Tuesday, November 4, 2014

 ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿ

     ಮಹಾತ್ಮಾ ಗಾಂಧಿ
  ಸರ್ದಾರ್ ಪಟೇಲ್
  ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ಹೆಸರುಗಳನ್ನು ಬಾರಿಬಾರಿಗೂ ಸ್ಮರಿಸುತ್ತಿದ್ದಾರೆ. ಓರ್ವರನ್ನು ರನ್ ಫಾರ್ ಯುನಿಟಿಗೂ (ಏಕತೆಗಾಗಿ ಓಟ) ಇನ್ನೋರ್ವರನ್ನು ಸ್ವಚ್ಛ ಭಾರತಕ್ಕೂ ಬಳಸಿಕೊಂಡಿದ್ದಾರೆ. ‘ಸರ್ದಾರ್ ಇಲ್ಲದ ಗಾಂಧಿ ಅಪೂರ್ಣ’ ಎಂಬೊಂದು ಆಕರ್ಷಕ ನುಡಿಗಟ್ಟನ್ನೂ ಉದುರಿಸಿದ್ದಾರೆ. ಹೀಗೆ ‘ಗಾಂಧಿಯನ್ನು ಪೂರ್ಣಗೊಳಿಸುವ ಪಟೇಲರಿಗಾಗಿ’ ನರ್ಮದಾ ನದಿ ಕಣಿವೆಯಲ್ಲಿ 600 ವಿೂಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಸಿಟಿಝನ್ ಫಾರ್ ಅಕೌಂಟೇಬಲ್ ಗವರ್ನ್‍ಮೆಂಟ್ ಎಂಬ ಸರಕಾರೇತರ ಸಂಸ್ಥೆಯೊಂದು ಈ ಪ್ರತಿಮೆಗಾಗಿ ಅಭಿಯಾನ ನಡೆಸುತ್ತಿದೆ. ಮನೆ ಮನೆಗೆ ಭೇಟಿ ಕೊಡುತ್ತಿದೆ. ರಾಮಮಂದಿರಕ್ಕೆ ಇಟ್ಟಿಗೆಯನ್ನು ಸಂಗ್ರಹಿಸಿದಂತೆ ಪಟೇಲ್ ಪ್ರತಿಮೆಗೆ ಪ್ರತಿಯೋರ್ವರಿಂದಲೂ ದುಡ್ಡು, ಉಕ್ಕಿನ ಸಂಗ್ರಹವಾಗುತ್ತಿದೆ. ಅದಕ್ಕೆಂದೇ www.statueofunity ಎಂಬ ವೆಬ್‍ಸೈಟ್ ಪ್ರಾರಂಭಿಸಲಾಗಿದ್ದು, 2500 ಕೋಟಿ ರೂಪಾಯಿಯ ಆ ಯೋಜನೆಯ ಬಗ್ಗೆ ಅದರಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಇದಾಗಲಿದ್ದು, ನ್ಯೂಯಾರ್ಕ್‍ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಮತ್ತು ಬ್ರೆಜಿಲ್‍ನ ರಿಯೋ ಡಿ ಜನಿರೋದಲ್ಲಿರುವ ಕ್ರಿಸ್ಟ್ ದಿ ರಿಡೀಮರ್‍ಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟನ್ನೂ ಇದಕ್ಕಾಗಿ ರಚಿಸಲಾಗಿದೆ. ಸಂದರ್ಶಕರ ಕೊಠಡಿ, ಅಮ್ಯೂಸ್‍ಮೆಂಟ್ ಪಾರ್ಕ್, ವಿಶಾಲ ಸಭಾಂಗಣ, ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿರುವ ಪಟೇಲ್‍ರ ಈ ಪ್ರತಿಮೆ ಯೋಜನೆಯನ್ನು ಸ್ವಚ್ಛ ಭಾರತದ ಗಾಂಧೀಜಿಗೆ ಒಮ್ಮೆ ಹೋಲಿಸಿ ನೋಡಿ. ಯಾರು ಪೂರ್ಣವಾಗುತ್ತಿದ್ದಾರೆ? ಗಾಂಧಿಯೋ ಪಟೇಲರೋ? ಸ್ವಚ್ಛ ಭಾರತ್ ಅಭಿಯಾನವನ್ನು ಘೋಷಿಸುವ ಸಂದರ್ಭದಲ್ಲೂ ತೀವ್ರ ಬಲಪಂಥೀಯ ವ್ಯಕ್ತಿತ್ವಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ್ ಮತ್ತು ಮದನ್ ಮೋಹನ್ ಮಾಳವಿಯರನ್ನು ಮೋದಿಯವರು ಸ್ಮರಿಸಿ ಕೊಂಡಿದ್ದರು. ಗಾಂಧಿ ಎಂಬುದು ಮೋದಿ ಮತ್ತು ಅವರ ಪರಿವಾರಕ್ಕೆ ಎಂದೂ ಜೀರ್ಣಿಸಲಾಗದ ವ್ಯಕ್ತಿತ್ವ. ಗಾಂಧಿಯವರ ಅಭಿವೃದ್ಧಿ ಚಿಂತನೆಗೂ ಮೋದಿಯವರ ಅಭಿವೃದ್ಧಿ ಚಿಂತನೆಗೂ ತದ್ವಿರುದ್ಧ ಎನ್ನಬಹುದಾದಷ್ಟು ವ್ಯತ್ಯಾಸಗಳಿವೆ. ದೇಶಪ್ರೇಮ, ರಾಷ್ಟ್ರೀಯ ಭದ್ರತೆ, ಕೈಗಾರಿಕಾ ನೀತಿ, ಅರ್ಥವ್ಯವಸ್ಥೆ ಮತ್ತು ಜಾತ್ಯತೀತತೆ.. ಎಲ್ಲದರ ವಿಷಯದಲ್ಲೂ ಗಾಂಧಿ ಮತ್ತು ಮೋದಿಯವರು ಉತ್ತರ-ದಕ್ಷಿಣ. ಆದ್ದರಿಂದಲೇ, ಪ್ರಧಾನಿಯಾಗುವವರೆಗೆ ಗಾಂಧಿಯನ್ನು ಹೊರಗಿಟ್ಟೇ ಮೋದಿ ಮಾತಾಡುತ್ತಿದ್ದರು. ಗಾಂಧಿ ಎಂಬೊಂದು ವ್ಯಕ್ತಿತ್ವವು ಈ ದೇಶವನ್ನು ಮತ್ತು ಇಲ್ಲಿಯ ನಾಗರಿಕರನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ ಎಂಬ ಸತ್ಯವನ್ನು ಅಲ್ಲಗಳೆಯುವ ರೀತಿಯಲ್ಲಿ ಅವರು ವರ್ತಿಸಿದ್ದರು. ಪಟೇಲ್‍ರು ಗುಜರಾತ್‍ನವರಾದಂತೆಯೇ ಗಾಂಧಿ ಕೂಡ ಗುಜರಾತ್‍ನವರೇ. ಪಟೇಲ್‍ರಿಗೆ ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಅವರನ್ನು ಗೌರವಾರ್ಹ ವ್ಯಕ್ತಿತ್ವವಾಗಿ ಗುರುತಿಸಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟು, ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸರ್ದಾರ್ ಪಟೇಲ್ ಯುನಿವರ್ಸಿಟಿ ಮುಂತಾದ ರೂಪದಲ್ಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿತ್ತು. ಆದ್ದರಿಂದ, “ಕಾಂಗ್ರೆಸ್ ಸರಕಾರ ಪಟೇಲ್‍ರನ್ನು ನಿರ್ಲಕ್ಷಿಸಿದುದರಿಂದ ಪ್ರತಿಮೆ ನಿರ್ಮಿಸಬೇಕಾಯಿತು” ಎಂಬ ಮೋದಿವಾದ ಸುಳ್ಳು ಮತ್ತು ಅತಾರ್ಕಿಕವಾದುದು. ಒಂದು ರೀತಿಯಲ್ಲಿ, ಗುಜರಾತ್‍ನವರಾಗಿಯೂ ಗುಜರಾತ್‍ನಲ್ಲಿ ಕಳೆದು ಹೋಗಿರುವುದು ಗಾಂಧಿಯೇ. ಅವರನ್ನು ಸಬರಮತಿಯ ಆಶ್ರಮಕ್ಕೆ ಸೀಮಿತಗೊಳಿಸಿ ಬಿಡಲಾಗಿದೆ. ಧರಣಿ, ಸತ್ಯಾಗ್ರಹ, ಹಿಂದೂ-ಮುಸ್ಲಿಮ್ ಏಕತೆ ಮುಂತಾದುವುಗಳೆಲ್ಲ ನೆಲೆ ಕಳೆದುಕೊಂಡಿರುವುದೂ ಗುಜರಾತ್‍ನಲ್ಲಿಯೇ. ನಿಜವಾಗಿ, ಗುಜರಾತ್‍ನಲ್ಲಿ ಪ್ರತಿಮೆ ನಿರ್ಮಾಣ ವಾಗಲೇಬೇಕಿದ್ದರೆ (ಪ್ರತಿಮೆ ನಿರ್ಮಾಣವೇ ತಪ್ಪು) ಅದು ಗಾಂಧಿಯದ್ದಾಗಿರಬೇಕಿತ್ತು. ಆದರೆ ಗಾಂಧಿಯನ್ನು ಕಸ ಗುಡಿಸುವುದಕ್ಕೆ, ಡ್ರೈನೇಜ್ ಸ್ವಚ್ಛಗೊಳಿಸುವುದಕ್ಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳ ಮಟ್ಟಕ್ಕೆ ಇಳಿಸಿಬಿಟ್ಟು ಪಟೇಲ್‍ರನ್ನು  ಪ್ರತಿಮೆಯಲ್ಲಿ ಮೋದಿ ಎತ್ತಿ ನಿಲ್ಲಿಸಿದ್ದಾರೆ. ಈ ಮೂಲಕ ಗಾಂಧಿಯನ್ನು ರಾಜಕೀಯ ರಹಿತ ವ್ಯಕ್ತಿತ್ವವಾಗಿ ಕಟ್ಟಿಕೊಡುವ ಸಂಚು ಎದ್ದು ಕಾಣುತ್ತಿದೆ. ರಾಜಕೀಯವಾಗಿ ಗಾಂಧಿ ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತಾರೋ ಅಲ್ಲಿಯ ವರೆಗೆ ಮೋದಿ ಮತ್ತು ಅವರ ಪರಿವಾರದ ಚಿಂತನೆಗಳಿಗೆ ಸವಾಲು ಎದುರಾಗುತ್ತಲೇ ಇರುತ್ತದೆ. 1948ರಲ್ಲಿ ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇವತ್ತು ಕೂಡಾ ಬಹು ಚರ್ಚಿತ ವ್ಯಕ್ತಿಯಾಗಿ ಜೀವಂತ ಇದ್ದಾನೆ. ಗಾಂಧಿ ಈ ದೇಶದಲ್ಲಿ ಚರ್ಚೆಗೆ ಒಳಗಾಗುವುದು ಇತರ ನಾಯಕರಂತೆ ಪುಣ್ಯ ತಿಥಿಯಂದೋ ಹುಟ್ಟು ಹಬ್ಬದಂದೋ ಅಥವಾ ಕೆಲವು ನಿರ್ದಿಷ್ಟ ದಿನಗಳಂದೋ ಅಲ್ಲ. ಈ ದೇಶದ ಆಡಳಿತವು ತೆಗೆದುಕೊಳ್ಳುವ ಬಹುತೇಕ ಪ್ರತಿ ನಿರ್ಧಾರದ ಸಂದರ್ಭದಲ್ಲೂ ಅವರು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಗೊಳ್ಳುತ್ತಾರೆ. ಅವರ ಆಲೋಚನೆಗಳನ್ನು ಮತ್ತು ಪ್ರಸ್ತುತ ಆಡಳಿತದ  ಆಲೋಚನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. ಒಂದು ವೇಳೆ, ಗಾಂಧಿಯವರದು ಸ್ವಚ್ಛತೆ, ಸಮಾಜಸೇವಾ ಕಾರ್ಯಗಳು ಅಥವಾ ಸರಳ ಜೀವನ ಮುಂತಾದ ತೀರಾ ರಾಜಕೀಯ ರಹಿತ ವ್ಯಕ್ತಿತ್ವವಾಗಿರುತ್ತಿದ್ದರೆ ಈ 6 ದಶಕಗಳ ಬಳಿಕವೂ ಗೋಡ್ಸೆಯ ಗುಂಡು ಚರ್ಚಾರ್ಹ ಎನಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಗಾಂಧಿ ಯಾವಾಗಲೋ ಓರ್ವ ಸಮಾಜ ಸೇವಕರಾಗಿ ಕಾಣೆಯಾಗುತ್ತಿದ್ದರು. ಬಹುಶಃ ಗಾಂಧಿಗಿರುವ ಈ ವಿಶೇಷತೆಯೇ ಅವರನ್ನು ಅತ್ತ ಒಪ್ಪಿಕೊಳ್ಳಲೂ ಆಗದ ಇತ್ತ ತಿರಸ್ಕರಿಸಲೂ ಆಗದ ಸಂದಿಗ್ಧತೆಗೆ ಮೋದಿ ಮತ್ತು ಪರಿವಾರವನ್ನು ನೂಕಿಬಿಟ್ಟಿದೆ. ಈ ಹಿನ್ನೆಲೆಯಿಂದಾಗಿಯೇ ಮೋದಿಯವರು ಗಾಂಧಿಯನ್ನು ಸ್ವಚ್ಛ ಭಾರತಕ್ಕೆ ಜೋಡಿಸಿರಬೇಕು. ಓರ್ವ ಸೋಶಿಯಲ್ ವರ್ಕರ್ ಎಂಬಂತೆ ಗಾಂಧಿಯನ್ನು ಬೀದಿಬದಿಯಲ್ಲಿ ಕಸಗುಡಿಸಲು ನಿಲ್ಲಿಸುತ್ತಲೇ ಪಟೇಲ್‍ರನ್ನು ಪ್ರತಿಮೆಯ ಮೂಲಕ ರಾಜಕೀಯ ವ್ಯಕ್ತಿತ್ವವಾಗಿ ಕಟ್ಟಿಕೊಡುವುದು ಮೋದಿಯವರ ಇಂಗಿತವಾದಂತಿದೆ. ಸ್ವಚ್ಛ ಭಾರತದ ಗಾಂಧಿಯ ಎದುರು ಪ್ರತಿಮೆಯ ಪಟೇಲರನ್ನು ನಿಲ್ಲಿಸುವಾಗ ಗೆಲ್ಲುವುದು ಪಟೇಲರೇ. ಪ್ರತಿಮೆ ಸ್ಥಾಯಿಯಾದುದು. ಅದು ಅನಂತ ಕಾಲದ ವರೆಗೆ ಇರಬಲ್ಲುದು. ಆದರೆ ಸ್ವಚ್ಛ ಭಾರತಕ್ಕೆ ಸೀಮಿತತೆ ಮತ್ತು ಕಾಲಮಿತಿ ಎರಡೂ ಇದೆ. ಅದೊಂದು ಯೋಜನೆ. ಆ ಯೋಜನೆಯ ಮೂಲಕ ಗಾಂಧಿ ಚರ್ಚೆಗೀಡಾಗುವುದು ನೈರ್ಮಲ್ಯದ ಸುತ್ತ ಮಾತ್ರ. ಆ ಚರ್ಚೆ ಎಂದೂ ಗಾಂಧಿಯವರ ರಾಜಕೀಯ ಆಲೋಚನೆಗಳ ಕಡೆಗೆ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಮೆಗಾದರೋ ಉಕ್ಕಿನ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವು ಬಲಾಢ್ಯತೆ, ಶ್ರೇಷ್ಠತೆ ಮುಂತಾದ ಗುಣಗಳನ್ನೇ ಧ್ವನಿಸುತ್ತದೆ. ಬಹುಶಃ ಸ್ವಚ್ಛ ಭಾರತ ಮತ್ತು ಪ್ರತಿಮೆ ನಿರ್ಮಾಣದ ಮೂಲಕ ಗಾಂಧಿಯನ್ನು ರಾಜಕೀಯ ರಹಿತಗೊಳಿಸಿ ಪಟೇಲರನ್ನು ಮೋದಿ ಬ್ರಾಂಡಿನ ಹೊಸ ರಾಜಕೀಯ ಪ್ರತಿರೂಪವಾಗಿ ಕಟ್ಟಿಕೊಡುವ ಪ್ರಯತ್ನ ಸಾಗುತ್ತಿರುವಂತೆ ಕಾಣುತ್ತಿದೆ.
 ನಿಜವಾಗಿ, ಗಾಂಧಿ ಮತ್ತು ಪಟೇಲ್ ಇಬ್ಬರೂ ಕಾಂಗ್ರೆಸಿಗರೇ.  ಅವರಿಬ್ಬರ ಐಡಿಯಾಲಜಿಯೂ ಕಾಂಗ್ರೆಸನ್ನು ಬೆಳೆಸಿದೆ ಮತ್ತು ಬಲಿಷ್ಠಗೊಳಿಸಿದೆ. ತನ್ನ ಬದುಕಿನುದ್ದಕ್ಕೂ ಕಾಂಗ್ರೆಸಿನವರಾಗಿದ್ದುಕೊಂಡೇ ಬದುಕಿದ್ದು ಮತ್ತು ಕಾಂಗ್ರೆಸ್ ಅನ್ನು  ಸಮರ್ಥಿಸಿಕೊಂಡವರಾಗಿದ್ದರು ಪಟೇಲರು. ಆದರೆ ಮೋದಿ ಮತ್ತು ಅವರ ಬೆಂಬಲಿಗರು ಈ ಸತ್ಯವನ್ನು ಎಲ್ಲೂ ಹೇಳದೆಯೇ ಅವರನ್ನು ತಮ್ಮವರೆಂದೂ ಅವರ ಐಡಿಯಾಲಜಿಯು ತಮ್ಮದೆಂದೂ ಬಿಂಬಿಸುವ ಯತ್ನದಲ್ಲಿದ್ದಾರೆ. ಪಟೇಲರ ಐಡಿಯಾಲಜಿ ಕಾಂಗ್ರೆಸ್‍ನ ಐಡಿಯಾಲಜಿಯಾಗಿತ್ತು. ಗಾಂಧಿ, ನೆಹರೂರಂತೆಯೇ ದ್ವೇಷ ರಾಜಕೀಯವನ್ನು ಇಷ್ಟಪಡದವರು ಪಟೇಲರು. ಆದ್ದರಿಂದಲೇ, 1949ರಲ್ಲಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಲಾದ ಮತ್ತು ಅಲ್ಲಿದ್ದ ಮೌಲ್ವಿಯನ್ನು ಓಡಿಸಿ ಅದರೊಳಗೆ ರಾಮ ವಿಗ್ರಹ ಪ್ರತಿಷ್ಠಾಪಿಸಲಾದ ಘಟನೆಯ ವಿರುದ್ಧ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. “ವಿವಾದವನ್ನು ಬಲವಂತದಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ, ನೀವಿದಕ್ಕೆ ಆಸ್ಪದ ಕೊಡಬೇಡಿ” ಎಂದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಿ.ಬಿ. ಪಂತ್‍ರಿಗೆ ಅವರು ಖಾರ ಪತ್ರವನ್ನು ಬರೆದಿದ್ದರು. ಗಾಂಧಿ ಹತ್ಯೆಯ ತರುವಾಯ ಆರೆಸ್ಸೆಸ್‍ಗೆ ನಿಷೇಧ ವಿಧಿಸಿದ್ದೂ ಪಟೇಲರೇ. ನಿಷೇಧವನ್ನು ಹಿಂತೆಗೆದುಕೊಳ್ಳುವುದಕ್ಕೆ, “ಸಾಮಾಜಿಕ ಸಂಘಟನೆಯಾಗಿ ಚಟುವಟಿಕೆಯಲ್ಲಿರುತ್ತೇವೆ, ರಾಜಕೀಯ ಪ್ರವೇಶಿಸುವುದಿಲ್ಲ” ಎಂಬ ಮುಚ್ಚಳಿಕೆಯನ್ನು ಷರತ್ತು ಆಗಿ ಮುಂದಿಟ್ಟವರೂ ಪಟೇಲರೇ. ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಖಾರ ಪತ್ರವನ್ನು ಬರೆದವರೂ ಅವರೇ. ‘ಇಂಡಿಯಾ ವಿನ್ಸ್ ಫ್ರೀಡಮ್' ಎಂಬ ಕೃತಿಯಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್‍ರು ಭಾರತ ವಿಭಜನೆಗೊಂಡ ಬಗ್ಗೆ ಮತ್ತು ಆ ಸಮಯದಲ್ಲಿ ಪಟೇಲರ ದೃಷ್ಟಿಕೋನದ ಬಗ್ಗೆ ಬರೆದಿದ್ದಾರೆ. ನೆಹರೂ ಅವರಿಗಿಂತ 6 ತಿಂಗಳು ಮೊದಲೇ ವಿಭಜನೆಯನ್ನು ಅನಿವಾರ್ಯ ಎಂದು ಒಪ್ಪಿಕೊಂಡವರು ಪಟೇಲರಾಗಿದ್ದರು. ಅವರು 1946 ಡಿಸೆಂಬರ್‍ನಲ್ಲಿಯೇ ವಿಭಜನೆಯ ಪರ ನಿಲುವನ್ನು ಹೊಂದಿದ್ದರು. ಕೊನೆ ಕ್ಷಣದ ವರೆಗೆ ದೇಶ ವಿಭಜನೆಗೆ ವಿರುದ್ಧವಾಗಿದ್ದ ಆಝಾದ್‍ರಿಗೆ ಅತ್ಯಂತ ಆಘಾತ ಮತ್ತು ಅಚ್ಚರಿಯಾದದ್ದು ಪಟೇಲರ ಈ ನಿಲುವೇ ಆಗಿತ್ತು. ಅವರು ಪಟೇಲರ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನಾವು ಇಷ್ಟಪಡುತ್ತೇವೋ ಇಲ್ಲವೋ ಆದರೆ ಭಾರತದಲ್ಲಿ ಎರಡು ದೇಶಗಳಿವೆ” ಎಂಬ ಪಟೇಲರ ಪತ್ರವನ್ನು ಓದಿ ನಾನು ದುಃಖಿತನಾದೆ ಎಂದು ಆಝಾದ್‍ರು ಇಂಡಿಯಾ ವಿನ್ಸ್ ಫ್ರೀಡಮ್‍ನಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಥ ಪಟೇಲರನ್ನು ಮೋದಿಯವರು ಇವತ್ತು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟೇಲರು ಕಾಂಗ್ರೆಸ್‍ನೊಳಗಿದ್ದೂ ಕಾಂಗ್ರೆಸ್ ಅಲ್ಲದ ವ್ಯಕ್ತಿಯಾಗಿದ್ದರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನವೊಂದು ರನ್ ಫಾರ್ ಯುನಿಟಿ ಮತ್ತು ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರ ಮಾತು-ಕೃತಿಯಲ್ಲಿದೆ. ನಿಜವಾಗಿ, ಪಟೇಲ್ ಇಲ್ಲದ ಕಾಂಗ್ರೆಸ್ ಹೇಗೆ ಅಪೂರ್ಣವೋ ಗಾಂಧಿ ಇಲ್ಲದ ಭಾರತೀಯ ರಾಜಕೀಯವೂ ಅಷ್ಟೇ ಅಪೂರ್ಣ. ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ನೆಹರೂ, ಆಝಾದ್, ಪಟೇಲ್, ಗಾಂಧಿ ಮುಂತಾದವರ ಕಾಲದ ಕಾಂಗ್ರೆಸ್ ಎಂದೂ ಒಂದು ಪಕ್ಷವಾಗಿರಲಿಲ್ಲ. ಅದೊಂದು
ತತ್ವ-ಸಿದ್ಧಾಂತಗಳುಳ್ಳ ಮನೆಯಾಗಿತ್ತು. ಅಲ್ಲಿ ಪಟೇಲರಿಗೂ, ನೆಹರೂರಿಗೂ ಆಝಾದ್‍ರಿಗೂ ಗಾಂಧೀಜಿಗೂ ಭಿನ್ನ ಭಿನ್ನ ಅಭಿಪ್ರಾಯಗಳಿದ್ದುವು. ಸರಿ ತಪ್ಪುಗಳ ಬಗ್ಗೆ ತಕರಾರುಗಳಿದ್ದುವು. ಆದರೆ ಅವರೆಂದೂ ಜನಾಂಗ ದ್ವೇಷಿಗಳೋ ಧಾರ್ಮಿಕ ಅಸಹಿಷ್ಣುಗಳೋ ಆಗಿರಲಿಲ್ಲ. ಭಾರತ ವಿಭಜನೆಯಾಗುವುದನ್ನು ಒಪ್ಪುವವರು ಮತ್ತು ಒಪ್ಪದವರು, ಪಾಕಿಸ್ತಾನಕ್ಕೆ ಪರಿಹಾರವಾಗಿ 50 ಕೋಟಿ ರೂಪಾಯಿ ಕೊಡಬೇಕೆನ್ನುವ ಗಾಂಧಿ ಅಭಿಪ್ರಾಯವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಅವರಲ್ಲಿ ಇದ್ದರೂ ಅದನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿಯೇ ಅವರು ಪರಿಗಣಿಸಿದ್ದರು. ಆದರೆ ಇವತ್ತು ಮೋದಿ ಮತ್ತು ಅವರ ಪರಿವಾರವು ಕಾಂಗ್ರೆಸ್ ಮನೆಯಿಂದ ಪಟೇಲ್‍ರನ್ನು ಅಪಹರಿಸಿ ತಂದು ಅವರಿಗೆ ತನ್ನ ಬಣ್ಣ ವನ್ನು ಬಳಿಯುವ ಪ್ರಯತ್ನ ಮಾಡುತ್ತಿದೆ. ‘ಉಕ್ಕಿನ ಮನುಷ್ಯ’, ‘ದೇಶ ವಿಭಜನೆಯ ವಿರೋಧಿ’, ‘ದೇಶವನ್ನು ಒಗ್ಗೂಡಿಸಿದ ವ್ಯಕ್ತಿ’.. ಎಂಬೆಲ್ಲ ಬಿರುದುಗಳನ್ನು ನೀಡಿ ಮೆರವಣಿಗೆ ಮಾಡುತ್ತಿದೆ. ಅವರ ಪ್ರತಿಮೆಯನ್ನು ಕೆತ್ತುವ ಉತ್ಸಾಹದಲ್ಲಿದೆ. ಇದು ಹೇಗಿದೆಯೆಂದರೆ, ವಾಜಪೇಯಿಯವರನ್ನು ತಮ್ಮವರೆಂದು ಕರೆದು ಕಾಂಗ್ರೆಸಿಗರು ಪ್ರತಿಮೆ ನಿರ್ಮಿಸಿದಂತೆ. ಅವರ ಐಡಿಯಾಲಜಿಯನ್ನು ತಮ್ಮ ಐಡಿಯಾಲಜಿ ಎಂದು ಹೇಳಿಕೊಂಡಂತೆ. ನಿಜ ಏನೆಂದರೆ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರೆಂದು ಹೇಳಿಕೊಳ್ಳಬಹುದಾದ ಯಾರೊಬ್ಬರೂ ಮೋದಿ ಮತ್ತು ಅವರ ಪರಿವಾರಕ್ಕಿಲ್ಲ. ಇರುವವರೆಲ್ಲ ಕಾಂಗ್ರೆಸಿಗರೇ. ಈ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವರು ಪಟೇಲರನ್ನು ಹೆಕ್ಕಿಕೊಂಡಿದ್ದಾರೆ. ಮಾತ್ರವಲ್ಲ, ಅವರಿಗೆ ಬಂಡಾಯ ಕಾಂಗ್ರೆಸಿಗನ ವೇಷ ತೊಡಿಸಿ ‘ಅವರ ಆಲೋಚನೆಗಳೇ ನಮ್ಮವು' ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ಇದೀಗ ಅವರಿಗೆ ಗಾಂಧಿ ಇಲ್ಲದ ಪಟೇಲ್ ಪರಿಣಾಮಕಾರಿಯಲ್ಲ ಎಂಬುದು ಮನವರಿಕೆಯಾಗಿರಬೇಕು. ಈ ಕಾರಣದಿಂದಲೇ ರಾಜಕೀಯ ರಹಿತ ಸಾಧು ಗಾಂಧಿಯನ್ನು ಅವರು ಸ್ವಚ್ಛ ಭಾರತದ ನೆಪದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಾಂಧಿ ಮತ್ತು ಪಟೇಲರನ್ನು ಒಟ್ಟಿಗೇ ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ಪ್ರಬಲ ವ್ಯಕ್ತಿತ್ವವಾಗಿ ಪಟೇಲ್‍ರು ಮತ್ತು ಇನ್ನೊಂದು ಕಡೆ ಸಾಧು ವ್ಯಕ್ತಿತ್ವವಾಗಿ ಗಾಂಧಿ - ಹೀಗೆ ಇವರಿಬ್ಬರನ್ನು ಬಳಸಿಕೊಂಡು ಮೋದಿಯವರು ತಮ್ಮ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರು ಇಂದಿನ ಮಾತು ಮುಂದಿನ ದಿನಗಳಲ್ಲಿ, ‘ಗಾಂಧಿ ಇಲ್ಲದ ಪಟೇಲ್ ಅಪೂರ್ಣ’ ಎಂದಾಗಿ ಕೊನೆಗೆ, ಗಾಂಧಿ ಅಪೂರ್ಣವಾಗಿಯೂ ಪಟೇಲ್ ಪೂರ್ಣವಾಗಿಯೂ ವ್ಯಾಖ್ಯಾನಕ್ಕೀಡಾಗಬಹುದು. ಅಂತಿಮವಾಗಿ ಗೋಡ್ಸೆಯೇ ವಿಜೃಂಭಿಸಲೂ ಬಹುದು.

