥದ್ದೇನಿಲ್ಲ..' ಎಂದು ಆಕೆ ಸಹಜತೆಯನ್ನು ತೋರ್ಪಡಿಸಲು ಯತ್ನಿಸುತ್ತಾಳೆ. ಅದೇ ವೇಳೆ ರವಿಯ ಕಾಲ್ ಬರುತ್ತದೆ. ‘ಹಲೋ ರವಿ, ಹಲೋ ರವಿ’ ಎಂದು ಹೇಳುತ್ತಾಳೆ. ಮತ್ತೆ ಮತ್ತೆ ಪುನರಾವರ್ತಿಸುತ್ತಾಳೆ. ಒಳರಸ್ತೆಯಾದುದರಿಂದ ಸಂಪರ್ಕದಲ್ಲಿ ತೊಂದರೆ ಕಾಣಿಸಿಕೊಂಡು ಕರೆ ಸ್ಥಗಿತಗೊಳ್ಳುತ್ತದೆ. ಈ ಮಧ್ಯೆ ಆ ಹುಡುಗಿಯ ಮನಸ್ಥಿತಿಯ ಕುರಿತು ಕಾರು ಚಾಲಕ ಆಲೋಚಿಸುತ್ತಿರುತ್ತಾನೆ. ಮನೆಯಿಂದ ತಪ್ಪಿಸಿಕೊಂಡು ಬಂದಿರಬೇಕು ಎಂದು ಅನುಮಾನಿಸುತ್ತಾನೆ. ಆದರೂ ಹುಡುಗಿಯಲ್ಲಿ ಬ್ಯಾಗು ಇಲ್ಲದೇ ಇರುವುದು ಮತ್ತು ಸೀದಾ-ಸಾದಾ ಪೇಟೆಗೆ ಹೋಗುವವರಂತೆ ಕಾಣಿಸುತ್ತಿರುವುದು ಆತನಲ್ಲೂ ಗೊಂದಲ ಮೂಡಿಸುತ್ತದೆ. ಆದರೂ ಆತ ಪ್ರಶ್ನೆಯೊಂದನ್ನು ಎಸೆದು ಬಿಡುತ್ತಾನೆ.
   "ಸಾಮಾನ್ಯವಾಗಿ ಮನೆಯಿಂದ ಓಡಿ ಹೋಗುವವರಲ್ಲಿ ಬ್ಯಾಗು ಇರುತ್ತದಲ್ಲ. ನಿನ್ನಲ್ಲಿ ಅದು ಕಾಣಿಸುತ್ತಿಲ್ಲ. ಏನಾಯ್ತು?"
   ಆಕೆ: ನಾನು ಓಡಿ ಹೋಗುತ್ತಿರುವುದಾಗಿ ನಿಂಗೆ ಯಾರು ಹೇಳಿದ್ದು?
   ಆತ: ನೀನೇ
   ಆಕೆ: ನಾನಾ..
   ಆತ: ಹಾಂ, ನಿನ್ನ ಮುಖವೇ ಅದನ್ನು ಹೇಳುತ್ತದೆ.
ಹೀಗೆ ಮಾತುಕತೆಗಳು ಸಾಗುತ್ತವೆ. ಹೇಳಲೋ ಬೇಡವೋ ಎಂಬ ಗೊಂದಲ ಹುಡುಗಿಯಲ್ಲಿ. ಆತ ಒತ್ತಾಯಪಡಿಸುತ್ತಾನೆ. ಇಲ್ಲಿ ನಾವಿಬ್ಬರೂ ಅಪರಿಚಿತರು ಅನ್ನುತ್ತಾನೆ. ನೀನು ಈ ಕಾರಿನಿಂದ ಇಳಿದು ಹೋದ ಬಳಿಕ ನೀನಾರೋ ನಾನಾರೋ? ನನ್ನಲ್ಲಿ ನೀನು ವಿಷಯ ಹೇಳುವುದರಿಂದ ನಮಗಲ್ಲದೇ ಇನ್ನಾರಿಗೂ ಗೊತ್ತಾಗಲ್ಲ.. ಎಂದೆಲ್ಲಾ ನಂಬಿಸುತ್ತಾನೆ. ಅರ್ಧದಲ್ಲೇ ಕಾರು ನಿಲ್ಲಿಸುತ್ತಾ, ‘ಇಷ್ಟವಿಲ್ಲದಿದ್ದರೆ ಇಳಿದು ಹೋಗಬಹುದು' ಎಂದೂ ಹೇಳುತ್ತಾನೆ. ಕಾರು ಚಲಿಸುತ್ತದೆ. ಹುಡುಗಿ ವೃತ್ತಾಂತ ಹೇಳತೊಡಗುತ್ತಾಳೆ. ನೀವು ಅನುಮಾನಿಸಿದ್ದೇ ನಿಜ ಅನ್ನುತ್ತಾಳೆ. ಕಾಲೇಜು ಸಹಪಾಠಿಯಾದ ರವಿಯನ್ನು ತಾನು ಪ್ರೀತಿಸುತ್ತಿದ್ದು, ಮನೆಯವರು ಈ ಪ್ರೀತಿಗೆ ಒಪ್ಪಿಗೆ ಸೂಚಿಸಲಿಲ್ಲ, ಬೇರೆಯೇ ಮದುವೆ ನಿಶ್ಚಯಿಸಿದ್ರು. ಆದ್ದರಿಂದ ಹೊರಟು ಬಂದೆ ಅನ್ನುತ್ತಾಳೆ. ಆತ ಆಕೆಯ ನಿರ್ಧಾರವನ್ನು ಒಂದು ಹಂತದಲ್ಲಿ ಸಮರ್ಥಿಸುತ್ತಾನೆ. ಮದುವೆ ನಿಶ್ಚಯವಾದ ಕೂಡಲೇ ಹೊರಟು ಬಂದದ್ದು ಒಳ್ಳೆಯದಾಯಿತು. ಈಗಿನ ಕೆಲವು ಪ್ರಕರಣಗಳಂತೂ ದಿಗಿಲು ಬಡಿಸುವಂತಿರುತ್ತದೆ ಅನ್ನುತ್ತಾನೆ. ಮದುವೆ ಮುನ್ನಾದಿನ ಅಥವಾ ರಾತ್ರಿ ಅಥವಾ ಮದುವೆ ಮಂಟಪದಿಂದಲೇ ಹುಡುಗಿಯರು ಓಡಿ ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥ ಸ್ಥಿತಿಯಲ್ಲಿ ನಿಶ್ಚಯದ ಸಂದರ್ಭದಲ್ಲೇ ಹೊರಟು ಬಂದದ್ದು ಅದಕ್ಕಿಂತ ಉತ್ತಮ ಅನ್ನುತ್ತಾನೆ. ಹುಡುಗಿ ಗಲಿಬಿಲಿಯಿಂದ ನೋಡುತ್ತಾಳೆ. ತಗ್ಗಿದ ದನಿಯಲ್ಲಿ, “ನನಗೆ ನಾಳೇನೇ ಮದುವೆ“ ಅನ್ನುತ್ತಾಳೆ. ತುಸು ಹೊತ್ತು ಮೌನ. ಬಳಿಕ ಆತನೇ ಮಾತು ಪ್ರಾರಂಭಿಸುತ್ತಾನೆ.
   "ಇಲ್ಲಿಂದ ಹೋದ ಬಳಿಕ ಏನು ಮಾಡುತ್ತೀ?"
   ಆಕೆ: ರವಿಗೆ ಪಾಲಕ್ಕಾಡಿನಲ್ಲಿ ಓರ್ವ ಗೆಳೆಯನಿದ್ದಾನೆ. ಮದುವೆ ರಿಜಿಸ್ಟರ್‍ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಆತ ಮಾಡಿಟ್ಟಿದ್ದಾನೆ. ರವಿಗೆ ಒಂದು ಉದ್ಯೋಗ ಸಿಗುವವರೆಗೆ ಆತನ ಮನೆಯಲ್ಲೇ ತಂಗುವ ಯೋಜನೆ ಹಾಕಿ ಕೊಂಡಿದ್ದೇವೆ.
   ಆತ: ನಿನಗೆ ನಿನ್ನ ಪ್ರಿಯಕರನ ಉದ್ಯೋಗದ ಬಗ್ಗೆ, ನಿನ್ನ ನಾಳೆಯ ಬಗ್ಗೆ ಕಾಳಜಿ ಇದೆ. ಭವಿಷ್ಯದ ಕುರಿತಂತೆ ಯೋಜನೆಯೂ ಇದೆ. ಆದರೆ ನಾಳೆಯ ದಿನ ನಿನ್ನ ಮನೆಯವರು ಎದುರಿಸುವ ಸಮಸ್ಯೆಗಳ ಕುರಿತಂತೆ ನೀನು ಯೋಚಿಸಿರುವೆಯಾ? ನಿನ್ನ ಹೆತ್ತವರ ಮುಂದೆ ನಿನ್ನ ಕುಟುಂಬದವರು ಎಸೆಯುವ ಪ್ರಶ್ನೆಗಳು, ಭತ್ರ್ಸನೆಗಳು ಏನಾಗಿರಬಹುದು ಎಂಬ ಬಗ್ಗೆ ಆಲೋಚಿಸಿರುವಿಯಾ?
   ಹುಡುಗಿ ಮೌನ ವಹಿಸುತ್ತಾಳೆ.
   ಆತ: ಮನೆಯಲ್ಲಿ ಯಾರೆಲ್ಲ ಇದ್ದಾರೆ?
   ಆಕೆ: ತಂದೆ-ತಾಯಿ, ತಂಗಿ, ತಮ್ಮ..
   ಆತ: ಇವತ್ತು ಸಂಜೆಯ ವರೆಗೆ ನಿನ್ನ ಮನೆಯವರು ನಿನ್ನನ್ನು ಹುಡುಕದೆ ಇರಬಹುದು. ಆದರೆ ಇದು ಹೆಚ್ಚು ಹೊತ್ತು ನಡೆಯಲ್ಲ. ಆ ಬಳಿಕ ನಿನ್ನ ಹುಡುಕಾಟ ನಡೆದೇ ನಡೆಯುತ್ತದೆ. ನೀನು ಓಡಿ ಹೋಗಿರುವಿ ಎಂಬ ಸುದ್ದಿ ನೆರೆಕರೆಗೆ, ಊರಿನವರಿಗೆ ನಿಧಾನವಾಗಿ ಗೊತ್ತಾಗುತ್ತದೆ. ಬಳಿಕ ನಾವು ಸಿನಿಮಾಗಳಲ್ಲಿ, ಪತ್ರಿಕೆಗಳಲ್ಲಿ ಓದಿರುತ್ತೇವಲ್ಲ - ಮದುವೆ ಮಂಟಪದಿಂದ ವಧು ಓಡಿ ಹೋದಳು, ಅವಮಾನ ಸಹಿಸಲಾರದೇ ತಂದೆ ಹೃದಯಾಘಾತದಿಂದ ನಿಧನರಾದರು, ತಾಯಿ ಆತ್ಮಹತ್ಯೆ ಮಾಡಿಕೊಂಡಳು ಎಂದೆಲ್ಲ.. ಅವೆಲ್ಲ ನಡೆಯಬಹುದು. ಬೇಡ ಬಿಡು- ನಿನ್ನ ಹೆತ್ತವರು, ಸಂಬಂಧಿಕರು ಅತ್ತ ಇರಲಿ, ತನ್ನ ಪತ್ನಿಯಾಗುವವಳ ಬಗ್ಗೆ ದೊಡ್ಡದೊಂದು ಕನಸು ಕಟ್ಟಿಕೊಂಡು ಅದಕ್ಕಾಗಿ ತಯಾರಿ ನಡೆಸುತ್ತಿರುವ ಮದುಮಗ ಇದ್ದಾನಲ್ಲ. ಆತನ ಬಗ್ಗೆ ಆಲೋಚಿಸಿದ್ದೀಯಾ? ಆತನ ಮುಂದೆಯಾದರೂ ಸತ್ಯ ಹೇಳಬಹುದಿತ್ತಲ್ಲವೇ? ಒಂದು ವೇಳೆ ನೀನು ಹೇಳಿರುತ್ತಿದ್ದರೆ ಈ ಪರಿಸ್ಥಿತಿ ಬರದಿರುವ ಸಾಧ್ಯತೆಯೂ ಇತ್ತಲ್ಲವೇ?
