Monday, August 27, 2012

ಇಂಥ ಪ್ರತಿಭಟನೆಗಳಿಂದ ನಾವು ಗಳಿಸುವುದಾದರೂ ಏನನ್ನು?

     2012 ಆಗಸ್ಟ್ 11, ಶನಿವಾರ
ಮುಂಬೈಯ ಆಝಾದ್ ಮೈದಾನದಲ್ಲಿ ಪ್ರತಿಭಟನೆ
2 ಸಾವು
50ರಷ್ಟು ಪೊಲೀಸರ ಸಹಿತ 63 ಮಂದಿಗೆ ಗಾಯ
34 ಬಸ್ಸುಗಳು ಬೆಂಕಿಗಾಹುತಿ
1857ರ ಪ್ರಥಮ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಸಾವಿಗೀಡಾದ ಯೋಧರ ಸ್ಮರಣಾರ್ಥ ಕಟ್ಟಲಾಗಿದ್ದ `ಅಮರ್ ಜವಾನ್' ಸ್ಮಾರಕಕ್ಕೆ ಹಾನಿ..
     ಆಗಸ್ಟ್ 17, ಶುಕ್ರವಾರ
ಲಕ್ನೋದ ತಿಲೆವಾರಿ ಮಸೀದಿಯಿಂದ ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ
ಬುದ್ಧ ಪ್ರತಿಮೆಗೆ ಹಾನಿ
ಹಲವರಿಗೆ ಗಾಯ, ಅನೇಕ ವಾಹನಗಳು ಜಖಂ
ಆಜ್ ತಕ್ ಚಾನೆಲ್‍ನ ಓಬಿ (outside broadcasting) ವಾಹನ ಪ್ರತಿಭಟನಾಕಾರರಿಂದ ಧ್ವಂಸ..
         ಅಸ್ಸಾಮ್ ಮತ್ತು ಮ್ಯಾನ್ಮಾರ್‍ನ ಕುರಿತಂತೆ ಮುಸ್ಲಿಮರು ಕಳೆದೆರಡು ವಾರಗಳಲ್ಲಿ ನಡೆಸಿದ ಪ್ರತಿಭಟನೆಯ ಫಲಿತಾಂಶಗಳಿವು. ಇವನ್ನು ಹೇಗೆ ಸಮರ್ಥಿಸುವುದು? ಅನ್ಯಾಯವನ್ನು ಖಂಡಿಸಿ ನಡೆಸಲಾಗುವ ಪ್ರತಿಭಟನೆಗಳೇ ಅನ್ಯಾಯದ ರೂಪವನ್ನು ಪಡಕೊಳ್ಳುವುದಕ್ಕೆ ಏನೆನ್ನಬೇಕು? ಇಂಥವು ಯಾರಿಗೆ ಲಾಭ ತಂದುಕೊಡಬಲ್ಲುದು? ಈ ಎರಡು ಪ್ರತಿಭಟನೆಗಳಲ್ಲಿ ಪ್ರಶಾಂತ್ ಸಾವಂತ್, ಸಈದ್ ಝೈದಿ ಮತ್ತು ಜಿತೇಂದ್ರ ಪಾಂಡೆ ಎಂಬ ಮಾಧ್ಯಮ ಪೊಟೋಗ್ರಾಫರ್‍ಗಳು ಗಾಯಗೊಂಡರು. ಲಕ್ನೋ ವಿಧಾನ ಸೌಧದ ಎದುರು ಪತ್ರಕರ್ತರು ಧರಣಿ ಕೂತರು. ಒಂದು ರೀತಿಯಲ್ಲಿ ಈ ಎರಡು ಘಟನೆಗಳ ಬಳಿಕ ಮ್ಯಾನ್ಮಾರ್ ಮತ್ತು ಅಸ್ಸಾಮ್‍ಗಳಿಗಿಂತ ಹೆಚ್ಚು ಮಾಧ್ಯಮಗಳಲ್ಲಿ ಚರ್ಚೆಗೊಳಗಾದದ್ದು ಈ ಪ್ರತಿಭಟನೆಗಳೇ. ಅಸ್ಸಾಮ್‍ನಲ್ಲಿ ಬೋಡೋಗಳು ನಡೆಸುತ್ತಿರುವ ಮುಸ್ಲಿಮರ ಜನಾಂಗೀಯ ನಿರ್ಮೂಲನಕ್ಕೆ, `ಅಕ್ರಮ ವಲಸಿಗರ ಸಮಸ್ಯೆ' ಎಂಬ ಅಕ್ರಮ ಹೆಡ್‍ಲೈನ್ ಕೊಟ್ಟು ಸುಳ್ಳು ಪ್ರಚಾರ ನಡೆಸುತ್ತಿರುವವರನ್ನು ಖಂಡಿಸುತ್ತಿರುವ ಮಾಧ್ಯಮ ಮಿತ್ರರೇ ಈ ಪ್ರತಿಭಟನೆಗಳಿಂದ ಹತಾಶರಾದರು. ಪ್ರತಿಭಟನಾಕಾರರ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಿಸಿದರು. ಮುಸ್ಲಿಮರ ಮುಂದೆ ಅನೇಕಾರು ಪ್ರಶ್ನೆಗಳನ್ನು ಇಟ್ಟರು. ನೀವೇಕೆ ಹೀಗೆ ಎಂದು ಪ್ರಶ್ನಿಸಿದರು..
      1. ನಮಾಝ್ ಎಂಬುದು ಸಹನೆಯ, ಶಾಂತಿಯ ದ್ಯೋತಕ ಎಂದಾದರೆ ಮಸೀದಿಯಿಂದ ಹೊರಬಿದ್ದ ಕೂಡಲೇ ಮುಸ್ಲಿಮರು ಸಹನೆಯನ್ನು ಕಳಕೊಳ್ಳುವುದೇಕೆ?
      2. ಹುತಾತ್ಮ ಯೋಧರ ಸ್ಮಾರಕವನ್ನು ಗುರುತಿಸಲಾರದಷ್ಟೂ ಅಥವಾ ಅದಕ್ಕೆ ಗೌರವ ಕೊಡಲಾರದಷ್ಟೂ ಮುಸ್ಲಿಮರು ಅಜ್ಞಾನಿಗಳೇ?
      3. ಬುದ್ಧ ಪ್ರತಿಮೆಯನ್ನು ಘಾಸಿಗೊಳಿಸಿದ್ದು ಏನನ್ನು ಸೂಚಿಸುತ್ತದೆ?
      4. ಮುಸ್ಲಿಮರು ಕೇವಲ ಮುಸ್ಲಿಮರಿಗಾಗಿ ಮಾತ್ರ ಪ್ರತಿಭಟಿಸುವುದೇಕೆ? ಟಿಬೇಟಿಯನ್ನರು, ಕಾಶ್ಮೀರಿ ಪಂಡಿತರು, ಪಾಕಿಸ್ತಾನದ ಹಿಂದೂಗಳು, ಲಂಕಾದ ತಮಿಳರ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧವೂ ಮುಸ್ಲಿಮರೇಕೆ ಪ್ರತಿಭಟಿಸುವುದಿಲ್ಲ?
      5. ಮ್ಯಾನ್ಮಾರ್ ಮತ್ತು ಅಸ್ಸಾಮ್‍ಗಾಗಿ ಸಣ್ಣ ಸಣ್ಣ ಪಟ್ಟಣಗಳಲ್ಲೂ ಮುಸ್ಲಿಮರು ಪ್ರತಿಭಟಿಸಿದ್ದಾರೆ. ಆದರೆ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿರುವ ಶಾಲೆಗೆ ಸೂಕ್ತ ಶಿಕ್ಷಕರನ್ನು ಒದಗಿಸುವುದಕ್ಕಾಗಿ, ನೀರಿಗೆ, ರಸ್ತೆಗಾಗಿ ಇದೇ ಸ್ಫೂರ್ತಿಯಲ್ಲಿ ಮುಸ್ಲಿಮರು ಯಾಕೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿಲ್ಲ?
      6. ಮ್ಯಾನ್ಮಾರ್‍ನ ಮುಸ್ಲಿಮರಿಗಾಗಿ ಭಾರತೀಯ ಮುಸ್ಲಿಮರೇಕೆ ಕಣ್ಣೀರು ಹಾಕಬೇಕು? ಜಗತ್ತಿನ ಯಾವುದೋ ಮೂಲೆಯಲ್ಲಿರುವ ಮುಸ್ಲಿಮರ ನೋವು, ಇನ್ನಾವುದೋ ಮೂಲೆಯಲ್ಲಿರುವ ಮುಸ್ಲಿಮರ ನೋವಾಗುವುದಾದರೂ ಹೇಗೆ?
       ಇನ್ನೂ ಇವೆ..
      ಇಷ್ಟಕ್ಕೂ, ಇಲ್ಲಿರುವ ಪ್ರಶ್ನೆಗಳೆಲ್ಲಾ ಉತ್ತರಿಸಲೇಬೇಕಾದಷ್ಟು ತೂಕ ಉಳ್ಳವು ಎಂದಲ್ಲ. ಅಲ್ಲದೇ, ಇಲ್ಲಿ ಪ್ರಶ್ನೆಗಳನ್ನು ತೇಲಿ ಬಿಟ್ಟವರಲ್ಲಿ, ಟಿಬೆಟ್, ನೇಪಾಳ, ಲಂಕಾ, ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಲಕ್ಷಾಂತರ ಮಂದಿಯನ್ನು ನಿರಾಶ್ರಿತರೆನ್ನುತ್ತಾ, ಬಂಗ್ಲಾದಿಂದ ಬಂದವರನ್ನು ಮಾತ್ರ ಅಕ್ರಮ ವಲಸಿಗರೆಂದು ಕರೆಯುವ ಪಕ್ಕಾ ಕೋಮುವಾದಿಗಳೂ ಇದ್ದಾರೆ. 1983ರ ಜುಲೈಯಲ್ಲಿ (ಬ್ಲಾಕ್ ಜುಲೈ) 1,34,053 ಲಂಕಾ ತಮಿಳರು ಭಾರತಕ್ಕೆ ಬಂದರು. 1989ರಲ್ಲಿ ಮತ್ತೆ 1,22,000 ಮಂದಿ ತಮಿಳರು ಈ ದೇಶಕ್ಕೆ ಕಾಲಿಟ್ಟರು. ಮಾತ್ರವಲ್ಲ, ರಾಜೀವ್ ಗಾಂಧಿಯನ್ನು ಕೊಂದ ಆರೋಪ ಕೂಡ ಈ ವಲಸಿಗರ ಮೇಲೆಯೇ ಇದೆ. ಆದರೆ ಬಂಗ್ಲಾ ಅಕ್ರಮ ವಲಸಿಗರ ಬಗ್ಗೆ ಪುಟಗಟ್ಟಲೆ ಬರೆಯುವ ಯಾರೂ ಈ ಸತ್ಯವನ್ನು ಹೇಳುತ್ತಲೇ ಇಲ್ಲ. 2001ರಲ್ಲಿ ಗುಜರಾತ್‍ನಲ್ಲಿ ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್‍ನ ಅಮೃತ್‍ಸರದಲ್ಲಿ ಶೌರ್ಯ ಸ್ಮೃತಿ  ಸಮ್ಮಾನ್ ಎಂಬ ಸಮಾರಂಭವನ್ನು ಆರೆಸ್ಸೆಸ್ ಹಮ್ಮಿಕೊಂಡಿತ್ತು. 1947ರ ಭಾರತ ವಿಭಜನೆಯ ವೇಳೆ ಪೂರ್ವ ಪಂಜಾಬ್‍ನಲ್ಲಿ ಮುಸ್ಲಿಮರ ಜನಾಂಗ ನಿರ್ಮೂಲನ ನಡೆದಿತ್ತು. ಆ ಕ್ರೌರ್ಯದಲ್ಲಿ ಭಾಗವಹಿಸಿದ ತನ್ನ ಕಾರ್ಯಕರ್ತರನ್ನು ಗೌರವಿಸುವುದಕ್ಕಾಗಿ ಹಮ್ಮಿಕೊಂಡ ಆ ಸಮಾರಂಭದ (ದಿ ಹಿಂದೂ, ಅಜಯ್ ಭಾರದ್ವಾಜ್, ಆಗಸ್ಟ್ 15, 2012) ಬಗ್ಗೆ, ಇವತ್ತು ಮುಂಬೈಯ `ಅಮರ್ ಜವಾನ್' ದಾಳಿಯ ಪೊಟೋವನ್ನು ಹಿಡಿದು ದೇಶಭಕ್ತಿ ಪ್ರದರ್ಶಿಸುತ್ತಿರುವ ಎಷ್ಟು ಮಂದಿ ಮಾತಾಡಿದ್ದಾರೆ? ಲೂಧಿಯಾನ ಜಿಲ್ಲೆಯ ಅಕಾಲ್‍ಘರ್(ಪೂರ್ವ ಪಂಜಾಬ್)ನಲ್ಲಿ ಮಸೀತ್ ವಾಲಾ ಗುರುದ್ವಾರ್ (ಗುರುದ್ವಾರವಾಗಿ ಬದಲಿಸಲಾದ ಮಸೀದಿ) ಇವತ್ತೂ ಇದೆ. ರಜಪೂತನ್ ದೆ ಗಾಲಿ (ರಜಪೂತ್ ಮುಸ್ಲಿಮರ ಬೀದಿ) ಮತ್ತು ತಾರು ಶಾ ದ ತೋಬಾ (ಸಂತ ತಾರೂ ಶಾ ಅವರ ಕೆರೆ) ಇದೆ. (ದಿ ಹಿಂದೂ, ಆಗಸ್ಟ್ 15, 2012) ಇಲ್ಲಿ ಮುಸ್ಲಿಮರೇ ಇಲ್ಲ.ಅವರನ್ನು ನಿರ್ಮೂಲನಗೊಳಿಸಲಾಗಿದೆ. ಆದರೆ ಯಾವನೋ ಒಬ್ಬ ಘಸ್ನಿಯೋ ಘೋರಿಯೋ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದ ಎಂದು ಹೇಳುತ್ತಾ ಮುಸ್ಲಿಮರನ್ನೆಲ್ಲ ಅಸಹಿಷ್ಣುಗಳು ಎಂಬಂತೆ ಬಿಂಬಿಸುವ ಮಂದಿಯೆಲ್ಲಾ ಈ ಬಗ್ಗೆ ಯಾಕೆ ಮಾತನ್ನೇ ಆಡುತ್ತಿಲ್ಲ? ನಿಜವಾಗಿ, ನಮಾಝ್ ಮಾಡುವವರು ಇದ್ದಾಗ್ಯೂ ಒಂದು ಮಸೀದಿಯನ್ನು ಬಲವಂತದಿಂದ ದೇವಾಲಯವಾಗಿಯೋ ಗುರುದ್ವಾರವಾಗಿಯೋ ಬದಲಿಸುವುದು ಅಥವಾ ದೇವಾಲಯವನ್ನು ಬಲವಂತದಿಂದ ಮಸೀದಿಯಾಗಿಯೋ ಗುರುದ್ವಾರವಾಗಿಯೋ ಮಾಡುವುದು ಎರಡೂ ಕ್ರೌರ್ಯವೇ. ಆದ್ದರಿಂದಲೇ ಬಾಮಿಯಾನದಲ್ಲಿ ಬುದ್ಧ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಕೃತ್ಯ ಮನುಷ್ಯ ವಿರೋಧಿಯಾಗುವುದು. ಇತರರ ಆರಾಧ್ಯರನ್ನು ಧ್ವಂಸ ಮಾಡುವುದು ಬಿಡಿ, ಅವುಗಳ ಬಗ್ಗೆ ನಿಂದನೆಯ ಮಾತು ಕೂಡ ಆಡಬಾರದು ಎಂದು ಪವಿತ್ರ ಕುರ್‍ಆನ್ (22: 40) ಹೇಳಿರುವಾಗ, ಲಕ್ನೋದ ಪ್ರತಿಭಟನಾಕಾರರು ಬುದ್ಧ ಪ್ರತಿಮೆಗೆ ಹಾನಿ ಮಾಡಿರುವುದು ಹೇಗೆ ಸಮರ್ಥನೀಯವಾಗುತ್ತದೆ?
         ಅಂದಹಾಗೆ, ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಇದು ಮೊದಲೇನೂ ಅಲ್ಲ..
       ರೈಲ್ವೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಿಹಾರದ ವಿದ್ಯಾರ್ಥಿಗಳ ಮೇಲೆ ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕಾರ್ಯಕರ್ತರು 2008 ಆಕ್ಟೋಬರ್ 20ರಂದು ಮುಂಬೈಯಲ್ಲಿ ದಾಳಿ ನಡೆಸುತ್ತಾರೆ. ಅದರಿಂದಾಗಿ ಬಿಹಾರದ ಪವನ್ ಕುಮಾರ್ ಅನ್ನುವ ವಿದ್ಯಾರ್ಥಿ ಸಾವಿಗೀಡಾಗುತ್ತಾನೆ. ಠಾಕ್ರೆಯನ್ನು ಬಂಧಿಸಲಾಗುತ್ತದೆ. ಇದನ್ನು ಖಂಡಿಸಿ ಕಲ್ಯಾಣ್ ಗ್ರಾಮದಲ್ಲಿ ನಡೆಸಲಾದ ಪ್ರತಿಭಟನೆಗೆ ನಾಲ್ವರು ಬಲಿಯಾಗುತ್ತಾರೆ. 2010 ಡಿಸೆಂಬರ್‍ನಲ್ಲಿ ಶಿವಸೇನೆಯು ಪುಣೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಪೊಲೀಸರು ಸೇನಾ ನಾಯಕರ ದೂರವಾಣಿಯನ್ನು ಕದ್ದಾಲಿಸುತ್ತಾರೆ. `ಗುಂಪು ಸೇರಿಸಿ, ಬಸ್‍ಗಳನ್ನು ಸುಡು, ಟಿ.ವಿ ಚಾನೆಲ್‍ಗಳಿಗೆ ಮಾಹಿತಿ ನೀಡು..' ಎಂದು ಶಿವಸೇನೆಯ ವಿಧಾನ ಪರಿಷತ್ತಿನ ಸದಸ್ಯರಾಗಿರುವ ನೀಲಮ್ ಘೋರೆಗೆ ಉದ್ಧವ್ ಠಾಕ್ರೆಯ ಸಹಾಯಕನಾಗಿದ್ದ (ಪಿ.ಎ.) ಮಿಲಿಂದ್ ನಾರ್ವೇಕರ್ ನಿರ್ದೇಶನ ನೀಡುತ್ತಿರುವುದು ಆ ಮೂಲಕ ಪತ್ತೆಯಾಗುತ್ತದೆ. (ದಿ ಹಿಂದೂ, ಆಗಸ್ಟ್ 15, 2012). ಬಹುಶಃ ಆಝಾದ್ ಮೈದಾನದಲ್ಲಿ ಮುಸ್ಲಿಮರ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿ ಕಳೆದ ವಾರ ರಾಜ್ ಠಾಕ್ರೆ ಪ್ರತಿಭಟನೆ ಹಮ್ಮಿಕೊಂಡಾಗ ಇವೆಲ್ಲ ನೆನಪಿರಲಿಲ್ಲವೋ ಏನೋ?
      ಆದರೆ..
      ಆಝಾದ್ ಮೈದಾನದ ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರಶ್ನಿಸಿ ಮುಸ್ಲಿಮ್ ಕಾರ್ಯಕರ್ತನೋರ್ವ ಪ್ರಾಯೋಜಕರ ವಿರುದ್ಧ ಮುಂಬೈ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಮುಸ್ಲಿಮ್ ವಕೀಲರೋರ್ವರು ರಾಜ್ಯ ಹೈಕೋರ್ಟಿನ ಮೆಟ್ಟಿಲೇರಿದ್ದಾರೆ. ಪ್ರಕರಣದ ಕುರಿತಂತೆ ಮುಂಬೈಯ ಮುಸ್ಲಿಮ್ ನಾಯಕರು ಟಿ.ವಿ. ಚಾನೆಲ್‍ಗಳ ಮೂಲಕ ಸಾರ್ವಜನಿಕರ ಕ್ಷಮೆ ಯಾಚಿಸಿದ್ದಾರಲ್ಲದೇ, ಪೊಲೀಸರಿಗೆ ಶರಣಾಗುವಂತೆ ಗಲಭೆಕೋರರಲ್ಲಿ ಮನವಿ ಮಾಡಿದ್ದಾರೆ. ನೀವೇ ಹೇಳಿ, ಮುಂಬೈ ಮತ್ತು ಲಕ್ನೋ ಪ್ರತಿಭಟನೆಗಳನ್ನು ಎತ್ತಿಕೊಂಡು, ಮುಸ್ಲಿಮರನ್ನು ಹೀನಾಯವಾಗಿ ಬಿಂಬಿಸುತ್ತಿರುವ ಬಲಪಂಥೀಯರಲ್ಲಿ ಇಂಥ ಒಂದೇ ಒಂದು ಉದಾಹರಣೆಯಾದರೂ ಇದೆಯೇ? ಗೋಧ್ರಾದಲ್ಲಿ ನಡೆದ ಕರಸೇವಕರ ಸಾವಿಗೆ ಪ್ರತಿಯಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾವಿರಾರು ಮಂದಿಯ ಹತ್ಯೆ ನಡೆಯಿತಲ್ಲ, ಬಂದ್‍ಗೆ ಕರೆ ಕೊಟ್ಟವರು ಈ ವರೆಗೆ ಅದಕ್ಕಾಗಿ ಕ್ಷಮೆ ಯಾಚಿಸಿದ್ದಾರಾ? ಪೊಲೀಸರಿಗೆ ಶರಣಾಗಿ ಎಂದು ಕೊಲೆಗಾರರಿಗೆ ಆದೇಶಿಸಿದ್ದಾರಾ?
       ಹಾಗಂತ, ಮುಸ್ಲಿಮರ ಹಿಂಸಾತ್ಮಕ ಪ್ರತಿಭಟನೆಗಳನ್ನು ಸಮರ್ಥಿಸುವುದಕ್ಕಾಗಿ ಇವನ್ನೆಲ್ಲ ಪುರಾವೆಯಾಗಿ ಮಂಡಿಸುತ್ತಿದ್ದೇನೆ ಅಂದುಕೊಳ್ಳಬೇಡಿ..
       ಈಜಿಪ್ಟನ್ನು ಈ ಹಿಂದೆ ಆಳಿದ್ದ ಫರೋವ ಚಕ್ರವರ್ತಿಯ ಬಗ್ಗೆ ಪವಿತ್ರ ಕುರ್‍ಆನಿನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಆತ ತನ್ನ ಸಾಮ್ರಾಜ್ಯದ ಗಂಡು ಮಕ್ಕಳನ್ನು ಕೊಲ್ಲುತ್ತಿದ್ದ, ಸಮಾಜವನ್ನು ಎರಡು ಪಂಗಡಗಳಾಗಿ ವಿಭಜಿಸಿ ಒಂದನ್ನು ಅವಮಾನಿಸುತ್ತಲೂ ಇನ್ನೊಂದನ್ನು ಗೌರವಿಸುತ್ತಲೂ ಇದ್ದ, ಭೂಮಿಯಲ್ಲಿ ಬಂಡಾಯ ಎದ್ದಿದ್ದ, ಮಹಾ ಅಕ್ರಮಿ ಆಗಿದ್ದ (ಪವಿತ್ರ ಕುರ್‍ಆನ್: 28: 4) ಅವನ ಬಳಿಗೆ ಪ್ರವಾದಿ ಮೂಸಾ(ಅ) (ಮೋಸೆಸ್)ರನ್ನು ಹೋಗುವಂತೆ ಮತ್ತು ಅನ್ಯಾಯ ಮಾಡಬೇಡವೆಂದು ಉಪದೇಶಿಸುವಂತೆ ಸೃಷ್ಟಿಕರ್ತನು ಆಜ್ಞಾಪಿಸುತ್ತಾನೆ. ಆದರೆ, ಆತನೊಂದಿಗೆ ಮಾತಾಡುವಾಗ ಮೃದುವಾಗಿ ಮಾತಾಡಬೇಕು (ಪವಿತ್ರ ಕುರ್‍ಆನ್: 20: 40) ಎಂದೂ ಆದೇಶಿಸುತ್ತಾನೆ. ಓರ್ವ ಅಕ್ರಮಿ ವ್ಯಕ್ತಿಯೊಂದಿಗೆ ಮಾತಾಡುವಾಗಲೂ ನಿಮ್ಮ ಭಾಷೆ, ವರ್ತನೆ ಅಕ್ರಮ ರೂಪದಲ್ಲಿರಬಾರದು ಎಂದು ಕುರ್‍ಆನ್ ಕಲಿಸುವಾಗ, ಮುಸ್ಲಿಮರ ಪ್ರತಿಭಟನೆಗಳು ಹಿಂಸಾತ್ಮಕವಾಗುವುದಾದರೂ ಏಕೆ? ಅಸ್ಸಾಮ್ ಇಲ್ಲವೇ ಮ್ಯಾನ್ಮಾರ್‍ನಲ್ಲಿ ಅನ್ಯಾಯವಾಗುತ್ತಿದೆಯೆಂದು ಹೇಳಿ ಮುಂಬೈಯಲ್ಲೋ ಲಕ್ನೋದಲ್ಲೋ ಸಾರ್ವಜನಿಕರ ಮೇಲೆ ದಾಳಿ ಮಾಡುವುದು, ಸೊತ್ತುಗಳಿಗೆ ಹಾನಿ ಮಾಡುವುದನ್ನು ಯಾಕೆ ಸಹಿಸಿಕೊಳ್ಳಬೇಕು? ಪ್ರತಿಭಟನೆಗಳೆಂಬುದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಇರುವ ಮಾರ್ಗಗಳೇ ಹೊರತು ಹಲ್ಲೆಗೆ, ತೋಚಿದಂತೆ ನಡಕೊಳ್ಳುವುದಕ್ಕೆ ಇರುವ ಪರವಾನಿಗೆ ಅಲ್ಲವಲ್ಲ. ಇವತ್ತು ಈ ಪ್ರತಿಭಟನೆಗಳನ್ನು ಎತ್ತಿಕೊಂಡು ಪಕ್ಕಾ ಕೋಮುವಾದಿಗಳೂ  ಮುಸ್ಲಿಮರನ್ನು ಹೀಗಳೆಯುತ್ತಿದ್ದಾರಲ್ಲ, ಅಸ್ಸಾಮ್ ಮತ್ತು ಮ್ಯಾನ್ಮಾರ್‍ನ ಬದಲು ಇವೇ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿದ್ದಾರಲ್ಲ, ಇದಕ್ಕೆ ಯಾರು ಹೊಣೆ?
      ಮುಸ್ಲಿಮರಿಂದ ಸಣ್ಣ ಪ್ರಮಾದವಾದರೂ ಅದನ್ನು ಧರ್ಮದ ತಪ್ಪೆಂಬಂತೆ ಮತ್ತು ಇಡೀ ಮುಸ್ಲಿಮ್ ಸಮುದಾಯವೇ ಅದಕ್ಕೆ ಹೊಣೆಯೆಂಬಂತೆ ಬಿಂಬಿಸುವ ಶ್ರಮ ಇವತ್ತು ಈ ದೇಶದಲ್ಲಿ  ಒಂದು ವರ್ಗದಿಂದ ನಡೆಯುತ್ತಲೇ ಇದೆ. ಇಂಥ ಹೊತ್ತಲ್ಲಿ ಮುಸ್ಲಿಮರ ಆಲೋಚನೆ, ಮಾತು, ವರ್ತನೆಗಳೆಲ್ಲ ಅತ್ಯಂತ ಪಕ್ವ ರೂಪದಲ್ಲಿರಬೇಕು. ಜಗತ್ತಿನಲ್ಲಿರುವ ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಪರಸ್ಪರ ಸಹೋದರರು (ಪವಿತ್ರ ಕುರ್‍ಆನ್: 49:13) ಎಂದು ನಂಬುವ ಮುಸ್ಲಿಮರ ಪಾಲಿಗೆ ಪಾಕಿಸ್ತಾನದಲ್ಲಿ ಅನ್ಯಾಯಕ್ಕೆ ಒಳಗಾಗುವ ಹಿಂದೂವಿನ ನೋವೂ ಅವರದೇ ನೋವಾಗಬೇಕು. ಮ್ಯಾನ್ಮಾರ್‍ನ ಮುಸ್ಲಿಮರ ನೋವು ಅವರದೇ ನೋವು. ಇತಿಯೋಪಿಯಾದ ಬಡ ಮನುಷ್ಯರ ಹಸಿವೂ ತಮ್ಮದೇ ಹಸಿವಾಗಬೇಕು.. ಆದ್ದರಿಂದ ಮ್ಯಾನ್ಮಾರ್ ಎಂದಲ್ಲ ಜಗತ್ತಿನ ಎಲ್ಲೇ ಆಗಲಿ ಮನುಷ್ಯರ ಮೇಲೆ ಅನ್ಯಾಯ ಆಗುತ್ತಿದ್ದರೆ ಅದರ ಬಗ್ಗೆ ಜನಜಾಗೃತಿ ಮೂಡಿಸುವ, ಪ್ರತಿಭಟಿಸುವ ಹಕ್ಕು ಯಾವಾಗಲೂ ಇರುತ್ತದೆ. ಟಿಬೆಟ್‍ನಲ್ಲಿ ಚೀನಾದ ದೌರ್ಜನ್ಯವನ್ನು ಖಂಡಿಸಿ ಭಾರತದಲ್ಲಿರುವ ಟಿಬೆಟಿಯನ್ನರು ಪ್ರತಿಭಟಿಸುವುದು, ತಮಿಳರ ಮೇಲೆ ಲಂಕಾ ಸರಕಾರ ಎಸಗುತ್ತಿರುವ ಕ್ರೌರ್ಯವನ್ನು ಭಾರತದಲ್ಲಿರುವ ತಮಿಳರು ಖಂಡಿಸುವುದೆಲ್ಲ ಈ ಮನುಷ್ಯ ಪ್ರೇಮದ ಆಧಾರದಲ್ಲೇ. ಒಂದು ವೇಳೆ ಈ ಪ್ರಜ್ಞೆ ಸತ್ತು ಹೋದರೆ ಮತ್ತು ಅನ್ಯಾಯವನ್ನೂ ಮುಸ್ಲಿಮ್, ಹಿಂದೂ ಎಂದು ವರ್ಗೀಕರಿಸಿ ಬಿಟ್ಟರೆ ಮತ್ತೆ ಮನುಷ್ಯರು ಅಂತ ಗುರುತಿಸಿಕೊಳ್ಳುವುದಕ್ಕೆ ನಮಗೆ ಅರ್ಹತೆಯಾದರೂ ಏನಿದೆ? ಅನ್ಯಾಯಕ್ಕೆ ಧರ್ಮ ಇಲ್ಲ ಎಂದಾದರೆ ಅದನ್ನು ಖಂಡಿಸುವಾಗ ಧರ್ಮ ಅಡ್ಡ ಬರಬಾರದು ಅಲ್ಲವೇ? ಒಳಿತಿನ ಮತ್ತು ಮನುಷ್ಯ ಪ್ರೇಮದ ಕೆಲಸದಲ್ಲಿ ಎಲ್ಲರೊಂದಿಗೆ ಸಹಕರಿಸಿ ಎಂದು ಪವಿತ್ರ ಕುರ್‍ಆನ್ (5: 2) ಹೇಳಿರುವಾಗ, ಮುಸ್ಲಿಮರು ಅದರ ವಿರೋಧಿಯಾಗಲು ಸಾಧ್ಯವೇ? ನಿಜವಾಗಿ ಇವತ್ತು ಪ್ರತಿಭಟನೆಗಳೆಲ್ಲಾ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿದ್ದರೆ, ಅದು ವಿಭಜಿಸಿದವರ ತಪ್ಪೇ ಹೊರತು ಧರ್ಮದ್ದಲ್ಲ. ಯಾವಾಗ ಆ ವಿಭಜನೆಯನ್ನು ಮೀರಿ ಸರ್ವರಿಗೂ ಒಂದುಗೂಡಲು ಸಾಧ್ಯವಾಗುತ್ತದೋ ಆಗ ಅಸ್ಸಾಮ್‍ಗಳು, ಗುಜರಾತ್‍ಗಳು ಖಂಡಿತ ಇಲ್ಲವಾದೀತು. ನಿಜವಾಗಿ, ಮನುಷ್ಯ ವಿರೋಧಿಗಳನ್ನು, ವಿಭಜನವಾದಿಗಳನ್ನು ಸೋಲಿಸುವುದಕ್ಕೆ ಮನುಷ್ಯ ಪ್ರೇಮಿಗಳ ಬಳಿಯಿರುವ ಆಯುಧ ಇದೊಂದೇ. ಆದ್ದರಿಂದಲೇ ಮುಂಬೈ ಮತ್ತು ಲಕ್ನೋ ಪ್ರತಿಭಟನೆಗಳ ಬಗ್ಗೆ ವಿಷಾದ ಮೂಡುವುದು.

