Monday, April 11, 2022

2016ರ ಚಿಪ್ಪು, 2021ರ ಬ್ರೋಕರ್





1. 2000 ನೋಟಿನಲ್ಲಿ ಚಿಪ್ಪು
2. ಬ್ರೋಕರ್

1990ರಲ್ಲಿ ಈ ದೇಶ ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ, ಅದರ ಸಮರ್ಥಕರು ಅಭಿವೃದ್ಧಿಯ ಮರೆಯಲ್ಲಿ ಕೆಲವು ಪದ ಪುಂಜಗಳ ನ್ನು ಠಂಕಿಸಿ ಬಿಡುಗಡೆಗೊಳಿಸತೊಡಗಿದರು. ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ ಉದಾರೀಕರಣದ ಹವಾ ಬಹಳ ದೊಡ್ಡದು.

1960ರಲ್ಲಿ ಭಾರತೀಯ ಕೃಷಿ ಕ್ಷೇತ್ರ ಬಹುದೊಡ್ಡ ತಿರುವನ್ನು ಪಡೆದುಕೊಂಡಿತು. ಆವರೆಗೆ ಇದ್ದ ಸಾಂಪ್ರದಾಯಿಕ ಕೃಷಿ ಪದ್ಧತಿ ಯನ್ನು  ಭಿನ್ನ ದಾರಿಯಲ್ಲಿ ಕೊಂಡೊಯ್ದ ಶ್ರೇಯ 1960 ದಶಕಗಳಿಗೆ ಸಲ್ಲುತ್ತದೆ. ಆವರೆಗೆ ಕೃಷಿ ಕ್ಷೇತ್ರಕ್ಕೆ ಸರ್ಕಾರಿ ಬೆಂಬಲವು ಒಂದು ಹಂತದ  ವರೆಗೆ ಮಾತ್ರ ಇತ್ತು ಮತ್ತು ಒಂದು ವ್ಯವಸ್ಥಿತ ರೂಪದಲ್ಲಿ ಅದಿರಲಿಲ್ಲ. ಆದರೆ 1960ರ ಬಳಿಕದ ಕೃಷಿ ವಲ ಯವು ಹಾಗಲ್ಲ. ಬೆಳೆಗೆ  ಬೆಂಬಲ ಬೆಲೆ, ಸಬ್ಸಿಡಿ, ಮಾರ್ಕೆಟಿಂಗ್, ಕ್ರೆಡಿಟಿಂಗ್ ಸಿಸ್ಟಂ, ಸಂಶೋಧನೆ ಇತ್ಯಾದಿಗಳ ಭರಪೂರ ಕೊಡುಗೆಯನ್ನು ಸರ್ಕಾರ ಕೃಷಿಗೆ  ಒದಗಿಸುವುದರೊಂದಿಗೆ 1960ರಿಂದ 80ರ ದಶಕದಲ್ಲಿ ಭಾರತ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯಿತು. ಈ ಸ ನ್ನಿವೇಶಕ್ಕೆ ತಡೆ ಒಡ್ಡಿದ್ದು 1990ರ ಉದಾರೀಕರಣ ನೀತಿ. ಉದಾರೀಕರಣವೆಂದರೆ, ಖಾಸಗಿಗಳ ಕೈಗೆ ನಿಧಾನಕ್ಕೆ ಪ್ರತಿಯೊಂದನ್ನೂ  ಒಪ್ಪಿಸುತ್ತಾ ಬರುವುದು ಅಥವಾ ಎಲ್ಲ ನೀತಿಗಳಲ್ಲೂ ಉದಾರವಾಗುವುದು. ಸದ್ಯ ಈ ನೀತಿಯ ಪರಾಕಾಷ್ಠೆಯನ್ನು ನಾವು  ನೋಡುತ್ತಿದ್ದೇವೆ. ರೈಲ್ವೆ, ಇನ್ಶೂರೆನ್ಸ್, ವಿಮಾನ ನಿರ್ವಹಣೆ, ಬ್ಯಾಂಕಿ೦ಗ್ ಇತ್ಯಾದಿ ಎಲ್ಲವನ್ನೂ ಒಂದೊಂದಾಗಿ ಖಾಸಗಿ ಕುಳಗಳ ಕೈಗೆ  ಒಪ್ಪಿಸಲಾಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲೂ ವಿದೇಶಿ ಖಾಸಗಿ ಕಂಪೆನಿಗಳು ಪಾಲುದಾರರಾಗುವಲ್ಲಿ ವರೆಗೆ ನೀತಿಗಳು ಉದಾರವಾಗುತ್ತಿವೆ.  ವಿಶೇಷ ಏನೆಂದರೆ,

