Friday, October 21, 2016

ಮುಸ್ಲಿಮರನ್ನೇ ಪ್ರಣಾಳಿಕೆಯಾಗಿ ಮಾಡಿಕೊಂಡಿರುವವರ ಬಗ್ಗೆ..

         ಭಾರತೀಯ ಜನತಾ ಪಕ್ಷವು 2014ರಲ್ಲಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಕೆಲವು ಮುಖ್ಯ ಅಂಶಗಳು ಹೀಗಿವೆ.
1.    ಕಪ್ಪು ಹಣವನ್ನು ಮರಳಿ ತರುವುದು.
2.    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸುವುದು.
3.    ಪರಿಚ್ಛೇದ 370ನ್ನು ರದ್ದುಪಡಿಸುವುದು.
4.    ಬೆಲೆ ಸ್ಥಿರತೆಗೆ ಫಂಡ್ ತಯಾರಿಸುವುದು.
5.    ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ6.    ರೈತ ಪರ ಯೋಜನೆ
7.    ಸ್ವಉದ್ಯೋಗಕ್ಕೆ ಉತ್ತೇಜನ
8.    ಭ್ರಷ್ಟಾಚಾರಕ್ಕೆ ತಡೆ
ಇವು ಮತ್ತು ಇಂಥ ಇನ್ನಷ್ಟು ಭರವಸೆಗಳುಳ್ಳ ಪ್ರಣಾಳಿಕೆಯನ್ನು ಮುಂದಿಟ್ಟು ಬಿಜೆಪಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಗೆಲುವು ದಾಖಲಿಸಿತು. ಮಾತ್ರವಲ್ಲ, ಇವತ್ತು ಆ ಗೆಲುವಿಗೆ ಸುಮಾರು ಎರಡೂವರೆ ವರ್ಷಗಳು ಸಂದುವು. ಈ ಎರಡೂವರೆ ವರ್ಷಗಳಲ್ಲಿ ಅದರ ಪ್ರಣಾಳಿಕೆಯ ವಿಷಯಗಳು ಎಷ್ಟಂಶ ಚರ್ಚೆಗೆ ಒಳಗಾಗಿವೆ? ಟಿ.ವಿ. ಚಾನೆಲ್‍ಗಳ ಪ್ರೈಮ್ ಟೈಮ್‍ನಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ ಕಪ್ಪು ಹಣದ ಚರ್ಚೆ ಹೇಗೆ ನಡೆದಿದೆ? 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿಸುತ್ತೇನೆ ಅಂದ ಪ್ರಧಾನಿಯವರ ಮಾತಿಗೆ 1000 ದಿನಗಳು ತುಂಬುತ್ತಿದ್ದರೂ ಅದೊಂದು ಗಂಭೀರ ಇಶ್ಯೂ ಆಗುವ ಸಾಮರ್ಥ್ಯವನ್ನು ಈವರೆಗೂ ಪಡಕೊಂಡಿಲ್ಲವಲ್ಲ, ಏಕೆ? ರಾಮಮಂದಿರ ನಿರ್ಮಾಣದ ವಿಷಯ ಎಲ್ಲಿಯ ವರೆಗೆ ಮುಟ್ಟಿದೆ? ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಬಿಜೆಪಿಯ ಯಾವೊಬ್ಬ ಹೊಣೆಗಾರ ವ್ಯಕ್ತಿಯೂ ರಾಮಮಂದಿರ ಎಂಬ ಪದವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದೇ ಇರುವುದರ ಹಿನ್ನೆಲೆ ಏನು? ಆಹಾರ ವಸ್ತುಗಳ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಫಂಡ್ ತಯಾರಿಸುತ್ತೇವೆಂದು ಹೇಳಿ ಎರಡೂವರೆ ವರ್ಷಗಳಾದುವಲ್ಲ, ಏನಾಯ್ತು ಸ್ವಾಮಿ ಎಂದು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ? ಎಲ್ಲಿದೆ ಫಂಡ್, ಎಲ್ಲಿದೆ ಸ್ಥಿರತೆ ಎಂದು ಪ್ರಶ್ನಿಸಬಹುದಲ್ಲ? ಯಾಕೆ ಸುಳ್ಳು ಭರವಸೆಯನ್ನು ಕೊಡುತ್ತೀರಿ ಎಂದು ತಕರಾರು ತೆಗೆಯಬಹುದಲ್ಲ? ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ ಎಂಬುದು ಯಾವ ದೇಶದಲ್ಲಿ ಜಾರಿಯಾಗಿದೆ ಎಂದು ಹೇಳುವಿರಾ? ಕೃಷಿ ಭೂಮಿಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರುತ್ತಿರುವ ನೀತಿಯನ್ನೇ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ರೈತಪರ ಯೋಜನೆ ಎಂದು ಹೇಳಿರಬಹುದೇ? ಅಲ್ಲ ಎಂದಾದರೆ, ಈ ಎರಡೂವರೆ ವರ್ಷಗಳಲ್ಲಿ ಜಾರಿಗೊಂಡ ರೈತಪರ ಯೋಜನೆಗಳು ಏನೆಲ್ಲ? ಸ್ಕಿಲ್ ಇಂಡಿಯಾ ಎಂಬ ಘೋಷಣೆಯ ಹೊರತಾಗಿ ಉದ್ಯೋಗ ರಂಗದಲ್ಲಿ ಆಗಿರುವ ಬದಲಾವಣೆಗಳು ಏನೇನು? ಸ್ವ ಉದ್ಯೋಗ ಕ್ಷೇತ್ರ 2014ಕ್ಕಿಂತ ಹಿಂದೆ ಮತ್ತು ಈಗ ಹೇಗಿದೆ?
