Wednesday, May 18, 2016

ನೇಣಿಗೆ ಅರ್ಹರಾದವರೆಲ್ಲ ವಿರೋಧ ಪಕ್ಷಗಳಲ್ಲೇ ಏಕಿದ್ದಾರೆ ಬೇಗಂ?

        ಡಾ| ಚಂದ್ರ ಮುಝಫ್ಫರ್
  ತಲ್ಹಾ ಅಹ್ಮದ್  
        ರೋನಕ್ ದೇಸಾಯಿ
  ಇವರೆಲ್ಲ ಬಾಂಗ್ಲಾದೇಶದ ಪ್ರಧಾನಿ ಬೇಗಮ್ ಹಸೀನಾರಂತೆ ಅಪ್ಪಟ ಪ್ರಗತಿಪರರು ಮತ್ತು ಹಸೀನಾರ ಭಾಷೆಯಲ್ಲಿ ಹೇಳುವುದಾದರೆ ‘ಮೂಲಭೂತವಾದಿ' ಮುಸ್ಲಿಮರಲ್ಲ. ಆದರೂ ಇವರೆಲ್ಲ ಬಾಂಗ್ಲಾ ದೇಶದ ಯುದ್ಧಾಪರಾಧಿ ನ್ಯಾಯ ಪ್ರಕ್ರಿಯೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿನ ‘ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ’(International Crime Tribunal - ICT)ದ ನ್ಯಾಯ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ನ್ಯಾಯಾಲಯಕ್ಕೆ ಸಂಬಂಧಿಸಿ ಕತೆ-ಚಿತ್ರಕತೆ, ನಿರ್ದೇಶನ, ನಿರ್ಮಾಣ.. ಎಲ್ಲವನ್ನೂ ಹಸೀನಾರೇ ನಿರ್ವಹಿಸುತ್ತಿರುವರೇನೋ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಇವರೇನೂ ಬಾಂಗ್ಲಾದೇಶದ ಜಮಾಅತೆ ಇಸ್ಲಾಮೀ ಅಥವಾ ವಿರೋಧ ಪಕ್ಷವಾದ ಖಲೀದಾ ಝಿಯಾರ ಬಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ ಕಾರ್ಯಕರ್ತರಲ್ಲ. ಮಲೇಶ್ಯ ಕೇಂದ್ರಿತ ಇಂಟರ್‍ನ್ಯಾಶನಲ್ ಮೂವ್‍ಮೆಂಟ್ ಫಾರ್ ಎ ಜಸ್ಟ್ ವರ್ಲ್ಡ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ| ಚಂದ್ರ ಮುಝಫ್ಫರ್ ಅವರು, ‘ನಿಝಾಮಿಯವರ ಗಲ್ಲು ಮತ್ತು ರಾಜಕೀಯದ ಮೇಲಿನ ಹಿಡಿತ' (The Hanging of Nizami and grip on Political Power) ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಲೇಖನ ಬರೆದಿದ್ದಾರೆ. ಮುಸ್ಲಿಮ್ ಕೌನ್ಸಿಲ್ ಆಫ್ ಬ್ರಿಟನ್‍ನ ಸಂಚಾಲಕ ಹಾಗೂ ನ್ಯಾಯವಾದಿ, ಉಪನ್ಯಾಸಕರೂ ಆಗಿರುವ ತಲ್ಹಾ ಅಹ್ಮದ್ ಅವರು, The Politicalisation of Bangladesh's War