Wednesday, June 22, 2016

ಮಾಧ್ಯಮ ನಿಷ್ಠೆಯನ್ನು ಪ್ರಶ್ನಿಸಿದ ‘ಗುಜರಾತ್ ಫೈಲ್ಸ್’...

       ಖ್ಯಾತ ಸಾಹಿತಿ ಅರುಂಧತಿ ರಾಯ್, ರಘು ಕಾರ್ನಾಡ್, ಶುಧಬ್ರತ್ ಸೇನ್ ಗುಪ್ತಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕಾಂಗ್ರೆಸ್‍ನ ಅಹ್ಮದ್ ಪಟೇಲ್, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್, ಸಂದೀಪ್ ದೀಕ್ಷಿತ್, ಜ್ಯೋತಿ ಮಲ್ಹೋತ್ರ ಮತ್ತು
        ಎನ್.ಡಿ.ಟಿ.ವಿ.ಯ ಬರ್ಖಾದತ್ತ್, ಲಂಡನ್ನಿನ ಟೆಲಿಗ್ರಾಫ್ ಪತ್ರಿಕೆಯ ಶಂಕರ್ ಶಾನ್ ಥಾಕೂರ್, ಇಂಡಿಯನ್ ಎಕ್ಸ್‍ಪ್ರೆಸ್‍ನ ಸೀಮಾ ಚಿಸ್ತಿ, ರಾಜ್ಯಸಭಾ ಟಿ.ವಿ.ಯ ಗಿರೀಶ್ ನಿಕಂ, ನ್ಯೂಸ್ ಲಾಂಡ್ರಿ ಆನ್‍ಲೈನ್ ಪತ್ರಿಕೆಯ ಅಭಿನಂದನ್ ಸೆಖ್ರಿ, ಟಿ.ವಿ. ಪತ್ರಕರ್ತ ಶೇಖರ್ ಗುಪ್ತಾ, ಸಭಾ ನಕ್ವಿ, ಅರ್ನಾಬ್ ಗೋಸ್ವಾಮಿಯ ಟೈಮ್ಸ್ ನೌ ಚಾನೆಲ್‍ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಸದಾ ಕಾಣಿಸಿಕೊಳ್ಳುವ ಜಾವೇದ್ ನಕ್ವಿ...
      ಮುಂತಾದ ಪ್ರಮುಖರೆಲ್ಲ ಒಂದೇ ಕಾರ್ಯಕ್ರಮದಲ್ಲಿ ಸೇರಿದರೆ, ಆ ಸಂದರ್ಭ ಹೇಗಿದ್ದೀತು? ಮಾಧ್ಯಮಗಳು ಈ ಕಾರ್ಯ ಕ್ರಮಕ್ಕೆ ಕೊಡುವ ಮಹತ್ವ ಎಷ್ಟಿರಬಹುದು? ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ಅವರನ್ನು ಮುತ್ತಿಕೊಂಡಾವು. ಚಾನೆಲ್‍ಗಳು ಅವರಿಂದ ಬೈಟ್ ಪಡಕೊಳ್ಳಬಹುದು. ಪತ್ರಿಕೆಗಳು ಸಂದರ್ಶನ ನಡೆಸಬಹುದು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮುಂತಾದ ವಿಷಯಗಳ ಮೇಲೆ ಅವರನ್ನು ಮಾತಿಗೆಳೆದು ಸುದ್ದಿ ಸ್ಫೋಟಕ್ಕೆ ಯತ್ನಿಸಬಹುದು. ಏನಾದರೂ ವಿವಾದಾಸ್ಪದವಾದುದು ಸಿಗುವುದೋ ಎಂದು ಕುಟುಕಿ ನೋಡಬಹುದು. ಒಟ್ಟಿನಲ್ಲಿ ಈ ಇಡೀ ಕಾರ್ಯಕ್ರಮವನ್ನು ಟಿ.ವಿ. ಮತ್ತು ಪತ್ರಿಕೆಗಳು ಮಹತ್ವ ಪೂರ್ಣವಾಗಿ ಪರಿಗಣಿಸಿ ಮುಖ್ಯ ಸುದ್ದಿಯಾಗಿಸಬಹುದು.. ಎಂದೆಲ್ಲಾ ಊಹಿಸುವುದು ಸಹಜ. ಆದರೆ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯನ್ನು ಹೊರತುಪಡಿಸಿ ಮುಖ್ಯವಾಹಿನಿಯ ಇನ್ನಾವ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳೂ ಈ ಕಾರ್ಯಕ್ರಮದ ಕುರಿತು ಒಂದಕ್ಷರವನ್ನೂ ಬರೆಯಲಿಲ್ಲ. ಒಂದಕ್ಷರವನ್ನೂ ಹೇಳಲಿಲ್ಲ!
