Monday, April 20, 2015

ದರ ನಿಗದಿಪಡಿಸಿ ತಿರುಗಾಡುವ ಯುವಕರೂ 'ರುಬೀನ'ರ 'ಸುಲ್ತಾನ'ರೂ


ಮಾಧ್ಯಮದ ಜೊತೆ ಮಾತಾಡುತ್ತಿರುವ ರುಬೀನ
     “ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು 18 ತುಂಬುವಾಗಲೇ ಮದುವೆಯಾಗಿ ಹೊರಟು ಹೋಗುತ್ತಿದ್ದ ವಾತಾವರಣದ ಮಧ್ಯೆ ನನಗೆ 24 ತುಂಬಿತು. ತಂದೆ ಕೂಲಿ ಮಾಡುತ್ತಿದ್ದರು. ತಾಯಿ ಮೀನು ಮಾರುವವಳು. ಇವತ್ತಿನ ಮದುವೆ ಮಾರುಕಟ್ಟೆಯಲ್ಲಿ ಹೆಣ್ಣಿಗೆ ಮತ್ತು ಹೆಣ್ಣಿನ ಅಪ್ಪ-ಅಮ್ಮನಿಗೆ ಕೆಲವು ಅರ್ಹತೆಗಳು ಇರಲೇಬೇಕಾಗುತ್ತದಲ್ಲವೇ? ಹೆಣ್ಣು ಎಂಬ ಐಡೆಂಟಿಟಿಯೊಂದೇ ಓರ್ವಳು ಮದುಮಗಳಾಗುವುದಕ್ಕೆ ಸಾಕಾಗುವುದಿಲ್ಲವಲ್ಲ. ಹೆಣ್ಣಿನ ಬಗ್ಗೆ ಗಂಡಿನಲ್ಲಿ ಒಂದು ರೇಖಾಚಿತ್ರವಿರುತ್ತದೆ. ಆ ಚಿತ್ರಕ್ಕೆ ಹೆಣ್ಣು ತಾಳೆಯಾದರೆ ಮಾತ್ರವೇ ಆಕೆ ಮದುಮಗಳಾಗಲು ಸಾಧ್ಯ. ಹೀಗಿರುವಾಗ 9ನೇ ತರಗತಿಯಲ್ಲಿ ಕಲಿಕೆ ನಿಲ್ಲಿಸಿದ, ಬಣ್ಣದಲ್ಲೂ ಸೌಂದರ್ಯದಲ್ಲೂ ಸಿನಿಮಾ ತಾರೆಯರಿಗೆ ಹೋಲಿಕೆಯಾಗದ ಮತ್ತು ಮೀನು ಮಾರುವ ಬಡ ಕುಟುಂಬದ ಹೆಣ್ಣಾಗಿರುವ ನನಗೆ ಮದುವೆ ಪ್ರಸ್ತಾಪಗಳು ಬರುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನರ್ಥವಿರುತ್ತದೆ? ಹೀಗಿದ್ದೂ, ನನಗೆ 4 ಪ್ರಸ್ತಾಪಗಳು ಬಂದುವು. ಆದರೆ ಆ ನಾಲ್ವರೂ ನನ್ನನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ, ಅವರು ಕೇಳುವಷ್ಟು ವರದಕ್ಷಿಣೆ ಕೊಡಲು ನನ್ನ ಅಮ್ಮ-ಅಪ್ಪನಲ್ಲಿ ದುಡ್ಡಿರಲಿಲ್ಲ. ಅದರಲ್ಲೂ ನನ್ನ ಅಪ್ಪನಾದರೋ ಜವಾಬ್ದಾರಿ ರಹಿತ ವ್ಯಕ್ತಿ. ಹರೆಯದ ಮಗಳಿದ್ದಾಳೆ ಎಂಬುದನ್ನು ಮರೆತವರಂತೆ ಅವರು ವರ್ತಿಸುವರು. ಅಪ್ಪನ ಬಗ್ಗೆ ತಾಯಿಗೂ ತಕರಾರುಗಳಿದ್ದುವು. ನಾನು ತಂದೆಯವರೊಂದಿಗೆ ಈ ಬಗ್ಗೆ ಜಗಳಾಡಿದ್ದೆ. ‘ನನ್ನ ವಿವಾಹಕ್ಕೆ (ವರದಕ್ಷಿಣೆ) ಏನು ತಯಾರಿ ನಡೆಸಿದ್ದೀರಿ’ ಎಂದು ಧೈರ್ಯ ತಂದುಕೊಂಡು ಪ್ರಶ್ನಿಸಿದ್ದೆ. ತಂದೆಗೆ ಸಿಟ್ಟು ಬಂದಿತ್ತು. ನಿನ್ನ ಮದುವೆಗೆ ಚಿಕ್ಕಾಸನ್ನೂ ಖರ್ಚು ಮಾಡುವುದಿಲ್ಲವೆಂದು ಅವರು ಘರ್ಜಿಸಿದ್ದರು. ನಮ್ಮಲ್ಲಿ ಪುರುಷರು ಮಹಿಳೆಯರ ಅರ್ಧದಷ್ಟೂ ದುಡಿಯುವುದಿಲ್ಲ. ಅಲ್ಲದೆ, ಮಹಿಳೆಯಿಂದಲೇ ಅವರು ಖರ್ಚಿಗೆ ಕೇಳುವುದಿದೆ. ಇಂಥ ಸ್ಥಿತಿಯಲ್ಲಿ ತಂದೆಯೊಂದಿಗೆ ಜಗಳಾಡಿ ಪ್ರಯೋಜನವಾದರೂ ಏನಿರುತ್ತದೆ? ಮೀನು ಮಾರುವ ತಾಯಿಯಿದ್ದೂ ಉತ್ತಮ ಮೀನಿನ ರುಚಿ ಸವಿಯವ ಸಾಮರ್ಥ್ಯವಿಲ್ಲದ ನನಗೆ ಇನ್ನು ಇತರ ಹುಡುಗಿಯರಂತೆ ಅಂದವಾಗಿ ಡ್ರೆಸ್ಸು ಧರಿಸಿ ನಡೆದಾಡುವ ಅವಕಾಶ ಎಲ್ಲಿರುತ್ತದೆ..”
   ರುಬೀನಾ ಹೇಳುತ್ತಾ ಹೋಗುತಾರೆ,
     “ನಿನ್ನನ್ನು ಮದುವೆಯಾಗಲು ದೂರದಿಂದ ಸುಲ್ತಾನ್ ಬರುತ್ತಾನೆಂದು ಚಿಕ್ಕಂದಿನಲ್ಲಿ ತಾಯಿ ಹೇಳುತ್ತಿದ್ದರು. ಆದರೆ ಬೆಳೆದು ದೊಡ್ಡವಳಾದಾಗ ಆ ಮಾತು ಎಷ್ಟು ಅಸಂಭವ ಎಂಬುದು ನನಗೆ ಅರಿವಾಗತೊಡಗಿತು. ಸುಲ್ತಾನ್ ಬಿಡಿ ಓರ್ವ ಮೀನು ಮಾರುವವನಾದರೂ ಬರುತ್ತಿಲ್ಲವಲ್ಲ ಎಂದು ಅಮ್ಮ ಸಂಕಟ ಪಡುತ್ತಿದ್ದಳು. ಒಂದು ದಿನ ಅಪ್ಪನೊಂದಿಗೆ- ‘ರುಬೀನಾಳಿಗೆ ಸಂಬಂಧ ಹುಡುಕಿ’ ಅಂತ ಅಮ್ಮ ಹೇಳಿದ್ರು. ನಿನ್ನ ಕೈಯಲ್ಲಿ ವರದಕ್ಷಿಣೆಯ ದುಡ್ಡಿದ್ದರೆ ಹುಡುಕು ಅಂದರು ಅಪ್ಪ. ಹಾಗೆ ಹೋದ ಅಪ್ಪ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಬಂದು ನೀರು ಕೇಳಿದ್ರು. ಅಡುಗೆ ತಯಾರಿಯಲ್ಲಿದ್ದ ನನಗದು ಕೇಳಿಸಲಿಲ್ಲ. ಸಿಟ್ಟಿನಿಂದ ಚೆನ್ನಾಗಿ ಬಾರಿಸಿದ್ರು. ನಾನು ಮೊದಲೇ ಕೃಶಕಾಯಿ. ಬವಳಿ ಬಂದು ಬಿದ್ದುಬಿಟ್ಟೆ. ಅಮ್ಮ ಮೀನು ಮಾರಿ ಬರುವಾಗ ನಾನಿನ್ನೂ ಮಲಗಿಯೇ ಇದ್ದೆ. ನನ್ನ ಮೈಯಲ್ಲಿರುವ ಬಾಸುಂಡೆಗಳನ್ನು ನೋಡಿ ಅವಳು ಕಣ್ಣೀರಿಳಿಸಿದಳು. ವಿಶೇಷ ಏನೆಂದರೆ, ಅದೇ ದಿನ ನಮ್ಮ ಮನೆಗೆ ನಸೀಮಾದ ಎಂಬ ಅತಿಥಿ ಬಂದರು. ತಾಯಿ ಅವರೊಂದಿಗೆ ಎಲ್ಲವನ್ನೂ ಹೇಳಿ ಕಣ್ಣೀರಿಳಿಸಿದಳು. ಒಂದು ವಿವಾಹ ಸಂಬಂಧ ತರುವಂತೆ ವಿನಂತಿಸಿದಳು. ವರದಕ್ಷಿಣೆಯಾಗಿ ಏನು ಕೊಡಬಲ್ಲೆ ಎಂಬುದು ಆಕೆಯ ಪ್ರಶ್ನೆ. ಅಮ್ಮ ತುಸು ಅಲುಗಾಡಿದಳು. ಕೊಡಲು ಅಮ್ಮನ ಬಳಿಯಿರುವುದು ಸುಸ್ಥಿತಿಯಲ್ಲಿರದ ಮೀನು ಬುಟ್ಟಿ ಮಾತ್ರ. ನಾನು ಅಮ್ಮನನ್ನೇ ನೋಡಿದೆ. ನನ್ನನ್ನು ಹೆತ್ತ ತಪ್ಪಿಗೆ ಆಕೆಯ ಕಣ್ಣು, ಕೆನ್ನೆ, ತುಟಿಗಳು ಅದುರುತ್ತಿವೆಯೇನೋ ಎಂದು ಸಂಕಟವಾಯಿತು. ಅಮ್ಮ ಹೇಳಿದಳು,
‘ಈಗ ಏನಿಲ್ಲ, ಆದರೆ 50 ಸಾವಿರ ರೂಪಾಯಿ ಮತ್ತು 3 ಪವನ್ ಚಿನ್ನ ವರದಕ್ಷಿಣೆಯಾಗಿ ಕೊಡಬಲ್ಲೆ. ಇದಕ್ಕೂ ಸಾಲ ಮಾಡಬೇಕಷ್ಟೇ. ಆದರೆ ನಾನು ಮೀನು ಮಾರಿ ಸಾಲವನ್ನು ಸಂದಾಯ ಮಾಡುವೆ.’
    ಹೀಗಿರುತ್ತಾ 2008 ಜೂನ್ 23ರಂದು ಪಕ್ಕದ ಮನೆಗೆ ನಸೀಮಾದರ ಫೋನ್ ಕರೆಬಂತು. ಹುಡುಗನನ್ನು ನೋಡಲು ಇಂತಿಂಥ ಜಾಗಕ್ಕೆ ಬನ್ನಿ ಎಂದು ಆಕೆ ಹೇಳಿದರು. ಅಮ್ಮ ಕರಕೊಂಡು ಹೋದರು. ವರದಕ್ಷಿಣೆಯ ಭಾರವನ್ನು ದೇಹವಿಡೀ ಹೊತ್ತು ಬಸವಳಿದ ತಾಯಿಯೊಂದಿಗೆ ಸುಲ್ತಾನ್‍ನ ಕನಸು ಕಾಣುತ್ತಾ ಹೋಗುವ ಹರೆಯದ ಮಗಳು! ನಾವೊಂದು ಮನೆಗೆ ಹೋದೆವು. ಅಲ್ಲಿ 48 ವರ್ಷದ ಹಸನ್ ಜಾಬಿರ್ ಎಂಬವನಿದ್ದ. ಅವನೇ ನನ್ನ ಸುಲ್ತಾನ್. ಮಾಲ್ದೀವ್ಸ್ ನವ. ಅವನನ್ನು ನೋಡಿದ ಕೂಡಲೇ ನನಗೆ ಭಯವಾಯಿತು. ನಸೀಮಾದ ಆತನ ಬಗ್ಗೆ ನನ್ನಲ್ಲಿ ಹೇಳತೊಡಗಿದರು- ವಯಸ್ಸೇನೂ ನಿಲ್ಲುವುದಿಲ್ವಲ್ಲ ರುಬೀನಾ. ಮುಂದಿನ ವರ್ಷ ನಿನಗೆ 25 ಆಗುತ್ತದೆ. ಹೆಣ್ಣಿನ ಪ್ರಾಯ ಎಂಬುದು ಗಂಡಿನ ಪ್ರಾಯದಂತೆ ಅಲ್ವಲ್ಲ? ನೋಡು, ನಮ್ಮ ಭಾಗ್ಯವು ನಮ್ಮನ್ನು ಹುಡುಕಿಕೊಂಡು ಬರುವುದು ಬದುಕಿನಲ್ಲಿ ಒಂದು ಬಾರಿ ಮಾತ್ರ. ಆ ಸಂದರ್ಭದಲ್ಲಿ ಆ ಭಾಗ್ಯವನ್ನು ನಾವು ಗಟ್ಟಿಯಾಗಿ ಹಿಡ್ಕೊಬೇಕು. ನಾವೆಲ್ಲ ಭಾಗ್ಯವನ್ನು ಹುಡುಕಿಕೊಂಡು ತಿರುಗಾಡಿದವರು ಮಗಳೇ. ಆದರೆ ಸಿಗಲಿಲ್ಲ. ನೀನು ಭಾಗ್ಯವಂತೆ. ವರನ ಬಗ್ಗೆ ನೀನೇನೂ ಚಿಂತಿಸಬೇಡ. ಈತ ದೊಡ್ಡ ವ್ಯಾಪಾರಿ. ನಾಲ್ಕೈದು ಮನೆಗಳಿವೆ. 3 ಅಂಗಡಿಗಳಿವೆ. ದುಡ್ಡು ಮಾಡುವ ಬ್ಯುಸಿಯಲ್ಲಿ ಮದುವೆಯನ್ನು ಮುಂದೂಡುತ್ತಾ ಹೋಗಿ ಹೋಗಿ ಈಗ ಒಪ್ಪಿಕೊಂಡಿದ್ದಾನೆ. ಈತನಿಗೆ ಪ್ರೀತಿಸಲಷ್ಟೇ ಗೊತ್ತು. ಪ್ರೀತಿಸುವವರಿಗಾಗಿ ಈತ ಹೃದಯನ್ನೇ ಸಿಗಿದು ಕೊಡುವಷ್ಟು ಉದಾರಿ. ಮಗಳೇ, ನಿನ್ನ ಮನೆಯವರ ಸಾಲವನ್ನು ಆತ ಸಂದಾಯ ಮಾಡಬಲ್ಲ. ವೃದ್ಧಾಪ್ಯದಲ್ಲಿ ನಿನ್ನ ಅಪ್ಪ-ಅಮ್ಮ ದುಡಿಯದಂತೆ ಸಾಕಬಲ್ಲ..’ ಹೀಗೆ ನಸೀಮಾದ ಹೇಳುತ್ತಾ ಹೋದಂತೆ ಆತ ನನ್ನ ಪಾಲಿನ ಸುಲ್ತಾನ್ ಆಗುತ್ತಲೇ ಹೋದ. ನಾನು ಒಪ್ಪಿಕೊಂಡೆ. ಆತ ತಾಯಿಗೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಒಂದು ಬಗೆಯ ಖುಷಿ, ಆತಂಕಗಳೊಂದಿಗೆ ನಾನು ಗುಬ್ಬಚ್ಚಿಯಂತಾದೆ. ವರದಕ್ಷಿಣೆ ಕೊಡುವ ಸಾಮರ್ಥ್ಯವಿಲ್ಲದ ಹೆಣ್ಣು ಮಗಳೊಬ್ಬಳ ಮುಂದೆ ಇವುಗಳಲ್ಲದೆ ಬೇರೆ ಆಯ್ಕೆಗಳು ಏನಿರುತ್ತವೆ ಹೇಳಿ? ಈ ಪ್ರಸ್ತಾಪವನ್ನು ತಿರಸ್ಕರಿಸಬಹುದು. ಆದರೆ ಆ ತಿರಸ್ಕಾರವು ನನ್ನ ಅಮ್ಮ-ಅಪ್ಪನನ್ನು ಹೇಗೆಲ್ಲ ಕಾಡಬಹುದು? ಅವರ ಕಣ್ಣೀರಿಗೆ ಕಾರಣವಾಗುವ ತಿರಸ್ಕಾರಕ್ಕಿಂತ ಅವರನ್ನು ಸುಖವಾಗಿಡಬಲ್ಲ ಅಥವಾ ಕನಿಷ್ಠ ಭಾರವನ್ನು ಇಳಿಸಬಲ್ಲ ಒಪ್ಪಿಗೆಯೇ ಉತ್ತಮ ಅಲ್ಲವೇ? ನನ್ನ ಹರೆಯದ ಕನಸುಗಳಿಗೆ ಆತ ರೆಕ್ಕೆ ಜೋಡಿಸಬಲ್ಲ ಎಂಬ ನಿರೀಕ್ಷೆಯೊಂದಿಗೆ 2008 ಜೂನ್ 28ರಂದು ಒಂದು ಹೊಟೇಲಿನಲ್ಲಿ ಹಸನ್ ಜಾಬಿರ್‍ನೊಂದಿಗೆ ವಿವಾಹವಾದೆ. ಒಂದು ಉಂಗುರ ಮತ್ತು ಒಂದು ಪವನಿನ ಸರವನ್ನು ಆತ ಮಹರ್ ಆಗಿ ನೀಡಿದ. ಮದುವೆ ದಿನದಂದು ಆತ ನನ್ನ ತಾಯಿಗೆ ಮತ್ತೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಅದರಿಂದ ನಸೀಮಾದ ಮತ್ತಿತರರು ತಮ್ಮ ಪಾಲನ್ನು ಪಡಕೊಂಡರು. ನನ್ನ ಮನಸ್ಸಿಗೆ ಆತನನ್ನು ಪದೇ ಪದೇ ಸುಲ್ತಾನ್ ಎಂದು ಹೇಳಿಕೊಟ್ಟೆ. ಆತನನ್ನು ಪತಿಯಾಗಿ ಒಪ್ಪಿಕೊಳ್ಳುವಂತೆ ಮನಸ್ಸನ್ನು ಸಿದ್ಧಪಡಿಸಿದೆ. ಆಯ್ಕೆಗಳೇ ಇಲ್ಲದ ಹೆಣ್ಣು ಮಗಳ ಮುಂದೆ ಮಾಲ್ದೀವ್ಸ್ ಆದರೂ, 48 ವರ್ಷವಾದರೂ, ಕೂದಲು ತುಸು ನೆರೆದಿದ್ದರೂ ಉತ್ತಮ ಆಯ್ಕೆಯೇ ತಾನೆ? ನಾನು ಮಾಲ್ದೀವ್ಸ್ ಗೆ ತೆರಳಬೇಕಾದರೆ ಪಾಸ್‍ಪೋರ್ಟ್‍ನ ವ್ಯವಸ್ಥೆ ಆಗಬೇಕಿತ್ತು. ಹಾಗೆ ಆಗಸ್ಟ್ 24ಕ್ಕೆ ಮಾಲ್ದೀವ್ಸ್ ಗೆ ತೆರಳಿದೆವು. ಮೊದಲು ಹೋದದ್ದು ಅವರ ಅಕ್ಕನ ಮನೆಗೆ. ಭಾಷೆ ಬೇರೆ. ಏನೇನೋ ಹೇಳಿ ನಕ್ಕರು. ನಾನು ಮೌನವಾಗಿದ್ದೆ. ಓರ್ವ ಹಿರಿಯರು ಬಂದು ನನ್ನನ್ನು ಆಲಿಂಗಿಸಿಕೊಂಡರು. ನನಗೆ ನೆಮ್ಮದಿಯೆನಿಸಿತು. ಬಳಿಕ ಪತಿಯವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಐವರು ಮಕ್ಕಳಿದ್ದರು. ನನ್ನ ಮನಸ್ಸಿಗೆ ಮೊದಲ ಆಘಾತ ಆದದ್ದು ಆಗಲೇ. ಅವು ನನ್ನ `ಸುಲ್ತಾನ'ನ ಮಕ್ಕಳು. ಅವರಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಆಕೆ ಅವರನ್ನೂ ಮಕ್ಕಳನ್ನೂ ಬಿಟ್ಟು ಹೋಗಿದ್ದಳು. ನನಗೇಕೆ ಮೋಸ ಮಾಡಿದಿರಿ ಎಂದು ನಾನವರಲ್ಲಿ ಪ್ರಶ್ನಿಸಿದೆ. ಅವರು ಗದರಿಸಿದರು. ಆ ಗದರಿಕೆ ಎಷ್ಟು ಜೋರಾಗಿತ್ತೆಂದರೆ ನನಗೆ ಧ್ವನಿಯೇ ಇರಲಿಲ್ಲ.
ನಸೀಮಾದ ಹೇಳಿದ್ದು ಸರಿ. ಅವರಿಗೆ 5 ಮನೆಗಳಿದ್ದುವು. 3 ಅಂಗಡಿಗಳಿದ್ದುವು. ಆದರೆ ತುಂಬಾ ಜಿಪುಣರಾಗಿದ್ದರು. ಈ ನಡುವೆ ನಾನು ಗರ್ಭಧರಿಸಿದೆ. ಗರ್ಭಿಣಿಯಾದವಳು ತಾಯಿಯ ಆಸರೆಯನ್ನು ಬಯಸುವುದು ಸಹಜ. ಊರಿಗೆ ಕಳುಹಿಸಿಕೊಡಿ ಎಂದು ವಿನಂತಿಸಿದೆ. ಆದರೆ ಅವರು ಮನಸ್ಸು ಮಾಡಲಿಲ್ಲ. ಒಂದು ಬಗೆಯ ಸಂಕಟ, ಮನೋವ್ಯಥೆಗಳೊಂದಿಗೆ ಗರ್ಭವನ್ನು ಅನುಭವಿಸಿ 2009 ಸೆ. 4ರಂದು ಗಂಡು ಮಗುವಿಗೆ ಜನ್ಮವಿತ್ತೆ. ಮಗುವಿಗೆ ಶುಹೈಬ್ ಅಂತ ಹೆಸರಿಟ್ಟೆ. ನಾನು ಮತ್ತೆ ಮತ್ತೆ ಊರಿಗೆ ಹೋಗುವ ಬೇಡಿಕೆಯನ್ನು ಇಡುತ್ತಲೇ ಇದ್ದೆ. ಕೊನೆಗೆ ಮಗುವಿಗೆ 8 ತಿಂಗಳಾದ ಬಳಿಕ 2010 ಫೆ. 1ರಂದು ಊರಿಗೆ ಮರಳಿದೆ. 15 ದಿನ ಇದ್ದು ಪುನಃ ಮಾಲ್ದೀವ್ಸ್ ಗೆ ಹೋದೆ. ಅವರಿಗೆ ಮಕ್ಕಳ ಮೇಲೆ ಪ್ರೀತಿ ಬಹಳವೇ ಕಡಿಮೆ. ಎಷ್ಟು ಕಡಿಮೆಯೆಂದರೆ, ಶುಹೈಬ್‍ನಿಗೆ ಬಿಸ್ಕಿಟ್, ಬೇಬಿ ಪೌಡರ್ ಮುಂತಾದುವುಗಳನ್ನೂ ತಂದುಕೊಡುತ್ತಿರಲಿಲ್ಲ. ಹೀಗಿರುತ್ತಾ ಒಂದು ದಿನ ಆ ಅನಾಹುತ ಸಂಭವಿಸಿ ಬಿಟ್ಟಿತು.
    ಬೆಳಿಗ್ಗೆ ಅವರು ಅಂಗಡಿಗೆಂದು ತೆರಳಿದ ಬಳಿಕ ಮೇಜಿನ ಮೇಲಿದ್ದ ಕೆಲವು ಮಾತ್ರೆಗಳನ್ನು ನಾನು ನುಂಗಿಬಿಟ್ಟೆ. ಮಾನಸಿಕ ಒತ್ತಡ ಅದರ ಹಿಂದಿತ್ತೋ ಏನೋ ನಾನರಿಯೆ. ಹಾಸಿಗೆಯಲ್ಲಿ ಬಿದ್ದುಕೊಂಡೆ. ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಮಗ ಹತ್ತಿರದಲ್ಲೇ ನಿಶ್ಶಬ್ದವಾಗಿ ಮಲಗಿದ್ದ. ಆತನನ್ನು ತಟ್ಟಿ ಎಬ್ಬಿಸಿದೆ. ಅಲುಗಾಡಲಿಲ್ಲ. ನಾನು ಹುಚ್ಚಿಯಂತೆ ಮನೆಯ ಪಕ್ಕದ ನರ್ಸ್‍ಗಳ ಬಳಿಗೆ ಓಡಿ ವಿಷಯ ತಿಳಿಸಿ ಮರಳಿ ಬಂದೆ. ಮಗು ಸಾವಿಗೀಡಾಗಿದೆ ಎಂಬುದು ನನಗೆ ಖಚಿತವಾಯಿತು. ನಾನು ಫ್ಯಾನಿಗೆ ನೇಣು ಬಿಗಿದು ಸಾಯಲು ಯತ್ನಿಸಿದಾಗ ನರ್ಸ್‍ಗಳು ಹಗ್ಗ ಬಿಚ್ಚಿ ಉಳಿಸಿದರು. ಸುತ್ತ ಸೇರಿದವರೆಲ್ಲ ಮಗುವನ್ನು ಕೊಂದ ಪಾಪಿಯಂತೆ ನನ್ನನ್ನು ದುರುಗುಟ್ಟಿ ನೋಡಿದರು. ಪತ್ರಿಕೆಗಳಲ್ಲೂ ಹಾಗೆಯೇ ಬಂತು. ನಾನು ಕೊಂದಿರಲಿಲ್ಲ. ಮಗು ಹೇಗೆ ಸಾವಿಗೀಡಾಗಿದೆ ಎಂಬುದೂ ಗೊತ್ತಿರಲಿಲ್ಲ. ನನ್ನನ್ನು ಜೈಲಿಗೆ ಅಟ್ಟಲಾಯಿತು. ಇದಾಗಿ ಹಲವು ತಿಂಗಳುಗಳ ಬಳಿಕ ಗಂಡ ನನ್ನನ್ನು ಭೇಟಿಯಾಗಲು ಬಂದರು. ನನಗೆ ಖುಷಿಯಾಯಿತು. ನನ್ನನ್ನು ಬಿಡುಗಡೆಗೊಳಿಸಿ ಜೊತೆಗೊಯ್ಯುವರೆಂದು ಅಂದುಕೊಂಡೆ. ಆದರೆ ಅವರು ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸುವುದಕ್ಕಾಗಿ ಬಂದಿದ್ದರು. ನಾನು ಸಹಿ ಹಾಕಲಿಲ್ಲ. ಹೀಗೆ ಮೂರು ಬಾರಿ ಬಂದರು. ನಾನು ಒಪ್ಪಿಕೊಳ್ಳದೇ ಹೋದಾಗ ಒಂದು ದಿನ ನ್ಯಾಯಾಧೀಶರೇ ನನ್ನನ್ನು ಕರೆದು ಕಾಗದಕ್ಕೆ ಸಹಿ ಹಾಕಿಸಿದರು. ಅದು ವಿವಾಹ ವಿಚ್ಛೇದನ ಪತ್ರ. ಮರು ಮದುವೆಗೆ ಮಾಲ್ದೀವ್ಸ್ ನಲ್ಲಿ ಪತ್ನಿಯ ಸಹಿಯುಳ್ಳ ವಿಚ್ಛೇದನ ಪತ್ರ ಅಗತ್ಯವಂತೆ.
    ವಿಚಾರಣೆಯಿಲ್ಲದೇ ಜೈಲಲ್ಲಿದ್ದ ನನಗೆ ನಿಧಾನಕ್ಕೆ ಬಿಡುಗಡೆಯ ಬಾಗಿಲುಗಳು ತೆರೆಯತೊಡಗಿದುವು. ಜಯಚಂದ್ರನ್ ಎಂಬವರು ಜೈಲಿನಿಂದ ಬಿಡುಗಡೆಗೊಂಡದ್ದು ನನ್ನ ಪಾಲಿಗೆ ವರವಾಯಿತು. ಅವರು ಪತ್ರಕರ್ತರು, ಮಾನವಹಕ್ಕು ಹೋರಾಟಗಾರರಲ್ಲಿ ನನ್ನ ಬಗ್ಗೆ ಹೇಳಿ ಸಭೆ ಏರ್ಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡಿದರು. ಹೀಗೆ ಮೂರುವರೆ ವರ್ಷಗಳ ಬಳಿಕ ನನ್ನ ವಿಚಾರಣೆ ನಡೆಯಿತು. ವಿಚಾರಣೆ ನಡೆದದ್ದು ಮಾಲ್ದೀವ್ಸ್ ನ ದಿವೇಹಿ ಭಾಷೆಯಲ್ಲಿ. ದಿವೇಹಿ ಭಾಷೆಯಲ್ಲಿದ್ದ ದಾಖಲೆಗಳಿಗೆ ನನ್ನಿಂದ ಸಹಿ ಪಡೆದುಕೊಂಡರು. ನನಗೆ ಏನಿಲ್ಲವೆಂದರೂ 25 ವರ್ಷಗಳ ವರೆಗೆ ಶಿಕ್ಷೆಯಾದೀತೆಂದು ಎಲ್ಲರೂ ಹೇಳಿಕೊಂಡರು. ಇಂಥ ಸಂದರ್ಭದಲ್ಲೇ ಫಾರಿಶ್ ಅಬ್ದುಲ್ಲ ಎಂಬ ವಕೀಲರು ನನ್ನ ನೆರವಿಗೆ ಬಂದದ್ದು. ಅವರು ಇಡೀ ಪ್ರಕರಣ ಎಷ್ಟು ದುರ್ಬಲವಾಗಿದೆ ಎಂಬುದನ್ನು ನ್ಯಾಯಾಲಯದ ಮುಂದಿಟ್ಟರು. ಮಗುವಿನ ಪೋಸ್ಟ್ ಮಾರ್ಟಂ ನಡೆಸಿಲ್ಲ, ಮಗುವಿಗೇನಾಗಿದೆ ಎಂಬ ಬಗ್ಗೆ ವೈದ್ಯಕೀಯ ವರದಿಯಿಲ್ಲ, ಪ್ರಕರಣಕ್ಕೆ ಸಾಕ್ಷಿಗಳಾದ ನರ್ಸ್‍ಗಳು ಮಾಲ್ದೀವ್ಸ್ ಬಿಟ್ಟು ಹೋಗಿದ್ದಾರೆ, ಪತಿಯ ಹೇಳಿಕೆಯನ್ನೇ ದಾಖಲಿಸಿಲ್ಲ.. ಹೀಗೆ ಅವರು ಎಲ್ಲವನ್ನೂ ನ್ಯಾಯಾಲಯದಲ್ಲಿ ತೆರೆದಿಟ್ಟರು. ಕೊನೆಗೆ 5 ವರ್ಷಗಳ ಬಂಧನದ ಬಳಿಕ 2015 ಮಾರ್ಚ್ 16ರಂದು ನಾನು ಜೈಲಿನಿಂದ ಹೊರಬಂದೆ. ಊರಿಗೆ ಮರಳಿದ ಬಳಿಕ ಜಾಬಿರ್ ಮತ್ತೆ ಕರೆ ಮಾಡಿದರು. ಕ್ಷಮೆ ಯಾಚಿಸಿದರು. ತಾನು ಮರು ಮದುವೆಯಾಗಿಲ್ಲ ಅಂದರು. ನಿನ್ನನ್ನು ಕಣ್ಣಾರೆ ಕಾಣಬೇಕು ಅಂದರು. ನಾನು ಫೋನ್ ಇಟ್ಟೆ. ಹಾಗಾಗದಿರಲಿ ಎಂದು ಪ್ರಾರ್ಥಿಸಿದೆ...”
     ಹೀಗೆ ಕೇರಳದ ತಿರುವನಂತಪುರ ಜಿಲ್ಲೆಯ ಕಡಪ್ಪುರದ ರುಬೀನಾಳು ಪತ್ರಕರ್ತ ಶಮೀರ್‍ರ ಮುಂದೆ ಹೇಳುತ್ತಾ ಹೋಗುವಾಗ ವರದಕ್ಷಿಣೆಯ ಕರಾಳ ಮುಖವೊಂದು ನಮ್ಮೆದುರು ತೆರೆಯುತ್ತಾ ಹೋಗುತ್ತದೆ. ಒಂದು ಕಡೆ ವರದಕ್ಷಿಣೆಯನ್ನು ನಿರೀಕ್ಷಿಸುತ್ತಾ ತಿರುಗಾಡುವ ಯುವಕರು ಮತ್ತು ಇನ್ನೊಂದು ಕಡೆ ಈ ಸಂದರ್ಭವನ್ನೇ ದುರುಪಯೋಗಿಸಲು ಕಾದು ಕೂತಿರುವ ಜಾಬಿರ್ ಗಳು... ಇವರ ಮಧ್ಯೆ ರುಬೀನರು ನಲುಗುತ್ತಲೇ ಇದ್ದಾರೆ. ಇಷ್ಟಿದ್ದೂ, ನಮ್ಮ ಸಮುದಾಯ ಈ ವಾಸ್ತವಕ್ಕೆ ಮುಖಾಮುಖಿಗೊಳ್ಳುವುದು ಯಾವಾಗ? ನಿರ್ದಯಿ ಫತ್ವಾಗಳು ಜಾರಿಯಾಗುವುದು ಎಂದು? ವರ್ಷಗಳ ಹಿಂದೆ ನನ್ನೂರಿನ ಹೆಣ್ಣು ಮಗಳು ಗುಜರಾತ್‍ಗೆ ಮದುವೆಯಾಗಿ ಹೋದ ಘಟನೆ ಇನ್ನೂ ಹಸಿರಾಗಿರುವುದರಿಂದಲೋ ಏನೋ ಈ ರುಬೀನಾ ನನ್ನ ಮನಸ್ಸನ್ನಿಡೀ ಕಾಡಿದಳು. ಆದ್ದರಿಂದಲೇ ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.