   ಹುಡುಗಿ ಪಿಳಿಪಿಳಿ ಅನ್ನುತ್ತಾಳೆ. ತಾನು ಹೀಗೆಲ್ಲ ಆಲೋಚಿಸಲಿಲ್ಲ, ಮದುವೆ ನಿಶ್ಚಯಗೊಂಡ ಕೂಡಲೇ ಗಲಿಬಿಲಿಗೊಂಡೆ ಅನ್ನುತ್ತಾಳೆ. ತನಗೆ ಗೊತ್ತುಪಡಿಸಿದ ವರ ದುಬೈಯಲ್ಲಿ ಉದ್ಯೋಗದಲ್ಲಿದ್ದು ನಾವಿಬ್ಬರೂ ಮಾತಾಡಿಲ್ಲ. ನನ್ನ ಪೋಟೋ ನೋಡಿ ಆತ ಒಪ್ಪಿಕೊಂಡ. ಆತನ ಹೆತ್ತವರು ಮದುವೆ ನಿಶ್ಚಯಿಸಿದ್ರು.. ಎಂದೆಲ್ಲಾ ಹೇಳಿಬಿಡುತ್ತಾಳೆ. ಹುಡುಗಿಯ ಈ ಗಲಿಬಿಲಿಯನ್ನು ಸದುಪಯೋಗಿಸಿಕೊಂಡು ಹುಡುಗ ತನ್ನ ಬದುಕಿನಲ್ಲಾದ ಘಟನೆಯನ್ನು ಆಕೆಯ ಮುಂದೆ ತೆರೆದಿಡುತ್ತಾನೆ. ತನಗೋರ್ವ ಮುದ್ದು ತಂಗಿಯಿದ್ದದ್ದು, ತಾನು ಮತ್ತು ತಂದೆ-ತಾಯಿ ಅತ್ಯಂತ ಅಕ್ಕರೆಯಿಂದ ಆಕೆಯನ್ನು ನೋಡಿಕೊಂಡಿದ್ದು ಮತ್ತು ಆಕೆಯ ಒಪ್ಪಿಗೆ ಪಡೆದೇ ಮದುವೆ ನಿಶ್ಚಯಿಸಿದ್ದು.. ಎಲ್ಲವನ್ನೂ ಹೇಳುತ್ತಾನೆ. ಆದರೆ ಆಕೆಗೊಂದು ಅಫೇರ್ ಇದೆ ಎಂಬುದು ಆಕೆ ಹೇಳಿಯೂ ಇರಲಿಲ್ಲ. ಮನೆಯವರಿಗೆ ಗೊತ್ತೂ ಇರಲಿಲ್ಲ. ಹೀಗಿರುತ್ತಾ ಮದುವೆಯ ದಿನ ಆಕೆ ಓಡಿ ಹೋಗುತ್ತಾಳೆ. ಇದನ್ನು ಅರಗಿಸಿಕೊಳ್ಳಲಾಗದ ತಂದೆ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ತಾಯಿ ಕುಗ್ಗಿ ಹೋಗುತ್ತಾರೆ. ಊರವರು ಮನೆಗೆ ಬಂದು ಮಗಳನ್ನು ದೂಷಿಸುವುದನ್ನು ಆಲಿಸಲು ತಾಯಿ ಸಿದ್ಧಳಿರಲಿಲ್ಲ. ಆಕೆ ಆಗಲೂ ಮಗಳನ್ನು ಪ್ರೀತಿಸುತ್ತಿದ್ದಳು. ಆ ವರೆಗೆ ಪ್ರೀತಿಯಿಂದ ಬೆಳೆಸಿದ ತಂಗಿಯನ್ನು ದ್ವೇಷಿಸಲು ನಮ್ಮಿಂದ ಸಾಧ್ಯವೇ ಆಗಲಿಲ್ಲ.. ಅನ್ನುತ್ತಾನೆ. ಕಣ್ಣಲ್ಲಿ ಹನಿ ಕಣ್ಣೀರು. ನನ್ನ ತಂದೆಗಾದ ಸ್ಥಿತಿ ನಿನ್ನ ತಂದೆಗೆ ಆಗದಿರಲಿ ಎಂದೂ ಹೇಳುತ್ತಾನೆ. ಹುಡುಗಿಯ ಕಣ್ಣು ಹನಿಗೂಡುತ್ತದೆ. ತನ್ನ ಮನೆಯಲ್ಲಿ ಹೆತ್ತವರು, ಸಂಬಂಧಿಕರು ಆಡುತ್ತಿದ್ದ ಮಾತುಗಳು ನೆನಪಿಗೆ ಬರುತ್ತವೆ. ಕಾರನ್ನು ಮನೆಯತ್ತ ತಿರುಗಿಸುವಂತೆ ಹೇಳುತ್ತಾಳೆ. ಆಕೆಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಆಕೆಯ ಹೆಸರು ಕೇಳುತ್ತಾನೆ. ಸೀತ ಅನ್ನುತ್ತಾಳೆ. ಹ್ಯಾಪಿ ಮ್ಯಾರೇಜ್ ಲೈಫ್ ಎಂದು ಶುಭ ಕೋರುತ್ತಾನೆ. ಮನೆಗೆ ಹೋದ ಬಳಿಕ ತಾನು ಆತನನ್ನು ಮದುವೆಗೆ ಆಹ್ವಾನಿಸಿಲ್ಲ ಎನ್ನುವುದು ಆಕೆಗೆ ಜ್ಞಾಪಕಕ್ಕೆ ಬರುತ್ತದೆ. ಕರೆ ಮಾಡುತ್ತಾಳೆ. ಆದರೆ ತನಗೂ ಇಂತಿಂಥವರ ಮಗಳು ಸೀತಳಿಗೂ ನಾಳೆ ಮದುವೆ ಇದೆ ಎಂದು ಆತ ಹೇಳುತ್ತಾನೆ. ಹುಡುಗಿಗೆ ಗಾಬರಿಯಾಗುತ್ತದೆ. ತನಗೆ ಮದುವೆ ನಿಶ್ಚಯಗೊಂಡ ಹುಡುಗನ ಪೋಟೋ ಹುಡುಕುತ್ತಾಳೆ. ಅವನೇ ಇವನು. ಆಘಾತದಿಂದ ಇನ್ನೂ ಹೊರಬರದ ಆಕೆಯೊಂದಿಗೆ ಆತ ಹೇಳುತ್ತಾನೆ:
   ನಾನು ನನ್ನ ಬದುಕಿನಲ್ಲಾದ ಘಟನೆಯನ್ನಷ್ಟೇ ನಿನ್ನಲ್ಲಿ ಹೇಳಿದೆ. ನಿನ್ನನ್ನು ನಾನು ನಿನ್ನ ಮನೆಗೆ ಮರಳಿಸಿಲ್ಲ. ಆದರೆ ನನ್ನ ಮಾತನ್ನು ಆಲಿಸಲು ಮತ್ತು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸಾಯಿತಲ್ಲ, ಆ ಮನಸ್ಸನ್ನು ನಾನು ಇಷ್ಟಪಡುತ್ತೇನೆ. ನಡೆದ ಘಟನೆ ನಮ್ಮಿಬ್ಬರ ನಡುವೆಯೇ ಇರಲಿ. ನಾಳೆ ಮದುವೆ ಮಂಪಟದಲ್ಲಿ ಭೇಟಿಯಾಗೋಣ..”
   ವಿಶಾಲ್ ಶಿವ್ ಪ್ರಭು ನಿರ್ದೇಶಿಸಿರುವ ‘ಶರಿಗಳ್ ಮಾತ್ರಂ' (sharikal  matram) ಎಂಬ 17 ನಿಮಿಷಗಳ ಮಲಯಾಳಂ ಕಿರುಚಿತ್ರದ ದೃಶ್ಯಗಳಿವು. ಗೆಳೆಯ ಇರ್ಶಾದ್ ಬೈರಿಕಟ್ಟೆ ಕಳುಹಿಸಿಕೊಟ್ಟ ಈ ಕಿರುಚಿತ್ರವು ತನ್ನ ಭಾವುಕತೆಯಿಂದಾಗಿ ಮತ್ತೆ ಮತ್ತೆ ಕಾಡುತ್ತದೆ. ನಿಜವಾಗಿ, ಪ್ರೀತಿ-ಪ್ರೇಮ, ಓಡಿ ಹೋಗುವುದು.. ಇವೆಲ್ಲ ಇವತ್ತಿನ ದಿನಗಳಲ್ಲಿ ಹೊಸ ವಿಷಯವಲ್ಲ. ಅದನ್ನು ನಾವು - ಅವರು ಎಂದು ವಿಂಗಡಿಸಬೇಕಾದ ಅಗತ್ಯವೂ ಇಲ್ಲ. ಹೆಣ್ಣು-ಗಂಡು ನಡುವಿನ ಆಕರ್ಷಣೆಗೆ ಧರ್ಮಾತೀತವಾದ ಪ್ರಕೃತಿ ಸಹಜ ಕಾರಣಗಳಿವೆ. ಆದರೆ ಈ ವಾಸ್ತವವನ್ನು ನಿರ್ಲಕ್ಷಿಸುವ ಮಂದಿ ಇಂಥ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುತ್ತಾರೆ. ಯಾವ ಧರ್ಮಕ್ಕೆ ಎಷ್ಟು ಲಾಭ-ನಷ್ಟ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಜೋಡಿಗಳನ್ನು ಹುಡುಕುವುದಕ್ಕಾಗಿ ತಂಡಗಳ ರಚನೆಯಾಗುತ್ತದೆ. ಒಂದು ರೀತಿಯ ಗದ್ದಲ, ಹೇಳಿಕೆ- ಪ್ರತಿ ಹೇಳಿಕೆಗಳ ನಡುವೆ ಪ್ರಕರಣ ಮಾಧ್ಯಮಗಳಲ್ಲೂ ಜೀವಂತ ಇರುತ್ತದೆ. ಆದರೆ ಇಂಥ ಪ್ರಕರಣಗಳಿಗೆ ಇನ್ನೊಂದು ಮುಖವಿರುತ್ತದೆ. ಅದುವೇ ಜೋಡಿಗಳ ಹೆತ್ತವರದ್ದು. ಮುಖ್ಯವಾಗಿ ಹೆಣ್ಣಿನ ಮನೆಯವರು ಇಂಥ ಸಂದರ್ಭಗಳಲ್ಲಿ ತೀವ್ರವಾಗಿ ಕುಗ್ಗಿ ಹೋಗಿರುತ್ತಾರೆ. ಹೆತ್ತು ಹೊತ್ತು ಬೆಳೆಸಿದ, ಮುದ್ದಾಡಿದ ಮಗುವೊಂದು ಕೈಯಿಂದ ಜಾರಿಹೋದ ಅನುಭವ. ಬಂಧುಗಳು ದೂಷಿಸುತ್ತಾರೆ. ನೆರೆಕರೆಯವರು ತಲೆಗೊಂದು ಮಾತಾಡುತ್ತಾರೆ. ಕಚೇರಿ, ಮಾರುಕಟ್ಟೆ, ಅಲ್ಲಿ-ಇಲ್ಲಿ.. ಎಲ್ಲೆಡೆಯೂ ಅವಮಾನಿಸಿದಂಥ ಅನುಭವವಾಗುತ್ತದೆ. ಎಲ್ಲಕ್ಕಿಂತ, ತಾನು ಈ ವರೆಗೆ ಇಷ್ಟು ಪ್ರೀತಿಯಿಂದ ಬೆಳೆಸಿದ ಮಗು ಹೀಗೆ ಮಾಡಿತಲ್ಲ ಎಂಬ ನೋವು ಮತ್ತೆ ಮತ್ತೆ ಹೆತ್ತವರನ್ನು ಚುಚ್ಚುತ್ತಿರುತ್ತದೆ. ನಿಜವಾಗಿ, ಭಾವುಕತೆ ಕೊಡುವ ನೋವು ಇತರೆಲ್ಲ ನೋವುಗಳಿಗಿಂತ ಹೆಚ್ಚು ತೀವ್ರವಾದುದು. ಹಾಗಂತ, ಮಕ್ಕಳೇ ತಪ್ಪು, ಹೆತ್ತವರೇ ಸರಿ ಎಂದಲ್ಲ. ತಮ್ಮ ಪ್ರೇಮ ಪ್ರಕರಣವನ್ನು ಹೆತ್ತವರ ಮುಂದೆ ಹೇಳುವ ಹೊಣೆಗಾರಿಕೆ ಮಕ್ಕಳ ಮೇಲೆ ಇರುವಂತೆಯೇ ಅವರನ್ನು ತಾಳ್ಮೆಯಿಂದ ಆಲಿಸುವ ಹೊಣೆಗಾರಿಕೆ ಹೆತ್ತವರ ಮೇಲೂ ಇದೆ. ತನ್ನ ಮಕ್ಕಳು ತಾನು ಹೇಳಿದಂತೆ ಕೇಳಬೇಕು ಎಂಬ ಅಧಿಕಾರ ಪ್ರಜ್ಞೆಯಿಂದಾಗಿ ಅನೇಕ ಬಾರಿ ಹೆತ್ತವರು ಅನಾಹುತಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅದೇ ವೇಳೆ, ಇತರೆಲ್ಲ ವಿಷಯಗಳನ್ನು ಹೆತ್ತವರ ಮುಂದಿಡುವ ಮಕ್ಕಳು ಪ್ರೇಮ ಪ್ರಕರಣವನ್ನು ಮುಚ್ಚಿಡುವುದೇ ಹೆಚ್ಚು.
   ಜಗತ್ತು ಆಧುನಿಕವಾಗಿದೆ ಎಂದು ನಾವೆಷ್ಟೇ ಹೇಳಿಕೊಂಡರೂ ಓರ್ವ ತಂದೆಗೆ ತನ್ನ ಮಗಳು ಯಾವಾಗಲೂ ಪುಟ್ಟ ಮಗುವೇ. ಆ ಮಗು ತನ್ನ ಭಾವನೆಯಂತೆ ಬದುಕಬೇಕು, ಸುಖವಾಗಿರಬೇಕು, ನಗುನಗುತ್ತಿರಬೇಕು, ಅಪ್ಪನನ್ನು ಕಾಡಿಸುತ್ತಿರಬೇಕು.. ಎಂದೆಲ್ಲಾ ಆತ ಆಸೆ ಪಡುತ್ತಿರುತ್ತಾನೆ. ಕೂಲಿ ಕೆಲಸ ಮಾಡಿಯೋ ರಿಕ್ಷಾ ಚಲಾಯಿಸಿಯೋ, ಕಚೇರಿಯಿಂದಲೋ ಸಂಜೆ ಮನೆಗೆ ಹೋದಾಗ ಅಪ್ಪನನ್ನು ಸ್ವಾಗತಿಸುವುದು ಮಗಳೇ. ನೀರು ಕೊಡುವುದು ಮಗಳೇ. ದಣಿವಾರಿಸಿಕೊಳ್ಳುವಂತೆ, ಸ್ನಾನ ಮಾಡುವಂತೆ, ಚಾ ಕುಡಿಯುವಂತೆ.. ಒತ್ತಾಯಿಸುವುದೆಲ್ಲ ಮಗಳೇ. ಮಗಳೆಂದರೆ ಮನೆಯ ದೀಪ. ಆ ದೀಪದ ಬೆಳಕಿನಲ್ಲಿ ಮನೆ ಖುಷಿ ಖುಷಿಯಾಗಿರುತ್ತದೆ. ಬಹುಶಃ ಇಂಥ ಮಗು ಮನೆಯಲ್ಲಿ ಹೇಳದೇ ಕೇಳದೇ ಹೊರಟು ಹೋಗುವುದನ್ನು ಯಾವ ಹೆತ್ತವರೂ ಜೀರ್ಣಿಸುವುದಕ್ಕೆ ಸಾಧ್ಯವಿಲ್ಲ. ತಮ್ಮ ಅಮೂಲ್ಯವಾದುದನ್ನು ಯಾರೋ ಕಿತ್ತುಕೊಂಡು ಹೋದರು ಎಂಬ ಭಾವದಲ್ಲಿ ಅಥವಾ ತನ್ನ ಮಗು ತನಗೆ ಮೋಸ ಮಾಡಿತು ಎಂಬ ನೋವಿನಲ್ಲಿ ಮನೆ ಮೌನವಾಗಿ ಬಿಡುತ್ತದೆ. ಅಂದಹಾಗೆ, ಮಕ್ಕಳ ಮೇಲೆ ಹೆತ್ತವರು ತಮ್ಮ ಇಚ್ಛೆಯನ್ನು ಹೇರುವುದು ತಪ್ಪೇ ಆಗಿರಬಹುದು. ತಮ್ಮ ಮೂಗಿನ ನೇರಕ್ಕೆ ಅವರು ಬದುಕಬೇಕು ಎಂದು ಬಯಸುವುದನ್ನು ಪ್ರಕೃತಿ ವಿರೋಧಿ ಎಂದೂ ಹೇಳಬಹುದು. ಆದರೆ ಈ ತಪ್ಪು-ಒಪ್ಪುಗಳ ಆಚೆಗೆ ಭಾವನಾತ್ಮಕ ಸಂಬಂಧವೊಂದು ಹೆತ್ತವರು ಮತ್ತು ಮಕ್ಕಳ ನಡುವೆ ಇದೆ. ಆ ಸಂಬಂಧ ಎಷ್ಟು ಗಾಢವಾದುದೆಂದರೆ ಈ ಸ್ವಾತಂತ್ರ್ಯ, ಅಧಿಕಾರ, ಒಪ್ಪು-ತಪ್ಪು ಎಂಬೆಲ್ಲ ವಿಧಿ ನಿಯಮಗಳನ್ನೇ ಸಡಿಲಗೊಳಿಸುವಷ್ಟು. ತಂದೆಯ ಮಡಿಲಲ್ಲಿ ತಲೆಯಿಟ್ಟು ಮಗಳು ತನ್ನ ಇಚ್ಛೆಯನ್ನು ಹೇಳಿಕೊಂಡರೆ ಯಾವ ಅಪ್ಪನೂ ಕರಗದಿರಲಾರ ಅಥವಾ ಮಗಳನ್ನು ಆಲಂಗಿಸಿ ತನ್ನ ಎದೆ ಮಿಡಿತವನ್ನು ಅಪ್ಪ ಹೇಳಿಕೊಂಡರೆ ಯಾವ ಮಗಳೂ ಕರಗದಿರಲಾರಳು. ‘ಶರಿಗಳ್ ಮಾತ್ರಂ’ ಚಿತ್ರದಲ್ಲಿ ಕಾರು ಚಾಲಕ ಹೇಳುವ ಒಂದು ಡಯಲಾಗ್ ಇದೆ -
    “ತಾನು ಮಾಡಿದ್ದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಒಂದಂತೂ ಗೊತ್ತಿದೆ, ಹೆತ್ತವರನ್ನು ದುಃಖಕ್ಕೀಡು ಮಾಡುವ ಯಾವ ಸರಿಗಳೂ ನನಗೆ ತಪ್ಪುಗಳಾಗಿವೆ. ಅವರನ್ನು ಸಂತಸಪಡಿಸುವ ಯಾವ ತಪ್ಪುಗಳೂ ನನಗೆ ಸರಿಗಳಾಗಿವೆ. ಸರಿಗಳು ಮಾತ್ರ..”
    ಇದು ನನ್ನನ್ನು ಮತ್ತೆ ಮತ್ತೆ ಕಾಡಿತು. ಭಾವುಕಗೊಳಿಸಿತು. ತಾರ್ಕಿಕ ಪ್ರಶ್ನೆಗಳೇನೇ ಇದ್ದರೂ..

Monday, November 17, 2014

ಹೊಟ್ಟೆ ತುಂಬಿಸುವ ಬದಲು ಹೊಟ್ಟೆ ಸೀಳುವುದನ್ನೇ ಪರಿಹಾರ ಅನ್ನುತ್ತೇವಲ್ಲ..

   ಸಂತಾನಹರಣ ಚಿಕಿತ್ಸೆಯಲ್ಲಿ ವ್ಯಾಸೆಕ್ಟಮಿ ಮತ್ತು ಟ್ಯುಬೆಕ್ಟಮಿ ಎಂಬ ಎರಡು ವಿಧಾನಗಳಿವೆ. ವ್ಯಾಸೆಕ್ಟಮಿ ಪುರುಷರಿಗೆ ಸಂಬಂಧಿಸಿದ್ದಾದರೆ ಟ್ಯುಬೆಕ್ಟಮಿ ಮಹಿಳೆಯರಿಗೆ ಸಂಬಂಧಿಸಿದ್ದು. ಇದರಲ್ಲಿ ಪುರುಷರ ಸಂತಾನಹರಣ ಚಿಕಿತ್ಸೆಯು ತೀರಾ ಸರಳ, ಸುಲಭ ಮತ್ತು ಕಡಿಮೆ ಅವಧಿಯದ್ದು. ಇದಕ್ಕೆ 5 ನಿಮಿಷಗಳಷ್ಟೇ ಸಾಕಾಗುತ್ತದೆ. ಮಾತ್ರವಲ್ಲ, ಎರಡು ಗಂಟೆಗಳ ವಿರಾಮದಲ್ಲಿ ಎಲ್ಲವೂ ಕೊನೆಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಟ್ಯುಬೆಕ್ಟಮಿ ಸರಳವಲ್ಲ. ಕೆಲವೊಮ್ಮೆ ಮಹಿಳೆಯರು 8 ದಿನಗಳ ವರೆಗೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ತುಸು ದೀರ್ಘ ಅವಧಿಯ ವಿರಾಮ ಬೇಕಾಗುತ್ತದೆ. ಅಲ್ಲದೇ ಪುಟ್ಟ ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಯೂ ಇರುತ್ತದೆ. ಇಷ್ಟಿದ್ದೂ, ಸಂತಾನಹರಣ ಚಿಕಿತ್ಸೆಗೆ ಮಹಿಳೆಯರೇ ಯಾಕೆ ಒಳಗಾಗುತ್ತಿದ್ದಾರೆ? 2012ರಲ್ಲಿ ಸಂತಾನಹರಣ ಚಿಕಿತ್ಸೆಗೆ ಒಳಗಾದವರ ಸಂಖ್ಯೆ 46 ಲಕ್ಷ. ಆದರೆ ಇದರಲ್ಲಿ ಪುರುಷರ ಅನುಪಾತ ಒಂದು ಶೇಕಡಾಕ್ಕಿಂತಲೂ ಕಡಿಮೆ. 2012-13ರಲ್ಲಿ 0.85% ಪುರುಷರು ಮಾತ್ರ ವ್ಯಾಸೆಕ್ಟಮಿ ಮಾಡಿಸಿಕೊಂಡಿದ್ದಾರೆ. 2013-14ರಲ್ಲಂತೂ ಈ ಅನುಪಾತ 0.44%ಕ್ಕೆ ಕುಸಿದಿದೆ (ದಿ ಹಿಂದೂ 2014 ನವಂಬರ್ 13 ). ಅಂದರೆ ಸಂತಾನಹರಣ ಚಿಕಿತ್ಸೆಗೆ ಒಳಗಾಗುವವರಲ್ಲಿ ಶೇ. 99ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ. ಯಾಕೆ ಹೀಗೆ? ಒಂದು ಕಡೆ ಹೆಣ್ಣು ಗರ್ಭಧರಿಸಬೇಕು, 9 ತಿಂಗಳ ವರೆಗೆ ದೈಹಿಕವಾಗಿ ವಿವಿಧ ಏರಿಳಿತಗಳನ್ನು ಅನುಭವಿಸಬೇಕು, ಕೊನೆಗೆ ಸಂತಾನ ಹರಣ ಚಿಕಿತ್ಸೆಗೂ ಆಕೆಯದೇ ದೇಹ ಬೇಕು. ಅದೇ ವೇಳೆ ಪುರುಷ ಗರ್ಭಧರಿಸುವುದಿಲ್ಲ ಎಂದು ಮಾತ್ರವಲ್ಲ, ತನ್ನ ದೇಹವನ್ನು ವ್ಯಾಸೆಕ್ಟಮಿಗೆ ಒಡ್ಡುವುದೂ ಇಲ್ಲ. ಇಲ್ಲೂ ಒಂದು ಕುತೂಹಲದ ಸಂಗತಿಯಿದೆ. ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಬಡತನ ರೇಖೆಗಿಂತ ಕೆಳಗಿನ (BPL) ಮಹಿಳೆಯರಿಗೆ ಸರಕಾರವು 600 ರೂಪಾಯಿಯನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಬಡತನ ರೇಖೆಗಿಂತ ಮೇಲಿನ (APL) ಮಹಿಳೆಯರಿಗೆ 250 ರೂಪಾಯಿಯನ್ನು ನೀಡುತ್ತದೆ. ಅದೇ ವೇಳೆ ಇಂಥ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ BPL, APL ಎಂದು ನೋಡದೆಯೇ ಸರಕಾರ 1,100 ರೂಪಾಯಿಯನ್ನು ನೀಡುತ್ತದೆ (ದಿ ಹಿಂದೂ 2014 ನವಂಬರ್ 13 ). ಯಾಕೆ ಈ ಅಸಮಾನತೆ, ಲಿಂಗ ತಾರತಮ್ಯ? ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆಗಳ ಬಗ್ಗೆ ಧಾರಾಳ ಮಾತುಗಳು ಕೇಳಿ ಬರುತ್ತಿರುವ ಈ ದಿನಗಳಲ್ಲೂ ಪುರುಷರಿಗೆ 1,100 ರೂಪಾಯಿ ಮತ್ತು ಮಹಿಳೆಯರಿಗೆ 600 ರೂಪಾಯಿ ಎಂದು ನಿಗದಿಪಡಿಸಿರುವ ಔಚಿತ್ಯವೇಕೆ ಪ್ರಶ್ನೆಗೀಡಾಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆಯಲ್ಲಿ ಲಿಂಗ ಸಮಾನತೆಗಾಗಿ ಎಲ್ಲೂ ಒತ್ತಾಯಗಳು ಕೇಳಿ ಬರುತ್ತಿಲ್ಲವೇಕೆ? ‘ಮಹಿಳೆಯರು ಸಂತಾನಹರಣ ಚಿಕಿತ್ಸೆಗೆ ಒಳಗಾಗುವುದೇ ಬೇಡ, ಗರ್ಭಧರಿಸುವುದರಿಂದ ವಿನಾಯಿತಿ ಪಡೆದಿರುವ ಪುರುಷರೇ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲಿ’ ಎಂಬ ಕೂಗೇಕೆ ಮೊಳಗುತ್ತಿಲ್ಲ? ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವವರು ಗ್ರಾವಿೂಣ ಪ್ರದೇಶದ ಇಂಗ್ಲಿಷು, ಆಧುನಿಕತೆ, ಥಳಕು-ಬಳಕು ಗೊತ್ತಿಲ್ಲದ ಬಡ ಮಹಿಳೆಯರು ಎಂಬುದೇ ಈ ಮೌನಕ್ಕೆ ಕಾರಣವೇ ಅಥವಾ ಇದರ ಹಿಂದೆ ಇನ್ನೇನಾದರೂ ಉದ್ದೇಶಗಳಿವೆಯೇ? ಒಂದೋ ಸಂತಾನಹರಣ ಚಿಕಿತ್ಸೆಯೇ ರದ್ದುಗೊಳ್ಳಬೇಕು ಅಥವಾ ಇದರಲ್ಲಿ ಲಿಂಗ ಸಮಾನತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಒತ್ತಾಯಗಳು ಛತ್ತೀಸ್‍ಗಢದ ಸಾಮೂಹಿಕ ಹತ್ಯೆಯ ಬಳಿಕವೂ ಈವರೆಗೂ ಕೇಳಿ ಬಂದಿಲ್ಲವಲ್ಲ, ಯಾಕಾಗಿ? ಲಿಂಗ ಸಮಾನತೆಯ ಕೂಗುಗಳೂ ಸೆಲೆಕ್ಟಿವ್ ಆಗುತ್ತಿವೆಯೇ? ಹೆಣ್ಣು-ಗಂಡಿನ ನಡುವೆ ಶಿಕ್ಷಣ, ಉದ್ಯೋಗ, ಆಡಳಿತ ಸಹಿತ ಯಾವುದರಲ್ಲೂ ಲಿಂಗ ತಾರತಮ್ಯ ಸಲ್ಲದು ಎಂಬ ವಾದಗಳೆಲ್ಲವೂ ದಶಕಗಳಿಂದ ಜೀವಂತವಿರುವ ಈ ತಾರತಮ್ಯವನ್ನು ನಿರ್ಲಕ್ಷಿಸಿರುವುದೇಕೆ? ಅಲ್ಲದೇ, 2003ರಿಂದ 12ರ ನಡುವೆ ಸಂತಾನಹರಣ ಚಿಕಿತ್ಸೆಗೊಳಗಾದವರಲ್ಲಿ 1,434 ಮಂದಿ ಸಾವಿಗೀಡಾಗಿದ್ದಾರೆ. ಆದ್ದರಿಂದಲೇ ಸಂತಾನಹರಣ ಚಿಕಿತ್ಸೆ ಎಷ್ಟು ಸುರಕ್ಷಿತ ಎಂಬುದು ಚರ್ಚಾರ್ಹವೆನಿಸುವುದು. ಆದರೆ ಈ ಬಗ್ಗೆ ಎಲ್ಲೂ ಚರ್ಚೆಗಳೇ ಆಗುತ್ತಿಲ್ಲ. ವರ್ಷಂಪ್ರತಿ ಲಕ್ಷಾಂತರ ಮಂದಿಯನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಮತ್ತು ಇವರಲ್ಲಿ ದೊಡ್ಡದೊಂದು ಸಂಖ್ಯೆಯನ್ನು ಬಲವಂತ, ಆಮಿಷಗಳಿಂದ ಚಿಕಿತ್ಸಾ ಕೊಠಡಿಗೆ ಕರೆ ತರಲಾಗುತ್ತದೆ ಎಂಬುದು ಗೊತ್ತಿದ್ದೂ ಅದು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣವಾಗಿ ಈಗಲೂ ಗುರುತಿಸಿಕೊಳ್ಳುತ್ತಿಲ್ಲ. ಬಿಹಾರದ ಅರಾರಿಯ ಜಿಲ್ಲೆಯ ಶಾಲಾ ಕಟ್ಟಡದಲ್ಲಿ ಎರಡು ಗಂಟೆಯೊಳಗೆ 53 ಮಂದಿಯ ಸಂತಾನ ಹರಣ ಚಿಕಿತ್ಸೆ ನಡೆಸಿದ ಬಗ್ಗೆ ಮತ್ತು ಅವರನ್ನು ನೆಲದಲ್ಲಿ ಮಲಗಿಸಿದುದರ ಬಗ್ಗೆ 2012 ಎಪ್ರಿಲ್‍ನಲ್ಲಿ ಸುಪ್ರೀಮ್ ಕೋರ್ಟಿಗೆ ದೂರನ್ನು ಸಲ್ಲಿಸಲಾಗಿತ್ತು. ಆ ಚಿಕಿತ್ಸೆಯ ಕುರಿತಂತೆ ವೀಡಿಯೋಗಳೂ ಬಿಡುಗಡೆಯಾಗಿದ್ದುವು. ಆ 53 ಮಂದಿ ಮಹಿಳೆಯರನ್ನು ಬೆದರಿಕೆ ಹಾಕಿ ಬಲವಂತದಿಂದ ಶಾಲಾ ಕಟ್ಟಡದೊಳಕ್ಕೆ ಕರೆ ತರಲಾಗಿತ್ತು ಮತ್ತು ಟಾರ್ಚ್‍ಲೈಟ್ ಮೂಲಕ ಚಿಕಿತ್ಸೆ ನಡೆಸಲಾಗಿತ್ತು ಎಂದು ದೇವಿಕಾ ಬಿಸ್ವಾಸ್ ಎಂಬವರು ಕೋರ್ಟಿನಲ್ಲಿ ಹೇಳಿಕೆಯಿತ್ತಿದ್ದರು. ಈ ಬಗ್ಗೆ ಎರಡು ತಿಂಗಳ ಒಳಗೆ ಉತ್ತರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಮ್ ಕೋರ್ಟ್ ಆದೇಶವನ್ನೂ ನೀಡಿತ್ತು. ಸಂತಾನಹರಣ ಚಿಕಿತ್ಸೆಗೆ ಒಳಗಾಗದಿದ್ದರೆ ರೇಶನ್ ಕಾರ್ಡ್ ಸಹಿತ ಸರಕಾರಿ ಸೌಲಭ್ಯಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರ ಭಾರತದಲ್ಲಿ ಮುಖ್ಯವಾಗಿ ಆದಿವಾಸಿ, ಬುಡಕಟ್ಟು ಜನಾಂಗಗಳ ಮಹಿಳೆಯರನ್ನು ಬೆದರಿಸಲಾಗುತ್ತದೆ ಎಂಬ ವರದಿಗಳೂ ಈ ಹಿಂದೆ ಬಂದಿದ್ದುವು. ಕಾರ್, ಫ್ರೀಜರ್‍ಗಳ ಆಮಿಷ ಒಡ್ಡಿದ ಪ್ರಕರಣಗಳೂ ಧಾರಾಳ ಇವೆ. ಮಾತ್ರವಲ್ಲ, ಒಂದು ವರ್ಷದಲ್ಲಿ ಇಷ್ಟು ಸಂಖ್ಯೆಯ ಸಂತಾನ ಹರಣ ಚಿಕಿತ್ಸೆ ನಡೆಸಬೇಕು ಎಂಬ ಗುರಿಯನ್ನು ಆರೋಗ್ಯ ಅಧಿಕಾರಿಗಳಿಗೆ ನಿಗದಿಪಡಿಸಲಾಗುತ್ತದೆ ಮತ್ತು ಗುರಿ ಮುಟ್ಟದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆಯನ್ನೂ ಹಾಕಲಾಗುತ್ತದೆ ಎಂದು 2013 ಜೂನ್ 20ರಂದು ಆ್ಯಂಡ್ರ್ಯೂ ಮೆಕ್‍ಸ್ಕಿಲ್ ಎಂಬವರು, ‘ಇನ್‍ಸೈಡ್ ಇಂಡಿಯಾಸ್ ಸ್ಟಿರಿಲೈಸೇಶನ್ ಕ್ಯಾಂಪ್’ ಎಂಬ ಲೇಖನದಲ್ಲಿ ಗುಜರಾತನ್ನು ಉಲ್ಲೇಖಿಸಿ ಬರೆದಿದ್ದರು. ಆದರೆ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಗಂಭೀರ ಚರ್ಚೆ, ಅಧ್ಯಯನಕ್ಕೆ ಒಳಪಟ್ಟೇ ಇಲ್ಲ. ಕಾರಣವೇನು? ಈ ಚಿಕಿತ್ಸೆಗೆ ಒಳಗಾಗುವವರಲ್ಲಿ ಬಡವರೇ ಹೆಚ್ಚಿರುವುದರಿಂದ ಈ ಎಲ್ಲ ವಿಷಯಗಳು ಚರ್ಚೆಗೆ ಬಂದಿಲ್ಲವೋ ಅಥವಾ ಆ ಬಗ್ಗೆ ಚರ್ಚಿಸದಂತೆ ತಡೆಯುವ ವ್ಯವಸ್ಥಿತ ಹುನ್ನಾರ ಇದೆಯೋ? ಬಡವರ ಮಕ್ಕಳನ್ನು ಆಮಿಷವೊಡ್ಡಿ ಬಾವಿಗೆ ದೂಡುವ ವ್ಯವಸ್ಥಿತ ವಿಧಾನವಾಗಿರ ಬಹುದೇ ಈ ಸಂತಾನಹರಣ ಚಿಕಿತ್ಸೆ?
