Monday, April 8, 2013

ಯುವಕರತ್ತ ಗುರಿ ಮಾಡಿದ್ದ ಬಂದೂಕು ಯುವತಿಯರತ್ತ ತಿರುಗಿತೇಕೆ?

   ಜಿಐಓ (ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್)ನ ಮೇಲೆ ನಿಗಾ ಇಡುವಂತೆ ಮಹಾರಾಷ್ಟ್ರದ ಎಲ್ಲಾ ಪೊಲೀಸ್  ಠಾಣೆಗಳಿಗೆ  ಮುಂಬೈಯ ಗುಪ್ತಚರ ಸಂಸ್ಥೆಗಳು ಸುತ್ತೋಲೆ ಹೊರಡಿಸಿರುವುದನ್ನು, Erroreous memo puts Mumbai cops in spot-  ಎಂಬ ಶೀರ್ಷಿಕೆಯಲ್ಲಿ ಪಿಟಿಐ ಕಳೆದವಾರ ವರದಿ ಮಾಡಿತು. Mumbai police shocker: Muslim institute is enrolling for Jihad  ಎಂಬ ಹೆಡ್‍ಲೈನ್‍ನಲ್ಲಿ NDTV ಸುದ್ದಿ ಪ್ರಕಟಿಸಿದರೆ;  Storm after cop memo leak over Girls Islamic Organisation ಎಂದು ದಿ ಟೆಲಿಗ್ರಾಫ್ ಪತ್ರಿಕೆ ಸುದ್ದಿ ಬರೆಯಿತು. ಎಪ್ರಿಲ್ ಒಂದರಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸುದ್ದಿ ಮರುದಿನ ಹೆಚ್ಚಿನೆಲ್ಲಾ ಆಂಗ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಯಿತು. ಸುತ್ತೋಲೆಯಲ್ಲಿ,
   ‘ಜಮಾಅತೆ ಇಸ್ಲಾಮೀ  ಹಿಂದ್‍ನ ಅಂಗಸಂಸ್ಥೆಯಾದ ಜಿಐಓವು ಮಹಾರಾಷ್ಟ್ರದಲ್ಲಿ 40 ಹೈಸ್ಕೂಲ್ ಮತ್ತು 3 ಜೂನಿಯರ್ ಕಾಲೇಜುಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿನಿಯರ ಬ್ರೈನ್‍ವಾಶ್ ಮಾಡುತ್ತಿದೆ. ಅವರಿಗೆ ಜಿಹಾದ್‍ನ ತರಬೇತಿ ನೀಡುತ್ತಿದೆ. ಸಂಘಟನೆಯ ಸ್ವಾಲಿಹಾ ಬಾಜಿ ಮತ್ತು ಸುಮಯ್ಯ ಎಂಬಿಬ್ಬರು ಈ ವಿಷಯದಲ್ಲಿ ತುಂಬಾ ಮುಂದಿದ್ದಾರೆ. ಅವರ ಬಗ್ಗೆ ವಿಶೇಷ ಗಮನವಿಡಬೇಕು. ಇಸ್ಲಾಮಿನಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಾ, ಅವರಲ್ಲಿ ಜಿಹಾದಿ ಪ್ರಜ್ಞೆಯನ್ನು ಅದು ತುಂಬುತ್ತಿದೆ..' ಎಂದೆಲ್ಲಾ ಹೇಳಲಾಗಿತ್ತು. ಆನ್‍ಲೈನ್‍ನಲ್ಲಿ ಈ ಕುರಿತಂತೆ ಧಾರಾಳ ಚರ್ಚೆಗಳು ನಡೆದುವು. ಅಲ್ಲದೇ,
