Wednesday, May 20, 2015

ಒಂದು ಹೋರಾಟ, ನೂರಾರು ನಿರೀಕ್ಷೆಗಳು...

   ಅಬ್ದುಲ್ ಅಝೀಝ್
 ಯಾಸೀನ್
 ಶರ್ಫುದ್ದೀನ್
 ಆಸಿಫ್ ಹುಸೈನ್
 ಮಕ್ಬೂಲ್ ಅಹ್ಮದ್
  `ಪದಾಧಿಕಾರಿಗಳ ಆಯ್ಕೆ' ಎಂಬ ಶೀರ್ಷಿಕೆಯಡಿ ಸಾಮಾನ್ಯವಾಗಿ ಇಂಥ ಹೆಸರುಗಳು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ.. ಎಂದು ಮುಂತಾಗಿ ಅವರ ಹೊಣೆಗಾರಿಕೆಯ ವಿವರಗಳೂ ಅದರಲ್ಲಿರುತ್ತವೆ. ಬಹುತೇಕ ಒಂದೇ ವಿಚಾರಧಾರೆಯವರೇ ಇಂಥ ಸಮಿತಿಗಳಲ್ಲಿರುತ್ತಾರೆ. ವಿಶೇಷ ಏನೆಂದರೆ, ಈ ಮೇಲಿನವರ ವಿಚಾರಧಾರೆ ಒಂದೇ ಅಲ್ಲ. ಇವರು ಪ್ರತಿನಿಧಿಸುವ ಸಂಘಟನೆಗಳೂ ಒಂದೇ ಅಲ್ಲ. ಆದರೂ ಇವರೆಲ್ಲ ತಮ್ಮ ಊರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದಕ್ಕಾಗಿ ಜೊತೆಗೂಡಿದ್ದಾರೆ. ‘ಕೆಡುಕು ಮುಕ್ತ ಹೋರಾಟ ಸಮಿತಿ’ ಎಂಬೊಂದು ತಂಡವನ್ನು ಇವರು ರಚಿಸಿ ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುದ್ರೋಳಿ ಎಂಬ ಪ್ರದೇಶವನ್ನು ಗುರಿಯಾಗಿಸಿಕೊಂಡು ರಚಿಸಲಾದ ಈ ಸಮಿತಿಯನ್ನು ಎಪ್ರಿಲ್ 17 ರಂದು ಉದ್ಘಾಟಿಸಲಾಗಿದೆ. ಕುದ್ರೋಳಿ ವ್ಯಾಪ್ತಿಯ 5 ಮಸೀದಿಗಳ ಅಧ್ಯಕ್ಷರುಗಳೂ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಾಗಂತ, ಈ ಮಸೀದಿಗಳ ವಿಚಾರಧಾರೆಗಳು ಒಂದೇ ಅಲ್ಲ. ಅನೇಕ ಬಾರಿ ಈ ವಿಚಾರಧಾರೆಗಳು ಮುಖಾಮುಖಿಯಾಗಿವೆ. ವೈಚಾರಿಕ ಬಿಕ್ಕಟ್ಟುಗಳೂ, ತರ್ಕಗಳೂ ಮತ್ತು ಪರಸ್ಪರರ ನಡುವೆ ಸಣ್ಣ ಮಟ್ಟಿನ ಬೇರ್ಪಡುವಿಕೆಗಳೂ ನಡೆದಿವೆ. ಇಷ್ಟಿದ್ದೂ ಮುಹಮ್ಮದ್ ಬಾಖವಿ, ಉಸ್ಮಾನ್ ದಾರಿಮಿ, ಮುಹಮ್ಮದ್ ರಫೀಕ್ ಮದನಿ, ರಿಯಾಝುಲ್ ಹಕ್ಕ್ ಅನ್ಸಾರಿ, ಮುಫ್ತಿ ಅಬ್ದುಲ್ ಮನ್ನಾನ್.. ಮುಂತಾದ ವಿಭಿನ್ನ ವಿಚಾರಧಾರೆಯ ಧರ್ಮ ಗುರುಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇಡೀ ಕುದ್ರೋಳಿ ಪ್ರದೇಶವನ್ನು 9 ಮೊಹಲ್ಲಗಳಾಗಿ ವಿಭಜಿಸಲಾಗಿದೆ. ಪ್ರತಿ ಮೊಹಲ್ಲಗಳಿಗೂ ಸಂಚಾಲಕ, ಉಪಸಂಚಾಲಕರನ್ನು ನೇಮಿಸಲಾಗಿದೆ. ಅಲ್ಲದೆ, ಪ್ರದೇಶದ ನಾರಾಯಣ ಕರ್ಕೇರ ಮುಂತಾದವರನ್ನು ಸೇರಿಸಿಕೊಂಡು ‘ಕೆಡುಕು ಮುಕ್ತ ಸೌಹಾರ್ದ ಸಮಿತಿ’ಯನ್ನೂ ರಚಿಸಲಾಗುತ್ತಿದೆ. ಕಾರ್ನರ್ ಮೀಟಿಂಗ್‍ಗಳು, ಹಿರಿಯರ ಸಭೆಗಳು, ಮಹಿಳೆ, ವಿದ್ಯಾರ್ಥಿ ಮತ್ತು ಯುವಕರ ಸಭೆಗಳನ್ನು ನಡೆಸಲಾಗುತ್ತಿದೆ. ಕುದ್ರೋಳಿ ಪರಿಸರದ ಗಾಂಜಾ ಅಡ್ಡೆಗಳಿಗೆ ಸಮಿತಿಯ ಸದಸ್ಯರು ಭೇಟಿ ಕೊಡುತ್ತಿದ್ದಾರೆ. ಮೆಡಿಕಲ್‍ಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಡಿಸಿಪಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇವೆಲ್ಲ ಎಷ್ಟು ಪರಿಣಾಮ ಬೀರಿದೆಯೆಂದರೆ, ಈಗಾಗಲೇ ಗಾಂಜಾದ ಎರಡು ಅಡ್ಡೆಗಳು ಬಾಗಿಲು ಮುಚ್ಚಿವೆ. ಈ ಪ್ರದೇಶದ ಮಾದಕ ಪದಾರ್ಥಗಳ ಮಾರಾಟಗಾರರೂ ಮತ್ತು ಸೇವನೆಗಾರರಲ್ಲಿ ಒಂದು ಬಗೆಯ ಭೀತಿ ಉಂಟಾಗಿದೆ. ಮಾದಕ ಪದಾರ್ಥಗಳ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಮುಖತಃ ಭೇಟಿಯಾಗುವುದು, ಇದರಿಂದ ದೂರ ನಿಲ್ಲಲು ನೆರವು ನೀಡುವುದು ಮತ್ತು ಕೇಳದಿದ್ದರೆ ಕಾನೂನಿನ ಕೈಗೆ ಒಪ್ಪಿಸುವ ಈ ಸಮಿತಿಯ ನಿರ್ಧಾರವು ಸರ್ವತ್ರ ಶ್ಲಾಘನೆಯ ಪಾತ್ರವಾಗಿದೆ. ನಿಜವಾಗಿ, ರಾಜ್ಯದಲ್ಲಿಯೇ ಒಂದು ಅಪರೂಪದ ಬೆಳವಣಿಗೆ ಇದು. ಅಷ್ಟಕ್ಕೂ, ಕೆಡುಕು ಎಂಬುದು ಕುದ್ರೋಳಿ ಪ್ರದೇಶದಲ್ಲಿ ಮಾತ್ರ ಕಾಣುವ ಸಮಸ್ಯೆಯಲ್ಲ. ಮಾದಕ ವ್ಯಸನಕ್ಕೆ ತುತ್ತಾದ ಮತ್ತು ಅದರ ವ್ಯವಹಾರ ಮಾಡುವ ಪ್ರದೇಶಗಳು ಈ ರಾಜ್ಯದಲ್ಲಿ ಅನೇಕ ಕಡೆ ಇವೆ. ಮದ್ಯಪಾನವನ್ನು ಚಟವಾಗಿಸಿ ಕೊಂಡವರು, ಜೂಜಿನಂತಹ ವಿವಿಧ ಕೆಡುಕುಗಳಲ್ಲಿ ತೊಡಗಿಸಿ ಕೊಂಡವರು ಅಸಂಖ್ಯ ಇದ್ದಾರೆ. ಇವರೆಲ್ಲ ಯಾವುದಾದರೊಂದು `ಕುದ್ರೋಳಿ'ಯಲ್ಲಿ ಬದುಕುತ್ತಿರುವವರೇ. ಇಷ್ಟಿದ್ದೂ, ಇವರ ವಿರುದ್ಧ ಸಮಾಜ ಮಾತಾಡಿದ್ದು ಕಡಿಮೆ. ವಿದ್ಯಾರ್ಥಿ-ಯುವಕರು ಈ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಓದಿಯೋ ಕಣ್ಣಾರೆ ಕಂಡೋ ತ್ಚು ತ್ಚು ತ್ಚು ಎಂಬ ಉದ್ಗಾರದೊಂದಿಗೆ ಸುಮ್ಮನಾಗುವ ಸಂಭಾವಿತರೇ ಹೆಚ್ಚಿರುತ್ತಾರೆ. ಹೀಗಿದ್ದೂ  ಈ ಒಂಟಿ ಮನಸುಗಳು ಒಟ್ಟಾಗುವುದಿಲ್ಲ. ಇದಕ್ಕೆ ಭಿನ್ನ ವಿಚಾರಧಾರೆಗಳು, ರಾಜಕೀಯ ಹಿತಾಸಕ್ತಿಗಳು, ಜಾತಿ-ಧರ್ಮಗಳ ಕಟ್ಟುಪಾಡು.. ಮುಂತಾದುವು ಹೇತುವಾಗಿರುತ್ತದೆ. ಆದ್ದರಿಂದಲೇ ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಶ್ಲಾಘನೆಗೆ ಅರ್ಹವಾಗುವುದು. ವಿಚಾರಧಾರೆಯ ಭಿನ್ನತೆಗಿಂತ ಕೆಡುಕಿನ ನಿರ್ಮೂಲನಕ್ಕೆ ಹೆಚ್ಚು ಮಹತ್ವಕೊಟ್ಟ ಈ ಪ್ರದೇಶದ ಮಂದಿ ಅಭಿನಂದನೆಗೆ ಅರ್ಹರೆನಿಸುವುದು.
  `ಸೈಂಟ್‍ಪಿಕ್ ಅಮೇರಿಕನ್' ಎಂಬ ವೆಬ್ ಸೈಟ್‍ನಲ್ಲಿ ಕ್ಯಾಸ್ಸಿ ರೋಡೆನ್‍ಬರ್ಗ್ ಎಂಬವರು 2012 ಎಪ್ರಿಲ್ 30ರಂದು ಓರ್ವ ಯುವಕನ ಮನಮಿಡಿಯುವ ಪತ್ರವೊಂದನ್ನು ಪ್ರಕಟಿಸುತ್ತಾರೆ.
 "ನಾನು ಜ್ಯಾಕ್. ನನ್ನ ಅದೃಷ್ಟ ಚೆನ್ನಾಗಿದೆ. ನಾನು ಮಾದಕ ವ್ಯಸನದ ಚಟದಿಂದ ನಿಧಾನಕ್ಕೆ ಹೊರಬರುತ್ತಿದ್ದೇನೆ. ಕಳೆದ 10 ತಿಂಗಳಿನಿಂದ ನಾನು ಮಾರಿಜುವಾನ ಸೇವಿಸುತ್ತಿಲ್ಲ. ನಾನು ಮಾದಕ ಪದಾರ್ಥಗಳ ಹೆಸರು ಕೇಳಿದ್ದು ಶಾಲಾ ದಿನಗಳಲ್ಲಿ. ಕೊಕೇನ್, ಹೆರಾಯಿನ್, ಗಾಂಜಾಗಳ ಬಗ್ಗೆ ನಾನು ತರಗತಿಗಳಲ್ಲಿ ಕೇಳಿದ್ದೆ. ಆದರೆ ಮಾರಿಜುವಾನ ಎಂಬ ಹೆಸರು ಕೇಳಿದ ನೆನಪಿಲ್ಲ. ಕೇಳಿದ್ದರೂ ಅದರ ಕುರಿತಂತೆ ಭೀತಿ ಪಡುವ ಯಾವ ಸಂಗತಿಗಳೂ ನನ್ನ ಕಿವಿಗೆ ಬಿದ್ದಿರಲಿಲ್ಲ. ಇಂಥ ಪದಾರ್ಥಗಳು ಯಾರಲ್ಲಾದರೂ ಸಿಕ್ಕರೆ ಪೊಲೀಸರು ಬಂಧಿಸುತ್ತಾರೆ ಎಂಬ ಸುದ್ದಿಯನ್ನಷ್ಟೇ ಕೇಳಿದ್ದೆ. ಪೊಲೀಸರಿಗೆ ಗೊತ್ತಾಗದಿದ್ದರೆ ಸಾಕಲ್ಲವೇ ಎಂಬ ನಿಲುವಷ್ಟೇ ನನ್ನದಾಗಿತ್ತು. ಇದರಾಜೆಗೆ ಈ ಮಾದಕ ಪದಾರ್ಥಗಳ ಅಪಾಯಗಳ ಬಗ್ಗೆ ನನ್ನಲ್ಲಿ ಸಣ್ಣ ಮಾಹಿತಿಯೂ ಇರಲಿಲ್ಲ. ಹೀಗಿರುತ್ತಾ ನನ್ನ ತರಗತಿಯ ಸಹಪಾಠಗಳು ಏನನ್ನೊ ಹೀರುವುದನ್ನು ನಾನು ಕಂಡೆ. ನನಗೂ ಕುತೂಹಲವಾಯಿತು. ಆದರೂ ಒಂದು ಬಗೆಯ ಭಯ. ನಾನು ಇಂಟರ್‍ನೆಟ್ ಮೂಲಕ ಹುಡುಕಾಟ ನಡೆಸಿದೆ. ನನಗೆ ಅದರಲ್ಲಿ ಸಿಕ್ಕ ಮಾಹಿತಿ ನನ್ನನ್ನು ಯಾವ ಬಗೆಯ ನಕಾರಾತ್ಮಕ ಚಿಂತನೆಗೆ ದೂಡಿ ಬಿಟ್ಟಿತೆಂದರೆ ಅದನ್ನು ಪರೀಕ್ಷಿಸಿ ನೋಡುವ ಹುಚ್ಚು ಆಸೆ ಉಂಟಾಯಿತು. ಒಂದು ಕಡೆ ವಯೋ ಸಹಜ ಆವೇಶ ಇನ್ನೊಂದು ಕಡೆ ಕುತೂಹಲ. ಇವೆರಡೂ ಸೇರಿ ನನ್ನನ್ನು ಮಾರಿಜುವಾನದತ್ತ ಕೊಂಡೊಯ್ಯಿತು. ನಾನದನ್ನು ಸೇವಿಸಿದೆ. ಮೊದಲ ಸೇವನೆ ಮುಂದಿನ ಸೇವನೆಗೆ ಪ್ರೇರಣೆ ನೀಡಿತು. ನಾನು ಸೇವಿಸುತ್ತಾ ಹೋದೆ. ಕ್ರಮೇಣ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿತು. ಟಿ.ವಿ. ವೀಕ್ಷಣೆ, ಕ್ರೀಡೆ, ಶಿಕ್ಷಣ, ಗೆಳೆಯರೊಂದಿಗಿನ ಸಂಬಂಧ ಎಲ್ಲವನ್ನೂ ನಿರ್ಲಕ್ಷಿಸುವ ಹಂತಕ್ಕೆ ತಲುಪಿದೆ. ಹೋಮ್‍ವರ್ಕ್ ಮಾಡುತ್ತಿರಲಿಲ್ಲ. ಶಿಕ್ಷಕರ ಪಾಠಕ್ಕಿಂತ ಮಾರಿಜುವಾನಕ್ಕೆ ಆಸೆ ಪಡುತ್ತಿದ್ದೆ. ಗೆಳೆಯರೊಂದಿಗೆ ಬೆರೆತು ಖುಷಿ ಪಡುವುದಕ್ಕಿಂತ ಅಮಲಿನಲ್ಲಿ ತೇಲಾಡುವುದನ್ನು ಇಷ್ಟಪಡುತ್ತಿದ್ದೆ. ನನ್ನೊಳಗೆ ಏನೇನೋ ಆಗುತ್ತಿದ್ದುವು. ಮನಸ್ಸು ನನ್ನ ಹಿಡಿತದಲ್ಲಿರುತ್ತಿರಲಿಲ್ಲ. ಕಾರಣವಿಲ್ಲದೆಯೇ ಆತ್ಮಹತ್ಯೆಗೆ ಮನಸು ಪ್ರಚೋದಿಸುತ್ತಿತ್ತು. ಈ ಒತ್ತಡವನ್ನು ತಡೆಯಲಾಗದೇ ಆತ್ಮಹತ್ಯೆಗೆ ಪ್ರಯತ್ನಿಸ ತೊಡಗಿದೆ. ಶಾಲೆಯಲ್ಲಿರುವಾಗ ಹತ್ತಿರದ ಗಾರ್ಬೆಜ್‍ಗೆ ಜಂಪ್ ಮಾಡುವಂತೆ ಮನಸು ಒತ್ತಾಯಿಸುತ್ತಿತ್ತು. ಮನೆಗೆ ಹೋದರೆ ತಂದೆಯ ಬಂದೂಕಿನಿಂದ ತಲೆಗೆ ಹೊಡೆದು ಕೊಳ್ಳುವಂತೆ ಮನಸ್ಸು ಹೇಳುತ್ತಿತ್ತು. ನಾಚಿಕೆ ಮತ್ತು ಭಯ ನನ್ನಿಂದ ದೂರವಾಗ ತೊಡಗಿತು. ನಾನು ದುಡ್ಡು  ಕದಿಯತೊಡಗಿದೆ. ತಾಯಿಯಿಂದ ಕದಿಯಲು ಪ್ರಾರಂಭವಾಗಿ ಮುಂದೆ ಅದು ಗೆಳೆಯರ ಮತ್ತು ದಾರಿಹೋಕರಲ್ಲಿಗೂ ಬಂದು ತಲುಪಿತು. ನನ್ನ ತಾಯಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ಗಮನಕ್ಕೆ ಈ ಕದಿಯುವಿಕೆ ಬಂದದ್ದೇ ತಡ, ಅವರು ನನ್ನನ್ನು ತಪಾಸಣೆ ಒಳಪಡಿಸಿದರು. ಬೆದರಿಸಿದರು. ಒಂದೋ ಚಿಕಿತ್ಸೆಗೆ ಒಪ್ಪಿಕೊಳ್ಳಬೇಕು ಇಲ್ಲವೇ ಪೆÇಲೀಸರ ಕೈಗೊಪ್ಪಿಸುವೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ನಾನು ಕೊನೆಗೂ ಚಿಕಿತ್ಸೆಗೆ ಒಪ್ಪಿಕೊಂಡೆ. ಹಾಗೆ ಆ ವ್ಯಸನದಿಂದ ಹೊರಬಂದೆ.."
 ನಿಜವಾಗಿ, ಇದು ಓರ್ವ `ಜಾಕ್'ನ ಕತೆಯಲ್ಲ. ಇಂಥ ಹತ್ತು ಹಲವು ನಿಜಕತೆಗಳು ಇಂಟರ್‍ನೆಟ್‍ನಲ್ಲಿ ಧಾರಾಳ ಇವೆ. `ಹೈ ಟೈಮ್ಸ್: ಒನ್ ಟೀನ್ಸ್ ಟ್ರು ಸ್ಟೋರಿ ಆಫ್ ಪೋಟ್ ಅಡಿಕ್ಷನ್ ಆಂಡ್ ರಿಕವರಿ’ ಎಂಬ ಶೀರ್ಷಿಕೆಯಲ್ಲಿ ಗ್ರೇಗ್ ಎಂಬ ಮುದ್ದು ಹುಡುಗನ ಮನಮಿಡಿಯುವ ಕತೆಯಿದೆ. `ಕಾನ್‍ಫೆಶ್ಶನ್ ಆಫ್ ಎ ಪೋಟ್ ಎಡಿಕ್ಟ್', `ಮೈ ಮಾರಿಜುವಾನ ಎಡಿಕ್ಷನ್ ಸ್ಟೋರಿ', ‘ಓವರ್ ಕಮಿಂಗ್ ಮೈ ಟೀನೇಜ್ ಡ್ರಗ್ ಎಡಿಕ್ಷನ್...’ ಮುಂತಾದ ಶೀರ್ಷಿಕೆಗಳಲ್ಲಿ ಧಾರಾಳ ಬರಹಗಳಿವೆ. 2013 ಫೆ. 2 ರಂದು ಮಂಗಳೂರಿನ ಪಕ್ಕದ ಪದವಿನಂಗಡಿಯ ಸ್ನೇಹ ಎಂಬ 18ರ ಯುವತಿ ಆತ್ಮಹತ್ಯೆ ಮಾಡಿಕೊಂಡಳು. 9ನೇ ತರಗತಿಯ ವರೆಗೆ ಕಲಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡಕೊಂಡಿದ್ದ ಸ್ನೇಹ ಬಳಿಕ ಮಾದಕ ಪದಾರ್ಥದತ್ತ ಅರ್ಕಷಿತಳಾದಳು. ಮನೆಯವರಿಗೆ ಗೊತ್ತಾಗುವಾಗ ಈ ಚಟಕ್ಕೆ ಒಂದೂವರೆ ವರ್ಷಗಳೇ ತಗಲಿತ್ತು. ಮಗು ಎಂದಿನಂತಿಲ್ಲ ಎಂಬ ಅನುಮಾನ ಮೂಡಿ ಹೆತ್ತವರು ಶಾಲೆಯಲ್ಲಿ ವಿಚಾರಿಸಿದಾಗ ದಂಗು ಬಡಿಸುವ ಸತ್ಯಗಳು ಎದುರಾದವು. ಮಗು ಮಧ್ಯಾಹ್ನದ ಬಳಿಕ ಡಿಜೆ ಪಾರ್ಟಿಗಳಿಗೆ ತೆರಳು ತ್ತಿತ್ತು. ಕ್ಲಬ್‍ಗಳಿಗೆ ಹೋಗುತ್ತಿತ್ತು. ತಂದೆ ಗುರುರಾಜ ಉಪಾಧ್ಯಾಯರಿಗೆ ಕುಟುಂಬದೊಂದಿಗೆ ಹೇಳಲು ಅಳುಕು. ಮನೆತನದ ಗೌರವ ಎಲ್ಲಿ ಮಣ್ಣುಪಾಲಾಗುತ್ತೋ ಎಂಬ ಅಂಜಿಕೆ. ಅವರು ಮಗಳನ್ನು ಬೆಂಗಳೂರು ಸಹಿತ ವಿವಿಧ ಆಸ್ಪತ್ರೆಗಳಲ್ಲಿ ತಿಂಗಳುಗಟ್ಟಲೆ ಇರಿಸಿ ಚಿಕಿತ್ಸೆ ಕೊಡಿಸಿದರು. ಡ್ರಗ್ಸ್, ಮದ್ಯಪಾನ, ಗುಟ್ಕಾದಂತಹ ಎಲ್ಲ ಬಗೆಯ ವ್ಯಸನಕ್ಕೂ ತುತ್ತಾಗಿದ್ದ ಮಗಳು ಹಿಂದಿನಂತಾಗಲಿ ಎಂದು ಪ್ರಾರ್ಥಿಸಿದರು. ಆದರೆ ಹೆತ್ತವರಿಗೆ ಗೊತ್ತಾಗದಂತೆ ಮಗಳು ಮನೆಯಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಿದ್ದಳು. ಕೂಡಿ ಹಾಕಿದರೆ ಮಕ್ಕಳ ಕಲ್ಯಾಣ ಇಲಾಖೆಗೆ ಕರೆ ಮಾಡಿ ದೂರು ಕೊಡುತ್ತಿದ್ದಳು. ಆದರೂ ಈ ಎಲ್ಲವನ್ನೂ ಗುರುರಾಜ್ ಮತ್ತು ಸುನೀತಾ ಎಂಬ ಆ ಹೆತ್ತವರು ಸಹಿಸಿಕೊಂಡಿದ್ದರು. ಫೆ. 2 ರಂದು ತಾಯಿಯೊಂದಿಗೆ ಸ್ನೇಹ
ದುಡ್ಡು ಕೇಳಿದಳು. ನಿರಾಕರಿಸಿದುದಕ್ಕೆ ಸಿಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಳು.
 ನಿಜವಾಗಿ ಮಾದಕ ವ್ಯಸನವನ್ನು ಅಂಟಿಸಿಕೊಂಡ ‘ಸ್ನೇಹ’ಕ್ಕಿಂತ ಈ ಸಂಗತಿಯನ್ನು ಕುಟುಂಬದ ಮಾನದ ಪ್ರಶ್ನೆಯಾಗಿಸಿಕೊಂಡು ಒಳಗೊಳಗೇ ಕರಗಿದ ಗುರುರಾಜ್ ಹೆಚ್ಚು ಕರುಣೆಗೆ ಅರ್ಹರು. ಮಕ್ಕಳ ಚಟಕ್ಕೆ ಒಳಗೊಳಗೇ ಕೊರಗುತ್ತಾ ಅಯುಷ್ಯ ಕಳೆಯುವ ಹೆತ್ತವರು ನಾವು ವಾಸಿಸುವ ‘ಕುದ್ರೋಳಿ’ಗಳಲ್ಲಿದ್ದಾರೆ. ಆದರೆ ಕುಟುಂಬದ ಗೌರವ, ಮಾನದ ಪ್ರಶ್ನೆಯ ಮುಂದೆ ಅವು ಬಹಿರಂಗಕ್ಕೆ ಬರುತ್ತಿಲ್ಲ. ಅಲ್ಲದೇ, ಇಂಥ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸುವುದಕ್ಕೆ ವಿಚಾರಧಾರೆಗಳು, ಜಾತಿ-ಧರ್ಮಗಳು, ಸಂಘಟನಾ ಗೆರೆಗಳು ಅಡ್ಡ ಬರುತ್ತಿವೆ. ಅಂದಹಾಗೆ, ಕೆಡುಕಿನಲ್ಲಿ ಭಾಗಿಯಾಗಿರುವ ಮಂದಿ ಬಯಸುವುದೂ ಇಂಥ ವಿಭಜನೆಯನ್ನೇ. ಆದ್ದರಿಂದಲೇ,
    ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಇಷ್ಟವಾಗುತ್ತದೆ.