Criminal Tribunal (ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯದ ರಾಜಕೀಕರಣ) ಎಂಬ ಶೀರ್ಷಿಕೆಯಲ್ಲಿ ಮತ್ತು ಹಾರ್ವರ್ಡ್ ಯುನಿವರ್ಸಿಟಿಯ ರೋನಕ್ ದೇಸಾಯಿಯವರು,A Justice Denied as Bangladesh Prosecutes War Crime ಎಂಬ ಹೆಸರಲ್ಲಿ ಲೇಖನಗಳನ್ನು ಬರೆದಿದ್ದಾರೆ. ‘ನ್ಯಾಯದ ಹೊರತು ಶಾಂತಿಯಿಲ್ಲ' (No Peace without Justice ) ಎಂಬ ಹೆಸರಿನ ಇಟಲಿಯ ರಾಜಕೀಯೇತರ ಸಂಸ್ಥೆಯೊಂದು ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯ ವನ್ನು ತೀವ್ರವಾಗಿ ಖಂಡಿಸಿದೆ. ‘ಅದರ ತೀರ್ಪುಗಳು ರಾಜಕೀಯ ಪ್ರೇರಿತ ಮತ್ತು ವಿರೋಧ ಪಕ್ಷಗಳನ್ನು ದಮನಿಸುವ ಉದ್ದೇಶವನ್ನಷ್ಟೇ ಹೊಂದಿವೆ..’ ಎಂದು ಅದು ಟೀಕಿಸಿದೆ. ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಕೂಡ ಬಾಂಗ್ಲಾದೇಶದ ಬೆಳವಣಿಗೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಟರ್ಕಿ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಂದಹಾಗೆ, ಯುದ್ಧಾಪರಾಧಗಳ ತನಿಖೆಯ ನೆಪದಲ್ಲಿ ಬಾಂಗ್ಲಾ ದೇಶದಲ್ಲಿ ನಿರ್ದಿಷ್ಟ ಮಂದಿಯನ್ನು ಬೆನ್ನಟ್ಟಿ ಕೊಲ್ಲುವ ಕಾರ್ಯಾಚರಣೆ ನಡೆಯುತ್ತಿದೆಯೇ? ವಿರೋಧ ಪಕ್ಷಗಳನ್ನು ದಮನಿಸುವುದು ಇದರ ಗುರಿಯೇ? ಇಲ್ಲದಿದ್ದರೆ 1971ರಲ್ಲಿ ನಡೆದಿದೆಯೆನ್ನಲಾದ ಯುದ್ಧಾಪರಾಧಗಳ ತನಿಖೆಗೆ 2010ರಲ್ಲಿ ದಿಢೀರಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವುದು ಮತ್ತು ವಿರೋಧ ಪಕ್ಷಗಳ ಐವರು ಪ್ರಮುಖ ನಾಯಕರನ್ನು ಗಲ್ಲಿಗೇರಿಸುವುದೆಲ್ಲ ಏನು? ಯುದ್ಧಾಪರಾಧಿಗಳೆಲ್ಲ ವಿರೋಧ ಪಕ್ಷಗಳಾದ ಜಮಾಅತೆ ಇಸ್ಲಾಮೀ ಮತ್ತು ಬಾಂಗ್ಲಾದೇಶ್ ನ್ಯಾಶನಲ್ ಪಾರ್ಟಿ(BNP)ಯಲ್ಲೇ ತುಂಬಿಕೊಂಡಿದ್ದಾರೆಯೇ? ಶೇಖ್ ಹಸೀನಾರ ಅವಾಮಿ ಲೀಗ್ ಪರಿಶುದ್ಧವೇ? ನಿಜಕ್ಕೂ, ಈ ನ್ಯಾಯ ಪ್ರಕ್ರಿಯೆ ಪಾರದರ್ಶಕವಾಗಿದೆಯೇ?
