Monday, January 1, 2018

ಕ್ಷಮಿಸಿ ಬಿಡು ನನ್ನ..



1. ಮಳೆ
2. ಸಂಪತ್ತಿನಲ್ಲಿ ಹೆಚ್ಚಳ
3. ಸಂತಾನ ವೃದ್ಧಿ4. ಉದ್ಯಾನ
5. ಕಾಲುವೆ
   ಈ ಐದೂ ಸಂಗತಿಗಳು ಮನುಷ್ಯನ ಪಾಲಿಗೆ ಇಷ್ಟವಾದವುಗಳು. ಈ ಐದನ್ನೂ ಮನುಷ್ಯ ಬಯಸುತ್ತಾನೆ. ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ವಾತಾಯನ (AC) ಇದ್ದೂ ಬೆವರುವ ಮನುಷ್ಯನನ್ನು ಸದಾ ತಂಪಾಗಿಡುವುದು ಮಳೆ. ಮಳೆಯು ನೀರಿನ ಒರತೆಯನ್ನಷ್ಟೇ ಚಿಮ್ಮಿಸುವುದಲ್ಲ. ಒಟ್ಟು ಜಗತ್ತನ್ನೇ ತಂಪಾಗಿಸುತ್ತದೆ. ತಂಪು ಅನ್ನುವುದು ಮನುಷ್ಯ ಪ್ರಕೃತಿ. ಬಿಸಿ ಅದರ ವಿರೋಧಿ. ಎಲ್ಲಿ ಬಿಸಿ ಇರುತ್ತೋ ಅಲ್ಲಿ ಭಯ, ಹಾಹಾಕಾರ, ಗುಂಪು ಗುಳೇ ಇರುತ್ತದೆ. ಕಾಡಿಗೆ ಬೆಂಕಿ ಹತ್ತಿಕೊಂಡಿತೆಂದರೆ ಪ್ರಾಣಿಗಳು ಭಯಭೀತವಾಗುತ್ತವೆ. ನಾಡೂ ಚಿಂತಿತವಾಗುತ್ತದೆ. ಈ ಬಿಸಿ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಆತ ನಿಯಂತ್ರಣ ಕಳಕೊಳ್ಳುತ್ತಾನೆ. ಆಡಬಾರದ ಮಾತುಗಳನ್ನು ಆಡುತ್ತಾನೆ. ಹಲ್ಲೆ-ಹತ್ಯೆಗಳ ವರೆಗೆ ಈ ಬಿಸಿ ಕೊಂಡೊಯ್ಯುವುದೂ ಇದೆ. ಇದಕ್ಕೆ ವಿರುದ್ಧವಾಗಿ ತಂಪನ್ನು ಕಲ್ಪಿಸಿಕೊಳ್ಳಿ. ಧಾರಾಕಾರವಾಗಿ ಸುರಿಯುವ ಮಳೆಯ ಜೂಂ ನಾದಕ್ಕೆ ನಿಮ್ಮನ್ನು ಒಡ್ಡಿಕೊಳ್ಳಿ. ಅದು ತೃಪ್ತಿ, ಖುಷಿ, ನೆಮ್ಮದಿಯ ಭಾವವನ್ನು ಚಿಮ್ಮಿಸುತ್ತದೆ. ಸಾಮಾನ್ಯವಾಗಿ ಜನರು ವಿಹಾರಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳೆಲ್ಲ ಯಾಕೆ ತಂಪಿನದ್ದಾಗಿರುತ್ತವೆ? ನವ ವಧೂ-ವರರು