Monday, October 27, 2014

ನುಡಿಸಿರಿಯನ್ನು ಒಪ್ಪಿಕೊಳ್ಳುವ ಸಿದ್ದಲಿಂಗಯ್ಯ ಮತ್ತು ನೋಬೆಲ್ ಅನ್ನು ತಿರಸ್ಕರಿಸುವ ಸರ್ತೆ

      “ಅಲ್ಜೀರಿಯಾದ ವಿರುದ್ಧ ಫ್ರಾನ್ಸ್ ನಡೆಸುತ್ತಿದ್ದ ಯುದ್ಧದ ಸಂದರ್ಭದಲ್ಲಿ ನಾವು 121 ಹೇಳಿಕೆಗೆ (Declaration of the121) ಸಹಿ ಹಾಕಿದೆವಲ್ಲ, ಆಗ ಈ ನೋಬೆಲ್ ಪಾರಿತೋಷಕವನ್ನು  ನನಗೆ ನೀಡಿರುತ್ತಿದ್ದರೆ ನಾನು ಸ್ವೀಕರಿಸಬಹುದಿತ್ತು. ಯಾಕೆಂದರೆ ಅದು ನನ್ನ ಪಾಲಿಗೆ ಮಾತ್ರವಲ್ಲ, ನಾವು ಯಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರೆಲ್ಲರ ಪಾಲಿಗೆ ಸಲ್ಲುವ ಗವ್ ರವ ವಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸದೆ ಯುದ್ಧ ಮುಗಿದ ಬಳಿಕ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಲ್ಲದೆ, ಪ್ರಶಸ್ತಿಯು ಪಶ್ಚಿಮದ ಸಾಹಿತಿಗಳಿಗೆ ಇಲ್ಲವೇ ಪೂರ್ವದ ಬಂಡಾಯಗಾರರಿಗೆ ಎಂಬ ರೀತಿಯಲ್ಲಿ ಯಾಕೆ ವಿತರಣೆಯಾಗುತ್ತಿದೆ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ನಾನು ಈ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ..”
   ‘ದಿ ವಾಲ್', ‘ದಿ ಫೈಲ್ಸ್', ‘ನೋ ಎಕ್ಸಿಸ್ಟ್', ‘ದಿ ವಿಕ್ಟರ್ಸ್', ‘ಡರ್ಟಿ ಹ್ಯಾಂಡ್ಸ್', ‘ಟ್ರಬಲ್ಡ್ ಸ್ಲೀಪ್', ‘ದಿ ಡೆವಿಲ್ ಆ್ಯಂಡ್ ಗುಡ್ ಲಾರ್ಡ್', ‘ದಿ ಟ್ರೋಜನ್ ವುಮೆನ್', ‘ದಿ ಕಂಡೆಮ್‍ನ್ಡ್ ಆಫ್ ಅಲ್ ಟೋನಾ..' ಮುಂತಾದ ಮೇರು ಕೃತಿಗಳನ್ನು ಬರೆದ ಫ್ರಾನ್ಸ್ ನ ಖ್ಯಾತ ಸಾಹಿತಿ ಜೀನ್ ಪಾಲ್ ಸರ್ತೆ 1964ರಲ್ಲಿ ತನಗೆ ಸಿಕ್ಕ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸುತ್ತಾ ಹೇಳಿದ ಮಾತುಗಳಿವು. ದಸರಾವನ್ನು ಉದ್ಘಾಟಿಸಿದ ಗಿರೀಶ್ ಕಾರ್ನಾಡ್‍ರ ಕುರಿತಂತೆ ಅಥವಾ ವಿಹಿಂಪ ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಮೋಹನ್ ಆಳ್ವರ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ಕವಿ ಸಿದ್ಧಲಿಂಗಯ್ಯನವರ ಕುರಿತಂತೆ ಉಂಟಾದ ಪರ-ವಿರುದ್ಧ ಅಭಿಪ್ರಾಯಗಳಂತೆ ಸರ್ತೆಯವರ ನಿರ್ಧಾರವೂ ಅಂದು ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.  ತನ್ನ ಯುದ್ಧ ವಿರೋಧಿ ನಿಲುವನ್ನು ಪ್ರಶಸ್ತಿಯ ಆಯ್ಕೆಗೆ ಮಾನದಂಡವಾಗಿ ಬಳಸಿಕೊಳ್ಳಬೇಕಿತ್ತೆಂದು ಸರ್ತೆ ಒತ್ತಡ ಹಾಕುವುದು ಎಷ್ಟು ಸರಿ ಎಂಬ ವಾದವನ್ನು ಅಂದು ಹಲವರು ಮುಂದಿಟ್ಟಿದ್ದರು. ಪ್ರಶಸ್ತಿಯನ್ನು ಯಾವಾಗ, ಯಾವ ಸಂದರ್ಭದಲ್ಲಿ ನೀಡಬೇಕೆಂದು ಸ್ವತಃ ಸಾಹಿತಿಯೇ ತೀರ್ಮಾನಿಸುವುದು ಅಸಂಬದ್ಧ ಎಂದೂ ಹೇಳಿದವರಿದ್ದರು. ಅದೇ ವೇಳೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಫ್ರಾನ್ಸಿನ ಅತಿಕ್ರಮಣ ನೀತಿಯನ್ನು ಖಂಡಿಸುವುದಕ್ಕಿಂತ ಪ್ರಶಸ್ತಿಯನ್ನು ತಿರಸ್ಕರಿಸಿ ಪ್ರತಿಭಟಿಸುವುದೇ ಹೆಚ್ಚು ಪ್ರಭಾವಶಾಲಿ ಎಂದು ಸಮರ್ಥಿಸಿದವರೂ ಇದ್ದರು. ಕಳೆದ ವಾರ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು, ‘ಜೀನ್ ಪಾಲ್ ಸರ್ತೆ: ಹಿಂದೆಂಗಿಂತಲೂ ಈಗ ಹೆಚ್ಚು ಪ್ರಸ್ತುತ' (Jean Paul Sartre: More relevent now than ever) ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿದಾಗಲೂ ಓದುಗ ವಲಯದಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದುವು. ಪ್ರಶಸ್ತಿಯನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸಿ ಪ್ರಶಸ್ತಿ ಮೊತ್ತವಾದ 21 ಸಾವಿರ ಪೌಂಡ್ ಅನ್ನು ಲಂಡನ್ನಿನ ವರ್ಣಭೇದ ಸಮಿತಿಗೆ ನೀಡಿರುತ್ತಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದೂ ಹೇಳಿದವರಿದ್ದಾರೆ. ಅದೇ ವೇಳೆ, ಸರ್ತೆಯವರ ನಿಲುವನ್ನು ಸೈದ್ಧಾಂತಿಕ ಬದ್ಧತೆ ಎಂದು ಕರೆದು ಬೆಂಬಲಿಸಿದವರಿದ್ದಾರೆ. ನೋಬೆಲ್ ಪ್ರಶಸ್ತಿಯನ್ನು ಯುದ್ಧ, ಅತಿಕ್ರಮಣ ಮುಂತಾದುವುಗಳೊಂದಿಗೆ ಜೋಡಿಸಿ ಸಂವೇದನಾಶೀಲ ಗೊಳಿಸಿದುದಕ್ಕಾಗಿ ಅವರನ್ನು ಮೆಚ್ಚಿಕೊಂಡವರಿದ್ದಾರೆ. ನಿಜವಾಗಿ, ಸರ್ತೆಯವರ ನಿರ್ಧಾರಕ್ಕೆ ಬಲವಾದ ಕಾರಣಗಳಿದ್ದುವು.
   1830ರಲ್ಲಿ ಅಲ್ಜೀರಿಯವನ್ನು ಅತಿಕ್ರಮಿಸಿ ವಶಪಡಿಸಿಕೊಂಡ ಫ್ರಾನ್ಸ್, ತನ್ನ ಸೇನಾ ಬಲದ ಮೂಲಕ ಸ್ಥಳೀಯತೆಯ ಮೇಲೆ ದಾಳಿ ನಡೆಸುತ್ತಲೇ ಬಂದಿತು. ಮಾರ್ಶಲ್ ಬುಗೀಡ್‍ರ ನೇತೃತ್ವದಲ್ಲಿ ಹತ್ಯಾಕಾಂಡ, ಅತ್ಯಾಚಾರಗಳೂ ನಡೆದುವು. 1834ರಲ್ಲಿ ಅಲ್ಜೀರಿಯಾವನ್ನು ಫ್ರಾನ್ಸ್ ನ ಮಿಲಿಟರಿ ಕಾಲನಿಯಾಗಿ ಘೋಷಿಸಲಾಯಿತು. 1840ರಲ್ಲಿ ಅಲೆಜೈರ್, ಓರನ್ ಮತ್ತು ಕಾನ್‍ಸ್ಟಾಂಟಿಕ್ ಎಂಬ ಹೆಸರಲ್ಲಿ ಅಲ್ಜೀರಿಯಾವನ್ನು 3 ಭಾಗಗಳಾಗಿ ವಿಭಜಿಸಲಾಯಿತು. ಹಾಗೆಯೇ ಕಾಲನಿಯಾಗಿದ್ದ ಅಲ್ಜೀರಿಯಾವನ್ನು ಫ್ರಾನ್ಸ್ ನ ಭಾಗವೆಂದೂ ಸಾರಲಾಯಿತು. ಹೀಗೆ ಫ್ರಾನ್ಸ್ ನ ಭಾಗವಾದ ಅಲ್ಜೀರಿಯಾದಲ್ಲಿ ಸ್ಪೈನ್, ಇಟಾಲಿಯನ್ ಮುಂತಾದ ಯುರೋಪಿಯನ್ ರಾಷ್ಟ್ರಗಳ ಮಂದಿ ಬಂದು ನೆಲೆಸಿದರು. ಧಾರಾಳ ಸಂಖ್ಯೆಯಲ್ಲಿ ಫ್ರೆಂಚರೂ ಈ ಹೊಸ ನಾಡಲ್ಲಿ ಬೀಡು ಕಟ್ಟತೊಡಗಿದರು. ಹೀಗಿದ್ದೂ ಪ್ರಥಮ ಜಾಗತಿಕ ಯುದ್ಧದ ವೇಳೆ ಅಲ್ಜೀರಿಯನ್ನರು ಫ್ರಾನ್ಸ್ ನ ಜೊತೆಗೂಡಿ ಹೋರಾಡಿದರು. ಒಂದು ರೀತಿಯಲ್ಲಿ, ಅಲ್ಜೀರಿಯಾದ ಮೇಲೆ ತನ್ನ ದೇಶ ನಡೆಸುತ್ತಿರುವ ದಾಳಿ ಮತ್ತು ಆ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತಾ ಬೆಳೆದವರೇ ಸರ್ತೆ. 1940ರಲ್ಲಿ ಜರ್ಮನಿಯ ಹಿಟ್ಲರ್‍ನ ಸೇನೆಯು ಫ್ರಾನ್ಸ್ ನ ಮೇಲೆ ದಾಳಿ ಮಾಡಿದಾಗ ಅವರಿಗೆ ಅತಿಕ್ರಮಣದ ನೇರ ಪರಿಚಯವಾಗಿತ್ತು. ಅವರನ್ನು ಜರ್ಮನ್ ಸೇನೆ ಬಂಧಿಸಿತು. 9 ತಿಂಗಳ ಕಾಲ ಜೈಲಲ್ಲಿದ್ದ ಅವರು 1941ರಲ್ಲಿ ಬಿಡುಗಡೆಗೊಳ್ಳುವಾಗ ಅವರೊಳಗೆ ಸಾಕಷ್ಟು ಬದಲಾವಣೆಗಳಾಗಿದ್ದುವು. ಆ ಬಳಿಕ ಅವರು ಓರ್ವ ಫ್ರಾನ್ಸಿನ ಪ್ರಜೆಯಾಗಿಯಷ್ಟೇ ಆಲೋಚಿಸಲಿಲ್ಲ. ಅಲ್ಜೀರಿಯನ್ನರೂ ಅವರದಾದರು. ಜಗತ್ತಿನ ಸಕಲ ಅತಿಕ್ರಮಣವನ್ನೂ ಅವರು ದ್ವೇಷಿಸಿದರು. ಆದ್ದರಿಂದಲೇ, 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ 11 ಮಂದಿ ಇಸ್ರೇಲಿ ಅಥ್ಲೀಟ್‍ಗಳನ್ನು ಫೆಲೆಸ್ತೀನಿನ ಮಂದಿ ಕೊಂದು ಹಾಕಿದುದನ್ನು ಅವರು ಬೆಂಬಲಿಸಿದ್ದು. ಜಾಗತಿಕವಾಗಿಯೇ ಆ ಘಟನೆಯ ವಿರುದ್ಧ ಖಂಡನೆಗಳು ವ್ಯಕ್ತವಾಗುತ್ತಿದ್ದಾಗ ಅವರು ಆ ಹತ್ಯೆಯ ಪರ ನಿಂತದ್ದು. ಅತಿಕ್ರಮಣ ಮತ್ತು ದೌರ್ಜನ್ಯಕ್ಕೀಡಾದ ಒಂದು ಸಂತ್ರಸ್ತ ಸಮೂಹಕ್ಕೆ ಪ್ರತಿರೋಧದ ಹಕ್ಕಿದೆ ಎಂದವರು ಆ ಸಂದರ್ಭದಲ್ಲಿ ವಾದಿಸಿದರು.
   “ಭಯೋತ್ಪಾದನೆಯು ಭಯಾನಕವೇ ಆಗಿರಬಹುದು. ಆದರೆ ಫೆಲೆಸ್ತೀನಿಯರಿಗೆ ಬೇರೆ ದಾರಿಯಿರಲಿಲ್ಲ. ಆಯುಧ ಮತ್ತು ಬೆಂಬಲದ ಕೊರತೆಯನ್ನು ಎದುರಿಸುತ್ತಿರುವ ಅವರು ತಮ್ಮ ಅತಿಕ್ರಮಣ ವಿರೋಧಿ ನಿಲುವನ್ನು ನಾವೆಣಿಸಿದ ರೀತಿಯಲ್ಲೇ ತೋರಬೇಕೆಂದು ಬಯಸುವುದೇ ತಪ್ಪು. ಅಲ್ಲದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಇಸ್ರೇಲಿನ ಆ ಅಥ್ಲೀಟ್‍ಗಳು ಸೈನಿಕರಾಗಿದ್ದರೆಂಬುದನ್ನೂ ನಾವು ಪರಿಗಣಿಸಬೇಕು..” ಎಂದು ಸಮರ್ಥಿಸಿಕೊಂಡರು. ಅಂದಿನ ಸಾಹಿತಿಗಳಾದ ಆ್ಯಂಡರ್ಸನ್ ಮತ್ತು ವಾಲ್‍ಝೇರ್‍ರು ಇದನ್ನು ಹಿಪಾಕ್ರಸಿ ಎಂದು ಖಂಡಿಸಿದ್ದರು. ಫ್ರಾನ್ಸಿನಲ್ಲಿ ಅವರ ನಿಲುವಿನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದರೂ ಅವರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಅವರಿಗೆ ಕಮ್ಯುನಿಸಂನ ಮೇಲೆ ಪ್ರೀತಿ ಇತ್ತಾದರೂ ಫ್ರಾನ್ಸಿನಲ್ಲಿರುವ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿಕೊಳ್ಳಲಿಲ್ಲ. ಹಾಗೆಯೇ ಸೋವಿಯತ್ ಯೂನಿಯನ್‍ನಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ತೀವ್ರವಾಗಿ ವಿಮರ್ಶೆಗೊಡ್ಡಿದರು. ಅದು ಹಂಗೇರಿಯ ಮೇಲೆ ನಡೆಸಿದ ದಾಳಿಯನ್ನು ಓರ್ವ ಕಮ್ಯುನಿಸ್ಟ್ ಪ್ರೇಮಿಯಾಗಿದ್ದುಕೊಂಡೇ ಖಂಡಿಸಿದರು. ಅಮೇರಿಕವು ವಿಯೆಟ್ನಾಂನ ಮೇಲೆ ದಾಳಿ ಮಾಡಿದುದನ್ನು ಖಂಡಿಸುತ್ತಲೇ ರಶ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದರು. ನಿಜವಾಗಿ, ಅವರು ಈ ಜಗತ್ತಿನ ಸಕಲ ಕ್ರೌರ್ಯಗಳಿಗೂ ವಿರೋಧ ಪಕ್ಷ ವಾಗಿದ್ದರು. ಸಂತ್ರಸ್ತರ ಕುರಿತಂತೆ ಅವರಲ್ಲಿ ಅಪಾರ ಕಕ್ಕುಲಾತಿಯಿತ್ತು. ಇಲ್ಲದಿದ್ದರೆ, ಅಲ್ಜೀರಿಯಾದ ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ದಾಳಿ ನಡೆಸುತ್ತಿದ್ದ ನ್ಯಾಶನಲ್ ಲಿಬರೇಶನ್ ಫ್ರಂಟ್ (FLN) ಅನ್ನು ಅವರು ಬೆಂಬಲಿಸುತ್ತಿರಲಿಲ್ಲ.
   1954ರಲ್ಲಿ ಅಲ್ಜೀರಿಯಾದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಅದಕ್ಕಾಗಿಯೇ FLN ಸಂಘಟನೆಯನ್ನು ಹುಟ್ಟು ಹಾಕಲಾಯಿತು. 1956ರಲ್ಲಿ 4 ಲಕ್ಷ  ಫ್ರೆಂಚ್ ಯೋಧರು ಅಲ್ಜೀರಿಯಾದಲ್ಲಿದ್ದರು. FLNನ್ನು ನಿರ್ಮೂಲನಗೊಳಿಸುವುದಕ್ಕಾಗಿ ಫ್ರೆಂಚ್ ಸರಕಾರವು ಭೂಸೇನೆ ಮತ್ತು ವಾಯುಸೇನೆಯನ್ನು ಬಳಸಿತು. ಮಾರಕ ನೆಪಾಮ್ ಎಂಬ ರಾಸಾಯನಿಕವನ್ನು ಪ್ರಯೋಗಿಸಿತು. ಆದರೆ ಗೆರಿಲ್ಲಾ ಹೋರಾಟವನ್ನು ಸದೆಬಡಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಹೀಗೆ 1961ರಲ್ಲಿ ಅಧ್ಯಕ್ಷ  ಚಾರ್ಲ್ಸ್  ಡಿ ಗಲ್ಲೆಯವರು ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ನೀಡಲು ತೀರ್ಮಾನಿಸಿದರು. ಆದರೆ ಇದಕ್ಕೆ ಸೇನೆಯಿಂದ ತೀವ್ರ ಪ್ರತಿರೋಧ ಎದುರಾಯಿತು. ಅಧ್ಯಕ್ಷ  ಡಿ ಗಲ್ಲೆಯವರನ್ನು ಹತ್ಯೆ ಮಾಡುವ ಯತ್ನವೂ ನಡೆಯಿತು. ಅಲ್ಜೀರಿಯನ್ ಸ್ವಾತಂತ್ರ್ಯವನ್ನು ವಿರೋಧಿಸುವ ಯೋಧರು ಒಟ್ಟು ಸೇರಿ OAS  ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಅಲ್ಜೀರಿಯಾದಲ್ಲಿ ಬಾಂಬು, ಹತ್ಯೆಗಳಲ್ಲಿ ತೊಡಗಿಸಿಕೊಂಡಿತು. ಅಲ್ಜೀರಿಯಾದ ಪರ ಇರುವ  ಫ್ರೆಂಚ್ ಪ್ರಜೆಗಳನ್ನೂ ದಾಳಿಗೆ ಗುರಿಪಡಿಸಲಾಯಿತು. ಸರ್ತೆಯವರು ಎರಡು ಬಾರಿ ಹತ್ಯಾ ಯತ್ನಗಳಿಂದ ಪಾರಾದರು. ಕೊನೆಗೆ 1962ರಲ್ಲಿ ಅಲ್ಜೀರಿಯಾವು ಸ್ವತಂತ್ರಗೊಂಡಿತು. ಆ ಸಂದರ್ಭವನ್ನು ಅತ್ಯಂತ ಖುಷಿಯಿಂದ ಕಣ್ತುಂಬಿಕೊಂಡವರಲ್ಲಿ ಸರ್ತೆ ಕೂಡ ಒಬ್ಬರು. ಅಷ್ಟಕ್ಕೂ,
   ಸ್ವೀಡನ್ನಿನ ಪ್ರಮುಖ 15 ಮಂದಿ ಸಾಹಿತಿಗಳು ಒಟ್ಟು ಸೇರಿ ಆಯ್ಕೆ ಮಾಡುವ ನೋಬೆಲ್ ಪ್ರಶಸ್ತಿಯ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಒಂದು ಸಾಹಿತ್ಯವನ್ನು ಆಯ್ಕೆ ಮಾಡುವುದಕ್ಕೆ ಇರುವ ಮಾನದಂಡಗಳು, ಅಲ್ಲಿ ನಡೆಯುವ ಚರ್ಚೆಗಳ ಸ್ವರೂಪ, ಕೊಡುವ ಆದ್ಯತೆ.. ಯಾವುದನ್ನೂ ಸ್ವೀಡನ್ ಹೊರ ಜಗತ್ತಿಗೆ ಯಾವತ್ತೂ ಬಿಟ್ಟು ಕೊಡುವುದಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಒತ್ತಡಗಳಿರುತ್ತವೆಯೇ ಎಂಬುದರಿಂದ ಹಿಡಿದು ಜಗತ್ತಿನ ಎಲ್ಲ ಭಾಷೆಗಳ ಎಲ್ಲ ಕೃತಿಗಳಿಗೂ ಸಮಾನ ಪ್ರಾಶಸ್ತ್ಯ ಲಭ್ಯವಾಗುತ್ತಿವೆಯೇ ಎಂಬಲ್ಲಿವರೆಗೆ ಎಲ್ಲವೂ ರಹಸ್ಯವಾಗಿಯೇ ಇರುತ್ತವೆ. ಈವರೆಗೆ ಒಟ್ಟು 111 ನೋಬೆಲ್ ಪ್ರಶಸ್ತಿ ಗಳನ್ನು ವಿತರಿಸಲಾಗಿದೆ. ಅದರಲ್ಲಿ ಅನೇಕ ಪ್ರಶಸ್ತಿಗಳು ಈಗಲೂ ವಿವಾದಾಸ್ಪದವಾಗಿಯೇ ಉಳಿದಿವೆ. 2004ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ವಿಲ್ಫ್ರೆಡ್ ಎಲಿನೋಕ್, 1997ರಲ್ಲಿ ಗೆದ್ದ ಇಟಲಿಯ ಕವಿ ದಾರಿಯ ಫೋ, 1989ರಲ್ಲಿ ಪ್ರಶಸ್ತಿ ಗೆದ್ದ ಸ್ಪಾನಿಶ್ ಸಾಹಿತಿ ಕ್ಯಾಮಿನೊ ಜೋಸ್ ಸೆಲ್ಲಾ.. ಇವರೆಲ್ಲರ ಹಿಂದೆ ಈಗಲೂ ಅಚ್ಚರಿ ಇದೆ. 6 ವರ್ಷಗಳ ಹಿಂದೆ ಜೀನ್ ಮಾರಿಯಾ ಗುಸ್ತಾವೊ ಲಿ ಕ್ಲೇಸಿಯೋ ಎಂಬ ಅಷ್ಟೇನೂ ಪರಿಚಿತವಲ್ಲದ ಫ್ರಾನ್ಸಿನ ಸಾಹಿತಿಗೆ ಈ ಪ್ರಶಸ್ತಿ ಸಿಕ್ಕಾಗ ಹಲವರು ತಗಾದೆ ಎತ್ತಿ ದ್ದರು. ನಿಜವಾಗಿ, ‘ಗೀತಾಂಜಲಿ'ಯು ಇಂಗ್ಲಿಷ್‍ಗೆ ಅನುವಾದಗೊಳ್ಳದೇ ಇರುತ್ತಿದ್ದರೆ ಮತ್ತು ವಿಶ್ವಕವಿ ಡಬ್ಲ್ಯು.ಬಿ. ಯೇಟ್ಸ್ ರು ಮಧ್ಯಪ್ರವೇಶಿಸದೇ ಇರುತ್ತಿದ್ದರೆ ನಮ್ಮ ರವೀಂದ್ರನಾಥ ಠಾಗೋರರಿಗೆ ನೋಬೆಲ್ ಸಿಗುವುದೇ ಅನುಮಾನವಾಗಿತ್ತು. ಅಂದಹಾಗೆ, ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್, ರಶ್ಯನ್ ಭಾಷೆಗಳ ಸಾಹಿತ್ಯಗಳಿಗೆ ಸಿಗುವ ಆದ್ಯತೆಯು ಏಶ್ಯನ್ ಮತ್ತು ಆಫ್ರಿಕನ್ ಸಾಹಿತ್ಯಗಳಿಗೆ ಇವತ್ತು ಖಂಡಿತ ಸಿಗುತ್ತಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಸಾಹಿತ್ಯಗಳು ಮಾತ್ರವಲ್ಲ, ಸಾಹಿತಿಯ ದೇಶ, ಭಾಷೆ, ಸಾಹಿತ್ಯದ ವಸ್ತು, ರಾಜಕೀಯ ಮುಂತಾದುವುಗಳೆಲ್ಲ ಪ್ರಭಾವ ಬೀರುತ್ತಿರುವುದಕ್ಕೆ ಅವಕಾಶವಿದ್ದೇ ಇದೆ. ಒಬಾಮರಿಗೆ ಸಿಕ್ಕ ನೋಬೆಲ್ ಶಾಂತಿ ಪ್ರಶಸ್ತಿಯು ಈ ಅನುಮಾನವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಒಂದು ವೇಳೆ 1954-62ರ ಮಧ್ಯೆ ಸರ್ತೆಗೆ ನೋಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಫ್ರಾನ್ಸ್-ಅಲ್ಜೀರಿಯಾದಲ್ಲಿ ಮತ್ತು ಜಾಗತಿಕವಾಗಿ ಅದು ಮಾಡಬಹುದಾಗಿದ್ದ ಸದ್ದು ಯಾವ ಬಗೆಯದ್ದಾಗಿರುತ್ತಿತ್ತು? ಸರ್ತೆ ಅವರು ಅತಿಕ್ರಮಣ ವಿರೋಧಿ ಐಕಾನ್ ಆಗಿ ಬಿಂಬಿತಗೊಳ್ಳುತ್ತಿರಲಿಲ್ಲವೇ? ಪ್ರಶಸ್ತಿಯು ಅವರ ಯುದ್ಧ ವಿರೋಧಿ ನಿಲುವಿಗೆ ಸಿಕ್ಕ ಪುರಸ್ಕಾರ’ ಎಂಬ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಯುತ್ತಿತ್ತಲ್ಲವೇ? ಹಾಗಾಗಿರುತ್ತಿದ್ದರೆ ಇತರ ಅತಿಕ್ರಮಣಕೋರ ರಾಷ್ಟ್ರಗಳ ಮೇಲೂ ಅದು ಪರಿಣಾಮ ಬೀರುತ್ತಿತ್ತೇನೋ. ಮಾತ್ರವಲ್ಲ, ಅಲ್ಜೀರಿಯಾ

