1974ರಲ್ಲಿObedience to Authority (ಪ್ರಭುತ್ವಕ್ಕೆ ವಿಧೇಯತೆ) ಎಂಬ ಕೃತಿ ಬಿಡುಗಡೆಯಾಗುತ್ತದೆ. ಬಹುಶಃ ಇದು ಇಕ್ಮ್ಯಾನ್ ಮತ್ತು ಹನ್ನಾ ಅವರಿಬ್ಬರನ್ನು ಎದುರಿಟ್ಟುಕೊಂಡು ಬರೆಯಲಾದ ಪುಸ್ತಕವೇ ಎಂದು ಅನುಮಾನಿಸುವಷ್ಟರ ಮಟ್ಟಿಗೆ ಈ ಕೃತಿ ಚರ್ಚಿತವಾಗುತ್ತದೆ. ಆ ಕಾಲದಲ್ಲಿ ಬೆಸ್ಟ್ ಸೆಲ್ಲರ್ (ಹೆಚ್ಚು ಮಾರಾಟವಾದ) ಆದ ಕೃತಿ ಇದು.
ಅಮೇರಿಕದ ಯೇಲೆ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಸ್ಟಾನ್ಲಿ ಮಿಲ್ಗ್ರಾಮ್ ಎಂಬವರು ಅಂದಿನ ದಿನಪತ್ರಿಕೆಗಳಲ್ಲಿ ಒಂದು ಜಾಹೀರಾತನ್ನು ಪ್ರಕಟಿಸುತ್ತಾರೆ. 1962-63ರಲ್ಲಿ ನಡೆದ ಘಟನೆ ಇದು. ‘ತನ್ನ ಅಧ್ಯಯನದ ಮೇಲೆ ಪ್ರಯೋಗ ನಡೆಸುವುದಕ್ಕಾಗಿ ಸ್ವಯಂ ಸೇವಕರು ಬೇಕಾಗಿದ್ದಾರೆ..’ ಎಂಬುದೇ ಆ ಜಾಹೀರಾತು. ಆ ಜಾಹೀರಾತಿಗೆ ಸ್ಪಂದಿಸಿ ಹಲವು ಮಂದಿ ಹೆಸರು ನಮೂದಿಸುತ್ತಾರೆ. ಹೀಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಿಂದ ಅವರು ಇಬ್ಬರನ್ನು ತನ್ನ ಮೊದಲ ಪ್ರಯೋಗಕ್ಕಾಗಿ ಆಯ್ಕೆ ಮಾಡುತ್ತಾರೆ. ಇಬ್ಬರಿಗೆ ಎರಡು ಪ್ರತ್ಯೇಕ ಕೊಠಡಿಗಳು. ಇಬ್ಬರಲ್ಲಿ ಒಬ್ಬನಿಗೆ ಶಿಕ್ಷಕ ಮತ್ತು ಇನ್ನೊಬ್ಬನಿಗೆ ವಿದ್ಯಾರ್ಥಿ ಎಂದು ನಾಮಕರಣ ಮಾಡುತ್ತಾರೆ. ಶಿಕ್ಷಕ ಆ ಇಡೀ ಪ್ರಯೋಗದ ಕಾರ್ಯನಿರ್ವಾಹಕನೆಂದೂ ಹೇಳಲಾಗುತ್ತದೆ. ವಿದ್ಯಾರ್ಥಿಯನ್ನು ಕೊಠಡಿಯಲ್ಲಿ ಕೂರಿಸಿ ಆತನ ಕೈಗೆ ವಿದ್ಯುತ್ ವಯರುಗಳನ್ನು ಜೋಡಿಸುತ್ತಾರೆ. ಆತನಿಗೆ ಬರಹದ ಪ್ರತಿಯೊಂದನ್ನೂ ನೀಡುತ್ತಾರೆ. ಆತ ಅದನ್ನು ಕಲಿಯಬೇಕು. ಇನ್ನೊಂದು ಕೊಠಡಿಯಲ್ಲಿ ಶಿಕ್ಷಕನನ್ನು ಕೂರಿಸುತ್ತಾರೆ. 