ಯಾಕೆ ಕಠಿಣ ಬಿಸಿ ಇರುವ ಪ್ರದೇಶಗಳನ್ನು ಹನಿಮೂನ್‍ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲ? ಸಂಜೆಯ ಸಮಯದಲ್ಲಿ ಸಮುದ್ರ ತೀರಕ್ಕೋ ಪಾರ್ಕಿಗೋ ನಾವು ಭೇಟಿ ಕೊಡುವುದೇಕೆ? ಅದು ಮನುಷ್ಯನನ್ನು ತಂಪಾಗಿಡುತ್ತದೆ. ರಮ್ಯ ಭಾವನೆಗಳನ್ನು ಅದು ಸೃಷ್ಟಿ ಮಾಡುತ್ತದೆ. ಅತೀ ಹೆಚ್ಚು ಪ್ರೇಮ ಕಾವ್ಯಗಳು ಹುಟ್ಟು ಪಡೆದಿರುವುದೇ ತಂಪಾದ ತಾಣಗಳಲ್ಲಿ. ಮಳೆ ಅದರ ನಿರ್ಮಾತೃ. ಧಾರಾಕಾರ ಸುರಿಯುವ ಮಳೆಯ ನಾದಕ್ಕೆ ಮನುಷ್ಯ ಎಲ್ಲವನ್ನೂ ಮರೆಯುತ್ತಾನೆ. ಅದು ಮಣ್ಣನ್ನಷ್ಟೇ ಜವುಗು ಗೊಳಿಸುವುದಲ್ಲ, ಮನುಷ್ಯರ ಹೃದಯಗಳನ್ನೂ ಹದ ಮಾಡುತ್ತದೆ. ವಿಶ್ವಾಸ (ಈಮಾನ್) ಅಂದರೆ ಏನು ಎಂಬ ಅಲೀ(ರ) ಅವರ ಪ್ರಶ್ನೆಗೆ ಪ್ರವಾದಿ ಮುಹಮ್ಮದ್(ಸ)ರು ಕೊಟ್ಟ ಉತ್ತರ ಅತ್ಯಂತ ಕೌತುಕಪೂರ್ಣವಾದುದು. ‘ವಿಶ್ವಾಸ ಎಂಬುದು ನಾಲ್ಕು ಕಂಬಗಳಿಂದ ಎತ್ತರಿಸಿ ನಿಲ್ಲಿಸಲಾದ ಒಂದು ಕಟ್ಟಡ. ಆ ಕಂಬಗಳಲ್ಲಿ ಸಹನೆ ಎಂಬ ಕಂಬವೂ ಒಂದು’ ಎಂದವರು ಹೇಳುತ್ತಾರೆ. ತಾಳ್ಮೆ ವಹಿಸುವುದು ಪ್ರತೀಕಾರ ಎಸಗುವುದಕ್ಕಿಂತ ಉತ್ತಮ (16:126) ಎಂದು ಒಂದು ಕಡೆ ಹೇಳುವ ಪವಿತ್ರ ಕುರ್‍ಆನ್, ಇನ್ನೊಂದು ಕಡೆ, ಅಸಭ್ಯ ಮಾತನ್ನಾಡುವವರಿಗೆ ಪ್ರತಿಯಾಗಿ ಸಹನೆ ವಹಿಸಿರಿ (73:10) ಎಂದೂ ಹೇಳುತ್ತದೆ. ಅಲ್ಲದೇ ಈ ಕುರಿತಂತೆ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಬದುಕಿನಲ್ಲಿ ಧಾರಾಳ ಉದಾಹರಣೆಗಳೂ ಇವೆ. ಪ್ರವಾದಿ ಮುಹಮ್ಮದ್(ಸ)ರಂತೂ ಈ ಸಹನೆಯ ಮಾಡೆಲ್ ಆಗಿ ಬದುಕಿದ್ದಾರೆ.
