Tuesday, September 16, 2014

ಹೆಣ್ಣನ್ನು ವೇಶ್ಯೆಗೊಳಿಸುವ ಪುರುಷನೇಕೆ ಮಹಿಳಾ ವಿರೋಧಿ ಎನಿಸಿಕೊಳ್ಳುತ್ತಿಲ್ಲ?

   ಹೆಣ್ಣು ಸ್ವಯಂ ವೇಶ್ಯೆ ಅಲ್ಲ. ಗಂಡು ಆಕೆಯನ್ನು ವೇಶ್ಯೆಗೊಳಿಸುತ್ತಾನೆ. ಆತನ ಸಂಪರ್ಕದಿಂದಾಗಿ ಆಕೆ ವೇಶ್ಯೆಯಾಗುತ್ತಾಳೆ. ಆದರೂ ಮಾಂಸದಂಧೆ, ವೇಶ್ಯಾವಾಟಿಕೆ, ಮೈ ಮಾರುವಿಕೆ.. ಮುಂತಾದ ಪದಗಳೆಲ್ಲ ಹೆಣ್ಣಿನ ಸುತ್ತವೇ ಗಿರಕಿ ಹೊಡೆಯುತ್ತಿರುವುದೇಕೆ? ಇವು ಮತ್ತು ಇಂಥ ಅನೇಕ ಪದಗಳಲ್ಲಿ ಒಂದು ಪದವನ್ನಾದರೂ ಆಕೆಯನ್ನು ವೇಶ್ಯೆಗೊಳಿಸಿದ ಪುರುಷನಿಗೆ ಈ ಸಮಾಜ ಇನ್ನೂ ಕೊಡದಿರುವುದು ಯಾವ ಕಾರಣದಿಂದ? ಹೆಣ್ಣು ವೇಶ್ಯೆಯಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರ ನಿಂತೋ ಘನತೆರಹಿತವಾಗಿಯೋ ಬದುಕುತ್ತಿರುವಾಗ ಅದಕ್ಕೆ ಕಾರಣನಾದವ ಸಕಲ ಮರ್ಯಾದೆ ಮತ್ತು ಪೂರ್ಣ ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾನಲ್ಲ, ಯಾಕೆ ಇದು ಚರ್ಚಾರ್ಹಗೊಳ್ಳುತ್ತಿಲ್ಲ? ಹಾಗಂತ, ಹೆಣ್ಣನ್ನು ಹೀಗೆ ವೇಶ್ಯೆಗೊಳಿಸಿದವ ರಾಜಕಾರಣಿ ಆಗಿರಬಹುದು, ಧಾರ್ಮಿಕ ಮುಖಂಡ, ಹೋರಾಟಗಾರ, ಸಮಾಜಸೇವಕ, ಬುದ್ಧಿಜೀವಿ, ಸಾಹಿತಿ, ಪತ್ರಕರ್ತ, ವೈದ್ಯ, ಇಂಜಿನಿಯರ್, ನ್ಯಾಯವಾದಿ, ಸಾಮಾನ್ಯ.. ಯಾರೂ ಆಗಿರಬಹುದು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಎಂದೋ ನಿಷೇಧ ವಿಧಿಸಿ ಎಂದೋ ಆತ ಆಗ್ರಹಿಸಿರಬಹುದು. ಆ ಕುರಿತಾದ ಪ್ರತಿಭಟನೆಗಳಲ್ಲಿ ಮುಂದಾಳುತ್ವ ವಹಿಸಿರಬಹುದು. ಹೆಣ್ಣಿನ ಹಕ್ಕು-ಸಮಾನತೆಯ ಕುರಿತಂತೆ ಚರ್ಚಿಸಿರಬಹುದು.. ಇವೆಲ್ಲ ಏನು? ಪುರುಷ ಯಜಮಾನಿಕೆ ಅಲ್ಲವೇ? ಪುರುಷನಿಗೆ ಸಮಾಜದಲ್ಲಿ ಸಿಗುವಷ್ಟೇ ಗೌರವ ಆತನಿಂದ ‘ವೇಶ್ಯೆ' ಆದವಳಿಗೂ ಸಿಗಬೇಕೆಂದು ಒತ್ತಾಯಿಸಿ ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ? ಆಕೆಯನ್ನು ‘ವೇಶ್ಯೆ' ಮಾಡಿದವರ ಭಾವಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಒತ್ತಾಯಿಸುತ್ತಿಲ್ಲ? ಹೆಣ್ಣಿನಿಂದ ಸುಖವನ್ನು ಪಡೆದ ಪುರುಷ ಆಕೆಗೆ ವೇಶ್ಯೆ ಎಂಬ ಬಿರುದನ್ನು ದಯಪಾಲಿಸಿ ಹಿಂತಿರುಗುತ್ತಾನೆ. ಆದರೆ ಆಕೆಯಿಂದ ಆತ ಯಾವ ಬಿರುದನ್ನೂ ಪಡಕೊಳ್ಳುವುದಿಲ್ಲ. ಈ ತಾರತಮ್ಯದ ಬಗ್ಗೆ ಸಮಾಜದ ನಿಲುವು ಏನು? ಅಷ್ಟಕ್ಕೂ, ಆತ ಸುಖಕ್ಕೆ ಬದಲಾಗಿ ದುಡ್ಡು ಪಾವತಿಸುತ್ತಾನೆ ಎಂದು ವಾದಿಸಬಹುದು. ಓರ್ವ ಹೆಣ್ಣಿಗೆ ತನ್ನ ಮಾನ, ಮರ್ಯಾದೆ, ಗೌರವ ಮುಂತಾದುವುಗಳನ್ನೆಲ್ಲ ವಿೂರಿ ಬದುಕಬೇಕಾದಂಥ ಬಡತನದ ಪರಿಸ್ಥಿತಿ ಎದುರಾಗಿದೆಯೆಂದರೆ ಅದಕ್ಕೆ ಈ ಪುರುಷ ಸಮಾಜದ ಪ್ರತಿಕ್ರಿಯಿಸಬೇಕಾದ ರೀತಿ ಯಾವುದು? ಲೈಂಗಿಕವಾಗಿ ಬಳಸಿಕೊಳ್ಳುವುದೇ? ಓರ್ವರ ಅಸಹಾಯಕತೆಗೆ ಪ್ರತಿಕ್ರಿಯಿಸುವ ಮಾನವೀಯ ವಿಧಾನವೇ ಇದು? ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಪ್ರಕಾರ, ಹೆಚ್ಚಿನೆಲ್ಲ ವೇಶ್ಯೆಯರ ಹಿಂದೆ ಬಡತನದ ಕತೆಯಿದೆ. ಮಾನವ ಕಳ್ಳ ಸಾಗಾಣಿಕೆಯಿಂದಲೋ ಮೋಸಕ್ಕೊಳಗಾಗಿಯೋ ವೇಶ್ಯೆಯರಾಗುವವರ ಸಂಖ್ಯೆ ತೀರಾ ಕಡಿಮೆ. ಮಾನವ ಕಳ್ಳ ಸಾಗಾಣಿಕೆಗೆ ಗುರಿಯಾಗುವವರ ಹಿನ್ನೆಲೆಯೂ ಬಡತನದ್ದೇ. ಒಂದು ಕಡೆ ಅಸಹಾಯಕತೆ. ಇನ್ನೊಂದು ಕಡೆ ಆ ಅಸಹಾಯಕತೆಗೆ ನೆರವಾಗುವ ನೆಪದಲ್ಲಿ ಆಕೆಯ ದೇಹದ ದುರ್ಬಳಕೆ. ಯಾಕೆ ಇದು ಮಹಿಳಾ ದೌರ್ಜನ್ಯ ಅನ್ನಿಸಿಕೊಳ್ಳುತ್ತಿಲ್ಲ?
ಪುರಾತನ ಮೆಸಪಟೋಮಿಯ ಅಥವಾ ಹಮ್ಮುರಾಬಿ ನಾಗರಿಕತೆಯಲ್ಲಿ ವೇಶ್ಯಾವಾಟಿಕೆ ಇತ್ತು ಎಂದೋ ಅಥವಾ ಗ್ರೀಕ್‍ನ ಪೋರ್ನೊ ಎಂಬ ಪದದಿಂದ ಪೋರ್ನೋಗ್ರಫಿ ಎಂಬ ಪದ ಹುಟ್ಟಿಕೊಂಡಿದೆಯೆಂದೋ ವಾದಿಸುವುದು ಸುಲಭ. ಪುರಾತನ ಗ್ರೀಕ್‍ನ ಇತಿಹಾಸದಲ್ಲಿ ಲೈಸ್ ಎಂಬ ಮಹಿಳೆಯ ಚೆಲುವು ಮತ್ತು ಮಾದಕತೆಯ ಕತೆಯಿದೆ. ಆಕೆ ವೇಶ್ಯೆ ಆಗಿದ್ದಳೆಂದೂ ಆಕೆಯ ಚೆಲುವಿಗಾಗಿ ಹೆಚ್ಚಿನ ಮೊತ್ತ ಪಾವತಿಸಲಾಗುತ್ತಿತ್ತೆಂದೂ ಹೇಳಲಾಗುತ್ತದೆ. ಅಂದಹಾಗೆ, ಪುರಾತನ ಕಾಲದ ದೊಡ್ಡದೊಂದು ಇತಿಹಾಸವು ಅಮಾನವೀಯವಾಗಿತ್ತು. ದುರ್ಬಲರಾದ ಮಹಿಳೆ ಮತ್ತು ಪುರುಷರ ರಕ್ತದ ಕಲೆಗಳಿಂದ ಅವು ಬರೆಯಲ್ಪಟ್ಟಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಮಿಲಿಟರಿ ವೇಶ್ಯಾಗೃಹದಲ್ಲಿ ಚೀನಾ, ಕೊರಿಯ ಮತ್ತಿತರೆಡೆಯ 2 ಲಕ್ಷದಷ್ಟು ಮಹಿಳೆಯರು ಲೈಂಗಿಕ ತೃಷೆಗೆ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಗುಲಾಮರು ಮತ್ತು ದೇವದಾಸಿಯರಾಗಿ ಪುರುಷ-ಮಹಿಳೆಯರಿಬ್ಬರೂ ಈ ಜಗತ್ತಿನಾದ್ಯಂತ ಸರಣಿ ಅತ್ಯಾಚಾರಗಳನ್ನು ಅನುಭವಿಸಿದರು. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು(ಸ) ಗುಲಾಮತನ, ವೇಶ್ಯಾವಾಟಿಕೆಯನ್ನು ಕಾನೂನುಬಾಹಿರವೆಂದು ಸಾರಿದರು. ಕಮ್ಯುನಿಸ್ಟ್ ಚಿಂತಕರೂ ವೇಶ್ಯಾವಾಟಿಕೆಗೆ ವಿರುದ್ಧ ವಾಗಿದ್ದರು. 'Only a specific expression of the general prostitution of the laborer' ಎಂದು ಹೇಳಿದ್ದ ಕಾರ್ಲ್ ಮಾರ್ಕ್ಸ್, ‘ಕ್ಯಾಪಿಟಾಲಿಸಂನಿಂದ ಹೊರಬರುವುದಕ್ಕಾಗಿ ವೇಶ್ಯಾವಾಟಿಕೆಯನ್ನು ನಿಷೇಧಿಸಬೇಕಾಗಿದೆ’ ಎಂದು ವಾದಿಸಿದ್ದರು. ಫ್ರೆಡ್ರಿಕ್ ಏಂಗಲ್ಸ್ ರು, ಮದುವೆಯನ್ನೇ ‘ವೇಶ್ಯಾವಾಟಿಕೆಯ ವಿಧಾನ’ ಎಂದಿದ್ದರು. ವ್ಲಾದಿವಿೂರ್ ಲೆನಿನ್‍ರ ಪ್ರಕಾರ, ‘ವೇಶ್ಯಾವಾಟಿಕೆಯು ಅಸಹ್ಯ ಕೃತ್ಯ'. ಜಗತ್ತು ಕಮ್ಯುನಿಸಂನಿಂದ ಬಂಡವಾಳಶಾಹಿತ್ವಕ್ಕೆ ಹೊರಳಿದ ಬಳಿಕ ವೇಶ್ಯಾವಾಟಿಕೆಯ ಕುರಿತಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ವ್ಯಕ್ತವಾದುವು. ಆದರೆ ಇವತ್ತೂ 109 ರಾಷ್ಟ್ರಗಳು ವೇಶ್ಯಾವಾಟಿಕೆಯನ್ನು ಕಾನೂನುಬಾಹಿರ ಎಂದೇ ಪರಿಗಣಿಸಿವೆ. ಉತ್ತರ ಕೊರಿಯಾ, ಸುಡಾನ್, ಸೌದಿ ಅರೇಬಿಯಾ, ಇರಾನ್‍ಗಳಲ್ಲಿ ವೇಶ್ಯಾವಾಟಿಕೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ನಿಜವಾಗಿ, ಗ್ರೀಕ್, ರೋಮನ್, ಮೆಸಪೊಟೇಮಿಯ ನಾಗರಿಕತೆಗಳಲ್ಲಿ ಮತ್ತು ಬಳಿಕದ ಶತಮಾನಗಳಲ್ಲಿ ದುರ್ಬಲರಾದ ಹೆಣ್ಣು ಮತ್ತು ಗಂಡಿನ ಮೇಲೆ ದೈಹಿಕ ದೌರ್ಜನ್ಯಗಳು ನಡೆಯುತ್ತಿದ್ದುವು. ಹೆಣ್ಣು ಅತ್ಯಾಚಾರಕ್ಕೆ ಒಳಗಾಗುವಾಗ ಗಂಡು ಇತರ ಕಠಿಣ ದುಡಿಮೆಗಳಿಗೆ ಬಲಿಯಾಗುತ್ತಿದ್ದ. ಆದರೆ ಈ ಆಧುನಿಕ ಜಗತ್ತು ದುರ್ಬಲ ಪುರುಷರನ್ನು ಬಹುತೇಕ ಆ ದೌರ್ಜನ್ಯಗಳಿಂದ ಹೊರತಂದು ರಕ್ಷಿಸಿದೆ. ಗಣಿಗಳಲ್ಲಿ, ತೋಟ, ಕಾರ್ಖಾನೆಗಳಲ್ಲಿ ಜೀತಕ್ಕೆ ಒಳಗಾದವರಿಗೆ ಮುಕ್ತಿ ನೀಡುತ್ತಿದೆ. ಆದರೆ ದುರ್ಬಲ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಈ ಜಗತ್ತು ಅದೇ ಮಾನದಂಡದಲ್ಲಿ ವ್ಯಾಖ್ಯಾನಿಸುತ್ತಿಲ್ಲ. ಅದಕ್ಕೆ ವೇಶ್ಯಾವಾಟಿಕೆ ಎಂಬ ಬಿರುದನ್ನು ಕೊಟ್ಟು ಆ ದೌರ್ಜನ್ಯವನ್ನು ನ್ಯಾಯಬದ್ಧಗೊಳಿಸುವ ಜಾಣತನ ತೋರುತ್ತಿದೆ. ಆಕೆಯ ದೇಹವನ್ನು ಕಮರ್ಷಿಯಲ್ ಎಂದು ವ್ಯಾಖ್ಯಾನಿಸಿ ದುಡ್ಡು ಕೊಟ್ಟು ಆ ದೇಹವನ್ನು ಯಾರಿಗೆ ಬೇಕಾದರೂ ಪಡೆಯುವ ಅರ್ಹತೆಯಿದೆ ಎಂದು ಹೇಳುತ್ತಿದೆ.
   ನಿಜವಾಗಿ, ಇಲ್ಲಿ ಚರ್ಚೆಗೊಳಗಾಗಬೇಕಾದದ್ದು ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂದಲ್ಲ, ವೇಶ್ಯೆಯರ ಅಗತ್ಯ ಯಾರಿಗಿದೆ ಮತ್ತು ಯಾಕಿದೆ ಎಂದು. ಯಾಕೆ ಪುರುಷರು ಇಂಥದ್ದೊಂದು ವ್ಯವಸ್ಥೆಯನ್ನು ಬಯಸುತ್ತಾರೆ? ವೇಶ್ಯೆಯ ಬಳಿಗೆ ಹೋಗುವ ಪುರುಷ ಯಾರದೋ ಮಗ, ಪತಿ, ಸಹೋದರ, ತಂದೆ.. ಆಗಿರುತ್ತಾರೆ. ಅವರಿಗೆ ತನ್ನ ಮನೆಯಲ್ಲಿ ಪತಿಯಾಗಿ, ತಂದೆಯಾಗಿ, ಮಗನಾಗಿ ಮತ್ತು ಇನ್ನಿತರ ಪಾತ್ರವಾಗಿ ಜವಾಬ್ದಾರಿಗಳಿವೆ. ಸಾಮಾಜಿಕವಾಗಿ ಐಡೆಂಟಿಟಿ ಇದೆ. ಈ ಪಾತ್ರಗಳಿಗೆಲ್ಲ ಅವರ ವೇಶ್ಯಾಸಂಗ ನ್ಯಾಯವನ್ನೂ ಗೌರವವನ್ನೂ ಒದಗಿಸಿಕೊಡಬಲ್ಲುದೇ? ಪತಿಯಾಗಿ ಓರ್ವ ವ್ಯಕ್ತಿ ತನ್ನ ವೇಶ್ಯಾಸಂಗವನ್ನು ಹೇಗೆ ಸಮರ್ಥಿಸಬಲ್ಲ? ಪತ್ನಿಯೊಂದಿಗೆ ಆತ ಈ ಸಂಗತಿಯನ್ನು ಹೇಳಬಲ್ಲನೇ? ಹಾಗೆ ಹೇಳಿದರೆ ಆಕೆಯ ಪ್ರತಿಕ್ರಿಯೆ ಏನಿದ್ದೀತು? ಆಕೆಯೂ ಅಂಥದ್ದೇ ಸ್ವಾತಂತ್ರ್ಯವನ್ನು ಬಯಸಿದರೆ ಆತನ ಪ್ರತಿಕ್ರಿಯೆ ಏನಿದ್ದೀತು? ಅವರ ಸಂಬಂಧ ಎಲ್ಲಿಯವರೆಗೆ ಮುಂದುವರಿದೀತು? ಓರ್ವ ತಂದೆ ತನ್ನ ವೇಶ್ಯಾಸಂಗವನ್ನು ತನ್ನ ಮಕ್ಕಳ ಜೊತೆ ಹಂಚಿಕೊಳ್ಳಬಲ್ಲರೇ? ಮಗ ತನ್ನ ತಾಯಿಯೊಂದಿಗೋ ತಂದೆಯೊಂದಿಗೋ ‘ತಾನು ಹೀಗೆ’ ಎಂದು ಹೇಳಿ ಕೊಳ್ಳಬಲ್ಲನೇ? ವೇಶ್ಯೆಯನ್ನು ಅನುಭವಿಸುವ ಓರ್ವ ಶಿಕ್ಷಕನನ್ನು ಸಮಾಜ ಹೇಗೆ ಸ್ವೀಕರಿಸಬಹುದು? ಅಂದ ಹಾಗೆ, ವೇಶ್ಯಾವಾಟಿಕೆಯ ಸುತ್ತ ಚರ್ಚಿಸುವಾಗ ನಾವೆಲ್ಲ ಯಾಕೆ ಈ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಸಾಮಾಜಿಕ ಸಂಬಂಧಗಳು ಗಟ್ಟಿಯಾಗಿರುವುದೇ ನಂಬಿಕೆಗಳ ಮೇಲೆ. ಪತ್ನಿಗೆ ಪತಿಯ ಮೇಲೆ, ಮಗಳಿಗೆ ತಂದೆಯ ಮೇಲೆ, ಹೆತ್ತವರಿಗೆ ಮಕ್ಕಳ ಮೇಲೆ, ಮಕ್ಕಳಿಗೆ ಶಿಕ್ಷಕರ ಮೇಲೆ.. ಇಂಥ ನಂಬಿಕೆಗಳ ಮೇಲೆ ವೇಶ್ಯಾಸಂಗ ಬೀರುವ ಪರಿಣಾಮಗಳು ಯಾವ ಬಗೆಯವು? ಹೀಗಿರುತ್ತಾ, ಮಹಿಳಾ ಹಕ್ಕು, ಸಮಾನತೆಯ ಬಗ್ಗೆ ಮಾತಾಡುವ ಜಗತ್ತಿಗೆ ಯಾಕೆ ವೇಶ್ಯಾವಾಟಿಕೆಯು ಪುರುಷ ಜಗತ್ತಿನ ಸೃಷ್ಟಿ ಎಂದು ಅನಿಸುತ್ತಿಲ್ಲ? ಪುರುಷನ ಬಯಕೆಯನ್ನು ತೀರಿಸುವುದಕ್ಕೆ ಮದುವೆಯ ಹೊರತಾದ ವ್ಯವಸ್ಥೆಯೊಂದು ಇರಬೇಕು ಎಂದಾದರೆ ಮಹಿಳೆಯ ಬಯಕೆಯನ್ನು ತೀರಿಸುವುದಕ್ಕೂ ಒಂದು ವ್ಯವಸ್ಥೆ ಇರಬೇಕೆಂದು ಮಹಿಳಾ ಜಗತ್ತು ವಾದಿಸುತ್ತಿಲ್ಲವೇಕೆ? ಆ ವ್ಯವಸ್ಥೆ ಯಾಕೆ ಈ ವರೆಗೆ ಅಸ್ತಿತ್ವಕ್ಕೆ ಬಂದಿಲ್ಲ? ಅಷ್ಟಕ್ಕೂ, ಪುರುಷನಿಗೇಕೆ ಅಂಥದ್ದೊಂದು ವ್ಯವಸ್ಥೆಯ ಅಗತ್ಯವಿದೆ? ಆತನೇನು ಮಹಿಳೆಗಿಂತ ಮಿಗಿಲೇ? ಮಹಿಳೆಗಿಲ್ಲದ ಕೆಲವು ವಿಶೇಷ ರಿಯಾಯಿತಿ, ಸೌಲಭ್ಯಗಳು ಪುರುಷನಿಗೆ ಅಗತ್ಯವಿದೆ ಮತ್ತು ಅದರಲ್ಲಿ ಮಹಿಳೆಯ ದೇಹವೂ ಒಂದು ಎಂದು ಕಲಿಸಿದವರು ಯಾರು? ಈ ಅಸಮಾನತೆಯ ಪಾಠವನ್ನು ಖಂಡಿಸುವ ಮತ್ತು ಪ್ರತಿಭಟಿಸುವ ಬದಲು ಅದನ್ನೇ ಕಾನೂನುಬದ್ಧಗೊಳಿಸಿ ಎಂದು ಒತ್ತಾಯಿಸುವುದು ಯಾವ ಬಗೆಯ ಸಮಾನತೆ?
   ಅತ್ಯಾಚಾರಕ್ಕೂ ವೇಶ್ಯಾವಾಟಿಕೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕಡೆ ಪುರುಷ ಹೆಣ್ಣಿನ ಅನುಮತಿಯನ್ನು ಪಡೆಯದೇ ದೈಹಿಕ ಸುಖವನ್ನು ಪಡೆಯುವಾಗ ಇನ್ನೊಂದು ಕಡೆ ಅವಳ ಅಸಹಾಯಕೆಯನ್ನೇ ಅನುಮತಿಯನ್ನಾಗಿ ಪರಿವರ್ತಿಸಿಕೊಂಡು ಸುಖ ಪಡೆಯುತ್ತಾನೆ. ಎರಡರಲ್ಲೂ ಗಂಡಿನ ದಬ್ಬಾಳಿಕೆ ಮತ್ತು ಹೆಣ್ಣಿನ ಅಸಹಾಯಕತೆಗಳಿವೆ. ಆದರೆ, ಒಂದು ದಬ್ಬಾಳಿಕೆಯಾಗಿಯೂ ಇನ್ನೊಂದು ಪುರುಷ ಸಮಾಜದ ಸಹಜ ಬೇಡಿಕೆಯಾಗಿಯೂ ಗುರುತಿಗೀಡಾಗಿದೆ. ಮುಸ್ಲಿಮ್ ಮಹಿಳೆಯರು ತೊಡುವ ಬುರ್ಖಾವನ್ನು ಪುರುಷ ಯಜಮಾನಿಕೆಯಾಗಿ ಮತ್ತು ಅಸಮಾನತೆಯ ಸಂಕೇತವಾಗಿ ವ್ಯಾಖ್ಯಾನಿಸುವವರೇ ವೇಶ್ಯಾವಾಟಿಕೆಯು ಕಾನೂನು ಬದ್ಧಗೊಳ್ಳಬೇಕೆಂದು ವಾದಿಸುತ್ತಾರೆ. ಅದಕ್ಕಿರುವ ಪುರಾತನ ಹಿನ್ನೆಲೆಯನ್ನು ಮುಂದಿಡುತ್ತಾರೆ. ಆದರೆ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬಾಳಿ ಬದುಕಬೇಕಾದ ಓರ್ವ ಹೆಣ್ಣನ್ನು ವೇಶ್ಯೆ ಮಾಡುವುದು ಪುರುಷ ದಬ್ಬಾಳಿಕೆ, ಯಜಮಾನಿಕೆಯಾಗಿ ಗುರುತಿಸಿಕೊಳ್ಳದೇ ಆಯ್ಕೆ ಸ್ವಾತಂತ್ರ್ಯವಾಗಿ ವ್ಯಾಖ್ಯಾನಗೊಳ್ಳುತ್ತದೆ. ಅಂದ ಹಾಗೆ, ವೇಶ್ಯವಾಟಿಕೆಯು ಓರ್ವ ಹೆಣ್ಣು ಮಗಳ ಪಾಲಿಗೆ ಆಯ್ಕೆಯೋ ಅನಿವಾರ್ಯವೋ ಆಗಬಹುದಾದ ಸಂದರ್ಭ ಯಾವುದು? ಯಾವ ಹೆಣ್ಣೂ ತನ್ನ ಬದುಕಿನ ಪ್ರಥಮ ಆಯ್ಕೆಯಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಲ್ಲಳೇ? ಹಾಗೆ ವಾದಿಸುವುದು ಎತ್ತು-ಕುರಿಗಳು ಸ್ವಯಂ ಕಸಾಯಿಖಾನೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂದು ವಾದಿಸಿದಂತಾಗದೆ? ಹೆಣ್ಣಿನ ಪಾಲಿಗೆ ವೇಶ್ಯಾವಾಟಿಕೆ ಕಟ್ಟಕಡೆಯ ಆಯ್ಕೆ. ತನ್ನ ಅನಿವಾರ್ಯತೆಯನ್ನು ಪೂರೈಸಲು ಬೇರೆ ಯಾವುದೇ ಮಾರ್ಗ ಇಲ್ಲದೇ ಇರುವಾಗ ತನ್ನ ಸಹಜ ಲಜ್ಜೆಯನ್ನು ಬಲವಂತದಿಂದ ಬದಿಗಿರಿಸಿ ಆಕೆ ದೇಹವನ್ನು ಪಣಕ್ಕಿಡಬಯಸುತ್ತಾಳೆ. ಅದವಳ ಆಯ್ಕೆಯಲ್ಲ, ಅನಿವಾರ್ಯತೆ. ನಿಜವಾಗಿ, ಅಂಥ ಅನಿವಾರ್ಯತೆಗಳು ಪುರುಷನಿಗೂ ಎದುರಾಗುತ್ತವೆ. ಆದರೆ ಆತ ಅದನ್ನು ಎದುರಿಸುವುದಕ್ಕೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಅಂಥ ಅನಿವಾರ್ಯತೆ ಎದುರಾದಾಗ ಪುರುಷ ಆಕೆಯ ದೇಹವನ್ನು ಬಯಸುತ್ತಾನೆ. ಹೆಣ್ಣಿನ ಅನಿವಾರ್ಯತೆಗೆ ದೇಹವನ್ನು ಬಳಸದೆಯೇ ನೆರವಾಗುವ ಅವಕಾಶ ಇದ್ದರೂ, ಆಕೆಯನ್ನು ಆತ ವೇಶ್ಯಗೊಳಿಸುತ್ತಾನೆ. ಮಾತ್ರವಲ್ಲ, ತನ್ನ ವೇಶ್ಯಾಸಂಗವನ್ನು ಮರೆಮಾಚಿ ಸಮಾಜದಲ್ಲಿ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಇದು ಪುರುಷ ಯಜಮಾನಿಕೆ ಮತ್ತು ಮಹಿಳಾ ದೌರ್ಜನ್ಯ ಅಲ್ಲ ಎಂದಾದರೆ ಜುಜುಬಿ ಬುರ್ಖಾ ಯಾವ ಲೆಕ್ಕ? ಅದರ ವಿರುದ್ಧವೇಕೆ ಈ ಪರಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ?

Wednesday, September 10, 2014

ಬಶೀರ್ ಎತ್ತಿಕೊಳ್ಳಬೇಕಾದ ಪಂಜು ಮತ್ತು ಸಾರಾ ಅಬೂಬಕರ್‍ರ ಪಂಜು

ಸಾರಾ ಅಬೂಬಕರ್ 
    ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಅವರ ‘ಬಾಡೂಟದ ಜೊತೆ ಗಾಂಧಿ ಜಯಂತಿ’ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಸರ್ ಅವರು ಮಾಡಿದ ಭಾಷಣ ಮತ್ತು ಅದನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ (ಶೇರ್) ಪತ್ರಕರ್ತ ನವೀನ್ ಸೂರಿಂಜೆಯವರ ಬಗ್ಗೆ ವ್ಯಕ್ತವಾದ ಹೆಚ್ಚಿನ ಪ್ರತಿಕ್ರಿಯೆಗಳನ್ನು ಓದಿ ತೀವ್ರ ನೋವು ಮತ್ತು ವಿಷಾದ ಉಂಟಾಯಿತು. ಒಂದೊಳ್ಳೆಯ ಚರ್ಚೆ ನಡೆಸಬಹುದಾಗಿದ್ದ ಮತ್ತು ನಡೆಸಬೇಕಾಗಿದ್ದ ಅಭಿಪ್ರಾಯವನ್ನೇ ಅನಾಗರಿಕಗೊಳಿಸಿ, ಬಳಿಕ ನಿಂದನೀಯ ಮಟ್ಟಕ್ಕೆ ಕೊಂಡೊಯ್ದು ಕೊನೆಗೆ ಧರ್ಮವಿರೋಧಿ ಎಂಬ ಷರಾದೊಂದಿಗೆ ಮುಕ್ತಾಯಗೊಳಿಸುವ ಅವಿವೇಕವು ಹಲವಾರು ಪ್ರತಿಕ್ರಿಯೆಗಳಲ್ಲಿ ಕಂಡುಬಂತು. ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದಕ್ಕಿಂತ ಮೊದಲು ಭಾಷೆ ಮತ್ತು ಭಾವನೆಗಳ ಮೇಲೆ ಹಿಡಿತ ಅತ್ಯಗತ್ಯ. ಕಂಪ್ಯೂಟರ್‍ನ ಕೀ ಬೋರ್ಡ್‍ಗೆ ಸ್ವಂತ ಬುದ್ಧಿಯಿಲ್ಲ. ಸರಿ-ತಪ್ಪುಗಳ ಪ್ರಜ್ಞೆಯಿಲ್ಲ. ಇವುಗಳನ್ನು ಕೀ ಬೋರ್ಡ್‍ನಲ್ಲಿ ತುಂಬಬೇಕಾದವನು ಅದರ ಬಳಕೆದಾರ. ಈ ಎಚ್ಚರಿಕೆ ಬಳಕೆದಾರನಲ್ಲಿ ಸದಾ ಇರಬೇಕು. ಪತ್ರಿಕೆಗಳಿಗೆ ಸಂಪಾದಕ ಇರುವಂತೆ ಫೇಸ್‍ಬುಕ್‍ಗೆ ಇಲ್ಲ ಮತ್ತು ಆ ಕಾರಣದಿಂದಾಗಿ ಎಡಿಟಿಂಗ್‍ನ ಭೀತಿ ಇಲ್ಲ ಎಂಬ ಭರವಸೆಯಲ್ಲಿ ಯದ್ವಾತದ್ವಾ ಬರೆಯುವುದರಿಂದ ಬರೆದವರ ಮೇಲಷ್ಟೇ ಅಲ್ಲ, ಅವರು ಪ್ರತಿನಿಧಿಸುವ ಸಮುದಾಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ತಪ್ಪು ತಿಳುವಳಿಕೆಗಳಿಗೆ ಅದು ಅವಕಾಶ ಮಾಡಿಕೊಡಬಹುದು ಎಂಬ ಎಚ್ಚರಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕು.
 ದಿನೇಶ್ ಅವಿೂನ್ ಮಟ್ಟು ಅಥವಾ ನವೀನ್ ಸೂರಿಂಜೆಯವರ ಅಭಿಪ್ರಾಯಗಳನ್ನು ಪ್ರಭಾಕರ ಭಟ್ಟರದ್ದೋ ತೊಗಾಡಿಯಾ, ಯೋಗಿ ಆದಿತ್ಯನಾಥರದ್ದೋ ಅಭಿಪ್ರಾಯಗಳಂತೆ ಕಾಣುವುದು ಆಕ್ಷೇಪಾರ್ಹ, ಹಾಸ್ಯಾಸ್ಪದ ಮತ್ತು ಖಂಡನೀಯವಾದದ್ದು. ಅವಿೂನ್ ಮಟ್ಟು ಅವರು ನಮ್ಮ ನಡುವಿನ ಅತ್ಯಂತ ಸಂವೇದನಾಶೀಲ ಚಿಂತಕ, ಬರಹಗಾರ. ಅವರು ಈ ನಾಡಿನ ಜಾತ್ಯತೀತ ಮತ್ತು ಕೋಮುವಾದಿ ವಿರೋಧಿ ನಿರ್ಭೀತ ವ್ಯಕ್ತಿತ್ವವೂ ಹೌದು. ನವೀನ್ ಸೂರಿಂಜೆ ಯುವ ಪತ್ರಕರ್ತ. ಅವರಲ್ಲಿ ಅಪಾರ ಉತ್ಸಾಹ ಇದೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ. ಕೋಮುವಾದವನ್ನು ಮತ್ತು ಧಾರ್ಮಿಕ ಕಂದಾಚಾರಗಳನ್ನು ರಿಸ್ಕ್ ತೆಗೆದುಕೊಂಡು ಖಂಡಿಸುವ ಛಾತಿ ತೋರಿಸುತ್ತಾರೆ. ಇವರನ್ನು ವಿಮರ್ಶಿಸುವ ಮೊದಲು ಈ ಅರಿವು ಇರಬೇಕು. ಹಾಗಂತ, ಇವರ ಅಭಿಪ್ರಾಯಗಳನ್ನು ಸಾರಾಸಗಟು ಒಪ್ಪಿಕೊಳ್ಳಬೇಕು ಎಂದಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಮಟ್ಟು ಮತ್ತು ಸೂರಿಂಜೆಗೆ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಆ ಅಭಿಪ್ರಾಯಗಳನ್ನು ವಿಮರ್ಶಿಸುವುದಕ್ಕೂ ಇದೆ. ಆದರೆ, ಆ ವಿಮರ್ಶೆಯು ಸೌಜನ್ಯದ ಗೆರೆಯನ್ನು ದಾಟಬಾರದು. ಇವರನ್ನು ಸಂಘಪರಿವಾರದ ವ್ಯಕ್ತಿಗಳೆಂದು ನಿಂದಿಸುವುದು ಖಂಡನೀಯವಷ್ಟೇ ಅಲ್ಲ, ಅದರಲ್ಲಿ ಅಜ್ಞಾನ ಇದೆ. ಅವರ ವ್ಯಕ್ತಿತ್ವ, ನಿಲುವು, ಹೋರಾಟಗಳ ಬಗ್ಗೆ ಅಪರಿಚಿತತೆಯಿದೆ ಮತ್ತು ಧರ್ಮವಿರೋಧಿ ಅಸಹಿಷ್ಣುತೆಯಿದೆ. ಇಂಥ ಏಕಮುಖ ನಿಲುವುಗಳು ಅಂತಿಮವಾಗಿ ಅಭಿಪ್ರಾಯ ಸ್ವಾತಂತ್ರ್ಯವನ್ನೇ ಸಹಿಸದ ಮತ್ತು ಅಂಥವರ ಮೇಲೆ ದಾಳಿ ಮಾಡಬಹುದಾದ ಮಟ್ಟಕ್ಕೆ ಕೊಂಡೊಯ್ಯಬಹುದು. ಇದು ಅಪಾಯಕಾರಿ.
 ದಿನೇಶ್ ಅವಿೂನ್ ಮಟ್ಟು ಅವರು ಬುರ್ಖಾದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಈವರೆಗೆ ಈ ಸಮಾಜ ಆಲಿಸದ ಅಭಿಪ್ರಾಯಗಳೇನೂ ಅಲ್ಲ. ಅವರ ಅಭಿಪ್ರಾಯದಲ್ಲಿ ಒಂದಷ್ಟು ಅರಿವಿನ ಕೊರತೆ, ಯಾವುದೋ ಒತ್ತಡ, ಮುಸ್ಲಿಮ್ ಸಮುದಾಯದೊಳಗಿನ ಇತ್ತೀಚಿನ ಸಂವೇದನಾಶೀಲ ಬೆಳವಣಿಗೆಗಳ ಕುರಿತಂತೆ ಅಧ್ಯಯನ ನಡೆಸದೇ ಇರುವುದು.. ಮುಂತಾದುವುಗಳು ಗೋಚರಿಸುತ್ತವೆ. ಮಟ್ಟು ಸರ್ ಅವರ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ. ನಿಜವಾಗಿ, ಬುರ್ಖಾವನ್ನು ಕಳಚಲೇಬೇಕು ಅನ್ನುವುದು ಬುರ್ಖಾ ಧರಿಸಲೇಬೇಕು ಅನ್ನುವಷ್ಟೇ ಅಪಾಯಕಾರಿ ಮತ್ತು ಸ್ವಾತಂತ್ರ್ಯ ವಿರೋಧಿಯಾದುದು. ಬುರ್ಖಾವನ್ನು ಕಿತ್ತು ಹಾಕಬೇಕೆಂಬ ದನಿ ಜೋರಾದಂತೆಲ್ಲ ಅದನ್ನು ಧರಿಸಲೇಬೇಕು ಎಂದು ವಾದಿಸುವವರ ಚಟುವಟಿಕೆಗಳೂ ಜೋರಾಗುತ್ತವೆ. ಇದಕ್ಕೆ ಕಾರಣ, ಬುರ್ಖಾವು ಧರ್ಮದ ಮೂಲಭೂತ ಹಕ್ಕು ಎಂದೋ ಅದಿಲ್ಲದೇ ಧರ್ಮ ಸಂಪೂರ್ಣವಾಗದು ಎಂದೋ ಅಲ್ಲ. ಅದೊಂದು ಬಗೆಯ ಭೀತಿ. ಮುಸ್ಲಿಮರ ಕುರಿತಂತೆ ಈ ದೇಶದಲ್ಲಿ ಇವತ್ತು ಸಾಕಷ್ಟು ಪ್ರಮಾಣದಲ್ಲಿ ಅಪಪ್ರಚಾರಗಳು ಮತ್ತು ಆಕ್ರಮಣಗಳು ನಡೆಯುತ್ತಿವೆ. ಅವರ ಅಸ್ತಿತ್ವ, ಐಡೆಂಟಿಟಿಯನ್ನೇ ಪ್ರಶ್ನಾರ್ಹಗೊಳಿಸುವ ಚಟುವಟಿಕೆಗಳು ನಡೆಯುತ್ತಿವೆ. ಬುರ್ಖಾ, ಸ್ಕಾರ್ಫ್‍ನ ನೆಪದಲ್ಲಿ ಶಾಲಾ
ಪ್ರವೇಶಾತಿಯನ್ನೇ ನಿರಾಕರಿಸುವ ಘಟನೆಗಳೂ ನಡೆಯುತ್ತಿವೆ. ಇಂಥ ನಕಾರಾತ್ಮಕ ಬೆಳವಣಿಗೆಗಳು ಅಂತಿಮವಾಗಿ ಧರ್ಮದ ಮೂಲಭೂತ ಬೇಡಿಕೆಗಳಲ್ಲದವುಗಳನ್ನು ಕೂಡ ಧರ್ಮದ ಬೇಡಿಕೆಯಾಗಿ ಮತ್ತು ಅದನ್ನು ಪ್ರಶ್ನಿಸುವವರನ್ನು ಸಂಚುಕೋರರನ್ನಾಗಿ ಪರಿಗಣಿಸುವಂತೆ ಮಾಡುವುದಕ್ಕೆ ಅವಕಾಶ ಇದೆ. ತಮ್ಮ ಧರ್ಮದ ಒಂದೊಂದು ಕುರುಗಳನ್ನು ಅಳಿಸುವ ಸಂಚುಗಳು ನಡೆಯುತ್ತಿವೆ ಎಂದು ಕೆಲವರು ಭಾವಿಸುವುದಕ್ಕೂ ಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ತಾವು ‘ಕುರುಹು’ ಎಂದು ಭಾವಿಸುವ ವಿಷಯಗಳು ನಿಜವಾದ ಧಾರ್ಮಿಕ ಕುರುಹುಗಳೋ ಎಂದು ಆಲೋಚಿಸುವಷ್ಟೂ ಅವರಲ್ಲಿ ಸಹನೆ ಇರುವುದಿಲ್ಲ. ಮಟ್ಟು ಮತ್ತು ಸೂರಿಂಜೆಯವರನ್ನು ನಿಂದಿಸಿದವರಲ್ಲಿ ಈ ಅವಿವೇಕ ಗೋಚರಿಸುತ್ತದೆ. ಅವರ ಪ್ರತಿಕ್ರಿಯೆಗಳಲ್ಲಿ, ಬುರ್ಖಾ ಧರಿಸಲೇಬೇಕು ಎಂಬ ಆಗ್ರಹಕ್ಕಿಂತ ತಮ್ಮ ಧರ್ಮದ ವಿರುದ್ಧ ಸಂಚು ನಡೆದಿದೆ ಎಂಬ ಭೀತಿಯೇ ಎದ್ದು ಕಾಣುತ್ತದೆ.
ಬಿ. ಎಂ. ಬಶೀರ್
ಅಮೀನ್ ಮಟ್ಟು
    ಕುಕ್ಕಿಲದಲ್ಲಿರುವ ನನ್ನ ತಾಯಿ ಆಸ್ಯಮ್ಮರು ಈಗಲೂ ಪ್ರತಿದಿನ ಬೆಳಿಗ್ಗೆ ಅರ್ಧ ಕಿಲೋ ವಿೂಟರ್‍ನಷ್ಟು ದೂರ ಇರುವ ಚಂದ್ರ ಭಟ್ಟ ಮತ್ತು ವಿನಯ ಭಟ್ಟರ ಮನೆಗೆ ಹಾಲು ತರಲು ಹೋಗುತ್ತಾರೆ. ಅಷ್ಟೇ ದೂರ ಇರುವ ಮಗನ (ನನ್ನ ಅಣ್ಣ) ಬೀಡಿ ಬ್ರಾಂಚ್‍ಗೂ ಹೋಗುತ್ತಾರೆ. ಪರಿಸರದಲ್ಲಿರುವ ಹಿಂದೂ-ಮುಸ್ಲಿಮ್-ಕ್ರೈಸ್ತರ ಮನೆಗಳಿಗೂ ಭೇಟಿ ಕೊಡುತ್ತಿರುತ್ತಾರೆ. ಆದರೆ, ಈ ಯಾವ ಸಂದರ್ಭಗಳಲ್ಲೂ ಅವರು ಬುರ್ಖಾ ಧರಿಸುವುದೇ ಇಲ್ಲ. ಸೀರೆ, ಕುಪ್ಪಸ ಮತ್ತು ತಲೆಗೊಂದು ಲೇಸ್ (ಶಿರವಸ್ತ್ರ).. ಇದುವೇ ನನ್ನಮ್ಮನ ಬುರ್ಖಾ. ಹಾಗಂತ, ಅವರು ಬುರ್ಖಾ ಧರಿಸದೇ ಇರುವುದಕ್ಕೆ ಸಾರಾ ಅಬೂಬಕರ್ ಅವರ ಕೃತಿಗಳು ಮತ್ತು ಚಿಂತನೆಗಳು ಕಾರಣ ಅಲ್ಲ. ಅಕ್ಷರ ಜ್ಞಾನವೇ ಇಲ್ಲದ ಅವರು ಸಾರಾ ಅಬೂಬಕರ್‍ರನ್ನು ನೋಡಿಯೂ ಇಲ್ಲ. ಅದವರ ಬದುಕು. ಅದರಂತೆ ಅವರು ಬದುಕುತ್ತಿದ್ದಾರೆ. ‘ಹೀಗೆ ಬದುಕುವುದು ಧರ್ಮ ವಿರೋಧಿ' ಎಂದು ಯಾವ ‘ಮೂಲಭೂತ’ವಾದಿಯೂ ಅವರೊಂದಿಗೆ ಹೇಳಿಲ್ಲ. ಯಾಕೆಂದರೆ, ಬುರ್ಖಾ ಇಸ್ಲಾಮಿನ ಮೂಲಭೂತ ಬೇಡಿಕೆಯಲ್ಲ. ಎರಡ್ಮೂರು ದಶಕಗಳ ಹಿಂದೆ ವಿದೇಶಗಳಿಂದ ಕಡ ತಂದ ವಸ್ತು ಇದು. ಈ ‘ವಸ್ತು'ವನ್ನು ಮುಸ್ಲಿಮ್ ಸಮುದಾಯ ತನ್ನದಾಗಿಸಿಕೊಂಡುದುದಕ್ಕೆ ಒಂದು ಪ್ರಮುಖ ಕಾರಣ ಇದೆ. ಅದುವೇ ಬಡತನ. ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಪೆರ್ನಾಲ್‍ನಂದು (ಹಬ್ಬ) ಕಷ್ಟದಲ್ಲಿ ಹೊಸ ಬಟ್ಟೆ ಹೊಲಿಸುವ ಸಮುದಾಯಕ್ಕೆ ಬುರ್ಖಾದ ಅಗತ್ಯ ಬಹಳವೇ ಇತ್ತು. ಅದು ಒಳಗಿರುವ ಬಟ್ಟೆಯನ್ನು ಮರೆಸುತ್ತದೆ. ತಾನು ಧರಿಸಿದ ಚೂಡಿದಾರ, ಸೀರೆ ಅಥವಾ ಲಂಗದಾವಣಿಯ ವಯಸ್ಸನ್ನು ಮರೆಮಾಚುತ್ತದೆ. ಅವುಗಳ ಬಣ್ಣ ಮಾಸಿರುವುದನ್ನು ಅದು ನೋಡುಗರಿಂದ ಅಡಗಿಸುತ್ತದೆ. ಸೀರೆಗೆ ಅಥವಾ ಕುಪ್ಪಸಕ್ಕೆ ಹಾಕಿರುವ ತೇಪೆಯನ್ನು ಅದು ಮುಚ್ಚಿ ಬಿಡುತ್ತದೆ. ಇವತ್ತು, ಶಾಲಾ-ಕಾಲೇಜಿಗೆ ಹೋಗುವ ಎಷ್ಟೋ ಹೆಣ್ಣು ಮಕ್ಕಳು ಬುರ್ಖಾವನ್ನು ಇಷ್ಟಪಟ್ಟು ಧರಿಸುತ್ತಾರೆ. ಅದವರ ಬಡತನವನ್ನು ಮರೆಮಾಚುತ್ತದೆ. ಬಸ್ಸಿನಲ್ಲೋ ರಸ್ತೆಯಲ್ಲೋ ಅಥವಾ ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲೋ ಅವರನ್ನು ಇನ್ಫೀರಿಯಾರಿಟಿ ಕಾಂಪ್ಲೆಕ್ಸ್‍ನಿಂದ ರಕ್ಷಿಸುತ್ತದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗಿರುವಾಗ ಒಂದು ವೇಳೆ, ಯಾರಾದರೂ ಬುರ್ಖಾವನ್ನು ಅವರಿಂದ ಕಿತ್ತು ಹಾಕಲು ಮುಂದಾಗುತ್ತಾರೆಂದರೆ ಅದವರ ಗೌರವವನ್ನೇ ಕಿತ್ತುಹಾಕಲು ಮುಂದಾದಂತೆ ಮತ್ತು ಅವರ ಬಡತನವನ್ನು ಸಮಾಜದ ಮುಂದೆ ಬಿಚ್ಚಿಟ್ಟಂತೆ ಆಗಬಹುದು. ಇಂಥ ಪ್ರಯತ್ನವನ್ನು ಕೆಲವರು ಪ್ರಗತಿಪರ ದೃಷ್ಟಿಕೋನ ಎಂದು ವಾದಿಸಿದರೂ ಅದನ್ನು ಅನಿವಾರ್ಯವಾಗಿ ಧರಿಸಿದವರ ಮಟ್ಟಿಗೆ (ಹೆಚ್ಚಿನವರು ಹಾಗೆಯೇ) ಅವಮಾನ. ಮಾತ್ರವಲ್ಲ, ಅವರ ವಿರುದ್ಧದ ಸಂಚು. ಅಷ್ಟಕ್ಕೂ, ನನ್ನ ಈ ವಾದವನ್ನು ಸಮರ್ಥಿಸುವುದಕ್ಕೆ ಮುಸ್ಲಿಮ್ ಸಮುದಾಯದ ಮನೆಗಳಲ್ಲಿರುವ ಬುರ್ಖಾಗಳ ಸಂಖ್ಯೆಗಳೇ ಧಾರಾಳ ಸಾಕು. ಸಾಮಾನ್ಯವಾಗಿ, ಓರ್ವರಿಗೆ ಒಂದಕ್ಕಿಂತ ಹೆಚ್ಚು ಉಡುಪುಗಳಿರುವಂತೆ ಬುರ್ಖಾಗಳಿಲ್ಲ. ಒಂದು ಮನೆಯಲ್ಲಿ ಐದು ಮಂದಿ ಮಹಿಳೆಯರಿದ್ದರೆ, ಎರಡೋ ಮೂರೋ ಬುರ್ಖಾಗಳಿರುವುದೇ ಹೆಚ್ಚು. (ಇದಕ್ಕೆ ಅಪವಾದಗಳೂ ಇವೆ.) ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಪ್ರತಿದಿನ ಸಂಜೆ ಬುರ್ಖಾವನ್ನು ಒಗೆದು ಬೆಳಿಗ್ಗೆ ಧರಿಸಿಕೊಂಡು ಹೋಗುವವರೇ ಅಧಿಕವಿದ್ದಾರೆ. ಆದ್ದರಿಂದ, ಬುರ್ಖಾದಿಂದ ಮುಸ್ಲಿಮ್ ಮಹಿಳೆಯರನ್ನು ಹೊರತರಬೇಕು ಎಂದು ಕರೆಕೊಡುವಾಗ ಅಥವಾ ‘ಅದು ಮೂಲಭೂತವಾದದ ಸಂಕೇತ' ಎಂದು ವಾದಿಸುವಾಗ ಈ ವಸ್ತುಸ್ಥಿತಿಯನ್ನು ಅರಿತುಕೊಳ್ಳುವುದೂ ಅಗತ್ಯವೆನಿಸುತ್ತದೆ. ಅದು ಯಾರದೋ ಹೇರಿಕೆಯೋ ಅಥವಾ ಅನಿವಾರ್ಯತೆಯೋ ಎಂಬ ಚರ್ಚೆಗೆ ತೊಡಗುವ ಸಂದರ್ಭದಲ್ಲಿ ಈ ವಸ್ತುಸ್ಥಿತಿಯನ್ನೂ ಎದುರಿಟ್ಟುಕೊಳ್ಳಬೇಕಿದೆ. ಮುಸ್ಲಿಮ್ ಸಮುದಾಯದ ಒಳಗಿನ ತಲ್ಲಣಗಳನ್ನು ಅಧ್ಯಯನ ನಡೆಸದೇ ಬರಿದೇ ಆಗ್ರಹಗಳನ್ನು ವ್ಯಕ್ತಪಡಿಸಿದರೆ ಅದು ಅಂತಿಮವಾಗಿ ‘ಬಂಡಾಯ’ ಎಂಬ ಹಣೆಪಟ್ಟಿಯೊಂದಿಗೆ ನಿರ್ಲಕ್ಷ್ಯಕ್ಕೆ ಒಳಗಾಗಬಹುದೇ ಹೊರತು ರಚನಾತ್ಮಕ ಬದಲಾವಣೆಗಲ್ಲ.
 ಬುರ್ಖಾವು ಮುಸ್ಲಿಮ್ ಸಮುದಾಯದಲ್ಲಿ ಎಷ್ಟು ಬೇಗ ಜನಪ್ರಿಯಗೊಂಡಿತೋ ಅಷ್ಟೇ ವೇಗವಾಗಿ ಇವತ್ತು  ಅದರ ‘ಧಾರ್ಮಿಕ ಅನ್ಯತ್ವ'ದ ಕುರಿತೂ ಚರ್ಚೆಗಳಾಗುತ್ತಿವೆ. ಬುರ್ಖಾ ಅಂದರೆ ಕುರ್‍ಆನ್ ಹೇಳಿರುವ ಪರ್ದಾ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡತೊಡಗಿದೆ. ಈ ಅರಿವನ್ನು ಮೂಡಿಸುತ್ತಿರುವುದು ಮೂಲಭೂತವಾದಿಗಳೆಂದು ಪ್ರಗತಿಪರರು ದೂಷಿಸುವ ಧಾರ್ಮಿಕ ಸಂಘಟನೆಗಳೇ ಎಂಬುದು ಗಮನಾರ್ಹ. ಆದರೂ, ನಿಂತ ಸ್ಥಿತಿಯಲ್ಲಿಯೇ ಬುರ್ಖಾವನ್ನು ಕಳಚಿ ಹಾಕುವಂತಹ ವೈರಾಗ್ಯವಾಗಲಿ, ಅನಿವಾರ್ಯತೆಯಾಗಲಿ ಅಥವಾ ಆರ್ಥಿಕ ಸಬಲೀಕರಣವಾಗಲಿ ಮುಸ್ಲಿಮ್ ಸಮುದಾಯದಲ್ಲಿ ಇವತ್ತಿಲ್ಲ. ಇವತ್ತಿನ ತಲೆಮಾರು ಇದಕ್ಕೆ ಎಷ್ಟರ ಮಟ್ಟಿಗೆ ಒಗ್ಗಿ ಹೋಗಿದೆ ಎಂದರೆ, ಅದಿಲ್ಲದೆ ಕಂಫರ್ಟಬಲ್ ಆಗುತ್ತಿಲ್ಲ ಎಂದು ಹೇಳುವಷ್ಟು. ಮಾತ್ರವಲ್ಲ, ‘ಬುರ್ಖಾ ಕಡ್ಡಾಯ' ಎಂದು ಮನೆಯ ಪುರುಷರು ಭಾವಿಸುವಷ್ಟು. ಇವತ್ತು ಅಸಂಖ್ಯ ಯುವತಿಯರು ಯಾರ ಒತ್ತಡವೂ ಇಲ್ಲದೇ ಇಷ್ಟಪಟ್ಟು ಬುರ್ಖಾ ಧರಿಸುತ್ತಿದ್ದಾರೆ. ಅದು ಕಡ್ಡಾಯವಲ್ಲ ಎಂದು ಹೇಳಿದರೂ ಕಂಫರ್ಟಬಲ್‍ನ ಕಾರಣ ಮುಂದಿಡುತ್ತಾರೆ. ಅವಿೂನ್ ಮಟ್ಟು ಅವರು ಹೇಳಿದಂತೆ, ಒಂದು ವೇಳೆ ಮುಸ್ಲಿಮ್ ಮಹಿಳೆಯರ ಮಧ್ಯೆ ಬುರ್ಖಾ ಬೇಕೇ ಬೇಡವೇ ಎಂಬ ವಿಷಯದಲ್ಲಿ ಇವತ್ತು ಗುಪ್ತ ಮತದಾನ ನಡೆಸಿದರೆ ಬುರ್ಖಾವೇ ಜಯಶಾಲಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಅದರ ಹಿಂದೆ ಇರುವುದು ಮೂಲಭೂತವಾದವಲ್ಲ; ಮರ್ಯಾದೆ ವಾದ, ಬಡತನ ವಾದ ಮತ್ತು ಕೆಲವೊಮ್ಮೆ ಮೈಮುಚ್ಚುವ ವಾದ.
 ಹಾಗಂತ, ಮುಸ್ಲಿಮ್ ಸಮಾಜದಲ್ಲಿ ಅಪದ್ಧಗಳು ಇಲ್ಲ ಎಂದಲ್ಲ. ಬುರ್ಖಾ ಕಡ್ಡಾಯವಲ್ಲ ಎಂದು ವಾದಿಸುವ ಮಂದಿಯೇ ತಂತಮ್ಮ ಮನೆಗಳಲ್ಲಿ ಕಡ್ಡಾಯದಂತೆ ಅದನ್ನು ಹೇರುವುದಿದೆ. ಬುರ್ಖಾ ಧರಿಸದೆ ಇರುವ ಸಹಜ ಸ್ವಾತಂತ್ರ್ಯವನ್ನು ಮಹಿಳೆಯರಿಂದ ಕಿತ್ತುಕೊಳ್ಳುವುದಿದೆ. ಬುರ್ಖಾ ಧರಿಸದೇ ಇರುವುದು ಧರ್ಮವಿರೋಧಿ ಕ್ರಮದಂತೆ ವಾದಿಸುವುದೂ ಇದೆ. ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರದ್ದೋ ಪುರುಷ ಸಮಾಜದ್ದೋ ಒತ್ತಡಕ್ಕೆ ಮಣಿದು ಬುರ್ಖಾ ಧರಿಸುತ್ತಿರುವರೆಂಬ ವಾದವನ್ನು ನಾನು ಸಾರಾಸಗಟು ತಿರಸ್ಕರಿಸುತ್ತಲೂ ಇಲ್ಲ. ಆದರೆ, ಇವಕ್ಕೆಲ್ಲ ಬುರ್ಖಾ ವಿರೋಧಿ ಅಭಿಯಾನ ನಡೆಸುವುದೋ ನಿಂತ ಸ್ಥಿತಿಯಲ್ಲೇ ಅದನ್ನು ಕಳಚಿ ಹಾಕಬೇಕೆಂದು ಆಗ್ರಹಿಸುವುದೋ ಪರಿಹಾರ ಅಲ್ಲ. ಸಾರಾ ಅಬೂಬಕರ್ ಮಾಡಿದ್ದೂ ಇದೇ ತಪ್ಪನ್ನು. ಅವರು ಮುಸ್ಲಿಮ್ ಸಮಾಜದಲ್ಲಿದ್ದ ಅಜ್ಞಾನಜನ್ಯ ಮತ್ತು ಧರ್ಮ ವಿರೋಧಿ ಆಚರಣೆಗಳನ್ನು ಕಟುವಾಗಿ ಖಂಡಿಸಿದರು. ಅದಕ್ಕೆ ಧರ್ಮವೇ ಕಾರಣ ಎಂಬ ಅತಿರೇಕದ ವ್ಯಾಖ್ಯಾನವನ್ನು ಕೊಟ್ಟರು. ಪದಗಳಿಂದ ಚುಚ್ಚಿದರು. ಅವಮಾನಿಸಿದರು. ಸಾರಾರ ಈ ವಾದದಲ್ಲಿ ಸಮಾಜವನ್ನು ಚಿಂತನೆಗೆ ಹಚ್ಚುವುದಕ್ಕಿಂತ ಆಕ್ರೋಶಕ್ಕೆ ದೂಡುವ ಅಂಶಗಳೇ ಹೆಚ್ಚಿದ್ದುವು. ಮೂರು ದಶಕಗಳ ಹಿಂದಿನ ಸಮಾಜವು ಅವರ ನಕಾರಾತ್ಮಕ ಧೋರಣೆಯನ್ನು ನಕಾರಾತ್ಮಕವಾಗಿಯೇ ಸ್ವೀಕರಿಸಿತು. ಅದು ಸರಿ ಎಂದಲ್ಲ. ಆದರೆ, ಸಾರಾರನ್ನು ನಕಾರಾತ್ಮಕವಾಗಿ ಸ್ವೀಕರಿಸಿದ ಅದೇ ಸಮಾಜ,  ‘ಮೂಲಭೂತವಾದಿ'ಗಳ ಸುಧಾರಣಾವಾದಿ ಸಭ್ಯ ವಾದವನ್ನು ಅಷ್ಟೇ ಸಕಾರಾತ್ಮಕವಾಗಿ ಆಲಿಸಿತು. ತನ್ನನ್ನು ತಿದ್ದಿಕೊಳ್ಳಲು ಮುಂದಾಯಿತು. ತಲಾಕ್, ಬಹುಪತ್ನಿತ್ವ, ಬುರ್ಖಾ, ಹೆಣ್ಣು ಮಕ್ಕಳ ಶಿಕ್ಷಣ.. ಮುಂತಾದುವುಗಳ ಕುರಿತಂತೆ ಸಮಾಜದಲ್ಲಿದ್ದ ದೊಡ್ಡದೊಂದು ಅಜ್ಞಾನದ ಪರದೆಯನ್ನು ಕಿತ್ತುಹಾಕುವಲ್ಲಿ ಅದು ಬಹುದೊಡ್ಡ ಯಶಸ್ಸು ಪಡೆಯಿತು. ಇವತ್ತು ಮುಸ್ಲಿಮ್ ಸಮಾಜದಲ್ಲಿ ‘ತಲಾಕ್, ತಲಾಕ್, ತಲಾಕ್’ ನಗಣ್ಯವಾಗುತ್ತಾ ಬಂದಿದೆ. ‘ಬಹುಪತ್ನಿತ್ವ'ದ ಇತಿ-ಮಿತಿಗಳು ಅರ್ಥವಾಗಿವೆ ಮತ್ತು ಹೆಣ್ಣು ಮಕ್ಕಳು ಧಾರಾಳ ಸಂಖ್ಯೆಯಲ್ಲಿ ಶಿಕ್ಷಿತರಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಸ್ಲಿಮ್ ಸಮುದಾಯದೊಳಗೆ ಸದ್ದು-ಗದ್ದಲವಿಲ್ಲದೇ ನಡೆದಿರುವ ಈ ಕ್ರಾಂತಿಯನ್ನು ಪರಿಗಣಿಸುವಾಗ ಸಾರಾ-ಬೊಳುವಾರು ಅವರ ಪರಂಪರೆಯ ಪಂಜನ್ನು (ರಿಲೇ ಬ್ಯಾಟನ್) ಬಿ.ಎಂ. ಬಶೀರ್ ಅಷ್ಟೇ ಆಸಕ್ತಿಯಿಂದ ಯಾಕೆ ಮುಂದುವರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾರಾರ ಸಮಾಜವಲ್ಲ ಇವತ್ತಿನದು. ಬೊಳುವಾರು ಎದುರಿಸಿದ ಸಮಸ್ಯೆಗಳಲ್ಲ ಇವತ್ತಿನ ಮುಸ್ಲಿಮ್ ಸಮಾಜದ್ದು. ಬಲಪಂಥೀಯ ಕೋಮುವಾದಿ ವಿಚಾರಧಾರೆಯ ಭೀತಿಯೇ ಇವತ್ತಿನ ಮುಸ್ಲಿಮ್ ಸಮುದಾಯದ ಒಳಗಿನ ಮತ್ತು ಹೊರಗಿನ ತಲ್ಲಣಗಳಾಗಿವೆ. ಭಾರತೀಕರಣದ ನೆಪದಲ್ಲಿ ಬುರ್ಖಾವನ್ನು ಅವು ಇಶ್ಯೂ ಮಾಡುತ್ತಿವೆ. ತಲಾಕ್, ಬಹುಪತ್ನಿತ್ವ, ಜಿಹಾದ್.. ಎಂಬೆಲ್ಲಾ ಪದಗಳನ್ನು ಅವು ವಿರೂಪಗೊಳಿಸಿ ಮಾರುತ್ತಿವೆ. ಹೆಣ್ಣು-ಗಂಡಿನ ಪ್ರೀತಿಯನ್ನು ಲವ್ ಜಿಹಾದ್ ಅನ್ನುತ್ತಿವೆ. ಪ್ರತಿ ಸ್ಥಳೀಯ ಘಟನೆಯನ್ನೂ ರಾಷ್ಟ್ರಮಟ್ಟದ ಇಶ್ಯೂ ಆಗಿಸುವ ಮತ್ತು ಕೋಮುಗಲಭೆಗೆ ಪ್ರಚೋದನೆ ಕೊಡುವ ಜಾಣತನವನ್ನು ಅವು ಪ್ರದರ್ಶಿಸುತ್ತಿವೆ. ಇಂಥ ಹೊತ್ತಲ್ಲಿ ಬಿ.ಎಂ. ಬಶೀರ್‍ರಂಥವರು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಇವತ್ತು ಮುಸ್ಲಿಮ್ ಸಮಾಜದೊಳಗಿನ ಸುಧಾರಣಾ ಪ್ರಕ್ರಿಯೆಗೆ ಅಡ್ಡವಾಗಿ ನಿಂತಿರುವುದು (ಮಟ್ಟು ಸರ್ ಪ್ರಕಾರ) ‘ಮೂಲಭೂತವಾದಿ' ಸಂಘಟನೆಗಳಲ್ಲ. ನಿಜವಾಗಿ ಅವೇ ಸುಧಾರಣಾ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟಿವೆ ಮತ್ತು ಆ ದಾರಿಯಲ್ಲಿ ಶ್ರಮಿಸುತ್ತಿವೆ. ಈ ಸುಧಾರಣಾ ಪ್ರಕ್ರಿಯೆಗಳು ನಿಧಾನಗೊಳ್ಳುವಂತೆ ಮತ್ತು ಸಮಾಜವು ಕೋಮುವಾದೀಕರಣಗೊಳ್ಳುವಂತೆ ಪ್ರಚೋದನೆ ಸಿಗುತ್ತಿರುವುದು ಬಲಪಂಥೀಯ ಕೋಮುವಾದದಿಂದ. ಆದ್ದರಿಂದ ಸಾರಾರ ಪಂಜನ್ನು ಪಕ್ಕಕ್ಕಿಟ್ಟ ಬಶೀರ್‍ರ ನಡೆಯನ್ನು ಸೂಕ್ತ ಮತ್ತು ಸಮಂಜಸ ಎಂದೇ ವ್ಯಾಖ್ಯಾನಿಸಬೇಕಾಗಿದೆ. ಇವತ್ತಿನ ದಿನಗಳಲ್ಲಿ ಮುಸ್ಲಿಮ್ ಸಮಾಜಕ್ಕೆ ಸಾರಾರ (ಬಂಡಾಯ) ಅಗತ್ಯವಿಲ್ಲ. ಬಶೀರ್‍ರಂಥವರ ಅಗತ್ಯವಿದೆ. ಮುಸ್ಲಿಮ್ ಸಮಾಜದ ಒಳಗೆ ಗುರುತಿಸಿಕೊಂಡು ಅಲ್ಲಿನ ಧ್ವನಿಯಾಗುತ್ತಲೇ ಮತ್ತು ಸಂದರ್ಭೋಚಿತವಾಗಿ ಸುಧಾರಣಾ ಪರ ನಿಲುವು ವ್ಯಕ್ತಪಡಿಸುತ್ತಲೇ ಬಲಪಂಥೀಯ ಕೋಮುವಾದದ ವಿರುದ್ಧ ಅವರು ಪ್ರಬಲ ಪಂಜನ್ನು ಉರಿಸಬೇಕಾಗಿದೆ. ಈ ಪಂಜು ಎಲ್ಲ ರೀತಿಯ ಕೋಮುವಾದವನ್ನು ದಹಿಸುವ ಮತ್ತು ಅಜ್ಞಾನದ ಕತ್ತಲೆಗೆ ಬೆಳಕು ನೀಡುವ ಕೆಲಸವನ್ನು ಮಾಡಬೇಕಾಗಿದೆ.