ಸ್ವತಂತ್ರಗೊಳ್ಳುವುದಕ್ಕೆ 1962ರ ವರೆಗೆ ಕಾಯಬೇಕಾಗಿಯೂ ಇರುತ್ತಿರಲಿಲ್ಲವೇನೋ. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ ಮಹತ್ವ ಬರುವುದು ಈ ಎಲ್ಲ ಕಾರಣಗಳಿಂದಲೇ. ಮಾತ್ರವಲ್ಲ, ಗಿರೀಶ್ ಕಾರ್ನಾಡ್, ಸಿದ್ಧಲಿಂಗಯ್ಯ ಅವರ ಸುತ್ತ ನಡೆದ ಮತ್ತು ಸದ್ಯ ನಡೆಯುತ್ತಿರುವ ಚರ್ಚೆಗಳ ಇತಿ ಮತ್ತು ಮಿತಿಗಳೂ ಇವೇ. ಇವತ್ತು ಕೂಡ ಸರ್ತೆ ಅವರ ನಿಲುವನ್ನು ಪ್ರಶ್ನಿಸುವವರೂ ಮತ್ತು ಬೆಂಬಲಿಸುವವರೂ ಇಬ್ಬರೂ ಇದ್ದಾರೆ. ಅವರು ತಮ್ಮ ನಿಲುವನ್ನು ಪ್ರತಿಪಾದಿಸುವುದಕ್ಕೆ ನೋಬೆಲ್ ಸಾಹಿತ್ಯ ಪ್ರಶಸ್ತಿಯ ವೇದಿಕೆಯನ್ನು ಬಳಸಿಕೊಳ್ಳಬೇಕಿತ್ತು ಎಂದು ವಾದಿಸುವವರು ಇರುವಂತೆಯೇ ಅವರು ಆ ವೇದಿಕೆಯನ್ನು ತಿರಸ್ಕರಿಸುವ ಮೂಲಕ ಅದನ್ನು ಪ್ರತಿಪಾದಿಸಲು ಯಶಸ್ವಿಯಾಗಿದ್ದಾರೆ ಎಂದು ವಾದಿಸುವವರೂ ಇದ್ದಾರೆ. ಹೀಗಿರುವಾಗ, ಇದರಲ್ಲಿ ಒಂದು ಮಾತ್ರ ಸರಿ ಎಂದು ಪಟ್ಟು ಹಿಡಿದು ವಾದಿಸಬೇಕಿಲ್ಲ. ಎರಡರಲ್ಲೂ ಸರಿ ಇರಬಹುದು ಮತ್ತು ಯಾವುದು ಹೆಚ್ಚು ಸರಿ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಬಹುದು. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ 50 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಎರಡರಲ್ಲೂ ಸರಿಯನ್ನೇ ಹುಡುಕುತ್ತಾ ಸಂವಾದದ ವೇದಿಕೆಯನ್ನು ನಿರ್ಮಲವಾಗಿಡುವುದೇ ಉತ್ತಮವೆನಿಸುತ್ತದೆ.




Tuesday, October 21, 2014

ಗಾಳಿಯಾಡದ ಪಂಜರದೊಳಗೆ ಧರ್ಮಗಳನ್ನು ಬಚ್ಚಿಟ್ಟಿರುವುದೇಕೆ?

ಮೀರತ್ ಪ್ರೇಮ ಪ್ರಕರಣದ ಯುವತಿ
   “ಲವ್ ಜಿಹಾದ್ ಎಂಬುದು ಮುಸ್ಲಿಮ್ ಕಾನ್ಸ್ ಪರಸಿಯ (ಸಂಚು) ಉತ್ಪನ್ನ ಎಂದು ದೂಷಿಸಲಾಗುತ್ತದೆ. ಇದು ನಿಜವೇ? ಮುಸ್ಲಿಮ್ ಸಮಾಜದಲ್ಲಿ ಅಂಥದ್ದೊಂದು ವಾತಾವರಣ ಇದೆಯೇ? ಯಾವ ಹೆತ್ತವರೂ ತಮ್ಮ ಧರ್ಮ ಅಥವಾ ಜಾತಿಗಿಂತ ಹೊರಗಿನ ಕುಟುಂಬಗಳೊಂದಿಗೆ ಮದುವೆ ಸಂಬಂಧವನ್ನು ಕುದುರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮದುವೆ ಮತ್ತಿತರ ವಿಷಯಗಳಲ್ಲಿ ಈ ದೇಶದ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಅಪ್ಪಟ ಸಂಪ್ರದಾಯವಾದಿಗಳಾಗುತ್ತಾರೆ. ಹುಡುಗಿಗಾಗಲಿ, ಹುಡುಗನಿಗಾಗಲಿ ತಮ್ಮದೇ ಜಾತಿ, ಭಾಷೆಯ ಸಂಬಂಧಕ್ಕಾಗಿ ಎಷ್ಟು ಸಮಯ ಬೇಕಾದರೂ ಕಾಯುವ ಸ್ಥಿತಿಯೊಂದು ಈ ದೇಶದಲ್ಲಿ ಇವತ್ತೂ ಇದೆ. ಹೀಗಿರುವಾಗ ‘ಸಂಚು’ ಎಂಬ ಪದ ಬಳಕೆ ಎಷ್ಟು ಸರಿ? ತಮ್ಮ ಧರ್ಮವನ್ನು ಬಿಟ್ಟು ಹೊರಗಿನವರನ್ನು ಮದುವೆಯಾದ ಗಂಡು-ಹೆಣ್ಣನ್ನು ಬಹಿಷ್ಕರಿಸುವ ರೂಢಿ ಈ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದವೂ ಇಲ್ಲ. ಆದ್ದರಿಂದಲೇ ಇಂಥ ಪ್ರೇಮಿಗಳು ಇವತ್ತು ನ್ಯಾಯಾಲಯದ್ದೋ ಪೊಲೀಸರದ್ದೋ ನೆರವು ಪಡೆದು ಮದುವೆಯಾಗುತ್ತಿದ್ದಾರೆ. ಒಂದು ವೇಳೆ, ಇದು ಮುಸ್ಲಿಮರ ಸಂಚೇ ಆಗಿರುತ್ತಿದ್ದರೆ ಇಂಥ ಮದುವೆಗಳಲ್ಲಿ ಮುಸ್ಲಿಮರ ಪಾಲುಗೊಳ್ಳುವಿಕೆ ಹೇಗಿರಬೇಕಿತ್ತು? ಮುಸ್ಲಿಮ್ ಸಮುದಾಯವೇ ಇಂಥ ಮದುವೆಗಳಲ್ಲಿ ಭಾಗವಹಿಸಿ ಬೆಂಬಲಿಸ ಬೇಕಿತ್ತಲ್ಲವೇ? ನಿಜ ಏನೆಂದರೆ, ಧರ್ಮವನ್ನೂ ಕುಟುಂಬವನ್ನೂ ಮತ್ತು ಅದರ ತಲ್ಲಣಗಳನ್ನೂ ಲೆಕ್ಕಿಸದ ಓರ್ವ ಯುವಕ ಮತ್ತು ಯುವತಿಯ ಲವ್ ಸ್ಟೋರಿ ಇದು. ಅವರು ನೆರವಿಗಾಗಿ ಕೋರ್ಟು ಮೆಟ್ಟಲೇರುತ್ತಿರುವುದರ ಹಿನ್ನೆಲೆಯೂ ಇದುವೇ. ತನಿಖೆಗಳು ಮತ್ತೆ ಮತ್ತೆ ಇದನ್ನೇ ಸಮರ್ಥಿಸುತ್ತಲೂ ಇವೆ. ಹಾಗಂತ, ತನಿಖೆ ನಡೆಸುವ ಪೊಲೀಸರೆಲ್ಲ ಮುಸ್ಲಿಮರೇನೂ ಅಲ್ಲವಲ್ಲ. ಧರ್ಮದ ವಿಷಯದಲ್ಲಿ ಪೊಲೀಸರ ಸಹಿತ ಎಲ್ಲರೂ ಕಟು ಸಂಪ್ರದಾಯವಾದಿಗಳಾಗುವ ಈ ದೇಶದಲ್ಲಿ ‘ಲವ್ ಜಿಹಾದ್'ನ ವಿಷಯದಲ್ಲಿ ಅವರೆಲ್ಲ ಸುಳ್ಳು ಹೇಳಲು ಸಾಧ್ಯವೇ..?" ಎಂದು ಓರ್ವ ಓದುಗ ಪ್ರತಿಕ್ರಿಯಿಸುವಾಗ,
   "ಹಿಂದೂಗಳು ಅಂತರ್ ಧರ್ಮೀಯ ವಿವಾಹದ ವಿರೋಧಿಗಳಲ್ಲ. ಬೌದ್ಧ, ಕ್ರೈಸ್ತ, ಯಹೂದಿ ಯುವಕರನ್ನು ಹಿಂದೂ ಯುವತಿಯರು ವಿವಾಹವಾಗುವುದನ್ನು ಅವರು ವಿರೋಧಿಸುತ್ತಲೂ ಇಲ್ಲ. ಆದರೆ ಮುಸ್ಲಿಮ್ ಯುವಕರನ್ನು ವಿವಾಹವಾಗುವುದನ್ನು ಅವರು ವಿರೋಧಿಸುತ್ತಾರೆ. ಯಾಕೆಂದರೆ, ಹಿಂದೂಗಳು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾರೆ. ಬೌದ್ಧ, ಕ್ರೈಸ್ತ, ಯಹೂದಿ ಧರ್ಮಗಳು ಮಹಿಳೆಯರನ್ನು ಗೌರವಿಸುವಾಗ ಇಸ್ಲಾಮ್ ಅವರನ್ನು ತಲಾಕ್, ತಲಾಕ್, ತಲಾಕ್ ಎಂದು ಅಟ್ಟುತ್ತದೆ. ಅದರ ವಿರುದ್ಧ ಮಹಿಳೆಯರು ಏನು ಮಾಡುವಂತೆಯೂ ಇಲ್ಲ. ಮುಸ್ಲಿಮರು ಮತಾಂತರ ಮಾಡುತ್ತಾರೆ. ಕುರ್‍ಆನಿನ ದೃಷ್ಟಿಯಲ್ಲಿ ಮುಸ್ಲಿಮ್ ಮಹಿಳೆ ಸೆಕ್ಸ್ ಸ್ಲೇವ್ (ಲೈಂಗಿಕ ಗುಲಾಮಳು) ಆಗಿದ್ದಾಳೆ. ಮಾತ್ರವಲ್ಲ, ಇನ್ನೊಂದು ಧರ್ಮದಿಂದ ಮತಾಂತರ ಆದವಳ ಸ್ಥಿತಿಯಂತೂ ಇದಕ್ಕಿಂತಲೂ ಹೀನಾಯವಾದುದಾಗಿದೆ.." ಎಂದು ಇನ್ನೋರ್ವ ಉತ್ತರಿಸುತ್ತಾನೆ. ಅಕ್ಟೋಬರ್ 15ರಂದು ಇಂಡಿಯಾ ಟುಡೆ ಪತ್ರಿಕೆಯ ಆನ್‍ಲೈನ್ ವಿಭಾಗದಲ್ಲಿ ಪ್ರಕಟವಾದ, 'ಲವ್ ಜಿಹಾದ್‍ನ ನೆಪ: ಮಧ್ಯಪ್ರದೇಶದಲ್ಲಿ ಹಿಂದೂ-ಮುಸ್ಲಿಮ್ ಮದುವೆಯನ್ನು ತಡೆದ ಬಲಪಂಥೀಯ ಗುಂಪು' (Citing Love Jihad, right -wing group stops Hindu -Muslim court marriage in MP) ಎಂಬ ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿ ವ್ಯಕ್ತವಾದ ಅಭಿಪ್ರಾಯಗಳಲ್ಲಿ ಮೇಲಿನಂಥ ತುತು ಮೆಮೆ ಅನ್ನುವ ಧಾಟಿಯವು ಧಾರಾಳ ಇವೆ. ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ, ತಲಾಕ್‍ನ ನಿಜವಾದ ರೂಪ, ಮದುವೆ ಮತ್ತು ಮತಾಂತರದ ವಿಧಿ-ವಿಧಾನಗಳನ್ನು ಕರ್ಮಟವಾಗಿ ಚರ್ಚಿಸಿದ ಬರಹಗಳು ಇರುವಂತೆಯೇ ಸತಿ ಹೋಗುವುದು, ಶ್ರೇಣೀಕೃತ ಜಾತಿಪದ್ಧತಿ, ವಿಧವೆಯರನ್ನು ಅಮಂಗಲೆಯರೆಂದು ದೂರ ಇಡುವುದು.. ಸೇರಿದಂತೆ ಹಿಂದೂ ಧರ್ಮದ ವಿವಿಧ ಆಚರಣೆಗಳ ವಿಮರ್ಶೆಗಳೂ ನಡೆದಿವೆ. ಲವ್ ಜಿಹಾದನ್ನು ಓರ್ವ ಅಲ್ಲಗಳೆಯುವಾಗ ಇನ್ನೋರ್ವ ಅದನ್ನು ಭಯೋತ್ಪಾದನೆಯ ಭಾಗವಾಗಿ ಕಾಣುತ್ತಾನೆ. ಅಷ್ಟಕ್ಕೂ,
   ಲವ್‍ಜಿಹಾದ್ (ಈ ಪದ ಪ್ರಯೋಗವೇ ತಪ್ಪು) ಎಂದು ರಾಡಿಯೆಬ್ಬಿಸಲಾದ ಯಾವ ಪ್ರಕರಣವೂ ಅನಕ್ಷರಸ್ಥರಿಗೆ ಸಂಬಂಧಿಸಿದ್ದಲ್ಲ. ಓದು-ಬರಹ ಬಾರದ, ಮುಸ್ಲಿಮ್ ಯುವಕರ 'ಸಂಚು’ಗಳನ್ನು ತಿಳಿಯದ ಮುಗ್ಧ ಹೆಣ್ಣು ಮಕ್ಕಳ ಹೆಸರೇನೂ ಲವ್ ಜಿಹಾದ್‍ನಲ್ಲಿ ಒಳಗೊಂಡವರ ಪಟ್ಟಿಯಲ್ಲಿಲ್ಲ. ಹೆಚ್ಚಿನೆಲ್ಲ ಹೆಣ್ಣು ಮಕ್ಕಳೂ ಓದಿದವರೇ. ತಮ್ಮ ಸುತ್ತಮುತ್ತ ಮತ್ತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಸಾಮರ್ಥ್ಯ  ಇದ್ದವರೇ. ಇಷ್ಟಿದ್ದೂ, ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯರ ಮಧ್ಯೆ ಪ್ರೇಮಾಂಕುರವಾಗುತ್ತದೆಂದರೆ ಮತ್ತು ಅವರು ಪರಸ್ಪರ ಮದುವೆಯಾಗಲು ತೀರ್ಮಾನಿಸುತ್ತಾರೆಂದರೆ, ಅದೇಕೆ ಅಪಾಯಕಾರಿಯಾಗಿ ಗುರುತಿಸಿಕೊಳ್ಳಬೇಕು? ಲವ್ ಜಿಹಾದ್‍ಗೆ ಬಲಿ ಅನ್ನುವ ಪದಪ್ರಯೋಗಗಳಿಗೇಕೆ ಅದು ಗುರಿಯಾಗಬೇಕು? ಓರ್ವ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವ ಮೊದಲು ತಂತಮ್ಮ ಧರ್ಮದ ಪರವಾನಿಗೆ ಪಡೆದುಕೊಂಡು ಮುಂದುವರಿದ ಉದಾಹರಣೆ ಎಲ್ಲೂ ಇಲ್ಲ. ಪ್ರಾಯ ಸಹಜ ಆಕರ್ಷಣೆಯು ಹೆಣ್ಣು-ಗಂಡನ್ನು ಹತ್ತಿರ ತರುತ್ತದೆ. ಅವರು ಪರಸ್ಪರ ಮಾತಾಡುತ್ತಾರೆ. ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಳ್ಳುವಾಗ ತಾನು ಹಿಂದೂ ಎಂದೋ ಮುಸ್ಲಿಮ್ ಎಂದೋ ಇಬ್ಬರಿಗೂ ಗೊತ್ತಾಗುತ್ತದೆ. ಹೆಸರನ್ನು ಅಥವಾ ಧರ್ಮವನ್ನು ಮರೆಮಾಚಿ ಪ್ರೀತಿಸಲು ಸಾಧ್ಯವಿಲ್ಲ. ಯಾಕೆಂದರೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ದಿನ ಬೆಳಗಾಗುವುದರೊಳಗಾಗಿ ನಡೆಯುವ ಸಂಗತಿಗಳಲ್ಲ. ಅದೊಂದು ದೀರ್ಘ ಪ್ರಕ್ರಿಯೆ. ಓರ್ವ ವಿದ್ಯಾವಂತ ಹೆಣ್ಣು ಮಗಳು ತನ್ನ ಪ್ರಿಯಕರನ ಧರ್ಮವನ್ನು ಮತ್ತು ವಿಚಾರಗಳನ್ನು ತಿಳಿದುಕೊಳ್ಳಲಾರದಷ್ಟು ದುರ್ಬಲಳು ಎಂದು ಹೇಳುವುದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗುತ್ತದೆ. ಹಾಗಂತ, ಇವೆಲ್ಲ ಲವ್ ಜಿಹಾದ್ ಎಂದು ಕೂಗೆಬ್ಬಿಸುವವರಿಗೆ ಗೊತ್ತಿಲ್ಲ ಎಂದಲ್ಲ. 2009 ಅಕ್ಟೋಬರ್‍ನಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಲವ್ ಜಿಹಾದ್‍ನ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿತ್ತು. ಲವ್ ಜಿಹಾದ್ ಸಂಘಟಿತವಾಗಿ ನಡೆಯುತ್ತಿದೆಯೇ ಎಂಬ ಅಂಶವನ್ನೂ ತನಿಖೆಯ ವೇಳೆ ಪರಿಗಣಿಸುವಂತೆ ನಿರ್ದೇಶಿಸಿತ್ತು. 2009ರ ಕೊನೆಯಲ್ಲಿ ಸಿಐಡಿ ನಿರ್ದೇಶಕ ಜಾಕೊಬ್ ಪೊನ್ನೂಸೆ ಅವರು ಲವ್ ಜಿಹಾದ್ ಕಲ್ಪನೆಯನ್ನೇ ತಿರಸ್ಕರಿಸಿ ವರದಿ ನೀಡಿದರು. ಅದಕ್ಕೆ ಯಾವ ಪುರಾವೆಯೂ ಇಲ್ಲ ಎಂದೂ ಹೇಳಿದರು. 2012 ಜನವರಿಯಲ್ಲಿ ಕೇರಳದ ಪೊಲೀಸರೂ ಲವ್ ಜಿಹಾದ್‍ನ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಲವ್ ಜಿಹಾದ್ ಎಂಬುದು ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದೂ ಹೇಳಿದರು. ಮಾತ್ರವಲ್ಲ, ಲವ್ ಜಿಹಾದ್‍ನ ಹೆಸರಲ್ಲಿ ಅಪಪ್ರಚಾರದಲ್ಲಿ ತೊಡಗಿರುವ ಹಿಂದೂ ಜಾಗೃತಿ ಡಾಟ್ ಆರ್ಗ್ ಮೇಲೆ ಕೇಸು ಹಾಕುವುದಾಗಿಯೂ ಘೋಷಿಸಿದರು. ಅಲ್ಲದೇ 2014 ಸೆಪ್ಟೆಂಬರ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಎ.ಎಲ್. ಬ್ಯಾನರ್ಜಿಯವರೂ ಲವ್ ಜಿಹಾದ್ ಅನ್ನು ತಿರಸ್ಕರಿಸಿದರು. ಹೆಚ್ಚಿನೆಲ್ಲ ಪ್ರೇಮ ವಿವಾಹಗಳೂ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಡೆದಿರುವುದಾಗಿ (ರಾಯಿಟರ್ಸ್ ವರದಿ) ಅವರು ಅಭಿಪ್ರಾಯಪಟ್ಟರು. ಇಷ್ಟಿದ್ದೂ, ಮತ್ತೆ ಮತ್ತೆ ಸುಳ್ಳುಗಳನ್ನೇಕೆ ಹಬ್ಬಿಸಲಾಗುತ್ತದೆ? ‘ಮುಸ್ಲಿಮೇತರ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಮುಸ್ಲಿಮ್ ಯುವಕರು ಪ್ರೇಮದ ಬಲೆಗೆ ಬೀಳಿಸುತ್ತಾರೆ, ಆಕೆಯ ಕುಟುಂಬವನ್ನು ಒಪ್ಪಿಸಿಯೋ ಪ್ರೇಮದ ಅಮಲಿನಲ್ಲೋ ಮದುವೆಯಾಗುತ್ತಾರೆ, ಮದುವೆಗಿಂತ ಮೊದಲೇ ಅಥವಾ ನಂತರ ಮತಾಂತರ ಮಾಡುತ್ತಾರೆ, 5-6 ಮಕ್ಕಳನ್ನು ಹುಟ್ಟಿಸಿದ ಬಳಿಕ ತಲಾಕ್ ಹೇಳುತ್ತಾರೆ, ಬಳಿಕ ಅಸಹಾಯಕ ಸ್ಥಿತಿಯಲ್ಲಿ ಭಯೋತ್ಪಾದಕರಿಗೆ ಸಹಾಯಕಿಯಾಗಿ ಅವರು ಬದುಕುತ್ತಾರೆ..' ಎಂಬಂಥ ಅಪ್ಪಟ ಸುಳ್ಳುಗಳನ್ನು ವಿೂರತ್ ಘಟನೆಯ ಬಳಿಕ ಧರ್ಮ ಜಾಗರಣ್ ಮಂಚ್ ತನ್ನ ಮುದ್ರಿತ ನೋಟೀಸುಗಳಲ್ಲಿ ಹೇಳಿರುವುದೇಕೆ? ಯಾವ ತನಿಖೆಯಲ್ಲೂ ಸಾಬೀತಾಗದ ಸಂಗತಿಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದರ ಕಾನೂನು ವಿಧಿ ಏನು? ಅಲ್ಲದೇ,
   ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಜಹಾನಾ ಬಾದ್‍ನ ಗೈನೇರಿದಾನ್ ಗ್ರಾಮದ ಜಾಟ್ ಯುವಕನ ಮನೆಗೆ 2014 ಮೇ 20ರಂದು ನುಗ್ಗಿದ ಯುವತಿಯ ಹೆತ್ತವರು, ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಸ್ಥಳೀಯ ಬಿಜೆಪಿ ನಾಯಕರು ಹಿಂದೂ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮತ್ತು ಹುಡುಗಿಯನ್ನು ಮರಳಿ ಹಿಂದೂ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ನೆಲೆಸುತ್ತದೆ. ಆದರೆ ಅದೇ ಬಿಜೆಪಿಯ ಮುಖಂಡರು ಮೇ 30ರಂದು ವಿೂರತ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಯುವತಿಯನ್ನು ರಕ್ಷಿಸುವಂತೆ ಮತ್ತು ಮುಸ್ಲಿಮ್ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಯುವಕನನ್ನು ಬಂಧಿಸದಿದ್ದರೆ ಮಹಾ ಪಂಚಾಯತ್ ಕರೆಯುವುದಾಗಿ ಬೆದರಿಸುತ್ತಾರೆ (ಇಂಡಿಯನ್ ಎಕ್ಸ್ ಪ್ರೆಸ್). ‘ಹಿಂದೂ ಬಹು-ಬೇಟಿ ಬಚಾವೋ ಸಂಘರ್ಷ್ ಸಮಿತಿ’ಯನ್ನು ರಚಿಸಲಾಗುತ್ತದೆ. ಏನಿವೆಲ್ಲ? ಜಹನಾಬಾದ್‍ನ ಮುಸ್ಲಿಮ್ ಯುವತಿಯನ್ನು ಹಿಂದೂ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸುವ ಇದೇ ರಾಜಕೀಯ ಪಕ್ಷ, ವಿೂರತ್‍ನ ಹಿಂದೂ ಯುವತಿಯನ್ನು ಮುಸ್ಲಿಮ್ ಕುಟುಂಬಕ್ಕೆ ಒಪ್ಪಿಸಿ ಎಂದು ಆಗ್ರಹಿಸದೇ ಇರುವುದನ್ನು ಏನೆಂದು ಕರೆಯಬೇಕು? ದ್ವಂದ್ವ, ಹಿಪಾಕ್ರಸಿ, ಜನಾಂಗಬೇಧ, ಮನುಷ್ಯ ವಿರೋಧಿ.. ಮುಂತಾದ ಪದಗಳಿಂದ ಆ ನಕಲಿತನವನ್ನು ಖಂಡಿಸಿದರೆ ಸಾಕೇ? ನಿಜವಾಗಿ,
   ತನ್ನ ಮಾತಿನಿಂದಲೋ ವಿಚಾರಗಳಿಂದಲೋ ಇನ್ನೋರ್ವರನ್ನು ಪ್ರಭಾವಿತಗೊಳಿಸುವ ಪ್ರಯತ್ನಗಳು ಹೊಸದೇನೂ ಅಲ್ಲ. ಕಂಪೆನಿಯೊಂದು ಹೆಚ್ಚಿನ ಸಂಬಳ, ಭತ್ಯೆಯ ಭರವಸೆಯನ್ನು ನೀಡಿ ಇನ್ನೊಂದು ಕಂಪೆನಿಯ ಉದ್ಯೋಗಿಗಳನ್ನು ಆಕರ್ಷಿಸುವುದಿದೆ. ಫೆಮಿನಿಸಂನ ಪ್ರತಿಪಾದಕರು ತಮ್ಮ ವಾದಗಳ ಮೂಲಕ ಇತರರನ್ನು ಪ್ರಭಾವಿತಗೊಳಿಸುವುದಕ್ಕೆ ಪ್ರಯತ್ನಿಸುವುದಿದೆ. ಪ್ರಗತಿಪರರು ಮತ್ತು ಸಂಪ್ರದಾಯವಾದಿಗಳ ಮಧ್ಯೆ ವೈಚಾರಿಕ ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಮಾವೋವಾದ, ಮಾರ್ಕ್ಸಿಸಮ್ ನ ವಕ್ತಾರರು ಅದನ್ನು ಇತರರಿಗೂ ಹಂಚುತ್ತಿರುತ್ತಾರೆ. ಇತರೆಲ್ಲ ಆರ್ಥಿಕ ಚಿಂತನೆಗಳಿಗಿಂತ ಬಂಡವಾಳಶಾಹಿತ್ವವು ಹೇಗೆ ಉತ್ತಮ ಎಂಬುದನ್ನು ಹೇಳುವುದಕ್ಕಾಗಿ ಪ್ರತಿದಿನ ಜಾಗತಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳು ನಡೆಯುತ್ತಲೇ ಇವೆ. ರಾಜಕಾರಣಿಗಳಂತೂ ಭರವಸೆಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಒಂದು ರೀತಿಯಲ್ಲಿ, ಇಲ್ಲೆಲ್ಲಾ ನಡೆಯುತ್ತಿರುವುದು ಮನಪರಿವರ್ತನೆಯ ಪ್ರಯತ್ನಗಳೇ. ಫೆಮಿನಿಸ್ಟ್, ಮಾರ್ಕ್ಸಿಸ್ಟ್, ಸೋಶಿಯಲಿಸ್ಟ್, ಇಂಡಸ್ಟ್ರಿಯಲಿಸ್ಟ್, ಪೊಲಿಟಿಶಿಯನ್.. ಎಲ್ಲರೂ ತಂತಮ್ಮ ವಾದಗಳಿಗೆ ಜನರನ್ನು ಸೇರಿಸುವ ಪ್ರಯತ್ನದಲ್ಲಿ ಪ್ರತಿದಿನ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ, ಸಮಾಜವೂ ಇದನ್ನು ಅತ್ಯಂತ ಸ್ಫೂರ್ತಿಯಿಂದಲೇ ಸ್ವೀಕರಿಸಿದೆ. ಹೀಗಿರುವಾಗ ಧರ್ಮಗಳಿಗೇಕೆ ನಾವು ಇಂಥದ್ದೊಂದು ಸ್ಪೇಸ್ ಅನ್ನು ಒದಗಿಸಿಕೊಡುತ್ತಿಲ್ಲ? ಸೋಶಿಯಲಿಸಂ ಅನ್ನು ಚರ್ಚಿಸುವಷ್ಟೇ ಸ್ಫೂರ್ತಿ ಮತ್ತು ಉತ್ಸಾಹದಿಂದ ಧರ್ಮಗಳ ಬಗ್ಗೆಯೂ ಚರ್ಚಿಸುವುದಕ್ಕೇಕೆ ವಾತಾವರಣವನ್ನು ಸಜ್ಜುಗೊಳಿಸುತ್ತಿಲ್ಲ? ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದ ವ್ಯಕ್ತಿ ಮನಪರಿವರ್ತನೆಗೊಂಡು ಬಂಡವಾಳಶಾಹಿತ್ವ ವನ್ನು ಅಪ್ಪಿಕೊಳ್ಳುವುದು ಎಷ್ಟು ಸಲಿಸಾಗಿ ನಡೆಯಬಲ್ಲುದೋ ಅಷ್ಟೇ ಸಲೀಸಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಮುಸ್ಲಿಮ್ ಆಗುವುದೂ ಅಥವಾ ಇದಕ್ಕೆ ವಿರುದ್ಧ ಆಗುವುದು ಯಾಕೆ ಸಾಧ್ಯವಾಗುತ್ತಿಲ್ಲ? ಫೆಮಿನಿಸಂ, ಸೋಶಿಯಲಿಸಂಗೆಲ್ಲ ಇರುವ ಅಪಾರ ಸ್ವಾತಂತ್ರ್ಯವು ಹಿಂದೂಯಿಸಂ, ಇಸ್ಲಾಮಿಸಂಗೆಲ್ಲ ನಾವು ನೀಡದಿರುವುದು ಯಾಕಾಗಿ? ಸಮಾಜವಾದ ಮತ್ತು ಬಂಡವಾಳವಾದಗಳ ನಡುವೆ ವೈಚಾರಿಕ ಸಂವಾದ ನಡೆಯುವಂತೆಯೇ ಮತ್ತು ಇಷ್ಟವಿದ್ದವರು ಇಷ್ಟ ಬಂದ ವಾದವನ್ನು ಸ್ವೀಕರಿಸಲು ಸ್ವಾತಂತ್ರ್ಯ ಇರುವಂತೆಯೇ ಇಸ್ಲಾಮ್, ಕ್ರೈಸ್ತ-ಹಿಂದೂ ಧರ್ಮಗಳ ನಡುವೆಯೂ ಸಂವಾದ ನಡೆಯುವಂತಹ ಮತ್ತು ಇಷ್ಟ ಬಂದವರು ಇಷ್ಟ ಬಂದ ಧರ್ಮವನ್ನು ಸ್ವೀಕರಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಇರುವಂತಹ ವಾತಾವರಣಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟರೇನು? ಅಷ್ಟಕ್ಕೂ, ಒಂದು ಕಂಪೆನಿಯ ಭರವಸೆಯು ಸುಳ್ಳು ಎಂದು ಗೊತ್ತಾದರೆ ಅದರಿಂದ ಹಿಂದೆ ಬರುವುದಕ್ಕೆ ಉದ್ಯೋಗಿಗೆ ಸಕಲ ಸ್ವಾತಂತ್ರ್ಯವೂ ಇರುತ್ತದೆ. ಫೆಮಿನಿಸಂ, ಸೋಶಿಯಲಿಸಂ.. ಎಲ್ಲವೂ ಹಾಗೆಯೇ. ಮಾತು, ವಿಚಾರಗಳಿಂದ ಪ್ರಭಾವಿತಗೊಂಡು ಓರ್ವ ವ್ಯಕ್ತಿ ಒಂದು ಇಸಂ ಅನ್ನು ಒಪ್ಪಿಕೊಂಡಾಕ್ಷಣ ಎಲ್ಲವೂ ಮುಗಿದು ಹೋಗುವುದಿಲ್ಲ. ಅದು ಸುಳ್ಳು ಮತ್ತು ಮಾತಿನ ಕಸರತ್ತು ಎಂದು ಗೊತ್ತಾದ ತಕ್ಷಣ ಆತನಿಗೆ/ಳಿಗೆ ತನ್ನ ಹಿಂದಿನ ವಾದಕ್ಕೆ ಮರಳಿ ಬರುವುದಕ್ಕೂ ಅವಕಾಶ ಇರುತ್ತದೆ. ಅಂಥ ಪ್ರಕರಣಗಳು ಇವತ್ತು ಧಾರಾಳ ನಡೆಯುತ್ತಲೂ ಇವೆ. ಈ ಸ್ವಾತಂತ್ರ್ಯ ಧಾರ್ಮಿಕವಾಗಿಯೂ ಇರಬೇಕಾದದ್ದೇ. ಇಸ್ಲಾವಿೂ ವಿಚಾರಗಳಿಂದ ಪ್ರಭಾವಿತನಾದವನಿಗೆ ಅದರ ಒಳಹೊಕ್ಕ ಬಳಿಕ ಅದು ಭ್ರಮೆ ಎಂದು ಅನಿಸಿದರೆ ಮರಳಿ ಹೋಗುವುದಕ್ಕೆ ಯಾವ ನಿರ್ಬಂಧಗಳೂ ಇರಬೇಕಿಲ್ಲ, ಇರಬಾರದು ಕೂಡ. ಈ ನಿಯಮ ಇತರ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೂ ಈ ಕ್ಷೇತ್ರ ಇನ್ನೂ ಇಂಥ ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳದೇ ಇರುವುದು ಯಾವ ಕಾರಣದಿಂದ? 
   ಅಂದಹಾಗೆ, ಲವ್ ಜಿಹಾದ್ ಆಗಿ ಬಿಂಬಿತಗೊಂಡಿದ್ದ ವಿೂರತ್‍ನ ಜಾಟ್ ಯುವತಿ ಮತ್ತು ಮುಸ್ಲಿಮ್ ಯುವಕನ ಪ್ರೇಮ ಪ್ರಕರಣವು ಇದೀಗ ಪಡೆದುಕೊಂಡ ತಿರುವನ್ನೇ ಎತ್ತಿಕೊಳ್ಳಿ. ಇದರಿಂದ ಸಿಗುವ ಪಾಠಗಳೇನು? ಧರ್ಮವನ್ನು ಉಸಿರಾಡುವುದಕ್ಕೂ ಸ್ವಾತಂತ್ರ್ಯವಿಲ್ಲದ ಗಾಜಿನ ಪಂಜರವಾಗಿ ಮಾರ್ಪಡಿಸಿದ್ದು ಯಾರು? ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಬೆಳೆಯಬೇಕಾದ ಧರ್ಮಕ್ಕೆ ಲಂಚ, ಆಮಿಷಗಳ ಬೇಲಿಗಳೇಕೆ? ಒತ್ತಡ, ಬಲವಂತದ ತಿವಿತಗಳೇಕೆ? ಇಷ್ಟವಿದ್ದವರು ಒಪ್ಪಿಕೊಳ್ಳುವ ಮತ್ತು ಇಷ್ಟವಿಲ್ಲದವರು ಒಪ್ಪಿಕೊಳ್ಳದೇ ಇರುವ ಸಹಜ ಸ್ವಾತಂತ್ರ್ಯವನ್ನು ಧರ್ಮಗಳಿಂದ ಕಿತ್ತುಕೊಂಡವರು ಯಾರು? ಅವರ ಉದ್ದೇಶವೇನು?

