Thursday, December 6, 2018

ನಾಲ್ಕೂವರೆ ವರ್ಷಗಳ ಹಿಂದಿನ ಆ ವಾಕ್ಯವೂ ಜುಮ್ಲಾವೇ?



 “BJP believes that political stability, progress and peace in the region are essential for South Asia’s growth and development. The Congress-led UPA [United Progressive Alliance] has failed to establish enduring friendly and cooperative relations with India’s neighbours. India’s relations with traditional allies have turned cold. India and its neighbours have drifted apart. The absence of statecraft has never been felt so acutely as today.”

 2014ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಒಂದು ಭಾಗ ಇದು.
`ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಹಳಸಿದೆ. ಎಷ್ಟೆಂದರೆ- ಈ ಹಿಂದೆಂದೂ ಸಂಬಂಧ ಇಷ್ಟು ತಳಮಟ್ಟಕ್ಕೆ ಹೋಗಿರಲಿಲ್ಲ. `ಬಿಜೆಪಿ ಈ ಬಗೆಯ ವಾತಾವರಣವನ್ನು ಬಯಸುವುದಿಲ್ಲ. ದಕ್ಷಿಣ ಏಶ್ಯಾವು ಅಭಿವೃದ್ಧಿ ಹೊಂದಬೇಕಾದರೆ, ಈ ಪ್ರದೇಶದಲ್ಲಿ ಶಾಂತಿ, ರಾಜಕೀಯ ಸ್ಥಿರತೆ ಇರಬೇಕಾದುದು ಬಹುಮುಖ್ಯ ಎಂಬುದಾಗಿ ಬಿಜೆಪಿ ಭಾವಿಸುತ್ತದೆ ಎಂದು ಇದನ್ನು ಅನುವಾದಿಸಬಹುದು.
ನೇಪಾಳ
ಚೀನಾ
ಭೂತಾನ್
ಮಾಲ್ದೀವ್ಸ್
ಶ್ರೀಲಂಕಾ
ಪಾಕಿಸ್ತಾನ್
ಬಾಂಗ್ಲಾ
ಅಫಘಾನಿಸ್ತಾನ್
ಬಿಜೆಪಿಯ ಪ್ರಣಾಳಿಕೆಗೆ ನಾಲ್ಕೂವರೆ  ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಆ ಪ್ರಣಾಳಿಕೆಯ ಉದ್ದೇಶ ಎಷ್ಟಂಶ ಈಡೇರಿದೆ? ಪ್ರಧಾನಿ ನರೇಂದ್ರ ಮೋದಿಯವರ ಆರಂಭ ಅದ್ಭುತವಾಗಿತ್ತು. ಭಾರತದ ಇನ್ಯಾವ ಪ್ರಧಾನಿಗಳೂ ಅಯೋಜಿಸಿರದ ವಿಶಿಷ್ಟ ಪ್ರಮಾಣ ವಚನ ಕಾರ್ಯಕ್ರಮವನ್ನು ಅವರು ಏರ್ಪಡಿಸಿದರು. ಸಾರ್ಕ್ ರಾಷ್ಟ್ರಗಳ ಅಧ್ಯಕ್ಷರನ್ನು ತನ್ನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಹೊಸತೊಂದು ಕ್ರಮವನ್ನು ಹುಟ್ಟು ಹಾಕಿದರು. ಜಪಾನ್ ಭೇಟಿಯಲ್ಲಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು ಬಿಟ್ಟರೆ ಉಳಿದವರೆಲ್ಲ ಆ ಆಹ್ವಾನವನ್ನು ಸ್ವೀಕರಿಸಿದರು. ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಆ ಬಳಿಕ ನಾಲ್ಕೂವರೆ ವರ್ಷಗಳು ಉರುಳಿ ಹೋಗಿವೆ. ಬಿಜೆಪಿಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು 2013ರಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. `ಚೀನಾ ಬಿಡಿ, ಪುಟ್ಟ ಮಾಲ್ದೀವ್ಸ್ ಅನ್ನು ನಿಭಾಯಿಸಲೂ ಭಾರತಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ದೂರಿದ್ದರು. ಈಗ ಅವರ ಅಭಿಪ್ರಾಯ ಏನಿರಬಹುದು? ಈಗ ಭಾರತ ಮತ್ತು ಮಾಲ್ದೀವ್ಸ್‍ಗಳ ನಡುವಿನ ಸಂಬಂಧ ಎಷ್ಟು ದುರ್ಬಲ ಆಗಿದೆಯೆಂದರೆ, ಮಾಲ್ದೀವ್ಸ್ ಬಹುತೇಕ ಚೀನಾದ ವಸಾಹತಿನಂತಾಗಿ ಬಿಟ್ಟಿದೆ. ಬಂದರು ಅಭಿವೃದ್ಧಿಯಲ್ಲಿ ಭಾರತದ ಹೂಡಿಕೆಯನ್ನು ರದ್ದು ಪಡಿಸುವಷ್ಟರ ಮಟ್ಟಿಗೆ ಸಂಬಂಧ ಹಳಸಿ ಹೋಗಿದೆ. 2016ರಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯ್ಯೂಂ ಭಾರತಕ್ಕೆ ಭೇಟಿ ಕೊಟ್ಟದ್ದು ಮತ್ತು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮಾಲ್ದೀವ್ಸ್‍ಗೆ ಭೇಟಿ ಕೊಟ್ಟದ್ದು ನಡೆಯಿತಾದರೂ ಅದೊಂದು ಪ್ರವಾಸ ಎಂಬುದಕ್ಕಿಂತ ಹೆಚ್ಚಿಗೇನೂ ಮಹತ್ವ ಪಡೆಯದಾಯಿತು.