Tuesday, September 9, 2014

‘ಮೌಲಾನಾ’ ಪ್ರತಿಪಾದಿಸಿದ ಭಾವೈಕ್ಯತೆಯ ಸುತ್ತ..

ಅಕ್ಬರ್
ದಾರಾಶುಕೊ
ರಾಜಾರಾಂ ಮೋಹನ್ ರಾಯ್
ರಾಮಕೃಷ್ಣ ಪರಮಹಂಸ
    ಸಹಿತ ಅನೇಕಾರು ಮಂದಿ ಈ ದೇಶದಲ್ಲಿ ‘ಸರ್ವಧರ್ಮ ಸಮಭಾವ' ಅಥವಾ ಧಾರ್ಮಿಕ ಸೌಹಾರ್ದತೆಯ ಕುರಿತಂತೆ ತಮ್ಮದೇ ಆದ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಅವುಗಳ ಪರ ಮತ್ತು ವಿರುದ್ಧ ಧಾರಾಳ ಚರ್ಚೆಗಳೂ ಆಗಿವೆ. ವಿಭಿನ್ನ ಧರ್ಮ, ಜಾತಿ, ಜನಾಂಗಗಳಿರುವ ದೇಶವೊಂದರಲ್ಲಿ ಧಾರ್ಮಿಕ ಆಚರಣೆಗಳು ಹೇಗಿರಬೇಕು? ಅವುಗಳ ನಡುವೆ ಸೌಹಾರ್ದತೆ ಸಾಧ್ಯವೇ? ಹೇಗೆಲ್ಲ ಸಾಧ್ಯ? ಯಾವುದು ಸೌಹಾರ್ದ ಮತ್ತು ಯಾವುದಲ್ಲ? ಗಾಡ್, ಖುದಾ, ಭಗವಾನ್, ಅಲ್ಲಾಹ್.. ಮುಂತಾದುವುಗಳೆಲ್ಲ ಓರ್ವ ದೇವನ ಹಲವು ನಾಮಗಳಾಗಬಹುದಾದರೆ, ಇಸ್ಲಾಮ್, ಕ್ರೈಸ್ತ, ಹಿಂದೂ, ಬೌದ್ಧ, ಜೈನ.. ಮುಂತಾದುವುಗಳೆಲ್ಲ ಆ ಓರ್ವ ದೇವನ ಹಲವು ಹೆಸರುಗಳಲ್ಲಿರುವ ಒಂದೇ ಧರ್ಮವಾಗಬಾರದೇಕೆ? ‘ಸರ್ವೆ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ - ಎಲ್ಲರೂ ಸುಖವಾಗಿರಲಿ, ಯಾರಿಗೂ ದುಃಖ ಬಾರದಿರಲಿ’ - ಎಂಬ ಶ್ಲೋಕಕ್ಕಿಂತ ‘ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸರ್ವ ಸಮಾನರು' ಎಂಬ ಕುರ್‍ಆನಿನ (49:13) ವಚನದಲ್ಲಿ ಏನು ಭಿನ್ನತೆಯಿದೆ? ಧರ್ಮಗಳೆಲ್ಲ ಪರಸ್ಪರ ಪ್ರತ್ಯೇಕವಾಗಿ ಮತ್ತು ಆಚರಣೆಗಳಲ್ಲೋ ಆರಾಧನೆಗಳಲ್ಲೋ ಒಂದಕ್ಕೊಂದು ಸಂಧಿಸದಷ್ಟು ಅನ್ಯವಾಗಿ ಗುರುತಿಸಿಕೊಳ್ಳುತ್ತಿರುವುದರಿಂದಲೇ ಅಲ್ಲವೇ ವಿಚಾರವಾದ, ನಾಸ್ತಿಕವಾದ, ಮೂಲಭೂತವಾದಗಳು ಬೆಳೆದಿರುವುದು? ಟಿ.ಎನ್. ಸೀತಾರಾಮ್‍ರ ಧಾರಾವಾಹಿಯೊಂದರಲ್ಲಿ ಮಗುವೊಂದು ಬೆತ್ತಲೆಯಾಗಿ ಮನೆಯಿಂದ ಹೊರಗೆ ಹೋಗುವ ದೃಶ್ಯವಿದೆ. ಧರ್ಮದ ಬೇಲಿಯೊಳಗೆ ಬೆಳೆಸದೆ ಸ್ವತಂತ್ರವಾಗಿ ಮನುಷ್ಯರನ್ನು ಬೆಳೆಸಬೇಕೆಂಬ ಆಗ್ರಹ ಆ ದೃಶ್ಯದಲ್ಲಿದೆ. ಇಂಥ ಆಲೋಚನೆ, ವಿಚಾರಗಳಿಗೆ ಮೂಲ ಕಾರಣ ಯಾರು? ಧರ್ಮಗಳೋ ಅಥವಾ ಅದನ್ನು ಪ್ರತ್ಯೇಕತೆಯೊಳಗೆ ತೂರಿಸಿದ ಧರ್ಮಭಕ್ತರೋ?
   ಬಹುಶಃ ಪ್ರಶ್ನೆಗಳು ಧಾರಾಳ ಇವೆ. ಮಾತ್ರವಲ್ಲ, ಇಂಥ ಪ್ರಶ್ನೆಗಳು ಎಷ್ಟು ಪ್ರಭಾವಶಾಲಿ ಆಗಿರುತ್ತವೆ ಎಂದರೆ, ದಾರಾಶುಕೊರಂಥ ಅನೇಕಾರು ಮಂದಿಯನ್ನೂ ಅವು ಸೃಷ್ಟಿಸುತ್ತವೆ. ನಿಜವಾಗಿ, ‘ಕಾರ್ಮಿಕ ವರ್ಗದ ಹೊಟ್ಟೆಯನ್ನು ಧಾರ್ಮಿಕ ಚಿಂತನೆಗಳು ತಣಿಸುವುದಿಲ್ಲ' ಎಂಬ ಅಸಹನೆಯಿಂದಲೇ ಕಾರ್ಲ್ ಮಾರ್ಕ್ಸ್ ರ ಕಮ್ಯುನಿಸ್ಟ್ ಮೆನಿಫೆಸ್ಟೋ ಹುಟ್ಟಿಕೊಂಡದ್ದು. ಹಾಗಂತ, ಆ ಮೆನಿಫೆಸ್ಟೋ ಕಾರ್ಮಿಕರ ಹೊಟ್ಟೆಯನ್ನು ತಣಿಸಿತೋ ಎಂದು ಪ್ರಶ್ನಿಸಿದರೆ, ವಿಷಾದವೇ ಉತ್ತರವಾಗುತ್ತದೆ. ಜಗತ್ತಿನ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ ಎಂದು ಹೇಳಿದ್ದು ಕಾರ್ಲ್ ಮಾರ್ಕ್ಸ್. ಅವರು ಕಾರ್ಮಿಕ ವರ್ಗದ ಕ್ರಾಂತಿಯನ್ನು ಬಯಸಿದರು. ಕಮ್ಯುನಿಸಂ ಎಂಬ ‘ಕಾರ್ಮಿಕ ಕ್ರಾಂತಿ'ಯು ಯುರೋಪನ್ನು ಸಂಪೂರ್ಣವಾಗಿ ಆವರಿಸದಿದ್ದರೂ ಅಲ್ಲೆಲ್ಲಾ ಶ್ರೀಮಂತ ವರ್ಗವನ್ನು ಅದು ಅಪ್ರತ್ಯಕ್ಷಗೊಳಿಸಲಿದೆ ಎಂದು ಅವರು ಭಾವಿಸಿದ್ದರು. ಅಷ್ಟಕ್ಕೂ, ಅದು ಅವರೊಬ್ಬರ ನಿರೀಕ್ಷೆಯಷ್ಟೇ ಆಗಿರಲಿಲ್ಲ. ಏಂಗಲ್ಸ್ ರಿಗೂ ಮತ್ತು ಅವರಂಥ ಅನೇಕ ಚಿಂತಕರಿಗೂ ಅದರಲ್ಲಿ ಪಾತ್ರವಿದೆ. ಜಗತ್ತಿನಲ್ಲಿರುವ ಧರ್ಮಗಳಿಗೆಲ್ಲ ಪರ್ಯಾಯ ಧರ್ಮವಾಗಿ ‘ಕಾರ್ಮಿಕ ಧರ್ಮ' ಉದಯವಾಯಿತೆಂಬ ಮತ್ತು ಅದುವೇ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೆಂಬ ಪ್ರಚಾರವೂ ನಡೆಯಿತು. ಆದರೆ ಆ ಭರವಸೆ ತೀರಾ ಸಣ್ಣ ಅವಧಿಯಲ್ಲೇ ಧರಾಶಾಹಿಯಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋವನ್ನು ರಷ್ಯಾದಲ್ಲಿ ಜಾರಿಗೆ ತಂದ ಸ್ಟಾಲಿನ್‍ರೇ ಆ ಮೆನಿಫೆಸ್ಟೋದ ಅಪ್ರಸ್ತುತತೆಯನ್ನು ಸಾರಿಬಿಟ್ಟರು. ಅವರಿಗೆ ಒಂದಕ್ಕಿಂತ ಹೆಚ್ಚು ಅದ್ದೂರಿ ಬಂಗಲೆಗಳಿದ್ದುದು, ಅತ್ಯಾಧುನಿಕ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಮತ್ತು ಸ್ವದೇಶಿತನವನ್ನು ಪ್ರಚುರಪಡಿಸುತ್ತಾ ವಿದೇಶಿ ಮದ್ಯವಾದ ಸ್ಕೋಡಾವನ್ನು ಸೇವಿಸುತ್ತಿದ್ದುದೆಲ್ಲಾ ಕ್ರಮೇಣ ಬಹಿರಂಗವಾಯಿತು. ಕಮ್ಯುನಿಸ್ಟ್ ಮೆನಿಫೆಸ್ಟೋ ಮಾತಾಡಿದ್ದು ಕಾರ್ಮಿಕರ ಪರ. ಆದರೆ ಸ್ಟಾಲಿನ್ ಬದುಕಿದ್ದು ಅಪ್ಪಟ ಶ್ರೀಮಂತರಂತೆ. ಅವರ ದಾಂಪತ್ಯ ಬದುಕಂತೂ ಅತ್ಯಂತ ಮಾದರಿರಹಿತವಾಗಿತ್ತು ಎಂದು ಎರಡು ವರ್ಷಗಳ ಹಿಂದೆ ಮೃತಪಟ್ಟ ಅವರ ಮಗಳು ಸ್ವೆಟ್ಲಾನಾ ಸ್ಟಾಲಿನಾ ತಮ್ಮ ‘ಟ್ವೆಂಟಿ ಲೆಟರ್ಸ್ ಟು ಏ  ಫ್ರೆಂಡ್  ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಅವರು ನನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾರೆ ಎಂದವರು ಹೇಳಿದ್ದಾರೆ. ಧರ್ಮದ ವೈಫಲ್ಯವನ್ನು ಎತ್ತಿಕೊಂಡು ಕಾರ್ಮಿಕವಾದವನ್ನು ನೆಚ್ಚಿಕೊಂಡ ವ್ಯಕ್ತಿಯೋರ್ವರ ವಿಫಲ ಬದುಕಿನ ಚಿತ್ರಣವನ್ನು ಸ್ವೆಟ್ಲಾನಾರ ಆತ್ಮಕತೆ ವಿವರಿಸುತ್ತದೆ. ಧಾರಾಶುಕೊ ಅಂತೂ ಧರ್ಮಗಳ ನಡುವೆ ಪಾರಿಭಾಷಿಕಗಳ ಹೊರತು ಇನ್ನೇನೂ ವ್ಯತ್ಯಾಸ ಇಲ್ಲವೆಂದು ಹೇಳಿದ್ದ. ಧಾರ್ಮಿಕ ಸೌಹಾರ್ದತೆಯನ್ನು ಗುರಿಯಾಗಿಟ್ಟುಕೊಂಡು ‘ದೀನೇ ಇಲಾಹಿ'ಯನ್ನು ಅಕ್ಬರ್ ಸ್ಥಾಪಿಸಿದಂತೆಯೇ ಅದರ ಮುಂದುವರಿದ ಭಾಗವನ್ನು ದಾರಾಶುಕೊ ಕೈಗೆತ್ತಿಕೊಂಡಿದ್ದ. ಆತ ಉಪನಿಷತ್ತು, ಭಗವದ್ಗೀತೆ, ಚಂದ್ರವಧೆ, ಯೋಗವಿಶಿಷ್ಟ ಇತ್ಯಾದಿ ಸಂಸ್ಕøತ ಗ್ರಂಥಗಳನ್ನು ಫಾರ್ಸಿ ಭಾಷೆಗೆ ಅನುವಾದಿಸಿದ್ದ. ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ತುಲನಾತ್ಮಕ ಅಧ್ಯಯನವುಳ್ಳ ‘ಮಜ್‍ಮಉಲ್ ಬಹ್ರೈನ್' ಎಂಬ ಫಾರ್ಸಿ ಗ್ರಂಥವನ್ನು ಬರೆದದ್ದಲ್ಲದೇ ‘ಸಮುದ್ರ ಸಂಗಮ’ ಎಂಬ ಹೆಸರಲ್ಲಿ ಅದನ್ನು ಸಂಸ್ಕøತಕ್ಕೂ ಅನುವಾದಿಸಿದ್ದ. 1866ರಲ್ಲಿ ಸ್ಥಾಪಿತವಾದ ‘ಭಾರತೀಯ ಬ್ರಹ್ಮ ಸಮಾಜವು' ಹಿಂದೂ, ಬೌದ್ಧ ಮತ್ತು ಇಸ್ಲಾಮ್‍ನಿಂದ ಪಡೆಯಲಾದ ಉದ್ಧರಣೆಗಳಿಂದ ಕೂಡಿದ ಚಿಂತನೆಗಳಾಗಿವೆ ಎಂದು ಹೇಳಲಾಗುತ್ತದೆ. ಸರ್ವಧರ್ಮ ಸಮಭಾವ ಎಂಬ ಕಲ್ಪನೆಯಲ್ಲಿ ರಾಮಕೃಷ್ಣ ಪರಮ ಹಂಸರಿಗೂ ವಿರೋಧ ಇರಲಿಲ್ಲ. ಹೀಗೆ ಒಂದು ಬಗೆಯ ಧಾರ್ಮಿಕ ಸೌಹಾರ್ದತೆ, ಸಮಭಾವದ ಕಲ್ಪನೆಗಳು ಈ ದೇಶದಲ್ಲಿ ಆಗಾಗ ಮೂಡಿ ಬರುತ್ತಲೇ ಇದ್ದುವು. ವಿವಿಧ ನದಿಗಳು ಸಾಗರಕ್ಕೆ ಸೇರುವಂತೆ ವಿವಿಧ ಧರ್ಮಗಳೆಲ್ಲ ಒಂದೇ ದೇವನಲ್ಲಿಗೆ ಸೇರುತ್ತವೆ ಎಂಬ ಮಾತುಗಳೂ ಹುಟ್ಟಿಕೊಂಡವು. ಅಷ್ಟಕ್ಕೂ,
   ಬಹುದೇವಾರಾಧನೆ ಮತ್ತು ಮೂರ್ತಿ ಪೂಜೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮ ಮತ್ತು ಏಕದೇವಾರಾಧನೆಯನ್ನು ಮಾತ್ರ ಪ್ರತಿಪಾದಿಸುವ ಹಾಗೂ ಮೂರ್ತಿ ಪೂಜೆ ಮತ್ತು ಬಹುದೇವಾರಾಧನೆಯನ್ನು ಪ್ರಬಲವಾಗಿ ನಿರಾಕರಿಸುವ ಇಸ್ಲಾಮ್ ಧರ್ಮದ ನಡುವೆ ಭಾವೈಕ್ಯತೆ ಹೇಗೆಲ್ಲ ಸಾಧ್ಯ? ಯಾವೆಲ್ಲ ವಿಷಯಗಳಲ್ಲಿ ಸಾಧ್ಯ? 33ರಿಂದ 33 ಕೋಟಿಯ ವರೆಗೆ ದೇವತೆಗಳಲ್ಲಿ ನಂಬಿಕೆಯಿಡುವ ಹಿಂದೂ ಧರ್ಮಕ್ಕೂ ಪ್ರವಾದಿ ಮುಹಮ್ಮದ್‍ರನ್ನು(ಸ) ಅಂತಿಮ ಪ್ರವಾದಿ ಮತ್ತು ಪವಿತ್ರ ಕುರ್‍ಆನನ್ನು ಅಂತಿಮ ದೇವಗ್ರಂಥ ಎನ್ನುವ ಇಸ್ಲಾಮ್‍ಗೂ ನಡುವೆ ಖಂಡಿತ ಅನೇಕಾರು ವಿಷಯಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಹೀಗಿರುವಾಗ, ಮೂರ್ತಿ ಪೂಜೆಯನ್ನು ಪ್ರಬಲವಾಗಿ ನಿರಾಕರಿಸುವ ಧರ್ಮದ ವ್ಯಕ್ತಿಯೊಬ್ಬ ಗಣಪತಿಯನ್ನು ಪೂಜಿಸುವುದು ಮತ್ತು ಅದನ್ನು ಭಾವೈಕ್ಯತೆ ಎಂದು ಮಾಧ್ಯಮಗಳು ವ್ಯಾಖ್ಯಾನಿಸುವುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಧರ್ಮದ ಮೂಲಭೂತ ವಿಶ್ವಾಸಕ್ಕೇ ವಿರುದ್ಧವಾದ ಕೃತ್ಯವೊಂದು ಭಾವೈಕ್ಯತೆಯ ಹೆಸರಲ್ಲಿ ಶ್ಲಾಘನೆಗೆ ಒಳಗಾಗುವುದು ಎಷ್ಟು ಸರಿ? ಇಸ್ಲಾಮ್‍ನಲ್ಲಿ ಮದ್ಯಪಾನವನ್ನು ಬಲವಾಗಿ ನಿಷೇಧಿಸಲಾಗಿದೆ. ಸಾಷ್ಟಾಂಗವು ನಿರಾಕಾರನಾದ ದೇವನಿಗೆ ಹೊರತು ಇನ್ನಾವ ಮನುಷ್ಯರಿಗೋ ವಿಗ್ರಹಗಳಿಗೋ ಆಗಬಾರದೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಅಸಂಖ್ಯ ದೇವ-ದೇವತೆಗಳ ಜೊತೆಗೇ ಜಡ ಮತ್ತು ಚೇತನ ವಸ್ತುಗಳೂ ಶ್ರದ್ಧಾಕೇಂದ್ರಗಳಾಗಿವೆ. ಸೂರ್ಯ, ಚಂದ್ರ, ನಕ್ಷತ್ರ, ಸಮುದ್ರ, ನದಿ, ಪರ್ವತ, ಮರ, ಗೋವು ಎಲ್ಲವೂ ಪೂಜನೀಯ. ಹಾಗಂತ, ಇವುಗಳನ್ನು ಪೂಜಿಸುವವರನ್ನು ನಿರಾಕಾರ ದೇವನನ್ನು (ಅಲ್ಲಾಹ್) ಪೂಜಿಸುವಂತೆ ಇಸ್ಲಾಮ್ ಬಲವಂತ ಪಡಿಸುವುದಿಲ್ಲ (ಪವಿತ್ರ ಕುರ್‍ಆನ್: 2: 256). ಅಲ್ಲದೇ, ಅದು ವಿಗ್ರಹಗಳ ನಿಂದನೆಯನ್ನು ಧರ್ಮನಿಷಿದ್ಧ ಎನ್ನುತ್ತದೆ (ಪವಿತ್ರ ಕುರ್‍ಆನ್: 6: 108). ಹಾಗೆಯೇ, ಶವವನ್ನು ದಫನ ಮಾಡಬೇಕೆಂದೇ ಇಸ್ಲಾಮ್ ಆದೇಶಿಸುತ್ತದೆ. ಹಿಂದೂಗಳಲ್ಲಿರುವ ಸಪ್ತಪದಿಗಿಂತ ಭಿನ್ನವಾಗಿ ಇಸ್ಲಾಮ್‍ನಲ್ಲಿ ನಿಕಾಹ್ ಕ್ರಮ ಇದೆ. ಜೈನರ ದಿಗಂಬರ ಪದ್ಧತಿ ಇಸ್ಲಾಮ್‍ನಲ್ಲಿಲ್ಲ. ಸನ್ಯಾಸತ್ವವೂ ಇಲ್ಲ. ಹಾಗಂತ, ಭಾವೈಕ್ಯತೆಗಾಗಿ ಓರ್ವ ಮುಸ್ಲಿಮ್ ಈ ನಿಯಮಗಳನ್ನೆಲ್ಲಾ ಮುರಿಯಬಹುದೇ? ಹಾಗೆ ಮುರಿಯುವುದು ಭಾವೈಕ್ಯತೆಯೆಂದಾದರೆ, ಭಾವೈಕ್ಯತೆಯ ಅರ್ಥವೇನು, ಧರ್ಮಗಳ ಮೂಲಭೂತ ಬೇಡಿಕೆಗಳನ್ನು ಮುರಿಯುವುದೇ? ಹೀಗೆ ಮುರಿಯುವುದರಿಂದ ಒಂದು ಧರ್ಮದ ಅನುಯಾಯಿಗಳಿಗೆ ಆಗಬಹುದಾದ ನೋವುಗಳು ಎಷ್ಟರ ಮಟ್ಟಿಗೆ ಪರಿಗಣನೆಗೆ ಒಳಗಾಗಿವೆ? ಭಾವೈಕ್ಯತೆ ಎಂಬುದು ವಿವಿಧ ಧರ್ಮಗಳ ಅನುಯಾಯಿಗಳು ತಂತಮ್ಮ ಧರ್ಮದ ಮೂಲಭೂತ ವಿಶ್ವಾಸ ಮತ್ತು ಬೇಡಿಕೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರ ಹೆಸರೇ ಆಗಿದ್ದರೆ ಮತ್ತು ಅದು ಶ್ಲಾಘನಾರ್ಹ ಕ್ರಮ ಎಂದಾದರೆ ಫಲಿತಾಂಶ ಏನಾದೀತು? ಸಾಮಾಜಿಕವಾಗಿ ಇಂಥ ಭಾವೈಕ್ಯತೆಗಳು ಭಾರೀ ಪ್ರಮಾಣದಲ್ಲಿ ನಡೆದರೆ ಮಸೀದಿ, ಮಂದಿರ, ಚರ್ಚ್, ಬಸದಿ, ಗುರುದ್ವಾರಗಳು ಹೇಗೆ ಕಾಣಿಸಿಕೊಂಡಾವು? ಅವು ಸೃಷ್ಟಿಸಬಹುದಾದ ಸಮಸ್ಯೆಗಳು ಮತ್ತು ಪರಿಣಾಮಗಳೇನು? ಧರ್ಮದ ನಿಯಮಗಳನ್ನು ಮುರಿಯುವುದೇ ಭಾವೈಕ್ಯತೆ ಎಂಬುದು ಕೊನೆಗೆ ಏನನ್ನು ಮತ್ತು ಯಾವುದನ್ನೆಲ್ಲಾ ಮುರಿಯುವುದಕ್ಕೆ ಪ್ರೇರೇಪಿಸಬಹುದು?
 
