Thursday, July 27, 2017

ತಿಯೋಡರ್ ಶಾನಿನ್ ಭಾರತದಲ್ಲಿರುತ್ತಿದ್ದರೆ ಕೃತಿಯ ಹೆಸರು ಏನಿರುತ್ತಿತ್ತು?

      ಖ್ಯಾತ ಪ್ರೊಫೆಸರ್ ತಿಯೋಡರ್ ಶಾನಿನ್ ಅವರ ‘ರೈತರು ಮತ್ತು ರೈತ ಸಮಾಜಗಳು’ (Peasant and peasant societies) ಎಂಬ ಕೃತಿಯ ಬಗ್ಗೆ ಅರಿತುಕೊಳ್ಳುವ ಸಂದರ್ಭ ಸಿಕ್ಕಿತು. ಈ ಕೃತಿಯ ಮೇಲೆ ನಡೆದ ಚರ್ಚೆ, ವಿಮರ್ಶೆ ಮತ್ತು ರೈತ ಸಮುದಾಯದ ಬಗ್ಗೆ ಕೃತಿಕಾರನ ಆಳ ಅಧ್ಯಯನವು ಯಾರನ್ನೇ ಆಗಲಿ ಪ್ರಭಾವಿತಗೊಳಿಸಬಲ್ಲಷ್ಟು ಪ್ರಾಮುಖ್ಯವಾದವು. ಈ ಕೃತಿಗೆ ಎರಡು ದಶಕಗಳಿಗಿಂತ ಹೆಚ್ಚು ಪ್ರಾಯವಾಗಿದೆ ಮತ್ತು ‘ರಶ್ಯನ್ ಕ್ರಾಂತಿಯಲ್ಲಿ ರೈತರ ಪಾತ್ರ’ ಎಂಬ ವಿಷಯದ ಮೇಲೆ ನಡೆಸಿದ ಅಧ್ಯಯನವು ಈ ಕೃತಿ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂಬ ಎರಡು ಕೊರತೆಗಳನ್ನು ಬಿಟ್ಟರೆ ಇದು ಒಂದು ಬಹು ಪ್ರಭಾವಿ ಕೃತಿ. ವಿಶೇಷ ಏನೆಂದರೆ, ಈ ಕೃತಿಯ ಬಗ್ಗೆ ಓದುತ್ತಾ ಹೋದಂತೆ ಭಾರತದಲ್ಲಿ ಇತ್ತೀಚೆಗೆ ದುರಂತಮಯವಾಗಿ ಅಂತ್ಯ ಕಂಡ ಎರಡು ರೈತ ಪ್ರತಿಭಟನೆಗಳು ಕಣ್ಣ ಮುಂದೆ ತೇಲಿ ಬಂದುವು.
1. ದೆಹಲಿಯ ಜಂತರ್-ಮಂತರ್‍ನಲ್ಲಿ ತಮಿಳುನಾಡು ರೈತರು ನಡೆಸಿದ ಪ್ರತಿಭಟನೆ.
2. ಮಧ್ಯಪ್ರದೇಶದ ಮಂಡಸೂರ್‍ನಲ್ಲಿ ನಡೆದ ರೈತ ಪ್ರತಿಭಟನೆ.
ತಮಿಳುನಾಡಿನ ಸುಮಾರು 100ಕ್ಕಿಂತಲೂ ಅಧಿಕ ರೈತರು 42 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಜಂತರ್ ಮಂತರ್ ಅನ್ನು ಈ ರೈತರು ಯಾಕೆ ಆಯ್ಕೆ ಮಾಡಿಕೊಂಡರೆಂದರೆ, ಅವರ ಬೇಡಿಕೆ ತಮಿಳುನಾಡು ಸರಕಾರದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಕೇಂದ್ರ ಸರಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಅವರು ಪ್ರತಿಭಟನೆಗೆ ಗಾಂಧಿ ಮಾರ್ಗವನ್ನು ಆಶ್ರಯಿಸಿದರು. ರೈತರೆಂದರೆ ಗ್ರಾಮೀಣ ಭಾರತದಲ್ಲಿ ಬದುಕುವ ಜನಸಮೂಹ. ಮಣ್ಣು, ಕೆಸರು, ನೀರು ಮುಂತಾದುವುಗಳ ಜೊತೆಗೇ ಹೆಚ್ಚು ಬೆರೆತು ಗೊತ್ತಿರುವ ಮತ್ತು ಪೇಟೆಯ ಥಳಕನ್ನು ಅಂಜಿಕೆಯಿಂದ ನೋಡುವ ಜನರು ಇವರು. ಆದ್ದರಿಂದ ಜಂತರ್ ಮಂತರ್ ಅನ್ನುವುದು ಅವರ ಪಾಲಿಗೆ ತೀರಾ ಹೊಸತು. ದುಡಿಯುವ ವರ್ಗವು, ಪಟ್ಟಣದ ಒಂದು ಕಡೆ ದುಡಿಯದೇ ವಾರಗಟ್ಟಲೆ ಕಳೆಯುವುದೇ ಒಂದು ಹಿಂಸೆ. ಇದು ಅವರ ಪ್ರತಿಭಟನೆಯಲ್ಲೂ ವ್ಯಕ್ತವಾಯಿತು. ಕೇಂದ್ರ ಸರಕಾರ ಈ ಪ್ರತಿಭಟನೆಯನ್ನು ನಿರ್ಲಕ್ಷಿಸ ತೊಡಗಿದಾಗ ಅವರು ಪ್ರತಿಭಟನೆಯ ವಿಧಾನವನ್ನು ಬದಲಿಸಿದರು. ಸ್ವತಃ ತಮ್ಮ ಮೂತ್ರವನ್ನೇ ಕುಡಿಯುವ ಆಘಾತಕಾರಿ ಪ್ರಯೋಗಕ್ಕೆ ಇಳಿದರು. ಪ್ರಧಾನಿ ನಿವಾಸದೆದುರು ಬೆತ್ತಲೆಯಾಗಿ ಓಡಿದರು. ಕಳೆದ ವರ್ಷದ ಅಕ್ಟೋಬರ್‍ನಿಂದ ಆತ್ಮಹತ್ಯೆ ಮಾಡಿಕೊಂಡ ತಮ್ಮ ಪ್ರೀತಿ ಪಾತ್ರ ರೈತರ ಡಮ್ಮಿ ತಲೆಬುರುಡೆಯನ್ನು ಪ್ರದರ್ಶಿಸಿದರು. ರಸ್ತೆಯಲ್ಲಿ ಉಂಡರು. ಇಲಿ ಮತ್ತು ಸತ್ತ ಹಾವನ್ನು ಬಾಯಲ್ಲಿ ಕಚ್ಚಿ ಹಿಡಿದರು. ಹುಚ್ಚರಂತೆ ವೇಷ ತೊಟ್ಟರು.. ಹಾಗಂತ, ಅವರ ಬೇಡಿಕೆಯು ಕೇಂದ್ರ ಸರಕಾರವು ಪುಟ್ಟದೊಂದು ಸಾಂತ್ವನ ಒದಗಿಸದಷ್ಟು ಮತ್ತು ಪ್ರಧಾನಿ ಮೋದಿಯವರ ಮನ್ ಕಿ ಬಾತ್‍ನಲ್ಲಿ ಪ್ರಸ್ತಾಪಿಸಲ್ಪಡದಷ್ಟು ದೇಶದ್ರೋಹಿ ಆಗಿರಲಿಲ್ಲ.
1. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು.
2. ಸೂಕ್ತ ಬರ ಪರಿಹಾರವನ್ನು ಘೋಷಿಸಬೇಕು.
3. ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ನಿಗದಿಪಡಿಸಿದ ನೀರನ್ನು ಅಡೆತಡೆಯಿಲ್ಲದೇ ಒದಗಿಸಬೇಕು.