     ನೇಪಾಳ ಮತ್ತು ಶ್ರೀಲಂಕಾಗಳು ಭಾರತದ ಪಾಲಿಗೆ ಅತಿ ಮಹತ್ವದ ಎರಡು ನೆರೆ ರಾಷ್ಟ್ರಗಳು. ಇನ್ನೊಂದು ಭೂತಾನ್. ಈ ಮೂರೂ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸ್ಥಾಪಿಸಲು ಭಾರತ ಮತ್ತು ಚೀನಾ ಬಹು ಹಿಂದಿನಿಂದಲೂ ಶ್ರಮ ನಡೆಸುತ್ತಲೇ ಬಂದಿದೆ. 1980ರಲ್ಲಿ ಭಾರತದ ಶಾಂತಿ ಪಾಲನಾ ಪಡೆಯನ್ನು ರಾಜೀವ್ ಗಾಂಧಿಯವರು ಲಂಕಾಕ್ಕೆ ಕಳುಹಿಸಿದುದಕ್ಕೆ ಈ ಪೈಪೋಟಿಯೇ ಕಾರಣ. ಎಲ್‍ಟಿಟಿಇಯ ನೆಪದಲ್ಲಿ ಚೀನಾದ ಸೇನೆಯು ಶ್ರೀಲಂಕಾವನ್ನು ಪ್ರವೇಶಿಸಿದರೆ, ಅದರಿಂದ ಲಂಕಾವು ಭಾರತಕ್ಕೆ ಇನ್ನೊಂದು ಮಗ್ಗುಲು ಮುಳ್ಳಾಗಿ ಕಾಡಲಿದೆ ಎಂಬ ಭಯ ರಾಜೀವ್‍ರನ್ನು ಕಾಡಿತ್ತು. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಎನ್ನಬಹುದಾದ ಸಂಬಂಧ ಇತ್ತಾದರೂ ಮೋದಿಯವರ ಅವಧಿಯಲ್ಲಿ ಆ ಸಂಬಂಧವೂ ಹಳಸಿದೆ. ಕಳೆದ ಚುನಾವಣೆಯ ಬಳಿಕವಂತೂ ಶ್ರೀಲಂಕಾದಲ್ಲಿ ಚೀನಾ ಪರ ವಾತಾವರಣವಿದೆ. ಅಲ್ಲಿನ ಅಧ್ಯಕ್ಷ ಸಿರಿಸೇನಾ ಅವರ ಚೀನಾಪ್ರೇಮ ಬಹುತೇಕ ಬಹಿರಂಗವಾಗಿಯೇ ಇದೆ. ಕಳೆದ ಚುನಾವಣೆಯಲ್ಲಿ ಭಾರತದ ಗುಪ್ತಚರ ಏಜೆನ್ಸಿಯ (RAW) ವಿರುದ್ಧ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ವರದಿಯಾಗಿತ್ತು. ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪವನ್ನು ಅದು ಹೊರಿಸಿತ್ತಲ್ಲದೇ RAWದ ಕಚೇರಿಯನ್ನು ತೆರವುಗೊಳಿಸುವಂತೆ ಅದರ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು ಎಂಬ ವರದಿಗಳಿದ್ದುವು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರೂ ಮತ್ತು ಅಧ್ಯಕ್ಷ ಸಿರಿಸೇನಾ ಭಾರತವನ್ನು ಸಂದರ್ಶಿಸಿದ್ದರೂ ಶ್ರೀಲಂಕಾದಲ್ಲಿ ಚೀನಾದ ಬಹುಕೋಟಿ ಹೂಡಿಕೆಯನ್ನು ತಪ್ಪಿಸಲು ಈ ಇಬ್ಬರಿಗೂ ಸಾಧ್ಯವಾಗಿಲ್ಲ. ವಲಯದ ಸ್ಥಿರತೆಯ ದೃಷ್ಟಿಯಿಂದ ಭಾರತಕ್ಕೆ ಶ್ರೀಲಂಕಾ ಅತಿ ಮುಖ್ಯ ದೇಶ. 2013ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯೂ ಇದನ್ನೇ ಹೇಳುತ್ತದೆ. ಆದರೆ,