Saturday, August 18, 2012

ಅವರು ನಿರಾಶ್ರಿತರು,ಇವರು ಮಾತ್ರ ಅಕ್ರಮ ವಲಸಿಗರೇ?

2012 ಜುಲೈ 6
      ಅಸ್ಸಾಮ್‍ನ ಕೊಕ್ರಾಜಾರ್ ಜಿಲ್ಲೆಯಲ್ಲಿ ಶಂಕಿತ ಬೋಡೋಗಳು ಇಬ್ಬರು ಮುಸ್ಲಿಮರನ್ನು ಗುಂಡಿಟ್ಟು ಕೊಲ್ಲುತ್ತಾರಲ್ಲದೇ ಮೂವರನ್ನು ಗಾಯಗೊಳಿಸುತ್ತಾರೆ.
ಜುಲೈ 19
       ಆಲ್ ಅಸ್ಸಾಮ್ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್‍ನ (AAMSU) ಇಬ್ಬರು ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಲಾಗುತ್ತದೆ.
ಜುಲೈ 20
         ಬೋಡೋ ಲಿಬರೇಶನ್ ಟೈಗರ್ಸ್ ನ  (BLT - ಇದು ಮಾಜಿ ಉಗ್ರವಾದಿ ಗುಂಪು) ನಾಲ್ವರು ಕಾರ್ಯಕರ್ತರು ಸಂಜೆ ಎರಡು ಬೈಕುಗಳನ್ನೇರಿ ಮುಸ್ಲಿಮರು ಅಧಿಕವಿರುವ ಜಾಯ್‍ಪುರಿಗೆ ಬರುತ್ತಾರೆ. ರಮಝಾನ್‍ನ ಆರಂಭದ ದಿನವಾದ್ದರಿಂದ ಮುಸ್ಲಿಮರು ನಮಾಝ್‍ಗಾಗಿ ಒಟ್ಟುಗೂಡಿದ್ದರು. ಮುಸ್ಲಿಮರ ಗುಂಪನ್ನು ಕಂಡು ಹೆದರಿದ  BLT  ಕಾರ್ಯಕರ್ತರು, ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದು, ಅದಾಗಲೇ ಬಂದೂಕುಧಾರಿಗಳ ದಾಳಿಗೆ ಒಳಗಾಗಿದ್ದ ಮುಸ್ಲಿಮರಲ್ಲಿ ಆತಂಕ ಮೂಡಿಸುತ್ತದೆ. ತಮ್ಮ ಮೇಲೆ ಆಕ್ರಮಣ ನಡೆಸಲು ಬೋಡೋಗಳು ಬಂದಿದ್ದಾರೆಂದು ತಿಳಿದು ಯುವಕರನ್ನು ಥಳಿಸುತ್ತಾರೆ. ಮಾತ್ರವಲ್ಲ, ನಾಲ್ವರು ಯುವಕರೂ ಸಾವಿಗೀಡಾಗುತ್ತಾರೆ.
ಜುಲೈ 21
          ಸಾವಿಗೀಡಾದ ನಾಲ್ವರು ಯುವಕರನ್ನೂ ಮೆರವಣಿಗೆಯಲ್ಲಿ ಜಾಯ್‍ಪುರಿಯಿಂದ ಕೊಕ್ರಾಜಾರ್‍ಗೆ ತರಲಾಗುತ್ತದೆ. ಸ್ಥಳೀಯ ಟಿ.ವಿ. ಚಾನೆಲ್‍ಗಳೆಲ್ಲಾ ಘಟನೆಯನ್ನು ಲೈವ್ ಆಗಿ ತೋರಿಸುತ್ತದಲ್ಲದೇ ಇಡೀ ಘಟನೆಯನ್ನು ಮುಸ್ಲಿಮ್ ವರ್ಸಸ್ ಬೋಡೋಗಳು ಎಂಬ ಧಾಟಿಯಲ್ಲಿ ಸುದ್ದಿ ಬಿತ್ತರಿಸುತ್ತವೆ. ಚಾವಡಿ ಚರ್ಚೆಗಳನ್ನು ನಡೆಸುತ್ತವೆ. ಗೋಧ್ರಾದಲ್ಲಿ ಸಾವಿಗೀಡಾದ ಕರಸೇವಕರನ್ನು ಅಹ್ಮದಾಬಾದ್‍ಗೆ ಮೆರವಣಿಗೆಯಲ್ಲಿ ತಂದಂತೆ ಈ ಪ್ರಕರಣವನ್ನೂ ಬಿಂಬಿಸಲಾಗುತ್ತದೆ. ಅವತ್ತಿನಿಂದಲೇ ಗಲಭೆ ಪ್ರಾರಂಭವಾಗುತ್ತದೆ.
       ಅಷ್ಟಕ್ಕೂ, ಅಸ್ಸಾಮನ್ನು 50:50 ಆಗಿ ವಿಭಜಿಸಿ (Divide  Assam - 50:50) ಎಂಬ ಬೇಡಿಕೆಯೊಂದಿಗೆ 23 ವರ್ಷಗಳ ಕಾಲ ಸಶಸ್ತ್ರ ಹೋರಾಟ ನಡೆಸಿದವರು ಯಾರು, ಮುಸ್ಲಿಮರೇ? 1993,  96 ಮತ್ತು 98ರಲ್ಲಿ ಬೋಡೋ ಪ್ರದೇಶದಿಂದ ಸಾವಿರಾರು ಬಂಗಾಳಿ ಹಿಂದೂಗಳು ಮತ್ತು ಆದಿವಾಸಿಗಳನ್ನು ಹೊರದಬ್ಬಲಾಯಿತಲ್ಲ, ಅವರೇನು ಬಂಗ್ಲಾದೇಶಿ ನುಸುಳುಕೋರರಾಗಿದ್ದರೆ? ಈಗಿನ ಗಲಭೆಯನ್ನು ಸ್ವದೇಶಿ ಮತ್ತು ವಿದೇಶಿ ಎಂದು ವಿಭಜಿಸುವವರಿಗೆ ಬೋಡೋಗಳ ಬಗ್ಗೆ, ಅಲ್ಲಿನ ಪರಿಸ್ಥಿತಿಯ ಬಗ್ಗೆ ಎಷ್ಟು ಗೊತ್ತಿದೆ? ಟಿ.ವಿ.ಗಳಲ್ಲಿ ಚರ್ಚಿಸುವ ಮತ್ತು ಪತ್ರಿಕೆಗಳಲ್ಲಿ ಅಂಕಣ ಬರೆಯುವವರೆಲ್ಲಾ ಇಡೀ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚುತ್ತಿರುವುದು ಎಷ್ಟು ಸರಿ?
         ಪ್ರತ್ಯೇಕ ಬೋಡೋ ರಾಜ್ಯವನ್ನು ಆಗ್ರಹಿಸಿ ಬುಡಕಟ್ಟು ಜನಾಂಗವಾದ ಬೋಡೋಗಳು 1982ರಲ್ಲಿ ಚಳವಳಿ ಪ್ರಾರಂಭಿಸುತ್ತಾರೆ. 1987 ಮಾರ್ಚ್ 2ರಂದು ಬೋಡೋ ಲಿಬರೇಶನ್ ಟೈಗರ್ಸ್ (BLT) ಎಂಬ ಉಗ್ರವಾದಿ ತಂಡವನ್ನು ಕಟ್ಟಿ, ಹಿಂಸೆ, ದೌರ್ಜನ್ಯ, ಕೊಲೆಗಳನ್ನು ನಡೆಸಲು ಪ್ರಾರಂಭಿಸುತ್ತಾರೆ. ಬಂದೂಕು ಸಿಡಿಯಲಾರಂಭಿಸುತ್ತದೆ. ಕೇಂದ್ರ ಸರಕಾರ ಮತ್ತು ಉಗ್ರವಾದಿಗಳ ಮಧ್ಯೆ ಒಂದಕ್ಕಿಂತ ಹೆಚ್ಚು ಬಾರಿ ಮಾತುಕತೆಗಳು ನಡೆಯುತ್ತವೆ. ಕೊನೆಗೆ, ಪ್ರತ್ಯೇಕ ರಾಜ್ಯದ ಬದಲು ಸ್ವಯಂ ಆಡಳಿತ ನಡೆಸಲು ಅವಕಾಶ ಇರುವ ಬೋಡೋ ಸ್ವಾಯತ್ತ ಮಂಡಳಿ (Bodo Territorial Autonomous District - BTAD )ಯ ರಚನೆಗೆ ಉಗ್ರರು ಒಪ್ಪಿಕೊಳ್ಳುತ್ತಾರಲ್ಲದೆ 2003ರಲ್ಲಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಹೀಗೆ, ಅಸ್ಸಾಮ್‍ನ 27 ಜಿಲ್ಲೆಗಳಲ್ಲಿ 4 ಜಿಲ್ಲೆಗಳನ್ನು ಒಳಗೊಂಡ ಬೋಡೋ ಸ್ವಾಯತ್ತ ಮಂಡಳಿಯನ್ನು (BTAD) ರಚಿಸಿ ಕೇಂದ್ರ ಸರಕಾರ ಕೈತೊಳೆದುಕೊಳ್ಳುತ್ತದೆ.
ಕೊಕ್ರಾಜಾರ್
ಬಕ್ಸಾ
ಚಿರಾಗ್
ಉದಲ್‍ಗುರಿ
        ಬಿಜೆಪಿ ಆಟ ಆಡಿದ್ದೇ ಇಲ್ಲಿ. ಈ ಮೇಲಿನ ನಾಲ್ಕು ಜಿಲ್ಲೆಗಳಲ್ಲಿ ಬೋಡೋಗಳ ಸಂಖ್ಯೆ ಬರೇ 29%. ಉಳಿದಂತೆ ಮುಸ್ಲಿಮರು, ಆದಿವಾಸಿಗಳು, ಕಾಚ್-ರಾಜ್‍ಬೊಂಗಿಸ್‍ನಂಥ ಇತರರು 71% ಇದ್ದಾರೆ. ಹೀಗಿರುತ್ತಾ ಮುಸ್ಲಿಮರೇ ಅಧಿಕ ಇರುವ ಪ್ರದೇಶಗಳನ್ನು ಬೋಡೋ ಸ್ವಾಯತ್ತ ಮಂಡಳಿಯ (BTAD) ವ್ಯಾಪ್ತಿಗೆ ಒಳಪಡಿಸಿದ್ದೇಕೆ? ಬೋಡೋಗಳನ್ನು ಬೋಡೋಗಳೇ ಆಳಲಿ, ಆದರೆ ಮುಸ್ಲಿಮರನ್ನು ಮತ್ತು ಇತರರನ್ನು ಅವರ ಜೊತೆ ಸೇರಿಸಿರುವುದರ ಹಿಂದಿನ ಉದ್ದೇಶ ಏನಿತ್ತು? ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕನಿಷ್ಠ ಮಾತು ಕತೆಯಲ್ಲೂ ಸೇರಿಸದೆ ಏಕಾಏಕಿ ಅವರ ಪ್ರದೇಶವನ್ನು ಬೋಡೋಗಳೊಂದಿಗೆ ಸೇರಿಸಿದ್ದನ್ನು ಪ್ರಾಮಾಣಿಕ ಅಂತ ಹೇಗೆ ಕರೆಯುವುದು? ಆದ್ದರಿಂದಲೇ ಆ ವ್ಯಾಪ್ತಿಯಲ್ಲಿ ಬರುವ ಆದಿವಾಸಿಗಳು, ಬಂಗಾಳಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟು ಸೇರಿ ತಮ್ಮನ್ನು ಬೋಡೋಲ್ಯಾಂಡ್‍ನಿಂದ ಪ್ರತ್ಯೇಕಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಬೋಡೋಗಳು 50%ಕ್ಕಿಂತ ಕಡಿಮೆ ಇರುವ ಪ್ರದೇಶಗಳನ್ನು ಬೋಡೋ ಲ್ಯಾಂಡ್‍ಗೆ ಸೇರಿಸಬೇಡಿ ಎಂದು ಅವರು ಒತ್ತಾಯಿಸಿದ್ದರು. ಇದಕ್ಕೆ ಕಾರಣವೂ ಇತ್ತು. ಬೋಡೋಲ್ಯಾಂಡನ್ನು ಆಳುತ್ತಿರುವುದು ಬೋಡೋ ಪೀಪಲ್ಸ್ ಫ್ರಂಟ್ (BPF) ಅನ್ನುವ ರಾಜಕೀಯ ಪಕ್ಷ. 12 ಶಾಸಕರಿರುವ ಈ ಪಕ್ಷ ಅಸ್ಸಾಮ್‍ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿದೆ. ಒಂದು ರೀತಿಯಲ್ಲಿ ಕಾನೂನು ಮತ್ತು ಜಾರಿಯ ಅಧಿಕಾರ ಇರುವುದೇ ಬೋಡೋಗಳ ಕೈಯಲ್ಲಿ. ಹೀಗಿರುತ್ತಾ, ಮುಸ್ಲಿಮರನ್ನು ಅಪರಾಧಿಗಳೆಂಬಂತೆ ಬಿಂಬಿಸುವುದಕ್ಕೆ ಅಡ್ಡಿಯಾದರೂ ಏನಿದೆ? ನಿಜವಾಗಿ ಅಕ್ರಮ ವಲಸಿಗರು ಎಂಬ ಪದಗುಚ್ಚವನ್ನು ಹರಿಯಬಿಟ್ಟಿದ್ದೇ BTAD ಯ ಮುಖ್ಯಸ್ಥ ಹಂಗ್ರಾಮ್ ಮೊಹಿಲಾರಿ. ಕೇಂದ್ರದೊಂದಿಗೆ 1993ರಲ್ಲಿ ನಡೆದ ಒಪ್ಪಂದದ ಬಳಿಕ ಬೋಡೋ ಲಿಬರೇಶನ್ ಟೈಗರ್ಸ್ (BLT) ಸಂಘಟನೆ ವಿಸರ್ಜನೆಗೊಂಡಿದ್ದರೂ ಅದರ ಕಾರ್ಯಕರ್ತರು ಬಂದೂಕನ್ನು ಸರಕಾರಕ್ಕೆ ಇನ್ನೂ ಸಂಪೂರ್ಣವಾಗಿ ಒಪ್ಪಿಸಿಲ್ಲ. ಬೋಡೋಯೇತರರನ್ನು ಸುಲಿಯಲು, ಹಫ್ತಾ ವಸೂಲು ಮಾಡಲು, ದೌರ್ಜನ್ಯಕ್ಕೊಳಪಡಿಸಲು ಇವರು ತಮ್ಮ ಉಗ್ರವಾದಿ ಇಮೇಜನ್ನು ಬಳಸಿಕೊಳ್ಳುತ್ತಲೂ ಇದ್ದಾರೆ. ಹೀಗಿದ್ದೂ ಇವೆಲ್ಲವನ್ನು ಬಚ್ಚಿಟ್ಟುಕೊಂಡು, ಕೇವಲ ಅಕ್ರಮ ವಲಸೆ ಅನ್ನುವ ಬೆತ್ತವನ್ನು ಮಾಧ್ಯಮಗಳು ಝಳಪಿಸುತ್ತಿರುವುದೇಕೆ? ಬಂಗಾಳಿ ಹಿಂದೂಗಳನ್ನು ಮತ್ತು ಆದಿವಾಸಿಗಳನ್ನು 1993, 96 ಮತ್ತು 98ರಲ್ಲಿ ಹೊರದಬ್ಬಲಾದಾಗ ಬಾಯಿ ಮುಚ್ಚಿಕೊಂಡಿದ್ದ ABVP ಮತ್ತು ಬಿಜೆಪಿಗಳು, ಈಗ ಅಕ್ರಮ ವಲಸೆಯ ಗಿಣಿಪಾಠ ಒಪ್ಪಿಸು ತ್ತಿರುವುದೇಕೆ?
ನಿಜವಾಗಿ, ಬೋಡೋ ಲ್ಯಾಂಡ್ ಸ್ಥಾಪನೆಯಾದ ದಿನದಿಂದಲೇ ತಮ್ಮ ಪ್ರದೇಶದಲ್ಲಿ ಜನಸಂಖ್ಯೆಯನ್ನು ವೃದ್ಧಿಸಲು ಬೋಡೋಗಳು ಯೋಜನೆ ಹಾಕಿಕೊಂಡಿದ್ದರು. ಅದರಂತೆ ಬೋಡೋಯೇತರರನ್ನು ಬೋಡೋಲ್ಯಾಂಡ್‍ನಿಂದ ಹೊರದಬ್ಬಿ ಬೋಡೋಗಳನ್ನು ಬಹುಸಂಖ್ಯಾತ ಗೊಳಿಸುವುದಕ್ಕೆ ಮುಂದಾದರು. 1994, 96 ಮತ್ತು 98ರಲ್ಲಿ ಬೃಹತ್ ಸಂಖ್ಯೆಯಲ್ಲಿ ಬಂಗಾಳಿ ಹಿಂದೂಗಳನ್ನು ಬೋಡೋ ಪ್ರದೇಶದಿಂದ ಹೊರದಬ್ಬಿದರು. 1993ರಲ್ಲಿ ಮುಸ್ಲಿಮರ ವಿರುದ್ಧವೂ ಇಂಥದ್ದೇ ದಾಳಿ ನಡೆಯಿತು. 2008ರಲ್ಲಿ ದರಾಂಗ್  ಮತ್ತು ಉದಲ್‍ಗುರಿ ಪ್ರದೇಶಗಳ ಮುಸ್ಲಿಮರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸಲಾಯಿತು. ಸಾವಿರಾರು ಮಂದಿ ನಿರಾಶ್ರಿತರಾದರು. ಆದರೆ ಹೀಗೆ ಹೊರದಬ್ಬಲ್ಪಟ್ಟವರು ಈಗಲೂ ನಿರಾಶ್ರಿತ ಶಿಬಿರಗಳಲ್ಲೇ ಇದ್ದಾರೆ ಅನ್ನುವುದನ್ನು ಯಾವ ದೇಶ ಭಕ್ತರೂ  ಹೇಳುತ್ತಲೇ ಇಲ್ಲ.
         ಅಂದಹಾಗೆ, ಅಸ್ಸಾಮ್‍ಗೆ ವಲಸೆ ಬಂದವರು ಮುಸ್ಲಿಮರು ಮಾತ್ರವಾ?
     ದೇಶ ವಿಭಜನೆಯಾಗುವುದಕ್ಕಿಂತ ಮೊದಲೇ ಬಂಗಾಲದಿಂದ ಅಸ್ಸಾಮ್‍ಗೆ ಸಾಮೂಹಿಕ ವಲಸೆ ನಡೆದಿತ್ತು. Grow More Food  (ಹೆಚ್ಚು ಉತ್ಪನ್ನಗಳನ್ನು ಬೆಳೆಸಿ) ಎಂಬ ಬ್ರಿಟಿಷ್ ಸರಕಾರದ ಯೋಜನೆಯ ಪ್ರಕಾರ ಅವರೆಲ್ಲಾ ವಲಸೆ ಬಂದಿದ್ದರು. ಚಾ ತೋಟದಲ್ಲಿ ಕೆಲಸ ಮಾಡಲು ಬಿಹಾರದ ಆದಿವಾಸಿಗಳನ್ನು ಬ್ರಿಟಿಷರು ಅಸ್ಸಾಮ್‍ಗೆ ಕರೆ ತಂದಂತೆಯೇ ಬಂಗಾಳಿ ಮಾತಾಡುವ ಮುಸ್ಲಿಮರು ದೇಶ ವಿಭಜನೆಗಿಂತ ಮೊದಲು ತಮ್ಮದೇ ದೇಶದ ಇನ್ನೊಂದು ರಾಜ್ಯಕ್ಕೆ ಕೂಲಿಯಾಳುಗಳಾಗಿ ಬಂದರು. ಅವರಲ್ಲಿ ಹಿಂದೂಗಳೂ ಇದ್ದರು. ತಲೆಮಾರುಗಳಿಂದ ಅವರು ಇವತ್ತು ಅಸ್ಸಾಮಿನಲ್ಲಿದ್ದಾರೆ. ಅವರ ಭಾಷೆ ಅಸ್ಸಾಮಿ. ಸಂಸ್ಕøತಿ ಅಸ್ಸಾಮಿ. ಆದರೆ ಬೋಡೋಗಳು ಮತ್ತು ಬಿಜೆಪಿ ಇವನ್ನೆಲ್ಲಾ ಅಡಗಿಸಿಟ್ಟು, ಲುಂಗಿ ಸುತ್ತುವ, ಬಂಗಾಳಿ ಭಾಷೆ ಗೊತ್ತಿರುವ ಪ್ರತಿಯೊಬ್ಬರನ್ನೂ ಅಕ್ರಮ ವಲಸಿಗ ಅನ್ನುತ್ತಿವೆ. ಅಷ್ಟಕ್ಕೂ, 1971ರ ಜನಗಣತಿಯಂತೆ ಕೊಕ್ರಾಜಾರ್‍ನಲ್ಲಿ 17% ಮುಸ್ಲಿಮರಿದ್ದರು. 81ರಲ್ಲಿ ಜನಗಣತಿಯೇ ನಡೆದಿಲ್ಲ. 91ರಲ್ಲಿ ಅವರ ಸಂಖ್ಯೆ 19.3 ಕ್ಕೇರಿತು. ಆದರೆ 2001-11ರಲ್ಲಿ ಅದು 20.4%ಕ್ಕೆ ತಲುಪಿತು. 2001ರ ಅವಧಿಯಲ್ಲಿ ಕೊಕ್ರಾಜಾರ್‍ನಲ್ಲಿ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಬರೇ 5.19%. ಒಂದು ವೇಳೆ 1991-2001ರ ಅವಧಿಯಲ್ಲಿ ಅಸ್ಸಾಮ್‍ನಲ್ಲಾದ ಒಟ್ಟು ಜನಸಂಖ್ಯಾ ಬೆಳವಣಿಗೆಗೆ ಇದನ್ನು ಹೋಲಿಸಿದರೆ ಜನಸಂಖ್ಯೆಯಲ್ಲಿ 9% ಇಳಿಕೆಯಾದಂತಾಗುತ್ತದೆ. (ದಿ ಹಿಂದೂ: ಆಗಸ್ಟ್ 8, 2012) ಇದು ಸೂಚಿಸುವುದಾದರೂ ಏನನ್ನು? ಬೋಡೋಗಳು ಹೇಳುವಂತೆ ಕೊಕ್ರಾಜಾರ್‍ಗೆ ಅಕ್ರಮ ವಲಸಿಗರು ನುಸುಳಿದ್ದಾರೆಂದರೆ, ಈ ಇಳಿಕೆ ಹೇಗಾಯಿತು? ಬಂದವರೆಲ್ಲಾ ಎಲ್ಲಿಗೆ ಹೋದರು? ಹೀಗಿರುವಾಗ ಮುಸ್ಲಿಮರನ್ನು ವ್ಯವಸ್ಥಿತವಾಗಿ ಮನೆಗಳಿಂದ ಹೊರಕ್ಕಟ್ಟಿ, ಅವರ ಮನೆಗಳಿಗೆ ಬೆಂಕಿಕೊಟ್ಟು, ದಾಖಲೆಗಳನ್ನು ನಾಶ ಮಾಡುವ ಮತ್ತು ಬಳಿಕ ಅಕ್ರಮ ವಲಸಿಗರು ಎಂಬ ಮುದ್ರೆಯೊತ್ತುವ ಷಡ್ಯಂತ್ರ ಇದೇಕೆ ಆಗಿರಬಾರದು? ಹೀಗಿದ್ದರೂ ಮಾಧ್ಯಮಗಳೇಕೆ ಅಸ್ಸಾಮ್ ಮುಸ್ಲಿಮರ ಬಗ್ಗೆ ಅಧ್ಯಯನ ನಡೆಸುತ್ತಿಲ್ಲ? `ಅಸ್ಸಾಮಿನಲ್ಲಿ ಲಕ್ಷಾಂತರ ವಲಸಿಗರನ್ನು ಅನುಮಾನಿತ ಮತದಾರರ (Doutful Voters ) ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅವರನ್ನೆಲ್ಲಾ ಗಡೀಪಾರು ಮಾಡಬೇಕೆಂದು' ಕಳೆದ ಲೋಕಸಭೆಯಲ್ಲಿ ಅಡ್ವಾಣಿ ಹೇಳುವಾಗ ಅವರಲ್ಲಿ 4 ಲಕ್ಷ ಹಿಂದೂಗಳಿದ್ದಾರೆಂಬುದನ್ನು ಯಾವ ಪತ್ರಿಕೆ, ಟಿ.ವಿಯಾದರೂ ಬಹಿರಂಗಪಡಿಸಿತ್ತೇ? 1960ರಲ್ಲಿ ಪೂರ್ವ ಪಾಕಿಸ್ತಾನದಿಂದ ಅಸ್ಸಾಮ್‍ಗೆ ಬಂದ ಇವರನ್ನು ಬಿಜೆಪಿ ನಿರಾಶ್ರಿತರೆಂದು  ಕರೆಯುತ್ತಿದೆ . ಅವರೀಗಲೂ ಅನುಮಾನಿತರ ಪಟ್ಟಿಯಲ್ಲಿದ್ದು, ಮತದಾನಕ್ಕೆ ಅವಕಾಶ ಇಲ್ಲದಿದ್ದರೂ ಅವನ್ನೆಲ್ಲಾ ಮುಚ್ಚಿಟ್ಟು, `ಅಕ್ರಮ ವಲಸಿಗರು' ಎಂದು ಮುಸ್ಲಿಮರನ್ನೇ ಗುರಿ ಮಾಡುತ್ತಿದೆ.  ಯಾಕೆ ಈ ದ್ವಂದ್ವ?  ಅನುಮಾನಿತ ಮತದಾರರು ಮುಸ್ಲಿಮರೆಂದಾದರೆ ಅವರು ಅಕ್ರಮ ವಲಸಿಗರಾಗುವುದೂ ಹಿಂದೂಗಳಾದರೆ ನಿರಾಶ್ರಿತರಾಗುವುದೂ ಏಕೆ? ಈ ಇಬ್ಬಗೆಯ ನೀತಿಗೆ ಏನೆನ್ನಬೇಕು?
         `ಅಕ್ರಮ ವಲಸಿಗರು' ಅನ್ನುವ ಸಂಘ ಪ್ರಣೀತ ಪದಗುಚ್ಚವನ್ನು ತುಟಿಯಲ್ಲಿಟ್ಟು, ಅವಕಾಶ ಸಿಕ್ಕಾಗಲೆಲ್ಲಾ ಅಸ್ಸಾಮ್ ಮುಸ್ಲಿಮರ ಮೇಲೆ ಉಗುಳುವ ಮಂದಿಗೆ ಬಹುಶಃ ಈ ಸತ್ಯ ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಹೇಳುತ್ತಿಲ್ಲ, ಅಷ್ಟೇ.

Tuesday, July 31, 2012

ಹಾಗಂತ ಎಲ್ಲರಿಗೂ ಶಿರಿನ್ ಆಗಲು ಸಾಧ್ಯವಿಲ್ಲವಲ್ಲ?

  ಶಿರಿನ್
ಈ ಜಗತ್ತಿನಲ್ಲಿ ಮಹಿಳಾ ಸಮಾನತೆಯ ಬಗ್ಗೆ ಮಾತಾಡುವ, ಮಹಿಳೆ ಹಾಗೆ, ಹೀಗೆ, ದೇವತೆ ಎಂದೆಲ್ಲಾ ಅಪಾರ ಕಕ್ಕುಲಾತಿ ತೋರುವವರನ್ನೆಲ್ಲಾ ಒಂದೇ ಏಟಿಗೆ ನಂಬಬೇಡಿ. ಅವರು ಫೆಮಿನಿಸ್ಟ್ ಗಳೋ  ಅಥವಾ ಸಿನಿಮಾ ನಿರ್ದೇಶಕರು, ಹೋರಾಟಗಾರರೋ ಯಾರೇ ಆಗಿರಬಹುದು. ಅವರಲ್ಲಿ ಹೆಚ್ಚಿನವರು ಹೆಣ್ಣಿನ ಮುಖ, ಮೂಗು, ತುಟಿ, ಕಣ್ಣು, ಬಾಯಿ, ಕೆನ್ನೆ, ಕೂದಲು, ಕಾಲು, ಕೈ..ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ಹೆಣ್ಣಿನ ಪರ ಅಥವಾ ವಿರುದ್ಧ ನಿಲ್ಲುತ್ತಾರೆಂಬುದನ್ನು ದಯವಿಟ್ಟು ನಂಬಿ. ಆಧುನಿಕ ಮನುಷ್ಯರಲ್ಲಿ ಹೆಚ್ಚಿನವರು ಇಷ್ಟಪಡುವುದು ಹೆಣ್ಣು ಎಂಬ ಜೀವಿಯನ್ನಲ್ಲ, ಅವಳ ಸೌಂದರ್ಯವನ್ನು. ನಾನು ಇಷ್ಟು ಒತ್ತು ಕೊಟ್ಟು ಹೇಳಲು ಕಾರಣ ಏನೆಂದರೆ, ಅದು ನನ್ನ ಮುಖ. 14 ವರ್ಷಗಳ ಹಿಂದೆ ನನ್ನ ಗೆಳೆಯರ ಬಳಗದಲ್ಲಿದ್ದವರು ಮತ್ತು ನನ್ನಲ್ಲಿ ಮಾತಾಡಲು ಆಸಕ್ತಿ ತೋರುತ್ತಿದ್ದವರಲ್ಲಿ ಹೆಚ್ಚಿನವರು ಇವತ್ತು ನನ್ನ ಜೊತೆಗಿಲ್ಲ. ಯಾವಾಗ ನನ್ನ ಮುಖಕ್ಕೆ ಆಸಿಡ್ ದಾಳಿಯಾಯಿತೋ ಆಗಿನಿಂದಲೇ ಅವರೆಲ್ಲರ ನಿಜ ಬಣ್ಣವೂ ಬಯಲಾಯಿತು..
         1998 ಮೇ 28ರಂದು ಆಸಿಡ್ ದಾಳಿಗೆ ಒಳಗಾದ ಶಿರಿನ್ ಜುವಾಲೆಯ ಅನುಭವಗಳನ್ನು ಓದುವಾಗ ಹೃದಯ ಭಾರವಾಗುತ್ತದೆ. ಕಣ್ಣು ಒದ್ದೆಯಾಗುತ್ತದೆ..
          ಒಂದು ದಿನ ನೀವು ಅನಿರೀಕ್ಷಿತವಾಗಿ ಆಸಿಡ್ ದಾಳಿಗೊಳಗಾಗುತ್ತೀರಿ ಮತ್ತು ಮುಖ ವಿಕಾರವಾಗಿ ಬಿಡುತ್ತದೆ ಎಂದಿಟ್ಟುಕೊಳ್ಳಿ. ಆ ಬಳಿಕವೂ ನೀವು ಈ ಹಿಂದಿನಂತೆಯೇ ಮದುವೆಗೋ ಮುಂಜಿಗೋ ಸಲೀಸಾಗಿ ಹೋಗಿ ಬಿಡಬಹುದೆಂದು ಅಂದುಕೊಂಡಿದ್ದೀರಾ? ನಿಮ್ಮ ಗೆಳತಿಯರು ಹತ್ತಿರ ಕುಳ್ಳಿರಿಸಬಹುದು, ಪಾರ್ಟಿಗೋ ಶಾಪಿಂಗ್ ಗೋ  ಅಥವಾ ಇನ್ನಾವುದೇ ಕಾರ್ಯಕ್ರಮಕ್ಕೆ ಹೋಗುವಾಗ, `ಬಾರೇ ಹೋಗೋಣ' ಎಂದು ಜೊತೆಗೆ ಕರಕೊಳ್ಳಬಹುದೆಂದು ನಂಬಿದ್ದೀರಾ? ನಿಮ್ಮ ಉಪಸ್ಥಿತಿ ಅವರಿಗೆ ಕಿರಿಕ್ ಅನ್ನಿಸದೆಂದು ಭಾವಿಸಿದ್ದೀರಾ? ನಿಜವಾಗಿ, ಒಂದು ಮುಖದ ಬೆಲೆ ಗೊತ್ತಾಗುವುದು ಅದು ವಿಕಾರಗೊಂಡಾಗಲೇ. ನಿಮ್ಮನ್ನು ವ್ಯಂಗ್ಯದ ಮಾತುಗಳು ಚುಚ್ಚುತ್ತವೆ. ತಮಾಷೆಗಳು ಕೇಳಿ ಬರುತ್ತವೆ. ಎಲ್ಲಿಗೆ ಹೋಗುವುದಿದ್ದರೂ ನಿಮ್ಮನ್ನು ಜೊತೆಗೂಡಿಸಿಕೊಂಡು ಹೋಗುತ್ತಿದ್ದವರೇ ನಿಮ್ಮಿಂದ ತಪ್ಪಿಸಿಕೊಂಡು ಹೋಗಲು ಶ್ರಮ ಪಡುತ್ತಾರೆ. ಪಾರ್ಟಿಗೆ ನೀವು ಹೋದರೆ ಪಾರ್ಟಿಯ ಸೌಂದರ್ಯ ಹಾಳಾಗುತ್ತದೆ ಎಂದು ಭಾವಿಸುತ್ತಾರೆ. ಬೇಡ, ಎಲ್ಲದಕ್ಕೂ ಅವರನ್ನೇ ಅಪರಾಧಿಗಳು ಎಂದು ಹೇಗೆ ಹೇಳುವುದು? ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ, ವಿಚಾರ ವಿನಿಮಯ ನಡೆಸುವುದಕ್ಕೆ, ತಿನ್ನಲು, ಕುಡಿಯಲು, ನೋಡಲು, ಉಸಿರಾಡಲು.. ಎಲ್ಲದಕ್ಕೂ ಮುಖ ಮುಖ್ಯವೇ ಅಲ್ಲವೇ? ಮುಖವನ್ನು ನೋಡಿ ನಾವು ವ್ಯಕ್ತಿಯನ್ನು ಅಳೆಯುತ್ತೇವಲ್ಲ. ಮುಖದಿಂದ ಸೌಂದರ್ಯವನ್ನು ಲೆಕ್ಕ ಹಾಕುತ್ತೇವಲ್ಲ. ಮುಖದ ಸೌಂದರ್ಯಕ್ಕಾಗಿ ಎಷ್ಟೆಲ್ಲ ಕಾಸ್ಮೆಟಿಕ್ಸ್ ಗಳನ್ನು  ಬಳಸುತ್ತೇವೆ?  ಮುಗುಳುನಗುವನ್ನು ಸದಾ  ತುಟಿಯಲ್ಲಿಟ್ಟು ಬದುಕುವುದಕ್ಕೆ ಎಷ್ಟೊಂದು ಶ್ರಮ ಪಡುತ್ತೇವೆ? ದೇಹದ ಇತರೆಲ್ಲ ಭಾಗಗಳು ಮುಚ್ಚಿರುವಾಗಲೂ ತೆರೆದಿರುವ ಭಾಗವೆಂದರೆ ಮುಖವೊಂದೇ ಅಲ್ಲವೇ? ಆ ಮುಖದಲ್ಲಿರುವ ಕಣ್ಣಿಗೆ ಸಾವಿರಾರು ಮಂದಿಯ ಭಾವನೆಗಳನ್ನು ಮೀಟುವ ಸಾಮರ್ಥ್ಯ  ಇರುತ್ತದಲ್ಲ. ಮೂಗು, ಕೆನ್ನೆ, ಹುಬ್ಬು, ತುಟಿಗಳ ಸುತ್ತ ಈ ಜಗತ್ತಿನಲ್ಲಿ ಎಷ್ಟೊಂದು ಕವನಗಳು ರಚನೆಯಾಗಿಲ್ಲ? ಎಷ್ಟು ಮಂದಿ ಅವುಗಳಿಗೆ ಮರುಳಾಗಿಲ್ಲ? ಆದರೆ, ಆ ಮುಖವೇ ವಿಕಾರವಾಗಿ ಬಿಟ್ಟರೆ, ನೋಡಲು ಭೀತಿ ಹುಟ್ಟಿಸುವಂತಿದ್ದರೆ.. ಮುಖ ಬದುಕಿನ ಎಷ್ಟೊಂದು ಅಮೂಲ್ಯ ಭಾಗ ಅಂತ ಗೊತ್ತಾಗುವುದು ಆಗಲೇ..
          ಶಿರಿನ್ ಜುವಾಲೆ ತನ್ನಂತರಂಗವನ್ನು ನಿವೇದಿಸಿಕೊಳ್ಳುತ್ತಾ ಹೋಗುತ್ತಾಳೆ. -My  Husband Changed  My Life  Forever -  ನನ್ನ ಗಂಡ ನನ್ನ ಬದುಕನ್ನು ಸಂಪೂರ್ಣವಾಗಿ ಬದಲಿಸಿದ - ಎಂಬ ಶೀರ್ಷಿಕೆಯಲ್ಲಿ ಬ್ಲಾಗಿನಲ್ಲಿ ಬರೆಯುತ್ತಾ ಹತ್ತಿರವಾಗುತ್ತಾಳೆ..
           ಬಾಲಿವುಡ್ ಇರುವ, ನಟಿಯರೆಲ್ಲಾ ಸುದ್ದಿ ಮಾಡುತ್ತಿರುವ, ಕಾಸ್ಮೆಟಿಕ್ಸ್ ಗಳು  ಅತ್ಯಂತ ಹೆಚ್ಚು ಮಾರಾಟವಾಗುವ, ಸೌಂದರ್ಯದ ಬಗ್ಗೆ ಧಾರಾಳ ಚರ್ಚೆ-ಸಂವಾದಗಳು ನಡೆಯುತ್ತಿರುವ ಮುಂಬೈಯ ಹುಡುಗಿ ನಾನು. ಮದುವೆಯಾದ 2 ತಿಂಗಳೊಳಗೇ ನಾನು ವಿಚ್ಛೇದನಕ್ಕೆ ಬೇಡಿಕೆಯಿಟ್ಟೆ. ಗಂಡನೊಂದಿಗೆ ಸಂಸಾರ ಸಾಗಿಸುವುದು ಸಾಧ್ಯವಿಲ್ಲ ಅಂತ ಹೇಳಿದೆ. ಮನೆಯವರು ಒಪ್ಪಲಿಲ್ಲ. 2 ತಿಂಗಳೊಳಗೇ ದಾಂಪತ್ಯ ಸಂಬಂಧವನ್ನು ಅಳೆಯಲಾಗುತ್ತಾ? ತುಸು ಸಹನೆ ವಹಿಸು. ಕ್ಷಮಿಸುವ ಗುಣ ರೂಢಿಸಿಕೊ. 6 ತಿಂಗಳೋ ಒಂದು ವರ್ಷವೋ ಕಾದು ನೋಡಿದ ಬಳಿಕ ತೀರ್ಮಾನಿಸುವ. ಮದುವೆಯೆಂದರೇನು ಮಕ್ಕಳಾಟಿಕೆಯಾ.. ಅಂತ ಅವರೆಲ್ಲ ಗದರಿಸಿದರು. ನಾನು ಒಪ್ಪಿಕೊಂಡು ಗಂಡನ ಮನೆಗೆ ನಡೆದೆ. ಹೀಗೆ ಬದುಕು ಸಾಗುತ್ತಿದ್ದಾಗಲೇ ಒಂದು ದಿನ ಮಾಸಗಾವಿಯ ನಮ್ಮ ಫ್ಲಾಟಿನ ಕೆಳಗೆ ನನ್ನ ಗಂಡ ನನ್ನ ಮುಖದ ಮೇಲೆ ಆಸಿಡ್ ಎರಚಿದ. ಎರಚಿದ್ದು ಆಸಿಡ್ ಎಂದು ಗೊತ್ತಾದ ಕೂಡಲೇ ನಾನು ಬಾತ್ ರೂಮ್ ಗೆ  ಓಡಿ ಪೈಪ್ ತಿರುಗಿಸಿದೆ. ಬಹುಶಃ ಆವತ್ತು ನಾನು ಹಾಗೆ ಮಾಡದಿರುತ್ತಿದ್ದರೆ, ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕೆ ಇವತ್ತು  ನಾನೇ ಇರುತ್ತಿರಲಿಲ್ಲವೇನೋ? ಹೊಗೆಯ ಮಧ್ಯೆ ಬಿಕ್ಕಳಿಸುವ ನನ್ನನ್ನು ನೋಡಿ ತಾಯಿ ದಿಗ್ಭ್ರಮೆಗೊಂಡರು. ನನ್ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮುಖವೆಲ್ಲ ಬೊಬ್ಬೆಯೆದ್ದಿದ್ದುವು. 4 ವರ್ಷಗಳಲ್ಲಿ 16 ಆಪರೇಶನ್ ಗಳಿಗೆ  ಒಳಗಾದೆ. ಒಂದು ಅಮೇರಿಕದಲ್ಲಿ. ನನ್ನ ಗಂಡ ಎಷ್ಟು ಬುದ್ಧಿವಂತ ಅಂದರೆ ಆಸಿಡ್ ಎರಚಿದ ಅದೇ ದಿನ ಆತ ವಿದೇಶಕ್ಕೆ ಹಾರಿ ಹೋಗಿದ್ದ. ಇವೆಲ್ಲ ನಡೆದು 12 ವರ್ಷಗಳಾದುವು. ಆದರೆ ಆತನನ್ನು ಶಿಕ್ಷಿಸುವುದಕ್ಕೆ ನಮ್ಮ ವ್ಯವಸ್ಥೆಗೆ ಈವರೆಗೂ ಸಾಧ್ಯವಾಗಿಲ್ಲ.
           ನನಗೆ ಗೊತ್ತು, ನಾನು ವಿಚ್ಛೇದನ ಕೋರಿದುದಕ್ಕೆ ಗಂಡ ಕೊಟ್ಟ ಉಡುಗೊರೆ ಇದೆಂದು. ಆದರೆ ನಾನು ಈ ಸಮಾಜದಿಂದ       ವಿಚ್ಛೇದನ ಕೋರಿಲ್ಲವಲ್ಲ. 2 ತಿಂಗಳು ಆಸ್ಪತ್ರೆಯಲ್ಲಿರುವ ವರೆಗೆ ನನಗೆ ನನ್ನ ಮುಖ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಯಾವಾಗ ಮನೆಗೆ ಕಾಲಿಟ್ಟೆನೋ ನನ್ನ ಮುಖವನ್ನು (ನನ್ನನ್ನಲ್ಲ) ನೋಡುವುದಕ್ಕೆ ಹಲವು ಭಾಗಗಳಿಂದ ಜನ ಬರತೊಡಗಿದರು. ನನ್ನನ್ನು ನೋಡಿದ್ದೇ ತಡ ಕೆಲವರು ಮುಖ ಮುಚ್ಚಿದರು. ಕೆಲವರು ಬಾಯಗಲಿಸಿದರು. ಭೀತಿ, ಅಚ್ಚರಿ ವ್ಯಕ್ತಪಡಿಸಿದರು.. ತನ್ನ ಭಾವೀ ಬದುಕು ಈ ಸಮಾಜದಲ್ಲಿ ಎಷ್ಟು ಕಷ್ಟ ಅಂತ ಅನ್ನಿಸತೊಡಗಿದ್ದೇ ಆಗ. ನನ್ನನ್ನು ನೋಡಲು ಬಂದವರಲ್ಲಿ ಹೆಚ್ಚಿನವರು ಕನ್ನಡಿ ನೋಡುವಂತೆ ಮತ್ತೆ ಮತ್ತೆ ನನ್ನ ಮುಖವನ್ನು ನೋಡುವಾಗ ಆಗುತ್ತಿದ್ದ ಸಂಕಟ ಪದಗಳಿಗೆ ನಿಲುಕದ್ದು. ನನ್ನೊಳಗಿನ ಮುಜುಗರವೇ 2 ವರ್ಷಗಳ ವರೆಗೆ ನನ್ನನ್ನು ಮನೆಯೊಳಗೇ ಕೂಡಿ ಹಾಕಿತು. ಆದರೆ ಎಷ್ಟೂಂತ ಮನೆಯೊಳಗಿರುವುದು? ಎಂದಾದರೂ ಒಂದು ದಿನ ಹೊರಬರಲೇ ಬೇಕಲ್ಲವೇ? ಹೊರ ಬಂದೆ. ಯಾರೊಂದಿಗಾದರೂ ಮಾತಾಡುವಾಗ ಅವರ ಕಣ್ಣನ್ನು ದೃಷ್ಟಿಸದೇ ಮಾತಾಡುವ ವಿಧಾನವನ್ನು ಕಲಿತುಕೊಂಡೆ. ಹೀಗೆ ಮಾಡುವುದರಿಂದ ಎದುರಿನವರ ಮುಖದಲ್ಲಿ ಆಗುವ ಭಾವನೆಗಳು ನನಗೆ ಕಾಣಿಸುವುದಿಲ್ಲವಲ್ಲ. ನಿಜವಾಗಿ ನನಗೆ ಆಸಿಡ್ ಎರಚಿದ್ದು ಗಂಡ ಅಷ್ಟೇ ಅಲ್ಲ, ಈ ಜಗತ್ತು ಕೂಡಾ. ಸುಂದರಿಯರನ್ನು ಮಾತ್ರ ಈ ಜಗತ್ತು ಪ್ರೀತಿಸುತ್ತದೆ ಎಂಬ ಕರಾಳ ಸತ್ಯವನ್ನು ನನಗೆ ಕಲಿಸಿದ್ದು ಕೂಡ ಆಸಿಡೇ. ಒಂದು ವೇಳೆ ನನ್ನ ತಾಯಿ ಮತ್ತು ಅಣ್ಣ ನನ್ನ ಬೆನ್ನಿಗೆ ನಿಲ್ಲದಿರುತ್ತಿದ್ದರೆ ಶಿರಿನ್ ಜುವಾಲೆ ಇಷ್ಟು ಖಚಿತವಾಗಿ ಮಾತಾಡುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಈ ಜಗತ್ತಿನ ಮಂದಿ ಹೆಣ್ಣನ್ನು ಯಾವ ಕಾರಣಕ್ಕಾಗಿಯೇ ಪ್ರೀತಿಸಲಿ, ನನ್ನ ತಾಯಿ ಮತ್ತು ಅಣ್ಣ ಪ್ರೀತಿಸುತ್ತಿದ್ದುದು ನನ್ನ ಮುಖವನ್ನಲ್ಲ, ನನ್ನನ್ನು ಎಂದು ಅನಿಸಿದಾಗಲೆಲ್ಲಾ ಕಣ್ಣೀರು ಹರಿಯುತ್ತಿತ್ತು. ಮುಖ ವಿಕಾರವಾದ ಬಳಿಕ ಹಿಂದಿಗಿಂತಲೂ ಹೆಚ್ಚು ಪ್ರೀತಿಸಿದ ಅವರನ್ನು ನೋಡುತ್ತಾ ಕಣ್ಣು ಒದ್ದೆಯಾಗುತ್ತಿತ್ತು. ಇವರಿಗಾಗಿಯಾದರೂ ಈ ಸಮಾಜದಲ್ಲಿ ಎಲ್ಲರಂತೆಯೇ ಬದುಕಬೇಕೆಂದು ತೀರ್ಮಾನಿಸಿದೆ. ನನ್ನ ಗಂಡ ನನಗೆ ಆಸಿಡ್ ಎರಚಿದುದರ ಉದ್ದೇಶ, ನಾನು ವಿಕಾರ ಮುಖದೊಂದಿಗೆ ಶಾಶ್ವತವಾಗಿ ಮೂಲೆ ಸೇರಬೇಕೆಂದೇ ತಾನೇ? ನನ್ನ ಈ ಮುಖವನ್ನು ಈ ಸಮಾಜಕ್ಕೆ ತೋರಿಸುವ ಮೂಲಕ ಗಂಡನನ್ನು ಸೋಲಿಸಬೇಕು ಎಂದು ನಿರ್ಧರಿಸಿದೆ. ಶಿಕ್ಷಣವನ್ನು ಮುಂದುವರಿಸಲು ತೀರ್ಮಾನಿಸಿದೆ. ಆದರೆ ಮುಂಬೈಯ ಶಿಕ್ಷಣ ಸಂಸ್ಥೆಯೊಂದು ನನಗೆ ಪ್ರವೇಶವನ್ನೇ ಕೊಡಲಿಲ್ಲ. ಮೆಕ್ಡೊನಾಲ್ಡ್ ತನ್ನ ಆವರಣದಿಂದಲೇ ನನ್ನನ್ನು ಹೊರಹಾಕಿತು. ಈ ಎಲ್ಲ ಪ್ರಕರಣಗಳು ನನ್ನಲ್ಲಿ ಇನ್ನಷ್ಟು ಉತ್ಸಾಹವನ್ನೇ ತುಂಬಿದುವು. ಆಸ್ಪತ್ರೆಯ ಆರಂಭದ ಎರಡು ತಿಂಗಳಲ್ಲಿ ಪ್ರತಿದಿನವೂ ನನ್ನ ಗಾಯಗಳಿಗೆ ದ್ರವ ಪದಾರ್ಥ (Fluid) ಸವರುತ್ತಿರುವಾಗ ಆಗುತ್ತಿದ್ದ ಉರಿಯ ಎದುರು ಇಂಥ ಗಾಯಗಳೆಲ್ಲ ಏನು ಮಹಾ ಅಂದುಕೊಂಡೆ. ದಾದಿಯರು ದಿನಾ ಗಾಯಗಳನ್ನು ಡ್ರೆಸ್ಸಿಂಗ್ ಮಾಡುವಾಗ ಆಗುತ್ತಿದ್ದ ನೋವಿನ ಮುಂದೆ ಇವು ಏನೇನೂ ಅಲ್ಲ ಅಂಥ ತಳ್ಳಿ ಹಾಕಿದೆ. `ಮ್ಯಾನೇಜ್ಮೆಂಟ್ ಆಫ್ ವೆಲಂಟರಿ ಆರ್ಗನೈಝೇಶನ್' ಎಂಬ ವಿಷಯದ ಮೇಲೆ ಮುಂಬೈಯಲ್ಲಿ ಡಿಪ್ಲೋಮಾ ಮಾಡಿದೆ. ಲಂಡನ್ನಿನ ವೇಲ್ಸ್ ಯುನಿವರ್ಸಿಟಿಯಿಂದ, `ಡೆವಲಪ್ಮೆಂಟ್ ಅಂಡ್ ಹ್ಯೂಮನ್ ಸೈನ್ಸ್' ಎಂಬ ವಿಷಯದ ಮೇಲೆ ಪದವಿ ಪಡೆದೆ. ಅಮೇರಿಕದಲ್ಲಿ ನಡೆದ ವರ್ಲ್ಡ್  ಬ್ಯಾನ್ಸ್ ಕಾಂಗ್ರೆಸ್ ನಲ್ಲಿ  ಏಷ್ಯಾದ ಪ್ರತಿನಿಧಿಯಾಗಿ ಭಾಗವಹಿಸಿ ಮಾತಾಡಿದೆ. ನನ್ನ ಗಂಡ ನನ್ನ ಮುಖ ಇನ್ನಾರಿಗೂ ಸಿಗದಿರಲಿ ಎಂದು ಭಾವಿಸಿದ್ದ. ವಿಕಾರ ಮುಖದೊಂದಿಗೆ ಮನೆಯೊಳಗಿರಲಿ ಅಂತ ಅಂದುಕೊಂಡಿದ್ದ. ಆದರೆ ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದೆನೋ ಅಲ್ಲೆಲ್ಲಾ ಚರ್ಚೆಗೊಳಗಾಗುತ್ತಿದ್ದುದು ನನ್ನ ಮುಖವಲ್ಲ, ನನ್ನ ಗಂಡನ ಮುಖ. ಆತನ ಕ್ರೂರ ಮನಸ್ಸು. ನನಗೆ ಆಸಿಡ್ ಎರಚುವ ಮೂಲಕ ಆತ ನನ್ನನ್ನಲ್ಲ, ಆತನನ್ನೇ ಅಡಗಿಸಿಕೊಳ್ಳಬೇಕಾಯಿತು..
         ನಿಜವಾಗಿ, ನಾನು ಈ ಪ್ರಕರಣದ ಮೂಲಕ ದೇವನನ್ನು ಅರಿತುಕೊಂಡೆ. ನನ್ನಲ್ಲಿ ಏನು ಇದೆ ಮತ್ತು ಏನೆಲ್ಲ ಇತ್ತು ಅನ್ನುವುದನ್ನು ತಿಳಿದುಕೊಂಡದ್ದು ಈ ಘಟನೆಯ ಮೂಲಕವೇ. ನನ್ನ ಮುಖ ಮತ್ತು ಆ ಮುಖಾಂತರ ನನ್ನ ಸೌಂದರ್ಯವೂ ನಷ್ಟವಾದಾಗ, ಇವುಗಳಾಚೆಗಿನ ಸತ್ಯಗಳನ್ನು ನಾನು ತಿಳಿದುಕೊಂಡೆ. ನಿಜವಾಗಿ, ಇದು ನನ್ನ ಬದುಕಿನ ಅತ್ಯಂತ ಪ್ರಮುಖವಾದ ಅರಿವು ಎಂದೇ ನನ್ನ ಭಾವನೆ. ನಾನೆಂದೂ ಅಲ್ಲಾಹನಲ್ಲಿ ವಿಶ್ವಾಸ ಇಟ್ಟವಳು. ಅವನ ತೀರ್ಮಾನವೇ ಅತ್ಯಂತ ಸರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು ಎಂದು ಬಲವಾಗಿ ನಂಬಿದವಳು. ಅದು ಇವತ್ತಲ್ಲದಿದ್ದರೆ ನಾಳೆ ಬಂದೇ ಬರುತ್ತದೆ. ಈ ವಿಶ್ವಾಸವೇ ನನ್ನನ್ನು ಬದುಕುವಂತೆ ಮಾಡಿದೆ..
ಆಸಿಡ್ ಗಿಂತ ಮೊದಲು