2. ಯಾರೂ ಕೂಡಾ ಬಡವರಾಗಿಯೇ ಉಳಿಯಬೇಕೆಂದು ಪ್ರಾರ್ಥಿಸುವುದಿಲ್ಲ. ಒಂದು ರೀತಿಯಲ್ಲಿ, ಮನುಷ್ಯ ಪ್ರತಿದಿನವೂ ತನ್ನ ಸಂಪತ್ತಿನ ವೃದ್ಧಿಗಾಗಿ ಪ್ರಯತ್ನಪಡುತ್ತಾನೆ. ಕೂಲಿ ಕಾರ್ಮಿಕನೋರ್ವ ಅಷ್ಟಿಷ್ಟು ಕೂಡಿಡುತ್ತಾ ಒಂದು ದಿನ ಆ ಮೊತ್ತ ಅಧಿಕವಾಗುವುದನ್ನು ನಿರೀಕ್ಷಿಸುತ್ತಾನೆ. ಬಡತನ ಮುಕ್ತ ಜೀವನದ ಕನಸು ಹೆಣೆಯುತ್ತಾನೆ. ಪ್ರತಿದಿನ ಒಂದು ಸಾವಿರ ರೂಪಾಯಿ ವರಮಾನವಿರುವ ವ್ಯಾಪಾರಿಯೋರ್ವ ಅಲ್ಲಿಗೇ ತನ್ನನ್ನು ನಿಯಂತ್ರಿಸಿಕೊಳ್ಳುವುದಿಲ್ಲ. ಒಂದು ಸಾವಿರವನ್ನು ಒಂದೂವರೆಯೋ ಎರಡೋ ಆಗಿ ಹೆಚ್ಚಿಸಲು ಯೋಜನೆ ಹಾಕಿಕೊಳ್ಳುತ್ತಾನೆ. ವ್ಯಾಪಾರದ ಇನ್ನೊಂದು ಶಾಖೆ ಆರಂಭಿಸುವ ಬಗ್ಗೆ ಚಿಂತಿಸುತ್ತಾನೆ. ಒಂದು ವೇಳೆ ಅದು ಕೈಗೂಡಿದರೂ ಪ್ರಯತ್ನ ಅಲ್ಲಿಗೇ ನಿಲ್ಲುವುದಿಲ್ಲ. ಇನ್ನೊಂದು ಶಾಖೆಯನ್ನು ತೆರೆಯುವ ಪ್ರಯತ್ನಗಳು ನಡೆಯುತ್ತವೆ. ಶ್ರೀಮಂತಿಕೆ, ಸಂಪತ್ತು, ಬಡತನರಹಿತ ಬದುಕು.. ಇವೆಲ್ಲ ಮಾನವ ಸಹಜ ಬಯಕೆಗಳು. ಆದ್ದರಿಂದಲೇ ಜಗತ್ತಿನಲ್ಲಿ ಸರ್ವಸಂಗ ಪರಿತ್ಯಾಗಿಗಳ ಸಂಖ್ಯೆ ಬಹಳ ಬಹಳ ಕಡಿಮೆ. ಧರ್ಮ ಯಾವುದೇ ಆಗಿದ್ದರೂ ಸಂಪತ್ತನ್ನು ತಿರಸ್ಕಾರಾರ್ಹವಾಗಿಯೋ ವಜ್ರ್ಯವಾಗಿಯೋ ಕಾಣು ವವರು ಯಾರೂ ಇಲ್ಲ. ಹಾಗಂತ, ಸಂಪತ್ತನ್ನು ಗಳಿಸುವ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳಿರಬಹುದು. ಬಡ್ಡಿಯ ಮೂಲಕ ಸಂಪತ್ತನ್ನು ಹೆಚ್ಚುಗೊಳಿಸುವ ಮಂದಿ ಇರಬಹುದು. ಜೂಜಿನಲ್ಲಿ ಹಣ ತೊಡಗಿಸಿ ಹಣ ವೃದ್ಧಿಸುವವರು ಇರಬಹುದು. ಮದ್ಯ, ಅಕ್ರಮ ವಹಿವಾಟುಗಳಲ್ಲಿ ಹಣವನ್ನು ತೊಡಗಿಸಿ ಸಂಪತ್ತು ವೃದ್ಧಿಸುವುದಕ್ಕೆ ಪ್ರಯತ್ನಿಸುವವರೂ ಇರಬಹುದು. ಮತ್ತು ಇವೆಲ್ಲವನ್ನೂ ತಪ್ಪು ಮಾರ್ಗ ಎಂದು ಖಚಿತವಾಗಿ ನಂಬುತ್ತಲೇ ಸರಿಮಾರ್ಗಗಳಲ್ಲಿ ಸಂಪತ್ತು ಹೆಚ್ಚುಗೊಳಿಸುವ ಪ್ರಯತ್ನದಲ್ಲಿ ತೊಡಗಿರುವವರೂ ಇರಬಹುದು.