1990ರಲ್ಲಿ ನರಸಿಂಹರಾವ್ ಪ್ರಧಾನಿ ಆಗಿದ್ದ ಕಾಲದಲ್ಲಿ ಮತ್ತು ಮನ್‌ಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದ ವೇಳೆ ಪರಿಚಯಿಸಲಾದ  ಉದಾರೀಕರಣವನ್ನು ಈ ದೇಶದ ನಾಗರಿಕರು ಸಹಜವಾಗಿ ಸ್ವೀಕರಿಸುವಂತಹ ವಾತಾವರಣ ಇತ್ತೇ ಎಂಬ ಪ್ರಶ್ನೆಯಿದೆ. ಈ ದೇಶದ  ಬಹುಸಂಖ್ಯಾತ ಮಂದಿಗೆ ಉದಾರೀಕರಣ, ಜಾಗತೀಕರಣ ಇತ್ಯಾದಿಗಳ ಪೂರ್ಣ ಪರಿಚಯ ಆ ಸಂದರ್ಭದಲ್ಲಿ ಇದ್ದಿರುವ ಸಾಧ್ಯತೆಯೇ  ಇಲ್ಲ. ಕೇಂದ್ರ ಸರ್ಕಾರ ಹೇಗೂ ಅದನ್ನು ಸಮರ್ಥಿಸಿಕೊಂಡು ಹೇಳಿಕೆಗಳನ್ನು ಕೊಟ್ಟಿರಬಹುದು. ಆದರೆ ಜನಸಾಮಾನ್ಯರನ್ನು  ನಂಬಿಸುವುದಕ್ಕೆ ಪ್ರಧಾನಿ, ವಿತ್ತ ಸಚಿವರು ಅಥವಾ ಅವರ ಮಂತ್ರಿಮಂಡಲದ ಸದಸ್ಯರ ಹೇಳಿಕೆಗಳಿಂದಷ್ಟೇ ಸಾಧ್ಯವಿಲ್ಲ. ಸರ್ಕಾರ ಏನೇ  ಹೇಳಿದರೂ ಅದನ್ನು ತಕ್ಷಣಕ್ಕೆ ಜನರು ಒಪ್ಪುವುದು ಕಡಿಮೆ. ಅನುಮಾನಿಸುತ್ತಾರೆ. ರಾಜಕೀಯ ಉದ್ದೇಶ ಇದ್ದೀತೇ, ಇದು ಸಂಚೇ  ಎಂದೆಲ್ಲಾ ಸಂದೇಹ ಪಡುತ್ತಾರೆ. ಇದನ್ನು ಅತ್ಯಂತ ಚೆನ್ನಾಗಿ ಅರಿತವರೇ ಖಾಸಗೀಕರಣದ ರೂವಾರಿಗಳು. ಈ ದಣಿಗಳು ಏನು  ಮಾಡುತ್ತಾರೆಂದರೆ, ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತಾರೆ. ಎಕನಾಮಿಸ್ಟ್ ಗಳು, ಚಿಂತಕರನ್ನು ತಮ್ಮತ್ತ ಸೆಳೆಯುತ್ತಾರೆ. ತಮ್ಮ  ವಿಚಾರಗಳನ್ನು ಅವರ ಬಾಯಿಯಲ್ಲಿ ಹೇಳಿಸುವ ಶ್ರಮ ನಡೆಸುತ್ತಾರೆ. ಜನರು ಪತ್ರಿಕೆಗಳ ವಿಶ್ಲೇಷಣೆಯ ಮೇಲೆ ನಂಬಿಕೆಯಿಡುವಷ್ಟು  ರಾಜಕಾರಣಿಗಳ ಹೇಳಿಕೆಯಲ್ಲಿ ನಂಬಿಕೆ ಇಡುವುದಿಲ್ಲ. ಎಕನಾಮಿಸ್ಟ್ ರ  ಒಂದು ವಿಶ್ಲೇಷಣೆಗೆ ಮಾರು ಹೋಗುವಷ್ಟು ವಿತ್ತಸಚಿವರ  ಹೇಳಿಕೆಗೆ ತಲೆ ಬಾಗುವುದಿಲ್ಲ. ಆದ್ದರಿಂದ,

