Wednesday, June 29, 2016

‘ಈದ್’ಗಳ ನಡುವೆ ಈದ್..

        ‘ನಾವೇಕೆ ಹಬ್ಬ ಆಚರಿಸಬೇಕು..’ ಎಂಬ ಪ್ರಶ್ನೆಯನ್ನು ಈ ಹಿಂದೆ ‘ಯಾಹೂ’ವಿನಲ್ಲಿ ಕೇಳಲಾಗಿತ್ತು. ಸುಮಾರು 420 ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಏನೆಂದರೆ,  ಹೆಚ್ಚಿನೆಲ್ಲ ಅಭಿಪ್ರಾಯಗಳ ಆಶಯದಲ್ಲಿ ವಿಪರೀತ ಅನ್ನಬಹುದಾದ ವ್ಯತ್ಯಾಸ ಇರಲಿಲ್ಲ.
  1. ನಮ್ಮಿಂದ ದೂರ ಇರುವ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಹಬ್ಬಗಳು ಅವಕಾಶ ಮಾಡಿಕೊಡುತ್ತವೆ.
  2. ವೈರಿಗಳಿಗೂ ಕೂಡ ವಿಶ್ ಮಾಡುವ ಸಂದರ್ಭವನ್ನು ಹಬ್ಬಗಳು ಒದಗಿಸಿಕೊಡುತ್ತವೆ.
  3. ಸಾಕಷ್ಟು ಪ್ರೇಮ (Love) ಪ್ರಕರಣಗಳು  ಚಿಗುರೊಡೆಯುವುದೇ ಹಬ್ಬಗಳಿಂದ.
  4. ನಾವು ಹಬ್ಬಗಳಿಗಾಗಿ ಎಷ್ಟು ಹಣ ವ್ಯಯ ಮಾಡುತ್ತೇವೋ ಅದಕ್ಕಿಂತಲೂ ಅಧಿಕ ಸಂತಸವನ್ನು ಹಬ್ಬಗಳಿಂದ ಪಡೆಯುತ್ತೇವೆ..
  ಎಂಬುದೇ ಒಟ್ಟು ಉತ್ತರಗಳ ಸಾರಾಂಶವಾಗಿತ್ತು. ಆದರೆ, ಇದೇ ವೇಳೆ ‘ನಾವೇಕೆ ಹಬ್ಬ ಆಚರಿಸಬಾರದು..’ ಎಂಬುದಕ್ಕೂ ಅನೇಕರು ಕಾರಣಗಳನ್ನು ಕೊಟ್ಟಿದ್ದರು. ಸಂಗೀತಗಳ ಅಬ್ಬರದಿಂದ ಕಿವಿ ತೂತಾಗುತ್ತೆ, ಯಥೇಚ್ಛ ಮದ್ಯಪಾನದಿಂದಾಗಿ ಘರ್ಷಣೆಗಳಾಗುತ್ತೆ, ನೀರು ಮಲಿನವಾಗುತ್ತೆ; ತಿಂಡಿ-ತಿನಿಸುಗಳ ಪೊಟ್ಟಣಗಳಿಂದ ರಸ್ತೆ, ಪರಿಸರ ಗಲೀಜಾಗುತ್ತೆ, ಮೆರವಣಿಗೆ ಮುಂತಾದುವುಗಳಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತೆ..’ ಎಂದೆಲ್ಲ ಅವರು ದೂರಿಕೊಂಡಿದ್ದರು.
