Monday, January 5, 2015

ಒಂದು ವೇಳೆ ಗೋಡ್ಸೆಯ ಸ್ಥಾನದಲ್ಲಿ ಅಫ್ಝಲ್‍ಗುರು ಇರುತ್ತಿದ್ದರೆ..

   1. ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ
   2. ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ
   3. ಮೆ ಇಟ್ ಪ್ಲೀಸ್ ಯುವರ್ ಆನರ್: ದಿ ಅಸಾಸಿನ್ಸ್ ಸ್ಟೇಟ್‍ಮೆಂಟ್ ಇನ್ ಕೋರ್ಟ್
   4. 1986 ಫೆ. 1ರಂದು ಬಾಬರಿ ಮಸೀದಿಯ ಗೇಟಿನ ಬೀಗ ತೆರೆಯಲು ಆದೇಶಿಸಿದ ನ್ಯಾಯಾಧೀಶರ ಕೃತಿ
‘ನೀವು ಓದಲೇಬೇಕಾದ 6 ಹೊಸ ಪುಸ್ತಕಗಳು' ಎಂಬ ಹೆಸರಿನಲ್ಲಿ ಆರೆಸ್ಸೆಸ್‍ನ ಮುಖವಾಣಿ ಆರ್ಗನೈಝರ್ ಪತ್ರಿಕೆಯು 1997 ಅಕ್ಟೋಬರ್ 5ರ ಸಂಚಿಕೆಯಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿದ್ದ ಪುಸ್ತಕಗಳಿವು. ಇವುಗಳಲ್ಲಿ, ‘ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ’ ಮತ್ತು 'ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ' ಎಂಬೆರಡು ಕೃತಿಗಳನ್ನು ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಬರೆದಿದ್ದರು. 1948 ಜನವರಿ 30ರಂದು ತನ್ನ ಪಾಯಿಂಟ್ ಬ್ಲಾಂಕ್ ರೇಂಜ್ ಬಂದೂಕಿನಿಂದ ಗಾಂಧೀಜಿಯವರ ಎದೆಗೆ ಮೂರು ಸುತ್ತು ಗುಂಡುಹಾರಿಸಿದ ನಾಥೂರಾಮ್ ಗೋಡ್ಸೆಯ ಆ ಕೃತ್ಯಕ್ಕೆ ಈ 2015ಕ್ಕೆ ಸುಮಾರು 67 ವರ್ಷಗಳು ತಗುಲುತ್ತವೆ. ಕೃತ್ಯ ನಡೆದಾಗ ಈ ದೇಶ ಎಷ್ಟು ಆಕ್ರೋಶಗೊಂಡಿತ್ತೆಂದರೆ, ಆರೆಸ್ಸೆಸ್‍ಗೆ ನಿಷೇಧ ಹೇರಲಾಯಿತು. ಆರೆಸ್ಸೆಸ್‍ನ ಬಗ್ಗೆ ಒಲವು ಹೊಂದಿದ್ದರೆಂದು ಹೇಳಲಾಗುತ್ತಿದ್ದ ಸರ್ದಾರ್ ಪಟೇಲರೇ ಈ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದರು. ಮಾತ್ರವಲ್ಲ, ಆ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ‘ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು' ಎಂಬ ಷರತ್ತನ್ನು ಒಡ್ಡಿದ್ದರು. ಆರೆಸ್ಸೆಸ್‍ಗೂ ನಾಥೂರಾಮ್ ಗೋಡ್ಸೆಗೂ ನಡುವೆ ಯಾವ ಬಗೆಯ ಸಂಬಂಧ ಇತ್ತು ಎಂಬುದನ್ನು ಸಹೋದರ ಗೋಪಾಲ ಗೋಡ್ಸೆ ಹಲವು ಬಾರಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಗೋಡ್ಸೆಯನ್ನು 1949 ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು. ಆ ಕಾಲದಲ್ಲಿ ಗೋಡ್ಸೆಯನ್ನು ಹೊಗಳುವುದು ಬಿಡಿ ಆತನ ಹೆಸರೆತ್ತುವುದೇ ದೇಶದ್ರೋಹವೆಂಬಂತಹ ವಾತಾವರಣ ದೇಶದೆಲ್ಲೆಡೆ ಇತ್ತು. ಬ್ರಾಹ್ಮಣನಾಗಿದ್ದ ಆತನನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಟ್ಟುಕೊಳ್ಳುವವರೇ ಇರಲಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ್ದ ಆತನ ನೆನಪಲ್ಲಿ ಜಯಂತಿ ಆಚರಿಸಿದ್ದೋ ಪ್ರತಿಮೆ ನಿರ್ಮಾಣ ಮಾಡಿದ್ದೋ ನಡೆಯಲಿಲ್ಲ. ಹೀಗೆ ರಾಷ್ಟ್ರಪಿತ ಗಾಂಧೀಜಿಯನ್ನು ಹತ್ಯೆಗೈದ ದೇಶದ್ರೋಹಿ ಎಂಬ ಐಡೆಂಟಿಟಿಯೊಂದಿಗೆ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಇದೀಗ ಗುಣಗಾನಕ್ಕೆ ಒಳಗಾಗುತ್ತಿದ್ದಾನೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಉತ್ತರ ಪ್ರದೇಶದ ವಿೂರತ್‍ನಲ್ಲಿ ಗೋಡ್ಸೆ ದೇವಾಲಯಕ್ಕೆ ಭೂಮಿ ಪೂಜೆ ನಡೆದಿದೆ. ಹಿಂದೂ ಮಹಾಸಭಾ ತಯಾರಿಸಿರುವ ‘ದೇಶಭಕ್ತ ನಾಥೂರಾಮ್ ಗೋಡ್ಸೆ’ ಎಂಬ ಡಾಕ್ಯುಮೆಂಟರಿಯು ಇದೇ ಜನವರಿಯ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಗಾಂಧಿ ಹತ್ಯೆಯಾದ ಜನವರಿ 30ನ್ನು ಶೌರ್ಯ ದಿನವನ್ನಾಗಿ ಆಚರಿಸುವುದಾಗಿ ಮಹಾಸಭಾ ಘೋಷಿಸಿದೆ. ದೇಶದಾದ್ಯಂತ ಆತನ ಪ್ರತಿಮೆ ನಿಲ್ಲಿಸುವ ಬಗ್ಗೆ ಅದು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದೆ. ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‍ರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. 'ಗೋಡ್ಸೆಯು ಗಾಂಧಿಯನ್ನಲ್ಲ ನೆಹರೂರನ್ನು ಹತ್ಯೆ ಮಾಡಬೇಕಿತ್ತು' ಎಂದು ಕೇರಳದ ಸಂಘಪರಿವಾರದ ಮುಖವಾಣಿ ಕೇಸರಿ ಪತ್ರಿಕೆಯಲ್ಲಿ ಬಿಜೆಪಿ ಮುಖಂಡ ಗೋಪಾಲಕೃಷ್ಣನ್ ಈ ಹಿಂದೆ ಆಸೆ ತೋಡಿಕೊಂಡಿದ್ದರು. ಮೊನ್ನೆ ಮೊನ್ನೆ ಟಿ.ವಿ. ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಚಾರ್ಯ ಮದನ್ ಅವರು ಗಾಂಧಿ ಹತ್ಯೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಉದ್ದೇಶಕ್ಕಾಗಿ ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂದರು. ದೇಶ ವಿಭಜನೆಯ ಸಂದರ್ಭದಲ್ಲಾದ ಎಲ್ಲ ಹತ್ಯೆಯ ಹೊಣೆಯನ್ನೂ ಗಾಂಧಿಯ ಮೇಲೆ ಹೊರಿಸಿದ ಆತ, ಗಾಂಧಿ 10 ಲಕ್ಷ ಮಂದಿಯ ಕೊಲೆಗಾರ ಎಂದರು. ಗಾಂಧಿಯನ್ನು ವಿಚಾರಣೆಗೆ ಒಳಪಡಿಸುವ ಯಾವುದೇ ಕಾನೂನು ಈ ದೇಶದಲ್ಲಿ ರಚನೆಯಾಗದೇ ಇರುವುದು ದುರದೃಷ್ಟಕರ ಎಂದೂ ಆತ ಹೇಳಿದ. ಅಷ್ಟಕ್ಕೂ, 1948ರಲ್ಲಿ ಅಪ್ಪಟ ದೇಶದ್ರೋಹಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈ 2015ರಲ್ಲಿ ದೇಶಭಕ್ತನಾಗಿ ಪರಿವರ್ತನೆಗೊಂಡದ್ದು ಹೇಗೆ ಮತ್ತು ಯಾಕೆ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ರಾಷ್ಟ್ರಪಿತನನ್ನು ಕೊಲೆಗೈದ ಅಪರಾಧಿಯೊಬ್ಬನ ಮೇಲೆ ಸಂಘಪರಿವಾರಕ್ಕೆ ಈ ಮಟ್ಟದ ಮಮಕಾರ ಯಾಕಾಗಿ? ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವು ದೆಂದರೆ ಜೇನುಗೂಡಿಗೆ ಕೈ ಹಾಕಿದಂತೆ. ನಾಲ್ಕು ದಿಕ್ಕಿನಿಂದಲೂ ಆ ಸಮರ್ಥನೆ ಪ್ರಶ್ನೆಗೀಡಾಗುತ್ತದೆ. ಕೊಲೆಪಾತಕನನ್ನು ವೈಭವೀಕರಣಗೊಳಿಸುವವರು ಟೀಕೆಗೆ ಖಂಡಿತ ಗುರಿಯಾಗುತ್ತಾರೆ. ಇದು ಸಂಘಪರಿವಾರಕ್ಕೆ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೂ ಅಂಥದ್ದೊಂದು ಧೈರ್ಯ ಪ್ರದರ್ಶಿಸುವುದಕ್ಕೆ ಗೋಡ್ಸೆಯಲ್ಲಿ ಏನಿದೆ?
   ನಿಜವಾಗಿ, ಸಂಘಪರಿವಾರಕ್ಕೆ ಮುಸ್ಲಿಮ್ ವಿರೋಧಿ ವ್ಯಕ್ತಿತ್ವ ವೊಂದರ ಅಗತ್ಯವಿದೆ. ಗಾಂಧೀಜಿಯನ್ನು ಕೊಂದವ ಎಂಬೊಂದು ಪರಿಚಿತ ಮುಖ ಗೋಡ್ಸೆಗೆ ಈಗಾಗಲೇ ಇದೆ. ಈ ಮುಖಕ್ಕೆ ಇನ್ನೊಂದು ಭಾವುಕ ವ್ಯಾಖ್ಯಾನವನ್ನು ಕೊಟ್ಟು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಉದುರಿಸುವ ಆಲೋಚನೆ ಸಂಘಪರಿವಾರದ್ದು. ಸಾವರ್ಕರ್, ಹೆಡ್ಗೆವಾರ್, ಗೋಲ್ವಲ್ಕರ್‍ಗಳನ್ನು ಈ ಸಮಾಜ ಈ ವರೆಗೂ ತನ್ನೊಳಗೆ ಜೀರ್ಣಿಸಿಕೊಂಡಿಲ್ಲ. ಬಹುಸಂಖ್ಯಾತ ಸಮಾಜ ಅವರನ್ನು ಜಗಲಿಯ ಒಳಗೆ ಬಿಟ್ಟುಕೊಳ್ಳುತ್ತಲೂ ಇಲ್ಲ. ಅವರನ್ನು ಒಂದು ಸಂಘಟನೆಗೆ ಮತ್ತು ನಿರ್ದಿಷ್ಟ ಆಲೋಚನೆಗೆ ಸೀಮಿತಗೊಳಿಸಿ ಅನುಮಾನದಿಂದ ನೋಡುತ್ತಲೂ ಇದೆ. ಇವರಿಗೆ ಹೋಲಿಸಿದರೆ ಗೋಡ್ಸೆ ತುಸು ಭಿನ್ನ. ಆತ ಈ ಎಲ್ಲ ಚೌಕಟ್ಟನ್ನೂ ವಿೂರಿ ಒಂದು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದವ. ಗೋಲ್ವಾಲ್ಕರ್‍ರ ಹೆಸರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸುವುದಕ್ಕಿಂತ ಗೋಡ್ಸೆಯ ಹೆಸರಿನಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹೆಚ್ಚು ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ಪೂರಕವಾಗಿ ಭಾವುಕ ಕತೆಯೊಂದನ್ನು ಆತನ ಸುತ್ತ ಕಟ್ಟುವುದಕ್ಕೂ ಅವಕಾಶ ಇರುತ್ತದೆ. ಗೋಡ್ಸೆಯನ್ನು ವೈಭವೀಕರಿಸುತ್ತಿರುವ ವರ್ಗ ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಗೌರವಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅದೇ ಉಸಿರಲ್ಲಿ ಅವರೋರ್ವ ಮುಸ್ಲಿಮ್ ಪರ ಮತ್ತು ಪಾಕಿಸ್ತಾನದ ರಚನೆಗೆ ಸಮ್ಮತಿಸಿದ ವ್ಯಕ್ತಿ ಎಂದೂ ಹೇಳುತ್ತದೆ. ಟರ್ಕಿಯಲ್ಲಿ ಖಲೀಫಾ ಆಡಳಿತ ಉರುಳಿದಾಗ ಇಲ್ಲಿ ಖಿಲಾಫತ್ ಚಳವಳಿಯನ್ನು ಹುಟ್ಟು ಹಾಕಿ ಮುಸ್ಲಿಮರನ್ನು ಬೆಂಬಲಿಸಿದ ವ್ಯಕ್ತಿ ಗಾಂಧೀಜಿ ಅನ್ನುತ್ತದೆ. ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಗಾಂಧೀಜಿ ಕಾರಣ ಎಂಬ ಆರೋಪವನ್ನೂ ಹೊರಿಸುತ್ತದೆ. ಹೀಗೆ ಗಾಂಧೀಜಿಯನ್ನು ಮುಸ್ಲಿಮ್ ಪರವೆಂದೂ ಮತ್ತು ಮುಸ್ಲಿಮರನ್ನು ಹಿಂದೂಗಳ ಕೊಲೆಗಾರರೆಂದೂ ಬಿಂಬಿಸುವ ಎರಡು ಉದ್ದೇಶವನ್ನು ಗೋಡ್ಸೆಯ ವೈಭವೀಕರಣವು ಪೂರ್ತಿಗೊಳಿಸುತ್ತದೆ. ಅಂದಹಾಗೆ, ಮುಸ್ಲಿಮ್ ಪರ ಇರುವವರನ್ನು ಹತ್ಯೆ ನಡೆಸುವುದು ದೇಶದ್ರೋಹವೋ ಅಪರಾಧವೋ ಆಗುವುದಿಲ್ಲ ಎಂಬ ಸಂದೇಶವೊಂದನ್ನು ರವಾನಿಸಲು ಗೋಡ್ಸೆಯಷ್ಟು ಉತ್ತಮ ವ್ಯಕ್ತಿ ಸಂಘಪರಿವಾರಕ್ಕೆ ಬೇರೊಬ್ಬರಿಲ್ಲ. ಗೋಡ್ಸೆ ಸಮರ್ಥನೆಗೀಡಾದಷ್ಟೂ ಗಾಂಧೀಜಿ ಹೆಚ್ಚೆಚ್ಚು ಮುಸ್ಲಿಮ್ ಪ್ರೇಮಿಯಾಗುತ್ತಲೇ ಹೋಗುತ್ತಾರೆ. ಅಲ್ಲದೇ, ಗೋಡ್ಸೆಯ ಪರ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಮತ್ತು ಮುಸ್ಲಿಮರು ಚರ್ಚೆಗೀಡಾಗಲೇ ಬೇಕಾಗುತ್ತದೆ.