 ಉದಾರೀಕರಣದ ರೂವಾರಿಗಳು ಮತ್ತು ಸಮರ್ಥಕರು ತಮ್ಮ ನೀತಿಯನ್ನು ಜನಪ್ರಿಯಗೊಳಿಸುವುದಕ್ಕೆ ಈ ಬಳಸು ದಾರಿಯನ್ನು ಆಯ್ಕೆ ಮಾಡಿಕೊಂಡರು. 1990ರ ಬಳಿಕದ ಭಾರತವನ್ನು ಇಡಿಯಾಗಿ ವಿಶ್ಲೇಷಿಸಿದರೆ  ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇತ್ತೀಚಿನ ಉದಾಹರಣೆಗಳಾಗಿ ನಾವು 2016ರಲ್ಲಿ ಅನಿರೀಕ್ಷಿತವಾಗಿ ಜಾರಿಗೊಳಿಸಲಾದ  ನೋಟ್‌ಬ್ಯಾನ್ ಮತ್ತು 2021ರ ಕೊನೆಯಲ್ಲಿ ಜಾರಿಗೆ ತರಲಾದ ಕೃಷಿ ಕಾಯ್ದೆಯನ್ನು ಎತ್ತಿಕೊಳ್ಳಬಹುದು.

ನೋಟ್ ಬ್ಯಾನ್‌ನ ಬೆನ್ನಿಗೇ ಈ ದೇಶದ ಮಾಧ್ಯಮದ ಮಂದಿ ಮತ್ತು ಎಕನಾಮಿಸ್ಟ್ ಗಳ  ಒಂದು ಗುಂಪು ಯಾವ ಬಗೆಯ ಪ್ರಚಾರ  ಯುದ್ಧವನ್ನು ಕೈಗೊಂಡಿತು, ಪರಿಶೀಲಿಸಿ. ಕನ್ನಡದಲ್ಲಂತೂ ಪಬ್ಲಿಕ್ ಟಿ.ವಿ.ಯ ರಂಗನಾಥ್ ಅವರ ಕಾರ್ಯಕ್ರಮ ಬಹಳ  ಪ್ರಸಿದ್ಧವಾದುದು. ಹೊಸ 2000 ರೂಪಾಯಿ ನೋಟಿನಲ್ಲಿ ರಹಸ್ಯ ಚಿಪ್ಪು ಇದೆ ಮತ್ತು ಅದು ಉಪಗ್ರಹದ ಕಣ್ಗಾವಲಿನಲ್ಲಿದೆ ಎಂದು  ಅವರು ಇಬ್ಬರು ಎಕನಾಮಿಸ್ಟ್ ಗಳ  ಬಾಯಿಯಲ್ಲಿ ಹೇಳಿಸಿದರು. ನೋಟ್ ಬ್ಯಾನ್‌ನಿಂದಾಗಿ ಜನರು ಕ್ಯೂನಲ್ಲಿ ನಿಂತು ಸಾಯುತ್ತಿದ್ದಾಗ  ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಒಂದೊಂದಾಗಿ ಬಾಗಿಲು ಮುಚ್ಚತೊಡಗಿದಾಗ, ಬಿಜೆಪಿ ಬೆಂಬಲಿಗರು ಕೇಂದ್ರ ಸರ್ಕಾರದ  ಪರ ನಿಲ್ಲುವುದಕ್ಕೆ ಈ ಕಾರ್ಯಕ್ರಮದ ಪಾಲು ಬಲು ದೊಡ್ಡದು. 