3. ಸಂತಾನವನ್ನು ಬಯಸದ ದಂಪತಿಗಳು ತೀರಾ ತೀರಾ ವಿರಳ. ಸಂತಾನ ಭಾಗ್ಯ ಅನ್ನುವ ಪದಪುಂಜವೇ ಇದೆ. ಮಕ್ಕಳಾಗದವರಿಗೆ ಮಕ್ಕಳಾಗಿಸುವ ವಿವಿಧ ಚಿಕಿತ್ಸಾ ಪದ್ಧತಿಗಳು ಮತ್ತು ವೈದ್ಯರ ವಿವರಗಳು ಮಾಧ್ಯಮಗಳಲ್ಲಂತೂ ಜಾಹೀರಾತುಗಳಾಗಿ ಪ್ರಕಟವಾಗುತ್ತಲೇ ಇರುತ್ತವೆ. ಮಕ್ಕಳಾಗದ ದಂಪತಿಗಳು ಇನ್ನಾರದೋ ಮಗುವನ್ನು ದತ್ತುಪಡಕೊಳ್ಳುತ್ತಾರೆ. ಚಿತ್ರರಂಗದಲ್ಲಂತೂ ಈ ಕ್ರಮ ಇನ್ನಷ್ಟು ವಿಪರೀತ ರೀತಿಯಲ್ಲಿ ಚಾಲ್ತಿಯಲ್ಲಿದೆ. ಗರ್ಭ ಧರಿಸಲು ಇಷ್ಟಪಡದ ನಟಿಯು ಮಕ್ಕಳನ್ನು ದತ್ತುಪಡೆದು ಸಾಕುವುದಿದೆ. ಸರಕಾರಗಳೂ ಸಂತಾನ ಸಹಿತ ಕುಟುಂಬ ಜೀವನದ ಪರವಾಗಿದೆ. ಸಂತಾನ ನಿಯಂತ್ರಣದ ಕುರಿತಂತೆ ಮಾತುಗಳೇನೇ ಇರಲಿ, ಸಂತಾನವೇ ಇರಬಾರದ ಸ್ಥಿತಿಯೊಂದನ್ನು ಯಾರೂ ಪ್ರಸ್ತಾಪಿಸುವು ದಿಲ್ಲ. ಒಂದು ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡಿರಬೇಕೋ ಮೂರಿರಬೇಕೋ.. ಎಂದು ಮುಂತಾಗಿ ಚರ್ಚೆಯಾಗುತ್ತದೆಯೇ ಹೊರತು ಒಂದು ಬೇಕೋ ಬೇಡವೋ ಎಂಬ ಚರ್ಚೆಯನ್ನು ಯಾವ ಸರಕಾರವೂ ಆರಂಭಿಸಿಲ್ಲ. ಯಾವ ಸಮಾಜವೂ ಆ ಬಗೆಯ ಚರ್ಚೆಯನ್ನು ಮಾನ್ಯ ಮಾಡುತ್ತಿಲ್ಲ. ಒಂದು ಸಮಾಜವು ಸಂತಾನರಹಿತ ಸ್ಥಿತಿಯೆಡೆಗೆ ತಲುಪುವುದೆಂದರೆ, ಚೈತನ್ಯರಹಿತವಾಗುವುದು ಎಂದರ್ಥ. ಒಂದು ಪ್ರದೇಶದ ಅಭಿವೃದ್ಧಿ ಆ ಪ್ರದೇಶ ದಲ್ಲಿರುವ ಜನಸಂಪತ್ತನ್ನು ಆಧರಿಸಿರುತ್ತದೆ. ಯುವ ಸಮೂಹ ಅಭಿವೃದ್ಧಿಯ ಸಂಕೇತ. ವೃದ್ಧರ ಸಂಖ್ಯೆ ಅಧಿಕಗೊಳ್ಳುವುದೆಂದರೆ, ಅಭಿವೃದ್ಧಿಯ ನಡೆ ಸಾವಿನೆಡೆಗೆ ಸಾಗುತ್ತಿದೆ ಎಂದರ್ಥ. ಆದ್ದರಿಂದಲೇ ಸಿದ್ಧಾಂತ, ವಿಚಾರಧಾರೆಗಳು ಏನೇ ಆಗಿರಬಹುದು, ಆದರೆ ಮಕ್ಕಳನ್ನು ಹೊಂದುವ ವಿಷಯದಲ್ಲಿ ಎಲ್ಲ ಸಿದ್ಧಾಂತಗಳ ನಿಲುವೂ ಬಹುತೇಕ ಒಂದೇ. ಪುರಾತನ ಕಾಲದ ಈಜಿಪ್ಟ್ ನಲ್ಲಿ ರಾಜ ಫರೋವನು ತನ್ನ ಸಾಮ್ರಾಜ್ಯದಲ್ಲಿರುವ ಇಸ್ರಾಈಲ್ ವಂಶದಲ್ಲಿ ಹುಟ್ಟುವ ಪ್ರತಿ ಗಂಡು ಮಗುವನ್ನೂ ಕೊಲ್ಲುವ ಆದೇಶ ಹೊರಡಿಸಿದುದನ್ನು ಪವಿತ್ರ ಕುರ್‍ಆನ್ ಉಲ್ಲೇಖಿಸಿದೆ ಮತ್ತು ಆ ಆದೇಶದ ಹೊರತಾಗಿಯೂ ಇಸ್ರಾಈಲ್ ವಂಶದ ಮಗುವೊಂದು ಫರೋವನ ರಾಜಭವನದಲ್ಲೇ ಬೆಳೆದುದನ್ನು ಮತ್ತು ಆ ಮಗುವೇ ಆ ಬಳಿಕ ಇಸ್ರಾಈಲ್ ವಂಶದ ವಿಮೋಚನೆಯ ನೇತೃತ್ವ ವಹಿಸಿದುದನ್ನೂ ಸವಿಸ್ತಾರವಾಗಿ ಹೇಳಿದೆ. ಪುರಾತನ ಕಾಲದಿಂದ ಹಿಡಿದು ಈ ಆಧುನಿಕ ಕಾಲದ ವರೆಗೆ ಸಂತಾನವೆಂಬುದು ಮೌಢ್ಯ, ಭಾಗ್ಯ, ದೌರ್ಭಾಗ್ಯ, ಅಪಾಯಗಳ ಸುರುಳಿ ಸುತ್ತುತ್ತಾ ಬಂದಿವೆ ಮತ್ತು ಬರುತ್ತಿವೆ.
ಇನ್ನು, ಉದ್ಯಾನ ಮತ್ತು ಕಾಲುವೆ ಇವೆರಡೂ ಪ್ರತ್ಯೇಕ ವಿಷಯ ಸೂಚಿಗಳಾಗಿದ್ದರೂ ಗುಣದಲ್ಲಿ ಬಹುತೇಕ ಒಂದೇ. ಮಾತ್ರವಲ್ಲ, ಕ್ರಮಸಂಖ್ಯೆ 1ರ ಭಾವನೆಯನ್ನೇ ಇವೂ ಚಿಮ್ಮಿಸುತ್ತವೆ. ಕಾಲುವೆ ಮತ್ತು ಉದ್ಯಾನಗಳು ಮನುಷ್ಯನ ಕಣ್ಣಿಗೆ ತಂಪು ಮತ್ತು ಮನಸ್ಸಿಗೆ ಮುದ ನೀಡುವವುಗಳು. ಮಳೆಯ ಗುಣವೂ ಇದುವೇ. ಪವಿತ್ರ ಕುರ್‍ಆನ್ ಸ್ವರ್ಗಕ್ಕೆ ಸಂಬಂಧಿಸಿ ವಿವಿಧೆಡೆ (15:45, 44:52, 47:15, 54:54) ಕಾಲುವೆ ಮತ್ತು ಉದ್ಯಾನಗಳ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟಕ್ಕೂ, ಇವೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಕ್ಕೆ ಒಂದು ಕಾರಣ ಇದೆ. ಪವಿತ್ರ ಕುರ್‍ಆನಿನ 71ನೇ ಅಧ್ಯಾಯವಾದ ನೂಹ್‍ನ 10ರಿಂದ 12ರ ವರೆಗಿನ ವಚನಗಳು ಈ ಮೇಲಿನ  ಐದೂ ವಿಷಯಗಳ ಕುರಿತಂತೆ ಅತ್ಯಂತ ವಿಶಿಷ್ಟವಾದ ಮತ್ತು ಗಹನ ಚಿಂತನೆಗೆ ದೂಡಬಹುದಾದ ಸಂಗತಿಯೊಂದನ್ನು ಪ್ರಸ್ತಾಪಿಸುತ್ತದೆ. ಅದು ಹೀಗಿದೆ:
   ‘ನಿಮ್ಮ ಪ್ರಭುವಿನೊಡನೆ ಕ್ಪಮಾಯಾಚನೆ ಮಾಡಿರಿ. ಖಂಡಿತ ವಾಗಿಯೂ ಅವನು ಮಹಾ ಕ್ಷಮಾಶೀಲನಾಗಿದ್ದಾನೆ. ಅವನು ನಿಮ್ಮ ಮೇಲೆ ಆಕಾಶದಿಂದ ಮಳೆಯನ್ನು ಧಾರಾಳವಾಗಿ ಸುರಿಸುವನು. ನಿಮಗೆ ಸೊತ್ತು-ಸಂತಾನಗಳನ್ನು ದಯಪಾಲಿಸುವನು. ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು..’