Tuesday, May 5, 2015

ಅತ್ಯಾಚಾರ ಮತ್ತು ಕಾರಣಗಳ ಹುಡುಕಾಟ


    ಒಝ್‍ಜೆಕಾನ್ ಅಸ್ಲನ್ ಎಂಬ 20ರ ಹರೆಯದ ಟರ್ಕಿಯ ಮನಃಶಾಸ್ತ್ರ ವಿದ್ಯಾರ್ಥಿನಿಯನ್ನು 2000 ಆಗಸ್ಟ್ ನಲ್ಲಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಲಾಗುತ್ತದೆ. ಯುವತಿ ಪ್ರತಿರೋಧ ವ್ಯಕ್ತ ಪಡಿಸುತ್ತಾಳೆ. ಅಪಹರಣಕಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡುತ್ತಾಳೆ. ಅಪಹರಣಕಾರರು ಆಕೆಗೆ ಇರಿಯುತ್ತಾರಲ್ಲದೇ ತಲೆಗೆ ಕಬ್ಬಿಣದ ರಾಡ್‍ನಿಂದ ಏಟು ಕೊಟ್ಟು ಕೊಲೆ ಮಾಡುತ್ತಾರೆ. ಈ ಕೃತ್ಯ ಟರ್ಕಿಯಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗುತ್ತದೆ. ಅಂಕಾರ, ಇಸ್ತಾಂಬುಲ್, ಮೆರ್ಸಿನ್‍ಗಳಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ. ಇದೇ ವೇಳೆ, ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆ ಪ್ರತಿರೋಧ ತೋರುವುದರಿಂದ ಲಾಭವೋ ನಷ್ಟವೋ ಎಂಬುದರ ಬಗ್ಗೆ ಯುರೋಪಿನಲ್ಲಿ ನಡೆಯುತ್ತಿದ್ದ ಚರ್ಚೆಯು ಟರ್ಕಿಯನ್ನೂ ಆವರಿಸುತ್ತದೆ. 1999ರಲ್ಲಿ ಇಂಗ್ಲೆಂಡಿನಲ್ಲಿ ಈ ಕುರಿತಂತೆ ನಡೆದ ಚರ್ಚೆಯ ಫಲಿತಾಂಶಗಳು ಟರ್ಕಿಯಲ್ಲೂ ಪ್ರತಿಫಲಿಸುತ್ತದೆ. ಸ್ವರಕ್ಷಣಾ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ಏರ್ಪಾಡು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತದೆ. ಎರಡು ಬೆರಳುಗಳಿಂದ ಅತ್ಯಾಚಾರಿಯ ಕಣ್ಣನ್ನು ತಿವಿಯುವುದು ಅಥವಾ ಕೊರಳಿಗೆ ಗುದ್ದುವುದು, ಬೊಬ್ಬೆ ಹಾಕುವುದು, ತಲೆಗೂದಲನ್ನು ಬಲವಾಗಿ ಹಿಡಿದೆಳೆಯುವುದು.. ಸಹಿತ ಪ್ರತಿರೋಧ ವಿಧಾನಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಂದರ್ಭಕ್ಕೆ ಹೊಂದಿಕೊಂಡು ಮಹಿಳೆ ಪ್ರತಿರೋಧ ತೋರಬೇಕೆಂದು ಹೇಳುವವರಂತೆಯೇ ಅದರಿಂದಾಗಿ ಅತ್ಯಾಚಾರಿಗಳು ರೊಚ್ಚಿಗೇಳುವ ಅಪಾಯದ ಬಗ್ಗೆಯೂ ಎಚ್ಚರದ ಮಾತುಗಳು ಕೇಳಿಬರುತ್ತವೆ. ಒಂದು ರೀತಿಯಲ್ಲಿ, ಅಸ್ಲನ್ ಟರ್ಕಿಯ ನಿರ್ಭಯ ಆಗುತ್ತಾಳೆ. ಆಕೆಯ ಪ್ರತಿರೋಧ ದೊಡ್ಡ ಮಟ್ಟದ ಪ್ರಶಂಸೆಗೆ ಪಾತ್ರವಾಗುತ್ತದೆ.
    ಹಾಗಂತ, ಅತ್ಯಾಚಾರವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಯುರೋಪ್‍ನಲ್ಲಿ 90ರ ದಶಕದಲ್ಲೇ ಚರ್ಚೆ ಆರಂಭವಾಗಿತ್ತು.
    ಕ್ರೆಗ್ನಾನ್ ಮತ್ತು ಗ್ರೋವ್ಸ್ ಬರೆದ- ‘ಹರ್ ವಿಟ್ಸ್ ಅಬೌಟ್ ಹರ್: ಸೆಲ್ಫ್ ಡಿಫೆನ್ಸ್ ಸಕ್ಸೆಸ್ ಸ್ಟೋರೀಸ್ ಬೈ ವುಮೆನ್', ಫಿಸ್ನೋಫ್ ಮತ್ತು ಮಾರ್ಗನ್ ಅವರು ಬರೆದ- ‘ರೇಪ್, ಪ್ರಿವೆನ್ಶನ್ ಆಂಡ್ ಸೆಲ್ಫ್ ಡಿಫೆನ್ಸ್’, ಜೆಲ್‍ಮ್ಯಾನ್ ಮತ್ತು ಜೋಸೆಫ್‍ರ- ‘ದಿ ಮೈಂಡ್ ಆಫ್ ದಿ ರೇಪಿಸ್ಟ್’, ಬೆಲ್ ಮತ್ತು ನಪುರ್ಲಾ ನೆಲ್ಸನ್ ಅವರ- ‘ಸ್ಪೀಕಿಂಗ್ ಅಬೌಟ್ ರೇಪ್ ಈಸ್ ಎವ್ರಿ ಒನ್ಸ್ ಬ್ಯುಸಿನೆಸ್’ ಅಥವಾ ಬ್ರೈತ್‍ವೈಟ್ ಮತ್ತು ಬೈಲ್ಸ್ ಅವರು ಬರೆದ- ‘ವುಮೆನ್ ಆ್ಯಸ್ ವಿಕ್ಟಿಮ್ಸ್ ಆಫ್ ಕ್ರೈಮ್..’ ಮುಂತಾದ ಹಲವಾರು ಕೃತಿ-ಲೇಖನಗಳು ಯುರೋಪಿಯನ್ ಆಲೋಚನೆಗಳನ್ನು ಕೆದಕುವ ಪ್ರಯತ್ನ ಮಾಡಿದ್ದುವು. ‘ಅತ್ಯಾಚಾರಿಗಳಿಗೆ ಅನೇಕ ಬಾರಿ ಅತ್ಯಾಚಾರದ ಪರಿಣಾಮ ಗೊತ್ತಿರುವುದಿಲ್ಲ, ಮರಣ ದಂಡನೆಗೆ ಅರ್ಹವಾಗುವಷ್ಟು ಭೀಕರ ಅಪರಾಧ ಎಂಬುದರ ಪ್ರಜ್ಞೆ ಇರುವುದಿಲ್ಲ, ಆದ್ದರಿಂದ ಅತ್ಯಾಚಾರಿಗಳ ಮುಂದೆ ಅದರ ಪರಿಣಾಮಗಳ ಬಗ್ಗೆ ವಿವರಿಸುವ ಮೂಲಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳಬಹುದು’ ಎಂಬ ಅಭಿಪ್ರಾಯಗಳೂ ಬಂದುವು. 2009 ಡಿಸೆಂಬರ್‍ನಲ್ಲಿ ರೇಪ್ ಇಂಟೆಲಿಜೆನ್ಸ್ ಯುನಿಟ್ ಎಂಬ ವಿಭಾಗವನ್ನು ಬ್ರಿಟನ್‍ನಲ್ಲಿ ಪ್ರಪ್ರಥಮವಾಗಿ ತೆರೆಯಲಾಯಿತು. ಕೆರೋಲಿನ್ ಬೇಟ್ಸ್ ರ ನೇತೃತ್ವದಲ್ಲಿ 400 ವಿಶೇಷ ಅಧಿಕಾರಿಗಳನ್ನು ಒಳಗೊಂಡ ತಂಡವಾಗಿತ್ತು ಅದು. ಜಾನ್‍ವೊರ್ ಬಾಯ್ಸ್ ಎಂಬ ಕ್ಯಾಬ್ ಡ್ರೈವರ್ ಹಾಗೂ ಫುಟ್ಬಾಲ್ ರೆಫ್ರಿಗಳ ಮುಖ್ಯಸ್ಥ ಕಿರ್ಕ್ ರೈಡ್ ಎಂಬಿಬ್ಬರು ನೂರಾರು ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸಿದ್ದ ಸಂಗತಿ ಬಹಿರಂಗಕ್ಕೆ ಬಂದ ಬಳಿಕ ಈ ತಂಡದ ರಚನೆಯಾಗಿತ್ತು. ಒಂದು ರೀತಿಯಲ್ಲಿ, ಯುರೋಪಿಯನ್ ರಾಷ್ಟ್ರಗಳಲ್ಲಿ 90ರ ದಶಕದಲ್ಲೇ ಆರಂಭವಾದ ಮಹಿಳಾ ಸುರಕ್ಷಿತತೆಯ ಚರ್ಚೆಗಳು ಭಾರತದಲ್ಲಿ ಗಂಭೀರ ಮಟ್ಟದಲ್ಲಿ ಕಾಣಿಸಿಕೊಂಡದ್ದು 2012ರ ನಿರ್ಭಯ ಪ್ರಕರಣದ ನಂತರ. ಅತ್ಯಾಚಾರದ ಹಿಂದಿರುವ ಸತ್ಯಗಳು ಮತ್ತು ಮಿಥ್ಯಗಳು ಒಂದು ಹಂತದ ವರೆಗೆ ನಮ್ಮಲ್ಲಿ ಆ ಬಳಿಕ ಚರ್ಚೆಗೀಡಾದವು. ಹೆಣ್ಣಿನ ಉಡುಪು, ಗಂಡಿನ ಅಮಲು, ಆಧುನಿಕ ಜೀವನ ಕ್ರಮ, ಗಂಡಿನ ಬಲಾಢ್ಯತೆ, ಸಿನಿಮಾ.. ಮುಂತಾದುವುಗಳನ್ನು ಅತ್ಯಾಚಾರಕ್ಕೆ ಕಾರಣವಾಗಿ ಮುಂದಿಡಲಾಯಿತು. ಇವನ್ನು ತಿರಸ್ಕರಿಸುವ ಪ್ರಕ್ರಿಯೆಯೂ ನಡೆದುವು. ನಿಜವಾಗಿ, ನಮ್ಮಲ್ಲಿ ನಡೆದ ಚರ್ಚೆಯಲ್ಲಿ ಕಾಣದೇ ಹೋದುದೇನೆಂದರೆ, ಸ್ವರಕ್ಷಣೆಯ ಬಗ್ಗೆ ಗಂಭೀರ ಮಟ್ಟದ ವಿಶ್ಲೇಷಣೆ ನಡೆಯದೇ ಹೋದುದು. ‘ಪ್ರಚೋದನಾತ್ಮಕ ಉಡುಪು ಧರಿಸುವ ಮಹಿಳೆ ಅಪಾಯವನ್ನು ಆಹ್ವಾನಿಸುತ್ತಾಳೆ' ಎಂಬ ಅಭಿಪ್ರಾಯವನ್ನು ತಿರಸ್ಕರಿಸಿ ನಮ್ಮಲ್ಲಿ ತಿಂಗಳುಗಟ್ಟಲೆ ಚರ್ಚೆಗಳು ನಡೆದಿವೆ. ಅತ್ಯಾಚಾರಿಗಳು ಸುಲಭದ ಗುರಿಯನ್ನು ಇಟ್ಟುಕೊಳ್ಳುತ್ತಾರೆಯೇ ಹೊರತು ಬಟ್ಟೆಯ ಉದ್ದಳತೆಯನ್ನು ನೋಡಿಯಲ್ಲ ಎಂದು ವಾದಿಸಿದವರಿದ್ದಾರೆ. ಮಕ್ಕಳು, ವೃದ್ಧೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಪ್ರಚೋದನೆ ಕಾರಣ’ ಎಂದು ಪ್ರಶ್ನಿಸಿದವರಿದ್ದಾರೆ. ಮಹಿಳೆಯರ ಕುರಿತಾದ ಕೀಳು ಭಾವನೆ, ಪುರುಷ ಶ್ರೇಷ್ಠ ಆಲೋಚನೆಗಳೇ ಅತ್ಯಾಚಾರಕ್ಕೆ ಕಾರಣ ಎಂದೂ ಸಮರ್ಥಿಸಿದವರಿದ್ದಾರೆ. ಈ ವಾದ-ವಿವಾದಗಳೇನೇ ಇರಲಿ, ಅತ್ಯಾಚಾರ ಪ್ರಕರಣಗಳಂತೂ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಇಂಡಿಯಾಸ್ ಡಾಟರ್‍ನಲ್ಲಿ ಆರೋಪಿ ಮುಖೇಶ್ ಸಿಂಗ್ ತನ್ನ ಕೃತ್ಯದ ಬಗ್ಗೆ ತೀರಾ ಕ್ಯಾಶುವಲ್ ಆಗಿ ಮಾತಾಡುತ್ತಾನೆ. ಅತ್ಯಾಚಾರದ ಇತರ ಪ್ರಕರಣಗಳಿಗೆ ಇಲ್ಲದ ಮಹತ್ವ ನಿರ್ಭಯಳಿಗೇಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸುತ್ತಾನೆ. ಸಂಜೆಯ ಬಳಿಕ ಹೆಣ್ಣು ಮನೆಯಿಂದ ಹೊರ ಬರಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಇಂಥ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಇಂಥ ಪುರಾತನ ಆಲೋಚನೆಗಳೇ ಕಾರಣ ಎಂದೂ ಷರಾ ಬರೆಯಬಹುದು. ಆದರೆ ಯುರೋಪಿಯನ್ ರಾಷ್ಟ್ರಗಳು ತೀರಾ ಮುಂದುವರಿದಿದೆಯಲ್ಲವೇ? ಧಾರ್ಮಿಕ ಚಿಂತನೆಗಳಿಗೆ ತೀರಾ ಕಡಿಮೆ ಮಹತ್ವ ಇರುವ ಮತ್ತು ಭಾರತದಂತೆ ಖಾಪ್ ಪಂಚಾಯತ್, ಜಾತಿಗಳು ಮತ್ತು ಕಟ್ಟುಪಾಡುಗಳಿಲ್ಲದ ಅಥವಾ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳಲ್ಲವೆ ಅವು? ಮಾನವ ಹಕ್ಕುಗಳು ಮತ್ತು ಮಹಿಳಾ ಸ್ವಾತಂತ್ರ್ಯದ ವಿಷಯದಲ್ಲಿ ಅಮೇರಿಕ ಜಗತ್ತಿನಲ್ಲಿಯೇ ಮುಂಚೂಣಿಯಲ್ಲೂ ಇದೆಯಲ್ಲವೇ? ಇವೆಲ್ಲ ಇದ್ದೂ ಅಮೇರಿಕದಲ್ಲಿ ಪ್ರತಿವರ್ಷ 92 ಸಾವಿರಕ್ಕಿಂತಲೂ ಅಧಿಕ ಲೈಂಗಿಕ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದೇಕೆ? 90ರ ದಶಕದಲ್ಲೇ ಬ್ರಿಟನ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಅತ್ಯಾಚಾರವು ಬಹುದೊಡ್ಡ ಚರ್ಚಾ ವಿಷಯವಾಗುವುದಕ್ಕೆ ಕಾರಣಗಳೇನು? ಇವತ್ತು ಯುರೋಪ್, ಅಮೇರಿಕ ಸಹಿತ ಮುಂದುವರಿದ ರಾಷ್ಟ್ರಗಳು ಅತ್ಯಾಚಾರದ ಸಮಸ್ಯೆಯನ್ನು ಎದುರಿಸುತ್ತಿವೆ. ಸ್ವರಕ್ಷಣೆಯ ಬಗ್ಗೆ ಅಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗುವುದಕ್ಕೆ ಕಾರಣಗಳೇನು? ಮುಖೇಶ್ ಸಿಂಗ್‍ನಂಥ ಮನಸ್ಥಿತಿಯೊಂದೇ ಇದಕ್ಕೆ ಕಾರಣ ಎಂದಾದರೆ ಯುರೋಪಿಯನ್ ರಾಷ್ಟ್ರಗಳು ಮುಂದುವರಿದಿದೆ ಎಂಬುದು ಬೊಗಳೆ ಎಂದಾಗುತ್ತದೆ. ಅದು ಮಾನಸಿಕವಾಗಿ ಭಾರತಕ್ಕಿಂತಲೂ ಹಿಂದಿದೆ ಎನ್ನಬೇಕಾಗುತ್ತದೆ ಅಥವಾ ಈ ಯುರೋಪ್‍ಗಿಂತಲೂ ಗಲ್ಫ್ ರಾಷ್ಟ್ರಗಳು ಸಾಕಷ್ಟು ಮುಂದಿವೆ ಎಂದೂ ಒಪ್ಪಬೇಕಾಗುತ್ತದೆ. ಯಾಕೆಂದರೆ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಾಚಾರ ಪ್ರಕರಣ ಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಒಂದು ಕಡೆ, ಆಧುನಿಕ ಚಿಂತನೆಗಳು ಎಲ್ಲಿ ಅತ್ಯಂತ ಹೆಚ್ಚಿವೆಯೋ ಅಲ್ಲಿ ಮಹಿಳಾ ದೌರ್ಜನ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಮೊದಲು ಅಮೇರಿಕ ಮತ್ತಿತರ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಉದಾರೀಕರಣದ ಪ್ರಕ್ರಿಯೆಗಳಿಗೆ ಯುರೋಪ್ ತೆರೆದುಕೊಂಡ ಬಳಿಕ ಮಹಿಳಾ ದೌರ್ಜನ್ಯಗಳ ಪ್ರಕರಣಗಳಲ್ಲಿ ತೀವ್ರಗತಿಯ ಏರಿಕೆ ಉಂಟಾಯಿತು. ಸಿನಿಮಾ, ಜಾಹೀರಾತು, ಸಾರ್ವಜನಿಕ ಬದುಕು ಎಲ್ಲದರಲ್ಲೂ ಮಹಿಳೆ ಮತ್ತು ಪುರುಷ ಕಾಣಿಸಿಕೊಳ್ಳುವ ವಿಧಾನ ಬದಲಾಯಿತು. ಪುರುಷ ಮತ್ತು ಮಹಿಳೆಯರ ಸ್ವಾತಂತ್ರ್ಯ, ಹಕ್ಕುಗಳ ವಿಷಯದಲ್ಲಿ ಹೊಸ ಬಗೆಯ ಚಿಂತನೆಗಳು ನಡೆದುವು. ಸ್ತ್ರೀ ಮತ್ತು ಪುರುಷ ಸಮಾನತೆಯ ವಿಷಯದಲ್ಲಿ ಗಂಭೀರ ವಾದ-ವಿವಾದಗಳು ಉಂಟಾದುವು. ವಿಂಬಲ್ಡನ್ ಟೆನ್ನಿಸ್‍ನಲ್ಲಿ ಪುರುಷರಷ್ಟೇ ಬಹುಮಾನ ಮೊತ್ತವನ್ನು ಮಹಿಳೆಗೂ ನೀಡಬೇಕು ಎಂಬ ಕೂಗು ಹುಟ್ಟಿಕೊಂಡದ್ದೂ ಈ ಸಂದರ್ಭದಲ್ಲೇ. ಯುರೋಪಿನ ಈ ಉದಾರೀಕರಣದ ನೀತಿಗೆ ಭಾರತ ತೆರೆದುಕೊಂಡ ಬಳಿಕ ಭಾರತವೂ ವೇಗವಾಗಿ ಯುರೋಪ್ ಆಗತೊಡಗಿತು. ಯುರೋಪಿನ ಅತ್ಯಾಚಾರ ಸಮಸ್ಯೆ ಭಾರತದ್ದೂ ಆಯಿತು. ಅಲ್ಲಿ ಯಾವ ಬಗೆಯ ಚರ್ಚೆಗಳಾಗುತ್ತವೋ ಅವೇ ಬಗೆಯ ಚರ್ಚೆ ದಶಕಗಳ ಬಳಿಕ ಇಲ್ಲೂ ಆಗತೊಡಗಿತು. ಇನ್ನು ಸ್ವರಕ್ಷಣೆಯ ಕಲೆಯ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ. ಈಗಾಗಲೇ ಯುರೋಪ್ ಆ ಕುರಿತಾದ ಚರ್ಚೆಯನ್ನು ಮಾಡಿ ಮುಗಿಸಿದೆ. ಇನ್ನೊಂದು ಕಡೆ, ಯುರೋಪಿಯನ್ ಪ್ರಣೀತ ಸ್ವಾತಂತ್ರ್ಯವನ್ನು ಅನುಮಾನದಿಂದಲೇ ನೋಡುತ್ತಿರುವ ಮತ್ತು ಆಧುನಿಕ ಚಿಂತನೆಗಳನ್ನು ತನ್ನೊಳಗೆ ಇಳಿಸಿಕೊಳ್ಳಲು ಹಿಂಜರಿಯುತ್ತಿರುವ ರಾಷ್ಟ್ರಗಳಲ್ಲಿ ಮಹಿಳಾ ದೌರ್ಜನ್ಯ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದನ್ನು ಏನೆಂದು ವಿಶ್ಲೇಷಿಸಬಹುದು?
  
