Saturday, October 21, 2017

ದಡ್ಡುಗಟ್ಟಿದ ಮನಸ್ಸಿನ ಸಂಕೇತವೇ ಆ ಫಾರ್ವರ್ಡ್?

      ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪೈಪೋಟಿಯಿಂದ ಹಂಚಿಕೆಯಾದ ವೀಡಿಯೋವೊಂದನ್ನು ವೀಕ್ಷಿಸಿದೆ. ಪಶ್ಚಿಮ ಬಂಗಾಲದ ಬಿಜೆಪಿ ನಾಯಕ ದಿಲೀಪ್ ಘೋಷ್‍ರನ್ನು ಹಿಗ್ಗಾ-ಮುಗ್ಗಾ ಥಳಿಸುವ ವೀಡಿಯೋ ಅದು. ಗುಂಪೊಂದು ಈ ನಾಯಕನನ್ನು ಅಟ್ಟಾ ಡಿಸಿಕೊಂಡು ಹೊಡೆಯುತ್ತದೆ. ಒದೆಯುತ್ತದೆ. ಥಳಿಸುತ್ತದೆ. ಮುಷ್ಠಿಯಿಂದ ಗುದ್ದುತ್ತದೆ. ಗುಂಪಿನ ನಡುವೆ ಅಸಹಾಯಕನಾದ ದಿಲೀಪ್ ಘೋಷ್‍ರು ಕುಸಿದು ಬೀಳುತ್ತಾರೆ. ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಾರೆ. ಇಲಿಯೊಂದು ಬೆಕ್ಕಿನ ಕೈಗೆ ಸಿಕ್ಕರೆ ಹೇಗೆ ಚಡಪಡಿಸಬಹುದೋ ಅಂಥದ್ದೊಂದು ಸನ್ನಿವೇಶ ಅಲ್ಲಿ ನಿರ್ಮಾಣವಾಗುತ್ತದೆ. ಸಿನಿಮಾ ಶೈಲಿಯಲ್ಲಿ ಓಡಿ ಬಂದು ಜಂಪ್ ಮಾಡಿ ಒದೆಯುವ ಘಟನೆಯೂ ನಡೆಯುತ್ತದೆ. ಒಂದು ವೇಳೆ, ಈ ವೀಡಿಯೋವನ್ನು ದಿಲೀಪ್ ಘೋಷ್‍ರ ಮಕ್ಕಳು, ಪತ್ನಿ, ತಾಯಿ, ತಂದೆ ನೋಡಿದರೆ ಏನನಿಸಬಹುದು? ಅವರ ಪ್ರತಿಕ್ರಿಯೆ ಹೇಗಿರಬಹುದು? ಅಪ್ಪ ನಡುಬೀದಿಯಲ್ಲಿ ಯಾರದೋ ಕೈಯಲ್ಲಿ ಥಳಿಸಿಕೊಳ್ಳುವುದನ್ನು ಮಕ್ಕಳಿಂದ ಸಹಿಸಿಕೊಳ್ಳಲು ಸಾಧ್ಯವೇ? ಒಂದು ಕುಟುಂಬದ ಸದಸ್ಯ ಅವಮಾನಿತ ಆಗುವುದೆಂದರೆ, ಅದು ಆತನೊಬ್ಬನ ಅವಮಾನವಷ್ಟೇ ಆಗುವು ದಲ್ಲ. ಆತನೊಂದಿಗೆ ಸಂಬಂಧ ಇರುವ ಎಲ್ಲರ ಅವಮಾನ ವಾಗಿಯೂ ಪರಿವರ್ತಿತವಾಗುತ್ತದೆ. ಅಪ್ಪ ಸದಾ ಮಕ್ಕಳ ಪಾಲಿಗೆ ಗೌರವಾನ್ವಿತ ವ್ಯಕ್ತಿತ್ವ. ಆ ವ್ಯಕ್ತಿತ್ವವನ್ನು ಹಾಗೆ ನೋಡು ವುದೇ ಮಕ್ಕಳ ಪಾಲಿನ ಹೆಮ್ಮೆ. ತುಂಬಿದ ಸಭೆಯಲ್ಲಿ ಮಕ್ಕಳು ಹೊಗಳಿಕೆಗೋ ಬಹುಮಾನಕ್ಕೋ ಅರ್ಹವಾಗುವುದು