     ನಿಜವಾಗಿ, ಭಾವೈಕ್ಯತೆಯು ಒಂದು ಧರ್ಮದ ನಿಯಮಗಳನ್ನು ಮುರಿದುಕೊಂಡು ನಡೆಸುವ ಆಚರಣೆಯ ಹೆಸರಲ್ಲ. ಅದು ಧರ್ಮಗಳನ್ನು ಮತ್ತು ಅದರ ಅನುಯಾಯಿಗಳನ್ನು ಪರಸ್ಪರ ಜೋಡಿಸುವುದರ ಹೆಸರು. ಆದ್ದರಿಂದ, ಒಂದು ಧರ್ಮದ ಆಚರಣೆಗಳನ್ನು ಗೌರವಿಸುವುದಕ್ಕೆ ಇನ್ನೊಂದು ಧರ್ಮದ ನಿಯಮಗಳನ್ನು ಮುರಿಯಬೇಕೆಂದಿಲ್ಲ. ಗಣೇಶ ಚತುರ್ಥಿಯ ದಿನದಂದು ಹಿಂದೂ ಬಾಂಧವರಿಗೆ ಶುಭಾಶಯ ಕೋರುವುದು, ಅವರ ಆಹ್ವಾನವನ್ನು ಸ್ವೀಕರಿಸಿ ಮನೆಗೆ ಭೇಟಿ ಕೊಡುವುದು, ಅವರ ಧಾರ್ಮಿಕ ಮೆರವಣಿಗೆ ಮತ್ತಿತರ ಸಂದರ್ಭಗಳು ಸುಗಮವಾಗಿ ನಡೆಯುವಂಥ ವಾತಾವರಣ ನಿರ್ಮಿಸುವುದು, ಅವರಿಗೆ ನೆರವಾಗುವುದು.. ಇತ್ಯಾದಿಗಳು ನಿಜ ಭಾವೈಕ್ಯತೆಯ ರೂಪಗಳಾಗಿವೆ. ವಿವಿಧ ಧರ್ಮದವರು ತಂತಮ್ಮ ಹಬ್ಬಗಳ ಸಂದರ್ಭದಲ್ಲಿ ಪರಸ್ಪರರ ಮನೆಗಳಿಗೆ ಭೇಟಿ ಕೊಡುವುದು ಮತ್ತು ಸಿಹಿ ತಿಂಡಿ, ಹಬ್ಬದೂಟಗಳನ್ನು ಹಂಚಿಕೊಳ್ಳುವುದು ದೊಡ್ಡದೊಂದು ಬದಲಾವಣೆಗೆ ಕಾರಣವಾಗಬಹುದು. ಇವು ಮನಸ್ಸುಗಳನ್ನು ಪರಸ್ಪರ ಹತ್ತಿರಗೊಳಿಸುತ್ತದೆ. ಅಲ್ಲಿ ಭಾವನಾತ್ಮಕ ಭದ್ರತೆಯೊಂದು ಏರ್ಪಡುತ್ತದೆ. ಮುರಿಯುವಿಕೆಯಲ್ಲಿ ಇಲ್ಲದ ತೃಪ್ತ ಮತ್ತು ನಿರಾಳ ಭಾವವೊಂದು ನಿರ್ಮಾಣವಾಗುತ್ತದೆ. ಅಂದಹಾಗೆ, ಗಣೇಶ ಚತುರ್ಥಿ ಎಂದಲ್ಲ, ವಿವಿಧ ಧರ್ಮಗಳಿರುವ ಈ ದೇಶದಲ್ಲಿ ಹಬ್ಬಗಳು ಮತ್ತು ವಿಶೇಷ ದಿನಗಳು ವಾರಕ್ಕೊಂದರಂತೆ ಬರುತ್ತಿರುತ್ತವೆ. ಇಂಥ ಸಂದರ್ಭಗಳಲ್ಲಿ ಆಯಾ ಧರ್ಮೀಯರು ತಮ್ಮೊಳಗೇ ಖುಷಿಯನ್ನು ಹಂಚಿಕೊಳ್ಳುವುದಕ್ಕಿಂತ ಎಲ್ಲ ಧರ್ಮೀಯರೂ ತಂತಮ್ಮ ಮಿತಿಯೊಳಗೆ ಒಟ್ಟಾಗಿ ಖುಷಿಯನ್ನು ಹಂಚಿಕೊಂಡು ಅನುಭವಿಸುವುದರಿಂದ ಸಹಜ ಭಾವೈಕ್ಯತೆ ನಿರ್ಮಾಣವಾಗಬಹುದು. ಹಾಗಾದಾಗ, ಮೂರ್ತಿಯನ್ನು ಆರಾಧಿಸುವವ ಮತ್ತು ಆರಾಧಿಸದವ, ಯೇಸುವನ್ನು ದೇವಪುತ್ರ ಅನ್ನುವವಳು ಮತ್ತು ಪ್ರವಾದಿ ಅನ್ನುವವಳ ನಡುವೆ ಸಂಬಂಧ ಬೆಳೆಯುತ್ತದೆ. ಅಂಥ ಸಂಬಂಧಗಳು ಉಂಟು ಮಾಡುವ ಭಾವೈಕ್ಯತೆಯು ಧಾರ್ಮಿಕ ನಿಯಮಗಳನ್ನು ಮುರಿದು ಮಾಡುವ ಭಾವ ಐಕ್ಯತೆಗಳಂಥಲ್ಲ. ಮುರಿಯುವುದು ಮತ್ತು ಜೋಡಿಸುವುದು ಒಂದೇ ಅಲ್ಲ. ಆದರೂ, ಮುರಿಯುವುದೇ ಭಾವೈಕ್ಯತೆ ಮತ್ತು ಜೋಡಿಸುವುದೇ ‘ಮತಾಂತರ' ಎಂಬ ರೀತಿಯಲ್ಲಿ ಸುದ್ದಿಗಳು ಪ್ರಸಾರವಾಗುತ್ತಿರುವುದಕ್ಕೆ ಏನೆನ್ನಬೇಕು? ತಂತಮ್ಮ ಧರ್ಮದಲ್ಲಿದ್ದುಕೊಂಡೇ ಇನ್ನೊಂದು ಧರ್ಮವನ್ನು ಗೌರವಿಸುವ ಮತ್ತು ಅದರ ಆಚರಣೆಗಳಿಗೆ ಸಹಕರಿಸುವ ಕ್ರಮಗಳು ಯಾಕೆ ಸಾಮಾಜಿಕ ಅಗತ್ಯಗಳಾಗಿ ಪ್ರಚಾರಗೊಳ್ಳುತ್ತಿಲ್ಲ? ಭಾವೈಕ್ಯತೆಯ ನಿಜವಾದ ರೂಪಕ್ಕಿಂತ ಕುರೂಪವೇ ಯಾಕೆ ಮಾದರಿ ಅನ್ನಿಸಿಕೊಳ್ಳುತ್ತಿವೆ? ಈ ಮಾದರಿ ಎಷ್ಟು ಸ್ವಾಗತಾರ್ಹ? ಎಷ್ಟು ಸಮಾಜಮುಖಿ?  
   ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕರುಂದವಾಡದ ಐದು ಮಸೀದಿಗಳಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಮತ್ತು ಮಂಗಳೂರಿನ ಕೈಕಂಬದಲ್ಲಿ ಮೌಲಾನ ಎಂಬ ಬಿ.ಕಾಂ. ವಿದ್ಯಾರ್ಥಿ ಗಣೇಶ ವಿಗ್ರಹವನ್ನು ರಚಿಸಿ ಪೂಜಿಸಿದ ಚಿತ್ರಸಹಿತ ಸುದ್ದಿಗಳನ್ನು ‘ಭಾವೈಕ್ಯತೆ' ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಮಾಧ್ಯಮಗಳು ಪ್ರಕಟಿಸಿದುದನ್ನು ಓದುತ್ತಾ ಹೀಗೆಲ್ಲಾ ಆಲೋಚಿಸಬೇಕಾಯಿತು.

