Monday, June 25, 2012

ಮಣಿಶಂಕರ್ ರನ್ನು ಹೊರಕ್ಕಟ್ಟಿದವರು ಪ್ರಣವ್ ರನ್ನು ಬಿಡುತ್ತಾರಾ?

ವೊಡಾಪೋನ್
ಏರ್ಸೆಲ್-ಮ್ಯಾಕ್ಸಿಸ್
ವಾಲ್ಮಾರ್ಟ್
ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಬ್ರಿಟನ್, ನೆದರ್ಲ್ಯಾಂಡ್ , ಅಮೇರಿಕ, ಸ್ವಿಟ್ಝರ್ಲ್ಯಾ oಡ್ ನಂಥ  ಪ್ರಬಲ ರಾಷ್ಟ್ರಗಳ ಒತ್ತಡಗಳಿಂದಾಗಿ ಪ್ರಣವ್ ಮುಖರ್ಜಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆಯೇ? ಹಣಕಾಸು ಖಾತೆಯನ್ನು ಅವರಿಂದ ಕಿತ್ತುಕೊಳ್ಳುವುದಕ್ಕೆ ಭಾರೀ ಷಡ್ಯಂತ್ರಗಳು ನಡೆದಿವೆಯೇ?
           ಇವು ಬರೇ ಅನುಮಾನಗಳಷ್ಟೇ ಅಲ್ಲ..
2012 ಮೇ 7ರಂದು ಭಾರತಕ್ಕೆ ಭೇಟಿ ಕೊಟ್ಟ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಮೊದಲು ಪ್ರಧಾನಿ ಮನಮೋಹನ್ ಸಿಂಗ್  ರನ್ನು ಭೇಟಿಯಾಗುತ್ತಾರೆ. ಇರಾನ್ ನ  ಜೊತೆ ಭಾರತದ ಸಂಬಂಧ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲೇ ವಿದೇಶಿ ಹೂಡಿಕೆಗೆ (F D I - Foreign  Direct Investment ) ಅವಕಾಶ ಒದಗಿಸುವುದು, ಏರ್ಸೆಲ್-ಮ್ಯಾಕ್ಸಿಸ್ ನಡುವಿನ ಒಪ್ಪಂದದ ಕುರಿತಂತೆ ಇರುವ ತಕರಾರುಗಳು ಮತ್ತು ತೈಲ, ಗ್ಯಾಸ್ ಮತ್ತು ಪರಮಾಣು ಕ್ಷೇತ್ರದಲ್ಲಿ ಬಂಡವಾಳ  ಹೂಡಿಕೆಯ ಬಗ್ಗೆ ಅವರಿಬ್ಬರೂ ಸುದೀರ್ಘ ಮಾತುಕತೆ ನಡೆಸುತ್ತಾರೆ. ಆ ಬಳಿಕ, ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಾಲ್ಮಾರ್ಟ್ ನಂಥ ಬೃಹತ್ ಕಂಪೆನಿಗಳ ಪ್ರವೇಶವನ್ನು ಪ್ರಬಲವಾಗಿ ವಿರೋಧಿಸುವ ಮಮತಾ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳಕ್ಕೆ ಹೋಗಿ ಕ್ಲಿಂಟನ್ ಭೇಟಿಯಾಗುತ್ತಾರೆ. ಅಷ್ಟಕ್ಕೂ ಹಿಲರಿ ಕ್ಲಿಂಟನ್ ರ  ಸ್ಥಾನಮಾನ, ಹುದ್ದೆಯ ಎದುರು ಮುಖ್ಯಮಂತ್ರಿ ಮಮತಾ ಯಾವ ಲೆಕ್ಕ? ಆದರೂ ಹಿಲರಿಯೇ ಮಮತಾರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದೇಕೆ? ಮಮತಾರ ತೃಣಮೂಲ ಕಾಂಗ್ರೆಸ್ ಯುಪಿಎಯ ಅಂಗಪಕ್ಷವಾಗಿದ್ದು, F D I ಗೆ ಅದು ವ್ಯಕ್ತಪಡಿಸುತ್ತಿರುವ ವಿರೋಧವನ್ನು ತಣ್ಣಗಾಗಿಸುವ ಉದ್ದೇಶವನ್ನು ಆ ಭೇಟಿ ಹೊಂದಿತ್ತು ಅನ್ನುವುದನ್ನು ಅಲ್ಲಗಳೆಯಬಹುದಾ?