2000 ರೂಪಾಯಿಯ ಕಪ್ಪು ಹಣ ಎಲ್ಲಿ ಬಚ್ಚಿಟ್ಟರೂ ಉಪಗ್ರಹ ಪತ್ತೆ  ಹಚ್ಚುತ್ತದೆ ಮತ್ತು ಇದೊಂದು ಅಭೂತಪೂರ್ವ ನೋಟು ಎಂದು ಕೊಂಡಾಡಿದ್ದೇ  ಕೊಂಡಾಡಿದ್ದು. ದೇಶದಲ್ಲಿರುವ ಕಪ್ಪು ಹಣವನ್ನು  ನಿರ್ಮೂಲನಗೊಳಿಸುವುದಕ್ಕೆ ಈ ನೋಟ್ ಬ್ಯಾನ್ ಪರಿಣಾಮಕಾರಿ ಎಂದೆಲ್ಲಾ ಸರ್ಕಾರ ಹೇಳುವಾಗ ಅದಕ್ಕೆ ರಂಗನಾಥ್‌ರ ‘ಚಿಪ್ಪು’  ಕಾರ್ಯಕ್ರಮ ಸಾಕಷ್ಟು ನೆರವನ್ನು ನೀಡಿತ್ತು. ಆ ಸನ್ನಿವೇಶದಲ್ಲಿ ನಿಜಕ್ಕೂ ಅದೊಂದು ಭಿನ್ನ ಕಾರ್ಯಕ್ರಮ. ನೋಟ್‌ಬ್ಯಾನನ್ನು  ಸಮರ್ಥಿಸುವ ದಿಸೆಯಲ್ಲಿ ಯಶಸ್ವೀ ಕಾರ್ಯಕ್ರಮ. ತಕ್ಷಣಕ್ಕೆ ಯಾರಿಗೂ ಆ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನು ಮತ್ತು  ವಾದವನ್ನು ತಳ್ಳಿ ಹಾಕುವುದಕ್ಕೆ ಬರುವುದಿಲ್ಲ. ಓಹ್, ಪ್ರಧಾನಿ ಮೋದಿ ಏನೋ ಅದ್ಭುತವನ್ನು ಸೃಷ್ಟಿಸಿದ್ದಾರೆ ಎಂದೇ ಜನರಾಡತೊಡಗುತ್ತಾರೆ. ಪ್ರಭುತ್ವವನ್ನು ನಂಬುತ್ತಾರೆ ಮತ್ತು ಪ್ರಭುತ್ವದ ಪರ ವಾದ ಮಾಡುತ್ತಾರೆ. ಹಾಗಂತ,

ನಿಜ ಏನು ಎಂಬುದು ಗೊತ್ತಾಗುವಾಗ ತಡವಾಗಿರುತ್ತದೆ ಮತ್ತು ಆಗಬೇಕಾದ ಅನಾಹುತ ಅದಾಗಲೇ ಆಗಿ ಬಿಟ್ಟಿರುತ್ತದೆ. ಚಿಪ್ ಪ್ರಕರಣದ  ಹಿಂದಿನ ಕತೆಯೂ ಇಷ್ಟೇ.

