Wednesday, January 13, 2016

‘ವರ್ಷದ ವ್ಯಕ್ತಿತ್ವ’ವಾಗಿ ಗೋವು ಮತ್ತು ರಾಜಕಾರಣದ ಅನಿವಾರ್ಯತೆಗಳು

    ಬಲಪಂಥೀಯ ವಿಚಾರಧಾರೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಯಾಹೂ ಡಾಟ್ ಕಾಮ್ ಪುರಾವೆಯೊಂದನ್ನು ನೀಡಿದೆ. ಅದು ಭಾರತದ 2015ನೇ ‘ವರ್ಷದ ವ್ಯಕ್ತಿತ್ವ’ವಾಗಿ (Personality of the Year) ಆಯ್ಕೆ ಮಾಡಿದ್ದು ಗೋವನ್ನು. ಹಾಗಂತ ಗೋವುಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದಲ್ಲ. ಈ ಆಯ್ಕೆ ಪ್ರಕ್ರಿಯೆಗೆ ಅದು ಕೆಲವು ಮಾನದಂಡಗಳನ್ನು ಗೊತ್ತು ಮಾಡಿದೆ. ವರ್ಷವಿಡೀ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ, ಮಾಧ್ಯಮಗಳಲ್ಲಿ ಚರ್ಚೆಗೆ, ಅಂಕಣ ಬರಹಕ್ಕೆ, ಸಂಪಾದಕೀಯಕ್ಕೆ ಹೆಚ್ಚು ಬಾರಿ ಬಳಕೆಯಾದ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಹುಡುಕಾಟಕ್ಕೆ ಒಳಗಾದ ವಿಷಯಗಳನ್ನು ಪರಿಶೀಲಿಸಿ ಅದು ವರ್ಷದ ವ್ಯಕ್ತಿತ್ವವನ್ನು ಆಯ್ಕೆ ಮಾಡುತ್ತದೆ. ಹೀಗೆ 2015 ಗೋವಿನ ಪಾಲಾಗಿದೆ. 120 ಕೋಟಿ ಮನುಷ್ಯರಿರುವ ಮತ್ತು ಇವರಲ್ಲಿ ಸುಮಾರು 60% ಜನರು ಬಡತನ ರೇಖೆಗಿಂತ ಕೆಳಗಿರುವ ದೇಶವೊಂದರಲ್ಲಿ ಪ್ರಾಣಿಯೊಂದು ವರ್ಷವಿಡೀ ಸುದ್ದಿಯಲ್ಲಿರುತ್ತದೆಂದರೆ ಏನರ್ಥ? ಅದಕ್ಕಿರುವ ಕಾರಣಗಳೇನು? ವರ್ಷದ 365 ದಿನಗಳಲ್ಲಿ ಬಹುತೇಕ 360 ದಿನಗಳೂ ಮಾಧ್ಯಮಗಳ ಮುಖಪುಟದಲ್ಲಿರುವುದು ಮನುಷ್ಯನೇ. ಆತ/ಕೆ ಫೇಸ್‍ಬುಕ್ ಬಳಸುತ್ತಾನೆ/ಳೆ. ವಾಟ್ಸ್‍ಆ್ಯಪ್ ಆತನಲ್ಲಿದೆ. ವಿಮಾನ ಓಡಿಸುತ್ತಾನೆ, ಬಾಂಬ್ ತಯಾರಿಸುತ್ತಾನೆ. ರಕ್ತ ಹರಿಸುತ್ತಾನೆ. ಆಡುತ್ತಾನೆ. ನಟಿಸುತ್ತಾನೆ, ಮೋಸ ಮಾಡುತ್ತಾನೆ, ಪ್ರಾಮಾಣಿಕತೆ ಮೆರೆಯುತ್ತಾನೆ, ಪ್ರತಿಭಟನೆ, ಆಮರಾಣಾಂತ ಉಪವಾಸ, ಚಳವಳಿ ಎಲ್ಲವನ್ನೂ ಮಾಡುತ್ತಾನೆ. ಅತ್ಯಾಚಾರ ಎಂಬುದೂ ಮನುಜ ಜಗತ್ತಿನ ಕೊಡುಗೆ. ಹಿಂಸೆ-ಅಹಿಂಸೆ, ದ್ವೈತ-ಅದ್ವೈತ, ಧರ್ಮ- ಅಧರ್ಮ, ಪ್ರೀತಿ-ಪ್ರೇಮ, ನಂಬಿಕೆ-ಮೂಢನಂಬಿಕೆ, ಅಸ್ತಿಕ-ನಾಸ್ತಿಕ... ಎಲ್ಲ ವಿಧಗಳಲ್ಲೂ ಮನುಷ್ಯನದ್ದೇ ಪಾತ್ರ. ಇವು ಮತ್ತು ಇನ್ನಿತರ ಎಲ್ಲ ವಿಷಯಗಳಲ್ಲೂ ಪ್ರಾಣಿಗಳ ಪಾತ್ರ  ನಗಣ್ಯ ಅನ್ನುವಷ್ಟು ಕಡಿಮೆ. ಇಷ್ಟಿದ್ದೂ ಗೋವು 2015ರ ವರ್ಷದ ವ್ಯಕ್ತಿತ್ವವಾಗಿ ಗುರುತಿಸಲ್ಪಟ್ಟಿರುವುದಕ್ಕೆ ಕಾರಣಗಳು ಏನು? ಅದರ ಹಿಂದಿರುವವರು ಯಾರು? ಅವರ ವಿಚಾರಧಾರೆ ಯಾವುದು? ಮಹಾರಾಷ್ಟ್ರ ಸರಕಾರದ ಗೋಮಾಂಸ ನಿಷೇಧದಿಂದ ಆರಂಭವಾಗಿ ದಾದ್ರಿಯ ವರೆಗೆ ಗೋವು ವರ್ಷವಿಡೀ ಸುದ್ದಿಯಲ್ಲಿತ್ತಲ್ಲ, ಅದು ಸಹಜ ಬೆಳವಣಿಗೆಯೋ ಅಥವಾ ರಾಜಕೀಯ ಅನಿವಾರ್ಯವೋ? 2015ರುದ್ದಕ್ಕೂ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಇತ್ತು. ಆಹಾರ ಭದ್ರತೆ, ಸಾಮಾಜಿಕ ಭದ್ರತೆ, ಜಾತಿ ತಾರತಮ್ಯ ಮುಂತಾದವುಗಳು 2015ರ ಆರಂಭದಿಂದ ಕೊನೆಯ ವರೆಗೂ ಸಮಸ್ಯೆಯಾಗಿಯೇ ಉಳಿದುಕೊಂಡವು. ಇವು ಮತ್ತು ಇಂತಹ ಇನ್ನಿತರ ಹತ್ತಾರು ಪ್ರಬಲ ಸಮಸ್ಯೆಗಳು ಗೋವನ್ನು ವರ್ಷದ ವ್ಯಕ್ತಿತ್ವವಾಗಿ  ಆಯ್ಕೆಯಾಗದಂತೆ ತಡೆಯುವುದಕ್ಕೆ ಪ್ರಬಲ ಕಾರಣಗಳಾಗಿ ಅಸ್ತಿತ್ವದಲ್ಲಿದ್ದುವು. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸುವಂತೆ ಮತ್ತು ಗೋವನ್ನು ಪ್ರಮುಖ ಸಮಸ್ಯೆಯಾಗಿ ಮುನ್ನೆಲೆಗೆ ಬರುವಂತೆ ತಂತ್ರ ಹೆಣೆದವರು ಯಾರು? ಅದಕ್ಕಿರುವ ಕಾರಣಗಳೇನು?
