Tuesday, February 5, 2013

ಮುಸ್ಲಿಮರನ್ನು ನಿಂದಿಸುವುದಕ್ಕೆ ಯಾಕೆ ಅವಕಾಶ ಮಾಡಿಕೊಟ್ಟಿರಿ ಕಮಲ್?

ಫೈರ್
ಪರ್ಝಾನಿಯಾ
ಡಾ ವಿನ್ಸಿ ಕೋಡ್
ಆರಕ್ಷಣ್
ಒರೇ ಒರು ಗ್ರಾಮತ್ತಿಲ್..
  ಮುಂತಾದ ಸಿನಿಮಾಗಳೆಲ್ಲ ಈ ದೇಶದಲ್ಲಿ ಈ ಹಿಂದೆ ನಿಷೇಧಕ್ಕೆ ಒಳಗಾಗಿತ್ತಲ್ಲ, ಅದಕ್ಕೆ ಯಾರು ಕಾರಣ; ಮುಸ್ಲಿಮರೇ? ವಿಶ್ವರೂಪಮ್ ಸಿನಿಮಾದ ಸುತ್ತ ಎದ್ದಿರುವ ವಿವಾದದ ಹೊಣೆಯನ್ನು ಮುಸ್ಲಿಮರ ತಲೆಗೆ ಕಟ್ಟಿ, ಕಮಲ್ ಹಾಸನ್‍ರನ್ನು ದಿವಾಳಿಯ ಅಂಚಿಗೆ ನೂಕಿದ ಖಳರಂತೆ ಚಿತ್ರಿಸುವವರೆಲ್ಲ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದರೇನು? ಹಾಗಾದರೆ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಲಾದ 'ಸೇತು ಸಮುದ್ರ' ಯೋಜನೆಯನ್ನು ಕೇಂದ್ರ ಸರಕಾರ ಕೈ ಬಿಟ್ಟಿರುವುದಕ್ಕೆ ಯಾವ ವ್ಯಾಖ್ಯಾನ ಕೊಡಬೇಕು? ಈ ದೇಶದ ಬೊಕ್ಕಸಕ್ಕೆ ಬಿಜೆಪಿ ಮತ್ತು ಪರಿವಾರವು ಕೋಟ್ಯಂತರ ರೂಪಾಯಿಗಳನ್ನು ನಷ್ಟ ಮಾಡಿದೆ ಎಂದು ಹೇಳಲಾದೀತೇ? ಇಷ್ಟಕ್ಕೂ, ವಿಶ್ವರೂಪಮ್ ಸಿನಿಮಾದ ವಿರುದ್ಧ ಮಾಡಲಾದ ಪ್ರತಿಭಟನೆ ಮತ್ತು ನಿಷೇಧದ ಕ್ರಮವನ್ನು, 'ತಾಲಿಬಾನ್ ಮನಸ್ಥಿತಿ' ಎಂದು ವ್ಯಾಖ್ಯಾನಿಸಿದ ಬಿಜೆಪಿಯು (ಸಂಸದ ತರುಣ್ ವಿಜಯ್) 1996ರಲ್ಲಿ ಮಾಡಿದ್ದಾದರೂ ಏನು?
  ಶಬಾನಾ ಆಝ್ಮಿ ಮತ್ತು ನಂದಿತಾ ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಫೈರ್’ ಚಿತ್ರದ ವಿರುದ್ಧ 1996ರಲ್ಲಿ ಬಿಜೆಪಿ ಮತ್ತು ಶಿವಸೇನೆಗಳು ಬೀದಿಗಿಳಿದವು. ಚಿತ್ರವು ಸಲಿಂಗ ಕಾಮಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಭಾರತೀಯತೆಗೆ ವಿರುದ್ಧ ಎಂದು ಅವು ಸಾರಿದುವು. ದೆಹಲಿ ಮತ್ತು ಮುಂಬೈಯ ಸಿನಿಮಾ ಮಂದಿರದೊಳಗೆ ನುಗ್ಗಿ ಅಲ್ಲಿರುವುದನ್ನೆಲ್ಲಾ ಧ್ವಂಸ ಮಾಡಿದುವು. ಫೆಬ್ರವರಿ 2000ದಲ್ಲಿ  ವಾರಣಾಸಿಯಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ  ದೀಪಾ ಮೆಹ್ತಾರ ವಾಟರ್ ಸಿನಿಮಾದ ವಿರುದ್ಧ ಇದೇ ಬಿಜೆಪಿ ಮತ್ತು ಸಂಘ ಪರಿವಾರದ ಮಂದಿ ಪ್ರತಿಭಟಿಸಿದರು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಶ್ಯಾಮ್ ದೇವ್ ಚೌಧರಿ, ರಾಜ್ಯ ಘಟಕದ ಕೋಶಾಧಿಕಾರಿ ಅಶೋಕ್ ಧವನ್ ಮತ್ತು ಆಗಿನ ಉತ್ತರ ಪ್ರದೇಶ ಸರಕಾರದ ಹಣಕಾಸು ಸಚಿವರ ಪತ್ನಿ ಜ್ಯೋತ್ಸ್ನಾ ಶ್ರೀವಾಸ್ತವ್‍ರ ನೇತೃತ್ವದಲ್ಲಿದ್ದ 500 ಮಂದಿಯ ಗುಂಪು ವಾಟರ್ ಸಿನಿಮಾದ ಚಿತ್ರೀಕರಣಕ್ಕೆ ಅಡ್ಡಿಪಡಿಸಿತ್ತಲ್ಲದೇ, ಸೆಟ್ ಅನ್ನು ಧ್ವಂಸ ಮಾಡಿತು. ‘ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸದಿದ್ದರೆ ಶವವನ್ನು ಕೊಂಡೊಯ್ಯ ಬೇಕಾದೀತು’ ಎಂದು ವಿಹಿಂಪದ ನಾಯಕ ಅಶೋಕ್ ಸಿಂಘಾಲ್ ಎಚ್ಚರಿಸಿದರು. ಇವೆಲ್ಲ ಏನು, ಯಾವ ಮನಸ್ಥಿತಿ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಈ ಮಟ್ಟದ ದ್ವಂದ್ವವೇಕೆ?
  ಇದೊಂದೇ ಅಲ್ಲ,
ಒರೇ ಒರು ಗ್ರಾಮತ್ತಿಲ್ ಎಂಬ ಸಿನಿಮಾ 1989ರಲ್ಲಿ ಬಿಡುಗಡೆಯಾಗುತ್ತದೆ. ತಮಿಳುನಾಡಿನ ವಿದ್ಯಾಸಂಸ್ಥೆಗಳಲ್ಲಿರುವ ಜಾತಿಯಾಧಾರಿತ ಮೀಸಲಾತಿಯನ್ನು ಪ್ರಶ್ನಿಸುವ ಈ ಸಿನಿಮಾದ ವಿರುದ್ಧ ಅಂಬೇಡ್ಕರ್ ಪೀಪಲ್ಸ್ ಮೊವ್‍ಮೆಂಟ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗಳು ತೀವ್ರ ಪ್ರತಿಭಟನೆ ನಡೆಸುತ್ತವೆ. ಸಿನಿಮಾಕ್ಕೆ ತಮಿಳುನಾಡಿನಲ್ಲಿ ನಿಷೇಧ ಹೇರಲಾಗುತ್ತದೆ. 2006ರಲ್ಲಿ ಡಾ ವಿನ್ಸಿ ಕೋಡ್ ಎಂಬ ಸಿನಿಮಾದ ವಿರುದ್ಧ ಕ್ರೈಸ್ತರು ಪ್ರತಿಭಟನೆ ನಡೆಸುತ್ತಾರೆ. ಟಾಮ್ ಹಾರಿಕ್ಸ್ ಮತ್ತು ಆಂಡ್ರಿ  ಟಾಟೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾವು ಕ್ರೈಸ್ತ ವಿರೋಧಿ ನಿಲುವನ್ನು ಹೊಂದಿದೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣದಿಂದಾಗಿಯೇ ಪಂಜಾಬ್, ಗೋವಾ, ನಾಗಾಲ್ಯಾಂಡ್, ಮೇಘಾಲಯ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಸಿನಿಮಾವನ್ನು ನಿಷೇಧಿಸಲಾಗುತ್ತದೆ. 2002ರಲ್ಲಿ ಬಿಡುಗಡೆಯಾದ ಮತ್ತು ಗುಜರಾತ್ ಹತ್ಯಾಕಾಂಡದ ಕತೆಯನ್ನೊಳಗೊಂಡ ಪರ್ಝಾನಿಯ ಚಿತ್ರವನ್ನು ಗುಜರಾತ್‍ನ ಮೋದಿ ಸರಕಾರ ನಿಷೇಧಿಸುತ್ತದೆ. ನಸೀರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿದ್ದ ಈ ಸಿನಿಮಾದ ಮೇಲಿನ ನಿಷೇಧವನ್ನು ಬಿಜೆಪಿ ಮತ್ತು ಪರಿವಾರ ಸ್ವಾಗತಿಸುತ್ತದೆ. ಪ್ರಕಾಶ್ ಝಾ ನಿರ್ದೇಶಿಸಿದ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದ ಆರಕ್ಷಣ್ ಸಿನಿಮಾವು 2011ರಲ್ಲಿ ವಿವಾದಕ್ಕೆ ಗುರಿಯಾಗುತ್ತದೆ. ಉದ್ಯೋಗ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಜಾತಿ ಆಧಾರಿತವಾಗಿ ನೀಡಲಾಗುವ ಮೀಸಲಾತಿಯನ್ನು ಸಿನಿಮಾ ವಿರೋಧಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಕೊನೆಗೆ ಉತ್ತರ ಪ್ರದೇಶ, ಆಂಧ್ರ, ಪಂಜಾಬ್‍ಗಳಲ್ಲಿ, 'ಆರಕ್ಷಣ್' ನಿಷೇಧಕ್ಕೆ ಒಳಗಾಗುತ್ತದೆ.. ಇವೆಲ್ಲ ಏನು? ಈ ಎಲ್ಲ ನಿಷೇಧಗಳಲ್ಲಿ ಮುಸ್ಲಿಮರ ಪಾತ್ರವಿತ್ತೇ? ಹೀಗಿದ್ದೂ, ವಿಶ್ವರೂಪಮ್ ಎಂಬ ಏಕೈಕ ಘಟನೆಯನ್ನು ಎತ್ತಿಕೊಂಡು; ಮುಸ್ಲಿಮರನ್ನು ಅಸಹಿಷ್ಣುಗಳಂತೆ, ವಾಕ್ ಸ್ವಾತಂತ್ರ್ಯದ ವೈರಿಗಳಂತೆ ಮಾಧ್ಯಮಗಳು ಬಿಂಬಿಸುತ್ತಿರುವುದಾದರೂ ಏತಕ್ಕೆ? ಈ ಹಿಂದೆ ಎಂದೂ ನಡೆಯದ 'ನಷ್ಟದ' ಚರ್ಚೆಗಳೆಲ್ಲ ಇವತ್ತು ನಡೆಯುತ್ತಿರುವುದೇಕೆ? ಕಮಲ್ ಹಾಸನ್‍ರಿಗೆ ಅಭಿಮಾನಿಗಳು ಚೆಕ್, ಡಿಡಿಗಳನ್ನು ಕಳುಹಿಸುತ್ತಿರುವ ಸುದ್ದಿಗೆ ಮತ್ತು ನಷ್ಟವನ್ನು ಭರಿಸುವುದಕ್ಕಾಗಿ ಕಮಲ್ ಸಿನಿಮಾದಲ್ಲಿ ಪುಕ್ಕಟೆಯಾಗಿ ನಟಿಸುವೆನೆಂದ ರಜನೀಕಾಂತ್‍ರ ಹೇಳಿಕೆಗಳಿಗೆ ಭಾರೀ ಕವರೇಜ್ ಕೊಡುವ ಮೂಲಕ ಮಾಧ್ಯಮಗಳು ಪ್ರಕರಣವನ್ನು ಭಾವನಾತ್ಮಕಗೊಳಿಸುತ್ತಿವೆಯೆಂಬುದು ಸುಳ್ಳೇ? ಅಂದಹಾಗೆ, ಕೋಟ್ಯಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿರುವ ಸಿನಿಮಾವೊಂದು ನಿಗದಿತ ಯೋಜನೆಯಂತೆ ಬಿಡುಗಡೆಗೊಳ್ಳದಿದ್ದರೆ ನಷ್ಟಕ್ಕೆ ಒಳಗಾಗುತ್ತದೆ ಅನ್ನುವುದೇನು ಹೊಸ ಸಂಗತಿಯಲ್ಲ. ಸಿನಿಮಾ ಎಂದಲ್ಲ, ಉದ್ಯಮಕ್ಕೂ ಇದು ಅನ್ವಯಿಸುತ್ತದೆ. ಅಷ್ಟಕ್ಕೂ, ಇವತ್ತು ಇಡೀ ಸಿನಿಮಾ ಕ್ಷೇತ್ರವೇ ದೊಡ್ಡದೊಂಡು ಉದ್ಯಮವಾಗಿ ಮಾರ್ಪಟ್ಟಿಲ್ಲವೇ? ಉದ್ಯಮ ಕ್ಷೇತ್ರದಲ್ಲಿ ನಡೆಯುವ ಎಲ್ಲ ಬಗೆಯ ಲಾಭ-ನಷ್ಟದ ಲೆಕ್ಕಾಚಾರಗಳು ಈ ಕ್ಷೇತ್ರದಲ್ಲೂ ನಡೆಯುತ್ತದಲ್ಲವೇ? ಹೀಗಿರುವಾಗ ಕೆಲವೊಮ್ಮೆ ವಿವಾದಗಳ ಅಗತ್ಯವೂ ಬೀಳುತ್ತದೆ. ತೀರಾ ಕಳಪೆ ಚಿತ್ರವೊಂದು ವಿವಾದಗಳಿಂದಾಗಿಯೇ ದುಡ್ಡು ಬಾಚುವುದೂ ಇದೆ. ಹಾಗಂತ, ಕಮಲ್ ಹಾಸನ್ ಆ ವರ್ಗದ ನಟ ಅಲ್ಲದೇ ಇರಬಹುದು. ಆದರೆ, ಉದ್ಯಮ ಕ್ಷೇತ್ರದಿಂದ ಹೊರ ಬರುವ ಕಳಪೆ ವಸ್ತುಗಳಂತೆ ಸಿನಿಮಾ ಕ್ಷೇತ್ರದಿಂದಲೂ ಕಳಪೆ ಸಿನಿಮಾಗಳು ಬರುತ್ತಿರುವಾಗ, ಜನಸಾಮಾನ್ಯರಲ್ಲಿ ಅನುಮಾನಗಳು ಮೊಡಲಾರದೆಂದು ಹೇಗೆ ಹೇಳುವುದು? ಆದ್ದರಿಂದಲೇ, ವಿಶ್ವ ರೂಪಮ್ ವಿವಾದವನ್ನು ‘ಪ್ರಚಾರದ ಸ್ಟಂಟ್' ಎಂದು ಹೇಳುವ ಮಂದಿ ಸಮಾಜದಲ್ಲಿ ಧಾರಾಳ ಇರುವುದು. ಸಿನಿಮಾ ಕ್ಷೇತ್ರವು ತನ್ನ ಇಮೇಜನ್ನು ಈ ಮಟ್ಟದಲ್ಲಿ ಕೆಡಿಸಿಕೊಂಡಿರುವಾಗ ಕಮಲ್ ಹಾಸನ್‍ರು ಅದರಿಂದ ರಿಯಾಯಿತಿ ಬಯಸುವುದು ಎಷ್ಟು ಸರಿ? ಅಂದಹಾಗೆ, ಈ ದೇಶದಲ್ಲಿ ರಾಜ್ಯಗಳು ವಿಧಿಸುವ ನಿಷೇಧಕ್ಕೆ ಹೆಚ್ಚಿನ ವೇಳೆ ಸುಪ್ರೀಮ್ ಕೋರ್ಟು ಮನ್ನಣೆಯನ್ನೇ ಕೊಟ್ಟಿಲ್ಲ. ಒರೇ ಒರು ಗ್ರಾಮತ್ತಿಲ್, ಆರಕ್ಷಣ್, ಫೈರ್.. ಮುಂತಾದ ಎಲ್ಲ ಸಿನಿಮಾಗಳೂ ನಿಷೇಧವನ್ನು ಕಳಚಿಕೊಂಡು ಆ ಬಳಿಕ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡಿವೆ. ವಿಶ್ವರೂಪಮ್‍ನ ವಿಷಯದಲ್ಲೂ ಹೀಗಾಗಬಹುದು. ಇದು ಕಮಲ್ ಹಾಸನ್‍ರಿಗೂ ಗೊತ್ತು,  ಅವರನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಮಾಧ್ಯಮಗಳಿಗೂ ಗೊತ್ತು. ಒಂದು ರೀತಿಯಲ್ಲಿ ಈ ವಿವಾದದ ಮೂಲಕ ಮುಸ್ಲಿಮರನ್ನು ಅಸಹಿಷ್ಣುಗಳಂತೆ, ಭಯೋತ್ಪಾದಕರ ಬೆಂಬಲಿಗರಂತೆ ಚಿತ್ರಿಸಲು ನೆಪ ಹುಡುಕುತ್ತಿರುವವರಿಗೆ ಲಾಭವಾಗಿದೆ ಎಂದಷ್ಟೇ ಹೇಳಬಹುದೇನೋ.
   ಭಯೋತ್ಪಾದನೆಯ ವಿಷಯದಲ್ಲಿ ಇವತ್ತು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುವುದು ಮುಸ್ಲಿಮರೇ. ಭಾರತೀಯ ಮುಸ್ಲಿಮರಂತೂ ಇಸ್ಲಾಮೋಫೋಬಿಯದಿಂದಾಗಿ ಹಲವು ಬಗೆಯ ನಿಂದನೆ, ಅನುಮಾನಗಳಿಗೆ ನಿತ್ಯ ಗುರಿಯಾಗುತ್ತಿದ್ದಾರೆ. ಎಲ್ಲೇ ಬಾಂಬ್ ಸ್ಫೋಟಗೊಂಡರೂ, 'ಅದನ್ನು ನಾವು ಖಂಡಿಸುತ್ತೇವೆ..' ಎಂಬ ಹೇಳಿಕೆಯನ್ನು ಭಾರತೀಯ ಮುಸ್ಲಿಮ್ ನಾಯಕರು ತಕ್ಷಣ ಹೊರಡಿಸುವ ಒತ್ತಡಕ್ಕೆ ಗುರಿಯಾಗಿದ್ದಾರೆ. ಖಂಡನೆ ವ್ಯಕ್ತಪಡಿಸುವುದಕ್ಕೆ ಒಂದು ದಿನ ತಡವಾದರೂ ಅದನ್ನು ಎತ್ತಿಕೊಂಡು, ಮುಸ್ಲಿಮರನ್ನು ಭಯೋತ್ಪಾದಕರ ಬೆಂಬಲಿಗರಂತೆ ಬಿಂಬಿಸುವ ಹೇಳಿಕೆಗಳು ಮಾಧ್ಯಮಗಳಲ್ಲಿ ತುಂಬಿಕೊಳ್ಳುತ್ತವೆ. ಮಾಲೆಗಾಂವ್, ಮಕ್ಕಾ ಮಸೀದಿ, ಸಮ್‍ಜೋತಾ ಎಕ್ಸ್ ಪ್ರೆಸ್.. ಸಹಿತ ಮಾಡದ ಹತ್ತಾರು ಭಯೋತ್ಪಾದನಾ ಸ್ಫೋಟಗಳ ಆರೋಪಗಳನ್ನು ಹೊತ್ತುಕೊಂಡು ಹಲವಾರು ವರ್ಷಗಳನ್ನು ಜೈಲಲ್ಲಿ ಕಳೆದಿರುವುದೂ ಮುಸ್ಲಿಮ್ ಯುವಕರೇ. ಈ ಎಲ್ಲ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯದ ಮನಸ್ಥಿತಿ ಹೇಗಿತ್ತೆಂದರೆ, ತಪ್ಪು ಮಾಡಿ ಸಿಕ್ಕಿ ಬಿದ್ದ ಅಪರಾಧಿಯಂತೆ. ಯಾಕೆಂದರೆ, ಪ್ರತಿ ಸಂದರ್ಭದಲ್ಲೂ ಇಲ್ಲಿನ ಮಾಧ್ಯಮಗಳು ಮುಸ್ಲಿಮರನ್ನೇ ಬೊಟ್ಟು ಮಾಡುತ್ತಿದ್ದುವು. ಕುರ್ತಾ, ಪೈಜಾಮ ಧರಿಸಿ; ದಾಡಿ, ಕೂದಲು ಬಿಟ್ಟು; ಮುಂಡಾಸು ಕಟ್ಟಿ, ಹೆಗಲಿಗೊಂದು ಬಂದೂಕು ನೇತಾಡಿಸಿದ ಅಫಘಾನ್ ವ್ಯಕ್ತಿಯ ಚಿತ್ರವನ್ನು ತೋರಿಸಿ, ಇವನಿಗೂ ಭಾರತೀಯ ಮುಸ್ಲಿಮರಿಗೂ ವ್ಯತ್ಯಾಸವಿಲ್ಲ ಎಂಬ ಧಾಟಿಯಲ್ಲಿ ಮಾಧ್ಯಮಗಳು ಮಾತಾಡುತ್ತಿದ್ದುವು. ಅಫಘಾನಿನಲ್ಲೋ ಚೆಚನ್ಯಾ, ಇರಾಕ್‍ನಲ್ಲೋ ನಡೆದ ಘಟನೆಯನ್ನು ಎತ್ತಿಕೊಂಡು 'ಭಾರತೀಯ ಮುಸ್ಲಿಮರೇ ಏನಂತೀರಿ'.. ಎಂದು ಪ್ರಶ್ನಿಸುತ್ತಿದ್ದುವು. ಈ ಮಧ್ಯೆ ಹೇಮಂತ್ ಕರ್ಕರೆಯವರ ತಂಡ ಹಿಂದೂ ಹೆಸರಿನ ಭಯೋತ್ಪಾದಕತೆಯನ್ನು ಬಯಲಿಗೆಳೆದರೂ, ಮುಸ್ಲಿಮರನ್ನು ಅಪಮಾನಿಸುವ, ಸುಳ್ಳು ಆರೋಪವನ್ನು ಹೊರಿಸಿ ಜೈಲಿಗಟ್ಟುವ ಘಟನೆಗಳಿಗೇನೂ ತೆರೆ ಬೀಳಲಿಲ್ಲ. ಶಬಾನಾ ಆಜ್ಮಿ, ಸೈಫ್ ಆಲಿ ಖಾನ್‍ರಂಥ ಸುಪರಿಚಿತ ವ್ಯಕ್ತಿಗಳಿಗೇ ಮುಂಬೈಯಲ್ಲಿ ಬಾಡಿಗೆಗೆ ಮನೆ ಸಿಗುತ್ತಿಲ್ಲವೆಂದ ಮೇಲೆ ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಅಧಿಕಾರಿಗಳು ತಪಾಸಣೆಯ ಹೆಸರಲ್ಲಿ ಬಟ್ಟೆಯನ್ನೆಲ್ಲಾ ಕಳಚಿದರೂ ಮಾತಾಡದಷ್ಟು ಮುಸ್ಲಿಮ್ ಸಮುದಾಯವನ್ನು ಅಪರಾಧಿ ಮನಸ್ಥಿತಿಗೆ ದೂಡಲಾಗಿತ್ತು. ಈ ಮಧ್ಯೆ ಮದ್ರಸಾಗಳ ಬಗ್ಗೆ ತೀವ್ರ ಅಪಪ್ರಚಾರಗಳು ನಡೆದುವು. ಮದ್ರಸಕ್ಕೆ ತೆರಳುವ ಮಕ್ಕಳ ಬ್ಯಾಗಿನಲ್ಲಿ ಆರ್‍ಡಿಎಕ್ಸ್ ಇದೆಯೋ ಎಂದು ಹುಡುಕುವ ಪ್ರಯತ್ನಕ್ಕೆ ಹಲವು ಪತ್ರಕರ್ತರು ಭಾರೀ ಉತ್ಸಾಹ ತೋರಿದರು. ಭಯೋತ್ಪಾದನೆಯ ಕುರಿತಂತೆ ಟಿ.ವಿ. ಚಾನೆಲ್‍ಗಳು ಕ್ರೈಮ್ ನ್ಯೂಸ್ ಪ್ರಸಾರ ಮಾಡುವಾಗ, ಅಲ್ಲಾಹು ಅಕ್ಬರ್.. ಎಂಬ ಆದಾನ್ ಕರೆಯನ್ನು ಹಿಮ್ಮೇಳದಲ್ಲಿ ನುಡಿಸುವಷ್ಟು ಮುಂದುವರಿದಿದ್ದುವು. ಈಗಲೂ ಪರಿಸ್ಥಿತಿ ಭಾರೀ ಭಿನ್ನವಾಗೇನೂ ಇಲ್ಲ. ಮುಸ್ಲಿಮ್ ಸಮುದಾಯದ ಸಾಕಷ್ಟು ಯುವಕರು ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಜೈಲಲ್ಲಿದ್ದಾರೆ.. ಆದ್ದರಿಂದಲೇ, ಇಂಥ ಸ್ಥಿತಿಯಲ್ಲಿ, ಮುಸ್ಲಿಮರು ಭಯೋತ್ಪಾದನೆಯಲ್ಲಿ ತೊಡಗಿರುವ ಕಥಾವಸ್ತುವನ್ನು ಇಟ್ಟುಕೊಂಡು ಕಮಲ್ ಹಾಸನ್ ಸಿನಿಮಾ ಮಾಡಬಾರದಿತ್ತು. ‘ಅಫಘನ್ನಿನ ಅಲ್‍ಕಾಯ್ದಾದ ಭಯೋತ್ಪಾದಕ ಉಮರ್‍ನು ತನ್ನ ಜೊತೆಗಾರ ಸಲೀಮ್ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ನೆಟ್‍ವರ್ಕ್ ನೊಂದಿಗೆ ಸೇರಿಕೊಂಡು ಅಮೇರಿಕದ ನ್ಯೂಯಾರ್ಕ್ ನಗರದ ಮೇಲೆ ಸೀಝಿಯಮ್ ಬಾಂಬು ದಾಳಿ ನಡೆಸಲು ಹಾಕುವ ಯೋಜನೆ ಮತ್ತು ಭಾರತದ ಗುಪ್ತಚರ ಸಂಸ್ಥೆಯ (ROW) ಏಜೆಂಟಾಗಿ ಅಮೇರಿಕಕ್ಕೆ ಹೋಗುವ ಕಮಲ್ ಹಾಸನ್ ಅದನ್ನು ಪತ್ತೆ ಹಚ್ಚುವ..’ ಕತೆಯುಳ್ಳ ವಿಶ್ವರೂಪಮ್ ಸಿನಿಮಾದಲ್ಲಿ ಬರೇ ಅಫಘಾನ್, ಅಮೇರಿಕಗಳಷ್ಟೇ ಇರುವುದಲ್ಲ. ಅದರಲ್ಲಿ ಭಾರತದ ಮಧುರೈ, ಕೊಯಂಬತ್ತೂರುಗಳೂ ಪ್ರಸ್ತಾಪವಾಗುತ್ತವೆ. ಉರ್ದು ಭಾಷೆಯ ಬಳಕೆಯಾಗುತ್ತದೆ. ಆದ್ದರಿಂದಲೇ ವಿಶ್ವ ರೂಪಮ್ ಸಿನಿಮಾದ ಬಗ್ಗೆ ಆತಂಕ ಮೂಡುವುದು. ವಿಶ್ವದಾದ್ಯಂತದ ಭಯೋತ್ಪಾದನೆಗೆ ಮುಸ್ಲಿಮರೇ ಕಾರಣ ಅನ್ನುವ ಸಂದೇಶವೊಂದು ವಿಶ್ವರೂಪಮ್‍ನ ಮೂಲಕ ಬಿತ್ತರಗೊಳ್ಳುವುದನ್ನು ಹೇಗೆ ಪ್ರೀತಿಯಿಂದ ಸ್ವಾಗತಿಸುವುದು? ‘..ತಾಲಿಬಾನ್‍ಗಳನ್ನು ಭಯೋತ್ಪಾದಕರೆಂದು ಕರೆದರೆ ಭಾರತೀಯ ಮುಸ್ಲಿಮರಿಗೇನು ತೊಂದರೆ..’ ಎಂಬ ಅರ್ಧಸತ್ಯವನ್ನು ಹೇಳುತ್ತಾ ಕೆಲವರು ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಿರುವುದಕ್ಕೆ ವಿಶ್ವರೂಪಮ್ ನೆಪವಾಗುತ್ತಿಲ್ಲವೇ? ಕುರ್ತಾ-ಪೈಜಾಮ ತೊಟ್ಟ, ಗಡ್ಡ ಬಿಟ್ಟ, ಟೊಪ್ಪಿ ಧರಿಸಿದ ಮುಸ್ಲಿಮ್ ಗುಂಪುಗಳನ್ನು ತೋರಿಸಿ, ಭಯೋತ್ಪಾದನೆಯ ಕತೆ ಹೇಳುವ ಅವಕಾಶವನ್ನು ಟಿ.ವಿ. ಚಾನೆಲ್‍ಗಳಿಗೆ ಮತ್ತೆ ಒದಗಿಸಿಕೊಟ್ಟದ್ದು ವಿಶ್ವರೂಪಮ್ ಅಲ್ಲವೇ? ಮುಸ್ಲಿಮ್ ವಿರೋಧವನ್ನೇ ತಮ್ಮ ಅಜೆಂಡಾವಾಗಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳು ವಿಶ್ವ ರೂಪಮ್ ವಿವಾದದಿಂದ ಲಾಭ ಎತ್ತಲಾರವೇ..
  ಇಷ್ಟಿದ್ದೂ, ಬುದ್ಧಿವಂತ, ಜಾತ್ಯತೀತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಕಮಲ್ ಹಾಸನ್‍ರೇ.. ನೀವು ಹೀಗೇಕೆ ಮಾಡಿದಿರಿ?

No comments:

Post a Comment