   ಜನಸಂಖ್ಯಾ ಸ್ಫೋಟ ಎಂಬ ಭೀತಿಕಾರಕ ಪದ ಸೃಷ್ಟಿಯಾದದ್ದು ಬಹುತೇಕ 19ನೇ ಶತಮಾನದಲ್ಲಿ. ಜನಸಂಖ್ಯೆಯ ಹೆಚ್ಚಳದಿಂದಾಗುವ ತೊಂದರೆಗಳ ಬಗ್ಗೆ ಬರಹ, ಡಾಕ್ಯುಮೆಂಟರಿಗಳು 1960ರಲ್ಲಿ ಬರತೊಡಗಿದುವು. ಮುಖ್ಯವಾಗಿ ಆಹಾರದ ಕೊರತೆಯು ಈ ಜಗತ್ತನ್ನು ತೀವ್ರವಾಗಿ ಕಾಡಲಿದೆ ಎಂಬ ಪ್ರಚಾರವನ್ನು ನಡೆಸಲಾಯಿತು. ಈ ವಾದಕ್ಕೆ ರೆವರೆಂಡ್ ಥಾಮಸ್ ಮುಲ್ತಸ್ ಎಂಬವರ ಚಿಂತನೆಗಳನ್ನೇ ಪ್ರಮುಖ ಆಧಾರವಾಗಿ ಬಳಸಿಕೊಳ್ಳಲಾಗಿತ್ತು. ಜನಸಂಖ್ಯೆಯನ್ನು ಅಪಾಯವಾಗಿ ಚಿತ್ರಿಸುವ ಚಿಂತನೆಗಳಿಗೆ ಇವತ್ತಿಗೂ ಆಧಾರ ಥಾಮಸ್‍ರ ಅಭಿಪ್ರಾಯಗಳೇ. ‘ಜನನ ಪ್ರಮಾಣವು ಆಹಾರ ಉತ್ಪಾದನಾ ಪ್ರಮಾಣಕ್ಕಿಂತ ಅಧಿಕವಾಗಿದೆ’ ಎಂದು ಥಾಮಸ್ ಹೇಳಿದ್ದ. ಆದರೆ ಹಸಿರು ಕ್ರಾಂತಿಯು ಥಾಮಸ್‍ರ ಅಭಿಪ್ರಾಯವನ್ನು ಸುಳ್ಳಾಗಿಸಿದಾಗ (ಆಹಾರ ಉತ್ಪಾದನೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾದಾಗ) ಪಾಶ್ಚಾತ್ಯ ಜಗತ್ತು ಹೊಸ ಭೀತಿಯನ್ನು ಅದಕ್ಕೆ ಸೇರಿಸಿದುವು. ಅಧಿಕ ಜನಸಂಖ್ಯೆಯು ಪರಿಸರ ಅಸಮತೋಲನೆ, ಅಭಿವೃದ್ಧಿ ಕುಸಿತ ಮತ್ತು ರಾಜಕೀಯ ಅನಿಶ್ಚಿತತೆಗೆ ಕಾರಣವಾಗಬಲ್ಲುದು ಎಂದು ಅವು ಅಭಿಪ್ರಾಯಪಟ್ಟವು. ಇದಕ್ಕೆ ಪೂರಕವಾಗಿ ಅಮೇರಿಕ, ಬ್ರಿಟನ್, ಜಪಾನ್, ಸ್ವೀಡನ್‍ಗಳು ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳಿಗೆ ನೆರವನ್ನು ನೀಡತೊಡಗಿದುವು. ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತು ಅಮೇರಿಕದ ಫೋರ್ಡ್, ರಾಕ್‍ಫೆಲ್ಲರ್ ಫೌಂಡೇಶನ್‍ಗಳು ಸಂತಾನ ನಿಯಂತ್ರಣದ ಅಗತ್ಯ, ಅನಿವಾರ್ಯತೆಗಳ ಬಗ್ಗೆ ಭಾಷಣ ಬಿಗಿಯತೊಡಗಿದುವು. ಅಮೇರಿಕದ ಜೀವಶಾಸ್ತ್ರಜ್ಞ ಪೌಲ್ ಎಹ್‍ರಿಚ್‍ರು ‘ಪಾಪ್ಯುಲೇಶನ್ ಬಾಂಬ್' ಎಂಬ ಬಹು ಪ್ರಸಿದ್ಧ ಕೃತಿಯನ್ನು 1968ರಲ್ಲಿ ಬರೆದರು.ಜನಸಂಖ್ಯೆಯ ಹೆಚ್ಚಳವು ಸಂಪತ್ತಿನ ಸವೆತಕ್ಕೆ ಮತ್ತು ಕ್ಯಾಪಿಟಾಲಿಸಮ್ ನ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂಬುದು ಪಾಶ್ಚಾತ್ಯರ ಭಯವಾಗಿತ್ತು. ಹೀಗೆ ಜನಸಂಖ್ಯಾ ನಿಯಂತ್ರಣಕ್ಕಾಗಿ ತೃತೀಯ ರಾಷ್ಟ್ರಗಳ ಮೇಲೆ ಪಾಶ್ಚಾತ್ಯ ಜಗತ್ತಿನ ಒತ್ತಡಗಳು ಹೆಚ್ಚುತ್ತಾ ಇದ್ದ ಸಂದರ್ಭದಲ್ಲೇ ಭಾರತದಲ್ಲಿ ತುರ್ತು ಸ್ಥಿತಿ ಘೋಷಣೆಯಾದದ್ದು. ಬಹುಶಃ ಈ ತುರ್ತುಸ್ಥಿತಿಗೂ ಪಾಶ್ಚಾತ್ಯ ಜಗತ್ತಿನ ಒತ್ತಡಗಳಿಗೂ ಪರಸ್ಪರ ಸಂಬಂಧ ಇರಬಹುದೇ ಎಂಬ ಅನುಮಾನ ಈಗಲೂ ಇದೆ. 1975-77ರ ತುರ್ತುಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ಮತ್ತು ಮಗ ಸಂಜಯ್ ಗಾಂಧಿಯವರು ಅತ್ಯಂತ ಮುತುವರ್ಜಿಯಿಂದ ಜಾರಿಗೆ ತಂದದ್ದು ಸಂತಾನ ನಿಯಂತ್ರಣ ಕಾನೂನನ್ನು. ಮುಖ್ಯವಾಗಿ ಪುರುಷರನ್ನು ಬೀದಿಯಿಂದ ಬಲವಂತದಿಂದ ಎತ್ತಿಕೊಂಡು ಹೋಗಿ ವ್ಯಾಸೆಕ್ಟಮಿಗೆ ಗುರಿಪಡಿಸಲಾಯಿತು. ತುರ್ತು ಸ್ಥಿತಿಯ ಎರಡು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಮಂದಿಯ ಮೇಲೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಭಾರತದ ಈ ದಿಟ್ಟ ಕ್ರಮಕ್ಕಾಗಿ ವಿಶ್ವಬ್ಯಾಂಕ್‍ನ ಅಧ್ಯಕ್ಷ ರಾಬರ್ಟ್ ಮೆಕ್‍ನಾಮರ್ ಅವರು ಇಂದಿರಾ ಗಾಂಧಿಯವರನ್ನು ಅಭಿನಂದಿಸಿದ್ದರು.
   "ತುರ್ತುಸ್ಥಿತಿಯ ಸಂದರ್ಭದಲ್ಲಿ ಜಾರಿಗೊಳಿಸಲಾದ ಅತಿ ಅಪಾಯಕಾರಿ ಪ್ರಯೋಗಗಳಲ್ಲಿ ಬಲವಂತದ ಸಂತಾನ ಹರಣ ಚಿಕಿತ್ಸೆಯೂ ಒಂದು. ಜನಸಂಖ್ಯೆಯು ನಿಯಂತ್ರಣ ವಿೂರಿ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಇಂಟರ್‍ನ್ಯಾಶನಲ್ ಮಾನಿಟರಿ ಫಂಡ್ (IMF) ಹಾಗೂ ವಿಶ್ವಬ್ಯಾಂಕ್‍ಗಳು ಭಾರತವನ್ನು ಆಗಾಗ ಎಚ್ಚರಿಸುತ್ತಲೇ ಇತ್ತು. ಆದರೆ ಭಾರತದ ರಾಜಕೀಯ ವಾತಾ ವರಣದಲ್ಲಿ ಜನನ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವುದು ಸುಲಭದ್ದಾಗಿರಲಿಲ್ಲ. ಹಾಗೊಂದು ವೇಳೆ ಜಾರಿಗೊಳಿಸಲು ಪ್ರಯತ್ನಿಸಿರುತ್ತಿದ್ದರೆ ಅಧಿಕಾರಕ್ಕೆ ಕುತ್ತು ಬರುವ ಸಾಧ್ಯತೆಯೂ ಇತ್ತು. ಹೀಗಿರುತ್ತಾ ತುರ್ತುಸ್ಥಿತಿ ಘೋಷಣೆಯಾದಾಗ IMF ಮತ್ತು ವಿಶ್ವಬ್ಯಾಂಕ್‍ಗಳು ಚುರುಕಾದುವು. ತನ್ನ ಬೇಡಿಕೆಯನ್ನು ಜಾರಿಗೊಳಿಸುವಂತೆ ಅವು ಇಂದಿರಾರ ಮೇಲೆ ಒತ್ತಡ ಹೇರಿದುವು. ಪಶ್ಚಿಮದ ಧನಿಕರನ್ನು ತೃಪ್ತಿಪಡಿಸುವುದಕ್ಕಾಗಿ ಇಂದಿರಾ ಮತ್ತು ಸಂಜಯ್ ಗಾಂಧಿಯವರು ಆ ಸಂದರ್ಭವನ್ನು ಬಳಸಿಕೊಂಡರು" ಎಂದು ‘ದಿ ಸಂಜಯ್ ಸ್ಟೋರಿ’ ಎಂಬ ವಿನೋದ್ ಮೆಹ್ತಾರ ಕೃತಿಯನ್ನು ವಿಮರ್ಶಿಸುತ್ತಾ ಡೇವಿಡ್ ಫ್ರಮ್ ಬರೆದಿದ್ದಾರೆ.
   ನಿಜವಾಗಿ, ಜನಸಂಖ್ಯೆಗೂ ಜನರ ಸಾಕ್ಷರತೆ, ಆರ್ಥಿಕ ಸ್ಥಿತಿಗೂ ಹತ್ತಿರದ ನಂಟಿದೆ. ಅತ್ಯಂತ ಹೆಚ್ಚು ಸಾಕ್ಷರರಿರುವ ಕೇರಳದಲ್ಲಿ ಅತಿ ಕಡಿಮೆ ಜನನ ಅನುಪಾತವಿದೆ. ಒಂದು ವೇಳೆ ಈ ಸತ್ಯವನ್ನು ನಮ್ಮನ್ನಾಳುವವರು ಒಪ್ಪಿಕೊಂಡರೆ ಸಂತಾನ ನಿಯಂತ್ರಣ ಚಿಕಿತ್ಸೆಗೆ ಬದಲಿ ದಾರಿಯೊಂದು ಅವರೆದುರು ತೆರೆದುಕೊಳ್ಳುತ್ತದೆ. ಜನರಿಗೆ ಶಿಕ್ಷಣವನ್ನು ಮತ್ತು ಆರ್ಥಿಕವಾಗಿ ಚೇತರಿಕೆಯನ್ನು ಕೊಡಲು ಆಡಳಿತಗಾರರು ಶಕ್ತವಾದರೆ ಆ ಬಳಿಕ ಅಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ದುರಂತ ಏನೆಂದರೆ, ನಮ್ಮ ಸರಕಾರಗಳು ಬಡವರಿಗೆ ಹೊಟ್ಟೆ ತುಂಬುವಷ್ಟು ಊಟ ಕೊಡುವುದಿಲ್ಲ. ಅಕ್ಷರ ಕಲಿಕೆಗೆ ಏರ್ಪಾಡು ಮಾಡುವುದಿಲ್ಲ. ಅದರ ಬದಲು ಬಡವರ ಹೊಟ್ಟೆಯಲ್ಲಿರುವ ಮಕ್ಕಳನ್ನು ಬಲವಂತದಿಂದ ಕಸಿಯಲು ಪ್ರಯತ್ನಿಸುತ್ತದೆ. ನಿಜವಾಗಿ ಇದು ಜನರಿಗೆ ವ್ಯವಸ್ಥೆ ಮಾಡುವ ಕಡು ದ್ರೋಹ. ಯಾಕೆಂದರೆ, ಮೂಲಭೂತ ಅಗತ್ಯಗಳಾದ ಅಕ್ಷರ, ಆಹಾರ, ಆರೋಗ್ಯವನ್ನು ನೀಡುವ ಹೊಣೆಗಾರಿಕೆ ಸರಕಾರದ್ದು. ಆ ಹೊಣೆಗಾರಿಕೆಯಲ್ಲಿ ಸರಕಾರ ವೈಫಲ್ಯ ಕಂಡಾಗ ಅದರ ಅಡ್ಡ ಪರಿಣಾಮಗಳು ಸಮಾಜದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಆ ಅಡ್ಡ ಪರಿಣಾಮಗಳಿಗೆ ಹೊಟ್ಟೆ ಸೀಳುವುದು ಪರಿಹಾರ ಅಲ್ಲ. ಅದು ಕ್ರೌರ್ಯ. ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಅಸಮರ್ಥವಾದ ಸರಕಾರವೊಂದರಿಂದ ಮಾತ್ರ ಇಂಥ ಕ್ರೌರ್ಯಗಳನ್ನು ಪರಿಹಾರವಾಗಿ ಸೂಚಿಸಲು ಸಾಧ್ಯ. ಸಂತಾನ ನಿಯಂತ್ರಣ ಚಿಕಿತ್ಸೆ ಎಂಬುದು ವ್ಯವಸ್ಥೆಯ ಅಸಮರ್ಥತೆಗೆ ಹುಟ್ಟಿಕೊಂಡ ಕೂಸೇ ಹೊರತು ಅದು ಪರಿಹಾರ ಅಲ್ಲ. ಇದನ್ನು ಪರಿಹಾರವಾಗಿ ಪರಿಗಣಿಸಿದ್ದಕ್ಕಾಗಿ ಚೀನಾ ಇವತ್ತು ಪಶ್ಚಾತ್ತಾಪ ಪಡುತ್ತಿದೆ. ಜನರ ಜೀವನ ಮಟ್ಟವನ್ನು ಸುಧಾರಿಸುವ ಬದಲು ಜನರ ಹೊಟ್ಟೆ ಸೀಳುವುದನ್ನೇ ಪರಿಹಾರವೆಂದು ಹೇಳಿಕೊಟ್ಟ ಪಾಶ್ಚಾತ್ಯ ಚಿಂತನೆಗಳನ್ನು ಒಪ್ಪಿಕೊಂಡದ್ದಕ್ಕಾಗಿ ಅದು ಇವತ್ತು ಭಾರೀ ಬೆಲೆ ತೆರುತ್ತಿದೆ. ಆದರೂ ಭಾರತದಲ್ಲಿ ಈ ಕುರಿತಂತೆ ಬಲವಾದ ಜಾಗೃತಿ ಕಾರ್ಯಕ್ರಮಗಳೇನೂ ನಡೆಯುತ್ತಿಲ್ಲ. ಸಂತಾನವನ್ನೇ ಅಪಾಯಕಾರಿಯೆಂದು ಬಿಂಬಿಸುವ ಪ್ರಯತ್ನದಲ್ಲಿ ಇವತ್ತೂ ವ್ಯವಸ್ಥೆ ತಲ್ಲೀನವಾಗಿದೆ. ಇದನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಬೇಕಾದ ಮಾಧ್ಯಮಗಳು ಅನುಮಾನ ಮೂಡಿಸುವ ರೀತಿಯಲ್ಲಿ ಮೌನವಾಗಿವೆ. ಜಾಗತಿಕವಾಗಿ ನಡೆಯುವ ಒಟ್ಟು ಸಂತಾನ ನಿಯಂತ್ರಣ ಚಿಕಿತ್ಸೆಯಲ್ಲಿ ಶೇ. 37ರಷ್ಟು ಚಿಕಿತ್ಸೆಗಳು ಭಾರತದಲ್ಲೇ ನಡೆಯುತ್ತಿದ್ದರೂ ಮತ್ತು ಈ ಚಿಕಿತ್ಸೆಗೆ ಒಳಗಾಗುವವರಲ್ಲಿ 99%ಕ್ಕಿಂತಲೂ ಅಧಿಕ ಮಂದಿ ಮಹಿಳೆಯರೇ ಆಗಿದ್ದರೂ ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಲಿಂಗ ತಾರತಮ್ಯದ ಮಾತಾಡುತ್ತಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಹೆಸರಲ್ಲಿ ಪ್ರತಿಭಟನೆಗಳೂ ಕಾಣಿಸಿಕೊಳ್ಳುತ್ತಿಲ್ಲ.
  ಯಾಕೆ ಹೀಗೆ?

Monday, November 10, 2014

ನಂದಿತಾ ಸಾವಿನಲ್ಲಿ ‘ಅತ್ಯಾಚಾರ’ಕ್ಕೊಳಗಾದ ಮಾಧ್ಯಮ ಧರ್ಮ


    ಒಂದು ಘಟನೆಯ ಸುತ್ತ ಸುದ್ದಿ ತಯಾರಿಸುವಾಗ ಓರ್ವ ಪತ್ರಕರ್ತನ/ಳಲ್ಲಿ ಇರಲೇಬೇಕಾದ ಎಚ್ಚರಿಕೆಗಳು ಏನೆಲ್ಲ? ಪ್ರತಿ ಘಟನೆಗೂ ಒಂದಕ್ಕಿಂತ ಹೆಚ್ಚು ಆಯಾಮಗಳಿರುತ್ತವೆ. ಹತ್ತಾರು ತಿರುವುಗಳಿರುತ್ತವೆ. ಈ ಆಯಾಮ ಮತ್ತು ತಿರುವುಗಳನ್ನು ಗಮನದಲ್ಲಿಟ್ಟುಕೊಂಡೇ ಪತ್ರಕರ್ತ ಘಟನಾ ಸ್ಥಳಕ್ಕೆ ತಲುಪಬೇಕು. ಹಾಗಂತ, ಘಟನಾ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಒಂದೇ ಬಗೆಯ ವಾತಾವರಣ ಇರಬೇಕೆಂದೇನೂ ಇಲ್ಲ. ಸ್ಥಳೀಯರ ಅಭಿಪ್ರಾಯದಲ್ಲಿ ವ್ಯತ್ಯಾಸ ಇರಬಹುದು. ಹೇಳುವ ಶೈಲಿ, ಮಂಡಿಸುವ ವಾದ, ಹಾವಭಾವಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಇರಬಹುದು. ಇವರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು, ಸಂತ್ರಸ್ತರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದವರು, ಮನಸ್ತಾಪ ಇರುವವರು, ನಿಷ್ಪಕ್ಷ  ನಿಲುವಿನವರು, ಸ್ವಾರ್ಥಿಗಳು.. ಎಲ್ಲರೂ ಇರಬಹುದು. ಅವರೆಲ್ಲರ ಅಭಿಪ್ರಾಯಗಳನ್ನು ಸುದ್ದಿಯ ರೂಪಕ್ಕೆ ಇಳಿಸುವ ಮೊದಲು ಈ ಅರಿವು ಸದಾ ಜೊತೆಗಿರಬೇಕು. ಅಲ್ಲದೇ, ಘಟನಾ ಸ್ಥಳದಲ್ಲೂ ಸೂಕ್ಷ್ಮ ಕುರುಹುಗಳಿರುತ್ತವೆ. ಈ ಕುರುಹುಗಳಿಗೂ ತಾನು ದಾಖಲಿಸಿಕೊಂಡ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡುವ ಮತ್ತು ಅದರ ಆಧಾರದಲ್ಲಿ ಘಟನೆಯನ್ನು ವಿಶ್ಲೇಷಿಸುವ ತಾಳ್ಮೆಯೂ ಇರಬೇಕು. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೀಗೆಲ್ಲ ನಡೆಯುವುದೇ ಇಲ್ಲ. ಘಟನಾ ಸ್ಥಳವನ್ನು ಪರಿಶೀಲಿಸದೆಯೇ ಮತ್ತು ಘಟನೆಯ ಒಳ-ಹೊರಗನ್ನು ಅಭ್ಯಸಿಸದೆಯೇ ನಿರ್ದಿಷ್ಟ ಮೂಲವೊಂದರ ಮಾಹಿತಿಯನ್ನಷ್ಟೇ ಆಧರಿಸಿಕೊಂಡು ಸುದ್ದಿಯನ್ನು ಕೆಲವೊಮ್ಮೆ ಹೆಣೆಯಲಾಗುತ್ತದೆ. ಕನಿಷ್ಠ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ತರಿಸಿ ಸುದ್ದಿಗೆ ನಿಖರತೆಯನ್ನು ಕೊಡುವ ಪ್ರಯತ್ನಗಳೂ ನಡೆಯುವುದಿಲ್ಲ. ಭಯೋತ್ಪಾದನಾ ಪ್ರಕರಣಗಳ ಕುರಿತಾದ ವರದಿಗಳಲ್ಲಿ ಇಂಥ ಏಕಮುಖ ನಿಲುವುಗಳು ಪತ್ರಿಕೆಗಳಲ್ಲಿ ಹಲವು ಬಾರಿ ವ್ಯಕ್ತವಾಗಿವೆ. ಮದ್ರಸಗಳೂ ಇಂಥ ವರದಿ ಗಾರಿಕೆಯಿಂದ ಸಂತ್ರಸ್ತಗೊಂಡಿವೆ. ಇದೀಗ ನಂದಿತಾ ಪ್ರಕರಣ. ಅಕ್ಟೋಬರ್ 30ರಂದು ಮೃತಪಟ್ಟ ಬಾಲಕಿ ನಂದಿತಾಳ ಕುರಿತಂತೆ ನವೆಂಬರ್ 2ರಿಂದ ಕನ್ನಡ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗತೊಡ ಗಿವೆ. ಈ ಸುದ್ದಿ ಮತ್ತು ಅದಕ್ಕೆ ಕೊಡುತ್ತಿರುವ ಶೀರ್ಷಿಕೆಗಳನ್ನು ಓದುವಾಗ ಕೆಲವೊಮ್ಮೆ ದಿಗಿಲಾಗುತ್ತದೆ. ಕೆಲವೊಮ್ಮೆ ಆತಂಕ, ವಿಷಾದವೂ ಉಂಟಾಗುತ್ತದೆ. ನಂದಿತಾಳ ಹೆತ್ತವರ ಕಣ್ಣೀರು, ಆಕ್ರೋಶ ಸಹಜವಾದುದು. ಆದರೆ ಪತ್ರಿಕೆಯೊಂದಕ್ಕೆ ಅದರಾಚೆಗೂ ಕೆಲವು ಜವಾಬ್ದಾರಿಗಳಿವೆ. ಇನ್ನೂ ಖಚಿತವಾಗದ ಘಟನೆಯೊಂದರ ಮೇಲೆ ಶೀರ್ಷಿಕೆ ಕಟ್ಟುವಾಗ ಮತ್ತು ಸುದ್ದಿ ಹೆಣೆಯುವಾಗ ಅನುಮಾನಿತ ಪ್ರಜ್ಞೆಯೊಂದು ಇರಲೇಬೇಕಾಗುತ್ತದೆ. ಈ ಮಾಹಿತಿಯೇ ಅಂತಿಮ ಅಲ್ಲ ಅನ್ನುವ ಸೂಚನೆಯೊಂದು ಸುದ್ದಿಯಲ್ಲಿ ಅಲ್ಲಲ್ಲಿ ಇಣುಕಬೇಕಾಗುತ್ತದೆ. ಯಾಕೆಂದರೆ, ಪತ್ರಿಕೆಯೆಂಬುದು ಕಾಗದಗಳ ರಾಶಿಯಲ್ಲ. ಅದು ಸಮಾಜದಲ್ಲಿ ಅಭಿಪ್ರಾಯವನ್ನು ರೂಪಿಸುತ್ತದೆ. ಸಮಾಜದ ಶಾಂತಿ-ಅಶಾಂತಿಯಲ್ಲಿ ಅದಕ್ಕೂ ಒಂದು ಪಾತ್ರವಿರುತ್ತದೆ. ಈ ಕಾರಣದಿಂದಲೇ ನ. 2ರಂದು ಪ್ರಕಟವಾದ ಪತ್ರಿಕಾ ವರದಿಗಳನ್ನು ಪರಿಶೀಲಿಸಬೇಕಾಗುತ್ತದೆ.
   1. ವಿಜಯವಾಣಿ
ಮುಖಪುಟ ಸುದ್ದಿ - ಶೀರ್ಷಿಕೆ: ವಿಷ ಕುಡಿಸಿ ಬಾಲಕಿ ಹತ್ಯೆ
“...ಪುಂಡರ ಗುಂಪೊಂದು ವಿಷ ಕುಡಿಸಿದ ಪರಿಣಾಮ ಶಾಲಾ ಬಾಲಕಿ ಮೃತಪಟ್ಟಿದ್ದು ತೀರ್ಥಹಳ್ಳಿ ಉದ್ವಿಗ್ನಗೊಂಡಿದೆ.. ಅಕ್ಟೋಬರ್ 29 ಬೆಳಿಗ್ಗೆ ಶಾಲೆಗೆ ತೆರಳಲೆಂದು ನಂದಿತಾ ಬಸ್ ನಿಲ್ದಾಣದಲ್ಲಿದ್ದಾಗ ಪರಿಚಿತನೊಬ್ಬ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ತೀರ್ಥಹಳ್ಳಿಯಲ್ಲಿ ಅದೇ ಕಾರಿಗೆ ಮತ್ತಿಬ್ಬರು ವ್ಯಕ್ತಿಗಳು ಹತ್ತಿದ್ದಾರೆ. ಬಳಿಕ ಆಕೆಯನ್ನು ಪಟ್ಟಣದ ಹೊರವಲಯದ ಆನಂದಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋದ ಯುವಕರು ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಬಾಯಿಗೆ ಬಟ್ಟೆ ತುರುಕಿ ಕಾಲ್ಕಿತ್ತಿದ್ದಾರೆ. ಸೊಪ್ಪು ತರಲೆಂದು ಬೆಟ್ಟಕ್ಕೆ ಹೋದ ಮಹಿಳೆಯರು ನಂದಿತಾಳನ್ನು ರಕ್ಷಿಸಿ ಪಾಲಕರಿಗೆ ಮಾಹಿತಿ ನೀಡಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
   2. ವಿಜಯ ಕರ್ನಾಟಕ
ಮುಖಪುಟ ಸುದ್ದಿ-ಶೀರ್ಷಿಕೆ: ಅಪಹರಣ, ಅತ್ಯಾಚಾರ - ಶಾಲಾ ಬಾಲಕಿ ಸಾವು
ತೀರ್ಥಹಳ್ಳಿ: ...ಇಲ್ಲಿನ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಳೇಬೈಲು ಗ್ರಾಮದ ಬಾಲಕಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿ ಬಲವಂತವಾಗಿ ಪ್ರಜ್ಞೆ ತಪ್ಪುವ ಔಷಧಿ ಕುಡಿಸಿದ್ದಾರೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅ. 29ರಂದು ಬೆಳಿಗ್ಗೆ 9:30ರ ಸುಮಾರಿಗೆ ಶಾಲೆಯ ಬಳಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಮೂವರು ಯುವಕರ ಗುಂಪು, ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಿತ್ತು.