  ಗ್ರೀಸ್‍ನ ಗೋಲ್ಡನ್ ಡಾನ್ ಪಾರ್ಟಿ, ಫ್ರಾನ್ಸ್ ನ ಫ್ರಂಟ್ ನೇಶನ್, ಫಿನ್‍ಲ್ಯಾಂಡ್‍ನ ಟ್ರೂ ಫಿನ್ಸ್, ಡೆನ್ಮಾರ್ಕ್‍ನ ಡೆನ್ಮಾರ್ಕ್ ಪೀಪಲ್ಸ್ ಪಾರ್ಟಿ, ಸ್ವೀಡನ್‍ನ ಸ್ಟೀಡನ್ ಡೆಮಾಕ್ರೆಟ್ಸ್, ಸ್ವೀಝರ್ಲ್ಯಾಂಡ್ ನ ಸ್ವಿಸ್ ಪೀಪಲ್ಸ್ ಪಾರ್ಟಿ ಮುಂತಾದ ಬಲಪಂಥೀಯ ರಾಜಕೀಯ ಪಕ್ಷಗಳು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಇವತ್ತು ಪ್ರಾಬಲ್ಯವನ್ನು ಸ್ಥಾಪಿಸುತ್ತಿವೆ. ಕೆಲವು ಕಡೆ ಆಡಳಿತದ ಮೈತ್ರಿಕೂಟದಲ್ಲಿ ಭಾಗಿಯಾಗಿವೆ. ನೆದರ್ಲ್ಯಾಂಡ್, ಇಟಲಿ, ಅಸ್ಟ್ರಿಯ, ನಾರ್ವೆ ಮುಂತಾದ ರಾಷ್ಟ್ರಗಳಲ್ಲೂ ಈ ವಿಚಾರಧಾರೆಗೆ ಸಾಕಷ್ಟು ಜನಮನ್ನಣೆ ದೊರಕುತ್ತಿವೆ. ಭಾರತದಲ್ಲಿ ಬಿಜೆಪಿ ಹೇಗೆಯೋ ಗ್ರೀಸ್‍ನಲ್ಲಿ ಗೋಲ್ಡನ್ ಡಾನ್ ಪಾರ್ಟಿ ಕೂಡ ಹಾಗೆಯೇ. ಮೋದಿ ಅಥವಾ ಅವರ ಪರಿವಾರ ಮಾತಾಡುವ ಭಾಷೆಯಲ್ಲಿಯೇ ಬಹುತೇಕ ಫ್ರೆಂಚ್ ನೇಶನ್ ಪಕ್ಷದ ಮರಿನ್ ಲಿ ಪೆನ್ ಮಾತಾಡುತ್ತಾರೆ. ನೆದರ್ಲ್ಯಾಂಡ್ ನ ಪಾರ್ಟಿ ಆಫ್ ಫ್ರೀಡಮ್‍ನ ಗೀರ್ಟ್ ವೈಲ್ಡರ್ಸ್, ಟ್ರೂ ಫಿನ್ಸ್ ನ ಟಿಯೋ ಸೋಯಿನಿ, ಇಟಲಿಯ ನಾರ್ದನ್ ಲೀಗ್‍ನ ಅಂಬರ್ಟೋ ಬಾಸ್ಸಿ, ನಾರ್ವೇಯ ಸಿವ್ ಜೇನ್ಸನ್ ಮುಂತಾದವರೆಲ್ಲ ಬಳಸುವ ಭಾಷೆ ಮತ್ತು ಭಾವ-ಭಂಗಿಗಳು ಅಮೇರಿಕದ ಈಗನ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‍ರಂತೆಯೇ ಇವೆ. ಆಕ್ರಮಣಕಾರೀ ಭಾಷಾ ಶೈಲಿ ಮತ್ತು ಬಲಪಂಥೀಯ ಉಗ್ರ ವಿಚಾರಧಾರೆಯನ್ನು ಸಾರ್ವಜನಿಕವಾಗಿ ಎಗ್ಗಿಲ್ಲದೇ ಪ್ರಸ್ತಾಪಿಸುವುದು ಒಂದು ಹಂತದ ವರೆಗೆ ಜನಪ್ರಿಯವಾಗತೊಡಗಿದೆ. ಭಾರತದಲ್ಲಿ ಗೋವು, ಸೆಗಣಿ, ಗೋಮೂತ್ರ ಮತ್ತು ಅದರ ಉತ್ಪನ್ನಗಳ ಹೆಸರಲ್ಲಿ ಚರ್ಚೆಗಳು ನಡೆಯುತ್ತಿರುವಂತೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಪಿಯ ಜೇಯ್‍ಗಾರ್ಡ್, ಹೆನ್ಸ್, ಕ್ರಿಸ್ಚಿಯನ್ ಸ್ಟಾಚೆ, ಜೋಸೆಫ್ ಬಚರ್, ಜಿಮ್ಮಿ ಅಕೆಸ್ಸನ್ ನಂತಹ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮುಸ್ಲಿಮರ ಆಚಾರ, ಸಾಂಸ್ಕ್ರಿತಿಕ ವೈವಿಧ್ಯತೆಗಳು, ಧಾರ್ಮಿಕ ವಿಧಿಗಳು, ಚಿಹ್ನೆಗಳ ಬಗ್ಗೆ ಅಕ್ರೋಶದ ಧ್ವನಿಯಲ್ಲಿ ಮಾತಾಡುತ್ತಿರುತ್ತಾರೆ. ಒಂದು ರೀತಿಯಲ್ಲಿ, ರಾಜಕೀಯದ ಸಾಂಸ್ಕ್ರಿತೀಕೀಕರಣವು ನಡೆಯುತ್ತಿರುವಂತೆ ತೋರುತ್ತಿದೆ. ಬಹುಶಃ ಮುಕ್ತ ಮಾರುಕಟ್ಟೆಗೆ ಜಗತ್ತು ತೆರೆದುಕೊಂಡ ಬಳಿಕ ಆದ ಮಹತ್ತರ ಬದಲಾವಣೆ ಇದು. ಮುಕ್ತ ಮಾರುಕಟ್ಟೆ ವಿಧಾನದಲ್ಲಿ ಸರಕಾರಗಳಿಗೆ ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಸರಕಾರ ರಚಿಸುವುದಾದರೂ, ಆ ಸರಕಾರದ ನೀತಿ-ನಿರೂಪಣೆಗಳನ್ನು ನಿರ್ಧರಿಸುವುದು ಅವರಲ್ಲ, ಮುಕ್ತ ಮಾರುಕಟ್ಟೆಯ ಒಡೆಯರು. ಜಾಗತಿಕವಾಗಿ ಇವತ್ತು ವಿಶ್ವ ಬ್ಯಾಂಕು, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಏಶ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ಸಹಿತ ವಿವಿಧ ಹಣಕಾಸು ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಈ ಸಂಸ್ಥೆಗಳಿಂದ ಸಾಲ ಪಡೆಯದೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ವಾತಾವರಣವನ್ನು ನಿರ್ಮಿಸಲಾಗಿದೆ. ಗ್ರೀಸ್ ಇದೇ ವ್ಯವಸ್ಥೆಯ ಬಲಿಪಶು. ಮುಕ್ತ ಆರ್ಥಿಕ ನೀತಿಯಿಂದಾಗಿ ದೇಶಗಳ ಮೇಲೆ ಆಗಿರುವ ದೊಡ್ಡ ಅಡ್ಡ ಪರಿಣಾಮ ಏನೆಂದರೆ, ಹಣಕಾಸು ನಿರ್ವಹಣೆಯನ್ನು ಬಹುತೇಕ ತೆರೆಮರೆಯಲ್ಲಿ ಅವೇ ನಿಯಂತ್ರಿಸುವುದು. ಜಿಡಿಪಿ, ಅಭಿವೃದ್ಧಿ, ಸಾಲ ಎಂಬವುಗಳನ್ನೇ ತೋರಿಸಿ ಪ್ರತಿ ರಾಷ್ಟ್ರಗಳ ಮೇಲೂ ಅವು ಸವಾರಿ ಮಾಡುತ್ತವೆ. ಸಾಲ ಕೊಡುವ ಈ ಬ್ಯಾಂಕುಗಳು ಇಂತಿಷ್ಟು ಜಿಡಿಪಿ ದರ ಇರಬೇಕು ಎಂದು ತಾಕೀತು ಮಾಡುತ್ತವೆ. ಅಭಿವೃದ್ಧಿಯ ವೇಗವು ಕುಂಠಿತಗೊಳ್ಳಬಾರದಾದರೆ ಇಂತಿಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಡ ಹೇರುತ್ತವೆ. ಹೀಗೆ ಮುಕ್ತ ಆರ್ಥಿಕ ನೀತಿಯ ಅಡ್ಡ ಪರಿಣಾಮಕ್ಕೆ ಬಹುತೇಕ ಎಲ್ಲ ರಾಷ್ಟ್ರಗಳ ಹಣಕಾಸು ಇಲಾಖೆಗಳು ತುತ್ತಾಗಿವೆ. ಆದ್ದರಿಂದ ಹಣಕಾಸು ನೀತಿಗೆ ಸಂಬಂಧಿಸಿದ ಪ್ರಮುಖ ಇಲಾಖೆಗಳಲ್ಲೆಲ್ಲಾ ರಾಜಕಾರಣಿಗಳಲ್ಲದ ತಜ್ಞರು ನೇಮಕವಾಗಿರುತ್ತಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ದುಡಿದವರನ್ನೋ ಅಥವಾ ಅವುಗಳ ಪರವಾದ ಅಭಿಪ್ರಾಯ ಹೊಂದಿದವರನ್ನೋ ಹಣಕಾಸು ನೀತಿ-ನಿರೂಪಣಾ ಇಲಾಖೆಗಳಲ್ಲಿ ನೇಮಿಸಿಕೊಳ್ಳಲೇಬೇಕಾದ ಒತ್ತಡವೊಂದನ್ನು ಎಲ್ಲ ಸರಕಾರಗಳೂ ಎದುರಿಸುತ್ತಿವೆ. ನಿಜವಾಗಿ ಒಂದು ದೇಶದ ಅರ್ಥವ್ಯವಸ್ಥೆಯ ನಿಯಂತ್ರಣ ಆ ದೇಶದ ಕೈಯಿಂದ ತಪ್ಪಿಹೋದರೆ, ಆ ಬಳಿಕ ಸರಕಾರಗಳಿಗೆ ಸುದ್ದಿಯಲ್ಲಿರುವುದಕ್ಕೆ ಹೆಚ್ಚು ವಿಷಯಗಳಿರುವುದಿಲ್ಲ. ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಬಡತನ, ಹಸಿವಿನಿಂದ ಸಾವು, ಆಹಾರ ಭದ್ರತೆ ಮುಂತಾದವುಗಳನ್ನು ಹೆಚ್ಚು ಪ್ರಸ್ತಾಪಿಸುವಂತಿಲ್ಲ. ರಾಜಕಾರಣಿಗಳಲ್ಲದ ತಜ್ಞರು ಹಣಕಾಸು ಕ್ಷೇತ್ರದ ವಿವಿಧ ಆಯಕಟ್ಟಿನ ಸ್ಥಾನಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನಿರ್ದೇಶನದಂತೆ ಉದ್ಯೋಗ ನಡೆಸುತ್ತಿರುವುದು ಒಂದು ರೀತಿಯಲ್ಲಿ ರಾಜಕಾರಣಿಗಳಲ್ಲಿ ವಿಷಯದ ಕೊರತೆ ಎದುರಿಸುವಂತೆ ಮಾಡಿದೆ. ಆದ್ದರಿಂದಲೇ ರಾಜಕಾರಣಿಗಳು ಸಾಂಸ್ಕ್ರಿತಿಕ ರಾಜಕಾರಣವನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಆದ್ದರಿಂದಲೇ ಜನರು ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು, ಯಾರನ್ನು