Thursday, August 29, 2024

ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದ ಆಕೆ ವಿಚ್ಛೇದನ ಪಡಕೊಂಡಳು





ತಾನೇಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದೆ ಎಂಬುದನ್ನು ಇತ್ತೀಚೆಗೆ ಓರ್ವ ಮಹಿಳೆ ಹೀಗೆ ಹಂಚಿಕೊಂಡಿದ್ದರು,

‘ನಮ್ಮದು ಅವಿಭಕ್ತ ಕುಟುಂಬ. ನಾನು ಉದ್ಯೋಗಸ್ಥೆ ಮಹಿಳೆ. ಪ್ರತಿದಿನ ನಾನು 7 ಗಂಟೆ ಕೆಲಸ ಮಾಡುತ್ತೇನೆ ಮತ್ತು  ಪ್ರಯಾಣಕ್ಕಾಗಿ 4 ಗಂಟೆ ಉಪಯೋಗಿಸುತ್ತೇನೆ. ಅಂದರೆ, ಪ್ರತಿದಿನ 11 ಗಂಟೆಗಳು ಉದ್ಯೋಗ ನಿಮಿತ್ತ ಖರ್ಚಾಗುತ್ತವೆ.  ನನ್ನ ಗಂಡನಿಗೆ ರಾತ್ರಿ ಪಾಳಿಯ ಕೆಲಸ. ನಾನು ಕೆಲಸ ಮುಗಿಸಿ ಮನೆಗೆ ತಲುಪಿದ ಅರ್ಧಗಂಟೆಯೊಳಗೆ ನನ್ನ ಗಂಡ ಮನೆಯಿಂದ ಕೆಲಸಕ್ಕೆ ಹೊರಡುತ್ತಾರೆ. ನಾನು ಆದಷ್ಟು ಬೇಗ ಮನೆಗೆ ಬಂದು ಅಡುಗೆ ಮಾಡಿ ಬಳಸಿ, ಟಿಫಿನ್‌ಗೆ ಹಾಕಿ  ಕೊಡಬೇಕೆಂದು ನನ್ನ ಗಂಡ ಬಯಸುತ್ತಾನೆ. ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ಬ್ರೇಕ್ ಫಾಸ್ಟ್ ಮತ್ತು ಲಂಚ್ ರೆಡಿ ಮಾಡಿ  ಗಂಡನಿಗೂ ಆತನ ಹೆತ್ತವರಿಗೂ ಮತ್ತು ಅಜ್ಜ-ಅಜ್ಜಿಗೂ ನೀಡುತ್ತೇನೆ. ಇದನ್ನು ನಾನು ಪ್ರತಿದಿನವೂ ಮಾಡುತ್ತೇನೆ ಮತ್ತು ಈ  ಬಗ್ಗೆ ನನ್ನಲ್ಲಿ ಆಕ್ಷೇಪಗಳೂ ಇಲ್ಲ. ಸಮಸ್ಯೆ ಇರೋದು ಸಮಯದಲ್ಲಿ ಮತ್ತು ನನಗಾಗುವ ಆಯಾಸ ದಲ್ಲಿ. ಅಂದಹಾಗೆ,

ರಜಾದಿನದಂದೂ  ನನಗೆ ಬಿಡುವಿಲ್ಲ. ಈ ದಿನಗಳಂದು ನನ್ನ ಅತ್ತೆ ಹಾಸಿಗೆಯಿಂದ ಏಳುವುದೇ ಇಲ್ಲ. ಕೇಳಿದರೆ, ಆರೋಗ್ಯ  ಸರಿ ಇಲ್ಲ ಅನ್ನುತ್ತಾರೆ. ಆದ್ದರಿಂದ ಅವರಿರುವಲ್ಲಿಗೆ ನಾನು ಎಲ್ಲವನ್ನೂ ತಲುಪಿಸಬೇಕು. ಆದರೆ, ಅದೇ ಬೆಡ್‌ನಲ್ಲಿ ಕುಳಿತು  ಅತ್ತೆ ನನ್ನದುರೇ ಗಂಟೆಗಟ್ಟಲೆ ತನ್ನವರೊಂದಿಗೆ ಫೋನ್‌ನಲ್ಲಿ ಮಾತಾಡುತ್ತಾರೆ. ನನ್ನ ಗಂಡನಾದರೋ ಪರಮ ಉದಾಸೀನ  ವ್ಯಕ್ತಿ. ರಜಾ ದಿನದಂದು ಅಂಗಡಿಗೆ ತೆರಳಿ ದಿನಸಿ ವಸ್ತುಗಳನ್ನು ತರುವುದಿಲ್ಲ. ಅದನ್ನೂ ನಾನೇ ತರುತ್ತೇನೆ. ಜೊತೆಗೆ ಸ್ವಚ್ಛತಾ  ಕೆಲಸವನ್ನೂ ನಾನೇ ಮಾಡಬೇಕು. ನಾನೇನೂ ಮೆಶಿನ್ ಅಲ್ಲವಲ್ಲ. ಆದರೆ ಮನೆಯವರಿಗೆ ಇದು ಅರ್ಥವೇ ಆಗುತ್ತಿಲ್ಲ.  ಅವರು ಮನೆ ಕ್ಲೀನ್ ಇಲ್ಲ ಎಂದು ನನ್ನನ್ನೇ ದೂರುತ್ತಾರೆ. ಕೆಲಸಕ್ಕೆ ಹೋಗುವ ಮೊದಲು ಗುಡಿಸಿ, ಒರೆಸಿ ಹೋಗಲಿಕ್ಕೇನು  ಧಾಡಿ ಎಂದು ಮೈಮೇಲೆ ಬೀಳುತ್ತಾರೆ.

ಒಂದು ದಿನ ಅತ್ತೆ-ಮಾವಂದಿರ ಎದುರೇ ನನ್ನ ಗಂಡ ನನ್ನನ್ನು ಥಳಿಸಿದರು. ನನ್ನ ಮೈಮೇಲೆ ಗಾಯಗಳಾದುವು. ಗಂಡ  ನನ್ನನ್ನು ಥಳಿಸುತ್ತಿದ್ದರೂ ಮನೆಯವರಾರೂ ಅದನ್ನು ತಡೆಯಲಿಲ್ಲ ಅಥವಾ ಥಳಿಸದಂತೆ ಮಗನನ್ನು ಆಕ್ಷೇಪಿಸಲೂ ಇಲ್ಲ.  ನೀನು ಕೆಲಸಕ್ಕೆ ರಾಜೀನಾಮೆ ಕೊಡು ಎಂಬುದು ಗಂಡನ ಆಗ್ರಹವಾಗಿತ್ತು. ಮರುದಿನ ನಾನು ನನ್ನ ಕಚೇರಿ ಮುಖ್ಯಸ್ಥರಿಗೆ  ಕೆಲಸ ಬಿಡುವುದಾಗಿ ಹೇಳಿದೆ. ಆದರೆ ಅವರು ತಕ್ಷಣ ಕೆಲಸದಿಂದ ಬಿಡುಗಡೆಗೊಳಿಸಲು ಒಪ್ಪಿಕೊಳ್ಳಲಿಲ್ಲ. ಕನಿಷ್ಠ ಎರಡು  ತಿಂಗಳಾದರೂ ಕೆಲಸ ಮಾಡಬೇಕು ಎಂಬ ಷರತ್ತು ವಿಧಿಸಿದರು. ನನಗೆ ಭತ್ಯೆ, ಪಿಂಚಣಿ ಸಿಗಬೇಕಾದರೆ ಈ ಷರತ್ತಿಗೆ ನಾನು  ತಲೆಬಾಗಲೇಬೇಕಿತ್ತು. ನಾನು ಈ ವಿಷಯವನ್ನು ಗಂಡನಲ್ಲಿ ಹೇಳಿದೆ. ಆತ ರೌದ್ರಾವತಾರ ತಾಳಿದ. ಬೆಲ್ಟ್ನಿಂದ ಹೊಡೆದ.  ನಿಜವಾಗಿ, ಆತನಿಗೆ ನಾನು ಕೆಲಸ ಬಿಡುವುದು ಬೇಕಿರಲಿಲ್ಲ. ಯಾಕೆಂದರೆ, ಆತ ನಗರದ ಅನೇಕ ಜನರಿಂದ ಸಾಲ  ಪಡಕೊಂಡಿದ್ದ. ಫೈನಾನ್ಸ್ ಗಳಿಂದಲೂ ಸಾಲ ಪಡಕೊಂಡಿದ್ದ. ಇದು ನನಗೆ ಗೊತ್ತಿರಲಿಲ್ಲ. ನನ್ನ ಸಂಬಳವನ್ನು  ತೆಗೆದುಕೊಳ್ಳುತ್ತಿದ್ದ ಆತ, ಅದನ್ನು ಯಾವುದಕ್ಕೆ ಖರ್ಚು ಮಾಡುತ್ತಿದ್ದೇನೆ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲ. ನಿಜ ಏ ನೆಂದರೆ,

ದುಡಿಯುವ ಮಹಿಳೆಯಾಗಿಯೂ ನನಗೆ ಬೇಕಾದಷ್ಟು ಬಟೆ ಖರೀದಿಸುವುದಕ್ಕೂ ಸ್ವಾತಂತ್ರ್ಯ  ಇರಲಿಲ್ಲ. ನನ್ನ ಸೀರೆ ಹರಿದಿರುವುದು ಗೊತ್ತಾಗದಿರಲೆಂದು ಕನಿಷ್ಠ 3 ಪಿನ್‌ಗಳನ್ನಾದರೂ ಚುಚ್ಚುತ್ತಿದ್ದೆ. ಆದರೂ ನನ್ನ ಬಗ್ಗೆ ಗಂಡ ಮತ್ತು ಮ ನೆಯವರು ಯಾವ ಕಾಳಜಿಯನ್ನೂ ತೋರುತ್ತಿರಲಿಲ್ಲ. ಅಲ್ಲದೇ, ನನ್ನ ಹೆತ್ತವರ ಜೊತೆ ಮಾತಾಡಲೂ ಗಂಡ ಬಿಡುತ್ತಿರಲಿಲ್ಲ.  ಆ ಕಾರಣದಿಂದಾಗಿ ನಾನು ಕಚೇರಿ ತಲುಪಿದ ಬಳಿಕ ಕರೆ ಮಾಡುತ್ತಿದ್ದೆ. ಮನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯ  ತಲೆದೋರಿದರೆ ಅಥವಾ ನ್ಯಾಯದ ಬಗ್ಗೆ ನಾನು ಮಾತನಾಡಿದರೆ, ತಕ್ಷಣ ನನ್ನ ಗಂಡ ಮತ್ತು ಅತ್ತೆ ನನ್ನ ಹೆತ್ತವರಿಗೆ ಕರೆ  ಮಾಡಿ ಬೆದರಿಸುತ್ತಿದ್ದರು. ನನ್ನ ಹೆತ್ತವರನ್ನು ಅತೀ ಕನಿಷ್ಠ ಪದಗಳಿಂದ ಗಂಡ ಬೈಯುತ್ತಿದ್ದ..’

ಅಂದಹಾಗೆ,

ಇದು ಒಂದು ಮುಖ ಮಾತ್ರ. ಒಂದುವೇಳೆ ಈಕೆಯ ಗಂಡನನ್ನು ಪ್ರಶ್ನಿಸಿದರೆ ಆತನಲ್ಲಿ ಸಮರ್ಥನೆಯ ನೂರು  ವಾದಗಳಿರಬಹುದು. ಅಂತೂ ದೇಶದಲ್ಲಿ ವಿಚ್ಚೇದನ ಅಥವಾ ತಲಾಕ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುತ್ತಿವೆ  ಎಂಬುದಂತೂ  ನಿಜ. ಹಾಗಂತ, ಇದು ಕೇವಲ ಭಾರತಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಅಲ್ಲ. ಜಾಗತಿಕವಾಗಿಯೇ  ಇಂಥದ್ದೊಂದು  ಸ್ಥಿತಿಯಿದೆ. ಜಗತ್ತಿನಲ್ಲಿಯೇ ಅತ್ಯಧಿಕ ವಿಚ್ಛೇದನ ಗಳು ನಡೆಯುತ್ತಿರುವುದು ಮಾಲ್ದೀವ್ಸ್ ನಲ್ಲಿ. ಪ್ರತಿ ಸಾವಿರ  ಮದುವೆಯಲ್ಲಿ 5ರಿಂದ 6 ಮದುವೆಗಳು ಅಲ್ಲಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಕಝಕಿಸ್ತಾನದಲ್ಲಿ ನಡೆಯುವ ಸಾವಿರ  ಮದುವೆ ಗಳಲ್ಲಿ 4ರಿಂದ 5ರಷ್ಟು ಮದುವೆಗಳು ವಿಚ್ಛೇದನಕ್ಕೆ ಒಳಗಾಗುತ್ತಿವೆ. ರಶ್ಯಾದಲ್ಲಿ 3ರಿಂದ 4 ಮದುವೆಗಳು ಹೀಗೆ  ಕೊನೆಗೊಳ್ಳುತ್ತಿದ್ದರೆ, ಅಮೇರಿಕದಲ್ಲಿ ಪ್ರತಿ ಸಾವಿರದಲ್ಲಿ 5ರಷ್ಟು ಮದುವೆಗಳು ತಲಾಕ್‌ಗೆ ಒಳಗಾಗುತ್ತಿವೆ. ಅಮೇರಿಕದ ಅರ್ಕಿ ನ್ಸಾಸ್ ರಾಜ್ಯವಂತೂ ವಿಶ್ವದಲ್ಲಿಯೇ ಅತ್ಯಧಿಕ ತಲಾಕ್‌ಗಳಾಗುವ ರಾಜ್ಯವಾಗಿ ಗುರುತಿಸಿ ಕೊಂಡಿದೆ. ಇಲ್ಲಿ ನಡೆಯುವ ಪ್ರತಿ  1000 ಮದುವೆಗಳಲ್ಲಿ 24ರಷ್ಟು ಮದುವೆಗಳು ದೀರ್ಘ ಬಾಳಿಕೆ ಬರುವುದೇ ಇಲ್ಲ. ಈ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ  ಭಾರತ ಉತ್ತಮ ಸ್ಥಿತಿಯಲ್ಲಿದೆ. ನಮ್ಮಲ್ಲಿ ನಡೆಯುವ ಪ್ರತಿ ಸಾವಿರ ಮದುವೆಗಳ ಪೈಕಿ ವಿಚ್ಛೇದನದಲ್ಲಿ ಕೊನೆಗೊಳ್ಳುವುದು  ಒಂದರಿಂದ  ಎರಡರಷ್ಟು ವಿವಾಹಗಳು ಮಾತ್ರ. ಆದರೆ, ನಮಗಿಂತಲೂ ಕಡಿಮೆ ಪ್ರಮಾಣದಲ್ಲಿ ವಿಚ್ಛೇದನಗಳಾಗುತ್ತಿರುವುದು  ಶ್ರೀಲಂಕಾದಲ್ಲಿ. ಜಗತ್ತಿನಲ್ಲಿಯೇ ವಿಚ್ಛೇದನ ಪ್ರಕರಣಗಳು ಶ್ರೀಲಂಕಾದಲ್ಲಿ ಅತೀ ಕಡಿಮೆ ಎಂದು ಲೆಕ್ಕ ಹಾಕಲಾಗಿದೆ. ಇಲ್ಲಿ  ನಡೆಯುವ ಪ್ರತಿ 10 ಸಾವಿರ ಮದುವೆಗಳ ಪೈಕಿ ಒಂದು ಮದುವೆಯಷ್ಟೇ ತಲಾಕ್‌ನಲ್ಲಿ ಕೊನೆ ಗೊಳ್ಳುತ್ತವೆ. ಆ ಬಳಿಕದ  ಸ್ಥಾನ ವಿಯೆಟ್ನಾಂ ಮತ್ತು ಗ್ವಾಟೆ ಮಾಲಾಗಳ ಪಾಲಾಗಿದೆ. ವಿಶೇಷ ಏನೆಂದರೆ, ಫಿಲಿಪ್ಪೀನ್‌ನಲ್ಲಿ ಈ ವರ್ಷದ ಆರಂಭದ  ವರೆಗೆ ವಿಚ್ಚೇದನವೇ ಕಾನೂನುಬಾಹಿರವಾಗಿತ್ತು. ಪರಸ್ಪರ ತಿಳುವಳಿಕೆಯಿಂದ ವಿಚ್ಚೇದನಗಳು ನಡೆಯುತ್ತಿದ್ದುವಾದರೂ ಅವು ಕಾನೂನುಬದ್ಧ  ಆಗಿರಲೂ ಇಲ್ಲ. ಆದರೆ, 2024 ಮೇಯಲ್ಲಿ ವಿಚ್ಛೇದನವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಅಲ್ಲಿನ ಪಾರ್ಲಿಮಂಟ್‌ನಲ್ಲಿ ಮಂಡಿಸಲಾಗಿದೆ. ಅಷ್ಟಕ್ಕೂ,

ಇತ್ತೀಚಿನ ಒಂದೆರಡು ದಶಕಗಳಲ್ಲಿ ವಿಚ್ಛೇದನ ಪ್ರಕರಣ ವೇಗವನ್ನು ಪಡೆಯಲು ಕಾರಣವೇನು ಎಂಬ ಪ್ರಶ್ನೆ ಸಹಜ. ಈ  ಕುರಿತಂತೆ ಹಲವು ಬಗೆಯ ಸರ್ವೇಗಳು ನಡೆದಿವೆ ಮತ್ತು ಸಮಸ್ಯೆಯ ಆಳವನ್ನು ಸ್ಪರ್ಶಿಸಲು ಅನೇಕ ತಜ್ಞರು  ಪ್ರಯತ್ನಿಸಿದ್ದಾರೆ. ಕಳೆದೊಂದು ದಶಕದಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಆಗಿರುವ ಭಾರೀ ಪ್ರಮಾಣದ ಏರಿಕೆಯನ್ನು  ನೋಡಿದರೆ, ಸಮಾಜ ಗಂಭೀರವಾಗಿ ಆಲೋಚಿಸಬೇಕಾದ ಕ್ಷೇತ್ರ ಇದು ಎಂದೇ ಅನಿಸುತ್ತದೆ. ಸಾಮಾನ್ಯವಾಗಿ, ಹತ್ಯೆ,  ಹಲ್ಲೆ, ಅತ್ಯಾಚಾರ, ದ್ವೇಷಭಾಷಣ ಇತ್ಯಾದಿಗಳು ಸುದ್ದಿಯಾಗುವಂತೆ ವಿಚ್ಛೇದನ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗುವುದಿಲ್ಲ. ಹಲವು ಪ್ರಕರಣಗಳು ಮಾತುಕತೆಯಲ್ಲಿ, ಇನ್ನು ಹಲವು ಕೌಟುಂಬಿಕ ನ್ಯಾಯಾಲಯಗಳಲ್ಲಿ ಮತ್ತೂ  ಹಲವು ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ. ಇಂಥ ಅಸಂಖ್ಯ ಪ್ರಕರಣಗಳ  ಪೈಕಿ ಅಲ್ಲೊಂದು  ಇಲ್ಲೊಂದು  ಮಾಧ್ಯಮಗಳಲ್ಲಿ ವರದಿಯಾಗುವುದನ್ನು ಬಿಟ್ಟರೆ ಉಳಿದಂತೆ ಈ ಕ್ಷೇತ್ರವು ಗಾಢ ಮೌನವನ್ನೇ  ಹೊದ್ದುಕೊಂಡಿವೆ. ಈ ಮೌನವೇ ಈ ಕ್ಷೇತ್ರದಲ್ಲಾಗುವ ತಲ್ಲಣಗಳು ಹೊರಜಗತ್ತಿನಲ್ಲಿ ಚರ್ಚೆಯಾಗದಂತೆಯೂ  ನೋಡಿಕೊಳ್ಳುತ್ತವೆ. ನಿಜವಾಗಿ, ವಿಚ್ಛೇದನ ಪ್ರಕರಣದ ಏರುಗತಿಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಆಗಿರುವ  ಬದಲಾವಣೆಗೂ ನೇರ ಸಂಬಂಧ  ಇದೆ. ಮುಖ್ಯವಾಗಿ, ವಿಚ್ಛೇದನಕ್ಕೆ ಕೆಲವು ಮುಖ್ಯ ಕಾರಣಗಳನ್ನು ಹೀಗೆ ಪಟ್ಟಿ  ಮಾಡಬಹುದು.

1. ಮಹಿಳಾ ಸಬಲೀಕರಣ: ಮಹಿಳೆಯರು ಹೆಚ್ಚೆಚ್ಚು ಶಿಕ್ಷಿತರಾಗುತ್ತಿದ್ದಾರೆ ಮತ್ತು ಉದ್ಯೋಗಕ್ಕೂ ಸೇರುತ್ತಿದ್ದಾರೆ. ಸ್ವಾವಲಂಬಿ  ಬದುಕು ಸಹಜವಾಗಿಯೇ ಅವರೊಳಗೆ ಧೈರ್ಯ, ಸ್ವಾಭಿಮಾನ ಮತ್ತು ಭರವಸೆಯನ್ನು ತುಂಬಿದೆ. ಪತಿಯದ್ದೋ  ಅಥವಾ  ಪತಿ ಮನೆಯವರದ್ದೋ  ಹೀನೈಕೆ, ಅವಮಾನ, ದೌರ್ಜನ್ಯ, ಹಿಂಸೆಯನ್ನು ಪ್ರತಿಭಟಿಸಲು ಮತ್ತು ಸಂಬಂಧವನ್ನೇ ಮುರಿದು  ಹೊರಬರಲು ಶಿಕ್ಷಣ ಅವರಲ್ಲಿ ಛಲವನ್ನು ಒದಗಿಸಿದೆ.

2. ನಗರ ಜೀವನ: ಗ್ರಾಮ ಭಾರತ ಬದಲಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿದ್ದಾರೆ. ನಗರದ ಜೀವನ  ವಾದರೋ ಇನ್ನೂ ವಿಚಿತ್ರ. ಇಲ್ಲಿ ಕೆಲಸದ ಅವಧಿ ಹೆಚ್ಚಿರುತ್ತದಷ್ಟೇ ಅಲ್ಲ, ನೈಟ್ ಶಿಫ್ಟ್, ಡೇ ಶಿಫ್ಟ್ ಕೂಡಾ ಇರುತ್ತದೆ.  ಇದರಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೂ ಅಧಿಕವಿರುತ್ತದೆ. ಅಲ್ಲದೇ,  ಕುಟುಂಬದಲ್ಲಿ ಬಿರುಕು ಮೂಡುವುದಕ್ಕೆ ಪೂರಕ ಸುದ್ದಿಗಳನ್ನು ಓದುವುದಕ್ಕೆ ಅವಕಾಶಗಳಿರುವುದೂ ಕೌಟುಂಬಿಕ ಸಂಬಂಧದ  ಭದ್ರತೆಯನ್ನು ತೆಳುವಾಗಿಸುತ್ತದೆ.

3. ಅತಿಯಾದ ನಿರೀಕ್ಷೆ: ದಂಪತಿಗಳು ಅತಿಯಾದ ನಿರೀಕ್ಷೆಯನ್ನು ಹೊಂದುವುದು ಮತ್ತು ಅದು ಕೈಗೂಡುವ ಲಕ್ಷಣ  ಕಾಣಿಸದೇ ಹೋದಾಗ ಮನಸ್ತಾಪ ಉಂಟಾಗುವುದೂ ನಡೆಯುತ್ತಿದೆ. ದಂಪತಿಗಳು ಸ್ವಸಂತೋಷಕ್ಕೆ, ಸ್ವಗುರಿ ಮತ್ತು ಸ್ವಂತ  ಐಡೆಂಟಿಟಿಗಾಗಿ ಸೆಣಸುವುದು ಕೂಡಾ ಕೌಟುಂಬಿಕ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿವೆ.

