Thursday, October 13, 2016

ಸರ್ಜಿಕಲ್ ಸ್ಟ್ರೈಕ್ ಹೇಳಿಕೊಟ್ಟ ಜರ್ನಲಿಸಂ ಪಾಠ

       ಟೈಮ್ಸ್ ನೌ ಚಾನೆಲ್‍ನಲ್ಲಿ ಅಕ್ಟೋಬರ್ 3ರಂದು ಪ್ರಸಾರವಾದ ನ್ಯೂಸ್ ಹವರ್ (News Hour) ಕಾರ್ಯಕ್ರಮದಿಂದ ಹಿಂದಿ ಸಿನಿಮಾ ನಟಿ ಮಿತಾ ವಶಿಷ್ಟ್ ಮಧ್ಯದಲ್ಲೇ ಎದ್ದು ಹೋದರು. ‘ಪಾಕ್ ಕಲಾವಿದರನ್ನು ಬಹಿಷ್ಕರಿಸಬೇಕು #PakArtistBanned’.. ಎಂಬ ಆಗ್ರಹದೊಂದಿಗೆ ನಡೆದ ಕಾರ್ಯಕ್ರಮ ಅದು. ತನ್ನ ವಾದವನ್ನು ಸಮರ್ಥಿಸುವುದಕ್ಕಾಗಿ ನಿರೂಪಕ ಅರ್ನಾಬ್ ಗೋಸ್ವಾಮಿ ಸಕಲ ಕೌಶಲ್ಯವನ್ನೂ ಪ್ರಯೋಗಿಸುತ್ತಿದ್ದರು. ಅರ್ನಾಬ್ ವಾದವನ್ನು ಮಿತಾ ವಶಿಷ್ಟ್ ತಿರಸ್ಕರಿಸಿದರು. ಪಾಕ್ ಕಲಾವಿದರನ್ನು ಬಹಿಷ್ಕರಿಸುವುದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದರು. ಕಲಾವಿದರು ಟೆರರಿಸ್ಟ್ ಗಳಲ್ಲ ಎಂದು ವಾದಿಸಿದರು. ಅವರ ಮಾತುಗಳು ಪ್ರಬುದ್ಧವಾಗಿದ್ದುವು. ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಅವರು ಕಾರ್ಗಿಲ್ ಅನ್ನು ಉಲ್ಲೇಖಿಸಿದರು. ಹುತಾತ್ಮ ಯೋಧ ಬಾತ್ರಾರನ್ನು ಪ್ರಸ್ತಾಪಿಸಿದರು. ಅವರ ಮಾತು ಎಷ್ಟು ನಿರರ್ಗಳವಾಗಿತ್ತು ಅಂದರೆ, ಅರ್ನಾಬ್ ಮಧ್ಯದಲ್ಲೇ ಅವರ ಮಾತನ್ನು ತುಂಡರಿಸಿದರು. ಇದನ್ನು ಪ್ರತಿಭಟಿಸಿ ಆಕೆ ಸ್ಟುಡಿಯೋ ದಿಂದ ಎದ್ದು ಹೊರ ನಡೆದರು. ಇಂಥದ್ದೇ ಇನ್ನೊಂದು ಪ್ರಕರಣ ಸೆ. 30ರಂದು ಜನಶ್ರೀ ಚಾನೆಲ್‍ನಲ್ಲಿ ನಡೆಯಿತು. ಹಿರಿಯ ಬಹುಭಾಷಾ ನಟ ಪ್ರಕಾಶ್ ರೈ ಅವರ ‘ಇದೊಳ್ಳೆ ರಾಮಾಯಣ’ ಎಂಬ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿರೂಪಕಿ ತುಸು ವಿಷಯಾಂತರ ಮಾಡಿ, ‘ಕಾವೇರಿ ವಿವಾದದ ಕುರಿತಂತೆ ಅವರ ಅಭಿಪ್ರಾಯವನ್ನು ಕೇಳಿದರು. `ಕಾವೇರಿ ಜಲಯುದ್ಧದ ಬಗ್ಗೆ ಏನು ಹೇಳುತ್ತೀರಿ? ಸುಪ್ರೀಮ್ ಕೋರ್ಟ್‍ನ ಆದೇಶ ತಪ್ಪಾ? ಕರ್ನಾಟಕ ಮತ್ತು ತಮಿಳ್ನಾಡುಗಳಲ್ಲಿ ಯಾವ ರಾಜ್ಯ ಹಠಮಾರಿಯಂತೆ ಕಾಣಿಸುತ್ತೆ...' ಎಂದೆಲ್ಲ ನಿರೂಪಕಿ ಪ್ರಶ್ನಿಸಿದರು. ಪ್ರಕಾಶ್ ರೈ ಈ ವಿಷಯಾಂತರವನ್ನು ಬಲವಾಗಿ ಖಂಡಿಸಿದರು. ಕಾಂಟ್ರವರ್ಸಿ ಬೇಕಾ ನಿಮ್ಗೆ ಎಂದು ಸಿಟ್ಟಾದರು. ಕಾಮನ್‍ಸೆನ್ಸ್ ಇಲ್ಲದೇ ಪ್ರಶ್ನಿಸ್ಬಾರ್ದು ಎಂದು ಆಕ್ರೋಶ ವ್ಯಕ್ತಪಡಿಸಿ ಮಧ್ಯದಲ್ಲೇ ಎದ್ದು ಹೋದರು.
