Monday, April 22, 2013

ಇಷ್ಟಿದ್ದೂ ಆ ಅಜೆಂಡಾದಲ್ಲಿ ಇನ್ನೂ ನಿರೀಕ್ಷೆ ಇಟ್ಟುಕೊಂಡಿದ್ದೀರಲ್ಲ, ಏಕೆ?

   1985ರಲ್ಲಿ ರಾಮನಿಗಾಗಿ ಸಂತರು ದೇಶಾದ್ಯಂತ ನಡೆಸಿದ ಪಾದಯಾತ್ರೆ, 1989ರ ಇಟ್ಟಿಗೆ ಚಳವಳಿ, 1990ರ ರಾಮಜ್ಯೋತಿ ಯಾತ್ರೆ, 1992 ಅಕ್ಟೋಬರ್‍ನಲ್ಲಿ ನಡೆದ ರಾಮ ಪಾದುಕಾ ಯಾತ್ರೆ ಮತ್ತು 92 ಡಿಸೆಂಬರ್‍ನಲ್ಲಿ ನಡೆದ ಬಾಬರಿ ಮಸೀದಿಯ ಧ್ವಂಸ.. ಇವುಗಳು ಬಿಜೆಪಿಗೆ ರಾಜಕೀಯವಾಗಿ ಭಾರೀ ಲಾಭವನ್ನು ತಂದುಕೊಟ್ಟಿವೆ ಎಂದು ಅನೇಕ ಮಂದಿ ಬಲವಾಗಿ ನಂಬಿದ್ದಾರೆ. 1984ರಲ್ಲಿ 2 ಲೋಕಸಭಾ ಸೀಟುಗಳನ್ನಷ್ಟೇ (ಅಡ್ವಾಣಿ, ವಾಜಪೇಯಿ) ಹೊಂದಿದ್ದ ಬಿಜೆಪಿ, 96ರಲ್ಲಿ ಸರಕಾರ ರಚಿಸುವಷ್ಟು ಬೆಳೆದಿರುವುದಕ್ಕೆ ಈ ರಾಮ ಮಂದಿರ ಚಳವಳಿಯೇ ಕಾರಣ ಎಂದು ಬಿಜೆಪಿಯ ವಿರೋಧಿಗಳೂ ಅಂದು ಕೊಂಡಿದ್ದಾರೆ. ಆದರೆ ನಿಜಸ್ಥಿತಿ ಹಾಗಿದೆಯೇ? ರಾಮ ಜನ್ಮಭೂಮಿ ಚಳವಳಿ ಬಿಜೆಪಿಗೆ ಎಷ್ಟರ ಮಟ್ಟಿಗೆ ಲಾಭವನ್ನು ತಂದುಕೊಟ್ಟಿದೆ? 96ರಲ್ಲಿ ಸರಕಾರ ರಚಿಸುವಷ್ಟು ಅದು ಪ್ರಬಲ ಪಕ್ಷವಾಗಿ ಮೂಡಿ ಬಂದಿರುವುದಕ್ಕೆ ಕೇವಲ ಮಂದಿರ ಚಳವಳಿಯೊಂದೇ ಕಾರಣವೇ ಅಥವಾ ವಿ.ಪಿ. ಸಿಂಗ್‍ರ ಮಂಡಲ್ ಇಶ್ಯೂ, ಬೋಫೋರ್ಸ್ ಹಗರಣ ಸಹಿತ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅದಾಗಲೇ ಸೃಷ್ಟಿ ಮಾಡಿದ್ದ ಸನ್ನಿವೇಶಗಳೇ? 80 ರ ದಶಕದಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಬಂಡೆದ್ದು ತೃತೀಯರಂಗ ಕಟ್ಟಿಕೊಂಡ ವಿ.ಪಿ. ಸಿಂಗ್‍ರ ಜೊತೆ ಬಿಜೆಪಿ ಕೈ ಜೋಡಿಸಿತು. ಸರಕಾರದಲ್ಲಿ ಭಾಗಿಯಾಯಿತು. ಹೀಗೆ ಅಪರಿಚಿತವಾಗಿದ್ದ ಬಿಜೆಪಿಯನ್ನು ಈ ದೇಶದ ಮಂದಿಗೆ ಪರಿಚಯಿಸಿಕೊಟ್ಟಿದ್ದೇ ವಿ.ಪಿ. ಸಿಂಗ್. (ಕರ್ನಾಟಕದಲ್ಲಿ ಯಡಿಯೂರಪ್ಪರನ್ನು ಸೇರಿಸಿ ಕುಮಾರಸ್ವಾಮಿ ಸರಕಾರ ರಚಿಸಿದಂತೆ) ಬಳಿಕ ಬಿಜೆಪಿಯ ಬೆಳವಣಿಗೆಯನ್ನು ತಡೆಯುವುದಕ್ಕಾಗಿ ವಿ.