Monday, September 1, 2014

ವೃದ್ಧಾಶ್ರಮದಿಂದ ಗ್ರೇಸಿ ಮಾರ್ಟಿಸ್ ಬರೆದ ಪತ್ರ






 
   Every morning
   He helps her get up
   Get ready for a day
   That she may not remember tomorrow
   ........ 
ಗ್ರೇಸಿ ಮಾರ್ಟಿಸ್ ಬರೆದ ಪತ್ರದ ಒಂದು ಭಾಗ
   ಹೀಗೆ ಆರಂಭವಾಗಿ ನಾಲ್ಕೈದು ಚರಣಗಳಲ್ಲಿ ಕೊನೆಗೊಳ್ಳುವ ಕವನವು 2006 ಫೆಬ್ರವರಿಯಲ್ಲಿ ಪ್ರಕಟವಾದಾಗ ಕೇಟ್ ಕಾರ್ಟ್ ರೈಟ್‍ರನ್ನು ಸಾಕಷ್ಟು ಮಂದಿ ಅಭಿನಂದಿಸಿದ್ದರು. ನೆನಪು ಶಕ್ತಿಯನ್ನು ಕಳಕೊಂಡ ತಾಯಿಯನ್ನು ಎದುರಿಟ್ಟುಕೊಂಡು ಕೇಟ್ ಕಾರ್ಟ್‍ರೈಟ್‍ರು ರಚಿಸಿದ್ದ ಈ ಕವನಕ್ಕೆ ಧಾರಾಳ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದುವು. "ಪ್ರತಿ ಬೆಳಗುಗಳಲಿ| ಅವ ಮಾಡುವವನು ಸಹಾಯ ಅವಳಿಗೆ| ಎದ್ದೇಳಲು| ದಿನದಾರಂಭಕ್ಕೆ ಸಿದ್ಧಗೊಳ್ಳಲು| ಆದರವಳು ಅದನ್ನು ನಾಳೆ ನೆನಪಿಸಲಾರಳು| ಅದುವೇ ಅವನ ಅಳಲು.." ಎಂಬ ಸಾಲುಗಳಲ್ಲಿರುವ ಭಾವುಕತೆಯನ್ನು ಕೊಂಡಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಈ ಹಾಡನ್ನು ಹಂಚಿಕೊಂಡರು. ಅದು ಒಳಗೊಂಡಿರುವ ಭಾವುಕತೆಗಾಗಿ ಇಷ್ಟಪಟ್ಟರು. ತಮ್ಮ ಮನೆ ಮತ್ತು ಪರಿಸರಗಳಲ್ಲಿ ಹಿರಿಯರ ಸ್ಥಿತಿ-ಗತಿಗಳ ಕುರಿತಂತೆ ಈ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದುವು. ಹಿರಿಯರನ್ನು ವೃದ್ಧಾ ಶ್ರಮಗಳಿಗೆ ಅಟ್ಟುವ ಬಗ್ಗೆ, ಅದರ ಅಗತ್ಯ-ಅನಗತ್ಯಗಳ ಕುರಿತಂತೆ ವಾಗ್ವಾದಗಳೂ ನಡೆದುವು. ಆಧುನಿಕ ಜೀವನ ಕ್ರಮಗಳ ಪ್ರಭಾವವನ್ನು ಕೆಲವರು ಅದಕ್ಕೆ ಕಾರಣವಾಗಿ ಮುಂದಿಟ್ಟರು. ಕೆಲವರು ತಿರಸ್ಕರಿಸಿದರು. ಧರ್ಮವನ್ನು ಪರಿಹಾರವಾಗಿ ಮುಂದಿಟ್ಟವರು ಕೆಲವರಾದರೆ, ವೃದ್ಧಾಶ್ರಮಗಳನ್ನೇ ಅನಿವಾರ್ಯವಾಗಿ ಕಂಡವರು ಕೆಲವರು. ಹೀಗೆ ಕೇಟ್‍ರ ಕೆಲವು ಸಾಲುಗಳು ಒಂದು ಗಂಭೀರ ಚರ್ಚೆಯನ್ನೇ ಹುಟ್ಟು ಹಾಕುವಲ್ಲಿ ಸಫಲವಾಗಿದ್ದುವು.
   ವಯಸ್ಸಾಗುವುದು ಪ್ರಕೃತಿ ಸಹಜ ಬೆಳವಣಿಗೆ. ಹುಟ್ಟುವ ಮಗುವಿನಿಂದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇದು ಅರಿವಿಗೆ ಬರುವುದು ವಯಸ್ಸಾದಾಗಲೇ. ಹೆಚ್ಚಿನ ವೇಳೆ ಹಿರಿಯರು ಹಿರಿತನಕ್ಕೆ ಸಜ್ಜುಗೊಂಡಿರುವುದೇ ಇಲ್ಲ. ಮುಪ್ಪನ್ನು ಎದುರಿಸುವ ಕುರಿತು, ಆ ಸಂದರ್ಭದಲ್ಲಿ ತನ್ನ ವರ್ತನೆ, ನಿರೀಕ್ಷೆ, ಸಹನೆ.. ಮುಂತಾದುವುಗಳ ಕುರಿತು ಮಾನಸಿಕ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ತನ್ನ ಬಿಸಿನೆಸ್‍ನಲ್ಲಿ ವೈಫಲ್ಯ ಉಂಟಾದರೆ ಏನು ಮಾಡಬೇಕು ಎಂದು ಆಲೋಚಿಸುವ ಮತ್ತು ವ್ಯಾಪಾರದ ಹಿತ ಕಾಪಾಡುವಲ್ಲಿ ವಿವಿಧ ತಂತ್ರಗಳನ್ನು ಹೆಣೆಯುವ ಮಂದಿ ಧಾರಾಳ ಇದ್ದಾರೆ. ಕಚೇರಿಗೆ ಎರಡು ದಿನ ರಜೆ ಹಾಕಬೇಕೆಂದು ಬಯಸುವ ನೌಕರ, ಅದಕ್ಕಾಗಿ ತಯಾರಿ ನಡೆಸುತ್ತಾನೆ. ಹಾಗಂತ ಇಂಥ ಮುನ್ನೆಚ್ಚರಿಕೆಗಳು ಕೇವಲ ಬ್ಯುಸಿನೆಸ್‍ಗೋ ಕಚೇರಿ ನೌಕರಿಗೋ ಸೀಮಿತವೂ ಅಲ್ಲ. ಎಲ್ಲ ಕ್ಷೇತ್ರಗಳಲ್ಲೂ ಇಂಥದ್ದೊಂದು ತಯಾರಿಯನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಹಾಗಂತ,  ವೃದ್ಧಾಪ್ಯವು ಇವುಗಳಂತೆ ಅಲ್ಲ ಎಂದು ವಾದಿಸಬಹುದಾದರೂ ಅದೂ ಒಂದು ತಯಾರಿಗರ್ಹವಾದ ಸ್ಥಿತಿಯೇ. ವೃದ್ಧಾಪ್ಯವನ್ನು ನಿರ್ಲಕ್ಷಿಸಿ ಬದುಕುವುದರಿಂದ ಅದೇನೂ ನಮ್ಮಿಂದ ದೂರ ಹೋಗುವುದಿಲ್ಲ. ನಿಜವಾಗಿ, ನಮ್ಮ ದೈಹಿಕ-ಮಾನಸಿಕ ಆರೋಗ್ಯವು ನಾವು ವೃದ್ಧಾಪ್ಯವನ್ನು ಹೇಗೆ ನೋಡುತ್ತಿದ್ದೇವೆ ಎಂಬುದನ್ನು ಆಧರಿಸಿಕೊಂಡಿರುತ್ತದೆ. ಅನಾರೋಗ್ಯಕ್ಕೂ ನಮ್ಮ ಮನಸ್ಥಿತಿಗೂ ಹತ್ತಿರದ ನಂಟಿದೆ. ವೃದ್ಧಾಪ್ಯದ ಕುರುಹುಗಳಿಗೂ ನಮ್ಮ ಆಲೋಚನೆಗಳಿಗೂ ನಿಕಟ ಸಂಬಂಧವಿದೆ. ಅನೇಕರನ್ನು ವೃದ್ಧಾಪ್ಯ ಕಾಡುವುದು  ವಯಸ್ಸಿನಿಂದಲ್ಲ, ಮನಸ್ಥಿತಿಯಿಂದ.
   ಯುರೋಪಿಯನ್ ರಾಷ್ಟ್ರಗಳಲ್ಲಿ ವೃದ್ಧಾಪ್ಯದ ಸುತ್ತ ಹತ್ತು-ಹಲವು ಪ್ರಬಂಧಗಳು, ಸರ್ವೇಗಳು ನಡೆದಿವೆ. ವೃದ್ಧಾಪ್ಯವನ್ನೇ ಮುಂದೂಡಬಹುದಾದ ಸಂಶೋಧನೆಗಳಲ್ಲಿ ವಿಜ್ಞಾನಿಗಳು ತೊಡಗಿಸಿಕೊಂಡಿರುವ ಸುದ್ದಿಗಳೂ ಬರುತ್ತಿವೆ. ಯುರೋಪ್‍ನಲ್ಲಿರುವ ವೃದ್ಧಾಶ್ರಮಗಳಿಗೆ ಹೋಲಿಸಿದರೆ, ಭಾರತದಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ ಏನೇನೂ ಅಲ್ಲ. ಆದರೂ ವೃದ್ಧಾಶ್ರಮಗಳ ಕುರಿತಂತೆ ಗಂಭೀರ ಚರ್ಚೆ ನಡೆಯಲೇಬೇಕಾಗಿದೆ. ‘ಏಜಿಂಗ್, ಇಂಟರ್ ಜನರೇಶನಲ್ ರಿಲೇಶನ್ಸ್, ಕೇರ್ ಸಿಸ್ಟಮ್ಸ್ ಆ್ಯಂಡ್ ಕ್ವಾಲಿಟಿ ಆಫ್ ಲೈಫ್' ಎಂಬ ಹೆಸರಲ್ಲಿ 2003ರಲ್ಲಿ ನಾರ್ವೆಯಲ್ಲಿ ಪ್ರಬಂಧವೊಂದು ಮಂಡನೆಯಾಗಿತ್ತು. ಜರ್ಮನಿ, ಇಸ್ರೇಲ್, ಸ್ಪೈನ್, ನಾರ್ವೆ ಮತ್ತು ಬ್ರಿಟನ್‍ಗಳು ಧನಸಹಾಯ ನೀಡಿ ರಚಿಸಲಾದ ಸರ್ವೇ ಆಧಾರಿತ ಈ ಪ್ರಬಂಧವು ವೃದ್ಧರ ಹತ್ತು-ಹಲವು ಸಮಸ್ಯೆಗಳನ್ನು ಸಮಾಜದ ಮುಂದಿಟ್ಟಿತು. ಮುಖ್ಯವಾಗಿ ಯುರೋಪಿನಲ್ಲಿ ವೃದ್ಧರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಆಳ ಅಧ್ಯಯನ ನಡೆಸಿದ ಪ್ರಬಂಧವಾಗಿತ್ತದು. ಅದೇ ರೀತಿಯಲ್ಲಿ, ಜಾಸ್ಮೀನ್ ರಾಕ್‍ವೆಲ್ ಎಂಬವರು ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿಗಾಗಿ, "ರಿಲೇಶನ್‍ಶಿಪ್ ಆ್ಯಸ್ ರೆಮೆಡಿ: ವಿೂಟಿಂಗ್ ದಿ ಸೋಶಿಯಲ್ ಆ್ಯಂಡ್ ಇಮೋಶನಲ್ ನೀಡ್ಸ್ ಆಫ್ ಎಲ್ಡರ್ಸ್ ಲಿವಿಂಗ್ ಇನ್ ರೆಸಿಡೆನ್ಸಿಯಲ್ ಕೇರ್" ಎಂಬ ಅಧ್ಯಯನಾತ್ಮಕ ಪ್ರಬಂಧವನ್ನು ರಚಿಸಿದ್ದರು. ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ‘ವೃದ್ಧಾಪ್ಯ' ಹಲವು ರೀತಿಯಲ್ಲಿ ಸದಾ ಚರ್ಚೆಯಲ್ಲಿರುವ ಸಂಗತಿ. ಹಾಂಕಾಂಗ್, ಚೀನಾ ಅಥವಾ ದಕ್ಷಿಣೇಶ್ಯದ ರಾಷ್ಟ್ರಗಳಲ್ಲಿ ವೃದ್ಧರ ಸ್ಥಿತಿ-ಗತಿಯನ್ನು ಯುರೋಪಿಯನ್ ರಾಷ್ಟ್ರಗಳ ವೃದ್ಧರ ಸ್ಥಿತಿ-ಗತಿಗಳೊಂದಿಗೆ ಹೋಲಿಸಿಕೊಂಡು ನಡೆಸಲಾದ ಸರ್ವೇಗಳೂ ಧಾರಾಳ ಇವೆ. ಏಶ್ಯನ್ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಹಿರಿಯರಿಂದ ಭಾವನಾತ್ಮಕವಾಗಿ ದೂರ ಸರಿಯುತ್ತಿರುವ ಬಗ್ಗೆ ಮತ್ತು ಆರ್ಥಿಕ ನೆರವು ಮಾತ್ರವೇ ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತಿರುವ ಬಗ್ಗೆ ಸಾಕಷ್ಟು ವಿವರಗಳೂ ವ್ಯಕ್ತಗೊಂಡಿವೆ. ಅಷ್ಟಕ್ಕೂ, ಇಂಥದ್ದೊಂದು ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಮತ್ತು ಅದರ ವ್ಯಾಪ್ತಿ ದಿನೇ ದಿನೇ ವಿಸ್ತಾರಗೊಳ್ಳುತ್ತಿರುವುದಕ್ಕೆ ಕಾರಣಗಳೇನು? ಆಧುನಿಕ ಜೀವನ ಕ್ರಮಗಳೇ? ಶೈಕ್ಷಣಿಕ ಬೆಳವಣಿಗೆಯೇ? ಜೀವನಾನುಕೂಲತೆಗಳೇ? ತಥಾಕಥಿತ ಅಭಿವೃದ್ಧಿಗಳೇ? ಟಿ.ವಿ., ಕಂಪ್ಯೂಟರ್, ಮೊಬೈಲ್‍ಗಳೇ? ಇಂದಿನ ತಲೆಮಾರು ಪ್ರತಿದಿನವೂ ಹೊಸ ಹೊಸ ತಂತ್ರಜ್ಞಾನಗಳನ್ನುಪರಿಚಯಿಸಿಕೊಳ್ಳುತ್ತಿವೆ. ಅತ್ಯಂತ ವೇಗವಾಗಿ Update  ಆಗುತ್ತಿವೆ. ಹಾಗೆಯೇ ಅವು ಮನೆಯ ಹಿರಿಯರು Updateಗೊಂಡಿರಬೇಕೆಂದೂ ಬಯಸುತ್ತಿವೆ. ಮೊಬೈಲನ್ನು ಕೇವಲ ಕರೆ ಮಾಡುವುದಕ್ಕಷ್ಟೇ ಬಳಸುವ ಹಿರಿಯರಿಗೂ ವಿವಿಧ ಆ್ಯಪ್‍ಗಳಿಗಾಗಿ ಬಳಸುವ ಹೊಸ ತಲೆಮಾರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ತಮ್ಮ ಭಾಷೆ, ಹವ್ಯಾಸ, ವೇಗಗಳಿಗೆ ಹಿರಿಯರು ಹೊಂದಿಕೊಳ್ಳಲಾರರು ಎಂಬುದು ಗೊತ್ತಾಗುತ್ತಲೇ ಮಕ್ಕಳು ಹಿರಿಯರಿಂದ ದೂರ ಸರಿದು ಉಪಕರಣಗಳಿಗೆ ಹತ್ತಿರ ವಾಗುತ್ತಿರಬಹುದೇ? ಟಿ.ವಿ. ಕಾರ್ಟೂನ್‍ಗಳಲ್ಲಿ ಅಥವಾ ವಿವಿಧ ಕಾರ್ಯಕ್ರಮಗಳಲ್ಲಿ ಸಿಗುವ ಆನಂದವನ್ನೇ ಹಿರಿಯರ ಒಡನಾಟದಲ್ಲೂ ಯುವ ತಲೆಮಾರು ನಿರೀಕ್ಷಿಸುತ್ತಿರಬಹುದೇ? ನಿಜವಾಗಿ, ಹಿರಿಯರೆಂಬುದು ಒಂದು ಅದ್ಭುತ ಮಾಹಿತಿಕೋಶ. ಅವರಲ್ಲಿ ಕತೆ, ಕವನ, ಹಾಸ್ಯ, ತಮಾಷೆ, ಒಗಟು.. ಎಲ್ಲವೂ ಇರುತ್ತವೆ. ಆದರೆ ಇವನ್ನು ಆಸ್ವಾದಿಸುವುದಕ್ಕೂ ಬರಬೇಕಲ್ಲವೇ? ಟಿ.ವಿ., ಮೊಬೈಲ್‍ಗಳಲ್ಲಿ ಅಥವಾ ಗೆಳೆಯರ ಜೊತೆಗಿನ ಒಡನಾಟದಲ್ಲಿ ಸಿಗುವ ಖುಷಿಯನ್ನು ಹಿರಿಯರಲ್ಲಿ ಹುಡುಕುತ್ತಾ ಅದು ಸಿಗದಾಗ ದೂರ ಸರಿಯುವ ಆಧುನಿಕ ಪೀಳಿಗೆಯಿಂದಾಗಿ ಹಿರಿಯರು ಒಂಟಿತನ ಅನುಭವಿಸುತ್ತಾರೆ. ಅಷ್ಟಕ್ಕೂ, ಹಿರಿಯರೊಂದಿಗೆ ಬೆರೆಯುವ ಕಲೆಯನ್ನು ಮಕ್ಕಳಿಗೆ ನಾವೆಷ್ಟು ಹೇಳಿಕೊಡುತ್ತಿದ್ದೇವೆ? ಅದರ ಸುಖವನ್ನು ಎಷ್ಟು ಮನವರಿಕೆ ಮಾಡಿಕೊಡುತ್ತಿದ್ದೇವೆ? ಮಗನೂ ಸೊಸೆಯೂ ನೌಕರಿ ಮಾಡುತ್ತಿರುವ ಮನೆಯಲ್ಲಿ ಹಿರಿಯರು ಹೆಚ್ಚು ಆಶ್ರಯಿಸುವುದು ಮೊಮ್ಮಕ್ಕಳನ್ನು. ಮೊಮ್ಮಕ್ಕಳೂ ತುಟ್ಟಿಯಾದರೆ ಆ ಬಳಿಕ ಹಿರಿಯರು ಹತಾಶರಾಗುತ್ತಾರೆ. ಆರೋಗ್ಯ ಹದಗೆಡತೊಡಗುತ್ತದೆ. ಅತ್ತ ನೌಕರಿಯನ್ನೂ ಬಿಡಲಾಗದ ಇತ್ತ ಹೆತ್ತವರನ್ನೂ ಸರಿಯಾಗಿ ನೋಡಲಾಗದ ಅನೇಕ ಮಕ್ಕಳು ಅಂತಿಮವಾಗಿ ವೃದ್ಧಾಶ್ರಮಗಳನ್ನು ಸಂಪರ್ಕಿಸುತ್ತಾರೆ. ಹೀಗೆ  ಬದುಕಿನ ವಾಸ್ತವಗಳಿಗೆ ಬೆನ್ನು ಹಾಕಿ ಬದುಕತೊಡಗುತ್ತಾರೆ. ನಿಜವಾಗಿ, ಹಿರಿಯರಿಗೆ ಭಾವನಾತ್ಮಕ ಆರೈಕೆಯ ಅಗತ್ಯವಿರುತ್ತದೆ. ಅದನ್ನು ವೃದ್ಧಾಶ್ರಮಗಳು ಕೊಡಲಾರವು. ವೃದ್ಧಾಶ್ರಮಗಳಲ್ಲಿರುವವರೆಲ್ಲ ವೃದ್ಧರೇ. ಅದರಲ್ಲೂ ವಿವಿಧ ಕಾಯಿಲೆಗಳನ್ನು ಅಂಟಿಸಿಕೊಂಡು ಸಂಕಟಪಡುವವರೇ ಹೆಚ್ಚು. ಆದ್ದರಿಂದಲೇ, ಅಲ್ಲಿ ನಡೆಯಬಹುದಾದ ಮಾತುಕತೆಗಳು ಕೂಡ ಬಹುತೇಕ ಕಣ್ಣೀರಿನದ್ದೇ ಆಗಿರುತ್ತವೆ. ಮಗ, ಮಗಳು, ಸೊಸೆ, ಕುಟುಂಬಿಕರು ನಡೆಸಿದ ದೌರ್ಜನ್ಯಗಳು ಮತ್ತೆ ಮತ್ತೆ ಅವರ ಮಾತುಕತೆಗಳಲ್ಲಿ ಪ್ರಸ್ತಾಪಗೊಳ್ಳುತ್ತಿರುವುದಕ್ಕೆ ಅವಕಾಶವಿದೆ. ಅಂತಿಮವಾಗಿ ಹೃದಯ ಭಾರಗೊಳ್ಳುವುದಕ್ಕೂ ಕಣ್ಣೀರಿಗೂ ಅದು ಕಾರಣವಾಗಬಹುದು. ಆದರೆ ಮನೆಯ ವಾತಾವರಣ ಹಾಗಲ್ಲ. ಅಲ್ಲಿ ಹಿರಿಯರ ಮುಂದೆ ಮಗ, ಸೊಸೆ, ಮೊಮ್ಮಕ್ಕಳು, ಮಗಳ ಮಕ್ಕಳು, ಕುಟುಂಬಿಕರಿರುತ್ತಾರೆ. ಅಲ್ಲೊಂದು ಜೀವಕಳೆಯಿರುತ್ತದೆ. ಅಲ್ಲಿ ನಡೆಯಬಹುದಾದ ಮಾತು ಕತೆಗಳು ವೃದ್ಧರ ನಡುವೆ ನಡೆಯುವ ಮಾತುಕತೆಗಳಂತಿರುವುದಿಲ್ಲ. ಮೊಮ್ಮಕ್ಕಳ ನಗು ವೃದ್ಧರ ಮನಸ್ಸನ್ನು ಅರಳಿಸುತ್ತದೆ. ತನ್ನ ಮಗನೋ ಮಗಳೋ ಬಾಲ್ಯದಲ್ಲಿ ನಡೆಸುತ್ತಿದ್ದ ತುಂಟಾಟಗಳು ಮೊಮ್ಮಕ್ಕಳ ಮೂಲಕ ಅವರ ನೆನಪಿಗೆ ಬರುತ್ತವೆ. ತನ್ನ ಊರುಗೋಲನ್ನು ಮೊಮ್ಮಗು ಊರಿಕೊಂಡು ತಮಾಷೆ ಮಾಡುವಾಗ ಹಿರಿಯರೂ ಆನಂದಪಡುತ್ತಾರೆ. ವೃದ್ಧಾಶ್ರಮಗಳಲ್ಲಿ ಇಂಥದ್ದೊಂದು ವಾತಾವರಣಕ್ಕೆ ಅವಕಾಶವೇ ಇಲ್ಲ.
   ಅಂದಹಾಗೆ, ಶೈಕ್ಷಣಿಕ ಪ್ರಗತಿಯು ಕೌಟುಂಬಿಕ ನೆಮ್ಮದಿಗೆ ಕನ್ನ ಕೊರೆಯುತ್ತಿದೆಯೇ ಎಂಬುದರ ಸುತ್ತ ಗಂಭೀರ ಅವಲೋಕನವೊಂದು ನಡೆಯಬೇಕಾಗಿದೆ. ಇಂದಿನ ಜೀವನ ಕ್ರಮಗಳು ದಶಕಗಳ ಹಿಂದಿನಂತಿಲ್ಲ. ಮನೆಯ ಪ್ರತಿ ಸದಸ್ಯರಲ್ಲೂ ಅವರದೇ ಆದ ಉದ್ದೇಶಗಳಿವೆ. ಕಲಿಕೆ ಮತ್ತು ಉದ್ಯೋಗ ಪಡೆಯುವಲ್ಲಿ ಹೆಣ್ಣು-ಗಂಡು ಇಬ್ಬರಲ್ಲೂ ಪೈಪೋಟಿಯಿದೆ. ಇವತ್ತು ಗಂಡಿನಂತೆ ಹೆಣ್ಣೂ ಉದ್ಯೋಗಸ್ಥೆಯೇ.  ಬಹುಶಃ ಇಂಥ  ವಾತಾವರಣವು ಅಂತಿಮವಾಗಿ ಹಿರಿಯರನ್ನು ಒಂಟಿಯಾಗಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಒಂದು ಕಡೆ, ‘ಬಳಸಿ ಬಿಸಾಕು' ಎಂಬ ಸಂಸ್ಕøತಿ ಮನೆಯ ಜಗಲಿಗಷ್ಟೇ ಅಲ್ಲ, ಅಡುಗೆ ಕೋಣೆಯನ್ನೂ ಆವರಿಸಿಬಿಟ್ಟಿದೆ. ಬಂಡವಾಳಶಾಹಿತ್ವವು ಸ್ವಕೇಂದ್ರಿತ ಜೀವನ ಮೌಲ್ಯಗಳನ್ನು ಅತ್ಯಂತ ಯಶಸ್ವಿಯಾಗಿ ಪ್ರತಿ ಮನೆ-ಮನಗಳಲ್ಲೂ ಬಿತ್ತುತ್ತಿದೆ. ಇವತ್ತಿನ ಜಗತ್ತಿನಲ್ಲಿ ‘ಹಳತಿಗೆ' ಭಾರೀ ಬೆಲೆಯೇನೂ ಇಲ್ಲ. ಮೊಬೈಲ್, ಶೂಸ್, ವಾಹನ, ಟಿ.ವಿ., ಆಭರಣಗಳು.. ಎಲ್ಲವೂ ವರ್ಷ ಕಳೆಯುವ ಮೊದಲೇ ಹಳತಾಗುತ್ತವೆ. ಹಳತಾದುದನ್ನು ತ್ಯಜಿಸಿ ಹೊಸದನ್ನು ಖರೀದಿಸುವಂತೆ ಮಾರುಕಟ್ಟೆಗಳು ಮತ್ತು ಅಲ್ಲಿನ ಉತ್ಪನ್ನಗಳು ಪ್ರಚೋದಿಸುತ್ತವೆ. ಹೀಗೆ ವರ್ಷವಾಗುತ್ತಲೇ ಹೊಸ ಮೊಬೈಲು, ವಾಹನ, ಆಭರಣಗಳು ಯುವ ತಲೆಮಾರಿನ ಕೈಯಲ್ಲಿ ಪ್ರತ್ಯಕ್ಷಗೊಳ್ಳುತ್ತಲೇ ಇರುತ್ತವೆ. ಆ ಪಟ್ಟಿಗೆ ಇವತ್ತು ಹಿರಿಯರೂ ಸೇರಿಕೊಳ್ಳುತ್ತಿದ್ದಾರೆಯೇ? ಹಳತಾದವರನ್ನು ಆಶ್ರಮಕ್ಕೆ ಅಟ್ಟಿ ಹೊಸತಿನೊಂದಿಗೆ ಬದುಕುವುದು ಸಹಜ ಅನ್ನಿಸಿಕೊಳ್ಳುತ್ತಿದೆಯೇ? ಹಳತು ಮತ್ತು ಹೊಸತು ಎಂಬ ಎರಡು ಧ್ರುವಗಳಿಗೆ ಹಿರಿಯರು ಮತ್ತು ಕಿರಿಯರನ್ನು ಸೇರಿಸಿಬಿಟ್ಟಿರುವುದು ಯಾವುದು? ನಮ್ಮ ಶೈಕ್ಷಣಿಕ ಪ್ರಗತಿಯೇ? ಜೀವನ ವಿಧಾನಗಳೇ? ಮೌಲ್ಯಗಳ ನಿರ್ಲಕ್ಷ್ಯವೇ? ಬಂಡವಾಳಶಾಹಿತ್ವವೇ?
   ಉಡುಪಿ ಜಿಲ್ಲೆಯ ವೃದ್ಧಾಶ್ರಮದಲ್ಲಿರುವ ಗ್ರೇಸಿ ಮಾರ್ಟಿಸ್ ಅನ್ನುವ ತಾಯಿ ಕಳೆದವಾರ ನನಗೆ  ಬರೆದ ಪತ್ರವನ್ನು ಓದುತ್ತಾ ಇವೆಲ್ಲ ನೆನಪಾದುವು.

Wednesday, August 27, 2014

ಬರಹ ಜಗತ್ತಿನ ‘ನೂರ್’

