Wednesday, July 30, 2014

ನ್ಯೂಯಾರ್ಕ್‍ನಲ್ಲಿ ಇಸ್ರೇಲನ್ನು ಸ್ಥಾಪಿಸಿರುತ್ತಿದ್ದರೆ ಅಮೇರಿಕಕ್ಕೂ ಫೆಲೆಸ್ತೀನ್ ಅರ್ಥವಾಗುತ್ತಿತ್ತು..

   “ವಸಾಹತುಶಾಹಿತ್ವಕ್ಕೆ ಬದ್ಧವಾಗಿರುವ ಮತ್ತು ಮಾನವ ಹಕ್ಕು ಉಲ್ಲಂಘನೆಗಳನ್ನು ಎಗ್ಗಿಲ್ಲದೇ ನಡೆಸುತ್ತಿರುವ ಇಸ್ರೇಲ್‍ನೊಂದಿಗೆ ಬ್ರಿಟನ್ನಿನ ಕಂಪೆನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಬಂಧವನ್ನು ಕಡಿದುಕೊಳ್ಳಬೇಕು. ಡೇವಿಡ್ ಕ್ಯಾಮರೂನ್ ನೇತೃತ್ವದ ಸರಕಾರವು ಇಸ್ರೇಲ್‍ಗೆ ದಿಗ್ಬಂಧನ ವಿಧಿಸಬೇಕು..” ಎಂದು ಬ್ರಿಟನ್ನಿನ ಖ್ಯಾತ ಪತ್ರಕರ್ತ ಬೆನ್ ವೈಟ್ ಕಳೆದ ವಾರ ಆಗ್ರಹಿಸಿದ್ದರು. ‘ಇಸ್ರೇಲಿ ಅಪಾರ್ಥೀಡ್: ಎ ಬೆಗಿನ್ನರ್ಸ್ ಗೈಡ್’ ಮತ್ತು 'ಪೆsಲೆಸ್ತೀನಿಯನ್ಸ್ ಇನ್ ಇಸ್ರೇಲ್: ಸೆಗ್ರೆಗೇಶನ್, ಡಿಸ್‍ಕ್ರಿಮಿನೇಶನ್ ಆ್ಯಂಡ್ ಡೆಮಾಕ್ರಸಿ' ಎಂಬೆರಡು ಪುಸ್ತಕಗಳಲ್ಲಿ ಅವರು ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರೋಸಲೇಮ್‍ನಲ್ಲಿ ಫೆಲೆಸ್ತೀನಿಯರ ಬದುಕು-ಬವಣೆಗಳನ್ನು ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. 1967ರ ಅರಬ್ ಯುದ್ಧದಲ್ಲಿ ಈ ಪ್ರದೇಶಗಳನ್ನು ಆಕ್ರಮಿಸಿಕೊಂಡ ಇಸ್ರೇಲ್, ಇವತ್ತು ಅಲ್ಲಿನ ಫೆಲೆಸ್ತೀನಿಯರನ್ನು ಹೊರಕ್ಕಟ್ಟಿ ಯಹೂದಿಗಳನ್ನು ಕೂರಿಸುತ್ತಿರುವ ಬಗ್ಗೆ, 1970ರ ಮಧ್ಯದಲ್ಲೇ ಸುಮಾರು 70% ಫೆಲೆಸ್ತೀನಿಯರು ತಮ್ಮ ಭೂಮಿಯನ್ನು ಕಳಕೊಂಡ ಬಗ್ಗೆ.. ಅವರು ವಿವರವಾಗಿ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ಸರಕಾರಕ್ಕಿಂತ ಇಸ್ರೇಲ್‍ನ ಪ್ರಜಾತಂತ್ರ ಸರಕಾರವೇ ಅತಿ ಕ್ರೂರವಾದದ್ದು ಎಂದಿದ್ದಾರೆ. ಅಷ್ಟಕ್ಕೂ, ಹಾಲೋಕಾಸ್ಟ್ ನಡೆಸಿದ್ದು ಫೆಲೆಸ್ತೀನಿಯರಲ್ಲ. ರಶ್ಯಾದಲ್ಲಿ ನಡೆದ ಕಿಶಿನೋವ್ ಹತ್ಯಾಕಾಂಡಕ್ಕೂ ಅವರು ಕಾರಣರಲ್ಲ. 1492ರಲ್ಲಿ ಸ್ಪೈನ್, 1904-14ರ ಆಸುಪಾಸಿನಲ್ಲಿ ರಶ್ಯಾ, ಲಿಥುವೇನಿಯಾ, ಜರ್ಮನಿ.. ಮುಂತಾದ ರಾಷ್ಟ್ರಗಳಲ್ಲಿ ಯಹೂದಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಅರಬ್ ರಾಷ್ಟ್ರಗಳಲ್ಲಿದ್ದ ಯಹೂದಿಯರು ಸುಖವಾಗಿದ್ದರು. 1881ರಲ್ಲಿ ದಕ್ಷಿಣ ಯುರೋಪ್‍ನಲ್ಲಿ ಯಹೂದಿಯರ ಮೇಲೆ ದಬ್ಬಾಳಿಕೆ ನಡೆದು ರಬ್ಬಿ ಎಲಿಜಾ ಬೆನ್ ಸುಲೇಮಾನ್‍ರ ನೇತೃತ್ವದಲ್ಲಿ ಯಹೂದಿಯರ ಒಂದು ತಂಡ ಫೆಲೆಸ್ತೀನ್‍ಗೆ ಆಗಮಿಸಿದಾಗ ಅವರು ವಿರೋಧಿಸಲಿಲ್ಲ. 1492ರಲ್ಲಿ ರಬ್ಬಿ ಯಹೂದ ಹಚ್‍ಸಿಡ್ ಎಂಬಾತ ಸ್ಪೈನ್‍ನಿಂದ 1500 ಯಹೂದಿಯರನ್ನು ಪೆsಲೆಸ್ತೀನ್‍ಗೆ ಕರೆತಂದಾಗಲೂ ಅವರು ಪ್ರತಿಭಟಿಸಲಿಲ್ಲ. ಆದರೆ ಬರಬರುತ್ತಾ ಈ ವಲಸೆ ಹೆಚ್ಚಾಯಿತು. ಫೆಲೆಸ್ತೀನ್‍ನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವವು ಈ ವಲಸೆ ಪ್ರಕ್ರಿಯೆ ಹಿಂದಿದೆ ಎಂಬುದು ಬಹಿರಂಗವಾಗುತ್ತಲೇ ಹಲವು ಅನುಮಾನಗಳೂ  ಹುಟ್ಟಿಕೊಂಡವು. ಆಸ್ಟ್ರೇಲಿಯನ್-ಹಂಗೇರಿಯನ್ ಪತ್ರಕರ್ತ ಥಿಯೋಡರ್ ಹರ್ಝಲ್‍ನ ಕನಸಾಗಿರುವ ಇಸ್ರೇಲ್ ರಾಷ್ಟ್ರದ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಸಂಶಯ ಮೂಡತೊಡಗಿದುವು. ಇದನ್ನು ಸಮರ್ಥಿಸುವಂತೆ 1904-14ರ ಮಧ್ಯೆ 40 ಸಾವಿರ ಯಹೂದಿಗಳು ಫೆಲೆಸ್ತೀನ್‍ಗೆ ವಲಸೆ ಬಂದರು. 