      ಈ ಎರಡೂ ಘಟನೆಗಳು ಬಹುಮುಖ್ಯವಾದ ಪ್ರಶ್ನೆಯೊಂದನ್ನು ನಮ್ಮ ಮುಂದಿಡುತ್ತದೆ. ಮಾಧ್ಯಮಗಳ ಬಗ್ಗೆ ಕೇವಲತನ ಅಥವಾ ನಿರ್ಲಕ್ಷ್ಯಭಾವದ ನಿಲುವುಗಳು ಬಲ ಪಡೆಯುತ್ತಿವೆಯೇ? `ಟಿವಿ ಚಾನೆಲ್‍ಗಳೆಂದರೆ ಇಷ್ಟೇ..' ಎಂಬ ಉಡಾಫೆತನ ಹೆಚ್ಚಾಗುತ್ತಿವೆಯೇ? ಚಾನೆಲ್‍ಗಳನ್ನು, ಅವುಗಳ ಸುದ್ದಿ ಸ್ಫೋಟವನ್ನು ಮತ್ತು ಅವು ಏರ್ಪಡಿಸುವ ಚರ್ಚೆಯನ್ನು ಅಪ್ರಾಮುಖ್ಯಗೊಳಿಸುವಂತಹ ಮಾತುಗಳು ಸಮಾಜವನ್ನು ಪ್ರಭಾವಿತಗೊಳಿಸುತ್ತಿವೆಯೇ? ಹಾಗಂತ ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಪ್ರಕರಣ ಕೇವಲ ವಾರಗಳ ಹಿಂದಿನ ಎರಡು ಉದಾಹರಣೆಗಳು ಮಾತ್ರ. ಇವೆರಡರ ಹಿಂದೆ ಇಂಥ ಹತ್ತಾರು ಘಟನೆಗಳು ನಡೆದಿವೆ. ಇತ್ತಿತ್ತಲಾಗಿ ಇವುಗಳ ಸಂಖ್ಯೆ ಹೆಚ್ಚಾಗುತ್ತಲೂ ಇವೆ. ಇದಕ್ಕೆ ಏನು ಕಾರಣ? ಯಾರು ಕಾರಣ? ನಿರೂಪಕರೇ, ಅತಿಥಿಗಳೇ ಅಥವಾ ಟಿವಿ ಚಾನೆಲ್‍ಗಳ ಮೇಲಿನ ವಿಶ್ವಾಸದ ಕುಸಿತವೇ? ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವಾಟ್ಸ್ ಅಪ್‍ಗಳು ಈ ಪ್ರಕ್ರಿಯೆಯಲ್ಲಿ ಯಾವ ಪಾತ್ರ ವಹಿಸಿವೆ? ಅಷ್ಟಕ್ಕೂ,
        ಈ ಎರಡು ಘಟನೆಗಳನ್ನು ಉಲ್ಲೇಖಿಸುವುದಕ್ಕೆ ಇನ್ನೊಂದು ಕಾರಣವೂ ಇದೆ.
       ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸರ್ಜಿಕಲ್ (ಸೀಮಿತ) ದಾಳಿ ನಡೆಸಿದ್ದು ಈ ಕಾರಣಗಳಲ್ಲಿ ಒಂದಾದರೆ ಇನ್ನೊಂದು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಅನಾರೋಗ್ಯ. ಮಾಧ್ಯಮಗಳು ಈ ಎರಡೂ ಸಂದರ್ಭಗಳನ್ನು ಹೇಗೆ ನಿಭಾಯಿಸಿದುವು? ಈ ಎರಡರಲ್ಲೂ ಸೂಕ್ಷ್ಮವಾದ ಹಲವಾರು ಅಂಶಗಳಿವೆ. ವದಂತಿಗಳು ಮತ್ತು ಊಹೆಗಳು ಅತೀ ಹೆಚ್ಚು ಕಾರುಬಾರು ನಡೆಸುವ ಸಂದರ್ಭ ಇದು. ಓರ್ವ ಪತ್ರಕರ್ತನಿ/ಳಿ/ಗೆ ಮತ್ತು ಪತ್ರಿಕೆಯ ನಿರ್ಣಾಯಕ ಸ್ಥಾನದಲ್ಲಿರುವವರಿಗೆ ಅತ್ಯಂತ ಸವಾಲಿನ ಸಮಯವೂ  ಹೌದು. ಯಾವುದೇ ಸುದ್ದಿಯು ಪುರಾವೆಯನ್ನು ಬಯಸುತ್ತದೆ. ಮೂಲ ಎಷ್ಟೇ ವಿಶ್ವಾಸಾರ್ಹ ಆಗಿದ್ದರೂ ಖಚಿತವಾಗಿ ಹೇಳುವುದಕ್ಕೆ ಪುರಾವೆಯ ಅಗತ್ಯ ಇದ್ದೇ ಇದೆ. ಸರ್ಜಿಕಲ್ ದಾಳಿ ಮತ್ತು ಜಯಲಲಿತಾರ ಆರೋಗ್ಯಕ್ಕೆ ಸಂಬಂಧಿಸಿ ಸುದ್ದಿ ತಯಾರಿಯ ವೇಳೆ ಈ ಬೇಡಿಕೆಯನ್ನು ಪೂರೈಸಲಾಗಿದೆಯೇ? ನಿಜವಾಗಿ, ಸರ್ಜಿಕಲ್ ದಾಳಿಯ ಬಗ್ಗೆ ಕನ್ನಡದ ವಿವಿಧ ಪತ್ರಿಕೆಗಳು, ‘ಸಿಡಿದೆದ್ದ ಭಾರತ’, ‘ಉರಿದೆದ್ದ ಭಾರತ ಪ್ರತಿಘಾತ’, ‘ಭಾರತದ ಎದಿರೇಟಿಗೆ ಉರಿದ ಪಾಕ್’, ‘ಪಾಕ್‍ಗೆ ನುಗ್ಗಿ ದಾಳಿ: ಸೇನೆ’, ‘ಪಾಕ್‍ಗೆ ನುಗ್ಗಿ ಉಗ್ರ ಸಂಹಾರ’.. ಎಂಬೆಲ್ಲ ಶೀರ್ಷಿಕೆಗಳೊಂದಿಗೆ ಸೆ. 30ರಂದು ಸುದ್ದಿ ಬರೆದಿವೆ. ಉರಿ ಘಟನೆಯ ನೋವು ದೇಶದಲ್ಲಿ ಹಸಿರಾಗಿದ್ದುದರಿಂದ ಇಂಥ ಶೀರ್ಷಿಕೆಗಳ ಔಚಿತ್ಯವನ್ನು ಒಂದು ಹಂತದ ವರೆಗೆ ಒಪ್ಪಿಕೊಳ್ಳೋಣ. ಆದರೆ ಈ ಶೀರ್ಷಿಕೆಗಳ ಕೆಳಗಡೆ ಕೊಟ್ಟಿರುವ ಉಪಶೀರ್ಷಿಕೆಗಳು ಮತ್ತು ಸಂಪಾದಕೀಯಗಳಲ್ಲಿ ಬಳಸಲಾದ ಪದಗಳಲ್ಲೆಲ್ಲ ಎಷ್ಟಂಶ ಎಚ್ಚರಿಕೆಯನ್ನು ಪಾಲಿಸಲಾಗಿದೆ? ‘ಸರ್ಜಿಕಲ್ ಸ್ಟ್ರೈಕ್’ ಎಂಬುದು ಯಾವ ಪತ್ರಕರ್ತರ ಪಾಲಿಗೂ ಪುರಾವೆ ಸಮೇತ ಸಾಬೀತಾದ ವಿಷಯ ಅಲ್ಲ. ಅದು ಸೇನೆ ಮತ್ತು ಸರಕಾರದ ಹೇಳಿಕೆ. ಹಾಗಂತ, ಸರ್ಜಿಕಲ್ ದಾಳಿ ನಡೆದಿಲ್ಲ ಎಂಬುದು ಇಲ್ಲಿನ ವಾದ ಅಲ್ಲ. ಸೇನೆಯ ಮೇಲೆ ಶಂಕೆಯೇ ಎಂಬ ಪ್ರಶ್ನೆಯನ್ನು ಎತ್ತಬೇಕಾಗಿಯೂ ಇಲ್ಲ. ಇಲ್ಲಿ, ‘ಸರ್ಜಿಕಲ್ ದಾಳಿ ನಡೆದಿದೆ ಮತ್ತು ಅದಕ್ಕೆ ಸುಮಾರು 40ರಷ್ಟು ಉಗ್ರರು ಬಲಿಯಾಗಿದ್ದಾರೆ’ ಎಂದು ಓರ್ವ ಪತ್ರಕರ್ತನಿಗೆ ಅಥವಾ ಸುದ್ದಿಮನೆಗೆ ಒಪ್ಪಿಕೊಳ್ಳಲು ಇರುವ ಏಕೈಕ ಮೂಲ ಸೇನೆ ಮತ್ತು ಸರಕಾರ ಮಾತ್ರ. ಆದ್ದರಿಂದ ಅದು ದೃಢೀಕರಣಗೊಳ್ಳುವ ವರೆಗೆ ಅದು ಒಂದು ಹೇಳಿಕೆಯಾಗಿ ಪರಿಗಣಿತವಾಗಬೇಕೇ ಹೊರತು ಪುರಾವೆ ಸಮೇತ ಸಾಬೀತಾದ ಸುದ್ದಿಯ ರೂಪದಲ್ಲಿ ಅಲ್ಲ. ಪುರಾವೆ ಎಲ್ಲಿಯ ವರೆಗೆ ಲಭ್ಯವಾಗುವುದಿಲ್ಲವೋ ಅಲ್ಲಿಯ ವರೆಗೆ ಅದು ಹೇಳಿಕೆ. ಆ ಹೇಳಿಕೆಯನ್ನು ಒಪ್ಪುವ, ಒಪ್ಪದಿರುವ, ಅನುಮಾನಿಸುವ ಮತ್ತು ಅನುಮಾನಿಸದಿರುವ ಅವಕಾಶ ಎಲ್ಲರಿಗೂ ಇದೆ. ಸಾಮಾನ್ಯವಾಗಿ, ಒಂದು ಹೇಳಿಕೆಯ ದೌರ್ಬಲ್ಯ ಏನೆಂದರೆ, ಇವತ್ತಿನ ಹೇಳಿಕೆ ನಾಳೆಯ ದಿನ ಅದೇ ತಾಜಾತನವನ್ನು ಉಳಿಸಿ ಕೊಳ್ಳಬೇಕೆಂದಿಲ್ಲ. ಆ ಹೇಳಿಕೆಗೆ ನಾಳೆ ಒಂದಷ್ಟು ಸೇರ್ಪಡೆ ಆಗಬಹುದು ಅಥವಾ ಹೇಳಿಕೆಯ ಒಂದಷ್ಟು ಭಾಗ ನಿರಾಕರಣೆಗೂ ಒಳಪಡಬಹುದು. ಸಂಪೂರ್ಣ ನಿರಾಕರಣೆಗೆ ಒಳಗಾಗುವ ಹೇಳಿಕೆಗಳೂ ಧಾರಾಳ ಇವೆ. ಸೇನೆಯ ವತಿಯಿಂದಲೇ ಇಂಥ ಎಡವಟ್ಟುಗಳು ನಡೆದ ಸಂದರ್ಭಗಳೂ ಇವೆ. ಕಾಶ್ಮೀರದಲ್ಲಿ, ಮಣಿಪುರ, ನಾಗಾಲ್ಯಾಂಡ್‍ಗಳಲ್ಲಿ ಸೇನೆಯೇ ಕಟಕಟೆಯಲ್ಲಿ ನಿಂತಿ ರುವುದಕ್ಕೆ ಅನೇಕಾರು ಉದಾಹರಣೆಗಳಿವೆ. ಹಾಗಂತ, ಸರ್ಜಿಕಲ್ ದಾಳಿ ಸುಳ್ಳು ಎಂಬುದು ಇದರರ್ಥವಲ್ಲ. ಸೇನೆ ಸತ್ಯವನ್ನೇ ಹೇಳಿರಬಹುದು. ಆದರೆ ಪುರಾವೆ ಸಿಗುವವರೆಗೆ ಓರ್ವ ಪತ್ರಕರ್ತ ಆ ಹೇಳಿಕೆಯ ಮೇಲೆ ಶಂಕೆಯ ಒಂದು ಕಣ್ಣಿಟ್ಟಿರಲೇಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಭಾರತೀಯ ಸೇನೆ, ದೇಶಪ್ರೇಮ, ಪಾಪಿ ಪಾಕಿಸ್ತಾನ, ರಾಷ್ಟ್ರೀಯ ಹಿತಾಸಕ್ತಿ, ದೇಶ ರಕ್ಷಣೆ.. ಮುಂತಾದುವುಗಳು ಸುದ್ದಿ ತಯಾರಿ ಮತ್ತು ವಿಶ್ಲೇಷಣೆಯ ಮೇಲೆ ಅಡ್ಡ ಪರಿಣಾಮ ಬೀರುವಂತಿಲ್ಲ. ಪುರಾವೆ ಸಿಗುವವರೆಗೆ ಅಥವಾ ಕನಿಷ್ಠ ಹೇಳಿಕೆಯನ್ನು ಸಾಬೀತುಪಡಿಸುವಂತಹ ವಾತಾವರಣ ಸೃಷ್ಟಿಯಾಗುವ ವರೆಗೆ ಸುದ್ದಿಮನೆಯಲ್ಲ್ಲೂ ಪತ್ರಕರ್ತರಲ್ಲೂ ಶಂಕೆ ಇರಬೇಕಾದುದು ಜರ್ನಲಿಸಂನ ಅತೀ ಪ್ರಬಲ ಬೇಡಿಕೆ. ಹಾಗಂತ, ಈ ಶಂಕೆಯನ್ನು ಕೇವಲ ಸೆ. 29ರಂದು ನಡೆದ ಸರ್ಜಿಕಲ್ ದಾಳಿಗೆ ಸಂಬಂಧಿಸಿ ಮಾತ್ರ ಹೇಳುತ್ತಿಲ್ಲ. ಭಯೋತ್ಪಾದನೆ ಮತ್ತಿತರ ಆರೋಪದಲ್ಲಿ ಬಂಧನಕ್ಕೀಡಾಗುವವರ ಕುರಿತೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಬಂಧಿಸಿದವರ ಹೇಳಿಕೆಗಳೇ ಪುರಾವೆ ಆಗಿರುತ್ತಿದ್ದರೆ ಈ ದೇಶದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಜೈಲಿನಿಂದ ಹೊರಬರುವುದಕ್ಕೆ ಸಾಧ್ಯವಿರಲಿಲ್ಲ. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೇಳಿಕೆಗಳು ಪುರಾವೆಗಳನ್ನು ಒದಗಿಸುವುದಿಲ್ಲ. ಕೆಲವೊಮ್ಮೆ ಪುರಾವೆಗಳು ಹೇಳಿಕೆಗಳನ್ನೇ ದೃಢೀಕರಿಸುವುದಿಲ್ಲ. ಆದರೆ ಇವತ್ತು ಸುದ್ದಿ ಮಾಧ್ಯಮಗಳು ಪೈಪೋಟಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಮುದ್ರಣ ಮಾಧ್ಯಮಕ್ಕಿಂತಲೂ ದೃಶ್ಯ ಮಾಧ್ಯಮದಲ್ಲಿ ಈ ಪೈಪೋಟಿ ಮಿತಿ ಮೀರಿದೆ. ಸೆನ್ಸೇಷನಲ್ ಸುದ್ದಿಯನ್ನು ತಯಾರಿಸಲೇಬೇಕಾದ ಒತ್ತಡವನ್ನು ಪ್ರತಿ ಚಾನೆಲೂ ಎದುರಿಸುತ್ತಿದೆ. ಒಂದು ಹೇಳಿಕೆ, ಒಂದು ಬಂಧನ, ಒಂದು ಪ್ರೀತಿ, ಒಂದು ನಗು, ಒಂದು ಅಫೇರ್, ಒಂದು ವದಂತಿ.. ಎಲ್ಲವೂ ಸ್ಟೋರಿ ಗಳಾಗಬೇಕಾದ ಅನಿವಾರ್ಯತೆಯೊಂದಿಗೆ ಚಾನೆಲ್‍ಗಳು ದಿನದೂಡುತ್ತಿವೆ. ಪುರಾವೆಗಳ ವರೆಗೆ ಕಾದು ಸ್ಟೋರಿ ಮಾಡಬಹುದಾದ ಸಹನೆ ಬಹುತೇಕ ಯಾವ ಸುದ್ದಿಮನೆಗೂ ಇಲ್ಲ.
