Wednesday, July 19, 2017

ಮಾಂಸ ವಿರೋಧಿ ಧರ್ಮದಲ್ಲಿ ಮಾಂಸಾಹಾರಿಗಳೇ ಬಹುಸಂಖ್ಯಾತರಾಗಿರುವುದೇಕೆ?

 
   ಎರಡು ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡತೊಡಗಿದೆ.
1. ಮಾಂಸ ಮತ್ತು ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ನಿಷೇಧಿಸಿದೆಯೇ?
2. ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸ ಇದ್ದೂ ದೇಶದಾದ್ಯಂತ ಬಹುದೊಡ್ಡ ಸಂಖ್ಯೆಯ ಹಿಂದೂಗಳು ಈಗಲೂ ಮಾಂಸಾಹಾರ ಸೇವಕರಾಗಿರುವುದಕ್ಕೆ ಕಾರಣಗಳೇನು?
    ಈ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಒಂದೋ, ಹಿಂದೂ ಧರ್ಮವು ಮಾಂಸ ಮತ್ತು ಗೋಮಾಂಸ ಸೇವನೆಯ ವಿರೋಧಿಯಲ್ಲ ಅಥವಾ ಇವತ್ತು ನಾವು ಯಾರನ್ನೆಲ್ಲ ಹಿಂದೂಗಳು ಎಂದು ಕರೆಯುತ್ತೇವೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಅವರ ಧರ್ಮ ಬೇರೆ. ಅವರ ಆಚಾರ-ವಿಚಾರ ಬೇರೆ. ಅವರ ಸಂಸ್ಕೃತಿ ಬೇರೆ. ಅವರ ಕೌಟುಂಬಿಕ ವಿಧಾನಗಳು ಬೇರೆ. ಅವರ ಆಹಾರ ಕ್ರಮ ಬೇರೆ. ಅವರ ಆರಾಧನಾ ವಿಧಾನ ಬೇರೆ. ಅವರ ದೈವಿಕ ನಂಬಿಕೆಗಳು ಬೇರೆ. ಹೀಗೆ ಅನೇಕಾರು ‘ಬೇರೆ’ಗಳುಳ್ಳ ಬಹುದೊಡ್ಡ ಜನಸಮೂಹವನ್ನು ಹಿಂದೂ ಧರ್ಮದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ನಂಬಬೇಕಾಗುತ್ತದೆ. ಹಿಂದೂ ಧರ್ಮಕ್ಕೆ ಕ್ರಿಸ್ತಪೂರ್ವ 5000ಕ್ಕಿಂತ ಅಧಿಕ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆ ಕಾಲದಿಂದಲೇ ಗೋಮಾಂಸ ಸೇವನೆಯನ್ನು ಹಿಂದೂ ಧರ್ಮವು ಪಾಪಕರವೆಂದು ಬೋಧಿಸುತ್ತಾ ಬಂದಿದೆ ಎಂದೂ ವಾದಿಸಲಾಗುತ್ತದೆ. ನಾಲ್ಕು ವೇದಗಳು, ಪುರಾಣಗಳು, ಭಗವದ್ಗೀತೆ.. ಎಲ್ಲವನ್ನೂ ಗೋಮಾಂಸ ಸೇವನೆಯ ವಿರೋಧಕ್ಕೆ ಆಧಾರವಾಗಿ ಆಧುನಿಕ ಗೋರಕ್ಷಕರು ನೀಡುತ್ತಾ ಬಂದಿದ್ದಾರೆ. ಇದು ನಿಜವೇ ಆಗಿದ್ದರೆ ಯಾಕೆ ಗೋಮಾಂಸ ಸೇವಕರಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದೂ ಧರ್ಮಾನುಯಾಯಿಗಳು ಈಗಲೂ ಇದ್ದಾರೆ? ಹಿಂದೂ ಧರ್ಮದ ಇಷ್ಟು ದೀರ್ಘ ಇತಿಹಾಸವೂ ಅವರನ್ನು ಈವರೆಗೂ ಬದಲಿಸದಿರಲು ಕಾರಣವೇನು? ನಿಜವಾಗಿ ಯಾವುದೇ ಒಂದು ಧರ್ಮದ ಮೂಲಭೂತ ನಿಯಮಗಳು ಸಾರಾಸಗಟು ಅವಜ್ಞೆಗೆ ಒಳಗಾಗಲು ಸಾಧ್ಯವೇ ಇಲ್ಲ. ಉಲ್ಲಂಘನೆಯ ಅಲ್ಲೊಂದು ಇಲ್ಲೊಂದು ಪ್ರಕರಣಗಳು ನಡೆಯಬಹುದು. ಮಾತ್ರವಲ್ಲ, ಯಾರಾದರೂ ಈ ಉಲ್ಲಂಘನೆಯನ್ನು ಪ್ರಶ್ನಿಸುತ್ತಾರೋ ಅನ್ನುವ ಭಯವೂ ಆ ಉಲ್ಲಂಘಕರಲ್ಲಿ ಇದ್ದೇ ಇರುತ್ತದೆ. ಮೂರ್ತಿ ಪೂಜೆ ಹಿಂದೂ ಧರ್ಮದ ಮತಾಚಾರ್ಯರ ಪ್ರಕಾರ ಮೂಲಭೂತ ನಿಯಮ. ವೇದಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಉಲ್ಲೇಖಗಳಿವೆ ಎಂಬ ವಾದವೇನೇ ಇರಲಿ, ಹಿಂದೂ ಧರ್ಮದ ಆಧುನಿಕ ಗುರುಗಳು ಮೂರ್ತಿಪೂಜೆಯನ್ನು ಹಿಂದೂ ಧರ್ಮದ ಪ್ರಮುಖ ಆರಾಧನಾ ವಿಧಾನವಾಗಿ ಪರಿಗಣಿಸಿದ್ದಾರೆ. ಹಾಗಂತ ಮೂರ್ತಿಪೂಜೆಯನ್ನು ಮಾಡದವರೂ ಇರಬಹುದು. ಮೂರ್ತಿಪೂಜೆಯ ಸಿಂಧುತ್ವವನ್ನೇ ಪ್ರಶ್ನಿಸುವವರೂ ಇರಬಹುದು. ಆದರೆ ಇವರೆಂದೂ ಮೂರ್ತಿಯನ್ನು ಬಹಿರಂಗವಾಗಿ ಒಡೆದು ಹಾಕುವುದಾಗಲಿ, ಒಡೆಯುವವರನ್ನು ಬಹಿರಂಗವಾಗಿ ಬೆಂಬಲಿಸುವುದಾಗಲಿ ಎಲ್ಲೂ ಮಾಡಿಲ್ಲ. ಇದು ಹಿಂದೂ ಧರ್ಮದಲ್ಲಿ ಮೂರ್ತಿಪೂಜೆಗಿರುವ ಐತಿಹಾಸಿಕ ಪರಂಪರೆಯನ್ನು ಒತ್ತಿ ಹೇಳುತ್ತದೆ. ವಿಗ್ರಹಕ್ಕೆ ಹಾಲು ಬೇಕೋ, ನೈವೇದ್ಯ ಅರ್ಪಿಸಬೇಕೋ, ಎಳನೀರಿನಿಂದ ಶುದ್ಧಗೊಳಿಸ ಬೇಕೋ.. ಇತ್ಯಾದಿ ಪ್ರಶ್ನೆಗಳೆಲ್ಲದರಲ್ಲೂ ಒಂದು ಒಳ ಸತ್ಯವಿದೆ. ಈ ಪ್ರಶ್ನೆಗಳು ಮೂರ್ತಿಪೂಜೆಯನ್ನು ಪ್ರಶ್ನಿಸುವುದಿಲ್ಲ. ಅದರ ಆರಾಧನಾ ವಿಧಾನವನ್ನಷ್ಟೇ ಪ್ರಶ್ನಿಸುತ್ತದೆ. ಒಂದು ವೇಳೆ, ಗೋಮಾಂಸ ಸೇವನೆಯ ವಿಷಯದಲ್ಲಿ ಹಿಂದೂ ಧರ್ಮವು ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿರುತ್ತಿದ್ದರೆ ಹಿಂದೂ ಧರ್ಮದ ಅನುಯಾಯಿಗಳು ಗೋಮಾಂಸ ಸೇವನೆಯನ್ನು ತಮ್ಮ ಆಹಾರ ಕ್ರಮವಾಗಿ ಪಾಲಿಸುತ್ತಿರಲು ಹೇಗೆ ಸಾಧ್ಯ? ಇದು ಒಂದೋ ಅವರು ಹಿಂದೂಗಳಲ್ಲ ಎಂಬುದಕ್ಕೆ ಸಾಕ್ಷ್ಯ ವಹಿಸುತ್ತದೆ ಅಥವಾ ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷಿದ್ಧವಲ್ಲ ಎಂದು ಸಾರಿದಂತಾಗುತ್ತದೆ.