        ಪ್ರಶ್ನೆಗಳು ಇನ್ನೂ ಇವೆ. ಅದೇ ವೇಳೆ, ಈ ಎರಡೂವರೆ ವರ್ಷ ಗಳ ಅವಧಿಯಲ್ಲಿ ಗಂಭೀರ ಚರ್ಚೆಗೆ ಒಳಗಾದ ವಿಷಯಗಳನ್ನೊಮ್ಮೆ ಅವಲೋಕಿಸಿ. ಗೋವು, ಪಾಕಿಸ್ತಾನ, ಝಾಕಿರ್ ನಾೈಕ್, ಮತಾಂತರ, ಬಿರಿಯಾಣಿ, ಸೂರ್ಯ ನಮಸ್ಕಾರ, ಭಯೋತ್ಪಾದನೆ, ಕಾಶ್ಮೀರ, ಯೋಗ, ವಿದೇಶ ಪ್ರವಾಸ, ಬುರ್ಖಾ, ತಲಾಕ್, ಕೋಮುಗಲಭೆ, ತೈಲ ಬೆಲೆ, ಸರ್ಜಿಕಲ್ ಸ್ಟ್ರೈಕ್ .. ಇತ್ಯಾದಿ ಇತ್ಯಾದಿ.
     ಆದ್ದರಿಂದಲೇ ಕೆಲವು ಅನುಮಾನಗಳೂ ಹುಟ್ಟಿಕೊಳ್ಳುತ್ತವೆ. ಪ್ರಣಾಳಿಕೆಯ ವಿಷಯಗಳ ಮೇಲೆ ಜನರ ಗಮನ ಹರಿಯದಂತೆ ತಡೆಯುವ ಹುನ್ನಾರವೊಂದು ನಡೆದಿದೆಯೇ? ಅದರ ಭಾಗವೇ ಈ ಚರ್ಚೆಗಳೆಲ್ಲ? ಬಿಜೆಪಿಯ ಪ್ರಣಾಳಿಕೆಯ ಆದ್ಯತಾ ಪಟ್ಟಿಯಲ್ಲಿ ಗೋವು ಇಲ್ಲದಿದ್ದರೂ ಸರಿಸುಮಾರು ಈ ಎರಡೂವರೆ ವರ್ಷಗಳುದ್ದಕ್ಕೂ ಗೋವು ಸದಾ ಚರ್ಚಾ ವಸ್ತುವಾದುದಕ್ಕೆ ಕಾರಣ ಏನು? ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುತ್ತಲೇ ಮತ್ತು ರಫ್ತಿನ ಪ್ರಮಾಣವನ್ನು ಏರಿಸುತ್ತಲೇ ದೇಶದೊಳಗೆ ಮಾಂಸ ಸೇವನೆ ಮತ್ತು ಸಾಗಾಟದ ಹೆಸರಲ್ಲಿ ಭಾವೋದ್ರೇಕದ ಹೇಳಿಕೆಗಳು, ಹಲ್ಲೆಗಳು, ಹತ್ಯೆಗಳು ನಡೆಯುತ್ತಿರುವುದರ ಹಿನ್ನೆಲೆ ಯಾವುದು? ಇವೆಲ್ಲ ಅನಿರೀಕ್ಷಿತ ಮತ್ತು ಅನಿರ್ಧರಿತ ವಿದ್ಯಮಾನಗಳೋ ಅಥವಾ ಪೂರ್ವನಿರ್ಧರಿತ ತಂತ್ರಗಳೋ? ಈ ಎರಡೂವರೆ ವರ್ಷಗಳ ಬಹುತೇಕ ಅವಧಿ ಕಳೆದುಹೋಗಿರುವುದೇ ಮುಸ್ಲಿಮ್ ಸಂಬಂಧಿ ಇಶ್ಯೂಗಳ ಮೇಲೆ. ಇದೀಗ ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಗಳು ಚರ್ಚಾ ವ್ಯಾಪ್ತಿಗೆ ಬಂದಿವೆ. ತಲಾಕ್‍ನ ಬಗ್ಗೆ ಚರ್ಚೆ ಮಾಡುವಾಗಲೆಲ್ಲ 2011ರ ಜನಗಣತಿಯ ವರದಿಯನ್ನು ಚರ್ಚಾಪಟುಗಳು ಪುರಾವೆಯಾಗಿ ಮುಂದಿಡುವುದಿದೆ. ಅದೂ ಅದರ ಅರ್ಧ ಭಾಗವನ್ನು ಮಾತ್ರ. 2011ರ ಜನಗಣತಿ ವರದಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015ರ ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿತು. ಇದಾದ ಒಂದು ವಾರದ ಬಳಿಕ ಉತ್ತರ ಪ್ರದೇಶದ ಸಾಯಿರಾ ಬಾನು ಎಂಬ ಮಹಿಳೆ ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ಗೆ ಹೋದರು. ಇದು ತಲಾಕ್ ಪದ್ಧತಿಯನ್ನು ಮಹಿಳಾ ವಿರೋಧಿ ಎಂಬಂತೆ ವ್ಯಾಖ್ಯಾನಿಸುವುದಕ್ಕೆ ಕಾರಣವೂ ಆಯಿತು. ಈ ವ್ಯಾಖ್ಯಾನಕ್ಕೆ ಪೂರಕವಾಗಿ ಅನೇಕರು 2011ರ ಜನಗಣತಿ ವರದಿಯ ಅರ್ಧ ಭಾಗವನ್ನು ಉಲ್ಲೇಖಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ, ಪ್ರತಿ ಸಾವಿರ ಮುಸ್ಲಿಮ್ ಮಹಿಳೆಯರಲ್ಲಿ 5.63 ಮಂದಿ ವಿಚ್ಛೇದಿತೆಯರಾಗಿದ್ದಾರೆ. 2001ರಲ್ಲಿ ಈ ಅನುಪಾತ ಸಾವಿರಕ್ಕೆ 5.3 ಇತ್ತು. ಅದೇವೇಳೆ, 2011ರ ಜನಗಣತಿಯಂತೆ ಹಿಂದೂಗಳಲ್ಲಿ ಪ್ರತೀ ಸಾವಿರಕ್ಕೆ 1.8 ಮಂದಿ ಮಹಿಳೆಯರು ವಿಚ್ಛೇದನ ಪಡೆದು ಕೊಂಡಿದ್ದಾರೆ. ಈ ಅಂಕಿ-ಸಂಖ್ಯೆಗಳನ್ನು ಪರಸ್ಪರ ಹೋಲಿಸಿದರೆ (5.63 ಮತ್ತು 1.8) ಮುಸ್ಲಿಮರಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚು ಇದೆ ಎಂದು ವಾದಿಸುವುದಕ್ಕೆ ಕಷ್ಟವೇನೂ ಇಲ್ಲ. ನಿಜ ಏನೆಂದರೆ, ಹಿಂದೂ ಸಮುದಾಯದಲ್ಲಿ ವಿಚ್ಛೇದನದ ಅನುಪಾತ 1.8 ಇರುವಾಗ ಪತಿಯಿಂದ ಪ್ರತ್ಯೇಕವಾಗಿ ಬದುಕುವ ಮಹಿಳೆಯರ ಸಂಖ್ಯೆ ಸಾವಿರಕ್ಕೆ 5.5ರಷ್ಟು ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪತ್ನಿ ಜಶೋದಾ ಬೆನ್ ಅವರೇ ಇದಕ್ಕೆ ಅತ್ಯುತ್ತಮ ಉದಾಹರಣೆ. ನರೇಂದ್ರ ಮೋದಿಯವರ ಪತ್ನಿಯಾಗಿದ್ದರೂ ಜಶೋದಾ ಬೆನ್ ಇವತ್ತು ಒಂಟಿ. ಅವರ ನಡುವೆ ಯಾವ ಸಂಬಂಧವೂ ಇಲ್ಲ. ಪತಿ ಮತ್ತು ಪತ್ನಿ ಎಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧವೂ ಹೀಗೆ ಪ್ರತ್ಯೇಕವಾಗಿ ಬದುಕುವವರ ನಡುವೆ ಇರುವುದಿಲ್ಲ. ಮತ್ತೇಕೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಿಲ್ಲ ಎಂದರೆ, ಕುಟುಂಬ ನ್ಯಾಯಾಲಯಗಳಲ್ಲಿ ಪ್ರಕರಣ ನಿರೀಕ್ಷೆಗೆ ತಕ್ಕಂತೆ ಇತ್ಯರ್ಥವಾಗುತ್ತಿಲ್ಲ. ಅಸಂಖ್ಯ ವಿಚ್ಛೇದನ ಕೇಸುಗಳು ಇವತ್ತು ಕುಟುಂಬ ನ್ಯಾಯಾಲಯಗಳಲ್ಲಿ ಧೂಳು ಹಿಡಿದು ಕೂತಿವೆ. ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಲಕ್ನೋ ಮುಂತಾದ ನಗರಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆಯೆಂದರೆ, ಅರ್ಜಿ ಸಲ್ಲಿಸಿದವರ ಯೌವನ ಕಳೆದು ಮುಪ್ಪಾದರೂ ಇತ್ಯರ್ಥವಾಗದು ಅನ್ನುವಷ್ಟು. ಕಳೆದ 5 ವರ್ಷಗಳಲ್ಲಿ ವಿಚ್ಛೇದನಕ್ಕಾಗಿ ಸಲ್ಲಿಸಲಾದ ಅರ್ಜಿಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರ ಪ್ರಾಯ ಮತ್ತು ಈಗ ಸಲ್ಲಿಸುವವರ ಪ್ರಾಯಗಳ ನಡುವಿನ ಅಂತರವೂ ಕುಸಿಯುತ್ತಿದೆ. 5 ವರ್ಷಗಳ ಹಿಂದೆ 25ರಿಂದ 35 ವರ್ಷಗಳ ಒಳಗಿನ 70% ಮಹಿಳೆಯರು ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಇದೀಗ 85% ಮಹಿಳೆಯರು ಮದುವೆಯಾಗಿ ಕೇವಲ 3 ವರ್ಷಗಳೊಳಗೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿಶೇಷ ಏನೆಂದರೆ, ತಲಾಕನ್ನು ಪ್ರಶ್ನಿಸುವವರು, ವಿಚ್ಛೇದನಕ್ಕೆ ಅರ್ಜಿ ಹಾಕದೇ ಜಶೋದಾ ಬೆನ್‍ರಂತೆ ಪ್ರತ್ಯೇಕವಾಗಿ ಬದುಕುವವರನ್ನು ವಿಚ್ಛೇದಿತರ ಸಂಖ್ಯೆಯೊಂದಿಗೆ ಸೇರಿಸುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾರೆ. ನಿಜವಾಗಿ, ವಿಚ್ಛೇದನ ಪ್ರಕ್ರಿಯೆ ದೀರ್ಘವಾಗಿರುವುದರಿಂದಾಗಿ ಪ್ರತ್ಯೇಕ ವಾಸವನ್ನು ಮಹಿಳೆಯರು ಆಯ್ದುಕೊಂಡಿರುವರೇ ಹೊರತು ದಾಂಪತ್ಯ ಸಂಬಂಧವನ್ನು ಉಳಿಸಿಕೊಂಡು ಹೋಗುವುದಕ್ಕಲ್ಲ. ಆದ್ದರಿಂದ ಹಿಂದೂ ಸಮುದಾಯದಲ್ಲಿರುವ ವಿಚ್ಛೇದಿತೆಯರು ಮತ್ತು ಪ್ರತ್ಯೇಕವಾಗಿ ವಾಸಿಸುವವರ ಸಂಖ್ಯೆಯನ್ನು ಒಟ್ಟು ಸೇರಿಸಬೇಕಾಗುತ್ತದೆ. ಅದು ಒಟ್ಟು ಸೇರಿದರೆ 1.8+5.5=7.3 ಆಗುತ್ತದೆ. 