      ಸೆ. 30ರಂದು ಎಲ್ಲ ಪತ್ರಿಕೆಗಳೂ ಸರ್ಜಿಕಲ್ ದಾಳಿಯ ಬಗ್ಗೆ ಮುಖಪುಟದಲ್ಲಿ ಸುದ್ದಿಯನ್ನೂ ಒಳಪುಟದಲ್ಲಿ ಸಂಪಾದಕೀಯ ವನ್ನೂ ಬರೆದುವು. ಮುಖಪುಟದ ಸುದ್ದಿಯ ಕೊನೆಯಲ್ಲಿ ‘ಸೇನೆ ಹೇಳಿದೆ’ ಎಂಬ ವಾಕ್ಯ ಇದ್ದರೂ ಸಂಪಾದಕೀಯದಲ್ಲಿ ಆ ಎಚ್ಚರಿಕೆ ಬಹುತೇಕ ಯಾವ ಪತ್ರಿಕೆಯಲ್ಲೂ ಕಾಣಿಸಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಎಂಬುದು ಸ್ಪಷ್ಟವಾಗಿ ಸೇನೆಯ ಹೇಳಿಕೆಯಾಗಿರುವುದರಿಂದ ಆ ಪದವನ್ನು ಸಂಪಾದಕೀಯದಲ್ಲಿ ಬಳಸುವಾಗ ಹೇಳಿಕೆಯೆಂಬ ನೆಲೆಯಲ್ಲಿ ಉದ್ಧರಣಾ ಚಿಹ್ನೆ (“”) ಹಾಕುವುದು ಪ್ರಾಯೋಗಿಕವಾಗಿ ಹೆಚ್ಚು ಸರಿ. ಯಾಕೆಂದರೆ, ಸಂಪಾದಕೀಯ ಬರೆಯುವಾಗ ಸಂಪಾದಕ ಅದನ್ನು ಪುರಾವೆ ಸಮೇತ ಖಚಿತ ಪಡಿಸಿಕೊಂಡಿರಲಿಲ್ಲ. ಒಂದು ಹೇಳಿಕೆಯಾಚೆಗೆ ಆ ದಾಳಿ ಸೀಮಿತವೋ ಅಸೀಮಿತವೋ ಎಂಬುದು ಸ್ಪಷ್ಟವಿರಲಿಲ್ಲ. ಆದರೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆಲ್ಲ ಬಹುತೇಕ ವಾಚಾಳಿಯಾದುವು. ದೇಶದ ಹಿತಾಸಕ್ತಿ, ದೇಶರಕ್ಷಣೆ, ಭಯೋತ್ಪಾದನಾ ವಿರೋಧಿ ಆಕ್ರಮಣ, ಸೇನೆಯ ಸಾಮರ್ಥ್ಯ.. ಇತ್ಯಾದಿ ಭಾವನಾತ್ಮಕ ಪದ ಪ್ರಯೋಗಗಳ ಮೂಲಕ ಇಂಥ ಮೌಲಿಕ ಪ್ರಶ್ನೆಗಳನ್ನು ಅವು ತಡೆದು ನಿಲ್ಲಿಸಿದುವು. ಸೆ. 30ರಿಂದ ಈ ವರೆಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ಮತ್ತು ಪ್ರಸಾರವಾದ ಸರ್ಜಿಕಲ್ ಸ್ಟ್ರೈಕ್ ಸಂಬಂಧಿ ವಿಷಯಗಳನ್ನು ವಿಶ್ಲೇಷಣೆಗೆ ಒಳ ಪಡಿಸಿದರೆ ಯಾವುದು ಜರ್ನಲಿಸಂ ಮತ್ತು ಯಾವುದು ಅಲ್ಲ ಎಂದು ವಿಶ್ಲೇಷಿಸುವುದಕ್ಕೆ ಧಾರಾಳ ಸರಕುಗಳು ಸಿಕ್ಕೀತು. ಬೇಕಿದ್ದರೆ ಜಯಲಲಿತಾರ ಅನಾರೋಗ್ಯವನ್ನೂ ಈ ವಿಶ್ಲೇಷಣೆಯ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅವರ ಕಾಯಿಲೆಯ ಕುರಿತಂತೆ ಮಾಧ್ಯಮ ಗಳಲ್ಲಿ ಹರಿದಾಡಿದ ಸುದ್ದಿಗಳಿಗೆ ಲೆಕ್ಕ ಮಿತಿಯಿಲ್ಲ. ಟಿ.