ಪಿ. ಸಿಂಗ್‍ರು ಮಂಡಲ್ ಇಶ್ಯೂವನ್ನು ಹೊರತಂದಾಗ, ಬಿಜೆಪಿ ಮಂದಿರವನ್ನು ಎತ್ತಿಕೊಂಡಿತು. ಬಿಜೆಪಿಯ ಬೆಳವಣಿಗೆಯ ಹಿಂದಿರುವ ಇವನ್ನೆಲ್ಲ ನಿರ್ಲಕ್ಷಿಸಿ ಬರೇ ಮಂದಿರವೊಂದಕ್ಕೇ ಸಂಪೂರ್ಣ ಕ್ರೆಡಿಟ್ ಕೊಡುವುದು ಸೂಕ್ತವೇ? ಹಾಗಿದ್ದರೆ ಕಳೆದು 10 ವರ್ಷಗಳಲ್ಲಿ ಬಿಜೆಪಿ ರಾಮನಿಗಾಗಿ ಒಂದೇ ಒಂದು ಚಳವಳಿ, ಪಾದಯಾತ್ರೆ, ರಥಯಾತ್ರೆಗಳನ್ನು ಕೈಗೊಂಡಿಲ್ಲವೇಕೆ? ಕನಿಷ್ಠ ಮಂದಿರದ ಬಗ್ಗೆ ಒಂದೇ ಒಂದು ಹೇಳಿಕೆ ಕೊಡುವುದಕ್ಕೂ ಅದು ಹಿಂಜರಿದಿರುವುದೇಕೆ, ಮರೆವೇ? ನಿರ್ಲಕ್ಷ್ಯವೇ?
   92ರಲ್ಲಿ ಬಾಬರಿ ಮಸೀದಿಯ ಧ್ವಂಸವಾಯಿತು. ಆ ವಾತಾವರಣ ಇನ್ನೂ ಹಸಿಯಾಗಿರುವಾಗಲೇ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳ ವಿಧಾನಸಭೆಗೆ 93ರಲ್ಲಿ ಚುನಾವಣೆ ನಡೆಯಿತು. ಆದರೆ, ಬಾಬರೀ ಪತನದ ಸಂದರ್ಭದಲ್ಲಿ ಉ. ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು. 425 ಸ್ಥಾನಗಳ ವಿಧಾನಸಭೆಯಲ್ಲಿ 221 ಶಾಸಕರನ್ನು ಹೊಂದಿದ್ದ ಅದು ಚುನಾವಣೆಯ ಬಳಿಕ 177ಕ್ಕೆ ಕುಸಿಯಿತು. ಮಧ್ಯ ಪ್ರದೇಶದ ವಿಧಾನಸಭೆಯಲ್ಲಿ 220ರಷ್ಟಿದ್ದ ಬಿಜೆಪಿಯ ಶಾಸಕರ ಸಂಖ್ಯೆ 117ಕ್ಕೆ ಇಳಿಯಿತು. ನಿಜವಾಗಿ, ಬಾಬರಿ ಮಸೀದಿಯ ಪತನದ ಬಳಿಕದಿಂದ ಈವರೆಗೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನೇ ಪಡೆದಿಲ್ಲ. ರಾಮ ಜನ್ಮಭೂಮಿ ಚಳವಳಿಯ ಕೇಂದ್ರ ಸ್ಥಾನವಿರುವ, ನೂರಾರು ಸಾಧು-ಸಂತರು, ಇಟ್ಟಿಗೆಗಳು ಒಟ್ಟಾದ ರಾಜ್ಯವೊಂದರ ಮತದಾರರು ಬಿಜೆಪಿಯನ್ನು ಸಾರಾಸಗಟು ತಿರಸ್ಕರಿಸಿದ್ದೇಕೆ? ಬಿಎಸ್‍ಪಿಯಂಥ ತೀರಾ ಜೂನಿಯರ್ ಪಕ್ಷವೂ ಆ ಬಳಿಕ ಅಧಿಕಾರಕ್ಕೆ ಬಂದವಲ್ಲ, ಏನದರ ಗುಟ್ಟು? ಮಂದಿರ, ಮಸೀದಿ ಅಜೆಂಡಾವನ್ನು ತಮ್ಮ ಪ್ರಣಾಳಿಕೆಯಲ್ಲಿ ಬಿಡಿ, ಕನಿಷ್ಠ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲೂ ಉಲ್ಲೇಖಿಸದ ಮಾಯಾವತಿ, ಅಖಿಲೇಶ್ ಸಿಂಗ್ ಯಾದವ್‍ರು ಆ ಬಳಿಕ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? ಮಂದಿರವು ಇಶ್ಯೂ ಅಲ್ಲ ಎಂಬುದನ್ನೇ ಅಲ್ಲವೇ? ಉತ್ತರ ಪ್ರದೇಶದ ವಿಧಾನಸಭೆಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವವನ್ನು ವಹಿಸಿಕೊಂಡದ್ದು ಉಮಾಭಾರತಿ. ಆಕೆ ಎಲ್ಲೆಲ್ಲಿ ಭಾಷಣಕ್ಕೆ ಹೋದರೋ ಅಲ್ಲೆಲ್ಲಾ ರಾಮ ಮಂದಿರವನ್ನು ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೂ ಈ ವರೆಗಿನ ಅತಿ ಕಡಿಮೆ ಸ್ಥಾನಗಳನ್ನು ಪಡೆಯಲಷ್ಟೇ ಅದು ಶಕ್ತವಾಯಿತು. ಇವೆಲ್ಲ ಏನು? ಕೋಮು ಅಜೆಂಡಾಕ್ಕೆ, ವಿಭಜನಕಾರಿ ರಾಜಕೀಯ ಸಿದ್ಥಾಂತಕ್ಕೆ ಈ ದೇಶದ ಮಣ್ಣು ಒಗ್ಗುವುದಿಲ್ಲ ಎಂದಲ್ಲವೆ ಇದರರ್ಥ? ಹಾಗಿದ್ದೂ, ರಾಮ ಮಂದಿರದಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಮಾತು ಈ ದೇಶದಲ್ಲಿ ಚಾಲ್ತಿಯಲ್ಲಿರುವುದು ಯಾಕೆ? ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್‍ರು ಮತ್ತೆ, ‘ಉಗ್ರ ನಾಯಕರನ್ನು’ ಮುಂಚೂಣಿಗೆ ತರುತ್ತಿದ್ದಾರಲ್ಲ, ಏನಿದರ ಮರ್ಮ? ಬಿಜೆಪಿಯ ಚುನಾವಣಾ ಸಮಿತಿಗೆ ಮೋದಿ, ಉಮಾಭಾರತಿ, ವರುಣ್ ಗಾಂಧಿ, ಅಮಿತ್ ಷಾರನ್ನು ಅವರು ಸೇರ್ಪಡೆಗೊಳಿಸಿರುವುದು ಯಾವ ಸಂದೇಶವನ್ನು ನೀಡುತ್ತದೆ? ಇಷ್ಟಿದ್ದೂ,
   ‘ಮುಸ್ಲಿಮ್ ಮತ್ತು ಹಿಂದೂಗಳ ಮಧ್ಯೆ ಬಿಜೆಪಿ ದ್ವೇಷವನ್ನು ಬಿತ್ತುತ್ತಿದೆ ಎಂದು ಅರೋಪಿಸುವುದಕ್ಕೆ ಕಾಂಗ್ರೆಸ್‍ಗೆ ಏನು ಅರ್ಹತೆಯಿದೆ? ಅದರ ಆಳ್ವಿಕೆಯಲ್ಲಿ ಕೋಮುಗಲಭೆ ನಡೆದಿಲ್ಲವೇ..’ ಎಂದು ಕಳೆದ ತಿಂಗಳು ರಾಜನಾಥ್ ಸಿಂಗ್ ಪ್ರಶ್ನಿಸಿದರಲ್ಲ, ಏನೆನ್ನಬೇಕು?