   3. ಉದಯವಾಣಿ
ಒಳಪುಟ ಸುದ್ದಿ - ಶೀರ್ಷಿಕೆ: ಬಾಲಕಿ ಸಾವಿಗೆ ಭುಗಿಲೆದ್ದ ಆಕ್ರೋಶ: ತೀರ್ಥಹಳ್ಳಿ ಉದ್ವಿಗ್ನ
..ತೀರ್ಥಹಳ್ಳಿ ಸವಿೂಪದ ಬಾಳೇ ಬೈಲು ನಿವಾಸಿಯೋರ್ವರ ಪುತ್ರಿ ಅಕ್ಟೋಬರ್ 29ರಂದು ಬೆಳಿಗ್ಗೆ ಬಸ್‍ಗಾಗಿ ನಿಲ್ದಾಣದಲ್ಲಿ ಕಾಯುತ್ತಿ ದ್ದಳು. ಸುಮಾರು 9;30ರ ವೇಳೆಗೆ ಕಾರೊಂದರಲ್ಲಿ ಬಂದ ನಾಲ್ವರು ಯುವಕರು ಆಕೆಯನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡರು. ಬಳಿಕ ಆಕೆಗೆ ಸಾಫ್ಟ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
   4. ಹೊಸದಿಗಂತ
ಮುಖಪುಟ ಸುದ್ದಿ - ಶೀರ್ಷಿಕೆ: ತೀರ್ಥಹಳ್ಳಿಯಲ್ಲಿ ಪೈಶಾಚಿಕ ಕೃತ್ಯ ಬೆಳಕಿಗೆ, ಅತ್ಯಾಚಾರಕ್ಕೆ ಯತ್ನ: ಬಾಲಕಿ ದುರ್ಮರಣ
   ..ದಿನಸಿ ವ್ಯಾಪಾರಿ ಬಾಳೇಬೈಲಿನ ಕೃಷ್ಣಪ್ಪ ಎಂಬವರ ಪುತ್ರಿ ಯಾಗಿದ್ದ ನಂದಿತಾ, ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅ. 29ರಂದು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆಕೆಗೆ ಪರಿಚಯವಿದ್ದ ಒಂದು ಕೋಮಿಗೆ ಸೇರಿದ ನಾಲ್ವರು ಯುವಕರು ಆಕೆಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ನಂತರ ಆನಂದಗಿರಿ ನೆಡುತೋಪಿನಲ್ಲಿ ಮತ್ತು ಬರುವ ಮಾದಕ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರಬಹುದೆಂದು ಶಂಕಿಸಲಾಗಿದೆ.. ಆನಂದಗಿರಿ ಗುಡ್ಡದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಲು ಹೋಗಿದ್ದ ಮಹಿಳೆಯರು ಈಕೆ ನೆಡುತೋಪಿನಲ್ಲಿ ಅನಾಥವಾಗಿ ಮೂರ್ಛೆ ತಪ್ಪಿ ಬಿದ್ದಿರುವುದನ್ನು ನೋಡಿ ನಂದಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
   5. ವಾರ್ತಾಭಾರತಿ
ಒಳಪುಟ ಸುದ್ದಿ - ಶೀರ್ಷಿಕೆ: ವಿದ್ಯಾರ್ಥಿನಿ ನಿಗೂಢ ಸಾವು
   ನಂದಿತಾ ಅಕ್ಟೋಬರ್ 29ರಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುವ ಸಮಯದಲ್ಲಿ ಬೇರೆ ಕೋಮಿನ ಯುವಕನ ಜೊತೆಗೆ ಮಾತನಾಡಿದ್ದು, ಇದನ್ನು ಸ್ಥಳೀಯರು ನೋಡಿ ಆಕೆಯ ಮನೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಮನೆಯವರ ಬೈಗುಳಕ್ಕೆ ಅಂಜಿ ಬಾಲಕಿ ಇಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಒಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಆಕೆಯನ್ನು ಅ. 29ರಂದು ನಾಲ್ವರು ಯುವಕರು ಅಪಹರಿಸಿದ್ದು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸ್ಥಳೀಯರು ಆಗಮಿಸಿದಾಗ ಓಡಿ ಹೋಗಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದ್ದಾರೆ. ನ. 1ರಂದು ಆಕೆ ಮೃತಪಟ್ಟಿದ್ದಾಳೆ ಎಂದು ಸಂಘಪರಿವಾರದ ಸಂಘಟನೆಗಳು ಆರೋಪಿಸುತ್ತಿವೆ. ಕಳೆದೆರಡು ದಿನಗಳಿಂದ ಮೌನವಾಗಿದ್ದ ಆಕೆಯ ಪೋಷಕರು ನಾಲ್ವರು ಯುವಕರ ವಿರುದ್ಧ ಅತ್ಯಾಚಾರ ಯತ್ನ ಮತ್ತು ಕೊಲೆಯತ್ನ ದೂರು ದಾಖಲಿಸಿದ್ದಾರೆ. ಒಂದು ಮೂಲದ ಪ್ರಕಾರ, ನಾಲ್ವರು ಯುವಕರು ಬಾಲಕಿಯನ್ನು ಪುಸಲಾಯಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದರೆನ್ನಲಾಗಿದ್ದು ಬಾಲಕಿಯ ಕಿರುಚಾಟದಿಂದ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾದರೆಂದು ಹೇಳಲಾಗಿದೆ. ಆದರೆ ಸತ್ಯವೇನು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
   6. ಪ್ರಜಾವಾಣಿ
ಮುಖಪುಟ ಸುದ್ದಿ: ಶೀರ್ಷಿಕೆ - ವಿದ್ಯಾರ್ಥಿನಿ ಸಾವು: ತೀರ್ಥಹಳ್ಳಿಯಲ್ಲಿ ಗಲಾಟೆ
  ..ಅ. 29ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಂದಿತಾಳನ್ನು 4 ಮಂದಿ ಯುವಕರ ಗುಂಪು ಕಾರಿನಲ್ಲಿ ಅಪಹರಿಸಿತ್ತು. ತದ ನಂತರ ಪಟ್ಟಣದ ತುಂಗಾ ಬೆಟ್ಟದಲ್ಲಿ ವಿದ್ಯಾರ್ಥಿನಿಯನ್ನು ಬಿಟ್ಟು ಹೋಗಿತ್ತು. ಹೊಟ್ಟೆ ಮತ್ತು ತಲೆನೋವು ತಾಳಲಾರದೆ ಬಳಲಿದ್ದ ಬಾಲಕಿಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಳು.
  7. ಕನ್ನಡ ಪ್ರಭ
ಒಳಪುಟ ಸುದ್ದಿ - ಶೀರ್ಷಿಕೆ: ಅತ್ಯಾಚಾರಕ್ಕೊಳಗಾದ ತೀರ್ಥಹಳ್ಳಿ ಬಾಲಕಿ ಸಾವು
   ..ಬಾಲಕಿಯ ತಂದೆ ಕೃಷ್ಣಪ್ಪ ಹೇಳುವಂತೆ, ಗುರುವಾರ ಶಾಲೆಯಿಂದ ಮರಳುತ್ತಿದ್ದ 8ನೇ ತರಗತಿಯ ಈ ಮುಗ್ಧ ಬಾಲಕಿಯನ್ನು ಪರಿಚಯದ ಹುಡುಗನೊಬ್ಬ ಓಮ್ನಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರಿನಲ್ಲಿದ್ದ ಇತರ ಇಬ್ಬರು ಆಕೆಯ ನೀರಿನ ಬಾಟಲಿಗೆ ಯಾವುದೋ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಿದ್ದಾರೆ. ಪ್ರಜ್ಞೆ ತಪ್ಪಿದ ಆಕೆಯ ಜೊತೆಗೆ ಈ ಮೂರು ಮಂದಿ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸುಮಾರು ಒಂದು ಗಂಟೆಯ ನಂತರ ಓಮ್ನಿಯಿಂದ ಬಾಲಕಿಯನ್ನು ರಸ್ತೆ ಪಕ್ಕಕ್ಕೆ ದೂಡಿ ಹೋಗಿದ್ದಾರೆ. ಆಕೆಯನ್ನು ನೋಡಿದ ಯಾರೋ ಆಕೆಯ ಗುರುತಿನ ಚೀಟಿಯಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ ತಿಳಿಸಿದ್ದಾರೆ. ಆಕೆಯನ್ನು ಮನೆಗೆ ಕೊಂಡುಹೋದ ಮೇಲೆ ಆಕೆಗೆ ಪ್ರಜ್ಞೆ ಬಂದಿದ್ದು ವಿಪರೀತ ವಾಂತಿ ಮಾಡಿದ್ದಾಳೆ..”
    ಒಂದೇ ಘಟನೆ, ಒಂದೇ ದಿನ ಬೇರೆ ಬೇರೆ ಪತ್ರಿಕೆಗಳನ್ನು ಚಿತ್ರಿತವಾದ ರೀತಿ ಇದು. ಯಾಕೆ ಹೀಗೆ? ಸುದ್ದಿಗಳಲ್ಲಿ ಈ ಮಟ್ಟದ ವೈರುಧ್ಯಗಳೇಕಿವೆ? ನಿಜವಾಗಿ, ಇಂಥ ಘಟನೆಗಳಿಗೆ ಯಾವಾಗಲೂ ಒಂದಕ್ಕಿಂತ ಹೆಚ್ಚು ಮುಖಗಳಿರುತ್ತವೆ. ವಾರ್ತಾಭಾರತಿಯನ್ನು ಬಿಟ್ಟು ಉಳಿದ ಯಾವ ಪತ್ರಿಕೆಗಳೂ ಆ ಕುರಿತಂತೆ ಆಸಕ್ತಿಯನ್ನೇ ತೋರಿಲ್ಲ. ಕನಿಷ್ಠ ಪ್ರಜಾವಾಣಿ ತೋರಿದ ಸಂಯಮವನ್ನೂ ಅವು ಪ್ರದರ್ಶಿಸಿಲ್ಲ. ಅದರ ಬದಲು ಅವೆಲ್ಲ ಅತ್ಯಾಚಾರವನ್ನು ಸಾಬೀತುಪಡಿಸಲು ಜಿದ್ದಿಗೆ ಬಿದ್ದಂತೆ ವರ್ತಿಸಿದುವು. ಮಾನ, ಘನತೆ, ಗೌರವಗಳೆಲ್ಲ ಮೃತದೇಹಕ್ಕೂ ಇರುತ್ತದೆ ಮತ್ತು ಅದನ್ನು ಗೌರವಿಸ ಬೇಕಾಗಿದೆ ಎಂಬುದನ್ನು ಮರೆತಂತೆ ಬರೆದುವು. ಅಂದಹಾಗೆ,  ಬಾಲಕಿ ನಂದಿತಾ ಪ್ರಕರಣಕ್ಕೆ ಎರಡು ವಾರಗಳು ಸಂದ ಈ ಸಂದರ್ಭದಲ್ಲಿ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಏನನಿಸುತ್ತದೆ? ಮಗಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ವತಃ ತಂದೆ ಕೃಷ್ಣಪ್ಪರೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಮಾತು - ವರ್ತನೆಗಳಲ್ಲಿ ಅಸಹಜತೆ ವ್ಯಕ್ತವಾಗುತ್ತಿದೆ. ಘಟನೆಗೆ ಬೇರೆಯದೇ ಆದ ಆಯಾಮಗಳಿರಬಹುದು ಎಂದು ಶಂಕಿಸುವುದಕ್ಕೆ ಪೂರಕವಾದ ಅಂಶಗಳು ಗೋಚರಿಸುತ್ತಿವೆ. ಆದರೆ ನವಂಬರ್ 2ರಿಂದ ಬಹುತೇಕ ಒಂದು ವಾರಗಳ ಕಾಲ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಇಂಥದ್ದೊಂದು ಸುಳಿವನ್ನೇ ಕೊಡದಷ್ಟು ಏಕಮುಖವಾಗಿದ್ದುವು. ಘಟನೆಗೆ ಇನ್ನೊಂದು ಮುಖವಿರಬಹುದೇ ಎಂಬ ಶಂಕೆಗೆ ಆಸ್ಪದವೇ ಇಲ್ಲದಂತೆ ವರ್ತಿಸಿದುವು. ಈ ಬೇಜವಾಬ್ದಾರಿ ವರ್ತನೆಯೇ ತೀರ್ಥಹಳ್ಳಿಯನ್ನು ಉರಿಸಿದ್ದು ಅಥವಾ ಉರಿಸಲು ಬಯಸಿದವರಿಗೆ ನೆರವಾದದ್ದು. ಅಷ್ಟಕ್ಕೂ,
   ರೋಚಕತೆ, ಸುದ್ದಿವೈಭವ, ಊಹೆ, ಅತಿರೇಕಗಳ ಹಂಗಿಲ್ಲದೇ ಒಂದು ಸುದ್ದಿಯನ್ನು ಕೇವಲ ಸುದ್ದಿಯಾಗಿಯಷ್ಟೇ ಓದುಗನಿಗೆ ಕಟ್ಟಿಕೊಡಬೇಕಾದುದು ಪತ್ರಿಕಾ ಧರ್ಮ ಎಂದಾದರೆ ಆ ಧರ್ಮ ಇವತ್ತು ಎಲ್ಲಿದೆ, ಎಷ್ಟರ ಮಟ್ಟಿಗೆ ಜೀವಂತವಾಗಿದೆ ಮತ್ತು ಯಾರೆಲ್ಲ ಅದನ್ನು ಅನುಸರಿಸುತ್ತಿದ್ದಾರೆ?