        ಶಿರಿನ್ ಹೇಳುತ್ತಾ ಹೋಗುವಾಗ ಪತ್ರಕರ್ತೆ ಶ್ರೀಲತಾ ಮಾತು ಬಾರದೇ ಮೌನವಾಗುತ್ತಾರೆ..
    ಶಿರಿನ್ ಇವತ್ತು 4 ಮಕ್ಕಳ ತಾಯಿ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ರಝಾ ಖಾನ್ ನನ್ನು  ಆಕೆ ಮರು ಮದುವೆಯಾಗಿದ್ದಾಳೆ. ಅಲ್ಲದೆ ಫಲಶ್ ಎಂಬ ಸ್ವಯಂ ಸೇವಾ ಸಂಘಟನೆಯೊಂದನ್ನು ನಡೆಸುತ್ತಲೂ ಇದ್ದಾಳೆ. ಮುಂಬೈಯಲ್ಲಿ ಇಂಥ ಪ್ರಕರಣಗಳು ಘಟಿಸಿದಾಗಲೆಲ್ಲ ಫಲಶ್ ಅಲ್ಲಿಗೆ ಧಾವಿಸುತ್ತದೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ, ಅವರಿಗೆ ನೆರವು ನೀಡುವ ಕೆಲಸವನ್ನೂ ಮಾಡುತ್ತಿದೆ. ಅಂದಹಾಗೆ, ಕಳೆದ ವಾರ ಟಿ.ವಿ.ಯಲ್ಲಿ ಆಸಿಡ್  ಘಟನೆಯೊಂದರ ವರದಿ ಭಿತ್ತರವಾಗಿತ್ತು. ಫೇಸ್ ಬುಕ್ ನಲ್ಲಿ  ಧಾರಾಳ ಕಮೆಂಟ್ ಗಳೂ  ಬಂದಿದ್ದುವು. ಯಾಕೋ ಮನಸ್ಸು ಆರ್ದ್ರವಾಯಿತು.

Monday, July 23, 2012

ಈ ಎರಡು ಸಂಗತಿಗಳನ್ನು ಜೊತೆಗಿಟ್ಟು ನೋಡಿ,ಏನನಿಸುತ್ತದೆ?