15ರಿಂದ 450 ವೋಲ್ಟ್ ವರೆಗೆ ವಿದ್ಯುತ್ ಶಾಕ್ ಕೊಡಬಲ್ಲ 30 ಸ್ವಿಚ್ಗಳುಳ್ಳ ಕೊಠಡಿ ಅದು. ಈ ಇಡೀ ಪ್ರಯೋಗದ ಕಾರ್ಯ ನಿರ್ವಾಹಕ ನೀನು ಎಂಬುದನ್ನು ಮತ್ತೊಮ್ಮೆ ಆತನಿಗೆ ಮಿಲ್ಗ್ರಾಮ್ ನೆನಪಿಸುತ್ತಾರೆ. ಈ ವ್ಯಕ್ತಿಯ ಹೊಣೆಗಾರಿಕೆ ಏನೆಂದರೆ, ವಿದ್ಯುತ್ ಇನ್ನೊಂದು ಕೋಣೆಯಲ್ಲಿರುವ ವಿದ್ಯಾರ್ಥಿಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಪ್ಪು ಉತ್ತರಕ್ಕೆ ಶಾಕ್ ಕೊಡುವುದು. 15 ವೋಲ್ಟ್ ನಿಂದ ಆರಂಭವಾಗುವ ವಿದ್ಯುತ್ನ ಪ್ರಮಾಣ ಅಧಿಕವಾಗುತ್ತಾ ಕೊನೆಗೆ 450 ವೋಲ್ಟ್ ಗೆ ತಲುಪುತ್ತದೆ. ಇನ್ನೊಂದು ಕೊಠಡಿಯಲ್ಲಿರುವ ವಿದ್ಯಾರ್ಥಿಯ ಕೈಗೆ ವಿದ್ಯುತ್ ವಯರುಗಳನ್ನು ಚುಚ್ಚಲಾಗಿದ್ದು, ನೀವು ಸ್ವಿಚ್ ಹಾಕುತ್ತಾ ಹೋದಂತೆ ಆತನ ಉತ್ತರದಲ್ಲಿ ಆಗುವ ವ್ಯತ್ಯಾಸವನ್ನು ನೀವು ಗಮನಿಸಿ ದಾಖಲಿಸಬೇಕು ಎಂದು ಶಿಕ್ಷಕನಿಗೆ ಹೇಳಲಾಗುತ್ತದೆ. ಆ ವಿದ್ಯಾರ್ಥಿ ತಪ್ಪು ಉತ್ತರ ಕೊಟ್ಟಾಗಲೆಲ್ಲ ಶಾಕ್ನ ತೀವ್ರತೆ ಯನ್ನು ಅಧಿಕಗೊಳಿಸುತ್ತಾ ಹೋಗುವ ಕ್ರಿಯೆ ಇದು. ಶಿಕ್ಷಕ ಆ ಕ್ರಿಯೆಯಲ್ಲಿ ತಲ್ಲೀನನಾಗುತ್ತಾನೆ. ವಿದ್ಯಾರ್ಥಿ ತಪ್ಪು ಉತ್ತರ ಕೊಡುವಾಗ ಶಾಕ್ನ ಪ್ರಮಾಣವನ್ನು ಈತ ಹೆಚ್ಚಿಸುತ್ತಾನೆ. ಕುತೂಹಲದ ಸಂಗತಿ ಏನೆಂದರೆ, ವಿದ್ಯಾರ್ಥಿಯ ಕೈಗೆ ಜೋಡಿಸಲಾದ ವಯರುಗಳಲ್ಲಿ ವಿದ್ಯುತ್ ಹರಿಯುತ್ತಲೇ ಇರಲಿಲ್ಲ. ಅದು ವಿದ್ಯಾರ್ಥಿಗೂ ಗೊತ್ತು. ಆತನಿಗೆ ಮೊದಲೇ ಆ ಬಗ್ಗೆ ಹೇಳಲಾಗಿತ್ತು. ಶಿಕ್ಷಕ ವಿದ್ಯುತ್ ಶಾಕ್ ಕೊಡುವಾಗಲೆಲ್ಲ ತಪ್ಪು ಉತ್ತರ ನೀಡಬೇಕೆಂದೂ ಹೇಳಲಾಗಿತ್ತು. ಶಿಕ್ಷಕನಿಗೆ ಮಾತ್ರ ಇದು ಗೊತ್ತಿರಲಿಲ್ಲ. ಇಂಥ ಪ್ರಯೋಗಕ್ಕೆ ಅನೇಕರನ್ನು ಒಡ್ಡಿದ ಬಳಿಕ ಮಿಲ್ ಗ್ರಾಮ್ ‘ಒಬಿಡಿಯನ್ಸ್ ಟು ಅಥೋರಿಟಿ’ ಎಂಬ ವಿಶ್ಲೇಷಣಾತ್ಮಕ ಕೃತಿ ಬರೆಯುತ್ತಾರೆ. ಅವರ ಪ್ರಕಾರ, ಒಂದು ಆದೇಶ ಎಂಬ ನೆಲೆಯಲ್ಲಿ ಶಿಕ್ಷಕನು ತನ್ನ ವಿದ್ಯಾರ್ಥಿಗೆ ವಿದ್ಯುತ್ ಶಾಕ್ ಕೊಟ್ಟುದುದನ್ನು ಮೇಲ್ನೋಟಕ್ಕೆ ಸಮರ್ಥಿಸಿಕೊಳ್ಳಬಹುದು. ಆದರೆ ಸಾಮಾನ್ಯ ಪ್ರಜ್ಞೆ ಇರುವವರು ಶಾಕ್ ಕೊಡಲು