ಅಷ್ಟಕ್ಕೂ, ಸ್ವಾತಂತ್ರ್ಯ ಎಂಬ ಪದ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್'ನ ಬಳಿಕ ಹುಟ್ಟಿಕೊಂಡದ್ದಲ್ಲ. ಅದು ಉದಾರೀಕರಣದ ಮೊದಲೂ ಇತ್ತು ಮತ್ತು ಉದಾರೀಕರಣದ ನಂತರದಲ್ಲೂ ಇರುತ್ತದೆ. ಆದರೆ ಜಾಗತೀಕರಣದ ನಂತರ ‘ಸ್ವಾತಂತ್ರ್ಯ’ ಎಂಬ ಪದಕ್ಕೆ ಪುರುಷ ಮತ್ತು ಮಹಿಳೆ ಇಬ್ಬರೂ ವಿಪರೀತ ಅರ್ಥವನ್ನು ಕಲ್ಪಿಸಿಕೊಂಡಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ದೀಪಿಕಾ ಪಡುಕೋಣೆಯಿದ್ದರೆ ಇನ್ನೊಂದು ಕಡೆ ಮುಖೇಶ್ ಸಿಂಗ್ ಇದ್ದಾನೆ. ಇವರಿಬ್ಬರೂ ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿಯೇ ಬದುಕುತ್ತಿದ್ದರೂ ಸ್ವಾತಂತ್ರ್ಯ ಎಂಬ ಪದವನ್ನು ಇವರು ಅರ್ಥೈಸಿಕೊಂಡ ರೀತಿಯೇ ಬೇರೆ. ದೀಪಿಕಾಳ ಮೈ ಚಾಯ್ಸ್ ಅನ್ನು ವೀಕ್ಷಿಸಿದರೆ ಮುಖೇಶ್‍ಗೆ ಅದು ಅನಾಗರಿಕ ಅನ್ನಿಸಬಹುದು. ಇಂಡಿಯಾಸ್ ಡಾಟರ್‍ನಲ್ಲಿ ಮುಖೇಶ್‍ನನ್ನು ವೀಕ್ಷಿಸಿದ ದೀಪಿಕಾಳಿಗೆ ಆತ ಅನಾಗರಿಕನಾಗಿ ಕಾಣಿಸಬಹುದು. ಬಹುಶಃ ಉದಾರೀಕಣದ ಜಗತ್ತು ಈ ಎರಡು ‘ಉಗ್ರ'ವಾದಗಳ ನಡುವೆ ಸಿಕ್ಕು ಇವತ್ತು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ಯುರೋಪ್ ಪ್ರಣೀತ ಸ್ವಾತಂತ್ರ್ಯವು ಹೆಣ್ಣನ್ನು ಮೈ ಚಾಯ್ಸ್ ನಂತೆ ಬೆಳೆಯಲು ಪ್ರಚೋದಿಸುತ್ತದೆ. ಇನ್ನೊಂದು ಕಡೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಅದು ಗಾಢ ನಿರ್ಲಕ್ಶ್ಯವನ್ನೂ ತಾಳುತ್ತದೆ ಅಥವಾ ಆ ಬಗ್ಗೆ ಚರ್ಚಿಸುವುದು ಮಹಿಳಾ ವಿರೋಧಿ ಎಂಬ ವಾತಾವರಣವನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಮಾರುಕಟ್ಟೆ ಆಧಾರಿತ ಅದರ ನೀತಿಗಳು ಕಾರಣವೋ ಏನೋ ಆದರೆ ಅದು ಸಮಾಜದ ಒಟ್ಟು ಆಲೋಚನಾ ಪ್ರಕ್ರಿಯೆಯ ಮೇಲೆ ಪರಿಣಾಮವನ್ನಂತೂ ಬೀರುತ್ತಿದೆ. ಒಂದು ರೀತಿಯಲ್ಲಿ, ಉದಾರೀಕರಣದ ಕರಾಳ ಮುಖವಾಗಿ ಮುಖೇಶ್ ಕಾಣಿಸಿದರೆ ಅತಿರೇಕದ ಮುಖವಾಗಿ ದೀಪಿಕಾ ಕಾಣಿಸುತ್ತಾಳೆ. ಇವೆರಡರ ನಡುವೆ ನಾವು ‘ಸ್ವಾತಂತ್ರ್ಯ'ಕ್ಕೆ ಅರ್ಥವನ್ನು ಹುಡುಕಬೇಕಿದೆ. ಪಂಜಾಬ್‍ನ ಮೊಗ್ಗಾದಲ್ಲಿ ನಡೆದ ಘಟನೆಯನ್ನು ಇನ್ನೊಂದು ನಿರ್ಭಯ ಆಗಿ ನೋಡಲಾಗುತ್ತಿರುವ ಈ ಸಂದರ್ಭದಲ್ಲಿ ಇಂಥದ್ದೊಂದು ಹುಡುಕಾಟ ಅಗತ್ಯವೆನಿಸುತ್ತದೆ. 

Friday, May 1, 2015

ಶ್ರಮ ಸಂಸ್ಕೃತಿ ಮತ್ತು ಯಂತ್ರ ಸಂಸ್ಕೃತಿಯನ್ನು ಮುಖಾಮುಖಿಗೊಳಿಸಿದ ಪ್ರಸನ್ನ

     ಯಂತ್ರಗಳ ಈ ಯುಗದಲ್ಲಿ ಶ್ರಮ ಸಂಸ್ಕ್ರಿತಿಗೆ ಏನು ಮಹತ್ವವಿದೆ? ಮಡಿಕೆ ತಯಾರಿ, ಕೈಮಗ್ಗ, ಚಾಪೆನೇಯ್ಗೆ, ಸಾಂಪ್ರದಾಯಿಕ ಕೃಷಿ.. ಮುಂತಾದ ಶ್ರಮ ಸಹಿತ ಜೀವನ ಕ್ರಮಕ್ಕೆ ಇವತ್ತಿನ ಸಮಾಜ ಮರಳಬೇಕೆಂದು ಬಯಸುವುದು ಎಷ್ಟು ಪ್ರಾಯೋಗಿಕ? ತುಂಬಿ ತುಳುಕುತ್ತಿರುವ ಜನಸಂಖ್ಯೆಗೆ ಇಂಥ ಗುಡಿ ಕೈಗಾರಿಕೆಗಳು ಉದ್ಯೋಗ ನೀಡಬಲ್ಲುದೇ? ಅನ್ನ ನೀಡೀತೇ? ಯಂತ್ರಗಳು ಶ್ರಮ ಸಹಿತ ಸರಳ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರಿರಬಹುದು. ಇವತ್ತು ಯಂತ್ರಗಳು ಮಾಡುವ ಕೆಲಸವನ್ನು ಐದಾರು ದಶಕಗಳ ಹಿಂದೆ ಮನುಷ್ಯನೇ ಮಾಡುತ್ತಿದ್ದ. ಕೃಷಿಯಿಂದ ಹಿಡಿದು ಹೈನುಗಾರಿಕೆಯ ವರೆಗೆ, ಮರ ಕಡಿಯುವಲ್ಲಿಂದ ತೊಡಗಿ ಅಡಿಕೆ ಸುಲಿಯುವವರೆಗೆ ಎಲ್ಲವೂ ಯಂತ್ರ ಮುಕ್ತವಾಗಿದ್ದುವು. ಆದರೆ ಇವತ್ತು ಗದ್ದೆಯನ್ನು ಉತ್ತುವುದು, ಬಿತ್ತುವುದು, ಕೊಯ್ಯುವುದು, ಕಾಳು-ಜೊಳ್ಳನ್ನು ಬೇರ್ಪಡಿಸುವುದು, ಪ್ಯಾಕಿಂಗ್, ಮಾರ್ಕೆಟಿಂಗ್.. ಎಲ್ಲವನ್ನೂ ಯಂತ್ರವೇ ಮಾಡುತ್ತಿದೆ. ಹಸುವಿನ ಹಾಲು ಕರೆಯುವುದಕ್ಕೂ ಮೆಷೀನು ಬಂದಿದೆ. ಮರಗಳನ್ನು ಕಡಿಯುವುದಕ್ಕೆ ಯಂತ್ರ, ಲೋಡ್-ಅನ್‍ಲೋಡ್‍ಗೆ ಯಂತ್ರ; ಅಡಿಕೆಯನ್ನು ಕೀಳುವಲ್ಲಿಂದ ಸುಲಿಯುವವರೆಗೂ ಎಲ್ಲಕ್ಕೂ ಯಂತ್ರವೇ. ಹಾಗಂತ, ಹೀಗಲ್ಲದೇ ಬರೇ ಮನುಷ್ಯರನ್ನೇ ಆಶ್ರಯಿಸಿಕೊಳ್ಳುವ ವಿಧಾನ ಸಮಾಜವನ್ನು ಇವತ್ತು ಎತ್ತ ಕೊಂಡೊಯ್ಯಬಲ್ಲವು? ಏರುತ್ತಿರುವ ಜನಸಂಖ್ಯೆಗೆ ಸಾವಯವ ಕೃಷಿ ಪದ್ಧತಿ ಅನ್ನ ನೀಡುವಷ್ಟು ಸಮರ್ಥವೇ? ಯಂತ್ರಗಳ ಅವಲಂಬನೆಯಿಲ್ಲದೆ ಬದುಕುವುದು ಇಂದಿನ ಆಧುನಿಕ ಜಗತ್ತಿನಲ್ಲಿ ಎಷ್ಟು ವಾಸ್ತವ..
    ಇಂಥದ್ದೊಂದು ಚರ್ಚೆಗೆ ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದ್ದಾರೆ. ‘ಶ್ರಮಸಹಿತ ಸರಳ ಬದುಕನ್ನು ಬದುಕೋಣ ಬನ್ನಿ' ಎಂದು ಆಗ್ರಹಿಸಿ ಮಾರ್ಚ್ 20ರಿಂದ ಎಪ್ರಿಲ್ 20ರ ವರೆಗೆ ಅವರು ಬದನವಾಳುವಿ ನಲ್ಲಿ ಸತ್ಯಾಗ್ರಹ ನಡೆಸಿದರು. ಯಂತ್ರಗಳಿಂದ ಕಳಚಿಕೊಳ್ಳುವುದು ಈ ಸತ್ಯಾಗ್ರಹದ ಪರಮ ಧ್ಯೇಯ. ಈ ಸತ್ಯಾಗ್ರಹಕ್ಕೆ ಬೆಂಬಲವನ್ನು ಸೂಚಿಸಿ ಮೇಧಾ ಪಾಟ್ಕರ್ ಬದನವಾಳುವಿಗೆ ಆಗಮಿಸಿದರು. ರಹ್ಮತ್ ತರೀಕೆರೆ, ಜಿ.ಕೆ. ಗೋವಿಂದರಾವ್, ಎ.ಎನ್. ಯಲ್ಲಪ್ಪ ರೆಡ್ಡಿ, ದೇವನೂರು ಮಹಾದೇವ.. ಮುಂತಾದವರು ಪ್ರಸನ್ನರೊಂದಿಗೆ ಸೇರಿಕೊಂಡಿರು. ‘ಶ್ರಮಸಹಿತ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇವೆ. ಅದ್ದೂರಿ ಸಭೆ-ಸಮಾರಂಭಗಳನ್ನು ಏರ್ಪಡಿಸುವುದಿಲ್ಲ. ಸರಳ ಮದುವೆ ಮಾಡುತ್ತೇವೆ..' ಎಂಬಿತ್ಯಾದಿಯಾಗಿ ಪ್ರತಿಜ್ಞೆಯನ್ನೂ ಅಲ್ಲಿ ಕೈಗೊಳ್ಳಲಾಯಿತು. ಒಂದು ರೀತಿಯಲ್ಲಿ, ಆಧುನಿಕ ಜಗತ್ತಿನ ಯಂತ್ರ ಸಹಿತ ಬದುಕಿಗೆ ಪರ್ಯಾಯವೆಂಬಂತೆ ಮೈಸೂರು ಸವಿೂಪದ ಬದನವಾಳು ಸತ್ಯಾಗ್ರಹ ತನ್ನನ್ನು ಬಿಂಬಿಸಿ ಕೊಂಡಿತು. ಅಷ್ಟಕ್ಕೂ, ಕಂಪ್ಯೂಟರ್, ಮೊಬೈಲ್ ಜಮಾನದ ಇಂದಿನ ಪೀಳಿಗೆಯ ಪ್ರಶ್ನೆಗಳಿಗೆ ಬದನವಾಳು ತೃಪ್ತಿಕರ ಉತ್ತರ ನೀಡಬಲ್ಲುದೇ ಎಂಬ ಪ್ರಶ್ನೆ ಸಹಜವಾದುದು. ಕಂಪ್ಯೂಟರನ್ನು ಕೈಬಿಟ್ಟು ಹಾರೆ-ಗುದ್ದಲಿಯನ್ನು ಎತ್ತಿಕೊಳ್ಳಿ ಅನ್ನುವುದು ಅಥವಾ ಕೈಗಾರಿಕೆಗಳನ್ನು ಸ್ಥಗಿತಗೊಳಿಸಿ ಶ್ರಮಸಹಿತ ಜಗತ್ತಿಗೆ ಮರಳಿ ಅನ್ನುವುದು ಆಶ್ಚರ್ಯಕರವಷ್ಟೇ ಅಲ್ಲ ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಕಾಣಬಹುದು. ಆದರೆ ಈ ಯಂತ್ರಗಳು ಎಲ್ಲಿಯ ವರೆಗೆ? ಪ್ರಾಕೃತಿಕ ಸಂಪನ್ಮೂಲಕ್ಕೂ ಒಂದು ಮಿತಿಯಿದೆಯಲ್ಲವೇ? ಆ ಬಳಿಕ ಏನು? 2050ಕ್ಕಾಗುವಾಗ ತೈಲ ಸಂಪನ್ಮೂಲ ಬಿಡಿ, ನದಿ ಮೂಲಗಳೂ ಬತ್ತಿ ಹೋಗಬಹುದೆಂಬ ಭೀತಿಯನ್ನು ಮೇಧಾ ಪಾಟ್ಕರ್‍ರಂತಹವರೇ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಯಂತ್ರಗಳೇನು ಮಾಡಬಲ್ಲವು? ಅಂದಹಾಗೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಂತ್ರಗಳ ಬಳಕೆ ಎಂದರೆ ಲಾಭ ಹೆಚ್ಚಿಸುವುದು ಹಾಗೂ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುವುದು ಎಂದರ್ಥ. ಈ ವ್ಯವಸ್ಥೆ ಎಷ್ಟು ಸ್ವಾರ್ಥ ಮತ್ತು ಮೋಹದ ಚೌಕಟ್ಟಿನೊಳಗೆ ಹೆಣೆಯಲ್ಪಟ್ಟಿದೆಯೆಂದರೆ, ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಹೆಚ್ಚೆಚ್ಚು ದುಡಿಯಬೇಕೆಂದು ಅದು ಹೇಳಿಕೊಡುತ್ತದೆ. ಇಲ್ಲಿ ವಿಶ್ರಾಂತಿಗೆ ಸಮಯ ಬಹಳ ಕಡಿಮೆ. ಆದ್ದರಿಂದಲೇ ಬೌದ್ಧಿಕ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ವಿೂಸಲಿಡಲು ಇಲ್ಲಿ ಸಮಯವೇ ಇರುವುದಿಲ್ಲ. ದುಡಿಮೆ, ದುಡಿಮೆ ಮತ್ತೂ ದುಡಿಮೆ. ವಿಜ್ಞಾನದ ಸಂಶೋಧನೆಗಳು ಲಾಭಕೋರರ ಕೈಗೆ ಸಿಕ್ಕರೆ ಏನಾಗಬಹುದೋ ಅದರ ಪ್ರತ್ಯಕ್ಷ ಉದಾಹರಣೆಗಳು ಪ್ರತಿ ದಿನ ಸಿಗುತ್ತಲೇ ಇವೆ. ಈ ಲಾಭಕೋರ ಜಗತ್ತಿನ ಮುಷ್ಠಿಯಿಂದ ಹೊರಬಂದು ಸಹಜವಾಗಿ ಮತ್ತು ಸರಳವಾಗಿ ಬದುಕುವುದು ಸಾಧ್ಯವಿಲ್ಲವೇ ಎಂಬ ಪ್ರಸನ್ನ ಅವರ ಪ್ರಶ್ನೆ ಈ ನೆಲೆಯಲ್ಲಿ ತೀರಾ ಅಸಹಜವಾದುದಲ್ಲ ಮತ್ತು ಒಂದೇ ಏಟಿಗೆ ತಿರಸ್ಕಾರಕ್ಕೆ ಅರ್ಹವಾದವೂ ಅಲ್ಲ.
    ಇವತ್ತಿನ ಜಗತ್ತು ಎರಡು ಭಾಗಗಳಾಗಿ ವಿಭಜಿತಗೊಂಡಿದೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದದ, ಸವಲತ್ತು ಇರುವ ಮತ್ತು ಇರದ ಅಥವಾ ಶ್ರೀಮಂತ ಮತ್ತು ಬಡ ಎಂಬ ಎರಡು ಜಗತ್ತುಗಳು. ಈ ಜಗತ್ತಿನಲ್ಲಿ ಒಂದಕ್ಕೊಂದು ಅವಲಂಬನೆ ಎಷ್ಟು ಆಳವಾಗಿದೆ ಎಂದರೆ, ಅಮೇರಿಕಕ್ಕೆ ಶೀತವಾದರೆ ಚೀನಾ ಸೀನುವಷ್ಟು. ಎಲ್ಲವೂ ಯಂತ್ರಾಧಾರಿತ. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ವಿಪರೀತ ಅವಲಂಬನೆಯು ಎಲ್ಲ ಬಗೆಯ ಪೈಪೋಟಿ, ಹಿಂಸೆ, ಆತ್ಮಹತ್ಯೆಗಳ ಭೀಕರ ಸಂಸ್ಕ್ರಿತಿಯನ್ನೇ ಹುಟ್ಟುಹಾಕಿದೆ. ಯಂತ್ರವೆಂಬುದು ಬೇಡಿಕೆಗೆ ತಕ್ಕಂತೆ ಆಹಾರವನ್ನು ಪೂರೈಸುವುದಲ್ಲ. ಅದು ಭ್ರಮೆಯ ಜಗತ್ತನ್ನು ರೈತನ ಮುಂದೆ ತೆರೆದಿಡುತ್ತದೆ. ಹೆಚ್ಚು ಬೆಳೆ, ಹೆಚ್ಚು ದುಡ್ಡು, ಐಶಾರಾಮಿ ಜೀವನ.. ಇಂಥದ್ದೊಂದು ಕಲ್ಪನೆ ಯಂತ್ರ ಸಂಸ್ಕ್ರಿತಿಯದ್ದೇ ಹೊರತು ಶ್ರಮ ಸಂಸ್ಕ್ರಿತಿಯದ್ದಲ್ಲ. ಶ್ರಮ ಸಂಸ್ಕ್ರಿತಿಯಲ್ಲಿ ಮೋಹ ಇಲ್ಲ. ದುಡ್ಡು ಕೂಡಿಡುವ ಧಾವಂತ ಇಲ್ಲ. ಬೆಳಗ್ಗಿನಿಂದ ಸಂಜೆವರೆಗೆ ದುಡಿದು ರಾತ್ರಿಯನ್ನು ನೆಮ್ಮದಿಯಾಗಿ ಕಳೆಯುವ ಮತ್ತು ವಿಪರೀತ ಆಸೆಗಳಿಲ್ಲದೆ ಬದುಕುವ ವಿಧಾನ. ಯಂತ್ರ ಸಂಸ್ಕ್ರಿತಿ ಇದಕ್ಕೆ ವಿರುದ್ಧವಾದುದು. ಅದು ಹಣ ಕೇಂದ್ರಿತ. ಅದಕ್ಕಾಗಿ ಎಷ್ಟು ದುಡಿದರೂ ಉತ್ತಮವೇ. ಹಾಗೆ, ಆಧ್ಯಾತ್ಮಿಕಕ್ಕೂ ಬೌದ್ಧಿಕ ಬೆಳವಣಿಗೆಗೂ ವಿೂಸಲಿಡಲು ಸಮಯವೇ ಇಲ್ಲದಷ್ಟು ಮನುಷ್ಯನನ್ನು ಯಂತ್ರ ಮಾನವನಾಗಿಸುವುದು ಅದರ ಶೈಲಿ. ಎಲ್ಲಿ ಈ ಬಗೆಯ ಧಾವಂತ ಇರುತ್ತದೋ ಅಲ್ಲಿ ಹಿಂಸೆ ಮತ್ತು ಸಾವು ಅನಿವಾರ್ಯವಾಗಿರುತ್ತದೆ. ಯಂತ್ರಾಧಾರಿತ ಜೀವನ ಕ್ರಮದ ಮುಖ್ಯ ಕೊಡುಗೆ ಏನೆಂದರೆ ಪೈಪೋಟಿ. ಶ್ರಮ ಸಹಿತ ಬದುಕಿನಲ್ಲಿ ಈ ಪೈಪೋಟಿ ಕಡಿಮೆ. ಅಂದಹಾಗೆ, ಕೈಗಾರಿಕಾ ಕ್ರಾಂತಿಯಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಿದುವು, ಜನರ ಜೀವನ ಮಟ್ಟದಲ್ಲಿ ಮತ್ತು ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಉಂಟಾಯಿತು ಎಂದೆಲ್ಲ ಹೇಳುವಾಗಲೂ ಅದರ ಅಡ್ಡ ಪರಿಣಾಮವಾದ ಹಿಂಸೆ, ಕೊಲೆ, ಕ್ರೌರ್ಯಗಳನ್ನು ನಾವು ಅಡಗಿಸುವುದೇ ಹೆಚ್ಚು. ಐಸಿಸ್‍ನಂಥ ಗುಂಪುಗಳು, ಅಮೇರಿಕದಂಥ ಬಲಾಢ್ಯ ರಾಷ್ಟ್ರಗಳು ಮತ್ತು ಅವುಗಳ ಕ್ರೌರ್ಯಗಳು ಅಸ್ತಿತ್ವ ದಲ್ಲಿರುವುದಕ್ಕೆ ಯಂತ್ರ ಸಂಸ್ಕ್ರಿತಿಗೆ ದೊಡ್ಡ ಪಾತ್ರವಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು ಅಮೇರಿಕದ ಅತಿಕ್ರಮಣದ ಹಿಂದಿನ ಉದ್ದೇಶವಾದರೆ, ಗೋ ಸಾಗಾಟವನ್ನು ತಡೆಯುವ ನೆಪದಲ್ಲಿ ದುಡ್ಡು ಮತ್ತಿತರ ವಸ್ತುಗಳನ್ನು ಕಸಿಯುವುದು ಸ್ಥಳೀಯ ಮಟ್ಟದ ಕ್ರೌರ್ಯಗಳ ಹಿಂದಿನ ಉದ್ದೇಶ. ದುಡ್ಡಿನ ರುಚಿ ಹತ್ತಿಬಿಟ್ಟರೆ ಅದು ಹಿಂಸೆಗೂ ಹೇಸುವುದಿಲ್ಲ. ಕೊಲೆಗೂ ಹಿಂಜರಿಯುವುದಿಲ್ಲ. ಆಧುನಿಕ ಜಗತ್ತಿನ ಕಟು ವಾಸ್ತವ ಇದು. ಶ್ರಮಸಹಿತ ಸರಳ ಬದುಕು ದುಡ್ಡು ಕೇಂದ್ರಿತ ಅಲ್ಲದೇ ಇರುವುದರಿಂದ ಹಿಂಸೆ ಕಡಿಮೆ. ಆದ್ದರಿಂದ ವೀಕೆಂಡ್ ಪಾರ್ಟಿಗಳು ಮತ್ತು ಮೋಜುಗಳೂ ಕಡಿಮೆ. ಯಂತ್ರಗಳು ಒಂದು ಕಡೆ ಉತ್ಪಾದನೆಯನ್ನು ಹೆಚ್ಚಿಸಿರುವಂತೆಯೇ ಇನ್ನೊಂದು ಕಡೆ ಹಸಿವೆಯಿಂದಿರುವವರಿಗೆ ಆ ಉತ್ಪಾದನೆಯನ್ನು ನೀಡದಿರುವ ಕ್ರೌರ್ಯವನ್ನೂ ಪ್ರದರ್ಶಿಸುತ್ತದೆ. ಮಿಗತೆಯಾದ ತನ್ನ ಉತ್ಪನ್ನವನ್ನು ಹಸಿವೆಯ ಮಂದಿಗೆ ನೀಡುವುದರಿಂದ ಲಾಭವೋ ಅಥವಾ ಸಮುದ್ರಕ್ಕೆ ಎಸೆಯುವುದರಿಂದ ಲಾಭವೋ ಎಂಬ ನಿಷ್ಕರ್ಷೆ ಮಾಡುವಷ್ಟು ಕೆಲವೊಮ್ಮೆ ಅದು ಹೃದಯಹೀನವಾಗುತ್ತದೆ.
    ನಿಜವಾಗಿ, ಸ್ಥಳೀಯತೆ ಎಂಬುದು ಒಂದು ಅನನ್ಯ ಐಡೆಂಟಿಟಿ. ಪ್ರತಿಯೊಂದು ಗ್ರಾಮ ಅಥವಾ ಪ್ರದೇಶಕ್ಕೂ ಅದರದ್ದೇ ಆದ ಸ್ಥಳೀಯತೆಯಿದೆ. ಅಕ್ಕಿ, ಗೋಧಿ, ಬಟಾಟೆ, ಟೊಮೆಟೊ, ಮೆಣಸು, ನೀರುಳ್ಳಿ, ಆ್ಯಪಲ್, ಬಾಳೆಹಣ್ಣು.. ಹೀಗೆ ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುತ್ತವೆ. ಭತ್ತ ಬೆಳೆಯುವ ಮಣ್ಣಿನಲ್ಲಿ ಗೋಧಿಗೆ ಇಳುವರಿ ಸಿಗಲಾರದು. ಟೊಮೆಟೊ ಬೆಳೆಯುವ ಪ್ರದೇಶದಲ್ಲಿ ಮೆಣಸು ಇಳುವರಿಯನ್ನು ಕೊಡಲಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯ ಗುಣ ಇದೆ. ಶ್ರಮ ಸಂಸ್ಕ್ರಿತಿಯು ಈ ಸ್ಥಳೀಯತೆಯನ್ನು ಆಧರಿಸಿ ಬದುಕುತ್ತವೆ. ಶ್ರಮ ಸಂಸ್ಕ್ರಿತಿಯಲ್ಲಿ ವಲಸೆ ಕಡಿಮೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೆಚ್ಚಿನ ಇಳುವರಿಯನ್ನು ಮತ್ತು ಹೆಚ್ಚಿನ ಸಂಪಾದನೆಯನ್ನು ನಿರೀಕ್ಷಿಸಿ ವಲಸೆ ಹೋಗುವುದಿಲ್ಲ. ಆದರೆ ಆಧುನಿಕ ಕೈಗಾರಿಕಾ ಜಗತ್ತು ವಲಸೆಯನ್ನು ನೆಚ್ಚಿಕೊಂಡಂತಿರುತ್ತದೆ. ಅದು ವಿಕೇಂದ್ರಿತವಲ್ಲ, ಕೇಂದ್ರೀಕೃತ. ಆದ್ದರಿಂದಲೇ ಇವತ್ತು ಗ್ರಾಮಗಳಿಂದ ನಗರಗಳಿಗೆ ಜನರು ವಿಪರೀತ ಪ್ರಮಾಣದಲ್ಲಿ ವಲಸೆ ಹೋಗುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಮಗಳು ಖಾಲಿಯಾಗುತ್ತಿವೆ. ನಗರಗಳು ಗಿಜಿಗುಡುತ್ತಿವೆ. ಮಾಲಿನ್ಯಗಳು ಹೆಚ್ಚಾಗುತ್ತಿವೆ.
ಅಷ್ಟಕ್ಕೂ ಶ್ರಮ ಸಂಸ್ಕ್ರಿತಿಯಿಂದ ಯಂತ್ರ ಸಂಸ್ಕ್ರಿತಿಗೆ ಜಗತ್ತು ಸಂಪೂರ್ಣ ವಾಲಿರುವ ಈ ದಿನಗಳಲ್ಲಿ ಶ್ರಮದ ಬದುಕಿನ ಬಗ್ಗೆ ಮಾತಾಡುವುದು ಹಿಮ್ಮುಖ ನಡೆ ಅನಿಸುತ್ತದೋ ಇಲ್ಲವೋ ಆದರೆ ಸದ್ಯದ ದಿನಗಳಲ್ಲಿ ಅಂಥದ್ದೊಂದು ಚಿಂತನೆ ಅಸಾಧುವೇನೂ ಅಲ್ಲ. ಶ್ರಮ ಸಂಸ್ಕ್ರಿತಿ ಮತ್ತು ಯಂತ್ರ ಸಂಸ್ಕ್ರಿತಿ ಇಂದಿನ ದಿನಗಳಲ್ಲಿ ಮುಖಾಮುಖಿಗೊಳ್ಳಲೇಬೇಕಾದ ತುರ್ತು ಅಗತ್ಯವಂತೂ ಇದೆ. ಆಯ್ಕೆ ಯಾವುದೇ ಇದ್ದರೂ ಮುಖಾಮುಖಿಯಂತೂ ಸ್ವಾಗತಾರ್ಹವೇ. ಮೈಸೂರಿನ ಬದನವಾಳು ಅಂಥದ್ದೊಂದು ಮುಖಾಮುಖಿಗೆ ವೇದಿಕೆಯನ್ನು ಒದಗಿಸಿದೆ. ಇದು ಹೇಗೆಂದರೆ, ಕಂಪ್ಯೂಟರ್ ಮತ್ತು ಮಡಿಕೆಯನ್ನು ಮುಖಾಮುಖಿಗೊಳಿಸಿದಂತೆ. ಈ ಮುಖಾಮುಖಿಯಲ್ಲಿ ಗೆಲ್ಲುವುದು ಕಂಪ್ಯೂಟರೇ ಆಗಿರಬಹುದು. ಯಂತ್ರಗಳೇ ಇಲ್ಲದ ಜಗತ್ತನ್ನು ಊಹಿಸುವುದು ಸಾಧ್ಯವೇ ಇಲ್ಲ ಎಂದೂ ಹೇಳಬಹುದು. ಆದರೂ ಯಂತ್ರಗಳನ್ನು ವಿಪರೀತವಾಗಿ ಹಚ್ಚಿಕೊಂಡಿರುವ ಇಂದಿನ ಜಗತ್ತಿನಲ್ಲಿ ಮಡಿಕೆ ಮತ್ತು ಕಂಪ್ಯೂಟರ್ ಮುಖಾಮುಖಿಗೊಳ್ಳುವುದನ್ನು ಸ್ವಾಗತಿಸಲೇಬೇಕು. ಅದರ ಸಾಧಕ-ಬಾಧಕಗಳು ಚರ್ಚಿತಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರಸನ್ನ ಅವರ ಸತ್ಯಾಗ್ರಹ ಅಭಿನಂದನಾರ್ಹ.

Monday, April 20, 2015

ದರ ನಿಗದಿಪಡಿಸಿ ತಿರುಗಾಡುವ ಯುವಕರೂ 'ರುಬೀನ'ರ 'ಸುಲ್ತಾನ'ರೂ


ಮಾಧ್ಯಮದ ಜೊತೆ ಮಾತಾಡುತ್ತಿರುವ ರುಬೀನ
     “ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು 18 ತುಂಬುವಾಗಲೇ ಮದುವೆಯಾಗಿ ಹೊರಟು ಹೋಗುತ್ತಿದ್ದ ವಾತಾವರಣದ ಮಧ್ಯೆ ನನಗೆ 24 ತುಂಬಿತು. ತಂದೆ ಕೂಲಿ ಮಾಡುತ್ತಿದ್ದರು. ತಾಯಿ ಮೀನು ಮಾರುವವಳು. ಇವತ್ತಿನ ಮದುವೆ ಮಾರುಕಟ್ಟೆಯಲ್ಲಿ ಹೆಣ್ಣಿಗೆ ಮತ್ತು ಹೆಣ್ಣಿನ ಅಪ್ಪ-ಅಮ್ಮನಿಗೆ ಕೆಲವು ಅರ್ಹತೆಗಳು ಇರಲೇಬೇಕಾಗುತ್ತದಲ್ಲವೇ? ಹೆಣ್ಣು ಎಂಬ ಐಡೆಂಟಿಟಿಯೊಂದೇ ಓರ್ವಳು ಮದುಮಗಳಾಗುವುದಕ್ಕೆ ಸಾಕಾಗುವುದಿಲ್ಲವಲ್ಲ. ಹೆಣ್ಣಿನ ಬಗ್ಗೆ ಗಂಡಿನಲ್ಲಿ ಒಂದು ರೇಖಾಚಿತ್ರವಿರುತ್ತದೆ. ಆ ಚಿತ್ರಕ್ಕೆ ಹೆಣ್ಣು ತಾಳೆಯಾದರೆ ಮಾತ್ರವೇ ಆಕೆ ಮದುಮಗಳಾಗಲು ಸಾಧ್ಯ. ಹೀಗಿರುವಾಗ 9ನೇ ತರಗತಿಯಲ್ಲಿ ಕಲಿಕೆ ನಿಲ್ಲಿಸಿದ, ಬಣ್ಣದಲ್ಲೂ ಸೌಂದರ್ಯದಲ್ಲೂ ಸಿನಿಮಾ ತಾರೆಯರಿಗೆ ಹೋಲಿಕೆಯಾಗದ ಮತ್ತು ಮೀನು ಮಾರುವ ಬಡ ಕುಟುಂಬದ ಹೆಣ್ಣಾಗಿರುವ ನನಗೆ ಮದುವೆ ಪ್ರಸ್ತಾಪಗಳು ಬರುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನರ್ಥವಿರುತ್ತದೆ? ಹೀಗಿದ್ದೂ, ನನಗೆ 4 ಪ್ರಸ್ತಾಪಗಳು ಬಂದುವು. ಆದರೆ ಆ ನಾಲ್ವರೂ ನನ್ನನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ, ಅವರು ಕೇಳುವಷ್ಟು ವರದಕ್ಷಿಣೆ ಕೊಡಲು ನನ್ನ ಅಮ್ಮ-ಅಪ್ಪನಲ್ಲಿ ದುಡ್ಡಿರಲಿಲ್ಲ. ಅದರಲ್ಲೂ ನನ್ನ ಅಪ್ಪನಾದರೋ ಜವಾಬ್ದಾರಿ ರಹಿತ ವ್ಯಕ್ತಿ. ಹರೆಯದ ಮಗಳಿದ್ದಾಳೆ ಎಂಬುದನ್ನು ಮರೆತವರಂತೆ ಅವರು ವರ್ತಿಸುವರು. ಅಪ್ಪನ ಬಗ್ಗೆ ತಾಯಿಗೂ ತಕರಾರುಗಳಿದ್ದುವು. ನಾನು ತಂದೆಯವರೊಂದಿಗೆ ಈ ಬಗ್ಗೆ ಜಗಳಾಡಿದ್ದೆ. ‘ನನ್ನ ವಿವಾಹಕ್ಕೆ (ವರದಕ್ಷಿಣೆ) ಏನು ತಯಾರಿ ನಡೆಸಿದ್ದೀರಿ’ ಎಂದು ಧೈರ್ಯ ತಂದುಕೊಂಡು ಪ್ರಶ್ನಿಸಿದ್ದೆ. ತಂದೆಗೆ ಸಿಟ್ಟು ಬಂದಿತ್ತು. ನಿನ್ನ ಮದುವೆಗೆ ಚಿಕ್ಕಾಸನ್ನೂ ಖರ್ಚು ಮಾಡುವುದಿಲ್ಲವೆಂದು ಅವರು ಘರ್ಜಿಸಿದ್ದರು. ನಮ್ಮಲ್ಲಿ ಪುರುಷರು ಮಹಿಳೆಯರ ಅರ್ಧದಷ್ಟೂ ದುಡಿಯುವುದಿಲ್ಲ. ಅಲ್ಲದೆ, ಮಹಿಳೆಯಿಂದಲೇ ಅವರು ಖರ್ಚಿಗೆ ಕೇಳುವುದಿದೆ. ಇಂಥ ಸ್ಥಿತಿಯಲ್ಲಿ ತಂದೆಯೊಂದಿಗೆ ಜಗಳಾಡಿ ಪ್ರಯೋಜನವಾದರೂ ಏನಿರುತ್ತದೆ? ಮೀನು ಮಾರುವ ತಾಯಿಯಿದ್ದೂ ಉತ್ತಮ ಮೀನಿನ ರುಚಿ ಸವಿಯವ ಸಾಮರ್ಥ್ಯವಿಲ್ಲದ ನನಗೆ ಇನ್ನು ಇತರ ಹುಡುಗಿಯರಂತೆ ಅಂದವಾಗಿ ಡ್ರೆಸ್ಸು ಧರಿಸಿ ನಡೆದಾಡುವ ಅವಕಾಶ ಎಲ್ಲಿರುತ್ತದೆ..”
   ರುಬೀನಾ ಹೇಳುತ್ತಾ ಹೋಗುತಾರೆ,
     “ನಿನ್ನನ್ನು ಮದುವೆಯಾಗಲು ದೂರದಿಂದ ಸುಲ್ತಾನ್ ಬರುತ್ತಾನೆಂದು ಚಿಕ್ಕಂದಿನಲ್ಲಿ ತಾಯಿ ಹೇಳುತ್ತಿದ್ದರು. ಆದರೆ ಬೆಳೆದು ದೊಡ್ಡವಳಾದಾಗ ಆ ಮಾತು ಎಷ್ಟು ಅಸಂಭವ ಎಂಬುದು ನನಗೆ ಅರಿವಾಗತೊಡಗಿತು. ಸುಲ್ತಾನ್ ಬಿಡಿ ಓರ್ವ ಮೀನು ಮಾರುವವನಾದರೂ ಬರುತ್ತಿಲ್ಲವಲ್ಲ ಎಂದು ಅಮ್ಮ ಸಂಕಟ ಪಡುತ್ತಿದ್ದಳು. ಒಂದು ದಿನ ಅಪ್ಪನೊಂದಿಗೆ- ‘ರುಬೀನಾಳಿಗೆ ಸಂಬಂಧ ಹುಡುಕಿ’ ಅಂತ ಅಮ್ಮ ಹೇಳಿದ್ರು. ನಿನ್ನ ಕೈಯಲ್ಲಿ ವರದಕ್ಷಿಣೆಯ ದುಡ್ಡಿದ್ದರೆ ಹುಡುಕು ಅಂದರು ಅಪ್ಪ. ಹಾಗೆ ಹೋದ ಅಪ್ಪ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಬಂದು ನೀರು ಕೇಳಿದ್ರು. ಅಡುಗೆ ತಯಾರಿಯಲ್ಲಿದ್ದ ನನಗದು ಕೇಳಿಸಲಿಲ್ಲ. ಸಿಟ್ಟಿನಿಂದ ಚೆನ್ನಾಗಿ ಬಾರಿಸಿದ್ರು. ನಾನು ಮೊದಲೇ ಕೃಶಕಾಯಿ. ಬವಳಿ ಬಂದು ಬಿದ್ದುಬಿಟ್ಟೆ. ಅಮ್ಮ ಮೀನು ಮಾರಿ ಬರುವಾಗ ನಾನಿನ್ನೂ ಮಲಗಿಯೇ ಇದ್ದೆ. ನನ್ನ ಮೈಯಲ್ಲಿರುವ ಬಾಸುಂಡೆಗಳನ್ನು ನೋಡಿ ಅವಳು ಕಣ್ಣೀರಿಳಿಸಿದಳು. ವಿಶೇಷ ಏನೆಂದರೆ, ಅದೇ ದಿನ ನಮ್ಮ ಮನೆಗೆ ನಸೀಮಾದ ಎಂಬ ಅತಿಥಿ ಬಂದರು. ತಾಯಿ ಅವರೊಂದಿಗೆ ಎಲ್ಲವನ್ನೂ ಹೇಳಿ ಕಣ್ಣೀರಿಳಿಸಿದಳು. ಒಂದು ವಿವಾಹ ಸಂಬಂಧ ತರುವಂತೆ ವಿನಂತಿಸಿದಳು. ವರದಕ್ಷಿಣೆಯಾಗಿ ಏನು ಕೊಡಬಲ್ಲೆ ಎಂಬುದು ಆಕೆಯ ಪ್ರಶ್ನೆ. ಅಮ್ಮ ತುಸು ಅಲುಗಾಡಿದಳು. ಕೊಡಲು ಅಮ್ಮನ ಬಳಿಯಿರುವುದು ಸುಸ್ಥಿತಿಯಲ್ಲಿರದ ಮೀನು ಬುಟ್ಟಿ ಮಾತ್ರ. ನಾನು ಅಮ್ಮನನ್ನೇ ನೋಡಿದೆ. ನನ್ನನ್ನು ಹೆತ್ತ ತಪ್ಪಿಗೆ ಆಕೆಯ ಕಣ್ಣು, ಕೆನ್ನೆ, ತುಟಿಗಳು ಅದುರುತ್ತಿವೆಯೇನೋ ಎಂದು ಸಂಕಟವಾಯಿತು. ಅಮ್ಮ ಹೇಳಿದಳು,
‘ಈಗ ಏನಿಲ್ಲ, ಆದರೆ 50 ಸಾವಿರ ರೂಪಾಯಿ ಮತ್ತು 3 ಪವನ್ ಚಿನ್ನ ವರದಕ್ಷಿಣೆಯಾಗಿ ಕೊಡಬಲ್ಲೆ. ಇದಕ್ಕೂ ಸಾಲ ಮಾಡಬೇಕಷ್ಟೇ. ಆದರೆ ನಾನು ಮೀನು ಮಾರಿ ಸಾಲವನ್ನು ಸಂದಾಯ ಮಾಡುವೆ.’
    ಹೀಗಿರುತ್ತಾ 2008 ಜೂನ್ 23ರಂದು ಪಕ್ಕದ ಮನೆಗೆ ನಸೀಮಾದರ ಫೋನ್ ಕರೆಬಂತು. ಹುಡುಗನನ್ನು ನೋಡಲು ಇಂತಿಂಥ ಜಾಗಕ್ಕೆ ಬನ್ನಿ ಎಂದು ಆಕೆ ಹೇಳಿದರು. ಅಮ್ಮ ಕರಕೊಂಡು ಹೋದರು. ವರದಕ್ಷಿಣೆಯ ಭಾರವನ್ನು ದೇಹವಿಡೀ ಹೊತ್ತು ಬಸವಳಿದ ತಾಯಿಯೊಂದಿಗೆ ಸುಲ್ತಾನ್‍ನ ಕನಸು ಕಾಣುತ್ತಾ ಹೋಗುವ ಹರೆಯದ ಮಗಳು! ನಾವೊಂದು ಮನೆಗೆ ಹೋದೆವು. ಅಲ್ಲಿ 48 ವರ್ಷದ ಹಸನ್ ಜಾಬಿರ್ ಎಂಬವನಿದ್ದ. ಅವನೇ ನನ್ನ ಸುಲ್ತಾನ್. ಮಾಲ್ದೀವ್ಸ್ ನವ. ಅವನನ್ನು ನೋಡಿದ ಕೂಡಲೇ ನನಗೆ ಭಯವಾಯಿತು. ನಸೀಮಾದ ಆತನ ಬಗ್ಗೆ ನನ್ನಲ್ಲಿ ಹೇಳತೊಡಗಿದರು- ವಯಸ್ಸೇನೂ ನಿಲ್ಲುವುದಿಲ್ವಲ್ಲ ರುಬೀನಾ. ಮುಂದಿನ ವರ್ಷ ನಿನಗೆ 25 ಆಗುತ್ತದೆ. ಹೆಣ್ಣಿನ ಪ್ರಾಯ ಎಂಬುದು ಗಂಡಿನ ಪ್ರಾಯದಂತೆ ಅಲ್ವಲ್ಲ? ನೋಡು, ನಮ್ಮ ಭಾಗ್ಯವು ನಮ್ಮನ್ನು ಹುಡುಕಿಕೊಂಡು ಬರುವುದು ಬದುಕಿನಲ್ಲಿ ಒಂದು ಬಾರಿ ಮಾತ್ರ. ಆ ಸಂದರ್ಭದಲ್ಲಿ ಆ ಭಾಗ್ಯವನ್ನು ನಾವು ಗಟ್ಟಿಯಾಗಿ ಹಿಡ್ಕೊಬೇಕು. ನಾವೆಲ್ಲ ಭಾಗ್ಯವನ್ನು ಹುಡುಕಿಕೊಂಡು ತಿರುಗಾಡಿದವರು ಮಗಳೇ. ಆದರೆ ಸಿಗಲಿಲ್ಲ. ನೀನು ಭಾಗ್ಯವಂತೆ. ವರನ ಬಗ್ಗೆ ನೀನೇನೂ ಚಿಂತಿಸಬೇಡ. ಈತ ದೊಡ್ಡ ವ್ಯಾಪಾರಿ. ನಾಲ್ಕೈದು ಮನೆಗಳಿವೆ. 3 ಅಂಗಡಿಗಳಿವೆ. ದುಡ್ಡು ಮಾಡುವ ಬ್ಯುಸಿಯಲ್ಲಿ ಮದುವೆಯನ್ನು ಮುಂದೂಡುತ್ತಾ ಹೋಗಿ ಹೋಗಿ ಈಗ ಒಪ್ಪಿಕೊಂಡಿದ್ದಾನೆ. ಈತನಿಗೆ ಪ್ರೀತಿಸಲಷ್ಟೇ ಗೊತ್ತು. ಪ್ರೀತಿಸುವವರಿಗಾಗಿ ಈತ ಹೃದಯನ್ನೇ ಸಿಗಿದು ಕೊಡುವಷ್ಟು ಉದಾರಿ. ಮಗಳೇ, ನಿನ್ನ ಮನೆಯವರ ಸಾಲವನ್ನು ಆತ ಸಂದಾಯ ಮಾಡಬಲ್ಲ. ವೃದ್ಧಾಪ್ಯದಲ್ಲಿ ನಿನ್ನ ಅಪ್ಪ-ಅಮ್ಮ ದುಡಿಯದಂತೆ ಸಾಕಬಲ್ಲ..’ ಹೀಗೆ ನಸೀಮಾದ ಹೇಳುತ್ತಾ ಹೋದಂತೆ ಆತ ನನ್ನ ಪಾಲಿನ ಸುಲ್ತಾನ್ ಆಗುತ್ತಲೇ ಹೋದ. ನಾನು ಒಪ್ಪಿಕೊಂಡೆ. ಆತ ತಾಯಿಗೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಒಂದು ಬಗೆಯ ಖುಷಿ, ಆತಂಕಗಳೊಂದಿಗೆ ನಾನು ಗುಬ್ಬಚ್ಚಿಯಂತಾದೆ. ವರದಕ್ಷಿಣೆ ಕೊಡುವ ಸಾಮರ್ಥ್ಯವಿಲ್ಲದ ಹೆಣ್ಣು ಮಗಳೊಬ್ಬಳ ಮುಂದೆ ಇವುಗಳಲ್ಲದೆ ಬೇರೆ ಆಯ್ಕೆಗಳು ಏನಿರುತ್ತವೆ ಹೇಳಿ? ಈ ಪ್ರಸ್ತಾಪವನ್ನು ತಿರಸ್ಕರಿಸಬಹುದು. ಆದರೆ ಆ ತಿರಸ್ಕಾರವು ನನ್ನ ಅಮ್ಮ-ಅಪ್ಪನನ್ನು ಹೇಗೆಲ್ಲ ಕಾಡಬಹುದು? ಅವರ ಕಣ್ಣೀರಿಗೆ ಕಾರಣವಾಗುವ ತಿರಸ್ಕಾರಕ್ಕಿಂತ ಅವರನ್ನು ಸುಖವಾಗಿಡಬಲ್ಲ ಅಥವಾ ಕನಿಷ್ಠ ಭಾರವನ್ನು ಇಳಿಸಬಲ್ಲ ಒಪ್ಪಿಗೆಯೇ ಉತ್ತಮ ಅಲ್ಲವೇ? ನನ್ನ ಹರೆಯದ ಕನಸುಗಳಿಗೆ ಆತ ರೆಕ್ಕೆ ಜೋಡಿಸಬಲ್ಲ ಎಂಬ ನಿರೀಕ್ಷೆಯೊಂದಿಗೆ 2008 ಜೂನ್ 28ರಂದು ಒಂದು ಹೊಟೇಲಿನಲ್ಲಿ ಹಸನ್ ಜಾಬಿರ್‍ನೊಂದಿಗೆ ವಿವಾಹವಾದೆ. ಒಂದು ಉಂಗುರ ಮತ್ತು ಒಂದು ಪವನಿನ ಸರವನ್ನು ಆತ ಮಹರ್ ಆಗಿ ನೀಡಿದ. ಮದುವೆ ದಿನದಂದು ಆತ ನನ್ನ ತಾಯಿಗೆ ಮತ್ತೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಅದರಿಂದ ನಸೀಮಾದ ಮತ್ತಿತರರು ತಮ್ಮ ಪಾಲನ್ನು ಪಡಕೊಂಡರು. ನನ್ನ ಮನಸ್ಸಿಗೆ ಆತನನ್ನು ಪದೇ ಪದೇ ಸುಲ್ತಾನ್ ಎಂದು ಹೇಳಿಕೊಟ್ಟೆ. ಆತನನ್ನು ಪತಿಯಾಗಿ ಒಪ್ಪಿಕೊಳ್ಳುವಂತೆ ಮನಸ್ಸನ್ನು ಸಿದ್ಧಪಡಿಸಿದೆ. ಆಯ್ಕೆಗಳೇ ಇಲ್ಲದ ಹೆಣ್ಣು ಮಗಳ ಮುಂದೆ ಮಾಲ್ದೀವ್ಸ್ ಆದರೂ, 48 ವರ್ಷವಾದರೂ, ಕೂದಲು ತುಸು ನೆರೆದಿದ್ದರೂ ಉತ್ತಮ ಆಯ್ಕೆಯೇ ತಾನೆ? ನಾನು ಮಾಲ್ದೀವ್ಸ್ ಗೆ ತೆರಳಬೇಕಾದರೆ ಪಾಸ್‍ಪೋರ್ಟ್‍ನ ವ್ಯವಸ್ಥೆ ಆಗಬೇಕಿತ್ತು. ಹಾಗೆ ಆಗಸ್ಟ್ 24ಕ್ಕೆ ಮಾಲ್ದೀವ್ಸ್ ಗೆ ತೆರಳಿದೆವು. ಮೊದಲು ಹೋದದ್ದು ಅವರ ಅಕ್ಕನ ಮನೆಗೆ. ಭಾಷೆ ಬೇರೆ. ಏನೇನೋ ಹೇಳಿ ನಕ್ಕರು. ನಾನು ಮೌನವಾಗಿದ್ದೆ. ಓರ್ವ ಹಿರಿಯರು ಬಂದು ನನ್ನನ್ನು ಆಲಿಂಗಿಸಿಕೊಂಡರು. ನನಗೆ ನೆಮ್ಮದಿಯೆನಿಸಿತು. ಬಳಿಕ ಪತಿಯವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಐವರು ಮಕ್ಕಳಿದ್ದರು. ನನ್ನ ಮನಸ್ಸಿಗೆ ಮೊದಲ ಆಘಾತ ಆದದ್ದು ಆಗಲೇ. ಅವು ನನ್ನ `ಸುಲ್ತಾನ'ನ ಮಕ್ಕಳು. ಅವರಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಆಕೆ ಅವರನ್ನೂ ಮಕ್ಕಳನ್ನೂ ಬಿಟ್ಟು ಹೋಗಿದ್ದಳು. ನನಗೇಕೆ ಮೋಸ ಮಾಡಿದಿರಿ ಎಂದು ನಾನವರಲ್ಲಿ ಪ್ರಶ್ನಿಸಿದೆ. ಅವರು ಗದರಿಸಿದರು. ಆ ಗದರಿಕೆ ಎಷ್ಟು ಜೋರಾಗಿತ್ತೆಂದರೆ ನನಗೆ ಧ್ವನಿಯೇ ಇರಲಿಲ್ಲ.
ನಸೀಮಾದ ಹೇಳಿದ್ದು ಸರಿ. ಅವರಿಗೆ 5 ಮನೆಗಳಿದ್ದುವು. 3 ಅಂಗಡಿಗಳಿದ್ದುವು. ಆದರೆ ತುಂಬಾ ಜಿಪುಣರಾಗಿದ್ದರು. ಈ ನಡುವೆ ನಾನು ಗರ್ಭಧರಿಸಿದೆ. ಗರ್ಭಿಣಿಯಾದವಳು ತಾಯಿಯ ಆಸರೆಯನ್ನು ಬಯಸುವುದು ಸಹಜ. ಊರಿಗೆ ಕಳುಹಿಸಿಕೊಡಿ ಎಂದು ವಿನಂತಿಸಿದೆ. ಆದರೆ ಅವರು ಮನಸ್ಸು ಮಾಡಲಿಲ್ಲ. ಒಂದು ಬಗೆಯ ಸಂಕಟ, ಮನೋವ್ಯಥೆಗಳೊಂದಿಗೆ ಗರ್ಭವನ್ನು ಅನುಭವಿಸಿ 2009 ಸೆ. 4ರಂದು ಗಂಡು ಮಗುವಿಗೆ ಜನ್ಮವಿತ್ತೆ. ಮಗುವಿಗೆ ಶುಹೈಬ್ ಅಂತ ಹೆಸರಿಟ್ಟೆ. ನಾನು ಮತ್ತೆ ಮತ್ತೆ ಊರಿಗೆ ಹೋಗುವ ಬೇಡಿಕೆಯನ್ನು ಇಡುತ್ತಲೇ ಇದ್ದೆ. ಕೊನೆಗೆ ಮಗುವಿಗೆ 8 ತಿಂಗಳಾದ ಬಳಿಕ 2010 ಫೆ. 1ರಂದು ಊರಿಗೆ ಮರಳಿದೆ. 15 ದಿನ ಇದ್ದು ಪುನಃ ಮಾಲ್ದೀವ್ಸ್ ಗೆ ಹೋದೆ. ಅವರಿಗೆ ಮಕ್ಕಳ ಮೇಲೆ ಪ್ರೀತಿ ಬಹಳವೇ ಕಡಿಮೆ. ಎಷ್ಟು ಕಡಿಮೆಯೆಂದರೆ, ಶುಹೈಬ್‍ನಿಗೆ ಬಿಸ್ಕಿಟ್, ಬೇಬಿ ಪೌಡರ್ ಮುಂತಾದುವುಗಳನ್ನೂ ತಂದುಕೊಡುತ್ತಿರಲಿಲ್ಲ. ಹೀಗಿರುತ್ತಾ ಒಂದು ದಿನ ಆ ಅನಾಹುತ ಸಂಭವಿಸಿ ಬಿಟ್ಟಿತು.
    ಬೆಳಿಗ್ಗೆ ಅವರು ಅಂಗಡಿಗೆಂದು ತೆರಳಿದ ಬಳಿಕ ಮೇಜಿನ ಮೇಲಿದ್ದ ಕೆಲವು ಮಾತ್ರೆಗಳನ್ನು ನಾನು ನುಂಗಿಬಿಟ್ಟೆ. ಮಾನಸಿಕ ಒತ್ತಡ ಅದರ ಹಿಂದಿತ್ತೋ ಏನೋ ನಾನರಿಯೆ. ಹಾಸಿಗೆಯಲ್ಲಿ ಬಿದ್ದುಕೊಂಡೆ. ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಮಗ ಹತ್ತಿರದಲ್ಲೇ ನಿಶ್ಶಬ್ದವಾಗಿ ಮಲಗಿದ್ದ. ಆತನನ್ನು ತಟ್ಟಿ ಎಬ್ಬಿಸಿದೆ. ಅಲುಗಾಡಲಿಲ್ಲ. ನಾನು ಹುಚ್ಚಿಯಂತೆ ಮನೆಯ ಪಕ್ಕದ ನರ್ಸ್‍ಗಳ ಬಳಿಗೆ ಓಡಿ ವಿಷಯ ತಿಳಿಸಿ ಮರಳಿ ಬಂದೆ. ಮಗು ಸಾವಿಗೀಡಾಗಿದೆ ಎಂಬುದು ನನಗೆ ಖಚಿತವಾಯಿತು. ನಾನು ಫ್ಯಾನಿಗೆ ನೇಣು ಬಿಗಿದು ಸಾಯಲು ಯತ್ನಿಸಿದಾಗ ನರ್ಸ್‍ಗಳು ಹಗ್ಗ ಬಿಚ್ಚಿ ಉಳಿಸಿದರು. ಸುತ್ತ ಸೇರಿದವರೆಲ್ಲ ಮಗುವನ್ನು ಕೊಂದ ಪಾಪಿಯಂತೆ ನನ್ನನ್ನು ದುರುಗುಟ್ಟಿ ನೋಡಿದರು. ಪತ್ರಿಕೆಗಳಲ್ಲೂ ಹಾಗೆಯೇ ಬಂತು. ನಾನು ಕೊಂದಿರಲಿಲ್ಲ. ಮಗು ಹೇಗೆ ಸಾವಿಗೀಡಾಗಿದೆ ಎಂಬುದೂ ಗೊತ್ತಿರಲಿಲ್ಲ. ನನ್ನನ್ನು ಜೈಲಿಗೆ ಅಟ್ಟಲಾಯಿತು. ಇದಾಗಿ ಹಲವು ತಿಂಗಳುಗಳ ಬಳಿಕ ಗಂಡ ನನ್ನನ್ನು ಭೇಟಿಯಾಗಲು ಬಂದರು. ನನಗೆ ಖುಷಿಯಾಯಿತು. ನನ್ನನ್ನು ಬಿಡುಗಡೆಗೊಳಿಸಿ ಜೊತೆಗೊಯ್ಯುವರೆಂದು ಅಂದುಕೊಂಡೆ. ಆದರೆ ಅವರು ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸುವುದಕ್ಕಾಗಿ ಬಂದಿದ್ದರು. ನಾನು ಸಹಿ ಹಾಕಲಿಲ್ಲ. ಹೀಗೆ ಮೂರು ಬಾರಿ ಬಂದರು. ನಾನು ಒಪ್ಪಿಕೊಳ್ಳದೇ ಹೋದಾಗ ಒಂದು ದಿನ ನ್ಯಾಯಾಧೀಶರೇ ನನ್ನನ್ನು ಕರೆದು ಕಾಗದಕ್ಕೆ ಸಹಿ ಹಾಕಿಸಿದರು. ಅದು ವಿವಾಹ ವಿಚ್ಛೇದನ ಪತ್ರ. ಮರು ಮದುವೆಗೆ ಮಾಲ್ದೀವ್ಸ್ ನಲ್ಲಿ ಪತ್ನಿಯ ಸಹಿಯುಳ್ಳ ವಿಚ್ಛೇದನ ಪತ್ರ ಅಗತ್ಯವಂತೆ.
    ವಿಚಾರಣೆಯಿಲ್ಲದೇ ಜೈಲಲ್ಲಿದ್ದ ನನಗೆ ನಿಧಾನಕ್ಕೆ ಬಿಡುಗಡೆಯ ಬಾಗಿಲುಗಳು ತೆರೆಯತೊಡಗಿದುವು. ಜಯಚಂದ್ರನ್ ಎಂಬವರು ಜೈಲಿನಿಂದ ಬಿಡುಗಡೆಗೊಂಡದ್ದು ನನ್ನ ಪಾಲಿಗೆ ವರವಾಯಿತು. ಅವರು ಪತ್ರಕರ್ತರು, ಮಾನವಹಕ್ಕು ಹೋರಾಟಗಾರರಲ್ಲಿ ನನ್ನ ಬಗ್ಗೆ ಹೇಳಿ ಸಭೆ ಏರ್ಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡಿದರು. ಹೀಗೆ ಮೂರುವರೆ ವರ್ಷಗಳ ಬಳಿಕ ನನ್ನ ವಿಚಾರಣೆ ನಡೆಯಿತು. ವಿಚಾರಣೆ ನಡೆದದ್ದು ಮಾಲ್ದೀವ್ಸ್ ನ ದಿವೇಹಿ ಭಾಷೆಯಲ್ಲಿ. ದಿವೇಹಿ ಭಾಷೆಯಲ್ಲಿದ್ದ ದಾಖಲೆಗಳಿಗೆ ನನ್ನಿಂದ ಸಹಿ ಪಡೆದುಕೊಂಡರು. ನನಗೆ ಏನಿಲ್ಲವೆಂದರೂ 25 ವರ್ಷಗಳ ವರೆಗೆ ಶಿಕ್ಷೆಯಾದೀತೆಂದು ಎಲ್ಲರೂ ಹೇಳಿಕೊಂಡರು. ಇಂಥ ಸಂದರ್ಭದಲ್ಲೇ ಫಾರಿಶ್ ಅಬ್ದುಲ್ಲ ಎಂಬ ವಕೀಲರು ನನ್ನ ನೆರವಿಗೆ ಬಂದದ್ದು. ಅವರು ಇಡೀ ಪ್ರಕರಣ ಎಷ್ಟು ದುರ್ಬಲವಾಗಿದೆ ಎಂಬುದನ್ನು ನ್ಯಾಯಾಲಯದ ಮುಂದಿಟ್ಟರು. ಮಗುವಿನ ಪೋಸ್ಟ್ ಮಾರ್ಟಂ ನಡೆಸಿಲ್ಲ, ಮಗುವಿಗೇನಾಗಿದೆ ಎಂಬ ಬಗ್ಗೆ ವೈದ್ಯಕೀಯ ವರದಿಯಿಲ್ಲ, ಪ್ರಕರಣಕ್ಕೆ ಸಾಕ್ಷಿಗಳಾದ ನರ್ಸ್‍ಗಳು ಮಾಲ್ದೀವ್ಸ್ ಬಿಟ್ಟು ಹೋಗಿದ್ದಾರೆ, ಪತಿಯ ಹೇಳಿಕೆಯನ್ನೇ ದಾಖಲಿಸಿಲ್ಲ.. ಹೀಗೆ ಅವರು ಎಲ್ಲವನ್ನೂ ನ್ಯಾಯಾಲಯದಲ್ಲಿ ತೆರೆದಿಟ್ಟರು. ಕೊನೆಗೆ 5 ವರ್ಷಗಳ ಬಂಧನದ ಬಳಿಕ 2015 ಮಾರ್ಚ್ 16ರಂದು ನಾನು ಜೈಲಿನಿಂದ ಹೊರಬಂದೆ. ಊರಿಗೆ ಮರಳಿದ ಬಳಿಕ ಜಾಬಿರ್ ಮತ್ತೆ ಕರೆ ಮಾಡಿದರು. ಕ್ಷಮೆ ಯಾಚಿಸಿದರು. ತಾನು ಮರು ಮದುವೆಯಾಗಿಲ್ಲ ಅಂದರು. ನಿನ್ನನ್ನು ಕಣ್ಣಾರೆ ಕಾಣಬೇಕು ಅಂದರು. ನಾನು ಫೋನ್ ಇಟ್ಟೆ. ಹಾಗಾಗದಿರಲಿ ಎಂದು ಪ್ರಾರ್ಥಿಸಿದೆ...”
     ಹೀಗೆ ಕೇರಳದ ತಿರುವನಂತಪುರ ಜಿಲ್ಲೆಯ ಕಡಪ್ಪುರದ ರುಬೀನಾಳು ಪತ್ರಕರ್ತ ಶಮೀರ್‍ರ ಮುಂದೆ ಹೇಳುತ್ತಾ ಹೋಗುವಾಗ ವರದಕ್ಷಿಣೆಯ ಕರಾಳ ಮುಖವೊಂದು ನಮ್ಮೆದುರು ತೆರೆಯುತ್ತಾ ಹೋಗುತ್ತದೆ. ಒಂದು ಕಡೆ ವರದಕ್ಷಿಣೆಯನ್ನು ನಿರೀಕ್ಷಿಸುತ್ತಾ ತಿರುಗಾಡುವ ಯುವಕರು ಮತ್ತು ಇನ್ನೊಂದು ಕಡೆ ಈ ಸಂದರ್ಭವನ್ನೇ ದುರುಪಯೋಗಿಸಲು ಕಾದು ಕೂತಿರುವ ಜಾಬಿರ್ ಗಳು... ಇವರ ಮಧ್ಯೆ ರುಬೀನರು ನಲುಗುತ್ತಲೇ ಇದ್ದಾರೆ. ಇಷ್ಟಿದ್ದೂ, ನಮ್ಮ ಸಮುದಾಯ ಈ ವಾಸ್ತವಕ್ಕೆ ಮುಖಾಮುಖಿಗೊಳ್ಳುವುದು ಯಾವಾಗ? ನಿರ್ದಯಿ ಫತ್ವಾಗಳು ಜಾರಿಯಾಗುವುದು ಎಂದು? ವರ್ಷಗಳ ಹಿಂದೆ ನನ್ನೂರಿನ ಹೆಣ್ಣು ಮಗಳು ಗುಜರಾತ್‍ಗೆ ಮದುವೆಯಾಗಿ ಹೋದ ಘಟನೆ ಇನ್ನೂ ಹಸಿರಾಗಿರುವುದರಿಂದಲೋ ಏನೋ ಈ ರುಬೀನಾ ನನ್ನ ಮನಸ್ಸನ್ನಿಡೀ ಕಾಡಿದಳು. ಆದ್ದರಿಂದಲೇ ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.