      ಕಳೆದ ಮೇ 27ರಂದು ಶುಕ್ರವಾರ ಸಂಜೆ 6:30ಕ್ಕೆ ದೆಹಲಿಯ ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೇಲಿನ ಗಣ್ಯರೆಲ್ಲ ಭಾಗವಹಿಸಿದ್ದರು. ಪುಸ್ತಕದ ಹೆಸರು ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ (Gujarat Fails: Anatomy of a Coverup). ಬರೆದವರು ತೆಹಲ್ಕಾ ಪತ್ರಿಕೆಯ ಮಾಜಿ ಪತ್ರಕರ್ತೆ ರಾಣಾ ಅಯ್ಯೂಬ್. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಮರುದಿನ ಕಾರವಾನ್ ಪತ್ರಿಕೆಯು ಈ ಕುರಿತಂತೆ ಸಂವಾದವೊಂದನ್ನು ಏರ್ಪಡಿಸಿತ್ತು. ಇಂಡಿಯಾ ಟುಡೇ ಟಿ.ವಿ.ಯ ರಾಜ್‍ದೀಪ್ ಸರ್ದೇಸಾಯಿ ಮತ್ತು ಖ್ಯಾತ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ರಾಣಾ ಅಯ್ಯೂಬ್‍ರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಯಾವ ಮಾಧ್ಯಮವೂ ಸುದ್ದಿಯಾಗಿಸದೇ ಇದ್ದುದೇಕೆ ಎಂದು ಸರ್ದೇಸಾಯಿ ಅವರಲ್ಲಿ ಪ್ರಶ್ನಿಸಲಾಯಿತು. ‘ಅಧಿಕಾರ ದಲ್ಲಿರುವವರ ಜೊತೆಗೆ ಮನಸ್ತಾಪದ ವಾತಾವರಣವನ್ನು ಮಾಧ್ಯಮಗಳು ಬಯಸುತ್ತಿಲ್ಲ’ ಎಂದವರು ಉತ್ತರಿಸಿದ್ದರು. ಅಷ್ಟಕ್ಕೂ,
ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ಕಥಾ ಸಂಕಲನವೋ ಕಾದಂಬರಿಯೋ ಬಿಡುಗಡೆಗೊಳ್ಳುತ್ತಿದ್ದರೆ ಮಾಧ್ಯಮಗಳು ಖಂಡಿತ ಅದನ್ನು ಸುದ್ದಿಯಾಗಿ ಪರಿಗಣಿಸುತ್ತಿದ್ದುವು. ಅಷ್ಟರ ಮಟ್ಟಿಗೆ ರಾಣಾ ಅಯ್ಯೂಬ್ ಪರಿಚಿತ ಪತ್ರಕರ್ತೆ. ಆದರೆ ರಾಣಾ ಅಯ್ಯೂಬ್ ಬರೆದಿರುವುದು ಗುಜರಾತ್ ಹತ್ಯಾಕಾಂಡದ ಸುತ್ತ. ಅದರಲ್ಲೂ ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ ಎಂಬ ಶೀರ್ಷಿಕೆಯೇ ಅದೊಂದು ತನಿಖಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಪುಸ್ತಕ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಲ್ಪಿತ ಕಾದಂಬರಿ ಬರೆಯುವುದಕ್ಕೂ ಆರೋಪಿತರನ್ನೇ ಸಂಪರ್ಕಿಸಿ ಅವರ ಅಭಿಪ್ರಾಯವನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸುವುದಕ್ಕೂ ಇರುವ ವ್ಯತ್ಯಾಸ ಮತ್ತು ಅದು ಬೀರುವ ಪರಿಣಾಮಗಳು ಏನೇನು ಎಂಬುದು ಮಾಧ್ಯಮದ ಮಂದಿಗೆ ಚೆನ್ನಾಗಿ ಗೊತ್ತು. ಆಳುವ ದೊರೆಗಳನ್ನು ಅದು ಕುಪಿತಗೊಳಿಸಬಹುದು. ಮಾಧ್ಯಮ ಕಚೇರಿಗಳಿಗೂ ಆಳುವವರಿಗೂ ನಡುವೆ ಇರುವ ಸಂಬಂಧ ಹದಗೆಡಬಹುದು. ಆದ್ದರಿಂದಲೇ, ಈ ತನಿಖಾ ಬರಹವನ್ನು ಪ್ರಕಟಿಸುವಂತೆ ತೆಹಲ್ಕಾದ ಸಂಪಾದಕ ತರುಣ್ ತೇಜ್‍ಪಾಲ್‍ರಲ್ಲಿ ರಾಣಾ ಅಯ್ಯೂಬ್ ಕೋರಿಕೊಂಡಾಗ ಅವರು ನಿರಾಕರಿಸಿದ್ದರು. ‘ಬಂಗಾರು ಲಕ್ಷ್ಮಣ್‍ರ ಕುರಿತು ಸ್ಟಿಂಗ್ ಆಪರೇಶನ್ ನಡೆಸಿದುದಕ್ಕಾಗಿ ಮೋದಿಯವರ ಪಕ್ಷ ನಮ್ಮ ಪತ್ರಿಕಾ ಕಚೇರಿಯನ್ನು ಧ್ವಂಸಗೊಳಿಸಿದೆ. ನಮ್ಮನ್ನು ಬೆನ್ನಟ್ಟಿದೆ. ಇನ್ನೊಮ್ಮೆ ಆ ಸಾಹಸ ಬೇಡ..’ ಎಂದಿದ್ದರು. ಈ ಕಾರಣದಿಂದಲೇ, ರಾಣಾ ಅಯ್ಯೂಬ್ ಅವರು ಈ ಕೃತಿಯನ್ನು ಸ್ವಯಂ ಪ್ರಕಟಿಸಿದರು. ನ್ಯೂಸ್ ಲಾಂಡ್ರಿಯಂಥ ಆನ್ ಲೈನ್ ಪತ್ರಿಕೆಗಳು ಕೃತಿಯ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಿದುವು. ರಾಣಾರ ಸಂದರ್ಶನ ನಡೆಸಿದುವು. ನಿಜವಾಗಿ,
       ‘ಗುಜರಾತ್ ಫೈಲ್ಸ್’ ಹುಟ್ಟಿಕೊಂಡದ್ದರಲ್ಲೇ ಒಂದು ರೋಚಕತೆಯಿದೆ. ಗುಜರಾತ್ ಹತ್ಯಾಕಾಂಡದ ಕುರಿತಂತೆ ತನಿಖೆ ನಡೆಸಬೇಕೆಂದು ತೀರ್ಮಾನಿಸಿದ ರಾಣಾ ಅಯ್ಯೂಬ್ ಅದಕ್ಕಾಗಿ ಕೆಲವು ಸಿದ್ಧತೆಗಳನ್ನು ನಡೆಸಿದರು. ತನ್ನ ಹೆಸರನ್ನು ಮೈಥಿಲಿ ತ್ಯಾಗಿ ಎಂದು ಬದಲಾಯಿಸಿದರು. ‘ವೈಬ್ರಾಂಟ್ ಗುಜರಾತ್’ನ ಕುರಿತಂತೆ ಸಿನಿಮಾ ನಿರ್ಮಿಸುವ ಉದ್ದೇಶದಿಂದ ಅಮೇರಿಕದಿಂದ ಬಂದಿರುವ ಅನಿವಾಸಿಯಾಗಿ ತನ್ನನ್ನು ಗುರುತಿಸಿಕೊಂಡರು. ಇವೆಲ್ಲ ನಡೆದುದು 2010ರಲ್ಲಿ. ಆಗ ರಾಣಾಗೆ 26 ವರ್ಷ. ತೆಹಲ್ಕಾದಲ್ಲಿ ಪತ್ರಕರ್ತೆಯಾಗಿದ್ದ ಆಕೆ ಸುದೀರ್ಘ 8 ತಿಂಗಳ ಕಾಲ ಗುಜರಾತ್‍ನಲ್ಲಿ ಸುತ್ತಾಡಿದರು. ತಾನು ಧರಿಸಿರುವ ರಿಸ್ಟ್ ವಾಚ್‍ನಲ್ಲಿ ಗುಪ್ತ ಕ್ಯಾಮರಾವನ್ನು ಅಳವಡಿಸಿಕೊಂಡು ಹಲವರನ್ನು ಸಂದರ್ಶಿಸಿದರು. ಅದರಲ್ಲಿ ನರೇಂದ್ರ ಮೋದಿಯವರೂ ಒಬ್ಬರು. ಮೋದಿಯವರ ಗಾಂಧಿ ನಗರದ ಅಧಿಕೃತ ನಿವಾಸದ ಎದುರು ಈ ಸಂದರ್ಶನಕ್ಕಾಗಿ ಒಂದು ಗಂಟೆ ಮೊದಲೇ ಅವರು ಕಾದು ಕುಳಿತರು. ತಾನು ವಾಚ್‍ನಲ್ಲಿ ಬಚ್ಚಿಟ್ಟಿರುವ ಗುಪ್ತ ಕ್ಯಾಮರಾವು ಸೆಕ್ಯುರಿಟಿ ಚೆಕ್‍ನ ಸಂದರ್ಭದಲ್ಲಿ ಎಲ್ಲಿ ಬಹಿರಂಗವಾಗಿ ಬಿಡುತ್ತೋ ಎಂಬ ಭಯ ಆಕೆಯನ್ನು ಆ ಒಂದು ಗಂಟೆಯ ಉದ್ದಕ್ಕೂ ಕಾಡಿತ್ತು. ಒಂದು ರೀತಿಯಲ್ಲಿ, ತನಿಖಾ ಪತ್ರಿಕೋದ್ಯಮವೆಂಬುದೇ ಒಂದು ಚಕ್ರವ್ಯೂಹ. ಅದಕ್ಕೆ ಅಪಾರ ಧೈರ್ಯ ಬೇಕು. ಆಯಾ ಸಂದರ್ಭಗಳನ್ನು ನಾಜೂಕಿನಿಂದ ದಾಟುವ ಕಲೆ ಗೊತ್ತಿರಬೇಕು. ಸನ್ನಿವೇಶವನ್ನು ಗ್ರಹಿಸುವ ಸೂಕ್ಷ್ಮತೆ ಇರಬೇಕು. ಕನ್ನಡದ ಚಿತ್ರನಟಿ ಮರಿಯಾ ಸುಸೈರಾಜ್ ಮತ್ತು ಗೆಳೆಯ ಸೇರಿಕೊಂಡು ನೀರಜ್ ಗ್ರೋವರ್ ಎಂಬವರನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ‘ಮುಂಬೈ ಮಿರರ್’ನ ಸಂಪಾದಕಿ ಮೀನಲ್ ಬೆಹಗಲ್ ಈ ರೀತಿಯದ್ದೇ ಸಾಹಸ ಕೈಗೊಂಡಿದ್ದರು. ಆ ಬಳಿಕ ‘ಡೆತ್ ಇನ್ ಮುಂಬೈ’ ಎಂಬ ಹೆಸರಲ್ಲಿ ಕೃತಿಯನ್ನೂ ಬರೆದಿದ್ದರು. ‘ಡೋಂಗ್ರಿ ಟು ದುಬೈ’, ‘ಬ್ಲ್ಯಾಕ್ ಫ್ರೈಡೇ’, ‘ಸಿಕ್ಸ್ ಡಿಕೇಡ್ಸ್ ಆಫ್ ದಿ ಮುಂಬೈ ಮಾಫಿಯ’, ‘ಮಾಫಿಯ ಕ್ವೀನ್ಸ್ ಆಫ್ ಮುಂಬೈ’, ‘ಮೈ ನೇಮ್ ಈಸ್ ಅಬೂಸಲೇಮ್’.. ಮುಂತಾದ ಕೃತಿಗಳನ್ನು ಬರೆದಿರುವ ಹುಸೇನ್ ಝಾಯಿದಿ ಕೂಡ ಇಂಥದ್ದೇ ಪತ್ರಿಕಾ ಸಾಹಸಕ್ಕೆ ಹೆಸರಾದವರು. ಯಾವ ಬಾಗಿಲನ್ನು ತಟ್ಟಿದರೆ ಅಪಾಯ ಖಚಿತ ಎಂದು ಭಾವಿಸಲಾಗಿರುತ್ತದೋ ಅದೇ ಬಾಗಿಲನ್ನು ತಟ್ಟುವ ಧೈರ್ಯ ತೋರುವವರು. ಝಾಯಿದಿ ಅಂತೂ ಸದ್ದಾಮ್ ಹುಸೇನ್‍ರ ಪತನದ ಬಳಿಕ ಇರಾಕ್ ತೆರಳಿದ ಸಾಹಸಿ. ಆ ಬಳಿಕ ಅಲ್ಲಿ ಅಪಹರಣಕ್ಕೊಳಗಾಗಿ ಬಿಡುಗಡೆಗೊಂಡು ಬಂದವರು. ರಾಣಾ ಅಯ್ಯೂಬ್‍ಳ ತನಿಖಾ ಪತ್ರಿಕೋದ್ಯಮವನ್ನು ಕೂಡ ನಾವು ಇವರಿಬ್ಬರ ಸಾಹಸಕ್ಕೆ ಹೋಲಿಸಬಹುದು. ಆಕೆ ನರೇಂದ್ರ ಮೋದಿಯವರನ್ನು ಭೇಟಿಯಾದರು. ಗುಜರಾತ್‍ನ ಮಾಜಿ ಗೃಹ ಸಚಿವ ಅಶೋಕ್ ನಾರಾಯಣ್, 2002ರಲ್ಲಿ ಗುಜರಾತ್ ಎಟಿಎಸ್‍ನ ಮುಖ್ಯಸ್ಥರಾಗಿದ್ದ ಜಿ.ಎಲ್. ಸಿಂಘಾಲ್, ಅಹ್ಮದಾಬಾದ್‍ನ ಪೊಲೀಸ್ ಕಮೀಷನರ್ ಆಗಿದ್ದ ಪಿ.ಸಿ. ಪಾಂಡೆ, ಗುಜರಾತ್‍ನ ಗುಪ್ತದಳದ ಮುಖ್ಯಸ್ಥರಾಗಿದ್ದ ಸಿ.ಸಿ. ರೈಗಾರ್, ರಾಜನ್ ಪ್ರಿಯದರ್ಶಿ, ವೈ.ಎ. ಶೇಖ್.. ಮುಂತಾದ ಹಲವರನ್ನು ಆಕೆ ಈ ಮಾರುವೇಷದಲ್ಲಿ ಭೇಟಿಯಾದರು. ಇಶ್ರತ್ ಜಹಾನ್, ಸೊಹ್ರಾಬು ದ್ದೀನ್ ಶೇಖ್, ಕೌಸರ್‍ಬೀ ಸಹಿತ ಹಲವು ಎನ್‍ಕೌಂಟರ್‍ಗಳ ಒಳಹೊರಗನ್ನು ತಿಳಿಯಲು 8 ತಿಂಗಳುಗಳ ಕಾಲ ಶ್ರಮಿಸಿದರು. ಗುಜರಾತ್‍ನಲ್ಲಿ ಹೇಗೆ ನಕಲಿ ಎನ್‍ಕೌಂಟರ್‍ಗಳನ್ನು ನಡೆಸಲಾಗಿದೆ ಮತ್ತು ಬಿಜೆಪಿ ನಾಯಕರಿಗಾಗಿ ಹೇಗೆ ಅದನ್ನು ಅಡಗಿಸಲಾಗಿದೆ ಎಂಬುದನ್ನು ಈ ಎಲ್ಲ ತನಿಖೆಯ ಬಳಿಕ ಆಕೆ ಅರಿತುಕೊಂಡರು. ಕೃತಿಯಲ್ಲಿ ದಾಖಲಿಸಿದರು. ನಕಲಿ ಎನ್‍ಕೌಂಟರ್‍ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡ ಇರುವುದಕ್ಕೆ ತನ್ನ ಕೃತಿ ಯಲ್ಲಿ ಪುರಾವೆಗಳಿವೆ ಎಂದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು. ವಿಶೇಷ ಏನೆಂದರೆ,