ಒಪ್ಪಲಾರರು. ಇದೊಂದು ಪ್ರಯೋಗ ಎಂದು ಹೇಳಿದರೂ ತನ್ನೆದುರಿನ ಇನ್ನೋರ್ವ ಮನುಷ್ಯನಿಗೆ ವಿದ್ಯುತ್ ಹರಿಸುವುದಕ್ಕೆ ಒಪ್ಪಿಕೊಳ್ಳುವುದು ಅಸಾಧ್ಯ. ಇದು ಕಾಮನ್ಸೆನ್ಸ್. ವಿದ್ಯುತ್ ಶಾಕ್ ತಗುಲಿದ ವ್ಯಕ್ತಿ ಚೀರುತ್ತಿದ್ದರೂ ಮತ್ತೆ ಮತ್ತೆ ಶಾಕ್ ಕೊಡಲು ಓರ್ವ ಸೈಕೋ ಪಾತ್ಗೆ ಮಾತ್ರ ಸಾಧ್ಯ. ಹಾಗಂತ, ಮಿಲ್ಗ್ರಾಮ್ರ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಪ್ರತಿ ಮೂರರಲ್ಲಿ ಇಬ್ಬರು ವ್ಯಕ್ತಿಗಳೂ (65%) 450 ವೋಲ್ಟ್ ನಷ್ಟು ಅಪಾಯಕಾರಿ ಪ್ರಮಾಣದಲ್ಲಿ ತನ್ನ ವಿದ್ಯಾರ್ಥಿಗೆ ಶಾಕ್ ಕೊಟ್ಟಿದ್ದರು ಎಂಬುದೇ ಇಲ್ಲಿನ ಅಚ್ಚರಿ. 300 ವೋಲ್ಟ್ ಗಿಂತ ಕಡಿಮೆ ಶಾಕ್ ಕೊಟ್ಟವರು ಯಾರೂ ಇರಲಿಲ್ಲ. ನಿಜವಾಗಿ, ನಮ್ಮ ಮನೆಯಲ್ಲಿ ನಾವು ಉಪಯೋಗಿಸುವ ವಿದ್ಯುತ್ನ ಪ್ರಮಾಣ 220 ವೋಲ್ಟ್ ಎಂಬುದನ್ನು ಪರಿಗಣಿಸುವಾಗ, ಈ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೇಲೆ ಯಾವ ಮಟ್ಟದಲ್ಲಿ ವಿದ್ಯುತ್ ಪ್ರವಹಿಸಿದರು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಲು ಕಾರಣವೇನು? ಮಿಲ್ಗ್ರಾಮ್ ಈ ಎಲ್ಲ ಪ್ರಯೋಗಗಳಿಂದ ಕಂಡುಕೊಂಡದ್ದೇನೆಂದರೆ, ಅಧಿಕಾರಸ್ಥರ ಆದೇಶಗಳನ್ನು ವಿಧೇಯವಾಗಿ ಪಾಲಿಸುವುದೇ ಇದಕ್ಕೆ ಕಾರಣ. ವಿದ್ಯುತ್ ಶಾಕ್ ಹೆಚ್ಚಿಸುವುದರಿಂದ ವಿದ್ಯಾರ್ಥಿಗೆ ಆಗುವ ಅಪಾಯದ ಬಗ್ಗೆ ಶಿಕ್ಷಕರಿಗೆ ಗೊತ್ತಿಲ್ಲ ಎಂದಲ್ಲ. ಆದರೆ ಅದೊಂದು ಆದೇಶ. ಮರುಮಾತಿಲ್ಲದೇ ಅದಕ್ಕೆ ವಿಧೇಯವಾಗಿರುವುದು ತನ್ನ ಕರ್ತವ್ಯ ಎಂದು ಆತ ಭಾವಿಸುತ್ತಾನೆ. ಇದೇ ಪ್ರಯೋಗವನ್ನು ಮಿಲ್ಗ್ರಾಮ್ರು ಜರ್ಮನಿ ಯಲ್ಲೂ ನಡೆಸಿದರು. ಅಲ್ಲಿಯ ಫಲಿತಾಂಶ ಇದಕ್ಕಿಂತಲೂ ಆಘಾತಕಾರಿಯಾಗಿತ್ತು. ವಿದ್ಯಾರ್ಥಿಗಳ ಮೇಲೆ 450 ವೋಲ್ಟ್ ವಿದ್ಯುತ್ ಹರಿಸಿದ ಶಿಕ್ಷಕರ ಪ್ರಮಾಣ 85% ಇತ್ತು.