ಅಪ್ಪನ ಪಾಲಿಗೆ ಹೇಗೆ ಹೆಮ್ಮೆಯ ಸಂಗತಿಯೋ ಅಪ್ಪ ಹಾಗೆ ಗುರು ತಿಸಿಕೊಳ್ಳುವುದು ಮಕ್ಕಳ ಪಾಲಿಗೂ ಹೆಮ್ಮೆ. ಆದ್ದರಿಂದಲೋ ಏನೋ ಇಬ್ಬರ ನಡುವೆ ಜಗಳ ನಡೆಯುವ ಸಂದರ್ಭದಲ್ಲಿ ವಿನಿಮಯವಾಗುವ ಕೆಟ್ಟ ಬೈಗುಳಗಳು ಹೆತ್ತವರನ್ನೇ ಕೇಂದ್ರೀಕರಿಸಿರುತ್ತವೆ. ‘ನನ್ನನ್ನು ಏನು ಬೇಕಾದರೂ ಅನ್ನು, ಆದರೆ ಹೆತ್ತವ ರನ್ನು ಏನಾದರೂ ಅಂದರೆ ಸುಮ್ಮನಿರಲ್ಲ’ ಎಂಬ ಮಾತು ಸಾಮಾನ್ಯವಾಗಿ ಸಿನಿಮಾಗಳಲ್ಲೂ ಅದರ ಹೊರಗೂ ಕೇಳಿ ಬರುವುದಿದೆ. ಇಂಥದ್ದೊಂದು ಗೌರವಾನ್ವಿತ ವ್ಯಕ್ತಿತ್ವ ನಡುಬೀದಿಯಲ್ಲಿ ಅವಮಾನಕ್ಕೊಳಗಾಗುವುದನ್ನು ಯಾವ ಮಗು ತಾನೇ ಸಹಿಸಿಕೊಂಡೀತು? ಈ ಪ್ರಶ್ನೆ ಕೇವಲ ದಿಲೀಪ್ ಘೋಷ್‍ರಿಗೆ ಸಂಬಂಧಿಸಿ ಮಾತ್ರ ಕೇಳಬೇಕಾದುದಲ್ಲ. ಹೀಗೆ ಎಲ್ಲರೆದುರೇ ಅವಮಾನಿತರಾದ ಮತ್ತು ಅವಮಾನಿತರಾಗುತ್ತಲೇ ಸಾವಿಗೀಡಾದ ಹಲವರ ಪಟ್ಟಿ ನಮ್ಮೆಲ್ಲರ ಮುಂದಿದೆ. ಹೈನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಹರ್ಯಾಣದ ಪೆಹ್ಲೂಖಾನ್ ಎಂಬ 50ರ ಆಸುಪಾಸಿನ ವ್ಯಕ್ತಿ ಗುಂಪಿನಿಂದ ಥಳಿತಕ್ಕೊಳಗಾಗಿ ಅಸಹಾಯಕರಾಗಿ ಬೀದಿಯಲ್ಲಿ ಬೀಳುವ ವೀಡಿಯೋವನ್ನು ಬಹುತೇಕರು ವೀಕ್ಷಿಸಿರಬಹುದು. ಅಖ್ಲಾಕ್ ಎಂಬ ವೃದ್ಧನನ್ನು ಉತ್ತರ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಕೊಲ್ಲುವ ವೀಡಿಯೋವೂ ಬಹುತೇಕ ವೈರಲ್ ಆಗಿತ್ತು. ಇಂಥದ್ದು ಅನೇಕ ಇವೆ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ನಡೆದ ಹಲವು ಥಳಿತದ ವೀಡಿಯೋಗಳು ಅನೇಕರ ಮೊಬೈಲ್ ಗ್ಯಾಲರಿಯಲ್ಲಿ ಈಗಲೂ ಇದ್ದಿರಬಹುದು. ಗೂಗಲ್‍ನಿಂದ ಹೆಕ್ಕಿ ಈಗಲೂ ಇಂಥವುಗಳನ್ನು ರವಾನಿಸುವವರೂ ಇದ್ದಾರೆ. ದಿಲೀಪ್ ಘೋಷ್‍ರನ್ನು