       ಇಲ್ಲಿಯ ವಚನಗಳ ವಿಶೇಷತೆ ಏನೆಂದರೆ, ದೇವನೊಂದಿಗೆ ಕ್ಷಮೆ ಯಾಚಿಸುವವರಿಗೆ ಕೊಡುಗೆಯಾಗಿ 5 ವಸ್ತುಗಳನ್ನು ನೀಡ ಲಾಗಿದೆ. 1. ಮಳೆ 2. ಸಂಪತ್ತು 3. ಸಂತಾನ 4. ಉದ್ಯಾನ 5. ಕಾಲುವೆ. ಕ್ಷಮಿಸಿ ಬಿಡು ಎಂದು ಮನಸಾರೆ ಹೇಳುವುದರಿಂದ ವ್ಯಕ್ತಿ ನಿರಾಳವಾಗುತ್ತಾನೆ. ಒತ್ತಡ ರಹಿತ ಸ್ಥಿತಿಗೆ ತಲುಪುತ್ತಾನೆ. ಇದು ಆತನ ಪಾಲಿಗೆ ಯೋಜನೆಗಳ ಜಾರಿಯನ್ನು ಸುಲಭ ಗೊಳಿಸುತ್ತದೆ. ಆತನಲ್ಲಿ ಅದು ಏಕಾಗ್ರತೆಯನ್ನು ಉಂಟು ಮಾಡುತ್ತದೆ. ನಿಜವಾಗಿ, ಮನುಷ್ಯನ ಬೇಡಿಕೆಗಳಲ್ಲಿ ಪ್ರಾಮುಖ್ಯ ಪಡೆದಿರುವುದೇ ಈ ಐದು ಸಂಗತಿಗಳು. ಇವುಗಳಿಗಾಗಿಯೇ ಮನುಷ್ಯ ಪ್ರತಿನಿತ್ಯ ಶ್ರಮ ಪಡುತ್ತಾನೆ. ಚಿಂತಿಸುತ್ತಾನೆ. ಹೋರಾಡುತ್ತಾನೆ. ಒಂದು ವೇಳೆ, ದೇವನೊಂದಿಗೆ ಕ್ಷಮೆ ಯಾಚಿಸುವುದರಿಂದ ಈ ಎಲ್ಲವೂ ಲಭ್ಯವಾಗುತ್ತದೆ ಎಂಬುದು ಮನುಷ್ಯನಿಗೆ ಮನವರಿಕೆ ಯಾದರೆ ಅದರಿಂದ ಲಭ್ಯವಾಗಬಹುದಾದ ತೃಪ್ತಿ ಯಾವ ರೀತಿ ಯಿರಬಹುದು? ಅಷ್ಟಕ್ಕೂ, ಕ್ಷಮಾಯಾಚನೆಗೂ ಸಂಪತ್ತಿನ ವೃದ್ಧಿಗೂ ನಡುವೆ ಸಂಬಂಧ ಇದೆ ಎಂದು ವಿಶ್ವಾಸಿಗೆ ಗೊತ್ತಿದೆಯೇ? ಕ್ಷಮಾಯಾಚನೆಗೂ ಮಳೆಗೂ ನಡುವೆ ಸಂಬಂಧ ಇದೆ ಎಂಬುದನ್ನು ವಿಶ್ವಾಸಿ ತಿಳಿದುಕೊಂಡಿರುವನೇ/ಳೇ? ದೇವನೊಂದಿಗಿನ ಕ್ಷಮಾಯಾಚನೆಯಿಂದ ಸಂತಾನ ಭಾಗ್ಯವಾಗುವುದೆಂಬುದನ್ನು ವಿಶ್ವಾಸಿಗಳು ತಿಳಿದುಕೊಂಡಿದ್ದಾರೆಯೇ? ಪ್ರವಾದಿ ಮುಹಮ್ಮದ್(ಸ)ರು ಪ್ರತಿದಿನ 100ರಷ್ಟು ಬಾರಿ ದೇವನೊಂದಿಗೆ ಕ್ಷಮೆ ಯಾಚಿಸುತ್ತಿದ್ದರು