‘ನಿಜವಾಗಿ, 2000 ರೂಪಾಯಿ ನೋಟಿನಲ್ಲಿ ಚಿಪ್ ಹುಟ್ಟಿ ಕೊಂಡದ್ದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪ್‌ನಲ್ಲಿ. ಅದರಲ್ಲಿ ಬಿಜೆಪಿ ಸಂಸದರು,  ಹಿರಿಯ ಪತ್ರಕರ್ತರು ಎಲ್ಲರೂ ಇದ್ದರು. ಬಿಜೆಪಿಯ ಸಂಸದ ರಾಜೀವ್ ಚಂದ್ರಶಾಖರ್ ಈ ಚಿಪ್ ವಿಷಯವನ್ನು ಆ ಗ್ರೂಪಲ್ಲಿ  ಮೊದಲು ಪ್ರಸ್ತಾಪ ಮಾಡಿದರು. ಬಳಿಕ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇದನ್ನು ಪುಷ್ಠೀಕರಿಸಿ ಮಾತಾಡಿದರು. ಈ  ಚಿಪ್ ಸಂಗತಿಯನ್ನು ಸಮರ್ಥಿಸಿ ರಾಷ್ಟ್ರೀಯ ವಾಹಿನಿಯಲ್ಲಿ  ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದರು. ಮೊದಲು ಈ ಚಿಪ್  ಸಂಗತಿಯನ್ನು ಸುವರ್ಣ ನ್ಯೂಸ್ ಚಾನೆಲ್‌ನ ಅಜಿತ್ ಹೇಳಲಿ ಎಂದು ಆ ಗ್ರೂಪ್‌ನಲ್ಲಿ ಚರ್ಚೆ ನಡೆಯಿತು. ಆದರೆ, ಈ ಚರ್ಚೆ  ನಡೆಯುವಾಗ ಅವರ ಕಾರ್ಯಕ್ರಮದ ಎಡಿಟಿಂಗ್ ಮುಗಿದಿತ್ತು. ಹಾಗಾಗಿ ಈ ಚಿಪ್ ಸಂಗತಿಯನ್ನು ಸ್ಫೋಟಿಸುವುದಕ್ಕೆ ರಂಗನಾಥ್‌ರಿಗೆ  ಜವಾಬ್ದಾರಿ ವಹಿಸಿಕೊಡಲಾಯಿತು. ಆಡಳಿತ ಪಕ್ಷದ ನಂಬಲರ್ಹ ಮೂಲಗಳಿಂದ ಸುದ್ದಿ ಬಂದಿರುವುದರಿಂದ  ರಂಗನಾಥ್‌ರು ಸುದ್ದಿಯ  ಆಳಕ್ಕೆ ಹೋಗದೇ ಎಡವಟ್ಟು ಮಾಡಿಕೊಂಡರು...’

ಹೀಗೆ ಟ್ವೀಟ್ ಮಾಡಿರುವುದು ಬೇರಾರೂ ಅಲ್ಲ, ರಂಗನಾಥ್‌ರ ಸಹೋದ್ಯೋಗಿ ಅರುಣ್ ಸಿ. ಬಡಿಗೇರ.

ವಿಶೇಷ ಏನೆಂದರೆ, ಈ ಸ್ಪಷ್ಟೀಕರಣ ಬಂದಿರುವುದು 2021ರ ಕೊನೆಯಲ್ಲಿ. ಅಥವಾ ನೋಟ್ ಬ್ಯಾನ್‌ಗೆ ಐದು  ವರ್ಷಗಳು ಸಂದ  ವೇಳೆಯಲ್ಲಿ. ಇದೇ ರೀತಿಯಲ್ಲಿ ರೈತ ಪ್ರತಿಭಟನೆಗೆ ಸಂಬಂಧಿಸಿದ ಸುದ್ದಿಗಳನ್ನೂ ವಿಶ್ಲೇಷಿಸಬಹುದು. ರೈತ ಪ್ರತಿಭಟನೆಯನ್ನು  ಮೂಲದಲ್ಲೇ  ಚಿವುಟುವುದಕ್ಕೆ ನಡೆಸಲಾದ ಪ್ರಯತ್ನ ಅಷ್ಟಿಷ್ಟಲ್ಲ. ಅದು ವಿಫಲವಾದಾಗ ರೈತರ ವಿರುದ್ಧ ಮಾತಿನ ಯುದ್ಧವನ್ನು  ಸಾರಲಾಯಿತು. ದೇಶದ್ರೋಹಿ, ಆಂದೋಲನ್ ಜೀವಿ, ಮಾವೋಯಿಸ್ಟ್ ಎಂದೆಲ್ಲಾ ಕರೆಯಲಾಯಿತು. ಗಾಯಕಿ ರಿಹಾನ್ನಾ ಸಹಜ ಟ್ವೀಟ್  ಮಾಡಿದಾಗ ಮತ್ತು ಗ್ರೇಟಾ ಥನ್‌ಬರ್ಗ್ ಕೂಡಾ ಧ್ವನಿಯೆತ್ತಿದಾಗ ಪ್ರಭುತ್ವ ಮತ್ತು ಅದರ ಕಾಲಾಳುಗಳು ಅವರಿಬ್ಬರ ಮೇಲೆ ಮುಗಿಬಿದ್ದ  ರೀತಿ ಅಭೂತಪೂರ್ವ. ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಪ್ರತಿಭಟನೆ ಸೂಚಿಸುವಲ್ಲಿ ವರೆಗೆ ಮತ್ತು  ಭಾರತದ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವಲ್ಲಿ ವರೆಗೆ ರೈತಪರ ಧ್ವನಿಗಳನ್ನು ಅಡಗಿಸುವುದಕ್ಕೆ ಇನ್ನಿಲ್ಲದ ಶ್ರಮ ನಡೆಯಿತು. ಅಷ್ಟಕ್ಕೂ,  