  ಕಳೆದವಾರ ಗಲ್ಲಿಗೇರಿಸಲ್ಪಟ್ಟ ಮುತೀಉರ್ರಹ್ಮಾನ್ ನಿಝಾಮಿ ಯವರು ಯುದ್ಧಾಪರಾಧದ ಆರೋಪದಲ್ಲಿ ಗಲ್ಲಿಗೇರಿಸಲಾದ 5ನೇ ವ್ಯಕ್ತಿ. ಈ ಮೊದಲು ಇದೇ ಆರೋಪದಲ್ಲಿ ಅಲ್ ಅಹ್ಸನ್ ಮುಹಮ್ಮದ್ ಮುಜಾಹಿದ್, ಸಲಾಹುದ್ದೀನ್ ಚೌಧರಿ, ಕಮರು ಝ್ಝಮಾನ್, ಅಬ್ದುಲ್ ಕಾದಿರ್ ಮುಲ್ಲಾರನ್ನು ಗಲ್ಲಿಗೇರಿಸಲಾಗಿತ್ತು. ಇವರಲ್ಲಿ ಸಲಾಹುದ್ದೀನ್ ಚೌಧರಿ(BNP)ಯವರನ್ನು ಬಿಟ್ಟರೆ ಉಳಿದ ನಾಲ್ವರೂ ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷಕ್ಕೆ ಸೇರಿದವರು. ಜಮಾಅತೆ ಇಸ್ಲಾಮಿಯ ಪ್ರಭಾವಿ ನಾಯಕರಾದ ಗುಲಾಮ್ ಆಝಮ್ ಮತ್ತು ದಿಲಾವರ್ ಹುಸೇನ್ ಸಈದಿಯವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇಲ್ಲಿ ಒಬ್ಬೊಬ್ಬರದ್ದೂ ಬಹುತೇಕ ಒಂದೇ ಕತೆ. ಬಾಂಗ್ಲಾದೇಶದ ಸಂಸತ್ತಿಗೆ 7 ಬಾರಿ ಆಯ್ಕೆಯಾಗಿದ್ದ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಮುಖ್ಯ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ್ದ ಸಲಾಹುದ್ದೀನ್ ಚೌಧರಿಯವರ ವಿಚಾರಣಾ ಪ್ರಕ್ರಿಯೆಯೇ ಒಂದು ಸೋಜಿಗ. ಪಾಕಿಸ್ತಾನದಿಂದ ಬಾಂಗ್ಲಾದೇಶವು ಸ್ವತಂತ್ರಗೊಳ್ಳುವ ಮುನ್ನಾದಿನ ಮತ್ತು ಮರುದಿನ ನಡೆದ ಹಿಂದೂಗಳ ಮೇಲಿನ ದಾಳಿಯ ಸಹಿತ ಇತರ ಅಪರಾಧ ಕೃತ್ಯಗಳಲ್ಲಿ ಪಾಲುಗೊಂಡ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ತಮಾಷೆ ಏನೆಂದರೆ, ‘ಆ ದಿನಗಳಲ್ಲಿ ಅವರು ಪಶ್ಚಿಮ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾ) ಇರಲೇ ಇಲ್ಲ ಮತ್ತು ಅವರು ತನ್ನೊಂದಿಗೆ ಪಂಜಾಬ್ ಯುನಿವರ್ಸಿಟಿಯಲ್ಲಿದ್ದರು’ ಎಂದು ಬಾಂಗ್ಲಾದ ಹಾಲಿ ಸುಪ್ರೀಮ್ ಕೋರ್ಟ್‍ನ ನ್ಯಾಯಾಧೀಶರೇ ಟ್ರಿಬ್ಯೂನಲ್‍ಗೆ ಪತ್ರ ಬರೆದಿದ್ದರು. ‘ನ್ಯಾಯಾಧೀಶನೆಂಬ ನೆಲೆಯಲ್ಲಿ ತಾಂತ್ರಿಕ ತೊಂದರೆಗಳಲ್ಲದೇ ಹೋಗಿದ್ದರೆ ತಾನು ಟ್ರಿಬ್ಯೂನಲ್‍ನಲ್ಲಿ ಬಂದು ಸಾಕ್ಷ್ಯ ನುಡಿಯುತ್ತಿದ್ದೆ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದರು. ಚೌಧರಿಯವರ ವಿರುದ್ಧ 41 ಸಾಕ್ಷಿಗಳನ್ನು ಕೋರ್ಟ್‍ನಲ್ಲಿ ಹಾಜರುಪಡಿಸಲಾಗಿತ್ತು. ಆದರೆ ಚೌಧರಿಯವರ ಪರ ಬರೇ 4 ಮಂದಿ ಸಾಕ್ಷಿಗಳಿಗೆ ಮಾತ್ರ ಅನುಮತಿ ನೀಡಲಾಯಿತು. ಚೌಧರಿಯವರ ವಿರುದ್ಧ 41 ಮಂದಿ ಆರೋಪ ಹೊರಿಸುವಾಗ ಅವರ ಪರವಾಗಿ ಬರೇ 4 ಮಂದಿ ಸಾಕ್ಷ್ಯ ನುಡಿಯುವ ಸನ್ನಿವೇಶವನ್ನೊಮ್ಮೆ ಊಹಿಸಿ. ಆ ವಿಚಾರಣಾ ಪ್ರಕ್ರಿಯೆ ಹೇಗಿದ್ದೀತು? ಅಲ್ಲದೇ ಚೌಧರಿಯವರ ಪರ ಸಾಕ್ಷ್ಯ ನುಡಿಯುವುದಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ಮತ್ತು ಮಾಜಿ ಅಮೇರಿಕನ್ ರಾಯಭಾರಿಯವರು ಕೇಳಿಕೊಂಡರೂ ಟ್ರಿಬ್ಯೂನಲ್ ಅವಕಾಶ ನೀಡಲಿಲ್ಲ. ಅದೇ ವೇಳೆ ಇಂಟರ್‍ನೆಟ್‍ನ ಮೂಲಕ ಸೋರಿಕೆಯಾದ ತೀರ್ಪಿನ ಪ್ರತಿಯು ಇಡೀ ನ್ಯಾಯ ಪ್ರಕ್ರಿಯೆಯನ್ನೇ ಬೋಗಸ್ ಎಂದು ಬಹಿರಂಗವಾಗಿಯೇ ಸಾಬೀತುಪಡಿಸಿತ್ತು. ಚೌಧರಿಯವರಿಗೆ ಟ್ರಿಬ್ಯೂನಲ್ ಗಲ್ಲು ಶಿಕ್ಷೆ ಘೋಷಿಸುವುದಕ್ಕಿಂತ ಮೊದಲೇ ಆ ತೀರ್ಪಿನ ಪ್ರತಿ ಇಂಟರ್‍ನೆಟ್‍ನಲ್ಲಿ ಸೋರಿಕೆಯಾಗಿತ್ತು. ಮರುದಿನ ನ್ಯಾಯಾಧೀಶರು ಓದಿದ ತೀರ್ಪೂ ನೆಟ್‍ನಲ್ಲಿ ಸೋರಿಕೆಯಾದ ತೀರ್ಪೂ ಸಂಪೂರ್ಣ ತಾಳೆಯಾಗುತ್ತಿತ್ತು. ಹಸೀನಾ ಸರಕಾರದ ಮಂತ್ರಿಯೋರ್ವರು ಬರೆದುಕೊಟ್ಟ ತೀರ್ಪನ್ನು ನ್ಯಾಯಾಧೀಶರು ಓದಿದ್ದಾರೆ ಎಂದೇ ಅದನ್ನು ವ್ಯಾಖ್ಯಾನಿಸಲಾಗಿತ್ತು. ನಿಜವಾಗಿ, ಬಾಂಗ್ಲಾದೇಶದ ಅಪರಾಧ ಟ್ರಿಬ್ಯೂನಲ್‍ನ ವಿಚಾರಣೆಯ ಬಗ್ಗೆ, ಅದು 2010ರಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಬಗ್ಗೆ ಮತ್ತು ವಿರೋಧ ಪಕ್ಷಗಳನ್ನೇ ಗುರಿಯಾಗಿಸಿ ಅದು ನೀಡುತ್ತಿರುವ ಗಲ್ಲು ಶಿಕ್ಷೆಗಳ ಬಗ್ಗೆ ನಾವು ಅನುಮಾನಿಸಬೇಕಾದದ್ದು ಇವು ಮತ್ತು ಇಂತಹ ಅನೇಕಾರು ಕಾರಣಗಳಿಂದಲೇ. ಕಳೆದವಾರ ಗಲ್ಲಿಗೇರಿಸಲಾದ ಮುತೀಉರ್ರಹ್ಮಾನ್ ನಿಝಾಮಿಯರನ್ನೇ ಎತ್ತಿಕೊಳ್ಳಿ. ಅವರು ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷದ ಪ್ರಭಾವಿ ನಾಯಕರಾಗಿದ್ದುದಷ್ಟೇ ಅಲ್ಲ, 2009ರ ವರೆಗೆ ಖಲೀದಾ ಝಿಯ ಸರಕಾರದಲ್ಲಿ ಕೃಷಿ ಸಚಿವರಾಗಿ ಜನಪ್ರಿಯರಾಗಿದ್ದರು. ಬಳಿಕ ಕೈಗಾರಿಕಾ ಸಚಿವರಾದರು. ಢಾಕಾ ಯುನಿವರ್ಸಿಟಿಯಿಂದ ಪದವಿ ಪಡೆದರು. ಇಸ್ಲಾಮ್‍ಗೆ ಸಂಬಂಧಿಸಿ ಆಳ ಜ್ಞಾನವನ್ನು ಪಡೆದವರಾಗಿಯೂ ಗುರುತಿಸಿಕೊಂಡಿದ್ದರು. ಅಮೇರಿಕದ ಇಸ್ಲಾಮೀ ಚಿಂತಕರ ಸಭೆಯು 2009ರಲ್ಲಿ ನಿಝಾಮಿಯವರನ್ನು ವಿಶ್ವದ ಪ್ರಭಾವಿ 50 ಮುಸ್ಲಿಮರಲ್ಲಿ ಓರ್ವರೆಂದು ಗುರುತಿಸಿತ್ತು. ಅವರು ಎರಡು ಬಾರಿ ಬಾಂಗ್ಲಾದೇಶದ ಸಂಸತ್ತಿಗೆ ಆಯ್ಕೆಯಾಗಿದ್ದರು. ಹಾಗಂತ, ಇವೆಲ್ಲ ಓರ್ವ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಾರುವ ಪುರಾವೆಗಳು ಎಂದಲ್ಲ ಅಥವಾ ಅವರ ಮೇಲೆ ಹೊರಿಸಲಾಗುವ ಆರೋಪಗಳನ್ನು ಸುಳ್ಳು ಎಂದು ಸಾರುವುದಕ್ಕೆ ಇರುವ ಸಮರ್ಥನೆಗಳೂ ಅಲ್ಲ. ಆದರೆ ಕಲ್ಪಿತ ಆರೋಪಗಳನ್ನೇ ನಿಜ ಎಂದು ಸಾರಲು ವ್ಯವಸ್ಥೆ ಮತ್ತು ಕೋರ್ಟು ತುದಿಗಾಲಲ್ಲಿ ನಿಲ್ಲುವುದಾದರೆ ಆ ಬೆಳವಣಿಗೆಗೆ ಏನೆನ್ನಬೇಕು? ಬಾಂಗ್ಲಾದೇಶದ ಈಗಿನ ಅಧ್ಯಕ್ಷೆ ಶೇಖ್ ಹಸೀನಾ ಪ್ರಧಾನಿಯಾದದ್ದು ಇದೇ ಮೊದಲಲ್ಲ. 1996-2001ರಲ್ಲೂ ಅವರು ಪ್ರಧಾನಿಯಾಗಿದ್ದರು. 