Wednesday, April 15, 2015

ಬೀಫ್ ಫೆಸ್ಟ್ ಪ್ರತಿಭಟನೆ ಮತ್ತು ಆಹಾರದ ಹಕ್ಕಿನ ಪ್ರಶ್ನೆ

     ದನದ ಮಾಂಸ ಸೇವನೆಯು ಆಹಾರ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೊ? ಓರ್ವರ ಆಹಾರವನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಅದಕ್ಕಿರುವ ಮಾನದಂಡಗಳೇನು? ಓರ್ವ ಮಾಂಸಾಹಾರಿ, ಇನ್ನೋರ್ವ ಸಸ್ಯಾಹಾರಿ, ಮತ್ತೋರ್ವಳು ಉಭಯಾಹಾರಿ- ಇವರಲ್ಲಿ ಒಬ್ಬರನ್ನು ಸರಿ ಮತ್ತು ಮತ್ತಿಬ್ಬರನ್ನು ತಪ್ಪು ಎಂದು ವಿಂಗಡಿಸಬಹುದೆ? ಹಾಗೆ ವಿಂಗಡಿಸುವುದಾದರೆ ಅದಕ್ಕಿರುವ ಆಧಾರಗಳೇನು- ಧಾರ್ಮಿಕ ಗ್ರಂಥಗಳೇ, ಪುರಾಣಗಳೇ, ರಾಜಕೀಯವೇ, ಪರ-ವಿರೋಧಿಗಳ ಶೇಕಡಾವಾರು ಲೆಕ್ಕಾಚಾರಗಳೇ ಅಥವಾ ಆರೋಗ್ಯವೇ... ಇಂಥದ್ದೊಂದು ಜಿಜ್ಞಾಸೆ ಸಮಾಜವನ್ನು ಮತ್ತೆ ಕಾಡತೊಡಗಿದೆ. ನಿಜವಾಗಿ, ದನದ ಮಾಂಸವನ್ನು ನಿಷೇಧಿಸಬೇಕೆಂದು ಆಗ್ರಹಿಸುವವರ ವಾದವು ಎಷ್ಟು ಏಕಪಕ್ಷೀಯ ವಾಗಿದೆಯೆಂದರೆ ಅದು ನಟಿ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್’ನಂತೆ ಕಾಣಿಸುತ್ತದೆ. ಮೈ ಚಾಯ್ಸ್ ನಲ್ಲಿ ದೀಪಿಕಾ ಕೆಲವು ಸೆಲೆಕ್ಟಿವ್ ವಿಷಯಗಳ ಬಗ್ಗೆ ಮಾತ್ರ ಮಾತಾಡುತ್ತಾಳೆ. ಸಿನಿಮಾ ರಂಗದಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ವೇತನ ತಾರತಮ್ಯದ ಬಗ್ಗೆ ಮೈ ಚಾಯ್ಸ್ ನಲ್ಲಿ ಏನೂ ಇಲ್ಲ. ಹೀರೋಗೆ ಸಮಾನವಾದ ವೇತನ ಪಡೆಯುವುದು ಹೀರೋಯಿನ್‍ಳ ಹಕ್ಕು ಎಂದಾಕೆ ಹೇಳುವುದಿಲ್ಲ. ಆರ್ಥಿಕ ಅಸಮಾನತೆಯ ಬಗ್ಗೆ ಮೈ ಚಾಯ್ಸ್ ಮೌನವಾಗುತ್ತದೆ. ಅತ್ಯಾಚಾರ, ಗೃಹಹಿಂಸೆ, ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ದೀಪಿಕಾ ಪಡಕೋಣೆಯಲ್ಲಿ ಯಾವ `ಚಾಯ್ಸೂ' ಇಲ್ಲ. ಒಂದು ರೀತಿಯಲ್ಲಿ, ದನದ ಮಾಂಸವನ್ನು ನಿಷೇಧಿಸಬೇಕೆನ್ನುವವರ ವಾದದಲ್ಲಿ ಮೈ ಚಾಯ್ಸ್ ನ ದೌರ್ಬಲ್ಯಗಳೆಲ್ಲ ಕಾಣಿಸುತ್ತವೆ. ಅಂದ ಹಾಗೆ, ಈ ದೇಶದ ದೊಡ್ಡದೊಂದು ಜನಸಂಖ್ಯೆಗೆ ಮಾಂಸವೇ ಆಹಾರ. ಆಹಾರ ಎಂಬುದು ತಿನ್ನುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಅಸಂಖ್ಯ ಮಂದಿಯನ್ನು ಸುತ್ತಿಕೊಂಡಿರುತ್ತದೆ. ನೀವು ಅಕ್ಕಿಯನ್ನು ನಿಷೇಧಿಸಿದರೆ ಅದು ಅನ್ನ ತಿನ್ನುವವರ ಸಮಸ್ಯೆಯಾಗಿಯಷ್ಟೇ ಗುರುತಿಸಿಕೊಳ್ಳುವುದಿಲ್ಲ. ಅದು ಗದ್ದೆಯ ಸಮಸ್ಯೆಯೂ ಹೌದು. ಎತ್ತುಗಳನ್ನು, ನೇಗಿಲು ತಯಾರಿಸುವವರನ್ನು, ಮರದ ವ್ಯಾಪಾರಿಗಳನ್ನು, ಟ್ರ್ಯಾಕ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರನ್ನು, ನೀರೆತ್ತುವ ಪಂಪ್ ಮತ್ತು ಅದರ ಉತ್ಪಾದಕ ಕೇಂದ್ರಗಳನ್ನು, ಕಾರ್ಮಿಕರನ್ನು.. ಹೀಗೆ ಅದು ಸಂಕೋಲೆಯಂತೆ ಉದ್ದಕ್ಕೂ ಬಾಧಿಸುತ್ತಾ ಹೋಗುತ್ತದೆ. ನೀವು ಅನ್ನಕ್ಕೆ ಬೆಂಕಿಕೊಟ್ಟರೆ ಆ ಬೆಂಕಿ ಕೊನೆಗೊಳ್ಳುವುದು ಇನ್ನೆಲ್ಲೋ ರೈತರ ಗದ್ದೆ-ನೇಗಿಲುಗಳಲ್ಲಿ. ಭತ್ತದ ಬಣವೆಗಳಲ್ಲಿ ಅಥವಾ ರಸಗೊಬ್ಬರವನ್ನೋ ನೇಗಿಲನ್ನೋ ತಯಾರಿಸುವ ಕಾರ್ಮಿಕರಲ್ಲಿ. ದನದ ಮಾಂಸ ನಿಷೇಧಕ್ಕೂ ಇದೇ ಬಗೆಯ ಮುಖ ಇದೆ. ಅದು ತಿನ್ನುವವರಿಗೆ ಮಾತ್ರ ಸಂಬಂಧಿಸಿರುವುದಲ್ಲ. ಮಾಂಸದ ವ್ಯಾಪಾರಿಗಳು, ಕಸಾಯಿಗಳು, ರೈತರು, ಮಧ್ಯವರ್ತಿಗಳು, ಚರ್ಮ ಉತ್ಪಾದನೆ ಮತ್ತು ಚರ್ಮೋದ್ಯಮದಲ್ಲಿ ತೊಡಗಿಸಿಕೊಂಡವರು.. ಎಲ್ಲರೂ ಅದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಾರೆ. ಬ್ಯಾಗ್, ಪರ್ಸ್, ಶೂ, ಚಪ್ಪಲಿ ಮುಂತಾದವುಗಳಿಗೆ ದನ ಮತ್ತು ಎತ್ತಿನ ಚರ್ಮ ಅಗತ್ಯ. ಮಹಾರಾಷ್ಟ್ರದ ಧಾರಾವಿಯು ಏಷ್ಯದಲ್ಲೇ ಅತಿ ದೊಡ್ಡವಾದ ಚರ್ಮೋದ್ಯಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ 16 ಸಾವಿರದಷ್ಟು ಸಣ್ಣ ಸಣ್ಣ ಕೈಗಾರಿಕೆ ಗಳಿವೆ. 25 ಸಾವಿರಕ್ಕಿಂತ ಅಧಿಕ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ, ಮಾಂಸಾಹಾರವು ಹೊಟೇಲ್ ವ್ಯವಹಾರಗಳಲ್ಲಿ ದೊಡ್ಡದೊಂದು ಪಾತ್ರ ನಿರ್ವಹಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 17,500 ಕೋಟಿ ರೂಪಾಯಿ ಬೆಲೆಬಾಳುವ 18 ಲಕ್ಷ ಟನ್ ದನದ ಮಾಂಸವನ್ನು ಈ ದೇಶವು ರಫ್ತು ಮಾಡಿದೆ. ಆದರೆ `ಮಾಂಸ ನಿಷೇಧಿಸಿ' ಅನ್ನುವವರು ಈ ವಿಷಯಗಳನ್ನು ತಮ್ಮ ಚರ್ಚಾವ್ಯಾಪ್ತಿಗೆ ತೆಗೆದುಕೊಳ್ಳುವುದೇ ಇಲ್ಲ. ಮುದಿ ಹಸು-ಎತ್ತುಗಳ ಕುರಿತೂ ಅವರಲ್ಲಿ ಯೋಜನೆಗಳೇ ಇಲ್ಲ. “ಜಾನುವಾರು ಹತ್ಯೆಗೆ ನಿಷೇಧ ಇರುವ ಮಧ್ಯ ಪ್ರದೇಶದಲ್ಲಿ- ಹಾಲುಕೊಡದ, ಉಳುಮೆಗೆ ಬಾರದ ಹಸು-ಎತ್ತುಗಳ ಸಹಿತ ಧಾರಾಳ ಜಾನುವಾರು ಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..” ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (05-05-2013) ಬರೆದಿರುವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಅವರ ಚರ್ಚೆ ಏನಿದ್ದರೂ `ಪವಿತ್ರ'ತೆಯ ಸುತ್ತಲೇ ತಿರುಗುತ್ತಿರುತ್ತದೆ. ಮಾಂಸ ನಿಷೇಧವನ್ನು ಪ್ರತಿಭಟಿಸಿ ಮೊನ್ನೆ ಎಪ್ರಿಲ್ 9ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾದ ‘ಬೀಫ್ ಫೆಸ್ಟ್ ಕಾರ್ಯಕ್ರಮ’ ಇದೀಗ ವಿವಾದಕ್ಕೆ ಒಳಗಾಗಿದೆ. ಸಾರ್ವಜನಿಕವಾಗಿ ಬೀಫ್ ಭೋಜನ ಮಾಡಲಾದ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಮತ್ತು ಕೆ. ಮರುಳ ಸಿದ್ಧಪ್ಪ ಭಾಗವಹಿಸಿರುವುದರ ಸುತ್ತ ಚರ್ಚೆಗಳು ಎದ್ದಿವೆ.  ಅಂಬೇಡ್ಕರ್ ಜನ್ಮದಿನವಾದ ಎಪ್ರಿಲ್ 14 ರಂದು ಚೆನ್ನೈ ಮತ್ತು ಬೆಂಗಳೂರಿನಲ್ಲಿ ದನದಮಾಂಸದ ಬಿರಿಯಾನಿಯನ್ನು (ಬೀಫ್ ಫೆಸ್ಟ್) ಸಾರ್ವಜನಿಕವಾಗಿಯೇ ಸೇವಿಸಲಾಗಿದೆ. ಹೀಗೆ ಆಹಾರದ ಹಕ್ಕಿನ ಬದಲು ಬೀಫ್ ಫೆಸ್ಟ್ ಚರ್ಚಾ ವಸ್ತುವಾಗುತ್ತಿದೆ. ಅಷ್ಟಕ್ಕೂ ಬೀಫ್ ಫೆಸ್ಟ್ ನೈತಿಕವೋ ಅನೈತಿಕವೋ ಎಂಬುದು ಚರ್ಚಾ ವಸ್ತುವಾದರೆ ಮುಖ್ಯ ವಿಷಯ ಬದಿಗೆ ಸರಿಯುತ್ತದೆ ಎಂಬುದು ಆಹಾರದ ಹಕ್ಕನ್ನು ವಿರೋಧಿಸುವವರಿಗೆ ಚೆನ್ನಾಗಿ ಗೊತ್ತು.
    ನಿಜವಾಗಿ, ಪ್ರತಿಯೊಂದಕ್ಕೂ ಕೆಲವು ಮೇರೆಗಳಿವೆ. ಈ ಮೇರೆಗಳನ್ನು ನಿರ್ಲಕ್ಷಿಸಿ ಪ್ರತಿಭಟನೆಯನ್ನೋ ಇನ್ನೇನನ್ನೋ ಹಮ್ಮಿಕೊಂಡಾಗ ಅವುಗಳ ಉದ್ದೇಶಶುದ್ದಿಯೇ ಸಾರ್ವಜನಿಕವಾಗಿ ಪ್ರಶ್ನೆಗೊಳಗಾಗುತ್ತದೆ. ಹಾಗಾದರೆ ಪ್ರತಿಭಟನೆಯ ಮೂಲ ಉದ್ದೇಶವೇ ಚರ್ಚೆಯ ವ್ಯಾಪ್ತಿಯಿಂದ ಹೊರಬಿದ್ದು ಪ್ರತಿಭಟನೆ ನೈತಿಕವೋ ಅನೈತಿಕವೋ ಎಂಬುದರ ಸುತ್ತವೇ ಇಡೀ ಚರ್ಚೆ ಕೇಂದ್ರೀಕೃತಗೊಳ್ಳುತ್ತದೆ. ಆಹಾರದ ಹಕ್ಕನ್ನು ಆಗ್ರಹಿಸಿ ಏರ್ಪಡಿಸಲಾದ ಬೀಫ್ ಫೆಸ್ಟ್ ಕಾರ್ಯಕ್ರಮ ಇಲ್ಲೆಲ್ಲೋ ಎಡವಿದೆ ಎಂದು ಅನಿಸುವುದು ಈ ಕಾರಣದಿಂದಲೇ. ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವುದು ಸೇವಿಸುವವರ ಹಕ್ಕೇ ಆಗಿರಬಹುದು. ಅಂಥ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿರಲೂಬಹುದು. ಆದರೂ ದನವನ್ನು ಈ ದೇಶದಲ್ಲಿ ಪೂಜಿಸುವವರಿದ್ದಾರೆ. ಅದಕ್ಕೆ ಪವಿತ್ರತೆಯನ್ನು ಕಲ್ಪಿಸಿದವರಿದ್ದಾರೆ. ಅದು ಮಾಂಸಕ್ಕಾಗಿ ಬಳಕೆಯಾಗಬಾರದೆಂದು ಪ್ರಾಮಾಣಿಕವಾಗಿ ಬಯಸುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ, ದನವನ್ನು ಸುತ್ತುವರಿದಿರುವ ಮಿಥ್ಯೆಗಳು ಮತ್ತು ರಾಜಕೀಯ ಸ್ವಾರ್ಥವನ್ನು ಇಂಥವರಿಗೆ ತಿಳಿಯಪಡಿಸುವುದಕ್ಕೆ ಉದ್ರೇಕಕಾರಿಯಲ್ಲದ ವಿಧಾನವನ್ನೇ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ದನದ ಮಾಂಸವನ್ನು ಬಹಿರಂಗವಾಗಿ (ಅದೂ ಒಂದು ಹಬ್ಬಂದಂತೆ) ಸೇವಿಸುವುದರಲ್ಲಿ ಒಂದು ಉಗ್ರವಾದವಿದೆ. ಈ ಉಗ್ರವಾದವನ್ನು ‘ದನದ ರಾಜಕೀಯ’ದಲ್ಲಿ ತೊಡಗಿರುವವರು ಹೆಚ್ಚು ಇಷ್ಟಪಡುತ್ತಾರೆ. ಇಂಥ ಉಗ್ರವಾದವೇ ಅವರ ಮಾರುಕಟ್ಟೆ. ಬಹಿರಂಗವಾಗಿ ಮಾಂಸ ಭೋಜನ ಮಾಡುವವರು ಧರ್ಮ ವಿರೋಧಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ಹೇಳಿ ತಮ್ಮ ಬೆಂಬಲಿಗ ವಲಯವನ್ನು ಅವರು ವಿಸ್ತರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೀಫ್ ಫೆಸ್ಟ್ ಕಾರ್ಯಕ್ರಮ ಒಂದು ಅನುಚಿತ ಪ್ರತಿಭಟನಾ ವಿಧಾನ. ಆದರೂ ಈ ಕಾರಣವೊಂದನ್ನೇ ನೆಪವಾಗಿಟ್ಟುಕೊಂಡು ಆಹಾರ ಹಕ್ಕು ಪ್ರತಿಭಟನೆಯ ಪ್ರಸ್ತುತತೆಯನ್ನು ನಾವು ನಿರಾಕರಿಸಬೇಕಿಲ್ಲ. ಈ ಫೆಸ್ಟ್ ನ ನೈತಿಕ-ಅನೈತಿಕತೆಯನ್ನು ಚರ್ಚಿಸುವ ಬದಲು ಅಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಬಲವಂತಪಡಿಸಿದ ವ್ಯವಸ್ಥೆಯ ಫ್ಯಾಸಿಸ್ಟ್ ಧೋರಣೆಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಇತ್ತೀಚೆಗೆ, ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಮುಖ್ಯ ನ್ಯಾಯಮೂರ್ತಿ ಕೆ.ಎಲ್. ದತ್ತು ಅವರಿಗೆ ಬರೆದ ಪತ್ರವೊಂದು ಇದೇ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ಗುಡ್ ಫ್ರೈಡೆಯೆಂದು ನ್ಯಾಯಾಧೀಶರುಗಳ ಸಭೆ ಏರ್ಪಡಿಸಿದುದರ ಔಚಿತ್ಯವನ್ನು ಪ್ರಶ್ನಿಸಿ ದತ್ತು ಅವರಿಗೆ ಮಾರ್ಚ್ 18ರಂದು ಕುರಿಯನ್ ಪತ್ರ ಬರೆದಿದ್ದರು. ರಜಾದಿನದಂದು ಸಭೆ ಇಟ್ಟದ್ದು ಸರಿಯಲ್ಲ ಅಂದಿದ್ದರು. ಆದರೆ ಸಭೆಯನ್ನು ಸಮರ್ಥಿಸಿ ದತ್ತು ಅವರು ಮಾರ್ಚ್ 20ರಂದು ಉತ್ತರ ಬರೆದರು. 2007ರಲ್ಲಿ ವಾಲ್ಮೀಕಿ ಜಯಂತಿಯಂದು ಮತ್ತು 2009ರಲ್ಲಿ ಸ್ವಾತಂತ್ರ್ಯೋತ್ಸವದಂದು ಮುಖ್ಯ ನ್ಯಾಯಮೂರ್ತಿಗಳ ಸಭೆಯನ್ನು ಇಡಲಾಗಿತ್ತು ಎಂದೂ ಸಮರ್ಥಿಸಿಕೊಂಡರು. ಇದಕ್ಕೆ ಉತ್ತರವಾಗಿ ಎಪ್ರಿಲ್ ಒಂದರಂದು ಕುರಿಯನ್ ಮತ್ತೊಂದು ಪತ್ರ ಬರೆದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದುವು. ನಿಜವಾಗಿ, ಕುರಿಯನ್ ಅವರ ಪತ್ರದ ಒಳಾರ್ಥವನ್ನು ಅರ್ಥೈಸದೇ ಹೋದರೆ ಅವರನ್ನು ಟೀಕೆಗೊಳಪಡಿಸುವುದು ತೀರಾ ಸುಲಭ. ಅಮೇರಿಕದಲ್ಲಿ ಗುಡ್‍ಫ್ರೈಡೆಯಂದು ನ್ಯಾಯಾಂಗ ಕಲಾಪಗಳು ನಡೆಯುತ್ತವೆ ಎಂದು ನಮಗೆ ವಾದಿಸಬಹುದು. 18ನೇ ಶತಮಾನದಲ್ಲಿ ಬ್ರಿಟನ್ನಿನ ಮುಖ್ಯ ನ್ಯಾಯಾಧೀಶರಾಗಿದ್ದ ಲಾರ್ಡ್ ಮ್ಯಾನ್ ಫೀಲ್ಡ್‍ರು ನ್ಯಾಯಾಂಗ ವಿಚಾರಣೆಯನ್ನು ಮರುದಿನಕ್ಕೆ ನಿಗದಿಪಡಿಸಿದಾಗ ವಕೀಲರಾದ ಸಾರ್ಜೆಂಟ್ ಡೆವಿ ಎಂಬವರು, ‘ನಾಳೆ  ಗುಡ್‍ಫ್ರೈಡೆ’ ಅಂದಿದ್ದರು. ಅದಕ್ಕೆ, ‘ಚಿಂತಿಲ್ಲ, ಒಳ್ಳೆಯ ದಿನ, ಒಳ್ಳೆಯ ಉದ್ದೇಶ..’ ಎಂದು ಮ್ಯಾನ್ ಫೀಲ್ಡ್ ಪ್ರತಿಕ್ರಿಯಿಸಿದ್ದನ್ನು ಉದಾಹರಣೆಯಾಗಿ ಬಳಸಿಕೊಳ್ಳಬಹುದು. ‘ಹಿಂದುಗಳಲ್ಲಿ ಸುಮಾರು 100ರಷ್ಟು ಪವಿತ್ರ ದಿನಗಳಿದ್ದರೂ ಸರಕಾರ ಅದನ್ನು 10-15ಕ್ಕೆ ಇಳಿಸಿದೆ ಮತ್ತು ಖಾಸಗಿ ಕಂಪೆನಿಗಳಂತೂ 5ಕ್ಕೆ ಇಳಿಸಿವೆ. ಆದರೂ ನಮ್ಮ ತಕರಾರಿಲ್ಲ, ನಿಮ್ಮದೇನು’ ಎಂದೂ ಕುರಿಯನ್‍ರನ್ನು ಟೀಕಿಸಬಹುದು. ನಿಜವಾಗಿ, ಕುರಿಯನ್ ಅವರ ತಕರಾರು ಗುಡ್‍ಫ್ರೈಡೇ ದಿನದ ಸಭೆಯದ್ದಲ್ಲ, ಅಂಥ ದಿನಗಳನ್ನು ಕಡೆಗಣಿಸಲು ಒತ್ತಾಯಿಸುವ ಫ್ಯಾಸಿಸಂನ ಕುರಿತಾದ್ದು. ಅವರು ತಮ್ಮ ಪತ್ರದಲ್ಲಿ ಸೆಕ್ಯುಲರಿಸಂ ಕಡೆಗಣನೆಗೆ ಒಳಗಾಗುತ್ತಿರುವ ಬಗ್ಗೆ ಭೀತಿಯನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗ ತಂಡವು ಈ ದೇಶದಲ್ಲಿ ಇವತ್ತು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಕುರಿಯನ್‍ರ ತಕರಾರು ಏನು ಎಂಬುದು ಅರ್ಥವಾಗುತ್ತದೆ. ಸೆಕ್ಯುಲರಿಸಂನ ಮೇಲೆ ವೈಚಾರಿಕವಾಗಿ ಮತ್ತು ಆಡಳಿತಾತ್ಮಕವಾಗಿ ನಿರಂತರ ಹಲ್ಲೆಗಳಾಗುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಹಕ್ಕಿನ ನಿಷೇಧದ ಚರ್ಚೆ ಅಥವಾ ಕುರಿಯನ್‍ರ ಪತ್ರದ ಮೇಲಿನ ಚರ್ಚೆ ಹೇಗೆ ಸಾಗಬೇಕು ಮತ್ತು ಹೇಗೆ ಸಾಗುತ್ತಿದೆಯೆಂಬುದು ಬಹಳ ಮುಖ್ಯ. ಫ್ಯಾಸಿಸಂ ಅಂದರೆ ನಾವು ಈಗಲೂ ಜರ್ಮನಿ, ಇಟಲಿ, ಸ್ಪೈನ್ ಕಡೆಗೆ ನೋಡುತ್ತೇವೆ. ಹಿಟ್ಲರ್, ಮುಸೋಲೊನಿ, ಫ್ರಾಂಕೊ ಮುಂತಾದವರೇ ನಮ್ಮ ಕಣ್ಣ ಮುಂದೆ ಸುಳಿಯುತ್ತಾರೆ. ಆದರೆ ಹಿಟ್ಲರ್‍ನ ಮೈನ್‍ಕ್ಯಾಂಪ್‍ಗಿಂತಲೂ ಅಪಾಯಕಾರಿಯಾದ ವಿಚಾರಧಾರೆಗಳು ಈ ದೇಶದಲ್ಲಿ ಹರಿದಾಡುತ್ತಿವೆ ಎಂಬುದನ್ನು ಇಂಥ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 4 ಸಾವಿರಕ್ಕಿಂತಲೂ ಅಧಿಕ ಜಾತಿ ಬುಡಕಟ್ಟುಗಳಿರುವ, 325 ಭಾಷೆಗಳು, ಬೇರೆ ಬೇರೆ ರಾಜ್ಯಗಳು ಮತ್ತು ಅದರದೇ ಆದ ಭಿನ್ನ ಸಂಸ್ಕøತಿಗಳಿರುವ ದೇಶವನ್ನು ಒಂದೇ ವಿಚಾರಧಾರೆಯೊಳಗೆ ಮತ್ತು ಒಂದೇ ಸಂಸ್ಕøತಿಯೊಳಗೆ ತಂದು ನಿಲ್ಲಿಸುವ ತಂತ್ರಗಳು ನಮ್ಮನ್ನು ಜಾಗೃತಿಗೊಳಿಸುತ್ತಲೂ ಇಲ್ಲ. ಮೋದಿಯರ ಚುನಾವಣಾ ವಿಜಯದ ಕುರಿತು Democratically Elected Totalitarian Government ಎಂದು ಅರುಂಧತಿ ರಾಯ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
    ತನ್ನ ದೇಶದಲ್ಲಿ ವರ್ಣಬೇಧ ಮಾನಸಿಕತೆ ಇದೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋರಲ್ಲಿ ಈಗಲೂ ಇದೆ. ಇರುವ ಕೆಡುಕನ್ನು ಇದೆ ಎಂದು ಒಪ್ಪಿಕೊಳ್ಳುವುದು ಅರ್ಧ ಪರಿಹಾರವನ್ನು ಕಂಡುಕೊಂಡಂತೆ. ಆದರೆ ಈ ದೇಶದಲ್ಲಿ ಇವತ್ತು ಎಲ್ಲವನ್ನೂ ನಿರಾಕರಿಸುವ ಮನಸ್ಥಿತಿಯೊಂದು ಗಟ್ಟಿಗೊಳ್ಳುತ್ತಿದೆ. `ಇಲ್ಲಿ ಎಂದೂ ಅಸ್ಪ್ರಿಶ್ಯತೆ ಇರಲಿಲ್ಲ, ಗೋಹತ್ಯೆ ಇರಲಿಲ್ಲ, ಶ್ರೇಣೀಕೃತ ವ್ಯವಸ್ಥೆ ಇರಲಿಲ್ಲ, ಮಡೆಸ್ನಾನ ಸರಿ, ಪಂಕ್ತಿಭೋಜನ ಸರಿ, ಆರ್ಯರು ಹೊರಗಿನವರಲ್ಲ..’ ಹೀಗೆ ಹಿಂದಿನ ತಪ್ಪುಗಳನ್ನು ಹೊಸ ವ್ಯಾಖ್ಯಾನದೊಂದಿಗೆ ಅನುಕೂಲಕ್ಕೆ ಬಳಸಿಕೊಳ್ಳುವ ವಿಚಾರಧಾರೆಯೊಂದು ವೇಗವಾಗಿ ಪ್ರಸಾರವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕುರಿಯನ್‍ರ ಪತ್ರ ಮತ್ತು ಆಹಾರದ ಹಕ್ಕು ಪ್ರತಿಭಟನೆಗಳು ಮುಖ್ಯವಾಗುತ್ತವೆ. ಅಂದಹಾಗೆ, ದನದ ಮಾಂಸವನ್ನು ಆಹಾರವಾಗಿ ಪರಿಗಣಿಸುವವರು ಯಾರ ಮತ್ತು ಯಾವ ಧರ್ಮದ ವಿರೋಧಿಗಳೂ ಅಲ್ಲ ಎಂಬುದನ್ನು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತುಪಡಿಸಬೇಕಾಗಿದೆ. ಅದನ್ನು ಒಂದು ಆಹಾರದ ಇಶ್ಯೂ ಆಗಿ ಪರಿಗಣಿಸಬೇಕೆ ಹೊರತು ಧರ್ಮದ ವಿಷಯವಾಗಿ ಖಂಡಿತ ಅಲ್ಲ. ಆಹಾರವು ಸಮಾಜವನ್ನು ವಿಂಗಡಿಸುವುದರ ಮಾನದಂಡ ಅಲ್ಲ, ಆಗಲೂ ಬಾರದು.

Tuesday, April 7, 2015

ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ?