ಯಾಕೆಂದರೆ, ಗಾಂಧೀಜಿ ಇಲ್ಲದಿದ್ದರೆ ಗೋಡ್ಸೆಗೆ ವ್ಯಕ್ತಿತ್ವವೇ ಇಲ್ಲ. ಗಾಂಧೀಜಿಯಿಂದಾಗಿಯೇ ಗೋಡ್ಸೆ ಇವತ್ತು ಇತಿಹಾಸದ ಪುಟದಲ್ಲಿದ್ದಾನೆ. ಗಾಂಧೀಜಿಗೆ ಆತ ಗುಂಡಿಕ್ಕದೇ ಇರುತ್ತಿದ್ದರೆ ಮಹಾರಾಷ್ಟ್ರದ ಪುಣೆಯಲ್ಲಿ ‘ಅಗ್ರಣಿ' ಎಂಬ ಪತ್ರಿಕೆಯನ್ನು ನಡೆಸುತ್ತಾ ಆತ ಪರಿವಾರದ ಪ್ರಚಾರಕನಾಗಿ ಎಲ್ಲೋ ಕಳೆದು ಹೋಗುತ್ತಿದ್ದ. ಆದ್ದರಿಂದ, ಗೋಡ್ಸೆಯನ್ನು ವಿವರಿಸಲು ತೊಡಗಿದಂತೆಲ್ಲಾ ಗೋಡ್ಸೆಗಿಂತ ಹೆಚ್ಚು ಗಾಂಧೀಜಿ ಮತ್ತು ಮುಸ್ಲಿಮರು ಪ್ರಸ್ತಾಪವಾಗುತ್ತಲೇ ಇರಬೇಕಾಗುತ್ತದೆ. ಒಂದು ರೀತಿಯಲ್ಲಿ, ಇದು ಸಂಘಪರಿವಾರದ ಬಯಕೆಯೂ ಹೌದು. ಗಾಂಧೀಜಿಯನ್ನು ಈ ದೇಶದ ಗೌರವಾನ್ವಿತರ ಪಟ್ಟಿಯಿಂದ ಕಳಚಬೇಕೆಂಬುದು ಸಂಘದ ಬಹುಕಾಲದ ಕನಸು. ಬಹುಸಂಖ್ಯಾತರು ಅನುಭವಿಸುವ ಸ್ವಾತಂತ್ರ್ಯವನ್ನು ಅಷ್ಟೇ ಸಮಾನವಾಗಿ ಮುಸ್ಲಿಮ್ ಅಲ್ಪಸಂಖ್ಯಾತರು ಅನುಭವಿಸಬಾರದೆಂಬ ಅಜೆಂಡಾವನ್ನೂ ಅದು ಹೊಂದಿದೆ. ಈ ಗುರಿಯನ್ನು ತಲುಪುವುದಕ್ಕೆ ಗೋಡ್ಸೆ ಯಷ್ಟು ಸೂಕ್ತ ವ್ಯಕ್ತಿತ್ವ ಬೇರೆ ಸಿಗಲಾರದು. ಗೋಡ್ಸೆಯ ಬಗ್ಗೆ ಮಾತುಗಳನ್ನು ಆರಂಭಿಸಿ ಗಾಂಧೀಜಿ, ಮುಸ್ಲಿಮರು ಮತ್ತು ದೇಶಭಕ್ತಿಯಲ್ಲಿ ಕೊನೆಗೊಳಿಸುವುದು ಸುಲಭ ಮತ್ತು ಹೆಚ್ಚು ಪ್ರಾಯೋಗಿಕ. ಗೋಡ್ಸೆ ಗುಂಡಿಕ್ಕಿದುದು ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಗಲ್ಲ, ದೇಶ ವಿಭಜಿಸಿದವರನ್ನು ಬೆಂಬಲಿಸಿದ ಗಾಂಧಿಗೆ ಎಂದು ಪರಿವಾರ ಇವತ್ತು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಈ ವಾದಕ್ಕೆ ಹೆಚ್ಚು ಬಲ ಬರುತ್ತದೆ. ಮುಸ್ಲಿಮರ ಪರ ನಿಲ್ಲುವವರನ್ನು ಅಥವಾ ಮುಸ್ಲಿಮರನ್ನು ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂಬ ಸಂದೇಶವನ್ನು ಗೋಡ್ಸೆಯ ಮೂಲಕ ರವಾನಿಸಲು ಸಂಘಪರಿವಾರ ತೀರ್ಮಾನಿಸಿದಂತಿದೆ. ಬಹುಶಃ, ಗೋಡ್ಸೆಯ ಪ್ರತಿಮೆಯನ್ನು ದೇಶದಾದ್ಯಂತ ನಿರ್ಮಿಸಲು ಹೊರಟಿರುವ ಹಿಂದೂ ಮಹಾಸಭಾವನ್ನು ತಡೆಯಬೇಕೆಂದು ಕೋರಿ ಕಾನೂನು ತಜ್ಞ ಮತ್ತು ಮಾನವ ಹಕ್ಕು ಕಾರ್ಯಕರ್ತರಾಗಿರುವ ಶಹ್‍ಝಾದ್‍ರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರಕ್ಕೆ ತೂಕ ಬರುವುದೂ ಈ ಕಾರಣದಿಂದಲೇ. ಅದು ಬರೇ ಪ್ರತಿಮೆಯಲ್ಲ. ಆ ಪ್ರತಿಮೆಗೆ ಮುಸ್ಲಿಮ್ ವಿರೋಧಿಯಾದ ಇಮೇಜು ಇದೆ. ಗೋಡ್ಸೆಯ ಪ್ರತಿಮೆ ಹೆಚ್ಚಾದಷ್ಟೂ ಅಥವಾ ಆತನ ವೈಭವೀಕರಣ ವಿಸ್ತರಿಸಿದಷ್ಟೂ ಮುಸ್ಲಿಮ್ ವಿರೋಧಿ ಭಾವನೆಗಳು ಈ ದೇಶದಲ್ಲಿ ಖಂಡಿತ ಹೆಚ್ಚಾಗುತ್ತದೆ. ಒಂದು ಕಡೆ ಪಾರ್ಲಿಮೆಂಟಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ. ಹಾಗಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್ ಸಂಸತ್ ಸದಸ್ಯನನ್ನು ಅದು ಹೊಂದಿಲ್ಲ. ದೇಶಾದ್ಯಂತವಿರುವ ಅದರ 1058ರಷ್ಟು ಅಸೆಂಬ್ಲಿ ಸದಸ್ಯರಲ್ಲಿ ಬರೇ 4 ಮಂದಿಯಷ್ಟೇ ಮುಸ್ಲಿಮರಿದ್ದಾರೆ. ದೇಶವನ್ನಾಳುವ ಪ್ರಮುಖ ಪಕ್ಷವೊಂದರಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಇಷ್ಟು ದಯನೀಯ ಸ್ಥಿತಿಯಲ್ಲಿರುವಾಗಲೇ ಗೋಡ್ಸೆ ಮುನ್ನೆಲೆಗೆ ಬಂದಿದ್ದಾನೆ. ಮಾತ್ರವಲ್ಲ, ಮಾತನಾಡಲೇಬೇಕಿದ್ದ ಪ್ರಧಾನಿಯವರು ಮೌನವಾಗಿದ್ದಾರೆ. ಒಂದು ವೇಳೆ, ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಗೋಡ್ಸೆಯ ಮಾದರಿಯಲ್ಲಿ ವೈಭವೀಕರಿಸಲು ಯಾವುದಾದರೊಂದು ಸಂಘಟನೆ ಮುಂದಾಗಿರುತ್ತಿದ್ದರೆ ಕೇಂದ್ರ ಸರಕಾರದ ನಿಲುವು ಏನಾಗಿರುತ್ತಿತ್ತು? 1500 ವರ್ಷಗಳ ಇಸ್ಲಾವಿೂ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮುಸ್ಲಿಮ್ ಬಾಹುಳ್ಯದ ಕಾಶ್ಮೀರವು ಸೆಕ್ಯುಲರ್ ರಾಷ್ಟ್ರವಾದ ಭಾರದೊಂದಿಗೆ 1947ರಲ್ಲಿ ಸೇರಿಕೊಂಡರೂ ಭಾರತವು ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದಿರುವುದಕ್ಕೆ; ಪಕ್ಷ
 ಪಾತ, ದೌರ್ಜನ್ಯ ನಡೆಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಫ್ಝಲ್ ಗುರು ಪಾರ್ಲಿಮೆಂಟ್‍ಗೆ ದಾಳಿ ನಡೆಸಿದ್ದಾನೆ ಎಂದು ವಾದಿಸಬಹುದಾದ ಸಂದರ್ಭವನ್ನೊಮ್ಮೆ ಊಹಿಸಿ. ಆತ ದಾಳಿ ಮಾಡಿದ್ದು ಪಾರ್ಲಿಮೆಂಟಿನ ಮೇಲಲ್ಲ, ಅದರೊಳಗೆ ಕುಳಿತಿರುವ ಕಾಶ್ಮೀರಿ ವಿರೋಧಿಗಳನ್ನು ಎಂಬ ಸಮರ್ಥನೆಯನ್ನು ಅವಲೋಕಿಸಿ ನೋಡಿ. ಕೇಂದ್ರ ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಗೋಡ್ಸೆಯನ್ನು ವೈಭವೀಕರಿಸುತ್ತಿರುವವರು ಏನೆನ್ನಬಹುದು?

No comments:

Post a Comment