ಎಂಬುದನ್ನು ಅಕ್ಷರಾರ್ಥಕ್ಕಿಂತ ಹೊರಗೆ ತಂದು ನೋಡುವ ವಿಶ್ವಾಸಿಗಳು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಒಂದು ಕ್ಷಮಾಯಾಚನೆಯು ಓರ್ವ ವಿಶ್ವಾಸಿಯ ಪಾಲಿಗೆ 5 ಕೊಡುಗೆಗಳನ್ನು ಪಡೆದುಕೊಳ್ಳುವ ಸಂದರ್ಭವಾಗಿರುತ್ತದೆ ಎಂಬುದು ಎಷ್ಟು ಅದ್ಭುತ ಮತ್ತು ರೋಮಾಂಚನಕಾರಿ?
      ಖ್ಯಾತ ವಿದ್ವಾಂಸ ಹಸನ್ ಬಸರೀಯವರ ಬಳಿ ಬಂದು ಜನರು ಸಮಸ್ಯೆಗಳನ್ನು ಹೇಳಿಕೊಳ್ಳತೊಡಗಿದರು. ಓರ್ವ ಬರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಪರಿಹಾರ ಕೇಳಿದ. ಅವರು, ‘ದೇವನಲ್ಲಿ ಕ್ಷಮಾಯಾಚನೆ ನಡೆಸು’ ಎಂದುತ್ತರವಿತ್ತರು. ಇನ್ನೋರ್ವ, ಬಡತನದ ಬಗ್ಗೆ ದೂರಿಕೊಂಡ. ಆತನಿಗೂ ‘ದೇವನಲ್ಲಿ ಕ್ಷಮಾ ಯಾಚನೆಯನ್ನು ನಡೆಸು’ ಎಂಬ ಉತ್ತರವನ್ನೇ ಕೊಟ್ಟರು. ಇನ್ನೋರ್ವ ಸಂತಾನವಿಲ್ಲದ ಬಗ್ಗೆ, ಮತ್ತೋರ್ವ, ಬೆಳೆನಾಶದ ಬಗ್ಗೆ.. ಹೀಗೆ ಬೇರೆ ದೂರುಗಳು ಅವರ ಮುಂದೆ ಬಂದುವು. ಅವರು ಎಲ್ಲದಕ್ಕೂ ‘ದೇವನೊಂದಿಗೆ ಕ್ಷಮಾಯಾಚನೆ ಮಾಡಿರಿ’ ಎಂಬ ಏಕ ಉತ್ತರವನ್ನೇ ಕೊಟ್ಟರು. ದೂರುದಾರರಲ್ಲಿ ಅಸಮಾಧಾನ ಕಾಣಿಸಿತು. ಅವರು ಹಸನ್ ಬಸರೀ ಅವರ ಮುಂದೆ ಅದನ್ನು ವ್ಯಕ್ತಪಡಿಸಿದರು. ಎಲ್ಲ ದೂರುಗಳಿಗೂ ಏಕ ಉತ್ತರವನ್ನೇ ಕೊಡಲು ಕಾರಣವೇನು ಎಂದವರು ಪ್ರಶ್ನಿಸಿದರು. ಆಗ ಹಸನ್ ಬಸರೀಯವರು ಈ ಮೇಲಿನ (71:10-12) ವಚನವನ್ನು ಪಠಿಸಿದರು.
    ಇದರಾಚೆಗೆ ಏನೂ ಹೇಳಬೇಕಾಗಿಲ್ಲ.





No comments:

Post a Comment