   'ಜನರು ಇವತ್ತು ವಿಜ್ಞಾನದೆಡೆಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವಾಗ, ಈ ಸಂಘಟನೆಯು ಯುವತಿಯರನ್ನು ಬುರ್ಖಾ ಧರಿಸುವಂತೆ ಮತ್ತು ಇಸ್ಲಾಮನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತಿದೆ. ಆದ್ದರಿಂದಲೇ ನಾವು ಇವರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ..' ಎಂದು ಗುಪ್ತಚರ ಸಂಸ್ಥೆಯ ವಿಶೇಷ ದಳದ ಮುಖ್ಯಸ್ಥ ಸಂಜಯ್ ಶಿಂತ್ರೆ ಪತ್ರಕರ್ತರೊಂದಿಗೆ ಹೇಳಿಕೊಂಡದ್ದು ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು. ‘ವೈಜ್ಞಾನಿಕ ಆಲೋಚನೆಗಳನ್ನು ಹೊಂದುವುದೆಂದರೆ ಬಟ್ಟೆಗಳನ್ನೆಲ್ಲಾ ಕಳಚುವುದು ಎಂದರ್ಥವೇ..’ ಎಂದು ಚರ್ಚೆಯಲ್ಲಿ ಭಾಗವಹಿಸಿದ ಒಬ್ಬರು ಪ್ರಶ್ನಿಸಿದರೆ, 'ಮೈ ಮುಚ್ಚುವ ಬಟ್ಟೆ ಧರಿಸುವುದು ವಿಜ್ಞಾನಕ್ಕೆ ವಿರುದ್ಧವೇ'..  ಎಂದು ಇನ್ನೊಬ್ಬರು ಪ್ರಶ್ನಿಸಿದರು. Leaked information is secondary, but how that Mumbai police has issued such an internal notice where an organisation is working for the good cause. Is the police is blind as they cant differentiate between good and bad...  It is very clear that the Mumbai police is acting as per the script written by the RSS and VHP -  ಗುಪ್ತಚರ ಇಲಾಖೆಯು ಹೊರಡಿಸಿದ ಸುತ್ತೋಲೆ ಹೇಗೆ ಸೋರಿಕೆಯಾಯಿತು ಎಂಬುದು ಮುಖ್ಯವಲ್ಲ, ಬದಲು ಒಳಿತಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯ ವಿರುದ್ಧ ಪೊಲೀಸರು ಇಂಥದ್ದೊಂದು ಸುತ್ತೋಲೆ ಹೊರಡಿಸಿದ್ದಾದರೂ ಹೇಗೆ? ಒಳಿತು ಮತ್ತು ಕೆಡುಕಿನ ನಡುವೆ ಇರುವ ವ್ಯತ್ಯಾಸವನ್ನು