Wednesday, April 15, 2015

ಬೀಫ್ ಫೆಸ್ಟ್ ಪ್ರತಿಭಟನೆ ಮತ್ತು ಆಹಾರದ ಹಕ್ಕಿನ ಪ್ರಶ್ನೆ

     ದನದ ಮಾಂಸ ಸೇವನೆಯು ಆಹಾರ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೊ? ಓರ್ವರ ಆಹಾರವನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಅದಕ್ಕಿರುವ ಮಾನದಂಡಗಳೇನು? ಓರ್ವ ಮಾಂಸಾಹಾರಿ, ಇನ್ನೋರ್ವ ಸಸ್ಯಾಹಾರಿ, ಮತ್ತೋರ್ವಳು ಉಭಯಾಹಾರಿ- ಇವರಲ್ಲಿ ಒಬ್ಬರನ್ನು ಸರಿ ಮತ್ತು ಮತ್ತಿಬ್ಬರನ್ನು ತಪ್ಪು ಎಂದು ವಿಂಗಡಿಸಬಹುದೆ? ಹಾಗೆ ವಿಂಗಡಿಸುವುದಾದರೆ ಅದಕ್ಕಿರುವ ಆಧಾರಗಳೇನು- ಧಾರ್ಮಿಕ ಗ್ರಂಥಗಳೇ, ಪುರಾಣಗಳೇ, ರಾಜಕೀಯವೇ, ಪರ-ವಿರೋಧಿಗಳ ಶೇಕಡಾವಾರು ಲೆಕ್ಕಾಚಾರಗಳೇ ಅಥವಾ ಆರೋಗ್ಯವೇ... ಇಂಥದ್ದೊಂದು ಜಿಜ್ಞಾಸೆ ಸಮಾಜವನ್ನು ಮತ್ತೆ ಕಾಡತೊಡಗಿದೆ. ನಿಜವಾಗಿ, ದನದ ಮಾಂಸವನ್ನು ನಿಷೇಧಿಸಬೇಕೆಂದು ಆಗ್ರಹಿಸುವವರ ವಾದವು ಎಷ್ಟು ಏಕಪಕ್ಷೀಯ ವಾಗಿದೆಯೆಂದರೆ ಅದು ನಟಿ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್’ನಂತೆ ಕಾಣಿಸುತ್ತದೆ. ಮೈ ಚಾಯ್ಸ್ ನಲ್ಲಿ ದೀಪಿಕಾ ಕೆಲವು ಸೆಲೆಕ್ಟಿವ್ ವಿಷಯಗಳ ಬಗ್ಗೆ ಮಾತ್ರ ಮಾತಾಡುತ್ತಾಳೆ. ಸಿನಿಮಾ ರಂಗದಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ವೇತನ ತಾರತಮ್ಯದ ಬಗ್ಗೆ ಮೈ ಚಾಯ್ಸ್ ನಲ್ಲಿ ಏನೂ ಇಲ್ಲ. ಹೀರೋಗೆ ಸಮಾನವಾದ ವೇತನ ಪಡೆಯುವುದು ಹೀರೋಯಿನ್‍ಳ ಹಕ್ಕು ಎಂದಾಕೆ ಹೇಳುವುದಿಲ್ಲ. ಆರ್ಥಿಕ ಅಸಮಾನತೆಯ ಬಗ್ಗೆ ಮೈ ಚಾಯ್ಸ್ ಮೌನವಾಗುತ್ತದೆ. ಅತ್ಯಾಚಾರ, ಗೃಹಹಿಂಸೆ, ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ದೀಪಿಕಾ ಪಡಕೋಣೆಯಲ್ಲಿ ಯಾವ `ಚಾಯ್ಸೂ' ಇಲ್ಲ. ಒಂದು ರೀತಿಯಲ್ಲಿ, ದನದ ಮಾಂಸವನ್ನು ನಿಷೇಧಿಸಬೇಕೆನ್ನುವವರ ವಾದದಲ್ಲಿ ಮೈ ಚಾಯ್ಸ್ ನ ದೌರ್ಬಲ್ಯಗಳೆಲ್ಲ ಕಾಣಿಸುತ್ತವೆ. ಅಂದ ಹಾಗೆ, ಈ ದೇಶದ ದೊಡ್ಡದೊಂದು ಜನಸಂಖ್ಯೆಗೆ ಮಾಂಸವೇ ಆಹಾರ. ಆಹಾರ ಎಂಬುದು ತಿನ್ನುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಅಸಂಖ್ಯ ಮಂದಿಯನ್ನು ಸುತ್ತಿಕೊಂಡಿರುತ್ತದೆ. ನೀವು ಅಕ್ಕಿಯನ್ನು ನಿಷೇಧಿಸಿದರೆ ಅದು ಅನ್ನ ತಿನ್ನುವವರ ಸಮಸ್ಯೆಯಾಗಿಯಷ್ಟೇ ಗುರುತಿಸಿಕೊಳ್ಳುವುದಿಲ್ಲ. ಅದು ಗದ್ದೆಯ ಸಮಸ್ಯೆಯೂ ಹೌದು. ಎತ್ತುಗಳನ್ನು, ನೇಗಿಲು ತಯಾರಿಸುವವರನ್ನು, ಮರದ ವ್ಯಾಪಾರಿಗಳನ್ನು, ಟ್ರ್ಯಾಕ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರನ್ನು, ನೀರೆತ್ತುವ ಪಂಪ್ ಮತ್ತು ಅದರ ಉತ್ಪಾದಕ ಕೇಂದ್ರಗಳನ್ನು, ಕಾರ್ಮಿಕರನ್ನು.. ಹೀಗೆ ಅದು ಸಂಕೋಲೆಯಂತೆ ಉದ್ದಕ್ಕೂ ಬಾಧಿಸುತ್ತಾ ಹೋಗುತ್ತದೆ. ನೀವು ಅನ್ನಕ್ಕೆ ಬೆಂಕಿಕೊಟ್ಟರೆ ಆ ಬೆಂಕಿ ಕೊನೆಗೊಳ್ಳುವುದು ಇನ್ನೆಲ್ಲೋ ರೈತರ ಗದ್ದೆ-ನೇಗಿಲುಗಳಲ್ಲಿ. ಭತ್ತದ ಬಣವೆಗಳಲ್ಲಿ ಅಥವಾ ರಸಗೊಬ್ಬರವನ್ನೋ ನೇಗಿಲನ್ನೋ ತಯಾರಿಸುವ ಕಾರ್ಮಿಕರಲ್ಲಿ. ದನದ ಮಾಂಸ ನಿಷೇಧಕ್ಕೂ ಇದೇ ಬಗೆಯ ಮುಖ ಇದೆ. ಅದು ತಿನ್ನುವವರಿಗೆ ಮಾತ್ರ ಸಂಬಂಧಿಸಿರುವುದಲ್ಲ. ಮಾಂಸದ ವ್ಯಾಪಾರಿಗಳು, ಕಸಾಯಿಗಳು, ರೈತರು, ಮಧ್ಯವರ್ತಿಗಳು, ಚರ್ಮ ಉತ್ಪಾದನೆ ಮತ್ತು ಚರ್ಮೋದ್ಯಮದಲ್ಲಿ ತೊಡಗಿಸಿಕೊಂಡವರು.. ಎಲ್ಲರೂ ಅದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಾರೆ. ಬ್ಯಾಗ್, ಪರ್ಸ್, ಶೂ, ಚಪ್ಪಲಿ ಮುಂತಾದವುಗಳಿಗೆ ದನ ಮತ್ತು ಎತ್ತಿನ ಚರ್ಮ ಅಗತ್ಯ. ಮಹಾರಾಷ್ಟ್ರದ ಧಾರಾವಿಯು ಏಷ್ಯದಲ್ಲೇ ಅತಿ ದೊಡ್ಡವಾದ ಚರ್ಮೋದ್ಯಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ 16 ಸಾವಿರದಷ್ಟು ಸಣ್ಣ ಸಣ್ಣ ಕೈಗಾರಿಕೆ ಗಳಿವೆ. 25 ಸಾವಿರಕ್ಕಿಂತ ಅಧಿಕ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ, ಮಾಂಸಾಹಾರವು ಹೊಟೇಲ್ ವ್ಯವಹಾರಗಳಲ್ಲಿ ದೊಡ್ಡದೊಂದು ಪಾತ್ರ ನಿರ್ವಹಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 17,500 ಕೋಟಿ ರೂಪಾಯಿ ಬೆಲೆಬಾಳುವ 18 ಲಕ್ಷ ಟನ್ ದನದ ಮಾಂಸವನ್ನು ಈ ದೇಶವು ರಫ್ತು ಮಾಡಿದೆ. ಆದರೆ `ಮಾಂಸ ನಿಷೇಧಿಸಿ' ಅನ್ನುವವರು ಈ ವಿಷಯಗಳನ್ನು ತಮ್ಮ ಚರ್ಚಾವ್ಯಾಪ್ತಿಗೆ ತೆಗೆದುಕೊಳ್ಳುವುದೇ ಇಲ್ಲ. ಮುದಿ ಹಸು-ಎತ್ತುಗಳ ಕುರಿತೂ ಅವರಲ್ಲಿ ಯೋಜನೆಗಳೇ ಇಲ್ಲ. “ಜಾನುವಾರು ಹತ್ಯೆಗೆ ನಿಷೇಧ ಇರುವ ಮಧ್ಯ ಪ್ರದೇಶದಲ್ಲಿ- ಹಾಲುಕೊಡದ, ಉಳುಮೆಗೆ ಬಾರದ ಹಸು-ಎತ್ತುಗಳ ಸಹಿತ ಧಾರಾಳ ಜಾನುವಾರು ಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..” ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (05-05-2013) ಬರೆದಿರುವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಅವರ ಚರ್ಚೆ ಏನಿದ್ದರೂ `ಪವಿತ್ರ'ತೆಯ ಸುತ್ತಲೇ ತಿರುಗುತ್ತಿರುತ್ತದೆ. ಮಾಂಸ ನಿಷೇಧವನ್ನು ಪ್ರತಿಭಟಿಸಿ ಮೊನ್ನೆ ಎಪ್ರಿಲ್ 9ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾದ ‘ಬೀಫ್ ಫೆಸ್ಟ್ ಕಾರ್ಯಕ್ರಮ’ ಇದೀಗ ವಿವಾದಕ್ಕೆ ಒಳಗಾಗಿದೆ. ಸಾರ್ವಜನಿಕವಾಗಿ ಬೀಫ್ ಭೋಜನ ಮಾಡಲಾದ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಮತ್ತು ಕೆ. ಮರುಳ ಸಿದ್ಧಪ್ಪ ಭಾಗವಹಿಸಿರುವುದರ ಸುತ್ತ ಚರ್ಚೆಗಳು ಎದ್ದಿವೆ.  ಅಂಬೇಡ್ಕರ್ ಜನ್ಮದಿನವಾದ ಎಪ್ರಿಲ್ 14 ರಂದು ಚೆನ್ನೈ ಮತ್ತು ಬೆಂಗಳೂರಿನಲ್ಲಿ ದನದಮಾಂಸದ ಬಿರಿಯಾನಿಯನ್ನು (ಬೀಫ್ ಫೆಸ್ಟ್) ಸಾರ್ವಜನಿಕವಾಗಿಯೇ ಸೇವಿಸಲಾಗಿದೆ. ಹೀಗೆ ಆಹಾರದ ಹಕ್ಕಿನ ಬದಲು ಬೀಫ್ ಫೆಸ್ಟ್ ಚರ್ಚಾ ವಸ್ತುವಾಗುತ್ತಿದೆ. ಅಷ್ಟಕ್ಕೂ ಬೀಫ್ ಫೆಸ್ಟ್ ನೈತಿಕವೋ ಅನೈತಿಕವೋ ಎಂಬುದು ಚರ್ಚಾ ವಸ್ತುವಾದರೆ ಮುಖ್ಯ ವಿಷಯ ಬದಿಗೆ ಸರಿಯುತ್ತದೆ ಎಂಬುದು ಆಹಾರದ ಹಕ್ಕನ್ನು ವಿರೋಧಿಸುವವರಿಗೆ ಚೆನ್ನಾಗಿ ಗೊತ್ತು.
    ನಿಜವಾಗಿ, ಪ್ರತಿಯೊಂದಕ್ಕೂ ಕೆಲವು ಮೇರೆಗಳಿವೆ. ಈ ಮೇರೆಗಳನ್ನು ನಿರ್ಲಕ್ಷಿಸಿ ಪ್ರತಿಭಟನೆಯನ್ನೋ ಇನ್ನೇನನ್ನೋ ಹಮ್ಮಿಕೊಂಡಾಗ ಅವುಗಳ ಉದ್ದೇಶಶುದ್ದಿಯೇ ಸಾರ್ವಜನಿಕವಾಗಿ ಪ್ರಶ್ನೆಗೊಳಗಾಗುತ್ತದೆ. ಹಾಗಾದರೆ ಪ್ರತಿಭಟನೆಯ ಮೂಲ ಉದ್ದೇಶವೇ ಚರ್ಚೆಯ ವ್ಯಾಪ್ತಿಯಿಂದ ಹೊರಬಿದ್ದು ಪ್ರತಿಭಟನೆ ನೈತಿಕವೋ ಅನೈತಿಕವೋ ಎಂಬುದರ ಸುತ್ತವೇ ಇಡೀ ಚರ್ಚೆ ಕೇಂದ್ರೀಕೃತಗೊಳ್ಳುತ್ತದೆ. ಆಹಾರದ ಹಕ್ಕನ್ನು ಆಗ್ರಹಿಸಿ ಏರ್ಪಡಿಸಲಾದ ಬೀಫ್ ಫೆಸ್ಟ್ ಕಾರ್ಯಕ್ರಮ ಇಲ್ಲೆಲ್ಲೋ ಎಡವಿದೆ ಎಂದು ಅನಿಸುವುದು ಈ ಕಾರಣದಿಂದಲೇ. ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವುದು ಸೇವಿಸುವವರ ಹಕ್ಕೇ ಆಗಿರಬಹುದು. ಅಂಥ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿರಲೂಬಹುದು. ಆದರೂ ದನವನ್ನು ಈ ದೇಶದಲ್ಲಿ ಪೂಜಿಸುವವರಿದ್ದಾರೆ. ಅದಕ್ಕೆ ಪವಿತ್ರತೆಯನ್ನು ಕಲ್ಪಿಸಿದವರಿದ್ದಾರೆ. ಅದು ಮಾಂಸಕ್ಕಾಗಿ ಬಳಕೆಯಾಗಬಾರದೆಂದು ಪ್ರಾಮಾಣಿಕವಾಗಿ ಬಯಸುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ, ದನವನ್ನು ಸುತ್ತುವರಿದಿರುವ ಮಿಥ್ಯೆಗಳು ಮತ್ತು ರಾಜಕೀಯ ಸ್ವಾರ್ಥವನ್ನು ಇಂಥವರಿಗೆ ತಿಳಿಯಪಡಿಸುವುದಕ್ಕೆ ಉದ್ರೇಕಕಾರಿಯಲ್ಲದ ವಿಧಾನವನ್ನೇ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ದನದ ಮಾಂಸವನ್ನು ಬಹಿರಂಗವಾಗಿ (ಅದೂ ಒಂದು ಹಬ್ಬಂದಂತೆ) ಸೇವಿಸುವುದರಲ್ಲಿ ಒಂದು ಉಗ್ರವಾದವಿದೆ. ಈ ಉಗ್ರವಾದವನ್ನು ‘ದನದ ರಾಜಕೀಯ’ದಲ್ಲಿ ತೊಡಗಿರುವವರು ಹೆಚ್ಚು ಇಷ್ಟಪಡುತ್ತಾರೆ. ಇಂಥ ಉಗ್ರವಾದವೇ ಅವರ ಮಾರುಕಟ್ಟೆ. ಬಹಿರಂಗವಾಗಿ ಮಾಂಸ ಭೋಜನ ಮಾಡುವವರು ಧರ್ಮ ವಿರೋಧಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ಹೇಳಿ ತಮ್ಮ ಬೆಂಬಲಿಗ ವಲಯವನ್ನು ಅವರು ವಿಸ್ತರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೀಫ್ ಫೆಸ್ಟ್ ಕಾರ್ಯಕ್ರಮ ಒಂದು ಅನುಚಿತ ಪ್ರತಿಭಟನಾ ವಿಧಾನ. ಆದರೂ ಈ ಕಾರಣವೊಂದನ್ನೇ ನೆಪವಾಗಿಟ್ಟುಕೊಂಡು ಆಹಾರ ಹಕ್ಕು ಪ್ರತಿಭಟನೆಯ ಪ್ರಸ್ತುತತೆಯನ್ನು ನಾವು ನಿರಾಕರಿಸಬೇಕಿಲ್ಲ. ಈ ಫೆಸ್ಟ್ ನ ನೈತಿಕ-ಅನೈತಿಕತೆಯನ್ನು ಚರ್ಚಿಸುವ ಬದಲು ಅಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಬಲವಂತಪಡಿಸಿದ ವ್ಯವಸ್ಥೆಯ ಫ್ಯಾಸಿಸ್ಟ್ ಧೋರಣೆಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಇತ್ತೀಚೆಗೆ, ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಮುಖ್ಯ ನ್ಯಾಯಮೂರ್ತಿ ಕೆ.ಎಲ್. ದತ್ತು ಅವರಿಗೆ ಬರೆದ ಪತ್ರವೊಂದು ಇದೇ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ಗುಡ್ ಫ್ರೈಡೆಯೆಂದು ನ್ಯಾಯಾಧೀಶರುಗಳ ಸಭೆ ಏರ್ಪಡಿಸಿದುದರ ಔಚಿತ್ಯವನ್ನು ಪ್ರಶ್ನಿಸಿ ದತ್ತು ಅವರಿಗೆ ಮಾರ್ಚ್ 18ರಂದು ಕುರಿಯನ್ ಪತ್ರ ಬರೆದಿದ್ದರು. ರಜಾದಿನದಂದು ಸಭೆ ಇಟ್ಟದ್ದು ಸರಿಯಲ್ಲ ಅಂದಿದ್ದರು. ಆದರೆ ಸಭೆಯನ್ನು ಸಮರ್ಥಿಸಿ ದತ್ತು ಅವರು ಮಾರ್ಚ್ 20ರಂದು ಉತ್ತರ ಬರೆದರು. 2007ರಲ್ಲಿ ವಾಲ್ಮೀಕಿ ಜಯಂತಿಯಂದು ಮತ್ತು 2009ರಲ್ಲಿ ಸ್ವಾತಂತ್ರ್ಯೋತ್ಸವದಂದು ಮುಖ್ಯ ನ್ಯಾಯಮೂರ್ತಿಗಳ ಸಭೆಯನ್ನು ಇಡಲಾಗಿತ್ತು ಎಂದೂ ಸಮರ್ಥಿಸಿಕೊಂಡರು. ಇದಕ್ಕೆ ಉತ್ತರವಾಗಿ ಎಪ್ರಿಲ್ ಒಂದರಂದು ಕುರಿಯನ್ ಮತ್ತೊಂದು ಪತ್ರ ಬರೆದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದುವು. ನಿಜವಾಗಿ, ಕುರಿಯನ್ ಅವರ ಪತ್ರದ ಒಳಾರ್ಥವನ್ನು ಅರ್ಥೈಸದೇ ಹೋದರೆ ಅವರನ್ನು ಟೀಕೆಗೊಳಪಡಿಸುವುದು ತೀರಾ ಸುಲಭ. ಅಮೇರಿಕದಲ್ಲಿ ಗುಡ್‍ಫ್ರೈಡೆಯಂದು ನ್ಯಾಯಾಂಗ ಕಲಾಪಗಳು ನಡೆಯುತ್ತವೆ ಎಂದು ನಮಗೆ ವಾದಿಸಬಹುದು. 18ನೇ ಶತಮಾನದಲ್ಲಿ ಬ್ರಿಟನ್ನಿನ ಮುಖ್ಯ ನ್ಯಾಯಾಧೀಶರಾಗಿದ್ದ ಲಾರ್ಡ್ ಮ್ಯಾನ್ ಫೀಲ್ಡ್‍ರು ನ್ಯಾಯಾಂಗ ವಿಚಾರಣೆಯನ್ನು ಮರುದಿನಕ್ಕೆ ನಿಗದಿಪಡಿಸಿದಾಗ ವಕೀಲರಾದ ಸಾರ್ಜೆಂಟ್ ಡೆವಿ ಎಂಬವರು, ‘ನಾಳೆ  ಗುಡ್‍ಫ್ರೈಡೆ’ ಅಂದಿದ್ದರು. ಅದಕ್ಕೆ, ‘ಚಿಂತಿಲ್ಲ, ಒಳ್ಳೆಯ ದಿನ, ಒಳ್ಳೆಯ ಉದ್ದೇಶ..’ ಎಂದು ಮ್ಯಾನ್ ಫೀಲ್ಡ್ ಪ್ರತಿಕ್ರಿಯಿಸಿದ್ದನ್ನು ಉದಾಹರಣೆಯಾಗಿ ಬಳಸಿಕೊಳ್ಳಬಹುದು. ‘ಹಿಂದುಗಳಲ್ಲಿ ಸುಮಾರು 100ರಷ್ಟು ಪವಿತ್ರ ದಿನಗಳಿದ್ದರೂ ಸರಕಾರ ಅದನ್ನು 10-15ಕ್ಕೆ ಇಳಿಸಿದೆ ಮತ್ತು ಖಾಸಗಿ ಕಂಪೆನಿಗಳಂತೂ 5ಕ್ಕೆ ಇಳಿಸಿವೆ. ಆದರೂ ನಮ್ಮ ತಕರಾರಿಲ್ಲ, ನಿಮ್ಮದೇನು’ ಎಂದೂ ಕುರಿಯನ್‍ರನ್ನು ಟೀಕಿಸಬಹುದು. ನಿಜವಾಗಿ, ಕುರಿಯನ್ ಅವರ ತಕರಾರು ಗುಡ್‍ಫ್ರೈಡೇ ದಿನದ ಸಭೆಯದ್ದಲ್ಲ, ಅಂಥ ದಿನಗಳನ್ನು ಕಡೆಗಣಿಸಲು ಒತ್ತಾಯಿಸುವ ಫ್ಯಾಸಿಸಂನ ಕುರಿತಾದ್ದು. ಅವರು ತಮ್ಮ ಪತ್ರದಲ್ಲಿ ಸೆಕ್ಯುಲರಿಸಂ ಕಡೆಗಣನೆಗೆ ಒಳಗಾಗುತ್ತಿರುವ ಬಗ್ಗೆ ಭೀತಿಯನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗ ತಂಡವು ಈ ದೇಶದಲ್ಲಿ ಇವತ್ತು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಕುರಿಯನ್‍ರ ತಕರಾರು ಏನು ಎಂಬುದು ಅರ್ಥವಾಗುತ್ತದೆ. ಸೆಕ್ಯುಲರಿಸಂನ ಮೇಲೆ ವೈಚಾರಿಕವಾಗಿ ಮತ್ತು ಆಡಳಿತಾತ್ಮಕವಾಗಿ ನಿರಂತರ ಹಲ್ಲೆಗಳಾಗುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಹಕ್ಕಿನ ನಿಷೇಧದ ಚರ್ಚೆ ಅಥವಾ ಕುರಿಯನ್‍ರ ಪತ್ರದ ಮೇಲಿನ ಚರ್ಚೆ ಹೇಗೆ ಸಾಗಬೇಕು ಮತ್ತು ಹೇಗೆ ಸಾಗುತ್ತಿದೆಯೆಂಬುದು ಬಹಳ ಮುಖ್ಯ. ಫ್ಯಾಸಿಸಂ ಅಂದರೆ ನಾವು ಈಗಲೂ ಜರ್ಮನಿ, ಇಟಲಿ, ಸ್ಪೈನ್ ಕಡೆಗೆ ನೋಡುತ್ತೇವೆ. ಹಿಟ್ಲರ್, ಮುಸೋಲೊನಿ, ಫ್ರಾಂಕೊ ಮುಂತಾದವರೇ ನಮ್ಮ ಕಣ್ಣ ಮುಂದೆ ಸುಳಿಯುತ್ತಾರೆ. ಆದರೆ ಹಿಟ್ಲರ್‍ನ ಮೈನ್‍ಕ್ಯಾಂಪ್‍ಗಿಂತಲೂ ಅಪಾಯಕಾರಿಯಾದ ವಿಚಾರಧಾರೆಗಳು ಈ ದೇಶದಲ್ಲಿ ಹರಿದಾಡುತ್ತಿವೆ ಎಂಬುದನ್ನು ಇಂಥ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 4 ಸಾವಿರಕ್ಕಿಂತಲೂ ಅಧಿಕ ಜಾತಿ ಬುಡಕಟ್ಟುಗಳಿರುವ, 325 ಭಾಷೆಗಳು, ಬೇರೆ ಬೇರೆ ರಾಜ್ಯಗಳು ಮತ್ತು ಅದರದೇ ಆದ ಭಿನ್ನ ಸಂಸ್ಕøತಿಗಳಿರುವ ದೇಶವನ್ನು ಒಂದೇ ವಿಚಾರಧಾರೆಯೊಳಗೆ ಮತ್ತು ಒಂದೇ ಸಂಸ್ಕøತಿಯೊಳಗೆ ತಂದು ನಿಲ್ಲಿಸುವ ತಂತ್ರಗಳು ನಮ್ಮನ್ನು ಜಾಗೃತಿಗೊಳಿಸುತ್ತಲೂ ಇಲ್ಲ. ಮೋದಿಯರ ಚುನಾವಣಾ ವಿಜಯದ ಕುರಿತು Democratically Elected Totalitarian Government ಎಂದು ಅರುಂಧತಿ ರಾಯ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
    ತನ್ನ ದೇಶದಲ್ಲಿ ವರ್ಣಬೇಧ ಮಾನಸಿಕತೆ ಇದೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋರಲ್ಲಿ ಈಗಲೂ ಇದೆ. ಇರುವ ಕೆಡುಕನ್ನು ಇದೆ ಎಂದು ಒಪ್ಪಿಕೊಳ್ಳುವುದು ಅರ್ಧ ಪರಿಹಾರವನ್ನು ಕಂಡುಕೊಂಡಂತೆ. ಆದರೆ ಈ ದೇಶದಲ್ಲಿ ಇವತ್ತು ಎಲ್ಲವನ್ನೂ ನಿರಾಕರಿಸುವ ಮನಸ್ಥಿತಿಯೊಂದು ಗಟ್ಟಿಗೊಳ್ಳುತ್ತಿದೆ. `ಇಲ್ಲಿ ಎಂದೂ ಅಸ್ಪ್ರಿಶ್ಯತೆ ಇರಲಿಲ್ಲ, ಗೋಹತ್ಯೆ ಇರಲಿಲ್ಲ, ಶ್ರೇಣೀಕೃತ ವ್ಯವಸ್ಥೆ ಇರಲಿಲ್ಲ, ಮಡೆಸ್ನಾನ ಸರಿ, ಪಂಕ್ತಿಭೋಜನ ಸರಿ, ಆರ್ಯರು ಹೊರಗಿನವರಲ್ಲ..’ ಹೀಗೆ ಹಿಂದಿನ ತಪ್ಪುಗಳನ್ನು ಹೊಸ ವ್ಯಾಖ್ಯಾನದೊಂದಿಗೆ ಅನುಕೂಲಕ್ಕೆ ಬಳಸಿಕೊಳ್ಳುವ ವಿಚಾರಧಾರೆಯೊಂದು ವೇಗವಾಗಿ ಪ್ರಸಾರವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕುರಿಯನ್‍ರ ಪತ್ರ ಮತ್ತು ಆಹಾರದ ಹಕ್ಕು ಪ್ರತಿಭಟನೆಗಳು ಮುಖ್ಯವಾಗುತ್ತವೆ. ಅಂದಹಾಗೆ, ದನದ ಮಾಂಸವನ್ನು ಆಹಾರವಾಗಿ ಪರಿಗಣಿಸುವವರು ಯಾರ ಮತ್ತು ಯಾವ ಧರ್ಮದ ವಿರೋಧಿಗಳೂ ಅಲ್ಲ ಎಂಬುದನ್ನು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತುಪಡಿಸಬೇಕಾಗಿದೆ. ಅದನ್ನು ಒಂದು ಆಹಾರದ ಇಶ್ಯೂ ಆಗಿ ಪರಿಗಣಿಸಬೇಕೆ ಹೊರತು ಧರ್ಮದ ವಿಷಯವಾಗಿ ಖಂಡಿತ ಅಲ್ಲ. ಆಹಾರವು ಸಮಾಜವನ್ನು ವಿಂಗಡಿಸುವುದರ ಮಾನದಂಡ ಅಲ್ಲ, ಆಗಲೂ ಬಾರದು.

Tuesday, April 7, 2015

ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ?