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕೃಷಿ ಕಾಯ್ದೆಗಳು ಏನೇನು ಎಂಬುದನ್ನು ಜನರಿಗೆ ಸ್ಪಷ್ಟಪಡಿಸುವುದಕ್ಕೆ  ಕೇಂದ್ರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕಾಯ್ದೆ 1ರ ಪ್ರಕಾರ, 

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ  ಎಪಿಎಂಸಿಯ ಹೊರಗೆ ಮಾರಬಹುದು. ಈ ಹಿಂದಿನ ಎಲ್ಲಾ ಎಪಿಎಂಸಿ ಕಾಯ್ದೆಗಳನ್ನು ಈ ಹೊಸ ಕಾಯ್ದೆ ಅನೂರ್ಜಿತ ಗೊಳಿಸುತ್ತದೆ.  ಎರಡನೇ ಕಾಯ್ದೆಯು, 

ರೈತರಿಗೆ ಗುತ್ತಿಗೆ ಕೃಷಿ ಮಾಡಲು ಹಾಗೂ ನಿಗದಿತ ಬೆಲೆಗೆ ತಮ್ಮ ಉತ್ಪನ್ನಗಳ ಮಾರಾಟ ಮಾಡುವ ಬಗ್ಗೆ ಭಿತ್ತನೆ  ಅವಧಿಗೆ ಮುನ್ನವೇ ಖಾಸಗಿ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಇದರಲ್ಲಿರುವ  ದೊಡ್ಡದೊಂದು ದೋಷ ಏನೆಂದರೆ, ಖರೀದಿದಾರರು ನೀಡುವ ಕನಿಷ್ಠ ಬೆಲೆ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ. 3ನೇ ಕಾಯ್ದೆಯು,  

ಆಹಾರ ಉತ್ಪನ್ನಗಳ ದಾಸ್ತಾನಿನ ಮೇಲೆ ಮಿತಿ ಹೇರುವ ಕೇಂದ್ರದ ಅಧಿಕಾರವನ್ನು ರದ್ದುಗೊಳಿಸುತ್ತದೆ. ಅಂದರೆ ಖಾಸಗಿ ಖರೀ ದಿದಾರರು ಎಷ್ಟೇ ಉತ್ಪನ್ನಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬಹುದು ಮತ್ತು ಇಂಥ ಅವಕಾಶವು ಮುಂದೊಂದು  ದಿನ ಆಹಾರ ಉತ್ಪನ್ನಗಳ ಕೃತಕ ಅಭಾವವನ್ನು ಸೃಷ್ಟಿಸಿ ಈ ಕಂಪೆನಿಗಳಿಗೆ ಬೆಲೆ ಏರಿಕೆಯನ್ನು ಸಾಧ್ಯವಾಗಿಸಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆ,

ಈಗಿನ ಮಂಡಿ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದೇ ಎಪಿಎಂಸಿ. ಈ ಮೂರು ಕಾಯ್ದೆಗಳು ನೇರವಾಗಿ ಮಂಡಿ ವ್ಯವಸ್ಥೆಯ  ಮೇಲೆಯೇ ಗದಾಪ್ರಹಾರ ಮಾಡುತ್ತದೆ. ಸದ್ಯದ ಸ್ಥಿತಿ ಹೇಗೆಂದರೆ, ಯಾವುದೇ ಖಾಸಗಿ ಖರೀದಿದಾರರು ಎಪಿಎಂಸಿ ಮೂಲಕವೇ ರೈತರ  ಬೆಳೆಯನ್ನು ಖರೀದಿಸಬೇಕೇ ಹೊರತು ರೈತರನ್ನು ನೇರವಾಗಿ ಸಂಪರ್ಕಿಸಿ ಖರೀದಿಸುವಂತಿಲ್ಲ. ಮಂಡಿಯು ಬೆಳೆಗಳಿಗೆ ಟ್ಯಾಕ್ಸ್  ವಿಧಿಸುತ್ತದೆ ಮತ್ತು ಇದು ರಾಜ್ಯ ಸರ್ಕಾರಗಳಿಗೆ ಸೇರುತ್ತದೆ. ಈ ಟ್ಯಾಕ್ಸನ್ನು ಗ್ರಾಮೀಣ ಭಾಗದ ಮೂಲ ಸೌಲಭ್ಯವನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಳಸಲಾಗುತ್ತಿದೆ. ಎಪಿಎಂಸಿ ಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಇದರಲ್ಲಿ ತಿದ್ದುಪಡಿ ತರಬೇಕಾಗಿರುವುದು  ಕೂಡ ರಾಜ್ಯಗಳೇ. ಬಿಹಾರವು 2006ರಲ್ಲೇ  ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದೆ. ಕೇರಳದಲ್ಲಿ ಈ ಎಪಿಎಂಸಿಯೇ ಇಲ್ಲ.  ಎಪಿಎಂಸಿಯನ್ನು ರದ್ದುಗೊಳಿಸಿರುವ ಬಿಹಾರವು ಇವತ್ತು ಅದರ ಅಡ್ಡಪರಿಣಾಮವನ್ನು ಎದುರಿಸುತ್ತಿದೆ ಎಂದು ವರದಿಗಳಿವೆ. ಅಲ್ಲಿನ  ರೈತರು ತಮ್ಮ ಬೆಳೆಯನ್ನು ಪಂಜಾಬ್‌ಗೆ ಕಳುಹಿಸಿ ಹೆಚ್ಚಿನ ಬೆಲೆಯನ್ನು ಪಡೆಯುತ್ತಿದ್ದಾರೆ. ಪಂಜಾಬ್‌ನಲ್ಲಿ ಎಪಿಎಂಸಿ ಇದೆ. ಸದ್ಯದ  ಕೇಂದ್ರದ ಮೂರು  ಕೃಷಿ ಕಾಯ್ದೆಗಳು ಎಪಿಎಂಸಿಯನ್ನೇ ಅನೂರ್ಜಿತಗೊಳಿಸುತ್ತದೆ ಅಥವಾ ನಿಧಾನಕ್ಕೆ ಅವುಗಳು ಅನೂರ್ಜಿತಗೊಳ್ಳುವಂತೆ  ಮಾಡುತ್ತದೆ. ರೈತರಿಗೆ ಇರುವ ಭಯವೂ ಇದುವೇ. ನಿಧಾನಕ್ಕೆ ಖಾಸಗಿಗಳ ಕೈಯಲ್ಲಿ ರೈತರು ಬೊಂಬೆಗಳಾಗಿ ಪರಿವರ್ತಿತರಾದಾರು  ಎಂಬ ಭಯ ಪ್ರತಿಭಟನಾನಿರತ ರೈತರದ್ದು. ಆದರೆ,

ಕೇಂದ್ರ ಸರ್ಕಾರ ಹಠಮಾರಿ ಧೋರಣೆ ತಳೆಯಿತು. ತನ್ನ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ವಿವಿಧ ಪದಗಳನ್ನು ಠಂಕಿಸಿತು ಮತ್ತು  ಕತೆಗಳನ್ನು ಕಟ್ಟಿತು. ಅದರಲ್ಲಿ ಒಂದು, 2016ರ ಚಿಪ್ಪಾದರೆ ಇನ್ನೊಂದು 2020ರ ಬ್ರೋಕರ್, ಖಾಲಿಸ್ತಾನಿ.

ಇಷ್ಟೇ.

No comments:

Post a Comment