ರೂಪ್‍ರೇಖಾ ವರ್ಮ
     ಲೀಲಾ ಗುಲಾಠಿ ಮತ್ತು ಜಶೋಧರಾ ಬಗ್ಚಿ ಬರೆದಿರುವ ‘ಎ ಸ್ಪೇಸ್ ಆಫ್ ಸೈಲೆನ್ಸ್: ದಿ ಸೆಕ್ಷುವಲ್ ಎಕನಾಮಿಕ್ಸ್ ಆಫ್ ಮಾಡರ್ನ್ ಇಂಡಿಯಾ' ಎಂಬ ಕೃತಿ ಅಥವಾ ದೀಪಾ ಸರ್ಕಾರ್ ಬರೆದಿರುವ, ‘ಅಬಾರ್ಷನ್ ಇನ್ ಇಂಡಿಯಾ: ಫ್ಯಾಕ್ಟ್ಸ್ ಆಂಡ್ ರಿಯಾಲಿಟೀಸ್’ ಎಂಬ ಕೃತಿ ಅಥವಾ ‘ಸೋಶಿಯಲ್ ಅಬ್ಯೂಸ್ ಏಂಡ್ ಗರ್ಲ್ಸ್', ಅಥವಾ ‘ಲಿಟ್ಲ್ ವುಮೆನ್', ‘ಎಸ್ಕೇಪ್', ‘ಲೀನ್ ಇನ್: ವುಮೆನ್ ವರ್ಕ್ ಏಂಡ್ ದ ವಿಲ್ ಟು ಲೀಡ್'.. ಮುಂತಾದ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಕೃತಿಗಳು ಈ ಜಗತ್ತಿನಲ್ಲಿ ನೂರಾರು ಇವೆ. ಆ ಕುರಿತಂತೆ ಫೇಸ್‍ಬುಕ್ ಪುಟಗಳಿವೆ. ವೆಬ್‍ಸೈಟ್‍ಗಳಿವೆ. 2013 ಮೇ 29ರಂದು ಒಂದು ವಿಶೇಷ ಅಭಿಯಾನ ನಡೆಯಿತು. ಮಹಿಳಾ ವಿರೋಧಿ ಫೇಸ್‍ಬುಕ್ ಪುಟಗಳ ವಿರುದ್ಧ ಸುಮಾರು 100ರಷ್ಟು ನ್ಯಾಯವಾದಿಗಳು ಪ್ರತಿ ಭಟನಾ ಅಭಿಯಾನ ಕೈಗೊಂಡರು. ಫೇಸ್‍ಬುಕ್ ತಕ್ಷಣ ಅದಕ್ಕೆ ಸ್ಪಂದಿಸಿತಲ್ಲದೇ ಅಂಥ ಪುಟಗಳನ್ನು ಅದು ಕಿತ್ತು ಹಾಕಿತು. ಇವತ್ತು ಫೇಸ್‍ಬುಕ್ ಮತ್ತು ಟ್ವಿಟರ್‍ಗಳಲ್ಲಿ ಅಸಂಖ್ಯ ಮಹಿಳೆಯರಿದ್ದಾರೆ. ಬ್ಲಾಗುಗಳನ್ನು ಬರೆಯುತ್ತಿದ್ದಾರೆ. ಜಗತ್ತಿನ ಪ್ರತಿ ಘಟನೆಗಳಿಗೂ ಪ್ರತಿಕ್ರಿಯಿಸುತ್ತಾ ಈ ಮಹಿಳೆಯರು ಗಮನ ಸೆಳೆಯುತ್ತಿದ್ದಾರೆ. ಆದರೆ ಅವರಾರೂ ‘ಮದುವೆ ಮುಂಚಿನ ಸೆಕ್ಸ್ ಅಥವಾ ಮದುವೆಯಾಚೆಗಿನ ಸೆಕ್ಸ್’ ಅನ್ನು ಮಹಿಳಾ ಸಬಲೀಕರಣದ ಭಾಗವಾಗಿ ಮತ್ತು ಹೆಣ್ಣಿನ ಆಯ್ಕೆಯಾಗಿ ಕಂಡದ್ದು ಎಲ್ಲೂ ಸುದ್ದಿಯಾಗಿಲ್ಲ. ಇದೀಗ ಭಾರೀ ಸುದ್ದಿಯಲ್ಲಿರುವ ‘ಮೈ ಚಾಯ್ಸ್' ಎಂಬ ವೀಡಿಯೋ ಮಹಿಳಾ ಸಬಲೀಕರಣದ ಸುತ್ತ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್..' ಎಂದು ಆರಂಭವಾಗುವ ಮತ್ತು ಫ್ಯಾಶನ್ ಇಂಡಿಯಾ ಎಂಬ ಮಾಸ ಪತ್ರಿಕೆಯು ಹೊರ ತಂದಿರುವ ಈ ವೀಡಿಯೋ ಎಷ್ಟರ ಮಟ್ಟಿಗೆ ಮಹಿಳಾ ಸಬಲೀಕರಣದ ಪ್ರತಿನಿಧಿ? ‘ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ? ‘ನಾನು ಪ್ರಶ್ನಾತೀತೆ' ಎಂಬ ಅಹಮಿಕೆಯೊಂದು ‘ಮೈ ಚಾಯ್ಸ್' ವೀಡಿಯೋದ ಉದ್ದಕ್ಕೂ ರಾಚುತ್ತಿರುವುದು ಏನನ್ನು ಸೂಚಿಸುತ್ತದೆ? ಸ್ವೇಚ್ಛೆಗೂ ಆಯ್ಕೆಗೂ ನಡುವೆ ವ್ಯತ್ಯಾಸಗಳಿರುತ್ತವಲ್ಲವೇ? ಯಾವುದು ಸ್ವೇಚ್ಛೆ? ಯಾವುದು ಆಯ್ಕೆ? ಸರಿ ಮತ್ತು ತಪ್ಪುಗಳ ಹಂಗಿಲ್ಲದೇ ಬದುಕುವುದರ ಹೆಸರೇ ಮಹಿಳಾ ಸಬಲೀಕರಣವೇ? ಹಾಗಂತ, ನ್ಯಾಯ-ಅನ್ಯಾಯ, ನೈತಿಕ-ಅನೈತಿಕ, ಸರಿ-ತಪ್ಪು.. ಮುಂತಾದ ಪದಗಳು ಮತ್ತು ಅವು ಧ್ವನಿಸುವ ಮೌಲ್ಯಗಳನ್ನು ಹುಟ್ಟು ಹಾಕಿದ್ದು ಯಾರು? ಅದು ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಪಾಲನೆಯಲ್ಲಿರಬೇಕೆಂದು ಬಯಸುತ್ತಿರುವವರು ಯಾರು? ಬರೇ ಪುರುಷರೇ? ಮಹಿಳೆಯರೂ ಇವನ್ನು ಜೀವನ ಮೌಲ್ಯ ಎಂದು ನಂಬುತ್ತಿಲ್ಲವೇ? ಅಷ್ಟಕ್ಕೂ, ಇಂಥ ಯಾವ ಕಟ್ಟುಪಾಡುಗಳೂ ಇಲ್ಲದೇ ರಚನೆಯಾಗುವ ಸಮಾಜವೊಂದರ ಸ್ವರೂಪ ಹೇಗಿದ್ದೀತು? ಹೊತ್ತು-ಗೊತ್ತಿಲ್ಲದೇ ಮನೆಗೆ ಆಗಮಿಸುವ ಮತ್ತು ಮನೆಯಿಂದ ನಿರ್ಗಮಿಸುವ ಪತ್ನಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಈ ಬಗ್ಗೆ ಪತಿ ಮತ್ತು ಮಕ್ಕಳ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಪತ್ನಿಯ ಧಾಟಿಯಲ್ಲೇ ಪತಿಯೂ ಮಾತಾಡತೊಡಗಿದರೆ ಏನಾದೀತು? ಆತನೂ ಪ್ರಶ್ನಾತೀತವಾದರೆ ಮನೆ ಹೇಗಿದ್ದೀತು? ಹೀಗೆ ಆಲೋಚಿಸುವ ಯಾವ ಕುಟುಂಬ ಪೂರ್ಣಾಯುಷ್ಯ ಬಾಳಬಹುದು? ‘ನಾನು ಎಲ್ಲಿಗೂ ಹೋಗುವೆ, ಹೇಗೆ ಬೇಕಾದರೂ ಬದುಕುವೆ, ಅದು ನನ್ನ ಆಯ್ಕೆ..’ ಎಂದು ಮಹಿಳೆ ವಾದಿಸುವಾಗ ಪುರುಷನೂ ಹಾಗೆಯೇ ವಾದಿಸಬಹುದಲ್ಲವೇ? ಹೆಣ್ಣು ಪ್ರಶ್ನಾತೀತೆಯಾದರೆ ಗಂಡೂ ಪ್ರಶ್ನಾತೀತ. ಹಾಗಾದರೆ ಯಾರು ಪ್ರಶ್ನಾರ್ಹರು? ಪ್ರಶ್ನಾತೀತವಾಗಿ ಬೆಳೆಯುವುದೇ ಮಹಿಳಾ ಸಬಲೀಕರಣವೆಂದಾದರೆ ಆ ಸಬಲೀಕರಣ ಮಹಿಳೆಯರನ್ನು ಎತ್ತ ಕೊಂಡೊಯ್ಯಬಹುದು? ಯಾವ ಬಗೆಯ ಸಮಾಜವನ್ನು ಅದು ನಿರ್ಮಿಸಬಲ್ಲುದು?
    ಮಹಿಳಾ ಸಬಲೀಕರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಮತ್ತು ಹತ್ತು-ಹಲವು ಪುರಸ್ಕಾರಗಳನ್ನು ಪಡೆದಿರುವ ರೂಪ್‍ರೇಖಾ ವರ್ಮ ಅವರ ನಾಟಕದಲ್ಲಿ ಒಂದು ದೃಶ್ಯವಿದೆ.
   ತಾಯಿಯ ರೊಟ್ಟಿಯೂ ಉರುಟು
   ತಂದೆಯ ಪೈಸೆಯೂ ಉರುಟು
   ಚಂದ್ರನೂ ಉರುಟು
   ಸೂರ್ಯನೂ ಉರುಟು
   ಇಡೀ ಜಗತ್ತೇ ಉರುಟು ಉರುಟು
ಎಂದು ಪುಟ್ಟ ಹುಡುಗಿ ವಿೂನ ಹಾಡುತ್ತಿರುತ್ತಾಳೆ. ಅದನ್ನು ಕೇಳಿಸಿಕೊಂಡ ಚಿಕ್ಕಪ್ಪ ಆಕೆಯನ್ನು ಹತ್ತಿರ ಕರೆಯುತ್ತಾನೆ. ನಿನ್ನ ಹಾಡು ಸರಿಯಿಲ್ಲ ಅನ್ನುತ್ತಾನೆ. ಹುಡುಗಿಯ ಕಣ್ಣಲ್ಲಿ ಅಚ್ಚರಿ. ಏನು ತಪ್ಪು ಎಂದು ಪ್ರಶ್ನಿಸುತ್ತಾಳೆ. ಆತ ಹುಡುಗಿಯನ್ನು ಹತ್ತಿರ ಕೂರಿಸುತ್ತಾನೆ. ಈ ಹಾಡು ಏನು ಹೇಳುತ್ತದೆ ನೋಡು - ‘ಅಮ್ಮ ರೊಟ್ಟಿ ತಯಾರಿಸುತ್ತಾಳೆ, ಅಪ್ಪ ದುಡ್ಡು ತರುತ್ತಾನೆ’ ಎಂದು ತಾನೇ. ಯಾಕೆ ಅಮ್ಮ ದುಡ್ಡು ತರುತ್ತಾಳೆ, ಅಪ್ಪ ರೊಟ್ಟಿ ತಯಾರಿಸುತ್ತಾನೆ ಎಂದು ಹೇಳಿಲ್ಲ? ಹಾಗೂ ಆಗಬಹುದಲ್ಲವೇ ಮಗೂ... ಎಂದು ಪ್ರಶ್ನಿಸುತ್ತಾನೆ. ಹುಡುಗಿ ನಗುತ್ತಾಳೆ. ಚಿಕ್ಕಪ್ಪಾ.. ಅಮ್ಮ ರೊಟ್ಟಿ ತಯಾರಿಸದೇ ಅಪ್ಪ ರೊಟ್ಟಿ ತಯಾರಿಸುತ್ತಾರಾ? ನೀವೇನು ಚಿಕ್ಕಪ್ಪ ಹೀಗೆ ಕೇಳ್ತೀರಿ’ ಎಂದು ಹುಡುಗಿ ಹಲ್ಲು ಬಿಡುತ್ತಾಳೆ. ಚಿಕ್ಕಪ್ಪ ನಗುತ್ತಾರೆ. ‘ಹಾಗಾದರೆ, ಅಪ್ಪಂದಿರು ಯಾರೂ ರೊಟ್ಟಿ ತಯಾರಿಸುತ್ತಿಲ್ಲ ಎಂದು ಹೇಳಬಹುದಾ’ ಎಂದು ಹುಡುಗಿಯಲ್ಲಿ ಪ್ರಶ್ನಿಸುತ್ತಾರೆ. ಆಕೆ ಸಹಜ ದನಿಯಲ್ಲಿ, ‘ಹೌದು, ಯಾಕೆಂದರೆ ಅಪ್ಪ ಪುರುಷನಾಗಿದ್ದಾನೆ. ಪುರುಷರು ಅಡುಗೆ ಕೆಲಸ ಮಾಡುವುದಿಲ್ಲವಲ್ಲ’ ಅನ್ನುತ್ತಾಳೆ. ‘ಸರಿ ಮಗಳೇ, ಅಪ್ಪ ಪುರುಷನಾಗಿರುವುದರಿಂದ ರೊಟ್ಟಿ ತಯಾರಿಸುತ್ತಿಲ್ಲ ಅಲ್ಲವೇ. ಹಾಗಾದರೆ ನಿನ್ನೆ ನಾವು ಡಾಬಾಕ್ಕೆ ಹೋಗಿ ತಿಂಡಿ ತಿಂದೆವಲ್ಲ. ಅಲ್ಲಿ ರೊಟ್ಟಿ ತಯಾರಿಸಿದ್ದು ಯಾರೂಂತ ಹೇಳಬಲ್ಲೆಯಾ? ನೆನಪು ಮಾಡು’ ಅನ್ನುತ್ತಾರೆ. ಹುಡುಗಿ ಕೆನ್ನೆಗೊಮ್ಮೆ, ಗಲ್ಲಕ್ಕೊಮ್ಮೆ ಕೈಯಿಟ್ಟು ‘ಅದೂ.. ಅದೂ.. ಡಾಬಾವಾಲ ಅಂಕಲ್’ ಅನ್ನುತ್ತಾಳೆ. ‘ಡಾಬಾವಾಲ ಅಂಕಲ್ ಪುರುಷನೋ ಸ್ತ್ರೀಯೋ’ ಎಂದು ಪ್ರಶ್ನಿಸುತ್ತಾರೆ ಚಿಕ್ಕಪ್ಪ. ಪುರುಷ ಅನ್ನುತ್ತಾಳೆ. ‘ಹಾಗಾದರೆ, ನಿನ್ನ ಹಾಡು ತಪ್ಪಲ್ಲವೇ? ಪುರುಷರೂ ರೊಟ್ಟಿ ತಯಾರಿಸುತ್ತಾರಲ್ಲವೇ ಮಗಳೇ’ ಅನ್ನುತ್ತಾರೆ. ಹುಡುಗಿ, ‘ಸರಿ ಚಿಕ್ಕಪ್ಪ, ಪುರುಷರೂ ರೊಟ್ಟಿ ತಯಾರಿಸುತ್ತಾರೆ’ ಎಂದು ಒಪ್ಪಿಕೊಳ್ಳುತ್ತಾಳೆ. ಚಿಕ್ಕಪ್ಪ ಆಕೆಯ ಬೆನ್ನು ತಟ್ಟುತ್ತಾರೆ. ನನ್ನ ವಿೂನ ತುಂಬಾ ಜಾಣೆ ಅನ್ನುತ್ತಾರೆ. ಹುಡುಗಿ ಚಿಕ್ಕಪ್ಪನ ಶಹಬಾಸ್‍ಗಿರಿಯನ್ನು ಅನುಭವಿಸುತ್ತಿರುವಾಗ ಅವರು ಮತ್ತೆ ಪ್ರಶ್ನಿಸುತ್ತಾರೆ, ‘ಮಗಳೇ, ಇನ್ನು ‘ತಾಯಿಯ ಪೈಸೆಯೂ ಉರುಟು ಉರುಟು’ ಎಂದು ಹಾಡಬಹುದಲ್ಲವೇ? ಅದರಲ್ಲಿ ತಪ್ಪಿಲ್ಲವಲ್ಲ..' ಎಂದು ಕೇಳುತ್ತಾರೆ. ಆದರೆ ಹುಡುಗಿ ಒಪ್ಪುವುದಿಲ್ಲ. ಅಮ್ಮ ದುಡ್ಡು ತರುವುದಿಲ್ಲವಲ್ಲ, ಹೊರಗೆ ದುಡಿದು ದುಡ್ಡು ತರುವವ ತಂದೆಯಲ್ಲವೇ.. ಎಂಬುದು ವಿೂನಳ ವಾದ. ಚಿಕ್ಕಪ್ಪ ಒಪ್ಪುವುದಿಲ್ಲ. ತಾಯಿ ದುಡಿಯುವುದಿಲ್ಲ ಎಂದು ನಿನಗೆ ಯಾರು ಹೇಳಿದ್ದು ಎಂದು ಪ್ರಶ್ನಿಸುತ್ತಾರೆ. ಹುಡುಗಿಗೆ ಇರುಸು ಮುರುಸು. ಯಾರೇಕೆ ಹೇಳ್ಬೇಕು ಚಿಕ್ಕಪ್ಪಾ ಎಂದಾಕೆ ಪ್ರಶ್ನಿಸುತ್ತಾಳೆ. ತಾಯಿ ದಿನಾ ಮನೆಯಲ್ಲೇ ಇರುತ್ತಾರಲ್ಲ, ತಂದೆ ಕಚೇರಿಗೆ ಹೋಗಿ ದುಡ್ಡು ಸಂಪಾದಿಸುತ್ತಾರೆ ಎಂದು ಆಕೆ ಸಮರ್ಥಿಸಿಕೊಳ್ಳುತ್ತಾಳೆ. ಆಗ ಚಿಕ್ಕಪ್ಪ ಮಾತಿಗಿಳಿಯುತ್ತಾರೆ. ‘ನಿಜ, ನಿನ್ನ ತಾಯಿ ಇರೋದು ಮನೆಯಲ್ಲೇ. ಆದರೆ ಮನೆಯ ಕೆಲಸ-ಕಾರ್ಯಗಳನ್ನೆಲ್ಲ ಮಾಡುತ್ತಿರುವವರು ಯಾರು, ತಾಯಿಯಲ್ಲವೇ? ಒಂದು ವೇಳೆ ತಾಯಿ ಮಾಡುವ ಕೆಲಸಗಳನ್ನೆಲ್ಲ ಇನ್ನೊಬ್ಬರಿಂದ ಮಾಡಿಸುವುದಾದರೆ ನಾವೆಷ್ಟು ಸಂಬಳ ಕೊಡಬೇಕಾದೀತು? ಆ ಕೆಲಸ ತಾಯಿ ಮಾಡುತ್ತಾಳೆಂದಾದರೆ, ಆ ಸಂಬಳದ ದುಡ್ಡನ್ನೆಲ್ಲಾ ಆಕೆ ಮನೆಗಾಗಿ ಉಳಿಸುತ್ತಾಳೆ ಎಂದಾಗುತ್ತದೆ. ಅಲ್ಲದೇ, ಎಷ್ಟೋ ತಾಯಂದಿರು ಮನೆಯಿಂದ ಹೊರಗೆ ಹೋಗಿಯೂ ದುಡಿಯುತ್ತಿದ್ದಾರೆ. ನಿನ್ನ ಚಿಕ್ಕಮ್ಮನನ್ನು ನೋಡು ಅಥವಾ ನಿನ್ನ ಗೆಳತಿ ಪ್ರಣತಿಯ ತಾಯಿಯನ್ನೋ ಅಸ್ಮಾಳ ತಾಯಿಯನ್ನೋ ನೋಡು. ಅವರೆಲ್ಲಾ ದುಡ್ಡು ಸಂಪಾದನೆಗಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರಲ್ಲವೇ?..’ ಹುಡುಗಿಗೆ ಅರ್ಥವಾಗತೊಡಗುತ್ತದೆ. ಆಕೆ ತನ್ನ ಹಾಡನ್ನು ಬದಲಿಸಿ ಹಾಡುತ್ತಾಳೆ. ‘ತಾಯಿಯ ರೊಟ್ಟಿಯೂ ಉರುಟು, ತಂದೆಯ ರೊಟ್ಟಿಯೂ ಉರುಟು. ತಾಯಿಯ ಪೈಸೆಯೂ ಉರುಟು, ತಂದೆಯ ಪೈಸೆಯೂ ಉರುಟು..’ ಮಗು ಹೀಗೆ ಹಾಡುತ್ತಾ ಹೋದಂತೆ ಮಹಿಳೆಯ ವ್ಯಕ್ತಿತ್ವವು ಪುರುಷನೆತ್ತರಕ್ಕೆ ಏರುತ್ತಾ ಹೋಗುತ್ತದೆ. ಹೆಣ್ಣಿನ ಕುರಿತಂತೆ ಇರುವ ತಾತ್ಸಾರ ಭಾವನೆಗೆ ಏಟು ಬೀಳುತ್ತಲೇ ಇರುತ್ತದೆ.
   ನಿಜವಾಗಿ, ರೂಪ್‍ರೇಖಾ ವರ್ಮಾರ ಈ ನಾಟಕದ ಮುಂದೆ ಹೋಮಿ ಅದಜನಿಯ ಅವರ ಈ ‘ಮೈ ಚಾಯ್ಸ್’ ಏನೇನೂ ಅಲ್ಲ. ವಿೂನ ಮತ್ತು ಆ ಚಿಕ್ಕಪ್ಪರ ನಡುವಿನ ಸಂಭಾಷಣೆ ಎಷ್ಟು ಹೃದ್ಯವೆಂದರೆ ಓದುತ್ತಾ ಓದುತ್ತಾ ಆ ಮಗು ನಮ್ಮೊಳಗೇ ಇಳಿಯುತ್ತದೆ. ಅದರ ಪುಟ್ಟ ಪುಟ್ಟ ಅಚ್ಚರಿಗಳು ನಮ್ಮೊಳಗನ್ನು ನಾಟುತ್ತದೆ, ಕದಡುತ್ತದೆ, ಕುಕ್ಕುತ್ತದೆ. ಆ ಚಿಕ್ಕಪ್ಪನಾದರೋ ಪುರುಷ ಪ್ರಧಾನ ಸಮಾಜದ ಅಹಮಿಕೆಗೆ ಒಂದೊಂದೇ ಏಟುಗಳನ್ನು ಕೊಡುತ್ತಾ ಹೋಗುತ್ತಾರೆ. ಆ ಏಟುಗಳು ಎಷ್ಟು ನಾಜೂಕಿನವು ಎಂದರೆ, ಅವು ಏಟುಗಳಂತೆ ಕಾಣುವುದೇ ಇಲ್ಲ. ರೂಪ್‍ರೇಖಾ ವರ್ಮಾರ ಮಹಿಳಾ ಸಬಲೀಕರಣಕ್ಕೂ ಮೈ ಚಾಯ್ಸ್ ನ ಮಹಿಳಾ ಸಬಲೀಕರಣಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಮಾತು, ಸಂಭಾಷಣೆ, ಹಾವ-ಭಾವ, ವಸ್ತು.. ಎಲ್ಲದರಲ್ಲೂ ಆ ಮಗು ಮತ್ತು ಚಿಕ್ಕಪ್ಪನೆದುರು ಮೈ ಚಾಯ್ಸ್ ಸೋಲುತ್ತದೆ. ದೀಪಿಕಾ ಪಡುಕೋಣೆಯ ಮಾತುಗಳಲ್ಲಿ ಮನಸ್ಸನ್ನು ಕದಡುವ ಕಳಕಳಿಯಿಲ್ಲ; ಆಕ್ರೋಶ, ಅಹಮಿಕೆ, ಗಡಸುತನವಷ್ಟೇ ಇದೆ. ಹಾಗಂತ, ರೂಪ್‍ರೇಖಾ ವರ್ಮಾರ ನಾಟಕದ ಜೊತೆ ಮೈ ಚಾಯ್ಸ್ ಅನ್ನು ಹೋಲಿಸದೇ ಒಂದು ಒಂಟಿ ವೀಡಿಯೋವಾಗಿ ನೋಡಿದರೂ ಅದು ಮಹಿಳಾ ಸಬಲೀಕರಣಕ್ಕಿಂತ ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ಗೆ ಪ್ರತ್ಯುತ್ತರ ಕೊಡಲು ತಯಾರಿಸಲಾದ ವೀಡಿಯೋದಂತೆ ಕಾಣಿಸುತ್ತದೆ. ಮಹಿಳೆಯರು ಹೇಗಿರಬೇಕೆಂದು ಆರೋಪಿ ಮುಖೇಶ್ ಸಿಂಗ್ ‘ಇಂಡಿಯಾಸ್ ಡಾಟರ್’ನಲ್ಲಿ ಹೇಳುತ್ತಾನೆ. ಆತನ ವಕೀಲರಿಬ್ಬರೂ ಆತನಂತೆಯೇ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಿಜವಾಗಿ, ಅವರ ಮಹಿಳಾ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯೆಂಬಂತೆ ಮೈ ಚಾಯ್ಸ್ ಅನ್ನು ಪರಿಗಣಿಸಬಹುದೇ ಹೊರತು ಮಹಿಳಾ ಸಬಲೀಕರಣದ ಸಂಕೇತವಾಗಿ ಅಲ್ಲ. ಮೈ ಚಾಯ್ಸ್ ನಲ್ಲಿ ಮಹಿಳೆಯ ಜಗತ್ತು ತೀರಾ ಸೀಮಿತವಾದದ್ದು. ಓರ್ವ ಸಿನಿಮಾ ತಾರೆಯ ಬೀಸು ಹೇಳಿಕೆಗಳಷ್ಟೇ ಮೈ ಚಾಯ್ಸ್ ನಲ್ಲಿದೆ. ಅದು ಬಿಟ್ಟು ಮಹಿಳಾ ಸಬಲೀಕರಣವನ್ನು ಅದು ಧ್ವನಿಸುವುದೇ ಇಲ್ಲ. ಮಹಿಳಾ ಜಗತ್ತಿನ ವಿವಿಧ ಮುಖಗಳಿಗೆ ಅದರಲ್ಲಿ ಸ್ಥಾನವೂ ಇಲ್ಲ. ಸೆಕ್ಸ್ ಅನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ವೀಡಿಯೋ ಅದು. ಆದರೆ ಅದರಾಚೆಗೆ ಬಹುದೊಡ್ಡ ಮಹಿಳಾ ಗುಂಪಿದೆ. ಅವರ ಸಬಲೀಕರಣಕ್ಕೆ ಈ ವೀಡಿಯೋದಲ್ಲಿ ಏನೇನೂ ಇಲ್ಲ. ಶಿಕ್ಷಣ, ಉದ್ಯೋಗ, ಗೃಹಹಿಂಸೆ, ಅತ್ಯಾಚಾರ, ವರದಕ್ಷಿಣೆ, ಭ್ರೂಣಹತ್ಯೆ, ಲಿಂಗ-ವೇತನ ತಾರತಮ್ಯ, ಲೈಂಗಿಕ ದೌರ್ಜನ್ಯ.. ಹೀಗೆ ಸಬಲೀಕರಣಗೊಳ್ಳದ ಅಸಂಖ್ಯ ಸಮಸ್ಯೆಗಳಿವೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್’ ಎಂಬ ಮಾತುಗಳು ಮಹಿಳಾ ಜಗತ್ತನ್ನು ಈ ಸಮಸ್ಯೆಗಳಿಂದ ಮುಕ್ತಗೊಳಿಸುವುದಕ್ಕೆ ಖಂಡಿತ ಪರ್ಯಾಪ್ತವಲ್ಲ. ಒಂದು ರೀತಿಯಲ್ಲಿ, ಈ ವೀಡಿಯೋ ಪರಿಹಾರ ಅಲ್ಲ, ಸಮಸ್ಯೆ. ಸಬಲೀಕರಣವಲ್ಲ, ದುರ್ಬಲೀಕರಣ. ಸಿನಿಮಾ ತಾರೆಯೋರ್ವಳು ಸಿನಿಮಾದಲ್ಲಿ ಹೊಡೆಯಬಹುದಾದ ಡಯಲಾಗಷ್ಟೇ ಅದು. ದೀಪಿಕಾ ಪಡುಕೋಣೆ ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
   ಒಂದು ವೇಳೆ ದೀಪಿಕಾ ಪಡುಕೋಣೆಯ ಬದಲು ವಿೂನ ಮತ್ತು ಆ ಚಿಕ್ಕಪ್ಪ ರ ಮುದ್ದು ಮುದ್ದು ಸಂಭಾಷಣೆ ಮತ್ತು ದೃಶ್ಯಗಳು ಮೈ ಚಾಯ್ಸ್ ನಲ್ಲಿ ಮೂಡಿ ಬರುತ್ತಿದ್ದರೆ ಹೇಗಿರುತ್ತಿತ್ತು? ಅದು ವೀಕ್ಷಕರನ್ನು ಹೇಗೆಲ್ಲ ಕಾಡಬಹುದಿತ್ತು? ಸಬಲೀಕರಣಗೊಲ್ಲದ  ಮಹಿಳಾ ಜಗತ್ತಿನ ಮೇಲೆ ಮತ್ತು ಅದಕ್ಕೆ ಅಡ್ಡಿಯಾಗಿರುವ ಪುರುಷ ಮನೋಭಾವದ ಮೇಲೆ ಅದು ಯಾವ ಪ್ರಭಾವವನ್ನು ಬೀರಬಹುದಿತ್ತು?