ತಕ್ಷಣಕ್ಕೆ ಒಪ್ಪಿ ಬಿಡುವಂತಹ ಸುಲಭದ ಬೇಡಿಕೆ ಇವು ಅಲ್ಲವಾದರೂ ಪ್ರತಿಕ್ರಿಯೆಗೆ ಅನರ್ಹವಾದಂತಹವುಗಳೇ ಇವು? 42 ದಿನಗಳ ಕಾಲ ಗಾಂಧಿ ಮಾದರಿಯಲ್ಲಿ ಪ್ರತಿಭಟಿಸಿದ ರೈತ ಗುಂಪು ಕೊನೆಗೆ ನಿರಾಶೆಯಿಂದ ಗದ್ದೆಗೆ ಮರಳಿರುವುದು ಏನನ್ನು ಸೂಚಿಸುತ್ತದೆ? ಭಾರತವನ್ನು ಕೃಷಿ ಪ್ರಧಾನ ದೇಶ ಎಂದು ವ್ಯಾಖ್ಯಾನಿಸುವ ಸರಕಾರದ ನೀತಿಗಳು ಎಷ್ಟಂಶ ಕೃಷಿಗೆ ಪೂರಕವಾಗಿವೆ? ಕೃಷಿಯನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಲು ರಾಜಕೀಯ ಅರ್ಥ ತಜ್ಞರು ಎಲ್ಲಿಯವರೆಗೆ ಯಶಸ್ವಿಯಾಗಿದ್ದಾರೆ? ಗೋವನ್ನು ನಕಲಿ ಗೋರಕ್ಷಕರು ನೋಡುವ ರೀತಿಯಲ್ಲೇ  ಸರಕಾರಗಳು ಕೃಷಿಯನ್ನು ನೋಡುತ್ತಿವೆಯೇ? ಕೃಷಿಯನ್ನು ಪೂಜನೀಯ ಸ್ಥಾನದಲ್ಲಿಟ್ಟು, ರೈತರಿಗೆ ಗುಂಡು ಹೊಡೆಯುವುದು ಕೂಡ ಸಮರ್ಥನೀಯವಾಗುತ್ತಿರುವುದು ಯಾವ ಕಾರಣದಿಂದ? ಜಂತರ್ ಮಂತರ್‍ನ ಬಳಿಕ ನಡೆದ ಮಧ್ಯಪ್ರದೇಶದ ಮಂಡಸೂರ್ ಪ್ರತಿಭಟನೆಯು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಚರ್ಚಾ ವೇದಿಕೆಯನ್ನು ಒದಗಿಸಿದೆ. ನಿಜವಾಗಿ, ಜಂತರ್ ಮಂತರ್‍ಗೆ ಹೋಲಿಸಿದರೆ ಮಂಡಸೂರ್ ಪ್ರತಿಭಟನೆ ಸಂಪೂರ್ಣ ಭಿನ್ನ. ಅಲ್ಲಿ ಹಿಂಸಾಚಾರ ನಡೆದಿದೆ. ಬೆಂಕಿ ಹಚ್ಚಲಾದ ಘಟನೆಗಳು ನಡೆದಿವೆ. ಪೊಲೀಸರ ಗುಂಡಿಗೆ 7ರಷ್ಟು ರೈತರು ಸಾವಿಗೀಡಾಗಿದ್ದಾರೆ. ಜಂತರ್ ಮಂತರ್‍ನ ಗಾಂಧಿ ಮಾದರಿಯ ಪ್ರತಿಭಟನೆಯು ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮವನ್ನು ಬೀರದೇ ನಿರಾಶಾದಾಯಕವಾಗಿ ಕೊನೆಗೊಂಡ ಬಳಿಕ ನಡೆದ ಪ್ರತಿಭಟನೆ ಇದು ಎಂಬ ನೆಲೆಯಲ್ಲಿ ಈ ಪ್ರತಿಭಟನೆ ಮತ್ತು ಅಲ್ಲಿಯ ಹಿಂಸಾಚಾರ ಮುಖ್ಯವಾಗುತ್ತದೆ. ಮಂಡಸೂರ್‍ನಲ್ಲಿ ಸೇರಿದ ರೈತರ ಎದುರು ಜಂತರ್ ಮಂತರ್ ವಿಫಲ ಪ್ರತಿಭಟನಾ ಮಾದರಿಯಿತ್ತು. ಅದೇ ಮಾದರಿಯನ್ನು ಆಯ್ಕೆ ಮಾಡಿಕೊಂಡರೆ ವ್ಯವಸ್ಥೆಯ ದಪ್ಪ ಚರ್ಮಕ್ಕೆ ನಾಟದು ಎಂದು ಅವರು ಭಾವಿಸಿದ್ದರೆ, ಅದರ ಸಂಪೂರ್ಣ ಹೊಣೆಯನ್ನು ಅವರ ಮೇಲೆ ಹೊರಿಸಬೇಕಿಲ್ಲ. ವಿಶೇಷ ಏನೆಂದರೆ, ಕೇಂದ್ರ ಸರಕಾರಕ್ಕೆ ರೈತರು, ಕಾರ್ಮಿಕರು, ಸಂಘಟನೆಗಳು, ಹಕ್ಕು ಕಾರ್ಯಕರ್ತರು, ಭಯೋತ್ಪಾದಕರು.. ಮುಂತಾದುವುಗಳ ವ್ಯತ್ಯಾಸವೇ ಗೊತ್ತಿಲ್ಲ ಅನ್ನುವುದನ್ನು ಮಂಡಸೂರ್ ಎತ್ತಿ ತೋರಿಸಿತು. ರೈತ ಪ್ರತಿಭಟನೆಯನ್ನು ಅದು ನೋಡಿದ್ದು ಕಾನೂನು ಮತ್ತು ಸುವ್ಯವಸ್ಥೆ ಎಂಬ ಕಣ್ಣಿನಿಂದಲೇ. ಆಂತರಿಕ ಭದ್ರತೆಗೆ ರೈತ ಪ್ರತಿ ಭಟನೆಯಿಂದ ಅಪಾಯವಿದೆ ಎಂಬಂತೆ ಅದು ವ್ಯಾಖ್ಯಾನಿಸಿತು. ಈ ಪ್ರತಿಭಟನೆಯ ಹಿಂದೆ ದಂಗೆಕೋರ ಶಕ್ತಿಗಳ, ದೇಶದ್ರೋಹಿಗಳ ಕೈವಾಡ ಇರುವ ಸಾಧ್ಯತೆ ಇದೆ.. ಎಂಬಂತಹ ಅನುಮಾನಗಳನ್ನು ಅದು ಬಿತ್ತುವ ಪ್ರಯತ್ನ ಮಾಡಿತು. ನಿಜವಾಗಿ, ರೈತರು ಪ್ರತಿ ಭಟನೆಯಲ್ಲಿ ಭಾಗವಹಿಸುವುದು ಸಾಮಾನ್ಯವಾಗಿ ಬೆಳೆಗೆ ಸಂಬಂದಿಸಿ ಮಾತ್ರ. ಅತಿವೃಷ್ಟಿ, ಅನಾವೃಷ್ಟಿ, ರಸಗೊಬ್ಬರ, ನೀರು.. ಇತ್ಯಾದಿಗಳ ಬಗ್ಗೆ ದೂರಿಕೊಂಡು ವರ್ಷದಲ್ಲಿ ಅಪರೂಪವಾಗಿ ಅವರು ಬೀದಿಗೆ ಬರುತ್ತಾರೆ. ಇವರು ಭಯೋತ್ಪಾದಕರಲ್ಲ ಅಥವಾ ಇತರ ಪ್ರತಿಭಟನಾಕಾರರಂತೆ ಇವರನ್ನು ಪರಿಗಣಿಸಬೇಕಿಲ್ಲ. ಅವರಿಗೆ ಹೇಳಿಕೊಳ್ಳಲು ಬಿಡಬೇಕು. ಜನಪ್ರತಿನಿಧಿಗಳು ಅವರನ್ನು ಆಲಿಸಬೇಕು. ಅದರ ಜೊತೆ ಜೊತೆಗೇ ಕೃಷಿ ಸಮಸ್ಯೆಯನ್ನು ಅರಿತುಕೊಳ್ಳುವ ಮತ್ತು ಕೃಷಿಗೆ ಸಂಬಂಧಿಸಿದ ಜ್ಞಾನ ಪಡೆದುಕೊಳ್ಳುವ ಮನಸ್ಸೂ ಹೊಂದಿರಬೇಕು. ಕೃಷಿಯನ್ನು ಸಮಸ್ಯೆಯಾಗಿ ಕಾಣುವುದಕ್ಕಿಂತ ಅದನ್ನು ಜೀವನ ಮಾರ್ಗವಾಗಿ ಪರಿಗಣಿಸುವ ಪ್ರಬುದ್ಧತೆ ಬರಬೇಕು. ದುರಂತ ಏನೆಂದರೆ, ಕೃಷಿ ಪ್ರದೇಶದಿಂದ ಆಯ್ಕೆಯಾಗುವ ಜನಪ್ರತಿನಿಧಿಗೂ ಕೃಷಿಯೊಂದಿಗೆ ಸಂಬಂಧ ಇರುವುದು ತೀರಾ ತೆಳು ಮಟ್ಟದಲ್ಲಿ. ನಗರದಲ್ಲಿ ಬೆಳೆದ ವ್ಯಕ್ತಿ ಅಥವಾ ಗದ್ದೆಗೆ ಇಳಿಯಲು ಹೇಸಿಗೆ ಪಡುವ ವ್ಯಕ್ತಿ ಈ ದೇಶದ ಕಾನೂನು ನಿರ್ಮಾತೃ ಆಗುತ್ತಾನೆ. ಕೃಷಿಕರನ್ನು ಆಳುತ್ತಾನೆ. ಬಜೆಟ್ ಮಂಡಿಸುತ್ತಾನೆ. ಕೃಷಿಗೆ ಸಂಬಂಧಿಸಿ ಹಲವಾರು ಸಮಿತಿಗಳು ನೀಡಿರುವ ಅನೇಕ ವರದಿಗಳ ಬಗ್ಗೆ ಏನೇನೂ ಗೊತ್ತಿಲ್ಲದವರೇ ನಮ್ಮ ಶಾಸನ ಸಭೆಗಳಲ್ಲಿ ಹೆಚ್ಚಿದ್ದಾರೆ. ಎಂ.ಎಸ್. ಸ್ವಾಮಿನಾಥನ್ ಅವರು ರೈತ ಸಾವನ್ನು ತಡೆಗಟ್ಟುವುದಕ್ಕೆ ಹಲವು ಮಾರ್ಗಗಳನ್ನು ಸೂಚಿಸಿದ್ದಾರೆ. ‘ರೈತನು ಗದ್ದೆಗೆ ಹೂಡುವ ಬೆಲೆಯ ಅರ್ಧದಷ್ಟು ಬೆಂಬಲ ಬೆಲೆಯನ್ನು ಆತನ ಫಸಲಿಗೆ ನೀಡಬೇಕೆಂಬುದು’ ಅವರು ನೀಡಿರುವ ವರದಿಯ ಪ್ರಮುಖ ಅಂಶ. ಮಂಡಸೂರ್ ಪ್ರತಿಭಟನೆಗೆ ಸಂಬಂಧಿಸಿ ಈ ವರದಿ ಅತಿ ಉಪಯುಕ್ತವಾದುದು. ಆದರೆ, ಶಿವರಾಜ್ ಸಿಂಗ್ ಚೌಹಾಣ್‍ರು ಇಡೀ ಪ್ರತಿಭಟನೆಯನ್ನು ಜೋಕ್ ಆಗಿ ಪರಿವರ್ತಿಸಿದರು. ರೈತ ಪ್ರತಿಭಟನೆಗೆ ವಿರುದ್ಧವಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕುಳಿತರು. ಅಷ್ಟೇ ಶೀಘ್ರವಾಗಿ ಲಿಂಬೆ ಜ್ಯೂಸ್ ಕುಡಿದು ಸತ್ಯಾಗ್ರಹದಿಂದ ಮುಕ್ತವಾದರು. ಒಂದು ಕಡೆ ಪ್ರತಿಭಟನಾಕಾರರ ಮೇಲೆ ಗುಂಡೆಸೆಯುತ್ತಲೇ ಇನ್ನೊಂದು ಕಡೆ ತಾನು ಗಾಂಧಿ ಮಾರ್ಗದಲ್ಲಿದ್ದೇನೆ ಎಂದು ಸಾರುವ ಬುದ್ಧಿವಂತಿಕೆ ಇದು. ಏಕಕಾಲದಲ್ಲಿ ರೈತರನ್ನು ವಿಲನ್‍ಗಳಾಗಿಯೂ ತಾನು ಮತ್ತು ತನ್ನ ಸರಕಾರವನ್ನು ಹೀರೋ ಆಗಿಯೂ ಬಿಂಬಿಸಿಕೊಂಡ ಕ್ಷಣ ಇದು. ಮಾಧ್ಯಮಗಳೂ ಚೌಹಾಣ್‍ರ ಬಲೆಯೊಳಗೆ ಬಿದ್ದುವು. ರೈತರನ್ನು ಗೂಂಡಾಗಳಂತೆ ಮತ್ತು ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಂತೆ ಪರೋಕ್ಷವಾಗಿ ಅವು