        ಬಹುರಾಷ್ಟ್ರೀಯ ಕಂಪೆನಿಗಳ ಲಾಬಿಯ ಪರಿಚಯ ಇದ್ದವರು, ಹಿಲರಿ ಕ್ಲಿಂಟನ್ ರ  ಬಂಗಾಳ ಭೇಟಿಯನ್ನು ಕ್ಷುಲ್ಲಕ ಅನ್ನಲು ಸಾಧ್ಯವೇ ಇಲ್ಲ.
ಹಿಲರಿ - ಮಮತಾ
        ಕಲ್ಲಿದ್ದಲಿನ ಮೂಲಕ ವಿದ್ಯುತ್ ತಯಾರಿಸುವ ಬೃಹತ್ ಯೋಜನೆಯನ್ನು 1990ರಲ್ಲಿ ಎನ್ರಾನ್ ಭಾರತದ ಮುಂದಿಡುತ್ತದೆ. ಅದರ ಬೆನ್ನಿಗೇ ಇಂಧನ ಮತ್ತು ರಕ್ಷಣಾ ಇಲಾಖೆಯ ಕಾರ್ಯದರ್ಶಿಗಳ ಜೊತೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಭಾರತಕ್ಕೆ ಭೇಟಿ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಎನ್ರಾನನ್ನು ಸ್ಥಾಪಿಸುವ ಬಗ್ಗೆ ಒಪ್ಪಂದವಾಗುತ್ತದೆ. ಭಾರತದ ನೀತಿ ನಿರೂಪಕರಲ್ಲಿ (Policy Makers)  ಅರಿವು ಮೂಡಿಸುವುದಕ್ಕೆ 60 ಮಿಲಿಯನ್ ಡಾಲರ್ ಖರ್ಚು ಮಾಡಿರುವೆನೆಂದು ಆ ಬಳಿಕ ಎನ್ರಾನ್ ಒಪ್ಪಿಕೊಳ್ಳುತ್ತದೆ. ಅಂದಹಾಗೆ, ಅಂದು ಎನ್ರಾನ್ ನ  ಪರ ಕಿಸಿಂಜರ್ ಬಂದಿದ್ದರೆ ಇಂದು ಅಮೇರಿಕದ ವಾಲ್ಮಾರ್ಟ್ ನ  ಪರ ಹಿಲರಿ ಬಂದಿಲ್ಲ ಎಂದು ಹೇಗೆ ಹೇಳುವುದು? ಮೆಕ್ಸಿಕೋದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಂಡವಾಳ ಹೂಡುವುದಕ್ಕಾಗಿ ತಾನು ಲಂಚ ಕೊಟ್ಟಿದ್ದೆ ಎಂದು ವಾಲ್ಮಾರ್ಟ್ ಇತ್ತೀಚೆಗಷ್ಟೆ ಹೇಳಿಕೊಂಡಿತ್ತು. ಅದು ಅಮೇರಿಕದಲ್ಲಿ ವಿವಾದವನ್ನೂ ಉಂಟು ಮಾಡಿತ್ತಲ್ಲದೆ ತನಿಖೆಗೂ ಆದೇಶಿಸಲಾಗಿತ್ತು. ನಿಜವಾಗಿ, ವಾಲ್ ಮಾರ್ಟ್ ನಂತಹ ಬೃಹತ್ ಕಂಪೆನಿಗಳು ಲಂಚ ಕೊಟ್ಟೋ, ಲಾಬಿ ನಡೆಸಿಯೋ ವಿವಿಧ ದೇಶಗಳಿಂದ ಕಾಂಟ್ರ್ಯಾಕ್ಟ್ ಗಳನ್ನು ಪಡಕೊಳ್ಳುತ್ತವೆ. 190 ರಾಷ್ಟ್ರಗಳಲ್ಲಿ ಸಂಸ್ಥೆಗಳನ್ನು ಹೊಂದಿರುವ, 3,60,000 ಉದ್ಯೋಗಿಗಳಿರುವ ಯುರೋಪಿನ ಬೃಹತ್ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪೆನಿ ಸಿಯೆಮೆನ್ಸ್ ಗೆ  (Siemens) 2011 ಡಿಸೆಂಬರ್ ನಲ್ಲಿ ಜರ್ಮನಿಯಲ್ಲಿ 1.6 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. 