ಮದುವೆಯಾಗಬೇಕು, ಎಲ್ಲಿ ಧರ್ಮ ಇರಬೇಕು, ಯಾರು ಯಾವ ಭಾಷೆಯನ್ನಾಡಬೇಕು ಮುಂತಾದವುಗಳನ್ನೇ ದೇಶದ ಪ್ರಮುಖ ಇಶ್ಯೂ ಆಗಿ ಬಿಂಬಿಸುತ್ತಿರುವಂತೆ ಅನಿಸುತ್ತಿದೆ. ನಿಜವಾಗಿ ಮುಕ್ತ ಮಾರುಕಟ್ಟೆ ನೀತಿಯು ನಾಗರಿಕರ ಮೇಲೆ ಬೀರಿ ರುವ ಅಡ್ಡ ಪರಿಣಾಮ ಇದು. ಈ ನೀತಿಯಲ್ಲಿ ಮಾರುಕಟ್ಟೆಗಳು ಮಾತ್ರ ಮುಕ್ತವಾಗುವುದಲ್ಲ. ಸರಕಾರಗಳು ಕೂಡ ಜವಾಬ್ದಾರಿ ಯಿಂದ ಬಹುತೇಕ ಮುಕ್ತವಾಗಿರುತ್ತವೆ. ಬಾಹ್ಯ ನೋಟಕ್ಕೆ ಸರಕಾರವೊಂದು ಆರ್ಥಿಕ ಪ್ರಗತಿ, ಜಿಡಿಪಿ ಪ್ರಗತಿ, ಅದೂ ಇದೂ ಎಂದೆಲ್ಲ ಹೇಳುತ್ತಿರಬಹುದು. ಆದರೆ ಅವನ್ನು ಆಗಾಗ ಹೇಳಿಕೊಡುತ್ತಿರುವುದು ಮುಕ್ತ ಆರ್ಥಿಕ ನೀತಿಯ ಒಡೆಯರೇ. ಅವರೇ ಸರಕಾರದಲ್ಲಿ ಹಣಕಾಸು ಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ. ಯಾವ್ಯಾವ ತಜ್ಞರನ್ನು ಯಾವ್ಯಾವ ಇಲಾಖೆಯ ಮುಖ್ಯಸ್ಥರನ್ನಾಗಿಸಬೇಕೆಂದು ಪಟ್ಟಿ ಕೊಡುತ್ತಾರೆ. ಇಂಥ ಸ್ಥಿತಿಯಲ್ಲಿ ರಾಜಕಾರಣಿಗಳಿಗೆ ಜನರನ್ನು ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು ಮತ್ತು ಸರಕಾರದ ನೀತಿ-ನಿಯಮಗಳ ಬಗ್ಗೆ ಸಾರ್ವಜನಿಕ ಚರ್ಚೆಗಳಾಗದಂತೆ ನೋಡಿಕೊಳ್ಳ ಬೇಕೆಂದಾದರೆ ಸಾಂಸ್ಕ್ರಿತಿಕ ರಾಜಕೀಯವೊಂದೇ ಉತ್ತಮ ಉಪಾಯ. ಹೀಗೆ ದನ, ಕರು, ಸೆಗಣಿ, ಸಸ್ಯಹಾರ, ಮಾಂಸಹಾರ, ಉಡುಗೆ-ತೊಡುಗೆ, ಯೋಗ, ಭಾಷೆ, ಭಗವದ್ಗೀತೆ... ಇತ್ಯಾದಿಗಳು ಪ್ರಜಾತಂತ್ರದ ಪ್ರಧಾನ ರಂಗ ಭೂಮಿಗೆ ಬರ ಬೇಕಾಗುತ್ತದೆ. ನಿಜವಾಗಿಯೂ ಈ ರಂಗಭೂಮಿಯಲ್ಲಿ ಗಟ್ಟಿಯಾಗಿ ತಳವೂರಲೇ ಬೇಕಾಗಿದ್ದ ವಿಷಯಗಳು ಕಂಬಿ ಕೀಳ ಬೇಕಾಗುತ್ತದೆ. ಆದ್ದರಿಂದ,  ಮಹಾರಾಷ್ಟ್ರ ಸರಕಾರವು 2015ರ ಆರಂಭದಲ್ಲಿ ಗೋಮಾಂಸವನ್ನು ನಿಷೇಧಿಸುವಲ್ಲಿಂದ ತೊಡಗಿ ವರ್ಷದ ಕೊನೆಯಲ್ಲಾದ ದಾದ್ರಿ ಹತ್ಯಾಕಾಂಡದ ವರೆಗೆ ಗೋವು