ಸಾರಿದುವು. ರೈತರನ್ನು ಭೇಟಿಯಾಗಲು ಹೋದವರನ್ನು ಸರಕಾರ ಅರ್ಧದಲ್ಲೇ  ತಡೆಯಿತು. ಅದಕ್ಕೆ ಕಾನೂನು ಸುವ್ಯವಸ್ಥೆಯ ಸಬೂಬು ನೀಡ ಲಾಯಿತು. ಒಟ್ಟಿನಲ್ಲಿ ರೈತರನ್ನು ಸಮಾಜದಿಂದ ಪ್ರತ್ಯೇಕಗೊಳಿಸಿ, ಉದ್ರಿಕ್ತವಾಗಬಹುದಾದ ಎಲ್ಲ ಮಾರ್ಗವನ್ನೂ ಮುಕ್ತಗೊಳಿಸಿ, ಕೊನೆಗೆ ಸದೆಬಡಿಯುವ ತಂತ್ರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು. ಮುಖ್ಯವಾಗಿ, ರೈತರಿಗೆ ರಾಜಕೀಯದ ಒಳ-ಸುಳಿಗಳು ಗೊತ್ತಿಲ್ಲ. ಗದ್ದೆಯಲ್ಲಿ ಅವರು ತಮ್ಮ ಹಣವನ್ನು ಹೂಡುತ್ತಾರೆ. ಅದಕ್ಕಾಗಿ ಬ್ಯಾಂಕುಗಳಿಂದಲೋ ಕೈಗಡವಾಗಿಯೋ ಸಾಲವನ್ನು ಪಡೆಯುತ್ತಾರೆ. ಫಸಲು ನಿರೀಕ್ಷಿಸುತ್ತಾರೆ. ಅವರ ಬಹುತೇಕ ಗಮನ ಗದ್ದೆ-ಫಸಲು, ಬ್ಯಾಂಕುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಎಲ್ಲವೂ ಕೈಕೊಟ್ಟಿತು ಅನ್ನುವಾಗ ಬೀದಿಗಿಳಿಯುತ್ತಾರೆ. ಮಂಡಸೂರ್‍ನ ರೈತರ ಪ್ರತಿಭಟನೆಗೆ ಮುಖ್ಯ ಕಾರಣ, ಅತಿವೃಷ್ಟಿ. ಗದ್ದೆಗೆ ಎಷ್ಟು ಹೂಡಿಕೆ ಮಾಡಿದ್ದಾರೋ ಆ ಮೊತ್ತವೂ ಲಭ್ಯವಾಗದಷ್ಟು ಬೆಲೆ ಪಾತಾಳಕ್ಕೆ ಕುಸಿದಿತ್ತು. ಅಲ್ಲದೇ ನೋಟು ಅಮಾನ್ಯವು ರೈತರ ಸಮಸ್ಯೆಗಳಿಗೆ ಉಪ್ಪು-ಖಾರವನ್ನು ಹಚ್ಚಿತ್ತು. ಆದರೆ ಕೇಂದ್ರ ಸರಕಾರವು ಒಟ್ಟು ಬೆಳವಣಿಗೆಯನ್ನು ‘ಭಯೋ ತ್ಪಾದನೆ’ಯ ಕಣ್ಣಲ್ಲಿ ಅಳೆಯುವುದರೊಂದಿಗೆ ಇಡೀ ಸನ್ನಿವೇಶವೇ ಬದಲಾಯಿತು. ರೈತರೆಲ್ಲ ಆಂತರಿಕ ಸುರಕ್ಷತೆಗೆ ಅಪಾಯಕಾರಿಗಳಾಗಿ ಕಂಡುಬಂದರು. ಗುಂಡು ಹಾರಿಸಿದ್ದನ್ನೂ ಸಮರ್ಥಿಸಿಕೊಳ್ಳಲಾಯಿತು. ಇಡೀ ಪ್ರಕರಣವನ್ನು ನಿಭಾಯಿಸುವಲ್ಲಿ ಚೌಹಾಣ್ ಸಂಪೂರ್ಣ ವಿಫಲರಾದರೂ ಅವರ ಸತ್ಯಾಗ್ರಹವೇ ರೈತ ಪ್ರತಿಭಟನೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ರಾಜಕಾರಣಿಯೋರ್ವ ರೈತನನ್ನು