ತಿಳಿಯದಷ್ಟು ಅವರು ಕುರುಡಾಗಿ ಬಿಟ್ಟರೇ? ಇದಕ್ಕೆ ಪೊಲೀಸರು ಕ್ಷಮೆ ಯಾಚಿಸುವುದು ಪರಿಹಾರವಲ್ಲ. ಅವರು ತಕ್ಷಣ ಈ ಸುತ್ತೋಲೆಯನ್ನು ಹಿಂಪಡೆದು ಜಿಐಓನ ಮೇಲೆ ನಿಗಾ ಇಡುವುದನ್ನು ನಿಲ್ಲಿಸಬೇಕು. ಈ ಬೆಳವಣಿಗೆಯನ್ನು ನೋಡುವಾಗ ಮುಂಬೈ ಪೊಲೀಸರು ಆರೆಸ್ಸೆಸ್ ಮತ್ತು ವಿಹಿಂಪದ ಕಾರ್ಯಸೂಚಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತಿದೆ..’ ಅಂತ ಚೆನ್ನೈಯ ಯೂನುಸ್ ಎಂಬವರು ಬರೆದರೆ; ಅಮೇರಿಕದಲ್ಲಿರುವ ಸುರೇಶ್ ಎಂಬವರು,
   ‘ತನಿಖಾ ಸಂಸ್ಥೆಗಳು ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಅನುಮಾನಗೊಂಡಾಗ ಅದರ ವಿರುದ್ಧ ಮುಗಿ ಬೀಳುವುದು ಸರಿಯಲ್ಲ. ಅವರು ತನಿಖೆ ನಡೆಸಲಿ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ನಿಗಾ ವಹಿಸುವುದು, ಅನುಮಾನಗೊಳ್ಳುವುದೆಲ್ಲ ಅಸಹಜ ಅಲ್ಲ. ದೇಶದ ತನಿಖಾ ಸಂಸ್ಥೆಗಳನ್ನು ಎಲ್ಲ ಬಾಹ್ಯ ಒತ್ತಡಗಳಿಂದ ಮುಕ್ತಗೊಳಿಸುವುದು ಮತ್ತು ತೀರಾ ಸಣ್ಣ ವಿಷಯದಲ್ಲೂ ತನಿಖೆಗೆ ಪೂರ್ಣ ಸ್ವಾತಂತ್ರ್ಯ ಕೊಡುವುದು ನಮ್ಮ ಅಗತ್ಯವಾಗಿದೆ..' ಎಂದು ಬರೆದರು. ಹೀಗೆ ಚರ್ಚೆಗಳು ಸಾಗುತ್ತಿರುವಂತೆಯೇ ಪ್ರಕರಣದ ಎರಡು ದಿನಗಳ ಬಳಿಕ ಮುಂಬೈ ಪೊಲೀಸರು ಕ್ಷಮೆ ಯಾಚಿಸಿದರು. ಜಮಾಅತ್‍ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ  ಮುಹಮ್ಮದ್ ಅಸ್ಲಮ್ ಖಾನ್ ನೇತೃತ್ವದ ನಿಯೋಗಕ್ಕೆ ತನಿಖೆ ನಡೆಸುವ ಭರವಸೆ ನೀಡಿದರು. ಆದರೆ ಕ್ಷಮೆ, ತನಿಖಾ ಭರವಸೆಗಳೇನೇ ಇರಲಿ, ಸುತ್ತೋಲೆಯು ಸಾರ್ವಜನಿಕವಾಗಿ ಕೆಲವು ಅನುಮಾನಗಳನ್ನಂತೂ ಹುಟ್ಟು ಹಾಕಿದೆ. ಭಯೋತ್ಪಾದನೆಯ ಹೆಸರಲ್ಲಿ ಅಮಾಯಕ ಮುಸ್ಲಿಮ್ ಯುವಕರ ಬಂಧನದ ಕುರಿತಂತೆ ತನಿಖೆ ನಡೆಸಲು ತ್ವರಿತ ನ್ಯಾಯಾಲಯಗಳನ್ನು ರಚಿಸಲಾಗುವುದೆಂದು ಗೃಹ ಸಚಿವ ಶಿಂಧೆಯವರು ಘೋಷಿಸಿದ ಬೆನ್ನಲ್ಲೇ ಮುಸ್ಲಿಮ್ ಯುವತಿಯರ ಮಧ್ಯೆಯೂ 'ಜಿಹಾದಿ' ತರಬೇತಿಗಳು ನಡೆಯುತ್ತಿವೆಯೆಂಬ ಸುದ್ದಿಯನ್ನು ಹರಿಬಿಡುವುದಕ್ಕೆ ಕಾರಣವೇನು? ಇದು ಕಾಕತಾಳೀಯವೇ (Co- inside) ಅಥವಾ ಇದರ ಹಿಂದೆ ನಿಗೂಢ ಉದ್ದೇಶಗಳಿವೆಯೇ? ಜಿಐಓನ ವಿರುದ್ಧ ಒಂದೇ ಒಂದು ಕೇಸು ದಾಖಲಾಗಿಲ್ಲ ಎಂದು ಮುಂಬೈ ಪೊಲೀಸ್ ಮುಖ್ಯಸ್ಥರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಇಸ್ಲಾಮಿನಂತೆ ಬದುಕಲು ಮುಸ್ಲಿಮ್ ಯುವತಿಯರನ್ನು ಜಿಐಓ ಪ್ರೇರೇಪಿಸುತ್ತಿದೆ ಎಂದೂ ಹೇಳುತ್ತಿದ್ದಾರೆ. ಇದೇನು ದೇಶ ವಿರೋಧಿ ಕೃತ್ಯವೇ? ಈ ದೇಶದ ಸಂವಿಧಾನವೇ ಒದಗಿಸಿರುವ ಸ್ವಾತಂತ್ರ್ಯವನ್ನು ಭಯೋತ್ಪಾದನಾ ಚಟುವಟಿಕೆಯಂತೆ, ನಿಗಾ ಇಡುವಷ್ಟು ಉಗ್ರ ಕೃತ್ಯದಂತೆ ಯಾಕೆ ನೋಡಬೇಕು? ಜಿಐಓನ ಚಟುವಟಿಕೆಗಳೇನೂ ಭೂಗತವಾಗಿ ನಡೆಯುತ್ತಿಲ್ಲವಲ್ಲ. ಅದರ ಸಂವಿಧಾನ ಎಲ್ಲರಿಗೂ ಸಿಗುವಷ್ಟು ಮುಕ್ತವಾಗಿದೆ. ಅದರ ಕಚೇರಿಗಳು ಕೂಡ ವಿಳಾಸ ಸಮೇತ ಸಾರ್ವಜನಿಕರಿಗೆ ಲಭ್ಯವಿವೆ. ಯಾರಿಗೆ ಬೇಕಾದರೂ ಅದರ ಚಟುವಟಿಕೆಗಳನ್ನು ವೀಕ್ಷಿಸುವ, ಪಾಲುಗೊಳ್ಳುವ ಅವಕಾಶಗಳೂ ಇವೆ. ಹೀಗಿರುತ್ತಾ, ಜಿಐಓವನ್ನು ಶಂಕಿತಗೊಳಿಸುವ ಸುತ್ತೋಲೆಯೊಂದು ಹೊರಡುತ್ತದೆಂದರೆ ಅದನ್ನು ಕಡೆಗಣಿಸುವುದಾದರೂ ಹೇಗೆ? ಇಷ್ಟಕ್ಕೂ ಈ ದೇಶದಲ್ಲಿ ಜಿಐಓ ಎಂಬ ಸಂಘಟನೆ ಇರುವುದು ಮಹಾರಾಷ್ಟ್ರದಲ್ಲಿ ಮಾತ್ರ ಅಲ್ಲ, ದೇಶದಾದ್ಯಂತ ಇದೆ. ಅಲ್ಲದೆ, ಅದರ ಸಂವಿಧಾನ, ಕಾರ್ಯವಿಧಾನ, ಗುರಿ, ಉದ್ದೇಶಗಳೆಲ್ಲವೂ ದೇಶದಾದ್ಯಂತ ಒಂದೇ. www.giomsz.blogspot.com  ಎಂಬ ಲಿಂಕ್‍ಗೆ ಕ್ಲಿಕ್ ಮಾಡಿದರೆ ಮುಂಬೈಯ ಜಿಐಓ ಘಟಕವು ಈ ವರೆಗೆ ಏನೆಲ್ಲ ಚಟುವಟಿಕೆಗಳನ್ನು ನಡೆಸಿದೆ, ಅದರ ವಿಶೇಷತೆಯೇನು, ಅದರ ಕಾರ್ಯವಿಧಾನ ದೇಶಕ್ಕೆ ಮಾರಕವೋ ಪೂರಕವೋ.. ಎಂಬಿತ್ಯಾದಿಗಳನ್ನೆಲ್ಲ ಗುಪ್ತಚರ ಇಲಾಖೆಯ ಸಹಿತ ಯಾರಿಗೆ ಬೇಕಾದರೂ ಮನವರಿಕೆ ಮಾಡಿಕೊಳ್ಳಬಹುದು. ಇಷ್ಟಿದ್ದೂ ನೈತಿಕತೆ ಅಳವಡಿಸಿಕೊಳ್ಳುವಂತೆ, ಧರ್ಮದ ಪ್ರಕಾರ ಬದುಕುವಂತೆ ಪ್ರೇರೇಪಿಸುವುದನ್ನು ಸುತ್ತೋಲೆಯಲ್ಲಿ ಅಪರಾಧವಾಗಿ ಪರಿಗಣಿಸಿರುವುದು ಮತ್ತು ಪೊಲೀಸ್ ಇಲಾಖೆಯ ಒಳಗೇ ಸುತ್ತಬೇಕಾದ ಈ ಸುತ್ತೋಲೆಯನ್ನು ಶಿವಸೇನೆಯ ಸಾಮ್ನಾ ಪತ್ರಿಕೆಗೆ ಮೊದಲು ಸೋರಿಕೆ ಮಾಡಿರುವುದು ಏನನ್ನು ಸೂಚಿಸುತ್ತದೆ? ಜಿಐಓ ಮತ್ತು ಆ ಮೂಲಕ ಜಮಾಅತ್‍ನ ಮೇಲೆ ಸಾರ್ವಜನಿಕರಲ್ಲಿ ಒಂದು ಬಗೆಯ ಅನುಮಾನವನ್ನು ಮೂಡಿಸುವ ಉದ್ದೇಶ ಇದರ ಹಿಂದೆ ಇಲ್ಲ ಅನ್ನುತ್ತೀರಾ? ಬಂಗ್ಲಾದೇಶದ ಜಮಾಅತೆ ಇಸ್ಲಾಮಿಯ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ತಾಳೆ ಮಾಡಿ ನೋಡಿಕೊಳ್ಳಿ. ಪೊಲೀಸರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನ ಬರುವುದಿಲ್ಲವೇ? ಬಂದೂಕು ಹಿಡಿದ ಬುರ್ಖಾಧಾರಿ ಮಹಿಳೆಯರ ಪೊಟೋದ ಜೊತೆ ಈ ಸುದ್ದಿಯನ್ನು ಪ್ರಕಟಿಸುವುದಕ್ಕೆ ಸಾಮ್ನಾ ಪತ್ರಿಕೆಗೆ ಅವಕಾಶ ಮಾಡಿಕೊಟ್ಟದ್ದಾದರೂ ಯಾರು? ಸುತ್ತೋಲೆಯು ಯಾಕೆ ಮುಸ್ಲಿಮ್ ವಿರೋಧಿ ಧೋರಣೆಯುಳ್ಳ ಸಾಮ್ನಾಕ್ಕೇ ಪ್ರಥಮವಾಗಿ ಸೋರಿಕೆಯಾಗಬೇಕು? ಜಿಐಓವು ಯುವತಿಯರಿಗೆ ಬಂದೂಕಿಗೆ ತರಬೇತಿ ಕೊಡುತ್ತಿದೆ ಎಂಬ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಬಿತ್ತುವುದಕ್ಕೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಾಮ್ನಾದ ಮುಖಾಂತರ ನಡೆಸಿರುವ ಸಂಚು ಇದಾಗಿರಬಾರದೇಕೆ? ಅಂದಹಾಗೆ,
  1. ಒಳಿತಿನ ಅಭಿವೃದ್ಧಿ ಮತ್ತು ಕೆಡುಕಿನ ನಿರ್ಮೂಲನಕ್ಕಾಗಿ ಯುವತಿಯರನ್ನು ಪ್ರೇರೇಪಿಸುವುದು.
  2. ಸಮಾಜದಲ್ಲಿರುವ ಕೆಡುಕುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದು.
  3. ಇಸ್ಲಾಮೀ  ಜೀವನ ಕ್ರಮದ ಆಧಾರದಲ್ಲಿ ಕುಟುಂಬ ನಿರ್ಮಾಣಕ್ಕಾಗಿ ಯುವತಿಯರನ್ನು ತಯಾರುಗೊಳಿಸುವುದು.