   ಮಲಯಾಳಂ ಸಿನಿಮಾಗಳು ಕನ್ನಡಕ್ಕೆ (ರಿಮೇಕ್) ಬರುತ್ತಿರುವಷ್ಟೇ ವೇಗವಾಗಿ ಮಲಯಾಳಂ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬರುತ್ತಿರುವುದು ಕಡಿಮೆ. ವೈಕಂ ಮುಹಮ್ಮದ್ ಬಶೀರ್, ಎಂ.ಟಿ. ವಾಸುದೇವ ನಾಯರ್, ತಕಳಿ ಶಿವಶಂಕರ್ ಪಿಳ್ಳೆ, ರಾಧಾಕೃಷ್ಣನ್, ಎಂ. ಮುಕುಂದನ್, ಓ.ವಿ. ವಿಜಯನ್, ನಾರಾಯಣ ಮೆನನ್.. ಮುಂತಾದ ಕೆಲವೇ ಸಾಹಿತಿಗಳು ಮತ್ತು ಸಾಹಿತ್ಯಗಳನ್ನು ಹೊರತು ಪಡಿಸಿದರೆ ಉಳಿದಂತೆ ದೊಡ್ಡದೊಂದು ಗುಂಪು ನಮ್ಮ ಪರಿಚಿತ ವಲಯದಿಂದ ಈಗಲೂ ಹೊರಗಿವೆ. ಪಾರ್ವತಿ ಜಿ. ಐತಾಳ್, ಕೆ.ಕೆ. ಗಂಗಾಧರನ್, ಫಕೀರ್ ಮುಹಮ್ಮದ್ ಕಟ್ಪಾಡಿಯಂಥ ಕೆಲವೇ ಮಂದಿ ಮಲಯಾಳಂನ ಕಂಪನ್ನು ಕನ್ನಡಿಗರ ಮನೆಮನೆ ತಲುಪಿಸುವಲ್ಲಿ ದುಡಿದಿದ್ದಾರೆ. ಅಷ್ಟಕ್ಕೂ, ಇದು ಮಲಯಾಳಂ ಸಾಹಿತ್ಯದ ಒಂದು ಮಗ್ಗುಲು ಮಾತ್ರ. ಆ ಸಾಹಿತ್ಯ ಪ್ರಪಂಚಕ್ಕೆ ಇನ್ನೊಂದು ಮಗ್ಗುಲೂ ಇದೆ. ಅದುವೇ ಇಸ್ಲಾವಿೂ ಸಾಹಿತ್ಯ. ಫಕೀರ್ ಮುಹಮ್ಮದ್ ಕಟ್ಪಾಡಿಯಾಗಲಿ, ಗಂಗಾಧರನ್ ಆಗಲಿ ಮುಟ್ಟದ ಈ ಸಾಹಿತ್ಯ ಕ್ಷೇತ್ರ ಎಷ್ಟು ವಿಸ್ತಾರವಾಗಿ ಬೆಳೆದಿದೆಯೆಂದರೆ, ಎಂ.ಟಿ. ವಾಸುದೇವ ನಾಯರ್ ಪ್ರತಿನಿಧಿಸುವ ಸಾಹಿತ್ಯ ಜಗತ್ತಿಗೆ ಪೈಪೋಟಿ ನೀಡುವಷ್ಟು. ಮುಸ್ಲಿಮರ ಕುರಿತಂತೆ ಮುಸ್ಲಿಮೇತರರಲ್ಲಿರುವ ತಪ್ಪು ತಿಳುವಳಿಕೆಗಳು, ಕುರ್‍ಆನಿನ ಕೆಲವಾರು ಪದಪ್ರಯೋಗಗಳ ಬಗೆಗಿನ ಭೀತಿ, ಮುಸ್ಲಿಮರ ವಿವಿಧ ಆಚರಣೆ-ಅನುಷ್ಠಾನಗಳ ಕುರಿತಂತೆ ಗಲಿಬಿಲಿ.. ಮುಂತಾದ ಎಲ್ಲವುಗಳನ್ನೂ ವಸ್ತುವಾಗಿಸಿಕೊಂಡು ಅತ್ಯಂತ ಅಧಿಕಾರಯುತವಾಗಿ ಬರೆಯಲಾದ ಸಾಹಿತ್ಯ ಕೃತಿಗಳು ಈ ಕ್ಷೇತ್ರದಲ್ಲಿ ಪ್ರಕಟವಾಗುತ್ತಿವೆ. ಮಹಿಳೆಯನ್ನು ಮನೆಯೊಳಗೆ, ಶಾಲೆಯಿಂದ ಹೊರಗೆ.. ಇಡುವುದನ್ನೇ ಧಾರ್ಮಿಕತೆ ಎಂದು ತಪ್ಪಾಗಿ ಅಂದುಕೊಂಡಿದ್ದ ಸಮಾಜವನ್ನು ತಿದ್ದುವ ಸಾಹಿತ್ಯಗಳೂ ಪ್ರಕಟವಾಗುತ್ತಿವೆ. ಆದರೆ ಕನ್ನಡ ನಾಡಿನ ಪಾಲಿಗೆ ತೀರಾ ಅಗತ್ಯವಿದ್ದ ಮತ್ತು ಕನ್ನಡಿಗರು ಓದಲೇಬೇಕಾಗಿದ್ದ ಇಂಥ ಅನೇಕಾರು ಸಾಹಿತ್ಯ ಕೃತಿಗಳು ಅನುವಾದಕರ ಕೊರತೆಯಿಂದಲೋ ಅಥವಾ ಇತರೇ ಕಾರಣಗಳಿಂದಲೋ ಕನ್ನಡಿಗರಿಂದ ದೂರವೇ ಉಳಿದಿತ್ತು. ಇಂಥ ಸಂದರ್ಭದಲ್ಲಿ ಅನುವಾದ ಪ್ರಪಂಚಕ್ಕೆ ಕಾಲಿಟ್ಟವರೇ ಪಿ. ನೂರ್(ಪ್ರಕಾಶ) ಮುಹಮ್ಮದ್. 1970ರ ದಶಕದಲ್ಲಿ ಇವರು ಮಲಯಾಳಂನ ಇಸ್ಲಾವಿೂ ಸಾಹಿತ್ಯ ಜಗತ್ತಿನೊಳಗೆ ಪ್ರವೇಶಿಸಿದ ಬಳಿಕ ಮೊನ್ನೆ ಆಗಸ್ಟ್ 19ರಂದು ನಿಧನರಾಗುವ ವರೆಗೂ ಆ ಪ್ರಪಂಚದಲ್ಲಿ ಧಾರಾಳ ಸುತ್ತಾಡಿದರು. ಅಲ್ಲಿ ಬೆಳಕು ಕಾಣುತ್ತಿದ್ದ ಪ್ರತಿ ಕೃತಿಗಳನ್ನೂ ಬಹುತೇಕ ಓದಿದರು. ಕನ್ನಡಿಗರಿಗೆ ಕೊಡಲೆಂದು ತೆಗೆದಿಟ್ಟರು. ಅನುವಾದಿಸಿದರು. ಅನುವಾದದ ಕುರಿತಂತೆ ಅವರಲ್ಲಿ ಎಷ್ಟರ ಮಟ್ಟಿಗೆ ಉತ್ಸಾಹ ಇತ್ತೆಂದರೆ, ಇನ್ನೋರ್ವ ಅನುವಾದಕರ ಬಗ್ಗೆ ಓದುಗರು ಆಲೋಚನೆಯನ್ನೇ ಮಾಡದಷ್ಟು.
   1978 ಎಪ್ರಿಲ್ 23ರಂದು ಪ್ರಾರಂಭವಾದ ಸನ್ಮಾರ್ಗ ವಾರ ಪತ್ರಿಕೆಯ ಸ್ಥಾಪಕ ಸಂಪಾದಕೀಯ ಮಂಡಳಿಯಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲೇ ನೂರ್ ಮುಹಮ್ಮದ್‍ರು ಒಂದೆರಡು ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಲ್ಲ. ಬಿ.ಎಸ್ಸಿ. ಪದವೀಧರ. ಅಂದಿನ ಕಾಲದಲ್ಲಿ ಕೆಲಸಗಳು ಹುಡುಕಿಕೊಂಡು ಬರಬಹುದಾಗಿದ್ದ ಭಾರೀ ತೂಕದ ಪದವಿಯೊಂದನ್ನು ಪಡೆದುಕೊಂಡಿದ್ದ ಅವರು, ಸನ್ಮಾರ್ಗ ವಾರಪತ್ರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದುದಕ್ಕೆ ಕಾರಣ, ಅಂದಿನ ಸಾಮಾಜಿಕ ವಾತಾವರಣ ಎನ್ನಬಹುದು. ಅಂದು, ಇಸ್ಲಾಮ್‍ನ ಬಗ್ಗೆ ಮುಸ್ಲಿಮೇತರರಲ್ಲಿ ಮಾತ್ರ ತಿಳುವಳಿಕೆಯ ಕೊರತೆ ಇದ್ದುದಲ್ಲ, ಸ್ವತಃ ಮುಸ್ಲಿಮರಲ್ಲೇ ಬೆಟ್ಟದಷ್ಟು ಸುಳ್ಳು ನಂಬುಗೆಗಳಿದ್ದುವು. ಅಜ್ಞಾನಜನ್ಯ ಆಚರಣೆಗಳಿದ್ದುವು. ಕಾಫಿರ್ ಎಂಬ ಪದ ಮುಸ್ಲಿಮರಿಗೆ ಗೊತ್ತಿತ್ತೇ ಹೊರತು ಅದನ್ನು ಯಾರ ಮೇಲೆ, ಹೇಗೆ, ಯಾವಾಗ, ಯಾಕೆ ಪ್ರಯೋಗಿಸಬೇಕೆಂಬ ಬಗ್ಗೆ ಏನೇನೂ ತಿಳುವಳಿಕೆ ಇರಲಿಲ್ಲ. ಆದ್ದರಿಂದ ಅದನ್ನು ತಪ್ಪಾಗಿ ಪ್ರಯೋಗಿಸಿ ಮುಸ್ಲಿಮೇತರರಿಂದ ಬೇರ್ಪಟ್ಟು ಕೊಂಡಿದ್ದರು. ಮುಸ್ಲಿಮರ ನಮಾಝ್, ಅವರ ಉಪವಾಸ, ಅವರ ಮಸೀದಿ, ಸಲಾಮ್, ಆರಾಧನೆ.. ಎಲ್ಲವೂ ಮುಸ್ಲಿಮೇತರರ ಪಾಲಿಗೆ ತೀರಾ ಅಪರಿಚಿತ ಮಾತ್ರವಲ್ಲ, ಮುಸ್ಲಿಮೇತರ ಸಮಾಜದಲ್ಲಿ ಈ ಬಗ್ಗೆ ಧಾರಾಳ ಅನುಮಾನಗಳಿದ್ದುವು. ಮುಸ್ಲಿಮ್ ಮಹಿಳಾ ಜಗತ್ತಂತೂ ಇನ್ನಷ್ಟು ಕತ್ತಲೆಯಲ್ಲಿತ್ತು. ತಲಾಕ್‍ನ ಬಗ್ಗೆ, ಪರ್ದಾದ ಬಗ್ಗೆ, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳ ಬಗ್ಗೆ.. ಮುಖ್ಯವಾಹಿನಿಯ ಮಾಧ್ಯಮಗಳಲ್ಲೇ ತೀರಾ ಕಡಿಮೆ ವಿಷಯಗಳು ಬರುತ್ತಿದ್ದ ಸಂದರ್ಭಗಳಾಗಿದ್ದುವು. ಇಂಥ ಹೊತ್ತಲ್ಲಿ ಬಿ.ಎಸ್ಸಿ. ಪದವೀಧರನಾದ ನೂರ್ ಮುಹಮ್ಮದ್‍ರು ಸರಕಾರಿಯೋ ಖಾಸಗಿಯೋ ನೌಕರ ಆಗುವುದಕ್ಕಿಂತ ಜ್ಞಾನ ಕ್ಷೇತ್ರದಲ್ಲಿರುವ ಈ ಕತ್ತಲೆಗೆ ಬೆಳಕು ಚೆಲ್ಲುವ ಲೇಖಕ ಆಗಲು ನಿರ್ಧರಿಸಿದರು. ಅದಕ್ಕಾಗಿ ಸನ್ಮಾರ್ಗ ಪತ್ರಿಕೆಯನ್ನು ದೀವಟಿಕೆಯಾಗಿ ಬಳಸಿಕೊಂಡರು. ಸನ್ಮಾರ್ಗ ಪತ್ರಿಕೆಯ ಆರಂಭದ ಐದು ವರ್ಷಗಳಲ್ಲಿ ಅವರು ಸಂಬಳವನ್ನೇ ಪಡೆದಿರಲಿಲ್ಲ. ಪವಿತ್ರ ಕುರ್‍ಆನಿನ ಮೇಲೆ ಅವರಿಗೆಷ್ಟು ಪ್ರೀತಿಯಿತ್ತು ಮತ್ತು ಸಮಾಜಕ್ಕೆ ಅದನ್ನು ತಲುಪಿಸಬೇಕೆಂಬ ಕಾಳಜಿಯಿತ್ತು ಅಂದರೆ, ಮೊನ್ನೆ ನಿಧನರಾಗುವ ವೇಳೆ ಕುರ್‍ಆನ್ ವ್ಯಾಖ್ಯಾನದ (ತಫ್ಹೀಮುಲ್ ಕುರ್‍ಆನ್) 5ನೇ ಭಾಗದ ಅನುವಾದದಲ್ಲಿದ್ದರು. ಮಂಗಳೂರಿನ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನಕ್ಕಾಗಿ ಅವರು ಅನುವಾದಿಸಿದ 50 ಕೃತಿಗಳಲ್ಲಿ, 1. ವೇದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್, 2. ಇಸ್ಲಾಮ್ ಸಂಶಯಗಳ ಸುಳಿಯಲ್ಲಿ, 3. ಭಾರತೀಯ ಸಂಸ್ಕ್ರಿತಿಯ ಅಂತರ್ಧಾರೆಗಳು, 4. ಮಹಿಳೆ ಇಸ್ಲಾಮಿನಲ್ಲಿ, 5. ತಲಾಕ್, 6. ಸತ್ಯ ವಿಶ್ವಾಸ ಮುಂತಾದುವುಗಳೂ ಸೇರಿವೆ. ಅವರ ಬರಹವಿಲ್ಲದೇ ಸನ್ಮಾರ್ಗ ಪತ್ರಿಕೆಯ ಒಂದೇ ಒಂದು ಸಂಚಿಕೆ ಕಳೆದ 37 ವರ್ಷಗಳಲ್ಲಿ ಈ ವರೆಗೂ ಪ್ರಕಟವಾಗಿಲ್ಲ ಎಂಬುದೇ ಅವರ ಅಕ್ಷರ ಪ್ರೇಮಕ್ಕೆ ಮತ್ತು ಸಾಮಾಜಿಕ ಬದ್ಧತೆಗೆ ನೀಡಬಹುದಾದ ಬಹುದೊಡ್ಡ ಪುರಾವೆ.
   ಭಾಷೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದವರು ನೂರ್ ಮುಹಮ್ಮದ್. ಕನ್ನಡ ಭಾಷೆಯಲ್ಲಿ ಅವರಿಗೆಷ್ಟು ಪ್ರಭುತ್ವ ಇತ್ತೋ ಅಷ್ಟೇ ಮಲಯಾಳಂ ಭಾಷೆಯಲ್ಲಿ ಪಾಂಡಿತ್ಯವೂ ಇತ್ತು. ಕನ್ನಡ ಭಾಷೆಯನ್ನು ಅತ್ಯಂತ ಖಚಿತವಾಗಿ ಮತ್ತ ನಿಖರವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ನೂರ್ ಮುಹಮ್ಮದ್ ಒಂದು ಅತ್ಯುತ್ತಮ ಉದಾಹರಣೆ. ಅವರು ಕನ್ನಡಕ್ಕೆ ಹಲವಾರು ಪದಗಳನ್ನು ಪರಿಚಯಿಸಿದರು. ಮಲಯಾಳಂನ ಪದವೊಂದಕ್ಕೆ ಅಷ್ಟೇ ಚೆಲುವಾದ ಪದವೊಂದು ಅವರ ಜ್ಞಾನಕೋಶದಲ್ಲಿ ಅರಳದೇ ಹೋದರೆ, ಸಂಪಾದಕೀಯ ಮಂಡಳಿಯ ಇತರ ಸಹೋದ್ಯೋಗಿಗಳಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಸನ್ಮಾರ್ಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಪ್ಪು ಪದಗಳನ್ನು ಹೆಕ್ಕಿ, ಎತ್ತಿ ಹೇಳಿ ನಿಖರತೆಗೆ ಮತ್ತು ಸ್ಪಷ್ಟತೆಗೆ ಒತ್ತು ಕೊಡುವಂತೆ ಎಚ್ಚರಿಸುತ್ತಿದ್ದರು. ಅನುವಾದವೆಂಬುದು ಬರೇ ಪದಗಳ ಕನ್ನಡೀಕರಣವಲ್ಲ, ಅಲ್ಲಿ ಭಾವ, ಆವೇಶ, ಸ್ಪಷ್ಟತೆ ಮತ್ತು ಖಚಿತತೆ ಇರಬೇಕು ಅನ್ನುತ್ತಿದ್ದರು. ಯಾವುದೇ ಬರಹವನ್ನು ಅನುವಾದಿಸುವ ಮೊದಲು ಇಡೀ ಬರಹವನ್ನು ಪೂರ್ಣವಾಗಿ ಓದಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅನುವಾದದ ಸಂದರ್ಭದಲ್ಲಿ ಮೂಲ ಕೃತಿಗೆ ಚ್ಯುತಿ ಬರದಂತೆ, ಅದರ ಸೌಂದರ್ಯಕ್ಕೆ ಹಾನಿ ತಟ್ಟದಂತೆ ಜಾಗರೂಕರಾಗಿರಬೇಕು ಎಂದು ತಿದ್ದುತ್ತಿದ್ದರು. ಅವರ ಅನುವಾದದಲ್ಲಿ ಯಾವಾಗಲೂ ಈ ಶಿಷ್ಟತೆ ಸದಾ ಇರುತ್ತಿದ್ದುವು. ಅನುವಾದ ಕ್ಷೇತ್ರದಲ್ಲಿ ತರಬೇತಿ ಪಡೆದು, ಪದವಿಯ ಮೇಲೆ ಪದವಿ ಪಡೆದು ಬಂದವರನ್ನು ಅಚ್ಚರಿ ಗೊಳಿಸುವಷ್ಟು ಅವರಲ್ಲಿ ಪದ ಸಂಪತ್ತು ಮತ್ತು ಪದ ಸೌಂದರ್ಯವಿತ್ತು. ಅವರು ಅನುವಾದದಲ್ಲಿ ‘ನೂರ್’ತನ(ತಮ್ಮತನ) ವನ್ನು ಸೃಷ್ಟಿಸಿದ್ದರು. ‘ಇದು ನೂರ್ ಮುಹಮ್ಮದ್‍ರ ಅನುವಾದ' ಎಂದು ಹೇಳಬಹುದಾದಷ್ಟು ವಿಶಿಷ್ಟತೆ ಅವರ ಅನುವಾದಕ್ಕಿತ್ತು. ‘ಭಾರತೀಯ ಸಂಸ್ಕøತಿಯ ಅಂತರ್ಧಾರೆಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ  ಡಾ| ಸಿದ್ಧಲಿಂಗಯ್ಯ ಕಳೆದ ವರ್ಷ ಬೆಂಗಳೂರಿನಲ್ಲಿ ‘ನೂರ್’ತನವನ್ನು ಹೀಗೆ ವರ್ಣಿಸಿದ್ದರು,
   “ಇದು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಲಾದ ಕೃತಿ ಎಂದು ಅನಿಸುತ್ತಲೇ ಇಲ್ಲ. ಕನ್ನಡದಲ್ಲೇ ಸ್ವತಂತ್ರವಾಗಿ ರಚಿತಗೊಂಡ ಕೃತಿಯಂತೆ ಭಾಸವಾಗುತ್ತಿದೆ. ಮಲಯಾಳಂ ಭಾಷೆಯ ಛಾಪು ಇಲ್ಲದ, ಅಚ್ಚ ಕನ್ನಡ ಶೈಲಿಯಲ್ಲಿ ಪ್ರಕಟಗೊಂಡಿರುವ ಕೃತಿ ಇದು” ಎಂದಿದ್ದರು.
   ಅನುವಾದ ಜಗತ್ತು ತೀರಾ ಹಳೆಯದು. ಕ್ರಿಸ್ತಪೂರ್ವ 3-1ನೇ ಶತಮಾನದ ಆರಂಭದಲ್ಲೇ ಯಹೂದಿ ಧರ್ಮಗ್ರಂಥವು ಅಲೆಕ್ಸಾಂಡ್ರಿಯಾದಲ್ಲಿ ಗ್ರೀಕ್ ಭಾಷೆಗೆ ಅನುವಾದಗೊಂಡಿದೆ ಎಂದು ಹೇಳಲಾಗುತ್ತಿದೆ. ಯಹೂದಿಯರಲ್ಲಿ ತಮ್ಮ ಪರಂಪರಾಗತ ಭಾಷೆ ಕಾಣೆಯಾಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ಆ ನಂತರ ಬೌದ್ಧರು ಮತ್ತು ಅರಬರು ಈ ಅನುವಾದ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟರು. ಬೌದ್ಧರ ತಾಂಗುಟ್ ಸಾಮ್ರಾಜ್ಯವಂತೂ ಈ ಕೆಲಸವನ್ನು ಅತ್ಯಂತ ಮುತುವರ್ಜಿಯಿಂದ ನಡೆಸಿತು. 13ನೇ ಶತಮಾನದಲ್ಲಿ ಅಲ್ಫಾನ್ಸೋ ರಾಜನು ಸ್ಪೇನ್‍ನ ಟೊಲೊಡೋದಲ್ಲಿ ‘ಸ್ಕೂಲ್ ಆಫ್ ಟ್ರಾನ್ಸ್‍ಲೇಶನ್’ ಅನ್ನು ಸ್ಥಾಪಿಸಿದ. ಇದೇ ಸಂದರ್ಭದಲ್ಲಿ ಕಾರ್ಡೋವಾದಲ್ಲಿ ಇಸ್ಲಾವಿೂ ಫಿಲಾಸಫಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಿಸುವ ಪ್ರಯತ್ನಗಳೂ ನಡೆದುವು. ಇಂಥ ಅನುವಾದಗಳೇ ಯುರೋಪಿನ ವೈಜ್ಞಾನಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ದೇಣಿಗೆಯನ್ನು ನೀಡಿದುವು. 1453ರಲ್ಲೇ ಅನುವಾದದಲ್ಲಿ ಬಳಕೆಯಾಗಬೇಕಾದ ಭಾಷೆ, ಶೈಲಿಗಳ ಬಗ್ಗೆ ಚರ್ಚೆಗಳೆದ್ದಿದ್ದುವು. ಪ್ಲೇಟೋ, ಅರಿಸ್ಟಾಟಲ್‍ರ ಸಾಹಿತ್ಯಿಕ ಭಾಷೆಗೆ ಅನುವಾದಿತ ಭಾಷೆಯಲ್ಲಿ ನ್ಯಾಯ ಕೊಡಬೇಕೆಂಬ ಬಗ್ಗೆ ಓದುಗ ವೃಂದದಿಂದ ಆಗ್ರಹಗಳು ಕೇಳಿಬಂದಿದ್ದುವು. 20ನೇ ಶತಮಾನದಲ್ಲಿ ಬೆಂಜಮಿನ್ ಜ್ಯೂವೆಟ್ ಎಂಬವರು ಪ್ಲೇಟೋರನ್ನು ಸರಳ ಭಾಷೆಯಲ್ಲಿ ಅನುವಾದಿಸಿದರು. ಅವರು ಭಾಷಾ ಶೈಲಿಗಿಂತ ನಿಖರತೆಗೆ ಒತ್ತು ಕೊಟ್ಟರು. ನಿಜವಾಗಿ, ರಶ್ಯನ್ ಮೂಲದ ರೋಮನ್ ಜಾಕೊಬ್ಸ್ ಎಂಬವರು 1959ರಲ್ಲಿ ಮಂಡಿಸಿದ ‘ಆನ್ ಲಿಂಗ್ವಿಸ್ಟಿಕ್ ಆಸ್ಪೆಕ್ಟ್ಸ್ ಆಫ್ ಟ್ರಾನ್ಸ್‍ಲೇಶನ್’ ಎಂಬ ಪ್ರಬಂಧವಾಗಲಿ, ಜೇಮ್ಸ್ ಮೆರಿಲ್‍ರ ‘ಲೋಸ್ಟ್ ಇನ್ ಟ್ರಾನ್ಸ್‍ಲೇಶನ್’ ಎಂಬ ಬರಹವಾಗಲಿ ಅಥವಾ 1997ರಲ್ಲಿ ಡಗ್ಲಾಸ್ ಹೋಪ್‍ಸ್ಟೌಡ್‍ಚರ್ ಅವರು ಬರೆದ ಕೃತಿಯಾಗಲಿ ಎಲ್ಲವೂ ಅನುವಾದದ ಬಗೆಗಿನ ಸಮಸ್ಯೆಗಳ ಕುರಿತೇ ಆಗಿತ್ತು. ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ತರ್ಜುಮೆಗೊಳ್ಳುವಾಗ ಮೂಲ ಕೃತಿಗೆ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವೇ ಎಂಬ ಚರ್ಚೆ, ಸಂವಾದಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಿವೆ. ಇಂಥ ಅನುಮಾನಗಳನ್ನು ಸಮರ್ಥಿಸುವಂತೆ ಅನೇಕಾರು ಬರಹಗಳೂ ಪ್ರಕಟಗೊಂಡಿವೆ. 1143ರಲ್ಲಿ ಪವಿತ್ರ ಕುರ್‍ಆನನ್ನು ರಾಬರ್ಟಸ್ ಕೆಟನ್ಸಿಸ್ ಎಂಬವ ಲ್ಯಾಟಿನ್ ಭಾಷೆಗೆ ಅನುವಾದಿಸಿದ್ದನ್ನು ಸಾಮಾನ್ಯವಾಗಿ ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತದೆ. ಆತ ಅತ್ಯಂತ ತಪ್ಪುತಪ್ಪಾಗಿ ಮತ್ತು ತದ್ವಿರುದ್ಧ ಅರ್ಥ ಬರುವಂತೆ ಕುರ್‍ಆನನ್ನು ಅನುವಾದಿಸಿದ್ದ. ಆ ಅನುವಾದದ ಆಧಾರದಲ್ಲೇ ಯುರೋಪಿಯನ್ ಅನುವಾದಕರು ಪವಿತ್ರ ಕುರ್‍ಆನನ್ನು ಇತರ ಭಾಷೆಗಳಿಗೆ ಅನುವಾದಿಸಿದ್ದೂ ನಡೆಯಿತು. ರೋಮ್‍ನಲ್ಲಿ ಶಿಕ್ಷಕನಾಗಿದ್ದ ಲುಡವಿಕೋ ಮ್ಯಾರ್ರಾಸ್ಸಿ ಕೂಡ ಅವರಲ್ಲಿ ಒಬ್ಬ. ಒಂದು ರೀತಿಯಲ್ಲಿ, ಅನುವಾದಿತ ಕೃತಿಗಳ ಮೇಲೆ ಮತ್ತು ಅವು ಬೀರಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಮೇಲೆ ಜಾಗತಿಕ ಸಾಹಿತ್ಯ ಕ್ಷೇತ್ರವು ನಡೆಸಿದ ಚರ್ಚೆಯನ್ನು ಎದುರಿಟ್ಟುಕೊಂಡು ನೋಡಿದರೆ, ನೂರ್ ಮುಹಮ್ಮದ್‍ರು ಆ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲೇಬೇಕಾದ ಮತ್ತು ಅವರಿಲ್ಲದ ಚರ್ಚೆಯು ಅಪೂರ್ಣ ಅನ್ನಬಹುದಾದ ವ್ಯಕ್ತಿತ್ವವಾಗಿ ಕಾಣಿಸುತ್ತಾರೆ. ಅವರು ಅನುವಾದವನ್ನು ಒಂದು ಧ್ಯಾನವಾಗಿ ಸ್ವೀಕರಿಸಿದವರು. ಅದರಲ್ಲೇ ಆಧ್ಯಾತ್ಮ ಮತ್ತು ತಾಧ್ಯಾತ್ಮವನ್ನು ಕಂಡುಕೊಂಡವರು. ಅದಕ್ಕೊಂದು ನಿಖರತೆ ಮತ್ತು ಖಚಿತತೆಯನ್ನು ದೊರಕಿಸಿಕೊಟ್ಟವರು. ಅನುವಾದವೆಂಬುದು ಭಾಷಾ ಬದಲಾವಣೆಯಲ್ಲ ಎಂಬುದಾಗಿ ಅಧಿಕಾರಯುತವಾಗಿ ಘೋಷಿಸಿದವರು. ಅವರು ಅನುವಾದಕ್ಕಾಗಿ ಅನುವಾದ ಮಾಡುತ್ತಿದ್ದುದಲ್ಲ. ಅದವರ ತತ್ವವಾಗಿತ್ತು. ಸಿದ್ಧಾಂತವಾಗಿತ್ತು. ಜೀವನದ ಗುರಿಯಾಗಿತ್ತು. ಅವರು ಅನುವಾದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಕೃತಿಯು ಆಯಾಕಾಲದ ಸಾಮಾಜಿಕ ಅಗತ್ಯಗಳಾಗಿರುತ್ತಿತ್ತು. ದುಡ್ಡಿಗಾಗಿಯೋ ಪ್ರಶಂಸೆಗಾಗಿಯೋ ಅವರು ಲೇಖನಿ ಎತ್ತಿಕೊಂಡದ್ದೇ ಇಲ್ಲ. ವೇದಿಕೆ ಹತ್ತಿದ್ದಿಲ್ಲ. ಪ್ರಶಸ್ತಿ-ಪುರಸ್ಕಾರಗಳಿಗೆ ಕೊರಳೊಡ್ಡಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿದಿದ್ದರೂ ಸಾಹಿತ್ಯ ವೇದಿಕೆಯ ಪೋಟೋ ಆಲ್ಬಂಗಳಲ್ಲಿ ಅವರಿಲ್ಲ. ಅವರೇ ಅನುವಾದಿಸಿದ ಕೃತಿಗಳೆಲ್ಲ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಹಿತಿಗಳ ಕೈಯಲ್ಲಿ ಬಿಡುಗಡೆಗೊಳ್ಳುತ್ತಿರುವಾಗಲೆಲ್ಲಾ ವೇದಿಕೆಯ ಕೆಳಗೆ ಕೂತು ತಣ್ಣಗೆ ಮತ್ತು ಮೌನವಾಗಿ ಅವನ್ನೆಲ್ಲ ಕಣ್ತುಂಬಿಕೊಂಡು ಅಪರಿಚಿತರಂತೆ ಹೊರಟು ಹೋಗುವರು. ‘ತಾನು ಮೃತಪಟ್ಟರೆ ಸಂತಾಪ ಸೂಚಕ ಸಭೆ ನಡೆಸಬಾರದು’ ಎಂದು ಉಯಿಲು ಹೇಳುವಷ್ಟು ಸಾಮಾನ್ಯ ವ್ಯಕ್ತಿತ್ವ ಅವರದು. ಅವರು ಏನೆಲ್ಲ ಬರೆದರೋ ಅವನ್ನೇ ಉಂಡರು, ಬದುಕಿದರು. ಬಿಳಿ ಶರ್ಟು, ಬಿಳಿ ಪಂಚೆ, ಬಿಳಿ ಗಡ್ಡ, ಕನ್ನಡಕ, ಭರವಸೆಯ ಕಣ್ಣು, ಖಚಿತ ಮಾತು.. ಇವೇ ನೂರ್ ಮುಹಮ್ಮದ್. ಅವರೋರ್ವ ಪ್ರಖರ ಸಿದ್ಧಾಂತವಾದಿ. ಬರೆದಂತೆ ಬದುಕಿದರು.
   ಇಂದಿನ ಸಾಹಿತ್ಯಿಕ ಪ್ರಪಂಚದಲ್ಲಿ ಅನುವಾದಕರ ಪಟ್ಟಿ ಬಹಳ ಉದ್ದವಿದೆ. ಆದರೆ, ಇವರಲ್ಲಿ ‘ನೂರ್ ಮುಹಮ್ಮದ್'ರನ್ನು ಹುಡುಕ ಹೊರಟರೆ ವಿಷಾದವೇ ಎದುರಾಗುತ್ತದೆ. ನಿಜವಾಗಿ, ನೂರ್ ಮುಹಮ್ಮದ್‍ರ ವಿಶೇಷತೆಯೇ ಇದು. ಎಲ್ಲರೂ ಅನುವಾದಕರೇ. ಆದರೆ ಎಲ್ಲರೂ ನೂರ್ ಮುಹಮ್ಮದ್ ಅಲ್ಲ. ಆದ್ದರಿಂದಲೇ, ನೂರ್ ಮುಹಮ್ಮದ್‍ರ ಹೆಸರಲ್ಲಿ ರಾಜ್ಯ ಸರಕಾರವು ಅನುವಾದ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಅಗತ್ಯವಿದೆ. ಇಂಥ ಓರ್ವ ಅನುವಾದಕ ಈ ಜಗತ್ತಿನಲ್ಲಿ ಇದ್ದು ಹೊರಟು ಹೋಗಿದ್ದಾರೆ ಎಂಬುದನ್ನು ಹೊಸ ತಲೆಮಾರಿನ ಅನುವಾದಕರಿಗೆ ಗೊತ್ತು ಮಾಡಬೇಕಾಗಿದೆ. ಪಂಚೆ, ಷರ್ಟು, ಮನಸ್ಸು, ಲೇಖನಿ, ಭಾಷೆ, ಮಾತು.. ಎಲ್ಲವೂ ಯಾವ ಸಂದರ್ಭದಲ್ಲೂ ಬಿಕರಿಗೊಳ್ಳಲು ಸಿದ್ಧವಾಗಿರುವ ಮತ್ತು ಬಿಕರಿಯಾಗುತ್ತಿರುವ ಇಂದಿನ ದಿನಗಳಲ್ಲಿ ‘ಬಿಕರಿಯಾಗದೇ’ ಹೊರಟುಹೋದ ಅವರನ್ನು ಸಾಹಿತ್ಯಿಕ ಜಗತ್ತಿನಲ್ಲಿ ನಾವು ಸದಾ ಉಳಿಸಿಕೊಳ್ಳಬೇಕಾಗಿದೆ. ನೂರ್ ಮುಹಮ್ಮದ್‍ರನ್ನು ಉಳಿಸಿಕೊಳ್ಳುವುದೆಂದರೆ ನಾವು ಮಾರಾಟವಾಗದೇ ಇರುವುದು; ನಮ್ಮ ಲೇಖನಿ ಮತ್ತು ಮನಸ್ಸು ‘ಬಿಕರಿ’ ಪ್ರಪಂಚವನ್ನು ಧಿಕ್ಕರಿಸಿ ಬದುಕುವುದು. ಇದು ಅಸಾಧ್ಯವಲ್ಲ. ಯಾಕೆಂದರೆ, ನೂರ್ ಮುಹಮ್ಮದ್ ಇದನ್ನು ಸಾಧಿಸಿ ತೋರಿಸಿದ್ದಾರೆ. 