ಯಾವ ಆಯುಧವೂ ಇಲ್ಲದೇ ಹೇಗೆ ಸೋಲಿಸಬಲ್ಲ ಎಂಬುದಕ್ಕೆ ದೃಷ್ಟಾಂತ ಇದು. ಜಂತರ್ ಮಂತರ್‍ನಲ್ಲಿ ರೈತರನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರ ಸರಕಾರವು ದಮನಿಸಿದರೆ, ಮಂಡಸೂರ್‍ನ ರೈತರ ಮೇಲೆ ಬಲಪ್ರಯೋಗಿಸುವ ಮೂಲಕ ಅಲ್ಲಿನ ರಾಜ್ಯ ಸರಕಾರ ದಮನಿಸಿತು. ಈ ದಮನವು ಸಾರ್ವ ಜನಿಕ ಚರ್ಚೆಗೆ ಒಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಸತ್ಯಾಗ್ರಹದ ನಾಟಕವೂ ನಡೆಯಿತು. ರೈತರು ರಾಜಕೀಯದಲ್ಲಿ ಪಳಗಿಲ್ಲ ವಾದುದರಿಂದ ಜಂತರ್ ಮಂತರ್ ಮತ್ತು ಮಂಡಸೂರ್ ಎರಡೂ ಕಡೆ ತೀವ್ರ ವೈಫಲ್ಯ ಅನುಭವಿಸಿದರು.
     ಈ ದೇಶದಲ್ಲಿ 40 ಸಾವಿರದಷ್ಟು ವೈವಿಧ್ಯಮಯ ಭತ್ತದ ತಳಿಗಳಿವೆ ಎಂದು ಹೇಳಲಾಗುತ್ತದೆ. ಎಲ್ಲ ಮಣ್ಣಲ್ಲೂ ಎಲ್ಲ ತಳಿಗಳೂ ಹುಲಸಾದ ಫಸಲನ್ನು ಕೊಡಲಾರವು. ಅದಕ್ಕೆ ಮಣ್ಣು ಮ್ಯಾನೇಜ್‍ಮೆಂಟ್‍ನ ಅರಿವು ಇರಬೇಕು. ಕಾಲ-ವಾತಾವರಣಕ್ಕೆ ಸಂಬಂಧಿಸಿ ಬೆಳೆಯಲ್ಲಿ ವೈವಿಧ್ಯತೆಯನ್ನು ತರುವ ಅರಿವು ರೈತ ನಿಗಿರಬೇಕು. ವೈಜ್ಞಾನಿಕ ಕೃಷಿ ಪದ್ಧತಿಯ ಜ್ಞಾನ ಇರಬೇಕು. ಬೆಳೆದ ಫಸಲಿಗೆ ಸೂಕ್ತ ಮಾರುಕಟ್ಟೆ ದರವೂ ದೊರಕಬೇಕು. ಆದರೆ ಕೃಷಿಯನ್ನು ಅಧ್ಯಯನ ನಡೆಸದ ಜನಪ್ರತಿನಿಧಿಗಳು ಮತ್ತು ಕೃಷಿ ಭೂಮಿಯನ್ನು ನಕಲಿ ಗೋರಕ್ಷಕರಂತೆ ನೋಡುವ ಆಡಳಿತಗಾರರು ದೇಶದಲ್ಲಿದ್ದಾರೆ. ಅವರಿಗೆ ರೈತರೂ ಒಂದೇ. ಉಗ್ರರೂ ಒಂದೇ. ದಮನಿಸುವುದೇ ಅವರ ಧರ್ಮ.
ಒಂದು ವೇಳೆ
   ತಿಯೋಡರ್ ಶಾನಿನ್ ಭಾರತದ ಈಗಿನ ರೈತರ ಬಗ್ಗೆ ಬರೆಯುತ್ತಿದ್ದರೆ ಆ ಕೃತಿಗೆ ‘ರೈತರು ಮತ್ತು ರೈತ ಸಮಾಜಗಳು’ ಎಂಬುದರ ಬದಲು ‘ರೈತರು ಮತ್ತು ಭಯೋತ್ಪಾದಕ ಸರಕಾರಗಳು’ ಎಂಬ ಶೀರ್ಷಿಕೆಯನ್ನು ಕೊಡುತ್ತಿದ್ದರೇನೋ.. 

No comments:

Post a Comment