Wednesday, October 8, 2014

ಜ್ಞಾನಸರ ಮತ್ತು ವಿರತ್ತುರ ಪ್ರತಿಜ್ಞೆ ಧರ್ಮ ರಕ್ಷಣೆಗೋ ಜನಾಂಗ ನಿರ್ಮೂಲನಕ್ಕೋ?


    ಶ್ರೀಲಂಕಾದ ಬೋದು ಬಾಲ ಸೇನಾ (ಬೌದ್ಧ ಸೇನೆ)ದ ನಾಯಕ ಗಲಗೊಡ ಜ್ಞಾನಸರ ಮತ್ತು ಮ್ಯಾನ್ಮಾರ್‍ನ ‘969 ಚಳವಳಿ’ಯ ನಾಯಕ ಆಶಿನ್ ವಿರತ್ತು ಕಳೆದ ವಾರ ಲಂಕಾದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ ಮತ್ತು ಬೌದ್ಧ ಧರ್ಮದ ರಕ್ಷಣೆಗೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂಬ ಸುದ್ದಿಯನ್ನು ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು ಪ್ರಕಟಿಸಿದ್ದುವು. ಇದಕ್ಕೆ ಕಾರಣವೂ ಇದೆ.  
   2014 ಜೂನ್ 15ರಂದು ಲಂಕಾದ ಕಲುತರ ಜಿಲ್ಲೆಯ ಅಲುತಗಮ, ಬೆರುವಲ ಮತ್ತು ದರ್ಗಾಟೌನ್ ಪ್ರದೇಶಗಳಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ನಡೆಯಿತು. 4 ಮಂದಿ ಸಾವಿಗೀಡಾದರು. ಸಾವಿರಾರು ಮುಸ್ಲಿಮರು ನಿರ್ವಸಿತರಾದರು. 17 ಮಸೀದಿಗಳು ನೆಲಸಮಗೊಂಡವು. ಬೌದ್ಧ ಸನ್ಯಾಸಿ ಅಯಗಮ ಸಮಿತ್‍ರ ಮೇಲೆ ಹಲ್ಲೆ ನಡೆಸಲಾದ ನೆಪದಲ್ಲಿ ಬೌದ್ಧ ಸೇನೆ ಈ ಹಿಂಸಾಚಾರವನ್ನು ಆರಂಭಿಸಿತ್ತು. ಮೂರು ದಿನಗಳ ವರೆಗೆ ನಡೆದ ಈ ಹಿಂಸಾಚಾರದ ಸುದ್ದಿಯು ಹೊರ ಜಗತ್ತಿಗೆ ಅಷ್ಟೇ ತೀವ್ರತೆಯಿಂದ ವರದಿಯಾಗದಿರಲೆಂದು ಸರಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್ ವಿಧಿಸಿತು. ಟಿ.ವಿ.ಗಳು ಸುಮ್ಮ ನಾದುವು. ಆದರೆ ಮಾಧ್ಯಮಗಳು ತೋರಿಸದಿದ್ದುದನ್ನು ಫೇಸ್‍ಬುಕ್, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣಗಳು ಜಗತ್ತಿಗೆ ತೋರಿಸಿದುವು. ಬೌದ್ಧಸೇನೆಯ ಪ್ರಮುಖ ಟೀಕಾಕಾರರಾಗಿರುವ ಬೌದ್ಧ ಸನ್ಯಾಸಿ ವಾಟರೇಕ ವಿಜಿತರಿಗೆ ಜೂನ್ 19ರಂದು ಈ ಮಂದಿ ಬಲವಂತದಿಂದ ಸುನ್ನತಿ (ಮುಂಜಿ) ಮಾಡಿಸಿದರು. ಸಂಡೇ ಟೈಮ್ಸ್ ನ ಪತ್ರಕರ್ತ ಶರತ್ ಸಿರಿವರ್ಧನೆಯ ಮೇಲೆ ದಾಳಿ ನಡೆಯಿತು. ಅಲ್ ಜಝೀರಾ ಪತ್ರಿಕಾ ತಂಡ ಮತ್ತು ಪತ್ರಕರ್ತ ಬಿನಯ್ ಸೂರ್ಯರಚಿಯ ಮೇಲೂ ಹಲ್ಲೆ ನಡೆಯಿತು. ಮುಸ್ಲಿಮರ ಆಸ್ತಿ-ಪಾಸ್ತಿಗಳ ಮೇಲೆ ವ್ಯವಸ್ಥಿತ ದಾಳಿ ನಡೆಯಿತು. ಬೊಲಿವಿಯಾದಲ್ಲಿದ್ದ ಅಧ್ಯಕ್ಷ  ರಾಜಪಕ್ಸೆ ಹಿಂತಿರುಗಿ ಬರುವವರೆಗೆ ಸರಕಾರ ಯಾವ ಹೇಳಿಕೆಯನ್ನೂ ಹೊರಡಿಸಲಿಲ್ಲ. ಈ ಮುಸ್ಲಿಮ್ ವಿರೋಧಿ ದಂಗೆಗೆ ರಕ್ಷಣಾ ಮಂತ್ರಿಯ ಸಲಹೆಗಾರ ಕಪಿಲ್ ಹೆಂದವಿತರಣ, ಕರ್ನಲ್ ಸುರೇಶ್ ಸಲ್ಲೆ ಮತ್ತು ಗುಪ್ತಚರ ಇಲಾಖೆಯ ಉಪಮುಖ್ಯಸ್ಥ ಚಂದ್ರ ವಾಕಿಷ್ಟರೇ ಕಾರಣ ಎಂದು ಮುಖ್ಯ ವಿರೋಧ ಪಕ್ಷವಾದ ಯುನೈಟೆಡ್ ನ್ಯಾಶನಲ್ ಪಾರ್ಟಿಯ ನಾಯಕ ಮಂಗಳ ಸಮರವೀರ ಆರೋಪಿಸಿದರು. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್‍ಕಿ ಮೂನ್, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ನವಿಪಿಳ್ಳೆ, ಕೊಲಂಬೋದಲ್ಲಿರುವ ಅಮೇರಿಕ ಮತ್ತು ಕೆನಡಾದ ರಾಯಭಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ನಾರ್ವೆ, ಸ್ವೀಡನ್, ತುರ್ಕಿ ಸಹಿತ ಯುರೋಪಿಯನ್ ಯೂನಿಯನ್‍ಗಳ ನಿಯೋಗವೊಂದು ಕೊಲಂಬೋಕ್ಕೆ ಭೇಟಿ ನೀಡಿತು. ಲಂಕಾದ ತಮಿಳರ ಜಾಗದಲ್ಲಿ ಇದೀಗ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹಲವಾರು ಮಂದಿ ಎತ್ತಿದರು. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಬೌದ್ಧ ಸೇನೆಯ ಕಾರ್ಯಕ್ರಮಗಳಲ್ಲಿ ಅಧ್ಯಕ್ಷ ರಾಜಪಕ್ಸೆ ಭಾಗಿಯಾಗುತ್ತಿರುವುದನ್ನು ಅನೇಕರು ಪ್ರಶ್ನಿಸಿದರು.
   ಅಂದಹಾಗೆ, ಗಲಭೆ ನಡೆದ ಜೂನ್ ತಿಂಗಳಿನಲ್ಲಿಯೇ ಲಂಕಾದ ಪಾರ್ಲಿಮೆಂಟ್‍ನ 6 ಮಂದಿ ಸದಸ್ಯರ ಸತ್ಯಶೋಧನಾ ಸಮಿತಿಯೊಂದು ದೇಹಿವಾಲಾ ಮೃಗಾಲಯಕ್ಕೆ ಭೇಟಿ ನೀಡಿತು. ಗಲಭೆಯಿಂದ ತತ್ತರಿಸಿದ ಜನರನ್ನು ಭೇಟಿಯಾಗುವುದಕ್ಕೆ ಸಮಿತಿ ರಚಿಸುವ ಬದಲು ಮೃಗಾಲಯದಲ್ಲಿ ನೀರ್ಗುದುರೆ ಮತ್ತು ಸಿಂಹವು ಸಾವಿಗೀಡಾದುದನ್ನು ಪರಿಶೀಲಿಸಲು ಸಮಿತಿ ರಚಿಸಿದುದಕ್ಕೆ ತೀವ್ರ ಟೀಕೆಗಳು ಎದುರಾದುವು. ಗಲಭೆಗ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ ರಾಜಪಕ್ಸೆಯವರು, ಬೌದ್ಧ ಧರ್ಮದ ರಕ್ಷಣೆಯ ಅಗತ್ಯವಿದೆ ಎಂದಿದ್ದೂ ಚರ್ಚೆಗೀಡಾಯಿತು. ಅಷ್ಟಕ್ಕೂ, ಜನಾಂಗ ತಾರತಮ್ಯ ಎಂಬುದು ಲಂಕಾಕ್ಕೆ ಹೊಸತಲ್ಲ.
    1948ರಲ್ಲಿ ಲಂಕಾವು ಬ್ರಿಟಿಷ್ ಪ್ರಭುತ್ವದಿಂದ ಸ್ವತಂತ್ರಗೊಂಡ ಕೂಡಲೇ ಸಿಲೋನ್ ಸಿಟಿಝನ್‍ಶಿಪ್ ಆ್ಯಕ್ಟನ್ನು ಪಾರ್ಲಿಮೆಂಟ್ ಜಾರಿಗೆ ತಂದಿತ್ತು. ಈ ಕಾಯ್ದೆಯು ಭಾರತ ಮೂಲದ ತಮಿಳರಿಗೆ ಪೌರತ್ವವನ್ನೇ ನಿಷೇಧಿಸಿತು. ಆಗ 7 ಲಕ್ಷದಷ್ಟು ತಮಿಳು ನಾಗರಿಕರು ಅತಂತ್ರರಾದರು. ಇವರಲ್ಲಿ 3 ಲಕ್ಷ  ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. 1956ರಲ್ಲಿ ಪ್ರಧಾನಿ ಭಂಡಾರ ನಾಯಿಕೆಯವರು ಸಿಂಹಳ ಓನ್ಲಿ ಆ್ಯಕ್ಟ್ ಅನ್ನು ಜಾರಿಗೆ ತಂದರು. ಈ ಮೂಲಕ ಲಂಕಾದ ಅಧಿಕೃತ ಭಾಷೆಯಾಗಿ ಇಂಗ್ಲಿಷ್‍ನ ಬದಲು ಸಿಂಹಳವು ಆಯ್ಕೆಯಾಯಿತು. ಮಾತ್ರವಲ್ಲ, ಈ ಕಾಯ್ದೆಯನ್ನು ಬಳಸಿಕೊಂಡು ತಮಿಳರನ್ನು ವ್ಯವಸ್ಥಿತವಾಗಿ ಬಗ್ಗುಬಡಿಯಲಾಯಿತು. ಸರಕಾರಿ ಹುದ್ದೆಗಳಲ್ಲಿ ಭಾಷೆಯ ನೆಪವೊಡ್ಡಿ ತಮಿಳರನ್ನು ಹೊರಗಿಡಲಾಯಿತು. ಸಿಂಹಳ ಭಾಷೆಯಲ್ಲಿ ಪರಿಣತರಾಗಿಲ್ಲ ಎಂಬ ಕಾರಣವೊಡ್ಡಿ ತಮಿಳು ಅಧಿಕಾರಿಗಳನ್ನು ಹುದ್ಧೆಯಿಂದ ಕಿತ್ತುಹಾಕಲಾಯಿತು. ನಿಜವಾಗಿ, 1960ರಲ್ಲಿ ಪ್ರತ್ಯೇಕ ತಮಿಳುರಾಷ್ಟ್ರದ ಬೇಡಿಕೆಯನ್ನು ಮುಂದಿಡುವ ಕರಪತ್ರಗಳು ಪ್ರಕಟವಾಗಲು ಪ್ರಾರಂಭವಾದುದಕ್ಕೆ ಕಾರಣ ಇದುವೇ. ಕೊಲಂಬೋದ ಬ್ರಿಟಿಷ್ ರಾಯಭಾರ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆ್ಯಂಟನಿ ಬಾಲಸಿಂಘಂ ಅವರು ಪ್ರತ್ಯೇಕತಾವಾದಿಗಳ ಸಭೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಬಳಿಕ ಅವರು ಇಂಗ್ಲೆಂಡ್‍ಗೆ ತೆರಳಿದರಲ್ಲದೇ ಎಲ್‍ಟಿಟಿಇಯ ಪ್ರಮುಖ ಚಿಂತಕರಲ್ಲಿ ಒಬ್ಬರಾದರು. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಲಂಕಾ ಸರಕಾರವು ತಾರತಮ್ಯ ನೀತಿಯನ್ನು ಸಡಿಲಗೊಳಿಸಲಿಲ್ಲ. 1970ರಲ್ಲಿ ಪಾಲಿಸಿ ಆಫ್ ಸ್ಟಾಂಡರ್‍ಡೈಸೇಶನ್ ಎಂಬ ಕಾಯ್ದೆಯನ್ನು ಜಾರಿಗೊಳಿಸಿತು. ವಿಶ್ವವಿದ್ಯಾಲಯಗಳ ಆಡಳಿತವನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡರೂ ನಿಜ ಅದಾಗಿರಲಿಲ್ಲ. ಈ ಕಾಯ್ದೆಯನ್ನು ಬಳಸಿಕೊಂಡು ಸಿಂಹಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡ ಲಾಯಿತು. ಈ ಕಾಯ್ದೆಯಂತೆ ವೈದ್ಯಕೀಯ ಸೀಟು ಸಿಗಬೇಕೆಂದರೆ ಸಿಂಹಳೀಯ ವಿದ್ಯಾರ್ಥಿ ಒಟ್ಟು 400 ಅಂಕದಲ್ಲಿ 229 ಅಂಕ ಪಡೆದರೆ ಸಾಕಾಗುತ್ತದೆ. ಆದರೆ ತಮಿಳು ವಿದ್ಯಾರ್ಥಿ 250 ಅಂಕ ಪಡೆಯಬೇಕು. 1978ರಲ್ಲಿ ತಮಿಳು ಮ್ಯಾಗಸಿನ್‍ಗಳ ಆಮದಿಗೆ ನಿಷೇಧ ವಿಧಿಸಲಾಯಿತು. ಹೀಗೆ ಲಂಕಾದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಸಿಂಹಳೀಯರನ್ನು ಬಿಟ್ಟರೆ ಉಳಿದಂತೆ ಎರಡನೇ ಅತಿದೊಡ್ಡ ಸಮುದಾಯವಾಗಿದ್ದ ತಮಿಳರನ್ನು ವ್ಯವಸ್ಥಿತವಾಗಿ ತುಳಿದುದರ ಫಲಿತಾಂಶವೇ ಎಲ್‍ಟಿಟಿಇಯ ಉಗಮವಾಗಿತ್ತು. 2009 ಮೇ 17ರಂದು ಎಲ್‍ಟಿಟಿಇಯು ಅಂತಿಮವಾಗಿ ಸೋಲೊಪ್ಪಿಕೊಂಡರೂ ಅದು ಹುಟ್ಟುಹಾಕಿದ ಕಾವು ಮತ್ತು ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಇಂಥ ಹೊತ್ತಿನಲ್ಲಿಯೇ ಲಂಕಾವು ಮತ್ತೊಮ್ಮೆ ಜನಾಂಗೀಯ ನಿರ್ಮೂಲನಾ ಆರೋಪಕ್ಕೆ ಗುರಿಯಾಗಿದೆ.
   ಲಂಕಾಕ್ಕೂ ಮುಸ್ಲಿಮರಿಗೂ ಪ್ರವಾದಿ ಮುಹಮ್ಮದ್ ರ ಕಾಲದಿಂದಲೇ ಸಂಬಂಧ ಇದೆ. 7ನೇ ಶತಮಾನದಲ್ಲೇ ಅರಬ್ ವ್ಯಾಪಾರಿಗಳು ಈ ದ್ವೀಪರಾಷ್ಟ್ರಕ್ಕೆ ಕಾಲಿಟ್ಟರಲ್ಲದೇ ಕೃಷಿ ಮತ್ತು ಜಾನುವಾರು ಸಾಕಣೆ ಮಾಡುತ್ತಿದ್ದ ಸಿಂಹಳೀಯ ನಾಡಿಗೆ ವ್ಯಾಪಾರದ ರುಚಿಯನ್ನು ಹತ್ತಿಸಿದರು. ಆದ್ದರಿಂದಲೇ ಬಹುತೇಕ ಜನರಿಗೆ ಮತ್ತು ಆಡಳಿತಕ್ಕೆ ಹತ್ತಿರವಾದರು. ಅವರು ಬಹುಬೇಗ ತಮಿಳು ಕಲಿತರು. ಸ್ಥಳೀಯರೊಂದಿಗೆ ಬೆರೆತು ಅಲ್ಲೇ ನೆಲೆಸಿದರು. ಮುಸ್ಲಿಮ್ ದೊರೆಗಳು ಲಂಕಾವನ್ನು ಆಳಿದ ಇತಿಹಾಸವೂ ಇದೆ. 1344ರಲ್ಲಿ ಲಂಕಾಕ್ಕೆ ಭೇಟಿ ನೀಡಿದ ಖ್ಯಾತ ಇತಿಹಾಸಕಾರ ಇಬ್ನು ಬತೂತ ಈ ಬಗ್ಗೆ ತನ್ನ ಅನುಭವವನ್ನೂ ಹಂಚಿಕೊಂಡಿದ್ದಾರೆ. ಕ್ರಿಸ್ತಪೂರ್ವ 307-267ರ ಸಮಯದಲ್ಲಿ ರಾಜ ಅಶೋಕ್‍ರಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರವಾದ ಸಿಂಹಳೀಯರು ಲಂಕಾದಲ್ಲಿ ಇವತ್ತೂ ಬಹುಸಂಖ್ಯಾತರೇ. ಮುಸ್ಲಿಮರು ಬರೇ 10%. ಮುಸ್ಲಿಮರನ್ನು ಸಾಮಾನ್ಯವಾಗಿ ಮಾರ್ಸ್ ಮುಸ್ಲಿಮ್ಸ್ ಮತ್ತು ಮಲಯಾ ಮುಸ್ಲಿಮ್ಸ್ ಎಂದು ವಿಭಜಿಸಲಾಗುತ್ತದೆ. ಸಿಂಹಳೀಯರದ್ದು ಪಾಲಿ ಭಾಷೆಗೆ ಹತ್ತಿರದ ನಂಟಿರುವ ಆರ್ಯನ್ ಭಾಷೆಯಾದರೆ ಮುಸ್ಲಿಮರು ಅರಬಿ ಮತ್ತು ತಮಿಳು ಮಿಶ್ರಿತ ಭಾಷೆ ಮಾತಾಡುತ್ತಾರೆ. ಅವರ ಭಾಷೆಯಲ್ಲಿ ಅತ್ಯಧಿಕ ಅರಬಿ ಪದಗಳು ಒಳಗೊಂಡಿವೆ. ಅಲ್ಲಿನ 99% ಮುಸ್ಲಿಮರು ಕೂಡ ಅಕ್ಷರಸ್ಥರೇ. ಸುಮಾರು 800ರಷ್ಟು ಶಾಲೆಗಳನ್ನು ಅವರು ನಡೆಸುತ್ತಿದ್ದಾರೆ. ಮುಸ್ಲಿಮ್ ಯುನಿವರ್ಸಿಟಿಯೂ ಇದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮುಸ್ಲಿಮರು, ಎಲ್‍ಟಿಟಿಇ ಮತ್ತು ಸರಕಾರದ ನಡುವಿನ ಹೋರಾಟದ ಸಂದರ್ಭದಲ್ಲಿ ಸರಕಾರವನ್ನೇ ಬೆಂಬಲಿಸಿದ್ದರು. ಇದು ಎಲ್‍ಟಿಟಿಇಯ ಮುಖಂಡ ಪ್ರಭಾಕರನ್ ಅವರನ್ನು ತೀವ್ರವಾಗಿ ಸಿಟ್ಟಿಗೆಬ್ಬಿಸಿತ್ತು. 1990ರ ಅವಧಿಯಲ್ಲಿ ಉತ್ತರ ಲಂಕಾದಿಂದ 95 ಸಾವಿರ ಮುಸ್ಲಿಮರನ್ನು ಅವರು ಹೊರಹಾಕಿದ್ದರು. ಮಾತ್ರವಲ್ಲ, ನೂರಾರು ಮಂದಿ ಈ ಸಂದರ್ಭದಲ್ಲಿ ಪ್ರಾಣ ಕಳಕೊಂಡರು. ಈ ಕೃತ್ಯಕ್ಕಾಗಿ 2002ರಲ್ಲಿ ಸ್ವತಃ ಪ್ರಭಾಕರ್ ಅವರೇ ಮುಸ್ಲಿಮರ ಕ್ಷಮೆ ಯಾಚಿಸಿದ್ದರು. ಒಂದು ರೀತಿಯಲ್ಲಿ ತಮಿಳರೊಂದಿಗೆ ಜನಾಂಗೀಯವಾಗಿ ಯಾವ ಸಂಬಂಧ ಇಲ್ಲದಿದ್ದರೂ ಇವತ್ತೂ ತಮಿಳು ಮಾತಾಡುವ ಮುಸ್ಲಿಮರು ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಆರಂಭದಲ್ಲಿ ತಮಿಳರ ವಿರುದ್ಧ ನಿಂತ ಅಲ್ಲಿನ ಸರಕಾರ ಮತ್ತು ಬಲಪಂಥೀಯ ಬೌದ್ಧರು ಇವತ್ತು ಮುಸ್ಲಿಮರ ಜನಾಂಗ ನಿರ್ಮೂಲನಕ್ಕಾಗಿ ವಿವಿಧ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. 2013 ಫೆಬ್ರವರಿಯಲ್ಲಿ ಹಲಾಲ್ ಲೋಗೋದ ನೆಪದಲ್ಲಿ ಬೌದ್ಧ ಸೇನೆಯು ಸರಣಿ ಪ್ರತಿಭಟನೆಯನ್ನು ಹಮ್ಮಿ ಕೊಂಡಿತ್ತು. ಆಲ್ ಸಿಲೋನ್ ಜವಿೂಯತುಲ್ ಉಲೆಮಾ ಎಂಬ ಸಂಘಟನೆಯು ನೀಡುವ ಹಲಾಲ್ (ಧರ್ಮಸಮ್ಮತ) ಸರ್ಟಿಫಿಕೇಟನ್ನು ಅಲ್ಲಿನ ಸಾಕಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳುತ್ತಿವೆ. ಆದರೆ ಇಸ್ಲಾವಿೂ ಕಾನೂನಿನಂತೆ ತಯಾರಾಗುವ ಉತ್ಪನ್ನಗಳು ಲಂಕಾದಲ್ಲಿ ಮಾರಾಟವಾಗುವುದು ಮತ್ತು ಅದು ಬೌದ್ಧರ ಆಹಾರವಾಗಿ ಬಳಕೆಗೀಡಾಗುವುದು ತಪ್ಪು ಎಂದು ಬೌದ್ಧ ಸೇನೆ ವಾದಿಸಿತು. ಬಳಿಕ ಅಂಥ ಸರ್ಟಿಫಿಕೇಟ್ ಕೊಡುವುದನ್ನು ಉಲೇಮಾ ಸಂಘಟನೆಯು ರದ್ದುಪಡಿಸಿತು. ನಿಜವಾಗಿ ಬೌದ್ಧ ಸೇನೆಯ ಸಿಟ್ಟು ಹಲಾಲ್ ಉತ್ಪನ್ನದ  ಮೇಲಾಗಿರಲಿಲ್ಲ. ಹಲಾಲ್ ಉತ್ಪನ್ನದ ಕಂಪೆನಿಗಳು ಲಂಕಾದಲ್ಲಿ ಜನಪ್ರಿಯವಾಗಿದ್ದುವು. 10% ಮುಸ್ಲಿಮರಿದ್ದರೂ ಹಲಾಲ್ ಉತ್ಪನ್ನಗಳು ಮಾರುಕಟ್ಟೆಯ 20%ವನ್ನು ಆಕ್ರಮಿಸಿಕೊಂಡಿದ್ದುವು. ಇದುವೇ ಬೌದ್ಧ ಸೇನೆಯನ್ನು ಕುಪಿತಗೊಳಿಸಿತ್ತು. 2014 ಆಗಸ್ಟ್ ನಲ್ಲಿ ಮಸೀದಿಯ ನಿರ್ಮಾಣದ ವಿರುದ್ಧ ಬೌದ್ಧ ಸೇನೆ ಪ್ರತಿಭಟನೆ ಹಮ್ಮಿಕೊಂಡಿತು. ಬಳಿಕ ಅದು ದೊಡ್ಡ ವಿವಾದಕ್ಕೂ ಕಾರಣವಾಯಿತು.
   ಅಂದಹಾಗೆ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿರುವ ‘969 ಚಳವಳಿ' ಹಾಗೂ ಬೋದೋ ಬಾಲ ಸೇನಾಗಳು ಜೊತೆಯಾಗಿರುವುದಕ್ಕೂ ಭಾರತ ಉಪಖಂಡದಲ್ಲಾದ ಬೆಳವಣಿಗೆಗಳಿಗೂ ಸಂಬಂಧ ಇರಬಹುದೇ? ಭಾರತದಲ್ಲಿ ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಬಲ ಬಂದಿರುವುದು ಮತ್ತು ಬಲಪಂಥೀಯ ಚಟುವಟಿಕೆಗಳು ಹೆಚ್ಚು ವೇಗ ಪಡೆದಿರುವುದನ್ನು ಮ್ಯಾನ್ಮಾರ್ ಮತ್ತು ಲಂಕಾದ ಬೆಳವಣಿಗೆಗಳಿಗೆ ಹೋಲಿಸಿ ನೋಡಿದರೆ ಏನನಿಸುತ್ತದೆ? ವಿರತ್ತು ಮತ್ತು ಜ್ಞಾನಸರರ ಭೇಟಿಯು ರವಾನಿಸುವ ಸೂಚನೆಗಳೇನು? ಭಾರತದಲ್ಲಿ ಮುಸ್ಲಿಮರ ವಿರುದ್ಧ ಬಲಪಂಥೀಯ ಸಂಘಟನೆಗಳು ಯಾವ ಆರೋಪವನ್ನು ಹೊರಿಸುತ್ತಿವೆಯೋ ಅವೇ ಆರೋಪವನ್ನು ಲಂಕಾದಲ್ಲಿ ಬೌದ್ಧ ಸೇನೆ ಮುಸ್ಲಿಮರ ವಿರುದ್ಧ ಹೊರಿಸುತ್ತಿರುವುದರ ಹಿನ್ನೆಲೆ ಏನು? ‘ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ, ಸಿಂಹಳೀಯ ಮಹಿಳೆಯರನ್ನು ವಿವಾಹವಾಗಿ ಜನಸಂಖ್ಯೆ ಹೆಚ್ಚಿಸುತ್ತಾರೆ, ವ್ಯಾಪಾರದ ಮೂಲಕ ಪ್ರಾಬಲ್ಯ ಪಡೆದು ಆಡಳಿತವನ್ನು ಕೈವಶ ಪಡಿಸಬಯಸುತ್ತಾರೆ ಮತ್ತು ಸಿಂಹಳೀಯ ಅಸ್ಮಿತೆಗೆ ಬೆದರಿಕೆ ಯಾಗಿದ್ದಾರೆ..’ ಮುಂತಾದ ಆರೋಪಗಳೊಂದಿಗೆ ಬೌದ್ಧ ಸೇನೆ ಕಾರ್ಯಪ್ರವೃತ್ತವಾಗಿರುವುದನ್ನು ಏನೆಂದು ವ್ಯಾಖ್ಯಾನಿಸಬಹುದು? ಅದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶವೇನು?
   ಆಶಿನ್ ವಿರತ್ತು ಮತ್ತು ಜ್ಞಾನಸರರ ನಡುವಿನ ಭೇಟಿ ಮತ್ತು ಅವರ ಧರ್ಮರಕ್ಷಣೆಯ ಪ್ರತಿಜ್ಞೆಯು ಸಹಜವಾಗಿಯೇ ಅನುಮಾನ ಗಳನ್ನು ಹುಟ್ಟುಹಾಕುತ್ತದೆ.



Tuesday, September 16, 2014

ಹೆಣ್ಣನ್ನು ವೇಶ್ಯೆಗೊಳಿಸುವ ಪುರುಷನೇಕೆ ಮಹಿಳಾ ವಿರೋಧಿ ಎನಿಸಿಕೊಳ್ಳುತ್ತಿಲ್ಲ?

   ಹೆಣ್ಣು ಸ್ವಯಂ ವೇಶ್ಯೆ ಅಲ್ಲ. ಗಂಡು ಆಕೆಯನ್ನು ವೇಶ್ಯೆಗೊಳಿಸುತ್ತಾನೆ. ಆತನ ಸಂಪರ್ಕದಿಂದಾಗಿ ಆಕೆ ವೇಶ್ಯೆಯಾಗುತ್ತಾಳೆ. ಆದರೂ ಮಾಂಸದಂಧೆ, ವೇಶ್ಯಾವಾಟಿಕೆ, ಮೈ ಮಾರುವಿಕೆ.. ಮುಂತಾದ ಪದಗಳೆಲ್ಲ ಹೆಣ್ಣಿನ ಸುತ್ತವೇ ಗಿರಕಿ ಹೊಡೆಯುತ್ತಿರುವುದೇಕೆ? ಇವು ಮತ್ತು ಇಂಥ ಅನೇಕ ಪದಗಳಲ್ಲಿ ಒಂದು ಪದವನ್ನಾದರೂ ಆಕೆಯನ್ನು ವೇಶ್ಯೆಗೊಳಿಸಿದ ಪುರುಷನಿಗೆ ಈ ಸಮಾಜ ಇನ್ನೂ ಕೊಡದಿರುವುದು ಯಾವ ಕಾರಣದಿಂದ? ಹೆಣ್ಣು ವೇಶ್ಯೆಯಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರ ನಿಂತೋ ಘನತೆರಹಿತವಾಗಿಯೋ ಬದುಕುತ್ತಿರುವಾಗ ಅದಕ್ಕೆ ಕಾರಣನಾದವ ಸಕಲ ಮರ್ಯಾದೆ ಮತ್ತು ಪೂರ್ಣ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾನಲ್ಲ, ಯಾಕೆ ಇದು ಚರ್ಚಾರ್ಹಗೊಳ್ಳುತ್ತಿಲ್ಲ? ಹಾಗಂತ, ಹೆಣ್ಣನ್ನು ಹೀಗೆ ವೇಶ್ಯೆಗೊಳಿಸಿದವ ರಾಜಕಾರಣಿ ಆಗಿರಬಹುದು, ಧಾರ್ಮಿಕ ಮುಖಂಡ, ಹೋರಾಟಗಾರ, ಸಮಾಜಸೇವಕ, ಬುದ್ಧಿಜೀವಿ, ಸಾಹಿತಿ, ಪತ್ರಕರ್ತ, ವೈದ್ಯ, ಇಂಜಿನಿಯರ್, ನ್ಯಾಯವಾದಿ, ಸಾಮಾನ್ಯ.. ಯಾರೂ ಆಗಿರಬಹುದು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದೋ ನಿಷೇಧ ವಿಧಿಸಿ ಎಂದೋ ಆತ ಆಗ್ರಹಿಸಿರಬಹುದು. ಆ ಕುರಿತಾದ ಪ್ರತಿಭಟನೆಗಳಲ್ಲಿ ಮುಂದಾಳುತ್ವ ವಹಿಸಿರಬಹುದು. ಹೆಣ್ಣಿನ ಹಕ್ಕು-ಸಮಾನತೆಯ ಕುರಿತಂತೆ ಚರ್ಚಿಸಿರಬಹುದು.. ಇವೆಲ್ಲ ಏನು? ಪುರುಷ ಯಜಮಾನಿಕೆ ಅಲ್ಲವೇ? ಪುರುಷನಿಗೆ ಸಮಾಜದಲ್ಲಿ ಸಿಗುವಷ್ಟೇ ಗೌರವ ಆತನಿಂದ ‘ವೇಶ್ಯೆ' ಆದವಳಿಗೂ ಸಿಗಬೇಕೆಂದು ಒತ್ತಾಯಿಸಿ ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ? ಆಕೆಯನ್ನು ‘ವೇಶ್ಯೆ' ಮಾಡಿದವರ ಭಾವಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತಿಲ್ಲ? ಹೆಣ್ಣಿನಿಂದ ಸುಖವನ್ನು ಪಡೆದ ಪುರುಷ ಆಕೆಗೆ ವೇಶ್ಯೆ ಎಂಬ ಬಿರುದನ್ನು ದಯಪಾಲಿಸಿ ಹಿಂತಿರುಗುತ್ತಾನೆ. ಆದರೆ ಆಕೆಯಿಂದ ಆತ ಯಾವ ಬಿರುದನ್ನೂ ಪಡಕೊಳ್ಳುವುದಿಲ್ಲ. ಈ ತಾರತಮ್ಯದ ಬಗ್ಗೆ ಸಮಾಜದ ನಿಲುವು ಏನು? ಅಷ್ಟಕ್ಕೂ, ಆತ ಸುಖಕ್ಕೆ ಬದಲಾಗಿ ದುಡ್ಡು ಪಾವತಿಸುತ್ತಾನೆ ಎಂದು ವಾದಿಸಬಹುದು. ಓರ್ವ ಹೆಣ್ಣಿಗೆ ತನ್ನ ಮಾನ, ಮರ್ಯಾದೆ, ಗೌರವ ಮುಂತಾದುವುಗಳನ್ನೆಲ್ಲ ವಿೂರಿ ಬದುಕಬೇಕಾದಂಥ ಬಡತನದ ಪರಿಸ್ಥಿತಿ ಎದುರಾಗಿದೆಯೆಂದರೆ ಅದಕ್ಕೆ ಈ ಪುರುಷ ಸಮಾಜದ ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ಲೈಂಗಿಕವಾಗಿ ಬಳಸಿಕೊಳ್ಳುವುದೇ? ಓರ್ವರ ಅಸಹಾಯಕತೆಗೆ ಪ್ರತಿಕ್ರಿಯಿಸುವ ಮಾನವೀಯ ವಿಧಾನವೇ ಇದು? ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಹೆಚ್ಚಿನೆಲ್ಲ ವೇಶ್ಯೆಯರ ಹಿಂದೆ ಬಡತನದ ಕತೆಯಿದೆ. ಮಾನವ ಕಳ್ಳ ಸಾಗಾಣಿಕೆಯಿಂದಲೋ ಮೋಸಕ್ಕೊಳಗಾಗಿಯೋ ವೇಶ್ಯೆಯರಾಗುವವರ ಸಂಖ್ಯೆ ತೀರಾ ಕಡಿಮೆ. ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುವವರ ಹಿನ್ನೆಲೆಯೂ ಬಡತನದ್ದೇ. ಒಂದು ಕಡೆ ಅಸಹಾಯಕತೆ. ಇನ್ನೊಂದು ಕಡೆ ಆ ಅಸಹಾಯಕತೆಗೆ ನೆರವಾಗುವ ನೆಪದಲ್ಲಿ ಆಕೆಯ ದೇಹದ ದುರ್ಬಳಕೆ. ಯಾಕೆ ಇದು ಮಹಿಳಾ ದೌರ್ಜನ್ಯ ಅನ್ನಿಸಿಕೊಳ್ಳುತ್ತಿಲ್ಲ?
ಪುರಾತನ ಮೆಸಪಟೋಮಿಯ ಅಥವಾ ಹಮ್ಮುರಾಬಿ ನಾಗರಿಕತೆಯಲ್ಲಿ ವೇಶ್ಯಾವಾಟಿಕೆ ಇತ್ತು ಎಂದೋ ಅಥವಾ ಗ್ರೀಕ್‍ನ ಪೋರ್ನೊ ಎಂಬ ಪದದಿಂದ ಪೋರ್ನೋಗ್ರಫಿ ಎಂಬ ಪದ ಹುಟ್ಟಿಕೊಂಡಿದೆಯೆಂದೋ ವಾದಿಸುವುದು ಸುಲಭ. ಪುರಾತನ ಗ್ರೀಕ್‍ನ ಇತಿಹಾಸದಲ್ಲಿ ಲೈಸ್ ಎಂಬ ಮಹಿಳೆಯ ಚೆಲುವು ಮತ್ತು ಮಾದಕತೆಯ ಕತೆಯಿದೆ. ಆಕೆ ವೇಶ್ಯೆ ಆಗಿದ್ದಳೆಂದೂ ಆಕೆಯ ಚೆಲುವಿಗಾಗಿ ಹೆಚ್ಚಿನ ಮೊತ್ತ ಪಾವತಿಸಲಾಗುತ್ತಿತ್ತೆಂದೂ ಹೇಳಲಾಗುತ್ತದೆ. ಅಂದಹಾಗೆ, ಪುರಾತನ ಕಾಲದ ದೊಡ್ಡದೊಂದು ಇತಿಹಾಸವು ಅಮಾನವೀಯವಾಗಿತ್ತು. ದುರ್ಬಲರಾದ ಮಹಿಳೆ ಮತ್ತು ಪುರುಷರ ರಕ್ತದ ಕಲೆಗಳಿಂದ ಅವು ಬರೆಯಲ್ಪಟ್ಟಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಮಿಲಿಟರಿ ವೇಶ್ಯಾಗೃಹದಲ್ಲಿ ಚೀನಾ, ಕೊರಿಯ ಮತ್ತಿತರೆಡೆಯ 2 ಲಕ್ಷದಷ್ಟು ಮಹಿಳೆಯರು ಲೈಂಗಿಕ ತೃಷೆಗೆ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಗುಲಾಮರು ಮತ್ತು ದೇವದಾಸಿಯರಾಗಿ ಪುರುಷ-ಮಹಿಳೆಯರಿಬ್ಬರೂ ಈ ಜಗತ್ತಿನಾದ್ಯಂತ ಸರಣಿ ಅತ್ಯಾಚಾರಗಳನ್ನು ಅನುಭವಿಸಿದರು. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಗುಲಾಮತನ, ವೇಶ್ಯಾವಾಟಿಕೆಯನ್ನು ಕಾನೂನುಬಾಹಿರವೆಂದು ಸಾರಿದರು. ಕಮ್ಯುನಿಸ್ಟ್ ಚಿಂತಕರೂ ವೇಶ್ಯಾವಾಟಿಕೆಗೆ ವಿರುದ್ಧ ವಾಗಿದ್ದರು. 'Only a specific expression of the general prostitution of the laborer' ಎಂದು ಹೇಳಿದ್ದ ಕಾರ್ಲ್ ಮಾರ್ಕ್ಸ್, ‘ಕ್ಯಾಪಿಟಾಲಿಸಂನಿಂದ ಹೊರಬರುವುದಕ್ಕಾಗಿ ವೇಶ್ಯಾವಾಟಿಕೆಯನ್ನು ನಿಷೇಧಿಸಬೇಕಾಗಿದೆ’ ಎಂದು ವಾದಿಸಿದ್ದರು. ಫ್ರೆಡ್ರಿಕ್ ಏಂಗಲ್ಸ್ ರು, ಮದುವೆಯನ್ನೇ ‘ವೇಶ್ಯಾವಾಟಿಕೆಯ ವಿಧಾನ’ ಎಂದಿದ್ದರು. ವ್ಲಾದಿವಿೂರ್ ಲೆನಿನ್‍ರ ಪ್ರಕಾರ, ‘ವೇಶ್ಯಾವಾಟಿಕೆಯು ಅಸಹ್ಯ ಕೃತ್ಯ'. ಜಗತ್ತು ಕಮ್ಯುನಿಸಂನಿಂದ ಬಂಡವಾಳಶಾಹಿತ್ವಕ್ಕೆ ಹೊರಳಿದ ಬಳಿಕ ವೇಶ್ಯಾವಾಟಿಕೆಯ ಕುರಿತಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ವ್ಯಕ್ತವಾದುವು. ಆದರೆ ಇವತ್ತೂ 109 ರಾಷ್ಟ್ರಗಳು ವೇಶ್ಯಾವಾಟಿಕೆಯನ್ನು ಕಾನೂನುಬಾಹಿರ ಎಂದೇ ಪರಿಗಣಿಸಿವೆ. ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ಇರಾನ್‍ಗಳಲ್ಲಿ ವೇಶ್ಯಾವಾಟಿಕೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ನಿಜವಾಗಿ, ಗ್ರೀಕ್, ರೋಮನ್, ಮೆಸಪೊಟೇಮಿಯ ನಾಗರಿಕತೆಗಳಲ್ಲಿ ಮತ್ತು ಬಳಿಕದ ಶತಮಾನಗಳಲ್ಲಿ ದುರ್ಬಲರಾದ ಹೆಣ್ಣು ಮತ್ತು ಗಂಡಿನ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದುವು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಾಗ ಗಂಡು ಇತರ ಕಠಿಣ ದುಡಿಮೆಗಳಿಗೆ ಬಲಿಯಾಗುತ್ತಿದ್ದ. ಆದರೆ ಈ ಆಧುನಿಕ ಜಗತ್ತು ದುರ್ಬಲ ಪುರುಷರನ್ನು ಬಹುತೇಕ ಆ ದೌರ್ಜನ್ಯಗಳಿಂದ ಹೊರತಂದು ರಕ್ಷಿಸಿದೆ. ಗಣಿಗಳಲ್ಲಿ, ತೋಟ, ಕಾರ್ಖಾನೆಗಳಲ್ಲಿ ಜೀತಕ್ಕೆ ಒಳಗಾದವರಿಗೆ ಮುಕ್ತಿ ನೀಡುತ್ತಿದೆ. ಆದರೆ ದುರ್ಬಲ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಜಗತ್ತು ಅದೇ ಮಾನದಂಡದಲ್ಲಿ ವ್ಯಾಖ್ಯಾನಿಸುತ್ತಿಲ್ಲ. ಅದಕ್ಕೆ ವೇಶ್ಯಾವಾಟಿಕೆ ಎಂಬ ಬಿರುದನ್ನು ಕೊಟ್ಟು ಆ ದೌರ್ಜನ್ಯವನ್ನು ನ್ಯಾಯಬದ್ಧಗೊಳಿಸುವ ಜಾಣತನ ತೋರುತ್ತಿದೆ. ಆಕೆಯ ದೇಹವನ್ನು ಕಮರ್ಷಿಯಲ್ ಎಂದು ವ್ಯಾಖ್ಯಾನಿಸಿ ದುಡ್ಡು ಕೊಟ್ಟು ಆ ದೇಹವನ್ನು ಯಾರಿಗೆ ಬೇಕಾದರೂ ಪಡೆಯುವ ಅರ್ಹತೆಯಿದೆ ಎಂದು ಹೇಳುತ್ತಿದೆ.
   ನಿಜವಾಗಿ, ಇಲ್ಲಿ ಚರ್ಚೆಗೊಳಗಾಗಬೇಕಾದದ್ದು ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂದಲ್ಲ, ವೇಶ್ಯೆಯರ ಅಗತ್ಯ ಯಾರಿಗಿದೆ ಮತ್ತು ಯಾಕಿದೆ ಎಂದು. ಯಾಕೆ ಪುರುಷರು ಇಂಥದ್ದೊಂದು ವ್ಯವಸ್ಥೆಯನ್ನು ಬಯಸುತ್ತಾರೆ? ವೇಶ್ಯೆಯ ಬಳಿಗೆ ಹೋಗುವ ಪುರುಷ ಯಾರದೋ ಮಗ, ಪತಿ, ಸಹೋದರ, ತಂದೆ.. ಆಗಿರುತ್ತಾರೆ. ಅವರಿಗೆ ತನ್ನ ಮನೆಯಲ್ಲಿ ಪತಿಯಾಗಿ, ತಂದೆಯಾಗಿ, ಮಗನಾಗಿ ಮತ್ತು ಇನ್ನಿತರ ಪಾತ್ರವಾಗಿ ಜವಾಬ್ದಾರಿಗಳಿವೆ. ಸಾಮಾಜಿಕವಾಗಿ ಐಡೆಂಟಿಟಿ ಇದೆ. ಈ ಪಾತ್ರಗಳಿಗೆಲ್ಲ ಅವರ ವೇಶ್ಯಾಸಂಗ ನ್ಯಾಯವನ್ನೂ ಗೌರವವನ್ನೂ ಒದಗಿಸಿಕೊಡಬಲ್ಲುದೇ? ಪತಿಯಾಗಿ ಓರ್ವ ವ್ಯಕ್ತಿ ತನ್ನ ವೇಶ್ಯಾಸಂಗವನ್ನು ಹೇಗೆ ಸಮರ್ಥಿಸಬಲ್ಲ? ಪತ್ನಿಯೊಂದಿಗೆ ಆತ ಈ ಸಂಗತಿಯನ್ನು ಹೇಳಬಲ್ಲನೇ? ಹಾಗೆ ಹೇಳಿದರೆ ಆಕೆಯ ಪ್ರತಿಕ್ರಿಯೆ ಏನಿದ್ದೀತು? ಆಕೆಯೂ ಅಂಥದ್ದೇ ಸ್ವಾತಂತ್ರ್ಯವನ್ನು ಬಯಸಿದರೆ ಆತನ ಪ್ರತಿಕ್ರಿಯೆ ಏನಿದ್ದೀತು? ಅವರ ಸಂಬಂಧ ಎಲ್ಲಿಯವರೆಗೆ ಮುಂದುವರಿದೀತು? ಓರ್ವ ತಂದೆ ತನ್ನ ವೇಶ್ಯಾಸಂಗವನ್ನು ತನ್ನ ಮಕ್ಕಳ ಜೊತೆ ಹಂಚಿಕೊಳ್ಳಬಲ್ಲರೇ? ಮಗ ತನ್ನ ತಾಯಿಯೊಂದಿಗೋ ತಂದೆಯೊಂದಿಗೋ ‘ತಾನು ಹೀಗೆ’ ಎಂದು ಹೇಳಿ ಕೊಳ್ಳಬಲ್ಲನೇ? ವೇಶ್ಯೆಯನ್ನು ಅನುಭವಿಸುವ ಓರ್ವ ಶಿಕ್ಷಕನನ್ನು ಸಮಾಜ ಹೇಗೆ ಸ್ವೀಕರಿಸಬಹುದು? ಅಂದ ಹಾಗೆ, ವೇಶ್ಯಾವಾಟಿಕೆಯ ಸುತ್ತ ಚರ್ಚಿಸುವಾಗ ನಾವೆಲ್ಲ ಯಾಕೆ ಈ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುವುದೇ ನಂಬಿಕೆಗಳ ಮೇಲೆ. ಪತ್ನಿಗೆ ಪತಿಯ ಮೇಲೆ, ಮಗಳಿಗೆ ತಂದೆಯ ಮೇಲೆ, ಹೆತ್ತವರಿಗೆ ಮಕ್ಕಳ ಮೇಲೆ, ಮಕ್ಕಳಿಗೆ ಶಿಕ್ಷಕರ ಮೇಲೆ.. ಇಂಥ ನಂಬಿಕೆಗಳ ಮೇಲೆ ವೇಶ್ಯಾಸಂಗ ಬೀರುವ ಪರಿಣಾಮಗಳು ಯಾವ ಬಗೆಯವು? ಹೀಗಿರುತ್ತಾ, ಮಹಿಳಾ ಹಕ್ಕು, ಸಮಾನತೆಯ ಬಗ್ಗೆ ಮಾತಾಡುವ ಜಗತ್ತಿಗೆ ಯಾಕೆ ವೇಶ್ಯಾವಾಟಿಕೆಯು ಪುರುಷ ಜಗತ್ತಿನ ಸೃಷ್ಟಿ ಎಂದು ಅನಿಸುತ್ತಿಲ್ಲ? ಪುರುಷನ ಬಯಕೆಯನ್ನು ತೀರಿಸುವುದಕ್ಕೆ ಮದುವೆಯ ಹೊರತಾದ ವ್ಯವಸ್ಥೆಯೊಂದು ಇರಬೇಕು ಎಂದಾದರೆ ಮಹಿಳೆಯ ಬಯಕೆಯನ್ನು ತೀರಿಸುವುದಕ್ಕೂ ಒಂದು ವ್ಯವಸ್ಥೆ ಇರಬೇಕೆಂದು ಮಹಿಳಾ ಜಗತ್ತು ವಾದಿಸುತ್ತಿಲ್ಲವೇಕೆ? ಆ ವ್ಯವಸ್ಥೆ ಯಾಕೆ ಈ ವರೆಗೆ ಅಸ್ತಿತ್ವಕ್ಕೆ ಬಂದಿಲ್ಲ? ಅಷ್ಟಕ್ಕೂ, ಪುರುಷನಿಗೇಕೆ ಅಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ? ಆತನೇನು ಮಹಿಳೆಗಿಂತ ಮಿಗಿಲೇ? ಮಹಿಳೆಗಿಲ್ಲದ ಕೆಲವು ವಿಶೇಷ ರಿಯಾಯಿತಿ, ಸೌಲಭ್ಯಗಳು ಪುರುಷನಿಗೆ ಅಗತ್ಯವಿದೆ ಮತ್ತು ಅದರಲ್ಲಿ ಮಹಿಳೆಯ ದೇಹವೂ ಒಂದು ಎಂದು ಕಲಿಸಿದವರು ಯಾರು? ಈ ಅಸಮಾನತೆಯ ಪಾಠವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಬದಲು ಅದನ್ನೇ ಕಾನೂನುಬದ್ಧಗೊಳಿಸಿ ಎಂದು ಒತ್ತಾಯಿಸುವುದು ಯಾವ ಬಗೆಯ ಸಮಾನತೆ?
   ಅತ್ಯಾಚಾರಕ್ಕೂ ವೇಶ್ಯಾವಾಟಿಕೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕಡೆ ಪುರುಷ ಹೆಣ್ಣಿನ ಅನುಮತಿಯನ್ನು ಪಡೆಯದೇ ದೈಹಿಕ ಸುಖವನ್ನು ಪಡೆಯುವಾಗ ಇನ್ನೊಂದು ಕಡೆ ಅವಳ ಅಸಹಾಯಕೆಯನ್ನೇ ಅನುಮತಿಯನ್ನಾಗಿ ಪರಿವರ್ತಿಸಿಕೊಂಡು ಸುಖ ಪಡೆಯುತ್ತಾನೆ. ಎರಡರಲ್ಲೂ ಗಂಡಿನ ದಬ್ಬಾಳಿಕೆ ಮತ್ತು ಹೆಣ್ಣಿನ ಅಸಹಾಯಕತೆಗಳಿವೆ. ಆದರೆ, ಒಂದು ದಬ್ಬಾಳಿಕೆಯಾಗಿಯೂ ಇನ್ನೊಂದು ಪುರುಷ ಸಮಾಜದ ಸಹಜ ಬೇಡಿಕೆಯಾಗಿಯೂ ಗುರುತಿಗೀಡಾಗಿದೆ. ಮುಸ್ಲಿಮ್ ಮಹಿಳೆಯರು ತೊಡುವ ಬುರ್ಖಾವನ್ನು ಪುರುಷ ಯಜಮಾನಿಕೆಯಾಗಿ ಮತ್ತು ಅಸಮಾನತೆಯ ಸಂಕೇತವಾಗಿ ವ್ಯಾಖ್ಯಾನಿಸುವವರೇ ವೇಶ್ಯಾವಾಟಿಕೆಯು ಕಾನೂನು ಬದ್ಧಗೊಳ್ಳಬೇಕೆಂದು ವಾದಿಸುತ್ತಾರೆ. ಅದಕ್ಕಿರುವ ಪುರಾತನ ಹಿನ್ನೆಲೆಯನ್ನು ಮುಂದಿಡುತ್ತಾರೆ. ಆದರೆ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬಾಳಿ ಬದುಕಬೇಕಾದ ಓರ್ವ ಹೆಣ್ಣನ್ನು ವೇಶ್ಯೆ ಮಾಡುವುದು ಪುರುಷ ದಬ್ಬಾಳಿಕೆ, ಯಜಮಾನಿಕೆಯಾಗಿ ಗುರುತಿಸಿಕೊಳ್ಳದೇ ಆಯ್ಕೆ ಸ್ವಾತಂತ್ರ್ಯವಾಗಿ ವ್ಯಾಖ್ಯಾನಗೊಳ್ಳುತ್ತದೆ. ಅಂದ ಹಾಗೆ, ವೇಶ್ಯವಾಟಿಕೆಯು ಓರ್ವ ಹೆಣ್ಣು ಮಗಳ ಪಾಲಿಗೆ ಆಯ್ಕೆಯೋ ಅನಿವಾರ್ಯವೋ ಆಗಬಹುದಾದ ಸಂದರ್ಭ ಯಾವುದು? ಯಾವ ಹೆಣ್ಣೂ ತನ್ನ ಬದುಕಿನ ಪ್ರಥಮ ಆಯ್ಕೆಯಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲಳೇ? ಹಾಗೆ ವಾದಿಸುವುದು ಎತ್ತು-ಕುರಿಗಳು ಸ್ವಯಂ ಕಸಾಯಿಖಾನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ವಾದಿಸಿದಂತಾಗದೆ? ಹೆಣ್ಣಿನ ಪಾಲಿಗೆ ವೇಶ್ಯಾವಾಟಿಕೆ ಕಟ್ಟಕಡೆಯ ಆಯ್ಕೆ. ತನ್ನ ಅನಿವಾರ್ಯತೆಯನ್ನು ಪೂರೈಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಇರುವಾಗ ತನ್ನ ಸಹಜ ಲಜ್ಜೆಯನ್ನು ಬಲವಂತದಿಂದ ಬದಿಗಿರಿಸಿ ಆಕೆ ದೇಹವನ್ನು ಪಣಕ್ಕಿಡಬಯಸುತ್ತಾಳೆ. ಅದವಳ ಆಯ್ಕೆಯಲ್ಲ, ಅನಿವಾರ್ಯತೆ. ನಿಜವಾಗಿ, ಅಂಥ ಅನಿವಾರ್ಯತೆಗಳು ಪುರುಷನಿಗೂ ಎದುರಾಗುತ್ತವೆ. ಆದರೆ ಆತ ಅದನ್ನು ಎದುರಿಸುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಅಂಥ ಅನಿವಾರ್ಯತೆ ಎದುರಾದಾಗ ಪುರುಷ ಆಕೆಯ ದೇಹವನ್ನು ಬಯಸುತ್ತಾನೆ. ಹೆಣ್ಣಿನ ಅನಿವಾರ್ಯತೆಗೆ ದೇಹವನ್ನು ಬಳಸದೆಯೇ ನೆರವಾಗುವ ಅವಕಾಶ ಇದ್ದರೂ, ಆಕೆಯನ್ನು ಆತ ವೇಶ್ಯಗೊಳಿಸುತ್ತಾನೆ. ಮಾತ್ರವಲ್ಲ, ತನ್ನ ವೇಶ್ಯಾಸಂಗವನ್ನು ಮರೆಮಾಚಿ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಇದು ಪುರುಷ ಯಜಮಾನಿಕೆ ಮತ್ತು ಮಹಿಳಾ ದೌರ್ಜನ್ಯ ಅಲ್ಲ ಎಂದಾದರೆ ಜುಜುಬಿ ಬುರ್ಖಾ ಯಾವ ಲೆಕ್ಕ? ಅದರ ವಿರುದ್ಧವೇಕೆ ಈ ಪರಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ?