ಭಾರತೀಯ ರಾಜಕೀಯದ ಪ್ರಮುಖ ವಿಷಯವಾಗಿರುವುದನ್ನು ನಾವು ಬರೇ ರಾಜಕೀಯ ತಂತ್ರಗಾರಿಕೆಯಾಗಿಯಷ್ಟೇ ನೋಡಬೇಕಾಗಿಲ್ಲ. ಸಾಂಸ್ಕ್ರಿತಿಕ ರಾಜಕಾರಣವು  ಮುಕ್ತ ಆರ್ಥಿಕ ನೀತಿಯ ಬೇಡಿಕೆಯೂ ಹೌದು. ಈ ಆರ್ಥಿಕ ನೀತಿಯಿಂದ ಆಗಿರುವ ಮತ್ತು ಆಗುತ್ತಿರುವ ವಿರೂಪಗಳನ್ನು ಮರೆಮಾಚಬೇಕಾದರೆ ಜನರನ್ನು ಭಾವುಕಗೊಳಿಸುವ ವಿಷಯಗಳ ಮೇಲೆ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಬೆಲೆ ಏರಿಕೆಯ ಬಗ್ಗೆ ಜನರು ಗಂಭೀರವಾಗಿ ಮಾತಾಡತೊಡಗಿದರೆ ಅದರಿಂದ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಅನುಮಾನಗಳು ಸೃಷ್ಟಿಯಾಗು ತ್ತವೆ. ಅಂತಾರಾಷ್ಟ್ರೀಯ ಹಣಕಾಸು ಒಪ್ಪಂದಗಳು, ಅದರ ಶರತ್ತುಗಳು, ಪಾವತಿಸಬೇಕಾದ ಬಡ್ಡಿಗಳು ಮುಂತಾದವುಗಳೆಲ್ಲ ಜನರಿಗೆ ಗೊತ್ತಾಗುತ್ತದೆ. ಹೀಗಾದರೆ ಪರ್ಯಾಯ ನೀತಿಗಳತ್ತ ಜನರಿಂದ ಒತ್ತಾಯಗಳು ಕೇಳಬರಬಹುದು. ಗ್ರೀಸ್‍ನ ನಾಗರಿಕರಂತೆ ತಿರುಗಿಬಿದ್ದರೆ ಅದು ಅಪಾಯಕಾರಿ ನಾಗರಿಕ ಚಳವಳಿಯನ್ನು ಹುಟ್ಟು ಹಾಕಬಹುದು. ಅದಕ್ಕಿಂತ ಮೋದಿ ಮತ್ತು ಅವರ ಪರಿವಾರದ ಭಾಷೆಯಲ್ಲಿ, ಡೊನಾಲ್ಡ್ ಟ್ರಂಪ್‍ರ ಭಾಷೆಯಲ್ಲಿ ಅಥವಾ ಗೀರ್ಟ್ ವಿಲ್ಡರ್ಸ್‍ರ ಭಾಷೆಯಲ್ಲಿ ಮಾತಾಡಿದರೆ ಅದು ಪ್ರಧಾನ ವಿಷಯವನ್ನು ಮರೆಸಿ ಬಿಡುತ್ತದೆ. ಆದ್ದರಿಂದ ಜಾಗತೀಕರಣದಂತೆ ರಾಜಕೀಯವನ್ನೂ ಸಾಂಸ್ಕ್ರಿತೀಕರಣಗೊಳಿಸ ಬೇಕಾಗುತ್ತದೆ. ಆಗ ಗೋವು, ಮಸೀದಿ, ಮಂದಿರ, ಗಡ್ಡ, ಮದ್ರಸ, ಕುರ್‍ಆನ್, ಭಗವದ್ಗೀತೆ, ಪ್ರಣಯ... ಮುಂತಾದವು ಗಳಲ್ಲಿಯೇ ಸಮಾಜ ಮುಳುಗಿ ಬಿಡುತ್ತದೆ. ಅಂದಹಾಗೆ,
  2015ರಲ್ಲಿ ಗೋವು ‘ವರ್ಷದ ವ್ಯಕ್ತಿತ್ವ’ವಾಗಿ ಮೂಡಿ ಬಂದಂತೆಯೇ 2016ರಲ್ಲಿ  ಮಂದಿರ ‘ವರ್ಷದ ವ್ಯಕ್ತಿತ್ವ’ ಗೌರವವನ್ನು ಪಡೆಯಲೂ ಬಹುದು.  

No comments:

Post a Comment