ಮಾನವರಲ್ಲಿ ಎರಡು ಬಗೆಯ ವರ್ತನಾ ಸ್ವಭಾವವಿದೆ ಎಂಬುದು Obedience to Authority ಕೃತಿಯ ಬಹು ಮುಖ್ಯ ಅಂಶ. ಅದರಲ್ಲಿ ಒಂದು ಸ್ವಾಯತ್ತ ಗುಣವಾದರೆ ಇನ್ನೊಂದು ಪ್ರತಿನಿಧಿ ಗುಣ. ಓರ್ವ ವ್ಯಕ್ತಿ ಸ್ವಾಯತ್ತ ಗುಣವನ್ನು ಹೊಂದಿದರೆ ಕೊನೆಗೆ ಆತ ಸರ್ವಾಧಿಕಾರಿಯಾಗಿ ಬದಲಾಗಬಹುದು. ಸಕಲ ಅಧಿಕಾರವೂ ತನ್ನ ನಿಯಂತ್ರಣದಲ್ಲಿದೆ ಅಥವಾ ತಾನು ಯಾರಿಗೂ ಭಯಪಡಬೇಕಾಗಿಲ್ಲ ಎಂಬ ಹಂತಕ್ಕೆ ಆತ ತಲುಪಿದರೆ ಆತ ನಿರಂಕುಶನಾಗಿ ಬದಲಾಗಬಹುದು. ಇನ್ನೊಂದು, ಪ್ರತಿನಿಧಿ ಗುಣ. ಇದರ ವ್ಯಾಪ್ತಿಯೊಳಗೆ ಕಂಪೆನಿ ಮ್ಯಾನೇಜರ್, ಸೇನಾ ಮುಖ್ಯಸ್ಥ ಮತ್ತು ಇದು ಮುಂದುವರಿದೂ ವರಿದೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನವರೆಗೂ ಬರಬಹುದು. ಆತ ಮೇಲಿನವರಿಗೆ ವಿಧೇಯನಾಗಿರುವುದಷ್ಟೇ ತನ್ನ ಕರ್ತವ್ಯ ಎಂದು ಅಂದುಕೊಳ್ಳುತ್ತಾನೆ. ಕಾಮನ್ಸೆನ್ಸ್ ಅನ್ನು ಉಪಯೋಗಿಸದೇ ಮೇಲಿನವರ ಆದೇಶ ಬಂದರೆ ಯಾವುದೇ ಕ್ರೌರ್ಯಕ್ಕೂ ಆತ/ಕೆ ಮುಂದಾಗಬಲ್ಲ. ಹಿಟ್ಲರ್ ಮತ್ತು ಇಕ್ಮ್ಯಾನ್ರನ್ನು ಈ ಎರಡೂ

ನಮ್ಮಲ್ಲಿ ಆಗಾಗ ನಡೆಯುತ್ತಿರುವ ಕೋಮುಗಲಭೆ, ಹತ್ಯಾಕಾಂಡ, ಹಿಂಸಾಚಾರ, ಸೇನೆ-ಪೊಲೀಸ್ ದೌರ್ಜನ್ಯ ಗಳು.. ಇಂಥ ವಿಧೇಯತೆಗಳ ಫಲಿತಾಂಶವಾಗಿರಬಹುದೆಂದೇ ಅನಿಸುತ್ತದೆ. ಆದ್ದರಿಂದಲೇ ಪ್ರವಾದಿಯವರು(ಸ) ವಿಧೇಯತೆಯು ಶರ್ತಬದ್ಧವಾಗಿರಬೇಕೆಂದು ಹೇಳಿರುವುದು. ವಿಧೇಯತೆಯು ಸತ್ಯ ಮತ್ತು ನ್ಯಾಯಕ್ಕೆ ಬದ್ಧವಾಗಿರಬೇಕೆಂದು ಹೇಳಿರುವುದು. ಉರಿಯುತ್ತಿರುವ ಬೆಂಕಿಗೆ ಹಾರಬೇಕೆಂದು ನಾಯಕ (ಖಲೀಫ, ಪ್ರಧಾನಿ, ಸಂಘಟನೆಯ ನೇತಾರ ಇತ್ಯಾದಿ) ಆದೇಶಿಸಿದರೆ ಅದಕ್ಕೆ ವಿಧೇಯವಾಗಬಾರದೆಂದು ಅವರು ತನ್ನ ಅನುಯಾಯಿಗಳಿಗೆ ಕರೆ ಕೊಟ್ಟಿರುವುದರಲ್ಲಿ ಈ ಎಲ್ಲ ಅಪಾಯಗಳ ಮುನ್ಸೂಚನೆಯನ್ನು ಕಾಣಬಹುದಾಗಿದೆ.
No comments:
Post a Comment