Tuesday, March 31, 2015

ನ್ಯೂಸ್ ಚಾನೆಲ್‍ಗಳು ನಡೆಸುವ `ಹತ್ಯೆಯ' ತನಿಖೆಯನ್ನು ಯಾರಿಗೆ ಒಪ್ಪಿಸೋಣ?

    ವೃಂದಾ ಗ್ರೋವರ್, ಸುಧಾ ರಾಮಲಿಂಗಂ, ಪಮೇಲ ಪಿಲಿಪೋನ್, ಅರುಣಾ ರಾಯ್, ಅಂಜಲಿ ಭಾರಧ್ವಾಜ್, ಕವಿತಾ ಕೃಷ್ಣನ್, ಕವಿತಾ ಶ್ರೀವಾಸ್ತವ.. ಇವರೆಲ್ಲ ಫೆ. 26ರಂದು ಟೈಮ್ಸ್ ನೌ ಟಿ.ವಿ. ಚಾನೆಲ್‍ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಬಹಿರಂಗ ಪತ್ರವೊಂದನ್ನು ಬರೆದರು. ‘ನಮ್ಮ ವಿರುದ್ಧದ ದ್ವೇಷ ಭಾಷಣವನ್ನು ನಿಲ್ಲಿಸು’ (Stop fostering hate speech against us) ಎಂಬ ಶೀರ್ಷಿಕೆಯಲ್ಲಿದ್ದ ಆ ಪತ್ರದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿದ್ದುವು. ಮಾಧ್ಯಮ ನೀತಿ ಸಂಹಿತೆಯು ನ್ಯೂಸ್‍ರೂಮ್‍ನಿಂದ ನಾಪತ್ತೆಯಾಗಿರುವ ಬಗ್ಗೆ ಆಕ್ಷೇಪಗಳಿದ್ದುವು. ಸುಪ್ರೀಮ್ ಕೋರ್ಟಿನ ನ್ಯಾಯವಾದಿಗಳೂ, ಆರ್.ಟಿ.ಐ. ಕಾರ್ಯಕರ್ತರೂ, ನಾಗರಿಕ ಹಕ್ಕು ಹೋರಾಟಗಾರರೂ, ಹಿರಿಯ ಪತ್ರಕರ್ತರೂ ಆಗಿರುವ ಇವರೆಲ್ಲ ಅರ್ನಾಬ್ ಗೋಸ್ವಾಮಿಯ ಆ್ಯಂಕರಿಂಗ್ ವಿಧಾನವನ್ನು ಪ್ರಶ್ನಿಸಿದರು. ಪ್ರತಿದಿನ ರಾತ್ರಿ 9 ಗಂಟೆಗೆ ಅವರು ನಡೆಸಿಕೊಡುವ ‘ನ್ಯೂಸ್ ಅವರ್' (News hour ) ಚರ್ಚಾ ಕಾರ್ಯಕ್ರಮವು ಹೇಗೆ ನ್ಯಾಶನಲ್ ಬ್ರಾಡ್‍ಕಾಸ್ಟಿಂಗ್ ಅಥಾರಿಟಿಯ (NBC) ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂಬುದನ್ನು ಬೊಟ್ಟು ಮಾಡಿದರು. ತನ್ನ ನಿಲುವಿಗೆ ವಿರುದ್ಧವಾಗಿರುವವರನ್ನು ಕಡೆಗಣಿಸುವ ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಅರ್ನಾಬ್‍ರ ಅಬ್ಬರದ ವರ್ತನೆಯನ್ನು ಖಂಡಿಸಿದರು. ಇದಕ್ಕೆ ಉದಾಹರಣೆಯಾಗಿ ಅವರು ಫೆ. 17 ಮತ್ತು 18ರಂದು ನಡೆದ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಮಧ್ಯ ಪ್ರದೇಶದ ಮಹಾನ್ ಎಂಬಲ್ಲಿ ಎಸ್ಸಾರ್ (Essar) ಬಹುರಾಷ್ಟ್ರೀಯ ಕಂಪೆನಿಯು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತಂತೆ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರಿಗೆ ಮನವರಿಕೆ ಮಾಡಿಸಲು ಗ್ರೀನ್‍ಪೀಸ್ ಸಂಘಟನೆಯ ಪ್ರಿಯಾ ಪಿಳ್ಳೆ ಬ್ರಿಟನ್‍ಗೆ ಹೋಗುವುದರಲ್ಲಿದ್ದರು. ಇದನ್ನು ಅರಿತ ಕೇಂದ್ರ ಸರಕಾರ ಅವರ ಪ್ರಯಾಣವನ್ನು ತಡೆಹಿಡಿಯಿತು. ಅವರ ಪಾಸ್‍ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಂಡಿತು. ನಿಜವಾಗಿ, ಎಸ್ಸಾರ್ ಕಂಪೆನಿಯ ಮುಖ್ಯ ಕೇಂದ್ರವಿರುವುದು ಬ್ರಿಟನ್‍ನಲ್ಲಿ. ಆ ಹಿನ್ನೆಲೆಯಲ್ಲಿ ಪ್ರಿಯಾ ಪಿಳ್ಳೆಯವರ ಬ್ರಿಟನ್ ಪ್ರವಾಸ ಯಾವ ರೀತಿಯಲ್ಲೂ ಅನುಚಿತವಾಗಿರಲಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ಫೆ. 17ರಂದು ತನ್ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಚರ್ಚಿಸಿದರು. ಆದರೆ ಚರ್ಚೆ ಎಷ್ಟು ಏಕಮುಖವಾಗಿತ್ತೆಂದರೆ, ಅವರು ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಎಂದರು. ದೇಶವಿರೋಧಿಗಳೆಂದರು. ಗ್ರೀನ್‍ಪೀಸನ್ನು ಖಂಡಿಸುವ ಅಭಿಪ್ರಾಯಗಳಿಗೆ ಧಾರಾಳ ಸಮಯಾವಕಾಶ ಕೊಟ್ಟ ಅವರು ಅದನ್ನು ಸಮರ್ಥಿಸುವವರಿಗೆ ಏನನ್ನೂ ಕೊಡಲಿಲ್ಲ. ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಗಳು, ದೇಶವಿರೋಧಿಗಳು, ನಕ್ಸಲೈಟ್ ಬೆಂಬಲಿಗರು ಎಂದು ಕರೆಯುವುದಕ್ಕೆ ಅರ್ನಾಬ್‍ಗೆ ಏನು ಹಕ್ಕಿದೆ? ಒಂದು ಚಾನೆಲ್ ಹೀಗೆ ಬೇಕಾಬಿಟ್ಟಿಯಾಗಿ ಜನರನ್ನು ವಿಭಜಿಸುವುದು ಬೇಜವಾಬ್ದಾರಿತನದ್ದು. ಕಾರ್ಯಕ್ರಮವನ್ನು ನಡೆಸಿಕೊಡುವ ವ್ಯಕ್ತಿಯೆಂಬ (ಆ್ಯಂಕರ್) ನೆಲೆಯಲ್ಲಿ ಇರಲೇಬೇಕಾದ ತಟಸ್ಥ ನಿಲುವು, ನ್ಯಾಯ, ನಿಷ್ಪಪಕ್ಷಪಾತತನ ಮುಂತಾದ ಮೌಲ್ಯಗಳು ಅರ್ನಾಬ್‍ರಲ್ಲಿ ಕಾಣೆಯಾಗಿರುವುದಕ್ಕಾಗಿ ನಾವು ಟೈಮ್ಸ್ ನೌಗೆ ಬಹಿಷ್ಕಾರ ಹಾಕಿದ್ದೇವೆ ಎಂದು ಪತ್ರದಲ್ಲಿ ಅವರು ಘೋಷಿಸಿದರು.
    ನಿಜವಾಗಿ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಪತ್ರ ಬಹಳ ಮುಖ್ಯವಾದುದು. ಇದೇ ವೇಳೆ ಡಿ.ಕೆ. ರವಿಯ ಸಾವನ್ನು ಎದುರಿಟ್ಟುಕೊಂಡು ಕನ್ನಡದ ನ್ಯೂಸ್ ಚಾನೆಲ್‍ಗಳು ನಡೆಸಿದ ಚರ್ಚೆಯ ಸ್ವರೂಪವನ್ನೂ ಇಲ್ಲಿ ಎತ್ತಿಕೊಳ್ಳಬಹುದು. 1976ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಾದ ಪೀಟರ್ ಫಿಂಚ್  ಹೇಳಿದಂತೆ, “ಟಿ.ವಿ. ಎಂಬುದು ಅಮ್ಯೂಸ್‍ಮೆಂಟ್ ಪಾರ್ಕೇ? ಅದೊಂದು ಸರ್ಕಸ್ ಕಂಪೆನಿಯೇ? ದೊಂಬರಾಟದವರ ಗುಂಪೇ? ಅದನ್ನು ಮತ್ತು ಅದರಲ್ಲಿ ಪ್ರಸಾರವಾಗುವುದನ್ನು ವೀಕ್ಷಕರು ಸೀರಿಯಸ್ಸಾಗಿ ಪರಿಗಣಿಸಬಾರದೇ?..” ಇಂಥ ಅನುಮಾನ ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಿದೆ. ಬೇಕಾದರೆ, ಟೈಮ್ಸ್ ನೌನ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನೇ ಎತ್ತಿಕೊಳ್ಳಿ. ಆ ದಿನದ ಪ್ರಮುಖ ಇಶ್ಯೂವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ರಾತ್ರಿ 9 ಗಂಟೆಗೆ ಕಾಣಿಸಿಕೊಳ್ಳುತ್ತಾರೆ. ಚಾನೆಲ್‍ನಲ್ಲಿ 10-12 ಮಂದಿಯನ್ನು ಕೂರಿಸಿ ಚರ್ಚೆ ಆರಂಭಿಸುತ್ತಾರೆ. ಯಾರನ್ನೂ ಅವರು ಮಾತಾಡಲು ಬಿಡುವುದಿಲ್ಲ. ಅವರು ಪ್ರಶ್ನೆ ಎಸೆಯುತ್ತಾರೆ. ಉತ್ತರ ಬರುವ ಮೊದಲೇ ಮತ್ತೆ ಮಾತಾಡಿ ತನ್ನ ಅಭಿಪ್ರಾಯವನ್ನೇ ಅಂತಿಮ ಗೊಳಿಸುತ್ತಾರೆ. ಆದ್ದರಿಂದಲೇ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ಟಿ.ವಿ. ಸ್ಕ್ರೀನ್‍ನಲ್ಲಿ ಆಗಾಗ ಇಣುಕಿ ಮಾಯವಾಗುತ್ತಾರೆ. ಅಷ್ಟಕ್ಕೂ, ಮಾಧ್ಯಮಗಳಿಗೆ ಕೆಲವು ನೀತಿ ಸಂಹಿತೆಗಳಿವೆ. ""TV News channels must provide for neutrality by offering equality for all affected parties, players and actors in any dispute or conflict to present their point of view. News channels must strive to ensure that allegations are not portrayed as fact and charges are not conveyed as an act of guilt." "... avoid... broadcasting content that is malicious, biased, regressive, knowingly inaccurate, hurtful, misleading...." NBA..." ಯ ಈ ನೀತಿ ಸಂಹಿತೆಯನ್ನು ಟೈಮ್ಸ್ ನೌ ಸಹಿತ ಈ ದೇಶದಲ್ಲಿರುವ ಸುಮಾರು 400ರಷ್ಟು ಸುದ್ದಿ ಚಾನೆಲ್‍ಗಳಲ್ಲಿ ಎಷ್ಟು ಚಾನೆಲ್‍ಗಳು ಪಾಲಿಸುತ್ತಿವೆ? ಇವತ್ತು ಅರ್ನಾಬ್ ಒಂಟಿಯಲ್ಲ. ಮಾಧ್ಯಮ ನೀತಿ ಸಂಹಿತೆಯನ್ನೆಲ್ಲ ಗಾಳಿಗೆ ತೂರಿ ತಾನೇ ಸರಿ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅರ್ನಾಬ್‍ರಿಂದ ಪ್ರಭಾವಿತರಾದವರು ಇವತ್ತು ವಿವಿಧ ಚಾನೆಲ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯೂಸ್‍ಎಕ್ಸ್ ನಲ್ಲಿ ರಾಹುಲ್ ಶಿವಶಂಕರ್ ಅನ್ನುವ ಆ್ಯಂಕರ್ ಅರ್ನಾಬ್‍ರನ್ನೇ ಕಾಪಿ ಮಾಡುತ್ತಿದ್ದಾರೆ. ಝೀ ಬಿಸಿನೆಸ್‍ನಲ್ಲಿ ಅಮಿಶ್ ದೇವಗನ್, ಹೆಡ್‍ಲೈನ್ ಟುಡೇಯಲ್ಲಿ ಗೌರವ್ ಸಾವಂತ್‍ರೆಲ್ಲ ಅರ್ನಾಬ್‍ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಕನ್ನಡದ ಒಂದೆರಡು ನ್ಯೂಸ್ ಚಾನೆಲ್‍ಗಳಲ್ಲೂ ಈ ಬಗೆಯ ಆ್ಯಂಕರ್‍ಗಳಿದ್ದಾರೆ. ವಿರೋಧಿ ದನಿಯನ್ನು ಮಟ್ಟ ಹಾಕುವುದೇ ಆ್ಯಂಕರ್‍ನ ಕೆಲಸ ಎಂದು ನಂಬಿರುವವರ ಮಧ್ಯೆ ಪಾರದರ್ಶಕ, ತಟಸ್ಥ, ನ್ಯಾಯಯುತ.. ಮುಂತಾದ ಮೌಲ್ಯಗಳೆಲ್ಲ ಗೌರವ ಗಿಟ್ಟಿಸಿಕೊಳ್ಳುವುದು ಹೇಗೆ? ಅಸ್ಸಾಮ್‍ನಲ್ಲಿ ಹುಟ್ಟಿ ಆಕ್ಸ್ ಫರ್ಡ್‍ನಲ್ಲಿ ಕಲಿತಿರುವ ಅರ್ನಾಬ್‍ರ ಮೇಲೆ ಅಮೇರಿಕದ ಫಾಕ್ಸ್ ನ್ಯೂಸ್ ಮತ್ತು MSNBC ಗಳು ಪ್ರಭಾವ ಬೀರಿರಬಹುದು. ಫಾಕ್ಸ್ ನ್ಯೂಸ್‍ನ ಬಿಲ್ ರೈಲಿಯನ್ನು ಅರ್ನಾಬ್ ಅನುಸರಿಸುತ್ತಿದ್ದಾರೆ ಎಂಬ ಆರೋಪ ನಿಜವಿರಲೂಬಹುದು. ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕೆಂದು ಅರ್ನಾಬ್ ಆಗ್ರಹಿಸಿದುದಕ್ಕೂ ಅವರ ತಂದೆ ಕರ್ನಲ್ ಮನೋರಂಜನ್‍ರು ಬಿಜೆಪಿ ಸದಸ್ಯರಾಗಿರುವುದಕ್ಕೂ ಮತ್ತು 1998ರಲ್ಲಿ ಅವರು ಗುವಾಹಟಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದುದಕ್ಕೂ ಸಂಬಂಧ ಇಲ್ಲದೇ ಇರಬಹುದು. ಆದರೂ ಓರ್ವ ವ್ಯಕ್ತಿಯಾಗಿ ಮತ್ತು ಚಾನೆಲ್‍ನ ಮುಖ್ಯಸ್ಥರಾಗಿ ಅರ್ನಾಬ್‍ರಿಗೆ ಸಾಮಾಜಿಕ ಜವಾಬ್ದಾರಿ ಇರಬೇಡವೇ? ಇದು ಕೇವಲ ಅರ್ನಾಬ್‍ರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಟೈಮ್ಸ್ ನೌ ಎಂಬುದು ಇಂಗ್ಲಿಷ್ ಚಾನೆಲ್ ಆದುದರಿಂದ ಅದರ ಪ್ರತಿ ಕಾರ್ಯಕ್ರಮಗಳೂ ಸುದ್ದಿಗೀಡಾಗುತ್ತವೆ. ವೀಕ್ಷಕರೂ ದೊಡ್ಡ ಮಟ್ಟದಲ್ಲಿರುತ್ತಾರೆ. ಹಾಗಂತ, ಅರ್ನಾಬ್‍ರಂತೆ ಏಕಮುಖವಾಗಿ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್‍ಗಳು ಕನ್ನಡದಲ್ಲೂ ಇವೆ. ಡಿ.ಕೆ. ರವಿ ಸಾವಿನ ವಿಷಯದಲ್ಲಿ ಕನ್ನಡದ ಪ್ರಮುಖ ಚಾನೆಲ್‍ಗಳು ವರ್ತಿಸಿದ್ದು ಬಹುತೇಕ ಅರ್ನಾಬ್‍ರಂತೆಯೇ. CBI ಯ ಹೊರತಾದ ಯಾವ ತನಿಖೆಯೂ ಸೂಕ್ತವಲ್ಲ ಎಂದು ಅವೆಲ್ಲ ಇಡೀ ದಿನ ವಾದಿಸಿದುವು. ರವಿ ಸಾವನ್ನು ಕೊಲೆ ಎಂದು ಸಾಬೀತುಪಡಿಸುವುದಕ್ಕಾಗಿ ವದಂತಿಗಳಿಗೆ ರೆಕ್ಕೆ-ಪುಕ್ಕ ಸೇರಿಸಿ ಸುದ್ದಿ ರೂಪದಲ್ಲಿ ಕೊಟ್ಟವು. ಈ ಸಂದರ್ಭದಲ್ಲಿ ಚಾನೆಲ್‍ಗಳ ಶೈಲಿ ಎಷ್ಟು ಏಕಪಕ್ಷೀಯವಾಗಿತ್ತೆಂದರೆ ಕೊಲೆಯಲ್ಲದ ಇನ್ನಾವುದನ್ನು ಊಹಿಸುವುದೂ ಅಪರಾಧವಾದೀತೋ ಎಂಬ ರೀತಿಯಲ್ಲಿತ್ತು. ಇದೇ ವೇಳೆ, ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಅವರು ಚಾನೆಲ್‍ಗಳ ಈ ‘ಅರ್ನಾಬ್ ಕಾಯಿಲೆ’ಯನ್ನು ಟೀಕಿಸುತ್ತಾ, “ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರದ ಅಧೀನದಲ್ಲಿದೆಯಲ್ಲ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಅನ್ನುವುದಾದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯು ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್.ಬಿ.ಐ., ಇಂಟರ್‍ಪೋಲ್, ವಿಶ್ವಸಂಸ್ಥೆ?..” ಎಂಬ ಪ್ರಶ್ನೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹಾಗಂತ, ರವಿ ಪ್ರಕರಣ ಮೊದಲನೆಯದ್ದಲ್ಲ. ಬಾಂಬ್ ಸ್ಫೋಟದ ಸಂದರ್ಭದಲ್ಲಿ ಈ ಬಗೆಯ ತಪ್ಪುಗಳನ್ನು ಹೆಚ್ಚಿನೆಲ್ಲ ಚಾನೆಲ್‍ಗಳೂ ಮಾಡಿವೆ. ಬೆಂಗಳೂರಿನಲ್ಲಿ ಕೆಲವು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವರೆಂದು ಆರೋಪಿಸಿ ಮುತೀಉರ್ರಹ್ಮಾನ್ ಎಂಬ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತನ ಸಹಿತ ಕೆಲವರ ಬಂಧನವಾದಾಗ ಇವೇ ಚಾನೆಲ್‍ಗಳು ಆ ಸುದ್ದಿಯನ್ನು ಹಬ್ಬದಂತೆ ಆಚರಿಸಿದ್ದುವು. ಪತ್ರಿಕೆಗಳಲ್ಲೂ ‘ಅರ್ನಾಬ್ ಪ್ರೇರಿತ’ ಸುದ್ದಿಗಳು ಪ್ರಕಟವಾಗಿದ್ದುವು. ಹಾಗಾದರೆ ಸುದ್ದಿ ಮಾಧ್ಯಮಗಳನ್ನು ಈ ಕಾಯಿಲೆಯಿಂದ ಮುಕ್ತಗೊಳಿಸುವುದು ಹೇಗೆ? ಅದಕ್ಕೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ವಿಧಾನ ಯಾವುದು? ಹಾಗಂತ ಟೈಮ್ಸ್ ನೌ ಅನ್ನೇ ವೀಕ್ಷಿಸಬೇಕು ಎಂಬ ಒತ್ತಾಯವನ್ನು ಯಾರೂ ಹೇರುತ್ತಿಲ್ಲ ನಿಜ. ವೀಕ್ಷಕರ ಮುಂದೆ ಇವತ್ತು ಧಾರಾಳ ಆಯ್ಕೆಗಳಿವೆ. ಪಬ್ಲಿಕ್ ಬೇಡ ಅಂದರೆ TV 9 ಇದೆ, ಸುವರ್ಣ ಇದೆ, BTV  ಇದೆ. ಆದರೆ ಇದು ಕಾಯಿಲೆಗಿರುವ ಮದ್ದೇ? ಇವತ್ತು ಈ ದೇಶದಲ್ಲಿ ಅತ್ಯಂತ ಹೆಚ್ಚು TRP ಗಳಿಸುತ್ತಿರುವುದು ಅರ್ನಾಬ್‍ರ ‘ನ್ಯೂಸ್ ಅವರ್’ ಕಾರ್ಯಕ್ರಮ. ಒಂದು ಕಡೆ ಪ್ರಮುಖ ವ್ಯಕ್ತಿತ್ವಗಳಿಂದ ಅರ್ನಾಬ್ ತೀವ್ರ ಟೀಕೆಯನ್ನು ಎದುರಿಸುತ್ತಿದ್ದರೂ ಇನ್ನೊಂದು ಕಡೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಹೀಗಿರುವಾಗ ಈ ಆಯ್ಕೆಗಳು ನಿರ್ದಿಷ್ಟ ಚಾನೆಲ್‍ಗಳ ಮೇಲೆ ಯಾವ ಪರಿಣಾಮ ಬೀರಬಹುದು? ಜನಪ್ರಿಯತೆಯ ಆಧಾರದಲ್ಲಿ ಹೇಳುವುದಾದರೆ ಅರ್ನಾಬ್ ಇವತ್ತು ಅತ್ಯುತ್ತಮ ಆ್ಯಂಕರ್. ಆದರೆ ಜನಪ್ರಿಯತೆಯೊಂದೇ ಒಂದು ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ಮಾನದಂಡವೆ? ಆ ಜನಪ್ರಿಯತೆಗಾಗಿ ಅವರು ಅನುಸರಿಸಿದ ಕಾರ್ಯ ವಿಧಾನಗಳನ್ನು ನಾವು ಪರಿಶೀಲನೆಗೆ ಒಳಪಡಿಸಬೇಡವೇ? ಇಲ್ಲದಿದ್ದರೆ ಅನಂತ ಮೂರ್ತಿಗಿಂತ ಭೈರಪ್ಪ ಶ್ರೇಷ್ಠ ಎಂದೋ ಅಥವಾ ಗಾಂಧೀಜಿಗಿಂತ ಮೋದಿ ಶ್ರೇಷ್ಠ ಎಂದೋ ಹೇಳಬೇಕಾದೀತಲ್ಲವೇ?
    ಮಾರ್ಚ್ 23ರ ಔಟ್‍ಲುಕ್ ಪತ್ರಿಕೆಯು ಅರ್ನಾಬ್ ಗೋಸ್ವಾಮಿಯನ್ನು ಮುಖಪುಟದಲ್ಲಿ ಕೂರಿಸಿ, ‘TV ನ್ಯೂಸ್‍ನ ಕೊಲೆಗಾರ (THE MAN, WHO KILLED TV NEWS)’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿದೆ. ಒಂದು ವೇಳೆ ಡಿ.ಕೆ. ರವಿಯ ವಿಷಯದಲ್ಲಿ ಇದೇ ಮಾನದಂಡವನ್ನು ಕನ್ನಡ ಚಾನೆಲ್‍ಗಳಿಗೆ ಅನ್ವಯಿಸಿದರೆ ಶೀರ್ಷಿಕೆ ಹೇಗಿರಬಹುದು?