Tuesday, November 4, 2014

 ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿ

     ಮಹಾತ್ಮಾ ಗಾಂಧಿ
  ಸರ್ದಾರ್ ಪಟೇಲ್
  ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ಹೆಸರುಗಳನ್ನು ಬಾರಿಬಾರಿಗೂ ಸ್ಮರಿಸುತ್ತಿದ್ದಾರೆ. ಓರ್ವರನ್ನು ರನ್ ಫಾರ್ ಯುನಿಟಿಗೂ (ಏಕತೆಗಾಗಿ ಓಟ) ಇನ್ನೋರ್ವರನ್ನು ಸ್ವಚ್ಛ ಭಾರತಕ್ಕೂ ಬಳಸಿಕೊಂಡಿದ್ದಾರೆ. ‘ಸರ್ದಾರ್ ಇಲ್ಲದ ಗಾಂಧಿ ಅಪೂರ್ಣ’ ಎಂಬೊಂದು ಆಕರ್ಷಕ ನುಡಿಗಟ್ಟನ್ನೂ ಉದುರಿಸಿದ್ದಾರೆ. ಹೀಗೆ ‘ಗಾಂಧಿಯನ್ನು ಪೂರ್ಣಗೊಳಿಸುವ ಪಟೇಲರಿಗಾಗಿ’ ನರ್ಮದಾ ನದಿ ಕಣಿವೆಯಲ್ಲಿ 600 ವಿೂಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಸಿಟಿಝನ್ ಫಾರ್ ಅಕೌಂಟೇಬಲ್ ಗವರ್ನ್‍ಮೆಂಟ್ ಎಂಬ ಸರಕಾರೇತರ ಸಂಸ್ಥೆಯೊಂದು ಈ ಪ್ರತಿಮೆಗಾಗಿ ಅಭಿಯಾನ ನಡೆಸುತ್ತಿದೆ. ಮನೆ ಮನೆಗೆ ಭೇಟಿ ಕೊಡುತ್ತಿದೆ. ರಾಮಮಂದಿರಕ್ಕೆ ಇಟ್ಟಿಗೆಯನ್ನು ಸಂಗ್ರಹಿಸಿದಂತೆ ಪಟೇಲ್ ಪ್ರತಿಮೆಗೆ ಪ್ರತಿಯೋರ್ವರಿಂದಲೂ ದುಡ್ಡು, ಉಕ್ಕಿನ ಸಂಗ್ರಹವಾಗುತ್ತಿದೆ. ಅದಕ್ಕೆಂದೇ www.statueofunity ಎಂಬ ವೆಬ್‍ಸೈಟ್ ಪ್ರಾರಂಭಿಸಲಾಗಿದ್ದು, 2500 ಕೋಟಿ ರೂಪಾಯಿಯ ಆ ಯೋಜನೆಯ ಬಗ್ಗೆ ಅದರಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಇದಾಗಲಿದ್ದು, ನ್ಯೂಯಾರ್ಕ್‍ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಮತ್ತು ಬ್ರೆಜಿಲ್‍ನ ರಿಯೋ ಡಿ ಜನಿರೋದಲ್ಲಿರುವ ಕ್ರಿಸ್ಟ್ ದಿ ರಿಡೀಮರ್‍ಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟನ್ನೂ ಇದಕ್ಕಾಗಿ ರಚಿಸಲಾಗಿದೆ. ಸಂದರ್ಶಕರ ಕೊಠಡಿ, ಅಮ್ಯೂಸ್‍ಮೆಂಟ್ ಪಾರ್ಕ್, ವಿಶಾಲ ಸಭಾಂಗಣ, ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿರುವ ಪಟೇಲ್‍ರ ಈ ಪ್ರತಿಮೆ ಯೋಜನೆಯನ್ನು ಸ್ವಚ್ಛ ಭಾರತದ ಗಾಂಧೀಜಿಗೆ ಒಮ್ಮೆ ಹೋಲಿಸಿ ನೋಡಿ. ಯಾರು ಪೂರ್ಣವಾಗುತ್ತಿದ್ದಾರೆ? ಗಾಂಧಿಯೋ ಪಟೇಲರೋ? ಸ್ವಚ್ಛ ಭಾರತ್ ಅಭಿಯಾನವನ್ನು ಘೋಷಿಸುವ ಸಂದರ್ಭದಲ್ಲೂ ತೀವ್ರ ಬಲಪಂಥೀಯ ವ್ಯಕ್ತಿತ್ವಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ್ ಮತ್ತು ಮದನ್ ಮೋಹನ್ ಮಾಳವಿಯರನ್ನು ಮೋದಿಯವರು ಸ್ಮರಿಸಿ ಕೊಂಡಿದ್ದರು. ಗಾಂಧಿ ಎಂಬುದು ಮೋದಿ ಮತ್ತು ಅವರ ಪರಿವಾರಕ್ಕೆ ಎಂದೂ ಜೀರ್ಣಿಸಲಾಗದ ವ್ಯಕ್ತಿತ್ವ. ಗಾಂಧಿಯವರ ಅಭಿವೃದ್ಧಿ ಚಿಂತನೆಗೂ ಮೋದಿಯವರ ಅಭಿವೃದ್ಧಿ ಚಿಂತನೆಗೂ ತದ್ವಿರುದ್ಧ ಎನ್ನಬಹುದಾದಷ್ಟು ವ್ಯತ್ಯಾಸಗಳಿವೆ. ದೇಶಪ್ರೇಮ, ರಾಷ್ಟ್ರೀಯ ಭದ್ರತೆ, ಕೈಗಾರಿಕಾ ನೀತಿ, ಅರ್ಥವ್ಯವಸ್ಥೆ ಮತ್ತು ಜಾತ್ಯತೀತತೆ.. ಎಲ್ಲದರ ವಿಷಯದಲ್ಲೂ ಗಾಂಧಿ ಮತ್ತು ಮೋದಿಯವರು ಉತ್ತರ-ದಕ್ಷಿಣ. ಆದ್ದರಿಂದಲೇ, ಪ್ರಧಾನಿಯಾಗುವವರೆಗೆ ಗಾಂಧಿಯನ್ನು ಹೊರಗಿಟ್ಟೇ ಮೋದಿ ಮಾತಾಡುತ್ತಿದ್ದರು. ಗಾಂಧಿ ಎಂಬೊಂದು ವ್ಯಕ್ತಿತ್ವವು ಈ ದೇಶವನ್ನು ಮತ್ತು ಇಲ್ಲಿಯ ನಾಗರಿಕರನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ ಎಂಬ ಸತ್ಯವನ್ನು ಅಲ್ಲಗಳೆಯುವ ರೀತಿಯಲ್ಲಿ ಅವರು ವರ್ತಿಸಿದ್ದರು. ಪಟೇಲ್‍ರು ಗುಜರಾತ್‍ನವರಾದಂತೆಯೇ ಗಾಂಧಿ ಕೂಡ ಗುಜರಾತ್‍ನವರೇ. ಪಟೇಲ್‍ರಿಗೆ ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಅವರನ್ನು ಗೌರವಾರ್ಹ ವ್ಯಕ್ತಿತ್ವವಾಗಿ ಗುರುತಿಸಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟು, ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸರ್ದಾರ್ ಪಟೇಲ್ ಯುನಿವರ್ಸಿಟಿ ಮುಂತಾದ ರೂಪದಲ್ಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿತ್ತು. ಆದ್ದರಿಂದ, “ಕಾಂಗ್ರೆಸ್ ಸರಕಾರ ಪಟೇಲ್‍ರನ್ನು ನಿರ್ಲಕ್ಷಿಸಿದುದರಿಂದ ಪ್ರತಿಮೆ ನಿರ್ಮಿಸಬೇಕಾಯಿತು” ಎಂಬ ಮೋದಿವಾದ ಸುಳ್ಳು ಮತ್ತು ಅತಾರ್ಕಿಕವಾದುದು. ಒಂದು ರೀತಿಯಲ್ಲಿ, ಗುಜರಾತ್‍ನವರಾಗಿಯೂ ಗುಜರಾತ್‍ನಲ್ಲಿ ಕಳೆದು ಹೋಗಿರುವುದು ಗಾಂಧಿಯೇ. ಅವರನ್ನು ಸಬರಮತಿಯ ಆಶ್ರಮಕ್ಕೆ ಸೀಮಿತಗೊಳಿಸಿ ಬಿಡಲಾಗಿದೆ. ಧರಣಿ, ಸತ್ಯಾಗ್ರಹ, ಹಿಂದೂ-ಮುಸ್ಲಿಮ್ ಏಕತೆ ಮುಂತಾದುವುಗಳೆಲ್ಲ ನೆಲೆ ಕಳೆದುಕೊಂಡಿರುವುದೂ ಗುಜರಾತ್‍ನಲ್ಲಿಯೇ. ನಿಜವಾಗಿ, ಗುಜರಾತ್‍ನಲ್ಲಿ ಪ್ರತಿಮೆ ನಿರ್ಮಾಣ ವಾಗಲೇಬೇಕಿದ್ದರೆ (ಪ್ರತಿಮೆ ನಿರ್ಮಾಣವೇ ತಪ್ಪು) ಅದು ಗಾಂಧಿಯದ್ದಾಗಿರಬೇಕಿತ್ತು. ಆದರೆ ಗಾಂಧಿಯನ್ನು ಕಸ ಗುಡಿಸುವುದಕ್ಕೆ, ಡ್ರೈನೇಜ್ ಸ್ವಚ್ಛಗೊಳಿಸುವುದಕ್ಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳ ಮಟ್ಟಕ್ಕೆ ಇಳಿಸಿಬಿಟ್ಟು ಪಟೇಲ್‍ರನ್ನು  ಪ್ರತಿಮೆಯಲ್ಲಿ ಮೋದಿ ಎತ್ತಿ ನಿಲ್ಲಿಸಿದ್ದಾರೆ. ಈ ಮೂಲಕ ಗಾಂಧಿಯನ್ನು ರಾಜಕೀಯ ರಹಿತ ವ್ಯಕ್ತಿತ್ವವಾಗಿ ಕಟ್ಟಿಕೊಡುವ ಸಂಚು ಎದ್ದು ಕಾಣುತ್ತಿದೆ. ರಾಜಕೀಯವಾಗಿ ಗಾಂಧಿ ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತಾರೋ ಅಲ್ಲಿಯ ವರೆಗೆ ಮೋದಿ ಮತ್ತು ಅವರ ಪರಿವಾರದ ಚಿಂತನೆಗಳಿಗೆ ಸವಾಲು ಎದುರಾಗುತ್ತಲೇ ಇರುತ್ತದೆ. 1948ರಲ್ಲಿ ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇವತ್ತು ಕೂಡಾ ಬಹು ಚರ್ಚಿತ ವ್ಯಕ್ತಿಯಾಗಿ ಜೀವಂತ ಇದ್ದಾನೆ. ಗಾಂಧಿ ಈ ದೇಶದಲ್ಲಿ ಚರ್ಚೆಗೆ ಒಳಗಾಗುವುದು ಇತರ ನಾಯಕರಂತೆ ಪುಣ್ಯ ತಿಥಿಯಂದೋ ಹುಟ್ಟು ಹಬ್ಬದಂದೋ ಅಥವಾ ಕೆಲವು ನಿರ್ದಿಷ್ಟ ದಿನಗಳಂದೋ ಅಲ್ಲ. ಈ ದೇಶದ ಆಡಳಿತವು ತೆಗೆದುಕೊಳ್ಳುವ ಬಹುತೇಕ ಪ್ರತಿ ನಿರ್ಧಾರದ ಸಂದರ್ಭದಲ್ಲೂ ಅವರು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಗೊಳ್ಳುತ್ತಾರೆ. ಅವರ ಆಲೋಚನೆಗಳನ್ನು ಮತ್ತು ಪ್ರಸ್ತುತ ಆಡಳಿತದ  ಆಲೋಚನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. ಒಂದು ವೇಳೆ, ಗಾಂಧಿಯವರದು ಸ್ವಚ್ಛತೆ, ಸಮಾಜಸೇವಾ ಕಾರ್ಯಗಳು ಅಥವಾ ಸರಳ ಜೀವನ ಮುಂತಾದ ತೀರಾ ರಾಜಕೀಯ ರಹಿತ ವ್ಯಕ್ತಿತ್ವವಾಗಿರುತ್ತಿದ್ದರೆ ಈ 6 ದಶಕಗಳ ಬಳಿಕವೂ ಗೋಡ್ಸೆಯ ಗುಂಡು ಚರ್ಚಾರ್ಹ ಎನಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಗಾಂಧಿ ಯಾವಾಗಲೋ ಓರ್ವ ಸಮಾಜ ಸೇವಕರಾಗಿ ಕಾಣೆಯಾಗುತ್ತಿದ್ದರು. ಬಹುಶಃ ಗಾಂಧಿಗಿರುವ ಈ ವಿಶೇಷತೆಯೇ ಅವರನ್ನು ಅತ್ತ ಒಪ್ಪಿಕೊಳ್ಳಲೂ ಆಗದ ಇತ್ತ ತಿರಸ್ಕರಿಸಲೂ ಆಗದ ಸಂದಿಗ್ಧತೆಗೆ ಮೋದಿ ಮತ್ತು ಪರಿವಾರವನ್ನು ನೂಕಿಬಿಟ್ಟಿದೆ. ಈ ಹಿನ್ನೆಲೆಯಿಂದಾಗಿಯೇ ಮೋದಿಯವರು ಗಾಂಧಿಯನ್ನು ಸ್ವಚ್ಛ ಭಾರತಕ್ಕೆ ಜೋಡಿಸಿರಬೇಕು. ಓರ್ವ ಸೋಶಿಯಲ್ ವರ್ಕರ್ ಎಂಬಂತೆ ಗಾಂಧಿಯನ್ನು ಬೀದಿಬದಿಯಲ್ಲಿ ಕಸಗುಡಿಸಲು ನಿಲ್ಲಿಸುತ್ತಲೇ ಪಟೇಲ್‍ರನ್ನು ಪ್ರತಿಮೆಯ ಮೂಲಕ ರಾಜಕೀಯ ವ್ಯಕ್ತಿತ್ವವಾಗಿ ಕಟ್ಟಿಕೊಡುವುದು ಮೋದಿಯವರ ಇಂಗಿತವಾದಂತಿದೆ. ಸ್ವಚ್ಛ ಭಾರತದ ಗಾಂಧಿಯ ಎದುರು ಪ್ರತಿಮೆಯ ಪಟೇಲರನ್ನು ನಿಲ್ಲಿಸುವಾಗ ಗೆಲ್ಲುವುದು ಪಟೇಲರೇ. ಪ್ರತಿಮೆ ಸ್ಥಾಯಿಯಾದುದು. ಅದು ಅನಂತ ಕಾಲದ ವರೆಗೆ ಇರಬಲ್ಲುದು. ಆದರೆ ಸ್ವಚ್ಛ ಭಾರತಕ್ಕೆ ಸೀಮಿತತೆ ಮತ್ತು ಕಾಲಮಿತಿ ಎರಡೂ ಇದೆ. ಅದೊಂದು ಯೋಜನೆ. ಆ ಯೋಜನೆಯ ಮೂಲಕ ಗಾಂಧಿ ಚರ್ಚೆಗೀಡಾಗುವುದು ನೈರ್ಮಲ್ಯದ ಸುತ್ತ ಮಾತ್ರ. ಆ ಚರ್ಚೆ ಎಂದೂ ಗಾಂಧಿಯವರ ರಾಜಕೀಯ ಆಲೋಚನೆಗಳ ಕಡೆಗೆ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಮೆಗಾದರೋ ಉಕ್ಕಿನ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವು ಬಲಾಢ್ಯತೆ, ಶ್ರೇಷ್ಠತೆ ಮುಂತಾದ ಗುಣಗಳನ್ನೇ ಧ್ವನಿಸುತ್ತದೆ. ಬಹುಶಃ ಸ್ವಚ್ಛ ಭಾರತ ಮತ್ತು ಪ್ರತಿಮೆ ನಿರ್ಮಾಣದ ಮೂಲಕ ಗಾಂಧಿಯನ್ನು ರಾಜಕೀಯ ರಹಿತಗೊಳಿಸಿ ಪಟೇಲರನ್ನು ಮೋದಿ ಬ್ರಾಂಡಿನ ಹೊಸ ರಾಜಕೀಯ ಪ್ರತಿರೂಪವಾಗಿ ಕಟ್ಟಿಕೊಡುವ ಪ್ರಯತ್ನ ಸಾಗುತ್ತಿರುವಂತೆ ಕಾಣುತ್ತಿದೆ.