ರೂಪ್‍ರೇಖಾ ವರ್ಮ
     ಲೀಲಾ ಗುಲಾಠಿ ಮತ್ತು ಜಶೋಧರಾ ಬಗ್ಚಿ ಬರೆದಿರುವ ‘ಎ ಸ್ಪೇಸ್ ಆಫ್ ಸೈಲೆನ್ಸ್: ದಿ ಸೆಕ್ಷುವಲ್ ಎಕನಾಮಿಕ್ಸ್ ಆಫ್ ಮಾಡರ್ನ್ ಇಂಡಿಯಾ' ಎಂಬ ಕೃತಿ ಅಥವಾ ದೀಪಾ ಸರ್ಕಾರ್ ಬರೆದಿರುವ, ‘ಅಬಾರ್ಷನ್ ಇನ್ ಇಂಡಿಯಾ: ಫ್ಯಾಕ್ಟ್ಸ್ ಆಂಡ್ ರಿಯಾಲಿಟೀಸ್’ ಎಂಬ ಕೃತಿ ಅಥವಾ ‘ಸೋಶಿಯಲ್ ಅಬ್ಯೂಸ್ ಏಂಡ್ ಗರ್ಲ್ಸ್', ಅಥವಾ ‘ಲಿಟ್ಲ್ ವುಮೆನ್', ‘ಎಸ್ಕೇಪ್', ‘ಲೀನ್ ಇನ್: ವುಮೆನ್ ವರ್ಕ್ ಏಂಡ್ ದ ವಿಲ್ ಟು ಲೀಡ್'.. ಮುಂತಾದ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಕೃತಿಗಳು ಈ ಜಗತ್ತಿನಲ್ಲಿ ನೂರಾರು ಇವೆ. ಆ ಕುರಿತಂತೆ ಫೇಸ್‍ಬುಕ್ ಪುಟಗಳಿವೆ. ವೆಬ್‍ಸೈಟ್‍ಗಳಿವೆ. 2013 ಮೇ 29ರಂದು ಒಂದು ವಿಶೇಷ ಅಭಿಯಾನ ನಡೆಯಿತು. ಮಹಿಳಾ ವಿರೋಧಿ ಫೇಸ್‍ಬುಕ್ ಪುಟಗಳ ವಿರುದ್ಧ ಸುಮಾರು 100ರಷ್ಟು ನ್ಯಾಯವಾದಿಗಳು ಪ್ರತಿ ಭಟನಾ ಅಭಿಯಾನ ಕೈಗೊಂಡರು. ಫೇಸ್‍ಬುಕ್ ತಕ್ಷಣ ಅದಕ್ಕೆ ಸ್ಪಂದಿಸಿತಲ್ಲದೇ ಅಂಥ ಪುಟಗಳನ್ನು ಅದು ಕಿತ್ತು ಹಾಕಿತು. ಇವತ್ತು ಫೇಸ್‍ಬುಕ್ ಮತ್ತು ಟ್ವಿಟರ್‍ಗಳಲ್ಲಿ ಅಸಂಖ್ಯ ಮಹಿಳೆಯರಿದ್ದಾರೆ. ಬ್ಲಾಗುಗಳನ್ನು ಬರೆಯುತ್ತಿದ್ದಾರೆ. ಜಗತ್ತಿನ ಪ್ರತಿ ಘಟನೆಗಳಿಗೂ ಪ್ರತಿಕ್ರಿಯಿಸುತ್ತಾ ಈ ಮಹಿಳೆಯರು ಗಮನ ಸೆಳೆಯುತ್ತಿದ್ದಾರೆ. ಆದರೆ ಅವರಾರೂ ‘ಮದುವೆ ಮುಂಚಿನ ಸೆಕ್ಸ್ ಅಥವಾ ಮದುವೆಯಾಚೆಗಿನ ಸೆಕ್ಸ್’ ಅನ್ನು ಮಹಿಳಾ ಸಬಲೀಕರಣದ ಭಾಗವಾಗಿ ಮತ್ತು ಹೆಣ್ಣಿನ ಆಯ್ಕೆಯಾಗಿ ಕಂಡದ್ದು ಎಲ್ಲೂ ಸುದ್ದಿಯಾಗಿಲ್ಲ. ಇದೀಗ ಭಾರೀ ಸುದ್ದಿಯಲ್ಲಿರುವ ‘ಮೈ ಚಾಯ್ಸ್' ಎಂಬ ವೀಡಿಯೋ ಮಹಿಳಾ ಸಬಲೀಕರಣದ ಸುತ್ತ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್..' ಎಂದು ಆರಂಭವಾಗುವ ಮತ್ತು ಫ್ಯಾಶನ್ ಇಂಡಿಯಾ ಎಂಬ ಮಾಸ ಪತ್ರಿಕೆಯು ಹೊರ ತಂದಿರುವ ಈ ವೀಡಿಯೋ ಎಷ್ಟರ ಮಟ್ಟಿಗೆ ಮಹಿಳಾ ಸಬಲೀಕರಣದ ಪ್ರತಿನಿಧಿ? ‘ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ? ‘ನಾನು ಪ್ರಶ್ನಾತೀತೆ' ಎಂಬ ಅಹಮಿಕೆಯೊಂದು ‘ಮೈ ಚಾಯ್ಸ್' ವೀಡಿಯೋದ ಉದ್ದಕ್ಕೂ ರಾಚುತ್ತಿರುವುದು ಏನನ್ನು ಸೂಚಿಸುತ್ತದೆ? ಸ್ವೇಚ್ಛೆಗೂ ಆಯ್ಕೆಗೂ ನಡುವೆ ವ್ಯತ್ಯಾಸಗಳಿರುತ್ತವಲ್ಲವೇ? ಯಾವುದು ಸ್ವೇಚ್ಛೆ? ಯಾವುದು ಆಯ್ಕೆ? ಸರಿ ಮತ್ತು ತಪ್ಪುಗಳ ಹಂಗಿಲ್ಲದೇ ಬದುಕುವುದರ ಹೆಸರೇ ಮಹಿಳಾ ಸಬಲೀಕರಣವೇ? ಹಾಗಂತ, ನ್ಯಾಯ-ಅನ್ಯಾಯ, ನೈತಿಕ-ಅನೈತಿಕ, ಸರಿ-ತಪ್ಪು.. ಮುಂತಾದ ಪದಗಳು ಮತ್ತು ಅವು ಧ್ವನಿಸುವ ಮೌಲ್ಯಗಳನ್ನು ಹುಟ್ಟು ಹಾಕಿದ್ದು ಯಾರು? ಅದು ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಪಾಲನೆಯಲ್ಲಿರಬೇಕೆಂದು ಬಯಸುತ್ತಿರುವವರು ಯಾರು? ಬರೇ ಪುರುಷರೇ? ಮಹಿಳೆಯರೂ ಇವನ್ನು ಜೀವನ ಮೌಲ್ಯ ಎಂದು ನಂಬುತ್ತಿಲ್ಲವೇ? ಅಷ್ಟಕ್ಕೂ, ಇಂಥ ಯಾವ ಕಟ್ಟುಪಾಡುಗಳೂ ಇಲ್ಲದೇ ರಚನೆಯಾಗುವ ಸಮಾಜವೊಂದರ ಸ್ವರೂಪ ಹೇಗಿದ್ದೀತು? ಹೊತ್ತು-ಗೊತ್ತಿಲ್ಲದೇ ಮನೆಗೆ ಆಗಮಿಸುವ ಮತ್ತು ಮನೆಯಿಂದ ನಿರ್ಗಮಿಸುವ ಪತ್ನಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಈ ಬಗ್ಗೆ ಪತಿ ಮತ್ತು ಮಕ್ಕಳ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಪತ್ನಿಯ ಧಾಟಿಯಲ್ಲೇ ಪತಿಯೂ ಮಾತಾಡತೊಡಗಿದರೆ ಏನಾದೀತು? ಆತನೂ ಪ್ರಶ್ನಾತೀತವಾದರೆ ಮನೆ ಹೇಗಿದ್ದೀತು? ಹೀಗೆ ಆಲೋಚಿಸುವ ಯಾವ ಕುಟುಂಬ ಪೂರ್ಣಾಯುಷ್ಯ ಬಾಳಬಹುದು? ‘ನಾನು ಎಲ್ಲಿಗೂ ಹೋಗುವೆ, ಹೇಗೆ ಬೇಕಾದರೂ ಬದುಕುವೆ, ಅದು ನನ್ನ ಆಯ್ಕೆ..’ ಎಂದು ಮಹಿಳೆ ವಾದಿಸುವಾಗ ಪುರುಷನೂ ಹಾಗೆಯೇ ವಾದಿಸಬಹುದಲ್ಲವೇ? ಹೆಣ್ಣು ಪ್ರಶ್ನಾತೀತೆಯಾದರೆ ಗಂಡೂ ಪ್ರಶ್ನಾತೀತ. ಹಾಗಾದರೆ ಯಾರು ಪ್ರಶ್ನಾರ್ಹರು? ಪ್ರಶ್ನಾತೀತವಾಗಿ ಬೆಳೆಯುವುದೇ ಮಹಿಳಾ ಸಬಲೀಕರಣವೆಂದಾದರೆ ಆ ಸಬಲೀಕರಣ ಮಹಿಳೆಯರನ್ನು ಎತ್ತ ಕೊಂಡೊಯ್ಯಬಹುದು? ಯಾವ ಬಗೆಯ ಸಮಾಜವನ್ನು ಅದು ನಿರ್ಮಿಸಬಲ್ಲುದು?
    ಮಹಿಳಾ ಸಬಲೀಕರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಮತ್ತು ಹತ್ತು-ಹಲವು ಪುರಸ್ಕಾರಗಳನ್ನು ಪಡೆದಿರುವ ರೂಪ್‍ರೇಖಾ ವರ್ಮ ಅವರ ನಾಟಕದಲ್ಲಿ ಒಂದು ದೃಶ್ಯವಿದೆ.
   ತಾಯಿಯ ರೊಟ್ಟಿಯೂ ಉರುಟು
   ತಂದೆಯ ಪೈಸೆಯೂ ಉರುಟು
   ಚಂದ್ರನೂ ಉರುಟು
   ಸೂರ್ಯನೂ ಉರುಟು
   ಇಡೀ ಜಗತ್ತೇ ಉರುಟು ಉರುಟು
ಎಂದು ಪುಟ್ಟ ಹುಡುಗಿ ವಿೂನ ಹಾಡುತ್ತಿರುತ್ತಾಳೆ. ಅದನ್ನು ಕೇಳಿಸಿಕೊಂಡ ಚಿಕ್ಕಪ್ಪ ಆಕೆಯನ್ನು ಹತ್ತಿರ ಕರೆಯುತ್ತಾನೆ. ನಿನ್ನ ಹಾಡು ಸರಿಯಿಲ್ಲ ಅನ್ನುತ್ತಾನೆ. ಹುಡುಗಿಯ ಕಣ್ಣಲ್ಲಿ ಅಚ್ಚರಿ. ಏನು ತಪ್ಪು ಎಂದು ಪ್ರಶ್ನಿಸುತ್ತಾಳೆ. ಆತ ಹುಡುಗಿಯನ್ನು ಹತ್ತಿರ ಕೂರಿಸುತ್ತಾನೆ. ಈ ಹಾಡು ಏನು ಹೇಳುತ್ತದೆ ನೋಡು - ‘ಅಮ್ಮ ರೊಟ್ಟಿ ತಯಾರಿಸುತ್ತಾಳೆ, ಅಪ್ಪ ದುಡ್ಡು ತರುತ್ತಾನೆ’ ಎಂದು ತಾನೇ. ಯಾಕೆ ಅಮ್ಮ ದುಡ್ಡು ತರುತ್ತಾಳೆ, ಅಪ್ಪ ರೊಟ್ಟಿ ತಯಾರಿಸುತ್ತಾನೆ ಎಂದು ಹೇಳಿಲ್ಲ? ಹಾಗೂ ಆಗಬಹುದಲ್ಲವೇ ಮಗೂ... ಎಂದು ಪ್ರಶ್ನಿಸುತ್ತಾನೆ. ಹುಡುಗಿ ನಗುತ್ತಾಳೆ. ಚಿಕ್ಕಪ್ಪಾ.. ಅಮ್ಮ ರೊಟ್ಟಿ ತಯಾರಿಸದೇ ಅಪ್ಪ ರೊಟ್ಟಿ ತಯಾರಿಸುತ್ತಾರಾ? ನೀವೇನು ಚಿಕ್ಕಪ್ಪ ಹೀಗೆ ಕೇಳ್ತೀರಿ’ ಎಂದು ಹುಡುಗಿ ಹಲ್ಲು ಬಿಡುತ್ತಾಳೆ. ಚಿಕ್ಕಪ್ಪ ನಗುತ್ತಾರೆ. ‘ಹಾಗಾದರೆ, ಅಪ್ಪಂದಿರು ಯಾರೂ ರೊಟ್ಟಿ ತಯಾರಿಸುತ್ತಿಲ್ಲ ಎಂದು ಹೇಳಬಹುದಾ’ ಎಂದು ಹುಡುಗಿಯಲ್ಲಿ ಪ್ರಶ್ನಿಸುತ್ತಾರೆ. ಆಕೆ ಸಹಜ ದನಿಯಲ್ಲಿ, ‘ಹೌದು, ಯಾಕೆಂದರೆ ಅಪ್ಪ ಪುರುಷನಾಗಿದ್ದಾನೆ. ಪುರುಷರು ಅಡುಗೆ ಕೆಲಸ ಮಾಡುವುದಿಲ್ಲವಲ್ಲ’ ಅನ್ನುತ್ತಾಳೆ. ‘ಸರಿ ಮಗಳೇ, ಅಪ್ಪ ಪುರುಷನಾಗಿರುವುದರಿಂದ ರೊಟ್ಟಿ ತಯಾರಿಸುತ್ತಿಲ್ಲ ಅಲ್ಲವೇ. ಹಾಗಾದರೆ ನಿನ್ನೆ ನಾವು ಡಾಬಾಕ್ಕೆ ಹೋಗಿ ತಿಂಡಿ ತಿಂದೆವಲ್ಲ. ಅಲ್ಲಿ ರೊಟ್ಟಿ ತಯಾರಿಸಿದ್ದು ಯಾರೂಂತ ಹೇಳಬಲ್ಲೆಯಾ? ನೆನಪು ಮಾಡು’ ಅನ್ನುತ್ತಾರೆ. ಹುಡುಗಿ ಕೆನ್ನೆಗೊಮ್ಮೆ, ಗಲ್ಲಕ್ಕೊಮ್ಮೆ ಕೈಯಿಟ್ಟು ‘ಅದೂ.. ಅದೂ.. ಡಾಬಾವಾಲ ಅಂಕಲ್’ ಅನ್ನುತ್ತಾಳೆ. ‘ಡಾಬಾವಾಲ ಅಂಕಲ್ ಪುರುಷನೋ ಸ್ತ್ರೀಯೋ’ ಎಂದು ಪ್ರಶ್ನಿಸುತ್ತಾರೆ ಚಿಕ್ಕಪ್ಪ. ಪುರುಷ ಅನ್ನುತ್ತಾಳೆ. ‘ಹಾಗಾದರೆ, ನಿನ್ನ ಹಾಡು ತಪ್ಪಲ್ಲವೇ? ಪುರುಷರೂ ರೊಟ್ಟಿ ತಯಾರಿಸುತ್ತಾರಲ್ಲವೇ ಮಗಳೇ’ ಅನ್ನುತ್ತಾರೆ. ಹುಡುಗಿ, ‘ಸರಿ ಚಿಕ್ಕಪ್ಪ, ಪುರುಷರೂ ರೊಟ್ಟಿ ತಯಾರಿಸುತ್ತಾರೆ’ ಎಂದು ಒಪ್ಪಿಕೊಳ್ಳುತ್ತಾಳೆ. ಚಿಕ್ಕಪ್ಪ ಆಕೆಯ ಬೆನ್ನು ತಟ್ಟುತ್ತಾರೆ. ನನ್ನ ವಿೂನ ತುಂಬಾ ಜಾಣೆ ಅನ್ನುತ್ತಾರೆ. ಹುಡುಗಿ ಚಿಕ್ಕಪ್ಪನ ಶಹಬಾಸ್‍ಗಿರಿಯನ್ನು ಅನುಭವಿಸುತ್ತಿರುವಾಗ ಅವರು ಮತ್ತೆ ಪ್ರಶ್ನಿಸುತ್ತಾರೆ, ‘ಮಗಳೇ, ಇನ್ನು ‘ತಾಯಿಯ ಪೈಸೆಯೂ ಉರುಟು ಉರುಟು’ ಎಂದು ಹಾಡಬಹುದಲ್ಲವೇ? ಅದರಲ್ಲಿ ತಪ್ಪಿಲ್ಲವಲ್ಲ..' ಎಂದು ಕೇಳುತ್ತಾರೆ. ಆದರೆ ಹುಡುಗಿ ಒಪ್ಪುವುದಿಲ್ಲ. ಅಮ್ಮ ದುಡ್ಡು ತರುವುದಿಲ್ಲವಲ್ಲ, ಹೊರಗೆ ದುಡಿದು ದುಡ್ಡು ತರುವವ ತಂದೆಯಲ್ಲವೇ.. ಎಂಬುದು ವಿೂನಳ ವಾದ. ಚಿಕ್ಕಪ್ಪ ಒಪ್ಪುವುದಿಲ್ಲ. ತಾಯಿ ದುಡಿಯುವುದಿಲ್ಲ ಎಂದು ನಿನಗೆ ಯಾರು ಹೇಳಿದ್ದು ಎಂದು ಪ್ರಶ್ನಿಸುತ್ತಾರೆ. ಹುಡುಗಿಗೆ ಇರುಸು ಮುರುಸು. ಯಾರೇಕೆ ಹೇಳ್ಬೇಕು ಚಿಕ್ಕಪ್ಪಾ ಎಂದಾಕೆ ಪ್ರಶ್ನಿಸುತ್ತಾಳೆ. ತಾಯಿ ದಿನಾ ಮನೆಯಲ್ಲೇ ಇರುತ್ತಾರಲ್ಲ, ತಂದೆ ಕಚೇರಿಗೆ ಹೋಗಿ ದುಡ್ಡು ಸಂಪಾದಿಸುತ್ತಾರೆ ಎಂದು ಆಕೆ ಸಮರ್ಥಿಸಿಕೊಳ್ಳುತ್ತಾಳೆ. ಆಗ ಚಿಕ್ಕಪ್ಪ ಮಾತಿಗಿಳಿಯುತ್ತಾರೆ. ‘ನಿಜ, ನಿನ್ನ ತಾಯಿ ಇರೋದು ಮನೆಯಲ್ಲೇ. ಆದರೆ ಮನೆಯ ಕೆಲಸ-ಕಾರ್ಯಗಳನ್ನೆಲ್ಲ ಮಾಡುತ್ತಿರುವವರು ಯಾರು, ತಾಯಿಯಲ್ಲವೇ? ಒಂದು ವೇಳೆ ತಾಯಿ ಮಾಡುವ ಕೆಲಸಗಳನ್ನೆಲ್ಲ ಇನ್ನೊಬ್ಬರಿಂದ ಮಾಡಿಸುವುದಾದರೆ ನಾವೆಷ್ಟು ಸಂಬಳ ಕೊಡಬೇಕಾದೀತು? ಆ ಕೆಲಸ ತಾಯಿ ಮಾಡುತ್ತಾಳೆಂದಾದರೆ, ಆ ಸಂಬಳದ ದುಡ್ಡನ್ನೆಲ್ಲಾ ಆಕೆ ಮನೆಗಾಗಿ ಉಳಿಸುತ್ತಾಳೆ ಎಂದಾಗುತ್ತದೆ. ಅಲ್ಲದೇ, ಎಷ್ಟೋ ತಾಯಂದಿರು ಮನೆಯಿಂದ ಹೊರಗೆ ಹೋಗಿಯೂ ದುಡಿಯುತ್ತಿದ್ದಾರೆ. ನಿನ್ನ ಚಿಕ್ಕಮ್ಮನನ್ನು ನೋಡು ಅಥವಾ ನಿನ್ನ ಗೆಳತಿ ಪ್ರಣತಿಯ ತಾಯಿಯನ್ನೋ ಅಸ್ಮಾಳ ತಾಯಿಯನ್ನೋ ನೋಡು. ಅವರೆಲ್ಲಾ ದುಡ್ಡು ಸಂಪಾದನೆಗಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರಲ್ಲವೇ?..’ ಹುಡುಗಿಗೆ ಅರ್ಥವಾಗತೊಡಗುತ್ತದೆ. ಆಕೆ ತನ್ನ ಹಾಡನ್ನು ಬದಲಿಸಿ ಹಾಡುತ್ತಾಳೆ. ‘ತಾಯಿಯ ರೊಟ್ಟಿಯೂ ಉರುಟು, ತಂದೆಯ ರೊಟ್ಟಿಯೂ ಉರುಟು. ತಾಯಿಯ ಪೈಸೆಯೂ ಉರುಟು, ತಂದೆಯ ಪೈಸೆಯೂ ಉರುಟು..’ ಮಗು ಹೀಗೆ ಹಾಡುತ್ತಾ ಹೋದಂತೆ ಮಹಿಳೆಯ ವ್ಯಕ್ತಿತ್ವವು ಪುರುಷನೆತ್ತರಕ್ಕೆ ಏರುತ್ತಾ ಹೋಗುತ್ತದೆ. ಹೆಣ್ಣಿನ ಕುರಿತಂತೆ ಇರುವ ತಾತ್ಸಾರ ಭಾವನೆಗೆ ಏಟು ಬೀಳುತ್ತಲೇ ಇರುತ್ತದೆ.
   ನಿಜವಾಗಿ, ರೂಪ್‍ರೇಖಾ ವರ್ಮಾರ ಈ ನಾಟಕದ ಮುಂದೆ ಹೋಮಿ ಅದಜನಿಯ ಅವರ ಈ ‘ಮೈ ಚಾಯ್ಸ್’ ಏನೇನೂ ಅಲ್ಲ. ವಿೂನ ಮತ್ತು ಆ ಚಿಕ್ಕಪ್ಪರ ನಡುವಿನ ಸಂಭಾಷಣೆ ಎಷ್ಟು ಹೃದ್ಯವೆಂದರೆ ಓದುತ್ತಾ ಓದುತ್ತಾ ಆ ಮಗು ನಮ್ಮೊಳಗೇ ಇಳಿಯುತ್ತದೆ. ಅದರ ಪುಟ್ಟ ಪುಟ್ಟ ಅಚ್ಚರಿಗಳು ನಮ್ಮೊಳಗನ್ನು ನಾಟುತ್ತದೆ, ಕದಡುತ್ತದೆ, ಕುಕ್ಕುತ್ತದೆ. ಆ ಚಿಕ್ಕಪ್ಪನಾದರೋ ಪುರುಷ ಪ್ರಧಾನ ಸಮಾಜದ ಅಹಮಿಕೆಗೆ ಒಂದೊಂದೇ ಏಟುಗಳನ್ನು ಕೊಡುತ್ತಾ ಹೋಗುತ್ತಾರೆ. ಆ ಏಟುಗಳು ಎಷ್ಟು ನಾಜೂಕಿನವು ಎಂದರೆ, ಅವು ಏಟುಗಳಂತೆ ಕಾಣುವುದೇ ಇಲ್ಲ. ರೂಪ್‍ರೇಖಾ ವರ್ಮಾರ ಮಹಿಳಾ ಸಬಲೀಕರಣಕ್ಕೂ ಮೈ ಚಾಯ್ಸ್ ನ ಮಹಿಳಾ ಸಬಲೀಕರಣಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಮಾತು, ಸಂಭಾಷಣೆ, ಹಾವ-ಭಾವ, ವಸ್ತು.. ಎಲ್ಲದರಲ್ಲೂ ಆ ಮಗು ಮತ್ತು ಚಿಕ್ಕಪ್ಪನೆದುರು ಮೈ ಚಾಯ್ಸ್ ಸೋಲುತ್ತದೆ. ದೀಪಿಕಾ ಪಡುಕೋಣೆಯ ಮಾತುಗಳಲ್ಲಿ ಮನಸ್ಸನ್ನು ಕದಡುವ ಕಳಕಳಿಯಿಲ್ಲ; ಆಕ್ರೋಶ, ಅಹಮಿಕೆ, ಗಡಸುತನವಷ್ಟೇ ಇದೆ. ಹಾಗಂತ, ರೂಪ್‍ರೇಖಾ ವರ್ಮಾರ ನಾಟಕದ ಜೊತೆ ಮೈ ಚಾಯ್ಸ್ ಅನ್ನು ಹೋಲಿಸದೇ ಒಂದು ಒಂಟಿ ವೀಡಿಯೋವಾಗಿ ನೋಡಿದರೂ ಅದು ಮಹಿಳಾ ಸಬಲೀಕರಣಕ್ಕಿಂತ ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ಗೆ ಪ್ರತ್ಯುತ್ತರ ಕೊಡಲು ತಯಾರಿಸಲಾದ ವೀಡಿಯೋದಂತೆ ಕಾಣಿಸುತ್ತದೆ. ಮಹಿಳೆಯರು ಹೇಗಿರಬೇಕೆಂದು ಆರೋಪಿ ಮುಖೇಶ್ ಸಿಂಗ್ ‘ಇಂಡಿಯಾಸ್ ಡಾಟರ್’ನಲ್ಲಿ ಹೇಳುತ್ತಾನೆ. ಆತನ ವಕೀಲರಿಬ್ಬರೂ ಆತನಂತೆಯೇ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಿಜವಾಗಿ, ಅವರ ಮಹಿಳಾ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯೆಂಬಂತೆ ಮೈ ಚಾಯ್ಸ್ ಅನ್ನು ಪರಿಗಣಿಸಬಹುದೇ ಹೊರತು ಮಹಿಳಾ ಸಬಲೀಕರಣದ ಸಂಕೇತವಾಗಿ ಅಲ್ಲ. ಮೈ ಚಾಯ್ಸ್ ನಲ್ಲಿ ಮಹಿಳೆಯ ಜಗತ್ತು ತೀರಾ ಸೀಮಿತವಾದದ್ದು. ಓರ್ವ ಸಿನಿಮಾ ತಾರೆಯ ಬೀಸು ಹೇಳಿಕೆಗಳಷ್ಟೇ ಮೈ ಚಾಯ್ಸ್ ನಲ್ಲಿದೆ. ಅದು ಬಿಟ್ಟು ಮಹಿಳಾ ಸಬಲೀಕರಣವನ್ನು ಅದು ಧ್ವನಿಸುವುದೇ ಇಲ್ಲ. ಮಹಿಳಾ ಜಗತ್ತಿನ ವಿವಿಧ ಮುಖಗಳಿಗೆ ಅದರಲ್ಲಿ ಸ್ಥಾನವೂ ಇಲ್ಲ. ಸೆಕ್ಸ್ ಅನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ವೀಡಿಯೋ ಅದು. ಆದರೆ ಅದರಾಚೆಗೆ ಬಹುದೊಡ್ಡ ಮಹಿಳಾ ಗುಂಪಿದೆ. ಅವರ ಸಬಲೀಕರಣಕ್ಕೆ ಈ ವೀಡಿಯೋದಲ್ಲಿ ಏನೇನೂ ಇಲ್ಲ. ಶಿಕ್ಷಣ, ಉದ್ಯೋಗ, ಗೃಹಹಿಂಸೆ, ಅತ್ಯಾಚಾರ, ವರದಕ್ಷಿಣೆ, ಭ್ರೂಣಹತ್ಯೆ, ಲಿಂಗ-ವೇತನ ತಾರತಮ್ಯ, ಲೈಂಗಿಕ ದೌರ್ಜನ್ಯ.. ಹೀಗೆ ಸಬಲೀಕರಣಗೊಳ್ಳದ ಅಸಂಖ್ಯ ಸಮಸ್ಯೆಗಳಿವೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್’ ಎಂಬ ಮಾತುಗಳು ಮಹಿಳಾ ಜಗತ್ತನ್ನು ಈ ಸಮಸ್ಯೆಗಳಿಂದ ಮುಕ್ತಗೊಳಿಸುವುದಕ್ಕೆ ಖಂಡಿತ ಪರ್ಯಾಪ್ತವಲ್ಲ. ಒಂದು ರೀತಿಯಲ್ಲಿ, ಈ ವೀಡಿಯೋ ಪರಿಹಾರ ಅಲ್ಲ, ಸಮಸ್ಯೆ. ಸಬಲೀಕರಣವಲ್ಲ, ದುರ್ಬಲೀಕರಣ. ಸಿನಿಮಾ ತಾರೆಯೋರ್ವಳು ಸಿನಿಮಾದಲ್ಲಿ ಹೊಡೆಯಬಹುದಾದ ಡಯಲಾಗಷ್ಟೇ ಅದು. ದೀಪಿಕಾ ಪಡುಕೋಣೆ ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
   ಒಂದು ವೇಳೆ ದೀಪಿಕಾ ಪಡುಕೋಣೆಯ ಬದಲು ವಿೂನ ಮತ್ತು ಆ ಚಿಕ್ಕಪ್ಪ ರ ಮುದ್ದು ಮುದ್ದು ಸಂಭಾಷಣೆ ಮತ್ತು ದೃಶ್ಯಗಳು ಮೈ ಚಾಯ್ಸ್ ನಲ್ಲಿ ಮೂಡಿ ಬರುತ್ತಿದ್ದರೆ ಹೇಗಿರುತ್ತಿತ್ತು? ಅದು ವೀಕ್ಷಕರನ್ನು ಹೇಗೆಲ್ಲ ಕಾಡಬಹುದಿತ್ತು? ಸಬಲೀಕರಣಗೊಲ್ಲದ  ಮಹಿಳಾ ಜಗತ್ತಿನ ಮೇಲೆ ಮತ್ತು ಅದಕ್ಕೆ ಅಡ್ಡಿಯಾಗಿರುವ ಪುರುಷ ಮನೋಭಾವದ ಮೇಲೆ ಅದು ಯಾವ ಪ್ರಭಾವವನ್ನು ಬೀರಬಹುದಿತ್ತು?

Tuesday, March 31, 2015

ನ್ಯೂಸ್ ಚಾನೆಲ್‍ಗಳು ನಡೆಸುವ `ಹತ್ಯೆಯ' ತನಿಖೆಯನ್ನು ಯಾರಿಗೆ ಒಪ್ಪಿಸೋಣ?