   ಅಂದಹಾಗೆ, 1961ರಲ್ಲಿ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ನಡೆದ ಕೋಮುಗಲಭೆಯಿಂದ ಹಿಡಿದು 2012ರಲ್ಲಿ ರಾಜಸ್ಥಾನದ ಭರತ್ಪುರ್‍ನಲ್ಲಿ ನಡೆದ ಕೋಮುಗಲಭೆಯವರೆಗೆ, ಕಾಂಗ್ರೆಸ್ ಆಳ್ವಿಕೆಯಲ್ಲಿ ಸಾಕಷ್ಟು ಕೋಮುಗಲಭೆಗಳು ನಡೆದಿವೆ. ಆದರೆ, ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ದೊಡ್ಡದೊಂದು ವ್ಯತ್ಯಾಸ ಇದೆ. ಅದುವೇ ಐಡಿಯಾಲಜಿ. ಬಿಜೆಪಿ ಪ್ರಚೋದಿತ ಕೋಮುಗಲಭೆಗಳಿಗೆ ಸೈದ್ಧಾಂತಿಕ ಹಿನ್ನೆಲೆಯಿರುತ್ತದೆ. ಅದು ಓಟಿಗಾಗಿಯಷ್ಟೇ ಗಲಭೆ ಎಬ್ಬಿಸುವುದಲ್ಲ. ಅದರಾಚೆಗೆ ಕೆಲವು ನಿಗೂಢ ಅಜೆಂಡಾಗಳು ಅದರ ಬಳಿಯಿವೆ. ಕಾಲ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಮುಸ್ಲಿಮರನ್ನು ದ್ವೇಷಿಸುವುದಕ್ಕೆ ಪೂರಕವಾಗುವ ಇಶ್ಯೂಗಳೊಂದಿಗೆ ಅದು ಗುರುತಿಸಿಕೊಳ್ಳುತ್ತದೆ. ಮಾತ್ರವಲ್ಲ, ಹತ್ತು ಹಲವು ಸತ್ಯಗಳನ್ನು ಮುಚ್ಚಿಡುವುದಕ್ಕೂ ಅದು ಪ್ರಯತ್ನಿಸುತ್ತದೆ. ಹೇಗೆಂದರೆ,
   ‘1949 ಡಿಸೆಂಬರ್ 22-23ರ ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಬಾಬ ಅಭಿರಾಮ್ ದಾಸ್, ವೃಂದಾವನ್ ದಾಸ್ ಮತ್ತು ಇನ್ನೊಬ್ಬರು ಸೇರಿಕೊಂಡು ಬಾಬರಿ ಮಸೀದಿಯ ಮುಖ್ಯ ಗುಂಬಜದ ಕೆಳಗೆ ರಾಮ ವಿಗ್ರಹವನ್ನು ಸ್ಥಾಪಿಸುತ್ತಾರೆ. ಒಳಗೆ ಮಲಗಿಕೊಂಡಿದ್ದ ಮುಅದ್ದಿನ್ (ಬಾಂಗ್ ಕೊಡುವವ) ಮುಹಮ್ಮದ್ ಇಸ್ಮಾಈಲ್‍ರನ್ನು ತೀವ್ರವಾಗಿ ಥಳಿಸಿ ಹೊರ ಹಾಕುತ್ತಾರೆ. ಅಲ್ಲಿರುವ ಚಾಪೆ ಇನ್ನಿತರ ವಸ್ತುಗಳನ್ನು ಹೊರಕ್ಕೆಸೆಯುತ್ತಾರೆ. ಮಸೀದಿಯ ಗೋಡೆಗಳಲ್ಲಿ ಬರೆಯಲಾಗಿದ್ದ ಅರಬಿ ಅಕ್ಷರಗಳನ್ನು ಖುರ್ಪಿ ಎಂಬ ಆಯುಧದಿಂದ ಅಳಿಸಿ ಅವಸರವಸರವಾಗಿ ರಾಮ ಮತ್ತು ಸೀತೆಯನ್ನು ಕೆತ್ತುತ್ತಾರೆ. ಮರುದಿನ ಬೆಳಿಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಸಾಧುಗಳು ಬಾಬರಿ ಮಸೀದಿಗೆ ಬಂದು ಸೇರಿಕೊಳ್ಳುತ್ತಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ ಹಿಂದೂ ಮಹಾಸಭಾದ ಫೈಝಾಬಾದ್ ವರ್ತುಲದ ಅಧ್ಯಕ್ಷ ಗೋಪಾಲ್ ಸಿಂಗ್ ವಿಶಾರದನು, ಮಸೀದಿಯೊಳಗೆ ‘ರಾಮ ವಿಗ್ರಹದ ಪವಾಡಸದೃಶ ಪ್ರತ್ಯಕ್ಷದ’ ಕತೆಯನ್ನು ವಿವರಿಸುವ ಪೋಸ್ಟರ್ ಮತ್ತು ನೋಟಿಸುಗಳನ್ನು ಹಂಚುತ್ತಾನೆ. ನಿಜವಾಗಿ ಮಸೀದಿಯ ಒಳಗೆ ರಾಮ ವಿಗ್ರಹವನ್ನು ಪ್ರತಿಷ್ಠಾಪಿಸುವ ಯೋಜನೆಗೆ ರೂಪುಕೊಟ್ಟಿದ್ದೇ ಫೈಝಾಬಾದ್‍ನ ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟರ್ ಕೆ.ಕೆ.ಕೆ. ನಾಯರ್. ವಿಗ್ರಹ ಪ್ರತಿಷ್ಠಾಪನೆಗಾಗಿ ಒಂದು ವಾರ ಮೊದಲೇ ಅಯೋಧ್ಯೆಯ ಒಂದು ದೇವಾಲಯದಲ್ಲಿ ಸಂತರನ್ನು ಭೇಟಿಯಾಗಿ ಅವರು ಯೋಜನೆಗೆ ಅಂತಿಮ ರೂಪ ಕೊಟ್ಟಿದ್ದರು. ಡಿಸೆಂಬರ್ 22ರ ಬೆಳಗಾತ 4 ಗಂಟೆಗೆ ಅವರು ಬಾಬರಿ ಮಸೀದಿಗೆ ತೆರಳಿ ವಿಗ್ರಹ ಪ್ರತಿಷ್ಠಾಪನೆಯನ್ನು ಕಂಡು ಅನಂದಿಸಿದ್ದರು. ಆದರೆ ಈ ಸುದ್ದಿಯನ್ನು ಲಕ್ನೋದ ತನ್ನ ಮೇಲಧಿಕಾರಿಗಳಿಗೆ ಬೆಳಗಿನ 9 ಗಂಟೆಯವರೆಗೂ ತಿಳಿಸಿಯೇ ಇರಲಿಲ್ಲ. ಸಾಧುಗಳು-ಸಾರ್ವಜನಿಕರು ಬಂದು ಇಡೀ ಮಸೀದಿಯನ್ನು ವಶಪಡಿಸಿಕೊಂಡ ಬಳಿಕವಷ್ಟೇ ಅವರು ಸುದ್ದಿಯನ್ನು ರವಾನಿಸಿದರು. ಮಹಾತ್ಮಾಗಾಂಧಿ ಹತ್ಯೆಯ ಆರೋಪದಲ್ಲಿ ಬಂಧನಕ್ಕೀಡಾಗಿ ಬಳಿಕ ಬಿಡುಗಡೆಗೊಂಡ ದಿಗ್ವಿಜಯ್ ನಾಥ್ ಈ ಇಡೀ ಷಢ್ಯಂತ್ರದ ಮಾಸ್ಟರ್ ಮೈಂಡ್ ಆಗಿದ್ದ..’