2001ರಿಂದ 2011ರ ನಡುವೆ ಅರ್ಜೆಂಟೀನಾ, ಬಾಂಗ್ಲಾ, ಚೀನಾ, ರಶ್ಯ, ವೆನೆಝುವೇಲಾ ಮತ್ತಿತರ ರಾಷ್ಟ್ರಗಳಲ್ಲಿ ಲಂಚದ ಮೂಲಕ ಅದು ಕಾಂಟ್ರ್ಯಾಕ್ಟ್ ಗಳನ್ನು ಪಡಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ನಿಜವಾಗಿ ಸಿಯೆಮೆನ್ಸ್ ಅನ್ನು ಇಸ್ರೇಲ್ ಸಹಿತ ಯುರೋಪಿಯನ್ ರಾಷ್ಟ್ರಗಳೆಲ್ಲಾ ಬಹಿಷ್ಕರಿಸಬೇಕಾಗಿತ್ತು. ಜರ್ಮನಿಯ ಈ ಸಿಯೆಮೆನ್ಸ್, ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರ್ ನನ್ನು ಬಹಿರಂಗವಾಗಿ ಬೆಂಬಲಿಸಿತ್ತು. ನಾಝಿ ಪಕ್ಷಕ್ಕೆ ಚಂದಾ ಎತ್ತಿತ್ತು. ಯಹೂದಿಗಳನ್ನು ವಿದ್ಯುತ್ ಹಾಯಿಸಿ ಕೊಲ್ಲಲಾಗಿದೆಯೆಂದು (ಹಾಲೋಕಾಸ್ಟ್) ಹೇಳಲಾಗುವ ಕಾನ್ಸನ್ ಟ್ರೇಶನ್ ಕ್ಯಾಂಪ್ ಗೆ  (ಮನೆ) ವಿದ್ಯುತ್ ಹರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟದ್ದು ಇದೇ ಸಿಯೆಮೆನ್ಸ್. ಆದರೆ ಹಾಲೋಕಾಸ್ಟನ್ನು ಒಪ್ಪದ ಅಹ್ಮದಿ ನೆಜಾದ್ ರನ್ನು ಖಂಡಿಸುವ, ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಗುಂಥರ್ ಗ್ರಾಸ್ ಗೆ  ಬಹಿಷ್ಕಾರವನ್ನು ಹಾಕುವ ಇದೇ ಇಸ್ರೇಲ್, 2009ರಲ್ಲಿ ಸಿಯೆಮೆನ್ಸ್ ಜೊತೆ 418 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಇದನ್ನು ಏನೆಂದು ಕರೆಯಬೇಕು? ಅಂದಹಾಗೆ ಹಾಲೋಕಾಸ್ಟನ್ನು ನಿರಾಕರಿಸುವುದು ಯುರೋಪಿಯನ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧ. ಅವೇ ರಾಷ್ಟ್ರಗಳು ಹಾಲೋಕಾಸ್ಟ್ ಗೆ  ಸಹಕರಿಸಿದ ಸಿಯೆಮೆನ್ಸ್ ಗೆ  ಕಾಂಟ್ಯಾಕ್ಟ್ ಗಳನ್ನೂ ಕೊಡುತ್ತಿವೆ. ಇದಕ್ಕೇನು ಕಾರಣ?
            1950ರಿಂದಲೇ ಭಾರತ ಸರಕಾರದ ನೀತಿಗಳ ಮೇಲೆ ವಿದೇಶಿ ಪ್ರಭಾವಗಳು ಇದ್ದಿದ್ದರೂ 1980ರ ವರೆಗೆ ಅದಕ್ಕೊಂದು ಮಿತಿ, ನಿಯಂತ್ರಣ ಇತ್ತು.