  ನಿಜವಾಗಿ, ಈ ಮೇಲಿನ ಎರಡೂ ಅಭಿಪ್ರಾಯಗಳು ವಾಸ್ತವಕ್ಕೆ ಅತೀ ಹತ್ತಿರವಾದವು. ಕ್ರೈಸ್ತ, ಇಸ್ಲಾಮ್, ಹಿಂದೂ, ಬೌದ್ಧ, ಸಿಕ್ಖ್, ಜೈನ್, ಯಹೂದಿ.. ಮುಂತಾದ ಎಲ್ಲ ಧರ್ಮ ಗಳಲ್ಲೂ ಹಬ್ಬಗಳಿಗೆಂದೇ ನಿಗದಿತ ದಿನಗಳಿವೆ. ಒಂದಕ್ಕಿಂತ ಹೆಚ್ಚು ದಿನಗಳ ವರೆಗೆ ಚಾಚಿಕೊಂಡ ಹಬ್ಬಗಳೂ ಇವೆ. ಹೋಲಿಕಾ ಎಂಬ ಪಿಶಾಚಿಯಿಂದ ಪ್ರಹ್ಲಾದನು ಪವಾಡ ಸದೃಶವಾಗಿ ಪಾರಾದ ಘಟನೆಯನ್ನು ಸ್ಮರಿಸುವ ‘ಹೋಲಿ’ ಹಬ್ಬವನ್ನು 16 ದಿನಗಳ ವರೆಗೆ ಆಚರಿಸಲಾಗುತ್ತದೆ. ಈ ಘಟನೆಯಲ್ಲಿ ಪ್ರಹ್ಲಾದನ ಬದಲು ಪಿಶಾಚಿಯೇ ಸುಟ್ಟು ಹೋಗುತ್ತದೆ. ಭಗವಾನ್ ವಿಷ್ಣುವಿನ ಭಕ್ತನಾದ ಪ್ರಹ್ಲಾದನನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ಹಾಕಬೇಕೆಂಬ ಉದ್ದೇಶದಿಂದ ಕರೆತಂದ ಹೋಲಿಕಾ ಕೊನೆಗೆ ತಾನೇ ಸುಟ್ಟು ಹೋಗುತ್ತದೆ. ಇನ್ನು, ಶ್ರೀಲಂಕಾದಲ್ಲಿ ಎಸ್ನಾಲ ಪೆರಹೆಲಾ ಎಂಬ ಕಲರ್‍ಫುಲ್ ಹಬ್ಬ ಇದೆ. ಲಂಕಾದ ಅತಿದೊಡ್ಡ ಹಬ್ಬವಾಗಿ ಇದು ಗುರುತಿಸಿಕೊಂಡಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪವಿತ್ರ ಹಲ್ಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ‘ದಲದ ಮಲಗವ’ ಎಂಬ ದೇವಾಲಯದಲ್ಲಿ ಈ ಹಲ್ಲನ್ನು ಸಂರಕ್ಷಿಸಿಡಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಈ ಹಲ್ಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯ ಇದೆ. ಬೌದ್ಧರೇ ಹೆಚ್ಚಿರುವ ಬರ್ಮಾದಲ್ಲಿ ಪಾವುಂಗ್ ಡಾಡೊ ಪಗೋಡ ಎಂಬ ಪ್ರಸಿದ್ಧ ಹಬ್ಬ ಇದೆ. ಬರ್ಮಾದ ಮಟ್ಟಿಗೆ ಇದು ಅತಿ ದೊಡ್ಡ ಹಬ್ಬ. ಈ ಹಬ್ಬದ ಆಯುಷ್ಯ 20 ದಿನಗಳು. ಇದರ ವಿಶೇಷತೆ ಏನೆಂದರೆ, ಚಂದ್ರನನ್ನು ಆಧರಿಸಿದ ಹಬ್ಬ ಇದು. ಚಂದ್ರನ ಉದಯದೊಂದಿಗೆ ಈ ಹಬ್ಬ ಆರಂಭಗೊಳ್ಳುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಖುಷಿಪಡಲಾಗುತ್ತದೆ. ಥಾಯ್ಲೆಂಡ್‍ನಲ್ಲಿ ಸೊಂಕ್ರಣ್ ಎಂಬ ಹೆಸರಿನ ಹಬ್ಬ ಇದೆ. ಇದನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಮೂರೂ ದಿನ ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಈ ಹಬ್ಬ ಥಾಯ್ಲೆಂಡ್‍ನ ಹೊಸ ವರ್ಷದ ಆರಂಭವಾಗಿಯೂ ಗುರುತಿಸಿಕೊಂಡಿದೆ. ಅತಿ ಬಿಸಿಲಿನ ಸಮಯದಲ್ಲಿ ಆಚರಿಸಲ್ಪಡುವ ಈ ಹಬ್ಬದಲ್ಲಿ ಪರಸ್ಪರ ನೀರನ್ನು ಚೆಲ್ಲುವ ಸಂಪ್ರದಾಯವಿದೆ. ರಸ್ತೆ ಮತ್ತಿತರ ಕಡೆ ನಡೆದಾಡುವವರ ಮೇಲೆ ನೀರು ಚೆಲ್ಲಿ ಖುಷಿ ಪಡಲಾಗುತ್ತದೆ. ಕಾಂಬೋಡಿಯಾ, ಲಾವೋಸ್ ಮತ್ತು ಬರ್ಮಾಗಳಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
  ಅಷ್ಟಕ್ಕೂ, ಹಬ್ಬಗಳ ಮುಖ್ಯ ಉದ್ದೇಶ ಏನು, ಸಂತಸ ಪಡುವುದೇ? ಇವತ್ತಿನ ದಿನಗಳಲ್ಲಿ ಸಂತಸಪಡುವುದಕ್ಕೆ ಪ್ರತ್ಯೇಕ ದಿನಗಳ ಅಗತ್ಯವಿದೆಯೇ? ಟಿ.ವಿ. ರೇಡಿಯೋ, ಮೊಬೈಲ್, ಕಂಪ್ಯೂಟರ್, ಸಿನಿಮಾ.. ಮುಂತಾದುವುಗಳಿಲ್ಲದ ಒಂದಾನೊಂದು ಕಾಲ ಇವತ್ತಿನದ್ದಲ್ಲ. ಇವತ್ತು ಎಲ್ಲವನ್ನೂ ತಂತ್ರಜ್ಙಾನ ಅಗ್ಗವಾಗಿಸಿದೆ. ಸಂತಸ ಬೆರಳ ತುದಿಯಲ್ಲಿದೆ. ನಿಮಗೆ ಇಷ್ಟವಾದ ಹಾಡನ್ನು ಯಾವಾಗ ಬೇಕಾದರೂ ಆಲಿಸಬಹುದು. ಎಷ್ಟು ಬೇಕಾದರೂ ಆಲಿಸಬಹುದು. ಅದಕ್ಕಾಗಿಯೇ ಪ್ರತ್ಯೇಕ ಸಭೆಗಳನ್ನೋ ದಿನಗಳನ್ನೋ ಸಂದರ್ಭಗಳನ್ನೋ ಹುಟ್ಟು ಹಾಕಬೇಕಿಲ್ಲ. ಮಾತಾಡಬೇಕೆಂದು ಅನಿಸಿದಾಗಲೆಲ್ಲ ಮಾತಾಡಬಹುದಾದ ವ್ಯವಸ್ಥೆ ಈಗಿನದು. ವಾಟ್ಸ್ಯಾಪ್, ಫೇಸ್‍ಬುಕ್, ಟ್ವೀಟರ್‍ಗಳು ಮಾತನ್ನು ಅಗ್ಗಗೊಳಿಸಿವೆ. ಹಿಂದಿನ ಕಾಲದಂತೆ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಮತ್ತು ಕುಶಲ ವಿಚಾರಿಸುವುದಕ್ಕೆ ಹಬ್ಬಗಳನ್ನು ಕಾಯಬೇಕಿಲ್ಲ. ಮೊಬೈಲ್ ಇದೆ. ವೀಡಿಯೋ ಮಾತುಕತೆಗೂ ಅದರಲ್ಲಿ ಅವಕಾಶ ಇದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಪರಸ್ಪರ ಅಡುಗೆ ಕೋಣೆ ಮತ್ತು ಬೆಡ್‍ರೂಮಿನಷ್ಟೇ ಹತ್ತಿರಗೊಳಿಸಿರುವ ಈ ದಿನಗಳಲ್ಲಿ ಶಬ್ದಮಾಲಿನ್ಯ, ನೀರು ಮಾಲಿನ್ಯ ಸಹಿತ ಕೆಲವಾರು ಮಾಲಿನ್ಯ ಮತ್ತು ಅಪಾಯಗಳಿಗೆ ಅವಕಾಶ ಕೊಡಬಹುದಾದ ಹಬ್ಬಗಳ ಆಚರಣೆ ಪ್ರಸ್ತುತವೇ ಎಂಬ ಪ್ರಶ್ನೆ ತೀರಾ ಬಾಲಿಶವಲ್ಲ.