Tuesday, August 12, 2014

ಮುಹಮ್ಮದ್ ಮುಸ್ಲಿಯಾರ್ ರ ಮಗಳ ಮದುವೆ

   “ನನ್ನ ಮಗಳಿಗೆ ವಿವಾಹ ನಿಶ್ಚಯ ಆಗಿದೆ ಇವನೇ” - ಕಳೆದವಾರ ಉಭಯ ಕುಶಲೋಪರಿಯ ಮಧ್ಯೆ ಮುಹಮ್ಮದ್
ಮುಸ್ಲಿಯಾರ್ (ಹೆಸರು ಬದಲಿಸಲಾಗಿದೆ) ನನ್ನೊಂದಿಗೆ ಹೇಳಿದರು. ನಾವಿಬ್ಬರೂ ಅಚಾನಕ್ ಆಗಿ ಮಧ್ಯಾಹ್ನ ಹೊಟೇಲಿನಲ್ಲಿ ಭೇಟಿಯಾಗಿದ್ದೆವು. ಸಂಬಂಧದಲ್ಲಿ ಅವರು ನನಗೆ ಮಾವ ಆಗುತ್ತಾರೆ. ಅಭಿನಂದಿಸಿದೆ. ಆದರೆ ನನ್ನ ಅಭಿನಂದನೆಯನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವ ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಖುಷಿ ಮತ್ತು ಬೇಸರ ಎರಡೂ ಬೆರೆತ ಮುಖಭಾವ. ನನ್ನ ಅಚ್ಚರಿಯನ್ನು ಗುರುತಿಸಿದವರಂತೆ, ‘ಇಪ್ಪತ್ತು ಪವನ್ ಕೊಡಬೇಕು ಕಾದರ್' ಅಂದರು. ನಾನು ತುಸು ಪ್ರತಿಭಟನೆಯ ಧನಿಯಲ್ಲಿ ಮಾತಾಡಿದೆ. ‘ಈ ಕಾಲದಲ್ಲಿ ವರದಕ್ಷಿಣೆಯಾ? ಯಾಕೆ ಒಪ್ಪಿಕೊಂಡಿರಿ ನೀವು' ಎಂದೆ. ಅವರು ಹೇಳಿದರು, ‘ಒಪ್ಪಿಕೊಳ್ಳದೇ ಇನ್ನೇನು ಮಾಡಕ್ಕಾಗುತ್ತೆ ಇವನೇ? ಬಡವರ ಮನೆಯ ಮಕ್ಕಳಿಗೆ ಹೆಚ್ಚು ಅವಕಾಶಗಳು ಇಲ್ಲವಲ್ಲ. ಶ್ರೀಮಂತರ ಮಧ್ಯೆ ಇಂಥ ತಾಪತ್ರಯಗಳು ಕಡಿಮೆ. ಅಲ್ಲಿ ಪ್ರತಿಭಟನೆ, ನಿರಾಕರಣೆಗಳಿಗೆ ಅವಕಾಶವೂ ಇರುತ್ತೆ. ಆದರೆ ನಮ್ಮಂಥವರು ಒಪ್ಪಿಕೊಳ್ಳದಿದ್ದರೆ ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕಾಗುತ್ತೆ ನೋಡು. ಹಾಗಂತ, ಜಮಾಅತೆ ಇಸ್ಲಾವಿೂ, ಸಲಫಿಗಳಲ್ಲಿರುವ ಧೈರ್ಯ (ವರದಕ್ಷಿಣೆರಹಿತ ವಿವಾಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು) ನಮ್ಮಲ್ಲಿ ಎಲ್ಲಿದೆ ಹೇಳು?”
   ನಿಜವಾಗಿ, ಈ ವಾರ ವರದಕ್ಷಿಣೆಯ ಕುರಿತಾಗಿ ಲೇಖನ ಬರೆಯಲು ನಾನು ಉದ್ದೇಶಿಸಿಯೇ ಇರಲಿಲ್ಲ. ವರದಕ್ಷಿಣೆಯ ಸುತ್ತ ಈ ಸಮಾಜದಲ್ಲಿ ಈಗಾಗಲೇ ಅನೇಕಾರು ಚರ್ಚೆಗಳಾಗಿವೆ. ಸಭೆ, ವಿಚಾರಗೋಷ್ಠಿ, ಸಂವಾದಗಳು ನಡೆದಿವೆ. ವರದಕ್ಷಿಣೆಯನ್ನು ಖಂಡಿಸಿ ಜಾಥಾಗಳು ನಡೆದಿವೆ. ಮಹರ್ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳೂ ನಡೆದಿವೆ. ‘ಸನ್ಮಾರ್ಗ’ದಲ್ಲೇ ವರದಕ್ಷಿಣೆಯ ಸುತ್ತ ಓದುಗರ ಚರ್ಚೆಯನ್ನು ನಡೆಸಲಾಗಿದೆ. ಅನೇಕಾರು ಬರಹಗಳನ್ನೂ ಪ್ರಕಟಿಸಲಾಗಿದೆ. ಆದರೂ, ಈ ಪಿಡುಗು ಸಮಾಜದಿಂದ ತೊಲಗುತ್ತಿಲ್ಲ ಅಂದರೆ ಏನೆನ್ನಬೇಕು? ಅಂದಹಾಗೆ, ಉಸ್ತಾದರಿಗೂ (ಮುಸ್ಲಿಯಾರ್) ಜನಸಾಮಾನ್ಯರಿಗೂ ನಡುವೆ ಖಂಡಿತ ವ್ಯತ್ಯಾಸ ಇದೆ. ಉಸ್ತಾದರಿಗೆ ಸಮಾಜದಲ್ಲಿ ಒಂದು ಬಗೆಯ ವಿಶೇಷ ಗೌರವವಿದೆ. ಇತರರಿಗೆ ಸಲಾಮ್ ಹೇಳದವರು ಕೂಡ ಉಸ್ತಾದರನ್ನು ಕಂಡ ಕೂಡಲೇ ಸಲಾಮ್ ಹೇಳುತ್ತಾರೆ. ಎದ್ದು ನಿಲ್ಲುತ್ತಾರೆ. ಮುಖಭಾವಗಳು ಬದಲಾಗುತ್ತವೆ. ಇಸ್ಲಾಮಿನ ತಿಳುವಳಿಕೆಯಿರುವ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆಂಬ ನೆಲೆಯಲ್ಲಿ ಸಮಾಜ ಅವರನ್ನು ಅತ್ಯಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಆದರೆ ಅಂಥವರಲ್ಲೇ ವರದಕ್ಷಿಣೆಯ ಬೇಡಿಕೆ ಇಡಲಾಗುತ್ತದೆಂದರೆ? ಅವರ ಧಾರ್ಮಿಕ ಜ್ಞಾನ ಮತ್ತು ಸಾಮಾಜಿಕ ಸ್ಥಾನ-ಮಾನವನ್ನು ಓರ್ವ ‘ವರ' ಮಣ್ಣುಪಾಲು
ಮಾಡುತ್ತಾನೆಂದರೆ? ಸಾಮಾಜಿಕ ಅನಿಷ್ಠಗಳ ಬಗ್ಗೆ ಧಾರಾಳ ಮಾತಾಡಿದ ಉಸ್ತಾದರನ್ನೇ ಒಂದು ‘ಅನಿಷ್ಠ’ ಅಸಹಾಯಕ ವಾಗಿಸಿ ಬಿಡುತ್ತದೆಂದರೆ? ಯಾರು ಇದಕ್ಕೆ ಕಾರಣ? ಹೆಣ್ಣಿನ ತಂದೆ ಎನಿಸಿಕೊಳ್ಳುವುದು ಸಾಮಾಜಿಕ ಗೌರವವನ್ನೇ ಕುಗ್ಗಿಸುವಷ್ಟು ಭೀಕರ ಅಪರಾಧವೇ? ಯಾರು ಇಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿರುವುದು? ಜನಸಾಮಾನ್ಯರೇ, ಶ್ರೀಮಂತರೇ, ಉಸ್ತಾದರೇ, ಕಾಝಿಗಳೇ, ಸಂಘಟನೆಗಳೇ? ಒಂದು ಕಡೆ ಭ್ರೂಣಹತ್ಯೆಯ ವಿರುದ್ಧ ನಮ್ಮ ಮಸೀದಿಯ ಮೈಕುಗಳು ಧಾರಾಳ ಮಾತಾಡುತ್ತವೆ. ಭ್ರೂಣಹತ್ಯೆಗೀಡಾದ ಮಗುವಿನಲ್ಲಿ ನಾಳೆ ಅಲ್ಲಾಹನು ಅದಕ್ಕೆ ಕಾರಣರಾದವರ ಹೆಸರು ಹೇಳಿಸಿ ಶಿಕ್ಷಿಸುತ್ತಾನೆ (ಪವಿತ್ರ ಕುರ್‍ಆನ್: 81:8) ಎಂದು ಬೆದರಿಸಲಾಗುತ್ತದೆ. ಹೆಣ್ಣು ಸಮಾಜಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ವ್ಯಾಖ್ಯಾನಗಳೂ ನಡೆಯುತ್ತಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ, ವಿವಾಹ ಮಾಡಿಸಿಕೊಡುವ ಹೆತ್ತವರಿಗೆ ಸ್ವರ್ಗದ ವಾಗ್ದಾನವಿದೆ ಎಂದು ಹೇಳಲಾಗುತ್ತದೆ. ಪ್ರವಾದಿ ಮುಹಮ್ಮದ್‍ರಿಗೆ(ಸ) ಹೆಣ್ಣು ಮಕ್ಕಳು ಮಾತ್ರವೇ ಇದ್ದುದನ್ನು ನೆನಪಿಸಿ, ಹೆಣ್ಣು ಮಕ್ಕಳಿಗಾಗಿ ಸಂತಸಪಡಿ ಎನ್ನಲಾಗುತ್ತದೆ. ಆದರೆ, ಇನ್ನೊಂದು ಕಡೆ ಹೆಣ್ಣನ್ನು ಹೊರೆ ಎಂದೇ ಪರಿಗಣಿಸಲಾಗುತ್ತಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಮದುವೆಗಾಗಿ ಹಣ ಸಂಗ್ರಹಿಸತೊಡಗಬೇಕಾದ ಒತ್ತಡವನ್ನು ಹೆತ್ತವರ ಮೇಲೆ ಹೊರಿಸಲಾಗುತ್ತಿದೆ. ಯಾಕೆ ಈ ದ್ವಂದ್ವ? ನಮ್ಮ ಭಾಷಣಗಳಿಗೂ ವರ್ತನೆಗಳಿಗೂ ಯಾಕಿಷ್ಟು ಅಂತರ? ಭಾಷಣಗಳು ಎಷ್ಟು ಕರ್ಣಾನಂದಕರವೋ ಪ್ರಾಯೋಗಿಕವಾಗಿ ಅದು ಅಷ್ಟೇ ಕರ್ಕಶವೆನಿಸಿರುವುದೇಕೆ? ಹೀಗೆ ಭಾಷಣ ಮಾಡುವ ಉಸ್ತಾದರನ್ನೇ ಹೆಣ್ಣು ಬೇಟೆಯಾಡುತ್ತಿರುವುದೇಕೆ? ಹೆಣ್ಣು ಮಕ್ಕಳನ್ನು ಪ್ರೀತಿಸಿದ ಪ್ರವಾದಿಯವರ ಅನುಯಾಯಿಗಳಿಗೆ ಹೆಣ್ಣು ಮಕ್ಕಳು ಭಾರ ಅನಿಸಿರುವುದು ಯಾವುದರ ಸೂಚನೆ? ಇವೆಲ್ಲವನ್ನು ಇಟ್ಟುಕೊಂಡು ನಾವು, ಭ್ರೂಣಹತ್ಯೆ ಮಾಡಬೇಡಿ ಎಂದು ಕರೆ ಕೊಡುತ್ತೇವಲ್ಲ, ಹತ್ಯೆಗೀಡಾದ ಮಗುವಿನಲ್ಲೇ ಈ ಬಗ್ಗೆ ಪ್ರಶ್ನಿಸಿ ಶಿಕ್ಷೆ ನೀಡಲಾಗುತ್ತದೆ ಅನ್ನುತ್ತೇವಲ್ಲ ಮತ್ತು ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಅರಬರನ್ನು ಅಜ್ಞಾನಿಗಳು ಎಂದು ಟೀಕಿಸುತ್ತೇವಲ್ಲ, ಎಷ್ಟು ಹಾಸ್ಯಾಸ್ಪದ? ಓರ್ವ ಮಗಳ ವಿವಾಹವೇ ಉಸ್ತಾದರಿಗೆ ಇಷ್ಟು ಭಾರವಾಗಿರುವಾಗ ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿರುವ ಹೆತ್ತವರು ಏನು ಮಾಡಬೇಕು? ಕುರ್‍ಆನಿನ ಸೂಕ್ತಗಳನ್ನೋ ಪ್ರವಾದಿಯ(ಸ) ಮಾತುಗಳನ್ನೋ ಆಚರಣೆಗೆ ತರದ ಸಮಾಜದಲ್ಲಿ ಈ ಹೆತ್ತವರು ಇಸ್ಲಾಮಿನ ಈ ಪಾವನ ಮೌಲ್ಯಗಳಲ್ಲಿ ಎಲ್ಲಿಯವರೆಗೆ ನಂಬಿಕೆ ಇಟ್ಟುಕೊಂಡು ಮುಂದುವರಿಯಬಲ್ಲರು? ಹೆಣ್ಣು ಭ್ರೂಣಹತ್ಯೆ ಮಾಡಬೇಡಿ ಎಂದು ಅವರಲ್ಲಿ ಹೇಳುವುದಕ್ಕೆ ಈ ಸಮಾಜಕ್ಕೆ ಏನು ಅರ್ಹತೆಯಿದೆ? ಒಂದು ವೇಳೆ, ಅವರು ಅಂಥ ಹತ್ಯೆಗೆ ಮುಂದಾದರೆಂದರೆ, ಅದಕ್ಕಾಗಿ ಅಲ್ಲಾಹನು ಅವರನ್ನು ಮಾತ್ರ ಹಿಡಿಯುವನೇ? ಅಂಥ ಪಾಪ ಕೃತ್ಯವನ್ನು ಅವರಿಗೆ ಅನಿವಾರ್ಯಗೊಳಿಸಿದ ನಮ್ಮ-ನಿಮ್ಮನ್ನು ಆತ ತಪ್ಪಿತಸ್ಥರೆಂದು ಪರಿಗಣಿಸಲಾರನೇ?
     ಸಾಮಾನ್ಯವಾಗಿ, ಮುಸ್ಲಿಯಾರ್‍ಗಳಲ್ಲಿ ಹೆಚ್ಚಿನವರೂ ಬಡವರೇ. ಸಾಮಾನ್ಯ ಮಂದಿ ಎದುರಿಸುವ ಸಕಲ ಸಮಸ್ಯೆಗಳನ್ನು ಅವರೂ ಬಹುತೇಕ ಎದುರಿಸುತ್ತಾರೆ. ಅವರ ಮಕ್ಕಳು ಹೋಗುವುದು ಸರಕಾರಿ ಶಾಲೆಗೆ. ಸುಣ್ಣ-ಬಣ್ಣದ ಸಾಮಾನ್ಯ ಮನೆಗಳಲ್ಲಿ ಅವರು ಮತ್ತು ಅವರ ಕುಟುಂಬ ಬದುಕುತ್ತಿರುತ್ತದೆ. ಅವರದ್ದು ಸರಕಾರಿ ಉದ್ಯೋಗ ಅಲ್ಲವಾದ್ದರಿಂದ ಕೈ ತುಂಬ ಸಂಬಳವೂ ಸಿಗುವುದಿಲ್ಲ. ಪತಿಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಮನೆಯಲ್ಲಿ ಬೀಡಿಯನ್ನೋ ಇತರ ಆರ್ಥಿಕ ಮೂಲಗಳನ್ನೋ ಪತ್ನಿ ಅವಲಂಬಿಸಿರುತ್ತಾರೆ. ಅಂದಹಾಗೆ, ಮುಸ್ಲಿಯಾರ್‍ಗಳ ಮಕ್ಕಳು ಮುಸ್ಲಿಯಾರ್ ಆಗದೇ ಇರುವುದಕ್ಕೆ ಮುಖ್ಯ ಕಾರಣ ಈ ಆರ್ಥಿಕ ದುಃಸ್ಥಿತಿಯೇ. ಅವರ ಉದ್ಯೋಗ ಸದಾ ಅನಿಶ್ಚಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಸಾಮಾಜಿಕ ಅನಿಷ್ಠಗಳಿಗೆ  ಅಥವಾ ತಪ್ಪು ಆಚರಣೆಗಳಿಗೆ  ಬಹಿರಂಗವಾಗಿ ವಿರೋಧ ವ್ಯಕ್ತಪಡಿಸದಷ್ಟು  ಔದ್ಯೋಗಿಕ ಅಭದ್ರತೆ ಕಾಡುತ್ತಿರುತ್ತದೆ. ಮಸೀದಿ ಆಡಳಿತ ಮಂಡಳಿಯಲ್ಲಿರುವವರಿಗೆ ಅಸಂತೃಪ್ತಿಯಾಗಬಹುದಾದ ಯಾವುದನ್ನೂ ಹೇಳದಂಥ ಮತ್ತು ಸದಾ ಅವರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಚನ ನೀಡಬೇಕಾದಂಥ ವಾತಾವರಣ ಇರುತ್ತದೆ. ಹೀಗೆ, ‘ರಾಜಿ ಮನಸ್ಥಿತಿ'ಯ ಹೊರತು ಅನ್ಯ ದಾರಿಯಿಲ್ಲದ ಸಂದರ್ಭವೊಂದು ಅನೇಕ ಮುಸ್ಲಿಯಾರ್‍ಗಳನ್ನು ಇವತ್ತು ಕಾಡುತ್ತಿದೆ. ಆದರೂ ಸಮಾಜ ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ  ಈ ಕಾರಣಗಳೆಲ್ಲ ಉತ್ತರವಾಗುವುದಿಲ್ಲ ನಿಜ. ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸ ಬೇಕಾದ ವರ್ಗವೊಂದು ವೈಯಕ್ತಿಕ ಕಾರಣಗಳಿಗಾಗಿಯೋ ಮುಲಾಜಿಗಾಗಿಯೋ ಆ ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಅದರ ದುಷ್ಫಲವನ್ನು ಇಡೀ ಸಮಾಜವೇ ಹೊರಬೇಕಾಗುತ್ತದಲ್ಲವೇ? ಅಂಥ ಸಂದರ್ಭಗಳಲ್ಲಿ ಆ ದುಷ್ಫಲ ಸ್ವತಃ ಆ ವರ್ಗವನ್ನೂ ಕಾಡುತ್ತದೆ. ಒಂದು ವೇಳೆ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಇವತ್ತು ಏರ್ಪಡುತ್ತಿರುವ ಪ್ರವಚನ, ವಾದ-ಪ್ರತಿ ವಾದದಂಥ ಕಾರ್ಯಕ್ರಮಗಳ ಅರ್ಧದಷ್ಟನ್ನಾದರೂ ವರದಕ್ಷಿಣೆಯ ವಿರೋಧಕ್ಕಾಗಿ ವಿೂಸಲಿರಿಸುತ್ತಿದ್ದರೆ ಸಮಾಜದ ಪರಿಸ್ಥಿತಿಯೇ ಬೇರೆಯಿರುತ್ತಿತ್ತು. ವರದಕ್ಷಿಣೆಯ ಮದುವೆಯನ್ನು ನಡೆಸಿಕೊಡುವುದಿಲ್ಲವೆಂದು ಪ್ರತಿ ಮಸೀದಿ ಮತ್ತು ಉಸ್ತಾದರು ತೀರ್ಮಾನಿಸುವುದಾದರೆ ಹಾಗೂ ಕಾಝಿಗಳು ಈ ಬಗ್ಗೆ ಫತ್ವಾ ಹೊರಡಿಸುವುದಾದರೆ ಮುಹಮ್ಮದ್ ಮುಸ್ಲಿಯಾರ್‍ರಂಥ ‘ಬಡವರು' ಜಮಾಅತೆ ಇಸ್ಲಾಮಿಯ ಕಡೆಗೋ ಸಲಫಿಗಳ ಕಡೆಗೋ ಮೆಚ್ಚುಗೆಯ ನೋಟ ಬೀರುವುದಕ್ಕೂ ಅವಕಾಶವಿರುತ್ತಿರಲಿಲ್ಲ.
   ಒಂದು ರೀತಿಯಲ್ಲಿ, ಮುಹಮ್ಮದ್ ಮುಸ್ಲಿಯಾರ್‍ರ ಆತಂಕವನ್ನು ನಾವು ಇನ್ನೊಂದು ಕಾರಣಕ್ಕಾಗಿಯೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇವತ್ತು ರೇಶನ್ ಕಾರ್ಡ್ ಮಾಡಿಸಬೇಕೆಂದರೆ ಅದಕ್ಕೆಂದೇ ಒಂದು ವ್ಯವಸ್ಥೆಯಿದೆ. ಇಂತಿಂಥ ಸ್ಥಳಗಳಿಗೆ, ನಿರ್ದಿಷ್ಟ ದಾಖಲಾತಿಗಳೊಂದಿಗೆ ಹೋದರೆ ರೇಶನ್‍ಕಾರ್ಡ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶೀತ-ನೆಗಡಿಯಾದರೆ ಎಲ್ಲಿಗೆ ಹೋಗಬೇಕು ಎಂಬುದು ಸಮಾಜಕ್ಕೆ ಚೆನ್ನಾಗಿ ಗೊತ್ತು. ಇದೊಂದೇ ಅಲ್ಲ; ಡ್ರೈವಿಂಗ್ ಲೈಸೆನ್ಸ್, ಹಾಲು, ತರಕಾರಿ, ಮಾಂಸ.. ಇವೆಲ್ಲಕ್ಕೂ ನಿರ್ದಿಷ್ಟ ಜಾಗಗಳಿವೆ ಮತ್ತು ಅಲ್ಲಿಗೆ ತೆರಳಿದರೆ ಅವನ್ನು ಖರೀದಿಸುವ ಅವಕಾಶಗಳೂ ಮುಕ್ತವಾಗಿರುತ್ತವೆ. ಆದರೆ, ಮದುವೆ ಸಂಬಂಧವನ್ನು ಕುದುರಿಸುವುದಕ್ಕೆ ನಮ್ಮಲ್ಲಿ ಏನು ವ್ಯವಸ್ಥೆಯಿದೆ? ಹೆಣ್ಣು ಅಥವಾ ಗಂಡಿನ ಹೆತ್ತವರು ಯಾರನ್ನು ಸಂಪರ್ಕಿಸಬೇಕು? ಸಿಕ್ಕ-ಸಿಕ್ಕವರಲ್ಲಿ ಮದುವೆ ಸಂಬಂಧಕ್ಕೆ ಮೊರೆ ಇಡುತ್ತಾ, ಎಲ್ಲಾದರೂ ಅಂಥ ಅವಕಾಶಗಳಿವೆಯೇ ಎಂದು ಪತ್ರಿಕೆ ಇನ್ನಿತರ ಕಡೆ ಹುಡುಕುತ್ತಾ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಿಕ್ಕವರೊಡನೆ ಗುಟ್ಟಿನಲ್ಲೆಂಬಂತೆ  ಕೇಳಿಕೊಳ್ಳುತ್ತಾ ಬದುಕುವ ಸ್ಥಿತಿಯ ಹೊರತು ಈ ವರೆಗೆ ಇದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆಯನ್ನು ಮಾಡಲು ನಮಗೆ ಸಾಧ್ಯವಾಗಿದೆ? ಹೆಣ್ಣು ಮತ್ತು ಗಂಡಿನ ವಿವರವುಳ್ಳ ಸಮಗ್ರ ಮ್ಯಾರೇಜ್ ಬ್ಯೂರೋವೊಂದನ್ನು ಸ್ಥಾಪಿಸುವುದು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಈವರೆಗೂ ಸ್ಥಾನ ಪಡೆದಿಲ್ಲವೇಕೆ? ಮದುವೆ ಸಂಬಂಧ ಎಂಬುದು ಗುಟ್ಟಿನಲ್ಲಿ, ಅವರಿವರಲ್ಲಿ ಮುಚ್ಚುಮರೆಯೊಂದಿಗೆ ಹೇಳಿಕೊಳ್ಳಬೇಕಾದ ಸಂಗತಿಯೇ? ತನ್ನ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ಬಂದಿರುವಳೆಂಬುದಕ್ಕಾಗಿ ಓರ್ವ ತಂದೆ ಅಥವಾ ತಾಯಿ ಮುಜುಗರ ಪಟ್ಟುಕೊಳ್ಳಬೇಕೇ? ಸೂಕ್ತ ವರ ಅಥವಾ ವಧುವಿಗಾಗಿ ಅವರು ಅವರಿವರಲ್ಲಿ ಬೇಡುತ್ತಿರಬೇಕೇ? ತನಗೆ ಸೂಕ್ತ ವರನನ್ನು ಸ್ವಯಂ ತಾನೇ ಹುಡುಕಿ ನಿರ್ಧರಿಸುವ ಸ್ವಾತಂತ್ರ್ಯ ಮತ್ತು ಅವಕಾಶ ಹೆಣ್ಣಿಗೆ ಇಲ್ಲವೆಂದಾದರೆ ಅದಕ್ಕಾಗಿ ಆಕೆಗೆ ಅತ್ಯಂತ ಪಾರದರ್ಶಕ ವ್ಯವಸ್ಥೆಯೊಂದನ್ನು ಮಾಡಿ ಕೊಡಬೇಕಾದ ಹೊಣೆಗಾರಿಕೆ ಯಾರದು? ನಮ್ಮದಲ್ಲವೇ? ಆ ಹೊಣೆಗಾರಿಕೆಯನ್ನು ನಾವೆಷ್ಟರ ಮಟ್ಟಿಗೆ ನಿಭಾಯಿಸಿದ್ದೇವೆ? ಮುಹಮ್ಮದ್ ಮುಸ್ಲಿಯಾರರ ಭೀತಿ ಕೂಡ ಇದುವೇ. ಮದುವೆ ಸಂಬಂಧ ಕೂಡಿ ಬರುವುದೇ ತುಂಬಾ ಕಷ್ಟದಲ್ಲಿ. ಅದಕ್ಕಾಗಿ ಎಷ್ಟೋ ನಿದ್ದೆಗಳನ್ನು ಕಳೆಯಬೇಕಾಗುತ್ತದೆ.
ಓಡಾಡಬೇಕಾಗುತ್ತದೆ. ಕೆಲವಾರು ನಿರಾಶೆಯ ಉತ್ತರಗಳನ್ನೂ ಆಲಿಸಬೇಕಾಗುತ್ತದೆ. ಹೀಗಿರುವಾಗ, ಕೂಡಿ ಬಂದಿರುವ ಈ ಸಂಬಂಧವನ್ನೇ ವರದಕ್ಷಿಣೆಯ ಕಾರಣಕ್ಕಾಗಿ ತಿರಸ್ಕರಿಸಿ ಬಿಟ್ಟರೆ ಹೊಸ ಸಂಬಂಧವನ್ನು ಹುಡುಕುವುದು ಹೇಗೆ? ಒಂದು ವೇಳೆ ಈ ಅವ್ಯವಸ್ಥಿತ ಮೆಟ್ರಿಮೋನಿಯಲ್ ಜಗತ್ತಿನಲ್ಲಿ ತನ್ನ ಮಗಳು ಒಂಟಿಯಾದರೆ? ಸೂಕ್ತ ವರ ಸಿಗದೇ ಹೋದರೆ?
   ‘ಪ್ಲೀಸ್ ವರದಕ್ಷಿಣೆ ಪಡೆದ ಮದುವೆಯ ಆಮಂತ್ರಣವನ್ನು ನಮಗೆ ನೀಡದಿರಿ. ಅದರಲ್ಲಿ ಹೆಣ್ಣು ಹೆತ್ತವರ ಕಣ್ಣೀರ ಹನಿಗಳಿವೆ' ಎಂಬ ಸ್ಟಿಕ್ಕರ್ ಅನ್ನು ತಯಾರಿಸಿ ಮಿತ್ರ ಸಿದ್ದೀಕ್ ಜಕ್ರಿಬೆಟ್ಟು ಅವರು ವರ್ಷಗಳ ಹಿಂದೆ ಹಲವು ಕಡೆ ಹಂಚಿದ್ದರು. ಇದೀಗ ಅದರ ಪ್ರತ್ಯಕ್ಷ  ಸಂಕೇತವಾಗಿ ಮುಹಮ್ಮದ್ ಮುಸ್ಲಿಯಾರ್ ನಮ್ಮ ಮುಂದಿದ್ದಾರೆ. ಅವರ ನೋವಿಗೆ ಸಾಂತ್ವನ ಹೇಳುತ್ತಲೇ, ವರದಕ್ಷಿಣೆರಹಿತ ಮದುವೆ ವಾತಾವರಣವೊಂದನ್ನು ನಾವೆಲ್ಲ ನಿರ್ಮಿಸಬೇಕಿದೆ.