          ಆದರೆ 1986 ಮಾರ್ಚ್ 26ರಂದು ಸ್ವೀಡನ್ನ ಬೋಫೋರ್ಸ್ ಕಂಪೆನಿಯೊಂದಿಗೆ 1500 ಕೋಟಿ ರೂಪಾಯಿಯ ವ್ಯವಹಾರಕ್ಕೆ ಭಾರತ ಯಾವಾಗ ಸಹಿ ಹಾಕಿತೋ ಅಂದಿನಿಂದಲೇ ಭಾರತದ ರಾಜಕಾರಣಿಗಳನ್ನು ಆಳುವ ಹಂತಕ್ಕೆ ವಿದೇಶಿ ಕಂಪೆನಿಗಳು ತಲುಪಿಬಿಟ್ಟವು. 1987 ಎಪ್ರಿಲ್ 16ರಂದು ಸ್ವೀಡನ್ನಿನ ರೇಡಿಯೋವೊಂದು ಮೊತ್ತಮೊದಲ ಬಾರಿಗೆ ಬೋಫೋರ್ಸ್ ವ್ಯವಹಾರದಲ್ಲಿ ಭಾರತದ ರಾಜಕಾರಣಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ಲಂಚ ಪಾವತಿಯಾಗಿರುವುದಾಗಿ ಸುದ್ದಿ ಸ್ಫೋಟಿಸಿತು. ಬೋಫೋರ್ಸ್ ಕಂಪೆನಿಯ ನಿರ್ದೇಶಕ ಮಾರ್ಟಿನ್ ಲಿರ್ಬೊರ ಖಾಸಗಿ ಡೈರಿಯೊಂದರ ಆಧಾರದಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಎಂಬ ಪತ್ರಕರ್ತೆ ದಿ ಹಿಂದೂ ಪತ್ರಿಕೆಯಲ್ಲಿ ಇಡೀ ಬೋಫೋರ್ಸ್ ವ್ಯವಹಾರವನ್ನೇ ಬಿಚ್ಚಿಡಲು ಪ್ರಾರಂಭಿಸಿದಾಗ ಜನ ದಂಗಾಗಿ ಬಿಟ್ಟರು. ರಾಜಕೀಯದಲ್ಲಿ ಬಿರುಗಾಳಿ ಎದ್ದಿತು. ಇಟಲಿಯ ಶಸ್ತ್ರಾಸ್ತ್ರ ದಲ್ಲಾಳಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ರಾಜೀವ್ ಗಾಂಧಿ ನಡುವೆ ಇದ್ದ ಸಂಬಂಧ, ಬೋಫೋರ್ಸ್ ನಿರ್ದೇಶಕ ಮಾರ್ಟಿನ್ ರ  ಡೈರಿಯಲ್ಲಿQ ಮತ್ತು R ಎಂಬ ಸಾಂಕೇತಿಕ ಅಕ್ಷರಗಳಲ್ಲಿ ನಮೂದಿಸಲಾಗಿದ್ದ ಲಂಚದ ವಿವರಗಳು, ಸ್ವಿಸ್ ಬ್ಯಾಂಕಲ್ಲಿ ಕ್ವಟ್ರೋಚಿ ಹೊಂದಿದ್ದ ಎರಡು ಬ್ಯಾಂಕ್ ಖಾತೆಗಳು ಮತ್ತು ಕೋಟ್ಯಂತರ ದುಡ್ಡುಗಳ ವಿವರಗಳೆಲ್ಲಾ ಬಹಿರಂಗವಾದುವು. ಬಳಿಕ ಸಿಬಿಐಗೆ ತನಿಖೆಯ ಹೊಣೆಯನ್ನು ವಹಿಸಲಾಯಿತಲ್ಲದೇ ಕ್ವಟ್ರೋಚಿಯ ವಿರುದ್ಧ ಇಂಟರ್ ಪೋಲ್ ವಾರೆಂಟನ್ನು ಹೊರಡಿಸಲಾಯಿತು. ಇದೇ ವೇಳೆ, ಯೂನಿಯನ್ ಕಾರ್ಬೈಡ್ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ಭಾರತದಿಂದ ಸುರಕ್ಷಿತವಾಗಿ ಅಂದಿನ ಕಾಂಗ್ರೆಸ್ ಸರಕಾರವು ವಿದೇಶಕ್ಕೆ ರಾತೋರಾತ್ರಿ ವಿಮಾನದಲ್ಲಿ ಕಳುಹಿಸಿ ಕೊಟ್ಟಂತೆ ಕ್ವಟ್ರೋಚಿಯನ್ನೂ ರಹಸ್ಯವಾಗಿ ವಿದೇಶಕ್ಕೆ ರವಾನಿಸಿತು. ಇಂಟರ್ ಪೋಲ್  ವಾರೆಂಟ್ ಇದ್ದರೂ ಕ್ವಟ್ರೋಚಿ ವಿದೇಶಗಳಲ್ಲಿ ಪತ್ರಿಕೆಗಳಿಗೆ ಸಂದರ್ಶನ ಕೊಡುತ್ತಿದ್ದ. 2007 ಫೆಬ್ರವರಿ 6ರಂದು ಇಂಟರ್ ಪೋಲ್ ವಾರೆಂಟ್ ಪ್ರಕಾರ ಅರ್ಜೆಂಟೀನಾದಲ್ಲಿ ಕ್ವಟ್ರೋಚಿಯನ್ನು ಬಂಧಿಸಲಾಯಿತಾದರೂ ಸಿಬಿಐಯು ಗೊತ್ತೇ ಇಲ್ಲದಂತೆ ನಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಅದು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದೇ ಬಂಧನದ 4 ತಿಂಗಳ ಬಳಿಕ ಜೂನ್ ನಲ್ಲಿ. ಸಿಬಿಐಯ ಬದ್ಧತೆಯನ್ನೇ ಅರ್ಜೆಟೀನಾ ಕೋರ್ಟು ಪ್ರಶ್ನಿಸಿತು. ಸರಿಯಾದ ದಾಖಲೆಗಳನ್ನೇ ಒದಗಿಸದ ನಿಮಗೆ ಕ್ವಟ್ರೋಚಿಯನ್ನು ಕೊಡಲಾರೆ ಅಂದಿತು. ನಿಜವಾಗಿ, ಕ್ವಟ್ರೋಚಿ ವಿಷಯದಲ್ಲಿ ಮುಂದುವರಿಯದಂತೆ ಭಾರತ ಸರಕಾರಕ್ಕೆ ತಾಕೀತು ಮಾಡಲು ವಿದೇಶಿ ರಾಷ್ಟ್ರಗಳ ಮುಖಾಂತರ ಬೋಫೋರ್ಸ್ ಯಶಸ್ವಿಯಾಗಿತ್ತು. ಹೀಗಿರುವಾಗ ಸಿಬಿಐ ಮಾಡುವುದಾದರೂ ಏನು? ಜವಾಹರ್ಲಾಲ್ ನೆಹರು ಯುನಿವರ್ಸಿಟಿಯಲ್ಲಿ ನಿರ್ದೇಶಕರಾಗಿರುವ ಅರುಣ್ ಕುಮಾರ್ ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ಈ ಬಗ್ಗೆ ಹೀಗೆ ಬರೆದಿದ್ದರು,
ನಾನು ಇತ್ತೀಚೆಗೆ ಮಾಜಿ ಸಚಿವರೊಬ್ಬರನ್ನು ಭೇಟಿಯಾಗಿದ್ದೆ. ಕಪ್ಪು ಹಣದ ಬಗ್ಗೆ ಅವರಲ್ಲಿ ಮಾತಾಡಿದೆ. ಅವರು ಬೋಫೋರ್ಸ್  ಫೈಲನ್ನು ಹಿಡಿದುಕೊಂಡು ಒಮ್ಮೆ ಪ್ರಧಾನ ಮಂತ್ರಿಯ ಬಳಿಗೆ ಹೋಗಿದ್ದರಂತೆ. ಆಗ ಪ್ರಧಾನಿಯವರು, `ಆ ಫೈಲನ್ನು ಮುಚ್ಚಿಬಿಡು. ಅದನ್ನು ತೆರೆದರೆ ನನ್ನ ಜೀವಕ್ಕೆ ಅಪಾಯ ಇದೆ’ ಎಂದಿದ್ದರಂತೆ.
           ಆದ್ದರಿಂದಲೇ, `ರಾಷ್ಟ್ರಪತಿ' ಪ್ರಣವ್ ಮುಖರ್ಜಿಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು..
ಚಿದಂಬರಮ್ ರಿಂದ  ಹಣಕಾಸು ಖಾತೆಯನ್ನು ಪಡಕೊಂಡ ಪ್ರಣವ್ ಮುಖರ್ಜಿಯವರು, 2ಜಿ ಸ್ಪೆಕ್ಟ್ರಂನ ಬಗ್ಗೆ ಕಠಿಣ ನಿಲುವನ್ನು ತಾಳಿದರು. ಒಂದು ಹಂತದಲ್ಲಿ ಚಿದಂಬರಮ್ ರ  ವಿರುದ್ಧವೇ ಧ್ವನಿ ಎತ್ತಿದರು. ಕಪ್ಪು  ಹಣವನ್ನು ಭಾರತಕ್ಕೆ ತರುವ ಬಗ್ಗೆಯೂ ಅವರಲ್ಲಿ ಸ್ಪಷ್ಟ ನಿಲುವು ಇತ್ತು. ವೊಡಾಪೋನ್ ವಿವಾದದಲ್ಲಿ ಅವರ ಕಠಿಣ ನಿಲುವು, ಬ್ರಿಟನ್ ಮತ್ತು ನೆದರ್ ಲ್ಯಾಂಡ್ ಗಳನ್ನು ತಳಮಳಗೊಳಿಸಿತ್ತು. ಮುಖ್ಯವಾಗಿ, ಭಾರತದಿಂದ ತೆರಿಗೆಯನ್ನು ತಪ್ಪಿಸಿಕೊಳ್ಳುವ ತಂತ್ರವೊಂದಕ್ಕೆ ವೊಡಾಪೋನ್ ಕೈ ಹಾಕಿತ್ತು. ಅದಕ್ಕಾಗಿ ಅದು ಕಂಪೆನಿಯ ನಿಜವಾದ ಮಾಲಿಕರ ಗುರುತನ್ನು ಅಡಗಿಸುವ ಪ್ರಯತ್ನ ಮಾಡಿತು. ಮಾರಿಷಸ್ ಮೂಲಕ ಬಂಡವಾಳ ಬಂದರೆ ಅದಕ್ಕೆ ತೆರಿಗೆ ವಿನಾಯಿತಿಯಿದೆ ಅನ್ನುವ 2003ರ ಸುಪ್ರೀಮ್ ಕೋರ್ಟ್ ನ  ತೀರ್ಪನ್ನು ದುರುಪಯೋಗಿಸಲು ವೊಡಾಪೋನ್ ಯೋಜನೆ ರೂಪಿಸಿತು. ಆಝಾದಿ ಬಚಾವೋ ಆಂದೋಲನ್ ಮತ್ತು ಭಾರತ ಸರಕಾರದ ನಡುವಿನ ವಿವಾದವನ್ನು ಬಗೆಹರಿಸುವ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ಈ ತೀರ್ಪನ್ನು ಬಹುರಾಷ್ಟ್ರೀಯ ಕಂಪೆನಿಯಾದ ವೊಡಾಫೋನ್ ಬಳಸಿಕೊಳ್ಳುವುದನ್ನು ಮುಖರ್ಜಿ ಬಲವಾಗಿ ವಿರೋಧಿಸಿದರು. ವೊಡಾಫೋನ್ ಗೆ  ತೆರಿಗೆ ವಿನಾಯಿತಿ ಸಾಧ್ಯವಿಲ್ಲ ಎಂದು ಅವರು ಪಟ್ಟು ಹಿಡಿದರು. ನಿಜವಾಗಿ ಚಿದಂಬರಮ್ ವಿತ್ತ ಮಂತ್ರಿಯಾಗಿದ್ದಾಗ ನಡೆದ 2ಜಿ ಸ್ಪೆಕ್ಟ್ರಮ್ ನ  ಬಗ್ಗೆ, ವೊಡಾಫೋನ್, ಏರ್ಸೆಲ್-ಮ್ಯಾಕ್ಸಿಸ್ ನಂತಹ ಬೃಹತ್ ಕಂಪೆನಿಗಳ ವ್ಯವಹಾರದ ಕುರಿತಂತೆ ಮುಖರ್ಜಿಯ ನಿಲುವು ಕಾರ್ಪೋರೇಟ್ ವಲಯದಲ್ಲಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿವೆ. ಒಂದು ರೀತಿಯಲ್ಲಿ, ವಿತ್ತ ಮಂತ್ರಿಯಾಗಿ ಅವರನ್ನು ಸಹಿಸಿಕೊಳ್ಳುವುದು ಕಾರ್ಪೋರೇಟ್ ಸಂಸ್ಥೆಗಳಿಗೆ ಇವತ್ತು ಸಾಧ್ಯವಾಗುತ್ತಿಲ್ಲ.