   ಕೃಷ್ಣ ಝಾ ಮತ್ತು ಧೀರೇಂದ್ರ ಝಾ ಅವರ, ‘ಅಯೋಧ್ಯಾ: ದಿ ಡಾರ್ಕ್ ನೈಟ್’  ಎಂಬ ಕೃತಿಯಲ್ಲಿರುವ ಈ ಸಂಗತಿಗಳನ್ನು ರಾಮ ಮಂದಿರ ಚಳವಳಿಯ ಸಂದರ್ಭದಲ್ಲಾಗಲಿ, ಆ ಬಳಿಕವಾಗಲಿ ಬಿಜೆಪಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದ್ದಿದೆಯೇ? ರಾಮ ವಿಗ್ರಹವು ಪವಾಡ ಸದೃಶವಾಗಿ ಬಾಬರಿ ಮಸೀದಿಯ ಒಳಗೆ ಪ್ರತ್ಯಕ್ಷವಾಗಿದೆ ಎಂಬ ಸುಳ್ಳನ್ನು ಹೇಳುತ್ತಾ, ಮುಸ್ಲಿಮರನ್ನು ಖಳರಂತೆ ಬಿಂಬಿಸುತ್ತಾ, ಗಲಭೆಗೆ ಪ್ರಚೋದಿಸಿದ್ದನ್ನು ಬಿಟ್ಟರೆ ಉಳಿದಂತೆ ಅದು ಯಾವ ನಿರ್ಮಾಣ ಕೆಲಸವನ್ನು ಮಾಡಿದೆ? ಬಾಂಗ್ಲಾ ನುಸುಳುಕೋರರು, ಮುಸ್ಲಿಮ್ ಭಯೋತ್ಪಾದನೆ, 371ನೇ ವಿಧಿ, ಲವ್ ಜಿಹಾದ್, ಪರ್ಸನಲ್ ಲಾ.. ಹೀಗೆ ಅದು ಎತ್ತುವ ಎಲ್ಲ ಸಂಗತಿಗಳೂ ಯಾಕೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿರುತ್ತವೆ? ಕಾಂಗ್ರೆಸ್, ಕಮ್ಯೂನಿಸ್ಟ್, ತೃಣಮೂಲ, ಡಿ.ಎಂ.ಕೆ., ಜನತಾ ದಳಗಳಂಥ ಪಕ್ಷಗಳು ಮಾತಾಡುವ ಶೈಲಿ ಮತ್ತು ಬಿಜೆಪಿ ಮಾತಾಡುವ ಶೈಲಿಗಳನ್ನು ನೋಡಿ. ಕಾಂಗ್ರೆಸ್ ಆಳ್ವಿಕೆಯಲ್ಲಿ ಕೋಮುಗಲಭೆ ನಡೆದಿಲ್ಲವೇ ಎಂದು ಪ್ರಶ್ನಿಸುವ ರಾಜನಾಥ್ ಸಿಂಗ್‍ರೇ, ಈ ಶೈಲಿಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಿದ್ದೀರಾ? ಈಶ್ವರಪ್ಪ, ವರುಣ್ ಗಾಂಧಿ, ಉಮಾಭಾರತಿ.. ಮುಂತಾದ ಹತ್ತು-ಹಲವು ನಾಯಕರ ಭಾಷೆ, ವಿಷಯ, ಆವೇಶಗಳು ಹೇಗಿರುತ್ತವೆ? ಮುಸ್ಲಿಮರ ಕುರಿತಂತೆ ಬಳಸುವ ಅವೇ ಭಾಷೆಯನ್ನು, ಅವೇ ಶೈಲಿಯನ್ನು, ಅವೇ ಆವೇಶವನ್ನು ಇತರರಿಗೆ ನೀವೆಲ್ಲ ಉಪಯೋಗಿಸುತ್ತೀರಾ? ಕೋಮುಗಲಭೆಗಳನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್ ವಿಫಲ ಆಗಿರಬಹುದು. 1984ರ ಸಿಖ್ ಹತ್ಯಾಕಾಂಡವನ್ನು ಕಾಂಗ್ರೆಸ್ಸಿನ ಪೂರ್ವಗ್ರಹಪೀಡಿತ ದುಷ್ಟ ಮನಸ್ಥಿತಿಗೆ ಪುರಾವೆಯಾಗಿ ತೋರಿಸಬಹುದು. ಆದರೆ, 2005 ಅಗಸ್ಟ್ 12ರಂದು ಪ್ರಧಾನಿ ಮನ್‍ಮೋಹನ್ ಸಿಂಗ್‍ರು ಸಿಖ್ ಸಮುದಾಯದಲ್ಲಷ್ಟೇ ಅಲ್ಲ, ಇಡೀ ದೇಶಕ್ಕೇ ಕೈ ಮುಗಿದು ಕ್ಷಮೆಯಾಚಿಸಿದರಲ್ಲ, ಮೋದಿಯಿಂದ ಅಂಥದ್ದೊಂದು ಕ್ಷಮೆಯಾಚನೆಯನ್ನು ಮಾಡಿಸಲು ನಿಮ್ಮಿಂದ ಸಾಧ್ಯವಾಗಿದೆಯೇ? ಸಿಖ್ ಹತ್ಯಾಕಾಂಡದ ಪಶ್ಚಾತ್ತಾಪವಾಗಿ ಓರ್ವ ಸಿಖ್ ವ್ಯಕ್ತಿಯನ್ನೇ ಪ್ರಧಾನ ಮಂತ್ರಿಯಾಗಿ ಕಾಂಗ್ರೆಸ್ ಆಯ್ಕೆ ಮಾಡಿತು. ನಿಮಗೆ ಹೀಗೆ ಸಮರ್ಥಿಸಿಕೊಳ್ಳುವುದಕ್ಕೆ ಏನಿದೆ ಹೇಳಿ? ಪ್ರಧಾನಿ ಬಿಡಿ, ವಿಧಾನ ಸಭೆಗೆ ಓರ್ವ ಮುಸ್ಲಿಮ್ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸುವುದನ್ನು ನೋಡುವುದಕ್ಕೆ ನಾವು ಇನ್ನೆಷ್ಟು ವರ್ಷಗಳನ್ನು ಕಾಯಬೇಕು? ಇವೆಲ್ಲ ಏನನ್ನು ಸೂಚಿಸುತ್ತದೆ? ಮುಸ್ಲಿಮರಿಗೆ ಸಂಬಂಧಿಸಿ ಕಾಂಗ್ರೆಸ್‍ನ ಧೋರಣೆಗೂ ಬಿಜೆಪಿಯು ಧೋರಣೆಗೂ ನಡುವೆ ಇರುವ ಅಗಾಧ ಅಂತರವನ್ನೇ ಅಲ್ಲವೇ? ಹೀಗಿರುತ್ತಾ,
   ನೀವೇ ಇಷ್ಟು ಬಾಲಿಶವಾಗಿ ಪ್ರಶ್ನಿಸಿದರೆ ಹೇಗೆ ರಾಜನಾಥ್‍ರೇ..


No comments:

Post a Comment