Monday, August 4, 2014

ಜುಟ್ಟು ಹಿಡಿದು ಅತ್ಯಾಚಾರ ನಡೆಸಬಯಸುವವರ ಸುತ್ತ...

 1991 ಜೂನ್ 9
   “ವೈಟ್ ಈಗಲ್ಸ್ ಪಡೆಯ ಮಿಲಾನ್ ಲುಕಿಕ್ ನಮ್ಮ ಅಪಾರ್ಟ್‍ಮೆಂಟ್‍ಗೆ ಬಂದ. ಡ್ರೀನಾ ನದಿ ಮತ್ತು ಸೆರ್ಬಿಯದ ಗಡಿಗೆ ತಾಗಿಕೊಂಡಂತೆ ಇದ್ದ ನಮ್ಮ ವಿಸ್‍ಗ್ರೇಡ್ ಪಟ್ಟಣವನ್ನು ಅದಾಗಲೇ ವೈಟ್ ಈಗಲ್ಸ್ ಪಡೆ ಸುತ್ತುವರಿದು ವಶಪಡಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಆಲಿಸಿದ್ದೆವು. ನನಗಾಗ 17 ವರ್ಷ. ತಂಗಿ ಎಮಿನಾಳಿಗೆ 15. ಹಾಗಂತ ಲುಕಿಕ್ ನಮಗೆ ಅಪರಿಚಿತ ವ್ಯಕ್ತಿಯೇನೂ ಆಗಿರಲಿಲ್ಲ. ಸ್ಥಳೀಯವಾಗಿ ಆತ ಪರಿಚಿತ ಮತ್ತು ವೈಟ್ ಈಗಲ್ಸ್ ನ ಪ್ರಮುಖ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದ. ಆತ ಮನೆಗೆ ಬಂದವನೇ, ತನ್ನ ಜೊತೆ ಬರುವಂತೆ ನಮ್ಮಿಬ್ಬರಿಗೂ ಆದೇಶಿಸಿದ. ಪೊಲೀಸ್ ಠಾಣೆಯಲ್ಲಿರುವ ಕೆಲವು ಯುವಕರ ಗುರುತು ಪತ್ತೆ ಹಚ್ಚಲು ನಿಮ್ಮ ನೆರವು ಬೇಕಾಗಿದೆಯೆಂದು ಹೇಳಿದ. ಅಮ್ಮ ತಡೆದಳು. ವೈಟ್ ಈಗಲ್ಸ್ ನ ಕಾರ್ಯಕರ್ತರು ಪಟ್ಟಣದಲ್ಲಿ ಅದಾಗಲೇ ಹತ್ಯೆ, ಹಲ್ಲೆಗಳಲ್ಲಿ ನಿರತರಾಗಿರುವ ಬಗ್ಗೆ, ಜನಾಂಗ ನಿರ್ಮೂಲನದ ಉದ್ದೇಶದೊಂದಿಗೆ ಅವರು ಪಟ್ಟಣವನ್ನು ಸುತ್ತುವರಿದಿರುವರೆಂಬ ಬಗ್ಗೆ.. ನಮ್ಮಲ್ಲಿ ಸುದ್ದಿಗಳು ಹಬ್ಬಿದ್ದುವು. ಆದ್ದರಿಂದಲೇ ಒಂದು ಬಗೆಯ ಆತಂಕ, ಅನುಮಾನ ನಮ್ಮ ಅಪಾರ್ಟ್‍ಮೆಂಟನ್ನು ಮಾತ್ರವಲ್ಲ ಇಡೀ ಪಟ್ಟಣವನ್ನೇ ಆವರಿಸಿತ್ತು. ಲುಕಿಕ್, ಜನಾಂಗ ನಿರ್ಮೂಲನದ ಪರ ಇದ್ದ ವ್ಯಕ್ತಿ. ಆದ್ದರಿಂದಲೇ ತಾಯಿ ಆತಂಕಿತರಾಗಿದ್ದರು. ಆದರೆ ಲುಕಿಕ್ ಘರ್ಜಿಸಿದ. ‘ನಾನೇ ಕಾನೂನು, ನಾನೇ ನ್ಯಾಯಾಂಗ’ ಎಂದು ಬೆದರಿಸಿದ. ನಾವಿಬ್ಬರೂ ಆತನ ಜೊತೆ ಕಾರಲ್ಲಿ ಕೂತೆವು. ಆದರೆ ಆತ ಮಾತು ಕೊಟ್ಟಂತೆ ನಮ್ಮನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಿಲ್ಲ. ನೇರ ಎಲಿನಾ ವ್ಲಾಸ್ ಎಂಬ ಹೊಟೇಲಿಗೆ ಕೊಂಡೊಯ್ದ. 20-30 ಕೋಣೆಗಳುಳ್ಳ ದೊಡ್ಡ ಹೊಟೇಲಾಗಿತ್ತದು. ನಾವು ಹೋಗುವಾಗ ಸ್ವಾಗತಕಾರಿಣಿಯರು ತಮಾಷೆ ಮಾಡಿ ನಗುತ್ತಿದ್ದರು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾದರೆ ತಂಗಿ ಎಮಿನಾಳನ್ನು ಇನ್ನೊಂದು ಕೋಣೆಯಲ್ಲಿ. ಕೆಲವು ಗಂಟೆಗಳ ಬಳಿಕ ಎಮಿನಾ ಅರಚುವ, ಬಿಕ್ಕಳಿಸುವ, ಅಂಗಲಾಚುವ ಶಬ್ದವನ್ನು ಆಲಿಸಿದೆ. ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ಆಕೆ ನನಗೆ ಚಿಕ್ಕವಳಲ್ಲವೇ? ಆದರೆ ಆ ಬಳಿಕ ಎಂದೂ ನನ್ನ ತಂಗಿಯನ್ನು ನಾನು ನೋಡೇ ಇಲ್ಲ.
    ಸ್ವಲ್ಪ ಸಮಯದ ಬಳಿಕ ಲುಕಿಕ್ ನನ್ನ ಕೋಣೆಗೆ ಬಂದ. ಬಾಗಿಲಿಗೆ ಎದುರಾಗಿ ಟೇಬಲನ್ನು ತಂದಿಟ್ಟ. ಬೆತ್ತಲೆಯಾಗು ಅಂದ. ನಾನು ಹಿಂಜರಿದೆ. ಆತ ಸಿಡುಕಿದ. ನೀನು ಸುರಕ್ಷಿತವಾಗಿ ತೆರಳಬೇಕಾದರೆ ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಸಿದ. ಬೆತ್ತಲೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಡ, ಅದು ತುಂಬಾ ಹಿಂಸಾತ್ಮಕವಾಗಿರುತ್ತದೆ ಎಂದ. ನೀನು ನನ್ನ ಜೊತೆಗಿರುವುದು ನಿನ್ನ ಅದೃಷ್ಟ. ಇಲ್ಲದಿದ್ದರೆ ನಿನ್ನ ಸೊಂಟಕ್ಕೆ ಕಲ್ಲು ಕಟ್ಟಿ ಡ್ರೀನಾ ನದಿಗೆ ಎಸೆಯಲಾಗುತ್ತಿತ್ತು ಎಂದ. ನಾನು ಹೇಳಿದಂತೆ ಕೇಳದಿದ್ದರೆ ಹೊರಗಿನಿಂದ 10 ಯೋಧರನ್ನು ಕರೆಸ ಬೇಕಾಗುತ್ತದೆ ಎಂದೂ ಬೆದರಿಸಿದ. ನಿಜವಾಗಿ, ಇತರರಿಗೆ ಹೋಲಿಸಿದರೆ ನಾನು ಅದೃಷ್ಟವಂತಳಾಗಿದ್ದೆ. ಆತ ನನ್ನನ್ನು ಕೊಲ್ಲಲಿಲ್ಲ. ಒಂದು ದಿನ ನನ್ನನ್ನು ಬಿಟ್ಟು ಬಿಟ್ಟ. ಮನೆಗೆ ಬಂದಾಗ ತಾಯಿ ಮತ್ತೆ ಮತ್ತೆ ಎಮಿನಾಳ ಬಗ್ಗೆ ಪ್ರಶ್ನಿಸಿದರು. ನನ್ನನ್ನು ಸಾಂತ್ವನಿಸಿದರು. ಆದರೂ ನಾನು ನನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಲೇ ಇಲ್ಲ. ನನ್ನಂತೆಯೇ ತಂಗಿಯೂ ಶೀಘ್ರ ಬರಬಹುದು ಎಂದು ನಂಬಿಸಿದೆ. ತಂಗಿಯನ್ನು ಹುಡುಕುತ್ತಾ ತಾಯಿ ಪದೇ ಪದೇ ಪೊಲೀಸು ಠಾಣೆಗೆ ಹೋದರು. ಒಂದು ದಿನ ಪೊಲೀಸ್ ಪೇದೆಯೊಬ್ಬ ತಾಯಿಯತ್ತ ಬಂದೂಕು ಎತ್ತಿದ. ಆಗ ಆತನ ಜೊತೆ ಲುಕಿಕ್‍ನೂ ಇದ್ದ. ಲುಕಿಕ್  ಹೇಳಿದನಂತೆ, ‘ಕನಿಷ್ಠ ಓರ್ವ ಮಗಳಾದರೂ ಹಿಂತಿರುಗಿದ್ದಾಳಲ್ಲ, ಇನ್ನೇನು ಬೇಕು ನಿಂಗೆ?’
ಜುಲೈಯಲ್ಲಿ ನಾವು ನಮ್ಮ ಹುಟ್ಟಿದೂರನ್ನು ತೊರೆದೆವು. ತಂಗಿಯನ್ನು ಸ್ಮರಿಸುತ್ತಾ, ಆಕೆ ಎಲ್ಲಾದರೂ ಸುರಕ್ಷಿತಳಾಗಿ ಇರುವಳೆಂಬ ನಿರೀಕ್ಷೆ ಇರಿಸುತ್ತಾ ಅಕ್ಕ ಮಲೀಹಾ ಈ ಮೊದಲೇ ಸೇರಿಕೊಂಡಿದ್ದ ಬೇರೊಂದು ಪಟ್ಟಣವನ್ನು ಸೇರಿಕೊಂಡೆವು. ನಾನು ರಾತ್ರಿ ಎದ್ದು ಚೀರಾಡುತ್ತೇನೆ. ಭಯ-ಭೀತಿಯಿಂದ ಜೋರಾಗಿ ಉಸಿರಾಡುತ್ತೇನೆ. ರಾತ್ರಿ ಎದ್ದು ಕೂರುತ್ತೇನೆ. ಆಗೆಲ್ಲಾ ಅಕ್ಕ ಸಮಾಧಾನಿಸುತ್ತಾಳೆ..”
    ‘ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಪ್ರಕಟಿಸಿದ ಸಂದರ್ಶನದಲ್ಲಿ ಜಾಸ್ನಾ ಎಂಬ ಯುವತಿ ಹೇಳಿದ ಮಾತುಗಳಿವು. ಈ ಸಂದರ್ಶನದ ಆರಂಭದಲ್ಲಿ ಸುಮಾರು 45 ನಿಮಿಷಗಳ ವರೆಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಈ ಹುಡುಗಿ ಹೇಳಿಕೊಂಡೇ ಇರಲಿಲ್ಲ. 1991ರಿಂದ 95ರ ನಡುವೆ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧ ಮತ್ತು ಹತ್ಯಾಕಾಂಡಗಳು ಅತ್ಯಂತ ಭೀಕರ ಕ್ರೌರ್ಯಗಳಲ್ಲಿ ಒಂದೆಂದು ಜಾಗತಿಕವಾಗಿಯೇ ಗುರುತಿಸಿಕೊಂಡಿದೆ. ಆ ಬಳಿಕ ಯುಗೋಸ್ಲಾವಿಯಾವು ಬೋಸ್ನಿಯಾ-ಹರ್ಝಗೋವಿನಾ, ಕ್ರೋವೇಶಿಯಾ, ಸೆರ್ಬಿಯ ಮುಂತಾದ ರಾಷ್ಟ್ರಗಳಾಗಿ ವಿಭಜನೆಗೊಂಡಿತು. ಬೋಸ್ನಿಯನ್ನರ ಮೇಲೆ ಸೆರ್ಬಿಯದ ಮಂದಿ ನಡೆಸಿದ ಕ್ರೌರ್ಯಗಳು ಎಷ್ಟು ಭೀಕರವಾಗಿತ್ತು ಅಂದರೆ, 30 ಸಾವಿರದಷ್ಟು ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು ಎಂದು ಆ ಬಳಿಕದ ವರದಿಗಳೇ ಹೇಳಿದುವು. ಅವರಲ್ಲಿ ಜಾಸ್ನಾ ಕೂಡ ಓರ್ವಳು. ಅತ್ಯಾಚಾರಕ್ಕೀಡಾದವರು ಸಾಮಾಜಿಕ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳಕೊಂಡರು. ಪಾಶ್ಚಾತ್ಯ ಪತ್ರಕರ್ತರು ಮತ್ತು ಟಿ.ವಿ. ಚಾನೆಲ್‍ಗಳು ಬೋಸ್ನಿಯಾದ ಈ ಸಂತ್ರಸ್ತರನ್ನು ಭೇಟಿಯಾದಾಗಲೆಲ್ಲ ಅವರು ಮಾತಾಡಲು ನಿರಾಕರಿಸಿದರು. ಅವರ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದರು. ಪಶ್ಚಿಮವು ತಮಗೆ ನ್ಯಾಯ ಕೊಡುವುದಕ್ಕಲ್ಲ, ಬರೇ ಅನುಭವಿಸಲು ಮತ್ತು ಮನರಂಜನೆಯ ವಿಷಯ ಒದಗಿಸಲಷ್ಟೇ ಆಸಕ್ತವಾಗಿವೆ ಎಂದು ಆರೋಪಿಸಿದರು. ಸೆರ್ಬಿಯವು ಆ ಬಳಿಕ ನಡೆಸಿದ ತನಿಖೆಗಳಲ್ಲಿ ಅತ್ಯಾಚಾರಿಗಳಲ್ಲಿದ್ದ ಭೀಭತ್ಸ ಆಲೋಚನೆಗಳೂ ಬೆಳಕಿಗೆ ಬಂದುವು. ಒಂದು ಸಮುದಾಯವನ್ನು ಅಪಮಾನಗೊಳಿಸುವುದಕ್ಕೆ ಅತ್ಯಾಚಾರವನ್ನು ಒಂದು ಉಪಕರಣವಾಗಿ ಅವರು ಪರಿಗಣಿಸಿದ್ದರು. ದ್ವೇಷದ ಮನಸ್ಥಿತಿಯನ್ನು ಅತ್ಯಾಚಾರಗಳು ತೃಪ್ತಗೊಳಿಸುತ್ತವೆ ಎಂದು ಅತ್ಯಾಚಾರಿಗಳು ಅಭಿಪ್ರಾಯಪಟ್ಟಿದ್ದರು.
   ಅಷ್ಟಕ್ಕೂ, ಇದನ್ನು ಕೇವಲ ಬೋಸ್ನಿಯಾಕ್ಕೆ ಮಾತ್ರ ಸೀಮಿತಗೊಳಿಸಬೇಕಿಲ್ಲ.
ರಾಹುಲ್
ಮೋಹಿತ್
ಸುಧೀರ್
ಅರವಿಂದ್
   ವಾರಗಳ ಹಿಂದೆ ಔಟ್‍ಲುಕ್ ವಾರಪತ್ರಿಕೆಯು ಪ್ರಕಟಿಸಿದ ಮುಝಫ್ಫರ್ ನಗರ್ ಗಲಭೆಯಲ್ಲಿ ಅತ್ಯಾಚಾರಕ್ಕೀಡಾದವರ ಕುರಿತಾದ ತನಿಖಾ ಬರಹದಲ್ಲಿ ಕಾಣಿಸಿಕೊಂಡ ಅತ್ಯಾಚಾರಿಗಳ ಹೆಸರುಗಳಿವು. ಈ ಪಟ್ಟಿಯಲ್ಲಿ ಇನ್ನೂ ಕೆಲವು ಹೆಸರುಗಳಿವೆ. ಅತ್ಯಾಚಾರದ ದೂರನ್ನು ದಾಖಲಿಸಿರುವ 7 ಮಂದಿ ಸಂತ್ರಸ್ತೆಯರ ಒಡಲ ಮಾತನ್ನು ಪತ್ರಕರ್ತೆ ನೇಹಾ ದೀಕ್ಷಿತ್ ಇದರಲ್ಲಿ ದಾಖಲಿಸಿದ್ದಾರೆ. ಈ ಸಂತ್ರಸ್ತೆಯರಿಗೆ ಈ ಮೇಲಿನ ಅತ್ಯಾಚಾರಿಗಳೇನೂ ಅಪರಿಚಿತರಾಗಿರಲಿಲ್ಲ. ಮಿಲಾನ್ ಲುಕಿಕ್‍ನಂತೆ ಒಂದು ಹಂತದ ವರೆಗೆ ಪರಿಚಿತರೇ. ಅವರ ಹೊಲಗಳಲ್ಲಿ ಈ ಸಂತ್ರಸ್ತೆಯರು ದುಡಿದಿದ್ದಾರೆ. ಕೂಲಿ ಕೊಡುವ ಮೊದಲು ಜಿಮಾರ್ ಮತ್ತು ಚಾಮರ್ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಸಾಮಾನ್ಯವಂತೆ. ಈ ಮಹಿಳೆಯರು ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಕಡಿಮೆ ಕೂಲಿ ಕೊಡಲಾಗುತ್ತಿತ್ತು. ಆ ದ್ವೇಷವನ್ನು ಗಲಭೆಯ ವೇಳೆ ತೀರಿಸಲಾಗಿದೆ ಎಂದು ಸಂತ್ರಸ್ತೆಯರು ಹೇಳಿರುವುದನ್ನು ನೇಹಾ ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಗುಜರಾತ್‍ನ ಸೂರತ್‍ನಲ್ಲಿ ನಡೆದ ಗಲಭೆಯ ವೇಳೆ ಸಾಮೂಹಿಕ ಅತ್ಯಾಚಾರ ಮತ್ತು ವೀಡಿಯೋ ಚಿತ್ರೀಕರಣಗಳು ನಡೆದಿದ್ದವು. ಹಾಗಂತ ಅದೇನೂ ಕದ್ದು ಮುಚ್ಚಿ ನಡೆಸಲಾದ ಚಿತ್ರೀಕರಣ ಆಗಿರಲಿಲ್ಲ. ವಿದ್ಯುತ್ ತಂತಿಯನ್ನು ಕಡಿತಗೊಳಿಸಿ ಸುತ್ತ-ಮುತ್ತಲಿನ ಪ್ರದೇಶಗಳನ್ನು ಕತ್ತಲುಮಯಗೊಳಿಸಿದ ಬಳಿಕ ಹೊನಲು ಬೆಳಕಿನಲ್ಲಿ ಸಂಪೂರ್ಣ ಯೋಜಿತವಾಗಿಯೇ ಚಿತ್ರೀಕರಣ ನಡೆಸ ಲಾಗಿತ್ತು ಎಂದು ಆ ನಂತರದ ವರದಿಗಳು ಸ್ಪಷ್ಟಪಡಿಸಿದ್ದುವು. (ಇಂಡಿಯಾ ಯುನೈಟೆಡ್ ಅಗೈನ್‍ಸ್ಟ್ ಫ್ಯಾಸಿಝಂ 2013 ನವೆಂಬರ್ 26). 2002ರ ಗುಜರಾತ್ ಹತ್ಯಾಕಾಂಡದಲ್ಲೂ ಅತ್ಯಾಚಾರವು ಪ್ರಮುಖ ಆಯುಧವಾಗಿ ಬಳಕೆಯಾಗಿತ್ತು. ಸಂತ್ರಸ್ತೆಯರಲ್ಲಿ ಬಿಲ್ಕಿಸ್ ಬಾನೋ ಓರ್ವರಾಗಿದ್ದರು. 2007ರಲ್ಲಿ ಒಡಿಸ್ಸಾದ ಕಂಧಮಲ್‍ನಲ್ಲಿ ನಡೆದ ಕ್ರೈಸ್ತ ವಿರೋಧಿ ಹತ್ಯಾಕಾಂಡದಲ್ಲೂ ಅತ್ಯಾಚಾರ ನಡೆದಿತ್ತು. ಸಿಸ್ಟರ್ ವಿೂನಾರ ಮೇಲಿನ ಅತ್ಯಾಚಾರವು ರಾಷ್ಟ್ರಮಟ್ಟದಲ್ಲೇ  ಸುದ್ದಿಗೀಡಾಗಿತ್ತು. ಕಂಧಮಲ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಗುಜರಾತ್‍ನ ಅತ್ಯಾಚಾರಗಳಿಗೆ ಹೋಲುತ್ತವೆ ಎಂದು ಆ ಸಂದರ್ಭದಲ್ಲಿ ಹರ್ಷಮಂದರ್ ಬರೆದಿದ್ದರು.
   ನಿಜವಾಗಿ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಬೋಸ್ನಿಯಾದಿಂದ ಹಿಡಿದು ಮುಝಫ್ಫರ್ ನಗರದವರೆಗೆ ಒಂದು ಸಮಾನತೆಯಿದೆ. ಅದುವೇ ದ್ವೇಷ. ಪುರುಷ ತನ್ನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಹೆಣ್ಣಿನ ದೇಹವನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಅನ್ನುವುದನ್ನು ಇವೆಲ್ಲ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿವೆ. ಹೆಣ್ಣನ್ನು ಅತ್ಯಾಚಾರಕ್ಕೀಡು ಮಾಡುವ ಮೂಲಕ ತಮ್ಮ ದ್ವೇಷವನ್ನು ದಮನಗೊಳಿಸುವ ಮಂದಿ ಪುರುಷ ಸಮಾಜದಲ್ಲಿದ್ದಾರೆ. ಬೆಂಗಳೂರಿನ ವಿಬ್‍ಗಯಾರ್ ಪ್ರಕರಣದಲ್ಲೂ ಇದು ಸ್ಪಷ್ಟವಾಗಿದೆ. 6ರ ಬಾಲೆಯ ಮೇಲಿನ ದ್ವೇಷವೇ ಸಾಮೂಹಿಕ ಅತ್ಯಾಚಾರಕ್ಕೆ ಕಾರಣ ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಆದ್ದರಿಂದಲೇ, ಈ ಮನಸ್ಥಿತಿಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕಾದ ಅಗತ್ಯವಿದೆ. ಅಂದಹಾಗೆ, ಇಂಥ ಮನಸ್ಥಿತಿ ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರಬೇಕೆಂದೇನೂ ಇಲ್ಲ. ವಿಬ್‍ಗಯಾರ್‍ನ ಆರೋಪಿಗಳು ಹಿಂದೂಗಳೂ ಅಲ್ಲ. ಅತ್ಯಾಚಾರಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ, ಆ ಮನಸ್ಥಿತಿಯ ಕರಾಳತೆಯ ಸುತ್ತ ಮಾಧ್ಯಮಗಳಲ್ಲಿ ವಿಸ್ತೃತ ಚರ್ಚೆಗಳಾಗಬೇಕಿದೆ. ಒಂದು ಕಡೆ ಅತ್ಯಾಚಾರದ ವಿರುದ್ಧ ಕಾನೂನಿನ ಮೇಲೆ ಕಾನೂನುಗಳು ಜಾರಿಯಾಗುತ್ತಿವೆ. ಗಲ್ಲು ಶಿಕ್ಷೆಯ ಬೇಡಿಕೆಯನ್ನೂ ಮುಂದಿಡಲಾಗುತ್ತಿದೆ. ಆದರೂ ಅತ್ಯಾಚಾರಗಳು ಕಡಿಮೆಯಾಗುತ್ತಿಲ್ಲ. ಯಾಕೆ ಹೀಗೆ? ಇದರ ಹಿಂದೆ ಬರೇ ದೈಹಿಕ ತೃಪ್ತಿಯ ಉದ್ದೇಶವಷ್ಟೇ ಇದೆಯೇ ಅಥವಾ ಕ್ರೌರ್ಯದ ಮನಸ್ಥಿತಿಯೊಂದು ಕೆಲಸ ಮಾಡುತ್ತಿದೆಯೇ? ಹೆಣ್ಣನ್ನು ಗುಲಾಮಳು ಎಂದು ಬಗೆವ, ತನ್ನ ಇಚ್ಛೆಯನ್ನು ಪೂರೈಸಬೇಕಾದವಳು ಎಂದು ನಂಬಿರುವ ಪುರುಷ ಯಜಮಾನಿಕೆಯು ಈ ಭಯರಹಿತ ವಾತಾವರಣಕ್ಕೆ ಕಾರಣವೇ? ಅಂಥ ಮನಸ್ಥಿತಿಯು ಹುಟ್ಟು ಪಡೆಯುವುದು ಎಲ್ಲಿ? ಮನೆಯಲ್ಲೇ? ಶಾಲೆ-ಕಾಲೇಜು, ಉದ್ಯೋಗ ಸ್ಥಳಗಳಲ್ಲೇ? ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಮನಸ್ಥಿತಿಯಿರುವ ಮನೆಯಲ್ಲಿ ಬೆಳೆದವರು ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಹೆಣ್ಣಿನ ಧ್ವನಿಯನ್ನು ಅಡಗಿಸುವುದಕ್ಕೆ, ಆಕೆಯ ಭಿನ್ನ ಅಭಿಪ್ರಾಯವನ್ನು ಖಂಡಿಸುವುದಕ್ಕೆ, ಆಕೆಯ ಪ್ರತಿಭೆಯನ್ನು ಚಿವುಟುವುದಕ್ಕೆ ಅತ್ಯಾಚಾರಗಳು ಟೂಲ್ ಆಗುತ್ತಿವೆಯೇ? ಈ ಮನಸ್ಥಿತಿಯ ಮಂದಿ ಮನೆಯಲ್ಲಿ ತಮ್ಮ ತಾಯಿ, ಪತ್ನಿ, ತಂಗಿ, ಅಕ್ಕ, ಅತ್ತಿಗೆಯರೊಂದಿಗೆ ಹೇಗೆ ವರ್ತಿಸುತ್ತಾರೆ? ಅವರೆಲ್ಲರೊಂದಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ರೀತಿ ಹೇಗಿವೆ? ಭಾಷೆ ಹೇಗಿದೆ?
    ಪ್ರಭಾ ಎನ್. ಬೆಳವಂಗಳ ಅವರ ಫೇಸ್‍ಬುಕ್ ಬರಹಕ್ಕೆ, ‘ಪ್ರಭಾರ ಜುಟ್ಟು ಹಿಡಿದು ಅತ್ಯಾಚಾರ ನಡೆಸಿದರೆ ಅವರು ಸರಿಯಾಗುತ್ತಾರೆ..' ಎಂಬ ಉತ್ತರವನ್ನು ನೀಡಿದ ವಿ.ಆರ್. ಭಟ್ ಎಂಬವರ ಮನಸ್ಥಿತಿಯ ಸುತ್ತ ಆಲೋಚಿಸುತ್ತಾ ಹೋದಂತೆ ಇವೆಲ್ಲ ನೆನಪಾದುವು.