ವಿ. ಚಾನೆಲ್‍ಗಳಲ್ಲಂತೂ ವದಂತಿಗಳು ಮತ್ತು ಊಹೆಗಳನ್ನೇ ಮೂಟೆಯಾಗಿಸಿ ‘ಅಮ್ಮ’ನನ್ನು ವೀಕ್ಷಕರ ಮುಂದಿಡಲಾಯಿತು. ಬಹುಶಃ, ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಅವರು ಸ್ಟುಡಿಯೋದಿಂದ ಎದ್ದು ಹೋದುದರ ಹಿಂದೆ ಜರ್ನಲಿಸಂನ ಮೂಲಭೂತ ಬೇಡಿಕೆಗಳನ್ನು ಹೀಗೆ ನಿರ್ಲಕ್ಷಿಸಿರುವುದಕ್ಕೂ ಪಾತ್ರ ಇರಬಹುದು. ಮಾಧ್ಯಮಗಳು ಪುರಾವೆಗಳನ್ನು ಕಡೆಗಣಿಸಿದಷ್ಟೂ ಮತ್ತು ವೀಕ್ಷಕರು ಹಾಗೂ ಓದುಗರ ತಕ್ಷಣದ ಭಾವನೆಯನ್ನು ಎನ್‍ಕ್ಯಾಶ್ ಮಾಡುವ ಮಟ್ಟಕ್ಕೆ ಇಳಿದಷ್ಟೂ ಮಾಧ್ಯಮ ವಿಶ್ವಾಸಾರ್ಹತೆಯ ಮಟ್ಟದಲ್ಲೂ
ಇಳಿಮುಖವಾಗುತ್ತಲೇ ಹೋಗುತ್ತದೆ. ಟಿ.ವಿ. ಚಾನೆಲ್‍ಗಳನ್ನು ಸದ್ಯ ಕಾಡುತ್ತಿರುವ ಕಾಯಿಲೆ ಇದು. ವಿಶ್ವಾಸಾರ್ಹತೆಯ ಮಟ್ಟ ಕುಸಿಯು ವುದೆಂದರೆ, ವೀಕ್ಷಕರ ಪಾಲಿಗೆ ಕೇವಲವಾಗುವುದು ಎಂದರ್ಥ. ‘ಟಿ.ಆರ್.ಪಿ.ಗಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ..’ ಎಂಬ ಮಾತು ಜನಪ್ರಿಯವಾದಷ್ಟೂ ಟಿ.ವಿ. ಚಾನೆಲ್‍ಗಳ ವಿಶ್ವಾಸಾರ್ಹತೆ ಕುಸಿಯುತ್ತಾ ಹೋಗುತ್ತದೆ. ಅದರ ಪರಿಣಾಮವಾಗಿ ಉಡಾಫೆ, ನಿರ್ಲಕ್ಷ್ಯತನದ ಮಾತುಗಳು ಮೇಲುಗೈ ಪಡೆಯುತ್ತವೆ. ಬಹುಶಃ,
       ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ರು ಮಾಧ್ಯಮ ಗಮನವನ್ನು ಆ ಕಡೆ ಸೆಳೆದಿದ್ದಾರೆ ಎಂದೇ ಅನಿಸುತ್ತದೆ.

No comments:

Post a Comment