ಅವರಿಬ್ಬರ ಮಧ್ಯೆ ಹೀಗೆ ವಾದ-ಪ್ರತಿವಾದ ನಡೆಯುತ್ತದೆ..
ಅ) ಮನುಷ್ಯನಿಗೆ ಸಾಷ್ಟಾಂಗವೆರಗು
ಇ) ಸಾಧ್ಯವಿಲ್ಲ
ಅ) ಯಾಕೆ?
ಇ) ನನ್ನ ಹುಟ್ಟಿನ ಎದುರು ಮನುಷ್ಯನ ಹುಟ್ಟು ಏನೇನೂ ಅಲ್ಲ. ಆತ ನನಗಿಂತ ಕೆಳಮಟ್ಟದವ
ಅ) ಹಾಗಾದರೆ ನೀನಿಲ್ಲಿಂದ ತೊಲಗು. ಆದೇಶ ಪಾಲಿಸದವನಿಗೆ ಇಲ್ಲಿ ಜಾಗವಿಲ್ಲ.
ಇ) ನಿನ್ನ ಪ್ರತಿಷ್ಠೆಯ ಆಣೆ. ನಾನು ಇಲ್ಲಿಂದ ಹೋದ ಬಳಿಕ ಎಲ್ಲ ಮನುಷ್ಯರನ್ನೂ ಖಂಡಿತವಾಗಿಯೂ ದಾರಿಗೆಡಿಸಿ ಬಿಡುವೆನು.
ಅ) ಸಾಧ್ಯವಿಲ್ಲ. ನನ್ನ ನಿಷ್ಠಾವಂತ ದಾಸರನ್ನು ದಾರಿಗೆಡಿಸಲು ನಿನ್ನಿಂದ ಆಗಲ್ಲ..
ಮೊರಿಟೋನಿಯಾದ ಗುಲಾಮ
ಸೃಷ್ಟಿಕರ್ತ (ಅಲ್ಲಾಹ್) ಮತ್ತು ಇಬ್ಲೀಸನ (setan) ಮಧ್ಯೆ ನಡೆದ ಈ ಮಾತುಕತೆಯನ್ನು ಪವಿತ್ರ ಕುರ್ಆನ್ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ (15:42, 17:65, 38:83) ಉಲ್ಲೇಖಿಸಿರುವುದಕ್ಕೆ ಕಾರಣ ಏನಿರಬಹುದು? ಇಬ್ಲೀಸ್, 'ಶಪಿತ' ಆಗುವುದೇ ಈ ಮಾತುಕತೆಯ ಬಳಿಕ. ಆ ಮಾತುಕತೆಯ ವರೆಗೂ ಸೃಷ್ಟಿಕರ್ತನ ಪರಮನಿಷ್ಠನಾಗಿ ಇಬ್ಲೀಸ್ ಗುರುತಿಸಿಕೊಂಡಿದ್ದ. ಹೀಗಿರುವಾಗ ಆತನ ಒಂದೇ ಒಂದು ಅಪರಾಧಕ್ಕೆ ನರಕ ಶಿಕ್ಷೆಯನ್ನು ಮತ್ತು ಶಾಶ್ವತ ಶಾಪವನ್ನು ಸೃಷ್ಟಿಕರ್ತನು ವಿಧಿಸಿರುವುದರಲ್ಲಿ ಏನು ಪಾಠವಿದೆ? ಇದಕ್ಕೆ ಪವಿತ್ರ ಕುರ್ಆನ್ ನಲ್ಲಿ  ಹೆಚ್ಚು ಒತ್ತು ಕೊಟ್ಟಿರುವುದರ ಔಚಿತ್ಯವೇನು?
1. ಜನಾಂಗೀಯ ವಾದ
2. ಅಸೂಯೆ
3. ಅಹಂಕಾರ
ಬೆಂಕಿಯಿಂದ ಸೃಷ್ಟಿಸಲ್ಪಟ್ಟ ತಾನು ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಪ್ರಥಮ ಮನುಷ್ಯ ಆದಮನಿಗಿಂತ(ಅ) ಶ್ರೇಷ್ಠ (38:76) ಎಂಬ ಇಬ್ಲೀಸ್ ನ  ವಾದದಲ್ಲಿ ಜನಾಂಗೀಯ ಕೊಳಕು ಇದೆ. ಹುಟ್ಟಿನ ಮೂಲವನ್ನು ಶ್ರೇಷ್ಠತೆಗೆ ಮಾನದಂಡವಾಗಿಸಬೇಕೆಂದು ಆತ ವಾದಿಸುವಾಗ, ಅಲ್ಲಾಹನು ಒಳಿತು (49:13) ಮಾತ್ರ ಮಾನದಂಡ ಅನ್ನುತ್ತಾನೆ. ಆದರೆ ಇಬ್ಲೀಸ್ ಒಪ್ಪುವುದಿಲ್ಲ. ಒಪ್ಪದವನು ನರಕಕ್ಕೆ ಎಂದು ಅಲ್ಲಾಹನು ಹೇಳುತ್ತಾನೆ. ಮನುಷ್ಯರನ್ನು ಜನಾಂಗೀಯ ಆಧಾರದಲ್ಲಿ ಶ್ರೇಷ್ಠರು, ಕನಿಷ್ಠರು ಎಂದು ವಿಂಗಡಿಸುವುದು ನರಕ ಶಿಕ್ಷೆಗೆ ಅರ್ಹ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದು ಪವಿತ್ರ ಕುರ್ಆನ್ ಮಾತ್ರ. 14ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ರ (ಸ) ಮೂಲಕ ಸಾರಲಾದ ಸಮಾನತೆಯ ಈ ಸಂದೇಶ ಎಷ್ಟು ಪ್ರಭಾವಶಾಲಿಯಾಯಿತೆಂದರೆ, ಕಪ್ಪು ಚರ್ಮದ ಬಿಲಾಲ್ ರು  ಪ್ರವಾದಿಯನ್ನು(ಸ) ಅಪ್ಪಿಕೊಳ್ಳುವಷ್ಟು. ಸಮಾನತೆಯ ಈ ಕಲ್ಪನೆಯನ್ನು ಪವಿತ್ರ ಕುರ್ಆನ್ ಸ್ವರ್ಗಕ್ಕೆ ಒಂದು ಮಾನದಂಡವಾಗಿ ಪರಿಗಣಿಸಿತು. ಇದಕ್ಕೆ ಇನ್ನೊಂದು ಕಾರಣವೂ ಇದೆ. ಯಾವಾಗ ಜನಾಂಗೀಯ ಕಲ್ಪನೆಗೆ ಒತ್ತು ಸಿಗುತ್ತದೋ ಆಗೆಲ್ಲಾ ಜನರು ಗುಲಾಮರಾಗಿ, ಉಂಡ ಎಲೆಯಲ್ಲಿ ಉರುಳುವವರಾಗಿ, ಅಸ್ಪøಶ್ಯರಾಗಿ ವಿಂಗಡನೆಗೊಳ್ಳುವುದಕ್ಕೆ ಅವಕಾಶವಾಗುತ್ತದೆ. ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಿಯೂ ಮಡೆ ಸ್ನಾನವನ್ನು ನಿಷೇಧಿಸಲು ಸಾಧ್ಯವಾಗದಿರುವುದೇ ಇದಕ್ಕೆ ಅತಿ ದೊಡ್ಡ ಪುರಾವೆ. ಆ ಮನಃಸ್ಥಿತಿ ಎಷ್ಟು ಭೀಕರ ಅಂದರೆ, ಮಂದಿರ, ಶಾಲೆ, ಆಸ್ಪತ್ರೆ, ಸಾರ್ವಜನಿಕ ಬಾವಿ, ಮದುವೆ.. ಎಲ್ಲದರಿಂದಲೂ ಅದು ಮನುಷ್ಯರನ್ನು ಪ್ರತ್ಯೇಕಿಸುತ್ತದೆ. ಅಷ್ಟೇ ಅಲ್ಲ, ಮನುಷ್ಯನೇ ಮನುಷ್ಯನ ದಾಸನಾಗಿ ಬಿಡುವುದಕ್ಕೆ, ಶ್ರೇಷ್ಠನು ಹೇಳಿದ ಪ್ರತಿಯೊಂದು ಅಪ್ಪಣೆಯನ್ನೂ ಸರಿ-ತಪ್ಪು ಯೋಚಿಸದೇ ಮಾಡುವುದಕ್ಕೆ ನಿರ್ಬಂಧಿಸುತ್ತದೆ. ಒಂದು ವೇಳೆ ವಿಕಿಪೀಡಿಯಾ ಅಥವಾ ಇನ್ನಾವುದಾದರೂ ಸೈಟನ್ನು ಇಂಟರ್ನೆಟ್ಟಲ್ಲಿ ತೆರೆದು ನೋಡಿದರೆ ಪುರಾತನ ಕಾಲದಲ್ಲಿ ಕಪ್ಪು ಮನುಷ್ಯರು ಗುಲಾಮರಾಗಿ ಜಗತ್ತಿನಾದ್ಯಂತದ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವುದರ ವಿವರ ಸಿಗಬಹುದು. 14ರಿಂದ 19ನೇ ಶತಮಾನದ ಮಧ್ಯೆ 12 ಮಿಲಿಯನ್ ಕಪ್ಪು ಮನುಷ್ಯರು ಆಫ್ರಿಕಾದಿಂದ ಅಮೇರಿಕಕ್ಕೆ ಗುಲಾಮರಾಗಿ ಬಂದಿದ್ದರೆ ಅದರ ಹಿಂದೆ ಜನಾಂಗೀಯತೆಗೆ ದೊಡ್ಡ ಪಾತ್ರ ಇದೆ. ಆದ್ದರಿಂದಲೇ, ಗುಲಾಮತನವನ್ನು ಪೋಷಿಸಿದ್ದಕ್ಕಾಗಿ 2008 ಜುಲೈ 30ರಂದು ಅಮೇರಿಕ ಬಹಿರಂಗವಾಗಿ ಜಗತ್ತಿನ ಕ್ಷಮೆ ಯಾಚಿಸಿದ್ದು. ಹಾಗಂತ ಅಮೇರಿಕದಿಂದ ಇವತ್ತು ಜನಾಂಗೀಯತೆ ಸಂಪೂರ್ಣ ನಿರ್ನಾಮವಾಗಿದೆಯೇ? ಅತ್ಯಂತ ಆಧುನಿಕ ಶಿಕ್ಷಣ ಪಡೆದ, ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ವ್ಯಕ್ತಿಗಳ ಒಳಗೂ ಜನಾಂಗೀಯ ಶ್ರೇಷ್ಠತೆ ಸುಪ್ತವಾಗಿರುವುದೇನು ಸುಳ್ಳೇ? 1936ರಲ್ಲಿ ಜರ್ಮನಿಯಲ್ಲಿ ನಡೆದ 11ನೇ ಒಲಿಂಪಿಕ್ಸ್ ನಲ್ಲಿ  ಭಾಗವಹಿಸದಂತೆ ಕರಿಯರಿಗೆ ಹಿಟ್ಲರ್ ನಿಷೇಧ ಹೇರಿದ್ದು ಕೂಡ ಆರ್ಯ ಶ್ರೇಷ್ಠ ಅನ್ನುವ ಜನಾಂಗೀಯ ಕಲ್ಪನೆಯಿಂದಲೇ ತಾನೇ?
ನಿಜವಾಗಿ, ಮನುಷ್ಯರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂದು ಪವಿತ್ರ ಕುರ್ಆನ್ ಹೇಳುವ ಮೂಲಕ (38:71) ಮಣ್ಣಿಗೂ ಮನುಷ್ಯನಿಗೂ ಸಂಬಂಧವನ್ನು ಕಲ್ಪಿಸುತ್ತದೆ. ಮಣ್ಣು ಮನುಷ್ಯನದ್ದು. ಆದ್ದರಿಂದಲೇ ಮಣ್ಣಿನಲ್ಲಿರುವ ಗಿಡ, ಮರ, ಪ್ರಾಣಿ, ನೀರು, ಖನಿಜ, ಬಂಗಾರ, ತೈಲ.. ಎಲ್ಲವುಗಳೊಂದಿಗೂ ಮನುಷ್ಯನಿಗೆ ಹೊಣೆಗಾರಿಕೆಯಿರುತ್ತದೆ. ಮಣ್ಣಿನ ಮೇಲಾಗುವ ಸರ್ವ ಅನ್ಯಾಯಗಳನ್ನೂ ಪ್ರತಿಭಟಿಸುವುದಕ್ಕೆ ಮನುಷ್ಯನನ್ನು ಪ್ರಚೋದಿಸಬೇಕಾದದ್ದೂ ಈ ಸಂಬಂಧಗಳೇ. ಬಹುರಾಷ್ಟ್ರೀಯ ಕಂಪೆನಿಯೊಂದು ಇಲ್ಲಿನ ಫಲವತ್ತಾದ ಭೂಮಿಯನ್ನು ಕಬಳಿಸುವಾಗ, ನೀರನ್ನು ಮಲಿನಗೊಳಿಸುವಾಗ, ವಾತಾವರಣವನ್ನು ಕೆಡಿಸುವಾಗ, ಭೂಮಿಯ ಮೇಲೆ ಅನ್ಯಾಯ ನಡೆಯುವಾಗ.. ಆ ಬಗ್ಗೆ ಧ್ವನಿಯೆತ್ತಬೇಕಾದದ್ದು ಮನುಷ್ಯನ ಹೊಣೆಗಾರಿಕೆ. ಯಾಕೆಂದರೆ ಆ ಮಣ್ಣೇ ಮನುಷ್ಯನ ರಚನೆಯಲ್ಲಿ ಪಾತ್ರ ವಹಿಸಿದ್ದು. ಆ ಮಣ್ಣು ಮಲಿನಗೊಳ್ಳುವುದೆಂದರೆ ಮನುಷ್ಯ ಮಲಿನಗೊಂಡಂತೆ. ಇಷ್ಟಕ್ಕೂ ಮನುಷ್ಯರನ್ನು ಯಾರದ್ದೋ ತಲೆ, ಮೂಗು, ಕೈ, ಕಾಲುಗಳಿಂದ ಸೃಷ್ಟಿಸಲಾಗಿದೆ ಎಂಬ ಕಾನ್ಸೆಪ್ಟ್ ಮತ್ತು ಮನುಷ್ಯರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ ಎಂಬ ಕಾನ್ಸೆಪ್ಟನ್ನು ಪರಸ್ಪರ ಎದುರಿಟ್ಟು ಆಲೋಚಿಸಿ. ಒಂದು, ಮನುಷ್ಯನನ್ನು ಹುಟ್ಟಿನ ಆಧಾರದಲ್ಲಿ ವಿಂಗಡಿಸುತ್ತಾ ಹೋದರೆ ಇನ್ನೊಂದು ಆತನನ್ನು ಜೋಡಿಸುತ್ತಾ ಹೋಗುತ್ತದಲ್ಲವೇ?
ಇವಿಷ್ಟೇ ಅಲ್ಲ,
ಸ್ವರ್ಗದಿಂದ ಇಬ್ಲೀಸನ ಉಚ್ಛಾಟನೆಗೆ ಅಸೂಯೆ ಮತ್ತು ಅಹಂಕಾರ ಎಂಬ ಇನ್ನೆರಡು ಸ್ವಭಾವಗಳಿಗೂ ಪಾತ್ರ ಇದೆ. ತನಗಿಂತ ಕಿರಿಯವ ಸ್ಥಾನಮಾನದಲ್ಲಿ ಮೇಲೆ ಹೋಗುವುದನ್ನು ಆತ ಇಷ್ಟಪಡಲಿಲ್ಲ. ಇನ್ನೊಂದು, ತಾನೇ ಸರಿ ಅನ್ನುವ ಅಹಂಕಾರ. ಒಂದು ರೀತಿಯಲ್ಲಿ ಈ ಎರಡೂ ಗುಣಗಳು ಸಮಾಜದಲ್ಲಿ ಇವತ್ತು ಧಾರಾಳ ಇದೆ. ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಒಬ್ಬನ ಕಾಲೆಳೆಯುವ ಸಂಸ್ಕøತಿ ಅತ್ಯಂತ ಬಲಿಷ್ಠವಾಗಿಯೇ ಇದೆ. ವ್ಯಕ್ತಿಯೋರ್ವ ಉನ್ನತ ಸ್ಥಾನಕ್ಕೆ ಹೋಗುವುದನ್ನು ಸಹಿಸದೆ ಕಿವಿಯೂದುವ, ಮೇಲಧಿಕಾರಿಗಳಲ್ಲಿ ಸುಳ್ಳು ದೂರುಗಳನ್ನು ಸಲ್ಲಿಸುವ ಪ್ರಕರಣಗಳು ಅಸಂಖ್ಯ ನಡೆಯುತ್ತಿರುತ್ತವೆ. ಸುಳ್ಳು ಆರೋಪಗಳು ಮತ್ತು ಅದನ್ನು ಸಾಬೀತುಪಡಿಸುವುದಕ್ಕಾಗಿ ನಕಲಿ ದಾಖಲೆಗಳನ್ನು ತಯಾರಿಸುವುದೂ ಇದೆ. ಪಕ್ಕದ ಮನೆಯವ ಖರೀದಿಸಿದ ಬೈಕ್ ನಿಂದ  ಯಾವ ತೊಂದರೆ ಇಲ್ಲದಿದ್ದರೂ ಕಳವಳಗೊಳ್ಳುವ ಎಷ್ಟು ಮಂದಿ ನಮ್ಮ ಮಧ್ಯೆ ಇಲ್ಲ? ಪಕ್ಕದ ಮನೆಯ ಪತಿ-ಪತ್ನಿ ಸದಾ ಖುಷಿಯಾಗಿರುವುದು, ಒಮ್ಮೆಯೂ ಅವರ ಮನೆಯಿಂದ ಜಗಳ ಕೇಳಿಸದೇ ಇರುವುದಕ್ಕೆ ಕಸಿವಿಸಿಗೊಳ್ಳುವವರಿಲ್ಲವೇ? ಪಕ್ಕದ ಮನೆಗೆ ಫ್ರಿಡ್ಜು, ವಾಷಿಂಗ್ ಮೆಷೀನು , ಟಿ.ವಿ. ಅಥವಾ ಇನ್ನೇನೋ ಬಂದರೆ ಸಂಕಟ ಪಡುವವರ ಸಂಖ್ಯೆ ಎಷ್ಟಿಲ್ಲ? ಅದರಿಂದ ಅವರಿಗೇನೂ ತೊಂದರೆ ಆಗದಿದ್ದರೂ ಏನೋ ಆದಂಥ ಅನುಭವ..
      ಒಂದು ರೀತಿಯಲ್ಲಿ ಅಲ್ಲಾಹನ ಜೊತೆ ಇಬ್ಲೀಸ್ ಮಾಡಿದ್ದು ಪಂಥಾಹ್ವಾನ. ನಾನು ನನ್ನ ಈ ಸ್ವಭಾವಗಳಿಂದ ನಿನ್ನ ಮಣ್ಣಿನ ಮಕ್ಕಳನ್ನು ಕೆಡಿಸುತ್ತೇನೆ ಎಂದಾತ ವಾದಿಸಿದ. ಎಲ್ಲರನ್ನೂ ಸಾಧ್ಯವಿಲ್ಲ ಎಂದು ಅಲ್ಲಾಹನು ಮರುತ್ತರಿಸಿದ. ಗುಲಾಮತನವನ್ನು ಪೋಷಿಸಿ, ಶ್ರೇಣೀಕೃತ ಸಮಾಜವನ್ನು ರಚಿಸಿ, ಮಣ್ಣು, ನೀರು, ವಾತಾವರಣವನ್ನು ಮಲಿನಗೊಳಿಸಿ, ಅಸೂಯೆ, ಅಹಂಕಾರಗಳ ಮೂಟೆಯನ್ನೇ ತಯಾರು ಗೊಳಿಸಿ.. ಇಬ್ಲೀಸ್ ತನ್ನ ಸಾಮರ್ಥ್ಯವನ್ನು  ಪ್ರದರ್ಶಿಸುತ್ತಲೇ ಇದ್ದಾನೆ. ಮಾತ್ರವಲ್ಲ, ಈ ಮೂಲಕ ಸೃಷ್ಟಿಕರ್ತನ ನಿಷ್ಥ  ದಾಸರಿಗೆ ಸವಾಲು ಒಡ್ಡುತ್ತಲೇ ಇದ್ದಾನೆ. ನಿಜವಾಗಿ, ಈ ಸವಾಲನ್ನು ಅತ್ಯಂತ ಸ್ಫೂರ್ತಿಯುತವಾಗಿ ಎದುರಿಸುವುದಕ್ಕೆ ತರಬೇತಿ ಕೊಡುವುದೇ ರಮಝಾನ್ ನ  ಉಪವಾಸ. ಇದು ಮನುಷ್ಯನನ್ನು ಇಬ್ಲೀಸನ ದಾಸ್ಯತ್ವದಿಂದ ಸೃಷ್ಟಿಕರ್ತನ ದಾಸ್ಯತ್ವಕ್ಕೆ ವರ್ಗಾವಣೆಗೊಳಿಸುವಂಥದ್ದು. ಅಂದಹಾಗೆ, ಸೃಷ್ಟಿಕರ್ತ ಮತ್ತು ಇಬ್ಲೀಸನ ಮಧ್ಯೆ ನಡೆದ ವಾದ-ಪ್ರತಿವಾದವನ್ನು ಪವಿತ್ರ ಕುರ್ಆನ್ ಎತ್ತಿ ಹೇಳಿದ್ದು, ಮನುಷ್ಯ ಇಬ್ಲೀಸನ ದಾರಿಯನ್ನು ಅನುಸರಿಸಬೇಕೆಂದು ಅಲ್ಲವಲ್ಲ. ಯಾರಲ್ಲಿ ಇಬ್ಲೀಸನ ಗುಣ ಇದೆಯೋ ಅವರು ತಿದ್ದಿಕೊಳ್ಳುವುದಕ್ಕೆ ಸೃಷ್ಟಿಕರ್ತನು ರಮಝಾನನ್ನು ಅತ್ಯಂತ ಸೂಕ್ತ ಸಂದರ್ಭವಾಗಿ ಪರಿಗಣಿಸಿದ್ದಾನೆ. ಇಬ್ಲೀಸ್ ನ  ಸ್ವಭಾವವು ಸಾಮಾಜಿಕವಾಗಿ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ವಿವರಿಸುವುದಕ್ಕೆ ಘಟನೆಗಳನ್ನು ಉಲ್ಲೇಖಿಸುವ ಅಗತ್ಯವೇ ಇಲ್ಲ. ಆದ್ದರಿಂದ ರಮಝಾನ್ ಎಂಬುದು ಮನುಷ್ಯನನ್ನು ಇಬ್ಲೀಸನ ಪ್ರಭಾವದಿಂದ ಬಿಡಿಸುವ ಪ್ರಭಾವಶಾಲಿ ಆಯುಧವಾಗಿದೆ. ಈ ಆಯುಧವನ್ನು ಎತ್ತಿಕೊಂಡು ಸ್ವಯಂ ಸುಧಾರಿಸಲು ಮತ್ತು ಆ ಮುಖಾಂತರ ಸೃಷ್ಟಿಕರ್ತನ ನಿಷ್ಠ ದಾಸರಲ್ಲಿ ಸೇರಿಕೊಳ್ಳಲು ಪ್ರಯತ್ನಿಸಬೇಕು. ನಿಜವಾಗಿ ರಮಝಾನನ್ನು ಸದುಪಯೋಗಪಡಿಸುವುದೆಂದರೆ ಇಬ್ಲೀಸನ್ನು ಸೋಲಿಸುವುದೆಂದರ್ಥ.
       ನಾವು ಸೋಲಬಾರದೆಂಬುದೇ ರಮಝಾನ್ ನ  ಕಳಕಳಿ.

Tuesday, July 10, 2012

ಹಾಶಿಮ್ ಆಮ್ಲನನ್ನು ಶೇರ್ ಮಾಡುವುದರಲ್ಲೇ ತೃಪ್ತಿ ಹೊಂದಬೇಕೆ?