     ಒಂದು ರೀತಿಯಲ್ಲಿ, ಹಿಂದೂ ಧರ್ಮದ ನಿಜವಾದ ಪ್ರತಿ ನಿಧಿಗಳು ಯಾರು ಮತ್ತು ಅದಕ್ಕೆ ಬಲವಂತವಾಗಿ ಸೇರ್ಪಡೆಗೊಂಡ ವರು ಯಾರು ಅನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಗೋವು ಒಂದು ಪರಿಣಾಮಕಾರಿ ಭೂತಗನ್ನಡಿ ಎಂದೂ ಹೇಳಬಹುದು. ಗೋಮಾಂಸ ಸೇವನೆ ಪಾಪಕಾರ್ಯ ಎಂದು ಹೇಳುತ್ತಿರುವುದು ಬ್ರಾಹ್ಮಣ ಸಮೂಹ. ಅದು ಮಾಂಸಾಹಾರವನ್ನೇ ಒಪ್ಪುವುದಿಲ್ಲ. ಇದು ತಪ್ಪು ಎಂದಲ್ಲ. ಆದರೆ ಇದೇ ಸಂದರ್ಭದಲ್ಲಿ ಈ ಬ್ರಾಹ್ಮಣ ಸಮೂಹಕ್ಕಿಂತ ಎಷ್ಟೋ ಪಟ್ಟು ಅಧಿಕ ಸಂಖ್ಯೆಯ ಮಂದಿ ಗೋಮಾಂಸವನ್ನು ಸೇವಿಸುತ್ತಾರೆ. ಮಾಂಸಾಹಾರವನ್ನೂ ಸೇವಿಸುತ್ತಾರೆ. ಅವರೆಲ್ಲರ ಹೆಸರೂ ಹಿಂದೂ ಧರ್ಮದ ಪಟ್ಟಿ ಯಲ್ಲಿದೆ. ಈ ದೇಶದಲ್ಲಿ 80 ಕೋಟಿಗಿಂತ ಅಧಿಕ ಹಿಂದೂ ಧರ್ಮೀಯರಿದ್ದಾರೆ ಎಂದು ಲೆಕ್ಕ ಹಾಕುವಾಗ ಅವರಲ್ಲಿ ಮಾಂಸಾಹಾರಿಗಳು ಮತ್ತು ಗೋಮಾಂಸ ಸೇವಕರೇ ಅಧಿಕವಿದ್ದಾರೆ ಎಂಬುದು ಬಹಿರಂಗ ರಹಸ್ಯ. ಈ ವೈರುಧ್ಯವೇಕೆ? ಇದು ಕೊಡುವ ಸೂಚನೆಯೇನು? ಒಂದೋ ಬ್ರಾಹ್ಮಣರು ನಿಜವಾದ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಅಥವಾ ಗೋಮಾಂಸ ಮತ್ತು ಮಾಂಸಾಹಾರವನ್ನು ಸೇವಿಸುವ ಈ ದೇಶದ ಬಹುದೊಡ್ಡ ಜನಸಮುದಾಯವನ್ನು ಅಕ್ರಮವಾಗಿ ಹಿಂದೂ ಧರ್ಮದ ಪಟ್ಟಿ ಯಲ್ಲಿಟ್ಟು ಲೆಕ್ಕ ಹಾಕಲಾಗುತ್ತಿದೆ ಎಂಬುದನ್ನೇ ಅಲ್ಲವೇ? ಅಲ್ಲದೇ ಮಾಂಸಾಹಾರವೇ ನಿಷಿದ್ಧವಾಗಿರುವ ಧರ್ಮವೊಂದರಲ್ಲಿ ಮಾಂಸಾಹಾರ ಸೇವಿಸುವ ಅನುಯಾಯಿಗಳ ಸಂಖ್ಯೆಯೇ ಹೆಚ್ಚಿರುವುದಕ್ಕೆ ಸಾಧ್ಯವೇ ಇಲ್ಲ. ಪ್ರಶ್ನೆಗಳು ಹುಟ್ಟಿಕೊಳ್ಳುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳು ಯಾರು? ಅವರ ಧರ್ಮ ಯಾವುದಾಗಿತ್ತು? ಆ ಧರ್ಮದ ಆಹಾರ ಕ್ರಮಗಳಿಗೂ ಇವತ್ತು ಹಿಂದೂ ಧರ್ಮದ ಅಧಿಕೃತ ಪ್ರತಿನಿಧಿಗಳೆಂದು ಹೇಳುವವರ ಆಹಾರ ಕ್ರಮಗಳಿಗೂ ನಡುವೆ ತಾಳಮೇಳವಿದೆಯೇ? ಅವರ ಉಡುಪಿನ ಶೈಲಿ ಹೇಗಿತ್ತು? ಅವರ ಭಾಷೆ ಯಾವುದಾಗಿತ್ತು? ಆರಾಧನಾ ವಿಧಾನಗಳು ಹೇಗಿದ್ದುವು? ಬಹುಶಃ ಆರ್ಯರು ಈ ದೇಶಕ್ಕೆ ದಂಡೆತ್ತಿ ಬಂದರು ಎಂಬ ವಾದ ಬಲ ಪಡೆಯುವುದೂ ಇಲ್ಲೇ. ಈ ದೇಶದ ಮೂಲ ನಿವಾಸಿಗಳ ಧರ್ಮ ಮಾಂಸಾಹಾರ ರಹಿತ ಹಿಂದೂ ಧರ್ಮವಾಗಿರುವ ಸಾಧ್ಯತೆ ತೀರಾ ತೀರಾ ತೀರಾ ಕಡಿಮೆ. ಆರ್ಯರು ಕ್ರಮೇಣ ಈ ಉಪಭೂಖಂಡಕ್ಕೆ ಕಾಲಿಡುವ ಸಮಯದಲ್ಲಿ ಇಲ್ಲಿನ ಮೂಲ ನಿವಾಸಿಗಳು ಮಾಂಸಾಹಾರಿಗಳಾಗಿದ್ದರು. ವಿವಿಧ ಬುಡಕಟ್ಟುಗಳಾಗಿ ಬದುಕುತ್ತಿರುವ ಸಮೂಹವೊಂದರ ಮಧ್ಯೆ ಆರ್ಯರು ಪ್ರಾಬಲ್ಯ ಸ್ಥಾಪಿಸಿದರು. ಆರಂಭದಲ್ಲಿ ಈ ಬುಡಕಟ್ಟುಗಳ ಮನ ಗೆಲ್ಲಲಿಕ್ಕಾದರೂ ಆರ್ಯರು ಮಾಂಸಾಹಾರಿಗಳಾಗಿರಬೇಕಾದ ಅನಿವಾರ್ಯತೆಯೇ ಹೆಚ್ಚು. ಅಲ್ಲದೇ ಪುರಾತನ ಕಾಲದಲ್ಲಿ ಬರೇ ಹಣ್ಣು-ಹಂಪಲುಗಳನ್ನು ಮತ್ತು ಸಸ್ಯಾಹಾರವನ್ನು ಮಾತ್ರ ಸೇವಿಸಿಕೊಂಡು ಬದುಕಬಹುದಾದ ವಾತಾವರಣ ಇತ್ತು ಎಂದು ಹೇಳುವ ಹಾಗಿಲ್ಲ. ಕೃಷಿ ಕ್ರಾಂತಿ ನಡೆಯದ ಕಾಲ ಅದು. ಇವತ್ತಿನಂತೆ ಫಸಲು ಕೈಕೊಟ್ಟರೆ, ಅನಾವೃಷ್ಟಿಯಾದರೆ, ಪ್ರತಿಭಟನೆ ಮಾಡಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾದ ವ್ಯವಸ್ಥಿತ ಸರಕಾರಿ ವ್ಯವಸ್ಥೆಯೂ ಅಂದಿನದಲ್ಲ. ಇವತ್ತಿನಂತೆ ಮಾಧ್ಯಮ ಸೌಲಭ್ಯವೂ ಆ ಕಾಲದ ಜನಸಮೂಹಕ್ಕೆ ಲಭ್ಯವಿದ್ದಿರಲಿಲ್ಲ. ಆದ್ದರಿಂದ ಯಾವ ಪ್ರದೇಶದಲ್ಲಿ ಯಾರು ವಾಸಿಸುತ್ತಾರೋ ಅವರಿಗೆ ಅಲ್ಲಿ ಲಭ್ಯವಿರುವುದೇ ಆಹಾರ. ಅದುವೇ ಅವರ ಧರ್ಮ. ಭಾರತಕ್ಕೆ ಆಗಮಿಸಿದ ಆರ್ಯರು ಇದಕ್ಕಿಂತ ಹೊರತಾಗಿ ಬದುಕಿದರು ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಲಭ್ಯತೆಯನ್ನು ಹೊಂದಿಕೊಂಡು ಸರಿ-ತಪ್ಪು ಅನ್ನಿಸಿಕೊಳ್ಳುತ್ತದೆ. ಪುರಾತನ ಕಾಲದಲ್ಲಿ ಭಾರತೀಯ ಉಪಭೂಖಂಡದಲ್ಲಿ ಎಲ್ಲೆಡೆಯೂ ಸಸ್ಯಾಹಾರ ವಿಫುಲವಾಗಿತ್ತು ಮತ್ತು ಮಾಂಸಾಹಾರವನ್ನು ಸೇವಿಸದೆಯೇ ಈ ಖಂಡದ ಪ್ರತಿ ತಗ್ಗು-ದಿಣ್ಣೆಗಳಲ್ಲೂ ಬದುಕಬಹುದಾದಂತಹ ಸ್ಥಿತಿಯಿತ್ತು ಎಂದು ವಾದಿಸುವುದು ಹಠಮಾರಿತನವಾಗಬಹುದೇ ಹೊರತು ಅದು ವಾಸ್ತವವನ್ನು ಪ್ರತಿನಿಧಿಸಲಾರದು. ಈ ಉಪಭೂಖಂಡದಲ್ಲಿ ಮಾಂಸಾಹಾರಿಗಳೇ ಅಧಿಕ ಇದ್ದರು. ವಿವಿಧ ಬುಡಕಟ್ಟುಗಳಾಗಿ ಅವರು ಗುರುತಿಸಿಕೊಂಡಿದ್ದರು. ಅದುವೇ ಅವರ ಧರ್ಮ, ಸಂಸ್ಕೃತಿ. ಅವರಿಗೆ ಅವರದೇ ಆದ ರೀತಿಯ ಆರಾಧನಾ ವಿಧಾನಗಳಿದ್ದುವು. ಕಲ್ಲುರ್ಟಿ, ಪಂಜುರ್ಲಿ, ಬಬ್ಬರ್ಯೆ, ಪಿಲಿ ಚಾಮುಂಡಿ, ಕೊಡಮಂತಾಯ.. ಮುಂತಾದ ಹೆಸರಿನ ನೂರಾರು ಆರಾಧ್ಯರು ಗಳನ್ನು ಇವತ್ತಿಗೂ ವಿವಿಧ ಬುಡಕಟ್ಟುಗಳು ಆರಾಧಿಸುತ್ತಿರುವುದು ಇದನ್ನೇ ಸೂಚಿಸುತ್ತದೆ. ಇಲ್ಲಿ ಕೋಲ ನಡೆಯುತ್ತದೆ. ಇಲ್ಲಿನ ಆರಾಧನಾ ಪದ್ಧತಿಯ ವಿಧಾನವೇ ಬೇರೆ. ಮೈಯಲ್ಲಿ ದೆವ್ವ ಬರುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ. ಕೋಳಿ-ಕುರಿ-ಆಡು ಮತ್ತು ಜಾನುವಾರುಗಳನ್ನು ಬಲಿ ಕೊಡುವ ಪದ್ಧತಿಯೂ ಇಲ್ಲಿದೆ. ಇಲ್ಲಿ ಆರಾಧನಾ ಪದ್ಧತಿಯನ್ನು ನೆರವೇರಿಸಿ ಕೊಡುವ ವ್ಯಕ್ತಿಯ ವೇಷ ವಿಧಾನವು ಬ್ರಾಹ್ಮಣ ಸಮೂಹದ ಪುರೋಹಿತರ ವೇಷ ವಿಧಾನಕ್ಕೆ ಯಾವ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಇವರ ನಡುವೆ ಹೆಸರಿನಲ್ಲೂ ಉತ್ತರ-ದಕ್ಷಿಣ ಅನ್ನುವಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ, ಒಂದು ಧರ್ಮದ ಅನುಯಾಯಿಗಳನ್ನು ಅವರ ಹೆಸರಿನ ಮೂಲಕ ಗುರುತಿಸಲಾಗುತ್ತದೆ. ಮುಸ್ಲಿಮ್, ಕ್ರೈಸ್ತ, ಯಹೂದಿ, ಸಿಕ್ಖ್.. ಮುಂತಾದ ಧರ್ಮದ ಅನುಯಾಯಿಗಳನ್ನು ಗುರುತಿಸುವುದಕ್ಕೆ ಬಹಳ ಸಾಹಸ ಪಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ದೇಶಗಳಲ್ಲಿರುವ ಈ ಧರ್ಮದ ಅನುಯಾಯಿಗಳ ಹೆಸರಿನಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರೂ ಅವರನ್ನು ಗುರುತಿಸಲು ಅಸಾಧ್ಯವಾಗುವಷ್ಟು ಈ ವ್ಯತ್ಯಾಸ ದೊಡ್ಡದಿರುವುದಿಲ್ಲ. ಆದರೆ ಭಾರತದಲ್ಲೇ ಇರುವ ಹಿಂದೂ ಧರ್ಮದ ಅನುಯಾಯಿಗಳ ಹೆಸರನ್ನೊಮ್ಮೆ ಪರಿಶೀಲಿಸಿ. ಅವೆಲ್ಲ ತೀರಾ ತೀರಾ ಭಿನ್ನ. ಬಹುಶಃ, ಇವತ್ತು ಹಿಂದೂ ಧರ್ಮದ ಅನುಯಾಯಿಗಳಾಗಿ ಯಾರೆಲ್ಲ ಗುರುತಿಸಿಕೊಂಡಿದ್ದಾರೋ ಅಥವಾ ಆ ಪಟ್ಟಿಯಲ್ಲಿ ಯಾರನ್ನೆಲ್ಲ ಸೇರ್ಪಡೆಗೊಳಿಸಲಾಗಿದೆಯೋ ಅವರೆಲ್ಲ ಮೂಲತಃ ಹಿಂದೂಗಳಲ್ಲ. ಈಗಲೂ ಅಲ್ಲ. ಅವರವರಿಗೆ ಅವರದೇ ಆದ ಬುಡಕಟ್ಟು ಧರ್ಮ ಇದೆ. ಅವರದೇ ಆದ ಆಹಾರ ಕ್ರಮ ಇದೆ. ಸಾಂಸ್ಕ್ರಿತಿಕ ಹಿನ್ನೆಲೆ ಇದೆ. ಆದರೆ ಅವರ ಮೇಲೆ ಬಲವಂತದಿಂದ ಹಿಂದೂ ಧರ್ಮವನ್ನು ಹೇರಲಾಗಿದೆ ಅಥವಾ ತಮ್ಮದೇ ವಿವಿಧ ಕಾರಣಗಳಿಗಾಗಿ ಅವರು ಈ ಧರ್ಮದ ಐಡೆಂಟಿಟಿಯನ್ನು ಸ್ವೀಕರಿಸಿಕೊಂಡಿದ್ದಾರೆ. ಆದರೆ ಇವರು ಅವರಾಗಿಲ್ಲ. ಯಾಕೆಂದರೆ ಇವರ ಧರ್ಮ ಅದಲ್ಲ. ಆದ್ದರಿಂದಲೇ ಇವರು ಮಾಂಸಾಹಾರ ಸೇವಿಸುತ್ತಾರೆ. ಇಂಥವರ ಸಂಖ್ಯೆಯೇ ಈ ದೇಶದಲ್ಲಿ ಬಹುಸಂಖ್ಯಾತವಾಗಿರುವುದರಿಂದಲೇ ಮಾಂಸಾಹಾರ ಸೇವಿಸದವರ ಸಂಖ್ಯೆ ಕಡಿಮೆಯೂ ಮಾಂಸಾಹಾರಿಗಳ ಸಂಖ್ಯೆ ಅಧಿಕವೂ ಆಗಿರುವುದು. ಒಂದು ವೇಳೆ ಗೋಮಾಂಸ ಮತ್ತು ಮಾಂಸಾಹಾರ ಸೇವನೆ ನಿಷೇಧವು ಹಿಂದೂ ಧರ್ಮದ ಮೂಲಭೂತ ನಿಯಮವಾಗಿ ಇರುತ್ತಿದ್ದರೆ ಆ ಧರ್ಮದಲ್ಲಿ ಕನಿಷ್ಠ ಬಹುಸಂಖ್ಯಾತ ಅನುಯಾಯಿಗಳು ಸಸ್ಯಾಹಾರಿಗಳಾಗಿರಬೇಕಿತ್ತು. ಇಸ್ಲಾಮ್‍ನಲ್ಲಿ ಮದ್ಯಪಾನ ನಿಷಿದ್ಧ. ಅದು ಅದರ ಮೂಲಭೂತ ಬೇಡಿಕೆ. ಇವತ್ತಿಗೂ ಇಸ್ಲಾಮಿನ ಬಹುಸಂಖ್ಯಾತ ಅನುಯಾಯಿಗಳು ಮದ್ಯ ಸೇವಿಸುವುದಿಲ್ಲ. ಬಾರ್ ನಡೆಸುವುದಿಲ್ಲ. ಮದ್ಯಪಾನ ಮಾಡುವ ಮುಸ್ಲಿಮರು ಅಲ್ಲೊಂದು ಇಲ್ಲೊಂದು ಸಿಗಬಹುದಾದರೂ ಮುಸ್ಲಿಮ್ ಸಮುದಾಯ ಈಗಲೂ ಅದನ್ನು ಅತ್ಯಂತ ಪ್ರಬಲ ಕೆಡುಕಾಗಿ ಪರಿಗಣಿಸುತ್ತದೆ. ಮುಸ್ಲಿಮ್ ಮದ್ಯಪಾನಿಯೂ ಕದ್ದು ಮುಚ್ಚಿಯೇ ಅದನ್ನು ಸೇವಿಸುತ್ತಾನೆ. ಉಪವಾಸ ಇಸ್ಲಾಮ್‍ನ ಮೂಲಭೂತ ಬೇಡಿಕೆ. ಇವತ್ತಿಗೂ ಬಹುಸಂಖ್ಯಾತ ಮುಸ್ಲಿಮರು ಅದನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಇದಕ್ಕೆ ಅಲ್ಲೊಂ ದು ಇಲ್ಲೊಂದು ಅಪವಾದಗಳಿರ ಬಹುದು. ಆದರೆ ಉಪವಾಸದ ಸಿಂಧುತ್ವವನ್ನು ಪ್ರಶ್ನಿಸುವ ಮತ್ತು ಉಪವಾಸದ ಸಮಯದಲ್ಲಿ ಬಹಿರಂಗವಾಗಿ ತಿನ್ನುವ ಪ್ರಕರಣಗಳು ನಡೆಯುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಮಾಂಸಾಹಾರ ಮತ್ತು ಗೋಮಾಂಸ ಸೇವನೆಗೆ ಸಂಬಂಧಿಸಿ ಹಿಂದೂ ಧರ್ಮದಲ್ಲಿ ಅದು ಸಂಪೂರ್ಣ ತದ್ವಿರುದ್ಧ.
ಯಾಕೆ ಹೀಗೆ? ಇದು ರವಾನಿಸುವ ಸಂದೇಶವೇನು?



No comments:

Post a Comment