ಥಳಿಸುವ ವೀಡಿಯೋವು ನಾನಿರುವ ಅನೇಕಾರು ವಾಟ್ಸಾಪ್ ಗ್ರೂಪ್‍ಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಪವಾಗುತ್ತಿರುವುದನ್ನು ನೋಡಿ ನೋಡಿ ನಾನು ಒಂದು ರೀತಿಯಲ್ಲಿ ಕಂಗಾಲಾದೆ. ನನ್ನನ್ನು ಮತ್ತೆ ಮತ್ತೆ ಪ್ರಶ್ನೆಗಳು ಕಾಡಿದುವು. ಓರ್ವ ಗೌರವಾನ್ವಿತ ವ್ಯಕ್ತಿ ನಡು ಬೀದಿಯಲ್ಲಿ ಥಳಿತಕ್ಕೊಳಗಾಗುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ಮನೋರಂಜನೆ, ಅಪರಾಧ, ಹಂಚಿಕೊಳ್ಳಬಾರದ, ವೀಕ್ಷಿಸಬಾರದ.. ಇವುಗಳಲ್ಲಿ ಯಾವ ಕೆಟಗರಿ? ಇದು ಎಲ್ಲರೂ ವೀಕ್ಷಿಸಬೇಕಾದ ಮತ್ತು ಒಬ್ಬರಿಂದೊಬ್ಬರಿಗೆ ಹಂಚಿಕೆ ಮಾಡಬೇಕಾದ ವೀಡಿಯೋ ಹೌದೇ? ಇದನ್ನು ವೀಕ್ಷಿಸಿದ ಬಳಿಕ ವೀಕ್ಪಕನ ಮನಸ್ಸಿನಲ್ಲಿ ಉದ್ಭವವಾಗುವ ಭಾವ ಯಾವುದು? ತೃಪ್ತಿಯೇ, ಅತೃಪ್ತಿಯೇ, ಖುಷಿಯೇ, ಸಿಟ್ಟೇ, ನೋವೇ? ಹಾಗಂತ, ದಿಲೀಪ್ ಘೋಷ್‍ರು ನಾಗರಿಕ ಜಗತ್ತಿನಲ್ಲಿ ಬದುಕದ ಮತ್ತು ಕಾಡಿನಲ್ಲೋ ಇನ್ನೆಲ್ಲೋ  ಭೂಗತರಾಗಿ ಬದುಕುವ ವೀರಪ್ಪನ್ನೋ ದಾವೂದ್ ಇಬ್ರಾಹೀಮೋ ಏನೂ ಅಲ್ಲ. ಅವರ ವಿಚಾರಧಾರೆ, ಚಟುವಟಿಕೆ, ರಾಜಕೀಯ ಕಾರ್ಯ ವಿಧಾನಗಳ ಮೇಲೆ ಅನೇಕರಿಗೆ ಅಸಮಾಧಾನ ಇರಬಹುದು. ಇದು ಅಸಹಜ ಅಲ್ಲ. ಪ್ರಜಾ ತಂತ್ರ ರಾಷ್ಟ್ರವೊಂದರಲ್ಲಿ ಪ್ರತಿಯೊಬ್ಬರಿಗೂ ಭಿನ್ನ ವಿಚಾರಧಾರೆ ಯನ್ನು ಹೊಂದುವ, ವ್ಯಕ್ತಪಡಿಸುವ ಮತ್ತು ಅದರಂತೆ ಬದು ಕುವ ಪೂರ್ಣ ಸ್ವಾತಂತ್ರ್ಯ ಇದೆ. ಅದು ಸಂವಿಧಾನ ವಿರೋಧಿಯಾಗಬಾರದು ಎಂಬುದಷ್ಟೇ ಇಲ್ಲಿರುವ ಷರತ್ತು. ದಿಲೀಪ್ ಘೋಷ್‍ರ ವಿಚಾರಧಾರೆಯನ್ನು ಮತ್ತು ಅವರು ಗುರುತಿಸಿಕೊಂಡಿರುವ ಬಿಜೆಪಿಯನ್ನು ಪ್ರಶ್ನಿಸುವುದಕ್ಕೆ ಈ ದೇಶದಲ್ಲಿ ಅನೇಕರು ಸಂವಿಧಾನಬದ್ಧ ದಾರಿಗಳಿವೆ. ವೇದಿಕೆಗಳಿವೆ.
      ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‍ನಲ್ಲಿ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾವು (GJM) ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸೆ. 26ರಂದು ಕೈ ಬಿಟ್ಟಿತ್ತು. ಸತತ 104 ದಿನಗಳ ವರೆಗೆ ಸಾಗಿದ ಈ ಪ್ರತಿಭಟನೆಯಿಂದ ಉಎಒ ಹಿಂದೆ ಸರಿಯಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮನವಿ ಕಾರಣ ವಾಗಿತ್ತು. ಪಶ್ಚಿಮ ಬಂಗಾಲದಲ್ಲಿ ಬೇರು ಬಿಡಲು ವಿವಿಧ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿಯು ಈ ಬೆಳವಣಿಗೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ತೀರ್ಮಾನಿಸಿತು. ದಿಲೀಪ್ ಘೋಷ್ ನೇತೃತ್ವದ ಒಂದು ನಿಯೋಗವು GJM ಗುಂಪಿನೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಅಕ್ಟೋಬರ್ 4ರಂದು ದಾರ್ಜಿಲಿಂಗ್‍ಗೆ ಭೇಟಿ ಕೊಟ್ಟಿತು. ದಾರ್ಜಿಲಿಂಗ್‍ನ ಚೌಕ್ ಬಝಾರ್‍ನಲ್ಲಿ GJM ಬೆಂಬಲಿಗರೊಂದಿಗೆ ಬಿಜೆಪಿ ರಾಲಿ ನಡೆಸಿತು. ಮಾತ್ರವಲ್ಲ, ಗೋರ್ಖಾ ದುಃಖ್ ನಿವಾರಕ್ ಸಭಾಂಗಣದಲ್ಲಿ ‘ವಿಜಯ ಸಮ್ಮಿಲನ ಸಭೆ’ಯನ್ನು ಏರ್ಪಡಿಸಿತು. ಈ ಸಮಯದಲ್ಲಿ GJM ಅನ್ನು ವಿರೋಧಿಸುವ ಗುಂಪೊಂದು ಈ ಸಭೆಗೆ ಅಡ್ಡಿಪಡಿಸಿದೆ. ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾದಷ್ಟು ಪ್ರಬಲವಾಗಿ ವಿರೋಧಿ ಗುಂಪು ಪ್ರತಿಭಟನೆ ನಡೆಸಿದೆ. ಸಭಾಂಗಣದಿಂದ ಹೊರಬಂದ ದಿಲೀಪ್ ಘೋಷ್‍ರನ್ನು ಗುಂಪು ಥಳಿಸಿದೆ. ಹಾಗಂತ, ನಾವು ಈ ಚರ್ಚೆಯನ್ನು ದಿಲೀಪ್ ಘೋಷ್‍ರಿಂದ ಆರಂಭಿಸಿ ಅವರಲ್ಲಿಗೇ ಕೊನೆ ಗೊಳಿಸಬೇಕಾದ ಅಗತ್ಯ ಇಲ್ಲ. ರಾಜಸ್ತಾನದಿಂದ ತನ್ನ ಮನೆಗೆ ಆಕಳುಗಳನ್ನು ಕೊಂಡೊಯ್ಯುತ್ತಿದ್ದ ಹೈನು ಕೃಷಿಕ ಪೆಹ್ಲೂಖಾನ್ ರನ್ನೂ ದಿಲೀಪ್ ಘೋಷ್‍ರ ಸ್ಥಾನದಲ್ಲಿ ಇರಿಸಿ ನೋಡಬಹುದು. ದಿಲೀಪ್ ಘೋಷ್‍ರಿಗೆ ದಾರ್ಜಿಲಿಂಗ್‍ನಲ್ಲಿ ಸಭೆ ನಡೆಸುವ ಮತ್ತು ತನ್ನ ವಿಚಾರವನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಮತ್ತು ಅರ್ಹತೆ ಪೆಹ್ಲೂಖಾನ್‍ಗೂ ಇತ್ತು. ಅವರು ಕಾನೂನುಬದ್ಧವಾಗಿಯೇ ಆಕಳನ್ನು ಸಾಗಿಸುತ್ತಿದ್ದರು. ಥಳಿಸಲು ಬಂದ ಗುಂಪಿಗೆ ಅಧಿಕೃತ ದಾಖಲೆಗಳನ್ನು ತೋರಿಸಿಯೂ ಇದ್ದರು. ನನಗೆ ದಿಲೀಪ್ ಘೋಷ್‍ರ ವೀಡಿಯೋವನ್ನು ನೋಡನೋಡುತ್ತಾ ಪೆಹ್ಲೂಖಾನ್‍ರ ವೀಡಿಯೋ ನೆನಪಿಗೆ ಬಂತು. ಇಬ್ಬರೂ ಅಸಹಾಯಕರು. ಕಾನೂನಿನ ಪ್ರಕಾರ ಯಾವ ಅಪರಾಧವನ್ನು ಮಾಡಿರದೇ ಇದ್ದರೂ ಇಬ್ಬರೂ ನಡುಬೀದಿಯಲ್ಲಿ ಅವಮಾನಕ್ಕೆ ಒಳಗಾದರು. ಇಲ್ಲಿ ಎರಡು ಪ್ರಮುಖ ವಿಷಯಗಳಿವೆ.
1. ಈ ವೀಡಿಯೋವನ್ನು ಇತರರಿಗೆ ಹಂಚುವ ಗುಂಪು
2. ಇದನ್ನು ಅನುಭವಿಸುವ ಗುಂಪು
     ಪೆಹ್ಲೂಖಾನ್‍ರ ಥಳಿತ ಮತ್ತು ಹತ್ಯೆಗೆ ಸಂಬಂಧಿಸಿ ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯದ್ದಿದ್ದುವು. ಒಂದು- ಥಳಿತವನ್ನು ಪರೋಕ್ಷವಾಗಿ ಸಮರ್ಥಿಸುವ ಧಾಟಿಯದ್ದಾದರೆ ಇನ್ನೊಂದು ಖಂಡಿಸುವ ಧಾಟಿಯವು. ಪೆಹ್ಲೂಖಾನ್‍ರನ್ನು ದನಕಳ್ಳ ಎಂದು ಸುಳ್ಳು ಸುಳ್ಳೇ ಕರೆದು, ದೇಶದಲ್ಲಿ ಪ್ರತಿದಿನ ಕಳ್ಳತನವಾಗುತ್ತಿರುವ ಗೋಸಂಕುಲಗಳ ಪಟ್ಟಿ ಮಾಡಿ, ಕಸಾಯಿ ಖಾನೆಗಳ ಸಂಖ್ಯೆಯಲ್ಲಿ ವಿವರಿಸಿ, ಕೊನೆಗೆ ಅತ್ತ ಖಂಡನೆಯನ್ನೂ ವ್ಯಕ್ತಪಡಿಸದೇ ಇತ್ತ ಥಳಿತವನ್ನೂ ಹೊಗಳದೇ ಗೋಹತ್ಯೆ ನಿಷೇ ಧಕ್ಕೆ ಕರೆಕೊಡುವ ರೀತಿಯಲ್ಲಿ ಒಂದು ವರ್ಗದ ಪ್ರತಿಕ್ರಿಯೆ ಬಹುತೇಕ ಮುಕ್ತಾಯಗೊಂಡಿತ್ತು. ಅಂಥ ಪ್ರತಿಕ್ರಿಯೆಗಳನ್ನು ಗಮನವಿಟ್ಟು ಓದಿದರೆ ಪೆಹ್ಲೂಖಾನ್‍ರದ್ದೇ ತಪ್ಪು ಎಂದು ಅಂತಿಮ ನಿರ್ಧಾರಕ್ಕೆ ಯಾರೇ ಆಗಲಿ ಬರುವ ಸಾಧ್ಯತೆಯೇ ಹೆಚ್ಚು. ಅದೇ ವೇಳೆ, ಇದೇ ಮಂದಿ ಇವತ್ತು ದಿಲೀಪ್ ಘೋಷ್‍ರ ಮೇಲಿನ ಹಲ್ಲೆಗೆ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಯನ್ನು ನೋಡಿದರೆ ದಿಗಿಲಾಗುತ್ತದೆ. ಅವರ ಪ್ರತಿಕ್ರಿಯೆಯಲ್ಲಿ ನೇರ ಖಂಡನೆಯಿದೆ. ಆಕ್ರೋಶ ಇದೆ. ಮಮತಾ ಬ್ಯಾನರ್ಜಿಯವರೇ ಇದಕ್ಕೆ ಹೊಣೆ ಎಂಬ ಸಿಟ್ಟು ಇದೆ. ದಿಲೀಪ್ ಘೋಷ್‍ರ ಹಕ್ಕು, ಸ್ವಾತಂತ್ರ್ಯ, ಘನತೆಯನ್ನು ಎತ್ತಿ ಹಿಡಿಯುವ ಮಾತುಗಳಿವೆ. ಅದೇವೇಳೆ, ಪೆಹ್ಲೂಖಾನ್‍ರ ಮೇಲಿನ ಹಲ್ಲೆಯನ್ನು ಕಟು ಭಾಷೆಯಲ್ಲಿ ಖಂಡಿಸಿದ, ಅವರ ಹೈನುಗಾರಿಕಾ ಮೂಲವನ್ನು ಉಲ್ಲೇಖಿಸಿ ಸಮರ್ಥಿಸಿದ ಮತ್ತು ಅವರ ಘನತೆ, ಗೌರವ, ಸ್ವಾತಂತ್ರ್ಯದ ಬಗ್ಗೆ ಬಲವಾಗಿ ವಾದಿಸಿದವರಲ್ಲಿ ಅನೇಕರು ಇವತ್ತು ದಿಲೀಪ್ ಘೋಷ್‍ರ ಮೇಲಾದ ಹಲ್ಲೆಗೆ ಅತ್ಯಂತ ಮೃದುವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪ ಇಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಳಗೊಳಗೇ ಸಂತಸ ಪಡುವ ರೀತಿಯಲ್ಲಿರುವ ಪ್ರತಿಕ್ರಿಯೆಗಳೂ ಇವೆ. ಇದರ ಜೊತೆಗೇ ನನ್ನನ್ನು ಕಾಡಿದ ಇನ್ನೊಂದು ಅಂಶವೆಂದರೆ, ಯಾವ ಭಾವ-ವಿಕಾರವೂ ಇಲ್ಲದೇ ಇಂಥ ವೀಡಿಯೋಗಳನ್ನು ಹಂಚುವವರ ಮನಸ್ಥಿತಿ. ವೀಡಿಯೋದಲ್ಲಿ ವೀಕ್ಷಿಸುತ್ತಿರುವುದು ಕ್ರೌರ್ಯ, ಅವ ಮಾನವನ್ನು. ಇದನ್ನು ಇನ್ನೊಬ್ಬರಿಗೆ ಓರ್ವ ವ್ಯಕ್ತಿ ಯಾವೆಲ್ಲ ಕಾರಣಗಳಿಗಾಗಿ ಫಾರ್ವರ್ಡ್ ಮಾಡಬಹುದು? ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳಬೇಕೆಂದು ಅಥವಾ ಇತರರು ವೀಕ್ಷಿಸ ಬೇಕೆಂದು ಆತ ಯಾವ ಉದ್ದೇಶದಿಂದ ಬಯಸಿರಬಹುದು? ಅದನ್ನು ನೋಡಿ ಆತ ಸಂತಸ ಪಟ್ಟಿರಬಹುದೇ, ದುಃಖಿಸಿರ ಬಹುದೇ, ಕಾನೂನು ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಆತನ ಉದ್ದೇಶವೇ, ವೀಕ್ಷಿಸುವ ಸಂದರ್ಭದಲ್ಲಿ ವೀಡಿಯೋದಲ್ಲಿರುವ ವ್ಯಕ್ತಿಯ ಮಕ್ಕಳು, ಪತ್ನಿ, ಹೆತ್ತವರು, ಸಂಬಂಧಿಕರ ನೆನಪು ಸುಳಿದಿರಬಹುದೇ? ಅಥವಾ