ಮೈಕೆಲ್ ಜಾನ್ಸನ್
ಕಾರ್ಲ್ ಲೂಯಿಸ್
ಮೈಕೆಲ್ ಫೆಲ್ಪ್ಸ್
ಜೇವಿಯರ್ ಸೊಟೊಮೆಯರ್
ಮೈಕೆಲ್ ಜೋರ್ಡಾನ್
ಉಸೇನ್ ಬೋಲ್ಟ್
ಉಸೇನ್ ಬೋಲ್ಟ್
   ..ಒಲಿಂಪಿಕ್ಸ್ ನ  ಕುರಿತಂತೆ ಚರ್ಚೆ ಆರಂಭವಾದಾಗಲೆಲ್ಲಾ ಮೇಲಿನ ಹೆಸರುಗಳು ಯಾವತ್ತೂ ಉಲ್ಲೇಖಕ್ಕೆ ಒಳಗಾಗುತ್ತವೆ. ಫೆಲ್ಪ್ಸ್ ಇಲ್ಲದ ಈಜು ಕೊಳವನ್ನು ಹೇಗೆ ವೀಕ್ಷಿಸುವುದು ಎಂದು ಅಸಂಖ್ಯ ಮಂದಿ ಟ್ವೀಟ್ ಮಾಡುತ್ತಾರೆ. 100 ಮತ್ತು 200 ಮೀಟರ್ ಓಟದಲ್ಲಿ ಭಾಗವಹಿಸಿ ಬಳಿಕ ಅದೇ ಉತ್ಸಾಹದಲ್ಲಿ ಉದ್ದ ಜಿಗಿತಕ್ಕೆ (ಲಾಂಗ್ ಜಂಪ್) ಸಿದ್ಧವಾಗುವ ಕಾರ್ಲ್ ಲೂಯಿಸ್ ನನ್ನು  ಮಾಧ್ಯಮಗಳು ಮತ್ತೆ ಮತ್ತೆ ಸ್ಮರಿಸುತ್ತವೆ. ಬೆನ್ ಜಾನ್ಸನ್ ಅನ್ನುವ ಕಪ್ಪು ಓಟಗಾರ, 100 ಮೀಟರ್ ಓಟವನ್ನು ವಿಶ್ವದಾಖಲೆಯೊಂದಿಗೆ ಮುಗಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟದ್ದನ್ನೂ ಬಳಿಕ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಪದಕ ಮರಳಿಸಿದ್ದನ್ನೂ ಜಗತ್ತು ಸಂಕಟದಿಂದ ನೋಡುತ್ತದೆ. 1993ರಲ್ಲಿ ಕ್ಯೂಬಾದ ಜೇವಿಯರ್ ಸೊಟೋಮೆಯರ್ ನು  2.45 ಮೀಟರ್ ಎತ್ತರಕ್ಕೆ ಜಿಗಿದು (ಹೈಜಂಪ್) ವಿಶ್ವವನ್ನೇ ದಂಗುಬಡಿಸಿದ್ದನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ. 100 ಮತ್ತು 200 ಮೀಟರ್ ಓಟದಲ್ಲಿ ಎರಡೆರಡು ಬಾರಿ ವಿಶ್ವದಾಖಲೆ ಬರೆದು ಇದೀಗ ಮತ್ತೆ ಓಟಕ್ಕೆ ಸಜ್ಜಾಗಿರುವ ಜಮೈಕಾದ ಉಸೇನ್ ಬೋಲ್ಟ್ ನ  ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಲೇ ಇವೆ. ಆತ ನಡೆಸುತ್ತಿರುವ ತಯಾರಿಯ ಬಗ್ಗೆ ಪೋಟೋಗಳು ಪ್ರಕಟವಾಗುತ್ತಿವೆ. ಇದೇ ಜುಲೈ 27ರಂದು ಲಂಡನ್ನಿನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡೆಯಲ್ಲಿ 100 ಮೀಟರ್ ಓಟವನ್ನು ಈತ 9.40 ಸೆಕೆಂಡ್ ಗಳೊಳಗೆ ದಾಟಿ ಮತ್ತೆ ಹೊಸ ವಿಶ್ವದಾಖಲೆ ಬರೆಯುತ್ತಾನೆ ಎಂದು ಮೈಕೆಲ್ ಜಾನ್ಸನ್ ಈಗಾಗಲೇ ಹೇಳಿಕೆಯನ್ನೂ ನೀಡಿದ್ದಾರೆ. ಒಂದು ರೀತಿಯಲ್ಲಿ ಇವತ್ತು ಪತ್ರಿಕೆ, ಟಿ.ವಿ., ಫೇಸ್ ಬುಕ್, ಟ್ವೀಟರ್, ಆರ್ಕುಟ್.. ಎಲ್ಲವೂ ಒಲಿಂಪಿಕ್ಸ್ ನ  ಬಗ್ಗೆಯೇ ಮಾತಾಡತೊಡಗಿವೆ. ನಿಜವಾಗಿ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅತ್ಯಧಿಕ ಚಿನ್ನ ದೋಚಿದ ಚೀನಾ ಮತ್ತು ಅಮೇರಿಕದ ಮಧ್ಯೆ ಈ ಬಾರಿ ತೀವ್ರ ಪೈಪೋಟಿಯಿದೆ. ಬ್ರಿಟನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ರಶ್ಯಾ.. ಎಲ್ಲವೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಗುರಿಯಿಟ್ಟು ಕ್ರೀಡಾಳುಗಳನ್ನು ಸಜ್ಜುಗೊಳಿಸುತ್ತಿವೆ. ಆದರೆ ಇಲ್ಲೆಲ್ಲೂ ಯಾವ ಚರ್ಚೆಯಲ್ಲೂ ಮುಸ್ಲಿಮ್ ರಾಷ್ಟ್ರಗಳ, ಮುಸ್ಲಿಮ್ ಕ್ರೀಡಾಳುಗಳ ಹೆಸರು ಕಾಣಿಸಿಕೊಳ್ಳುತ್ತಲೇ ಇಲ್ಲ, ಯಾಕೆ?
             1896ರಲ್ಲಿ ಅಥೆನ್ಸ್ ನಲ್ಲಿ ನಡೆದ ಮೊದಲ ಒಲಿಂಪಿಕ್ಸ್ ನಲ್ಲಿ ಕೇವಲ 14 ರಾಷ್ಟ್ರಗಳ 241 ಕ್ರೀಡಾಳುಗಳಷ್ಟೇ ಭಾಗವಹಿಸಿದ್ದರು. ಆದರೆ ಈ ಬಾರಿಯ ಲಂಡನ್ ಒಲಿಂಪಿಕ್ಸ್ ನಲ್ಲಿ 207 ರಾಷ್ಟ್ರಗಳು ಪಾಲುಗೊಳ್ಳುವ ಸಾಧ್ಯತೆ ಇದೆ. 13 ಸಾವಿರದಷ್ಟು ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದೂ ಎಷ್ಟು ಮುಸ್ಲಿಮ್ ರಾಷ್ಟ್ರಗಳು ಪದಕಗಳ ನಿರೀಕ್ಷೆಯಲ್ಲಿವೆ? ಇಟಲಿ, ನೆದರ್ ಲ್ಯಾಂಡ್, ಜಮೈಕಾ, ಕೆನ್ಯಾ, ಬೆಲಾರೂಸ್, ಕ್ಯೂಬಾದಂಥ ಸಣ್ಣ ಪುಟ್ಟ ರಾಷ್ಟ್ರಗಳೂ ಬಂಗಾರವನ್ನು ದೋಚುತ್ತಾ ಪದಕ ಪಟ್ಟಿಯಲ್ಲಿ ಪ್ರಬಲ ರಾಷ್ಟ್ರಗಳಿಗೆ ಸವಾಲೊಡ್ಡುತ್ತಿರುವಾಗ, ಶ್ರೀಮಂತ ಮುಸ್ಲಿಮ್ ರಾಷ್ಟ್ರಗಳ ಪಾಡಾದರೂ ಏನು? ಸೌದಿ ಅರೇಬಿಯಾ, ಈಜಿಪ್ಟ್, ಇರಾಕ್, ಲಿಬಿಯಾ, ಬಂಗ್ಲಾಗಳೆಲ್ಲಾ ಕನಿಷ್ಠ  ಕಂಚಿನ ಪದಕವನ್ನಾದರೂ ಪಡಕೊಳ್ಳುವುದಕ್ಕೆ ಅಸಮರ್ಥವಾಗುತ್ತಿರುವುದೇಕೆ?  2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮುಸ್ಲಿಮ್ ರಾಷ್ಟ್ರಗಳ ಹೆಸರುಗಳನ್ನು ಓದಬೇಕಾದರೆ ಪಟ್ಟಿಯನ್ನು ತಲೆ ಕೆಳಗಾಗಿಸಿ ಓದಬೇಕು. ಅಲ್ಲೂ ಕಾಣಸಿಗುವುದು ಏಳೆಂಟು ಮುಸ್ಲಿಮ್ ರಾಷ್ಟ್ರಗಳ ಹೆಸರುಗಳು ಮಾತ್ರ. 55 ಮುಸ್ಲಿಮ್ ರಾಷ್ಟ್ರಗಳಲ್ಲಿ ಉಳಿದೆಲ್ಲವೂ ಎಲ್ಲಿಗೆ ಹೋದುವು? ಇಥಿಯೋಪಿಯಾದಂಥ ದಟ್ಟ ದರಿದ್ರ ರಾಷ್ಟ್ರವೇ ಬೀಜಿಂಗ್ ನಲ್ಲಿ 7 ಪದಕಗಳನ್ನು ಪಡೆದಿರುವಾಗ ಶ್ರೀಮಂತ ಮುಸ್ಲಿಮ್ ರಾಷ್ಟ್ರಗಳಿಗೇಕೆ ಅದು ಸಾಧ್ಯವಾಗುತ್ತಿಲ್ಲ? ಒಲಿಂಪಿಕ್ಸ್ ನ  112 ವರ್ಷಗಳ ಇತಿಹಾಸದಲ್ಲಿ ಈವರೆಗೆ 15,100 ಪದಕಗಳನ್ನು ಸ್ಪರ್ಧೆಗಿಡಲಾಗಿದೆ. ಅದರಲ್ಲಿ ಮುಸ್ಲಿಮ್ ರಾಷ್ಟ್ರಗಳು ಗೆದ್ದಿರುವುದು ಬರೇ 1.9%ರಷ್ಟು ಮಾತ್ರ. ಯಾಕಿವೆಲ್ಲ?
 ಇಸ್ಲಾಮೀ  ಇತಿಹಾಸದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ..
         ಅಮ್ರ್ ಬಿನ್ ಆಸ್ ರು  ರಾಜ್ಯಪಾಲರಾಗಿದ್ದ ಸಿರಿಯದಲ್ಲಿ ಓಟದ ಸ್ಪರ್ಧೆಯೊಂದು ನಡೆಯುತ್ತದೆ. ಅದರಲ್ಲಿ ಅಬ್ದುಲ್ಲಾ ಅನ್ನುವ ಅವರ ಮಗನೂ ಭಾಗವಹಿಸುತ್ತಾನೆ. ಸ್ಪರ್ಧೆಯಲ್ಲಿ ಕ್ರೈಸ್ತ ಯುವಕ ಗೆಲ್ಲುತ್ತಾನೆ. ಅಬ್ದುಲ್ಲಾನಿಗೆ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರೈಸ್ತ ಯುವಕನನ್ನು ಥಳಿಸುತ್ತಾನೆ. ಆತ ಖಲೀಫಾ (ಪ್ರಧಾನಮಂತ್ರಿ) ಉಮರ್ ರಿಗೆ(ರ) ದೂರು ಕೊಡುತ್ತಾನೆ. ವಿಚಾರಣೆ ನಡೆಸಿದ ಅವರು ಅಬ್ದುಲ್ಲಾನಿಗೆ ಮರಳಿ ಹೊಡೆಯುವಂತೆ ಕ್ರೈಸ್ತ ಯುವಕನಿಗೆ ಆಜ್ಞಾಪಿಸುತ್ತಾರಲ್ಲದೆ, ಪ್ರಜೆಗಳು ಆಡಳಿತಗಾರರ ಗುಲಾಮರಲ್ಲ ಎಂದು ಸಾರುತ್ತಾರೆ.. ಇದೊಂದೇ ಅಲ್ಲ,
        ಪ್ರವಾದಿ ಮುಹಮ್ಮದ್ ರು (ಸ) ಕುದುರೆಗಳ ಓಟದ ಸ್ಪರ್ಧೆ, ಈಜು ಸ್ಪರ್ಧೆಗಳನ್ನು ನಡೆಸುತ್ತಿದ್ದರು, ಸೇನೆಗೆ ಯುವಕರನ್ನು ಭರ್ತಿಗೊಳಿಸುವುದಕ್ಕಿಂತ ಮೊದಲು ಕುಸ್ತಿ ಪಂದ್ಯಾಟವನ್ನು ಏರ್ಪಡಿಸುತ್ತಿದ್ದರು, ಹಸ್ಸಾನ್ ಬಿನ್ ಸಾಬಿತ್ ಎಂಬ ಕವಿಯಲ್ಲಿ (ಶಾಇರುರಸೂಲ್) ಸ್ಪರ್ಧಾಮನೋಭಾವವನ್ನು ಹುಟ್ಟುಹಾಕಿದ್ದರು, ಬಿಲ್ವಿದ್ಯೆ ಕಲಿಯುವಂತೆ ಪ್ರೇರೇಪಿಸಿದ್ದರು.. ಎನ್ನುವುದೆಲ್ಲಾ ಐತಿಹಾಸಿಕ ಸತ್ಯ. ಪವಿತ್ರ ಕುರ್ಆನಿನ 6ನೇ ಅಧ್ಯಾಯ ಅಲ್ ಅನ್ಫಾಲ್ ನ 60ನೇ ವಚನವನ್ನು ವ್ಯಾಖ್ಯಾನಿಸುತ್ತಾ, `ಮುಸ್ಲಿಮರು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಈ ವಚನ ಪುರಾವೆ..' ಎಂದು ವಿಶ್ವವಿಖ್ಯಾತ ವಿದ್ವಾಂಸ ಯೂಸುಫುಲ್ ಕರ್ಝಾವಿಯವರೇ ಹೇಳಿದ್ದಾರೆ. ಇವೆಲ್ಲ ಏನು, ಸ್ಪರ್ಧೆ ಅಸ್ಪøಶ್ಯವಲ್ಲ ಎಂದಲ್ಲವೇ ಇದರರ್ಥ? ಇಷ್ಟಿದ್ದೂ ಮುಸ್ಲಿಮ್ ಜಗತ್ತೇಕೆ ಕ್ರೀಡಾಕೂಟಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ?
       1936ರಲ್ಲಿ ಜರ್ಮನಿಯಲ್ಲಿ ನಡೆದ 11ನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಹಿಟ್ಲರ್ ಕರಿಯರಿಗೆ ಅವಕಾಶ ಕೊಡಲಿಲ್ಲ. ಜಗತ್ತು ಪ್ರತಿಭಟಿಸಿತು. ಇವತ್ತು ಅದೇ ಕಪ್ಪು ಬಣ್ಣಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದ್ದರೆ, ಅದಕ್ಕೆ ಈ ಕರಿಯರು ಕ್ರೀಡೆಗಳಲ್ಲಿ ಪ್ರದರ್ಶಿಸುತ್ತಿರುವ ಅಪೂರ್ವ ಪ್ರತಿಭೆಯೇ ಕಾರಣವಲ್ಲವೇ? ಅಷ್ಟಕ್ಕೂ ಅಸಂಖ್ಯ ಬಿಳಿ ಓಟಗಾರರ ಎದುರು ಉಸೇನ್ ಬೋಲ್ಟ್ ಅನ್ನುವ ಕಪ್ಪು ಮನುಷ್ಯ ಸಂಭ್ರಮಿಸುವುದು, ತನ್ನೆರಡೂ ಕೈಗಳನ್ನು ಗಾಳಿಯಲ್ಲಿ ಹಾರಿಸಿ ಖುಷಿ ಪಡುವುದನ್ನು ಒಮ್ಮೆ ಊಹಿಸಿ. ಎಡ-ಬಲಗಳಲ್ಲಿರುವ ಬಿಳಿ ಓಟಗಾರರ ನಡುವೆ ಎತ್ತರದ ಸ್ಥಾನದಲ್ಲಿ ನಿಂತು ಬಂಗಾರದ ಪದಕವನ್ನು ಕೊರಳಲ್ಲಿ ನೇತಾಡಿಸುವುದನ್ನು ನಿಲುಕಿಸಿ. ಅದು ಬಿಳಿ ಜಗತ್ತಿಗೆ ಕೊಡುವ ಮಾರಕ ಏಟೇ ಅಲ್ಲವೇ? ಜಮೈಕಾದಲ್ಲಿ, ಇಥಿಯೋಪಿಯಾ, ಗ್ರೆನೆಡಾ ಮತ್ತು ಇನ್ನಿತರ ಕಪ್ಪು ಮನುಷ್ಯರೇ ಇರುವ ಆಫ್ರಿಕನ್ ರಾಷ್ಟ್ರಗಳಲ್ಲಿ ಅಣುಬಾಂಬು ಇಲ್ಲದೇ ಇರಬಹುದು. ಡ್ರೋನ್ ಕ್ಷಿಪಣಿಗಳನ್ನು ತಯಾರಿಸುವುದು ಅವಕ್ಕೆ ಗೊತ್ತಿಲ್ಲದೇ ಇರಬಹುದು. ಆದರೆ ಅಮೇರಿಕ, ಜರ್ಮನಿ, ಬ್ರಿಟನ್ ನಂಥ ಬಿಳಿ ಮಾನಸಿಕತೆಯ ಜಗತ್ತಿಗೆ ಅಲ್ಲಿನ ಕಪ್ಪು ಮನುಷ್ಯರು ಕ್ರೀಡಾ ಜಗತ್ತಿನಲ್ಲಿ ಒಡ್ಡುತ್ತಿರುವ ಸವಾಲೇನು ಸಣ್ಣದೇ? ಅಂದಹಾಗೆ ಕಪ್ಪು ಮನುಷ್ಯರನ್ನು ಈಗಲೂ ಅತ್ಯಂತ ಅಸಡ್ಡೆಯಿಂದ ನೋಡುತ್ತಿರುವ ಅಮೇರಿಕಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹೆಸರನ್ನು ತಂದುಕೊಟ್ಟಿರುವುದು ಆ ದೇಶದವರೇ ಆದ ಕಾರ್ಲ್ ಲೂಯಿಸ್, ಮುಹಮ್ಮದ್ ಅಲಿ ಕ್ಲೇ, ಮೈಕೆಲ್ ಜಾನ್ಸನ್.. ಮುಂತಾದ ಕಪ್ಪು  ಮನುಷ್ಯರೇ. ಇವರನ್ನು ಹೊರಗಿಟ್ಟು ಇವತ್ತು ಅಮೇರಿಕನ್ ಚರಿತ್ರೆಯನ್ನು ಯಾರಿಗಾದರೂ ಬರೆಯಲು ಸಾಧ್ಯವೇ?
         ಇವತ್ತು ಜಗತ್ತಿನ ವಾತಾವರಣ ಹೇಗಿದೆಯೆಂದರೆ, ಒಬ್ಬ ಕ್ರೀಡಾಳುವಿಗೆ ಜಗತ್ತಿನ ಚರ್ಚೆಯನ್ನೇ ಬದಲಿಸುವ ಸಾಮರ್ಥ್ಯ  ಇದೆ. ಇವತ್ತು ಉದ್ಯಮದ ಸ್ವರೂಪ ಪಡಕೊಂಡಿರುವುದು ಬರೇ ಕ್ರೀಡೆಯಷ್ಟೇ ಅಲ್ಲ, ಕ್ರೀಡಾಳು ಕೂಡಾ. ಒಂದು ವೇಳೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಉಸೇನ್ ಬೋಲ್ಟ್ ಘೋಷಿಸುವುದನ್ನೊಮ್ಮೆ ಸುಮ್ಮನೆ ಊಹಿಸಿಕೊಳ್ಳಿ. ಏನಾದೀತು? ಇಡೀ ಬ್ರಿಟನ್ನೇ ತಬ್ಬಿಬ್ಬಾಗದೇ? ಒಲಿಂಪಿಕ್ಸ್ ಸಮಿತಿಯೇ ಆತನ ಕಾಲಡಿಗೆ ಬೀಳುವ ಸಾಧ್ಯತೆ ಇಲ್ಲವೇ? ಯಾಕೆಂದರೆ ಡೌ, ಮೆಕ್ ಡೊನಾಲ್ಡ್, ಕೋಕಕೋಲಾ, ಏಸರ್, ಜನರಲ್ ಎಲೆಕ್ಟ್ರಿಕಲ್ಸ್, ಒಮೆಗಾ, ಸ್ಯಾಮ್ಸಂಗ್, ಪೆನಸಾನಿಕ್.. ಮುಂತಾದ ಬೃಹತ್ ಕಂಪೆನಿಗಳು ಇವತ್ತು ಲಂಡನ್ ಒಲಿಂಪಿಕ್ಸ್ ಗೆ  ಪ್ರಾಯೋಜಕವಾಗಿರುವುದೇ ಇಂಥ ಕ್ರೀಡಾಳುಗಳನ್ನು ಕೇಂದ್ರೀಕರಿಸಿಕೊಂಡು. ಉಸೇನ್ ಬೋಲ್ಟ್, ರೋಜರ್ ಫೆಡರರ್, ನಡಾಲ್ ರನ್ನು ನೋಡುವುದಕ್ಕೆಂದೇ ದೊಡ್ಡದೊಂದು ವೀಕ್ಷಕ ವರ್ಗ ಕ್ರೀಡಾಂಗಣಕ್ಕೆ ಬರುತ್ತದೆ. ಅದಕ್ಕೆ ಪೂರಕವಾಗಿ ಇಂಥ ಕಂಪೆನಿಗಳು ಮಾಧ್ಯಮಗಳಲ್ಲಿ ಚರ್ಚೆಯನ್ನೂ ಹುಟ್ಟು ಹಾಕುತ್ತವೆ. ಕೆವಿನ್ ಬೋರ್ಲಿ, ಕಿರಾನಿ ಜೇಮ್ಸ್, ಶಾನ್ ಮೆರಿಟ್, ಜೊನಾಥನ್ ಬೋರ್ಲಿ.. ಇವರಲ್ಲಿ 400 ಮೀಟರ್ ಓಟವನ್ನು ಗೆಲ್ಲುವವರು ಯಾರು ಎಂದೆಲ್ಲಾ ಮಾಧ್ಯಮಗಳು ಚರ್ಚಿಸುತ್ತಿದ್ದರೆ ಅದರಲ್ಲಿ ಈ ಕಂಪೆನಿಗಳದ್ದೂ ಪಾಲಿದೆ. ಒಂದು ವೇಳೆ ರಫೆಲ್ ನಡಾಲ್ ಭಾರತದವನಾಗಿದ್ದು, ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಡೌ ಕಂಪೆನಿಯ ಪ್ರಾಯೋಜಕತ್ವವನ್ನು ಪ್ರತಿಭಟಿಸಿ ತಾನು ಒಲಿಂಪಿಕ್ಸ್ ನಲ್ಲಿ ಭಾಗವಹಿಸುವುದಿಲ್ಲ ಅನ್ನುತ್ತಿದ್ದರೆ ಏನಾಗುತ್ತಿತ್ತು?  ಒಂದು ವೇಳೆ ಮೈಕೆಲ್ ಫೆಲ್ಪ್ಸ್ ಅನ್ನುವ ಆಸ್ಟ್ರೇಲಿಯದ ಮೀನು ಇರಾಕ್ ನದ್ದಾಗಿದ್ದರೆ ಮತ್ತು ಇರಾಕ್ ಮೇಲಿನ ಅತಿಕ್ರಮಣದಲ್ಲಿ ಬ್ರಿಟನ್ ನ  ಪಾತ್ರವನ್ನು ಖಂಡಿಸಿ ಲಂಡನ್ ಒಲಿಂಪಿಕ್ಸ್ ಗೆ  ಬಹಿಷ್ಕಾರ ಘೋಷಿಸಿರುತ್ತಿದ್ದರೆ ಹೇಗಿರುತ್ತಿತ್ತು? ನಿಜವಾಗಿ, ಅಮೇರಿಕದ ಅತಿಕ್ರಮಣ ನೀತಿಯನ್ನು, ಡೌನಂಥ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾರ್ಥ ಚಿಂತನೆಯನ್ನು ಪ್ರತಿಭಟಿಸಿ ರಾಲಿ ನಡೆಸಿದರೆ ಎಷ್ಟು ಕವರೇಜು ಸಿಗಬಹುದೋ ಅದಕ್ಕಿಂತ ನೂರು ಪಟ್ಟು ಕವರೇಜು ಮತ್ತು ಪ್ರಭಾವ ಇಂಥ ಐಕಾನ್ ಗಳ ನಿಲುವಿನಿಂದ ಖಂಡಿತ ಸಿಗಬಲ್ಲುದು. ಅವರ ಹೇಳಿಕೆಗಳನ್ನು ಎದುರಿಟ್ಟುಕೊಂಡು ಜಗತ್ತು ಖಂಡಿತ ಚರ್ಚಿಸಬಲ್ಲುದು. ಇಂಥದ್ದೊಂದು ಸಾಧ್ಯತೆಯನ್ನು ಬಳಸಿಕೊಳ್ಳುವುದಕ್ಕೆ ಮುಸ್ಲಿಮ್ ಜಗತ್ತಿಗೆ ಈವರೆಗೂ ಸಾಧ್ಯವಾಗಿಲ್ಲವೇಕೆ?
        ಇವತ್ತು ಮಾಧ್ಯಮಗಳು ಚರ್ಚಿಸುತ್ತಿರುವ ಒಲಿಂಪಿಕ್ಸ್ ನ  ಪ್ರಮುಖ ಕ್ರೀಡಾಳುಗಳ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ನ  ಹೆಸರಿಲ್ಲ. ಆದರೆ ಉದ್ದಕ್ಕೂ ಕಪ್ಪು ಮನುಷ್ಯರ ಹೆಸರಿದೆ. ಈ ಒಲಿಂಪಿಕ್ಸ್ ನ  ಒಟ್ಟು 302 ಪದಕಗಳ ಗೊಂಚಲಿಗೆ ಕಣ್ಣಿಟ್ಟಿರುವವರಲ್ಲಿ ದೊಡ್ಡದೊಂದು ಸಂಖ್ಯೆ ಕಪ್ಪು ಮನುಷ್ಯರದ್ದೇ. ಅವರಿಲ್ಲದೇ ಕ್ರೀಡಾಕೂಟ ಇಲ್ಲ ಅನ್ನುವ ವಾತಾವರಣ ಸದ್ಯ ನಿರ್ಮಾಣವಾಗಿ ಬಿಟ್ಟಿದೆ. ಅಂದಹಾಗೆ ಮುಸ್ಲಿಮ್ ಜಗತ್ತು ಮೈ ಚಳಿ ಬಿಟ್ಟು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ಕೆಲವೊಂದು ನಿಯಮಗಳು ಅಡ್ಡಿಯಾಗಿವೆ ಅನ್ನುವುದನ್ನು ಅಲ್ಲ ಗಳೆಯುತ್ತಿಲ್ಲ. ಮುಸ್ಲಿಮ್ ಮಹಿಳೆಯರು ಅನೇಕಾರು ಕ್ರೀಡಾ ಪ್ರಕಾರಗಳಲ್ಲಿ ಭಾಗವಹಿಸಲಾಗದಷ್ಟು ಅವನ್ನು ಕೆಡಿಸಲಾಗಿದೆ ಅನ್ನುವುದೂ ನಿಜ. ಆದರೆ ಪುರುಷರಿಗೆ ಅಂಥ ಸಮಸ್ಯೆ ಇಲ್ಲವಲ್ಲ. ಆದರೂ ಅವರೇಕೆ ಅಪರೂಪವಾಗುತ್ತಿದ್ದಾರೆ? ಕ್ರೀಡೆಯನ್ನು ಅಸ್ಪøಶ್ಯ ರೂಪದಲ್ಲಿ ಮುಸ್ಲಿಮ್ ಜಗತ್ತು ನೋಡುತ್ತಿರುವುದೇಕೆ? ಎಲ್ಲೋ ಒಬ್ಬ ಹಾಶಿಮ್ ಆಮ್ಲಾ ಎಂಬ ಕ್ರಿಕೆಟಿಗ ಮದ್ಯದ ಜಾಹೀರಾತನ್ನು ತನ್ನ ಜೆರ್ಸಿಯಲ್ಲಿ (ಟೀಶರ್ಟ್) ಹಾಕಲು ನಿರಾಕರಿಸಿದ್ದನ್ನು ಓದುತ್ತಾ, ಫೇಸ್ ಬುಕ್ ನಲ್ಲಿ ಶೇರ್ (share ) ಮಾಡುತ್ತಾ ಕಳೆಯುವುದನ್ನೇ ಇನ್ನೂ ನಾವು ಮಾಡುತ್ತಿರಬೇಕೇ?
ಲಂಡನ್ ಒಲಿಂಪಿಕ್ಸ್ ನಲ್ಲಿ ಬಾಂಬ್ ಸ್ಫೋಟಿಸಲು ಸಂಚು ಹೂಡಿದ್ದ 6 ಮಂದಿಯನ್ನು ಬಂಧಿಸಲಾಗಿದೆ ಎಂಬ ಜುಲೈ 5ರ ಮಾಧ್ಯಮ ಸುದ್ದಿಯನ್ನು ಓದುತ್ತಾ ನೋವಾಯಿತು. ಆ ಸುದ್ದಿಯ ಹಿಂದೆ ಪ್ರಚಾರದ ಸ್ಟಂಟ್ ಇದ್ದಿರಬಹುದಾದರೂ ಏನೋ ಶೂನ್ಯ ಭಾವ ಕಾಡಿತು..

Tuesday, July 3, 2012

ಅಷ್ಟನ್ನೂ ಅವಳೊಬ್ಬಳೇ ಮಾಡುತ್ತಾಳಲ್ಲ ಎಂದು ನಾವೆಂದಾದರೂ ಆಲೋಚಿಸಿದ್ದೇವಾ?