Wednesday, September 10, 2014

ಬಶೀರ್ ಎತ್ತಿಕೊಳ್ಳಬೇಕಾದ ಪಂಜು ಮತ್ತು ಸಾರಾ ಅಬೂಬಕರ್‍ರ ಪಂಜು

ಸಾರಾ ಅಬೂಬಕರ್ 
    ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರ ‘ಬಾಡೂಟದ ಜೊತೆ ಗಾಂಧಿ ಜಯಂತಿ’ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಸರ್ ಅವರು ಮಾಡಿದ ಭಾಷಣ ಮತ್ತು ಅದನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ (ಶೇರ್) ಪತ್ರಕರ್ತ ನವೀನ್ ಸೂರಿಂಜೆಯವರ ಬಗ್ಗೆ ವ್ಯಕ್ತವಾದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದಿ ತೀವ್ರ ನೋವು ಮತ್ತು ವಿಷಾದ ಉಂಟಾಯಿತು. ಒಂದೊಳ್ಳೆಯ ಚರ್ಚೆ ನಡೆಸಬಹುದಾಗಿದ್ದ ಮತ್ತು ನಡೆಸಬೇಕಾಗಿದ್ದ ಅಭಿಪ್ರಾಯವನ್ನೇ ಅನಾಗರಿಕಗೊಳಿಸಿ, ಬಳಿಕ ನಿಂದನೀಯ ಮಟ್ಟಕ್ಕೆ ಕೊಂಡೊಯ್ದು ಕೊನೆಗೆ ಧರ್ಮವಿರೋಧಿ ಎಂಬ ಷರಾದೊಂದಿಗೆ ಮುಕ್ತಾಯಗೊಳಿಸುವ ಅವಿವೇಕವು ಹಲವಾರು ಪ್ರತಿಕ್ರಿಯೆಗಳಲ್ಲಿ ಕಂಡುಬಂತು. ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದಕ್ಕಿಂತ ಮೊದಲು ಭಾಷೆ ಮತ್ತು ಭಾವನೆಗಳ ಮೇಲೆ ಹಿಡಿತ ಅತ್ಯಗತ್ಯ. ಕಂಪ್ಯೂಟರ್‍ನ ಕೀ ಬೋರ್ಡ್‍ಗೆ ಸ್ವಂತ ಬುದ್ಧಿಯಿಲ್ಲ. ಸರಿ-ತಪ್ಪುಗಳ ಪ್ರಜ್ಞೆಯಿಲ್ಲ. ಇವುಗಳನ್ನು ಕೀ ಬೋರ್ಡ್‍ನಲ್ಲಿ ತುಂಬಬೇಕಾದವನು ಅದರ ಬಳಕೆದಾರ. ಈ ಎಚ್ಚರಿಕೆ ಬಳಕೆದಾರನಲ್ಲಿ ಸದಾ ಇರಬೇಕು. ಪತ್ರಿಕೆಗಳಿಗೆ ಸಂಪಾದಕ ಇರುವಂತೆ ಫೇಸ್‍ಬುಕ್‍ಗೆ ಇಲ್ಲ ಮತ್ತು ಆ ಕಾರಣದಿಂದಾಗಿ ಎಡಿಟಿಂಗ್‍ನ ಭೀತಿ ಇಲ್ಲ ಎಂಬ ಭರವಸೆಯಲ್ಲಿ ಯದ್ವಾತದ್ವಾ ಬರೆಯುವುದರಿಂದ ಬರೆದವರ ಮೇಲಷ್ಟೇ ಅಲ್ಲ, ಅವರು ಪ್ರತಿನಿಧಿಸುವ ಸಮುದಾಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ತಪ್ಪು ತಿಳುವಳಿಕೆಗಳಿಗೆ ಅದು ಅವಕಾಶ ಮಾಡಿಕೊಡಬಹುದು ಎಂಬ ಎಚ್ಚರಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕು.
 ದಿನೇಶ್ ಅವಿೂನ್ ಮಟ್ಟು ಅಥವಾ ನವೀನ್ ಸೂರಿಂಜೆಯವರ ಅಭಿಪ್ರಾಯಗಳನ್ನು ಪ್ರಭಾಕರ ಭಟ್ಟರದ್ದೋ ತೊಗಾಡಿಯಾ, ಯೋಗಿ ಆದಿತ್ಯನಾಥರದ್ದೋ ಅಭಿಪ್ರಾಯಗಳಂತೆ ಕಾಣುವುದು ಆಕ್ಷೇಪಾರ್ಹ, ಹಾಸ್ಯಾಸ್ಪದ ಮತ್ತು ಖಂಡನೀಯವಾದದ್ದು. ಅವಿೂನ್ ಮಟ್ಟು ಅವರು ನಮ್ಮ ನಡುವಿನ ಅತ್ಯಂತ ಸಂವೇದನಾಶೀಲ ಚಿಂತಕ, ಬರಹಗಾರ. ಅವರು ಈ ನಾಡಿನ ಜಾತ್ಯತೀತ ಮತ್ತು ಕೋಮುವಾದಿ ವಿರೋಧಿ ನಿರ್ಭೀತ ವ್ಯಕ್ತಿತ್ವವೂ ಹೌದು. ನವೀನ್ ಸೂರಿಂಜೆ ಯುವ ಪತ್ರಕರ್ತ. ಅವರಲ್ಲಿ ಅಪಾರ ಉತ್ಸಾಹ ಇದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ. ಕೋಮುವಾದವನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ರಿಸ್ಕ್ ತೆಗೆದುಕೊಂಡು ಖಂಡಿಸುವ ಛಾತಿ ತೋರಿಸುತ್ತಾರೆ. ಇವರನ್ನು ವಿಮರ್ಶಿಸುವ ಮೊದಲು ಈ ಅರಿವು ಇರಬೇಕು. ಹಾಗಂತ, ಇವರ ಅಭಿಪ್ರಾಯಗಳನ್ನು ಸಾರಾಸಗಟು ಒಪ್ಪಿಕೊಳ್ಳಬೇಕು ಎಂದಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮಟ್ಟು ಮತ್ತು ಸೂರಿಂಜೆಗೆ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಆ ಅಭಿಪ್ರಾಯಗಳನ್ನು ವಿಮರ್ಶಿಸುವುದಕ್ಕೂ ಇದೆ. ಆದರೆ, ಆ ವಿಮರ್ಶೆಯು ಸೌಜನ್ಯದ ಗೆರೆಯನ್ನು ದಾಟಬಾರದು. ಇವರನ್ನು ಸಂಘಪರಿವಾರದ ವ್ಯಕ್ತಿಗಳೆಂದು ನಿಂದಿಸುವುದು ಖಂಡನೀಯವಷ್ಟೇ ಅಲ್ಲ, ಅದರಲ್ಲಿ ಅಜ್ಞಾನ ಇದೆ. ಅವರ ವ್ಯಕ್ತಿತ್ವ, ನಿಲುವು, ಹೋರಾಟಗಳ ಬಗ್ಗೆ ಅಪರಿಚಿತತೆಯಿದೆ ಮತ್ತು ಧರ್ಮವಿರೋಧಿ ಅಸಹಿಷ್ಣುತೆಯಿದೆ. ಇಂಥ ಏಕಮುಖ ನಿಲುವುಗಳು ಅಂತಿಮವಾಗಿ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಸಹಿಸದ ಮತ್ತು ಅಂಥವರ ಮೇಲೆ ದಾಳಿ ಮಾಡಬಹುದಾದ ಮಟ್ಟಕ್ಕೆ ಕೊಂಡೊಯ್ಯಬಹುದು. ಇದು ಅಪಾಯಕಾರಿ.
 ದಿನೇಶ್ ಅವಿೂನ್ ಮಟ್ಟು ಅವರು ಬುರ್ಖಾದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಈವರೆಗೆ ಈ ಸಮಾಜ ಆಲಿಸದ ಅಭಿಪ್ರಾಯಗಳೇನೂ ಅಲ್ಲ. ಅವರ ಅಭಿಪ್ರಾಯದಲ್ಲಿ ಒಂದಷ್ಟು ಅರಿವಿನ ಕೊರತೆ, ಯಾವುದೋ ಒತ್ತಡ, ಮುಸ್ಲಿಮ್ ಸಮುದಾಯದೊಳಗಿನ ಇತ್ತೀಚಿನ ಸಂವೇದನಾಶೀಲ ಬೆಳವಣಿಗೆಗಳ ಕುರಿತಂತೆ ಅಧ್ಯಯನ ನಡೆಸದೇ ಇರುವುದು.. ಮುಂತಾದುವುಗಳು ಗೋಚರಿಸುತ್ತವೆ. ಮಟ್ಟು ಸರ್ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ. ನಿಜವಾಗಿ, ಬುರ್ಖಾವನ್ನು ಕಳಚಲೇಬೇಕು ಅನ್ನುವುದು ಬುರ್ಖಾ ಧರಿಸಲೇಬೇಕು ಅನ್ನುವಷ್ಟೇ ಅಪಾಯಕಾರಿ ಮತ್ತು ಸ್ವಾತಂತ್ರ್ಯ ವಿರೋಧಿಯಾದುದು. ಬುರ್ಖಾವನ್ನು ಕಿತ್ತು ಹಾಕಬೇಕೆಂಬ ದನಿ ಜೋರಾದಂತೆಲ್ಲ ಅದನ್ನು ಧರಿಸಲೇಬೇಕು ಎಂದು ವಾದಿಸುವವರ ಚಟುವಟಿಕೆಗಳೂ ಜೋರಾಗುತ್ತವೆ. ಇದಕ್ಕೆ ಕಾರಣ, ಬುರ್ಖಾವು ಧರ್ಮದ ಮೂಲಭೂತ ಹಕ್ಕು ಎಂದೋ ಅದಿಲ್ಲದೇ ಧರ್ಮ ಸಂಪೂರ್ಣವಾಗದು ಎಂದೋ ಅಲ್ಲ. ಅದೊಂದು ಬಗೆಯ ಭೀತಿ. ಮುಸ್ಲಿಮರ ಕುರಿತಂತೆ ಈ ದೇಶದಲ್ಲಿ ಇವತ್ತು ಸಾಕಷ್ಟು ಪ್ರಮಾಣದಲ್ಲಿ ಅಪಪ್ರಚಾರಗಳು ಮತ್ತು ಆಕ್ರಮಣಗಳು ನಡೆಯುತ್ತಿವೆ. ಅವರ ಅಸ್ತಿತ್ವ, ಐಡೆಂಟಿಟಿಯನ್ನೇ ಪ್ರಶ್ನಾರ್ಹಗೊಳಿಸುವ ಚಟುವಟಿಕೆಗಳು ನಡೆಯುತ್ತಿವೆ. ಬುರ್ಖಾ, ಸ್ಕಾರ್ಫ್‍ನ ನೆಪದಲ್ಲಿ ಶಾಲಾ
ಪ್ರವೇಶಾತಿಯನ್ನೇ ನಿರಾಕರಿಸುವ ಘಟನೆಗಳೂ ನಡೆಯುತ್ತಿವೆ. ಇಂಥ ನಕಾರಾತ್ಮಕ ಬೆಳವಣಿಗೆಗಳು ಅಂತಿಮವಾಗಿ ಧರ್ಮದ ಮೂಲಭೂತ ಬೇಡಿಕೆಗಳಲ್ಲದವುಗಳನ್ನು ಕೂಡ ಧರ್ಮದ ಬೇಡಿಕೆಯಾಗಿ ಮತ್ತು ಅದನ್ನು ಪ್ರಶ್ನಿಸುವವರನ್ನು ಸಂಚುಕೋರರನ್ನಾಗಿ ಪರಿಗಣಿಸುವಂತೆ ಮಾಡುವುದಕ್ಕೆ ಅವಕಾಶ ಇದೆ. ತಮ್ಮ ಧರ್ಮದ ಒಂದೊಂದು ಕುರುಗಳನ್ನು ಅಳಿಸುವ ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಭಾವಿಸುವುದಕ್ಕೂ ಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ತಾವು ‘ಕುರುಹು’ ಎಂದು ಭಾವಿಸುವ ವಿಷಯಗಳು ನಿಜವಾದ ಧಾರ್ಮಿಕ ಕುರುಹುಗಳೋ ಎಂದು ಆಲೋಚಿಸುವಷ್ಟೂ ಅವರಲ್ಲಿ ಸಹನೆ ಇರುವುದಿಲ್ಲ. ಮಟ್ಟು ಮತ್ತು ಸೂರಿಂಜೆಯವರನ್ನು ನಿಂದಿಸಿದವರಲ್ಲಿ ಈ ಅವಿವೇಕ ಗೋಚರಿಸುತ್ತದೆ. ಅವರ ಪ್ರತಿಕ್ರಿಯೆಗಳಲ್ಲಿ, ಬುರ್ಖಾ ಧರಿಸಲೇಬೇಕು ಎಂಬ ಆಗ್ರಹಕ್ಕಿಂತ ತಮ್ಮ ಧರ್ಮದ ವಿರುದ್ಧ ಸಂಚು ನಡೆದಿದೆ ಎಂಬ ಭೀತಿಯೇ ಎದ್ದು ಕಾಣುತ್ತದೆ.
ಬಿ. ಎಂ. ಬಶೀರ್
ಅಮೀನ್ ಮಟ್ಟು
    ಕುಕ್ಕಿಲದಲ್ಲಿರುವ ನನ್ನ ತಾಯಿ ಆಸ್ಯಮ್ಮರು ಈಗಲೂ ಪ್ರತಿದಿನ ಬೆಳಿಗ್ಗೆ ಅರ್ಧ ಕಿಲೋ ವಿೂಟರ್‍ನಷ್ಟು ದೂರ ಇರುವ ಚಂದ್ರ ಭಟ್ಟ ಮತ್ತು ವಿನಯ ಭಟ್ಟರ ಮನೆಗೆ ಹಾಲು ತರಲು ಹೋಗುತ್ತಾರೆ. ಅಷ್ಟೇ ದೂರ ಇರುವ ಮಗನ (ನನ್ನ ಅಣ್ಣ) ಬೀಡಿ ಬ್ರಾಂಚ್‍ಗೂ ಹೋಗುತ್ತಾರೆ. ಪರಿಸರದಲ್ಲಿರುವ ಹಿಂದೂ-ಮುಸ್ಲಿಮ್-ಕ್ರೈಸ್ತರ ಮನೆಗಳಿಗೂ ಭೇಟಿ ಕೊಡುತ್ತಿರುತ್ತಾರೆ. ಆದರೆ, ಈ ಯಾವ ಸಂದರ್ಭಗಳಲ್ಲೂ ಅವರು ಬುರ್ಖಾ ಧರಿಸುವುದೇ ಇಲ್ಲ. ಸೀರೆ, ಕುಪ್ಪಸ ಮತ್ತು ತಲೆಗೊಂದು ಲೇಸ್ (ಶಿರವಸ್ತ್ರ).. ಇದುವೇ ನನ್ನಮ್ಮನ ಬುರ್ಖಾ. ಹಾಗಂತ, ಅವರು ಬುರ್ಖಾ ಧರಿಸದೇ ಇರುವುದಕ್ಕೆ ಸಾರಾ ಅಬೂಬಕರ್ ಅವರ ಕೃತಿಗಳು ಮತ್ತು ಚಿಂತನೆಗಳು ಕಾರಣ ಅಲ್ಲ. ಅಕ್ಷರ ಜ್ಞಾನವೇ ಇಲ್ಲದ ಅವರು ಸಾರಾ ಅಬೂಬಕರ್‍ರನ್ನು ನೋಡಿಯೂ ಇಲ್ಲ. ಅದವರ ಬದುಕು. ಅದರಂತೆ ಅವರು ಬದುಕುತ್ತಿದ್ದಾರೆ. ‘ಹೀಗೆ ಬದುಕುವುದು ಧರ್ಮ ವಿರೋಧಿ' ಎಂದು ಯಾವ ‘ಮೂಲಭೂತ’ವಾದಿಯೂ ಅವರೊಂದಿಗೆ ಹೇಳಿಲ್ಲ. ಯಾಕೆಂದರೆ, ಬುರ್ಖಾ ಇಸ್ಲಾಮಿನ ಮೂಲಭೂತ ಬೇಡಿಕೆಯಲ್ಲ. ಎರಡ್ಮೂರು ದಶಕಗಳ ಹಿಂದೆ ವಿದೇಶಗಳಿಂದ ಕಡ ತಂದ ವಸ್ತು ಇದು. ಈ ‘ವಸ್ತು'ವನ್ನು ಮುಸ್ಲಿಮ್ ಸಮುದಾಯ ತನ್ನದಾಗಿಸಿಕೊಂಡುದುದಕ್ಕೆ ಒಂದು ಪ್ರಮುಖ ಕಾರಣ ಇದೆ. ಅದುವೇ ಬಡತನ. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಪೆರ್ನಾಲ್‍ನಂದು (ಹಬ್ಬ) ಕಷ್ಟದಲ್ಲಿ ಹೊಸ ಬಟ್ಟೆ ಹೊಲಿಸುವ ಸಮುದಾಯಕ್ಕೆ ಬುರ್ಖಾದ ಅಗತ್ಯ ಬಹಳವೇ ಇತ್ತು. ಅದು ಒಳಗಿರುವ ಬಟ್ಟೆಯನ್ನು ಮರೆಸುತ್ತದೆ. ತಾನು ಧರಿಸಿದ ಚೂಡಿದಾರ, ಸೀರೆ ಅಥವಾ ಲಂಗದಾವಣಿಯ ವಯಸ್ಸನ್ನು ಮರೆಮಾಚುತ್ತದೆ. ಅವುಗಳ ಬಣ್ಣ ಮಾಸಿರುವುದನ್ನು ಅದು ನೋಡುಗರಿಂದ ಅಡಗಿಸುತ್ತದೆ. ಸೀರೆಗೆ ಅಥವಾ ಕುಪ್ಪಸಕ್ಕೆ ಹಾಕಿರುವ ತೇಪೆಯನ್ನು ಅದು ಮುಚ್ಚಿ ಬಿಡುತ್ತದೆ. ಇವತ್ತು, ಶಾಲಾ-ಕಾಲೇಜಿಗೆ ಹೋಗುವ ಎಷ್ಟೋ ಹೆಣ್ಣು ಮಕ್ಕಳು ಬುರ್ಖಾವನ್ನು ಇಷ್ಟಪಟ್ಟು ಧರಿಸುತ್ತಾರೆ. ಅದವರ ಬಡತನವನ್ನು ಮರೆಮಾಚುತ್ತದೆ. ಬಸ್ಸಿನಲ್ಲೋ ರಸ್ತೆಯಲ್ಲೋ ಅಥವಾ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲೋ ಅವರನ್ನು ಇನ್ಫೀರಿಯಾರಿಟಿ ಕಾಂಪ್ಲೆಕ್ಸ್‍ನಿಂದ ರಕ್ಷಿಸುತ್ತದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗಿರುವಾಗ ಒಂದು ವೇಳೆ, ಯಾರಾದರೂ ಬುರ್ಖಾವನ್ನು ಅವರಿಂದ ಕಿತ್ತು ಹಾಕಲು ಮುಂದಾಗುತ್ತಾರೆಂದರೆ ಅದವರ ಗೌರವವನ್ನೇ ಕಿತ್ತುಹಾಕಲು ಮುಂದಾದಂತೆ ಮತ್ತು ಅವರ ಬಡತನವನ್ನು ಸಮಾಜದ ಮುಂದೆ ಬಿಚ್ಚಿಟ್ಟಂತೆ ಆಗಬಹುದು. ಇಂಥ ಪ್ರಯತ್ನವನ್ನು ಕೆಲವರು ಪ್ರಗತಿಪರ ದೃಷ್ಟಿಕೋನ ಎಂದು ವಾದಿಸಿದರೂ ಅದನ್ನು ಅನಿವಾರ್ಯವಾಗಿ ಧರಿಸಿದವರ ಮಟ್ಟಿಗೆ (ಹೆಚ್ಚಿನವರು ಹಾಗೆಯೇ) ಅವಮಾನ. ಮಾತ್ರವಲ್ಲ, ಅವರ ವಿರುದ್ಧದ ಸಂಚು. ಅಷ್ಟಕ್ಕೂ, ನನ್ನ ಈ ವಾದವನ್ನು ಸಮರ್ಥಿಸುವುದಕ್ಕೆ ಮುಸ್ಲಿಮ್ ಸಮುದಾಯದ ಮನೆಗಳಲ್ಲಿರುವ ಬುರ್ಖಾಗಳ ಸಂಖ್ಯೆಗಳೇ ಧಾರಾಳ ಸಾಕು. ಸಾಮಾನ್ಯವಾಗಿ, ಓರ್ವರಿಗೆ ಒಂದಕ್ಕಿಂತ ಹೆಚ್ಚು ಉಡುಪುಗಳಿರುವಂತೆ ಬುರ್ಖಾಗಳಿಲ್ಲ. ಒಂದು ಮನೆಯಲ್ಲಿ ಐದು ಮಂದಿ ಮಹಿಳೆಯರಿದ್ದರೆ, ಎರಡೋ ಮೂರೋ ಬುರ್ಖಾಗಳಿರುವುದೇ ಹೆಚ್ಚು. (ಇದಕ್ಕೆ ಅಪವಾದಗಳೂ ಇವೆ.) ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಪ್ರತಿದಿನ ಸಂಜೆ ಬುರ್ಖಾವನ್ನು ಒಗೆದು ಬೆಳಿಗ್ಗೆ ಧರಿಸಿಕೊಂಡು ಹೋಗುವವರೇ ಅಧಿಕವಿದ್ದಾರೆ. ಆದ್ದರಿಂದ, ಬುರ್ಖಾದಿಂದ ಮುಸ್ಲಿಮ್ ಮಹಿಳೆಯರನ್ನು ಹೊರತರಬೇಕು ಎಂದು ಕರೆಕೊಡುವಾಗ ಅಥವಾ ‘ಅದು ಮೂಲಭೂತವಾದದ ಸಂಕೇತ' ಎಂದು ವಾದಿಸುವಾಗ ಈ ವಸ್ತುಸ್ಥಿತಿಯನ್ನು ಅರಿತುಕೊಳ್ಳುವುದೂ ಅಗತ್ಯವೆನಿಸುತ್ತದೆ. ಅದು ಯಾರದೋ ಹೇರಿಕೆಯೋ ಅಥವಾ ಅನಿವಾರ್ಯತೆಯೋ ಎಂಬ ಚರ್ಚೆಗೆ ತೊಡಗುವ ಸಂದರ್ಭದಲ್ಲಿ ಈ ವಸ್ತುಸ್ಥಿತಿಯನ್ನೂ ಎದುರಿಟ್ಟುಕೊಳ್ಳಬೇಕಿದೆ. ಮುಸ್ಲಿಮ್ ಸಮುದಾಯದ ಒಳಗಿನ ತಲ್ಲಣಗಳನ್ನು ಅಧ್ಯಯನ ನಡೆಸದೇ ಬರಿದೇ ಆಗ್ರಹಗಳನ್ನು ವ್ಯಕ್ತಪಡಿಸಿದರೆ ಅದು ಅಂತಿಮವಾಗಿ ‘ಬಂಡಾಯ’ ಎಂಬ ಹಣೆಪಟ್ಟಿಯೊಂದಿಗೆ ನಿರ್ಲಕ್ಷ್ಯಕ್ಕೆ ಒಳಗಾಗಬಹುದೇ ಹೊರತು ರಚನಾತ್ಮಕ ಬದಲಾವಣೆಗಲ್ಲ.
 ಬುರ್ಖಾವು ಮುಸ್ಲಿಮ್ ಸಮುದಾಯದಲ್ಲಿ ಎಷ್ಟು ಬೇಗ ಜನಪ್ರಿಯಗೊಂಡಿತೋ ಅಷ್ಟೇ ವೇಗವಾಗಿ ಇವತ್ತು  ಅದರ ‘ಧಾರ್ಮಿಕ ಅನ್ಯತ್ವ'ದ ಕುರಿತೂ ಚರ್ಚೆಗಳಾಗುತ್ತಿವೆ. ಬುರ್ಖಾ ಅಂದರೆ ಕುರ್‍ಆನ್ ಹೇಳಿರುವ ಪರ್ದಾ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡತೊಡಗಿದೆ. ಈ ಅರಿವನ್ನು ಮೂಡಿಸುತ್ತಿರುವುದು ಮೂಲಭೂತವಾದಿಗಳೆಂದು ಪ್ರಗತಿಪರರು ದೂಷಿಸುವ ಧಾರ್ಮಿಕ ಸಂಘಟನೆಗಳೇ ಎಂಬುದು ಗಮನಾರ್ಹ. ಆದರೂ, ನಿಂತ ಸ್ಥಿತಿಯಲ್ಲಿಯೇ ಬುರ್ಖಾವನ್ನು ಕಳಚಿ ಹಾಕುವಂತಹ ವೈರಾಗ್ಯವಾಗಲಿ, ಅನಿವಾರ್ಯತೆಯಾಗಲಿ ಅಥವಾ ಆರ್ಥಿಕ ಸಬಲೀಕರಣವಾಗಲಿ ಮುಸ್ಲಿಮ್ ಸಮುದಾಯದಲ್ಲಿ ಇವತ್ತಿಲ್ಲ. ಇವತ್ತಿನ ತಲೆಮಾರು ಇದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಎಂದರೆ, ಅದಿಲ್ಲದೆ ಕಂಫರ್ಟಬಲ್ ಆಗುತ್ತಿಲ್ಲ ಎಂದು ಹೇಳುವಷ್ಟು. ಮಾತ್ರವಲ್ಲ, ‘ಬುರ್ಖಾ ಕಡ್ಡಾಯ' ಎಂದು ಮನೆಯ ಪುರುಷರು ಭಾವಿಸುವಷ್ಟು. ಇವತ್ತು ಅಸಂಖ್ಯ ಯುವತಿಯರು ಯಾರ ಒತ್ತಡವೂ ಇಲ್ಲದೇ ಇಷ್ಟಪಟ್ಟು ಬುರ್ಖಾ ಧರಿಸುತ್ತಿದ್ದಾರೆ. ಅದು ಕಡ್ಡಾಯವಲ್ಲ ಎಂದು ಹೇಳಿದರೂ ಕಂಫರ್ಟಬಲ್‍ನ ಕಾರಣ ಮುಂದಿಡುತ್ತಾರೆ. ಅವಿೂನ್ ಮಟ್ಟು ಅವರು ಹೇಳಿದಂತೆ, ಒಂದು ವೇಳೆ ಮುಸ್ಲಿಮ್ ಮಹಿಳೆಯರ ಮಧ್ಯೆ ಬುರ್ಖಾ ಬೇಕೇ ಬೇಡವೇ ಎಂಬ ವಿಷಯದಲ್ಲಿ ಇವತ್ತು ಗುಪ್ತ ಮತದಾನ ನಡೆಸಿದರೆ ಬುರ್ಖಾವೇ ಜಯಶಾಲಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅದರ ಹಿಂದೆ ಇರುವುದು ಮೂಲಭೂತವಾದವಲ್ಲ; ಮರ್ಯಾದೆ ವಾದ, ಬಡತನ ವಾದ ಮತ್ತು ಕೆಲವೊಮ್ಮೆ ಮೈಮುಚ್ಚುವ ವಾದ.
 ಹಾಗಂತ, ಮುಸ್ಲಿಮ್ ಸಮಾಜದಲ್ಲಿ ಅಪದ್ಧಗಳು ಇಲ್ಲ ಎಂದಲ್ಲ. ಬುರ್ಖಾ ಕಡ್ಡಾಯವಲ್ಲ ಎಂದು ವಾದಿಸುವ ಮಂದಿಯೇ ತಂತಮ್ಮ ಮನೆಗಳಲ್ಲಿ ಕಡ್ಡಾಯದಂತೆ ಅದನ್ನು ಹೇರುವುದಿದೆ. ಬುರ್ಖಾ ಧರಿಸದೆ ಇರುವ ಸಹಜ ಸ್ವಾತಂತ್ರ್ಯವನ್ನು ಮಹಿಳೆಯರಿಂದ ಕಿತ್ತುಕೊಳ್ಳುವುದಿದೆ. ಬುರ್ಖಾ ಧರಿಸದೇ ಇರುವುದು ಧರ್ಮವಿರೋಧಿ ಕ್ರಮದಂತೆ ವಾದಿಸುವುದೂ ಇದೆ. ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರದ್ದೋ ಪುರುಷ ಸಮಾಜದ್ದೋ ಒತ್ತಡಕ್ಕೆ ಮಣಿದು ಬುರ್ಖಾ ಧರಿಸುತ್ತಿರುವರೆಂಬ ವಾದವನ್ನು ನಾನು ಸಾರಾಸಗಟು ತಿರಸ್ಕರಿಸುತ್ತಲೂ ಇಲ್ಲ. ಆದರೆ, ಇವಕ್ಕೆಲ್ಲ ಬುರ್ಖಾ ವಿರೋಧಿ ಅಭಿಯಾನ ನಡೆಸುವುದೋ ನಿಂತ ಸ್ಥಿತಿಯಲ್ಲೇ ಅದನ್ನು ಕಳಚಿ ಹಾಕಬೇಕೆಂದು ಆಗ್ರಹಿಸುವುದೋ ಪರಿಹಾರ ಅಲ್ಲ. ಸಾರಾ ಅಬೂಬಕರ್ ಮಾಡಿದ್ದೂ ಇದೇ ತಪ್ಪನ್ನು. ಅವರು ಮುಸ್ಲಿಮ್ ಸಮಾಜದಲ್ಲಿದ್ದ ಅಜ್ಞಾನಜನ್ಯ ಮತ್ತು ಧರ್ಮ ವಿರೋಧಿ ಆಚರಣೆಗಳನ್ನು ಕಟುವಾಗಿ ಖಂಡಿಸಿದರು. ಅದಕ್ಕೆ ಧರ್ಮವೇ ಕಾರಣ ಎಂಬ ಅತಿರೇಕದ ವ್ಯಾಖ್ಯಾನವನ್ನು ಕೊಟ್ಟರು. ಪದಗಳಿಂದ ಚುಚ್ಚಿದರು. ಅವಮಾನಿಸಿದರು. ಸಾರಾರ ಈ ವಾದದಲ್ಲಿ ಸಮಾಜವನ್ನು ಚಿಂತನೆಗೆ ಹಚ್ಚುವುದಕ್ಕಿಂತ ಆಕ್ರೋಶಕ್ಕೆ ದೂಡುವ ಅಂಶಗಳೇ ಹೆಚ್ಚಿದ್ದುವು. ಮೂರು ದಶಕಗಳ ಹಿಂದಿನ ಸಮಾಜವು ಅವರ ನಕಾರಾತ್ಮಕ ಧೋರಣೆಯನ್ನು ನಕಾರಾತ್ಮಕವಾಗಿಯೇ ಸ್ವೀಕರಿಸಿತು. ಅದು ಸರಿ ಎಂದಲ್ಲ. ಆದರೆ, ಸಾರಾರನ್ನು ನಕಾರಾತ್ಮಕವಾಗಿ ಸ್ವೀಕರಿಸಿದ ಅದೇ ಸಮಾಜ,  ‘ಮೂಲಭೂತವಾದಿ'ಗಳ ಸುಧಾರಣಾವಾದಿ ಸಭ್ಯ ವಾದವನ್ನು ಅಷ್ಟೇ ಸಕಾರಾತ್ಮಕವಾಗಿ ಆಲಿಸಿತು. ತನ್ನನ್ನು ತಿದ್ದಿಕೊಳ್ಳಲು ಮುಂದಾಯಿತು. ತಲಾಕ್, ಬಹುಪತ್ನಿತ್ವ, ಬುರ್ಖಾ, ಹೆಣ್ಣು ಮಕ್ಕಳ ಶಿಕ್ಷಣ.. ಮುಂತಾದುವುಗಳ ಕುರಿತಂತೆ ಸಮಾಜದಲ್ಲಿದ್ದ ದೊಡ್ಡದೊಂದು ಅಜ್ಞಾನದ ಪರದೆಯನ್ನು ಕಿತ್ತುಹಾಕುವಲ್ಲಿ ಅದು ಬಹುದೊಡ್ಡ ಯಶಸ್ಸು ಪಡೆಯಿತು. ಇವತ್ತು ಮುಸ್ಲಿಮ್ ಸಮಾಜದಲ್ಲಿ ‘ತಲಾಕ್, ತಲಾಕ್, ತಲಾಕ್’ ನಗಣ್ಯವಾಗುತ್ತಾ ಬಂದಿದೆ. ‘ಬಹುಪತ್ನಿತ್ವ'ದ ಇತಿ-ಮಿತಿಗಳು ಅರ್ಥವಾಗಿವೆ ಮತ್ತು ಹೆಣ್ಣು ಮಕ್ಕಳು ಧಾರಾಳ ಸಂಖ್ಯೆಯಲ್ಲಿ ಶಿಕ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಸ್ಲಿಮ್ ಸಮುದಾಯದೊಳಗೆ ಸದ್ದು-ಗದ್ದಲವಿಲ್ಲದೇ ನಡೆದಿರುವ ಈ ಕ್ರಾಂತಿಯನ್ನು ಪರಿಗಣಿಸುವಾಗ ಸಾರಾ-ಬೊಳುವಾರು ಅವರ ಪರಂಪರೆಯ ಪಂಜನ್ನು (ರಿಲೇ ಬ್ಯಾಟನ್) ಬಿ.ಎಂ. ಬಶೀರ್ ಅಷ್ಟೇ ಆಸಕ್ತಿಯಿಂದ ಯಾಕೆ ಮುಂದುವರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾರಾರ ಸಮಾಜವಲ್ಲ ಇವತ್ತಿನದು. ಬೊಳುವಾರು ಎದುರಿಸಿದ ಸಮಸ್ಯೆಗಳಲ್ಲ ಇವತ್ತಿನ ಮುಸ್ಲಿಮ್ ಸಮಾಜದ್ದು. ಬಲಪಂಥೀಯ ಕೋಮುವಾದಿ ವಿಚಾರಧಾರೆಯ ಭೀತಿಯೇ ಇವತ್ತಿನ ಮುಸ್ಲಿಮ್ ಸಮುದಾಯದ ಒಳಗಿನ ಮತ್ತು ಹೊರಗಿನ ತಲ್ಲಣಗಳಾಗಿವೆ. ಭಾರತೀಕರಣದ ನೆಪದಲ್ಲಿ ಬುರ್ಖಾವನ್ನು ಅವು ಇಶ್ಯೂ ಮಾಡುತ್ತಿವೆ. ತಲಾಕ್, ಬಹುಪತ್ನಿತ್ವ, ಜಿಹಾದ್.. ಎಂಬೆಲ್ಲಾ ಪದಗಳನ್ನು ಅವು ವಿರೂಪಗೊಳಿಸಿ ಮಾರುತ್ತಿವೆ. ಹೆಣ್ಣು-ಗಂಡಿನ ಪ್ರೀತಿಯನ್ನು ಲವ್ ಜಿಹಾದ್ ಅನ್ನುತ್ತಿವೆ. ಪ್ರತಿ ಸ್ಥಳೀಯ ಘಟನೆಯನ್ನೂ ರಾಷ್ಟ್ರಮಟ್ಟದ ಇಶ್ಯೂ ಆಗಿಸುವ ಮತ್ತು ಕೋಮುಗಲಭೆಗೆ ಪ್ರಚೋದನೆ ಕೊಡುವ ಜಾಣತನವನ್ನು ಅವು ಪ್ರದರ್ಶಿಸುತ್ತಿವೆ. ಇಂಥ ಹೊತ್ತಲ್ಲಿ ಬಿ.ಎಂ. ಬಶೀರ್‍ರಂಥವರು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಇವತ್ತು ಮುಸ್ಲಿಮ್ ಸಮಾಜದೊಳಗಿನ ಸುಧಾರಣಾ ಪ್ರಕ್ರಿಯೆಗೆ ಅಡ್ಡವಾಗಿ ನಿಂತಿರುವುದು (ಮಟ್ಟು ಸರ್ ಪ್ರಕಾರ) ‘ಮೂಲಭೂತವಾದಿ' ಸಂಘಟನೆಗಳಲ್ಲ. ನಿಜವಾಗಿ ಅವೇ ಸುಧಾರಣಾ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿವೆ ಮತ್ತು ಆ ದಾರಿಯಲ್ಲಿ ಶ್ರಮಿಸುತ್ತಿವೆ. ಈ ಸುಧಾರಣಾ ಪ್ರಕ್ರಿಯೆಗಳು ನಿಧಾನಗೊಳ್ಳುವಂತೆ ಮತ್ತು ಸಮಾಜವು ಕೋಮುವಾದೀಕರಣಗೊಳ್ಳುವಂತೆ ಪ್ರಚೋದನೆ ಸಿಗುತ್ತಿರುವುದು ಬಲಪಂಥೀಯ ಕೋಮುವಾದದಿಂದ. ಆದ್ದರಿಂದ ಸಾರಾರ ಪಂಜನ್ನು ಪಕ್ಕಕ್ಕಿಟ್ಟ ಬಶೀರ್‍ರ ನಡೆಯನ್ನು ಸೂಕ್ತ ಮತ್ತು ಸಮಂಜಸ ಎಂದೇ ವ್ಯಾಖ್ಯಾನಿಸಬೇಕಾಗಿದೆ. ಇವತ್ತಿನ ದಿನಗಳಲ್ಲಿ ಮುಸ್ಲಿಮ್ ಸಮಾಜಕ್ಕೆ ಸಾರಾರ (ಬಂಡಾಯ) ಅಗತ್ಯವಿಲ್ಲ. ಬಶೀರ್‍ರಂಥವರ ಅಗತ್ಯವಿದೆ. ಮುಸ್ಲಿಮ್ ಸಮಾಜದ ಒಳಗೆ ಗುರುತಿಸಿಕೊಂಡು ಅಲ್ಲಿನ ಧ್ವನಿಯಾಗುತ್ತಲೇ ಮತ್ತು ಸಂದರ್ಭೋಚಿತವಾಗಿ ಸುಧಾರಣಾ ಪರ ನಿಲುವು ವ್ಯಕ್ತಪಡಿಸುತ್ತಲೇ ಬಲಪಂಥೀಯ ಕೋಮುವಾದದ ವಿರುದ್ಧ ಅವರು ಪ್ರಬಲ ಪಂಜನ್ನು ಉರಿಸಬೇಕಾಗಿದೆ. ಈ ಪಂಜು ಎಲ್ಲ ರೀತಿಯ ಕೋಮುವಾದವನ್ನು ದಹಿಸುವ ಮತ್ತು ಅಜ್ಞಾನದ ಕತ್ತಲೆಗೆ ಬೆಳಕು ನೀಡುವ ಕೆಲಸವನ್ನು ಮಾಡಬೇಕಾಗಿದೆ.

Tuesday, September 9, 2014

‘ಮೌಲಾನಾ’ ಪ್ರತಿಪಾದಿಸಿದ ಭಾವೈಕ್ಯತೆಯ ಸುತ್ತ..