    ವೃಂದಾ ಗ್ರೋವರ್, ಸುಧಾ ರಾಮಲಿಂಗಂ, ಪಮೇಲ ಪಿಲಿಪೋನ್, ಅರುಣಾ ರಾಯ್, ಅಂಜಲಿ ಭಾರಧ್ವಾಜ್, ಕವಿತಾ ಕೃಷ್ಣನ್, ಕವಿತಾ ಶ್ರೀವಾಸ್ತವ.. ಇವರೆಲ್ಲ ಫೆ. 26ರಂದು ಟೈಮ್ಸ್ ನೌ ಟಿ.ವಿ. ಚಾನೆಲ್‍ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಬಹಿರಂಗ ಪತ್ರವೊಂದನ್ನು ಬರೆದರು. ‘ನಮ್ಮ ವಿರುದ್ಧದ ದ್ವೇಷ ಭಾಷಣವನ್ನು ನಿಲ್ಲಿಸು’ (Stop fostering hate speech against us) ಎಂಬ ಶೀರ್ಷಿಕೆಯಲ್ಲಿದ್ದ ಆ ಪತ್ರದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿದ್ದುವು. ಮಾಧ್ಯಮ ನೀತಿ ಸಂಹಿತೆಯು ನ್ಯೂಸ್‍ರೂಮ್‍ನಿಂದ ನಾಪತ್ತೆಯಾಗಿರುವ ಬಗ್ಗೆ ಆಕ್ಷೇಪಗಳಿದ್ದುವು. ಸುಪ್ರೀಮ್ ಕೋರ್ಟಿನ ನ್ಯಾಯವಾದಿಗಳೂ, ಆರ್.ಟಿ.ಐ. ಕಾರ್ಯಕರ್ತರೂ, ನಾಗರಿಕ ಹಕ್ಕು ಹೋರಾಟಗಾರರೂ, ಹಿರಿಯ ಪತ್ರಕರ್ತರೂ ಆಗಿರುವ ಇವರೆಲ್ಲ ಅರ್ನಾಬ್ ಗೋಸ್ವಾಮಿಯ ಆ್ಯಂಕರಿಂಗ್ ವಿಧಾನವನ್ನು ಪ್ರಶ್ನಿಸಿದರು. ಪ್ರತಿದಿನ ರಾತ್ರಿ 9 ಗಂಟೆಗೆ ಅವರು ನಡೆಸಿಕೊಡುವ ‘ನ್ಯೂಸ್ ಅವರ್' (News hour ) ಚರ್ಚಾ ಕಾರ್ಯಕ್ರಮವು ಹೇಗೆ ನ್ಯಾಶನಲ್ ಬ್ರಾಡ್‍ಕಾಸ್ಟಿಂಗ್ ಅಥಾರಿಟಿಯ (NBC) ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂಬುದನ್ನು ಬೊಟ್ಟು ಮಾಡಿದರು. ತನ್ನ ನಿಲುವಿಗೆ ವಿರುದ್ಧವಾಗಿರುವವರನ್ನು ಕಡೆಗಣಿಸುವ ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಅರ್ನಾಬ್‍ರ ಅಬ್ಬರದ ವರ್ತನೆಯನ್ನು ಖಂಡಿಸಿದರು. ಇದಕ್ಕೆ ಉದಾಹರಣೆಯಾಗಿ ಅವರು ಫೆ. 17 ಮತ್ತು 18ರಂದು ನಡೆದ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಮಧ್ಯ ಪ್ರದೇಶದ ಮಹಾನ್ ಎಂಬಲ್ಲಿ ಎಸ್ಸಾರ್ (Essar) ಬಹುರಾಷ್ಟ್ರೀಯ ಕಂಪೆನಿಯು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತಂತೆ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರಿಗೆ ಮನವರಿಕೆ ಮಾಡಿಸಲು ಗ್ರೀನ್‍ಪೀಸ್ ಸಂಘಟನೆಯ ಪ್ರಿಯಾ ಪಿಳ್ಳೆ ಬ್ರಿಟನ್‍ಗೆ ಹೋಗುವುದರಲ್ಲಿದ್ದರು. ಇದನ್ನು ಅರಿತ ಕೇಂದ್ರ ಸರಕಾರ ಅವರ ಪ್ರಯಾಣವನ್ನು ತಡೆಹಿಡಿಯಿತು. ಅವರ ಪಾಸ್‍ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಂಡಿತು. ನಿಜವಾಗಿ, ಎಸ್ಸಾರ್ ಕಂಪೆನಿಯ ಮುಖ್ಯ ಕೇಂದ್ರವಿರುವುದು ಬ್ರಿಟನ್‍ನಲ್ಲಿ. ಆ ಹಿನ್ನೆಲೆಯಲ್ಲಿ ಪ್ರಿಯಾ ಪಿಳ್ಳೆಯವರ ಬ್ರಿಟನ್ ಪ್ರವಾಸ ಯಾವ ರೀತಿಯಲ್ಲೂ ಅನುಚಿತವಾಗಿರಲಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ಫೆ. 17ರಂದು ತನ್ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಚರ್ಚಿಸಿದರು. ಆದರೆ ಚರ್ಚೆ ಎಷ್ಟು ಏಕಮುಖವಾಗಿತ್ತೆಂದರೆ, ಅವರು ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಎಂದರು. ದೇಶವಿರೋಧಿಗಳೆಂದರು. ಗ್ರೀನ್‍ಪೀಸನ್ನು ಖಂಡಿಸುವ ಅಭಿಪ್ರಾಯಗಳಿಗೆ ಧಾರಾಳ ಸಮಯಾವಕಾಶ ಕೊಟ್ಟ ಅವರು ಅದನ್ನು ಸಮರ್ಥಿಸುವವರಿಗೆ ಏನನ್ನೂ ಕೊಡಲಿಲ್ಲ. ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಗಳು, ದೇಶವಿರೋಧಿಗಳು, ನಕ್ಸಲೈಟ್ ಬೆಂಬಲಿಗರು ಎಂದು ಕರೆಯುವುದಕ್ಕೆ ಅರ್ನಾಬ್‍ಗೆ ಏನು ಹಕ್ಕಿದೆ? ಒಂದು ಚಾನೆಲ್ ಹೀಗೆ ಬೇಕಾಬಿಟ್ಟಿಯಾಗಿ ಜನರನ್ನು ವಿಭಜಿಸುವುದು ಬೇಜವಾಬ್ದಾರಿತನದ್ದು. ಕಾರ್ಯಕ್ರಮವನ್ನು ನಡೆಸಿಕೊಡುವ ವ್ಯಕ್ತಿಯೆಂಬ (ಆ್ಯಂಕರ್) ನೆಲೆಯಲ್ಲಿ ಇರಲೇಬೇಕಾದ ತಟಸ್ಥ ನಿಲುವು, ನ್ಯಾಯ, ನಿಷ್ಪಪಕ್ಷಪಾತತನ ಮುಂತಾದ ಮೌಲ್ಯಗಳು ಅರ್ನಾಬ್‍ರಲ್ಲಿ ಕಾಣೆಯಾಗಿರುವುದಕ್ಕಾಗಿ ನಾವು ಟೈಮ್ಸ್ ನೌಗೆ ಬಹಿಷ್ಕಾರ ಹಾಕಿದ್ದೇವೆ ಎಂದು ಪತ್ರದಲ್ಲಿ ಅವರು ಘೋಷಿಸಿದರು.
    ನಿಜವಾಗಿ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಪತ್ರ ಬಹಳ ಮುಖ್ಯವಾದುದು. ಇದೇ ವೇಳೆ ಡಿ.ಕೆ. ರವಿಯ ಸಾವನ್ನು ಎದುರಿಟ್ಟುಕೊಂಡು ಕನ್ನಡದ ನ್ಯೂಸ್ ಚಾನೆಲ್‍ಗಳು ನಡೆಸಿದ ಚರ್ಚೆಯ ಸ್ವರೂಪವನ್ನೂ ಇಲ್ಲಿ ಎತ್ತಿಕೊಳ್ಳಬಹುದು. 1976ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಾದ ಪೀಟರ್ ಫಿಂಚ್  ಹೇಳಿದಂತೆ, “ಟಿ.ವಿ. ಎಂಬುದು ಅಮ್ಯೂಸ್‍ಮೆಂಟ್ ಪಾರ್ಕೇ? ಅದೊಂದು ಸರ್ಕಸ್ ಕಂಪೆನಿಯೇ? ದೊಂಬರಾಟದವರ ಗುಂಪೇ? ಅದನ್ನು ಮತ್ತು ಅದರಲ್ಲಿ ಪ್ರಸಾರವಾಗುವುದನ್ನು ವೀಕ್ಷಕರು ಸೀರಿಯಸ್ಸಾಗಿ ಪರಿಗಣಿಸಬಾರದೇ?..” ಇಂಥ ಅನುಮಾನ ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಿದೆ. ಬೇಕಾದರೆ, ಟೈಮ್ಸ್ ನೌನ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನೇ ಎತ್ತಿಕೊಳ್ಳಿ. ಆ ದಿನದ ಪ್ರಮುಖ ಇಶ್ಯೂವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ರಾತ್ರಿ 9 ಗಂಟೆಗೆ ಕಾಣಿಸಿಕೊಳ್ಳುತ್ತಾರೆ. ಚಾನೆಲ್‍ನಲ್ಲಿ 10-12 ಮಂದಿಯನ್ನು ಕೂರಿಸಿ ಚರ್ಚೆ ಆರಂಭಿಸುತ್ತಾರೆ. ಯಾರನ್ನೂ ಅವರು ಮಾತಾಡಲು ಬಿಡುವುದಿಲ್ಲ. ಅವರು ಪ್ರಶ್ನೆ ಎಸೆಯುತ್ತಾರೆ. ಉತ್ತರ ಬರುವ ಮೊದಲೇ ಮತ್ತೆ ಮಾತಾಡಿ ತನ್ನ ಅಭಿಪ್ರಾಯವನ್ನೇ ಅಂತಿಮ ಗೊಳಿಸುತ್ತಾರೆ. ಆದ್ದರಿಂದಲೇ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ಟಿ.ವಿ. ಸ್ಕ್ರೀನ್‍ನಲ್ಲಿ ಆಗಾಗ ಇಣುಕಿ ಮಾಯವಾಗುತ್ತಾರೆ. ಅಷ್ಟಕ್ಕೂ, ಮಾಧ್ಯಮಗಳಿಗೆ ಕೆಲವು ನೀತಿ ಸಂಹಿತೆಗಳಿವೆ. ""TV News channels must provide for neutrality by offering equality for all affected parties, players and actors in any dispute or conflict to present their point of view. News channels must strive to ensure that allegations are not portrayed as fact and charges are not conveyed as an act of guilt." "... avoid... broadcasting content that is malicious, biased, regressive, knowingly inaccurate, hurtful, misleading...." NBA..." ಯ ಈ ನೀತಿ ಸಂಹಿತೆಯನ್ನು ಟೈಮ್ಸ್ ನೌ ಸಹಿತ ಈ ದೇಶದಲ್ಲಿರುವ ಸುಮಾರು 400ರಷ್ಟು ಸುದ್ದಿ ಚಾನೆಲ್‍ಗಳಲ್ಲಿ ಎಷ್ಟು ಚಾನೆಲ್‍ಗಳು ಪಾಲಿಸುತ್ತಿವೆ? ಇವತ್ತು ಅರ್ನಾಬ್ ಒಂಟಿಯಲ್ಲ. ಮಾಧ್ಯಮ ನೀತಿ ಸಂಹಿತೆಯನ್ನೆಲ್ಲ ಗಾಳಿಗೆ ತೂರಿ ತಾನೇ ಸರಿ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅರ್ನಾಬ್‍ರಿಂದ ಪ್ರಭಾವಿತರಾದವರು ಇವತ್ತು ವಿವಿಧ ಚಾನೆಲ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯೂಸ್‍ಎಕ್ಸ್ ನಲ್ಲಿ ರಾಹುಲ್ ಶಿವಶಂಕರ್ ಅನ್ನುವ ಆ್ಯಂಕರ್ ಅರ್ನಾಬ್‍ರನ್ನೇ ಕಾಪಿ ಮಾಡುತ್ತಿದ್ದಾರೆ. ಝೀ ಬಿಸಿನೆಸ್‍ನಲ್ಲಿ ಅಮಿಶ್ ದೇವಗನ್, ಹೆಡ್‍ಲೈನ್ ಟುಡೇಯಲ್ಲಿ ಗೌರವ್ ಸಾವಂತ್‍ರೆಲ್ಲ ಅರ್ನಾಬ್‍ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಕನ್ನಡದ ಒಂದೆರಡು ನ್ಯೂಸ್ ಚಾನೆಲ್‍ಗಳಲ್ಲೂ ಈ ಬಗೆಯ ಆ್ಯಂಕರ್‍ಗಳಿದ್ದಾರೆ. ವಿರೋಧಿ ದನಿಯನ್ನು ಮಟ್ಟ ಹಾಕುವುದೇ ಆ್ಯಂಕರ್‍ನ ಕೆಲಸ ಎಂದು ನಂಬಿರುವವರ ಮಧ್ಯೆ ಪಾರದರ್ಶಕ, ತಟಸ್ಥ, ನ್ಯಾಯಯುತ.. ಮುಂತಾದ ಮೌಲ್ಯಗಳೆಲ್ಲ ಗೌರವ ಗಿಟ್ಟಿಸಿಕೊಳ್ಳುವುದು ಹೇಗೆ? ಅಸ್ಸಾಮ್‍ನಲ್ಲಿ ಹುಟ್ಟಿ ಆಕ್ಸ್ ಫರ್ಡ್‍ನಲ್ಲಿ ಕಲಿತಿರುವ ಅರ್ನಾಬ್‍ರ ಮೇಲೆ ಅಮೇರಿಕದ ಫಾಕ್ಸ್ ನ್ಯೂಸ್ ಮತ್ತು MSNBC ಗಳು ಪ್ರಭಾವ ಬೀರಿರಬಹುದು. ಫಾಕ್ಸ್ ನ್ಯೂಸ್‍ನ ಬಿಲ್ ರೈಲಿಯನ್ನು ಅರ್ನಾಬ್ ಅನುಸರಿಸುತ್ತಿದ್ದಾರೆ ಎಂಬ ಆರೋಪ ನಿಜವಿರಲೂಬಹುದು. ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕೆಂದು ಅರ್ನಾಬ್ ಆಗ್ರಹಿಸಿದುದಕ್ಕೂ ಅವರ ತಂದೆ ಕರ್ನಲ್ ಮನೋರಂಜನ್‍ರು ಬಿಜೆಪಿ ಸದಸ್ಯರಾಗಿರುವುದಕ್ಕೂ ಮತ್ತು 1998ರಲ್ಲಿ ಅವರು ಗುವಾಹಟಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದುದಕ್ಕೂ ಸಂಬಂಧ ಇಲ್ಲದೇ ಇರಬಹುದು. ಆದರೂ ಓರ್ವ ವ್ಯಕ್ತಿಯಾಗಿ ಮತ್ತು ಚಾನೆಲ್‍ನ ಮುಖ್ಯಸ್ಥರಾಗಿ ಅರ್ನಾಬ್‍ರಿಗೆ ಸಾಮಾಜಿಕ ಜವಾಬ್ದಾರಿ ಇರಬೇಡವೇ? ಇದು ಕೇವಲ ಅರ್ನಾಬ್‍ರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಟೈಮ್ಸ್ ನೌ ಎಂಬುದು ಇಂಗ್ಲಿಷ್ ಚಾನೆಲ್ ಆದುದರಿಂದ ಅದರ ಪ್ರತಿ ಕಾರ್ಯಕ್ರಮಗಳೂ ಸುದ್ದಿಗೀಡಾಗುತ್ತವೆ. ವೀಕ್ಷಕರೂ ದೊಡ್ಡ ಮಟ್ಟದಲ್ಲಿರುತ್ತಾರೆ. ಹಾಗಂತ, ಅರ್ನಾಬ್‍ರಂತೆ ಏಕಮುಖವಾಗಿ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್‍ಗಳು ಕನ್ನಡದಲ್ಲೂ ಇವೆ. ಡಿ.ಕೆ. ರವಿ ಸಾವಿನ ವಿಷಯದಲ್ಲಿ ಕನ್ನಡದ ಪ್ರಮುಖ ಚಾನೆಲ್‍ಗಳು ವರ್ತಿಸಿದ್ದು ಬಹುತೇಕ ಅರ್ನಾಬ್‍ರಂತೆಯೇ. CBI ಯ ಹೊರತಾದ ಯಾವ ತನಿಖೆಯೂ ಸೂಕ್ತವಲ್ಲ ಎಂದು ಅವೆಲ್ಲ ಇಡೀ ದಿನ ವಾದಿಸಿದುವು. ರವಿ ಸಾವನ್ನು ಕೊಲೆ ಎಂದು ಸಾಬೀತುಪಡಿಸುವುದಕ್ಕಾಗಿ ವದಂತಿಗಳಿಗೆ ರೆಕ್ಕೆ-ಪುಕ್ಕ ಸೇರಿಸಿ ಸುದ್ದಿ ರೂಪದಲ್ಲಿ ಕೊಟ್ಟವು. ಈ ಸಂದರ್ಭದಲ್ಲಿ ಚಾನೆಲ್‍ಗಳ ಶೈಲಿ ಎಷ್ಟು ಏಕಪಕ್ಷೀಯವಾಗಿತ್ತೆಂದರೆ ಕೊಲೆಯಲ್ಲದ ಇನ್ನಾವುದನ್ನು ಊಹಿಸುವುದೂ ಅಪರಾಧವಾದೀತೋ ಎಂಬ ರೀತಿಯಲ್ಲಿತ್ತು. ಇದೇ ವೇಳೆ, ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಅವರು ಚಾನೆಲ್‍ಗಳ ಈ ‘ಅರ್ನಾಬ್ ಕಾಯಿಲೆ’ಯನ್ನು ಟೀಕಿಸುತ್ತಾ, “ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರದ ಅಧೀನದಲ್ಲಿದೆಯಲ್ಲ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಅನ್ನುವುದಾದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯು ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್.ಬಿ.ಐ., ಇಂಟರ್‍ಪೋಲ್, ವಿಶ್ವಸಂಸ್ಥೆ?..” ಎಂಬ ಪ್ರಶ್ನೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹಾಗಂತ, ರವಿ ಪ್ರಕರಣ ಮೊದಲನೆಯದ್ದಲ್ಲ. ಬಾಂಬ್ ಸ್ಫೋಟದ ಸಂದರ್ಭದಲ್ಲಿ ಈ ಬಗೆಯ ತಪ್ಪುಗಳನ್ನು ಹೆಚ್ಚಿನೆಲ್ಲ ಚಾನೆಲ್‍ಗಳೂ ಮಾಡಿವೆ. ಬೆಂಗಳೂರಿನಲ್ಲಿ ಕೆಲವು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವರೆಂದು ಆರೋಪಿಸಿ ಮುತೀಉರ್ರಹ್ಮಾನ್ ಎಂಬ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತನ ಸಹಿತ ಕೆಲವರ ಬಂಧನವಾದಾಗ ಇವೇ ಚಾನೆಲ್‍ಗಳು ಆ ಸುದ್ದಿಯನ್ನು ಹಬ್ಬದಂತೆ ಆಚರಿಸಿದ್ದುವು. ಪತ್ರಿಕೆಗಳಲ್ಲೂ ‘ಅರ್ನಾಬ್ ಪ್ರೇರಿತ’ ಸುದ್ದಿಗಳು ಪ್ರಕಟವಾಗಿದ್ದುವು. ಹಾಗಾದರೆ ಸುದ್ದಿ ಮಾಧ್ಯಮಗಳನ್ನು ಈ ಕಾಯಿಲೆಯಿಂದ ಮುಕ್ತಗೊಳಿಸುವುದು ಹೇಗೆ? ಅದಕ್ಕೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ವಿಧಾನ ಯಾವುದು? ಹಾಗಂತ ಟೈಮ್ಸ್ ನೌ ಅನ್ನೇ ವೀಕ್ಷಿಸಬೇಕು ಎಂಬ ಒತ್ತಾಯವನ್ನು ಯಾರೂ ಹೇರುತ್ತಿಲ್ಲ ನಿಜ. ವೀಕ್ಷಕರ ಮುಂದೆ ಇವತ್ತು ಧಾರಾಳ ಆಯ್ಕೆಗಳಿವೆ. ಪಬ್ಲಿಕ್ ಬೇಡ ಅಂದರೆ TV 9 ಇದೆ, ಸುವರ್ಣ ಇದೆ, BTV  ಇದೆ. ಆದರೆ ಇದು ಕಾಯಿಲೆಗಿರುವ ಮದ್ದೇ? ಇವತ್ತು ಈ ದೇಶದಲ್ಲಿ ಅತ್ಯಂತ ಹೆಚ್ಚು TRP ಗಳಿಸುತ್ತಿರುವುದು ಅರ್ನಾಬ್‍ರ ‘ನ್ಯೂಸ್ ಅವರ್’ ಕಾರ್ಯಕ್ರಮ. ಒಂದು ಕಡೆ ಪ್ರಮುಖ ವ್ಯಕ್ತಿತ್ವಗಳಿಂದ ಅರ್ನಾಬ್ ತೀವ್ರ ಟೀಕೆಯನ್ನು ಎದುರಿಸುತ್ತಿದ್ದರೂ ಇನ್ನೊಂದು ಕಡೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಹೀಗಿರುವಾಗ ಈ ಆಯ್ಕೆಗಳು ನಿರ್ದಿಷ್ಟ ಚಾನೆಲ್‍ಗಳ ಮೇಲೆ ಯಾವ ಪರಿಣಾಮ ಬೀರಬಹುದು? ಜನಪ್ರಿಯತೆಯ ಆಧಾರದಲ್ಲಿ ಹೇಳುವುದಾದರೆ ಅರ್ನಾಬ್ ಇವತ್ತು ಅತ್ಯುತ್ತಮ ಆ್ಯಂಕರ್. ಆದರೆ ಜನಪ್ರಿಯತೆಯೊಂದೇ ಒಂದು ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ಮಾನದಂಡವೆ? ಆ ಜನಪ್ರಿಯತೆಗಾಗಿ ಅವರು ಅನುಸರಿಸಿದ ಕಾರ್ಯ ವಿಧಾನಗಳನ್ನು ನಾವು ಪರಿಶೀಲನೆಗೆ ಒಳಪಡಿಸಬೇಡವೇ? ಇಲ್ಲದಿದ್ದರೆ ಅನಂತ ಮೂರ್ತಿಗಿಂತ ಭೈರಪ್ಪ ಶ್ರೇಷ್ಠ ಎಂದೋ ಅಥವಾ ಗಾಂಧೀಜಿಗಿಂತ ಮೋದಿ ಶ್ರೇಷ್ಠ ಎಂದೋ ಹೇಳಬೇಕಾದೀತಲ್ಲವೇ?
    ಮಾರ್ಚ್ 23ರ ಔಟ್‍ಲುಕ್ ಪತ್ರಿಕೆಯು ಅರ್ನಾಬ್ ಗೋಸ್ವಾಮಿಯನ್ನು ಮುಖಪುಟದಲ್ಲಿ ಕೂರಿಸಿ, ‘TV ನ್ಯೂಸ್‍ನ ಕೊಲೆಗಾರ (THE MAN, WHO KILLED TV NEWS)’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿದೆ. ಒಂದು ವೇಳೆ ಡಿ.ಕೆ. ರವಿಯ ವಿಷಯದಲ್ಲಿ ಇದೇ ಮಾನದಂಡವನ್ನು ಕನ್ನಡ ಚಾನೆಲ್‍ಗಳಿಗೆ ಅನ್ವಯಿಸಿದರೆ ಶೀರ್ಷಿಕೆ ಹೇಗಿರಬಹುದು?