ಹಾಗೆ ಫಾರ್ವರ್ಡ್ ಮಾಡುವುದಕ್ಕೆ ವೀಡಿಯೋದಲ್ಲಿರುವ ವ್ಯಕ್ತಿಯ ಧರ್ಮ, ರಾಜಕೀಯ ವಿಚಾರಧಾರೆ, ವೈಯಕ್ತಿಕ ದ್ವೇಷ, ಸ್ವಾರ್ಥ.. ಇತ್ಯಾದಿ ಇತ್ಯಾದಿಗಳು ಕಾರಣವೇ? ನಿಜವಾಗಿ,
     ಆತ್ಮಹತ್ಯೆ, ಹತ್ಯೆ, ಅಪಘಾತ, ಹಿಂಸಾಚಾರ, ಥಳಿತ.. ಮುಂತಾದುವುಗಳ ವೀಡಿಯೋಗಳನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಾರೆ ಮತ್ತು ಫಾರ್ವರ್ಡ್ ಮಾಡುತ್ತಿದ್ದಾರೆ ಎಂಬುದೇ ಅಪಾಯದ ಸೂಚನೆ. ಯಾವುದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾ ಹೋದಂತೆ ಅದು ಕ್ರಮೇಣ ತಪ್ಪುಗಳ ಪಟ್ಟಿಯಿಂದಲೇ ಹೊರಬಿದ್ದು ಸಹಜವಾಗಿ ಕಾಣಿಸತೊಡಗುತ್ತದೆ. ಹುಲಿಯ ವೇಷ ತೊಟ್ಟು ಪುಟ್ಟ ಮಕ್ಕಳ ಎದುರು ನಿಂತರೆ ಆರಂಭದಲ್ಲಿ ಅವು ಬೆದರುತ್ತವೆ. ಕಿರುಚಲೂ ಬಹುದು. ಆದರೆ ಮತ್ತೆ ಮತ್ತೆ ಇದನ್ನು ಪುನರಾವರ್ತಿಸಿದರೆ ಅವು ಆ ಹುಲಿಯನ್ನು ಸಹಜವಾಗಿ ಸ್ವೀಕರಿಸುತ್ತದೆ. ಬಹುಶಃ ನಮ್ಮ ಸಮಾಜ ಹಿಂಸೆ, ಕ್ರೌರ್ಯ, ಕಾನೂನು ಉಲ್ಲಂಘನೆಗೆ ಹೊಂದಿಕೊಳ್ಳುವ ಹಂತಕ್ಕೆ ತಲುಪುತ್ತಿದೆಯೇನೋ ಎಂದು ಭಯವಾಗುತ್ತಿದೆ. ಕ್ರೌರ್ಯದ ವೀಡಿಯೋವನ್ನು ನಿರ್ಲಿಪ್ತವಾಗಿ ವೀಕ್ಷಿಸುವ ಮತ್ತು ಪೂರ್ವಾಪರ ಯೋಚಿಸದೆಯೇ ಫಾರ್ವರ್ಡ್ ಮಾಡುವ ಸ್ಥಿತಿ ನಿಧಾನಕ್ಕೆ ನಿರ್ಮಾಣವಾಗುತ್ತಿರುವಂತೆ ಅನಿಸುತ್ತಿದೆ. ಇದು ಹಿಂಸೆಗೆ ಹೊಂದಿಕೊಳ್ಳುವುದರ ಸೂಚನೆ. ಹಿಂಸೆಯನ್ನು ವೀಕ್ಷಿಸಿ ವೀಕ್ಷಿಸಿ ಮನಸ್ಸು ದಡ್ಡುಗಟ್ಟುತ್ತಿರುವುದರ ಸಂಕೇತ. ಪೆಹ್ಲೂಖಾನ್ ಮತ್ತು ದಿಲೀಪ್ ಘೋಷ್ ಪ್ರಕರಣವು ನಮ್ಮೊಳಗನ್ನು ಅವಲೋಕಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಸಂದರ್ಭ.

No comments:

Post a Comment