    ನಾಲ್ಕೂವರೆ ವರ್ಷ ಗಳು ಕಳೆದ ಬಳಿಕವೂ ಮೋದಿಯವರಿಂದ ವಿಶೇಷವಾದುದೇನನ್ನೂ ಮಾಡಲು ಸಾಧ್ಯವಾಗಿಲ್ಲವೆಂದರೆ ಏನೆನ್ನಬೇಕು? ಮೋದಿಯವರು ಭೇಟಿ ನೀಡಿ ಸಾಧಿಸಲಾಗದ್ದನ್ನು ಚೀನಾವು ಭೇಟಿ ನೀಡದೆಯೇ ಮತ್ತು ಬಹಿರಂಗ ಹೇಳಿಕೆಗಳನ್ನು ಕೊಡದೆಯೇ ಸಾಧಿಸುತ್ತಿದೆ. ಇದನ್ನು ನೇಪಾಳಕ್ಕೆ ಸಂಬಂಧಿಸಿಯೂ ಹೇಳಬಹುದಾಗಿದೆ. ಭಾರತ ಮತ್ತು ಚೀನಾಕ್ಕೆ ಹೋಲಿಸಿ ನೋಡುವುದಾದರೆ ಎಲ್ಲ ರೀತಿಯಲ್ಲೂ ನೇಪಾಳಕ್ಕೆ ಅಚ್ಚು-ಮೆಚ್ಚಿನ ರಾಷ್ಟ್ರವಾಗಬೇಕಾದದ್ದು ಭಾರತವೇ. ಭಾರತೀಯ ಸಂಸ್ಕೃತಿ ನೇಪಾಳದಲ್ಲೂ ಇದೆ. ಹಿಂದೂಗಳೇ ಅಧಿಕವಿರುವ ರಾಷ್ಟ್ರ ನೇಪಾಳ. ಧಾರಾಳ ದೇವಾಲಯಗಳು ಇರುವುದೂ ನೇಪಾಳದಲ್ಲೇ. ಆದರೆ, ರಾಜಾಳ್ವಿಕೆ ಪತನಗೊಂಡ ಬಳಿಕದ ನೇಪಾಳವು ಭಾರತ ಸ್ನೇಹಿಯಾಗಿ ಉಳಿದಿಲ್ಲ. 2014ರಲ್ಲಿ ಮೋದಿಯವರು ನೇಪಾಳಕ್ಕೆ ಭೇಟಿ ನೀಡಿದಾಗ ಅದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಲಾಗಿತ್ತು. ಪರಸ್ಪರ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಎಂದು ಭೇಟಿಯನ್ನು ಕೊಂಡಾಡಲಾಗಿತ್ತು. ಆದರೆ ಆ ಬಳಿಕ ಪರಿಸ್ಥಿತಿ ಎಷ್ಟು ಕೆಟ್ಟಿತೆಂದರೆ, ಮನ್‍ಮೋಹನ್ ಸಿಂಗ್ ಸರಕಾರವೇ ಇದಕ್ಕಿಂತ ಉತ್ತಮ ಎಂದು ಹೇಳುವಂತಾಯಿತು. ಮುಖ್ಯವಾಗಿ,