Wednesday, March 18, 2015

ಧರ್ಮ ವಿರೋಧಿಗಳನ್ನು ಸಮಾಜಕ್ಕೆ ಪರಿಚಯಿಸಿದ 3ರ ಬಾಲೆ

ಕಾಲ್ಪನಿಕ ಚಿತ್ರ
ಸುರತ್ಕಲ್
  ಮುಡಿಪು
  ಉಳ್ಳಾಲ
  ಬೋಳಂತೂರು
  ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರದೇಶಗಳು ಕಳೆದ ಎರಡ್ಮೂರು ವಾರಗಳಿಂದ ಸುದ್ದಿಯಲ್ಲಿವೆ. ಹಾಗಂತ, ಈ ಪ್ರದೇಶಗಳಿಗೆ ಬೃಹತ್ ಕೈಗಾರಿಕೆಗಳೋ, ಪರಮಾಣು ವಿದ್ಯುತ್ ಸ್ಥಾವರಗಳೋ ಬರುತ್ತಿಲ್ಲ. ರಾಜ್ಯ ಸರಕಾರ ಮೊನ್ನೆ ವಿಧಾನ ಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಈ ಪ್ರದೇಶಗಳಿಗೆ ವಿಶೇಷ ಯೋಜನೆಗಳನ್ನೂ ಪ್ರಸ್ತಾಪಿಸಿಲ್ಲ. ಅದೇ ಗುಳಿ ಬಿದ್ದ ರಸ್ತೆಗಳು, ‘ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುವ ಬೋರ್ಡ್‍ಗಳು, ನೀರು- ವಿದ್ಯುತ್, ಗ್ಯಾಸ್ ವಿತರಣೆಯ ಸಮಸ್ಯೆಗಳು.. ಎಲ್ಲವೂ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ. ವಿಚಿತ್ರ ಏನೆಂದರೆ, ಈ ಪ್ರದೇಶಗಳು ಸುದ್ದಿಯಲ್ಲಿರುವುದು ಈ ಮೂಲಭೂತ ಸಮಸ್ಯೆಗಳ ಕಾರಣದಿಂದಾಗಿ ಅಲ್ಲ. ಹೆಣ್ಣು ಗಂಡಿನ ಕಾರಣಕ್ಕಾಗಿ, ಅನೈತಿಕ ಪೊಲೀಸ್‍ಗಿರಿಯ ಕಾರಣಕ್ಕಾಗಿ, ಅತ್ಯಾಚಾರದ ಕಾರಣಕ್ಕಾಗಿ. ಇಲ್ಲಿ ನಡೆಯುವ ಪ್ರತಿಭಟನೆಗಳು ಎಷ್ಟು ಧರ್ಮವಿರೋಧಿ ಸ್ವರೂಪದಲ್ಲಿರುತ್ತವೆಯೆಂದರೆ,  ಅಪರಾಧವನ್ನು ನೋಡುವ ಬದಲು ಆರೋಪಿಯ ಧರ್ಮವನ್ನು ನೋಡಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಸಂಘಪರಿವಾರಕ್ಕೆ ನೀಡಬೇಕು. ಶಿಕ್ಷಕಿಯೋರ್ವರು ಸ್ನಾನ ಮಾಡುತ್ತಿದ್ದಾಗ ಅದನ್ನು ವಿಡಿಯೋ ಚಿತ್ರೀಕರಿಸಿದ ಘಟನೆ ವಾರಗಳ ಹಿಂದೆ ಬೋಳಂತೂರಿನಲ್ಲಿ ನಡೆಯಿತು. ಮಹಿಳೆ ಹಿಂದೂ ಧರ್ಮದವರಾದರೆ, ಚಿತ್ರೀಕರಿಸಿದವ ಇಸ್ಲಾಮ್ ಧರ್ಮದವ. ಈ ಕೃತ್ಯವನ್ನು ಖಂಡಿಸಿ ಸಂಘಪರಿವಾರವು ಆ ವಲಯದಲ್ಲಿ ಈ ವರೆಗೆ ನಡೆಯದಷ್ಟು ದೊಡ್ಡ ಮಟ್ಟದ ಪ್ರತಿಭಟನಾ ಸಭೆಯನ್ನು ಏರ್ಪಡಿಸಿತು. ರಾಲಿಯನ್ನು ಹಮ್ಮಿಕೊಂಡಿತು. ಸಂಘದ ಪ್ರಮುಖ ನಾಯಕರು ಆ ಪ್ರದೇಶದಲ್ಲಿ ಸೇರಿ ಇಡೀ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಆ ಯುವಕನ ನೆಪದಲ್ಲಿ ಆತನ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾದ ಬಳಿಕ ಉಳ್ಳಾಲದಲ್ಲಿ 3ರ ಹರೆಯದ ಬಾಲೆಯ ಮೇಲೆ ಅತ್ಯಾಚಾರ ನಡೆಯಿತು. (ಇದು ಬಹುತೇಕ ದೃಢಪಟ್ಟಿದೆ). ಬಾಲೆ ಮುಸ್ಲಿಮ್ ಸಮುದಾಯಕ್ಕೆ ಸೇರಿದವಳಾದರೆ ಅತ್ಯಾಚಾರದ ಆರೋಪ ಹೊತ್ತವ ಹಿಂದೂ ಸಮುದಾಯಕ್ಕೆ ಸೇರಿದವ. ವಿಷಾದ ಏನೆಂದರೆ, ಬೋಳಂತೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡವರು ಈ ಬಾಲೆಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಪ್ರತಿಭಟಿಸುವುದು ಬಿಡಿ, ಒಂದು ಗೆರೆಯ ಖಂಡನಾ ಹೇಳಿಕೆಯನ್ನೂ ಹೊರಡಿಸಲಿಲ್ಲ. ತೀರ್ಥಹಳ್ಳಿಯ ನಂದಿತಾ ಎಂಬ ಬಾಲಕಿಯ ಸಾವನ್ನು ಮುಂದಿಟ್ಟುಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಿದ ಮತ್ತು ಹೆಣ್ಣಿನ ಮಾನದ ಬಗ್ಗೆ ಹತ್ತು-ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ ಸಂಘಪರಿವಾರವು ಈ ಬಾಲೆಗೆ ಬೆಂಬಲ ಸೂಚಿಸುವ ಮತ್ತು ಅಪರಾಧವನ್ನು ಖಂಡಿಸುವ ಸಣ್ಣ ಪ್ರಯತ್ನವನ್ನೂ ನಡೆಸಲಿಲ್ಲ. ಬೋಳಂತೂರು ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಮಂದಿ ಆರೋಪಿಯ ವಿರುದ್ಧ ಕನಿಷ್ಠ ಆಕ್ರೋಶವನ್ನಾದರೂ ವ್ಯಕ್ತಪಡಿಸಿದ್ದರು. ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು.(ಇಷ್ಟು ಸಾಕು ಎಂದಲ್ಲ).  ಆದರೆ, ಕನಿಷ್ಠ ಈ ಮಟ್ಟದ ಪ್ರತಿಕ್ರಿಯೆ ಕೂಡಾ ಉಳ್ಳಾಲ ಪ್ರಕರಣದಲ್ಲಿ ಸಂಘಪರಿವಾರದಿಂದ ವ್ಯಕ್ತವಾಗಿಲ್ಲ. ಏನಿವೆಲ್ಲ? ಯಾಕೆ ಈ ಬಗೆಯ ಆಷಾಡಭೂತಿತನದ ಪ್ರಕಿಯೆಗಳು ನಡೆಯುತ್ತಿವೆ? ನಾಗರಿಕ ಸಮಾಜವೇಕೆ ಈ ಬಗೆಯ ಹಿಪಾಕ್ರಸಿಯನ್ನು ಪ್ರಶ್ನಿಸುವ ಉಮೇದು ತೋರಿಸುತ್ತಿಲ್ಲ?
 ನಿಜವಾಗಿ ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದೇ ದೊಡ್ಡ ತಪ್ಪು. ‘ಅತ್ಯಾಚಾರ ಮಾಡಿದ ಹಿಂದೂ’, ‘ವೀಡಿಯೋ ಚಿತ್ರೀಕರಿಸಿದ ಮುಸ್ಲಿಮ್..’ ಎಂದೆಲ್ಲಾ ಹೇಳುವುದೇ ಅನೈತಿಕವಾದದ್ದು. ಅಪರಾಧಗಳನ್ನು ಧರ್ಮಗಳ ಮೇಲೆ ಹೇರುವುದಕ್ಕೆ ನನ್ನ ಪ್ರಬಲ ವಿರೋಧವಿದೆ. ಆದರೂ, ಈ ಲೇಖನದ ಆರಂಭದಲ್ಲಿ ಹಿಂದೂ-ಮುಸ್ಲಿಮ್ ಎಂಬ ಪದಗಳನ್ನು ಬಳಸಿದ್ದೇನೆ. ಇದು ಸಂಘಪರಿವಾರದ ಹಿಪಾಕ್ರಸಿಯನ್ನು ಸ್ಪಷ್ಟಪಡಿಸುವುದಕ್ಕೆ ಮಾಡಲಾದ ಉಲ್ಲೇಖವೇ  ಹೊರತು ಇದರಲ್ಲಿ ಇನ್ನಾವ ಉದ್ದೇಶವೂ ಅಲ್ಲ. ನಿಜವಾಗಿ, ಅಪರಾಧಿಗಳಿಗೆ ಯಾವ ಧರ್ಮವೂ ಇಲ್ಲ. ಹಿಂದೂ ಅತ್ಯಾಚಾರಿ, ಮುಸ್ಲಿಮ್ ಕೋಮುವಾದಿ, ಕ್ರೈಸ್ತ ಭ್ರಷ್ಟಾಚಾರಿ.. ಎಂಬ ಪದಗಳೇ ಅನ್ಯಾಯದ್ದು. ಈ ಪದಗಳಾಚೆಗೆ ಸಮಾಜದ ಮನಸ್ಥಿತಿಯನ್ನು ಬೆಳೆಸುವ ಪ್ರಯತ್ನಗಳು ನಡೆಯಬೇಕಾಗಿದೆ. ದುರಂತ ಏನೆಂದರೆ, ಸಂಘಪರಿವಾರವು ಸಮಾಜವನ್ನು ಈ ರೀತಿಯಲ್ಲಿ ವಿಭಜಿಸಲು ಶ್ರಮಪಡುತ್ತಿದೆ. ಅದು ಅತ್ಯಾಚಾರವನ್ನೋ, ವೀಡಿಯೋ ಚಿತ್ರೀಕರಣವನ್ನೋ ಪ್ರಶ್ನಿಸುತ್ತಿಲ್ಲ. ಚಿತ್ರಿಸಿದವನ ಧರ್ಮವನ್ನು ನೋಡಿ ಅದು ಪ್ರತಿಭಟನೆ ಹಮ್ಮಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ. ಅಂದರೆ ಸಂಘಪರಿವಾರಕ್ಕೆ ಹೆಣ್ಣಿನ ಮಾನವಾಗಲಿ, ಸುರಕ್ಷಿತತೆಯಾಗಲಿ ಮುಖ್ಯವಲ್ಲ. ಒಂದು ವೇಳೆ ಅದಾಗಿರುತ್ತಿದ್ದರೆ 3ರ ಬಾಲೆಯ ಬದುಕು ಅದಕ್ಕೆ ಮುಖ್ಯವಾಗ ಬೇಕಿತ್ತು. ಆರೋಪಿಯ ಧರ್ಮ ನೋಡದೇ ಆ ಬಾಲೆಯ ಪರ ಮಾತಾಡುವ ಮತ್ತು ಆ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ನಡೆಸಬೇಕಿತ್ತು. ಸುಳ್ಳಿನ ಕತೆ ಕಟ್ಟಿದ ಶಾಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಿತ್ತು. ಆದರೆ, ಈ ಬಾಲೆಯ ಪ್ರಕರಣ ಎಂದಲ್ಲ, ಇದಕ್ಕೆ ಸಮಾನವಾದ ಯಾವ ಪ್ರಕಣಗಳಲ್ಲೂ ಸಂಘಪರಿವಾರ ಮಾತಾಡಿದ್ದೇ ಇಲ್ಲ. ಅಷ್ಟಕ್ಕೂ, ಈ ಪ್ರಕರಣದ ಪಾತ್ರಧಾರಿಗಳು ಅದಲು ಬದಲಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಸಂಘಪರಿವಾರದ ಪ್ರತಿಕ್ರಿಯೆ ಏನಾಗಿರುತ್ತಿತ್ತು?
 ಮಗುವಿನ ಮನಸ್ಸು ಶುಭ್ರವಾದುದು. ಅದಕ್ಕೆ ಹಿಂದೂವೋ ಮುಸ್ಲಿಮೋ ಗೊತ್ತಿಲ್ಲ. ತನ್ನನ್ನು ಕರೆದೊಯ್ಯುವ ವ್ಯಕ್ತಿಯನ್ನು ಅಂಕಲ್ ಎಂದು ಕರೆಯಬಲ್ಲುದೆ ಹೊರತು ಮುಸ್ಲಿಮ್ ಅಂಕಲ್ ಎಂದೋ ಹಿಂದೂ ಅಂಕಲ್ ಎಂದೋ ಅದು ಕರೆಯಲಾರದು. ಆದರೆ, ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ನೈತಿಕತೆ ಮತ್ತು ಅನೈತಿಕ.. ಎಂಬುದನ್ನೆಲ್ಲ ಚೆನ್ನಾಗಿ ಬಲ್ಲ ಪ್ರೌಢ ಹೆಣ್ಣು ಮತ್ತು ಗಂಡುಗಳಿಬ್ಬರು ಪರಸ್ಪರ ಮಾತಾಡಿದರೆಂಬ  ಕಾರಣಕ್ಕಾಗಿ ಹಲ್ಲೆ ನಡೆಸುವ ಮಂದಿ ಇಂಥ ನೈತಿಕ-ಅನೈತಿಕತೆಗಳ ಬಗ್ಗೆ ಏನೊಂದೂ ಗೊತ್ತಿಲ್ಲದ ಬಾಲೆಗಾಗಿ ಯಾವ ಪೊಲೀಸ್‍ಗಿರಿಯನ್ನೂ ಮಾಡಿಲ್ಲ ಮತ್ತು ಮಾಡುತ್ತಿಲ್ಲ ಅನ್ನುವುದು ಅತ್ಯಂತ ವಿಷಾದನೀಯವಾದುದು. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುತ್ತಾ ಹೋಗುವುದಕ್ಕೆ ಯಾವ ಅರ್ಥವೂ ಇಲ್ಲ. ಆದರೂ ಈ ಜಿಲ್ಲೆಯಲ್ಲಿ ಸದ್ಯ ಇಂಥದ್ದೊಂದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಮರ ವಿರುದ್ಧ ಹಿಂದೂ ಏನು ಮಾಡಿದರೂ ಸರಿ ಮತ್ತು ಸಮರ್ಥನೀಯ ಎಂಬ ಅಪಾಯಕಾರಿ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಇದು ಮುಸ್ಲಿಮರ ಮೇಲೂ ಪ್ರಭಾವ ಬೀರುತ್ತಿದೆ. ಅವರಲ್ಲೂ ಅದೇ ರೀತಿಯಾಗಿ ಆಲೋಚಿಸುವವರ ಸಂಖ್ಯೆ ವೃದ್ಧಿಸುತ್ತಿದೆ. ಇಂಥವರಿಗೆ ಹೆಣ್ಣಿನ ಮಾನ, ಗೌರವ, ಯಾವುದೂ ಮುಖ್ಯ ಅಲ್ಲ. ಹೆಣ್ಣು ಅವರಿಗೆ ಒಂದು ಸರಕು ಮಾತ್ರ. ಇನ್ನೊಂದು ಧರ್ಮದವರನ್ನು ದ್ವೇಷಿಸುವುದಕ್ಕೆ ಮಾತ್ರ ಬಳಕೆಗೀಡಾಗುವ ಸರಕು. ಆ ಉದ್ದೇಶ ಈಡೇರಿದ ಬಳಿಕ ಆ ಹೆಣ್ಣಿಗೂ ಅವರಿಗೂ ಯಾವ ಸಂಬಂಧವೂ ಇರುವುದಿಲ್ಲ. ಇದಕ್ಕೆ, ಅನೈತಿಕ ಪೊಲೀಸ್‍ಗಿರಿಯಲ್ಲಿ ಅವಮಾನಕ್ಕೆ ಒಳಗಾದ ಹೆಣ್ಣು ಮಕ್ಕಳೇ ಅತ್ಯುತ್ತಮ ಪುರಾವೆ. ಆದ್ದರಿಂದ, ಮಹಿಳಾ ವಿರೋಧಿ, ಧರ್ಮ ವಿರೋಧಿ ಮತ್ತು ಮನುಷ್ಯ ವಿರೋಧಿಯಾದ ಈ ಮಾನಸಿಕತೆಯಿಂದ ಜಿಲ್ಲೆಯನ್ನು ಪಾರು ಮಾಡುವ ಬಗ್ಗೆ ಸರ್ವಧರ್ಮೀಯರೂ (ಮುಖ್ಯವಾಗಿ ಧಾರ್ಮಿಕ ಮುಖಂಡರು) ಗಂಭೀರವಾಗಿ ಆಲೋಚಿಸಬೇಕಾಗಿದೆ. ಈ ಬಗೆಯ ಮಾನಸಿಕತೆ ಹಿಂದೂ-ಮುಸ್ಲಿಮ್ ಯಾರಲ್ಲೇ ಇರಲಿ, ಅವರನ್ನೆಲ್ಲ ಬಹಿರಂಗವಾಗಿ ತರಾಟೆಗೆ ಎತ್ತಿಕೊಳ್ಳುವ ಹಾಗೂ ಮನುಷ್ಯರನ್ನು ಮತ್ತು ಅವರ ಅಪರಾಧಗಳನ್ನು ಧರ್ಮದ ನೆಲೆಯಲ್ಲಿ ವಿಭಜಿಸದೇ ಪರಾಮರ್ಶಿಸುವ ವಾತಾವರಣವನ್ನು ಬೆಳೆಸಬೇಕಾಗಿದೆ. ಉಳ್ಳಾಲದ ಬಾಲೆಯೂ, ಬೋಳಂತೂರಿನ ಶಿಕ್ಷಕಿಯೂ ಮುಡಿಪುವಿನ ಶಾಲಾ ವಿದ್ಯಾರ್ಥಿಗಳೂ.. ಎಲ್ಲರೂ ನಮ್ಮವರೇ. ಅವರ ಮೇಲೆ ಆದ ಅನ್ಯಾಯವನ್ನು ಧರ್ಮ-ಜಾತಿಗಳ ಹಂಗಿಲ್ಲದೇ ಖಂಡಿಸೋಣ. ಆರೋಪಿಗಳನ್ನು ಯಾವ ಧರ್ಮಕ್ಕೂ ಸೇರಿಸದೆ ಬರೇ ಆರೋಪಿಗಳಾಗಿಯೇ ಕಾಣೋಣ. ನಮಗೆ ಶಿಕ್ಷಕಿಯ ಮಾನ ಮತ್ತು ಬಾಲೆಯ ಪ್ರಾಣ ಎರಡೂ ಮುಖ್ಯ. ಅದಕ್ಕೆ ಅಪಚಾರ ಎಸಗಿದವರಿಗೆ ಧರ್ಮವಿಲ್ಲ. ಅವರನ್ನು ನೆಪವಾಗಿಸಿಕೊಂಡು ಮನುಷ್ಯರನ್ನು ವಿಂಗಡಿಸಿದವರಿಗೂ ಧರ್ಮವಿಲ್ಲ. ಅವರು ಧರ್ಮ ರಕ್ಷಕರಾಗುವುದಕ್ಕೆ ಅರ್ಹರೂ ಅಲ್ಲ.