1971ರಲ್ಲಿ ಅವರ ತಂದೆ ಮುಜೀಬುರ್ರಹ್ಮಾನ್ ಪ್ರಧಾನಿಯಾಗಿದ್ದರು. ಒಂದು ವೇಳೆ ಯುದ್ಧಾಪರಾಧಗಳ ಕುರಿತಂತೆ ಟ್ರಿಬ್ಯೂನಲ್ ರಚಿಸಬೇಕಾದ ಅನಿವಾರ್ಯತೆ ಎದುರಾಗಿದ್ದರೆ ಅದು ಮುಜೀಬುರ್ರಹ್ಮಾನ್‍ರ ಅವಧಿಯಲ್ಲಿ. ಆದರೆ ಅವರು ಯುದ್ಧಾಪರಾಧಿಗಳಿಗೆ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಿದರು. ಇದಾಗಿ ದೀರ್ಘ 45 ವರ್ಷಗಳ ಬಳಿಕ 2010ರಲ್ಲಿ ಹಸೀನಾರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಟ್ರಿಬ್ಯೂನಲ್)ವನ್ನು ಸ್ಥಾಪಿಸಿದರು. ಪ್ರಮುಖ ವಿರೋಧ ಪಕ್ಷವಾದ ಜಮಾಅತೆ ಇಸ್ಲಾಮಿಯ ಮೇಲೆ 2014ರಲ್ಲಿ ನಿಷೇಧ ಹೇರಿದರು. ವಿರೋಧ ಪಕ್ಷಗಳ ಪ್ರಮುಖ ನಾಯಕರ ಮೇಲೆಲ್ಲ ವಿವಿಧ ಆರೋಪಗಳನ್ನು ಹೊರಿಸಿ ವಿಚಾರಣೆ ಆರಂಭಿಸಿದರು. ನಿಝಾಮಿಯವರ ವಿಚಾರಣಾ ಪ್ರಕ್ರಿಯೆ ಎಷ್ಟು ಹಾಸ್ಯಾಸ್ಪದವಾಗಿತ್ತೆಂದರೆ, ಅವರ ವಿರುದ್ಧ ಸಾಕ್ಷ್ಯ ನುಡಿಯುವುದಕ್ಕೆ 22 ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರ ಪರ ಕೇವಲ 4 ಮಂದಿಗೆ ಮಾತ್ರ ಸಾಕ್ಷ್ಯ ನುಡಿಯಲು ಅನುಮತಿಯನ್ನು ನೀಡಲಾಗಿತ್ತು. ಅದರಲ್ಲೂ ನಿಝಾಮಿಯವರ ವಿರುದ್ಧ ಸಾಕ್ಷ್ಯ ನುಡಿದವರನ್ನು ಪ್ರಶ್ನೆಗೊಳಪಡಿಸಲು (ಕ್ರಾಸ್ ಕ್ವಶ್ಚನ್) ವಕೀಲರಿಗೆ ನ್ಯಾಯಾಲಯ ಅವಕಾಶವನ್ನೇ ನೀಡಲಿಲ್ಲ. ನಿಜವಾಗಿ, ಯಾವುದೇ ಒಂದು ನ್ಯಾಯ ಪ್ರಕ್ರಿಯೆಯ ಅತ್ಯಂತ ಮಹತ್ವದ ಘಟ್ಟ ಸಾಕ್ಷಿಗಳನ್ನು