     ಅವರಿಬ್ಬರು ಮದುವೆಯಾದರು..
ಮದುವೆಗೆ ಆಗಮಿಸಿದ ಎಲ್ಲರೂ ವಧೂ - ವರರನ್ನು ಹೊಗಳಿದ್ದೇ ಹೊಗಳಿದ್ದು. ಅಪರೂಪದ ಜೋಡಿ ಎಂದರು. made for  each other  ಅಂದರು. ಡಿಕ್ಷನರಿಯಲ್ಲಿ, ಪತ್ರಿಕೆ, ಕಾದಂಬರಿಗಳಲ್ಲಿ ಏನೆಲ್ಲ ಆಲಂಕಾರಿಕ ಪದ, ಉಕ್ತಿಗಳನ್ನು ಓದಿದ್ದಾರೋ ಅವೆಲ್ಲವನ್ನೂ ಅವರಿಬ್ಬರ ಮೇಲೆ ಸುರಿಸಿ ಉಬ್ಬಿಸಿದರು. ಜಗತ್ತು ಬಹಳ ಸುಂದರವಾಗಿ ಕಂಡಿತವರಿಗೆ. ತಾವಿಬ್ಬರೂ ಈ ಮೊದಲೇ ಮದುವೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡರು..
       ಹೀಗೆ ಒಂದೆರಡು ತಿಂಗಳುಗಳು ಕಳೆದುವು.
ಒಂದು ದಿನ ಗಂಡನ ಬಳಿ ಬಂದು ಪತ್ನಿ ಹೇಳಿದಳು,
ದಾಂಪತ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ನಾನಿವತ್ತು ಒಂದು ಮ್ಯಾಗಸಿನ್ನಲ್ಲಿ ಓದಿದೆ. ತುಂಬಾ ಹಿಡಿಸಿತು. ನಾವೇಕೆ ಅದನ್ನು ಪ್ರಯೋಗಿಸಿ ನೋಡಬಾರದು?
       ಆತನಿಗೂ ಕುತೂಹಲವಾಯಿತು. 
   ಆಕೆ ಹೇಳಿದಳು,
ನನ್ನಲ್ಲಿ ಇರುವ, ಆದರೆ ನಿಮಗೆ ಇಷ್ಟವಾಗದ ಸ್ವಭಾವಗಳನ್ನು ನೀವು ಒಂದು ಕಾಗದದಲ್ಲಿ ಪಟ್ಟಿ ಮಾಡಬೇಕು. ಹಾಗೆಯೇ ನನಗಿಷ್ಟವಾಗದ ನಿಮ್ಮ ಸ್ವಭಾವಗಳನ್ನು ನಾನೂ ಪಟ್ಟಿ ಮಾಡುವೆ. ಆ ಬಳಿಕ ನಾವಿಬ್ಬರೂ ಒಂದೇ ಟೇಬಲ್ ಮುಂದೆ ಕೂತು ಅದನ್ನು ಓದುವ. ನಮ್ಮನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳುವುದಕ್ಕೆ ಇದು ನೆರವಾಗಬಹುದು ಅಂತ ನನ್ನ ಭಾವನೆ.
   ಆತ ಒಪ್ಪಿದ
ಒಂದು ಬಗೆಯ ಕುತೂಹಲದಿಂದ ಅವರಿಬ್ಬರೂ ಬೇರೆ ಬೇರೆ ಕೋಣೆ ಸೇರಿಕೊಂಡರು. ಬಾಗಿಲು ಮುಚ್ಚಿದರು. ಮದುವೆಯಾದ ದಿನದಿಂದ ಆವರೆಗಿನ ಗಂಡನ ಪ್ರತಿ ವರ್ತನೆಯನ್ನೂ ಆಕೆ ಮರು ಸೃಷ್ಟಿಸಿಕೊಂಡಳು. ಕೆಲವೊಮ್ಮೆ ಆಕೆಗೆ ಸಿಟ್ಟು ಬರುತ್ತಿತ್ತು. ತನ್ನ ಕಲ್ಪನೆಯ ಪತಿ ಮತ್ತು ಈ ನಿಜವಾದ ಪತಿಯ ನಡುವೆ ಇರುವ ಅಂತರವನ್ನು ಬರೆಯುವಾಗ ಭಾವುಕಳಾಗುತ್ತಿದ್ದಳು. ನೀವು ನನ್ನನ್ನು ಅರ್ಥವೇ ಮಾಡುತ್ತಿಲ್ಲ ಅಂತ ಬರೆದಳು. ನೀವು ಅದನ್ನು ಬಿಡಬೇಕು, ಇದನ್ನು ಬಿಡಬೇಕು. ಹಾಗೆ ಮಾತಾಡಬಾರದು, ಹೀಗೆ ಡ್ರೆಸ್ ಮಾಡ ಬಾರದು, ಇಷ್ಟು ಗಂಟೆಗೇ ಬರಬೇಕು.. ಎಂದೆಲ್ಲಾ ಬರೆದಳು. ನನ್ನನ್ನು ಮಾರುಕಟ್ಟೆಗೆ, ಮದುವೆಗೆ, ಔತಣಕ್ಕೆ.. ಕರಕೊಂಡು ಹೋಗುವಾಗ ಹೊಸ ಉಡುಪು ಕೊಡುವ ಬಗ್ಗೆ ನಿಮಗೆ ಗೊಡವೆಯೇ ಇಲ್ಲ ಅಂದಳು. ಆಚೆ ಮನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಬರೆದು, ನಿಮಗಂತೂ ಆ ಕುರಿತು ಕಾಳಜಿಯೇ ಇಲ್ಲ ಅಂದಳು. ವಾಷಿಂಗ್ ಮೆಶೀನು, ಫ್ರಿಡ್ಜು, ಟಿ.ವಿ., ಕಂಪ್ಯೂಟರು, ಸೋಫಾ.. ಮ್ ಮ್ .. ಎಲ್ಲವುಗಳನ್ನು ಪಡಕೊಳ್ಳಲು ನಿಮ್ಮೊಂದಿಗೆ ಎಷ್ಟು ಹೋರಾಡಿದೆ ಅಂದಳು. ನಾನು ಹೇಳದಿದ್ದರೆ ನೀವು ಏನನ್ನೂ ಮಾಡುವುದಿಲ್ಲ ಎಂದು ಸಿಟ್ಟಾದಳು. ನೀವು ಸಂಜೆ ಮನೆಗೆ ಬಂದು ನೀರು ತಾ ಅನ್ನುತ್ತೀರಿ, ಬಿಸಿ ನೀರು ಕೇಳುತ್ತೀರಿ, ಅದೂ-ಇದೂಗಳ ಬಗ್ಗೆ ಪ್ರಶ್ನಿಸುತ್ತೀರಿ.. ನಾನೇನು ಕೆಲಸದವಳಾ.. ಎಂದು ಕಟುವಾಗಿಯೇ ಬರೆದಳು.. ಪುಟಗಳು ತುಂಬುತ್ತಿದ್ದುವು. ನೀವು ಬದಲಾಗಿ, ನಿಮ್ಮ ಇಷ್ಟು ಸ್ವಭಾವಗಳನ್ನು ತಿದ್ದಿಕೊಳ್ಳಿ.. ಅಷ್ಟನ್ನು ಬಿಟ್ಟು ಬಿಡಿ.. ಹೀಗೆ ಸಾಗಿತ್ತು ಆರೋಪ ಪಟ್ಟಿ..
ಮರುದಿನ ಬೆಳಗ್ಗೆ ಅವರಿಬ್ಬರೂ ಟೇಬಲ್ ಮುಂದೆ ಕುಳಿತು ಕೊಂಡರು.
ಇಬ್ಬರ ಕಣ್ಣುಗಳೂ ಸಂದಿಸಿದುವು. ಇಬ್ಬರಲ್ಲೂ ಒಂದು ರೀತಿಯ ದಿಗಿಲು; ಏನಾಗುತ್ತೋ, ಕಾಗದದಲ್ಲಿ ಏನೇನಿವೆಯೋ ಅನ್ನುವ ಕುತೂಹಲ. ಆತ ನಸುನಕ್ಕ. ಆಕೆಯ ಮುಖದಿಂದ  ಇನ್ನೂ ಸಿಟ್ಟಿನ ಕುರುಹು  ಮಾಸಿರಲಿಲ್ಲ.
ನಾನು ಆರಂಭಿಸಲಾ?
ಆಕೆ ಕೇಳಿದಳು. ಆತ ಹೂಂ ಅಂದ. ಆಕೆ 5 ಪುಟಗಳಷ್ಟಿದ್ದ ಪಟ್ಟಿಯನ್ನು ಓದತೊಡಗಿದಳು.
ಆದರೆ, ಓದಿ ಒಂದು ಪುಟವೂ ಆಗಿರಲಿಲ್ಲ. ಗಂಡನ ಕಣ್ಣಿನಿಂದ ನಿಧಾನವಾಗಿ ಕಣ್ಣೀರು ತೊಟ್ಟಿಕ್ಕುವುದನ್ನು ಆಕೆ ಕಂಡಳು. `ಏನಾದರೂ ತಪ್ಪಾಯಿತೆ..' ಓದುವುದನ್ನು ನಿಲ್ಲಿಸಿ ಪ್ರಶ್ನಿಸಿದಳು. ಆತ ತಲೆ ಅಲ್ಲಾಡಿಸಿದ. ಓದನ್ನು ಮುಂದುವರಿಸು ಅಂದ. ಆಕೆ ಮತ್ತೆ ಓದತೊಡಗಿದಳು. ಸಂಪೂರ್ಣ ಓದಿದ ಬಳಿಕ ಆ ಪಟ್ಟಿಯನ್ನು ಟೇಬಲ್ ಮೇಲೆ ಇಟ್ಟಳು. ಬರೆಯುವುದಕ್ಕೆ ಇನ್ನೂ ಇತ್ತು ಅಂದಳು. ಬಳಿಕ ಅದನ್ನು ಸುರುಳಿಯಾಗಿಸುತ್ತಾ, `ಇನ್ನು ನೀವು ಪ್ರಾರಂಭಿಸಿ, ಆ ನಂತರ ನಮ್ಮಿಬ್ಬರ ಪಟ್ಟಿಯ ಕುರಿತಂತೆ ಚರ್ಚಿಸುವ' ಅಂದಳು. ಆತ ಹೇಳಿದ,
ಓದುವುದಕ್ಕೆ ನನ್ನ ಪಟ್ಟಿಯಲ್ಲಿ ಏನೇನೂ ಇಲ್ಲ. ನನ್ನ ಮಟ್ಟಿಗೆ ನೀನು ಅತ್ಯುತ್ತಮ ಹೆಣ್ಣು. ನೀನು ಈಗ ಏನಾಗಿರುವೆಯೋ ಅದುವೇ ನಂಗಿಷ್ಟ. ನಿನ್ನನ್ನು ಬದಲಿಸುವ ಪ್ರಯತ್ನವನ್ನು ನಾನೆಂದೂ ಮಾಡಲಾರೆ. ನಿನ್ನಂಥ ಹೆಣ್ಣು ನನಗೆ ಸಿಕ್ಕಿರುವುದಕ್ಕಾಗಿ ನಾನು ಯಾವತ್ತೂ ಖುಷಿ ಪಡುತ್ತೇನೆ. ನಿನ್ನಲ್ಲಿ ನನಗಾವ ಕೊರತೆಗಳೂ ಕಾಣಿಸುತ್ತಿಲ್ಲ. ನೀನು ಹೀಗೆಯೇ ಇರು, ನಾನದನ್ನೇ ಇಷ್ಟಪಡುತ್ತೇನೆ.. ಯೂ ಆರ್ ಲವ್ಲೀ ಆಂಡ್ ವಂಡರ್ಫುಲ್..
ಆಕೆ ತಲೆ ಕೆಳಗಾಗಿಸುತ್ತಾಳೆ. ಕೆನ್ನೆ ಒದ್ದೆಯಾಗತೊಡಗುತ್ತದೆ.
ನಿಜವಾಗಿ ಈ ಕತೆಯನ್ನು ಇದೇ ರೂಪದಲ್ಲಿ ಓದಬೇಕೆಂದಿಲ್ಲ. ಪತಿಯ ಜಾಗದಲ್ಲಿ ಪತ್ನಿಯನ್ನೂ ಪತ್ನಿಯ ಜಾಗದಲ್ಲಿ ಪತಿಯನ್ನೂ ಕೂರಿಸಬಹುದು. ಮುಂಜಾನೆ ಎದ್ದು ಪತ್ನಿ ಅಡುಗೆ ಮನೆ ಸೇರುತ್ತಾಳೆ. ಪತಿಗೆ 9 ಗಂಟೆಗೆ ಕಚೇರಿಗೆ ತಲುಪಬೇಕು. ಮಗಳ ಶಾಲಾ ಬಸ್ಸು 8 ಗಂಟೆಗೆ ಬರುತ್ತದೆ. 8 ಗಂಟೆಯೊಳಗೆ ಕರೆಂಟು ಹೋಗುವುದರಿಂದ ಬೇಗ ಗ್ರೈಂಡ್ ಮಾಡಬೇಕು, ಇಸ್ತ್ರಿ ಹಾಕಬೇಕು, ನೀರು ತುಂಬಿಸಬೇಕು, ಅಡುಗೆ ಆಗಬೇಕು, ಮಗಳನ್ನು ಎಬ್ಬಿಸಬೇಕು, ಹಲ್ಲುಜ್ಜಬೇಕು, ಶೂ ಪಾಲಿಶು, ಬ್ಯಾಗು ರೆಡಿ ಮಾಡಬೇಕು. 10 ಗಂಟೆಯ ಸ್ನಾಕ್ಸು, 1 ಗಂಟೆಯ ಬ್ರೇಕ್  ಫಾಸ್ಟನ್ನು ಟಿಫಿನಿನಲ್ಲಿ ತುಂಬಿಸಬೇಕು.. ಇತ್ಯಾದಿ ಒತ್ತಡಗಳೊಂದಿಗೆ ಹೆಚ್ಚಿನ ಮಹಿಳೆಯರು ಅಡುಗೆ ಮನೆಯಲ್ಲಿ ಬ್ಯುಝಿ ಆಗಿರುವಾಗ ಅನೇಕ ಪುರುಷರು ಹಾಸಿಗೆಯಲ್ಲಿ ಆರಾಮ ನಿದ್ರೆಯಲ್ಲಿರುತ್ತಾರೆ. ಮನೆಗೆಲಸವನ್ನು `ಕೆಲಸ' ಎಂದು ಅವರು ಪರಿಗಣಿಸಿರುವುದೇ ಇಲ್ಲ. ಕಚೇರಿಯಲ್ಲಿ ಮಾಡುವುದು ಮಾತ್ರ ಕೆಲಸ ಅನ್ನುವ ನಿಲುವು ಅವರದು. ಆದ್ದರಿಂದಲೇ ಬೆಳಗ್ಗೆ ಎಚ್ಚರವಾಗುವಾಗ ತುಸು ಲೇಟಾದರೂ ಪತ್ನಿಯನ್ನು ತರಾಟೆಗೆ ತೆಗೆದುಕೊಳ್ಳುವವರಿದ್ದಾರೆ. ನನ್ನನ್ನೇಕೆ ಬೇಗ ಎಬ್ಬಿಸಿಲ್ಲ, ಕಚೇರಿಗೆ ಲೇಟಾಯ್ತು ಎಂದು ಪತ್ನಿಯ ಮೇಲೆ ಸಿಟ್ಟಾಗುವವರಿದ್ದಾರೆ. ಅದೇ ವೇಳೆ ತಾನು ಲೇಟಾಗಿ ಎದ್ದರೆ ಪತಿಯನ್ನು ಪತ್ನಿ ಟೀಕಿಸುವುದೇ ಇಲ್ಲ. ತನ್ನ ನಿದ್ದೆಯನ್ನೇ ದೂರುತ್ತಾ, ಅಡುಗೆ ಕೆಲಸ ಸಮಯಕ್ಕೆ ಸರಿಯಾಗಿ ಆಗುತ್ತೋ ಇಲ್ಲವೋ ಅನ್ನುವ ಬಗ್ಗೆ ಭಯ ಪಡುತ್ತಾ ನೂರು ಡಿಗ್ರಿಯಲ್ಲಿ ಕೆಲಸಕ್ಕೆ ತೊಡಗುತ್ತಾರೆ. ಇಷ್ಟಕ್ಕೂ ತಲೆ ನೋವು, ಹೊಟ್ಟೆ ನೋವು ಇದ್ದರೂ ಅದನ್ನು ಒಳಗೊಳಗೇ ನುಂಗಿಕೊಂಡು ಅಡುಗೆ ತಯಾರಿಸಿ ಪತಿ, ಮಕ್ಕಳನ್ನು ಮುಗುಳುನಗೆಯೊಂದಿಗೆ ಕಳುಹಿಸಿಕೊಡುವ ಎಷ್ಟು ಮಹಿಳೆಯರು ನಮ್ಮ ನಡುವೆಯಿಲ್ಲ? ಜ್ವರ ಬಂದರೆ ಪುರುಷರು ಕಚೇರಿಗೆ ರಜೆ ಹಾಕುವಂತೆ ಮಹಿಳೆ ಮನೆಗೆಲಸಕ್ಕೆ ರಜೆ ಹಾಕುವುದಿದೆಯಾ? ಕಷ್ಟನೋ ಇಷ್ಟನೋ ಸಹಿಸಿಕೊಂಡು ಮಾಡಿದ ಅಡುಗೆಯಲ್ಲೂ ಉಪ್ಪು - ಖಾರದ ಕೊರತೆಯನ್ನು ಹುಡುಕುವವರು ನಮ್ಮಲ್ಲಿಲ್ಲವೇ? `ಇವತ್ತು ನೀನು ಆರಾಮ ಮಾಡು, ನಾನು ಅಡುಗೆ ಮಾಡುತ್ತೇನೆ' ಎಂದು ಹೇಳುವುದಕ್ಕೆ ನಮ್ಮಲ್ಲಿ ಎಷ್ಟು ಮಂದಿಗೆ ಸಾಧ್ಯವಾಗುತ್ತದೆ? ದಿನಾ ಚಾನೋ ಕಾಫಿಯೋ ಕೊಡುವ ಪತ್ನಿಯ ಕೈ ಹಿಡಿದು ಕೂರಿಸಿ, `ಇವತ್ತು ನಾನು ಕಾಪಿ ಮಾಡುವೆ' ಎಂದು ಆಕೆಯನ್ನು ರಮಿಸಲು ನಾವು ಮುಂದಾದದ್ದಿದೆಯೇ? ಅಡುಗೆಯಲ್ಲಿ ಸಹಕರಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಶೌಚಾಲಯ ಶುಚಿಗೊಳಿಸುವುದು.. ಇಂಥದ್ದನ್ನೆಲ್ಲಾ ಪುರುಷ ಮಾಡಿದರೆ ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ಎಂದು ಅಂದುಕೊಂಡವರಿಲ್ಲವೇ?
ದ್ವಿತೀಯ ಖಲೀಫ ಉಮರ್ ರ (ರ) ಕಾಲದಲ್ಲಿ ಒಂದು ಘಟನೆ ನಡೆಯುತ್ತದೆ..
ಪತ್ನಿಯ ಕುರಿತು ದೂರು ನೀಡಲಿಕ್ಕಾಗಿ ಓರ್ವರು ಉಮರ್ ರ (ರ) ಮನೆಗೆ ಬರುತ್ತಾರೆ. ಆಗ ಖಲೀಫರ ಜೊತೆ ಅವರ ಪತ್ನಿಯು ಏರಿದ ಧ್ವನಿಯಲ್ಲಿ ಮಾತಾಡುವುದು, ರೇಗಾಡುವುದು ಕೇಳಿಸುತ್ತದೆ. ಖಲೀಫರು ಏನೊಂದೂ ಮಾತಾಡುತ್ತಿರಲಿಲ್ಲ. ಹೊರಗೆ ನಿಂತ ವ್ಯಕ್ತಿಗೆ ಕಸಿವಿಸಿಯಾಗ ತೊಡಗುತ್ತದೆ. ನಿಷ್ಠುರ ವ್ಯಕ್ತಿಯಾಗಿರುವ ಉಮರ್ ರೇ  ಹೀಗಾದರೆ ಮತ್ತೆ ನಾನೇನೂಂತ ಹೇಳುವುದು ಅಂದುಕೊಂಡು ಹೊರಡುವ ಬಗ್ಗೆ ತೀರ್ಮಾನಿಸುತ್ತಾರೆ. ಆಗ ಉಮರ್(ರ) ಹೊರಬರುತ್ತಾರೆ.ಏನೆಂದು  ಪ್ರಶ್ನಿಸುತ್ತಾರೆ. `ನನ್ನ ಪತ್ನಿಯ ಒರಟು ಸ್ವಭಾವ ಹಾಗೂ ರೇಗಾಟದ ಬಗ್ಗೆ ದೂರು ನೀಡಲಿಕ್ಕಾಗಿ ಇಲ್ಲಿಗೆ ಬಂದಿರುವೆ. ಆದರೆ ನಿಮ್ಮ ಪತ್ನಿಯ ವರ್ತನೆ ನನ್ನ ಪತ್ನಿಯ ಹಾಗೆಯೇ ಇದೆ. ಆದ್ದರಿಂದ ನಾನು ಮರಳಿ ಹೋಗುವುದಕ್ಕೆ ತೀರ್ಮಾನಿಸಿದ್ದು' ಅನ್ನುತ್ತಾರೆ. ಆಗ ಉಮರ್ ಹೇಳುತ್ತಾರೆ,
ನನ್ನ ಪತ್ನಿ ನನಗಾಗಿ ಅಡುಗೆ ಮಾಡುತ್ತಾಳೆ, ರೊಟ್ಟಿ ತಯಾರಿಸುತ್ತಾಳೆ, ಬಟ್ಟೆ ಒಗೆಯುತ್ತಾಳೆ. ನನ್ನ ಮಕ್ಕಳಿಗೆ ಎದೆ ಹಾಲು ಕೊಡುತ್ತಾಳೆ.. ನಿಜವಾಗಿ ಇವ್ಯಾವುವೂ ಆಕೆಯ ಕರ್ತವ್ಯಗಳಲ್ಲಿ ಸೇರಿಲ್ಲ. ಆದರೆ ಅವೆಲ್ಲವನ್ನೂ ಮಾಡುವ ಆಕೆಗೆ ರೇಗಾಡುವುದಕ್ಕೆ ಹಕ್ಕಿದೆ..'
ಪತಿ-ಪತ್ನಿ ಎಂದರೆ ಯಜಮಾನ ಮತ್ತು ಕೆಲಸದಾಳು ಖಂಡಿತ ಅಲ್ಲ. ಅವರಿಬ್ಬರೂ ಜೋಡಿಗಳು. ಬದುಕನ್ನು ಸಂತಸ ಅಥವಾ ದುಃಖಮಯಗೊಳಿಸುವ ಎರಡೂ ಆಯ್ಕೆಗಳೂ ಅವರಲ್ಲೇ ಇರುತ್ತವೆ . ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮೊದಲು ಗೆಳೆಯರಲ್ಲಿ, ಅನುಭವಿಗಳಲ್ಲಿ ಸಮಾಲೋಚನೆ ನಡೆಸುವ ಎಷ್ಟೋ ಪುರುಷರು ತಮ್ಮ ಪತ್ನಿಯಲ್ಲಿ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಅಭಿಪ್ರಾಯ ಕೇಳುವುದಿಲ್ಲ. ಆಕೆಗೇನು ಗೊತ್ತು ಅನ್ನುವ ತಾತ್ಸಾರ ಅನೇಕರಲ್ಲಿದೆ. ಒಂದು ವೇಳೆ ತನಗಿಂತ ಉತ್ತಮವಾದ ಅಭಿಪ್ರಾಯವನ್ನು ಆಕೆ ವ್ಯಕ್ತಪಡಿಸಿದರೂ ಅದನ್ನು ಸ್ವೀಕರಿಸುವುದಕ್ಕೆ ಅನೇಕರಲ್ಲಿ ಮುಜುಗರ ಇರುತ್ತದೆ. ಪತ್ನಿ ಹೇಳಿದಂತೆ ಕೇಳುವವನೆಂಬ ಪಟ್ಟ ಎಲ್ಲಿ ಸಿಗುತ್ತದೋ ಅನ್ನುವ ಭೀತಿಯೂ ಇರುತ್ತದೆ. ನಿಜವಾಗಿ ಒಂದು ಮನೆಯಲ್ಲಿ ಪತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ, ಕಾಳಜಿ ವಹಿಸುವ ಇನ್ನೊಂದು ಜೀವ ಇದ್ದರೆ ಅದು ಪತ್ನಿ ಮಾತ್ರ. ಆತನ ನೋವನ್ನು ಆಕೆ ತನ್ನ ನೋವೆಂದೇ ಪರಿಗಣಿಸುತ್ತಾಳೆ. ಆತನ ಅನಾರೋಗ್ಯ, ಆರ್ಥಿಕ ಮುಗ್ಗಟ್ಟು, ಸಾಲ ಎಲ್ಲವುಗಳ ಬಗ್ಗೆ ಇತರೆಲ್ಲರಿಗಿಂತ ಹೆಚ್ಚು ಚಿಂತಿತಳಾಗುವುದೂ ಆಕೆಯೇ. ಹೀಗಿರುವಾಗ ಆಕೆಯ ಅಭಿಪ್ರಾಯವನ್ನು ಪರಿಗಣಿಸುವುದಕ್ಕೆ ಅಥವಾ ಸಮಾಲೋಚಿಸುವುದಕ್ಕೆ ಅಳುಕಾದರೂ ಯಾಕಿರಬೇಕು? ನಿಜವಾಗಿ ಪತಿ ಮತ್ತು ಪತ್ನಿಯ ನಡುವಿನ ಸಂಬಂಧವನ್ನು ಹೆಚ್ಚು ಬಲಿಷ್ಠಗೊಳಿಸುವುದೇ ಸಮಾಲೋಚನೆಗಳು, ಪರಸ್ಪರ ಹಂಚಿಕೊಳ್ಳುವಿಕೆಗಳು. ತಮಾಷೆ, ಹಾಡು, ಕುಟುಕುವ ಮಾತು, ಮೆಚ್ಚುಗೆಯ ನೋಟ.. ಇಂತಹ ಸಣ್ಣ ಪುಟ್ಟ ಅಂಶಗಳೇ ಬದುಕನ್ನು ಉಲ್ಲಸಿತವಾಗಿಡುವುದು. ಹೊರಗೆಲ್ಲೋ ಕೇಳಿದ, ಓದಿದ ಜೋಕ್ ಅನ್ನು ಮನೆಗೆ ಬಂದು ಪತ್ನಿಯೊಂದಿಗೆ ಹಂಚಿಕೊಳ್ಳುವುದರಿಂದ ಆಕೆಯೂ ಖುಷಿಯಾಗುತ್ತಾಳೆ. ಮರುದಿನ ಆಕೆಯೂ ಪ್ರಯತ್ನಿಸಬಹುದು. ಕಚೇರಿಯಲ್ಲಿ ನಮ್ಮ ಕೆಲಸದ ಸ್ವರೂಪ, ಇರುವ ಒತ್ತಡಗಳ ಕುರಿತಂತೆ ಆಕೆಯೊಂದಿಗೆ ಹೇಳಿಕೊಳ್ಳುವುದು ಆಕೆಯನ್ನು ಹೆಚ್ಚು ಹತ್ತಿರಗೊಳಿಸುತ್ತದೆ. ನಮ್ಮನ್ನು  ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.ಒಂದು ರೀತಿಯಲ್ಲಿ ನಾವು ಪಟ್ಟಿ ಮಾಡಬೇಕಾದದ್ದು ನೆಗೆಟಿವ್ ಗಳನ್ನಲ್ಲ, ಪಾಸಿಟಿವ್ ಗಳನ್ನು. ಹಾಗೇನಾದರೂ ಮಾಡಲು ಪ್ರಯತ್ನಿಸಿದರೆ ಇತರರು ಅಸೂಯೆ ಪಡುವಷ್ಟು ನಮ್ಮ ಬದುಕನ್ನು ಸುಂದರಗೊಳಿಸಬಹುದು. ಇಷ್ಟಕ್ಕೂ ಪ್ರವಾದಿ ಮುಹಮ್ಮದ್ ರು (ಸ ) ಪತ್ನಿ ಆಯಿಷಾರೊಂದಿಗೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಆರಂಭದಲ್ಲಿ ಗೆಲ್ಲುತ್ತಿದ್ದ ಆಯಿಷಾ, ಕೊನೆ ಕೊನೆಗೆ ದೇಹ ದಪ್ಪಗಾದ ಕಾರಣ ಸೋಲುತ್ತಿದ್ದರು ಎಂಬುದೆಲ್ಲಾ ನಮಗೆ ಗೊತ್ತು. ಅದನ್ನು ಓದಿಗಷ್ಟೇ ನಾವೇಕೆ ಸೀಮಿತಗೊಳಿಸಬೇಕು? ಪತ್ನಿಯೊಂದಿಗೆ ಶಟ್ಲ್, ಲಗೋರಿ, ಗೋಲಿ, ಕೇರಮ್ ಗಳಂಥ ಆಟವನ್ನು ಆಡಲು ನಮಗೇಕೆ ಸಾಧ್ಯವಾಗುತ್ತಿಲ್ಲ? ನಿಜವಾಗಿ ಆಟದ ಸಂದರ್ಭದಲ್ಲಿ ಬರೇ ಆಟವಷ್ಟೇ ನಡೆಯುವುದಲ್ಲ, ತಮಾಷೆ, ಮೋಸ, ಮಾತುಗಳ ವಿನಿಮಯ, ಸಿಟ್ಟು, ಲಜ್ಜೆ.. ಎಲ್ಲವೂ ಇರುತ್ತದೆ. ಬದುಕನ್ನು ಸುಂದರವಾಗಿಡುವುದೂ ಇವುಗಳೇ..
ಕಳೆದ ಒಂದು ವಾರದಲ್ಲಿ, `ಪತಿಯಿಂದ ಪತ್ನಿಯ ಕೊಲೆ' ಎಂಬ ಶೀರ್ಷಿಕೆಯ ಸುಮಾರು ಹತ್ತರಷ್ಟು ಸುದ್ದಿಗಳನ್ನು ಓದಿದಾಗ ಇವೆಲ್ಲ ನೆನಪಾಯಿತು..

Monday, June 25, 2012

ಮಣಿಶಂಕರ್ ರನ್ನು ಹೊರಕ್ಕಟ್ಟಿದವರು ಪ್ರಣವ್ ರನ್ನು ಬಿಡುತ್ತಾರಾ?