2001ರಲ್ಲಿ ಹೀಗೆ ಪ್ರತ್ಯೇಕವಾಗಿ ಬದುಕುವುದನ್ನು ಆಯ್ಕೆ ಮಾಡಿಕೊಂಡ ಹಿಂದೂ ಮಹಿಳೆಯರ ಅನುಪಾತ ಸಾವಿರಕ್ಕೆ 4.7 ಇದ್ದರೆ 2011ಕ್ಕಾಗುವಾಗ ಇದು 5.5ಕ್ಕೆ ಹೆಚ್ಚಳವಾಯಿತೆಂಬುದನ್ನೂ ಇಲ್ಲಿ ಗಮನಿಸಬೇಕು. ಇನ್ನು, ಈ ಅಂಕಿ-ಸಂಖ್ಯೆಗಳು ಸರಕಾರದ ಜನಗಣತಿ ಲೆಕ್ಕಕ್ಕೆ ಸಿಕ್ಕಂತವು. ಸಿಗದೇ ಇರುವ ಇಂಥ ಪ್ರಕರಣಗಳನ್ನೂ ಸೇರಿಸಿದರೆ ಇಂಥ ಅಂಕಿ-ಸಂಖ್ಯೆಗಳಲ್ಲಿ ದೊಡ್ಡ ವ್ಯತ್ಯಾಸ ಉಂಟಾಗಬಹುದು. ಅಲ್ಲದೇ, ಪ್ರತ್ಯೇಕವಾಗಿ ಬದುಕುವುದನ್ನು ಹೆಚ್ಚಿನ ಮಹಿಳೆಯರು ಬಹಿರಂಗಪಡಿಸುವುದೂ ಇಲ್ಲ. ನಿಜವಾಗಿ, ತ್ರಿವಳಿ ತಲಾಕ್ ವ್ಯಾಪಕ ಮಟ್ಟದಲ್ಲಿ ಜಾರಿಯಲ್ಲಿದೆಯೆಂದು ಬಿಂಬಿಸುವವರನ್ನು ಪ್ರಶ್ನಿಸುವ ವಿವರಗಳಿವು. ಒಂದು ವೇಳೆ, ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಸಮುದಾಯದಲ್ಲಿ ಭಾರೀ ವಿಚ್ಛೇದನ ಪ್ರಕರಣಗಳಾಗುತ್ತಿವೆ ಎಂಬ ವಾದ ನಿಜ ಎಂದಾಗಿರುತ್ತಿದ್ದರೆ, ವಿಚ್ಛೇದನ ಪ್ರಕರಣಗಳಲ್ಲಿ ಹಿಂದೂ ಸಮುದಾಯವನ್ನು ಮೀರಿಸುವ ರೀತಿಯಲ್ಲಿ ಏರಿಕೆ ಕಾಣಬೇಕಿತ್ತು. ಅದಾಗಿಲ್ಲ ಎಂಬುದೇ ಅದರ ಪಾಲನೆ ತೀರಾ ತೀರಾ ಕಡಿಮೆ ಪ್ರಮಾಣದಲ್ಲಿದೆ  ಎಂಬುದಕ್ಕೆ ಪುರಾವೆಯಾಗಿದೆ. ಹಾಗಂತ, ತ್ರಿವಳಿ ತಲಾಕ್ ಬೇಕು ಅಥವಾ ಅದುವೇ ಸರಿ ಎಂಬುದು ಇಲ್ಲಿನ ವಾದವಲ್ಲ. ಒಂದೇ ಉಸಿರಿಗೆ ತಕ್ಷಣದ ಪ್ರತಿಕ್ರಿಯೆಯಾಗಿ ಹೇಳಿಬಿಡುವ ತ್ರಿವಳಿ ತಲಾಕ್ ಅನ್ನು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿಲ್ಲ. ತಲಾಕ್ ಎಂಬುದು ಒಂದು ಪ್ರಕ್ರಿಯೆಯ ಭಾಗ. ಅದರಲ್ಲಿ ವಿಚಾರಣೆ, ಆಪ್ತ ಸಮಾಲೋಚನೆ, ಸಮಯಾವಕಾಶ ಎಲ್ಲವೂ ಇದೆ. ಮುಸ್ಲಿಮ್ ಸಮುದಾಯದಲ್ಲಿ ಈ ವಿಧಾನವನ್ನು ಬಿಟ್ಟು ತ್ರಿವಳಿ ತಲಾಕ್ ಹೇಳುವ ಪ್ರಕರಣಗಳು ಹತ್ತು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಇವತ್ತು ಇಲ್ಲ ಅನ್ನುವಷ್ಟು ಕಡಿಮೆ. ಹೀಗಿದ್ದೂ, ತಲಾಕ್ ದೇಶದ ಮುಖ್ಯ ಇಶ್ಯೂ ಆಗುವುದರ ಹಿನ್ನೆಲೆ ಏನು? ಅಲ್ಲದೇ, ಇಸ್ರೇಲ್, ಫಿಲಿಪ್ಪೀನ್ಸ್, ಮಲೇಶ್ಯಾ, ಸಿಂಗಾಪುರ, ಶ್ರೀಲಂಕಾ, ಬ್ರಿಟನ್‍ಗಳಲ್ಲಿ ವೈಯಕ್ತಿಕ ನಿಯಮಗಳಿಗೆ ಅನುಮತಿ ಇರುವಾಗ, ಕೇಂದ್ರ ಸರಕಾರವು (ಕಾನೂನು ಆಯೋಗವು) ಸಮಾನ ನಾಗರಿಕ ಸಂಹಿತೆಯ ಕುರಿತು ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಿರುವುದರ ಉದ್ದೇಶ ಏನು? ತಲಾಕ್, ಸಮಾನ ನಾಗರಿಕ ಸಂಹಿತೆಯಂತಹ  ಚರ್ಚೆಯನ್ನು ಒಂದಷ್ಟು ಸಮಯ ಚಾಲ್ತಿಯಲ್ಲಿರಿಸಿ ಪ್ರಣಾಳಿಕೆಯತ್ತ ಜನರ ಗಮನಹರಿಯದಂತೆ ತಡೆಯುವುದಕ್ಕಾಗಿಯೇ? ಮುಸ್ಲಿಮರನ್ನು ಗುರಿಯಾಗಿಸಿದಷ್ಟೂ ಹಿಂದೂ ಧ್ರುವೀ ಕರಣ ನಡೆಯುತ್ತದೆ. ಈ ಹಿಂದೆ ಕಾಂಗ್ರೆಸ್ ಸರಕಾರವು ಸಾಚಾರ್ ಆಯೋಗ, ರಂಗನಾಥ್ ಆಯೋಗ, ಆ ಆಯೋಗ, ಈ ಆಯೋಗ ಎಂದು ಮುಸ್ಲಿಮರನ್ನು ಆಟವಾಡಿಸಿತು. ಇದೀಗ ಬಿಜೆಪಿಯು ಅದೇ ಆಟವನ್ನು ಇನ್ನೊಂದು ರೀತಿಯಲ್ಲಿ ಹೆಚ್ಚು ಕ್ರೂರವಾಗಿ ಆಡುತ್ತಿದೆ. ಈ ಆಟಕ್ಕೆ ಎರಡೂ ಪಕ್ಷಗಳು ನೀಡಿರುವ ಹೆಸರು ಮುಸ್ಲಿಮ್ ಸಬಲೀಕರಣ. ಆದರೆ ನಿಜಕ್ಕೂ ಇದು ಸಬಲೀಕರಣವೇ? ಅಲ್ಲ, ದುರ್ಬಲೀಕರಣ ಮತ್ತು ಯೋಜಿತ ದಮನವೇ?
        ಸಾಯಿರಾ ಬಾನು ಪ್ರಕರಣದ ನೆಪದಲ್ಲಿ ತ್ರಿವಳಿ ತಲಾಕನ್ನು ಜಜ್ಜಿ ಜಜ್ಜಿ ವಿರೂಪಗೊಳಿಸಿರುವವರಿಗೆ, ಅತ್ತ ತಲಾಕನ್ನೂ ಪಡೆಯದೇ ಇತ್ತ ಪತಿಯ ಸ್ವೀಕಾರಕ್ಕೂ ಒಳಗಾಗದೇ ಗುಜರಾತ್‍ನ ಎಲ್ಲೋ ಮೂಲೆಯಲ್ಲಿ ನಿಟ್ಟುಸಿರು ಬಿಡುತ್ತಿರುವ ಜಶೋದಾ ಬೆನ್ ಕಾಣುತ್ತಿಲ್ಲವಲ್ಲ, ಅವರನ್ನು ಕ್ರೌರ್ಯಮುಕ್ತಗೊಳಿಸಲು ಕಾನೂನು ರಚಿಸಬೇಕೆಂದು ವಾದಿಸುತ್ತಿಲ್ಲವಲ್ಲ, ಇದುವೇ ಅರ್ಥವಾಗುತ್ತಿಲ್ಲ!


2 comments: