Monday, May 19, 2014

ಗುರುಶರಣ್ ಕ್ಷಮಿಸಿದರೆಂದು ಜನರೇಕೆ ಕ್ಷಮಿಸಬೇಕು ಪ್ರಧಾನಿಗಳೇ?


ಲೆ ವವಡೆ
ಮಾರ್ಕಸ್ ಚ್ಯೂಸೆಸ್ಕ್ಯೂ
ಮಿಖಾಯಿಲ್ ಗೋರ್ಬಚೇವ್
   .. 1987-92 ಮಧ್ಯೆ ಜಾಗತಿಕ ಸುದ್ದಿಯ ಕೇಂದ್ರವಾಗಿದ್ದವರಲ್ಲಿ ಇವರೆಲ್ಲ ಸೇರಿದ್ದರು. ಪೋಲೆಂಡಿನಲ್ಲಿ ನಡೆದ ಕ್ರಾಂತಿಯ ನೇತೃತ್ವವನ್ನು ವವಡೆ ವಹಿಸಿಕೊಂಡಿದ್ದರು. ರುಮೇನಿಯಾದ ಮಂದಿ ಮಾರ್ಕಸ್ ಚ್ಯೂಸೆಸ್ಕ್ಯೂವನ್ನು ಅಧಿಕಾರದಿಂದ ಕೆಳಗಿಳಿಸಿದರು. ಯುಗೋಸ್ಲಾವಿಯಾ, ಬಲ್ಗೇರಿಯಾ, ಚಕೋಸ್ಲವಾಕಿಯಗಳೆಲ್ಲ ಸರಕಾರಿ ವಿರೋಧಿ ಪ್ರತಿಭಟನೆ ಮತ್ತು ದಮನಗಳ ಕಾರಣಕ್ಕಾಗಿ ಸುದ್ದಿಯಲ್ಲಿದ್ದುವು. ರಷ್ಯಾದಲ್ಲಿ ಮಿಖಾಯಿಲ್ ಗೋರ್ಬಚೇವ್‍ರು ಪೆರಸ್ಟ್ರಾಯಿಕಾ ಮತ್ತು ಗ್ಲಾಸ್‍ನೋಸ್ತ್ ಎಂಬ ಎರಡು ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಒಂದು ರೀತಿಯಲ್ಲಿ, ಕಮ್ಯುನಿಸಮ್‍ನ ಹಿಡಿತದಿಂದ ಮುಕ್ತವಾಗುವುದಕ್ಕೆ 1987-92ರ ನಡುವೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಪ್ರಯತ್ನಗಳು ನಡೆದುವು. ಕಮ್ಯುನಿಸ್ಟ್ ಪ್ರಭಾವಿತ ಸೋಶಿಯಲ್ ಇಕನಾಮಿಕ್ಸ್ ನಿಂದ ಬಂಡವಾಳಶಾಹಿ ಅರ್ಥವ್ಯವಸ್ಥೆಯಾದ ಲಿಬರಲ್ ಇಕನಾಮಿಕ್ಸ್ ನೆಡೆಗೆ ಅಸೆಗಣ್ಣಿನಿಂದ ನೋಡುವ ಮಂದಿ ಹೆಚ್ಚಾದರು. ಕಮ್ಯೂನಿಸಮ್ ವಿಚಾರಧಾರೆಯಲ್ಲಿ ಸಡಿಲ ಮಾಡಿಕೊಳ್ಳಲು ಅಥವಾ ಪೂರ್ಣವಾಗಿ ಅದರಿಂದ ಹೊರಬರಲು ವಿವಿಧ ರಾಷ್ಟ್ರಗಳು ಪ್ರಯತ್ನದಲ್ಲಿ ತೊಡಗಿದುವು. ಇಂಥ ಸಂದರ್ಭದಲ್ಲೇ ಮನಮೋಹನ್ ಸಿಂಗ್‍ರು ಭಾರತದ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. 1991ರಲ್ಲಿ ಮನಮೋಹನ್ ಸಿಂಗ್‍ರು ಈ ದೇಶದ ಹಣಕಾಸು ಸಚಿವರಾಗಿ ಆಯ್ಕೆಯಾದ ಹೊತ್ತಲ್ಲಿ ಈ ದೇಶವು ನೆಹರೂ ಅವರ `ಸೋಶಿಯಲ್ ಇಕನಾಮಿಕ್ಸ್' ಅರ್ಥವ್ಯವಸ್ಥೆಯನ್ನೇ ನೆಚ್ಚಿಕೊಂಡಿತ್ತು. 1972 ಮತ್ತು 76ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಸಲಹೆಗಾರರಾಗಿ, 90ರಲ್ಲಿ ವಿ.ಪಿ. ಸಿಂಗ್‍ರ ಅಧಿಕಾರಾವಧಿಯಲ್ಲಿ ಹಣಕಾಸು ಖಾತೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಮನ್‍ಮೋಹನ್ ಸಿಂಗ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ಅಲ್ಲದೇ ರಿಸರ್ವ್ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಅನುಭವ ಪಡೆದಿದ್ದ ಸಿಂಗ್‍ರಿಗೆ ಪಂಡಿತ್ ನೆಹರೂ ಅರ್ಥವಾಗದಿರುವುದಕ್ಕೆ ಸಾಧ್ಯವೂ ಇರಲಿಲ್ಲ. 1947ರಿಂದ 91ರ ವರೆಗಿನ ಸುಮಾರು 4 ದಶಕಗಳ ಅವಧಿಯಲ್ಲಿ ಈ ದೇಶ ಸಾಗಿ ಬಂದ ಹಾದಿ ಮತ್ತು ಸಾಧಿಸಿದ ಅಭಿವೃದ್ಧಿಯ ಕುರಿತಂತೆ ಮನ್‍ಮೋಹನ್ ಸಿಂಗ್‍ರಿಗೆ ಯಾರೂ ವಿವರಿಸಿ ಕೊಡಬೇಕಾದ ಅಗತ್ಯವೂ ಇರಲಿಲ್ಲ. ನೆಹರೂ ಕಲಿತದ್ದೂ ಬ್ರಿಟನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಮನ್‍ಮೋಹನ್ ಕಲಿತದ್ದೂ ಅಲ್ಲೇ. ನೆಹರೂ ಕೇಂಬ್ರಿಡ್ಜ್ ನಲ್ಲಿ ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ ತೇರ್ಗಡೆಯಾದರೆ, ಮನ್‍ಮೋಹನ್ ಅಂತೂ ಆ್ಯಡಂಸ್ಮಿತ್ ಪುರಸ್ಕಾರದೊಂದಿಗೆ 24ನೇ ವಯಸ್ಸಿನಲ್ಲೇ ಅರ್ಥತಜ್ಞನಾಗಿ ಗುರುತಿಸಿಕೊಂಡೇ ತೇರ್ಗಡೆಗೊಂಡರು. ಇಂಥ ಮನ್‍ಮೋಹನ್ ಸಿಂಗ್‍ರನ್ನು 1991ರಲ್ಲಿ ಪಿ.ವಿ. ನರಸಿಂಹರಾವ್‍ರು ಹಣಕಾಸು ಸಚಿವರಾಗಿ ಆಯ್ಕೆ ಮಾಡಿದಾಗ ಸಾಕಷ್ಟು ಅರ್ಥತಜ್ಞರು ಹಲವು ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಅಮೇರಿಕನ್ ನೇತೃತ್ವದ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಬೆಂಬಲಿಗರು ಮತ್ತು ವಿಶ್ವಬ್ಯಾಂಕ್ ಕೂಡಾ ಸಿಂಗ್‍ರಿಂದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದುವು. ಅದರಂತೆ ನೆಹರೂ ಅವರ ಸೋಶಿಯಲ್ ಇಕನಾಮಿಕ್ಸ್ ಗೆ ಬದಲಾಗಿ ಈ ದೇಶವನ್ನು ಉದಾರೀಕರಣ ಅರ್ಥವ್ಯವಸ್ಥೆಗೆ ಮನ್‍ಮೋಹನ್ ಸಿಂಗ್ ತೆರೆದಿಟ್ಟರು. ಅಲ್ಲಿಂದ ಈ 2014ರ ವರೆಗೆ 23 ವರ್ಷಗಳು ಸರಿದು ಹೋಗಿವೆ. ಹಣಕಾಸು ಸಚಿವರಿಂದ ಹಿಡಿದು ಪ್ರಧಾನ ಮಂತ್ರಿಯ ವರೆಗೆ ಸಾಗಿ ಮೊನ್ನೆ ಮೊನ್ನೆ ಮನ್‍ಮೋಹನ್ ಸಿಂಗ್ ಇಳಿದು ಹೋಗಿದ್ದಾರೆ. ಹೊಸ ಅರ್ಥ ವ್ಯವಸ್ಥೆಯನ್ನು ಈ ದೇಶಕ್ಕೆ ಪರಿಚಯಿಸಿದ ವ್ಯಕ್ತಿ ಮೊನ್ನೆ ಇಳಿದು ಹೋಗುವಾಗ ಎಷ್ಟು ಅಪರಿಚಿತರಾಗಿದ್ದರೆಂದರೆ, ಅವರನ್ನು ನೆನಪಿಸುವುದಕ್ಕೆ ಅವರ ಪಕ್ಷವೇ ಮುಂದಾಗಲಿಲ್ಲ. ಗಾಂಧೀಜಿಯ ಭಾರತವನ್ನು ನೆಹರೂ ಕೊಲೆಗೈದರೆ ನೆಹರೂರ ಭಾರತವನ್ನು ಮನ್‍ಮೋಹನ್ ಸಿಂಗ್ ಕೊಲೆಗೈದದ್ದಷ್ಟೇ ಅಲ್ಲ, ಭಾರತವನ್ನು ಕಾರ್ಪೋರೇಟ್ ವಲಯಕ್ಕೆ ಮಾರಿ ಹಿಂಬಾಗಿಲಿನಿಂದ ಹೊರಟು ಹೋದರು. ಚುನಾವಣೆಗಿಂತ ಮೊದಲೇ ಸೋಲೊಪ್ಪಿಕೊಂಡ ಈ ದೇಶದ ಪ್ರಪ್ರಥಮ ಪ್ರಧಾನಿ ಎಂಬ ಬಿರುದು ಪಡೆದರು. ಮನ್‍ಮೋಹನ್ ಹೀಗೇಕಾದರು? ಪ್ರಧಾನಿಯ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರು, `ದಿ ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟ್ಟರ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸದಿರುತ್ತಿದ್ದರೆ ಆ ಚುನಾವಣೆಯ ಸಮಯದಲ್ಲೂ ಅವರು ಸುದ್ದಿಗೆ ಒಳಗಾಗುತ್ತಿದ್ದರೆ? ಅವರ ತಮ್ಮ  ಬಿಜೆಪಿ ಸೇರಿದಾಗ ಅವರು ಎರಡುಗೆರೆಯ ಉಲ್ಲೇಖಕ್ಕೆ ಒಳಗಾಗಿದ್ದನ್ನು ಬಿಟ್ಟರೆ ಉಳಿದಂತೆ ಈ ಚುನಾವಣೆಯ ವೇಳೆ ಅವರ ಉಲ್ಲೇಖ ಶೂನ್ಯ. 10 ವರ್ಷ ದೇಶವನ್ನು ಮುನ್ನಡೆಸಿದ ವ್ಯಕ್ತಿ ಈ ಮಟ್ಟದಲ್ಲಿ ಅಪ್ರಸ್ತುತರಾದರೇಕೆ? ಅವರು ಚುನಾವಣಾ ರಾಜಕೀಯಕ್ಕೆ ಒಗ್ಗಿಕೊಳ್ಳದೇ ಇದ್ದುದೇ? ಜನರ ನಾಡಿಮಿಡಿತ ಗೊತ್ತಿಲ್ಲದ, ಓಟಿಗೂ ನಿಂತಿಲ್ಲದ ಮತ್ತು ಭಾಷಣ ಚಾತುರ್ಯವೂ ಇಲ್ಲದ ಅವರ ದೌರ್ಬಲ್ಯಗಳೇ? ಅಥವಾ..
   ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಹತ್ಯೆ ಮಾಡಿದವರನ್ನು ಈ ದೇಶ ಬಂಧಿಸಿದ್ದರೂ, ಆ ಹತ್ಯೆಯ ಹಿಂದೆ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕೈವಾಡ ಇದೆ ಎಂದು ವಾದಿಸುವವರು ಇವತ್ತೂ ಇದ್ದಾರೆ. ಭಾರತವನ್ನು ನೆಹರೂ ಪ್ರಭಾವಿತ ಅರ್ಥವ್ಯವಸ್ಥೆಯಿಂದ ಅಮೇರಿಕನ್ ಮಾದರಿಯ ಅರ್ಥವ್ಯವಸ್ಥೆಗೆ ಹೊರಳಿಸಲು ಈ ಎರಡು ಹತ್ಯೆಗಳನ್ನು ನಡೆಸಲಾಗಿದೆ ಎಂದೂ  ಹೇಳಲಾಗುತ್ತದೆ. ಅದೇನೇ ಇದ್ದರೂ, ಭಾರತಕ್ಕೆ ಉದಾರೀಕರಣದ ಹೊಸ ಅರ್ಥವ್ಯವಸ್ಥೆಯನ್ನು ಪರಿಚಯಿಸಿದ್ದು ಮನ್‍ಮೋಹನ್ ಸಿಂಗ್. ‘59 ವರ್ಷವಾಗುವವರೆಗೆ ನಾನು ರಾಜಕೀಯದ ಬಗ್ಗೆ ಆಲೋಚಿಸಿಯೇ ಇರಲಿಲ್ಲವೆಂದು’ ಬ್ರಿಟಿಷ್ ಪತ್ರಕರ್ತ ಮಾರ್ಕ್ ಟುಲಿಯೊಂದಿಗೆ ಹೇಳಿದ್ದ ಮನ್‍ಮೋಹನ್, 2004ರಲ್ಲಿ ಪ್ರಧಾನಿಯಾದರು. 91ರಲ್ಲಿ ಈ ದೇಶಕ್ಕೆ ಉದಾರೀಕರಣ ನೀತಿಯನ್ನು ಪರಿಚಯಿಸುತ್ತಾ, ‘ದೇಶದ ಬಡತನವನ್ನು ಹೋಗಲಾಡಿಸುವುದಕ್ಕಾಗಿ ಈ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ...’ ಅಂದಿದ್ದರು. ಆದರೆ, ಮೊನ್ನೆ ಆಹಾರ ಭದ್ರತಾ ಕಾಯ್ದೆ ಮತ್ತು ನರೇಗಾ(ಗ್ರಾವಿೂಣ ಉದ್ಯೋಗ ಖಾತ್ರಿ ಯೋಜನೆ)ವನ್ನು ದೇಶಕ್ಕೆ ಕೊಟ್ಟು ಮೌನವಾಗಿ ಇಳಿದು ಹೋದರು. ನಿಜವಾಗಿ, ಅವರ ಉದಾರೀಕರಣ ಅರ್ಥವ್ಯವಸ್ಥೆಯ ದೊಡ್ಡ ವೈಫಲ್ಯ ಇದು. ಉದಾರೀಕರಣ ವ್ಯವಸ್ಥೆಯೇ ಬಡತನವನ್ನು ಹೋಗಲಾಡಿಸುತ್ತದೆ ಎಂದಿದ್ದ ಅವರು, ಅದಾಗಿ 23 ವರ್ಷಗಳ ಬಳಿಕ, ಬಡತನ ಅಳಿದಿಲ್ಲ ಮತ್ತು ಉದ್ಯೋಗ ಸಮಸ್ಯೆ ನಿವಾರಣೆಗೊಂಡಿಲ್ಲ ಎಂಬುದನ್ನು ಈ ಎರಡು ಯೋಜನೆಗಳ ಮೂಲಕ ಒಪ್ಪಿಕೊಂಡರು. ಅಷ್ಟಕ್ಕೂ, ಪ್ರಧಾನಿ ಅಂದರೆ ಕಂಪೆನಿ ಮ್ಯಾನೇಜರ್ ಅಲ್ಲವಲ್ಲ. ಮ್ಯಾನೇಜರ್ ಜನರಿಗೆ ಉತ್ತರದಾಯಿಯಲ್ಲ. ಮನ್‍ಮೋಹನ್ ಸಿಂಗ್ ಹಾಗಲ್ಲವಲ್ಲವೇ? ಆದರೂ ಅವರ ವರ್ತನೆ ಹೇಗಿತ್ತು? ಜನರ ನಾಡಿಮಿಡಿತ ಗೊತ್ತಿಲ್ಲದ, ಜನರೊಂದಿಗೆ ಸಂಪರ್ಕ ಇಲ್ಲದ ಮತ್ತು ಓಟಿಗೆ ನಿಲ್ಲದ ವ್ಯಕ್ತಿ ಎಂಬ ಕೊರತೆಗಳನ್ನು ವಿೂರಿ ಬೆಳೆಯಲು ಅವರು ಯತ್ನಿಸಿದ್ದರೇ? ಒಂದು ಬಾವಿಯ ಉದ್ಘಾಟನೆಗೆ ಹೋದರೂ, ಸೆನ್ಸೆಕ್ಸ್, ಜಿಡಿಪಿ, ಅಬಿವೃದ್ಧಿ ಸೂಚ್ಯಂಕಗಳಿಂದ ಭಾಷಣವನ್ನು ಪ್ರಾರಂಭಿಸಿ, ‘ರೂಪಾಯಿ ಮೌಲ್ಯ’ದಲ್ಲಿ ಕೊನೆಗೊಳಿಸುವುದನ್ನು ಹೊರತುಪಡಿಸಿ ಬೇರೇನಾದರೂ ಅವರಿಂದ ನಿರೀಕ್ಷಿಸಲು ಸಾಧ್ಯವಿತ್ತೇ? ನೆಹರೂ, ಇಂದಿರಾ, ವಾಜಪೇಯಿ, ದೇವೇಗೌಡ, ವಿ.ಪಿ.ಸಿಂಗ್, ರಾಜೀವ್ ಗಾಂಧಿ... ಮುಂತಾದವರೆಲ್ಲ ಏನು ಹೇಳುತ್ತಾರೋ ಅದುವೇ ಸುದ್ದಿಯಾಗುತ್ತಿದ್ದರೆ, ಸಿಂಗ್ ಏನಾದರೂ ಹೇಳುತ್ತಾರೆ ಎಂಬುದೇ ಸುದ್ದಿಯಾಗುವಷ್ಟು ಅವರು ಮೌನಿಯಾದರಲ್ಲ, ಯಾಕೆ? ದೇಶವನ್ನು ಮುನ್ನಡೆಸುವ ವ್ಯಕ್ತಿಗೆ ದೇಶದ ಪ್ರಮುಖ ಅಂಗವಾದ ಜನರ ಬಗ್ಗೆ ಯಾವ ಅಭಿಪ್ರಾಯವೂ ಸಂಬಂಧವೂ ಇರಬೇಕಿಲ್ಲ ಎಂಬ ಹೊಸ ರಾಜಕೀಯ ವ್ಯಾಖ್ಯಾನವನ್ನು ಸಿಂಗ್ ಕೊಟ್ಟದ್ದು ಸುಳ್ಳೇ? ನಿಜವಾಗಿ, ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಭಾರತದಲ್ಲೊಬ್ಬ ಮ್ಯಾನೇಜರ್ ಬೇಕಿತ್ತು. ಆತ ಜನರೊಂದಿಗೆ ಬೆರೆಯುವ, ಅವರ ನಾಡಿ ಮಿಡಿತ ಅರಿತು ಮಾತಾಡುವ ವ್ಯಕ್ತಿ ಆಗಬಾರದೆಂಬುದು ಅವರ ಬಯಕೆ. ಆದ್ದರಿಂದಲೇ 2ಜಿ, ಕಲ್ಲಿದ್ದಲು ಹಗರಣದಲ್ಲಿ ಎಲ್ಲವೂ ಗೊತ್ತಿದ್ದೂ ಮನ್‍ಮೋಹನ್ ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ಯಾಕೆಂದರೆ, ಅದು ಮ್ಯಾನೇಜರ್‍ನ ಕಾರ್ಯಕ್ಷೇತ್ರವಲ್ಲ. ಯಾವ ವಿಭಾಗದಲ್ಲಿ ಏನೇನು ನಡೆದಿದೆಯೋ ಅದಕ್ಕೆ ಆಯಾ ವಿಭಾಗದವರೇ ಹೊಣೆಗಾರರು ಮತ್ತು ಅವರೇ ಆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂಬಂತೆ ಅವರು ವರ್ತಿಸಿದರು. ನಿಜವಾಗಿ, ಮನಮೋಹನ್‍ರು ಮಾತಾಡಬೇಕಾದ ಪ್ರಧಾನಿಯಾಗಿ ಈ ದೇಶದಲ್ಲಿ ಗುರುತಿಸಿಕೊಳ್ಳಲೇ ಇಲ್ಲ. ಹೌದು, ಆರ್‍ಟಿಇ, ಆರ್‍ಟಿಐ, ನರೇಗ, ಆಹಾರ ಭದ್ರತಾ ಕಾಯ್ದೆ.. ಮುಂತಾದ ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದರು, ನಿಜ. ಆದರೆ ಆರ್‍ಟಿಐ ಕಾರ್ಯಕರ್ತರು ಸಾಲುಸಾಲಾಗಿ ಹತ್ಯೆಗೊಳಗಾಗುತ್ತಿರುವಾಗಲೂ ಅವರ ರಕ್ಷಣೆಗೆ ಯಾವ ಕಾಯ್ದೆಯನ್ನೂ ಅವರು ರೂಪಿಸಲಿಲ್ಲ. ಪೆಟ್ರೋಲಿಯಂ ಕ್ಷೇತ್ರವನ್ನು ಅವರು ರಿಲಯನ್ಸ್ ನಂಥ ಕಾರ್ಪೋರೇಟ್ ಕಂಪೆನಿಗಳ ಕಾಲಬುಡದಲ್ಲಿಟ್ಟರು. ಈ ದೇಶದ ರಕ್ಷಣಾ ರಹಸ್ಯಗಳು ಅಮೇರಿಕಕ್ಕೆ ಸೋರಿಕೆಯಾಗಲು ಅವಕಾಶ ಇರುವ ಅಣು ಒಪ್ಪಂದಕ್ಕೆ ಸಹಿ ಹಾಕಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಅವರಿಗೆ ತಟ್ಟಲೇ ಇಲ್ಲ. ಒಂದು ಕಡೆ ವೇತನದಲ್ಲಿ ಹೆಚ್ಚಳವಾಗುತ್ತಲೇ ಇನ್ನೊಂದು ಕಡೆ ಖರ್ಚಲ್ಲೂ ಹೆಚ್ಚಳವಾಯಿತು. ರೈತರ ಆತ್ಮಹತ್ಯೆ, ಪಟ್ಟಣಕ್ಕೆ ಗ್ರಾವಿೂಣರ ವಲಸೆಯಿಂದಾಗಿ ಕೊಳಚೆಗೇರಿಗಳ ನಿರ್ಮಾಣ, ಉದ್ಯೋಗ ಅನಿಶ್ಚಿತತೆ.. ಸಹಿತ ಹತ್ತು-ಹಲವು ಸಮಸ್ಯೆಗಳಿಗೆ ಮನಮೋಹನ್‍ರ ಅರ್ಥವ್ಯವಸ್ಥೆಯಲ್ಲಿ ಯಾವ ಉತ್ತರವೂ ಇರಲಿಲ್ಲ. ಪೋಟಾವನ್ನು ಹಿಂತೆಗೆದುಕೊಂಡು ಅದಕ್ಕಿಂತಲೂ ಕ್ರೂರ ಎನ್ನಬಹುದಾದ UAPA ಯನ್ನು ಜಾರಿಗೊಳಿಸಿದ್ದೂ ಮನಮೋಹನ್‍ರೇ. ಪಾರ್ಲಿಮೆಂಟ್‍ನಲ್ಲಿ ಚರ್ಚೆ ನಡೆಸದೆಯೇ ಆಧಾರ್ ಎಂಬ ತಲೆಹಿಡುಕ ಬಹುಕೋಟಿ ಯೋಜನೆಯನ್ನು ಜಾರಿಗೊಳಿಸಿದ್ದೂ ಇವರೇ. 1984ರ ಸಿಕ್ಖ್ ಹತ್ಯಾಕಾಂಡ, 2002ರ ಗುಜರಾತ್ ನರಮೇಧ ಮತ್ತು ಇವುಗಳ ಮಧ್ಯೆ ಹತ್ತಾರು ಕೋಮುಗಲಭೆಗಳು ನಡೆದದ್ದಾಗ್ಯೂ 'ಕೋಮುಗಲಭೆ ತಡೆ ವಿಧೇಯಕ'ವನ್ನು ಜಾರಿಗೊಳಿಸುವುದಕ್ಕೆ ಅವರು ಆಸಕ್ತಿ ತೋರಲಿಲ್ಲ. ಅಣು ಒಪ್ಪಂದವನ್ನು ಜಾರಿಗೊಳಿಸುವುದಕ್ಕೆ ಅವರು ತೋರಿದ ಉತ್ಸಾಹದ ಒಂದು ಅಂಶವನ್ನಾದರೂ ಈ ಬಗ್ಗೆ ತೋರಿದ್ದರೆ ಅದು ಎಂದೋ ಈ ದೇಶದ ಕಾನೂನಾಗಿ ಜಾರಿಯಾಗುತ್ತಿತ್ತು.
   ಬಂಡವಾಳಶಾಹಿ ಅರ್ಥವ್ಯವಸ್ಥೆಯು ಇವತ್ತು ಎಷ್ಟು ಪ್ರಾಬಲ್ಯ ಸಾಧಿಸಿದೆಯೆಂದರೆ, ಜಗತ್ತಿನಲ್ಲಿ ಯಾರೆಲ್ಲ ಅದರ ಜಾರಿಗಾಗಿ ಯತ್ನಿಸುತ್ತಾರೋ ಅವರನ್ನೆಲ್ಲಾ ಅದು ಮಹಾನ್ ಸುಧಾರಕರಂತೆ ಬಿಂಬಿಸುತ್ತದೆ. ಮನಮೋಹನ್ ಸಿಂಗ್‍ರನ್ನು ಬಿಂಬಿಸಿದ್ದೂ ಹಾಗೆಯೇ. ಇಡೀ ಸರಕಾರವೇ ಹಗರಣಗಳಿಂದ ನಲುಗಿ ಹೋಗುತ್ತಿರುವಾಗಲೂ ಮನಮೋಹನ್ ಸಿಂಗ್‍ರನ್ನು ಸಂತನಂತೆ ಬಿಂಬಿಸಲಾಯಿತು. ಇತರ ವಿಷಯಗಳನ್ನು ಮುನ್ನೆಲೆಗೆ ತಂದು ಅವರ ಅರ್ಥವ್ಯವಸ್ಥೆಯ ಸಾಧಕ-ಬಾಧಕಗಳು ಚರ್ಚೆ ಗೊಳಗಾಗದಂತೆ ನೋಡಿಕೊಳ್ಳಲಾಯಿತು. ನಿಜವಾಗಿ, ಇಂಥ ಪ್ರಯತ್ನ ನಡೆದಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡುರನ್ನು ಕೂಡ ಹೀಗೆಯೇ ಬಿಂಬಿಸಲಾಗಿತ್ತು. ವಿಶ್ವಬ್ಯಾಂಕ್‍ನ ‘ಉತ್ತಮ ವ್ಯಕ್ತಿ'ಗಳ ಪಟ್ಟಿಯಲ್ಲಿ ಅವರೂ ಸ್ಥಾನ ಪಡೆದಿದ್ದರು. 1999ರಲ್ಲಿ ಅಮೇರಿಕದ ಟೈಮ್ಸ್ ಮ್ಯಾಗಸಿನ್ ತನ್ನ ಮುಖಪುಟದಲ್ಲಿ ನಾಯ್ಡುರನ್ನು ಅಚ್ಚು ಹಾಕಿ, ‘ದಕ್ಷಿಣೇಶ್ಯದ ವರ್ಷದ ವ್ಯಕ್ತಿ' ಎಂದು ಕೊಂಡಾಡಿತ್ತು. 2000ದಲ್ಲಿ ಅಮೇರಿಕದ ಅಂದಿನ ಅಧ್ಯಕ್ಷ  ಬಿಲ್ ಕ್ಲಿಂಟನ್ ಮತ್ತು ಬ್ರಿಟನ್ನಿನ ಪ್ರಧಾನಿ ಟೋನಿ ಬ್ಲೇರ್ ಹೈದರಾಬಾದ್‍ಗೆ ಆಗಮಿಸಿ ನಾಯ್ಡುರನ್ನು ಭೇಟಿಯಾಗಿದ್ದರು. ಆಂಧ್ರದಲ್ಲಿ ನಾಯ್ಡು ಸಾಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಸಿಗಬೇಕೆಂದು ಹಲವು ಪತ್ರಕರ್ತರು ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೂ ಜನರು ಕಿತ್ತೆಸೆದರು. ಪಶ್ಚಿಮ ಬಂಗಾಲದಲ್ಲಿ ಜ್ಯೋತಿ ಬಸು ಯಾವ ನೀತಿಯನ್ನು ಅಳವಡಿಸಿಕೊಂಡಿದ್ದರೋ ಅದಕ್ಕೆ ಭಿನ್ನವಾಗಿ ಮನಮೋಹನ್ ನೀತಿಯತ್ತ ಒಲವು ತೋರಿದವರು ಬುದ್ಧದೇವ ಭಟ್ಟಾಚಾರ್ಯ. ಸಿಂಗೂರ್ ಮತ್ತು ನಂದಿಗ್ರಾಮ ಸೃಷ್ಟಿಯಾದದ್ದು ಇವರ ಕಾಲದಲ್ಲೇ. ಜನರು ಬುದ್ಧದೇವ್‍ರನ್ನು ಹೊರಹಾಕಿದರು. ಇದೀಗ ಮನಮೋಹನ್.
  
2004ರಲ್ಲಿ ಮನಮೋಹನ್ ಸಿಂಗ್‍ರು ಪ್ರಧಾನಿಯಾದ ಸಂದರ್ಭದಲ್ಲಿ ಗ್ಯಾಸ್‍ನ ಬೆಲೆ ರೂ. 247 ಆಗಿತ್ತು. ಈ ಬೆಲೆಯನ್ನು ಇನ್ನು ಮುಂದೆ ಹೆಚ್ಚಳಗೊಳಿಸಬಾರದೆಂದು ಅವರ ಪತ್ನಿ ಗುರುಶರಣ್ ಕೌರ್ ಅಂದು ಸಾರ್ವಜನಿಕವಾಗಿಯೇ ವಿನಂತಿಸಿದ್ದರು. ಆದರೆ 10 ವರ್ಷಗಳ ಬಳಿಕ ಇವತ್ತು ಗ್ಯಾಸ್‍ನ ಬೆಲೆ ರೂ. 480 ಆಗಿದೆ. ಬಹುಶಃ ಮಾತು ತಪ್ಪಿದ ಪತಿಯನ್ನು ಕ್ಷಮಿಸುವುದಕ್ಕೆ ಗುರುಶರ್‍ಣ್ ಕೌರ್‍ಗೆ ಅವರದ್ದೇ ಆದ ಅನಿವಾರ್ಯತೆಗಳಿರಬಹುದು. ಹಾಗಂತ, ಜನರಿಗೆ ಅಂಥ ಅನಿವಾರ್ಯತೆಗಳೇನೂ ಇಲ್ಲವಲ್ಲ.

Tuesday, May 13, 2014

ಕ್ಯೊಂ ಕರ್‍ತೇಹೇ ಆಪ್‍ಲೋಗ್ ಐಸಾ?

ನವೀದ್
   ಈ ಮಾತುಕತೆಯನ್ನು ಯೂಟ್ಯೂಬ್‍ನಲ್ಲಿ ನೀವೂ ಆಲಿಸಿರಬಹುದು..
“ಟ್ರಿಣ್.. ಟ್ರಿಣ್.. ಹಲೋ, ಮಿಸ್ಟರ್ ಝಾಕಿರ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವ ಮತ್ತು ಸದಾ update  ಮಾಡುತ್ತಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ (ಹಿರಿಯ ಅಧಿಕಾರಿ) ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ನಿಮ್ಮೊಂದಿಗೆ ಕೇಳಲಿದ್ದಾರೆ. ನಿಮ್ಮ ಹೆಸರಲ್ಲಿರುವ ಫೇಸ್‍ಬುಕ್ ಅಕೌಂಟ್ ಅನ್ನು ಬಳಸುತ್ತಿರುವುದು ನೀವೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿಯಷ್ಟೇ ಈ ಮಾತುಕತೆ. ಅವರೊಂದಿಗೆ ಮಾತಾಡಿ..
  ಟ್ರಿಣ್ ಟ್ರಿಣ್.. ಹಲೋ, ನಾನು ರಾಮ್‍ಕಿಶನ್ ಚೌಧರಿ. ಅಭಿನಂದನೆಗಳು ಝಾಕಿರ್ ಹುಸೇನ್‍ರಿಗೆ. ನೀವು ಬಹುಮಾನ ಗೆದ್ದಿದ್ದೀರಿ. ಅಂದಹಾಗೆ, ಮೊನ್ನೆ 9:35ಕ್ಕೆ ನೀವು ಫೇಸ್‍ಬುಕ್ update  ಮಾಡಿದ್ದೀರಿ ತಾನೇ.
ಹೌದು
ಏನನ್ನು update  ಮಾಡಿದ್ದೀರಿ ಅಂತ ಹೇಳಬಹುದಾ?
ನಿಮ್ಮ ಹೆಸರು ಸರ್..
ರಾಮ್‍ಕಿಶನ್ ಚೌಧರಿ
ಹೇಳಿ ಝಾಕಿರ್ ಅವರೇ, ಏನನ್ನು update  ಮಾಡಿದ್ದೀರಿ?
ನಿಮ್ಮ ಹೆಸರು
ರಾಮ್ ಕಿಶನ್ ಚೌಧರಿ
ನಿಮಗೆ ಒಂದು ನಿಮಿಷ ಹೆಚ್ಚುವರಿ ಸಮಯ ಕೊಡುತ್ತಿದ್ದೇನೆ. ಆಲೋಚಿಸಿ ಹೇಳಿ.. ಕರೆಯನ್ನು ಮ್ಯೂಟ್ ಮಾಡಲಾಗುತ್ತದೆ.
ಈಗ ಇನ್ನೋರ್ವರೊಂದಿಗೆ ಮಾತುಕತೆ.
   ಟ್ರಿಣ್, ಟ್ರಿಣ್.. ಹಲೋ ಮಿಸ್ಟರ್ ಅಮಿತ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ಕೇಳಲಿದ್ದಾರೆ.. ಅವರೊಂದಿಗೆ ಮಾತಾಡಿ..
   ಹಲೋ... ನಾನು ಮುಹಮ್ಮದ್ ಅಬ್ದುಲ್ಲಾ. ಅಭಿನಂದನೆಗಳು ಅಮಿತ್‍ರಿಗೆ. ನಿಮ್ಮ ಇತ್ತೀಚಿನ update ನ ಬಗ್ಗೆ ಹೇಳುವಿರಾ?
ನಿಮ್ಮ ಹೆಸರು ಸರ್
'ಮುಹಮ್ಮದ್ ಅಬ್ದುಲ್ಲಾ'
ಮೊನ್ನೆ ನೀವು update  ಮಾಡಿರುವುದನ್ನೊಮ್ಮೆ ಜ್ಞಾಪಿಸಿಕೊಳ್ಳಿ, ಏನದು?
ನಿಮ್ಮ ಹೆಸರು..
'ಮುಹಮ್ಮದ್ ಅಬ್ದುಲ್ಲಾ'
ಮೌನ...
   ಅಮಿತ್ ಅವರೇ ನಂಗೊತ್ತು, ನೀವು ಹೇಳಲಾರಿರಿ. ನೀವು ಮಾತ್ರವಲ್ಲ, ಈ ಮೊದಲು ನಾನು ಸಂಪರ್ಕಿಸಿದ ವ್ಯಕ್ತಿಯೂ ಹೇಳಲಾರರು. ಅಮಿತ್ ಅವರೇ, ನಾನು ನಿಮ್ಮೊಂದಿಗೆ ಇತ್ತೀಚಿನ update ನ ಬಗ್ಗೆ ವಿಚಾರಿಸಿದಾಗ ನೀವು ಮತ್ತೆ ಮತ್ತೆ ನನ್ನ ಹೆಸರು ಕೇಳಿದಿರಿ. ನಾನು ಮುಹಮ್ಮದ್ ಅಬ್ದುಲ್ಲ ಎಂಬ ಮುಸ್ಲಿಮ್ ಎಂದು ಗೊತ್ತಾದಾಗ ನೀವು ವಿಷಯ ಹೇಳಲು ತಡವರಿಸಿದಿರಿ. ಝಾಕಿರ್ ಅವರೇ, ನಿಮ್ಮಲ್ಲಿ ನಾನು ಇತ್ತೀಚಿನ update ನ ಬಗ್ಗೆ ವಿಚಾರಿಸಿದೆ. ನೀವು ನನ್ನ ಹೆಸರನ್ನು ಪದೇ ಪದೇ ಕೇಳಿದಿರಿ. ನಾನು ರಾಮ್ ಕಿಶನ್ ಚೌಧರಿ ಎಂಬ ಹಿಂದೂ ಎಂದು ಗೊತ್ತಾದಾಗ ಹೇಳಲು ತಡವರಿಸಿದಿರಿ. ಆದರೆ ನಾನು ಪೇಸ್‍ಬುಕ್‍ನಿಂದ ಮಾತಾಡುತ್ತಿಲ್ಲ. ‘ರೇಡಿಯೋ ಮಿರ್ಚಿ ಮುರ್ಗಾ'ದಿಂದ ನವೀದ್ ಮಾತಾಡುತ್ತಾ ಇದ್ದೇನೆ. ಝಾಕಿರ್ ಅವರೇ, ನೀವು ಹಿಂದೂಗಳ ವಿರುದ್ಧ  update ಮಾಡಿದ್ದೀರಿ. ನಾನು ನಿಮ್ಮ ಇತ್ತೀಚಿನ  update ಬಗ್ಗೆ ಕೇಳಿದಾಗ ನೀವೆಷ್ಟು ನಾಚಿಕೊಂಡಿರಿ ಮತ್ತು ಅಡಗಿಸಲು ಯತ್ನಿಸಿದಿರಿ  ಅಂದರೆ, ನಿಮಗೆ ಅದನ್ನು ಹೇಳಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಮಿತ್ ಅವರೇ, ನೀವು ಮುಸ್ಲಿಮರ ವಿರುದ್ಧ  update ಮಾಡಿದ್ದೀರಿ. ಆದ್ದರಿಂದಲೇ ನಿಮಗೆ  updateನ್ನು ಹೇಳಿಕೊಳ್ಳಲು ಆಗಲಿಲ್ಲ. ಕ್ಯೊಂ ಕರ್‍ತೇಹೇ ಆಪ್‍ಲೋಗ್ ಐಸಾ? (ಯಾಕೆ ಹೀಗೆ ಮಾಡ್ತೀರಿ ನೀವು).
   ಅವರಿಬ್ಬರೂ ಮೌನ ವಹಿಸುತ್ತಾರೆ.
ಝಾಕಿರ್ ಅವರೇ, ನಿಮ್ಮೊಂದಿಗೆ ಫೋನಿನಲ್ಲಿ ಹೀಗೆ ಸಂಪರ್ಕಿಸುವುದಕ್ಕಿಂತ  ಮೊದಲು ನಾನು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. 2012 ಜುಲೈ 13ರಂದು ಅಪೋಲೋ ಆಸ್ಪತ್ರೆಯಲ್ಲಿ ನಿಮ್ಮ ಮಗನ ಆಪರೇಶನ್ ಆಗಿತ್ತು. ಆಗ ನಿಮ್ಮ ಮಗನ ನೆರವಿಗೆ ಬಂದದ್ದು ಮತ್ತು ರಕ್ತ ಕೊಟ್ಟದ್ದು ಕಿಶೋರ್, ಗೌರವ್, ಮನ್‍ದೀಪ್ ಮತ್ತು ರಣ್‍ಬೀರ್ ಎಂಬ ಹಿಂದೂಗಳು. ಹೌದಲ್ಲವೇ ಝಾಕಿರ್. ‘ಹೌದು'.
   ಅಮಿತ್ ಅವರೇ, ಜಾಮಿಯಾ ಯೂನಿವರ್ಸಿಟಿಯ ಬಳಿ 2012 ಮಾರ್ಚ್ 17ರಂದು ನೀವು ಅಪಘಾತಕ್ಕೆ ಒಳಗಾಗಿದ್ದಿರಿ, ಅಮಿತ್ ಹೌದೇ? ‘ಹೌದು'. ನೀವು ಬೈಕ್‍ನಿಂದ ಬಿದ್ದಿರಿ. ನಿಮ್ಮ ಕುಟುಂಬದವರು ಆಸ್ಪತ್ರೆಗೆ ಬರುವಾಗ ನಿಮ್ಮ ಬಳಿ ಇದ್ದುದು ರಿಝ್ವಾನ್, ಯಾಸಿರ್, ಅಫ್ನಾನ್, ಶಾಹಿದ್ ಎಂಬ ಯುವಕರು. ನಿಮ್ಮ ಕುಟುಂಬದವರು ಇಲ್ಲದ ಸಂದರ್ಭದಲ್ಲಿ ನಿಮ್ಮ ಬಳಿ ನಿಂತು ಸಹಾಯ ಮಾಡಿದ ಈ ಯುವಕರು ಮುಸ್ಲಿಮರು. ಹೌದಲ್ಲವೇ ಅಮಿತ್? ‘ಹೌದು'. ಝಾಕಿರ್ ಅವರೇ, ನಿಮ್ಮ 8 ವರ್ಷದ ಮಗನ ಅತ್ಯಂತ ಇಷ್ಟದ ಗೆಳೆಯ ಯಾರು ಗೊತ್ತಾ? ಒಮ್ಮೆ ಕೇಳಿನೋಡಿ. ಲಕ್ಷ್ಯ ಎಂಬ ಹಿಂದೂ ಹುಡುಗ. ಆತ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದು ಈ ಲಕ್ಷ್ಯನೊಂದಿಗೆ. ನಾವು ಶಾಲೆಯನ್ನು ಸಂಪರ್ಕಿಸಿ ಈ ಮಾಹಿತಿಯನ್ನು ಪಡಕೊಂಡಿದ್ದೇವೆ.
   ಅಮಿತ್ ಅವರೇ, ನಿಮ್ಮ ತಂದೆ ಅಂಗಡಿ ನಡೆಸ್ತಾ ಇದ್ರು. ಈಗ ಅವರಿಲ್ಲ, ಸರಿ ತಾನೇ. ‘ಸರಿ'. ನಿಮ್ಮ ತಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದು ಶಬ್ಬೀರ್ ಸಾಬ್‍ರೊಂದಿಗೆ. ಯಾಕೆಂದರೆ, ನಿಮ್ಮ ತಂದೆಯವರಿಗೆ ಶಬ್ಬೀರ್ ಸಾಬ್ ಇಷ್ಟದ ಗೆಳೆಯ ಆಗಿದ್ದರು. ಹೀಗಿರುವಾಗ, ಯಾಕೆ ನೀವು ಇಂಥ ಮನುಷ್ಯ ವಿರೋಧಿ ವಿಷಯಗಳನ್ನು  update ಮಾಡುತ್ತಿದ್ದೀರಿ? ಯಾಕೆ ಮಾನವೀಯತೆಯನ್ನು ಕೊಲೆಗೈಯುತ್ತಿದ್ದೀರಿ?
   ಆಗ ಅವರಿಬ್ಬರೂ ಕುಗ್ಗಿದ ದನಿಯಲ್ಲಿ,
‘ಸರ್, ನಾವು ಈಗಲೇ ಡಿಲೀಟ್ (ಅಳಿಸಿ ಹಾಕುವುದು) ಮಾಡುತ್ತೇವೆ’ ಅನ್ನುತ್ತಾರೆ.
   ಹೌದು, ನೀವು ಡಿಲೀಟ್ ಮಾಡಬಹುದು. ಆದರೆ ಈಗಾಗಲೇ 12 ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಶೇರ್ ಮಾಡಿರಬಹುದು. ನಿಮ್ಮೊಂದಿಗೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಮೊದಲು ನಿಮ್ಮ ಮನಸ್ಸಿನಿಂದ ಡಿಲೀಟ್ ಮಾಡಿ. ನಿಮ್ಮ ಮೆದುಳಿನಿಂದ ಡಿಲೀಟ್ ಮಾಡಿ. ಮಾನವೀಯತೆಯನ್ನು ಬೆಳೆಸಿಕೊಳ್ಳಿ. ದ್ವೇಷವನ್ನು ಬಿತ್ತಬೇಡಿ. ವಿ ಹಿಂದೂಸ್ತಾನಿ. ನಿಮ್ಮಿಬ್ಬರಿಗೂ ಕೃತಜ್ಞತೆಗಳು.”
   2014 ಮೇ 2ರಂದು ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಈ ಆಡಿಯೋವನ್ನು ಸಾವಿರಾರು ಮಂದಿ ಆಲಿಸಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
   A Hindu and a Muslim were fighting over Religion on Facebook, here this R. J. shame both on air - (ಧರ್ಮದ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಮನನ್ನು ರೇಡಿಯೋ ಜಾಕಿ ತರಾಟೆಗೆ ತೆಗೆದುಕೊಂಡಿರುವುದು) ಎಂಬ ಹೆಸರಲ್ಲಿ ಫೇಸ್ ಬುಕ್‍ನಲ್ಲಿ ಹರಿದಾಡಿದ ಈ ಆಡಿಯೋ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಧಾರಾಳ ಮಂದಿ ಶೇರ್ ಮಾಡಿದ್ದಾರೆ. ‘ರೇಡಿಯೋ ಮಿರ್ಚಿ ಮುರ್ಗಾ'ದ ನಿರೂಪಕ (ರೇಡಿಯೋ ಜಾಕಿ) ನವೀದ್‍ನನ್ನು ಅಸಂಖ್ಯ ಮಂದಿ ಕೊಂಡಾಡಿದ್ದಾರೆ. ನಿಜವಾಗಿ, ಝಾಕಿರ್ ಮತ್ತು ಅಮಿತ್ ಎಂಬುದು ಕೇವಲ ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ, ಅವರು ವಿಷಮ ಆಲೋಚನೆಗಳ ಎರಡು ಪ್ರತೀಕಗಳೂ ಹೌದು. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದೇ ಇರುತ್ತಾರೆ. ಅಂದಹಾಗೆ, ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಇವತ್ತು ಪ್ರಭಾವಿ ಮಾಧ್ಯಮವಾಗಿ ಗುರುತಿಗೀಡಾಗಿದೆ. ಮಾರ್ಕ್ ಝುಕರ್ ಬರ್ಗ್ ಎಂಬ ಯುವಕ ತನ್ನ ಹಾರ್ವರ್ಡ್ ಯುನಿವರ್ಸಿಟಿಯ ಸಹಪಾಠಿಗಳಾದ ಎಡ್ವರ್ಡ್ ಸೆವೆರಿನ್, ಆ್ಯಂಡ್ರ್ಯೂ ಮೆಕಲಮ್, ಡಸ್ಟಿನ್ ಮಾಸ್ಕೊವಿಜ್ ಮತ್ತು ಕ್ರಿಸ್ ಹ್ಯೂಸ್‍ರೊಂದಿಗೆ ಸೇರಿ 2004 ಫೆ. 4ರಂದು ಫೇಸ್‍ಬುಕ್ ಅನ್ನು ಪ್ರಾರಂಭಿಸಿದಾಗ ಇದು ಮಾಧ್ಯಮ ಕ್ಷೇತ್ರದಲ್ಲಿ ಈ ಮಟ್ಟದ ಕ್ರಾಂತಿ ಮಾಡುತ್ತದೆಂದು ಖಂಡಿತ ಊಹಿಸಿರಲಿಲ್ಲ. ಆರಂಭದಲ್ಲಿ ಫೇಸ್‍ಬುಕ್‍ನ ಸದಸ್ಯತನವು ಹಾರ್ವರ್ಡ್ ಯುನಿವರ್ಸಿಟಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಬೋಸ್ಟನ್ ಪ್ರದೇಶದ ಕಾಲೇಜುಗಳಿಗೆ ಅದನ್ನು ವಿಸ್ತರಿಸಲಾಯಿತು. ನಿಜವಾಗಿ, ಫೇಸ್‍ಬುಕ್ ಹುಟ್ಟುವುದಕ್ಕಿಂತ ಮೊದಲು ಮುದ್ರಣ ಮಾಧ್ಯಮವೇ (ಪತ್ರಿಕೆ) ಎಲ್ಲವೂ ಆಗಿತ್ತು. ಓರ್ವ ಬರಹಗಾರನನ್ನು ಹುಟ್ಟಿಸುವುದು ಅಥವಾ ಸಾಯಿಸುವುದು ಇದುವೇ ಆಗಿತ್ತು. ಓರ್ವನಿಗೆ ತನ್ನ ಭಾವನೆ, ಅಭಿಪ್ರಾಯ, ಚಿಂತನೆಗಳನ್ನು ಹೇಳಿಕೊಳ್ಳುವುದಕ್ಕೆ ಪತ್ರಿಕೆಗಳ ಹೊರತು ಇನ್ನಾವ ವೇದಿಕೆಯೂ ಇರಲಿಲ್ಲ. ಹಾಗೆಯೇ, ಪತ್ರಿಕೆಗಳಿಗೂ ಅವುಗಳದ್ದೇ ಆದ ಅಜೆಂಡಾ ಮತ್ತು ಮಿತಿಗಳಿದ್ದುವು. ಒಂದು ಲೇಖನ ಅಥವಾ ಕತೆ ಎಷ್ಟೇ ಚೆನ್ನಾಗಿದ್ದರೂ ಅದನ್ನು ಪ್ರಕಟಿಸದೇ ಇರುವುದಕ್ಕೆ ಪತ್ರಿಕೆಗಳಿಗೆ ಅವುಗಳದ್ದೇ ಆದ ಒತ್ತಡಗಳಿದ್ದುವು. ಜೊತೆಗೇ, ಪುಟಗಳ ಮಿತಿಯೂ ಇರುತ್ತದೆ. ಇಂಥ ಸ್ಥಿತಿಯಿಂದಾಗಿ, ಅತ್ಯುತ್ತಮವಾದ ಮತ್ತು ತಮ್ಮ ನಿಲುವಿಗೆ ಹೊಂದುವ ಬರಹಗಳನ್ನಷ್ಟೇ ಹೆಕ್ಕಿ ಪ್ರಕಟಿಸಬೇಕಾದ ಅನಿವಾರ್ಯತೆ ಪತ್ರಿಕೆಗಳ ಮುಂದಿರುತ್ತದೆ. ಇದರಿಂದಾಗಿ, ಅದಾಗಲೇ ಬರಹ ಜಗತ್ತಿಗೆ ಕಾಲಿಡ ಬಯಸುವ ಹೊಸಬರು ಪತ್ರಿಕೆಗಳಿಗೆ ಬರಹ ಕಳುಹಿಸುತ್ತಾ ತಿರಸ್ಕøತಗೊಳ್ಳುತ್ತಾ ಒಂದು ರೀತಿಯ ನಿರಾಶೆಗೆ ಒಳಗಾಗುತ್ತಿರಬೇಕಾಗುತ್ತದೆ. ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಜನಪ್ರಿಯಗೊಂಡದ್ದು ಈ ಕಾರಣದಿಂದಲೇ. ಅಲ್ಲಿ ಮಿತಿಗಳೇ ಇಲ್ಲ. ನಿಮ್ಮ ಅಭಿಪ್ರಾಯ, ಚಿಂತನೆಗಳನ್ನು ಕಳಪೆ ಎಂದು ತಿರಸ್ಕರಿಸುವ ಸಂಪಾದಕರೂ ಇಲ್ಲ. ಬರಹದ ಪ್ರಕಟನೆಗಾಗಿ ಪ್ರತಿದಿನವೂ ಕಾಯುವ, ಸಂಪಾದಕರಿಗೆ ಕರೆ ಮಾಡಿ ವಿಚಾರಿಸುವ ಅಗತ್ಯವೂ ಇಲ್ಲ. ನೀವು ಏನನ್ನು ಬಯಸುತ್ತೀರೋ ತಕ್ಷಣ ಅದನ್ನು ಫೇಸ್‍ಬುಕ್‍ನಲ್ಲಿ ಬರೆಯಬಹುದು. ಪತ್ರಿಕೆಗಳು ಒದಗಿಸದ ಈ ಸ್ಪೇಸ್ ಅನ್ನು ಫೇಸ್‍ಬುಕ್ ಕೊಟ್ಟದ್ದರಿಂದಲೇ ಅದು ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸಿಕೊಂಡಿತು. ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವಷ್ಟು ಅದು ತನ್ನನ್ನು ವಿಸ್ತರಿಸಿಕೊಂಡಿತು. ದುರಂತ ಏನೆಂದರೆ, ‘ಝಾಕಿರ್’ ಮತ್ತು ‘ಅಮಿತ್’ನಂಥವರು ಇದರ ದುರ್ಲಾಭವನ್ನು ಧಾರಾಳವಾಗಿ ಪಡೆಯುತ್ತಿರುವುದು. ಪತ್ರಿಕೆಗಳಲ್ಲಿ ಪ್ರಕಟಿಸಲು ಅಯೋಗ್ಯವಾದ ಮತ್ತು ಸಾಧ್ಯವೂ ಇಲ್ಲದ ನಿಂದನೆ, ಅವಹೇಳನವುಳ್ಳ ಬರಹಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ಡೇಟ್ ಮಾಡುತ್ತಿರುವುದು. ಧರ್ಮಗಳನ್ನು, ಅದರ ಆಚರಣೆ, ವೇಷಭೂಷಣಗಳನ್ನು ಅಪಹಾಸ್ಯಗೊಳಿಸುವ ಬರಹಗಳು ಫೇಸ್‍ಬುಕ್‍ನಲ್ಲಿ ಇವತ್ತು ಕಾಣಿಸಿಕೊಳ್ಳುತ್ತಿವೆ. ಸೌಜನ್ಯದ ಮಿತಿಯೇ ಇಲ್ಲದ ಅತ್ಯಂತ ನಿಂದನಾತ್ಮಕ ಬರಹಗಳೂ ಅಪ್‍ಡೇಟ್ ಆಗುತ್ತಿವೆ. ಅವನ್ನು ಲೈಕ್ ಮಾಡುವವರೂ ಇರುತ್ತಾರೆ. ಹಾಗಂತ, ಇದಕ್ಕೆ ವಿರುದ್ಧವಾಗಿ ಬರಹಗಳು ಪ್ರಕಟವಾಗುತ್ತಿಲ್ಲ ಎಂದಲ್ಲ. ಧರ್ಮಗಳ ಕುರಿತಂತೆ ಅತ್ಯಂತ ವೈಚಾರಿಕ ಮತ್ತು
ಆರೋಗ್ಯಪೂರ್ಣ ಚರ್ಚೆಗಳು ಖಂಡಿತ ನಡೆಯುತ್ತಿವೆ. ಆದರೆ, ಅನೇಕ ಬಾರಿ ಇಂಥ ವಾತಾವರಣವನ್ನು ‘ಅಮಿತ್' ಮತ್ತು ‘ಝಾಕಿರ್'ಗಳು ಕೆಡಿಸಿಬಿಡುತ್ತಾರೆ. ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಪರಸ್ಪರ ಸಂಘರ್ಷಕ್ಕೆ ಇಳಿಸುತ್ತಾರೆ. ಆ ಮೂಲಕ ಜಗಳಕ್ಕೆಂದೇ ಸಿದ್ಧವಾಗಿ ನಿಂತವರಿಗೆ ಆಹಾರ ಒದಗಿಸುತ್ತಾರೆ. ಆದ್ದರಿಂದಲೇ,
   ನವೀದ್ ಇಷ್ಟವಾಗುತ್ತಾರೆ.

Thursday, May 8, 2014

ಜಾನುವಾರು ಹತ್ಯೆ, ಮುಸ್ಲಿಮರು ಮತ್ತು ಕೆಲವು ಸುಳ್ಳುಗಳು

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ನ ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
 A total ban (on Cattle Slaughter) was not permissable if, Under economic conditions, keeping useless bull or bullock be a burden on the society and therefore not in the public interest  - ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
 ನಿಜವಾಗಿ, ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು'ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, ಜಾನುವಾರು ಹತ್ಯೆಯನ್ನು ಖಂಡಿಸುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ‘ಶ್ರದ್ಧೆ’ಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ?
 ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ...ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಈಗ ಇರುವಂಥ (12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆ ಮಾಡಬಹುದು) ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ‘ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ಧಾರಾಳ ಜಾನುವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..’ ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (5-5-2013) ಬರೆದಿದ್ದರು. ಅದು ಬಿಡಿ, 1998ರಲ್ಲಿ ಬಿಜೆಪಿಯ ವಾಜಪೇಯಿಯವರೇ ದೇಶದ ಪ್ರಧಾನಿಯಾಗಿದ್ದರಲ್ಲ ಮತ್ತು ಆಗ ಈ ದೇಶದಲ್ಲಿ 3500ರಷ್ಟು ಕಸಾಯಿಖಾನೆಗಳಿದ್ದುವಲ್ಲ, ಇವುಗಳನ್ನು ಮುಚ್ಚಿಸಲು ಅವರು ಆಗ ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೂ ಯಾಕೆ ಅವರು ಇಂಥ ಪ್ರಯತ್ನಕ್ಕೆ ಮುಂದಾಗಲಿಲ್ಲ? ಆದರೆ, ಯಾಕೆ ಹೀಗಾಯಿತೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. 2012ರಲ್ಲಿ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ‘ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕøತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ.’ (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಹಾಗಂತ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು.ಅಷ್ಟಕ್ಕೂ ಇಲ್ಲಿ ಕಸಾಯಿಖಾನೆಗಳಿಗೆ ಪರವಾನಿಗೆ ಕೊಟ್ಟಿರುವುದು ಮುಸ್ಲಿಮರು ಅಲ್ಲವಲ್ಲ. ಅದರ ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಂಬುದು ನಿಜ. ಹಾಗಂತ, ಮುಸ್ಲಿಮರು ಕೇವಲ ಜಾನುವಾರು ವ್ಯಾಪಾರದಲ್ಲಿ ಮಾತ್ರ ತೊಡಗಿಸಿಕೊಂಡಿರುವುದಲ್ಲ, ಸರಕಾರ ಅನುಮತಿಸಿರುವ ಎಲ್ಲ ವ್ಯಾಪಾರ ವ್ಯವಹಾರಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ, ಜಾನುವಾರು ವ್ಯಾಪಾರವನ್ನು ಮುಸ್ಲಿಮರು ತೊರೆಯಬೇಕು ಎಂದೋ ಅಂಥ ವ್ಯಾಪಾರಿಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು ಎಂದೋ ಕೆಲವರು ವಾದಿಸುತ್ತಿರುವುದು ಎಷ್ಟು ಸರಿ? ಯಾವ ವ್ಯಾಪಾರ ದೇಶಪ್ರೇಮದ್ದು ಮತ್ತು ಯಾವುದು ದೇಶದ್ರೋಹದ್ದು ಎಂದು ತೀರ್ಮಾನಿಸಬೇಕಾದವರು ಯಾರು, ಸರಕಾರವೋ ಅಥವಾ ಸಂಘಟನೆಗಳೋ? ಅಲ್ಲದೇ, ಜಾನುವಾರು ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಯೇ ಹೊರತು ಕೇವಲ ಅವರು ಮಾತ್ರವೇ ಅಲ್ಲ. ಹಿಂದೂಗಳೂ ಇದ್ದಾರೆ. ವ್ಯಾಪಾರಿಗಳಿಗೆ ಜಾನುವಾರು ಮಾರಾಟ ಮಾಡುತ್ತಿರುವವರು ಯಾರು? ಅವರ ಕುರಿತೇಕೆ ಯಾರೂ  ಚಕಾರ ಎತ್ತುತ್ತಿಲ್ಲ? ಅವರು ಜಾನುವಾರುಗಳನ್ನು ಮಾರುವುದರಿಂದ ತಾನೇ ಈ ವ್ಯಾಪಾರ ಈ ವರೆಗೆ ಉಳಿದಿರುವುದು? ಹೀಗಿರುವಾಗ, ಮುಸ್ಲಿಮರು ಜಾನುವಾರು ವ್ಯಾಪಾರ ಮಾಡದಿದ್ದರೆ ಅಥವಾ ಮಾಂಸ ತಿನ್ನದಿದ್ದರೆ ಇಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದೆಲ್ಲ ಕೆಲವರು ವಾದಿಸುತ್ತಿರುವುದಕ್ಕೆ ಏನರ್ಥವಿದೆ? ಸರಕಾರವೇ ಅನುಮತಿಸಿರುವ ವ್ಯಾಪಾರದ ಮೇಲೆ ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಯಾಕೆ ನಾವು ನೇತು ಹಾಕಬೇಕು? ಜಾನುವಾರು ಹತ್ಯೆಯು ಸಾಮರಸ್ಯಕ್ಕೆ ತೊಡಕಾಗುತ್ತದೆಂದಾದರೆ ಅದನ್ನು ನಿಷೇಧಿಸಬೇಕಾದದ್ದು ಸರಕಾರ. ಇದು ಎಲ್ಲರಿಗೂ ಗೊತ್ತು. ಜಾನುವಾರು ಹತ್ಯೆ ಎಂದಲ್ಲ ಯಾವುದೇ ಹತ್ಯೆ ಅಥವಾ ವ್ಯಾಪಾರವು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆಂದಾದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಅಲ್ಲದೇ, ಸರಕಾರದ ನಿಲುವನ್ನು ಪ್ರಶ್ನಿಸಿ ಕೋರ್ಟಿಗೆ ಹೋಗುವ ಅವಕಾಶ ಎಲ್ಲರಿಗೂ ಮುಕ್ತವಿದೆ. ಇದು ಬಿಟ್ಟು, ‘ಮುಸ್ಲಿಮರು ಈ ವ್ಯಾಪಾರ ಬಿಡಬೇಕು, ಆ ಆಹಾರವನ್ನು ತಿನ್ನಬಾರದು, ಹಾಗೆ ಮಾಡಬೇಕು, ಹೀಗೆ ಮಾಡಬೇಕು... ಎಂದೆಲ್ಲಾ ಸರಕಾರವೂ ಅಲ್ಲದ, ನ್ಯಾಯಾಲಯವೂ ಅಲ್ಲದ ಕೆಲವು ಖಾಸಗಿ ವ್ಯಕ್ತಿಗಳು ಒತ್ತಾಯಿಸುವುದು ಮತ್ತು ‘ನಾವು ಹೇಳಿದಂತೆ ಕೇಳದಿದ್ದರೆ ಸಾಮರಸ್ಯ ಕೆಡುತ್ತದೆ’ ಎಂದು ಬೆದರಿಸುವುದು ಯಾವುದರ ಸೂಚನೆ?
 ಹೌದು, ಜಾನುವಾರುಗಳ ಅಕ್ರಮ ಸಾಗಾಟವು ಕಾನೂನಿನ ಪ್ರಕಾರವೇ ನಿಷಿದ್ಧವಾಗಿದೆ. ಜಾನುವಾರು ಎಂದಲ್ಲ, ಅಕ್ಕಿ, ಗೋಧಿ, ಬದನೆ, ಬೆಂಡೆಕಾಯಿ... ಸಹಿತ ಯಾವುದೇ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಾಟವೂ ನಿಷಿದ್ಧವೇ ಆಗಿದೆ. ಇಂಥ ಅಕ್ರಮ ವ್ಯಾಪಾರದಲ್ಲಿ ಮುಸ್ಲಿಮರು ಎಂದಲ್ಲ ಯಾರೇ ತೊಡಗಿಸಿಕೊಂಡರೂ ಅದು ಶಿಕ್ಷಾರ್ಹವೇ. ಇಲ್ಲಿನ ಮುಸ್ಲಿಮರು ಅಕ್ರಮ ಜಾನುವಾರು ಸಾಗಾಟದಾರರ ಪರ ಎಲ್ಲೂ ವಾದಿಸಿಲ್ಲ. ಪ್ರತಿಭಟಿಸಿಲ್ಲ. ಹಾಗೆ ವಾದಿಸುವುದು, ಅಕ್ರಮವನ್ನು ಸಮರ್ಥಿಸುವುದು ಧಾರ್ಮಿಕವಾಗಿಯೇ ನಿಷಿದ್ಧ. ನಿಜವಾಗಿ, ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕೆಲವು ಭ್ರಷ್ಟ ಅಧಿಕಾರಿಗಳು ಕಾರಣವೇ ಹೊರತು ಒಂದು ನಿರ್ದಿಷ್ಟ ಧರ್ಮವೋ ಅದರ ಅನುಯಾಯಿಗಳೋ ಅಲ್ಲ. ಆದ್ದರಿಂದ, ಇಲ್ಲಿ ಮುಸ್ಲಿಮರ ವಿರುದ್ಧ ಅಲ್ಲ, ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಯಬೇಕಾಗಿದೆ. ಜಾನುವಾರು ಸಾಗಾಟವು ಅಕ್ರಮವಾಗಿ ನಡೆಯುತ್ತದೆ ಮತ್ತು ಅಮಾನವೀಯವಾಗಿ ಜಾನುವಾರುಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತದೆ ಎಂಬ ಅಂಶವು ಒಟ್ಟು ವ್ಯಾಪಾರದ ಮೇಲೆಯೇ ನಿಷೇಧ ಹೇರುವುದಕ್ಕೆ ಕಾರಣ ಆಗುವುದಿಲ್ಲ. ಶೀತ ಆಗಿರುವುದಕ್ಕೆ ಮೂಗನ್ನೇ ಕೊಯ್ಯುವುದು ಪರಿಹಾರ ಅಲ್ಲವಲ್ಲ. ಅದಕ್ಕೆ ಮದ್ದು ಮಾಡಬೇಕಲ್ಲವೇ? ಜಾನುವಾರು ಸಾಗಾಟದಲ್ಲಾಗುವ ಅಕ್ರಮವನ್ನು ತಡೆಗಟ್ಟುವುದಕ್ಕೂ ಇದೇ ಮಾರ್ಗವನ್ನು ಅನುಸರಿಸಬೇಕಾಗಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ ಕಾನೂನು ಪಾಲಕರಿಗೆ ಸಹಕಾರ ನೀಡಿದರೆ ಇದು ಖಂಡಿತ ಜಾರಿಗೆ ಬರುತ್ತದೆ. ಅದು ಬಿಟ್ಟು, ಜಾನುವಾರು ಮಾಂಸವನ್ನು ಮುಸ್ಲಿಮರು ತ್ಯಜಿಸುವುದೋ ಅದರ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದೋ ಒಟ್ಟು ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಯಾಕೆಂದರೆ, 125 ಕೋಟಿ ಜನರಿರುವ ಈ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚೆಂದರೆ 15-16 ಕೋಟಿಯಷ್ಟೇ. ಕೇವಲ ಇಷ್ಟೊಂದು ಸಣ್ಣ ಸಂಖ್ಯೆಯನ್ನು ಆಧರಿಸಿ ಇಲ್ಲಿ ಯಾವ ವ್ಯಾಪಾರವೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರಕಾರವು 2011ರಲ್ಲಿ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾದಾಗ ಅದನ್ನು ಪ್ರತಿಭಟಿಸಿ ಬೆಂಗಳೂರಿನಲ್ಲಿ ಬಹಿರಂಗವಾಗಿ ಜಾನುವಾರು ಮಾಂಸವನ್ನು ಬೇಯಿಸಿ ಹಂಚಲಾಗಿತ್ತು. ಆ ಪ್ರತಿಭಟನೆಯನ್ನು ಏರ್ಪಡಿಸಿದ್ದು ಮುಸ್ಲಿಮರಾಗಿರಲಿಲ್ಲ. ಅಲ್ಲಿ ಪ್ರತಿಭಟಿಸಿದವರು ಯಾರು ಮತ್ತು ಮಾಂಸವನ್ನು ತಿಂದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಈ ದೇಶದ ದೊಡ್ಡದೊಂದು ಗುಂಪು ಇವತ್ತು ಜಾನುವಾರು ಮಾಂಸವನ್ನು ಆಹಾರವಾಗಿ ಬಳಸುತ್ತಿದೆ. ಅವರಲ್ಲಿ ಮುಸ್ಲಿಮರೂ ಸೇರಿದ್ದಾರೆ ಎಂಬುದು ನಿಜವೇ ಹೊರತು ಅವರೆಲ್ಲರೂ ಮುಸ್ಲಿಮರು ಎಂಬುದು ಅಪ್ಪಟ ಸುಳ್ಳು. ಒಂದು ವೇಳೆ, ಈ ದೇಶದ ಶೇ. 15ರಷ್ಟಿರುವ ಮುಸ್ಲಿಮರು ಮಾತ್ರ ಈ ಆಹಾರವನ್ನು ಸೇವಿಸುತ್ತಿದ್ದು ಉಳಿದ 85% ಮಂದಿ ಅದನ್ನು ವಿರೋಧಿಸುತ್ತಿದ್ದಾರೆ ಎಂದಾಗಿದ್ದರೆ ಅದು ಈ ದೇಶದಲ್ಲಿ ಎಂದೋ ನಿಷೇಧಕ್ಕೆ ಒಳಗಾಗುತ್ತಿತ್ತು. ಯಾಕೆಂದರೆ, ಯಾವ ಸರಕಾರವೂ 15% ಮಂದಿಯನ್ನು ತುಷ್ಠೀಕರಿಸುವುದಕ್ಕಾಗಿ 85% ಮಂದಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿಸಲಾರದು. ‘ಮುಸ್ಲಿಮರು ದಲಿತರಿಗಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ’ ಎಂಬ ಸಾಚಾರ್ ವರದಿಯ ಅಂಶಗಳೇ ಮುಸ್ಲಿಮರನ್ನು ಇಲ್ಲಿನ ಸರಕಾರಗಳು ಎಷ್ಟರಮಟ್ಟಿಗೆ ಕಡೆಗಣಿಸಿವೆ ಎಂಬುದಕ್ಕೆ ಅತ್ಯುತ್ತಮ ಪುರಾವೆ. ಇಷ್ಟಿದ್ದೂ, ‘ಕಾಂಗ್ರೆಸ್ ಸರಕಾರವು ಮುಸ್ಲಿಮರನ್ನು ತುಷ್ಠೀಕರಿಸುತ್ತದೆ’ ಎಂದೋ ಅಥವಾ ‘ಮುಸ್ಲಿಮರಿಗಾಗಿಯೇ ಜಾನುವಾರು ಹತ್ಯೆಯನ್ನು ಸಕ್ರಮಗೊಳಿಸಲಾಗಿದೆ’ ಎಂದೋ ಹೇಳುವುದಾದರೆ, ಅದಕ್ಕೆ ನಾನೇನೂ ಹೇಳುತ್ತಿಲ್ಲ. ತೀರ್ಮಾನ ಓದುಗರಿಗೆ ಬಿಟ್ಟದ್ದು. ಆದರೂ,
 ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮತ್ತು ಅಕ್ರಮ ಸಾಗಾಟ ಹಾಗೂ ಮುಸ್ಲಿಮರ ಬಗ್ಗೆ ಮಾತ್ರ ಮಾತುಗಳು ಕೇಳಿ ಬರುತ್ತಿರುವುದನ್ನು ಕಂಡು ಇವೆಲ್ಲವನ್ನೂ ಇಲ್ಲಿ ಹಂಚಿಕೊಳ್ಳಬೇಕೆನಿಸಿತು.