ವೊಡಾಪೋನ್
ಏರ್ಸೆಲ್-ಮ್ಯಾಕ್ಸಿಸ್
ವಾಲ್ಮಾರ್ಟ್
ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಬ್ರಿಟನ್, ನೆದರ್ಲ್ಯಾಂಡ್ , ಅಮೇರಿಕ, ಸ್ವಿಟ್ಝರ್ಲ್ಯಾ oಡ್ ನಂಥ  ಪ್ರಬಲ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರಣವ್ ಮುಖರ್ಜಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆಯೇ? ಹಣಕಾಸು ಖಾತೆಯನ್ನು ಅವರಿಂದ ಕಿತ್ತುಕೊಳ್ಳುವುದಕ್ಕೆ ಭಾರೀ ಷಡ್ಯಂತ್ರಗಳು ನಡೆದಿವೆಯೇ?
           ಇವು ಬರೇ ಅನುಮಾನಗಳಷ್ಟೇ ಅಲ್ಲ..
2012 ಮೇ 7ರಂದು ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಮೊದಲು ಪ್ರಧಾನಿ ಮನಮೋಹನ್ ಸಿಂಗ್  ರನ್ನು ಭೇಟಿಯಾಗುತ್ತಾರೆ. ಇರಾನ್ ನ  ಜೊತೆ ಭಾರತದ ಸಂಬಂಧ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ ವಿದೇಶಿ ಹೂಡಿಕೆಗೆ (F D I - Foreign  Direct Investment ) ಅವಕಾಶ ಒದಗಿಸುವುದು, ಏರ್ಸೆಲ್-ಮ್ಯಾಕ್ಸಿಸ್ ನಡುವಿನ ಒಪ್ಪಂದದ ಕುರಿತಂತೆ ಇರುವ ತಕರಾರುಗಳು ಮತ್ತು ತೈಲ, ಗ್ಯಾಸ್ ಮತ್ತು ಪರಮಾಣು ಕ್ಷೇತ್ರದಲ್ಲಿ ಬಂಡವಾಳ  ಹೂಡಿಕೆಯ ಬಗ್ಗೆ ಅವರಿಬ್ಬರೂ ಸುದೀರ್ಘ ಮಾತುಕತೆ ನಡೆಸುತ್ತಾರೆ. ಆ ಬಳಿಕ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಾಲ್ಮಾರ್ಟ್ ನಂಥ ಬೃಹತ್ ಕಂಪೆನಿಗಳ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸುವ ಮಮತಾ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳಕ್ಕೆ ಹೋಗಿ ಕ್ಲಿಂಟನ್ ಭೇಟಿಯಾಗುತ್ತಾರೆ. ಅಷ್ಟಕ್ಕೂ ಹಿಲರಿ ಕ್ಲಿಂಟನ್ ರ  ಸ್ಥಾನಮಾನ, ಹುದ್ದೆಯ ಎದುರು ಮುಖ್ಯಮಂತ್ರಿ ಮಮತಾ ಯಾವ ಲೆಕ್ಕ? ಆದರೂ ಹಿಲರಿಯೇ ಮಮತಾರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇಕೆ? ಮಮತಾರ ತೃಣಮೂಲ ಕಾಂಗ್ರೆಸ್ ಯುಪಿಎಯ ಅಂಗಪಕ್ಷವಾಗಿದ್ದು, F D I ಗೆ ಅದು ವ್ಯಕ್ತಪಡಿಸುತ್ತಿರುವ ವಿರೋಧವನ್ನು ತಣ್ಣಗಾಗಿಸುವ ಉದ್ದೇಶವನ್ನು ಆ ಭೇಟಿ ಹೊಂದಿತ್ತು ಅನ್ನುವುದನ್ನು ಅಲ್ಲಗಳೆಯಬಹುದಾ?
        ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಯ ಪರಿಚಯ ಇದ್ದವರು, ಹಿಲರಿ ಕ್ಲಿಂಟನ್ ರ  ಬಂಗಾಳ ಭೇಟಿಯನ್ನು ಕ್ಷುಲ್ಲಕ ಅನ್ನಲು ಸಾಧ್ಯವೇ ಇಲ್ಲ.
ಹಿಲರಿ - ಮಮತಾ
        ಕಲ್ಲಿದ್ದಲಿನ ಮೂಲಕ ವಿದ್ಯುತ್ ತಯಾರಿಸುವ ಬೃಹತ್ ಯೋಜನೆಯನ್ನು 1990ರಲ್ಲಿ ಎನ್ರಾನ್ ಭಾರತದ ಮುಂದಿಡುತ್ತದೆ. ಅದರ ಬೆನ್ನಿಗೇ ಇಂಧನ ಮತ್ತು ರಕ್ಷಣಾ ಇಲಾಖೆಯ ಕಾರ್ಯದರ್ಶಿಗಳ ಜೊತೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಭಾರತಕ್ಕೆ ಭೇಟಿ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್ರಾನನ್ನು ಸ್ಥಾಪಿಸುವ ಬಗ್ಗೆ ಒಪ್ಪಂದವಾಗುತ್ತದೆ. ಭಾರತದ ನೀತಿ ನಿರೂಪಕರಲ್ಲಿ (Policy Makers)  ಅರಿವು ಮೂಡಿಸುವುದಕ್ಕೆ 60 ಮಿಲಿಯನ್ ಡಾಲರ್ ಖರ್ಚು ಮಾಡಿರುವೆನೆಂದು ಆ ಬಳಿಕ ಎನ್ರಾನ್ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಅಂದು ಎನ್ರಾನ್ ನ  ಪರ ಕಿಸಿಂಜರ್ ಬಂದಿದ್ದರೆ ಇಂದು ಅಮೇರಿಕದ ವಾಲ್ಮಾರ್ಟ್ ನ  ಪರ ಹಿಲರಿ ಬಂದಿಲ್ಲ ಎಂದು ಹೇಗೆ ಹೇಳುವುದು? ಮೆಕ್ಸಿಕೋದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕಾಗಿ ತಾನು ಲಂಚ ಕೊಟ್ಟಿದ್ದೆ ಎಂದು ವಾಲ್ಮಾರ್ಟ್ ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದು ಅಮೇರಿಕದಲ್ಲಿ ವಿವಾದವನ್ನೂ ಉಂಟು ಮಾಡಿತ್ತಲ್ಲದೆ ತನಿಖೆಗೂ ಆದೇಶಿಸಲಾಗಿತ್ತು. ನಿಜವಾಗಿ, ವಾಲ್ ಮಾರ್ಟ್ ನಂತಹ ಬೃಹತ್ ಕಂಪೆನಿಗಳು ಲಂಚ ಕೊಟ್ಟೋ, ಲಾಬಿ ನಡೆಸಿಯೋ ವಿವಿಧ ದೇಶಗಳಿಂದ ಕಾಂಟ್ರ್ಯಾಕ್ಟ್ ಗಳನ್ನು ಪಡಕೊಳ್ಳುತ್ತವೆ. 190 ರಾಷ್ಟ್ರಗಳಲ್ಲಿ ಸಂಸ್ಥೆಗಳನ್ನು ಹೊಂದಿರುವ, 3,60,000 ಉದ್ಯೋಗಿಗಳಿರುವ ಯುರೋಪಿನ ಬೃಹತ್ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪೆನಿ ಸಿಯೆಮೆನ್ಸ್ ಗೆ  (Siemens) 2011 ಡಿಸೆಂಬರ್ ನಲ್ಲಿ ಜರ್ಮನಿಯಲ್ಲಿ 1.6 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. 2001ರಿಂದ 2011ರ ನಡುವೆ ಅರ್ಜೆಂಟೀನಾ, ಬಾಂಗ್ಲಾ, ಚೀನಾ, ರಶ್ಯ, ವೆನೆಝುವೇಲಾ ಮತ್ತಿತರ ರಾಷ್ಟ್ರಗಳಲ್ಲಿ ಲಂಚದ ಮೂಲಕ ಅದು ಕಾಂಟ್ರ್ಯಾಕ್ಟ್ ಗಳನ್ನು ಪಡಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ನಿಜವಾಗಿ ಸಿಯೆಮೆನ್ಸ್ ಅನ್ನು ಇಸ್ರೇಲ್ ಸಹಿತ ಯುರೋಪಿಯನ್ ರಾಷ್ಟ್ರಗಳೆಲ್ಲಾ ಬಹಿಷ್ಕರಿಸಬೇಕಾಗಿತ್ತು. ಜರ್ಮನಿಯ ಈ ಸಿಯೆಮೆನ್ಸ್, ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರ್ ನನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಾಝಿ ಪಕ್ಷಕ್ಕೆ ಚಂದಾ ಎತ್ತಿತ್ತು. ಯಹೂದಿಗಳನ್ನು ವಿದ್ಯುತ್ ಹಾಯಿಸಿ ಕೊಲ್ಲಲಾಗಿದೆಯೆಂದು (ಹಾಲೋಕಾಸ್ಟ್) ಹೇಳಲಾಗುವ ಕಾನ್ಸನ್ ಟ್ರೇಶನ್ ಕ್ಯಾಂಪ್ ಗೆ  (ಮನೆ) ವಿದ್ಯುತ್ ಹರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಇದೇ ಸಿಯೆಮೆನ್ಸ್. ಆದರೆ ಹಾಲೋಕಾಸ್ಟನ್ನು ಒಪ್ಪದ ಅಹ್ಮದಿ ನೆಜಾದ್ ರನ್ನು ಖಂಡಿಸುವ, ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಗುಂಥರ್ ಗ್ರಾಸ್ ಗೆ  ಬಹಿಷ್ಕಾರವನ್ನು ಹಾಕುವ ಇದೇ ಇಸ್ರೇಲ್, 2009ರಲ್ಲಿ ಸಿಯೆಮೆನ್ಸ್ ಜೊತೆ 418 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದನ್ನು ಏನೆಂದು ಕರೆಯಬೇಕು? ಅಂದಹಾಗೆ ಹಾಲೋಕಾಸ್ಟನ್ನು ನಿರಾಕರಿಸುವುದು ಯುರೋಪಿಯನ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧ. ಅವೇ ರಾಷ್ಟ್ರಗಳು ಹಾಲೋಕಾಸ್ಟ್ ಗೆ  ಸಹಕರಿಸಿದ ಸಿಯೆಮೆನ್ಸ್ ಗೆ  ಕಾಂಟ್ಯಾಕ್ಟ್ ಗಳನ್ನೂ ಕೊಡುತ್ತಿವೆ. ಇದಕ್ಕೇನು ಕಾರಣ?
            1950ರಿಂದಲೇ ಭಾರತ ಸರಕಾರದ ನೀತಿಗಳ ಮೇಲೆ ವಿದೇಶಿ ಪ್ರಭಾವಗಳು ಇದ್ದಿದ್ದರೂ 1980ರ ವರೆಗೆ ಅದಕ್ಕೊಂದು ಮಿತಿ, ನಿಯಂತ್ರಣ ಇತ್ತು.
          ಆದರೆ 1986 ಮಾರ್ಚ್ 26ರಂದು ಸ್ವೀಡನ್ನ ಬೋಫೋರ್ಸ್ ಕಂಪೆನಿಯೊಂದಿಗೆ 1500 ಕೋಟಿ ರೂಪಾಯಿಯ ವ್ಯವಹಾರಕ್ಕೆ ಭಾರತ ಯಾವಾಗ ಸಹಿ ಹಾಕಿತೋ ಅಂದಿನಿಂದಲೇ ಭಾರತದ ರಾಜಕಾರಣಿಗಳನ್ನು ಆಳುವ ಹಂತಕ್ಕೆ ವಿದೇಶಿ ಕಂಪೆನಿಗಳು ತಲುಪಿಬಿಟ್ಟವು. 1987 ಎಪ್ರಿಲ್ 16ರಂದು ಸ್ವೀಡನ್ನಿನ ರೇಡಿಯೋವೊಂದು ಮೊತ್ತಮೊದಲ ಬಾರಿಗೆ ಬೋಫೋರ್ಸ್ ವ್ಯವಹಾರದಲ್ಲಿ ಭಾರತದ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಲಂಚ ಪಾವತಿಯಾಗಿರುವುದಾಗಿ ಸುದ್ದಿ ಸ್ಫೋಟಿಸಿತು. ಬೋಫೋರ್ಸ್ ಕಂಪೆನಿಯ ನಿರ್ದೇಶಕ ಮಾರ್ಟಿನ್ ಲಿರ್ಬೊರ ಖಾಸಗಿ ಡೈರಿಯೊಂದರ ಆಧಾರದಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಎಂಬ ಪತ್ರಕರ್ತೆ ದಿ ಹಿಂದೂ ಪತ್ರಿಕೆಯಲ್ಲಿ ಇಡೀ ಬೋಫೋರ್ಸ್ ವ್ಯವಹಾರವನ್ನೇ ಬಿಚ್ಚಿಡಲು ಪ್ರಾರಂಭಿಸಿದಾಗ ಜನ ದಂಗಾಗಿ ಬಿಟ್ಟರು. ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಇಟಲಿಯ ಶಸ್ತ್ರಾಸ್ತ್ರ ದಲ್ಲಾಳಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ರಾಜೀವ್ ಗಾಂಧಿ ನಡುವೆ ಇದ್ದ ಸಂಬಂಧ, ಬೋಫೋರ್ಸ್ ನಿರ್ದೇಶಕ ಮಾರ್ಟಿನ್ ರ  ಡೈರಿಯಲ್ಲಿQ ಮತ್ತು R ಎಂಬ ಸಾಂಕೇತಿಕ ಅಕ್ಷರಗಳಲ್ಲಿ ನಮೂದಿಸಲಾಗಿದ್ದ ಲಂಚದ ವಿವರಗಳು, ಸ್ವಿಸ್ ಬ್ಯಾಂಕಲ್ಲಿ ಕ್ವಟ್ರೋಚಿ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳು ಮತ್ತು ಕೋಟ್ಯಂತರ ದುಡ್ಡುಗಳ ವಿವರಗಳೆಲ್ಲಾ ಬಹಿರಂಗವಾದುವು. ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ವಹಿಸಲಾಯಿತಲ್ಲದೇ ಕ್ವಟ್ರೋಚಿಯ ವಿರುದ್ಧ ಇಂಟರ್ ಪೋಲ್ ವಾರೆಂಟನ್ನು ಹೊರಡಿಸಲಾಯಿತು. ಇದೇ ವೇಳೆ, ಯೂನಿಯನ್ ಕಾರ್ಬೈಡ್ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ಭಾರತದಿಂದ ಸುರಕ್ಷಿತವಾಗಿ ಅಂದಿನ ಕಾಂಗ್ರೆಸ್ ಸರಕಾರವು ವಿದೇಶಕ್ಕೆ ರಾತೋರಾತ್ರಿ ವಿಮಾನದಲ್ಲಿ ಕಳುಹಿಸಿ ಕೊಟ್ಟಂತೆ ಕ್ವಟ್ರೋಚಿಯನ್ನೂ ರಹಸ್ಯವಾಗಿ ವಿದೇಶಕ್ಕೆ ರವಾನಿಸಿತು. ಇಂಟರ್ ಪೋಲ್  ವಾರೆಂಟ್ ಇದ್ದರೂ ಕ್ವಟ್ರೋಚಿ ವಿದೇಶಗಳಲ್ಲಿ ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತಿದ್ದ. 2007 ಫೆಬ್ರವರಿ 6ರಂದು ಇಂಟರ್ ಪೋಲ್ ವಾರೆಂಟ್ ಪ್ರಕಾರ ಅರ್ಜೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸಲಾಯಿತಾದರೂ ಸಿಬಿಐಯು ಗೊತ್ತೇ ಇಲ್ಲದಂತೆ ನಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅದು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇ ಬಂಧನದ 4 ತಿಂಗಳ ಬಳಿಕ ಜೂನ್ ನಲ್ಲಿ. ಸಿಬಿಐಯ ಬದ್ಧತೆಯನ್ನೇ ಅರ್ಜೆಟೀನಾ ಕೋರ್ಟು ಪ್ರಶ್ನಿಸಿತು. ಸರಿಯಾದ ದಾಖಲೆಗಳನ್ನೇ ಒದಗಿಸದ ನಿಮಗೆ ಕ್ವಟ್ರೋಚಿಯನ್ನು ಕೊಡಲಾರೆ ಅಂದಿತು. ನಿಜವಾಗಿ, ಕ್ವಟ್ರೋಚಿ ವಿಷಯದಲ್ಲಿ ಮುಂದುವರಿಯದಂತೆ ಭಾರತ ಸರಕಾರಕ್ಕೆ ತಾಕೀತು ಮಾಡಲು ವಿದೇಶಿ ರಾಷ್ಟ್ರಗಳ ಮುಖಾಂತರ ಬೋಫೋರ್ಸ್ ಯಶಸ್ವಿಯಾಗಿತ್ತು. ಹೀಗಿರುವಾಗ ಸಿಬಿಐ ಮಾಡುವುದಾದರೂ ಏನು? ಜವಾಹರ್ಲಾಲ್ ನೆಹರು ಯುನಿವರ್ಸಿಟಿಯಲ್ಲಿ ನಿರ್ದೇಶಕರಾಗಿರುವ ಅರುಣ್ ಕುಮಾರ್ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ಹೀಗೆ ಬರೆದಿದ್ದರು,
ನಾನು ಇತ್ತೀಚೆಗೆ ಮಾಜಿ ಸಚಿವರೊಬ್ಬರನ್ನು ಭೇಟಿಯಾಗಿದ್ದೆ. ಕಪ್ಪು ಹಣದ ಬಗ್ಗೆ ಅವರಲ್ಲಿ ಮಾತಾಡಿದೆ. ಅವರು ಬೋಫೋರ್ಸ್  ಫೈಲನ್ನು ಹಿಡಿದುಕೊಂಡು ಒಮ್ಮೆ ಪ್ರಧಾನ ಮಂತ್ರಿಯ ಬಳಿಗೆ ಹೋಗಿದ್ದರಂತೆ. ಆಗ ಪ್ರಧಾನಿಯವರು, `ಆ ಫೈಲನ್ನು ಮುಚ್ಚಿಬಿಡು. ಅದನ್ನು ತೆರೆದರೆ ನನ್ನ ಜೀವಕ್ಕೆ ಅಪಾಯ ಇದೆ’ ಎಂದಿದ್ದರಂತೆ.
           ಆದ್ದರಿಂದಲೇ, `ರಾಷ್ಟ್ರಪತಿ' ಪ್ರಣವ್ ಮುಖರ್ಜಿಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು..
ಚಿದಂಬರಮ್ ರಿಂದ  ಹಣಕಾಸು ಖಾತೆಯನ್ನು ಪಡಕೊಂಡ ಪ್ರಣವ್ ಮುಖರ್ಜಿಯವರು, 2ಜಿ ಸ್ಪೆಕ್ಟ್ರಂನ ಬಗ್ಗೆ ಕಠಿಣ ನಿಲುವನ್ನು ತಾಳಿದರು. ಒಂದು ಹಂತದಲ್ಲಿ ಚಿದಂಬರಮ್ ರ  ವಿರುದ್ಧವೇ ಧ್ವನಿ ಎತ್ತಿದರು. ಕಪ್ಪು  ಹಣವನ್ನು ಭಾರತಕ್ಕೆ ತರುವ ಬಗ್ಗೆಯೂ ಅವರಲ್ಲಿ ಸ್ಪಷ್ಟ ನಿಲುವು ಇತ್ತು. ವೊಡಾಪೋನ್ ವಿವಾದದಲ್ಲಿ ಅವರ ಕಠಿಣ ನಿಲುವು, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಗಳನ್ನು ತಳಮಳಗೊಳಿಸಿತ್ತು. ಮುಖ್ಯವಾಗಿ, ಭಾರತದಿಂದ ತೆರಿಗೆಯನ್ನು ತಪ್ಪಿಸಿಕೊಳ್ಳುವ ತಂತ್ರವೊಂದಕ್ಕೆ ವೊಡಾಪೋನ್ ಕೈ ಹಾಕಿತ್ತು. ಅದಕ್ಕಾಗಿ ಅದು ಕಂಪೆನಿಯ ನಿಜವಾದ ಮಾಲಿಕರ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿತು. ಮಾರಿಷಸ್ ಮೂಲಕ ಬಂಡವಾಳ ಬಂದರೆ ಅದಕ್ಕೆ ತೆರಿಗೆ ವಿನಾಯಿತಿಯಿದೆ ಅನ್ನುವ 2003ರ ಸುಪ್ರೀಮ್ ಕೋರ್ಟ್ ನ  ತೀರ್ಪನ್ನು ದುರುಪಯೋಗಿಸಲು ವೊಡಾಪೋನ್ ಯೋಜನೆ ರೂಪಿಸಿತು. ಆಝಾದಿ ಬಚಾವೋ ಆಂದೋಲನ್ ಮತ್ತು ಭಾರತ ಸರಕಾರದ ನಡುವಿನ ವಿವಾದವನ್ನು ಬಗೆಹರಿಸುವ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ಈ ತೀರ್ಪನ್ನು ಬಹುರಾಷ್ಟ್ರೀಯ ಕಂಪೆನಿಯಾದ ವೊಡಾಫೋನ್ ಬಳಸಿಕೊಳ್ಳುವುದನ್ನು ಮುಖರ್ಜಿ ಬಲವಾಗಿ ವಿರೋಧಿಸಿದರು. ವೊಡಾಫೋನ್ ಗೆ  ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದರು. ನಿಜವಾಗಿ ಚಿದಂಬರಮ್ ವಿತ್ತ ಮಂತ್ರಿಯಾಗಿದ್ದಾಗ ನಡೆದ 2ಜಿ ಸ್ಪೆಕ್ಟ್ರಮ್ ನ  ಬಗ್ಗೆ, ವೊಡಾಫೋನ್, ಏರ್ಸೆಲ್-ಮ್ಯಾಕ್ಸಿಸ್ ನಂತಹ ಬೃಹತ್ ಕಂಪೆನಿಗಳ ವ್ಯವಹಾರದ ಕುರಿತಂತೆ ಮುಖರ್ಜಿಯ ನಿಲುವು ಕಾರ್ಪೋರೇಟ್ ವಲಯದಲ್ಲಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಒಂದು ರೀತಿಯಲ್ಲಿ, ವಿತ್ತ ಮಂತ್ರಿಯಾಗಿ ಅವರನ್ನು ಸಹಿಸಿಕೊಳ್ಳುವುದು ಕಾರ್ಪೋರೇಟ್ ಸಂಸ್ಥೆಗಳಿಗೆ ಇವತ್ತು ಸಾಧ್ಯವಾಗುತ್ತಿಲ್ಲ.
            ಯಾರೇನೇ ಹೇಳಲಿ, ಭಾರತ ಸಹಿತ ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳ ನೀತಿಗಳನ್ನು ರೂಪಿಸುವುದು ಬೃಹತ್ ಕಂಪೆನಿಗಳೇ. ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಪ್ರಧಾನಿ ಆಗಬೇಕು, ವಿದೇಶಾಂಗ, ಹಣಕಾಸು, ಆರೋಗ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುವುದೂ ಅವುಗಳೇ. ಅವು ತಮ್ಮ ಬಯಕೆಯನ್ನು ಅಮೇರಿಕದಂಥ ರಾಷ್ಟ್ರಗಳ ಮುಖಾಂತರ ಜಾರಿಗೆ  ತರುತ್ತವೆ. ಅಗತ್ಯ ಬಂದಾಗಲೆಲ್ಲಾ ಹಿಲರಿ, ಒಬಾಮಾ, ಕ್ಯಾಮರೂನ್ ಗಳು ಬೃಹತ್ ಕಂಪೆನಿಗಳ ಸಿಇಓಗಳೊಂದಿಗೆ ಆಯಾ ರಾಷ್ಟ್ರಗಳಿಗೆ ಭೇಟಿ ಕೊಡುತ್ತಾರೆ. ಒಪ್ಪಂದ ಕುದುರಿಸುತ್ತಾರೆ. ಲಂಚ ಪಾವತಿಯಾಗುತ್ತದೆ. ಇದಕ್ಕೆ ಒಗ್ಗದವರಿಗೆ ರಾಷ್ಟ್ರಪತಿ ಹುದ್ದೆಯನ್ನೋ ದುರ್ಬಲ ಇಲಾಖೆಯನ್ನೋ ಕೊಟ್ಟು ಅಟ್ಟಲಾಗುತ್ತದೆ.
         ಭಾರತ-ಇರಾನ್ ಗ್ಯಾಸ್ ಪೈಪ್ ಲೈನ್ ನ  ಪರ ಬಲವಾಗಿ ವಾದಿಸುತ್ತಿದ್ದ ಮಣಿಶಂಕರ್ ಅಯ್ಯರ್ ರಿಂದ  2006ರಲ್ಲಿ ಪೆಟ್ರೋಲಿಯಂ ಖಾತೆಯನ್ನು ಕಸಿದು ಅವರಿಗೆ ಮನಮೋಹನ್ ಸಿಂಗ್ ರು  ಕ್ರೀಡಾ ಖಾತೆಯನ್ನು ಕೊಟ್ಟಿದ್ದರು. ಇದಕ್ಕೆ ಅಯ್ಯರ್ ರ ಇರಾನ್ ಪರ ನಿಲುವು ಕಾರಣ ಎಂದು ಅಗ ಭಾರತದಲ್ಲಿ ಅಮೇರಿಕದ  ರಾಯಭಾರಿ ಆಗಿದ್ದ ಡೇವಿಡ್ ಮುಲ್ ಫೊರ್ಡ್  ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಪ್ರಣವ್ ಮುಖರ್ಜಿ..
ಅಷ್ಟೇ ವ್ಯತ್ಯಾಸ