4. ಕಾನೂನು ತಿಳುವಳಿಕೆ: ಶೈಕ್ಷಣಿಕವಾಗಿ ಹೇಗೆ ಹೆಣ್ಣು ಮಕ್ಕಳು ಮುಂದೆ ಬಂದರೋ ಅವರಿಗೆ ಮದುವೆ ಮತ್ತು ವಿಚ್ಛೇದನಗಳ ಕುರಿತಾದ ಕಾನೂನಿನ ತಿಳುವಳಿಕೆಯೂ ಹೆಚ್ಚಾಯಿತು. ವಿಚ್ಛೇದನ ಪಡಕೊಳ್ಳುವುದಕ್ಕೆ ಏನೇನು ಮಾಡಬೇಕು, ಎಷ್ಟು  ಸಮಯದಲ್ಲಿ ವಿಚ್ಛೇದನ ಸಿಗಬಹುದು, ಅದಕ್ಕಿರುವ ಪ್ರಕ್ರಿಯೆ ಗಳು ಏನೇನು ಎಂಬುದನ್ನೆಲ್ಲ ತಿಳಿದುಕೊಂಡಿರುವ ಪತಿ  ಮತ್ತು ಪತ್ನಿ ವಿಚ್ಛೇದನಕ್ಕೆ ಹೆದರಬೇಕಾಗಿಲ್ಲ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ.
5. ಅಣು ಕುಟುಂಬಗಳ ಹೆಚ್ಚಳ: ಅವಿಭಕ್ತ ಕುಟುಂಬಗಳಲ್ಲಿ ಸಿಗುವ ಕೌಟುಂಬಿಕ ಬೆಂಬಲವು ಅಣು ಕುಟುಂಬಗಳಲ್ಲಿ  ಸಿಗುವುದಿಲ್ಲ. ಪತಿ-ಪತ್ನಿ ನಡುವೆ ಉಂಟಾಗುವ ಮನಸ್ತಾಪವನ್ನು ಹೆತ್ತವರು ಮಧ್ಯಪ್ರವೇಶಿಸಿ ಬಗೆಹರಿಸುವುದು ಅವಿಭಕ್ತ  ಕುಟುಂಬಗಳಲ್ಲಿ ಸಾಧ್ಯ. ನಾಲ್ಕು ಬುದ್ಧಿ ಮಾತು ಹೇಳಿ ಅವರು ಮನಸ್ತಾಪಕ್ಕೆ ಮುಲಾಮು ಹಚ್ಚುತ್ತಾರೆ. ಆದರೆ, ಪತಿ-ಪತ್ನಿ  ಮಾತ್ರ ಇರುವಲ್ಲಿ ಭಿನ್ನಾಭಿಪ್ರಾಯ ದಿನೇ ದಿನೇ ಬೆಳೆಯುತ್ತ ಬೆಟ್ಟವಾಗುತ್ತಾ ಹೋಗುವುದಕ್ಕೆ ಅವಕಾಶ ಹೆಚ್ಚಿದೆ ಮತ್ತು  ಇಬ್ಬರನ್ನೂ ಅಹಂ ನಿಯಂತ್ರಿಸುವುದಕ್ಕೆ ಸಾಧ್ಯವೂ ಇದೆ. ಹಾಗಂತ,

ಈ ಪರಿಸ್ಥಿತಿಯಿಂದ ಹೊರಬರುವುದಕ್ಕೆ ಸಾಧ್ಯವೇ ಇಲ್ಲ ಎಂದಲ್ಲ. ಪತಿ ಮತ್ತು ಪತ್ನಿ ಮನಸ್ಸು ಮಾಡಿದರೆ ಮತ್ತು ಅಹಂ  ಅನ್ನು ತೊರೆದು ಪರಸ್ಪರರನ್ನು ಗೌರವಿಸುವ ಬುದ್ಧಿವಂತಿಕೆಯನ್ನು ತೋರಿದರೆ, ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು  ಉಂಟಾಗ ಬಹುದು. ಮದುವೆಗೆ ಮುಂಚೆ ವಧೂ-ವರರನ್ನು ಕೌನ್ಸಿಲಿಂಗ್‌ಗೆ ಒಳಪಡಿಸುವುದು ಇದರಲ್ಲಿ ಬಹಳ ಮುಖ್ಯ.  ಅವರಿಬ್ಬರೂ ಪರಸ್ಪರ ಬಯಕೆ, ನಿರೀಕ್ಷೆ, ಆರ್ಥಿಕ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದರಿಂದ ಮದುವೆ ಬಳಿಕದ ಬದುಕ ನ್ನು ಹೆಚ್ಚು ನಿಖರವಾಗಿ ನಡೆಸಲು ಅನುಕೂಲವಾಗಬಹುದು. ಪರಸ್ಪರ ಮಾತುಕತೆ ನಡೆಸುವುದು, ತಪ್ಪುಗಳನ್ನು ತಿದ್ದಿಕೊಳ್ಳುವುದು, ಕ್ಷಮೆ ಕೇಳಿಕೊಳ್ಳುವುದು, ವಾರದ ರಜೆಯಲ್ಲೋ  ಅಥವಾ ರಜೆ ಪಡೆದುಕೊಂಡೋ ದೂರ ಪ್ರಯಾಣ  ಬೆಳೆಸುವುದು, ಕೆಲವೊಮ್ಮೆ ರಾತ್ರಿಯ ಊಟವನ್ನು ಮನೆಯ ಹೊರಗೆ ಮಾಡುವುದು, ಸಂಬಂಧಿಕರ ಮನೆಗೆ ಜೊತೆಯಾಗಿ  ಹೋಗುವುದು ಇತ್ಯಾದಿಗಳನ್ನು ಮಾಡುವುದೂ ಉತ್ತಮ. ಭಿನ್ನಾಭಿಪ್ರಾಯವನ್ನು ಬೆಟ್ಟವಾಗಿಸದೇ ಕ್ಷಮಿಸುವ ಮತ್ತು  ಮರೆಯುವ ಕೌಶಲ್ಯವನ್ನು ಇಬ್ಬರೂ ಬೆಳೆಸಿಕೊಳ್ಳಬೇಕು. ಪರಸ್ಪರರ ಪ್ರತಿಭೆಗಳನ್ನು ಒಪ್ಪಿಕೊಳ್ಳುವ, ಗೌರವಿಸುವ ಮತ್ತು  ಮೆಚ್ಚಿಕೊಳ್ಳುವ ಗುಣವನ್ನೂ ಅಳವಡಿಸಿಕೊಳ್ಳಬೇಕು. ಪತಿ ಮತ್ತು ಪತ್ನಿ ಎಂಥದ್ದೇ  ಉದ್ಯೋಗದಲ್ಲಿದ್ದರೂ ಪರಸ್ಪರರಿಗೆ  ಸಮಯ ಕೊಡುವಷ್ಟು ಬಿಡುವು ಮಾಡಿಕೊಳ್ಳಲೇಬೇಕು. ಮನೆಯೊಳಗಿನ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳಬೇಕು.  ಹಾಗಂತ,

ಇವಿಷ್ಟನ್ನು ಮಾಡಿದರೆ ಮುಂದೆ ವಿಚ್ಛೇದನಗಳೇ ನಡೆಯಲ್ಲ ಎಂದು ಹೇಳುತ್ತಿಲ್ಲ. ಇವೆಲ್ಲ ಟಿಪ್ಸ್ ಗಳಷ್ಟೇ. ವಿಚ್ಚೇದನ  ಪ್ರಮಾಣವನ್ನು ಕಡಿಮೆ ಗೊಳಿಸುವುದಕ್ಕಷ್ಟೇ ಈ ಟಿಪ್ಸ್ ಗಳಿಗೆ ಸಾಧ್ಯವಾಗಬಹುದು. ಅದರಾಚೆಗೆ, ಮದುವೆ ಎಲ್ಲಿಯವರೆಗೆ  ಭೂಮಿಯಲ್ಲಿ ಅಸ್ತಿತ್ವದಲ್ಲಿರುತ್ತದೋ ಅಲ್ಲಿಯವರೆಗೆ ವಿಚ್ಛೇ ದನವೂ ಇದ್ದೇ  ಇರುತ್ತದೆ.

ವಕ್ಫ್ ತಿದ್ದುಪಡಿ ಮಸೂದೆ: ವಿರೋಧಿಸುವುದೇ ಪರಿಹಾರವೇ?





ವಕ್ಫ್ ಗೆ  ಸಂಬಂಧಿಸಿ  ಸಾರ್ವಜನಿಕವಾಗಿ ಎರಡು ಅತಿರೇಕದ ಅಭಿಪ್ರಾಯಗಳಿವೆ

1. ವಕ್ಫ್ ನ  ಹೆಸರಿನಲ್ಲಿ ಮುಸ್ಲಿಮರು ಸಿಕ್ಕಸಿಕ್ಕ ಭೂಮಿಯ ಮೇಲೆ ಹಕ್ಕು ಸ್ಥಾಪಿಸುತ್ತಿದ್ದು, ವಕ್ಫ್ ಕಾಯಿದೆಯನ್ನೇ ರದ್ದು ಪಡಿಸಬೇಕು. ಮೊಗಲರ ಕಾಲದಲ್ಲಿ ಪ್ರಾರಂಭವಾದ ಈ ವಕ್ಫ್ ವ್ಯವಸ್ಥೆಯು ಸ್ವಾತಂತ್ರ‍್ಯಾನಂತರವೂ ಮುಂದುವರಿಯುವುದಕ್ಕೆ  ಅರ್ಥವಿಲ್ಲ ಮತ್ತು ಮೊಗಲರು ಬಿಟ್ಟು ಹೋದ ವಕ್ಫ್ ಆಸ್ತಿಯಲ್ಲಿ ಇವತ್ತು ಎಷ್ಟೋ ಪಟ್ಟು ವೃದ್ಧಿಸಿರುವುದೇ ಮುಸ್ಲಿಮರು  ವಕ್ಫ್ ಹೆಸರಲ್ಲಿ ಅನ್ಯಾಯವಾಗಿ ಭೂಮಿ ಕಬಳಿಸುತ್ತಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ.

2. ಭಾರತೀಯ ವಕ್ಫ್ ವ್ಯವಸ್ಥೆಯ ನಿರ್ವಹಣೆಯಲ್ಲಿ ಯಾವುದೇ ನ್ಯೂನತೆಗಳಿಲ್ಲ ಮತ್ತು ಅದನ್ನು ಸುಧಾರಣೆ ಮಾಡಬೇಕಾದ  ಯಾವ ಅಗತ್ಯವೂ ಇಲ್ಲ. ಅಂದಹಾಗೆ,

ವಕ್ಫ್ ಎಂಬುದರ ಸರಳ ಅರ್ಥ-
ಅಲ್ಲಾಹನಿಗೆ ಅರ್ಪಿಸುವುದು. ಇದರಲ್ಲಿ ಎರಡು ವಿಧಗಳಿವೆ.
1. ಮಸೀದಿ ನಿರ್ಮಾಣಕ್ಕಾಗಿ ಓರ್ವ ಅಥವಾ ಸಂಸ್ಥೆ ತನ್ನ ಭೂಮಿಯನ್ನು ವಕ್ಫ್ ಮಾಡುವುದು ಅಥವಾ ಅಲ್ಲಾಹನಿಗೆ  ಅರ್ಪಿಸುವುದು.
2. ಮಸೀದಿಯ ಇಮಾಮರು, ಮದ್ರಸ ಅಧ್ಯಾಪಕರು, ಸಿಬಂದಿಗಳು ಮುಂತಾದವರ ವೇತನ ನಿರ್ವಹಣೆಗಾಗಿ ಮತ್ತು  ಮಸೀದಿಗೆ ಆದಾಯ ಮೂಲವಾಗಿ ಭೂಮಿಯನ್ನು ವಕ್ಫ್ ಮಾಡುವುದು.

ಹೀಗೆ ಮಸೀದಿ ನಿರ್ಮಾಣಕ್ಕಾಗಿ ಮತ್ತು ಮಸೀದಿಯ ಆದಾಯ ಮೂಲಕ್ಕಾಗಿ ಹೆಕ್ಟೇರುಗಟ್ಟಲೆ ಭೂಮಿಯನ್ನು ವಕ್ಫ್  ಮಾಡಿದ ಮುಸ್ಲಿಮರಿದ್ದಾರೆ. ಒಮ್ಮೆ ವಕ್ಫ್ ಮಾಡಿದ ಮೇಲೆ ಆ ಭೂಮಿಯ ಸಂಪೂರ್ಣ ಅಧಿಕಾರವನ್ನು ಆ ವ್ಯಕ್ತಿ ಕಳ ಕೊಳ್ಳುತ್ತಾರೆ. ಆ ಬಳಿಕದಿಂದ ಅದು ಅಲ್ಲಾಹನ ಆಸ್ತಿಯಾಗಿ ಪರಿವರ್ತನೆಯಾಗುತ್ತದೆ. ಮಸೀದಿ ಆಡಳಿತ ಮಂಡಳಿಗಾಗಲಿ,  ಅದರ ಅಧ್ಯಕ್ಷ, ಪದಾಧಿಕಾರಿಗಳಿಗಾಗಲಿ ಆ ಭೂಮಿಯಲ್ಲಿ ಯಾವ ಪಾಲೂ ಇಲ್ಲ. ಅವರು ಅದನ್ನು ಸುಪರ್ದಿಗೆ ಪಡ  ಕೊಳ್ಳುವುದಕ್ಕೂ ಅವಕಾಶ ಇಲ್ಲ. ಈ ವ್ಯವಸ್ಥೆ ಪ್ರವಾದಿ(ಸ)ರ ಕಾಲದಿಂದಲೇ ಮುಸ್ಲಿಮರಲ್ಲಿ ಅಸ್ತಿತ್ವದಲ್ಲಿದೆ. ಮೊಗಲರು ಇದನ್ನು ಆರಂಭಿಸಿದ್ದಲ್ಲ ಮತ್ತು ಅವರು ನಿಲ್ಲಿಸಬಯಸಿದ್ದರೂ ಅದು ನಿಲ್ಲುವಂಥದ್ದೂ ಆಗಿರಲಿಲ್ಲ. ಯಾಕೆಂದರೆ, ವಕ್ಫ್  ಎಂಬುದು ದೊರೆಗಳೋ ಸರಕಾರವೋ ಯಾರಿಂದಲಾದರೂ ಭೂಮಿಯನ್ನು ಕಿತ್ತುಕೊಂಡು ಕೊಡುವುದರ ಹೆಸರಲ್ಲ. ಹಾಗೆ  ಕೊಡುವುದು ವಕ್ಫ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಓರ್ವ ವ್ಯಕ್ತಿ ಯಾವುದೇ ಒತ್ತಾಯ-ಬಲವಂತವಿಲ್ಲದೇ ಮನಃ ಪೂರ್ವಕವಾಗಿ ಅಲ್ಲಾಹನಿಗೆ ಅರ್ಪಿಸುವುದಷ್ಟೇ ವಕ್ಫ್ ಆಗಬಲ್ಲದು. ಆದ್ದರಿಂದಲೇ,