ಅಕ್ಬರ್
ದಾರಾಶುಕೊ
ರಾಜಾರಾಂ ಮೋಹನ್ ರಾಯ್
ರಾಮಕೃಷ್ಣ ಪರಮಹಂಸ
    ಸಹಿತ ಅನೇಕಾರು ಮಂದಿ ಈ ದೇಶದಲ್ಲಿ ‘ಸರ್ವಧರ್ಮ ಸಮಭಾವ' ಅಥವಾ ಧಾರ್ಮಿಕ ಸೌಹಾರ್ದತೆಯ ಕುರಿತಂತೆ ತಮ್ಮದೇ ಆದ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವುಗಳ ಪರ ಮತ್ತು ವಿರುದ್ಧ ಧಾರಾಳ ಚರ್ಚೆಗಳೂ ಆಗಿವೆ. ವಿಭಿನ್ನ ಧರ್ಮ, ಜಾತಿ, ಜನಾಂಗಗಳಿರುವ ದೇಶವೊಂದರಲ್ಲಿ ಧಾರ್ಮಿಕ ಆಚರಣೆಗಳು ಹೇಗಿರಬೇಕು? ಅವುಗಳ ನಡುವೆ ಸೌಹಾರ್ದತೆ ಸಾಧ್ಯವೇ? ಹೇಗೆಲ್ಲ ಸಾಧ್ಯ? ಯಾವುದು ಸೌಹಾರ್ದ ಮತ್ತು ಯಾವುದಲ್ಲ? ಗಾಡ್, ಖುದಾ, ಭಗವಾನ್, ಅಲ್ಲಾಹ್.. ಮುಂತಾದುವುಗಳೆಲ್ಲ ಓರ್ವ ದೇವನ ಹಲವು ನಾಮಗಳಾಗಬಹುದಾದರೆ, ಇಸ್ಲಾಮ್, ಕ್ರೈಸ್ತ, ಹಿಂದೂ, ಬೌದ್ಧ, ಜೈನ.. ಮುಂತಾದುವುಗಳೆಲ್ಲ ಆ ಓರ್ವ ದೇವನ ಹಲವು ಹೆಸರುಗಳಲ್ಲಿರುವ ಒಂದೇ ಧರ್ಮವಾಗಬಾರದೇಕೆ? ‘ಸರ್ವೆ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ - ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖ ಬಾರದಿರಲಿ’ - ಎಂಬ ಶ್ಲೋಕಕ್ಕಿಂತ ‘ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸರ್ವ ಸಮಾನರು' ಎಂಬ ಕುರ್‍ಆನಿನ (49:13) ವಚನದಲ್ಲಿ ಏನು ಭಿನ್ನತೆಯಿದೆ? ಧರ್ಮಗಳೆಲ್ಲ ಪರಸ್ಪರ ಪ್ರತ್ಯೇಕವಾಗಿ ಮತ್ತು ಆಚರಣೆಗಳಲ್ಲೋ ಆರಾಧನೆಗಳಲ್ಲೋ ಒಂದಕ್ಕೊಂದು ಸಂಧಿಸದಷ್ಟು ಅನ್ಯವಾಗಿ ಗುರುತಿಸಿಕೊಳ್ಳುತ್ತಿರುವುದರಿಂದಲೇ ಅಲ್ಲವೇ ವಿಚಾರವಾದ, ನಾಸ್ತಿಕವಾದ, ಮೂಲಭೂತವಾದಗಳು ಬೆಳೆದಿರುವುದು? ಟಿ.ಎನ್. ಸೀತಾರಾಮ್‍ರ ಧಾರಾವಾಹಿಯೊಂದರಲ್ಲಿ ಮಗುವೊಂದು ಬೆತ್ತಲೆಯಾಗಿ ಮನೆಯಿಂದ ಹೊರಗೆ ಹೋಗುವ ದೃಶ್ಯವಿದೆ. ಧರ್ಮದ ಬೇಲಿಯೊಳಗೆ ಬೆಳೆಸದೆ ಸ್ವತಂತ್ರವಾಗಿ ಮನುಷ್ಯರನ್ನು ಬೆಳೆಸಬೇಕೆಂಬ ಆಗ್ರಹ ಆ ದೃಶ್ಯದಲ್ಲಿದೆ. ಇಂಥ ಆಲೋಚನೆ, ವಿಚಾರಗಳಿಗೆ ಮೂಲ ಕಾರಣ ಯಾರು? ಧರ್ಮಗಳೋ ಅಥವಾ ಅದನ್ನು ಪ್ರತ್ಯೇಕತೆಯೊಳಗೆ ತೂರಿಸಿದ ಧರ್ಮಭಕ್ತರೋ?
   ಬಹುಶಃ ಪ್ರಶ್ನೆಗಳು ಧಾರಾಳ ಇವೆ. ಮಾತ್ರವಲ್ಲ, ಇಂಥ ಪ್ರಶ್ನೆಗಳು ಎಷ್ಟು ಪ್ರಭಾವಶಾಲಿ ಆಗಿರುತ್ತವೆ ಎಂದರೆ, ದಾರಾಶುಕೊರಂಥ ಅನೇಕಾರು ಮಂದಿಯನ್ನೂ ಅವು ಸೃಷ್ಟಿಸುತ್ತವೆ. ನಿಜವಾಗಿ, ‘ಕಾರ್ಮಿಕ ವರ್ಗದ ಹೊಟ್ಟೆಯನ್ನು ಧಾರ್ಮಿಕ ಚಿಂತನೆಗಳು ತಣಿಸುವುದಿಲ್ಲ' ಎಂಬ ಅಸಹನೆಯಿಂದಲೇ ಕಾರ್ಲ್ ಮಾರ್ಕ್ಸ್ ರ ಕಮ್ಯುನಿಸ್ಟ್ ಮೆನಿಫೆಸ್ಟೋ ಹುಟ್ಟಿಕೊಂಡದ್ದು. ಹಾಗಂತ, ಆ ಮೆನಿಫೆಸ್ಟೋ ಕಾರ್ಮಿಕರ ಹೊಟ್ಟೆಯನ್ನು ತಣಿಸಿತೋ ಎಂದು ಪ್ರಶ್ನಿಸಿದರೆ, ವಿಷಾದವೇ ಉತ್ತರವಾಗುತ್ತದೆ. ಜಗತ್ತಿನ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಅವರು ಕಾರ್ಮಿಕ ವರ್ಗದ ಕ್ರಾಂತಿಯನ್ನು ಬಯಸಿದರು. ಕಮ್ಯುನಿಸಂ ಎಂಬ ‘ಕಾರ್ಮಿಕ ಕ್ರಾಂತಿ'ಯು ಯುರೋಪನ್ನು ಸಂಪೂರ್ಣವಾಗಿ ಆವರಿಸದಿದ್ದರೂ ಅಲ್ಲೆಲ್ಲಾ ಶ್ರೀಮಂತ ವರ್ಗವನ್ನು ಅದು ಅಪ್ರತ್ಯಕ್ಷಗೊಳಿಸಲಿದೆ ಎಂದು ಅವರು ಭಾವಿಸಿದ್ದರು. ಅಷ್ಟಕ್ಕೂ, ಅದು ಅವರೊಬ್ಬರ ನಿರೀಕ್ಷೆಯಷ್ಟೇ ಆಗಿರಲಿಲ್ಲ. ಏಂಗಲ್ಸ್ ರಿಗೂ ಮತ್ತು ಅವರಂಥ ಅನೇಕ ಚಿಂತಕರಿಗೂ ಅದರಲ್ಲಿ ಪಾತ್ರವಿದೆ. ಜಗತ್ತಿನಲ್ಲಿರುವ ಧರ್ಮಗಳಿಗೆಲ್ಲ ಪರ್ಯಾಯ ಧರ್ಮವಾಗಿ ‘ಕಾರ್ಮಿಕ ಧರ್ಮ' ಉದಯವಾಯಿತೆಂಬ ಮತ್ತು ಅದುವೇ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೆಂಬ ಪ್ರಚಾರವೂ ನಡೆಯಿತು. ಆದರೆ ಆ ಭರವಸೆ ತೀರಾ ಸಣ್ಣ ಅವಧಿಯಲ್ಲೇ ಧರಾಶಾಹಿಯಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋವನ್ನು ರಷ್ಯಾದಲ್ಲಿ ಜಾರಿಗೆ ತಂದ ಸ್ಟಾಲಿನ್‍ರೇ ಆ ಮೆನಿಫೆಸ್ಟೋದ ಅಪ್ರಸ್ತುತತೆಯನ್ನು ಸಾರಿಬಿಟ್ಟರು. ಅವರಿಗೆ ಒಂದಕ್ಕಿಂತ ಹೆಚ್ಚು ಅದ್ದೂರಿ ಬಂಗಲೆಗಳಿದ್ದುದು, ಅತ್ಯಾಧುನಿಕ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಮತ್ತು ಸ್ವದೇಶಿತನವನ್ನು ಪ್ರಚುರಪಡಿಸುತ್ತಾ ವಿದೇಶಿ ಮದ್ಯವಾದ ಸ್ಕೋಡಾವನ್ನು ಸೇವಿಸುತ್ತಿದ್ದುದೆಲ್ಲಾ ಕ್ರಮೇಣ ಬಹಿರಂಗವಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋ ಮಾತಾಡಿದ್ದು ಕಾರ್ಮಿಕರ ಪರ. ಆದರೆ ಸ್ಟಾಲಿನ್ ಬದುಕಿದ್ದು ಅಪ್ಪಟ ಶ್ರೀಮಂತರಂತೆ. ಅವರ ದಾಂಪತ್ಯ ಬದುಕಂತೂ ಅತ್ಯಂತ ಮಾದರಿರಹಿತವಾಗಿತ್ತು ಎಂದು ಎರಡು ವರ್ಷಗಳ ಹಿಂದೆ ಮೃತಪಟ್ಟ ಅವರ ಮಗಳು ಸ್ವೆಟ್ಲಾನಾ ಸ್ಟಾಲಿನಾ ತಮ್ಮ ‘ಟ್ವೆಂಟಿ ಲೆಟರ್ಸ್ ಟು ಏ  ಫ್ರೆಂಡ್  ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಅವರು ನನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂದವರು ಹೇಳಿದ್ದಾರೆ. ಧರ್ಮದ ವೈಫಲ್ಯವನ್ನು ಎತ್ತಿಕೊಂಡು ಕಾರ್ಮಿಕವಾದವನ್ನು ನೆಚ್ಚಿಕೊಂಡ ವ್ಯಕ್ತಿಯೋರ್ವರ ವಿಫಲ ಬದುಕಿನ ಚಿತ್ರಣವನ್ನು ಸ್ವೆಟ್ಲಾನಾರ ಆತ್ಮಕತೆ ವಿವರಿಸುತ್ತದೆ. ಧಾರಾಶುಕೊ ಅಂತೂ ಧರ್ಮಗಳ ನಡುವೆ ಪಾರಿಭಾಷಿಕಗಳ ಹೊರತು ಇನ್ನೇನೂ ವ್ಯತ್ಯಾಸ ಇಲ್ಲವೆಂದು ಹೇಳಿದ್ದ. ಧಾರ್ಮಿಕ ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ‘ದೀನೇ ಇಲಾಹಿ'ಯನ್ನು ಅಕ್ಬರ್ ಸ್ಥಾಪಿಸಿದಂತೆಯೇ ಅದರ ಮುಂದುವರಿದ ಭಾಗವನ್ನು ದಾರಾಶುಕೊ ಕೈಗೆತ್ತಿಕೊಂಡಿದ್ದ. ಆತ ಉಪನಿಷತ್ತು, ಭಗವದ್ಗೀತೆ, ಚಂದ್ರವಧೆ, ಯೋಗವಿಶಿಷ್ಟ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ತುಲನಾತ್ಮಕ ಅಧ್ಯಯನವುಳ್ಳ ‘ಮಜ್‍ಮಉಲ್ ಬಹ್ರೈನ್' ಎಂಬ ಫಾರ್ಸಿ ಗ್ರಂಥವನ್ನು ಬರೆದದ್ದಲ್ಲದೇ ‘ಸಮುದ್ರ ಸಂಗಮ’ ಎಂಬ ಹೆಸರಲ್ಲಿ ಅದನ್ನು ಸಂಸ್ಕøತಕ್ಕೂ ಅನುವಾದಿಸಿದ್ದ. 1866ರಲ್ಲಿ ಸ್ಥಾಪಿತವಾದ ‘ಭಾರತೀಯ ಬ್ರಹ್ಮ ಸಮಾಜವು' ಹಿಂದೂ, ಬೌದ್ಧ ಮತ್ತು ಇಸ್ಲಾಮ್‍ನಿಂದ ಪಡೆಯಲಾದ ಉದ್ಧರಣೆಗಳಿಂದ ಕೂಡಿದ ಚಿಂತನೆಗಳಾಗಿವೆ ಎಂದು ಹೇಳಲಾಗುತ್ತದೆ. ಸರ್ವಧರ್ಮ ಸಮಭಾವ ಎಂಬ ಕಲ್ಪನೆಯಲ್ಲಿ ರಾಮಕೃಷ್ಣ ಪರಮ ಹಂಸರಿಗೂ ವಿರೋಧ ಇರಲಿಲ್ಲ. ಹೀಗೆ ಒಂದು ಬಗೆಯ ಧಾರ್ಮಿಕ ಸೌಹಾರ್ದತೆ, ಸಮಭಾವದ ಕಲ್ಪನೆಗಳು ಈ ದೇಶದಲ್ಲಿ ಆಗಾಗ ಮೂಡಿ ಬರುತ್ತಲೇ ಇದ್ದುವು. ವಿವಿಧ ನದಿಗಳು ಸಾಗರಕ್ಕೆ ಸೇರುವಂತೆ ವಿವಿಧ ಧರ್ಮಗಳೆಲ್ಲ ಒಂದೇ ದೇವನಲ್ಲಿಗೆ ಸೇರುತ್ತವೆ ಎಂಬ ಮಾತುಗಳೂ ಹುಟ್ಟಿಕೊಂಡವು. ಅಷ್ಟಕ್ಕೂ,
   ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮ ಮತ್ತು ಏಕದೇವಾರಾಧನೆಯನ್ನು ಮಾತ್ರ ಪ್ರತಿಪಾದಿಸುವ ಹಾಗೂ ಮೂರ್ತಿ ಪೂಜೆ ಮತ್ತು ಬಹುದೇವಾರಾಧನೆಯನ್ನು ಪ್ರಬಲವಾಗಿ ನಿರಾಕರಿಸುವ ಇಸ್ಲಾಮ್ ಧರ್ಮದ ನಡುವೆ ಭಾವೈಕ್ಯತೆ ಹೇಗೆಲ್ಲ ಸಾಧ್ಯ? ಯಾವೆಲ್ಲ ವಿಷಯಗಳಲ್ಲಿ ಸಾಧ್ಯ? 33ರಿಂದ 33 ಕೋಟಿಯ ವರೆಗೆ ದೇವತೆಗಳಲ್ಲಿ ನಂಬಿಕೆಯಿಡುವ ಹಿಂದೂ ಧರ್ಮಕ್ಕೂ ಪ್ರವಾದಿ ಮುಹಮ್ಮದ್‍ರನ್ನು(ಸ) ಅಂತಿಮ ಪ್ರವಾದಿ ಮತ್ತು ಪವಿತ್ರ ಕುರ್‍ಆನನ್ನು ಅಂತಿಮ ದೇವಗ್ರಂಥ ಎನ್ನುವ ಇಸ್ಲಾಮ್‍ಗೂ ನಡುವೆ ಖಂಡಿತ ಅನೇಕಾರು ವಿಷಯಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಹೀಗಿರುವಾಗ, ಮೂರ್ತಿ ಪೂಜೆಯನ್ನು ಪ್ರಬಲವಾಗಿ ನಿರಾಕರಿಸುವ ಧರ್ಮದ ವ್ಯಕ್ತಿಯೊಬ್ಬ ಗಣಪತಿಯನ್ನು ಪೂಜಿಸುವುದು ಮತ್ತು ಅದನ್ನು ಭಾವೈಕ್ಯತೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸುವುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಧರ್ಮದ ಮೂಲಭೂತ ವಿಶ್ವಾಸಕ್ಕೇ ವಿರುದ್ಧವಾದ ಕೃತ್ಯವೊಂದು ಭಾವೈಕ್ಯತೆಯ ಹೆಸರಲ್ಲಿ ಶ್ಲಾಘನೆಗೆ ಒಳಗಾಗುವುದು ಎಷ್ಟು ಸರಿ? ಇಸ್ಲಾಮ್‍ನಲ್ಲಿ ಮದ್ಯಪಾನವನ್ನು ಬಲವಾಗಿ ನಿಷೇಧಿಸಲಾಗಿದೆ. ಸಾಷ್ಟಾಂಗವು ನಿರಾಕಾರನಾದ ದೇವನಿಗೆ ಹೊರತು ಇನ್ನಾವ ಮನುಷ್ಯರಿಗೋ ವಿಗ್ರಹಗಳಿಗೋ ಆಗಬಾರದೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಅಸಂಖ್ಯ ದೇವ-ದೇವತೆಗಳ ಜೊತೆಗೇ ಜಡ ಮತ್ತು ಚೇತನ ವಸ್ತುಗಳೂ ಶ್ರದ್ಧಾಕೇಂದ್ರಗಳಾಗಿವೆ. ಸೂರ್ಯ, ಚಂದ್ರ, ನಕ್ಷತ್ರ, ಸಮುದ್ರ, ನದಿ, ಪರ್ವತ, ಮರ, ಗೋವು ಎಲ್ಲವೂ ಪೂಜನೀಯ. ಹಾಗಂತ, ಇವುಗಳನ್ನು ಪೂಜಿಸುವವರನ್ನು ನಿರಾಕಾರ ದೇವನನ್ನು (ಅಲ್ಲಾಹ್) ಪೂಜಿಸುವಂತೆ ಇಸ್ಲಾಮ್ ಬಲವಂತ ಪಡಿಸುವುದಿಲ್ಲ (ಪವಿತ್ರ ಕುರ್‍ಆನ್: 2: 256). ಅಲ್ಲದೇ, ಅದು ವಿಗ್ರಹಗಳ ನಿಂದನೆಯನ್ನು ಧರ್ಮನಿಷಿದ್ಧ ಎನ್ನುತ್ತದೆ (ಪವಿತ್ರ ಕುರ್‍ಆನ್: 6: 108). ಹಾಗೆಯೇ, ಶವವನ್ನು ದಫನ ಮಾಡಬೇಕೆಂದೇ ಇಸ್ಲಾಮ್ ಆದೇಶಿಸುತ್ತದೆ. ಹಿಂದೂಗಳಲ್ಲಿರುವ ಸಪ್ತಪದಿಗಿಂತ ಭಿನ್ನವಾಗಿ ಇಸ್ಲಾಮ್‍ನಲ್ಲಿ ನಿಕಾಹ್ ಕ್ರಮ ಇದೆ. ಜೈನರ ದಿಗಂಬರ ಪದ್ಧತಿ ಇಸ್ಲಾಮ್‍ನಲ್ಲಿಲ್ಲ. ಸನ್ಯಾಸತ್ವವೂ ಇಲ್ಲ. ಹಾಗಂತ, ಭಾವೈಕ್ಯತೆಗಾಗಿ ಓರ್ವ ಮುಸ್ಲಿಮ್ ಈ ನಿಯಮಗಳನ್ನೆಲ್ಲಾ ಮುರಿಯಬಹುದೇ? ಹಾಗೆ ಮುರಿಯುವುದು ಭಾವೈಕ್ಯತೆಯೆಂದಾದರೆ, ಭಾವೈಕ್ಯತೆಯ ಅರ್ಥವೇನು, ಧರ್ಮಗಳ ಮೂಲಭೂತ ಬೇಡಿಕೆಗಳನ್ನು ಮುರಿಯುವುದೇ? ಹೀಗೆ ಮುರಿಯುವುದರಿಂದ ಒಂದು ಧರ್ಮದ ಅನುಯಾಯಿಗಳಿಗೆ ಆಗಬಹುದಾದ ನೋವುಗಳು ಎಷ್ಟರ ಮಟ್ಟಿಗೆ ಪರಿಗಣನೆಗೆ ಒಳಗಾಗಿವೆ? ಭಾವೈಕ್ಯತೆ ಎಂಬುದು ವಿವಿಧ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮದ ಮೂಲಭೂತ ವಿಶ್ವಾಸ ಮತ್ತು ಬೇಡಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರ ಹೆಸರೇ ಆಗಿದ್ದರೆ ಮತ್ತು ಅದು ಶ್ಲಾಘನಾರ್ಹ ಕ್ರಮ ಎಂದಾದರೆ ಫಲಿತಾಂಶ ಏನಾದೀತು? ಸಾಮಾಜಿಕವಾಗಿ ಇಂಥ ಭಾವೈಕ್ಯತೆಗಳು ಭಾರೀ ಪ್ರಮಾಣದಲ್ಲಿ ನಡೆದರೆ ಮಸೀದಿ, ಮಂದಿರ, ಚರ್ಚ್, ಬಸದಿ, ಗುರುದ್ವಾರಗಳು ಹೇಗೆ ಕಾಣಿಸಿಕೊಂಡಾವು? ಅವು ಸೃಷ್ಟಿಸಬಹುದಾದ ಸಮಸ್ಯೆಗಳು ಮತ್ತು ಪರಿಣಾಮಗಳೇನು? ಧರ್ಮದ ನಿಯಮಗಳನ್ನು ಮುರಿಯುವುದೇ ಭಾವೈಕ್ಯತೆ ಎಂಬುದು ಕೊನೆಗೆ ಏನನ್ನು ಮತ್ತು ಯಾವುದನ್ನೆಲ್ಲಾ ಮುರಿಯುವುದಕ್ಕೆ ಪ್ರೇರೇಪಿಸಬಹುದು?
 
     ನಿಜವಾಗಿ, ಭಾವೈಕ್ಯತೆಯು ಒಂದು ಧರ್ಮದ ನಿಯಮಗಳನ್ನು ಮುರಿದುಕೊಂಡು ನಡೆಸುವ ಆಚರಣೆಯ ಹೆಸರಲ್ಲ. ಅದು ಧರ್ಮಗಳನ್ನು ಮತ್ತು ಅದರ ಅನುಯಾಯಿಗಳನ್ನು ಪರಸ್ಪರ ಜೋಡಿಸುವುದರ ಹೆಸರು. ಆದ್ದರಿಂದ, ಒಂದು ಧರ್ಮದ ಆಚರಣೆಗಳನ್ನು ಗೌರವಿಸುವುದಕ್ಕೆ ಇನ್ನೊಂದು ಧರ್ಮದ ನಿಯಮಗಳನ್ನು ಮುರಿಯಬೇಕೆಂದಿಲ್ಲ. ಗಣೇಶ ಚತುರ್ಥಿಯ ದಿನದಂದು ಹಿಂದೂ ಬಾಂಧವರಿಗೆ ಶುಭಾಶಯ ಕೋರುವುದು, ಅವರ ಆಹ್ವಾನವನ್ನು ಸ್ವೀಕರಿಸಿ ಮನೆಗೆ ಭೇಟಿ ಕೊಡುವುದು, ಅವರ ಧಾರ್ಮಿಕ ಮೆರವಣಿಗೆ ಮತ್ತಿತರ ಸಂದರ್ಭಗಳು ಸುಗಮವಾಗಿ ನಡೆಯುವಂಥ ವಾತಾವರಣ ನಿರ್ಮಿಸುವುದು, ಅವರಿಗೆ ನೆರವಾಗುವುದು.. ಇತ್ಯಾದಿಗಳು ನಿಜ ಭಾವೈಕ್ಯತೆಯ ರೂಪಗಳಾಗಿವೆ. ವಿವಿಧ ಧರ್ಮದವರು ತಂತಮ್ಮ ಹಬ್ಬಗಳ ಸಂದರ್ಭದಲ್ಲಿ ಪರಸ್ಪರರ ಮನೆಗಳಿಗೆ ಭೇಟಿ ಕೊಡುವುದು ಮತ್ತು ಸಿಹಿ ತಿಂಡಿ, ಹಬ್ಬದೂಟಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಬದಲಾವಣೆಗೆ ಕಾರಣವಾಗಬಹುದು. ಇವು ಮನಸ್ಸುಗಳನ್ನು ಪರಸ್ಪರ ಹತ್ತಿರಗೊಳಿಸುತ್ತದೆ. ಅಲ್ಲಿ ಭಾವನಾತ್ಮಕ ಭದ್ರತೆಯೊಂದು ಏರ್ಪಡುತ್ತದೆ. ಮುರಿಯುವಿಕೆಯಲ್ಲಿ ಇಲ್ಲದ ತೃಪ್ತ ಮತ್ತು ನಿರಾಳ ಭಾವವೊಂದು ನಿರ್ಮಾಣವಾಗುತ್ತದೆ. ಅಂದಹಾಗೆ, ಗಣೇಶ ಚತುರ್ಥಿ ಎಂದಲ್ಲ, ವಿವಿಧ ಧರ್ಮಗಳಿರುವ ಈ ದೇಶದಲ್ಲಿ ಹಬ್ಬಗಳು ಮತ್ತು ವಿಶೇಷ ದಿನಗಳು ವಾರಕ್ಕೊಂದರಂತೆ ಬರುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಆಯಾ ಧರ್ಮೀಯರು ತಮ್ಮೊಳಗೇ ಖುಷಿಯನ್ನು ಹಂಚಿಕೊಳ್ಳುವುದಕ್ಕಿಂತ ಎಲ್ಲ ಧರ್ಮೀಯರೂ ತಂತಮ್ಮ ಮಿತಿಯೊಳಗೆ ಒಟ್ಟಾಗಿ ಖುಷಿಯನ್ನು ಹಂಚಿಕೊಂಡು ಅನುಭವಿಸುವುದರಿಂದ ಸಹಜ ಭಾವೈಕ್ಯತೆ ನಿರ್ಮಾಣವಾಗಬಹುದು. ಹಾಗಾದಾಗ, ಮೂರ್ತಿಯನ್ನು ಆರಾಧಿಸುವವ ಮತ್ತು ಆರಾಧಿಸದವ, ಯೇಸುವನ್ನು ದೇವಪುತ್ರ ಅನ್ನುವವಳು ಮತ್ತು ಪ್ರವಾದಿ ಅನ್ನುವವಳ ನಡುವೆ ಸಂಬಂಧ ಬೆಳೆಯುತ್ತದೆ. ಅಂಥ ಸಂಬಂಧಗಳು ಉಂಟು ಮಾಡುವ ಭಾವೈಕ್ಯತೆಯು ಧಾರ್ಮಿಕ ನಿಯಮಗಳನ್ನು ಮುರಿದು ಮಾಡುವ ಭಾವ ಐಕ್ಯತೆಗಳಂಥಲ್ಲ. ಮುರಿಯುವುದು ಮತ್ತು ಜೋಡಿಸುವುದು ಒಂದೇ ಅಲ್ಲ. ಆದರೂ, ಮುರಿಯುವುದೇ ಭಾವೈಕ್ಯತೆ ಮತ್ತು ಜೋಡಿಸುವುದೇ ‘ಮತಾಂತರ' ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವುದಕ್ಕೆ ಏನೆನ್ನಬೇಕು? ತಂತಮ್ಮ ಧರ್ಮದಲ್ಲಿದ್ದುಕೊಂಡೇ ಇನ್ನೊಂದು ಧರ್ಮವನ್ನು ಗೌರವಿಸುವ ಮತ್ತು ಅದರ ಆಚರಣೆಗಳಿಗೆ ಸಹಕರಿಸುವ ಕ್ರಮಗಳು ಯಾಕೆ ಸಾಮಾಜಿಕ ಅಗತ್ಯಗಳಾಗಿ ಪ್ರಚಾರಗೊಳ್ಳುತ್ತಿಲ್ಲ? ಭಾವೈಕ್ಯತೆಯ ನಿಜವಾದ ರೂಪಕ್ಕಿಂತ ಕುರೂಪವೇ ಯಾಕೆ ಮಾದರಿ ಅನ್ನಿಸಿಕೊಳ್ಳುತ್ತಿವೆ? ಈ ಮಾದರಿ ಎಷ್ಟು ಸ್ವಾಗತಾರ್ಹ? ಎಷ್ಟು ಸಮಾಜಮುಖಿ?  
   ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕರುಂದವಾಡದ ಐದು ಮಸೀದಿಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಮತ್ತು ಮಂಗಳೂರಿನ ಕೈಕಂಬದಲ್ಲಿ ಮೌಲಾನ ಎಂಬ ಬಿ.ಕಾಂ. ವಿದ್ಯಾರ್ಥಿ ಗಣೇಶ ವಿಗ್ರಹವನ್ನು ರಚಿಸಿ ಪೂಜಿಸಿದ ಚಿತ್ರಸಹಿತ ಸುದ್ದಿಗಳನ್ನು ‘ಭಾವೈಕ್ಯತೆ' ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಮಾಧ್ಯಮಗಳು ಪ್ರಕಟಿಸಿದುದನ್ನು ಓದುತ್ತಾ ಹೀಗೆಲ್ಲಾ ಆಲೋಚಿಸಬೇಕಾಯಿತು.