Wednesday, May 7, 2014

ನೋವಲ್ಲೂ ಮಿಡಿವ ಆ ಯುವಕನನ್ನು ಎದುರಿಟ್ಟುಕೊಂಡು..

2014 ಫೆಬ್ರವರಿ 6
   ಕೀಮೋಥೆರಪಿ ಬೇಗನೇ ಮುಗಿಯಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ಅದು ನಿರೀಕ್ಷಿಸಿದ್ದಕ್ಕಿಂತಲೂ ತುಂಬಾ ಹೆಚ್ಚೇ ಸಮಯವನ್ನು ತೆಗೆದುಕೊಂಡಿತು. ಇದು ತುಂಬಾ ನೋವನ್ನೂ ಕೊಟ್ಟಿತು. ಆದರೂ ನಿರೀಕ್ಷಿಸಿದಷ್ಟು ಅಲ್ಲ. ಇನ್ನು, ನಾನು ಸಹಜ ಸ್ಥಿತಿಗೆ ಮರಳಲು ಕೆಲವು ದಿನಗಳೇ ಬೇಕಾಗಬಹುದು. ಹೌದು, ನಾನು ವಾಸ್ತವವನ್ನು ಒಪ್ಪಬೇಕಿದೆ. ಮನೆಗೆ ಹೋಗಬಹುದೆಂದು ವೈದ್ಯರೂ ಹೇಳಿದ್ದಾರೆ. ಮನಸ್ಸಿಗೆ ಖುಷಿಯಾಗುತ್ತಿದೆ - ಮನೆಯ ಸ್ವಂತ ಹಾಸಿಗೆಯಲ್ಲಿ ಮಲಗಬಹುದಲ್ಲ..
   ಫೆಬ್ರವರಿ 20
ನಾನು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿದ್ದೇನೆ. ನನ್ನ ಕೀಮೋಥೆರಪಿಯ ಎರಡನೇ ಹಂತ ಪ್ರಾರಂಭವಾಗಿದೆ.  Cetuximab ಮತ್ತು Irinotecan  ಎಂಬ ಎರಡು ಔಷಧಿಗಳನ್ನು ಸೇವಿಸಿದೆ. ಇದು ನನ್ನ ಮೇಲೆ ಅಡ್ಡ ಪರಿಣಾಮ ಬೀರುತ್ತದೆಂಬುದು ನನಗೆ ಗೊತ್ತು. ನಾನು ಯಾವಾಗ ಚೆನ್ನಾಗಿರುತ್ತೇನೆ ಮತ್ತು ಯಾವಾಗ ಕಷ್ಟದಲ್ಲಿರುತ್ತೇನೆ ಎಂದು ಹೇಳಲಾಗುತ್ತಿಲ್ಲ. ನನ್ನ ಹೊಟ್ಟೆಯಲ್ಲಿ 3ನೇ ವಿಶ್ವ ಯುದ್ಧದ ಅನುಭವವಾಗುತ್ತಿದೆ.
   ಎಪ್ರಿಲ್ 13
ಹದಿಹರೆಯದ ಕ್ಯಾನ್ಸರ್ ಟ್ರಸ್ಟ್ ಗೆ (Teenage Cancer Trust)  ನೆರವು ನೀಡುತ್ತಿರುವ ಹೃದಯವಂತರನ್ನು ಸ್ಮರಿಸಿ ಖುಷಿಯಾಗುತ್ತಿದೆ. ಅವರಲ್ಲಿ ಹೆಚ್ಚಿನವರನ್ನೂ ನಾನು ನೋಡಿಲ್ಲ. ಇವತ್ತು ನನ್ನ ಆತ್ಮೀಯ ಗೆಳೆಯ ಲಂಡನ್ ಮ್ಯಾರಥಾನ್‍ನಲ್ಲಿ ಓಡಿದ. ನಾನೂ ಅದರಲ್ಲಿ ಓಡಬೇಕಿತ್ತು. ಆ ಮೂಲಕ ನನ್ನ ಟ್ರಸ್ಟ್ ಗೆ  ನಿಧಿ ಸಂಗ್ರಹಿಸಬೇಕಿತ್ತು. ಆದರೆ ದೇಹ ಸಹಕರಿಸುತ್ತಿಲ್ಲ.
   ಎಪ್ರಿಲ್ 16
ಇವತ್ತು ನಾನು ತುಸು ಚೆನ್ನಾಗಿಯೇ ಉಸಿರಾಡಿದೆ. ಅಂದರೆ ಸರಾಗ ಎಂದು ಅರ್ಥ ಅಲ್ಲ. ಆದರೂ ತುಸು ನೆಮ್ಮದಿಯಂತೂ ಇದೆ. ವೈದ್ಯರು ನನ್ನ ಎದೆಗೆ ಕಿವಿಗೊಟ್ಟು ಆಲಿಸಿದರು. ಶಬ್ದ ಬರುತ್ತಿತ್ತು. ಆ ಶಬ್ದಕ್ಕೂ ಎದೆಯಲ್ಲಿರುವ ಟ್ಯೂಮರ್‍ಗೂ ಸಂಬಂಧ ಇಲ್ಲ ಎಂಬುದು ವೈದ್ಯರ ನಿಲುವು. ಒಂದು ವೇಳೆ ಇದೆ ಎಂದಾದರೆ ತುಸು ಗಂಭೀರ ಪರೀಕ್ಷೆ ಎದುರಿಸಬೇಕಾಗುತ್ತದೆ. ಇವತ್ತು ನೋವು ತುಸು ಹಿಡಿತಕ್ಕೆ ಬಂದಿದೆ. ಒಂದು ವಾರಕ್ಕಿಂತ ಮೊದಲಾಗಿದ್ದರೆ ನೋವಿನ ಕಾರಣದಿಂದ ಪ್ರತಿದಿನ ರಾತ್ರಿ 7-8 ಬಾರಿ ಏಳುತ್ತಿದ್ದೆ. ಆದರೆ ನೋವು ನಿವಾರಕ ಔಷಧದ ಪರಿಣಾಮ ಈಗ 2-3 ಬಾರಿ ಏಳುತ್ತಿದ್ದೇನೆ. ಈ ಹಿಂದಿನದಕ್ಕೆ ಹೋಲಿಸಿದರೆ ಇದು ಓಕೆ. ಇದು ಏನೇ ಇರಲಿ, ಬದುಕಿನಲ್ಲಿ ಬ್ಯುಝಿ ಆಗಿರಬೇಕು ಎಂದು ನಾನು ಬಯಸುತ್ತೇನೆ. ಈ ತಿಂಗಳ ಕೊನೆಯಲ್ಲಿ ನನ್ನ ಕುರಿತಾದ ಡಾಕ್ಯುಮೆಂಟರಿ ಬಿಡುಗಡೆಗೊಳ್ಳುವುದನ್ನು ನಾನು ಖಾತ್ರಿಪಡಿಸಬೇಕಾಗಿದೆ. ಅದಕ್ಕಾಗಿ ಸಮಯ ನೀಡಬೇಕಾಗಿದೆ. ದೇಹವನ್ನು ಅದಕ್ಕಾಗಿ ಸಜ್ಜುಗೊಳಿಸಬೇಕಾಗಿದೆ.
   ಎಪ್ರಿಲ್ 21
ಖುಷಿಯ ಮತ್ತು ಅಚ್ಚರಿಯ ಸಂಗತಿ ಏನೆಂದರೆ, ನಾನೀಗಲೂ ಉಸಿರಾಡುತ್ತಿದ್ದೇನೆ. ನಿಮಗೆ ಗೊತ್ತಾ, ನಾನಿನ್ನು ಶಾಶ್ವತವಾಗಿ ಕೃತಕ ಆಕ್ಸಿಜನ್‍ನ ಸಹಾಯದಿಂದಲೇ ಬದುಕಬೇಕಾಗಿದೆ. ಹಾಗಾಗಿ ಆಸ್ಪತ್ರೆಯ ಹಾಸಿಗೆಯಿಂದ ಏಳಲಾಗುತ್ತಿಲ್ಲ. ಟ್ಯೂಮರ್‍ನಿಂದಾಗಿ ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಇವತ್ತು ನಾನು CT  ಸ್ಕ್ಯಾನ್ ಮಾಡಿಸಲಿರುವೆನು. ಅದರಲ್ಲೇನೂ ಚೇತರಿಕೆ ಕಂಡರೆ ನಿಮ್ಮೊಂದಿಗೆ ಹೀಗೆ ಮಾತಾಡುವ ಅವಕಾಶ ಸಿಗಬಹುದೇನೋ.. ಬಹುಶಃ ಇಂಥ ನೋವು ಈ ಹಿಂದೆಂದೂ ಕಂಡಿರಲೇ ಇಲ್ಲ ಅನ್ನುವಷ್ಟು ತೀವ್ರವಾಗಿ ಇವತ್ತು ನನ್ನನ್ನು ಕಾಡುತ್ತಿದೆ. ತುಸು ಅಲ್ಲಾಡಲೂ ಆಗುತ್ತಿಲ್ಲ. ಸಣ್ಣ ಅಲುಗಾಟಕ್ಕೂ ಜೀವವೇ ಹೋದಷ್ಟು ನೋವಿನ ಅನುಭವವಾಗುತ್ತಿದೆ. ನಿತ್ರಾಣ ಎಷ್ಟು ವಿಪರೀತ ಮಟ್ಟಕ್ಕೆ ಹೋಗಿದೆಯೆಂದರೆ, ಮಾತಾಡಲೂ ಆಗದಷ್ಟು ಮತ್ತು ಹೀಗೆ ಟೈಪ್ ಮಾಡಲೂ ಕೂಡದಷ್ಟು. ಆದ್ದರಿಂದ ನಿಮ್ಮೆಲ್ಲರ ಪ್ರತಿಕ್ರಿಯೆ, ಹಾರೈಕೆಗಳನ್ನು ಓದಲಾಗುತ್ತಿಲ್ಲ. ಆದರೆ ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿಯಾಗಿರುವೆ. ಹೌದು, ಸಾವು ಅನಿವಾರ್ಯ. ಆದರೂ ನಾನು ಸಾಯಲು ಬಯಸುತ್ತಿಲ್ಲ. ಬದುಕನ್ನು ಕೇವಲ ಉಡುಗೊರೆ ಎಂಬಂತೆ ಕೇವಲವಾಗಿ ಪರಿಗಣಿಸಬಾರದೆಂಬುದೇ ನನ್ನ ನಿಲುವು. ಅದು ಅಮೂಲ್ಯ.
   ಎಪ್ರಿಲ್ 22
ಬಹುಶಃ ಇದು ನನ್ನ ಬದುಕಿನ ಕೊನೆಯ ಭೇಟಿ ಆಗಿರಬಹುದೇನೋ. ನೋವು ತುಂಬಾ ತುಂಬಾ ತೀವ್ರವಾಗುತ್ತಿದೆ. ಹಾಗಂತ, ಇಂಥ ನೋವುಗಳನ್ನು ನಾನು ಈ ಮೊದಲು ಅನುಭವಿಸಿಲ್ಲ ಎಂದಲ್ಲ. ಆದರೆ ನೋವು ದಿನೇ ದಿನೇ ಬಿಗಡಾಯಿಸುತ್ತಿದೆ. ಆದರೂ ನಾನು ಮಾಡಬೇಕಾದ ಕೆಲಸಗಳು ಇನ್ನೂ ಇವೆ. ಮುಖ್ಯವಾಗಿ ‘ಕ್ಯಾನ್ಸರ್ ಟ್ರಸ್ಟ್'ಗೆ ನಿಧಿ ಸಂಗ್ರಹ. ನನ್ನ ಅನುಪಸ್ಥಿತಿಯಲ್ಲೂ ಅದು ಮುಂದುವರಿಯಬೇಕು. ಪ್ಲೀಸ್ Do it. ಎಲ್ಲರಿಗೂ ಕೃತಜ್ಞತೆಗಳು. ವಿಶೇಷವಾಗಿ ನನ್ನ ಅಮ್ಮನಿಗೆ, ಕುಟುಂಬ ವರ್ಗಕ್ಕೆ, ಸ್ನೇಹಿತರಿಗೆ, ನನಗೆ ಆರೋಗ್ಯವನ್ನು ಮರಳಿಸುವುದಕ್ಕಾಗಿ ಶ್ರಮ ವಹಿಸಿ ದುಡಿಯುತ್ತಿರುವ ವೈದ್ಯರಿಗೆ, ಎಲ್ಲರಿಗೆ..
   ಎಪ್ರಿಲ್ 27
ನಿನ್ನೆ ಮಧ್ಯಾಹ್ನದ ಬಳಿಕ ಕೆಮ್ಮು ನನ್ನನ್ನು ಎಷ್ಟು ಕಾಡಿತೆಂದರೆ ತುಂಬಾ ತುಂಬಾ. ಆರಂಭದಲ್ಲಿ ಅಷ್ಟು ಜೋರಾಗಿ ಇರಲಿಲ್ಲ. ಆದರೆ ಬರಬರುತ್ತಾ ನನ್ನಿಂದ ತಡಕೊಳ್ಳಲೇ ಆಗದಷ್ಟು ವಿಪರೀತ ಆಯಿತು. ಸಂಜೆಯ ಹೊತ್ತಲ್ಲಿ ಉಸಿರಾಟವೂ ಕೈ ಕೊಡತೊಡಗಿತು. ನನ್ನನ್ನು ಭೇಟಿಯಾಗಲು ಹಲವರು ಬಂದಿದ್ದರು. ಅವರು ನನ್ನ ಸುತ್ತಲಿನಿಂದ ಚದುರಿದ್ದೇ ತಡ, ನಾನು ಕುರ್ಚಿಯಲ್ಲಿ ಕೂರಲು ಯತ್ನಿಸಿದೆ. ಉಸಿರಾಡಲು ಕಷ್ಟಪಡುವ ಸಂದರ್ಭ ಎಷ್ಟು ಭಯಾನಕ ಅನ್ನುವುದು ನಿಮಗೆ ಗೊತ್ತಿದೆಯೋ ಇಲ್ಲವೋ. ಕುರ್ಚಿಯಲ್ಲಿ ನೇರವಾಗಿ ಕೂತೆ. ನನಗೆ ಜೋಡಿಸಲಾಗಿದ್ದ ಕೃತಕ ಆಮ್ಲಜನಕದ ಪ್ರಮಾಣವನ್ನು ಹೆಚ್ಚುಗೊಳಿಸುವಂತೆ ದಾದಿಯರಲ್ಲಿ ವಿನಂತಿಸಿದೆ. ಆದರೂ ಉಸಿರಾಟದಲ್ಲಿ ಸಹಜತೆ ಇರಲಿಲ್ಲ. ಮತ್ತೆ ನಾನು ಹಾಸಿಗೆಗೆ ಮರಳಿದೆ. ಸ್ವಲ್ಪ ಹೊತ್ತು ನಿರಾಳ ಅನ್ನಿಸಿತು. ಬಳಿಕ ಉಸಿರಾಟದಲ್ಲಿ ತೊಡಕು ಕಾಣಿಸತೊಡಗಿತು. ಸಹಿಸಿಕೊಂಡೆ. ಆದರೆ ಎಲ್ಲಿವರೆಗೇಂತ ಈ ಸ್ಥಿತಿಯನ್ನು ಸಹಿಸಿಕೊಳ್ಳುವುದು? ತುಸು ಸಮಯದ ಬಳಿಕ ಕೆಮ್ಮು ಶುರುವಾಯಿತು. ಜೊತೆಗೇ ಉಸಿರಾಟದ ತೊಂದರೆಯೂ ಹೆಚ್ಚಾಯಿತು. ನಿಜ ಹೇಳಬೇಕೆಂದರೆ, ನನ್ನನ್ನು ಯಾರೋ ಉಸಿರುಗಟ್ಟಿಸಿ ಕೊಲ್ಲುತ್ತಿರುವ ಅನುಭವ. ಬಳಿಕ ತುಸು ನೆಮ್ಮದಿ. ಒಮ್ಮೆ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದರೆ, ಇನ್ನೊಮ್ಮೆ ಒಂದಷ್ಟು ಕರುಣೆ ತೋರಿಸಿದಂತೆ ಸಡಿಲ ಆಗುತ್ತಿತ್ತು. ರಾತ್ರಿಯಿಡೀ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ನಿದ್ದೆ ಕಳೆದೆ. ಆದರೆ ಬೆಳಿಗ್ಗೆ ಚೆನ್ನಾಗಿದ್ದೇನೆ. I am feeling bloody fantastic.  ನಿನ್ನೆ ವೈದ್ಯರು ನನ್ನನ್ನು ಕಾಡುತ್ತಿರುವ ಸಮಸ್ಯೆಯ ಸುತ್ತ ಚರ್ಚಿಸುತ್ತಿದ್ದರು. ನನ್ನ ಕೆಮ್ಮಿಗೆ ಟ್ಯೂಮರ್ ಅಡ್ಡವಾಗಿರುವುದು ಕಾರಣ ಅಂದರು. ಎಕ್ಸ್ ರೇ  ತೆಗೆಯಲಾಯಿತು. ಹಾಗಂತ ನಾನು ಯಾರನ್ನೂ ಯಾವುದನ್ನೂ ದೂರುತ್ತಿಲ್ಲ. ಒಂದು ಹಂತದ ವರೆಗೆ ನಾನು ಖುಷಿಯಾಗಿಯೇ ಇದ್ದೇನೆ. ಪ್ರತಿದಿನ ಆರೋಗ್ಯದಲ್ಲಿ ಏರುಪೇರಾಗುವುದು ಈ ರೋಗದ ಭಾಗವೇ ಆಗಿದೆ. ನೋಡುವ..
   ಎಪ್ರಿಲ್ 29
ಹಾಯ್, ನಾನು ಸ್ಟೀಫನ್. ನಾನಿನ್ನೂ ಜೀವಂತ ಇದ್ದೇನೆ ಮತ್ತು ಬದುಕಿರಲು ಹೋರಾಟ ನಡೆಸುತ್ತಿದ್ದೇನೆ. ಹಾಗಂತ, ನನ್ನ ಮಿತಿಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಬದುಕಿ ಉಳಿಯಬೇಕೆಂಬ ನನ್ನ ಆಸೆ ಮತ್ತು ವಾಸ್ತವಗಳ ನಡುವೆ ಎಷ್ಟು ದೊಡ್ಡ ಅಂತರ ಇದೆ ಎಂಬುದನ್ನೂ ಬಲ್ಲೆ. ಆದರೂ ಹೋರಾಟ ಮಾಡುತ್ತಲೇ ಇರುವೆ. ನಾನು ಸತ್ತೇ ಹೋದೆ ಎಂದೇ ಎಣಿಸಿದ್ದೆ. ಆದರೆ ಹಾಗೇನೂ ಆಗಿಲ್ಲ. ಎಪ್ರಿಲ್ 27ರಂದು ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಅದು ಕೆಲಸ ಮಾಡುವುದಿಲ್ಲವೆಂದ ಮೇಲೆ ಕೃತಕ ಆಮ್ಲಜನಕದ ನೆರವು ಪಡೆಯಲೇಬೇಕು ತಾನೇ. ಈಗ ನಾನು ಉಸಿರಾಡುತ್ತಿರುವುದು ಇದೇ ಆಮ್ಲಜನಕದಿಂದ. ಮ್‍ಮ್.. ಆಮ್ಲಜನಕದೊಂದಿಗೆ ಬದುಕುವುದು, ಸದಾ ಮೂಗಿಗಿಟ್ಟುಕೊಂಡು ಉಸಿರಾಡೋದು ಎಷ್ಟು ಕಷ್ಟ ಗೊತ್ತಾ? ಆದರೂ ನಾನು ತುಂಬ ಖುಷಿಯಲ್ಲಿದ್ದೇನೆ. ಯಾಕೆಂದರೆ, ನಾನು ಆರಂಭಿಸಿದ, 'ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್'ಗೆ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿವೆ. ಜನರು ಈ ಫಂಡ್‍ನ ಮೇಲೆ ಎಷ್ಟೊಂದು ಮಮಕಾರ ತೋರಿರುವರೆಂದರೆ, ಅದಕ್ಕೆ ನಿಗದಿತ ಗುರಿಗಿಂತ ಮೂರು ಪಟ್ಟು ಹೆಚ್ಚು ಹಣವು ಜಮೆಯಾಗಿದೆ. ಗೆಳೆಯರೇ, ನನ್ನ ಭಾವನೆಗಳನ್ನು ಪ್ರತಿದಿನ update  ಮಾಡಬೇಕೆಂದು ನಾನು ಬಯಸುತ್ತಿರುತ್ತೇನೆ. ಆದರೆ ನಾನು ಎಲ್ಲರಂತಿಲ್ಲವಲ್ಲ. ಮನಸ್ಸು ಬಯಸುತ್ತದಾದರೂ ದೇಹ ಸಹಕರಿಸುತ್ತಿಲ್ಲ. ಹಾಂ, ಎಪ್ರಿಲ್ 27ರಂದು ಬಲ ಶ್ವಾಸಕೋಶ ನಿಷ್ಕ್ರಿಯವಾಯಿತಲ್ಲ. ಅಂದು ನನ್ನನ್ನು ವೈದ್ಯರ ಒಂದು ತಂಡ ಇಡಿಯಾಗಿ ಸುತ್ತುವರಿದಿತ್ತು. ಎಮರ್ಜೆನ್ಸಿ ರೂಮ್ ತುಂಬಾ ವೈದ್ಯರೇ. ಅವರೆಲ್ಲರನ್ನೂ ಹಾಗೇ ನೋಡುತ್ತಲೇ ಒಂದು ಬಗೆಯ ಆತಂಕ, ತಳಮಳ ಉಂಟಾಯಿತು. ಓರ್ವ ರೋಗಿಯನ್ನು ನೋಡುವುದಕ್ಕಾಗಿ ವೈದ್ಯರು ಅಷ್ಟು ಗುಂಪಾಗಿ ಬರುವುದಿಲ್ಲವಲ್ಲ. ನಾನಿನ್ನು ಉಳಿಯಲಾರೆನೇನೋ ಎಂಬ ಅನುಮಾನ ಉಂಟಾಯಿತು. ಆದರೆ ಇನ್ನೂ ಬದುಕಿದ್ದೇನೆ. ಅವರೆಲ್ಲ ಹೋದ ಬಳಿಕ ವಿಪರೀತ ಸುಸ್ತಾಯಿತು. ಎಷ್ಟು ಅಂದರೆ ಏನೂ ಮಾಡಲು ಸಾಧ್ಯವಿಲ್ಲ ಅನ್ನುವಷ್ಟು...    ಸ್ಟೀಫನ್ ಸುಟನ್ ಎಂಬ 19 ವರ್ಷದ ಕ್ಯಾನ್ಸರ್ ಪೀಡಿತ ಯುವಕ ತನ್ನ ಬ್ಲಾಗಲ್ಲಿ ಹೀಗೆ ಬರೆಯುತ್ತಾ ಹೋಗುತ್ತಾನೆ. ಓದುತ್ತಾ ಹೋದಂತೆ ಕಣ್ಣಾಲಿಗಳು ತುಂಬಿಕೊಳ್ಳುತ್ತಾ ಹೋಗುತ್ತದೆ.
   ಲಂಡನ್ನಿನ ಬರ್ನ್‍ಂಟ್‍ವುಡ್‍ನಲ್ಲಿ 1994 ಡಿ. 16ರಂದು ಹುಟ್ಟಿದ ಈ ಹುಡುಗ 2012 ಆಗಸ್ಟ್ ನಲ್ಲಿ Chase Terrace Technology College ನಿಂದ ಪದವಿ ಪಡೆದ. ಅಲ್ಲದೇ ವೈದ್ಯನಾಗುವ ಉದ್ದೇಶದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಸಂದರ್ಶನಕ್ಕೆ ಹೋದ. ರಾಷ್ಟ್ರಮಟ್ಟದ ಅಥ್ಲೀಟ್, ಕ್ರಾಸ್ ಕಂಟ್ರಿ ಮತ್ತು ಫುಟ್ಬಾಲ್ ಆಟಗಾರನಾಗಿರುವ ಸುಟನ್, ಸಂದರ್ಶನದ ಫಲಿತಾಂಶವನ್ನು ಪ್ರಕಟವಾಗುವುದಕ್ಕಿಂತ ಮೊದಲೇ ಅರ್ಜಿಯನ್ನು ಹಿಂದಕ್ಕೆ ಪಡೆದ. ಯಾಕೆಂದರೆ, ಆತನಿಗೆ ಬಾಧಿಸಿರುವ ಕ್ಯಾನ್ಸರ್ ರೋಗವು ಗುಣಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಗೊತ್ತಾಗಿರುತ್ತದೆ. 15ನೇ ವರ್ಷದಲ್ಲೇ ಕ್ಯಾನ್ಸರ್‍ಗೆ ತುತ್ತಾದ ಆತ 2013 ಜನವರಿಯಲ್ಲಿ ತನ್ನದೇ ಆದ ಬ್ಲಾಗ್ ಅನ್ನು ತೆರೆದು ಭಾವನೆಗಳನ್ನು ಬರೆಯಲು ಪ್ರಾರಂಭಿಸಿದ. ತನಗಾಗುವ ನೋವು, ಖುಷಿ, ಸಂಕಟ, ದುಮ್ಮಾನಗಳನ್ನು ಪ್ರತಿದಿನವೆಂಬಂತೆ ಅದರಲ್ಲಿ ದಾಖಲಿಸುತ್ತಾ ಹೋದ. ಫೇಸ್‍ಬುಕ್‍ನಲ್ಲೂ ಹಾಕತೊಡಗಿದ. ಈ ಮಧ್ಯೆ ತನ್ನಂತೆ ಕ್ಯಾನ್ಸರ್‍ನಿಂದ ಬಳಲುತ್ತಿರುವವರಿಗಾಗಿ ‘ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್’ ಅನ್ನು ಪ್ರಾರಂಭಿಸಿ ನಿಧಿ ಸಂಗ್ರಹಿಸತೊಡಗಿದ. ಅದಕ್ಕಾಗಿ ವೆಬ್‍ಸೈಟ್ ಸ್ಥಾಪಿಸಿದ. ಆರಂಭದಲ್ಲಿ 10,000 ಪೌಂಡ್ ಆತನ ಗುರಿಯಾಗಿತ್ತು. ಆದರೆ ಬರಬರುತ್ತಾ ಗುರಿ ಹಿಗ್ಗತೊಡಗಿತಲ್ಲದೇ 1 ಮಿಲಿಯನ್‍ಗೆ ತಲುಪಿತು. ಕಳೆದ ಎಪ್ರಿಲ್ 27ಕ್ಕೆ 3.5 ಮಿಲಿಯನ್ ಪೌಂಡ್ ಸಂಗ್ರಹವಾಗಿ ಜಾಗತಿಕವಾಗಿಯೇ ಸುದ್ದಿಗೀಡಾಯಿತು. ಓರ್ವ ಯುವಕನ ಈ ಪ್ರಯತ್ನವನ್ನು ಜಗತ್ತಿನ ಪ್ರಮುಖ ಸುದ್ದಿ ಮಾಧ್ಯಮಗಳು ಕೊಂಡಾಡಿದುವು. ವಿಷಾದ ಏನೆಂದರೆ, ಸ್ಟೀಫನ್ ಸುಟನ್ ಮಾತ್ರ ಅದಾಗಲೇ ಸಾವಿನ ಹತ್ತಿರಕ್ಕೆ ಸಮೀಪಿಸಿದ್ದ. ಎಪ್ರಿಲ್ 27ರಂದೇ ಆತನ ಬಲ ಶ್ವಾಸಕೋಶವು ನಿಷ್ಕ್ರಿಯಗೊಂಡು ಜೀವರಕ್ಷಕ ಉಪಕರಣಗಳ ಸಹಾಯದಿಂದ ಉಸಿರಾಡುತ್ತಿದ್ದ. ಆ ಸಂದರ್ಭದಲ್ಲೂ ನಗಲು ಪ್ರಯತ್ನಿಸುವ ಆತನನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ನಿಜವಾಗಿ,
ಈರ್ಷ್ಯೇ, ದ್ವೇಷ, ಅಹಂಕಾರ, ವಂಚನೆ, ಸುಳ್ಳು, ಕಾಪಟ್ಯಗಳನ್ನು ದೇಹವಿಡೀ ತುಂಬಿಕೊಂಡು ಬದುಕುತ್ತಿರುವ ನಮ್ಮನ್ನು ಎಚ್ಚರ ಗೊಳಿಸುವುದಕ್ಕೆ ಸ್ಟೀಫನ್ ಸುಟನ್ ಒಬ್ಬನೇ ಸಾಕು.


Tuesday, April 22, 2014

ತೆರೆದ ಬಯಲಲ್ಲಾಗಿದ್ದರೆ ಲಿಂಡಾ ಕೂಡ ‘ಕ್ಷಮಿಸಿದ್ದೇನೆ ಹೋಗು' ಅನ್ನುತ್ತಿದ್ದಳೇನೋ!

ಮಕ್ಕಳೊಂದಿಗೆ  ಜೆಮಿ ಪಾಡ್ರನ್
ಅಮೇರಿಕದ ಲಾರಾ ಬ್ಲೂಮೆನ್‍ಫೀಲ್ಡ್ ರ ತಂದೆ 1986ರಲ್ಲಿ ಇಸ್ರೇಲ್‍ಗೆ ಭೇಟಿ ನೀಡುತ್ತಾರೆ. ಅವರೋರ್ವ ಯಹೂದಿ ರಬ್ಬಿ. ಆದರೆ ಇಸ್ರೇಲ್‍ನ ಜೆರುಸಲೇಮ್‍ನಲ್ಲಿ ಅವರ ಮೇಲೆ ಗುಂಡಿನ ದಾಳಿಯಾಗುತ್ತದೆ. ಉಮರ್ ಖಾತಿಬ್ ಎಂಬ ಯುವಕ ಹಾರಿಸಿದ ಗುಂಡು ಅವರ ಕತ್ತಿನ ಭಾಗಕ್ಕೆ ತಾಗಿದರೂ ಅವರು ಪ್ರಾಣಾಪಾಯದಿಂದ ಪಾರಾಗುತ್ತಾರೆ. ಲಿಬಿಯದ ಮೇಲೆ ಅಮೇರಿಕ ನಡೆಸಿದ ಬಾಂಬ್ ದಾಳಿಗೆ ತೀವ್ರ ಕ್ರುದ್ಧನಾಗಿದ್ದ ಖಾತಿಬ್, ಅಮೇರಿಕದ ಈ ರಬ್ಬಿಯನ್ನು ತನ್ನ ಪ್ರತೀಕಾರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ. ಲಾರಾಳ ಮೇಲೆ ಈ ಘಟನೆ ತೀವ್ರ ಪ್ರಭಾವವನ್ನು ಬೀರುತ್ತದೆ. ಲಿಬಿಯದ ಮೇಲಿನ ದಾಳಿಯ ಸಿಟ್ಟನ್ನು ತನ್ನ ತಂದೆಯ ಮೇಲೆ ಓರ್ವ ಯುವಕ ತೀರಿಸುತ್ತಾನೆಂದರೆ, ಆ ಪ್ರತೀಕಾರ ಮನಸ್ಥಿತಿಯ ಒಳ ಮರ್ಮವೇನು, ಅದು ಜನರನ್ನು ಹೇಗೆ ಸಿದ್ಧಗೊಳಿಸುತ್ತದೆ, ಆ ಸಂದರ್ಭದಲ್ಲಿ ಅವರ ಆಲೋಚನೆಗಳು ಹೇಗಿರುತ್ತವೆ.. ಮುಂತಾದ ವಿಷಯಗಳ ಸುತ್ತ ಲಾರಾ ತೀವ್ರ ಆಸಕ್ತಿ ವಹಿಸುತ್ತಾಳೆ. ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡ ಬಳಿಕ ಆಕೆಯಲ್ಲಿ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ. ತನ್ನ ತಂದೆಗೆ ಗುಂಡಿಕ್ಕಿದ ಯುವಕನನ್ನು ಭೇಟಿಯಾಗಬೇಕೆಂದು ಆಕೆ ತೀರ್ಮಾನಿಸುತ್ತಾಳೆ. ಯುವಕನ ಕುಟುಂಬದೊಂದಿಗೆ ಸಂಪರ್ಕ ಸಾಧಿಸುತ್ತಾಳೆ. ಇಸ್ರೇಲಿ ಜೈಲಿನಲ್ಲಿದ್ದ ಯುವಕನೊಂದಿಗೆ ಕುಟುಂಬದವರ ನೆರವಿನಿಂದ ಪತ್ರ ವ್ಯವಹಾರ ನಡೆಸುತ್ತಾಳೆ. ಆದರೆ ಎಲ್ಲೂ ಆಕೆ ತನ್ನ ನಿಜ ಗುರುತನ್ನು ಆ ಕುಟುಂಬದೊಂದಿಗಾಗಲಿ, ಯುವಕನೊಂದಿಗಾಗಲಿ ಹೇಳಿಕೊಳ್ಳುವುದೇ ಇಲ್ಲ. ಇಸ್ರೇಲ್‍ನ ಅಧ್ಯಕ್ಷ  ಇಝಾಕ್ ರಬಿನ್‍ರನ್ನು ಹತ್ಯೆಗೈದ ಆರೋಪಿಯನ್ನು ಮತ್ತು ಅಲ್ಜೀರಿಯಾದ ಬ್ಲಡ್ ಫ್ಯೂಯೆಡ್ ಕಮಿಟಿಯನ್ನು ಆಕೆ ಭೇಟಿಯಾಗುತ್ತಾಳೆ. ಇರಾನ್ ನ್ಯಾಯಾಲಯದ ಮುಖ್ಯ ನ್ಯಾಯಾ ಧೀಶರು, ಧಾರ್ಮಿಕ ಗುರುಗಳು, ಕ್ರೀಡಾ ಅಭಿಮಾನಿಗಳನ್ನು ಭೇಟಿಯಾಗಿ ಪ್ರತೀಕಾರದ ಸುತ್ತಮುತ್ತ ಚರ್ಚಿಸುತ್ತಾಳೆ. ಬೋಸ್ನಿಯಾ, ಈಜಿಪ್ಟ್, ಸಿಸಿಲಿ.. ಮುಂತಾದ ರಾಷ್ಟ್ರಗಳಿಗೆ ಭೇಟಿ ಕೊಟ್ಟು ಅನುಭವ ಪಡೆಯುತ್ತಾಳೆ. 1998ರಲ್ಲಿ ಖಾತಿಬ್‍ನ ಬಿಡುಗಡೆಯಾಗುತ್ತದೆ. ಆತನನ್ನು ಸಂದರ್ಶಿಸುತ್ತಾಳೆ. ಹೀಗೆ ತಾನು ಸಂಗ್ರಹಿಸಿದ ಒಟ್ಟು ಅನುಭವಗಳನ್ನು ಮುಂದಿಟ್ಟುಕೊಂಡು 2002ರಲ್ಲಿ, ‘ರಿವೆಂಜ್: ಎ ಸ್ಟೋರಿ ಆಫ್ ಹೋಪ್' ಎಂಬ ಕೃತಿಯನ್ನು ಆಕೆ ಬಿಡುಗಡೆಗೊಳಿಸುತ್ತಾಳೆ. ಇಷ್ಟಕ್ಕೂ,
 ಸಮೀರರನ್ನು ಸಂತೈಸುತ್ತಿರುವ ಬಿಲಾಲ್ ನ ತಾಯಿ
    ಕ್ಷಮೆ ಮತ್ತು ಪ್ರತೀಕಾರವನ್ನು ಮುಖ್ಯ ವಸ್ತುವಾಗಿಟ್ಟುಕೊಂಡು ರಚನೆಯಾದ ಕೃತಿಗಳು ಲಾರಾ ಒಬ್ಬರದ್ದೇ ಅಲ್ಲ. ಹಲವಾರು ಇವೆ. ಪ್ರತೀಕಾರದ ಪರವಹಿಸಿ ಮಾತಾಡುವವರಿಗಿಂತ ಎಷ್ಟೋ ಅಧಿಕ ಪ್ರಮಾಣದಲ್ಲಿ ಕ್ಷಮೆಯ ಪರವಹಿಸಿ ಮಾತಾಡುವವರು ಈ ಜಗತ್ತಿನಲ್ಲಿದ್ದಾರೆ. ಕ್ಷಮೆಯ ಮಹತ್ವವನ್ನು ಸಾರುವ ಮೋನಾ ಅಫಿನಿಟೋ ಅವರ, ‘ವೆನ್ ಟು ಫೊರ್‍ಗಿವ್’; ಫೆಡ್ರಿಕ್ ಲುಸ್‍ಕಿನ್ ಅವರ, ‘ಫೊರ್‍ಗಿವ್ ಫಾರ್ ಗುಡ್’; ಜೆಫ್ರಿ ಮುಫೀಯವರ, ‘ಗೆಟ್ಟಿಂಗ್ ಇವನ್: ಫೊರ್‍ಗಿವ್‍ನೆಸ್ ಆಂಡ್ ಇಟ್ಸ್ ಲಿಮಿಟ್ಸ್’; ರಾಬರ್ಟ್ ಎನ್‍ರೈಟ್‍ರ, ‘ಫೊರ್‍ಗಿವ್‍ನೆಸ್ ಈಸ್ ಎ ಚಾೈಸ್: ಎ ಸ್ಟೆಪ್ ಬೈ ಸ್ಟೆಪ್..' ಮುಂತಾದ ಹಲವಾರು ಕೃತಿಗಳು ಪ್ರಕಟವಾಗಿದ್ದರೂ ರಿವೆಂಜ್‍ನ (ಪ್ರತೀಕಾರ) ಅಗತ್ಯವನ್ನು ಸಾರುವ ಕೃತಿಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ತಂದೆಯ ಮೇಲಿನ ಹಲ್ಲೆಯನ್ನು ಖಂಡಿಸಿ ಒಂದು ಬಗೆಯ ಪ್ರತೀಕಾರ ಭಾವದಿಂದಲೇ ಪ್ರಪಂಚದ ಸುತ್ತಾಟಕ್ಕಿಳಿದ ಲಾರಾ, ಅಂತಿಮವಾಗಿ ಕೃತಿ ಬರೆಯುವ ಹೊತ್ತಿನಲ್ಲಿ ಕ್ಷಮೆಯ ಕಡೆಗೆ ವಾಲಿದ್ದರು. ಕ್ಷಮೆ ಎಂದರೇನು, ಅದನ್ನು ನೀಡುವ ವಿಧಾನ ಹೇಗೆ, ಅದರಿಂದ ಏನು ಪ್ರಯೋಜನ.. ಎಂಬುದನ್ನೆಲ್ಲಾ ವಿವರಿಸುವ ವೆಬ್‍ಸೈಟ್‍ಗಳು ಇವತ್ತು ಧಾರಾಳ ಇವೆ. ಕ್ಷಮೆಯಿಂದಾಗಿ ನಿಮ್ಮ ಮೆದುಳಿನಲ್ಲಾಗುವ ಬದಲಾವಣೆ ಮತ್ತು ಪ್ರತೀಕಾರ ಭಾವದಿಂದ ಆಗುವ ಬದಲಾವಣೆಗಳ ಬಗ್ಗೆ ವಿಸ್ತೃತ ಮಾಹಿತಿಗಳು ಇವತ್ತು ಇಂಟರ್‍ನೆಟ್‍ನಲ್ಲಿ ಸಾಕಷ್ಟಿವೆ. ಆದ್ದರಿಂದಲೇ, ಕಳೆದ ವಾರ ಇರಾನ್ ಜಾಗತಿಕವಾಗಿಯೇ ಸುದ್ದಿಗೀಡಾದದ್ದು. ಓರ್ವ ತಾಯಿಯ ಕ್ಷಮಾಗುಣವು ಇರಾನನ್ನು ಮತ್ತು ಅದರ ಶಿಕ್ಷಾ ಕ್ರಮವನ್ನು ಜಾಗತಿಕವಾಗಿಯೇ ಚರ್ಚೆಗೊಳಪಡಿಸಿದುವು. ತನ್ನ 18ರ ಹರೆಯದ ಮಗನನ್ನು ಇರಿದು ಕೊಂದ ಬಿಲಾಲ್ ಎಂಬ ಯುವಕನನ್ನು ಸವಿೂರ ಅನ್ನುವ ಆ ತಾಯಿ ನೆರೆದ ಸಾವಿರಾರು ಮಂದಿಯ ಎದುರೇ ಕ್ಷಮಿಸಿಬಿಟ್ಟರು. ಆ ಮೂಲಕ ಆತ ನೇಣು ಶಿಕ್ಷೆಯಿಂದ ಪಾರಾಗಿಬಿಟ್ಟ. ಅವರ ಮೂವರು ಮಕ್ಕಳಲ್ಲಿ ಇನ್ನೋರ್ವ ಮಗ ಅಪಘಾತದಲ್ಲಿ ಸಾವಿಗೀಡಾಗಿದ್ದ. ಈಗ ಇರುವುದು ಮಗಳೊಬ್ಬಳೇ. ನಿಜವಾಗಿ, ಒಂದು ಕುಟುಂಬವು ಪ್ರತೀಕಾರ ಕೈಗೊಳ್ಳುವುದಕ್ಕೆ ಇದಕ್ಕಿಂತ ಉತ್ತಮವಾದ ಬೇರೆ ಯಾವ ಕಾರಣವಿದೆ? ಆದರೆ, ನೇಣು ಕುಣಿಕೆಗೆ ತಲೆಯೊಡ್ಡಿದ್ದ ಬಿಲಾಲ್‍ನ ಕೆನ್ನೆಗೊಂದು ಬಾರಿಸಿ ಆ ತಾಯಿ ಬಿಕ್ಕಿ ಬಿಕ್ಕಿ ಅತ್ತಾಗ ನೆರೆದವರು ಭಾವುಕರಾಗಿದ್ದರು. ಸ್ವತಃ ಪೊಲೀಸರ ಕಣ್ಣುಗಳೇ ಹನಿಗೂಡಿದ್ದುವು. ಸವಿೂರಾರನ್ನು ಬಿಲಾಲ್‍ನ ತಾಯಿ ಆಲಿಂಗಿಸಿಕೊಂಡರು. ಆನ್‍ಲೈನ್ ನಲ್ಲಿ ಪ್ರಕಟವಾದ ಆ ಘಟನೆಯ ಹತ್ತು ಹಲವು ದೃಶ್ಯಗಳು ಎಷ್ಟು ಭಾವುಕವಾಗಿತ್ತೆಂದರೆ, ಸಾರ್ವಜನಿಕವಾಗಿ ಗಲ್ಲಿಗೇರಿಸುವುದು ಸರಿಯೋ ತಪ್ಪೋ ಎಂಬುದನ್ನು ಮತ್ತೊಮ್ಮೆ ಅದು ಚರ್ಚಾರ್ಹಗೊಳಿಸಿತು. ಡೈಲಿ ಮೈಲ್, ದಿ ಗಾರ್ಡಿಯನ್, ಬಿಬಿಸಿ, ಸಿ.ಎನ್.ಎನ್ ಡಾಟ್ ಕಾಮ್ ಸಹಿತ ಜಗತ್ತಿನ ಪ್ರಸಿದ್ಧ ಮಾಧ್ಯಮಗಳು ಈ ಕುರಿತಂತೆ ವಿಸ್ತೃತ ವರದಿಯನ್ನು ಒಂದಕ್ಕಿಂತ ಹೆಚ್ಚು ಫೋಟೋಗಳ ಸಮೇತ ಪ್ರಕಟಿಸಿದುವು. ‘ನಾನು ದೇವವಿಶ್ವಾಸಿಯಾಗಿದ್ದೇನೆ ಮತ್ತು ನನ್ನ ಮಗನಿಗೆ ಕ್ಷಮೆಯು ತುಂಬಾ ಇಷ್ಟ..' ಎಂದು ಹೇಳಿದ ಆ ತಾಯಿಯ ಫೋಟೋವನ್ನು ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿದುವು. ಸಾಮಾನ್ಯವಾಗಿ, ಇರಾನ್ ಚರ್ಚೆಗೀಡಾಗುವುದೇ ನಕಾರಾತ್ಮಕ ಸುದ್ದಿಗಳಿಗಾಗಿ. ಕಲ್ಲೆಸೆದು ಕೊಲ್ಲುವ, ಸಾರ್ವಜನಿಕವಾಗಿ ನೇಣಿಗೇರಿಸುವ ಅಲ್ಲಿನ ಶಿಕ್ಷಾ ಕ್ರಮಗಳನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‍ರಿಂದ ಹಿಡಿದು ಆಮ್ನೆಸ್ಟಿ ಇಂಟರ್‍ನ್ಯಾಶನಲ್ ವರೆಗೆ ಎಲ್ಲರೂ ಚರ್ಚೆಗೊಳಪಡಿಸುತ್ತಲೇ ಬಂದಿದ್ದಾರೆ. ಸಾರ್ವಜನಿಕರೆದುರು ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವುದು ಕ್ರೂರ ವಿಧಾನ ಎಂಬ ಅಭಿಪ್ರಾಯ ಅಸಂಖ್ಯ ಮಂದಿಯಲ್ಲಿದೆ. ಅಲ್ಲದೇ, ‘ಮರಣ ದಂಡನೆಯೇ ತಪ್ಪು, ಕೊಲ್ಲುವ ಸ್ವಾತಂತ್ರ್ಯ ಯಾರಿಗೂ ಇಲ್ಲ’ ಎಂದು ವಾದಿಸುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ಆ್ಯಂಟನಿ ಚೆಕಾವ್ ಅವರ ‘ದಿ ಬೆಟ್' ಎಂಬ ಕತೆಯಿಂದ ಪ್ರಭಾವಿತಗೊಂಡು, ಈ ಶಿಕ್ಷಾ ವಿಧಾನವನ್ನೇ ಭಿನ್ನವಾಗಿ ವ್ಯಾಖ್ಯಾನಿಸುವವರೂ ಇದ್ದಾರೆ. ಆದರೆ, ಎಲ್ಲರ ವಾದಗಳಿಗೂ ಒಂದು ಹಂತದ ತಡೆಯನ್ನು ವಿಧಿಸುವಲ್ಲಿ ಇರಾನ್‍ನ ಈ ತಾಯಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕವಾಗಿ ನೇಣಿಗೇರಿಸುವುದನ್ನು ಕ್ರೂರ ಅನ್ನುವವರು ಒಂದು ಕಡೆಯಾದರೆ, ಸಾರ್ವಜನಿಕವಾಗಿ ಸಾರುವ ಕ್ಷಮೆಯ ಸಂದೇಶವು ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಪ್ರಭಾವಶಾಲಿ ಯಾದದ್ದು ಅನ್ನುವವರು ಇನ್ನೊಂದು ಕಡೆ. ಅಂದಹಾಗೆ, ಮುಚ್ಚಿದ ಮನೆಯೊಳಗೆ ಯಾರಿಗೂ ಕಾಣದಂತೆ ಓರ್ವರನ್ನು ಗಲ್ಲಿಗೇರಿಸುವುದು ಸಾರ್ವಜನಿಕರನ್ನು ಎಷ್ಟರ ಮಟ್ಟಿಗೆ ತಟ್ಟಬಹುದು? ಗಲ್ಲು ಶಿಕ್ಷೆ ಎಂಬುದು ಸಾಮಾನ್ಯ ಶಿಕ್ಷೆಯಲ್ಲ. ಅಸಾಮಾನ್ಯ ಕ್ರೌರ್ಯಗಳಿಗಾಗಿ ಮಾತ್ರ ವಿಧಿಸಲಾಗುವ ಗಲ್ಲು ಶಿಕ್ಷೆಯನ್ನು ಎಲ್ಲರಿಂದಲೂ ಮುಚ್ಚಿಡುವುದರಿಂದ ಶಿಕ್ಷೆಯ ಉದ್ದೇಶ ಪೂರ್ತಿಯಾಗಬಲ್ಲುದೇ? ಯಾಕೆಂದರೆ, ಶಿಕ್ಷೆ ನೀಡುವುದು ಕೇವಲ ವ್ಯಕ್ತಿಗೆ ಅಲ್ಲವಲ್ಲ. ಅಲ್ಲಿ ವ್ಯಕ್ತಿ ನಿಮಿತ್ತ ಮಾತ್ರ. ಗಲ್ಲು ಶಿಕ್ಷೆಯ ಮೂಲಕ ಅಂಥ ಕೃತ್ಯಗಳನ್ನು ಎಸಗುವವರಿಗೆ ಅಥವಾ ಅದಕ್ಕಾಗಿ ಸಿದ್ಧತೆ ನಡೆಸುವವರಿಗೆ ಎಚ್ಚರಿಕೆ ನೀಡಲಾಗುತ್ತದಲ್ಲವೇ? ಆ ಎಚ್ಚರಿಕೆಯನ್ನು ತೀರಾ ಖಾಸಗಿಯಾಗಿ ನೀಡುವುದಕ್ಕಿಂತ ಬಹಿರಂಗವಾಗಿ ನೀಡುವುದು ಹೆಚ್ಚು ಪ್ರಭಾವಶಾಲಿಯಲ್ಲವೇ? ಪೊಲೀಸ್ ಠಾಣೆ, ಕೋರ್ಟು, ಜೈಲು, ಶಿಕ್ಷೆ.. ಇವೆಲ್ಲ ಆಟದ ಬಯಲುಗಳು ಅಲ್ಲ ತಾನೇ. ತಪ್ಪು ಮಾಡುವವರಲ್ಲಿ ಭೀತಿ ಮತ್ತು ಪರಿವರ್ತನೆಯ ಮನಸ್ಸನ್ನು ಹುಟ್ಟು ಹಾಕಬೇಕೆಂಬ ಉದ್ದೇಶದಿಂದಲೇ ಇವು ಅಸ್ತಿತ್ವಕ್ಕೆ ಬಂದಿವೆ. ಹೀಗಿರುವಾಗ, ಜನರಲ್ಲಿ ಒಂದು ಹಂತದ ವರೆಗೆ ಭೀತಿಯನ್ನು ಮೂಡಿಸಬಲ್ಲ ತೆರೆದ ಬಯಲಿನ ಗಲ್ಲು ಶಿಕ್ಷೆಯನ್ನು ಕೇವಲ ಕ್ರೂರ ಎಂಬ ಪೂರ್ವ ನಿರ್ಧರಿತ ಚೌಕಟ್ಟಿನೊಳಗೆ ಮಾತ್ರ ಇಟ್ಟು ನೋಡುವುದೇಕೆ? ಅದರಾಚೆಗಿನ ಸಾಧ್ಯತೆಗಳೂ ಇರಬಹುದಲ್ಲವೇ? ಅಲ್ಲದೇ, ಶಿಕ್ಷೆ ಜಾರಿಯಾಗುವ ಹಂತದಲ್ಲಿ ಸವಿೂರರಂಥ ತಾಯಂದಿರು ಕ್ಷಮೆ ನೀಡುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅದು ಎಂಥ ಸಂದೇಶವನ್ನು ಸಾರಬಲ್ಲುದು? ಅಪರಾಧಿಯ ಮನಸ್ಥಿತಿಯನ್ನಷ್ಟೇ ಅಲ್ಲ, ವೈರಿಗಳ ಮನಸ್ಸನ್ನೂ ತೇವಗೊಳಿಸುವ ಸಾಮರ್ಥ್ಯ ಅಂಥ ಘಟನೆಗಳಿಗೆ ಇರುತ್ತದಲ್ಲವೇ? ಸಾರ್ವಜನಿಕರ ಮುಂದೆ ನಡೆಯಬಹುದಾದ ಇಂಥ ಘಟನೆಗಳು ಅಪರಾಧಗಳನ್ನು ಕಡಿಮೆಗೊಳಿಸುವುದಕ್ಕೆ ಹೆಚ್ಚು ಉಪಯುಕ್ತವಾಗದೇ.. ಹೀಗೆಲ್ಲಾ ಇಂಟರ್‍ನೆಟ್‍ನಲ್ಲಿ ಅನೇಕರು ವಾದಿಸಿದ್ದಾರೆ.. ಅದೇ ವೇಳೆ ಈ ಅಭಿಪ್ರಾಯವನ್ನು ಖಂಡಿಸಿಯೂ ಬರೆದಿದ್ದಾರೆ.
   ಓ ಕಟುಕನೇ, ನನ್ನ ತಂದೆಯನ್ನು ಯಾಕೆ ಕೊಂದೆ? (ಡಿಯರ್ ಬ್ಯಾಡ್ ಗೈ, ವೈ ಡಿಡ್ ಯು ಕಿಲ್ ಮೈ ಡ್ಯಾಡಿ)
ಹಾಗಂತ, ಇಬ್ಬರು ಮಕ್ಕಳು ಕೋರ್ಟ್‍ನಲ್ಲಿ ಪ್ರಶ್ನಿಸಿದ ಭಾವುಕ ಘಟನೆಯನ್ನು 2014 ಮಾರ್ಚ್ 2ರಂದು ಮಾಧ್ಯಮಗಳು ಪ್ರಕಟಿಸಿದ್ದುವು. ಅಮೇರಿಕದ ಆಸ್ಟಿನ್ ಪಟ್ಟಣದಲ್ಲಿ ಬ್ರೆಂಡನ್ ಡ್ಯಾನಿಯಲ್ ಎಂಬ 20 ವರ್ಷದ ಯುವಕನು  ಜೆಮಿ ಪ್ಯಾಡ್ರನ್ ಎಂಬ ಪೊಲೀಸಧಿಕಾರಿಯನ್ನು 2012 ಎಪ್ರಿಲ್ 12ರಂದು ಗುಂಡಿಕ್ಕಿ ಕೊಲೆಗೈದಿದ್ದ. ಕೋರ್ಟ್‍ನಲ್ಲಿ ಆ ಘಟನೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ಯಾಡ್ರನ್‍ರ ಪತ್ನಿ ಅಮಿ 11 ಪುಟಗಳ ದೀರ್ಘ ಪತ್ರವೊಂದನ್ನು ಓದಿದಳು. ಆಕೆಯ 10 ವರ್ಷದ ಅರಿಯಾನ ಮತ್ತು 6 ವರ್ಷದ ಒಲಿವಾ ಎಂಬಿಬ್ಬರು ಮಕ್ಕಳು ಅಪ್ಪನನ್ನು ಸ್ಮರಿಸಿ ಬರೆದ ಪತ್ರವಾಗಿತ್ತದು. 'ನೀನು ನಮ್ಮ ತಂದೆಯನ್ನು ಯಾಕೆ ಕೊಂದೆ, ಅವರು ತುಂಬಾ ಫನ್ನಿ ಆಗಿದ್ರು. ಇಷ್ಟ ಆಗಿದ್ರು. ನೀನು ಈ ಶಿಕ್ಷೆಗೆ ಅರ್ಹನಾಗಿರುವಿ. ನೀನು ಕಂಬಿಗಳ ಹಿಂದೆಯೇ ಬದುಕು. ನೀನೆಷ್ಟು ಮೂರ್ಖ ಕೆಲಸ ಮಾಡಿದೆ ಗೊತ್ತಾ..' ಎಂದೆಲ್ಲಾ ಬರೆದಿದ್ದ ಆ ಪತ್ರ ಕೋರ್ಟಿನಲ್ಲಿದ್ದ ಎಲ್ಲರನ್ನೂ ಕಣ್ತುಂಬಿಸಿತ್ತು. ಕೋರ್ಟು ಬ್ರೆಂಡನ್ ಡ್ಯಾನಿಯಲ್‍ಗೆ ಮರಣದಂಡನೆ ಶಿಕ್ಷೆ ವಿಧಿಸಿದಾಗ ಮೃತ ಜೆಮಿ ಪ್ಯಾಡ್ರನ್‍ನ ಸಹೋದರಿ ಲಿಂಡಾ ಡಯಾನ್‍ಳು ಡ್ಯಾನಿಯಲ್‍ನನ್ನು ಉದ್ದೇಶಿಸಿ, ‘ನೀನು ನರಕಕ್ಕೆ ಹೋಗು’ ಎಂದಿದ್ದಳು.
   ಒಂದು ರೀತಿಯಲ್ಲಿ, ಬಿಲಾಲ್‍ನನ್ನು ಕ್ಷಮಿಸಿದ ಇರಾನ್‍ನ ಆ ತಾಯಿ ಮತ್ತು ಡ್ಯಾನಿಯಲ್‍ನನ್ನು ‘ನರಕಕ್ಕೆ ಹೋಗು’ ಅನ್ನುವ ಮಹಿಳೆ ಇಬ್ಬರೂ ಕ್ಷಮೆ ಮತ್ತು ಪ್ರತೀಕಾರದ ಎರಡು ಮುಖಗಳಾಗಿದ್ದಾರೆ. ಕ್ಷಮೆ ಸುಲಭದ್ದಲ್ಲ. ಅಪರಾಧಿಯನ್ನು ನೋಡುವಾಗ ತಾಯಿಗೆ ತನ್ನ ಕಳೆದು ಹೋದ ಮಗನ ನೆನಪು ಬರುತ್ತದೆ. ಪತ್ನಿಗೆ ಪತಿಯ ನೆನಪು ಕಾಡುತ್ತದೆ. ಮಕ್ಕಳು ಅಪ್ಪನನ್ನು ನೆನಪಿಸಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ ಕ್ಷಮೆಗಿಂತ ಪ್ರತೀಕಾರವೇ ಮೇಲುಗೈ ಪಡೆಯುತ್ತದೆ. ‘ಒಂದು ವೇಳೆ ತಾನು ಕ್ಷಮಿಸಿದರೆ ಅಪರಾಧಿ ಪಾಠ ಕಲಿಯುವುದು ಹೇಗೆ, ಆತ ನನ್ನ ಕ್ಷಮಾಗುಣವನ್ನು ದೌರ್ಬಲ್ಯ ಎಂದು ತಿಳಿದುಕೊಂಡರೆ, ಆತ ಬದಲಾಗದಿದ್ದರೆ, ಅಷ್ಟಕ್ಕೂ ತನ್ನ ಮಗನನ್ನು ಅಥವಾ ಗಂಡನನ್ನು ಕೊಂದವನನ್ನು ನಾನೇಕೆ ಕ್ಷಮಿಸಬೇಕು, ಇಷ್ಟು ವರ್ಷ ಅವರಿಲ್ಲದೇ ತಾನನುಭವಿಸಿದ ದುಃಖಕ್ಕೆ ಅವನಿಗೂ ಶಿಕ್ಷೆಯಾಗಲಿ..' ಎಂಬಂಥ ಆಲೋಚನೆಗಳು ಖಂಡಿತ ಸಂತ್ರಸ್ತರಲ್ಲಿ ಸುಳಿದು ಹೋಗಬಹುದು. ಇವಿದ್ದೂ ಓರ್ವರು ಅಪರಾಧಿಯನ್ನು ಕ್ಷಮಿಸುತ್ತಾರೆಂದರೆ, ಅದು ಅಭೂತಪೂರ್ವವಾದುದು. ಕ್ಷಮೆಯು ಪ್ರತೀಕಾರಕ್ಕಿಂತ ಶ್ರೇಷ್ಠ ಅನ್ನುತ್ತದೆ ಪವಿತ್ರ ಕುರ್‍ಆನ್ (16: 146). ಬಹುಶಃ, ಗಲ್ಲು ಶಿಕ್ಷೆ ಜಾರಿಗೆ ತೆರೆದ ಬಯಲು ಉತ್ತಮವೋ ಅಥವಾ ಮುಚ್ಚಿದ ಕೊಠಡಿ ಉತ್ತಮವೋ ಎಂಬ ಚರ್ಚೆಗೆ ತಾರ್ಕಿಕ ಉತ್ತರ ಸಿಗುವುದೂ ಇಲ್ಲೇ. ತೆರೆದ ಬಯಲಲ್ಲಿ - ಸಾವಿರಾರು ಮಂದಿಯ ಮುಂದೆ ಓರ್ವ ಅಪರಾಧಿ ಅಸಹಾಯಕನಾಗಿ ನೇಣು ಕುಣಿಕೆಗೆ ಕೊರಳೊಡ್ಡಲು ಸಿದ್ಧವಾಗಿರುವ ಸ್ಥಿತಿಯು ಯಾರನ್ನೇ ಆಗಲಿ ಭಾವುಕಗೊಳಿಸದಿರಲು ಸಾಧ್ಯವಿಲ್ಲ. ಯಾಕೆಂದರೆ, ನೆರೆದವರಿಗೆ ಅಲ್ಲಿ ವ್ಯಕ್ತಿ ಕಾಣುತ್ತಾನೆಯೇ ಹೊರತು ಆತನ ಅಪರಾಧ ಅಲ್ಲ. ಜೊತೆಗೇ ಕಣ್ತುಂಬಿಕೊಂಡ ಆತನ ತಾಯಿಯೋ, ಪತ್ನಿಯೋ, ಸಹೋದರನೋ ಅಲ್ಲಿರುತ್ತಾರೆ. ಇಂಥ ಸನ್ನಿವೇಶವು ಸಂತ್ರಸ್ತ ಕುಟುಂಬದ ಮೇಲೂ ಪ್ರಭಾವ ಬೀರಬಲ್ಲುದು. ಆವರೆಗೆ, ‘ಕ್ಷಮಿಸುವುದೇ ಇಲ್ಲ' ಎಂದು ತೀರ್ಮಾನಿಸಿದವರೂ ತೆರೆದ ಬಯಲಿನ ಸ್ಥಿತಿಯನ್ನು ಕಂಡು ನಿಲುವು ಬದಲಿಸುವುದಕ್ಕೆ ಅವಕಾಶವಿದೆ. ನೆರೆದವರ ಹಾವ-ಭಾವ ಸಂತ್ರಸ್ತ ಕುಟುಂಬದ ಮೇಲೆ ಖಂಡಿತ ಪ್ರಭಾವ ಬೀರಬಲ್ಲುದು. ಆದರೆ. ಮುಚ್ಚಿದ ಕೊಠಡಿಯೊಳಗೆ ಗಲ್ಲಿಗೇರಿಸುವ ಸ್ಥಿತಿಯು ಇದಕ್ಕಿಂತ ಖಂಡಿತ ಭಿನ್ನ. ಅಲ್ಲಿ ಇಂಥ ಭಾವುಕ ಸನ್ನಿವೇಶಕ್ಕೆ ಅವಕಾಶವೇ ಇಲ್ಲ. ಆದ್ದರಿಂದಲೇ,
   ‘ನರಕಕ್ಕೆ ಹೋಗು' ಅನ್ನುವ ಲಿಂಡಾ ಡಯಾಸ್ ಮತ್ತು ‘ಕ್ಷಮಿಸಿದ್ದೇನೆ ಹೋಗು' ಅನ್ನುವ ಸವಿೂರಾ ಮುಖ್ಯವಾಗುತ್ತಾರೆ.

Thursday, April 10, 2014

ಗೆಲ್ಲುವ ಸಾಮರ್ಥ್ಯಕ್ಕೆ ಮಾನದಂಡವೇನು ರಾಜನಾಥ್ ಸಿಂಗ್‍ರೇ?

   ಜಾಟರು ಮತ್ತು ರಜಪೂತ್‍ರನ್ನು ಇತರ ಹಿಂದುಳಿದ ಜಾತಿಗಳಲ್ಲಿ (OBC) ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸದ ಅಥವಾ ರಾಜಸ್ಥಾನದ ಗುಜ್ಜರ್‍ಗಳ ವಿೂಸಲಾತಿ ಬೇಡಿಕೆಯ ಪರವಾಗಿರುವ ಬಿಜೆಪಿಯು ಮುಸ್ಲಿಮರ ವಿೂಸಲಾತಿ ಬೇಡಿಕೆಯನ್ನು ಮಾತ್ರ ವಿರೋಧಿಸುತ್ತಿರುವುದೇಕೆ? ಮುಸ್ಲಿಮರ ಸ್ಥಿತಿ-ಗತಿ ದಲಿತರಿಗಿಂತಲೂ ಹೀನಾಯವಾಗಿದೆ ಎಂಬ ಅಧ್ಯಯನಾತ್ಮಕ ವರದಿಯನ್ನು ಕೊಟ್ಟ ‘ಸಾಚಾರ್ ಸಮಿತಿ ವರದಿ'ಯನ್ನು ಬಿಜೆಪಿ ಅಣಕಿಸುತ್ತಿರುವುದೇಕೆ? ಅದನ್ನು ಮುಸ್ಲಿಮ್ ತುಷ್ಟೀಕರಣದ ವರದಿ ಅನ್ನುತ್ತದಲ್ಲ, ಹಾಗಾದರೆ ಜಾಟರು, ಗುಜ್ಜಾರ್‍ಗಳು, ರಜಪೂತರನ್ನೆಲ್ಲ ಓಬಿಸಿಯಲ್ಲಿ ಸೇರ್ಪಡೆಗೊಳಿಸಿರುವುದಕ್ಕೆ ಯಾಕೆ ಅದು ‘ತುಷ್ಟೀಕರಣ' ಪದ ಬಳಸುತ್ತಿಲ್ಲ? ಮುಸ್ಲಿಮರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಕಟವಾಗುವ ಯಾವ ಯೋಜನೆಗಳಿಗೂ ಅದೇಕೆ ತಡೆ ಒಡ್ಡುತ್ತಿದೆ? ಬಡ ಮುಸ್ಲಿಮ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್‍ಶಿಪ್‍ನ ವಿರುದ್ಧ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿರುವ ಏಕೈಕ ರಾಜ್ಯ ಗುಜರಾತ್. ಒಂದು ಕಡೆ, ‘ಸಬ್‍ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಮಂತ್ರವನ್ನು ಜಪಿಸುತ್ತಿರುವ ಮೋದಿ ಇನ್ನೊಂದು ಕಡೆ ಮುಸ್ಲಿಮರ ವಿಕಾಸವನ್ನು ಬಯಸದವರಂತೆ ವರ್ತಿಸುತ್ತಿರುವುದೇಕೆ? ಕಳೆದ ಮಾರ್ಚ್ ನಲ್ಲಿ  ಯೋಗಗುರು ಬಾಬಾ ರಾಮ್‍ದೇವ್ ಏರ್ಪಡಿಸಿದ್ದ ಸಭೆಯಲ್ಲಿ ಮೋದಿ ಭಾಗಿಯಾಗಿದ್ದರು. ಕಾಂಗ್ರೆಸನ್ನು ಕಠಿಣ ಪದಗಳಲ್ಲಿ ಖಂಡಿಸಿದ್ದ ರಾಮ್‍ದೇವ್‍ರು ಮೋದಿಯ ಪರ ವಹಿಸಿ ಮಾತಾಡಿದ್ದರು. ಆಗ ಮಾತಾಡದಿದ್ದ ಬಿಜೆಪಿಯು ಈಗ ಸೋನಿಯಾ-ಬುಖಾರಿ ಭೇಟಿಯನ್ನು ಪ್ರಶ್ನಿಸುತ್ತಿದೆಯಲ್ಲ, ಏನಿದರ ಅರ್ಥ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಕಾಣುತ್ತಿರುವ ಈ ಮಟ್ಟದ ಗೊಂದಲವು ಉದ್ದೇಶಿತವೋ ಅನುದ್ದೇಶಿತವೋ? ಒಂದು ಕಡೆ ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್‍ರು ಮುಸ್ಲಿಮರ ಕ್ಷಮೆ ಯಾಚಿಸುತ್ತಿದ್ದಾರೆ. ಇನ್ನೊಂದು ಕಡೆ, ಮುಸ್ಲಿಮರನ್ನು ಇನ್ನಷ್ಟು ಭಯಪಡಿಸುವ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 17% ಮುಸ್ಲಿಮರಿರುವ ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಇಡೀ ದೇಶದಲ್ಲಿ ಅದು ಕೇವಲ ಐವರು ಮುಸ್ಲಿಮ್ ಅಭ್ಯರ್ಥಿಗಳಿಗಷ್ಟೇ ಟಿಕೆಟು ನೀಡಿದೆ. ಜಮ್ಮು ಕಾಶ್ಮೀರದ ಶ್ರೀನಗರ, ಬಾರಮುಲ್ಲಾ, ಅನಂತ್‍ನಾಗ್, ಬಿಹಾರ ಮತ್ತು ಲಕ್ಷ ದ್ವೀಪ ಹೀಗೆ ಐದು ಕ್ಷೇತ್ರಗಳಲ್ಲಿ ಅದು ಮುಸ್ಲಿಮರನ್ನು ಕಣಕ್ಕಿಳಿಸಿದೆ. ಇವು ಎಲ್ಲವೂ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳು. ಇಷ್ಟಕ್ಕೂ, ‘ಗೆಲ್ಲುವ ಸಾಮರ್ಥ್ಯ ಇರುವ  ಅಭ್ಯರ್ಥಿಗಳನ್ನಷ್ಟೇ ನಿಲ್ಲಿಸಬೇಕಾಗುತ್ತದೆ’ ಎಂಬ ರಾಜನಾಥ್ ಸಿಂಗ್‍ರ ಮಾತಿನ ಇಂಗಿತವಾದರೂ ಏನು? ಬಿಜೆಪಿಯನ್ನು ಬೆಂಬಲಿಸುವ ಹಿಂದೂಗಳು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿ ಸುವುದಿಲ್ಲ ಎಂದೇ ಅಲ್ಲವೇ? ಇಂಥದ್ದೊಂದು ವಾತಾವರಣವನ್ನು ಬಿಜೆಪಿ ಯಾಕಾಗಿ ತಯಾರಿಸಿ ಇಟ್ಟಿದೆ? ಅದರ ಬೆಂಬಲಿಗರು ಈ ಮಟ್ಟದಲ್ಲಿ ಮುಸ್ಲಿಮ್ ವಿರೋಧಿ ನೀತಿಯನ್ನು ಬೆಳೆಸಿಕೊಂಡಿರುವುದನ್ನು ಅದೇಕೆ ಪ್ರಶ್ನಿಸುತ್ತಿಲ್ಲ? ನಿಜವಾಗಿ, ಇತರ ಯಾವ ರಾಷ್ಟ್ರೀಯ ಪಕ್ಷಗಳಲ್ಲೂ ಇಂಥ ಕಟು ವಾತಾವರಣ ಇಲ್ಲ. ಅದರ ಬೆಂಬಲಿಗರು ಅಭ್ಯರ್ಥಿಯ ಧರ್ಮವನ್ನೇ ಮತದಾನಕ್ಕೆ ಪ್ರಥಮ ಷರತ್ತಾಗಿ ಮುಂದಿಟ್ಟದ್ದೂ ಇಲ್ಲ. ಆದರೆ ಈ ದೇಶದ ನೇತೃತ್ವವನ್ನು ವಹಿಸಿ ಕೊಳ್ಳುವುದಕ್ಕೆ ಉತ್ಸುಕವಾಗಿರುವ ಬಿಜೆಪಿಯು ಪ್ರಜಾತಂತ್ರಕ್ಕೆ ತೀರಾ ವಿರುದ್ಧವಾದ ಇಂಥದ್ದೊಂದು ಬೆಂಬಲಿಗ ವರ್ಗವನ್ನು ಪೋಷಿಸಿ ಬೆಳೆಸುತ್ತಿರುವುದೇಕೆ? ಉತ್ತರ ಪ್ರದೇಶದ ಮುಝಫ್ಫರ್ ನಗರದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದೇ ಡಾ| ಸಂಜೀವ್ ಬಲಿಯಾನ್. ಈತ ಮುಝಫ್ಫರ್ ನಗರ ಗಲಭೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪಿ. ಅಲ್ಲದೇ ಕೈರಾನಾ ಮತ್ತು ಬಿಜನೂರ್‍ಗಳಲ್ಲೂ ಮುಝಫ್ಫರ್ ನಗರದ ಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಗೇ ಟಿಕೆಟ್ ನೀಡಲಾಗಿದೆ. ಏನಿವೆಲ್ಲ? ಮುಸ್ಲಿಮರು ತನ್ನನ್ನು ಬೆಂಬಲಿಸಬೇಕೆಂದು ಬಿಜೆಪಿ ಬಯಸುತ್ತಿದೆಯಲ್ಲ, ಅದಕ್ಕೆ ಏನಿವೆ ಸಮರ್ಥನೆಗಳು?
   ದಲಿತರಿಗೆ ವಿೂಸಲಾತಿ ಒದಗಿಸುವ ಮಂಡಲ್ ವರದಿ ಜಾರಿಯ ವಿರುದ್ಧ 1980ರಲ್ಲಿ ಈ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಗೊಂಡದ್ದೇ  ಗುಜರಾತ್‍ನಲ್ಲಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು. ಆ ದಿನಗಳಲ್ಲಿ ಬಿಜೆಪಿಯು ದಲಿತರನ್ನು ಅನ್ಯರಂತೆ (Others) ಪರಿಗಣಿಸಿತ್ತು. ‘ವರ್‍ಶಿಪ್ಪಿಂಗ್ ಫಾಲ್ಸ್ ಗಾಡ್' ಎಂಬ ಕೃತಿಯಲ್ಲಿ ಬಿಜೆಪಿಯ ಅರುಣ್ ಶೌರಿಯವರು, ಅಂಬೇಡ್ಕರ್‍ರನ್ನು ಟೀಕಿಸಿದ್ದರು. ‘ದಲಿತರು ಹಿಂದೂ ಧರ್ಮವನ್ನು ಬಿಟ್ಟು ಹೊರ ಬರುವುದೇ ಅಸ್ಪೃಶ್ಯತೆಗೆ ಇರುವ ಮದ್ದು’ ಎಂಬ ಅಂಬೇಡ್ಕರ್‍ರ ಅಭಿಪ್ರಾಯದೊಂದಿಗೆ ಶೌರಿ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಆದರೆ, ದೆಹಲಿ ಗದ್ದುಗೆಯನ್ನು ವಶಪಡಿಸಿಕೊಳ್ಳಬೇಕಾದರೆ ತನ್ನ ‘ದಲಿತ ನೀತಿ'ಯನ್ನು ಬದಲಿಸಿಕೊಳ್ಳುವುದು ಅನಿವಾರ್ಯ ಎಂಬುದು ಬಿಜೆಪಿಗೆ ಕ್ರಮೇಣ ಮನವರಿಕೆ ಆಗತೊಡಗಿತು. ದಲಿತರು ಅತ್ಯಂತ ಹೆಚ್ಚಿರುವ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಒಟ್ಟು 120ರಷ್ಟು ಲೋಕಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸದ ಹೊರತು ದೆಹಲಿ ದಕ್ಕುವುದಿಲ್ಲ ಎಂಬ ಸತ್ಯವನ್ನು ಅದು ಕಂಡುಕೊಳ್ಳಲಾರಂಭಿಸಿತು. ಅದಕ್ಕಾಗಿ ಅಯೋಧ್ಯಾ ಚಳವಳಿಯನ್ನು ಅದು ಬಳಸಿಕೊಂಡಿತು. ಮಾತ್ರವಲ್ಲ, ದಲಿತರ (Others) ಜಾಗದಲ್ಲಿ ಅದು ಮುಸ್ಲಿಮರನ್ನು ತಂದಿರಿಸಿತು. ಇತರ ಹಿಂದುಳಿತ ವರ್ಗ(OBC)ದ ವಿೂಸಲಾತಿಯು ಹಿಂದೂಗಳಿಗೆ ಮಾತ್ರ ಸೀಮಿತವಾಗಬೇಕಿದ್ದು, ಅದರಲ್ಲಿ ಮುಸ್ಲಿಮರನ್ನು ಸೇರಿಸುವ ಕ್ರಮವನ್ನು ಖಂಡಿಸುವ ಪ್ರಯತ್ನಕ್ಕೆ ಕೈ ಹಾಕಿತು. ದಲಿತರ ವಿೂಸಲಾತಿ ಹಕ್ಕುಗಳನ್ನು ಮುಸ್ಲಿಮರು ಕಬಳಿಸುತ್ತಿದ್ದಾರೆಂಬ ಪುಕಾರು ಹಬ್ಬಿಸಿ, ದಲಿತ ಪ್ರೇಮದ ಹೊಸ ಮುಖವನ್ನು ಪ್ರದರ್ಶಿಸಿತು. ಅದಕ್ಕೆ ಪೂರಕವಾಗಿ ಕಲ್ಯಾಣ್ ಸಿಂಗ್, ಮೋದಿ, ಉಮಾ ಭಾರತಿ, ಬಂಗಾರು ಲಕ್ಷ್ಮಣ್.. ಮುಂತಾದ ಹಿಂದುಳಿದವರನ್ನು ತೋರಿಸಿ ದಲಿತ ವಿರೋಧಿ ಕಳಂಕವನ್ನು ತೊಳೆಯಲು ಯತ್ನಿಸಿತು. ಇದರ ಭಾಗವಾಗಿಯೇ ಮೋದಿಯವರು 2013 ಎಪ್ರಿಲ್‍ನಲ್ಲಿ ಕೇರಳದ ಶಿವಗಿರಿಯಲ್ಲಿರುವ ನಾರಾಯಣ ಗುರು ಮಂದಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು. ಅಸ್ಪøಶ್ಯತೆಯನ್ನು ಪ್ರಬಲವಾಗಿ ಖಂಡಿಸಿ ಒಂದು ಪರ್ಯಾಯ ಚಳವಳಿಯನ್ನೇ ಪ್ರಾರಂಭಿಸಿದ್ದ ನಾರಾಯಣ ಗುರು ಕಟ್ಟಿಸಿದ ಮಂದಿರಕ್ಕೆ ‘ಅಸ್ಪøಶ್ಯತೆ'ಯಲ್ಲಿ ಬಲವಾದ ನಂಬಿಕೆಯಿಟ್ಟಿರುವ ಪಕ್ಷವೊಂದರ ನಾಯಕ ಮುಖ್ಯ ಅತಿಥಿಯಾಗುತ್ತಾರೆಂದರೆ, ಅದು ಬಿಜೆಪಿಯ ಮುಖವಾಡದ ಬದುಕಿಗೆ ಹಿಡಿದ ಕನ್ನಡಿ. 2014 ಫೆಬ್ರವರಿಯಲ್ಲಿ ಮೋದಿ ಮತ್ತೆ ಕೇರಳಕ್ಕೆ ಬಂದಿದ್ದರು. ಮಾತ್ರವಲ್ಲ, ‘ಹೊಲೆಯ’ ಎಂಬ ಅತಿ ಹಿಂದುಳಿದ ಜಾತಿಯ ಸಭೆಯಲ್ಲಿ ಭಾಗವಹಿಸಿದ್ದರು. 80ರ ದಶಕದಲ್ಲಿ ವಿೂಸಲಾತಿ ವಿರೋಧಿ ಚಳವಳಿಯನ್ನು ಹಮ್ಮಿಕೊಂಡ ಬಿಜೆಪಿ, 2014ರಲ್ಲಿ ‘ಹೊಲೆಯರ' ಸಭೆಯಲ್ಲಿ ಭಾಗವಹಿಸುವಷ್ಟು ಉದಾರಿಯಾದದ್ದು ಅದರ ಸಮಯ ಸಾಧಕ ರಾಜಕೀಯಕ್ಕೆ ಅತ್ಯುತ್ತಮ ಉದಾಹರಣೆ. ಒಂದು ವೇಳೆ ಅದರ ರಾಜಕೀಯ ಮಹತ್ವಾಕಾಂಕ್ಷೆಯು ದಲಿತರನ್ನು ಹೊರಗಿಟ್ಟರೂ ಸಾಧಿತವಾಗುತ್ತಿದ್ದರೆ, ಇವತ್ತು ಹೊಲೆಯರ ಸಭೆಯಲ್ಲಿ ಭಾಗವಹಿಸುವುದಕ್ಕೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೋರ್ವ ಮುಂದಾಗುತ್ತಲೇ ಇರಲಿಲ್ಲ.
   2013 ಅಕ್ಟೋಬರ್ 13ರಂದು ಚೆನ್ನೈಯ ನಾನಿ ಎಂ. ಪಾಲ್ಖಿವಾಲರ ಸ್ಮರಣಾರ್ಥ ಏರ್ಪಡಿಸಲಾದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮೋದಿ ಭಾಗಿಯಾಗಿದ್ದರು. India and the World  (ಭಾರತ ಮತ್ತು ವಿಶ್ವ) ಎಂಬ ವಿಷಯದ ಮೇಲೆ ಮಾತಾಡುತ್ತಾ ಅವರು ಹೀಗೆ ಹೇಳಿದ್ದರು:
   ‘ನಾನೊಮ್ಮೆ ರಶ್ಯನ್ ಪ್ರವಾಸದಲ್ಲಿದ್ದೆ. ಆಗ ಅತಿಥಿಗಳಲ್ಲಿ ಟೀ  ಕೇಳಿದೆ. ಅವರಿಗೆ ಅರ್ಥವಾಗಲಿಲ್ಲ. ಆಗ ನಾನು ಚಾಯ್ ಎಂದು ಹೇಳಿದೆ. ತಕ್ಷಣ ಅವರು ಒದಗಿಸಿದರು. ನಮ್ಮ ಹಿರಿಯರು ಈ ಜಗತ್ತಿನೊಂದಿಗೆ ಇಟ್ಟುಕೊಂಡ ಸಂಬಂಧ ಅಂಥದ್ದಾಗಿತ್ತು..' ಎಂದಿದ್ದರು. ಚಾಯ್ ಎಂಬುದು ಈ ದೇಶದ ಸಾಂಸ್ಕøತಿಕ ಪದವಾಗಿದ್ದು ಅದನ್ನು ರಶ್ಯನ್ನರು ಎರವಲು ಪಡಕೊಂಡಿದ್ದಾರೆ ಎಂಬುದು ಮೋದಿಯ ನಿಲುವಾಗಿತ್ತು. ನಿಜವಾಗಿ ಚಾಯ್ ಎಂಬುದು ಭಾರತೀಯ ಪದವಲ್ಲ, ಮಂಡೇರಿಯನ್ ಪದ. Tea ಎಂಬುದು ಕೂಡಾ ಭಾರತೀಯವಲ್ಲ, ಚೀನಾದ್ದು. ಹೀಗೆ ಇತಿಹಾಸವನ್ನು ಹಲವು ಬಾರಿ ತಪ್ಪಾಗಿ ಉಲ್ಲೇಖಿಸಿರುವ ಮೋದಿಯವರಲ್ಲಿ ಉದ್ದಕ್ಕೂ ಕಾಣಿಸುವುದು ಬರೇ ಆವೇಶ, ಆರ್ಭಟ ಮಾತ್ರ. ಕಳೆದ ಫೆ.  22ರಂದು ಅಸ್ಸಾಮ್‍ನ ಸಿಲ್‍ಚೂರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ್ದ ಮೋದಿ, ‘ಬಾಂಗ್ಲಾದಿಂದ ಬರುವ ಹಿಂದೂ ವಲಸಿಗರನ್ನು ರಕ್ಷಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ' ಎಂದಿದ್ದರಲ್ಲದೇ, ಬಾಂಗ್ಲಾದಿಂದ ಬರುವ ‘ಅನ್ಯ ವಲಸಿಗರು' (ಮುಸ್ಲಿಮರು) ಕಾಂಗ್ರೆಸ್‍ನ ಓಟ್‍ಬ್ಯಾಂಕ್ ಷಡ್ಯಂತ್ರದಂತೆ ಬರುತ್ತಿದ್ದಾರೆ ಎಂದಿದ್ದರು (ದಿ ಹಿಂದೂ 2014 ಮಾರ್ಚ್ 19). ಮೋದಿ ಹೋದಲ್ಲೆಲ್ಲ ಮುಸ್ಲಿಮರ ವಿರುದ್ಧ ಒಂದು ಬಗೆಯ ಅಸಹನೆಯನ್ನು ಬಿತ್ತುತ್ತಲೇ ಇದ್ದಾರೆ. ಮುಸ್ಲಿಮರನ್ನು ಅನ್ಯರಂತೆ ಬಿಂಬಿಸುವುದು, ಕುಟುಕುವುದು ಅವರ ಶೈಲಿಯಾಗಿ ಬಿಟ್ಟಿದೆ. ಕಮ್ಯುನಲಿಸಮ್ ಮತ್ತು ಕ್ಯಾಪಿಟಲಿಸಮ್ ಅನ್ನು ಅತ್ಯಂತ ಜಾಣತನದಿಂದ ಮಿಶ್ರ ಮಾಡುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಪಶ್ಚಿಮ ಬಂಗಾಲದಿಂದ ಟಾಟಾ ಕಂಪೆನಿಯ ನ್ಯಾನೋ ಕಾರು ತಯಾರಿಕಾ ಘಟಕವು ಗುಜರಾತ್‍ಗೆ ವರ್ಗಾವಣೆಯಾದಾಗ, ಅವರು ಅದನ್ನು ಶ್ರೀ ಕೃಷ್ಣನಿಗೆ ಹೋಲಿಸಿದ್ದರು. ಶ್ರೀ ಕೃಷ್ಣ ಹುಟ್ಟಿದ್ದು ಉತ್ತರ ಪ್ರದೇಶದ ಮಥುರಾದಲ್ಲಾದರೂ ಬೆಳೆದದ್ದು ಗುಜರಾತ್‍ನ ದ್ವಾರಕದಲ್ಲಿ, ಹಾಗೆಯೇ ನ್ಯಾನೋ ಕೂಡಾ ಎಂದಿದ್ದರು. ಒಂದು ಕಡೆ ಸ್ವದೇಶಿ ರಾಷ್ಟ್ರೀಯತೆಯ ಬಗ್ಗೆ ಭಾವಾವೇಶದ ಮಾತನ್ನಾಡುತ್ತಲೇ ಇನ್ನೊಂದು ಕಡೆ ರಾಜೀವ್ ದೀಕ್ಷಿತ್‍ರ ಸ್ವದೇಶಿ ಜಾಗರಣ್ ಮಂಚ್ ಅನ್ನು ಗುಜರಾತ್‍ನಿಂದಲೇ ಓಡಿಸಿದ್ದರು.
   ಬಿಜೆಪಿ ಇವತ್ತು ಯಾವ ಮುಖವನ್ನು ಪ್ರದರ್ಶಿಸುತ್ತಿದೆಯೋ ಅದೇ ಮುಖವನ್ನು ಮೂರ್ನಾಲ್ಕು ದಶಕಗಳ ಹಿಂದೆ ಅದು ತೀವ್ರವಾಗಿ ದ್ವೇಷಿಸಿತ್ತು. ದಲಿತರನ್ನು ಅನ್ಯರ ಪಟ್ಟಿಯಲ್ಲಿಟ್ಟು ಕಂಡದ್ದು ಅದೇ ಪಕ್ಷ.  ಅಂಬೇಡ್ಕರ್‍ರನ್ನು ಅಸಹನೆಯಿಂದ ನೋಡಿದ್ದೂ ಇದೇ ಪಕ್ಷ.. ದಲಿತರಿಗೆ ವಿೂಸಲಾತಿಯನ್ನು ವಿರೋಧಿಸಿದ್ದೂ ಇದೇ ಪಕ್ಷ.  ಆದರೆ ಇದೀಗ ಅದು ಹೊಲೆಯ, ಮಾದಿಗ, ಗಾಣಿಗ.. ಮುಂತಾದ ಎಲ್ಲರನ್ನೂ ತನ್ನವರೆಂದು ಹೇಳುತ್ತಾ ತಿರುಗಾಡುತ್ತಿದೆ. ಮುಸ್ಲಿಮರಲ್ಲಿ ಕ್ಷಮೆ ಯಾಚಿಸುತ್ತಿದೆ. ಆದರೆ ದಲಿತರಿಗೆ ವಿೂಸಲಾತಿ ಇರುವ ಕ್ಷೇತ್ರಗಳನ್ನು ಹೊರತು ಪಡಿಸಿ ಅದು ಇತರ ಕಡೆ ಈ ಹೊಲೆಯ, ಮಾದಿಗ, ಗಾಣಿಗರಿಗೆ ಟಿಕೆಟ್ ಕೊಡುತ್ತಿಲ್ಲ. ಅವರಿಗೆ ಗೆಲ್ಲುವ ಸಾಮರ್ಥ್ಯ  ಇಲ್ಲ ಎಂಬುದನ್ನು ಅದು ಈಗಾಗಲೇ ತೀರ್ಮಾನಿಸಿ ಬಿಟ್ಟಿದೆ. ಅದರ ಮುಸ್ಲಿಮ್ ಪ್ರೀತಿಯೂ ಇದೇ ರೀತಿ. ಅವರಿಗೂ ಗೆಲ್ಲುವ ಸಾಮರ್ಥ್ಯ  ಇಲ್ಲ. ಅಷ್ಟಕ್ಕೂ, ಈ ಗೆಲ್ಲುವ ಸಾಮರ್ಥ್ಯದ  ಮಾನದಂಡವಾದರೂ ಏನು? ಗೆಲ್ಲುವುದಕ್ಕೆ ಓರ್ವ ಅಭ್ಯರ್ಥಿಯಲ್ಲಿ ಏನೆಲ್ಲ ಅರ್ಹತೆಗಳಿರಬೇಕು? ಬಿಜೆಪಿಗೆ ಮತ ಹಾಕುವವರು ಗಾಣಿಗ, ಹೊಲೆಯ, ಮುಸ್ಲಿಮ್ ಎಂಬುದನ್ನೆಲ್ಲಾ ಅರ್ಹತೆಯ ಪಟ್ಟಿಯಲ್ಲಿಟ್ಟು ಪರೀಕ್ಷಿಸುತ್ತಾರೆಯೇ? ಆ ಪರೀಕ್ಷೆಯಲ್ಲಿ ದಲಿತರು ಮತ್ತು ಮುಸ್ಲಿಮರಾಗಿ ಗುರುತಿಸಿಕೊಳ್ಳುವುದು ಅವರ ತಿರಸ್ಕಾರಕ್ಕೆ ಕಾರಣವಾಗುತ್ತದೆಯೇ? ಹಾಗಾದರೆ ಆ ಮತದಾರರ ಮನಸ್ಥಿತಿಯಾದರೂ ಯಾವ ರೂಪದ್ದು? ಅಂಥದ್ದೊಂದು ಬೃಹತ್ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಪಕ್ಷವೊಂದು ಈ ಗಾಣಿಗ, ಹೊಲೆಯ, ಮಾದಿಗರ.. ಕಲ್ಯಾಣಕ್ಕಾಗಿ ಕೆಲಸ ಮಾಡಬಹುದೇ? ಅದಕ್ಕೆ ಈ ಬೆಂಬಲಿಗರ ಗುಂಪು ಅವಕಾಶ ಕೊಡಬಹುದೇ?

Wednesday, March 19, 2014

ಅವರನ್ನು ಭ್ರಷ್ಟರೆನ್ನುವುದಕ್ಕಾಗಿ ನಾವೇ ಭ್ರಷ್ಟರಾಗುವುದು ಯಾವ ಬಗೆಯ ಜರ್ನಲಿಸಂ?

   ‘ಕುಟುಕು ಪತ್ರಿಕೋದ್ಯಮ’ (Sting Journalism) ಮತ್ತು ‘ಬಲೆಗೆ ಸಿಲುಕಿಸುವ ಕಾರ್ಯಾಚರಣೆ’ (Entrapment Operation) ಇವೆರಡೂ ಒಂದೇ ಅಲ್ಲ. ಇವೆರಡರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ‘ಕಾವಲು ನಾಯಿ’ಯೊಂದು (Watch dog) ಮಾಲಿಕನ ಕಣ್ಣು ತಪ್ಪಿಸಿ ಮನೆಯೊಳಗೆ ಹೊಕ್ಕು ಒಳಗೆ ಕ್ಯಾಮರಾ ಇಡುವುದು ಬೇರೆ, ಮಾಲಿಕನಿಗೆ ಗುರುತೇ ಸಿಗದಷ್ಟು ಅಚ್ಚು ಕಟ್ಟಾಗಿ ವೇಷ ಬದಲಿಸಿ ಕಾವಲು ನಾಯಿಯೊಂದು ಮಾಲಿಕನನ್ನು ಭೇಟಿಯಾಗುವುದು ಮತ್ತು ಆತನಿಗೆ ಆಮಿಷ ಒಡ್ಡಿ ಬಲೆಗೆ ಸಿಲುಕಿಸುವುದು ಬೇರೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು (Sting Operation) ಯಾವ ಬಗೆಯವು? ಅವು ನಿಜಕ್ಕೂ, ನಾವೆಲ್ಲ ಸಮರ್ಥಿಸುವಷ್ಟು ನೈತಿಕವಾಗಿವೆಯೇ? ಖಾಸಗಿತನ ಎಂಬುದು ಪ್ರತಿಯೋರ್ವರ ಸಾಂವಿಧಾನಿಕ ಹಕ್ಕು. ಬೇಕಾಬಿಟ್ಟಿಯಾಗಿ ಅದರೊಳಕ್ಕೆ ಇಣುಕುವುದು, ಕ್ಯಾಮರ ಇಡುವುದು ಸಂವಿಧಾನ ವಿರೋಧಿ. ಒಂದು ವೇಳೆ ಇಣುಕುವುದು ಅನಿವಾರ್ಯ ಎಂದಾದರೆ ಆ ಅನಿವಾರ್ಯತೆಯನ್ನು ಸಮಾಜದ ಮುಂದೆ ಸ್ಪಷ್ಟಪಡಿಸಬೇಕಾಗುತ್ತದೆ. ಮಾತ್ರವಲ್ಲ, ಸಮಾಜಕ್ಕೂ ಅದು ಅನಿವಾರ್ಯ ಎಂದು ಅನಿಸುವಷ್ಟು ಆ ಸ್ಪಷ್ಟನೆ ಗಂಭೀರವಾಗಿರಬೇಕಾಗುತ್ತದೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು ಈ ಮಟ್ಟದಲ್ಲಿ ಇವೆಯೇ? ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಇರುವ ಇಂದಿನ ಮಾಧ್ಯಮ ರಂಗದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಗುರಿ ಮತ್ತು ಸವಾಲುಗಳು ಇವೆ. ನೂರಾರು ಮಾಲಿಕರು, ಸಾವಿರಾರು ಪತ್ರಕರ್ತರು ಈ ರಂಗವನ್ನು ಇವತ್ತು ಆಳುತ್ತಿದ್ದಾರೆ. ಓರ್ವ ರಾಜಕಾರಣಿಗೆ ತನ್ನ ಕ್ಷೇತ್ರದ ಮತದಾರರನ್ನು ಸೆಳೆಯುವುದು ಮತ್ತು ಅವರು ಸದಾ ತನ್ನ ಬೆಂಬಲಿಗರಾಗಿರುವಂತೆ ನೋಡಿಕೊಳ್ಳುವುದು ಎಷ್ಟು ಅಗತ್ಯವೋ ಅಂಥದ್ದೇ ಅಗತ್ಯ ಇವತ್ತು ಚಾನೆಲ್‍ಗಳಿಗೂ ಇವೆ. ವೀಕ್ಷಕರನ್ನು ಹಿಡಿದಿಡುವುದಕ್ಕಾಗಿ ಅವು ವಿವಿಧ ಚಾನೆಲ್‍ಗಳೊಂದಿಗೆ ಹೋರಾಡಬೇಕಾಗುತ್ತದೆ. ರಾಜಕಾರಣಿಯೋರ್ವ ತನ್ನ ಪ್ರತಿಸ್ಪರ್ಧಿಯ ಪ್ರಭಾವವನ್ನು ಕುಗ್ಗಿಸುವುದಕ್ಕಾಗಿ ಮಾಡಬಹುದಾದ ತಂತ್ರಗಳಂತೆಯೇ ಚಾನೆಲ್‍ಗಳೂ ತಂತ್ರಗಳನ್ನು ಹೆಣೆಯಬೇಕಾಗುತ್ತದೆ. ಆಗಾಗ ಬ್ರೇಕಿಂಗ್ ನ್ಯೂಸ್‍ಗಳು, ತನಿಖಾ ವರದಿಗಳು, ಮನರಂಜನೆಗಳನ್ನು ಇತರ ಚಾನೆಲ್‍ಗಳಿಗಿಂತ ಭಿನ್ನ ರೂಪದಲ್ಲಿ ಒದಗಿಸುತ್ತಿರಬೇಕಾಗುತ್ತದೆ. ಇಂಥ ಒತ್ತಡಗಳು ಟಿ.ವಿ. ಚಾನೆಲ್‍ಗಳ ಹೆಜ್ಜೆ ತಪ್ಪಿಸಲಾರವೇ? ಸಾರ್ವಜನಿಕ ಹಿತಾಸಕ್ತಿಗಾಗಿ ನಡೆಯಬೇಕಾದ ತನಿಖಾ ವರದಿಯೊಂದು ತಮ್ಮ TRP ಹೆಚ್ಚಿಸಿ ಕೊಳ್ಳುವುದಕ್ಕಾಗಿ ದುರ್ಬಳಕೆಗೆ ಈಡಾಗಲಾರದೇ?
   2007ರಲ್ಲಿ, ದೆಹಲಿಯ ಶಾಲಾ ಶಿಕ್ಷಕಿಯ ಮೇಲೆ ನಡೆಸಲಾದ ಕುಟುಕು ಕಾರ್ಯಾಚರಣೆಯನ್ನು ಲೈವ್ ಇಂಡಿಯಾ ಟಿ.ವಿ. ಚಾನೆಲ್ ಪ್ರಸಾರ ಮಾಡಿತ್ತು. ಶಾಲೆಯ ವಿದ್ಯಾರ್ಥಿಗಳನ್ನು ಈಕೆ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದಾಳೆಂದು ಅದು ವಾದಿಸಿತು. ಚಾನೆಲ್‍ನಲ್ಲಿ ಈ ಕುಟುಕು ಕಾರ್ಯಾಚರಣೆ ಪ್ರಸಾರವಾದದ್ದೇ ತಡ, ಜನ ಕುಪಿತರಾದರು. ಶಿಕ್ಷಕಿಯ ಮೇಲೆ ದಾಳಿ ನಡೆಸಿದರು. ಆ ಪರಿಸರದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಆ ಶಿಕ್ಷಕಿ ಮಾನಗೇಡಿಯಾಗಿ, ಕ್ರೂರಿಯಾಗಿ ಬಿಂಬಿತಗೊಂಡರು. ಆದರೆ ಆ ಬಳಿಕ ಇಡೀ ಕಾರ್ಯಾಚರಣೆಯೇ ನಕಲಿ ಎಂದು ಸಾಬೀತಾಯಿತು. ಪತ್ರಕರ್ತರಿಬ್ಬರನ್ನು ಬಂಧಿಸಲಾಯಿತು. ಆದರೆ, ಆ ದಿನಗಳಲ್ಲಿ ಆ ಶಿಕ್ಷಕಿ ಎದುರಿಸಿರಬಹುದಾದ ಒತ್ತಡವನ್ನೊಮ್ಮೆ ಊಹಿಸಿ. ಹಾಗಂತ, ಒಂದು ಕುಟುಕು ಕಾರ್ಯಾಚರಣೆಯನ್ನು ಒಂದೇ ದಿನದಲ್ಲಿ ಒಂದೇ ಬಾರಿಗೆ ನಡೆಸುವುದಕ್ಕೆ ಸಾಧ್ಯವಿಲ್ಲವಲ್ಲ. ಅದಕ್ಕೆ ಒಂದಕ್ಕಿಂತ ಹೆಚ್ಚು ದಿನಗಳು ಬೇಕಾಗಬಹುದು. ಆ ಸಂದರ್ಭದಲ್ಲಿ ಕುಟುಕು ತಂಡವು ವಿವಿಧ ಬಗೆಯ ಮಾತುಕತೆ, ಒಪ್ಪಂದ, ಕೊಡುಕೊಳ್ಳುವಿಕೆಗಳನ್ನು ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯೊಂದಿಗೆ ನಡೆಸಿರಬಹುದು. ತಂಡವು ಅಸಂಖ್ಯ ಸುಳ್ಳುಗಳನ್ನು ಹೇಳಿರಬಹುದು. ಆದರೆ ಆ ಕಾರ್ಯಾಚರಣೆಯನ್ನು ಟಿ.ವಿ. ಚಾನೆಲ್ ಸಂಪೂರ್ಣವಾಗಿ ಇದ್ದ ಹಾಗೇ ಪ್ರಸಾರ ಮಾಡುವುದಿಲ್ಲ. ಅದನ್ನು ಸಂಕ್ಷೇಪಿಸುತ್ತದೆ. ತನಗೆ ಬೇಕಾದ್ದನ್ನು ಮಾತ್ರ ಉಳಿಸಿ ಉಳಿದುದನ್ನು ಕಿತ್ತು ಹಾಕಿ ಪ್ರಸಾರ ಮಾಡುತ್ತದೆ. ವೀಕ್ಷಕರಿಗೆ ಗೊತ್ತಿರುವುದು ಚಾನೆಲ್ ಏನನ್ನು ಪ್ರಸಾರ ಮಾಡಿದೆಯೋ ಅದು ಮಾತ್ರ. ಇದು ಹೇಗೆ ಸಮರ್ಥನೀಯ? ಇಲ್ಲಿ ಚಾನೆಲ್ ಅಳವಡಿಸಿಕೊಂಡಿರುವ ಪಾರದರ್ಶಕತೆ ಯಾವುದು? ಕುಟುಕು ಕಾರ್ಯಾಚರಣೆಗೆ ಒಳಗಾದ ವ್ಯಕ್ತಿಯನ್ನು ಸುಳ್ಳುಗಾರ ಮತ್ತು ಚಾನೆಲನ್ನು ಪ್ರಾಮಾಣಿಕ ಎಂದು ವಿಭಜಿಸುವುದಕ್ಕೆ ಇರುವ ಮಾನದಂಡ ಏನು? ತನ್ನ ಹಿತಾಸಕ್ತಿಗಾಗಿಯೇ ಒಂದು ಚಾನೆಲ್ ಕುಟುಕು ಕಾರ್ಯಾಚರಣೆಯನ್ನು ಆಯೋಜಿಸಬಾರದೆಂದಿದೆಯೇ? ಕಾರ್ಯಾಚರಣೆ ವಿಫಲಗೊಂಡರೂ ತನಗೆ ಬೇಕಾದಂತೆ ಇಡೀ ಕಾರ್ಯಾಚರಣೆಯನ್ನು ತಿರುಚಿ, ಸಂಕ್ಷೇಪಿಸಿ ಪ್ರಸಾರ ಮಾಡುವುದಕ್ಕೂ ಅವಕಾಶ ಇದೆಯಲ್ಲವೇ? ಇಂಥ ತಪ್ಪುಗಳು ನಡೆಯಲ್ಲ ಎಂದು ವೀಕ್ಷಕರನ್ನು ನಂಬಿಸುವುದಕ್ಕೆ ಮಾಧ್ಯಮಗಳು ಏನು ಕ್ರಮಗಳನ್ನು ಕೈಗೊಂಡಿವೆ? ಅಂದಹಾಗೆ, ಚಾನೆಲ್‍ಗಳನ್ನು ನಂಬಬೇಕು ಮತ್ತು ಅದರ ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯನ್ನು ನಂಬಬಾರದು ಎಂದು ವಾದಿಸುವುದಕ್ಕೆ ಬರೇ ಅದು ಪ್ರಸಾರ ಮಾಡುವ ದೃಶ್ಯಗಳನ್ನಷ್ಟೇ ಸಮರ್ಥನೆಯಾಗಿ ಬಳಸಿಕೊಳ್ಳಲು ಇಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಆದ್ದರಿಂದಲೇ ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಕುಟುಕು ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು. 2013 ಡಿಸೆಂಬರ್ 16ರಂದು ಪ್ರಕಟವಾದ ಲೇಖನದಲ್ಲಿ (The Dilemmas of Sting Journalism) ಅದು ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಸ್ಟಿಂಗ್ ಅಪರೇಶನ್‍ಗಳ ಸತ್ಯಾಸತ್ಯತೆಯನ್ನು ನಂಬಲು ಸಾಧ್ಯವಿಲ್ಲವಾದ್ದರಿಂದ ತಾವು ಅದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಅದು ಹೇಳಿಕೊಂಡಿತ್ತಲ್ಲದೇ ಆಮಿಷವೊಡ್ಡಿ ಬಲೆಗೆ ಸಿಲುಕಿಸುವ ಕಾರ್ಯಾಚರಣೆಗೆ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
   ನಿಜವಾಗಿ, 1973ರಲ್ಲಿ ಅಮೆರಿಕದಲ್ಲಿ ತೆರೆಕಂಡ The Sting ಎಂಬ ಸಿನಿಮಾದ ಸುಧಾರಿತ ರೂಪವೇ ಸ್ಟಿಂಗ್ ಆಪರೇಶನ್. ಆ ಸಿನಿಮದಲ್ಲಿ ರಾಬರ್ಟ್ ರೆಡ್‍ಫೋರ್ಡ್ ಮತ್ತು ನ್ಯೂಮನ್‍ರು ನಿರ್ವಹಿಸಿದ ಅದೇ ಪಾತ್ರವನ್ನು ಇವತ್ತು ಪತ್ರಕರ್ತರು ಮಾಡುತ್ತಿದ್ದಾರೆ. ಅಮೇರಿಕದಲ್ಲಿ ಈ ಕುಟುಕು ಕಾರ್ಯಾಚರಣೆಯ ದುರ್ಬಳಕೆ ಪ್ರಾರಂಭವಾದಂತೆಯೇ ಅದು ಹಲವು ಕಾನೂನುಗಳನ್ನು ರೂಪಿಸಿತು. ಕಾನೂನು ಜಾರಿ ಮಾಡುವ ಸಂಸ್ಥೆಗಳು ಮತ್ತು ಪೊಲೀಸ್ ಪರವಾನಿಗೆ ಇರುವ ಗೂಢಚರರಿಗೆ ಮಾತ್ರ ಅದು ಸ್ಟಿಂಗ್ ಆಪರೇಶನ್ ನಡೆಸುವುದಕ್ಕೆ ಅನುಮತಿ ನೀಡಿತು. ಪತ್ರಕರ್ತರಿಗೆ ಅವಕಾಶವನ್ನು ನಿರಾಕರಿಸಲಾಯಿತು. ಸ್ವೀಡನ್ ಅಂತೂ ಕುಟುಕು ಕಾರ್ಯಾಚರಣೆಯನ್ನೇ ನಿಷೇಧಿಸಿತು. ಅಷ್ಟಕ್ಕೂ, ಮಾಧ್ಯಮಗಳಿಗೆ ನೀತಿ ಸಂಹಿತೆ (Ethics) ಎಂಬುದು ಇರಬೇಡವೇ? ಮಾಧ್ಯಮ ರಂಗವು ಈ ಎಥಿಕ್ಸ್ ಅನ್ನು ಪಾಲಿಸಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂಸ್ಥೆ ಯಾವುದು? 2001ರಲ್ಲಿ ಆಪರೇಶನ್ ವೆಸ್ಟ್ ಎಂಡ್ ಎಂಬ ಹೆಸರಿನಲ್ಲಿ ಟೆಹಲ್ಕಾವು ಕುಟುಕು ಕಾರ್ಯಾಚರಣೆ ನಡೆಸಿದಾಗ ಈ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಅದು ತನ್ನ ಕಾರ್ಯಾಚರಣೆಯ ಭಾಗವಾಗಿ ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವೇಶ್ಯೆಯರನ್ನೂ ಮದ್ಯವನ್ನೂ ಒದಗಿಸಿತ್ತು. ಆ ಬಳಿಕ ಮುಂಬೈ ಪ್ರೆಸ್ ಕ್ಲಬ್‍ನಲ್ಲಿ ಅದು ಪತ್ರಿಕಾಗೋಷ್ಠಿಯನ್ನು ನಡೆಸಿ ತನ್ನ ಕ್ರಮವನ್ನು ಸಮರ್ಥಿಸಿಯೂ ಕೊಂಡಿತ್ತು. ಆದರೆ, ಟೆಹಲ್ಕಾದ ಕುಟುಕು ಕಾರ್ಯಾಚರಣೆಯು ಎತ್ತಿರುವ ನೈತಿಕ ಪ್ರಶ್ನೆ ಈಗಲೂ ಜೀವಂತವಾಗಿಯೇ ಇದೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕೆ ಮಾಧ್ಯಮರಂಗ ಆ ಮಟ್ಟಕ್ಕೂ ಇಳಿಯ ಬೇಕೇ? ಸಮಾಜವು ನೈತಿಕತೆಯನ್ನು ಬಯಸುವುದು ಬರೇ ರಾಜಕಾರಣಿಗಳಿಂದ ಮಾತ್ರ ಅಲ್ಲವಲ್ಲ, ಪತ್ರಿಕಾ ರಂಗದಲ್ಲೂ ಅದು ಇರಬೇಕಲ್ಲವೇ? ವೇಶ್ಯೆಯರನ್ನು ಒದಗಿಸುವ ಮನಸ್ಥಿತಿ ಯಾವ ಬಗೆಯದು? ಓರ್ವರ ಭ್ರಷ್ಟತನವನ್ನು ಬಯಲಿಗೆಳೆಯುವುದಕ್ಕೆ ಅಂಥದ್ದನ್ನೆಲ್ಲ ಒದಗಿಸಲು ಒಂದು ಮಾಧ್ಯಮ ಸಂಸ್ಥೆ ಸಿದ್ಧವಾಗುತ್ತದೆಂದರೆ, ಆ ಸಂಸ್ಥೆಯನ್ನು ಎಷ್ಟರ ಮಟ್ಟಿಗೆ ನಂಬಬಹುದು? ಇದೊಂದೇ ಅಲ್ಲ, ಇಲ್ಲಿ ಇನ್ನೊಂದು ಅಚ್ಚರಿಯೂ ಇದೆ. ಭಾರತದಲ್ಲಿ ರಾಜಕಾರಣಿಗಳು ಮಾತ್ರವೇ ಸ್ಟಿಂಗ್ ಆಪರೇಶನ್‍ಗೆ ಗುರಿಯಾಗುತ್ತಿರುವುದೇಕೆ? ಭ್ರಷ್ಟಾಚಾರವು ಕೇವಲ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವೇ? ಉದಾರೀಕರಣಕ್ಕೆ ಈ ದೇಶವು ತೆರೆದುಕೊಂಡ ಬಳಿಕ ಒಟ್ಟು ವಾತಾವರಣವೇ ಬದಲಾಗಿ ಬಿಟ್ಟಿದೆ. ಹೆಸರಿಗೆ ಪ್ರಧಾನಿ, ಹಣಕಾಸು ಸಚಿವ, ರಕ್ಷಣಾ ಸಚಿವ.. ಎಂಬೆಲ್ಲಾ ವಿಂಗಡಣೆಗಳಿದ್ದರೂ ಅವೆಲ್ಲವನ್ನೂ ನೋಡಿಕೊಳ್ಳುವುದು ಮತ್ತು ನಿರ್ವಹಿಸುವುದು ಕಾರ್ಪೋರೇಟ್ ದಣಿಗಳು ಎಂಬ ಮಾತುಗಳು ಎಲ್ಲೆಡೆಯೂ ಹರಿದಾಡುತ್ತಿವೆ. ಅಂಬಾನಿ, ಟಾಟಾ, ಅದಾನಿ, ಐಟಿ ಕಂಪೆನಿಗಳಿಗೆ ಸರಕಾರದ ಮೇಲೆ ಹಿಡಿತವಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕುಟುಕು ಕಾರ್ಯಾಚರಣೆ ನಡೆಸುವ ಮಾಧ್ಯಮ ಸಂಸ್ಥೆಗಳು ಈ ಮಂದಿಯ ಕಚೇರಿಯೊಳಗೆ ಈ ವರೆಗೂ ಕ್ಯಾಮರಾ ಇಟ್ಟಿಲ್ಲವಲ್ಲ, ಯಾಕೆ?
   ನಿಜವಾಗಿ, ಯಾರದೋ ಖಾಸಗಿ ಬದುಕಿಗೆ ಕ್ಯಾಮರಾ ಇಡುವುದು ಸುಲಭ. ಮದ್ಯವನ್ನೋ, ಹೆಣ್ಣನ್ನೋ ಅಥವಾ ಇನ್ನೇನನ್ನೋ ಕೊಟ್ಟು ಓರ್ವರನ್ನು ಸಿಲುಕಿಸುವುದು ಇಂದಿನ ದಿನಗಳಲ್ಲಿ ಭಾರೀ ಕಷ್ಟದ ಸಂಗತಿ ಅಲ್ಲ. ಆದರೆ, ಇದು ಸೃಷ್ಟಿ ಮಾಡುವ ನೈತಿಕ ಪ್ರಶ್ನೆ ಬಹಳ ಗಂಭೀರವಾದುದು. ಒಂದು ತಪ್ಪನ್ನು ಬಹಿರಂಗ ಪಡಿಸುವುದಕ್ಕಾಗಿ ತಪ್ಪಾದ ಮಾರ್ಗವನ್ನು ಅವಲಂಭಿಸುವುದು ಸಮರ್ಥನೀಯವೇ? ಹಾಗಂತ, ಮಾಧ್ಯಮ ಸಂಸ್ಥೆಗಳು ಸಾರ್ವಜನಿಕ ಸೊತ್ತೇನೂ ಅಲ್ಲವಲ್ಲ. ಅದರ ಆಡಳಿತ ಮಂಡಳಿ, ಪತ್ರಕರ್ತರು ಮತ್ತು ಇತರರು ಜನರಿಂದ ಓಟು ಪಡೆದು ಆಯ್ಕೆಯಾದವರೂ ಅಲ್ಲ. ಅಲ್ಲಿ ಎಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿದೆ ಎಂಬುದು ಜನರಿಗೆ ಗೊತ್ತಾಗುವುದೂ ಇಲ್ಲ. ಹೀಗಿರುವಾಗ, ಮಾಧ್ಯಮ ಸಂಸ್ಥೆಯೊಂದು ತನಿಖಾ ವರದಿಯನ್ನೋ, ಸವಿೂಕ್ಷೆಯನ್ನೋ ಅಥವಾ ಸ್ಟಿಂಗ್ ಅಪರೇಶನ್ ಅನ್ನೋ ಪ್ರಸಾರ ಮಾಡಿದ ಕೂಡಲೇ ಅದನ್ನು ನಾವು ನಂಬಲೇ ಬೇಕಾದ ಅಗತ್ಯ ಏನಿದೆ? ಒಂದು ವೇಳೆ, ಜನರ ವಿಶ್ವಾಸಕ್ಕೆ ಪಾತ್ರವಾದ ತಜ್ಞರ ತಂಡದ ತಪಾಸಣೆಯ ಬಳಿಕವೇ ಮಾಧ್ಯಮ ಸಂಸ್ಥೆಯೊಂದು ತನ್ನ ಪ್ರತಿ ಕಾರ್ಯಾಚರಣೆಯನ್ನೂ ಪ್ರಸಾರ ಮಾಡುವುದಾದರೆ ಅದು ಬೇರೆ ವಿಷಯ. ಆದರೆ ಇಂಥ ಪಾರದರ್ಶಕತೆಯನ್ನು ಇವತ್ತು ಯಾವ ಸಂಸ್ಥೆ ಅಳವಡಿಸಿಕೊಂಡಿದೆ? ಮಾಧ್ಯಮ ರಂಗದಲ್ಲಿರುವ ಪ್ರಾಮಾಣಿಕ ಸಂಸ್ಥೆಗಳನ್ನು ಗೌರವಿಸುತ್ತಲೇ ಈ ಅನುಮಾನವನ್ನು ವ್ಯಕ್ತಪಡಿಸಬೇಕಾಗಿದೆ.
   ಕಳೆದ ವಾರ T V 9 ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಡುವೆ ಸ್ಟಿಂಗ್ ಅಪರೇಶನ್‍ನ ಕುರಿತಂತೆ ನಡೆದಿರುವ ವಿವಾದವು ಇಂಥದ್ದೊಂದು ಬರಹಕ್ಕೆ ಪ್ರೇರೇಪಿಸಿತು.