ವಕ್ಫ್ ಮಾಡುವ ವ್ಯವಸ್ಥೆ ಪ್ರವಾದಿ ನಿಧನವಾಗಿ 1500 ವರ್ಷಗಳ ಬಳಿಕವೂ ಅಥವಾ ಮೊಗಲರ ನಂತರದ ಈ 800  ವರ್ಷಗಳ ಬಳಿಕವೂ ಇವತ್ತಿಗೂ ಈ ದೇಶದಲ್ಲಿ ಅಸ್ತಿತ್ವದಲ್ಲಿದೆ. ಕೇವಲ ನಮ್ಮ ದೇಶ ಎಂದಲ್ಲ, ಮುಸ್ಲಿಮರಿರುವ ಜಗತ್ತಿನ  ಎಲ್ಲ ರಾಷ್ಟ್ರಗಳಲ್ಲೂ ಈ ವಕ್ಫ್ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ವಕ್ಫ್ ಆಸ್ತಿ ಇರುವ ರಾಷ್ಟ್ರ  ಭಾರತವಾದರೆ, ದ್ವಿತೀಯ ಸ್ಥಾನದಲ್ಲಿ ಟರ್ಕಿಯಿದೆ. ಭಾರತದಲ್ಲಿ 60 ಲಕ್ಷ ಎಕ್ರೆ ವಕ್ಫ್ ಭೂಮಿಯಿದೆ. ಸರಳವಾಗಿ  ಹೇಳಬೇಕೆಂದರೆ, ಒಟ್ಟು ಕೇರಳದಷ್ಟು ದೊಡ್ಡದಾದ ಅಥವಾ ಅರ್ಧ ಪಂಜಾಬ್‌ನಷ್ಟು ವಿಸ್ತಾರವಾದ ಭೂಮಿ. ಇವೆಲ್ಲ  ಮೊಗಲರು ಕೊಟ್ಟಿರೋದಲ್ಲ. ಮೊಗಲರ ಕಾಲದಲ್ಲಿ ವಕ್ಫ್ ಬಂದಿರುವುದಕ್ಕಿಂತ  ಅನೇಕ ಪಟ್ಟು ಹೆಚ್ಚು ಭೂಮಿ ಇವತ್ತು  ವಕ್ಫ್ನ ಹೆಸರಲ್ಲಿ ನೋಂದಣಿಯಾಗಿದೆ ಎಂದಾದರೆ ಅದಕ್ಕೆ ದಾನಿಗಳಾದ ಮುಸ್ಲಿಮರೇ ಕಾರಣ. ಮಸೀದಿ, ಮದ್ರಸಾಗಳ  ನಿರ್ಮಾಣವು ಬಹುದೊಡ್ಡ ಪುಣ್ಯ ಕಾರ್ಯವಾಗಿರುವುದರಿಂದ ಮುಸ್ಲಿಮರು ಈ ವಿಷಯದಲ್ಲಿ ಉದಾರಿಗಳಾಗಿರುತ್ತಾರೆ.  ಸಂದರ್ಭ ಬಂದಾಗಲೆಲ್ಲ ಭೂಮಿ ವಕ್ಫ್ ಮಾಡುತ್ತಾರೆ. ಆ ಮೂಲಕ ದೇವನ ಪ್ರೀತಿಗೆ ಪಾತ್ರರಾಗುವುದನ್ನು ಬಯಸುತ್ತಾರೆ.  ನಿಜವಾಗಿ,

ಈ ದೇಶದ ಅತೀ ಹೆಚ್ಚಿನ ಭೂಮಿ ರಕ್ಷಣಾ ಇಲಾಖೆಯ ಅಧೀನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ರೈಲ್ವೆ ಇಲಾಖೆ ಇದ್ದರೆ,  ಮೂರನೇ ಸ್ಥಾನ ವಕ್ಫ್ ನ  ಪಾಲಾಗಿದೆ. ವಕ್ಫ್ ಅಧೀನದಲ್ಲಿ 2 ಲಕ್ಷ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಇದೆ ಎಂದು  ಅಂದಾಜಿಸಲಾಗಿದ್ದು, ಇವುಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಣೆ ಮಾಡಿರುತ್ತಿದ್ದರೆ ಪ್ರತಿ ವರ್ಷ 20 ಸಾವಿರ  ಕೋಟಿ ರೂಪಾಯಿ ಆದಾಯ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಒಂದುವೇಳೆ, ಇಷ್ಟು ಭಾರೀ ಮೊತ್ತವು ಸಂಗ್ರಹವಾಗಿ  ಅದು ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಬಳಕೆಯಾಗಿರುತ್ತಿದ್ದರೆ ಸಾಚಾರ್ ವರದಿಯಲ್ಲಿ ಮುಸ್ಲಿಮ್  ಸಮುದಾಯದ ಸ್ಥಾನಮಾನ ಎಲ್ಲಿರುತ್ತಿತ್ತು? ದಲಿತರಿಗಿಂತ ಕೆಳಗಿರುತ್ತಿತ್ತೇ? ಸರಕಾರದ ಹಂಗಿಲ್ಲದೇ ಮುಸ್ಲಿಮ್  ಸಮುದಾಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಈ ಆದಾಯದಿಂದ ಸಾಧ್ಯವಿರುತ್ತಿರಲಿಲ್ಲವೇ? ಪ್ರತಿ ಮಸೀದಿಯನ್ನು  ಕೇಂದ್ರೀಕರಿಸಿ ಆ ಮಸೀದಿ ವ್ಯಾಪ್ತಿಯಲ್ಲಿರುವ ಸರ್ವರ ಶಿಕ್ಷಣಕ್ಕಾಗಿ, ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ, ಪ್ರತಿಭಾ ಪೋಷಣೆ,  ಇಂಜಿನಿಯರ್, ಡಾಕ್ಟರ್, ಸೈಂಟಿಸ್ಟ್ ಗಳ  ತಯಾರಿಗಾಗಿ ಯೋಜನೆಯನ್ನು ರೂಪಿಸುವುದು ಮತ್ತು ಹಣ ಖರ್ಚು ಮಾಡುವುದಕ್ಕೆ ಸಾಧ್ಯವಿರಲಿಲ್ಲವೇ? ಸರಕಾರದ ಯಾವ ಮೀಸಲಾತಿಗೂ ದುಂಬಾಲು ಬೀಳದೆಯೇ ಸ್ವಶಕ್ತಿಯಿಂದ ಮೇಲೇಳಲು ಈ  ಆದಾಯ ಊರುಗೋಲು ಆಗುತ್ತಿರಲಿಲ್ಲವೇ? ಸರಕಾರದ ಸೌಲಭ್ಯದ ಹೊರತಾಗಿಯೂ ವಿಧವಾ ವೇತನ ನೀಡುವುದಕ್ಕೆ,  ವಿಶೇಷ ಚೇತನರಿಗೆ, ವೃದ್ಧರಿಗೆ ಮಾಸಾಶನ ಯೋಜನೆಯನ್ನು ರೂಪಿಸುವುದಕ್ಕೆ ಈ ಆದಾಯವನ್ನು ಬಳಸಿ  ಮಾದರಿಯಾಗಬಹುದಿತ್ತಲ್ಲವೇ? ತೀರಾ ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವ ಮತ್ತು ಮದುವೆಗೆ  ನೆರವಾಗುವಂಥ ಯೋಜನೆಗಳನ್ನು ತಯಾರಿಸಲು ಈ ಆದಾಯವನ್ನು ಬಳಕೆ ಮಾಡಬಹುದಿತ್ತಲ್ಲವೇ? ಆಘಾತಕಾರಿ ಸಂಗತಿ  ಏನೆಂದರೆ,

ಇಷ್ಟು ಭಾರೀ ಪ್ರಮಾಣದಲ್ಲಿ ವಕ್ಫ್ ಆಸ್ತಿಯನ್ನು ಹೊಂದಿದ್ದರೂ ಪ್ರತಿವರ್ಷ ಆದಾಯವಾಗಿ ಬರುತ್ತಿರುವುದು ಕೇವಲ 163  ಕೋಟಿ ರೂಪಾಯಿ. ಅಂದಹಾಗೆ, 20 ಸಾವಿರ ಕೋಟಿ ರೂಪಾಯಿ ಎಲ್ಲಿ, ಈ ಜುಜುಬಿ 163 ಕೋಟಿ ರೂಪಾಯಿ ಎಲ್ಲಿ?  ಹೀಗಾಗಲು ಕಾರಣವೇನು? 20 ಸಾವಿರ ಕೋಟಿ ರೂಪಾಯಿ ಆದಾಯವನ್ನು ತರಬಲ್ಲ ಆಸ್ತಿಯನ್ನು ಹೊಂದಿದ್ದೂ ಕೇವಲ  163 ಕೋಟಿ ರೂಪಾಯಿ ಆದಾಯ ಮಾತ್ರ ಸಂಗ್ರಹವಾಗುತ್ತಿರುವುದರ ಅಸಲಿಯತ್ತೇನು? 9ನೇ ಜಂಟಿ ಪಾರ್ಲಿಮೆಂಟರಿ  ಸಮಿತಿ (ಜೆಪಿಸಿ)ಯ ವರದಿಯು ಈ ಕುರಿತಂತೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ವಕ್ಫ್ ನ  70% ಭೂಮಿಯೂ  ಅತಿಕ್ರಮಣವಾಗಿದೆ ಮತ್ತು ವಕ್ಫ್ ಮಂಡಳಿಯ ಅಧೀನದಲ್ಲಿ 20-25% ಭೂಮಿಯಷ್ಟೇ ಇದೆ ಎಂದು ಆ ವರದಿಯಲ್ಲಿ  ಹೇಳಲಾಗಿತ್ತು. ಈ ಭೂಮಿ ಕೂಡಾ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ವಕ್ಫ್ ನ  ಆಸ್ತಿಯನ್ನು ಒಂದುಕಡೆ ಸರಕಾರ  ಅತಿಕ್ರಮಣ ಮಾಡಿದ್ದರೆ ಇನ್ನೊಂದೆಡೆ ಕಂಪೆನಿಗಳು ತಳವೂರಿದೆ. ಹಾಗೆಯೇ ರೆಸಿಡೆನ್ಶಿಯಲ್ ಕಾಂಪ್ಲೆಕ್, ಸರಕಾರಿ ಇನ್ಸ್ಟಿಟ್ಯೂಟ್‌ಗಳು ವಕ್ಫ್ ಭೂಮಿಯನ್ನು ಅತಿಕ್ರಮಿಸಿ ರಾಜನಂತೆ ಮೆರೆಯುತ್ತಿವೆ. ಇದಕ್ಕೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್  ಹೊಟೇಲನ್ನು ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