Monday, March 16, 2015

ಇಂಡಿಯಾಸ್ ಡಾಟರ್ ಮತ್ತು ಇಂಡಿಯಾಸ್ ನಾಗಾಲ್ಯಾಂಡ್

     ‘ನಾಗಾಗಳ ದೌರ್ಬಲ್ಯವನ್ನು ಬಹಿರಂಗಕ್ಕೆ ತಂದ ಘೋರ ಪಾತಕ' ಎಂಬ ಶೀರ್ಷಿಕೆಯ ಬರಹವನ್ನು ಶರೀಫುದ್ದೀನ್ ಖಾನ್‍ನ ಭಾವಚಿತ್ರದೊಂದಿಗೆ ಮಾರ್ಚ್ 4ರಂದು ಮುಖಪುಟದಲ್ಲಿ ಪ್ರಕಟಿಸಿದ ನಾಗಾಲ್ಯಾಂಡ್‍ನ ಪ್ರಮುಖ ಪತ್ರಿಕೆ ದಿ ಮಿರುಂಗ್ ಎಕ್ಸ್ ಪ್ರೆಸ್, ಆ ಬರಹದುದ್ದಕ್ಕೂ ನಾಗಾಗಳ ಸ್ವಾಭಿಮಾನವನ್ನು ಪ್ರಶ್ನಿಸುತ್ತಾ ಹೋಯಿತು. ನಿಜವಾಗಿ, ಅದು ಸುದ್ದಿಯೋ ವರದಿಯೋ ಅಥವಾ ಲೇಖನವೋ ಆಗಿರಲಿಲ್ಲ. ನಾಗಾಲ್ಯಾಂಡ್‍ನ ಪ್ರಭಾವಿ ಸಂಘಟನೆಗಳಾದ ನಾಗಾ ಕೌನ್ಸಿಲ್ ದಿಂಪುರ್ (NCD) ಮತ್ತು ನಾಗಾ ವುಮೆನ್ ಹೋಹೋ ದಿಂಪುರ್ (NWHD) ಎಂಬೆರಡು ಸಂಘಟನೆಗಳು ಹೊರಡಿಸಿದ ಜಂಟಿ ಹೇಳಿಕೆಗಳಷ್ಟೇ ಆಗಿದ್ದುವು. ಸಾಮಾನ್ಯವಾಗಿ, ಸಂಘಟನೆಗಳ ಹೇಳಿಕೆಗಳನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ. ಎಲ್ಲ ಪತ್ರಿಕೆಗಳೂ ಅವುಗಳಿಗಾಗಿ ಒಳಪುಟಗಳಲ್ಲಿ ಸ್ಥಳವನ್ನು ವಿೂಸಲಿಟ್ಟಿರುತ್ತವೆ. ಆದರೆ ಮಿರುಂಗ್ ಎಕ್ಸ್ ಪ್ರೆಸ್ ಈ ಸಂಪ್ರದಾಯವನ್ನು ಮುರಿದುದಷ್ಟೇ ಅಲ್ಲ, ಆ ಪತ್ರಿಕಾ ಹೇಳಿಕೆಯನ್ನು ವೈಭವೀಕರಿಸಿತು. ‘ಬಾಂಗ್ಲಾದೇಶಿಗಳ ಅಕ್ರಮ ಒಳ ನುಸುಳುವಿಕೆಯನ್ನು ಮತ್ತು ರಾಜ್ಯದಲ್ಲಿ ಅವರು ನೆಲೆಸುವುದನ್ನು ತಡೆಯುವ ಹೊಣೆಗಾರಿಕೆಯನ್ನು ನಾಗಾಗಳು ವಹಿಸಿಕೊಳ್ಳದಿದ್ದರೆ ನಮ್ಮ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದಾಳಿಯಲ್ಲಿ ಹೆಚ್ಚಳವಷ್ಟೇ ಆದೀತು' ಎಂದೂ ಬರೆಯಿತು. ‘ನಾಗಾಗಳು ಬರೇ ಖಂಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸುವುದು ಅಪಾಯಕಾರಿ..' ಎಂದಿತು. NCDಯ ಕೋಶಾಧಿಕಾರಿ ಚಿತೆನ್ ಕೊನ್ಯಾಕ್ ಮತ್ತು NWHDಯ ಅಧ್ಯಕ್ಷೆ ಹುಕೇಲಿ ವೊಟ್ಸಾರ ಸಹಿಯಿದ್ದ ಈ ಜಂಟಿ ಹೇಳಿಕೆಯ ಜೊತೆಜೊತೆಗೇ ಮಾರ್ಚ್ 3ರಂದು ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಕೂಡ ಒಂದು ಪ್ರಚೋದನಾತ್ಮಕ ಹೇಳಿಕೆಯನ್ನು ಹೊರಡಿಸಿತು. ಅದರ ಅಧ್ಯಕ್ಷ ತೊಂಗ್‍ಪಾಂಗ್ ಒಝುಕು ಅವರ ಸಹಿ ಇದ್ದ ಹೇಳಿಕೆಯಲ್ಲಿ, ‘ಶರೀಫುದ್ದೀನ್ ಎಸಗಿದ ಅತ್ಯಾಚಾರವು ಇಡೀ ನಾಗಾ ಸಮುದಾಯಕ್ಕೇ ಎಸೆದ ಸವಾಲು' ಎನ್ನಲಾಯಿತು. ‘ಅಕ್ರಮ ಬಂಗ್ಲಾದೇಶಿಗಳಾದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಿಧಾನವಾಗಿ ಇವರು ನಮ್ಮ ನಾಡಲ್ಲಿ ನಮ್ಮನ್ನೇ ನಿಯಂತ್ರಿಸುವಷ್ಟು ಪ್ರಬಲರಾಗುತ್ತಾರೆ. ಅವರಿಗೆ ನೆಲೆಸಲು ಅವಕಾಶ ನೀಡುವುದೇ ತಪ್ಪು..’ ಎಂದು ಷರಾ ಬರೆಯಿತು. ಅಂದಹಾಗೆ, ಶರೀಫುದ್ದೀನ್‍ನ ಮೇಲೆ ಅತ್ಯಾಚಾರದ ಆರೋಪ ದಾಖಲಾದದ್ದು ಫೆ. 23ರಂದು. ಫೆ. 24ರಂದು ಆತನ ಬಂಧನವಾಗಿತ್ತು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾದದ್ದೋ ಮಾರ್ಚ್ 3ರಂದು. ಕಾಕತಾಳೀಯವೇನೆಂದರೆ, ಅಕ್ರಮ ಬಂಗ್ಲಾದೇಶಿ ವಲಸಿಗರ(IBI) ವಿರುದ್ಧ ರಾಜ್ಯವ್ಯಾಪಿ ಅಭಿಯಾನ ಕೈಗೊಳ್ಳುವುದರ ಅಂಗವಾಗಿ ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಫೆ. 24ರಂದೇ ವಿವಿಧ ಸಂಘಟನೆಗಳೊಂದಿಗೆ ಚರ್ಚೆಯನ್ನು ಏರ್ಪಡಿಸಿತ್ತು. NCD, NWHD, ದಿಂಪುರ್ ನಾಗಾ ಮದರ್ಸ್ ಅಸೋಸಿಯೇಶನ್, ದಿಂಪುರ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (DCCI) ಮತ್ತು ದಿಂಪುರ್ ಪಟ್ಟಣದ ಸ್ಥಳೀಯ ನಾಗರಿಕರನ್ನು ಸೇರಿಸಿಕೊಂಡು ನಡೆಸಲಾದ ಆ ಚರ್ಚೆಯಲ್ಲಿ ಬಂಗ್ಲಾದೇಶೀಯರನ್ನು ತಡೆಗಟ್ಟುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯ ಮರುದಿನ NSF ನ ಅಧ್ಯಕ್ಷ ತೋಂಗ್‍ಪಾಂಗ್ ಒಝುಕು ಅವರು ಒಂದು ಹೇಳಿಕೆಯನ್ನು ಹೊರಡಿಸಿದರು. ನಾಗಾಲ್ಯಾಂಡ್‍ನಲ್ಲಿ ಪರ್ಯಾಯ ಸರಕಾರದಂತೆ ಕಾರ್ಯಾಚರಿಸುತ್ತಿರುವ ಇಸಾಕ್ ಮುಯಿವಾ ನೇತೃತ್ವದ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) ಎಂಬ ಸಶಸ್ತ್ರ ಸಂಘಟನೆಯು ತೆರಿಗೆ ಸಂಗ್ರಹಕ್ಕಾಗಿ ನೂರ್‍ಜಹಾನ್ ಹುಸೇನ್‍ನನ್ನು ನೇಮಿಸಿರುವುದನ್ನು ಆ ಹೇಳಿಕೆಯಲ್ಲಿ ಅವರು ಪ್ರಬಲವಾಗಿ ಖಂಡಿಸಿದರು. ಈ ನೇಮಕದ ಸುದ್ದಿಯು ನಿಜವೇ ಆಗಿದ್ದರೆ ಅದು ಇಡೀ ನಾಗಾಗಳಿಗೆ ಮಾಡುವ ಅವಮಾನ ಎಂದರು. ವಿಶೇಷ ಏನೆಂದರೆ, ಶರೀಫುದ್ದೀನ್ ಖಾನ್‍ನ ಬಂಧನದ ಮೂರು ದಿನಗಳ ಬಳಿಕ ಫೆ. 27ರಂದು ಮೋನ್ ಜಿಲ್ಲೆಯ ಕೊನ್ಯಾಕ್ ಬುಡಕಟ್ಟಿಗೆ ಸೇರಿದ 39 ವರ್ಷದ ನಾಗಾ ವ್ಯಕ್ತಿಯೋರ್ವ 6 ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆಸಿದ್ದ. ಶವಸಂಸ್ಕಾರ ವೊಂದರಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಆತ ಈ ಕೃತ್ಯವನ್ನು ಎಸಗಿದ್ದ. ಪತ್ರಿಕೆಗಳಲ್ಲಿ ಇದೂ ಸುದ್ದಿಗೀಡಾಗಿತ್ತು. ಆದರೆ ಶರೀಫುದ್ದೀನ್‍ನ ಕುರಿತು ಮಾತಾಡಿದ ಯಾವ ಸಂಘಟನೆಗಳೂ ಈ ಕೃತ್ಯದ ಬಗ್ಗೆ ತಪ್ಪಿಯೂ ಉಲ್ಲೇಖಿಸಲಿಲ್ಲ. ನಾಗಾಗಳ ಸ್ವಾಭಿಮಾನದ ಪ್ರಶ್ನೆಯಾಗಿಯೂ ಅದು ಕಾಡಲಿಲ್ಲ. ಹೀಗಿರುತ್ತಾ, ಈ ಇಡೀ ಘಟನೆಯನ್ನು ನಾವು ‘ಅತ್ಯಾಚಾರ ವಿರೋಧಿ ಸಾರ್ವಜನಿಕ ಆಕ್ರೋಶ'ವಾಗಿ ವ್ಯಾಖ್ಯಾನಿಸುವುದು ಎಷ್ಟು ಸರಿ? ಅತ್ಯಾಚಾರಿಗಳಿಗೆ ತ್ವರಿತವಾಗಿ ಶಿಕ್ಷೆ ಜಾರಿಯಾಗದಿರುವುದನ್ನು ಇದಕ್ಕೆ ಕಾರಣವಾಗಿ ಕೆಲವರು ಮುಂದಿಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ನಾಗಾ ಸಂಸ್ಕøತಿಯಲ್ಲಿ ಹೆಣ್ಣು ಮಕ್ಕಳಿಗೆ ಗೌರವದ ಸ್ಥಾನವಿದೆ ಎಂಬುದು ಅಥವಾ 2013ರಲ್ಲಿ ಈ ದೇಶದಲ್ಲಿ ದಾಖಲಾದ 33 ಸಾವಿರ ಅತ್ಯಾಚಾರ ಪ್ರಕರಣ ಗಳಲ್ಲಿ 73% ಪ್ರಕರಣಗಳೂ ಬಿದ್ದು ಹೋಗಿವೆ ಎಂಬುದು ನಿಜವೇ ಆಗಿರಬಹುದು. ಆದರೆ ಶರೀಫುದ್ದೀನ್ ಖಾನ್‍ನ ಮೇಲೆ ನಡೆದ ದಾಳಿಯು ಇವುಗಳಿಗಾಗಿ ಖಂಡಿತ ಅಲ್ಲ. ಈ ವಾದವನ್ನು ಸಮರ್ಥಿಸುವುದಕ್ಕೆ ಅತ್ಯಾಚಾರಕ್ಕೀಡಾದ ಆ 6ರ ಬಾಲೆ ಅನುಮತಿಸುವುದೂ ಇಲ್ಲ. ಅಲ್ಲದೇ 2013ರಲ್ಲಿ ನಾಗಾಲ್ಯಾಂಡಿನಲ್ಲಿ ಮಹಿಳಾ ದೌರ್ಜನ್ಯದ 51 ಪ್ರಕರಣಗಳು ನಡೆದಿವೆ ಎಂಬುದೂ ಈ ವಾದವನ್ನು ಅಲ್ಲಗಳೆಯುತ್ತದೆ. ನಿಜವಾಗಿ, ಶರೀಫುದ್ದೀನ್‍ನ ಮೇಲೆ ಮಾಡಲಾದ ದಾಳಿಗೆ ಅತ್ಯಾಚಾರ ಕಾರಣ ಆಗಿರಲಿಲ್ಲ. ಆತನಿಗೆ ತೊಡಿಸಲಾದ ಹೊರಗಿನವ (Outsider) ಎಂಬ ಹಣೆಪಟ್ಟಿಯೇ ಕಾರಣವಾಗಿತ್ತು. ಹಾಗಂತ, ಒಳಗಿನವರು ಮತ್ತು ಹೊರಗಿನವರು ಎಂಬ ಈ ವಿಭಜನೆಯು ನಾಗಾಲ್ಯಾಂಡಿನ ವಿಶೇಷತೆಯೇನೂ ಅಲ್ಲ. ಬಿಜೆಪಿ ಮತ್ತು ಸಂಘಪರಿವಾರ ಈ ದೇಶದಾದ್ಯಂತ ಇವತ್ತು ಇದೇ ಭಾಷೆಯಲ್ಲಿ ಮಾತಾಡುತ್ತಿದೆ. ಮುಸ್ಲಿಮರನ್ನು ಹೊರಗಿನವರೆಂದು ಕರೆಯುತ್ತಾ ಅವರ ಪ್ರತಿ ಅಪರಾಧವನ್ನೂ ಹಿಂದೂ ವಿರೋಧಿಯಂತೆ ಚಿತ್ರಿಸುತ್ತಿದೆ. ಹಿಂದೂ ಯುವತಿಯ ಮೇಲೆ ಹಿಂದೂ ಯುವಕ ಅತ್ಯಾಚಾರ ಮಾಡಿದರೆ ಅದು ಬರೇ ಅತ್ಯಾಚಾರವಾಗಿಯೂ ಮುಸ್ಲಿಮನೋರ್ವ ಅತ್ಯಾಚಾರವೆಸಗಿದರೆ ಅದು ಹಿಂದೂ ಧರ್ಮ, ಸಂಸ್ಕøತಿ, ಗೌರವ, ಸ್ವಾಭಿಮಾನಗಳ ಮೇಲಿನ ಹಲ್ಲೆಯಾಗಿಯೂ ವ್ಯಾಖ್ಯಾನಿಸಲಾಗುತ್ತದೆ. ತೀರ್ಥಹಳ್ಳಿಯ ನಂದಿತಾ, ವಿೂರತ್‍ನ ಪ್ರೇಮ ಪ್ರಕರಣಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಅಪರಾಧಿಯ ಧರ್ಮವನ್ನು ಪರಿಗಣಿಸಿ ಅಪರಾಧದ ತೀವ್ರತೆಯನ್ನು ಲೆಕ್ಕ ಹಾಕುವ ಈ ರೋಗ ಇವತ್ತು  ಧರ್ಮಗಳ ಹಂಗಿಲ್ಲದೇ ದೇಶದಾದ್ಯಂತ ವ್ಯಾಪಿಸಿದೆ. 1979ರಲ್ಲಿ ಅಸ್ಸಾಮ್‍ನಲ್ಲಿ ಅಸ್ಸಾಮ್ ಗಣ ಪರಿಷತ್ ಎಂಬ ವಿದ್ಯಾರ್ಥಿ ಸಂಘಟನೆಯು ಒಳಗಿನವರು ಮತ್ತು ಹೊರಗಿನವರು (ಅಕ್ರಮ ಬಂಗ್ಲಾದೇಶಿ ವಲಸಿಗರು) ಎಂಬ ವಿಭಜನಾ ಆಂದೋಲನವನ್ನು ಪ್ರಾರಂಭಿಸಿತು. 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡದಲ್ಲಿ ಈ ವಿಭಜನಾ ಚಳವಳಿಗೆ ದೊಡ್ಡ ಪಾತ್ರವಿತ್ತು. ನಿಜವಾಗಿ, ಅಸ್ಸಾಮ್ ಮತ್ತು ನಾಗಾಲ್ಯಾಂಡ್‍ಗಳು ಪರಸ್ಪರ ಗಡಿಗಳನ್ನು ಹಂಚಿಕೊಳ್ಳುತ್ತಿರುವ ಅಕ್ಕ-ಪಕ್ಕದ ರಾಜ್ಯಗಳು. ಅಲ್ಲದೇ ನಾಗಾಲ್ಯಾಂಡ್ ಎಂಬುದು ಬುಡಕಟ್ಟುಗಳೇ ತುಂಬಿರುವ ರಾಜ್ಯ. ಶರೀಫುದ್ದೀನ್‍ನ ಮೇಲೆ ಹಲ್ಲೆ ನಡೆಸಲಾದ ದಿಂಪುರ್ ಆ ರಾಜ್ಯದ ಏಕೈಕ ವ್ಯಾಪಾರಿ ನಗರ. ಈ ನಗರದಲ್ಲಿ ಪ್ರಮುಖ ವ್ಯಾಪಾರ-ವಹಿವಾಟುಗಳನ್ನೆಲ್ಲ ನಡೆಸುತ್ತಿದ್ದುದು ಹಿಂದಿ ಮಾತಾಡುವ ಉತ್ತರ ಭಾರತೀಯರಾಗಿದ್ದರು. ಈ ಕ್ಷೇತ್ರದಲ್ಲಿ ಸ್ಥಳೀಯ ಬುಡಕಟ್ಟುಗಳ ಪಾತ್ರ ಏನೇನೂ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಅಸ್ಸಾಮ್‍ನ ಬರಾಕ್ ಪ್ರದೇಶದ ಮುಸ್ಲಿಮರು ಸಣ್ಣ ವ್ಯಾಪಾರಿಗಳಾಗಿ ದಿಂಪುರ್‍ಗೆ ಆಗಮಿಸಿದರು. 1990ರ ಬಳಿಕ ಸರಕಾರವು ಈ ನಗರದಲ್ಲಿ ಸಾಕಷ್ಟು ಕಮರ್ಷಿಯಲ್ ಕಾಂಪ್ಲೆಕ್ಸ್ ಸ್ಥಾಪಿಸಿತು ಮತ್ತು ಮುಸ್ಲಿಮರು ಅವುಗಳಲ್ಲಿ ವ್ಯಾಪಾರಿ ಮಳಿಗೆಗಳನ್ನು ತೆರೆದರು. ದಿಂಪುರ್‍ನಲ್ಲಿ ಬಹುಸಂಖ್ಯಾತರಾಗಿರುವುದು ಸುಮಿ (ಸೆಮಾ) ಬುಡಕಟ್ಟುಗಳು. ವಿವಿಧ ಉಗ್ರವಾದಿ ಸಂಘಟನೆಗಳಲ್ಲಿ ಹೆಚ್ಚಿರುವವರೂ ಇವರೇ. ಈ ಉಗ್ರವಾದಿ ಸಂಘಟನೆಗಳು ದಿಂಪುರ್‍ನ ಮೇಲೆ ಹಿಡಿತ ಸಾಧಿಸಲು ಆರಂಭದಿಂದಲೂ ಯತ್ನಿಸುತ್ತಿವೆ. ಅದರ ಭಾಗವಾಗಿಯೇ ಮುಸ್ಲಿಮರನ್ನು ಹೊರಗಿನವರೆಂದು ಅವು ವಿಭಜಿಸುತ್ತಾ, ಸುಮಿಗಳ ಹಿತಾಸಕ್ತಿಯನ್ನು ಕಾಪಾಡುವ ಪೋಸು ಕೊಡುತ್ತಿವೆ. ಹೊರಗಿನವರು ಸುಮಿಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಅವು ನಿರಂತರ ಪ್ರಚಾರ ನಡೆಸುತ್ತಿವೆ. ಈ ಪ್ರಚಾರದ ಫಲಿತಾಂಶವೇ ಶರೀಫುದ್ದೀನ್ ಘಟನೆ. ವಿಶೇಷ ಏನೆಂದರೆ, ಆತನ ಪತ್ನಿ ಓರ್ವ ಸುಮಿ ಬುಡಕಟ್ಟಿನವಳು. ಆತನ ಮೇಲೆ ಅತ್ಯಾಚಾರದ ಕೇಸು ದಾಖಲಿಸಿದ ಯುವತಿಯ ಮನೆಯಂತೂ ಈತನ ಬಾಡಿಗೆ ಮನೆಯ ಪಕ್ಕವೇ ಇದೆ. ಅವರ ನಡುವೆ ಕುಟುಂಬ ಸಂಬಂಧದಂಥ ಸಲುಗೆಯೂ ಇದೆ.
    1980ರ ದಶಕದಲ್ಲಿ ಅಸ್ಸಾಮ್‍ನ ಮೇಲಿಗಾಂವ್ ಜಿಲ್ಲೆಯಿಂದ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ನಾಗಾಲ್ಯಾಂಡ್‍ಗೆ ಆಗಮಿಸಿದರು. ಇದಕ್ಕೆ ಕಾರಣವೂ ಇತ್ತು. ನಾಗಾಲ್ಯಾಂಡ್‍ನಲ್ಲಿ ಬಹುಸಂಖ್ಯಾತರಾಗಿರುವ ಸುಮಿ ಬುಡಕಟ್ಟುಗಳಿಗೆ ಕೃಷಿ, ವ್ಯವಸಾಯ ಗೊತ್ತಿರಲಿಲ್ಲ. ಅವು ಗುಡ್ಡಗಾಡು ಜನಾಂಗವಾಗಿತ್ತು. ಅಸ್ಸಾಮ್-ನಾಗಾ ಗಡಿ ಪ್ರದೇಶದಲ್ಲಿದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವುದಕ್ಕೆ ಅವರಿಗೆ ಬಂಗಾಳಿ ಮುಸ್ಲಿಮರ ಅಗತ್ಯವಿತ್ತು. ಆ ಉದ್ದೇಶದಿಂದ ಸುಮಿಗಳು ಮುಸ್ಲಿಮರನ್ನು ಕರೆಸಿಕೊಂಡರು. ರೈತಾಪಿ ವರ್ಗವಾಗಿದ್ದ ಮುಸ್ಲಿಮರು ಆ ಅರಣ್ಯ ಪ್ರದೇಶವನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಿದರು ಮತ್ತು ಅಲ್ಲೇ ನೆಲೆಸಿದರು. ಈ ಕಾರಣದಿಂದಾಗಿ ಮುಸ್ಲಿಮರು ಮತ್ತು ಸುಮಿ ಬುಡಕಟ್ಟುಗಳ ನಡುವೆ ಗಾಢ ವಿಶ್ವಾಸ ಬೆಳೆಯಿತು. ಕೌಟುಂಬಿಕ ಮತ್ತು ವೈವಾಹಿಕ ಸಂಬಂಧಗಳು ಏರ್ಪಟ್ಟವು. ಈ ಸಂಬಂಧ ಎಷ್ಟು ಪರಿಚಿತ ಆಯಿತೆಂದರೆ, ಇವತ್ತಿನ ಹೊಸ ಪೀಳಿಗೆಯು ಸುಮಿಯಾನ್ (ಸುಮಿ+ಮಿಯಾನ್) ಆಗಿ ಗುರುತಿಸಿಕೊಳ್ಳುತ್ತಿದೆ. ಶರೀಫುದ್ದೀನ್ ಸುಮಿ ಬುಡಕಟ್ಟಿನ ಮಹಿಳೆಯನ್ನು ವಿವಾಹವಾಗಿರುವುದಕ್ಕೆ ಇಂಥದ್ದೊಂದು ಹಿನ್ನೆಲೆಯೂ ಇದೆ.. ಇವೆಲ್ಲವನ್ನೂ ಜೊತೆಗಿಟ್ಟು ನೋಡಿದರೆ ನಾಗಾಲ್ಯಾಂಡ್ ಪ್ರಕರಣವು ಅತ್ಯಾಚಾರಕ್ಕೆ ನೀಡಲಾದ ಶಿಕ್ಷೆಯಾಗಿ ಕಾಣಿಸುತ್ತಿಲ್ಲ. ಅದು ಸ್ಪಷ್ಟವಾಗಿ ಜನಾಂಗ ದ್ವೇಷಿ ಪ್ರಚಾರ ಯುದ್ಧದ ಫಲಿತಾಂಶ. ಇಂಥ ಪ್ರಚಾರ ಕೇವಲ ನಾಗಾಲ್ಯಾಂಡಿನಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಅಲ್ಲಿ ಬಂಗಾಳಿ ಭಾಷೆ ಮಾತಾಡುವ ಎಲ್ಲ ಮುಸ್ಲಿಮರನ್ನೂ ಬಂಗ್ಲಾದೇಶಿಗಳು ಎಂದು ದ್ವೇಷಿಸುವಂತೆಯೇ ದೇಶದ ಇತರ ಭಾಗಗಳಲ್ಲಿ ಮುಸ್ಲಿಮರನ್ನು ಅಕ್ರಮಣಕೋರರು ಎಂಬ ರೀತಿಯಲ್ಲಿ ವ್ಯಾಖ್ಯಾನಿಸಿ ದ್ವೇಷಿಸಲಾಗುತ್ತಿದೆ. ಸಾಧ್ವಿ ಪ್ರಾಚಿ, ಬಾಲಿಕಾ ಸರಸ್ವತಿ, ಅವೈದ್ಯನಾಥ್, ಯೋಗಿ ಆದಿತ್ಯನಾಥ್, ತೊಗಾಡಿಯಾ.. ಸಹಿತ ಒಂದು ನಿರ್ದಿಷ್ಟ ಗುಂಪು ಇಂಥದ್ದೊಂದು ಅಭಿಪ್ರಾಯದೊಂದಿಗೆ ದೇಶದಾದ್ಯಂತ ಸುತ್ತುತ್ತಿದೆ. ಮುಸ್ಲಿಮರನ್ನು ದ್ವೇಷಿಸುವಂತೆ, ಅವರೊಂದಿಗೆ ಮಾತಾಡದಂತೆ, ವ್ಯವಹಾರ ಮಾಡದಂತೆ, ಸಂಪರ್ಕ ಇಟ್ಟುಕೊಳ್ಳದಂತೆ ಈ ಗುಂಪು ಕರೆ ಕೊಡುತ್ತಾ ಬರುತ್ತಿದೆ. ಲವ್ ಜಿಹಾದ್, ಗೋಹತ್ಯೆ, ಮತಾಂತರಗಳ  ನೆಪದಲ್ಲಿ ಮುಸ್ಲಿಮರನ್ನೇ ಗುರಿ ಮಾಡುತ್ತಿದೆ. ನಿಜವಾಗಿ, ಇದೊಂದು ಯಶಸ್ವಿ ಪ್ರಚಾರ ತಂತ್ರ. ಗೋಬೆಲ್ಸ್ ಮಾಡಿದ್ದು ಕೂಡ ಇದನ್ನೇ. ಹೀಗೆ ನಿರಂತರವಾಗಿ ನಡೆಯುವ ಅಪಪ್ರಚಾರವು ಸಮಾಜವನ್ನು ಸಕಾರಾತ್ಮಕವಾಗಿ ಬಾಧಿಸುತ್ತದೆ. ಸಮಾಜವು ಅದರ ಪ್ರಭಾವಕ್ಕೆ ಒಳಗಾಗುತ್ತದೆ. ಅಂತಿಮವಾಗಿ ಅದು ಸಮಾಜದಿಂದ ಪಾಪಪ್ರಜ್ಞೆಯಿಲ್ಲದ ಕ್ರೌಯವನ್ನು ಮಾಡಿಸುತ್ತದೆ ಮತ್ತು ಅದನ್ನು ಸಮರ್ಥಿಸಿ ಕೊಳ್ಳುವಂತೆ ಪ್ರಚೋದಿಸುತ್ತದೆ. ಹಿಟ್ಲರ್‍ನ ಜರ್ಮನಿಯಲ್ಲಿ ನಡೆದದ್ದೂ ಇದುವೇ. ನಾಗಾಲ್ಯಾಂಡಿನಲ್ಲಿ ನಡೆದದ್ದೂ ಇದುವೇ. ಭವಿಷ್ಯದ ಭಾರತದಲ್ಲಿ ನಡೆಯಬಹುದಾದದ್ದೂ ಇದುವೇ.
   ಇಂಡಿಯಾಸ್ ಡಾಟರ್‍ಗೆ ನಿಷೇಧ ಬೀಳುವ ದೇಶದಲ್ಲಿ ಇಂಡಿಯಾವನ್ನೇ ನಾಗಾಲ್ಯಾಂಡ್ ಮಾಡಬಯಸುವವರಿಗೆ ಹಾರ-ತುರಾಯಿಯ ಸ್ವಾಗತವಿದೆ ಎನ್ನುವುದಕ್ಕೆ ಏನನ್ನಬೇಕು?

Tuesday, March 3, 2015

ಸುಡುವ ಪ್ರತಿಭಟನೆ ಮತ್ತು ಭಗವದ್ಗೀತೆ

A book is a book
It is paper, ink and print
If you stab it
It won't bleed
If you beat it
It won't bruise
If you burn it
It won't acream.....
  
    ಎಂದು ಆರಂಭವಾಗುವ ಈ ಕವನವನ್ನು ಅಮೇರಿಕದ ಪ್ರಸಿದ್ಧ ಕವಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು 1942ರಲ್ಲಿ ಹಾಡಿದ್ದರು. ರೇಡಿಯೋದಲ್ಲಿ ಪ್ರಸಾರವಾದ ಅವರ ಈ ಹಾಡನ್ನು ಆಲಿಸಿ ಕೇಳುಗರು ಭಾವುಕರಾಗಿದ್ದರು. ‘They burnt the books’ (ಅವರು ಪುಸ್ತಕಗಳನ್ನು ಉರಿಸಿದರು) ಎಂಬ ಶೀರ್ಷಿಕೆಯ ಈ ಹಾಡು ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಜನರು ಈ ಹಾಡಿನ ಪ್ರತಿ ಪದವನ್ನೂ ನಾಝಿ ಜರ್ಮನಿಯೊಂದಿಗೆ ತಾಳೆ ಹಾಕಿ ಅನುಭವಿಸಿದರು. ಹಿಟ್ಲರ್, ಗೋಬೆಲ್ಸ್ ರನ್ನು ನೆನೆಸಿಕೊಂಡು ಆ ಪದಗಳಿಗೆ ಜೀವ ತುಂಬಿದರು. ಪುಲಿಟ್ಝರ್ ಪ್ರಶಸ್ತಿ ವಿಜೇತರಾಗಿದ್ದ ಸ್ಟೀವನ್ ವಿನ್ಸೆಂಟ್ ಬೆನೆಟ್‍ರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟ ಈ ಕವನದ ರಚನೆಗೆ ಒಂದು ಭಾವುಕ ಹಿನ್ನೆಲೆಯೂ ಇತ್ತು.
    ಜರ್ಮನಿಯ ಮೇಲೆ ಹಿಟ್ಲರ್ ಹಿಡಿತ ಸಾಧಿಸಿದ್ದ ಕಾಲ. ಈ ಹಿಡಿತ ಕೈ ತಪ್ಪದೇ ಇರಬೇಕಾದರೆ ಏನೇನೆಲ್ಲ ಮಾಡಬೇಕು ಎಂಬ ಬಗ್ಗೆ ಗೋಬೆಲ್ಸ್ ಕೆಲವು ಯೋಜನೆಗಳನ್ನು ರೂಪಿಸಿದ್ದ. ಸರ್ವಾಧಿಕಾರವನ್ನು ಖಂಡಿಸುವ ಮತ್ತು ಪ್ರಜಾತಂತ್ರವನ್ನು ಬೆಂಬಲಿಸುವ ಸರ್ವ ಸಾಹಿತ್ಯಗಳನ್ನೂ ಸುಡಬೇಕೆಂಬುದು ಆತನ ಯೋಜನೆಯಾಗಿತ್ತು. ಹಿಟ್ಲರ್ ವಿರೋಧಿ ಚಿಂತನೆಗಳು ಸಮಾಜದಲ್ಲಿ ಬೆಳೆಯದಂತೆ ಮಾಡುವುದಕ್ಕಾಗಿ ಪತ್ರಿಕೆ, ಸಂಗೀತ, ಸಿನಿಮಾ, ರೇಡಿಯೋ ಮುಂತಾದ ಎಲ್ಲವನ್ನೂ ಸೆನ್ಸಾರ್‍ಗೆ ಒಳಪಡಿಸಲು ಆತ ತೀರ್ಮಾನಿಸಿದ. ಸರ್ವಾಧಿಕಾರವನ್ನು ಇಷ್ಟಪಡುವ ಸಾಮಾಜಿಕ ವಾತಾವರಣವನ್ನು ನಿರ್ಮಿಸುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಯಾವ ಉಗ್ರ ನಿಲುವನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯಬಾರದೆಂದು ಆತ ಹಿಟ್ಲರ್‍ನಿಗೆ ಮನವರಿಕೆ ಮಾಡಿಸಿದ್ದ. ಅದರಂತೆ, ಜರ್ಮನಿಯ ಮಂದಿ ಓದಬಾರದ ಪುಸ್ತಕಗಳ ಪಟ್ಟಿ ಮಾಡುವಂತೆ ನಾಝಿ ವಿದ್ಯಾರ್ಥಿ ಸಂಘಟನೆಗಳು, ನಾಝಿ ಪರ ಪ್ರೊಫೆಸರ್‍ಗಳು ಮತ್ತು ಲೈಬ್ರರಿಯನ್‍ಗಳಿಗೆ ಗೋಬೆಲ್ಸ್ ಆದೇಶಿಸಿದ. ಹೀಗೆ ಪಟ್ಟಿ ಮಾಡಿದ ಬಳಿಕ 1983 ಮೇ 10ರಂದು ಜರ್ಮನಿಯಾದ್ಯಂತದ ಲೈಬ್ರರಿ ಮತ್ತು ಪುಸ್ತಕ ಮಾರಾಟ ಮಳಿಗೆಗಳ ಮೇಲೆ ನಾಝಿಗಳು ದಾಳಿ ಮಾಡಿದರು. ಹಿಟ್ಲರ್ ಪರ ಘೋಷಣೆಗಳನ್ನು ಕೂಗುತ್ತಾ ರಾತ್ರಿ ಟಾರ್ಚ್ ಲೈಟ್‍ನ ಸಹಾಯದಿಂದ ರಾಲಿ ನಡೆಸಿದರು. ದೊಡ್ಡದೊಂದು ಅಗ್ನಿಕುಂಡವನ್ನು ತಯಾರಿಸಿ ಸುಮಾರು 25 ಸಾವಿರಕ್ಕಿಂತಲೂ ಅಧಿಕ ಕೃತಿಗಳನ್ನು ಸುಟ್ಟು ಹಾಕಿದರು. ಜ್ಯಾಕ್ ಲಂಡನ್, ಅರ್ನೆಸ್ಟ್ ಹೆಮಿಂಗ್ವೆ, ಸಿಂಕ್ಲೇರ್ ಲೂವಿಸ್, ಹೆಲೆನ್ ಕೆಲ್ಲರ್, ಐನ್‍ಸ್ಟೀನ್ ಸಹಿತ ಹತ್ತಾರು ಪ್ರಸಿದ್ಧ ಸಾಹಿತಿಗಳ ಕೃತಿಗಳೂ ಅವುಗಳಲ್ಲಿದ್ದುವು. ಈ ಸುಡುವಿಕೆಯ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆಗಳು ಕಾಣಿಸಿಕೊಂಡವು. ಜಪಾನ್, ಚೀನಾ, ಅಮೇರಿಕ ಮುಂತಾದ ರಾಷ್ಟ್ರಗಳು ಹಿಟ್ಲರ್ ನೀತಿಯನ್ನು ತೀವ್ರವಾಗಿ ಖಂಡಿಸಿದುವು. ಸಾಹಿತಿಗಳು ಬೀದಿಗಿಳಿದರು. ಆದರೆ ಹಿಟ್ಲರ್ ಬೆದರಲಿಲ್ಲ. ಆತ ಶಾಲಾ ಪಠ್ಯದಲ್ಲೂ ಬದಲಾವಣೆಗಳನ್ನು ತಂದ. ನಾಝಿಸಂ ಮತ್ತು ಆತನನ್ನು ಬೆಂಬಲಿಸುವ ಪುಸ್ತಕಗಳನ್ನು ಶಾಲಾ ಪಠ್ಯವಾಗಿ ಸೇರಿಸಿದ. ಅವಸರ ಅವಸರವಾಗಿ ರಚಿತವಾದ ಆ ಪುಸ್ತಕಗಳು ಎಷ್ಟು ಕಳಪೆ ಗುಣಮಟ್ಟದವು ಆಗಿದ್ದುವೆಂದರೆ ನಾಝಿಸಂ ಅನ್ನು ಹೊಗಳುವುದಕ್ಕಿಂತ ಹೊರತಾದ ಯಾವ ಉದ್ದೇಶವೂ ಅವುಗಳಿಗಿರಲಿಲ್ಲ. ಮಕ್ಕಳನ್ನು ನಾಝಿಸಂನ ಬೆಂಬಲಿಗರಾಗಿ ಬೆಳೆಸುವಂತೆ ಶಾಲಾ ಸಭೆಗಳಲ್ಲಿ ಪೋಷಕರೊಂದಿಗೆ ವಿನಂತಿಸಲಾಗುತ್ತಿತ್ತು. ಹಿಟ್ಲರ್ ಹುಟ್ಟಿದ ದಿನವನ್ನು ಮತ್ತು ಅಧಿಕಾರಕ್ಕೇರಿದ ದಿನವನ್ನು ಶಾಲಾ ವಾರ್ಷಿಕ ದಿನಗಳನ್ನಾಗಿ ಆಚರಿಸುವ ವಾತಾವರಣವನ್ನು ಆತ ಹುಟ್ಟು ಹಾಕಿದ್ದ. ಒಂದು ರೀತಿಯಲ್ಲಿ, ತನ್ನ ವಿಚಾರವನ್ನು ಒಪ್ಪದ ಎಲ್ಲವನ್ನೂ ಮತ್ತು ಎಲ್ಲರನ್ನೂ ತಿರಸ್ಕರಿಸುವ ಉಗ್ರ ಮನೋಭಾವವೊಂದನ್ನು ನಾಝಿಸಂ ಪ್ರಚಾರ ಮಾಡುತ್ತಿತ್ತು. ಅದರ ಭಾಗವೇ ಸಾಹಿತ್ಯ ಕೃತಿಗಳ ಸುಡುವಿಕೆ. 1942ರಲ್ಲಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು ‘ದೆ ಬರ್ನ್‍ಂಟ್ ದ ಬುಕ್ಸ್’ ಎಂಬ ಹಾಡನ್ನು ಬರೆಯುವುದಕ್ಕೆ ಕಾರಣವಾದ ಅಂಶವೂ ಇದುವೇ. ‘ಸಾಹಿತ್ಯ ಕೃತಿಗಳಿಗೆ ಬೆಂಕಿ ಕೊಡುವುದರಿಂದ ನೀವು ಏನನ್ನೂ ಸಾಧಿಸಲಾರಿರಿ’ ಎಂಬ ಸಂದೇಶವನ್ನು ಸಾರಿದ ವಿನ್ಸೆಂಟ್‍ರನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ-
    ಕಳೆದೆರಡು ವಾರಗಳಿಂದ ಭಗವದ್ಗೀತೆ ಸುದ್ದಿಯಲ್ಲಿದೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಬೇಕು ಎಂಬ ಸುಶ್ಮಾ ಸ್ವರಾಜ್‍ರ ಬಯಕೆಗೆ ಪ್ರತಿರೋಧವೆಂಬಂತೆ ಅದನ್ನು ಸುಡಬೇಕೆಂಬ ಆಗ್ರಹವೊಂದು ಸಾಹಿತ್ಯ ವಲಯದಿಂದ ಕೇಳಿ ಬಂದಿದೆ. ಕೆ.ಎಸ್. ಭಗವಾನ್, ಜಿ.ಕೆ. ಗೋವಿಂದ ರಾವ್, ಅಗ್ನಿ ಶ್ರೀಧರ್, ಬಂಜಗೆರೆ ಜಯಪ್ರಕಾಶ್ ಮುಂತಾದ ಚಿಂತಕರು ಇಂಥದ್ದೊಂದು ವಾದವನ್ನು ಮುಂದಿಡುವ ಮೂಲಕ ಹೊಸ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. 1927 ಡಿಸೆಂಬರ್ 27ರಂದು ಬಾಬಾ ಸಾಹೇಬ್ ಅಂಬೇಡ್ಕರ್‍ರು ಮನುಸ್ಮೃತಿಯನ್ನು ಸಾರ್ವಜನಿಕವಾಗಿಯೇ ಸುಟ್ಟು ಹಾಕಿರುವುದನ್ನು ಕೆಲವರು ಈ ಸುಡುವ ಪ್ರತಿಭಟನೆಗೆ ಸಮರ್ಥನೆಯಾಗಿ ನೀಡುತ್ತಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಸುಡುವುದು ಅದಕ್ಕೆ ತೋರಲಾಗುವ ಸರಿಯಾದ ಪ್ರತಿರೋಧ ಎಂಬ ನಿಲುವು ಸಾಹಿತಿಗಳದ್ದು. ಅಂದಹಾಗೆ, ಭಗವದ್ಗೀತೆಯ ಕುರಿತಂತೆ ಪರ-ವಿರುದ್ಧ ಅಭಿಪ್ರಾಯಗಳೇನೇ ಇರಲಿ, ಸುಡುವ ಹಂತಕ್ಕೆ ಒಂದು ಗ್ರಂಥವನ್ನು ನಾವು ಕೊಂಡೊಯ್ಯಬೇಕೇ? ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ನೂರಾರು ದಾರಿಗಳಿರುವಾಗ ಬೆಂಕಿಯನ್ನು ಪ್ರತಿಭಟನೆಯ ಅಸ್ತ್ರವಾಗಿ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಸಮಂಜಸ? ಸುಡುವ ಪ್ರಕ್ರಿಯೆಯಲ್ಲಿ ಒಂದು ಉಗ್ರವಾದವಿದೆ. ಸುಟ್ಟ ಬಳಿಕ ಉಳಿಯುವುದು ಬೂದಿ ಮಾತ್ರ. ಬೂದಿಯಿಂದ ಮತ್ತೆ ಆ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದಲೇ ನಾಶ ಮಾಡುವ ಪ್ರತಿಭಟನೆಯು ಸಮಾಜ ವಿರೋಧಿಯಂತೆ ಅನಿಸುತ್ತದೆ. ಭಗವದ್ಗೀತೆಯಲ್ಲಿರುವ ನಿರ್ದಿಷ್ಟ ಶ್ಲೋಕಗಳ ಕುರಿತಂತೆ ಪೇಜಾವರ ಸ್ವಾವಿೂಜಿಗಳಂತಹ ಧರ್ಮಗುರುಗಳು ಯಾವ ವ್ಯಾಖ್ಯಾನವನ್ನು ಕೊಡುತ್ತಾರೋ ಅದನ್ನು ಪ್ರಗತಿ ಪರ ಸಾಹಿತಿಗಳು ಒಪ್ಪುವುದಿಲ್ಲ. ಪ್ರಗತಿಪರರ ಆಲೋಚನೆಗಳನ್ನು ಭಗವದ್ಗೀತೆಯ ಪರ ಇರುವವರೂ ಒಪ್ಪುವುದಿಲ್ಲ. ಇಂಥ ಸ್ಥಿತಿಯಲ್ಲಿ, ಬೆಂಕಿ ಕೊಡುವುದರಿಂದ ವೈಚಾರಿಕ ದಾರಿಯೇ ಮುಚ್ಚಿದಂತಾಗುತ್ತದೆ. ಚಾರ್ಲಿ ಹೆಬ್ಡೋದ ಮೇಲಿನ ದಾಳಿಯನ್ನು ಜಗತ್ತು ಖಂಡಿಸಿರುವುದರಲ್ಲಿ ಈ ಕಾರಣವೂ ಇದೆ. ಚಾರ್ಲಿ ಹೆಬ್ಡೋದ ನಿಲುವನ್ನು ಪ್ರಶ್ನಿಸುವುದಕ್ಕೆ ಬಂದೂಕಿಗಿಂತ ಹೊರತಾದ ಹತ್ತಾರು ದಾರಿಗಳಿದ್ದುವು. ಆ ದಾರಿಗಳ ಮೂಲಕ ಸಮಾಜವನ್ನು ಮುಟ್ಟುವುದಕ್ಕೆ ಹೆಬ್ಡೋ ವಿರೋಧಿಗಳು ಶ್ರಮಿಸಬಹುದಾಗಿತ್ತು. ಸಮಾಜದಲ್ಲಿ ಸಂವಾದದ ವಾತಾವರಣವನ್ನು ನಿರ್ಮಿಸಬಹುದಾಗಿತ್ತು. ಆದರೆ ಬಂದೂಕು ಆ ಅವಕಾಶವನ್ನೇ ಕಸಿದುಕೊಂಡಿತು. ಆ ಬಳಿಕ ನಡೆದ ಚರ್ಚೆಗಳಲ್ಲಿ ಹೆಚ್ಚಿನವು ಮುಸ್ಲಿಮ್ ಉಗ್ರವಾದದ ಸುತ್ತ ಆಗಿತ್ತೇ ಹೊರತು ಚಾರ್ಲಿ ಹೆಬ್ಡೋದ ನಿಂದನಾತ್ಮಕ ಧೋರಣೆಯ ಸುತ್ತ ಆಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲು ತಿಳಿಯದ ಸಮುದಾಯವಾಗಿ ಮುಸ್ಲಿಮ್ ಜಗತ್ತನ್ನು ಹೆಚ್ಚಿನ ಮಂದಿ ಚಿತ್ರೀಕರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಚಾರ್ಲಿ ಹೆಬ್ಡೋದ ವ್ಯಂಗ್ಯ ಚಿತ್ರಕ್ಕೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸವನ್ನು ಗಮನಿಸದಂತೆ ಮಾಡುವುದಕ್ಕೆ ಬಂದೂಕು ಯಶಸ್ವಿಯಾಯಿತು. ಇದೊಂದೇ ಅಲ್ಲ. ಅಮೇರಿಕದ ಫ್ಲಾರಿಡಾದಲ್ಲಿರುವ ಕ್ರಿಶ್ಚಿಯನ್ ಡವ್ ವರ್ಲ್ಡ್ ಔಟ್‍ರೀಚ್ ಸೆಂಟರ್‍ನ ಪಾದ್ರಿ ಟೆರ್ರಿ ಜೋನ್ಸ್ ರು ಪವಿತ್ರ ಕುರ್‍ಆನಿನ 200 ಪ್ರತಿಗಳನ್ನು ಸುಡುವುದಾಗಿ 2010 ಜುಲೈಯಲ್ಲಿ ಘೋಷಿಸಿದರು. ವರ್ಲ್ಡ್  ಟ್ರೇಡ್ ಸೆಂಟರ್ ಉರುಳಿದ ದಿನವಾದ ಸೆ. 11ರಂದು ಈ ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುವುದಾಗಿ ಅವರು ಹೇಳಿದರು. ಇದರ ವಿರುದ್ಧ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಯಿತು. 2011 ಮಾರ್ಚ್ 20ರಂದು ಅವರು ತನ್ನ ಚರ್ಚ್‍ನಲ್ಲಿ ‘ಕುರ್‍ಆನ್‍ನ ವಿಚಾರಣೆ' (Trial of Quran) ಎಂಬ ಕಾರ್ಯಕ್ರಮವನ್ನು ಇಟ್ಟುಕೊಂಡರು. ‘ಮಾನವೀಯತೆಯ ವಿರುದ್ಧ ಕ್ರೌರ್ಯವೆಸಗಿದೆ’ (Crime against Humanity) ಎಂಬ ಆರೋಪವನ್ನು ಹೊರಿಸಿ ಅವರು ಕುರ್‍ಆನನ್ನು ಬಹಿರಂಗವಾಗಿಯೇ ಸುಟ್ಟರು. 2010ರಲ್ಲಿ ಇವರು ‘ಇಸ್ಲಾಮ್ ಈಸ್ ಆಫ್ ದ ಡೆವಿಲ್’ (Islam is of the Devil) ಎಂಬ ಕೃತಿಯನ್ನು ಪ್ರಕಟಿಸಿದರಲ್ಲದೇ ಕುರ್‍ಆನನ್ನು ಎತ್ತಿ ಹಿಡಿದು - ‘ಇದು ಧರ್ಮಗ್ರಂಥವಲ್ಲ, ಪಿಶಾಚಿಯ ಗ್ರಂಥ’ ಎಂದು ಹೇಳಿದ ವೀಡಿಯೋವನ್ನು ಯೂಟ್ಯೂಬ್‍ಗೆ ಹಾಕಿದರು. ಆದರೆ ಇದಕ್ಕೆ ಪ್ರತಿಯಾಗಿ ಅಮೇರಿಕನ್ ಮುಸ್ಲಿಮರು ಮಾಡಿದ್ದೇನೆಂದರೆ, ಸೆ. 11ನ್ನು 'ಲವ್ ಜೀಸಸ್ ಡೇ' (Love Jesus day) ಆಗಿ ಆಚರಿಸಿದ್ದು. ಜೀಸಸ್‍ರನ್ನು ಪ್ರವಾದಿಯೆಂದು ಪವಿತ್ರ ಕುರ್‍ಆನ್  ಕರೆದಿರುವುದಾಗಿ ಅವರು ಹೇಳಿದರು. ಅಲ್ಲದೇ ಸೆ. 11ನ್ನು ‘ಪವಿತ್ರ ಕುರ್‍ಆನನ್ನು ಓದುವ ದಿನ'ವಾಗಿ ಮುಸ್ಲಿಮ್ ಸಂಘಟನೆಗಳು ಆಚರಿಸಿದ್ದೂ ನಡೆಯಿತು. ಅಮೇರಿಕನ್ನರ ಮೇಲೆ ಈ ಪ್ರತಿ ಪ್ರತಿಭಟನೆ ಸಾಕಷ್ಟು ಪರಿಣಾಮವನ್ನು ಬೀರಿತು. ಟೆರ್ರಿ ಜೋನ್ಸ್ ರ ಚರ್ಚ್‍ಗೆ ನೀಡಲಾಗಿದ್ದ 1 ಲಕ್ಷದ 40 ಸಾವಿರ ಡಾಲರ್ ಸಾಲವನ್ನು ಶೀಘ್ರವೇ ಮರು ಪಾವತಿಸುವಂತೆ ಅಮೇರಿಕದ ಬ್ಯಾಂಕೊಂದು ಆದೇಶಿಸಿತಲ್ಲದೇ ಚರ್ಚ್‍ನ ಆಸ್ತಿ-ಪಾಸ್ತಿಗಳಿಗೆ ನೀಡಲಾಗಿದ್ದ ಇನ್ಶೂರೆನ್ಸನ್ನು ರದ್ದುಪಡಿಸಿತು. ಕೆನಡ, ಕ್ಯೂಬಾ, ಅಮೇರಿಕ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ವ್ಯಾಟಿಕನ್ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳೂ ಟೆರ್ರಿ ಜೋನ್ಸ್ ರ ಸುಡುವ ಪ್ರತಿಭಟನೆಯನ್ನು ಖಂಡಿಸಿದುವು. ನಿಜವಾಗಿ, ಉಗ್ರವಾದಕ್ಕೆ ಎದುರಾದ ಸೋಲು ಇದು. ಹಾಗಂತ, ಸುಡುವ ಪ್ರತಿಭಟನೆ ಭಾರತದಲ್ಲಿ ನಡೆಯುತ್ತಿಲ್ಲ ಎಂದಲ್ಲ. 2014 ಡಿಸೆಂಬರ್ 27ರಂದು ತಮಿಳು ಸಾಹಿತಿ ಪೆರುಮಾಳ್ ಮುರುಗನ್‍ರ ಮಧೋರುಬಗನ್ ಎಂಬ ಕಾದಂಬರಿಯನ್ನು ಸಂಘಪರಿವಾರದ ಮಂದಿ ಸಾರ್ವಜನಿಕವಾಗಿಯೇ ಸುಟ್ಟು ಹಾಕಿದ್ದರು. ಕಾದಂಬರಿಯು ಅನೈತಿಕತೆಯನ್ನು ಪ್ರಚೋದಿಸುತ್ತದೆ ಮತ್ತು ಅದರಲ್ಲಿ ಶಿವನನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ಅವರು ಹೊರಿಸಿದ್ದರು. ಅಂತಿಮವಾಗಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ಹಿಂಪಡೆಯಿತು. ಮಾತ್ರವಲ್ಲ, `ತಾನಿನ್ನು ಬರೆಯುವುದಿಲ್ಲ' ಎಂದು ಮುರುಗನ್ ಪೆನ್ನು ಕೆಳಗಿಟ್ಟರು. 1995ರಲ್ಲಿ ಸಲ್ಮಾನ್ ರುಶ್ದಿಯವರ ‘ದಿ ಮೂರ್ಸ್ ಲಾಸ್ಟ್ ಸೈ' ಕೃತಿಯನ್ನು ಶಿವಸೇನೆ ಮತ್ತು ಕಾಂಗ್ರೆಸ್‍ನ ಕಾರ್ಯಕರ್ತರು ಬಹಿರಂಗವಾಗಿಯೇ ಸುಟ್ಟು ಹಾಕಿದ್ದರು. ಬಾಳಾ ಠಾಕ್ರೆ ಮತ್ತು ನೆಹರೂರವರನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂಬ ಆರೋಪವನ್ನು ಈ ಪಕ್ಷಗಳು ಇದಕ್ಕೆ ಕಾರಣವಾಗಿ ಕೊಟ್ಟಿದ್ದುವು. 1991ರ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿದ್ದ ರೋಹಿಂಟನ್ ಮಿಸ್ತ್ರಿಯವರ ‘ಸಚ್ ಎ ಲಾಂಗ್ ಜರ್ನಿ' ಕೃತಿಯನ್ನು 2010ರಲ್ಲಿ ಶಿವಸೇನೆಯ ವಿದ್ಯಾರ್ಥಿ ಘಟಕವು ಮುಂಬೈಯಲ್ಲಿ ಸುಟ್ಟು ಹಾಕಿತ್ತು. ಕಾದಂಬರಿಯು ಅಸಭ್ಯ ಮತ್ತು ಅಶ್ಲೀಲವಾಗಿದೆ ಹಾಗೂ ಬಾಳಾ ಠಾಕ್ರೆಯವರನ್ನು ಹಗುರವಾಗಿ ಕಾಣಲಾಗಿದೆ ಎಂದು ವಿದ್ಯಾರ್ಥಿಗಳು ಸುಡುವಿಕೆಗೆ ಕಾರಣವನ್ನು ಕೊಟ್ಟಿದ್ದರು.
    ಇವೇನೇ ಇದ್ದರೂ ಸುಡುವ ಪ್ರತಿಭಟನೆಯು ಸಂವಾದದ ವಿರೋಧಿಯಂತೆ ಕಾಣಿಸುತ್ತದೆ. ಆರೋಗ್ಯಕರ ಚರ್ಚೆ, ವೈಚಾರಿಕ ಜಗಳಕ್ಕೆ ಇರುವ ಅವಕಾಶವನ್ನು ಅದು ನಿರಾಕರಿಸಿಬಿಡುತ್ತದೆ. ಆದ್ದರಿಂದಲೇ ಈ ಪ್ರತಿಭಟನಾ ವಿಧಾನವನ್ನು ಪ್ರಶ್ನಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ ನಡುವೆ ವ್ಯತ್ಯಾಸಗಳೇನೇ ಇರಲಿ, ಸುಡುವ ಪ್ರತಿಭಟನೆ ಎಷ್ಟು ಆರೋಗ್ಯಪೂರ್ಣ? ಕೃತಿಯೊಂದಕ್ಕೆ ಬೆಂಕಿ ಕೊಡುವುದು ಪ್ರತಿಭಟನೆಯ ಸಾಂಕೇತಿಕ ರೂಪವೇ ಆಗಿರಬಹುದು. ಆದರೆ ಅದು ರವಾನಿಸುವ ಸಂದೇಶವೇನು? ಧರ್ಮಗಳ ಹೆಸರಲ್ಲಿ ಗುಡಿಸಲುಗಳಿಗೆ ಬೀಳುವ ಬೆಂಕಿ ಮತ್ತು ಉದ್ಯಮಿಗಳಿಗೆ ಜಾಗಗಳನ್ನು ಒದಗಿಸುವುದಕ್ಕಾಗಿ ಸ್ಲಂಗಳಿಗೆ ಬೀಳುವ ಬೆಂಕಿಯ ಮಧ್ಯೆ ನಾವು ಗ್ರಂಥಗಳಿಗೂ ಬೆಂಕಿ ಕೊಡಬೇಕೇ? ಅದು ಗ್ರಂಥವೊಂದರ ಮೇಲಿನ ಚರ್ಚೆಯನ್ನು ಅರ್ಥಪೂರ್ಣಗೊಳಿಸಬಲ್ಲುದೇ ಅಥವಾ ಇನ್ನಷ್ಟು ಬೆಂಕಿ ಪ್ರಕರಣಗಳಿಗೆ ಹೇತುವಾಗಬಹುದೇ?
    ಸ್ಟೀವನ್ ವಿನ್ಸೆಂಟ್ ಬೆನೆಟ್‍ರ ಹಾಡು ಯಾಕೋ ಇಷ್ಟವಾಗುತ್ತದೆ.