       ರಾಣಾ ಅಯ್ಯೂಬ್ ತನ್ನ ‘ಗುಜರಾತ್ ಫೈಲ್ಸ್..’ ಕೃತಿಯನ್ನು ಬಿಡುಗಡೆಗೊಳಿಸುವುದಕ್ಕಿಂತ ಒಂದು ದಿನ ಮೊದಲು (ಮೇ 26) ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯು ಓದುಗರೊಂದಿಗೆ ನಿಶ್ಶರ್ಥ ಕ್ಷಮೆ ಯಾಚಿಸುವ ಪ್ರಕಟಣೆಯನ್ನು ಹೊರಡಿಸಿತು. ಅಷ್ಟಕ್ಕೂ, ಭಾರತೀಯ ಮಾಧ್ಯಮಗಳಿಗೆ ಸಂಬಂಧಿಸಿ ಹೇಳುವುದಾದರೆ, ಅದು ಕ್ಷಮೆ ಯಾಚಿಸುವ ಪ್ರಕರಣವೇ ಆಗಿರಲಿಲ್ಲ. ಜೋಸೆಫ್ ಮೆಯ್‍ಟನ್ ಎಂಬ ಪತ್ರಕರ್ತ 2009ರಿಂದ ಗಾರ್ಡಿಯನ್ ಪತ್ರಿಕೆಗೆ ಬರೆಯುತ್ತಿದ್ದ. ಪತ್ರಿಕೆಯ ನ್ಯೂಯಾರ್ಕ್ ಪಟ್ಟಣದ ಪ್ರತಿನಿಧಿಯಾಗಿ ಸಂದರ್ಶನ, ವರದಿ, ಸುದ್ದಿಗಳನ್ನು ಪತ್ರಿಕೆಗೆ ಆಗಾಗ ರವಾನಿಸುತ್ತಿದ್ದ. ಆದರೆ, ಕಳೆದ ಫೆಬ್ರವರಿಯಲ್ಲಿ ಆತ ಕೃಷಿಯ ಕುರಿತಂತೆ ಮಾಡಿದ ವರದಿಯೊಂದು ಅನುಮಾನಕ್ಕೆ ಕಾರಣವಾಯಿತು. ಆತ ತನ್ನ ವರದಿಯಲ್ಲಿ, ಸಂದರ್ಶಿಸಿರುವುದಾಗಿ ಹೇಳಿದ ವ್ಯಕ್ತಿಗಳು ಪತ್ರಿಕಾ ಕಚೇರಿಗೆ ಕರೆ ಮಾಡಿ, ತಮ್ಮನ್ನು ಆತ ಭೇಟಿಯಾಗಿಯೇ ಇಲ್ಲ ಎಂದು ಹೇಳಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಗಾರ್ಡಿಯನ್ ಪತ್ರಿಕೆಯು, ತನಿಖಾ ತಂಡವನ್ನು ರಚಿಸಿತು. ಬಹುಶಃ ತನ್ನ ವರದಿಗಾರನ ವಿರುದ್ಧವೇ ತನಿಖೆ ನಡೆಸಿದ ಅಪರೂಪದ ಪ್ರಕರಣ ಇದು. 50 ಮಂದಿಯನ್ನು ಭೇಟಿಯಾದ ತನಿಖಾ ತಂಡಕ್ಕೆ ಆತ ತಪ್ಪೆಸಗಿರುವುದು ದೃಢಪಟ್ಟಿತು. ಎರಡು ಸಭೆಗಳಿಗೆ ಹಾಜರಾಗದೆಯೇ ಅದರ ವರದಿಯನ್ನು ಆತ ನಿರ್ವಹಿಸಿದ್ದ. ಅನೇಕ ವರದಿಗಳಲ್ಲಿ ಕೃತ್ರಿಮತೆ ಇತ್ತು. ವ್ಯಕ್ತಿಗಳನ್ನು ಭೇಟಿಯಾಗದೆಯೇ ಅವರ ಹೇಳಿಕೆಯನ್ನು ಕಲ್ಪಿಸಿಕೊಂಡು ಬರೆದಿದ್ದ. ತಾನು ನಡೆಸಿದ ಸಂದರ್ಶನದ ನಕಲು ಪ್ರತಿ, ಸಂದರ್ಶಕರ ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಮತ್ತಿತರ ದಾಖಲೆಗಳನ್ನು ನೀಡಲು ವಿಫಲನಾದ ಆತನನ್ನು ಠಕ್ಕ ವರದಿಗಾರ ಎಂದು ಪತ್ರಿಕೆ ಪರಿಗಣಿಸಿತಲ್ಲದೇ ಆತನ 13  ನ್ಯೂಸ್ ಸ್ಟೋರಿಗಳನ್ನು ವೆಬ್‍ಸೈಟ್‍ನಿಂದ ಕಿತ್ತು ಹಾಕಿತು. ಗಾರ್ಡಿಯನ್ ಪತ್ರಿಕೆಯ ಅಮೇರಿಕನ್ ಆವೃತ್ತಿಯ ಸಂಪಾದಕಿ ಲೀ ಗ್ಲಾಡಿನ್ನಿಂಗ್ ಅವರು ಇದಕ್ಕಾಗಿ ಓದುಗರ ಕ್ಷಮೆ ಯಾಚಿಸಿದರಲ್ಲದೇ ಓದುಗರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ ಎಂದು ಹೇಳಿಕೊಂಡರು. ನಿಜವಾಗಿ, ಜೋಸೆಫ್ ಮೆಯ್‍ಟನ್‍ನ ವರದಿಯಲ್ಲಿ ಕೃತ್ರಿಮತೆ ಇದ್ದುವಾದರೂ ಅವು ಸಂಪೂರ್ಣ ಸುಳ್ಳುಗಳೇ ಆಗಿರಲಿಲ್ಲ. ಆತ ಅವರಿವರಿಂದ ಕೇಳಿ ಸುದ್ದಿ ತಯಾರಿಸುತ್ತಿದ್ದ. ಕೆಲವರನ್ನು ಭೇಟಿಯಾಗದೆಯೇ ಅವರ ಸಂಗ್ರಹಿತ ಅಭಿಪ್ರಾಯಗಳನ್ನು ವರದಿಯಲ್ಲಿ ಬಳಸಿಕೊಳ್ಳುತ್ತಿದ್ದ. ಆದರೆ, ಗಾರ್ಡಿಯನ್ ಪತ್ರಿಕೆಯು ಇಡೀ ಬರಹವನ್ನೇ ಕಿತ್ತು ಹಾಕುವ ಮೂಲಕ ಪಾರದರ್ಶಕತೆ ಮೆರೆಯಿತು. ಒಂದು ಕಡೆ, ಓದುಗರಿಗೆ ಮತ್ತು ಸತ್ಯಕ್ಕೆ ಅಪಾರ ನಿಷ್ಠೆಯನ್ನು ಪ್ರದರ್ಶಿಸುವ ಪತ್ರಿಕೆಯಾದರೆ ಇನ್ನೊಂದು ಕಡೆ, ರಾಜಕಾರಣಿಗಳಿಗೆ ಮತ್ತು ಸುಳ್ಳಿಗೆ ಪರಮ ನಿಷ್ಠೆಯನ್ನು ತೋರುವ ಮಾಧ್ಯಮಗಳು.. ಏನೆನ್ನಬೇಕು ಇದಕ್ಕೆ? ಇಷ್ಟಿದ್ದೂ,
       ಬಿಡುಗಡೆಗೊಂಡ ಒಂದೇ ವಾರದಲ್ಲಿ ‘ಗುಜರಾತ್ ಫೈಲ್ಸ್’ ಕೃತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟಗೊಂಡ ಎರಡನೇ ಕೃತಿಯಾಗಿಸಿದ ಓದುಗರಿಗೆ ಮತ್ತು ಪ್ರಾಣವನ್ನೇ ಪಣಕ್ಕಿಟ್ಟು ಸತ್ಯವನ್ನು ಹುಡುಕಾಡಿದ ರಾಣಾ ಅಯ್ಯೂಬ್‍ರಿಗೆ ಧನ್ಯವಾದಗಳು.

No comments:

Post a Comment