    ಸಂವಿಧಾನ ರಚನೆಯ ವಿಷಯದಲ್ಲಿ ನೇಪಾಳದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳಲ್ಲಿ ಭಾರತ ಪರೋಕ್ಷವಾಗಿ ಮಧ್ಯ ಪ್ರವೇಶಿಸಿದುದು ಸಂಬಂಧ ಸುಧಾರಣೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿತು ಎಂದೇ ಹೇಳಬೇಕು. ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ತಾಗಿಕೊಂಡಿರುವ ನೇಪಾಳದ ಭಾಗಗಳಲ್ಲಿ ಮಧೇಸಿ ಮತ್ತು ತಾರು ಎಂಬ ಸಮುದಾಯಗಳು ವಾಸಿಸುತ್ತಿದ್ದು ಹೊಸ ಸಂವಿಧಾನದ ಬಗ್ಗೆ ಈ ಸಮುದಾಯಕ್ಕೆ ತಕರಾರುಗಳಿದ್ದುವು. ಈ ದಾರಿಯಾಗಿ ಭಾರತದಿಂದ ಸರಕುಗಳು ನೇಪಾಳಕ್ಕೆ ರಸ್ತೆ ಮೂಲಕ ಸಾಗಾಟವಾಗುತ್ತಿದ್ದು, ಮಧೇಸಿಗಳು ಈ ದಾರಿಯನ್ನು ಮುಚ್ಚಿದರು. ಹೀಗೆ ನೇಪಾಳದಲ್ಲಿ ದಿಢೀರ್ ಆಹಾರ ವಸ್ತುಗಳ ಕೊರತೆ ಉಂಟಾಯಿತು. ಮಧೇಸಿಗಳನ್ನು ಮುಂದಿಟ್ಟುಕೊಂಡು ಭಾರತವೇ ಹೆಣೆದ ತಂತ್ರ ಇದು ಎಂಬುದು ನೇಪಾಳದ ಅನುಮಾನ. ಅದು ಈ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಿತು. ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಹೊಸ ದಾರಿಯನ್ನು ಕಂಡುಕೊಂಡಿತು. ಮಾತ್ರವಲ್ಲ, ಭಾರತದ ವಿರುದ್ಧ ವಿಶ್ವಸಂಸ್ಥೆಗೂ ದೂರು ನೀಡಿತು. ನಿಜವಾಗಿ, ನೇಪಾಳದ ಸಂವಿಧಾನ ವಿವಾದವನ್ನು ಭಾರತ ಮಧೇಸಿಗಳ ಕಣ್ಣಲ್ಲಿ ನೋಡಿದುದು ಬಹುದೊಡ್ಡ ತಪ್ಪಾಗಿತ್ತು. ಮಧೇಸಿಯೇ ನೇಪಾಳದ ಒಂದು ಭಾಗವೇ ಹೊರತು ಮಧೇಸಿಯೇ ನೇಪಾಳವಲ್ಲ. ಇದರ ಜೊತೆಗೆ ಭೂತಾನ್, ಪಾಕಿಸ್ತಾನ್ ಮತ್ತು ಚೀನಾಗಳನ್ನು ತೆಗೆದುಕೊಂಡರೆ, ಮೋದಿ ಸರಕಾರದ ವಿದೇಶಾಂಗ ನೀತಿ ಎಷ್ಟು ನಿರಾಶಜನಕವಾದುದು ಎಂಬುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ,