ಅಘಾ ಅಲಿ ಅಸ್ಗರ್ ಎಂಬವರು ವಕ್ಫ್ ಮಾಡಿರುವ ಈ ಭೂಮಿಯನ್ನು ವಕ್ಫ್ ಬೋರ್ಡ್ ಮೊನಾಕ್ ಕಾರ್ಪೊರೇಶನ್‌ಗೆ  30 ವರ್ಷಗಳಿಗಾಗಿ ಲೀಸ್‌ಗೆ ನೀಡಿತ್ತು. 1973ರಲ್ಲಿ ಮತ್ತೆ 20 ವರ್ಷಗಳಿಗೆ ಲೀಸ್ ಅವಧಿಯನ್ನು ವಿಸ್ತರಿಸಿತು. ಆದರೆ ಇದೇ  ಮೊನಾರ್ಕ್ ಕಂಪೆನಿಯು ವಕ್ಫ್ ಬೋರ್ಡ್ ನ  ಗಮನಕ್ಕೆ ತಾರದೆಯೇ ಲೀಸ್ ಹಕ್ಕುಗಳನ್ನು ವಿಶ್ವಾರಮ್ ಹೊಟೇಲ್ಸ್  ಪ್ರೈವೇಟ್ ಲಿಮಿಟೆಡ್‌ಗೆ ಹಸ್ತಾಂತರಿಸಿತು. ಆ ಬಳಿಕ ಅಂಜುಮನ್ ಮತ್ತು ಇತರ ಮೂರು ಮಂದಿ ಸಿವಿಲ್ ಕೋರ್ಟ್ ನ   ಮೆಟ್ಟಿಲು ಹತ್ತಿದರು. ಆ ಬಳಿಕ ಅದು ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ವರೆಗೆ ಹೋಯಿತು. ಈ ಹೊಟೇಲನ್ನು  ತೆರವುಗೊಳಿಸಬೇಕೆಂದು ಈ ಮೂರೂ ಕೋರ್ಟ್ ಗಳು  ಆದೇಶ ನೀಡಿದುವು. ಇದು ಒಂದು ಪ್ರಕರಣವಾದರೆ, ಹೀಗೆ  ಕೋರ್ಟಿನ ಮುಖವನ್ನೇ ಕಾಣದೇ ಇರುವ ಅಸಂಖ್ಯ ಪ್ರಕರಣಗಳು ಈ ದೇಶದಲ್ಲಿವೆ. ವಕ್ಫ್ ಆಸ್ತಿಯ ಬಹುಭಾಗವನ್ನು  ಇವತ್ತಿಗೂ ಜುಜುಬಿ ಲೀಸ್‌ಗೆ ಕೊಡಲಾಗಿದೆ. ಅವುಗಳಿಂದ ಎಷ್ಟು ಆದಾಯ ಬರಬೇಕಿದೆಯೋ ಅದರ 5% ಆದಾಯ  ಕೂಡಾ ಬರುತ್ತಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಇದು ಸರಕಾರಕ್ಕೂ ಗೊತ್ತಿದೆ. ಸಚಿವರು, ಶಾಸಕರು, ಪ್ರಭಾವಿಗಳು ಮತ್ತು  ಶ್ರೀಮಂತರ ಕೈಯಲ್ಲಿ ವಕ್ಫ್ ಆಸ್ತಿಗಳು ವಿವಿಧ ಕಾಂಪ್ಲೆಕ್ಸ್ ಗಳಾಗಿ, ಶಿಕ್ಷಣ ಸಂಸ್ಥೆಗಳಾಗಿ, ಬಹುಮಹಡಿ ಕಟ್ಟಡಗಳಾಗಿ ಪರಿವರ್ತಿತವಾಗಿವೆ ಮತ್ತು ಅದರ ಕೋಟ್ಯಂತರ ರೂಪಾಯಿ ಆದಾಯ ಅವರ ಖಾತೆಗೆ ಹರಿದು ಬರುತ್ತಲೂ ಇವೆ. ಆದ್ದರಿಂದ  ಅತಿಕ್ರಮವಾಗಿರುವ ವಕ್ಫ್ ಆಸ್ತಿಯನ್ನು ತೆರವುಗೊಳಿಸುವುದು ಬಿಡಿ, ಕನಿಷ್ಠ ಆ ಬಗ್ಗೆ ಪ್ರಾಯೋಗಿಕ ತನಿಖೆಯನ್ನೂ  ಮಾಡಲಾಗುತ್ತಿಲ್ಲ. ಇನ್ನೊಂದೆಡೆ, ಇರುವ ವಕ್ಫ್ ಆಸ್ತಿಗಳ ನಿರ್ವಹಣೆಯೂ ಅತ್ಯಂತ ಕಳಪೆಯಾಗಿದೆ. ವಕ್ಫ್ ಆಸ್ತಿಯನ್ನು  ಆದಾಯ ಮೂಲವಾಗಿ ಪರಿವರ್ತಿಸುವಲ್ಲೂ ವಕ್ಫ್ ಮಂಡಳಿ ದಯನೀಯವಾಗಿ ಸೋತಿದೆ. ಹಾಗೆಯೇ ಮಂಡಳಿಯಲ್ಲಿ  ಭ್ರಷ್ಟಾಚಾರವೂ ಇದೆ. ಇದು ವಕ್ಫ್ ಆಸ್ತಿಯ ಒಂದು ಮುಖವಾದರೆ, ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯದ್ದು ಇನ್ನೊಂದು ಮುಖ. ವಕ್ಫ್ ಭೂಮಿಗೆ  ಸಂಬಂಧಿಧಿಸಿ ಇರುವ ಗೋಜಲುಗಳು ಮತ್ತು ಅಸಮರ್ಪಕ ನಿರ್ವಹಣೆಯ ನೆಪದಲ್ಲಿ ಇಡೀ ವಕ್ಫ್ ವ್ಯವಸ್ಥೆಯನ್ನೇ  ಕುಲಗೆಡಿಸುವ ದುರುದ್ದೇಶವನ್ನು ಈ ತಿದ್ದುಪಡಿ ಮಸೂದೆ ಹೊಂದಿದೆ ಎಂದೇ ಅನಿಸುತ್ತದೆ. ಅಂದಹಾಗೆ,

ವಕ್ಫ್ ಮಂಡಳಿಯಲ್ಲಿ ಈ ವರೆಗೆ ಮುಸ್ಲಿಮರಿಗೆ ಮಾತ್ರ ಅವಕಾಶ ಇತ್ತು. ಆದರೆ, ಇದೀಗ ಇಬ್ಬರು ಮುಸ್ಲಿಮೇತರರನ್ನು ಈ  ಮಂಡಳಿಗೆ ಸೇರಿಸುವ ಪ್ರಸ್ತಾವನೆ ಈ ತಿದ್ದುಪಡಿ ಮಸೂದೆಯಲ್ಲಿದೆ. ಹಾಗಂತ, ಇದರ ಒಳಮರ್ಮ ಅರ್ಥವಾಗಬೇಕಾದರೆ,  ರಾಮಮಂದಿರ ಟ್ರಸ್ಟ್, ಸಿಖ್ಖ್ ಗುರುದ್ವಾರ ಮಂಡಳಿ ಅಥವಾ ಈ ದೇಶದ ಯಾವುದೇ ಪ್ರಮುಖ ಮಂದಿರ ನಿರ್ವಹಣಾ  ಮಂಡಳಿಯಲ್ಲಿ ಯಾರ‍್ಯಾರು ಇದ್ದಾರೆ ಅನ್ನುವುದನ್ನು ನೋಡಬೇಕು. ಈ ಯಾವ ಮಂಡಳಿಗೂ ಮುಸ್ಲಿಮರನ್ನು ಸೇರಿಸದ  ಕೇಂದ್ರ ಸರ್ಕಾರ ವಕ್ಫ್ ಮಂಡಳಿಗೆ ಮಾತ್ರ ಹಿಂದೂಗಳನ್ನು ಸೇರಿಸಿಕೊಳ್ಳುವ ಔಚಿತ್ಯವೇನು? ಒಂದುವೇಳೆ ರಾಮಮಂದಿರ  ಟ್ರಸ್ಟ್ ನಲ್ಲಿ  ಮುಸ್ಲಿಮರನ್ನು ಸೇರಿಸಿದರೆ ಅದಕ್ಕೆ ವ್ಯಕ್ತವಾಗಬಹುದಾದ ಪ್ರತಿಕ್ರಿಯೆಗಳು ಹೇಗಿದ್ದೀತು? ಹಾಗೆಯೇ,

ಯಾವುದೇ ವಕ್ಫ್ ಆಸ್ತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದನ್ನು ಈ ಹೊಸ ಮಸೂದೆಯು  ಕಡ್ಡಾಯಗೊಳಿಸುತ್ತದೆ. ಆ ಮೂಲಕ ಜಿಲ್ಲಾಧಿಕಾರಿ ವಕ್ಫ್ ಆಸ್ತಿಯಲ್ಲಿ ಮಧ್ಯಪ್ರವೇಶ ಮಾಡುವುದಕ್ಕೂ ದಾರಿ  ತೆರೆದಂತಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಯಾವುದೇ ಆಸ್ತಿಯನ್ನು ನೋಂದಣಿಯಾಗದಂತೆ ತಡೆಯುವುದಕ್ಕೆ, ವಿವಿಧ ನೆಪಗಳ  ಮೂಲಕ ಸತಾಯಿಸುವುದಕ್ಕೆ ಅವರಿಗೆ ಈ ಮಸೂದೆ ಅವಕಾಶ ನೀಡಬಹುದು. ಇದೇವೇಳೆ,
1995ರ ವಕ್ಫ್ ಕಾಯ್ದೆ ಸೆಕ್ಷನ್ 40ನ್ನು ಈ ಮಸೂದೆಯು ರದ್ದು ಮಾಡುತ್ತದೆ. ಸೆಕ್ಷನ್ 40ರ ಪ್ರಕಾರ, ಯಾವುದೇ ಆಸ್ತಿಯು  ವಕ್ಫ್ ಆಸ್ತಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಈ ಕಾಯ್ದೆ ವಕ್ಫ್ ನ್ಯಾಯ ಮಂಡಳಿಗೆ  ನೀಡುತ್ತದೆ. ಆದರೆ,  ಈಗ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ಧಾರವನ್ನು ಕೈಗೊಳ್ಳ ಬೇಕಾಗಿದೆ. ಇದರಿಂದಾಗಿ, ವಕ್ಫ್ ನ್ಯಾಯ  ಮಂಡಳಿಯು ತನ್ನ ಅಸ್ತಿತ್ವವನ್ನು ಕಳಕೊಳ್ಳುತ್ತದಲ್ಲದೇ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಇದು ವಕ್ಫ್  ಆಸ್ತಿಯ ಮೇಲಿನ ಅಧಿಕಾರವನ್ನು ವಕ್ಫ್ ಮಂಡಳಿಯಿಂದ  ಪರೋಕ್ಷವಾಗಿ ಕಿತ್ತುಕೊಳ್ಳುವುದಕ್ಕೆ ಮತ್ತು ಜಿಲ್ಲಾಧಿಕಾರಿಗೆ ಅಧಿಕಾರವನ್ನು ನೀಡುತ್ತದೆ. ಜೊತೆಗೆ,

ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವ ಯಾವುದೇ ಆಸ್ತಿಯು ಸರ್ಕಾರಕ್ಕೆ ಸೇರಿದ್ದೋ ಎಂಬ ಅನುಮಾನ ಬಂದರೆ,  ಜಿಲ್ಲಾಧಿಕಾರಿ ಸರ್ವೇ ನಡೆಸಿ ನಿರ್ಧಾರ ಕೈಗೊಳ್ಳಬಹುದು ಎಂದು ಹೊಸ ಮಸೂದೆಯಲ್ಲಿ ಹೇಳಲಾಗಿದೆ. ಇದರಿಂದಾಗುವ  ತೊಂದರೆ ಏನೆಂದರೆ, ತಲೆತಲಾಂತರಗಳಿಂದ ಸರಕಾರಿ ಜಾಗದಲ್ಲಿರುವ ಮಸೀದಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು  ಹೋಗಬಹುದು. ಹೀಗೆ ಸರಕಾರಿ ಜಾಗದಲ್ಲಿ ಮಸೀದಿಗಳು ಮಾತ್ರ ಇರುವುದಲ್ಲ. ಮಂದಿರ, ಚರ್ಚ್ ಗಳೂ  ಇವೆ. ಹಳೆ  ಕಾಲದ ಇಂಥ ಮಸೀದಿಗಳು ಆ ಬಳಿಕ ವಕ್ಫ್ ಹೆಸರಿಗೆ ಹಸ್ತಾಂತರ ವಾಗಿರಲೂಬಹುದು. ಆದರೆ ಇಂಥವುಗಳನ್ನು ಹುಡುಕಿ  ಹುಡುಕಿ ಜಿಲ್ಲಾಧಿಕಾರಿಗಳಿಗೆ ದೂರು ಕೊಡುವ ವ್ಯವಸ್ಥಿತ ಗುಂಪೇ ರಚನೆಯಾಗಬಹುದು ಮತ್ತು ಆ ದೂರಿನ ಆಧಾರದಲ್ಲಿ  ಮಸೀದಿಗಳನ್ನು ತೆರವುಗೊಳಿಸುವ ಕಾರ್ಯವೂ ನಡೆಯಬಹುದು. ಜಿಲ್ಲಾಧಿಕಾರಿಯ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ  ಹೋಗುವ ಅವಕಾಶ ಇದೆಯಾದರೂ ಮುಸ್ಲಿಮ್ ಸಮುದಾಯವನ್ನು ಸದಾ ಆತಂಕದಲ್ಲಿಡುವುದಕ್ಕೆ  ಮಾಡಲಾದ ಸಂಚೇ  ಇದೆಂದು ಅನಿಸುತ್ತದೆ. ಈ ಮೊದಲು ಜಿಲ್ಲಾಧಿಕಾರಿಗೆ ಈ ಹಕ್ಕು ಇರಲಿಲ್ಲ. ವಕ್ಫ್ಗೆ ಸಂಬಂಧಿಸಿ ಎದುರಾಗುವ ಯಾವುದೇ  ವಿವಾದವನ್ನು ವಕ್ಫ್ ನ್ಯಾಯ ಮಂಡಳಿಯಲ್ಲಿಯೇ ಪ್ರಶ್ನಿಸಬೇಕಿತ್ತು. ಹಾಗೆಯೇ,

ಮುಸ್ಲಿಮೇತರರು ವಕ್ಫ್ ಆಗಿ ನೀಡುವ ಆಸ್ತಿಯನ್ನು ಸ್ವೀಕರಿಸುವುದಕ್ಕಾಗಿ ಈ ಹಿಂದೆ ಕಾಯ್ದೆಯಲ್ಲಿ ಸೆಕ್ಷನ್ 104ನ್ನು  ಅಳವಡಿಸಲಾಗಿತ್ತು. ಆದರೆ ಹೊಸ ಮಸೂದೆಯು ಆ 104 ಸೆಕ್ಷನ್ ಅನ್ನೇ ರದ್ದುಗೊಳಿಸಿದೆ. ಆ ಮೂಲಕ ಈ ಮೊದಲು  ಯಾರಾದರೂ ವಕ್ಫ್ ಆಗಿ ಆಸ್ತಿ ನೀಡಿದ್ದರೆ ಅದನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಸರ್ಕಾರ ಸ್ವಯಂ ಪಡಕೊಳ್ಳುತ್ತದೆ.  ಅಂದಹಾಗೆ,

ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರ್ಕಾರ ನಡೆಸಬಯಸಿರುವ ಸವಾರಿಯನ್ನು  ಪ್ರಶ್ನಿಸುತ್ತಲೇ ವಕ್ಫ್ ಆಸ್ತಿಗಳು ಇಷ್ಟಂಶ  ಪರಭಾರೆ ಆಗಿರುವುದಕ್ಕೆ ಮತ್ತು ಅತ್ಯಂತ ಅಸಮರ್ಪಕ ನಿರ್ವಹಣೆಗೆ ಯಾರು ಹೊಣೆ ಮತ್ತು ಏನು ಪರಿಹಾರ ಎಂಬುದನ್ನು ಮುಸ್ಲಿಮ್ ಸಮುದಾಯ ಸ್ವಯಂ ಪ್ರಶ್ನಿಸಿಕೊಳ್ಳುವ ವಿವೇಕವನ್ನೂ ಪ್ರದರ್ಶಿಸಬೇಕಿದೆ. ವಕ್ಫ್ ಮಂಡಳಿಯಲ್ಲಿ ಈ ವರೆಗೆ  ಯಾಕೆ ಒಬ್ಬರೇ ಒಬ್ಬರು ಮಹಿಳೆಯರಿಗೆ ಅವಕಾಶ ಕೊಟ್ಟಿಲ್ಲ, ಏಕೆ ಮುಸ್ಲಿಮ್ ಸಮುದಾಯದ ವಿವಿಧ ಪಂಥಗಳಿಗೆ ಪ್ರಾತಿನಿಧ್ಯವನ್ನು ಕೊಟ್ಟಿಲ್ಲ ಎಂಬ ಪ್ರಶ್ನೆಗೂ ಸಮುದಾಯ ಕೊರಳೊಡ್ಡಬೇಕಿದೆ. ಇದು ಮುಸ್ಲಿಮ್ ಸಮುದಾಯದ ಪಾಲಿಗೆ  ಆತ್ಮಾವಲೋಕನದ ಸಂದರ್ಭ. ಕನಿಷ್ಠ,

1. ವಕ್ಫ್ ಅಂದರೆ ಏನು, ಅದರಿಂದ ಸಮುದಾಯಕ್ಕೆ ಆಗುವ ಪ್ರಯೋಜನಗಳೇನು, ಇದಕ್ಕಿರುವ ಧಾರ್ಮಿಕ ಮಹತ್ವ,  ಹಿನ್ನೆಲೆ, ಇದು ಬೆಳೆದು ಬಂದ ಪರಂಪರೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳುವ ಜಾಗೃತಿ ಅಭಿಯಾನಗಳು  ಆರಂಭವಾಗಬೇಕು.
2. ವಕ್ಫ್ ನ  ಬಗ್ಗೆ ನಾನಾ ಬಗೆಯ ಸುಳ್ಳು ಪ್ರಚಾರಗಳು ಸಮಾಜದಲ್ಲಿ ಈಗಾಗಲೇ ಹರಡಿವೆ ಮತ್ತು ಸೋಶಿಯಲ್  ಮೀಡಿಯಾದ ಮೂಲಕ ಹರಡುತ್ತಲೂ ಇವೆ. ಈ ಅಪಪ್ರಚಾರಗಳನ್ನು ಪರಿಶೀಲಿಸಬೇಕಲ್ಲದೇ, ಇವುಗಳಿಗೆ ಸಮರ್ಪಕ  ಉತ್ತರ ಕೊಡುವ ಕಾರ್ಯಕ್ರಮಗಳು ಒಂದು ಅಭಿಯಾನ ರೂಪದಲ್ಲಿ ನಡೆಯಬೇಕು. ಆ ಕುರಿತಂತೆ ದಾಖಲೆ ಸಹಿತ  ಬರಹಗಳು, ಪ್ರಕಟಣೆಗಳು, ಭಿತ್ತಿಪತ್ರಗಳು ಎಲ್ಲೆಡೆ ಲಭ್ಯವಾಗುವಂತೆ ಮಾಡಬೇಕು.
3. ವಕ್ಫ್ ಮಂಡಳಿಗೆ ಚುರುಕುತನದಿಂದ ಕೂಡಿದ ಮತ್ತು ಆ್ಯಕ್ಟಿವ್ ಆಗಿರುವ ಅಧ್ಯಕ್ಷರು ಬೇಕು. ಅವರು ಮಾಧ್ಯಮಗಳು  ಮತ್ತು ರಾಜಕಾರಣಿಗಳು ಎತ್ತುವ ಪ್ರಶ್ನೆಗಳಿಗೆ ಅಂಕಿ-ಅಂಶ  ಆಧಾರಿತವಾಗಿ ಉತ್ತರಿಸುವಷ್ಟು ಶಕ್ತಿಶಾಲಿಯೂ ಆಗಿರಬೇಕು. ಈ  ಮಂಡಳಿಯು ಮಾಧ್ಯಮಗಳೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿರಬೇಕು. ಅದಕ್ಕಾಗಿ ಪೂರ್ಣಕಾಲಿಕ ಉದ್ಯೋಗಿಗಳ ನ್ನು ನೇಮಿಸಬೇಕು.
4. ವಕ್ಫ್ನ ಆಸ್ತಿಗಳು ಎಲ್ಲೆಲ್ಲಿ ಇವೆಯೋ ಆ ಬಗ್ಗೆ ಆನ್‌ಲೈನ್‌ನಲ್ಲಿ ಸಿಗುವಂತೆ ಡಾಟಾ ತಯಾರಿಸಬೇಕು. ಇವೆಲ್ಲ ಜನರಿಗೆ  ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡುವುದರಿಂದ ಅನಗತ್ಯ ಗೊಂದಲಗಳಿಗೂ ಮತ್ತು ಅಪಪ್ರಚಾರಗಳಿಗೂ ತಡೆ  ಬೀಳಬಹುದು. ಅತಿಕ್ರಮಣ ಆಗಿರುವ ವಕ್ಫ್ ಆಸ್ತಿಗಳು, ಈಗ ಬರುತ್ತಿರುವ ಆದಾಯ, ಕೋರ್ಟು ಮೆಟ್ಟಲೇರಿರುವ  ಪ್ರಕರಣಗಳು, ಪರಭಾರೆ ಆಗಿರುವ ಆಸ್ತಿಗಳು.. ಇತ್ಯಾದಿಗಳ ಸಹಿತ ಎಲ್ಲ ಮಾಹಿತಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ  ಪ್ರಕಟಿಸಬೇಕು.
5. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರಕ್ಕೆ ತಡೆ ಬೀಳಬೇಕು.

ಅಷ್ಟಕ್ಕೂ,

ಈ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುವುದಕ್ಕೆ ರಚಿಸಲಾದ ಸಂಸದೀಯ ಮಂಡಳಿಯಲ್ಲಿ ತೇಜಸ್ವಿ ಸೂರ್ಯ  ಇದ್ದಾರೆಂಬುದೇ ಕೇಂದ್ರ ಸರಕಾರದ ಪ್ರಾಮಾಣಿಕತೆಯನ್ನು ಜಗಜ್ಜಾಹೀರುಗೊಳಿಸುತ್ತದೆ.

ಆರೆಸ್ಸೆಸ್‌ನ ತದ್ರೂಪವೇ ಜಮಾಅತೆ ಇಸ್ಲಾಮೀ ಹಿಂದ್?




ಜಮಾಅತೆ ಇಸ್ಲಾಮೀ ಹಿಂದ್ ಎಂಬುದು ಆರೆಸ್ಸೆಸ್‌ನಂಥದ್ದೇ  ಒಂದು ಕೋಮುವಾದಿ ಮತ್ತು ಜನಾಂಗದ್ವೇಷಿ ಸಂಘಟನೆ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಇವರಲ್ಲಿ ಜಾತ್ಯತೀತ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವವರು ಮತ್ತು ಕೋಮುವಾದವನ್ನು ಖಂಡತುಂಡವಾಗಿ ವಿರೋಧಿಸುವವರೂ ಧಾರಾಳ ಇದ್ದಾರೆ. ಜಮಾಅತೆ ಇಸ್ಲಾಮಿಯನ್ನು ಆರೆಸ್ಸೆಸ್‌ನ ತದ್ರೂಪದಂತೆ ವಾದಿಸುವುದಕ್ಕೆ ಇವರು ಕೆಲವು ಕಾರಣಗಳನ್ನು ಕೊಡುತ್ತಾರೆ.

1. 1948ರಲ್ಲಿ ಉಪಪ್ರಧಾನಿ ವಲ್ಲಭಬಾಯಿ ಪಟೇಲ್‌ರು ಆರೆಸ್ಸೆಸ್ಸನ್ನು ನಿಷೇಧಿಸುವಾಗ ಜಮಾಅತೆ ಇಸ್ಲಾಮೀ ಹಿಂದನ್ನೂ ನಿಷೇಧಿಸಿದ್ದರು.
2. ಆರೆಸ್ಸೆಸ್ ಚಟುವಟಿಕೆಯಲ್ಲಿ ಸರಕಾರಿ ನೌಕರರು ಭಾಗಿಯಾಗಬಾರದು ಎಂದು 1966ರಲ್ಲಿ ಇಂದಿರಾ ಗಾಂಧಿ ಹೊರಡಿಸಿದ ಆದೇಶದ ಸಂದರ್ಭದಲ್ಲೂ ಈ ನಿಷೇಧವನ್ನು ಜಮಾಅತೆ ಇಸ್ಲಾಮೀ ಹಿಂದ್‌ಗೂ ಅನ್ವಯಿಸಿದ್ದರು.
3. ಜಮಾಅತೆ ಇಸ್ಲಾಮೀ ಹಿಂದ್ ಎಂಬ ಹೆಸರೇ ಅದು ಮುಸ್ಲಿಮ್ ಕೋಮುವಾದವನ್ನು ಪ್ರೇರೇಪಿಸುವ ಸಂಘಟನೆ ಎಂಬುದಕ್ಕೆ ಪುರಾವೆಯಾಗಿದೆ.
4. ಜಮಾಅತೆ ಇಸ್ಲಾಮೀ ಹಿಂದ್ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡುವ ಗುರಿಯನ್ನು ಹೊಂದಿದೆ.
5. ಮುಸ್ಲಿಮ್ ಕೋಮುವಾದಕ್ಕೆ ಇದು ಬೆಂಬಲವಾಗಿ ನಿಲ್ಲುತ್ತದೆ.
6. ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪಕ ಮೌಲಾನಾ ಮೌದೂದಿ ಓರ್ವ ಪಾಕಿಸ್ತಾನಿ ವ್ಯಕ್ತಿಯಾಗಿದ್ದಾರೆ.
7. ಜಮಾಅತೆ ಇಸ್ಲಾಮೀ ಹಿಂದನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ.
8. ಜಮಾಅತೆ ಇಸ್ಲಾಮೀ ಹಿಂದ್ ಹಿಂದೂ ವಿರೋಧಿ