            ಯಾರೇನೇ ಹೇಳಲಿ, ಭಾರತ ಸಹಿತ ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳ ನೀತಿಗಳನ್ನು ರೂಪಿಸುವುದು ಬೃಹತ್ ಕಂಪೆನಿಗಳೇ. ಯಾರಿಗೆ ಯಾವ ಖಾತೆ ಕೊಡಬೇಕು, ಯಾರು ಪ್ರಧಾನಿ ಆಗಬೇಕು, ವಿದೇಶಾಂಗ, ಹಣಕಾಸು, ಆರೋಗ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುವುದೂ ಅವುಗಳೇ. ಅವು ತಮ್ಮ ಬಯಕೆಯನ್ನು ಅಮೇರಿಕದಂಥ ರಾಷ್ಟ್ರಗಳ ಮುಖಾಂತರ ಜಾರಿಗೆ  ತರುತ್ತವೆ. ಅಗತ್ಯ ಬಂದಾಗಲೆಲ್ಲಾ ಹಿಲರಿ, ಒಬಾಮಾ, ಕ್ಯಾಮರೂನ್ ಗಳು ಬೃಹತ್ ಕಂಪೆನಿಗಳ ಸಿಇಓಗಳೊಂದಿಗೆ ಆಯಾ ರಾಷ್ಟ್ರಗಳಿಗೆ ಭೇಟಿ ಕೊಡುತ್ತಾರೆ. ಒಪ್ಪಂದ ಕುದುರಿಸುತ್ತಾರೆ. ಲಂಚ ಪಾವತಿಯಾಗುತ್ತದೆ. ಇದಕ್ಕೆ ಒಗ್ಗದವರಿಗೆ ರಾಷ್ಟ್ರಪತಿ ಹುದ್ದೆಯನ್ನೋ ದುರ್ಬಲ ಇಲಾಖೆಯನ್ನೋ ಕೊಟ್ಟು ಅಟ್ಟಲಾಗುತ್ತದೆ.
         ಭಾರತ-ಇರಾನ್ ಗ್ಯಾಸ್ ಪೈಪ್ ಲೈನ್ ನ  ಪರ ಬಲವಾಗಿ ವಾದಿಸುತ್ತಿದ್ದ ಮಣಿಶಂಕರ್ ಅಯ್ಯರ್ ರಿಂದ  2006ರಲ್ಲಿ ಪೆಟ್ರೋಲಿಯಂ ಖಾತೆಯನ್ನು ಕಸಿದು ಅವರಿಗೆ ಮನಮೋಹನ್ ಸಿಂಗ್ ರು  ಕ್ರೀಡಾ ಖಾತೆಯನ್ನು ಕೊಟ್ಟಿದ್ದರು. ಇದಕ್ಕೆ ಅಯ್ಯರ್ ರ ಇರಾನ್ ಪರ ನಿಲುವು ಕಾರಣ ಎಂದು ಅಗ ಭಾರತದಲ್ಲಿ ಅಮೇರಿಕದ  ರಾಯಭಾರಿ ಆಗಿದ್ದ ಡೇವಿಡ್ ಮುಲ್ ಫೊರ್ಡ್  ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಪ್ರಣವ್ ಮುಖರ್ಜಿ..
ಅಷ್ಟೇ ವ್ಯತ್ಯಾಸ

No comments:

Post a Comment