 ನಿಜವಾಗಿ, ಗಾಂಧಿ ಮತ್ತು ಪಟೇಲ್ ಇಬ್ಬರೂ ಕಾಂಗ್ರೆಸಿಗರೇ.  ಅವರಿಬ್ಬರ ಐಡಿಯಾಲಜಿಯೂ ಕಾಂಗ್ರೆಸನ್ನು ಬೆಳೆಸಿದೆ ಮತ್ತು ಬಲಿಷ್ಠಗೊಳಿಸಿದೆ. ತನ್ನ ಬದುಕಿನುದ್ದಕ್ಕೂ ಕಾಂಗ್ರೆಸಿನವರಾಗಿದ್ದುಕೊಂಡೇ ಬದುಕಿದ್ದು ಮತ್ತು ಕಾಂಗ್ರೆಸ್ ಅನ್ನು  ಸಮರ್ಥಿಸಿಕೊಂಡವರಾಗಿದ್ದರು ಪಟೇಲರು. ಆದರೆ ಮೋದಿ ಮತ್ತು ಅವರ ಬೆಂಬಲಿಗರು ಈ ಸತ್ಯವನ್ನು ಎಲ್ಲೂ ಹೇಳದೆಯೇ ಅವರನ್ನು ತಮ್ಮವರೆಂದೂ ಅವರ ಐಡಿಯಾಲಜಿಯು ತಮ್ಮದೆಂದೂ ಬಿಂಬಿಸುವ ಯತ್ನದಲ್ಲಿದ್ದಾರೆ. ಪಟೇಲರ ಐಡಿಯಾಲಜಿ ಕಾಂಗ್ರೆಸ್‍ನ ಐಡಿಯಾಲಜಿಯಾಗಿತ್ತು. ಗಾಂಧಿ, ನೆಹರೂರಂತೆಯೇ ದ್ವೇಷ ರಾಜಕೀಯವನ್ನು ಇಷ್ಟಪಡದವರು ಪಟೇಲರು. ಆದ್ದರಿಂದಲೇ, 1949ರಲ್ಲಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಲಾದ ಮತ್ತು ಅಲ್ಲಿದ್ದ ಮೌಲ್ವಿಯನ್ನು ಓಡಿಸಿ ಅದರೊಳಗೆ ರಾಮ ವಿಗ್ರಹ ಪ್ರತಿಷ್ಠಾಪಿಸಲಾದ ಘಟನೆಯ ವಿರುದ್ಧ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. “ವಿವಾದವನ್ನು ಬಲವಂತದಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ, ನೀವಿದಕ್ಕೆ ಆಸ್ಪದ ಕೊಡಬೇಡಿ” ಎಂದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಿ.ಬಿ. ಪಂತ್‍ರಿಗೆ ಅವರು ಖಾರ ಪತ್ರವನ್ನು ಬರೆದಿದ್ದರು. ಗಾಂಧಿ ಹತ್ಯೆಯ ತರುವಾಯ ಆರೆಸ್ಸೆಸ್‍ಗೆ ನಿಷೇಧ ವಿಧಿಸಿದ್ದೂ ಪಟೇಲರೇ. ನಿಷೇಧವನ್ನು ಹಿಂತೆಗೆದುಕೊಳ್ಳುವುದಕ್ಕೆ, “ಸಾಮಾಜಿಕ ಸಂಘಟನೆಯಾಗಿ ಚಟುವಟಿಕೆಯಲ್ಲಿರುತ್ತೇವೆ, ರಾಜಕೀಯ ಪ್ರವೇಶಿಸುವುದಿಲ್ಲ” ಎಂಬ ಮುಚ್ಚಳಿಕೆಯನ್ನು ಷರತ್ತು ಆಗಿ ಮುಂದಿಟ್ಟವರೂ ಪಟೇಲರೇ. ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಖಾರ ಪತ್ರವನ್ನು ಬರೆದವರೂ ಅವರೇ. ‘ಇಂಡಿಯಾ ವಿನ್ಸ್ ಫ್ರೀಡಮ್' ಎಂಬ ಕೃತಿಯಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್‍ರು ಭಾರತ ವಿಭಜನೆಗೊಂಡ ಬಗ್ಗೆ ಮತ್ತು ಆ ಸಮಯದಲ್ಲಿ ಪಟೇಲರ ದೃಷ್ಟಿಕೋನದ ಬಗ್ಗೆ ಬರೆದಿದ್ದಾರೆ. ನೆಹರೂ ಅವರಿಗಿಂತ 6 ತಿಂಗಳು ಮೊದಲೇ ವಿಭಜನೆಯನ್ನು ಅನಿವಾರ್ಯ ಎಂದು ಒಪ್ಪಿಕೊಂಡವರು ಪಟೇಲರಾಗಿದ್ದರು. ಅವರು 1946 ಡಿಸೆಂಬರ್‍ನಲ್ಲಿಯೇ ವಿಭಜನೆಯ ಪರ ನಿಲುವನ್ನು ಹೊಂದಿದ್ದರು. ಕೊನೆ ಕ್ಷಣದ ವರೆಗೆ ದೇಶ ವಿಭಜನೆಗೆ ವಿರುದ್ಧವಾಗಿದ್ದ ಆಝಾದ್‍ರಿಗೆ ಅತ್ಯಂತ ಆಘಾತ ಮತ್ತು ಅಚ್ಚರಿಯಾದದ್ದು ಪಟೇಲರ ಈ ನಿಲುವೇ ಆಗಿತ್ತು. ಅವರು ಪಟೇಲರ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನಾವು ಇಷ್ಟಪಡುತ್ತೇವೋ ಇಲ್ಲವೋ ಆದರೆ ಭಾರತದಲ್ಲಿ ಎರಡು ದೇಶಗಳಿವೆ” ಎಂಬ ಪಟೇಲರ ಪತ್ರವನ್ನು ಓದಿ ನಾನು ದುಃಖಿತನಾದೆ ಎಂದು ಆಝಾದ್‍ರು ಇಂಡಿಯಾ ವಿನ್ಸ್ ಫ್ರೀಡಮ್‍ನಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಥ ಪಟೇಲರನ್ನು ಮೋದಿಯವರು ಇವತ್ತು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟೇಲರು ಕಾಂಗ್ರೆಸ್‍ನೊಳಗಿದ್ದೂ ಕಾಂಗ್ರೆಸ್ ಅಲ್ಲದ ವ್ಯಕ್ತಿಯಾಗಿದ್ದರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನವೊಂದು ರನ್ ಫಾರ್ ಯುನಿಟಿ ಮತ್ತು ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರ ಮಾತು-ಕೃತಿಯಲ್ಲಿದೆ. ನಿಜವಾಗಿ, ಪಟೇಲ್ ಇಲ್ಲದ ಕಾಂಗ್ರೆಸ್ ಹೇಗೆ ಅಪೂರ್ಣವೋ ಗಾಂಧಿ ಇಲ್ಲದ ಭಾರತೀಯ ರಾಜಕೀಯವೂ ಅಷ್ಟೇ ಅಪೂರ್ಣ. ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ನೆಹರೂ, ಆಝಾದ್, ಪಟೇಲ್, ಗಾಂಧಿ ಮುಂತಾದವರ ಕಾಲದ ಕಾಂಗ್ರೆಸ್ ಎಂದೂ ಒಂದು ಪಕ್ಷವಾಗಿರಲಿಲ್ಲ. ಅದೊಂದು
ತತ್ವ-ಸಿದ್ಧಾಂತಗಳುಳ್ಳ ಮನೆಯಾಗಿತ್ತು. ಅಲ್ಲಿ ಪಟೇಲರಿಗೂ, ನೆಹರೂರಿಗೂ ಆಝಾದ್‍ರಿಗೂ ಗಾಂಧೀಜಿಗೂ ಭಿನ್ನ ಭಿನ್ನ ಅಭಿಪ್ರಾಯಗಳಿದ್ದುವು. ಸರಿ ತಪ್ಪುಗಳ ಬಗ್ಗೆ ತಕರಾರುಗಳಿದ್ದುವು. ಆದರೆ ಅವರೆಂದೂ ಜನಾಂಗ ದ್ವೇಷಿಗಳೋ ಧಾರ್ಮಿಕ ಅಸಹಿಷ್ಣುಗಳೋ ಆಗಿರಲಿಲ್ಲ. ಭಾರತ ವಿಭಜನೆಯಾಗುವುದನ್ನು ಒಪ್ಪುವವರು ಮತ್ತು ಒಪ್ಪದವರು, ಪಾಕಿಸ್ತಾನಕ್ಕೆ ಪರಿಹಾರವಾಗಿ 50 ಕೋಟಿ ರೂಪಾಯಿ ಕೊಡಬೇಕೆನ್ನುವ ಗಾಂಧಿ ಅಭಿಪ್ರಾಯವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಅವರಲ್ಲಿ ಇದ್ದರೂ ಅದನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿಯೇ ಅವರು ಪರಿಗಣಿಸಿದ್ದರು. ಆದರೆ ಇವತ್ತು ಮೋದಿ ಮತ್ತು ಅವರ ಪರಿವಾರವು ಕಾಂಗ್ರೆಸ್ ಮನೆಯಿಂದ ಪಟೇಲ್‍ರನ್ನು ಅಪಹರಿಸಿ ತಂದು ಅವರಿಗೆ ತನ್ನ ಬಣ್ಣ ವನ್ನು ಬಳಿಯುವ ಪ್ರಯತ್ನ ಮಾಡುತ್ತಿದೆ. ‘ಉಕ್ಕಿನ ಮನುಷ್ಯ’, ‘ದೇಶ ವಿಭಜನೆಯ ವಿರೋಧಿ’, ‘ದೇಶವನ್ನು ಒಗ್ಗೂಡಿಸಿದ ವ್ಯಕ್ತಿ’.. ಎಂಬೆಲ್ಲ ಬಿರುದುಗಳನ್ನು ನೀಡಿ ಮೆರವಣಿಗೆ ಮಾಡುತ್ತಿದೆ. ಅವರ ಪ್ರತಿಮೆಯನ್ನು ಕೆತ್ತುವ ಉತ್ಸಾಹದಲ್ಲಿದೆ. ಇದು ಹೇಗಿದೆಯೆಂದರೆ, ವಾಜಪೇಯಿಯವರನ್ನು ತಮ್ಮವರೆಂದು ಕರೆದು ಕಾಂಗ್ರೆಸಿಗರು ಪ್ರತಿಮೆ ನಿರ್ಮಿಸಿದಂತೆ. ಅವರ ಐಡಿಯಾಲಜಿಯನ್ನು ತಮ್ಮ ಐಡಿಯಾಲಜಿ ಎಂದು ಹೇಳಿಕೊಂಡಂತೆ. ನಿಜ ಏನೆಂದರೆ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರೆಂದು ಹೇಳಿಕೊಳ್ಳಬಹುದಾದ ಯಾರೊಬ್ಬರೂ ಮೋದಿ ಮತ್ತು ಅವರ ಪರಿವಾರಕ್ಕಿಲ್ಲ. ಇರುವವರೆಲ್ಲ ಕಾಂಗ್ರೆಸಿಗರೇ. ಈ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವರು ಪಟೇಲರನ್ನು ಹೆಕ್ಕಿಕೊಂಡಿದ್ದಾರೆ. ಮಾತ್ರವಲ್ಲ, ಅವರಿಗೆ ಬಂಡಾಯ ಕಾಂಗ್ರೆಸಿಗನ ವೇಷ ತೊಡಿಸಿ ‘ಅವರ ಆಲೋಚನೆಗಳೇ ನಮ್ಮವು' ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ಇದೀಗ ಅವರಿಗೆ ಗಾಂಧಿ ಇಲ್ಲದ ಪಟೇಲ್ ಪರಿಣಾಮಕಾರಿಯಲ್ಲ ಎಂಬುದು ಮನವರಿಕೆಯಾಗಿರಬೇಕು. ಈ ಕಾರಣದಿಂದಲೇ ರಾಜಕೀಯ ರಹಿತ ಸಾಧು ಗಾಂಧಿಯನ್ನು ಅವರು ಸ್ವಚ್ಛ ಭಾರತದ ನೆಪದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಾಂಧಿ ಮತ್ತು ಪಟೇಲರನ್ನು ಒಟ್ಟಿಗೇ ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ಪ್ರಬಲ ವ್ಯಕ್ತಿತ್ವವಾಗಿ ಪಟೇಲ್‍ರು ಮತ್ತು ಇನ್ನೊಂದು ಕಡೆ ಸಾಧು ವ್ಯಕ್ತಿತ್ವವಾಗಿ ಗಾಂಧಿ - ಹೀಗೆ ಇವರಿಬ್ಬರನ್ನು ಬಳಸಿಕೊಂಡು ಮೋದಿಯವರು ತಮ್ಮ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರು ಇಂದಿನ ಮಾತು ಮುಂದಿನ ದಿನಗಳಲ್ಲಿ, ‘ಗಾಂಧಿ ಇಲ್ಲದ ಪಟೇಲ್ ಅಪೂರ್ಣ’ ಎಂದಾಗಿ ಕೊನೆಗೆ, ಗಾಂಧಿ ಅಪೂರ್ಣವಾಗಿಯೂ ಪಟೇಲ್ ಪೂರ್ಣವಾಗಿಯೂ ವ್ಯಾಖ್ಯಾನಕ್ಕೀಡಾಗಬಹುದು. ಅಂತಿಮವಾಗಿ ಗೋಡ್ಸೆಯೇ ವಿಜೃಂಭಿಸಲೂ ಬಹುದು.