ನಿಜವಾಗಿ,

ಕ್ರಮಸಂಖ್ಯೆ 2ನ್ನು ಬಿಟ್ಟರೆ ಉಳಿದೆಲ್ಲ ಅಂಶಗಳೂ ಅಪ್ಪಟ ಸುಳ್ಳಿನಿಂದ ಕೂಡಿವೆ. ಜಮಾಅತೆ ಇಸ್ಲಾಮೀ ಹಿಂದ್‌ಗೂ ಈ ಎಲ್ಲ ಅಭಿಪ್ರಾಯಗಳಿಗೂ ಯಾವುದೇ ಸಂಬಂಧ ಇಲ್ಲ. 1948ರಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪನೆಯೇ ಆಗಿರಲಿಲ್ಲ.  1948ರಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸುವಾಗ ಉಪಪ್ರಧಾನಿ ವಲ್ಲಭ ಭಾಯಿ ಪಟೇಲ್ ಅವರು ಹೀಗೆ ಹೇಳಿದ್ದರು, 

     ‘.... ನಾವು ಆರೆಸ್ಸೆಸ್‌ನೊಂದಿಗೆ ಮಾತಾಡಿದ್ದೇವೆ. ಹಿಂದೂ ರಾಜ್ಯ ಅಥವಾ ಹಿಂದೂ ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಅವರು ಬಯಸುತ್ತಾರೆ. ಇದನ್ನು ಯಾವ ಸರಕಾರವೂ ಸಹಿಸುವುದಿಲ್ಲ. ಈ ದೇಶದಲ್ಲಿ ವಿಭಜನೆಯಾದ ಭಾಗದಷ್ಟು ಮುಸ್ಲಿಮರು ಈಗಲೂ ಇದ್ದಾರೆ. ನಾವು ಅವರನ್ನು ಓಡಿಸುವುದಿಲ್ಲ. ವಿಭಜನೆ ಮತ್ತು ಏನೇ ಆದರೂ ನಾವು ಆ ಆಟವನ್ನು ಪ್ರಾರಂಭಿಸಿದರೆ ಅದು ಕೆಟ್ಟ ದಿನವಾಗಿರುತ್ತದೆ. ಅವರು ಇಲ್ಲೇ ಇರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಇದು ಅವರ ದೇಶ ಎಂಬ ಭಾವನೆ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮತ್ತೊಂದೆಡೆ, ಈ ದೇಶದ ನಾಗರಿಕರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಅವರ ಜವಾಬ್ದಾರಿಯಾಗಿದೆ. ದೇಶ ವಿಭಜನೆ ಮುಗಿದ ಅಧ್ಯಾಯ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು’... 

ಹಾಗಂತ, ಇಂಥದ್ದೊಂದು  ಸಮರ್ಥನೆಯನ್ನು 1966ರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಅನ್ನು ನಿಷೇಧಿಸುವಾಗ ಇಂದಿರಾ ಗಾಂಧೀ ನೀಡಿಯೇ ಇರಲಿಲ್ಲ. ಅರೆಸ್ಸೆಸ್ಸನ್ನು ನಿಷೇಧಿಸುವಾಗ ಜೊತೆಗೊಂದು ಮುಸ್ಲಿಂ ಸಂಘಟನೆ ಬೇಕು ಎಂಬ ಕಾರಣವಷ್ಟೇ ಜಮಾಅತ್ ಅನ್ನು ನಿಷೇಧಿಸುವುದಕ್ಕೆ ಕಾರಣವಾಗಿತ್ತು.   ಸಮತೋಲನ ನೀತಿಯನ್ನು ಅನುಸರಿಸಿದರು. ಆರೆಸ್ಸೆಸ್ ಚಟುವಟಿಕೆಯಲ್ಲಿ ಸರಕಾರಿ ನೌಕರರು ಭಾಗಿಯಾಗಬಾರದು ಎಂಬ ಆದೇಶವನ್ನು ಜಮಾಅತೆ ಇಸ್ಲಾಮೀ ಹಿಂದ್‌ಗೂ ಅನ್ವಯಿಸಿದ್ದರು. ಹಿಂದೂಗಳನ್ನು ತೃಪ್ತಿಪಡಿಸುವುದು ಇದರ ಹಿಂದಿತ್ತೇ ಹೊರತು ಇನ್ನಾವ ಕಾರಣಗಳೂ ಈ ನಿಯಂತ್ರಣಕ್ಕೆ ಇರಲಿಲ್ಲ.

3. ಜಮಾಅತೆ ಇಸ್ಲಾಮೀ ಹಿಂದ್ ಅಂದರೆ ದೇಶವನ್ನು ಇಸ್ಲಾಮ್‌ಮಯಗೊಳಿಸಲು ಹುಟ್ಟಿಕೊಂಡಿರುವ ಸಂಘಟನೆ ಎಂದು ಅರ್ಥವಲ್ಲ. ಭಾರತದ ಇಸ್ಲಾಮೀ ಸಂಘಟನೆ ಎಂದಷ್ಟೇ ಇದರರ್ಥ. ಅದರಾಚೆಗೆ ಇನ್ನಾವ ಕಲ್ಪಿತ ಅರ್ಥಕ್ಕೂ ಅವಕಾಶ ಇಲ್ಲ. ದೇಶದಲ್ಲಿ ಈ ಬಗೆಯ ನೂರಾರು ಸಂಘಟನೆಗಳಿವೆ. ಒಕ್ಕಲಿಗ, ಕುರುಬ, ಲಿಂಗಾಯತ, ದಲಿತ, ಬ್ರಾಹ್ಮಣ, ಜಾಟ್.. ಹೀಗೆ ತಂತಮ್ಮ ಐಡೆಂಟಿಟಿಯ ಹೆಸರಲ್ಲಿ ಗುರುತಿಸುವ ಸಂಘಟನೆಗಳು ಅನೇಕ. ಇಸ್ಲಾಮ್ ಧರ್ಮದಲ್ಲಿ ಈ ರೀತಿಯಾಗಿ ಜಾತಿ ವಿಂಗಡನೆ ಇಲ್ಲದೇ ಇರುವುದರಿಂದ ಭಾರತದ ಇಸ್ಲಾಮೀ ಸಂಘಟನೆ ಎಂದೇ ಹೆಸರಿಸಲಾಗಿದೆ. ಗಮನಿಸಿ, ಅದರ ಹೆಸರಿನ ಕೊನೆಯಲ್ಲಿ ಹಿಂದ್ ಎಂದಿದೆ. ಅಂದರೆ, ಹಿಂದೂಸ್ತಾನದ ಸಂಘಟನೆ ಎಂದು ಅರ್ಥ. ಇದರಲ್ಲಿ ಕೋಮುವಾದ ಹೇಗೆ ಬಂತು ಎಂದು ಗೊತ್ತಾಗುವುದಿಲ್ಲ. ಇಸ್ಲಾಮ್ ಎಂಬ ಹೆಸರು ಕೋಮುವಾದದ ಸಂಕೇತವಲ್ಲ. ಅದೊಂದು ಧರ್ಮಸೂಚಕ ಪದ. ಇಸ್ಲಾಮ್ ಅಂದರೆ ಶಾಂತಿ ಎಂದು ಅರ್ಥ. ಹಿಂದೂ ಎಂಬ ಪದ ಹೇಗೆ ಕೋಮುವಾದದ ಸೂಚಕ ಅಲ್ಲವೋ ಕ್ರೈಸ್ತ, ಸಿಕ್ಖ್, ಯಹೂದಿ, ಬೌದ್ಧ ಇತ್ಯಾದಿ ಪದಗಳು ಹೇಗೆ ಕೋಮುವಾದಿ ಅಲ್ಲವೋ ಹಾಗೆಯೇ ಇಸ್ಲಾಮ್ ಕೂಡಾ ಕೋಮುವಾದಿ ಪದ ಅಲ್ಲ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಲ್ಲೆ.

4. ಇನ್ನು, ಜಮಾಅತೆ ಇಸ್ಲಾಮೀ ಹಿಂದ್ ಯಾವುದೇ ಮತಾಂತರ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ‘ಮತಾಂತರ ಮಾಡುವುದು’ ಎಂಬ ಪದದಲ್ಲಿಯೇ ಪರೋP್ಷÀವಾಗಿ ಬಲವಂತ ಎಂಬುದನ್ನು ಪರೋಕ್ಷ ವಾಗಿ ಧ್ವನಿಸುತ್ತದೆ. ಮತಾಂತರ ಮಾಡುವುದಕ್ಕೆ ಈ ದೇಶದ ಸಂವಿಧಾನ ಅನುಮತಿಸುವುದೂ ಇಲ್ಲ. ಅದೇವೇಳೆ, ಧರ್ಮ ಪ್ರಚಾರಕ್ಕೆ ಮತ್ತು ಯಾರಿಗಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಆಗಬೇಕೆಂದು ಇದ್ದರೆ ಅದಕ್ಕೆ ಈ ದೇಶದ ಸಂವಿಧಾನ ಅನುಮತಿಸುತ್ತದೆ. ಜಮಾಅತೆ ಇಸ್ಲಾಮೀ ಹಿಂದ್ ಈ ದೇಶದ ಸಂವಿಧಾನಕ್ಕೆ ಬದ್ಧವಾಗಿದ್ದುಕೊಂಡು ಮತ್ತು ಅದರ ಅಡಿಯಲ್ಲಿ ಕಾರ್ಯಾಚರಿಸುವ ಸಂಘಟನೆ. ಅದರ ಯಾವ ಕೆಲಸ ಕಾರ್ಯಗಳೂ ನಿಗೂಢವಾಗಿಲ್ಲ. ಅದಕ್ಕೊಂದು ಸಂವಿಧಾನವಿದೆ. ಅದು ಸಾರ್ವಜನಿಕವಾಗಿ ಲಭ್ಯವಿದೆ. ನೋಂದಾಯಿತ ಸದಸ್ಯರಿದ್ದಾರೆ. ಕಾರ್ಯಕರ್ತರಿದ್ದಾರೆ. ಅದರ ಚಟುವಟಿಕೆಗಳೂ ಬಹಿರಂಗವಾಗಿಯೇ ಇವೆ. ಅದರ ಕಾರ್ಯಾಲಯ ಕೂಡಾ ಬೋರ್ಡ್ ಅಂಟಿಸಿಕೊಂಡು  ಬಹಿರಂಗವಾಗಿಯೇ ಇದೆ. ಜಮಾಅತೆ ಇಸ್ಲಾಮೀ ಹಿಂದ್ ಈ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇಸ್ಲಾಮ್ ಧರ್ಮದ ಮೌಲ್ಯಗಳನ್ನು ಅದು ಸಾರ್ವಜನಿಕ ವೇದಿಕೆಗಳನ್ನು ಕಟ್ಟಿ ಪ್ರತಿಪಾದಿಸುತ್ತದೆ. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಮೌಢ್ಯಗಳನ್ನು ದೂರೀಕರಿಸಲು, ಕೆಡುಕುಗಳನ್ನು ಇಲ್ಲವಾಗಿಸಲು, ಕೋಮು ಸೌಹಾರ್ದವನ್ನು ಸ್ಥಾಪಿಸಲು ಅದು ನಿರಂತರ ಕೆಲಸ ಮಾಡುತ್ತಿದೆ. ಹಿಂದೂ-ಮುಸ್ಲಿಮರನ್ನು ಜೊತೆಗೂಡಿಸಿಕೊಂಡು ‘ಸದ್ಭಾವನಾ ಮಂಚ್’ ಎಂಬ ವೇದಿಕೆಯನ್ನು ಕಟ್ಟಿ ದೇಶಾದ್ಯಂತ ಕೋಮು ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದೆ. ಸ್ವಾಮೀಜಿಗಳು ಮತ್ತು ಮುಸ್ಲಿಮ್ ಧರ್ಮಗುರುಗಳನ್ನು ಒಂದೇ ವೇದಿಕೆಯಲ್ಲಿ ತಂದು ‘ಸೌಹಾರ್ದ ಸಮಾಜ’ ಕಟ್ಟುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ಮುಸ್ಲಿಮರಲ್ಲಿ ಸುಧಾರಣೆಯನ್ನು ಉಂಟು ಮಾಡುವುದಕ್ಕೆ ಹತ್ತು ಹಲವು ಅಭಿಯಾನಗಳನ್ನು ಕೈಗೊಳ್ಳುತ್ತಿದೆ. ವರದಕ್ಷಿಣೆ ವಿರೋಧಿ ಅಭಿಯಾನ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ, ಹೆಣ್ಣು ಶಿಶು ಹತ್ಯೆ ವಿರೋಧಿ ಅಭಿಯಾನ, ಮಾದಕ ವಸ್ತು ವಿರೋಧಿ ಜನಜಾಗೃತಿ ಅಭಿಯಾನ, ಕೋಮು ಸೌಹಾರ್ದಕ್ಕಾಗಿ ಅಭಿಯಾನಗಳನ್ನು ಆಗಾಗ ನಡೆಸುತ್ತಾ ಬಂದಿದೆ. ಜೊತೆಗೇ ತನ್ನದೇ ವಿವಿಧ ವಿಭಾಗಗಳ ಮೂಲಕ ಸಮಾಜ ಸೇವೆಯಲ್ಲೂ ನಿರತವಾಗಿದೆ. ಪ್ರವಾಹ, ಭೂಕುಸಿತ, ಕೋಮುಗಲಭೆ ಇತ್ಯಾದಿಗಳ ಸಂದರ್ಭದಲ್ಲಿ ತನ್ನ ಸ್ವಯಂ ಸೇವಕರ ಮೂಲಕ ಜನರ ನೆರವಿಗೆ ಧಾವಿಸುತ್ತಿದೆ. ಕಳೆದ 7 ದಶಕಗಳಲ್ಲಿ ಇಂಥ ಸಾವಿರಾರು ಸೇವೆಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ನಡೆಸಿದೆ ಮತ್ತು ನಡೆಸುತ್ತಲೂ ಇದೆ.