ಪ್ರತಿಪ್ರಶ್ನೆಗೆ ಒಳಪಡಿಸುವುದು. ಅವರು ನುಡಿದ ಸಾಕ್ಷ್ಯ ನಿಜವೋ ಸುಳ್ಳೋ ಎಂಬುದನ್ನು ಖಚಿತಪಡಿಸುವ ನಿರ್ಣಾಯಕ ಸಂದರ್ಭವದು. ಆದರೆ ಬಾಂಗ್ಲಾ ದೇಶದ ಟ್ರಿಬ್ಯೂನಲ್ ನಿಝಾಮಿಯವರಿಗೆ ಈ ಅವಕಾಶವನ್ನೇ ಒದಗಿಸಲಿಲ್ಲ. ಹೀಗಿರುತ್ತಾ, 22 ಸಾಕ್ಷಿದಾರರ ಸಾಕ್ಷ್ಯದ ಎದುರು 4 ಮಂದಿ ಸಾಕ್ಷಿಗಳ ಸಾಕ್ಷ್ಯ ಪರಿಣಾಮಕಾರಿಯಾಗುವ ಯಾವ ಸಾಧ್ಯತೆಯೂ ಇರಲಿಲ್ಲ. ಅದರ ಜೊತೆಗೇ, ವಿಚಾರಣಾ ಪ್ರಕ್ರಿಯೆಗೆ ಸಿದ್ಧವಾಗುವುದಕ್ಕಾಗಿ ಪ್ರಾಸಿಕ್ಯೂಶನ್‍ಗೆ ನ್ಯಾಯಾಲಯವು 22 ತಿಂಗಳ ದೀರ್ಘ ಅವಧಿಯನ್ನು ನೀಡಿದ್ದರೆ ನಿಝಾಮಿಯವರಿಗೆ ಕೇವಲ 3 ವಾರಗಳನ್ನಷ್ಟೇ ನೀಡಲಾಗಿತ್ತು. ಅಷ್ಟಕ್ಕೂ,
  ಅಂತಾರಾಷ್ಟ್ರೀಯ ಅಪರಾಧ ಟ್ರಿಬ್ಯೂನಲ್ (ICT) ಎಂಬುದು ಅಂತಾರಾಷ್ಟ್ರೀಯ ನ್ಯಾವೇತ್ತರನ್ನು ಒಳಗೊಂಡ ಸರ್ವಮಾನ್ಯ ವಿಚಾರಣಾ ಸಮಿತಿಯಲ್ಲ. ಅಂತಾರಾಷ್ಟ್ರೀಯ ಎಂಬ ಹೆಸರನ್ನು ಅದು ತಗುಲಿಸಿಕೊಂಡಿದ್ದರೂ ಅಂತಾರಾಷ್ಟ್ರೀಯಕ್ಕೂ ಅಂತಾರಾಷ್ಟ್ರೀಯ ಅಪರಾಧ ನಿಯಮಗಳಿಗೂ ಯಾವ ಸಂಬಂಧವೂ ಇಲ್ಲದಷ್ಟು ಈ ಟ್ರಿಬ್ಯೂನಲ್ ಏಕಪಕ್ಷೀಯವಾಗಿದೆ ಮತ್ತು ಸ್ಥಳೀಯರಿಂದ ತುಂಬಿಕೊಂಡಿದೆ . ಆದ್ದರಿಂದಲೇ ಅಂತಾರಾಷ್ಟ್ರೀಯ ಸಮುದಾಯವು ಈ ಟ್ರಿಬ್ಯೂನಲ್‍ನ ಗಲ್ಲು ಪ್ರೇಮವನ್ನು ಆಗಿಂದಾಗ್ಗೆ ಪ್ರಶ್ನೆಗೊಳಪಡಿಸುತ್ತಲೇ ಬಂದಿದೆ. ಬಹುಶಃ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರಗತಿಪರ ಚಿಂತಕರು ಮತ್ತು ಬ್ಲಾಗರ್‍ಗಳ ಹತ್ಯೆಗೂ ಅಲ್ಲಿನ ವ್ಯವಸ್ಥೆಗೂ ಸಂಬಂಧ ಇರಬಹುದೇ ಎಂಬ ಅನುಮಾನಗಳೂ ಮೂಡುತ್ತಿವೆ. ಹಸೀನಾ ಪ್ರಗತಿಪರ ಗುಂಪಿನೊಂದಿಗೆ ಗುರುತಿಸಿಕೊಂಡವರು. ಜೊತೆಗೇ ಜಮಾಅತೆ ಇಸ್ಲಾಮೀ ಮತ್ತು ಬಿಎನ್‍ಪಿ ಪಕ್ಷಗಳನ್ನು ಪ್ರಗತಿ ವಿರೋಧಿ ಮೂಲಭೂತವಾದಿಗಳಾಗಿ ಬಿಂಬಿಸುತ್ತಲೂ ಇದ್ದಾರೆ. ಇಂಥ ಸ್ಥಿತಿಯಲ್ಲಿ, ಓರ್ವ ಪ್ರಗತಿಪರನ ಹತ್ಯೆ ಹಸೀನಾರ ಪಾಲಿಗೆ ಆನೆಬಲವನ್ನು ತುಂಬಬಲ್ಲುದು. ಟ್ರಿಬ್ಯೂನಲ್ ನೀಡುವ ಗಲ್ಲು ತೀರ್ಪನ್ನು ಸಮಾಜ ಸ್ವಾಗತಿಸುವುದಕ್ಕೆ ಇಂಥ ಹತ್ಯೆಗಳು ದೊಡ್ಡದೊಂದು ಪಾತ್ರವನ್ನು ನಿರ್ವಹಿಸಬಹುದು. ನಿಜವಾಗಿ, ನಿಝಾಮಿಯವರ ಹತ್ಯೆ ಸಾರ್ವತ್ರಿಕ ಚರ್ಚೆಗೆ ಒಳಪಡಬೇಕಾದದ್ದು ಅವರು ಜಮಾಅತೆ ಇಸ್ಲಾಮಿಯವರೋ ಅಥವಾ ಮಾಜಿ ಸಚಿವರೋ ಎಂಬ ಕಾರಣಕ್ಕಾಗಿ ಅಲ್ಲ. ಅವರು ನಿಜಕ್ಕೂ ಆ ಶಿಕ್ಷೆಗೆ ಅರ್ಹರೋ ಅಥವಾ ಅವರನ್ನು ರಾಜಕೀಯ ಕಾರಣಗಳಿಗಾಗಿ ಶಿಕ್ಷೆಗೆ ಅರ್ಹಗೊಳಿಸಲಾಯಿತೋ ಎಂಬುದಕ್ಕಾಗಿ. ಹಸೀನಾರ ಅಧಿಕಾರ ದಾಹ ಅಥವಾ ರಾಜಕೀಯ ಪ್ರತೀಕಾರವು ಈ ಗಲ್ಲುಗಳ ಹಿಂದೆ ಕೆಲಸ ಮಾಡಿದೆಯೇ? ಟ್ರಿಬ್ಯೂನಲ್ ಆ ಉದ್ದೇಶಕ್ಕಾಗಿಯೇ ಹುಟ್ಟುಹಾಕಲಾದ ನಕಲಿ ನ್ಯಾಯಾಲಯವೇ? ಈ ಹಿಂದೆ ಈ ಟ್ರಿಬ್ಯೂನಲ್‍ನ ನ್ಯಾಯಾಧೀಶರು ಮತ್ತು ಯುದ್ಧಾಪರಾಧ ವಿಚಾರಣೆಯನ್ನು ಬೆಂಬಲಿಸುವ ಕಾರ್ಯಕರ್ತರ ನಡುವೆ ನಡೆದ ಮಾತುಕತೆಗಳ ವಿವರಗಳು ಸೋರಿಕೆಯಾಗಿದ್ದು ಮತ್ತು ಇಡೀ ವಿಚಾರಣಾ ಪ್ರಕ್ರಿಯೆಯೇ ಒಂದು ನಾಟಕ ಎಂಬುದಾಗಿ ಬಹಿರಂಗವಾದದ್ದನ್ನು ಮುಖಾಮುಖಿಯಾಗಿಟ್ಟು ನೋಡಿ. ಏನನಿಸುತ್ತದೆ? ಅಷ್ಟಕ್ಕೂ,
  ಹಸೀನಾರ ‘ಗಲ್ಲು' ರಾಜಕೀಯವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರವು ಬೆಂಬಲಿಸಿದ ಎರಡು ದಿನಗಳ ಬಳಿಕ ಸಾಧ್ವಿ ಪ್ರಜ್ಞಾಸಿಂಗ್ ಮತ್ತವರ ತಂಡವು ಆರೋಪಮುಕ್ತವಾಗಿರುವುದು ಕಾಕತಾಳೀಯವೋ..?


No comments:

Post a Comment