1919-29ರ ಮಧ್ಯೆ ಒಂದು ಲಕ್ಷದಷ್ಟು ಯಹೂದಿಯರು ಫೆಲೆಸ್ತೀನ್‍ಗೆ ಆಗಮಿಸಿದರು. ಬಳಿಕ ನಾಝಿಝಮ್ ಮತ್ತಿತರ ಕಾರಣಗಳಿಂದ 1930ರ ಬಳಿಕ ಸಾವಿರಾರು ಯಹೂದಿಯರು ಫೆಲೆಸ್ತೀನ್ ಸೇರಿಕೊಂಡರು. ಫೆಲೆಸ್ತೀನಿಯರು ಅಥವಾ ಅರಬರನ್ನು ಸಿಟ್ಟಿಗೆಬ್ಬಿಸಿದ್ದು ಈ ಪ್ರಕ್ರಿಯೆಗಳೇ. ದೌರ್ಜನ್ಯಕ್ಕೀಡಾಗಿರುವ ಜನರಿಗೆ ಆಶ್ರಯ ಒದಗಿಸುವುದು ಬೇರೆ, ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಉದ್ದೇಶದಿಂದಲೇ ನಿರ್ದಿಷ್ಟ ಧರ್ಮೀಯರನ್ನು ಒಂದೆಡೆ ಕಲೆ ಹಾಕುವುದು ಬೇರೆ. ಆದ್ದರಿಂದಲೇ 1936ರಲ್ಲಿ ಫೆಲೆಸ್ತೀನಿಯರು ಈ ಬೆಳವಣಿಗೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಚಳವಳಿಯ ರೂಪ ಪಡೆದು ಮುಂದುವರಿದಾಗ ಯಹೂದಿ ವಲಸೆಗೆ ನಿಯಂತ್ರಣ ಹೇರುವ ಕಾನೂನನ್ನು 1939ರಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿತು. ಆದರೂ ತೆರೆಮರೆಯಲ್ಲಿ ವಲಸೆ ನಡೆಯುತ್ತಲೇ ಇತ್ತು. ಇಷ್ಟಿದ್ದೂ ಇರ್ಗುನ್ ಮತ್ತು ಲೆಹಿ ಎಂಬ ಯಹೂದಿ ಸಶಸ್ತ್ರ ಗುಂಪಿನಂತೆ ಫೆಲೆಸ್ತೀನಿಯರು ಬ್ರಿಟಿಷ್ ಸರಕಾರದ ಮೇಲೆ ದಾಳಿ ನಡೆಸಲಿಲ್ಲ. ಅವರು ಬ್ರಿಟಿಷ್ ಸರಕಾರದಿಂದ ನ್ಯಾಯವನ್ನು ನಿರೀಕ್ಷಿಸಿದರು. ಒಂದು ವೇಳೆ ಭಾರತದ ಅರುಣಾಚಲ ಪ್ರದೇಶಕ್ಕೆ ಜಪಾನ್‍ನಿಂದಲೋ ಟಿಬೆಟ್‍ನಿಂದಲೋ ಬೌದ್ಧರನ್ನು ಕರೆ ತರುತ್ತಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಫೆಲೆಸ್ತೀನಿನಲ್ಲಿರುವ ಯಹೂದಿಯರ ಬಗ್ಗೆ ಚರ್ಚಿಸುವುದಕ್ಕೆ 1947 ಮೇ 15ರಂದು ವಿಶ್ವಸಂಸ್ಥೆಯು ಸಮಿತಿ ರಚಿಸಿದಂತೆ (UNSCOP) ಈ ಬೌದ್ಧರ ಬಗ್ಗೆ ಚರ್ಚಿಸುವುದಕ್ಕೂ ವಿಶ್ವಸಂಸ್ಥೆ ಸಮಿತಿ ರೂಪಿಸುತ್ತಿದ್ದರೆ ನಮ್ಮ ನಿಲುವು ಏನಿರುತ್ತಿತ್ತು? ಫೆಲೆಸ್ತೀನನ್ನು ಫೆಲೆಸ್ತೀನ್, ಯಹೂದಿ ಮತ್ತು ಸಿಟಿ ಆಫ್ ಜೆರುಸಲೇಮ್ ಎಂಬ ಮೂರು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಬೇಕೆಂದು 1947 ಸೆ. 3ರಂದು ವಿಶ್ವಸಂಸ್ಥೆಗೆ ಆ ಸಮಿತಿ ವರದಿ ಕೊಟ್ಟಂತೆಯೇ, ಭಾರತದ ಬಗ್ಗೆಯೂ ಕೊಡುವಂತಾಗಿದ್ದರೆ ಏನಾಗುತ್ತಿತ್ತು? ‘ಯಹೂದಿ ಏಜೆನ್ಸಿ'ಯ ನಾಯಕ ಡೇವಿಡ್ ಬೆನ್‍ಗುರಿಯನ್ 1948 ಮೇ 14ರಂದು ಸ್ವತಂತ್ರ ಯಹೂದಿ ರಾಷ್ಟ್ರ ಘೋಷಿಸಿದಂತೆಯೇ ಇಲ್ಲಿ ಪ್ರತ್ಯೇಕ ಬೌದ್ಧ ರಾಷ್ಟ್ರ ಘೋಷಿಸಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು? 1949 ಮೇ 1ರಂದು ವಿಶ್ವಸಂಸ್ಥೆಯು ಇಸ್ರೇಲ್‍ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ಕೊಟ್ಟಂತೆಯೇ ಅರುಣಾಚಲ ಪ್ರದೇಶಕ್ಕೂ ಕೊಡುತ್ತಿದ್ದರೆ ನಾವು ಸುಮ್ಮನಿರುತ್ತಿದ್ದೆವೇ? ನಮ್ಮ ಪ್ರತಿಭಟನೆಯನ್ನು ಈ ಬೌದ್ಧ ರಾಷ್ಟ್ರವು ಭಯೋತ್ಪಾದನೆಯೆಂದು ಕರೆಯುತ್ತಿದ್ದರೆ ನಾವದನ್ನು ಒಪ್ಪಿಕೊಳ್ಳುತ್ತಿದ್ದೆವೇ? ಸುಭಾಶ್ ಚಂದ್ರ ಬೋಸ್, ಭಗತ್‍ಸಿಂಗ್‍ರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯುವ ನಾವು ಮತ್ತೇಕೆ ಶೈಕ್ ಯಾಸೀನ್, ರಂತೀಸಿ, ಜಅïಬರಿಯನ್ನು ಭಯೋತ್ಪಾದಕರೆಂದು ಕರೆಯುತ್ತಿದ್ದೇವೆ? ಬ್ರಿಟಿಷ್ ಆಡಳಿತವಿದ್ದ ಭಾರತದಲ್ಲಿ ಕಾಂಗ್ರೆಸ್ ಪಕ್ಷ  ನಡೆಸಿರುವುದು ಸ್ವಾತಂತ್ರ್ಯ ಹೋರಾಟವೆಂದಾದರೆ ಮತ್ತೇಕೆ ಇಸ್ರೇಲ್ ಆಡಳಿತದ ಫೆಲೆಸ್ತೀನ್‍ನಲ್ಲಿ ಹಮಾಸ್‍ನ ಹೋರಾಟವು ಭಯೋತ್ಪಾದನೆಯಾಗಬೇಕು?
   1993: ಓಸ್ಲೋ ಒಪ್ಪಂದ
   2000 ಜುಲೈ: ಕ್ಯಾಂಪ್-ಡೇವಿಡ್ ಒಪ್ಪಂದ
   2001 ಜನವರಿ: ತಾಬಾ ಸಭೆ
   2002 ಸೆ. 7: ಶಾಂತಿಗಾಗಿ ನೀಲನಕ್ಷೆ
   2002 ಮಾರ್ಚ್: ಬೈರೂತ್ ಶಾಂತಿ ಸಭೆ
   2007 : ರಿಯಾದ್ ಶಾಂತಿ ಸಭೆ
1948ರ ಬಳಿಕ ಇಂಥ ಹತ್ತು-ಹಲವು ಸಭೆ, ಕರಾರುಗಳು ನಡೆದಿವೆ. ಅಮೇರಿಕ, ರಶ್ಯ ಯುರೋಪಿಯನ್ ಯೂನಿಯನ್, ಸೌದಿ ಅರೇಬಿಯಾ, ಈಜಿಪ್ಟ್, ವಿಶ್ವಸಂಸ್ಥೆಗಳು ಮಧ್ಯಸ್ಥಿಕೆಯನ್ನೂ ವಹಿಸಿವೆ. ಯಾಸರ್ ಅರಾಫತ್, ಯಹೂದ್ ಬರಾಕ್, ಇಝಾಕ್ ರಬಿನ್, ರಾಜಕುಮಾರ ಅಬ್ದುಲ್ಲಾ, ಏರಿಯಲ್ ಶರೋನ್ ಮುಂತಾದವರು ಫೆಲೆಸ್ತೀನ್ ಸಮಸ್ಯೆಯ ಸುತ್ತ ಚರ್ಚೆಯನ್ನೂ ನಡೆಸಿದ್ದಾರೆ. 1967ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ಅರಬ್ ಭೂಮಿಯಲ್ಲಿ ಯಹೂದಿಯರಿಗಾಗಿ ವಸತಿ ನಿರ್ಮಿಸುವುದನ್ನು ಯುರೋಪಿಯನ್ ಯೂನಿಯನ್ ಈ ಹಿಂದೆಯೇ ಖಂಡಿಸಿದೆ. 2011ರಲ್ಲಿ ವಿಶ್ವಸಂಸ್ಥೆಯೂ ವಿರೋಧಿಸಿತು. ಇದು ಶಾಂತಿ ಮಾತುಕತೆ ಮತ್ತು ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಅಡ್ಡಿಯಾಗುತ್ತಿದೆ ಎಂದಿತು. ಇದನ್ನು ಕಡೆಗಣಿಸಿ 2012ರಲ್ಲಿ ಇಸ್ರೇಲ್ ಮತ್ತೆ ವಸತಿ ನಿರ್ಮಾಣಕ್ಕೆ ಮುಂದಾದಾಗ ಅಂತಾರಾಷ್ಟ್ರೀಯ ಸಮುದಾಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಇಸ್ರೇಲ್‍ನ ಕ್ರಮವು ಈ ಹಿಂದಿನ ರೋಡ್‍ಮ್ಯಾಪ್‍ಗೆ ವಿರುದ್ಧ ಎಂದು ಬ್ರಿಟನ್ ಪ್ರತಿಭಟಿಸಿತು. ಆದರೂ ಇಸ್ರೇಲನ್ನು ನಿಯಂತ್ರಿಸಲು ಈ ಯಾವ ರಾಷ್ಟ್ರಗಳಿಗೂ ಸಾಧ್ಯವಾಗುತ್ತಿಲ್ಲ ಅಂದರೆ ಏನೆನ್ನಬೇಕು? ಪ್ರತ್ಯೇಕ ಇಸ್ರೇಲ್‍ನಂತೆ ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರಕ್ಕೂ UNSCOP ಸಮಿತಿಯು ಶಿಫಾರಸ್ಸು ಮಾಡಿದ್ದನ್ನು ವಿಶ್ವಸಂಸ್ಥೆಯೇಕೆ ಈ ವರೆಗೂ ಜಾರಿಗೊಳಿಸಿಲ್ಲ? ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ನೆರವಿನೊಂದಿಗೆ ಫೆಲೆಸ್ತೀನ್‍ನಲ್ಲಿ ಮಕ್ಕಳ ಮ್ಯಾಗಸಿನ್ ಪ್ರಕಟವಾಗುತ್ತಿತ್ತು. ಫೆಲೆಸ್ತೀನ್ ಅಥಾರಿಟಿಯ (PLO)  ಬೆಂಬಲವೂ ಅದಕ್ಕಿತ್ತು. ಒಮ್ಮೆ ಅದರಲ್ಲಿ ಹಿಟ್ಲರ್‍ನನ್ನು ಮೆಚ್ಚಿಕೊಂಡು ಲೇಖನವೊಂದು ಪ್ರಕಟವಾಯಿತು. ತಕ್ಷಣ ಯುನೆಸ್ಕೋ ಎಷ್ಟು ಸಿಟ್ಟಾಯಿತೆಂದರೆ ತನ್ನ ನೆರವನ್ನೇ ರದ್ದುಪಡಿಸಿತ್ತು. ಕೇವಲ ಲೇಖನವೊಂದಕ್ಕೆ ಈ ಪರಿ ಪ್ರತಿಕ್ರಿಯೆಯನ್ನು ನೀಡಬಲ್ಲಷ್ಟು ಸೂಕ್ಷ್ಮತೆ ಮತ್ತು ಎಚ್ಚರಿಕೆಯುಳ್ಳ ವಿಶ್ವಸಂಸ್ಥೆಗೆ, ಇಸ್ರೇಲ್‍ನ ನಿಯಮೋಲ್ಲಂಘನೆಯೇಕೆ ಕಾಣಿಸುತ್ತಿಲ್ಲ?
   1948ಕ್ಕಿಂತ ಮೊದಲು ಜಾಗತಿಕ ಭೂಪಟದಲ್ಲಿ ಇಸ್ರೇಲ್ ಎಂಬ ರಾಷ್ಟ್ರವೇ ಇರಲಿಲ್ಲ. ಆದರೆ ಫೆಲೆಸ್ತೀನ್ ಇತ್ತು. ಯಹೂದಿಗಳು ಅತ್ಯಂತ ಹೆಚ್ಚಿದ್ದುದು ಜರ್ಮನಿಯಲ್ಲಿ. ಪಶ್ಚಿಮೇಶ್ಯದಲ್ಲಿ ಅವರ ಸಂಖ್ಯೆ ತೀರಾ ಕಡಿಮೆಯಿತ್ತು. ಆದರೆ ಇವತ್ತು ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಇಸ್ರೇಲ್ ಇದೆ, ಫೆಲೆಸ್ತೀನ್ ಇಲ್ಲ. ಆದರೂ ಫೆಲೆಸ್ತೀನಿಯರನ್ನೇ ಭಯೋತ್ಪಾದಕರೆಂದು ಕರೆಯಲಾಗುತ್ತಿದೆ. ಸ್ವತಂತ್ರ ರಾಷ್ಟ್ರವನ್ನು ಹೊಂದುವ ಅವರ ಕನಸನ್ನು ಉಗ್ರವಾದಿ ಕನಸು ಎನ್ನಲಾಗುತ್ತಿದೆ. ನಿಜವಾಗಿ, ಯಹೂದಿಯರಿಗೆ ಅವರದೇ ಆದ ರಾಷ್ಟ್ರವೊಂದರ ಅಗತ್ಯ ಇದೆ ಎಂದಾಗಿದ್ದರೆ, ಅದಕ್ಕೆ ಎಲ್ಲ ರೀತಿಯಲ್ಲೂ ಜರ್ಮನಿಯೇ ಅತ್ಯಂತ ಸೂಕ್ತ ಜಾಗವಾಗಿತ್ತು. ಯಾಕೆಂದರೆ, ಹಾಲೋಕಾಸ್ಟ್ ನಡೆದಿರುವುದು ಅಲ್ಲೇ. ಯಹೂದಿಯರ ಸಂಖ್ಯೆ ಅತ್ಯಂತ ಹೆಚ್ಚಿದ್ದುದೂ ಅಲ್ಲೇ. ಇಷ್ಟಕ್ಕೂ ಇರಾಕಿನಲ್ಲಿರುವ ಕುರ್ದ್‍ಗಳಿಗೆ ಬ್ರಿಟನ್‍ನಲ್ಲಿ ಒಂದು ರಾಷ್ಟ್ರ ಸ್ಥಾಪಿಸಿ ಕೊಡುವುದಕ್ಕೆ ಆ ದೇಶ ಒಪ್ಪಿಕೊಂಡೀತೇ? ಇರಾಕ್‍ನ ಸುನ್ನಿಗಳಿಗೆ ಅಮೇರಿಕದಲ್ಲಿ ಒಂದು ರಾಷ್ಟ್ರ ಸ್ಥಾಪಿಸಿಕೊಡಬಹುದೇ? ಇರಾಕನ್ನು ವಿಭಜಿಸಿ ಕುರ್ದ್, ಸುನ್ನಿ ಮತ್ತು ಶಿಯಾ ರಾಷ್ಟ್ರಗಳನ್ನಾಗಿ ಮಾಡಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ಚರ್ಚಿಸುತ್ತಿವೆಯಾದರೂ ಅವು ತಮ್ಮ ನೆಲದಲ್ಲಿ ಅವರಿಗಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸುತ್ತಿಲ್ಲ. ಇರಾಕನ್ನೇ ಅದಕ್ಕಾಗಿ ವಿಭಜಿಸುವ ಮಾತಾಡುತ್ತಿವೆ. ಮತ್ತೇಕೆ ಇಸ್ರೇಲನ್ನು ತಂದು ಫೆಲೆಸ್ತೀನ್‍ನಲ್ಲಿ ಸ್ಥಾಪಿಸಲಾಗಿದೆ? ಜರ್ಮನಿಯನ್ನೇ ವಿಭಜಿಸಿ ಒಂದು ಇಸ್ರೇಲ್ ರಾಷ್ಟ್ರ ಮಾಡಬಹುದಿತ್ತಲ್ಲವೇ? ಕುರ್ದ್, ಸುನ್ನಿ, ಶಿಯಾಗಳ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರವನ್ನು ಯಹೂದಿಗಳ ವಿಷಯದಲ್ಲೇಕೆ ಕಡೆಗಣಿಸಲಾಯಿತು?
   ಕಳೆದ ಜೂನ್ 24ರಂದು ಹಮಾಸ್‍ನ ಅಲ್ ಅಖ್ಸಾ ಟಿವಿ ಚಾನೆಲ್ ಕೆಲವು ದೃಶ್ಯಗಳನ್ನು ಪ್ರಸಾರ ಮಾಡಿತು. ಹಮಾಸ್‍ನ ಸೇನಾ ವಿಭಾಗವು ಚಾಲಕ ರಹಿತ ಅಬಾಬೀಲ್ 1ಎ, ಅಬಾಬೀಲ್ 1ಬಿ ಎಂಬ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಅದು ಘೋಷಿಸಿತು. ಇದು ಇಸ್ರೇಲ್‍ನ ರಕ್ಷಣಾ ಸಚಿವಾಲಯದ ಮೇಲೆ ಹಾರಿ ದೃಶ್ಯಗಳನ್ನು ಸೆರೆ ಹಿಡಿದಿರುವುದಾಗಿಯೂ ಹೇಳಿಕೊಂಡಿತಲ್ಲದೇ ಕೆಲವು ದೃಶ್ಯಗಳ ಪ್ರಸಾರವನ್ನೂ ಮಾಡಿತು. ಕ್ಯಾಮರಾ ಮತ್ತು