5. ಜಮಾಅತೆ ಇಸ್ಲಾಮೀ ಹಿಂದ್ ಎಂದೂ ಕೋಮುವಾದವನ್ನು ಬೆಂಬಲಿಸಿಲ್ಲ ಮತ್ತು ಬೆಂಬಲಿಸುವುದಿಲ್ಲ. ‘ಕೋಮುವಾದಿ ಮುಸ್ಲಿಮ್ ಅಲ್ಲ’ ಎಂಬ ಪ್ರವಾದಿ ವಚನವನ್ನು ಬಲವಾಗಿ ಪ್ರತಿಪಾದಿಸುವ ಸಂಘಟನೆ ಇದು. ತನ್ನ ಪ್ರತಿ ಕಾರ್ಯಕ್ರಮದಲ್ಲೂ ಸಭೆಯಲ್ಲೂ ಅದು ಕೋಮುವಾದದ ವಿರುದ್ಧ ಮಾತಾಡುತ್ತಾ ಬಂದಿದೆ. ಕೋಮುಗಲಭೆ ನಡೆದಾಗ ಅಲ್ಲಿಯ ಜನರನ್ನು ಸೇರಿಸಿ ಕೋಮುವಾದದ ಕರಾಳತೆಯನ್ನು ಹೇಳುವ ಸಂಘಟನೆಯಾಗಿ ಜಮಾಅತೆ ಇಸ್ಲಾಮೀ ಹಿಂದ್ ಗುರುತಿಸಿಕೊಂಡಿದೆ. ಕೋಮುಗಲಭೆಯ ಆರೋಪದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಒಬ್ಬನೇ ಒಬ್ಬ ಸದಸ್ಯನನ್ನು ಈವರೆಗೆ ಬಂಧಿಸಿಲ್ಲ ಎಂಬುದೇ ಜಮಾಅತ್ ಏನೆಂಬುದಕ್ಕೆ ಸಾಕ್ಷ್ಯವಾಗಿದೆ. ಈಗಲೂ ಅದರ ದಾಖಲೆಯನ್ನು ಪರಿಶೀಲಿಸಿ ಈ ಬಗ್ಗೆ ಸ್ಪಷ್ಟಪಡಿಸಿಕೊಳ್ಳಲು ಮುಕ್ತ ಅವಕಾಶವಿದೆ.

6. ಇದೂ ಸುಳ್ಳು. ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪಕ ಮೌದೂದಿ ಅಲ್ಲ. ಅವರು ಜಮಾಅತೆ ಇಸ್ಲಾಮಿಯ ಸ್ಥಾಪಕ. ಅವರು ಈ ಸಂಘಟನೆಯನ್ನು ಸ್ವಾತಂತ್ರ‍್ಯಪೂರ್ವದಲ್ಲಿ 1941ರಲ್ಲಿ ಸ್ಥಾಪಿಸಿದ್ದಾರೆ. ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿರುವ ಕಂದಾಚಾರ, ಮೌಢ್ಯ, ಅಧರ್ಮಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅವರು ಈ ಸಂಘಟನೆ ಸ್ಥಾಪಿಸಿದ್ದರು. ಅದರ ಕೇಂದ್ರ ಕಚೇರಿ ಪಂಜಾಬ್‌ನಲ್ಲಿತ್ತು. ಅವರೂ ಅದೇ ಪಂಜಾಬ್‌ನಲ್ಲಿಯೇ ಕುಟುಂಬ ಸಮೇತ ವಾಸಿಸುತ್ತಿದ್ದರು. ಭಾರತ ಇಬ್ಭಾಗವಾಗುವುದನ್ನು ಪ್ರಬಲವಾಗಿ ವಿರೋಧಿಸಿದವರಲ್ಲಿ ಈ ಮೌದೂದಿ ಕೂಡಾ ಒಬ್ಬರು. ಆದರೆ ಎಲ್ಲರ ಬಯಕೆಯನ್ನೂ ಮೀರಿ ಭಾರತ ಇಬ್ಭಾಗವಾದಾಗ ಅವರಿದ್ದ ಪಂಜಾಬ್‌ನ ಭಾಗ ಪಾಕಿಸ್ತಾನದ ಪಾಲಾಯಿತು. ಆ ಮೂಲಕ ಅವರು ಪಾಕಿಸ್ತಾನದ ಭಾಗವಾದರು. ಅದರಾಚೆಗೆ ಅವರು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರಲ್ಲ. ಅವರಿದ್ದ ಮನೆಯೇ ಪಾಕಿಸ್ತಾನವಾದಾಗ ಅವರು ಸಹಜವಾಗಿಯೇ ಪಾಕಿಸ್ತಾನಿಯಾದರು. ಉತ್ತರ ಭಾರತದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮ್ ಕುಟುಂಬಗಳಲ್ಲಿ ಅವರಿಲ್ಲ. ಆದರೆ, ಅನೇಕರು ಈ ಸತ್ಯವನ್ನು ಮರೆಮಾಚಿ ಅವರನ್ನು ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದAತೆ ಸುಳ್ಳನ್ನು ಹರಡುತ್ತಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ 1948ರಲ್ಲಿ ಭಾರತದಲ್ಲಿ ಮರುರೂಪೀಕರಣಗೊಂಡ ಸಂಘಟನೆ ಎಂಬುದು ನಿಜ. ಅದರಾಚೆಗಿನ ಎಲ್ಲವೂ ಸುಳ್ಳು.

7. ಜಮಾಅತೆ ಇಸ್ಲಾಮೀ ಹಿಂದನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿಲ್ಲ. ಜಮಾಅತೆ ಇಸ್ಲಾಮೀ ಹಿಂದನ್ನು ಭಾರತದ ಹೊರತು ಇನ್ನಾವ ರಾಷ್ಟçಕ್ಕೂ ನಿಷೇಧಿಸಲು ಸಾಧ್ಯವೂ ಇಲ್ಲ. ಯಾಕೆಂದರೆ, ಜಮಾಅತೆ ಇಸ್ಲಾಮೀ ಹಿಂದ್ ಅಂದರೆ ಭಾರತದ ಇಸ್ಲಾಮೀ ಸಂಘಟನೆ ಎಂದು ಅರ್ಥ. ಅದನ್ನು ಬಾಂಗ್ಲಾದೇಶ ನಿಷೇಧಿಸುವುದು ಹೇಗೆ? ಬಾಂಗ್ಲಾದೇಶವು ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿಯನ್ನು ನಿಷೇಧಿಸಿದೆ. ಅದಕ್ಕೆ ರಾಜಕೀಯವೇ ಕಾರಣವಾಗಿದೆ. ಬೇಗಂ ಖಾಲಿದಾ ಝಿಯಾ ಅವರನ್ನು ಬೆಂಬಲಿಸುತ್ತಿದ್ದ ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿಯು ಹಸೀನಾರ ವಿರುದ್ಧ ಕೆಲಸ ಮಾಡುತ್ತಿತ್ತು. ಅಲ್ಲಿ ಅದು ರಾಜಕೀಯ ಪಕ್ಷವಾಗಿಯೇ ಗುರುತಿಸಿಕೊಂಡಿದೆ. ಅಲ್ಲಿನ ರಾಜಕೀಯ ಇತಿಹಾಸವನ್ನು ಅಧ್ಯಯನ ನಡೆಸಿದರೆ ಇದಕ್ಕೆ ಸೂಕ್ತ ಉತ್ತರ ಲಭಿಸಬಹುದು.

8. ಇದು ದೊಡ್ಡ ಸುಳ್ಳು. ಹಿಂದೂ-ಮುಸ್ಲಿಮರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಈ ದೇಶದ ಪ್ರಮುಖ ಸಂಘಟನೆಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕೂಡಾ ಒಂದು. ಹಿಂದೂಗಳನ್ನು ಸೇರಿಸಿ ಸದ್ಭಾವನಾ ಮಂಚ್ ಮಾಡಿರೋದು ಈ ದೇಶದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗುರುಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಅವರವರ ಧರ್ಮದ ಮೌಲ್ಯಗಳನ್ನು ಸಭಿಕರಿಗೆ ಹೇಳುವ ವೇದಿಕೆ ಸೃಷ್ಟಿಸುತ್ತಿರುವುದೂ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಈ ದೇಶದ ಸ್ವಾಮೀಜಿಗಳೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಇಟ್ಟುಕೊಂಡಿರುವುದೂ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಜಮಾಅತ್‌ನ ಸಾವಿರಾರು ಪುಸ್ತಕಗಳೇ ಅದು ಏನು ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಧಾರಾಳ ಸಾಕು. ಅದರ ಸಾಹಿತ್ಯ ದೇಶದ ಎಲ್ಲ ಭಾಷೆಗಳಲ್ಲೂ ಲಭ್ಯ ಇದೆ. ಕುರ್‌ಆನನ್ನು ಕನ್ನಡ ಸಹಿತ ಎಲ್ಲ ಭಾಷೆಗಳಿಗೂ ಅನುವಾದಿಸಿ ಮೊಟ್ಟಮೊದಲು ಹಂಚಿದ್ದೂ ಜಮಾಅತೆ ಇಸ್ಲಾಮೀ ಹಿಂದ್. ಅದು ಹಿಂದೂಗಳನ್ನು ಎಂದೂ ವಿರೋಧಿಸಿಲ್ಲ. ವಿರೋಧಿಸುವುದು ಅದರ ಸಿದ್ಧಾಂತವೇ ಅಲ್ಲ. ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಾದರೆ ಶಾಂತಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯ ಪುಸ್ತಕಗಳನ್ನು ಓದಬಹುದು. ಆದ್ದರಿಂದ ಜಮಾಅತೆ ಇಸ್ಲಾಮೀ ಹಿಂದನ್ನು ಆರೆಸ್ಸೆಸ್‌ನೊಂದಿಗೆ ಜೋಡಿಸುವುದು ಅಥವಾ ಅದನ್ನು ಕೋಮುವಾದಿ, ಹಿಂದೂ ವಿರೋಧಿ ಮತ್ತು ಮತಾಂತರಿಯಂತೆ  ಕಾಣುವುದು ಸರ್ವಥಾ ಸರಿಯಲ್ಲ.
ಅಂದಹಾಗೆ, 

ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ಸರಕಾರಿ ನೌಕರರಿಗಿದ್ದ ನಿಷೇಧವನ್ನು ಮೊನ್ನೆ ಕೇಂದ್ರ ಸರಕಾರ ಹಿಂಪಡೆದ ಬಳಿಕ ಉಂಟಾದ ಆರೆಸ್ಸೆಸ್-ಜಮಾಅತೆ ಇಸ್ಲಾಮೀ ಹಿಂದ್ ಚರ್ಚೆಯನ್ನು ಗಮನಿಸಿ ಈ ಎಲ್ಲವನ್ನೂ ಹೇಳಬೇಕಾಯಿತು.