  4. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಉತ್ತಮ ಚಾರಿತ್ರ್ಯ ಹಾಗೂ ಉನ್ನತ ಶಿಷ್ಟಾಚಾರಗಳನ್ನು ಬೆಳೆಸುವುದು.
  5. ನೈತಿಕ ಮೇರೆಗಳನ್ನು ಪಾಲಿಸುತ್ತಾ, ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಕೋಮು ದ್ವೇಷ, ಅಶಾಂತಿಗೆ ಕಾರಣವಾಗುವ ವಿಧಾನಗಳಿಂದ ದೂರವಿದ್ದುಕೊಂಡು ರಚನಾತ್ಮಕ ರೂಪದಲ್ಲಿ ಇವುಗಳ ಜಾರಿಗಾಗಿ ಪ್ರಯತ್ನಿಸುವುದು..
   ಮುಂತಾದ ಅಂಶಗಳಿರುವ ಜಿಐಓನ ಸಂವಿಧಾನದಲ್ಲಿ ದೇಶದ ಸಮಗ್ರತೆಗೆ, ಶಾಂತಿಯುತ ವ್ಯವಸ್ಥೆಗೆ ಭಂಗ ತರುವಂಥದ್ದು ಏನಿದೆ? ಇಸ್ಲಾಮಿನಂತೆ ಜೀವಿಸಿ ಎಂದು ಕರೆಕೊಟ್ಟು, ಅದಕ್ಕಾಗಿ ಪ್ರಯತ್ನಿಸುವುದು ಶಂಕಿತ ಚಟುವಟಿಕೆಯೇ? ಮುಂಬೈಯ ಜಿಐಓವಂತೂ, ‘ಪರೀಕ್ಷೆಯನ್ನು ಎದುರಿಸುವುದು ಹೇಗೆ; ಪ್ರಬಂಧ, ಸಂವಾದ, ಪೈಂಟಿಂಗ್ಸ್ ಸ್ಪರ್ಧೆಗಳು, ಇಸ್ಲಾಮೀ  ರಜಾದಿನ ಶಿಬಿರ (VIC), ಕ್ಯಾರಿಯರ್ ಗೈಡೆನ್ಸ್, ಸೆಮಿನಾರ್, ಅಧ್ಯಯನ ತರಗತಿಗಳು, ಗೆಟ್ ಟುಗೆದರ್.. ಮುಂತಾದ ವಿವಿಧ                ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಬ್ಲಾಗ್‍ನಲ್ಲಿಯೇ ಹೇಳಿಕೊಂಡಿದೆ. ಇದರಲ್ಲಿ ಭಯೋತ್ಪಾದನೆಗೆ ಪೂರಕವಾಗಿರುವುದು ಯಾವುದಿದೆ? ಅಲ್ಲದೇ, ದೇಶದಾದ್ಯಂತ ಜಿಐಓ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ತಮಿಳುನಾಡಿನ ಕುಡಂಕುಲಮ್‍ನಲ್ಲಿ ನಿರ್ಮಾಣವಾಗುತ್ತಿರುವ ಅಣುವಿದ್ಯುತ್ ಸ್ಥಾವರದ ವಿರುದ್ಧ ಮರಳಿನಲ್ಲಿ ಸ್ವಯಂ ಅರ್ಧ ಹೂತುಕೊಂಡು ಪ್ರತಿಭಟಿಸಿ ದೇಶದ ಗಮನ ಸೆಳೆದಿದ್ದರೆ ಅದು ಜಿಐಓ ಮಾತ್ರ. ದೆಹಲಿ ಅತ್ಯಾಚಾರದ ವಿರುದ್ಧ ಜಿಐಓ ರಾಲಿ, ಪ್ರತಿಭಟನೆ, ಸೆಮಿನಾರ್‍ಗಳನ್ನು ನಡೆಸಿದೆ. ಕರ್ನಾಟಕದ ಜಿಐಓ ಘಟಕವಂತೂ ಇತ್ತೀಚೆಗಷ್ಟೇ, 'ಲಜ್ಜೆ- ನನ್ನ ಜೀವನದ ಪ್ರತಿಬಿಂಬ '- ಎಂಬ ವಿಷಯದಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವತಿಯರಲ್ಲಿ ನೈತಿಕ ಮೇರೆಗಳನ್ನು ಪಾಲಿಸುವಂತೆ ಕರೆ ಕೊಡುವ ಕ್ಯಾಂಪಸ್ ಉಪನ್ಯಾಸಗಳನ್ನು ನಡೆಸುತ್ತಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅವರ ಧರ್ಮ ನೋಡದೇ ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಿದೆ. ಇವೆಲ್ಲ ಶಂಕಿತ ಚಟುವಟಿಕೆಗಳು ಎಂದಾದರೆ ಅಶಂಕಿತ ಚಟುವಟಿಕೆಗಳಾದರೂ ಯಾವುದು? ನಿಜವಾಗಿ, ಇವತ್ತು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವುದೇ ಯುವತಿಯರು. ಅತ್ಯಾಚಾರದ ಸುದ್ದಿಗಳು ಸುದ್ದಿ-ಮಾಧ್ಯಮಗಳನ್ನಿಡೀ ತುಂಬಿಕೊಂಡು ಭೀತಿಯ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶ ಇವತ್ತಿನದು. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಬಗ್ಗೆ ಕಾನೂನೇ ನಿರ್ಮಾಣವಾಗಿದ್ದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದರ ಜೊತೆಗೇ ಅತ್ಯಾಚಾರಕ್ಕೆ ಪ್ರಚೋದಕವಾಗುವ ಹೆಣ್ಣಿನ ವರ್ತನೆಗಳೂ ಸಾರ್ವಜನಿಕವಾಗಿ ಚರ್ಚೆಯಲ್ಲಿವೆ. ನೈತಿಕ-ಅನೈತಿಕಗಳು ವಿವಿಧ ಸೆಮಿನಾರ್‍ಗಳ, ಪತ್ರಿಕಾ ಬರಹಗಳ ವಸ್ತುವಾಗುತ್ತಿವೆ. ಇಂಥ ಹೊತ್ತಲ್ಲಿ, ಅತ್ಯಾಚಾರಿಗಳ ಬದಲು ನೈತಿಕ ಮೇರೆಗಳ ಬಗ್ಗೆ ಜಾಗೃತಿ ಮೂಡಿಸುವ ಯುವತಿಯರು ಶಂಕಿತಗೊಳ್ಳುವುದಕ್ಕೆ ಏನೆನ್ನಬೇಕು? ಅಂಥ ಸುತ್ತೋಲೆಯನ್ನು ತಯಾರುಗೊಳಿಸಿ ಸೋರಿಕೆ ಮಾಡಿದವರ ಉದ್ದೇಶ ಏನಿರಬಹುದು? ಈ ಸೋರಿಕೆ ಆಕಸ್ಮಿಕವೋ ಉದ್ದೇಶಪೂರ್ವಕವೋ?
   ಮುಸ್ಲಿಮ್ ಯುವಕರತ್ತ ಗುರಿ ಮಾಡಿದ್ದ ವ್ಯವಸ್ಥೆಯ ಬಂದೂಕು ಇದೀಗ ಯುವತಿಯರತ್ತ ತಿರುಗಿರುವುದಕ್ಕೆ ಖಂಡಿತ ಶಂಕಿತ ಉದ್ದೇಶವೊಂದು ಇರಲೇಬೇಕು.

1 comment:

  1. Dear Sir, Your blog appeaed in a right time with a very good investigations. Most of the COPs are behaving as if they are the brand ambassadors of RSS. Your efforts of throwing light in these kind of issues are great.

    ReplyDelete