  ಮೆಕ್ಸಿಕೋದಲ್ಲಿ ಸಾವಿನ ದಿನ ಎಂಬೊಂದು ಸಂಪ್ರದಾಯವಿದೆ. ಇದನ್ನು ಅಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಲು ಮೀಸಲಾಗಿರುವ ಈ ಹಬ್ಬಕ್ಕೆ ತಿಂಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ರೊಟ್ಟಿಗಳು ಮತ್ತು ಕ್ಯಾಂಡಲ್ ಗಳನ್ನು ಈ ಹಬ್ಬದಲ್ಲಿ ಧಾರಾಳ ಬಳಸುತ್ತಾರೆ. ಮನುಷ್ಯನ ಅಸ್ಥಿಪಂಜರದ ಆಕಾರದಲ್ಲಿ ಕೇಕ್‍ಗಳನ್ನು ತಯಾರಿಸುತ್ತಾರೆ. ದೇಹದ ಆಂತರಿಕ ಭಾಗಗಳ ಆಕಾರದಲ್ಲೂ ಕೇಕ್‍ಗಳನ್ನು ತಯಾರಿಸಿ, ಮೃತರಾದ ತಮ್ಮವರ ಗೋರಿಗಳ ಬಳಿ ನಿಗದಿತ ದಿನ ಎಲ್ಲರೂ ಒಟ್ಟು ಸೇರುತ್ತಾರೆ. ಅಲ್ಲಿ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ. ಅಲ್ಲಿ ಕ್ಯಾಂಡಲ್ ಹೊತ್ತಿಸುತ್ತಾರೆ. ಹೂ ಇಡುತ್ತಾರೆ. ಮೃತಪಟ್ಟವರ ಗುಣಗಾನ ಮಾಡುತ್ತಾರೆ. ಮೃತಪಟ್ಟವರ ಇಷ್ಟದ ಆಹಾರ ಮತ್ತು ಮದ್ಯದೊಂದಿಗೆ ರಾತ್ರಿಪೂರ್ತಿ ಸ್ಮಶಾನದಲ್ಲಿ ಪಾರ್ಟಿ ಮಾಡುತ್ತಾರೆ. ಬ್ರೆಝಿಲ್‍ನಲ್ಲೂ ತುಸು ಬದಲಾವಣೆಯೊಂದಿಗೆ ಇದನ್ನೇ ಹೋಲುವ ಆಚರಣೆಯಿದೆ. ಜಪಾನ್‍ನಲ್ಲಂತೂ ಬಹಳ ಪುರಾತನ ಕಾಲದಿಂದಲೇ ಪ್ರತಿ ವರ್ಷ ಆಚರಿಸುತ್ತಾ ಬಂದಿರುವ ಹಡಕ ಮತ್ಸುರಿ ಎಂಬ ಆಚರಣೆಯೊಂದಿದೆ. ಅದಕ್ಕೆ ‘ಶಿಂಟೋ ನಗ್ನ ಹಬ್ಬ’ ಎಂಬ ಹೆಸರೂ ಇದೆ. ಇದರ ವಿಶೇಷತೆ ಏನೆಂದರೆ, ಈ ಹಬ್ಬದಲ್ಲಿ ಭಾಗವಹಿಸುವುದು ಪುರುಷರು ಮಾತ್ರ. ಈ ಹಬ್ಬ ಅರೆನಗ್ನವಾಗಿ ನಡೆಯುತ್ತದೆ. ಈ ಹಬ್ಬದ ಆಚರಣೆ ಹೇಗೆಂದರೆ, ಓರ್ವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಆತ ಆ ಹಬ್ಬದ ನಗ್ನ ಪಾತ್ರಧಾರಿ ಅಥವಾ ಶಿನ್ ಓಟೊಕ್. ಆತ ರಸ್ತೆಯುದ್ದಕ್ಕೂ ನಗ್ನವಾಗಿಯೇ ಓಡಬೇಕು. ಆ ಸಮಯದಲ್ಲಿ ರಸ್ತೆಯುದ್ದಕ್ಕೂ ನಿಂತಿರುವ ಪುರುಷರು ಆತನನ್ನು ಸ್ಪರ್ಶಿಸಲು ಯತ್ನಿಸುತ್ತಾರೆ. ಆತನನ್ನು ಸ್ಪರ್ಶಿಸಿದರೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಅವರ ನಂಬಿಕೆ. ಬೊವಿಲಿಯದಲ್ಲೊಂದು ವಿಶಿಷ್ಟ ಹಬ್ಬವಿದೆ. ಪ್ರತಿ ವಾರ ಕಾರು, ಟ್ಯಾಕ್ಸಿ, ಬಸ್ ಮುಂತಾದ ವಾಹನಗಳ ಮಾಲಕರು ತಮ್ಮ ವಾಹನಗಳನ್ನು ಶೃಂಗರಿಸುತ್ತಾರೆ. ಭಾರತದಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಯುಧ ಪೂಜೆಯನ್ನೇ ಹೋಲುವ ಈ ಆಚರಣೆಗೆ ಲಾ ಬೆಂಡಿಶನ್ ಡೆ ಮೊವಿಲಿಡೇಡ್ಸ್ (ವಾಹನ ಹರಸುವ ದಿನ) ಎಂದು ಹೆಸರು. ಧರ್ಮಗುರುಗಳು ವಾಹನಗಳನ್ನು ಹರಸಿದ ಬಳಿಕ ಪಟಾಕಿ ಸಿಡಿಸಲಾಗುತ್ತದೆ. ಶಾಂಪೇನ್ ಅನ್ನು ಬಳಸಲಾಗುತ್ತದೆ. ಅಂದಹಾಗೆ, ಭಾರತದಲ್ಲಂತೂ ಹಬ್ಬಗಳ ರಾಶಿಯೇ ಇದೆ. ಮಹಾ ಶಿವರಾತ್ರಿ, ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ಓಣಂ, ದೀಪಾವಳಿ, ನವರಾತ್ರಿ ಉತ್ಸವ, ರಾಮನವಮಿ.. ಮುಂತಾದ ಅನೇಕಾರು ಹಬ್ಬಗಳಿವೆ. ಮಾತ್ರವಲ್ಲ, ಈ ಹಬ್ಬಗಳ ಆಚರಣಾ ವಿಧಾನದ ಕುರಿತಂತೆ ಸಾರ್ವಜನಿಕರಲ್ಲಿ ದೂರುಗಳೂ ಇವೆ. ಮಾಧ್ಯಮಗಳು ವಿಶೇಷವಾಗಿ ಪ್ರತಿ ವರ್ಷ ದೀಪಾವಳಿ, ಗಣೇಶ ಚತುರ್ಥಿ, ಜನ್ಮಾಷ್ಟಮಿಯ ಸಂದರ್ಭದಲ್ಲಿ ಜನಜಾಗೃತಿ ಅಭಿಯಾನವನ್ನೇ ಹಮ್ಮಿಕೊಳ್ಳುವುದಿದೆ. ಕಣ್ಣಿನ ಬಗ್ಗೆ, ನೀರು ಮತ್ತು ಶಬ್ದ ಮಾಲಿನ್ಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸರಕಾರಗಳೇ ಜಾಹೀರಾತನ್ನು ಹೊರಡಿಸುತ್ತವೆ. ಒಂದು ರೀತಿಯಲ್ಲಿ, ಹಬ್ಬಗಳು ಅನುಭವಿಸುವುದಕ್ಕಿಂತ ಸಹಿಸಿಕೊಳ್ಳಬೇಕಾದ ಹೊರೆಗಳಾಗಿ ಬದಲಾಗುತ್ತಿವೆಯೇನೋ ಎಂದು ಅಂದುಕೊಳ್ಳುವ ಹಂತಕ್ಕೆ ತಲುಪಿಬಿಟ್ಟಿದೆ. ದೀಪಾವಳಿ ಬಂತೆಂದರೆ ತಮ್ಮ ಮಕ್ಕಳ ಕಣ್ಣಿನ ಬಗ್ಗೆ ಹೆತ್ತವರು ವಿಶೇಷ ನಿಗಾ ಇಡಬೇಕಾಗುತ್ತದೆ. ಸಾರ್ವಜನಿಕರು ರಸ್ತೆಯಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುತ್ತಾರೆ. ಸಂಗೀತಗಳ ಅಬ್ಬರವೂ ಕಡಿಮೆಯೇನಿಲ್ಲ. ಹಬ್ಬಗಳೆಂದರೆ ‘ಭಯ’ ಉಂಟು ಮಾಡುವುದರ ಹೆಸರೇ? ಪ್ರೀತಿ-ಪ್ರೇಮವನ್ನು ಚಿಗುರೊಡೆಯಿಸುವ ಸಂದರ್ಭವೇ? ಹಬ್ಬಗಳ ನಿಜ ಉದ್ದೇಶ ಏನು? ಹೊಸ ಬಟ್ಟೆ, ಮೋಜು-ಮಸ್ತಿ ಇವುಗಳಾಚೆಗೆ ಹಬ್ಬ ಏನು? ಹಬ್ಬವನ್ನು ಆಚರಿಸಿದ ವ್ಯಕ್ತಿ ಪ್ರಾಯೋಗಿಕವಾಗಿ ಏನನ್ನು ಗಿಟ್ಟಿಸಿಕೊಳ್ಳುತ್ತಾನೆ? ಬರೇ ಮೋಜು-ಮಸ್ತಿಯೇ ಹಬ್ಬದ ಪರಮ ಗುರಿ ಮತ್ತು ಹಬ್ಬದಿಂದ ಕಲಿಯುವ ಪಾಠಗಳು ಏನೇನೂ ಇಲ್ಲ ಅನ್ನುವ ರೀತಿಯಲ್ಲಿ ಹಬ್ಬಗಳು ಬದಲಾಗಿವೆಯೇ ಅಥವಾ ಹಬ್ಬಗಳೇ ಹಾಗೆಯೇ?
  
        ನಿಜವಾಗಿ, ಮುಸ್ಲಿಮರ ಈದ್ (ಹಬ್ಬ) ವಿಶ್ಲೇಷಣೆಗೆ ಒಳಗಾಗಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ. ಅದು ಸಂತಸಕ್ಕಾಗಿ ಮಾತ್ರ ಇರುವ ಹಬ್ಬ ಅಲ್ಲ. 30 ದಿನಗಳ ಉಪವಾಸ ಮತ್ತು ಆ ಬಳಿಕ ಒಂದು ಹಬ್ಬ. ಈ ಹಬ್ಬದಲ್ಲಿ ಅತ್ಯಂತ ಕಡ್ಡಾಯ ವಾಗಿರುವುದು ಏನು ಅಂದರೆ, ಅತ್ಯಂತ ಬಡವರ ಮನೆಯ ಬಾಗಿಲನ್ನು ತಟ್ಟುವುದು. ಅವರಿಗೆ ನೈತಿಕ ಬೆಂಬಲ ಸಾರುವುದು. ಅವರ ಆ ದಿನದ ಅಗತ್ಯಗಳಿಗೆ ಕಡ್ಡಾಯವಾಗಿ ತನ್ನ ಪಾಲನ್ನು ನೀಡುವುದು. 30 ದಿನಗಳ ಉಪವಾಸವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದ ವ್ಯಕ್ತಿ, ಬಡವರಿಗೆ ಸಂಬಂಧಿಸಿ ಈ ಹೊಣೆಯಿಂದ ಜಾರಿಕೊಂಡರೆ ಆತ/ಕೆ ಅಪರಾಧಿಯಾಗುತ್ತಾನೆ. ಇಲ್ಲಿ ಹಬ್ಬದ ಉದ್ದೇಶ ಅತ್ಯಂತ ಸ್ಪಷ್ಟವಿದೆ. ಬರೇ ಸಂತಸ ಅದರ ಪ್ರಥಮ ಆದ್ಯತೆ ಆಗಿರುತ್ತಿದ್ದರೆ ಹಬ್ಬದ ದಿನದಂದು ಹೊಸಬಟ್ಟೆ ಧರಿಸಿ, ಪರ್ಫ್ಯೂಮ್ ಪೂಸಿ, ಮಸೀದಿಗೆ ಹೋಗುವುದು, ನಮಾಝು ಮತ್ತು ಪರಸ್ಪರ ಆಲಿಂಗನದೊಂದಿಗೆ ಮನಸೋ ಇಚ್ಛೆ ಖುಷಿ ಪಡುವುದು ಕಡ್ಡಾಯವಾಗಬೇಕಿತ್ತು. ಅಥವಾ ಇವಿಲ್ಲದಿದ್ದರೆ ಹಬ್ಬ ಸಂಪೂರ್ಣ ಆಗುವುದಿಲ್ಲ ಎಂಬ ಖಡಾಖಂಡಿತ ಶರತ್ತು ಇರ ಬೇಕಿತ್ತು. ಆದರೆ ಹೊಸಬಟ್ಟೆ, ನಮಾಜು, ಮಸೀದಿ.. ಮುಂತಾದುವುಗಳು ಈದ್‍ಗೆ ಕಡ್ಡಾಯ ಶರ್ತಗಳೇ ಅಲ್ಲ. ಅವಿಲ್ಲದೆಯೇ ಈದ್ ಇದೆ. ಆದರೆ ಬಡವರ ಬಾಗಿಲು ತಟ್ಟಲು ಅಸಹ್ಯಪಡುವವನಿಗೆ ಈದ್ ಇಲ್ಲ. ಆದ್ದರಿಂದಲೇ ಈದ್ ಎಂಬುದು ಜವಾಬ್ದಾರಿಯುತ ಸಂತಸವನ್ನು ಪರಿಚಯಿಸುತ್ತದೆ. ಇಲ್ಲಿ ಮದ್ಯದ ವಾಸನೆಯಿಲ್ಲ. ಡಿಜೆಗಳ ಅಬ್ಬರವಿಲ್ಲ. ಮೆರವಣಿಗೆ ಇಲ್ಲ. ಪಟಾಕಿಗಳಿಲ್ಲ. ಮಾಲಿನ್ಯ ಕಾರಕವಾದ ಯಾವುದೂ ಆಚರಣೆಯ ಭಾಗವಾಗಿಲ್ಲ. ನಗ್ನವಾಗಿ ಓಡುವವರೂ ಇಲ್ಲ, ಅಸ್ಥಿಪಂಜರದ ಕೇಕ್ ತಯಾರಿಸುವವರೂ ಇಲ್ಲ. ಈದ್ ಎಂಬುದು ಉಳ್ಳವರು ಮತ್ತು ಇಲ್ಲದವರ ನಡುವೆ ಸೇತುವೆಯೊಂದನ್ನು ನಿರ್ಮಿಸುವ ಘಳಿಗೆ. ಅದು ಸಮಾಜದ ಸಬಲೀಕರಣದ ಕಡೆಗೆ ಉಳ್ಳವರನ್ನು ಕರೆದೊಯ್ಯುತ್ತವೆ. ಇಷ್ಟಿಷ್ಟು ಬಾಗಿಲುಗಳು ನಿಮ್ಮ ನಿರೀಕ್ಷೆಯಲ್ಲಿವೆ ಎಂದು ಉಳ್ಳವರನ್ನು ಎಚ್ಚರಿಸುತ್ತದೆ. ಈ ಜವಾಬ್ದಾರಿಯನ್ನು ಕಡ್ಡಾಯ ಕರ್ಮವಾಗಿ ಸ್ವೀಕರಿಸಿದವರಿಗೆ ಮಾತ್ರ ನಿಜವಾದ ಈದ್ ಇದೆ. ಸಮಾಜಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನುವವರಿಗೂ ಈದ್‍ಗೂ ಸಂಬಂಧವೇ ಇರುವುದಿಲ್ಲ. ಅವರ ಹೊಸಬಟ್ಟೆ, ಆಲಿಂಗನ, ನಮಾಝïಗೆ ಆ ಕ್ಷಣದ ಪುಳಕಕ್ಕಿಂತ ಹೆಚ್ಚಿನ ಮಾನ್ಯತೆಯೂ ಲಭ್ಯವಾಗುವುದಿಲ್ಲ. ಆದ್ದರಿಂದಲೇ,
     ಈದ್, ಅನೇಕಾರು ಹಬ್ಬಗಳಲ್ಲಿ ಒಂದು ಆಗುವುದಿಲ್ಲ, ಆಗಬಾರದು ಕೂಡ.

No comments:

Post a Comment