ರಾಕೆಟ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಚಾಲಕ ರಹಿತ ವಿಮಾನವೊಂದನ್ನು ಅಶ್ಕಲೋನ್‍ನಲ್ಲಿ ತಾನು ಹೊಡೆದುರುಳಿಸಿರುವುದಾಗಿ ಆ ಬಳಿಕ ಇಸ್ರೇಲ್ ಹೇಳಿಕೊಂಡಿತ್ತು. ಗಾಝಾದಿಂದ ನೂರು ಕಿಲೋ ವಿೂಟರ್ ದೂರ ಇರುವ ಟೆಲ್‍ಅವೀವ್‍ಗೆ 2012ರಲ್ಲಿ 3 ರಾಕೆಟ್‍ಗಳನ್ನು ಹಾರಿಸಿದ್ದ ಹಮಾಸ್ ಈ ಬಾರಿ 130 ಕಿ.ವಿೂ. ದೂರದ ವಾಣಿಜ್ಯ ನಗರ ಹೈಫಕ್ಕೂ ರಾಕೆಟ್‍ಗಳನ್ನು ಹಾರಿಸಿತು. ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೂ ರಾಕೆಟ್ ಆಕ್ರಮಣದ ಬೆದರಿಕೆ ಉಂಟಾಯಿತಲ್ಲದೇ, ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. 2012ರಲ್ಲಿ ಸಾವಿಗೀಡಾದ ಖಸ್ಸಾಂ ಬ್ರಿಗೇಡ್‍ನ ಕಮಾಂಡರ್ ಅಹ್ಮದ್ ಜಅïಬರಿಯ ಹೆಸರಿನಲ್ಲಿ ರೂಪಿಸಲಾದ ಜೆ. 80 ಎಂಬ ರಾಕೆಟ್‍ಗಳನ್ನು ಟೆಲ್ ಅವೀವ್, ಹೈಫ ಮತ್ತು ಪರಮಾಣು ಸ್ಥಾವರ ಇರುವ ದಿಮೋನ್‍ಗೂ ಹಾರಿಸಲಾಯಿತು. ಈ ಮೊದಲಾಗಿದ್ದರೆ ಗಾಝಾದ ಸವಿೂಪವಿರುವ ಅಶ್ಕಲೋನ್, ಅಶ್‍ದೋದ್, ಸೆದ್‍ರೋತ್ ಮುಂತಾದ ನಗರಗಳಿಗಷ್ಟೇ ಹಮಾಸ್‍ನ ರಾಕೆಟ್‍ಗಳು ಹಾರಬಲ್ಲವಾಗಿದ್ದುವು. ನಿಜವಾಗಿ, ಇಸ್ರೇಲ್‍ನ ದಿಗ್ಬಂಧನ ಕಠಿಣವಾದಂತೆಲ್ಲ ಹಮಾಸ್‍ನ ಪ್ರತಿರೋಧ ಸಾಮರ್ಥ್ಯವೂ ವೃದ್ಧಿಸುತ್ತಿದೆ. ಇದು ಇಸ್ರೇಲ್‍ಗೂ ಗೊತ್ತಾಗಿದೆ. ಆದ್ದರಿಂದಲೇ, ಅದು ಭೂದಾಳಿಗೆ ಮುಂದಾಗಿದೆ. ಒಂದು ವೇಳೆ,
   ಅಮೇರಿಕದ ನ್ಯೂಯಾರ್ಕ್‍ನಲ್ಲೋ ಬ್ರಿಟನ್ನಿನ ಲಂಡನ್ನಿನಲ್ಲೋ ಅಥವಾ ಸೌದಿ ಅರೇಬಿಯಾದ ರಿಯಾದ್‍ನಲ್ಲೋ ಇಸ್ರೇಲ್‍ನ ಸ್ಥಾಪನೆಯಾಗಿರುತ್ತಿದ್ದರೆ ಅವುಗಳಿಗೂ ಫೆಲೆಸ್ತೀನ್‍ನ ನೋವು ಅರ್ಥವಾಗುತ್ತಿತ್ತು.

No comments:

Post a Comment