    ಪಾಕ್‍ನೊಂದಿಗೆ ಉತ್ತಮ ಸಂಬಂಧ ಬೆಳೆಸುವುದಕ್ಕೆ ನರೇಂದ್ರ ಮೋದಿಯವರಿಗೆ ಇರುವಷ್ಟು ಅವಕಾಶ ಮನ್‍ಮೋಹನ್ ಸಿಂಗ್‍ರಿಗೆ ಇದ್ದಿರಲಿಲ್ಲ. ಪಾಕ್‍ನ ವಿಷಯ ದಲ್ಲಿ ಮನ್‍ಮೋಹನ್ ಸಿಂಗ್‍ರ ಧೋರಣೆಯನ್ನು ಲವ್ ಲೆಟರ್ ಧೋರಣೆ ಎಂದು ಮೋದಿಯವರು ಲೇವಡಿ ಮಾಡಿದ್ದರು. ಪಾಕ್‍ಗೆ ಕಟು ಭಾಷೆ ಮಾತ್ರ ಅರ್ಥವಾಗುತ್ತದೆ ಎಂಬುದು ಮೋದಿ ಮತ್ತು ಅವರ ಪಕ್ಷದ ನಿಲುವಾಗಿತ್ತು. ಮೋದಿಯವರ ಪ್ರತಿಜ್ಞಾ ಸ್ವೀಕಾರದ ಸಮಯದಲ್ಲಿ ನವಾಝ್ ಶರೀಫ್‍ರು ಉಪಸ್ಥಿತರಿದ್ದುದು ಮತ್ತು ಮೋದಿಯವರು ಪಾಕ್‍ಗೆ ದಿಢೀರ್ ಭೇಟಿ ಕೊಟ್ಟದ್ದು ಏನೋ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆಗೆ ಇಂಬು ನೀಡಿತ್ತು. ಆದರೆ,

    ಅದರಾಚೆಗೆ ಯಾವ ಸ್ವಾಗತಾರ್ಹ ಬೆಳವಣಿಗೆಯೂ ನಡೆದಿಲ್ಲ. ಕಾಶ್ಮೀರವಂತೂ ಉರಿಯುತ್ತಿದೆ. ಪ್ರತ್ಯೇಕತಾವಾದ ಅತ್ಯಂತ ಚರಮಸೀಮೆಗೆ ಮುಟ್ಟಿದ್ದ 80-90ರ ದಶಕದ ಸ್ಥಿತಿಗೆ ಮತ್ತೆ ಕಾಶ್ಮೀರ ಮರಳಿ ಮುಖ ಮಾಡಿ ನಿಂತಿದೆ. ನವಾಝ್ ಶರೀಫ್ ಹೋಗಿ ಇಮ್ರಾನ್ ಖಾನ್ ಬಂದರೂ ಭಾರತದ ನಿಲುವು ಬದಲಾಗಿಲ್ಲ. ಬಹುಶಃ ಸಂಬಂಧ ಸುಧಾರಣೆಗೆ ಒತ್ತು ನೀಡುವುದಕ್ಕಿಂತ ಹಳಸು ವುದಕ್ಕೆ ಒತ್ತು ನೀಡುವುದೇ ರಾಜಕೀಯವಾಗಿ ಹೆಚ್ಚು ಲಾಭದಾಯಕ ಎಂದು ಬಿಜೆಪಿ ತೀರ್ಮಾನಿಸಿದೆಯೇನೋ ಎಂದನಿಸುತ್ತದೆ. ಇನ್ನಾರು ತಿಂಗಳುಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಶತ್ರು ಪಾಕಿಸ್ತಾನದ ಅಗತ್ಯವಿದೆಯೇ ಹೊರತು ಮಿತ್ರ ಪಾಕಿಸ್ತಾನದ್ದಲ್ಲ. ಕಳೆದ ಚುನಾವಣೆಯಲ್ಲಿ ಪಾಕಿಸ್ತಾನವೂ ಒಂದು ಇಶ್ಯೂ ಆಗಿತ್ತು ಬಿಜೆಪಿಗೆ. ಪಾಕಿಸ್ತಾನದೊಂದಿಗೆ ಮಾತು ಕತೆ ನಡೆಸುವ ಮೂಲಕ ಆ ಅವಕಾಶವನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಲಾರದು. ಇಮ್ರಾನ್ ಖಾನ್ ಮಾತುಕತೆಗೆ ಮತ್ತೆ ಮತ್ತೆ ಆಹ್ವಾನ ನೀಡುತ್ತಿದ್ದರೂ ಮೋದಿಯವರು ಅದನ್ನು ನಿರಾಕರಿಸುತ್ತಿರುವುದಕ್ಕೆ ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಕಾರಣವಾಗಿದೆಯೆಂದು ಅನಿಸುತ್ತದೆ. ಕಳೆದ 6 ದಶಕಗಳಿಂದ ಭಾರತ ಮತ್ತು ಪಾಕ್‍ಗಳು ಬಂದೂಕಿನಿಂದ ಮಾತಾಡುತ್ತಲೇ ಇವೆ. ಆದರೆ ಫಲ ಶೂನ್ಯ. ಆದ್ದರಿಂದ ಮಾತುಕತೆಯ ಹೊರತು ಭಾರತ-ಪಾಕ್‍ಗಳ ನಡುವಿನ ಸಮಸ್ಯೆ ಬಗೆಹರಿಯಲಾರದು. ಇಮ್ರಾನ್ ಖಾನ್ ಮಾತಿನ ಮೇಜಿಗೆ ಹೊಸಬ. ಈ ಹಿಂದಿನವರ ಕೃತ್ಯಕ್ಕೆ ಅವರು ಹೊಣೆಗಾರನೂ ಅಲ್ಲ. ಈ ಹಿನ್ನೆಲೆಯಲ್ಲಿ ಅವರ ಮಾತು ಕತೆಯ ಆಹ್ವಾನಕ್ಕೆ ಅರ್ಥ ಇದೆ. ಒಂದು ವೇಳೆ, ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಇರುತ್ತಿದ್ದರೆ ಇಮ್ರಾನ್ ಖಾನ್‍ರ ಆಹ್ವಾನವನ್ನು ಮೋದಿಯವರು ಖಂಡಿತ ಸ್ವೀಕರಿಸುತ್ತಿದ್ದರು. ಒಂದು ರೀತಿಯಲ್ಲಿ,

The absence of statecraft has never been felt so acutely as today ಎಂಬ ಬಿಜೆಪಿಯ 2014ರ ಪ್ರಣಾಳಿಕೆಯು ಇವತ್ತಿಗೆ ಬಹಳ ಚೆನ್ನಾಗಿಯೇ ಒಪ್ಪುತ್ತಿದೆ.




No comments:

Post a Comment